Sunday Read: ಜೋಗಿ ಹೊಸ ಪುಸ್ತಕ: ಚಿಯರ್ಸ್: ಅಮರ್ ಅಂತೋಣಿ - Vistara News

ಕಲೆ/ಸಾಹಿತ್ಯ

Sunday Read: ಜೋಗಿ ಹೊಸ ಪುಸ್ತಕ: ಚಿಯರ್ಸ್: ಅಮರ್ ಅಂತೋಣಿ

ಕತೆಗಾರ ಜೋಗಿ ಅವರ ಹೊಸ ಕೃತಿ ʼಚಿಯರ್ಸ್‌‌ʼ ಹಾಗೂ ಇನ್ನಿತರ ಮೂರು ಕೃತಿಗಳು ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿವೆ. ಈ ಕೃತಿಯಿಂದ ಆಯ್ದ ಭಾಗ ಇಲ್ಲಿದೆ.

VISTARANEWS.COM


on

jogi book cheers
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಂತೋಣಿ ನೀರಿನಲ್ಲಿ ಮುಳುಗಿ ಸಾಯುವುದಕ್ಕೆ ಮೊದಲು ಏನು ಹೇಳಿದ ಅನ್ನುವುದು ಮಹದೇವನಿಗೆ ಒಗಟಾಗಿಯೇ ಉಳಿದಿದೆ. ಮೂರನೇ ಸಲ ನೀರಿನಿಂದ ಮೇಲೇಳುವ ಹೊತ್ತಿಗೆ ಅಂತೋಣಿಯ ಶ್ವಾಸಕೋಶದೊಳಗೆ ನೀರು ಹೊಕ್ಕಿತ್ತು. ಅವನು ಕೈ ಮೇಲಕ್ಕೆತ್ತಿ ಮಹದೇವನ ಕಡೆ ಕಣ್ಣು ತಿರುಗಿಸಿ ಏನೋ ಹೇಳಿದ. ಅದು ನೀರೊಳಗೆ ಉಸಿರುಬಿಟ್ಟಂತೆ ಗುಳುಗುಳಗುಳುಗುಳ ಸದ್ದು ಮಾಡಿತೇ ಹೊರತು, ಮಹದೇವನಿಗೆ ಒಂಚೂರೂ ಅರ್ಥವಾಗಿರಲಿಲ್ಲ. ಅದಾದ ಕೂಡಲೇ ಮತ್ತೊಂದು ಸಲ ನೀರಲ್ಲಿ ಮುಳುಗಿದ ಅಂತೋಣಿ ಮೇಲೆ ಬರಲಿಲ್ಲ.

ಈ ಘಟನೆ ನಡೆದಾಗ ಮಹದೇವನಿಗೆ ಹತ್ತೊಂಬತ್ತು, ಅಂತೋಣಿಗೆ ಇಪ್ಪತ್ತೇಳು. ಮಹದೇವ ಹದಿನಾಲ್ಕು ವರ್ಷದವನಿದ್ದಾಗ ಅವನಿಗೆ ಅಂತೋಣಿ ಸಿಕ್ಕಿದ್ದ. ಮಹದೇವನಿಗೆ ಅಂತೋಣಿ ಇಷ್ಟವಾಗಲಿಕ್ಕೆ ಕಾರಣ ಅವನು ಹೇಳುತ್ತಿದ್ದ ಪೋಲಿ ಕತೆಗಳು. ಅವನು ಹೊಟ್ಟೆಯೊಳಗೆ ಅಡಗಿಸಿಟ್ಟುಕೊಂಡು ತೋರಿಸುತ್ತಿದ್ದ ಬೆತ್ತಲೆ ಪುಸ್ತಕ. ಅದನ್ನು ಮಹದೇವನ ಕಣ್ಣೆದುರು ಹಿಡಿದು ಅಂತೋಣಿ ಮಹದೇವನಿಗೆ ಹೊಟ್ಟೆ ತೊಳಸುವಂತೆ ಮಾಡುತ್ತಿದ್ದ. ಆದರೂ ಮತ್ತೆ ಮತ್ತೆ ಅದನ್ನು ನೋಡಬೇಕು ಅಂತ ಮಹದೇವನಿಗೆ ಅನ್ನಿಸುತ್ತಿತ್ತು.

ಮಹದೇವ ಶಾಲೆ ಮುಗಿಸಿ ಬರುವಾಗೆಲ್ಲ ಅಂತೋಣಿ ಸಿಗುತ್ತಿದ್ದ. ಶಾನುಭೋಗರ ಮನೆಯ ಗೇಟಿನ ಪಕ್ಕದಲ್ಲಿರುವ ಕಲ್ಲುಬೆಂಚಿನಲ್ಲಿ ಬೀಡಿ ಸೇದುತ್ತಾ ಕೂತಿರುತ್ತಿದ್ದ. ಆ ದಾರಿಯಲ್ಲಿ ಮಹದೇವನನ್ನು ಬಿಟ್ಟರೆ ಮತ್ಯಾರೂ ಬರುತ್ತಿರಲಿಲ್ಲ. ಅಂತೋಣಿಗೂ ಮಾತಾಡಿಸಲು ಯಾರೂ ಸಿಗುತ್ತಿರಲಿಲ್ಲ. ಅದಕ್ಕಾಗಿಯೇ ಅಂತೋಣಿ ದಾರಿಯಲ್ಲಿಯೇ ಕಾಯುತ್ತಾ ಇರುತ್ತಿದ್ದ. ಮಹದೇವ ಬರುತ್ತಿದ್ದಂತೆ ಅವನ ಜತೆಗೇ ಹೆಜ್ಜೆ ಹಾಕುತ್ತಿದ್ದ. ಇಬ್ಬರೂ ಮಾತಾಡುತ್ತಾ ಮಹದೇವನ ಮನೆಯ ಕಡೆ ನಡೆಯುತ್ತಿದ್ದರು.

ಮಹದೇವನ ಮನೆ ಶಾಲೆಯಿಂದ ಮೂರು ಮೈಲು ದೂರವಿತ್ತು. ಅಂತೋಣಿಯ ಮನೆ ಮಹದೇವನ ಮನೆಗಿಂತ ಒಂದು ಮೈಲು ಮೊದಲೇ ಬರುತ್ತಿತ್ತು. ಆದರೂ ಅಂತೋಣಿ ಅವನ ಜತೆಗೇ ಹೋಗಿ, ಮಹದೇವನನ್ನು ಮನೆ ಸೇರಿಸಿಯೇ ವಾಪಸ್ಸು ಬರುತ್ತಿದ್ದ. ಹಾಗಂತ ಮಹದೇವನ ಮನೆಗಾಗಲೀ, ಮನೆಯ ಹತ್ತಿರವಾಗಲೀ ಸುಳಿಯುತ್ತಿರಲಿಲ್ಲ. ಇನ್ನೇನು ಮನೆ ಕಣ್ಣಿಗೆ ಬೀಳುತ್ತದೆ ಅನ್ನುವಷ್ಟರಲ್ಲಿ ವಾಪಸ್ಸು ಹೊರಟು ಹೋಗುತ್ತಿದ್ದ.

ಮೊದಲ ದಿನ ಅಂತೋಣಿಯನ್ನು ನೋಡಿದಾಗ ಮಹದೇವನಿಗೆ ಹೆದರಿಕೆಯಾಗಿತ್ತು. ಶಾನುಭೋಗರ ಮನೆಯ ಕಲ್ಲುಬೆಂಚಿನಲ್ಲಿ ಕೂತು ಬೀಡಿ ಸೇದುತ್ತಿದ್ದ ಅಂತೋಣಿಯನ್ನು ದೂರದಿಂದಲೇ ನೋಡಿ, ತಲೆತಗ್ಗಿಸಿಕೊಂಡು ಹೊರಟ ಮಹದೇವನನ್ನು ಅಂತೋಣಿ ಚಪ್ಪಾಳೆ ತಟ್ಟಿ ಕರೆದಿದ್ದ. ಮಹದೇವ ಭಯದಿಂದ ಹಿಂತಿರುಗಿ ನೋಡಿರಲಿಲ್ಲ. ಅವನು ಮತ್ತೊಮ್ಮೆ ಚಪ್ಪಾಳೆ ತಟ್ಟುತ್ತಿದ್ದಂತೆ ಕೊಂಚ ವೇಗವಾಗಿ ನಡೆದು, ಅವನಿಗೆ ಕಾಣುವುದಿಲ್ಲ ಅಂತ ಅಂದಾಜಾಗುತ್ತಿದ್ದಂತೆ ಓಡಲು ಶುರುಮಾಡಿದ್ದ. ಮನೆಯ ತನಕವೂ ಓಡುತ್ತಾ ಹೋಗಿದ್ದ.

ಮಾರನೇ ದಿನ ಶಾಲೆಯಿಂದ ಬರುವಾಗ ಅವನು ಸಿಗುತ್ತಾನೇನೋ ಅನ್ನುವ ಭಯದಲ್ಲಿಯೇ ಇದ್ದ ಮಹದೇವನಿಗೆ ಕಲ್ಲು ಬೆಂಚಿನ ಮೇಲೆ ಕೂತಿದ್ದ ಅಂತೋಣಿ ಕಣ್ಣಿಗೆ ಬಿದ್ದಿರಲಿಲ್ಲ. ಆದರೂ ಯಾವುದಕ್ಕೂ ಅಲ್ಲಿಂದ ಬೇಗ ಕಣ್ಮರೆಯಾಗಬೇಕು ಅಂತ ಓಡುವುದಕ್ಕೆ ಶುರುಮಾಡಿದ್ದ. ಅಂತೋಣಿ ಅವನಿಗೋಸ್ಕರ ಮುಂದಿನ ತಿರುವಿನಲ್ಲಿ ಕಾಯುತ್ತಿದ್ದ. ಓಡುತ್ತಿದ್ದ ಮಹದೇವನ ಕೈ ಹಿಡಿದು ನಿಲ್ಲಿಸಿದ್ದ. ಓಡುತ್ತಿದ್ದವನನ್ನು ಥಟ್ಟನೆ ಹಿಡಿದು ನಿಲ್ಲಿಸಿದ ರಭಸಕ್ಕೆ ಮೊಳಕೈಯ ಕೀಲು ತಪ್ಪಿದಷ್ಟು ನೋವಾಗಿತ್ತು. ಭಯದಿಂದ ಅಂತೋಣಿಯನ್ನು ನೋಡುತ್ತಾ ಇನ್ನೇನು ಅತ್ತುಬಿಡಬೇಕು ಅನ್ನುವಷ್ಟರಲ್ಲಿ ಅಂತೋಣಿ ಅವನನ್ನು ಮಾತಾಡಿಸಿದ್ದ.

ಅಂತೋಣಿ ಅರ್ಧತೆಂಗಿನಮರದಷ್ಟು ಎತ್ತರ ಇದ್ದ. ಕಪ್ಪು ಬೆಲ್ ಬಾಟಮ್ ಪ್ಯಾಂಟು ಹಾಕಿದ್ದ, ಅಲ್ಲಲ್ಲಿ ಬಣ್ಣಗೆಟ್ಟ ಕೆಂಪು ಬಣ್ಣದ ಶೂ ಹಾಕಿಕೊಂಡಿದ್ದ. ಎಡಗೈಯಲ್ಲಿ ಹೊಳೆಯುವ ವಾಚು, ಅರ್ಧಹೊಟ್ಟೆ ಕಾಣುವಂತೆ ಹಾಕಿಕೊಂಡ ಶರಟು. ಅದರೊಳಗಿನಿಂದ ಇಣುಕುತ್ತಿದ್ದ ಬೆಳ್ಳಿ ಸರವನ್ನೆಲ್ಲ ನೋಡುತ್ತದ್ದಂತೆ ಅವನ ಹತ್ತಿರ ಚೂರಿಯೂ ಇರಬಹುದು ಅಂತ ಮಹದೇವನಿಗೆ ಅನುಮಾನ ಬಂದಿತ್ತು. ಚಂದಮಾಮದಲ್ಲಿ ಓದಿದ ಕಣಿವೆಯ ದರೋಡೆಕೋರರ ನಾಯಕನಂತೆ ಕಾಣುತ್ತಿದ್ದ ಅಂತೋಣಿಯ ಹಿಡಿತದಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಿದ್ದಂತೆ ಅಂತೋಣಿ `ಎಂಥದಾ.. ನೀನು ಹೆದರುವುದು ಎಂಥಕಾ’ ಅಂತ ಥೇಟ್ ಕೊಂಕಣಿ ಮಾತಾಡುವ ಶೈಲಿಯಲ್ಲಿ ಕೇಳಿದ್ದ. ಅಂತೋಣಿಯ ಭೀಮಕಾಯಕ್ಕೆ ತಕ್ಕ ಸ್ವರ ಅವನಿಗೆ ಇರಲಿಲ್ಲ. ಮಾತು ಮೃದುವಾಗಿಯೂ ರಾಗವಾಗಿಯೂ ಇತ್ತು. ಅದನ್ನು ಕೇಳುತ್ತಿದ್ದಂತೆ ಮಹದೇವನ ಭಯ ಅರ್ಧ ಹೊರಟುಹೋಗಿತ್ತು.

ಆವತ್ತಿನಿಂದ ಮಹದೇವನ ಸಂಜೆಯ ಸಂಗಾತಿಯಾಗಿ ಅಂತೋಣಿ ಜತೆಯಾಗುತ್ತಿದ್ದ. ಮಹದೇವನ ಜಗತ್ತನ್ನು ವಿಸ್ತರಿಸಿದ್ದೇ ಅಂತೋಣಿ. ಬೆಂಗಳೂರಿನಲ್ಲಿರುವ ಡಬಲ್ ಡೆಕರ್ ಬಸ್ಸು, ಮಂಗಳೂರಿನ ಬಂದರಿಗೆ ಬಂದು ಹಡಗನ್ನೇ ಮಗುಚಿಹಾಕಿದ ತಿಮಿಂಗಿಲ, ವೆಂಕಟರಮಣ ಸ್ವಾಮಿ ದೇವಸ್ಥಾನದ ರಥೋತ್ಸವದಲ್ಲಿ ಇನ್ನೇನು ರಥ ನೆಲಕ್ಕೆ ಬೀಳಬೇಕು ಅನ್ನುವಷ್ಟರಲ್ಲಿ ಓಡಿ ಬಂದು ಬೆನ್ನುಕೊಟ್ಟು ಎತ್ತಿದ ಉಜಿರೆಯ ಆನೆಯ ಕತೆ, ಹಡಗು ಬಂದಾಗ ಎದ್ದು ದಾರಿಕೊಡುವ ಇಂಗ್ಲೆಂಡಿನ ಸೇತುವೆ -ಹೀಗೆ ನೂರೆಂಟು ಸಂಗತಿಗಳು ಅಂತೋಣಿಗೆ ಗೊತ್ತಿದ್ದವು.

ಇವೆಲ್ಲದರ ಜತೆಗೆ ಅಂತೋಣಿ ವಿಚಿತ್ರವಾದ ಕತೆಗಳನ್ನೂ ಹೇಳುತ್ತಿದ್ದ. ಮಡಿಕೇರಿಯಲ್ಲಿರುವ ಕಾಲು ಕಳೆದುಕೊಂಡ ಸೈನಿಕನ ಹೆಂಡತಿ, ಮತ್ತೊಬ್ಬ ಗೆಳೆಯನ ಜತೆ ಓಡಾಡುತ್ತಿದ್ದದ್ದು. ಅದು ಗಂಡನಿಗೆ ಗೊತ್ತಾಗುತ್ತಿದ್ದಂತೆ ಅವಳು ಗುಡ್ಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡದ್ದು, ತಾನು ಸಾಯುವಾಗ ಅವನನ್ನೂ ಜತೆಗೇ ಎಳೆದುಕೊಂಡು ಬೆಟ್ಟದಿಂದ ಹಾರಿದ್ದು- ಇದನ್ನೆಲ್ಲ ಕಣ್ಮುಂದೆ ನಡೆದಂತೆ ಹೇಳುತ್ತಿದ್ದ. ಅದನ್ನೆಲ್ಲ ಮಹದೇವ ನಿಜ ಎಂದೇ ನಂಬುತ್ತಿದ್ದ. ಎಷ್ಟೋ ವರ್ಷಗಳ ನಂತರವಷ್ಚೇ ಮಹದೇವನಿಗೆ ಅಂತೋಣಿ ಹೇಳಿದ್ದು ಎಡಕಲ್ಲು ಗುಡ್ಡದ ಮೇಲೆ ಸಿನಿಮಾದ ಕತೆ ಅಂತ ಗೊತ್ತಾಗಿತ್ತು.

ಅಂತೋಣಿಗೆ ಕತೆಗೂ ಬದುಕಿಗೂ ವ್ಯತ್ಯಾಸವೇ ಇರಲಿಲ್ಲ. ತಾನು ನೋಡಿದ, ಓದಿದ, ಕೇಳಿದ ಕತೆಯನ್ನೆಲ್ಲ ನಡೆದಿದೆ ಎಂಬಂತೆ ಅವನು ಹೇಳುತ್ತಿದ್ದುದನ್ನು ಬೆರಗಿನಿಂದ ಕೇಳಿಸಿಕೊಳ್ಳುತ್ತಾ ಮಹದೇವನ ಒಳಗೊಂದು ಹೊಸದೇ ಲೋಕ ಸೃಷ್ಟಿಯಾಗುತ್ತಾ ಹೋಯಿತು.

ಮಹದೇವನ ಮನೆ ಇದ್ದದ್ದು ಊರಿನಿಂದ ಹೊರಗೆ. ಅವನ ಅಪ್ಪ ಶಾನುಭೋಗರ ಮನೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಶಾನುಭೋಗರ ಮುಂದೆ ಕೈ ಮುಗಿದು ನಿಲ್ಲುತ್ತಿದ್ದ ಅಪ್ಪನನ್ನು ಮಹದೇವ ನೋಡಿದ್ದ. ಶಾನುಭೋಗರ ಬಗ್ಗೆ ಮಹದೇವನಿಗೂ ಆಗ ಆರಾಧನಾ ಭಾವ ಇತ್ತು. ಅವರು ದೇವರ ಪ್ರತಿರೂಪ ಎಂದೇ ಅವನೂ ನಂಬಿದ್ದ.

ಅಂಥ ಭಾವನೆಯನ್ನು ಕಿತ್ತು ಎಸೆದಿದ್ದ ಅಂತೋಣಿ.  

ದೇವರ ಕಣ್ಣಲ್ಲಿ ಎಲ್ಲರೂ ಸಮಾನರು. ಎಲ್ಲಾ ಮನುಷ್ಯರೂ ಒಂದೇ. ಇಲ್ಲಿ ದೊಡ್ಡವರು ಸಣ್ಣವರು ಅಂತ ಆಗುವುದು ದುಡ್ಡಿನಿಂದ. ಜಾಸ್ತಿ ದುಡ್ಡಿದ್ದವನು ದೊಡ್ಡ ಮನುಷ್ಯ. ಅವನಿಗೆ ಎಲ್ಲರೂ ನಮಸ್ಕಾರ ಮಾಡುತ್ತಾರೆ. ನೀನೇ ದೇವರು ಅನ್ನುತ್ತಾರೆ. ಆದರೆ ಇದು ನಮ್ಮ ಧರ್ಮದಲ್ಲಿ ಮಾತ್ರ. ನಿಮ್ಮ ಧರ್ಮದಲ್ಲಿ ಎಷ್ಟು ದುಡ್ಡು ಸಂಪಾದನೆ ಮಾಡಿದರೂ ಜಾತಿಯನ್ನು ಕಳೆದುಕೊಳ್ಳಲಿಕ್ಕೆ ಆಗುವುದಿಲ್ಲ. ನಿನ್ನ ಜಾತಿ ಯಾವುದು ಅಂತ ಕೇಳುತ್ತಾರೆ. ನಿನ್ನನ್ನು ಗರ್ಭಗುಡಿಯ ಒಳಗೆ ಬಿಡುವುದಿಲ್ಲ. ಸ್ವಂತ ಸಾಧನೆಯಿಂದ ಸಮಾನತೆ ಸಾಧಿಸುವುದಕ್ಕೆ ನಿಮ್ಮ ಧರ್ಮದಲ್ಲಿ ಅವಕಾಶ ಇಲ್ಲ. ನಮ್ಮಲ್ಲಿ ಅದು ಸಾಧ್ಯ ಉಂಟು. ನಾನು ಮನಸ್ಸು ಮಾಡಿದರೆ ನಮ್ಮ ಚರ್ಚಿನ ಫಾದರ್ ಆಗಬಹುದು. ನೀನು ದೇವಸ್ಥಾನದ ಪೂಜಾರಿ ಆಗಲಿಕ್ಕೆ ಸಾಧ್ಯ ಇಲ್ಲ. ಹಾಗೇನಾದರೂ ಆಗಬೇಕಾದರೆ ನೀನು ಮತ್ತೊಂದು ಸಲ ಹುಟ್ಟಿ ಬರಬೇಕು. ಅದೂ ಅವರ ಜಾತಿಯಲ್ಲಿ ಹುಟ್ಟಬೇಕು.

ಹೀಗೆ ಮಾತಾಡುತ್ತಿದ್ದ ಅಂತೋಣಿಯನ್ನು ಕ್ರಮೇಣ ಮಹದೇವ ಆರಾಧಿಸಲು ಆರಂಭಿಸಿದ್ದ. ತನಗೆ ಬೇಕಾಗಿದ್ದ ಬಿಡುಗಡೆ ಅವನಿಂದ ಸಿಕ್ಕಿದೆ ಅಂತ ಮಹದೇವನಿಗೆ ಅನ್ನಿಸತೊಡಗಿತ್ತು. ಶಾಲೆಯಲ್ಲಿ ಕಲಿಯುತ್ತಿದ್ದ ಪಾಠ ಅರ್ಥವಾಗಲು ಬೇಕಾದ ಬದುಕಿನ ಜ್ಞಾನವನ್ನು ಅಂತೋಣಿ ಹೇಳಿಕೊಡುತ್ತಿದ್ದ. ಅಂತೋಣಿ ಇಲ್ಲದೇ ಹೋಗಿದ್ದರೆ ತಾನು ಹೇಗಿರುತ್ತಿದ್ದೆ ಅನ್ನುವುದನ್ನು ಮಹದೇವನಿಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ.

-2-

ಮಹದೇವ ಮುಂಬಯಿಗೆ ಬಂದು ಮೂವತ್ತು ವರ್ಷಗಳಾದ ನಂತರವೂ ಮುಖ್ಯವಾದ ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಅವನಿಗೆ ಅಂತೋಣಿ ನೆನಪಾಗುತ್ತಾನೆ. ಮನಸ್ಸಿನಲ್ಲಿ ಅಂತೋಣಿಯನ್ನು ನೆನೆದೇ ಅವನು ಇಕ್ಕಟ್ಟಿನ ಸಂದರ್ಭಗಳಲ್ಲಿ ಒಂದು ತೀರ್ಮಾನಕ್ಕೆ ಬರುವುದು. ಹಾಗೆ ಮಾಡಿದಾಗೆಲ್ಲ ಅವನು ಗೆದ್ದಿದ್ದಾನೆ

ಮಹದೇವ ಟ್ರಾನ್ಸ್‌ಪೋರ್ಟ್ ಕಂಪೆನಿಯಲ್ಲಿ ಜನರಲ್ ಮ್ಯಾನೇಜರ್. ದಕ್ಷಿಣ ವಲಯದ ಮುಖ್ಯಸ್ಥನಾಗಿದ್ದ ಅವನು ಮೂರು ಸಾವಿರ ಡ್ರೈವರುಗಳನ್ನು ನಿಭಾಯಿಸಬೇಕಾಗಿತ್ತು. ಒಮ್ಮೆ ಒಬ್ಬ ಡ್ರೈವರ್ ಕುಡಿದು ಲಾರಿ ಓಡಿಸಿದನೆಂದು ಅವನನ್ನು ಅವನ ಮೇಲಧಿಕಾರಿ ಕೆಲಸದಿಂದ ತೆಗೆದಿದ್ದ. ದುರದೃಷ್ಟವಶಾತ್ ಅವನು ಲಾರಿ ಡ್ರೈವರುಗಳ ಸಂಘದ ಅಧ್ಯಕ್ಷನಾಗಿದ್ದ.ಡ್ರೈವರುಗಳನ್ನೆಲ್ಲ ಸೇರಿಸಿ ಅವನು ಧರಣಿ ಕೂತ. ಲಾರಿಗಳು ಎಲ್ಲಿದ್ದವೋ ಅಲ್ಲೇ ಹೇಗಿದ್ದವೋ ಹಾಗೆ ರಸ್ತೆ ಬದಿಯಲ್ಲಿ ನಿಂತುಬಿಟ್ಟವು. ಕನ್‌ಸೈನುಮೆಂಟುಗಳು ತಲುಪಬೇಕಾದ ಜಾಗವನ್ನು ಸರಿಯಾದ ಹೊತ್ತಲ್ಲಿ ತಲುಪದೇ ಹೋದರೆ ಸಂಸ್ಥೆಯ ಹೆಸರು, ಹಣ ಎರಡೂ ನಷ್ಟವಾಗುತ್ತಿತ್ತು.

ಈ ಪರಿಸ್ಥಿತಿಯನ್ನು ನಿಭಾಯಿಸುವ ಹೊಣೆಯಲು ಚೇರ್‌ಮನ್ ಮಹದೇವನ ತಲೆಗೆ ಕಟ್ಟಿದರು. ಮಹದೇವ ತನ್ನ ಅಧಿಕಾರಿಗಳನ್ನು ಕರೆಸಿ ಮೀಟಿಂಗ್ ನಡೆಸಿದಾಗ, ಡ್ರೈವರುಗಳೆಲ್ಲ ಯಾವುದಕ್ಕೂ ಬಗ್ಗುವುದಿಲ್ಲ ಅನ್ನುವ ಸೂಚನೆ ಸಿಕ್ಕಿತು. ಎಲ್ಲರೂ ಕಂಗಾಲಾಗಿ ಹೋಗಿದ್ದರು. ಬೇರೆ ಬೇರೆ ಕಂಪೆನಿಗಳಿಂದ ಕರೆ ಬರುವುದಕ್ಕೆ ಶುರುವಾಗಿತ್ತು. ಲಾರಿಗಳು ರಸ್ತೆ ಬದಿಯಲ್ಲಿ ನಿಂತಿವೆ ಅನ್ನುವ ಕಾರಣಕ್ಕೆ ಪೊಲೀಸರು ಕೇಸು ಜಡಿಯುತ್ತಿದ್ದರು. ಎಷ್ಟೋ ಕಡೆ ಪುಂಡರು ಲಾರಿಯಲ್ಲಿರುವ ವಸ್ತುಗಳನ್ನೆಲ್ಲ ದೋಚಲು ಆರಂಭಿಸಿದ್ದರು.

ಮಹದೇವ ಮೀಟಿಂಗಿನಿಂದ ಎದ್ದು ಹೋಗಿ ಹತ್ತು ನಿಮಿಷ ಮೌನವಾಗಿ ನಿಂತು ಅಂತೋಣಿಯನ್ನು ನೆನೆದಿದ್ದ. ನಂತರ ಒಳಗೆ ಬಂದು ಸಸ್ಪೆಂಡ್ ಆಗಿದ್ದ ಡ್ರೈವರ್ ಜತೆಗೆ ಮುಷ್ಕರ ಹೂಡಿದ್ದ ಅಷ್ಟೂ ಮಂದಿಯನ್ನು ಸಸ್ಪೆಂಡ್ ಮಾಡುವ ನಿರ್ಧಾರ ಕೈಗೊಂಡಿದ್ದ. ಆ ಲಾರಿಗಳನ್ನು ಓಡಿಸಲು ಆಯಾ ಊರಿನಲ್ಲಿರುವ ನಿವೃತ್ತ ಡ್ರೈವರುಗಳಿಗೆ ಹೇಳುವುದೆಂದು ತೀರ್ಮಾನಿಸಿದ್ದ. ನೂರು ವರ್ಷ ಕಳೆಯ ಕಂಪೆನಿ ಆಗಿದ್ದರಿಂದ ಪ್ರತಿ ಊರಲ್ಲೂ ಒಬ್ಬರೋ ಇಬ್ಬರೋ ನಿವೃತ್ತ ಡ್ರೈವರುಗಳು ಇದ್ದೇ ಇದ್ದರು. ಕಂಪೆನಿಯ ಡಾಟಾಬೇಸ್ ತರಿಸಿ, ಡ್ರೈವರುಗಳ ನಂಬರ್ ಹುಡುಕಿ, ಅವರನ್ನು ತಕ್ಷಣವೇ ಹಂಗಾಮಿಯಾಗಿ ಕೆಲಸಕ್ಕೆ ತೆಗೆದುಕೊಂಡು ಲಾರಿಗಳು ಚಾಲೂ ಆಗುವಂತೆ ಮಾಡಿದ್ದ. ನಾಲ್ಕೈದು ಮಂದಿ ಹಲ್ಲೆ ಮಾಡಲು ಮುಂದಾದಾಗ ಪೊಲೀಸರ ಮೂಲಕ ಅವರನ್ನು ಹತ್ತಿಕ್ಕಿದ್ದ.

ಒಂದೆರಡು ಕಡೆ ನಿವೃತ್ತ ಡ್ರೈವರುಗಳು ಲಾರಿ ಹೊರಡಿಸುತ್ತಿದ್ದಂತೆ, ಮಿಕ್ಕ ಡ್ರೈವರುಗಳೆಲ್ಲ ತಾವಾಗಿಯೇ ಮುಷ್ಕರ ನಿಲ್ಲಿಸಿದರು. ಅರ್ಧದಿನದೊಳಗೆ ಸಮಸ್ಯೆ ಕರಗಿಹೋಗಿತ್ತು. ಎಲ್ಲರೂ ಅವನ ನಿರ್ಧಾರವನ್ನು ಕೊಂಡಾಡಿದ್ದರು. ಚೇರ್ಮನ್ ಮಾತ್ರ ಅಸಮಾಧಾನಗೊಂಡಿದ್ದರು.

`ಅಲ್ರೀ, ಎಲ್ಲರೂ ರಾಜೀನಾಮೆ ಕೊಟ್ಟಿದ್ರೆ ಏನು ಮಾಡ್ತಿದ್ರಿ. ಇಂಥ ರಿಸ್ಕ್ ತಗೋಬಾರದು. ನಾನಾಗಿದ್ರೆ ಸಸ್ಪೆಂಡ್ ಮಾಡಿದ್ದ ಡ್ರೈವರನ್ನು ವಾಪಸ್ ತಗೋತಿದ್ದೆ. ಎಲ್ಲಾ ಸರಿಹೋಗಿರೋದು’ ಅಂದಿದ್ದರು. ಅದಕ್ಕೆ ಮಹದೇವ ಅಷ್ಟೇ ಸ್ಪಷ್ಟವಾಗಿ `ಅವನು ಸಸ್ಪೆಂಡ್ ಆಗಿರೋದು ಕುಡಿದು ಡ್ರೈವ್ ಮಾಡಿದ್ದಕ್ಕೆ. ಅವನನ್ನು ಸಸ್ಪೆಂಡ್ ಮಾಡಿರೋದು ನಮ್ಮ ವಿಜಿಲೆನ್ಸ್ ಟೀಮ್. ಈಗ ಅವನನ್ನು ವಾಪಸ್ ತೆಗೆದುಕೊಂಡರೆ ಎಲ್ಲರಿಗೂ ಯಾವ ಮೆಸೇಜ್ ಹೋಗುತ್ತೆ ಯೋಚನೆ ಮಾಡಿ. ನಾಳೆ ಎಲ್ಲರೂ ಕುಡಿದು ಡ್ರೈವ್ ಮಾಡೋಕೆ ಶುರು ಮಾಡ್ತಾರೆ. ಎಲ್ಲರ ಮೊರೇಲೂ ಹಾಳಾಗುತ್ತೆ. ಅದು ಆಗಬಾರದು ಅಂದ್ರೆ ನಾವು ಗಟ್ಟಿಯಾಗಿ ನಿಲ್ಲಬೇಕು’ ಅಂದಿದ್ದ.

ಆ ಪ್ರಕರಣದಿಂದಾಗಿ ಚೇರ್ಮನ್ನಿಗೂ ಅವನಿಗೂ ಅಂತರ ಬೆಳೆಯಿತು. ಆದರೆ ಕಂಪೆನಿಯಲ್ಲಿ ಅವನ ಬಗ್ಗೆ ಗೌರವ ಹೆಚ್ಚಾಯಿತು. ಬೇರೆ ಸಂಸ್ಥೆಗಳ ಮೀಟಿಂಗಿನಲ್ಲಿ ಈ ಕುರಿತು ಚರ್ಚೆಯಾಯಿತು. ಮಿಕ್ಕ ಟ್ರಾನ್ಸ್ ಪೋರ್ಟ್ ಕಂಪೆನಿಗಳು ಕೂಡ ಕಟ್ಟುಪಾಡುಗಳನ್ನು ಬಿಗಿಗೊಳಿಸಿದವು. ಎಲ್ಲಕ್ಕಿಂತ ಹೆಚ್ಚಾಗಿ ಫ್ಯಾಮಿಲಿ ಮೀಟ್ ದಿನದಂದು ಡ್ರೈವರುಗಳ ಹೆಂಡತಿ ಮಕ್ಕಳೆಲ್ಲ ಮಹದೇವನ ನಿರ್ಧಾರವನ್ನು ಮೆಚ್ಚಿಕೊಂಡು ನಾಲ್ಕು ಮಾತಾಡಿದ್ದರು.

ನಮ್ಮ ಮನಸ್ಸಿನ ವಿರುದ್ಧ ಹೋಗಬಾರದು. ಆದರೆ ಅದಕ್ಕಿಂತ ಮುಖ್ಯವಾಗಿ ತತ್ವದ ವಿರುದ್ಧ ಹೋಗಬಾರದು. ಮನಸ್ಸಿನ ಮಾತು ಕೇಳದೇ ಹೋದರೆ ನಮಗೆ ಮಾತ್ರ ಸಮಸ್ಯೆಯಾಗುತ್ತದೆ. ತತ್ವದ ಮಾತಿಗೆ ಕಿವಿಗೊಡದೇ ಇದ್ದರೆ ಒಂದು ಸಮುದಾಯವೇ ತೊಂದರೆಗೆ ಒಳಗಾಗುತ್ತದೆ. ಅದಾಗಲಿಕ್ಕೆ ಯಾವತ್ತೂ ಅವಕಾಶ ಕೊಡಬಾರದು. ಅದು ನಿಜವಾದ ನಾಯಕನ ಲಕ್ಷಣ.

ಹಾಗಂತ ಅಂತೋಣಿ ಹೇಳಿದ್ದು ಮಹದೇವನಿಗೆ ಅಸ್ಪಷ್ಟವಾಗಿ ನೆನಪಿದೆ. ಹತ್ತೊಂಬತ್ತನೆಯ ವಯಸ್ಸಿನಲ್ಲಿ ಅಂತೋಣಿ ತುಂಬಿದ ಆತ್ಮವಿಶ್ವಾಸ, ಧೈರ್ಯ ಎರಡನ್ನೂ ಮಹದೇವ ಧಾರಾಳವಾಗಿ ಖರ್ಚು ಮಾಡುತ್ತಾ ಬಂದಿದ್ದಾನೆ. ಕಷ್ಟ ಎದುರಾದಾಗ ಅಂತೋಣಿಯನ್ನು ನೆನೆಯುತ್ತಾನೆ. ಸಂದಿಗ್ಧ ಬಂದಾಗ ಅಂತೋಣಿಯ ನೆನಪು ಮಾಡಿಕೊಳ್ಳುತ್ತಾನೆ. ಯಾರಾದರೂ ಗೊತ್ತಿಲ್ಲದ ಪ್ರಶ್ನೆ ಕೇಳಿದಾಗ, ಅಂತೋಣಿ ಸರ್ ಹತ್ರ ಕೇಳಿ ಹೇಳುತ್ತೇನೆ ಅನ್ನುತ್ತಾನೆ. ಅವನ ಗೆಳೆಯರು, ಹೆಂಡತಿ, ಮಕ್ಕಳು, ಸಹೋದ್ಯೋಗಿಗಳೆಲ್ಲ ಅಂತೋಣಿ ಎಂಬ ಮಹಾಮಹಿಮ ಎಲ್ಲೋ ಇದ್ದಾನೆ. ಅವನು ಮಹಾ ಪ್ರತಿಭಾವಂತ, ಮಹದೇವನ ಮ್ಯಾನೇಜ್‌ಮೆಂಟ್ ಗುರು ಎಂದು ನಂಬಿದ್ದಾರೆ.

-3-

ಅಂತೋಣಿ ಹೊಳೆಯಲ್ಲಿ ಮುಳುಗಿ ಸಾಯುವ ಮೊದಲು ಆಡಿದ ಮಾತನ್ನು ಮಾತ್ರ ಮಹದೇವನಿಗೆ ಡೀಕೋಡ್ ಮಾಡಲು ಸಾಧ್ಯವಾಗಿಲ್ಲ. ಎರಡು ಮೂರು ದಿನಗಳಿಂದ ಅಂತೋಣಿ ಸಪ್ಪಗಿದ್ದದ್ದು ಮಹದೇವನ ಗಮನಕ್ಕೂ ಬಂದಿತ್ತು. ದಿನಕ್ಕೊಂದು ಪೋಲಿ ಕತೆ ಹೇಳುತ್ತಿದ್ದ ಅಂತೋಣಿ, ಆ ಎರಡು ದಿನ ಮಾತ್ರ ಒಂಚೂರು ನಕ್ಕಿರಲಿಲ್ಲ. ಎಂದಿನಂತೆ ಅವನ ಬೆರಳುಗಳ ನಡುವೆ ಸಿಗರೇಟು ಉರಿಯುತ್ತಿರಲಿಲ್ಲ. ಅವನು ಶಾನುಭೋಗರ ಮನೆಯ ಗೇಟಿನ ಸಮೀಪದ ಕಲ್ಲುಬೆಂಚಿನ ಮೇಲೆ ಕುಳಿತಿರಲಿಲ್ಲ.

ಅವನಿಗೇನೋ ಆಗಿದೆ ಅಂತ ಮಹದೇವನಿಗೆ ಅನ್ನಿಸಿದ್ದರೂ ಮೊದಲ ದಿನ ಕೇಳುವುದಕ್ಕೆ ಧೈರ್ಯವಾಗಿರಲಿಲ್ಲ. ಅಂತೋಣಿ ಯಾವತ್ತೂ ಖಾಸಗಿ ವಿಷಯಗಳ ಕುರಿತು ಮಾತಾಡುತ್ತಲೇ ಇರಲಿಲ್ಲ. ಮಹದೇವ ಪಿಯು ಕಾಲೇಜಿನಿಂದ ಬರುತ್ತಿದ್ದ ಹಾಗೇ, ಸಿಗರೇಟು ಹೊಸಕಿ, ಅವನತ್ತ ನಡೆದುಬರುತ್ತಿದ್ದ ಅಂತೋಣಿ ಮುಗುಳ್ನಕ್ಕರೆ ಅದೇ ನಮಸ್ಕಾರ. ನಂತರ ಇದ್ದಕ್ಕಿದ್ದಂತೆ ಮಾತು ಶುರುಮಾಡುತ್ತಿದ್ದ `ಸೂರ್ಯಗ್ರಹಣದ ದಿನ ಸೂರ್ಯನನ್ನು ರಾಹು ನುಂಗುತ್ತದೆ, ಕೇತು ನುಂಗುತ್ತದೆ ಅಂತ ನಂಬಿದ್ದರಲ್ಲ. ಅದು ಸುಳ್ಳು ಅಂತ ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಜ್ಯೋತಿಷ್ಯಶಾಸ್ತ್ರದಲ್ಲಿ ರಾಹು ಕೇತು ನುಂಗುತ್ತದೆ ಅಂತ ಹೇಳಿಲ್ಲ. ಆವರಿಸಿಕೊಳ್ಳುತ್ತದೆ ಅಂತ ಬರೆದಿದ್ದಾರೆ. ಅದು ಸುಲಭವಾಗಿ ಅರ್ಥವಾಗಲಿ ಅಂತ ನುಂಗುತ್ತದೆ ಅಂತ ಮಕ್ಕಳಿಗೆ ಹೇಳಿಕೊಟ್ಟಿರ್ತಾರೆ. ಮುಟ್ಟಾದಾಗ ಕಾಗೆ ಮುಟ್ಟಿತು ಅಂತ ಹೇಳೋದಿಲ್ಲವ? ಅದು ಕಾಗೆ ಮುಟ್ಟುವುದಲ್ಲ ಅಂತ ಗೊತ್ತಿದ್ದರೂ ಹಾಗೆ ಹೇಳ್ತಾರಲ್ಲ, ಇದೂ ಹಾಗೆಯೇ. ಇದನ್ನು ಜನಪದದ ನುಡಿಗಟ್ಟು ಅಂತಾರೆ’ ಅಂತ ಹಿಂದುಮುಂದಿಲ್ಲದೇ ಮಾತು ಶುರುಮಾಡುತ್ತಿದ್ದ ಅಂತೋಣಿ, ಅದನ್ನೆಲ್ಲ ಹೇಳಲೆಂದೇ ಕಂಠಪಾಠ ಮಾಡಿಕೊಂಡು ಕಾಯುತ್ತಿದ್ದನೇನೋ ಅಂತ ಯಾರಿಗೇ ಆದರೂ ಅನ್ನಿಸುತ್ತಿತ್ತು.

ಆ ಎರಡು ದಿನ ಅಂತೋಣಿ ಯಾಕೆ ಏನೂ ಮಾತಾಡದೇ ಸುಮ್ಮನಿದ್ದ ಅನ್ನುವುದು ಮಹದೇವನಿಗೆ ಗೊತ್ತಾಗದೇ ಹೋದರೂ, ಮೌನವಾಗಿರುವ ಅಂತೋಣಿಯನ್ನು ಸಹಿಸಿಕೊಳ್ಳುವುದು ಕಷ್ಟ ಎನ್ನುವುದು ಮಾತ್ರ ಅರಿವಾಯಿತು. ಒಳ್ಳೆಯವರ ಮೌನವನ್ನೂ ಕೆಟ್ಟವರ ಮಾತನ್ನೂ ತಡಕೊಳ್ಳುವುದು ಕಷ್ಟ ಅಂತ ಹಿಂದೊಮ್ಮೆ ಅಂತೋಣಿಯೇ ಹೇಳಿದ್ದು ನೆನಪಾಗಿತ್ತು. ಅಂತೋಣಿಯ ಹತ್ತಿರ ನಿನಗೇನಾಗಿದೆ ಅಂತ ಕೇಳುವುದೋ ಬೇಡವೋ ಅನ್ನುವ ಗೊಂದಲದಲ್ಲೇ ಎರಡು ದಿನ ಕಳೆದಿತ್ತು.

ಮೂರನೆಯ ದಿನ ಶಾನುಭೋಗರ ಮನೆಯ ಗೇಟಿನ ಮುಂದೆ  ಮೂರೋ ನಾಲ್ಕೋ ಮಂದಿ ಅಪರಿಚಿತರು ನಿಂತಿದ್ದರು. ಅವರನ್ನು ಮಹದೇವ ಆ ಮೊದಲು ಎಲ್ಲೂ ನೋಡಿರಲಿಲ್ಲ. ಆವತ್ತು ಮಹದೇವ ಮನೆಗೆ ಹೋಗುತ್ತಲೇ ಅಪ್ಪ ಆತಂಕದ ಸ್ವರದಲ್ಲಿ ನಿನಗೆ ಅಂತೋಣಿ ಗೊತ್ತಿದ್ದಾನಾ ಕೇಳಿದ್ದರು. ಮಹದೇವ ಕಣ್ಣೋಜಿಯಂತೆ ಅಂಟೋಣಿಯಾ, ಯಾರದು ಅಂತ ಕೇಳಿದ್ದ. ಗೊತ್ತಿಲ್ಲ ಅಲ್ವಾ.. ಅಷ್ಟು ಸಾಕು ಅಂದಿದ್ದರು ಅಪ್ಪ. ಅಂತೋಣಿಯ ಮೇಲೆ ಯಾವುದೋ ಅಪರಾಧದ ನೆರಳು ಬಿದ್ದಿದೆ ಅಂತ ಮಹದೇವನಿಗೆ ಅಸ್ಪಷ್ಟವಾಗಿ ಅನ್ನಿಸತೊಡಗಿತ್ತು.

ಅದಾದ ನಂತರ ಅಂತೋಣಿ ಇದ್ದಕ್ಕಿದ್ದಂತೆ ಊರು ತುಂಬ ಹಬ್ಬಿದ. ಎಲ್ಲರೂ ಅವನ ಕುರಿತೇ ಮಾತಾಡುತ್ತಿದ್ದರು. ಅಂತೋಣಿ ಹುಡುಗರನ್ನೂ ಹುಡುಗಿಯರನ್ನೂ ಮತಾಂತರ ಮಾಡಿಸುತ್ತಾನೆ ಅಂತ ಒಂದು ಗುಂಪು ಹೇಳುತ್ತಿತ್ತು. ಅವನು ಗಾಂಜಾ ಮಾರುತ್ತಾನೆ. ಅದಕ್ಕಾಗಿಯೇ ಅವನು ಈ ಊರಿಗೆ ಬಂದಿದ್ದಾನೆ ಅಂತ ಮತ್ತೊಂದಷ್ಟು ಜನ ಹೇಳುತ್ತಿದ್ದರು. ಅವನು ಶಾನುಭೋಗರ ಮಗಳು ಗೀತಾಳಿಗೆ ಲವ್ ಲೆಟರ್ ಬರೆದುಕೊಟ್ಟಿದ್ದಾನೆ ಅನ್ನುವ ಸುದ್ದಿಯೂ ಹಬ್ಬಿತು. ಇವೆಲ್ಲಕ್ಕೂ ಮೀರಿದ ಒಂದು ಸುದ್ದಿ ಅಂತೋಣಿಯ ಅಸ್ತಿತ್ವಕ್ಕೇ ಮುಳುವಾಗುವಂತೆ ಊರನ್ನು ಸುತ್ತತೊಡಗಿತು.

ಅಂತೋಣಿಯ ಅಪ್ಪ ಆಲ್ಬರ್ಟ್  ಅದೇ ಊರಿನವನು. ಆ ಊರಲ್ಲಿರುವುದೆಲ್ಲ ಆಲ್ಬರ್ಟ್ ಆಸ್ತಿಯೇ. ಬ್ರಿಟಿಷರ ಕಾಲಕ್ಕೆ ಆ ಊರು ಬ್ರಿಟಿಷರು ಕುದುರೆಗಳನ್ನು ಮೇಯಿಸುವ ಜಾಗವಾಗಿತ್ತು. ಕುದುರೆ ಮೇಯಿಸುತ್ತಿದ್ದ ಫ್ರಾನ್ಸಿಸ್ ಅನ್ನುವವನಿಗೆ ಇಡೀ ಜಾಗವನ್ನು ಬ್ರಿಟಿಷರು ಬರೆದು ಕೊಟ್ಟಿದ್ದರು. ಫ್ರಾನ್ಸಿಸ್ ನಂತರ ಆ ಜಾಗ ಅವನ ಮಗ ಜಾನ್ಸನ್‌ಗೆ ಬಂತು. ನಂತರ ಅವನ ಮಗ ಅಲ್ಬರ್ಟ್‌ಗೆ ಬಂತು. ಕುಡುಕನೂ ಸ್ತ್ರೀವ್ಯಾಮೋಹಿಯೂ ಆಗಿದ್ದ ಆಲ್ಬರ್ಟ್ ಆ ಜಾಗವನ್ನು ಕಂಡಕಂಡವರಿಗೆ ಹಂಚಿದ್ದ. ಆಲ್ಬರ್ಟ್ ಹೆಂಡತಿ ಅವನ ಅವತಾರ ತಾಳಲಾರದೆ, ಒಂದು ದಿನ ಪುಟ್ಟ ಮಗುವನ್ನು ಕರಕೊಂಡು ತವರು ಮನೆಗೆ ಹೋದ ನಂತರ, ಆಲ್ಬರ್ಟ್ ಕಾಟ ಮತ್ತೂ ಹೆಚ್ಚಾಯಿತು.

ಆಲ್ಬರ್ಟ್ ಆರೂವರೆ ಅಡಿ ಎತ್ತರವಿದ್ದ. ಅವನ ತೋಳುಗಳು ಒನಕೆಯಂತಿದ್ದವು. ಕುಳಿತರೆ ಎರಡು ಕೇಜಿ ಹಂದಿಯನ್ನು ಲೀಲಾಜಾಲವಾಗಿ ತಿನ್ನುತ್ತಿದ್ದ. ಲೀಟರ್‌ಗಟ್ಟಲೆ ಹೆಂಡ ಕುಡಿಯುತ್ತಿದ್ದ. ನಂತರ ಅವನ ಬೇಟೆ ಶುರುವಾಗುತ್ತಿತ್ತು. ಹೆಣ್ಣುಗಳನ್ನು ಹುಡುಕಿಕೊಂಡು ಹೊರಡುತ್ತಿದ್ದ. ಅವನ ಮೇಲೆ ಊರಿನ ಮಂದಿಗೆ ಅಪಾರ ಸಿಟ್ಟಿತ್ತು. ಆದರೆ ಅವನು ಹಂಚುತ್ತಿದ್ದ ಭೂಮಿಯ ಮೇಲಿನ ಮೋಹವೂ ಇತ್ತು. ಹೀಗಾಗಿ ಮನಸ್ಸಿಲ್ಲದ ಮನಸ್ಸಿನಿಂದ, ಮನಸ್ಸಿದ್ದರೂ ಮನಸ್ಸಿಲ್ಲದಂತೆ ನಟಿಸುತ್ತಾ ಅವನನ್ನು ಸಹಿಸಿಕೊಳ್ಳುತ್ತಿದ್ದರು. ಕೂಲಿನಾಲಿ ಮಾಡುತ್ತಿದ್ದವರೆಲ್ಲ ಆಲ್ಬರ್ಟ್ ದೆಸೆಯಿಂದ ಗದ್ದೆ, ತೋಟ, ಮನೆ ಮಾಡಿಕೊಂಡರು.

ಇದ್ದಕ್ಕಿದ್ದಂತೆ ಒಂದು ದಿನ ಆಲ್ಬರ್ಟ್ ಕಾಣೆಯಾದ. ಅವನು ಎಲ್ಲಿಗೆ ಹೋದ ಎಂಬುದು ಯಾರಿಗೂ ಗೊತ್ತಾಗಲೇ ಇಲ್ಲ. ಅವನನ್ನು ಹುಡುಕುವ ಪ್ರಯತ್ನವನ್ನೂ ಯಾರೂ ಮಾಡಲಿಲ್ಲ. ಆಲ್ಬರ್ಟ್ ಮನೆ ಮತ್ತು ಮನೆಯ ಸುತ್ತಮುತ್ತ ಇದ್ದ ಹತ್ತಾರು ಎಕರೆಯನ್ನು ಶಾನುಭೋಗರು ತಮ್ಮದನ್ನಾಗಿ ಮಾಡಿಕೊಂಡರು.

ಇದೆಲ್ಲ ಆಗಿ ಹದಿನೈದು ವರ್ಷಗಳ ನಂತರ, ಆ ಊರಲ್ಲಿ ಅಂತೋಣಿ ಕಾಣಿಸಿಕೊಂಡಿದ್ದ. ಅವನ ಮೇಲೆ ಊರ ಮಂದಿ ನೂರಾರು ಆರೋಪಗಳನ್ನು ಮಾಡಲು ಮುಖ್ಯ ಕಾರಣ ಅವನು ಆಲ್ಬರ್ಟ್ ಮಗ ಅನ್ನುವುದೇ ಆಗಿತ್ತು. ಅಂತೋಣಿ ಊರಿಗೆ ಬಂದಿರುವುದೇ ಅಪ್ಪನ ಆಸ್ತಿಗೋಸ್ಕರ. ಆಸ್ತಿ ಪತ್ರ ಅವನ ಹತ್ತಿರ ಇದೆ. ಅದನ್ನಿಟ್ಟುಕೊಂಡು ಅವನು ಕೋರ್ಟಿಗೆ ಹೋದರೆ ಊರಿಗೆ ಊರೇ ತಾವಿರುವ ಜಾಗ ಮನೆ ಬಿಡಬೇಕಾಗುತ್ತದೆ ಎಂಬ ಸುದ್ದಿ ಹಬ್ಬಿದ್ದೇ ತಡ, ಅಂತೋಣಿಯನ್ನು ಯಾವುದಾದರೂ ಒಂದು ಪ್ರಕರಣದಲ್ಲಿ ಸಿಲುಕಿಸಲಿಕ್ಕೆ ಜನ ಕಾಯತೊಡಗಿದರು.

ಇದೆಲ್ಲ ಎಷ್ಟು ಸೂಕ್ಷ್ಮವಾಗಿ ನಡೆಯಿತು ಅಂತ ಮಹದೇವನಿಗೆ ಆಶ್ಚರ್ಯವಾಗುತ್ತದೆ. ಈ ಪ್ರಸಂಗವೆಲ್ಲ ಮಹದೇವನಿಗೆ ಗೊತ್ತಾದದ್ದು ಅಂತೋಣಿ ಸತ್ತ ನಂತರವೇ. ಆದರೆ ಅಂತೋಣಿ ಇದ್ದಾಗಲೇ ಜನ ಒಳಗೊಳಗೇ ಅವನನ್ನು ಹಿಂಬಾಲಿಸುತ್ತಿದ್ದರು. ಅವನ ಚಲನವಲನಗಳನ್ನು ಗುಟ್ಟಾಗಿ ಗಮನಿಸುತ್ತಿದ್ದರು ಅಂತ ಮಹದೇವನಿಗೆ ಆಮೇಲಾಮೇಲೆ ಅರಿವಾಯಿತು.

ಇದನ್ನೂ ಓದಿ: Sunday Read: ಚಿಂತಾಮಣಿ ಕೊಡ್ಲೆಕೆರೆ ಕಥಾ ಸಂಕಲನ ʼಭರತದ ಮಧ್ಯಾಹ್ನʼ

ಅಂತೋಣಿ ಸಾಯುವ ಹಿಂದಿನ ದಿನ ಮಹದೇವನಿಗೆ ಒಂದು ಚೀಟಿ ಸಿಕ್ಕಿತ್ತು. ಮಹದೇವ ನಡೆದುಹೋಗುವ ದಾರಿಯಲ್ಲಿ ಆ ಚೀಟಿಯನ್ನು ಒಂದು ಕಲ್ಲಿಗೆ ಸುತ್ತಿ ಅವರಿಬ್ಬರೂ ಕುಳಿತುಕೊಳ್ಳುತ್ತಿದ್ದ ಮರದ ಕೊಂಬೆಗೆ ಸಿಕ್ಕಿಸಿದ್ದ. ಉದಾಸೀನದಿಂದ ನಡೆದುಕೊಂಡು ಬರುತ್ತಿದ್ದ ಮಹದೇವನಿಗೆ ಆ ಕಲ್ಲೂ ಚೀಟಿಯೂ ಕಣ್ಣಿಗೆ ಬಿದ್ದು, ಓದಿ ನೋಡಿದರೆ `ನಾಳೆ ಸಂಜೆ ಐದು ಗಂಟೆಗೆ ಹೊಳೆಯ ಹತ್ತಿರ ಬಾ. ಮಾತಾಡುವುದಿದೆ’ ಅಂತ ಅಂತೋಣಿ ಬರೆದಿಟ್ಟಿದ್ದ.

-4-

ಮಹಾದೇವನನ್ನು ಮುಂದೆ ಕೂರಿಸಿಕೊಂಡು ಅವರೆಲ್ಲ ಕೊತಕೊತ ಕುದಿಯುತ್ತಾ ಕೂತಿದ್ದರು. `ಗೊತ್ತಿದ್ದರೆ ಹೇಳಪ್ಪಿ. ನಿಂಗೆ ಯಾವ ಸೀಮೆ ಫ್ರೆಂಡು ಅಂವ. ಫಟಿಂಗ. ನಮ್ಮನ್ನೆಲ್ಲ ಹಾಳು ಮಾಡಲಿಕ್ಕೇ ಬಂದವನು’.

`ಹೇಳ್ತಾನೆ ಬಿಡ್ರೀ. ಮಹದೇವ ನಮ್ಮೂರಿನ ಹುಡುಗ. ನಮ್ಮೂರಿನ ಮೇಲೆ ಅವನಿಗೆ ಪ್ರೀತಿ ಇರಬೇಕು.ಇದೆ. ಯಾರೋ ಬಂದು ನಮ್ಮನ್ನೆಲ್ಲ ಊರು ಬಿಡಿಸ್ತಾರೆ ಅಂದ್ರೆ ನಮ್ಮ ಮಹದೇವ ಸುಮ್ನಿರೋದಿಲ್ಲ’

‘ಹೇಳ್ಲಿಲ್ಲ ಅಂದ್ರೆ ಅವನಿಗೆ ಏನು ಮಾಡಬೇಕೂಂತ ಇದ್ವೋ ಅದನ್ನೇ ನಿಂಗೂ ಮಾಡ್ತೀವಿ’

‘ಹಾಗೆಲ್ಲ ಮಾತಾಡಬಾರದು. ಸುಮ್ನಿರೋ. ಮಹದೇವ ನಮ್ಮವನು..’

ಹೊಳೆಬದಿಗೆ ಅವರೆಲ್ಲ ಹೋದರು. ಮಹದೇವ ಹೋಗಲಿಲ್ಲ

-5-

ಆ ರಾತ್ರಿ ಕನಸಲ್ಲಿ ಅಂತೋಣಿ ಬಂದಿದ್ದ.

ಅವನನು ನೀರಲ್ಲಿ ಎರಡು ಸಲ ಮುಳುಗಿ, ಮೂರನೇ ಸಲ ಮೇಲೆ ಬಂದು ಮಹದೇವನ ಕಡೆ ಕೊಂಚವೇ ತಿರುಗಿ ಏನೋ ಹೇಳಲು ಯತ್ನಿಸಿದ. ಅವನ ಶ್ವಾಸಕೋಶದಲ್ಲಿ ನೀರು ತುಂಬಿತ್ತು. ಮಾತುಗಳು ಕೇಳಿಸುತ್ತಿರಲಿಲ್ಲ. ಅಸ್ಪಷ್ಟವಾಗಿ ಗುಳುಗುಳಗುಳುಗುಳ ಅಂತೇನೋ ಕೇಳಿಸಿತು. ಮತ್ತೊಮ್ಮೆ ಅದನ್ನು ಕೇಳಿಸಿಕೊಂಡರೆ ಅರ್ಥವಾದೀತೇನೋ ಅಂತ ಮಹದೇವ ಆ ಕನಸಿಗಾಗಿ ಕಾಯುತ್ತಲೇ ಇದ್ದಾನೆ. ಅವನಿಗೆ ಇದುವರೆಗೂ ಅಂತೋಣಿಯ ಕನಸು ಬಿದ್ದಿಲ್ಲ.

ಅಂತೋಣಿಯ ಮಾತುಗಳನ್ನು ಡೀಕೋಡ್ ಮಾಡಲು ಮಹದೇವ ಪ್ರಯತ್ನಪಡುತ್ತಲೇ ಇದ್ದಾನೆ. ಆದರೆ ಪ್ರತಿಸಲವೂ ಸೋಲುತ್ತಾನೆ. ಮೀಟಿಂಗು ನಡೆಯುತ್ತಿದ್ದಾಗ, ಊಟ ಮಾಡುವಾಗ, ಪ್ರೇಮಿಸುವಾಗ ಅಂತೋಣಿಯ ಕೊನೆಯ ಮಾತು ಕಿವಿಗೆ ಬೀಳುತ್ತದೆ.

ಅಂತೋಣಿಯ ಕೊನೆಯ ಮಾತು ಏನಿರಬಹುದು ಎಂದು ತಿಳಿಯಲು ಮಹದೇವ ಸಾಕಷ್ಟು ಪ್ರಯತ್ನಪಟ್ಟು ಸೋತಿದ್ದಾನೆ. ಮನೋವೈದ್ಯರನ್ನು ಭೇಟಿಯಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಂಡವರು ಬರೆದಿಟ್ಟ ಡೆತ್ ನೋಟ್, ಸಾಯುವವರ ಕೊನೆಯಾಸೆಗಳು, ನೇಣಿಗೆ ಹಾಕುವಾಗ ಎದುರಲ್ಲಿದ್ದ ಪೊಲೀಸ್ ಅಧಿಕಾರಿಗಳ ನೆನಪುಗಳನ್ನೆಲ್ಲ ಜಾಲಾಡಿಸಿದರೂ ಅವನಿಗೆ ಉತ್ತರ ಸಿಕ್ಕಿಲ್ಲ. ಮಹದೇವ ಮತ್ತೆ ಮತ್ತೆ ಕೇಳಿದಾಗ ಅವನ ಹೆಂಡತಿ ಉಮಾಳಿಗೆ ಸಿಟ್ಟು ನೆತ್ತಿಗೆ ಹತ್ತಿ, ‘ನೀವೊಂದು ಸಲ ಹೊಳೆಗೆ ಹಾರಿ. ಮೂರನೇ ಸಲ ಮೇಲೆ ಬರುವಾಗ ಏನು ಹೇಳ್ತೀರಿ ಅಂತ ನಿಮಗೇ ಗೊತ್ತಾಗ್ತದೆ’ ಅಂದ ನಂತರ, ಮಹದೇವ ಆ ಬಗ್ಗೆ ಮನೆಯಲ್ಲಿ ಮಾತಾಡುವುದನ್ನು ನಿಲ್ಲಿಸಿದ್ದಾನೆ.

ಮಹದೇವ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಅಂತ ಯಾವತ್ತೋ ಪತ್ರಿಕೆಯಲ್ಲಿ ಬಂದರೆ, ಈ ಕತೆ ಓದಿದ ನೀವೂ ನಾನೂ ಅವನು ಹೊಳೆಗೆ ಹಾರಿದ್ದು ಬೇರೆ ಯಾವ ಕಾರಣಕ್ಕೂ ಅಲ್ಲ, ನೀರಿನಲ್ಲಿ ಮುಳುಗಿ ಸಾಯುವವನು ಮೂರನೇ ಸಲ ಮೇಲೆ ಬಂದಾಗ ಏನು ಹೇಳುತ್ತಾನೆ ಅನ್ನುವುದನ್ನು ತಿಳಿದುಕೊಳ್ಳುವ ಅದಮ್ಯ ಆಸೆಯಿಂದ ಎಂದು ತೀರ್ಮಾನಿಸಬಹುದು.

ಪುಸ್ತಕ: ಚಿಯರ್ಸ್‌, drink life like a fish
ಲೇಖಕ: ಜೋಗಿ
ಪ್ರಕಾಶನ: ಸಾವಣ್ಣ ಪ್ರಕಾಶನ
ಬೆಲೆ: 150 ರೂ.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಎಚ್‌.ಎಸ್‌ ವೆಂಕಟೇಶಮೂರ್ತಿ ಹೊಸ ಕವನ ಸಂಕಲನದ ಕವಿತೆ: ಕಾಂಚನಜುಂಗ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮೈಸೂರು

Book Release: ಮೈಸೂರಿನಲ್ಲಿ ಮೇ 9ರಂದು ಐತಿಚಂಡ ರಮೇಶ ಉತ್ತಪ್ಪ ಅವರ 4 ಪುಸ್ತಕ ಬಿಡುಗಡೆ, ಸಂವಾದ

Book Release: ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

Ithichanda Ramesh Uthappaʼs Four books to be released in Mysore on May 9
Koo

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ, ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶನ ಹಾಗೂ ಮೈಸೂರು ಕಲ್ಚರಲ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ (Ithichanda Ramesh Uthappa) ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮವನ್ನು (Book Release) ನಗರದ ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು ಉದ್ಘಾಟಿಸಲಿದ್ದು, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಹಾಗೂ ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಭಾಗವಹಿಸಲಿದ್ದಾರೆ.

ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ.ಎಸ್. ಸಪ್ನ ಅವರು ಅಧ್ಯಕ್ಷತೆ ವಹಿಸಲಿದ್ದು, ವಿಶೇಷ ಅತಿಥಿಗಳಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ ಹಾಜರಿರಲಿದ್ದಾರೆ.

ಇದನ್ನೂ ಓದಿ | ರಾಜಮಾರ್ಗ ಅಂಕಣ: ಶೇಕ್ಸ್‌ಪಿಯರ್‌ ನೆನಪಿನಲ್ಲಿ ಓದುವ ಸುಖ ನೆನಪಿಸಿಕೊಳ್ಳುವ ಹೊತ್ತು

ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ಕೆ.ಪುಟ್ಟಸ್ವಾಮಿ, ಸಹ ಪ್ರಾಧ್ಯಾಪಕರಾದ ಪ್ರೊ. ಎನ್. ಮಮತ, ಪುಸ್ತಕಗಳ ಲೇಖಕರಾದ ಐತಿಚಂಡ ರಮೇಶ್ ಉತ್ತಪ್ಪ, ಪ್ರಕಾಶಕ ಚೇತನ್ ಕಣಬೂರು, ಮೈಸೂರು ಕಲ್ಬರಲ್ ಅಸೋಸಿಯೇಷನ್‌ನ ಎ.ಪಿ.ನಾಗೇಶ್ ಉಪಸ್ಥಿತರಿರಲಿದ್ದಾರೆ.

ಬಿಡುಗಡೆಯಾಗಲಿರುವ ಕೃತಿಗಳು

  • ಕಾಡು ಹೇಳಿದ ಕಥೆ: ವೈಲ್ಡ್‌ ಲೈಫ್ ರಿಪೋರ್ಟಿಂಗ್
  • ಹಾವು: ನಂಬಿಕೆ ಹಾಗೂ ಮನೋವೈಜ್ಞಾನಿಕ ವಿಶ್ಲೇಷಣೆ
  • ಆನೆ: ಬದಲಾದ ವರ್ತನೆ
  • ಅರ್ಜುನ ನಿನ್ನ ಮರೆಯಲೆಂತು ನಾ..!
Continue Reading

ಅಂಕಣ

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

ಧವಳ ಧಾರಿಣಿ ಅಂಕಣ: ಕಾಮವೆನ್ನುವುದು ಎಂತಹವರನ್ನೂ ತಲೆಕೆಡಿಸಿಬಿಡುತ್ತದೆ. ಕಾಮದ ಹುಚ್ಚಿನಲ್ಲಿರುವ ದಶರಥ ತನ್ನ ಸುಖಕ್ಕಾಗಿ ಏನನ್ನು ಮಾಡಲೂ ಹೇಸದ ಸ್ಥಿತಿಗೆ ತಲುಪಿದ್ದಾನೆ. ವಧಾರ್ಹನಲ್ಲದವನನ್ನು ವಧಿಸಲೇ, ಮರಣದಂಡನೆಗೆ ಗುರಿಯಾದವನನ್ನು ಬಿಡಿಸಲೇ, ದರಿದ್ರನನ್ನು ಶ್ರೀಮಂತನನ್ನಾಗಿ ಮಾಡಲೇ, ಶ್ರೀಮಂತನನ್ನು ದರಿದ್ರನನ್ನಾಗಿ ಮಾಡಲೇ; ನಿನ್ನ ಪ್ರೀತಿಗಾಗಿ ಏನನ್ನೂ ಮಾಡಲೂ ತಾನು ಸಿದ್ಧ ಎನ್ನುತ್ತಾನೆ.

VISTARANEWS.COM


on

king dasharatha kaikeyi dhavala dharini column
Koo

ಪ್ರಾಣಕ್ಕಿಂತ ಪ್ರಿಯಳಾದ ಸತಿಯಿಂದ ಪ್ರಾಪ್ತವಾದ ಪುತ್ರ ವಿಯೋಗ

dhavala dharini by Narayana yaji

ಧವಳ ಧಾರಿಣಿ ಅಂಕಣ: ಸ ಕೈಕೇಯ್ಯಾ ಗೃಹಂ ಶ್ರೇಷ್ಠಂ ಪ್ರವಿವೇಶ ಮಹಾಯಶಾಃ
ಪಾಣ್ಡುರಾಭ್ರಮಿವಾಕಾಶಂ ರಾಹುಯುಕ್ತಂ ನಿಶಾಕರಃ ৷৷ಅ.ಯೋ.10.11৷৷

ಬಿಳಿಯದಾದ ಮೋಡಗಳಿಂದ ಕೂಡಿದ ಆಕಾಶದಲ್ಲಿ ರಾಹುವಿಗೆ ಗ್ರಾಸವಾಗುವ ಸಲುವಾಗಿ ಚಂದ್ರನು ಪ್ರವೇಶಿಸುವಂತೆ ಮಹಾಯಶೋವಂತನಾದ ರಾಜನು ಭವ್ಯವಾದ ಕೈಕೇಯಿಯ ಅಂತಃಪುರವನ್ನು ಪ್ರವೇಶಿಸಿದನು.

ಕವಿಸಮಯವೆನ್ನುವದು ರಾಮಾಯಣ ಕಾವ್ಯದ ವಿಶೇಷ. ವಾಲ್ಮೀಕಿ ಕಾವ್ಯವನ್ನು ಕೇವಲ ಉಅಪದೇಶಕ್ಕಾಗಿಯಲ್ಲ, ಅದನ್ನು ತಾಳವಾದ್ಯಗಳೊಂದಿಗೆ ರಾಗವಾಗಿ ಹಾಡಲು ಅನುಕೂಲವಾಗುವಂತೆ ಬರೆದಿದ್ದಾನೆ. ಹಾಡುಗಾರಿಕೆಯಲ್ಲಿ ವರ್ಣನೆಗೆ ಮಹತ್ವ ಬರುತ್ತದೆ. ಕಾವ್ಯದ ಮುಂಗಾಣ್ಕೆ ಅಲ್ಲಲ್ಲಿ ವ್ಯಕ್ತವಾಗುತ್ತಾ ಹೋಗುತ್ತದೆ. ಕೈಕೇಯಿಯ ಅರಮನೆಗೆ ಹೋಗುವ ರಾಜನ ಕುರಿತು ವರ್ಣಿಸುವಾಗ ಬಿಳಿಯದಾದ ಮೋಡ, ರಾಹು, ಆಕಾಶ, ಚಂದ್ರ ಎನ್ನುವ ಉಪಮೆಗಳ ಮೂಲಕ ಹೇಳಿದ್ದಾನೆ. ಆಕಾಶ ಎನ್ನುವುದು ಮನಸ್ಸಿನಲ್ಲಿ ಆಸೆಗಳ ವಿಸ್ತಾರದವನ್ನು ಸೂಚಿಸಿದೆ. ಬಿಳಿಯದಾದ ಮೋಡವೆನ್ನುವದು ಅರ್ಥಪೂರ್ಣವಾದ ಉಪಮೆ. ನೀರಿನಿಂದ ಯುಕ್ತವಾದ ಮೋಡ ಕಪ್ಪಾಗಿರುತ್ತದೆ. ಮನಸ್ಸಿನಲ್ಲಿ ತನ್ನ ಮಗನ ಪಟ್ಟಾಭಿಷೇಕದ ಕುರಿತು ಯಾವ ಆಸೆಯನ್ನೇ ಇರಿಸಿಕೊಳ್ಳಲಿ, ಅದೆಲ್ಲವೂ ನೀರಿಲ್ಲದ ಮೋಡದಂತೆ ವ್ಯರ್ಥವಾಗಿ ಹಾರಿಹೋಗುತ್ತದೆ ಎನ್ನುವುದನ್ನು ಹೇಳುತ್ತಾನೆ. ರಾಹು ಮತ್ತು ಕೇತುಗಳು ಭಾರತೀಯ ಖಗೋಳಶಸ್ತ್ರದ ಪ್ರಕಾರ ಎರಡು ವಿರುದ್ಧದಿಕ್ಕುಗಳಲ್ಲಿರುವ ಬಿಂದುಗಳು. ಈ ಬಿಂದುವಿಗೆ ಸೂರ್ಯಚಂದರು ಬಂದಾಗ ಗ್ರಹಣವಾಗುತ್ತದೆ. ಚಂದ್ರ ಮನಸ್ಸಿನ ಕಾರಕ. ಸಂತೊಷ ಮತ್ತು ಕಾಮವಿಕಾರಗಳು ಮನಸ್ಸಿನಲ್ಲಿ ಉತ್ಪನ್ನವಾಗುವಂತವು. ಚಂದ್ರ ತನ್ನ ಪರಿಭ್ರಮಣದಲ್ಲಿ ರಾಹುವಿನ ಬಿಂದುವಿಗೆ ಬಂದಾಗ ಗ್ರಹಣವಾಗಿ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತಾನೋ ಅದೇರಿತಿ ರಾಜ ತನ್ನೆಲ್ಲ ಕನಸನ್ನು ಕಳೆದುಕೊಂಡು ನಿಶ್ಚಿತವಾಗಿ ಮರಣದತ್ತ ಸಾಗಲು ಬಂದಿದ್ದಾನೆ ಎನ್ನುವುದನ್ನು ಉಪಮಾಮಲಂಕಾರದಲ್ಲಿ ಕವಿ ವರ್ಣಿಸಿದ್ದಾನೆ.

ದಶರಥನ ಪಾತ್ರವನ್ನು ವಿವೇಚಿಸುವಾಗ ಮೊದಲಿನಿಂದಲೂ ಕಂಡುಬಂದ ಅಂಶವೆಂದರೆ ಮಹಾನ್ ರಾಜರ್ಶಿಯಾಗಿದ್ದ ದೊರೆ ರಾಮನ ಕುರಿತು ಕಡುಲೋಭಿಯಾಗಿ ಪರಿವರ್ತನೆಯಾಗಿರುವುದನ್ನು ಗಮನಿಸಬಹುದು. ದಶರಥನ ವ್ಯಕ್ತಿತ್ವವೆನ್ನುವುದು ಸಂಕೀರ್ಣವೇನೂ ಅಲ್ಲ. ಶೂರನಾಗಿದ್ದ; ಸೂರ್ಯವಂಶದ ಧ್ಯೇಯೋದ್ಧಶವಾದ ಧರ್ಮಸ್ಥಾಪನೆಯ ವಿಷಯದಲ್ಲಿ ಸದಾ ನಿರತನಾಗಿದ್ದ. ಅದೇ ಕಾಲಕ್ಕೆ ಅಯೋಧ್ಯೆಯ ಸಿಂಹಾಸನವೆನ್ನುವುದು ಗಣತಂತ್ರವ್ಯವಸ್ಥೆಯಲ್ಲಿ ಇತ್ತು. ರಾಜರಾಗುವವರು ಯಾರೇ ಆದರೂ ಅದಕ್ಕೆ ಪ್ರಜೆಗಳ ಒಪ್ಪಿಗೆ ಪಡೆಯಬೇಕಾಗಿತ್ತು. ಪ್ರಾಚೀನ ಗ್ರೀಸಿನಲ್ಲಿದ್ದ ರೀತಿಯ ಗಣತಂತ್ರವ್ಯವಸ್ಥೆ ಅಯೋಧ್ಯೆಯಲ್ಲಿ ಇತ್ತು ಎನ್ನುವುದಕ್ಕೆ ವಾಲ್ಮೀಕಿಯ ರಾಮಾಯಣವನ್ನು ಮತ್ತು ಮತ್ತು ಪ್ಲೇಟೋವಿನ “The Republic” ಕೃತಿಯನ್ನು ತುಲನೆ ಮಾಡಿದಾಗ ಅನಿಸುತ್ತದೆ. ಅದನ್ನು ಕೇವಲ ತೋರಿಕೆಗಾಗಿ ಆಚರಣೆಯಲ್ಲಿ ಇಟ್ಟು ತನಗೆ ಬೇಕಾದಂತೆ ಉತ್ತರಾಧಿಕಾರಿಯನ್ನು ಆರಿಸುವ ತಂತ್ರವನ್ನು ದಶರಥ ಅನುಸರಿಸಿರುವುದು ರಾಮನಿಗೆ ಪಟ್ಟಗಟ್ಟಬೇಕೆನ್ನುವ ಸಂದರ್ಭದಲ್ಲಿ ಕಾಣಬಹುದು. ಆತನ ಚಾಣಾಕ್ಷನಡೆಯ ಒಳಗಿರುವದು ತನ್ನದು ಎನ್ನುವ ಮೋಹದ ಅರಿವು ಎನ್ನುವುದು ಯಾರ ಗಮನಕ್ಕೂ, ಹೆಚ್ಚೇನು ರಾಮನ ಅರಿವಿಗೂ ಬಾರದ ಹಾಗೆ ನಡೆದುಕೊಂಡಿದ್ದಾನೆ. ಪರಿಪೂರ್ಣ ವ್ಯಕ್ತಿತ್ವದ ರಾಮನಂತಹ ದೊರೆ ತಮಗೆ ಸಿಗುತ್ತಾನೆ ಎನ್ನುವ ಕಾರಣಕ್ಕೆ ಪ್ರಜೆಗಳು ಸಂಭ್ರಮಿಸುವುದು ಸಹಜವೇ ಆಗಿದೆ. ತಾನು ಅಶ್ವಪತಿಗೆ ಕೊಟ್ಟ ಮಾತುಗಳು ಹೀಗೆ ಮರೆಯಾದ ಕಾರಣ ಅದು ದೊರೆಗೆ ಅಪರಿಮಿತ ಸಂತೋಷವನ್ನು ಕೊಟ್ಟಿದೆ. ಇಳಿವಯಸ್ಸಿನಲ್ಲಿ ಕಿರಿಯ ಚಲುವೆಯಾದ ಕೈಕೇಯಿಯ ಹಿಂದೆ ಬಿದ್ದಿದ್ದ ದೊರೆಗೆ ವೃದ್ದಾಪ್ಯದಲ್ಲಿ ಮಕ್ಕಳಾದ ಮೇಲೆ ರಾಮ ಎನ್ನುವ ಕುರುಡು ಮೋಹ ಆವರಿಸಿಕೊಂಡಿತ್ತು. ಆತನ ಕುರಿತು ಮಂಥರೆ ಹೇಳುವ ಮಾತು

ಧರ್ಮವಾದೀ ಶಠೋ ಭರ್ತಾ ಶ್ಲಕ್ಷ್ಣವಾದೀ ಚ ದಾರುಣಃ
ಶುದ್ಧಭಾವೇ ನ ಜಾನೀಷೇ ತೇನೈವ ಮತಿಸಂಧಿತಾ৷৷ಬಾ.ಕಾಂ.7.24৷৷

ನಿನ್ನ ಗಂಡನು ಮೇಲೆಮೇಲೆ ಧರ್ಮಸಮ್ಮತವಾದ ಮಾತುಗಳನ್ನು ಆಡುತ್ತಿದ್ದರೂ ಅಂತರಂಗದಲ್ಲಿ ಬಹಳ ಕಪಟಸ್ವಭಾವದವನು. ಬಾಯಲ್ಲಿ ಮೃದುವಾದ ಮಾತುಗಳನ್ನು ಆಡುತ್ತಿದ್ದರೂ ನಂಬಿಸಿ ಮೋಸಮಾಡುವುದು ಹೇಗೆಂದು ಯೋಚಿಸುತ್ತಿರುತ್ತಾನೆ. ಕರುಣೆಯೆನ್ನುವುದೇ ಇಲ್ಲ, ಬಹಳ ಋಜುಸ್ವಭಾವದವಳಾದ ನೀನು ಆತನ ಕಪಟವನ್ನು ಅರಿಯದೇ ಹೋದೆಯಲ್ಲವೇ.

ಮಂಥರೆ ಇಲ್ಲಿ ಕೈಕೇಯಿಯ ಮನಸ್ಸನ್ನು ತಿರುಗಿಸಲು ಹೇಳಿರುವಳಾದರೂ ಪಾಯಸವನ್ನು ತನ್ನ ರಾಣಿಯರಿಗೆ ಹಂಚುವಲ್ಲಿಂದ ಹಿಡಿದು ರಾಮಪಟ್ಟಾಭಿಷೇಕದ ವರೆಗೆ ದಶರಥ ಏಕಪಕ್ಷೀಯವಾಗಿ ತೆಗೆದುಕೊಂಡ ತೀರ್ಮಾನವನ್ನು ಗಮನಿಸಿದಾಗ ನಮ್ಮ ದೌರ್ಬಲ್ಯ ಶತ್ರುಗಳಿಗೆ ಆಯುಧ ಎನ್ನುವ ನೀತಿಶಾಸ್ತ್ರದ ಮಾತನ್ನು ನೆನಪಿಸುತ್ತದೆ. ಅಂತೂ ತನ್ನ ಕಾರ್ಯವಾದ ರಾಮನ ಪಟ್ಟಾಭಿಷೇಕದ ವಿಷಯದಲ್ಲಿ ಯಾವ ತೊಂದರೆಯಿಲ್ಲದೇ ಸಾಂಗವಾಗಿ ನಡೆಯುವುದು ಎನ್ನುವ ನಂಬಿಕೆಯೊಂದಿಗೆ ಸಂತೊಷವೆನ್ನುವುದು ಅತಿರೇಕಕ್ಕೆ ಹೋಗಿತ್ತು. ಸಂತೋಷ ಅತಿರೇಕಕ್ಕೆ ಹೋದಾಗ ಅದು ಮದಕ್ಕೆ ತಿರುಗುತ್ತದೆ. ಮದವೆನ್ನುವುದು ಕಾಮಕ್ಕೆ ಮೂಲ. ಅದನ್ನು ಇಳಿಸಿಕೊಳ್ಳಲು ಸಂಗಾತಿಯನ್ನು ಹುಡಿಕಿಕೊಳ್ಳುವುದು ಜೀವಿಗಳ ಸಹಜ ಕ್ರಿಯೆ. ಅರಸನಿಗೆ ತನ್ನ ಆಲೋಚನೆಯನ್ನು ಹಂಚಿಕೊಳ್ಳುವ ಸಂಗಾತಿಯ ಅಗತ್ಯ ತುರ್ತಾಗಿ ಎದುರಾಯಿತು. ವಶಿಷ್ಠರಲ್ಲಿಯಾಗಲಿ, ವಾಮದೇವರಲ್ಲಿಯಾಗಲಿ ಇದನ್ನೆಲ್ಲವನ್ನು ಹಂಚಿಕೊಳ್ಳಲು ಅವರೇನು ಸಾಮಾನ್ಯದವರಾಗಿರಲಿಲ್ಲ.

ರಾಮ ಯುವರಾಜ ಪಟ್ಟಕ್ಕೆ ಅರ್ಹನಾಗಿದ್ದರೂ, ಅಯೋಧ್ಯೆಯಲ್ಲಿ ಆ ಸಾಯಂಕಾಲ ನಡೆದ ಸಿದ್ಧತೆ ದಶರಥನ ವೈಯಕ್ತಿಕ ಕಾಮನೆಯ ಫಲವಾಗಿತ್ತು. ಪ್ರಜೆಗಳು ರಾಮನನ್ನು ರಾಜನ್ನಾಗಿ ನೋಡಲು ಬಯಸಿದ್ದರೆನ್ನುವುದು ನಿಜವಾದರೂ ಇಲ್ಲಿಮೊದಲ ಸಾರಿ ರಾಮನ ಪಟ್ಟಾಭಿಷೇಕಕ್ಕಾಗಿ ದಶರಥ ಹೇಗೆಲ್ಲಾ ಮಂಡಿಗೆಯನ್ನು ಹಾಕಿದ್ದ ಎನುವುದನ್ನು ಹಿಂದಿನ ಭಾಗಗಳಲ್ಲಿ ನೋಡಿದ್ದೇವೆ. ರಾಮನನ್ನು ಕೇವಲ ಮಗನಾಗಿ ಮಾತ್ರ ನೋಡಿದ್ದಾನೆಯೇ ಹೊರತು ವಿಶ್ವಾಮಿತ್ರ, ವಶಿಷ್ಠರು, ಪರಶುರಾಮ ಮೊದಲಾದವರಿಗೆ ರಾಮನ ಅವತಾರದ ಹಿಂದಿರುವ ದೈವತ್ವದ ದರ್ಶನ ಅರಸನಿಗೆ ಸಾಯುವವರೆಗೂ ಆಗಲೇ ಇಲ್ಲ. ರಾಮನಿಗೆ ಪಟ್ಟಗಟ್ಟುವ ತನ್ನ ಮನಸ್ಸಿನ ಮಂಡಿಗೆ ಯಶಸ್ವಿಯಾದ ವಿಷಯವನ್ನು ವಿವರವಾಗಿ ವರ್ಣಿಸಿ ಹೇಳಲು ಕಿರಿಯ ರಾಣಿಯಷ್ಟು ಆಪ್ತರು ಬೇರೆ ಯಾರೂ ಇಲ್ಲ. ಕೌಸಲ್ಯೆಗೆ ಹೇಳಿದರೆ ಆಕೆಗೆ ಸಂತೋಷವೇನೋ ಆಗಬಹುದಾದರೂ ಆಕೆಯಲ್ಲಿ ಕಾಮದ ಆಕರ್ಷಣೆ ದೊರೆಗೆ ಬತ್ತಿಹೋಗಿತ್ತು. ಸುಮಿತ್ರೆಯೂ ಅಷ್ಟೇ. ಚಿಕ್ಕವಯಸ್ಸಿನ ಕೈಕೆಯಿಯನ್ನು ಚೆನ್ನಾಗಿ ಮರಳುಮಾಡಿ ಇಟ್ಟುಕೊಂಡಿದ್ದ. ತನಗೆ ಬೇಕಾದ ಹಾಗೆ ಸುಖವನ್ನು ಅವಳಿಂದ ಪಡೆಯುತ್ತಿದ್ದ. ಆಕೆ ರಾಜನಿಗೋಸ್ಕರ ಅಲಂಕರಿಸಿಕೊಂಡು ನಗುಮುಖದಿಂದ ಯಾವತ್ತಿಗೂ ಸ್ವಾಗತಿಸಲು ಸಿದ್ಧಳಾಗಿರುತ್ತಿದ್ದಳು. ಕೈಕೇಯಿ ಮಂಥರೆಯ ಮಾತಿನಿಂದ ಪ್ರಭಾವಿತಳಾಗಿ ರಾಜನನ್ನು ಮಣಿಸಲೇ ಬೇಕೆಂದು ಕೋಪಾಗಾರವನ್ನು ಸೇರಿದರೆ ಇಳಿವಯಸ್ಸಿನ ರಾಜ “ರಾಮಾಭಿಷೇಕದ ಸಂತೋಷದ ವಾರ್ತೆಯನ್ನು ಕೈಕೇಯಿಗೆ ತಿಳಿಸಿ ರತಿಸುಖವನ್ನು ಪಡೆಯಬೇಕೆಂದು ಬಯಸಿ ಅತ್ಯಾಸೆಯಿಂದ ಕೈಕೇಯಿಯ ಅಂತಃಪುರಕ್ಕೆ ಧಾವಿಸಿ ಬರುತ್ತಾನೆ”.

ಕೈಕೇಯಿ ಅಂತಃಪುರದಲ್ಲಿ ಇಲ್ಲವಾಗಿರುವುದನ್ನು ಕಂಡವನಿಗೆ ವ್ಯಾಕುಲವಾಯಿತು. ಪ್ರತಿಹಾರಿ ಹೇಳಿದ “ದೇವ ದೇವಿ ಬೃಶಂ ಕ್ರುದ್ಧಾ ಕ್ರೋಧಾಗಾರಮಭಿದ್ರುತಾ-ಪರಮ ಕ್ರುದ್ಧೆಯಾಗಿ ದೇವಿ ಕೋಪಾಗಾರವನ್ನು ಸೇರಿದ್ದಾಳೆ” ಎನ್ನುವ ಮಾತನ್ನು ಕೇಳಿ ಕಂಗಾಲಾದ. ಕೋಪಾಗಾರಕ್ಕೆ ಧಾವಿಸಿ ನೋಡಿದರೆ ತನ್ನ ಪ್ರೇಯಸಿ ಅಸ್ತವ್ಯಸ್ತವಾಗಿ ನೆಲದ ಮೇಲೆ ಮಲಗಿದ್ದಾಳೆ. ಪ್ರಿಯತಮೆಯನ್ನು ಆಕಾಶದಿಂದ ಚ್ಯುತಳಾದ ಅಪ್ಸರೆಯಂತೆ ಕಂಡವನಿಗೆ ಎದೆಯೊಡೆದು ಹೋಯಿತು. “ನಿಷ್ಕಳಂಕನಾದ ದಶರಥ ಪಾಪಸಂಕಲ್ಪವನ್ನು ಹೊತ್ತ ಕೈಕೇಯಿಯನ್ನು ಕಂಡ” ಎನ್ನುವ ಮಾತು ಇಲ್ಲಿ ಬರುತ್ತದೆ. ಸಂಕಲ್ಪವೆನ್ನುವುದು ಹೊಸ ಕಾರ್ಯಕ್ಕೆ ಹೇತು. ಮುಂದಿನ ಘಟನೆಗೆ ಇಲ್ಲಿ ನಾಂದಿಯಾಗುತ್ತಿದೆ. ಧರ್ಮಮಾರ್ಗದಲ್ಲಿ ಸದಾ ನಡೆಯುತ್ತಿದ್ದ ಅರಸ ಕಾಮಮೋಹಿತನಾಗಿ ಕೈಕೇಯಿಯನ್ನು ಸಮಾಧಾನ ಮಾಡಲು ಹೇಳುವ ಮಾತುಗಳು ಸೂರ್ಯವಂಶಕ್ಕೆ ಹೇಳಿಸಿದ್ದಲ್ಲ.

ಅವಧ್ಯೋ ವಧ್ಯತಾಂ ಕೋ ವಾ ವಧ್ಯಃ ಕೋವಾ ವಿಮುಚ್ಯತಾಮ್.
ದರಿದ್ರಃ ಕೋ ಭವದಾಢ್ಯೋ ದ್ರವ್ಯವಾನ್ಕೋSಪ್ಯಕಿಂಚನಃ৷৷ಅ. ಕಾಂ.10.33৷৷

ಕಾಮವೆನ್ನುವುದು ಎಂತವರನ್ನೂ ತಲೆಕೆಡಿಸಿಬಿಡುತ್ತದೆ. ಕಾಮದ ಹುಚ್ಚಿನಲ್ಲಿರುವ ದಶರಥ ತನ್ನ ಸುಖಕ್ಕಾಗಿ ಏನನ್ನು ಮಾಡಲೂ ಹೇಸದ ಸ್ಥಿತಿಗೆ ತಲುಪಿದ್ದಾನೆ. ವಧಾರ್ಹನಲ್ಲದವನನ್ನು ವಧಿಸಲೇ, ಮರಣದಂಡನೆಗೆ ಗುರಿಯಾದವನನ್ನು ಬಿಡಿಸಲೇ, ದರಿದ್ರನನ್ನು ಶ್ರೀಮಂತನನ್ನಾಗಿ ಮಾಡಲೇ, ಶ್ರೀಮಂತನನ್ನು ದರಿದ್ರನನ್ನಾಗಿ ಮಾಡಲೇ; ನಿನ್ನ ಪ್ರೀತಿಗಾಗಿ ಏನನ್ನೂ ಮಾಡಲೂ ತಾನು ಸಿದ್ಧ ಎನ್ನುವ ಮಾತುಗಳು ದೊರೆತನಕ್ಕೆ ತಕ್ಕುದಲ್ಲ. ಆತ ಅವಳನ್ನು ಸಮಾಧಾನಿಸುತ್ತಾ “ಪ್ರಿಯತಮೆಯಲ್ಲಿ ನನಗೆ ನಿನಗಿಂತ- ಮನುಜರಲ್ಲಿ ರಾಮನಿಗಿಂತ ಹೆಚ್ಚಿನವರು ಯಾರೂ ಇಲ್ಲ” ಎನ್ನುವಲ್ಲಿ ರಾಮನ ಹೆಸರನ್ನು ಕೇಳಿದ ಆಕೆಗೆ ಮತ್ತುಷ್ಟು ಉರಿ ಹತ್ತಿತು. ದೊರೆ ಮನ್ಮಥನ ಬಾಣಕ್ಕೆ ಈಡಾಗಿರುವುದನ್ನು ಪಕ್ಕಾ ಮಾಡಿಕೊಂಡಳು. ಸ್ವಲ್ಪ ಹೊತ್ತು ಕಾಡಿಸಬೇಕು ಎಂದು ಸುಮ್ಮನಾದವಳು. ದಶರಥನಿಗೆ ಸಹಿಸಲಾಗಿಲ್ಲ. ಆಕೆಯ ರೂಪಲಾವಣ್ಯಕ್ಕೆ ಸೋತಿದ್ದ. ಅವಳ ನೋವನ್ನು ಬಗೆಹರಿಸುವುದು ತನ್ನ ಆದ್ಯ ಕರ್ತವ್ಯವೆಂದು ಬಗೆದ.. ಅದು ತನಕ ತಾನು ಗಳಿಸಿದ ಸುಕೃತದ ಮೇಲೆ ಆಣೆಯಿಟ್ಟು ಅವಳ ಬಯಕೆಯನ್ನು ಈಡೇರಿಸುವೆ ಎಂದು ಅಂಗಲಾಚಿದ.

dhavala dharini king dasharatha

ಆದರೂ ಸುಮ್ಮನಿದ್ದ ಕೈಕೇಯಿಗೆ ಕೊನೆಯದಾಗಿ “ನನ್ನ ರಾಮನಾಣೆಗೂ ನೀನು ಹೇಳುವ ಕಾರ್ಯವನ್ನು ಮಾಡುತ್ತೇನೆ” ಎಂದು ಪ್ರತಿಜ್ಞೆ ಮಾಡಿಬಿಟ್ಟ. ಗಾಳದಲ್ಲಿ ಚಿಕ್ಕಮೀನನ್ನು ಚುಚ್ಚಿ ದೊಡ್ಡಮೀನನ್ನು ಸೆಳೆಯುವಂತೆ ಚಕ್ರವರ್ತಿಯನ್ನು ಮಟ್ಟುಹಾಕಿ ತನ್ನ ಕಾರ್ಯಸಾಧಿಸಲು ಇದೇ ಸಮಯವೆಂದು ತಿಳಿದ ಕೈಕೇಯಿ ಬಯಕೆಯನ್ನು ಹೇಳುವ ಮುನ್ನ ರಾಜನಲ್ಲಿನ ಧರ್ಮಪ್ರಜ್ಞೆಯನ್ನು ಜಾಗ್ರತಗೊಳಿಸಲು “ನೀನು ಮಾಡಿದ ಈ ಪ್ರತಿಜ್ಞೆಯನ್ನು ಮೂವತ್ತುಮೂರು ಕೋಟಿ ದೇವತೆಗಳು ಕೇಳಲಿ, ಚಂದ್ರಸೂರ್ಯರೂ ಕೇಳಲಿ, ಆಕಾಶವೂ ಇದಕ್ಕೆ ಸಾಕ್ಷಿಯಾಗಲಿ, ನವಗ್ರಹಗಳು, ಹಗಲು-ರಾತ್ರಿಗಳು, ಎಂಟುದಿಕ್ಕುಗಳು,ಗಂಧರ್ವರಾಕ್ಷಸರನ್ನೊಳಗೊಂಡಿರುವ ಸ್ವರ್ಗ-ಮರ್ತ್ಯ-ಪಾತಾಳ, ನಿಶಾಚರರೂ, ಪಿಶಾಚಗಳೂ, ಭೂತಗಣಗಳೂ, ಗೃಹದೇವತೆಗಳೂ ಸಹಿತ ಎಲ್ಲರೂ ನೀನು ಹೇಳಿದ ಈ ಪ್ರತಿಜ್ಞಾವಾಕ್ಯಕ್ಕೆ ಸಾಕ್ಷಿಗಳಾಗಲಿ” ಎಂದವಳೇ ಆತನನ್ನು ಸಂಪೂರ್ಣವಾಗಿ ಖೆಡ್ಡಾಕ್ಕೆ ತೋಡುವ ಈ ಮಾತನ್ನು ಆಡುತ್ತಾಳೆ.

ಸತ್ಯಸಂಧೋ ಮಹಾತೇಜಾಃ ಧರ್ಮಜ್ಞಃ ಸುಸಮಾಹಿತಾಃ.
ವರಂ ಮಮ ದದಾತ್ಯೇಷಃ ತನ್ಮೇ ಶ್ರೃಣ್ವನ್ತು ದೈವತಾಃ৷৷ಅಯೋ.11.16৷৷

ಎಲೈ ದೇವತೆಗಳಿರಾ! ನೀವೆಲ್ಲರೂ ಕೇಳಿರಿ. ಸತ್ಯಸಂಧನಾದ ಮಹಾತೇಜಸ್ವಿಯಾದ, ಧರ್ಮಜ್ಞನಾದ ಧಶರಥನು ಸಮಾಧಾನಚಿತ್ತನಾಗಿ ತಾನು ಪ್ರತಿಜ್ಞೆ ಮಾಡಿರುವಂತೆ ನನಗೆ ವರವನ್ನು ದಯಪಾಲಿಸಲಿದ್ದಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಕವಿಗೆ ಕಾಡಿದ ಮೂರು ಚಿಂತೆಗಳು

ವ್ಯಾಧನ ಧ್ವನಿಯಿಂದ ಆಕರ್ಷಿತಳಾಗಿ ಬಲೆಗೆ ಬೀಳುವ ಜಿಂಕೆಯಂತೆ ರಾಜನು ತನ್ನ ವಿನಾಶಕ್ಕಾಗಿ ಧರ್ಮಪಾಶವನ್ನು ಕುತ್ತಿಗೆಗೆ ಬಿಗಿದುಕೊಂಡಿದ್ದು ಹೀಗೆ. ಅವನಿಗೆ ಮುಂದೆ ಮಾತಾಡಲು ಅವಕಾಶಕೊಡದಂತೆ ಆತನನ್ನು ಬಿಗಿದಪ್ಪಿ ತನಗೆ ಹಿಂದೆ ಕೊಟ್ಟಿದ್ದ ವರಗಳನ್ನು ಅಪೇಕ್ಷಿಸಿ ಅದಕ್ಕೆ ರಾಜ ಬೇರೆ ಏನನ್ನಾದರೂ ಹೇಳಬಾರದೆಂದು, “ರಾಮನಿಗೆ ಪಟ್ಟಾಭಿಷೇಕಕ್ಕೆ ಯಾವೆಲ್ಲಾ ಸಿದ್ಧತೆಗಳಾಗಿವೆಯೋ ಅದೇ ಸಾಂಬಾರಪದಾರ್ಥಗಳಿಂದ ಭರತನಿಗೆ ಪಟ್ಟಾಭಿಷೇಕವಾಗಬೇಕು. ಎರಡನೇಯ ವರವನ್ನೂ ಹೇಳಿಯೇಬಿಡುವೆ.

ನವ ಪಞ್ಚ ಚ ವರ್ಷಾಣಿ ದಣ್ಡಕಾರಣ್ಯಮಾಶ್ರಿತಃ
ಚೀರಾಜಿನಜಟಾಧಾರೀ ರಾಮೋ ಭವತು ತಾಪಸಃ.

ಹದಿನಾಲ್ಕು ವರುಷಗಳ ಕಾಲ ರಾಮನು ದಂಡಕಾರಣ್ಯಕ್ಕೆ ಹೋಗಿ ಅಲ್ಲಿ ಅವನು ಜಟಾಧಾರಿಯಾಗಿ ನಾರಮುಡಿಯನ್ನುಟ್ಟು ಕೃಷ್ಣಾಜಿನವನ್ನು ಧರಿಸಿ ತಾಪಸನಂತೆ ಇರಬೇಕು.

ಕೈಕೇಯಿ ಇಷ್ಟಕ್ಕೇ ನಿಲ್ಲಿಸುವುದಿಲ್ಲ. “ಆದ್ಯ ಚೈವ ಹಿ ಪಶ್ಯೇಯಂ ಪ್ರಯಾನ್ತಂ ರಾಘವಂ ವನಮ್- ರಾಘವನು ಚೀರಾಜಿನ-ಜಟಾಧಾರಿಯಾಗಿ ಕಾಡಿಗೆ ಹೋಗುವುದನ್ನು ಈಗಲೇ ನಾನು ನೋಡಬೇಕು, ಸತ್ಯವಚನನಾದ ನೀನು ಈಗಲೇ ನಡೆಸಿಕೊಡು” ತನ್ನ ಇಬ್ಬರು ಪ್ರಿಯರಲ್ಲಿ ಒಬ್ಬನಾದ ರಾಮನಿಗೆ ಆಘಾತಕಾರಿಯಾದ ವಿಷಯಗಳನ್ನು ಹೇಳುವ ಮಾತುಗಳು ದಶರಥನ ಕಾಮದ ಪಿತ್ಥವನ್ನು ಜರ್ರನೆ ಇಳಿಸಿಯೇಬಿಟ್ಟಿತು; ಜೊತೆಗೆ ಆತನ ಮನೋಧೈರ್ಯವನ್ನೂ ಸಹ! ಲೋಕದ ಎಲ್ಲಾ ರಾಜರನ್ನು, ಪ್ರಜೆಗಳನ್ನು ಮತ್ತು ವಶಿಷ್ಠರಾದಿಯಾಗಿರುವ ಎಲ್ಲಾ ಋಷಿಗಳನ್ನು ತನ್ನ ಇಷ್ಟಕ್ಕೆ ಒಗ್ಗಿಕೊಳ್ಳುವಂತೆ ತಂತ್ರವನ್ನು ಹೂಡಿದ ಅರಸನ ಇಚ್ಛೆ ಇಲ್ಲಿ ತರಗೆಲೆಗಳಂತೆ ಗಾಳಿಗೆ ಹಾರಿಹೋಯಿತು. ಯಾವ ಉದ್ಧೇಶಕ್ಕಾಗಿ ಕೈಕೇಯಿಯ ಅರಮನೆಗೆ ಬಂದಿದ್ದನೋ ಅವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಕದಡಿಹೋಯಿತು. ಅವನ ಜೀವನದಲ್ಲಿ ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿವದೊಂದೇ ಗುರಿ ಇದ್ದಿದ್ದು. ತನ್ನ ಪ್ರೀತಿಯ ರಾಣಿಯಿಂದಲೇ ಹೀಗೆ ವಿಘ್ನಬರಬಹುದೆಂದು ರಾಜ ಎಣಿಸಿರಲಿಲ್ಲ. ಅಂಥ ಸ್ವಲ್ಪ ಅನುಮಾನ ಬಂದಿದ್ದರೂ ಆತ ಕೈಕೇಯಿಯ ಅರಮನೆಗೆ ಬರುತ್ತಲೇ ಇರಲಿಲ್ಲ. ಒಮ್ಮೆಲೇ ಎಚ್ಚರತಪ್ಪಿ ಬಿದ್ದ. ತನ್ನ ರಾಜತ್ವಕ್ಕೆ ಧಿಕ್ಕಾರ ಹಾಕಿಕೊಂಡ. ಕೊನೆಗೆ ಅನಿವಾರ್ಯವಾಗಿ ಕೈಕೇಯಿಗೆ ನಮಸ್ಕರಿಸಿಕೊಂಡು “ನಿನ್ನ ಕಾಲನ್ನು ಬೇಕಾದರೂ ಹಿಡಿಯುತ್ತೇನೆ, ರಾಮನನ್ನು ರಕ್ಷಿಸು. ವರದಾನವೆನ್ನುವ ಒಂದು ಪ್ರತಿಜ್ಞೆಯಲ್ಲಿ ನನ್ನನ್ನು ಸಿಕ್ಕಿಹಾಕಿಸಿ ನಿರಪರಾಧಿಯನ್ನು ಕಾಡಿಗಟ್ಟಿದ ದೋಷ ನನಗೆ ಬಾರದಿರಲಿ” ಎಂದು ನೆಲದಲ್ಲಿ ಹೊರಳಾಡತೊಡಗಿದ.

ಮೂಂದಿನ ಭಾಗದಲ್ಲಿ ತನ್ನ ಕರ್ಮಫಲವನ್ನು ತಾನು ಉಂಡ ಮಹಾರಾಜ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ

Continue Reading

ದಕ್ಷಿಣ ಕನ್ನಡ

Yakshagana Artist: ವೇಷ ಕಳಚುತ್ತಿರುವಾಗಲೇ ಹೃದಯ ಸ್ತಬ್ಧ ; ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

Gangadhar Puttur : ವೇಷ ಕಳಚುತ್ತಿರುವಾಗಲೇ ಯಕ್ಷಗಾನ ಕಲಾವಿದ (Yakshagana Artist) ಗಂಗಾಧರ ಪುತ್ತೂರು ಇಹಲೋಕ ತ್ಯಜಿಸಿದ್ದಾರೆ. ಮುಖದ ಬಣ್ಣವನ್ನು ಅಳಿಸುತ್ತಿರುವಾಗ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

VISTARANEWS.COM


on

By

Yakshagana Artist No more
Koo

ಮಂಗಳೂರು: ವೇಷ ಕಳಚುತ್ತಿರುವಾಗಲೇ ಹೃದಯಾಘಾತದಿಂದ (Heart attack) ಧರ್ಮಸ್ಥಳ ಯಕ್ಷಗಾನ ಮೇಳದ ಸವ್ಯಸಾಚಿ ಕಲಾವಿದ (Yakshagana Artist) ಗಂಗಾಧರ ಪುತ್ತೂರು(60) ಅವರು ಇಹಲೋಕ ತ್ಯಜಿಸಿದ್ದಾರೆ.

ನಿನ್ನೆ ಬುಧವಾರ (ಮೇ 1) ರಾತ್ರಿ ಕೋಟ ಗಾಂಧಿಮೈದಾನದ ಬಳಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಅವರು ಕುಕ್ಕಿಂತ್ತಾಯ ದೈವದ ವೇಷವನ್ನು ನಿರ್ವಹಿಸಿದ್ದರು. ಬಳಿಕ ಚೌಕಿಗೆ ಆಗಮಿಸಿ ಕಿರೀಟ, ಯಕ್ಷಗಾನದ ಆಭರಣ ತೆಗೆದಿಟ್ಟು, ಮುಖದ ಬಣ್ಣವನ್ನು ಅಳಿಸುತ್ತಿರುವಾಗ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಪುತ್ತೂರಿನ ಸೇಡಿಯಾಪು ನಿವಾಸಿಯಾಗಿರುವ ಇವರು ಏಳನೇ ತರಗತಿಯವರೆಗೆ ವಿದ್ಯಾಭ್ಯಾಸ ಹೊಂದಿದ್ದರು. ತಮ್ಮ 18ನೇ ವಯಸ್ಸಿಗೆ ಯಕ್ಷಗಾನ ತಿರುಗಾಟ ಆರಂಭಿಸಿದ ಗಂಗಾಧರ ಪುತ್ತೂರು ಸುದೀರ್ಘ 40 ವರ್ಷಗಳಷ್ಟು ಕಾಲ ಯಕ್ಷಗಾನ ರಂಗದಲ್ಲಿ ವ್ಯವಸಾಯ ಮಾಡಿದ್ದರು. ಕರ್ಗಲ್ಲು ವಿಶ್ವೇಶ್ವರ ಭಟ್ ಹಾಗೂ ಕೆ.ಗೋವಿಂದ ಭಟ್ ಅವರಿಂದ ನಾಟ್ಯಾಭ್ಯಾಸ ಮಾಡಿದರು.

ಯಕ್ಷಗಾನ ರಂಗದ ಸವ್ಯಸಾಚಿ ಕಲಾವಿದರಾದ ಇವರು ಸ್ತ್ರೀವೇಷದಿಂದ ಹಿಡಿದು ಪುಂಡುವೇಷ, ರಾಜವೇಷ, ಹೆಣ್ಣುಬಣ್ಣ ಸಮರ್ಥವಾಗಿ ನಿರ್ವಹಿಸುತ್ತಿದ್ದರು. 30 ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಗಂಗಾಧರ ಪುತ್ತೂರು ಧರ್ಮಸ್ಥಳ ಮೇಳದಲ್ಲಿಯೇ ಕಲಾವಿದರಾಗಿ ತಿರುಗಾಟ ಮಾಡಿದ್ದರು.

ಇದನ್ನೂ ಓದಿ: Prajwal Revanna case: ತಲೆಮರೆಸಿಕೊಂಡ ಪ್ರಜ್ವಲ್‌ ರೇವಣ್ಣಗೆ ಲುಕೌಟ್‌ ನೋಟಿಸ್‌ ಜಾರಿ, ಬಂದ ಕೂಡಲೇ ಬಂಧನ!

ತೀವ್ರ ಹೃದಯಾಘಾತದಿಂದ ಹಿರಿಯ ಸಂಸದ ಶ್ರೀನಿವಾಸ್‌ ಪ್ರಸಾದ್‌ ವಿಧಿವಶ

ಬೆಂಗಳೂರು: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ (76) (Srinivas Prasad) ಅವರು ತೀವ್ರ ಹೃದಯಾಘಾತದಿಂದ (Heart Aattack) ವಿಧಿವಶರಾದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಲದಿನಗಳ ಹಿಂದೆ ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ 1:20ಕ್ಕೆ (Manipal Hospital ) ಅವರು ನಿಧನರಾಗಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀನಿವಾಸ್ ಪ್ರಸಾದ್ ಅವರು ಏಪ್ರಿಲ್ 22ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎನ್ನಲಾಗಿದೆ.

ಇನ್ನು ಈ ಬಗ್ಗೆ ಶ್ರೀನಿವಾಸ್ ಪ್ರಸಾದ್ ಅಳಿಯ ಹರ್ಷವರ್ಧನ್ ಮಾಹಿತಿ ನೀಡಿದ್ದು, ಶ್ರೀನಿವಾಸ್ ಪ್ರಸಾದ್ ಅವರು ರಾತ್ರಿ 1:20ರ ಸುಮಾರಿಗೆ ತೀವ್ರವಾದ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ರೀತಿಯಲ್ಲಿ ಪ್ರಯತ್ನ ಮಾಡಿದ್ದರು. ಅವರ ಈ ಅಗಲಿಕೆ ಇಡೀ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟ. ನನಗೆ ರಾಜಕೀಯಕ್ಕೆ ಜನ್ಮ ಕೊಟ್ಟಂತವರು. ರಾಜಕೀಯದಲ್ಲಿ ಏಕಾಂಗಿಯಾಗಿ ಹೋರಾಟ ಮಾಡೋದಕ್ಕೆ ಬಿಟ್ಟು ಹೋಗಿದ್ದಾರೆ. ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡಿದ್ದಾರೆ, ಹೋರಾಟದ ಜೀವಿ ಅವರು. ಐದು ವರ್ಷದ ಹಿಂದೆ ನಾನು ನಂಜನಗೂಡಿನಲ್ಲಿ ಗೆದ್ದಾಗ ಅವರು ಲೋಕಸಭೆಯಲ್ಲಿ ಸ್ಪರ್ಧೆ ಮಾಡ್ತಿನಿ ಅಂದರು. ನನ್ನನ್ನು ಅವರು ತಂದೆ ಸ್ಥಾನದಲ್ಲಿ ನಿಂತು ರಾಜಕೀಯವಾಗಿ ಬೆಳೆಸಿದ್ದಾರೆ ಯಾವುದೆ ವಿಚಾರ ಆಗಿದ್ದರೂ ಅವರ ಜೊತೆ ಚರ್ಚೆ ಮಾಡಿಯೇ ನಿರ್ಧಾರಕ್ಕೆ ಬರುತ್ತಿದೆ. ಈಗ ಯಾರ ಬಳಿ ಹೋಗಿ ಕೇಳಲಿ ಎಂದು ಅನಿಸಿ ಬಿಟ್ಟಿದೆ ಎಂದು ಭಾವುಕರಾಗಿ ಮಾತನಾಡಿದರು.

ಇದನ್ನೂ ಓದಿ:Raja Marga Column :‌ ಕಣ್ಣೇ ಕಾಣದ ಆಕೆ ಎರಡು ಬಾರಿ ಐಎಎಸ್‌ ಪಾಸ್‌ ಮಾಡಿದ್ದರು!

ಚಾಮರಾಜನಗರ ಕ್ಷೇತ್ರದಿಂದ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಶ್ರೀನಿವಾಸ್‌ ಪ್ರಸಾದ್‌ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇನ್ನು 2013ರಿಂದ 2016ರವರೆಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಸಚಿವರಾಗಿದ್ದರು . 24 ಡಿಸೆಂಬರ್ 2016 ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದ ಅವರು 2019ರಲ್ಲಿ ಚಾಮರಾಜನಗರ ಸಂಸದರಾಗಿ ಆಯ್ಕೆ.ಯಾಗಿದ್ದರು. ಅನಾರೋಗ್ಯ ಸಮಸ್ಯೆಯಿಂದಾಗಿ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ ಅವರು 2024 ಮಾರ್ಚ್ 17ರಂದು ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Kaladarpana-Art Reflects: ಬೆಂಗಳೂರಿನಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

Kaladarpana-Art Reflects: ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.

VISTARANEWS.COM


on

Kaladarpana-Art Reflects
Koo

ಬೆಂಗಳೂರು: ಕಲಾ ದರ್ಪಣ- ಆರ್ಟ್‌ ರಿಫ್ಲೆಕ್ಟ್ಸ್‌ (Kaladarpana-Art Reflects) ವತಿಯಿಂದ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ನಗರದ ನಾಗರಬಾವಿ 2ನೇ ಹಂತದ ಎನ್‌ಜಿಇಎಫ್‌ ಲೇಔಟ್‌ನ ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಭಾನುವಾರ (ಮೇ 5ರಂದು) ಬೆಳಗ್ಗೆ 8.30ಕ್ಕೆ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, 9ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.

ಅಂತರಾಷ್ಟ್ರೀಯ ಖ್ಯಾತಿಯ ತಬಲ ವಾದಕ ಪಂಡಿತ್ ಡಾ. ಸತೀಶ್ ಹಂಪಿಹೊಳಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಜಾವಾಣಿ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಮತ್ತು ಮಾರುತಿ ಮೆಡಿಕಲ್ಸ್ ಮಾಲೀಕರು ಮಹೇಂದ್ರ ಮುಣೋತ್ ಜೈನ್ ಅವರು ಭಾಗವಹಿಸಲಿದ್ದಾರೆ. ಈ ಮೂವರು ಗಣ್ಯರು, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕಲಾದರ್ಪಣ ಪ್ರಶಸ್ತಿ ಪುರಸ್ಕೃತರು

  • ಗೋ.ನಾ. ಸ್ವಾಮಿ, ಅಂತಾರಾಷ್ಟ್ರೀಯ ಖ್ಯಾತಿಯ ಜನಪದ ಗಾಯಕರು
  • ವಿದುಷಿ ಅನಸೂಯ ದ್ವಾರಕನಾಥ, ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು

ಇದನ್ನೂ ಓದಿ | Film festival: ಬೆಂಗಳೂರಿನಲ್ಲಿ ಮೇ 4, 5ರಂದು ಗುರುದತ್‌ ಚಲನ ಚಿತ್ರೋತ್ಸವ ಮತ್ತು ಸಂಗೀತ ರಸ ಸಂಜೆ

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಕರ್ನಾಟಕ ಚಿತ್ರಕಲಾ ಪರಿಷತ್‌ನ ಪ್ರಾಧ್ಯಾಪಕ ಪ್ರೊ. ವಿ.ಎಸ್. ನಾಯಕ ಬಳಕೂರು, ಎಸ್.ಎಸ್.ವಿ.ಎಸ್.ಪಿ.ಎಸ್. ಶಾಲೆ ಪ್ರಾಂಶುಪಾಲೆ ಲತಾ ಎಸ್. ಅವರು ಆಗಮಿಸಲಿದ್ದಾರೆ. ಕಲಾ ದರ್ಪಣ- ಆರ್ಟ್‌ ರಿಫ್ಲೆಕ್ಟ್ಸ್‌ ಸಂಸ್ಥೆಯ ಹೇಮಾ ವಿನಾಯಕ್‌ ಪಾಟೀಲ್‌ ಹಾಗೂ ವಿನಾಯಕ್‌ ಪಾಟೀಲ್‌ ಅವರು ಉಪಸ್ಥಿತರಿರಲಿದ್ದಾರೆ. ಖ್ಯಾತ ನಿರೂಪಕಿ ಭವಾನಿ ಲೋಕೇಶ್‌ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Continue Reading
Advertisement
Bengaluru Rain
ಕರ್ನಾಟಕ4 hours ago

Bengaluru Rain: ಸಿಲಿಕಾನ್‌ ಸಿಟಿಯಲ್ಲಿ ವರುಣನ ಆರ್ಭಟ; ಜಲಾವೃತವಾದ ರಸ್ತೆಗಳು, ನೆಲಕ್ಕುರುಳಿದ 16 ಮರ

Rohit Sharma
ಪ್ರಮುಖ ಸುದ್ದಿ5 hours ago

Rohit Sharma : 4 ರನ್​ಗೆ ಔಟಾಗಿ ಕಣ್ಣೀರು ಸುರಿಸಿದ ರೋಹಿತ್​ ಶರ್ಮಾ; ಇಲ್ಲಿದೆ ವಿಡಿಯೊ

PM Narendra Modi
ದೇಶ5 hours ago

ತಮ್ಮ ಬಗ್ಗೆ ಟ್ರೋಲ್‌ ಮಾಡಿದ್ದನ್ನೂ ಮೆಚ್ಚಿದ ಮೋದಿ; ಮಮತಾ ಬ್ಯಾನರ್ಜಿ ನೋಟಿಸ್; ಯಾರು ಸರ್ವಾಧಿಕಾರಿ?

School Children
ಸಂಪಾದಕೀಯ5 hours ago

ವಿಸ್ತಾರ ಸಂಪಾದಕೀಯ: ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ, ಇ-ಮೇಲ್‌ ಕಿಡಿಗೇಡಿಗಳಿಗೆ ಕಠಿಣ ಪಾಠ ಕಲಿಸಬೇಕಿದೆ

IPL 2024
ಕ್ರೀಡೆ5 hours ago

IPL 2024 : ಸೂರ್ಯನ ಪ್ರತಾಪಕ್ಕೆ ಮಂಕಾದ ಸನ್​; ಮುಂಬೈಗೆ 7 ವಿಕೆಟ್​ ಭರ್ಜರಿ ಗೆಲುವು

Narendra Modi
ದೇಶ5 hours ago

Maldives: ಭಾರತೀಯರೇ, ದಯಮಾಡಿ ಬನ್ನಿ ಎಂದ ಮಾಲ್ಡೀವ್ಸ್‌ ಸಚಿವ; ಬಾಯ್ಕಾಟ್‌ ಪೆಟ್ಟಿಗೆ ಥಂಡಾ!

DK Shivakumar
ಕರ್ನಾಟಕ5 hours ago

Prajwal Revanna Case: ದೇವರಾಜೇಗೌಡ ನನ್ನ ವಿರುದ್ಧ ಸುಳ್ಳು ಅಪಾದನೆ ಮಾಡಿದ್ದಾರೆ ಎಂದ ಡಿಕೆಶಿ

T20 World Cup 2024
ಕ್ರೀಡೆ5 hours ago

T20 World Cup 2024 : ಕೇಸರಿಯ ರಂಗು; ಟೀಮ್​ ಇಂಡಿಯಾದ ಟಿ20 ವಿಶ್ವ ಕಪ್​​ ಜೆರ್ಸಿ ಬಿಡುಗಡೆ

108 Ambulance
ಕರ್ನಾಟಕ6 hours ago

108 Ambulance: 108 ಸಿಬ್ಬಂದಿಗೆ ಸರ್ಕಾರದಿಂದ ವೇತನ ಬಾಕಿ ಉಳಿಸಿಕೊಂಡಿಲ್ಲ: ದಿನೇಶ್ ಗುಂಡೂರಾವ್

IPL 2024
ಪ್ರಮುಖ ಸುದ್ದಿ6 hours ago

IPL 2024 : ಮುಂಬೈ ಚಾ ರಾಜಾ ರೋಹಿತ್​ ಶರ್ಮಾ ಎಂದು ಕೂಗಿದ ಹೇಡನ್​ ಪುತ್ರಿ ಗ್ರೇಸ್​​; ಇಲ್ಲಿದೆ ವಿಡಿಯೊ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ10 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ10 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ10 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ24 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ1 day ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ1 day ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ1 day ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ4 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌