Sunday Read: ಹೊಸ ಪುಸ್ತಕ: ಹಸ್ತಿನಾವತಿ: ಕನಸು ವಾಸ್ತವಗಳ ನಡುವಿನ ತೂಗುಯ್ಯಾಲೆ - Vistara News

ಕಲೆ/ಸಾಹಿತ್ಯ

Sunday Read: ಹೊಸ ಪುಸ್ತಕ: ಹಸ್ತಿನಾವತಿ: ಕನಸು ವಾಸ್ತವಗಳ ನಡುವಿನ ತೂಗುಯ್ಯಾಲೆ

ಜೋಗಿ ಅವರ ಹೊಸ ಕಾದಂಬರಿ ʼಹಸ್ತಿನಾವತಿʼ ಏಕಕಾಲಕ್ಕೆ ಮಹಾಭಾರತದ ಹಗೆತನದ ಗತ, ಇಂದಿನ ದಿಲ್ಲಿಯ ವರ್ತಮಾನ ಮತ್ತು ಭವಿಷ್ಯದ ಸುಡುಬಯಲಿನ ಸುಳಿವು- ಮೂರನ್ನೂ ಹೊತ್ತಿದೆ. ವರ್ತಮಾನದ ರಾಜಕಾರಣದ ಸುಡುಬಯಲಿನಲ್ಲಿ ಬಂದು ನಿಂತಿರುವ ಜೀವಗಳ ಮೂಕವಿಹ್ವಲ ದನಿಯೊಂದು ಕೃತಿಯುದ್ದಕ್ಕೂ ಪ್ರತಿಧ್ವನಿಸುತ್ತದೆ.

VISTARANEWS.COM


on

hastinavathi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

: ಹರೀಶ್‌ ಕೇರ

ಹಸ್ತಿನಾವತಿ ಮತ್ತು ಇಂದ್ರಪ್ರಸ್ಥಗಳು ಮಹಾಭಾರತದ ಎರಡು ದೊಡ್ಡ ನಗರಗಳು. ಸಭೆಯಲ್ಲಿ ಮನೆ ಸೊಸೆಯ ಸೀರೆ ಸೆಳೆದರೂ ಸುಮ್ಮನಿದ್ದ ಅಪವಿತ್ರ ನಗರಿ ಒಂದು. ರಾಜಸೂಯ ನಡೆದ, ಮಯಸಭೆಯಂಥ ಸ್ವಪ್ನಸದೃಶ ಭವನವಿದ್ದ ನಗರಿ ಇನ್ನೊಂದು. ಇಂದ್ರಪ್ರಸ್ಥದಲ್ಲಿ ನೆಲೆಸಬೇಕು ಎನ್ನುವುದು ಕನಸು; ಹಸ್ತಿನಾವತಿಯ ಸುಡುಸುಡು ನಿತ್ಯಕೇಡಿನ ನಗರಿ ವಾಸ್ತವ. ಜೋಗಿಯವರ ʼಹಸ್ತಿನಾವತಿʼ ಇಂಥ ಕನಸು ವಾಸ್ತವಗಳ ನಡುವೆ ತೂಗುಬಿದ್ದ ಉಯ್ಯಾಲೆ.

jogi
ಜೋಗಿ

ಕನ್ನಡದ ದೊಡ್ಡ ಕಾದಂಬರಿಗಳೆಲ್ಲ ಚರಿತ್ರೆ- ವರ್ತಮಾನ- ಭವಿಷ್ಯ ಮೂರನ್ನೂ ಬೆಸೆಯುವ ತ್ರಿಕೂಟಗಳಾಗಿ ಕಾಣಿಸಿಕೊಂಡಿವೆ. ಉದಾಹರಣೆಗೆ ಮಲೆಗಳಲ್ಲಿ ಮದುಮಗಳು ಮಲೆನಾಡಿಗೆ ಆಧುನಿಕತೆ ಕಾಲಿಡುವ ಮೊದಲಿನ ಕ್ಷುದ್ರತನ, ಸ್ವಾತಂತ್ರ್ಯೋದಯ ಕಾಲದ ವರ್ತಮಾನ ಹಾಗೂ ಪ್ರೇಮದ ಆಧುನಿಕ ಪ್ರವಾಹವನ್ನು ಬೆಸೆಯುತ್ತದೆ. ಗ್ರಾಮಾಯಣ ಗ್ರಾಮೀಣ ಕ್ರೌರ್ಯದ ಚರಿತ್ರೆ, ಹಿಂಸೆಯ ವರ್ತಮಾನ ಮತ್ತು ಮುಂದುವರಿಯುವ ವಿಲಾಪವನ್ನು ಹಿಡಿಯುತ್ತದೆ. ಕುಸುಮಬಾಲೆ ಪಾಳೇಗಾರಿಕೆಯ ಗತ, ದಲಿತ ಕಥನದ ಇಂದು ಮತ್ತು ಕನಸಿನ ನಾಳೆಗಳನ್ನು ಹಿಡಿಯಲ್ಲಿಡಲು ಯತ್ನಿಸುತ್ತದೆ.

ಇಂಥದೊಂದು ಸಾಲಿಗೆ ಸೇರುವ ಕಾದಂಬರಿ ಜೋಗಿ ಅವರ ʼಹಸ್ತಿನಾವತಿ.ʼ ಇದು ಏಕಕಾಲಕ್ಕೆ ಮಹಾಭಾರತದ ಹಗೆತನದ ಗತ, ಇಂದಿನ ದಿಲ್ಲಿಯ ವರ್ತಮಾನ ಮತ್ತು ಭವಿಷ್ಯದ ಸುಡುಬಯಲಿನ ಸುಳಿವು- ಮೂರನ್ನೂ ಹೊತ್ತಿದೆ. ಪೊಲಿಟಿಕಲ್‌ ಸ್ಟ್ರಾಟಜಿಸ್ಟ್‌ ಎನಿಸಿಕೊಂಡ ಸಹದೇವ ಉಪಾಧ್ಯಾಯ ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಸಂಗತಿಗಳು ಅವನನ್ನು ಕದಲಿಸುವಂಥವಲ್ಲ. ಯಾವುದು ಅವನ ಕೈಯಳತೆಯನ್ನು ಮೀರಿ ಬೆಳೆಯುತ್ತಿದೆಯೋ ಅದು ಅವನ ಕಣ್ಣನ್ನೂ ತೆರೆಸುತ್ತದೆ. ನಿಜ ಕಾದಂಬರಿಯ ಹಾಗೆ. ಅದು ಕಥೆಗಾರನ ಕೈಮೀರಿ ಬೆಳೆದಾಗಲೇ ಬೆಳಕು. ಆವರಿಸಿಕೊಂಡಿರುವುದು ವೇಷ, ಆವರಣ ಮೀರಿ ಬೆಳೆಯುವುದು ಅವತರಣ. ʼಉರಿಯ ಪೇಟೆಗಳಲಿ ಪತಂಗದ ಸರಕು ಮಾರದೆ ಮರಳುವುದೆ?ʼ ಎಂಬುದು ಕುಮಾರವ್ಯಾಸನ ಒಂದು ಪ್ರಸಿದ್ಧ ರೂಪಕ. ಬೆಂಕಿ ಪೇಟೆಗೆ ಪತಂಗ ಬಂದರೆ ಸುಡದೇ ಮರಳುವುದಿಲ್ಲ. ಸುಟ್ಟರೆ ಮರಳುವ ಪ್ರಶ್ನೆಯೇ ಇಲ್ಲ. ಹೀಗೆ ಈ ವರ್ತಮಾನದ ರಾಜಕಾರಣದ ಸುಡುಬಯಲಿನಲ್ಲಿ ಬಂದು ನಿಂತಿರುವ ಜೀವಗಳ ಮೂಕವಿಹ್ವಲ ದನಿಯೊಂದು ಕೃತಿಯುದ್ದಕ್ಕೂ ಪ್ರತಿಧ್ವನಿಸುತ್ತದೆ.

ನನಗೆ ಈ ಕಾದಂಬರಿಯಲ್ಲಿ ಒಬ್ಬ ಹಳೆಯ ಜೋಗಿ, ಒಬ್ಬ ಹೊಸ ಜೋಗಿ ಸಿಕ್ಕಿದರು. ಎರಡಕ್ಕೂ ವಿವರಣೆ ಕೊಡುವೆ. ಜೋಗಿಯ ಕೃತಿಗಳಲ್ಲೆಲ್ಲ ʼನದಿಯ ನೆನಪಿನ ಹಂಗುʼ ಮತ್ತು ʼಗುರುವಾಯನಕೆರೆʼ ಭಿನ್ನವಾದುವು. ಕಾನೂರು ಹೆಗ್ಗಡತಿಯಂತೆ, ಮರಳಿ ಮಣ್ಣಿಗೆಯಂತೆ, ಹಲವು ಜೀವನ ಪ್ರವಾಹಗಳು ಸಮಾನಾಂತರವಾಗಿ ಹರಿದುಬಂದು, ಕೊನೆಯಲ್ಲಿ ಭೋರ್ಗರೆಯುವ ಪ್ರವಾಹವಾಗುವ, ಹಲವು ದರ್ಶನ ನೀಡುವ ರೀತಿಯದು. ಅವರ ನಂತರದ ಕಾದಂಬರಿಗಳು ಸ್ವರೂಪ, ಸಂಸ್ಕಾರ ಕಾದಂಬರಿಗಳಂತೆ, ಅಂಥ ಹೆಚ್ಚಿನ ಕವಲುಗಳಿಲ್ಲದ, ಹಿಗ್ಗಿಸಿದ ಸಣ್ಣಕಥೆಗಳಂತಿದ್ದವು. ʼಹಸ್ತಿನಾವತಿʼಯಲ್ಲಿ ಅವರು ದೊಡ್ಡ ಭಿತ್ತಿಯನ್ನು ತೋರಿಸುವ, ಅನೇಕ ಧಾರೆಗಳನ್ನು ಹಿಡಿಯುವ ಯತ್ನ ಮಾಡಿದ್ದಾರೆ. ಇಲ್ಲಿ ಪೊಲಿಟಿಕಲ್‌ ಸ್ಟ್ರಾಟಜಿಸ್ಟ್‌ ಆಗಿರುವ ಸಹದೇವನಿದ್ದಂತೆ ಊರುಮನೆಯ ಯಶೋದೆ, ಸಾಹಿತಿ ಸದಾಶಿವ ದೇಸಾಯಿ ಇದ್ದಂತೆ ಹೋರಾಟಗಾರ್ತಿ ದೇವಯಾನಿ, ಇದ್ದೂ ಇಲ್ಲದಂತಿರುವ ಸಂಸರಂತೆ ಇಲ್ಲದೆಯೂ ಇರುವ ವ್ಯಾಸ, ಬದುಕಿಗೆ ಕಚ್ಚಿಕೊಂಡ ಚಾರುಲತಾಳಂತೆ ವೈರಾಗ್ಯವನ್ನು ನೆಚ್ಚಿಕೊಂಡ ಸಂಯುಕ್ತಾ ಪರಾಂಜಪೆ- ಎಲ್ಲ ಇದ್ದಾರೆ.

ಆದರೆ ಇದು ಹಳೆಯ ಕ್ರಮದಂತಿಲ್ಲವೇ ಇಲ್ಲ. ಕಾದಂಬರಿಯ ಪೂರ್ವಾರ್ಧ ಬಹಳ ವೇಗವಾಗಿ ಸಾಗುತ್ತದೆ. ಅದರ ಪ್ರಕಾರ ಉತ್ತರಾರ್ಧ ಇನ್ನೂ ವೇಗವಾಗಿ ಸಾಗಬೇಕು. ಹಾಗಾಗುವುದಿಲ್ಲ. ತಂತ್ರದ ಕುದುರೆಯ ಮೇಲೆ ಕುಳಿತು ಧಾವಿಸಿ ಬಂದ ಕತೆಗಾರ ಥಟ್ಟನೆ ಕುದುರೆ ಇಳಿದು ನಡೆಯಲು ಶುರುಮಾಡುತ್ತಾನೆ. ನಾನಿನ್ನು ಓಡುವುದಿಲ್ಲ, ನಡೆಯುತ್ತೇನೆ, ನೀನೂ ನನ್ನ ಜತೆ ನಡೆ ಎಂದು ಓದುಗನಿಗೆ ಆಹ್ವಾನ ಕೊಡುತ್ತಾನೆ. ಇದು ಬಹಳ ರಿಸ್ಕೀ ನಡೆ. ಇಲ್ಲಿ ಹೊಸ ಜೋಗಿ ಕಾಣಿಸುತ್ತಾರೆ. ಸ್ವತಃ ಮಹಾಭಾರತದ ವ್ಯಾಸ ಕೂಡ ಇಂಥ ರಿಸ್ಕ್‌ ತೆಗೆದುಕೊಳ್ಳುವುದಿಲ್ಲ. ಅವರಲ್ಲಿ ಉದ್ಯೋಗಪರ್ವದ ಬಳಿಕ ಆಯುಧಗಳ ಝಣತ್ಕಾರವೇ ಝಣತ್ಕಾರ. ಆದರಿಲ್ಲಿ ವ್ಯಾಸರೇ ಬಂದು ನಿರಾಳವಾಗಿ ಕತೆ ಹೇಳುತ್ತಾ, ಕೇಳುತ್ತಾ ಕೂತುಬಿಡುತ್ತಾರೆ. ಮಹಾಭಾರತ ಬರೆದ ವೇದವ್ಯಾಸರು ಇಲ್ಲಿ ʼಭಗವತಿ ಆರಾಧನೆʼ ಮಾಡುತ್ತ ಅಪ್ರಯತ್ನವಾಗಿ ಕತೆಗೆ ತಿರುವು ತಂದುಕೊಡುವುದನ್ನು ಓದುವುದೇ ಒಂದು ಸೊಗಸು.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಕಾಣೆಯಾಗಿದ್ದಾರೆ ಹುಡುಕಿ ಕೊಡಬೇಡಿ

ಹಾಗೆ, ಈ ಕಾದಂಬರಿ, ಕತೆಗಾರಿಕೆಯ ಬಗ್ಗೆ ಮೂಡಿರುವ ಒಂದು ರೂಪಕ ಕೂಡ. ಕತೆಗಾರ ತನ್ನ ಕತೆಯನ್ನು ಎಷ್ಟು ತಾನೇ ನಿಯಂತ್ರಿಸಬಲ್ಲ? ಎಷ್ಟು ಅದರೊಳಗೆ ಪ್ರವೇಶಿಸಬಲ್ಲ? ಇದಕ್ಕೆ ಉತ್ತರವಾಗಿ ವೇದವ್ಯಾಸರು ಮಹಾಭಾರತದಲ್ಲಿ ಇಲ್ಲದ, ತಾನು ಬರೆದಿಲ್ಲ ಎಂದು ಹೇಳುವ ಕತೆಯೊಂದನ್ನು ಹೇಳುತ್ತಾರೆ. ಅದೂ ಕುತೂಹಲಕರವಾಗಿದೆ. ಯುದ್ಧ ಬೇಡವೆಂಬ ಮಾತಿಗೆ ದುರ್ಯೋಧನ ಒಪ್ಪಿದ ಎಂದಿಟ್ಟುಕೊಳ್ಳಿ, ಆಗ ಏನಾಗುತ್ತದೆ ಎಂಬ ಪ್ರಶ್ನೆಯ ಎಳೆಯನ್ನು ಹಿಡಿದು ಹೋಗುವ ಕತೆಯದು. ಆಗಲೂ ನಡೆಯಲಿದ್ದುದನ್ನು ತಪ್ಪಿಸಲು ಸಾಧ್ಯವೇ? ತಾನು ಸೃಷ್ಟಿಸಿದ ಪಾತ್ರಗಳು ತನ್ನ ನಿಯಂತ್ರಣ ಮೀರಿ ಬೆಳೆಯುತ್ತ ಹೋಗುವುದನ್ನು ನೋಡುತ್ತ ಸುಮ್ಮನಿರುವುದು ಹೇಗೆ ಸಾಧ್ಯ? ಅಥವಾ ತಾನು ನಿಯಂತ್ರಿಸಬಲ್ಲೆ ಎಂಬುದೇ ಪೊಳ್ಳು ಅಹಂಕಾರವೇ? ಈ ಅಹಂಕಾರದ ನಿರಸನ ಕತೆ ಬರೆಯುವುದರಿಂದ ಹಿಡಿದು ದೇಶದ ಚುಕ್ಕಾಣಿ ಹಿಡಿದಿರುವವರೆಗೂ ಹಬ್ಬಿಲ್ಲವೇ? ಇಂಥ ರೂಪಕಾತ್ಮಕ ಪ್ರಶ್ನೆಗಳನ್ನು ಈ ಕಾದಂಬರಿ ಕೂರಂಬಿನಂತೆ ನಮ್ಮ ಕಡೆಗೆ ಎಸೆಯುತ್ತದೆ.

ಜೋಗಿಯವರು ಇದನ್ನು ಪೊಲಿಟಿಕಲ್‌ ಥ್ರಿಲ್ಲರ್‌ ಎಂದು ಕರೆದಿದ್ದಾರೆ. ಇದು ಪೊಲಿಟಿಕಲ್‌ ಥ್ರಿಲ್ಲರ್‌ ಆಗಿರುವಂತೆಯೇ ಸೋಶಿಯಲ್‌ ಥ್ರಿಲ್ಲರ್‌ ಕೂಡ ಹೌದು. ಈ ವ್ಯವಸ್ಥೆಯ ನಡುವೆ ಸಿಕ್ಕಿಬಿದ್ದಿರುವ ಸಜ್ಜನನ ದುಗುಡದ ಕತೆಯಿದು. ಈ ದುಗುಡವನ್ನು ನಾವು ಕಲ್ಪಿಸಿಕೊಳ್ಳಬಹುದು. ಯಾಕೆಂದರೆ ಒಂದಲ್ಲ ಒಂದು ಹಂತದಲ್ಲಿ ನಾವೆಲ್ಲರೂ ಅಂಥ ಸಜ್ಜನ, ಸಭ್ಯರೇ ಆಗಿದ್ದೆವು. ಜಾತಿ, ದುಡ್ಡು, ಆಮಿಷ, ವೈಷಮ್ಯ ಇತ್ಯಾದಿ ಸುಳಿಗಳಲ್ಲಿ ಸಿಲುಕಿಕೊಂಡೆವು. ಈ ಸುಳಿಗಳನ್ನು ಅರ್ಥಮಾಡಿಕೊಂಡರೆ ಬಿಡುಗಡೆ ಸುಲಭ. ಆದರೆ ಅಷ್ಟು ಸುಲಭವಾಗಿ ವ್ಯವಸ್ಥೆ ನಮ್ಮ ಆವರಣ ಕಳಚಿಕೊಳ್ಳಲು ಬಿಡುವುದಿಲ್ಲ. ಸ್ವಪ್ನವಾಸ್ತವದಂಥ ಸ್ಥಿತಿಯೊಂದನ್ನು ಹೊಕ್ಕು ದಾಟಿ ಬಂದ ಮೇಲೂ ಮನುಷ್ಯ ಅಪ್ಪಟ ಮನುಷ್ಯನೇ ಆಗಿರುತ್ತಾನೆ. ಬದಲಾವಣೆಯ ಆಸೆ ಹಾಗೂ ನಿಷ್ಠುರ ವಾಸ್ತವದ ಅರಿವು ಅವನನ್ನು ಮುನ್ನಡೆಸುತ್ತವೆ ಎಂಬುದನ್ನು ಕಾದಂಬರಿ ಸಾರುತ್ತದೆ.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಕಂದಹಾರ್‌ಗೆ ಬಂದ ಕುಣಿಗಲ್‌ ಹುಡುಗ

ಕೃತಿ: ಹಸ್ತಿನಾವತಿ (ಕಾದಂಬರಿ)
ಲೇಖಕ: ಜೋಗಿ
ಪ್ರಕಾಶನ: ಅಂಕಿತ ಪುಸ್ತಕ
ಬೆಲೆ: 450 ರೂ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಶಿವಮೊಗ್ಗ

Book Release: ರಾಮನೇನು ದೇವನೇ? ಪುಸ್ತಕ ಲೋಕಾರ್ಪಣೆ ಮಾಡಿದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ

Book Release: ಶಿವಮೊಗ್ಗ ಜಿಲ್ಲೆಯ ಹೊಸನಗರ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕ ಡಾ. ಕೆ. ಎಸ್. ಕಣ್ಣನ್ ಅವರ ʼರಾಮನೇನು ದೇವನೇ?ʼ ಪುಸ್ತಕವನ್ನು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಲೋಕಾರ್ಪಣೆಗೊಳಿಸಿದರು.

VISTARANEWS.COM


on

Koo

ಶಿವಮೊಗ್ಗ: ಶ್ರೀ ಭಾರತೀ ಪ್ರಕಾಶನ ಪ್ರಕಟಿಸಿರುವ, ಲೇಖಕ ಡಾ. ಕೆ. ಎಸ್. ಕಣ್ಣನ್ ಅವರ ʼರಾಮನೇನು ದೇವನೇ?ʼ ಪುಸ್ತಕವನ್ನು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೊಸನಗರ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿದರು. ಈ ವೇಳೆ ಪುಸ್ತಕದ (Book Release) ಲೇಖಕರಾದ ಡಾ. ಕೆ. ಎಸ್. ಕಣ್ಣನ್, ಶ್ರೀ ಭಾರತೀ ಪ್ರಕಾಶನದ ಕವಿತಾ ಜೋಯ್ಸ್, ನಾಗೇಂದ್ರ ಕೊಪ್ಪಲು ಉಪಸ್ಥಿತರಿದ್ದರು.

ಆದಿಕಾವ್ಯವೆಂದೇ ಪ್ರಸಿದ್ಧವಾದ ಕಾವ್ಯ ವಾಲ್ಮೀಕಿ ರಾಮಾಯಣ. ಅದು ಚಿತ್ರಿಸುವುದು ರಾಮನ ಕಥೆಯನ್ನು, ಅರ್ಥಾತ್ ರಾಮನು ನಡೆದ ಹಾದಿಯನ್ನು. ರಾಮನು ಎಲ್ಲಿಂದ ಎಲ್ಲಿಗೆ ನಡೆದದ್ದು? ಅಯೋಧ್ಯೆಯಿಂದ ಹೊರಟು ಕೊನೆಗೆ ಅಯೋಧ್ಯೆಗೇ ಬಂದು ಸೇರಿದನಲ್ಲವೇ? ಅದುವೇ ರಾಮಾಯಣವಾಯಿತು. ಇನ್ನೂ ಮುಖ್ಯವಾದ ರಾಮಾಯನವೊಂದಿದೆ. ದಿವಿಯಿಂದ ಹೊರಟು ಭುವಿಯಲ್ಲಿ ಇದ್ದು ಮತ್ತೆ ದಿವಿಗೆ ಬಂದು ಸೇರಿದನಲ್ಲವೇ? ಅದುವೇ ನಿಜವಾದ ರಾಮಾಯಣ! ನಾವೂ ನಮ್ಮ ಮೂಲವನ್ನು ಸೇರಿಕೊಳ್ಳಲು ಹಿಡಿಯಬೇಕಾದ ಹಾದಿಯನ್ನು ಅರುಹುವ ಅಮರಕೃತಿ ʼರಾಮನೇನು ದೇವನೇ?ʼ ಪುಸ್ತಕವಾಗಿದೆ.

‘ರಾಮನೂ ನಮ್ಮ-ನಿಮ್ಮಂತೆ ಮನುಷ್ಯ, ನಮಗಿಂತ ಹೆಚ್ಚು ಸಾಧನೆ ಮಾಡಿ ಪುರುಷೋತ್ತಮನಾದವ’ ಎನ್ನುವ ವಾದವೊಂದು ಪ್ರಚಲಿತವಾಗಿದೆ. ಈ ವಾದ ಮಾಡುವವರು ‘ರಾಮಾಯಣದಲ್ಲಿ ವಾಲ್ಮೀಕಿಗಳು ರಾಮ ದೇವರು ಎಂದಿಲ್ಲ’ ಎಂದು ಹೇಳುತ್ತಾರೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ರಾಮಾಯಣ, ಹೆಜ್ಜೆ ಹೆಜ್ಜೆಗೆ ರಾಮನ ದಿವ್ಯತೆಯನ್ನು ಗುರುತಿಸುತ್ತದೆ. ಕೆಲವೊಮ್ಮೆ ಪ್ರತ್ಯಕ್ಷವಾಗಿ, ಇನ್ನು ಕೆಲವೊಮ್ಮೆ ಪರೋಕ್ಷವಾಗಿ ಅದು ಕಾಣಸಿಗುತ್ತದೆ. ಅದನ್ನು ಸಾಧಿಸುವ ಸತ್ಕಾರ್ಯವನ್ನು ಈ ಕೃತಿ ಮಾಡಿದೆ.

ರಾಮಾಯಣದ ಶ್ಲೋಕಗಳನ್ನು ಉಲ್ಲೇಖಿಸುತ್ತಾ, ಅದರ ಆಶಯವನ್ನು ವಿವರಿಸುತ್ತಾ, ತರ್ಕಬದ್ಧವಾಗಿ ಸಾಗುವ ಈ
ಕೃತಿ, ಶಾಸ್ತ್ರೀಯ ಕ್ರಮದ ನಿರೂಪಣೆಯಿಂದ ಗಮನ ಸೆಳೆಯುತ್ತದೆ. ಇಲ್ಲಿ ಕಲ್ಪನೆಯಿಲ್ಲ, ಮನಸ್ಸಿಗೆ ಅನ್ನಿಸಿದ್ದನ್ನೆಲ್ಲ ರಾಮಾಯಣದಲ್ಲಿದೆ ಎನ್ನುವ ಅಪಭ್ರಂಶವಿಲ್ಲ, ತನಗನ್ನಿಸಿದ್ದೇ ಸತ್ಯ ಎಂದುಕೊಳ್ಳುವ ಅಹಂಕಾರವೂ ಇಲ್ಲ. ಋಷಿಹೃದಯದ ಒಳಹೊಕ್ಕು, ಆ ಆರ್ಷತನವನ್ನು ಆಸ್ವಾದಿಸುತ್ತಾ, ಸತ್ಯವನ್ನು ಮಾತ್ರ ಹೇಳುತ್ತೇನೆ ಎನ್ನುವ ವಿನಯಪೂರ್ವಕವಾದ ದಿಟ್ಟತನ ಕೃತಿಯಲ್ಲಿದೆ.

ಇದನ್ನೂ ಓದಿ | Sunday Read: ಹೊಸ ಪುಸ್ತಕ: ರಾಮನೇನು ದೇವನೇ?

ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ 39ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ, ಮದ್ರಾಸು ಐಐಟಿಯಲ್ಲಿ ಪೀಠಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ, ಬಹುಶ್ರುತ ವಿದ್ವಾಂಸರಾದ ಡಾ. ಕೆ. ಎಸ್. ಕಣ್ಣನ್ ಅವರು ರಚಿಸಿರುವ, ಶ್ರೀ ಭಾರತೀ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕದ ಪ್ರತಿಗಳಿಗಾಗಿ ಶ್ರೀಪುಸ್ತಕಮ್ (9591542454) ಸoಪರ್ಕಿಸಬಹುದಾಗಿದೆ.

“ಶ್ರೀರಾಮ, ಶ್ರೀಮನ್ನಾರಾಯಣನ ಅವತಾರ. ವಾಲ್ಮೀಕಿ ರಾಮಾಯಣ ಇದನ್ನು ಬಗೆಬಗೆಯಾಗಿ ತೋರಿಸಿಕೊಡುತ್ತದೆ. ವ್ಯಕ್ತವಾಗಿಯಲ್ಲದೇ ರಾಮಾಯಣದ ಅಂತಃಸೂತ್ರವೇ ಇದಾಗಿದೆ. ವೈಕುಂಠದಿಂದ ಆರಂಭವಾಗಿ ಮತ್ತೆ ವೈಕುಂಠವನ್ನು ಸೇರುವುದೇ ರಾಮನ ಅಯನ. ಈ ಅಯನ ಜೀವಿಗಳೆಲ್ಲರದ್ದೂ ಆಗಬೇಕೆನ್ನುವುದೇ ರಾಮಾಯಣದ ಸಂದೇಶ, ಶ್ರೀರಾಮನ ಅವತಾರವೂ, ಶ್ರೀಮದ್ರಾಮಾಯಣದ ಅವತಾರವೂ ಈ ಉದ್ದೇಶದ್ದೇ ಆಗಿದೆ. ಇದೀಗ ರಾಮನೇನು ದೇವನೇ? ಕೃತಿ ವಾಲ್ಮೀಕಿಗಳು ರಾಮಾಯಣದಲ್ಲಿ ಎಲ್ಲೆಲ್ಲಿ ಈ ಅಂಶವನ್ನು ಪ್ರಸ್ತುತಪಡಿಸಿದ್ದಾರೆ ಎನ್ನುವುದನ್ನು ಸಾಧಾರವಾಗಿ ನಿರೂಪಿಸಿದೆ.
| ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರ ಮಠ

Continue Reading

ಅಂಕಣ

ರಾಜಮಾರ್ಗ ಅಂಕಣ: ಶ್ರೀರಾಮ ಆಗುವುದು ಕಷ್ಟ, ರಾವಣ ಆಗುವುದು ಕೂಡ ಕಷ್ಟವೇ!

ರಾಜಮಾರ್ಗ ಅಂಕಣ: ಇಂದು ಶ್ರೀರಾಮ ನವಮಿ. ಯಾವ ಕೋನದಲ್ಲಿ ನೋಡಿದರೂ ರಾಮನ ವ್ಯಕ್ತಿತ್ವದಲ್ಲಿ ಒಂದು ಕಪ್ಪುಚುಕ್ಕೆ ಕೂಡ ಕಂಡು ಬರುವುದು ಸಾಧ್ಯ ಇಲ್ಲ. ಆದ್ದರಿಂದ ರಾಮ ಆಗುವುದು ಎಲ್ಲರಿಗೂ ಕಷ್ಟ!

VISTARANEWS.COM


on

sri rama rajamarga column
Koo

ಈ ಕತೆಯನ್ನು ಓದಿದ ನಂತರ ನೀವು ಯಾರನ್ನೂ ದ್ವೇಷ ಮಾಡುವುದಿಲ್ಲ!

Rajendra-Bhat-Raja-Marga-Main-logo

ಇಂದು ರಾಮನವಮಿ (Sri Ram Navami). ನನ್ನ ಜನ್ಮ ನಕ್ಷತ್ರ ಪುನರ್ವಸು. ಅದು ಶ್ರೀ ರಾಮಚಂದ್ರನ ಜನ್ಮ ನಕ್ಷತ್ರವೂ ಹೌದು! ನಾನು ಕೂಡ ರಾಮನ ಹಾಗೆ ನನ್ನ ಹೆತ್ತವರಿಗೆ ಹಿರಿಯ ಮಗ. ಆದರೆ ನಮ್ಮ ಹೋಲಿಕೆಯು ಅಷ್ಟಕ್ಕೇ ನಿಂತು ಬಿಡುತ್ತದೆ!

ಏಕೆಂದರೆ ಶ್ರೀರಾಮನ ಹಾಗೆ ಬದುಕುವುದು ತುಂಬಾನೆ ಕಷ್ಟ. ಶ್ರೀಕೃಷ್ಣನ ಹಾಗೆ ಯೋಚನೆ ಮಾಡುವುದು ಕೂಡ ಕಷ್ಟ. ನನಗೆ ಎರಡೂ ಈವರೆಗೆ ಸಾಧ್ಯವಾಗಲೇ ಇಲ್ಲ ಅನ್ನುವುದು ವಾಸ್ತವ. ಅದರಲ್ಲಿಯೂ ಮೊದಲನೆಯದ್ದು ಭಾರೀ ಕಷ್ಟ.

ವಾಲ್ಮೀಕಿಯು ಕೆತ್ತಿದ್ದು ಅದ್ಭುತವಾದ ವ್ಯಕ್ತಿತ್ವ ರಾಮ

ಶ್ರೀರಾಮನ ಬಗ್ಗೆ ಬೇರೆ ಬೇರೆ ವೇದಿಕೆಗಳಲ್ಲಿ ಗಂಟೆಗಳ ಕಾಲ ಮಾತಾಡಿದ್ದೇನೆ. ಅವನ ಜೀವನದ ಪ್ರತೀ ಒಂದು ಘಟನೆ ಕೂಡ ನನಗೆ ಬೆರಗನ್ನೇ ಮೂಡಿಸುತ್ತದೆ. ಆದಿ ಕವಿ ವಾಲ್ಮೀಕಿಯು ರಾಮಾಯಣದ ಮೂಲಕ ಕೆತ್ತಿದ ರಾಮನ ಪಾತ್ರವು ಅದು ವಿಶ್ವದ ಅದ್ಭುತ!

ನನಗೆ ಅಚ್ಚರಿ ಮೂಡಿಸಿದ ಒಂದೆರಡು ಘಟನೆಗಳು

ಶ್ರೀ ರಾಮನಿಗೆ ಪಟ್ಟಾಭಿಷೇಕಕ್ಕೆ ಸಂಕಲ್ಪವನ್ನು ದಶರಥನು ತೆಗೆದುಕೊಂಡಾಗಿತ್ತು. ಅದಕ್ಕಾಗಿ ತೀವ್ರ ಹಂಬಲ ಪಟ್ಟವರು ಅಯೋಧ್ಯೆಯ ಪ್ರತೀ ಒಬ್ಬ ನಾಗರಿಕರು. ರಾಮನು ಅರಸ ಆಗಬಾರದು ಅಂತ ಒಬ್ಬರೂ ಹೇಳಿರಲಿಲ್ಲ. ಪಟ್ಟಾಭಿಷೇಕಕ್ಕೆ ದಿನವನ್ನು ನಿಗದಿ ಮಾಡಿದ ದಶರಥ ಮಹಾರಾಜನು ಇಡೀ ಅಯೋಧ್ಯಾ ನಗರವನ್ನು ಸಿಂಗಾರ ಮಾಡಿ ಪಟ್ಟಕ್ಕೆ ಸಿದ್ಧತೆ ಮಾಡಿದ್ದನು.

ಆದರೆ ಮಂಥರೆ ಎಂಬ ಅತೃಪ್ತ ಆತ್ಮವು ಕೈಕೇಯಿ ರಾಣಿಯ ತಲೆಯನ್ನು ಕೆಡಿಸಿ ರಾಮನ ಪಟ್ಟಾಭಿಷೇಕಕ್ಕೆ ವಿಘ್ನವನ್ನು ಒಡ್ಡಿದ್ದು ನಮಗೆಲ್ಲ ಗೊತ್ತಿದೆ. ಹಿಂದೆ ಯಾವುದೋ ಒಂದು ಕಾಲದಲ್ಲಿ ಕೊಟ್ಟಿದ್ದ ಎರಡು ವರಗಳನ್ನು ಕೈಕೇಯಿಯು ಆ ಮಧ್ಯರಾತ್ರಿ ದಶರಥ ಮಹಾರಾಜನಿಗೆ ಕೇಳಿದಾಗ ರಾಜನು ಅದನ್ನು ನೆರವೇರಿಸಲು ಸಾಧ್ಯವೇ ಆಗದೇ ಕುಸಿದು ಬಿದ್ದ ಕಥೆಯು ಕೂಡ ನಮಗೆ ಗೊತ್ತಿದೆ.

ಪಿತೃ ವಾಕ್ಯಂ ಶಿರೋಧಾರ್ಯಂ!

ಆಗ ಶ್ರೀ ರಾಮನು ಕಟ್ಟು ಬಿದ್ದದ್ದು ಯಾವುದೋ ಒಂದು ಗಳಿಗೆಯಲ್ಲಿ ತನ್ನ ಅಪ್ಪ ತನ್ನ ಚಿಕ್ಕಮ್ಮನಿಗೆ ಕೊಟ್ಟಿದ್ದ ಒಂದು ಮಾತಿಗೆ! ಅದನ್ನು ತಂದೆಯು ನೇರವಾಗಿ ಹೇಳಲು ಸಾಧ್ಯ ಆಗದೆ ಕಣ್ಣೀರನ್ನು ಸುರಿಸುತ್ತ ನೆಲಕ್ಕೆ ಒರಗಿದಾಗಲೂ ರಾಮನಿಗೆ ಅದು ಖಂಡಿತವಾಗಿಯೂ ‘ಪಿತೃ ವಾಕ್ಯಮ್ ಶಿರೋಧಾರ್ಯಮ್’!

king dasharatha

ರಾಮನು ಅರಸ ಆಗಬಾರದು ಎಂದು ರಾಣಿ ಕೈಕೇಯಿಯ ಮನಸ್ಸಿನಲ್ಲಿ ಕೂಡ ಇರಲಿಲ್ಲ. ಆದರೆ ಆಕೆಯಲ್ಲಿ ಆ ಭ್ರಮೆ ಮತ್ತು ಪುತ್ರ ವಾತ್ಸಲ್ಯವನ್ನು ಹುಟ್ಟಿಸಿದವಳು ಆ ಗೂನಜ್ಜಿ ಮಂಥರೆ!

ಅವಳು ಹೇಗೂ ಅಯೋಧ್ಯೆಯ ಪ್ರಜೆ ಆಗಿರಲಿಲ್ಲ. ಅವಳು ಕೈಕೇಯಿಯ ತಾಯಿಯ ಮನೆಯಿಂದ ಕೈಕೇಯಿ ಜೊತೆಗೆ ಬಂದವಳು. ಒಂದು ರೀತಿಯಲ್ಲಿ ಶ್ರೀರಾಮನು ಪಟ್ಟವೇರಿ ಅರಸನಾಗಲು ಆ ಅಯೋಧ್ಯೆಯಲ್ಲಿ ನೂರು ಪ್ರತಿಶತದ ಬಹುಮತದ ಮುದ್ರೆ ಇತ್ತು! ಆದರೆ ರಾಮನು ತಂದೆ ಬಹಳ ಹಿಂದೆ ತನ್ನ ರಾಣಿಗೆ ಕೊಟ್ಟ ಒಂದು ಮಾತಿಗೆ ಕಟ್ಟು ಬಿದ್ದು ಅರಸೊತ್ತಿಗೆಯನ್ನು ಎಡಗಾಲಿನಿಂದ ಒದ್ದು ನಾರು ಮುಡಿ ತೊಟ್ಟು ಕಾಡಿಗೆ ಹೋದವನು. ತನ್ನದೇ ಹಕ್ಕಿನ ರಾಜ್ಯವನ್ನು ತ್ಯಾಗ ಮಾಡಲು ಆತ ಹಿಂದೆ ಮುಂದೆ ನೋಡಲಿಲ್ಲ!

‘ನೀನು ಕೊಟ್ಟ ಮಾತಿಗೆ ನಾನು ಹೇಗೆ ಹೊಣೆ ಆಗಬೇಕು?’ ಎಂದು ಅಪ್ಪನನ್ನು ಒಂದು ಮಾತು ಕೂಡ ಶ್ರೀ ರಾಮನು ಕೇಳಲಿಲ್ಲ! ಆ ರೀತಿಯ ಸಣ್ಣ ಯೋಚನೆ ಕೂಡ ಆತನ ಮನದಲ್ಲಿ ಬರಲಿಲ್ಲ ಅಂದರೆ ಅದು ಅದ್ಭುತವೇ ಹೌದು! ಸರ್ವಾಲಂಕಾರ ಆಗಿದ್ದ ಅಯೋಧ್ಯೆಯ ನಡುವೆ ಯಾವ ವಿಷಾದ ಕೂಡ ಇಲ್ಲದೆ ಎದ್ದು ಹೋಗುವುದು ಸುಲಭ ಅಲ್ಲ! ಅದು ರಾಮನಿಗೆ ಮಾತ್ರ ಸಾಧ್ಯವಾಗುವ ನಡೆ.

ರಾಮನಿಗೆ ನೂರು ಪ್ರತಿಶತ ಜನಮತದ ಬೆಂಬಲ ಇತ್ತು!

ಆಗ ಪೂರ್ಣ ಜನಮತ ತನ್ನ ಪರವಾಗಿ ಇದ್ದಾಗ ರಾಮನು ಪಿತೃ ವಾಕ್ಯವನ್ನು ಧಿಕ್ಕರಿಸಿ ಆಡಳಿತವನ್ನು ಮಾಡಬಹುದಿತ್ತು ಎಂದು ನನಗೆ ಹಲವರು ಕೇಳಿದ್ದಾರೆ. ಆದರೆ ಆಗ ರಾಮನು ಕೇವಲ ದಶರಥನ ಮಗ ಮಾತ್ರ ಆಗಿದ್ದ. ಅರಸ ಆಗಿರಲಿಲ್ಲ ಅನ್ನುವುದು ನನ್ನ ಉತ್ತರ!

ಮುಂದೆ ರಾಣಿ ಕೈಕೇಯಿ ಕಾಡಿಗೆ ಬಂದು ತಮ್ಮ ತಪ್ಪಿಗೆ ಕ್ಷಮೆ ಕೇಳಿ ಮತ್ತೆ ಅಯೋಧ್ಯೆಗೆ ಬರಬೇಕು ಎಂದು ಎಷ್ಟು ವಿನಂತಿ ಮಾಡಿದರೂ ರಾಮಚಂದ್ರನ ಮನಸ್ಸು ಒಂದಿಷ್ಟೂ ವಿಚಲಿತ ಆಗಲಿಲ್ಲ. ಕಣ್ಣೀರು ಸುರಿಸುತ್ತಾ ಬಂದ ಭರತನನ್ನು ಧೈರ್ಯ ತುಂಬಿಸಿ ಅರಸನಾಗಲು ಮಾನಸಿಕವಾಗಿ ಸಿದ್ಧತೆ ಮಾಡಿ ಕಳುಹಿಸಿದ್ದು ಅದೇ ರಾಮ. ಈ ರೀತಿಯ ನಿರ್ಧಾರಗಳು ರಾಮನ ವ್ಯಕ್ತಿತ್ವದ ಕೈಗನ್ನಡಿ.

Sri Ramachandra

ಮುಂದೆ ಅದೇ ರಾಮನು ರಾವಣನ ವಧೆಯಾದ ನಂತರ ಅತ್ಯಂತ ವಿಧಿವತ್ತಾಗಿ ಲಂಕೆಯಲ್ಲಿ ಆತನ ಕ್ರಿಯಾಕರ್ಮ ಮುಗಿಸುತ್ತಾನೆ. ಆಗ ರಾಮ ಹೇಳಿದ ಎರಡು ಮಾತುಗಳನ್ನು ಕೇಳಿ.

ರಾಮನು ದ್ವೇಷ ಮಾಡಿದ್ದು ರಾವಣನನ್ನು ಅಲ್ಲ!

‘ನಾನು ದ್ವೇಷ ಮಾಡಿದ್ದು ರಾವಣನನ್ನು ಅಲ್ಲ. ಅವನ ಒಳಗಿದ್ದ ರಾವಣತ್ವವನ್ನು! ಯಾರನ್ನೇ ಆದರೂ ಮರಣದ ನಂತರ ದ್ವೇಷ ಮಾಡಬಾರದು. ರಾವಣನು ಹೇಳಿ ಕೇಳಿ ಮಹಾ ಬ್ರಾಹ್ಮಣ. ಆತನು ದೈವಭಕ್ತ. ಆದ್ದರಿಂದ ಅವನನ್ನು ಗೌರವಿಸುವುದು ನಮ್ಮ ಕರ್ತವ್ಯ!’

ಸೀತೆಯನ್ನು ಅಗ್ನಿಪರೀಕ್ಷೆ ಮಾಡಿದ್ದು ಸರಿಯಾ?

ಮುಂದೆ ಅದೇ ರಾಮಚಂದ್ರನು ಅಯೋಧ್ಯೆಗೆ ಬಂದು ಪಟ್ಟಾಭಿಷೇಕ ಆಗುವ ಮೊದಲು ತನ್ನ ಪತ್ನಿ ಸೀತೆಯನ್ನು ಅಯೋಧ್ಯೆಯ ಜನರ ಮುಂದೆ ಅಗ್ನಿ ಪರೀಕ್ಷೆಗೆ ಒಡ್ಡಿದ ವಿಷಯದ ಬಗ್ಗೆ ತುಂಬಾ ಟೀಕೆಗಳು ಇವೆ. ಅದೇ ರೀತಿ ಒಬ್ಬ ಸಾಮಾನ್ಯ ಅಗಸನ ಮಾತನ್ನು ಕೇಳಿ ತನ್ನ ಕೈ ಹಿಡಿದ ಮಡದಿ ಸೀತೆಯನ್ನು ಮತ್ತೆ ಕಾಡಿಗೆ ಕಳುಹಿಸಿದ ನಿರ್ಧಾರದ ಬಗ್ಗೆ ಕೂಡ ಸಾಕಷ್ಟು ಟೀಕೆಗಳು ಬಂದಿವೆ.

ಆದರೆ ಅವೆರಡು ಕೂಡ ಶ್ರೀರಾಮನು ರಾಜಾರಾಮನಾಗಿ ತೆಗೆದುಕೊಂಡ ನಿರ್ಧಾರಗಳು. ಅವು ಸೀತಾರಾಮನಾಗಿ ತೆಗೆದುಕೊಂಡ ನಿರ್ಧಾರಗಳು ಅಲ್ಲ!

ರಾಜನ ನಡೆಗಳು ಸಂಶಯಾಸ್ಪದ ಆಗಿರಬಾರದು!

ರಾಜಾರಾಮನಾಗಿ ತನ್ನ ಪ್ರತಿಯೊಬ್ಬ ಪ್ರಜೆಯ ಮುಂದೆ ಸಂಶಯಾತೀತವಾಗಿ ಇರಬೇಕು ಮತ್ತು ಕಾಣಿಸಿಕೊಳ್ಳಬೇಕು ಎನ್ನುವುದು ರಾಜನ ಆದ್ಯ ಕರ್ತವ್ಯ. ತಾನು ನೆಟ್ಟಗಿರುವುದು ಮಾತ್ರವಲ್ಲ, ತನ್ನ ನೆರಳು ಕೂಡ ನೆಟ್ಟಗಿರಬೇಕು ಎಂದು ಭಾವಿಸುವುದು ಒಬ್ಬ ರಾಜನ ಆದ್ಯತೆಯೇ ಆಗಿದೆ. ಒಬ್ಬ ಬಹು ಸಾಮಾನ್ಯ ಅಗಸನೂ ಅರಸನಿಗೆ ಒಬ್ಬ ಗೌರವಾನ್ವಿತ ಪ್ರಜೆಯೇ ಆಗಿದ್ದಾನೆ. ಆತನ ಮನದ ಸಂಶಯವನ್ನು ಕೂಡ ನಿವಾರಣೆ ಮಾಡುವುದು ಒಬ್ಬ ಅರಸನ ಕರ್ತವ್ಯ. ಹೀಗೆ ಯಾವ ಕೋನದಲ್ಲಿ ನೋಡಿದರೂ ರಾಮನ ವ್ಯಕ್ತಿತ್ವದಲ್ಲಿ ಒಂದು ಕಪ್ಪುಚುಕ್ಕೆ ಕೂಡ ಕಂಡು ಬರುವುದು ಸಾಧ್ಯ ಇಲ್ಲ. ಆದ್ದರಿಂದ ರಾಮ ಆಗುವುದು ಎಲ್ಲರಿಗೂ ಕಷ್ಟ!

ರಾವಣ ಆಗುವುದು ಕಷ್ಟವೇ!

ರಾಮ ಆಗುವುದು ಎಷ್ಟು ಕಷ್ಟವೋ ರಾವಣ ಆಗುವುದು ಅಷ್ಟೇ ಕಷ್ಟ! ಕವಿ ವಾಲ್ಮೀಕಿಯು ಕಥಾ ನಾಯಕ ರಾಮನ ಪಾತ್ರಕ್ಕೆ ಎಷ್ಟು ಶಕ್ತಿ ತುಂಬಿದ್ದಾನೋ ಖಳನಾದ ರಾವಣನ ಪಾತ್ರಕ್ಕೆ ಕೂಡ ಅಷ್ಟೇ ಶಕ್ತಿಯನ್ನು ತುಂಬಿದ್ದಾನೆ. ಆತನ ಪಾತ್ರವೂ ಅಮೋಘವೆ ಆಗಿದೆ!

ಸೀತಾ ಸ್ವಯಂವರದಲ್ಲಿ ತನಗಾದ ಅಪಮಾನದಿಂದ ಕುದ್ದು ಹೋಗಿದ್ದ ರಾವಣನ ಅಂತರ್ಯದಲ್ಲಿ ಸೀತೆಯನ್ನು ಒಮ್ಮೆ ಗೆಲ್ಲಬೇಕು ಎಂದು ಮಾತ್ರ ಇತ್ತು. ಅನುಭವಿಸುವುದು ಆಗಿರಲಿಲ್ಲ. ಅನುಭವಿಸುವ ಆಸೆ ಇದ್ದಿದ್ದರೆ ಅವನದ್ದೇ ಲಂಕೆಯಲ್ಲಿ ಏಕಾಂಗಿ ಆಗಿದ್ದ ಸೀತೆಯು ತನ್ನ ಮಾನವನ್ನು ಉಳಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ!

ಹೀಗೊಂದು ಕಥೆಯನ್ನು ನಾನು ಓದಿದ್ದು!

ಈ ಕಥೆಯು ಮೂಲ ರಾಮಾಯಣದಲ್ಲಿ ಇಲ್ಲ. ಆದರೆ ಅದ್ಭುತವಾಗಿದೆ. ಕಾಲ್ಪನಿಕ ಎಂದು ಬೇಕಾದರೂ ಕರೆಯಿರಿ. ಸೀತೆಯನ್ನು ಹುಡುಕುತ್ತಾ ಲಂಕೆಗೆ ಬಂದಿದ್ದ ಶ್ರೀರಾಮನಿಗೆ ರಾವಣನ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಆಲ್ಲಿ ಕೇಳಿಬರುತ್ತವೆ. ಆತನು ಮಹಾ ಯೋಧ. ಆತನನ್ನು ಸೋಲಿಸುವುದು ಖಂಡಿತ ಸುಲಭದ ಕೆಲಸ ಅಲ್ಲ ಎಂದು ಗೊತ್ತಾಗುತ್ತದೆ. ಅದಕ್ಕೆ ‘ಶತ್ರು ಸಂಹಾರ’ದ ಯಾಗವನ್ನು ಮಾಡಬೇಕು ಎಂದು ಅಲ್ಲಿದ್ದ ಹಿರಿಯರು ಹೇಳುತ್ತಾರೆ.

ಲಂಕೆ ಹೇಳಿ ಕೇಳಿ ರಾಕ್ಷಸರ ನಾಡು! ಅಲ್ಲಿ ಆ ಯಾಗವನ್ನು ಮಾಡಬೇಕು ಅಂತಾದರೆ ಪುರೋಹಿತರು ಯಾರು ಸಿಗುತ್ತಾರೆ? ಆಗ ಹಿರಿಯರು ಇನ್ನೊಂದು ಉಪಾಯವನ್ನು ಹೇಳುತ್ತಾರೆ. ಲಂಕೆಯಲ್ಲಿ ಒಬ್ಬನೇ ಬ್ರಾಹ್ಮಣ ಇರುವುದು ಅದು ರಾವಣ! ಆತನಿಗೆ ಎಲ್ಲಾ ವೇದ ವಿದ್ಯೆಗಳು ಗೊತ್ತಿವೆ. ಆತ ಪುರೋಹಿತನಾಗಿ ಬರಲು ಒಪ್ಪಿದರೆ ಆದೀತು ಎಂಬ ಅಭಿಪ್ರಾಯ ಬಂತು.

ತನ್ನದೇ ವಧೆಯನ್ನು ಮಾಡುವ ‘ಶತ್ರುಸಂಹಾರ ಯಾಗ’ಕ್ಕೆ ಪುರೋಹಿತನಾಗಿ ರಾವಣನು ಬರಬಹುದೇ? ಈ ಪ್ರಶ್ನೆಯು ಎದ್ದಾಗ ನೋಡೋಣ, ಒಮ್ಮೆ ಪ್ರಯತ್ನ ಮಾಡೋಣ ಎಂಬ ಮಾತು ಬಂತು. ಆಗ ರಾವಣನಿಗೆ ಶ್ರೀರಾಮನ ಕಡೆಯಿಂದ ಗೌರವಪೂರ್ವಕ ಆಮಂತ್ರಣವು ಹೋಯಿತು. ರಾವಣ ಬರಲು ಸಾಧ್ಯ ಇಲ್ಲವೇ ಇಲ್ಲ ಎಂದು ಎಲ್ಲರೂ ನಂಬಿದ್ದರು.

ಇದನ್ನೂ ಓದಿ: ರಾಜಮಾರ್ಗ ಅಂಕಣ: RCB- ʼಹೊಸ ಅಧ್ಯಾಯʼ ಆರಂಭ ಆಗೋದು ಯಾವಾಗ?

ಆದರೆ ಶ್ರೀರಾಮನ ಆಮಂತ್ರಣಕ್ಕೆ ತಲೆ ಬಾಗಿ ರಾವಣನು ಬಂದೇ ಬಿಟ್ಟ! ಪುರೋಹಿತನಾಗಿ ಕೂತು ‘ಶತ್ರು ಸಂಹಾರ’ ಯಾಗವನ್ನು ಪೂರ್ತಿ ಮಾಡಿದ. ಪೂರ್ಣಾಹುತಿ ಆದ ನಂತರ ಶ್ರೀರಾಮನು ಪುರೋಹಿತ ರಾವಣನ ಪಾದ ಮುಟ್ಟಿ ನಮಸ್ಕಾರ ಮಾಡಿದ!

ಆಗ ರಾವಣ ರಾಮನಿಗೆ ಕೈ ಮುಗಿದು ಹೇಳಿದ ಮಾತು ಕೇಳಿ.

“ಶ್ರೀರಾಮ, ಸೀತೆಯನ್ನು ಅಪಹರಣ ಮಾಡಿಕೊಂಡು ಬಂದ ನಂತರ ಪಾಪ ಪ್ರಜ್ಞೆಯಿಂದ ಸರಿಯಾಗಿ ನಿದ್ದೆಯು ಬರುತ್ತಿಲ್ಲ. ನಿದ್ದೆ, ವಿಶ್ರಾಂತಿ ಇಲ್ಲದೆ ದಣಿದು ಬಿಟ್ಟಿದ್ದೇನೆ. ನಿನ್ನ ಕಾಲ ಮೇಲೆ ಒಂದು ಗಳಿಗೆ ಮಲಗಬೇಕು ಅನ್ನಿಸ್ತಾ ಇದೆ! ನಿನ್ನ ಅನುಮತಿಯನ್ನು ಕೊಡುವೆಯಾ?’

ತನ್ನ ಗೆಲುವಿಗೆ ಬೇಕಾಗಿ ದೊಡ್ಡ ಯಾಗವನ್ನೇ ಮಾಡಿಕೊಟ್ಟ ರಾವಣನ ವಿನಂತಿಯನ್ನು ಶ್ರೀರಾಮನು ನಿರಾಕರಿಸಲು ಸಾಧ್ಯವೇ ಇರಲಿಲ್ಲ. ಶ್ರೀರಾಮ ಅಸ್ತು ಅಂದ. ರಾವಣನು ಪುಟ್ಟ ಮಗುವಿನ ಹಾಗೆ ರಾಮನ ಕಾಲಿನ ಮೇಲೆ ಸುದೀರ್ಘ ಕಾಲ ಮೈಮರೆತು ಮಲಗಿದ. ಎಲ್ಲವನ್ನೂ ಮರೆತು ಬಿಟ್ಟನು! ತನ್ನ ಪಾಪದ ಭೀತಿಯನ್ನು ರಾಮನ ಪಾದಮೂಲದಲ್ಲಿ ಇಟ್ಟು ಎದೆಯ ಭಾರವನ್ನು ಇಳಿಸಿ ಹೊರಟು ಹೋದನು ರಾವಣ!

ಈಗ ಹೇಳಿ ರಾವಣ ಆಗುವುದು ಅಷ್ಟು ಸುಲಭವಾ?

ಇದನ್ನೂ ಓದಿ: Ram Navami : ಇಂದು ದೇಶಾದ್ಯಂತ ರಾಮ ನವಮಿ ಸಂಭ್ರಮ; ಏನು ಈ ದಿನದ ಮಹತ್ವ?

Continue Reading

ಅಂಕಣ

ಧವಳ ಧಾರಿಣಿ ಅಂಕಣ: ರಾಮಾಯಣದ ಕವಿಗೆ ಕಾಡಿದ ಮೂರು ಚಿಂತೆಗಳು

ಧವಳ ಧಾರಿಣಿ ಅಂಕಣ: ರಾಮಾಯಣವನ್ನು ರಚಿಸಿದ ಮುನಿಗೆ ತನ್ನ ಕಾವ್ಯದ ಮೇಲೆ ಮೋಹವುಂಟಾಯಿತು. ಮತ್ತೆ ಮತ್ತೆ ಕಾವ್ಯಾನುಸಂಧಾನವನ್ನು ಮಾಡತೊಡಗಿದ. ಕವಿಗೆ ಪ್ರತಿಯೊಂದು ಕೃತಿಯೂ ಮಕ್ಕಳಂತೆ. ಕೃತಿ ಆತನನ್ನು ಮೋಹಪರವಶತೆಗೆ ಈಡುಮಾಡುತ್ತದೆ.

VISTARANEWS.COM


on

valmiki dhavala dharini column
Koo

ರಾಮಾಯಣದ ಪೂರ್ವರಂಗ ಮತ್ತು ಅಂತರಂಗ

dhavala dharini by Narayana yaji

ಧವಳ ಧಾರಿಣಿ ಅಂಕಣ: ಕೃತ್ವಾಪಿ ತನ್ಮಹಾಪ್ರಾಜ್ಞಸ್ಸಭವಿಷ್ಯಂ ಸಹೋತ್ತರಮ್
ಚಿನ್ತಯಾಮಾಸ ಕೋನ್ವೇತತ್ಪ್ರಯುಞ್ಜೀಯಾದಿತಿ ಪ್ರಭುಃ ৷৷ಬಾ.4.3৷৷

ಮಹಾ ಪ್ರಾಜ್ಞರು ಮತ್ತು ತ್ರಿಕಾಲವನ್ನು ಬಲ್ಲವರಾದ ವಾಲ್ಮೀಕಿ ಮಹರ್ಷಿಗಳು ಶ್ರೀರಾಮನ ಪಟ್ಟಾಭಿಷೇಕದ ನಂತರ ಭವಿಷ್ಯವನ್ನು ಹೇಳುವ ಉತ್ತರಕಾಂಡ ಸಹಿತವಾದ ರಾಮಾಯಣವನ್ನು ರಚಿಸಿದ ನಂತರ ನನ್ನಿಂದ ಇದರ (ರಾಮಾಯಣದ) ಉಪದೇಶವನ್ನು ಪಡೆದು ಸರಿಯಾಗಿ ಪ್ರಯೋಗಿಸಬಲ್ಲ ಸಮರ್ಥರು ಯಾರಿದ್ದಾರೆ ಎನ್ನುವ ಚಿಂತೆಗೊಳಗಾದರು (ಭಾವಾರ್ಥ).

ಕವಿಗೆ ಕಾವ್ಯವನ್ನು ರಚಿಸುವಾಗ ಹೇಗೆ ಮತ್ತು ಯಾಕೆ ಎನ್ನುವ ಚಿಂತೆ ಉಂಟಾಗುವುದು ಸಹಜದ ಕ್ರಿಯೆ. ಮನಸ್ಸಿನಲ್ಲಿ ಯಾವುದೋ ಅಮೂರ್ತವಾದ ಭಾವವನ್ನು ಇರಿಸಿಕೊಂಡು ಅದನ್ನು ಮೂರ್ತರೂಪಕ್ಕೆ ತರುವಾಗ ಕವಿ ಪ್ರಸವವೇದನೆಯನ್ನು ಅನುಭವಿಸುತ್ತಾನೆ. ಇಲ್ಲಿ ಕಾವ್ಯ ರೂಪುಗೊಳ್ಳುವಿಕೆಯೆನ್ನುವುದನ್ನು ಕೀಟವೊಂದು ಪತಂಗವಾಗಿ ಪರಿವರ್ತಿತವಾಗುವುದಕ್ಕೆ ಹೋಲಿಸಬಹುದು. ಕಾವ್ಯದ ವಸ್ತು ಮನಸ್ಸಿನಲ್ಲಿ ರೂಪುಗೊಳ್ಳುತ್ತಲೇ ಅದು ಹೊರ ಬರುವುದಕ್ಕೆ ಧ್ಯಾನಸ್ಥ ಸ್ಥಿತಿ ಬೇಕಾಗುತ್ತದೆ. ಮನಸ್ಸಿನಲ್ಲಿ ಮಥನ ನಡೆಯುತ್ತಾ ನಂತರದಲ್ಲಿ ಅದು ತನ್ನ ಸುತ್ತಲೂ ಕಟ್ಟಿದ ಗೂಡನ್ನು ತಾನೇ ಒಡೆದುಕೊಂಡು ಮನೋಹರವಾದ ಪಾತರಗಿತ್ತಿಯಾಗಿ ಹಾರತೊಡಗುತ್ತದೆ. ಮೊದಲು ಕವಿ ರಸಭಾವದಲ್ಲಿ ಲೀನವಾಗುತ್ತಾನೆ. ತುರೀಯಾವಸ್ಥೆಗೆ ತಲುಪುವಾಗ ಭಾವದ ಆವರಣದೊಳಗೆ ಸಿಕ್ಕಿಬೀಳುತ್ತಾನೆ. ಹುತ್ತಗಟ್ಟುವ ಕ್ರಿಯೆ ಎಂದರೆ ಇದೆ. ರತ್ನಾಕರನೆನ್ನುವ ಬೇಡ ಹೆಂಡತಿ ಮಕ್ಕಳನ್ನು ಸುಖವಾಗಿರಿಸಲು ಹಿಂಸಾವೃತ್ತಿಯನ್ನೇ ಮೈಗೂಡಿಸಿಕೊಂಡು ಬದುಕಿದವ. ಲೌಕಿಕದ ಸುಖವನ್ನು ಹಂಚಿಕೊಳ್ಳಲು ಬಯಸುವ ಅವರ ಕುಟುಂಬದವರು ಅದರಿಂದ ಉಂಟಾಗಬಹುದಾದಂತಹ ಪಾಪಕ್ಕೆ ಹೊಣೆಗಾರರಾಗಲು ಸಿದ್ಧರಿಲ್ಲದಾಗ ಆಘಾತಗೊಂಡ.

ಬದುಕೆನ್ನುವುದು ಆದರ್ಶವನ್ನು ಹುಡುಕುವುದಕ್ಕಾಗಿಯಲ್ಲ; ಆದರ್ಶವೇ ಬದುಕಾಗಬೇಕೆಂದು ಆಗ ಅನಿಸಿತು. ಅಂಗುಲಿಮಾಲ ಬುದ್ಧನಿಂದ ಪ್ರಭಾವಿತನಾಗಿರುವುದು ಇಂತಹುದೇ ಸಂದರ್ಭದಲ್ಲಿ. “ನಾನೃಷಿಃ ಕುರುತೇ ಕಾವ್ಯಂ” ಕವಿ ಜ್ಞಾನಿಯಷ್ಟೇ ಅಲ್ಲ, ಋಷಿಯೂ ಆಗಿರಬೇಕು. ಈ ಬದಲಾವಣೆಯ ಪರ್ವದಲ್ಲಿ, ತನಗಾಗಿ ಅಲ್ಲ ಲೋಕಕ್ಕಾಗಿ ಬದುಕಿದವ ಜಗತ್ತಿನಲ್ಲಿ ಇರಬಹುದೇ ಎನ್ನುವ ಸಂಶಯದ ಹುತ್ತ ಕಾಡಿದಾಗ ಹುಡುಕಾಟ ಪ್ರಾರಂಭವಾಯಿತು. ಆಗ ದರ್ಶನವಾಗಿರುವುದು ವೇದೋಪನಿಷತ್ತುಗಳಲ್ಲಿ ಅವಿತಿರುವ ಅಮೂರ್ತ ಜ್ಞಾನಭಂಡಾರ. ದರ್ಶನ ಆದರ್ಶವಾಗಬೇಕಾದರೆ ಅದಕ್ಕೊಂದು ಮೂರ್ತರೂಪ ಬೇಕು. ಅದೆಲ್ಲಿ ಎಂದು ಮತ್ತೆ ಮತ್ತೆ ಹಂಬಲಿಸುತ್ತಾ ಎಚ್ಚರವಾಗಿಯೂ ಎಚ್ಚರಗೊಳ್ಳದ ಸ್ಥಿತಿಯಲ್ಲಿ ಇದ್ದ. ಅಕ್ಷರವೆನ್ನುವುದು ಅವಿನಾಶಿ. ಅದು ಒಂದೂ ಅಲ್ಲದ ಬಹುತ್ವವೂ ಅಲ್ಲದ ವ್ಯಾಪಕತ್ವ. ಅದಕ್ಕೆ ಮತ್ತೊಂದು ಅಕ್ಷರ ಸೇರಿದಾಗ ಅದಕ್ಕೊಂದು ಮೂರ್ತರೂಪ ಬರುತ್ತದೆ. ಅದುವೇ ರಾಮ ಎನ್ನುವುದನ್ನು ಸಪ್ತರ್ಷಿಗಳೇ ಹೇಳಿದಾಗ ಮನಸ್ಸಿನೊಳಗೆ ಪಡಿಮೂಡಿತು ಆ ಆಕೃತಿ.

ಕವಿಸೃಷ್ಟಿಯನ್ನು “ನಿಯತಿಕೃತ ನಿಯಮರಹಿತ”ವೆಂದು ಹೇಳುತ್ತಾರೆ. ಲೋಕಾತೀತವಾದ ವಿಷಯಗಳನ್ನು ಅನುಭವಿಸುವಿಕೆಗೆ ದರ್ಶನವೆಂದು ಕರೆಯುತ್ತಾರೆ. ಅದು ಅಲೌಕಿಕ ಆನಂದವನ್ನು ನೀಡುತ್ತದೆ. ರತ್ನಾಕರ, ಪ್ರಾಚೇತಸ, ಋಕ್ಷ ಹೀಗೆ ಹಲವು ಹೆಸರುಳ್ಳ, ಆದರೆ ಹಿಂಸಾರತಿಯಲ್ಲಿ ಮನವಿಟ್ಟವನಿಗೆ ಸ್ವಾರ್ಥವನ್ನು ಬಿಟ್ಟು ಕೇವಲ ಕರ್ತವ್ಯವನ್ನೇ ತನ್ನ ಆಹ್ನಿಕವೆಂದುಕೊಂಡ ವ್ಯಕ್ತಿ ಇರಲು ಸಾಧ್ಯವೇ ಎನ್ನುವ ಸಂಶಯ ಬರುತ್ತಿತ್ತು. ಅನುಭವ ಪಕ್ವವಾಗಬೇಕಾದರೆ ಅದಕ್ಕೆ ನಿದರ್ಶನ ಬೇಕು. ನಾಟ್ಯದ ಭಾಷೆಯಲ್ಲಿ ಇದನ್ನು ಅಮೂರ್ತದಿಂದ ಮೂರ್ತಕ್ಕೆ ಮತ್ತು ಮೂರ್ತದಿಂದ ಅಮೂರ್ತಕ್ಕೆ ಎನ್ನುವ ಅವಸ್ಥೆಗಳಿಗೆ ತಲುಪುವ ಕ್ರಿಯೆ ಎನ್ನುತ್ತಾರೆ. ಸರಳವಾದ ರಂಗದ ಮೇಲೆ ತಾನು ಅನುಭವಿಸಿದ ವಿಷಯಗಳನ್ನು ನಟ ಕಣ್ಣಿಗೆ ಕಟ್ಟುವಂತೆ ಅಭಿನಯಿಸುತ್ತಾನೆ. ರಥ, ದೇವೇಂದ್ರನ ಸಭೆ, ಅರಣ್ಯ ಇವೆಲ್ಲವುಗಳ ಅಭಿನಯ ನಟನ ಸಾಮರ್ಥ್ಯದ ಮೇಲೆ ಪ್ರೇಕ್ಷಕನಿಗೆ ದರ್ಶನವಾಗಿ ಆತ ಪ್ರತ್ಯಕ್ಷವಾಗಿ ಅದನ್ನು ಅನುಭವಿಸಿ ತನ್ನನ್ನು ಸಂಪೂರ್ಣವಾಗಿ ಮರೆಯುತ್ತಾನೆ. ರಸದಲ್ಲಿ ಲೀನವಾಗುತ್ತಾನೆ. ಅಲ್ಲಿಗೆ ಪ್ರೇಕ್ಷಕನಿಗೆ ಮೂರ್ತಸ್ವರೂಪದಲ್ಲಿ ಕಾಣಿಸಿಕೊಂಡು ಆತನನ್ನು ತನ್ನೊಟ್ಟಿಗೆ ಅಮೂರ್ತಲೋಕಕ್ಕೆ ಒಯ್ಯುತ್ತದೆ. (ಯಕ್ಷಗಾನ ಇದಕ್ಕೆ ಸ್ಪಷ್ಟ ಉದಾಹರಣೆ). ಈ ಅನುಭವದ ಸಾಕ್ಷಾತ್ಕಾರಕ್ಕಾಗಿ ಋಷಿ ವಾಲ್ಮೀಕಿ ಹಂಬಲಿಸುತ್ತಿದ್ದ.

ರಾಮಾಯಣದ ಸಂದರ್ಭದಲ್ಲಿ ವಾಲ್ಮೀಕಿ ಮಹರ್ಷಿಗೆ ಮೂರುಸಲ ಚಿಂತೆಯುಂಟಾಗಿತ್ತು. ಬದುಕಬೇಕಾದರೆ ಹಿಂಸೆಯೇ ಮಾರ್ಗವೆಂದು ಅದೇ ಹಾದಿ ಹಿಡಿದು ಇದೀಗ ಆದರ್ಶದ ಬೆನ್ನು ಹತ್ತಿದವನಿಗೆ, ಎಲ್ಲಾ ಕಡೆಯೂ ಇದ್ದು ಎಲ್ಲದರಿಂದಲೂ ಅಂತರವನ್ನು ಕಾಯ್ದುಕೊಂಡಂತಹ ವ್ಯಕ್ತಿ ಈ ಲೋಕದಲ್ಲಿ ಇರಲು ಸಾಧ್ಯವೇ ಎನ್ನುವ ಸಂಶಯ ಬಿಟ್ಟೂ ಬಿಡದೇ ಕಾಡುತ್ತಿತ್ತು. ಒಂದು ವೇಳೆ ಇಲ್ಲದೇ ಹೋದರೆ…??? ಎನ್ನುವ ಚಿಂತೆಗೂ ಇದೇ ಕಾರಣವಾಗಿತ್ತು. ಮುನಿಪುಂಗವ ಆ ಕುರಿತೇ ತಪಸ್ಸು ಮಾಡುತ್ತಿದ್ದ; ಈ ವಿಷಯದ ಕುರಿತು ಸ್ಪಷ್ಟ ನಿದರ್ಶನವನ್ನು ಬಯಸುತ್ತಿದ್ದ. ಸಪ್ತರ್ಷಿಗಳೇನೋ ಮಹಾಮಹಿಮನ ವಿಷಯಗಳ ಕುರಿತು ರಾಮ ಎನ್ನುವ ಹೆಸರನ್ನು ಹೇಳಿದ್ದಾರೆ. ಲೋಕದಲ್ಲಿ ಸಂಭಾವಿತನಾಗಿ ಬದುಕುವದೆನ್ನುವದು ಒಂದು ಆದರ್ಶ ಸ್ಥಿತಿ (Utopian State). ಆದರ್ಶವೆನ್ನುವುದು ವಾಸ್ತವವೂ ಆಗಬಹುದೇ ಎನ್ನುವ ಚಿಂತೆ ನಿರಂತರವಾಗಿ ಕಾಡುತ್ತಿರುವಾಗಲೇ, ಇದಕ್ಕೆ ಉತ್ತರಿಸಬಲ್ಲವರು ಅಧ್ಯಯನ ಅಧ್ಯಾಪನಗಳಲ್ಲಿ ನಿರತರಾದ ತಪಸ್ವಿಗಳಾಗಿರಬೇಕು; ಏಕಾಗ್ರತೆಯನ್ನು ವಾಲ್ಮೀಕಿಗಿಂತಲೂ ಚನ್ನಾಗಿ ಸಾಧಿಸಿದವರಾಗಿರಬೇಕು. ಮಾತು ಬಲ್ಲವರಲ್ಲಿ ಶ್ರೇಷ್ಠರಾಗಿರಬೇಕು. ಅಂಥವರು ಯಾರಿದ್ದಾರೆ ಎನ್ನುವ ಪ್ರಶ್ನೆ ನಿರಂತರವಾಗಿ ವಾಲ್ಮೀಕಿಯನ್ನು ಕಾಡುತ್ತಿತ್ತು.

ಹೀಗಿರುತ್ತಿರುವಾಗ ಅವರಲ್ಲಿಗೆ ನಾರದ ಬರುತ್ತಾನೆ. ಮಹರ್ಷಿಯ ಪ್ರಶ್ನೆಗೆ ಉತ್ತರಿಸಲು ಇವರಿಗಿಂತಲೂ ಬೇರೆ ಯಾರು ಸಮರ್ಥರಿಲ್ಲ ಎಂದುಕೊಳ್ಳುತ್ತಾನೆ. (ತಪಸ್ಸ್ವಾಧ್ಯಾಯನಿರತಂ ತಪಸ್ವೀ ವಾಗ್ವಿದಾಂ ವರಮ್). ನೇರವಾಗಿ ಅವರಲ್ಲಿಯೇ ತನ್ನನ್ನು ಕಾಡುತ್ತಿರುವ ಚಿಂತೆಯನ್ನು ಹೇಳುತ್ತಾ “ಲೋಕದಲ್ಲಿ ಯಾವ ದೋಷವೂ ಇಲ್ಲದ ವ್ಯಕ್ತಿ ಎಂದರೆ ಆತನಲ್ಲಿ ಈ ಕೆಳಗಿನ ಹದಿನಾರು ಗುಣಗಳಿರಬೇಕು. (ಅವು ಕಲ್ಯಾಣವಂತ, ವೀರ್ಯವಂತ, ದರ್ಮಜ್ಞ, ಕೃತಜ್ಞ, ಸತ್ಯಭಾಷಿ, ದೃಢವ್ರತನಿಷ್ಠ, ಕುಲಾಚಾರಗಳನ್ನು ತಪ್ಪದೇ ನಡೆಸುಕೊಂಡು ಬರುವಾತ, ಭೂತದಯೆ, ಚತುರ್ದಶವಿದ್ಯೆಗಳಲ್ಲಿಯೂ ಪಾರಂಗತ, ಸರ್ವಕಾರ್ಯ ದುರಂಧರ, ಮೋಹಕರೂಪಿನವ, ಧೈರ್ಯವಂತ, ಕೋಪವನ್ನು ಗೆದ್ದವ, ಎಣೆಯಿಲ್ಲದ ಕಾಂತಿಯುಳ್ಳವ, ಅನಸೂಯ, ದೇವತೆಗಳಿಗೂ ಅಂಜದ ಪರಾಕ್ರಮಿ) ಇಂಥಹ ಮಾನವನು “ಕೋನ್ವಸ್ಮಿನ್ ಸಾಂಪ್ರತಂ ಲೋಕೇ- ಈ ಕಾಲದಲ್ಲಿ” ಇದ್ದಾನೆಯೇ; ಇದ್ದರೆ ಆತನ ಕುರಿತು ವಿವರಿಸಿ ಎಂದು ಕೇಳಿಕೊಳ್ಳುತ್ತಾರೆ. ಆಗ ನಾರದರು ಇಕ್ಷಾಕುವಂಶದಲ್ಲಿ ಜನಿಸಿದ ರಾಮ ರಾಮ ಎಂದು ಜನಗಳು ಕರೆಯುವ ನರಪುಂಗವನಿದ್ದಾನೆ ಎಂದು ಆತನ ಕುರಿತು ವಿವರಿಸುತ್ತಾರೆ.

ರಾಮಾಯಣದ ಕಥೆಯನ್ನು ಕೇಳಿದ ವಾಲ್ಮೀಕಿಗೆ ಮನಸ್ಸು ಪ್ರಪುಲ್ಲವಾಗಿದೆ. ಹಗುರವಾಗಿದೆ. ಪ್ರಪಂಚದಲ್ಲಿ ಎಲ್ಲವೂ ಸುಂದರವಾಗಿ ಕಾಣಿಸುತ್ತಿದೆ. ಹೀಗೆ ತಮಸಾ ನದಿಯಲ್ಲಿ ಸ್ನಾನ ಮಾಡಿ ಬರುವಾಗ ಬೇಡನೊಬ್ಬ ಮಿಥುನ ಸ್ಥಿತಿಯಲ್ಲಿದ್ದ ಜೋಡಿ ಕ್ರೌಂಚಪಕ್ಷಿಗೆ ಬಾಣ ಬಿಟ್ಟು ಗಂಡು ಹಕ್ಕಿಯನ್ನು ಕೊಂದುಬಿಟ್ಟ. ಹೆಣ್ಣು ಹಕ್ಕಿ ಅದನ್ನು ನೋಡಿ ಗೋಳಾಡತೊಡಗಿತು. ಅದರ ಸ್ಥಿತಿಯನ್ನು ನೋಡಿದ ಮುನಿಯ ಮನಸ್ಸಿನಲ್ಲಿ ಕರುಣಾರಸವು ಉಕ್ಕೇರಿತು. ಬೇಡನೆಡೆಗೆ ನೋಡಿ ಹೇಳಿದ ಮಾತು-

sage and poet valmiki

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಶ್ಶಾಶ್ವತೀಸ್ಸಮಾಃ
ಯತ್ಕ್ರೌಞ್ಚಮಿಥುನಾದೇಕಮವಧೀ: ಕಾಮಮೋಹಿತಮ್ ৷৷ಬಾ. 15৷৷

“ಎಲೈ ನಿಷಾದನೇ! ಮಿಥುನದಲ್ಲಿ ನಿರತವಾಗಿದ್ದ ಕ್ರೌಂಚ ಪಕ್ಷಿಗಳಲ್ಲಿ ಒಂದನ್ನು ಹೊಡೆದು ಕೊಂದಿರುವುದರಿಂದ ನೀನು ಬಹಳ ಕಾಲದವರೆಗೆ ಸ್ಥಿರವಾಗಿ ಬದುಕಲಾರೆ”

ಒಂದು ಕಾಲದಲ್ಲಿ ಆ ಬೇಡನಂತೆ ತಾನೂ ಹಿಂಸಾವೃತ್ತಿಯನ್ನು ಅನುಸರಿಸುತ್ತಿದ್ದ ವಾಲ್ಮೀಕಿ ಈಗ ಅದನ್ನು ತ್ಯಜಿಸಿದ್ದಾರೆ. ಬೇಡನಿಗೆ ಶಾಪವನ್ನು ಕೊಡುವಾಗಲೂ ಸಾಯಿ ಎಂದು ಹೇಳುವದಕ್ಕಿಂತ “ಬಹಳ ಕಾಲ ಸ್ಥಿರವಾಗಿ ಬದುಕಲಾರೆ” ಎನ್ನುವ ಮಾತನ್ನು ಆಡುತ್ತಾನೆ. “ಸಾಯಿ ಎನ್ನುವುದಕ್ಕಿಂತ ಬದುಕಲಾರೆ” ಎನ್ನುವ ಮಾತುಗಳು ಬಹು ಅರ್ಥಪೂರ್ಣ! ರಾಮಾಯಣವನ್ನು ಕೇಳಿದ ಪ್ರಭಾವದಿಂದ ಹಿಂಸೆಯ ಲವಲೇಶವೂ ಮನಸ್ಸಿನಲ್ಲಿ ಇಲ್ಲ. ಮರುಕ್ಷಣದಲ್ಲಿಯೇ ಬೇಡನ ವೃತ್ತಿಯೇ ಬೇಟೆಯಾಡುವುದು, ತನ್ನ ಶಾಪ ಅಗತ್ಯವಿತ್ತೇ ಎನ್ನುವ ಇನ್ನೊಂದು ಚಿಂತೆ ಅವರನ್ನು ಕಾಡಿತು. ಹೆಣ್ಣು ಕ್ರೌಂಚದ ಶೋಕ ವಾಲ್ಮೀಕಿಯ ಮನವನ್ನು ಕಲಕಿತ್ತು. ಅದಕ್ಕೆ ಪ್ರತಿಯಾಗಿ “ಬಹಳ ಕಾಲ ಬದುಕಲಾರೆ” ಎನ್ನುವುದು ಉತ್ತರವಾಗಲಾರದು. ತನ್ನ ಶಾಪ ನಿಜವಾದರೆ ಬೇಡನ ಹೆಂಡತಿಗೆ ದುಃಖವಾಗದೇ ಇದ್ದೀತೆ ಎನ್ನುವ ಮನೋಭಾವವೂ ಇದ್ದಿರಬಹುದಾಗಿದೆ. ಹಿಂಸೆಗೆ ಇನ್ನೊಂದು ಹಿಂಸೆ ಉತ್ತರವಾಗಲಾರದು. ಹಾಗಾಗಿ ಚಿಂತೆಗೆ ಪರಿಹಾರವೆಂದರೆ ಶೋಕ ಶ್ಲೋಕವಾಗುವುದು. ಶೋಕವೆಂದರೆ ದುಃಖ; ಶೋಕಕ್ಕೆ ಕಾರಣ ವಿಯೋಗ. ರಾಮಾಯಣವೂ ವಿಯೋಗದ ಕಥೆಯೇ. ಇಲ್ಲಿ ತಂದೆಗೆ ಮಕ್ಕಳ ವಿಯೋಗ, ಅಣ್ಣನಿಗೆ ತಮ್ಮನ ವಿಯೋಗ, ಗಂಡನಿಗೆ ಹೆಂಡತಿಯ ವಿಯೋಗ. ಕ್ರೌಂಚವೆಂದರೆ ಕುಟಿಲ ಸ್ವರೂಪರಾದ ರಾಕ್ಷಸರು ಎನ್ನುವ ಅರ್ಥವೂ ಇದೆ. ಸೀತೆಯನ್ನು ರಾಮನಿಂದ ಅಗಲಿಸಿದ ಕಾರಣಕ್ಕೆ ಮಂಡೋದರಿಗೂ ಇಲ್ಲಿ ರಾವಣನ ವಿಯೋಗವನ್ನು ಅನುಭವಿಸಬೇಕಾಯಿತು ಎನ್ನುವದೂ ಆಗುತ್ತದೆ. ಕಾಮದಿಂದ ಸುಗ್ರೀವನ ಹೆಂಡತಿಯನ್ನು ಅಪಹರಿಸಿದ ವಾಲಿಯನ್ನು ರಾಮ ಕೊಂದು ಸುಗ್ರೀವನಿಗೆ ಆತನ ಪತ್ನಿ ಪುನಃ ಸಿಗುವಂತೆ ಮಾಡಿದ್ದಾನೆ.

ಕರುಣರಸದ ಸ್ಥಾಯಿಭಾವವೇ ಶೋಕ. ಈ ಸ್ಥಾಯಿಭಾವವನ್ನು ಶ್ಲೋಕವಾಗಿಸುವುದು ಎಂದರೆ ಸ್ತೋತ್ರರೂಪವಾದ ಪದ್ಯವನ್ನಾಗಿಸುವುದು. ಸ್ತೋತ್ರವೆಂದರೆ ಸದ್ಗುಣಗಳನ್ನು (ದೇವರನ್ನು) ಹೊಗಳುವುದು. ನಿಷಾದ ಎಂದರೆ ಪೀಡಿಸುವವ ಎನ್ನುವ ಅರ್ಥವೂ ಆಗುತ್ತದೆ. ಅಲ್ಪೀಭೂತವಾದ ಮಿಥುನದಿಂದ ಎಂದರೆ ರಾಜ್ಯಭ್ರಂಶವನವಾಸಾದಿ ಕ್ಲೇಷಗಳಿಂದ ಕೃಶರಾದ ಸೀತಾರಾಮರೆನ್ನುವವರಲ್ಲಿ ಒಬ್ಬಳಾದ ಸೀತೆಯನ್ನು ಅವಧೀಃ- ಅಗಲಿಸಿದ ಕಾರಣದಿಂದಾಗಿ ಬ್ರಹ್ಮವರದಿಂದ ಲಭಿಸಿದ ರಾಜ್ಯವನ್ನು ರಾವಣ ಇನ್ನು ಬಹಳಕಾಲದ ವರೆಗೆ ಅನುಭವಿಸಲಾರೆ. ತ್ರಿಲೋಕಕಂಟಕನಾದ ರಾವಣನನ್ನು ಶಪಿಸಿರುವುದರಿಂದ ಸಕಲ ಲೋಕಕ್ಕೂ ಸನ್ಮಂಗಳವುಂಟಾಯಿತು ಎನ್ನುವುದಾಗಿಯೂ ಅರ್ಥವನ್ನು ಮಾಡಬಹುದು. ಶೋಕರೂಪವಾಗಿ ಹೊರಬಂದ ಮಾತು ಅನುಷ್ಟುಪ್ ಛಂದಸ್ಸಿನಲ್ಲಿತ್ತು. ಅದೇ ಶ್ಲೋಕವಾಗಿ ಮಂಗಳಕರ ನಾಂದೀ ಪದ್ಯವಾಯಿತು ಎನ್ನುವ ಸಮಾಧಾನವೂ ಇದೀಗ ಮುನಿಯಲ್ಲಿ ಮೂಡಿತು. ತನ್ನ ಶಿಷ್ಯ ಭಾರದ್ವಾಜನಿಗೆ “ತನ್ನ ಮಾತು ಕೇವಲ ಪದಜಾಲವಾಗದಿರಲಿ. ಪ್ರಾಸಬದ್ಧವಾಗಿ ಬಂದಿರುವ ಇದು ತಂತಿಯ ವಾದ್ಯದೊಡನೆ ಹಾಡುವ ಲಯಬದ್ಧಶ್ಲೋಕವಾಗಿ ಪರಿಣಮಿಸಲಿ” ಎನ್ನುತ್ತಾನೆ. ಅದನ್ನು ಭಾರದ್ವಾಜ ಕಂಠಪಾಠ ಮಾಡುತ್ತಾನೆ.

king dasharatha

ಇತ್ತ ಆಶ್ರಮಕ್ಕೆ ಬಂದರೆ, ಕವಿಯನ್ನು ನೋಡಲು ಬ್ರಹ್ಮನೇ ಬಂದಿರುತ್ತಾನೆ. ರಾಮಾಯಣದ ಕಾವ್ಯವನ್ನು ರಚಿಸು ಎಂದು ವರ ನೀಡುತ್ತಾನೆ. ವರದ ಫಲದಿಂದ ರಾಮಾಯಣದಲ್ಲಿ ನಡೆದ ವೃತ್ತಾಂತಗಳು, ಎಲ್ಲಾ ಪಾತ್ರಗಳ ರಹಸ್ಯಗಳು ವಾಲ್ಮೀಕಿಗೆ ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ತೋರುತ್ತದೆ. ಎಲ್ಲಿ ಹೃದಯದ ಕಣ್ಣು ತೆರೆಯುತ್ತದೆಯೋ ಅಲ್ಲಿ ಕಾವ್ಯದ ರಸಸೃಷ್ಟಿಯಾಗುತ್ತದೆ. ಲೋಕದಲ್ಲಿ ಸಾಮಾನ್ಯವಾಗಿ ಕಂಡ ಸಂಗತಿಗಳು ಕವಿಗೆ ವಿಶೇಷ ರೂಪವಾಗಿ ಗೋಚರವಾಗುವುದು. ತೀ. ನಂ. ಶ್ರೀಕಂಠಯ್ಯನವರು ಕಾವ್ಯ ಹುಟ್ಟುವ ಹೊತ್ತನ್ನು “ತನ್ನೊಳಗೆ ತುಂಬಿರುವ ರಸಕ್ಕೆ ಅನುಗುಣವಾದ ಶಬ್ದಾರ್ಥಗಳನ್ನು ಕುರಿತು ಚಿಂತನೆಯಲ್ಲಿ ಕವಿಯ ಚೇತಸ್ಸು ನಿಶ್ಚಲವಾಗಿರುವಾಗ, ವಸ್ತುವಿನ ನಿಜಸ್ವರೂಪವನ್ನು ಮುಟ್ಟಿದ ಪ್ರಜ್ಞೆ ಅವನಲ್ಲಿ ಥಟ್ಟನೆ ಹೊಮ್ಮುತ್ತದೆ. ಇದೇ ಕವಿಯ ಪ್ರತಿಭೆ, ಪರಮೇಶ್ವರನ ಮೂರನೆಯ ಕಣ್ಣೆಂದೇ ಕೀರ್ತಿಸುತ್ತಾರೆ. ಇದರ ಮೂಲಕ ತ್ರಿಕಾಲದಲ್ಲಿ ನಡೆಯುವ ಸಂಗತಿಗಳನ್ನು ಸಾಕ್ಷಾತ್ತಾಗಿ ಕಾಣಬಲ್ಲನು(ಭಾ. ಕಾ. ಮೀ-10)” ಎಂದು ವಿವರಿಸುತ್ತಾರೆ. ವಾಲ್ಮೀಕಿ ಕುಳಿತಲ್ಲಿಯೇ ರಾಮಾಯಣದ ಎಲ್ಲಾ ವಿವರಗಳನ್ನು ಕಾಣುವದು ಈ ವಿಶೇಷದೃಷ್ಟಿಯಿಂದಲೇ. ಅದನ್ನೇ ಬ್ರಹ್ಮ ಆತನಿಗೆ ಕೊಟ್ಟ ವರ ಎಂದು ಅಲಂಕಾರಿಕವಾಗಿ ಹೇಳಲಾಗಿದೆ. ಸಕಲ ಚರಾಚರಗಳ ಸೃಷ್ಟಿಗೆ ಕಾರಣ ಬ್ರಹ್ಮ; ಆತನೇ ತನಗಿರುವ ಅಪೂರ್ವ ಕಾವ್ಯಸೃಷ್ಟಿಯನ್ನು ವಾಲ್ಮೀಕಿಗೆ ಅನುಗ್ರಹಿಸಿದ್ದಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕದ ಕನಸಿನ ವಿಹಾರ

ರಾಮಾಯಣವನ್ನು ರಚಿಸಿದ ಮುನಿಗೆ ತನ್ನ ಕಾವ್ಯದ ಮೇಲೆ ಮೋಹವುಂಟಾಯಿತು. ಮತ್ತೆ ಮತ್ತೆ ಕಾವ್ಯಾನುಸಂಧಾನವನ್ನು ಮಾಡತೊಡಗಿದ. ಕವಿಗೆ ಪ್ರತಿಯೊಂದು ಕೃತಿಯೂ ಮಕ್ಕಳಂತೆ. ಕೃತಿ ಆತನನ್ನು ಮೋಹಪರವಶತೆಗೆ ಈಡುಮಾಡುತ್ತದೆ. ವಾಲ್ಮೀಕಿಗೆ ತನ್ನ ಕಾವ್ಯ ಅದ್ವಿತೀಯವಾದುದೆನ್ನುವ ವಿಶ್ವಾಸ ಬಂದಿದೆ. ಈ ಮೊದಲು ಹದಿನಾರು ಗುಣಗಳುಳ್ಳ ಮನುಷ್ಯ ಇದ್ದಿರಬಹುದೇ ಎನ್ನುವ ಚಿಂತೆ ಅವರನ್ನು ಕಾಡಿತ್ತು. ನಂತರ ಹೆಣ್ಣು ಕ್ರೌಂಚದ ವಿರಹದ ಅಳುವನ್ನು ನೋಡಿ “ಹೆಚ್ಚು ಕಾಲ ಬದುಕಲಾರೆ” ಎನ್ನುವ ಶಾಪವನ್ನು ಕೊಟ್ಟ ಕಾರಣ ಚಿಂತೆ ಕಾಡಿತ್ತು. “ಸೃಷ್ಟಿ ಎನ್ನುವ ಶಬ್ಧದಲ್ಲಿ ಸಾವು ಎನ್ನುವುದು ಇರುವುದಿಲ್ಲ. ಸಾವಿನಲ್ಲಿ ಸೃಷ್ಟಿ ಇರುವುದಿಲ್ಲ, ಇವೆರಡೂ ಯಾವತ್ತಿಗೂ ಒಟ್ಟಿಗೆ ಇರಲಾರದು” ಬ್ರಹ್ಮನಿಗೆ ಸೃಷ್ಟಿಸುವುದು ತಿಳಿದಿದೆಯೇ ಹೊರತೂ ನಾಶದ ಅರಿವಿಲ್ಲ. ವಾಲ್ಮೀಕಿಗೆ ಈ ಕಾರಣಕ್ಕಾಗಿ ಬದುಕಲಾರೆ ಎನ್ನುವ ಮಾತು ಕವಿಸೃಷ್ಟಿಗೆ ವಿರುದ್ಧವಾಗಿ ತೋರಿದೆ. ಹಾಗಾಗಿ ಎರಡನೇ ಸಾರಿ ಚಿಂತೆಗೊಳಗಾದ. ಅದಕ್ಕೆ ಬ್ರಹ್ಮನೇ ಬಂದು ಸಮಾಧಾನ ಹೇಳಿ ನಂತರದಲ್ಲಿ ಮಹಾಕಾವ್ಯವನ್ನು ರಚಿಸಿದ ಬಳಿಕ “ಚಿನ್ತಯಾಮಾಸ ಕೋನ್ವೇತತ್ಪ್ರಯುಞ್ಜೀಯಾದಿತಿ ಪ್ರಭುಃ” ಇಂತಹ ಕಾವ್ಯವನ್ನು ಉಪದೇಶ ಪಡೆಯಬಲ್ಲ ಸಮರ್ಥರು ಯಾರಿದ್ದಾರೆ ಎನ್ನುವ ಚಿಂತೆ ಮೂರನೇ ಬಾರಿಗೆ ಉದ್ಭವಿಸಿತು. ಹೀಗೆ ಚಿಂತಿಸುತ್ತಾ ಕಣ್ಮುಚ್ಚಿ ಕುಳಿತಿರುವ ಹೊತ್ತಿನಲ್ಲಿ ಅವರ ಕಾಲನ್ನು ಯಾರೋ ಹಿಡಿದುಕೊಂಡಿದ್ದು ಗಮನಕ್ಕೆ ಬಂತು. ಯಾರೆಂದು ಕಣ್ಣುತೆರೆದು ನೋಡಿದರೆ ಬಾಲಕರಾದ ಲವ-ಕುಶರು.

ಇಲ್ಲಿ ಎರಡು ಸಂಗತಿಗಳನ್ನು ವಾಲ್ಮೀಕಿ ಹೇಳುವುದು ಬಲು ಮುಖ್ಯ. ಮೊದಲನೆಯದು ಅವರು ಮುನಿವೇಷಧಾರಿಗಳಾಗಿದ್ದರು, ಅವರು ಆಶ್ರಮವಾಸಿಗಳಾಗಿರಲಿಲ್ಲವೆಂದು ಮುನಿವೇಷಧಾರಿಗಳಾಗಿದ್ದರು ಎನ್ನುವುದರ ಮೂಲಕ ಸೂಚಿಸುತ್ತಾರೆ, ಎರಡನೆಯದು ಆ ಬಾಲಕರಿಗೆ ಹಾಡುವುದಕ್ಕೆ ಯೋಗ್ಯವಾದ ಶಾರಿರ ಸಂಪತ್ತು – “ಭ್ರಾತರೌ ಸ್ವರಸಮ್ಪನ್ನೌ ದದರ್ಶಾಶ್ರಮವಾಸಿನೌ” ಇತ್ತು ಎನ್ನುವುದು. ರಾಮಾಯಣವನ್ನು ವಾಲ್ಮೀಕಿ ರಚಿಸುವಾಗಲೇ ತನ್ನ ಕಾವ್ಯ ಹಾಡುವುದಕ್ಕೆ ಯೋಗ್ಯವಾಗಿ ಇರಬೇಕೆನ್ನುವುದನ್ನು ಬಯಸಿದ್ದರು. ರಾಮಾಯಣದಲ್ಲಿ ಅಧ್ಯಯನ ಮಾಧುರ್ಯವೂ ಇದೆ, ಗಾನ ಮಾಧುರ್ಯವೂ ಇದೆ. ನವರಸಭರಿತವಾಗಿದೆ ಎನ್ನುವುದು ಬಲು ಮುಖ್ಯ. ಕವಿಯ ಮನಸ್ಸನ್ನು ಅರಿತು ಹಾಡುವ ಯೋಗ್ಯರಾದ ಗಾಯಕರು ಸಿಕ್ಕಿದರೆಂದು ಮುನಿಗೆ ಸಂತೋಷವಾಯಿತು. ಶಿಷ್ಯರೂ ಅಷ್ಟೇ, ರಾಮಾಯಣವನ್ನು ಆಮೂಲಾಗ್ರವಾಗಿ ಕಲಿತು ಕವಿ ವಾಲ್ಮೀಕಿಯ ಮನಸ್ಸು ತೃಪ್ತಿಯಾಗುವಂತೆ ಮಹರ್ಷಿಗಳ ಸಭೆಯಲ್ಲಿ ಹಾಡಿ ತೋರಿಸಿದರು.

ಇಲ್ಲಿಗೆ ಮುನಿಯನ್ನು ಕಾಡಿದ ಮೂರನೆಯ ಚಿಂತೆ ಯೋಗ್ಯರಾದ ಗಾಯಕರು ಸಿಕ್ಕಿದರು ಎನ್ನುವ ಸಂತೋಷದಲ್ಲಿ ಪರಿವರ್ತಿತವಾಯಿತು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ

Continue Reading

ಕಲೆ/ಸಾಹಿತ್ಯ

Sunday Read: ಹೊಸ ಪುಸ್ತಕ: ರಾಮನೇನು ದೇವನೇ?

ಹೊಸ ಪುಸ್ತಕ: ರಾಮನ ದೈವತ್ವದ ವಾಸ್ತವಾಂಶವೇನು? – ಎಂಬ ಪ್ರಶ್ನೆಯನ್ನೇ, “ರಾಮನೇನು ದೇವನೇ?” – ಎಂಬ ಈಚೆಗಷ್ಟೆ ಪ್ರಕಾಶಿತವಾದ ಕೃತಿಯು ವಿಶ್ಲೇಷಿಸುತ್ತದೆ. ಇಷ್ಟು ಆಳವಾದ ವಿಶ್ಲೇಷಣೆ ಯಾವುದೇ (ಭಾರತೀಯ ಅಥವಾ ಬೇರೆ ದೇಶದ) ಭಾಷೆಯಲ್ಲೂ ಬಂದಿಲ್ಲ. ಈ ಕೃತಿಯ ಪರಿಚಯ ಹಾಗೂ ಆಯ್ದ ಭಾಗ ಇಲ್ಲಿದೆ.

VISTARANEWS.COM


on

sunday read new book ramanenu devane
Koo

:: ಡಾ. ಕೆ.ಎಸ್‌. ಕಣ್ಣನ್‌

ಹೊಸ ಪುಸ್ತಕ: “ರಾಮನು (Sri Rama) ಮನುಷ್ಯನೋ ದೇವನೋ?” – ಎಂಬ ಪ್ರಶ್ನೆಗೆ ಉತ್ತರ ಕೊಡುವ ಕೃತಿ: “ರಾಮನೇನು ದೇವನೇ?” ತಾನು ಮನುಷ್ಯನೆಂದು ರಾಮನೇ ಹೇಳಿಕೊಂಡಿರುವುದುಂಟು; ರಾಮಾಯಣದ ಆರಂಭದಲ್ಲೂ, ನಾರದರನ್ನು ವಾಲ್ಮೀಕಿಗಳು ಕೇಳುವುದೂ ನಾನಾ ಗುಣಸಂಪನ್ನನಾದ ನರನ ಬಗ್ಗೆಯೇ; ಆಗ ನಾರದರು ಹೇಳುವುದೂ ಅಂತಹೊಬ್ಬ ಮನುಷ್ಯನ ಬಗ್ಗೆಯೇ.

ಆದರೂ, ನಮ್ಮ ಪರಂಪರೆಯಂತೂ ಸಾವಿರಾರು ವರ್ಷಗಳಿಂದ ರಾಮನನ್ನು ದೇವರೆಂದೇ ಪೂಜಿಸಿಕೊಂಡು ಬಂದಿದೆ. ಆತನ ಸುಗುಣ-ಸುರೂಪಗಳನ್ನೂ ಜೀವಿತ-ಸಂದೇಶಗಳನ್ನೂ ಸ್ಮರಿಸಿ ರೂಪಿಸಿ ಹಾಡಿ ಕೊಂಡಾಡಿ ವಿರಚಿತವಾದ ಕಾವ್ಯ-ನಾಟಕಗಳೆಷ್ಟು, ಚಿತ್ರ-ಶಿಲ್ಪಗಳೆಷ್ಟು, ಮಂದಿರ-ದೇವಾಲಯಗಳೆಷ್ಟು – ಲೆಕ್ಕವಿಡುವವರಾರು! “ಇಂತಹ ಭಾಷೆಯಲ್ಲಿ ಶ್ರೀರಾಮಚಂದ್ರನನ್ನು ಕುರಿತಾದ ಸ್ತುತಿಯಿಲ್ಲ”- ಎನ್ನಲಾಗುವ ಒಂದೇ ಒಂದು ಭಾರತೀಯಭಾಷೆಯಾದರೂ ಉಂಟೆ? ಹೀಗಿದ್ದರೂ, ಕೆಲ ಸಂಪ್ರದಾಯಸ್ಥರಿಗೂ ಒಮ್ಮೊಮ್ಮೆ ಸಂಶಯಗಳು ಮೂಡಿರುವುದುಂಟು. ಪಾಶ್ಚಾತ್ಯವಿಮರ್ಶಕರಂತೂ, “ರಾಮನನ್ನು ದೇವನೆಂದಿರುವ ಭಾಗಗಳೆಲ್ಲಾ ಪ್ರಕ್ಷಿಪ್ತವೇ ಆಗಿರಬೇಕು (ಎಂದರೆ, ಆಮೇಲೇ ಸೇರಿಸಿರುವಂತಹವಾಗಿರಬೇಕು)” – ಎಂಬುದಾಗಿಯೇ ತಮ್ಮ ತರ್ಕವನ್ನು ಆರಂಭಿಸುತ್ತಾರೆ. ಅಸೂಯಾಪ್ರೇರಿತವಾದ ದುರ್ಮದದಿಂದ, ಇತರಸಂಸ್ಕೃತಿಗಳನ್ನು ಹೀನಾಯಮಾಡುವ ಅವರ ಸಹಜಪ್ರವೃತ್ತಿಗಂತೂ ಸಾಕಷ್ಟೇ ನಿದರ್ಶನಗಳಿವೆ..

ಹಾಗಾದರೆ ರಾಮನ ದೈವತ್ವದ ವಾಸ್ತವಾಂಶವೇನು? – ಎಂಬ ಪ್ರಶ್ನೆಯನ್ನೇ, “ರಾಮನೇನು ದೇವನೇ?” – ಎಂಬ ಈಚೆಗಷ್ಟೆ ಪ್ರಕಾಶಿತವಾದ ಕೃತಿಯು ವಿಶ್ಲೇಷಿಸುತ್ತದೆ. ಇಷ್ಟು ಆಳವಾದ ವಿಶ್ಲೇಷಣೆ ಯಾವುದೇ (ಭಾರತೀಯ ಅಥವಾ ಬೇರೆ ದೇಶದ) ಭಾಷೆಯಲ್ಲೂ ಬಂದಿಲ್ಲವೆನ್ನಬಹುದು! ಈ ಕೃತಿಯನ್ನು ರಚಿಸಿದ ಪ್ರೊ. ಕೆ. ಎಸ್. ಕಣ್ಣನ್ ಅವರು ರಾಮಾಯಣದ ಎಲ್ಲ ಮುಖ್ಯಪ್ರಸಂಗಗಳನ್ನೂ ಕ್ರಮಬದ್ಧವಾಗಿ ಪರಿಶೀಲಿಸಿ ಇಲ್ಲಿ ವಿವರಿಸಿದ್ದಾರೆ. ವಾಲ್ಮೀಕಿರಾಮಾಯಣದ ಮೂಲವಾಕ್ಯಗಳನ್ನು ಅವಶ್ಯವಿರುವೆಡೆಯಲ್ಲೆಲ್ಲಾ ಇದಕ್ಕಾಗಿ ಉದ್ಧರಿಸಿದ್ದಾರೆ; ಸಾಮಾನ್ಯರಿಗೂ ಅರ್ಥವು ಸ್ಫುಟವಾಗಲೆಂದು ಅವುಗಳೆಲ್ಲದರ ಅನುವಾದ-ವಿವರಣೆಗಳನ್ನೂ ತಿಳಿಗನ್ನಡದಲ್ಲಿ ಕೊಟ್ಟಿದ್ದಾರೆ. ರಾಮಾಯಣದಿಂದ ಮಾತ್ರವಲ್ಲದೆ, ಇತರ ಹಲವು ಪ್ರಸಿದ್ಧಗ್ರಂಥಗಳಿಂದಲೂ ಸೇರಿದಂತೆ, ಸುಮಾರು 400ಕ್ಕೂ ಮೀರಿದ ಉದ್ಧೃತಿಗಳು ಈ ಕೃತಿಯಲ್ಲಿವೆ! ಅಷ್ಟೇ ಅಲ್ಲ, ಉಲ್ಲೇಖಗೊಂಡ ಸಮಸ್ತವಾಕ್ಯಗಳಿಗೂ ಆಕರ-ಅಧ್ಯಾಯ-ಶ್ಲೋಕಸಂಖ್ಯೆಗಳನ್ನು ಬಿಡದೇ ಸೂಚಿಸಲಾಗಿದೆ.

ಈ ಕೃತಿಯ ಲೇಖಕರಾದ ಪ್ರೊ. ಕೆ. ಎಸ್. ಕಣ್ಣನ್ ಅವರು ಮದ್ರಾಸಿನಲ್ಲಿಯ ಐಐಟಿಯಲ್ಲಿ ಪೀಠಪ್ರಾಧ್ಯಾಪಕರಾಗಿ ಕೆಲಸ ಮಾಡಿ ಈಚೆಗಷ್ಟೆ ನಿವೃತ್ತರಾಗಿರುವವರು. ಹೆಸರಾಂತ ಸಂಸ್ಕೃತ ವಿದ್ವಾಂಸರಾದ ಇವರು ಹಲವು ಪುಸ್ತಕಗಳನ್ನು ರಚಿಸಿದ್ದಾರೆ.

ಈ ಕೃತಿಯ ಆಯ್ದ ಭಾಗ ಇಲ್ಲಿದೆ:

“ರಾಮಾಯಣಾಖ್ಯಂ ಮಧು”

ಸೀತೆಯ ಚರಿತ – ರಾಮನ ಅಯನ

ಆದಿಕಾವ್ಯವೆಂದೇ ಪ್ರಸಿದ್ಧವಾದ ಕಾವ್ಯ, ವಾಲ್ಮೀಕಿ ರಾಮಾಯಣ. ಅದು ಚಿತ್ರಿಸುವುದು ರಾಮನ ಕಥೆಯನ್ನು, ಅರ್ಥಾತ್ ರಾಮನು ನಡೆದ ಹಾದಿಯನ್ನು. ಅಯನವೆಂದರೆ ಮಾರ್ಗ, ರಾಮನ ಅಯನವೇ ರಾಮಾಯಣ. ಸಂಧಿನಿಯಮದಿಂದಾಗಿ ʼಅಯನ’ದಲ್ಲಿಯ ʼನ’ಕಾರವು ʼಣ’ಕಾರವಾಗಿದೆ. ಅಯನವೆಂದರೆ ಮಾರ್ಗ, ಹೋಗುವಿಕೆ (ʼಅಯ ಗತʼ ಎಂದು ಧಾತು). ಅಷ್ಟನ್ನು ಮಾತ್ರ ಹೇಳುವುದು ರಾಮಾಯನ ಎನಿಸಿಕೊಳ್ಳುತ್ತದೆ. ಈ ರಾಮಾಯನವನ್ನು ಕುರಿತಾದ ಕಾವ್ಯ ಎನ್ನುವಲ್ಲಿ, ಆ ಕಾವ್ಯದ ಹೆಸರಾಗಿ ಬಂದಾಗ ನಕಾರವು ಣಕಾರವಾಗುತ್ತದೆ.

ರಾಮಾಯನವನ್ನು ಹೇಳುವ ಕಾವ್ಯದ ಹೆಸರು ರಾಮಾಯಣ. ರಾಮನು ಎಲ್ಲಿಂದ ಎಲ್ಲಿಗೆ ನಡೆದದ್ದು? ಅಯೋಧ್ಯೆಯಿಂದ ಹೊರಟು ಕೊನೆಗೆ ಅಯೋಧ್ಯೆಗೇ ಬಂದು ಸೇರಿದನಲ್ಲವೇ? ಅದುವೇ ರಾಮಾಯಣವಾಯಿತು. ಇನ್ನೂ ಮುಖ್ಯವಾದ ರಾಮಾಯನವೊಂದಿದೆ. ದಿವಿಯಿಂದ ಹೊರಟು ಭುವಿಯಲ್ಲಿ ಇದ್ದು ಮತ್ತೆ ದಿವಿಗೆ ಬಂದು ಸೇರಿದನಲ್ಲವೇ? ಅದುವೇ ನಿಜವಾದ ರಾಮಾಯಣ! ನಾವೂ ನಮ್ಮ ಮೂಲವನ್ನು ಸೇರಿಕೊಳ್ಳಲು ಹಿಡಿಯಬೇಕಾದ ಹಾದಿಯನ್ನು ಅರುಹುವ ಅಮರಕೃತಿಯಿದು. ರಾಮನು ಹೋದ ದಾರಿಯು ನಮಗೆ ಆದರ್ಶ. ರಾವಣನು ಹಾಕಿದ ಹೆಜ್ಜೆ ಆದರ್ಶವಲ್ಲ. ಈ ಭಾವವನ್ನು ತಿಳಿಸುವ ಗಾದೆ ಮಾತೊಂದು ಸಂಸ್ಕೃತದಲ್ಲಿದೆ: “ರಾಮನ ಹಾಗೆ ವರ್ತಿಸಬೇಕು. ರಾವಣನ ಹಾಗಲ್ಲ”.

ಪ್ರಪಂಚದಲ್ಲಿ ರಾಮನೊಬ್ಬನೇ ಒಳ್ಳೆಯವ ಎಂದೇನೂ ಇಲ್ಲವಲ್ಲ? ರಾವಣನೊಬ್ಬನೇ ಕೆಟ್ಟವ ಎಂದು ಕೂಡ ಅಲ್ಲವಲ್ಲವೇ? ಎಂದೇ, ʼರಾಮ’ನಿಗೊಂದು ʼಆದಿ’, ʼರಾವಣ’ನಿಗೊಂದು ʼಆದಿ’ ಸೇರಿಸಿದರು. ʼಆದಿ’ ಎಂದರೆ ʼಮೊದಲಾದʼ. ಅಲ್ಲಿಗೆ ಗಾದೆಯ ಪೂರ್ಣರೂಪ “ರಾಮ ಮೊದಲಾದವರ ಹಾಗೆ ಇರತಕ್ಕದ್ದು, ರಾವಣ ಮೊದಲಾದವರಂತೆ ಇರತಕ್ಕದ್ದಲ್ಲ”. ಗಾದೆ ಹೀಗೆ: ʼರಾಮಾssದಿವದ್ ವರ್ತಿತವ್ಯಂ, ನ ರಾವಣಾssದಿವತ್ʼ.

ರಾವಣನು ಪುಲಸ್ತ್ಯ ವಂಶದವನು. ಎಂದೇ ರಾವಣನು ʼಪೌಲಸ್ತ್ಯʼನೆನಿಸುವನು. ರಜೋಗುಣಭರಿತನಾಗಿದ್ದು ಧರ್ಮವನ್ನೂ ಅಮರರನ್ನೂ ಲೆಕ್ಕಿಸೆನೆನ್ನುವ ಆ ಅಹಂಕಾರಿಯ ಮಾರಣವೇ ಈ ಕಾವ್ಯ ಎಂದೇ ವಾಲ್ಮೀಕಿಗಳು ರಾಮಾಯಣವನ್ನು “ಪೌಲಸ್ತ್ಯವಧ” ಎಂದೂ ಕರೆದಿದ್ದಾರೆ. ರಾಮನು ಒಳ್ಳೆಯವನಿರಬಹುದು, ಸೀತೆಯು ಒಳ್ಳೆಯವಳಲ್ಲವೆ? ವಾಲ್ಮೀಕಿ ಮಹರ್ಷಿಯು ಗಂಡಸಾದ್ದರಿಂದ ಗಂಡಸಾದ ರಾಮನನ್ನೇ ಹೊಗಳಿದ್ದಾನೋ ಏನೋ? ಎಂದು ಸಂಶಯಪಡಬೇಕಿಲ್ಲ. ವಾಲ್ಮೀಕಿಗಳೇ ಹೇಳುವಂತೆ “ಸೀತಾಯಾಃ ಚರಿತಂ ಮಹತ್”: ಸೀತೆಯ ನಡೆಯೂ ರಾಮನದಷ್ಟೇ ಹಿರಿದಾದುದೇ.

ರಾಮನ ಹೆಸರೇ ಮಧುರವಾದದ್ದು.
ರಾಮೇತಿ ಮಧುರಾಂ ವಾಣೀಂ ವಿಶ್ವಾಮಿತ್ರೋsಭ್ಯಭಾಷತ | (1.21.9)
ಋಷಯೋ ರಾಮ ರಾಮೇತಿ ಮಧುರಾಂ ವಾಚಮ್ ಅಬ್ರುವನ್ (1.73.21)

ಸೀತೆಯ ಹೆಸರೂ ಮಧುರವೇ.
ಸೀತೇತಿ ಮಧುರಾಂ ವಾಣೀಂ ವ್ಯಾಹರನ್ ಪ್ರತಿಬುಧ್ಯತೇ । (5.34.42)

ರಾಮನು ಇಳಿದು ಬಂದವನೇ? ಮೇಲಕ್ಕೆ ಏರಿದವನೇ? ಸಂಶಯವೂ ಬರುವುದುಂಟು. ರಾಮನನ್ನು ನಾವು ಆದರಿಸುತ್ತೇವೆ, ಆರಾಧಿಸುತ್ತೇವೆ, ಪೂಜಿಸುತ್ತೇವೆ. ಆತನನ್ನು ದೇವರೆಂದೇ ಭಾವಿಸುತ್ತೇವೆ. ಆದರೆ, ಒಮ್ಮೊಮ್ಮೆ ಕೆಲವರಿಗೆ ಸ್ವಲ್ಪ ಸಂಶಯವೂ ಬರುವುದುಂಟು. ರಾಮನು ವಾಸ್ತವವಾಗಿ ದೇವನೇ? ಎಂದು. ಏಕೆ? ರಾಮನಲ್ಲೂ ಕೆಲವು ದೋಷಗಳು ಇದ್ದವಲ್ಲವೆ? ರಾಮನಲ್ಲೂ ಕೆಲವು ದೋಷಗಳು ಇದ್ದವಲ್ಲವೇ? ಮರೆಯಲ್ಲಿ ನಿಂತಲ್ಲವೇ ರಾಮನು ವಾಲಿಯನ್ನು ಕೊಂದದ್ದು? ಅದೇನು ದೊಡ್ಡ ಗುಣವೇ? ತನಗೆ ಯಾವ ದ್ರೋಹವನ್ನೂ ಮಾಡದಿದ್ದ ಸೀತೆಯನ್ನು, “ಅಘೋರಚಕ್ಷುಷ್ಕಳೂ ಅಪತಿಘ್ನಿಯೂ’ ಆದ ಕೈಹಿಡಿದ ಮಡದಿಯನ್ನು – ರಾಮನು ಪರಿತ್ಯಾಗ ಮಾಡಲಿಲ್ಲವೇ? ಅದರಲ್ಲಿ ದೋಷವಿಲ್ಲವೇ? ಎಂದು ʼಕೇಳುವವರುಂಟು’ ಎನ್ನುವುದಕ್ಕಿಂತ, ನಮಗೇ ಕೆಲವೊಮ್ಮೆ ಹಾಗೆನ್ನಿಸಲೂಬಹುದು.

ಕೃತಿ: ರಾಮನೇನು ದೇವನೇ?
ಪ್ರಕಾಶಕರು: ಶ್ರೀ ಭಾರತೀ ಪ್ರಕಾಶನ, ಬೆಂಗಳೂರು
ಪುಟ: 200, ಬೆಲೆ: ರೂ. 200.
ಪ್ರತಿಗಳಿಗೆ: 95915 42454

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

Continue Reading
Advertisement
Narendra Modi
ದೇಶ7 mins ago

Narendra Modi : ವಿಶ್ವವೇ ನೋಡಿದೆ.. ಯುಪಿ ರ್ಯಾಲಿಯಲ್ಲಿ ಶಮಿಯನ್ನು ಹೊಗಳಿದ ಮೋದಿ

IPL 2024
ಕ್ರೀಡೆ27 mins ago

IPL 2024 : ಚೆನ್ನೈ ವಿರುದ್ಧ ಲಕ್ನೊ ತಂಡಕ್ಕೆ8 ವಿಕೆಟ್ ಭರ್ಜರಿ ಗೆಲುವು

Operation Hasta
ಕರ್ನಾಟಕ29 mins ago

Operation Hasta: ಮಾಜಿ‌ ಸಚಿವ ಮಾಲೀಕಯ್ಯ ಗುತ್ತೇದಾರ್, ಮಾಜಿ ಶಾಸಕಿ ಶಾರದಾ ಶೆಟ್ಟಿ ಕಾಂಗ್ರೆಸ್‌ ಸೇರ್ಪಡೆ

Ballari Lok Sabha constituency Congress candidate e Tukaram Election campaign
ಬಳ್ಳಾರಿ52 mins ago

Lok Sabha Election 2024: ಬಡವರ ಬಾಳು ಬಂಗಾರ ಮಾಡಿದ್ದು ಕಾಂಗ್ರೆಸ್‌: ಈ. ತುಕಾರಾಂ

Lok Sabha Election 2024
Lok Sabha Election 202452 mins ago

Lok Sabha Election 2024: 1 ವೋಟಿಗಾಗಿ ದಟ್ಟ ಕಾಡಿನಲ್ಲಿ 18 ಕಿ.ಮೀ. ನಡೆದ ಚುನಾವಣಾ ಸಿಬ್ಬಂದಿ

Narendra Modi
ಪ್ರಮುಖ ಸುದ್ದಿ1 hour ago

Narendra Modi : ಮತದಾನ ಮಾಡಿದವರಿಗೆ ಥ್ಯಾಂಕ್ಸ್ ಹೇಳಿದ ಮೋದಿ; ಎನ್​ಡಿಎಗೆ ಮತ ನೀಡಿದ್ದಾರೆ ಎಂದ ಪ್ರಧಾನಿ

Lok sabha Election
ರಾಜಕೀಯ1 hour ago

lok Sabha Election : ಮೊದಲ ಹಂತದಲ್ಲಿ ಶೇ.60.3ರಷ್ಟು ಮತದಾನ

Actor Darshan
ಕರ್ನಾಟಕ1 hour ago

Actor Darshan: ನಟ ದರ್ಶನ್‌ ಇದ್ದ ಪ್ರಚಾರ ವಾಹನಕ್ಕೆ ವಿದ್ಯುತ್‌ ಸ್ಪರ್ಶ; ತಪ್ಪಿದ ಭಾರೀ ಅನಾಹುತ!

Boat Capsizes
ದೇಶ2 hours ago

Boat Capsizes: ದೋಣಿ ಮುಳುಗಿ ಇಬ್ಬರು ಜಲಸಮಾಧಿ; ಏಳು ಮಂದಿ ನಾಪತ್ತೆ

Chikkaballapur Lok Sabha Constituency NDA candidate Dr K Sudhakar election campaign
ಚಿಕ್ಕಬಳ್ಳಾಪುರ2 hours ago

Lok Sabha Election: ಯಲಹಂಕದಲ್ಲಿ ಡಾ.ಕೆ.ಸುಧಾಕರ್ ಗೆ 1 ಲಕ್ಷ ಮತಗಳ ಲೀಡ್ ಕೊಡಿಸುತ್ತೇನೆ: ಎಸ್ ಆರ್ ವಿಶ್ವನಾಥ್ ಪ್ರತಿಜ್ಞೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ8 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ19 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ7 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌