ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಕಸೂತಿ‍ - Vistara News

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಕಸೂತಿ‍

ಸರಿಯಾಗಿ ನೋಡಿದರೆ, ದಿಂಬು ಮಾತ್ರವಲ್ಲ, ಹೊದಿಕೆಗಳು, ಮಂದ್ರಿ, ಕರ್ಟನ್ ಎಲ್ಲದರ ಮೇಲೆಯೂ ಹೂವು, ಬಳ್ಳಿಗಳ ಚಿತ್ತಾರಗಳು. ಅರೇ! ಅತ್ತೆ ಸೀರೆ, ರವಕೆಯಲ್ಲೂ ಇದ್ದದ್ದು ಇವೇ ಚಿತ್ತಾರಗಳು ಎಂದು ನೆನಪಾಯ್ತು. ಬಟ್ಟೆ ಅಂತ ಕಾಣಿಸಿದ್ದರ ಮೇಲೆಲ್ಲಾ ಕಸೂತಿಯ ಚಿತ್ತಾರಗಳೇ ತುಂಬಿಕೊಂಡಿದ್ದವು.

VISTARANEWS.COM


on

kannada short story kasuthi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
soumya prabhu kalyankar

:: ಸೌಮ್ಯ ಪ್ರಭು ಕಲ್ಯಾಣಕರ್‌

Hurt people hurt people

 ― Yehuda Berg

ಬಸ್ಸಿಳಿಯುವಾಗಲೇ ಪೂರ್ತಿ ಕತ್ತಲು ಕವಿದಿತ್ತು. ಕೈಲಿದ್ದ ಮೊಬೈಲಿನ ಟಾರ್ಚು ಆನ್ ಮಾಡಿ ಕಲ್ಲಿನ ಚಪ್ಪಡಿಗಳ ಸಂಕದ ಮೇಲೆ ಕಾಲಿಟ್ಟು ನಡೆಯುವಾಗ ‘ಅರೇ ಈ ಚಪ್ಪಡಿಗಳು ಅದೆಷ್ಟು ವರ್ಷಗಳಿಂದ ಬಿದ್ದುಕೊಂಡಿವೆಯಲ್ಲಾ?, ಈ ಕೊಂಪೆಯಲ್ಲಿ ಏನೂ ಬದಲಾಗಿಲ್ಲ, ಆಗುವುದೂ ಇಲ್ಲ’ ಅಂದುಕೊಂಡೆ. ಬಂದು ಏಳು ವರ್ಷಗಳಾಯ್ತಲ್ಲ ಎಂದು ಆ ಕ್ಷಣಕ್ಕೇ ಹೊಳೆಯಿತು. ಅದರಿಂದ ಕೆಳಕ್ಕಿಳಿದು ನಡೆಯುತ್ತಿದ್ದಂತೆ ದಾರಿ ಮಹೇಶನ ಮನೆಯ ಪಕ್ಕಕ್ಕೆ ಹೊರಳಿತು. ಮಂದ ಬೆಳಕಿನಲ್ಲಿ ಆರಾಮವಾಗಿ ಬಿದ್ದುಕೊಂಡ ಅವರ ಮನೆಯ ನಾಯಿ ಬೊಗಳಲು ಶುರು ಮಾಡಿತು.

ಮನೆಯೊಳಗಿಂದ “ಏರ್ ಅವು (ಯಾರದು)” ಎಂಬ ಪ್ರಶ್ನೆಗೆ ‍“ನಾನು” ಎಂದಷ್ಟೇ‌ ಹೇಳಿದೆ.

“ಓಹ್! ಬಾಬಣ್ಣ ಈಗ ಬರುವುದಾ?, ಗಿರ್ಜತ್ತೆ ಹೇಗಿದ್ದಾರೆ ಈಗ? ಎಂಥ ತಡ ಮಾಡಿ ಹೊರಟ್ರಿಯಾ?” ಎಂಬ ಮಾತಿನೊಂದಿಗೆ ಮಹೇಶನ ಆಕೃತಿ ಮಸುಕಾಗಿ ಕುಂಟುತ್ತಾ ಹೊರಬಂದದ್ದು ಕಂಡಿತು.

“ಹೂಂ, ಮಹೇಶಣ್ಣ, ಕಾಲೇಜು ಬಿಟ್ಟು ಮನೆಗೆ ಹೋಗಿ ಹೊರಟು ಬರುವಾಗ ತಡವಾಯ್ತು, ಅಮ್ಮ ಆರಾಮಿದ್ದಾಳೆ, ಕಾಲು ಹೇಗಿದೆ ಇವಾಗ?” ಎಂದು ನಡೆಯುತ್ತಲೇ ಕೇಳಿದೆ.

ಅವನು “ಹೂಂ ಪರ್ವಾಗಿಲ್ಲ ಬಾಬಣ್ಣ, ಜಾಗ್ರತೆ ಹೋಗಿ” ಎಂದ.

ಮಹೇಶ ಅಮ್ಮನ ದೂರದ ಸಂಬಂಧಿ, ಮಾಧ್ವಿಯತ್ತೆಯ ಎಲ್ಲಾ ಸಮಾಚಾರಗಳನ್ನು ಅಮ್ಮನಿಗೆ ತಿಳಿಸುವಾತ. ಅಡಿಕೆ ಮರಗಳ ಸಪೂರ, ಉದ್ದ ಕಪ್ಪು ನೆರಳುಗಳ ಮಧ್ಯೆ ನಡೆಯುತ್ತಾ ಹೋದಂತೆ, ಮಿಣುಕುಹುಳಗಳ ಮಿಂಚಿ ಮಾಯವಾಗುವ ಬೆಳಕು, ಜೀರುಂಡೆಗಳ ಸದ್ದು, ಕಪ್ಪೆಗಳ ವಟವಟಗಳ ನಡುವೆ ಈ ಕತ್ತಲ ಪ್ರಪಂಚದಲ್ಲಿ ಸುಖವೆನಿಸಿತು. ‍ಕತ್ತಲಿದ್ದರೂ ಸುತ್ತಣ ಏನಿದೆ, ಏನಿಲ್ಲ ಎಂಬುದರ ಅರಿವು ಚೆನ್ನಾಗಿಯೇ ಮನಸ್ಸಿಗೆ ತಿಳಿದಿತ್ತು. ಜಯ, ಸುಧೀ ಇಬ್ಬರೂ ಹತ್ತಿ ಕೂತು ದಾರಿ ಕಾಯುತ್ತಿದ್ದ ಮಾವಿನ ಮರ, ಅದರಾಚೆಗೆ ಸಣ್ಣ ಹೊಂಡ, ಅದರ ಸುತ್ತ ಬೆಳೆದ ಜರಿ ಗಿಡ, ದಂಡೆಯಂಚಿಗೆ ಬೆಳೆದ ಕತ್ತರಿ ದಾಸವಾಳದ ಗಿಡ, ಅದರ ಪಕ್ಕದ ಜಂಬೂ ನೇರಳೆ ಮರ, ಮೈ ತುಂಬ ಹೂ ಬಿಡುತ್ತಿದ್ದ ಕರವೀರ ಮತ್ತದರ ಗಟ್ಟಿ ಕಾಯಿಗಳು ಎಲ್ಲವೂ ಬೆಳಕಿದ್ದಾಗ ಹೇಗೆ ಕಾಣಿಸುತ್ತಿತ್ತೋ ಅಷ್ಟೇ ನಿಚ್ಚಳವಾಗಿ ಮನದ ಕಣ್ಣಿಗೆ ಗೋಚರಿಸುತ್ತಿತ್ತು. ಆ ಕರವೀರದ ಕಾಯಿಗಳಲ್ಲಿ ಜಯಾ ಅದೆಷ್ಟು ಚೆನ್ನಾಗಿ ಪೊಕ್ಕ ಆಡ್ತಿದ್ದಳು!

ಅತ್ತೆ ಮನೆಯ ದೀಪದ ಬೆಳಕು ಕಾಣಿಸುತ್ತಿದ್ದಂತೆ ರಾಜನ್ ನಾಯಿ ಜೋರಾಗಿ ಬೊಗಳುತ್ತಾ ಸ್ವಾಗತಿಸಿದ.

“ಎಂಥಾ ಮಾರಾಯ, ಅಜ್ಜ ಆಗಿದ್ದೀಯಲ್ಲಾ? ನನ್ನ ಗುರ್ತ ಸಿಗುವುದಿಲ್ಲ ಅಲ್ಲಾ ನಿಂಗೀಗ, ಕಾಟು ಎಲ್ಲಾದ್ರೂ ತಂದು” ಅನ್ನುತ್ತಾ ಬೈದು ಅದರ ಹತ್ತಿರ ಹೋದರೆ, ಬಾಲ ಆಡಿಸುತ್ತಾ, ಶೇಲೆ ಮಾಡುತ್ತಾ ಕಾಲು, ಕೈ ನೆಕ್ಕಲು ಶುರು ಮಾಡಿದ.

ಅದರ ಸಂಭ್ರಮ ಮುಗಿದ ಮೇಲೆ, ತಪ್ಪಲೆಯಲ್ಲಿಟ್ಟಿದ್ದ ನೀರಿನಲ್ಲಿ ಕೈ ಕಾಲು ತೊಳೆಯುತ್ತಾ ಬಲಗಡೆ ಕಣ್ಣು ಹಾಯಿಸಿದರೆ, ದೊಡ್ಡ ಚಾವಡಿಯ ಮೂಲೆಯಲ್ಲಿ ರಾಶಿ ಬಟ್ಟೆಗಳಲ್ಲಿ ಮುಳುಗಿರುವ ತಲೆಯೊಂದು ಕಾಣಿಸಿತು. ನಾಯಿ ಬೊಗಳಿದರೂ ಕೇಳಲಿಲ್ವಾ ಇವಳಿಗೆ ಅಂದುಕೊಂಡು ಚಾವಡಿಯ ಕಡೆ ನಡೆದು ಮೆಟ್ಟಲು ಹತ್ತುತ್ತಿದ್ದಂತೆ ಎಮರ್ಜೆನ್ಸಿ ದೀಪದ ಹತ್ತಿರ ಕೂತು, ರಾಶಿ ರಾಶಿ ಬಟ್ಟೆಯ ತುಂಡುಗಳು, ಬೇರೆ ಬೇರೆ ಸೈಜಿನ ರಿಂಗುಗ‍ಳು, ಬಣ್ಣ ಬಣ್ಣದ ಹೊಳೆಯುವ ಮಣಿಗಳು, ಬಗೆ ಬಗೆಯ ದಾರಗಳು ಎಲ್ಲವನ್ನೂ ಪುಟ್ಟ ಪುಟ್ಟ ತಟ್ಟೆಗಳಲ್ಲಿ ಹರಡಿಸಿಕೊಂಡು ಅದರ ಮಧ್ಯೆ ಕಸೂತಿ ಹಾಕುತ್ತಾ ಕೂತಿದ್ದಳು ಮಾಧ್ವಿಯತ್ತೆ… ಯಾವುದೋ ಬೇರೆ ಲೋಕಕ್ಕೆ ಬಂದಂತನಿಸಿತು.

“ಅತ್ತೆ!” ಎಂದಾಗ ತಲೆಯೆತ್ತಿದವಳ ಕಣ್ಣಲ್ಲಿ ಸಂತಸದೆಳೆ ಒಂದರೆಗಳಿಗೆ ಕಂಡಂತಾಯ್ತು.

“ಬಾಬಣ್ಣ, ಬಂದ್ಯಾ, ತಡವಾಯ್ತಲ್ಲಾ ಮಗ?” ಎಂದಳು. ಮಹೇಶ ಹೇಳಿರಬೇಕು ಅಂದುಕೊಂಡು ತಲೆಯಾಡಿಸಿದೆ.

“ಹೋಗು, ಸ್ನಾನ ಮುಗಿಸಿ ಬಾ, ಊಟ ಮಾಡುವೆಯಂತೆ, ಕಾಫಿ ಬೇಡ ಅಯ್ತಾ ಇಷ್ಟು ಹೊತ್ತಲ್ಲಿ” ಎನ್ನುತ್ತಾ ಕನ್ನಡಕ ತೆಗೆದು ಮೇಲೇಳಹೊರಟಳು.

“ಬೇಡ, ಸಧ್ಯಕ್ಕೆ ಹಸಿವಿಲ್ಲತ್ತೆ, ನೀನು ಕೂತ್ಕೊ, ಕಾಲೇಜಿಂದ ಬಂದು ಸ್ನಾನ ಮುಗಿಸಿಯೇ ಹೊರಟೆ, ಬಸ್ಸಲ್ಲಿ ಏನೂ ಆಯಾಸವಾಗಿಲ್ಲ, ಸ್ನಾನ ನಾಳೆ ಮಾಡ್ತೆ, ಆಗ್ದಾ?” ಎಂದು ಒಂದು ನಿಮಿಷ ತಡೆದು, “ಸುಧೀ?” ಎಂದು ತಡವರಿಸುತ್ತಾ ಕೇಳಿದಾಗ ಅವಳು ಏನೂ ಭಾವನೆಗಳನ್ನು ತೋರದೆ “ಬಾಣಂತಿ ಕೋಣೆಯಲ್ಲಿ” ಎಂದಳು.

“ಬಾಣಂತಿ ಕೋಣೆ?” ಎಂದು ಆಶ್ಚರ್ಯದ ಉದ್ಗಾರ ಬಾಯಿಂದ ಗೊತ್ತಿಲ್ಲದೆಯೇ ಹೊರಬಿತ್ತು, ಮಾಧ್ವಿಯತ್ತೆ ತಲೆಯೆತ್ತಲೂ ಇಲ್ಲ, ಮಾತೂ ಆಡದೇ ಮತ್ತೆ ಕನ್ನಡಕ ಧರಿಸಿ ತನ್ನ ಕೆಲಸ ಮುಂದುವರಿಸಿದಳು.

ಎದ್ದು ಚಾವಡಿ ದಾಟಿ ನಡುಮನೆಗೆ ಬಂದರೆ ಮಾವ ಕತ್ತಲಲ್ಲಿ ಕೂತು ಮಣ ಮಣ ಮಾಡುತ್ತಿದ್ದದ್ದು ಕೇಳಿತು.

“ಮಾವ, ನಾನು ಬಾಬು” ಎಂದೆ, ಉತ್ತರವಿಲ್ಲ.

ಮತ್ತೆ ಚಾವಡಿ ಹಾದು, ಕೊಟ್ಟಿಗೆ ಮತ್ತು ಬಚ್ಚಲ ನಡುವೆಯಿದ್ದ ‍ಬಾಣಂತಿ ಕೋಣೆಗೆ ನಡೆದೆ. ಬಾಗಿಲು ಸ್ವಲ್ಪವೇ ಸ್ವಲ್ಪ ತೆರೆದಿತ್ತು, ಜೀರೋ ಬಲ್ಬಿನ ಮಂದ ಬೆಳಕು ಹೊರಗೆ ಬರಲು ಸೆಣೆಸುತ್ತಿತ್ತು. ಮೆಲ್ಲಗೆ ಬಾಗಿಲು ದೂಡಿ ಕಾಲಿಟ್ಟು ಸುತ್ತ ನೋಡಿದರೆ, ಗೊರಬುಗಳು, ನೇಗಿಲು ಇತ್ಯಾದಿ, ಗದ್ದೆಗೆ ನೇಜಿ ನೆಡಲು, ಉಳಲು ಬೇಕಾದ ಎಲ್ಲಾ ವಸ್ತುಗಳಿದ್ದವು.

“ಸುಧೀ” ಎಂದು ಮೆತ್ತಗೆ ಕರೆದರೆ, ಯಾವುದೋ ಮೂಲೆಯಿಂದ ಅವನ ಸ್ವರ ಕೇಳಿದಂತಾಯ್ತು. ಗೋಡೆ ತಡಕಾಡಿ ಲೈಟ್ ಸ್ವಿಚ್ ಆನ್ ಮಾಡಿದರೆ, ಮೂಲೆಯೊಂದರಲ್ಲಿ ಹಾಸಿಗೆಯ ಮೇಲೆ ಕೃಶಕಾಯ ಆಕೃತಿ ಮಲಗಿದೆ, ಸುಧೀ ಎಂದು ನಂಬಲಾರದಷ್ಟು ಬದಲಾಗಿದ್ದಾನೆ. ಮುಖಕ್ಕೆ ಯಾರೋ ರಪ್ ಎಂದು ಬಾರಿಸಿದಂತಾಯ್ತು. ಅಲ್ಲಿ ಕಾಣುತ್ತಿದ್ದದ್ದು, ಸುಮಾರು ಹದಿನೈದು ವರ್ಷಗಳಿಂದ ಭೀಮಸೇನ ಎಂದು ಕರೆಸಿಕೊಳ್ಳುತ್ತಿದ್ದ ಜೀವ ಎಂದು ನಂಬಲು ಆಗಲೇ ಇಲ್ಲ, ಕಣ್ಣಿಗೆ ಕಂಡದ್ದನ್ನು ಜೀರ್ಣಿಸಿಕೊಳ್ಳಲು ಒದ್ದಾಡಿದೆ. ಕಣ್ಣು ಮಂಜಾಗಿ, ಗಂಟಲು ಕಟ್ಟಿ ಬಂತು. ಹೇಗಿದ್ದ ಜೀವ, ಛೇ! ಮೊದಲೇ ಬಂದಿದ್ರೆ ಏನಾಗ್ತಿತ್ತು ನಂಗೆ? ಏಳು ವರ್ಷ ಕತ್ತೆ ಕಾಯ್ತಿದ್ದೆನಾ ಅನಿಸಿ ನನ್ನ ಮೇಲೆ ನನಗೇ ಸಿಟ್ಟು ಬಂತು.

ಸ್ವಲ್ಪ ಸಾವರಿಸಿಕೊಳ್ಳುವಷ್ಟರಲ್ಲಿ ಸುಧೀ ತನ್ನ ನಿತ್ರಾಣ ದನಿಯಲ್ಲಿ “ಬಾಬಣ್ಣ, ನಿನ್ನ ನೋಡಬೇಕು ಅಂತ ತುಂಬಾ ಆಸೆಯಾಗಿತ್ತೋ” ಅಂದ.

ಇಷ್ಟೂ ಹೊತ್ತು ಗಮನಕ್ಕೆ ಬಾರದ ಕಮಟು ವಾಸನೆ ಒಂದೇ ಸಲ ಮೂಗಿಗೆರಗಿತು. ಕೂರಲು ಜಾಗವೇ ಇರಲಿಲ್ಲ, ತಲೆ ಹತ್ತಿರ ಒಂದು ಚೊಂಬು, ಮತ್ತೊಂದು ಲೋಟವಿತ್ತು ಅಷ್ಟೆ. ಅಲ್ಲಿದ್ದ ಒಂದಿಷ್ಟು ಸಾಮಾನುಗಳನ್ನು ಬದಿಗೆ ಸರಿಸಿ, ಅವನ ಪಕ್ಕದಲ್ಲಿ ಹೋಗಿ ಕೂತೆ. ಕುರುಚಲು ಗಡ್ಡ, ಕೆದರಿದ್ದ ರಾಶಿ ತಲೆ ಕೂದಲು.

ಅವನ ಕಟ್ಟಿಗೆಯ ಹಾಗಿದ್ದ ಕೈ ಹಿಡಿದು “ಹೇಗಿದ್ದೀ ಸುಧೀ?” ಎಂದರೆ, ಅವನು ನಿರ್ಭಾವುಕನಾಗಿ ಸುಮ್ಮಗೆ ದಿಟ್ಟಿಸಿದ.

ಒಂದಿಷ್ಟು ಹೊತ್ತಾದ ಮೇಲೆ “ಗೊತ್ತಿಲ್ಲ ಬಾಬಣ್ಣ, ಓಬಯ್ಯ ಏನೋ ಮೂರೂ ಹೊತ್ತು ಅನ್ನ ಕಲೆಸಿ ತಿನ್ನಿಸುತ್ತಾನೆ, ಆ ಅಡಕೆಯ ಸೋಗೆ ಮೇಲೆ ಪಾಯಿಖಾನೆ ಆಗುತ್ತೆ. ನೀರು ತಲೆಯ ಹತ್ತಿರ ಉಂಟು, ಹಗಲು ರಾತ್ರಿ ಇಲ್ಲೇ ಬಿದ್ದಿರುವುದು. ಉರುವಾಗ್ತದೆ, ಹೊರಗೆ ಹೋಗಬೇಕು, ಗುಡ್ಡ ಸುತ್ತಬೇಕು ಅನಿಸ್ತದೆ” ಅಂದ.

ಯಾವ ಮಾತೂ ಹೊಳೆಯಲಿಲ್ಲ, ತಲೆ ಬ್ಲಾಂಕ್ ಆಯ್ತು. ಸುಧೀ ಏಳಲು ಪ್ರಯತ್ನಿಸಿದ, ಗೋಡೆಗೆ ದಿಂಬು ಒರಗಿಸಿ, ಅವನನ್ನೆತ್ತಿ ಕೂರಿಸಿದೆ.

“ನನ್ನ ಅಮ್ಮ ಎಂಬ ಮಹಾರಾಣಿಗೆ ಉಚ್ಚೆ, ಚಿಚ್ಚಿಗಳ ವಾಸನೆ ಮನೆಯಿಡೀ ಹರಡಿ ಊಟಕ್ಕೆ ಕೂತ್ರೆ ವಾಕರಿಕೆ ಬರ್ತದಂತೆ, ಅಪ್ಪನ ಕೆಲ್ಸ ಮಾಡಿಯೇ ಸಾಕಾಗಿರ್ತದೆ ಅವ್ಳಿಗೆ, ನನ್ನಿಂದ ಇನ್ನಷ್ಟು ಕಷ್ಟ ಯಾಕೆ, ನಾನೇ ಇಲ್ಲಿಗೆ ಹಾಸಿಗೆ ಹಿಡ್ಕೊಂಡು ಬಂದೆ, ಆರಾಮಾಗಿರ್ಲಿ ಅವ್ಳು ಅಲ್ಲಿ” ಎಂದ.

ದನಿಯಲ್ಲಿನ ತಾತ್ಸಾರ, ಕಹಿ, ತಿರಸ್ಕಾರ ಅರ್ಥವಾಯಿತು. ನಾಲಿಗೆ ಹೊರಳಿಸುವ ಪ್ರಯತ್ನ ಮಾಡಿದರೂ ಶಬ್ದ ಹೊರಡಲಿಲ್ಲ.

“ಜಯಾ ಕರೀತಾನೆ ಇರ್ತಾಳೆ, ಇಬ್ರೂ ಒಟ್ಟಿಗೆ ಆರಾಮಾಗಿರಬಹುದು, ಹೋದ್ರಾಯ್ತು ಅಲ್ಲಿಗೆ ಬೇಗ” ಎಂದವನು “ಇರ್ಲಿ ಬಾಬಣ್ಣ, ನೀ ಹೇಳು, ಕೇಶವ ಮಾಮ, ಗಿರ್ಜಾ ಮಾಮಿ ಹೇಗಿದ್ದಾರೆ? ನಂಗೇನಾದ್ರೂ ತಂದ್ಯಾ?” ಎಂದು ಸ್ವಲ್ಪ ಗೆಲುವಿನ ಸ್ವರದಲ್ಲಿ ಕೇಳಿದ.

“ಹೌದು, ಅಮ್ಮ ಈವಾಗ ಆರಾಮಾಗಿದ್ದಾಳೆ, ನಿನ್ನ ತುಂಬಾ ನೆನಪಿಸಿಕೊಳ್ಳುತ್ತಾಳೆ, ಆಸ್ಪತ್ರೆಯಿಂದ ಬಂದು ಹದಿನೈದು ದಿನ ಆಯ್ತು, ಅವಳು ಎಲ್ಲೂ ಟ್ರಾವೆಲ್ ಮಾಡಬಾರದು ಒಂದು ತಿಂಗಳು, ಅದಕ್ಕೆ ಬಂದಿಲ್ಲ, ಈ ತಿಂಗಳ ಕೊನೆಗೆ ಬರ್ತಾಳೆ ನಿನ್ನ ನೋಡೋಕೆ, ಓಹ್! ಮರೆತೇ ಹೋಗಿತ್ತು, ತಡಿ” ಎಂದವನಿಗೆ ಹೇಳಿ, ಚಾವಡಿಗೆ ಓಡಿ ಬ್ಯಾಗಿನಲ್ಲಿದ್ದ, ತಿಂಡಿಯ ಚೀಲ, ಮತ್ತೆ ಒಂದಿಷ್ಟು ಪುಸ್ತಕಗಳನ್ನು ತೆಗೆದುಕೊಂಡೆ.

ಅತ್ತೆ ಕಡೆ ನೋಡಬೇಕೆನಿಸಲಿಲ್ಲ. ತಿಂಡಿಯ ಚೀಲದಿಂದ ಡೈರಿ ಮಿಲ್ಕು, ಚಿಪ್ಸ್, ಹಣ್ಣುಗಳು ಮತ್ತು ಅವನಿಷ್ಟದ ಖಾರ ಶೇಂಗಾದ ಪ್ಯಾಕೆಟುಗಳನ್ನು ತೆಗೆಯುತ್ತಿದಂತೆ ಅವನ ಮುಖವರಳಿತು. ಮೊದಲಿನ ಪುಟ್ಟ ಭೀಮಸೇನ ಕಣ್ಮುಂದೆ ಬಂದು ನಕ್ಕಂತಾಯ್ತು. ಎಲ್ಲವನ್ನೂ ಬಾಚಿ ಅಪ್ಪಿಕೊಂಡ.

ಡೈರಿಮಿಲ್ಕಿನ ರ್ಯಾಪರ್ ಬಿಚ್ಚಿ ತಿನ್ನುತ್ತಾ “ಇದೊಂದು ಮಾತ್ರ ಗಿರ್ಜಾ ಮಾಮಿ ಮರೆಯಲ್ಲ ನೋಡು, ನಂಗಿಪ್ಪತ್ತೆರಡು ವರ್ಷವಾದ್ರೂ ಅವರಿಗೆ ನಾನಿನ್ನೂ ಮಗೂನೇ” ಎಂದು ಪುಸ್ತಕಗಳಲ್ಲೊಂದನ್ನು ಎತ್ತಿಕೊಂಡು ನನ್ನ ಕಡೆಗೆ ಒಮ್ಮೆ ಧನ್ಯತೆಯಿಂದ ನೋಡಿ, “ನಾ ತಿಂತಾ ಓದ್ಲಾ ಬಾಬಣ್ಣ ?”ಎಂದಾಗ ಸರಿಯೆಂದು ನಕ್ಕು ಅಲ್ಲಿಂದೆದ್ದೆ. ಅದಷ್ಟನ್ನೂ ಗಿರ್ಜಾ ಮಾಮಿ ಕಳಿಸದ್ದಲ್ಲ, ನಾನೇ ತಂದೆ ಎನ್ನಲು ಮನಸ್ಸಾಗಲಿಲ್ಲ.

ಹೊರಬರುವಷ್ಟರಲ್ಲಿ ರಾಜನ್ ಗುರ್ರ್ ಎಂದಿದ್ದೂ, ಅದರ ಹತ್ರ ತುಳುವಿನಲ್ಲಿ ಮಾತಾಡಿದ ಓಬಯ್ಯನ ಸ್ವರವೂ, ಅವನ ಸ್ಲಿಪರ್ರಿನ ಶಬ್ದವೂ ಕೇಳಿ ನಂತರ ಅವನ ದೃಢಕಾಯವೂ ಕಾಣಿಸಿಕೊಂಡಿತು.

“ಓಬಯ್ಯ…ಸೌಖ್ಯಾ ?”ಎಂದೆ.

ಅವನೂ “ಹಾಂ” ಎಂದ.

ಅವನು ಹತ್ತಿರ ಬರುವುದನ್ನೇ ಕಾದು, ಮೆಲು ದನಿಯಲ್ಲಿ, “ನಾಳೆ ಆ ಕೋಣೆ ಪೂರ್ತಿ ಸ್ವಚ್ಛ ಮಾಡಿ, ಎಲ್ಲಾ ಗದ್ದೆ, ನಾಟಿ ಸಾಮಾನುಗಳನ್ನು ಬಚ್ಚಲ ಮೇಲೆ ಅಟ್ಟಕ್ಕೆ ಹಾಕಿ, ಅಲ್ಲಿ ಸುಧೀಗೊಂದು ಮಂಚ ಹಾಕಲು ಜಾಗ ಆಗಬೇಕು” ಎಂದೆ.

ನನ್ನ ದನಿಯಲ್ಲಿದ್ದ ಅಪ್ಪಣೆ ಕೇಳಿ ಅವನಿಗೆ ಆಶ್ಚರ್ಯವಾಗಿರಬೇಕು. “ಅಲ್ಲ, ಅಮ್ಮ…” ಎಂದು ಏನೋ ಮಾತನಾಡಲು ಹೊರಟ. ತಡೆದು, “ಆ ಮಹೇಶನ ತಮ್ಮ ಉಜಿರೆಯಲ್ಲಿ ಓದೋದಲ್ವಾ, ನಾಳೆ ಅವ್ನು ಕಾಲೇಜಿಗೆ ಹೋಗಿ ಬರುವಾಗ ಒಂದು ಬೆಡ್ ಪಾನ್ ತರೋಕೆ ಹೇಳು” ಎಂದು ಸ್ವಲ್ಪ ದನಿ ಎತ್ತರಿಸಿಯೇ ಹೇಳಿದೆ.

“ಸರಿ ಬಾಬಣ್ಣ” ಎಂದ ಅವನು.

ಕೊಟ್ಟಿಗೆಯಲ್ಲಿ ದನಗಳು ಮೆಲುಕು ಹಾಕುವ, ಅವುಗಳ ಕೊರಳಿನ ಘಂಟೆಯ ಸದ್ದು ಕೇಳುತ್ತಾ ಚಾವಡಿಯ ಮೆಟ್ಟಲ ಮೇಲೆ ಕೂತೆ. ದೊಡ್ಡ ತುಳಸಿಕಟ್ಟೆಯಲ್ಲಿ ದೀಪ ಗಾಳಿಗೆ ಓಲಾಡುತ್ತಾ ಉರಿಯುತ್ತಿತ್ತು. ಅದರ ಬೆಳಕಲ್ಲಿ ಕಟ್ಟೆಯ ಮೇಲೆ ಕೆತ್ತಿದ್ದ ಲಕ್ಷ್ಮಿ ಸುಂದರವಾಗಿ ಕಾಣುತ್ತಿದ್ದಳು. ದೂರದಲ್ಲಿ ಕಾಣುತ್ತಿದ್ದ ಬಾವಿಕಟ್ಟೆ, ಮಾವಿನ, ತೆಂಗಿನ, ಅಡಿಕೆ ಮರದ ಛಾಯೆಗಳು. ವರ್ಷಕ್ಕೆರಡು ಸರ್ತಿ ರಜೆಯಲ್ಲಿ ಇಲ್ಲಿಗೆ ಬಂದಾಗ ಆ ಬಾವಿಕಟ್ಟೆಯಲ್ಲಿ ಅಮ್ಮ ಬಟ್ಟೆ ಒಗೆಯುತ್ತಿದ್ದದ್ದು, ನಾನು, ಜಯ, ಸುಧೀ ಮೂರೂ ಜನ ಸುತ್ತ ಆಟವಾಡುತ್ತಾ ಅಮ್ಮನಿಗೆ ಉಪದ್ರ ಕೊಟ್ಟು ಬೈಸಿಕೊಳ್ಳುತ್ತಿದ್ದದ್ದು, ಪಕ್ಕದ ಹಳ್ಳದಲ್ಲಿ ಬೈರಾಸಿನಲ್ಲಿ ಮೀನು ಹಿಡಿಯುತ್ತಾ, ಗದ್ದೆ, ಗುಡ್ಡ, ತೋಟ, ನಾಗಬನ, ಕೆರೆದಂಡೆ, ಬೆಟ್ಟುಗದ್ದೆ ಸುತ್ತುತ್ತಿದ್ದದ್ದು ಎಲ್ಲವೂ ಕಣ್ಮುಂದೆ ಸಿನಿಮಾ ರೀಲಿನ ಥರಾ ಸಾಗಿ ಹೋಯ್ತು. ಜಯಾ ಅದೆಷ್ಟು ಚೆಂದವಿದ್ದಳು, ಎರಡು ಜಡೆ ಕಟ್ಟಿ ಕೆಂಪು ರಿಬ್ಬನ್ ಹಾಕಿ, ಹಣೆಗೆ ಲಾಲ್ ಗಂಧ ಇಟ್ಟರೆ ಮುದ್ದು ಮುದ್ದು ಬೊಂಬೆಯಂತೆ ಕಾಣುತ್ತಿದ್ದಳು. ಸುಧೀ ದೊಡ್ಡ ಜೀವ, ನಮ್ಮಿಬ್ರಿಗೂ ಅವನೇ ರಕ್ಷಕ, ಎಲ್ಲಾ ಕಿತಾಪತಿಗಳೂ ಅವನ ಸುಪರ್ದಿಯಲ್ಲೇ ನಡೆಯಬೇಕು. ತೆಂಗಿನ ಸೋಗೆಯಲ್ಲಿ ನಮ್ಮನ್ನು ಕೂರಿಸಿ ಎಳೆಯೋದೂ ಅವನೇ. ಗೇರು , ಕುಂಟಾಳ, ಮಾವಿನ ಹಣ್ಣು ಕೊಯ್ಯೋದೂ ಅವನೇ. ವಯಸ್ಸಿನಲ್ಲಿ ಜಯಾ ದೊಡ್ಡವಳು, ಆದರೆ ಸ್ವಲ್ಪ ಕಡ್ಡಿಯೇ, ಅವಳಿಗಿಂತ ಎರಡು ವರ್ಷಕ್ಕೆ ಚಿಕ್ಕವನಾದ‍ನಾನೂ ಹಾಗೇ. ನನಗಿಂತ ಒಂದು ವರ್ಷ ಚಿಕ್ಕವನಾದ ಸುಧೀಗೆ ಮಾತ್ರ ಭೀಮಬಲ. ಒಂದ್ಸಲ ಅದು ಹೇಗೋ ಅವನಿಗೆ ಕೆಸುವಿನ ಎಲೆ ತಿನ್ನಿಸಿ ಅಳುವಂತೆ ಮಾಡಿದ್ದೆ ಅಲ್ಲಾ, ಆಮೇಲೆ ಅಮ್ಮ ಬೈದ್ರೆ ಜಯಾ ಬಂದು ತಾ ಮಾಡಿದ್ದೆಂದು ಸುಳ್ಳು ಹೇಳಿದರೂ ಮಾಧ್ವಿಯತ್ತೆ ದಡ್ಡನೇನೋ ನೀನು ಅಂತ ಸುಧೀಗೆ ಹೊಡೆದಿದ್ದು…ಎಲ್ಲಾ ನೆನಪುಗಳೂ ತಾ ಮುಂದು ತಾ ಮುಂದು ಅಂತ ಬರತೊಡಗಿದವು, ಆದರೀಗ? ಜಯಾ ಇಲ್ಲ, ಸುಧೀ ಅವಳೆಡೆಗೇ ಜಾರಿ ಹೋಗುತ್ತಿದ್ದಾನೆ, ಅತ್ತೆ ಅವರದ್ದೇ ಲೋಕದ್ದಲ್ಲಿದ್ದರೆ, ಮಾಮ ಇದ್ದೂ ಇಲ್ಲದ ಹಾಗೆ… ಅಯ್ಯೋ ಈ ಮನೆಯ ಅವಸ್ಥೆಯೇ ಅನಿಸಿ ಅರಿವಿಲ್ಲದೆಯೇ ನಿಟ್ಟುಸಿರು ಹೊರಬಿತ್ತು.

ಅತ್ತೆ ಊಟಕ್ಕೆ ಕರೆದರು, ಅಷ್ಟು ದೊಡ್ಡ ಅಡುಗೆಮನೆಯಲ್ಲಿ ನಾವಿಬ್ಬರೇ, ಒಂದು ಕಾಲದಲ್ಲಿ ಯಾವಾಗಲೂ ತಿರುಗುತ್ತಿದ್ದ ದೊಡ್ಡ ಗ್ರೈಂಡರ್, ಎಲೆಯ ಸುತ್ತಮುತ್ತ ತಿರುಗುತ್ತಿದ್ದ ಚಾಮಿಯ ವಂಶದ ಕುಡಿಗಳು, ನಿಂಗೆ ದೊಡ್ಡ ಎಲೆ, ನಂಗೆ ಸಣ್ಣ ಎಲೆ ಎಂದು ಕೋಳಿ ಜಗಳವಾಡಿ ತಿನ್ನುತ್ತಿದ್ದ ಸುಧೀ, ಜಯಾ, ಹೆಚ್ಚು ಮಾತನಾಡದೇ ಸುಮ್ಮನೆ ದೊಡ್ಡ ದೊಡ್ಡ ತುತ್ತುಗಳನ್ನು ಇಳಿಸುತ್ತಿದ್ದ ಮಾಮ, ಅಡುಗೆಮನೆಯ ಹಿಂದಣ ಬಾಗಿಲಿನ ಹತ್ತಿರ ಬೆಳೆದಿದ್ದ ‍ಬಿಂಬುಳಿ ಮರ ಮತ್ತದರ ಸುತ್ತ ತಿರುಗುತ್ತಿದ್ದ ಗಿರಿರಾಜ ಕೋಳಿ ಎಲ್ಲಾ ಕಣ್ಮುಂದೆ ಸರಿದವು. ಅಯಾಚಿತವಾಗಿ ತಲೆ ಎತ್ತಿ ನೋಡಿದರೆ, ತೂಗುತ್ತಿದ್ದ ಬೆಣ್ಣೆ ಮಡಕೆಗಳು ಕಾಣಲಿಲ್ಲ. ನನ್ನನ್ನೇ ನೋಡುತ್ತಿದ್ದ ಅತ್ತೆ ಅರ್ಥವಾದಂತೆ ತಲೆಯಲುಗಿಸಿದರು. ಕಪ್ಪು ಹಿಡಿದಿದ್ದ ಗೋಡೆಗಳನ್ನು ಬೆಳಗುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದ ಬಲ್ಬ್ ಮಂಕಾಗಿತ್ತು. ಅರ್ಧಕ್ಕರ್ಧ ಅಡುಗೆ ಮನೆ ಖಾಲಿ, ಒಂದು ಮೂಲೆಯಲ್ಲಿ ಪಾತ್ರೆ ಪಗಡಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದರು ಅತ್ತೆ.

ನಾನು ತಿನ್ನುವ ಶಬ್ದ ನನಗೇ ಕೇಳಲು ಅಸಹನೆಯೆನಿಸಿ “ಮಾಮ ಮತ್ತೆ ಸುಧೀಗೆ ಊಟ?” ಎಂದು ಕೇಳಿದೆ.

“ಇಬ್ಬರದ್ದು ಆಯ್ತು” ಎಂದರು ಅತ್ತೆ.

ಹೊಂಚು ಹಾಕಿದ್ದ ಮೌನ ಮತ್ತೆ ಎರಗಿತು.

ಊಟ ಮುಗಿಸಿ ಅವಳು ಮುಗಿಸುವವರೆಗೆ ಕಾದು, “ನಾಳೆ ಓಬಯ್ಯನಿಗೆ ಹೇಳಿ ಸುಧೀ ಮಲಗಲು ಅಲ್ಲೊಂದು ಮಂಚ ಹಾಕಿಸಿ ಆ ಕೋಣೆ ಸ್ವಲ್ಪ ಖಾಲಿ ಮಾಡಿಸ್ತೀನಿ” ಎಂದು, ಅವಳ ಉತ್ತರದ ನೀರೀಕ್ಷೆಯಿಲ್ಲದೆ ಹೊರನಡೆದೆ.

ಚಾವಡಿಯ ಎಡಭಾಗಕ್ಕಿದ್ದ ಕೋಣೆಯ ಒಳಗೆ ಆಗಲೇ‌ಹಾಸಿಗೆ ಹಾಸಿತ್ತು. ಕೈಲಿ ಮೊಬೈಲ್ ಹಿಡಿದು ಕೂತೆ. ಮನೆಯ ವಿಷಾದ ತನ್ನಲ್ಲೂ ಇಳಿಯುತ್ತದೆಯೆನಿಸಿ ಜೋರಾಗಿ ತಲೆ ಕೊಡಹಿದೆ. ತಲೆದಿಂಬಿನ ಮೇಲೂ ಕಸೂತಿಯ ಹೂವಿನ ಚಿತ್ತಾರಗಳು, ಅದನ್ನು ಕೈಲೊಮ್ಮೆ ಸವರಿದೆ. ಸರಿಯಾಗಿ ನೋಡಿದರೆ, ದಿಂಬು ಮಾತ್ರವಲ್ಲ, ಹೊದಿಕೆಗಳು, ಮಂದ್ರಿ, ಕರ್ಟನ್ ಎಲ್ಲದರ ಮೇಲೆಯೂ ಹೂವು, ಬಳ್ಳಿಗಳ ಚಿತ್ತಾರಗಳು. ಸುಧೀ ರೂಮಲ್ಲಿದ್ದವುಗಳ ಮೇಲೂ ಇದೇ ಚಿತ್ತಾರವಿತ್ತು, ಅರೇ! ಅತ್ತೆ ಸೀರೆ, ರವಕೆಯಲ್ಲೂ ಇದ್ದದ್ದು ಇವೇ ಚಿತ್ತಾರಗಳು ಎಂದು ನೆನಪಾಯ್ತು. ಬಟ್ಟೆ ಅಂತ ಕಾಣಿಸಿದ್ದರ ಮೇಲೆಲ್ಲಾ ಕಸೂತಿಯ ಚಿತ್ತಾರಗಳೇ ತುಂಬಿಕೊಂಡಿದ್ದವು.

ಮೊಬೈಲಿನಲ್ಲಿ ಡೌನ್ಲೋಡ್ ಮಾಡಿಟ್ಟಿದ್ದ ವಿಡಿಯೋಗಳನ್ನು ನೋಡುತ್ತಾ ಅದ್ಯಾವಾಗ ನಿದ್ದೆ ಹೋದೆನೋ ತಿಳಿಯಲಿಲ್ಲ, ಎಚ್ಚರಿಸಿದ್ದು ಒಂದು ವಿಚಿತ್ರ ಕನಸು. ತಲೆಯ ಬಳಿಯಿದ್ದ ಚೆಂಬಿನ ನೀರು ಕುಡಿದು ಸಾವರಿಸಿಕೊಂಡು ಕತ್ತಲೆಯನ್ನೇ ನೋಡುತ್ತಾ ಕೂತೆ.

ಕನಸಲ್ಲಿ ಜಯಾ, ನಾನು, ಸುಧೀ ಇದೇ ಮನೆಯ ಅಂಗಳದಲ್ಲಿ ಕುಣಿಯುತ್ತಿದ್ದೇವೆ, ಇದ್ದಕ್ಕಿದ್ದ ಹಾಗೆ ಮಾಮ ಎಲ್ಲಿಂದಲೋ ಓಡಿ ಬಂದು ನನ್ನ ಬಿಟ್ಟು ಅವರಿಬ್ಬರನ್ನು ಹಿಡಿದು ತಬ್ಬುವ ಪ್ರಯತ್ನ ಮಾಡುತ್ತಿದ್ದರೆ, ಅತ್ತೆ ಇಬ್ಬರನ್ನೂ ತನ್ನ ಎಂಬ್ರಾಯ್ಡರಿ ರಿಂಗುಗಳ ಮಧ್ಯೆ ಬಂಧಿಸಿ ರೇಶಿಮೆಯ ‍ದಾರಗಳಿಂದ ಹೊಲೆಯುತ್ತಿದ್ದಾರೆ. ಬಿಡಿಸಲು ಹೋದ ನನ್ನನ್ನು ದೊಡ್ಡ ಕೆಂಪು ಕಣ್ಣುಗಳಿಂದ ದುರುಗಟ್ಟಿ ತೆಂಗಿನ ಮರದಷ್ಟು ದೊಡ್ಡ ಸೂಜಿಯಲ್ಲಿ ಚುಚ್ಚಲು ಬರುತ್ತಿದ್ದಾರೆ. ಮಾಮ ಕಿರುಚುತ್ತಾ ಅತ್ತೆಯನ್ನು ದೂಡಲು ಪ್ರಯತ್ನಿಸುತ್ತಿದ್ದಾರೆ, ಕೊನೆಗೆ ಅತ್ತೆ ಬೆಳೆದು ಹೆಮ್ಮರವಾಗಿದ್ದಾಳೆ. ಮಕ್ಕಳಿಬ್ಬರೂ ಕಸೂತಿಯ ಹೂವುಗಳಾಗಿ ಬದಲಾಗುತ್ತಾ ನೋವಿನಲ್ಲಿ ಕಿರುಚುತ್ತಿದ್ದಾರೆ. ‍

ಅಬ್ಬಾ! ಎಂಥಾ ಕನಸು! ಭಯಕ್ಕೆ ಇಡೀ ಮೈ ಬೆವೆತು ಹೋಗಿತ್ತು. ಮೊಬೈಲ್ ಸ್ಕ್ರೀನ್ ಆನ್ ಮಾಡಿ ನೋಡಿದರೆ ನಾಲ್ಕೂವರೆ, ಇನ್ನು ನಿದ್ದೆ ಹತ್ತಿದ ಹಾಗೆ ಎಂದುಕೊಂಡು ಹೊರಬಂದು ಚಾವಡಿಯ ಕಡೆ ನಡೆದೆ. ಮಾಮನ ಮಣ ಮಣ ಕೇಳುತ್ತಲೇ ಇತ್ತು. ಮಾಧ್ವಿಯತ್ತೆ ಎಮರ್ಜನ್ಸಿ ಲ್ಯಾಂಪಿನ ಹತ್ತಿರಕ್ಕೆ ಕೂತು ದಾರವನ್ನು ಎಳೆಯುತ್ತಲೇ ಇದ್ದಳು.

ಆಶ್ಚರ್ಯವಾಗಿ ಹತ್ತಿರ ಹೋಗಿ “ಅತ್ತೆ ನಿದ್ದೆನೇ ಮಾಡುದಿಲ್ವಾ ನೀನು?” ಕೇಳಿದೆ.

ಒಮ್ಮೆಗೆ ಬೆಚ್ಚಿಬಿದ್ದು ನೋಡಿದಳು, ಅವಳ ಕಣ್ಣುಗಳಲ್ಲಿ ಚೂರೂ ನಿದ್ದೆಯಿರಲಿಲ್ಲ.

“ನೀನ್ಯಾಕೆ ಇಷ್ಟು ಬೇಗ ಎದ್ದೆ?, ನೀರು ಇಟ್ಟಿದ್ನಲ್ಲಾ, ಎಂಥ ಬೇಕಿತ್ತು?” ಎಂದು ಕೇಳಿದಳು.

ಇವಾಗಷ್ಟೇ ಕನಸಲ್ಲಿ ರಾಕ್ಷಸಿಯಾಗಿದ್ದಳಲ್ಲ, ಹೇಗೆ ಹೀಗಾದಳು ಅನಿಸಿ ಕೂಡಲೇ ಇವಳ ಈ ಪ್ರೀತಿ, ಅಂತಃಕರಣ ಸುಧೀ ಮೇಲೆ, ಅದೂ ಅವನು ಈ ಸ್ಥಿತಿಯಲ್ಲಿದ್ದಾಗಲೂ ಹರಿದಿಲ್ಲವಲ್ಲಾ ಅನಿಸಿತು. ಇಲ್ಲ ಅಂತ ತಲೆಯಾಡಿಸಿ, ಅಲ್ಲೇ ಇದ್ದ ಈಸೀಚೇರಲ್ಲಿ ಮೈ ಚೆಲ್ಲಿದೆ.

ಬಂದಾಗಿಂದ ಅಪ್ಪ ಅಮ್ಮನ ಬಗ್ಗೆ ಏನೂ ಕೇಳದವಳು, ಇದ್ದಕ್ಕಿದ ಹಾಗೆ, “ಅಣ್ಣ ನನ್ನ ನೆನಪಿಸ್ಕೊತಾನಾ? ಅತ್ತಿಗೆ ಯಾವತ್ತಾದ್ರೂ ಮಹೇಶನಿಗೆ ಫೋನ್ ಮಾಡಿ ಕೇಳ್ತಾಳಂತೆ” ಎಂದಳು.

“ಮೊಬೈಲಾದ್ರೂ ತೊಗೋ ಅತ್ತೆ, ಅಮ್ಮ, ಅಪ್ಪನ ಹತ್ತಿರ ಮಾತಾಡಬಹುದು, ಸುಧೀಗೂ ಟೈಮ್ ಪಾಸಾಗುತ್ತೆ” ಎಂದರೆ ಕೇಳದವಳಂತೆ ಸುತ್ತಣ ತಟ್ಟೆಗಳಲ್ಲಿ ಏನೋ ಹುಡುಕಲಾರಂಭಿಸಿದಳು.

ಸ್ವಲ್ಪ ಹೊತ್ತು ಬಿಟ್ಟು ಸ್ವಗತವೆಂಬಂತೆ “ಜಯಾ ಹೋದಾಗ ಅಣ್ಣ ಅತ್ತಿಗೆ ಬಂದಿದ್ದು, ನೀನೂ ಕಾಲೇಜು ಸೇರಿದ ಮೇಲೆ ಬಂದೇ ಇಲ್ಲ.” ಎಂದಳು.

ಅಷ್ಟರಲ್ಲಿ ಮಾಮ ಜೋರಾಗಿ “ಮಾಧ್ವೀ, ಎಲ್ಲೋದ್ಯೆ, ನನ್ನ ಬಿಟ್ಟು ತಿರುಗಲು ಹೋಗ್ತಾಳೆ, ಯಾರೊಟ್ಟಿಗೆ ಸುತ್ತಿ ಹಾಳಾಗಿದ್ಯೇ? ಅಯ್ಯೋ ಬಾರೆ ಇಲ್ಲಿ, ನಂಗೇನೋ ಆಗ್ತಿದೆ” ಎಂದು ಬೊಬ್ಬೆ ಹಾಕಿದರು.

ನಂಗೆ ಗಾಭರಿಯಾಗಿ ಏಳಲು ಹೊರಟರೆ, “ಸುಮ್ನಿರು ಬಾಬು, ಆ ಮನುಷ್ಯನದ್ದು ಇದ್ದಿದ್ದೇ, ನಾ ಹದಿನೆಂಟು ವರ್ಷದವಳಿದ್ದಾಗ್ಲೇ ಓಡಿ ಹೋಗಲಿಲ್ಲ, ಇವಾಗೆಲ್ಲಿ ಹೋಗ್ಲಿ?” ಎಂದವಳು ಮಾಮನ್ನುದ್ದೇಶಿಸಿ, “ಒಂದ್ಸಲ ಸುಮ್ನಿರಕ್ಕಾಗ್ದಾ? ಇಲ್ಲೇ ಇದ್ದೇನೆ, ಹೊರಕಡೆ ಹೋಗೋ ಟೈಮಾಗಿಲ್ಲ, ಬಿದ್ಕೊಳ್ಳಿ ” ಎಂದು ದಪ್ಪ ಸ್ವರದಲ್ಲಿ ಆದೇಶಿಸಿದಳು.

“ರಕ್ತನೇ ಸರಿಯಿಲ್ಲ, ಮನುಷ್ಯ ಹೇಗೆ ಸರಿಯಿರೋದು?, ಇವನಮ್ಮ, ಆ ತಾಟಗಿತ್ತಿ ಬದುಕಿರೋವರೆಗೂ ನನ್ನ ಹುರಿದು ಮುಕ್ಕಿದಳು, ಈ ಮನುಷ್ಯ ಜೀವಂತ ಹೆಣ ಮಾಡಿದ, ಇನ್ನೇನು ಉಳೀತು, ಹಾಗೇ ಆಗಬೇಕು, ಅಲ್ಲಾದ್ರೂ ಆರಾಮಾಗಿರ್ಲಿ. ಅದೊಂದು ಪಾಪದ ಕೂಸು, ಲಗಾಡಿ ತೆಗೆದ್ರು ಎಲ್ರೂ ಸೇರಿಕೊಂಡು.” ಎಂದು ಪಿತ್ತ ನೆತ್ತಿಗೇರಿದವಳಂತೆ ಬಡಬಡಿಸಿದಳು.

“ಅತ್ತೆ, ಸುಮ್ನಿರು” ಎಂದು ಪದೇ ಪದೇ ಹೇಳಿದ ಮೇಲೆ ತೆಪ್ಪಗಾದಳು.

ಆ ದಿನವನ್ನಾದರೂ ಹೇಗೆ ಮರೆಯೋದು? ಆಫೀಸಿನಿಂದ ನೇರ ಸ್ಕೂಲಿಗೆ ಬಂದು ಅಪ್ಪ ನನ್ನನ್ನು ಕರ್ಕೊಂಡು ಸೀದಾ ಮನೆಗೆ ಹೋಗಿ ಅಮ್ಮನನ್ನು ಹೊರಡಿಸಲು ಪ್ರಯತ್ನಿಸುತ್ತಿದ್ದರು. ಮೊದಲು ಏನೂ ಅರ್ಥವಾಗದ ಅಮ್ಮ ‘ಏನು ಅಂತ ಹೇಳಿದ್ರೆ ಮಾತ್ರ ಹೊರಡ್ತೀನಿ’ ರಚ್ಚೆ ಹಿಡಿದು ಕೂತಿದ್ದಳು.

ಅಪ್ಪ “ಬಾಬು, ಇಲ್ಲೇ ಇದ್ದಾನೆ ಅಮೇಲೆ ಹೇಳ್ತೀನಿ ಗಿರ್ಜಾ” ಎಂದರೂ ಅವಳು ಕೇಳದೇ ಕೂತಿದ್ದು… ಕೊನೆಗೆ ತಡೆಯಲಾಗದೇ “ಆ ಪ್ರಾಣಿ ಮಗು ಜೀವ ತೆಗೆದೇ ಬಿಡ್ತೇ” ಎಂದು ಕಿರುಚಿದ್ದೂ, ಅಮ್ಮನಿಗೆ ಅರ್ಥವಾಗದಾಗ, “ಭಾವ ಮತ್ತೆ ಅವರಮ್ಮ ಸೇರಿ ಆ ಜಯಾನ ಕೊಂದುಬಿಟ್ರೇ…” ಎಂದಿದ್ದರು. ಅಮ್ಮ ಕುಸಿದು ಕೂತವಳು ಅದೆಷ್ಟೋ ಹೊತ್ತು ಮಾತೇ ಆಡಲಿಲ್ಲ.

ಏನೂ ತೋಚದೇ, ಅರ್ಥವಾಗದೇ ಕೂತ ನನ್ನನ್ನು ಅಪ್ಪ “ಹೊರಡು ಬಾಬು, ನಿನ್ನ ಬಟ್ಟೆ ಬ್ಯಾಗಲ್ಲಿ ಹಾಕ್ಕೋ” ಎಂದಿದ್ದರು. ‍ಜಯಾ ಸತ್ತು ಹೋದ್ಲು ಅಂದ್ರೆ ಏನು? ಎಲ್ಲಿಗೆ ಹೋಗ್ತಾಳೆ ಅವಳು? ಸುಧೀ ಏನು ಮಾಡ್ತಾನೆ ಇನ್ನು?ಮಾಧ್ವಿಯತ್ತೆ ಏನು ಮಾಡ್ತಾಳೆ…ತಲೆ ತುಂಬಾ ಪ್ರಶ್ನೆಗಳಿದ್ದವು ಆ ದಿನ‍. ಅತ್ತೆಯೂರು ಮುಟ್ಟಿದಾಗ ಅತ್ತೆ ಅಕ್ಷರಶಃ ಹುಚ್ಚಿಯಾಗಿದ್ದಳು. ಅಮ್ಮ ಹೋಗಿ ಅಪ್ಪಿಕೊಂಡರೂ ಒಂದೂ ಹನಿ ಕಣ್ಣೀರು ಹಾಕದವಳು, ಜಯಾಳನ್ನು ಅಂತಿಮ ಸಂಸ್ಕಾರಕ್ಕೆ ಕೊಂಡೊಯ್ಯುವಾಗ ಮಾತ್ರ ಮಾಮನಿಗೆ ಮುಟ್ಟಲು ಬಿಡದೇ, ಹುಲಿಯಂತೆ ಅಬ್ಬರಿಸಿ ಹಾರಾಡಿದ್ದಳು. ಕೊನೆಗೆ ಅಪ್ಪನೇ ಬೆಂಕಿಕೊಟ್ಟಿದ್ದರು. ಜಯಾ ಮುಖ ಅಚ್ಚಳಿಯದೇ ನನ್ನ ಎದೆಯಲ್ಲಿ ಉಳಿದುಬಿಟ್ಟಿತ್ತು. ಮೈ ಹೊಡೆದೇಟುಗಳಿಂದ ನೀಲಿಗಟ್ಟಿ ಹೋಗಿತ್ತು, ಅಷ್ಟು ಸಣ್ಣವನಾದ ನನಗೂ ಜಯಾ ಮಾಯದ ನೋವಾಗಿ ಉಳಿದಿರಬೇಕಾದರೆ ಅತ್ತೆ ಅದು ಹೇಗೆ ತಡೆದುಕೊಂಡಿರಬೇಕು.

ಅಮ್ಮ ಅಪ್ಪನೊಂದಿಗೆ ಜಗಳವಾದಾಗೆಲ್ಲಾ ಅತ್ತೆ ಬಗ್ಗೆ ಬೈಯುತ್ತಾಳೆ. “ಹೇಡಿ ನೀವು, ಯಾರೋ ಅಯೋಗ್ಯರು ಬರೆದ ಹೆಸರಿಲ್ಲದ ಪತ್ರಗಳು ಬಂದ ಕೂಡಲೇ, ಓದು ನಿಲ್ಲಿಸಿ ಆ ರಾಕ್ಷಸನಿಗೆ ನಿಮ್ಮ ತಂಗಿಯನ್ನು ಕಟ್ಟಿ ಅವಳ ಜೀವನ ಬಲಿ ತೊಗೊಂಡ್ರಿ, ಅದ್ರ ಹೊಟ್ಟೆಯಲ್ಲಿ ಹುಟ್ಟಿದವಕ್ಕೂ ಗ್ರಹಚಾರ ತಪ್ಪಿಲ್ಲ” ಎನ್ನುತ್ತಾ ಸಂಕಟಪಟ್ಟು ಅಳುತ್ತಾಳೆ.

ಅಪ್ಪ ಸುಮ್ಮನೇ ಹೊರಹೋಗುತ್ತಾರೆ.

ಅಮ್ಮ ಹೇಳಿದ ಮೇಲೆ ತಿಳಿದಿದ್ದು ಇಷ್ಟು, ತುಂಬಾ ಚೆಂದದ ಮಾಧ್ವಿಯತ್ತೆ ಕಾಲೇಜು ಮೆಟ್ಟಿಲು ಹತ್ತಿದ್ದೇ ತಡ ಮನೆಗೆ ಪತ್ರಗಳು ಬರಲಾರಂಭಿಸಿದ್ದವು. ಹಾಸಿಗೆ ಹಿಡಿದಿದ್ದ ಅಜ್ಜ ಅಜ್ಜಿಯದ್ದು ಒಂದೇ ವರಾತ, ಅವಳಿಗೆ ಮದ್ವೆ ಮಾಡಿಬಿಡು ಅಂತ. ಕೊನೆಗೆ ಸುಮಾರು ೨೦ ವರ್ಷ ದೊಡ್ಡವರಾಗಿದ್ದ ಮಾವನಿಗೆ ಅತ್ತೆಯನ್ನು ಮದುವೆ ಮಾಡಿಕೊಟ್ಟಿದ್ದರು ಅಪ್ಪ. ಒಂಚೂರು ಓದು, ನಯನಾಜೂಕಿನ ಗಂಧ ಗಾಳಿಯಿಲ್ಲದ ಗಂಡ, ಮಾತು ಮಾತಿಗೂ ಹುರಿದು ಮುಕ್ಕುತ್ತಿದ್ದ ಅತ್ತೆಯೊಡನೆ ಮೂಕಪಶುವಿನಂತೆ ಜೀವನ ಸಾಗಿಸುತ್ತಿದ್ದ ಮಾಧವಿ ಜಯಾ ಹುಟ್ಟಿದ ಮೇಲೆ ಬದುಕೋ ಪ್ರಯತ್ನ ಒಂದಿಷ್ಟು ಮಾಡಲಾರಂಭಿಸಿದ್ದಳು. ‍ಆದರೆ ಅವಳತ್ತೆ ಮತ್ತು ಗಂಡನಿಗೆ ಅದೂ ಸಮ್ಮತವಿರಲಿಲ್ಲ, ಹೆಣ್ಣು ಮಗುವೆಂದು ಅದನ್ನೂ, ಹೆತ್ತ ಅವಳನ್ನೂ ಬೆಳಗ್ಗೆ ಎದ್ದಾಗಿಂದ ರಾತ್ರಿ ಮಲಗುವವರೆಗೂ ಬೈಗುಳಗಳಲ್ಲೇ ಮುಳುಗೇಳಿಸುತ್ತಿದ್ದರು. ನಂತರ ಹುಟ್ಟಿದ ಸುಧೀ ಜಯಾಳಿಗಿಂತ ಸ್ವಲ್ಪ ಅದೃಷ್ಟವಂತನಾದರೂ ಏಟುಗಳು ಇಬ್ಬರಿಗೂ ಸಮನಾಗಿ ಬೀಳುತ್ತಿದ್ದವು. ಅಮ್ಮ ಇಲ್ಲಿಗೆ ಬಂದಾಗೆಲ್ಲಾ ಆ ಅಜ್ಜಿಗೆ, ಮಾವನಿಗೆ ಸೂಕ್ಷ್ಮವಾಗಿ ಏನಾದರೂ ಹೇಳುವ ಪ್ರಯತ್ನ ಮಾಡುತ್ತಿದ್ದದ್ದು ಇನ್ನೂ ನೆನಪಿದೆ. ಆದರೆ ಅದರಿಂದ ಪರಿಸ್ಥಿತಿ ಇನ್ನೂ ಕೆಡುತ್ತಿತ್ತು ಎಂದು ಅಮ್ಮ ಸುಮ್ಮಗಾಗುತ್ತಿದ್ದಳು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಉರಿವ ರಾತ್ರಿ ಸುರಿದ ಮಳೆ

ಆ ಅಜ್ಜಿಯ ಹತ್ತಿರವಿದ್ದ ಬೆಳ್ಳಿಯ ಎಲೆಯಡಿಕೆಯ ಸಂಚಿಯನ್ನು ತರುವಾಗ ಎತ್ತಿ ಹಾಕಿ ನಜ್ಜುಗುಜ್ಜು ಮಾಡಿದ್ದಾಳೆಂಬುದು ಒಂದು ನೆಪ, ಅದೆಷ್ಟು ಹೊಡೆದರೋ, ಎಲ್ಲಿಗೆ ಏಟು ಬಿತ್ತೋ ಪುಟ್ಟ ಜಯಾ ಉಸಿರಿಲ್ಲದೇ ಮಲಗಿದ್ದಳು. ಕೆರೆಗೆ ಜಾರಿಬಿದ್ದಳು ಅಂದೇನೋ ಹೇಳಿ ಎಲ್ಲರ ಬಾಯಿ ಮುಚ್ಚಿಸಿದ್ದರು ಮಾಮ. ಸುಧೀ ಮಂಕಾಗಿ ಕೂತಿದ್ದ, ಅವನ ಹತ್ತಿರ ಏನು ಮಾತಾಡಬೇಕು ಗೊತ್ತಿಲ್ಲದೇ ನಾನೂ ಸುಮ್ಮನೇ‌ಕೂತಿದ್ದೆ. ಇಲ್ಲಿದ್ದ ಒಂದು ವಾರದಲ್ಲಿ ಅತ್ತೆ ಸುಧೀಯ ಬಳಿ ಒಂದೂ ಮಾತನಾಡಿರಲಿಲ್ಲ ಎಂದು ಮೊದಲು ಗಮನಿಸಿದ್ದು ಅಮ್ಮ, ಸುಧೀಯನ್ನು ಕರೆದುಕೊಂಡು ಬಂದು ಊಟ ಮಾಡಿಸು, ಮಲಗಿಸು ಎಂದು ಹೇಳಿದಾಗೆಲ್ಲಾ ಅತ್ತೆ ಕಿವುಡಾಗಿದ್ದಳು. ಪುಟ್ಟ ಸುಧೀ ಆ ಕಡೆ ತಾಯಿಯೂ ಇಲ್ಲದೇ, ಸದಾ ಬೆನ್ನಿಗಿದ್ದ ಅಕ್ಕನೂ ಇಲ್ಲದೇ ಕಂಗಾಲಾಗಿದ್ದ.

ಹೊರಡುವ ದಿನ “ಮಾಧ್ವಿ, ಇನ್ನೊಂದು ಮಗುವಿದೆ ನಿಂಗೆ, ಸ್ವಲ್ಪ ಗಟ್ಟಿಯಾಗು, ಅದಕ್ಕಾಗಿಯಾದರೂ ಬದುಕಬೇಕಲ್ವೇ” ಎಂದಾಗಲೂ ಅತ್ತೆ ತುಟಿ ಬಿಚ್ಚಿರಲೇ ಇಲ್ಲ.

ಕೊನೆಗೆ ಅಮ್ಮ ಅವನನ್ನು ಕರ್ಕೊಂಡು ಬಂದು ಒಂದಿಷ್ಟು ತಿಂಗಳು ನಮ್ಮೊಟ್ಟಿಗೇ ಇಟ್ಟುಕೊಂಡಿದ್ದೂ ಆಗಿತ್ತು. ವಾಪಾಸು ಬಿಡಲು ಬಂದದ್ದು ಆ ಅಜ್ಜಿ ತೀರಿಕೊಂಡಾಗ. ಅಷ್ಟು ನರಕಯಾತನೆ ಕೊಟ್ಟ ಮುದುಕಿ ಅದೆಷ್ಟು ಆರಾಮಾಗಿ ಸತ್ತು ಹೋದಳು ಎಂದು ಗದ್ದೆ ಕೆಲಸಕ್ಕೆ ಬರುತ್ತಿದ್ದ ಆಳುಗಳು ಹೇಳುತ್ತಿದ್ದದ್ದೂ ನೆನಪಿದೆ. ಆಮೇಲೆ ಅಪ್ಪ ಬಂದೇ ಇಲ್ಲ ಇಲ್ಲಿಗೆ, ಅಮ್ಮ ಮಾತ್ರ ನನ್ನ ಕಟ್ಟಿಕೊಂಡು ಆಗಾಗ ಬರುತ್ತಿದ್ದಳು. ಜಯಾ ಹೋದ ಮೇಲೆ, ಮಾಧ್ವಿಯತ್ತೆ ಮೊದಲಿನ ಹಾಗೆ ಆಗಲೇ ಇಲ್ಲ, ಸುಧೀ ಈ ಕಡೆ ತಂದೆ-ತಾಯಿ ಇದ್ದೂ ಅನಾಥನೇ‌ ಆಗಿ ಹೋದ. ಗೊತ್ತಿದ್ದೋ ಗೊತ್ತಿಲ್ಲದೆಯೇ ಅತ್ತೆ ಎರಡೂ ಮಕ್ಕಳನ್ನೂ ಒಟ್ಟಿಗೆ ಕಳೆದುಕೊಂಡಳೇನೋ ಎಂದು ಅಮ್ಮ ಹೇಳುತ್ತಿದ್ದಳು. ಅವನಿಗೆ ನಾವು ಮೂವರೇ ಪ್ರಪಂಚದಲ್ಲಿದ್ದ ಬಂಧುಗಳು. ಅದೆಷ್ಟೋ ಸಲ ಈ ಮನುಷ್ಯನನ್ನು ಬಿಟ್ಟು ಬಾ ಅಂತಲೋ, ಈ ಮಗುವನ್ನು ನನಗಾದರೋ ಕೊಟ್ಟುಬಿಡು ಅಂತಲೋ ಅಮ್ಮ ಜಗಳವಾಡಿದ್ದೂ ಇದೆ. ಅದ್ಯಾವುದೂ ಅತ್ತೆ ಮಾಡಲಿಲ್ಲ. ಜಯಾ ಹೋದ ಮೇಲೆ ಅತ್ತೆ ಮನೆ ಬಿಟ್ಟು ಎಲ್ಲಿಗೂ ಹೋಗದೆ ಸ್ವಯಂ ಗೃಹಬಂಧನ ಶಿಕ್ಷೆ ಕೊಟ್ಟುಕೊಂಡಿದ್ದಳು. ಎಷ್ಟೇ ಬೈದುಕೊಂಡಾದರೂ ಅಮ್ಮ ನನ್ನನ್ನು ಕರ್ಕೊಂಡು ಬರುವುದನ್ನು ಬಿಡಲಿಲ್ಲ, ಪ್ರತೀಸಲ ಸುಧೀಗೆ ಇಷ್ಟವಾಗುವ ಎಲ್ಲವನ್ನೂ ಹೊತ್ತು ತರುತ್ತಿದ್ದಳು.

ಕಾಲೇಜಿನ ಮೆಟ್ಟಲು ಹತ್ತಿ ಎರಡು ವರ್ಷವಾಗುವಷ್ಟರಲ್ಲಿ ಸುಧೀಗೆ ಕ್ಯಾನ್ಸರ್ ಅಂತೆ ಅಂತ ಅಮ್ಮ ಹೇಳಿದಾಗ ಹುಚ್ಚು ಹಿಡಿದಂತಾಗಿತ್ತು. ಮಹೇಶನೊಟ್ಟಿಗೆ ಅವನೇ ಜಿಲ್ಲಾಸ್ಪತ್ರೆಗೆ ಹೋಗಿ ಬಂದಿದ್ದನಂತೆ, ಏನೂ ಮಾಡಲಾಗಲ್ಲ ಅಂತ ವೈದ್ಯರೂ ಕೈ ಚೆಲ್ಲಿದ್ದರಂತೆ. ಜಯಾ ಮಾಯದ ಗಾಯವಾಗಿ ಉಳಿದು ಹೋಗಿದ್ದಳು, ಈವಾಗ ಮತ್ತೊಂದು ಗಾಯ ಮಾಡಿಕೊಳ್ಳಲು ಹೆದರಿ ಸ್ನೇಹಿತರು, ಕಾಲೇಜು, ಗೇಮು, ಮೊಬೈಲ್ ಅಂತೆಲ್ಲಾ ಮುಳುಗಿ ನನ್ನ ಪ್ರಪಂಚವನ್ನು ಕಿರಿದುಗೊಳಿಸಿಕೊಂಡಿದ್ದೆ. ಇಲ್ಲಿಗೆ ಬರಬೇಕು ಅನಿಸಿರಲಿಲ್ಲ. ಅಮ್ಮ ಅದೆಷ್ಟು ಸಲ ಗೋಗೆರೆದಿದ್ದಳು, ಹೋಗಿ ನೋಡಿ ಬರೋಣ ಬಾರೋ ಅಂತ, ಉಹೂಂ, ಧೈರ್ಯವಾಗುತ್ತಿರಲಿಲ್ಲ. ಈವಾಗ ಹಂಗಾಮಿ ಶಿಕ್ಷಕನಾಗಿ ಓದಿದ ಕಾಲೇಜಿನಲ್ಲೇ ಕೆಲಸಕ್ಕೆ ಸೇರಿಕೊಂಡು, ಕಂಡ ಕಂಡ ವಿದ್ಯಾರ್ಥಿಗಳ ಮುಖದಲ್ಲೆಲ್ಲಾ ಸುಧೀ, ಜಯಾರನ್ನು ಕಾಣುವ ಪ್ರಯತ್ನ ಮಾಡುತ್ತಿದ್ದೆ. ಮಾಧ್ವಿಯತ್ತೆಯ ನೆನಪೂ ಸದಾ ಬರುತ್ತಿತ್ತು. ‍ಕನಿಷ್ಠ ಆರು ಕುಟುಂಬಗಳಿಗೆ ಹಂಚುವಷ್ಟು ನೋವನ್ನು ಮಾಧ್ವಿಯತ್ತೆ ಒಬ್ಬಳಿಗೇ ದೇವರು ಸುರಿದಿದ್ದಾನೆ ಎಂದು ಅಮ್ಮ ಅಲವತ್ತುಕೊಳ್ಳುತ್ತಿದ್ದದ್ದು ನಿಜ ಅನಿಸುತ್ತಿತ್ತು. ಅವಳ ಮೇಲೆ ಯಾಕಿಷ್ಟು ದ್ವೇಷ ವಿಧಿಗೆ? ಅವಳೋ ಆ ವಿಧಿಯ ಮೇಲೆಯೇ ಯುದ್ಧ ಸಾರುತ್ತಾ ಬದುಕುವ ಸೋಗು ಹಾಕುತ್ತಿದ್ದಾಳೆ. ತನ್ನದು ಅಂತ ಉಳಿದ ಒಂದು ಜೀವವನ್ನೂ ಅಪ್ಪಿಕೊಂಡು ಹೇಗೋ ಬದುಕಬಹುದಿತ್ತು. ಅದೂ ಮಾಡ್ತಿಲ್ಲ. ಅಮ್ಮನಿಗೆ ಹೃದಯ ಶಸ್ತ್ರಚಿಕಿತ್ಸೆಯಾದಾಗ ಅವಳು ಕೇಳಿದ್ದು ಒಂದೇ.

“ ನಿಮ್ಮಪ್ಪ ಹೇಡಿ ಬಾಬು, ಅವಳನ್ನು, ಆ ಹುಡುಗನನ್ನ ಎದುರಿಸೋ ಧೈರ್ಯ ಅವರಿಗಿಲ್ಲ, ನೀನಾದ್ರೂ ಸುಧೀನ ಇಲ್ಲಿಗೆ ಕರ್ಕೊಂಡು ಬಾರೋ, ಅವಳು ಮರಗಟ್ಟಿ ಜೀವನ ಲಗಾಡಿ ತೆಗೆದುಕೊಂಡಳು, ಅವನನ್ನ ಇಲ್ಲಿ ಹಾಸ್ಪಿಟಲ್ಲಾಗಾದ್ರೂ ತೋರಿಸೋಣ” ಅಂತ.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಶ್ರಾವಣಾ

ಅಪ್ಪನ, ಅತ್ತೆಯ ಮರಗಟ್ಟುವಿಕೆ ಕಾಯಿಲೆ ನಂಗೂ ಹರಡಿತ್ತು.

ಅಮ್ಮನಿಗೆ ಸ್ವಲ್ಪ ಆರಾಮಾದ ಮೇಲೆ ಕೊಟ್ಟ ಮಾತಿನಂತೆ ಹೊರಟಾಗ ಆಕೆಗೆ ಅದೆಷ್ಟು ಖುಷಿಯಾಗಿತ್ತು. ಅಪ್ಪನೂ ಥ್ಯಾಂಕ್ಸ್ ಅಂತ ಕಣ್ಣಲ್ಲೇ ಹೇಳಿದಂತೆ ಅನಿಸಿತ್ತಲ್ಲಾ? ಕೂತಲ್ಲೇ ಜೋಂಪು ಹತ್ತಿದಂತಾಯ್ತು. ಎಚ್ಚರವಾದಾಗ ಬೆಳಕು ಹರಿದಿತ್ತು. ಎಮರ್ಜೆನ್ಸಿ ಲ್ಯಾಂಪ್ ಈಗ ಉರಿಯುತ್ತಿರಲಿಲ್ಲ, ಅತ್ತೆ ಕಾಣಲಿಲ್ಲ, ಅಡುಗೆ ಮನೆಯಲ್ಲಿರಬೇಕು. ಬಚ್ಚಲ ಹತ್ತಿರ ಓಬಯ್ಯನ ಸ್ವರ ಕೇಳಿತು. ಸುಧೀಗೆ ಬೆಳಗ್ಗಿನ ಕೆಲ್ಸಕ್ಕೆ ಸಹಾಯ ಮಾಡಲು ಬಂದಿರಬೇಕು ಅನಿಸಿತು. ಬಾಣಂತಿ ಕೋಣೆಯಲ್ಲಿದ್ದ ಎಲ್ಲವನ್ನೂ ಕ್ಲೀನ್ ಮಾಡಿಸಿ ಮಂಚ ಹಾಕಿಸಿ, ಪಕ್ಕದಲ್ಲೊಂದು ಮೇಜು, ಸಣ್ಣ ಕಪಾಟು ಎಲ್ಲವನ್ನೂ ಇಡಿಸಿದೆ. ನಾನೇ ಕೂತು ಅವನ, ಗಡ್ಡ, ಕೂದಲು ಕತ್ತರಿಸಿ ಅವನನ್ನು ಸ್ವಲ್ಪ ನೋಡುವ ಹಾಗೆ ಮಾಡಿದೆ. ಮಹೇಶನ ತಮ್ಮ ತಂದ ಬೆಡ್ ಪಾನ್ ಬಳಸಲು ಹೇಳಿ ಕೊಟ್ಟೆ. ಅವನ ಮುಖದಲ್ಲೊಂದು ಕಿರುನಗು. “ಮುಂದಿನ ತಿಂಗಳು ಬರುವಾಗ ಇನ್ನಷ್ಟು ಪುಸ್ತಕ ತನ್ನಿ ಬಾಬಣ್ಣ” ಅಂದ. “ಹೂಂ, ನಾಳೆ ಬೆಳಗ್ಗೆ ಹೊರಡ್ತೀನಿ, ಮುಂದಿನ ಹದಿನೈದು ದಿನದಲ್ಲಿ ಬರ್ತೀನೋ, ಅಲ್ಲಿಯವರೆಗೆ ಸಾಕಲ್ಲ ಇಷ್ಟು? ಆಮೇಲೆ ನಮ್ಮನೆಗೆ ಹೋಗೋಣ ಆಗ್ದಾ?, ಅಲ್ಲಿ ಇಡೀ ಲೈಬ್ರೆರಿ ನಿಂದೇ ”ಅಂದೆ. ಅವನು ಖುಷಿಯಲ್ಲಿ ಚಿಕ್ಕ ಮಗುವಿನಂತೆ ನಕ್ಕ.

ಮರುದಿನ ಬೆಳಗ್ಗೆ ಬೇಗ ಎದ್ದು ಹೊರಟು ಅತ್ತೆ ಕಾಲಿಗೆ ಬಿದ್ದಾಗ ತಲೆಸವರಿದಳು, “ಅತ್ತೆ, ಸುಧೀ ಕಡೆ ಸ್ವಲ್ಪ ಗಮನ ಕೊಡು ಈವಾಗಾದ್ರೂ, ಎಷ್ಟು ದಿನ ಇರುತ್ತಾನೋ ಖುಷಿಯಲ್ಲಿರಲಿ” ಅಂದೆ.

ಏನೂ ಉತ್ತರಿಸದೆ, ಕೈಗೆ ಒಂದು ಬಟ್ಟೆಯ ಚೀಲ ಕೊಟ್ಟಳು, ತೆಗೆದು ನೋಡಿದರೆ ಕಸೂತಿಯ ಹೂವಿನ ಚಿತ್ತಾರಗಳ ಅಂಚಿರುವ ಒಂದು ಡಬಲ್ ಬೆಡ್ ಶೀಟ್ ಮತ್ತು ತಲೆದಿಂಬಿನ ಕವರುಗಳ ಸೆಟ್. ಅವಳ ಮುಖ ನೋಡಿದರೆ ವಿಚಿತ್ರವಾಗಿ ನಕ್ಕಳು.

“ಚೆಂದ ಉಂಟು, ಥ್ಯಾಂಕ್ಸ್ ಅತ್ತೆ” ಎಂದು ನಡುಮನೆಗೆ ಕಡೆ ತಿರುಗಿ “ಮಾಮ ಹೊರಡ್ತೀನಿ” ಎಂದು ಗಟ್ಟಿಯಾಗಿ ಹೇಳಿದರೆ, ಸಿಕ್ಕಿದ್ದು ರಾಮ ನಾಮ ಪಾಯಸಕ್ಕೆ ಹಾಡು. ಮೆಲ್ಲಗೆ ಸುಧೀ ಕೋಣೆಗೆ ಇಣುಕಿ ಹಾಕಿದರೆ, ಸ್ವಚ್ಛವಾದ ಕೋಣೆಯಲ್ಲಿ ಹೂವಿನ ಚಿತ್ತಾರದ ಮಧ್ಯೆ ನೀಟಾಗಿ ಮಲಗಿದ್ದ. ಹತ್ತಿರ ಹೋಗಿ ಕೈ ಸವರಿ ಹೊರಟೆ, ಮುಂದಿನ ಸರ್ತಿ ನೋಡ್ತೀನೋ ಇಲ್ವೋ ಅನಿಸಿ ಗಂಟಲುಬ್ಬಿ ಬಂತು. ಮೇಲಿನವರೆಗೆ ನಡೆದು ಬರುತ್ತಿದ್ದಂತೆ ಪಕ್ಕದಲ್ಲೇ ಜಯಾ ಉದ್ದ ಲಂಗ ತೊಟ್ಟು ಕೆಂಪು ಕೇಪುಳ ಹೂವಿನ ಗೊಂಚಲು ತಿರುಗಿಸುತ್ತಾ ಬಂದಂತೆ ಅನಿಸಿತು. ನಿಂತು ತಿರುಗಿ ನೋಡಿದರೆ, ಗದ್ದೆಯಲ್ಲಿ ಅ‍ವಳೂ, ಸುಧೀಯೂ ಒಬ್ಬರ ಹಿಂದೆ ಒಬ್ಬರು ಓಡುತ್ತಿದ್ದಂತೆ ಅನಿಸಿತು. ಇಬ್ಬರ ಮೈಮೇಲೂ ಹೂವಿನ ಚಿತ್ತಾರವಿರುವ ಅಂಗಿಗಳು, ತಲೆ ಕೊಡಹಿ ನಡೆದೆ. ‍ಬಸ್ಸು ನಿಲ್ಲುವ ತಾಣಕ್ಕೆ ಬಂದರೆ, ಮಹೇಶ ಅಲ್ಲಿಗೆ ಬಂದು ಕಾಯುತ್ತಾ ನಿಂತಿದ್ದ.

“ಬಾಬಣ್ಣ, ಸುಧೀಯಣ್ಣನಿಗಾದ್ರೂ ಬರ್ತಾ ಇರಿ” ಅಂದ. ಹೂಂ ಅಂದೆ.

ಮಂಗಳೂರಿಗೆ ಡೈರೆಕ್ಟ್ ಬಸ್ ಬರಲೇ ಇಲ್ಲ, ಸರಿ ಬೆಳ್ತಂಗಡಿಗೆ ಹೋಗಿ ಅಲ್ಲಿಂದ ಎಕ್ಸ್ಪ್ರೆಸ್ ಹಿಡಿದರಾಯ್ತು ಅಂತ ಸಿಕ್ಕಿದ ಶಟಲ್ ಬಸ್ಸಿಗೆ ಹತ್ತಿ ಕೂತೆ. ಭಾವಗಳು, ನೆನಪುಗಳು ಪದೇ ‍ಪದೇ ಧಾಳಿಯಿಡುತ್ತಿದ್ದವು. ಮರಗಟ್ಟಿದ ಮನಸ್ಸು ಕರಗುತ್ತಿದ್ದಂತೆ ಭಾಸವಾಗುತ್ತಿತ್ತು. ಕಣ್ಣು ಮುಚ್ಚಿ ಕೂತೆ. ಬೆಳ್ತಂಗಡಿಯಲ್ಲಿಳಿದು ಎಕ್ಸ್ಪ್ರೆಸ್ ಬಸ್ಸು ಹತ್ತಿ ಟಿಕೇಟು ತೊಗೊಂಡು ಮೂರು ನಾಲ್ಕು ನಿಮಿಷಗಳಾಗಿರಬೇಕು. ಪಾಕೇಟಿನಲ್ಲಿದ್ದ ಮೊಬೈಲ್ ರಿಂಗಾಯ್ತು. ತೆಗೆದು ನೋಡಿದರೆ, ಮಹೇಶನ ನಂಬರ್. ಕೈ ನಡುಗಲಾರಂಭಿಸಿತು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಮೈ ಲೈಫ್ ಮೈ ಪ್ರಾಬ್ಲಮ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮೈಸೂರು

Book Release: ಮೈಸೂರಿನಲ್ಲಿ ಮೇ 9ರಂದು ಐತಿಚಂಡ ರಮೇಶ ಉತ್ತಪ್ಪ ಅವರ 4 ಪುಸ್ತಕ ಬಿಡುಗಡೆ, ಸಂವಾದ

Book Release: ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

Ithichanda Ramesh Uthappaʼs Four books to be released in Mysore on May 9
Koo

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ, ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶನ ಹಾಗೂ ಮೈಸೂರು ಕಲ್ಚರಲ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ (Ithichanda Ramesh Uthappa) ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮವನ್ನು (Book Release) ನಗರದ ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು ಉದ್ಘಾಟಿಸಲಿದ್ದು, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಹಾಗೂ ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಭಾಗವಹಿಸಲಿದ್ದಾರೆ.

ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ.ಎಸ್. ಸಪ್ನ ಅವರು ಅಧ್ಯಕ್ಷತೆ ವಹಿಸಲಿದ್ದು, ವಿಶೇಷ ಅತಿಥಿಗಳಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ ಹಾಜರಿರಲಿದ್ದಾರೆ.

ಇದನ್ನೂ ಓದಿ | ರಾಜಮಾರ್ಗ ಅಂಕಣ: ಶೇಕ್ಸ್‌ಪಿಯರ್‌ ನೆನಪಿನಲ್ಲಿ ಓದುವ ಸುಖ ನೆನಪಿಸಿಕೊಳ್ಳುವ ಹೊತ್ತು

ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ಕೆ.ಪುಟ್ಟಸ್ವಾಮಿ, ಸಹ ಪ್ರಾಧ್ಯಾಪಕರಾದ ಪ್ರೊ. ಎನ್. ಮಮತ, ಪುಸ್ತಕಗಳ ಲೇಖಕರಾದ ಐತಿಚಂಡ ರಮೇಶ್ ಉತ್ತಪ್ಪ, ಪ್ರಕಾಶಕ ಚೇತನ್ ಕಣಬೂರು, ಮೈಸೂರು ಕಲ್ಬರಲ್ ಅಸೋಸಿಯೇಷನ್‌ನ ಎ.ಪಿ.ನಾಗೇಶ್ ಉಪಸ್ಥಿತರಿರಲಿದ್ದಾರೆ.

ಬಿಡುಗಡೆಯಾಗಲಿರುವ ಕೃತಿಗಳು

  • ಕಾಡು ಹೇಳಿದ ಕಥೆ: ವೈಲ್ಡ್‌ ಲೈಫ್ ರಿಪೋರ್ಟಿಂಗ್
  • ಹಾವು: ನಂಬಿಕೆ ಹಾಗೂ ಮನೋವೈಜ್ಞಾನಿಕ ವಿಶ್ಲೇಷಣೆ
  • ಆನೆ: ಬದಲಾದ ವರ್ತನೆ
  • ಅರ್ಜುನ ನಿನ್ನ ಮರೆಯಲೆಂತು ನಾ..!
Continue Reading

ಅಂಕಣ

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

ಧವಳ ಧಾರಿಣಿ ಅಂಕಣ: ಕಾಮವೆನ್ನುವುದು ಎಂತಹವರನ್ನೂ ತಲೆಕೆಡಿಸಿಬಿಡುತ್ತದೆ. ಕಾಮದ ಹುಚ್ಚಿನಲ್ಲಿರುವ ದಶರಥ ತನ್ನ ಸುಖಕ್ಕಾಗಿ ಏನನ್ನು ಮಾಡಲೂ ಹೇಸದ ಸ್ಥಿತಿಗೆ ತಲುಪಿದ್ದಾನೆ. ವಧಾರ್ಹನಲ್ಲದವನನ್ನು ವಧಿಸಲೇ, ಮರಣದಂಡನೆಗೆ ಗುರಿಯಾದವನನ್ನು ಬಿಡಿಸಲೇ, ದರಿದ್ರನನ್ನು ಶ್ರೀಮಂತನನ್ನಾಗಿ ಮಾಡಲೇ, ಶ್ರೀಮಂತನನ್ನು ದರಿದ್ರನನ್ನಾಗಿ ಮಾಡಲೇ; ನಿನ್ನ ಪ್ರೀತಿಗಾಗಿ ಏನನ್ನೂ ಮಾಡಲೂ ತಾನು ಸಿದ್ಧ ಎನ್ನುತ್ತಾನೆ.

VISTARANEWS.COM


on

king dasharatha kaikeyi dhavala dharini column
Koo

ಪ್ರಾಣಕ್ಕಿಂತ ಪ್ರಿಯಳಾದ ಸತಿಯಿಂದ ಪ್ರಾಪ್ತವಾದ ಪುತ್ರ ವಿಯೋಗ

dhavala dharini by Narayana yaji

ಧವಳ ಧಾರಿಣಿ ಅಂಕಣ: ಸ ಕೈಕೇಯ್ಯಾ ಗೃಹಂ ಶ್ರೇಷ್ಠಂ ಪ್ರವಿವೇಶ ಮಹಾಯಶಾಃ
ಪಾಣ್ಡುರಾಭ್ರಮಿವಾಕಾಶಂ ರಾಹುಯುಕ್ತಂ ನಿಶಾಕರಃ ৷৷ಅ.ಯೋ.10.11৷৷

ಬಿಳಿಯದಾದ ಮೋಡಗಳಿಂದ ಕೂಡಿದ ಆಕಾಶದಲ್ಲಿ ರಾಹುವಿಗೆ ಗ್ರಾಸವಾಗುವ ಸಲುವಾಗಿ ಚಂದ್ರನು ಪ್ರವೇಶಿಸುವಂತೆ ಮಹಾಯಶೋವಂತನಾದ ರಾಜನು ಭವ್ಯವಾದ ಕೈಕೇಯಿಯ ಅಂತಃಪುರವನ್ನು ಪ್ರವೇಶಿಸಿದನು.

ಕವಿಸಮಯವೆನ್ನುವದು ರಾಮಾಯಣ ಕಾವ್ಯದ ವಿಶೇಷ. ವಾಲ್ಮೀಕಿ ಕಾವ್ಯವನ್ನು ಕೇವಲ ಉಅಪದೇಶಕ್ಕಾಗಿಯಲ್ಲ, ಅದನ್ನು ತಾಳವಾದ್ಯಗಳೊಂದಿಗೆ ರಾಗವಾಗಿ ಹಾಡಲು ಅನುಕೂಲವಾಗುವಂತೆ ಬರೆದಿದ್ದಾನೆ. ಹಾಡುಗಾರಿಕೆಯಲ್ಲಿ ವರ್ಣನೆಗೆ ಮಹತ್ವ ಬರುತ್ತದೆ. ಕಾವ್ಯದ ಮುಂಗಾಣ್ಕೆ ಅಲ್ಲಲ್ಲಿ ವ್ಯಕ್ತವಾಗುತ್ತಾ ಹೋಗುತ್ತದೆ. ಕೈಕೇಯಿಯ ಅರಮನೆಗೆ ಹೋಗುವ ರಾಜನ ಕುರಿತು ವರ್ಣಿಸುವಾಗ ಬಿಳಿಯದಾದ ಮೋಡ, ರಾಹು, ಆಕಾಶ, ಚಂದ್ರ ಎನ್ನುವ ಉಪಮೆಗಳ ಮೂಲಕ ಹೇಳಿದ್ದಾನೆ. ಆಕಾಶ ಎನ್ನುವುದು ಮನಸ್ಸಿನಲ್ಲಿ ಆಸೆಗಳ ವಿಸ್ತಾರದವನ್ನು ಸೂಚಿಸಿದೆ. ಬಿಳಿಯದಾದ ಮೋಡವೆನ್ನುವದು ಅರ್ಥಪೂರ್ಣವಾದ ಉಪಮೆ. ನೀರಿನಿಂದ ಯುಕ್ತವಾದ ಮೋಡ ಕಪ್ಪಾಗಿರುತ್ತದೆ. ಮನಸ್ಸಿನಲ್ಲಿ ತನ್ನ ಮಗನ ಪಟ್ಟಾಭಿಷೇಕದ ಕುರಿತು ಯಾವ ಆಸೆಯನ್ನೇ ಇರಿಸಿಕೊಳ್ಳಲಿ, ಅದೆಲ್ಲವೂ ನೀರಿಲ್ಲದ ಮೋಡದಂತೆ ವ್ಯರ್ಥವಾಗಿ ಹಾರಿಹೋಗುತ್ತದೆ ಎನ್ನುವುದನ್ನು ಹೇಳುತ್ತಾನೆ. ರಾಹು ಮತ್ತು ಕೇತುಗಳು ಭಾರತೀಯ ಖಗೋಳಶಸ್ತ್ರದ ಪ್ರಕಾರ ಎರಡು ವಿರುದ್ಧದಿಕ್ಕುಗಳಲ್ಲಿರುವ ಬಿಂದುಗಳು. ಈ ಬಿಂದುವಿಗೆ ಸೂರ್ಯಚಂದರು ಬಂದಾಗ ಗ್ರಹಣವಾಗುತ್ತದೆ. ಚಂದ್ರ ಮನಸ್ಸಿನ ಕಾರಕ. ಸಂತೊಷ ಮತ್ತು ಕಾಮವಿಕಾರಗಳು ಮನಸ್ಸಿನಲ್ಲಿ ಉತ್ಪನ್ನವಾಗುವಂತವು. ಚಂದ್ರ ತನ್ನ ಪರಿಭ್ರಮಣದಲ್ಲಿ ರಾಹುವಿನ ಬಿಂದುವಿಗೆ ಬಂದಾಗ ಗ್ರಹಣವಾಗಿ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತಾನೋ ಅದೇರಿತಿ ರಾಜ ತನ್ನೆಲ್ಲ ಕನಸನ್ನು ಕಳೆದುಕೊಂಡು ನಿಶ್ಚಿತವಾಗಿ ಮರಣದತ್ತ ಸಾಗಲು ಬಂದಿದ್ದಾನೆ ಎನ್ನುವುದನ್ನು ಉಪಮಾಮಲಂಕಾರದಲ್ಲಿ ಕವಿ ವರ್ಣಿಸಿದ್ದಾನೆ.

ದಶರಥನ ಪಾತ್ರವನ್ನು ವಿವೇಚಿಸುವಾಗ ಮೊದಲಿನಿಂದಲೂ ಕಂಡುಬಂದ ಅಂಶವೆಂದರೆ ಮಹಾನ್ ರಾಜರ್ಶಿಯಾಗಿದ್ದ ದೊರೆ ರಾಮನ ಕುರಿತು ಕಡುಲೋಭಿಯಾಗಿ ಪರಿವರ್ತನೆಯಾಗಿರುವುದನ್ನು ಗಮನಿಸಬಹುದು. ದಶರಥನ ವ್ಯಕ್ತಿತ್ವವೆನ್ನುವುದು ಸಂಕೀರ್ಣವೇನೂ ಅಲ್ಲ. ಶೂರನಾಗಿದ್ದ; ಸೂರ್ಯವಂಶದ ಧ್ಯೇಯೋದ್ಧಶವಾದ ಧರ್ಮಸ್ಥಾಪನೆಯ ವಿಷಯದಲ್ಲಿ ಸದಾ ನಿರತನಾಗಿದ್ದ. ಅದೇ ಕಾಲಕ್ಕೆ ಅಯೋಧ್ಯೆಯ ಸಿಂಹಾಸನವೆನ್ನುವುದು ಗಣತಂತ್ರವ್ಯವಸ್ಥೆಯಲ್ಲಿ ಇತ್ತು. ರಾಜರಾಗುವವರು ಯಾರೇ ಆದರೂ ಅದಕ್ಕೆ ಪ್ರಜೆಗಳ ಒಪ್ಪಿಗೆ ಪಡೆಯಬೇಕಾಗಿತ್ತು. ಪ್ರಾಚೀನ ಗ್ರೀಸಿನಲ್ಲಿದ್ದ ರೀತಿಯ ಗಣತಂತ್ರವ್ಯವಸ್ಥೆ ಅಯೋಧ್ಯೆಯಲ್ಲಿ ಇತ್ತು ಎನ್ನುವುದಕ್ಕೆ ವಾಲ್ಮೀಕಿಯ ರಾಮಾಯಣವನ್ನು ಮತ್ತು ಮತ್ತು ಪ್ಲೇಟೋವಿನ “The Republic” ಕೃತಿಯನ್ನು ತುಲನೆ ಮಾಡಿದಾಗ ಅನಿಸುತ್ತದೆ. ಅದನ್ನು ಕೇವಲ ತೋರಿಕೆಗಾಗಿ ಆಚರಣೆಯಲ್ಲಿ ಇಟ್ಟು ತನಗೆ ಬೇಕಾದಂತೆ ಉತ್ತರಾಧಿಕಾರಿಯನ್ನು ಆರಿಸುವ ತಂತ್ರವನ್ನು ದಶರಥ ಅನುಸರಿಸಿರುವುದು ರಾಮನಿಗೆ ಪಟ್ಟಗಟ್ಟಬೇಕೆನ್ನುವ ಸಂದರ್ಭದಲ್ಲಿ ಕಾಣಬಹುದು. ಆತನ ಚಾಣಾಕ್ಷನಡೆಯ ಒಳಗಿರುವದು ತನ್ನದು ಎನ್ನುವ ಮೋಹದ ಅರಿವು ಎನ್ನುವುದು ಯಾರ ಗಮನಕ್ಕೂ, ಹೆಚ್ಚೇನು ರಾಮನ ಅರಿವಿಗೂ ಬಾರದ ಹಾಗೆ ನಡೆದುಕೊಂಡಿದ್ದಾನೆ. ಪರಿಪೂರ್ಣ ವ್ಯಕ್ತಿತ್ವದ ರಾಮನಂತಹ ದೊರೆ ತಮಗೆ ಸಿಗುತ್ತಾನೆ ಎನ್ನುವ ಕಾರಣಕ್ಕೆ ಪ್ರಜೆಗಳು ಸಂಭ್ರಮಿಸುವುದು ಸಹಜವೇ ಆಗಿದೆ. ತಾನು ಅಶ್ವಪತಿಗೆ ಕೊಟ್ಟ ಮಾತುಗಳು ಹೀಗೆ ಮರೆಯಾದ ಕಾರಣ ಅದು ದೊರೆಗೆ ಅಪರಿಮಿತ ಸಂತೋಷವನ್ನು ಕೊಟ್ಟಿದೆ. ಇಳಿವಯಸ್ಸಿನಲ್ಲಿ ಕಿರಿಯ ಚಲುವೆಯಾದ ಕೈಕೇಯಿಯ ಹಿಂದೆ ಬಿದ್ದಿದ್ದ ದೊರೆಗೆ ವೃದ್ದಾಪ್ಯದಲ್ಲಿ ಮಕ್ಕಳಾದ ಮೇಲೆ ರಾಮ ಎನ್ನುವ ಕುರುಡು ಮೋಹ ಆವರಿಸಿಕೊಂಡಿತ್ತು. ಆತನ ಕುರಿತು ಮಂಥರೆ ಹೇಳುವ ಮಾತು

ಧರ್ಮವಾದೀ ಶಠೋ ಭರ್ತಾ ಶ್ಲಕ್ಷ್ಣವಾದೀ ಚ ದಾರುಣಃ
ಶುದ್ಧಭಾವೇ ನ ಜಾನೀಷೇ ತೇನೈವ ಮತಿಸಂಧಿತಾ৷৷ಬಾ.ಕಾಂ.7.24৷৷

ನಿನ್ನ ಗಂಡನು ಮೇಲೆಮೇಲೆ ಧರ್ಮಸಮ್ಮತವಾದ ಮಾತುಗಳನ್ನು ಆಡುತ್ತಿದ್ದರೂ ಅಂತರಂಗದಲ್ಲಿ ಬಹಳ ಕಪಟಸ್ವಭಾವದವನು. ಬಾಯಲ್ಲಿ ಮೃದುವಾದ ಮಾತುಗಳನ್ನು ಆಡುತ್ತಿದ್ದರೂ ನಂಬಿಸಿ ಮೋಸಮಾಡುವುದು ಹೇಗೆಂದು ಯೋಚಿಸುತ್ತಿರುತ್ತಾನೆ. ಕರುಣೆಯೆನ್ನುವುದೇ ಇಲ್ಲ, ಬಹಳ ಋಜುಸ್ವಭಾವದವಳಾದ ನೀನು ಆತನ ಕಪಟವನ್ನು ಅರಿಯದೇ ಹೋದೆಯಲ್ಲವೇ.

ಮಂಥರೆ ಇಲ್ಲಿ ಕೈಕೇಯಿಯ ಮನಸ್ಸನ್ನು ತಿರುಗಿಸಲು ಹೇಳಿರುವಳಾದರೂ ಪಾಯಸವನ್ನು ತನ್ನ ರಾಣಿಯರಿಗೆ ಹಂಚುವಲ್ಲಿಂದ ಹಿಡಿದು ರಾಮಪಟ್ಟಾಭಿಷೇಕದ ವರೆಗೆ ದಶರಥ ಏಕಪಕ್ಷೀಯವಾಗಿ ತೆಗೆದುಕೊಂಡ ತೀರ್ಮಾನವನ್ನು ಗಮನಿಸಿದಾಗ ನಮ್ಮ ದೌರ್ಬಲ್ಯ ಶತ್ರುಗಳಿಗೆ ಆಯುಧ ಎನ್ನುವ ನೀತಿಶಾಸ್ತ್ರದ ಮಾತನ್ನು ನೆನಪಿಸುತ್ತದೆ. ಅಂತೂ ತನ್ನ ಕಾರ್ಯವಾದ ರಾಮನ ಪಟ್ಟಾಭಿಷೇಕದ ವಿಷಯದಲ್ಲಿ ಯಾವ ತೊಂದರೆಯಿಲ್ಲದೇ ಸಾಂಗವಾಗಿ ನಡೆಯುವುದು ಎನ್ನುವ ನಂಬಿಕೆಯೊಂದಿಗೆ ಸಂತೊಷವೆನ್ನುವುದು ಅತಿರೇಕಕ್ಕೆ ಹೋಗಿತ್ತು. ಸಂತೋಷ ಅತಿರೇಕಕ್ಕೆ ಹೋದಾಗ ಅದು ಮದಕ್ಕೆ ತಿರುಗುತ್ತದೆ. ಮದವೆನ್ನುವುದು ಕಾಮಕ್ಕೆ ಮೂಲ. ಅದನ್ನು ಇಳಿಸಿಕೊಳ್ಳಲು ಸಂಗಾತಿಯನ್ನು ಹುಡಿಕಿಕೊಳ್ಳುವುದು ಜೀವಿಗಳ ಸಹಜ ಕ್ರಿಯೆ. ಅರಸನಿಗೆ ತನ್ನ ಆಲೋಚನೆಯನ್ನು ಹಂಚಿಕೊಳ್ಳುವ ಸಂಗಾತಿಯ ಅಗತ್ಯ ತುರ್ತಾಗಿ ಎದುರಾಯಿತು. ವಶಿಷ್ಠರಲ್ಲಿಯಾಗಲಿ, ವಾಮದೇವರಲ್ಲಿಯಾಗಲಿ ಇದನ್ನೆಲ್ಲವನ್ನು ಹಂಚಿಕೊಳ್ಳಲು ಅವರೇನು ಸಾಮಾನ್ಯದವರಾಗಿರಲಿಲ್ಲ.

ರಾಮ ಯುವರಾಜ ಪಟ್ಟಕ್ಕೆ ಅರ್ಹನಾಗಿದ್ದರೂ, ಅಯೋಧ್ಯೆಯಲ್ಲಿ ಆ ಸಾಯಂಕಾಲ ನಡೆದ ಸಿದ್ಧತೆ ದಶರಥನ ವೈಯಕ್ತಿಕ ಕಾಮನೆಯ ಫಲವಾಗಿತ್ತು. ಪ್ರಜೆಗಳು ರಾಮನನ್ನು ರಾಜನ್ನಾಗಿ ನೋಡಲು ಬಯಸಿದ್ದರೆನ್ನುವುದು ನಿಜವಾದರೂ ಇಲ್ಲಿಮೊದಲ ಸಾರಿ ರಾಮನ ಪಟ್ಟಾಭಿಷೇಕಕ್ಕಾಗಿ ದಶರಥ ಹೇಗೆಲ್ಲಾ ಮಂಡಿಗೆಯನ್ನು ಹಾಕಿದ್ದ ಎನುವುದನ್ನು ಹಿಂದಿನ ಭಾಗಗಳಲ್ಲಿ ನೋಡಿದ್ದೇವೆ. ರಾಮನನ್ನು ಕೇವಲ ಮಗನಾಗಿ ಮಾತ್ರ ನೋಡಿದ್ದಾನೆಯೇ ಹೊರತು ವಿಶ್ವಾಮಿತ್ರ, ವಶಿಷ್ಠರು, ಪರಶುರಾಮ ಮೊದಲಾದವರಿಗೆ ರಾಮನ ಅವತಾರದ ಹಿಂದಿರುವ ದೈವತ್ವದ ದರ್ಶನ ಅರಸನಿಗೆ ಸಾಯುವವರೆಗೂ ಆಗಲೇ ಇಲ್ಲ. ರಾಮನಿಗೆ ಪಟ್ಟಗಟ್ಟುವ ತನ್ನ ಮನಸ್ಸಿನ ಮಂಡಿಗೆ ಯಶಸ್ವಿಯಾದ ವಿಷಯವನ್ನು ವಿವರವಾಗಿ ವರ್ಣಿಸಿ ಹೇಳಲು ಕಿರಿಯ ರಾಣಿಯಷ್ಟು ಆಪ್ತರು ಬೇರೆ ಯಾರೂ ಇಲ್ಲ. ಕೌಸಲ್ಯೆಗೆ ಹೇಳಿದರೆ ಆಕೆಗೆ ಸಂತೋಷವೇನೋ ಆಗಬಹುದಾದರೂ ಆಕೆಯಲ್ಲಿ ಕಾಮದ ಆಕರ್ಷಣೆ ದೊರೆಗೆ ಬತ್ತಿಹೋಗಿತ್ತು. ಸುಮಿತ್ರೆಯೂ ಅಷ್ಟೇ. ಚಿಕ್ಕವಯಸ್ಸಿನ ಕೈಕೆಯಿಯನ್ನು ಚೆನ್ನಾಗಿ ಮರಳುಮಾಡಿ ಇಟ್ಟುಕೊಂಡಿದ್ದ. ತನಗೆ ಬೇಕಾದ ಹಾಗೆ ಸುಖವನ್ನು ಅವಳಿಂದ ಪಡೆಯುತ್ತಿದ್ದ. ಆಕೆ ರಾಜನಿಗೋಸ್ಕರ ಅಲಂಕರಿಸಿಕೊಂಡು ನಗುಮುಖದಿಂದ ಯಾವತ್ತಿಗೂ ಸ್ವಾಗತಿಸಲು ಸಿದ್ಧಳಾಗಿರುತ್ತಿದ್ದಳು. ಕೈಕೇಯಿ ಮಂಥರೆಯ ಮಾತಿನಿಂದ ಪ್ರಭಾವಿತಳಾಗಿ ರಾಜನನ್ನು ಮಣಿಸಲೇ ಬೇಕೆಂದು ಕೋಪಾಗಾರವನ್ನು ಸೇರಿದರೆ ಇಳಿವಯಸ್ಸಿನ ರಾಜ “ರಾಮಾಭಿಷೇಕದ ಸಂತೋಷದ ವಾರ್ತೆಯನ್ನು ಕೈಕೇಯಿಗೆ ತಿಳಿಸಿ ರತಿಸುಖವನ್ನು ಪಡೆಯಬೇಕೆಂದು ಬಯಸಿ ಅತ್ಯಾಸೆಯಿಂದ ಕೈಕೇಯಿಯ ಅಂತಃಪುರಕ್ಕೆ ಧಾವಿಸಿ ಬರುತ್ತಾನೆ”.

ಕೈಕೇಯಿ ಅಂತಃಪುರದಲ್ಲಿ ಇಲ್ಲವಾಗಿರುವುದನ್ನು ಕಂಡವನಿಗೆ ವ್ಯಾಕುಲವಾಯಿತು. ಪ್ರತಿಹಾರಿ ಹೇಳಿದ “ದೇವ ದೇವಿ ಬೃಶಂ ಕ್ರುದ್ಧಾ ಕ್ರೋಧಾಗಾರಮಭಿದ್ರುತಾ-ಪರಮ ಕ್ರುದ್ಧೆಯಾಗಿ ದೇವಿ ಕೋಪಾಗಾರವನ್ನು ಸೇರಿದ್ದಾಳೆ” ಎನ್ನುವ ಮಾತನ್ನು ಕೇಳಿ ಕಂಗಾಲಾದ. ಕೋಪಾಗಾರಕ್ಕೆ ಧಾವಿಸಿ ನೋಡಿದರೆ ತನ್ನ ಪ್ರೇಯಸಿ ಅಸ್ತವ್ಯಸ್ತವಾಗಿ ನೆಲದ ಮೇಲೆ ಮಲಗಿದ್ದಾಳೆ. ಪ್ರಿಯತಮೆಯನ್ನು ಆಕಾಶದಿಂದ ಚ್ಯುತಳಾದ ಅಪ್ಸರೆಯಂತೆ ಕಂಡವನಿಗೆ ಎದೆಯೊಡೆದು ಹೋಯಿತು. “ನಿಷ್ಕಳಂಕನಾದ ದಶರಥ ಪಾಪಸಂಕಲ್ಪವನ್ನು ಹೊತ್ತ ಕೈಕೇಯಿಯನ್ನು ಕಂಡ” ಎನ್ನುವ ಮಾತು ಇಲ್ಲಿ ಬರುತ್ತದೆ. ಸಂಕಲ್ಪವೆನ್ನುವುದು ಹೊಸ ಕಾರ್ಯಕ್ಕೆ ಹೇತು. ಮುಂದಿನ ಘಟನೆಗೆ ಇಲ್ಲಿ ನಾಂದಿಯಾಗುತ್ತಿದೆ. ಧರ್ಮಮಾರ್ಗದಲ್ಲಿ ಸದಾ ನಡೆಯುತ್ತಿದ್ದ ಅರಸ ಕಾಮಮೋಹಿತನಾಗಿ ಕೈಕೇಯಿಯನ್ನು ಸಮಾಧಾನ ಮಾಡಲು ಹೇಳುವ ಮಾತುಗಳು ಸೂರ್ಯವಂಶಕ್ಕೆ ಹೇಳಿಸಿದ್ದಲ್ಲ.

ಅವಧ್ಯೋ ವಧ್ಯತಾಂ ಕೋ ವಾ ವಧ್ಯಃ ಕೋವಾ ವಿಮುಚ್ಯತಾಮ್.
ದರಿದ್ರಃ ಕೋ ಭವದಾಢ್ಯೋ ದ್ರವ್ಯವಾನ್ಕೋSಪ್ಯಕಿಂಚನಃ৷৷ಅ. ಕಾಂ.10.33৷৷

ಕಾಮವೆನ್ನುವುದು ಎಂತವರನ್ನೂ ತಲೆಕೆಡಿಸಿಬಿಡುತ್ತದೆ. ಕಾಮದ ಹುಚ್ಚಿನಲ್ಲಿರುವ ದಶರಥ ತನ್ನ ಸುಖಕ್ಕಾಗಿ ಏನನ್ನು ಮಾಡಲೂ ಹೇಸದ ಸ್ಥಿತಿಗೆ ತಲುಪಿದ್ದಾನೆ. ವಧಾರ್ಹನಲ್ಲದವನನ್ನು ವಧಿಸಲೇ, ಮರಣದಂಡನೆಗೆ ಗುರಿಯಾದವನನ್ನು ಬಿಡಿಸಲೇ, ದರಿದ್ರನನ್ನು ಶ್ರೀಮಂತನನ್ನಾಗಿ ಮಾಡಲೇ, ಶ್ರೀಮಂತನನ್ನು ದರಿದ್ರನನ್ನಾಗಿ ಮಾಡಲೇ; ನಿನ್ನ ಪ್ರೀತಿಗಾಗಿ ಏನನ್ನೂ ಮಾಡಲೂ ತಾನು ಸಿದ್ಧ ಎನ್ನುವ ಮಾತುಗಳು ದೊರೆತನಕ್ಕೆ ತಕ್ಕುದಲ್ಲ. ಆತ ಅವಳನ್ನು ಸಮಾಧಾನಿಸುತ್ತಾ “ಪ್ರಿಯತಮೆಯಲ್ಲಿ ನನಗೆ ನಿನಗಿಂತ- ಮನುಜರಲ್ಲಿ ರಾಮನಿಗಿಂತ ಹೆಚ್ಚಿನವರು ಯಾರೂ ಇಲ್ಲ” ಎನ್ನುವಲ್ಲಿ ರಾಮನ ಹೆಸರನ್ನು ಕೇಳಿದ ಆಕೆಗೆ ಮತ್ತುಷ್ಟು ಉರಿ ಹತ್ತಿತು. ದೊರೆ ಮನ್ಮಥನ ಬಾಣಕ್ಕೆ ಈಡಾಗಿರುವುದನ್ನು ಪಕ್ಕಾ ಮಾಡಿಕೊಂಡಳು. ಸ್ವಲ್ಪ ಹೊತ್ತು ಕಾಡಿಸಬೇಕು ಎಂದು ಸುಮ್ಮನಾದವಳು. ದಶರಥನಿಗೆ ಸಹಿಸಲಾಗಿಲ್ಲ. ಆಕೆಯ ರೂಪಲಾವಣ್ಯಕ್ಕೆ ಸೋತಿದ್ದ. ಅವಳ ನೋವನ್ನು ಬಗೆಹರಿಸುವುದು ತನ್ನ ಆದ್ಯ ಕರ್ತವ್ಯವೆಂದು ಬಗೆದ.. ಅದು ತನಕ ತಾನು ಗಳಿಸಿದ ಸುಕೃತದ ಮೇಲೆ ಆಣೆಯಿಟ್ಟು ಅವಳ ಬಯಕೆಯನ್ನು ಈಡೇರಿಸುವೆ ಎಂದು ಅಂಗಲಾಚಿದ.

dhavala dharini king dasharatha

ಆದರೂ ಸುಮ್ಮನಿದ್ದ ಕೈಕೇಯಿಗೆ ಕೊನೆಯದಾಗಿ “ನನ್ನ ರಾಮನಾಣೆಗೂ ನೀನು ಹೇಳುವ ಕಾರ್ಯವನ್ನು ಮಾಡುತ್ತೇನೆ” ಎಂದು ಪ್ರತಿಜ್ಞೆ ಮಾಡಿಬಿಟ್ಟ. ಗಾಳದಲ್ಲಿ ಚಿಕ್ಕಮೀನನ್ನು ಚುಚ್ಚಿ ದೊಡ್ಡಮೀನನ್ನು ಸೆಳೆಯುವಂತೆ ಚಕ್ರವರ್ತಿಯನ್ನು ಮಟ್ಟುಹಾಕಿ ತನ್ನ ಕಾರ್ಯಸಾಧಿಸಲು ಇದೇ ಸಮಯವೆಂದು ತಿಳಿದ ಕೈಕೇಯಿ ಬಯಕೆಯನ್ನು ಹೇಳುವ ಮುನ್ನ ರಾಜನಲ್ಲಿನ ಧರ್ಮಪ್ರಜ್ಞೆಯನ್ನು ಜಾಗ್ರತಗೊಳಿಸಲು “ನೀನು ಮಾಡಿದ ಈ ಪ್ರತಿಜ್ಞೆಯನ್ನು ಮೂವತ್ತುಮೂರು ಕೋಟಿ ದೇವತೆಗಳು ಕೇಳಲಿ, ಚಂದ್ರಸೂರ್ಯರೂ ಕೇಳಲಿ, ಆಕಾಶವೂ ಇದಕ್ಕೆ ಸಾಕ್ಷಿಯಾಗಲಿ, ನವಗ್ರಹಗಳು, ಹಗಲು-ರಾತ್ರಿಗಳು, ಎಂಟುದಿಕ್ಕುಗಳು,ಗಂಧರ್ವರಾಕ್ಷಸರನ್ನೊಳಗೊಂಡಿರುವ ಸ್ವರ್ಗ-ಮರ್ತ್ಯ-ಪಾತಾಳ, ನಿಶಾಚರರೂ, ಪಿಶಾಚಗಳೂ, ಭೂತಗಣಗಳೂ, ಗೃಹದೇವತೆಗಳೂ ಸಹಿತ ಎಲ್ಲರೂ ನೀನು ಹೇಳಿದ ಈ ಪ್ರತಿಜ್ಞಾವಾಕ್ಯಕ್ಕೆ ಸಾಕ್ಷಿಗಳಾಗಲಿ” ಎಂದವಳೇ ಆತನನ್ನು ಸಂಪೂರ್ಣವಾಗಿ ಖೆಡ್ಡಾಕ್ಕೆ ತೋಡುವ ಈ ಮಾತನ್ನು ಆಡುತ್ತಾಳೆ.

ಸತ್ಯಸಂಧೋ ಮಹಾತೇಜಾಃ ಧರ್ಮಜ್ಞಃ ಸುಸಮಾಹಿತಾಃ.
ವರಂ ಮಮ ದದಾತ್ಯೇಷಃ ತನ್ಮೇ ಶ್ರೃಣ್ವನ್ತು ದೈವತಾಃ৷৷ಅಯೋ.11.16৷৷

ಎಲೈ ದೇವತೆಗಳಿರಾ! ನೀವೆಲ್ಲರೂ ಕೇಳಿರಿ. ಸತ್ಯಸಂಧನಾದ ಮಹಾತೇಜಸ್ವಿಯಾದ, ಧರ್ಮಜ್ಞನಾದ ಧಶರಥನು ಸಮಾಧಾನಚಿತ್ತನಾಗಿ ತಾನು ಪ್ರತಿಜ್ಞೆ ಮಾಡಿರುವಂತೆ ನನಗೆ ವರವನ್ನು ದಯಪಾಲಿಸಲಿದ್ದಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಕವಿಗೆ ಕಾಡಿದ ಮೂರು ಚಿಂತೆಗಳು

ವ್ಯಾಧನ ಧ್ವನಿಯಿಂದ ಆಕರ್ಷಿತಳಾಗಿ ಬಲೆಗೆ ಬೀಳುವ ಜಿಂಕೆಯಂತೆ ರಾಜನು ತನ್ನ ವಿನಾಶಕ್ಕಾಗಿ ಧರ್ಮಪಾಶವನ್ನು ಕುತ್ತಿಗೆಗೆ ಬಿಗಿದುಕೊಂಡಿದ್ದು ಹೀಗೆ. ಅವನಿಗೆ ಮುಂದೆ ಮಾತಾಡಲು ಅವಕಾಶಕೊಡದಂತೆ ಆತನನ್ನು ಬಿಗಿದಪ್ಪಿ ತನಗೆ ಹಿಂದೆ ಕೊಟ್ಟಿದ್ದ ವರಗಳನ್ನು ಅಪೇಕ್ಷಿಸಿ ಅದಕ್ಕೆ ರಾಜ ಬೇರೆ ಏನನ್ನಾದರೂ ಹೇಳಬಾರದೆಂದು, “ರಾಮನಿಗೆ ಪಟ್ಟಾಭಿಷೇಕಕ್ಕೆ ಯಾವೆಲ್ಲಾ ಸಿದ್ಧತೆಗಳಾಗಿವೆಯೋ ಅದೇ ಸಾಂಬಾರಪದಾರ್ಥಗಳಿಂದ ಭರತನಿಗೆ ಪಟ್ಟಾಭಿಷೇಕವಾಗಬೇಕು. ಎರಡನೇಯ ವರವನ್ನೂ ಹೇಳಿಯೇಬಿಡುವೆ.

ನವ ಪಞ್ಚ ಚ ವರ್ಷಾಣಿ ದಣ್ಡಕಾರಣ್ಯಮಾಶ್ರಿತಃ
ಚೀರಾಜಿನಜಟಾಧಾರೀ ರಾಮೋ ಭವತು ತಾಪಸಃ.

ಹದಿನಾಲ್ಕು ವರುಷಗಳ ಕಾಲ ರಾಮನು ದಂಡಕಾರಣ್ಯಕ್ಕೆ ಹೋಗಿ ಅಲ್ಲಿ ಅವನು ಜಟಾಧಾರಿಯಾಗಿ ನಾರಮುಡಿಯನ್ನುಟ್ಟು ಕೃಷ್ಣಾಜಿನವನ್ನು ಧರಿಸಿ ತಾಪಸನಂತೆ ಇರಬೇಕು.

ಕೈಕೇಯಿ ಇಷ್ಟಕ್ಕೇ ನಿಲ್ಲಿಸುವುದಿಲ್ಲ. “ಆದ್ಯ ಚೈವ ಹಿ ಪಶ್ಯೇಯಂ ಪ್ರಯಾನ್ತಂ ರಾಘವಂ ವನಮ್- ರಾಘವನು ಚೀರಾಜಿನ-ಜಟಾಧಾರಿಯಾಗಿ ಕಾಡಿಗೆ ಹೋಗುವುದನ್ನು ಈಗಲೇ ನಾನು ನೋಡಬೇಕು, ಸತ್ಯವಚನನಾದ ನೀನು ಈಗಲೇ ನಡೆಸಿಕೊಡು” ತನ್ನ ಇಬ್ಬರು ಪ್ರಿಯರಲ್ಲಿ ಒಬ್ಬನಾದ ರಾಮನಿಗೆ ಆಘಾತಕಾರಿಯಾದ ವಿಷಯಗಳನ್ನು ಹೇಳುವ ಮಾತುಗಳು ದಶರಥನ ಕಾಮದ ಪಿತ್ಥವನ್ನು ಜರ್ರನೆ ಇಳಿಸಿಯೇಬಿಟ್ಟಿತು; ಜೊತೆಗೆ ಆತನ ಮನೋಧೈರ್ಯವನ್ನೂ ಸಹ! ಲೋಕದ ಎಲ್ಲಾ ರಾಜರನ್ನು, ಪ್ರಜೆಗಳನ್ನು ಮತ್ತು ವಶಿಷ್ಠರಾದಿಯಾಗಿರುವ ಎಲ್ಲಾ ಋಷಿಗಳನ್ನು ತನ್ನ ಇಷ್ಟಕ್ಕೆ ಒಗ್ಗಿಕೊಳ್ಳುವಂತೆ ತಂತ್ರವನ್ನು ಹೂಡಿದ ಅರಸನ ಇಚ್ಛೆ ಇಲ್ಲಿ ತರಗೆಲೆಗಳಂತೆ ಗಾಳಿಗೆ ಹಾರಿಹೋಯಿತು. ಯಾವ ಉದ್ಧೇಶಕ್ಕಾಗಿ ಕೈಕೇಯಿಯ ಅರಮನೆಗೆ ಬಂದಿದ್ದನೋ ಅವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಕದಡಿಹೋಯಿತು. ಅವನ ಜೀವನದಲ್ಲಿ ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿವದೊಂದೇ ಗುರಿ ಇದ್ದಿದ್ದು. ತನ್ನ ಪ್ರೀತಿಯ ರಾಣಿಯಿಂದಲೇ ಹೀಗೆ ವಿಘ್ನಬರಬಹುದೆಂದು ರಾಜ ಎಣಿಸಿರಲಿಲ್ಲ. ಅಂಥ ಸ್ವಲ್ಪ ಅನುಮಾನ ಬಂದಿದ್ದರೂ ಆತ ಕೈಕೇಯಿಯ ಅರಮನೆಗೆ ಬರುತ್ತಲೇ ಇರಲಿಲ್ಲ. ಒಮ್ಮೆಲೇ ಎಚ್ಚರತಪ್ಪಿ ಬಿದ್ದ. ತನ್ನ ರಾಜತ್ವಕ್ಕೆ ಧಿಕ್ಕಾರ ಹಾಕಿಕೊಂಡ. ಕೊನೆಗೆ ಅನಿವಾರ್ಯವಾಗಿ ಕೈಕೇಯಿಗೆ ನಮಸ್ಕರಿಸಿಕೊಂಡು “ನಿನ್ನ ಕಾಲನ್ನು ಬೇಕಾದರೂ ಹಿಡಿಯುತ್ತೇನೆ, ರಾಮನನ್ನು ರಕ್ಷಿಸು. ವರದಾನವೆನ್ನುವ ಒಂದು ಪ್ರತಿಜ್ಞೆಯಲ್ಲಿ ನನ್ನನ್ನು ಸಿಕ್ಕಿಹಾಕಿಸಿ ನಿರಪರಾಧಿಯನ್ನು ಕಾಡಿಗಟ್ಟಿದ ದೋಷ ನನಗೆ ಬಾರದಿರಲಿ” ಎಂದು ನೆಲದಲ್ಲಿ ಹೊರಳಾಡತೊಡಗಿದ.

ಮೂಂದಿನ ಭಾಗದಲ್ಲಿ ತನ್ನ ಕರ್ಮಫಲವನ್ನು ತಾನು ಉಂಡ ಮಹಾರಾಜ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ

Continue Reading

ದಕ್ಷಿಣ ಕನ್ನಡ

Yakshagana Artist: ವೇಷ ಕಳಚುತ್ತಿರುವಾಗಲೇ ಹೃದಯ ಸ್ತಬ್ಧ ; ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

Gangadhar Puttur : ವೇಷ ಕಳಚುತ್ತಿರುವಾಗಲೇ ಯಕ್ಷಗಾನ ಕಲಾವಿದ (Yakshagana Artist) ಗಂಗಾಧರ ಪುತ್ತೂರು ಇಹಲೋಕ ತ್ಯಜಿಸಿದ್ದಾರೆ. ಮುಖದ ಬಣ್ಣವನ್ನು ಅಳಿಸುತ್ತಿರುವಾಗ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

VISTARANEWS.COM


on

By

Yakshagana Artist No more
Koo

ಮಂಗಳೂರು: ವೇಷ ಕಳಚುತ್ತಿರುವಾಗಲೇ ಹೃದಯಾಘಾತದಿಂದ (Heart attack) ಧರ್ಮಸ್ಥಳ ಯಕ್ಷಗಾನ ಮೇಳದ ಸವ್ಯಸಾಚಿ ಕಲಾವಿದ (Yakshagana Artist) ಗಂಗಾಧರ ಪುತ್ತೂರು(60) ಅವರು ಇಹಲೋಕ ತ್ಯಜಿಸಿದ್ದಾರೆ.

ನಿನ್ನೆ ಬುಧವಾರ (ಮೇ 1) ರಾತ್ರಿ ಕೋಟ ಗಾಂಧಿಮೈದಾನದ ಬಳಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಅವರು ಕುಕ್ಕಿಂತ್ತಾಯ ದೈವದ ವೇಷವನ್ನು ನಿರ್ವಹಿಸಿದ್ದರು. ಬಳಿಕ ಚೌಕಿಗೆ ಆಗಮಿಸಿ ಕಿರೀಟ, ಯಕ್ಷಗಾನದ ಆಭರಣ ತೆಗೆದಿಟ್ಟು, ಮುಖದ ಬಣ್ಣವನ್ನು ಅಳಿಸುತ್ತಿರುವಾಗ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಪುತ್ತೂರಿನ ಸೇಡಿಯಾಪು ನಿವಾಸಿಯಾಗಿರುವ ಇವರು ಏಳನೇ ತರಗತಿಯವರೆಗೆ ವಿದ್ಯಾಭ್ಯಾಸ ಹೊಂದಿದ್ದರು. ತಮ್ಮ 18ನೇ ವಯಸ್ಸಿಗೆ ಯಕ್ಷಗಾನ ತಿರುಗಾಟ ಆರಂಭಿಸಿದ ಗಂಗಾಧರ ಪುತ್ತೂರು ಸುದೀರ್ಘ 40 ವರ್ಷಗಳಷ್ಟು ಕಾಲ ಯಕ್ಷಗಾನ ರಂಗದಲ್ಲಿ ವ್ಯವಸಾಯ ಮಾಡಿದ್ದರು. ಕರ್ಗಲ್ಲು ವಿಶ್ವೇಶ್ವರ ಭಟ್ ಹಾಗೂ ಕೆ.ಗೋವಿಂದ ಭಟ್ ಅವರಿಂದ ನಾಟ್ಯಾಭ್ಯಾಸ ಮಾಡಿದರು.

ಯಕ್ಷಗಾನ ರಂಗದ ಸವ್ಯಸಾಚಿ ಕಲಾವಿದರಾದ ಇವರು ಸ್ತ್ರೀವೇಷದಿಂದ ಹಿಡಿದು ಪುಂಡುವೇಷ, ರಾಜವೇಷ, ಹೆಣ್ಣುಬಣ್ಣ ಸಮರ್ಥವಾಗಿ ನಿರ್ವಹಿಸುತ್ತಿದ್ದರು. 30 ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಗಂಗಾಧರ ಪುತ್ತೂರು ಧರ್ಮಸ್ಥಳ ಮೇಳದಲ್ಲಿಯೇ ಕಲಾವಿದರಾಗಿ ತಿರುಗಾಟ ಮಾಡಿದ್ದರು.

ಇದನ್ನೂ ಓದಿ: Prajwal Revanna case: ತಲೆಮರೆಸಿಕೊಂಡ ಪ್ರಜ್ವಲ್‌ ರೇವಣ್ಣಗೆ ಲುಕೌಟ್‌ ನೋಟಿಸ್‌ ಜಾರಿ, ಬಂದ ಕೂಡಲೇ ಬಂಧನ!

ತೀವ್ರ ಹೃದಯಾಘಾತದಿಂದ ಹಿರಿಯ ಸಂಸದ ಶ್ರೀನಿವಾಸ್‌ ಪ್ರಸಾದ್‌ ವಿಧಿವಶ

ಬೆಂಗಳೂರು: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ (76) (Srinivas Prasad) ಅವರು ತೀವ್ರ ಹೃದಯಾಘಾತದಿಂದ (Heart Aattack) ವಿಧಿವಶರಾದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಲದಿನಗಳ ಹಿಂದೆ ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ 1:20ಕ್ಕೆ (Manipal Hospital ) ಅವರು ನಿಧನರಾಗಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀನಿವಾಸ್ ಪ್ರಸಾದ್ ಅವರು ಏಪ್ರಿಲ್ 22ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎನ್ನಲಾಗಿದೆ.

ಇನ್ನು ಈ ಬಗ್ಗೆ ಶ್ರೀನಿವಾಸ್ ಪ್ರಸಾದ್ ಅಳಿಯ ಹರ್ಷವರ್ಧನ್ ಮಾಹಿತಿ ನೀಡಿದ್ದು, ಶ್ರೀನಿವಾಸ್ ಪ್ರಸಾದ್ ಅವರು ರಾತ್ರಿ 1:20ರ ಸುಮಾರಿಗೆ ತೀವ್ರವಾದ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ರೀತಿಯಲ್ಲಿ ಪ್ರಯತ್ನ ಮಾಡಿದ್ದರು. ಅವರ ಈ ಅಗಲಿಕೆ ಇಡೀ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟ. ನನಗೆ ರಾಜಕೀಯಕ್ಕೆ ಜನ್ಮ ಕೊಟ್ಟಂತವರು. ರಾಜಕೀಯದಲ್ಲಿ ಏಕಾಂಗಿಯಾಗಿ ಹೋರಾಟ ಮಾಡೋದಕ್ಕೆ ಬಿಟ್ಟು ಹೋಗಿದ್ದಾರೆ. ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡಿದ್ದಾರೆ, ಹೋರಾಟದ ಜೀವಿ ಅವರು. ಐದು ವರ್ಷದ ಹಿಂದೆ ನಾನು ನಂಜನಗೂಡಿನಲ್ಲಿ ಗೆದ್ದಾಗ ಅವರು ಲೋಕಸಭೆಯಲ್ಲಿ ಸ್ಪರ್ಧೆ ಮಾಡ್ತಿನಿ ಅಂದರು. ನನ್ನನ್ನು ಅವರು ತಂದೆ ಸ್ಥಾನದಲ್ಲಿ ನಿಂತು ರಾಜಕೀಯವಾಗಿ ಬೆಳೆಸಿದ್ದಾರೆ ಯಾವುದೆ ವಿಚಾರ ಆಗಿದ್ದರೂ ಅವರ ಜೊತೆ ಚರ್ಚೆ ಮಾಡಿಯೇ ನಿರ್ಧಾರಕ್ಕೆ ಬರುತ್ತಿದೆ. ಈಗ ಯಾರ ಬಳಿ ಹೋಗಿ ಕೇಳಲಿ ಎಂದು ಅನಿಸಿ ಬಿಟ್ಟಿದೆ ಎಂದು ಭಾವುಕರಾಗಿ ಮಾತನಾಡಿದರು.

ಇದನ್ನೂ ಓದಿ:Raja Marga Column :‌ ಕಣ್ಣೇ ಕಾಣದ ಆಕೆ ಎರಡು ಬಾರಿ ಐಎಎಸ್‌ ಪಾಸ್‌ ಮಾಡಿದ್ದರು!

ಚಾಮರಾಜನಗರ ಕ್ಷೇತ್ರದಿಂದ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಶ್ರೀನಿವಾಸ್‌ ಪ್ರಸಾದ್‌ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇನ್ನು 2013ರಿಂದ 2016ರವರೆಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಸಚಿವರಾಗಿದ್ದರು . 24 ಡಿಸೆಂಬರ್ 2016 ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದ ಅವರು 2019ರಲ್ಲಿ ಚಾಮರಾಜನಗರ ಸಂಸದರಾಗಿ ಆಯ್ಕೆ.ಯಾಗಿದ್ದರು. ಅನಾರೋಗ್ಯ ಸಮಸ್ಯೆಯಿಂದಾಗಿ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ ಅವರು 2024 ಮಾರ್ಚ್ 17ರಂದು ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Kaladarpana-Art Reflects: ಬೆಂಗಳೂರಿನಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

Kaladarpana-Art Reflects: ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.

VISTARANEWS.COM


on

Kaladarpana-Art Reflects
Koo

ಬೆಂಗಳೂರು: ಕಲಾ ದರ್ಪಣ- ಆರ್ಟ್‌ ರಿಫ್ಲೆಕ್ಟ್ಸ್‌ (Kaladarpana-Art Reflects) ವತಿಯಿಂದ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ನಗರದ ನಾಗರಬಾವಿ 2ನೇ ಹಂತದ ಎನ್‌ಜಿಇಎಫ್‌ ಲೇಔಟ್‌ನ ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಭಾನುವಾರ (ಮೇ 5ರಂದು) ಬೆಳಗ್ಗೆ 8.30ಕ್ಕೆ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, 9ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.

ಅಂತರಾಷ್ಟ್ರೀಯ ಖ್ಯಾತಿಯ ತಬಲ ವಾದಕ ಪಂಡಿತ್ ಡಾ. ಸತೀಶ್ ಹಂಪಿಹೊಳಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಜಾವಾಣಿ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಮತ್ತು ಮಾರುತಿ ಮೆಡಿಕಲ್ಸ್ ಮಾಲೀಕರು ಮಹೇಂದ್ರ ಮುಣೋತ್ ಜೈನ್ ಅವರು ಭಾಗವಹಿಸಲಿದ್ದಾರೆ. ಈ ಮೂವರು ಗಣ್ಯರು, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕಲಾದರ್ಪಣ ಪ್ರಶಸ್ತಿ ಪುರಸ್ಕೃತರು

  • ಗೋ.ನಾ. ಸ್ವಾಮಿ, ಅಂತಾರಾಷ್ಟ್ರೀಯ ಖ್ಯಾತಿಯ ಜನಪದ ಗಾಯಕರು
  • ವಿದುಷಿ ಅನಸೂಯ ದ್ವಾರಕನಾಥ, ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು

ಇದನ್ನೂ ಓದಿ | Film festival: ಬೆಂಗಳೂರಿನಲ್ಲಿ ಮೇ 4, 5ರಂದು ಗುರುದತ್‌ ಚಲನ ಚಿತ್ರೋತ್ಸವ ಮತ್ತು ಸಂಗೀತ ರಸ ಸಂಜೆ

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಕರ್ನಾಟಕ ಚಿತ್ರಕಲಾ ಪರಿಷತ್‌ನ ಪ್ರಾಧ್ಯಾಪಕ ಪ್ರೊ. ವಿ.ಎಸ್. ನಾಯಕ ಬಳಕೂರು, ಎಸ್.ಎಸ್.ವಿ.ಎಸ್.ಪಿ.ಎಸ್. ಶಾಲೆ ಪ್ರಾಂಶುಪಾಲೆ ಲತಾ ಎಸ್. ಅವರು ಆಗಮಿಸಲಿದ್ದಾರೆ. ಕಲಾ ದರ್ಪಣ- ಆರ್ಟ್‌ ರಿಫ್ಲೆಕ್ಟ್ಸ್‌ ಸಂಸ್ಥೆಯ ಹೇಮಾ ವಿನಾಯಕ್‌ ಪಾಟೀಲ್‌ ಹಾಗೂ ವಿನಾಯಕ್‌ ಪಾಟೀಲ್‌ ಅವರು ಉಪಸ್ಥಿತರಿರಲಿದ್ದಾರೆ. ಖ್ಯಾತ ನಿರೂಪಕಿ ಭವಾನಿ ಲೋಕೇಶ್‌ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Continue Reading
Advertisement
Lok Sabha Election-2024
ದೇಶ3 mins ago

Lok Sabha Election 2024: ಗುಜರಾತ್‌ನಲ್ಲಿ ಶೇ.10ಕ್ಕಿಂತ ಹೆಚ್ಚು ಮುಸ್ಲಿಮರಿದ್ದರೂ ಕಾಂಗ್ರೆಸ್ ಒಬ್ಬ ಮುಸ್ಲಿಮನಿಗೂ ಟಿಕೆಟ್‌ ಕೊಟ್ಟಿಲ್ಲ!

marriage cancel in kodagu
ಕೊಡಗು19 mins ago

Marriage Cancel : ಸಿಹಿ ತಿಂಡಿ ಕಿರಿಕ್‌ಗೆ ಮದುವೆ ಮುರಿದ ವರ; ಹೋಗೊಲೋ ಎಂದಳು ವಧು!

Jasprit Bumrah
ಪ್ರಮುಖ ಸುದ್ದಿ20 mins ago

Jasprit Bumrah : ಪತ್ನಿ ಸಂಜನಾಗೆ ರೊಮ್ಯಾಂಟಿಕ್​​ ಬರ್ತ್​ಡೇ ವಿಶಸ್​ ಹೇಳಿದ ಜಸ್​ಪ್ರಿತ್​ ಬುಮ್ರಾ

Chinese Scientists
ವಿಜ್ಞಾನ27 mins ago

Chinese Scientists: ಇನ್ನು ಮನುಷ್ಯರು 130 ವರ್ಷ ಬದುಕಬಹುದು! ಚೀನಾ ವಿಜ್ಞಾನಿಗಳ ಸಂಶೋಧನೆ

Ranchi Cash
ದೇಶ29 mins ago

12 ತಾಸು, 6 ಮಷೀನ್‌ಗಳಿಂದ 30 ಕೋಟಿ ರೂ. ಎಣಿಕೆ; ಕಾಂಗ್ರೆಸ್‌ ಮುಖಂಡನ ಪಿಎ ಮನೆಯಲ್ಲಿ ಹಣದ ರಾಶಿ!

Weight Loss Tips kannada
ಲೈಫ್‌ಸ್ಟೈಲ್34 mins ago

Weight Loss Tips Kannada: ಈ ಐದರಲ್ಲಿ ಒಂದು ಜ್ಯೂಸ್‌ ಕುಡಿಯುತ್ತಿದ್ದರೂ ಸಾಕು, ನಿಮ್ಮ ದೇಹ ತೂಕ ಇಳಿಯುತ್ತದೆ!

Laborer died by falling tree in Somawarpet
ಕೊಡಗು35 mins ago

Kodagu News: ಸೋಮವಾರಪೇಟೆಯಲ್ಲಿ ಮರ ಬಿದ್ದು ಕಾರ್ಮಿಕ ಸಾವು

Akshaya Tritiya-2024
ಲೈಫ್‌ಸ್ಟೈಲ್40 mins ago

Akshaya Tritiya 2024: ಅಕ್ಷಯ ತೃತೀಯದಂದು ಏನು ಮಾಡಬೇಕು, ಏನು ಮಾಡಬಾರದು?

Rahul Gandi
ದೇಶ44 mins ago

Rahul Gandhi : ಸುಳ್ಳು ಹರಡಬೇಡಿ, ಸುಮ್ಮನಿರಿ; ರಾಹುಲ್​ ಗಾಂಧಿಗೆ ಬಹಿರಂಗ ಪತ್ರ ಬರೆದು ಕುಟುಕಿದ ಯೂನಿವರ್ಸಿಟಿಗಳ ಕುಲಪತಿಗಳು

Lok Sabha Election 2024
ಬಾಗಲಕೋಟೆ53 mins ago

Lok Sabha Election 2024: ಚುನಾವಣಾ ಕರ್ತವ್ಯದ ಮೇಲೆ ತೆರಳುತ್ತಿದ್ದ ಮುಖ್ಯ ಶಿಕ್ಷಕ ಹೃದಯಾಘಾತದಿಂದ ಸಾವು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ13 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ22 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ24 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ1 day ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ4 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ5 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌