SundayRead | ಗಾಂಧಿ ಜಯಂತಿ | ಗಾಂಧಿ ರಾಜಕೀಯದ ಮರು ಮೌಲ್ಯಮಾಪನ - Vistara News

ಕಲೆ/ಸಾಹಿತ್ಯ

SundayRead | ಗಾಂಧಿ ಜಯಂತಿ | ಗಾಂಧಿ ರಾಜಕೀಯದ ಮರು ಮೌಲ್ಯಮಾಪನ

ಮಹಾತ್ಮ ಗಾಂಧಿ ಅವರ ರಾಜಕೀಯವನ್ನು ನಾವು ಇಂದು ಹೇಗೆ ಗ್ರಹಿಸಬೇಕು? ಅವರು ಇಂದು ಅಪ್ರಸ್ತುತರೇ? ಅವರ ಹೋರಾಟಕ್ಕೆ ಬೆದರಿ ಬ್ರಿಟಿಷರು ದೇಶ ಬಿಟ್ಟಿದ್ದಲ್ಲವೇ? ಗಾಂಧಿ ಜಯಂತಿ ನಿಮಿತ್ತ ಒಂದು ಚಿಂತನೆ.

VISTARANEWS.COM


on

M K Gandhi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
RG hegade

| ಪ್ರೊ.ಆರ್.ಜಿ. ಹೆಗಡೆ

ದೇಶಕ್ಕೆ ಗಾಂಧಿ ಕೊಡುಗೆಯ ಮರು ಮೌಲ್ಯಮಾಪನ ನಡೆಯುತ್ತಿರುವಂತಿದೆ. ಗಾಂಧಿ ಪುಣ್ಯತಿಥಿಯ ದಿನ ಹಲವು ಲೇಖನಗಳು, ಮಾತುಗಳು ಬಂದವು. ಅಂತಹ ಅಭಿಪ್ರಾಯಗಳು ಹಿಂದೆಯೂ ನಿರಂತರವಾಗಿ ಬಂದಿವೆ. ಅವುಗಳಲ್ಲಿ ಕೆಲವು ನೇರವಾಗಿ, ಕೆಲವು ಸೂಕ್ಷ್ಮವಾಗಿ ಹೇಳಿದ್ದು ಒಂದೇ. ಏನೆಂದರೆ ಗಾಂಧಿ ಹೆಚ್ಚುಕಡಿಮೆ ಅಪ್ರಸ್ತುತ. ಕೆಲವು ಬರಹಗಳು ಇನ್ನೂ ಒಂದು ಮಾತು ಹೇಳಿದವು. ಏನೆಂದರೆ ಸ್ವಾತಂತ್ರ್ಯ ಚಳುವಳಿಯಲ್ಲಿ ಕೂಡ ಗಾಂಧಿಯ ಪಾತ್ರ ಹೇಳುವಷ್ಟು ದೊಡ್ಡದೇನೂ ಇರಲಿಲ್ಲ. ಬ್ರಿಟಿಷರು ಗಾಂಧಿ ಚಳವಳಿಗೆ ಹೆದರಿ ಬಿಟ್ಟು ಹೋದರೆನ್ನುವುದು ಹಾಸ್ಯಾಸ್ಪದ ಮಾತು. ಮತ್ತೆ ಕೆಲವು ಗಾಂಧಿ ಹಿಂದೂ ಧರ್ಮಕ್ಕೆ ದೊಡ್ಡ ಅಪಚಾರ ಮಾಡಿ ಇನ್ನೊಂದು ಧರ್ಮವನ್ನು ಎತ್ತಿಹಿಡಿದರು ಎಂಬ ಅಭಿಪ್ರಾಯವನ್ನೂ ಮಂಡಿಸಿವೆ/ಸುತ್ತಲೇ ಇವೆ (ದೀರ್ಘಕಾಲದಿಂದ ಪ್ರಚಲಿತವಿರುವ ಮಾತು). ಗೋಡ್ಸೆ ಗಾಂಧಿಯನ್ನು ಏಕೆ ಕೊಲ್ಲಬೇಕಾಯಿತು ಎನ್ನುವುದನ್ನು ಹಲವು ಕಾರಣಗಳ ಮೂಲಕ ಅವು ವಿಶದೀಕರಿಸಿವೆ/ಕರಿಸುತ್ತಿವೆ. ಅಂದರೆ ಗೋಡ್ಸೆಗೆ ಬಲವಾದ ಕಾರಣಗಳಿದ್ದವು ಎನ್ನುವುದು ವಾದ.

ಐತಿಹಾಸಿಕ ವ್ಯಕ್ತಿಗಳನ್ನು, ಘಟನೆಗಳನ್ನು ಮರುಮೌಲ್ಯಮಾಪನ ಮಾಡುವುದು ತಪ್ಪೇನೂ ಅಲ್ಲ. ಹಾಗೆಯೇ ಅಭಿಪ್ರಾಯಗಳಿಗೆಲ್ಲ ಉತ್ತರ ಬರೆದು ಗಾಂಧೀಜಿಯನ್ನು ‘ರಕ್ಷಿಸುವ’ ಅಗತ್ಯವೂ ಇಲ್ಲ. ಬದುಕಿರುವಾಗ ಕೂಡ ಆತ ತಮ್ಮನ್ನು ವಿಮರ್ಶೆಗಳಿಗೆ ತೆರೆದೇ ಇಟ್ಟಿದ್ದರು. ತಪ್ಪಿದ್ದಿದ್ದು ಗೊತ್ತಾದರೆ ಪಶ್ಚಾತ್ತಾಪ ಪಡುತ್ತಿದ್ದರು. ಕ್ಷಮೆ ಕೇಳುತ್ತಿದ್ದರು. ಸರಿಪಡಿಸಿಕೊಳ್ಳುತ್ತಿದ್ದರು. ಹಾಗಾಗಿ ಗಾಂಧಿ ಕುರಿತ ಹೊಸ, ಬೇರೆ ಬೇರೆ ದೃಷ್ಟಿಕೋನಗಳನ್ನು ನಿಂದಿಸುವ, ಖಂಡಿಸುವ ಅಗತ್ಯವೇನೂ ಇಲ್ಲ. ಆದರೂ ಈ ಹಿನ್ನೆಲೆಯಲ್ಲಿ ಬಹುಶಃ ನಾವು ಮಾಡಬೇಕಿರುವುದೆಂದರೆ ಗಾಂಧಿ ತತ್ವಗಳನ್ನು, ಗಾಂಧಿಯನ್ನು ಮತ್ತೊಮ್ಮೆ ನೋಡಿ ನಮ್ಮ ನಿಲುವುಗಳನ್ನು ಖಾತ್ರಿಪಡಿಸಿಕೊಳ್ಳುವುದು. ಈ ಲೇಖನದ ಉದ್ದೇಶ ಅದು.

1.. ಸಮಕಾಲೀನ ಗಾಂಧಿ ‘ವಿಮರ್ಶೆ’ಯ ಭಾಗವಾಗಿ ಬಂದಿರುವ ಮೊದಲ ಮಾತು ಗಾಂಧಿಯನ್ ಸತ್ಯಾಗ್ರಹಕ್ಕೆ ಬೆದರಿ ಬ್ರಿಟಿಷರು ಬಿಟ್ಟು ಹೋಗಲಿಲ್ಲ. ಅಂತಹ ಕ್ರೆಡಿಟ್‌ ಅನ್ನು ಗಾಂಧಿಗೆ ನೀಡುವುದು ಸರಿಯಲ್ಲ ಎನ್ನುವದು. ವಾದವನ್ನು ಪರಿಶೀಲಿಸಿಕೊಳ್ಳಬೇಕು. ಏಕೆಂದರೆ ಈ ವಿಷಯವೇ ಗಾಂಧಿ ತತ್ವದ ಪ್ರಸ್ತುತತೆಯನ್ನು ಅಥವಾ ಅಪ್ರಸ್ತುತತೆಯನ್ನು ನಿರ್ಣಯಿಸುವ ಪ್ರಮುಖ ಅಂಶ. ಒಂದು ರೀತಿಯಲ್ಲಿ ನೋಡಿದರೆ ಬಂದಿರುವ ಮಾತು ಸರಿ. ಗಾಂಧಿ ಸತ್ಯಾಗ್ರಹಕ್ಕೆ ʻಹೆದರಿ’ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಿರಲಿಕ್ಕಿಲ್ಲ. ಅಂತಹ ದಾಖಲೆಗಳೂ ಇದ್ದಂತಿಲ್ಲ. ಆದರೆ ಇಲ್ಲಿ ಒಂದು ಮಹತ್ವದ ವಿಷಯ. ಏನೆಂದರೆ ಸ್ವಾತಂತ್ರ್ಯ ಹೋರಾಟದ ಉದ್ದೇಶ ಕೂಡ ಬ್ರಿಟಿಷರನ್ನು ʻಹೆದರಿಸಿ’ ಓಡಿಸುವುದು ಇರಲಿಲ್ಲ. ಗಾಂಧಿ ಅಂತಹ ಭಾಷೆ ಮಾತನಾಡುತ್ತಿರಲಿಲ್ಲ. ಚಳವಳಿ ಬ್ರಿಟಿಷರ ʻವಿರುದ್ಧ’ ಇರಲೂ ಇಲ್ಲ. ಅಥವಾ ಅದು ಕೇವಲ ʻಸ್ವಾತಂತ್ರ್ಯ’ ಪಡೆಯುವ ಉದ್ದೇಶ ಹೊಂದಿದ ʻಹೋರಾಟ’ವೂ ಆಗಿರಲಿಲ್ಲ.

ಈ ಕುರಿತು ಅರಿಯಲು ಗಾಂಧಿ ಬರೆದ ಪುಸ್ತಕ ʻಹಿಂದ್ ಸ್ವರಾಜ್’ ಅನ್ನು ಓದಿಕೊಳ್ಳಬೇಕು. ತಮ್ಮ ʻಹೋರಾಟವನ್ನು’ ಆರಂಭಿಸುವುದಕ್ಕೆ ಮುನ್ನುಡಿಯಾಗಿ ಕೆಲವು ಪ್ರಶ್ನೆಗಳನ್ನು ಗಾಂಧಿ ತಮಗೆ ತಾವು ಕೇಳಿಕೊಳ್ಳುತ್ತಾರೆ. ಏನೆಂದರೆ ಬ್ರಿಟಿಷರ ವಿರುದ್ಧ ನಾವು ಯಾಕೆ ಹೋರಾಡಬೇಕು? ಅವರು ದೇಶವನ್ನು ಆಳಿದರೆ ಏನು ತೊಂದರೆ? ಸ್ವಾತಂತ್ರ್ಯ ಎಂದರೇನು? ಅವರನ್ನು ಓಡಿಸಿದ ನಂತರ ನಾವು ಯಾವ ರೀತಿಯ ಸರಕಾರವನ್ನು ರಚಿಸಬೇಕು? ಬಿಳಿ ಸಾಹಿಬ್‌ಗಳು(ಬ್ರಿಟಿಷರು) ಹೋಗಿ ಬ್ರೌನ್ ಸಾಹಿಬ್‌ಗಳು (ನಮ್ಮವರು) ಬಂದರೆ ಎಲ್ಲವೂ ಸರಿಹೋಗುತ್ತದೆಯೇ? ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಉತ್ತರ ಹುಡುಕುತ್ತ ಗಾಂಧಿ ಗಾಢ ಚಿಂತನೆಯಲ್ಲಿ ತೊಡಗುತ್ತಾರೆ. ಓದಿನಲ್ಲಿ, ದೇಶಸಂಚಾರದಲ್ಲಿ, ಆತ್ಮವಿಮರ್ಶೆಯಲ್ಲಿ ತೊಡಗಿಕೊಳ್ಳುತ್ತಾರೆ. ನಂತರ ತಮಗೆ ತಾವು ಸ್ಪಷ್ಟಪಡಿಸಿಕೊಳ್ಳುವುದೆಂದರೆ ಚಳವಳಿಯ ಉದ್ದೇಶ ಕೇವಲ ಬ್ರಿಟಿಷರನ್ನು ತೊಲಗಿಸುವುದು ಅಲ್ಲವೇ ಅಲ್ಲ. ಹೋರಾಟವಿರುವುದು ಪಾಶ್ಚಿಮಾತ್ಯ ಸಂಸ್ಕೃತಿಯ ವಿರುದ್ಧ. ಆ ʻಸೈತಾನನ ಸಂಸ್ಕೃತಿ’ಯ ಅಥವಾ ʻವೇಶ್ಯಾ ಸಂಸ್ಕ್ರತಿʼಯ ವಿರುದ್ಧ. ಬೇರೆಲ್ಲೂ ಬಳಸದ ಕಟು ಶಬ್ದಗಳನ್ನು ಆ ಸಂಸ್ಕೃತಿಯನ್ನು ವರ್ಣಿಸಲು ಗಾಂಧಿ ಬಳಸುತ್ತಾರೆ.

gandhi

ಪಾಶ್ಚಿಮಾತ್ಯ ಸಂಸ್ಕೃತಿಯ ವಿರುದ್ಧ ಗಾಂಧಿ ಇಂತಹ ನಿಲುವು ತಳೆಯುವುದಕ್ಕೆ ಕಾರಣಗಳಿವೆ. ಏನೆಂದರೆ ಅವರು ಭಾವಿಸಿದಂತೆ ಆ ಸಂಸ್ಕೃತಿ ಆತ್ಮವಿಲ್ಲದ, ನೈತಿಕತೆ ಪ್ರಧಾನವಲ್ಲದ ಸಂಸ್ಕೃತಿ. ಅದು ಮೆಟೀರಿಯಲಿಸ್ಟಿಕ್ ಆದ, ಸುಖಭೋಗಕ್ಕೆ ಸಂಬಂಧಿಸಿದ ಉಪಕರಣಗಳನ್ನು ಉತ್ಪಾದಿಸುವುದು ಮತ್ತು ಇಂತಹ ಉಪಕರಣಗಳನ್ನು ಬಳಸಿ ಮನುಷ್ಯ ಸುಖಪಡುವುದಕ್ಕೆ ಪ್ರಾಮುಖ್ಯತೆ ನೀಡುವ ಸಂಸ್ಕೃತಿ. ಗಾಂಧಿ ಬಹುಶಃ ಭಾವಿಸಿದಂತೆ ಇಂತಹ ಸಂಸ್ಕೃತಿಗಳಿಂದಾಗಿಯೇ ಜಗತ್ತಿನಲ್ಲಿ ವಸಾಹತುಶಾಹಿ ಮನಸ್ಥಿತಿ ಹುಟ್ಟಿಕೊಂಡಿದ್ದು ಮತ್ತು ಜಾಗತಿಕ ಯುದ್ಧಗಳು ಸಂಭವಿಸಿದ್ದು. ಮತ್ತೂ ಅವರು ಭಾವಿಸಿದಂತೆ ಇಂತಹ ಮಟೀರಿಯಲಿಸಂನಿಂದಾಗಿಯೇ ಭಾರೀ ಪ್ರಮಾಣದ ಆರ್ಥಿಕ ಅಸಮಾನತೆ ಜಗತ್ತಿನಲ್ಲಿ ಆರಂಭವಾಗಿದ್ದು. ಕೆಲವು ಪಾಶ್ಚಾತ್ಯ ರಾಷ್ಟ್ರಗಳು ಶ್ರೀಮಂತವಾಗುತ್ತ ಹೋಗಿ ಜಗತ್ತಿನ ಕೋಟ್ಯಂತರ ಜನ ಬಡವರಾಗಿ ಹೋಗಿದ್ದು. ಮತ್ತು ಇಂತಹ ಸಂಸ್ಕೃತಿಯಿಂದಾಗಿಯೇ ಜಗತ್ತಿನಾದ್ಯಂತ ಜನ ತಮ್ಮ ದೇಶದಲ್ಲಿಯೇ ಅನ್ಯರಾಗಿ ಹೋಗಿ, ಘನತೆಯನ್ನು ಕಳೆದುಕೊಂಡು ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗಿ ಹೋಗಿದ್ದು. ವಿಷಯವೆಂದರೆ ಸಂಸ್ಕೃತಿಯನ್ನು ಕಳೆದುಕೊಂಡು ಜನ ಪಶ್ಚಿಮದ ದಾಸರಾಗಿ ಹೋಗುತ್ತಿರುವುದರ ಕುರಿತು ಗಾಂಧಿಗೆ ತೀವ್ರ ಕಳವಳವಿತ್ತು.

ಇಂತಹ ಮೆಟೀರಿಯಲಿಸ್ಟಿಕ್ ಸಂಸ್ಕೃತಿಗೆ ವಿರುದ್ಧವಾಗಿ ಇನ್ನೊಂದು ರೀತಿಯ ಮೆಟೀರಿಯಲಿಸ್ಟಿಕ್ ಸಂಸ್ಕೃತಿಯನ್ನು ಹುಟ್ಟುಹಾಕುವುದರ ಮೂಲಕ ಕಾರ್ಲ್ ಮಾರ್ಕ್ಸ್ ಅದಕ್ಕೆ ಸ್ಪಂದಿಸಿದ್ದರೆ ಗಾಂಧಿ ಅದಕ್ಕೆ ಭಾರತೀಯ ಸಂಸ್ಕೃತಿಯ ಆಳದಲ್ಲಿರುವ ತಾತ್ವಿಕತೆಯ, ಧಾರ್ಮಿಕತೆಯ ಪುನರುತ್ಥಾನಕ್ಕೆ ಪ್ರಯತ್ನಿಸುವುದರ ಮೂಲಕ ಸ್ಪಂದಿಸಿದ್ದರು. ಸಂಸ್ಕೃತಿಯ ಪುನರುತ್ಥಾನ ಗಾಂಧಿ ಸ್ವಾತಂತ್ರ್ಯ ಹೋರಾಟದ ಪ್ರಾಥಮಿಕ ಗುರಿ. ಕೇವಲ ಬ್ರಿಟಿಷರನ್ನು ರಾಜಕೀಯವಾಗಿ ಓಡಿಸುವದು ಅಲ್ಲ. ಏಕೆಂದರೆ ಬ್ರಿಟಿಷರನ್ನು ಓಡಿಸಿಬಿಟ್ಟರೂ ಕೂಡ ಬ್ರಿಟಿಷ್ ಸಂಸ್ಕೃತಿ ನಮ್ಮಲ್ಲಿ ಉಳಿದುಹೋದರೆ ಏನನ್ನೂ ಸಾಧಿಸಿದಂತಾಗುವುದಿಲ್ಲ ಎನ್ನುವುದು ಗಾಂಧಿಗೆ ಗೊತ್ತಿತ್ತು. ಉದ್ದೇಶ ದೇಶಕ್ಕೆ ಕೇವಲ ಬ್ರಿಟಿಶ್ ದೇಶದಿಂದ ಸ್ವಾತಂತ್ರ‍್ಯ ಪಡೆಯುವುದಿರಲಿಲ್ಲ. ಗಾಂಧಿ ಚಳವಳಿ ಒಂದು ನಾಗರಿಕತೆಗಳ ಸಮರ. ಆ ಸಂಸ್ಕೃತಿಯಿಂದ ಮುಕ್ತಿ ಪಡೆದು ರಾಜಕೀಯ ಸ್ವಾತಂತ್ರ್ಯಕ್ಕೆ ಜನರನ್ನು ಅರ್ಹರನ್ನಾಗಿಸಿ ನಂತರ ರಾಜಕೀಯ ಸ್ವಾತಂತ್ರ್ಯ ಪಡೆಯುವ ಗುರಿ ಹೊಂದಿದ ಸಂಕೀರ್ಣ ʻಸಮರ’ ಅದು. ಮೂಲತಃ ಸಾಂಸ್ಕೃತಿಕ ಹೋರಾಟ.

ಹಾಗಾಗಿಯೇ ಅಲ್ಲಿ ಗಾಂಧಿ ಬಳಸಿದ ಆಯುಧಗಳು ಹಿಂದೂ ಸಂಸ್ಕೃತಿಯ ಆಳದಲ್ಲಿರುವ ಶ್ರೇಷ್ಠ ಮೌಲ್ಯಗಳು. ಮತ ಪ್ರತಿರೋಧದ ತಂತ್ರಗಳು. (ಉಪವಾಸ, ಭಜನೆ, ಹರತಾಳ ಮತ್ತು ಅಹಿಂಸೆ) ಅವುಗಳಿಗೆ ಅಪಾರ ಶಕ್ತಿಯಿದೆ ಎನ್ನುವುದು ಗಾಂಧಿಗೆ ಗೊತ್ತಿತ್ತು. ನಮ್ಮ ಋಷಿಮುನಿಗಳು, ಸಂತರು, ಧರ್ಮಸುಧಾರಕರು ಬಳಸಿದ ಮಾರ್ಗಗಳು ಅವೇ ಎನ್ನುವುದು ಗೊತ್ತಿತ್ತು. ನಮ್ಮ ಮೌಲ್ಯಗಳು ಬ್ರಿಟಿಷ್ ಮೌಲ್ಯಗಳಿಗೆ ಮುಖಾಮುಖಿಯಾದಾಗ ಆ ಸಂಸ್ಕೃತಿ ತನ್ನ ಕುರಿತು ನಾಚಿಕೊಳ್ಳುತ್ತದೆ. ಮತ್ತು ಹಾಗೆ ಆಗಬೇಕು. ಹಾಗೆ ಆದಾಗ ಇಂಗ್ಲೆಂಡ್ ಶರಣಾಗಿ ಹಿಂದೆ ಸರಿಯುತ್ತದೆ ಎನ್ನುವುದು ಗಾಂಧಿ ನಂಬುಗೆಯಾಗಿತ್ತು. ಇಂತಹ ಪ್ರಯತ್ನದಲ್ಲಿ ಗಾಂಧಿ ಕೆಲವು ಮಟ್ಟಿಗಾದರೂ ಯಶಸ್ವಿಯಾಗಿದ್ದು ನಮಗೆ ಗೊತ್ತಿದೆ. ಉದಾಹರಣೆಗಳಿವೆ. ಗಾಂಧಿಗೆ ಜೈಲುಶಿಕ್ಷೆ ವಿಧಿಸಿದ್ದ ನ್ಯಾಯಾಧೀಶ ಪಾಪಪ್ರಜ್ಞೆಯಿಂದ ಎದ್ದು ನಿಂತು ಬಿಡುತ್ತಾನೆ. ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ಇಡೀ ದೇಶವೇ ಉಪ್ಪು ತಯಾರಿಸಲು ಆರಂಭಿಸಿದಾಗ ಇಂಗ್ಲೆಂಡ್‌ಗೆ ಏನು ಮಾಡಬೇಕೆಂದೇ ತಿಳಿಯದೆ ಜಾಗತಿಕವಾಗಿ ಮುಖಭಂಗ ಅನುಭವಿಸುತ್ತದೆ. ಮತ್ತೆ ದೇಶ ಸ್ವತಂತ್ರವಾದ ನಂತರ ಕಲ್ಕತ್ತಾದಲ್ಲಿ ಆರಂಭವಾಗುವ ಭಾರೀ ಪ್ರಮಾಣದ ಕೋಮುಗಲಭೆಯನ್ನು ಗಾಂಧಿ ಏಕಾಂಗಿಯಾಗಿ ಹತೋಟಿಗೆ ತಂದಿದ್ದು ನೋಡಿದ ವಿಶ್ವ ದಂಗುಬಡಿದು ಹೋಗುತ್ತದೆ. ಅವರು ತಮ್ಮ ರಾಜಕೀಯ ಹೋರಾಟದ ಗೆಲ್ಲುವಿಕೆಗೆ ಒಂದು ನಿರ್ದಿಷ್ಟ ತಾರೀಕು ಇತ್ಯಾದಿ ಇಟ್ಟುಕೊಂಡಿರಲಿಲ್ಲ. ಮುಖ್ಯ ವಿಷಯ ಸಂಸ್ಕೃತಿಯ ಪುನರುತ್ಥಾನ. ಪುನರುತ್ಥಾನದ ನಾಯಕರಾಗಿದ್ದವರು ಗಾಂಧಿ. ಸಾಂಸ್ಕೃತಿಕ ಗೆಲುವಿನ ಮೂಲಕ ರಾಜಕೀಯ ಗೆಲುವು ತಂದವರು.

2. ಗಾಂಧೀಜಿಯನ್ನು ಇನ್ನೊಂದು ದೃಷ್ಟಿಯಿಂದ ಕೂಡ ನೋಡಬೇಕು. ಏನೆಂದರೆ ಇತಿಹಾಸಕಾರ್ತಿ ರೋಮಿಲಾ ಥಾಪರ್ ಹೇಳುವಂತೆ ಭಾರತಕ್ಕೆ ʻರಾಷ್ಟ್ರೀಯತೆಯ ಪರಿಕಲ್ಪನೆ’ಯನ್ನು ನೀಡಿಹೋದವರು ಗಾಂಧಿ. ಹಿಂದೆ ನಮ್ಮ ದೇಶದಲ್ಲಿ ರಾಜಕೀಯ ಐಕ್ಯತೆಯ ಪರಿಕಲ್ಪನೆಯೇ ಇರಲಿಲ್ಲ. (ಸಾಂಸ್ಕೃತಿಕ ಏಕತೆ ಇತ್ತು). ರಾಜರುಗಳು, ರಾಣಿಯರು ಅಲ್ಲಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದು ತಮ್ಮ ಸಲುವಾಗಿ. ತಮ್ಮ ದತ್ತು ಪುತ್ರರ ಸಲುವಾಗಿ. ಭಾರತದ ಸಲುವಾಗಿ ಅಲ್ಲ. ಅವೆಲ್ಲ ಸ್ವಾತಂತ್ರ್ಯ ಹೋರಾಟಗಳಾಗಿರಲಿಲ್ಲ. ಹಾಗೆಯೇ ಮೊದಲನೆಯ ಪೀಳಿಗೆಯ ಮೋತಿಲಾಲ್ ನೆಹರು ಅಂತವರ ʻಸ್ವಾತಂತ್ರ್ಯ ಹೋರಾಟ’ಗಳಲ್ಲಿ ಸಾಮಾನ್ಯ ಜನರ, ಬಡವರ, ದೀನದಲಿತರ, ಮಹಿಳೆಯರ ಮಕ್ಕಳ ಭಾಗವಹಿಸುವಿಕೆ ಇರಲಿಲ್ಲ. ಇಂತಹ ಸಮುದಾಯಗಳಿಗೆ ಆ ಹೋರಾಟದಲ್ಲಿ ಗೌರವವೂ ಇರಲಿಲ್ಲ. ದೇಶಕ್ಕೆ ಗಾಂಧೀಜಿಯ ಕೊಡುಗೆ ಸ್ವಾತಂತ್ರ್ಯ ಹೋರಾಟವನ್ನು ಜನರ ಹೋರಾಟವನ್ನಾಗಿಸಿ ತಾವೆಲ್ಲರೂ ಒಂದು ನೇಶನ್ ಸ್ಟೇಟ್‌ನಲ್ಲಿ ಭಾಗಿದಾರರು ಎಂಬ ಭಾವನೆಯನ್ನು ಅವರ ಮನಸ್ಸುಗಳೊಳಗೆ ಮೂಡಿಸಿದ್ದು. ದೇಶದ ಜನ ಒಂದು ರಾಜಕೀಯ ಕೊಡೆಯ ಕೆಳಗೆ ಬಂದಿದ್ದು ಈಗ.

ಜನರ ಮನಸ್ಸುಗಳೊಳಗೆ ಧೈರ್ಯವನ್ನು, ಮೋಟಿವೇಶನ್‌ ಅನ್ನು ತುಂಬಿದ ಗಾಂಧಿ ಅವರನ್ನೆಲ್ಲ ಘನತೆವಂತರನ್ನಾಗಿ ಮಾಡಿಬಿಟ್ಟರು. ಎಂತಹ ಘನತೆವಂತರೆಂದರೆ ಯಾವ ಹಣ ಬಲವೂ, ಸೈನ್ಯ ಬಲವೂ ಬಗ್ಗಿಸಲಾರದಂತದ್ದು. ಹೀಗಾಗಿ ನಮ್ಮ ಹೋರಾಟ ಪ್ರಜಾಪ್ರಭುತ್ವ ಪರಂಪರೆಯ ಹೋರಾಟ ಕೂಡ ಆಗಿಹೋಯಿತು. ಗಮನಿಸಬೇಕು. ಭಾರತದ ಸ್ವಾತಂತ್ರ್ಯ ಹಿಂಸಾತ್ಮಕ ಮಾರ್ಗಗಳಿಂದ ಬಂದಿದ್ದರೆ ನಾವು ಪ್ರಜಾಪ್ರಭುತ್ವ ದೇಶವಾಗಿ ಉಳಿಯುತ್ತಿರಲಿಲ್ಲವೇನೋ. ಏಕೆಂದರೆ ಹಿಂಸಾತ್ಮಕ ಚಳವಳಿಗಳ ನಾಯಕತ್ವ ವಹಿಸಿದವರಿಗೆ ಅಧಿಕಾರ ಬಿಟ್ಟು ಕೊಡುವ ಮನಸ್ಸಿರುವುದಿಲ್ಲ. ಸೈನ್ಯ ಬಲದ ಹೋರಾಟಗಳು ಒಂದು ವ್ಯಕ್ತಿ ಅಥವಾ ವ್ಯವಸ್ಥೆ ತನ್ನನ್ನು ತಾನು ಬಲಪಡಿಸಿಕೊಳ್ಳುವ ಹೋರಾಟಗಳಾಗಿರುತ್ತವೆ. ಅಂತಹ ಹೋರಾಟಗಳು ಜನರ ಕೈಗೆ ಅಧಿಕಾರ ನೀಡುವುದಿಲ್ಲ. ಆದರೆ ಗಾಂಧಿ ದೇಶಾದ್ಯಂತ ಸೃಷ್ಟಿಸಿದ ಜನ ಬಡವರಾಗಿದ್ದರೂ ಕೂಡ ನೈತಿಕವಾಗಿ ಶ್ರೀಮಂತರಾಗಿದ್ದವರು. ಬೇರೆಯವರ ದಮ್ಮಡಿ ಕಾಸು ಬಯಸಿದವರಲ್ಲ. ಸರಕಾರದಿಂದಲೂ ಕೂಡ ಏನನ್ನೂ ಬಯಸಿದವರಲ್ಲ. ತ್ಯಾಗ ಮಾಡಲು ಸಿದ್ಧವಿದ್ದವರು.

ಇನ್ನೂ ಒಂದು ಸೂಕ್ಷ್ಮ ವಿಚಾರವಿದೆ. ಬಹುಶಃ ಗಾಂಧೀಜಿಗೂ ಗೊತ್ತಿತ್ತು. ಏನೆಂದರೆ ಅಂದಿನ ಸಂದರ್ಭದಲ್ಲಿ ಸೈನ್ಯದ ಮೂಲಕ ಹೋರಾಟ ನಡೆಸಿದ್ದರೆ ಬಹುಶಃ ನಾವು ಗೆಲ್ಲುವುದು ಅನುಮಾನವಿತ್ತು. ಏಕೆಂದರೆ ಭಾರತಕ್ಕೆ ಅಂದು ಅಂತಹ ಸೈನ್ಯದ ಶಕ್ತಿ ಇರಲಿಲ್ಲ. ಮತ್ತು ಯುದ್ಧಗಳಿಗೆ ಬೇಕಾಗುವ ಹಣ ನಮ್ಮ ಬಳಿ ಇರಲಿಲ್ಲ. ಅಲ್ಲದೆ ನಾವು ಅಂದು ಗೆಲ್ಲಲು ಬೇರೆ ದೇಶದ ಸಹಾಯ ಪಡೆದಿದ್ದರೆ ನಾವು ಆ ದೇಶದ ಅಡಿಯಾಳಾಗಿ ಹೋಗುತ್ತಿದ್ದೆವು. ಯಾಕೆಂದರೆ ಯಾವ ದೇಶವೂ ಇನ್ನೊಂದಕ್ಕೆ ಪುಕ್ಕಟೆ ಸಹಾಯ ಮಾಡುವುದಿಲ್ಲ. ಗಾಂಧಿ ಪ್ರಸ್ತುತತೆ /ಅಪ್ರಸ್ತುತತೆ ಚರ್ಚಿಸುವಾಗ ಬಹುಶಃ ನಾವು ಈ ವಿಚಾರಗಳನ್ನು ಲಕ್ಷ್ಯದಲ್ಲಿಕೊಳ್ಳಬೇಕು.

3. ಇನ್ನೂ ಒಂದು ಮಹತ್ವದ ವಿಷಯ. ಏನೆಂದರೆ ಗಾಂಧಿಗೆ ದೇಶಗಳ, ಸರಕಾರಗಳ ಕುರಿತೇ ಅನುಮಾನವಿತ್ತು. ಅಂದರೆ ಸಂಘಟಿತ ದೇಶಗಳನ್ನು, ಸರಕಾರಗಳನ್ನು ನಡೆಸುವ ʻನಾಯಕರು’ ಒಳಗಿನಿಂದ ಜನವಿರೋಧಿಯಾಗಿರಲು ಸಾಧ್ಯವಿದೆ ಎಂಬುದು ಅವರಿಗೆ ತಿಳಿದಿತ್ತು. ಅಂದಿನ ರಶಿಯಾ, ಚೀನಾ ಇಂತಹ ದೇಶಗಳ ಜನರ ಪರಿಸ್ಥಿತಿ ನೋಡಿದ್ದ ಗಾಂಧಿಗೆ ದೇಶಕ್ಕಿಂತಲೂ ಜನರ ಕಲ್ಯಾಣ ಮುಖ್ಯ ಎನ್ನುವುದು ತಿಳಿದಿತ್ತು. ದುರ್ಬಲರ, ದೀನ ದಲಿತರ, ಮಹಿಳೆಯರ ಮತ್ತು ಅಶಕ್ತರ ಕಾಳಜಿಯೇ ಹೆಚ್ಚು ಮಹತ್ವದ್ದಾಗಿತ್ತು. ನಿಜದ ಪ್ರಜಾಪ್ರಭುತ್ವ ಸಾಧಿಸಲು ಹೊರಟವರು ಗಾಂಧಿ. ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಅವರು ಮುಂದಿಟ್ಟಿದ್ದು ಇಂತಹ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿಯೇ. ವಿಕೇಂದ್ರೀಕ್ರತ ಆಡಳಿತದಲ್ಲಿ ಸರಕಾರಗಳು ವಿಪರೀತ ಬಲಗೊಳ್ಳುವ ಅಗತ್ಯತೆ ಇರುವುದಿಲ್ಲ. ಆಗ ಅವು ನಿಜವಾಗಿ ಜನರ ಸೇವೆಯಲ್ಲಿ ತೊಡಗಬಹುದು ಎನ್ನುವುದು ಗಾಂಧಿಗೆ ಅರಿವಿತ್ತು.

ಇದನ್ನೂ ಓದಿ | ಸವಿಸ್ತಾರ ಅಂಕಣ | ‘ಭಾರತದ ಜಾತ್ಯತೀತತೆʼ ಎನ್ನುವುದು ʼತುಷ್ಟೀಕರಣʼಕ್ಕೆ ಹೊದಿಸಿದ ಕವಚ

4. ಗಾಂಧಿ ದೇವಮಾನವರಾಗಿರಲಿಲ್ಲ. ಅವರೊಳಗೂ ಎಕ್ಸೆಂಟ್ರಿಕ್ ಎಂದು ಹೇಳಬೇಕಾದ ವರ್ತನೆಗಳಿದ್ದವು. ಉದಾಹರಣೆಗೆ ಗಾಂಧಿ ಕಸ್ತೂರಬಾ ಮೇಲೆ ವಿಪರೀತದ ಕಂಡಿಷನ್‌ಗಳನ್ನು ಹೇರಿದ್ದರು. ಕಾಮವನ್ನು ತ್ಯಜಿಸಿದ್ದರು. ಮಕ್ಕಳ ಮೇಲೆ ಕೂಡ ಅಪಾರ ಒತ್ತಡಗಳನ್ನು ಹೇರಿದ್ದರು. ಅದು ಹೋಗಲಿ. ಗಾಂಧಿ ತೆಗೆದುಕೊಂಡ ಇತರ ಹಲವಾರು ನಿರ್ಣಯಗಳು ಕೂಡ ರಾಜಕೀಯದ ದೃಷ್ಟಿಯಿಂದ ತಪ್ಪಾಗಿದ್ದವು ಎಂದೇ ಹೇಳಬೇಕು. ಮುಖ್ಯವಾಗಿ (ದೇಶವಿಭಜನೆ ತಪ್ಪಿಸಲು) ʻಜಿನ್ನಾ ಪ್ರಧಾನಿಯಾಗಲಿ’ ಎಂದು ಗಾಂಧಿ ಹೇಳಿದ್ದರು. ಅಲ್ಲದೆ ಪಾಕಿಸ್ತಾನ ಹೋರಾಟದ ಸಿದ್ಧತೆಯಲ್ಲಿದ್ದರೂ ಕೂಡ ಆ ದೇಶಕ್ಕೆ ಒಪ್ಪಂದದ ಪ್ರಕಾರ ನೀಡಬೇಕಾಗಿದ್ದ ಹಣವನ್ನು ನೀಡಬೇಕು ಎಂದು ಹೇಳಿದ್ದರು. ತಮ್ಮ ವೃದ್ಧಾಪ್ಯದಲ್ಲಿ ತಮಗೆ ಕಾಮವನ್ನು ಗೆಲ್ಲಲು ಸಾಧ್ಯವಾಗಿದೆಯೇ ಎನ್ನುವದನ್ನು ಖಾತ್ರಿಪಡಿಸಿಕೊಳ್ಳುವ ಸಲವಾಗಿ ಚಿತ್ರವಿಚಿತ್ರ ಪರೀಕ್ಷೆಗಳಿಗೆ ತಮ್ಮನ್ನು ಒಡ್ಡಿಕೊಂಡಿದ್ದರು. ಆದರೆ ಇಲ್ಲೆಲ್ಲ ನಾವು ಒಂದು ವಿಷಯ ಗಮನಿಸಬೇಕು. ಏನೆಂದರೆ ಗಾಂಧಿ ಬರೇ ರಾಜಕಾರಣಿಯಾಗಿರಲಿಲ್ಲ. ಆಳವಾಗಿ ಧಾರ್ಮಿಕರಾಗಿದ್ದ ಅವರು ಸಂತನಾಗುವ, ಅಂದರೆ ತಮ್ಮನ್ನು ಪರಿಶುದ್ಧನನ್ನಾಗಿಸಿಕೊಳ್ಳುವ, ಆತ್ಮವನ್ನು ಉನ್ನತಮಟ್ಟಕ್ಕೆ ಕರೆದೊಯ್ಯುವ, ʻಸತ್ಯವನ್ನು’ ಅರಸುವ ನಿರಂತರ ಪರೀಕ್ಷೆಯಲ್ಲಿ ತೊಡಗಿದ್ದರು. ಬರೇ ರಾಜಕಾರಣಿಯಾದರೆ ಅವರು ಹಲವು ವಿಷಯಗಳನ್ನು ಮುಚ್ಚಿಡುತ್ತಿದ್ದರೇನೋ. ಆದರೆ ಗಾಂಧಿ ತಮ್ಮ ಜೀವನವನ್ನು ಪಾರದರ್ಶಕವಾಗಿಟ್ಟುಕೊಳ್ಳುವ ಹಂಬಲದಲ್ಲಿ ಎಲ್ಲವನೂ ಹೇಳಿಕೊಂಡುಬಿಟ್ಟರು. ಬಹುಶಃ ಅವರಿಗೆ ತಮ್ಮ ಸಾವೂ ದೊಡ್ಡ ವಿಷಯವಾಗಿರಲಿಲ್ಲ. ಆತ್ಮಶುದ್ಧಿ ಹೆಚ್ಚು ಮಹತ್ವದ್ದಾಗಿತ್ತು.

5. ಮತ್ತೊಂದು ವಿಷಯ ಬಹುಶಃ ನಾವು ಮರೆಯಬಾರದು. ಏನೆಂದರೆ ಗಾಂಧಿ ಹಿಂದೂ ಧರ್ಮದ ಕಟ್ಟಾ ಅನುಯಾಯಿ. ತಮ್ಮನ್ನು ತಾನು ಸನಾತನಿ ಹಿಂದು ಎಂದು ಕರೆದುಕೊಂಡವರು. ನಮ್ಮ ದೇಶದ ಸ್ವಾತಂತ್ರ್ಯ ಚಳವಳಿ ಹಿಂದೂ ಧರ್ಮದ ಮೌಲ್ಯಗಳನ್ನು, ತಂತ್ರಗಳನ್ನು ಆಧಾರಸ್ತಂಭಗಳನ್ನಾಗಿ ಇಟ್ಟುಕೊಂಡ ಚಳವಳಿ. ಹಿಂದೂ ಮೌಲ್ಯಗಳ ಪುನರುತ್ಥಾನ ಸಾಧಿಸಿದ ಚಳವಳಿ. ಆದರೂ ಕೂಡ ಮುಖ್ಯವಾಗಿ ಸ್ವಾತಂತ್ರ್ಯಾನಂತರದ ಕೆಲವು ಘಟನೆಗಳನ್ನು ಬಿಡಿಬಿಡಿಯಾಗಿ ನೋಡಿದರೆ ಗಾಂಧಿ ಉದ್ದೇಶಗಳ ಕುರಿತು ಸಾಧಾರಣ ವ್ಯಕ್ತಿಯೊಬ್ಬನಿಗೆ ಅನುಮಾನ ಬಂದರೆ ಆಶ್ಚರ್ಯವಿಲ್ಲ. ಗಾಂಧಿಯ ಇಂತಹ ಕೆಲವು ವೈರುಧ್ಯಗಳನ್ನು ಹೇಗೆ ಅರ್ಥಮಾಡಿಕೊಳ್ಳುವುದು ಎಂಬ ಪ್ರಶ್ನೆ ಇದೆ. ಬಹುಶಃ ಇವನ್ನು ಗಾಂಧಿಯ ಸಮಗ್ರ ವ್ಯಕ್ತಿತ್ವದ ಭಾಗವಾಗಿ ನೋಡಬೇಕು. ಬಹುಶಃ ತಮ್ಮ ಜೀವನದ ಕೊನೆಯ ಹಂತಗಳಲ್ಲಿ ಗಾಂಧಿಗೆ ತಾವು ರಾಜಕೀಯವನ್ನು ಮೀರಿದ ಒಂದು ಮಹಾ ಆತ್ಮವಾಗಬೇಕು, ಸಂತನಾಗಬೇಕು ಎಂದು ಇದ್ದ ಅಭಿಲಾಷೆಯೇ ಅವರ ಕೆಲವು ನಿರ್ಣಯಗಳನ್ನು ನಿರೂಪಿಸಿರಬಹುದು.

ಇದನ್ನೂ ಓದಿ | ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿಗೆ ಮೋದಿ ನಮನ

6. ಗಾಂಧಿಯಂತಹ ಇಡೀ ದೇಶದ ಮೈಮನಗಳನ್ನು ಆವರಿಸಿದ ವ್ಯಕ್ತಿ ಅಪ್ರಸ್ತುತವೆಂದು, ಅಥವಾ ದೇಶದ ಯುವಜನತೆ ಗಾಂಧಿಯಿಂದ ದೂರಹೋಗುತ್ತಿರಬಹುದೆಂದು, ಹಲವರು ಅಥವಾ ಕನಿಷ್ಟ ಕೆಲವರು ಭಾವಿಸುತ್ತಿರುವ ಕಾರಣಗಳನ್ನೂ ಹುಡುಕಿಕೊಳ್ಳಬೇಕು. ಬಹುಶಃ ಇದಕ್ಕೆ ಕಾರಣ ಗಾಂಧಿಯಲ್ಲ. ಗಾಂಧೀಜಿಯ ಹೆಸರನ್ನು, ಭಾವಚಿತ್ರವನ್ನು ಬಳಸಿಕೊಂಡು ಸುದೀರ್ಘಕಾಲ ನಡೆದುಬಂದ ʻಖುಷಿಪಡಿಸುವ ರಾಜಕೀಯ’ ಮತ್ತು ಸಬ್ಸಿಡಿ ರಾಜಕೀಯ. ಈ ರಾಜಕೀಯದಿಂದ ಬೇಸತ್ತಿರುವ ಸಮಕಾಲೀನ ಯುವಜನತೆ ಅದಕ್ಕೆಲ್ಲ ಗಾಂಧಿಯೇ ಕಾರಣ ಎಂದು ನಂಬಿರಲೂ ಸಾಧ್ಯವಿದೆ.

ಬಹುಶಃ ಗಾಂಧೀಜಿಯ ಮರುಮೌಲ್ಯಮಾಪನ ಮೇಲೆ ಕಾಣಿಸಿದ ವಿಷಯಗಳನ್ನೂ ಪರಿಗಣಿಸಬೇಕು.

(ಲೇಖಕರು ಪ್ರಾಧ್ಯಾಪಕ, ಕವಿ, ಕತೆಗಾರ, ವಿಮರ್ಶಕ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Bengaluru News: ಕಲಾ ರಸಿಕರ ಮನಸೂರೆಗೊಳಿಸಿದ ‘ಶ್ರದ್ಧಾ ನೃತ್ಯಾರ್ಣವʼ ವಿಶೇಷ ನೃತ್ಯೋತ್ಸವ

Bengaluru News: ಬೆಂಗಳೂರಿನ ಶ್ರದ್ಧಾ ನೃತ್ಯ ಸಂಸ್ಥೆಯ 14ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಮಲ್ಲೇಶ್ವರದ ವಯ್ಯಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿದ್ದ ‘ಶ್ರದ್ಧಾ ನೃತ್ಯಾರ್ಣವʼವಿಶೇಷ ನೃತ್ಯೋತ್ಸವವು ಕಲಾ ರಸಿಕರ ಮನಸೂರೆಗೊಳಿಸಿತು.

VISTARANEWS.COM


on

Shraddha Nrityarnava special dance festival in Bengaluru
Koo

ಬೆಂಗಳೂರು: ನಗರದ ಶ್ರದ್ಧಾ ನೃತ್ಯ ಸಂಸ್ಥೆಯ 14ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಶ್ರದ್ಧಾ ನೃತ್ಯಾರ್ಣವ’ ವಿಶೇಷ ನೃತ್ಯೋತ್ಸವ ಕಲಾ ರಸಿಕರ (Bengaluru News) ಮನಸೂರೆಗೊಂಡಿತು.

ನಗರದ ಮಲ್ಲೇಶ್ವರದ ವಯ್ಯಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಉತ್ಸಾಹಿ ಕಲಾವಿದರಿಂದ ನೃತ್ಯ ಸಮರ್ಪಣೆಯಾಗಿದ್ದು ವಿಶೇಷ. ಇದುವೇ ‘ನೃತ್ಯಾರ್ಣವʼದ ವಿಶೇಷ.

ದೇಶದ ಸುವಿಖ್ಯಾತ ರಚನೆಕಾರರ ಕೃತಿಗಳನ್ನು ಮೊದಲ ಹಂತದಲ್ಲಿ ನೃತ್ಯಾರ್ಣವಕ್ಕೆ ಸಮರ್ಥವಾಗಿ ಬಳಸಿಕೊಂಡು ಅದಕ್ಕೆ ತಕ್ಕಂತೆ ಚೇತೋಹಾರಿಯಾಗಿ ಯುವತಿಯರು ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.

ಇದನ್ನೂ ಓದಿ: Foreign Investment: ರಾಜ್ಯದಲ್ಲಿ ವಾಹನ ಬಿಡಿಭಾಗ ತಯಾರಿಕೆ; ಬಂಡವಾಳ ಹೂಡಿಕೆಗೆ ದ.ಕೊರಿಯಾ ಒಲವು

ಉತುಕ್ಕಾಡು ವೆಂಕಟಸುಬ್ಬಯ್ಯ ಅವರ ಆನಂದ ನರ್ತನ ಗಣಪತಿ, ತುಳಸೀ ದಾಸರ ಶ್ರೀ ರಾಮಚಂದ್ರ ಕೃಪಾಳು ಭಜಮನ, ಪದ್ಮಚರಣರ ಪ್ರದೋಷ ಸಮಯದಿ ಪರಶಿವ ತಾಂಡವ, ಪುರಂದರ ದಾಸರ ಭಾಗ್ಯದ ಲಕ್ಷ್ಮಿ ಬಾರಮ್ಮ – ಕೃತಿಗಳಿಗೆ ಸಂಸ್ಥೆಯ ಕಿರಿಯ ಕಲಾವಿದರು ನರ್ತಿಸಿ, ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು.

ಕಲಾಭಿವ್ಯಕ್ತಿಗೆ ಹೊಸ ಆಯಾಮ

ಕಾರ್ಯಕ್ರಮದಲ್ಲಿ ‘ಅಮೃತ ಮಂಥನ’ ನೃತ್ಯ ರೂಪಕ ಕಲಾಭಿವ್ಯಕ್ತಿಗೆ ಹೊಸ ಆಯಾಮವನ್ನೇ ನೀಡಿತು. ಸಂಸ್ಥೆ ನಿರ್ದೇಶಕಿ ಶಮಾ ಕೃಷ್ಣ ಹಾಗು ಹಿರಿಯ ಕಲಾವಿದರಿಂದ ಅಮೃತ ಮಂಥನ ಎಂಬುವ ರಸಪೂರ್ಣ ನೃತ್ಯ ನಾಟಕದ ಪ್ರಸ್ತುತಿ ವಿಶೇಷವಾಗಿ ಮೂಡಿಬಂತು. ಇದಕ್ಕೆ ಶತಾವಧಾನಿ ಡಾ. ಆರ್. ಗಣೇಶ್‌ರ ಸಾಹಿತ್ಯ, ಕಲಾವಿದ ಪ್ರವೀಣ್ ಡಿ. ರಾವ್ ಸಂಗೀತ ಮತ್ತು ವಿದುಷಿ ಶಮಾ ಕೃಷ್ಣ ಅವರ ನೃತ್ಯ ಸಂಯೋಜನೆ ಸಮರ್ಥವಾದ ನ್ಯಾಯ ಒದಗಿಸಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ʼಅಮೃತ ಮಂಥನ’ ಕ್ಕೆ ಖ್ಯಾತ ಸಂಶೋಧಕಿ ಪ್ರೊ. ಕರುಣಾ ವಿಜಯೇಂದ್ರ, ಖ್ಯಾತ ನೃತ್ಯ ಪಟುಗಳಾದ ಶೇಷಾದ್ರಿ ಅಯ್ಯಂಗಾರ್ ಮತ್ತು ನವ್ಯಾ ನಟರಾಜ ಅವರು ಕಲಾ ರಸದೌತಣಕ್ಕೆ ಸಾಕ್ಷಿಯಾಗಿದ್ದು ಬಹು ವಿಶೇಷ.

ಇದನ್ನೂ ಓದಿ: Gold Rate Today: ಮತ್ತೆ ಮೇಲ್ಮುಖವಾಗಿ ಸಾಗಿದ ಚಿನ್ನದ ದರ; ಇಂದಿನ ಬೆಲೆ ಚೆಕ್‌ ಮಾಡಿ

ಹಿರಿಯ ಭರತನಾಟ್ಯ ಕಲಾವಿದೆ ವಿದುಷಿ ಶಮಾ ಕೃಷ್ಣ ಮಾತನಾಡಿ, ನನ್ನ ಕನಸು, ಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಿರಿಯ ಮತ್ತು ಕಿರಿಯ ಶಿಷ್ಯರು ಸೂಕ್ತವಾಗಿ ಸ್ಪಂದಿಸಿದ್ದಾರೆ. ನೃತ್ಯ ರೂಪಕ ಪ್ರಸ್ತುತಿ ಸಂದರ್ಭ ಕಲಾವಿದರ ಪ್ರತಿ ಹೆಜ್ಜೆಯಲ್ಲೂ ಹೊಸತನ ಮೂಡಿದೆ. ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಹೊಸ ಪ್ರಯೋಗಕ್ಕೆ ಅಣಿಯಾಗಲು ‘ನೃತ್ಯಾರ್ಣವ’ ಹೊಸ ಚೈತನ್ಯ ನೀಡಿದೆ ಎಂದು ತಿಳಿಸಿದ್ದಾರೆ.

Continue Reading

ಕರ್ನಾಟಕ

Yuva Sambhrama 2024: ಬೆಂಗಳೂರಿನಲ್ಲಿ ಜು.12ರಿಂದ 3 ದಿನ ಯುವ ಸಂಭ್ರಮ

Yuva Sambhrama 2024: ಸಂಗಮ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಟರ್ಬೋಸ್ಟೀಲ್‌ ಮತ್ತು ವಿಸ್ತಾರ ನ್ಯೂಸ್‌ ಸಹಯೋಗದಲ್ಲಿ ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಇದೇ ಜು. 12 ರಿಂದ 14 ರವರೆಗೆ ಮೂರು ದಿನಗಳ ಕಾಲ “ಯುವ ಸಂಭ್ರಮ 2024” ಕಾರ್ಯಕ್ರಮ ಏರ್ಪಡಿಸಲಾಗಿದೆ. ಚಿಣ್ಣರ ಮೇಳ, ನೃತ್ಯ ಸಂಭ್ರಮ, ಉಚಿತ ಆರೋಗ್ಯ ತಪಾಸಣೆ, ಉದ್ಯೋಗ ಮೇಳ, ರಸ ಸಂಜೆ ಕಾರ್ಯಕ್ರಮಗಳು ಜರುಗಲಿವೆ.

VISTARANEWS.COM


on

Yuva Sambhrama 2024 programme for 3 days from July 12 in Bengaluru
Koo

ಬೆಂಗಳೂರು: ಸಂಗಮ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಟರ್ಬೋಸ್ಟೀಲ್‌ ಮತ್ತು ವಿಸ್ತಾರ ನ್ಯೂಸ್‌ ಸಹಯೋಗದಲ್ಲಿ ನಗರದ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಇದೇ ಜು. 12ರಿಂದ 14 ರವರೆಗೆ ಮೂರು ದಿನಗಳ ಕಾಲ “ಯುವ ಸಂಭ್ರಮ 2024” ಕಾರ್ಯಕ್ರಮ (Yuva Sambhrama 2024) ಏರ್ಪಡಿಸಲಾಗಿದೆ.

ಇದನ್ನೂ ಓದಿ: Gold Rate Today: ಮತ್ತೆ ಮೇಲ್ಮುಖವಾಗಿ ಸಾಗಿದ ಚಿನ್ನದ ದರ; ಇಂದಿನ ಬೆಲೆ ಚೆಕ್‌ ಮಾಡಿ

ಜು.12 ರಂದು ಬೆಳಗ್ಗೆ 10 ಗಂಟೆಗೆ ಚಿಣ್ಣರ ಮೇಳ ಏರ್ಪಡಿಸಲಾಗಿದ್ದು, ಗಾಯನ, ರಸಪ್ರಶ್ನೆ, ಚಿತ್ರಕಲೆ ಹಾಗೂ ಆಶುಭಾಷಣ ಸ್ಪರ್ಧೆ ನಡೆಯಲಿದೆ. ಸಂಜೆ 5 ಗಂಟೆಗೆ ನೃತ್ಯ ಸಂಭ್ರಮ ನಡೆಯಲಿದ್ದು, ಭಾರತೀಯ ಸಂಸ್ಕೃತಿಯ ವಿದ್ಯಾಪೀಠ ಶಾಲೆ, ಸುಮನ್ಸ್‌ ಕಾನ್ವೆಂಟ್‌, ಎಂ.ಇ.ಎಸ್.‌ ಶಾಲೆ ಮತ್ತು ಕಾಲೇಜು ಹಾಗೂ ಲಹರಿ ಮ್ಯೂಜಿಕಲ್‌ ಅಕಾಡಮಿ ವಿದ್ಯಾರ್ಥಿಗಳು, ನರ್ತನ ನೃತ್ಯ ವೃಂದ ಹಾಗೂ ಪಾರ್ವತಿ ನೃತ್ಯ ವಿಹಂಗಮ ತಂಡದಿಂದ ನೃತ್ಯ ಸಂಭ್ರಮ ಜರುಗಲಿದೆ.

ಇದನ್ನೂ ಓದಿ: Foreign Investment: ರಾಜ್ಯದಲ್ಲಿ ವಾಹನ ಬಿಡಿಭಾಗ ತಯಾರಿಕೆ; ಬಂಡವಾಳ ಹೂಡಿಕೆಗೆ ದ.ಕೊರಿಯಾ ಒಲವು

ಜು. 12 ರಿಂದ 14 ರವರೆಗೆ ಆರೋಗ್ಯ ಮೇಳ (ಉಚಿತ ಆರೋಗ್ಯ ತಪಾಸಣೆ) ಏರ್ಪಡಿಸಲಾಗಿದೆ. ಜು.13 ಮತ್ತು 14 ರಂದು ಬೆಳಿಗ್ಗೆ 10 ಗಂಟೆಯಿಂದ ಉದ್ಯೋಗ ಮೇಳ ಆಯೋಜಿಸಲಾಗಿದ್ದು, 40ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿವೆ.

ಜು.13 ಮತ್ತು 14 ರಂದು ಎರಡು ದಿನಗಳ ಕಾಲ ಸಂಜೆ 6 ಗಂಟೆಗೆ ಪ್ರಸಿದ್ಧ ಕಲಾವಿದರಿಂದ ರಸ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸರ್ವರಿಗೂ ಉಚಿತ ಪ್ರವೇಶ ವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Continue Reading

ಅಂಕಣ

ನನ್ನ ದೇಶ ನನ್ನ ದನಿ: ಜಗತ್ತಿನ ಇತಿಹಾಸ ಕನ್ನಡದಲ್ಲಿ ತರಲು ಆಸೆಪಟ್ಟಿದ್ದ ನಿರಂಜನ

ನನ್ನ ದೇಶ ನನ್ನ ದನಿ ಅಂಕಣ: ಐವತ್ತು ವರ್ಷಗಳ ಹಿಂದೆಯೇ ನಿರಂಜನರು “ಕಿರಿಯರ ವಿಶ್ವಕೋಶ” ತಂದರು. ಇಂದಿನಂತೆ ಕಂಪ್ಯೂಟರ್, ಅಂತರಜಾಲ, ಫೋನ್, ಇತ್ಯಾದಿ ಇಲ್ಲದ ಆ ಕಾಲಘಟ್ಟದಲ್ಲಿ ನಿರಂಜನ ಅವರ ಸಂಗ್ರಹ, ಸಂಪಾದನೆ ಮತ್ತು ಪ್ರಸ್ತಾವನೆಗಳು ನಿಜವಾಗಿಯೂ ಸಾಹಸವೇ. ವಿವಿಧ ಪ್ರವರ್ಗಗಳ ಅವರ ಕೃತಿಗಳನ್ನು, ಸಂಪಾದಿತ ಕೃತಿಗಳನ್ನು ನೋಡುವಾಗ, ನಿರಂಜನರು ಅದೆಂತಹ ಅದ್ಭುತ ಸಾಧಕರು, ಎನಿಸಿ ಗೌರವ ಇನ್ನಷ್ಟು ಹೆಚ್ಚಾಗುತ್ತದೆ.

VISTARANEWS.COM


on

niranjana ನನ್ನ ದೇಶ ನನ್ನ ದನಿ ಅಂಕಣ
Koo

ನಿರಂಜನ ಅವರ ಜನ್ಮ ಶತಮಾನೋತ್ಸವ

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: “ಇಡೀ ಜಗತ್ತಿನ ಇತಿಹಾಸವನ್ನು (History) ಕನ್ನಡದಲ್ಲಿ ಬರೆಯಬೇಕು ಎನಿಸುತ್ತಿದೆ” ಎಂದು ಆಸೆಪಟ್ಟಿದ್ದರು ನಿರಂಜನ (Niranjana).

ಇದೀಗ ಲೇಖಕ, ಸಂಪಾದಕ, ಕಾದಂಬರಿಕಾರ, ಅಪರೂಪದ ಸಾಧಕ “ನಿರಂಜನ” (ಜನನ : ಜೂನ್ 1924) ಅವರ ಶತಮಾನೋತ್ಸವ. ನಿರಂಜನ ಎಂದರೆ ಜ್ಞಾನ, ದೋಷರಹಿತವಾದುದು ಎಂಬೆಲ್ಲಾ ಅರ್ಥಗಳಿವೆ. ಶಿವ ಎನ್ನುವ ಅರ್ಥವೂ ಇದೆ. ಮೂಲತಃ ಕುಳಕುಂದ ಶಿವ ರಾವ್ ಆಗಿದ್ದ ಅವರು “ನಿರಂಜನ” ಎಂಬ ಕಾವ್ಯನಾಮ ಬಳಸಿದುದು ಅನ್ವರ್ಥವೇ ಆಗಿತ್ತು. ಕನ್ನಡ ಸಾಹಿತ್ಯದಲ್ಲಿ ಶಿವರಾಮ ಕಾರಂತರಂತೆ, ಮಹತ್ತ್ವದ ಮತ್ತು ಬಹು-ಆಯಾಮದ ಸಾಹಿತ್ಯ ರಚನೆ ಮಾಡಿದವರು ವಿರಳ. ಆದರೆ ಎಚ್ಚೆಸ್ಕೆ, ನಿರಂಜನ ಅವರನ್ನು ಈ ಕ್ಷಣಕ್ಕೆ ನೆನಪು ಮಾಡಿಕೊಳ್ಳಬಹುದು. ಸ್ವಯಂಭೂ, ಸ್ವಯಂಘೋಷಿತ ಸಾಹಿತ್ಯ ಧುರಂಧರ ಭಯಂಕರರ ಮಾಫಿಯಾದ ಅಬ್ಬರದಲ್ಲಿ, ಪ್ರಶಸ್ತಿ – ಸ್ಥಾನಮಾನ ಇತ್ಯಾದಿಗಳಿಗೆ ಹಾತೊರೆಯದೆ ತಮ್ಮ ಪಾಡಿಗೆ ತಾವು ಶುದ್ಧ ಸಾಹಿತ್ಯ ಸೇವೆಯನ್ನು ವ್ರತದಂತೆ ಪಾಲಿಸಿದವರು ಈ ಎಚ್ಚೆಸ್ಕೆ, ನಿರಂಜನ ಅಂತಹವರು.

1982ರಲ್ಲಿ ಒಮ್ಮೆ ಹೀಗಾಯಿತು. ಆಕಾಶವಾಣಿಯಲ್ಲಿ ಸಂಸ್ಕೃತ ವಾರ್ತೆಗಳು ಆರಂಭವಾದವು. ಕನ್ನಡದ ನಮ್ಮ ಸಮಾಜವಾದೀ, ಸಾಮ್ಯವಾದೀ ಲೇಖಕರು ಭಾರೀ ಗದ್ದಲವೆಬ್ಬಿಸಿದರು. ಅವರದ್ದೇ ನಿಯಂತ್ರಣದ ಪತ್ರಿಕೆಗಳನ್ನು ಓದಿದರೆ, ಏನೋ ಆಗಬಾರದ್ದು ಆಗಿಹೋಗಿದೆ, ಪ್ರಳಯವೇ ಆಗುತ್ತಿದೆ, ಎಂಬಂತಹ ಅಭಿಪ್ರಾಯ ಮೂಡುತ್ತಿತ್ತು. ಒಂದು ಪ್ರತಿಭಟನಾ ಸಭೆಯನ್ನೇ ಆಯೋಜಿಸಲಾಯಿತು. ನಾನೂ ಸಭಿಕನಾಗಿ ಹೋಗಿದ್ದೆ. ನಿರಂಜನ ಅವರದ್ದೇ ಅಧ್ಯಕ್ಷತೆ. ಒಬ್ಬೊಬ್ಬರಾಗಿ “ಕೆಲವೇ ಕೆಲವು ನಿಮಿಷಗಳ ಈ ಸಂಸ್ಕೃತ ವಾರ್ತೆಯ ಪ್ರಸಾರದಿಂದ” ಹೇಗೆ ಮತ್ತು ಎಷ್ಟು ಅನಾಹುತವಾಗುತ್ತಿದೆ, ಎಂದೆಲ್ಲಾ ಕೂಗಾಡತೊಡಗಿದರು. ಅನಂತರ ನಮ್ಮ ಸಮಾಜವಾದೀ ಲೇಖಕ ಮಿತ್ರ ಕಾಳಪ್ಪನವರು ಎದ್ದು ಮೈಕ್ ಮುಂದೆ ನಿಂತು ರೋದಿಸಲು ಪ್ರಾರಂಭಿಸಿದರು. “ನೋಡಿ, ಸತ್ತ ಭಾಷೆ ಸಂಸ್ಕೃತಕ್ಕೆ ಮಣೆ ಹಾಕಲಾಗುತ್ತಿದೆ. ಆದರೆ ಜನಭಾಷೆ ಉರ್ದುವಿಗೆ ಸ್ಥಾನವಿಲ್ಲ” ಇತ್ಯಾದಿ ಗಳಹತೊಡಗಿದರು. ತಡೆಯಲಾರದೆ, ನಾನು ಎದ್ದು ನಿಂತು ಗಟ್ಟಿಯಾಗಿ “ಎರಡಕ್ಕೂ ಹೋಲಿಕೆಯಿಲ್ಲ, ಉರ್ದುವಿಗೆ ಆಕಾಶವಾಣಿಯಲ್ಲಿ ಪ್ರತ್ಯೇಕ ಸ್ಟೇಷನ್ ಇದೆ” ಎಂದು ಆಕ್ಷೇಪಿಸಿದೆ. ನಮ್ಮ ಕಾಳಪ್ಪನವರಿಗೆ ಬರೀ ದ್ವೇಷ, ಪೂರ್ವಗ್ರಹಗಳೇ ಹೊರತು ಮಾಹಿತಿಯೂ ಇಲ್ಲ, ತಿಳಿವಳಿಕೆಯೂ ಇಲ್ಲ. ಸಭಾಂಗಣದಲ್ಲಿ ಆಗ ಗಲಾಟೆಯೇ ಆಗಿಹೋಯಿತು. ಸಭೆಯನ್ನೇ ಮುಗಿಸಬೇಕಾಯಿತು. ನಾನು ನೇರವಾಗಿ ಸಭಾಧ್ಯಕ್ಷರಾದ ನಿರಂಜನ ಅವರಲ್ಲಿಗೇ ಹೋಗಿ, ಪ್ರತ್ಯೇಕ ಉರ್ದು ಸ್ಟೇಷನ್ ಇರುವುದನ್ನು, ಸಂಸ್ಕೃತದಲ್ಲಿ ಕೇವಲ ಕೆಲವು ನಿಮಿಷಗಳ ವಾರ್ತೆ ಮಾತ್ರ ಬರುತ್ತಿದೆ, ಎಂಬಿತ್ಯಾದಿ ವಿವರ ಹೇಳಿದೆ. ಸಜ್ಜನರಾದ ಅವರು “You have a valid point” ಎಂದು ಒಪ್ಪಿಕೊಂಡರು.

ನವಕರ್ನಾಟಕ ಪ್ರಕಾಶನದ ಮಹತ್ತ್ವದ ಯೋಜನೆಗಳಲ್ಲೊಂದು ನಿರಂಜನ ಅವರು ಸಂಪಾದಕರಾಗಿದ್ದ 25 ಸಂಪುಟಗಳ “ವಿಶ್ವಕಥಾಕೋಶ” ಸರಣಿ. ಈ ಕಟ್ಟಿನಲ್ಲಿ ಧರಣಿ ಮಂಡಲ ಮಧ್ಯದೊಳಗೆ, ಆಫ್ರಿಕಾದ ಹಾಡು, ಕಾಡಿನಲ್ಲಿ ಬೆಳದಿಂಗಳು, ಚೆಲುವು, ಸುಭಾಷಿಣಿ, ವಿಚಿತ್ರ ಕಕ್ಷಿದಾರ, ಮಂಜು ಹೂವಿನ ಮದುವಣಿಗ, ಬೂದು ಬಣ್ಣದ ಕಾಂಗರೂ, ಹೆಜ್ಜೆಗುರುತು, ಅರಬಿ, ನೆತ್ತರು ದೆವ್ವ, ಬಾವಿ ಕಟ್ಟೆಯ ಬಳಿ, ಅದೃಷ್ಟ, ಸಜ್ಜನನ ಸಾವು, ಡೇಗೆ ಹಕ್ಕಿ, ಅವಸಾನ, ತಾತನ ಹುಟ್ಟುಹಬ್ಬ, ಬಾಲ ಮೇಧಾವಿ, ಇಬ್ಬರು ಗೆಳೆಯರು, ಅಬಿಂದಾ ಸಯೀದಾ, ನಿಗೂಢಸೌಧ, ಬೆಳಗಾಗುವ ಮುನ್ನ, ಮರಳುಗಾಡಿನ ಮದುವೆ, ಕಿವುಡು ವನದೇವತೆ, ಸಾವಿಲ್ಲದವರು ಸಂಪುಟಗಳಿವೆ.

ಜಗತ್ತಿನ ನೂರಾರು ದೇಶಗಳ ಹಲವು ನೂರು ಪ್ರಾತಿನಿಧಿಕ ಕಥೆಗಳು. ಅತ್ಯದ್ಭುತ ಸಂಚಯವದು. ನಿರಂಜನ ಅವರ ಸಂಪಾದಕತ್ವ ಎಂದರೆ, ಅಂತಹ ಯೋಜನೆಯ ಸತ್ತ್ವ ಏನು, ಪ್ರಾಮುಖ್ಯ ಏನು ಎಂದು ಅರಿಯಲು ಆ ಸಂಪುಟಗಳನ್ನೇ ಓದಬೇಕು, ಮುಖ್ಯವಾಗಿ ಆ ಎಲ್ಲ ಸಂಪುಟಗಳಿಗೆ ನಿರಂಜನ ಅವರು ಸಂಪಾದಕರಾಗಿ ಬರೆದ ಪ್ರಸ್ತಾವನೆಗಳನ್ನೂ ಓದಬೇಕು. ಆಯಾ ಸಂಕಲನದಲ್ಲಿ ಇರುವ ಕತೆಗಳು ಯಾವೆಲ್ಲ ದೇಶಗಳಿಗೆ ಸೇರಿವೆಯೋ, ಆ ದೇಶಗಳ ಪುಟ್ಟ ಸಾಂಸ್ಕೃತಿಕ ಇತಿಹಾಸವನ್ನೇ ಅವರು ನೀಡಿದ್ದಾರೆ. ಅದೊಂದು ದಾಖಲೆ, ಅದೊಂದು ಅದ್ಭುತ. ನಿರಂಜನ ಅವರು ಒಂದು ಚಿಕ್ಕ ಕಿಂಡಿಯಲ್ಲಿ ಜಗತ್ತಿನ ವಿಶ್ವರೂಪ ದರ್ಶನವನ್ನೇ ಮಾಡಿಸಿದ್ದರು, ಮಾಡಿಸಿದ್ದಾರೆ (ಮುಂದೆ ಪ್ರಕಾಶಕರು ಈ ಪ್ರಸ್ತಾವನೆಗಳನ್ನೇ ಪ್ರತ್ಯೇಕ ಸಂಪುಟವನ್ನಾಗಿ ಹೊರತಂದು ಮೆಚ್ಚುವಂತಹ ಕೆಲಸ ಮಾಡಿದರು).

ಈ “ವಿಶ್ವಕಥಾಕೋಶ” ಸಂಪುಟಗಳ ಒಂದು ಸರಣಿಯ ಲೋಕಾರ್ಪಣೆಗೆ, ನನ್ನ ನೆಚ್ಚಿನ ಅಂಕಣಕಾರರಾದ ಹಾ.ಮಾ.ನಾಯಕರು ಬಂದಿದ್ದರು. ಒಂದೇ ವೇದಿಕೆಯಲ್ಲಿ ಹಾ.ಮಾ.ನಾಯಕರನ್ನು, ನಿರಂಜನರನ್ನು ನೋಡುವ ಭಾಗ್ಯ ನಮ್ಮದು. ಲೋಕಾರ್ಪಣೆಯಾದ ಸರಣಿಗಳಲ್ಲಿ ರಷ್ಯನ್ ಕತೆಗಳೂ ಇದ್ದವು. ಲೋಕಾರ್ಪಣೆ ಮಾಡಿದ ಹಾ.ಮಾ.ನಾಯಕರು “ಈ ಸಂಕಲನಗಳಲ್ಲಿ ದಸ್ತಯೇವ್ ಸ್ಕಿ, ತೋಲ್ಸ್ ತೋಯ್ ಎಂಬ ಪ್ರಯೋಗಗಳಿವೆ, ನಮಗೆಲ್ಲಾ ಸುಪರಿಚಿತವಾಗಿರುವ ದಾಸ್ತೋವಸ್ಕಿ, ಟಾಲ್ ಸ್ಟಾಯ್ ಎಂಬ ಪದಗಳನ್ನೇ ಪ್ರಯೋಗಿಸಬಹುದಿತ್ತು” ಎಂದು ಅಭಿಪ್ರಾಯಪಟ್ಟರು. ಅದಕ್ಕೆ ಉತ್ತರವಾಗಿ ನಿರಂಜನರು “ನಾಯಕರೇ, ನಮಗೆ ಹೆಚ್ಚು ಪರಿಚಯವಿರುವ ಹೆಸರುಗಳು ಎರಡೋ ಮೂರೋ. ಆದರೆ, ಈ ಎಲ್ಲ ದೇಶಗಳ ಕತೆಗಳಲ್ಲಿ ಅಲ್ಲಿನ ನೂರಾರು ಹೆಸರುಗಳಿವೆ. ಅಲ್ಲಿನ ಸ್ಥಳೀಯವಾದ ಮತ್ತು ಅವರು ಬಳಸುವ ಮೂಲ-ಪ್ರಯೋಗಗಳನ್ನೇ ಬಳಸಿದ್ದೇವೆ. ನಮಗೆ ಪರಿಚಯವಿರುವ ಕೆಲವು (ಅಪಭ್ರಂಶವಾಗಿಹೋಗಿರುವ) ಪ್ರಯೋಗಗಳನ್ನು ಮಾತ್ರ ಉಳಿಸಿಕೊಳ್ಳಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.

ನನಗಂತೂ ನಿರಂಜನರ ಪರಿಕಲ್ಪನೆ ಅದ್ಭುತ ಎನಿಸಿತು.

ಕಾರಣಾಂತರಗಳಿಂದ ನಮ್ಮ ಮೇಲೆ ಮುಗಿಬಿದ್ದಿರುವ ಇಂಗ್ಲಿಷ್ ಭಾಷೆ ಮತ್ತು ರೋಮನ್ ಲಿಪಿಗಳ ಅಧ್ವಾನದ ಕಾರಣಕ್ಕೆ ಮೂಲ ಉಚ್ಚಾರಣೆಗಳಿಗೂ, ನಾವು ಬಳಸುತ್ತಿರುವ ಉಚ್ಚಾರಣೆಗಳಿಗೂ ಅರ್ಥಾತ್ ಸಂಬಂಧವೇ ಇಲ್ಲ ಎನ್ನುವಂತಾಗಿದೆ. ಹತ್ತಾರು ವರ್ಷಗಳಿಂದ ಸೀತಾರಾಮ ಗೋಯಲ್ ಅವರ “ವಾಯ್ಸ್ ಆಫ್ ಇಂಡಿಯಾ” ಸರಣಿಯ ಸಂಪಾದಕನಾಗಿ, ಈ ಗ್ರಂಥಗಳಲ್ಲಿ ಬರುವ ಸಾವಿರಾರು ಹೆಸರುಗಳಿಗೆ, ಸ್ಥಳನಾಮಗಳಿಗೆ ಮೂಲ ಉಚ್ಚಾರಣೆಗಳನ್ನು ದೊರಕಿಸಿಕೊಳ್ಳಲು, ಪ್ರತಿಬಾರಿಯೂ ಅಪಾರ ಪರಿಶ್ರಮ ಹಾಕಬೇಕಾಗುತ್ತಿದೆ. ಪ್ರತಿಬಾರಿಯೂ ನಿರಂಜನರಂತಹ ಧೀಮಂತರು ನೆನಪಾಗುತ್ತಾರೆ, ಎಂದರೆ ಉತ್ಪ್ರೇಕ್ಷೆಯಲ್ಲ.

ಉದಾಹರಣೆಗೆ, ಉತ್ತರ ಪ್ರದೇಶದ “ಅಮೇಠಿ” (ಸರಿಯಾದ ಪ್ರಯೋಗ) ಕ್ಷೇತ್ರವು, ಸಂಜಯ ಗಾಂಧಿ ಅವರ ಕಾಲದಿಂದಲೂ “ಖ್ಯಾತಿ” ಪಡೆದಿದೆ. ರೋಮನ್ ಲಿಪಿಯ ಅದ್ವಾನದ ಕಾರಣದಿಂದ (ನಾಲ್ಕೈದು ದಶಕಗಳಿಂದಲೂ) ಕನ್ನಡದ ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಮತ್ತು ಪುಸ್ತಕಗಳಲ್ಲಿ ಬಹುಪಾಲು “ಅಮೇಥಿ” ಎಂದೇ ಬಳಸಲಾಗುತ್ತಿದೆ! ಅಂತೆಯೇ, ಚೀನಾ ದೇಶದ Sinkiang / Xinjiang ಅನ್ನು ಸಿಂಕಿಯಾಂಗ್ ಎಂದೇ ಅನೇಕ ಕಡೆ ಉಲ್ಲೇಖಿಸಲಾಗಿದೆಯಾದರೂ, ಸರಿಯಾದ ಪ್ರಯೋಗ “ಶಿಂಜಾಂಗ್” ಆಗಿದೆ.

ನಿರಂಜನ ಅವರು ಆ ಕಾಲದಲ್ಲಿ ಮೂಲ ಉಚ್ಚಾರಣೆಗಳಿಗಾಗಿ ಅದೆಷ್ಟು ಶ್ರಮ ಹಾಕಿದರೋ, ಏನೋ?! ಐವತ್ತು ವರ್ಷಗಳ ಹಿಂದೆಯೇ ನಿರಂಜನರು “ಕಿರಿಯರ ವಿಶ್ವಕೋಶ” ತಂದರು. ಇಂದಿನಂತೆ ಕಂಪ್ಯೂಟರ್, ಅಂತರಜಾಲ, ಫೋನ್, ಇತ್ಯಾದಿ ಇಲ್ಲದ ಆ ಕಾಲಘಟ್ಟದಲ್ಲಿ ನಿರಂಜನ ಅವರ ಸಂಗ್ರಹ, ಸಂಪಾದನೆ ಮತ್ತು ಪ್ರಸ್ತಾವನೆಗಳು ನಿಜವಾಗಿಯೂ ಸಾಹಸವೇ. ವಿವಿಧ ಪ್ರವರ್ಗಗಳ ಅವರ ಕೃತಿಗಳನ್ನು, ಸಂಪಾದಿತ ಕೃತಿಗಳನ್ನು ನೋಡುವಾಗ, ನಿರಂಜನರು ಅದೆಂತಹ ಅದ್ಭುತ ಸಾಧಕರು, ಎನಿಸಿ ಗೌರವ ಇನ್ನಷ್ಟು ಹೆಚ್ಚಾಗುತ್ತದೆ.

ಅಂದಿನ ಆ ಲೋಕಾರ್ಪಣೆ ಸಮಾರಂಭದಲ್ಲಿ, ನಿರಂಜನರು “ಇಡೀ ಜಗತ್ತಿನ ಇತಿಹಾಸವನ್ನು ಕನ್ನಡದಲ್ಲಿ ಬರೆಯಬೇಕು ಎನಿಸುತ್ತಿದೆ” ಎಂದು ಆಸೆಪಟ್ಟಿದ್ದರು. ವಿಲ್ ಡ್ಯೂರಾಂಟ್ ಅವರ “ದ ಸ್ಟೋರಿ ಆಫ್ ಸಿವಿಲೈಸೇಷನ್” ಬೃಹತ್ ಸಂಪುಟಗಳನ್ನು ನೋಡುವಾಗ, ನಿರಂಜನರದ್ದೇ ನೆನಪು. ಆರೋಗ್ಯ ಚೆನ್ನಾಗಿದ್ದಿದ್ದರೆ ಅಂತಹುದನ್ನು ಅವರು ಖಂಡಿತವಾಗಿಯೂ ಸಾಧಿಸುತ್ತಿದ್ದರು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: “ನೀವು ಭಾರತೀಯರೋ, ರಾಷ್ಟ್ರೀಯರೋ?” ಎಮರ್ಜೆನ್ಸಿಯ ಕರಾಳ ನೆನಪು

Continue Reading

ಅಂಕಣ

ದಶಮುಖ ಅಂಕಣ: ಮಳೆಯ ನಡುವೆ ಮರಳಿ ಶಾಲೆಗೆ!

ದಶಮುಖ ಅಂಕಣ: ಶಾಲೆಯ ಜೀವನ ಮುಗಿದು ಹಲವು ಕಾಲ ಸಂದಿದ್ದರೂ, ಅದರ ನೆನಪುಗಳು ಮಾತ್ರ ಹುಲ್ಲಿನಂತೆ… ಒಂದು ಸಣ್ಣ ಮಳೆಗೇ ಹಸಿರಾಗಿ ಬಿಡುತ್ತವೆ. ನಮ್ಮನೆಯ ಮಕ್ಕಳೋ, ಪಕ್ಕದ ಮನೆಯ ಪಾಪುವೋ ಶಾಲೆಯ ಬಸ್ಸಿಗೆ ಓಡುತ್ತಿದ್ದರೆ ಅವರೊಂದಿಗೆ ನಾವೂ ದಾಪುಗಾಲಿಡುತ್ತೇವೆ.

VISTARANEWS.COM


on

ದಶಮುಖ back to school
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ದಶಮುಖ ಅಂಕಣ: ಶಾಲೆಗಳು (School) ಪ್ರಾರಂಭವಾಗಿ ಕೆಲದಿನಗಳಾಗಿವೆ. ಬಣ್ಣದ ಚಿಟ್ಟೆಗಳಂತೆ ಹಾರಾಡುತ್ತಾ ಶಾಲೆಯ ದಾರಿ ಹಿಡಿದಿರುವ (Back to School) ಮಕ್ಕಳನ್ನು (Children) ಕಾಣುತ್ತಿದ್ದಂತೆ ಮನಸ್ಸು ತುಂಬಿ ಬರುತ್ತದೆ. ಬೇಸಿಗೆ (Summer holidays) ರಜೆಯಲ್ಲಿ ಅವರೇನೇ ಮಾಡಿದರೂ, ಮಾಡದಿದ್ದರೂ… ರಜೆ ಕಳೆದಿದ್ದಂತೂ ಹೌದು. ಈಗ ಮರಳಿ ಶಾಲೆಗೆ. ಬಹುಪಾಲು ಮಕ್ಕಳು ಶಾಲೆಗೆ ಮರಳಿ ಹೋಗುತ್ತಿದ್ದರೆ, ಒಂದಿಷ್ಟು ಪುಟಾಣಿಗಳು ಮೊದಲ ಬಾರಿಗೆ ಶಾಲೆಗೆ ಹೋಗುವವರು. ಶಾಲೆಯ ಹಾದಿ ಹಿಡಿದಿರುವ ತಂತಮ್ಮ ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಷಕರು ತುಂಬಿಸಿಟ್ಟಿದ್ದಾರೆ. ಸಮವಸ್ತ್ರ (Uniform) ಹಾಕಿ ಹೊರಟವರು, ಅದಿನ್ನೂ ದೊರೆಯದೆ ಬಣ್ಣದ ಬಟ್ಟೆಗಳಲ್ಲೇ ಹೊರಟವರು, ಅಕ್ಕ-ಅಣ್ಣನ ಕೈ ಹಿಡಿದು ನಿಂತವರು, ಹೋಗಲು ಮನಸ್ಸಿಲ್ಲದ ಪೆಚ್ಚ ಮೋರೆಯವರು, ಫೋಟೊ ಇಷ್ಟವಿಲ್ಲದ ಗಂಭೀರ ಭಾವದವರು, ರಜೆಯ ಬೋರು ಕಳೆದ ಬಿಡುಗಡೆಯ ಭಾವದವರು, ಮೊದಲ ಬಾರಿಗೆ ಹೊರಟ ಅಳು ಮೋರೆಯವರು… ಅಂತೂ ಸಂಭ್ರಮ, ನಗು, ದುಗುಡ, ಆತಂಕ, ಅಳು ಮುಂತಾದ ಹಲವಾರು ಭಾವಗಳನ್ನು ಹೊತ್ತ ಪುಟ್ಟ ಬೊಂಬೆಗಳಂತೆ ಅವರೆಲ್ಲ ಕಂಡುಬರುತ್ತಾರೆ.

ಇದೇನು ಹೊಸದಲ್ಲ, ಪ್ರತಿವರ್ಷವೂ ಕಾಣುವಂಥದ್ದು. ಇವೆಲ್ಲ ಎಷ್ಟು ಹಳೆಯದ್ದೆಂದರೆ, ಬಾಲ್ಯದಲ್ಲಿ ನಾವೂ ಇದನ್ನೇ ಮಾಡಿದ್ದೆವಲ್ಲ ಎನಿಸಬಹುದು. ಶಾಲೆಗೆ ಹೋಗುವಾಗ ನಮಗೆಲ್ಲ ಈಗಿನಂತೆ ಪ್ರೀಸ್ಕೂಲ್‌ಗಳೆಲ್ಲ ಇರಲಿಲ್ಲ. ನೇರವಾಗಿ ಕಿಂಡರ್‌ಗಾರ್ಟ್‌ನ್‌ಗೆ ಹೋಗುವುದಾಗಿತ್ತು. ಅದಕ್ಕೆ ಬರುವವರೂ ಕಡಿಮೆಯೇ. ಒಂದನೇ ತರಗತಿಗೆ ಹೋದರೆ ಸಾಲದೇ ಎಂಬ ಮನಸ್ಥಿತಿ ಹಲವರಿಗಿತ್ತು ಆಗ. ಮನೆಯೊಂದನ್ನು ಶಾಲೆಯಾಗಿ ಮಾಡಿ, ನಮ್ಮ ಬಾಲವಾಡಿಯನ್ನು ನಡೆಸಲಾಗುತ್ತಿತ್ತು. ಬಾಲವಾಡಿಗೆ ಹೋದ ಮೊದಲ ದಿನ ನಾವೊಂದಿಷ್ಟು ಜನ ನಗುನಗುತ್ತಲೇ ಇದ್ದೆವು. ಆದರೆ ಇನ್ನೊಂದಿಷ್ಟು ಮಕ್ಕಳು ಚೀರಾಡಿ, ಭೋರಾಡಿ, ಉರುಳಾಡಿ, ಘಟ್ಟಿಸಿಕೊಂಡು ಅತ್ತಿದ್ದರು. ಸಮಾಧಾನ ಮಾಡುವ ಸಲುವಾಗಿ ಅವರಿಗೆಲ್ಲ ಒಂದೊಂದು ನಿಂಬೆಹುಳಿ ಪೆಪ್ಪರಮಿಂಟ್‌ ಸಿಕ್ಕಿದ್ದವು. ಮಾರನೇ ದಿನ ಅತ್ತವರ ಸಂಖ್ಯೆ ಹೆಚ್ಚಾಗಿತ್ತು, ನನ್ನನ್ನೂ ಸೇರಿ!

ನಮ್ಮ ಬಾಲವಾಡಿಯಲ್ಲಿ ಸಹಾಯಕ್ಕಿದ್ದವರನ್ನೂ ಸೇರಿಸಿದರೆ ಒಟ್ಟೂ ನಾಲ್ವರು ಸಿಬ್ಬಂದಿ ಇದ್ದರು. ಪಂಕಜಾ ಮಿಸ್‌, ಫಿರ್ದೂಸ್‌ ಮಿಸ್‌, ಸುಶೀಲಮ್ಮ ಆಂಟಿ ಮತ್ತು ಆಯಮ್ಮ ಆಂಟಿ- ಇವರಿಷ್ಟು ಮಂದಿ ಸೇರಿ, ಸುಮಾರು ೩೦ ಮಕ್ಕಳನ್ನು ಸುಧಾರಿಸುತ್ತಿದ್ದರು. ಕುಳಿತುಕೊಳ್ಳುವುದಕ್ಕೆಂದು ಬೆಂಚು- ಕುರ್ಚಿಗಳಲ್ಲ, ಮಕ್ಕಳಿಗೆಲ್ಲ ಪುಟ್ಟ ಕಾಲುಮಣೆಗಳು ಇರುತ್ತಿದ್ದವು. ಆ ಕಾಲುಮಣೆಗಳ ಅಡಿಗಿನ ಖಾಲಿ ಜಾಗವಂತೂ, ನಮ್ಮ ಬೆಣ್ಣೆ ಬಳಪಗಳು ಮತ್ತು ಸೀಮೆಸುಣ್ಣಗಳನ್ನು ಆಗಾಗ ತಿಂದು ಹಾಕುತ್ತಿತ್ತು. ಕೆಲವೊಮ್ಮೆ ಪಾಟಿಗಳೂ ಅದರಡಿಗೆ ಮರೆಯಾಗಿ, ಅದನ್ನು ಹುಡುಕುವುದಕ್ಕೆಂದು ಕಾಲುಮಣೆಗಳನ್ನು ಸರಿಸಿದಾಗ ಎಂದೋ ಕಣ್ಮರೆಯಾಗಿದ್ದ ಯಾರಾರದ್ದೋ ಬಣ್ಣಬಣ್ಣದ ಸೀಮೆ ಸುಣ್ಣಗಳೆಲ್ಲ- ಇಡಿಯಾಗಿ, ಪುಡಿಯಾಗಿ ದೊರೆಯುತ್ತಿದ್ದವು.

ನಮಗೆಲ್ಲ ಬಾಲವಾಡಿಯಲ್ಲಿ ಪುಸ್ತಕ-ಪೆನ್ಸಿಲ್ಲು ಇರಲಿಲ್ಲ. ಪೆನ್ಸಿಲ್ಲು, ರಬ್ಬರು, ಮೆಂಡರ್‌ಗಳನ್ನೆಲ್ಲ ನಾವು ಕಂಡಿದ್ದು ಪ್ರಾಥಮಿಕ ಶಾಲೆ ಆರಂಭವಾದ ಮೇಲೆಯೆ. ಅಲ್ಲಿಯವರೆಗೆ ಸ್ಲೇಟು-ಬಳಪದಲ್ಲೇ ಗೀಚುತ್ತಿದ್ದೆವು. ʻನನ್ನ ಪಾಟಿ ಕರಿಯದು, ಸುತ್ತುಕಟ್ಟು ಬಿಳಿಯದುʼ ಎಂಬ ಶಿಶುಗೀತೆ ಹೇಳಿದವರಿಗೆ, ಅದನ್ನು ಬಳಸಿಯೂ ಗೊತ್ತಿದ್ದೀತು. ಹಾಗಂತ ಪ್ಲಾಸ್ಟಿಕ್‌ ಮಣಿಗಳ ಪಾಟಿ ಇರುತ್ತಿತ್ತು ಕೆಲವರ ಬಳಿ. ಯಾರದ್ದೋ ಸ್ಲೇಟಿನಲ್ಲಿ ಬರೆದಿದ್ದನ್ನು ಇನ್ಯಾರೊ ಅಳಿಸುವುದು, ಯಾರದ್ದೋ ಬಟ್ಟೆ ತಾಗಿ, ಬರೆದಿದ್ದೆಲ್ಲ ತನ್ನಷ್ಟಕ್ಕೆ ಒರೆಸಿ ಹೋಗುವುದು, ಅದಕ್ಕಾಗಿ ʻಹೋʼ ಎಂದು ಅತ್ತು ರಂಪ ಮಾಡುವುದು, ಹಾಗೆ ಅಳಿಸಿಹೋಗಬಾರದೆಂದು ಸೀಮೆ ಸುಣ್ಣವನ್ನು ನೀರಲ್ಲಿ ಅದ್ದಿಕೊಂಡು ಬರೆಯುವುದು, ಹಾಗೆ ಬರೆದಿದ್ದನ್ನು ಅಳಿಸಲೇ ಆಗದೆ ʻಥೂʼ ಎಂದು ಎಂಜಲು ಉಗಿದು ಅಳಿಸುವುದು… ಇಂಥವೆಲ್ಲ ಬಾಲವಾಡಿಯ ದಿನಗಳ ಮಾಮೂಲಿ ಪ್ರಕ್ರಿಯೆ.

ಅಂದಿನ ಬಾಲವಾಡಿಯ ಜಗಳಗಳೂ ಇಂದಿನ ಹಾಗೆಯೇ, ಯಾವ ಕಾರಣಕ್ಕೆ ಬೇಕಿದ್ದರೂ ಹುಟ್ಟುತ್ತಿದ್ದವು. ತೊಟ್ಟ ಅಂಗಿಯ ಚುಂಗನ್ನು ಪಕ್ಕದವರು ಜಗ್ಗಿದರು ಎನ್ನುವುದರಿಂದ ಹಿಡಿದು, ಬಳಪ ಮುರಿದರು, ಮೊಣಕೈಯಲ್ಲಿ ತಿವಿದರು, ಜುಟ್ಟೆಳೆದರು, ಸ್ಲೇಟು ಮುಟ್ಟಿದರು ಎನ್ನುವವರೆಗೆ ಯಾವುದೇ ಕಾರಣಕ್ಕೂ ಹೊಡೆದಾಟ ಶುರುವಾಗುತ್ತಿತ್ತು. ಮನೆಯಲ್ಲಿ ಅತಿ ಮುದ್ದಿನಿಂದ ಬೆಳೆದವರು, ಬಾಲವಾಡಿಯಲ್ಲೂ ಹಠ ಮಾಡಿ, ಪೆಟ್ಟು ತಿಂದು, ಅತ್ತು ವಾಂತಿ ಮಾಡಿದ ಉದಾಹರಣೆಗಳಿದ್ದವು. ಮಕ್ಕಳ ಉಳಿದೆಲ್ಲ ಚಾಕರಿಯ ಜೊತೆಗೆ ಬಾಲವಾಡಿಯ ಆಯಮ್ಮ ಆಂಟಿಗೆ ಇಂಥ ಸ್ವಚ್ಛತೆಗೆ ಕೆಲಸಗಳೂ ಗಂಟು ಬೀಳುತ್ತಿದ್ದವು.

ಒಮ್ಮೆ ಬಾಲವಾಡಿ ಮುಗಿದ ಮೇಲೆ ಮುಂದಿನ ತರಗತಿಗಳಲ್ಲಿ, ಶಾಲೆಯ ಮೊದಲ ದಿನ ಅಷ್ಟೊಂದು ಕಷ್ಟ ಎನಿಸಿರಲಿಲ್ಲ. ಆದರೂ ಕೆಲವು ಮಕ್ಕಳಿಗೆ ಎರಡೇಟು ಬಿಗಿದು ಪಾಲಕರು ಬಿಟ್ಟು ಹೋಗುವ ದೃಶ್ಯಗಳು ಅಲ್ಲಲ್ಲಿ ಕಾಣುತ್ತಲೇ ಇರುತ್ತಿದ್ದವು. ಶಾಲೆಯ ಮುಖ ಕಾಣುತ್ತಿದ್ದಂತೆ, ʻಹೋಗಲೊಲ್ಲೆʼ ಎಂದು ರಸ್ತೆಯಲ್ಲೇ ಬಿದ್ದು ಉರುಳಾಡುವ ಮಕ್ಕಳ ಚಿತ್ರಗಳು ಈಗಲೂ ನೆನಪಿಗೆ ಬರುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಶಾಲೆಯ ಮೊದಲ ದಿನವೆಂದರೆ ಹಬ್ಬದ ವಾತಾವರಣವನ್ನೇ ನಿರ್ಮಿಸಲಾಗುತ್ತಿದೆ. ಶಾಲೆಯ ಆವರಣವನ್ನು ತಳಿರು-ತೋರಣ, ಬಾಳೆ ಕಂಬಗಳಿಂದ ಅಲಂಕರಿಸಿ, ಮಕ್ಕಳಿಗೆಲ್ಲ ಆರತಿ ಎತ್ತಿ ಬರಮಾಡಿಕೊಂಡು, ಮಿಠಾಯಿ ಹಂಚುವುದೋ ಅಥವಾ ಸಿಹಿಯೂಟ ಉಣಿಸುವುದನ್ನು ಕಾಣಬಹುದು. ಕೆಲವು ಶಾಲೆಗಳಲ್ಲಿ ಮಕ್ಕಳನ್ನು ಎತ್ತಿನ ಗಾಡಿಯ ಮೇಲೆ, ಟ್ರಾಕ್ಟರ್‌ಗಳ ಮೇಲೆ ಮೆರವಣಿಗೆಯ ಮೂಲಕ ಶಾಲೆಗೆ ಕರೆದೊಯ್ದ ಸುದ್ದಿಗಳಿವೆ. ಹಿಂದೆ ಶಾಲೆಗಳನ್ನು ಕರೆಯುತ್ತಿದ್ದುದೇ ʻಶಾಲೆಮನೆʼಗಳೆಂದು. ಹಿಂದಲ್ಲ, ಇಂದಿಗೂ ಮಕ್ಕಳು ಮನೆಗೆ ಹೋದಷ್ಟೇ ನಿರುಮ್ಮಳವಾಗಿ ಶಾಲೆಗೆ ಹೋಗಬೇಕೆಂಬ ಕಳಕಳಿ ನಿಜಕ್ಕೂ ಶ್ಲಾಘನೆಗೆ ಅರ್ಹ.

Maharashtra proposed to change School timings to ensure children get enough sleep

ನಮ್ಮಲ್ಲಿ ಮಾತ್ರವಲ್ಲ, ಹಲವಾರು ದೇಶಗಳಲ್ಲಿ ʻಬ್ಯಾಕ್‌ ಟು ಸ್ಕೂಲ್‌ʼ ಎಂಬುದು ಸಂಭ್ರಮದ ಸಮಯ. ಇದಕ್ಕಾಗಿ ಬಹುತೇಕ ಅಂಗಡಿ-ಮಳಿಗೆಗಳಲ್ಲಿ ʻಬ್ಯಾಕ್‌ ಟು ಸ್ಕೂಲ್‌ʼ ರಿಯಾಯ್ತಿಗಳು ರಾರಾಜಿಸುತ್ತವೆ. ಪೆನ್ನು, ಪೆನ್ಸಿಲ್ಲು, ಇರೇಸರ್‌ಗಳಿಂದ ಹಿಡಿದು ಬಣ್ಣದ ಪೆನ್ಸಿಲ್ಲುಗಳು, ಕ್ರೇಯಾನ್‌, ಚಿತ್ರಕಲೆಯ ತರಹೇವಾರಿ ಉಪಕರಣಗಳು, ನೋಟ್ ಪುಸ್ತಕಗಳು, ಶಾಲೆಯ ಬ್ಯಾಗು, ಊಟದ ಡಬ್ಬಿ, ನೀರಿನ ಬಾಟಲಿಗಳು, ಶೂಗಳು, ವಸ್ತ್ರಗಳು, ಕ್ಯಾಲ್ಕುಲೇಟರ್‌, ಲ್ಯಾಪ್‌ಟಾಪ್‌… ಹೀಗೆ, ಶಾಲೆಯ ಮಕ್ಕಳು ಮತ್ತು ಶಿಕ್ಷಕರಿಗೆ ಬೇಕಾಗುವ ಲೆಕ್ಕವಿಲ್ಲದಷ್ಟು ಸಾಮಗ್ರಿಗಳು ʻಸೇಲ್‌ʼ ಎಂಬ ಹಣೆಪಟ್ಟಿ ಹೊತ್ತು ಕುಳಿತಿರುತ್ತವೆ. ಇದೇ ಸಮಯದಲ್ಲಿ, ಉಪಯೋಗಿಸಲು ಯೋಗ್ಯ ಸ್ಥಿತಿಯಲ್ಲೇ ಇರುವ ಶಾಲೆಯ ಸಾಮಗ್ರಿಗಳ ‌ʻಗರಾಜ್‌ ಸೇಲ್ʼ ಸಹ ಕಂಡುಬರುತ್ತದೆ. ಆ ವಸ್ತುಗಳ ಮಾಲೀಕರಿಗೆ ಮನೆಯಲ್ಲಿ ಜಾಗ ಖಾಲಿಯಾಯಿತು, ಜೊತೆಗೆ ನಾಲ್ಕು ಕಾಸೂ ಕೈಗೆ ಬಂತು; ಹೊಸದನ್ನು ಖರೀದಿಸಲು ಅನುಕೂಲ ಇಲ್ಲದವರಿಗೆ ಕಡಿಮೆ ಖರ್ಚಿನಲ್ಲಿ ಅಗತ್ಯ ವಸ್ತುಗಳೂ ದೊರೆತವು- ಉಪಾಯ ಒಳ್ಳೆಯದಲ್ಲವೇ? ನಮ್ಮಲ್ಲಿ… ಇವನ್ನೆಲ್ಲ ಯೋಚಿಸುವುದೂ ಕಷ್ಟ.

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

ಇನ್ನೂ ಒಂದು ಕುತೂಹಲ ಬಹುದಿನಗಳವರೆಗೆ ಬಾಲ್ಯದಲ್ಲಿ ಕಾಡಿದ್ದಿತ್ತು. ಜೂನ್‌ 1ರಂದು ಅಷ್ಟೆಲ್ಲಾ ಜನರ ಬರ್ತ್‌ಡೇ ಇರುವುದಕ್ಕೆ ಹೇಗೆ ಸಾಧ್ಯ ಎಂಬುದು! ಪ್ರತಿ ಕ್ಲಾಸಿನಲ್ಲಿ ಇರುತ್ತಿದ್ದ 60-70 ಮಕ್ಕಳಲ್ಲಿ, ನಾಲ್ಕಾರು ಜನರಾದರೂ ಜೂನ್‌ 1ಕ್ಕೆ ಹುಟ್ಟಿದವರು ಇರುತ್ತಿದ್ದರು. ನಮ್ಮ ಕೆಲವು ಟೀಚರ್‌ಗಳು ತಾವೂ ಜೂನ್‌ 1ಕ್ಕೇ ಹುಟ್ಟಿದವರೆಂದು ಹೇಳಿ ನಕ್ಕಾಗ, ಅದೊಂದೇ ದಿನ ಯಾಕಾಗಿ ಅಷ್ಟೊಂದು ಜನ ಹುಟ್ಟುತ್ತಾರೆ ಎಂಬ ಕುತೂಹಲ ಮೂಡಿತ್ತು. ಹುಟ್ಟಿದ ದಿನಾಂಕ ಸ್ಪಷ್ಟವಾಗಿ ಗೊತ್ತಿಲ್ಲದವರೆಲ್ಲ, ಶಾಲೆಗೆ ಹೆಸರು ಕೊಡುವಾಗ ಅನಿವಾರ್ಯವಾಗಿ ಜೂನ್‌ 1ಕ್ಕೇ ಹುಟ್ಟುತ್ತಿದ್ದರು ಎಂಬುದು ತಿಳಿದಾಗ, ಟೀಚರ್‌ಗಳ ನಗೆಯೊಂದಿಗೆ ನಮ್ಮದೂ ಸೇರಿತ್ತು.

ಮಿತ್ರರ ಹುಟ್ಟಿದ ದಿನಗಳಂದು, ನಮ್ಮ ರಫ್‌ ಪುಸ್ತಕದ ಹಾಳೆಗಳನ್ನು ಹಿಂದಿನಿಂದ ಹರಿದು ಅವರಿಗಾಗಿ ತಯಾರಿಸುತ್ತಿದ್ದ ಗ್ರೀಟಿಂಗ್‌ ಕಾರ್ಡ್‌ಗಳು, ಪುಸ್ತಕದ ನಡುವೆ ಮರಿ ಹಾಕಲೆಂದು ಇರಿಸಿಕೊಳ್ಳುತ್ತಿದ್ದ ಹಕ್ಕಿಪುಕ್ಕಗಳು, ಸಾಮಾನ್ಯ ಇಂಕ್‌ ಪೆನ್ನುಗಳ ನಡುವೆ ರಾರಾಜಿಸುತ್ತಿದ್ದ ಹೀರೊ ಪೆನ್ನುಗಳು, ಆರೆಂಟು ಹನಿ ಇಂಕಿನ ಕಡ ಹಿಂತಿರುಗಿಸದ್ದಕ್ಕೆ ಹುಟ್ಟುತ್ತಿದ್ದ ಮುನಿಸು, ಫೌಂಟೆನ್‌ ಪೆನ್ನುಗಳಿಂದ ಚಿಮ್ಮುವ ಇಂಕಿಗೆ ಮುಂದಿನ ಬೆಂಚಿನವರ ವಸ್ತ್ರ ಕಲೆಯಾಗಿ ಏಳುತ್ತಿದ್ದ ಜಗಳ, ಮಧ್ಯಾಹ್ನ ಊಟದ ಡಬ್ಬಿಯ ಹಂಚಿಕೆಯಲ್ಲಿ ಆಗುತ್ತಿದ್ದ ರಾಜಿ ಪಂಚಾಯ್ತಿ, ಪ್ರತಿದಿನವೂ ಇರುತ್ತಿದ್ದ ಆಟದ ಪಿರಿಯೆಡ್‌, ಬೆತ್ತ ಹಿಡಿದೇ ಹುಟ್ಟಿದವರಂತೆ ಕಾಣುತ್ತಿದ್ದ ಪಿ.ಟಿ. ಮೇಷ್ಟ್ರು … ಹೆಕ್ಕುತ್ತಾ ಹೋದರೆ ಶಾಲೆಯ ಜೀವನದ ನೆನಪುಗಳು ಅಡಿಗಡಿಗೆ ಸಿಗುತ್ತವೆ.

ಶಾಲೆಯ ಜೀವನ ಮುಗಿದು ಹಲವು ಕಾಲ ಸಂದಿದ್ದರೂ, ಅದರ ನೆನಪುಗಳು ಮಾತ್ರ ಹುಲ್ಲಿನಂತೆ… ಒಂದು ಸಣ್ಣ ಮಳೆಗೇ ಹಸಿರಾಗಿ ಬಿಡುತ್ತವೆ. ನಮ್ಮನೆಯ ಮಕ್ಕಳೋ, ಪಕ್ಕದ ಮನೆಯ ಪಾಪುವೋ ಶಾಲೆಯ ಬಸ್ಸಿಗೆ ಓಡುತ್ತಿದ್ದರೆ ಅವರೊಂದಿಗೆ ನಾವೂ ದಾಪುಗಾಲಿಡುತ್ತೇವೆ… ಎಂದೋ ದಾಟಿ ಬಂದ ನಮ್ಮದೇ ಶಾಲೆಯ ಅಂಗಳಕ್ಕೆ. ಈಗ ನಿಮ್ಮ ಶಾಲೆಯ ದಿನಗಳು ನಿಮಗೂ ನೆನಪಾಗದಿದ್ದರೆ ಕೇಳಿ!

ಇದನ್ನೂ ಓದಿ: ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

Continue Reading
Advertisement
Hijab Row
ದೇಶ41 seconds ago

Hijab Row: ಹಿಬಾಬ್‌ ನಿಷೇಧದ ಬೆನ್ನಲ್ಲೇ ಜೀನ್ಸ್‌, ಟೀ-ಶರ್ಟ್‌ ಬ್ಯಾನ್‌- ಪ್ರಕಟಣೆ ಹೊರಡಿಸಿದ ಮುಂಬೈ ಕಾಲೇಜಿನ

Stray Dogs Attack
ಕರ್ನಾಟಕ13 mins ago

Stray Dogs Attack: ಸುರಪುರದಲ್ಲಿ ಬೀದಿ ನಾಯಿಗಳ ದಾಳಿಗೆ 15 ಕುರಿಗಳು ಬಲಿ

Gold Rate Today
ಚಿನ್ನದ ದರ18 mins ago

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಷ್ಟಿದೆ ಇಂದಿನ ಬೆಲೆ

lovers death self harming
ಕ್ರೈಂ34 mins ago

Lovers Death: ನಾಪತ್ತೆಯಾಗಿದ್ದ ಪ್ರೇಮಿಗಳ ಶವ ನೈಸ್ ರಸ್ತೆ ಬಳಿ ಕೆರೆಯಲ್ಲಿ ಪತ್ತೆ

Anant-Radhika Wedding
ದೇಶ44 mins ago

Anant-Radhika Wedding: ಅನಂತ್‌ ಅಂಬಾನಿ ಮದುವೆಗೆ ಪೂರ್ವಭಾವಿಯಾಗಿ ಸಾಮೂಹಿಕ ವಿವಾಹ; ಪ್ರತಿ ವಧುವಿಗೆ ಚಿನ್ನಾಭರಣ, 1 ಲಕ್ಷ ರೂ.

Prajwal Devaraj cancel birthday darshan main reason
ಸಿನಿಮಾ46 mins ago

Prajwal Devaraj: ಪ್ರಜ್ವಲ್ ದೇವರಾಜ್ ಬರ್ತ್‌ಡೇ ಸೆಲೆಬ್ರೇಷನ್‌ ಕ್ಯಾನ್ಸಲ್‌; ದರ್ಶನ್‌ ಕಾರಣ?

IND vs ZIM
ಕ್ರೀಡೆ55 mins ago

IND vs ZIM: ಜಿಂಬಾಬ್ವೆ ತಲುಪಿದ ಯಂಗ್‌ ಟೀಮ್‌ ಇಂಡಿಯಾ; ಶನಿವಾರದಿಂದ ಸರಣಿ ಆರಂಭ

Medal Biteing
ಕ್ರೀಡೆ1 hour ago

Medal Biting: ಒಲಂಪಿಕ್ಸ್‌ನಲ್ಲಿ ಕ್ರೀಡಾಪಟುಗಳು ಪದಕ ಕಚ್ಚುವುದು ಏಕೆ?

Tharun Sudhir sonal monteiro marriage update
ಸ್ಯಾಂಡಲ್ ವುಡ್1 hour ago

Tharun Sudhir: ಸೋನಾಲ್-ತರುಣ್ ಮದುವೆ ಯಾವಾಗ? ಭಾವಿ ಸೊಸೆ ಬಗ್ಗೆ ಡೈರೆಕ್ಟರ್ ಅಮ್ಮ ಏನಂದ್ರು?

Stock Market
ವಾಣಿಜ್ಯ2 hours ago

Stock Market: ಮೊದಲ ಬಾರಿಗೆ 80,000 ಗಡಿ ದಾಟಿದ ಸೆನ್ಸೆಕ್ಸ್: 24,250 ಪಾಯಿಂಟ್‌ ತಲುಪಿದ ನಿಫ್ಟಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ18 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌