ಮಕ್ಕಳ ಕಥೆ | ಸಿಟ್ಟಿನ ರಾಜ ಕಲಿತ ಪಾಠ - Vistara News

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ | ಸಿಟ್ಟಿನ ರಾಜ ಕಲಿತ ಪಾಠ

ರಾಜ ಲೋಕನಾಥ ತನ್ನ ಮೇಲಿನ ಟೀಕೆಯನ್ನು ಎಂದೂ ಸಹಿಸುತ್ತಿರಲಿಲ್ಲ. ರಾಜನ ಈ ಸ್ವಭಾವ ರಾಣಿಗೆ ಇಷ್ಟವಾಗುತ್ತಿರಲಿಲ್ಲ. ಇಂಥ ರಾಜನಿಗೆ ಆ ರಾಣಿ ಪಾಠ ಕಲಿಸಿದ್ದು ಹೇಗೆ? ಓದಿ, ಈ ಮಕ್ಕಳ ಕಥೆ.

VISTARANEWS.COM


on

angry king story
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಈ ಕಥೆಯನ್ನು ಇಲ್ಲಿ ಆಲಿಸಬಹುದು :

ಒಂದೂರು. ಅಲ್ಲೊಬ್ಬ ರಾಜ. ಅವನ ಹೆಸರು ಲೋಕನಾಥ. ಅವನಿಗೊಬ್ಬಳು ರಾಣಿ. ಅವಳ ಹೆಸರು ಮೋಹಿ. ಇಬ್ಬರೂ ಸುಖದಿಂದ ರಾಜ್ಯಭಾರ ಮಾಡಿಕೊಂಡಿದ್ದರು. ಇದಿಷ್ಟೇ ಆಗಿದ್ರೆ ಈ ಕಥೆನಾದ್ರೂ ಯಾಕೆ ಹೇಳಬೇಕಿತ್ತು… ಅಲ್ವಾ? ವಿಷಯ ಇಷ್ಟೇ ಅಲ್ಲ, ಲೋಕನಾಥನಿಗೆ ಒಂದು ಕೆಟ್ಟ ಗುಣ ಇತ್ತು. ತನ್ನ ಮೇಲಿನ ಟೀಕೆಯನ್ನು ಆತ ಎಂದಿಗೂ ಸಹಿಸುತ್ತಿರಲಿಲ್ಲ. ಯಾರಾದ್ರೂ ಅವನ ಟೀಕೆ ಮಾಡಿದ್ರೆ, ಜೀವವನ್ನೇ ಕಳೆದುಕೊಳ್ಳಬೇಕಾಗಿತ್ತು! ಹಾಗಾಗಿಯೇ ಆತನ ಆಸ್ಥಾನದವರೆಲ್ಲಾ ನಿಜವನ್ನು ಮುಚ್ಚಿಟ್ಟು ಅವನನ್ನು ಯದ್ವಾತದ್ವಾ ಹೊಗಳುತ್ತಿದ್ದರು. ಅವನು ಹೇಳಿದ್ದಕ್ಕೆಲ್ಲಾ ತಲೆಯಾಡಿಸುತ್ತಿದ್ದರು.

ಲೋಕನಾಥನ ಈ ಸ್ವಭಾವ ರಾಣಿ ಮೋಹಿಗೆ ಒಂಚೂರು ಇಷ್ಟವಾಗುತ್ತಿರಲಿಲ್ಲ. ಕೆಲವು ಬಾರಿ ಅದನ್ನು ಸೂಚ್ಯವಾಗಿ ಹೇಳಿಯೂ ಇದ್ದಳು. “ನಿಮ್ಮ ಆಸ್ಥಾನದಲ್ಲಿ ಇರುವವರು ಹೇಳುವುದೆಲ್ಲಾ ಸತ್ಯ ಅಂದುಕೊಳ್ಳಬೇಡಿ ಮಹಾರಾಜ. ನೀವೇ ಇಂದ್ರ-ಚಂದ್ರ-ದೇವೇಂದ್ರ ಎಂಬ ಅವರ ಮಾತುಗಳು ನಿಮ್ಮ ಮೇಲಿನ ಹೆದರಿಕೆಯಿಂದಲೂ ಇರಬಹುದಲ್ಲ” ಎಂದು ಮೋಹಿ ಆಗಾಗ ಹೇಳುತ್ತಿದ್ದಳು. ಆದರೆ ರಾಜ ತನ್ನನ್ನು ತಾನು ಸದಾ ಸಮರ್ಥಿಸಿಕೊಳ್ಳುತ್ತಿದ್ದ. “ಅವರು ಹಾಗೆಲ್ಲಾ ಹೆದರುವುದಕ್ಕೆ ನಾನೇನು ಸಿಂಹವೇ? ಶರಭವೇ? ನಾನಿರುವ ಹಾಗೆ ನನ್ನನ್ನು ಅವರು ವರ್ಣಿಸುತ್ತಾರೆ. ಅದರಲ್ಲೇನು?” ಎಂದು ತನ್ನ ರಾಣಿಯ ಬಾಯಿ ಮುಚ್ಚಿಸುತ್ತಿದ್ದ.

ಒಮ್ಮೆ ರಾಣಿ ತನ್ನ ಉದ್ಯಾನವನದಲ್ಲಿದ್ದಾಗ ಇದ್ದಕ್ಕಿದ್ದಂತೆ ಜೋರಾದ ಮಾತುಗಳು ಕೇಳಿದವು. ಆ ಧ್ವನಿ ರಾಜನದಾಗಿತ್ತು. “ಹಾಳಾದವನೇ! ಎಷ್ಟು ಸೊಕ್ಕು ನಿನಗೆ! ಮುಖ ತೋರಿಸಬೇಡ ನನಗೆ…” ಎಂದೆಲ್ಲಾ ರಾಜ ಕೂಗಾಡುತ್ತಿದ್ದ. ತಕ್ಷಣವೇ ಆ ಜಾಗಕ್ಕೆ ರಾಣಿ ಓಡೋಡುತ್ತಾ ಹೋದಳು. ತನ್ನದೇ ಸೇವಕನ ಮೇಲೆ ರಾಜ ಕೋಪದಿಂದ ಕೂಗಾಡುತ್ತಿದ್ದ. ರಾಜ ಗುರಿಯಿಟ್ಟು ಹೊಡೆದ ಬಾಣ, ಗುರಿ ತಾಗದೆ ಪಕ್ಕದಲ್ಲಿ ಬಿತ್ತು ಎಂದು ಆ ಸೇವಕ ಹೇಳಿದ್ದಕ್ಕೆ ರಾಜನ ಪಿತ್ತ ನೆತ್ತಿಗೇರಿತ್ತು. ಇಷ್ಟೊಂದು ಅಹಂಕಾರ ಯಾರಿಗೂ ಒಳ್ಳೆಯದಲ್ಲವಲ್ಲ ಎಂದು ಯೋಚಿಸಿದ ರಾಣಿ, “ನಿಮಗಾಗಿ ಒಂದು ಉಡುಗೊರೆಯಿದೆ ನನ್ನ ಬಳಿ” ಎಂದಳು. ಅವಳ ಈ ಮಾತನ್ನು ಕೇಳಿ ರಾಜನ ಮನಸ್ಸು ಪ್ರಸನ್ನವಾಯಿತು. “ಏನದು? ತೋರಿಸು” ಎಂದ ಕೋಪ ಬಿಟ್ಟು. “ತೋರಿಸುತ್ತೇನೆ. ಆದರೆ ಈಗಲ್ಲ, ನಾಳೆ ನಿಮ್ಮ ಆಸ್ಥಾನಕ್ಕೇ ತರುತ್ತೇನೆ ಅದನ್ನು. ಎಲ್ಲರೆದುರೇ ನೋಡಬಹುದು” ಎಂದಳು ರಾಣಿ. ಮೋಹಿಯ ಮಾತಿನಿಂದ ರಾಜನಿಗೆ ಸಂತೋಷವಾಯಿತು.

ಮರುದಿನ ಬೆಳಗ್ಗೆ ಆಸ್ಥಾನದ ಸಭೆ ನಡೆಯುತ್ತಿದ್ದಾಗ ರಾಣಿ ತನ್ನ ಸಖಿಯರೊಂದಿಗೆ ಬಂದಳು. ಅವಳ ಸಖಿಯರು ರೇಷ್ಮೆಯ ವಸ್ತ್ರ ಮುಚ್ಚಿದ್ದ ವಸ್ತುವೊಂದನ್ನು ಹೊತ್ತು ತಂದರು. “ಇದರಲ್ಲಿ ನಿಮ್ಮ ವರ್ಣಚಿತ್ರವಿದೆ ಮಹಾರಾಜ. ಇದನ್ನು ನಿಮಗೆ ನೀಡುವ ಮುನ್ನ ನನ್ನದೊಂದು ಕೋರಿಕೆ. ನೀವಿದನ್ನು ನೋಡುವ ಮುನ್ನವೇ, ಆಸ್ಥಾನಿಕರು ಅದನ್ನು ನೋಡಬೇಕು ಮತ್ತು ತಮ್ಮ ಅಭಿಪ್ರಾಯ ತಿಳಿಸಬೇಕು. ಅವರೆಲ್ಲರ ನಂತರ ನಿಮಗಿದನ್ನು ನೀಡಲಾಗುವುದು” ಎಂಬ ರಾಣಿಯ ಮಾತಿಗೆ ರಾಜನಿಗೇನೂ ಅಭ್ಯಂತರವಿರಲಿಲ್ಲ.

ಇದನ್ನೂ ಓದಿ | ಮಕ್ಕಳ ಕಥೆ | ದೇವರ ಮುಡಿಗೆ ಯಾರ ತಾವರೆ? |

ಒಬ್ಬೊಬ್ಬರಾಗಿ ಬಂದು, ರೇಷ್ಮೆಯ ವಸ್ತ್ರವನ್ನು ಎತ್ತಿ ನೋಡಿ ಕಸಿವಿಸಿಗೊಂಡು ಮೌನವಾಗಿ ಹಿಂದಿರುಗುತ್ತಿದ್ದರು. ಕಡೆಗೆ ರಾಜ ಅವರ ಅಭಿಪ್ರಾಯ ಕೇಳುತ್ತಿದ್ದಂತೆ, ʻಅದ್ಭುತ, ಸರ್ವಶ್ರೇಷ್ಠ, ಚಂದವೆಂದರೆ ಇದು, ಇಂಥದ್ದನ್ನು ನಾವೆಂದೂ ಕಂಡಿದ್ದಿಲ್ಲ…ʼ ಎಂದೆಲ್ಲಾ ವರ್ಣಿಸಿದರು. ರಾಜನ ಆನಂದಕ್ಕೆ ಮೇರೆಯೇ ಇಲ್ಲ. ಕಡೆಗೆ ತನ್ನ ಸರದಿ ಬಂದಾಗ, ರೇಷ್ಮೆಯ ವಸ್ತ್ರವನ್ನು ಕೆಳಗಿಳಿಸಿದ. ಅಲ್ಲಿರುವುದನ್ನು ನೋಡಿ ದಂಗಾದ.

ವಿಷಯವೇನೆಂದರೆ, ಅಲ್ಲಿ ಏನೂ ಇರಲಿಲ್ಲ. ಯಾವುದೇ ಚಿತ್ರ ಬಿಡಿ, ಬಣ್ಣದ ಒಂದು ಚುಕ್ಕಿಯೂ ಇರದೆ ಖಾಲಿ ಹಾಳೆಯಿತ್ತು ಅಲ್ಲಿ. “ಇದೆಂಥ ಮಕ್ಕಳಾಟ? ಇದರ ಪರಿಣಾಮ ಗೊತ್ತೇ ನಿನಗೆ?” ರಾಜ ಕೋಪದಿಂದ ಮೋಹಿಯನ್ನು ಪ್ರಶ್ನಿಸಿದ. ಶಾಂತ ಚಿತ್ತದಿಂದ ರಾಣಿ ಹೇಳಿದಳು- “ಹಿಂದೆಯೇ ಹೇಳಿದ್ದೆ ನಿಮಗೆ. ಆಸ್ಥಾನಿಕರೆಲ್ಲ ನಿಮ್ಮ ಹೆದರಿಕೆಯಲ್ಲಿದ್ದಾರೆ ಎಂಬುದಾಗಿ. ಈಗ ನೋಡಿ, ಏನೂ ಇರದ ಹಾಳೆಯಿಂದ ಅವರು ನಿಮ್ಮನ್ನು ವರ್ಣಿಸಿದರು, ಚಿತ್ರದ ಚಂದವನ್ನು ಕೊಂಡಾಡಿದರು. ತಮ್ಮ ಮನದಲ್ಲಿರುವುದನ್ನು ಹೇಳಲೇ ಇಲ್ಲ. ಇದಕ್ಕೆಲ್ಲ ನಿಮ್ಮ ಹೆದರಿಕೆಯಲ್ಲದೆ ಇನ್ಯಾವ ಕಾರಣ ಇದ್ದೀತು?” ರಾಣಿಯ ಈ ಮಾತಿನಿಂದ ಲೋಕನಾಥನಿಗೆ ತನ್ನ ತಪ್ಪಿನ ಅರಿವಾಯಿತು. ಇಷ್ಟೂ ದಿನಗಳ ಕಾಲ ತನ್ನದೇ ಪ್ರಜೆಗಳನ್ನು ಹೆದರಿಕೆಯಲ್ಲಿ ಇರಿಸಿದ್ದೆನಲ್ಲ ಎಂದು ತನ್ನ ಬಗ್ಗೆ ಬೇಸರವೂ ಆಯಿತು. ರಾಣಿ ಕಲಿಸಿದ ಈ ಪಾಠದಿಂದ ತನ್ನ ತಪ್ಪನ್ನು ತಿದ್ದಿಕೊಂಡು ಒಳ್ಳೆಯ ರಾಜನಾಗಿ ಆತ ಹೆಸರು ಗಳಿಸಿದ.

ಇದನ್ನೂ ಓದಿ | Motivational story | ಇದು ಒಂದೇ ವಠಾರದಲ್ಲಿದ್ದ ಇಬ್ಬರು ಅಮ್ಮಂದಿರು, ಅವರ ಇಬ್ಬರು ಮಕ್ಕಳ ಕಥೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ : ಒಂಟೆ ಮತ್ತು ಜೀಬ್ರಾದ ಗೆಳೆತನ

ನನ್ನ ಚಂದದ ಕೋಟೆಲ್ಲಾ ಮಣ್ಣಾಗಿ ಬಿಡುತ್ತದೆ. ಮಿರಿಮಿರಿ ಮಿಂಚುವ ಚರ್ಮವೆಲ್ಲಾ ಕೊಳಕಾಗಿ ಹೋಗುತ್ತದೆʼ ಎಂದು ಹೇಳಿತ್ತು ಜೀಬ್ರಾ. ಒಂಟೆಯೇನೂ ಹೆಚ್ಚು ಬೇಸರ ಮಾಡಿಕೊಳ್ಳದೆ ಸುಮ್ಮನಿತ್ತು. ಯಾಕೆ ಗೊತ್ತೇ? ಹಾಗಾದರೆ ಈ ಕಥೆಯನ್ನು ಓದಿ.

VISTARANEWS.COM


on

Zebra and camel
Koo


ಮರುಭೂಮಿಯಿಂದ ಸ್ವಲ್ಪ ದೂರದಲ್ಲಿ ಹಸುರಾದ ಹುಲ್ಲುಗಾವಲಿತ್ತು. ಆ ವಿಸ್ತಾರವಾದ ಹುಲ್ಲುಗಾವಲಿನಲ್ಲಿ ಜೀಬ್ರಾವೊಂದು ವಾಸಿಸುತ್ತಿತ್ತು. ಅದಕ್ಕೆ ಪಕ್ಕದ ಮರುಭೂಮಿಯಲ್ಲಿ ವಾಸಿಸುವ ಒಂಟೆಯೊಂದು ಸ್ನೇಹಿತನಾಗಿತ್ತು. ಇಬ್ಬರೂ ಬಾಲ್ಯದಲ್ಲೇ ಭೇಟಿಯಾಗಿ ಆಡುತ್ತಾ ಬೆಳೆದಿದ್ದರಿಂದ ಆತ್ಮೀಯ ಗೆಳೆಯರಾಗಿದ್ದವು. ವಾರದಲ್ಲಿ ನಾಲ್ಕಾರು ಬಾರಿ ಭೇಟಿಯಾಗಿ ಹರಟೆ ಹೊಡೆಯುತ್ತಿದ್ದವು. ತಂತಮ್ಮ ಅನುಭವಕ್ಕೆ ಬಂದ ಮೋಜಿನ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದವು.

ಜೀಬ್ರಾಗೆ ತನ್ನ ಬಗ್ಗೆ ಬಹಳ ಹೆಮ್ಮೆಯಿತ್ತು. ಚಂದದ ಕಪ್ಪು-ಬಿಳಿ ಪಟ್ಟೆಯ ಕೋಟು ತನ್ನ ಮೈಮೇಲಿದೆ. ಒಂಟೆಯಂತೆ ಕೊಳಕಾದ ಮಣ್ಣು ಬಣ್ಣದ ಮೈಯಲ್ಲ ತನ್ನದು; ದೇಹದ ಆಕೃತಿ ತೀಡಿದಂತೆ ಶಿಸ್ತಾಗಿದೆ, ವಿಚಿತ್ರವಾದ ಡುಬ್ಬ ಬೆನ್ನಿಲ್ಲ ತನಗೆ; ಮೈಯ ಚರ್ಮ ಮಿರಿಮಿರಿ ಮಿಂಚುತ್ತಿದೆ, ಕೂದಲು ತುಂಬಿಕೊಂಡಿಲ್ಲ. ಭಯವಾಗುವಷ್ಟು ಉದ್ದನೆಯ ರೆಪ್ಪೆಯಿಲ್ಲದೆ, ಸುಂದರ ಕಣ್ಣುಗಳಿವೆ ಎಂದೆಲ್ಲಾ ಒಳಗೊಳಗೇ ಜಂಬವಿತ್ತು. ʻಮಣ್ಣಲ್ಲಿ, ಮರಳಲ್ಲಿ ಆಡೋಣ ಬಾʼ ಎಂದು ಒಂಟೆ ಹಲವಾರು ಬಾರಿ ಜೀಬ್ರಾವನ್ನು ಕರೆದಿತ್ತು. ʻಅಯ್ಯೋ, ಇಲ್ಲಪ್ಪ. ನಾ ಬರಲ್ಲ. ನನ್ನ ಚಂದದ ಕೋಟೆಲ್ಲಾ ಮಣ್ಣಾಗಿ ಬಿಡುತ್ತದೆ. ಮಿರಿಮಿರಿ ಮಿಂಚುವ ಚರ್ಮವೆಲ್ಲಾ ಕೊಳಕಾಗಿ ಹೋಗುತ್ತದೆʼ ಎಂದು ಹೇಳಿತ್ತು ಜೀಬ್ರಾ. ಒಂಟೆಯೇನೂ ಹೆಚ್ಚು ಬೇಸರ ಮಾಡಿಕೊಳ್ಳದೆ ಸುಮ್ಮನಿತ್ತು.

ಆ ವರ್ಷ ಆ ಪ್ರಾಂತ್ಯಕ್ಕೆಲ್ಲಾ ಬರಗಾಲ ಬಂತು. ಹುಲ್ಲುಗಾವಲಿನಲ್ಲಿ ದೂರ ದೂರದವರೆಗೆ ಎಲ್ಲೂ ನೀರು ದೊರೆಯದೆ ಪರದಾಡುವ ಸ್ಥಿತಿ ಉಂಟಾಯಿತು. ಹುಲ್ಲುಗಾವಲಿನ ಉಳಿದೆಲ್ಲಾ ಪ್ರಾಣಿಗಳಂತೆಯೇ ಜೀಬ್ರಾ ಸಹ ಕಂಗಾಲಾಯಿತು. ಒಂಟೆಯ ಜೊತೆಗಿನ ಭೇಟಿಯಲ್ಲಿ ತನ್ನ ಆತಂಕವನ್ನು ಹಂಚಿಕೊಂಡಿತು. ʻನೀರಿಲ್ಲದಿದ್ದರೆ ಬದುಕೋದು ಹೇಗೆ? ಇಲ್ಲಿಂದ ತುಂಬಾ ದೂರ ನಡೆದ ಮೇಲೆ ಸ್ವಲ್ಪ ನೀರಿರೊ ಕೆರೆ ಇದೆಯಂತೆ. ಏನು ಮಾಡೋದು ಗೊತ್ತಾಗ್ತಿಲ್ಲʼ ಎಂದು ದುಗುಡದಿಂದ ಹೇಳಿತು.

ಆದರೆ ಒಂಟೆ ನಿರಾತಂಕವಾಗಿತ್ತು. ಬರಗಾಲದಿಂದ ಉಂಟಾಗುವ ಕಷ್ಟಗಳ ಬಗ್ಗೆ ಅದರ ಮುಖದಲ್ಲಿ ಯಾವ ಬೇಸರವೂ ಇರಲಿಲ್ಲ. ʻನಮಗೇ ನೀರಿಲ್ಲ ಅಂದಮೇಲೆ, ಮರುಭೂಮಿಯಲ್ಲಿ ನಿಮಗಿನ್ನೂ ಕಷ್ಟತಾನೆ?ʼ ಕೇಳಿತು ಜೀಬ್ರಾ. ʻಮಳೆಯಿಲ್ಲದ್ದು, ನೀರಿಲ್ಲದಿರುವುದು ನಮಗೆ ಮಾಮೂಲಿ. ಅದಕ್ಕೆ ಆತಂಕವೆಲ್ಲಾ ಇಲ್ಲʼ ಎಂದಿತು ನಗುತ್ತಾ. ಜೀಬ್ರಾ ಮುಖದಲ್ಲಿ ಚಿಂತೆಯ ಗೆರೆಗಳು ಹೋಗಲಿಲ್ಲ.

ʻಮರುಭೂಮಿಯಲ್ಲಿ ನೀರುಣಿಸುವ ಒಯಸಿಸ್‌ಗಳಿವೆ. ನಾವು ನೀರು ಬೇಕೆನಿಸಿದಾಗ ಅಲ್ಲಿಗೆ ಹೋಗುತ್ತೇವೆ. ನಿನ್ನನ್ನೂ ಬೇಕಿದ್ದರೆ ಕರೆದೊಯ್ಯುತ್ತೇನೆʼ ಎಂದಿತು ಒಂಟೆ. ಆದರೆ ಆ ಸುಡುಬಿಸಿಯಾದ ಮರಳಿನಲ್ಲಿ ನಡೆಯುವುದು ಹೇಗೆ? ಮರಳು ಗಾಳಿ ಬೀಸಿದರೆ ಅದನ್ನು ತಡೆದುಕೊಳ್ಳುವುದು ಹೇಗೆ ಎಂಬ ಚಿಂತೆ ಜೀಬ್ರಾಗೆ.

ʻನಮ್ಮ ದೇಹ ಜೀಬ್ರಾಗಳಂತೆ ತಿದ್ದಿ-ತೀಡಿದಂತಿಲ್ಲ, ನಿಜ. ಆದರೆ ಬಿಸಿ ಮರಳಿನಲ್ಲಿ ನಡೆಯಲು ಅನುಕೂಲವಾಗುವ ಹಾಗಿದೆ. ಬೆನ್ನಿನ ಮೇಲಿರುವ ಡುಬ್ಬಿನಿಂದಲೇ ತಿಂಗಳುಗಟ್ಟಲೆ ನಾವು ನೀರು ಕುಡಿಯದೆಯೂ ಬದುಕಿರುವುದು. ನಮ್ಮ ಚರ್ಮ, ಕಣ್ಣು ರೆಪ್ಪೆಗಳೆಲ್ಲಾ ಮರಳು ಗಾಳಿಯನ್ನು ತಡೆಯುವುದಕ್ಕೆಂದೇ ಹೀಗಿವೆ. ಮರಳುಗಾಡಿನಲ್ಲಿ ಬದುಕುವುದಕ್ಕೆ ನಮ್ಮಂತೆ ಇದ್ದರೆ ಮಾತ್ರವೇ ಸಾಧ್ಯʼ ಎಂದಿತು ಒಂಟೆ. ಜೀಬ್ರಾಗೆ ತನ್ನ ತಪ್ಪಿನ ಅರಿವಾಯಿತು.

ಇದನ್ನೂ ಓದಿ : ಮಕ್ಕಳ ಕಥೆ: ಮೂರ್ಖ ಮಾಲಿಯ ನೆರವಿಗೆ ಮಂಗಗಳು ಬಂದಾಗ ಏನಾಯ್ತು?

ʻಮರಳುಗಾಡಿನಲ್ಲಿ ಹಗಲಿಗೆ ಬಿಸಿ ಇದ್ದಂತೆಯೇ ರಾತ್ರಿ ತಂಪಾಗುತ್ತದೆ. ರಾತ್ರಿಯ ವೇಳೆ ನಿನ್ನನ್ನು ಒಯಸಿಸ್‌ ಬಳಿಗೆ ಕರೆದೊಯ್ಯುತ್ತೇನೆ. ಬೇಕಷ್ಟು ನೀರು ಕುಡಿದು, ದೂರದ ನೀರಿರುವ ಕೆರೆಯತ್ತ ಹೊರಡು. ಬರಗಾಲ ಕಳೆದ ಮೇಲೆ ಮರಳಿ ಬಾʼ ಎಂದಿತು ಒಂಟೆ. ಮಿತ್ರನ ಒಳ್ಳೆಯತನಕ್ಕೆ ಸಂತೋಷಪಟ್ಟ ಜೀಬ್ರಾ, ಒಂಟೆಯನ್ನು ಪ್ರೀತಿಯಿಂದ ಅಪ್ಪಿಕೊಂಡಿತು.

Continue Reading

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ: ಮೂರ್ಖ ಮಾಲಿಯ ನೆರವಿಗೆ ಮಂಗಗಳು ಬಂದಾಗ ಏನಾಯ್ತು?

ಗಿಡಗಳಿಗೆ ನೀರು ಹಾಕುವವರಿಲ್ಲ ಎಂಬ ಕಾರಣಕ್ಕೆ ಆತನಿಗೆ ಶ್ರೀಮಂತ ರಜೆಯನ್ನೇ ನೀಡುತ್ತಿರಲಿಲ್ಲ. ಎಷ್ಟೇ ಗೋಗರೆದರೂ ಆತನಿಗೆ ಒಂದೇ ಒಂದು ದಿನವೂ ಆ ಸಾಹುಕಾರ ರಜೆ ನೀಡುತ್ತಿರಲಿಲ್ಲ. ಮುಂದೇನಾಯಿತು? ಕಥೆ ಓದಿ.

VISTARANEWS.COM


on

monkey story
Koo

ಒಂದೂರಿನಲ್ಲಿ ಶ್ರೀಮಂತನೊಬ್ಬನಿದ್ದ. ಊರಂಚಿನಲ್ಲಿ ಆತನಿಗೊಂದು ಸುಂದರವಾದ ತೋಟವಿತ್ತು. (kIds Corner) ಹಲವು ರೀತಿಯ ಫಲಭರಿತ ಮರಗಳು, ನಾನಾ ಬಣ್ಣದ ಹೂವಿನ ಗಿಡಗಳನ್ನೆಲ್ಲಾ ಆತ ಅಲ್ಲಿ ಬೆಳೆಸಿದ್ದ. ಆ ತೋಟದ ಮೇಲೆ ಆತನಿಗೆ ಬಹಳ ಪ್ರೀತಿಯೂ ಇತ್ತು. ಆ ತೋಟ ಸಾಕಷ್ಟು ವಿಸ್ತಾರವಾಗಿ ಇದ್ದಿದ್ದರಿಂದ ಅದನ್ನು ನೋಡಿಕೊಳ್ಳುವುದಕ್ಕೆ ಮಾಲಿಯೊಬ್ಬನನ್ನು ನೇಮಿಸಿಕೊಂಡ. ಆ ಮಾಲಿಯೂ ತನ್ನ ಕೆಲಸವನ್ನು ಪ್ರೀತಿಯಿಂದಲೇ ಮಾಡುತ್ತಿದ್ದ.

ಬೇಸಿಗೆ ಶುರುವಾಯಿತು. ನೆತ್ತಿ ಸುಡುವಂಥ ಬಿಸಿಲಿನಿಂದಾಗಿ ಶ್ರೀಮಂತನ ತೋಟದ ಗಿಡಗಳೆಲ್ಲಾ ಬಸವಳಿದು ಹೋಗುತ್ತಿದ್ದವು. ಹಾಗಾಗಿ ಪ್ರತೀದಿನ ಬಾವಿಯಿಂದ ನೀರೆತ್ತಿಕೊಂಡು ಎಲ್ಲಾ ಗಿಡಗಳಿಗೂ ನೀರುಣಿಸಬೇಕಾಗುತ್ತಿತ್ತು. ಆಗ ಮಾತ್ರವೇ ಬಾಡದಂತೆ ಗಿಡಗಳನ್ನು ಉಳಿಸಿಕೊಳ್ಳಲು ಸಾಧ್ಯವಿತ್ತು. ಈ ಕೆಲಸಕ್ಕೆ ಮಾಲಿಗೇನೂ ಬೇಸರವಿರಲಿಲ್ಲ. ಅವನಿಗೆ ಬೇಸರವಿದ್ದಿದ್ದು ಒಂದೇ ಕಾರಣಕ್ಕೆ. ಗಿಡಗಳಿಗೆ ನೀರು ಹಾಕುವವರಿಲ್ಲ ಎಂಬ ಕಾರಣಕ್ಕೆ ಆತನಿಗೆ ಶ್ರೀಮಂತ ರಜೆಯನ್ನೇ ನೀಡುತ್ತಿರಲಿಲ್ಲ. ಎಷ್ಟೇ ಗೋಗರೆದರೂ ಆತನಿಗೆ ಒಂದೇ ಒಂದು ದಿನವೂ ಆ ಸಾಹುಕಾರ ರಜೆ ನೀಡುತ್ತಿರಲಿಲ್ಲ.

ಒಮ್ಮೆ ಆತನ ಊರಿನ ಜಾತ್ರೆ ಬಂತು. ತನ್ನ ಕುಟುಂಬವನ್ನೆಲ್ಲಾ ಆ ಜಾತ್ರೆಗೆ ಕರೆದೊಯ್ಯಬೇಕು. ತಾನೂ ಅಲ್ಲೆಲ್ಲಾ ಅಡ್ಡಾಡಬೇಕು ಎಂಬ ಆಸೆ ಆತನಿಗಿತ್ತು. ಆದರೆ ಎಷ್ಟೇ ಕೇಳಿದರೂ ಸಾಹುಕಾರ ರಜೆ ಕೊಡುವುದಿಲ್ಲ ಎಂಬುದು ಆತನಿಗೆ ಖಾತ್ರಿಯಾಗಿತ್ತು. ಹಾಗೆಂದು ತಾನು ಮರಳಿ ಬರುವಷ್ಟರಲ್ಲಿ ಎರಡು ದಿನಗಳಾಗುತ್ತವೆ, ಅಷ್ಟರಲ್ಲಿ ಗಿಡಗಳೆಲ್ಲಾ ಬಾಡಿ ಹೋಗುತ್ತವೆ ಎಂಬುದೂ ಆತನಿಗೆ ತಿಳಿದಿತ್ತು. ಸಮೀಪದ ಕಾಡಿನಲ್ಲಿ ಯಾರಿಂದಲಾದರೂ ತನಗೆ ನೆರವು ದೊರೆಯಬಹುದೇ ಎಂದು ಯೋಚಿಸಿದ. ಆತನಿಗೆ ಉಪಾಯವೊಂದು ಹೊಳೆಯಿತು.

ಪಕ್ಕದ ಕಾಡಿನಲ್ಲಿ ದೊಡ್ಡ ಹಿಂಡು ಮಂಗಗಳು ವಾಸವಾಗಿದ್ದವು. ಆ ಮಂಗಗಳ ರಾಜನನ್ನು ಮಾಲಿ ಭೇಟಿ ಮಾಡಿದ. ಅಪರೂಪಕ್ಕೊಮ್ಮೆ ತಮ್ಮ ಹಿಂಡು ಆ ತೋಟಕ್ಕೆ ಭೇಟಿ ನೀಡಿದಾಗ, ಹೆದರಿಸಿ ಓಡಿಸುತ್ತಿದ್ದ ಈ ಮಾಲಿ ಈಗ ತನ್ನನ್ನೇಕೆ ನೋಡಲು ಬಂದಿದ್ದಾನೆ ಎಂದು ಮಂಗರಾಜನಿಗೆ ಕುತೂಹಲವಾಯಿತು. ವಿಷಯವೇನು ಎಂದು ಮಾಲಿಯನ್ನು ವಿಚಾರಿಸಿದ.

ʻಮಂಗರಾಜ, ನನಗೆ ಎರಡು ದಿನಗಳ ಮಟ್ಟಿಗೆ ನಮ್ಮೂರಿಗೆ ಹೋಗಬೇಕು. ನನಗೆ ನಮ್ಮ ಸಾಹುಕಾರರು ರಜೆ ಕೊಡುತ್ತಿಲ್ಲ. ಹಾಗಾಗಿ ನೀವೆಲ್ಲಾ ಸೇರಿ ನನಗೊಂದು ಉಪಕಾರ ಮಾಡಬೇಕುʼ ಎಂದು ಮಾಲಿ ವಿನಂತಿಸಿದ.
ʻಉಪಕಾರವೇ! ನಮಗೆಲ್ಲಾ ಮಾಲಿ ಕೆಲಸ ಮಾಡಲು ಬರುವುದಿಲ್ಲʼ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡ ಮಂಗರಾಜ.

ʻಅಯ್ಯೋ! ತುಂಬಾ ಕಷ್ಟದ ಕೆಲಸವಲ್ಲ. ತೋಟದ ಬಾವಿಯಿಂದ ನೀರೆತ್ತಿ ಎಲ್ಲಾ ಗಿಡಗಳಿಗೂ ಹಾಕಬೇಕು, ಅಷ್ಟೆ. ಗಿಡ ಹಸಿರಾಗಿದ್ದರೆ ನಾನು ರಜೆಯ ಮೇಲೆ ಹೋದರೂ ನಮ್ಮ ಸಾಹುಕಾರರು ಬಯ್ಯುವುದಿಲ್ಲ. ಇದೊಂದು ಉಪಕಾರ ಮಾಡಿʼ ಎಂದು ಕೇಳಿದ ಮಾಲಿ. ಮಂಗಗಳು ಒಪ್ಪಿಕೊಂಡವು. ಈತ ನೆಮ್ಮದಿಯಿಂದ ಸಂಸಾರ ಸಮೇತ ಜಾತ್ರೆಗೆ ಹೋದ.

ಮಾರನೇದಿನ ಮಂಗಗಳ ಹಿಂಡು ತೋಟಕ್ಕೆ ಬಂದಿಳಿಯಿತು. ಒಂದೆರಡು ಮಂಗಗಳು ಬಾವಿಯಿಂದ ನೀರೆತ್ತುವ ಕೆಲಸವನ್ನು ಶುರು ಹಚ್ಚಿದವು. ಉಳಿದವು ಗಿಡಗಳಿಗೆ ನೀರು ಹಾಕುವ ಕೆಲಸ ವಹಿಸಿಕೊಂಡವು. ಆದರೆ ಅವುಗಳಿಗೊಂದು ಗಂಭೀರವಾದ ಸಮಸ್ಯೆ ಎದುರಾಯಿತು. ಯಾವ ಗಿಡಕ್ಕೆ ಎಷ್ಟು ನೀರು ಹಾಕಬೇಕು? ತಮ್ಮ ರಾಜನನ್ನು ಕೇಳಿದವು. ʻಅಯ್ಯೋ! ಈ ವಿಷಯವನ್ನು ಮಾಲಿಯ ಬಳಿ ಕೇಳಲೇ ಇಲ್ಲವಲ್ಲ. ನನ್ನ ಪ್ರಜೆಗಳಿಗೆ ರಾಜನಾಗಿ ಏನಾದರೂ ಉತ್ತರ ಹೇಳಬೇಕುʼ ಎಂದು ಯೋಚಿಸಿದ ಮಂಗರಾಜ, ಗಿಡಗಳ ಬೇರು ಎಷ್ಟು ದೊಡ್ಡದಿದೆಯೋ ಅಷ್ಟು ಹೆಚ್ಚು ನೀರು ಹಾಕಿ ಎಂದು ಸೂಚಿಸಿತು.

ಬೇರು ಎಷ್ಟು ದೊಡ್ಡದಿದೆ ಎಂದು ನೋಡುವುದು ಹೇಗೆ ಎಂದು ಮಂಗಗಳು ತಂತಮ್ಮಲ್ಲೇ ಚರ್ಚಿಸಿದವು. ʻಕಿತ್ತು ನೋಡೋಣʼ ಎಂದು ಒಂದು ಮಂಗ. ಎಲ್ಲರಿಗೂ ಸರಿ ಎನಿಸಿತು. ಒಂದಿಷ್ಟು ಮಂಗಗಳು ಕೀಳುವ ಕಾರ್ಯ ವಹಿಸಿಕೊಂಡರೆ, ಇನ್ನಷ್ಟು ನೀರು ಹಾಕುವ ಹಾಗೂ ಮತ್ತಷ್ಟು ಪುನಃ ನೆಡುವ ಕೆಲಸ ವಹಿಸಿಕೊಂಡವು. ಕೆಲವೇ ನಿಮಿಷಗಳಲ್ಲಿ ಇಡೀ ತೋಟ ಬುಡಮೇಲಾಯಿತು. ಒಂದು ಗಿಡವನ್ನು ಇನ್ನೊಂದು ಗಿಡದ ಪಕ್ಕ ಹಿಡಿದು ಬೇರಿನ ಉದ್ದ ನೋಡುವುದು, ನೀರಲ್ಲಿ ತೇಲಿಸುವುದು ಮಾಡುತ್ತಾ, ಇಡೀ ತೋಟವನ್ನು ಕೆಸರು ಗದ್ದೆಯನ್ನಾಗಿ ಮಾಡಿದವು. ಬಾವಿಯ ನೀರೆಲ್ಲಾ ಖರ್ಚಾಗುತ್ತಾ ಬಂದಂತೆ ಇವರ ಕೆಲಸವೂ ಪೂರ್ಣಗೊಂಡಿತು. ಮಾಲಿ ಒಪ್ಪಿಸಿದ್ದ ಕೆಲಸವನ್ನು ಮಾಡಿ ಮುಗಿಸಿದ ತೃಪ್ತಿಯಿಂದ ಎಲ್ಲವೂ ಕಾಡಿನತ್ತ ತೆರಳಿದವು.

ಇದನ್ನೂ ಓದಿ : ಮಕ್ಕಳ ಕಥೆ: ಆಗೋದೆಲ್ಲಾ ಒಳ್ಳೆಯದಕ್ಕೆ!

ಮಾರನೇ ದಿನ ಬೆಳಗ್ಗೆ ಎಂದಿನಂತೆ ಸಾಹುಕಾರ ತೋಟದ ವೀಕ್ಷಣೆಗೆ ಬಂದ. ನೋಡಿದರೆ… ಇಡೀ ತೋಟ ಆನೆ ಹೊಕ್ಕಂತಿತ್ತು. ಕೆಂಡಾಮಂಡಲವಾದ ಶ್ರೀಮಂತ ಎಲ್ಲಿ ಹುಡುಕಿದರೂ ಮಾಲಿ ಮಾತ್ರ ಕಾಣಲಿಲ್ಲ. ಜಾತ್ರೆ ಮುಗಿಸಿದ ಮಾಲಿ ಮಧ್ಯಾಹ್ನದ ಹೊತ್ತಿಗೆ ತೋಟಕ್ಕೆ ಮರಳಿ ಬಂದ. ಆತನಿಗಾಗಿಯೇ ಕಾಯುತ್ತ ಕುಳಿತಿದ್ದ ಸಾಹುಕಾರ. ತೋಟದ ಸ್ಥಿತಿ ಕಂಡು ಮಾಲಿಯ ಕಣ್ಣಲ್ಲೂ ನೀರು ಬಂತು. ಜಾತ್ರೆಗೆ ಹೋಗಬೇಕಿದ್ದರಿಂದ ತಾನು ಮಾಡಿ ಹೋಗಿದ್ದ ಬದಲಿ ವ್ಯವಸ್ಥೆಯ ಬಗ್ಗೆ ಸಾಹುಕಾರನಲ್ಲಿ ಹೇಳಿದ ಮಾಲಿ ಕ್ಷಮೆ ಕೋರಿದ. ಕೆಟ್ಟ ಮೇಲೆ ಬುದ್ಧಿ ಬಂದರೆ ಏನು ತಾನೆ ಲಾಭ!

Continue Reading

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ: ಆಗೋದೆಲ್ಲಾ ಒಳ್ಳೆಯದಕ್ಕೆ!

ಕುದುರೆ ಸಾಕುವುದು ಮತ್ತು ವ್ಯಾಪಾರ ಮಾಡುವ ಬಗ್ಗೆ ಒಳ್ಳೆಯ ತರಬೇತಿ ನೀಡಿದ್ದ. ಕ್ರಮೇಣ ಈತನ ವ್ಯಾಪಾರವನ್ನು ಮಗನೇ ನೋಡಿಕೊಳ್ಳತೊಡಗಿದ. ಯಾಕೆ ಗೊತ್ತೇ? ಕಥೆ ಓದಿ.

VISTARANEWS.COM


on

Horse riding
Koo

ಚೀನಾ ದೇಶದಲ್ಲಿ ಕುದುರೆಗಳ ವ್ಯಾಪಾರಿಯೊಬ್ಬನಿದ್ದ. ಅರಬ್‌ ದೇಶಗಳಿಂದ ಕುದುರೆಗಳನ್ನು ತಂದು ಆತ ಚೀನಾದಲ್ಲಿ ಮಾರುತ್ತಿದ್ದ. ಒಂದಕ್ಕಿಂತ ಒಂದು ಉತ್ತಮವಾದ ಕುದುರೆಗಳನ್ನು ಆತ ಸಾಕಿಕೊಂಡಿದ್ದ. ಒಳ್ಳೆಯ ದರ ಸಿಕ್ಕುತ್ತಿದ್ದಂತೆ ಅವುಗಳನ್ನು ಮಾರುತ್ತಿದ್ದ. ಆತನಿಗೆ ಒಬ್ಬನೇ ಮಗ. ಆ ಮಗನಿಗೂ ಕುದುರೆಗಳ ತಳಿಗಳನ್ನು ಗುರುತಿಸುವುದು, ಅವುಗಳನ್ನು ಸಾಕುವುದು ಮತ್ತು ವ್ಯಾಪಾರ ಮಾಡುವ ಬಗ್ಗೆ ಒಳ್ಳೆಯ ತರಬೇತಿ ನೀಡಿದ್ದ. ಕ್ರಮೇಣ ಈತನ ವ್ಯಾಪಾರವನ್ನು ಮಗನೇ ನೋಡಿಕೊಳ್ಳತೊಡಗಿದ.

ಒಂದು ದಿನ ಆತನ ಮಗ ಕುದುರೆ ಲಾಯದ ಬಾಗಿಲನ್ನು ಮುಚ್ಚುವುದಕ್ಕೆ ಮರೆತ. ರಾತ್ರಿಯಾಯಿತು, ಎಲ್ಲರೂ ಮಲಗಿಬಿಟ್ಟರು. ಬೆಳಗ್ಗೆದ್ದು ನೋಡುವಷ್ಟರಲ್ಲಿ ಉತ್ತಮ ತಳಿಯ ಗಂಡು ಕುದುರೆಯೊಂದು ಲಾಯದಿಂದ ತಪ್ಪಿಸಿಕೊಂಡಿತ್ತು. ವ್ಯಾಪಾರಿಯ ದುಬಾರಿ ಬೆಲೆಯ ಗಂಡು ಕುದುರೆ ಕಾಣೆಯಾಗಿದೆ ಎಂಬುದನ್ನು ತಿಳಿದ ಊರಿನ ಜನ ಬಂದು, ಹಿರಿಯ ವ್ಯಾಪಾರಿಗೆ ಸಮಾಧಾನ ಹೇಳಿದರು. ಆದರೆ ಯಾವುದೇ ಚಿಂತೆಯಿಲ್ಲದವರಂತೆ ನಿರ್ಲಿಪ್ತನಾಗಿದ್ದ ಆತ, ʻಅಯ್ಯೋ ಬಿಡಿ, ಆಗುವುದೆಲ್ಲಾ ಒಳ್ಳೆಯದಕ್ಕೆʼ ಎಂದು ಹೇಳಿ ತಣ್ಣಗೆ ಕೂತಿದ್ದ. ಊರಿನ ಜನರಿಗೆಲ್ಲಾ ಅಚ್ಚರಿಯಾಯಿತು. ಇಷ್ಟೊಂದು ನಷ್ಟವಾಗಿದ್ದಕ್ಕೆ ಬೇಸರದಿಂದ ಆತನಿಗೆ ಹಾಗಾಗಿದೆ ಎಂದು ಭಾವಿಸಿ ಸುಮ್ಮನಾದರು.

ಕೆಲವು ದಿನಗಳ ನಂತರ ಆತನ ಲಾಯದಿಂದ ಓಡಿಹೋಗಿದ್ದ ಕುದುರೆ ಮರಳಿ ಬಂತು. ಆ ಕುದುರೆಯ ಜೊತೆಯಲ್ಲಿ ಕಾಡು ತಳಿಯ ಹೆಣ್ಣು ಕುದುರೆಯೊಂದು ಲಾಯಕ್ಕೆ ಬಂದಿತ್ತು. ಈತನ ಕಾಣೆಯಾದ ದುಬಾರಿ ಕುದುರೆಯ ಜೊತೆಗೆ ಇನ್ನೊಂದು ಕುದುರೆಯೂ ಆತನಿಗೆ ಅನಾಯಾಸವಾಗಿ ಲಭ್ಯವಾಗಿತ್ತು. ಹಾಗಾಗಿ ಆಗೋದೆಲ್ಲಾ ಒಳ್ಳೇದಕ್ಕೆ ಎನ್ನುತ್ತಾ ನಷ್ಟದಲ್ಲೂ ಭರವಸೆ ಕಳೆದುಕೊಳ್ಳದೆ ಇದ್ದ ವ್ಯಾಪಾರಿಯ ಮನಸ್ಸು ಏನೆಂಬುದು ಆತನ ಮಗನಿಗೆ ಅರ್ಥವಾಗಿತ್ತು. ಆದರೂ ಎಲ್ಲಾ ಸಂದರ್ಭಗಳಲ್ಲೂ ಹೀಗೆಯೇ ಹೇಳುತ್ತಾನಲ್ಲ ತಂದೆ ಎಂದು ವಿಚಿತ್ರವೆನಿಸಿತು.

ಇನ್ನೊಂದು ದಿನ, ತಾನೇ ಸಾಕಿದ್ದ ಕುದುರೆಯೊಂದರ ಮೇಲೆ ವ್ಯಾಪಾರಿಯ ಮಗ ಸವಾರಿ ಮಾಡುತ್ತಿದ್ದ. ಸವಾರ ಹೇಳಿದ ಮಾತನ್ನು ಕೇಳುವಂತೆ ಆ ಕುದುರೆಯನ್ನು ಚನ್ನಾಗಿ ಪಳಗಿಸಲಾಗಿತ್ತು. ಆದರೆ ಹುಲ್ಲುಗಾವಲಿನಲ್ಲಿ ಓಡುತ್ತಿದ್ದ ಕುದರೆ ಇದ್ದಕ್ಕಿದ್ದಂತೆ ಮುಗ್ಗರಿಸಿತು. ಇದರಿಂದ ಕುದುರೆಯ ಮೇಲಿದ್ದ ವರ್ತಕನ ಮಗ ಕೆಳಗೆ ಉರುಳಿ ಬಿದ್ದ. ಆತ ಒಂದು ಕಾಲು ಮುರಿದುಹೋಯಿತು. ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು ಮುರಿದ ಕಾಲು ಮೊದಲಿನಂತಾಗುವುದು ಅನುಮಾನ, ಆದರೂ ವರ್ಷಗಟ್ಟಲೆ ಸಮಯ ಬೇಕು ಎಂದರು. ಏನೇನೋ ಗಿಡಮೂಲಿಕೆಯ ಔಷಧಿಗಳನ್ನು ಆತನ ಕಾಲಿಗೆ ಕಟ್ಟಿದರು.

ಈ ವಿಷಯ ಊರಿಗೆಲ್ಲಾ ತಿಳಿಯಿತು. ಊರ ಜನರೆಲ್ಲಾ ಇವರ ಮನೆಗೆ ಬಂದು ಸಮಾಧಾನ ಮಾಡತೊಡಗಿದರು. ವರ್ತಕನ ೨೫ ವರ್ಷದ ಮಗ, ಪಾಪ, ಇನ್ನು ವರ್ಷಗಟ್ಟಲೆ ಕುಂಟಬೇಕಲ್ಲ. ಆದರೂ ಪೂರಾ ಮೊದಲಿನಂತಾಗುವುದು ಅನುಮಾನ ಎಂದಿದ್ದಾರಲ್ಲ ವೈದ್ಯರು ಎಂದು ಜನರೆಲ್ಲಾ ಬೇಸರಗೊಂಡು ಆ ಕುದುರೆಯನ್ನು ಶಪಿಸಿದರು. ಆದರೆ ಇದಕ್ಕೂ ನಿರ್ಲಿಪ್ತನಾಗಿದ್ದ ವರ್ತಕ. ʻಚನ್ನಾಗಿ ಪಳಗಿದ ಕುದುರೆ ಮುಗ್ಗರಿಸಿದರೆ ಏನು ಮಾಡುವುದು? ಅದೇನು ಬೇಕೆಂದು ಮಾಡಲಿಲ್ಲವಲ್ಲ, ಪಾಪದ ಪ್ರಾಣಿ. ಆಗೋದೆಲ್ಲ ಒಳ್ಳೆಯದಕ್ಕೆ ಎಂದುಕೊಂಡರಾಯಿತುʼ ಎಂದು ವರ್ತಕ. ಮಗನಿಗೆ ಕಾಲು ಮುರಿದ ದುಃಖದಲ್ಲಿ ಆ ವ್ಯಾಪಾರಿಯ ತಲೆ ಕಟ್ಟಿದೆ ಎಂದುಕೊಂಡರು ಜನ.

ಇದನ್ನೂ ಓದಿ : ಮಕ್ಕಳ ಕಥೆ: ಎಲ್ಲಿ ಕಳೆದು ಹೋಯ್ತು ಚುಕ್ಕಿ ಚಿರತೆಯ ನಗು?

ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ಯುದ್ಧ ಘೋಷಣೆಯಾಯಿತು. ಪ್ರತಿ ಮನೆಯಿಂದಲೂ ಯುವಕರು ಸೇನೆಗೆ ಬರಲೇಬೇಕು ಎಂದು ರಾಜನ ಆಜ್ಞೆಯಾಯಿತು. ಊರೂರಿಗೆ ಸೈನಿಕರು ಬಂದರು. ಮನೆಮನೆಗೆ ಭೇಟಿ ನೀಡಿ, ಯುವಕರನ್ನು ಕರೆದೊಯ್ದರು. ವರ್ತಕನ ಮನೆಗೆ ಬಂದರೆ, ಮನೆಯಲ್ಲಿರುವ ಇಬ್ಬರು ಗಂಡಸರ ಪೈಕಿ ಒಬ್ಬ ಮುದುಕ, ಇನ್ನೊಬ್ಬನಿಗೆ ಕಾಲು ಮುರಿದಿದೆ. ಸೈನಿಕರು ತಮ್ಮಷ್ಟಕ್ಕೆ ಮಾತಾಡಿಕೊಂಡು ಹೊರಟುಹೋದರು. ಹಲವಾರು ದಿನಗಳವರೆಗೆ ನಡೆದ ಯುದ್ಧದಲ್ಲಿ ಬಹಳಷ್ಟು ಮಂದಿ ಜೀವ ಕಳೆದುಕೊಂಡರು. ಸಾವಿರಾರು ಮಂದಿ ಕೈ-ಕಾಲು ಕಳೆದುಕೊಂಡರು. ತನಗೆ ಕಾಲು ಮುರಿದಾಗಲೂ ಅಪ್ಪ ಬೇಸರ ಮಾಡದೆ ಇದ್ದಿದ್ದು ಮಗನಿಗೆ ನೆನಪಾಯಿತು. ಕಷ್ಟಗಳ ನಡುವೆ ಭರವಸೆ ಕಳೆದುಕೊಳ್ಳದೆ ಇರಬೇಕೆಂಬ ತಂದೆಯ ಮಾತು ಮಗನಿಗೆ ಅರ್ಥವಾಯಿತು.

Continue Reading

ಕಿಡ್ಸ್‌ ಕಾರ್ನರ್‌

ಮಕ್ಕಳ ಕಥೆ: ಎಲ್ಲಿ ಕಳೆದು ಹೋಯ್ತು ಚುಕ್ಕಿ ಚಿರತೆಯ ನಗು?

ಪ್ರಾಣಿಗಳು ಕೇಳೋ ಯಾವ ಪ್ರಶ್ನೆಗೂ ಚುಕ್ಕಿ ಚಿರತೆಗೆ ಉತ್ತರ ಕೊಡೋದಕ್ಕೇ ಆಗ್ಲಿಲ್ಲ. ಮುಂದೇನಾಯಿತು? ಕಥೆ ಓದಿ.

VISTARANEWS.COM


on

leopard
Koo

ಒಂದು ಕಾಡು. ಆ ಕಾಡಲ್ಲೊಂದು ಚುಕ್ಕಿ ಚಿರತೆ ವಾಸ ಮಾಡ್ತಿತ್ತು. ಒಂದು ದಿನ ಆ ಚಿರತೆಗೆ ಸಿಕ್ಕಾಪಟ್ಟೆ ಬೇಜಾರಾಗೋಯ್ತು. ವಿಷಯ ಏನಪಾ ಅಂದ್ರೆ, ತನ್ನ ನಗು ಕಳೆದೋಗಿದೆ ಅಂತ ಚುಕ್ಕಿ ಚಿರತೆಗೆ ಚಿಂತೆ ಆಗಿತ್ತು. ʻಎಷ್ಟು ದಿನ ಆಯ್ತು ನಾನು ನಕ್ಕು! ಎಲ್ಲಿ ಕಳೆದೋಯ್ತು ನನ್ನ ನಗುʼ ಅಂತ ತನ್ನ ಸುತ್ತಮುತ್ತೆಲ್ಲಾ ಹುಡುಕಾಡಿದ್ರೂ ಅದಕ್ಕೆ ನಗು ಸಿಕ್ಕಿರಲಿಲ್ಲ. ಅದಕ್ಕೆ ಹ್ಯಾಪ್‌ ಮೋರೆ ಹಾಕ್ಕೊಂಡು ಕೂತಿತ್ತು. ಕಾಡಿನ ಪ್ರಾಣಿಗಳೆಲ್ಲಾ ಅದರ ಹತ್ತಿರ ಬಂದು, ʻಚಿಕ್ಕಿ ಚಿರತೆ, ಯಾಕೆ ಅಳತಾ ಕೂತೆ?ʼ ಅಂತ ವಿಚಾರಿಸಿದ್ವು. ಅಷ್ಟ್ ಕೇಳಿದ್ದೇ ಗೋಳೋ ಅಂತಾಳೋದಕ್ಕೆ ಶುರು ಮಾಡಿತು ಚಿರತೆ. ʻನನ್ನ ನಗುವೇ ಕಳೆದೋಗಿದೆ. ಎಲ್ಲಿ ಹುಡುಕಿದ್ರೂ ಸಿಗ್ತಿಲ್ಲ. ಏನ್‌ ಮಾಡ್ಲಿ?ʼ ಅಂತ ಬಿಕ್ಕುತ್ತಾ ಹೇಳಿತು. ಉಳಿದೆಲ್ಲಾ ಪ್ರಾಣಿಗಳಿಗೂ ಪಾಪ ಅನ್ನಿಸಿ, ಅವೂ ಚುಕ್ಕಿ ಚಿರತೆಯ ಕಳೆದೋದ ನಗುವನ್ನು ಹುಡುಕೋದಕ್ಕೆ ಶುರು ಮಾಡಿದ್ವು. ʻಚುಕ್ಕಿ, ನಿನ್ನ ನಗು ಎಷ್ಟು ದೊಡ್ಡದು?ʼ ಅಂತ ಒಂದು ಪ್ರಾಣಿ ಕೇಳಿದ್ರೆ, ಇನ್ನೊಂದು ʻನಿನ್ನ ನಗು ಯಾವ ಬಣ್ಣಕ್ಕಿತ್ತು?ʼ ಅಂತ ಕೇಳಿತು. ಹೀಗೆ ಪ್ರಾಣಿಗಳು ಕೇಳೋ ಯಾವ ಪ್ರಶ್ನೆಗೂ ಚುಕ್ಕಿ ಚಿರತೆಗೆ ಉತ್ತರ ಕೊಡೋದಕ್ಕೇ ಆಗ್ಲಿಲ್ಲ. ನೀನು ಏನೂ ಹೇಳದಿದ್ರೆ ನಾವಾದ್ರೂ ಹೇಗೆ ಹುಡುಕೋದು ಅಂತ ಉಳಿದ ಪ್ರಾಣಿಗಳು ಹೊರಟೋದ್ವು.

ಚುಕ್ಕಿ ಚಿರತೆಯ ಬೇಸರ ಇನ್ನೂ ಹೆಚ್ಚಾಯ್ತು. ತನ್ನ ಸಹಾಯಕ್ಕೆ ಯಾರೂ ಬರಲಿಲ್ಲ ಅಂತ ಬೇಜಾರಿನಿಂದ ಕಾಡೊಳಗೆ ಹೋಗ್ತಾ ಇರಬೇಕಾದ್ರೆ ಜಿರಾಫೆಯೊಂದು ಕಂಡಿತು. ʻಇದ್ಯಾಕೆ ಚುಕ್ಕಿ. ಆಕಾಶ ತಲೆ ಮೇಲೆ ಬಿದ್ದಂಗಿದ್ದೀಯ?ʼ ಅಂತ ಕೇಳಿತು ಜಿರಾಫೆ. ʻಏನ್‌ ಹೇಳಲಿ ಜಿರಾಫೆಯಕ್ಕ, ನನ್ನ ನಗು ಕಳೆದೋಗಿದೆ. ನೀ ತುಂಬಾ ಎತ್ತರ ಇದೀಯಲ್ಲಾ… ನೋಡು, ಮೇಲೆ ಗಾಳಿಲ್ಲೆಲ್ಲಾದ್ರೂ ಇದೆಯಾ ನಗು ಅಂತʼ ಕೇಳಿತು ಚುಕ್ಕಿ ಚಿರತೆ. ಮೇಲೆಲ್ಲಾ ಹುಡುಕಾಡಿದ ಜಿರಾಫೆ, ʻಊಹುಂ! ಕಾಣ್ತಿಲ್ವಲ್ಲೇ ಚುಕ್ಕಿ ಗಾಳಿಲ್ಲೆಲ್ಲೂ. ಎಲ್ಲಿ ಕಳಕೊಂಡಿದ್ದೀಯೊ ಏನೊʼ ಅಂತು.

ಅಲ್ಲಿಂದ ಗೋಳಾಡುತ್ತಾ ಮುಂದು ಹೋಗಬೇಕಾದ್ರೆ ಹೆಗ್ಗಣವೊಂದು ಎದುರಾಯ್ತು. ʻಇದೇನೆ ಚುಕ್ಕಿ, ಹಿಂಗೆ ಹರಳೆಣ್ಣೆ ಕುಡಿದ ಮುಖ ಮಾಡ್ಕಂಡಿದ್ದೀಯಲ್ಲೇʼ ಅಂತ ವಿಚಾರಿಸಿತು ಹೆಗ್ಗಣ್ಣ. ʻನೀನಾದ್ರೂ ಇದೀಯಲ್ಲ ನನ್ನ ಕಷ್ಟಕ್ಕೆ ಹೆಗ್ಗಣ್ಣ! ನನ್ನ ನಗು ಕಳೆದೋಗಿದೆ. ಭೂಮಿ ಒಳಗೆಲ್ಲಾದ್ರೂ ಇದೆಯಾ ನೋಡು ಸ್ವಲ್ಪʼ ವಿನಂತಿಸಿತು ಚಿರತೆ. ಭೂಮಿಯೊಳಗಿಳಿದ ಹೆಗ್ಗಣ್ಣ ಅಲ್ಲೆಲ್ಲಾ ಹುಡುಕಾಡಿ, ಎಲ್ಲೂ ಸಿಗದೆ ಪೆಚ್ಚ ಮೋರೆಯೊಂದಿಗೆ ಮೇಲೆ ಬಂತು. ಈಗಂತೂ ಚುಕ್ಕಿ ಚಿರತೆಯ ಗೋಳು ಇನ್ನೂ ಹೆಚ್ಚಾಯ್ತು.

ಸ್ವಲ್ಪ ನೀರಾದ್ರೂ ಕುಡಿಯೋಣ ಅಂತ ನದೀ ಹತ್ರ ಹೋಯ್ತು ಚಿರತೆ. ನೀರೆಲ್ಲಾ ಕುಡಿದು ಉಸ್ಸಪ್ಪಾ ಅಂತ ಕೂತಿದ್ದಾಗ, ʻಏನ್‌ ಚುಕ್ಕಿ, ಚನ್ನಾಗಿದ್ದೀಯ?ʼ ಅನ್ನೋ ಧ್ವನಿ ಕೇಳಿತು. ಯಾರದು ಮಾತಾಡಿದ್ದು ಅಂತ ಆಚೀಚೆ ನೋಡ್ತಿದ್ದಾಗ, ನೀರೊಳಗಿಂದ ನೀರಾನೆಯೊಂದು ಹೊರಬಂತು. ʻಓಹ್‌ ನೀನಾ!ʼ ಅಂದ ಚುಕ್ಕಿ, ಅದರ ಹತ್ರವೂ ತನ್ನ ಕಷ್ಟ ಹೇಳಿಕೊಂಡ್ತು. ʻಸ್ವಲ್ಪ ನೀರೊಳಗೆ ನೋಡ್ತೀಯಾ, ಅಲ್ಲೆಲ್ಲಾದ್ರೂ ಬಿದ್ದೋಗಿದ್ರೆ…ʼ ಅನ್ನೋ ಮನವಿಗೆ ನೀರಾನೆ ಹೊಳೆಯೊಳಗಿಳಿದು ಹುಡುಕಾಡ್ತು. ʻಇಲ್ಲ ಕಣೆ ಚುಕ್ಕಿ. ಎಲ್‌ ಬಿಟ್ಯೋ ಏನೋʼ ಅಂತು ನೀರಾನೆ. ಗಾಳಿ, ನೀರು, ಭೂಮಿ ಎಲ್ಲೂ ಇಲ್ವಲ್ಲಾ ತನ್ನ ನಗು ಅಂತ ಬಿಕ್ಕಿಬಿಕ್ಕಿ ಅಳುತ್ತಾ ಬರುವಾಗ ಅದಕ್ಕೊಂದು ಮಂಗಣ್ಣ ಎದುರಾಯ್ತು.

ʻಇದೇನು ಹಿಂಗೆ ಅಳ್ತಿದ್ದೀಯ? ಅಂಥದ್ದೇನಾಯ್ತು?ʼ ಕೇಳಿತು ಮಂಗಣ್ಣ. ತನ್ನ ನಗು ಕಳೆದ ಕಥೆಯನ್ನು ಮಂಗಣ್ಣನಿಗೂ ಒಪ್ಪಿಸಿತು ಚುಕ್ಕಿ. ಅದರ ಕಥೆಯನ್ನೆಲ್ಲಾ ಕೇಳಿದ ಮಂಗಣ್ಣ, ʻನಿನ್ನ ನಗು ಯಾವತ್ತು ಕಳೆದೋಯ್ತು?ʼ ವಿಚಾರಿಸ್ತು. ʻಯಾವತ್ತೂಂದ್ರೆ…!ʼ ಯೋಚನೆ ಮಾಡ್ತು ಚುಕ್ಕಿ. ʻನಾನು ಚಿಕ್ಕವಳಿರಬೇಕಾದ್ರೆ ತುಂಬಾ ನಗ್ತಿದ್ದೆ. ಆದರೆ ದೊಡ್ಡವಳಾಗ್ತಾ, ನಾನು ನಗ್ತಿದ್ದಂತೆ ನನ್ನ ಕೋರೆ ಹಲ್ಲುಗಳು ಹೊರಗೆ ಬರೋದನ್ನ ನೋಡಿ, ಉಳಿದ ಪ್ರಾಣಿಗಳು ಹೆದರಿ ನನ್ನ ಹತ್ರನೇ ಬರ್ತಿರಲಿಲ್ಲ. ಹಂಗಾಗಿ ನಗೋದನ್ನು ಕಡಿಮೆ ಮಾಡಿದೆ. ಅದ್ಯಾವತ್ತು ಕಳೆದೋಯ್ತು ಅನ್ನೋದೆ ನಂಗೆ ಗೊತ್ತಾಗ್ಲಿಲ್ಲʼ ಅಂತು ಚಿರತೆ.

ಸೀದಾ ಮರವೊಂದನ್ನು ಏರಿದ ಮಂಗ, ಅಲ್ಲಿದ್ದ ಹಕ್ಕಿಯ ಗೂಡೊಂದರಿಂದ ಪುಕ್ಕವೊಂದನ್ನು ತಂತು. ಅದನ್ನು ಚುಕ್ಕಿಯ ಕಿವಿಯೊಳಗೆ ಹಾಕಿ ತಿರುಗಿಸತೊಡಗಿತು. ಮಂಗಣ್ಣ ನೀಡುತ್ತಿದ್ದ ಕಚುಗುಳಿಯನ್ನು ತಡೆಯಲಾಗದ ಚುಕ್ಕಿ, ನಗುತ್ತಾ ಉರುಳಾಡೋದಕ್ಕೆ ಶುರು ಮಾಡ್ತು. ʻಅಯ್ಯೋ, ಸಾಕು ಸಾಕು ಮಂಗಣ್ಣಾ, ನಗು ತಡೆಯೋದಕ್ಕಾಗ್ತಿಲ್ಲ. ಹೊಟ್ಟೆಯಲ್ಲಾ ನೋವು ಬಂತುʼ ಅಂತು ಚಿರತೆ ಬಿದ್ದೂಬಿದ್ದು ನಗುತ್ತಾ. ಚುಕ್ಕಿಯ ನಗುವ ಧ್ವನಿಗೆ ಕಾಡಿನ ಪ್ರಾಣಿಗಳೆಲ್ಲಾ ಬಂದು ಸೇರಿದವು. ʻನಗು ಎಲ್ಲಿ ಸಿಗ್ತು?ʼ ಅನ್ನೋದೊಂದೇ ಅವುಗಳ ಪ್ರಶ್ನೆ.

ಇದನ್ನೂ ಓದಿ : ಮಕ್ಕಳ ಕಥೆ: ಪ್ರಾಣಿಗಳ ರಜಾ ದಿನ ಹೇಗಿತ್ತು ಗೊತ್ತಾ?

ʻಸಿಗೋದಕ್ಕೆ ಚುಕ್ಕಿಯ ನಗು ಎಲ್ಲೂ ಕಳೆದಿರಲಿಲ್ಲ, ಅವಳ ಒಳಗೇ ಇತ್ತು. ನಂನಮ್ಮ ನಗು ನಮ್ಮೊಳಗೇ ಇರತ್ತೆ. ಅದನ್ನು ಹುಡುಕಬೇಕಾದ್ದು ನಾವು. ಚುಕ್ಕಿ ನಕ್ಕಾಗ ಅವಳ ಹಲ್ಲುಗಳು ಎಷ್ಟು ಚಂದ ಕಾಣತ್ತೆ ನೋಡಿʼ ಅಂತು ಮಂಗಣ್ಣ. ಉಳಿದ ಪ್ರಾಣಿಗಳಿಗೂ ಈಗ ಚುಕ್ಕಿಯ ಹಲ್ಲು ಹೆದರಿಕೆ ಹುಟ್ಟಿಸುವ ಬದಲು, ಸುಂದರವಾಗಿ ಕಂಡಿತು. ಚುಕ್ಕಿಯ ನಗು ಮರಳಿ ಬಂತು.

Continue Reading
Advertisement
Karnataka Weather Forecast
ಮಳೆ3 mins ago

Karnataka Weather :ಮಳೆಯ ಕಣ್ಣಾ ಮುಚ್ಚಾಲೆ ಆಟ; ವರುಣ ದೇವನ ತಲೆ ಮೇಲೆ ಹೊತ್ತು ತಿರುಗಿದ ಗ್ರಾ.ಪಂ ಪಿಡಿಒ

Prajwal Revanna Case HD Revanna may be shifted to Parappana Agrahara SIT custody is doubtful
ಕ್ರೈಂ7 mins ago

Prajwal Revanna Case: ಪರಪ್ಪನ ಅಗ್ರಹಾರಕ್ಕೆ ಎಚ್‌.ಡಿ. ರೇವಣ್ಣ ಶಿಫ್ಟ್‌? SIT ಕಸ್ಟಡಿಗೆ ಕೊಡುವುದು ಡೌಟ್!

Narendra Modi
ದೇಶ8 mins ago

Narendra Modi: ಅಯೋಧ್ಯೆಯಲ್ಲಿಂದು ಪ್ರಧಾನಿ ಮೋದಿ ರೋಡ್‌ಶೋ; ರಾಮಲಲ್ಲಾನಿಗೆ ವಿಶೇಷ ಪೂಜೆ

Police Officer
ದೇಶ16 mins ago

Police Officer: ಮರಳು ಮಾಫಿಯಾ ತಡೆಯಲು ಹೋದ ಎಎಸ್‌ಐ ಮೇಲೆ ಟ್ರ್ಯಾಕ್ಟರ್‌ ಹರಿಸಿ ಕೊಲೆ!

Covishield Vaccine
ದೇಶ36 mins ago

Covishield Vaccine: ಮಗಳ ಸಾವಿಗೆ ಕೋವಿಶೀಲ್ಡ್ ಲಸಿಕೆ ಕಾರಣ: ಆಸ್ಟ್ರಾಜೆನಿಕಾ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ತಂದೆ

ICC Women's T20 World Cup
ಕ್ರೀಡೆ54 mins ago

ICC Women’s T20 World Cup: ಮಹಿಳಾ ಟಿ20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ; ಒಂದೇ ಗುಂಪಿನಲ್ಲಿ ಭಾರತ-ಪಾಕ್​

Pakistan
ವಿದೇಶ1 hour ago

Pakistan: ಪಾಕಿಸ್ತಾನಕ್ಕೂ ಕಾಲಿಟ್ಟ ಯೋಗ; ಅಧಿಕೃತವಾಗಿ ತರಗತಿ ಆರಂಭ

Prajwal Revanna Case HD Revanna arrest is correct says R Ashok
ರಾಜಕೀಯ2 hours ago

Prajwal Revanna Case: ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಕೇಸ್‌; ರೇವಣ್ಣ ಬಂಧನ ಕ್ರಮ ಸರಿ ಇದೆ ಎಂದ ಆರ್.‌ ಅಶೋಕ್‌!

Vicky Pedia New reels about heat in Karnataka
ವೈರಲ್ ನ್ಯೂಸ್2 hours ago

Vicky Pedia: ʻಬಿಸಿ ಗಾಳಿ.. ಬಿಸಿ ಗಾಳಿ.. ಸಹಿ ಹಾಕಿದೆ ಬಿಸಿಲಿನಲಿʼಎಂದು ಹಾಡಿದ ವಿಕಾಸ್ ವಿಕ್ಕಿಪಿಡಿಯ: ಫ್ಯಾನ್ಸ್‌ ಫಿದಾ!

Lok Sabha Election 2024
Lok Sabha Election 20242 hours ago

Lok Sabha Election 2024: ಬಿಜೆಪಿಯ ʼಮೊಟ್ಟೆʼ ವಿಡಿಯೊ ವಿರುದ್ಧ ಕಾಂಗ್ರೆಸ್‌ ಕೆಂಡಾಮಂಡಲ; ಅಂತಹದ್ದೇನಿದೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ1 day ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

ಟ್ರೆಂಡಿಂಗ್‌