ಪ್ರಣಾಮ್‌ ಭಾರತ್‌ ಅಂಕಣ | ಒಂದು ಬೊಗಸೆ ಏಲಕ್ಕಿ - Vistara News

ಅಂಕಣ

ಪ್ರಣಾಮ್‌ ಭಾರತ್‌ ಅಂಕಣ | ಒಂದು ಬೊಗಸೆ ಏಲಕ್ಕಿ

ಹಿಂಜರಿಕೆ ಮುಜುಗರಗಳಿಂದಲೇ ಕೊಡಗಿನ ಅಪ್ಪಂಗಳದ ಮಸಾಲೆ ಬೆಳೆಗಳ ಅಧ್ಯಯನ ಕೇಂದ್ರಕ್ಕೆ ಕಾಲಿಟ್ಟಾಗ, ಅಲ್ಲಿನ ಸರಳ ವಿಜ್ಞಾನಿಗಳ ಮೂಲಕ ಕೊಡಗಿನ ಏಲಕ್ಕಿ ಬೆಳೆಯ ಅಪರೂಪದ ಲೋಕವೇ ತೆರೆದುಕೊಂಡಿತು.

VISTARANEWS.COM


on

cardamom
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
kushvanth logo

ಅಪ್ಪಂಗಳದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಪೈಸ್ ರಿಸರ್ಚ್ ಸೆಂಟರನ್ನು ನಾನು ಬಾಲ್ಯದಿಂದಲೂ ನೋಡುತ್ತಾ ಬೆಳೆದಿದ್ದೇನೆ. ಮಡಿಕೇರಿ- ಭಾಗಮಂಡಲದ ಹೆದ್ದಾರಿಯಲ್ಲಿ ಸುಮಾರು ನಲವತ್ತು ಎಕ್ರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಸಂಸ್ಥೆಯ ಬಗ್ಗೆ ಕುತೂಹಲದ ಜೊತೆಗೆ ರಸ್ತೆಯಂಚಿನಲ್ಲಿ ಸೊಗಸಾಗಿ ಬೆಳೆದ ಅವರ ಏಲಕ್ಕಿ ಸಸ್ಯಗಳನ್ನು ನಮ್ಮ ತೋಟದೊಂದಿಗೆ ಹೋಲಿಸಿಕೊಂಡಾಗ ಮೂಡುತ್ತಿದ್ದ ಸಣ್ಣ ಮಟ್ಟಿಗಿನ ಅಸೂಯೆ ಕೂಡ ನನ್ನ ಬಾಲ್ಯದ ದಿನಗಳ ಒಂದು ಅವಿಭಾಜ್ಯ ಅಂಗ.

ಕ್ಯಾನ್ಸರಿಗೆ ಕಿದ್ವಾಯಿ‌, ಹೃದಯಕ್ಕೆ ಜಯದೇವದಂತಹ ಸಂಸ್ಥೆಗಳು ನಮ್ಮ ರಾಜ್ಯದಲ್ಲಿದ್ದರೂ ಕರ್ನಾಟಕದ ಗ್ರಾಮೀಣ ಜನರು ಅಂತಹ ಸಂಸ್ಥೆಗೆ ನೇರವಾಗಿ ಹೋಗಲು ಹಿಂದೇಟು ಹಾಕುತ್ತಾ, ಆ ಸಂಸ್ಥೆಯೊಳಗೆ ತಮಗಿರಬಹುದಾದ ಪರಿಚಿತರನ್ನು ಹುಡುಕುವುದನ್ನು ನಾನು ಅನೇಕ ಬಾರಿ ಗಮನಿಸಿದ್ದೇನೆ.

“ಅದು ಸರಕಾರಿ ವೈದ್ಯಕೀಯ ಸಂಸ್ಥೆ.. ಯಾರಪ್ಪನದಲ್ಲಾರೀ…” ಎಂದು ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಿದ್ದ ಜನರ ಮೇಲೆ ಸಿಡುಕುತ್ತಿದ್ದ ನಾನು, ಸ್ವತಃ ಏಲಕ್ಕಿ ಬೆಳೆಗಾರನಾಗಿದ್ದರೂ ಅಪ್ಪಂಗಳದ ಸರಕಾರಿ ಸ್ಪೈಸ್ ರಿಸರ್ಚ್ ಸಂಸ್ಥೆಯ ಗೇಟಿನೊಳಗೆ ಹೋಗಲು ಇಷ್ಟು ವರ್ಷಗಳ ಕಾಲ ಮೀನಾಮೇಷ ಎಣಿಸಿದ್ದು ಮತ್ತು ಅಲ್ಲಿಯ ಹಿರಿಯ ವಿಜ್ಞಾನಿ ಮತ್ತು ಸಂಸ್ಥೆಯ ಮುಖ್ಯಸ್ಥರಾಗಿರುವ ಡಾ. ಅಂಕೇಗೌಡರ ಪರಿಚಯವಾದ ನಂತರವೇ ಅಲ್ಲಿಗೆ ಹೋಗಲು ಬಯಸಿದ್ದು, ಬಹುಶಃ ನನ್ನೊಳಗೂ ಇರುವ ಸುಪ್ತ ಭಾರತೀಯ ಮನಸ್ಥಿತಿಯ ಪ್ರತೀಕವಿರಬಹುದು!

ಕೃಷಿ ಮತ್ತು ಗ್ರಾಮೀಣ ಭಾರತದ ಬಗ್ಗೆ ಬರೆಯುವ ಅಂಕಣಗಳಿಂದ ವಿಶ್ವವಿಖ್ಯಾತರಾದ ಲೇಖಕ ಪಿ. ಸಾಯಿನಾಥರು, ಭಾರತದಲ್ಲಿ ಕೃಷಿ ಕ್ಷೇತ್ರದ ಈ ಬದಲಾವಣೆಗಳ ಬಗ್ಗೆ ಬಹಳ ಸೊಗಸಾಗಿ ಬರೆದಿದ್ದಾರೆ. ಹಿಂದೆ ಹರಿಯಾಣದಲ್ಲಿ ಎಮ್ಮೆ ಸಾಕುತ್ತಿದ್ದ ರೈತರು, ತಮ್ಮ ಎಮ್ಮೆ ಅಸ್ವಸ್ಥವಾದಾಗ ಅದನ್ನು ನೇರವಾಗಿ ಹರ್ಯಾಣದ ಹಿಸಾರಿನಲ್ಲಿರುವ ರಾಷ್ಟ್ರೀಯ ಎಮ್ಮೆಗಳ ರಿಸರ್ಚ್ ಸೆಂಟರಿನ ಮುಂದೆ ಕಟ್ಟಿಹಾಕಿ “ನೋಡ್ರಿ ಏನಾಗಿದೆ ನಮ್ಮ ಎಮ್ಮೆಗೆ” ಎಂದು ಹರಿಯಾಣ್ವಿ ಭಾಷೆಯಲ್ಲಿ ಒರಟಾಗಿ ಒದರುತ್ತಿದ್ದರು. ಅಲ್ಲಿಯ ವಿಜ್ಞಾನಿಗಳು ಮತ್ತು ವೈದ್ಯರು ರೈತರೊಂದಿಗೆ ಸರಳವಾಗಿ ಬೆರೆಯುತ್ತಾ, ಎಮ್ಮೆಯ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುತ್ತಾ ಬಗೆಹರಿಸುವಾಗ ಎರಡೂ ಕಡೆಯವರಿಗೆ ಲಾಭವಾಗುತ್ತಿತ್ತು. ರೈತರು ಮತ್ತು ವಿಜ್ಞಾನಿಗಳ ನಡುವಿನ ಪರಸ್ಪರ ಅರಿವು ಮತ್ತು ಬಾಂಧವ್ಯ ಹೆಚ್ಚಾಗಲು ಎಮ್ಮೆ ನೆಪವಾಗುತ್ತಿತ್ತು ಮತ್ತು ಒಬ್ಬರಿಗೆ ಮತ್ತೊಬ್ಬರ ಪ್ರಾಯೋಗಿಕ ಸವಾಲುಗಳ ಮತ್ತು ಸಮಸ್ಯೆಗಳ ಬಗೆಗೆ ಬಹಳಷ್ಟು ಒಳನೋಟ ಸಿಗುತ್ತಿತ್ತು.

ಆದರೆ ಕಾಲಕ್ರಮೇಣ ನಗರ ಪ್ರದೇಶದ ಹಿನ್ನಲೆಯಿರುವ ಹೊಸಾ ವಿಜ್ಞಾನಿಗಳು ಬಂದಂತೆ ಮತ್ತು ಅವರ ಮತ್ತು ರೈತರ ನಡುವಿನ ಬಾಂಧವ್ಯ ವಿಭಿನ್ನ ಭಾಷೆ ಮತ್ತು ಆಧುನಿಕತೆಯ ಕಾರಣದಿಂದ ಸಡಿಲವಾಗುತ್ತಾ ಹೋದಂತೆ ತಮ್ಮ ಊರಿನಲ್ಲೆ ಎಮ್ಮೆಗಳ ಸಂಶೋಧನಾ ಕೇಂದ್ರವಿದ್ದರೂ ಎಮ್ಮೆಗೆ ಹುಷಾರು ತಪ್ಪಿದಾಗ ರೈತರು ಅದನ್ನು ವಿಜ್ಞಾನಿಗಳ ಬಳಿಗೆ ಹೊಡೆದುಕೊಂಡು ಬರುವುದನ್ನು ಕಾಲಕ್ರಮೇಣ ನಿಲ್ಲಿಸತೊಡಗಿದರು. ಅಲ್ಲಿಯ ವಿಜ್ಞಾನಿಗಳು ಎಮ್ಮೆಯ ಮೇಲೆ ಮಾಡುತ್ತಿದ್ದ ಸಂಶೋಧನೆ ಮತ್ತು ಪ್ರಬಂಧಗಳು ಅಂತರಾಷ್ಟ್ರೀಯ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದರೂ ಅವರು ತಮ್ಮದೇ ಊರಿನ ರೈತರು ಮತ್ತು ಎಮ್ಮೆಗಳಿಂದ ದೂರವಾಗುತ್ತಾ ಹೋದ ಈ ವಿಷಯವನ್ನು ಪಿ. ಸಾಯಿನಾಥ್ ಅವರ ಲೇಖನಗಳಲ್ಲಿ ಓದಿದ್ದ ನನಗೆ, ನಾನೊಬ್ಬ ಕೃಷಿಕನಾಗಿದ್ದರೂ ಕೃಷಿ ವಿಜ್ಞಾನಿಗಳನ್ನು ಮುಕ್ತವಾಗಿ ಭೇಟಿಯಾಗಲು ಮತ್ತು ಚರ್ಚಿಸಲು ಮನದೊಳಗೆ ಕೆಲವು ಹಿಂಜರಿಕೆಗಳಿದ್ದವು.

“ಕೃಷಿ ವಿಜ್ಞಾನಿಗಳಿಗೆ ನಮ್ಮ ಜೊತೆ ಮಾತನಾಡಲು ಸಮಯವಿರುತ್ತೋ ಏನೋ?!” ಎಂಬ ಸಂಕೋಚಗಳ ಮೂಟೆಯೊಂದಿಗೆ ನಾನು ಅಪ್ಪಂಗಳದ ಸ್ಪೈಸ್ ರಿಸರ್ಚ್ ಕೇಂದ್ರಕ್ಕೆ ಹೊರಟೆ. ಕೊರೊನಾ ವೈರಸ್ಸಿಗೆ ವ್ಯಾಕ್ಸಿನ್ ಪಡೆದವರು ಸ್ವಲ್ಪ ಧೈರ್ಯವಾಗಿ ಮನೆಬಿಡುವಂತೆ “ನಮ್ಗೆ ಡಾ. ಅಂಕೇಗೌಡರು ಗೊತ್ತು” ಎಂಬ ಆತ್ಮವಿಶ್ವಾಸ ಮನದ ಮೂಲೆಯಲ್ಲಿದ್ದ ಕಾರಣ ಮಾಸ್ಕು ಸರಿಪಡಿಸಿಕೊಳ್ಳಿ ಎಂದು ದಬಾಯಿಸಿದ ಸೆಕ್ಯುರಿಟಿಯವರನ್ನು “ಎಲ್ರೀ.. ಹಿರಿಯ ವಿಜ್ಞಾನಿ ಡಾ. ಅಂಕೇಗೌಡರ ಕಚೇರಿ” ಎಂದು ವಾಪಾಸ್ ದಬಾಯಿಸುತ್ತಾ ಆ ಸಂಸ್ಥೆಯ ಆವರಣವನ್ನು ಪ್ರವೇಶಿಸಿದೆ.

ಡಾ. ಅಂಕೇಗೌಡರು ಪ್ಲಾಂಟ್ ಫಿಸಿಯೋಲಜಿಸ್ಟ್ ಮತ್ತು ಕರಿಮೆಣಸು ಬೆಳೆಯ ಬಗ್ಗೆ ವಿಶೇಷ ಆಸಕ್ತಿಯಿರುವ ವ್ಯಕ್ತಿಯೆಂದು ಇತರರಿಂದ ಕೇಳಿ ತಿಳಿದಿದ್ದೆ. ಕೃಷಿ ವಿಜ್ಞಾನಿಗಳ ವಿಷಯ ಬಂದಾಗಲೆಲ್ಲ ನನಗೆ ತೇಜಸ್ವಿಯವರ “ಕರ್ವಾಲೋ” ಕಾದಂಬರಿ ನೆನಪಾಗುತ್ತದೆ. ಮೂಡಿಗೆರೆಯ ಜೇನು ಸಂಶೋಧನಾ ಕೇಂದ್ರದ ಖ್ಯಾತ ವಿಜ್ಞಾನಿಯಾದ ಕರ್ವಾಲೊ ಸಾಹೇಬರ ಬಗ್ಗೆ ಊರಿನ ಜನರು ಸುಮ್ಮಸುಮ್ಮನೆ “ನಮ್ಗೆ ಕರ್ವಾಲೋ ಗೊತ್ತು” ಎಂದು ತೇಜಸ್ವಿಯವರ ಮುಂದೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರಂತೆ. ಅಸಲಿಗೆ ಕರ್ವಾಲೋ ಸಾಹೇಬರು ಜೇನು ಕೃಷಿ ಮತ್ತು ಪರಿಸರದ ಬಗ್ಗೆ ಕುತೂಹಲವಿಲ್ಲದ ಆ ಪ್ರತಿಷ್ಠಿತ ಜನರಿಂದ ದೂರವಿದ್ದು ಮಂದಣ್ಣನೆಂಬ ಕೆಳಹಂತದ ನೌಕರನೊಂದಿಗೆ ಏತಕ್ಕಾಗಿ ಕಾಡು ಸುತ್ತುತ್ತಿದ್ದರೆಂಬ ವಿಷಯವನ್ನು ಆ ಕಾದಂಬರಿಯಲ್ಲಿ ತೇಜಸ್ವಿಯವರು ರಸವತ್ತಾಗಿ ಹೇಳುತ್ತಾ ಹೋಗುತ್ತಾರೆ. ಅಂಕೇಗೌಡರ ಕಚೇರಿಯ ಮುಂದೆ ನೇತು ಹಾಕಿದ್ದ ದಪ್ಪ ಅಕ್ಷರಗಳ ಅವರ ಹೆಸರಿನ ಬೋರ್ಡ್ ಮೇಲೆ ಕಣ್ಣಾಡಿಸಿ ನಾನು ಒಳಗೆ ಇಣುಕಿದಾಗ ನನ್ನನ್ನು ಮುಗುಳು ನಗುವಿನೊಂದಿಗೆ ಸ್ವಾಗತಿಸಿದ ಅಂಕೇಗೌಡರ ಮುಖ ಕಣ್ಣಿಗೆ ಕಾಣುತ್ತಿದ್ದರೂ, ನನ್ನ ಮನಸ್ಸಿನಲ್ಲಿ “ನಮ್ಗೆ ಅಂಕೇಗೌಡರು ಗೊತ್ತು.. ನಾವು ಬಹಳ ಕ್ಲೋಜು” ಎಂದು ಬೊಗಳೆ ಬಿಡುತ್ತಿದ್ದ ಮತ್ತು ಅಪ್ಪಿತಪ್ಪಿಯೂ ತಮ್ಮ ತೋಟದ ಕಡೆಗೆ ತಲೆ ಹಾಕದಿದ್ದ ಕೆಲವು ಪ್ರತಿಷ್ಠಿತರು ನೆನಪಾದರು.

ಕೊಡಗಿನ ಅನೇಕ ಭಾಗಗಳಲ್ಲಿ ಏಲಕ್ಕಿಯ ಪಾರುಪತ್ಯವಿದ್ದ ವಿಷಯವನ್ನು ನಮ್ಮ ಹಿರಿಯ ತಲೆಮಾರಿನ ಜನರನ್ನು ಕೇಳಿದರೆ ವಿಸ್ತಾರವಾಗಿ ಹೇಳುತ್ತಾರೆ. ಕಾಫಿ ಬೆಳೆಯಲು ಕಾಫಿ ಬೋರ್ಡು, ಪರ್ಮಿಟ್ಟು ಮತ್ತೊಂದು ಇದ್ದ ಕಾಲಘಟ್ಟದಲ್ಲಿ ಕೊಡಗಿನ ಹಿರಿಯ ತಲೆಮಾರಿನ ಜನರ ಕೈಯಲ್ಲಿ ಕಾಸು ಓಡಾಡುವಂತೆ ಮಾಡಿದ ಮೊದಲ ವಾಣಿಜ್ಯ ಬೆಲೆ ಇದೇ ಮಲಬಾರ್ ತಳಿಯ ಏಲಕ್ಕಿ. ವಿಪರೀತ ಮಳೆಯಾಗುವ ಪ್ರದೇಶಗಳು ಮತ್ತು ದಟ್ಟ ಅರಣ್ಯವಿರುವ ಕಡೆಗಳಲ್ಲಿ ಇದು ನೈಸರ್ಗಿಕವಾಗಿ ಹೆಚ್ಚು ಕೆಲಸವಿಲ್ಲದೆ ಉತ್ಪತ್ತಿಯಾಗುತ್ತಿತ್ತು.

ಇದನ್ನೂ ಓದಿ | ಪ್ರಣಾಮ್‌ ಭಾರತ್‌ ಅಂಕಣ | ನೆನಪುಗಳು ಮಾಸುವ ಮುನ್ನ

ತೊಂಬತ್ತರ ದಶಕ ಬರುತ್ತಿದ್ದಂತೆ ಏಲಕ್ಕಿಯ ಅಧಃಪತನವಾದದಕ್ಕೆ ಹಲವಾರು ಕಾರಣಗಳಿವೆ. ಬದಲಾದ ಹವಾಮಾನ, ಕಟ್ಟೆರೋಗ ಕೊಟ್ಟ ಮೊಸೈಕ್ ವೈರಸ್, ಕಡಿಮೆಯಾದ ಕಾಡು ಇತ್ಯಾದಿ ಕಾರಣಗಳಿಂದ ತೊಂಬತ್ತರ ದಶಕ ಬರುತ್ತಿದ್ದಂತೆ ಸಾವಿರಾರು ಕೆಜಿ ಏಲಕ್ಕಿ ಬೆಳೆಯುತ್ತಿದ್ದ ಬೆಳೆಗಾರರ ಮನೆಗಳಲ್ಲೂ ಏಲಕ್ಕಿ ಅಪರೂಪದ ವಸ್ತುವಾಯಿತು. ಕಾಫಿಗೆ ತೊಂಬತ್ತರ ದಶಕದಲ್ಲಿ ಬಂದ ಬಂಗಾರದ ಬೆಲೆಯ ಕಾರಣದಿಂದ ಊರಿಗೆ ಊರೇ ಮತಾಂತರವಾಗುವಂತೆ ಏಲಕ್ಕಿ ತೋಟಗಳ ಮರಗಳನ್ನು ಸವರಿದ ಜನ ರೋಬಸ್ಟಾ ಕಾಫಿಯ ಕಡೆಗೆ ತಮ್ಮ ನಿಷ್ಠೆಯನ್ನು ಬದಲಿಸಿದರು. ಏಲಕ್ಕಿ ಗೂಡುಗಳನ್ನು ಒಡೆದ ಜನರು ಅದನ್ನು ಮನೆಯ ಸ್ಟೋರ್ ರೂಮುಗಳನ್ನಾಗಿಸಿದರು.

ಅಂಕೇಗೌಡರ ತಂಡದ ಎರಡು ಯುವ ವಿಜ್ಞಾನಿಗಳಾದ ಹಾಸನದ ಶಿವಕುಮಾರ್ ಮತ್ತು ಮೂಡಿಗೆರೆಯವರಾದ ಅಕ್ಷಿತಾರವರು ನನ್ನನ್ನು ಪೀಲ್ಡ್ ವಿಸಿಟ್ ಮಾಡುವ ಸಲುವಾಗಿ ಅವರ ಬೆಳೆಯುತ್ತಿರುವ ವಿವಿಧ ತಳಿಯ ಏಲಕ್ಕಿತೋಟಕ್ಕೆ ಕರೆದೊಯ್ದರು. ದಷ್ಟಪುಷ್ಟವಾಗಿ ಬೆಳೆದ ಏಲಕ್ಕಿ ಕಾಂಡಗಳಿಂದ ನಳನಳಿಸುತ್ತಿದ್ದ ಏಲಕ್ಕಿ ತೋಟದಲ್ಲಿ ವಿವಿಧ ಬೆಳವಣಿಗೆಯ ಹಂತದಲ್ಲಿದ್ದ ಏಲಕ್ಕಿ ಕಟಾವಿಗೆ ಸಿದ್ಧವಾಗಿತ್ತು. ತೋಟದೊಳಗೆ ಓಡಾಡುತ್ತಾ ನನ್ನ ತಲೆಯಲ್ಲಿ ಮೂಡುತ್ತಿದ್ದ ನೂರಾರು ಪ್ರಶ್ನೆಗಳಿಗೆ ಯುವ ವಿಜ್ಞಾನಿಗಳು ಉತ್ತರಿಸುತ್ತಿರುವಾಗ, ಏಲಕ್ಕಿಯ ವಿಷಯದಲ್ಲಿ ನನಗಿದ್ದ ಅನೇಕ ತಪ್ಪು ಕಲ್ಪನೆಗಳು ಮಾಯವಾದವು. ವಿಜ್ಞಾನಿಗಳ ಕೆಲವು ಅಭಿಪ್ರಾಯಗಳು ನನಗೆ ಒಬ್ಬ ಸಾಮಾನ್ಯ ಬೆಳೆಗಾರನಿಗೆ ಪ್ರಾಯೋಗಿಕವಾಗಿ ಅನುಸರಿಸಲು ಕಷ್ಟವೆಂದು ಅನಿಸಿದದ್ದನ್ನು ನಾನು ನೇರವಾಗಿ ಅವರಿಗೆ ಹೇಳಿದಾಗಲೂ ಅವರು ಬೇಸರಿಸಿಕೊಳ್ಳಲಿಲ್ಲ..

“ಏಲಕ್ಕಿಯಲ್ಲಿ ಕಾಫಿಗಿಂತ ಕೆಲಸ ಜಾಸ್ತಿಯಿದೆ” ಎಂದು ಯುವ ವಿಜ್ಞಾನಿ, ಹಾರ್ಟಿಕಲ್ಚರಿಸ್ಟ್ ಅಕ್ಷಿತಾರವರು ಹೇಳಿದಾಗ ಆ ಏಲಕ್ಕಿ ತೋಟದ ಕೆಸರಿನಲ್ಲಿ ನಾನು ಆಘಾತದಿಂದ ಜಾರಿ ಬಿದ್ದು ಬಿಡುತ್ತಿದ್ದೆ. ಏಲಕ್ಕಿಯಿಂದ ಕಾಫಿ ಕೃಷಿಗೆ ಹೊರಳಿದ ಅನೇಕ ಬೆಳೆಗಾರರು ಕಾಫಿಯಲ್ಲಿ ವರ್ಷ ಪೂರ್ತಿ ಕೆಲಸವಿರುತ್ತದೆ, ಏಲಕ್ಕಿಯಲ್ಲಿ ಅತೀ ಕಡಿಮೆ ಕೆಲಸವೆಂದು ಹೇಳುತ್ತಿದ್ದ ಮಾತುಗಳನ್ನು ನಾನು ಕೇಳಿದ್ದೆ. ಮಳೆಗಾಲ ಆರಂಭವಾಗುವಾಗ ಏಲಕ್ಕಿಯ ತೋಟದ ಕಳೆ ಗಿಡಗಳನ್ನು ನಾಶ ಮಾಡುವುದು, ಏಲಕ್ಕಿ ಕುಯ್ದು ಒಣಗಿಸುವುದು ಮತ್ತು ಏಲಕ್ಕಿ ಗಿಡಗಳನ್ನು ಮಂಗಗಳ ಹಾವಳಿಯಿಂದ ರಕ್ಷಿಸುವ ಕೆಲಸ ಬಿಟ್ಟರೆ ಬೇರೆ ಕೆಲಸವನ್ನು ಏಲಕ್ಕಿಯಲ್ಲಿ ನಮ್ಮ ಹಿರಿಯರು ಮಾಡುತ್ತಿರಲಿಲ್ಲ‌. ಬಹುಶಃ ಆ ಕಾರಣದಿಂದಲೋ ಎನೋ ನಮ್ಮ ಹಿರಿಯರಿಗೆ ಕಾರ್ಮಿಕರ ಕೊರತೆಯನ್ನು ಏಲಕ್ಕಿಯಲ್ಲಿ ಎದುರಿಸಿ ಗೊತ್ತಿರಲಿಲ್ಲ.

ಇದನ್ನೂ ಓದಿ | ಪ್ರಣಾಮ್‌ ಭಾರತ್‌ ಅಂಕಣ | ಫ್ಯಾಮಿಲಿ ಮೆಕ್ಯಾನಿಕ್‌ ಕಥೆ

ಹಿಂದಿನ ಕಾಲದಲ್ಲಿ, ಫಲವತ್ತಾದ ಕಾಡುಗಳಲ್ಲಿ ಏಲಕ್ಕಿಯನ್ನು ಬಿಸಾಕಿದರೂ ಅದು ಹುಟ್ಟಿ ಬೆಳೆದು ಚನ್ನಾಗಿ ಹಿಡಿಯುತ್ತಿತ್ತು‌. ಆದರೆ ಮಣ್ಣಿನ ಫಲವತ್ತತೆ ಕಡಿಮೆಯಾದಂತೆ ಏಲಕ್ಕಿಯಲ್ಲಿ ಫಸಲು ಕುಂಠಿತವಾಗಿ ಅದಕ್ಕೂ ವರ್ಷದಲ್ಲಿ ಕನಿಷ್ಠ ಪಕ್ಷ ಎರಡು ಬಾರಿ ಯನ್‌ಪಿಕೆ ರಸಕೊಬ್ಬರ ಕೊಟ್ಟು ಬೆಳೆಸಿದರೆ ಮಾತ್ರ ಉತ್ತಮ ಫಸಲನ್ನು ನಿರೀಕ್ಷಿಸಬಹುದೆಂದು ಅಕ್ಷಿತಾರವರು ತಿಳಿಸಿದರು. ಬೇಸಿಗೆಯಲ್ಲಿ ನೀರು ಕಡಿಮೆಯಾದಾಗ ನೀರು ಹಾಯಿಸುವುದು ಮತ್ತು ಕೀಟ ಬಾಧೆಯಿದ್ದಾಗ ಕೀಟನಾಶಕದ ಸಿಂಪಡಣೆಯ ಬಗ್ಗೆಯೂ ಮಾತನಾಡಿದರು‌. ಏಲಕ್ಕಿಯ ಬಣ್ಣ ಹಸಿರಾಗಿದ್ದರೆ ಮಾತ್ರ ಉತ್ತಮ ಧಾರಣೆ ಸಿಗುವ ಕಾರಣ ಏಲಕ್ಕಿ ಬಣ್ಣವನ್ನು ಸಂರಕ್ಷಿಸುವ ಬಗ್ಗೆಯೂ ಮಾತನಾಡಿದರು. ಥ್ರಿಫ್ಸ್ ಕೀಟದ ಹಾವಳಿಯನ್ನು ತಡೆಯಲು ಫಿಪಾನಿನ್ ಸಿಂಪಡಣೆ ಮತ್ತು ಕಾಂಡ ಹಾಗು ಕಾಯಿ ಕೊರೆಯುವ ಕೀಟದ ಹತೋಟಿಗೆ ಕ್ವಿನಾಲ್ ಫಾಸ್ ಸಿಂಪಡಣೆಯ ಬಗ್ಗೆಯೂ ಅವರು ಹೇಳುತ್ತಾ ಹೋದರು.

ಮಲೆನಾಡಿನ ಗ್ರಾಮೀಣ ಏಲಕ್ಕಿ ಬೆಳೆಗಾರರು ತಮ್ಮ ತೋಟದಲ್ಲಿ ಏಲಕ್ಕಿ ಗಿಡವನ್ನು ನೆಟ್ಟು ಅವರ ಅಪ್ಪನ ಕಾಲದಲ್ಲಿ ಏಲಕ್ಕಿಯನ್ನು ನೈಸರ್ಗಿಕವಾಗಿ ಬೆಳೆದಂತೆ ಈಗ ಬೆಳೆಯಬಹುದೆಂದು ನಿರೀಕ್ಷಿಸಿ ನಿರಾಶರಾಗುತ್ತಿದ್ದರೆ, ಅನೇಕ‌ ಕೇರಳಿಗರು ಏಲಕ್ಕಿಯ ಹಳೇಯ ಮಲಬಾರ್ ತಳಿಗಳಿಂದ ದೂರವಾಗಿ ನೆಲ್ಯಾಣಿ ಮತ್ತಿತರ ತಳಿಗಳನ್ನು ಬೆಳೆಸುತ್ತಿದ್ದಾರೆ. ಅವರು ಏಲಕ್ಕಿಗೆ ರಸಗೊಬ್ಬರ, ಕೀಟ ನಾಶಕ ಮತ್ತು ಬೇಸಿಗೆಯಲ್ಲಿ‌ ನೀರಾವರಿ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದಾರೆ. ಏಲಕ್ಕಿಗೆ ಕೆಲವರ್ಷಗಳ ಹಿಂದೆ ಬಂಗಾರದ ಬೆಲೆ ಬಂದಾಗಲೂ ಏಲಕ್ಕಿಯ ಮೇಲೆ ಹಣ ಹಾಕಿ ಹಣ ಬಾಚಿದವರೂ ಕೂಡ ವೈಜ್ಞಾನಿಕವಾಗಿ ಮತ್ತು ವಾಣಿಜ್ಯದ ದೃಷ್ಟಿಯಿಂದ ಏಲಕ್ಕಿ ಬೆಳೆದವರೇ ಹೊರತು ಅಪ್ಪ ನೆಟ್ಟ ಆಲದ ಮರಕ್ಕೆ ಸುತ್ತು ಬರುತ್ತಿರುವ ಸಣ್ಣ ಗ್ರಾಮೀಣ ಬೆಳೆಗಾರರಲ್ಲ.

ಈ ವಿಜ್ಞಾನಿಗಳ ಮಾತುಗಳನ್ನು ಕೇಳುತ್ತಿದ್ದಂತೆ ಇಂದಿನ ದಿನ ಏಲಕ್ಕಿಯನ್ನು ಬೆಳೆಯಬೇಕಾದರೆ ಅದರಲ್ಲೂ ಕಾಫಿಯಷ್ಟೆ ಕೆಲಸವಿದೆಯೆಂದೆನಿಸಿತು. ಏಲಕ್ಕಿ ತೋಟದಲ್ಲಿ ಹಳೇ ಗಿಡಗಳಿಗೆ ಎಂಟು ಹತ್ತು ವರ್ಷವಾದಾಗ ಅವುಗಳ ಗಿಡಗಳನ್ನು ಕಿತ್ತು, ಹೊಸಾ ಗಿಡವನ್ನು ನೆಡಬೇಕಾಗಿ ಬರುವ ವಿಷಯವೂ ಜ್ಞಾಪಕವಾಯಿತು. ಬಹುಶಃ ಅವರ ಎಲ್ಲಾ ಉಪದೇಶಗಳನ್ನು ಅಳವಡಿಸಿಕೊಳ್ಳಲು ಕಷ್ಟವಾದರೂ, ವರ್ಷಕ್ಕೆ ಎರಡು ಬಾರಿ ರಸಗೊಬ್ಬರ ಕೊಡುವುದು ಮತ್ತು ಬೇಸಿಗೆಯಲ್ಲಿ ಕನಿಷ್ಠ ಒಂದು ಬಾರಿಯಾದರೂ ನೀರು ನೀಡದಿದ್ದರೆ ಉತ್ತಮ ಫಸಲನ್ನು ಏಲಕ್ಕಿಯಲ್ಲಿ ಪಡೆಯಲು ಕಷ್ಟವಾಗಬಹುದು. ಬೆಳೆಗಾರನಿಗೆ ಕಾರ್ಮಿಕರ ಮತ್ತು ಸಂಪನ್ಮೂಲಗಳ ವಿಷಯದಲ್ಲಿರುವ ಸಮಸ್ಯೆಗಳನ್ನು, ವಿಜ್ಞಾನಿಗಳ ಉಪದೇಶದ ಜೊತೆಯಲ್ಲಿ ತಾಳೆ ಹಾಕಿ ಮಧ್ಯ ಪಥವನ್ನು ಅನುಸರಿಸುವುದು ಸಮಂಜಸವೆಂದು ನನ್ನ ಮನಸ್ಸಿನಲ್ಲಿ ಅನಿಸುತ್ತಿತ್ತು. ಆದರೆ ಕಟ್ಟೆಯಂತಹ ಮಾರಕ ರೋಗದ ವಿಷಯಕ್ಕೆ ಬಂದಾಗ ರೋಗಗ್ರಸ್ತ ಗಿಡಗಳನ್ನು ಮುಲಾಜಿಲ್ಲದೆ ಕಿತ್ತು ನಾಶಮಾಡಬೇಕೆನ್ನುವ ವಿಜ್ಞಾನಿಗಳ ಮಾತನ್ನು ಚಾಚೂ ತಪ್ಪದೆ ಅನುಸರಿಸುವುದರಲ್ಲಿ ಯಾವುದೇ ಅನುಮಾನಗಳಿರಬಾರದು.

ಇದನ್ನೂ ಓದಿ | ಪ್ರಣಾಮ್ ಭಾರತ್ ಅಂಕಣ: ಸ್ಟೆತಾಸ್ಕೋಪಿನ ಆತ್ಮಕಥೆ

ಜೊತೆಗಿದ್ದ ಮತ್ತೊಬ್ಬ ಯುವ ವಿಜ್ಞಾನಿ ಶಿವಕುಮಾರರು ಪ್ಲ್ಯಾಂಟ್ ಬ್ರೀಡರ್ ಆಗಿದ್ದ ಕಾರಣ ಪ್ರಾಯೋಗಿಕ ಹಂತದಲ್ಲಿರುವ ಮತ್ತು ಮುಂದೆ ಮಾರುಕಟ್ಟೆಗೆ ಬರಲಿರುವ ಏಲಕ್ಕಿಯ ಹೊಸಾ ತಳಿಗಳನ್ನು ವಿಶೇಷ ಆಸಕ್ತಿಯಿಂದ ನನಗೆ ತೋರಿಸುತ್ತಾ ಹೋದರು. ನೆಲ್ಯಾಣಿ ಮತ್ತು ಮಲಬಾರಿ ತಳಿಗಳ ಪರಿಚಯ ಮಾತ್ರವಿದ್ದ ನನಗೆ ಏಲಕ್ಕಿಯಲ್ಲಿ ಇನ್ನೂರಕ್ಕೂ ಹೆಚ್ಚು ತಳಿಗಳ ಬಗ್ಗೆ ಈ ಕೇಂದ್ರದಲ್ಲಿ ಸಂಶೋಧನೆ ನಡೆಯುತ್ತಿರುವ ವಿಚಾರ ಅಚ್ಚರಿಯ ಸಂಗತಿಯಾಗಿತ್ತು. ಅಪ್ಪಂಗಳದ ಸ್ಪೈಸ್ ರಿಸರ್ಚ್ ಸೆಂಟರಿನಲ್ಲಿ ಕರಿಮೆಣಸಿನ ನೂರಾರು ತಳಿಗಳನ್ನೂ ಶಿವಕುಮಾರರು ನನಗೆ ತೋರಿಸುತ್ತಾ ಪ್ರಪಂಚದ ವಿವಿಧ ಭಾಗಗಳಿಂದ ಅವುಗಳನ್ನು ಸಂಗ್ರಹಿಸಿ ತಂದ ಕಥೆಯನ್ನು ಹೇಳಿದರು‌. ಕೆಲವು ತಳಿಗಳ ಎಲೆಗಳನ್ನು ಮೂಸಿ ನೋಡಲು ಹೇಳಿ ಅದರ ವಿಭಿನ್ನತೆಯನ್ನು ತಿಳಿಸಿದರೆ ಮತ್ತೊಂದು ಕರಿಮೆಣಸಿನ ತಳಿಯ ಎಲೆಯನ್ನು ತಿನ್ನಲು ಹೇಳಿದರು. ಅದರ ರುಚಿ‌ ಸ್ವಲ್ಪ ಸಿಹಿಯಾಗಿರುವ ವೀಳ್ಯದೆಲೆಯ ರುಚಿಯಂತಿತ್ತು. ಕರಿಮೆಣಸಿನ ಗ್ಲಾಸ್ ಹೌಸಿನ ನರ್ಸರಿಯಲ್ಲಿ ಒಂದು ತಳಿಗೆ ಇನ್ನೊಂದು ತಳಿಯನ್ನು ಕಸಿಕಟ್ಟುವ ಕೆಲಸವನ್ನು ಬಹಳ ಸರಳವಾಗಿ ನನಗೆ ವಿವರಿಸಿದರು‌. ಹಳೇ ಬ್ಲೇಡಿನಲ್ಲಿ ಎರಡು ಬೇರೆ ಬೇರೆ ತಳಿಯ ಬಳ್ಳಿಗಳನ್ನು ತಮಗೆ ಬೇಕಾದ ಆಕಾರದಲ್ಲಿ ಕುಯ್ದು ಜೋಡಿಸಿ ಪಾಲಿತೀನ್ ಕಟ್ಟಿ ಕಸಿ ಗಿಡ ತಯಾರಿಸುವುದು ಮಕ್ಕಳಾಟವೆಂಬಂತೆ ವಿವರಿಸಿದರು. ಬಹುಶಃ ಕ್ಲಿಷ್ಟಕರ ಸಂಗತಿಗಳನ್ನು ಜನಸಾಮಾನ್ಯರಿಗೆ ಸರಳೀಕರಿಸಿ ಹೇಳುವ ವಿಶೇಷ ಜ್ಞಾನವೇ ವಿಜ್ಞಾನವೆಂದು ಅವರ ಮಾತುಗಳನ್ನು ಕೇಳುತ್ತಿದ್ದ ನನಗೆ ಅನಿಸತೊಡಗಿತು‌. ನಮ್ಮ ಹಳ್ಳಿಗಳಲ್ಲಿ ವಿಪರೀತ ಹವಾ ತಿನ್ನುವ, ಹೋರಿಯ ಬೀಜ ಒಡೆಯುವ ಪರಿಣತರಿಗೆ ಈ ವಿಜ್ಞಾನಿಯಲ್ಲಿರುವ ಸರಳತೆಯನ್ನು ಪರಿಚಯಿಸಬೇಕೆನಿಸಿತು. ಬಹುಶಃ ಅಂತಹವರನ್ನು ಕಂಡು ಅನುಭವವಿರುವ ಹಳ್ಳಿಯ ರೈತ ಈ ಕೃಷಿ ವಿಜ್ಞಾನಿಗಳ ಹೆಸರಿನ ಮುಂದಿರುವ ಪೆಥಾಲಜಿಸ್ಟ್, ಎಂಟಮಾಲಜಿಸ್ಟ್ ಎಂಬ ನಾಲಗೆ ಮಗುಚದ ಆಂಗ್ಲ ಹೆಸರುಗಳನ್ನು ಕೇಳಿ ಇವರ ಬಳಿಗೆ ಬರಲು ಅನವಶ್ಯ ಭಯ ಪಡುತ್ತಿರಬಹುದು!! ಅಸಲಿಗೆ ಈ ವಿಜ್ಞಾನಿಗಳು ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವ ಸರಳ ಜನ.

ಆ ಸಂಸ್ಥೆಯ ಮುಖ್ಯಸ್ಥರಾದ ಅಂಕೇಗೌಡರನ್ನು ಅಲ್ಲಿಂದ ಹೊರಡುವಾಗಲೂ ಭೇಟಿಯಾದೆ. ನಾನು ಅಲ್ಲಿಯ ವಿಜ್ಞಾನಿಗಳಿಂದ ವಿಸ್ಮಿತನಾಗಿದ್ದ ವಿಷಯವನ್ನು ಅವರು ಗಮನಿಸಿರಬಹುದು. ಅವರು ದಶಕಗಳ ಹಿಂದೆ ಇಲ್ಲಿಗೆ ವಿಜ್ಞಾನಿಯಾಗಿ ಬಂದಿದ್ದಾಗ ಇಲ್ಲಿಯ ಕೆಲವು ಪ್ರಗತಿಪರ ಬೆಳೆಗಾರರಿಂದಲೂ ಅಂಕೇಗೌಡರು ಮೂಕವಿಸ್ಮಿತರಾಗಿದ್ದರಂತೆ. ಚೆಟ್ಟಳ್ಳಿಯ ಸಿ.ಪಿ. ಅಪ್ಪಣ್ಣನವರು ಏಲಕ್ಕಿ ಕೃಷಿಯಲ್ಲಿ ಎಷ್ಟು ಪರಿಣತಿಯನ್ನು ಪಡೆದಿದ್ದರೆಂದರೆ ಅವರು ಲಕ್ಷ್ಮಿ ಹೆಸರಿನ ಹೊಸಾ ತಳಿಯನ್ನೂ ತಯಾರಿಸಿ ರೈತರಿಗೆ ಹಂಚಿದ ವಿಷಯವನ್ನು ಅಂಕೇಗೌಡರು ನನಗೆ ತಿಳಿಸಿದರು‌. ಸಿಪಿ ಅಪ್ಪಣನವರ ಹೆಸರನ್ನು ಇತ್ತೀಚೆಗೆ ಡಾ. ಪಾಟ್ಕರ್ ಅವರ ಜೊತೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಕೇಳಿದಂತಿತ್ತು. ಅದೇ ಪ್ರಗತಿಪರ ಕೃಷಿಕ ಡಾ. ಪಾಟ್ಕರ್ ನಮ್ಮ ಜಿಲ್ಲೆಯ ಮೊದಲ ಆಸ್ಪತ್ರೆ ಸ್ಥಾಪಿಸುವಾಗ ನೆರವಾದ ವ್ಯಕ್ತಿಯೆಂದು ತದನಂತರ ಗೊತ್ತಾಯಿತು.

ಒಂದಂತೂ ಸತ್ಯ.. ಏಲಕ್ಕಿ ಕೃಷಿ ತನ್ನ ಗತವೈಭವಕ್ಕೆ ಮರಳಲು ವಿಜ್ಞಾನಿಗಳ ಜೊತೆಗೆ ಕೃಷಿಕರೂ ಕೈಜೋಡಿಸಬೇಕಿದೆ. ಒಂದು ಕಾಲದಲ್ಲಿ ಸಾವಿರಾರು ಕೆಜಿ ಬೆಳೆಯುತ್ತಿದ್ದವರು ಈಗ ನಿಧಾನಕ್ಕೆ ಮತ್ತೆ ಏಲಕ್ಕಿ ಕೃಷಿಯುತ್ತ ಒಲವು ತೋರುತ್ತಿದ್ದಾರೆ. ಹೊಸಾ ತಳಿಗಳು, ಕಟ್ಟೆರೋಗದ ಹತೋಟಿ ಮತ್ತು ಉತ್ತಮ ಧಾರಣೆಯ ಆಶಾಕಿರಣವಿದ್ದರೆ ಏಲಕ್ಕಿ ಮತ್ತೆ ಕೊಡಗಿನ ಬೆಟ್ಟಸಾಲುಗಳಲ್ಲಿ ಪುಟಿದೇಳಬಹುದು. ಬ್ರಹ್ಮಗಿರಿ, ಪುಷ್ಪಗಿರಿ ತಪ್ಪಲಿನ ಸಣ್ಣ ಬೆಳೆಗಾರರು ಮತ್ತೆ ಗತ್ತಿನಿಂದ ಶುಕ್ರವಾರದ ಸಂತೆಯ ದಿನ ಮಡಿಕೇರಿಯಲ್ಲಿ ಓಡಾಡಬಹುದು. ಬಹುಶಃ ಏಲಕ್ಕಿಗೆ ಕೊಡಗಿನಲ್ಲಿ ಎರಡನೇ ಇನ್ನಿಂಗ್ಸಿನ ಆಟ ಇನ್ನೂ ಬಾಕಿಯಿರಬಹುದು. I am hopeful.. ನಾನು ಆಶಾವಾದಿ!!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್- ಆಯ್ಕೆ ಮಂಡಳಿ ನಿರ್ಧಾರ ಸರಿ ಇದೆಯೇ?

ರಾಜಮಾರ್ಗ ಅಂಕಣ: ಸ್ಟ್ರಾಟಜಿಯ ದೃಷ್ಟಿಯಿಂದ ಈ ಬಾರಿ ವಿಶ್ವಕಪ್‌ ಟಿ20 ಪಂದ್ಯಾಟಗಳಿಗೆ ಆರಿಸಿದ ಭಾರತ ಕ್ರಿಕೆಟ್ ತಂಡವು ಹೆಚ್ಚು ಸಮತೋಲಿತ ಎಂದು ಖಂಡಿತವಾಗಿ ಹೇಳಬಹುದು.‌ ಆದರೆ ಅದರಲ್ಲಿ ಒಂದಿಷ್ಟು ಅಪಸ್ವರ, ಒಂದಿಷ್ಟು ಭಿನ್ನ ಧ್ವನಿಗಳು ಬರುವುದು ಸಹಜವೇ ಆಗಿದೆ.

VISTARANEWS.COM


on

rajamarga column t20 world cup team
Koo

ಕೆ.ಎಲ್ ರಾಹುಲ್, ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ಮಿಸ್ ಆದದ್ದು ಹೇಗೆ?

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಆಲ್ ದ ಬೆಸ್ಟ್ ಟೀಮ್ ಇಂಡಿಯಾ!

ಐಪಿಎಲ್ (IPL) ಕಾರಣಕ್ಕೆ ಭಾರತದಲ್ಲಿ ನೂರಾರು ಕ್ರಿಕೆಟ್ (Cricket) ಪ್ರತಿಭೆಗಳು ಪ್ರಕಾಶನಕ್ಕೆ ಬಂದಿವೆ. ಹತ್ತು ಕ್ರಿಕೆಟ್ ಟೀಮ್ ರಚಿಸಲು ಸಾಧ್ಯ ಇರುವಷ್ಟು ಆಟಗಾರರು ಈಗ ಭಾರತದಲ್ಲಿ ಇದ್ದಾರೆ! ಅದರಿಂದಾಗಿ ಈ ಬಾರಿ ಕ್ರಿಕೆಟ್ ಆಯ್ಕೆ ಮಂಡಳಿಯು ಸಾಕಷ್ಟು ಅಳೆದು ತೂಗಿ ಒಂದು ಬಲಿಷ್ಠವಾದ ಟಿ 20 (T20) ತಂಡವನ್ನು ವಿಶ್ವಕಪ್‌ಗೆ (World Cup) ಆಯ್ಕೆ ಮಾಡಿದೆ. ಅದರಲ್ಲಿ ಒಂದಿಷ್ಟು ಅಪಸ್ವರ, ಒಂದಿಷ್ಟು ಭಿನ್ನ ಧ್ವನಿಗಳು ಬರುವುದು ಸಹಜವೇ ಆಗಿದೆ.

ಆದರೆ ಸ್ಟ್ರಾಟಜಿಯ ದೃಷ್ಟಿಯಿಂದ ಈ ಬಾರಿ ಆರಿಸಿದ ತಂಡವು ಹೆಚ್ಚು ಸಮತೋಲಿತ ಎಂದು ಖಂಡಿತವಾಗಿ ಹೇಳಬಹುದು.

ರೋಹಿತ್ ಶರ್ಮ – ಉತ್ತಮ ಕ್ಯಾಪ್ಟನ್

ರೋಹಿತ್ ಶರ್ಮ (Rohit Sharama) ಸದ್ಯಕ್ಕೆ ಭಾರತದ ಯಶಸ್ವೀ ಕ್ಯಾಪ್ಟನ್. ಐದು ಬಾರಿ ಐಪಿಲ್ ಟ್ರೋಫಿ ಎತ್ತಿದ ಸಾಧನೆ ಆತನದ್ದು. ಹಾಗೆಯೇ ಮೊನ್ನೆ ನಡೆದ ಕ್ರಿಕೆಟ್ ವಿಶ್ವಕಪ್ಪಿನಲ್ಲಿ ಅದ್ಭುತವಾಗಿ ಆಡಿ ಫೈನಲ್ ತನಕ ಬಂದ ಸಾಧನೆಯು ಸಣ್ಣದಲ್ಲ. ಆರಂಭಿಕ ಆಟಗಾರನಾಗಿ ಸಲೀಸಾಗಿ ಬೌಂಡರಿ, ಸಿಕ್ಸರ್ ಎತ್ತುವ ಛಾತಿ ಆತನಿಗೆ ಇದೆ. ಆದ್ದರಿಂದ ರೋಹಿತ್ ಶರ್ಮಾ ಆಯ್ಕೆಯು ನಿರ್ವಿವಾದ.

ಉಪನಾಯಕನಾಗಿ ಸಂಜು ಸ್ಯಾಮ್ಸನ್ ಅಥವಾ ರಿಷಭ್ ಪಂತ್ ಅವರಿಗೆ ಹೊಣೆ ನೀಡುವ ನಿರೀಕ್ಷೆ ಇತ್ತು. ಆದರೆ ಆಯ್ಕೆ ಮಂಡಳಿ ರಿಸ್ಕ್ ತೆಗೆದುಕೊಳ್ಳಲು ಹೋಗದೆ ಪಾಂಡ್ಯ ಅವರನ್ನೇ ಮುಂದುವರೆಸಿದೆ. ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಆತನ ನಾಯಕತ್ವದ ಹೆಚ್ಚಿನ ನಿರ್ಧಾರಗಳು ಟೀಕೆಗೆ ಗುರಿಯಾಗಿವೆ. ಆದರೆ ಪಾಂಡ್ಯ ಒಬ್ಬ ಆಲರೌಂಡರ್ ಮತ್ತು ಹೋರಾಟಗಾರ ಎಂಬ ಕಾರಣಕ್ಕೆ ಆತನಿಗೆ ತಂಡದಲ್ಲಿ ಸ್ಥಾನ ದೊರೆತಿದೆ ಎನ್ನುತ್ತದೆ ಆಯ್ಕೆ ಮಂಡಳಿ. ಆತನ ಬದಲಿಗೆ ತಿಲಕ್ ವರ್ಮ, ಸಾಯಿ ಸುದರ್ಶನ್ ಅಥವಾ ರುಥುರಾಜ್ ಗಾಯಕವಾಡ್ ಆಯ್ಕೆ ಆಗಿದ್ದರೆ ಚೆನ್ನಾಗಿತ್ತು ಎಂದು ಕ್ರಿಕೆಟ್ ಪ್ರೇಮಿಗಳು ಗಟ್ಟಿಯಾಗಿ ಹೇಳುತ್ತಿದ್ದಾರೆ. ಒಬ್ಬ ಬೌಲಿಂಗ್ ಆಲ್ರೌಂಡರ್ ಎಂಬ ದೃಷ್ಟಿಯಿಂದ ಹಾರ್ದಿಕ್ ಆಯ್ಕೆ ಆಗಿರಬಹುದು.

rajamarga column t20 world cup team

ಯಶಸ್ವೀ ಜೈಸ್ವಾಲ್ ಆಯ್ಕೆಯಲ್ಲಿ ಯಾರಿಗೂ ಅಚ್ಚರಿ ಆಗಲು ಸಾಧ್ಯವೇ ಇಲ್ಲ. ಕ್ರಿಕೆಟಿನ ಮೂರೂ ಫಾರ್ಮಾಟಗಳಲ್ಲಿ ಆತನ ನಿರ್ವಹಣೆಯು ತುಂಬಾ ಚೆನ್ನಾಗಿದೆ. ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಆತ ವಿಫಲನಾದರೂ ಈಗ ನಿಧಾನಕ್ಕೆ ಫಾರ್ಮ್ ಕಂಡು ಕೊಂಡಿದ್ದಾರೆ. ಆತನ ಆಕ್ರಮಣಶೀಲತೆ ಮತ್ತು ಹೊಡೆತಗಳ ಆಯ್ಕೆ ಚೆನ್ನಾಗಿರುವ ಕಾರಣ ಆತನ ಮೇಲೆ ಆಯ್ಕೆ ಮಂಡಳಿ ಭರವಸೆ ಇಟ್ಟ ಹಾಗಿದೆ.

ಕೊಹ್ಲಿ ಆಯ್ಕೆಯು ನಿರೀಕ್ಷಿತ

ವಿಶ್ವ ಕ್ರಿಕೆಟಿನ ಅತ್ಯದ್ಭುತ ಆಟಗಾರ ವಿರಾಟ್ ಕೊಹ್ಲಿ ಆಯ್ಕೆ ನಿರೀಕ್ಷಿತ. ಅದರೆ ಈ ಬಾರಿಯ ಐಪಿಲ್ ಪಂದ್ಯಗಳಲ್ಲಿ ಆತನ ಆಕ್ರಮಣಶೀಲತೆಯು ಕಡಿಮೆ ಆಗಿದೆ(?) ಎಂಬಂತೆ ಕಾಣುತ್ತಿರುವ ಕಾರಣ ಆತನನ್ನು ನಂಬರ್ 3 ಸ್ಥಾನಕ್ಕೆ ಆಡಿಸಬಹುದು ಅಥವಾ ನಂಬರ್ 3 ಸ್ಥಾನಕ್ಕೆ ಸಂಜು ಸಾಮ್ಸನ್ ಆಯ್ಕೆ ಪಡೆಯಬಹುದು. ಆದರೂ 90% ಭಾರತದ ಕ್ರಿಕೆಟ್ ಪ್ರೇಮಿಗಳು ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಬೇಕು ಎಂದು ಆಸೆ ಪಡುತ್ತಾರೆ.

ಸೂರ್ಯಕುಮಾರ್ ಯಾದವ್ ಟಿ 20 ಫಾರ್ಮಾಟಿಗೆ ಹೇಳಿ ಮಾಡಿಸಿದ ಆಟಗಾರ. ಒಮ್ಮೆ ಕುದುರಿಕೊಂಡರೆ ಸರಾಸರಿಯನ್ನು ಸಲೀಸಾಗಿ 200 ದಾಟಿಸುವ ಶಕ್ತಿ ಇದೆ. ಆದರೆ ದೀರ್ಘ ಅವಧಿಗೆ ಗಾಯಾಳು ಆಗಿ ಹೊರಗೆ ಕೂತ ಕಾರಣ ಆತನ ತಲೆಯ ಮೇಲೆ ತೂಗುಕತ್ತಿ ಇದ್ದೇ ಇತ್ತು. ಆದರೆ ಆಯ್ಕೆ ಮಂಡಳಿ ಆತನ ಹಿಂದಿನ ಸಾಧನೆಯ ಮೇಲೆ ಭರವಸೆ ಇಟ್ಟ ಹಾಗಿದೆ. ನಂಬರ್ 3 ಸ್ಥಾನಕ್ಕೆ ಆಯ್ಕೆಗಳು ಹೆಚ್ಚಿದ್ದ ಕಾರಣ ಸಹಜವಾಗಿ ಕೆ ಎಲ್ ರಾಹುಲ್ ಹೊರಗೆ ಕೂರಬೇಕಾಯಿತು ಅಷ್ಟೇ.

rajamarga column t20 world cup team

ಸಂಜು ಸ್ಯಾಮ್ಸನ್ ದಶಕಗಳಿಂದ ಐಪಿಲ್ ಆಡುತ್ತಾ ಇದ್ದಾರೆ. ಈ ಐಪಿಎಲ್ ಟೂರ್ನಿಯಲ್ಲಿ ಆತನ ಸರಾಸರಿ ಮತ್ತು ಕನ್ಸಿಸ್ಟೇನ್ಸಿಗಳು ತುಂಬಾ ಚೆನ್ನಾಗಿ ಇದ್ದ ಕಾರಣ ಅವರ ಆಯ್ಕೆ ಸಲೀಸಾಯ್ತು. ರಾಹುಲ್ ಬ್ಯಾಟಿಂಗ್ ಮತ್ತು ಕೀಪಿಂಗ್ ಚೆನ್ನಾಗಿದ್ದರೂ ಡ್ರಾಪ್ ಆದರು. ಈ ನೋವು ಕನ್ನಡಿಗರನ್ನು ಕಾಡದೇ ಇರದು. ಸಂಜು ಸ್ಯಾಮ್ಸನ್ ಅವರಿಗೊಂದು ಅವಕಾಶ ಕೊಡಲೇಬೇಕು ಎಂದು ದೀರ್ಘಕಾಲದಿಂದ ಭಾರತ ಆಸೆ ಪಡುತ್ತಿತ್ತು.

ಬಲಿಷ್ಠ ಮಿಡಲ್ ಆರ್ಡರ್

ಭಾರತಕ್ಕೆ ಅಗತ್ಯವಾಗಿ ಬೇಕಾಗಿದ್ದ ಬಲಿಷ್ಠ ಮಿಡಲ್ ಆರ್ಡರ್ ಈ ಬಾರಿ ನಿಸ್ಸಂಶಯವಾಗಿಯೂ ದೊರೆತಿದೆ. ರಿಶಭ್ ಪಂತ್ ಮತ್ತು ಶಿವಂ ದುಬೆ ಅಲ್ಲಿ ಮಿಂಚು ಹರಿಸುವುದು ಖಂಡಿತ. ಇನ್ನಷ್ಟು ಬಲಿಷ್ಠ ಮಾಡಲು ರವೀಂದ್ರ ಜಡೇಜಾ ಇದ್ದೇ ಇರುತ್ತಾರೆ.

ಇಡೀ ಐಪಿಲ್ ಪಂದ್ಯಾಟದಲ್ಲಿ ಮಿಂಚಿದ ತಿಲಕ್ ವರ್ಮ, ರಥುರಾಜ್ ಗಾಯಕವಾಡ, ಅಭಿಷೇಕ್ ಶರ್ಮಾ, ಸಾಯಿ ಸುದರ್ಶನ್, ರಿಯಾನ್ ಪರಾಗ್ ಯಾಕೆ ಮಿಸ್ ಆದರು?ಎಂಬ ಪ್ರಶ್ನೆಯು ನಿಮ್ಮ ಮನಸಿಗೆ ಕೂಡ ಬಂದಿರಬಹುದು. ಅವರು ಮುಂದಿನ ವಿಶ್ವಕಪ್ ತನಕ ಕಾಯಲೇಬೇಕು ಅನ್ನುವುದು ವಾಸ್ತವ.

rajamarga column t20 world cup team

ಬೌಲಿಂಗ್ ವಿಭಾಗ ಅಚ್ಚರಿ ಇಲ್ಲ

ಜಸ್ಪ್ರೀತ್ ಬುಮ್ರಾ, ಆರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ ವಿಭಾಗದ ಅಸ್ತ್ರಗಳು. ಖಲೀಲ್ ಅಹ್ಮದ್ ಮತ್ತು ಆವೇಶ್ ಖಾನ್ ಅವರು ಮೀಸಲು ಆಟಗಾರರಾಗಿ ಇರುವ ಕಾರಣ ಇಲ್ಲಿ ಅಚ್ಚರಿಯ ಮುಖಗಳು ಇಲ್ಲ. ಹಾರ್ದಿಕ ಪಾಂಡ್ಯ ಕೂಡ ಮಿದು ವೇಗದ ಬೌಲಿಂಗ್ ಮಾಡಬಲ್ಲರು. ದಾಖಲೆ ವೇಗದಲ್ಲಿ ಎಸೆಯಬಲ್ಲ ಮಯಾಂಕ್ ಯಾದವ್ ಫಿಟ್ನೆಸ್ ಕಾರಣಕ್ಕೆ ಡ್ರಾಪ್ ಆದ ಕಾರಣ ಸಿರಾಜ್ ಆಯ್ಕೆ ಸುಲಭ ಆಯ್ತು. ಸ್ಪಿನ್ ವಿಭಾಗದಲ್ಲಿ ಐಪಿಎಲನ ಗರಿಷ್ಠ ವಿಕೆಟ್ ಕಿತ್ತಿರುವ ಯಜುವೇಂದ್ರ ಚಹಲ್, ಯಾವ ಮೈದಾನದಲ್ಲಿಯೂ ಬಾಲ್ ಸ್ಪಿನ್ ಮಾಡುವ ಶಕ್ತಿ ಇರುವ ಕುಲದೀಪ್ ಯಾದವ್, ಆಕ್ಷರ್ ಪಟೇಲ್ ಇರುತ್ತಾರೆ. ರವಿ ಬಿಷ್ಣೊಯಿ ಇರಬೇಕಿತ್ತು ಎಂಬುದು ಹಲವರ ಅಭಿಪ್ರಾಯ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

ಭಾರತವು ಮೂರು ವೇಗ ಪ್ಲಸ್ ಎರಡು ಸ್ಪಿನ್ ಸಂಯೋಜನೆಯ ಜೊತೆಗೆ ಆಡಲು ಇಳಿಯಬಹುದು. ಇನ್ನು ಫಿನಿಶರ್ ಸ್ಥಾನಕ್ಕೆ ಶಿವಂ ದುಬೆ, ರಿಶಬ್ ಪಂತ್, ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಘ್ (ಮೀಸಲು) ಇರುವ ಕಾರಣ ದಿನೇಶ್ ಕಾರ್ತಿಕ್ ಡ್ರಾಪ್ ಆದರು ಅನ್ನಿಸುತ್ತದೆ. ಆತನ ಪ್ರಾಯ ಕೂಡ ಇಲ್ಲಿ ನಿರ್ಣಾಯಕ ಆಗಿರಬಹುದು.

2024ರ ವಿಶ್ವಕಪ್‌ಗೆ ಇದು ಡ್ರೀಮ್ ಟೀಮ್

ಧೋನಿ ನಾಯಕತ್ವದಲ್ಲಿ ಚೊಚ್ಚಲ T20 ವಿಶ್ವಕಪ್ ಗೆದ್ದು ಸಾಧನೆ ಮಾಡಿದ್ದ ಭಾರತ ಈ ಬಾರಿ ಇನ್ನೂ ಬಲಿಷ್ಠ ತಂಡದ ಜೊತೆಗೆ ಆಡಲು ಇಳಿಯುತ್ತಿದೆ. ಈ ತಂಡದಲ್ಲಿ ಆಕ್ರಮಣ, ಅನುಭವ, ಪರಿಣತಿ, ವೇಗ, ತಂತ್ರಗಾರಿಕೆ… ಎಲ್ಲವೂ ಇದೆ. ಉತ್ತಮ ಆಲ್ರೌಂಡರ್ ಆಟಗಾರರೂ ಇದ್ದಾರೆ. ಒತ್ತಡ ತಡೆಕೊಳ್ಳುವ ಶಕ್ತಿ ಇದ್ದವರು ಮಾತ್ರ ವಿಶ್ವಕಪ್ ಗೆಲ್ಲುತ್ತಾರೆ.

ಆದರೆ ಐಪಿಎಲ್ 2024ರಲ್ಲಿ ಸಖತ್ ಮಿಂಚುತ್ತಿರುವ ವಿದೇಶಿ ಆಟಗಾರರಾದ ಫಿಲ್ ಸಾಲ್ಟ್, ವಿಲ್ ಜಾಕ್ಸ್, ಮಾರ್ಕಸ್ ಸ್ಟಾಯಿನಿಸ್, ಟಿಮ್ ಡೇವಿಡ್, ಮೊಹಮ್ಮದ್ ನಬಿ, ಹೆನ್ರಿ ಕ್ಲಾಸೆನ್, ಜೋಸ್ ಬಟ್ಲರ್ ……ಮೊದಲಾದವರು ಬ್ಯಾಟ್ ಬೀಸುವ ವೇಗವನ್ನು ನೋಡುವಾಗ ಭಾರತೀಯರ ಎದೆಬಡಿತವು ಸ್ವಲ್ಪ ಹೆಚ್ಚಾಗಬಹುದು. ಏನಿದ್ದರೂ ಭಾರತಕ್ಕೆ ‘ಆಲ್ ದ ಬೆಸ್ಟ್’ ಹೇಳೋದಕ್ಕೆ ನಾವು ಖಂಡಿತ ಕಂಜೂಸ್ ಮಾಡುವುದಿಲ್ಲ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ ಶ್ರೀಕಾಂತ್ ಬೊಳ್ಳಾ

Continue Reading

ಅಂಕಣ

ರಾಜಮಾರ್ಗ ಅಂಕಣ: ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ ಶ್ರೀಕಾಂತ್ ಬೊಳ್ಳಾ

ರಾಜಮಾರ್ಗ ಅಂಕಣ: ಕುರುಡರಾಗಿ ಹುಟ್ಟಿದ ಕಾರಣಕ್ಕೆ ನೋವು, ತಿರಸ್ಕಾರ ಅನುಭವಿಸುತ್ತಿದ್ದ ಶ್ರೀಕಾಂತ್‌ ಬೊಳ್ಳಾ ಹಿಡಿದ ಛಲದ ಹಾದಿ ಇಂದು ಅವರನ್ನು ದೊಡ್ಡ ಕಂಪನಿಗಳ ಮಾಲಿಕರಾಗುವತ್ತ, ನೂರಾರು ದಿವ್ಯಾಂಗರಿಗೆ ಕೆಲಸ ನೀಡುವವರೆಗೆ ಮುನ್ನಡೆಸಿದೆ. ನಾವೆಲ್ಲರೂ ಓದಿ ರೋಮಾಂಚಿತರಾಗಬಹುದಾದ ಸ್ಫೂರ್ತಿ ಕಥೆಯಿದು.

VISTARANEWS.COM


on

rajamarga column srikant bolla
Koo

ಕಣ್ಣಿಲ್ಲ ಎಂಬ ಕಾರಣಕ್ಕೆ ಐಐಟಿ ರಿಜೆಕ್ಟ್ ಆಗಿದ್ದ ಯುವಕನು ಕೋಟಿ ಕೋಟಿ ಸಂಪಾದನೆ ಮಾಡಿದ್ದು ಹೇಗೆ?

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಮೂರು ವರ್ಷಗಳ ಹಿಂದೆ ಇವರನ್ನು ಬೆಂಗಳೂರಿನ ಒಂದು ಬಿಸಿನೆಸ್ ಸಮ್ಮೇಳನದ ವೇದಿಕೆಯಲ್ಲಿ ಭೇಟಿಯಾಗಿದ್ದೆ. ಅವರ ಹೋರಾಟದ ಕಥೆಯನ್ನು ಅವರ ಮಾತಲ್ಲೇ ಕೇಳಿ ರೋಮಾಂಚನವಾಗಿತ್ತು.

ಶ್ರೀಕಾಂತ್ ಬೊಳ್ಳ ಅವರ ಹೋರಾಟದ ಅದ್ಭುತವಾದ ಕಥೆಯನ್ನು ಅವರದ್ದೇ ಮಾತುಗಳಲ್ಲಿ ಕೇಳೋಣ.

ನಾನು ಹುಟ್ಟಿದ್ದು ಆಂಧ್ರಪ್ರದೇಶದ ಮಚಲಿ ಪಟ್ಟಣದ ಒಂದು ಪುಟ್ಟ ಗ್ರಾಮದಲ್ಲಿ (1992). ನನ್ನ ಹುಟ್ಟು ಕುರುಡುತನ ನನ್ನ ಕೃಷಿಕ ಕುಟುಂಬಕ್ಕೆ ದೊಡ್ಡ ಸವಾಲು ಆಗಿತ್ತು. ನಮ್ಮ ಕುಟುಂಬದ ವಾರ್ಷಿಕ ಆದಾಯ 20,000 ರೂಪಾಯಿಗಿಂತ ಕಡಮೆ ಇದ್ದ ಕಾಲ ಅದು!

ಅಪಮಾನ, ತಿರಸ್ಕಾರ ಮತ್ತು ತಾರತಮ್ಯ

ನಾನು ಕುರುಡ ಎಂಬ ಕಾರಣಕ್ಕೆ ತಿರಸ್ಕಾರ, ಅಪಮಾನ ತುಂಬಾ ನೋವು ಕೊಡುತ್ತಿತ್ತು. ತರಗತಿಯಲ್ಲಿ ಕೊನೆಯ ಬೆಂಚು ಖಾಯಂ. ಆಟಕ್ಕೆ ಅವಕಾಶವನ್ನೇ ಕೊಡುತ್ತಿರಲಿಲ್ಲ. ಇದರಿಂದ ಅಪ್ಪ ನೊಂದುಕೊಂಡು ನನ್ನನ್ನು ಹೈದರಾಬಾದ್ ನಗರದ ವಿಶೇಷ ಮಕ್ಕಳ ಶಾಲೆಗೆ ಸೇರಿಸಿದರು. ಅಲ್ಲಿ ನನ್ನ ಜೀವನದ ಹಲವು ಟರ್ನಿಂಗ್ ಪಾಯಿಂಟಗಳು ಆರಂಭ! ಕಲಿಕೆಯಲ್ಲಿ ನಾನು ನನ್ನ ತರಗತಿಗೆ ಪ್ರಥಮ ಬರಲು ಆರಂಭಿಸಿದೆ. ಕುರುಡು ಮಕ್ಕಳ ಕ್ರಿಕೆಟ್ ತಂಡದಲ್ಲಿ ನಾನು ರಾಷ್ಟ್ರೀಯ ತಂಡದಲ್ಲಿ ಆಡಿದೆ.

ಅಬ್ದುಲ್ ಕಲಾಂ ಭೇಟಿ ಮಿಂಚು ಹರಿಸಿತು

ನಾನು ಪ್ರೌಢಶಾಲೆಯಲ್ಲಿ ಓದುವಾಗ ನಮ್ಮ ಶಾಲೆಗೊಮ್ಮೆ ಅಬ್ದುಲ್ ಕಲಾಂ ಭೇಟಿ ನೀಡಿದರು. ಅವರ ಮಾತುಗಳಿಂದ ನಾನು ಪ್ರಭಾವಿತನಾದೆ. ಅವರ ‘ಲೀಡ್ ಇಂಡಿಯಾ 2020’ ಎಂಬ ವಿದ್ಯಾರ್ಥಿ ಅಭಿಯಾನಕ್ಕೆ ನಾನು ಸದಸ್ಯತನ ಪಡೆದೆ. ನನಗೆ ಎಸೆಸೆಲ್ಸಿ ಪರೀಕ್ಷೆಯಲ್ಲಿ 90% ಅಂಕಗಳು ಬಂದವು. ವಿಜ್ಞಾನದಲ್ಲಿ ಪಿಯುಸಿ ಮಾಡಬೇಕೆಂದು ನನ್ನ ಆಸೆ. ಆದರೆ ನಾನು ಕುರುಡ ಎಂಬ ಕಾರಣಕ್ಕೆ ನನಗೆ ಯಾವುದೇ ಕಾಲೇಜಿನಲ್ಲಿ ವಿಜ್ಞಾನದ ಸೀಟ್ ಸಿಗಲಿಲ್ಲ.

ನನಗೆ ಅಬ್ದುಲ್ ಕಲಾಂ ಅವರ ಮಾತುಗಳು ನೆನಪಾದವು – ಹಕ್ಕಿ ಹಾರುವುದು ರೆಕ್ಕೆಗಳ ಬಲದಿಂದಲ್ಲ. ಅದು ಹಾರುವುದು ಭರವಸೆಗಳ ಬಲದಿಂದ!

ಸರಕಾರದ ವಿರುದ್ಧ ಬೀದಿಗೆ ಇಳಿದು ಹೋರಾಟ.

ನಾನು ಹೈದರಾಬಾದ್ ಸರಕಾರದ ವಿರುದ್ಧ ರಸ್ತೆಗಿಳಿದು ಪ್ರತಿಭಟನೆಯನ್ನು ಮಾಡಿದೆ. ಆರು ತಿಂಗಳ ನಂತರ ನನಗೆ ವಿಜ್ಞಾನದ ಸೀಟ್ ದೊರೆಯಿತು. ಸತತವಾಗಿ ಕಷ್ಟ ಪಟ್ಟೆ. ಬ್ರೈಲ್ ಲಿಪಿಯಲ್ಲಿ ಪರೀಕ್ಷೆಯನ್ನು ಬರೆದು ದ್ವಿತೀಯ ಪಿಯುಸಿಯಲ್ಲಿ ನನಗೆ 98% ಅಂಕಗಳು ಬಂದವು!

ಐಐಟಿ ಸಂಸ್ಥೆಗಳು ಬಾಗಿಲು ತೆರೆಯಲಿಲ್ಲ

ನನಗೆ ಐಐಟಿಯಲ್ಲಿ BE ಮಾಡುವ ಆಸೆ. ಆದರೆ ಭಾರತದ ಯಾವುದೇ ಐಐಟಿ ಕಾಲೇಜುಗಳು ನನಗೆ ಕುರುಡ ಎಂಬ ಕಾರಣಕ್ಕೆ ಎಂಟ್ರೆನ್ಸ್ ಪರೀಕ್ಷೆಗೂ ಅವಕಾಶ ನೀಡಲಿಲ್ಲ. ನಾನು ಕೈಚೆಲ್ಲಲಿಲ್ಲ. ಅಮೆರಿಕಾದ ನಾಲ್ಕು ಪ್ರಸಿದ್ಧವಾದ ಯೂನಿವರ್ಸಿಟಿಗಳ ಬಾಗಿಲು ಬಡಿದೆ. ಎಲ್ಲವೂ ಆಹ್ವಾನ ನೀಡಿದವು.

ನಾನು ಮಸ್ಸಾಚುಸೆಟ್ಸ್ ವಿವಿ ಆರಿಸಿಕೊಂಡೆ. ಅಮೆರಿಕಾದ ವಿವಿಯಲ್ಲಿ BE ಪ್ರವೇಶ ಪಡೆದ ಜಗತ್ತಿನ ಮೊದಲ ಕುರುಡ ವಿದ್ಯಾರ್ಥಿ ನಾನಾಗಿದ್ದೆ! ನನಗೆ ಇಷ್ಟವಾದ BE ಕೋರ್ಸನ್ನು ಮುಗಿಸಿದೆ. ಅಲ್ಲಿ ಈಜು ಮತ್ತು ಡೈವಿಂಗಲ್ಲಿ ವಿವಿ ದಾಖಲೆ ಕೂಡ ಮಾಡಿದ್ದೆ. ಅಮೆರಿಕಾದ ಕೆಲವು ಕಾರ್ಪೊರೇಟ್ ಕಂಪೆನಿಗಳು ನನಗೆ ಉದ್ಯೋಗ ನೀಡಲು ಮುಂದೆ ಬಂದವು.

ಆದರೆ ನನ್ನ ಕನಸುಗಳು ಭಾರತದಲ್ಲಿ ಇದ್ದವು!

2011ರಲ್ಲಿ ಭಾರತಕ್ಕೆ ಬಂದು ಮತ್ತೆ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡಿದೆ. ಅವರ ಸಲಹೆಯಂತೆ ಬಹು ವಿಕಲತೆಯ ಮಕ್ಕಳಿಗಾಗಿ “ಸಮನ್ವೈ ಸೆಂಟರ್” ಎಂಬ ಸೇವಾ ಸಂಸ್ಥೆ ಆರಂಭಿಸಿದೆ. ಬ್ರೈಲ್ ಪ್ರಿಂಟಿಂಗ್ ಪ್ರೆಸ್ ತೆರೆದೆ. 3000 ಅಶಕ್ತ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ನೆರವಿಗೆ ನಿಂತೆ. ಅಷ್ಟಕ್ಕೇ ಸುಮ್ಮನಾಗಲಿಲ್ಲ.

ಆರಂಭ ಆಯಿತು ಅವರದ್ದೇ ಕಂಪೆನಿ

2011ರಲ್ಲಿ ‘ BOLLANT INDUSTRY’ ಎಂಬ ಸಣ್ಣ ಉದ್ಯಮವನ್ನು ಆರಂಭಿಸಿದೆ. ನಗರಪಾಲಿಕೆಯ ತ್ಯಾಜ್ಯ ವಸ್ತುಗಳಿಂದ ಮತ್ತು ಆಡಕೆಯಿಂದ ಕ್ರಾಫ್ಟ್ ಪೇಪರ್ ತಯಾರಿಸುವ ಕಂಪೆನಿ ಅದು. ಹಣ ಮಾಡುವುದು ನನ್ನ ಉದ್ದೇಶ ಆಗಿರಲಿಲ್ಲ. ನನ್ನ ಕಂಪೆನಿಯಲ್ಲಿ ಕುರುಡರಿಗೆ ಮತ್ತು ವಿಕಲಚೇತನರಿಗೆ ಉದ್ಯೋಗ ನೀಡಿದೆ. ರತನ್ ಟಾಟಾ ಅವರು ನನ್ನ ಕಂಪೆನಿಯಲ್ಲಿ ಹೂಡಿಕೆ ಮಾಡಲು ಮುಂದೆ ಬಂದರು. ನನ್ನ ಐಕಾನ್ ಎಪಿಜೆ ಅಬ್ದುಲ್ ಕಲಾಂ ಅವರು ಬಂದು ದೀಪ ಹಚ್ಚಿದರು. ಮುಂದೆ ಆ ಕಂಪೆನಿಯು ಪ್ರತೀ ತಿಂಗಳು 20% ಪ್ರಗತಿ ದಾಖಲಿಸುತ್ತಾ ಬಂದಿತು.

ದಿವ್ಯಾಂಗರಿಗೆ ಉದ್ಯೋಗ ನೀಡಿದರು

ಇಂದು ನನ್ನ ಕಂಪೆನಿಗೆ ನಾಲ್ಕು ರಾಜ್ಯಗಳಲ್ಲಿ 20 ಶಾಖೆಗಳು ಇವೆ. 100 ಕೋಟಿ ರೂಪಾಯಿ ವಾರ್ಷಿಕ ಟರ್ನ್ ಓವರ್ ಇದೆ! ನೂರಕ್ಕೆ ನೂರು ಸೌರಶಕ್ತಿ ಆಧಾರಿತವಾಗಿದೆ ಮತ್ತು ಪರಿಸರಸ್ನೇಹಿ ಆಗಿದೆ. ಅಶಕ್ತ ದಿವ್ಯಾಂಗರಿಗೆ ಸ್ವಾವಲಂಬಿ ಬದುಕಿನ ಅವಕಾಶವನ್ನು ನೀಡಿದ ಖುಷಿ ಇದೆ. ಭಾರತದ ಸಮಸ್ಯೆಗಳಾದ ಬಡತನ, ನಿರಕ್ಷರತೆ, ನಿರುದ್ಯೋಗಗಳ ನಿವಾರಣೆಗೆ ನಮ್ಮಿಂದಾದಷ್ಟು ಪ್ರಯತ್ನ ಪ್ರತಿಯೊಬ್ಬರೂ ಮಾಡಬೇಕು. ‘ಪಂಚೀ ಉಡತೀ ಹೈ ಪಂಖೋ ಕೀ ತಾಕತ್ ಸೆ ನಹೀಂ. ಹೌಸಲೆ ಸೇ!’ ಎಂಬ ಅಬ್ದುಲ್ ಕಲಾಂ ಅವರ ಮಾತಿನೊಂದಿಗೆ ಅವರು ತನ್ನ ಮಾತು ನಿಲ್ಲಿಸಿದರು. ಅವರ ಆಳವಾದ ಕಣ್ಣುಗಳಲ್ಲಿ ಗೆದ್ದ ಖುಷಿ ಇತ್ತು.

ಭರತ ವಾಕ್ಯ

ಅಂದ ಹಾಗೆ ಶ್ರೀಕಾಂತ್ ಅವರಿಗೆ ಫೋರ್ಬ್ಸ್ ಮಾಗಜ್ಹಿನ್ 2017ರಲ್ಲಿ ನಡೆಸಿದ ಏಷಿಯಾದ 30 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನವನ್ನು ದೊರೆತಿದೆ. ‘NDTV ಇಂಡಿಯನ್ ಆಫ್ ದಿ ಇಯರ್’ ಪ್ರಶಸ್ತಿ, ‘ಪ್ರೈಡ್ ಆಫ್ ತೆಲಂಗಾಣ’ ಪ್ರಶಸ್ತಿ, ‘ಟಿವಿ 9 ನವನಕ್ಷತ್ರ’ ಪ್ರಶಸ್ತಿ……. ಮೊದಲಾದ ನೂರಾರು ಪ್ರಶಸ್ತಿಗಳು ಅವರಿಗೆ ದೊರೆತಿವೆ. ಶ್ರೀಕಾಂತ್ ಬೊಳ್ಳ ಅವರ ಬದುಕು ಸಾವಿರಾರು ಯುವಕ ಯುವತಿಯರಿಗೆ ಸ್ಫೂರ್ತಿ ನೀಡಿದೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

Continue Reading

ಅಂಕಣ

ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

ರಾಜಮಾರ್ಗ ಅಂಕಣ: ಆಕ್ರಮಣಕಾರಿ ರಿಶಭ್ ಪಂತ್ ಡೆಹ್ರಾಡೂನ್ ಆಸ್ಪತ್ರೆಯಲ್ಲಿ ಅರ್ಧ ಹೆಣವಾಗಿ ಮಲಗಿದ್ದ! ಯಾರಿಗೂ ಆತ ಮರಳಿ ಕ್ರಿಕೆಟ್ ಆಡುವ ಭರವಸೆ ಇರಲಿಲ್ಲ. ಆದರೆ ಈಗ, ಈ ಐಪಿಎಲ್ ಸೀಸನ್‌ನಲ್ಲಿ ವಿಕೆಟ್ ಮುಂದೆ ಮತ್ತು ಹಿಂದೆ ಆತ ಆಕ್ರಮಣಕಾರಿ ಆಗಿ ಆಡುತ್ತಿರುವುದನ್ನು ನೀವು ನೋಡಿಯೇ ನೋಡಿರುತ್ತೀರಿ!

VISTARANEWS.COM


on

Rishabh Pant
Koo

ಹೋರಾಟಗಾರ ಕ್ರಿಕೆಟರ್ ಕ್ರಿಟಿಕಲ್ ಇಂಜುರಿ ಗೆದ್ದು ಬಂದ ಕಥೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: 2022 ಡಿಸೆಂಬರ್ 30ರ ಮಧ್ಯರಾತ್ರಿ ರೂರ್ಕಿ ಎಂಬಲ್ಲಿ ಆ ಕ್ರಿಕೆಟರ್ ಕಾರು ಅಪಘಾತಕ್ಕೆ ಒಳಗಾಗಿತ್ತು. ಆ ಅಪಘಾತದ ತೀವ್ರತೆಯನ್ನು ನೋಡಿದವರು ಆತ ಬದುಕಿದ್ದೇ ಗ್ರೇಟ್ ಅಂದಿದ್ದರು. ಬಲಗಾಲಿನ ಮಂಡಿ ಚಿಪ್ಪು ಸಮೇತ 90 ಡಿಗ್ರೀಯಷ್ಟು ತಿರುಗಿ ನಿಂತಿತ್ತು! ಮೈಯೆಲ್ಲಾ ಗಾಯಗಳು ಮತ್ತು ಎಲುಬು ಮುರಿತಗಳು! ಡೆಹ್ರಾಡೂನ್ ಆಸ್ಪತ್ರೆಯ ವೈದ್ಯರು ಆತನ ದೇಹದಲ್ಲಾದ ಗಾಯ ಮತ್ತು ಮೂಳೆ ಮುರಿತಗಳನ್ನು ನೋಡಿದಾಗ ‘ನೀನಿನ್ನು ಕ್ರಿಕೆಟ್ ಆಡೋದು ಕಷ್ಟ’ ಅಂದಿದ್ದರು. ಒಬ್ಬರಂತೂ ‘ನೀನು ನಿನ್ನ ಕಾಲುಗಳ ಮೇಲೆ ನಿಂತರೆ ಅದೇ ದೊಡ್ಡ ಸಾಧನೆ’ ಅಂದಿದ್ದರು!

ಅಮ್ಮಾ ನನಗೆ ಸಹಾಯ ಮಾಡು, ನಾನು ವಿಶ್ವಕಪ್ ಆಡಬೇಕು!

ಆ ಕ್ರಿಕೆಟಿಗ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಚೀರಿ ಚೀರಿ ಹಾಗೆ ಹೇಳುತ್ತಿದ್ದರೆ ನರ್ಸ್ ಮತ್ತು ವೈದ್ಯರು ಕಣ್ಣೀರು ಸುರಿಸುತ್ತಿದ್ದರು! ಕ್ರಿಕೆಟ್ ವಿಶ್ವಕಪ್ ಆರಂಭವಾಗಲು ಕೇವಲ ಒಂದೂವರೆ ವರ್ಷ ಬಾಕಿ ಇತ್ತು. ವೈದ್ಯರು ‘ಅನಿವಾರ್ಯ ಆದರೆ ಆತನ ಒಂದು ಕಾಲು ತುಂಡು ಮಾಡಬೇಕಾಗಬಹುದು!’ ಎಂದು ಅವನ ಅಮ್ಮನ ಕಿವಿಯಲ್ಲಿ ಪಿಸುಗುಟ್ಟಿದ್ದು, ಆತನ ಅಮ್ಮ ಬಾತ್ ರೂಮ್ ಒಳಗೆ ಹೋಗಿ ಕಣ್ಣೀರು ಸುರಿಸಿದ್ದು ಎಲ್ಲವೂ ನಡೆದು ಹೋಗಿತ್ತು!

ಆತ ರಿಶಭ್ ಪಂತ್ – ಆಕ್ರಮಣಕ್ಕೆ ಇನ್ನೊಂದು ಹೆಸರು!

ಅಪಘಾತ ಆಗುವ ಮೊದಲು ಆತ ಭಾರತೀಯ ಕ್ರಿಕೆಟ್ ತಂಡದ ಮೂರೂ ಫಾರ್ಮಾಟಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದ! ಆಕ್ರಮಣಕ್ಕೆ ಹೆಸರಾಗಿದ್ದ. ಸಲೀಸಾಗಿ ಒಂದೇ ಅವಧಿಯಲ್ಲಿ ಡಬಲ್ ಸೆಂಚುರಿ ಹೊಡೆಯುತ್ತಿದ್ದ. ವಿಕೆಟ್ ಹಿಂದೆ ಪಾದರಸದ ಚುರುಕು ಇತ್ತು. ಆತನ ಆಟವನ್ನು ನೋಡಿದವರು ʻಈತ ಧೋನಿಯ ಉತ್ತರಾಧಿಕಾರಿ ಆಗುವುದು ಖಂಡಿತ’ ಅನ್ನುತ್ತಿದ್ದರು!

ಅಂತಹ ರಿಶಭ್ ಪಂತ್ ಡೆಹ್ರಾಡೂನ್ ಆಸ್ಪತ್ರೆಯಲ್ಲಿ ಅರ್ಧ ಹೆಣವಾಗಿ ಮಲಗಿದ್ದ! ಯಾರಿಗೂ ಆತ ಮರಳಿ ಕ್ರಿಕೆಟ್ ಆಡುವ ಭರವಸೆ ಇರಲಿಲ್ಲ.

ಆತನ ನೆರವಿಗೆ ನಿಂತವರು ಕೇವಲ ನಾಲ್ಕೇ ಜನ

ಮರಳಿ ಕ್ರಿಕೆಟ್ ಮೈದಾನಕ್ಕೆ ಇಳಿಯಬೇಕು ಎಂದು ನಿದ್ದೆಯಲ್ಲಿಯೂ ಕನವರಿಸುತ್ತಿದ್ದ ಆತನ ನೆರವಿಗೆ ನಿಂತವರು ಕೇವಲ ನಾಲ್ಕೇ ಜನ. ಅವರೆಲ್ಲರೂ ಆತನ ಕ್ರಿಕೆಟ್ ದೈತ್ಯ ಪ್ರತಿಭೆಯನ್ನು ಕಂಡವರು. ಒಬ್ಬರು ಆತನಿಗೆ ಶಸ್ತ್ರಚಿಕಿತ್ಸೆ ಮಾಡಿದ ಮುಂಬಯಿಯ ಅಂಬಾನಿ ಆಸ್ಪತ್ರೆಯ ಖ್ಯಾತ ಸರ್ಜನ್ ದಿನ್ ಶಾ ಪಾದ್ರಿವಾಲ. ಇನ್ನೊಬ್ಬರು ಉತ್ತರಾಖಂಡದ ಶಾಸಕ ಉಮೇಶ್ ಕುಮಾರ್. ಇನ್ನೊಬ್ಬರು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ಕೋಚ್ ಆದ ಧನಂಜಯ್ ಕೌಶಿಕ್. ನಾಲ್ಕನೆಯರು ರಿಷಭನ ತಾಯಿ! ಆಕೆ ನಿಜಕ್ಕೂ ಗಾಡ್ಸ್ ಗ್ರೇಸ್ ಅನ್ನಬಹುದು. ಅವರೆಲ್ಲರಿಗೂ ಆತ ಭಾರತಕ್ಕೆ ಎಷ್ಟು ಅಮೂಲ್ಯ ಆಟಗಾರ ಎಂದು ಗೊತ್ತಿತ್ತು! ಆಸ್ಪತ್ರೆಯ ಹಾಸಿಗೆಗೆ ಒರಗಿ ಆತ ಪಟ್ಟ ಮಾನಸಿಕ ಮತ್ತು ದೈಹಿಕ ನೋವು, ಹೊರಹಾಕಿದ ನಿಟ್ಟುಸಿರು ಎಲ್ಲವೂ ಆ ನಾಲ್ಕು ಮಂದಿಗೆ ಗೊತ್ತಿತ್ತು.

ಆ ಹದಿನೈದು ತಿಂಗಳು…!

Rishabh Panth

ಆ ಅವಧಿಯಲ್ಲಿ ಏಷಿಯಾ ಕಪ್, ವಿಶ್ವ ಟೆಸ್ಟ್ ಚಾಂಪಿಯನಶಿಪ್, ವಿಶ್ವ ಕಪ್ ಎಲ್ಲವೂ ನಡೆದುಹೋಯಿತು! ಭಾರತ ಹಲವು ವಿಕೆಟ್ ಕೀಪರಗಳ ಪ್ರಯೋಗ ಮಾಡಿತು. ಭಾರತ ಒಂದೂ ಕಪ್ ಗೆಲ್ಲಲಿಲ್ಲ. ಭಾರತಕ್ಕೆ ಶಾಶ್ವತವಾದ ವಿಕೆಟ್ ಕೀಪರ್ ಸಿಗಲಿಲ್ಲ! ರಿಷಭ್ ಈ ಎಲ್ಲ ಪಂದ್ಯಗಳನ್ನು ನೋಡುತ್ತಿದ್ದ. ವಿಕೆಟ್ ಹಿಂದೆ ಅವನಿಗೆ ಅವನೇ ಕಾಣುತ್ತಿದ್ದ!

ಹಾಸಿಗೆಯಿಂದ ಎದ್ದು ಕ್ರಚಸ್ ಹಿಡಿದು ನಡೆದದ್ದು, ನಂತರ ಕ್ರಚಸ್ ಬದಿಗೆ ಇಟ್ಟು ಗೋಡೆ ಹಿಡಿದು ನಡೆದದ್ದು, ನಂತರ ಎಲ್ಲವನ್ನೂ ಬಿಟ್ಟು ನಿಧಾನವಾಗಿ ತನ್ನ ಕಾಲ ಮೇಲೆ ಗಟ್ಟಿಯಾಗಿ ನಿಂತದ್ದು, ಜಾಗಿಂಗ್ ಮಾಡಿದ್ದು, ಓಡಿದ್ದು, ಕಾಲುಗಳಿಗೆ ಫಿಸಿಯೋ ಥೆರಪಿ ಆದದ್ದು, ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಕೌನ್ಸೆಲಿಂಗ್ ನೆರವು ಪಡೆದದ್ದು….ಇವೆಲ್ಲವೂ ಕನಸಿನಂತೆ ಗೋಚರ ಆಗುತ್ತಿದೆ. ಮುಂದೆ ನಿರಂತರ ಕ್ರಿಕೆಟ್ ಕೋಚಿಂಗ್, ಮೈದಾನದಲ್ಲಿ ಬೆವರು ಹರಿಸಿದ್ದು, ಅಪಘಾತವಾದ ಕಾಲು ಬಗ್ಗಿಸಲು ತುಂಬ ಕಷ್ಟಪಟ್ಟದ್ದು ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಂತೆ ಅನ್ನಿಸುತ್ತಿದೆ.

2024 ಮಾರ್ಚ್ 12….

ಒಬ್ಬ ಕ್ರಿಕೆಟರ್ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ ಮೈದಾನಕ್ಕೆ ಇಳಿಯಲು ಬಿಸಿಸಿಐ ಫಿಟ್ನೆಸ್ ಸರ್ಟಿಫಿಕೇಟ್ ಕೊಡಬೇಕು. ಅದು ಸುಲಭದ ಕೆಲಸ ಅಲ್ಲ. ಅಲ್ಲಿ ಕೂಡ ರಿಶಭ್ ಇಚ್ಛಾಶಕ್ತಿ ಗೆದ್ದಿತ್ತು. ಮಾರ್ಚ್ 12ರಂದು ಆತನು ಕ್ರಿಕೆಟ್ ಆಡಲು ಸಂಪೂರ್ಣ ಫಿಟ್ ಎಂದು ಬಿಸಿಸಿಐ ಘೋಷಣೆ ಮಾಡಿದಾಗ ಆತ ಮೈದಾನದ ಮಧ್ಯೆ ಕೂತು ಜೋರಾಗಿ ಕಣ್ಣೀರು ಹಾಕಿದ್ದನು! ಎರಡೇ ದಿನದಲ್ಲಿ ಡೆಲ್ಲಿ ಐಪಿಎಲ್ ತಂಡವು ಆತನನ್ನು ತೆರೆದ ತೋಳುಗಳಿಂದ ಸ್ವಾಗತ ಮಾಡಿ ನಾಯಕತ್ವವನ್ನು ಕೂಡ ಆತನಿಗೆ ನೀಡಿತ್ತು! ಈ ಐಪಿಎಲ್ ಸೀಸನ್‌ನಲ್ಲಿ ವಿಕೆಟ್ ಮುಂದೆ ಮತ್ತು ಹಿಂದೆ ಆತ ಆಕ್ರಮಣಕಾರಿ ಆಗಿ ಆಡುತ್ತಿರುವುದನ್ನು ನೀವು ನೋಡಿಯೇ ನೋಡಿರುತ್ತೀರಿ!

ಮುಂದಿನ T20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಒಬ್ಬ ಅದ್ಭುತ ಬ್ಯಾಟರ್ ಮತ್ತು ವಿಕೆಟ್ ಕೀಪರ್ ದೊರಕಿದ್ದನ್ನು ನಾವು ಸಂಭ್ರಮಿಸಲು ಯಾವ ಅಡ್ಡಿ ಕೂಡ ಇಲ್ಲ ಎನ್ನಬಹುದು. ಆತನಿಗೆ ಶುಭವಾಗಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

Continue Reading

ಅಂಕಣ

ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

ರಾಜಮಾರ್ಗ ಅಂಕಣ: ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು.

VISTARANEWS.COM


on

Koo

ಈ ಕಥೆಯಲ್ಲಿ ಅದ್ಭುತ ಸಂದೇಶ ಇದೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಕಥೆಗೆ ಮೂಲ ಯಾವುದು ಎಂದು ಕೇಳಬೇಡಿ. ಆದರೆ ಅದರಲ್ಲಿ ಅದ್ಭುತ ಸಂದೇಶ ಇರುವ ಕಾರಣ ಅದನ್ನು ಇಲ್ಲಿ ಬರೆಯುತ್ತಿದ್ದೇನೆ. ಇದು ಯಾವುದೋ ಒಂದು ವ್ಯಾಟ್ಸಪ್ ಗುಂಪಿನಲ್ಲಿ ಬಂದ ಲೇಖನ ಆಗಿದೆ.

ಹನುಮಂತನೂ ಒಂದು ರಾಮಾಯಣ ಬರೆದಿದ್ದ!

ವಾಲ್ಮೀಕಿ ರಾಮಾಯಣ ಬರೆದು ಮುಗಿಸಿದಾಗ ಅದನ್ನು ಓದಿದ ನಾರದನಿಗೆ ಅದು ಖುಷಿ ಕೊಡಲಿಲ್ಲ. ಆತ ಹೇಳಿದ್ದೇನೆಂದರೆ – ಇದು ಚೆನ್ನಾಗಿದೆ. ಆದರೆ ಹನುಮಂತ ಒಂದು ರಾಮಾಯಣ ಬರೆದಿದ್ದಾನೆ. ಅದಿನ್ನೂ ಚೆನ್ನಾಗಿದೆ!

ಈ ಮಾತು ಕೇಳದೆ ವಾಲ್ಮೀಕಿಗೆ ಸಮಾಧಾನ ಆಗಲಿಲ್ಲ. ಆತನು ತಕ್ಷಣ ನಾರದನನ್ನು ಕರೆದುಕೊಂಡು ಹನುಮಂತನನ್ನು ಹುಡುಕಿಕೊಂಡು ಹೊರಟನು. ಅಲ್ಲಿ ಹನುಮಂತನು ಧ್ಯಾನಮಗ್ನನಾಗಿ ಕುಳಿತು ಏಳು ಅಗಲವಾದ ಬಾಳೆಲೆಯ ಮೇಲೆ ಇಡೀ ರಾಮಾಯಣದ ಕಥೆಯನ್ನು ಚಂದವಾಗಿ ಬರೆದಿದ್ದನು. ಅದನ್ನು ಓದಿ ವಾಲ್ಮೀಕಿ ಜೋರಾಗಿ ಅಳಲು ಆರಂಭ ಮಾಡಿದನು. ಹನುಮಂತ “ಮಹರ್ಷಿ, ಯಾಕೆ ಅಳುತ್ತಿದ್ದೀರಿ? ನನ್ನ ರಾಮಾಯಣ ಚೆನ್ನಾಗಿಲ್ಲವೇ?” ಎಂದನು.

ಅದಕ್ಕೆ ವಾಲ್ಮೀಕಿ “ಹನುಮಾನ್, ನಿನ್ನ ರಾಮಾಯಣ ರಮ್ಯಾದ್ಭುತ ಆಗಿದೆ. ನಿನ್ನ ರಾಮಾಯಣ ಓದಿದ ನಂತರ ನನ್ನ ರಾಮಾಯಣ ಯಾರೂ ಓದುವುದಿಲ್ಲ!’ ಎಂದು ಮತ್ತೆ ಅಳಲು ಆರಂಭ ಮಾಡಿದನು. ಈ ಮಾತನ್ನು ಕೇಳಿದ ಹನುಮಾನ್ ತಾನು ರಾಮಾಯಣ ಬರೆದಿದ್ದ ಬಾಳೆಲೆಗಳನ್ನು ಅರ್ಧ ಕ್ಷಣದಲ್ಲಿ ಹರಿದು ಹಾಕಿದನು! ಅವನು ವಾಲ್ಮೀಕಿಗೆ ಹೇಳಿದ ಮಾತು ‘ಮಹರ್ಷಿ, ನೀವಿನ್ನು ಆತಂಕ ಮಾಡಬೇಡಿ. ಇನ್ನು ನನ್ನ ರಾಮಾಯಣ ಯಾರೂ ಓದುವುದಿಲ್ಲ!’

hanuman

ಹನುಮಾನ್ ಹೇಳಿದ ಜೀವನ ಸಂದೇಶ

‘ವಾಲ್ಮೀಕಿ ಮಹರ್ಷಿ. ನೀವು ರಾಮಾಯಣ ಬರೆದ ಉದ್ದೇಶ ನಿಮ್ಮನ್ನು ಜಗತ್ತು ನೆನಪಿಟ್ಟುಕೊಳ್ಳಬೇಕು ಎಂದು. ನನಗೆ ಆ ರೀತಿಯ ಆಸೆಗಳು ಇಲ್ಲ. ನಾನು ರಾಮಾಯಣ ಬರೆದ ಉದ್ದೇಶ ನನಗೆ ರಾಮ ನೆನಪಿದ್ದರೆ ಸಾಕು ಎಂದು! ರಾಮನ ಹೆಸರು ರಾಮನಿಗಿಂತ ದೊಡ್ಡದು. ರಾಮ ದೇವರು ನನ್ನ ಹೃದಯದಲ್ಲಿ ಸ್ಥಿರವಾಗಿದ್ದಾನೆ. ನನಗೆ ಇನ್ನು ಈ ರಾಮಾಯಣದ ಅಗತ್ಯ ಇಲ್ಲ!’

ಈಗ ವಾಲ್ಮೀಕಿ ಇನ್ನೂ ಜೋರಾಗಿ ಅಳಲು ತೊಡಗಿದನು. ಅವನ ಅಹಂಕಾರದ ಪೊರೆಯು ಕಳಚಿ ಹೋಗಿತ್ತು. ಆತನು ಒಂದಕ್ಷರವೂ ಮಾತಾಡದೆ ಹನುಮಂತನ ಪಾದಸ್ಪರ್ಶ ಮಾಡಿ ಹಿಂದೆ ಹೋದನು.

ಭರತ ವಾಕ್ಯ

ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

Continue Reading
Advertisement
T20 World Cup
ಕ್ರೀಡೆ19 mins ago

T20 World Cup : ವಿಶ್ವ ಕಪ್​ ಗೆಲ್ಲುವುದು ಭಾರತ; ವಿಶ್ವ ಕಪ್​ ವಿಜೇತ ಲಂಕಾ ಆಟಗಾರನ ಸ್ಪಷ್ಟ ನುಡಿ

Shine Shetty Summer Fashion
ಫ್ಯಾಷನ್39 mins ago

Summer Fashion: ಉರಿ ಬಿಸಿಲಿನಲ್ಲಿ ಗಮನ ಸೆಳೆವ ನಟ ಶೈನ್‌ ಶೆಟ್ಟಿಯ ಕೂಲ್‌ ಸ್ಮೈಲ್‌ & ಸ್ಟೈಲ್‌!

IPL 2024
ಕ್ರೀಡೆ45 mins ago

IPL 2024 : ಐಪಿಎಲ್​ ಮಧ್ಯದಲ್ಲಿಯೇ ಕೆಕೆಆರ್​ ತಂಡ ತೊರೆದ ಆರಂಭಿಕ ಆಟಗಾರ

assault Case
ಬೆಂಗಳೂರು47 mins ago

Assault Case : ಪೊಲೀಸ್‌ ಸ್ಟೇಷನ್‌ನಲ್ಲೇ ಇನ್‌ಸ್ಪೆಕ್ಟರ್‌ ಕಪಾಳಕ್ಕೆ ಹೊಡೆದ ಮಹಿಳೆ

Prajwal Revanna Case Centre says it has no power to revoke Prajwal diplomatic passport Big relief for MP
ಕರ್ನಾಟಕ52 mins ago

Prajwal Revanna Case: ಪ್ರಜ್ವಲ್‌ರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ರದ್ದು ಮಾಡೋ ಅಧಿಕಾರ ನಮಗಿಲ್ಲ ಎಂದ ಕೇಂದ್ರ! ಸಂಸದನಿಗೆ ಬಿಗ್‌ ರಿಲೀಫ್‌?

Virat kohli
ಪ್ರಮುಖ ಸುದ್ದಿ1 hour ago

Virat Kohli : ಅಂಕಿ, ಅಂಶ ಪಂಡಿತರೇ ಬಾಯ್ಮುಚ್ಚಿ; ಕೊಹ್ಲಿಯನ್ನು ಟೀಕಿಸಿದವರ ಬೆಂಡೆತ್ತಿದ ಡಿ’ವಿಲಿಯರ್ಸ್​​

Brij Bhushan Singh
ದೇಶ1 hour ago

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್‌ ಭೂಷಣ್‌ಗಿಲ್ಲ ಟಿಕೆಟ್‌; ಮಗನಿಗೆ ಮಣೆ, ರಾಯ್‌ಬರೇಲಿಗೂ ಅಭ್ಯರ್ಥಿ ಘೋಷಿಸಿದ ಬಿಜೆಪಿ

Murder case in Bengaluru
ಬೆಂಗಳೂರು1 hour ago

Murder Case : ನಡುರಸ್ತೆಯಲ್ಲೆ ಪತ್ನಿಗೆ ಚಾಕು ಇರಿದು ಕೊಂದ ಪತಿ

Prajwal Revanna Case Locked up as Prajwal arrives at Bengaluru airport
ಹಾಸನ1 hour ago

Prajwal Revanna Case: ಬೆಂಗಳೂರು ಏರ್‌ಪೋರ್ಟ್‌ಗೆ ಪ್ರಜ್ವಲ್‌ ಬರುತ್ತಿದ್ದಂತೆ ಲಾಕ್‌! ಏನಿದು SIT ಸೂಚನೆ?

Andre Russell
ಕ್ರಿಕೆಟ್1 hour ago

Andre Russell : ಬ್ರಾವೊ ರೀತಿಯಲ್ಲೇ ಬಾಲಿವುಡ್​ಗೆ ಎಂಟ್ರಿ ಪಡೆದ ಆ್ಯಂಡ್ರೆ ರಸೆಲ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ14 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌