ಲೈಫ್‌ ಸರ್ಕಲ್‌ ಅಂಕಣ | ಭಕ್ತಿಯಲ್ಲಿದೆ ಜೀವನದ ಭೋಗ, ಸಾಧನೆಯ ಯೋಗ, ಮುಕ್ತಿಯ ಮಾರ್ಗ - Vistara News

ಅಂಕಣ

ಲೈಫ್‌ ಸರ್ಕಲ್‌ ಅಂಕಣ | ಭಕ್ತಿಯಲ್ಲಿದೆ ಜೀವನದ ಭೋಗ, ಸಾಧನೆಯ ಯೋಗ, ಮುಕ್ತಿಯ ಮಾರ್ಗ

ಭಕ್ತಿಯು ಇಡೀ ಜೀವನದ ಅರ್ಥಪೂರ್ಣತೆಯಾಗಿದೆ. ಭಕ್ತಿಯಲ್ಲಿ ಪ್ರೇಮವಿದೆ, ರಸವಿದೆ ಆನಂದವಿದೆ, ಮೋಕ್ಷಕ್ಕೆ ಕಾರಣವಾಗುವ ಪರಿಕಲ್ಪನೆ ಇದೆ. ನರನಿಂದ ನಾರಾಯಣನಾಗಲು ಇದು ಸುಲಭವಾದ ಮಾರ್ಗವಾಗಿದೆ.

VISTARANEWS.COM


on

dhyana
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
life circle

‘ಪ್ರೀತಿಯಿಂದ ವಸ್ತುವನ್ನು ಅಡೆತಡೆಯಿಲ್ಲದೆ ಸ್ಮರಿಸುವುದು ಭಕ್ತಿ’ ಎಂಬುದು ಲಿಂಗ ಪುರಾಣೋಕ್ತಿ. ಭಕ್ತಿಯ ಕುರಿತಾದ ಚಿಂತನೆಗಳು ಶತಶತಮಾನಗಳಿಂದ ನಡೆದುಕೊಂಡು ಬಂದಿವೆ. ಅನನ್ಯ ಭಕ್ತಿಯ ಮುಂದೆ ಎಲ್ಲವೂ ಅರ್ಥಹೀನ ಎಂಬ ಗೀತೋಕ್ತಿ ಇದೆ. ನಮ್ಮ ದೇಶದಲ್ಲಿ ಭಕ್ತಿ ಪಂಥಗಳ ಸಾಲು ಸಾಲೇ ಕಂಡುಬರುತ್ತದೆ. ಇತಿಹಾಸದಲ್ಲಿ ಭಕ್ತಿಕಾಲ ಎಂಬುದೇ ಆಗಿಹೋಗಿದೆ. ಕನಕದಾಸರು, ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ತುಳಸೀದಾಸರು, ವಲ್ಲಭಾಚಾರ್ಯ, ಕಬೀರ್, ರೈದಾಸ್, ಚೈತನ್ಯ, ಗುರು ನಾನಕ್, ಮೀರಾ, ರಸ್ಖಾನ್, ಆಂಡಾಳ್, ಆಳ್ವಾರರು, ಶಂಕರದೇವ್, ಇನ್ನೂ ಲೆಕ್ಕವಿಲ್ಲದಷ್ಟು ಮಂದಿ ಭಕ್ತಿ ಪಂಥಗಳ ಸ್ಥಾಪಕರಾಗಿ ಹೋಗಿದ್ದಾರೆ. ಪ್ರತಿಯೊಬ್ಬರಿಗೂ ಅವರದೇ ಆದ ಭಕ್ತಿಯ ಪರಿಕಲ್ಪನೆ ಇತ್ತು. ಭಕ್ತಿಯ ಪರಿಕಲ್ಪನೆಯೂ ಪಂಥದ ರೂಪದಲ್ಲಿ ಔಪಚಾರಿಕ ರೂಪವನ್ನು ಪಡೆದಿದೆ ಎಂಬುದಂತೂ ಸತ್ಯ. ಎಲ್ಲೋ ಒಂದು ಸಂಪ್ರದಾಯವಾಗಿ, ಎಲ್ಲೋ ಒಂದು ಪದ್ಧತಿಯಾಗಿಬಿಟ್ಟಿದೆ. ಆದರೆ ಪ್ರತಿಯೊಂದು ರೂಪದಲ್ಲೂ ಅದು ಸಂಕೀರ್ಣವಾಗುತ್ತಲೇ ಸಾಗಿತ್ತು.

ಭಕ್ತಿ ಪಂಥಗಳ ಹೊರತಾಗಿ ಬೇರೆಡೆ ಭಕ್ತಿಯ ಬಗ್ಗೆ ಚರ್ಚೆಯಾಗಲಿಲ್ಲವೆಂದಲ್ಲ. ಕಳೆದ 125 ವರ್ಷಗಳಲ್ಲಿಯೂ ಭಕ್ತಿಯ ಮೇಲೆ ಹೊಸ ಕೆಲಸ ನಡೆದಿದೆ. ಹೊಸ ಸ್ವರೂಪದಲ್ಲಿ, ವಿಕಾಸದ ರೂಪದಲ್ಲಿ, ವಿಜ್ಞಾನದ ಉತ್ಸಾಹದಲ್ಲಿ ಮತ್ತು ಆಧುನಿಕ ಜೀವನಶೈಲಿಯಲ್ಲಿಯೂ ಭಕ್ತಿಯ ಪುಸ್ತಕಗಳನ್ನು ಬರೆಯಲಾಗಿದೆ. ಮೋಕ್ಷದ ಬಯಕೆಯ ಸ್ವರೂಪವು ವೇದಗಳು ಮತ್ತು ಉಪನಿಷತ್ತುಗಳಲ್ಲಿದ್ದಂತೆಯೇ ಉಳಿದಿಲ್ಲ. ಮಹರ್ಷಿ ಅರವಿಂದರು ಭಕ್ತಿ ಮತ್ತು ಭವಿಷ್ಯದ ಜೀವನವನ್ನು ಆಂಗ್ಲ ಮೂಲದಲ್ಲಿ ವಿವರಿಸಿದರು.

ಭಕ್ತಿಯ ಅಗತ್ಯವೇನು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಭಕ್ತಿ ಎಂದರೆ ಅಂಶ. ಎಲ್ಲಾ ನಾಟಕವು ಅಂಶ ಮತ್ತು ಅಂಶಿಯದ್ದಾಗಿದೆ. ಯಾರು ಯಾವುದರ ಅಂಶವೋ, ಅದರೊಂದಿಗೆ ಸೇರಿಕೊಳ್ಳಲು ಬಯಸುತ್ತಾರೆ. ಸೂರ್ಯನನ್ನು ಭೇಟಿಯಾಗಲು ಬೆಂಕಿ ಯಾವಾಗಲೂ ಮೇಲಕ್ಕೇರುತ್ತದೆ. ನೀರು ಯಾವಾಗಲೂ ಸಮುದ್ರದ ಕಡೆಗೆ ಹರಿಯುತ್ತದೆ. ನೀವು ಭೂಮಿಯಿಂದ ಮೇಲಕ್ಕೆ ನಿರ್ಧಿಷ್ಟ ಎತ್ತರದವರೆಗೆ ಏನನ್ನಾದರೂ ಎಸೆದರೆ, ಅದು ತನ್ನ ಸಾಂದ್ರತೆಯನ್ನು ಆಧರಿಸಿ ಭೂಮಿಯ ಮೇಲೆಯೇ ಬೀಳುತ್ತದೆ. ಹಾಗೆಯೇ ಬ್ರಹ್ಮದ ಅಂಶವಾಗಿರುವ ಜೀವರು ಸದಾ ಬ್ರಹ್ಮವನ್ನು ಪಡೆಯಲು ಹಾತೊರೆಯುತ್ತಿರುತ್ತಾರೆ. ಬ್ರಹ್ಮ ಮತ್ತು ಮಾಯೆಯು ಪುರುಷ ಮತ್ತು ಪ್ರಕೃತಿಯಾಗುತ್ತಾರೆ. ಅವುಗಳನ್ನು ಚಿತ್ (ಜೀವ) ಮತ್ತು ಅಚಿತ್ (ಪ್ರಕೃತಿ) ಎಂದು ಕರೆಯಲಾಗುತ್ತದೆ. ಪುರುಷ ಮತ್ತು ಪ್ರಕೃತಿ ಯಾವಾಗಲೂ ಒಟ್ಟಿಗೆ ವಾಸಿಸುತ್ತವೆ, ಬೇರ್ಪಡಿಸಲಾಗದವು. ಬ್ರಹ್ಮ ಮತ್ತು ಮಾಯೆಯು ಪ್ರಳಯಕಾಲದಲ್ಲಿ ಸೂಕ್ಷ್ಮ ರೂಪದಲ್ಲಿ ವಾಸಿಸುತ್ತಾರೆ. ಸೃಷ್ಟಿ ಕಾಲದಲ್ಲಿ ಸ್ಥೂಲ ರೂಪದಲ್ಲಿ ಪ್ರಕೃತಿ ಮತ್ತು ಪುರುಷ ಎಂದು ಕರೆಯಲ್ಪಡುತ್ತಾರೆ.

ಮಹರ್ಷಿ ಅರವಿಂದರು ಜೀವನವನ್ನು ಅಭಿವೃದ್ಧಿಯ ಪಯಣವೆಂದು ಪರಿಗಣಿಸಿದ್ದಾರೆ. ಉದಾಹರಣೆಗೆ, ಡಾರ್ವಿನ್ ಕೂಡ ಒಂದು ವಿಶೇಷ ಜಾತಿಯ ಮಂಗಗಳಿಂದ ಮನುಷ್ಯರ ಬೆಳವಣಿಗೆಯನ್ನು ಹೇಳುತ್ತಿದ್ದರು. ಆದರೆ ಅದು ಭಾರತೀಯರಿಗೆ ಅನ್ವಯವಾಗುವುದಿಲ್ಲ ಎಂದು ವೇದವಿಜ್ಞಾನಿಗಳ ಅಭಿಪ್ರಾಯ. ಅರವಿಂದರು ಹೇಳುವಂತೆ ಆರಂಭದಲ್ಲಿ ಕೇವಲ ಪದಾರ್ಥ (ಮ್ಯಾಟರ್) ಇತ್ತು. ಪದಾರ್ಥದಿಂದಲೇ ಪ್ರಾಣವು ಉತ್ಪನ್ನವಾಗಿದೆ. ಪ್ರಾಣದಿಂದ ಮನಸ್ಸು ಬೆಳೆಯಿತು. ಮನಸ್ಸು ದ್ವಂದ್ವಾತ್ಮಕವಾಗಿದೆ ಮತ್ತು ವಿಕಸದ ಕೊನೆಯ ಗಡಿಯೂ ಅಲ್ಲ. ಭವಿಷ್ಯದ ಮಾನವನು ದ್ವಂದ್ವಾತೀತನಾಗಿರುತ್ತಾನೆ. ದೇಹ ಮತ್ತು ಆತ್ಮದ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಇದೀಗ ಅಮರತ್ವದ ಬಯಕೆ ಆತ್ಮದಲ್ಲಿ ಉಳಿದಿದೆ. ’ಮೃತ್ಯೋರ್ಮಾ ಅಮೃತಂಗಮಯ’. ಈಗ ದೇಹದ ಗುಣಗಳು, ಹೆತ್ತವರ ಗುಣಗಳು ಆತ್ಮದಲ್ಲಿ ಉಳಿದಿಲ್ಲ. ಇಂದ್ರಿಯಗಳು ವಸ್ತುಗಳ ಹಿಂದೆ ಓಡುತ್ತವೆ. ಕರ್ಮ ಮತ್ತು ಕರ್ಮಫಲಗಳು ಜೀವನದ ಚಟುವಟಿಕೆಗಳ ಮುಖ್ಯ ಆಧಾರವಾಗಿದೆ. ಎಲ್ಲಾ ಸಾಧ್ಯ ವಿಷಯಗಳು ಸಿದ್ಧವಾಗುತ್ತವೆ ಎಂದು ಅರವಿಂದರು ಅಭಿಪ್ರಾಯಪಟ್ಟಿದ್ದಾರೆ. ಪ್ರಕೃತಿಯಲ್ಲಿ ಸ್ಥಿತಪ್ರಜ್ಞೆಯು ಸಹಜವಾಗುತ್ತದೆ. ಎಲ್ಲಾ ಮಾನವರು ಅತಿಮಾನುಷರಾಗುತ್ತಾರೆ. ಅಂದರೆ, ಅವರು ವಿಜ್ಞಾನಮಯ ಕೋಶದಲ್ಲಿ ಸ್ಥಾಪಿಸಲ್ಪಡುತ್ತಾರೆ. ಇಡೀ ಮಾನವ ಜಾತಿಯು ಮೋಕ್ಷದ ರೂಪದಲ್ಲಿ ಜೀವನವನ್ನು ನಡೆಸುತ್ತದೆ. ಭೂಮಿಯ ಮೇಲಿನ ಸೃಷ್ಟಿ-ಸಾಕ್ಷಿ ವ್ಯವಹಾರವು ಕೊನೆಗೊಳ್ಳುತ್ತದೆ. ಹಾಗಾದರೆ ಯಾರ ಭಕ್ತಿ? ಯಾರ ಮುಂದೆ ಶರಣು? ಭಕ್ತಿ ಯೋಗ, ಕರ್ಮ ಯೋಗ, ಜ್ಞಾನ ಯೋಗ ಯಾರಿಗೆ ಬೇಕು?

ನಮ್ಮ ದೇಹವು ಪಂಚಕೋಶದಿಂದ ಮಾಡಲ್ಪಟ್ಟಿದೆ ಎಂಬುದು ಇಲ್ಲಿ ಸ್ಪಷ್ಟವಾಗಿರಬೇಕು. ಹೊರಗಿನದು ಅನ್ನಮಯ ಕೋಶ ಅಥವಾ ಸ್ಥೂಲ ದೇಹ. ಅದರೊಳಗೆ ಪ್ರಾಣಮಯಕೋಶವಿದೆ. ಇದನ್ನೇ ವಸ್ತು ರೂಪದ ಉದಾಹರಣೆ ಎಂದು ಪರಿಗಣಿಸಿ ಅರವಿಂದರು ತಮ್ಮ ಅಂತರಂಗದ ಪಯಣ ಆರಂಭಿಸುತ್ತಿರುವಂತಿದೆ. ಪದಾರ್ಥ ಭಾವದೊಳಗೆ ಪ್ರಾಣಮಯವಿದೆ ಮತ್ತು ಅದರೊಳಗೆ ಮನೋಮಯ ಕೋಶವಿದೆ. ಅವ್ಯಯ ಪುರುಷದ ಈ ಕೊನೆಯ ಮೂರು ಕಲೆಗಳು – ಮನ, ಪ್ರಾಣ, ವಾಕ್ ಎಂಬವು ಸೃಷ್ಟಿ-ಸಾಕ್ಷಿ ಪ್ರಾಣ ಎಂದು ಕರೆಯಲ್ಪಟ್ಟಿವೆ. ಎಲ್ಲಿಯವರೆಗೆ ಮನಸ್ಸು ಪ್ರಾಣ-ವಾಕ್ಕಿನೊಂದಿಗೆ ಸೇರಿಕೊಂಡಿರುತ್ತದೆಯೋ ಅಲ್ಲಿಯವರೆಗೆ ಸೃಷ್ಟಿಯ ಕಾರ್ಯವು ಮುಂದುವರಿಯುತ್ತದೆ. ಮನೋಮಯ ಕೋಶದ ಮುಂದೆ ವಿಜ್ಞಾನಮಯ ಕೋಶ ಮತ್ತು ಆನಂದಮಯ ಕೋಶಗಳಿವೆ. ಯಾವಾಗ ಮನಸ್ಸು ವಿಜ್ಞಾನ ಮತ್ತು ಆನಂದದೊಂದಿಗೆ ಬೆರೆಯುತ್ತದೆಯೋ ಅದನ್ನು ಮುಕ್ತಿ-ಸಾಕ್ಷಿ ಎನ್ನುತ್ತಾರೆ. ಜಡ ಜಗತ್ತು ಮತ್ತು ಇಂದ್ರಿಯಗಳ ವಿಷಯಗಳಿಂದ ದೂರ ಹೋಗುತ್ತಿರುತ್ತದೆ. ನಿವೃತ್ತಿ ಮಾರ್ಗ ಮಾತ್ರ ಪರಿಣಾಮಕಾರಿಯಾಗಿ ಉಳಿದಿರುತ್ತದೆ. ಈ ಪರಿಸ್ಥಿತಿಯಲ್ಲಿ ಸ್ವಾಭಾವಿಕವಾಗಿ ಬದುಕುವುದು ಭಕ್ತಿ ಮಾರ್ಗವಾಗುತ್ತದೆ ಎನ್ನುತ್ತಾರೆ ಅರವಿಂದರು. ಏನು ನಡೆಯುತ್ತಿದೆಯೋ, ಅದರಲ್ಲಿ ನಾನು ಅಡ್ಡಿಯಾಗಬಾರದು. ವ್ಯಕ್ತಿಯ ಬದಲಿಗೆ ದೇವರ ಇಚ್ಛೆಯು ಕೆಲಸ ಮಾಡುತ್ತದೆ.‌

aurobindo

ಅರವಿಂದರ ತತ್ವಾದರ್ಶವನ್ನು ದೇಶದ ಬಹುತೇಕ ಪಂಗಡಗಳು ಒಪ್ಪಿಕೊಂಡಿಲ್ಲ ಎಂಬುದಂತೂ ಸತ್ಯ. ಅನೇಕ ಪ್ರಶ್ನೆಗಳನ್ನು ಎತ್ತಲಾಯಿತು, ಆದರೆ ಅವುಗಳನ್ನು ಪರಿಹರಿಸಲಾಗಿಲ್ಲ. ಸಮಯ ಬಂದಾಗ ಉತ್ತರ ನೀಡಲಾಗುವುದು ಎಂದು ಹೇಳಲಾಯಿತು. ಜ್ಞಾನ (ವಿತ್ತಿ) ಮತ್ತು ಉಪಾಸನೆ ಸಮಾನಾರ್ಥಕವಾಗಲು ಸಾಧ್ಯವಿಲ್ಲ ಎಂದು ಕೆಲವರು ಹೇಳಿದ್ದಾರೆ. ನಿರ್ಗುಣ ವಿಧ್ಯೆ (ವಿವಿಧಾ ಧ್ಯಾಯತೇತಿ ವಿಧ್ಯಾ) ಎಂದು ಕರೆಯಲ್ಪಡುವ ಆತ್ಮದ ಸತ್ವಾದಿ ತ್ರಿಗುಣಗಳ ಸಾರದಿಂದ ಸ್ಪರ್ಶಿಸದ ನಿರ್ಗುಣ ಭಾವದ ಜ್ಞಾನವು ’ವಿತ್ತಿ’. ಆತ್ಮದ ಸಗುಣ ಸಾಕಾರ ರೂಪದಲ್ಲಿ ಜ್ಞಾನ, ಪರಿಚರ್ಯೆಯಲ್ಲಿ ಸೇವಾ ರೂಪೀ ಕ್ರಿಯೆಯೇ ’ಸಗುಣ ವಿಧ್ಯಾ ಉಪಾಸನೆ’ ಆಗಿದೆ. ಉಪಾಸನೆಯ ಮೂಲಕ ಗುರಿಯಾಗಿಸಿಕೊಂಡ ತತ್ವ ರೂಪೀ ವಸ್ತುವೇ ಧ್ಯೇಯ, ಜ್ಞಾತವ್ಯ ಅಥವಾ ಉಪಾಸ್ಯ ಎಂದಾಗುತ್ತದೆ.

ಉಪಾಸನೆಯ ಕುರಿತು ಶಂಕರಾಚಾರ್ಯರ ಹೇಳಿಕೆ ಏನೆಂದರೆ, ಮೊದಲನೆಯದಾಗಿ, ಮೂಲ ತತ್ವವನ್ನು ಮನಸ್ಸಿನಲ್ಲಿ ಧಾರಣೆ ಮಾಡಿಕೊಳ್ಳುವುದು. ನಂತರ ವಿಷಯದ ಮೇಲೆ ನಿತ್ಯವೂ ಸಮಾನ ರೂಪದಿಂದ ವಿಶ್ವಾಸ ರೂಪೀ ಪ್ರವಾಹದ ಸತತ ಪ್ರವೃತ್ತಿಯನ್ನು ಉಪಾಸನೆ ಎಂದು ಕರೆಯಲಾಗುತ್ತದೆ.

  1. ಪ್ರಾಮಾಣಿಕ ವಿಶ್ವಾಸದ ಅನುಸಾರ ತದನುಕೂಲ ಬುದ್ಧಿಯನ್ನು ವಿಜ್ಞಾನ ಎಂದು ಕರೆಯಲಾಗುತ್ತದೆ.
  2. ಭ್ರಮೆ ಮತ್ತು ಅಜ್ಞಾನವನ್ನು ಸಹ ಸ್ಪರ್ಶಿಸದೆ, ಇನ್ನೊಂದರಲ್ಲಿ ಮತ್ತೊಂದರ ಭಾವನಾ ರೂಪೀ ಬುದ್ಧಿಯೇ ಉಪಾಸನೆ.
  3. ಶ್ರದ್ಧಾ ಸೂತ್ರದ ಸಹಾಯದಿಂದ ಮನಸ್ಸು ಮತ್ತು ಬುದ್ಧಿಯನ್ನು ಪರ ತತ್ವಕ್ಕೆ ಶರಣಾಗಿಸುವುದು ಉಪಾಸನೆ.
  4. ಸಾಧಕರು ತಮ್ಮ ಆತ್ಮದ ಅಂಶಭೂತವನ್ನು (ಮನಸ್ಸು-ಬುದ್ಧಿ) ಮೂಲ ಆತ್ಮಕ್ಕೆ ಭಕ್ತಿಯ ರೂಪದಲ್ಲಿ ಅರ್ಪಿಸಿ ದೇವರ ಭಕ್ತರಾಗುತ್ತಾರೆ.
  5. ದೇವರ ಅಂಶವಾಗಲು ಜ್ಞಾನದಿಂದ ಮಾಡುವ ಯಾವುದೇ ಕಾರ್ಯಗಳನ್ನು ಭಕ್ತಿ ಎಂದು ಕರೆಯಲಾಗುತ್ತದೆ. ಭಕ್ತಿ ಎಂದರೆ ಉಪಾಸನೆಯೇ ಆಗಿದೆ.

ಒಟ್ಟಿನಲ್ಲಿ ಭಕ್ತಿಯೇ ಸಾಧ್ಯವನ್ನು ತಲುಪುವ ದಾರಿ. ತನ್ನಲ್ಲಿ ತಾನು ಸ್ಥಾಪಿತವಾಗಲು, ಶಾಂತಿಯಲ್ಲಿ ಸ್ಥಿರವಾಗಿರಲು ಇರುವ ಒಂದು ಮಾರ್ಗವಾಗಿದೆ. ಮಾರ್ಗಗಳು ಬದಲಾಗಬಹುದು. ಎಲ್ಲಿ ದೇವರ ವಿಶಿಷ್ಟತೆಯನ್ನು ಪ್ರಧಾನವಾಗಿಟ್ಟುಕೊಂಡು ಲೋಕಸಂಗ್ರಹದ ವ್ಯಕ್ತ ಕಾರ್ಮಗಳನ್ನು ಮಾಡಲಾಗುತ್ತದೆಯೋ ಅದು ಭಕ್ತ್ಯಾತ್ಮಕ ಕರ್ಮಯೋಗ. ಇಲ್ಲಿಯೂ ಸಹ ಭಕ್ತ್ಯಾತ್ಮಕ ಕರ್ಮಯೋಗವು ಅತ್ಯುತ್ತಮವೆಂದು ಪರಿಗಣಿಸಲ್ಪಟ್ಟಿದೆ, ಏಕೆಂದರೆ ಜ್ಞಾನ ಮತ್ತು ಕರ್ಮದೊಂದಿಗೆ ದೇವರ ಅನನ್ಯತೆಯ ವಿಕಾಸವೂ ಇದೆ.

ಜ್ಞಾನಾತ್ಮಕ ಭಕ್ತಿಯೋಗದಲ್ಲಿ, ಜ್ಞಾನ ಮತ್ತು ಕರ್ಮಗಳೆರಡೂ ದೇವರ ಅನನ್ಯತೆಯ ಅನುರೂಪವಾಗಿ ಉಳಿಯುತ್ತವೆ, ಆದರೆ ಲೋಕಸಂಗ್ರಹದಲ್ಲಿ ಜ್ಞಾನದ ದೃಷ್ಟಿ ಇರುತ್ತದೆಯೇ ವಿನಃ ಲೋಕಸಂಗ್ರಹದ ದೃಷ್ಟಿಯಲ್ಲ. ಇದೇ ವಟು, ಸಾಧು, ಸಂತರ ಭಿಕ್ಷಾಟನೆಯ ರಹಸ್ಯ. ಎಲ್ಲಿ ಜ್ಞಾನದ ಚರ್ಚೆಯು ಅವ್ಯಕ್ತವನ್ನು ಆಧರಿಸಿದೆ ಮತ್ತು ಲೋಕಸಂಗ್ರಹವು ವ್ಯಕ್ತ ಕರ್ಮಗಳ ಮೇಲೆ ಆಧರಿಸಿದೆಯೋ, ಅದು ಕರ್ಮಪ್ರಧಾನ ಭಕ್ತಿಯೋಗವಾಗಿದೆ. ಎಲ್ಲಿ ಅವ್ಯಕ್ತವಾದ ಜ್ಞಾನ ಮತ್ತು ಕ್ಷರದ ಕರ್ಮದ ಮೇಲೆ (ಲೋಕಸಂಗ್ರಹ) ಸಮಾನ ದೃಷ್ಟಿ ಇದೆಯೋ, ಅದು ಭಕ್ತಿಪ್ರಧಾನ ಭಕ್ತಿಯೋಗ. ಅದರಲ್ಲಿ ಸಮಾನತೆಯ ಅಭಿವೃದ್ಧಿ ಮತ್ತು ಲೋಕಸಂಗ್ರಹದ ಸಂಪೂರ್ಣ ರಕ್ಷಣೆಯೂ ಇದೆ.

(ಅ) ಜ್ಞಾನಾತ್ಮಕ ಭಕ್ತಿಯೋಗ

ಮಹಾತ್ಮಾನಸ್ತು ಮಾಂ ಪಾರ್ಥ ದೈವೀಂ ಪ್ರಕೃತಿಮಾಶ್ರಿತಾಃ |
ಭಜನ್ತ್ಯನನ್ಯ ಮನಸೋ ಜ್ಞಾತ್ವಾ ಭೂತಾದಿಮವ್ಯಯಮ್ || ಭಗವದ್ಗೀತೆ 9.13

ಓ ಕುಂತಿಯ ಪುತ್ರನೇ! ಮಹಾತ್ಮರು ದೈವಿಕ ಸ್ವಭಾವದ ಮೇಲೆ ಅವಲಂಬಿತರಾಗಿದ್ದಾರೆ, ನನ್ನನ್ನು ಎಲ್ಲಾ ಜೀವಿಗಳ ಶಾಶ್ವತ ಕಾರಣ ಮತ್ತು ನಾಶವಾಗದ ಅಕ್ಷರಶಃ ರೂಪವೆಂದು ತಿಳಿದುಕೊಳ್ಳುತ್ತಾರೆ. ಮನಸ್ಸನ್ನು ಹೊಂದಿಸಿ, ನಿರಂತರವಾಗಿ ಭಜಿಸುತ್ತಾರೆ.

(ಬ) ಭಕ್ತ್ಯಾತ್ಮಕ ಭಕ್ತಿಯೋಗ

ಸಮೋಽಹಂ ಸರ್ವಭೂತೇಷು ನ ಮೇ ದ್ವೇಷ್ಯೋಽಸ್ತಿ ನ ಪ್ರಿಯಃ |
ಯೇ ಭಜನ್ತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ || ಭಗವದ್ಗೀತೆ 9.29

ನಾನು ಎಲ್ಲಾ ಜೀವಿಗಳಲ್ಲಿ ಸಮಾನವಾಗಿ ಹರಡಿಕೊಂಡಿದ್ದೇನೆ, ಯಾವುದೂ ನನಗೆ ಅಪ್ರಿಯವೂ ಅಲ್ಲ ಪ್ರಿಯವೂ ಅಲ್ಲ, ಆದರೆ ನನ್ನನ್ನು ಪ್ರೀತಿಯಿಂದ ಪೂಜಿಸುವ ಭಕ್ತರು ನನ್ನಲ್ಲಿದ್ದಾರೆ ಮತ್ತು ನಾನು ಅವರಲ್ಲಿಯೂ ಪ್ರಕಟವಾಗಿದ್ದೇನೆ.

(ಕ) ಕರ್ಮಾತ್ಮಕ ಭಕ್ತಿಯೋಗ

ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್ |
ಯತ್ತಪಸ್ಯಸಿ ಕೌನ್ತೇಯ ತತ್ಕುರುಷ್ವ ಮದರ್ಪಣಮ್ || ಭಗವದ್ಗೀತೆ 9.27

ಹೇ ಅರ್ಜುನ! ನೀನು ಏನು ಕರ್ಮ ಮಾಡುತ್ತೀಯೋ, ಏನು ತಿನ್ನುತ್ತೀಯೋ, ಯಾವ ಹೋಮ ಮಾಡುತ್ತೀಯೋ, ಏನೇನು ದಾನ ಮಾಡುತ್ತೀಯೋ, ಯಾವ್ಯಾವ ತಪಸ್ಸು ಮಾಡುತ್ತೀಯೋ, ಅದೆಲ್ಲವೂ ನನಗೇ ಅರ್ಪಣೆ ಎಂಬ ಭಾವದಲ್ಲಿ ಕೈಗೊಳ್ಳು.

ಗೀತಾ ಜಯಂತಿ

ಪ್ರಾಯೋಗಿಕವಾಗಿ ಹೇಳುವುದಾದರೆ, ಭಕ್ತಿಯು ಇಡೀ ಜೀವನದ ಅರ್ಥಪೂರ್ಣತೆಯಾಗಿದೆ. ಭಕ್ತಿಯಲ್ಲಿ ಪ್ರೇಮವಿದೆ, ರಸವಿದೆ ಆನಂದವಿದೆ, ಮೋಕ್ಷಕ್ಕೆ ಕಾರಣವಾಗುವ ಪರಿಕಲ್ಪನೆ ಇದೆ. ನರನಿಂದ ನಾರಾಯಣನಾಗಲು ಇದು ಸುಲಭವಾದ ಮಾರ್ಗವಾಗಿದೆ. ನಾವು ಶರೀರಜೀವಿಯೋ, ಬುದ್ಧಿಜೀವಿಯೋ, ಮನಸ್ವಿಯೋ ಆಗಿರಬಹುದು. ಆದರೆ ಭಕ್ತಿಯ ಅನುಪಸ್ಥಿತಿಯಲ್ಲಿ ಜೀವನವು ಅಭಾವಗ್ರಸ್ತವೇ ಆಗಿರುತ್ತದೆ. ಏಕೆಂದರೆ ದೇಹ, ಮನಸ್ಸು ಮತ್ತು ಬುದ್ಧಿ ಈ ಮೂರೂ ಬದುಕುವ ಸಾಧನಗಳು. ನಾನು ಸಾಧನವಲ್ಲ. ನಾನು ಆತ್ಮರೂಪಿ – ಅಹಂ ಬ್ರಹ್ಮಾಸ್ಮಿ.’ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ’. ಆದ್ದರಿಂದ ಈ ಸಾಧನಗಳು ನನಗಾಗಿ ಕೆಲಸ ಮಾಡಬೇಕು, ನನ್ನೊಂದಿಗೆ ಐಕ್ಯವಾಗಿರಬೇಕು. ನನ್ನ ಅಂಗವಾಗುವುದರ ಮೂಲಕ, ಭಕ್ತನಾಗುವ ಮೂಲಕ, ನೀವು ಜ್ಞಾನಯುಕ್ತ ಕರ್ಮವನ್ನು ಮಾಡಬೇಕಾಗುತ್ತದೆ. ಆತ್ಮವೇ ಸ್ವಯಂ ಆತ್ಮಜ್ಯೋತಿಯು. ಇಡೀ ಜೀವನವು ಕರ್ಮ ರೂಪೀ ಯಾಗ. ವಿನಿಮಯವನ್ನು ಹೊರತುಪಡಿಸಿ ಬೇರೇನೂ ಇಲ್ಲ. ಯಾರ ನಡುವೆ ವಿನಿಮಯ ನಡೆಯುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಾನು ಮಾತನಾಡುತ್ತಿದ್ದೇನೆ, ನೀವು ಕೇಳುತ್ತಿದ್ದೀರಿ. ಇದು ಆದಾನ-ವಿಸರ್ಗ ಎಂಬ ವಿನಿಮಯ ಮಾತ್ರ. ನಿಮ್ಮ ಜ್ಞಾನಾಗ್ನಿಯಲ್ಲಿ ನನ್ನ ವಾಕ್ ಆಹುತಿಯಾಗುತ್ತಿದೆ. ಇಲ್ಲಿ ‘ನಾನು’ ಯಾರು? ‘ನೀವು’ ಯಾರು? ಎಂಬ ಪ್ರಶ್ನೆ ಉದ್ಭವಿಸಬಹುದು. ನೀವು ಮತ್ತು ನಾನು ಇಬ್ಬರೂ ಸಾಧನವಲ್ಲ. ನನ್ನ ಆತ್ಮವು ನಿಮ್ಮ ಆತ್ಮವನ್ನು, ಈಶ್ವರ ತತ್ವವನ್ನು, ಸಂಬೋಧಿಸಬೇಕು, ಇದೇ ಭಕ್ತಿ. ಇದೇ ದೇವರ ಪೂಜೆ. ಭಕ್ತಿಯು ಒಂದು ಯೋಗ.

ಇದನ್ನೂ ಓದಿ | ಲೈಫ್‌ ಸರ್ಕಲ್‌ ಅಂಕಣ | ಒಳಹೊರಗಿರುವ ಎಲ್ಲರೊಂದಿಗೆ ಮಾತನಾಡುವ ಕಲೆ

ಇದಕ್ಕೆ ವ್ಯತಿರಿಕ್ತವಾಗಿ, ನಾನು ನನ್ನ ಮಾತುಗಳನ್ನು ದೇಹ, ಮನಸ್ಸು ಅಥವಾ ಬುದ್ಧಿಯ ಮೂಲಕ ಹೇಳಿದರೆ, ಲೋಕಸಂಗ್ರಹದ ಭಾವನೆಯು ಕಡಿಮೆಯಾಗುತ್ತಾ ಹೋಗುತ್ತದೆ. ಆತ್ಮದವರೆಗೆ ತಲುಪುವುದಿಲ್ಲ. ಶ್ರದ್ಧೆ, ಸ್ನೇಹ, ವಾತ್ಸಲ್ಯದ ಕೊರತೆಯೂ ಇರುತ್ತದೆ. ಬುದ್ಧಿಯ ಸಂಪ್ರೇಷಣವು ಬುದ್ಧಿಗೆ ತಲುಪುತ್ತದೆ. ಮನಸ್ಸಿನ ಸಂವಹನವು ಮನಸ್ಸನ್ನು ತಲುಪುತ್ತದೆ. ಆತ್ಮದೊಂದಿಗೆ ಯಾವುದೂ ಸಂಪರ್ಕ ಹೊಂದಿಲ್ಲ. ಹಾಗಾದರೆ ನನ್ನ ಪ್ರಾರ್ಥನೆಯು ದೇವರಿಗೆ ಹೇಗೆ ತಲುಪುತ್ತದೆ? ನನ್ನ ಆತ್ಮವೇ ನನ್ನ ದೇವರು. ಅಂದರೆ ಏನು ಹೇಳುತ್ತೇವೆಯೋ ಅದರ ಪರಿಣಾಮವು ಎಲ್ಲಿಯೂ ಆಗುವುದಿಲ್ಲ. ಅಂದರೆ, ಸಂವಹನವನ್ನು ಗುರಿಯಾಗಿಸಿಕೊಂಡ ಉದ್ದೇಶವನ್ನು ಸಾಧಿಸಲಾಗುವುದಿಲ್ಲ. ಪರಿವರ್ತನೆಯ ಕೆಲಸವು ಆತ್ಮದ ಮಟ್ಟದಲ್ಲಿ ಮಾತ್ರ ಸಂಭವಿಸಬಹುದು. ಜಗತ್ತಿನಲ್ಲಿ ಪ್ರತಿ ವರ್ಷ ಸಾವಿರಾರು ಶಾಂತಿ ಸಮ್ಮೇಳನಗಳು ನಡೆಯುತ್ತವೆ, ಜೊತೆಗೆ ಅಶಾಂತಿ ಹೆಚ್ಚುತ್ತಿದೆ. ನಮ್ಮ ಸ್ವಾರ್ಥ, ನಮ್ಮ ಅಹಂಕಾರ, ನಮ್ಮನ್ನು ಯಾರಿಗೂ ಶರಣಾಗಲು ಬಿಡುವುದಿಲ್ಲ. ನನ್ನ ಎದುರಿಗಿರುವ ವ್ಯಕ್ತಿಯನ್ನು ನಾನು ದೇವರೆಂದು ಶ್ರದ್ಧೆಯಿಂದ ಸಂಬೋಧಿಸದಿದ್ದರೆ, ನಾನು ದೇವರ ಆಶೀರ್ವಾದವನ್ನು ಹೇಗೆ ಪಡೆಯುತ್ತೇನೆ? “ನೀನೂ ನಾನಾಗಿರುವೆ, ನಾನೂ ನೀನಾಗಿರುವೆ” – ಇದೇ ಭಕ್ತಿ ಮಾರ್ಗ.

ಭಕ್ತಿಯ ಎರಡನೆಯ ಅತ್ಯುತ್ತಮ ಉದಾಹರಣೆಯೆಂದರೆ ಸೇವೆ. ತನು-ಮನ-ಧನದಿಂದ ಸೇವೆಯಾಗುತ್ತದೆ. ಸೇವೆಯ ಮೊದಲ ಸ್ಥಿತಿಯೆಂದರೆ ಮನಸ್ಸಿನ ದ್ರವಿಸುವಿಕೆ, ಸಹಾನುಭೂತಿಯ ಭಾವನೆ. ಇದರಿಂದ ದುಃಖಿತರ ಅಥವಾ ರೋಗಿಯ ನೋವು ನಿಮ್ಮ ಅನುಭವಕ್ಕೆ ಬರುತ್ತದೆ. ನಮ್ಮ ಅಸ್ತಿತ್ವವನ್ನು ಮರೆಯೋಣ. ನಮ್ಮ ಆತ್ಮವು ಸೇವೆಯಲ್ಲಿ ತೊಡಗಲಿ. ನಾವು ರೋಗಿಯ ದೇಹ ಮತ್ತು ಮನಸ್ಸನ್ನು ಸಹ ನೆನಪಿಸಿಕೊಳ್ಳಬಾರದು. ನಾವು ರೋಗಿಯ ಆತ್ಮವನ್ನು ಗುರಿಯಾಗಿರಿಸಿಕೊಳ್ಳುತ್ತೇವೆ. ಸೇವೆಯು ರೋಗಿಯನ್ನು ಸಂತೋಷಪಡಿಸುತ್ತದೆ. ಅವನ ದೇಹ ಮತ್ತು ಮನಸ್ಸು ಸಂತೋಷವಾಗಿರಬಹುದೇ? ಇವು ನಮಗೆ ಮತ್ತು ರೋಗಿಗೆ ಸಾಧನಗಳಾಗಿವೆ. ಆನಂದವು ಆತ್ಮದ ಗುಣವಾಗಿದೆ. ಆತ್ಮವು ಆನಂದಮಯವಾಗಿರುವಾಗ, ಆ ಆನಂದವು ಮಾತ್ರ ನಿಮ್ಮ ಆತ್ಮವನ್ನು ಸ್ಪರ್ಶಿಸಲು ಸಾಧ್ಯವಾಗುತ್ತದೆ. ಬುದ್ಧಿಯು ಬುದ್ಧಿಯನ್ನು ಮುಟ್ಟುತ್ತದೆ, ಮನಸ್ಸು ಮನಸ್ಸನ್ನು ಮುಟ್ಟುತ್ತದೆ. ಅವುಗಳ ಮೂಲಕ ಪರಿವರ್ತನೆ ಸಾಧ್ಯವಿಲ್ಲ. ರೋಗಿಯ ಆತ್ಮವು ಆನಂದಭರಿತವಾಗಿದ್ದಾಗ, ಅವನ ಆತ್ಮವು ನಮ್ಮ ಆತ್ಮವನ್ನು ಸ್ಪರ್ಶಿಸಲು ಸಾಧ್ಯವಾಗುತ್ತದೆ. ನಂತರ ನೀವು ರೋಗಿಯಲ್ಲಿ ನಿಮ್ಮ ಚಿತ್ರವನ್ನು ನೋಡುತ್ತೀರಿ. ಇಬ್ಬರೂ ಒಂದಾಗುತ್ತಾರೆ. ಕೃಷ್ಣನು ಗೀತೆಯಲ್ಲಿ ‘ಮಮೈವಾಂಶೋ ಜೀವಲೋಕೇ’ ಎಂದು ಹೇಳಿದ್ದಾನೆ; ಎರಡೂ ಕಡೆ ಅವನೊಬ್ಬನೇ ಇದ್ದಾನೆ. ನಾವು ನರ ರೂಪದಲ್ಲಿ ನಾರಾಯಣನ ಸೇವೆ ಮಾಡಿದ್ದೇವೆ. ಆತ್ಮವು ಆತ್ಮದ ಸೇವೆ ಮಾಡಿದೆ. ಕೃಷ್ಣನು ಕೃಷ್ಣನ ಸೇವೆ ಮಾಡಿದನು. ನನ್ನ ಕೃಷ್ಣ ಸ್ವರೂಪದ ಜ್ಞಾನ ನನಗೆ ಇರಲಿಲ್ಲ, ಸೇವೆಯು ಆ ಜ್ಞಾನವನ್ನು ಉದಯಿಸಿತು. ಪರಹಿತಕೆ ಸರಿಸಮ ಧರ್ಮವಿಲ್ಲವೋ ಅಣ್ಣ. ನಾವು ಇತರರ ಕಲ್ಯಾಣಕ್ಕಾಗಿ ಯಾವುದೇ ಕೆಲಸವನ್ನು ಪೂರ್ಣ ಉದ್ದೇಶದಿಂದ ಮಾಡಿದಾಗ, ನಾವು ನಮ್ಮ ಕಲ್ಯಾಣವನ್ನೇ ಮಾಡುತ್ತೇವೆ ಎಂದು ಸಹ ಹೇಳಲಾಗಿದೆ. ಇದು ಭಕ್ತಿಯ ಫಲ. ಇದು ‘ವಸುಧೈವ ಕುಟುಂಬಕಂ’ ಮಾರ್ಗ.‌

ಇದನ್ನೂ ಓದಿ | ಲೈಫ್‌ ಸರ್ಕಲ್‌ ಅಂಕಣ | ಧ್ಯಾನದ ಮೂಲಕ ಜ್ಞಾನದ ಬೆಳಕು

ಪ್ರತಿಯೊಂದು ಜೀವಿಯೂ ತನ್ನದೇ ಆದ ಗುರಿಯೊಂದಿಗೆ ಭೂಮಿಗೆ ಇಳಿಯುತ್ತದೆ. ಆತ್ಮದ ಕ್ರಿಯೆಗಳಿಗೆ ಸಾಕ್ಷಿಯಾಗುವ ದೇವರು ಕೂಡ ಅವನೊಂದಿಗೆ ಇರುತ್ತಾನೆ. ಇವೆರಡರ ನಡುವೆ ಮಾಯೆ ಅಥವಾ ಪ್ರಕೃತಿಯ ಮುಸುಕು ಇದೆ. ಇದನ್ನು ಜೀವಿಗಳ ಹೊದಿಕೆ ಎಂದು ಕರೆಯಲಾಗುತ್ತದೆ. ಪಂಚಕೋಶದ ಮಧ್ಯಭಾಗದಲ್ಲಿ ಜೀವ ಮತ್ತು ಈಶ್ವರ ಇಬ್ಬರೂ ನೆಲೆಸಿದ್ದಾರೆ. ಮನೋಮಯ ಕೋಶವು ಈಶ್ವರೀಯ ಇಚ್ಛೆಗಳ ಕೇಂದ್ರವಾಗಿದೆ. ಈ ಇಚ್ಛೆಗಳಲ್ಲಿ ಪ್ರಾರಬ್ಧವಿದೆ, ತಪಸ್ಸಿನ ಮೂಲಕ ಮಾತ್ರ ಅದನ್ನು ಬದಲಾಯಿಸಬಹುದು. ಆನಂದ, ವಿಜ್ಞಾನದೊಂದಿಗೆ ಇದು ಹೃದಯದೊಳಗೆ ಸ್ಥಾಪಿತವಾದ ಮನಸ್ಸು. ಹೃದಯವು ಸೂಕ್ಷ್ಮ ದೇಹದ ಮನಸ್ಸು. ಇದು ಬ್ರಹ್ಮ-ವಿಷ್ಣು-ಶಿವ/ಇಂದ್ರರ ಸಂಯೋಜಿತ ರೂಪವಾಗಿದೆ. ಇದರ ಹೊರತಾಗಿ, ಸ್ಥೂಲ ಶರೀರದ ಒಂದು ಭಾಗವಾದ ಇಂದ್ರಿಯ ಮನಸ್ಸು ಇದೆ. ಇದರಲ್ಲಿ ಹುಟ್ಟಿದ ಬಯಕೆಗಳು ಪ್ರಪಂಚದ ವಿಷಯಗಳೊಂದಿಗೆ ಯೋಗವನ್ನು ಹೊಂದಿವೆ. ಯಾವಾಗ ಮನಸ್ಸಿನ ಬಗ್ಗೆ ಚರ್ಚೆಯಾಗುತ್ತದೋ ಆಗ ಮೂರೂ ಮನಸ್ಸುಗಳನ್ನು ನೋಡಬೇಕಾಗುತ್ತದೆ. ಮೂರೂ ಮನಸ್ಸುಗಳು ಸೌಮ್ಯ ಹಾಗೂ ಚಂಚಲ. ಇವುಗಳಲ್ಲಿ ಮೊದಲನೆಯದು ಜೀವರದ್ದು – ಇಂದ್ರಿಯ ಮನ ಅಥವಾ ಬಾಹ್ಯ ಮನಸ್ಸು ಎಂದು ಕರೆಯಲ್ಪಟ್ಟಿದೆ. ಅಂತರ್ಮನವು ಪ್ರಾಣಗಳ ಕ್ಷೇತ್ರ. ಅದು ದಿವ್ಯ ಮನ ಎನ್ನಲ್ಪಟ್ಟಿದೆ. ಸೂಕ್ಷ್ಮ ಮನಸ್ಸು ಅಥವಾ ಅಂತರತಮ ಮನವು ಕೃಷ್ಣನ (ದೇವರ) ಮನಸ್ಸು. ಇದನ್ನು ಅವ್ಯಯ ಮನ ಎಂದು ಕರೆಯಲಾಗುತ್ತದೆ. ಧ್ಯಾನದ ಅಭ್ಯಾಸವೆಂದರೆ ಸ್ಥೂಲದಿಂದ ಸೂಕ್ಷ್ಮವನ್ನು ದಾಟುತ್ತಾ ಅವ್ಯಯ ಮನದೊಂದಿಗೆ ಸಾಕ್ಷಾತ್ ಆಗುವುದು. ಇದೇ ಮೋಕ್ಷದ ಹೇತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

Mother Sentiment: ವ್ಯಾಸಂಗಕ್ಕಾಗಿ ಊರು ತೊರೆದು ಪಟ್ಟಣದ ಹಾಸ್ಟೆಲ್‌ ಸೇರುತ್ತಿರುವ ಮಗಳಿಗೆ ತಾಯಿ ಕರುಳಿನ ಭಾವುಕ ಪತ್ರ ಇದು…

ತಾಯಿ ಹೃದಯದ ಅಳಲು (Mother Sentiment) ನಿನಗಿನ್ನೂ ಗೊತ್ತಿಲ್ಲ. ನನ್ನ ಮನದಲ್ಲಿ ಹುದುಗಿಸಿರುವ ಪ್ರೀತಿ, ಮಮತೆ, ಅಕ್ಕರೆ, ಭಯ, ಆತಂಕಗಳ ಕುರಿತು ಇಲ್ಲಿ ಬರೆದಿರುವೆ. ಹಾಗೆಂದು ಇದು ನನ್ನೊಬ್ಬಳ ಅಳಲು ಅಲ್ಲ. ನನ್ನಂತೆ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಬೇರೆ ಊರುಗಳಲ್ಲಿ ಓದಲು, ನೌಕರಿ ಮಾಡಲು ಕಳುಹಿಸಿರುವ ಲಕ್ಷಾಂತರ ತಾಯಂದಿರ ಮನದ ಮಾತು…..ಇತ್ತೀಚೆಗೆ ಬಾಲಕಿಯರ ಮೇಲೆ ನಡೆಯುತ್ತಿರುವ ಅಮಾನುಷ ಕೃತ್ಯಗಳ ಹಿನ್ನೆಲೆಯಲ್ಲಿ ತಾಯಿಯೊಬ್ಬಳು ತನ್ನ ಮಗಳಿಗೆ ಬರೆದ ಸುದೀರ್ಘ ಪತ್ರದ ಸಾರ ಇಲ್ಲಿದೆ.

VISTARANEWS.COM


on

Mother Sentiment
Koo

| ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ

ಪ್ರೀತಿಯ ಮಗಳೇ,
ಅರೆ! ನಿನ್ನೆ ತಾನೆ ನನ್ನನ್ನು ಕಳಿಸಲು ಬಂದ ಅಮ್ಮ (Mother Sentiment) ಇಷ್ಟು ಬೇಗ ಪತ್ರ ಬರೆಯಲು ಕಾರಣವೇನು ಎಂದು ಗಾಬರಿಯಾಗಬೇಡ. ತಾಯಿ ಹೃದಯದ ಅಳಲು ನಿನಗಿನ್ನೂ ಗೊತ್ತಿಲ್ಲ. ನನ್ನ ಮನದಲ್ಲಿ ಹುದುಗಿಸಿರುವ ಪ್ರೀತಿ, ಮಮತೆ, ಅಕ್ಕರೆ, ಭಯ, ಆತಂಕಗಳ ಕುರಿತು ಇಲ್ಲಿ ಬರೆದಿರುವೆ. ಹಾಗೆಂದು ಇದು ನನ್ನೊಬ್ಬಳ ಅಳಲು ಅಲ್ಲ. ನನ್ನಂತೆ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಬೇರೆ ಊರುಗಳಲ್ಲಿ ಓದಲು, ನೌಕರಿ ಮಾಡಲು ಕಳುಹಿಸಿರುವ ಲಕ್ಷಾಂತರ ತಾಯಂದಿರ ಮನದ ಮಾತು.
ನಮ್ಮ ಮನೆಯಂಗಳದಲ್ಲಿ ಚಂದದ ಪ್ರಾಕು ಧರಿಸಿ, ಎರಡು ಪುಟ್ಟ ಜುಟ್ಟು ಹಾಕಿಕೊಂಡು, ಮುಖಕ್ಕೆ ಪೌಡರ್ ಸವರಿ, ಹಣೆಗೆ ಕಾಡಿಗೆಯ ಬೊಟ್ಟುಇಟ್ಟು ಕಾಲಿನ ಗೆಜ್ಜೆಯ ಸದ್ದು ಮಾಡುತ್ತಾ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮನೆಯೆಲ್ಲ ನಡೆಯುತ್ತಿದ್ದ, ಅರಳು ಹುರಿದಂತೆ ಮುದ್ದಾಗಿ ಬಾಯಿ ತುಂಬಾ ಮಾತನಾಡುತ್ತಿದ್ದ ಪುಟ್ಟ ಕಂದ ನೀನು, ಇಂದು ಕಾಲೇಜಿಗೆ ಹೋಗುವಷ್ಟು ದೊಡ್ಡವಳಾಗಿರುವೆ. ಅತ್ಯುತ್ತಮ ಅಂಕ ಗಳಿಸಿ ಒಳ್ಳೆಯ ಕಾಲೇಜಿನಲ್ಲಿ ಸೀಟು ಗಿಟ್ಟಿಸಿ ಉನ್ನತ ಶಿಕ್ಷಣ (Higher Education) ಪಡೆಯುವ ಆಸೆಯಲ್ಲಿ ನಾವು ಮನೆಯವರನ್ನೆಲ್ಲಾ ತೊರೆದು ಹಾಸ್ಟೆಲಿನಲ್ಲಿ ವಾಸವಾಗಲು ಹೋಗುತ್ತಿರುವೆ.

ತುಸುವೇ ಸಂಭ್ರಮ ನಮ್ಮೆಲ್ಲರಲ್ಲಿ ಮನೆ ಮಾಡಿದ್ದರೂ ಹೆಚ್ಚು ಆತಂಕ ಮನದಲ್ಲಿ ಇದೆ. ಕಾಣದ ಊರು, ಅರಿಯದ ಜನ, ಬದಲಾದ ವಾತಾವರಣ ಇದೆಲ್ಲಕ್ಕೂ ನೀನು ಅದು ಹೇಗೋ ಹೊಂದಿಕೊಂಡು ಬಿಡುವೆ ಎಂಬ ಭರವಸೆ ನನಗಿದೆ… ಆದರೆ ನನ್ನ ಭಯ ಅದಲ್ಲ, ಅದರ ಅರಿವಾಗಲು ನೀನು ನಾನಲ್ಲ.
‘ಅಯ್ಯೋ ಅಮ್ಮ! ಮತ್ತದೇ ರಾಗ ಆಡಬೇಡ ನೀನು’ ಎಂಬ ನಿನ್ನ ಗದರಿಕೆಯ ನಡುವೆಯೂ ಮನ ಆತಂಕದ ಗೂಡಾಗಿದೆ. ನಿನ್ನನ್ನು ಕಳಿಸಲು ಬಂದಾಗ ಹೇಳದ ಮಾತುಗಳನು ಬರೆಯಲೇಬೇಕಾದ, ಬರೆದು ತಿಳಿಸಲೇಬೇಕಾದ ಅನಿವಾರ್ಯತೆ ನನ್ನದು.

ಪ್ರೀತಿಯ ಕೂಸು ನೀನು

ನಮ್ಮ ಮನೆಯ ಪ್ರೀತಿಯ ಕೂಸು ನೀನು. ಅಜ್ಜ ಅಜ್ಜಿಯ ಚಿನ್ನುವಾಗಿ, ಅಪ್ಪನ ಮುದ್ದಿನ ಮಗಳಾಗಿ, ಅಕ್ಕ-ಅಣ್ಣಂದಿರ ನೆಚ್ಚಿನ ತಂಗಿಯಾಗಿ ನನ್ನ ಕಣ್ಮಣಿಯಾಗಿ ಸುರಕ್ಷಿತವಾದ ಗುಬ್ಬಚ್ಚಿ ಗೂಡಿನಂತಹ ಸಂಸಾರದಲ್ಲಿ ಬೆಳೆದಿರುವ ನಿನಗೆ ಹೊರಗಿನ ನಿಷ್ಕುರ ಪ್ರಪಂಚದ ಅರಿವಿಲ್ಲ. ಹಾಗೆಂದು ಇಡೀ ಜಗತ್ತೇ ಕೆಟ್ಟದು ಎಂದಲ್ಲ. ನನಗೆ ಎಲ್ಲವೂ ಗೊತ್ತಿದೆ ಎಂಬ ಹದಿಹರೆಯದ ಹುಮ್ಮಸ್ಸು, ಸುಣ್ಣದ ತಿಳಿ ನೀರನ್ನು ಕೂಡ ಹಾಲೆಂದು ನಂಬುವ ನಿನ್ನ ಬೋಳೆ ಸ್ವಭಾವ, ಸ್ನೇಹಕ್ಕಿಂತ ಮಿಗಿಲಾದದ್ದು ಬೇರೆ ಯಾವುದೂ ಇಲ್ಲ ಎಂಬ ಸ್ಲೋಗನ್‌ಗಳು, ಪ್ರೀತಿ ಮಾಡಬಾರದು, ಮಾಡಿದರೆ ಜಗಕ್ಕೆ ಹೆದರಬಾರದು ಎಂಬ ಧ್ಯೇಯ ವಾಕ್ಯಗಳು, ಜೀವನ ಇರೋದೇ ಎಂಜಾಯ್ ಮಾಡೋಕೆ, ಈ ಹದಿಹರೆಯದ ವಯಸ್ಸು ಮತ್ತೆ ಬರುತ್ತಾ ಎಂಬ ಮಾತುಗಳು ಹೆಚ್ಚು ರುಚಿಸುವ ಸಮಯ ಇದು.

ಯಾವುದೂ ತಪ್ಪಲ್ಲ ನಿಜ

ಯಾವುದೂ ತಪ್ಪಲ್ಲ ನಿಜ. ಆದರೆ ಅದೆಲ್ಲವೂ ಒಂದು ಮಿತಿಯಲ್ಲಿದ್ದಾಗ ಮಾತ್ರ. ಜೀವನದಲ್ಲಿ ಎಂಜಾಯ್ಮೆಂಟ್ ಇರಬೇಕೆ ಹೊರತು ಎಂಜಾಯ್ಮೆಂಟ್ ಒಂದೇ ಜೀವನದ ಮುಖ್ಯ ಉದ್ದೇಶ ಅಲ್ಲ. ನಮ್ಮ ಬದುಕನ್ನು ವ್ಯವಸ್ಥಿತವಾಗಿ ನಡೆಸಲು ಬೇಕಾಗುವ ವಿದ್ಯೆ, ಆರ್ಥಿಕ ಸ್ವಾವಲಂಬನೆಯನ್ನು ಕೊಡುವ ನೌಕರಿ, ಸಾಮಾಜಿಕ ವಲಯದಲ್ಲಿ ನಿನ್ನದೇ ಆದ ಒಂದು ಒಳ್ಳೆಯ ಗುರುತಿಸುವಿಕೆ ಇವು ಉನ್ನತ ಶಿಕ್ಷಣದ ಮುಖ್ಯ ಧ್ಯೇಯಗಳು.

ಈಗಾಗಲೇ ಬದುಕಿನಲ್ಲಿ ಒಂದು ಮಹತ್ತರ ಘಟ್ಟವನ್ನು ತಲುಪಿರುವ ಸೋದರ ಸಂಬಂಧಿಗಳು ನಾವಂತೂ ಎಂಜಾಯ್ ಮಾಡಲಿಲ್ಲ ನೀವಾದರೂ ಮಾಡಿ ಎಂದು ಲಘುವಾಗಿ ನಿಮಗೆ ಹೇಳಿರುವುದನ್ನು ನೀನು ಗಂಭೀರವಾಗಿ ತೆಗೆದುಕೊಳ್ಳಬೇಡ…. ಓಟದ ನಡುವೆ ಅಲ್ಲೊಂದು ಇಲ್ಲೊಂದು ಅಡೆತಡೆಗಳು ಇದ್ದರೆ ತೊಂದರೆ ಇಲ್ಲ, ಆದರೆ ಆಡೆ ತಡೆಗಳನ್ನೇ ದಾಟುತ್ತ ಮುಂದೆ ಸಾಗುವ ಹೊತ್ತಿಗೆ ನಿನ್ನ ಸಮಯ ವ್ಯರ್ಥವಾಗಬಹುದು, ನಿನ್ನ ಗುರಿ ನಿನ್ನ ಕೈತಪ್ಪಿ ಹೋಗಬಹುದು ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೋ.

ನಿನ್ನ ಕಾಲೇಜಿನಲ್ಲಿ, ಹಾಸ್ಟೆಲ್‌ನಲ್ಲಿ ಎಲ್ಲರೊಂದಿಗೆ ಒಳ್ಳೆಯ ಸ್ನೇಹವನ್ನು ಹೊಂದು ಆದರೆ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ. ಸದಾ ಒಂದು ಅಂತರವನ್ನು ಕಾಯ್ದುಕೋ. ಕಹಿ ಎನಿಸಿದರೂ ಜೀವನದ ಸತ್ಯ ಇದುವೇ. ಕೆಲ ಸ್ನೇಹ ಸಂಬಂಧಗಳು ಜೊತೆಗಿರುವವರೆಗೆ ಮಾತ್ರ.. ಒಂದೇ ಊರಿನವರಾದರೆ ಆಗಾಗ ಪರಸ್ಪರ ಭೇಟಿಯಾಗಿ ಕಷ್ಟ ಸುಖವನ್ನಾದರೂ ಹಂಚಿಕೊಳ್ಳುತ್ತಾರೆ, ಆದರೆ ದೂರದಲ್ಲಿರುವ ಸ್ನೇಹಿತರು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಭೇಟಿಯಾಗುತ್ತಾರೆ ಎಂಬುದನ್ನು ನೀನೇ ನೋಡುತ್ತಿರುವೆಯಲ್ಲ. ಹಾಗೆಂದು ಆ ಸ್ನೇಹದ ಕುರಿತು ತಿರಸ್ಕಾರ ಬೇಡ, ಒಳ್ಳೆಯ ಸ್ನೇಹಗಳು ಒಂದು ಮಧುರ ಅನುಭೂತಿಯಂತೆ ನಿನ್ನೊಂದಿಗೆ ಉಳಿದು ಹೋಗಬೇಕು ನಿಜ. ದುಸ್ವಪ್ನಗಳಂತಲ್ಲ.

ನಮ್ಮ ಜೊತೆಗೆ ಬರುವುದು ನಮ್ಮವರು ಮಾತ್ರ

ಜೀವಿತದ ಕೊನೆಯವರೆಗೂ ನಮ್ಮ ಜೊತೆಗೆ ಬರುವುದು ನಮ್ಮ ಅಪ್ಪ, ಅಮ್ಮ, ಅಣ್ಣ-ತಮ್ಮ, ಅಕ್ಕ- ತಂಗಿ ಮುಂತಾದ ರಕ್ತ ಸಂಬಂಧಗಳು ಮಾತ್ರ. ನಮ್ಮ ಕಷ್ಟ ಸುಖಕ್ಕೆ ನೋವು ನಲಿವಿಗೆ ಜೊತೆಯಾಗುವವರು ನಮ್ಮವರೇ. ಕೆಲ ಸ್ನೇಹಗಳು ಇದಕ್ಕೆ ಅಪವಾದ ಇರಬಹುದು. ನೀನು ಮನೆಯವರನ್ನೆಲ್ಲಾ ಬಿಟ್ಟು ಓದಲು ಹೋಗಿರುವ ಮುಖ್ಯ ಉದ್ದೇಶವನ್ನು ಸದಾ ನೆನಪಿನಲ್ಲಿಡು. ಓದು ಮತ್ತು ಅದಕ್ಕೆ ಸಂಬಂಧಪಟ್ಟ ಕೆಲಸಗಳಲ್ಲಿ ನಿನ್ನನ್ನು ನೀನು ತೊಡಗಿಸಿಕೋ. ಊಟದಲ್ಲಿ ಉಪ್ಪಿನಕಾಯಿ ಇರುವಂತೆ ತಮಾಷೆ, ಜೋಕುಗಳು, ಕಾಲೆಳೆಯುವುದು ಹಿತಮಿತವಾಗಿರಲಿ…. ಆದರೆ ಅದುವೇ ಮುಖ್ಯವಾಗದಿರಲಿ.

ಹಾಸ್ಟೆಲ್ ನಲ್ಲಿ ಕೊಡುವ ಆಹಾರಕ್ಕೆ ನಿನ್ನನ್ನು ನೀನು ಒಗ್ಗಿಸಿಕೊಳ್ಳುವುದನ್ನು ರೂಢಿ ಮಾಡಿಕೋ. ಬೇಕು ಬೇಕೆಂದಾಗ ಊಟ ಮಾಡಲು ಆಗುವುದಿಲ್ಲ. ಆದ್ದರಿಂದ ನಿಗದಿತ ಸಮಯದಲ್ಲಿ ಆಹಾರ ಸೇವಿಸು. ಅಲ್ಲಿ ಕೊಡುವ ಹಸಿ ತರಕಾರಿ ಸೊಪ್ಪುಗಳನ್ನು, ಹಣ್ಣುಗಳನ್ನು ಸೇವಿಸು. ಸಾಧ್ಯವಾದಷ್ಟು ಹೊರಗಿನ ಆಹಾರವನ್ನು ಅವಾಯ್ಡ್ ಮಾಡು. ಹಾಸ್ಟೆಲ್ನ ನಿಯಮಾವಳಿಗಳನ್ನು ಎಂದೂ ಮೀರದಿರು. ಅತಿಯಾಗಿ ರುಚಿಯ ಕಡೆ ಗಮನ ಕೊಡದೆ ಹಿತಮಿತವಾದ ಆಹಾರವನ್ನು ಸೇವಿಸು.

ಆರ್ಥಿಕ ಶಿಸ್ತು ಇರಲಿ

ಖರ್ಚಿನ ವಿಷಯದಲ್ಲಿ ಸ್ವಲ್ಪ ಹುಷಾರಾಗಿರು. ಯಾವುದೇ ಕಾರಣಕ್ಕೂ ಹಣದ ದುರ್ಬಳಕೆ ಬೇಡ. ಅದೆಷ್ಟೇ ಒಳ್ಳೆಯ ಸ್ನೇಹಿತರಾಗಿದ್ದರೂ ಕೂಡ ಯಾರೊಂದಿಗೂ ನಿನ್ನ ಖಾತೆಗೆ ಸಂಬಂಧಪಟ್ಟ ಮಾಹಿತಿಗಳನ್ನು ಮತ್ತು ಎಟಿಎಂನ ಪಾಸ್ವರ್ಡ್ ಅನ್ನು ಹಂಚಿಕೊಳ್ಳಬೇಡ. ನೀನು ಓದುತ್ತಿರುವೆಡೆಯಲ್ಲಾಗಲಿ, ವಾಸಿಸುತ್ತಿರುವ ಸ್ಥಳದಲ್ಲಾಗಲಿ ಪ್ರತಿ ಬಾರಿಯೂ ನಿನ್ನ ಮಾತೇ ನಡೆಯಬೇಕು ಎಂಬ ಹಟ ಬೇಡ. ಬೇರೆಯವರ ಮಾತಿಗೂ ಬೆಲೆ ಕೊಡು. ಬಹಳಷ್ಟು ಸಲ ನಿಮ್ಮ ಹಾಸ್ಟೆಲ್ ವಾರ್ಡನ್ ಗಳು ನಿಮಗೆ ಹೇಳುವ ಮಾತುಗಳು ಒರಟೆನಿಸಬಹುದು, ಬೇಧ ತೋರುತ್ತಾರೆ ಎಂದು ಕೂಡ ಅನಿಸಬಹುದು. ಆದರೆ ಅವರು ಕೂಡ ನಿಮ್ಮ ಒಳಿತಿಗಾಗಿ ಮತ್ತು ಸಂಸ್ಥೆಯ ಏಳಿಗೆಗಾಗಿ ದುಡಿಯುತ್ತಿರುವವರು. ನಿಮ್ಮ ಎಲ್ಲ ಆಗುಹೋಗುಗಳಿಗೆ ಜವಾಬ್ದಾರರು ಎಂಬುದು ಸದಾ ನೆನಪಿರಲಿ.

ಇನ್ನು ಮುಖ್ಯವಾಗಿ ನಮ್ಮ ಬದುಕಿನಲ್ಲಿ ಬಾಲ್ಯ, ಯೌವನ, ವೃದ್ಧಾಪ್ಯ ಹೇಗೆ ಒಂದರ ನಂತರ ಒಂದು ಕ್ರಮವಾಗಿ ಬರುತ್ತವೆಯೋ ಹಾಗೆಯೇ ವಿದ್ಯಾರ್ಥಿ ಜೀವನ, ಉದ್ಯೋಗ, ಸಂಗಾತಿ ಮತ್ತು ವಿವಾಹಗಳು ಕೂಡ ಅದೇ ಕ್ರಮದಲ್ಲಿ ಬರಬೇಕು. ಇದರಲ್ಲಿ ಮಧ್ಯದ ಎರಡು ವಿಷಯಗಳು ಹಿಂದು ಮುಂದಾದರೆ ಉಳಿದ ಎರಡು ವಿಷಯಗಳನ್ನು ನಿರೀಕ್ಷಿತ ಮಟ್ಟದಲ್ಲಿ ಸಾಧಿಸಲು ಆಗುವುದಿಲ್ಲ. ಆದ್ದರಿಂದ ಈಗ ಓದುವ ವಯಸ್ಸಿನಲ್ಲಿ ಕೇವಲ ನಿನ್ನ ಓದಿನೆಡೆ ಮಾತ್ರ ನಿನ್ನ ಗಮನವಿರಲಿ. ಹರೆಯದ ಆಕರ್ಷಣೆಗೆ ಒಳಗಾಗಿ ವಿರುದ್ಧ ಲಿಂಗಿಯ ಜೊತೆಗಿನ ಸ್ನೇಹಕ್ಕೆ ಪ್ರೀತಿ ಪ್ರೇಮದ ಬಣ್ಣ ಹಚ್ಚುವುದು ಬೇಡ. ನಿನ್ನ ತಂದೆ ತಾಯಿಯರಿಗೂ ನಿನ್ನ ಸ್ನೇಹಿತರನ್ನು ಪರಿಚಯಿಸಿ ಧೈರ್ಯವಾಗಿ ಮಾತನಾಡಬಲ್ಲಷ್ಟು ನಿಷ್ಕಲ್ಮಶ ಸ್ನೇಹವನ್ನು ಹೊಂದಿದ್ದರೆ ಸಾಕು. ನಮ್ಮ ಹಿರಿಯರು ಇದ್ದಂತೆ ನಾವಿಲ್ಲ ನಿಜ, ಆದರೆ ನಮ್ಮ ಹಿರಿಯರು ಹಾಕಿಕೊಟ್ಟ ದಾರಿ ನಮಗಿದ್ದೆ ಇದೆ.

ಕ್ಷಣಿಕ ಆಸೆಗೆ ಬಲಿಯಾಗಬೇಡ

ಮತ್ತೊಂದು ವಿಷಯ ಹೇಳಿದರೆ ನಿನಗೆ ಬೇಸರವಾಗಬಹುದು. ಇತ್ತೀಚೆಗೆ ಕೇಳಿ ಬರುತ್ತಿರುವ ಹೆಣ್ಣು ಮಕ್ಕಳ ಮೇಲಿನ ಬರ್ಬರ ಕೃತ್ಯಗಳು ಹೆತ್ತವರನ್ನು ಆತಂಕಕ್ಕೆ ಈಡು ಮಾಡಿವೆ. ಕ್ಷಣಿಕ ಆಕರ್ಷಣೆ ಬದುಕನ್ನು ನಾಶ ಮಾಡಬಹುದು. ಒಂದು ತಪ್ಪು ಹೆಜ್ಜೆ ಜೀವನವಿಡೀ ಪಶ್ಚಾತಾಪಕ್ಕೆ ದಾರಿ ಮಾಡಿಕೊಡುವುದು ಬೇಡ ಎಂಬ ಎಚ್ಚರ ನಿನಗಿದ್ದರೆ ಸಾಕು.
ಬದುಕಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಕಳೆದ ಒಂದುವರೆ ತಿಂಗಳಿನಲ್ಲಿ ನಡೆದ ಹೆಣ್ಣು ಮಕ್ಕಳ ಸಾಲು ಸಾಲು ಹತ್ಯೆಗಳನ್ನು ನೋಡಿ ಮನಸ್ಸಿಗೆ ಅನ್ನಿಸಿದ್ದು ಹೀಗೆ. ಅರಿಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ಗುಂಗಿಗೆ ಬಿದ್ದು, ತಂದೆ ತಾಯಿ ಬುದ್ಧಿ ಹೇಳಿದಾಗ ವಿದ್ಯಾರ್ಥಿ ದೆಸೆಯಲ್ಲಿ ತಾನು ತಪ್ಪು ಮಾಡುತ್ತಿರುವೆ ಎಂಬ ಅರಿವು ಉಂಟಾಗಿ ಪ್ರೀತಿಯಿಂದ ಹಿಂದೆ ಸರಿದ ತಪ್ಪಿಗೆ ಒಂದೊಮ್ಮೆ ತನ್ನನ್ನು ಪ್ರೀತಿಸಿದ ಹುಡುಗನೇ ತನ್ನನ್ನು ಕೊಚ್ಚಿ ಕೊಂದರೆ ಆಕೆಯನ್ನು ಇಷ್ಟು ವರ್ಷಗಳ ಕಾಲ ಲಾಲಿಸಿ ಪಾಲಿಸಿದ ತಂದೆ ತಾಯಿಗಳ ಪಾಡೇನು ಎಂದು ನೆನೆದಾಗ ಮೈಯಲ್ಲಿ ನಡುಕ ಉಂಟಾಗುತ್ತದೆ. ನಿಮ್ಮ ಬದುಕು ಕೇವಲ ನಿಮ್ಮದಲ್ಲ. ನಿಮ್ಮ ಬದುಕಿನ ಆಗುಹೋಗುಗಳ ಸುತ್ತ ನಿಮ್ಮ ಕುಟುಂಬ ಮತ್ತು ಸಮಾಜ ನಿಮ್ಮೊಂದಿಗೆ ಜೋಡಿಸಲ್ಪಟ್ಟಿ ರುತ್ತದೆ. ಆದ್ದರಿಂದ ನಿನ್ನ ಹುಷಾರಿನಲ್ಲಿ ನೀನಿರು ಎಂದು ಮಾತ್ರ ಹೇಳುತ್ತೇನೆ. ಸಮಾಜಕ್ಕೆ ಒಳ್ಳೆಯ ಉದಾಹರಣೆಯಾಗದಿದ್ದರೂ ಪರವಾಗಿಲ್ಲ ಆದರೆ ಕೆಟ್ಟ ಉದಾಹರಣೆಯಾಗಬಾರದು ಎಂಬ ಅರಿವಿನ ಪ್ರಜ್ಞೆ ನಿನ್ನಲ್ಲಿ ಸದಾ ಜಾಗೃತವಾಗಿರಲಿ.

ಅಷ್ಟಾಗಿಯೂ ನಿನಗೆ ಏನೇ ತೊಂದರೆಯಾದರೂ ಮುಕ್ತವಾಗಿ ಹೇಳಿಕೋ…. ಒಂದು ಸುಳ್ಳನ್ನು ಮುಚ್ಚಲು ನೂರಾರು ಸುಳ್ಳುಗಳನ್ನು ಹೇಳುವುದರ ಬದಲು ಒಂದು ಸತ್ಯವನ್ನು ಹೇಳಿ ಬೈಸಿಕೊಂಡರೂ ಪರವಾಗಿಲ್ಲ ಮನಸ್ಸು ನಿರಾಳವಾಗಿರುತ್ತದೆ ಎಂಬುದನ್ನು ಅರಿತುಕೋ.

ಬದುಕಿನ ಯಾವುದೇ ಹಂತದಲ್ಲಿಯಾದರೂ ನಮ್ಮ ತೋಳುಗಳ ಆಸರೆ ನಿನಗೆ ಇದ್ದೇ ಇರುತ್ತದೆ… ಆದರೆ ಆ ತೋಳುಗಳಲ್ಲಿ ಕಸುವು ತುಂಬುವ ಕೆಲಸ ಮಾತ್ರ ನಿನ್ನದು. ಅದು ನಿನ್ನ ನಡತೆಯಲ್ಲಿ, ವಿದ್ಯಾಭ್ಯಾಸದಲ್ಲಿ ಮತ್ತು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಸದಾ ಇರಲೇಬೇಕು. ನಿನ್ನ ಕುರಿತಾಗಿ ನನ್ನ ಆಸೆ ಆಕಾಂಕ್ಷೆಗಳಿಗೆ ಮಿತಿ ಇಲ್ಲ,ಭಯ ಆತಂಕಗಳು ನಿರಾಧಾರವಾದುದು ಎಂದು ನಿನಗೆ ಅನಿಸಿದರೆ ಅದು ನಿನ್ನ ತಪ್ಪಲ್ಲ. ನನ್ನಂತೆ ನೀನೂ ಕೂಡ ತಾಯಾಗಿ ನಿನ್ನ ಮಕ್ಕಳನ್ನು ಬೆಳೆಸುವಾಗ ನಿನಗೆ ಇದರ ಅನುಭವ ಖಂಡಿತವಾಗಿಯೂ ಆಗುತ್ತದೆ. ಪತ್ರ ತುಸು ದೊಡ್ಡದಾಯಿತು ಆದರೆ ಓದದೆ ಇರಬೇಡ. ನಿನ್ನ ಹಿತದಲ್ಲಿಯೇ ನಮ್ಮ ಕುಟುಂಬದ ಒಳಿತಿದೆ.

ಇದನ್ನೂ ಓದಿ: AR Rahman: ಪ್ರಶಸ್ತಿಗಳೆಲ್ಲ ಚಿನ್ನವೆಂದು ಭಾವಿಸಿ ಎಆರ್ ರೆಹಮಾನ್ ತಾಯಿ ಮಾಡಿದ್ದೇನು?

Continue Reading

ಅಂಕಣ

ರಾಜಮಾರ್ಗ ಅಂಕಣ: ಸಾವನ್ನೇ ಆಹ್ವಾನಿಸಿದ ಸುಂದರಿ ಝೋರಯಾ ಟರ್ ಬ್ರೀಕ್

ರಾಜಮಾರ್ಗ ಅಂಕಣ: ಝೋರಯಾ ಮಾನಸಿಕವಾಗಿ ಧೃಡವಾಗಿ ನಿಂತು ತಾನು ತನ್ನ ಮನೆಯ ಲಿವಿಂಗ್ ರೂಮಿನಲ್ಲಿ ಸೋಫಾದ ಮೇಲೆ ಕುಳಿತು ತನ್ನ ಮುದ್ದಿನ ಬೆಕ್ಕುಗಳನ್ನು ನೇವರಿಸುತ್ತಾ ಸಾವನ್ನು ಸ್ವಾಗತ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ತನ್ನ ದೇಹವನ್ನು ಪಂಚಭೂತಗಳಲ್ಲಿ ಲೀನ ಮಾಡಿ. ಅಂತ್ಯಸಂಸ್ಕಾರಕ್ಕೆ ಜನ ಸೇರಿಸುವ ಅಗತ್ಯ ಇಲ್ಲ. ನನ್ನ ಚಿತಾ ಭಸ್ಮವನ್ನು ಕಾಡಿನೊಳಗೆ ಹರಡಿ ಸಾಕು ಅಂದಿದ್ದಾರೆ.

VISTARANEWS.COM


on

ರಾಜಮಾರ್ಗ ಅಂಕಣ euthanasia zoraya ter beek
Koo

ನೆದರ್‌ಲ್ಯಾಂಡ್ ದೇಶದಲ್ಲೊಂದು ಹೃದಯ ವಿದ್ರಾವಕ ಘಟನೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಆಕೆ ಲೋಕೋತ್ತರ ಸುಂದರಿ. ವಯಸ್ಸು ಇನ್ನೂ 28. ಆಕೆ ಉತ್ಸಾಹದ ಖಣಿ. ಮೇಲ್ನೋಟಕ್ಕೆ 100% ಫಿಟ್ ಮತ್ತು ಆರೋಗ್ಯಪೂರ್ಣ ಆಗಿದ್ದಾರೆ. ಆದರೆ ಆಕೆ ತನ್ನ ದೇಶದ ಕಾನೂನಿನ ನೆರವು ಪಡೆದುಕೊಡು ತನ್ನ ಜೀವನಕ್ಕೊಂದು ಪೂರ್ಣವಿರಾಮ ಇಡಲು ನಿರ್ಧಾರ ಮಾಡಿದ್ದಾರೆ. ಅದಕ್ಕೆ ಅವರು ಆರಿಸಿಕೊಂಡ ವಿಧಾನ ಅಂದರೆ ದಯಾಮರಣ (euthanasia)! ಅಂದರೆ ತನ್ನ ಇಷ್ಟದ ಪ್ರಕಾರ, ಇಷ್ಟದ ಜಾಗದಲ್ಲಿ, ಇಷ್ಟದ ಜನರ ಮುಂದೆ, ಇಷ್ಟದ ರೀತಿಯಲ್ಲಿ ಸಾಯುವುದು..!

ದಯಾಮರಣ – ನೆದರ್‌ಲ್ಯಾಂಡ್‌ನಲ್ಲಿ ಕಾನೂನು ಸಮ್ಮತ

ನೆದರ್‌ಲ್ಯಾಂಡ್ (Netherlands) ದೇಶವು ದಯಾಮರಣಕ್ಕೆ ಕಾನಾನು ಸಮ್ಮತಿ ನೀಡಿ 22 ವರ್ಷಗಳೇ ಸಂದಿವೆ! ಅಸಹನೀಯ ನೋವು, ಗುಣಪಡಿಸಲು ಆಗದ ಕಾಯಿಲೆ, ಮಾನಸಿಕ ಅಸ್ವಾಸ್ಥ್ಯ ಸೇರಿದಂತೆ ಆರು ಕಾರಣಕ್ಕೆ ಸರಕಾರ ದಯಾಮರಣಕ್ಕೆ ಅನುಮತಿಯನ್ನು ನೀಡುತ್ತದೆ. 2022ರಲ್ಲಿ ಆ ದೇಶದಲ್ಲಿ ಕಾನೂನಿನ ನೆರವು ಪಡೆದು 8730 ಮಂದಿ ದಯಾಮರಣದ ಮೂಲಕ ತಮ್ಮ ಬದುಕನ್ನು ಕೊನೆಗೊಳಿಸಿದ್ದಾರೆ! ಇದು ಕಳೆದ ವರ್ಷಕ್ಕಿಂತ 14% ಅಧಿಕ ಎಂದು ಅಲ್ಲಿನ ಸರಕಾರ ಹೇಳಿದೆ.

ಝೋರಯಾಗೆ ಮಾನಸಿಕ ಕಾಯಿಲೆ

ಈ ಚಂದದ ಹುಡುಗಿ ಝೊರೆಯಾ (Zoraya Ter Beek) ಬಳಲುತ್ತಿರುವುದು ಖಿನ್ನತೆ, ಉದ್ವೇಗ ಆಕೆಯ ಬಾಲ್ಯದ ಒಡನಾಡಿಗಳು. ಇತ್ತೀಚೆಗೆ ಆಟಿಸಂ ಕೂಡ ಸೇರಿಕೊಂಡು ಆಕೆಗೆ ಬದುಕೇ ಅಸಹನೀಯವಾಗುತ್ತು. ಯಾವುದೆಲ್ಲ ಔಷಧಿ, ಚಿಕಿತ್ಸಾ ವಿಜ್ಞಾನ ಮತ್ತು ಕೌನ್ಸೆಲಿಂಗ್ ನಡೆದರೂ ಅವಳಿಗೆ ಅದ್ಯಾವುದೂ ರಿಲೀಫ್ ಕೊಡಲಿಲ್ಲ. ವೈದ್ಯರೂ ʼಇನ್ನು ಸಾಧ್ಯವಿಲ್ಲ’ ಎಂದು ಹೇಳಿದ ನಂತರ ಆಕೆ ಆರಿಸಿಕೊಂಡದ್ದು ಸಾವನ್ನು! ಆತ್ಮಹತ್ಯೆ ಮಾಡಿ ಸಾಯಲು ಮನಸಿಲ್ಲ ಎಂದಾಕೆ ಗಟ್ಟಿಯಾದ ನಿರ್ಧಾರ ತೆಗೆದುಕೊಂಡ ನಂತರ ಆಕೆಗೆ ಉಳಿದದ್ದು ಒಂದೇ ಪರಿಹಾರ – ಅದು ದಯಾಮರಣ! ಆಕೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದು 2020ರಲ್ಲಿ. ಅದೀಗ ಪರ ವಿರೋಧ ಚರ್ಚೆಯಾಗಿ ಈಗ ತೀರ್ಪು ಆಕೆಯ ಪರವಾಗಿ ಬಂದಿದೆ. ಅಂದರೆ ದಯಾಮರಣಕ್ಕೆ ಅನುಮತಿ ದೊರೆತಿದೆ.

ರಾಜಮಾರ್ಗ ಅಂಕಣ euthanasia zoraya ter beek

ದಯಾಮರಣ ಹೇಗೆ?

ಅರ್ಜಿದಾರರು ಇಷ್ಟಪಡುವ ಸ್ಥಳದಲ್ಲಿ, ಇಷ್ಟಪಡುವ ಸನ್ನಿವೇಶವನ್ನು ಕ್ರಿಯೇಟ್ ಮಾಡಿ ನಿಗದಿ ಪಡಿಸಿದ ದಿನದಂದು ವೈದ್ಯರು ಆಕೆಗೆ ಒಂದು ಅರಿವಳಿಕೆಯ ಇಂಜೆಕ್ಷನ್ ನೀಡುತ್ತಾರೆ. ಆಕೆ ಕೋಮಾ ತಲುಪುವುದನ್ನು ಕಾಯುವ ವೈದ್ಯರು ನಂತರ ಹೃದಯವು ನಿಧಾನವಾಗಿ ನಿಲ್ಲುವ ಔಷಧಿ ಕೊಡುತ್ತಾರೆ. ಒಂದಿಷ್ಟೂ ನೋವು ಪಡದೆ ಅರ್ಜಿದಾರರು ನಿಧಾನವಾಗಿ ಶಾಶ್ವತ ನಿದ್ದೆಗೆ ಜಾರುತ್ತಾರೆ. ಆಗ ದಯಾಮರಣ ಸಮಿತಿಯು ಅವರನ್ನು ಪರಿಶೀಲನೆ ಮಾಡಿ ಸಾವು ಸಂಭವಿಸಿದೆ ಎಂದು ಘೋಷಣೆ ಮಾಡಿದಲ್ಲಿಗೆ ಪ್ರಕ್ರಿಯೆ ಪೂರ್ತಿ ಆಗುತ್ತದೆ.

ಸಾವನ್ನು ಸ್ವಾಗತಿಸಲು ಮಾನಸಿಕ ಸಿದ್ಧತೆ

ಝೋರಯಾ ಮಾನಸಿಕವಾಗಿ ಧೃಡವಾಗಿ ನಿಂತು ತಾನು ತನ್ನ ಮನೆಯ ಲಿವಿಂಗ್ ರೂಮಿನಲ್ಲಿ ಸೋಫಾದ ಮೇಲೆ ಕುಳಿತು ತನ್ನ ಮುದ್ದಿನ ಬೆಕ್ಕುಗಳನ್ನು ನೇವರಿಸುತ್ತಾ ಸಾವನ್ನು ಸ್ವಾಗತ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ತನ್ನ ದೇಹವನ್ನು ಪಂಚಭೂತಗಳಲ್ಲಿ ಲೀನ ಮಾಡಿ. ಅಂತ್ಯಸಂಸ್ಕಾರಕ್ಕೆ ಜನ ಸೇರಿಸುವ ಅಗತ್ಯ ಇಲ್ಲ. ನನ್ನ ಚಿತಾ ಭಸ್ಮವನ್ನು ಕಾಡಿನೊಳಗೆ ಹರಡಿ ಸಾಕು ಅಂದಿದ್ದಾರೆ.

`ನನಗೆ ಪಾಪಪ್ರಜ್ಞೆ ಕಾಡುತ್ತಿಲ್ಲ. ನನಗಾಗಿ ಯಾರೂ ಕಣ್ಣೀರು ಸುರಿಸುವ ಅಗತ್ಯ ಇಲ್ಲ. ಇದು ನಾನೇ ಆರಿಸಿಕೊಂಡ ಸಾವು. ಹಾಗಾಗಿ ನನಗೆ ಯಾವ ವಿಷಾದವೂ ಇಲ್ಲ’ ಎಂದಾಕೆ ನಗುನಗುತ್ತಾ ಹೇಳುವಾಗ ಯಾರ ಮನಸ್ಸಾದರೂ ಕರಗದೆ ಇರದು!

ಹೋಗಿ ಬಾ ಝೊರೆಯಾ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅಳಿಸಲಾಗದ ನೋವು ಬಿಟ್ಟು ಹೋದ ಮಂಗಳೂರು ವಿಮಾನ ದುರಂತ!

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ

ಧವಳ ಧಾರಿಣಿ ಅಂಕಣ (Dhavall Dharini): ಗೌತಮ ಬುದ್ಧನೇ ನೇರವಾಗಿ ಬೋಧಿಸಿದ ತತ್ತ್ವಗಳನ್ನು ಗಮನಿಸಿದಾಗ ಆತನ ತತ್ತ್ವಗಳು ಭಾರತೀಯ ದರ್ಶನ ಶಾಸ್ತ್ರದ ಮುನ್ನುಡಿಯಾಗಿವೆ ಎನ್ನಬಹುದು. ಇಂದು ಬುದ್ಧ ಪೂರ್ಣಿಮಾ (Buddha Purnima) ಹಿನ್ನೆಲೆಯಲ್ಲಿ ಆತನ ಚಿಂತನೆಗಳ ಬಗ್ಗೆ ಒಂದು ಅವಲೋಕನ.

VISTARANEWS.COM


on

dhavala dharini column buddha ಧವಳ ಧಾರಿಣಿ
Koo
dhavala dharini by Narayana yaji

­ಧವಳ ಧಾರಿಣಿ ಅಂಕಣ: ಭಾರತದ ಇತಿಹಾಸದಲ್ಲಿ ಗೌತಮ ಬುದ್ಧ (Gautama Buddha) ಮಹತ್ವದ ಸ್ಥಾನ ಪಡೆಯುವುದು ಆತ ಹೊಸ ಧರ್ಮವನ್ನು ಸ್ಥಾಪಿಸಿದ್ದಾನೆ ಎನ್ನುವುದಕ್ಕೆ ಅಲ್ಲ. ಬೌದ್ಧ ಧರ್ಮವನ್ನು (buddhism) ನೇರವಾಗಿ ಬುದ್ಧನೇ ಸ್ಥಾಪಿಸಲಿಲ್ಲ. ಆತನ ನಿರ್ವಾಣದ ನಂತರದ ಇನ್ನೂರು ವರ್ಷಗಳ ನಂತರ ಆತನ ಶಿಷ್ಯರು ಒಂದೆಡೆ ಸೇರಿ ಬುಧ್ದನ ತತ್ತ್ವಕ್ಕೆ ಒಂದು ಧಾರ್ಮಿಕ ಸ್ವರೂಪವನ್ನು ಕೊಟ್ಟರು. ಶಾಕ್ಯಮುನಿ ಗೌತಮನಿಗೆ ಲೋಕದ ಜನತೆ ಬದುಕುತ್ತಿರುವ ವಿಧಾನದಲ್ಲಿ ಬದಲಾವಣೆ ತರಬೇಕಾಗಿತ್ತು. ವರ್ಣವ್ಯವಸ್ಥೆಯ ಮೂಲಕ ಅಸ್ತಿತ್ವಕ್ಕೆ ಬಂದ ಬ್ರಾಹ್ಮಣಿಕೆಯೆನ್ನುವುದು ಅದಾಗ ಜಾತಿಯಾಗಿ ಬದಲಾವಣೆಯಾಗಿತ್ತು. ಆದರೂ ಅದು ಅಷ್ಟು ಗಟ್ಟಿಯಾಗಿ ಅನುಷ್ಟಾನಕ್ಕೆ ಬಂದಿರಲಿಲ್ಲ. ಬ್ರಾಹ್ಮಣರ ಪಾರಮ್ಯವೆನ್ನುವುದು ಧಾರ್ಮಿಕ ರಂಗದಲ್ಲಿ ಇತ್ತು. ಆತನ ಜನನದ ಕಾಲಘಟ್ಟವಾದ ಸುಮಾರು ಕ್ರಿ. ಪೂ. 623 ಶತಮಾನದಲ್ಲಿ ಭಾರತ ಧಾರ್ಮಿಕವಾಗಿ ಹಲವು ಪಲ್ಲಟಗಳನ್ನು ಅನುಭವಿಸಿತ್ತು. ಸನಾತನ ಧರ್ಮದ ಆಚರಣೆಯಲ್ಲಿ ಸಮಗ್ರವಾದ ದಿಕ್ಕುಗಳನ್ನು ತೋರಿಸುವವರು ಇರಲಿಲ್ಲ. ಧಾರ್ಮಿಕ ನಾಯಕತ್ವವೆನ್ನುವದು ತತ್ವಜ್ಞಾನಿಗಳು ತಮಗೆ ತೋಚಿದ ದಿಕ್ಕಿನಲ್ಲಿ ಅರ್ಥೈಸಿಕೊಂಡು ಅದನ್ನೇ ಬೋಧಿಸುತ್ತಿದ್ದರು. ಈ ಕಾಲಘಟ್ಟದಲ್ಲಿಯೇ ತಂತ್ರಶಾಸ್ತ್ರ, ಅಘೋರಿಗಳು, ಕಾಪಾಲಿಕರು ಹೀಗೆ ಸಾಧನೆಗಳಿಗೆ ಸಾತ್ವಿಕಮಾರ್ಗಗಳ ಜೊತೆಗೆ ಹಟಯೋಗವೂ ಸೇರಿಹೋಗಿತ್ತು. ರಾಜರುಗಳು ಯಾವ ಹಾದಿಯನ್ನು ಹಿಡಿಯುತ್ತಿದ್ದಾರೋ ಅದೇ ಹಾದಿಯನ್ನು ಜನಸಾಮಾನ್ಯರು ನಡೆದುಕೊಳ್ಳುತ್ತಿದ್ದರು.

ಇಂತಹ ಹೊತ್ತಿನಲ್ಲಿ ಪ್ರವೇಶ ಮಾಡಿದ ಬುದ್ಧನ ಉಪದೇಶಗಳು ಸನಾತನ ಧರ್ಮಕ್ಕೇ ಹೊಸ ವ್ಯಾಖ್ಯಾನವನ್ನು ಕೊಟ್ಟವು. ಹಾಗಂತ ಆತ ಭಾರತೀಯ ದರ್ಶನ ಶಾಸ್ತ್ರಕ್ಕೆ ವಿಲೋಮವಾದದ್ದನ್ನು ತನ್ನು ಬೋಧನೆಯಲ್ಲಿ ಹೇಳಲಿಲ್ಲ. ಬುದ್ಧ ಅರ್ಥವಾಗಬೇಕಾದರೆ ಭಾರತೀಯ ತತ್ತ್ವಶಾಸ್ತ್ರ ಅರ್ಥವಾಗಬೇಕು. ಸ್ವರ್ಗಕಾಮಕ್ಕಾಗಿ ಯಜ್ಞ ಯಾಗಾದಿಗಳು ಎಂದು ಸಾರುತ್ತಿದ ಪುರಾಣಗಳ ನಡುವೆ ವೇದಾಂತದ ಪರಮ ಸತ್ಯವನ್ನು ಆತನ ಉಪದೇಶಗಳಲ್ಲಿ ಗಮನಿಸಬಹುದಾಗಿದೆ. “ವೇದಗಳಲ್ಲಿ ಅಡಗಿದ್ದ ಸತ್ಯಗಳನ್ನು ಹೊರತಂದು ಜಗತ್ತಿಗೆಲ್ಲ ಘಂಟಾಘೋಷವಾಗಿ ಸಾರಿದ ವಿಶಾಲಹೃದಯಿಯಾಗಿ ಬುದ್ದ ಕಾಣಿಸಿಸಿಕೊಳ್ಳುತ್ತಾನೆ ಎಂದು ವಿವೇಕಾನಂದರು ಹೇಳುತ್ತಾರೆ. “ಕಿಸಾಗೌತಮಿಗೆ ಆಕೆಯ ಮಗನ ಸಾವಿನ ನೋವನ್ನೂ ಮರೆಯಿಸಿ ಭವಚಕ್ರಗಳ ಬಂಧನದ ಜಗತ್ತಿನ ಮಾಯೆಯನ್ನು ಹೋಗಲಾಡಿಸಿದ ಬುದ್ಧ ಬಿಡಿಸಿದಷ್ಟೂ ಬಿಡಿಸಲಾಗದ ಒಗಟು”. ಸನಾತನ ಧರ್ಮದ ಸಾರವೇ ಬುದ್ಧನ ಉಪದೇಶವೆನ್ನಬಹುದಾಗಿದೆ. ಅದಕ್ಕೇ ಸ್ವಾಮಿ ವಿವೇಕಾನಂದರು ತಮ್ಮ ಕೃತಿಶ್ರೇಣಿಯಲ್ಲಿ “ಭಾರತದಲ್ಲಿ ಬೌದ್ಧಧರ್ಮವು ನಾಶವಾಗಲಿಲ್ಲ, ಉಪನಿಷತ್ತುಗಳಲ್ಲಿ ಹುಟ್ಟಿದೆ. ಅದು ನವಯುಗದ ಹಿಂದೂ ಧರ್ಮವಾಯಿತು” ಎನ್ನುತ್ತಾರೆ.

ಜೀವನದ ನಶ್ವರತೆಯೆನ್ನುವುದು ಬುದ್ಧನ ಬದುಕಿನಲ್ಲಿ ಬಂದ ಮೊದಲ ತಿರುವು. ಪ್ರಸಿದ್ಧವಾದ ಆತನ ವಾಕ್ಯ “ಆಸೆಯೇ ದುಃಖಕ್ಕೆ ಕಾರಣ” ಎನ್ನುವುದು ನೋಡಲು ಸರಳವಾಗಿ ಕಂಡರೂ ಈ ಸತ್ಯವನ್ನು ಮನಗಾಣುವಲ್ಲಿ ಬುದ್ಧ ಸುಮಾರು ಆರುವರ್ಷಗಳ ಕಾಲ ಹುಡುಕಾಡಿದ್ದಾನೆ. ತನ್ನ ಕುಲಗುರು ಅಸಿತದೇವಲನಿಂದ ಹಿಡಿದು ಆಲಾರಾ ಕಲಮ್, ಉದ್ಧತ ರಾಮಪುತ್ತ ಮುಂತಾದ ಅನೇಕರ ಹತ್ತಿರ ಈ ವಿಷಯವನ್ನು ಚರ್ಚಿಸಿದ್ದಾನೆ. ಹಿಮಾಲಯದ ತಪ್ಪಲಿನ ಕೆಲ ಸನ್ಯಾಸಿಗಳು ಪ್ರಾಪಂಚಿಕ ಸುಖ ಮತ್ತು ದುಃಖಗಳ ಕಾರಣವನ್ನು ಅರಿತು ವೇದೋಪನಿಷತ್ತುಗಳ ನಿಜವಾದ ಅರ್ಥಗಳನ್ನು ತಿಳಿದು ಅದನ್ನೇ ಬೊಧಿಸುತ್ತಿದ್ದರು. ಅವರೆಲ್ಲರೂ ಈತನಿಗೆ ತಮ್ಮಲ್ಲಿದ ವಿದ್ಯೆಯನ್ನು ಧಾರೆ ಎರೆದರೂ ಅವೆಲ್ಲವೂ ಬದುಕಿನ ಪರಮ ಸತ್ಯವನ್ನು ಸಾಧಿಸುವತ್ತ ಪ್ರಯೋಜನಕ್ಕೆ ಬಾರದವುಗಳು ಎನ್ನುವುದು ಅರಿವಾಯಿತು. ಉದ್ಧಕ ರಾಪಪುತ್ತನ ಹತ್ತಿರ ಸಮಾಧಿಗೆ ಹೋಗುವ ತಂತ್ರವನ್ನು ಕೇವಲ ಹದಿನೈದನೇ ದಿನಗಳಲ್ಲಿ ಕಲಿತ. ಆಗ ಅವನಿಗೆ ಅರಿವಾಗಿದ್ದು ಎಚ್ಚರಕ್ಕೂ ಮತ್ತು ಸಮಾಧಿಗೂ ಇರುವ ಸ್ಥಿತಿಯೆಂದರೆ ಗ್ರಹಿಕೆ ಮತ್ತು ಗ್ರಹಿಕೆಯಲ್ಲದ ಸ್ಥಿತಿ ಎನ್ನುವುದು. ಆದರೆ ಎಚ್ಚರಾದ ಮೇಲೆ ಮತ್ತೆ ಈ ಲೋಕದ ಅವಸ್ಥೆಗಳಲ್ಲೇ ಇರುತ್ತೇವೆ ಎನ್ನುವುದು ಅರಿತಾಗ ಸಮಾಧಿಯೆನ್ನುವುದು ಸ್ವಪ್ನ ಅಥವಾ ಸುಷುಪ್ತಿಯ ಅವಸ್ಥೆಗಳಲ್ಲಿರುವ ಸ್ಥಿತಿಯೇ ಹೊರತೂ ಬೇರೆನೂ ಅಲ್ಲವೆಂದು ಅರಿವಿಗೆ ಬಂತು. ಪರಿಪೂರ್ಣ ಜ್ಞಾನವೆನ್ನುವುದನ್ನು ಸಾಧಿಸಿದ ವ್ಯಕ್ತಿಗೆ ಮತ್ತೆ ಲೌಕಿಕ ಬಾಧಿಸಬಾರದು. ಹಾಗಾಗಿ ಯಾವುದು ಸ್ಥಾಯಿ ಸ್ವರೂಪವಲ್ಲವೋ ಅವೆಲ್ಲವೂ ಅವಿದ್ಯೆ ಎನ್ನುವ ತೀರ್ಮಾನಕ್ಕೆ ಬಂದವ ಗಯಾಕ್ಕೆ ಬಂದು ಅಲ್ಲಿನ ಸ್ಮಶಾನದಲ್ಲಿರುವ ಬೋಧಿವೃಕ್ಷದ ಕೆಳಗೆ ಧ್ಯಾನಮಾಡಲು ತೊಡಗಿದ. ಜ್ಞಾನವೆನ್ನುವದು ಪ್ರಾಪಂಚಿಕ ವಸ್ತುಗಳಿಂದ ವಿಮುಖನಾಗುವದಲ್ಲ, ನಮ್ಮ ಉಸಿರು, ಹಕ್ಕಿಯ ಹಾಡು, ಎಲೆ, ಸೂರ್ಯನ ಕಿರಣ ಇವೆಲ್ಲವೂ ಧ್ಯಾನಕ್ಕೆ ಸಾಧನವಾಗಬಹುದೆಂದು ಆತನಿಗೆ ಅನಿಸಿತು. ಒಂದು ಧೂಳಿನ ಕಣದಿಂದಲೇ ಸಮಗ್ರವಾಗಿ ಬ್ರಹ್ಮಾಂಡದ ಲಕ್ಷಣವನ್ನು ಅರಿಯಬಹುದೆನ್ನುವ ವಿಷಯ ಹೊಳೆಯಿತು. ಜ್ಞಾನೋದಯವೆನ್ನುವದು ವಾಸ್ತವ ಪ್ರಪಂಚದಲ್ಲಿದೆಯೇ ಹೊರತು ಕಾಣದ ಆತ್ಮ ಅಥವಾ ಬ್ರಹ್ಮದ ವಿಷಯದಲ್ಲಿ ಇಲ್ಲ. ಆತ್ಮ ಪ್ರತ್ಯೇಕವೆನ್ನುವ ಭಾವನೆಯನ್ನು ಮೀರಿ ಪ್ರಕೃತಿಯ ಪ್ರತೀ ವಸ್ತುವಿನಲ್ಲಿ ಸೌಂದರ್ಯವಿದೆಯೆನ್ನುವದನ್ನು ಗೌತಮನ ಅರಿತುಕೊಂಡ. ಪ್ರಪಂಚವೇ ಪರಸ್ಪರ ಅವಲಂಬಿತ ಮತ್ತು ಸ್ವಯಂ ಸ್ವಭಾವವುಳ್ಳ ಸತ್ಯವೆನ್ನುವ ಸೂತ್ರ ಆತನಿಗೆ ಅರಿವಾಯಿತು. ಜ್ಞಾನವೆನ್ನುವದು ಒಳಗಣ್ಣು ಎನ್ನುವ ಭ್ರಮೆಗಿಂತ ಹೊರಗಣ್ಣಿಗೆ ಕಾಣುವ ಪ್ರಪಂಚದ ಸಮಸ್ಥವಸ್ತುವಿನಲ್ಲಿ ಇದೆ ಎನ್ನುವದು ಸ್ಪಷ್ಟವಾಯಿತು.

buddha Purnima 2023

ಬುದ್ಧನ ಬೋಧನೆಗಳು ಮೊದಲನೆಯದಾಗಿ ಜೀವನವು ದುಃಖದಿಂದ ಕೂಡಿದೆ. ಜನನ, ಮರಣ, ರೋಗ, ವೃದ್ಧಾಪ್ಯ, ವಿರಹ, ಮನಸ್ಸು ಮತ್ತು ದೇಹಗಳ ವ್ಯವಸ್ಥೆಯೇ ದುಃಖಮಯ, ಎರಡನೆಯದಾಗಿ ಈ ದುಃಖಕ್ಕೆ ಕಾರಣವಿದೆ. ಮನುಷ್ಯ ತನ್ನ ಮೂಲರೂಪವನ್ನು ಅರಿಯದಿರುವದು, ಈ ಅಜ್ಞಾನಗಳಿಂದಾಗಿಯೇ ಆತ ದೇಹ-ಮನಸ್ಸುಗಳಿಗೆ ಅಂಟಿಕೊಳ್ಳುತ್ತಾನೆ. ಈ ಕಾರ್ಯಕಾರಣ ಸಂಬಂಧದಿಂದಾಗಿ ಕರ್ಮಚಕ್ರಗಳ ಮೂಲಕ ಪುನರ್ಜನದ ಭವಚಕ್ರಗಳಿಗೆ ಸಿಕ್ಕುಬೀಳುತ್ತಾನೆ, ಈ ಯಾತನೆಗಳಿಗೆ ಕಾರಣ ಆಯಾ ವ್ಯಕ್ತಿಯೇ ಹೊರತೂ ವಿಧಿ, ಆಕಸ್ಮಿಕ ಇತ್ಯಾದಿಗಳೆಲ್ಲ ಸುಳ್ಳು. ಮೂರನೆಯದು ಈ ಭವಚಕ್ರಗಳಿಂದ ಬಿಡುಗಡೆ. ಬುದ್ಧ ಇದು ಅವಿದ್ಯೆ, ಅಜ್ಞಾನಾವಸ್ಥೆಯೆನುತ್ತಾನೆ. ಲೋಕದಲ್ಲಿನ ಎಲ್ಲಾ ಅವಸ್ಥೆಗಳಿಗೂ ಇದೇ ಕಾರಣ, ಇದೇ “ಪ್ರತ್ಯೀತ್ಯಸಮುತ್ಪಾದ” ಸಿದ್ಧಾಂತ. ನಾಲ್ಕನೆಯದೇ ಈ ಭವಚಕ್ರಗಳಿಂದ ಬಿಡುಗಡೆಯ ಮಾರ್ಗವೆಂದರೆ ಈ ದುಃಖದಿಂದ ಬಿಡುಗಡೆ. ಅದೇ ಅವಿಧ್ಯಾ ಜಿವನದಿಂದ ಬಿಡುಗಡೆ. ಇದನ್ನು ಸಾಧಿಸಲು ಅಷ್ಟಾಂಗಿಕ ಮಾರ್ಗಗಳಾದ ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್ಕು, ಸಮ್ಯಕ್ ಕ್ರಿಯಾ ಸಮ್ಯಕ್ ಆಜೀವ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸ್ಮೃತಿ ಮತ್ತು ಸಮ್ಯಕ ಸಮಾಧಿಯ ಮೂಲಕ ಸಾಧಿಸಬಹುದು. ಈ ಅಷ್ಟಾಂಗ ಮಾರ್ಗವೆಂದರೆ ನೈತಿಕತೆ, ಸಾಧನೆ, ಸಾಕ್ಷಾತ್ಕಾರ, ಸ್ವಾರ್ಥವನ್ನು ತ್ಯಜಿಸುವದು, ಬೂತದಯೆಗಳು. ಬುದ್ದ ಇದನ್ನು ಸ್ವಯಂ ತನ್ನ ಕೊನೆಯಕ್ಷಣದವರೆಗೂತಾನೇ ಆಚರಿಸಿದ್ದನು. ಕುಂಡ ಕಮ್ಮಾರಪುತ್ತ ನೀಡಿದ ವಿಷಯುಕ್ತ ಆಹಾರದಿಂದ ಸಾಯುವ ಸಂದರ್ಭದಲ್ಲಿಯೂ ಅವನನ್ನು ಕ್ಷಮಿಸಿದನು. ಪ್ರಪಂಚದಲ್ಲಿ ಕಾಣುವ ವಸ್ತುಗಳನ್ನು ಅವು ಇರುವಂತೆಯೇ ತಿಳಿದವ ಬುದ್ಧ. ಹಾಗಂತ ಇದು ಚಾರ್ವಾಕ ಮತಕ್ಕೆ ಹತ್ತಿರವಾದಂತೆ ಕಂಡರೂ ಆತ ನಾಸ್ತಿಕವಾದಿಯಲ್ಲ. ಬುದ್ಧ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಾನೆ, ಅದು ಅದ್ವೈತವನ್ನು ಹೋಲುತ್ತದೆ. ಬೌದ್ಧರು ಆತ್ಮದ ಅಸ್ತಿತ್ವವನ್ನು ಒಪ್ಪುವದಿಲ್ಲ ಎನ್ನುವ ಸಾಮಾನ್ಯ ನಂಬಿಕೆ. ಆದರೆ ಇದಕ್ಕೆ ಆಧಾರವಿಲ್ಲ.

ಬೌದ್ಧ ದರ್ಶನಗಳಲ್ಲಿ ಬುದ್ಧತ್ತ್ವಕ್ಕೆ ಏರುವುದು ಅಂದರೆ ಅದು ತುರೀಯಾವಸ್ಥೆ. ಸಾಮಾನ್ಯ ವ್ಯಕ್ತಿ ಬುದ್ಧನಾಗಲಿಕ್ಕೆ ಅನೇಕ ಜನ್ಮಗಳನ್ನು ಪಡೆಯಬೇಕಾಗುತ್ತದೆ. ಅದರಲ್ಲಿಯೂ ಕೊನೆಯ ಮೂರು ಹಂತಗಳಾದ ಅರಿಹಂತ, ಪಚ್ಛೇಕ ಬುದ್ಧತ್ವವನ್ನು ಸಾಧಿಸಿದ ಮೇಲೆ ಗೌತಮ ಬುದ್ಧ ತಲುಪಿದ ಸ್ಥಿತಿ ಸಮ ಸಂಬುದ್ಧತ್ವದ ಸ್ಥಿತಿ. ಜಾತಕದ ಕತೆಗಳಲ್ಲಿ ಬುದ್ಧನ ಹಿಂದಿನ ಜನ್ಮದ ವಿವರಗಳು ಕಥೆಯ ರೂಪದಲ್ಲಿ ಬರುವುದನ್ನು ಗಮನಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮದ ಅಸ್ತಿತ್ವವನ್ನು ಬುದ್ಧ ಒಪ್ಪುವದೂ ಇಲ್ಲ ಅಥವಾ ನಿರಾಕರಿಸುವುದೂ ಇಲ್ಲ. ವಚ್ಚಗೋತ್ತ ಎನ್ನುವ ಬ್ರಾಹ್ಮಣ ಇದೇ ವಿಷಯದಲ್ಲಿ ಬುದ್ಧನ ಹತ್ತಿರ ಕೇಳುವ ಪ್ರಶ್ನೆ ತೆವಿಜ್ಜ ಸುತ್ತದಲ್ಲಿ ಬರುತ್ತದೆ. ಆತ ಬುದ್ಧನಲ್ಲಿ ಕೇಳುವ ಆತ್ಮವಿದೆಯೇ ಅಥವಾ ಇಲ್ಲವೇ ಎನ್ನುವ ಪ್ರಶ್ನೆಗೆ ಆತ ಮೌನವಾಗಿಬಿಡುತ್ತಾನೆ. ಆತನ ಪ್ರಕಾರ ಆತ್ಮವಿದೆ ಎಂದು ಸಾರಿದ್ದರೆ ಅನಿತ್ಯಕ್ಕೇ ನಿತ್ಯವೆಂದು ಆತನ ಶಿಷ್ಯರು ಪರಿಗಣಿಸಬಹುದು, ಇಲ್ಲವೆಂದರೆ ಉಚ್ಛೇದವಾದ (ವಿನಾಶವಾದ)ವನ್ನು ಉಪದೇಶಿಸುವ ದಾರ್ಶನಿಕರು ಹೇಳಿದ್ದು ಸತ್ಯವೆಂದು ಅವರು ನಂಬುತ್ತಾರೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

ಇದರ ಅರ್ಥವಿಷ್ಟೇ ಬುದ್ಧ ಅಸ್ತಿತ್ವವಾದಿಯಾಗಿದ್ದ. ತನ್ನ ಶಿಷ್ಯರಿಗೆ “ನಿಮಗೆ ನೀವೇ ಬೆಳಕಾಗಿರಿ” ಎಂದು ಉಪದೇಶವನ್ನು ಮಾಡಿದ್ದ. ಬದುಕಿನಲ್ಲಿ ಕಾಣುವ ವಸ್ತುಗಳಲ್ಲಿಯೇ ಆನಂದವಿದೆ ಎನ್ನುವದರ ಮೂಲಕವೇ ಆತನಿಗೆ ಜ್ಞಾನೋದಯವಾದದ್ದರಿಂದ ಆತ “ತಿವಿಜ್ಜಸುತ್ತ”ದಲ್ಲಿ ಹೇಳುವಂತೆ. “ಹಳೆಯ ಓಲೆಗರಿಯಲ್ಲಿ ಹೇಳಿದೆ ಎನ್ನುವ ಮಾತ್ರಕ್ಕೆ ನಂಬಬಾರದು. ಎಲ್ಲವನ್ನೂ ವಿಚಾರಣೆ ಮಾಡಿ ವಿಶ್ಲೇಷಿಸಿ ಅದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದಾದರೆ ಅದರಂತೆ ನೀವೂ ಬಾಳಿ” ಎಂದಿದ್ದಾನೆ. ಬುದ್ಧನ ಪ್ರಕಾರ ನಿರ್ವಾಣವೆಂದರೆ ಅದು ‘ಸಂವೇದನೆ ಮತ್ತು ಭಾವನೆಗಳು ನಿಂತುಹೋಗುವ ಕ್ರಿಯೆ’. ಇದು ಜ್ಞಾತ್ರಾಜ್ಞೇಯದ ಸಂಬಂಧದ ಆಭಾವ. ಈ ನಿರ್ವಾಣಕ್ರಿಯೆಯನ್ನು ಮಾಂಡುಕ್ಯೋಪನಿಷತ್ತಿನ ತುರೀಯಾವಸ್ಥೆಗೆ ಹೋಲಿಸಬಹುದು. (ನಾಂತಃಪ್ರಜ್ಞಂ ನ ಬಹಿಃಪ್ರಜ್ಞಂ..ಮಾಂಡೂಕ್ಯ-7) ಇವೆರಡರಲ್ಲೂ ಭಾವನಾತ್ಮಕವಾದ ವಿಷಯಗಳಿಲ್ಲ. ಅವು ವಿಷಯ, ವಿಷಯಿ ಸಂಬಂಧ, ದೇಶ ಕಾಲ ನಿಮಿತ್ತ ಇವುಗಳಿಗೆ ಅತೀತವಾಗಿದೆ. ಇವೆರಡರಲ್ಲೂ ಚೇತನಾವಿಷಯಗಳಿಲ್ಲ; ಚೈತನ್ಯಸ್ವರೂಪವಿದೆ. ಪಾಲಿ ಭಾಷೆಯಲ್ಲಿರುವ ತೇರವಾದ ಬೌದ್ಧಗ್ರಂಥ ‘ಉದಾನ”ದಲ್ಲಿ “ಅಜವೂ ಅನಾದಿಯೂ ಅಕೃತವೂ ಅಸಂಯುಕ್ತವೂ ಆದುದೊಂದಿದೆ. ಎಲೈ ಭಿಕ್ಕು, ಅದಿಲ್ಲವಾದರೆ ಹುಟ್ಟುಳ್ಳದ್ದೂ, ಸಾದಿಯೂ ಕೃತವೂ ಸಂಯುಕ್ತವೂ ಆದ ಜಗತ್ತಿನಿಂದ ಮುಕ್ತಿಯೇ ಇರುವದಿಲ್ಲ” (ಉದಾನ 8-3) ಎಂದಿದ್ದಾನೆ. ಆತ ನಿರ್ವಿಕಾರವೂ ಶಾಶ್ವತವೂ ಆದ ಶಾಶ್ವತ ಸತ್ಯವನ್ನು ಒಪ್ಪುತ್ತಾನೆಂಬುದು ಇದರಿಂದ ಸ್ಪಷ್ಟ. ಇದಲ್ಲದಿದ್ದರೆ ಅವನ ನಿರ್ವಾಣವಾದವೇ ಬಿದ್ದುಹೋಗುತ್ತದೆ. ಆತ ಹೇಳಿದ್ದು “ಆತ್ಮ ಮತ್ತು ಬ್ರಹ್ಮ ವಿಷಯಕವಾದ ವಿಚಾರಗಳಿಂದ ಯಾವ ಪ್ರಯೋಜನವೂ ಇಲ್ಲ, ಒಳ್ಳೆಯದನ್ನು ಮಾಡಿರಿ; ಒಳ್ಳೆಯವರಾಗಿರಿ, ಇದೇ ನಿಮ್ಮನ್ನು ನಿರ್ವಾಣಕ್ಕೆ ಕೊಂಡೊಯ್ಯುತ್ತದೆ”. ಬುದ್ಧನೇ ನೇರವಾಗಿ ಬೋಧಿಸಿದ ತತ್ತ್ವಗಳನ್ನು ಗಮನಿಸಿದಾಗ ಆತನ ತತ್ತ್ವಗಳು ಭಾರತೀಯ ದರ್ಶನ ಶಾಸ್ತ್ರದ ಮುನ್ನುಡಿಯಾಗಿವೆ ಎನ್ನಬಹುದು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

Continue Reading

ಅಂಕಣ

ರಾಜಮಾರ್ಗ ಅಂಕಣ: ಅಳಿಸಲಾಗದ ನೋವು ಬಿಟ್ಟು ಹೋದ ಮಂಗಳೂರು ವಿಮಾನ ದುರಂತ!

ರಾಜಮಾರ್ಗ ಅಂಕಣ: ರನ್ ವೇಯಲ್ಲಿ ಓಡಲು ತೊಡಗಿದ ವಿಮಾನ ನಿಯಂತ್ರಣಕ್ಕೆ ಬರಲಿಲ್ಲ. ರನ್ ವೇ ಪೂರ್ತಿ ಓಡಿದ ನಂತರವೂ ವೇಗ ಕಡಿಮೆ ಆಗಲಿಲ್ಲ. ಅಪಾಯದ ಗೆರೆ ದಾಟಿ ಓಡಿದ ವಿಮಾನ ಮುಂದೆ ಇರುವ ಕೆಂಜಾರು ಎಂಬ ಜಾಗದ ಕಂದಕದಲ್ಲಿ ಉರುಳಿ ಬಿದ್ದು ಎರಡು ಭಾಗವಾಯಿತು. ಕ್ಷಣ ಮಾತ್ರದಲ್ಲಿ ಇಂಜಿನ್ ಟ್ಯಾಂಕ್ ಬೆಂಕಿ ಹಿಡಿದು ವಿಮಾನ ಹೊತ್ತಿ ಉರಿಯಲು ಆರಂಭವಾಯಿತು.

VISTARANEWS.COM


on

rajamarga column mangalore flight crash 1
Koo
Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ (Mangalore Airport) 14 ವರ್ಷಗಳ ಹಿಂದೆ ಇದೇ ದಿನ (2010 ಮೇ 22) ನಡೆದ ಆ ಒಂದು ದುರ್ಘಟನೆಯು (Mangalore flight crash) ದೇಶದಾದ್ಯಂತ ಉಂಟುಮಾಡಿದ ನೋವಿನ ಅಲೆಗಳನ್ನು ಈಗ ಕಲ್ಪನೆ ಮಾಡಲೂ ಭಯವಾಗುತ್ತದೆ! ದಕ್ಷಿಣ ಭಾರತದ ಅತೀ ದೊಡ್ಡ ವಿಮಾನ ದುರಂತವದು.

ಅಂದು ಮೇ 22, 2010 ಮಧ್ಯರಾತ್ರಿ…

ದುಬೈಯಿಂದ ಹೊರಟ ಭಾರತದ ವೈಭವದ ಬೋಯಿಂಗ್ 737-800 ವಿಮಾನದಲ್ಲಿ 166 ಪ್ರಯಾಣಿಕರಿದ್ದರು. ಅದರಲ್ಲಿ ಎಲ್ಲ ಪ್ರಾಯದವರೂ ಇದ್ದರು. ಹೆಚ್ಚಿನವರು ಕರ್ನಾಟಕ ಮತ್ತು ಕೇರಳದವರು. ನೂರಾರು ಕನಸುಗಳನ್ನು ಹೊತ್ತು ತಮ್ಮ ತಾಯ್ನೆಲಕ್ಕೆ ಹೊರಟವರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮುಂಜಾನೆ ಸೂರ್ಯೋದಯಕ್ಕೆ ಮೊದಲು ಅವರು ಮಂಗಳೂರು ತಲುಪಿ ತಮ್ಮ ತಮ್ಮ ಊರಿಗೆ ಟ್ಯಾಕ್ಸಿ ಏರಬೇಕಾಗಿತ್ತು. ಆದರೆ ವಿಧಿಯ ಆಟ ಬೇರೆಯೇ ಇತ್ತು.

ಟೇಬಲ್ ಟಾಪ್ ರನ್ ವೇ…

ಮುಂಜಾನೆ ಆರು ಘಂಟೆಯ ಹೊತ್ತಿಗೆ ಜನರು ಕಣ್ಣುಜ್ಜಿ ಹೊರಗೆ ನೋಡಲು ತೊಡಗಿದಾಗ ವಿಮಾನ ಬಜಪೆ ವಿಮಾನ ನಿಲ್ದಾಣದ ರನ್ ವೇ ಸ್ಪರ್ಶ ಮಾಡಿ ಓಡತೊಡಗಿತ್ತು. ಅದು ಟೇಬಲ್ ಟಾಪ್ ರನ್ ವೇ. ಅಂದರೆ ಎತ್ತರದ ಪರ್ವತದ ಮೇಲೆ ಸಮತಟ್ಟು ಮಾಡಿ ನಿರ್ಮಿಸಿದ್ದ ರನ್ ವೇ. ವಿಮಾನದ ಕ್ಯಾಪ್ಟನ್ ಗ್ಲುಸಿಕಾ (Glusica) ಮತ್ತು ಫಸ್ಟ್ ಆಫೀಸರ್ ಹರಿಂದರ್ ಸಿಂಘ್ ಅಹ್ಲುವಾಲಿಯಾ ಇಬ್ಬರೂ ಅನುಭವಿಗಳು. ಅದರಲ್ಲಿ ಕ್ಯಾಪ್ಟನ್ ಗ್ಲುಸಿಕಾ ಅದೇ ರನ್ ವೇ ಮೇಲೆ ಹಿಂದೆ 16 ಬಾರಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ದಾಖಲೆ ಹೊಂದಿದ್ದರು. 2448 ಮೀಟರ್ ಉದ್ದವಾದ ರನ್ ವೇಯಲ್ಲಿ ವಿಮಾನವನ್ನು ನಿಯಂತ್ರಣಕ್ಕೆ ತಂದು ನಿಲ್ಲಿಸುವುದು ಕಷ್ಟ ಆಗಿರಲಿಲ್ಲ. ವಾತಾವರಣವೂ ಪೂರಕವಾಗಿತ್ತು. ಬಜಪೇ ವಿಮಾನ ನಿಲ್ದಾಣದಿಂದ ಪೂರಕ ಸಂಕೇತಗಳು ದೊರೆಯುತ್ತಿದ್ದವು.

ಕಣ್ಣು ಮುಚ್ಚಿ ತೆರೆಯುವ ಒಳಗೆ..

ಈ ಬಾರಿ ರನ್ ವೇಯಲ್ಲಿ ಓಡಲು ತೊಡಗಿದ ವಿಮಾನ ನಿಯಂತ್ರಣಕ್ಕೆ ಬರಲಿಲ್ಲ. ರನ್ ವೇ ಪೂರ್ತಿ ಓಡಿದ ನಂತರವೂ ವೇಗ ಕಡಿಮೆ ಆಗಲಿಲ್ಲ. ಅಪಾಯದ ಗೆರೆ ದಾಟಿ ಓಡಿದ ವಿಮಾನ ಮುಂದೆ ಇರುವ ಕೆಂಜಾರು ಎಂಬ ಜಾಗದ ಕಂದಕದಲ್ಲಿ ಉರುಳಿ ಬಿದ್ದು ಎರಡು ಭಾಗವಾಯಿತು. ಕ್ಷಣ ಮಾತ್ರದಲ್ಲಿ ಇಂಜಿನ್ ಟ್ಯಾಂಕ್ ಬೆಂಕಿ ಹಿಡಿದು ವಿಮಾನ ಹೊತ್ತಿ ಉರಿಯಲು ಆರಂಭವಾಯಿತು. ಆಕಾಶದ ಎತ್ತರಕ್ಕೆ ಬೆಂಕಿ ಮತ್ತು ಹೊಗೆ ಏರುತ್ತಾ ಹೋದಂತೆ ಒಳಗಿದ್ದ ಪ್ರಯಾಣಿಕರಿಗೆ ಏನಾಗ್ತಾ ಇದೆ ಎಂದು ಅರಿವಾಗುವ ಮೊದಲೇ ಇಡೀ ವಿಮಾನ ಸುಟ್ಟು ಹೋಯಿತು. ಸಣ್ಣಗೆ ಮಳೆ ಸುರಿಯುತ್ತಿದ್ದರೂ ವಿಮಾನದ ಬೆಂಕಿ ಆರಲಿಲ್ಲ.

ರೆಸ್ಕ್ಯೂ ಆಪರೇಶನ್ ಆರಂಭ.

ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಮಂಗಳೂರಿನಿಂದ ಅಗ್ನಿ ಶಾಮಕ ವಾಹನಗಳು, ಆಂಬ್ಯುಲೆನ್ಸಗಳು ಸ್ಥಳಕ್ಕೆ ಧಾವಿಸಿ ಬಂದವು. ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಜೀವದ ಹಂಗು ತೊರೆದು ಸ್ಥಳಕ್ಕೆ ಧಾವಿಸಿದರು. ಬೆಂಕಿ ಆರಿಸುವ ಪ್ರಯತ್ನವು ಹಲವು ಘಂಟೆ ನಡೆಯಿತು. ವಿಮಾನದಿಂದ ಸುಟ್ಟು ಕರಕಲಾದ ಶವಗಳನ್ನು ಹೊರಗೆ ತೆಗೆಯುವುದೇ ಕಷ್ಟ ಆಯಿತು. ತಮ್ಮವರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿತ್ತು.

ಅಂದು ಸುಟ್ಟು ಹೋದವರ ಸಂಖ್ಯೆಯೇ 158!

ವಿಮಾನದಲ್ಲಿ ಇದ್ದ ಪ್ರಯಾಣಿಕರ ಸಂಖ್ಯೆ 166. ಆರು ಜನ ಕ್ರೂ (Crew) ಸದಸ್ಯರು ಬೇರೆ ಇದ್ದರು. ಅಂದು ಬದುಕಿ ಉಳಿದವರ ಸಂಖ್ಯೆ 8 ಮಾತ್ರ. ತೀವ್ರವಾಗಿ ಗಾಯಗೊಂಡವರ ಸಂಖ್ಯೆ 8. ಅಂದರೆ 158 ಜನರು ಸುಟ್ಟು ಕರಕಲಾಗಿ ಹೋಗಿದ್ದರು! ಕ್ರೂ (Crew) ಸದಸ್ಯರೂ ಬೂದಿ ಆಗಿದ್ದರು. ಶವಗಳನ್ನು ಗುರುತು ಹಿಡಿಯುವುದು ತುಂಬಾನೇ ಕಷ್ಟ ಆಯಿತು. ಒಂದೊಂದು ಶವವನ್ನು ಎತ್ತಿ ಆಂಬುಲೆನ್ಸಗೆ ಸಾಗಿಸುವಾಗ ಜನರ ಆಕ್ರಂದನ ಹೃದಯ ವಿದ್ರಾವಕ ಆಗಿತ್ತು.

ಆಸ್ಪತ್ರೆಗೆ ಧಾವಿಸಿ ತಮ್ಮವರನ್ನು ಶವಗಳ ರಾಶಿಯಲ್ಲಿ ಹುಡುಕುತ್ತಾ ಅಳುವವರ ದೃಶ್ಯವು ನಿಜಕ್ಕೂ ಕರುಣಾಜನಕ ಆಗಿತ್ತು. ಅದರಲ್ಲಿಯೂ 12 ಶವಗಳ ಗುರುತು ಹಿಡಿಯುವುದೇ ಕಷ್ಟವಾಗಿ ಅವುಗಳನ್ನು ಮುಂದೆ ಕೂಳೂರಿನ ಫಲ್ಗುಣಿ ನದಿ ತೀರದಲ್ಲಿ ಸಾಮೂಹಿಕವಾಗಿ ಸಂಸ್ಕಾರ ಮಾಡಲಾಯಿತು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಭಾರತದಲ್ಲಿ ಕಡ್ಡಾಯ ಮತದಾನ ಕಾನೂನು ಯಾಕೆ ಸಾಧ್ಯವಿಲ್ಲ?

ಪೈಲಟ್ ನಿದ್ದೆ ರೆಕಾರ್ಡ್ ಆಗಿತ್ತು!

ಇಂತಹ ಅಪಘಾತಗಳು ನಡೆದಾಗ ಗಂಭೀರವಾದ ವಿಚಾರಣೆಗಳು ನಡೆಯುತ್ತವೆ. ಕಾಕ್‌ಪಿಟ್ ರೆಕಾರ್ಡರ್‌ನಲ್ಲಿ ಪೈಲಟ್ ಕ್ಯಾಪ್ಟನ್ ಗ್ಲುಸಿಕಾ ಅವರ ನಿದ್ದೆ ರೆಕಾರ್ಡ್ ಆಗಿತ್ತು. ಅಂದರೆ 55 ವರ್ಷ ಪ್ರಾಯದ ಆತನು ಸುಮಾರು ಹೊತ್ತು ವಿಮಾನದ ಹಾರಾಟದ ಅವಧಿಯಲ್ಲಿ ಮಲಗಿದ್ದು ನಿಚ್ಚಳವಾಯಿತು! ಇದೇ ಅಪಘಾತಕ್ಕೆ ಕಾರಣ ಎಂದು ಧೃಡವಾಗಿತ್ತು.

ಮುಂದೆ ಏನಾಯಿತು?

ರಾಜ್ಯ ಮತ್ತು ಕೇಂದ್ರ ಸರಕಾರಗಳು ಮೃತರಾದವರಿಗೆ ಪರಿಹಾರ ಕೊಟ್ಟವು. ವಿಮಾನ ಯಾನ ಸಂಸ್ಥೆ ಮತ್ತು ಖಾಸಗಿ ವಿಮಾ ಕಂಪೆನಿಗಳು ಪರಿಹಾರಗಳನ್ನು ನೀಡಿದವು. ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ದುರಂತದ ಸ್ಮಾರಕವನ್ನು ನಿರ್ಮಾಣ ಮಾಡಿ ಮೃತರಾದವರಿಗೆ ಶ್ರದ್ಧಾಂಜಲಿ ಕೊಟ್ಟಿತ್ತು. ಆದರೆ ತಮ್ಮವರನ್ನು ಕಳೆದುಕೊಂಡು ಇಂದಿಗೂ ರೋಧಿಸುತ್ತಿರುವ, ನೋವು ಪಡುತ್ತಿರುವ ಮಂದಿಗೆ ಈ ದುರಂತವು ಮರೆತು ಹೋಗುವುದು ಹೇಗೆ? ಅಂದು ಮಡಿದ ನೂರಾರು ಮಂದಿಗೆ ಒಂದು ಹನಿ ಕಣ್ಣೀರು ಸುರಿಸಿ ಶ್ರದ್ಧಾಂಜಲಿ ಕೊಡೋಣ ಅಲ್ಲವೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅವರ ನೆನಪೇ ನ್ಯಾಚುರಲ್‌ ಐಸ್‌ಕ್ರೀಂನ ತಾಜಾ ಹಣ್ಣಿನ ರುಚಿ, ಪರಿಮಳದಂತೆ!

Continue Reading
Advertisement
Karnataka Weather
ಕರ್ನಾಟಕ2 mins ago

Karnataka Weather: ಇಂದು ದಕ್ಷಿಣ ಕನ್ನಡ, ಹಾಸನ, ಕೊಡಗು ಸೇರಿ ವಿವಿಧೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ!

Hair Growth Tips
ಆರೋಗ್ಯ17 mins ago

Hair Growth Tips: ಕೂದಲು ಉದುರುವುದಕ್ಕೆ ಬೀಟಾ ಕ್ಯಾರೊಟಿನ್‌ ಮದ್ದು!

Dina Bhavishya
ಭವಿಷ್ಯ1 hour ago

Dina Bhavishya: ಈ ರಾಶಿಯವರು ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರವಿರಲಿ!

Girlfriend
ದೇಶ6 hours ago

Girlfriend: ‘ಬಾಡಿಗೆ ಗರ್ಲ್‌ಫ್ರೆಂಡ್‌’ ಆಗಲು ಸಿದ್ಧಳೆಂದ ಯುವತಿ; ಈಕೆಯ ‘ದರಪಟ್ಟಿ’ ನೋಡಿ,‌ ನೀವೂ ಟ್ರೈ ಮಾಡಿ

CAA Certificate
ದೇಶ7 hours ago

CAA Certificate: ದೀದಿ ವಿರೋಧದ ಮಧ್ಯೆಯೂ ಬಂಗಾಳದಲ್ಲಿ ಸಿಎಎ ಜಾರಿಗೆ ತಂದ ಕೇಂದ್ರ; ಪೌರತ್ವ ಪ್ರದಾನ!

Modi Meditation
ದೇಶ8 hours ago

Modi Meditation: ಮೋದಿಗೆ ಧ್ಯಾನ ಮಾಡಲು ಬಿಡಬೇಡಿ; ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ಮೊರೆ!

T20 World Cup 2024
ಕ್ರೀಡೆ8 hours ago

T20 World Cup 2024: ಟಿ20 ವಿಶ್ವಕಪ್​ನಲ್ಲಿ ಎಷ್ಟು ಬೌಲರ್​ಗಳು ಹ್ಯಾಟ್ರಿಕ್​ ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾರೆ?

Self Harming
ಕರ್ನಾಟಕ9 hours ago

Self Harming: ಶಾಲೆಗೆ ಹೋಗಲು ಬೇಸತ್ತು 11 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ

Rudram II
ದೇಶ9 hours ago

Rudram II: ಆಗಸದಿಂದಲೇ ವೈರಿಗಳನ್ನು ನಾಶಪಡಿಸುವ ರುದ್ರಂ II ಕ್ಷಿಪಣಿ ಪ್ರಯೋಗ ಯಶಸ್ವಿ; ಶತ್ರುಗಳಿಗೆ ನಡುಕ!

Chahal-Dhanashree
ಕ್ರೀಡೆ9 hours ago

Chahal-Dhanashree: ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದ್ದಾರಾ ಚಹಲ್?; ಕುತೂಹಲ ಮೂಡಿಸಿದ ಪತ್ನಿಯ ಪೋಸ್ಟ್!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ1 day ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌