Sunday Read | ಹೊಸ ಪುಸ್ತಕ | ಚಲಂನ ಪ್ರಣಯ ಚರಿತ್ರೆ ಗಿಡಗಳ ಕೆಳಗೆ - Vistara News

ಕಲೆ/ಸಾಹಿತ್ಯ

Sunday Read | ಹೊಸ ಪುಸ್ತಕ | ಚಲಂನ ಪ್ರಣಯ ಚರಿತ್ರೆ ಗಿಡಗಳ ಕೆಳಗೆ

ತೆಲುಗಿನ ಮಹಾ ಕಾದಂಬರಿಕಾರ, ಲೇಖಕ ಚಲಂ ಅವರ ಆತ್ಮಕತೆಯನ್ನು ಲಕ್ಕೂರು ಸಿ. ಆನಂದ ಅವರು ಕನ್ನಡಕ್ಕೆ ತಂದಿದ್ದಾರೆ. ಪ್ರೇಮ, ಆತ್ಮಮರುಕ, ಸಹಾನುಭೂತಿ ಎಲ್ಲದರ ಸಂಗಮದಂತಿರುವ ಈ ಹೊಸ ಪುಸ್ತಕ ʼಚಲಂʼನಿಂದ ಆಯ್ದ ಒಂದು ಭಾಗ ಇಲ್ಲಿದೆ.

VISTARANEWS.COM


on

chalam
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮದ್ರಾಸಿನ ಸಮುದ್ರದ ತೀರದಲ್ಲಿ ಕುಳಿತಿದ್ದಾರೆ ಒಬ್ಬ ಯುವಕ, ಯುವತಿ.
ಸೂರ್ಯೋದಯಕ್ಕೆ ಎದುರಾಗಿ, ದೂರದಿಂದ ಸೂರ್ಯನು ತನ್ನೊಳಗಿನಿಂದ ತೀರಕ್ಕೆ ಹೊರಳಿಸುತ್ತಿರುವ ಬೆಳಕಿನ ಎಳೆಗಳನ್ನು ನೋಡುತ್ತ, ಇಬ್ಬರೂ ಬಡ ಯುವಕರು, ಲೋಕವೆಂದರೆ ಅಷ್ಟಾಗಿ ತಿಳಿಯದೆ ಯಾರು ಹೇಳುತ್ತಾರೆಂದು ಹುಡುಕುವ ಅಮಾಯಕರು.
“ಹೋಗೋಣವಾ” ಎಂದಳು ಆಕೆ.
“ಹೋಗಬೇಕಾ?” …… ಎಂದನು ಆತ.
ಏಳಲು ಹೋಗಿ, ಇನ್ನೂ ಹತ್ತಿರಕ್ಕೆ ಕುಸಿದು ಬಿದ್ದ ಮರಳಿನಲ್ಲಿ. ಆಕೆಯ ಬೆರಳುಗಳು ಆತನ ಬೆರಳಿನೊಳಗೆ ಸಂಧಿಸಿದವು. ತನ್ನನ್ನು ಲೋಕದಿಂದ ರಕ್ಷಿಸೆಂಬಂತೆ ಕೇಳುತ್ತಿರುವಂತಿದೆ. ಅಷ್ಟೇ ಮತ್ತೆ ಕುಳಿತುಕೊಂಡರು.
“ನೀನು ಹೊರಟು ಹೋಗುವೆಯಾ?” ಕಣ್ಣೀರಿನೊಂದಿಗೆ ತಲೆಯನ್ನು ತಗ್ಗಿಸಿಕೊಂಡಳು ಆಕೆ.
ಸೊಂಟದ ಸುತ್ತಾ ಕೈಯಾಕಿ ಆಕೆಯನ್ನು ತನ್ನೆಡೆಗೆ ಒತ್ತಿಕೊಂಡ. ಆಕೆಯ ತಲೆ ಆತನ ಭುಜವನ್ನು ಮುದ್ದು ಮಾಡುತ್ತಿದೆ. ಪಶ್ಚಿಮದ ಗಾಳಿ ಆಕೆಯ ಜುಟ್ಟಿನೊಂದಿಗೆ ಆತನ ಕತ್ತನ್ನು ಮಧುರವಾಗಿ ಕಚಗುಳಿಯಿಡುತ್ತಿದೆ. ಆತನು ಆಕೆಯ ಮುಖದ ಮೇಲಕ್ಕೆ ಬಗ್ಗಿ ಮೃದುವಾಗಿ ಸೂರ್ಯಕಿರಣವನ್ನು ತೊಲಗಿಸಿ ಮುತ್ತಿಟ್ಟುಕೊಂಡ. ಆಕೆಯ ತುಟಿಗಳು ಅಷ್ಟೊಂದು ನಾಜೂಕಾಗಿ ಆತನ ತುಟಿಗಳ ಕೆಳಗೆ ಕದಲಿದವು. ಇನ್ನು ಆಕೆಯನ್ನು ಸಂರಕ್ಷಿಸುವೆಯೆಂದು (ದೇಹವನಲ್ಲ) ಕೋರಿಕೆಯಿಂದ ಆಕೆಯ ಮನಸನ್ನು ಕೆಡಿಸುವೆನೆಂಬ ಭಯದಿಂದ ನಡುಗಿದ. “ಹೋಗೋಣ ಬಾ” ಎಂದು ಎದ್ದ ದೃಢವಾಗಿ. ಕೈಯಲ್ಲಿ ಕೈಯನ್ನು ಹಿಡಿದುಕೊಂಡು ಇಬ್ಬರೂ ಪಟ್ಟಣದ ಕಡೆ ನಡೆದರು.
“ಯಾವೊತ್ತಿಗೂ ಈ ಕೈಯನ್ನು ಬಿಡಬೇಡ” ಎಂದ ಆತ. ರೋಡಿನ ಪಕ್ಕದಲ್ಲಿರುವ ಗಿಡಗಳ ಮೊನೆಗಳು ಪಕಪಕನೆ ನಕ್ಕವು ವಿಷಾದದಿಂದ. ಅಂದಿನ ಮದ್ರಾಸು ನಗರದ ಒಂಟಿ ಬೀದಿಯಲ್ಲಿ ಏಕಾಂತವಾಗಿ ತಿರುಗಿ ಅಪ್ಪಿಕೊಂಡರು. ಅಂದಿನಿಂದ ಇಂದಿನವರೆಗೂ ಚಲಂನ ಪ್ರಣಯ ಚರಿತ್ರೆ ಗಿಡಗಳ ಕೆಳಗೆ, ಪರ್ವತದ ಶಿಲೆಗಳ ನೆರಳಲ್ಲಿ, ಹೊಳೆಯ ನೀರಿನ ಮೇಲೆ, ಬಾಗಿರುವ ಗಿಡಗಳ ಕೆಳಗೆ ಸಾಗಿತು.
“ನಿಮ್ಮವರು ನಿನಗೆ ಮದುವೆ ಮಾಡುತ್ತಾರೆ?”
“ಮಾಡುವುದಿಲ್ಲ. ಯಾಕೆ ಮಾಡುತ್ತಾರೆ? ಹೇಗೆ ಮಾಡುತ್ತಾರೆ?”
“ಏನು ಮಾಡುತ್ತೀಯಾ ಮನೆಯಲ್ಲಿ ಕುಳಿತುಕೊಂಡು”
ನೊಂದುಕೊಳ್ಳುತ್ತಾಳೆ ಆಕೆ. “ತಿಳಿಯದಾ?” ಎಂದಳು.
ಅಲೋಚಿಸುತ್ತಿದ್ದಾಳೆ. ಕ್ರಮವಾಗಿ ಆತನ ಕಡೆಗೆ ನೋಡುತ್ತ ಸ್ವಲ್ಪ ದೂರ ನಡೆದಳು. ಮುಖದ ಮೇಲೆ ಬಂದು ಹಿಂದಕ್ಕೆ ಹೋಗುತ್ತಿವೆ ಅಲೆಗಳಂತಹ ಗಿಡಗಳ ನೆರಳುಗಳು. ಈಕೆ ತನಗೆ ದೂರವಾಗಿ ಹೋದರೆ ತಾನು ಹೇಗೆ ಕಾಲ ಕಳೆಯುವುದು?

chalam


“ನಾನು ಬಂದರೆ ನನ್ನನ್ನು ಓದಿಸುವೆಯಾ ಚಲಂ (ವೆಂಕಟಾಚಲಂ)?”
“ತಪ್ಪದೆ ಓದಿಸುತ್ತೇನೆ- ಅಲ್ಲ ನಾನು ಓದು ಹೇಳಿಕೊಡುತ್ತೇನೆ”.
“ಹೇಳುವೆಯಾ? ನಾನು ಡಾಕ್ಟರ್ ಆಗಬೇಕೆಂದಿರುವೆ”.
“ಹ್ಞೂ!!!”
ಈಕೆಗೇನು ವಾಗ್ದಾನ ಮಾಡುತ್ತಿದ್ದೇನೆ, ಇಂಗ್ಲೀಷ್ ಒಂದು ಮಾತೂ ಕೂಡಾ ಬರದ ಈಕೆಗೆ ತಾನು ಬದುಕುವುದು ಹೇಗೆ ಎಂದು ಗೊತ್ತಿರದ ನಾನು, ಈಕೆಯನ್ನು ಡಾಕ್ಟರ್ ಮಾಡುತ್ತೀನಾ?
ಆದರೆ ಸ್ತ್ರೀಯರ ಕುರಿತಾಗಿ, ಮಕ್ಕಳ ಕುರಿತಾಗಿ ಆತನ ಸಾಹಸಕ್ಕೆ ಕೊನೆಯಿಲ್ಲ. ಹಾಗೆ ಕಾಪಾಡುತ್ತಿದ್ದಾನೆ ಈಶ್ವರನು ಇಂದಿನವರೆಗೂ ಕೂಡಾ.
“ಓದಿಸುತ್ತೇನೆ”
ಯಾಕೆ ನಂಬಿದಳು? ಆತನನ್ನು ಈಕೆ. ಇಂದಿಗೂ ಆತನನ್ನು ಯಾಕೆ ನಂಬುತ್ತಾರೆ? ಆಕೆ ಆತನನ್ನು ಗಟ್ಟಿಯಾಗಿ ಅಪ್ಪಿಕೊಂಡಳು. ಆಕೆ ಸಣ್ಣ ಕೈಗಳ ಮೇಲೆಯೇ ಎಷ್ಟೋ ಜನ ದಿಕ್ಕಿಲದ ಸ್ತ್ರೀಯರು, ಆಪತ್ತಿನಲ್ಲಿರುವವರು, ದುಃಖಿತರು, ಸಮಾಧಾನಕ್ಕಾಗಿ ಹಪತಪಿಸುವವರು, ನನಗೊಬ್ಬ ತಾಯಿ ಇರುವುದಿಲ್ಲವಾ ಎಂದು ಅಳುವವರು, ಈ ಲೋಕದಲ್ಲಿ ಎಲ್ಲಿಯೂ ದಿಕ್ಕೆಂಬುದು ಇಲ್ಲದ ದೀನರು, ಸಮಾಜದ ಬಹಿಷ್ಕೃತರು. ಎಷ್ಟೋ ಜನ ಸ್ತ್ರೀಯರು, ತಾಯಿಯರನ್ನು ಬಿಟ್ಟು ಬಂದ ಮಕ್ಕಳು, ನನ್ನನ್ನು ತೆಗೆದುಕೊಳ್ಳಿ ಎಂದು ಗರ್ಭದಲ್ಲಿಯೇ ಕೈಗಳನ್ನು ಚಾಚುವ ಶಿಶುಗಳು. ಎಷ್ಟೊಂದು ಸಂತೋಷದಲ್ಲಿ ಅವರ ಬದುಕುಗಳು ಒಂದು ದೊಡ್ಡ fulfilment ನಡೆದಂತೆ ತೃಪ್ತಿಪಟ್ಟರು!


ಬೆಳಿಗ್ಗೆ ತೋಟದಲ್ಲಿ ದಾಳಿಂಬೆ ಹೂವಿನ ಗಿಡದ ಕೆಳಗೆ ಧ್ಯಾನದಲ್ಲಿ ಕುಳಿತಿರುವಾಗ ಮತ್ತೆ ಆ ಕೈ ನನ್ನ ಕೈಗಳಿಗೆ ತಗುಲಿತು. ಕಣ್ಣು ತೆರೆದು ನೋಡಿದೆ. ಹೊಸ ಕಣ್ಣುಗಳಿಂದ ಮಾಸಿ ಹೋದ ಸೀರೆ, ಕೆದರಿದ ಜುಟ್ಟು, ಕಿರುನಗೆಯಿಂದ ನಡುಗುತ್ತಿರುವ ತುಟಿಗಳು, ಅಮಾಯಕವಾದ ನೋಟಗಳು.
“ಯಾರೂ? ಯಾರು?”
“ಬಂದಿರುವೆ”
“ಬಂದೆಯಾ? ನಿಜವಾಗಿಯೂ ಬಂದೆಯಾ?” ಎಂದೆ. ಆದರೆ ಧ್ಯಾನದಿಂದ ಇನ್ನೂ ಹೊರಗೆ ಬರದೆ ಮೆದುಳು ಆಗಲೇ ಒರಟು ಆಲೋಚನೆಗಳನ್ನು ಪ್ರಾರಂಭಿಸಿತು. ಅರ್ಥವಾಗುತ್ತಿದೆ ಆಕೆಗೆ, ನಾನು ನಿಂತಿದ್ದೇನೆ. ಆಕೆಯೂ ಕೂಡಾ ನಿಂತಿದ್ದಾಳೆ. ದೂರದಲ್ಲಿ ದುಷ್ಯಂತನ ಸಭೆಯಲ್ಲಿ ಶಕುಂತಲೆಯಂತೆ, ಮಾತುಗಳಿಲ್ಲದೆ ನಡೆಯುತ್ತಿದ್ದೇವೆ. ಆಕೆ ತನ್ನಲ್ಲಿಲ್ಲದ ಉತ್ಸಾಹವನ್ನು ತಂದುಕೊಳ್ಳುತ್ತಿದ್ದಾಳೆ.
“ಬರುವಾಗ ನನ್ನನ್ನು ಉಟ್ಟುಬಟ್ಟೆಯಿಂದ ಕಳುಹಿಸಿದರು. ಹಣ ಕಳುಹಿಸುತ್ತೇನೆಂದರು. ಆದರೆ ಕಳುಹಿಸುತ್ತಾರಾ?” ಸುತ್ತಲೂ ನೋಡಿದಳು.
“ಇಲ್ಲ ನೀನು ಇರುತ್ತೀಯಾ?”
“ಎಷ್ಟೊಂದು ದೊಡ್ಡದಾಗಿದೆಯೋ! ಆದರೆ ಆಕೆ ಯಾರು? ಆಕೆಯೂ ಕೂಡಾ ನಿನ್ನೊಂದಿಗೆ ಇರುತ್ತಾಳಾ?” ನಾನು ಕೇಳಿಸಿಕೊಳ್ಳುತ್ತಿಲ್ಲ.
ಈಕೆಯೊಂದಿಗೆ ಇಲ್ಲಿ ಹೇಗೆ? ಹೇಗೆ?
“ಯಾರು ಇರುತ್ತಾರೆ ಇಲ್ಲಿ ವೆಂಕಟಾಚಲಂ?”
“ನಿನ್ನ ಮನೆಯಲ್ಲವಾ….. ಮಾತನಾಡುತ್ತಿಲ್ಲವೇಕೆ?” ಎನ್ನುತ್ತಾಳೆ ಭಯದಿಂದ.
“ಈ ಊರಿಗೆ ಬಂದ ಮೇಲೆ ನಿನ್ನನ್ನು ಬೇಟಿಯಾಗುವುದಕ್ಕೆ ಎಷ್ಟು ಕಷ್ಟವಾಯಿತೆಂದು ಕೊಂಡೆ?” ಎಂದು ಆಕೆಯನ್ನು ಕೇಳಿದೆ.
“ವೆಂಕಟಾಚಲಂ ಇದ್ದಾನಾ ಎಂದು?”
“ವೆಂಕಟಾಚಲಂ, ವೆಂಕಟಾಚಲಂ?”
“ಯಾರು ನೀನು?”
“ನಾನು ವೊಯ್ಯಿʼʼ
“ಓ !”
“ಎಲ್ಲಿದ್ದಾನೆ?”
“ನನಗೇನು ಗೊತ್ತು ಎಲ್ಲಿದ್ದಾನೋ? ಹಾಗೆ ಹೋಗಿ ಆ ಕಾಡಿನಲ್ಲಿ ಹುಡುಕು” ಎಂದಳು. ನಿರ್ಲಕ್ಷö್ಯವಾಗಿ. ಎಷ್ಟೊಂದು ಅಳು ಬಂತೋ!
ಗಿಡಗಳ ಮೇಲಕ್ಕೆ ಹರಡಿಕೊಂಡಿರುವ ಆ ಮುಂಜಾನೆಯ ಬಿಸಿಲಲ್ಲಿ ಇಬ್ಬರೂ ನಡೆಯುತ್ತಿದ್ದೇವೆ. ಮದ್ರಾಸಿನಲ್ಲಿ ನಾವಿಬ್ಬರು ಎಲ್ಲಿ ಬೇರೆಯಾಗಿ ಬಿಟ್ಟು ಹೋದೆವೋ, ಆ ಕಥೆಯನ್ನು ಮತ್ತೆ ಪಡೆದುಕೊಳ್ಳುವಂತಿದೆ. ಏಕತಾರಿಯನ್ನು ಹಿಡಿದುಕೊಂಡು ಭವಿಷ್ಯತ್ತಿನ ಸಂಗತಿಯನ್ನು ಆಲೋಚಿಸುತ್ತಾ ನಾನು, ನನ್ನ ಕೈಯನ್ನು ಹಿಡಿದುಕೊಂಡು ಎಲ್ಲಿಯೂ ಹಗೆಯಿಲ್ಲದ ವಿಶ್ವಾಸದಿಂದ ಆಗಾಗ ನನ್ನ ಮುಖದ ಕಡೆಗೆ ಪ್ರಶ್ನಾರ್ಥಕವಾಗಿ ನೋಡುತ್ತ ನಡೆಯುತ್ತಿದ್ದಾಳೆ ವೊಯ್ಯಿ. ಇಬ್ಬರೂ ದರಿದ್ರರು. ದಿಕ್ಕಿಲ್ಲದವರು. ಲೋಕ ಬಹಿಷ್ಕೃತರು. ಆದರೆ ಈ ದಿನದಿಂದ ನಮ್ಮ ಬದುಕಿನಲ್ಲಿ ಒಂದು ಉಜ್ವಲವಾದ ಕಾಂತಿಯೊಳಗಿನಿಂದ ನಡೆಯುತ್ತಿರುವೆಯೆಂದು ಗೊತ್ತಿಲ್ಲವಲ್ಲ.
“ನೀನು ಎಲ್ಲಿರುವುದು?”
ಪರಧ್ಯಾನದಲ್ಲಿ ನಾನು “ಹ್ಞೂ” ಎಂದೆ. ಎರಡು ನಿಮಿಷಗಳ ನಂತರ ಆಕೆ.
“ಚಿಟ್ಟಿ, ರವಿ ಎಲ್ಲಿ”
“ತೆನಾಲಿಗೆ ಹೋಗಿದ್ದಾರೆ”
“ಯಾಕೆ?”
“ನಮಗೆ ಯಾರೂ ಈ ಊರಿನಲ್ಲಿ ಮನೆ ಕೊಡುವುದಿಲ್ಲ. ಈಕೆ ನಮ್ಮ ಅಬ್ಬತ್ತೆ. ಈ ತೋಟದವರು ಆಕೆಗೆ ರಕ್ಷಣೆ ಕೊಟ್ಟರು. ಈಕೆ ನಮಗೆ ರಕ್ಷಣೆ ಕೊಟ್ಟಿದ್ದಾಳೆ” ನಾನು ಆಲೋಚಿಸುತ್ತಿದ್ದೇನೆ.
“ನಾನು ಬರುವುದು ನಿನಗೆ ತೊಂದರೇನಾ?”
“ನೀನು ಬರುವುದರಿಂದ ನನ್ನೊಳಗೆ, ಈ ತೋಟದ ಒಳಗೆ ಕಾಂತಿಯೊAದನ್ನು ಬೆಳಗಿಸಿದೆ”.
ತದನಂತರ ಮಾತನಾಡದೆ ಮನೆಗೆ ಬಂದೆವು. ಅಬ್ಬತ್ತೆ ಬಾಗಿಲಲ್ಲಿ ನಿಂತಿದ್ದಾಳೆ.
“ಇವಳೇ ನನ್ನ ವೊಯ್ಯಿ” ಎಂದೆ.
ಅಬ್ಬತ್ತೆ ಆಕೆಯ ಸುತ್ತಾ ಕೈ ಹಾಕಿದಳು.
“ಬಾರಮ್ಮ! ಒಳಗೆ ಬಾ! ನಮ್ಮವನ್ನು ಹೇಳಿದ್ದಾನೆ ನಿನ್ನ ವಿಷಯ”
ಮಾರನೇಯ ದಿನ ವೊಯ್ಯಿಗೆ ಪಾಠಗಳನ್ನು ಹೇಳಲು ಪ್ರಾರಂಭಿಸಿದೆ.


ಅಂದಿನಿಂದ ಪ್ರಾರಂಭವಾಯಿತು ನನ್ನ ಬದುಕಿಗೆಲ್ಲಾ ಉಜ್ವಲವಾದ ಕಾಲ. ನೆನಪು ಮಾಡಿಕೊಳ್ಳೋಣವೆಂದರೆ, ನೆನಪು ಮಾಡಿಕೊಳ್ಳುವುದಕ್ಕೆ ಏನೂ ಇಲ್ಲ. ಅಸಲು ಆನಂದವೆಂದರೆ ಏನು, ಏನು ಇಲ್ಲದೆಯಿರುವುದೇ ಆನಂದ. ಇದರಿಂದ ಆನಂದ ಬಂದಿದೆಯೆಂದರೆ ಅದು ಆನಂದದಲ್ಲಿ ಲೋಪವೆ. ಚಿಕ್ಕ ಮಕ್ಕಳು ಸಂತೋಷದಿಂದ ಕಳೆಯುತ್ತಾರೆ ದಿನಗಳನ್ನು, ಮುಖ್ಯವಾಗಿ ಬೀದಿ ಮಕ್ಕಳು. ಎಲೆಗಳೊಂದಿಗೆ, ಕಡ್ಡಿಗಳೊಂದಿಗೆ, ಕಲ್ಲುಗಳೊಂದಿಗೆ ಕೆಲಸವಿಲ್ಲದೆ ಕಳೆಯುತ್ತಾರೆ ಕ್ಷಣಗಳನ್ನು. ಈಡೆನ್‌ನಲ್ಲಿ ಆಡಂ ಈವ್ ಹಾಗೆಯೆ ಕಳೆದಿರುತ್ತಾರೆ ಬದುಕನ್ನು. Forbidden apple ತಿನ್ನುವವರೆಗೂ.
ಅಬ್ಬತ್ತೆ ಏನು ಬೇಯಿಸಿಡುತ್ತಾಳೋ ಅದನ್ನು ತಿಂದು, ಎಲ್ಲ ನಿದ್ದೆ ಮಾಡುತ್ತಿದ್ದೆವೊ, ಏನು ಮಾತನಾಡಿಕೊಳ್ಳುತ್ತಿದ್ದೆವೊ ನೆನಪಿಲ್ಲ. ಕೆಲವು ಎಕರೆಗಳ ದೊಡ್ಡ ತೋಟದಲ್ಲಿ ಹೂಗಳು, ಹಣ್ಣುಗಳು, ಬೆಚ್ಚಗಾಗಿಸುವ ಬಿಸಿಲು, ಉದಯಿಸುವ ಸೂರ್ಯನಿಗೆ Good bye ಹೇಳುವ ನಕ್ಷತ್ರಗಳು ಇಷ್ಟೇ ನೆನಪು. ತೊಡುವ ಎರಡು ಜೊತೆ ಬಟ್ಟೆಯ ಹೊರತು ನಮಗೆ ಆಸ್ತಿಯಿಲ್ಲ. ಕಾಲೇಜಿಗೆ ಹೋದರೂ ಹೋದಂತಿರುತ್ತಿರಲಿಲ್ಲ. ನನ್ನ ಮನಸು ಆಕೆಯ ಸೀರೆಯ ನೆರಿಗೆಗಳಲ್ಲಿ ಬಚ್ಚಿಟ್ಟುಕೊಂಡಿರುತ್ತಿತ್ತು. ಅಷ್ಟೂ ಹೊತ್ತು ಕಾಲೇಜು ಮುಗಿಯುತ್ತಿರುವಂತೆ, ಯಾವುದಾದರೂ ಗಿಡದ ಕೊಂಬೆಯಲ್ಲಿಯೊ ಕುಳಿತುಕೊಂಡು ನನಗಾಗಿ ಎದುರುನೋಡುವ ಆಕೆಗಾಗಿ ಕೈಗಳೊಳಗೆ ಮುಖವನ್ನು ಹುದುಗಿಸುತ್ತಿದ್ದೆ. ಮನುಷ್ಯ ಸಂಚಾರವಿಲ್ಲದ ಕಾಡಿನಂತಹ ಅಷ್ಟು ದೊಡ್ಡ ತೋಟವನ್ನು ನಮಗಾಗಿಯೇ ನಿರ್ಮಿಸಿರಬಹುದೆಂಬ ಕೃತಜ್ಞತೆಯಿಂದ ತುಂಬಿಹೋಗುತ್ತಿತ್ತು ನನ್ನ ಹೃದಯ. ಇದೆಲ್ಲಾ ನಿಜಾನಾ? ಕನಸಾ? ಇಂತಹ ಆನಂದ ಅಸಲು ಇದೆಯಾ ಪ್ರಪಂಚದಲ್ಲಿ? ಹೀಗೆಯೇ ಇದು ಬಿಡುವುದಕ್ಕೆ ಸಾಧ್ಯನಾ? ಇದಕ್ಕೂ ಮೊದಲು ಅಸಲು ಬದುಕಿರುವೆವಾ? ಎಂದು ಬಣ್ಣದ ನೆರಳಿನಂತಹ ಆಲೋಚನೆಗಳು ಮಾತ್ರ ಬರುತ್ತಿತ್ತು. ಏನನ್ನು ತಿನ್ನುತ್ತಿರುವೆವೊ! ಏನನ್ನು ಉಡುತ್ತಿರುವೆವೊ ನೆನಪಿಲ್ಲ;
ಒಂದು ದಿನ ಪ್ರಿನ್ಸಿಪಾಲ್ ನನ್ನನ್ನು ಕರೆದು, “ಏನು ಈ ಬಟ್ಟೆಗಳು? ನಿನ್ನನ್ನು ಪಾಠ ಹೇಳಲು ಹೇಗೆ ಕ್ಲಾಸ್‌ಗೆ ಕಳುಹಿಸಲಿ?ʼʼ ಎಂದು ಕೇಳುವವರೆಗೂ, ಅಲ್ಲಿಯವರೆಗೂ ನನಗೆ ಪೂರ್ತಿಯಾಗಿ ಅರ್ಥವಾಗಲಿಲ್ಲ.
“ಬದಲಾಯಿಸಬೇಕಾ? ಯಾಕೆ? ಹೇಗೆ ಬದಲಾಯಿಸಬೇಕು?” ಎಂದು ಕೇಳಿದೆ.
ಆತ ಜಂಟಲ್‌ಮನ್‌, ನನ್ನ ಕುರಿತು ದಯೆ ಇರುವವನು. “ನನಗೆ ಅದೆಲ್ಲಾ ಗೊತ್ತಿಲ್ಲ. ನೀನು ಬದಲಾಯಿಸಿಕೊಳ್ಳಬೇಕು” ಎಂದು ಹೊರಟು ಹೋದರು.
ಒಂದು ದಿನ ಕಾಲೇಜಿಗೆ ಹೋದ ನಂತರ ಕಾಲೇಜಿಗೆ ರಜೆ ಎಂದರು. ಪೂರ್ವ ಸಿದ್ಧತೆಯಿಲ್ಲದೆ, ಆಕಸ್ಮಾತ್ತಾಗಿ ಮನೆಗೆ ಬಂದೆ. ಮನೆಯೊಳಗಿನಿಂದ ಅಬ್ಬತ್ತೆಯ ಅಳು ಕೇಳಿಸಿತು. ನಿಂತು ಕೇಳಿದೆ. ಅದು ತನ್ನ ಸ್ವಂತ ದುಃಖ, ನಡು-ನಡುವೆ ಯಾರನ್ನೋ ಬಯ್ಯುತ್ತಿದ್ದಾಳೆ. ಇದಕ್ಕೂ ಮೊದಲು ಆಗಾಗ ಅಳುತ್ತಿದ್ದರೂ, ನಾನು ವೊಯ್ಯಿ ಹೋಗಿ ನಮ್ಮ-ನಮ್ಮ ಸಂತೋಷಗಳಿಂದ ಆಕೆಯನ್ನು ನಗಿಸುತ್ತಿದ್ದೇವು. ವೊಯ್ಯಿ ಹೇಳುತ್ತಿದ್ದಳು. ನಾನು ಇಲ್ಲದೆಯಿರುವಾಗ ಆಗಾಗ ಹೀಗೆ ಅಳುತ್ತಿರುತ್ತಾಳೆ. ಲೋಕವನ್ನೆಲ್ಲಾ ಮರೆತರೆ ಮರೆಯುತ್ತೇನೆ. ಆದರೆ ಯಾರೊಂದಿಗೆ ಬದುಕುತ್ತಿರುವೆವೊ ಆ ಅಬ್ಬತ್ತೆಯನ್ನು, ಕಮಲಳನ್ನು ಮರೆತು ತಿರುಗುತ್ತಿರುವೆಯೆಂದು ನನಗೆ ತುಂಬಾ ನಾಚಿಕೆಯಾಯಿತು. ಗಬಗಬನೆ ಓಡುತ್ತ ಹೋಗಿ ಅಬ್ಬತ್ತೆಯ ಕತ್ತನ್ನು ತಲೆಯನ್ನು ತಬ್ಬಿಕೊಂಡೆ.
“ಯಾಕೆ ಅಬ್ಬತ್ತೆ, ಏನಿದು?”
“ಏನೂ ಇಲ್ಲ ಬಿಡಪ್ಪ” ಎಂದು ಕಣ್ಣನ್ನು ಒರೆಸಿಕೊಂಡಳು.
“ಏನಿದು ದುಃಖ? ಹೇಳು ಅತ್ತೆ”
ಅಷ್ಟೊಂದು ಉಕ್ಕಿ ಬರುವ ಆನಂದದಲ್ಲಿ ಬದುಕುತ್ತಿದ್ದ ನಾನು ಇನ್ನೊಬ್ಬರ ಕಷ್ಟವನ್ನು ಒಳಗೆ ತೆಗೆದುಕೊಳ್ಳಲಾರದೆ ಹೋದೆ. ಲೋಕವೆಲ್ಲಾ ಆನಂದದಿಂದ ಕಾಣಿಸುತ್ತಿದೆ” ಒಂದು ಹೊತ್ತು ಅಬ್ಬತ್ತೆ ಊಟ ಮಾಡಿ ಬಡಿಸದೆ ಹೋದರೆ, ಕಮಲ ಸ್ನಾನಕ್ಕೆ ನೀರು ಇಡದೇ ಹೋದರೆ, ತಿಳಿಯುತ್ತಿತ್ತು ನನ್ನ ಆನಂದ ಎಂತಹದೆAದು. ಈ ಗಾಳಿ, ಬಿಸಿಲು, ಹಗಲು, ರಾತ್ರಿ, ಗಿಡಗಳು ನೆರಳು, ಬೆಳದಿಂಗಳು ಎಲ್ಲವನ್ನು ಪ್ರಶ್ನೆಯಿಲ್ಲದೆ ಅನುಭವಿಸುತ್ತ, ಯಾವ ಒಂದರಲ್ಲಿ ಯಾವ ಲೋಪ ಬಂದರೂ ಬಯ್ಯಲು ಪ್ರಾರಂಭಿಸುತ್ತೇವೆ. ವಿಧಿಯನ್ನೋ, ವಿಧಾತನನ್ನೋ, ಎಷ್ಟೊಂದು ದೊಡ್ಡದಾದ ಈ ಲೋಕದಲ್ಲಿ ಶೃಂಗಾರಕ್ಕೆ ಹಿಡಿದು ತುಂಬಾ ದೊಡ್ಡ ಲೋಪವಿದು. ಪ್ರಿಯರು ಒಬ್ಬರಲ್ಲಿ ಒಬ್ಬರು ತನ್ಮಯರಾಗಿರುವಾಗ ಈ ಲೋಕವನ್ನೇ ಮರೆಯುತ್ತಾರೆ. ಹಾಗೆ ಮರೆಯದೆ ಹೋದರೆ ಅದು ದೊಡ್ಡ ಶೃಂಗಾರವಾಗುವುದಿಲ್ಲ.
ಆ ಬೆಳಗ್ಗೆ ಇಷ್ಟೊಂದು ಆನಂದಮಯವಾದ ಕಾಲದಲ್ಲಿ ಅಬ್ಬತ್ತೆ ಯಾಕೆ ಅಳುತ್ತಿರುವಳೆಂದು ನನಗೆ ಆಶ್ಚರ್ಯವಾಯಿತು. ಆಸ್ತಿಯೆಲ್ಲಾ ಹೋಗಿ ಲೋಕದಲ್ಲಿ ಎಲ್ಲಿಯೂ ದಿಕ್ಕಿಲ್ಲದೆ, ಮುಂದೆ ತನ್ನ ಜೀವನ ಏನಾಗುತ್ತದೆಯೋ ತಿಳಿಯದೆ ಬೆಳೆಯುತ್ತಿರುವ ಕಮಲಳನ್ನು ಏನು ಮಾಡಬೇಕೆಂದು ಅರ್ಥವಾಗದೆ ಹಾಗೆ ಕುಗ್ಗಿ ಹೋಗುತ್ತಿದ್ದರೆ ನನಗೆ ಆಶ್ಚರ್ಯ. ನಾನು ಮನೆಗೆ ಬರುವಾಗ ಹೋಗುವಾಗ ನನ್ನಿಂದ ಒಂದು ಸಣ್ಣ ದಯೆಯಿರುವ ಮಾತಿಗೆ ಬಾಗಿಲು ಹಿಡಿದುಕೊಂಡು ಎದುರು ನೋಡುತ್ತ ನಿಂತಿರುವ ಕಮಲಳ ಕಡೆಗೆ ನಾನು ಕಣ್ಣೆತ್ತಿ ನೋಡಿದೆನಾ? ಅಬ್ಬತ್ತೆಗೆ ನಮ್ಮ ಮೇಲಿನ ನಿರ್ವಾಜ್ಯ ಕರುಣೆಗೆ ಯಾವಾಗಲಾದರು ಎದುರು ಮಾತನಾಡಿದೆನಾ? ಆದರೂ ನನ್ನ ಜೀವನದಲ್ಲಿ ಬಹುದೊಡ್ಡ ಕಾಲವದು.
ಮತ್ತೆ ಮೊದಲು ಜಾರಿಬೀಳುವ ನಕ್ಷತ್ರಗಳ ಕಾಂತಿ. ಬೆಳದಿಂಗಳಲ್ಲಿ ಗುರುತಿಲ್ಲದೆ ಕರಗಿ ಹೋಗುವಂತೆ ನಮ್ಮ ಕಾಲವೆಲ್ಲಾ ಪ್ರೀತಿಯ ಮಾಧುರ್ಯದಲ್ಲಿ ತೇಲಿ ಹೋಯಿತು. ಆದರೆ ಎಷ್ಟು ಕಾಲ ಸಾಗುತ್ತದೆ? ನನ್ನ ಕಾಲೇಜಿನ ಪರೀಕ್ಷೆ ಮುಗಿಯುತ್ತಿರುವಂತೆ ನಾನು ಮೊಯ್ಯಿ ಹೊರಟು ಹೋಗಬೇಕು. ಅತ್ತ ತದನಂತರ ಅಬ್ಬತ್ತೆ ಏನಾಗುತ್ತಾಳೆ? ಎಂಬ ಆಲೋಚನೆಯಿಲ್ಲ. ಆ ಮುಂಜಾನೆ ಆಲೋಚಿಸುವುದು ತಪ್ಪಲಿಲ್ಲ. ನಾನೂ ವೊಯ್ಯಿ ಊಟ ಮಾಡುತ್ತಿದ್ದೇವೆ. ನಾವು ಏನು ತಿನ್ನುತ್ತಿರುವೆಂದು ನಮಗೆ ನೆನಪಿಲ್ಲ. ಕಿರುನಗೆಯಿಂದ ಬಡಿಸುತ್ತಿದ್ದಾಳೆ ಕಮಲ ನಮ್ಮ ಸಂತೋಷವನ್ನೆ ತನ್ನ ಸಂತೋಷ ಮಾಡಿಕೊಂಡು ಎಷ್ಟು ಹೊತ್ತಿಗೋ ನಮ್ಮ ನೋಟ ನಮ್ಮ ಸುತ್ತಲಿರುವ ತೋಟದ ಮೇಲೆ ನೆನ್ನೆ ರಾತ್ರಿ ಸುರಿದ ಮಳೆಯ ಹನಿಗಳು ಬಿಸಿಲಿನಲ್ಲಿ ಹೊಳೆಯುತ್ತ ಗಾಳಿಯಲ್ಲಿ ತಣ್ಣಗೆ ಎಲೆಗಳ ಮೇಲೆಯಿಂದ ಜಾರಿಹೋಗುತ್ತಿವೆ. ಇನ್ನೂ ಬರಲಿಲ್ಲವಲ್ಲಾ? ಎಂಬ ಕೇಕೆಗಳು ಮಾಡುತ್ತಿವೆ ಪಕ್ಷಿಗಳು ಕಮಲ ಭಯದಿಂದ “ಈ ಹೊತ್ತಿಗೆ ಈ ಸಾರು, ಮಜ್ಜಿಗೆ” ಎಂದಳು.
ತಲೆಯೆತ್ತಿ ನೋಡಿದೆ, ಏನೋ ಹೇಳುತ್ತಿದ್ದಾಳೆ.
“ಪಲ್ಯ ಮಾಡಲಿಲ್ಲ”
“ಪಲ್ಯ? ಪಲ್ಯ ಇಲ್ಲದಿದ್ದರೇನಂತೆ?” ಎಂದಳು ವೊಯ್ಯಿ.
ಮಜ್ಜಿಗೆ ಅನ್ನದ ಕೈಯನ್ನು ತೊಳೆದುಕೊಂಡು ತೋಟದ ಒಳಗೆ ಓಡಿದೆವು.

ಇದನ್ನೂ ಓದಿ: Sunday Read | ಹೊಸ ಪುಸ್ತಕ: ದೇವರಿಲ್ಲದ ವಾಡೆಯಲ್ಲಿ ಭೂತಮಾತೆಯ ಸ್ವಗತ
“ಪಲ್ಯಕ್ಕೆ ಬೇಕಾದ ಸೊಪ್ಪು ಕೊಳ್ಳಲು ಅವರ ಬಳಿ ಹಣವಿಲ್ಲ” ಎಂದಳು ವೊಯ್ಯಿ.
ಎಷ್ಟೊಂದು ಕುರುಡ ನಾನು. ನಮ್ಮೀಬ್ಬರಿಗೆ ಯಾಕೆ ಊಟವಿಡುತ್ತಾಳೆ ಅಬ್ಬತ್ತೆ? ಯಾಕಿಡಬೇಕು ಆಕೆ? ನಮ್ಮಿಂದ ಹಣವಿಲ್ಲ. ಸರಿ, ಒಂದು ಒಳ್ಳೇಯ ಮಾತು, ಒಂದು ಕಿರುನಗೆಯೂ ಕೂಡಾ! ತಕ್ಷಣ ಏನೇನೋ ನೆನಪಿಗೆ ಬಂದು ದೊಡ್ಡ ಪಶ್ಚಾತ್ತಾಪದಿಂದ ಅಬ್ಬತ್ತೆಯ ಬಳಿಗೆ ಓಡಿದೆ. ನಾವು ಹೋಗಿ ನೋಡುವ ಹೊತ್ತಿಗೆ ಅರ್ಧ ತಿಂದ ಸಾರು. ಅನ್ನ ತಟ್ಟೆಯ ಮುಂದೆ ಇಟ್ಟುಕೊಂಡು ನಿಶ್ಯಬ್ಧವಾಗಿ ಅಳುತ್ತಿದದ್ದಾಳೆ. ಆ ತಟ್ಟೆ ಒಂದು ಬಟ್ಟಲು ನಾನು ಎಷ್ಟು ಗೋಗೆರೆದರೂ ಅಳು ನಿಲ್ಲಿಸಲಿಲ್ಲ ಎಷ್ಟು ಆಕೆ ಪ್ರಯತ್ನಿಸಿದರೂ ಅಳುವನ್ನು ನಿಲ್ಲಿಸಲಾಗುತ್ತಿಲ್ಲ. ಆಕೆಗೆ, ಕೊನೆಗೆ “ನೋಡಪ್ಪ! ಸಮಯ ಬರುವ ಹೊತ್ತಿಗೆ ನನ್ನ ಬಳಿಗೆ ಸೇರಿದ ನನ್ನ ಸೋದರಳಿಯನಿಗೆ ತಿಂಡಿ ಇಡುವುದಕ್ಕೂ ಕೂಡಾ ಏನೂ ಇಲ್ಲದಂತೆ ಮಾಡಿದನವನು”.
ಅವನೆಂದರೆ ತನ್ನ ಆಸ್ತಿಯನ್ನೆಲ್ಲಾ ಕಬಳಿಸಿದ ಆ ಮೂರನೇಯ ಗಂಡ. ಅಷ್ಟೊಂದು ಆಸ್ತಿಯನ್ನು ಈಕೆಯ ಅನುಮತಿಯಿಲ್ಲದೆ ಆತ ಹೇಗೆ ಕಬಳಿಸಿದನೋ ಯಾರಿಗೂ ಗೊತ್ತಿಲ್ಲ!
ಬಿಡುವಾಗಿ ಕುಳಿತುಕೊಂಡು ವಿರಾಮವಾಗಿ ಸುತ್ತಲೂ ನೋಡಿದೆ.
“ನಿನ್ನ ಹತ್ತಿರ ಹಣವಿಲ್ಲವೇ ಅಬ್ಬತ್ತೆ?”
“ನಿನಗೇಕೆ ತಂದೆ ಈ ತಗಾದೆಯಲ್ಲಾ” ಎಂದಳು. ನನಗೆ ಗಟ್ಟಿಯಾದ ಅನುಮಾನ ವುಂಟಾಗಿ, ಕಮಲಳನ್ನು ಕೇಳಿ, ತಿಳಿದುಕೊಂಡೆ. ಕ್ರಮವಾಗಿ ಅಬ್ಬತ್ತೆ ಅಡುಗೆಯ ಬಟ್ಟಲುಗಳನ್ನು ಮಾರಿಕೊಳ್ಳುತ್ತಾಳೆ. ಅದರ ಬದಲಾಗಿ ಮಣ್ಣಿನ ಪಾತ್ರೆಗಳನ್ನು ಕೊಂಡು ಕೊಳ್ಳುತ್ತಾಳೆ. ನಮ್ಮಿಬ್ಬರಿಗೆ ಒಳ್ಳೇಯ ಊಟವನ್ನಿಟ್ಟು ತಾನು, ಕಮಲ ಸಾರು, ಗಂಜಿಯನ್ನು ಸುರಿದುಕೊಂಡು ತಿನ್ನುತ್ತಿದ್ದಾರೆ. ಆಕೆ ಬರುವ ಅಳಿಯನಿಗೆ ವರದಕ್ಷಿಣೆಗೆಂದು ನಾಯ್ಡು ರವರು ಆಕೆಯ ನಗಾನಾಣ್ಯಗಳನ್ನು ಭದ್ರಪಡಿಸಿದ್ದಾರೆ. ಪ್ರತಿ ತಿಂಗಳೂ ಇಬ್ಬರಿಗೂ ಸರಿ ಹೊಂದುವ ಅಕ್ಕಿಯ ಖರ್ಚನ್ನು ಕೊಡುತ್ತಾರಂತೆ. ಮೂರು ಮದುವೆಗಳ್ಳನ್ನಾದ ಆಕೆಯ ನೈತಿಕ ನಿಲುವು ಆತನ ದೃಷ್ಟಿಯಲ್ಲಿ ಅಷ್ಟೇ ಇರಬಹುದು. ನನ್ನ ಸಂಪಾದನೆ ರೂ.೧೫, ಆಕೆಗೆ ಸ್ವಲ್ಪ ಕೊಡಲು ಹೋದೆ. “ಯಾಕಪ್ಪಾ” ಇವು ನನಗೆ? ನನ್ನ ಸೋದರಳಿಯನಿಗೆ ತಿಂಡಿಯನ್ನೂ ಕೂಡಾ ಕೊಡಲಾಗದ ದರಿದ್ರದ ಮುಂಡೆಯಾಗಿ ಮಾಡಿಟ್ಟ ಆ ಮುಂಡೆಮಗ. ಇದನ್ನೆಲ್ಲಾ ಅವನಿಂದ ಪಡದೇ ಪಡೆಯುತ್ತೇನೆ. ನೀನು ಯಾಕೆ ಕೊಡುವುದು? ನಿನಗೆಷ್ಟಿದೆ? ಎಂದು ನನ್ನ ಭುಜದ ಮೇಲೆ ಬಿದ್ದು ಅತ್ತಳು. ಅಂದಿನಿಂದ ಯಾವುದೋ ಒಂದು ಸಮಯದಲ್ಲಿ ಪ್ರತಿದಿನ ಅಳುತ್ತಿದ್ದಳು. ನಾನು ಪ್ರತಿ ಸಾರಿ ಮುದ್ದು ಮಾಡಿ, ತಲೆನೆವರಿ ಸಮಾಧಾನಗೊಳಿಸುವವರೆಗೂ ಅಳುತ್ತಿದ್ದಳು.
“ಅಳಬೇಡ ಅಬ್ಬತ್ತೆ! ಡಿಗ್ರಿ ಮುಗಿಯುತ್ತಿರುವಂತೆ ನಿನ್ನನ್ನು ನನ್ನ ಹತ್ತಿರವಿಟ್ಟುಕೊಂಡು ಹಾಯಾಗಿರಿಸುತ್ತೇನೆ”.
“ನಿಜಾನಾ ತಂದೆ!” ಎನ್ನುತ್ತಿದ್ದಳು.
ತನ್ನ ಕಷ್ಟಗಳು ಬಗೆಹರಿದವೆಂದಲ್ಲ. ನನ್ನೊಂದಿಗೆ ತನ್ನ ಉನ್ನತವಾದ ಭವಿಷ್ಯತ್ತನ್ನು eಟಿರಿoಥಿ ಮಾಡುತ್ತಿರುವಂತೆ, ನನ್ನ ಜೀವನದಲ್ಲಿ ನನಗೆ ನಾನು ಮಾಡಿಕೊಳ್ಳಬೇಕೆಂದಿರುವಲ್ಲಿ ಇತರರಿಗೆ ಮಾಡಬೇಕೆಂದಿರುವುಗಳಲ್ಲಿ ತುಂಬಾ ಮಟ್ಟಿಗೆ ನೆರವೇರಲಿಲ್ಲ. ಆದರೆ ಅಬ್ಬತ್ತೆ ವಿಷಯದಲ್ಲಿ ನಾನೂ ವೊಯ್ಯಿ ಇಷ್ಟರಲ್ಲಿಯೇ ಎಷ್ಟು ಸಾರಿ ಉಪಕಾರ ಮಾಡಲಾದಿತೋ ನೆನಪಿಸಿಕೊಂಡು ಆಶ್ಚರ್ಯವಾಗುತ್ತದೆ.


ಚಳಿಗಾಲ ಬರುತ್ತಿದೆ. ಕೋಗಿಲೆಗಳು ಹವೆಯ ಪ್ರದೇಶಗಳಿಗೆ ಹೊರಟು ಹೋಗಿವೆ. ಮುಂಜಾನೆಯೆ ಪಾರಿಜಾತ ಹೂಗಳು ಬಿಳಿಯಾಗಿ ಗಿಡದ ಕೆಳಗೆ ಹರಡಿಕೊಂಡಿವೆ. ಚಿಗುರು ಬೆಳದಿಂಗಳು ಸೂಸುತ್ತಿದೆ. ದೂರದಲ್ಲಿ ಊರಿನಿಂದ ಪಟಾಕಿಗಳ ಸದ್ದು ಕೇಳಿ ಬರುತ್ತಿದೆ. ಗಿಡಗಳ, ಮೇಲೆ ಸೀತಾಫಲಗಳು ಬಿರಿದುಕೊಳ್ಳುತ್ತಿವೆ. ಮತ್ತೆ ನಮ್ಮ ಸಂತೋಷದಲ್ಲಿ ಎಲ್ಲವನ್ನು ಮರೆತು ಹೋದೆವು. ಗಿಡಗಳ ಕೊಂಬೆಗಳ ಮೇಲೆ ಮಲಗಿಕೊಂಡು ಮೇಲಕ್ಕೆ ನೋಡುತ್ತಿದ್ದರೆ ತೇಜೋವಂತನಾದ ಆ ನೀಲಿಯೆಲ್ಲಾ ಕಣ್ಣುಗಳು ಕಲ್ಪಿಸಿಕೊಂಡಿರುವ ಭ್ರಮೆಯೇನಾ? ಅಲ್ಲಿ ಏನೂ ಇಲ್ಲವಾ? ಎಂದು ಆಶ್ಚರ್ಯವಾಗುತ್ತದೆ. ಇಷ್ಟರಲ್ಲಿ ಒಂದು ದಿನ ಅಬ್ಬತ್ತೆ ಆಕಸ್ಮಾತ್ತಾಗಿ “ಇನ್ನು ಸಾಕು ಹೊರಟು ಹೋಗಿಯಪ್ಪ” ಎಂದಳು. ಸಿಡಿಲು ಬಡಿದಂತೆ ಅಲ್ಲಿಯೇ ಕುಸಿದುಬಿದ್ದೆ. ಕಾರಣವೇನೆಂದು ಆಲೋಚಿಸಲಿಲ್ಲ. ಈಗ ಎಲ್ಲಿಗೆ ಹೋಗುವುದು? ನನಗೆ ಮನೆ ಯಾರು ಕೊಡುತ್ತಾರೆ? ತಿಂಡಿ ಯಾರು ಇಡುತ್ತಾರೆ. ತೋಟದೊಳಗೆ ಹೋಗಿ ವೊಯ್ಯಿಗೆ ಹೇಳಿದೆ.
“ಇಷ್ಟೇನಾ! ಯಾವುದಾದರೂ ಗುಡಿಸಲಿಗೆ ಹೋಗೋಣ” ಎಂದಳು.
“ರವಿ ಬರುತ್ತಿರುವನೆಂದು ಭಯಪಟ್ಟಳೇನೊ’ ಹೌದು ರವಿ ಬರುತ್ತಿದ್ದಾನೆಂದು ಪತ್ರ ಬಂದಿತು. ಒಳ್ಳೇಯ ಮಾತು ಹೇಳಿದೆಯೆಂದು ಅರ್ಧಗಂಟೆಯಲ್ಲಿ ಹೊರಗಡೆಗೆ ಹೋಗಿ, ಲಕ್ಷ್ಮಿವಾರಪೇಟೆಯಲ್ಲಿ, ಹೊಲೆಯರ ಗುಡಿಸಲಿನಲ್ಲಿ ಖಾಲಿಯಿರುವ ಕುಟೀರವೊಂದು ಏರ್ಪಡಿಸಿಕೊಂಡು ಬಂದೆನು. ನಮಗೇನಾದರು ಸಾಮಾನುಗಳಾ? ಏನಾದರೂನಾ? ಎರಡು ಬಟ್ಟೆಗಳು ಎರಡು ಪುಸ್ತಕಗಳನ್ನು ಹಿಡಿದುಕೊಂಡು ನಗುತ್ತಾ.
“ಹೋಗುತ್ತಿದ್ದೇವೆ ಅಬ್ಬತ್ತೆ” ಎಂದು ಹೇಳಿ ಹೊರಟು ಹೋದೆವು.
ಕಣ್ಣೀರಿನೊಂದಿಗೆ ನಮ್ಮ ಕಮಲ ನಮ್ಮ ಕಡೆಗೆ ಹಾಗೆಯೇ ನೋಡುತ್ತ ನಿಂತಿದ್ದಳು. ನಮ್ಮ ಮನೆಯ ಪಕ್ಕದಲ್ಲಿಯೆ ನಮ್ಮ ಕ್ಯಾಂಟೀನು, ಮುಂಜಾನೆಯ ಹೊತ್ತಿಗೆಲ್ಲಾ, ದಮ್ಮಡಿಗೆ ಒಂದು ಸಣ್ಣ ಇಡ್ಲಿ. ಒಂದು ಪಾವ್ ಬಜ್ಜಿ ತಿನ್ನುತ್ತಿದ್ದೆವು. ಮತ್ತೆ ನಾನು ಕಾಲೇಜಿಗೆ, ವೊಯ್ಯಿ ಸ್ಕೂಲಿಗೆ ಹೋಗುವ ಮೊದಲು ಗೋದಾವರಿ ರೈಲ್ವೆ ಸ್ಟೇಷನ್‌ನ ರೋಡ್ ಪಕ್ಕದಲ್ಲಿ ಮಾರುವ ಉದ್ದಿನ ರೊಟ್ಟಿಯ ಎರಡು ಚೂರುಗಳನ್ನು ತಿನ್ನುತ್ತಿದ್ದೆವು. ರವಿಗೆ ಇಡುತ್ತಿದ್ದೆವು.

ಕೃತಿ: ಚಲಂ (ಆತ್ಮಕತೆ)

ಮೂಲ ಲೇಖಕ: ವೆಂಕಟಾಚಲಂ, ತೆಲುಗು

ಅನುವಾದ: ಲಕ್ಕೂರು ಸಿ. ಆನಂದ

ಪ್ರಕಾಶನ: ಸೃಷ್ಟಿ ಪ್ರಕಾಶನ, ಬೆಂಗಳೂರು

ಪುಟ 360, ಬೆಲೆ 350 ರೂ.

ಇದನ್ನೂ ಓದಿ: ಹೊಸ ಪುಸ್ತಕ | ಇಂಗ್ಲಿಷ್‌ ನಾಮಫಲಕ ತೆಗೆಯಿರಿ ಎಂದು ಬಿಎಂಶ್ರೀಗೆ ಹೇಳಿದ ದಿಟ್ಟ ವ್ಯಕ್ತಿ ಇವರು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

ಧವಳ ಧಾರಿಣಿ ಅಂಕಣ: ತನ್ನ ಬಾಣದಿಂದ ಆನೆಯನ್ನು ಕೊಲ್ಲಬಲ್ಲೆ ಎನ್ನುವ ಹಮ್ಮಿನಿಂದ ಶಬ್ದ ಬಂದ ಕಡೆ ಬಾಣವನ್ನು ಬಿಟ್ಟ. ಮರುಕ್ಷಣದಲ್ಲಿ ಮನುಷ್ಯನ ಕೂಗು ಕೇಳಿಬಂತು. ಓಡಿಹೋಗಿ ನೋಡಿದರೆ ಆತ ಬಿಟ್ಟ ಬಾಣ ದೇಹದಲ್ಲಿ ನೆಟ್ಟುಕೊಂಡ ಕಾರಣದಿಂದ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ಋಷಿಕುಮಾರನನ್ನು ಕಂಡ. ಎಲ್ಲವೂ ಕೈಮೀರಿ ಹೋಗಿತ್ತು.

VISTARANEWS.COM


on

king dasharatha dhavala dharini
Koo

ಕರ್ಮಫಲವನ್ನು ತಾನೇ ಅರಿತು ಅನುಭವಿಸಿದ ಸೂರ್ಯವಂಶದ ಮಹಾನ್ ಚಕ್ರವರ್ತಿ

dhavala dharini by Narayana yaji

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕವೆನ್ನುವುದು ದಶರಥನಿಗೆ ಮಹಾನ್ ಸಂಕಲ್ಪವಾಗಿತ್ತು. ಅದಕ್ಕಾಗಿಯೇ ಆತ ಏನೆಲ್ಲ ಕಸರತ್ತನ್ನು ಮಾಡಿದ್ದ ಎನ್ನುವುದನ್ನು ನೋಡಿದ್ದೇವೆ.

ಕೈಕೇಯಿ ಮಂಥರೆಯ ದುರ್ಬೋಧನೆಯಿಂದ ಎಷ್ಟರಮಟ್ಟಿಗೆ ಪ್ರಭಾವಿತಳಾಗಿದ್ದಳೆಂದರೆ ಅರಸನ ಯಾವ ಒದ್ದಾಟವೂ ಅವಳನ್ನು ಕರಗಿಸಲಿಲ್ಲ. ರಾಮನನ್ನು ಬಿಟ್ಟರೆ ತಾನು ಬದುಕಿರಲಾರೆ ಎನ್ನುವ ಮಾತುಗಳು ಕಾದ ಮರಳಲ್ಲಿ ಬಿದ್ದ ನೀರಿನಂತೆಯೇ ಇಂಗಿಹೋಯಿತು. ಕೈಕೇಯಿ ತಿರುಗಿ ರಾಜನಿಗೆ ಧರ್ಮೋಪದೇಶ ಮಾಡುತ್ತಾಳೆ. ಶೈಭ್ಯ, ಅಲರ್ಕ ಮೊದಲಾದ ರಾಜರ್ಷಿಗಳು ಪ್ರತಿಜ್ಞಾಬದ್ಧರಾಗಿ ತಮ್ಮ ತಮ್ಮ ಜೀವವನ್ನೇ ಒತ್ತೆಯಾಗಿರಿಸಿದ ಸಂಗತಿಯನ್ನು ಹೇಳುತ್ತಾ ಪರೋಕ್ಷವಾಗಿ ದೊರೆಯ ಸಾವಿನ ಕುರಿತು ತಾನು ಅಂಜುವವಳಲ್ಲ ಎನ್ನುತ್ತಾಳೆ. ಅವಳಿಗೆ ತನ್ನ ಮಗ ಭರತ ಪಟ್ಟಕ್ಕೇರಲೇ ಬೇಕಾಗಿದೆ. ಆಕೆ ಕೌಸಲ್ಯೆಯನ್ನು ಎಷ್ಟರಮಟ್ಟಿಗೆ ದ್ವೇಷಿಸುತ್ತಿದಳೆಂದರೆ “ರಾಮ ಪಟ್ಟಾಭಿಷೇಕವಾದೊಡನೆಯೇ ರಾಜಮಾತೆಯಾಗಿ ಸಕಲಪ್ರಜೆಗಳಿಂದ ಗೌರವವನ್ನು ಸ್ವೀಕರಿಸುವ ಕೌಸಲ್ಯೆಯನ್ನು ತಾನು ಒಂದು ದಿನವೂ ನೋಡಿಸಹಿಸಲಾರೆ ಎನ್ನುತ್ತಾಳೆ. ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿ ಕೌಸಲ್ಯೆಯೊಂದಿಗೆ ನಿತ್ಯವೂ ರಮಿಸಲು ಇಚ್ಛಿಸುವ ನಿನ್ನ ಹುನ್ನಾರ ತನಗೆ ಗೊತ್ತು ಎಂದು ಜರಿಯುತ್ತಾಳೆ.

ದಶರಥನಿಗೆ ಮಾತು ಬಾರದಾಗಿದೆ. ಆತ ರಾಮನನ್ನು ಕಾಡಿಗೆ ಕಳುಹಿಸುವುದು ಬೇಡವೆಂದು ಬಗೆಬಗೆಯಲ್ಲಿ ಗೋಳಾಡುತ್ತಾನೆ. ಸ್ತ್ರೀಸುಖಕ್ಕೊಸ್ಕರವಾಗಿ ತನ್ನ ಪ್ರಿಯಸುತನನ್ನೇ ಅರಣ್ಯಕ್ಕೆ ಕಳುಹಿಸಿದ ತನ್ನನ್ನು ಅತಿಕಾಮಿಯೆಂದು ಪುರಜನರು ಆಡಿಕೊಳ್ಳುವರು, ಆ ಅಪವಾದ ಬರುತ್ತದೆಯೆಂದು ಗೋಗೆರೆಯುತ್ತಾನೆ. “ಹೆಂಗಸರೆಲ್ಲ ಮೋಸಗಾರರು, ಸ್ವಾರ್ಥಪರಾಯಣರು ಎಂದು ಉದ್ವೇಗದಿಂದ ಕೂಗಾಡುತ್ತಾನೆ. ಬಹುಶಃ ಆಗ ಆತನಿಗೆ ತನ್ನ ಹಿರಿಯ ಹೆಂಡತಿಯರಾದ ಕೌಸಲ್ಯೆ ಮತ್ತು ಸುಮಿತ್ರೆಯರ ನೆನಪಾಗಿರಬೇಕು. ಇಲ್ಲ, ಪ್ರಪಂಚದಲ್ಲಿ ಎಲ್ಲಾ ಹೆಂಗಸರೂ ಹಾಗಿಲ್ಲ’ ಕೇವಲ ಭರತನ ತಾಯಿಗೆ ಮಾತ್ರ ತನ್ನ ಮಾತು ಅನ್ವಯಿಸುತ್ತದೆ ಎಂದು ಕೂಗಾಡುತ್ತಾನೆ. ರಾಮನನ್ನು ಅರಣ್ಯಕ್ಕೆ ಕಳುಹಿಸುವ ಒಂದು ಮಾತನ್ನು ಬಿಟ್ಟು ಬೇರೆ ಏನನ್ನಾದರೂ ಕೇಳು ಎನ್ನುವ ಮಾತುಗಳು ಕೈಕೇಯಿಯ ಮೇಲೆ ಪರಿಣಾಮ ಬೀರದಿದ್ದಾಗ ಕೊನೆಯ ಅಸ್ತ್ರವೆನ್ನುವಂತೆ ದಶರಥ ಲೋಕಮರ್ಯಾದೆಯನ್ನು ಮೀರಿ ಅನಾಥನಂತೆ ಗೋಳಾಡುತ್ತಾ ಆಕೆಯ ಕಾಲಿಗೆ ನಮಸ್ಕರಿಸಲು ಹೋಗುತ್ತಾನೆ. ಆಗ ಕೈಕೇಯಿ ತಿರಸ್ಕಾರದಿಂದ ತನ್ನ ಕಾಲನ್ನು ದೂರಕ್ಕೆ ಚಾಚಿದುದರಿಂದ ಅವೂ ಆತನಿಗೆ ಸಿಕ್ಕದೇ ರೋಗಿಯೊಬ್ಬ ತತ್ತರಿಸಿ ಬೀಳುವಂತೆ ನೆಲದಮೇಲೆ ಬೀಳುತ್ತಾನೆ. ಅವನ ಈ ಸ್ಥಿತಿಯನ್ನು ನೋಡಿದ ರಾಮಾಯಣದ ಕವಿ ವಾಲ್ಮೀಕಿಗೂ ದಶರಥನ ಮೇಲೆ ಹೇಸಿಗೆಯುಂತಾಗುತ್ತದೆ. ಚಕ್ರವರ್ತಿ ತನ್ನ ಘನತೆಯನ್ನು ಮರೆತು ಹೀಗೆ ಮಾಡಬಾರದಿತ್ತು ಎಂದು ಅಸಮಾಧಾನವನ್ನು ವ್ಯಕ್ತಪಡಿಸುತ್ತಾನೆ.

ಅತದರ್ಹಂ ಮಹಾರಾಜಂ ಶಯಾನಮತಥೋಚಿತಮ್.
ಯಯಾತಿಮಿವ ಪುಣ್ಯಾನ್ತೇ ದೇವಲೋಕಾತ್ಪರಿಚ್ಯುತಮ್৷৷ಅಯೋ. .13.1৷৷

ರಾಜಾಧಿರಾಜನಾದಂತಹ ದಶರಥನು ಕೈಕೇಯಿಯ ಪಾದಗಳ ಮೇಲೆ ಬೀಳಲು ಹೋಗಬಾರದಿತ್ತು(ಅತದರ್ಹಂ) ಎಂದು ಬಹಿರಂಗವಾಗಿಯೇ ಸಿಡಿಮಿಡಿಗೊಳ್ಳುತ್ತಾನೆ. ರಾಮಾಯಣದ ಈ ಸನ್ನಿವೇಶ ವಾಲ್ಮೀಕಿಯ ಕಣ್ಣಿಗೆ ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ಸ್ಪಷ್ಟವಾಗಿ ಕಾಣುತ್ತಿದೆ. ನಿರುಧ್ವಿಘ್ನವಾಗಿ ಕಥೆಯನ್ನು ಹೇಳುತ್ತಾಹೋಗಬೇಕಾದ ಕವಿ ಸೀತೆಗೆ ತೊಂದರೆಯಾದ ಉತ್ಕಟಕ್ಷಣಗಳಲ್ಲಿ ರಸಭಾವವನ್ನು ಹತ್ತಿಕ್ಕಲಾರದೇ ತಾನೇ ಕಥೆಯೊಳಗೆ ಪ್ರವೇಶಿಸುವುದುಂಟು. ಆದರೆ ಇಲ್ಲಿ ಮಾತ್ರ ಆತನಿಗೆ ದಶರಥನ ಒಟ್ಟಾರೆಯ ವ್ಯವಹಾರವೇ ರೇಜಿಗೆ ಹುಟ್ಟಿಸಿದೆ. ಕೈಕೇಯಿಯನ್ನು ಇಕ್ಷಾಕುವಂಶಕ್ಕೇ ಅನರ್ಥಕಾರಿಣಿಯೆಂದು ತಿರಸ್ಕಾರದಿಂದ ಕವಿಹೇಳುತ್ತಾನೆ. ಸೂರ್ಯವಂಶದ ಪುಣ್ಯದ ಕಾರಣದಿಂದ ದಶರಥನಿಗೆ ಕೈಕೇಯಿಯ ಪಾದಗಳು ಸಿಗಲಿಲ್ಲ. ಎನ್ನುತ್ತಾನೆ. ಈ ಭಾಗವನ್ನು ದಶರಥವಿಲಾಪವೆನ್ನುವ ಹೆಸರಿನಿಂದ ಕರೆದರೂ ಇಲ್ಲಿ ಕಾಳಿದಾಸನ ಪ್ರಸಿದ್ಧಕಾವ್ಯ ರಘುವಂಶದ ಅಜವಿಲಾಪ ನೆನಪಿಗೆ ಬರುತ್ತದೆ. ರಘುವಂಶದಲ್ಲಿ ಅಜ ಮತ್ತು ಇಂದುಮತಿ ದಂಪತಿಗಳ ಪ್ರೇಮದ ವಿಷಯ ಪ್ರಸಿದ್ಧ. ದಿವ್ಯಪುಷ್ಪಮಾಲೆಯೊಂದು ಅಜನ ಪತ್ನಿ ಇಂದುಮತಿಯಮೇಲೆ ಬಿದ್ದಾಗ ಅವಳು ಮೃತಳಾಗುತ್ತಾಳೆ. ಆಗ ಅಜ ತನ್ನ ಪತ್ನಿಗಾಗಿ ಮಾಡುವ ದುಃಖವು ಅಜವಿಲಾಪವೆಂದೇ ಪ್ರಸಿದ್ಧಿಯಾಗಿದೆ. ಪತ್ನಿಯ ವಿರಹವನ್ನು ತಾಳಲಾರದೇ ಕುಗ್ಗಿ ಕುಗ್ಗಿ ಸಾಯುವ ಅಜನೂ ಸ್ತ್ರೀ ಕಾರಣದಿಂದ ಸಾಯುತ್ತಾನಾದರೂ ಅದು ಪ್ರೇಮಕಾವ್ಯದ ಉತ್ತುಂಗಗಳಲ್ಲೊಂದೆಂದು ಪರಿಗಳಿಸಲ್ಪಟ್ಟಿದೆ. ಅದರ ವಿರುದ್ಧವಾಗಿ ಅಜನ ಮಗನಾದ ದಶರಥನ ಒದ್ದಾಟವಿದೆ. ಅವನ ವಿಲಾಪಕ್ಕೆ ಸಹಾನುಭೂತಿಯನ್ನು ವ್ಯಕ್ತಪಡಿಸಲು ಯಾರೂ ಬರುವುದಿಲ್ಲ. ಅವನ ವಿಲಾಪಕ್ಕೆ ರಾತ್ರಿಯೇ ಹೆದರಿ ಓಡಿಹೋಯಿತು.

ಬೆಳಗಾದರೂ ದೊರೆ ಗೋಳಾಡುವುದನ್ನು ಬಿಟ್ಟು ರಾಮನನ್ನು ಪಟ್ಟಗಟ್ಟುವ ಯಾವ ಸೂಚನೆಯನ್ನೂ ನೀಡುವುದಿಲ್ಲ. ಎಲ್ಲಿಯಾದರೂ ಬೇರೆಯವರಿಗೆ ತಿಳಿದರೆ ತನ್ನ ಕೆಲಸ ಕೆಟ್ಟಿತೆನ್ನುವ ಚಿಂತೆ ಕೈಕೇಯಿಯಲ್ಲುಂಟಾಯಿತು. ರಾಜನನ್ನು ಧರ್ಮಪರಿಪಾಲನೆಯೆನ್ನುವ ಹಗ್ಗದಲ್ಲಿ ಕಟ್ಟಿಹಾಕಿದ್ದಳು.

ಸತ್ಯಮೇಕಪದಂ ಬ್ರಹ್ಮ ಸತೇ ಧರ್ಮಃ ಪ್ರತಿಷ್ಠಿತಃ
ಸತ್ಯಮೇವಾಕ್ಷಯಾ ವೇದಾಃ ಸತ್ಯೇನೈವಾಪ್ಯತೇ ಪರಮ್ II ಅಯೋ.14-7II

ಸತ್ಯವೆನ್ನುವುದೇ ಬ್ರಹ್ಮವಾಚಕವಾದ ಪ್ರಣವಸ್ವರೂಪವು. ಸತ್ಯದಲ್ಲಿಯೇ ಸಮಸ್ತ ಧರ್ಮಗಳೂ ಅಡಗಿರುವವು. ಕ್ಷಯವೃದ್ಧಿಗಳಿಲ್ಲದ ವೇದಗಳು ಸತ್ಯದ ಸ್ವರೂಪಗಳೇ ಆಗಿವೆ. ಪರಮೋತ್ಕ್ರಷ್ಟವಾದ ಲೋಕಗಳೂ ಸತ್ಯದ ಅವಲಂಬನೆಯಿಂದಲೇ ಲಭಿಸುತ್ತವೆ.

ಸಮಗ್ರವಾದ ಉಪನಿಷತ್ತಿನ ಸಾರವನ್ನು ಸಾರುವ ಈ ಮಾತು ಕೈಕೇಯಿಯಿಂದ ಬೇರೆ ಯಾವ ಸಂದರ್ಭದಲ್ಲಿಯಾದರೂ ಬಂದಿದ್ದರೆ ಆಕೆಯನ್ನು ಗಾರ್ಗಿ, ಲೋಪಾಮುದ್ರಾ ಮೊದಲಾದವರಸಾಲಿಗೆ ಸೇರಿಸಿಬಿಡುತ್ತಿದ್ದರೇನೋ. ಆಕೆಯ ತಂದೆ ಅಶ್ವಪತಿ ವೈಶ್ವಾನರ ವಿದ್ಯೆಯನ್ನು ಉದ್ಧಾಲಕನಿಗೆ ಕಲಿಸಿದ ಕುರಿತು “ಛಾಂದೋಗ್ಯ ಉಪನಿಷತ್ತಿನಲ್ಲಿ ಬರುತ್ತದೆ”. ರಾವಣನೂ ಸಹ ಎಲ್ಲಾ ವೇದಗಳನ್ನು ಓದಿಕೊಂಡಿದ್ದ. ಮೂಲತಃ ಸ್ವಭಾವದಲ್ಲಿ ಸಾತ್ವಿಕ ಗುಣಗಳಿಲ್ಲದಿದ್ದರೆ ಅವೆಲ್ಲವೂ ವ್ಯರ್ಥವಾಗುತ್ತದೆ. ಕೈಕೇಯಿಗಾಗಿರುವುದೂ ಅದೇ. ತನಗೆ ತಿಳಿದಿರುವ ಧರ್ಮಸೂತ್ರಗಳನ್ನು ತನ್ನ ಸ್ವಾಥಕ್ಕಾಗಿ ಬಳಸಿಕೊಳ್ಳುತ್ತಿದ್ದಾಳೆ. ಗಂಗಾನದಿಯೇ ಆದರೂ, ಬಚ್ಚಲುಮನೆಯಿಂದ ಹೊರಬಂದರೆ ಅದನ್ನು ಯಾರೂ ತೀರ್ಥವೆಂದು ಪರಿಗಣಿಸುವುದಿಲ್ಲ. ರಾಜನನ್ನು ಕರೆದೊಯ್ಯಲು ಸುಮಂತ್ರ ಕೈಕೇಯಿಯ ಅರಮನೆಗೆ ಬಂದಾಗ ಎಲ್ಲದರಲ್ಲಿಯೂ ಸೋತ ರಾಜನೇ “ರಾಮನನ್ನು ನೋಡಬೇಕೆಂದಿದ್ದೇನೆ, ಅವನನ್ನಿಲ್ಲಿಗೆ ಕರೆದುಕೊಂಡು ಬಾ” ಎನ್ನುತ್ತಾನೆ. ಆಗಲೆಂದು ಹೊರಟ ಸುಮಂತ್ರನಿಗೆ ಮನಸ್ಸಿನಲ್ಲಿ ಏನೋ ಒಂಡು ಸಂಶಯಕಾಡಿತು. ಸಭೆಗೆಬಂದವ ಅದಾಗಲೇ ಬಂದುಸೇರಿದ್ದ ಅರಸರ ವಿಷಯಗಳನ್ನು ತಿಳಿಸುವ ನೆವಮಾಡಿ ಮತ್ತೊಮ್ಮೆ ಕೈಕೇಯಿಯ ಅಂತಃಪುರಕ್ಕೆ ಬಂದ. ಕೈಕೇಯಿಗೆ ರಾಮನನ್ನು ಗುಪ್ತವಾಗಿ ಅರಣ್ಯಕ್ಕೆ ಕಳುಹಿಸಿ ಭರತನನ್ನು ಪಟ್ಟಾಭಿಷೇಕಕ್ಕೆ ಏರಿಸಬೇಕಿತ್ತು. ಚಾಣಾಕ್ಷಳಾಗಿದ್ದ ಆಕೆಗೆ ಈ ವಿಷಯ ಬಹಿರಂಗಕ್ಕೆ ಬಂದರೆ ಸಾಮಂತರೆಲ್ಲರೂ ತಿರುಗಿಬೀಳುವರು ಎನ್ನುವುದರ ಅರಿವಿತ್ತು. ಅದಕ್ಕಾಗಿಯೇ ಅವಳು ರಾಮ ತನ್ನ ಮನೆಗೇ ಬರಲಿ ಎಂದು ರಾಜನನ್ನು ಒತ್ತಾಯಿಸಿದಳು. ಎರಡನೆಯ ಸಾರಿ ಸುಮಂತ ಬಂದಾಗ ಸ್ವಲ್ಪ ಸಿಟ್ಟಿನಿಂದಲೇ ರಾಮನನ್ನು ಇಲ್ಲಿಗೆ ಕರೆತರಬೇಕು. ಇದು ತನ್ನ ಆಜ್ಞೆ ಎಂದು ಕಠೋರವಾಗಿಯೇ ಹೇಳುತ್ತಾನೆ. “ದಶರಥನ ಮಾತು ಸೋತ ಹೊತ್ತು ಅದು”. ದೊರೆ ಅಸಹಾಯಕನಾಗಿದ್ದ. ತನ್ನೆದುರೇ ತನ್ನ ಪರವಾಗಿ ಕೈಕೇಯಿ ರಾಮನಲ್ಲಿ ತನ್ನ ವರದ ಕುರಿತು ಒಡಂಬರಿಸುತ್ತಿರುವಾಗ ಮೌನವಾಗಿದ್ದ. ನಾಲಿಗೆ ಮಾತನ್ನು ಆಡುವುದು ಬುದ್ಧಿಯಬಲದಿಂದ. ದಶರಥನ ಬುದ್ಧಿಯನ್ನು ಸಂಪೂರ್ಣವಾಗಿ ಕೈಕೇಯಿ ಆಕ್ರಮಿಸಿಕೊಂಡಿದ್ದಳು. ರಾಮನ ಪ್ರಿಯಮಾತೆ ಕೈಕೇಯಿ ರಾಜನ ಪರವಾಗಿ ಆಡುವ ಮಾತಾಗಿದ್ದಳು. ಸಮಯ ಸರಿದಷ್ಟೂ ತನಗೇ ಅಪಾಯವೆಂದು ಅವಳಿಗೆ ಅರಿವಾಗತೊಡಗಿತು. ತಂದೆಯ ನೋಡಲು ಬಂದ ರಾಮ ಆತನ ಚಿಂತೆಗೆ ಕಾರಣವನ್ನು ಕೇಳೆದರೆ ಆತನಲ್ಲಿ ದೊರೆಯ ಮನಸ್ಸಿನಲ್ಲಿರುವುದು ಭರತನು ರಾಜನಾಗುವ ಮತ್ತು ರಾಮನ ಅರಣ್ಯಗಮನದ ವರಗಳನ್ನು ಹೇಳುತ್ತಾಳೆ. ಅಷ್ಟೇ ಅಲ್ಲ,’ “ಎಲ್ಲಿಯವರೆಗೆ ನೀನು ಈ ಅಯೋಧ್ಯೆಯನ್ನು ಬಿಟ್ಟು ಅರಣ್ಯಕ್ಕೆ ಹೋಗುವುದಿಲ್ಲವೋ ಅಲ್ಲಿಯವರೆಗೆ ರಾಜನು ಸ್ನಾನವನ್ನೂ ಮಾಡುವುದಿಲ್ಲ, ಊಟವನ್ನೂ ಮಾಡುವುದಿಲ್ಲ” ಎನ್ನುವ ಮಾತನ್ನು ಹೇಳಿದಾಗ ರಾಮ ಇನ್ನು ತಡಮಾಡುವುದು ಸರಿಯಲ್ಲವೆಂದು ಅರಣ್ಯಕ್ಕೆ ಹೊರಟಕಥೆ ಎಲ್ಲರಿಗೂ ಚಿರಪರಿಚಿತ.

dhavala dharini king dasharatha

ದಶರಥನಿಗೆ ರಾಮನ ಅಗಲುವಿಕೆಯ ದುಃಖಕ್ಕಿಂತ ಆತ ಸುಮಂತ್ರನ ಹತ್ತಿರ ತನ್ನ ತಂದೆ ಮತ್ತು ತಾಯಿಗೆ ಹೇಳುವ ಸಂದೇಶ ಇನ್ನಷ್ಟು ಶೋಕವನ್ನು ಕೊಡುತ್ತದೆ. ರಾಮ ತನ್ನ ತಾಯಿಗೆ ತಾಳ್ಮೆಯಿಂದ ಇರಲು ಹೇಳಿಕಳುಹಿಸುತ್ತಾನೆ. ಹದಿನಾಲ್ಕುವರ್ಷಗಳ ತನಕ ಹೇಗೋ ಭರತನ ಜೊತೆ ಹೊಂದಿಕೊಂಡು ಹೋಗು ಎಂದಿದ್ದ. ಭರತನಿಗೂ ಕೈಕೇಯಿಯಂತೇ ತನ್ನ ತಾಯಯಿಂದರನ್ನು ನೋಡಿಕೊಳ್ಳುವಂತೆ ಕಾಠಿಣ್ಯದಿಂದ ತುಂಬಿದ ಎಚ್ಚರಿಕೆಯ ಸಂದೇಶನ್ನು ಕಳಿಹಿಸುತ್ತಾನೆ. ಕೌಸಲ್ಯಯ ಕುರಿತು ಹೇಳುವಾಗ ರಾಮನ ಕಣ್ಣಲ್ಲಿ ನೀರು ಹರಿಯುತ್ತಿರುವುದನ್ನು ಕಂಡ ಲಕ್ಷ್ಮಣ ಕ್ರುದ್ಧನಾಗಿರುವ ವಿಷಯವನ್ನು ಹೇಳುವಾಗ ಅರಸನಿಗೆ ಕಾಮಮೋಹಿತನಾಗಿದ್ದ ತಾನೇ ಅವಸರದಿಂದ ಕೈಕೇಯಿಯನ್ನು ಓಲೈಸಲು ಹೋದೆ ಅನಿಸುತ್ತದೆ. ರಾಜ ಯಾವ ನಿರ್ಣಯಗಳನ್ನು ಕೈಗೊಳ್ಳುವಾಲೂ ಮೊದಲು ಅಮಾತ್ಯರೊಡನೆ ಸಮಾಲೋಚಿಸಿ ಅವರ ಸಲಹೆಪಡೆದು, ಅದು ಧರ್ಮಸಮ್ಮತವಾಗಿದ್ದರೆ ತನಗೆ ಯುಕ್ತವಾದ ನಿರ್ಣಯವನ್ನು ಕೈಗೊಳ್ಳಬೇಕು. ಇಲ್ಲಿ ಅದೇನನ್ನೂ ಮಾಡದೇ ಇರುವ ಅಪರಾಧೀ ಭಾವ ಕಾಡುತ್ತದೆ. ವನವಾಸಕ್ಕೆ ಹೊರಟ ರಾಮ, ಸೀತಾ ಲಕ್ಷ್ಮಣರು ನಗುತ್ತಲೇ ಹೊರಟರು, ಗುಹನಲ್ಲಿ ಆಲದ ಹಾಲನ್ನು ತರಿಸಿ ತಪಸ್ವಿಗಳಂತೆ ಜಟಾಧಾರಿಯಾದ ವಿಷಯವನ್ನು ಕೇಳಿದ ಕೌಸಲ್ಯೆಯ ಮಾತ್ರಭಾವಕ್ಕೆ ಬಲವಾದ ನೋವನ್ನು ಕೊಡುತ್ತದೆ. ಅನೇಕವರ್ಷಗಳಕಾಲ ಧಶರಥನಿಂದ ಅಲಕ್ಷಕ್ಕೆ ಒಳಗಾದರೂ ಆಕೆ ಅದನ್ನೆಲ್ಲ ಸಹಿಸಿಕೊಂಡು ಮೌನಿಯಾಗಿದ್ದವಳು ಬಲುತೀಕ್ಷ್ಣವಾದ ಮಾತುಗಳಿಂದ ಗಂಡನನ್ನು ನಿಂದಿಸುತ್ತಾಳೆ. ಕೊನೆಯದಾಗಿ “ಮಹರಾಜಾ! ನಿನ್ನ ಈ ದುಶ್ಚರ್ಯೆಯಿಂದಾಗಿ ನಾನು ಮತ್ತು ನನ್ನ ಮಗನು ಮಾತ್ರ ವಿನಾಶ ಹೊಂದಲಿಲ್ಲ. ರಾಮನನ್ನು ಕಾಡಿಗಟ್ಟಿ ರಾಷ್ಟ್ರಸಹಿತವಾದ ರಾಜ್ಯವನ್ನು ಹಾಳುಮಾಡಿದೆ. (ಹತಂ ತ್ವಯಾ ರಾಜ್ಯಮಿದಂ ಸರಾಷ್ಟ್ರಂ ಹತಸ್ತಥಾತ್ಮಾ ಸಹ ಮಂನ್ತ್ರಿಭಿಶ್ಚ) ಮಂತ್ರಿಗಳೊಡನೇ ನೀನೂ ಹಾಳಾದೆ” ಎನ್ನುವ ಕಠೋರಮಾತುಗಳನ್ನಾಡುತ್ತಾಳೆ.

ಅದುತನಕ ಅದುಮಿಟ್ಟುಕೊಂಡ ಅವಮಾನ, ತಿರಸ್ಕಾರಗಳೆಲ್ಲವೂ ಸ್ಪೋಟಗೊಂಡಹೊತ್ತು ಅದು. ಆಕೆಯ ಮಾತುಗಳು ಎಷ್ಟು ತೀಕ್ಷ್ಣವಾಗಿತ್ತೆಂದರೆ ದಶರಥ ಅದನ್ನು ಕೇಳಿದವನೇ ಮೂರ್ಛಿತನಾದ. ಆತನನ್ನು ಉಪಚರಿಸಿದ ಕೌಸಲ್ಯೆ ತಾನು ಹಾಗೇ ಮಾತಾಡಬಾರದಾಗಿತ್ತೆಂದು ದುಃಖಪಡುತ್ತಾಳೆ. ದಶರಥನ ಕಾಲಿಗೆ ಬಿದ್ದು ತನ್ನನ್ನು ಕ್ಷಮಿಸು ಎಂದು ಕೇಳಿಕೊಳ್ಳುತ್ತಾಳೆ. ಕೌಸಲ್ಯಾ ಮತ್ತು ಸುಮಿತ್ರಾ ಇಬ್ಬರೂ ಸೇರಿ ಗಂಡನ ಶುಶ್ರೂಷೇ ಮಾಡುತ್ತಾ ತಾವೇ ದುಃಖಿಸುತ್ತಲೂ ಇರುತ್ತಾರೆ. ದಶರಥನಿಗೆ ತಾನು ಇಷ್ಟೆಲ್ಲಾ ಒಳ್ಳೆಯ ಕಾರ್ಯವನ್ನು ಮಾಡಿದರೂ ತನಗೆ ಏಕೆ ಹೀಗೆ ಆಯಿತು ಎಂದು ಚಿಂತಿಸುತ್ತಾ ಯಾವುದೋ ಒಂದು ವಿಷಯವನ್ನು ಹೇಳಲೋ ಬೇಡವೋ ಎನ್ನುವಂತೆ ಇದ್ದ. ಆರನೆಯದಿನದ ಅರ್ಧರಾತ್ರಿಯಲ್ಲಿ ಇದ್ದಕ್ಕಿದ್ದಂತೆ ತನ್ನ ಪುತ್ರವಿಯೋಗಕ್ಕೆ ಕಾರಣವಾದ ತನ್ನ ಕರ್ಮಫಲದ ಕುರಿತು ಹೇಳಲು ನಿಶ್ಚಯಿಸಿದ. ಅದು ಎಲ್ಲರಿಗೂ ತಿಳಿದ ಕಥೆಯಾದ ಶ್ರವಣಕುಮಾರನ ಕಥೆ, ರಾಮಾಯಣದಲ್ಲಿ ಶ್ರವಣಕುಮಾರ ಎನ್ನುವ ಹೆಸರಿಲ್ಲ. ಕರಣ ಎಂದು ಆತನ ಹೆಸರು. ಆತನ ತಂದೆ ಓರ್ವ ಋಷಿಯಾಗಿದ್ದ. ಈ ಕಥೆ ಒಂದೇ ರೀತಿಯದಾದರೂ ಕಾಲಾಂತರದಲ್ಲಿ ಬೇರೆ ಬೇರೆ ರಾಮಾಯಣಗಳಲ್ಲಿ ಶ್ರವಣಕುಮಾರ ಎನ್ನುವ ಹೆಸರು ಬಂತು.

ಈ ಘಟನೆ ನಡೆಯುವಾಗ ದಶರಥನಿಗೆ ಪ್ರಾಯದ ಕಾಲ. ಆತ ಶಬ್ದವೇಧಿ ವಿದ್ಯೆಯಲ್ಲಿ ಮಹಾಚತುರ ಎನ್ನುವ ಕೀರ್ತಿ ಹಬ್ಬಿತ್ತು. ಅದನ್ನು ಪ್ರಯೋಗಿಸುವ ಹವ್ಯಾಸ ದೊರೆಗೆ. ಹಾಗಾಗಿ ಕಾಡಿಗೆ ಹೋಗಿ ಬೇಟೆಯಾಡುವ ವ್ಯಸನವನ್ನು ಹಚ್ಚಿಕೊಂಡಿದ್ದ. ಯುವರಾಜನಾಗಿದ್ದ ಆತನಿಗೆ ಆಗಿನ್ನೂ ಮದುವೆಯಾಗಿರಲಿಲ್ಲ (ದೇವ್ಯನೂಢಾ ತ್ವಮಭವೋ ಯುವರಾಜೋ ಭವಾಮ್ಯಹಮ್). ಮಳೆಗಾಲದ ಒಂದು ದಿನ ಬೇಟೆಗೆ ಹೋದಾಗ ಅನೆ ನೀರು ಕುಡಿಯುತ್ತಿರುವ ಸದ್ದು ಕೇಳಿಬಂತು. ತನ್ನ ಬಾಣದಿಂದ ಆನೆಯನ್ನು ಕೊಲ್ಲಬಲ್ಲೆ ಎನ್ನುವ ಹಮ್ಮಿನಿಂದ ಶಬ್ದ ಬಂದ ಕಡೆ ಬಾಣವನ್ನು ಬಿಟ್ಟ. ಮರುಕ್ಷಣದಲ್ಲಿ ಮನುಷ್ಯನ ಕೂಗು ಕೇಳಿಬಂತು. ಓಡಿಹೋಗಿ ನೋಡಿದರೆ ಆತ ಬಿಟ್ಟ ಬಾಣ ದೇಹದಲ್ಲಿ ನೆಟ್ಟುಕೊಂಡ ಕಾರಣದಿಂದ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ಋಷಿಕುಮಾರನನ್ನು ಕಂಡ. ಎಲ್ಲವೂ ಕೈಮೀರಿ ಹೋಗಿತ್ತು. ಆತನೇ ಕುರುಡರಾದ ತನ್ನ ತಂದೆಯ ವಿಷಯವನ್ನು ಹೇಳಿ ಅವರಿಗೆ ನೀರನ್ನು ತೆಗೆದುಕೊಂಡು ಹೋಗು ಎಂದು ಕೇಳಿದ. ದಶರಥ ಯೌವನ ಮದದಿಂದ ಅಪರಾಧವನ್ನು ಮಾಡಿದರೂ ಪಶ್ಚಾತ್ತಾಪದಿಂದ ತೋಯ್ದು ಹೋಗಿದ್ದ. ಕುರುಡ ದಂಪತಿಗಳ ಬಳಿಗೆ ಬಂದು ಪ್ರಾಮಾಣಿಕವಾಗಿ ನಡೆದ ಸಂಗತಿಯನ್ನು ಹೇಳಿದ. ಬಾಲಕನ ಶವ ಸಂಸ್ಕಾರವನ್ನು ಅವರ ಹತ್ತಿರವೇ ಮಾಡಿಸಿದ. ಉದ್ಧೇಶಪೂರ್ವಕವಾಗಿ ತನ್ನ ಮಗನನ್ನು ಕೊಲ್ಲದ ಕಾರಣ ದೊರೆಗೆ ಬ್ರಹ್ಮಹತ್ಯಾ ಶಾಪವು ತಟ್ಟದು ಎಂದು ಹೇಳಿದರು. ಸಾಯುವ ಕಾಲದಲ್ಲಿ ತಮಗೆ ಆದ ರೀತಿಯಲ್ಲಿಯೇ ನಿನಗೂ ಪುತ್ರವಿಯೋಗವುಂಟಾಗಲಿ ಎಂದು ಶಾಪವನ್ನಿತ್ತು ಮಗನ ಚಿತೆಯನ್ನು ಏರಿ ದಿವ್ಯ ಶರೀರವನ್ನು ಧರಿಸಿ ಸ್ವರ್ಗಕ್ಕೆ ಹೋದರು.

king dasharatha kaikeyi dhavala dharini column

ರಾಜ ಕಾಲಾಂತರದಲ್ಲಿ ಅದನ್ನೆಲ್ಲ ಮರೆತಿದ್ದ. ಈಗ ರಾಮನ ಅಗಲುವಿಕೆಯೆನ್ನುವದು ಆತನಲ್ಲಿ ಅಪರಾಧೀ ಭಾವವನ್ನು ಮೂಡಿಸಿದೆ. ತನ್ನ ಕೊನೆಯ ದಿನಗಳು ಹತ್ತಿರ ಬಂತು ಎಂದು ದೊರೆಗೆ ಅನಿಸಲು ಸುರುವಾಯಿತು. ಸತ್ಯವಂತನಾದ, ಧರ್ಮಮಾರ್ಗದಲ್ಲಿ ನಡೆದ ತನಗೆ ಈ ಗತಿ ಏಕೆ ಬಂತು ಎಂದು ಚಿಂತಾಮಗ್ನನಾಗಿರುವಾಗ ಅವನಿಗೆ ತಾನೆಸಗಿದ ಈ ದುಷೃತ್ಯ ನೆನಪಿಗೆ ಬಂತು. ಪಶ್ಚಾತ್ತಾಪದಿಂದ ತೋಯ್ದು ಹೋಗಿದ್ದ. ಮುನಿಯ ಶಾಪ ಫಲಿಸುವ ಕಾಲ ಬಂತು ಎಂದು ಕೌಸಲ್ಯೆಗೆ ಹೇಳಿ ಇದಕ್ಕೆ ಕಾರಣ ತನ್ನ ಕರ್ಮಫಲ ಎನ್ನುತ್ತಾನೆ. ಮಾಡಿದ್ದಕ್ಕೆ ತಕ್ಕ ಕರ್ಮಫಲವನ್ನು ಅನುಭವಿಸುತ್ತಾರೆ ಎನ್ನುವ ನಂಬಿಕೆ ಪುನರ್ಜನ್ಮದಷ್ಟೇ ಪ್ರಾಚೀನವಾದುದು. ತಾನು ಬದುಕಬೇಕೆಮ್ದರೆ ರಾಮ ಬಂದು ತನ್ನನ್ನು ಒಂದು ಬಾರಿ ಸ್ಪರ್ಶಿಸಿದರೆ ಸಾಕು, ತಾನು ಬದುಕುವೆ ರಾಘವನ ವಿಷಯದಲ್ಲಿ ಘನತೆಯಿಂದ ತಾನು ನಡೆದುಕೊಳ್ಳಲಿಲ್ಲ ವೆಂದು ನಿರಂತರವಾಗಿ ಶೋಕಿಸುತ್ತಾನೆ. ಇಷ್ಟಾದರೂ ಪಾಯಸದ ಮಹಿಮೆಯಿಂದ ಜನಿಸಿದ ಮಕ್ಕಳು ಎನ್ನುವ ವಿಷಯವೇ ಮರೆತುಹೋಗಿದೆ. ಋಷಿಮುನಿಗಳಿಗೆ ಕಂಡ ರಾಮನ ನಿಜರೂಪದ ಅರಿವು ದಶರಥನಿಗೆ ಆಗಲೇ ಇಲ್ಲ. ಅತನನ್ನು ಸಮಾಧಾನ ಮಾಡುತ್ತಾ ಕೌಸಲ್ಯೆ ಮತ್ತು ಸುಮಿತ್ರೆಯರು ತಮ್ಮ ನಡುವೆ ಮಲಗಿಸಿಕೊಂಡಿದ್ದರು ಆರುದಿನಗಳಿಂದಲೂ ಬಾರದ ನಿದ್ರೆ ಇಬ್ಬರೂ ರಾಣಿಯರಿಗೂ ತಡರಾತ್ರಿ ಬಂತು. ರಾಘವನ ನೆನಪು ಮಾಡುತ್ತಲೇ ಇದ್ದ ರಾಜನನ್ನು ಚಿರನಿದ್ರೆ ಸೆಳೆದುಬಿಟ್ಟಿತು.

ರಘುವಂಶದ ಘನತೆಯ ಚಕ್ರವರ್ತಿಯೆಂದು ಹೆಸರು ಮಾಡಿದ ಯಶೋವಂತನಾದ ದೊರೆ ತನ್ನ ಕರ್ಮ ಫಲವನ್ನು ಅನುಭವಿಸಿ ಕೊನೆಗಾಲವನ್ನು ಕಂಡ. ಯಾವಾತ ತನ್ನ ಕರ್ಮಫಲವನ್ನು ಜೀವಿತಾವಧಿಯಲ್ಲಿ ಅನುಭವಿಸುತ್ತಾನೆಯೋ, ಆ ಕಾರಣದಿಂದ ಅವರು ಪಶ್ಚಾತ್ತಾಪ ಪಡುತ್ತಾರೆಯೋ ಅಂತವರು ಸತ್ತಮೇಲೆ ನರಕದಲ್ಲಿ ಆ ಶಿಕ್ಷೆ ಅನುಭವಿಸುವುದಿಲ್ಲ. ಈ ಎಲ್ಲಾ ಅವಸ್ಥೆಯನ್ನು ಅನುಭವಿಸಿದ ಸೂರ್ಯವಂಶದ ಯಶೋವಂತ ಅರಸನೂ ಸಹ ಸ್ವರ್ಗಕ್ಕೆ ನಡೆದ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

Continue Reading

ಬೆಂಗಳೂರು

Award Ceremony: ಬೆಂಗಳೂರಿನಲ್ಲಿ ಮೇ 19ರಂದು ಕಾದಂಬರಿ ಸಾರ್ವಭೌಮ ಅ.ನ.ಕೃ. ಪ್ರಶಸ್ತಿ ಪ್ರದಾನ

Award Ceremony: 2022ನೇ ಸಾಲಿನ ಅ. ನ. ಕೃ. ಪ್ರಶಸ್ತಿಗೆ ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಹಾಗೂ 2023ನೇ ಸಾಲಿನ ಅ. ನ. ಕೃ. ಪ್ರಶಸ್ತಿಗೆ ಡಾ. ಬಿ. ಎಸ್. ಸ್ವಾಮಿ ಅವರು ಆಯ್ಕೆಯಾಗಿದ್ದಾರೆ.

VISTARANEWS.COM


on

Award Ceremony
Koo

ಬೆಂಗಳೂರು: ಅ. ನ. ಕೃ. ಪ್ರತಿಷ್ಠಾನ ವತಿಯಿಂದ ಕಾದಂಬರಿ ಸಾರ್ವಭೌಮ ಅ. ನ. ಕೃ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೇ 19ರಂದು ಬೆಳಗ್ಗೆ 10ಗಂಟೆಗೆ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಎಚ್. ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. 2022ನೇ ಸಾಲಿನ ಅ. ನ. ಕೃ. ಪ್ರಶಸ್ತಿಯನ್ನು ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಹಾಗೂ 2023ನೇ ಸಾಲಿನ ಅ. ನ. ಕೃ. ಪ್ರಶಸ್ತಿಯನ್ನು ಡಾ. ಬಿ. ಎಸ್. ಸ್ವಾಮಿ ಅವರಿಗೆ ಪ್ರದಾನ (Award Ceremony) ಮಾಡಲಾಗುತ್ತದೆ.

ಪ್ರಶಸ್ತಿ ಪುರಸ್ಕೃತರಾದ ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಅವರು ರಾಷ್ಟೋತ್ಥಾನ ಸಾಹಿತ್ಯದ ಗೌರವ ಪ್ರಧಾನ ಸಂಪಾದಕರಾಗಿದ್ದು, ಡಾ. ಬಿ. ಎಸ್. ಸ್ವಾಮಿ ಅವರು ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ನಿರ್ವಾಹಕರಾಗಿದ್ದಾರೆ.

ಪ್ರಜಾವಾಣಿ ದಿನಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ. ಆರ್. ಗಣೇಶ್, ಲೇಖಕ, ಉಪನ್ಯಾಸಕ ಡಾ. ಬಂಡ್ಲಹಳ್ಳಿ ವಿಜಯಕುಮಾ‌ರ್ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

ಇದನ್ನೂ ಓದಿ | ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

ಡಾ. ಕೆ.ಆರ್. ಸಂಧ್ಯಾರೆಡ್ಡಿ, ಶಾ.ಮಂ. ಕೃಷ್ಣರಾವ್, ಎಂ. ವೆಂಕಟೇಶ್ ಅವರು ಉಪಸ್ಥಿತರಿರಲಿದ್ದು, ಮಾಜಿ ಅಡ್ವೊಕೇಟ್ ಜನರಲ್ ಹಾಗೂ ನ್ಯಾಯವಾದಿ ಅಶೋಕ್ ಹಾರನಹಳ್ಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಅ. ನ. ಕೃ. ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಗೌತಮ್ ಅ. ನ. ಕೃ, ಪ್ರತಿಷ್ಠಾನದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿರಲಿದ್ದಾರೆ.

2022ರ ಪ್ರಶಸ್ತಿ ಪುರಸ್ಕೃತರು: ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ

ಆರೂವರೆ ದಶಕಗಳ ಕಾಲ ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಮಾಜಕಾರ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಎಸ್. ಆರ್. ರಾಮಸ್ವಾಮಿ ಅವರು (ಜನನ: 29-10-1937) ಕಳೆದ 45 ವರ್ಷಗಳಿಂದ ‘ಉತ್ಥಾನ’ ಮಾಸಪತ್ರಿಕೆ ಮತ್ತು ‘ರಾಷ್ಟ್ರೋತ್ಥಾನ ಸಾಹಿತ್ಯ’ ಪ್ರಕಾಶನದ ಪ್ರಧಾನ ಸಂಪಾದಕರಾಗಿದ್ದಾರೆ.

ಸುಭಾಷ್‌ಚಂದ್ರ ಬೋಸ್ ಅವರ ಸಮಗ್ರ ಜೀವನಚರಿತ್ರೆ ‘ಕೋಲ್ಮಿಂಚು’ ಜಯಪ್ರಕಾಶ್ ನಾರಾಯಣ್ ವಲ್ಲಭಭಾಯಿ ಪಟೇಲ್, ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಸ್ವಾಮಿ ವಿವೇಕಾನಂದ, ಭಗಿನಿ ನಿವೇದಿತಾ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಜೀವನಚರಿತ್ರೆಗಳೂ ಸೇರಿ ಸುಮಾರು 60 ಗ್ರಂಥಗಳನ್ನು ಬರೆದಿದ್ದಾರೆ. ‘ಭಾರತದಲ್ಲಿ ಸಮಾಜಕಾರ್ಯ’, ‘ಸ್ವಾತಂತ್ರ್ಯೋದಯದ ಮೈಲಿಗಲ್ಲುಗಳು’ ಮೊದಲಾದ ಹಲವಾರು ಪ್ರತಿಷ್ಠಿತ ಕೃತಿಗಳಿಗೆ ವಿಸ್ತತ ಸ್ವತಂತ್ರ ಅವಲೋಕನ ಪ್ರಬಂಧಗಳನ್ನು ಬರೆದು ಸಂಪಾದನ ಮಾಡಿದ್ದಾರೆ.

ಅಭ್ಯುದಯ ಅರ್ಥಶಾಸ್ತ್ರದಲ್ಲಿ ಆಳವಾದ ಪರಿಶ್ರಮ ಮಾಡಿರುವ ಇವರು ಜಾಗತೀಕರಣದ ಹಿನ್ನೆಲೆಯಲ್ಲಿ ಬರೆದ ‘ಆರ್ಥಿಕತೆಯ ಎರಡು ಧ್ರುವ’ ಅರ್ಥಶಾಸ್ತ್ರ ಕ್ಷೇತ್ರದ ಒಂದು ಉನ್ನತ ಕೃತಿಯೆಂದು ಪರಿಗಣಿತವಾಗಿದೆ. ಸ್ವಾತಂತ್ರ್ಯೋತ್ತರ ಭಾರತದ ಅರ್ಥಿಕ ಯೋಜನೆಗಳನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿರುವ ರಾಮಸ್ವಾಮಿಯವರ ‘ಶತಮಾನದ ತಿರುವಿನಲ್ಲಿ ಭಾರತ’ ಸಮಾಜವಿಜ್ಞಾನ ಕ್ಷೇತ್ರದ ಆ ವರ್ಷದ ಶ್ರೇಷ್ಠ ಕೃತಿಯೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದಿದೆ. ಬ್ರಿಟಿಷ್-ಪೂರ್ವ ಭಾರತದ ಉನ್ನತ ಸ್ಥಿತಿ ಕುರಿತ ಖ್ಯಾತ ಸಂಶೋಧಕ ಧರ್ಮಪಾಲ್ ಅವರ ಕೃತಿಗಳನ್ನು ಇವರು ಕನ್ನಡಕ್ಕೆ ಪರಿಚಯಿಸಿದ್ದಾರೆ. ಸ್ವದೇಶೀ ಚಿಂತನೆಯ ಪ್ರತಿಪಾದಕಗಳಾದ ಇವರ ಹಲವಾರು ಕೃತಿಗಳು ಪಥದರ್ಶಕವೆನಿಸಿವೆ.

ಅನೇಕ ಹಿರಿಯ ಸಾಹಿತಿಗಳ ಒಡನಾಟದಲ್ಲಿದ್ದ ರಾಮಸ್ವಾಮಿಯವರು, ಡಿ.ವಿ.ಗುಂಡಪ್ಪ, ಸೀತಾರಾಮಯ್ಯ, ರಾಕ್ಲಪಲ್ಲಿ ಅನಂತಕೃಷ್ಣಶರ್ಮ, ವೀರಕೇಸರಿ ಸೀತಾರಾಮಶಾಸ್ತ್ರಿ, ತಿ. ತಾ. ಶರ್ಮ, ಪಿ. ಕೋದಂಡರಾವ್, ತೋಟಗಾರಿಕೆ ಋಷಿ ಎಂ. ಎಚ್. ಮರಿಗೌಡ ಮೊದಲಾದ ಧೀಮಂತರನ್ನು ಕುರಿತು ಬರೆದ ‘ದೀವಟಿಗೆಗಳು’, ‘ದೀಪ್ತಿಮಂತರು’ ಮತ್ತು ‘ದೀಪ್ತಶೃಂಗಗಳು’ – ಇವು ಅನುಪಮ ವ್ಯಕ್ತಿಚಿತ್ರಮಾಲಿಕೆಗಳಾಗಿವೆ. ಈಗಿನ ಜಗದ್‌ವ್ಯಾಪಿ ತುಮುಲಗಳ ಬೇರುಗಳಿರುವುದು ಎರಡು ಭಿನ್ನ ಜೀವನದೃಷ್ಟಿಗಳಲ್ಲಿ – ಎಂದು ಅವರ ‘ನಾಗರಿಕತೆಗಳ ಸಂಘರ್ಷ’ ಕೃತಿ ಪ್ರತಿಪಾದಿಸಿದೆ. ಅವರ ‘ಕೆಲವು ಇತಿಹಾಸ-ಪರ್ವಗಳು’ ಮತ್ತು ‘ಮರೆಯಬಾರದ ಇತಿಹಾಸಾಧ್ಯಾಯಗಳು’ ಮೈಲಿಗಲ್ಲುಗಳೆಂದು ಅಂಕಿತಗೊಂಡಿರುವ ಕೆಲವು ಇತಿಹಾಸ ಘಟನಾಸರಣಿಗಳ ಪರಾಮರ್ಶನೆಯಾಗಿವೆ. ಭಾರತದ ಈಚಿನ ಇತಿಹಾಸಕ್ಕೆ ನಿರ್ಣಾಯಕ ತಿರುವನ್ನಿತ್ತ ರಾಜಾ ರಾಮಮೋಹನರಾಯ್ ಅವರಿಂದ ಜಯಪ್ರಕಾಶ ನಾರಾಯಣ್ ವರೆಗಿನ ಹತ್ತಾರು ಮಹನೀಯರ ಜೀವಿತಕಥನಗಳು `ನವೋತ್ಥಾನದ ಅಧ್ವರ್ಯುಗಳು’ ಮತ್ತು ‘ಹಲವರು ರಾಷ್ಟ್ರಾರಾಧಕರು’. ರಾಮಸ್ವಾಮಿಯವರ ‘ಕವಳಿಗೆ’ ಮತ್ತು ‘ಸಾಹಿತ್ಯ ಸಾನ್ನಿಹಿತ್ಯ ಉನ್ನತಮಟ್ಟದ ಸಾಹಿತ್ಯ ಪರಾಮರ್ಶಕ ಕೃತಿಗಳಾಗಿವೆ. ರಾಮಸ್ವಾಮಿಯವರು ಕಳೆದ ಅರವತ್ತು ವರ್ಷಗಳಲ್ಲಿ ವಿವಿಧ ಪತ್ರಿಕೆಗಳಲ್ಲಿ 2000ಕ್ಕೂ ಹೆಚ್ಚು ಅಧ್ಯಯನಪೂರ್ಣ ಲೇಖನಗಳನ್ನು ಬರೆದಿದ್ದಾರೆ.

ಪತ್ರಿಕೋದ್ಯಮ ಸೇವೆಗಾಗಿ 2006ರಲ್ಲಿ ಇವರಿಗೆ ‘ಆರ್ಯಭಟ ಪ್ರಶಸ್ತಿ’ ದೊರೆತಿದೆ. ಸಾಹಿತ್ಯಸೇವೆಗಾಗಿ 2008ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಇವರಿಗೆ ದೊರೆತಿದೆ. 2011ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಇವರ ಸುದೀರ್ಘ ಸಾಹಿತ್ಯಸೇವೆಗಾಗಿ ಗೌರವಾರ್ಥ ಡಾಕ್ಟರೇಟ್ ನೀಡಿದೆ. ದೀರ್ಘ ಪತ್ರಿಕೋದ್ಯಮ ಸೇವೆಗಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ‘ವರ್ಷದ ಶ್ರೇಷ್ಠ ವ್ಯಕ್ತಿ’ ಸಮ್ಮಾನ ದೊರೆತಿದೆ (2012). ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳ ಜೀವಮಾನ ಸಾಧನೆಗಾಗಿ 2015ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನಾಡೋಜ’ ಪದವಿಯನ್ನು ಇವರಿಗೆ ನೀಡಲಾಗಿದೆ. ಕರ್ನಾಟಕ ಸರಕಾರವು 2022-23ರ ‘ಪಂಪಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.

2023ರ ಪ್ರಶಸ್ತಿ ಪುರಸ್ಕೃತರು : ಡಾ. ಬಿ. ಎಸ್. ಸ್ವಾಮಿ

ಬಿ. ಸಿದ್ಧಲಿಂಗ ಸ್ವಾಮಿಯವರು ಮೂಲತಃ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯವರು. ವಿ. ಬಸವಲಿಂಗಪ್ಪ – ಶಿವನಾಗಮ್ಮ ದಂಪತಿಯ ಸುಪುತ್ರರಾದ ಇವರು ಎಂ. ಎ., ಪಿಎಚ್. ಡಿ. ಪದವೀಧರರು. ಐದು ವರ್ಷ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಂತರ ಬೆಂಗಳೂರು ಆಕಾಶವಾಣಿಯಲ್ಲಿ ಇಪ್ಪತ್ತು ವರ್ಷ ಕಾರ್ಯನಿರ್ವಹಿಸಿ ಅನಂತರ ಗುಲ್ಬರ್ಗ, ಬೆಂಗಳೂರು, ಮಂಗಳೂರು ಬಾನುಲಿಕೇಂದ್ರಗಳಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ಹದಿನಾಲ್ಕು ವರ್ಷ ದುಡಿದು ನಿವೃತ್ತರಾದರು.

ಬಾನುಲಿಯ ಸುದೀರ್ಘ ಸೇವೆಯಲ್ಲಿ ಇವರು ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಿ, ಪ್ರತಿಭಾವಂತರನ್ನು ಹುಡುಕಿ ಅವರನ್ನು ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ತೊಡಗಿಸಿ ಜನಾನುರಾಗಿಯಾದರು.
1967ರಲ್ಲಿ ಇವರ ಮೊದಲ ಕವನಸಂಗ್ರಹ ‘ಅಮೃತ’ ಪ್ರಕಟವಾಯಿತು. ಅಂದಿನಿಂದ ಇಂದಿನವರೆಗೆ ಆರು ದಶಕ ಲೇಖನಿಯನ್ನು ಕೆಳಗಿಡದೆ ಒಂದೇ ಸಮನೆ ಬರೆಯುತ್ತ ಸುಮಾರು ನಾಲ್ಕುನೂರು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ‘ಕಲಿ ಭಾರತ’, ‘ಅಲ್ಲಮಪ್ರಭು’, ‘ಅಕ್ಕಮಹಾದೇವಿ’, ‘ಬಸವಣ್ಣ’ ಮಹಾಕಾವ್ಯಗಳೂ, ‘ಬೆಂಕಿಯಲ್ಲಿ ಅರಳಿದ ಹೂವು’ ನಂತಹ ಆತ್ಮಕಥನವೂ ಸೇರಿದೆ.

ಇವರ ಸಾಹಿತ್ಯಸೃಷ್ಟಿಗೆ ಯಾವ ಸರಹದ್ದುಗಳೂ ಇಲ್ಲ. ಕಥೆ, ಕಾದಂಬರಿ, ಕವನ, ನಾಟಕ, ರೂಪಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಸಂಪಾದನೆ, ವೈಚಾಲಕ, ಹಾಸ್ಯ, ಜಾನಪದ, ಪ್ರವಾಸಕಥನ, ಜೀವನ ಚರಿತ್ರೆ, ವಚನಸಾಹಿತ್ಯ, ದಾಸಸಾಹಿತ್ಯ, ಮಕ್ಕಳ ಸಾಹಿತ್ಯ, ಬಿಡಿ ಬರೆಹಗಳು – ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೈಯಾಡಿಸಿದ್ದಾರೆ. ಅನೇಕ ಸಾಮಾಜಿಕ, ಐತಿಹಾಸಿಕ ಕಾದಂಬರಿಗಳನ್ನು ಬರೆದ ಕೈಗಳಿಂದಲೇ ಜಾನಪದ ಸಾಹಿತ್ಯಚರಿತ್ರೆಯ ಹದಿನೈದು ಸಂಪುಟಗಳು, ಮಲೆ ಮಾದೇಶ್ವರ ಕಾವ್ಯ ಸಂಪಾದನೆ ಮಾಡಿದ್ದಾರೆ. ಜಾನಪದ ಕ್ಷೇತ್ರದಲ್ಲಿ ಒಂದು ವಿಶ್ವವಿದ್ಯಾಲಯ ಮಾಡುವಷ್ಟು ಕ್ಷೇತ್ರಕಾರ್ಯ, ಸಂಪಾದನೆ, ವಿಶ್ಲೇಷಣ, ಸಂಗ್ರಹ ಮಾಡಿದ್ದಾರೆ. ಶಿಷ್ಟಸಾಹಿತ್ಯದಲ್ಲಿ ಡಾ. ಸ್ವಾಮಿಯವರ ಕೊಡುಗೆ ಸಣ್ಣದಲ್ಲ. ಕಾಳಿದಾಸನ ಸಾಹಿತ್ಯದ ಕುರಿತು ಬರೆಯಬಲ್ಲ ಡಾ. ಸ್ವಾಮಿಯವರು ಸೂರದಾಸನ ಸಾಹಿತ್ಯದ ಬಗೆಗೂ ಬರೆಯಬಲ್ಲರು. ಹರಿದಾಸ ಪರಂಪರೆಯ ಕುರಿತು ಹಲವು ವರ್ಷ ಸಂಶೋಧನೆ ಮಾಡಿ ಒಂದು ಬೃಹತ್ ಗ್ರಂಥ ಪ್ರಕಟಿಸಿದ್ದಾರೆ. ಅದಕ್ಕಾಗಿ ಅವರು ಊರೂರು ಅಲೆದು ಹಲಕಥಾಕಾರರನ್ನು ಸಂದರ್ಶಿಸಿ, ವಾಚನಾಲಯಗಳಲ್ಲಿ ತಿಂಗಳುಗಟ್ಟಲೆ ಕುಳಿತು ಸಂಶೋಧನೆ ಮಾಡಿದ್ದಾರೆ.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ: ಚೀನಾ ದೇಶದ ಪ್ರಾಚೀನ ದೊರೆಗಳು ನಮಗೆ ಪ್ರೇರಣೆ ನೀಡಲಿ

ಇವರ ಸಾಹಿತ್ಯಸೇವೆಯನ್ನು ಗಮನಿಸಿ ಕನ್ನಡಿಗರು ಅವರಿಗೆ ‘ಮಧುವೃತ’ ಎಂಬ ಗೌರವಗ್ರಂಥ ಅರ್ಪಿಸಿದ್ದಾರೆ.
ಇವರ ‘ಕವಿಚಕ್ರೇಶ್ವರ’ ಕಾದಂಬರಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ(1974), ‘ಜಾನಪದ ಕಥಾಸಂಗಮ’ಕ್ಕೆ ಕರ್ನಾಟಕ ಜಾನಪದ-ಯಕ್ಷಗಾನ ಅಕಾಡೆಮಿಯ ಬಹುಮಾನ(1987), ‘ಮಹಾಜ್ಯೋತಿ ಮಾದೇಶ್ವರ’ ಕೃತಿಗೆ ಮುದ್ದಣ- ರತ್ನಾಕರವರ್ಣಿ ಪ್ರಶಸ್ತಿ, ‘ಜಾನಪದ ಸೌರಭ’, ಅಕ್ಕಮ್ಮ ಗಿರಿಗೌಡ ರುದ್ರಪ್ಪ ಪ್ರಶಸ್ತಿ (1996), ‘ತುಳುನಾಡ ಐಸಿರಿ’ಗೆ ಗೊರೂರು ಪ್ರತಿಷ್ಠಾನದ ಪ್ರಶಸ್ತಿ (1997), ಕದಂಬೋತ್ಸವದಲ್ಲಿ ಅಭಿನಂದನೆ(1998), ‘ಸಮಗ್ರ ನಾಟಕಗಳು’ಗೆ ಆರ್ಯಭಟ ಪ್ರಶಸ್ತಿ, ಜಾನಪದ ಜ್ಞಾನ ವಿಜ್ಞಾನ ಪ್ರಶಸ್ತಿ(2002), ‘ನಾಟಕ ರೂಪಕ’ ಕೃತಿಗೆ ಅತ್ತಿಮಬ್ಬೆ ಸಾಹಿತ್ಯಪ್ರತಿಷ್ಠಾನದ ಪ್ರಶಸ್ತಿ, ‘ಜಾನಪದಶ್ರೀ’ಗೆ ಕರ್ನಾಟಕ ಜಾನಪದ ಅಕಾಡೆಮಿ ಬಹುಮಾನ, ಇಂಥ ಅನೇಕ ಸಂಘಸಂಸ್ಥೆಗಳ ಬಹುಮಾನಗಳು, ಪ್ರಶಸ್ತಿಗಳು ಇವರಿಗೆ ಸಂದಿವೆ.

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಚೀನಾ ದೇಶದ ಪ್ರಾಚೀನ ದೊರೆಗಳು ನಮಗೆ ಪ್ರೇರಣೆ ನೀಡಲಿ

ನನ್ನ ದೇಶ ನನ್ನ ದನಿ ಅಂಕಣ: ಕಳೆದ ಎರಡು ಶತಮಾನಗಳಲ್ಲಿ ಭಾರತದ ಜ್ಞಾನಸಂಪತ್ತನ್ನು ಕೊಳ್ಳೆಹೊಡೆಯಲು ಬ್ರಿಟಿಷರು ಏನೇನು ಬೇಕೋ ಅಷ್ಟನ್ನೂ ಮಾಡಿದರು. ಬ್ರಿಟಿಷರ ಮೂಗಿನ ನೇರಕ್ಕೆ ಅನೇಕ ಭಾಷಾಂತರಗಳೂ ಆದವು. ಆದರೆ ಅನಂತರದ ಕಾಲಾವಧಿಯಲ್ಲಿ ಭಾಷಾಂತರಕ್ಕೆ ಸಿಕ್ಕಬೇಕಾದ ಪ್ರಾಮುಖ್ಯ ಸಿಕ್ಕಲೇ ಇಲ್ಲ. ಕನ್ನಡದ ವಿದ್ವಲ್ಲೋಕದಲ್ಲಿಯೂ “ಅನುವಾದವೇ, ಒಂದು ಡಿಕ್ಷನರಿ ಇದ್ದರಾಯಿತು” ಎಂಬಂತಹ ಔದಾಸೀನ್ಯ.

VISTARANEWS.COM


on

nanna desha nanna dani column
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath

ನನ್ನ ದೇಶ ನನ್ನ ದನಿ ಅಂಕಣ: ಅನುವಾದ ಮತ್ತು ಭಾಷಾಂತರ ಕ್ಷೇತ್ರಗಳ ಮಹತ್ತ್ವವೇ ನಮಗೆ ತಿಳಿಯದು. ಸಾಮಾನ್ಯರಿರಲಿ, ವಿಶ್ವವಿದ್ಯಾಲಯಗಳಲ್ಲಿ ವಿರಾಜಮಾನರಾಗಿರುವ ಬಹುತೇಕ ಪ್ರಭೃತಿಗಳಿಗೂ ತಿಳಿಯದು. ಭಾಷಾಂತರ ಕ್ಷೇತ್ರದ ಆಳ – ಅಗಲಗಳ ಸರಿಯಾದ ಅಂದಾಜೇ ನಮಗಿಲ್ಲ. ಕಳೆದ ಆರೇಳು ದಶಕಗಳಲ್ಲಿ ಇಂಗ್ಲಿಷ್ ಭಾಷೆ ಮತ್ತು ರೋಮನ್ ಲಿಪಿಗಳ ಅಟ್ಟಹಾಸ, ಅಬ್ಬರಗಳ ಮಹಾಪೂರದಲ್ಲಿ ಭಾರತೀಯ ಭಾಷೆಗಳು ಸೊರಗುತ್ತಿವೆ, ನಿಧಾನವಾಗಿ ನೇಪಥ್ಯಕ್ಕೂ ಸೇರುತ್ತಿವೆ. ಇನ್ನೂ ಹೆಚ್ಚಿನ ದುರಂತವೆಂದರೆ, ನಮ್ಮ ಸೋ ಕಾಲ್ಡ್ ಶಿಕ್ಷಣ ತಜ್ಞರಿಗೆ ಇದರ ಅಂದಾಜೂ ಆಗುತ್ತಿಲ್ಲ. ಇತ್ತೀಚಿನ ಒಂದೆರಡು ದಶಕಗಳಲ್ಲಿ, ಸಂವಾದ – ಚರ್ಚೆ – ಉಪನ್ಯಾಸಮಾಲೆ – ಎಲ್ಲವೂ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಎಂಬಂತಾಗಿವೆ. ಈ ಪಿಡುಗು ಇನ್ನಷ್ಟು ಮುಂದುವರಿದು ಸಂಗೀತ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮೊದಲ್ಗೊಂಡು, ಶಾಲಾ ಕಾಲೇಜುಗಳ ವಿದ್ಯಾರ್ಥಿ ಸಂಘಗಳ ಕಾರ್ಯಕ್ರಮಗಳನ್ನೂ ಇಂಗ್ಲಿಷ್ ಭಾಷೆ ಆವರಿಸಿಕೊಂಡುಬಿಟ್ಟಿದೆ. ಇನ್ನು ಇಡೀ ದೇಶದ ಬೌದ್ಧಿಕ – ಶೈಕ್ಷಣಿಕ ಕ್ಷೇತ್ರಗಳು, ಇಂಗ್ಲಿಷ್ ಭಾಷೆ – ಇಂಗ್ಲಿಷ್ ಮಾಧ್ಯಮಗಳ ಉಪೋತ್ಪನ್ನಗಳಾಗಿ ಹೋಗಿರುವುದು, ಈ ಎಲ್ಲಾ ಅಪಸವ್ಯಗಳಿಗೆ ಕಲಶವಿಟ್ಟಂತಾಗಿದೆ.

ಪ್ರಾಚೀನ ಭಾರತ, ಅಷ್ಟೇಕೆ, ಪ್ರಾಚೀನ ಜಗತ್ತಿನ ಬಹುಪಾಲು ಆಳರಸರಿಗೆ ಭಾಷಾಂತರ ಕ್ಷೇತ್ರದ ಮಹತ್ತ್ವ ತಿಳಿದಿತ್ತು. ಭಾಷೆಗಳನ್ನು ಯಾರೂ ಸಮಸ್ಯೆಯನ್ನಾಗಿ ಮಾಡಿಕೊಂಡಿರಲಿಲ್ಲ. ಹಿಂದೀ – ತಮಿಳು ಭಾಷೆಗಳನ್ನು ಮತ್ತು ಭಾಷಿಕರನ್ನು ದ್ವೇಷಿಸುವ ನಮ್ಮ ಇಂದಿನ ಯುಗಮಾನದ ಅವಿವೇಕ ಅಂದಿನವರಿಗೆ ಇರಲಿಲ್ಲ. ನಾಲ್ಕೈದು ದಶಕಗಳ ಹಿಂದೆ ಬಂಗಾಳಿ, ತಮಿಳು, ತೆಲುಗು, ಮರಾಠೀ ಮುಂತಾದ ಭಾಷೆಗಳಿಂದ ನೇರವಾಗಿ ಅನುವಾದ ಮಾಡುವವರು ನಮ್ಮಲ್ಲಿಯೇ ಇದ್ದರು. ಈಗ ವಿಚಿತ್ರವೆಂದರೆ, ಭಾರತೀಯ ಭಾಷೆಗಳ ನಡುವಣ ಕೊಡುಕೊಳ್ಳುವಿಕೆಗೂ ಇಂಗ್ಲಿಷ್ ಭಾಷೆಯು ಅನಿವಾರ್ಯ ಮಾಧ್ಯಮ ಎಂಬಂತಾಗುತ್ತಿದೆ. ಇದಕ್ಕಿಂತ ದೊಡ್ಡ ದುರಂತವಿನ್ನೇನು ಇದ್ದೀತು!

ಸಾವಿರಾರು ವರ್ಷಗಳ ನಿಜೇತಿಹಾಸಾಧ್ಯಯನ ನಮ್ಮ ದಿಗ್ಭ್ರಮೆಗೆ ಕಾರಣವಾಗುತ್ತದೆ. ನೋಡಿ, ನಮಗೆ ಯುವಾನ್ ಚ್ವಾಂಗ್ (ಇದು ಸರಿಯಾದ ಉಚ್ಚಾರಣೆ, ಹಿಂದೆ ಹ್ಯೂ ಎನ್ ತ್ಸಾಂಗ್ ಎನ್ನಲಾಗುತ್ತಿತ್ತು) ಫಾಹಿಯಾನ್ ಮಾತ್ರ ಗೊತ್ತು. ಅವರೆಲ್ಲ ಚೀನಾ ದೇಶದಿಂದ ಇಲ್ಲಿಗೆ ಬಂದು ಜ್ಞಾನಸಂಪತ್ತನ್ನು ಅಲ್ಲಿಗೆ ಕೊಂಡೊಯ್ದವರು. ಅವರು, ಅಂತಹವರು ಭಾಷಾಂತರದಿಂದ ಅದ್ಭುತವಾದ ಸಂಪತ್ತನ್ನು ಸಂಗ್ರಹಿಸಿದರು ಮತ್ತು ಅವರ ದೇಶದಲ್ಲಿ ಕಾಪಿಟ್ಟುಕೊಂಡರು. ನಿಜೇತಿಹಾಸದ ಇನ್ನಷ್ಟು ವಿವರಗಳು ಅಕ್ಷರಶಃ ನಮ್ಮನ್ನು ದಿಗ್ಭ್ರಮೆಗೊಳಿಸುತ್ತವೆ. ಇಲ್ಲಿಂದ ಅಲ್ಲಿಗೆ ಹೋಗಿ ಭಾಷಾಂತರ ಮಾಡಿದ ಭಾರತೀಯ ಮೂಲದ ವಿದ್ವಾಂಸರ ವಿವರಗಳು ಸಹ ದಿಕ್ಸೂಚಿಯಾಗಿವೆ.

ಸಾಮಾನ್ಯ ಯುಗದ ಮೊದಲನೆಯ ಶತಮಾನದಲ್ಲಿ (1st Century of Common Era) ಚೀನಾ ದೇಶದ ಸಮ್ರಾಟ ಮಿಂಗ್-ತಿ ಬೌದ್ಧ ಸಿದ್ಧಾಂತದ ಅಧ್ಯಯನಕ್ಕಾಗಿ 18 ಜನರ ತಂಡವನ್ನು ಭಾರತಕ್ಕೆ ಕಳುಹಿಸಿದ. ಅವರು ಇಲ್ಲಿಂದ ದೊಡ್ಡ ಸಂಖ್ಯೆಯ ಗ್ರಂಥಗಳನ್ನು ಪ್ರತಿ ಮಾಡಿಕೊಂಡು, ಅನುವಾದಿಸಿಕೊಂಡು ತೆಗೆದುಕೊಂಡುಹೋದರು ಮತ್ತು ಕಶ್ಯಪ ಮಾತಂಗ ಮತ್ತು ಧರ್ಮರತ್ನ ಎಂಬ ಬೌದ್ಧ ವಿದ್ವಾಂಸರನ್ನೂ ಕರೆದುಕೊಂಡುಹೋದರು. ಕಶ್ಯಪರು ಆಗ ಗಾಂಧಾರದಲ್ಲಿದ್ದರು (ಗಾಂಧಾರ ಎಂದರೆ ಇಂದಿನ ಆಫಘನಿಸ್ತಾನ. ಅದು ಇಸ್ಲಾಂ ಆಕ್ರಮಣಕ್ಕೆ ಮುಂಚೆ ಸಾವಿರಾರು ವರ್ಷಗಳ ಕಾಲ ಬೌದ್ಧ ಧರ್ಮಕ್ಕೆ ಹೆಸರಾಗಿತ್ತು). ಚೀನಾ ದೇಶದ ತರ್ಕೆಸ್ತಾನ್ ಪ್ರದೇಶದ ಪರ್ವತಗಳನ್ನು ಮತ್ತು ಗೋಬೀ ಮರುಭೂಮಿಯನ್ನು ದಾಟಿಹೋಗಲು ಕಶ್ಯಪರು ಪ್ರಯಾಸಪಡಬೇಕಾಯಿತು. ಆದರೆ, ಅವರ ಆ ಪರಿಶ್ರಮದ ಭೇಟಿಯ ಕಾರಣದಿಂದಲೇ ಅನಂತರದ ಅವಧಿಯಲ್ಲಿ, ಪ್ರಾಚೀನ ಭಾರತದ ವಿಶ್ವವಿದ್ಯಾಲಯಗಳಿಂದ ನೂರಾರು ಜನ ವಿದ್ವಾಂಸರು ಚೀನಾ ದೇಶದಲ್ಲಿಯೇ ಕುಳಿತು ಭಾಷಾಂತರ ಮಾಡುವಂತಹ ವ್ಯವಸ್ಥೆ ಬೆಳೆಯಲು ಸಾಧ್ಯವಾಯಿತು. ಅಗಾಧ ಪ್ರಮಾಣದ ಸಂಸ್ಕೃತ ಗ್ರಂಥಗಳನ್ನು ಅವರೆಲ್ಲ ಪ್ರತಿ ಮಾಡಿಕೊಂಡು ಇಲ್ಲಿಂದ ತೆಗೆದುಕೊಂಡುಹೋದರು. ಹಾಗೆ ಹೋದ ವಿದ್ವಾಂಸರಲ್ಲಿ ಸಂಘವರ್ಮ, ಧರ್ಮಸತ್ಯ, ಧರ್ಮಕಾಲ, ಮಹಾಬಲ, ವಿಘ್ನ, ಧರ್ಮಫಲ, ಕಲಾಸಿವಿ, ಕಲಾರುಚಿ ಮತ್ತು ಲೋಕರುಚಿ ಅವರು ಪ್ರಮುಖರಾದವರು.

nalanda and muslim invaders

ಆಗ ಕಾಶ್ಮೀರವೂ ಪ್ರಾಚೀನ ಭಾರತದ ಬಹಳ ದೊಡ್ಡ ಬೌದ್ಧ ಅಧ್ಯಯನ ಕೇಂದ್ರವಾಗಿತ್ತು. ಕಾಶ್ಮೀರದ ರಾಜವಂಶಕ್ಕೆ ಸೇರಿದ ಗುಣವರ್ಮರು ತಮ್ಮ ಪಾಂಡಿತ್ಯಕ್ಕೇ ಹೆಸರಾಗಿದ್ದರು. ಅವರು ಮೊದಲು ಶ್ರೀಲಂಕಾ ಮತ್ತು ಜಾವಾ ದೇಶಗಳಿಗೆ ಹೋಗಿ ಖ್ಯಾತರಾದರು. ಗುಣವರ್ಮರನ್ನು ಚೀನಾ ದೇಶದ ಚಕ್ರವರ್ತಿ ಆಹ್ವಾನಿಸಿದ. ಅಷ್ಟೇ ಅಲ್ಲ, ನಾಂಕಿಂಗ್ ಎಂಬ ಪಟ್ಟಣಕ್ಕೆ ಹೋಗಿ ಸ್ವತಃ ಗುಣವರ್ಮರನ್ನು ಎದುರುಗೊಂಡ. ಅವರ ಶಿಷ್ಯನೂ ಆದ. ಅವರಿಗಾಗಿ ಒಂದು ಬೌದ್ಧ ದೇವಾಲಯವನ್ನೂ ನಿರ್ಮಿಸಿದ. ಗುಣವರ್ಮರಂತೆಯೇ ಕಾಶ್ಮೀರದಿಂದ ಚೀನಾ ದೇಶಕ್ಕೆ ಹೋದ ವಿದ್ವಾಂಸರೆಂದರೆ ಬುದ್ಧಯಶಸ್, ಧರ್ಮಯಶಸ್, ಧರ್ಮಕ್ಷೇಮ, ಬುದ್ಧಜೀವ ಮತ್ತು ಧರ್ಮಮಿತ್ರ. ಈ ವಿವರಗಳು ಅದೆಷ್ಟು ಸಂತೋಷನೀಡುತ್ತವೆ ಎಂದರೆ, ನೋಡಿ, ದಕ್ಷಿಣ ಭಾರತದಿಂದಲೂ ಹಲವಾರು ವಿದ್ವಾಂಸರು ಚೀನಾ ದೇಶಕ್ಕೆ ಹೋದರು. ಹಾಗೆ ಹೋದ ಧರ್ಮರುಚಿ ಇಪ್ಪತ್ತು ವರ್ಷಗಳ ಕಾಲ (ಸಾಮಾನ್ಯ ಯುಗದ 693ರಿಂದ 713) ಚೀನಾ ದೇಶದಲ್ಲಿದ್ದು, ದಾಖಲೆ ಪ್ರಮಾಣದ ಐವತ್ಮೂರು ಗ್ರಂಥಗಳನ್ನು ಭಾಷಾಂತರಿಸಿದರು. ಚೀನೀ ಭಾಷೆಗೆ ವ್ಯವಸ್ಥಿತವಾದ ವ್ಯಾಕರಣವಿಲ್ಲ, ಒಂದು ಪದವನ್ನು ಒಂದು ಅಕ್ಷರವೋ – ಒಂದು ಚಿಹ್ನೆಯೋ ಪ್ರತಿನಿಧಿಸಿಬಿಡುತ್ತದೆ, ಎನ್ನುವ ಹಿನ್ನೆಲೆಯಲ್ಲಿ ಅತ್ಯಂತ ವ್ಯವಸ್ಥಿತವಾದ ಸಂಸ್ಕೃತ ಮತ್ತು ಇನ್ನಿತರ ಭಾರತೀಯ ಭಾಷೆಗಳಿಂದ ಅನುವಾದಿಸುವುದು ಅದೆಷ್ಟು ಶ್ರಮದಾಯಕ, ಕ್ಲಿಷ್ಟಕರ ಎಂಬುದನ್ನು ನಾವಿಲ್ಲಿ ಅರ್ಥಮಾಡಿಕೊಳ್ಳಬೇಕಿದೆ. ಭಾಷಾಂತರದ ಆಯಾಮವೇ ಹಾಗೆ. ಸಂಸ್ಕೃತಿಗಳ – ರೀತಿನೀತಿಗಳ ವ್ಯತ್ಯಾಸ ಮತ್ತು ಅಂತರಗಳೂ ಪ್ರಮುಖ ಪಾತ್ರ ವಹಿಸುತ್ತವೆ.

ಬಹಳ ಮುಖ್ಯವಾದ ಅಂಶವೊಂದನ್ನು ಇಲ್ಲಿ ಪ್ರಸ್ತಾಪಿಸಬೇಕಿದೆ. ಜ್ಞಾನದ ಸಂಪತ್ತನ್ನು ವಿವಿಧ ಸಮುದಾಯಗಳಿಗೆ, ಅನೇಕ ದೇಶಗಳಿಗೆ ಹಂಚಲು ನೀಡಲು ಭಾಷಾಂತರದ ಇಂತಹ ಪ್ರಮುಖ ಆಯಾಮಕ್ಕೆ ರಾಜಾಶ್ರಯ ಇತ್ತು, ಇರಬೇಕು ಎನ್ನುವುದನ್ನು ಸಹ ನಾವಿಲ್ಲಿ ಗಮನಿಸಬೇಕಿದೆ. ಭಾರತ, ಚೀನಾ ಮುಂತಾದ ದೇಶಗಳಲ್ಲಿ ಅನೇಕ ರಾಜರು ಪ್ರೋತ್ಸಾಹ ನೀಡಿದುದರಿಂದಲೇ ಜ್ಞಾನ ಪರಂಪರೆ ಮುಂದುವರಿಯಲು ಮತ್ತು ಉಳಿದುಕೊಂಡು ಬರಲು ಸಾಧ್ಯವಾಯಿತು.

ಕಳೆದ ಎರಡು ಶತಮಾನಗಳಲ್ಲಿ ಭಾರತದ ಜ್ಞಾನಸಂಪತ್ತನ್ನು ಕೊಳ್ಳೆಹೊಡೆಯಲು ಬ್ರಿಟಿಷರು ಏನೇನು ಬೇಕೋ ಅಷ್ಟನ್ನೂ ಮಾಡಿದರು. ಬ್ರಿಟಿಷರ ಮೂಗಿನ ನೇರಕ್ಕೆ ಅನೇಕ ಭಾಷಾಂತರಗಳೂ ಆದವು. ಆದರೆ ಅನಂತರದ ಕಾಲಾವಧಿಯಲ್ಲಿ ಭಾಷಾಂತರಕ್ಕೆ ಸಿಕ್ಕಬೇಕಾದ ಪ್ರಾಮುಖ್ಯ ಸಿಕ್ಕಲೇ ಇಲ್ಲ. ಕನ್ನಡದ ವಿದ್ವಲ್ಲೋಕದಲ್ಲಿಯೂ “ಅನುವಾದವೇ, ಒಂದು ಡಿಕ್ಷನರಿ ಇದ್ದರಾಯಿತು” ಎಂಬಂತಹ ಔದಾಸೀನ್ಯ. ಹಾಗೆಂದೇ, ಕನಿಷ್ಠ ಎಂಬತ್ತು ಪ್ರತಿಶತ ಅನುವಾದಗಳು ಕಳಪೆ ಗುಣಮಟ್ಟದವಾಗಿಬಿಟ್ಟಿವೆ. ಇನ್ನು ಪ್ರಶಸ್ತಿ, ಸ್ಥಾನಮಾನಗಳನ್ನು ಅನುವಾದಕರು ನಿರೀಕ್ಷಿಸುವಂತೆಯೇ ಇಲ್ಲ. ಒಂದೋ ಎರಡೋ ಕು-ಕವನಗಳನ್ನು ಬರೆದವರು ತಾವು ಬರೆದ ಕವನಗಳಿಗಿಂತ ಹೆಚ್ಚು ಸಂಖ್ಯೆಯ ಪ್ರಶಸ್ತಿಗಳನ್ನು ಗಳಿಸಿಬಿಡುತ್ತಾರೆ. ಕನ್ನಡದಲ್ಲಿ “ಕುವೆಂಪು ಭಾಷಾ ಭಾರತಿ ಪ್ರಾಧಿಕಾರ”ವು, ಭಾಷಾಂತರಕ್ಕೆ ಒಳ್ಳೆಯ ಸಂಭಾವನೆಯನ್ನು ಕೊಡುತ್ತಿರುವುದು ಸ್ವಾಗತಾರ್ಹವೇ ಆದರೂ, ಮುಖ್ಯ ವಿಷಯ ಅದಲ್ಲ. ನಮ್ಮ ಪರಂಪರೆಯ ಹಾಗೂ ಅನೇಕ ಪ್ರಮುಖ ಗ್ರಂಥಗಳ ಸಮರ್ಥ ಮತ್ತು ಅಧಿಕೃತ ಅನುವಾದಗಳು ಆಗಬೇಕಿದೆ. ಅದು ಬರಿಯ ಸಂಭಾವನೆಯ ಸಂಗತಿಯನ್ನು ಮೀರಿದುದು. ಕೆಲವು ಗ್ರಂಥಗಳ ಅನುವಾದಕ್ಕೆ ಪ್ರತ್ಯೇಕ ಆದ್ಯತೆಯನ್ನೇ ನೀಡಬೇಕಾಗುತ್ತದೆ ಮತ್ತು ಬರಿಯ ಸಂಭಾವನೆ ಸಾಲದೆಹೋಗುತ್ತದೆ. ಈ ಕಾರ್ಯಕ್ಕೆಂದೇ ಪೂರ್ಣಾವಧಿ ಭಾಷಾಂತರಕಾರರ ನೇಮಕವಾಗಬೇಕಾಗಿದೆ.

ಹಿಂದೆ ರಾಜಾಶ್ರಯ ಇದ್ದ ಹಾಗೆ, ಈಗ ಸರ್ಕಾರೀ ಮತ್ತು ಸೇವಾ ಸಂಸ್ಥೆಗಳು ಪೂರ್ಣಾವಧಿ ಭಾಷಾಂತರಕಾರರನ್ನೇ ನೇಮಿಸಿಕೊಂಡು ಈ ಕಾರ್ಯವನ್ನು ಕೈಗೊಳ್ಳಬೇಕು. ಆಗ ಮಾತ್ರ ನಮ್ಮ ಪರಂಪರೆ ಮತ್ತು ನಿಜ-ಇತಿಹಾಸ ಗ್ರಂಥಗಳನ್ನು ಉಳಿಸಿಕೊಳ್ಳಲು ಸಾಧ್ಯ. ಹಾಗಾದಾಗ ಮಾತ್ರವೇ, ಪರೋಕ್ಷವಾಗಿ ಎಲ್ಲ ಭಾರತೀಯ ಭಾಷೆಗಳನ್ನೂ ಉಳಿಸಲು, ಉಳಿಸಿಕೊಳ್ಳಲು ಸಾಧ್ಯ.

ಅದೆಷ್ಟು ಪ್ರಮಾಣದಲ್ಲಿ ಮಹತ್ತ್ವದ ಗ್ರಂಥಗಳು ಬೇರೆ ಬೇರೆ ಭಾಷೆಗಳಲ್ಲಿ ಬರಬೇಕಾಗಿವೆ ಎಂದರೆ, ಭಾರತಾದ್ಯಂತ ಹತ್ತಾರು ಸಾವಿರ ಪೂರ್ಣಾವಧಿ ಭಾಷಾಂತರಕಾರರ ಅಗತ್ಯವಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಆ ಕರಾಳ ದಿನಗಳನ್ನು ನೆನಪಿಸಿ ಅಂತರಂಗ ಕಲಕುವ ಬುಗುರಿ

ವಿಚಿತ್ರ ನೋಡಿ. ಅಮೆರಿಕಾ, ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳ ದರೋಡೆಕಾರರಿಗೆ ನಮ್ಮ ಪ್ರಾಚೀನ ಗ್ರಂಥಗಳ ನಿಜ-ಮೌಲ್ಯ ಗೊತ್ತಿತ್ತು. ಈ ಮೂರೂ ದೇಶಗಳ ವಿದ್ವಾಂಸರು ಒಟ್ಟಾಗಿ ಕುಳಿತು, ಸಾಮಾನ್ಯ ಯುಗದ 17 – 18ನೆಯ ಶತಮಾನಗಳಲ್ಲಿ, ನಮ್ಮ “ಸೂರ್ಯ ಸಿದ್ಧಾಂತ” ಗ್ರಂಥವನ್ನು ಅನುವಾದಿಸಿಕೊಂಡು ಹೋದರು. ಖಗೋಳ ಶಾಸ್ತ್ರದ ಆ ಅಮೌಲ್ಯ ಗ್ರಂಥದ ಪ್ರಮುಖ ವೈಜ್ಞಾನಿಕ ಅಂಶಗಳನ್ನು ಅವರು ಬಳಸಿಕೊಂಡರು. ಮೆಕಾಲೆ ಹುಟ್ಟುಹಾಕಿದ ನಮ್ಮ ದೇಶದ ಇಂದಿನ ವಿಕೃತ ಶಿಕ್ಷಣ ವ್ಯವಸ್ಥೆ ಹೇಗಿದೆಯೆಂದರೆ, ಇಂದು ನಮ್ಮ ವಿಶ್ವವಿದ್ಯಾಲಯಗಳ ಮಹಾಶಯರಿಗೆ “ಸೂರ್ಯ ಸಿದ್ಧಾಂತ”ದ ಬಗೆಗೆ ಕೇಳಿದರೆ, ಅವರು “ಅದು ಬೆಕ್ಕೋ – ನಾಯಿಯೋ ಇರಬಹುದು” ಎಂದಾರು. ಕಮ್ಯೂನಿಸ್ಟರು ಅವರ ತಲೆಗೆ ತುಂಬಿರುವಂತೆ, ಪ್ರಾಚೀನ ಭಾರತವೆಂದರೆ ಅವರ ಪಾಲಿಗೆ “ಸತೀ ಸಹಗಮನ, ಅಸ್ಪೃಶ್ಯತೆ, ಜಾತೀಯತೆ, ಮೂಢ ನಂಬಿಕೆಗಳು, ಭೇದಭಾವ, ಶೋಷಣೆ, ಇತ್ಯಾದಿ” ಮಾತ್ರ!

ಅತ್ಯಂತ ನಿರುಪಯುಕ್ತವಾದ ಕೆಮಿಸ್ಟ್ರಿ (ಶಾಲಾ ಕಾಲೇಜುಗಳಲ್ಲಿ ನಾನೂ ಕೆಮಿಸ್ಟ್ರಿ ವಿದ್ಯಾರ್ಥಿಯೇ. ಅದರಿಂದ ಮೂರುಕಾಸಿನ ಪ್ರಯೋಜನವೂ ಇಲ್ಲವೆಂಬುದನ್ನು, ಕಳೆದ ಅರ್ಧ ಶತಮಾನದಲ್ಲಿ ಅರ್ಥ ಮಾಡಿಕೊಂಡಿದ್ದೇನೆ) ಮುಂತಾದವನ್ನು ಕೈಬಿಟ್ಟು, ಆಗಬೇಕಾದ ವಿಭಾಗಗಳಲ್ಲಿ ಆಗಬೇಕಾದ ಕೆಲಸಗಳಿಗೆ ಆದ್ಯತೆ ಕೊಟ್ಟರೆ, ನಮ್ಮ ವಿಶ್ವವಿದ್ಯಾಲಯಗಳೂ ಅರ್ಥಪೂರ್ಣ ಕೊಡುಗೆ ನೀಡಬಹುದು.

ಇಲ್ಲಿ ಇನ್ನೂ ಒಂದು ಪ್ರಮುಖ ಸಂಗತಿಯನ್ನು ಪ್ರಸ್ತಾಪಿಸಬಹುದು. ಮೇಲೆ ಉಲ್ಲೇಖಿಸಿದ ಉದಾಹರಣೆಗಳು, ಮತಧರ್ಮಗಳ ಶಾಸ್ತ್ರಗ್ರಂಥಗಳ ಅನುವಾದಕ್ಕೆ ಸಂಬಂಧಿಸುತ್ತವೆ, ಅದರ ಹಿಂದೆ ಧರ್ಮಶ್ರದ್ಧೆಯ ಆಯಾಮವಿದೆ ಎಂದು ಕೆಲವರು ಮೂಗು ಮುರಿಯಬಹುದು. ಚೀನಾ ದೇಶದ ಈ ಮೇಲಿನ ಯೋಜನೆಗಳಲ್ಲಿ, ಅವರಿಗೆ ಜೊತೆಜೊತೆಯಲ್ಲಿಯೇ ತರ್ಕಶಾಸ್ತ್ರ, ಔಷಧಶಾಸ್ತ್ರ, ಆಯುರ್ವೇದ ಮುಂತಾದ ಅನೇಕ ಜ್ಞಾನಶಾಖೆಗಳ ಲಾಭವೂ ಆಯಿತು. ನಮ್ಮ ಭಾರತ-ಮೂಲದ ಗಣಿತ, ಅಂಕಿಗಳು, ಕ್ಯಾಲ್ಕುಲಸ್, ಬುದ್ಧಿವಂತರ ಆಟ ಎಂದೇ ಹೆಸರಾದ ಚದುರಂಗದಾಟ (Chess) ಇತ್ಯಾದಿ ಮಹತ್ತ್ವದ ಸಂಗತಿಗಳು ಅರೇಬಿಯಾ ಮೂಲಕ ಯೂರೋಪಿಗೆ ಪರಿಚಯವಾದವು. ಪರೋಕ್ಷವಾಗಿ ಯೂರೋಪಿನಲ್ಲಿ ಆಧುನಿಕ ವಿಜ್ಞಾನದ ವಿಕಾಸ ಸಂಶೋಧನೆಗಳಿಗೆ ಇವೆಲ್ಲಾ ಸಾಧನಗಳಾದವು, ಎಂಬುದನ್ನೂ ನಾವು ಮರೆಯುವಂತಿಲ್ಲ.

ಹೌದು, ಭಾಷಾಂತರ ಕ್ಷೇತ್ರಕ್ಕೆ ಈಗಲಾದರೂ ಆದ್ಯತೆ ದೊರೆಯಬೇಕಿದೆ. ಭಾರತೀಯ ಸಮಾಜದ ಬೌದ್ಧಿಕ ಲೋಕದ ಚುಕ್ಕಾಣಿ ಹಿಡಿದವರು ಈ ನಿಟ್ಟಿನಲ್ಲಿ ತೀವ್ರ ಗಮನ ನೀಡಬೇಕಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಜೈಶಂಕರ್‌ ಕೃತಿ ʻಭಾರತ ಪಥʼ ತೆರೆದಿಡುವ ವಿದೇಶಾಂಗ ಸಂಬಂಧಗಳ ರೋಚಕ ಆಯಾಮ

Continue Reading

ಬೆಂಗಳೂರು

Music Festival: ಬೆಂಗಳೂರಿನಲ್ಲಿ ಮೇ 12ರಂದು ಸಪ್ತಕ ʼಸಂಗೀತ ಸಂಭ್ರಮʼ

Music Festival: ಬೆಂಗಳೂರಿನ ಮಲ್ಲೇಶ್ವರದ ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಸಭಾ ಭವನದಲ್ಲಿ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

Music Festival
Koo

ಬೆಂಗಳೂರು: ಸಪ್ತಕ ಸಂಸ್ಥೆಯ 19ನೇ ವಾರ್ಷಿಕ ಸಂಗೀತ ಉತ್ಸವದ ನಿಮಿತ್ತ ಮೇ 12ರಂದು ಸಂಜೆ 5.30ಕ್ಕೆ ಸಂಗೀತ ಸಂಭ್ರಮ 552ನೇ ಕಾರ್ಯಕ್ರಮವನ್ನು (Music Festival) ನಗರದ ಮಲ್ಲೇಶ್ವರದ ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಪ್ತಕ ಸಂಚಾಲಕರಾದ ಜಿ.ಎಸ್‌.ಹೆಗಡೆ ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಕಾಡೆಮಿ ಆಫ್‌ ಮ್ಯೂಸಿಕ್‌ ಪ್ರಾಯೋಕತ್ವದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ. ಕೆ ಧರಿಣಿದೇವಿ ಮಾಲಗತ್ತಿ ಭಾಗವಹಿಸಲಿದ್ದಾರೆ.

ಕೋಲ್ಕೊತಾ ಗಾಯಕಿ ವಿದುಷಿ ರುಚಿರಾ ಪಾಂಡಾ, ಬೆಂಗಳೂರಿನ ತಬಲಾ ವಾದಕ ಪಂ. ರಾಜೇಂದ್ರ ನಾಕೋಡ, ಹಾರ್ಮೋನಿಯಂ ವಾದಕ ಪಂ. ವ್ಯಾಸಮೂರ್ತಿ ಕಟ್ಟಿ, ಮುಂಬಯಿಯ ತಬಲಾ ಸೋಲೋ ಕಲಾವಿದ ಪಂ. ಯೋಗೀಶ ಸಂಸಿ, ಪುಣೆಯ ಹಾರ್ಮೋನಿಯಮ್ ಲೆಹರಾ ಕಲಾವಿದರಾದ ತನ್ಮಯ ದೇವಚಕೆ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Book Release: ಮೈಸೂರಿನಲ್ಲಿ ಮೇ 9ರಂದು ಐತಿಚಂಡ ರಮೇಶ ಉತ್ತಪ್ಪ ಅವರ 4 ಪುಸ್ತಕ ಬಿಡುಗಡೆ, ಸಂವಾದ

Continue Reading
Advertisement
A Movie Re-ReleaseActress Chandni relives memories
ಸ್ಯಾಂಡಲ್ ವುಡ್6 mins ago

A Movie Re-Release: ರೀ-ರಿಲೀಸ್ ಆಗ್ತಿದೆ ಉಪ್ಪಿಯ `A’ ಸಿನಿಮಾ : ನೆನಪುಗಳನ್ನು ಮೆಲುಕು ಹಾಕಿದ ನಟಿ ಚಾಂದಿನಿ!

Sunil Chhetri
ಕ್ರೀಡೆ22 mins ago

Sunil Chhetri: 20 ವರ್ಷಗಳ ಫುಟ್ಬಾಲ್ ವೃತ್ತಿಜೀವನಕ್ಕೆ ತೆರೆ ಎಳೆಯಲು ನಿರ್ಧರಿಸಿದ ಸುನೀಲ್‌ ಚೆಟ್ರಿ; ಕುವೈತ್ ವಿರುದ್ಧ ಅಂತಿಮ ಪಂದ್ಯ

Aishwarya Rai Injured heads to Cannes Film Festival with daughter
ಬಾಲಿವುಡ್30 mins ago

Cannes 2024: ಐಶ್ವರ್ಯಾ ರೈ ಕೈಗೆ ಪೆಟ್ಟು: ಮಗಳ ಜತೆ ಕಾನ್ ಫಿಲ್ಮ್ ಫೆಸ್ಟಿವಲ್‌ನತ್ತ ಹೊರಟ ನಟಿ!

Robert Fico
ವಿದೇಶ32 mins ago

Robert Fico: ಸ್ಲೊವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಮೇಲೆ ಗುಂಡಿನ ದಾಳಿ ನಡೆಸಿದ್ದು ಓರ್ವ ಕವಿ; ಯಾಕೀ ದ್ವೇಷ?

self harming gym trainer
ಕ್ರೈಂ37 mins ago

Self Harming: ಪತ್ನಿಗೆ ಹೆದರಿಸಲು ಹೋಗಿ ಉರುಳು ಬಿಗಿದು ಸತ್ತ ಜಿಮ್‌ ಟ್ರೇನರ್; ವಿಡಿಯೋ ಕಾಲ್‌ನಲ್ಲೇ ಆತ್ಮಹತ್ಯೆ

GT vs SRH
ಕ್ರೀಡೆ47 mins ago

GT vs SRH: ಇಂದು ಲ್ಯಾವೆಂಡರ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಗುಜರಾತ್​ ತಂಡ; ಇದರ ಉದ್ದೇಶವೇನು?

mlc election congress candidate gift boxes
ಬೆಂಗಳೂರು1 hour ago

MLC Election: ಮತದಾರರಿಗೆ ಬೆಂಗಳೂರು ಕಾಂಗ್ರೆಸ್‌ ಅಭ್ಯರ್ಥಿ ಆಮಿಷ? ಸಾವಿರಾರು ಗಿಫ್ಟ್‌ ಬಾಕ್ಸ್‌ಗಳು ಪತ್ತೆ

Pakistan
ವಿದೇಶ1 hour ago

Pakistan: “ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ, ಆದರೆ ನಾವು..” ಪಾಕ್‌ ಸಂಸದನ ಭಾಷಣ ವೈರಲ್‌

Kangana Ranaut's Emergency gets postponed again
ಬಾಲಿವುಡ್1 hour ago

Kangana Ranaut: ಲೋಕಸಭಾ ಚುನಾವಣೆ: ಕಂಗನಾ ʻಎಮರ್ಜೆನ್ಸಿʼ ಸಿನಿಮಾ ಮತ್ತೆ ಪೋಸ್ಟ್‌ಪೋನ್‌!

T20 World Cup 2024
ಕ್ರೀಡೆ2 hours ago

KMF Nandini Logo: ನಂದಿನಿ ಲೋಗೋ ಇರುವ ಜೆರ್ಸಿ ಅನಾವರಣಗೊಳಿಸಿದ ಸ್ಕಾಟ್ಲೆಂಡ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ3 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ3 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌