ವಿಸ್ತಾರ Explainer | population of India: ಭಾರತದಲ್ಲಿ ಮುಂದಿನ ನೂರು ಮಕ್ಕಳು ಹುಟ್ಟೋದೆಲ್ಲಿ? ಅದರಿಂದೇನು? - Vistara News

EXPLAINER

ವಿಸ್ತಾರ Explainer | population of India: ಭಾರತದಲ್ಲಿ ಮುಂದಿನ ನೂರು ಮಕ್ಕಳು ಹುಟ್ಟೋದೆಲ್ಲಿ? ಅದರಿಂದೇನು?

ಭಾರತದಲ್ಲಿ ಈ ಕ್ಷಣ ಹುಟ್ಟುವ ನೂರು ಮಕ್ಕಳಲ್ಲಿ ಎಷ್ಟೆಷ್ಟು ಯಾವ ಯಾವ ರಾಜ್ಯದಲ್ಲಿ ಜನಿಸುತ್ತವೆ, ಮತ್ತು ಅದರಿಂದ ಭವಿಷ್ಯದಲ್ಲಿ ಉಂಟಾಗುವ ಸಾಮಾಜಿಕ- ರಾಜಕೀಯ- ಭೌಗೋಳಿಕ ಪರಿಣಾಮ ಏನೇನು? ಒಂದು ವಿವರವಾದ ನೋಟ ಇಲ್ಲಿದೆ.

VISTARANEWS.COM


on

population
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಶ್ವಸಂಸ್ಥೆಯೇ ಲೆಕ್ಕಹಾಕಿ ಹೇಳಿರುವ ಪ್ರಕಾರ, 2023ರಲ್ಲಿ ಚೀನಾವನ್ನೂ ಹಿಂದಿಕ್ಕಿ ಭಾರತ ಜಗತ್ತಿನ ಅತೀ ಹೆಚ್ಚು ಜನಸಂಖ್ಯೆಯ ದೇಶ ಎನಿಸಲಿದೆ. ಈ ವರ್ಷ ಭಾರತದ ಅಂದಾಜು ಜನಸಂಖ್ಯೆ 141.2 ಕೋಟಿ ಆಗಿದ್ದು, ಚೀನಾದಲ್ಲಿ ಅದು 142.6 ಕೋಟಿ ಇದೆ. ಅದಕ್ಕಿಂತ ಕುತೂಹಲಕಾರಿ ಸಂಗತಿ ಒಂದನ್ನು ನೋಡೋಣ. ಭಾರತದಲ್ಲಿ ಪ್ರಸ್ತುತ ವರ್ತಮಾನದಲ್ಲಿ ಹುಟ್ಟುತ್ತಿರುವ ಸರಾಸರಿ ನೂರು ಮಕ್ಕಳಲ್ಲಿ, ಯಾವ ರಾಜ್ಯದ ಮಕ್ಕಳ ಪಾಲು ಎಷ್ಟು ಎಂಬುದು ನಿಮಗೆ ಗೊತ್ತೆ?

india

ಪ್ರತಿ 2 ನಿಮಿಷಕ್ಕೆ 100 ಶಿಶುಗಳು!

ಗೊತ್ತಿಲ್ಲದಿದ್ದರೆ, ನಮ್ಮ ಆಧಾರ್‌ ಪ್ರಾಧಿಕಾರ ಒದಗಿಸಿರುವ ಅಂಕಿ ಅಂಶಗಳನ್ನು ನೋಡೋಣ. ಅದರ ಪ್ರಕಾರ, ದೇಶದಲ್ಲಿ ಇಂದು ಪ್ರತಿ 2 ನಿಮಿಷಕ್ಕೆ 100 ಮಕ್ಕಳು ಜನಿಸುತ್ತಿದ್ದಾರೆ. ಈ ನೂರು ಮಕ್ಕಳಲ್ಲಿ 34 ಮಕ್ಕಳು ಉತ್ತರಪ್ರದೇಶ ಹಾಗೂ ಬಿಹಾರ ಎರಡೇ ರಾಜ್ಯಗಳಲ್ಲಿ ಹುಟ್ಟುತ್ತಿವೆ! ಉತ್ತರದ ನಾಲ್ಕು ರಾಜ್ಯಗಳಲ್ಲಿ ಈ ನೂರ ಮಕ್ಕಳಲ್ಲಿ ಅರ್ಧ ಭಾಗ, ಅಂದರೆ 50 ಮಕ್ಕಳು ಜನಿಸುತ್ತಿವೆ!

ಪ್ರತೀ ರಾಜ್ಯಗಳ ವಿವರ ಹೀಗಿದೆ- ಉತ್ತರಪ್ರದೇಶ 22, ಬಿಹಾರ 12, ಮಧ್ಯಪ್ರದೇಶ 8, ರಾಜಸ್ಥಾನ 7, ಮಹಾರಾಷ್ಟ್ರ 7, ಪಶ್ಚಿಮ ಬಂಗಾಳ 5, ಗುಜರಾತ್‌ 5, ಕರ್ನಾಟಕ 4, ತಮಿಳುನಾಡು 4, ಆಂಧ್ರಪ್ರದೇಶ 3, ತೆಲಂಗಾಣ 3, ಒಡಿಶಾ 3, ಹರಿಯಾಣ ಪಂಜಾಬ್‌ ತಲಾ 2, ಇತರ ರಾಜ್ಯಗಳು ಒಂದು ಅಥವಾ ಒಂದಕ್ಕಿಂತಲೂ ಕಡಿಮೆ.

ಇದು ಏಕೆ ಹೀಗೆ ಎಂಬುದಕ್ಕೆ ಹೆಚ್ಚು ಕಾರಣಗಳನ್ನು ಹುಡುಕಬೇಕಿಲ್ಲ. ದಶಕಗಳಿಂದಲೂ ದಕ್ಷಿಣದ ರಾಜ್ಯಗಳು ಕುಟುಂಬ ಕಲ್ಯಾಣ ಯೋಜನೆಯನ್ನು ಭಕ್ತಿಯಿಂದ ಪಾಲಿಸುತ್ತ ಬಂದಿವೆ. ಇಲ್ಲಿ ಶೈಕ್ಷಣಿಕ ಅರಿವು ಕೂಡ ಹೆಚ್ಚು. ಉತ್ತರದ ರಾಜ್ಯಗಳು, ಮುಖ್ಯವಾಗಿ ʻಬಿಮಾರುʼ (ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ) ರಾಜ್ಯಗಳು ಕುಟುಂಬ ಕಲ್ಯಾಣವನ್ನೂ ಅಳವಡಿಸಿಕೊಂಡಿಲ್ಲ. ಇಲ್ಲಿ ಶಿಕ್ಷಣವೂ ಸಾಕಷ್ಟಿಲ್ಲ. ಸಾಕ್ಷರತೆ ಪ್ರಮಾಣ ಕಡಿಮೆ. ಹೀಗಾಗಿ ಸಂಸಾರ ದೊಡ್ಡದು, ಆದಾಯ ಕಡಿಮೆ, ಬಡತನ ಹೆಚ್ಚು. ಬಡತನ ಇನ್ನಷ್ಟು ಶೈಕ್ಷಣಿಕ ಹಿಂದುಳಿಯುವಿಕೆಗೂ ಮತ್ತಷ್ಟು ಮಕ್ಕಳಿಗೂ ಕಾರಣವಾಗುತ್ತದೆ.

ಹೀಗಾಗಿ ಇಂದು ಭಾರತ ಜನಸಂಖ್ಯೆಯ ವಿಷಯದಲ್ಲಿ ಅಸಮತೋಲಿತ ದೇಶ. ಪ್ರತಿ ಎರಡು ನಿಮಿಷದಲ್ಲಿ ಐವತ್ತು ಮಕ್ಕಳು ಉತ್ತರದ ನಾಲ್ಕು ರಾಜ್ಯಗಳಲ್ಲಿ, ಇನ್ನು ಐವತ್ತು ಮಕ್ಕಳು ಇತರ 24 ರಾಜ್ಯಗಳಲ್ಲಿ ಜನಿಸುತ್ತಾರೆ ಎಂದರೆ ಎಷ್ಟು ಅಸಮತೋಲಿತ ಬೆಳವಣಿಗೆ ಎಂಬುದನ್ನು ನೀವೇ ಊಹಿಸಿಕೊಳ್ಳಿ.

ಉದ್ಯೋಗಕ್ಕಾಗಿ ಭಾರಿ ವಲಸೆ

ಇದರಿಂದ ಏನಾಗುತ್ತದೆ ಎಂಬುದನ್ನು ತಿಳಿಯಲು ಭಾರತದಲ್ಲಿ ಬಡತನ ಹಾಗೂ ಉದ್ಯೋಗಕ್ಕಾಗಿ ವಲಸೆ ಹೇಗಿದೆ ಎಂಬುದನ್ನು ತಿಳಿಯಬೇಕು.

2016ರಲ್ಲಿ ಭಾರತ ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ದಕ್ಷಿಣದ ರಾಜ್ಯಗಳು, ವಿಶೇಷವಾಗಿ ತಮಿಳುನಾಡು ಮತ್ತು ಕೇರಳ, ವಲಸಿಗರ ಜನಸಂಖ್ಯೆಯಲ್ಲಿ ಹೆಚ್ಚಿನ ಹೆಚ್ಚಳ ಆಗಿದೆ. ಭಾರತದಲ್ಲಿ 45.36 ಕೋಟಿ ವಲಸಿಗರು ನಾನಾ ಕಾರಣಗಳಿಗಾಗಿ ವಲಸೆ ಹೋಗುತ್ತಾರೆ. ಭಾರತದ 121.03 ಕೋಟಿ ಜನಸಂಖ್ಯೆಯಲ್ಲಿ ವಲಸಿಗರು ಶೇ.37.8ರಷ್ಟಿದ್ದಾರೆ. 2006- 2016ರ ನಡುವೆ ಭಾರತದಲ್ಲಿ ಒಟ್ಟು ವಲಸಿಗರ ಸಂಖ್ಯೆ 44.35 ಪ್ರತಿಶತದಷ್ಟು ಹೆಚ್ಚಾಯಿತು. ತಮಿಳುನಾಡಿನ ವಲಸಿಗ ಜನಸಂಖ್ಯೆ 2011ರಲ್ಲಿ 3.13 ಕೋಟಿಗೆ (98 ಶೇಕಡಾ ಏರಿಕೆ) ಏರಿದೆ. ವಲಸಿಗರೇ ರಾಜ್ಯದ ಜನಸಂಖ್ಯೆಯ ಶೇಕಡಾ 43.4ರಷ್ಟಿದ್ದಾರೆ. ಕೇರಳದ ವಲಸೆ ಜನಸಂಖ್ಯೆ ಶೇಕಡಾ 77ರಷ್ಟು ಹೆಚ್ಚಾಗಿದೆ. ಜನಸಂಖ್ಯೆಯ ಸುಮಾರು 49 ಪ್ರತಿಶತ ಜನರು ಇಲ್ಲಿ ವಲಸಿಗರು.

ಕರ್ನಾಟಕವೂ ತನ್ನ ವಲಸೆ ಜನಸಂಖ್ಯೆಯಲ್ಲಿ 50 ಪ್ರತಿಶತ ಹೆಚ್ಚಳವನ್ನು ತೋರಿಸಿದೆ. 1.66 ಕೋಟಿಯಿಂದ 2.50 ಕೋಟಿಗೆ ಏರಿದೆ. ವಲಸಿಗ ಜನಸಂಖ್ಯೆಯಲ್ಲಿ ಶೇಕಡಾ 40ರಷ್ಟು ಏರಿಕೆಯಾಗಿದೆ. ಆಂಧ್ರಪ್ರದೇಶದ ಅಂಕಿಅಂಶವೂ ಹೀಗೇ ಇದೆ.

ಇದನ್ನೂ ಓದಿ | ವಿಸ್ತಾರ Explainer | ರಕ್ಕಮ್ಮ ಜಾಕ್ವೆಲಿನ್‌ ವಂಚಕ ಸುಕೇಶ್‌ ಕೈಯಲ್ಲಿ ರೊಕ್ಕಮ್ಮ ಆಗಿದ್ದು ಹೇಗೆ?

ಇವರು ಎಲ್ಲಿಂದ ಬಂದರು? ಎಲ್ಲರೂ ಬಂದುದು ಉತ್ತರದ ರಾಜ್ಯಗಳಿಂದ. ಇದರಲ್ಲಿ ಉತ್ತರ ಭಾರತ ಹಾಗೂ ಈಶಾನ್ಯ ಭಾರತದ ಜನರ ಪಾಲೂ ಸಾಕಷ್ಟಿದೆ. ಇಲ್ಲಿನ ಹವಾಮಾನ, ಶಿಕ್ಷಣ ಮಟ್ಟ, ಉದ್ಯೋಗದ ಲಭ್ಯತೆ, ಜೀವನದ ಸುರಕ್ಷತೆ, ಅಪರಾಧ ಪ್ರಮಾಣ ಕಡಿಮೆಯಾಗಿರುವಿಕೆ ಇತ್ಯಾದಿ ಅಂಶಗಳು ಇವರನ್ನು ಆಕರ್ಷಿಸಿವೆ. ಮುಂದೆಯೂ ಆಕರ್ಷಿಸಲಿವೆ.

ಸರಿಯಾಗಿ ಕಣ್ಣು ಬಿಟ್ಟು ನೋಡಿದರೆ ಕಟ್ಟಡ ನಿರ್ಮಾಣ ಕಾರ್ಮಿಕರಲ್ಲಿ ಹೆಚ್ಚಿನ ಮಂದಿ ಬಿಹಾರದವರಾಗಿರುವುದನ್ನು ಕಾಣಬಹುದು. ಕಾರ್ಪೊರೇಟ್‌ ವಲಯದಲ್ಲೂ ಉತ್ತರ ಭಾರತದ ಮಂದಿ ಸಾಕಷ್ಟು ಪ್ರಮಾಣದಲ್ಲಿ ಇಲ್ಲಿ ಬಂದು ನೆಲೆಸಿದ್ದಾರೆ. ಅನೇಕ ಸಲ ಇವರು, ʻಕನ್ನಡ ಮಾತಾಡುವುದಿಲ್ಲ, ಏನೀಗ?ʼ ಎಂದು ಕೇಳಿ ಕನ್ನಡಿಗರ ಸಿಟ್ಟಿಗೆ ಗುರಿಯಾಗಿರುವುದನ್ನೂ ನೋಡಿದ್ದೇವೆ. ಮುಂದಿನ ದಿನಗಳಲ್ಲಿ ರೈಲ್ವೇ ವಲಯ ಹಾಗೂ ಬ್ಯಾಂಕಿಂಗ್‌ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ತರದವರೇ ತುಂಬಿಕೊಳ್ಳಲಿದ್ದಾರೆ, ಈಗಾಗಲೇ ಅರ್ಧಕ್ಕೂ ಅಧಿಕ ಮಂದಿ ತುಂಬಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇರಲಿದ್ದಾರೆ. ಯಾಕೆಂದರೆ ಇವು ಕೇಂದ್ರ ಸರ್ಕಾರದ ಆಡಳಿತವಿರುವ ವಲಯಗಳು.

ಇದರಿಂದ ಆಗಲಿರುವ ಇನ್ನೂ ಒಂದು ಅಪಾಯ ಎಂದರೆ, ರಾಜಕೀಯ ಪ್ರಾತಿನಿಧ್ಯ ನಮಗೆ ಕಡಿಮೆಯಾಗಲಿದೆ. ಅದು ಹೇಗೆ?

ರಾಜಕೀಯದಲ್ಲೂ ಬಲಹೀನ ದಕ್ಷಿಣ

ಇತ್ತೀಚೆಗೆ ಮದ್ರಾಸ್‌ ಹೈಕೋರ್ಟ್‌ ಗಮನಾರ್ಹವಾದ ಒಂದು ಅಭಿಪ್ರಾಯವನ್ನು ತಿಳಿಸಿತ್ತು. ದಕ್ಷಿಣ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಮಾಡಿದಂತೆ, ಲೋಕಸಭಾ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತ ಹೋಗುತ್ತಿದೆ. ಇದು ಅನ್ಯಾಯ ಎಂದಿತ್ತು. 1962ರಿಂದ ಲೋಕಸಭೆಯಲ್ಲಿ ಸಿಕ್ಕಿರುವ ಪ್ರಾತಿನಿಧ್ಯದಲ್ಲಿ ತಮಿಳುನಾಡು ಹಾಗೂ ಆಂಧ್ರಪ್ರದೇಶಕ್ಕೆ ಅನ್ಯಾಯವಾಗಿದೆ. ಯಾಕೆಂದರೆ ಕಾಲಕಾಲಕ್ಕೆ ತಕ್ಕಂತೆ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆಯಾಗುತ್ತದೆ. 1962ರ ಚುನಾವಣೆಯವರೆಗೂ ತಮಿಳುನಾಡಿನಲ್ಲಿ 41 ಲೋಕಸಭೆ ಕ್ಷೇತ್ರಗಳಿದ್ದವು. 1962ರಲ್ಲಿ ಅದನ್ನು 39ಕ್ಕೆ ಇಳಿಸಲಾಯಿತು. ಯಾಕೆಂದರೆ ಜನಸಂಖ್ಯೆಯಲ್ಲಿ ನಿಯಂತ್ರಣ ಸಾಧಿಸಲಾಗಿತ್ತು. ಇದು ಅನ್ಯಾಯ ಹಾಗೂ ನಿಷ್ಕಾರಣ. ಕೇಂದ್ರ ಸರಕಾರದ ಕುಟುಂಬ ಕಲ್ಯಾಣ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಕ್ಕಾಗಿ ರಾಜ್ಯಕ್ಕೆ ಬಹುಮಾನ ನೀಡಬೇಕಾಗಿತ್ತು. ಆದರೆ ಶಿಕ್ಷೆ ನೀಡಲಾಗಿದೆ. ಯಾವ ರಾಜ್ಯಗಳು ಕೇಂದ್ರದ ಯೋಜನೆ ಜಾರಿಗೆ ವಿಫಲವಾಗಿವೆಯೋ ಅವುಗಳಿಗೆ ಬಹುಮಾನ, ಅಂದರೆ ಹೆಚ್ಚು ಎಂಪಿ ಸೀಟ್ ಪ್ರಾತಿನಿಧ್ಯ ನೀಡಲಾಗಿದೆ.

ಇದನ್ನೂ ಓದಿ | ವಿಸ್ತಾರ Explainer | ಈಗ ಯಾರು ಬೇಕಿದ್ರೂ ಕಾಶ್ಮೀರದಲ್ಲಿ ವೋಟ್‌ ಮಾಡಬಹುದಾ?

81ನೇ ವಿಧಿ ಏನು ಹೇಳುತ್ತದೆ?

ಸಂವಿಧಾನದ 81ನೇ ವಿಧಿ ಹೇಳುವ ಪ್ರಕಾರ, ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವೂ ತನ್ನ ಜನಸಂಖ್ಯೆಗೆ ಅನುಗುಣವಾಗಿ, ಲೋಕಸಭೆಯಲ್ಲಿ ಸಮಾನ ರೀತಿಯ ಪ್ರಾತಿನಿಧ್ಯವನ್ನು ಹೊಂದಬೇಕು ಎಂದು ಸಾರುತ್ತದೆ. ಲೋಕಸಭಾ ಕ್ಷೇತ್ರಗಳ ಸರಾಸರಿ ಜನಸಂಖ್ಯಾ ಪ್ರಮಾಣವನ್ನು ಒಂದೇ ರೀತಿಯಲ್ಲಿ ಕಾಯ್ದುಕೊಳ್ಳಲು ಸರಕಾರ ಕ್ಷೇತ್ರ ಮರುವಿಂಗಡಣೆಯನ್ನು ನಡೆಸುತ್ತದೆ. ಇದನ್ನು ಸಂವಿಧಾನದಲ್ಲಿ ಹೇಳಿದಂತೆ ಯಥಾವತ್ ಮರುವಿಂಗಡಣೆ ನಡೆಸುವುದಾದರೆ, ಇಂದು ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ದಿಲ್ಲಿಗಳು ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಿಕೊಳ್ಳಬೇಕು. ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಒಡಿಶಾ, ತೆಲಂಗಾಣಗಳು ಈಗಿರುವ ಸ್ಥಾನಗಳನ್ನೂ ಕಳೆದುಕೊಳ್ಳುತ್ತವೆ.

ಕ್ಷೇತ್ರ ಮರುವಿಂಗಡಣೆಗಳು

ಇದುವರೆಗೂ ನಾಲ್ಕು ಕ್ಷೇತ್ರ ಮರುವಿಂಗಡಣೆಗಳು ನಡೆದಿವೆ- 1952, 1963, 1973 ಹಾಗೂ 2002. ಹತ್ತು ವರ್ಷಕ್ಕೊಮ್ಮೆ ಮರುವಿಂಗಡಣೆ ನಡೆಯಬೇಕು. ಸದ್ಯ ಕ್ಷೇತ್ರ ಮರುವಿಂಗಡಣೆಯ ಸ್ವರೂಪಕ್ಕೆ ಕಡಿವಾಣ ಹಾಕಿರುವುದು 1976ರಲ್ಲಿ ತರಲಾದ ಸಂವಿಧಾನದ 42ನೇ ತಿದ್ದುಪಡಿ ಹಾಗೂ 2001ರಲ್ಲಿ ತರಲಾದ 84ನೇ ತಿದ್ದುಪಡಿಗಳು. 42ನೇ ತಿದ್ದುಪಡಿಯ ಪ್ರಕಾರ, ಮುಂದಿನ 25 ವರ್ಷಗಳಿಗೆ(2001) ಕ್ಷೇತ್ರ ಮರುವಿಂಗಡಣೆಗೆ 1971ರ ಜನಗಣತಿಯ ಸಂಖ್ಯೆಯನ್ನೇ ಆಧಾರವಾಗಿಟ್ಟುಕೊಂಡಿರಬೇಕು. ಕುಟುಂಬ ಕಲ್ಯಾಣ ಯೋಜನೆಯಲ್ಲಿ ಹಿಂದುಳಿದ ರಾಜ್ಯಗಳಿಗೆ ಎಚ್ಚರಿಕೆಯಾಗಿ ಈ ನಿಯಮ ರೂಪಿಸಲಾಯಿತು. 2001ರಲ್ಲಿ ಸಂಸತ್ತು 84ನೇ ತಿದ್ದುಪಡಿಯನ್ನು ತಂದಿತು. ಅದರ ಪ್ರಕಾರ, ಜನಸಂಖ್ಯೆಗನುಗುಣವಾದ ಪ್ರಾತಿನಿಧ್ಯ 2026ರವರೆಗೂ 2001ರ ಜನಗಣತಿಯ ಆಧಾರದಲ್ಲೇ ಇರಲಿದೆ; ಅಂದರೆ ಸೀಟುಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗುವುದಿಲ್ಲ. ಆದರೆ ಕ್ಷೇತ್ರಗಳ ಬೌಂಡರಿಗಳು ವ್ಯತ್ಯಾಸವಾಗಬಹುದು. ಹೀಗಿದ್ದರೂ ಎಂಪಿ ಸೀಟುಗಳ ಸಂಖ್ಯೆಯನ್ನು ಕಡಿಮೆ- ಹೆಚ್ಚು ಮಾಡಲು ಸರಕಾರ ಮುಂದಾಗಿಲ್ಲ. ಕಡಿಮೆ ಜನಸಂಖ್ಯೆಯ ರಾಜ್ಯಗಳು ಪ್ರಾತಿನಿಧ್ಯದಲ್ಲಿ ಅನ್ಯಾಯಕ್ಕೊಳಗಾಗಬಹುದು ಎಂಬುದು ಈ ನಡೆಯ ಹಿಂದಿನ ಆತಂಕ.

ಇದನ್ನೂ ಓದಿ: ವಿಸ್ತಾರ Explainer | ಹೂಡಿಕೆಗೆ ಈಗ ಸಾವರಿನ್‌ ಗೋಲ್ಡ್‌ ಬಾಂಡ್‌ ಎಂಬ ಸುವರ್ಣಾವಕಾಶ!

ಪ್ರಾತಿನಿಧ್ಯದಲ್ಲಿ ಏರುಪೇರು

ಕ್ಷೇತ್ರ ಮರುವಿಂಗಡಣೆಯಲ್ಲಿ ಉಂಟಾಗಿರುವ ಈ ನನೆಗುದಿಯಿಂದ ಉಂಟಾಗಿರುವ ನೈಜ ಸಮಸ್ಯೆ ಎಂದರೆ, ಪ್ರಾತಿನಿಧ್ಯದಲ್ಲಿ ಆಗಿರುವ ಏರುಪೇರು. 1977ರಿಂದಲೂ ನಮ್ಮಲ್ಲಿ ಸಂಸತ್ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಎಂಪಿಗಳ ಸಂಖ್ಯೆಯಿಲ್ಲ. 1951-52ರಲ್ಲಿ ಒಬ್ಬ ಎಂಪಿ ಎಷ್ಟು ಜನರನ್ನು ಪ್ರತಿನಿಧಿಸುತ್ತಿದ್ದನೋ, ಇಂದು ಅದಕ್ಕಿಂತ ನಾಲ್ಕು ಪಟ್ಟು ಜನರನ್ನು ಪ್ರತಿನಿಧಿಸುತ್ತಿದ್ದಾನೆ. ಭಾರತದಲ್ಲೇ ಹೀಗೆ ಒಬ್ಬ ಎಂಪಿ ಅತ್ಯಧಿಕ ಜನರನ್ನು ಪ್ರತಿನಿಧಿಸುತ್ತಿರುವುದು. ಜಾಗತಿಕ ಸರಾಸರಿ ಒಬ್ಬ ಎಂಪಿಗೆ 1.45 ಲಕ್ಷ ಜನ. ಆದರೆ ಭಾರತದಲ್ಲಿ ಇದು ಸರಾಸರಿ 15 ಲಕ್ಷದಷ್ಟಿದೆ. ಆದರೆ ಇದನ್ನು ಸರಿ ಮಾಡಲೆಂದು ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ಮರುವಿಂಗಡಣೆಗೆ ಮುಂದಾದರೆ, ಕುಟುಂಬ ಕಲ್ಯಾಣವನ್ನು ಪರಿಣಾಮಕಾರಿಯಾಗಿ ಅನುಷ್ಠಾನಿಸಿ, ದೇಶಕ್ಕೆ ಹೆಚ್ಚಿನ ತಲಾ ಜಿಡಿಪಿ ಕೊಡಮಾಡುತ್ತಿರುವ ದಕ್ಷಿಣ ಭಾರತದ ನಾಲ್ಕಾರು ರಾಜ್ಯಗಳಿಗೆ ತುಂಬಾ ಅನ್ಯಾಯವಾಗುತ್ತದೆ; ಪ್ರತಿಯೊಂದು ರಾಜ್ಯವೂ ಏಳೆಂಟು ಸಂಸದರನ್ನು ಕಳೆದುಕೊಳ್ಳುತ್ತದೆ. ರಾಜಕೀಯ ಪ್ರಾತಿನಿಧ್ಯ ಕುಸಿಯುತ್ತದೆ. ಇದೇ ವೇಳೆಗೆ, ಜನಸಂಖ್ಯೆಯನ್ನು ತಹಬಂದಿಗೆ ತರದೆ, ಜನಸಂಖ್ಯೆಯ ಜೊತೆಗೆ ಬಡತನ ಹೆಚ್ಚಿಸಿ ತಲಾದಾಯ ಕುಸಿದ ಉತ್ತರದ ರಾಜ್ಯಗಳಿಗೆ ಹೆಚ್ಚಿನ ಸಂಸದರು, ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಸಿಗುತ್ತದೆ.

ಸಂಸತ್ ಸದಸ್ಯರ ಪ್ರಮಾಣ

ರಾಜ್ಯ ಪ್ರಮಾಣ (ಶೇ.)
ಉತ್ತರಪ್ರದೇಶ 15.2
ಮಹಾರಾಷ್ಟ್ರ 9.1
ಪಶ್ಚಿಮ ಬಂಗಾಳ 8.0
ಬಿಹಾರ 7.6
ತಮಿಳುನಾಡು7.4
ಕರ್ನಾಟಕ5.3
ಮಧ್ಯಪ್ರದೇಶ 5.3
ಗುಜರಾತ್ 4.9

ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳು

ರಾಜ್ಯ   ಎಷ್ಟಿದೆ?ಎಷ್ಟಿರಬೇಕು?
ಉತ್ತರಪ್ರದೇಶ 80     93
ಬಿಹಾರ 40    44
ರಾಜಸ್ಥಾನ25  31
ಮಧ್ಯಪ್ರದೇಶ 29       33
ಹರಿಯಾಣ10 12
ಜಾರ್ಖಂಡ್ 14      14
ಮಹಾರಾಷ್ಟ್ರ 48 51
ಗುಜರಾತ್ 26  27
ಕರ್ನಾಟಕ 28  26
ಪಶ್ಚಿಮ ಬಂಗಾಳ 42    40
ಕೇರಳ 20     15
ಆಂಧ್ರಪ್ರದೇಶ, ತೆಲಂಗಾಣ 42   37
ತಮಿಳುನಾಡು 39     29
ದಿಲ್ಲಿ7 9

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

PM Modi: ಕನ್ಯಾಕುಮಾರಿಯಲ್ಲಿ ಪ್ರಧಾನಿ ಧ್ಯಾನ; ಪ್ರಧಾನಿ ಈ ಸ್ಥಳವನ್ನೇ ಆಯ್ಕೆ ಮಾಡಲು ಏನು ಕಾರಣ?

ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಈ ಬಾರಿ ಲೋಕ ಸಭಾ ಚುನಾವಣಾ ಪ್ರಚಾರದ ಅಂತ್ಯವನ್ನು ಕನ್ಯಾಕುಮಾರಿಯ ಸ್ವಾಮಿ ವಿವೇಕಾನಂದ ಕಲ್ಲಿನ ಸ್ಮಾರಕದಲ್ಲಿ ನಡೆಸಲಿದ್ದಾರೆ. ಇಲ್ಲಿ ಸುಮಾರು 45 ಗಂಟೆಗಳ ಕಾಲ ಅವರು ಕಳೆಯಲಿದ್ದಾರೆ.

VISTARANEWS.COM


on

By

PM Modi
Koo

ಲೋಕಸಭಾ ಚುನಾವಣೆ- 2024ರ (Loksabha election-2024) ಬಿಜೆಪಿ ಪ್ರಚಾರ ಕಾರ್ಯವನ್ನು ಅಂತ್ಯಗೊಳಿಸಿ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಕನ್ಯಾಕುಮಾರಿಗೆ ತೆರಳಲಿದ್ದು, ( Kanyakumari) ಇಲ್ಲಿನ ವಿವೇಕಾನಂದ ಕಲ್ಲಿನ ಸ್ಮಾರಕದಲ್ಲಿ (Vivekananda Rock Memorial) ಮೇ 30ರಿಂದ ಜೂನ್ 1ರವರೆಗೆ ಒಟ್ಟು 45 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ.

ಇದೇ ಸ್ಥಳದಲ್ಲಿ ಭಾರತದ ಆಧ್ಯಾತ್ಮಿಕ ನಾಯಕ ಸ್ವಾಮಿ ವಿವೇಕಾನಂದರು 1892ರಲ್ಲಿ ಮೂರು ದಿನಗಳ ಕಾಲ ಧ್ಯಾನ ಮಾಡಿ ಜ್ಞಾನೋದಯವನ್ನು ಪಡೆದಿದ್ದರು.

2019ರ ಚುನಾವಣಾ ಪ್ರಚಾರದ ಕೊನೆಯಲ್ಲಿ ಪ್ರಧಾನಿ ಮೋದಿ ಅವರು ಉತ್ತರಾಖಂಡದ ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿ 15 ಗಂಟೆಗಳ ‘ಏಕಾಂತವಾಸ್’ (ಏಕಾಂತ ಧ್ಯಾನ) ಕೈಗೊಂಡಿದ್ದರು.

2014 ರಲ್ಲಿ ಮಹಾರಾಷ್ಟ್ರದ ಪ್ರತಾಪಗಢಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದರು. 1659ರ ನವೆಂಬರ್ ನಲ್ಲಿ ಬಿಜಾಪುರದ ಆದಿಲ್ ಶಾಹಿ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್ ಅವರನ್ನು ಕೊಂದು ಯುದ್ಧದಲ್ಲಿ ಗೆದ್ದ ಛತ್ರಪತಿ ಶಿವಾಜಿಗೆ ಗೌರವ ಸಲ್ಲಿಸಿದರು. ಈ ವಿಜಯವು ಮರಾಠಾ ಸಾಮ್ರಾಜ್ಯದ ಮುಖ್ಯಸ್ಥನಾಗಿ ಶಿವಾಜಿಯ ಪಟ್ಟಾಭಿಷೇಕಕ್ಕೆ ದಾರಿ ಮಾಡಿಕೊಟ್ಟಿತು. ಇದನ್ನು ಹಿಂದವಿ ಸ್ವರಾಜ್ ಎಂದು ಛತ್ರಪತಿ ಶಿವಾಜಿ ಕರೆದರು.

ಇದೀಗ ಜೂನ್ 4 ರಂದು ಪ್ರಕಟವಾಗಲಿರುವ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಮುಂಚಿತವಾಗಿ ಮೋದಿ ಕನ್ಯಾಕುಮಾರಿ ಪ್ರವಾಸ ಯೋಜನೆ ಹಾಕಿಕೊಂಡಿದ್ದಾರೆ.


ವಿವೇಕಾನಂದ ಬಂಡೆಯ ಮಹತ್ವ ಏನು?

ಹಿಂದೂ ಮಹಾಸಾಗರ, ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಯ ಸಂಗಮದಲ್ಲಿರುವ ಭಾರತದ ದಕ್ಷಿಣ ತುದಿಯಾದ ಕನ್ಯಾಕುಮಾರಿಯ ವವತುರೈ ಕಡಲತೀರದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಈ ದ್ವೀಪದ ಮೇಲೆ ಧ್ಯಾನ ಮಾಡುವಾಗ ಸ್ವಾಮಿ ವಿವೇಕಾನಂದರು ಅಭಿವೃದ್ಧಿ ಹೊಂದಿದ ಭಾರತದ ಕನಸು ಕಂಡಿದ್ದರು.

ಭಾರತದಾದ್ಯಂತ ನಾಲ್ಕು ವರ್ಷಗಳ ಕಾಲ ಅಲೆದಾಡಿದ ಅವರು ದೈವಿಕ ಸ್ವಭಾವ, ಸತ್ಯ, ಶುದ್ಧತೆ, ಪ್ರಾಮಾಣಿಕತೆ, ಪರಿಶ್ರಮ, ಧೈರ್ಯ, ಶಕ್ತಿ ಮತ್ತು ಪ್ರೀತಿಯಲ್ಲಿ ನಂಬಿಕೆಯ ಇಡುವ ತತ್ತ್ವವನ್ನು ಸಾರಿದರು.

ಸ್ವಾಮಿ ರಾಮಕೃಷ್ಣಾನಂದರಿಗೆ 1894ರಲ್ಲಿ ವಿವೇಕಾನಂದರು, ಭಾರತೀಯ ಬಂಡೆಯ ಕೊನೆಯ ತುಣುಕಿನ ಮೇಲೆ ಕುಳಿತು ನಾನು ಒಂದು ಯೋಜನೆಯನ್ನು ಕಂಡಿದ್ದೇನೆ. ಸನ್ಯಾಸಿಗಳು ಅಲೆದಾಡುತ್ತಾ ಜನರಿಗೆ ಆಧ್ಯಾತ್ಮಿಕತೆಯನ್ನು ಕಲಿಸುವುದು ಹುಚ್ಚುತನ. ಬಡವರು ಅತ್ಯಂತ ಕಷ್ಟವಾದ ಜೀವನ ನಡೆಸುತ್ತಿರುವುದು ಅವರ ಅಜ್ಞಾನದಿಂದಾಗಿ. ನಾವು ಅದನ್ನು ಹೋಗಲಾಡಿಸುವ ಬದಲು ಅವರ ರಕ್ತವನ್ನು ಹೀರುತ್ತಿದ್ದೇವೆ ಮತ್ತು ಅವರನ್ನು ಪಾದದಡಿಯಲ್ಲಿ ತುಳಿಯುತ್ತಿದ್ದೇವೆ ಎಂದು ಹೇಳಿದ್ದರು.

1963ರಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ಶತಮಾನೋತ್ಸವದ ಮುನ್ನಾದಿನ ಆರ್‌ಎಸ್‌ಎಸ್ ಕಾರ್ಯಕರ್ತ ಏಕನಾಥ್ ರಾನಡೆ ನೇತೃತ್ವದ ವಿವೇಕಾನಂದ ರಾಕ್ ಸ್ಮಾರಕ ಸಮಿತಿಯು ಈ ಸ್ಥಳವನ್ನು ನೆನಪಿಸಿತ್ತು. ಇದನ್ನು 1970 ರಲ್ಲಿ ರಾಷ್ಟ್ರಪತಿ ವಿ.ವಿ.ಗಿರಿ ಅವರು ಔಪಚಾರಿಕವಾಗಿ ಉದ್ಘಾಟಿಸಿದರು.

ಒಂದು ನಂಬಿಕೆಯ ಪ್ರಕಾರ ಪಾರ್ವತಿ ದೇವಿಯು ಶಿವನಿಗಾಗಿ ಕಾಯುತ್ತಿರುವಾಗ ಇದೇ ಬಂಡೆಯ ಮೇಲೆ ಒಂದೇ ಕಾಲಿನ ಮೇಲೆ ಧ್ಯಾನ ಮಾಡುತ್ತಿದ್ದಳು.

ವವತುರೈನಿಂದ 15 ನಿಮಿಷಗಳ ದೋಣಿ ಸಂಚಾರದ ಮೂಲಕ ಕಲ್ಲಿನ ದ್ವೀಪವನ್ನು ಪ್ರವೇಶಿಸಬಹುದು. ಇದು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಸಂಗಮ ಸ್ಥಳವಾಗಿದೆ.


ಮೋದಿ ಈ ಸ್ಥಳ ಆಯ್ಕೆ ಮಾಡಿದ್ದು ಯಾಕೆ?

ಪ್ರಧಾನಿ ನರೇಂದ್ರ ಮೋದಿ ಅವರು ವಿವೇಕಾನಂದ ಅವರನ್ನು ತಮ್ಮ ಜೀವನಕ್ಕೆ ಆದರ್ಶ ಎಂದು ಪರಿಗಣಿಸುತ್ತಾರೆ. ಸ್ವಾಮಿ ವಿವೇಕಾನಂದರು ಸ್ಥಾಪಿಸಿರುವ ರಾಮಕೃಷ್ಣ ಮಿಷನ್‌ನ ಸದಸ್ಯರೂ ಆಗಿದ್ದಾರೆ.

ಕಳೆದ ವರ್ಷ ರಾಮಕೃಷ್ಣ ಮಿಷನ್‌ನ 125 ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮೋದಿ, ಸ್ವಾಮಿ ವಿವೇಕಾನಂದರು ಭಾರತದ ಬಗ್ಗೆ ಕಂಡಿರುವ ಕನಸನ್ನು ನನಸು ಮಾಡಲು ಭಾರತವು ಕೆಲಸ ಮಾಡುವುದನ್ನು ಅವರು ಹೆಮ್ಮೆಯಿಂದ ನೋಡುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದ್ದರು.

ಈ ಬಾರಿ ತಮಿಳುನಾಡಿನ ಕನ್ಯಾಕುಮಾರಿಯನ್ನು ಅವರು ಧ್ಯಾನ ಮಾಡಲು ಅವರು ಆಯ್ಕೆ ಮಾಡಿರುವುದು ಈ ವರ್ಷದ ಚುನಾವಣಾ ಪ್ರಚಾರದ ಸಮಯದಲ್ಲಿ ಅವರ ಪಕ್ಷ ದಕ್ಷಿಣ ಭಾರತದಲ್ಲಿ ಬಲವಾಗಿರುವುದನ್ನು ಸೂಚಿಸುತ್ತದೆ. ಕಳೆದ ಮೂರು ವರ್ಷಗಳಲ್ಲಿ ಅವರ ಒಟ್ಟು ಪ್ರವಾಸಗಳಲ್ಲಿ ಮೂರನೇ ಒಂದು ಭಾಗದಷ್ಟು ಅವರು ದಕ್ಷಿಣ ಭಾರತಕ್ಕೆ ಪ್ರವಾಸ ಕೈಗೊಂಡಿದ್ದರು. 2024ರಲ್ಲಿ ತಮಿಳುನಾಡಿಗೆ ಏಳು ಭಾರಿ ಭೇಟಿ ನೀಡಿದ್ದಾರೆ.

ದಕ್ಷಿಣದ ರಾಜ್ಯಗಳ ಮೇಲೆ ದೃಷ್ಟಿ

ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕವು ಒಟ್ಟು 543 ಲೋಕಸಭಾ ಸ್ಥಾನಗಳಲ್ಲಿ 131 ಸ್ಥಾನಗಳನ್ನು ಹೊಂದಿವೆ. ತಮಿಳುನಾಡುವೊಂದೇ ಸಂಸತ್ತಿನಲ್ಲಿ 39 ಸ್ಥಾನಗಳನ್ನು ಹೊಂದಿದೆ. ದಕ್ಷಿಣದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದರು.

ಮೋದಿ ಭೇಟಿಗೆ ಸಿದ್ಧತೆ ಏನು?

ಗುರುವಾರ ವಿವೇಕಾನಂದ ಕಲ್ಲಿನ ಸ್ಮಾರಕದಲ್ಲಿ ಪ್ರಧಾನಿಯವರ 45 ಗಂಟೆಗಳ ವಾಸ್ತವ್ಯ ಸುಗಮವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸುಮಾರು 2,000 ಪೊಲೀಸರು ಮತ್ತು ಭದ್ರತಾ ಏಜೆನ್ಸಿಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: Modi Meditation: ಮೋದಿಗೆ ಧ್ಯಾನ ಮಾಡಲು ಬಿಡಬೇಡಿ; ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ಮೊರೆ!

ತಿರುನೆಲ್ವೇಲಿ ವ್ಯಾಪ್ತಿಯ ಡಿಐಜಿ ಪ್ರವೇಶ್ ಕುಮಾರ್ ಅವರು ಪೊಲೀಸ್ ವರಿಷ್ಠಾಧಿಕಾರಿ ಇ. ಸುಂದರವತನಂ ಅವರೊಂದಿಗೆ ಇಲ್ಲಿನ ಕಲ್ಲಿನ ಸ್ಮಾರಕ, ಬೋಟ್ ಜೆಟ್ಟಿ, ಹೆಲಿಪ್ಯಾಡ್ ಮತ್ತು ರಾಜ್ಯ ಅತಿಥಿ ಗೃಹದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ.

ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಚುನಾವಣಾ ಪ್ರಚಾರವನ್ನು ಮುಗಿಸಿದ ಅನಂತರ ಪ್ರಧಾನಿ ಗುರುವಾರ ಮಧ್ಯಾಹ್ನ ತಿರುವನಂತಪುರಂ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ. ಸಂಜೆ ಕನ್ಯಾಕುಮಾರಿಯಲ್ಲಿರುವ ರಾಜ್ಯ ಅತಿಥಿ ಗೃಹ ತಲುಪಿ ದೋಣಿ ಮೂಲಕ ವಿವೇಕಾನಂದ ಕಲ್ಲಿನ ಸ್ಮಾರಕಕ್ಕೆ ತೆರಳಲಿದ್ದಾರೆ. ಅವರು ಶನಿವಾರ ಮಧ್ಯಾಹ್ನದವರೆಗೆ ಅಲ್ಲಿಯೇ ಇರುತ್ತಾರೆ ಎನ್ನಲಾಗಿದೆ.

ಮೋದಿ ಶನಿವಾರ ಸಂಜೆ ವೇಳೆಗೆ ಕನ್ಯಾಕುಮಾರಿ ಹೆಲಿಪ್ಯಾಡ್ ತಲುಪಿ ತಿರುವನಂತಪುರಕ್ಕೆ ಹಿಂತಿರುಗಿ ಅದೇ ದಿನ ದೆಹಲಿಗೆ ತೆರಳಲಿದ್ದಾರೆ.

ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸರ್ಕಾರವು ಪ್ರಧಾನಿಯವರ ಈ ಭೇಟಿಗೆ ಅನುಮತಿಯನ್ನು ವಿರೋಧಿಸಿ ಪ್ರಸ್ತುತ ಜಾರಿಯಲ್ಲಿರುವ ಚುನಾವಣಾ ಮಾದರಿ ನೀತಿ ಸಂಹಿತೆ ಮತ್ತು ನಡೆಯುತ್ತಿರುವ ಪ್ರವಾಸೋದ್ಯಮ ಋತುವನ್ನು ಉಲ್ಲೇಖಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

Continue Reading

ವಿದೇಶ

Flight Turbulence: ನೀವಿದ್ದ ವಿಮಾನ ಪ್ರಕ್ಷುಬ್ಧತೆಗೊಳಗಾದರೆ ಏನು ಮಾಡುತ್ತೀರಿ? ಇಲ್ಲಿದೆ ಪೈಲಟ್‌ಗಳ ಸಲಹೆ

ವಿಮಾನಗಳಲ್ಲಿ ಪ್ರಕ್ಷುಬ್ಧತೆಯ (Flight Turbulence) ಸಮಯದಲ್ಲಿ ಸುರಕ್ಷಿತವಾಗಿರಲು ಪ್ರಯಾಣಿಕರಿಗೆ ಅಮೆರಿಕದ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್‌, ವಿಮಾನ ಸಿಬ್ಬಂದಿ ಪಾಲಿಸಬಹುದಾದ ಮತ್ತು ಪ್ರಯಾಣಿಕರು ನಿರ್ವಹಿಸಬೇಕಾದ ಮಾರ್ಗಸೂಚಿಯನ್ನು ನೀಡಿದೆ. ಈ ಕುರಿತ ವಿವರಣೆ ಇಲ್ಲಿದೆ. ವಿಮಾನದೊಳಗಿನ ಪ್ರಕ್ಷುಬ್ಧತೆ (Flight Turbulence) ಎಂದರೇನು, ಇದರಿಂದ ಪಾರಾಗುವುದು ಹೇಗೆ ಎಂಬ ಮಾಹಿತಿಯೂ ಇಲ್ಲಿದೆ.

VISTARANEWS.COM


on

By

Flight Turbulence
Koo

ವಿಮಾನ (flight) ಹಾರುವಾಗ ವಾಯು ಒತ್ತಡದಿಂದ ಕೆಲವೊಮ್ಮೆ ಪ್ರಕ್ಷುಬ್ಧತೆ (Flight Turbulence) ಉಂಟಾಗುತ್ತದೆ. ವಿಮಾನ ನಡುಗುತ್ತದೆ. ಈ ಸಂದರ್ಭದಲ್ಲಿ ಹಠಾತ್ ಆಘಾತಗಳು ಸಂಭವಿಸಿ ಸಾವು ನೋವು ಉಂಟಾಗುವುದೂ ಇದೆ. ಇಂಥ ಸಂದರ್ಭದಲ್ಲಿ ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿ ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಬೇಕಾಗುತ್ತದೆ. ಇತ್ತೀಚೆಗೆ ಸಿಂಗಾಪುರ ಏರ್‌ಲೈನ್ಸ್ (singapore airlines) ವಿಮಾನ ಇಂಥದ್ದೇ ಪರಿಸ್ಥಿತಿಗೆ ಒಳಗಾಗಿ ಪ್ರಯಾಣಿಕರೊಬ್ಬರು ಸಾವಿಗೀಡಾಗಿ, ಹಲವರು ಪ್ರಯಾಣಿಕರು ಗಾಯಗೊಂಡಿದ್ದರು. ಲಂಡನ್‌ನಿಂದ ಸಿಂಗಾಪುರಕ್ಕೆ ಹಾರುತ್ತಿದ್ದ ಬೋಯಿಂಗ್ 777-312ER ವಿಮಾನ 321ರಲ್ಲಿದ್ದ ಪ್ರಯಾಣಿಕರು ವಾಯು ಪ್ರಕ್ಷುಬ್ಧತೆಯ ಭಯಾನಕತೆಯನ್ನು ಅನುಭವಿಸಬೇಕಾಯಿತು.

ವಾಯು ಪ್ರಕ್ಷುಬ್ಧತೆ ಎಂದರೇನು?

ವಾಯು ಪ್ರಕ್ಷುಬ್ಧತೆಯು ಭೂಮಿಯ ವಾತಾವರಣದಲ್ಲಿ ಗಾಳಿಯ ಅನಿಯಮಿತ ಮತ್ತು ಅನಿರೀಕ್ಷಿತ ಚಲನೆಯಿಂದ ಉಂಟಾಗುತ್ತದೆ. ಇದು ವಿಮಾನ ಹಾರಾಟದ ಸಮಯದಲ್ಲಿ ಅಪಘಾತಕ್ಕೆ ಕಾರಣವಾಗುತ್ತದೆ. ವೇಗವಾಗಿ ವಾಹನ ಓಡಿಸುತ್ತಿದ್ದಾಗ ಯಾವ ಸೂಚನಾ ಫಲಕ ಇಲ್ಲದೆ ಹಠಾತ್‌ ಹಂಪ್‌ ಎದುರಾದಾಗ ಏನಾಗುತ್ತದೋ ವಿಮಾನದೊಳಗೆ ಹಾಗೆಯೇ ಆಗುತ್ತದೆ. ವಿಮಾನವು ಚಾಲಕನ ನಿಯಂತ್ರಣ ಕಳೆದುಕೊಂಡು ಪತನಗೊಳ್ಳುವಂತಾಗುತ್ತದೆ.

ಆಗ ಏನು ಮಾಡಬೇಕು?

ಯಾವಾಗಲೂ ಸೀಟ್ ಬೆಲ್ಟ್ ಧರಿಸಿ ಸುರಕ್ಷಿತವಾಗಿ ಕುಳಿತಿರಬೇಕು. ಸೈನ್ ಆಫ್ ಆಗಿದ್ದರೂ, ಅದನ್ನು ಬಿಗಿಯಾಗಿ ಇರಿಸಬೇಕು.
ಸಿಬ್ಬಂದಿಯ ಸೂಚನೆಗಳನ್ನು ಅನುಸರಿಸಿ. ಅವರ ಮಾತನ್ನು ಕೇಳಿ. ಪ್ರಕ್ಷುಬ್ಧತೆಯನ್ನು ನಿಭಾಯಿಸಲು ಅವರಿಗೆ ತರಬೇತಿ ನೀಡಲಾಗಿರುತ್ತದೆ. ಪ್ರಕ್ಷುಬ್ಧತೆಯ ಸಮಯದಲ್ಲಿ ಕ್ಯಾಬಿನ್ ಸುತ್ತಲೂ ಚಲಿಸುವುದನ್ನು ತಪ್ಪಿಸಿ ಮತ್ತು ಆತಂಕದಿಂದ ಕಿರುಚದೇ ಮೌನವಾಗಿ ಕುಳಿತುಕೊಳ್ಳಿ.

ಕ್ಯಾಬಿನ್‌ನಲ್ಲಿ ಇಟ್ಟಿರುವ ವಸ್ತುಗಳು ಮೈಮೇಲೆ ಬೀಳದಂತೆ ಸುರಕ್ಷಿತವಾಗಿರಿಸಿ. ಸೋರಿಕೆ ಅಥವಾ ಬೀಳುವಿಕೆಯನ್ನು ತಪ್ಪಿಸಲು ವಸ್ತುಗಳನ್ನು ಓವರ್ ಹೆಡ್ ವಿಭಾಗಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿ.
ಪ್ರಕ್ಷುಬ್ಧತೆ ಸಾಮಾನ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ಶಾಂತವಾಗಿರಿ ಮತ್ತು ಭಯಭೀತರಾಗಬೇಡಿ. ರೆಸ್ಟ್ ರೂಮ್‌ ಅನ್ನು ಬಳಸಬೇಕಾದರೆ ಎದ್ದೇಳುವ ಮೊದಲು ಶಾಂತ ಕ್ಷಣಕ್ಕಾಗಿ ಕಾಯಿರಿ. ಸ್ಥಿರತೆಗಾಗಿ ಹ್ಯಾಂಡ್ರೈಲ್‌ಗಳನ್ನು ಬಳಸಿ.

ವಾಯು ಪ್ರಕ್ಷುಬ್ಧತೆಗೆ ಕಾರಣಗಳೇನು?

ಚಂಡಮಾರುತ, ಜೆಟ್ ಸ್ಟ್ರೀಮ್‌ ಅಥವಾ ಗಾಳಿಯ ಒತ್ತಡದಲ್ಲಿನ ಬದಲಾವಣೆಗಳಿಂದ ವಾಯು ಪ್ರಕ್ಷುಬ್ಧತೆ ಉಂಟಾಗಬಹುದು. ಹವಾಮಾನ ಬದಲಾವಣೆಗಳಿಂದಾಗಿ ಗಾಳಿಯ ಪ್ರಕ್ಷುಬ್ಧತೆಯು ಆಗಾಗ ಸಂಭವಿಸುತ್ತದೆ ಎನ್ನುತ್ತಾರೆ ತಜ್ಞರು. ತೀವ್ರವಾದ ಪ್ರಕ್ಷುಬ್ಧ ಘಟನೆಗಳು ಅಪರೂಪ. ಪೈಲಟ್‌ಗಳು ಅವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ತರಬೇತಿ ಪಡೆದಿರುತ್ತಾರೆ.

ಇದನ್ನೂ ಓದಿ: Viral Video: ರಣ ಭೀಕರ ಬಿರುಗಾಳಿ..! ಆಘಾತಕಾರಿ ವಿಡಿಯೋ ಎಲ್ಲೆಡೆ ವೈರಲ್‌

ಮಾಜಿ ಪೈಲೆಟ್ ಹೇಳಿದ್ದೇನು?

43 ವರ್ಷಗಳ ಅನುಭವ ಹೊಂದಿರುವ ನಿವೃತ್ತ ಪೈಲಟ್ ಕ್ಯಾಪ್ಟನ್ ಕ್ರಿಸ್ ಹ್ಯಾಮಂಡ್ ಅವರು ಈ ಪರಿಸ್ಥಿತಿಯನ್ನು ಹೀಗೆ ವಿವರಿಸುತ್ತಾರೆ: ಇಂಥ ಸಂದರ್ಭದಲ್ಲಿ ಪ್ರಯಾಣಿಕರನ್ನು ಹೆಚ್ಚು ಸಮಾಧಾನದಿಂದ ಇರಿಸುವಂತೆ ಮಾಡುವ ಜವಾಬ್ದಾರಿ ಪೈಲಟ್‌ನದ್ದಾಗಿದೆ. ಎಲ್ಲಕ್ಕಿಂತ ಪೈಲಟ್‌ ತಾನು ಸಮಾಧಾನದಿಂದ ಇದ್ದು, ವಿವೇಚನೆ ಮತ್ತು ಅನುಭವ ಬಳಸಿ ವಿಮಾನವನ್ನು ನಿಯಂತ್ರಿಸಬೇಕಾಗುತ್ತದೆ. ಅನುಭವಿ ಚಾಲಕರು ಇಂಥ ಸನ್ನಿವೇಶವನ್ನು ಯಶಸ್ವಿಯಾಗಿ ನಿಭಾಯಿಸಿ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡುತ್ತಾರೆ.

Continue Reading

ದೇಶ

Share Market: ಸೆನ್ಸೆಕ್ಸ್‌ ನೆಗೆತ, ನಿಫ್ಟಿ ಜಿಗಿತ; ಮೋದಿ ಭವಿಷ್ಯ ನಿಜವಾಗುತ್ತಾ? ಇಂದಿನ ಏರಿಕೆಗೆ ಕಾರಣಗಳು ಗೊತ್ತಾ?

Share Market: ಷೇರು ಮಾರುಕಟ್ಟೆಯಲ್ಲಿ ಗಣನೀಯ ಪ್ರಗತಿಯಾಗಿದೆ. ಬಿಎಸ್‌ಇ ಸೆನ್ಸೆಕ್ಸ್‌ 1,197 ಪಾಯಿಂಟ್ಸ್‌ ಏರಿಕೆಯೊಂದಿಗೆ ದಾಖಲೆಯ 75,460 ಪಾಯಿಂಟ್ಸ್‌ಗೆ ತಲುಪಿದರೆ, ನಿಫ್ಟಿಯು 370 ಪಾಯಿಂಟ್ಸ್‌ ಏರಿಕೆಯೊಂದಿಗೆ 22,989 ಪಾಯಿಂಟ್ಸ್‌ ತಲುಪಿದೆ. ಇದು ಲೋಕಸಭೆ ಚುನಾವಣೆ ಫಲಿತಾಂಶ, ಸ್ಥಿರ ಸರ್ಕಾರದ ಮುನ್ಸೂಚನೆಗೆ ಹಿಡಿದ ಕನ್ನಡಿ ಎಂದೇ ವಿಶ್ಲೇಷಿಸಲಾಗುತಿದೆ.

VISTARANEWS.COM


on

Share Market
Koo

ಮುಂಬೈ: “ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶ ಪ್ರಕಟವಾಗುವ ಜೂನ್‌ 4ರಂದು ಭಾರತದ ಷೇರು ಮಾರುಕಟ್ಟೆಯು (Share Market) ದಾಖಲೆ ಬರೆಯಲಿದೆ” ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕೂಡ ಇದೇ ಮಾತು ಹೇಳಿದ್ದಾರೆ. ಇದರ ಮಧ್ಯೆಯೇ, ಗುರುವಾರ (ಮೇ 23) ಷೇರು ಮಾರುಕಟ್ಟೆಯಲ್ಲಿ ಗಣನೀಯ ಪ್ರಗತಿಯಾಗಿದೆ. ಬಿಎಸ್‌ಇ ಸೆನ್ಸೆಕ್ಸ್‌ 1,197 ಪಾಯಿಂಟ್ಸ್‌ ಏರಿಕೆಯೊಂದಿಗೆ ದಾಖಲೆಯ 75,460 ಪಾಯಿಂಟ್ಸ್‌ಗೆ ತಲುಪಿದರೆ, ನಿಫ್ಟಿಯು 370 ಪಾಯಿಂಟ್ಸ್‌ ಏರಿಕೆಯೊಂದಿಗೆ 22,989 ಪಾಯಿಂಟ್ಸ್‌ ತಲುಪಿದೆ. ಲೋಕಸಭೆ ಚುನಾವಣೆ ಫಲಿತಾಂಶ, ಸ್ಥಿರ ಸರ್ಕಾರದ ಮುನ್ಸೂಚನೆಯ ಸಂಕೇತವಾಗಿಯೇ ಷೇರು ಮಾರುಕಟ್ಟೆಯು ದಾಖಲೆ ಬರೆದಿದೆ ಎಂದೇ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

“ನಿಫ್ಟಿಯು ದಾಖಲೆಯ ಏರಿಕೆ ಕಾಣುವ ಮೂಲಕ ಚುನಾವಣೆ ನಂತರದಲ್ಲಿ ದೇಶದಲ್ಲಿ ರಾಜಕೀಯ ಸ್ಥಿರತೆ ಇರುತ್ತದೆ ಎಂಬ ಸಂದೇಶ ರವಾನಿಸಿದೆ. ಅತಿ ಹೆಚ್ಚಿನ ಹಣ ಹೂಡಿಕೆ ಮಾಡುವವರು ಸೇರಿ ಎಲ್ಲರಿಗೂ ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ” ಎಂದು ಜಿಯೋಜೀತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ರಣತಂತ್ರಗಾರ ವಿ.ಕೆ.ವಿಜಯ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. ಸಾಮಾನ್ಯವಾಗಿ, ಸಾರ್ವತ್ರಿಕ ಚುನಾವಣೆ ಫಲಿತಾಂಶದ ದಿನ ಷೇರು ಪೇಟೆಯಲ್ಲಿ ಲವಲವಿಕೆ ಇದ್ದೇ ಇರುತ್ತದೆ. ಆದರೆ, ಜೂನ್‌ 4ರಂದು ಇತಿಹಾಸ ಸೃಷ್ಟಿಯಾಗುತ್ತದೆ ಎಂದು ಹೇಳುತ್ತಿರುವುದು ಹೂಡಿಕೆದಾರರ ಖುಷಿ ಹೆಚ್ಚಿಸಿದೆ.

Share Market

ಕೇಂದ್ರಕ್ಕೆ ಆರ್‌ಬಿಐ ಲಾಭಾಂಶದ ಕೊಡುಗೆ

ಕೇಂದ್ರ ಸರ್ಕಾರಕ್ಕೆ 2023-24ನೇ ಸಾಲಿನಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್ ದಾಖಲೆಯ 2.10 ಲಕ್ಷ ಕೋಟಿ ರೂ. ಡೆವಿಡೆಂಡ್‌ (ಲಾಭಾಂಶ) ನೀಡಲು ಒಪ್ಪಿಗೆ ನೀಡಿರುವುದು ಕೂಡ ಷೇರು ಮಾರುಕಟ್ಟೆಯ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. 2022-23ರಲ್ಲಿ ಕೇಂದ್ರ ಸರ್ಕಾರಕ್ಕೆ ಆರ್‌ಬಿಐ 87 ಸಾವಿರ ಕೋಟಿ ರೂ. ನೀಡಿತ್ತು. ಆದರೆ, ಅದು ಎರಡು ಪಟ್ಟು ಜಾಸ್ತಿಯಾಗಿರುವುದರಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಹಣ ಸಿಗುತ್ತದೆ. ಆ ಹಣವು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ವಿನಿಯೋಗವಾಗುತ್ತದೆ. ಇದರಿಂದ ಷೇರು ಪೇಟೆಯಲ್ಲಿ ಲಾಭ ಗಳಿಸಬಹುದು ಎಂಬ ಕಾರಣದಿಂದ ಹೂಡಿಕೆ ಜಾಸ್ತಿಯಾಗಿದೆ. ಗುರುವಾರವೂ ಸಾರ್ವಜನಿಕ ವಲಯದ ಸಂಸ್ಥೆಗಳು ಲಾಭ ಗಳಿಸಿರುವುದು ಈ ಮಾತಿಗೆ ಪುಷ್ಟಿ ನೀಡುವಂತಿದೆ.

ಷೇರು ಮಾರುಕಟ್ಟೆ ಬಗ್ಗೆ ಮೋದಿ ಹೇಳಿದ್ದೇನು?

“ಕೇಂದ್ರ ಸರ್ಕಾರವು ಕಳೆದ 10 ವರ್ಷಗಳಲ್ಲಿ ಮಹತ್ವದ ಸುಧಾರಣೆ ತಂದಿದೆ. ಆರ್ಥಿಕ ಶಿಸ್ತು, ವಿತ್ತೀಯ ಪ್ರಕ್ರಿಯೆಗಳಲ್ಲಿ ಸುಧಾರಣಾ ಕ್ರಮಗಳನ್ನು ಅನುಸರಿಸಿಕೊಂಡಿದೆ. ಇದರಿಂದಾಗಿ ಭಾರತದ ಷೇರು ಮಾರುಕಟ್ಟೆಯು ಕಳೆದ ಒಂದು ದಶಕದಲ್ಲಿ ಗಣನೀಯ ಏಳಿಗೆ ಕಂಡಿದೆ. 10 ವರ್ಷಗಳ ಹಿಂದೆ ಸೆನ್ಸೆಕ್ಸ್‌ 25 ಸಾವಿರ ಪಾಯಿಂಟ್ಸ್‌ ಹೊಂದಿತ್ತು. ಆದರೀಗ, ಸೆನ್ಸೆಕ್ಸ್‌ 75 ಸಾವಿರ ಪಾಯಿಂಟ್ಸ್‌ಗೆ ಏರಿಕೆಯಾಗಿದೆ. ಈಕ್ವಿಟಿ ಮಾರುಕಟ್ಟೆಯ ಮೌಲ್ಯವು ಕೆಲ ದಿನಗಳ ಹಿಂಷ್ಟೇ 5 ಲಕ್ಷ ಕೋಟಿ ಡಾಲರ್‌ ಆಗಿದೆ. ಹಾಗಾಗಿ, ಜೂನ್‌ 4ರಂದು ಷೇರು ಮಾರುಕಟ್ಟೆಯು ದಾಖಲೆ ಬರೆಯಲಿದೆ” ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Equity Market: ದೇಶದ ಷೇರುಪೇಟೆಯಲ್ಲಿ ಗೂಳಿ ನೆಗೆತ; 6 ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್‌ ಗಳಿಕೆ!

Continue Reading

ಸಿನಿಮಾ

CGI Technology In Film: ʼವೆಸ್ಟ್‌ವರ್ಲ್ಡ್‌ʼನಿಂದ ʼಅವತಾರ್‌ʼ ಚಿತ್ರದವರೆಗೆ ಸಿಜಿಐ ತಂತ್ರಜ್ಞಾನದ ರೋಚಕ ಹಾದಿ! ವಿಡಿಯೊಗಳಿವೆ

ಹೊಸ ತಂತ್ರಜ್ಞಾನಗಳು, ಆವಿಷ್ಕಾರಗಳು ಚಲನಚಿತ್ರ ಕ್ಷೇತ್ರದಲ್ಲೂ ಸಾಕಷ್ಟು ನಡೆದಿದೆ. ಇದರಲ್ಲಿ ಸಿಜಿಐ (CGI Technology In Film) ಕೂಡ ಒಂದು. 1970ರ ದಶಕದ ಆರಂಭದ ದಿನಗಳಿಂದಲೂ ಕಂಪ್ಯೂಟರ್ ರಚಿತ ಚಿತ್ರಣ (CGI- computer generated imagery) ಸಾಕಷ್ಟು ಪ್ರಯೋಗಗಳಿಗೆ ಒಳಗಾಗಿದೆ. ಇದು ಸಾಕಷ್ಟು ಅದ್ಭುತ ಚಲನಚಿತ್ರಗಳ ಮೇಲೆ ಪ್ರಭಾವವನ್ನು ಬೀರಿದೆ. ಕಥೆ ಹೇಳುವ ಶೈಲಿ ಮತ್ತು ದೃಶ್ಯ ಸಂಯೋಜನೆಯ ಗಡಿಗಳನ್ನು ವಿಸ್ತರಿಸಿದೆ. ಚಲನಚಿತ್ರ ರಂಗದಲ್ಲಿ ಸಿಜಿಐ ನ ಮೈಲುಗಲ್ಲು ಹೇಗಿತ್ತು ಎನ್ನುವ ಕಿರು ನೋಟ ಇಲ್ಲಿದೆ.

VISTARANEWS.COM


on

By

CGI Technology In Film
Koo

ಹಿಂದಿನ ದಿನಗಳಲ್ಲಿ ಚಲನಚಿತ್ರಗಳಲ್ಲಿ (film) ಒಂದು ವಿಶೇಷ ಸನ್ನಿವೇಶವನ್ನು ಚಿತ್ರಿಸಬೇಕಾದರೆ ಸೆಟ್‌ಗಳ ನಿರ್ಮಾಣಕ್ಕೆ ನಿರ್ಮಾಪಕರು (filmmakers), ಕೆಮರಾಮೆನ್‌ಗಳು (camera men) ಸಾಕಷ್ಟು ಕಷ್ಟಪಡುತ್ತಿದ್ದರು. ಆದರೆ ಈಗ ಎಲ್ಲವೂ ಕಂಪ್ಯೂಟರ್ ರಚಿತ ಚಿತ್ರಣ (CGI- computer generated imagery) ತಂತ್ರಜ್ಞಾನದ (CGI Technology In Film) ಮೂಲಕ ನಡೆದುಹೋಗುತ್ತದೆ. ಇದೀಗ ʼಮುಂಜ್ಯಾʼ ಎಂಬ ಭಾರತದ ಚಿತ್ರದಲ್ಲಿ ಈ ತಂತ್ರಜ್ಞಾನ ಬಳಸಲಾಗುತ್ತಿದೆ. ʼಮುಂಜ್ಯಾʼ ಭಾರತದ ಮೊದಲ CGI ಚಿತ್ರ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ತಂತ್ರಜ್ಞಾನದ ಹಿನ್ನೋಟ ಇಲ್ಲಿ ಕೊಡಲಾಗಿದೆ.

ಸಿನಿಮಾ ಜಗತ್ತಿನಲ್ಲಿ ಸಿಜಿಐಯ ವಿಕಾಸ ಒಂದು ಪ್ರಮುಖ ಮೈಲುಗಲ್ಲು ಎಂದರೆ ತಪ್ಪಾಗಲಾರದು. ಇದು ಸಿನಿಮಾದ ಭವಿಷ್ಯವನ್ನೇ ಬದಲಾಯಿಸಿತ್ತು. ಹಿಂದೆ ಚಲನಚಿತ್ರ ನಿರ್ಮಾಪಕರು ಪ್ರೇಕ್ಷಕರ ಗ್ರಹಿಕೆಯನ್ನು ರೂಪಿಸಲು ವಿವಿಧ ಪ್ರಯೋಗಗಳನ್ನು ಮಾಡುತ್ತಿದ್ದರು ಜೊತೆಗೆ ಆಪ್ಟಿಕಲ್ ತಂತ್ರಗಳನ್ನು ಅವಲಂಬಿಸಿದ್ದರು. ಕೆಮರಾ ಕೋನಗಳು, ಲೆನ್ಸ್ ಆಯ್ಕೆ ಮತ್ತು ವಿಸ್ತಾರವಾಗಿ ವಿನ್ಯಾಸಗೊಳಿಸಿದ ಸೆಟ್‌ ಗಳ ತಂತ್ರಗಳನ್ನು ಬಳಸುತ್ತಿದ್ದರು. ಹಸಿರು ಮತ್ತು ವಾಲ್ಯೂಮೆಟ್ರಿಕ್ ಎಲ್ಇಡಿ ಪರದೆಯನ್ನು ಬಳಸಿ ಹಿಂದೆ ಸೆಟ್ ವಿಸ್ತರಣೆಗಳನ್ನು ಕೈಯಿಂದ ನಿಖರವಾಗಿ ಚಿತ್ರಿಸಲಾಗುತ್ತಿತ್ತು.

ಈ ವಿಧಾನಕ್ಕೆ ಈಗ ಡಿಜಿಟಲ್ ಸ್ಪರ್ಶ ಸಿಕ್ಕಿದೆ. ಇಲ್ಲಿ ಕಂಪ್ಯೂಟರ್‌ಗಳು ಮತ್ತು ವಿವಿಧ ಸಾಫ್ಟ್‌ವೇರ್‌ಗಳು ಊಹಿಸುವ ಯಾವುದೇ ವಿನ್ಯಾಸವನ್ನು ರಚಿಸಲು ಇದು ಸಹಾಯ ಮಾಡುತ್ತದೆ. ಡಿಜಿಟಲ್ ಸೃಜನಶೀಲತೆಯೆಡೆಗಿನ ಈ ಬದಲಾವಣೆಯು ಸಿಜಿಐ ತಂತ್ರಜ್ಞಾನದ ಪ್ರಗತಿ ವೇಗವನ್ನು ಹೆಚ್ಚಿಸಿತ್ತು.


ಕಂಪ್ಯೂಟರ್ ಗ್ರಾಫಿಕ್ಸ್ ಬಳಸಿ ಈಗಾಗಲೇ ಹಲವಾರು ಚಿತ್ರಗಳನ್ನು ನಿರ್ಮಿಸಲಾಗಿದೆ. ಉದಾಹರಣೆಗೆ ಮಾರ್ವೆಲ್‌ನ ದಿ ಅವೆಂಜರ್ಸ್‌ನಲ್ಲಿ ಮಾರ್ಕ್ ರುಫಲೋ ಧರಿಸಿರುವ ಸೂಟ್ ಮತ್ತು ಸುತ್ತಲಿನ ದೃಶ್ಯಗಳಿಗೆ ಮತ್ತೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ.

ಸಿಜಿಐಯ ಮೊದಲ ಪ್ರಯೋಗ ಯಾವಾಗ?

ಸಿಜಿಐ ಅನ್ನು ಆಧುನಿಕ ಚಲನಚಿತ್ರಗಳಲ್ಲಿ ಮಾತ್ರ ನಾವು ಗಮನಿಸಿದ್ದೇವೆ. ಆದರೆ ಇದು 2000 ರ ದಶಕದಿಂದ ಹಾಲಿವುಡ್‌ನ ಚಿತ್ರೀಕರಣದಲ್ಲಿ ಬಳಕೆಯಾಗುತ್ತಿದೆ. ಕಂಪ್ಯೂಟರ್ ರಚಿತ ಚಿತ್ರಣ 1973ರ ವೆಸ್ಟ್‌ವರ್ಲ್ಡ್ ಮತ್ತು 1977ರ ಸ್ಟಾರ್ ವಾರ್ಸ್‌ನಲ್ಲೂ ಮಾಡಲಾಗಿದೆ.

ವೆಸ್ಟ್‌ವರ್ಲ್ಡ್ ( 1973)

ವೆಸ್ಟ್‌ವರ್ಲ್ಡ್ ಚಲನಚಿತ್ರದಲ್ಲಿ ಸಿಜಿಐ ಸಂಕ್ಷಿಪ್ತವಾಗಿ ಸರಿಸುಮಾರು 10 ಸೆಕೆಂಡ್ ನಷ್ಟೇ ಬಳಕೆ ಮಾಡಲಾಗಿದೆ. ಚಿತ್ರದಲ್ಲಿ ಇದು ಬಣ್ಣಗಳನ್ನು ಬದಲಾಯಿಸುವುದು, ಸಂಕುಚಿತಗೊಳಿಸುವುದು ಮತ್ತು ಚಿತ್ರಣವನ್ನು ವಿಸ್ತರಿಸುವುದು ಸೇರಿದೆ.


ಸ್ಟಾರ್ ವಾರ್ಸ್ (1977)

ಇದರಲ್ಲಿ ಚಿಕಣಿ ಮಾದರಿಗಳು ಮತ್ತು ಬೆಳಕಿನ ತಂತ್ರಗಳ ಮಿಶ್ರಣವನ್ನು ಮಾಡಲಾಗಿದೆ. ಚಿತ್ರದ ಪ್ರಮುಖ ಕ್ಷಣವೊಂದರಲ್ಲಿ ಲ್ಯೂಕ್ ಸ್ಕೈವಾಕರ್ ಮತ್ತು ಇತರ ಎಕ್ಸ್-ವಿಂಗ್ ಪೈಲಟ್‌ಗಳು ಡೆತ್ ಸ್ಟಾರ್‌ನ ಮೇಲೆ ತಮ್ಮ ಆಕ್ರಮಣಕ್ಕೆ ತಯಾರಿ ನಡೆಸುತ್ತಿರುವಾಗ ಇದನ್ನು ಪ್ರಯೋಗಿಸಲಾಗಿದೆ. ಇದರಲ್ಲಿ 3ಡಿ ಯುದ್ಧತಂತ್ರದ ನಕ್ಷೆಯನ್ನು ತೋರಿಸಲಾಗಿದೆ. ಇದನ್ನು ಇಲಿನಾಯ್ಸ್ ವಿಶ್ವವಿದ್ಯಾಲಯವು ಚಿಕಾಗೋದ ಎಲೆಕ್ಟ್ರಾನಿಕ್ ದೃಶ್ಯೀಕರಣ ಪ್ರಯೋಗಾಲಯ ತಂಡದೊಂದಿಗೆ ಅಭಿವೃದ್ಧಿಪಡಿಸಿದೆ.


ಸಿಜಿಐನ ಸಂಪೂರ್ಣ ಬಳಕೆ

ಸಂಪೂರ್ಣವಾಗಿ ಸಿಜಿಐ ಪಾತ್ರವನ್ನು ಸ್ಟಾರ್ ವಾರ್ಸ್ ಮತ್ತೊಮ್ಮೆ ಪರಿಚಯಿಸಿದ್ದು 1999ರ ಸ್ಟಾರ್ ವಾರ್ಸ್ ಸಂಚಿಕೆ 1: ದಿ ಫ್ಯಾಂಟಮ್ ಮೆನೇಸ್‌ನಲ್ಲಿ ಜಾರ್ ಜಾರ್ ಬಿಂಕ್ಸ್ ಮೂಲಕ.

ಸ್ಟಾರ್ ವಾರ್ಸ್: ಎ ನ್ಯೂ ಹೋಪ್ (1977)

1977ರಲ್ಲಿ ಬಿಡುಗಡೆಯಾದ ಜಾರ್ಜ್ ಲ್ಯೂಕಾಸ್‌ನ ಸ್ಟಾರ್ ವಾರ್ಸ್: ಎ ನ್ಯೂ ಹೋಪ್‌ ಪ್ರಾಯೋಗಿಕ ಮತ್ತು ಚಿಕಣಿ ಪರಿಣಾಮಗಳೊಂದಿಗೆ ಬೆರೆಸಿದ ಸಿಜಿಐ ಅಂಶಗಳ ಮನಮುಟ್ಟುವ ಬಳಕೆಯ ಮೂಲಕ ಚಲನಚಿತ್ರ ನಿರ್ಮಾಣದ ಹೊಸ ಯುಗವನ್ನು ಪ್ರಾರಂಭಿಸಿತು. 80ರ ದಶಕದಲ್ಲಿ ಇದು ಟ್ರಾನ್, ಪ್ರಿಡೇಟರ್, ಸೂಪರ್‌ಮ್ಯಾನ್, ಇ.ಟಿ. ಮತ್ತು ಏಲಿಯನ್ಸ್‌ನಂತಹ ಚಲನಚಿತ್ರಗಳ ಮೇಲೆ ಇದು ಪ್ರಭಾವ ಬೀರಿತು.


ಟರ್ಮಿನೇಟರ್ 2: ಜಡ್ಜ್‌ಮೆಂಟ್ ಡೇ (1991)

ಹೆಚ್ಚಿನ ಚಲನಚಿತ್ರ ಶಾಲೆಗಳಲ್ಲಿ ಒಂದು ಸಾಮಾನ್ಯ ಮಾತು ಇದೆ. ಸ್ಟಾರ್ ವಾರ್ಸ್ ಆಟವನ್ನು ಪ್ರಾರಂಭಿಸಿತು ಮತ್ತು ನಂತರ ಜುರಾಸಿಕ್ ಪಾರ್ಕ್ ಅದನ್ನು ಬದಲಾಯಿಸಿತು. ಇದಕ್ಕೆ ಸರಿಯಾದ ಒಂದು ಚಿತ್ರ ಟರ್ಮಿನೇಟರ್ 2: ಜಡ್ಜ್‌ಮೆಂಟ್ ಡೇ. ಈ ಚಿತ್ರದಲ್ಲಿ ಸಿಜಿಐ ಬಳಕೆಯಲ್ಲಿ ಇದು ಒಂದು ಅತ್ಯಂತ ಪ್ರಭಾವಶಾಲಿ ಚಲನಚಿತ್ರ. ಯಾಕೆಂದರೆ ಇಲ್ಲಿ ಖಳನಾಯಕನನ್ನು ಸಿಜಿಐ ಮೂಲಕ ಸಂಪೂರ್ಣ ಲಿಕ್ವಿಡ್ ಮೆಟಲ್ ಪಾತ್ರದಲ್ಲಿ ರಚಿಸಲಾಗಿದೆ. ಈ ಮೂಲಕ ಇದು ಯಾವುದೇ ಆಕಾರವನ್ನು ಮಾರ್ಫ್ ಮಾಡಬಹುದು ಎಂಬುದನ್ನು ನಿರೂಪಿಸಿತ್ತು.


ಜುರಾಸಿಕ್ ಪಾರ್ಕ್ (1995)

ಜುರಾಸಿಕ್ ಪಾರ್ಕ್ ಒಂದು ಬ್ಲಾಕ್ಬಸ್ಟರ್ ಚಿತ್ರ. ಇದು ಸಿಜಿಐ ಇತಿಹಾಸದಲ್ಲೊಂದು ಮೈಲುಗಲ್ಲು ಸ್ಥಾಪಿಸಿತ್ತು. ಇದರಲ್ಲಿ ಡೈನೋಸಾರ್‌ಗಳು ಕಲಾವಿದರೊಂದಿಗೆ ಸಂವಾದ ನಡೆಸುವುದನ್ನು ಕಾಣಬಹುದು. ಇದರಲ್ಲಿ ಮಾನವನ ಪಕ್ಕದಲ್ಲಿ ಡೈನೋಸಾರ್ ತಲೆಯ ಕ್ಲೋಸ್-ಅಪ್ ಅಗತ್ಯವಿರುವಾಗ ಪ್ರಾಯೋಗಿಕ ಡೈನೋಸಾರ್ ಮಾದರಿಯನ್ನು ಬಳಸಿದ್ದರೆ ದೂರದ ಶಾಟ್ ಗಳಿಗಾಗಿ ಡೈನೋಸಾರ್‌ಗಳ ಸಿಜಿಐ ಆವೃತ್ತಿಗಳನ್ನು ಬಳಸಲಾಗಿತ್ತು.


ದಿ ಮ್ಯಾಟ್ರಿಕ್ಸ್ (1999)

ಪ್ರೇಕ್ಷಕರನ್ನು ಬೆಚ್ಚಿಬೀಳಿಸಿದ ದೃಶ್ಯ ದಿ ಮ್ಯಾಟ್ರಿಕ್ಸ್ ಚಿತ್ರದ ತುಣುಕು ಚಿತ್ರ ನೋಡಿದವರೆಲ್ಲರಿಗೂ ನೆನಪಿರಬಹುದು. 360 ಡಿಗ್ರಿ ಕ್ಯಾಮರಾ ರಿಗ್‌ನ ಬಳಕೆ, ಮಧ್ಯದಲ್ಲಿ ಕೀನು ರೀವ್ಸ್‌ನ ಪ್ರತ್ಯೇಕ ಫೋಟೋಗಳನ್ನು ತೆಗೆಯುವ ಮೂಲಕ ನಟರು ಮತ್ತು ಸಿಜಿಐ ಒಟ್ಟಿಗೆ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ಈ ಚಿತ್ರ ತೋರಿಸಿಕೊಟ್ಟಿದೆ. ಸಿಜಿಐ ಅನ್ನು ದೋಷರಹಿತವಾಗಿ ಕಾರ್ಯಗತಗೊಳಿಸಿದ ಕೀರ್ತಿ ಈ ಚಿತ್ರ ತಂಡದ್ದು.


ಅವತಾರ್ (2009)

ಅವತಾರ್ ಚಿತ್ರದ ದೃಶ್ಯಾವಳಿಗಳು ಎಲ್ಲರ ಕಣ್ಣ ಮುಂದಿದೆ. ಇದರಲ್ಲಿ ಮೋಷನ್ ಕ್ಯಾಪ್ಚರ್ ಮತ್ತು ಸಿಜಿಐ ಸಂಪೂರ್ಣ ಮಿಶ್ರಣವಾಗಿತ್ತು.ಇದರಲ್ಲಿ ಕ್ಯಾಮರಾಗಳನ್ನು ಬಳಸಿಕೊಂಡು ನಟರ ಹೆಚ್ಚು ವಿವರವಾದ ಫೇಸ್ ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸಲಾಗಿದೆ. ಆ ಡೇಟಾವನ್ನು ಬಳಿಕ ಕಂಪ್ಯೂಟರ್ ರಚಿತ ಅಕ್ಷರ ಮಾದರಿಗಳಿಗೆ ವರ್ಗಾಯಿಸುತ್ತದೆ. ಸಂಪೂರ್ಣ ಮೂರು ಗಂಟೆಗಳ ಚಿತ್ರದಲ್ಲಿ ಶೇ. 60ರಷ್ಟನ್ನು ಸಿಜಿಐ ಮೂಲಕವೇ ಚಿತ್ರಣ ಮಾಡಲಾಗಿದೆ. ಈ ಚಿತ್ರವು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ.

ಇನ್ಸೆಪ್ಶನ್ (2010)

ಕ್ರಿಸ್ಟೋಫರ್ ನೋಲನ್ ಅವರ ಇನ್ಸೆಪ್ಶನ್ ನಲ್ಲಿ ಸಿಜಿಐನೊಂದಿಗೆ ಸಂಕೀರ್ಣ ನಿರೂಪಣಾ ರಚನೆಯ ನವೀನ ಅಪ್ಲಿಕೇಶನ್‌ ಅನ್ನು ಬಳಸಲಾಗಿದೆ. ಇದು ಕನಸಿನ ಕುಶಲತೆಯ ಮೂಲಕ ಮಾನವ ಮನಸ್ಸಿನ ಆಳವನ್ನು ಪರಿಶೋಧಿಸುತ್ತದೆ. ವೀಕ್ಷಕರ ವಾಸ್ತವತೆಯ ಗ್ರಹಿಕೆಗೆ ಸವಾಲು ಹಾಕುವ ಈ ಚಿತ್ರ ಪ್ರೇಕ್ಷಕರನ್ನು ತನ್ನ ಕಥೆಯೊಳಗೆ ಲೀನ ವಾಗುವಂತೆ ಮಾಡುತ್ತದೆ.


ಅವತಾರ್: ದಿ ವೇ ಆಫ್ ವಾಟರ್ (2022)

ಜೇಮ್ಸ್ ಕ್ಯಾಮರೂನ್ ಅವರ ಅವತಾರ್‌ನ ಬಹುನಿರೀಕ್ಷಿತ ಮುಂದುವರಿದ ಭಾಗ ದಿ ವೇ ಆಫ್ ವಾಟರ್ ಸಿನಿಮೀಯ ತಂತ್ರಜ್ಞಾನ ಮತ್ತು ಕಥೆ ಹೇಳುವಿಕೆಯನ್ನು ಮೀರಿ ಮತ್ತಷ್ಟು ಅಭಿವೃದ್ಧಿ ಹೊಂದಿದೆ. ಅತ್ಯಾಧುನಿಕ ಸಿಜಿಐ ಮತ್ತು ಕಾರ್ಯಕ್ಷಮತೆ ಕ್ಯಾಪ್ಚರ್ ತಂತ್ರಜ್ಞಾನದ ಪ್ರಭಾವಶಾಲಿ ಪರಾಕಾಷ್ಠೆಯನ್ನು ಈ ಚಿತ್ರದಲ್ಲಿ ಕಾಣಬಹುದು.


ಸಿಜಿಐ ಪ್ರಭಾವ ಹೇಗಿದೆ?

ಇತ್ತೀಚಿನ ವರ್ಷಗಳಲ್ಲಿ ಸ್ಟುಡಿಯೋಗಳು ಮತ್ತು ಚಲನಚಿತ್ರ ನಿರ್ಮಾಪಕರು ಸಿಜಿಐ ಅನ್ನು ದೂರವಿಡುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸಿಜಿಐ ಬಳಕೆಯಿಂದ ನಿಜವಾದ ಅನುಭವ, ಸಂತೃಪ್ತಿ ಕಲಾವಿದನಿಗೆ ಸಿಗುವುದಿಲ್ಲ. ಕಲಾವಿದರೊಬ್ಬರ ಪ್ರಕಾರ ಶೂಟಿಂಗ್ ವೇಳೆ ನಾನು ಜೆಟ್ ಗಳಲ್ಲಿ ಹಾರಲು ಬಯಸಿದರೆ ಸಿಜಿಐನಲ್ಲಿ ಜೆಟ್‌ಗಳೇ ಇರುವುದಿಲ್ಲ ಎನ್ನುತ್ತಾರೆ. ಈ ಹೇಳಿಕೆ ಚಿತ್ರರಂಗದ ಮಾರುಕಟ್ಟೆಯಲ್ಲಿ ಬಹುದೊಡ್ಡ ಪ್ರಭಾವವನ್ನು ಬೀರಿದೆ. ಯಾಕೆಂದರೆ ಚಿತ್ರಗಳಲ್ಲಿ ನೋಡುವ ದೃಶ್ಯಗಳು ಯಾವುದು ನಿಜವಲ್ಲ ಎಂದು ಪ್ರೇಕ್ಷಕರಿಗೆ ಗೊತ್ತಾದರೆ ಅವರು ಚಿತ್ರದ ಮೇಲಿನ ಆಸಕ್ತಿ ಕಳೆದುಕೊಳ್ಳಬಹುದು ಎನ್ನುವ ವಾದವೂ ಇದೆ.

ಇದನ್ನೂ ಓದಿ: Munjya Teaser: ʻಮುಂಜ್ಯಾʼ ಟೀಸರ್‌ ಔಟ್‌; ಇದು ಭಾರತದ ಮೊದಲ CGI ಚಿತ್ರ!

ಸಿಜಿಐನ ಭವಿಷ್ಯವೇನು?

ಸಿಜಿಐ ಭವಿಷ್ಯವು ಸ್ಟುಡಿಯೋದ ಮಿತಿಯಲ್ಲಿರುವುದು ಸ್ಪಷ್ಟ. ಚಿತ್ರೀಕರಣದಲ್ಲಿ ಈಗ ಅದ್ಧೂರಿ ಬಜೆಟ್‌ಗಳ ಯುಗವು ಕ್ಷೀಣಿಸುತ್ತಿದೆ. ಆದರೆ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ನೈಜ ಸಮಯದ ಫೋಟೊರಿಯಾಲಿಸ್ಟಿಕ್ ಹಿನ್ನೆಲೆಗಳನ್ನು ಪ್ರದರ್ಶಿಸುವ ಎಲ್ಇಡಿ ಪರದೆಗಳನ್ನು ಒಳಗೊಂಡಿರುವ ವರ್ಚುವಲ್ ಸೆಟ್ ಗಳ ಆಗಮನವು ಅಭೂತಪೂರ್ವ ಉನ್ನತ ಗುಣಮಟ್ಟದ ಸಿಜಿಐ ಯುಗವನ್ನು ಸೂಚಿಸುತ್ತದೆ.

ದಿ ಬ್ಯಾಟ್‌ಮ್ಯಾನ್, ಡ್ಯೂನ್ ಮತ್ತು ದಿ ಮ್ಯಾಂಡಲೋರಿಯನ್‌ನಂತಹ ಕೃತಿಗಳಲ್ಲಿ ಈ ನವೀನ ತಂತ್ರಜ್ಞಾನದ ಸಾಮರ್ಥ್ಯವನ್ನು ಪ್ರದರ್ಶಿಸುವ ಗ್ರೀಗ್ ಫ್ರೇಸರ್‌ನಂತಹ ಸಿನಿಮಾಟೋಗ್ರಾಫರ್‌ಗಳು ಮುಂಚೂಣಿಯಲ್ಲಿದ್ದಾರೆ.

Continue Reading
Advertisement
Fake CBI Officer
ಬೆಂಗಳೂರು4 mins ago

Fake CBI Officer : ಸಿಬಿಐ ಪೊಲೀಸರೆಂದು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿದ ನಾಲ್ವರು ಅರೆಸ್ಟ್‌

Prajwal Devaraj death news take leagal action by family
ಸ್ಯಾಂಡಲ್ ವುಡ್20 mins ago

Prajwal Devaraj: ಪ್ರಜ್ವಲ್​ ದೇವರಾಜ್ ಇನ್ನಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು; ಕುಟುಂಬಸ್ಥರ ಆಕ್ರೋಶ!

Prajwal Revanna Case
ಕ್ರೈಂ24 mins ago

Prajwal Revanna Case: ಅಶ್ಲೀಲ ವಿಡಿಯೋ ಹಂಚಿದ ಆರೋಪಿಗಳಾದ ಚೇತನ್‌, ಲಿಖಿತ್‌ಗೆ ಜಾಮೀನು

Agnikul Cosmos
ತಂತ್ರಜ್ಞಾನ40 mins ago

Agnikul Cosmos: ಯಶಸ್ವಿಯಾಗಿ ರಾಕೆಟ್ ಉಡಾವಣೆ ಮಾಡಿದ ಸ್ಟಾರ್ಟ್ ಅಪ್ ಕಂಪನಿ ಅಗ್ನಿಕುಲ್ ಕಾಸ್ಮೋಸ್; ಮೋದಿ ಅಭಿನಂದನೆ

PM Modi
Lok Sabha Election 202444 mins ago

PM Modi: ಕನ್ಯಾಕುಮಾರಿಯಲ್ಲಿ ಪ್ರಧಾನಿ ಧ್ಯಾನ; ಪ್ರಧಾನಿ ಈ ಸ್ಥಳವನ್ನೇ ಆಯ್ಕೆ ಮಾಡಲು ಏನು ಕಾರಣ?

Love Case in vijayapura
ವಿಜಯಪುರ53 mins ago

Love Case : ಪ್ರೇಮಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಕೇಸ್‌; ಯುವತಿ ತಂದೆ ಅರೆಸ್ಟ್‌

Kantara Movie Mollywood actor enters
ಸಿನಿಮಾ57 mins ago

Kantara Movie: `ಕಾಂತಾರ ಚಾಪ್ಟರ್‌ 1‌’ ಸಿನಿಮಾಗೆ ಖ್ಯಾತ ಮಾಲಿವುಡ್‌ ನಟ ಎಂಟ್ರಿ!

Singapore Open
ಕ್ರೀಡೆ58 mins ago

Singapore Open: ದ್ವಿತೀಯ ಸುತ್ತಿಗೆ ಆಟ ಮುಗಿಸಿದ ಭಾರತದ ಪಿ.ವಿ.ಸಿಂಧು

prajwalrevanna case hassan protest
ಕ್ರೈಂ1 hour ago

Prajwal Revanna Case: ಪ್ರಜ್ವಲ್‌ ರೇವಣ್ಣ ಬಂಧಿಸಲು ಆಗ್ರಹಿಸಿ ಹಾಸನದಲ್ಲಿ ಬೃಹತ್‌ ಪ್ರತಿಭಟನೆ

PM Narendra Modi
ದೇಶ1 hour ago

PM Narendra Modi: ಪ್ರಧಾನಿ ಮೋದಿ ಸ್ಪರ್ಧೆ ಅನರ್ಹತೆಗೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌