ಪ್ರಮುಖ ಸುದ್ದಿ
Kantara Movie | ಕಾಂತಾರದ ವರಾಹ ರೂಪಂ ಹಾಡು ನವರಸಂ ಹಾಡಿನ ಕಾಪಿ? ಕಾನೂನು ಕ್ರಮದ ಎಚ್ಚರಿಕೆ ಕೊಟ್ಟ ಮಲಯಾಳಂ ಸಂಗೀತ ತಂಡ
ಮಲಯಾಳಂ ಹಾಡನ್ನು ನಕಲು ಮಾಡಲಾಗಿದೆ ಎನ್ನಲಾದ ಕಾಂತಾರ ಸಿನಿಮಾ ತಂಡಕ್ಕೆ ಈಗ ಕಾನೂನು ಸಮರದ ಅತಂಕ ಎದುರಾಗಿದೆ.
ಬೆಂಗಳೂರು : ರಿಷಭ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ (Kantara Movie) ಯಶಸ್ಸಿನ ಉತ್ತುಂಗದಲ್ಲಿರುವ ನಡುವೆಯೇ, ಆ ಸಿನಿಮಾದ ಹಾಡುಗಳ ಬಗ್ಗೆ ಅಪಸ್ವರಗಳು ಕೇಳಿ ಬಂದಿವೆ. ಚಲನ ಚಿತ್ರದಲ್ಲಿ ಬಳಸಲಾಗಿರುವ ಹಾಡುಗಳ ಟ್ಯೂನ್ಗಳು ಭಾರತದ ನಾನಾ ಭಾಷೆಯ ಹಾಡುಗಳಿಂದ ನಕಲು ಮಾಡಲಾಗಿದೆ ಎಂಬ ಆರೋಪಗಳಿಗೆ ಪುಷ್ಟಿ ಸಿಕ್ಕಿದೆ. ಕೇರಳದ ಸಂಗೀತ ನಿರ್ದೇಶನ ಮಾಡಿರುವ ತಂಡವೊಂದು ಈ ಬಗ್ಗೆ ಕಾನೂನು ಸಮರದ ಎಚ್ಚರಿಕೆ ಕೊಟ್ಟು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.
ಕಾಂತಾರ ಸಿನಿಮಾದ “ವರಾಹ ರೂಪಂ’ ಎಂಬ ಹಾಡು ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿತ್ತು. ಹಾಡಿನ ಸಂಗೀತದ ಇಂಪು ಕನ್ನಡಿಗರ ಮನ ಮುಟ್ಟಿತ್ತು. ಆದರೆ ಈ ಹಾಡಿನ ಟ್ಯೂನ್ ನಮ್ಮದೆಂದು ಕೇರಳದ “ತೈಕುಡಂ ಬ್ರಿಜ್’ ಎಂಬ ಸಂಗೀತ ನಿರ್ದೇಶನ ಸಂಸ್ಥೆ ಆರೋಪಿಸಿದೆ.
ತೈಕುಡಂ ಬ್ರಿಗೇಡ್ ಐದು ವರ್ಷದ ಹಿಂದೆ ನವರಸಂ ಎಂಬ ಆಲ್ಬಮ್ ಸಾಂಗ್ ಬಿಡುಗಡೆ ಮಾಡಿತ್ತು. ಆ ಹಾಡಿನಲ್ಲಿರುವ ಟ್ಯೂನ್ ಮತ್ತು ವರಾಹ ರೂಪಂ ಹಾಡಿಗೆ ಸಾಮ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಈಗ ನವರಸಂ ಹಾಡಿನ ಕರ್ತೃಗಳಾದ ತೈಕುಡಮ್ ಬ್ರಿಜ್ ಕಾನೂನು ಹೋರಾಟದ ಸುಳಿವು ನೀಡಿದೆ.
“ಕಾಂತಾರ ಸಿನಿಮಾದೊಂದಿಗೆ ತೈಕುಡಂ ಬ್ರಿಜ್ ಯಾವುದೇ ಸಂಯೋಜನೆ ಮಾಡಿಕೊಂಡಿಲ್ಲ. ಅಂತೆಯೇ ನಮ್ಮ ಆಡಿಯೊ ನವರಸಂ ಮತ್ತು ವರಾಹ ರೂಪಂ ನಡುವೆ ಹೋಲಿಕೆಗಳಿವೆ. ಈ ಮೂಲಕ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿರುವುದು ಸ್ಪಷ್ಟ. ಹಾಡನ್ನು ಬಳಸಿಕೊಂಡಿರುವ ಸಿನಿಮಾ ತಂಡ ನಮ್ಮ ಹಕ್ಕುಗಳನ್ನು ಪಡೆದುಕೊಂಡಿಲ್ಲ. ತಮ್ಮದೇ ಸಂಗೀತವೆಂದು ಹೇಳಿಕೊಳ್ಳಲಾಗಿದೆ. ಹೀಗಾಗಿ ಕಾನೂನು ಕ್ರಮ ಬಯಸುತ್ತೇವೆ,” ಎಂದು ತೈಕುಡಂ ಬ್ರಿಜ್ ಫೇಸ್ಬುಕ್ನಲ್ಲಿ ಬರೆದುಕೊಂಡಿದೆ. ಈ ಪೋಸ್ಟ್ ಅನ್ನು ಹೊಂಬಾಳೆ ಫಿಲ್ಸ್ಮ್, ಅಜನೀಶ್ ಲೋಕನಾಥ್ ಹಾಗೂ ರಿಷಭ್ ಶೆಟ್ಟಿಗೆ ಟ್ಯಾಗ್ ಮಾಡಲಾಗಿದೆ.
ಅಚ್ಚರಿಯೆಂದರೆ ಸೂಪರ್ ಹಿಟ್ ಆಗಿರುವ ಹಾಡನ್ನು ಹೊಂಬಾಳೆ ಫೀಲ್ಸ್ಮ್ ಚಾನೆಲ್ನಿಂದ ಬಿಡುಗಡೆ ಮಾಡಿರಲಿಲ್ಲ. ಸಂಗೀತ ನಿರ್ದಶಕ ಅಜನೀಶ್ ಲೋಕನಾಥ್ ಅವರ ಚಾನೆಲ್ನಿಂದ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಹಾಡು ನಕಲಾಗಿದೆ ಎಂಬುದರ ಬಗ್ಗೆ ಈ ಹಿಂದೆಯೂ ಅಜನೀಶ್ ಅವರಿಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಆ ವೇಳೆ ಅವರು ಕಾಪಿ ಅಲ್ಲ, ಪ್ರೇರಣೆ ಎಂದಿದ್ದರು. ಅಲ್ಲದೆ, ಯಾರೂ ಈ ಬಗ್ಗೆ ಚಕಾರವೇ ಎತ್ತಿಲ್ಲ ಎಂದಿದ್ದರು. ಇದೀಗ ಸಂಗೀತ ತಂಡವೇ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಹೊಸ ತಿರುವು ಲಭಿಸಿದೆ.
ಇದನ್ನೂ ಓದಿ | Kantara Movie | ಕಾಂತಾರ ಸಿನಿಮಾ ನೋಡಿ ಥ್ರಿಲ್ ಆದ ಪೂಜಾ ಹೆಗ್ಡೆ, ಆಕೆ ಹೇಳಿದ್ದೇನು?
ಪ್ರಮುಖ ಸುದ್ದಿ
ವಿಸ್ತಾರ ಸಂಪಾದಕೀಯ: ರೈಲು ದುರಂತ ಬಳಿಕ ಪರಿಹಾರ ಕಾರ್ಯ; ರೈಲ್ವೆ ಸಚಿವರ ನಡೆ ಅನುಕರಣೀಯ
ಸದ್ಯ ದುರಂತದ ಕಾರಣ ಪತ್ತೆ ಹಚ್ಚುವ ಹೊಣೆ ಸಿಬಿಐಗೆ ವಹಿಸಲಾಗಿದೆ. ಇದು ಮಾನವಸಹಜ ಪ್ರಮಾದದಿಂದ ಆಗಿದ್ದರೂ ಶಿಕ್ಷಾರ್ಹ. ಉದ್ದೇಶಪೂರ್ವಕ ದುಷ್ಕೃತ್ಯ ಎಂಬುದಾದರೆ ಘೋರ ಅಪರಾಧ. ಎರಡೂ ಬಗೆಯಲ್ಲೂ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.
ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳ ನಡುವೆ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಮೃತರ ಸಂಖ್ಯೆ 288 ತಲುಪಿದೆ. ಇತ್ತೀಚಿನ ದಶಕಗಳಲ್ಲೇ ಇದು ಘನಘೋರ ಅಪಘಾತವಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇತ್ತೀಚಿನ ಕೆಲವು ವರ್ಷಗಳಿಂದ ಭಾರತೀಯ ರೈಲು ವ್ಯವಸ್ಥೆ ಸುರಕ್ಷಿತ ಎನಿಸಿಕೊಂಡಿತ್ತು. ʼಕವಚʼದಂಥ ಅತ್ಯಾಧುನಿಕ ತಂತ್ರಜ್ಞಾನಗಳು ಬಂದಿದ್ದವು. ಆದರೂ ಇಂಥ ಘೋರ ದುರಂತ ಸಂಭವಿಸಿರುವುದು ರೈಲ್ವೆ ಸುರಕ್ಷತೆಯನ್ನು ಮತ್ತೊಮ್ಮೆ ಆಮೂಲಾಗ್ರ ಪರಿಶೀಲಿಸಲು ಆಸ್ಪದ ಮಾಡಿಕೊಟ್ಟಿದೆ. ಈ ನಡುವೆ ಅಪಘಾತದ ಬಳಿಕ ಕೇವಲ 51 ಗಂಟೆಯೊಳಗೆ ಮೂರೂ ರೈಲುಗಳ ಬೋಗಿಗಳನ್ನು ತೆರವುಗೊಳಿಸಿ ಮತ್ತೆ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು ಮಾತ್ರ ಗಮನಾರ್ಹ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸುಮಾರು 36 ಗಂಟೆಗಳ ಕಾಲ ಸ್ಥಳದಲ್ಲೇ ಇದ್ದು ಮೇಲುಸ್ತುವಾರಿ ನೋಡಿಕೊಂಡಿರುವುದು ವಿಶೇಷವಾಗಿ ಗಮನ ಸೆಳೆದಿದೆ. ಹೊಸದಾಗಿ ರೈಲು ಸಂಚಾರ ಆರಂಭವಾಗಿ ರೈಲು ಹೊರಡುವವರಿಗೂ ಅವರು ಸ್ಥಳದಲ್ಲಿದ್ದು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ್ದು ಅನುಕರಣೀಯ ನಡೆಯಾಗಿದೆ.
ಹಿಂದೆ ನೆಹರೂ ಸರ್ಕಾರದ ಕಾಲದಲ್ಲಿ ರೈಲು ಅಪಘಾತ ಸಂಭವಿಸಿದಾಗ ಆಗಿನ ರೈಲ್ವೆ ಸಚಿವರಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಅವರ ಆ ನಡೆಯನ್ನು ಇಂದಿಗೂ ಪ್ರಶಂಸಿಸಲಾಗುತ್ತದೆ. ಆದರೆ, ಈಗಿನ ಈ ಕಾಲಘಟ್ಟದಲ್ಲಿ ರಾಜೀನಾಮೆ ನೀಡಿ ತೆರೆಮರೆಗೆ ಸರಿಯುವುದಕ್ಕಿಂತ ಸನ್ನಿವೇಶ ಮತ್ತು ಸವಾಲನ್ನು ಎದುರಿಸಿ ನಿಲ್ಲುವುದು ಕೂಡ ಮಹತ್ವದ್ದೇ ಆಗಿರುತ್ತದೆ. ರೈಲು ಅಪಘಾತ ಸಂಭವಿಸಿದ ಕೂಡಲೇ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ರಕ್ಷಣಾ ಕಾರ್ಯಾಚರಣೆಗೆ ಕ್ಷಿಪ್ರತೆ ತಂದುಕೊಟ್ಟ, ಸಂತ್ರಸ್ತರಿಗೆ ಭಾರಿ ಮೊತ್ತದ ಪರಿಹಾರ ಘೋಷಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಡೆ ಕೂಡ ಮೆಚ್ಚುವಂಥದ್ದಾಗಿದೆ.
ಇದನ್ನೂ ಓದಿ : Uttara Kannada News: ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕಂಕಣ ಬದ್ಧರಾಗಬೇಕು: ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ
ಇತ್ತೀಚೆಗೆ ರೈಲ್ವೆ ಇಲಾಖೆ ಕೈಗೊಂಡ ಹಲವಾರು ಕ್ರಾಂತಿಕಾರಕ ಕ್ರಮಗಳಿಂದಾಗಿ ರೈಲು ದುರಂತಗಳು ಬಹುತೇಕ ನಿಂತು ಹೋಗಿದ್ದವು. ಅಪಘಾತದ ಸಂಖ್ಯೆ ಶೂನ್ಯಕ್ಕೆ ಇಳಿದಿದೆ ಎಂದು ರೈಲ್ವೆ ಇಲಾಖೆ ಬೆನ್ನು ತಟ್ಟಿಕೊಂಡಿತ್ತು. ʼಕವಚ್’ ಹೆಸರಿನ ಆಧುನಿಕ ತಂತ್ರಜ್ಞಾನದ ಅಳವಡಿಕೆ ಮೂಲಕ ಅವಘಡಗಳ ಸಂಖ್ಯೆಯನ್ನು ಶೂನ್ಯಕ್ಕಿಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿತ್ತು. ಕವಚ್ ಎಂಬುದು ಸೆನ್ಸರ್ ಆಧಾರಿತ ತಂತ್ರಜ್ಞಾನ. ಪ್ರತಿ ರೈಲಿನ ಇಂಜಿನ್ನಲ್ಲಿ ಅಳವಡಿಸಲಾಗುತ್ತದೆ. ಹಳಿಯಲ್ಲಿ ಸಾಗುವ ಯಾವುದೇ ರೈಲು ಎದುರುಗಡೆಯಿಂದ ಮತ್ತೊಂದು ರೈಲು ಬರುತ್ತಿದ್ದರೆ, ಬೇರೆ ರೈಲು ಅದೇ ಹಳಿಯ ಮೇಲೆ ನಿಂತಿದ್ದರೆ ಅಥವಾ ರೈಲು ಹಳಿಯ ಮೇಲೆ ಅನ್ಯ ವಾಹನಗಳು ನಿಂತಿದ್ದರೆ ಅದನ್ನು ಕವಚ್ ಸೆನ್ಸರ್ ದೂರದಿಂದಲೇ ಗ್ರಹಿಸಿ, ಆಂತರಿಕ ನಿರ್ವಹಣಾ ವ್ಯವಸ್ಥೆಗೆ ಸಿಗ್ನಲ್ ರವಾನಿಸುತ್ತದೆ. ಸಿಗ್ನಲ್ ಪಡೆದ ಆಂತರಿಕ ನಿರ್ವಹಣಾ ವ್ಯವಸ್ಥೆಯು ಸ್ವಯಂಚಾಲಿತವಾಗಿ ಬ್ರೇಕ್ ಹಾಕುತ್ತದೆ. ಆದರೆ ಈಗ ಈ ಭೀಕರ ದುರಂತ ಸಂಭವಿಸಿದ ಮಾರ್ಗದಲ್ಲಿ ಕವಚ ತಂತ್ರಜ್ಞಾನ ಅಳವಡಿಸಿರಲಿಲ್ಲ. ಯಾಕೆ ಅಳವಡಿಸಿರಲಿಲ್ಲವೋ ತಿಳಿಯದು. ರೈಲ್ವೇ ಹಳಿಗಳ ವಿದ್ಯುದೀಕರಣ ಪ್ರಕ್ರಿಯೆಯಂತೆಯೇ ಇದು ಕೂಡ ಇಂದು ಅತ್ಯಗತ್ಯವಾಗಿದ್ದು, ತಂತ್ರಜ್ಞಾನದ ಸರ್ವಾಂಗೀಣ ಬಳಕೆ ಇನ್ನಷ್ಟು ಅಗತ್ಯವಾಗಿದೆ ಎಂಬುದನ್ನು ಇದು ಸೂಚಿಸಿದೆ.
ಸದ್ಯ ದುರಂತದ ಕಾರಣ ಪತ್ತೆ ಹಚ್ಚುವ ಹೊಣೆ ಸಿಬಿಐಗೆ ವಹಿಸಲಾಗಿದೆ. ಇದು ಮಾನವಸಹಜ ಪ್ರಮಾದದಿಂದ ಆಗಿದ್ದರೂ ಶಿಕ್ಷಾರ್ಹ. ಉದ್ದೇಶಪೂರ್ವಕ ದುಷ್ಕೃತ್ಯ ಎಂಬುದಾದರೆ ಘೋರ ಅಪರಾಧ. ಎರಡೂ ಬಗೆಯಲ್ಲೂ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಮತ್ತೆ ಇಂಥ ದುರ್ಘಟನೆ ಸಂಭವಿಸದಂತೆ ರೈಲ್ವೆ ಸಚಿವರು ಹಾಗೂ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು
ಟಾಪ್ 10 ನ್ಯೂಸ್
ವಿಸ್ತಾರ TOP 10 NEWS : ಬಾಡಿಗೆದಾರನಿಗೆ ಇಲ್ಲ ಫ್ರೀ ಕರೆಂಟ್, ಬಿಜೆಪಿಗೆ ಆರ್ಎಸ್ಎಸ್ ಪಾಠ ಇತ್ಯಾದಿ ಪ್ರಮುಖ ಸುದ್ದಿಗಳಿವು
ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.
1. ಹೊರಬಿತ್ತು ಗೃಹ ಜ್ಯೋತಿ ಮಾರ್ಗಸೂಚಿ; ಬಾಡಿಗೆದಾರನಿಗಿಲ್ಲ ಉಚಿತ ವಿದ್ಯುತ್?
ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ರಾಜ್ಯದ ಎಲ್ಲ ಜನತೆಗೂ 200 ಯೂನಿಟ್ ವಿದ್ಯುತ್ ಉಚಿತ (Free Electricity) ಎಂದು ಘೋಷಣೆ ಮಾಡಿದ್ದರು. ಕೊನೆಗೆ ವಾರ್ಷಿಕ ಸರಾಸರಿ ಬಳಕೆ ಮೇಲೆ ಶೇಕಡಾ 10ರಷ್ಟು ಏರಿಕೆ ಮಾಡಿ ವಿದ್ಯುತ್ ಬಿಲ್ ನೀಡುವುದಾಗಿ ಹೇಳಿದ್ದರು. ಈಗ ಗೃಹ ಜ್ಯೋತಿ (Gruha Jyoti) ಮಾರ್ಗಸೂಚಿ ಬಿಡುಗಡೆಯಾಗಿದ್ದು, ಬಾಡಿಗೆದಾರನಿಗೆ ಈ ಗ್ಯಾರಂಟಿ (Congress Guarantee) ಭಾಗ್ಯ ಇದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಆದೇಶದಲ್ಲಿರುವ ಷರತ್ತನ್ನು ನೋಡಿದರೆ ಗೊಂದಲ ಸೃಷ್ಟಿಯಾಗುತ್ತದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. ಉಚಿತ ಬಸ್ ಪ್ರಯಾಣಕ್ಕೆ ಸಿಕ್ಕಿತು ಅನುಮೋದನೆ; ಏಳು ಕಂಡೀಷನ್ನೊಂದಿಗೆ ಚಾಲನೆ!
ರಾಜ್ಯದ ಎಲ್ಲ ಮಹಿಳೆಯರಿಗೂ ಕಾಂಗ್ರೆಸ್ ಗ್ಯಾರಂಟಿ (Congress Guarantee) ಯೋಜನೆಯಂತೆ ಉಚಿತ ಬಸ್ ಪ್ರಯಾಣವನ್ನು ಕಲ್ಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಘೋಷಣೆ ಮಾಡಿದ ಬೆನ್ನಲ್ಲೇ ಈಗ ಅನುಮೋದನೆ ಆದೇಶವೂ ಹೊರಬಿದ್ದಿದೆ. ಜೂನ್ 11 ರಿಂದ ಜಾರಿಯಾಗಲಿರುವ ಉಚಿತ ಬಸ್ (Free Bus) ಪ್ರಯಾಣದ ಶಕ್ತಿ ಯೋಜನೆಯನ್ನು ನಾಲ್ಕೂ ಸಾರಿಗೆ ನಿಗಮಗಳ ಬಸ್ಗಳಲ್ಲಿ ಜಾರಿ ಮಾಡಿ ಆದೇಶವನ್ನು ಹೊರಡಿಸಲಾಗಿದೆ. ಆದರೆ, ಈ ಉಚಿತ ಪ್ರಯಾಣಕ್ಕೆ ಏಳು ಕಂಡೀಷನ್ ಹಾಕಿ ಯೋಜನೆಯ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. ಬರೀ ಮೋದಿ ಹೆಸರಿಗೆ ವೋಟ್ ಬರಲ್ಲ! ಬಿಜೆಪಿಗೆ ಆರೆಸ್ಸೆಸ್ ಮುಖವಾಣಿ ಪತ್ರಿಕೆಯಿಂದ ಫುಲ್ ಕ್ಲಾಸ್
ಕರ್ನಾಟಕದಲ್ಲಿ ಬಿಜೆಪಿ ಹೀನಾಯವಾಗಿ ಸೋತಿರುವುದು ಬಿಜೆಪಿಯ ಥಿಂಕ್ ಟ್ಯಾಂಕ್ನಲ್ಲಿ ಪರ್ಯಾಯ ಯೋಚನೆಗೆ ಕಾರಣವಾಗಿದೆಯೇ? ಹೌದು, ಇಂಥದೊಂದು ಅನುಮಾನ ಬರಲು ಕಾರಣವಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ದ ಮುಖವಾಣಿಯಾಗಿರುವ ಆರ್ಗೈನಸರ್ (Organizer) ವಾರ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು ಇದಕ್ಕೆ ಪುಷ್ಟಿ ನೀಡುತ್ತದೆ. ಚುನಾವಣೆ ಗೆಲ್ಲಲು ಮೋದಿ (Modi Magic) ನಾಮಬಲ, ಹಿಂದುತ್ವವು (hindutva) ಪ್ರತಿಬಾರಿಯೂ ಕೆಲಸ ಮಾಡುವುದಿಲ್ಲ ಎಂದು ಕಟುವಾಗಿ ಟೀಕಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. ಅಪಘಾತ ನಡೆದು 51 ಗಂಟೆಯಲ್ಲೇ ಹಳಿ ಸಿದ್ಧ, ರೈಲು ಸಂಚಾರ; 36 ತಾಸು ಸ್ಥಳದಲ್ಲೇ ಇದ್ದ ಸಚಿವ
ಒಡಿಶಾದ ಬಾಲಾಸೋರ್ ಜಿಲ್ಲೆ ಬಹನಗ ರೈಲು ನಿಲ್ದಾಣದ ಬಳಿ ತ್ರಿವಳಿ ರೈಲು ಅಪಘಾತ ಸಂಭವಿಸಿ 288 ಜನ ಮೃತಪಟ್ಟಿದ್ದು, ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇನ್ನು ಎರಡು ದಿನದಿಂದ ಅಪಘಾತ ನಡೆದ ಸ್ಥಳವು ಮಸಣದಂತಾಗಿತ್ತು. ಹೆಣಗಳ ರಾಶಿ ಬಿದ್ದಿದ್ದವು. ರೈಲು ಹಳಿಗಳ ಮೇಲೆ ಬೋಗಿಗಳು ಬಿದ್ದ ಚಿತ್ರ ಭಯ ಹುಟ್ಟಿಸುವಂತಿದ್ದವು. ಆದರೆ, ಅಪಘಾತ ನಡೆದು 51 ಗಂಟೆಯಲ್ಲಿಯೇ ಚಿತ್ರಣ ಬದಲಾಗಿದ್ದು, ರೈಲು ಸಂಚಾರ ಆರಂಭವಾಗದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. ಜೈಲಿಗೆ ಕಳುಹಿಸಲೇ ಬೇಕು ಅಂತಿದ್ದರೆ ಬನ್ನಿ, ನಾನೂ ನೋಡ್ತೇನೆ: ಎಂಬಿಪಿಗೆ ಸೂಲಿಬೆಲೆ ಸವಾಲ್
ರಾಜ್ಯ ಸರ್ಕಾರವನ್ನು ಹಿಟ್ಲರ್ ಆಡಳಿತ ಅಂದರೆ ಜೈಲು ಗ್ಯಾರಂಟಿ ಎಂಬ ಸಚಿವ ಎಂ.ಬಿ. ಪಾಟೀಲ್ ಹೇಳಿಕೆಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ತಿರುಗೇಟು ನೀಡಿದ್ದಾರೆ. “ನನ್ನನ್ನು ಜೈಲಿಗೆ ಕಳುಹಿಸಲೇ ಬೇಕು ಅಂತಿದ್ದರೆ ಬನ್ನಿ, ನಮ್ಮ ಹೋರಾಟವನ್ನು ನಾವು ಮಾಡುತ್ತೇವೆ. ಮಂತ್ರಿ ಆದವರಿಗೆ ವಿಷಯ, ವಸ್ತುವಿನ ಆಳವೇ ಗೊತ್ತಿಲ್ಲ. ಇದು ರಾಜ್ಯದ ದುರದೃಷ್ಟಕರ ಸಂಗತಿ, ಇವರಿಗೆ ರೌಡಿಸಂ ಬಿಟ್ಟರೆ ಬೇರೇನೂ ಗೊತ್ತಿಲ್ಲ” ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ವಿಶ್ವ ಪರಿಸರ ದಿನ: ‘ಸಸಿ ನೆಡಿ, ಫೋಟೊ ಕಳುಹಿಸಿ’ ವಿಸ್ತಾರ ಅಭಿಯಾನ; ನಿಮ್ಮ ಮತ್ತಷ್ಟು ಫೋಟೊಗಳು ಇಲ್ಲಿವೆ
ವಿಸ್ತಾರ ನ್ಯೂಸ್ ಚಾನೆಲ್ ವೀಕ್ಷಕರು ಹಾಗೂ ವಿಸ್ತಾರ ನ್ಯೂಸ್ ವೆಬ್ಸೈಟ್ ಓದುಗರ ಸ್ಪಂದನೆಯೇ ಅಂಥದ್ದು. ವಿಧಾನಸಭೆ ಚುನಾವಣೆ ವೇಳೆ “ಮತ ಹಾಕಿ, ಫೋಟೊ ಕಳುಹಿಸಿ” ಎಂಬ ಅಭಿಯಾನ ಆರಂಭಿಸಿದ್ದೆವು. ಆಗ ವೀಕ್ಷಕರು ಹಾಗೂ ಓದುಗರು ಸಾವಿರಾರು ಫೋಟೊಗಳನ್ನು ಕಳುಹಿಸಿ ನಮ್ಮ ಅಭಿಯಾನಕ್ಕೆ ಬೆಂಬಲ ನೀಡಿದ್ದರು. ಈಗ ವಿಶ್ವ ಪರಿಸರ ದಿನ ಹಿನ್ನೆಲೆಯಲ್ಲಿ “ಸಸಿ ನೆಡಿ, ಫೋಟೊ ಕಳುಹಿಸಿ” ಅಭಿಯಾನ ಆರಂಭಿಸಿದ್ದೇವೆ. ಈಗಲೂ ಅಷ್ಟೇ, ಸಾವಿರಾರು ಪರಿಸರ ಪ್ರಿಯರು ಸಸಿ ನೆಟ್ಟಿರುವ ಫೋಟೊಗಳನ್ನು ಕಳುಹಿಸಿ ಉತ್ತಮ ಸ್ಪಂದನೆ ನೀಡಿದ್ದಾರೆ. ಪರಿಸರ ಕಾಳಜಿ ಮೆರೆದಿದ್ದಾರೆ. ಸಾವಿರಾರು ಫೋಟೊಗಳಲ್ಲಿ ಆಯ್ದ ಕೆಲವು ಫೋಟೊಗಳು ಇಲ್ಲಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. ಮಳೆ ಶುರುವಾಗೋದಕ್ಕೆ ಇನ್ನು ನಾಲ್ಕೇ ದಿನ ಬಾಕಿ, ಈಗ್ಲೇ ನಿಮ್ಮ ಎಲ್ಲಾ ಕೆಲ್ಸಾ ಮುಗಿಸಿಕೊಂಡು ಬಿಡಿ
ವಾಡಿಕೆಯ ಪ್ರಕಾರ ಇಷ್ಟೊತ್ತಿಗೆ ಮುಂಗಾರು ಶುರುವಾಗಬೇಕಿತ್ತು. ಆದರೆ, ಈ ವರ್ಷ ತುಸು ವಿಳಂಬವಾಗಿದೆ(Monsoon delayed in Kerala). ಆಗ್ನೇಯ ಮಾನ್ಸೂನ್ ಕೇರಳಕ್ಕೆ ಅಪ್ಪಳಿಸುವುದು ಇನ್ನೂ ಮೂರ್ನಾಲ್ಕು ದಿನ ತಡವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (Indian Meteorological Department – IMD) ಹೇಳಿದೆ. ಅಂದರೆ, ಜೂನ್ 7ಕ್ಕೆ ಕೇರಳದಲ್ಲಿ ಮಳೆ ಶುರುವಾಗಲಿದೆ. ಇದಕ್ಕೂ ಮೊದಲು ಹವಾಮಾನ ಇಲಾಖೆಯು ಜೂನ್ 4ಕ್ಕೆ ಕೇರಳದಲ್ಲಿ ಮುಂಗಾರು ಆರಂಭವಾಗಲಿದೆ ಎಂದು ಅಂದಾಜಿಸಿತ್ತು. ಆದರೆ, ಈಗ ಇನ್ನೂ ಮೂರ್ನಾಲ್ಕು ದಿನಗಳು ತಡವಾಗಲಿದೆ ಎಂದು ಊಹೆ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಓದಿಗಾಗಿ: 1. ಏನು ನಿನ್ನ ಹನಿಗಳ ಲೀಲೆ… ಭಾರತದಲ್ಲಿ ಮುಂಗಾರು ಸೃಷ್ಟಿ ಹೇಗೆ? ಮಳೆ ವ್ಯಾಪಿಸುವುದು ಯಾವ ರೀತಿ?
2. ಮಳೆಗಾಲದಲ್ಲಿ ವೈರಲ್ ಸೋಂಕು ತಡೆಯುವುದು ಹೇಗೆ?
8. ದೇಶದ ಟಾಪ್ 40 ಡೆಂಟಲ್ ಕಾಲೇಜುಗಳ ಪೈಕಿ 10 ಕರ್ನಾಟಕದಲ್ಲಿವೆ!
ವೈದ್ಯಕೀಯ ಶಿಕ್ಷಣದಂತೆ ದಂತ ವೈದ್ಯಕೀಯ ಶಿಕ್ಷಣದಲ್ಲಿಯೂ ನಮ್ಮ ರಾಜ್ಯ ಮುಂಚುಣಿಯಲ್ಲಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಸಾಂಸ್ಥಿಕ ರ್ಯಾಂಕಿಂಗ್ ಚೌಕಟ್ಟಿನ (ಎನ್ಐಆರ್ಎಫ್) ವಾರ್ಷಿಕ ರ್ಯಾಂಕಿಂಗ್ (NIRF Ranking 2023) ಪಟ್ಟಿಯಲ್ಲಿ ಇದು ಮತ್ತೊಮ್ಮೆ ಸಾಬೀತಾಗಿದ್ದು, ದೇಶದ ಟಾಪ್ 40 ದಂತ ವೈದ್ಯಕೀಯ ಕಾಲೇಜುಗಳ ಪೈಕಿ ಹತ್ತು ಕಾಲೇಜುಗಳು ರಾಜ್ಯದಲ್ಲಿಯೇ ಇವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಓದಿಗಾಗಿ: 1. ಮೆಡಿಕಲ್ ಕಾಲೇಜುಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ನಿಮಾನ್ಸ್ಗೆ 4 ನೇ ಸ್ಥಾನ; ಟಾಪ್ ವೈದ್ಯಕೀಯ ಕಾಲೇಜುಗಳಿವು
2. ರಾಜ್ಯದ ಬೆಸ್ಟ್ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿ ಪ್ರಕಟ; ಇವು ಟಾಪ್ 10 ಕಾಲೇಜುಗಳು!
9. ದೀರ್ಘಕಾಲದ ಗೆಳತಿಗೆ ಮಾಂಗಲ್ಯ ಧಾರಣೆ ಮಾಡಿದ ಅಭಿಷೇಕ್ ಅಂಬರೀಶ್
ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambareesh Wedding) ) ಹಾಗೂ ಅವಿವ ಬಿಡಪ ಜೂನ್ 5ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕರ್ಕಾಟಕ ಲಗ್ನದಲ್ಲಿ (9:30-10:30) ಇಬ್ಬರೂ ಹಸೆಮಣೆ ಏರಿದರು. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದ ಕಲ್ಯಾಣಮಂಟಪದಲ್ಲಿ ಮದುವೆ ಗೌಡರ ಸಂಪ್ರದಾಯದಲ್ಲಿ ಅದ್ಧೂರಿಯಾಗಿ ನೆರವೇರಿತು. ಅವಿವ ಬಿಡಪ ಅವರಿಗೆ ಮಾಂಗಲ್ಯ ಧಾರಣೆ ಮಾಡುವ ವಿಡಿಯೊ ಇದೀಗ ವೈರಲ್ ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. 2024ರ ಟಿ20 ವಿಶ್ವ ಕಪ್ಗೆ ಕಂಟಕ, ಇಂಗ್ಲೆಂಡ್ಗೆ ಶಿಫ್ಟ್ ಮಾಡಲು ಐಸಿಸಿ ನಿರ್ಧಾರ
2024ರಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ (T20 World Cup) ಟೂರ್ನಿಯನ್ನು ಹೊಸ ಸ್ಥಳಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಆತಿಥ್ಯ ಪಡೆದುಕೊಂಡಿರುವ ಯುಎಸ್ಎಯಲ್ಲಿ ಮೂಲ ಸೌಕರ್ಯದ ಕೊರತೆ ಎದುರಾಗಿರುವ ಕಾರಣ ಅಲ್ಲಿಂದ ಇಂಗ್ಲೆಂಡ್ಗೆ ಸ್ಥಳಾಂತರ ಮಾಡಲು ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ನಿರ್ಧಾರ ಮಾಡಿದೆ ಎಂಬುದಾಗಿ ವರದಿಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ದೇಶ
72 Hoorain: ಕಾಶ್ಮೀರ ಫೈಲ್ಸ್, ಕೇರಳ ಸ್ಟೋರಿ ಬಳಿಕ ಮತ್ತೊಂದು ವಿವಾದಾತ್ಮಕ ಸಿನಿಮಾ ’72 ಹೂರೇ’ ತೆರೆಗೆ ಬರಲು ಸಿದ್ಧ
72 Hoorain: ರಾಷ್ಟ್ರ ಪ್ರಶಸ್ತಿ ವಿಜೇತ ಸಂಜಯ್ ಪೂರನ್ ಸಿಂಗ್ ಚೌಹಾಣ್ ನಿರ್ದೇಶನದ 72 ಹೂರೇ ಚಿತ್ರದ ಟೀಸರ್ ಲಾಂಚ್ ಮಾಡಲಾಗಿದ್ದು, ಪರ ವಿರೋಧ ಚರ್ಚೆಗಳು ಶುರುವಾಗಿವೆ.
ನವದೆಹಲಿ: ದಿ ಕೇರಳ ಸ್ಟೋರಿ (The Kerala Story), ಕಾಶ್ಮೀರ್ ಫೈಲ್ (The Kashmir Files), ದಿ ಡೈರಿ ಆಫ್ ವೆಸ್ಟ್ ಬೆಂಗಾಲ್ ಸಿನಿಮಾ ಬೆನ್ನಲ್ಲೇ ಮತ್ತೊಂದು ವಿವಾದಾತ್ಮಕ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಇಸ್ಲಾಮಿಕ್ ತೀವ್ರವಾದದ ಕತೆಯನ್ನು ಹೊಂದಿರುವ 72 ಹೂರೇ(72 Hoorain) ಚಿತ್ರದ ಟೀಸರ್ ಲಾಂಚ್ ಆಗಿದ್ದು, ತೀವ್ರ ವಿರೋಧ ಕೂಡ ವ್ಯಕ್ತವಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಸಂಜಯ್ ಪೂರನ್ ಸಿಂಗ್ ಚೌಹಾಣ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಟೀಸರ್ ಲಾಂಚ್ ಆಗುತ್ತಿದ್ದಂತೆ ನೆಟ್ಟಿಗರು, ಮುಸ್ಲಿಮ್ ಮತ್ತು ಇಸ್ಲಾಮ್ಗೆ ಅವಮಾನ ಮಾಡುವ ಪ್ರಾಪಗ್ಯಾಂಡ ಚಿತ್ರ ಎಂದು ಟೀಕಿಸಿದ್ದಾರೆ.
ಇತ್ತೀಚೆಗಷ್ಟೇ 72 ಹೂರೇ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಲಾಗಿತ್ತು. ಆಗಲೂ ಟ್ವಿಟರ್ನಲ್ಲಿ ಸಾಕಷ್ಟು ಪರ ಮತ್ತು ವಿರೋಧ ಚರ್ಚೆಗಳು ಶುರುವಾಗಿದ್ದವು. ಭಾರತದ ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಪ್ರಯತ್ನಗಳ ನಡೆಯುತ್ತಿವೆ ಎಂದು ಟೀಕೆ ವ್ಯಕ್ತವಾಗಿತ್ತು.
ಚಿತ್ರದ ಟೀಸರ್ನಲ್ಲಿ ಒಸಾಮಾ ಬಿನ್ ಲಾಡೆನ್, ಅಜ್ಮಲ್ ಕಸಬ್ ಸೇರಿದಂತೆ ಇತರ ಚಿತ್ರಗಳನ್ನು ಮತ್ತು ಯಾಕೂಬ್ ಮೆಮನ್ನ ಮಿಶ್ರಿತ ಫೋಟೋವನ್ನು ತೋರಿಸಲಾಗಿದೆ. ಮೇಲ್ನೋಟಕ್ಕೆ ಟೀಸರ್ನಲ್ಲಿ ಕಾಣುವ ಅಂಶಗಳು ಖಂಡಿತವಾಗಿಯೂ, ಈ ಸಿನಿಮಾ ಕೂಡ ಮುಸ್ಲಿಮರು ಸುತ್ತ ಸುತ್ತದೆ ಎಂಬುದು ವೇದ್ಯವಾಗುತ್ತದೆ. ಉಗ್ರರಾದ ಮಸೂದ್ ಅಜರ್ ಮತ್ತು ಹಫೀಜ್ ಸಯೀದ್ ಅವರನ್ನು ಹೋಲುವರವನ್ನು ಹೈಲೆಟ್ ಮಾಡಲಾಗಿರುವುದನ್ನು ಕಾಣಬಹುದಾಗಿದೆ.
ಇದನ್ನೂ ಓದಿ: The Kerala Story : ದಿ ಕೇರಳ ಸ್ಟೋರಿ ಸಿನಿಮಾದ ಬಗ್ಗೆ ಕೆಂಡ ಕಾರಿದ ಹಿರಿಯ ನಟ ನಾಸಿರುದ್ದೀನ್ ಶಾ
72 ಹೂರೇ ಚಿತ್ರದ ಟ್ರೈಲರ್ ಅನ್ನು ಸಹ ನಿರ್ದೇಶಕರಾಗಿರುವ ಅಶೋಕ್ ಪಂಡಿತ್ ಅವರು ಟ್ವಿಟರ್ನಲ್ಲಿ ಷೇರ್ ಮಾಡಿದ್ದಾರೆ. ಇವರು ಕಾಶ್ಮೀರ ಪಂಡತ್ ಕೂಡ ಹೌದು. ನಮ್ಮ ಚಿತ್ರ 72 Hoorain ಸಿನಿಮಾದ ಮೊದಲ ನೋಟವನ್ನು ನಿಮಗೆ ಪ್ರಸ್ತುತಪಡಿಸುವ ಭರವಸೆಯಂತೆ. ನೀವು ಅದನ್ನು ಇಷ್ಟಪಡುತ್ತೀರಿ ಎಂದು ನನಗೆ ಖಾತ್ರಿಯಿದೆ. ಭಯೋತ್ಪಾದಕರ ಮಾರ್ಗದರ್ಶಕರು ಭರವಸೆ ನೀಡಿದಂತೆ 72 ಕನ್ಯೆಯರನ್ನು ಭೇಟಿಯಾಗುವ ಬದಲು ನೀವು ಕ್ರೂರವಾಗಿ ಸಾಯುತ್ತಿದ್ದರೆ? ನನ್ನ ಮುಂಬರುವ ಚಿತ್ರ 72 ಹೂರೇ ನ ಮೊದಲ ನೋಟವನ್ನು ಪ್ರಸ್ತುತಪಡಿಸುತ್ತಿದ್ದೇನೆ. ಚಿತ್ರವು 7 ಜುಲೈ 2023 ರಂದು ಬಿಡುಗಡೆಯಾಗಲಿದೆ ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
72 ಹೂರೇ ಚಿತ್ರದ ಟೀಸರ್
ಕರ್ನಾಟಕ
Lok Sabha Election 2024 : ಲೋಕಸಭೆಯಲ್ಲಿ ಕಾಂಗ್ರೆಸ್ ಮಣಿಸಲು ಬಿಜೆಪಿ-ಜೆಡಿಎಸ್ ಮೈತ್ರಿ ಪ್ರಸ್ತಾಪ!
BJP JDS alliance: ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಅನ್ನು ಮಣಿಸಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಒಂದನ್ನು ಸಿದ್ಧ ಮಾಡಿಕೊಂಡಿದೆ ಎನ್ನಲಾಗಿದ್ದು, ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು “ಕೈ”ಗೆ ಪೆಟ್ಟುಕೊಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ (Congress-JDS) ಮೈತ್ರಿ ಮಾಡಿಕೊಂಡು ಬಿಜೆಪಿ ವಿರುದ್ಧ ಸ್ಪರ್ಧೆ ಮಾಡಿದ್ದವು. ಆದರೆ, ಕೊನೆಯಲ್ಲಿ ಈ ಎರಡೂ ಪಕ್ಷಗಳು ತಲಾ 1 ಸ್ಥಾನವನ್ನು ಗೆದ್ದುಕೊಂಡರೆ ಉಳಿದ 25 + 1 ಸ್ಥಾನವನ್ನು ಬಿಜೆಪಿ ಮತ್ತು ಬೆಂಬಲಿತ ಅಭ್ಯರ್ಥಿಗೆ ಜಯ ಒಲಿದಿತ್ತು. ಆದರೆ, ಈ ಬಾರಿ ಈ ಚಿತ್ರಣವೇ ಉಲ್ಟಾ ಆಗುವ ಲಕ್ಷಣಗಳು ಕಾಣುತ್ತಿದ್ದು, 2024ರ ಲೋಕಸಭಾ ಚುನಾವಣೆಗೆ (Lok Sabha Election 2024) ಕಾಂಗ್ರೆಸ್ ಅನ್ನು ಮಣಿಸಲು ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಲೆಕ್ಕಾಚಾರಗಳೂ ಈ ಪಕ್ಷಗಳಲ್ಲಿ ನಡೆಯುತ್ತಿವೆ ಎಂಬ ಗುಸು ಗುಸು ಪ್ರಾರಂಭವಾಗಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. 135 ಸ್ಥಾನಗಳನ್ನು ಗೆದ್ದು ಬೀಗಿದೆ. ಅಲ್ಲದೆ, ಈಗಾಗಲೇ ಘೋಷಿಸಿದಂತೆ 5 ಗ್ಯಾರಂಟಿಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಈಗಾಗಲೇ ಆದೇಶವನ್ನೂ ಹೊರಡಿಸಿದೆ. ಜತೆಗೆ ಮುಂದಿನ ಲೋಕಸಭೆ ಚುನಾವಣೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮುಂದಡಿ ಇಡುತ್ತಿದೆ. ಪ್ರತಿಯೊಂದು ಹೆಜ್ಜೆಯನ್ನೂ ಈ ನಿಟ್ಟಿನಲ್ಲಿ ಇಡಲಾಗುತ್ತಿದೆ. ಹೀಗಾಗಿ ಮುಂದಿನ ವರ್ಷ ಬರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನವನ್ನು ಗೆಲ್ಲುವ ಟಾರ್ಗೆಟ್ ಅನ್ನು ಕೈ ಪಕ್ಷ ಇಟ್ಟುಕೊಂಡಿದೆ.
ಎದುರೇಟು ಕೊಡಲು ಮಾಸ್ಟರ್ ಪ್ಲ್ಯಾನ್?
ಕಾಂಗ್ರೆಸ್ನ ಈ ಟಾರ್ಗೆಟ್ಗೆ ಎದುರೇಟು ಕೊಡಲು ಬಿಜೆಪಿ, ಜೆಡಿಎಸ್ ಪಕ್ಷಗಳ ನಡುವೆ ಮಾತುಕತೆ ನಡೆದಿದೆ. ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಎರಡಂಕಿ ದಾಟದಂತೆ ನೋಡಿಕೊಳ್ಳಲು ಮಾಸ್ಟರ್ ಪ್ಲ್ಯಾನ್ ಅನ್ನೇ ಹೆಣೆಯಲಾಗಿದೆ. 2019ರಲ್ಲಿ ಒಂದು ಸ್ಥಾನವನ್ನು ಮಾತ್ರ ಗೆದ್ದಿರುವ ಕಾಂಗ್ರೆಸ್, ಈ ಬಾರಿ ಶತಾಯಗತಾಯ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ. ಅಲ್ಲದೆ, ತನ್ನ ಟಾರ್ಗೆಟ್ ಕ್ಷೇತ್ರಗಳಲ್ಲಿ ಆ ನಿಟ್ಟಿನಲ್ಲಿ ಕೆಲವು ಸೂಚನೆಗಳನ್ನೂ ನೀಡಿದೆ ಎನ್ನಲಾಗಿದೆ. ಇದನ್ನು ತಡೆಯಲು ಈಗ ಬಿಜೆಪಿ ಪ್ಲ್ಯಾನ್ ಮಾಡಿದೆ.
ಇದನ್ನೂ ಓದಿ: Free Electricity: ಹೊರಬಿತ್ತು ಗೃಹ ಜ್ಯೋತಿ ಮಾರ್ಗಸೂಚಿ; ಬಾಡಿಗೆದಾರನಿಗಿಲ್ಲ ಉಚಿತ ವಿದ್ಯುತ್?
ಏನಿದೆ ಲೆಕ್ಕಾಚಾರದ ಸೂತ್ರ?
ಹಳೇ ಮೈಸೂರು ಭಾಗದಲ್ಲಿ ಮಾತ್ರ ಜೆಡಿಎಸ್ಗೆ ಶಕ್ತಿ ಇದೆ. ಹೀಗಾಗಿ ಇಲ್ಲಿ ಕ್ಷೇತ್ರ ಹಂಚಿಕೆಯ ಸೂತ್ರವನ್ನು ಅನುಸರಿಸಲಾಗುತ್ತಿದೆ. ಅಂದರೆ, ಮಂಡ್ಯ, ಹಾಸನ, ತುಮಕೂರು ಮೂರು ಕ್ಷೇತ್ರ ಬಿಟ್ಟು ಕೊಟ್ಟರೆ ಮೈತ್ರಿಗೆ ಸಿದ್ಧ ಎಂದು ಜೆಡಿಎಸ್ ಹೇಳಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಮೂರು ಕ್ಷೇತ್ರಗಳಲ್ಲಿ ಬಿಜೆಪಿ ತನ್ನದೇ ಆದ ಮತ ಬ್ಯಾಂಕ್ ಅನ್ನು ಹೊಂದಿದೆ. ಹೀಗಾಗಿ ಹೈಕಮಾಂಡ್ ಮಟ್ಟದಲ್ಲಿ ಇದಕ್ಕೆ ಸಮ್ಮತಿ ಸಿಕ್ಕರೆ ಕಾಂಗ್ರೆಸ್ಗೆ ಮೈತ್ರಿ ಪಕ್ಷಗಳನ್ನು ಎದುರಿಸುವ ಸವಾಲು ತಲೆದೋರಲಿದೆ.
-
ಸುವಚನ18 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ23 hours ago
Odisha Train Accident: ಅಪಘಾತ ನಡೆದು 51 ಗಂಟೆಯಲ್ಲೇ ಹಳಿ ಸಿದ್ಧ, ರೈಲು ಸಂಚಾರ; 36 ತಾಸು ಸ್ಥಳದಲ್ಲೇ ಇದ್ದ ಸಚಿವ
-
ಕರ್ನಾಟಕ24 hours ago
Ullal News: ಆಪ್ತನ ಸಹೋದರನ ಅಂತಿಮಯಾತ್ರೆಗೆ ಹೆಗಲುಕೊಟ್ಟ ಸ್ಪೀಕರ್ ಯು.ಟಿ. ಖಾದರ್
-
ಕರ್ನಾಟಕ16 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ23 hours ago
Shivamogga News: ಶಿಕಾರಿಪುರದಲ್ಲಿ ರಾಷ್ಟ್ರಕೂಟರ ಕಾಲದ ಪ್ರಾಚ್ಯಾವಶೇಷಗಳು ಪತ್ತೆ
-
ಕರ್ನಾಟಕ13 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ದೇಶ12 hours ago
Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು
-
ದೇಶ15 hours ago
world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್ ತಿಳಿಯಿರಿ