ಪ್ರಮುಖ ಸುದ್ದಿ
Actor Mandeep Roy : ಹಿರಿಯ ನಟ ಮನ್ದೀಪ್ ರಾಯ್ ನಿಧನ
ಕನ್ನಡ ಸಿನಿಮಾ ರಂಗದ ಹಿರಿಯ ನಟ ಮನ್ದೀಪ್ ರಾಯ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಬೆಂಗಳೂರು: ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ಮನ್ದೀಪ್ ರಾಯ್ (73) ನಿಧನರಾಗಿದ್ದಾರೆ. ಬೆಂಗಳೂರಿನ ಕಾವಲ್ ಬೈರಸಂದ್ರದಲ್ಲಿರುವ ನಿವಾಸದಲ್ಲಿ ಶನಿವಾರ ಮಧ್ಯರಾತ್ರಿ 1.45 ಕ್ಕೆ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಭಾನುವಾರ ಮಧ್ಯಾಹ್ನ 11 ಘಂಟೆಗೆ ಹೆಬ್ಬಾಳ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನರವೇರಲಿದೆ. ಹಿರಿಯ ನಟ ಮನ್ದೀಪ್ ರಾಯ್ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಪುತ್ರಿ ಅಕ್ಷತಾ ತಿಳಿಸಿದ್ದಾರೆ.
ಮಿಂಚಿನ ಓಟ, ದೇವರ ಆಟ, ಬಾಡದ ಹೂವು, ಪುಷ್ಪಕ ವಿಮಾನ, ಅಪೂರ್ವ ಸಂಸಾರ, ಆಪ್ತರಕ್ಷಕ, ರಾಜಕುಮಾರ್ ಸೇರಿದಂತೆ 500ಕ್ಕೂ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಡಿಸೆಂಬರ್ 5ರಂದು ಅವರಿಗೆ ಹೃದಯಾಘಾತವಾಗಿತ್ತು. ಆಗ ಶೇಷಾದ್ರಿಪುರಂನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕರ್ನಾಟಕ
Elephant trapped : ಮೂರು ತಿಂಗಳಿನಿಂದ ಸತಾಯಿಸುತ್ತಿರುವ 10 ವರ್ಷದ ಗಂಡಾನೆ ಕೊನೆಗೂ ಹನಿ ಟ್ರ್ಯಾಪ್ಗೆ ಬಿತ್ತು!
ತೀರ್ಥಹಳ್ಳಿ ತಾಲೂಕಿನ ಹಲವು ಕಡೆ ಬೆಳೆ ಹಾನಿ ಮಾಡುತ್ತಾ, ರಾಜಾರೋಷವಾಗಿ ಓಡಾಡುತ್ತಾ ಆತಂಕ ಹುಟ್ಟಿಸಿದ್ದ ಗಂಡಾನೆಯನ್ನು ಕೊನೆಗೂ ಅರಣ್ಯ ಇಲಾಖೆ ಹನಿ ಟ್ರ್ಯಾಪ್ (Elephant trapped) ಬಳಸಿ ಹಿಡಿದಿದ್ದಾರೆ.
ತೀರ್ಥಹಳ್ಳಿ: ಪಟ್ಟಣದ ಕುರುವಳ್ಳಿ ರಾಮೇಶ್ವರ ದೇವಸ್ಥಾನದ ಬಳಿ ಡಿಸೆಂಬರ್ 31ರ ಮುಂಜಾನೆ ಕಾಣಿಸಿಕೊಂಡು ಕಳೆದ ಮೂರು ತಿಂಗಳಿನಿಂದ ಸತಾಯಿಸುತ್ತಿದ್ದ 10 ವರ್ಷ ಪ್ರಾಯದ ಗಂಡು ಕಾಡಾನೆಯನ್ನು ಅರಣ್ಯ ಇಲಾಖೆ ಕೊನೆಗೂ ಸೆರೆ (Elephant trapped) ಹಿಡಿದಿದೆ.
ಹಾರೋಗೊಳಿಗೆ, ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಗೆರೆ, ಅಮ್ತಿ, ಮಳೂರು, ಬಳಗಟ್ಟೆ, ಕೆರೆಕೊಪ್ಪ ಸುತ್ತಮುತ್ತಲಿನ ಸುಮಾರು 320 ಹೆಕ್ಟೇರ್ ಕಿರು ಅರಣ್ಯ ಪ್ರದೇಶದಲ್ಲಿ ಆನೆ ಮೂರು ತಿಂಗಳಿನಿಂದ ಬೀಡುಬಿಟ್ಟಿತ್ತು.
ಸುತ್ತಲಿನ ರೈತರ ತೋಟಗಳ ಬೆಳೆ ಹಾನಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆನೆ ಹಿಡಿಯುವಂತೆ ಅಗ್ರಹಿಸಿದ್ದರು. ಇಲ್ಲಿಯವರೆಗೆ ಈ ಆನೆ ಯಾವುದೇ ಜೀವ ಹಾನಿ ಮಾಡಿರಲಿಲ್ಲವಾದರೂ ಬೆಳೆ ಹಾನಿ ಮಾಡಿತ್ತು. ವಿಶೇಷ ಎಂದರೆ ಈ ಆನೆ ಹೆಚ್ಚಾಗಿ ಜನನಿಬಿಡ ಪ್ರದೇಶದಲ್ಲಿಯೇ ಹಾಜರು ಹಾಕುತ್ತಿತ್ತು.
ಹಾಗಾಗಿ ಹಿಡಿಯುವುದು ಅನಿವಾರ್ಯ ಆಗಿತ್ತು.
ಈ ಹಿನ್ನೆಲೆಯಲ್ಲಿ ಮಾರ್ಚ್ 24ರಂದು ಆನೆ ಹಿಡಿಯುವ ಕಾರ್ಯಾಚರಣೆ ಆರಂಭಗೊಂಡಿತ್ತು. ಆನೆ ಹಿಡಿಯಲು ಸೆಣಬು, ಚೈನ್, ಅರಿವಳಿಕೆ ಮದ್ದು, ಕ್ರೇನ್, ಸಾಕಾನೆ, ಮಚಾನ್ ಮುಂತಾದ ಅಗತ್ಯತೆಗಳನ್ನು ಸಿದ್ಧಪಡಿಸಿದ್ದರು. ಆನೆ ಹೆಜ್ಜೆ ಗುರುತು ಇರುವ ಪ್ರದೇಶದ ಯಾವುದು ಎಂದು ಗುರುತಿಸಲು ಸಿಬ್ಬಂದಿ ಮೊದಲು ಕೂಂಬಿಂಗ್ ಮಾಡಿಕೊಂಡಿದ್ದರು. ನಂತರ ಸಾಕಾನೆಗಳ ಸಹಾಯದಿಂದ ಆನೆಗೆ ಡಾಟ್ (ಶೂಟ್ ಮೂಲಕ ಅರಿವಳಿಕೆ ನೀಡುವುದು) ಮಾಡುವ ಪ್ರಯತ್ನ ನಡೆಸಿದ್ದರು.
ಆದರೆ ಈ ಗಂಡಾನೆ ವೇಗವಾಗಿ ನಾಪತ್ತೆಯಾಗುತ್ತಿದ್ದ ಕಾರಣ ತಕ್ಷಣಕ್ಕೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಗುರುವಾರ ಸಂಜೆ ಸುಮಾರು 6.30ರಿಂದ 7 ಗಂಟೆ ಸುಮಾರಿಗೆ ಆನೆಗೆ ಮೊದಲ ಡಾಟ್ ನೀಡಲಾಗಿತ್ತು. ಕೆಲವು ನಿಮಿಷಗಳ ನಂತರ ಮತ್ತೊಂದು ಬೂಸ್ಟರ್ ಡಾಟ್ ನೀಡಿ ಆನೆಯ ಕಾಲುಗಳನ್ನು ಕಟ್ಟಲಾಗಿತ್ತು. ಶುಕ್ರವಾರ ಬೆಳಿಗ್ಗೆ ಕ್ರೇನ್ ಸಹಾಯದಿಂದ ಆನೆಯನ್ನು ಲಾರಿಗೆ ಹತ್ತಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪಶು ವೈದ್ಯರಾದ ಚಾಮರಾಜನಗರದ ಡಾ. ಮುಜೀಬ್ ರೆಹಮಾನ್, ಬಂಡೀಪುರದ ಡಾ. ವಸೀಮ್, ಶಿವಮೊಗ್ಗದ ಡಾ. ವಿನಯ್, ಮೃಗಾಲಯದ ವೈದ್ಯ ಡಾ. ಮುರುಳಿ, ಶಾರ್ಪ್ ಶೂಟರ್ ಡಾ. ಅಕ್ರಮ್ ಕಾಡಾನೆಯನ್ನು ಸೆರೆ ಹಿಡಿಯಲು ವೈದ್ಯಕೀಯ ತಂಡವಾಗಿ ಕಾರ್ಯ ನಿರ್ವಹಿಸಿದ್ದರು.
ಸಕ್ರೇಬೈಲು ಆನೆ ಬಿಡಾರದ 4 ಆನೆಗಳಾದ ಭಾನುಮತಿ, ಸಾಗರ್, ಬಾಲಣ್ಣ, ಬಹದ್ದೂರ್, ನಾಲ್ವರು ಮಾವುತರು, ಎಂಟು ಮಂದಿ ಕಾವಾಡಿಗಳು, ತೀರ್ಥಹಳ್ಳಿ, ಮೇಗರವಳ್ಳಿ, ಮಂಡಗದ್ದೆ ವಲಯಾರಣ್ಯದ ಸಿಬ್ಬಂದಿ, ಎಸಿಎಫ್ ಪ್ರಕಾಶ್ ಹಾಗೂ ವನ್ಯಜೀವಿ ವಿಭಾಗದ ಸಹಕಾರದಲ್ಲಿ ಆನೆಯನ್ನು ಸೆರೆಹಿಡಿಯಲಾಗಿದೆ ಎಂದು ಡಿಎಫ್ಒ ಶಿವಶಂಕರ್ ತಿಳಿಸಿದ್ದಾರೆ.
ಸಾಕು ಹೆಣ್ಣಾನೆ ಭಾನುಮತಿ ಬಳಸಿ ಕಾಡಲ್ಲಿರುವ ಆನೆಯನ್ನು ಸೆಳೆಯುವ ತಂತ್ರವನ್ನು ಅರಣ್ಯ ಇಲಾಖೆ ಸಿಬ್ಬಂದಿ ಪ್ರಯೋಗ ಮಾಡಿದ್ದಾರೆ. ಹನಿ ಟ್ರ್ಯಾಪ್ಗಾಗಿ ಹೆಣ್ಣಾನೆಯನ್ನು ಕಾಡಾನೆ ಓಡಾಡುವ ಸ್ಥಳಗಳಲ್ಲಿ ಕಟ್ಟಲಾಗುತ್ತದೆ. ವಾಸನೆ ಗ್ರಹಿಸಿ ಸುತ್ತಲ ಪ್ರದೇಶಲ್ಲಿ ಹೆಣ್ಣಾನೆ ಇರುವುದನ್ನು ಗಂಡಾನೆಗಳು ಗ್ರಹಿಸುತ್ತವೆ.
ಇದೇ ರೀತಿ ಮಧ್ಯ ಕಾಡಿನಿಂದ ಡಾಟ್ಗೆ ಅನುಕೂಲವಾಗುವ ಕಡೆಗೆ ಹೆಣ್ಣಾನೆಯನ್ನು ಓಡಾಡಿಸಿ ಒಂದು ಪ್ರದೇಶದಲ್ಲಿ ಕಟ್ಟುತ್ತಾರೆ. ಆನೆ ಬರುವ ಸಾಧ್ಯತೆ ಇದ್ದರೆ ವೈದ್ಯರ ತಂಡ ಮಚಾನ್ ನಿರ್ಮಿಸಿ ರಾತ್ರಿ ಕಾವಲು ಕಾಯುತ್ತಾರೆ. ಕಾಡಾನೆ ಕಂಡು ಬಂದ ತಕ್ಷಣ ಅರವಳಿಕೆ ನೀಡಿ ಸೆರೆ ಹಿಡಿಯಲಾಗುತ್ತದೆ. ಈಗ ಇಲ್ಲಿ ಸೆರೆ ಹಿಡಿದ ಕಾಡಾನೆಯನ್ನು ನಾಗರಹೊಳೆ ಅಭಯಾರಣ್ಯದಲ್ಲಿ ಬಿಡಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.
ಇದನ್ನೂ ಓದಿ : Elephant calf rescued : ತಾಯಿಯಿಂದ ಬೇರ್ಪಟ್ಟು ಡ್ಯಾಂ ಬಳಿ ಬಂದಿದ್ದ ಮರಿಯಾನೆ, ಮತ್ತೆ ಹಿಂಡಿಗೆ ಸೇರಿಸಿದ ಜನ
ಕರ್ನಾಟಕ
Karnataka Election 2023: ಚುನಾವಣೆ ಹಿನ್ನೆಲೆ ಹಣದ ಹೊಳೆ, ದಾಖಲೆ ಇಲ್ಲದ 6 ಕೋಟಿ ರೂ., 17 ಕೆಜಿ ಚಿನ್ನ, ಬೆಳ್ಳಿ ವಶ
Karnataka Election 2023: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಅಧಿಕಾರಿಗಳು ನಿತ್ಯ ಕೋಟ್ಯಂತರ ರೂಪಾಯಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಮಾರ್ಚ್ 31ರಂದು ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೋಟ್ಯಂತರ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ.
ಚಿಕ್ಕಮಗಳೂರು: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ (Karnataka Election 2023) ಮುಹೂರ್ತ ನಿಗದಿಯಾಗುತ್ತಲೇ ರಾಜ್ಯಾದ್ಯಂತ ಹಣದ ಹೊಳೆಯೇ ಹರಿಯುತ್ತಿದೆ. ಚುನಾವಣೆ ಪ್ರಚಾರಕ್ಕಾಗಿ ಅಭ್ಯರ್ಥಿಗಳು ಕೋಟಿ ಕೋಟಿ ರೂಪಾಯಿಯನ್ನು ಸಾಗಣೆ ಮಾಡುತ್ತಿದ್ದಾರೆ. ಆದರೂ, ಅಧಿಕಾರಿಗಳ ಹದ್ದಿನ ಕಣ್ಣಿನಿಂದ ಕೋಟ್ಯಂತರ ರೂಪಾಯಿಯನ್ನು ಸಾಗಣೆ ಮಾಡುವುದು ಕಷ್ಟವಾಗುತ್ತಿದೆ. ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಕೋಟಿ ಕೋಟಿ ರೂಪಾಯಿಯನ್ನು ಜಪ್ತಿ ಮಾಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಖಲೆ ಇಲ್ಲದ 6.44 ಕೋಟಿ ರೂಪಾಯಿ ಹಾಗೂ 17 ಕೆಜಿ ಚಿನ್ನ ಮತ್ತು ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿಯಲ್ಲಿ ಹಣ ಹಾಗೂ ಚಿನ್ನ ಜಪ್ತಿ ಮಾಡಲಾಗಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಹಾಕಿರುವ ಚೆಕ್ಪೋಸ್ಟ್ನಲ್ಲಿ ಅಧಿಕಾರಿಗಳು ಟಾಟಾ ಏಸ್ ವಾಹನವನ್ನು ತಪಾಸಣೆ ಮಾಡಿದ್ದಾರೆ. ಇದೇ ವೇಳೆ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ, ಚಿನ್ನ ಹಾಗೂ ಬೆಳ್ಳಿ ದೊರೆತಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಬೆಂಗಳೂರಿನಲ್ಲಿ 30 ಲಕ್ಷ ರೂ. ಪತ್ತೆ
ಬೆಂಗಳೂರು: ನಗರದ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲೆ ಇಲ್ಲದ 30 ಲಕ್ಷ ರೂಪಾಯಿ ಪತ್ತೆಯಾಗಿದೆ. ಲಾಲ್ ಬಾಗ್ ದಕ್ಷಿಣ ಗೇಟ್ ಬಳಿ ಅಕ್ರಮವಾಗಿ ಹಣ ಸಾಗಣೆ ಮಾಡುತ್ತಿದ್ದಾಗ ಪೊಲೀಸರು ಇಬ್ಬರನ್ನು ಬಂಧಿಸಿ, ಹಣ ಜಪ್ತಿ ಮಾಡಿದ್ದಾರೆ. ಬಂಧಿತರನ್ನು ಗುಜರ್ ಹಾಗೂ ರತನ್ ಗುಪ್ತಾ ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗದಲ್ಲಿ 1.39 ಕೋಟಿ ರೂ. ವಶಕ್ಕೆ
ಶಿವಮೊಗ್ಗ: ಜಿಲ್ಲೆಯ ಹರಕೆರೆ ಚೆಕ್ ಪೋಸ್ಟ್ನಲ್ಲಿ 1.39 ಕೋಟಿ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ. ವಾಹನ ತಪಾಸಣೆ ನಡೆಸುತ್ತಿರುವ ವೇಳೆ ನಗದು ಪತ್ತೆಯಾಗಿದೆ. ಯಾವುದೇ ದಾಖಲೆಯಿಲ್ಲದೆ ಬೊಲೆರೋ ವಾಹನದಲ್ಲಿ ಹಣ ಸಾಗಿಸಲಾಗುತ್ತಿತ್ತು. ಹಾಗಾಗಿ, ಪೊಲೀಸರು ಹಣ ಮತ್ತು ಚಾಲಕ ರವಿ ಮುಡಬೂಳ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಕಲಬುರಗಿಯಲ್ಲಿ 1 ಕೋಟಿ ರೂಪಾಯಿ ಜಪ್ತಿ
ಕಲಬುರಗಿ: ತಾಲೂಕಿನ ಅಫಜಲಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪರತಾಬಾದ್ ಚೆಕ್ಪೋಸ್ಟ್ ಬಳಿ ದಾಖಲೆ ಇಲ್ಲದೆ ಸಾಗಾಟ ಮಾಡಲಾಗುತ್ತಿದ್ದ 1 ಕೋಟಿ ರೂಪಾಯಿ ನಗದು ಹಣವನ್ನು ಜಪ್ತಿ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರದ ನಿವಾಸಿ ರವಿ ಮುಡಬೂಳ ಎಂಬುವವರು ಯಾವುದೇ ದಾಖಲೆ ಇಲ್ಲದೆ ಕಾರಿನಲ್ಲಿ ಹಣ ಕೊಂಡ್ಯೊಯುತ್ತಿದ್ದರು. ಸದ್ಯ ಒಂದು ಕೋಟಿ ರೂಪಾಯಿ ಜತೆಗೆ ರವಿ ಅವರನ್ನೂ ಚುನಾವಣಾಧಿಕಾರಿಗಳು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಇಷ್ಟು ಮೊತ್ತದ ಹಣವನ್ನು ಎಲ್ಲಿಂದ, ಎಲ್ಲಿಗೆ ಸಾಗಾಟ ಮಾಡಲಾಗುತ್ತಿದೆ. ಯಾವ ಉದ್ದೇಶಕ್ಕಾಗಿ ಸಾಗಿಸಲಾಗುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಪರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಕ್ರಿಕೆಟ್
IPL 2023 : ಚಾಂಪಿಯನ್ ಗುಜರಾತ್ಗೆ ಮೊದಲ ಪಂದ್ಯದಲ್ಲಿ 5 ವಿಕೆಟ್ ಜಯ, ಸಿಎಸ್ಕೆ ನಿರಾಸೆ
ಗುಜರಾತ್ ಟೈಟನ್ಸ್ ತಂಡ ಈ ಬಾರಿಯೂ ಸಂಘಟಿತ ಪ್ರಯತ್ನದ ಮೂಲಕ ಗೆಲ್ಲುವ ಮಾದರಿಯನ್ನು ಪ್ರದರ್ಶಿಸಿತು.
ಅಹಮದಾಬಾದ್: ಶುಭ್ಮನ್ ಗಿಲ್ (63 ರನ್) ಅರ್ಧ ಶತಕ ಹಾಗೂ ಬೌಲರ್ಗಳ ಸಂಘಟಿತ ಬೌಲಿಂಗ್ ದಾಳಿಯ ನೆರವು ಪಡೆದ ಗುಜರಾತ್ ಟೈಟನ್ಸ್ ತಂಡ ಐಪಿಎಲ್ 2023ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್ ವಿಜಯ ಸಾಧಿಸಿತು. ಈ ಮೂಲಕ ಹಾಲಿ ಚಾಂಪಿಯನ್ ಗುಜರಾತ್ ಬಳಗ ಶುಭಾರಂಭ ಮಾಡಿದರೆ, ಧೋನಿ ನೇತೃತ್ವದ ಸಿಎಸ್ಕೆ ಆರಂಭಿಕ ಆಘಾತ ಎದುರಾಯಿತು. ಅದೇ ರೀತಿ ಸ್ಫೋಟಕ ಅರ್ಧ ಶತಕ ಬಾರಿಸಿದ ಋತುರಾಜ್ ಗಾಯಕ್ವಾಡ್ (92 ರನ್, 50 ಎಸೆತ, 4 ಫೋರ್, 9 ಸಿಕ್ಸರ್) ಅವರ ಪರಿಶ್ರಮ ವ್ಯರ್ಥಗೊಂಡಿತು.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 178 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡ 19.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 182 ರನ್ ಬಾರಿಸಿ ಜಯ ಸಾಧಿಸಿತು.
ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಗುಜರಾತ್ ಟೈಟನ್ಸ್ ತಂಡ 37 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ವೃದ್ಧಿಮಾನ್ ಸಾಹ 25 ರನ್ ಬಾರಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಸಾಯಿ ಸುದರ್ಶನ್ 22 ರನ್ ಬಾರಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 8 ರನ್ಗೆ ಔಟಾಗುವ ಮೂಲಕ ತಂಡಕ್ಕೆ ಹಿನ್ನಡೆ ಉಂಟಾಯಿತು. ಆದರೆ, ಕೊನೇ ಹಂತದಲ್ಲಿ ವಿಜಯ್ ಶಂಕರ್ (27), ರಾಹುಲ್ ತೆವತಿಯಾ (15) ಹಾಗೂ ರಶೀದ್ ಖಾನ್ (10) ತಂಡವನ್ನು ಗೆಲ್ಲಿಸಿದರು.
ಅದಕ್ಕಿಂತ ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಬ್ಯಾಟರ್ ಡೆವೋನ್ ಕಾನ್ವೆ 1 ರನ್ಗೆ ವಿಕೆಟ್ ಒಪ್ಪಿಸುವ ಮೂಲಕ ಹಿನ್ನಡೆ ಉಂಟು ಮಾಡಿದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಮೊಯೀನ್ ಅಲಿ ಸ್ಫೋಟಕ ಬ್ಯಾಟಿಂಗ್ ಮಾಡಿದರೂ 23 ರನ್ಗಳಿಗೆ ಔಟಾದರು. ಹೀಗಾಗಿ ಸಿಎಸ್ಕೆ ತಂಡಕ್ಕೆ ಮತ್ತೆ ಹಿನ್ನಡೆ ಉಂಟಾಯಿತು.
ಗಾಯಕ್ವಾಡ್ ಸ್ಫೋಟಕ ಬ್ಯಾಟಿಂಗ್
ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಬೆನ್ಸ್ಟೋಕ್ಸ್ 7 ರನ್ಗೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಆದರೆ, ಮತ್ತೊಂದು ಬದಿಯಲ್ಲಿ ಅಬ್ಬರಿಸಿದ ಗಾಯಕ್ವಾಡ್ ನಿಧಾನವಾಗಿ ಇನಿಂಗ್ಸ್ ಕಟ್ಟಿದರು. 23 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಅವರು ನಂತರವೂ ಬಿಡುಬೀಸಿನ ಬ್ಯಾಟಿಂಗ್ ನಡೆಸಿದರು. ಆದರೆ, ಅಲ್ಜಾರಿ ಜೋಸೆಫ್ ಎಸೆದ ಚಾಣಾಕ್ಷ ಬೌಲಿಂಗ್ಗೆ ಅವರು ಶುಭ್ಮನ್ ಗಿಲ್ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.
ಗಾಯಕ್ವಾಡ್ ಹೊರತುಪಡಿಸಿ ಚೆನ್ನೈ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಅಂಬಾಟಿ ರಾಯುಡು 12 ರನ್ಗೆ ಔಟಾದರೆ, ಶಿವಂ ದುಬೆ 19 ರನ್ ಕೊಡುಗೆ ಕೊಟ್ಟರು. ಮಹೇಂದ್ರ ಸಿಂಗ್ ಧೋನಿ 7 ಎಸೆತಗಳಿಗೆ 14 ರನ್ ಬಾರಿಸಿದರು.
ಅದ್ಧೂರಿ ಉದ್ಘಾಟನಾ ಕಾರ್ಯಕ್ರಮ
ಕೋವಿಡ್ ನಂತರ ಮೊದಲ ಬಾರಿಗೆ ಅತ್ಯಂತ ವೈಭವದಿಂದ ನಡೆದ ಉದ್ಘಾಟನ ಸಮಾರಂಭದಲ್ಲಿ ನ್ಯಾಷನಲ್ ಕ್ರಶ್ ಖ್ಯಾತಿಯ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ(Rashmika Mandanna) ಮತ್ತು ಮಿಲ್ಕಿ ಬ್ಯೂಟಿ ಖ್ಯಾತಿಯ ತಮನ್ನಾ ಭಾಟಿಯ(Tamannaah Bhatia) ನೃತ್ಯದ ಮೂಲಕ ಎಲ್ಲರನ್ನು ರಂಜಿಸಿದರೆ, ಅರಿಜಿತ್ ಸಿಂಗ್(arijit singh) ಅವರ ಅದ್ಭುತ ಕಂಠಕ್ಕೆ ದಾಖಲೆಯ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ತಲೆದೂಗಿದರು. ಇದೇ ವೇಳೆ ನಡೆಸಿದ ಲೇಸರ್ ಶೋ ಅಭಿಮಾನಿಗಳನ್ನು ಮಂತ್ರಮುಗ್ದರನ್ನಾಗಿಸಿತು. ಆಸ್ಕರ್ ಪ್ರಶಸ್ತಿ ಗೆದ್ದ ಆರ್ಆರ್ಆರ್ ಸಿನೆಮಾದ ನಾಟು ನಾಟು ಹಾಡಿಗೆ ರಶ್ಮಿಕಾ ಕುಣಿದು ಕುಪ್ಪಳಿಸಿದರು.
ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಟೀಮ್ ಇಂಡಿಯಾದ ಮಾಜಿ ಆಟಗಾರರಾದ ರವಿಶಾಸ್ತ್ರಿ, ಸುನೀಲ್ ಗವಾಸ್ಕರ್, ವಿದೇಶಿ ಮಾಜಿ ಆಟಗಾರರಾದ ಆರಾನ್ ಫಿಂಚ್, ಕೆವಿನ್ ಪೀಟರ್ಸನ್ ಸೇರಿ ಅನೇಕ ಕ್ರಿಕೆಟಿಗರು ಹಾಗೂ ಮತ್ತಿತರ ಬಿಸಿಸಿಐ ಅಧಿಕಾರಿಗಳು ಉಪಸ್ಥಿತರಿದ್ದರು.
ಕರ್ನಾಟಕ
Communal Harmony : ಉರೂಸ್ ಸಂಭ್ರಮದಲ್ಲಿ ಹಿಂದೂ ಶ್ರೀಗಳನ್ನು ಗೌರವಿಸಿ ಭಾವೈಕ್ಯತೆ ಮೆರೆದ ಮುಸ್ಲಿಮರು
ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮ ಸೌಹಾರ್ದ (Communal harmony) ಪರಂಪರೆಯ ಕೊಂಡಿಯಾಗಿ ಸಮಾಜಕ್ಕೆ ದೊಡ್ಡ ಸಂದೇಶವನ್ನು ನೀಡಿತು. ಉರೂಸ್ ಸಂದರ್ಭದಲ್ಲಿ ಹಿಂದು ಸ್ವಾಮೀಜಿಗಳನ್ನು ಇಲ್ಲಿ ಗೌರವಿಸಲಾಯಿತು, ಆಶೀರ್ವಾದ ಪಡೆಯಲಾಯಿತು.
ವಿಜಯನಗರ: ಧರ್ಮ ಧರ್ಮಗಳ ನಡುವೆ ಸಂಘರ್ಷ, ಒಂದು ಧರ್ಮದ ಜಾತ್ರೆಗೆ ಇನ್ನೊಬ್ಬರು ಹೋಗಬಾರದು, ವ್ಯಾಪಾರ ಮಾಡಬಾರದು ಎನ್ನುವ ಧರ್ಮ ದಂಗಲ್ಗಳ ನಡುವೆ ಹೂವಿನಹಡಗಲಿ ಸೌಹಾರ್ದದ (Communal Harmony) ಸಂಭ್ರಮಕ್ಕೆ ಸಾಕ್ಷಿಯಾಯಿತು.
ಹೂವಿನಹಡಗಲಿ ತಾಲೂಕು ಹೊಳಲು ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಭಾಂದವರ ಭಾವೈಕ್ಯ ಸಂಗಮವಾದ ಗುರು ಹಜರತ್ ಮೆಹಬೂಬ ಸುಭಾನಿಗಳವರ ಉರೂಸು ಕಾರ್ಯಕ್ರಮ ವೈಭವದಿಂದ ಜರುಗಿತು. ಸೌಹಾರ್ದತೆಗೆ ಸಾಕ್ಷಿಯಾಗಿ ಗಮನ ಸೆಳೆದಿರುವ ಉರೂಸು ಆಚರಣೆಗೆ ಮುಸ್ಲಿಂ ಬಾಂದವರು ಗ್ರಾಮದ ವಿರಕ್ತ ಮಠದ ಶ್ರೀ ಚನ್ನಬಸವ ಶ್ರೀಗಳನ್ನು ಶ್ರದ್ಧಾ ಭಕ್ತಿಯಿಂದ ದರ್ಗಾಕ್ಕೆ ಬರಮಾಡಿಕೊಂಡು ದರ್ಶನಾಶೀರ್ವಾದ ಪಡೆದರಲ್ಲದೆ ಶ್ರೀಗಳ ಜೊತೆ ಹಿಂದೂ ಮುಖಂಡರನ್ನು ಗೌರವಿಸಿ ಸನ್ಮಾನಿಸಿದರು.
ಈವೇಳೆ ಹಿರಿಯರಾದ ಮುಜಾವರ್ ಇಮಾಮ್ ಸಾಬ್ ಮಾತನಾಡಿ, ʻನಮ್ಮ ಗ್ರಾಮದ ನೂತನ ಮಠಕ್ಕೆ ಚನ್ನಬಸವ ಶ್ರೀಗಳ ಆಗಮನ ಹೊಸ ಚೈತನ್ಯವನ್ನುಂಟು ಮಾಡಿದೆ. ಕೆಲ ವರ್ಷದಿಂದ ಸ್ವಲ್ಪ ಮರೀಚಿಕೆಯಾಗಿದ್ದ ಭಾವೈಕ್ಯತೆಗೆ ಮತ್ತೆ ಹೊಸ ಚಿಗುರು ಬಂದಂತಾಗಿದೆ. ಹಿಂದೂ ಮತ್ತು ಮುಸ್ಲಿಂ ಬಾಂದವರಿಗೆ ಶ್ರೀಗಳು ಕೊಂಡಿಯಾಗಿ ಸಮಾಜದ ಎಲ್ಲಾ ಮತ ಬಾಂಧವರಿಗೆ ಸದಾ ನೆರಳಾಗಿರಲಿʼ ಎಂದು ಆಶಯ ವ್ಯಕ್ತಪಡಿಸಿದರು.
ಉರೂಸು ಅಂಗವಾಗಿ ಹರಕೆ ಹೊತ್ತ ಭಕ್ತರು ದೀಡ ನಮಸ್ಕಾರ ಹಾಕಿದರು. ಸಂತಾನ ಫಲ ಬೇಡಿದ ಭಕ್ತರು ತಮಗೆ ಸಂತಾನವಾದ ಮಗುವಿನ ತೂಕದ ಸಕ್ಕರೆಯನ್ನು ಸ್ವಾಮಿಗೆ ಅರ್ಪಿಸಿ ಕೃಪೆಯನ್ನು ಪಡೆದರು.
ರೈತ ಬಾಂಧವರು ತಮ್ಮ ಎತ್ತುಗಳನ್ನು ಶೃಂಗರಿಸಿ ಚಕ್ಕಡಿ ಹೂಡಿ ದರ್ಗಾಕ್ಕೆ ಬರುವ ಭಕ್ತರಿಗೆ ಬೆಲ್ಲದ ಸಿಹಿ ನೀರು ಹಂಚುವುದರ ಮೂಲಕ ಸೇವೆ ಸಲ್ಲಿಸಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ಹೊಳಲು ಹಾಗೂ ಸುತ್ತ ಮುತ್ತಗ್ರಾಮದ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮಾಜ ಬಾಂಧವರು ಇದ್ದರು.
ಇದನ್ನೂ ಓದಿ :Communal harmony : ಹಿಂದೂ ಮಹಿಳೆಯ ಶವಕ್ಕೆ ಹೆಗಲು ಕೊಟ್ಟ ಮುಸ್ಲಿಂ ಯುವಕರು, ಅನಾಥೆಗೆ ಗೌರವದ ಅಂತ್ಯ ಸಂಸ್ಕಾರ
-
ದೇಶ20 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ21 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಗ್ಯಾಜೆಟ್ಸ್10 hours ago
Aadhaar Update: ಆನ್ಲೈನ್ನಲ್ಲಿ ಆಧಾರ್ ಅಪ್ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
-
ಅಂಕಣ21 hours ago
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
-
ಅಂಕಣ21 hours ago
Brand story : ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?
-
ಕರ್ನಾಟಕ11 hours ago
B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ
-
ದೇಶ12 hours ago
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್ಗೆ 25 ಸಾವಿರ ರೂ. ದಂಡ!
-
ಕರ್ನಾಟಕ15 hours ago
SSLC Exam 2023: ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ವಾಟ್ಸಾಪ್ನಲ್ಲಿ ಹರಿದಾಡಿದ ಕನ್ನಡ ಪೇಪರ್