D code column JDS in its crucial fighting this election D ಕೋಡ್‌ ಅಂಕಣ: ಜೆಡಿಎಸ್‌ಗೆ 2023ರ ವಿಧಾನಸಭೆ ಚುನಾವಣೆ 'Final Match' ಏಕೆಂದರೆ... - Vistara News

ಅಂಕಣ

D ಕೋಡ್‌ ಅಂಕಣ: ಜೆಡಿಎಸ್‌ಗೆ 2023ರ ವಿಧಾನಸಭೆ ಚುನಾವಣೆ ‘Final Match’ ಏಕೆಂದರೆ…

ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿರುವ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಅವರೆದುರು ಬೆಟ್ಟದಷ್ಟು ಸವಾಲುಗಳಿವೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿದ್ದೇವೆ. ಚುನಾವಣೆಯ ಕಾವು 2018ರಲ್ಲಿ ಇದ್ದಷ್ಟು ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಕಂಡುಬರುತ್ತಿಲ್ಲ. ಆಗಾಗ ಅಬ್ಬರಿಸಿದ್ದು, ಮತ್ತೆ ತಣ್ಣಗಾಗಿದ್ದು ಬಿಟ್ಟರೆ ನಿರಂತರ ಕಾವು ಇಲ್ಲ. ಬಹುಶಃ ಅಭ್ಯರ್ಥಿಗಳ ಘೋಷಣೆ ಇನ್ನೇನು ಕೆಲವೇ ದಿನಗಳಲ್ಲಿ ಆಗಲಿದ್ದು, ಆ ನಂತರ ಕಾವು ಏರಬಹುದು. ಆದರೆ ಪ್ರಾದೇಶಿಕ ಪಕ್ಷ ಜೆಡಿಎಸ್ ಮಾತ್ರ ಎರಡೂ ಪಕ್ಷಗಳಿಗಿಂತ ಮೊದಲೇ ʼಕಣʼವನ್ನು ಸಿದ್ಧ ಮಾಡಿಕೊಳ್ಳುತ್ತಿದೆ.

ಇಡೀ ಜೆಡಿಎಸ್ ಪಕ್ಷ ಎನ್ನುವುದಕ್ಕಿಂತಲೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಇಡೀ ಪಕ್ಷವನ್ನು ಹೊತ್ತೊಯ್ಯುತ್ತಿದ್ದಾರೆ ಎಂದರೆ ತಪ್ಪಿಲ್ಲ. ಈ ಬಾರಿ 123 ಸ್ಥಾನ ಗಳಿಸಿ ಸರಳ ಬಹುಮತದೊಂದಿಗೆ ಸುಸ್ಥಿರ ಸರ್ಕಾರ ರಚನೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಪಂಚರತ್ನ ಎಂಬ ಯೋಜನೆಯೊಂದಿಗೆ ರಥಯಾತ್ರೆ ನಡೆಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಕೃಷಿ, ಯುವಜನ ಮತ್ತು ಮಹಿಳೆ ಹಾಗೂ ವಸತಿ ಎಂಬ ಐದು ಅಂಶಗಳನ್ನು ಜಾರಿ ಮಾಡಿ ರಾಜ್ಯವನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ ಎಂದು ಹೇಳುತ್ತಿದ್ದಾರೆ. ಮೈಸೂರಿನಲ್ಲಿ ನಡೆದ ಬೃಹತ್‌ ಸಮಾರೋಪ ಕಾರ್ಯಕ್ರಮದಲ್ಲಿ ಸ್ವತಃ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಭಾಗವಹಿಸಿ ಮಾತನಾಡಿದ್ದಾರೆ. ಈ ಬಾರಿ ಜೆಡಿಎಸ್‌ ಪಕ್ಷವನ್ನು ಜನರು ಅಧಿಕಾರಕ್ಕೆ ತರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಂಚರತ್ನ ಘೋಷಣೆಯನ್ನೇ ಪ್ರಣಾಳಿಕೆ ಎಂದು ಹೇಳಬಹುದು. ಈ ರೀತಿ, ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಮೊದಲಿನಿಂದಲೇ ಯಾತ್ರೆ ನಡೆಸುತ್ತಿರುವ ಕುಮಾರಸ್ವಾಮಿ ಅವರಿಗೆ ಕ್ಷೇತ್ರಗಳಲ್ಲಿ ಭರ್ಜರಿ ಸ್ವಾಗತಗಳು ಸಿಗುತ್ತಿವೆ ಎಂದು ಆ ಪಕ್ಷದ ನಾಯಕರು ಹೇಳುತ್ತಿದ್ದಾರೆ. ತರಕಾರಿ, ಹಣ್ಣು, ಹೂ ಸೇರಿ ವಿವಿಧ ಬಗೆಯ ಬೃಹತ್ ಹಾರಗಳನ್ನು ಕ್ರೇನ್ ಮೂಲಕ ಕುಮಾರಸ್ವಾಮಿಯವರಿಗೆ ಗೌರವ ಸೂಚಿಸಿವುದೊಂದು ಟ್ರೆಂಡ್ ಆಗಿದೆ, ದಾಖಲೆಯನ್ನೂ ಬರೆದಿದೆ. ಆದರೆ ಜೆಡಿಎಸ್‌ಗೆ ಮುಂದಿನ ದಿನ ಅಷ್ಟು ಸಲೀಸಾಗಿದೆ ಎಂದೆನಿಸುವುದಿಲ್ಲ.

ಇತಿಹಾಸವನ್ನೊಮ್ಮೆ ನೋಡಿದರೆ, ಈಗಿನ ಜನತಾದಳ(ಜಾತ್ಯತೀತ) ಎನ್ನುವುದು 1999ರಲ್ಲಿ ಜನದಾದಳದಿಂದ ಒಡೆದು ಎರಡು ಭಾಗವಾದ ಪಕ್ಷಗಳಲ್ಲೊಂದು. ಮತ್ತೊಂದು ಪಕ್ಷ ಶರದ್ ಯಾದವ್ ನೇತೃತ್ವದ ಜನತಾದಳ (ಸಂಯುಕ್ತ) ಅಥವಾ ಜೆಡಿಯು. 1975ರಿಂದ 1977ರವರೆಗೆ ದೇಶದ ಮೇಲೆ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದು ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ. ಪ್ರಮುಖ ರಾಜಕೀಯ ನಾಯಕರನ್ನು ಸರ್ಕಾರ ಬಂಧಿಸಿದ್ದರಿಂದ ಭೂಗತವಾಗಿ ಹೋರಾಟವನ್ನು ಕೈಗೊಳ್ಳಲು ಸಾಧ್ಯವಾಗಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಹಾಗೂ ಭಾರತೀಯ ಜನಸಂಘದ ಕಾರ್ಯರ್ತರಿಂದ. ಈ ಹೋರಾಟದ ನಂತರ 1977ರಲ್ಲಿ ನಡೆದ ಚುನಾವಣೆಯಲ್ಲಿ ಕೇಂದ್ರದಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಿಯಾಗುವ ಮೂಲಕ ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಕಾಂಗ್ರೆಸೇತರ ಸರ್ಕಾರ ರಚನೆಯಾಯಿತು. ಅಂದರೆ ಜನತಾ ಪರಿವಾರ ಎಂದು ಇಡೀ ದೇಶದಲ್ಲಿ ಛಿದ್ರಛಿದ್ರವಾಗಿ ಹೋಯಿತೋ ಅದರ ಆ ವಿಚಾರಧಾರೆಯ ಮೂಲಾಧಾರ ಎಂದರೆ ಕಾಂಗ್ರೆಸ್ ವಿರೋಧ.

1978ರಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜನತಾ ಪಕ್ಷ ಹಾಗೂ ಭಾರತೀಯ ಜನಸಂಘ ಮೈತ್ರಿ ಮಾಡಿಕೊಂಡು ಜನತಾ ಪಕ್ಷದ ಚಿಹ್ನೆಯಲ್ಲೇ ಸೆಣಸಿದವು. ಜನತಾ ಪಕ್ಷ ಶೇ.37.95 ಮತದೊಂದಿಗೆ 59 ಶಾಸಕರನ್ನು ಹೊಂದಿತು. ಕಾಂಗ್ರೆಸ್ (ಐ) ಪಕ್ಷವು ಶೇ.44.25 ಮತಗಳೊಂದಿಗೆ 149 ಸ್ಥಾನ ಗಳಿಸಿ ಗದ್ದುಗೆ ಏರಿತು. ದ್ವಿಸದಸ್ಯತ್ವ ಕುರಿತ ಸಂಘರ್ಷದ ನಂತರ ಜನಸಂಘವು ವಿಸರ್ಜನೆಯಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) 1980ರಲ್ಲಿ ರಚನೆಯಾದ್ಧರಿಂದ 1983ರ ಚುನಾವಣೆಯನ್ನು ಬಿಜೆಪಿ ಪ್ರತ್ಯೇಕವಾಗಿ ಸೆಣೆಸಿತು. ಶೇ.7.93 ಮತ ಪಡೆದು 18 ಸೀಟುಗಳನ್ನು ಬಿಜೆಪಿ ಜಯಿಸಿತು. ಶೇ.33.07 ಮತದೊಂದಿಗೆ ಜನತಾ ಪಕ್ಷ 95, ಶೇ. 40.42 ಮತದೊಂದಿಗೆ ಕಾಂಗ್ರೆಸ್ 82 ಸ್ಥಾನ ಗಳಿಸಿತು. ಲಿಂಗಾಯತ ಹಾಗೂ ಒಕ್ಕಲಿಗ ನಾಯಕರ ನಡುವಿನ ಗುದ್ದಾಟದಲ್ಲಿ ಬ್ರಾಹ್ಮಣ ಸಮುದಾಯದ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಲು ಸರ್ವಸಮ್ಮತಿಯ ನಾಯಕರಾದರು. ತಮ್ಮ 95 ಸ್ಥಾನದ ಜತೆಗೆ ಬಿಜೆಪಿ(18), ಕಮ್ಯುನಿಸ್ಟ್(ಒಟ್ಟು 6) ಹಾಗೂ 16 ಪಕ್ಷೇತರರ ಬಹಿರಂಗ ಬೆಂಬಲವನ್ನು ಸಾಬೀತುಪಡಿಸಿ ಸರ್ಕಾರ ನಡೆಸಿದರು. ಆ ವೇಳೆಗಾಗಲೆ ಕಾಂಗ್ರೆಸ್‌ನಲ್ಲಿ ಎಸ್. ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲರಿಗೆ ಅವಮಾನ ಮಾಡಿದ್ದರ ಕಾರಣಕ್ಕೆ ವೀರಶೈವ ಲಿಂಗಾಯತರು ಜನತಾ ಪಕ್ಷದ ಕಡೆಗೆ ವಾಲಿದ್ದರು. ಅಲ್ಲಿಗೆ ಬಿಜೆಪಿಯು ಜನತಾ ಸರ್ಕಾರಕ್ಕೆ ಬಹಿರಂಗ ಬೆಂಬಲ ನೀಡಿ ಈ ಮತಗಳನ್ನು ಪಡೆಯಲು ಸಿದ್ಧವಾಯಿತು.

ಜನತಾ ಪಕ್ಷ ಒಡೆದು ಜನತಾದಳವಾದಾಗ 1994ರ ಕರ್ನಾಟಕ ಚುನಾವಣೆಯಲ್ಲಿ ಮತ ಪ್ರಮಾಣ ಶೇ.33.54ಕ್ಕೆ ಕುಸಿಯಿತು. ಮುಂದಿನ 1999ರ ಚನಾವಣೆಯಲ್ಲಿ ಜೆಡಿಎಸ್ ಆದಾಗ ಮತ ಪ್ರಮಾಣ ಕೇವಲ 10.42ಕ್ಕೆ ಕುಸಿಯಿತು. ಒಂದು ಕಡೆ ಜನತಾ ಮತಗಳು ಕುಗ್ಗುತ್ತಿದ್ದರೆ ಇನ್ನೊಂದೆಡೆ ಬಿಜೆಪಿ ಶೇ.16.99(1994), ಶೇ.20.69(1999), ಶೇ.28.33(2004), ಶೇ.33.86(2008)… ಹೀಗೆ ಏರುತ್ತಲೇ ಸಾಗಿತು. 2018ರ ಚುನಾವಣೆಯಲ್ಲಿ ಬಿಜೆಪಿ ಶೇ.36.22 ಮತ ಪಡೆದರೆ ಜೆಡಿಎಸ್ ಪಡೆದಿದ್ದು ಕೇವಲ ಶೇ.18.36. ಸ್ವಾತಂತ್ರ್ಯಾ ನಂತರ ಒಟ್ಟು ಮತದಲ್ಲಿ ಶೇ.50ರ ಆಸುಪಾಸು ಪಡೆಯುತ್ತಿದ್ದ ಕಾಂಗ್ರೆಸ್ 1983ರಲ್ಲಿ ಶೇ.40ಕ್ಕೆ ಇಳಿಯಿತು. ಜನತಾ ಪಕ್ಷದ, ನಂತರ ಜನತಾ ದಳದ ಪ್ರಾಬಲ್ಯ ಹೆಚ್ಚುತ್ತ ಹೋದಂತೆಲ್ಲ ಕಾಂಗ್ರೆಸ್ ಕುಸಿಯುತ್ತ ಸಾಗಿತು. ಆದರೆ 2004ರ ನಂತರದಲ್ಲಿ ಕಾಂಗ್ರೆಸ್ ಮತಪ್ರಮಾಣ ಶೇ. 35ರ ಆಸುಪಾಸಿಗೆ ಬಂದು ನಿಂತಿದೆ. ಕುಸಿತವನ್ನು ತಡೆಗಟ್ಟಿಕೊಂಡು ತನ್ನ ಮತಗಳನ್ನು ಹಿಡಿದಿಟ್ಟುಕೊಂಡಿದೆ. ಕಡಿಮೆ ಆಗುತ್ತಿರುವುದು ಜೆಡಿಎಸ್‌ನದ್ದು ಮಾತ್ರ.

ಈ ಹಿಂದೆ ಜನತಾ ಪಕ್ಷಕ್ಕೆ ಬಹಿರಂಗ ಬೆಂಬಲ ನೀಡಿದ ಕಾರಣಕ್ಕೆ ರಾಮಕೃಷ್ಣ ಹೆಗಡೆ ಮೂಲಕ ವೀರಶೈವ ಲಿಂಗಾಯತ ಮತಗಳು ಬಿಜೆಪಿಗೆ ಆಗಮಿಸಿದ್ದು, ಮತ್ತೆ ಬೇರೆ ಕಡೆ ಚದುರಿಲ್ಲ. ಜನತಾ ಮತಗಳು ಕುಸಿಯುತ್ತಾ ಹೋದಂತೆ ಬಿಜೆಪಿ ಬೆಳೆಯುತ್ತಾ ಸಾಗುತ್ತಿದೆ. ಅಂದರೆ ಜನತಾ ಮತಗಳನ್ನು ಬಿಜೆಪಿ ಪಡೆಯುತ್ತಿದೆ. ಈ ಹಿಂದೆಯೇ ತಿಳಿಸಿದಂತೆ ಜನತಾ ಮತಗಳು ಎಂದರೆ ಅದು ಕಾಂಗ್ರೆಸ್ ವಿರೋಧಿ ಮತಗಳು. ಕಾಂಗ್ರೆಸ್ ಪಕ್ಷವನ್ನು ವಿರೋಧಿಸಲು ಈ ಮತಗಳಿಗೆ ಒಂದು ಸದೃಢ ಪಕ್ಷ ಬೇಕು. ಈ ಹಿಂದೆ ಅದು ಜನತಾ ಪರಿವಾರ ಆಗಿತ್ತು. ಆದರೆ ಈಗ ಆ ಸ್ಥಾನವನ್ನು ಬಿಜೆಪಿ ತುಂಬುತ್ತಿದೆ.

ಸೈದ್ಧಾಂತಿಕ ಖಾಲಿತನ
ಜನತಾ ಪರಿವಾರವು ದುರ್ಬಲ ಆಗುತ್ತಾ ಹೋದಂತೆ ಕರ್ನಾಟಕದಲ್ಲಿ ಬಿಜೆಪಿ ಬೆಳೆಯುತ್ತಾ ಹೋಯಿತು, ಜನತಾ ಪರಿವಾರ ಒಟ್ಟಾಗಿದ್ದರೆ ಬಿಜೆಪಿ ಬೆಳೆಯುತ್ತಲೇ ಇರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ʼವಿಸ್ತಾರ ನ್ಯೂಸ್ʼ ಪ್ರಧಾನ ಸಂಪಾದಕರಾದ ʼಹರಿಪ್ರಕಾಶ್ ಕೋಣೆಮನೆʼ ಅವರೊಂದಿಗಿನ ಸಂದರ್ಶನದಲ್ಲೂ ತಿಳಿಸಿದ್ದರು. ಜನತಾ ಪರಿವಾರದಿಂದ ಸತತವಾಗಿ ಒಡೆಯುತ್ತಾ ಜೆಡಿಎಸ್ ಆಯಿತು. ಜೆಡಿಎಸ್‌ಗೆ ಅಲ್ಲಿವರೆಗೂ ಒಂದು ಸೈದ್ಧಾಂತಿಕ ಹಿನ್ನೆಲೆ ಇತ್ತು. ಆ ಸೈದ್ಧಾಂತಿಕ ಹಿನ್ನೆಲೆಯ ಮೂರ್ತ ರೂಪವಾಗಿ ಎಚ್.ಡಿ. ದೇವೇಗೌಡರು ಸಕ್ರಿಯರಾಗಿದ್ದರು.
ದೇವೇಗೌಡರು ಎಂದರೆ ಮೊದಲಿಗೆ ರೈತರ ಕುರಿತು ಕಾಳಜಿ ಹೊಂದಿರುವವರು ಎಂಬ ಭಾವನೆ. ಎಲ್ಲ ಸಮುದಾಯಗಳನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ, ಜಾತ್ಯತೀತ ನಿಲುವನ್ನು ಪ್ರತಿಪಾದಿಸುವ ಪಕ್ಷ ಎಂಬ ಬ್ರ್ಯಾಂಡ್ ಇದೆ. ಆದರೆ ಅಚಾನಕ್ಕಾಗಿ ರಾಜಕೀಯಕ್ಕೆ ಆಗಮಿಸಿದ ಎಚ್.ಡಿ. ಕುಮಾರಸ್ವಾಮಿಯವರು ತಮ್ಮ ಹಿಂದೆ ಯಾವುದೇ ಸೈದ್ಧಾಂತಿಕ ಹಿನ್ನೆಲೆಯನ್ನು ಹೊತ್ತು ತರಲಿಲ್ಲ. ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಿದಾಗ ಅವರನ್ನು ಕಾಂಗ್ರೆಸ್ ಟೀಕಿಸಿತು. ಜಾತ್ಯತೀತ ತತ್ವಕ್ಕೆ ತಿಲಾಂಜಲಿ ಇಟ್ಟರು ಎಂದು ಆಪಾದಿಸಿತು. ಈ ಸಂದರ್ಭದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ, ʼಈ ಜಾತ್ಯತೀತತೆ ಎಂದರೆ ಏನು? ಇನ್ನೂ ನನಗೆ ಅರ್ಥ ಗೊತ್ತಾಗಿಲ್ಲʼ ಎಂದು ಹೇಳಿದ್ದರು. ನಾಡಿನ ಜನರಿಗೆ ಒಳ್ಳೆಯದಾಗುವ ಎಲ್ಲ ಕೆಲಸ ಮಾಡುವುದೇ ತಮ್ಮ ಸಿದ್ಧಾಂತ ಎಂಬಂತೆ ಮುನ್ನಡೆದರು. ಅದು ಆ ಸಮಯದಲ್ಲಿ ಪ್ರಸಿದ್ಧಿಯೂ ಆಗಿತ್ತು. ಇನ್ನು, ತಂದೆಯ ಗರಡಿಯಲ್ಲಿಯೇ ಬೆಳೆದು ಅನೇಕ ಬಾರಿ ಶಾಸಕರಾಗಿ, ಸಚಿವರಾದರೂ ಎಚ್.ಡಿ. ರೇವಣ್ಣ ಅವರಿಗೆ ಈ ಸಿದ್ಧಾಂತಗಳು, ವೈಚಾರಿಕತೆ ಎಲ್ಲವೂ ಆಗಿಬರದ ವಿಚಾರಗಳು. ತನ್ನ ಕ್ಷೇತ್ರದ, ಜಿಲ್ಲೆಯ ಜನರಿಗೆ ʼವಾಸ್ತು ಪ್ರಕಾರʼ ಏನೆಲ್ಲ ಕೆಲಸ ಆಗಬೇಕು ಎನ್ನುವುದೊಂದೇ ಅವರ ಆದ್ಯತೆ.

ಇದೀಗ ದೇವೇಗೌಡರ ಕುಟುಂಬದ ಮೂರನೇ ತಲೆಮಾರು ರಾಜಕಾರಣದಲ್ಲಿದೆ. ಅತ್ತ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಆಗಲಿ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಆಗಲಿ, ಈ ಕಡೆ ನಿಖಿಲ್ ಕುಮಾರಸ್ವಾಮಿ ಆಗಲಿ ಇಲ್ಲಿವರೆಗೆ ಯಾವುದೇ ಸೈದ್ಧಾಂತಿಕ ನಿಲುವುಗಳನ್ನು ವ್ಯಕ್ತಪಡಿಸಿದಂತೆ ತೋರುತ್ತಿಲ್ಲ. ಇಬ್ಬರು ಸೊಸೆಯಂದಿರೂ ರಾಜಕಾರಣದಲ್ಲಿದ್ದಾರೆ, ಅವರಲ್ಲೂ ಇದೇ ಮುಂದುವರಿಕೆ ಆಗುತ್ತಿದೆ.

ರಾಜಕಾರಣದಲ್ಲಿ ಸಿದ್ಧಾಂತಗಳು ಏಕೆ ಎಂದು ಯಾರಾದರೂ ಪ್ರಶ್ನಿಸಬಹುದು. ಅದು ಅತ್ಯಾವಶ್ಯಕ. ಸಿದ್ಧಾಂತಗಳೇ ಒಂದು ಪಕ್ಷವನ್ನು ಮತ್ತೊಂದು ಪಕ್ಷದಿಂದ ಭಿನ್ನವಾಗಿಸುತ್ತವೆ. ಈ ಪಕ್ಷ ಅಧಿಕಾರಕ್ಕೆ ಬಂದರೆ ಹೀಗೆ ಮಾಡುತ್ತದೆ, ಹೀಗೆ ಮಾಡುವುದಿಲ್ಲ ಎಂಬ ಸೈದ್ಧಾಂತಿಕ ಸ್ಪಷ್ಟತೆ ಮತದಾರರಲ್ಲಿ ಮೂಡುವುದೇ ಸಿದ್ಧಾಂತದಿಂದ. ಉದಾಹರಣೆಗೆ, ಕರ್ನಾಟಕದಲ್ಲಿಯಾಗಲಿ ದೇಶದಲ್ಲೇ ಆಗಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ ಸರ್ಕಾರ ರಚನೆ ಆಗುತ್ತದೆ ಎಂದು ಯಾರೂ ಊಹಿಸಲೂ ಸಾಧ್ಯವಿಲ್ಲ. ಏಕೆಂದರೆ ಅವುಗಳ ಸೈದ್ಧಾಂತಿಕ ಹಿನ್ನೆಲೆಯ ಕಾರಣಕ್ಕೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಒಟ್ಟಾರೆ ಹಿಂದುಗಳಿಗೆ ಒಳ್ಳೆಯದಾಗುತ್ತದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾಮಾಜಿಕ ಕಲ್ಯಾಣ ಯೋಜನೆಗಳ ಜಾರಿಯಾಗುತ್ತದೆ ಎಂದು ಜನರಿಗೆ ಅನ್ನಿಸುವುದು ಅವುಗಳ ಸಿದ್ಧಾಂತದ ಕಾರಣಕ್ಕೆ.
ಯಾವುದೇ ಸಿದ್ಧಾಂತ ಇಲ್ಲ, ಜನರಿಗೆ ಒಳ್ಳೆಯದಾಗುವುದನ್ನು ಮಾಡುತ್ತೇವೆ ಎಂದರೆ ಅದು ನಂಬಿಕೆ ಮೂಡಿಸುವುದಿಲ್ಲ. ಇವರು ಅಧಿಕಾರಕ್ಕೆ ಬಂದರೆ ಅತ್ತ ಕಾಂಗ್ರೆಸ್ ಜತೆಗೂ ಸೇರಬಹುದು, ಇತ್ತ ಬಿಜೆಪಿ ಜತೆಗೂ ಸೇರಬಹುದು ಎಂಬ ಭಾವನೆ ಬರುತ್ತದೆ. ಈಗಾಗಲೆ ಜೆಡಿಎಸ್ ಕುರಿತು ಅಂತಹ ಭಾವನೆ ಇದೆ. ಎರಡು ಬಾರಿ ಕಾಂಗ್ರೆಸ್ ಜತೆ, ಒಮ್ಮೆ ಬಿಜೆಪಿ ಜತೆಗೆ ಸರ್ಕಾರ ರಚಿಸಿದೆ. ಜೆಡಿಎಸ್‌ನ ಮೂರನೆಯ ತಲೆಮಾರು ಸಹ ಯಾವುದೇ ಸಿದ್ಧಾಂತಗಳನ್ನು ಅನುಸರಿಸುವುದಾಗಲಿ, ತಮ್ಮದೇ ಸಿದ್ಧಾಂತವನ್ನು ಸೃಷ್ಟಿಸುವುದಾಗಲಿ ಮಾಡಿಲ್ಲ. ಸೈದ್ಧಾಂತಿಕವಾಗಿ ಪಕ್ಷವನ್ನು ಒಂದಷ್ಟು ಬೆಂಬಲಿಸುತ್ತಿದ್ದ ಬಸವರಾಜ ಹೊರಟ್ಟಿ, ವೈಎಸ್ವಿ ದತ್ತ, ರಮೇಶ್ ಬಾಬು ಅಂಥವರೆಲ್ಲ ಈಗ ಬಿಜೆಪಿ ಹಾಗೂ ಕಾಂಗ್ರೆಸ್ನಲ್ಲಿ ಹಂಚಿಹೋಗಿದ್ದಾರೆ. ಹೀಗಾಗಿ ಜೆಡಿಎಸ್‌ನಲ್ಲಿ ಈಗ ಸೈದ್ಧಾಂತಿಕ ಖಾಲಿತನ ಕಾಣುತ್ತಿದೆ, ಕಾಡುತ್ತಿದೆ.

ಜಾತಿ ಕೇಂದ್ರಿತ
ಸಾಮಾನ್ಯವಾಗಿ ಜೆಡಿಎಸ್ ಪಕ್ಷವನ್ನು ಕುರಿತು ಮಾತನಾಡುವಾಗ ಅದು ಕುಟುಂಬ ಆಧಾರಿತ ಪಕ್ಷ ಎನ್ನಲಾಗುತ್ತದೆ. ಒಂದು ಕುಟುಂಬಕ್ಕೆ ಸೀಮಿತವಾದ್ಧರಿಂದ ಪಕ್ಷವು ಇಡೀ ಕರ್ನಾಟಕದಲ್ಲಿ ಅಸ್ತಿತ್ವ ಹೊಂದಲು ಸಾಧ್ಯವಾಗಲಿಲ್ಲ ಎನ್ನಲಾಗುತ್ತದೆ. ಅಸಲಿಗೆ ದೇಶದ ಬಹಳಷ್ಟು ಪ್ರಾದೇಶಿಕ ಪಕ್ಷಗಳು ಕುಟುಂಬ ಕೇಂದ್ರಿತವೇ ಆಗಿವೆ. ಉದಾಹರಣೆಗೆ ತೆಲಂಗಾಣದ ಬಿಆಆರ್‌ಎಸ್‌, ಆಂದ್ರ ಪ್ರದೇಶದ ವೈಎಸ್ಆರ್ ಕಾಂಗ್ರೆಸ್, ಬಿಹಾರದ ಆರ್‌ಜೆಡಿ, ಡಿಎಂಕೆ, ಎನ್‌ಸಿಪಿ, ಸಮಾಜವಾದಿ ಪಕ್ಷ… ಹೀಗೆ ಅನೇಕ ಉದಾಹರಣೆಗಳಿವೆ. ಆದರೆ ಈ ಪಕ್ಷಗಳಲ್ಲಿ ಅನೇಕವು ರಾಜ್ಯವ್ಯಾಪಿ ಅಸ್ತಿತ್ವವನ್ನು ಹೊಂದಿವೆ. ಸ್ವಂತ ಬಲದ ಮೇಲೆ ಸರ್ಕಾರ ರಚಿಸಿವೆ. ಆದರೆ ಜೆಡಿಎಸ್‌ಗೆ ಏಕೆ ಅದು ಸಾಧ್ಯವಾಗುತ್ತಿಲ್ಲ? ಏಕೆಂದರೆ ಇದು ಕುಟುಂಬ ಆಧಾರಿತವಲ್ಲ, ಜಾತಿ ಆಧಾರಿತ ಪಕ್ಷವಾಗಿ ಬ್ರ್ಯಾಂಡ್‌ ಆಗಿದೆ.

ಕರ್ನಾಟಕ ದಕ್ಷಿಣದಲ್ಲಿ ಜೆಡಿಎಸ್ ಅಸ್ತಿತ್ವ ಹೊಂದಿದೆ, ಏಕೆಂದರೆ ಇಲ್ಲಿ ಒಕ್ಕಲಿಗ ಸಮುದಾಯ ಪ್ರಬಲವಾಗಿದೆ ಎನ್ನುವುದೇ ಬಹುದೊಡ್ಡ ಕಾರಣ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಉತ್ತರ ಕರ್ನಾಟಕದಲ್ಲೂ ಪ್ರಸಿದ್ಧರು. ಎಚ್.ಡಿ. ಕುಮಾರಸ್ವಾಮಿಯವರು ಉತ್ತರ ಕರ್ನಾಟಕದಲ್ಲಿ ಕಾರ್ಯಕ್ರಮ ಮಾಡಿದರೂ ಜನರು ಸೇರುತ್ತಾರೆ, ಆದರೆ ಅವು ಮತಗಳಾಗಿ ಪರಿವರ್ತನೆ ಆಗುತ್ತಿಲ್ಲ. ಏಕೆಂದರೆ ಜೆಡಿಎಸ್ ಎಂದರೆ ಒಕ್ಕಲಿಗರ ಪಕ್ಷ ಎಂದು ಬ್ರ್ಯಾಂಡ್ ಆಗಿಬಿಟ್ಟಿದೆ. ಒಕ್ಕಲಿಗರ ಪಕ್ಷ ಎಂಬ ಬ್ರ್ಯಾಂಡ್ ಜತೆಜತೆಗೇ ಲಿಂಗಾಯತ ವಿರೋಧಿ ಎಂಬ ಹಣೆಪಟ್ಟಿಯೂ, ಐತಿಹಾಸಿಕ ಕಾರಣಗಳಿಂದಾಗಿ ಬಂದುಬಿಟ್ಟಿದೆ.

ಒಕ್ಕಲಿಗರ ಜತೆಗೆ ಜೆಡಿಎಸ್ ಜತೆಗೆ ಇದ್ದ ಬಹುದೊಡ್ಡ ಶಕ್ತಿ ಎಂದರೆ ಮುಸ್ಲಿಂ ಸಮುದಾಯ. ದೇವೇಗೌಡರ ಕಾರಣಕ್ಕೆ ಜೆಡಿಎಸ್ ಜತೆಗಿದ್ದ ಮುಸ್ಲಿಂ ಮತಗಳನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಒಟ್ಟಾಗಿ ಹೊರತರುವಲ್ಲಿ 2018ರ ಚುನಾವಣೆಯಲ್ಲಿ ಯಶಸ್ವಿಯಾದವು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಟಿಪ್ಪು ಜಯಂತಿ ಘೋಷಣೆ ಮಾಡಿತು. ಇದರಿಂದಾಗಿ ಮುಸ್ಲಿಮರಿಗೆ ಕಾಂಗ್ರೆಸ್ ಹೆಚ್ಚು ಪ್ರಿಯವಾಯಿತು. ಟಿಪ್ಪು ಜಯಂತಿ ವಿರುದ್ಧ ಬಿಜೆಪಿ ನಡೆಸಿದ ಪ್ರಚಾರದ ಕಾರಣಕ್ಕೆ ಮುಸ್ಲಿಂ ಮತದಾರರಲ್ಲಿ ಅಭದ್ರತೆ ಉಂಟಾಯಿತು. ಜೆಡಿಎಸ್ ಕಡೆಗೆ ಒಲವಿದ್ದರೂ, ತನ್ನನ್ನು ಕಾಪಾಡಲು ಕಾಂಗ್ರೆಸ್‌ನಿಂದ, ಅದರಲ್ಲೂ ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ ಎಂಬ ಭಾವನೆ ಮೂಡಿ ಮುಸ್ಲಿಂ ಮತಗಳು 2018ರಲ್ಲಿ ಸಂಪೂರ್ಣವಾಗಿ ಕಾಂಗ್ರೆಸ್ ಕಡೆ ವಾಲಿದವು. ಇದು ಜೆಡಿಎಸ್ ಪಕ್ಷಕ್ಕೆ ಭಾರೀ ಹೊಡೆತ ನೀಡಿತು. ಹಾಸನ, ಮೈಸೂರಿನಂತಹ ಅನೇಕ ಕಡೆಗಳಲ್ಲಿ ಸಾಂಪ್ರದಾಯಿಕವಾಗಿ ಜೆಡಿಎಸ್‌ಗೆ ಬರುತ್ತಿದ್ದ ಮುಸ್ಲಿಂ ಮತಗಳು ಸಾರಾಸಗಟಾಗಿ ಕಾಂಗ್ರೆಸ್‌ಗೆ ಹೋಗಿದ್ದು ಜೆಡಿಎಸ್ ಜಂಘಾಬಲವನ್ನು ಕುಗ್ಗಿಸಿತು.

ಈಗಿನ ಚುನಾವಣೆಯಲ್ಲಿ ಮತ್ತೆ ಮುಸ್ಲಿಂ ಮತಗಳನ್ನು ಪಡೆಯಲು ರಾಜ್ಯ ಅಧ್ಯಕ್ಷರಾಗಿ ಸಿ.ಎಂ. ಇಬ್ರಾಹಿಂ ಅವರನ್ನು ನೇಮಿಸಲಾಗಿದೆ. ರಾಜ್ಯಸಭೆಯ ಮಾಜಿ ಸದಸ್ಯ, ಉತ್ತರ ಪ್ರದೇಶ ಮೂಲದ ಒಬೈದುಲ್ಲಾ ಖಾನ್ ಆಜ್ಮಿ ಅವರನ್ನು ಕೆಲ ದಿನದ ಹಿಂದಷ್ಟೆ ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರಿಸಿಕೊಳ್ಳಲಾಗಿದೆ. ಆದರೆ ಕಾಂಗ್ರೆಸ್‌ನಲ್ಲಿರುವಂತೆ ಜಮೀರ್ ಅಹ್ಮದ್ ಖಾನ್, ತನ್ವೀರ್ ಸೇಠ್, ಯು.ಟಿ. ಖಾದರ್ ಮುಂತಾದವರ ರೀತಿಯಲ್ಲಿ ಸ್ಥಳೀಯವಾಗಿ ಮುಸ್ಲಿಂ ಮತಗಳನ್ನು ಸೆಳೆಯಬಲ್ಲ ಪ್ರಬಲ ವ್ಯಕ್ತಿತ್ವಗಳು ಜೆಡಿಎಸ್‌ನಲ್ಲಿ ಇಲ್ಲ ಎನ್ನುವುದು ಬಹುದೊಡ್ಡ ಕೊರತೆ. ಈ ಕೊರತೆಯನ್ನು ಮೀರಿ ಹೇಗೆ ಕುಮಾರಸ್ವಾಮಿಯವರು ಮುಸ್ಲಿಂ ಮತ ಗಳಿಸುತ್ತಾರೆ ಎನ್ನುವುದು ಯಕ್ಷ ಪ್ರಶ್ನೆ.

ಅನುಕಂಪಕ್ಕೆ ಆಯಸ್ಸು ಕಡಿಮೆ
ಜೆಡಿಎಸ್ ಪಕ್ಷಕ್ಕೆ ಎಲ್ಲ ಬಾರಿಯೂ ಅರ್ಧಮರ್ಧ ಸೀಟುಗಳನ್ನು ನೀಡಿ ಮೈತ್ರಿ ಸರ್ಕಾರ ರಚನೆ ಆಗುವಂತೆ ಮಾಡಿದ್ದೀರಿ, ಈ ಬಾರಿ ಪೂರ್ಣ ಬಹುಮತ ನೀಡಿ ಎಂದು ಎಚ್.ಡಿ. ಕುಮಾರಸ್ವಾಮಿ ಕೇಳುತ್ತಿದ್ದಾರೆ. 2018ರ ಚುನಾವಣೆಯಲ್ಲಿ ಜೆಡಿಎಸ್ ಪಡೆದಿರುವುದು ಶೇ.18.36 ಮತ. ಕರ್ನಾಟಕದಲ್ಲಿ ಇಲ್ಲಿವರೆಗಿನ ಲೆಕ್ಕದ ಪ್ರಕಾರ ಸರಳ ಬಹುಮತದ 113 ಸ್ಥಾನ ಸಿಗಬೇಕೆಂದರೆ ಕನಿಷ್ಠ ಶೇ.35ಕ್ಕಿಂತ ಹೆಚ್ಚಿನ ಮತಗಳನ್ನು ಪಡೆಯಬೇಕು. ಅಂದರೆ ಜೆಡಿಎಸ್ ಬಹುತೇಕ ಶೇ.17ರಷ್ಟು ಹೆಚ್ಚು ಮತವನ್ನು ಅಂದರೆ ಕಳೆದ ಬಾರಿಗಿಂತ ದುಪ್ಪಟ್ಟು ಮತ ಪಡೆಯಬೇಕು. ಆದರೆ ಕರ್ನಾಟಕದಲ್ಲಿ ಇಲ್ಲಿವರೆಗಿನ ಇತಿಹಾಸದಲ್ಲಿ ಅಷ್ಟು ಪ್ರಮಾಣದ ಮತಗಳು ಯಾವುದೇ ಪಕ್ಷಕ್ಕೆ ಒಂದೇ ಚುನಾವಣೆಯಲ್ಲಿ ಏರಿಕೆ ಆಗಿಲ್ಲ. ಬಿಜೆಪಿಯು 1989ರಲ್ಲಿ ಶೇ.4.14 ಮತದಿಂದ 1994ರಲ್ಲಿ ಶೇ. 16.99ಕ್ಕೆ ಜಿಗಿಯಿತು. ಆನಂತರದಲ್ಲಿ ಶೇ. 20.69(1999), ಶೇ. 28.33(2004), ಶೇ. 33.86(2008) ಮತ ಗಳಿಸಿತು. 2013ರಲ್ಲಿ ಕೆಜೆಪಿ ಕಾರಣಕ್ಕೆ ಬಿಜೆಪಿ ಮತಗಳು ದಿಢೀರನೆ ಶೇ.19.89ಕ್ಕೆ ಕುಸಿದು 2018ರಲ್ಲಿ ಮತ್ತೆ ಶೇ.36.22ಕ್ಕೆ ಏರಿತು. ಅಂದರೆ 2013ರಲ್ಲಿ ಹಳೆಯ ಮತಗಳನ್ನು ಪಡೆದದ್ದು ಬಿಟ್ಟರೆ ಬಿಜೆಪಿ ಇಲ್ಲಿವರೆಗೆ ಅತಿ ದೊಡ್ಡ ಜಿಗಿತ ಕಂಡಿರುವುದು ಶೇ.8 (2004) ಮತಗಳು ಮಾತ್ರ. ಕಾಂಗ್ರೆಸ್‌ ಪಕ್ಷವು 2004ರಿಂದ 2018ರವರೆಗೆ ನಾಲ್ಕು ವರ್ಷ ಕ್ರಮವಾಗಿ ಶೇ.35.27, ಶೇ.34.76, ಶೇ.36.59 ಹಾಗೂ ಶೇ.38.04 ಮತ ಗಳಿಸುತ್ತಿದೆ. ಇಲ್ಲಿವರೆಗೆ ಕಾಂಗ್ರೆಸ್ ಕಂಡಿರುವುದು ಗರಿಷ್ಠ ಶೇ.2 ಮತ ಹೆಚ್ಚಳ ಮಾತ್ರ. ಅತ್ಯಂತ ವ್ಯವಸ್ಥಿತ ಸಂಘಟನೆ, ಸೈದ್ಧಾಂತಿಕ ಬಲ, ಹಣಬಲವನ್ನು ಹೊಂದಿರುವ ಎರಡೂ ಪಕ್ಷಗಳು ಒಂದಂಕಿಯ ಮತ ಹೆಚ್ಚಳಕ್ಕೆ ತಿಣುಕಾಡುತ್ತಿರುವಾಗ ಜೆಡಿಎಸ್ ಪಕ್ಷವು ದಿಢೀರನೆ ಶೇ.17 ಮತ ಗಳಿಕೆ ಮಾಡಬೇಕು ಎನ್ನುವುದು ಊಹಿಸಲೂ ಕಷ್ಟವಾದ ಫಲಿತಾಂಶ.

ದೇವೇಗೌಡರ ಕೊನೆಯ ಆಸೆ ಈಡೇರಿಸುತ್ತೇನೆ ಒಮ್ಮೆ ಪೂರ್ಣ ಬಹುಮತ ನೀಡಿ ಎನ್ನುವುದೂ ಸೇರಿ ಕುಮಾರಸ್ವಾಮಿ ಅವರು ಆಡುತ್ತಿರುವ ಅನುಕಂಪದ ಮಾತುಗಳು ಎಷ್ಟರ ಮಟ್ಟಿಗೆ ಜನರ ಮನವನ್ನು ತಟ್ಟುತ್ತವೆ ಕಾದುನೋಡಬೇಕು. ಅದರಲ್ಲೂ ಹಳೆ ಮೈಸೂರಿನಲ್ಲಿ ಈ ಬಾರಿ ಶತಾಯ ಗತಾಯ ಉತ್ತಮ ಸಾಧನೆ ಮಾಡಬೇಕು ಎಂದು ಮುಂದಾಗಿರುವ ಬಿಜೆಪಿ ಬಹಿರಂಗವಾಗಿ ಕಾಂಗ್ರೆಸ್ ವಿರುದ್ಧ ದಾಳಿ ನಡೆಸುತ್ತಿದೆ. ಇತ್ತೀಚೆಗೆ ಬೆಂಗಳೂರು ಮೈಸೂರು ಹೆದ್ದಾರಿ ಉದ್ಘಾಟನೆ ವೇಳೆಯೂ ಪ್ರಧಾನಿ ನರೇಂದ್ರ ಮೋದಿ ಕೇವಲ ಕಾಂಗ್ರೆಸ್ ವಿರುದ್ಧ ಮಾತ್ರ ವಾಗ್ದಾಳಿ ನಡೆಸಿದ್ದಾರೆಯೇ ವಿನಃ ಜೆಡಿಎಸ್ ವಿರುದ್ಧ ತುಟಿ ಬಿಚ್ಚಿಲ್ಲ. ಈಗಾಗಲೆ ಚರ್ಚಿಸಿದಂತೆ ಬಿಜೆಪಿಗೆ ಬೇಕಾಗಿರುವುದು ಕಾಂಗ್ರೆಸ್ ವಿರೋಧಿ ಮತಗಳು. ಕಾಂಗ್ರೆಸನ್ನು ಧೈರ್ಯವಾಗಿ ಎದುರು ಹಾಕಿಕೊಳ್ಳುತ್ತಾರೆ ಎಂಬ ನಂಬಿಕೆ ಜನರಲ್ಲಿ ಮೂಡಿದರೆ ಜೆಡಿಎಸ್ ಮತದಾರರು ನೇರವಾಗಿ ಬಿಜೆಪಿ ಕಡೆ ವಾಲುತ್ತಾರೆ ಎಂಬ ಸತ್ಯ ಬಿಜೆಪಿ ನಾಯಕರಿಗೆ ತಿಳಿದಿದೆ. ಇನ್ನು, ಈಗಾಗಲೆ ವೃದ್ಧಾಪ್ಯದಲ್ಲಿರುವ ದೇವೇಗೌಡರ ಹಾಗೂ ಮೇಲ್ನೋಟಕ್ಕೇ ಶಕ್ತಿಗುಂದಿದಂತೆ ಕಾಣುತ್ತಿರುವ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದಷ್ಟೂ ಆ ಪಕ್ಷದ ಮತದಾರರಿಗೆ, ಮುಖ್ಯವಾಗಿ ಒಕ್ಕಲಿಗರಿಗೆ ಬಿಜೆಪಿ ಕುರಿತು ಕ್ರೋಧ ಉಂಟಾಗುತ್ತದೆ, ಬಿಜೆಪಿ ಕುರಿತು ಮೃದು ಧೋರಣೆ ಹೊರಟುಹೋಗುತ್ತದೆ ಎಂಬ ಸತ್ಯವೂ ಬಿಜೆಪಿಗೆ ತಿಳಿದಿದೆ. ನೇರವಾಗಿ ಜೆಡಿಎಸ್ ಮತಗಳನ್ನೇ ಕಸಿಯಬೇಕು ಎಂದು ಕಾಂಗ್ರೆಸ್ ಮೇಲೆ ಬಿಜೆಪಿ ದಾಳಿ ನಡೆಸುತ್ತಿರುವಾಗ ಅನುಕಂಪದ ಮತಯಾಚನೆ ಕುಮಾರಸ್ವಾಮಿ ಅವರ ಸಹಾಯಕ್ಕೆ ಬರುತ್ತದೆಯೇ ಕಾದುನೋಡಬೇಕು.
ಈ ಚುನಾವಣೆ ಜೆಡಿಎಸ್ ಪಾಲಿನ ಫೈನಲ್ ಪಂದ್ಯ. ಈ ಪಂದ್ಯದಲ್ಲಿ 123 ಸ್ಥಾನ ಗಳಿಸಿ ಗೆಲ್ಲಬಹುದು ಅಥವಾ 2018ರ 37ಕ್ಕಿಂತಲೂ ಕಡಿಮೆ ಸಂಖ್ಯೆಗೆ ಇಳಿಯಬಹುದು. 123 ಗೆದ್ದರೆ ಜೆಡಿಎಸ್ ಪಕ್ಷದ ಹೊಸ ಅಧ್ಯಾಯ ಅದಾಗಿಯೇ ಆರಂಭವಾಗುತ್ತದೆ. ಈಗಿನದ್ದಕ್ಕಿಂತಲೂ ಕುಸಿದರೆ ಹೊಸ ಅಧ್ಯಾಯವನ್ನು ಮುಂದಿನ ಪೀಳಿಗೆ ತಾನಾಗಿಯೇ ಆರಂಭಿಸಬೇಕಾಗುತ್ತದೆ. ಇಡೀ ರಾಜ್ಯದ ಜನರನ್ನು ಒಳಗೊಳ್ಳುವಂತಹ ಗಟ್ಟಿ ಸೈದ್ಧಾಂತಿಕ ಅಡಿಪಾಯದೊಂದಿಗೆ ಪಕ್ಷವನ್ನು ಮತ್ತೆ ಕಟ್ಟಿ ಪಂದ್ಯದಲ್ಲೇ ಉಳಿಯುವಂತೆ ಮಾಡುವ ಸವಾಲು ಹೆಗಲೇರಲಿದೆ. ಏನು ಆಗಲಿದೆ ಎನ್ನುವುದು 2023ರ ವಿಧಾನಸಭೆ ಫಲಿತಾಂಶ ತಿಳಿಸಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ಮುಖವೇ ಇಲ್ಲದ ಆಕೆಗೆ ತನ್ನ ಹೆಸರೇ ಮರೆತು ಹೋಗಿತ್ತು!

ರಾಜಮಾರ್ಗ ಅಂಕಣ: ಮದುವೆಯ ನಂತರ ಆಕೆಗೆ ಇನ್ನೂ ಕೆಲವು ಐಡೆಂಟಿಟಿಗಳು ಸೇರಿದವು. ಇಂತವನ ಹೆಂಡತಿ, ಇಂತವನ ಅತ್ತಿಗೆ, ಇಂತವರ ಸೊಸೆ, ಇಂತವರ ತಾಯಿ, ಇಂತವರ ನಾದಿನಿ……. ಹೀಗೆ! ಅಲ್ಲಿಯೂ ಯಾರೂ ಆಕೆಯ ಹೆಸರು ಹಿಡಿದು ಕರೆಯಲಿಲ್ಲ. ಸಂಪ್ರದಾಯಸ್ಥರ ಮನೆ ಎಂಬ ನೆಪದಲ್ಲಿ ತಿಂಗಳ ಮೂರು ದಿನ ಹೊರಗೆ ಕುಳಿತುಕೊಳ್ಳುವುದು ತಪ್ಪಲಿಲ್ಲ.

VISTARANEWS.COM


on

ರಾಜಮಾರ್ಗ ಅಂಕಣ she 1
Koo

ಈಗಲೂ ಆಕೆಗೆ ಕಾಡುವ ಪ್ರಶ್ನೆ – ನಾನು ಯಾರು?

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಮನೆಯೊಳಗೆ ಆಕೆಯನ್ನು (she) ಎಲ್ಲರೂ ಅತ್ತಿಗೆ, ಮಾಮಿ, ಅಕ್ಕ ಎಂದೆಲ್ಲ ಕರೆಯುತ್ತಾರೆ. ಆಕೆಯ ಮಕ್ಕಳು (children) ಅಮ್ಮ (mother) ಎಂದು ಕರೆಯುತ್ತಾರೆ. ಮೊಮ್ಮಕ್ಕಳು ಅವರನ್ನು ಅಜ್ಜಿ ಎನ್ನುತ್ತಾರೆ. ಮೊಮ್ಮಕ್ಕಳ ಗೆಳೆಯರು ಮನೆಗೆ ಬಂದರೆ ಅವರೂ ಅಜ್ಜಿ ಎನ್ನುತ್ತಾರೆ. ಹೊರಗಿನವರು ಯಾರು ಬಂದರೂ ಆಕೆಯನ್ನು ಆಂಟಿ (Aunty) ಎಂದೇ ಕರೆಯುತ್ತಾರೆ. ಕೈ ಹಿಡಿದ ಗಂಡ (Husband) ಆಕೆಯನ್ನು ‘ಓ ಇವಳೇ’ ಎಂದು ಕರೆಯುತ್ತಾನೆ. ಮನೆಯ ಹೊರಗೆ ಬಂದರೆ ಅಲ್ಲಿ ಕೂಡ ಆಕೆಯು ಇಂತವನ ಹೆಂಡತಿ (wife) ಎಂದೇ ರಿಜಿಸ್ಟರ್ ಆಗಿದ್ದಾಳೆ. ಅವಳಿಗೆ ತನ್ನ ಸ್ವಂತ ಹೆಸರೇ ಮರೆತು ಹೋಗಿದೆ! ಅವಳಿಗೆ ಸ್ವಂತ ಐಡೆಂಟಿಟಿಯು (Identity) ಇಲ್ಲದೆ ಎಷ್ಟೋ ವರ್ಷಗಳೇ ಆಗಿ ಹೋಗಿವೆ.

ಆಕೆಯ ಬಾಲ್ಯವೂ ಹಾಗೇ ಇತ್ತು!

ಆಕೆ ಮೊದಲ ಬಾರಿಗೆ ಕಣ್ಣು ತೆರೆದು ಈ ಜಗತ್ತಿಗೆ ಬಂದಾಗ ಕೇಳಿದ ಮೊದಲ ಉದ್ಗಾರ – ಛೇ! ಈ ಬಾರಿಯೂ ಹೆಣ್ಣು! ಆಗ ಅದು ಅವಳಿಗೆ ಅರ್ಥ ಆಗದ ವಯಸ್ಸು.

ಅವಳನ್ನು ತೊಟ್ಟಿಲಲ್ಲಿ ಮಲಗಿಸಿ ಆಕೆಯ ಕಿವಿಯಲ್ಲಿ ಯಾವುದೋ ಒಂದು ಹೆಸರನ್ನು ಹೆತ್ತವರು ಉಸಿರಿದ್ದರು. ಅದೂ ಅವಳಿಗೆ ನೆನಪಿಲ್ಲ. ಮನೆಯವರು ಅಪ್ಪ, ಅಮ್ಮ ಎಲ್ಲರೂ ಆಕೆಯನ್ನು ಪೂರ್ತಿ ಹೆಸರಿನಿಂದ ಕರೆದದ್ದು ಇಲ್ಲವೇ ಇಲ್ಲ. ಅಮ್ಮಿ, ಅಮ್ಮು, ಪುಟ್ಟಿ, ಚಿನ್ನು…. ಹೀಗೆ ತರಹೇವಾರಿ ಹೆಸರುಗಳು. ಮನೆಯಲ್ಲಿ ತುಂಬಾ ಹೆಣ್ಣು ಮಕ್ಕಳಿದ್ದ ಕಾರಣ ಆಕೆಗೇ ಕೆಲವು ಬಾರಿ ಗೊಂದಲ ಆದದ್ದು ಇದೆ.

ಶಾಲೆಯಲ್ಲಿಯೂ ಆಕೆಗೆ ಐಡೆಂಟಿಟಿ ಇರಲಿಲ್ಲ!

ಆಕೆಯನ್ನು ಶಾಲೆಗೆ ಸೇರಿಸುವಾಗ ಯಾವುದೋ ಒಂದು ಹೆಸರು ಇಟ್ಟಿದ್ದರು. ಆದರೆ ಆ ಹೆಸರು ಶಾಲೆಯಲ್ಲಿ ಬಳಕೆ ಆದದ್ದು ಕಡಿಮೆ. ಹಾಜರಿಯನ್ನು ಕರೆಯುವಾಗ ಟೀಚರ್ ನಂಬರ್ ಕರೆಯುತ್ತಿದ್ದರು. ಪೇಪರ್ ಕೊಡುವಾಗಲೂ ನಂಬರ್. ಅಸೆಂಬ್ಲಿಯಲ್ಲಿಯೂ ನಂಬರ್. ಅಲ್ಲಿ ಕೂಡ ಟೀಚರ್ ಇಂತವರ ಮಗಳು, ಇಂತವರ ತಂಗಿ ಎಂದು ಪರಿಚಯ ಮಾಡುತ್ತಿದ್ದರು. ಸ್ಪರ್ಧೆಗೆ ಹೆಸರು ಕೊಟ್ಟಾಗಲೂ ನಂಬರ್ ಕರೆಯುತ್ತಿದ್ದರು. ಆಕೆಯು ಅವಳ ಅಣ್ಣನಷ್ಟು, ಅಕ್ಕನಷ್ಟು ಪ್ರತಿಭಾವಂತೆ ಆಗಿರಲಿಲ್ಲ. ಮಾರ್ಕ್ಸ್ ಕಡಿಮೆ ಬಂದಾಗ ಶಿಕ್ಷಕರು ‘ ನಿನಗೆ ಅಣ್ಣನಷ್ಟು ಯಾಕೆ ಮಾರ್ಕ್ ಬಂದಿಲ್ಲ? ಅಕ್ಕನ ಹಾಗೆ ಯಾಕೆ ಮಾರ್ಕ್ ಬರೋದಿಲ್ಲ?’ ಎಂದು ಕೇಳಿದಾಗ ಆಕೆಗೆ ಸಿಟ್ಟು ಬರುತ್ತಿತ್ತು.

‘ನಾನು ನಾನೇ ‘ಎಂದು ಕಿರುಚಿ ಹೇಳಬೇಕು ಎಂದು ಹಲವು ಬಾರಿ ಅನ್ನಿಸುತ್ತಿತ್ತು. ಆದರೆ ಆಗುತ್ತಲೇ ಇರಲಿಲ್ಲ. ಆಗಲೇ ಆಕೆಯು ಐಡೆಂಟಿಟಿ ಕಳೆದುಕೊಂಡಾಗಿತ್ತು.

ರಾಜಮಾರ್ಗ ಅಂಕಣ she 1

ಮುಂದೆ ಹೈಸ್ಕೂಲಿಗೆ ಬಂದಾಗಲೂ ಐಡೆಂಟಿಟಿ ಇರಲಿಲ್ಲ!

ಹೈಸ್ಕೂಲ್ ವಿದ್ಯಾಬ್ಯಾಸಕ್ಕೆ ಆಕೆ ಬಂದಾಗ ಇನ್ನೂ ಕೆಲವು ಕಿರುಕುಳಗಳು ಆರಂಭ ಆದವು. ಮೂರು ದಿನ ಹೊರಗೆ ಕೂರಲೇಬೇಕು ಎಂದು ಅಮ್ಮ ಅಪ್ಪಣೆ ಕೊಡಿಸಿದರು. ಆಗ ಶಾಲೆಗೆ ಬಂದಾಗಲೂ ಆಕೆಯು ಮೈಯನ್ನು ಮುದ್ದೆ ಮಾಡಿ ಕುಳಿತುಕೊಳ್ಳುತ್ತಿದ್ದಳು. ಆಗೆಲ್ಲ ಕೀಳರಿಮೆ ಹೆಚ್ಚಾಯಿತು. ಭಯ ಹೆಚ್ಚಾಯಿತು. ಮಾರ್ಕ್ ಮತ್ತೂ ಕಡಿಮೆ ಆಯಿತು.

ಒಮ್ಮೆ ಒಬ್ಬ ಓರಗೆಯ ಹುಡುಗ ಟಿಫಿನ್ ಬಾಕ್ಸನಲ್ಲಿ ಒಂದು ಲವ್ ಲೆಟರ್ ಇಟ್ಟು ನನ್ನನ್ನು ಪ್ರೀತಿ ಮಾಡುತ್ತಿಯಾ? ಎಂದು ಬರೆದಿದ್ದ. ಆಗ ಇನ್ನೂ ಭಯವು ಹೆಚ್ಚಾಯಿತು. ಮದುವೆ ಆಗ್ತೀಯಾ ಎಂದು ಕೇಳಿದಾಗ ಅವನು ʼಅದೆಲ್ಲ ಬೇಡ, ಪ್ರೀತಿ ಮಾತ್ರ ಮಾಡೋಣ’ ಅಂದನು. ಆಕೆಗೆ ಅದೆಲ್ಲ ಅರ್ಥವೇ ಆಗಲಿಲ್ಲ. ಮನೆಗೆ ಬಂದಾಗ ಅಮ್ಮ ಪ್ರತೀ ದಿನ ಆಕೆಯ ಶಾಲೆಯ ಬ್ಯಾಗ್ ಚೆಕ್ ಮಾಡುತ್ತಾ ಇದ್ದರು. ಜೋರಾಗಿ ಪ್ರತಿಭಟಿಸಬೇಕು ಅನ್ನಿಸಿದರೂ ಆಕೆಗೆ ಧ್ವನಿಯೇ ಬರಲಿಲ್ಲ.

ಎಲ್ಲರೂ ಡಾಮಿನೇಟ್ ಮಾಡುವವರು!

ಆಕೆಯ ತಿಂಗಳ ಆ ಡೇಟ್ ಆಕೆಗೆ ಮರೆತು ಹೋದರೂ ಅಮ್ಮನಿಗೆ ನೆನಪು ಇರುತ್ತಿತ್ತು. ಆಕೆಯ ತಂಗಿ, ತಮ್ಮ ಕೂಡ ಆಕೆಯ ಮೇಲೆ ಡಾಮಿನೇಟ್ ಮಾಡ್ತಾ ಇದ್ದರು. ಆಕೆಗೆ ಸ್ವಾಭಿಮಾನ ಎಂಬ ಶಬ್ದದ ಅರ್ಥವೇ ಮರೆತುಹೋಗಿತ್ತು.

ಕಡಿಮೆ ಮಾರ್ಕ್ ಬಂದ ಕಾರಣ ಆಕೆಯು ಕಾಲೇಜಿನ ಮೆಟ್ಟಲು ಹತ್ತಲಿಲ್ಲ. ‘ಗಂಡನ ಮನೆಗೆ ಹೋದ ನಂತರ ಅಡುಗೆ ಮಾಡಬೇಕಲ್ಲ’ ಎಂದು ಆಕೆಯ ಅಮ್ಮ ಅದನ್ನೇ ಚಂದ ಮಾಡಿ ಕಲಿಸಿದರು. ಮನೆಯ ನಾಲ್ಕು ಕೋಣೆಗಳ ನಡುವೆ ಆಕೆಯ ಧ್ವನಿ ಮತ್ತು ಐಡೆಂಟಿಟಿಗಳು ನಿರಂತರ ಉಸಿರುಗಟ್ಟುತ್ತಿದ್ದವು.

ಮದುವೆಯ ನಂತರ…

ಮದುವೆಯ ನಂತರ ಆಕೆಗೆ ಇನ್ನೂ ಕೆಲವು ಐಡೆಂಟಿಟಿಗಳು ಸೇರಿದವು. ಇಂತವನ ಹೆಂಡತಿ, ಇಂತವನ ಅತ್ತಿಗೆ, ಇಂತವರ ಸೊಸೆ, ಇಂತವರ ತಾಯಿ, ಇಂತವರ ನಾದಿನಿ……. ಹೀಗೆ! ಅಲ್ಲಿಯೂ ಯಾರೂ ಆಕೆಯ ಹೆಸರು ಹಿಡಿದು ಕರೆಯಲಿಲ್ಲ. ಸಂಪ್ರದಾಯಸ್ಥರ ಮನೆ ಎಂಬ ನೆಪದಲ್ಲಿ ತಿಂಗಳ ಮೂರು ದಿನ ಹೊರಗೆ ಕುಳಿತುಕೊಳ್ಳುವುದು ತಪ್ಪಲಿಲ್ಲ.

ಚಂದ ಅಡುಗೆ ಮಾಡ್ತೀ ಎಂಬ ಪ್ರಶಸ್ತಿ ಕೊಟ್ಟು ಆಕೆಯನ್ನು ಅಡುಗೆ ಮನೆಯ ಮಹಾರಾಣಿಯನ್ನಾಗಿ ಮಾಡಿಬಿಟ್ಟರು. ‘ಅನ್ನಪೂರ್ಣೆ ‘ ಎಂಬ ಬಿರುದು ಆಕೆಗೆ ಮುಳ್ಳಿನ ಕಿರೀಟ ಆಗಿ ಬಿಟ್ಟಿತು. ಇಡೀ ದಿನ ಊಟ, ತಿಂಡಿ, ಪಾತ್ರೆ, ಬಟ್ಟೆ, ಸ್ವಚ್ಛತೆ, ಒಂದಿಷ್ಟು ನೆಂಟರು, ಹಬ್ಬಗಳು, ಮದುವೆ, ಮುಂಜಿ, ಗೃಹ ಪ್ರವೇಶ, ಸೀಮಂತ ಇಷ್ಟರಲ್ಲಿ ಆಕೆಯ ದಿನಚರಿಯು ಮುಗಿದು ಹೋಗುತ್ತಿತ್ತು. ಒಂದೆರಡು ಧಾರಾವಾಹಿಗಳು ಸ್ವಲ್ಪ ರಿಲೀಫ್ ಕೊಡುತ್ತಿದ್ದವು. ಆಗೆಲ್ಲ ನನ್ನ ಬದುಕು ಆ ಧಾರಾವಾಹಿಗಳ ಕಥೆಯ ಹಾಗೆ ಇಲ್ಲವಲ್ಲ ಎಂಬ ದುಃಖವೂ ಆಕೆಯನ್ನು ಕಾಡುತ್ತಿತ್ತು.

ರಾಜಮಾರ್ಗ ಅಂಕಣ she 1

ಈಗಲೂ ಆಕೆಗೆ ಐಡೆಂಟಿಟಿ ಇಲ್ಲ!

ಮೊಮ್ಮಕ್ಕಳು ಅಜ್ಜಿ ಅಂತ ಕರೆದು ತಿಂಡಿಗಾಗಿ ಓಡಿ ಬರುತ್ತಾರೆ. ಈ ಪಾಠ ಹೇಳಿಕೊಡು, ಈ ಪಾಠ ಹೇಳಿಕೊಡು ಎಂದು ದುಂಬಾಲು ಬೀಳುತ್ತಾರೆ. ಆಗ ಆಕೆಗೆ ಅರ್ಥ ಆಗದೆ ಹೋದಾಗ ‘ ಏನಜ್ಜಿ? ನಿನಗೆ ಏನೂ ಗೊತ್ತಿಲ್ಲ. ಹೋಗಜ್ಜಿ’ ಎಂದು ಅಣಕಿಸಿದಾಗ ನೋವಾಗುತ್ತದೆ. ನೆರೆಹೊರೆಯವರ ಜೊತೆಗೆ ಮಾತಿಗೆ ನಿಂತರೆ ಸಿನೆಮಾ, ಗಾಸಿಪ್, ಫ್ಯಾಷನ್ ಎಂದೆಲ್ಲ ಮಾತಾಡುತ್ತಾರೆ. ಆಗೆಲ್ಲ ಆಕೆಯ ಅಜ್ಞಾನವು ಆಕೆಯನ್ನು ಅಣಕಿಸುತ್ತದೆ. ಆಕೆ ಈಗ ಮನೆಯಿಂದ ಹೊರಗೆ ಹೋಗೋದನ್ನು ಬಿಟ್ಟಿದ್ದಾರೆ. ತವರು ಮನೆಗೆ ಹೋಗದೆ ಎಷ್ಟೋ ವರ್ಷಗಳು ಕಳೆದಿವೆ.

ಆಕೆಯ ಗಂಡ ವಿ ಆರ್ ಎಸ್ ತೆಗೆದುಕೊಂಡು ಈಗ ಮನೆಯಲ್ಲಿಯೇ ಇದ್ದಾರೆ. ಪ್ರತೀ ಅರ್ಧ ಘಂಟೆಗೆ ಒಮ್ಮೆ ‘ ಓ ಇವಳೇ, ಒಂದು ಲೋಟ ಟೀ ಮಾಡಿ ಕೊಡು’ ಎಂದು ಕರೆಯುತ್ತಲೆ ಇರುತ್ತಾರೆ. ಮಗ, ಸೊಸೆ ಸಂಜೆ ಆಫೀಸ್ ಮುಗಿಸಿ ಬಂದು ಲ್ಯಾಪ್ ಟಾಪ್ ಕುಟ್ಟುತ್ತಾ ಕೂರುತ್ತಾರೆ. ಸೊಸೆ ಒಮ್ಮೆ ಕೂಡ ತಿಂಗಳಲ್ಲಿ ಮೂರು ದಿನ ಹೊರಗೆ ಕೂತದ್ದು ಅವಳು ನೋಡಲೇ ಇಲ್ಲ! ಆಗೆಲ್ಲ ನಾನೆಷ್ಟು ಕಳೆದುಕೊಂಡೆ ಎಂಬ ದುಃಖ ಆಕೆಯನ್ನು ಆವರಿಸುತ್ತದೆ. ಮೊಮ್ಮಕ್ಕಳು ಹೊಮ್ ವರ್ಕ್, ಪ್ರಾಜೆಕ್ಟ್, ವಿಡಿಯೋ ಗೇಮ್ ಎಂದು ಮುಳುಗಿರುತ್ತಾರೆ.

ಆಕೆ ʼಇವತ್ತಿನ ಊಟ, ತಿಂಡಿಯ ಮೆನು ಮುಗಿಯಿತು, ನಾಳೆ ಎಂತ ಅಡಿಗೆ ಮಾಡುವುದು?’ ಎಂದು ಲೆಕ್ಕ ಹಾಕುತ್ತ ತಡರಾತ್ರಿ ಹಾಸಿಗೆಗೆ ಒರಗುತ್ತಾರೆ.

ಆಗಲೂ ಆಕೆಗೆ ಕಾಡುವ ಪ್ರಶ್ನೆ – ನಾನು ಯಾರು?

ಇದನ್ನೂ ಓದಿ: ರಾಜಮಾರ್ಗ ಅಂಕಣ : ನನ್ನ ಬದುಕೇ ಬೇರೆ, ನನ್ನ ಸಿನಿಮಾನೇ ಬೇರೆ ಅಂದರೆ ಹೀಗೇ ಆಗೋದು!

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ʼಹಿಂದೂಗಳೇ ಕೊಲೆಗಾರರುʼ ಎಂಬ ಭಾರತ ವಿರೋಧಿ ಬಹುಸಂಖ್ಯಾತ-ವಾದ

ನನ್ನ ದೇಶ ನನ್ನ ದನಿ ಅಂಕಣ:
ಅಂತರಜಾಲದಲ್ಲಿ ಮತ್ತು ಜಾಗತಿಕ ಮಾಧ್ಯಮಗಳಲ್ಲಿ, ಭಾರತ ಕುರಿತಂತೆ, ಭಯಾನಕವಾದ ಮತ್ತು ಅಪ್ಪಟ ಮಿಥ್ಯೆಯ ಮಾಹಿತಿ ದೊರೆಯುತ್ತದೆ. ಲೇಖಕ, ಚಿಂತಕ, ಸಂಶೋಧಕ, ಪ್ರೊಫೆಸರ್ ಕೌಶಿಕ್ ಗಂಗೋಪಾಧ್ಯಾಯ ಅವರು ತಮ್ಮ “ದ ಮೆಜಾರಿಟೇರಿಯನ್ ಮಿಥ್” ಗ್ರಂಥದಲ್ಲಿ ಕೊಟ್ಟಿರುವ ಅಂಕಿ ಅಂಶಗಳು, ಕೋಷ್ಟಕಗಳು (Tables) ಆಘಾತವನ್ನೇ ಉಂಟುಮಾಡುತ್ತವೆ.

VISTARANEWS.COM


on

ನನ್ನ ದೇಶ ನನ್ನ ದನಿ ಅಂಕಣ hindu oppression
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: ನಮ್ಮ ಬಳಿ ಯಾರಾದರೂ ಬಂದು, “ಸನಾತನ ಧರ್ಮ (Sanatan Dharma) ಮತ್ತು ಹಿಂದೂ ಸಮಾಜಗಳು (Hindu community) ಅಪಾಯದಲ್ಲಿವೆ. ವಿಶ್ವದಾದ್ಯಂತ ಇರುವ ಕಮ್ಯೂನಿಸ್ಟರು (Communists), ಇಸ್ಲಾಂ (Islam) ಮತ್ತು ಕ್ರೈಸ್ತ (Christian) ಮತೀಯ ಶಕ್ತಿಗಳು ಭಾರತವನ್ನು (India) ಸಂಪೂರ್ಣವಾಗಿ ನಾಶ ಮಾಡಲು ಪಣ ತೊಟ್ಟಿವೆ. ಕನಿಷ್ಠ ಒಂದು ಶತಮಾನದಿಂದ ಇಂತಹ ಷಡ್ಯಂತ್ರ ನಡೆಯುತ್ತಿದೆ. ಹಿಂದೂ ಸಮಾಜದ ಬೇರೆ ಬೇರೆ ಜಾತಿಗಳ ನಡುವೆ ಅಂತಃಕಲಹ, ವೈಮನಸ್ಯ, ದ್ವೇಷಗಳನ್ನು ಹುಟ್ಟುಹಾಕಲಾಗುತ್ತಿದೆ, ಲಿಂಗಾಯತರನ್ನು – ಸಿಖ್ಖರನ್ನು ಹಿಂದೂಗಳ ಮೇಲೆ ಎತ್ತಿಕಟ್ಟಲಾಗುತ್ತಿದೆ. ಅಮೆರಿಕಾ, ಇಂಗ್ಲೆಂಡ್, ಯೂರೋಪಿನ ಕೆಲವು ದೇಶಗಳು, ಇಸ್ಲಾಮೀ (Islamic) ದೇಶಗಳು ಈ ಗುರಿಯ ಬೆನ್ನುಹತ್ತಿ, ದೆಹಲಿ-ಕೇಂದ್ರಿತ ಲುಟ್ಯೆನ್ಸ್ ನೊಂದಿಗೆ ಷಾಮೀಲಾಗಿ ಕಾರ್ಯನಿರ್ವಹಿಸುತ್ತಿವೆ. ಭಾರತದ ನೆರೆಹೊರೆಯ ಎಲ್ಲ ದೇಶಗಳನ್ನು, ಭಾರತದ ವಿರುದ್ಧವೇ ಎತ್ತಿಕಟ್ಟಲು ಚೀನಾ – ಪಾಕಿಸ್ತಾನಗಳು ಕೆಲಸ ಮಾಡುತ್ತಲೇ ಇವೆ. ಭಾರತದ ವಿರೋಧ ಪಕ್ಷಗಳಿಗೆ ಬೇರೆ ಬೇರೆ ದೇಶಗಳಿಂದ ವಿವಿಧ ಬಗೆಯಲ್ಲಿ ಹಣ ಬರುತ್ತಿದೆ ಮತ್ತು ಚುನಾವಣೆಗಳಲ್ಲಿ ಬುಡಮೇಲು ಕೃತ್ಯಗಳನ್ನು ನಡೆಸಲಾಗುತ್ತಿದೆ. ಜಾರ್ಜ್ ಸೋರೋಸ್ ಮೊದಲಾದವರು ಬಹಳ ಬಹಳ ದೊಡ್ಡ ಮೊತ್ತದ ಹಣ ಖರ್ಚು ಮಾಡಿ ಭಾರತವನ್ನು ಸರ್ವನಾಶ ಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ. ಕಮ್ಯೂನಿಸ್ಟರ ನಿಯಂತ್ರಣದ “ನ್ಯೂಯಾರ್ಕ್ ಟೈಮ್ಸ್”, “ವಾಷಿಂಗ್ಟನ್ ಪೋಸ್ಟ್”, ಬಿಬಿಸಿ ಮುಂತಾದ ಮಾಧ್ಯಮ ಲೋಕದ ದುಃಶಕ್ತಿಗಳು ಮತ್ತು ಅಮೇರಿಕಾದ ಕೆಲವು ವಿಶ್ವವಿದ್ಯಾಲಯಗಳೂ ಈ ಮಾಫಿಯಾದ ಭಾಗವಾಗಿವೆ. ಅಂತರಜಾಲದ ಅನೇಕ ಸಾಮಾಜಿಕ ಮಾಧ್ಯಮಗಳಲ್ಲಿಯೂ ವ್ಯವಸ್ಥಿತವಾಗಿ ಈ ದುಷ್ಕಾರ್ಯ ನಡೆಯುತ್ತಿದೆ……”

ಎಂದರೆ, ನಾವು ಶತಕೋಟಿ ಭಾರತೀಯರೂ ಗಹಗಹಿಸಿ ನಗುತ್ತೇವೆ. “ಅಯ್ಯಾ, ಇದೇ ರೀತಿಯ ಇನ್ನೊಂದಿಷ್ಟು ಜೋಕುಗಳನ್ನು ಹೇಳು” ಎಂದು ಸಹ ದುಂಬಾಲು ಬೀಳುತ್ತೇವೆ.

ಆದರೆ, ವಾಸ್ತವದಲ್ಲಿ, ನಮಗೆ ಅಂದರೆ ಭಾರತೀಯರಿಗೆ ಮೇಲ್ನೋಟಕ್ಕೆ ಹಾಸ್ಯ ಎನ್ನಿಸುವ ಈ ಎಲ್ಲ ಸಂಗತಿಗಳೂ, ಈ ಎಲ್ಲ ಸಾಲುಗಳೂ ನಿಜ; ಅಕ್ಷರಶಃ ಶತಪ್ರತಿಶತ ಸತ್ಯ.

ನೋಡಿ, ಪಾಕಿಸ್ತಾನವಿದೆ, ಬಾಂಗ್ಲಾದೇಶವಿದೆ. ಎಂಟು ದಶಕಗಳ ಹಿಂದೆ, ಅವು ನಮ್ಮ ದೇಶದ ಭಾಗಗಳೇ ಆಗಿದ್ದವು. ಇಸ್ಲಾಮೀ “ರಿಲಿಜನ್” (“ಧರ್ಮ” ಸೂಕ್ತವಾದ ಪದ ಅಲ್ಲ. ಧರ್ಮದ ವ್ಯಾಖ್ಯೆಯೇ ಬೇರೆ) ಹೆಸರಿನಲ್ಲಿ ಬೇರೆಯೇ ದೇಶ ಬೇಕು ಎಂಬಂತಹ ಹಕ್ಕೊತ್ತಾಯ ಬಂದ ಕ್ಷಣದಿಂದ ಮತ್ತು ಹೊಸ ದೇಶ 1947ರಲ್ಲಿ ಹುಟ್ಟಿಕೊಂಡ ದಿನದಿಂದ, ಅವ್ಯಾಹತವಾಗಿ ಹಿಂದೂಗಳ – ಸಿಖ್ಖರ ಹತ್ಯೆ, ಅತ್ಯಾಚಾರ, ಬಲವಂತದ ಮತಾಂತರ ಆಗುತ್ತಲೇ ಇದೆ. ಭಾರತದ ಹಣ, ಭಾರತದ ಸಹಕಾರ, ಭಾರತದ ಸೈನಿಕರ ರಕ್ತದಿಂದಲೇ ಹುಟ್ಟಿಕೊಂಡ ಬಾಂಗ್ಲಾದೇಶದಲ್ಲಿಯೂ ಹಿಂದೂಗಳ – ಬೌದ್ಧರ ಹತ್ಯಾಕಾಂಡ ಇಂದಿಗೂ ನಡೆಯುತ್ತಲೇ ಇದೆ. ಪಶ್ಚಿಮ ಪಾಕಿಸ್ತಾನದಲ್ಲಂತೂ, 1947ರಲ್ಲಿ 20% ಇದ್ದ ಹಿಂದೂಗಳ ಶೇಕಡಾವಾರು, ಈಗ 2ಕ್ಕಿಂತ ಕಡಿಮೆಯಾಗಿದೆ! ಕಳೆದ ಐವತ್ತು ವರ್ಷಗಳಲ್ಲಿ ಭಾರತವು ಅದೆಷ್ಟು ಸಹಾಯ ಹಸ್ತ ಚಾಚಿದರೂ, ಬಾಂಗ್ಲಾದೇಶದಲ್ಲಿಯೂ ಹಿಂದೂಗಳ – ಬೌದ್ಧರ ಪರಿಸ್ಥಿತಿ ಭಿನ್ನವಾಗಿಲ್ಲ.

ಈ ಎರಡೂ ದೇಶಗಳಲ್ಲಿ, ಅಂದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಆಗುತ್ತಿರುವ ಹಿಂದೂಗಳ – ಸಿಖ್ಖರ – ಬೌದ್ಧರ ಹತ್ಯಾಕಾಂಡಗಳ ಬಗೆಗೆ ವರದಿಗಳೂ, ಚಿತ್ರಗಳೂ, ವೀಡಿಯೋಗಳೂ ಬರುತ್ತಲೇ ಇವೆ.

ಅದೇ ನೋಡಿ, ಭಾರತದಲ್ಲಿರುವ ಮುಸ್ಲಿಮರ ಒಟ್ಟು ಜನಸಂಖ್ಯೆಯಲ್ಲಿ ಮತ್ತು ಶೇಕಡಾವಾರಿನಲ್ಲಿ (Percentage) ಏರಿಕೆ ಆಗುತ್ತಲೇ ಇದೆ. ಒಂದು ಅಂದಾಜಿನ ಪ್ರಕಾರ ಈಗ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ 25 ಕೋಟಿ ಇರಬಹುದು. ಕಳೆದ ಏಳೆಂಟು ದಶಕಗಳಲ್ಲಿ ಸಂವಿಧಾನಾತ್ಮಕವಾಗಿ ಮತ್ತು ಕಾನೂನಾತ್ಮಕವಾಗಿ ತುಂಬ ತುಂಬ ಸೌಲಭ್ಯಗಳು, ಮೀಸಲಾತಿ, ಅನುಕೂಲಗಳು, ಸಾಲ – ಸಹಾಯಧನಗಳು ಸಹಾ ಅವರಿಗೆ ದೊರೆಯುತ್ತಿವೆ.

ಆದರೆ, ಜಗತ್ತಿನ ಮಾಧ್ಯಮಗಳಲ್ಲಿ (ಕೇವಲ ಭಾರತದ ಮಾಧ್ಯಮಗಳಲ್ಲಿ ಮಾತ್ರವಲ್ಲ) ಮತ್ತು ಅಂತರಜಾಲದ ಅನೇಕ ಮಾಹಿತಿ-ವಿವರಗಳಲ್ಲಿ ಬೇರೆಯೇ ಚಿತ್ರ ಕಂಡುಬರುತ್ತದೆ. ಜಗತ್ತಿನಾದ್ಯಂತ ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ, ಹತ್ಯಾಕಾಂಡ ನಡೆಸುತ್ತಿದ್ದಾರೆ, ಕಿರುಕುಳ ಕೊಡುತ್ತಿದ್ದಾರೆ, ಅತ್ಯಾಚಾರ ಎಸಗುತ್ತಿದ್ದಾರೆ ಎಂಬಂತಹ ಸತ್ಯಸಂಗತಿಗಳಿವೆ. ವಿಶೇಷವಾಗಿ ಬಹುತೇಕ ಇಸ್ಲಾಮೀ ದೇಶಗಳಲ್ಲಿ ಕಾಫಿರರಿಗೆ ಕನಿಷ್ಠ ಸ್ವಾತಂತ್ರ್ಯವೂ ಇಲ್ಲ, ಕಾಫಿರರಿಗೆ ಅಲ್ಲಿ ಮನೆಯೊಳಗೂ ತಮ್ಮ ಸ್ವಂತದ ಮತಧರ್ಮಗಳ ಆಚರಣೆಗಳಿಗೂ ಅವಕಾಶವಿಲ್ಲ. ಆದರೆ, ಹಿಂದೂ ಬಹುಸಂಖ್ಯಾತರಿರುವ ಭಾರತದಲ್ಲಿ so called ಅಲ್ಪಸಂಖ್ಯಾತರಾದ ಮುಸ್ಲಿಮರು ಮತ್ತು ಕ್ರೈಸ್ತರು ತುಂಬ ಚೆನ್ನಾಗಿದ್ದಾರೆ ಮತ್ತು ಅವರಿಗೆ ಇಲ್ಲಿ ಅಪರಿಮಿತ ಸ್ವಾತಂತ್ರ್ಯವಿದೆ; ಹಕ್ಕುಗಳೂ, ಸೌಲಭ್ಯಗಳೂ ಧಂಡಿಯಾಗಿ ಇವೆ.

ವಸ್ತುಸ್ಥಿತಿ ಹೀಗಿದ್ದೂ ಅಂತರಜಾಲದಲ್ಲಿ ಮತ್ತು ಜಾಗತಿಕ ಮಾಧ್ಯಮಗಳಲ್ಲಿ, ಭಾರತ ಕುರಿತಂತೆ, ಭಯಾನಕವಾದ ಮತ್ತು ಅಪ್ಪಟ ಮಿಥ್ಯೆಯ ಮಾಹಿತಿ ದೊರೆಯುತ್ತದೆ. ಲೇಖಕ, ಚಿಂತಕ, ಸಂಶೋಧಕ, ಪ್ರೊಫೆಸರ್ ಕೌಶಿಕ್ ಗಂಗೋಪಾಧ್ಯಾಯ ಅವರು ತಮ್ಮ “ದ ಮೆಜಾರಿಟೇರಿಯನ್ ಮಿಥ್” ಗ್ರಂಥದಲ್ಲಿ ಕೊಟ್ಟಿರುವ ಅಂಕಿ ಅಂಶಗಳು, ಕೋಷ್ಟಕಗಳು (Tables) ಆಘಾತವನ್ನೇ ಉಂಟುಮಾಡುತ್ತವೆ.

“ಗ್ಲೋಬಲ್ ನ್ಯೂಸ್ ಸ್ಟ್ರೀಮ್” ಒಂದು ಡಿಜಿಟಲ್ ರಿಸೋರ್ಸ್ ಅಂದರೆ ಅಂಕೀಯ ದತ್ತಾಂಶ ಮಾಹಿತಿಕೋಶ. ಈ ಜಾಲತಾಣದ ಅಭಿಲೇಖಾಗಾರದಲ್ಲಿ (Archives) ನಾಲ್ಕು ದಶಕಗಳಿಗೂ ಹೆಚ್ಚಿನ ಕಾಲಾವಧಿಯ ಸುದ್ದಿಗಳ ದತ್ತಾಂಶವು ಸಂಗ್ರಹವಾಗಿದೆ. ಅಮೆರಿಕಾ, ಕೆನಡಾ, ಯೂರೋಪ್, ಆಫ್ರಿಕಾ, ಏಷ್ಯಾ, ದಕ್ಷಿಣ ಅಮೆರಿಕಾ ಖಂಡ, ಆಸ್ಟ್ರೇಲಿಯಾ ಇತ್ಯಾದಿಗಳ ಧ್ವನಿ ಕಡತಗಳು, ವೀಡಿಯೋಗಳು, ಜಾಲತಾಣಗಳು, ಬ್ಲಾಗ್ ಗಳು, ಪಾಡ್ ಕ್ಯಾಸ್ಟ್ ಗಳು, ಗ್ರಂಥಗಳು, ಸಮ್ಮೇಳನಗಳ ನಿರ್ಣಯಗಳು, ವಿಶ್ವಕೋಶಗಳು, ಆಧಾರ ಗ್ರಂಥಗಳು, ನಿಯತಕಾಲಿಕಗಳು, ವೃತ್ತಪತ್ರಿಕೆಗಳು, ಸುದ್ದಿ-ಜಾಲತಾಣಗಳು ಇತ್ಯಾದಿಗಳಲ್ಲಿ ಮೂರು ವರ್ಷಗಳ ಅವಧಿಯಲ್ಲಿ (2020, 2021 ಮತ್ತು 2022) ಪ್ರಕಟವಾದ ಮತ್ತು ದಾಖಲಾದ ಮಾಹಿತಿಯನ್ನು ವಿಶೇಷವಾಗಿ ಬಹುಸಂಖ್ಯಾತ-ವಾದ (Majoritarianism) ಕುರಿತ ದತ್ತಾಂಶಗಳನ್ನು ಆಳವಾಗಿ ಅಭ್ಯಾಸ ಮಾಡಿದಾಗ ಮತ್ತು ವಿಶ್ಲೇಷಿಸಿದಾಗ ದೊರೆಯುವ ಉಪಲಬ್ಧಿಗಳು ಅತ್ಯಂತ ಆಘಾತಕಾರಿಯಾಗಿವೆ. ಜಗತ್ತಿನ ಆರನೆಯ ಒಂದು ಭಾಗದಷ್ಟು ಜನಸಂಖ್ಯೆಯಿರುವ ಭಾರತದಲ್ಲಿ ಹೆಸರಿಗೆ ಬಹುಸಂಖ್ಯಾತರಾಗಿರುವ ಹಿಂದೂಗಳು so called ಅಲ್ಪಸಂಖ್ಯಾತರ ಮೇಲೆ ಮತ, ಭಾಷೆ ಮತ್ತು ಜನಾಂಗದ ಆಧಾರದ ಮೇಲೆ ದೌರ್ಜನ್ಯ ಮೆರೆದಿದ್ದಾರೆ ಎನ್ನುತ್ತವೆ ಈ ದತ್ತಾಂಶಗಳು. ಇನ್ನೂ ಭಯಂಕರವಾದ ಸಂಗತಿಯೆಂದರೆ, ಇಡೀ ಜಗತ್ತಿನ ಇಂತಹ ದತ್ತಾಂಶದಲ್ಲಿ 80% (ಹೌದು ಪ್ರತಿಶತ ಎಂಬತ್ತು) ಹಿಂದೂಗಳ ದೌರ್ಜನ್ಯದ ಮಾಹಿತಿಯೇ ಇಲ್ಲಿ ಪ್ರಧಾನವಾಗಿ ಲಭ್ಯವಾಗುತ್ತದೆ. ಅಂದರೆ, ಜಗತ್ತಿನಲ್ಲಿ ಭಾರತದ ಹಿಂದೂಗಳ ಬಗೆಗೆ, ಹಿಂದೂ-ವಿರೋಧೀ ಮಾಫಿಯಾ ಅದೆಂತಹ ದತ್ತಾಂಶವನ್ನು ದಾಖಲಿಸಿದೆ, ಎಂಬ ಈ ವಿವರಗಳು ನಿಜಕ್ಕೂ ಗಾಬರಿ ತರಿಸುತ್ತವೆ. ಹಿಂದುಗಳನ್ನು ರಾಕ್ಷಸರೆಂಬಂತೆ ಚಿತ್ರಿಸಲಾಗಿದೆ. ಆದರೆ, ಮುಸ್ಲಿಮರನ್ನು – ಕ್ರೈಸ್ತರನ್ನು ದುರುದ್ದೇಶಪೂರ್ವಕವಾಗಿ underplay ಮಾಡಿ, ದಮನಕಾರಿಗಳನ್ನೇ ದಮನಿತರೆಂಬಂತೆ ಬಿಂಬಿಸುವ ಕೆಲಸ ನಡೆಯುತ್ತಿದೆ. ಈ ಎಲ್ಲ ನಿಂದನೀಯ ದುಷ್ಕಾರ್ಯಗಳಲ್ಲಿ ಹಣ ಸಹ ದೊಡ್ಡ ಪಾತ್ರವನ್ನು ನಿರ್ವಹಿಸಿದೆ.

ಅದೇ ನೋಡಿ, ಕಾಫಿರರ ಮೇಲಿನ ಪಾಕಿಸ್ತಾನಿ ಮುಸ್ಲಿಮರ ದೌರ್ಜನ್ಯಗಳು, ಈ ದತ್ತಾಂಶದ ಪ್ರಕಾರ ಕೇವಲ 1.8% ಮಾತ್ರ! ಕನಿಷ್ಠ ಮಾಹಿತಿ, ಕನಿಷ್ಠ ಪ್ರಜ್ಞೆ ಇರುವ ಯಾರಿಗೇ ಆದರೂ, ಇದು ಸುಳ್ಳು ಎಂಬುದು ತಿಳಿಯುತ್ತದೆ. ಆದರೆ, ಇಂಥ ದಾಖಲೆಗಳ – ಸಾಕ್ಷ್ಯಾಧಾರಗಳ ಶಕ್ತಿಯೇ ಶಕ್ತಿ. ನ್ಯಾಯಾಲಯಗಳು, ವಿಶ್ವವಿದ್ಯಾಲಯಗಳು, ಸಂಶೋಧನಾ ವರದಿಗಳು, ವಿಶ್ವಕೋಶಗಳು ಇಂತಹ “ಗ್ಲೋಬಲ್ ನ್ಯೂಸ್ ಸ್ಟ್ರೀಮ್” ಡಿಜಿಟಲ್ ದತ್ತಾಂಶನ್ನೇ ಆಧರಿಸಿ ತಮ್ಮ ಷರಾ ಬರೆಯುತ್ತವೆ, ತೀರ್ಮಾನಗಳನ್ನು ಮಾಡುತ್ತವೆ. ಈ ಪರಿಪ್ರೇಕ್ಷ್ಯದಲ್ಲಿ ಭಾರತ-ವಿರೋಧೀ ದುಃಶಕ್ತಿಗಳು ಹೇಗೆಲ್ಲಾ ಕೆಲಸ ಮಾಡುತ್ತಿವೆ, ಹೇಗೆಲ್ಲಾ ವಂಚನೆಯಿಂದ ಸಾಕ್ಷ್ಯಾಧಾರಗಳನ್ನು ದಾಖಲಿಸುತ್ತವೆ ಎಂಬುದನ್ನು ಗಮನಿಸುವಾಗ ಆತಂಕವಾಗುತ್ತದೆ.

ಈ ದತ್ತಾಂಶದಲ್ಲಿ, ಕಾಶ್ಮೀರದಲ್ಲಿ ಮುಸ್ಲಿಮರ ದೌರ್ಜನ್ಯಕ್ಕೆ ಸಿಲುಕಿದ ಲಕ್ಷಾವಧಿ ಹಿಂದೂಗಳಿಗೆ ಸಂಬಂಧಿಸಿದಂತೆ; ಅವರ ಹತ್ಯೆ, ಅವರ ಮೇಲಾದ ಅವರ್ಣನೀಯ ಅತ್ಯಾಚಾರಗಳಿಗೆ ಸಂಬಂಧಿಸಿದಂತೆ 1,802 ವರದಿಗಳು ದಾಖಲಾಗಿದ್ದರೆ, ಗುಜರಾತಿನಲ್ಲಾದ 2002ರ ಗಲಭೆಗಳಿಗೆ ಸಂಬಂಧಿಸಿದಂತೆ 29,092 (ಹದಿನಾರು ಪಟ್ಟು) ವರದಿಗಳು ದಾಖಲಾಗಿವೆ. ಗುಜರಾತಿನಲ್ಲಿ ಆಗ ಹತ್ಯೆಯಾದವರ ಸಂಖ್ಯೆ ಅಧಿಕೃತವಾಗಿ 254 ಹಿಂದೂಗಳು ಮತ್ತು 790 ಮುಸ್ಲಿಮರು ಎನ್ನುವುದನ್ನು ಸಹ ಸಾಂದರ್ಭಿಕವಾಗಿ ನಾವಿಲ್ಲಿ ನೆನಪಿಸಿಕೊಳ್ಳಬೇಕಾಗಿದೆ.

ಇನ್ನೂ ಒಂದು ಉದಾಹರಣೆ ನೋಡಿ. 1984ರಲ್ಲಿ ಸಿಖ್ ಅಂಗರಕ್ಷಕರಿಂದ ಇಂದಿರಾ ಗಾಂಧಿಯವರ ಹತ್ಯೆಯಾಯಿತು. ಆಗ ಪ್ರತೀಕಾರ ರೂಪದಲ್ಲಿ ನಡೆದ ಸಿಖ್ ಹತ್ಯಾಕಾಂಡದಲ್ಲಿ (ಅಧಿಕೃತವಾಗಿ) ಸತ್ತವರು 3,350 ಮಂದಿ. ಆದರೆ, ಈ “ಗ್ಲೋಬಲ್ ನ್ಯೂಸ್ ಸ್ಟ್ರೀಮ್” ಡಿಜಿಟಲ್ ದತ್ತಾಂಶದಲ್ಲಿ 10,977 (ಕಾಶ್ಮೀರದ ಅಂಕಿ ಅಂಶಗಳ ಐದು ಪಟ್ಟು) ವರದಿಗಳು ದಾಖಲಾಗಿವೆ.

ಕಳೆದ ಏಳೆಂಟು ದಶಕಗಳಲ್ಲಿ ಕಮ್ಯೂನಿಸ್ಟರು – ಜಿಹಾದಿಗಳು ಸೇರಿ ಭಾರತದ ಇತಿಹಾಸವನ್ನೇ ವಿಕೃತವನ್ನಾಗಿ – ವಿಷಪೂರಿತವನ್ನಾಗಿ ಮಾಡಿದ್ದಾರೆ, ಎಂಬುದನ್ನು ಇಲ್ಲಿ ಸ್ಮರಿಸಿದರೆ, ಜಾಗತಿಕ ದಾಖಲೆಗಳ ದತ್ತಾಂಶದ ವಿಷಯದಲ್ಲಿಯೂ ಏನೆಲ್ಲಾ ನಡೆಯುತ್ತಿದೆ ಎಂಬುದು ಗಾಬರಿ ಉಂಟುಮಾಡುತ್ತದೆ. ಶಾಲಾ-ಕಾಲೇಜುಗಳ ಪಠ್ಯಗಳಲ್ಲಿರುವ ಸುಳ್ಳು – ಇತಿಹಾಸದ ದುಷ್ಪರಿಣಾಮದಿಂದ ಭಾರತ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಿರುವಾಗ ಜಾಗತಿಕ “ಗ್ಲೋಬಲ್ ನ್ಯೂಸ್ ಸ್ಟ್ರೀಮ್” ಡಿಜಿಟಲ್ ದತ್ತಾಂಶಗಳ ಈ ಆಯಾಮವು ಶತಕೋಟಿ ಭಾರತೀಯರಿಗೆ ಎಚ್ಚರಿಕೆಯ ಘಂಟೆಯಾಗಿದೆ.

ಜಗತ್ತೇ ವಿಚಿತ್ರ!

ಒಳಗಿನ ಶತ್ರುಗಳಂತೆಯೇ, ಹೊರಗಿನ ಕಟುಸತ್ಯಗಳು – ಭಾರತವಿರೋಧೀ ದುಃಶಕ್ತಿಗಳು ಸಹ ಅದೆಷ್ಟು ಘೋರ, ಅದೆಷ್ಟು ಭಯಾನಕ! ಅನೇಕ ದಶಕಗಳಿಂದ ಈ ಬಹುಸಂಖ್ಯಾತ-ವಾದ (Majoritarianism) ಎನ್ನುವುದೇ ಭಾರತೀಯ ಹಿಂದುಗಳನ್ನು ಹಣಿಯುವ, ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ, ಕಮ್ಯೂನಿಸ್ಟ್ ನೇತೃತ್ವದ ಮಾಫಿಯಾದ ಹುನ್ನಾರವಾಗಿದೆ. ನಮ್ಮಲ್ಲೇ ತುಂಬ ತುಂಬ ಉದಾಹರಣೆಗಳಿವೆ. ಪಾಕಿಸ್ತಾನ್ ಮೂಲದ ಭಯೋತ್ಪಾದಕ ಅಜ್ಮಲ್ ಕಸಬ್ ಮೊದಲಾದವರ ತಂಡವು, ಹಿಂದೂಗಳ ವೇಷದಲ್ಲಿಯೇ ದಾಳಿ ನಡೆಸಿತ್ತು ಮತ್ತು ಮುಂಬಯಿ ಮೇಲಿನ ಈ 2008ರ ಕುಖ್ಯಾತ ದಾಳಿಯ ಹಿಂದೆ ಬಹಳ ದೊಡ್ಡ ಷಡ್ಯಂತ್ರವನ್ನು ರೂಪಿಸಲಾಗಿತ್ತು. ಕಸಬ್ ಅಕಸ್ಮಾತ್ತಾಗಿ ಸೆರೆ ಸಿಕ್ಕು ಬಹಳಷ್ಟು ರಹಸ್ಯಗಳು ಬಯಲಾದವು. ಕೆಲವರಂತೂ ಹಿಂದೂ ರಾಷ್ಟ್ರೀಯ ಸಂಘಟನೆಗಳನ್ನೇ ಗುರಿ ಮಾಡಿ ಪುಸ್ತಕಗಳನ್ನೂ ಬರೆಸಿ, ಹಿಂದೂ-ಭಾರತವನ್ನೇ ಕಟಕಟೆಯಲ್ಲಿ ನಿಲ್ಲಿಸಲು ವ್ಯವಸ್ಥೆ ಮಾಡಿಕೊಂಡಿದ್ದರು.

ಭಾರತೀಯ ಸಮಾಜವು ಸಾವಿರ ಸಾವಿರ ವರ್ಷಗಳ ಯಾತನೆ, ಹಿಂಸೆ, ಹತ್ಯಾಕಾಂಡಗಳನ್ನು ಅನುಭವಿಸಿದ್ದು ಸಾಕು. ಇನ್ನಾದರೂ ಅರಿವಿನ ಬೆಳಕು ನಮ್ಮಲ್ಲಿ ಎಚ್ಚರ, ಜಾಗೃತಿಗಳನ್ನು ಉದ್ದೀಪಿಸಲಿ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಬ್ರಿಟಿಷರು ಬರುವ ಮೊದಲು ರಸ್ತೆಗಳೇ ಇರಲಿಲ್ಲವಾದರೆ, ಕೃಷ್ಣದೇವರಾಯನ ಭಾರಿ ಸೈನ್ಯ ಆಕಾಶದಲ್ಲಿ ಹಾರಾಡುತ್ತಿತ್ತೇ?

Continue Reading

ಪ್ರಮುಖ ಸುದ್ದಿ

ರಾಜಮಾರ್ಗ ಅಂಕಣ : ನನ್ನ ಬದುಕೇ ಬೇರೆ, ನನ್ನ ಸಿನಿಮಾನೇ ಬೇರೆ ಅಂದರೆ ಹೀಗೇ ಆಗೋದು!

ಒಬ್ಬ ಸಿನೆಮಾ ನಟ ತಾನು ಸಿನೆಮಾದಲ್ಲಿ ಮಾಡುವ ಪಾತ್ರಗಳಿಗೂ, ನಿಜ ಜೀವನದಲ್ಲಿ ಆತನ ವ್ಯಕ್ತಿತ್ವಕ್ಕೂ ಅಜಗಜಾಂತರ ಇದೆ ಅಂತಾದರೆ ಸಹಿಸಿಕೊಳ್ಳುವುದು ಹೇಗೆ? ಒಬ್ಬ ಸ್ಟಾರ್ ನಟ ಆಪಾದಿತನಾಗಿ ಕಟಕಟೆಯಲ್ಲಿ ತಲೆ ತಗ್ಗಿಸಿ ನಿಂತಾಗಲೂ ಜೈಕಾರ ಹಾಕುವ ಹುಚ್ಚು ಅಭಿಮಾನಿಗಳಿಗೆ ಏನೆಂದು ಹೇಳಬೇಕು? ಒಬ್ಬ ಸ್ಟಾರ್ ನಟನ ಕೋಟಿ ಅಭಿಮಾನಿಗಳು ಆತನ ಖಾಸಗಿ ಜೀವನವನ್ನು ಅನುಕರಣೆ ಮಾಡಲು ಹೋದರೆ ಸಮಾಜ ಹೇಗಿರಬಹುದು?

VISTARANEWS.COM


on

Actor Darshan
Koo

ರಾಜೇಂದ್ರ ಭಟ್ ಕೆ

Rajendra-Bhat-Raja-Marga-Main-logo

ಮೊದಲೇ ಹೇಳಿಬಿಡುತ್ತೇನೆ, ನಾನು ಯಾವುದೇ ಸಿನಿಮಾ ನಟನ ಅಭಿಮಾನಿಯಲ್ಲ. ದರ್ಶನ್ (Actor Darshan) ಎಂಬ ಕನ್ನಡದ ಸ್ಟಾರ್ ನಟನ ಬದುಕಿನಲ್ಲಿ ಈ ಎರಡು ದಿನಗಳ ಅವಧಿಯಲ್ಲಿ ಏನೆಲ್ಲ ಆಗಿದೆ ಅದರ ಬಗ್ಗೆ ನಾನು ತೀರ್ಪು ಕೊಡಲು ಹೋಗುವುದಿಲ್ಲ. ಆದರೆ ಈ ಘಟನೆಯು ಸಮಾಜಕ್ಕೆ ಬಹು ದೊಡ್ಡ ಸಂದೇಶ ಉಳಿಸಿ ಹೋಗಿದೆ. ಆತನ ಸಿನೆಮಾಗಳಲ್ಲಿ ಅವನು ಮಾಡುವ ಪಾತ್ರಗಳು, ಕೊಡುವ ಪೋಸ್, ಹೊಡೆಯುವ ಡೈಲಾಗುಗಳು, ಪ್ರಕಟಿಸುವ ಮೌಲ್ಯಗಳು….
ಛೇ! ಹೀಗಾಗಬಾರದಿತ್ತು. ಅವನನ್ನು ಕೋರ್ಟಿಗೆ ವಿಚಾರಣೆಗೆ ಕರೆತಂದಾಗ ಅಲ್ಲಿದ್ದ ಕೆಲವು ಅಭಿಮಾನಿಗಳು ‘ ಡಿ ಬಾಸಿಗೆ ಜಯವಾಗಲಿ’ ಅಂತ ಘೋಷಣೆ ಕೂಗಿದರಂತೆ! ಇನ್ನು ಅವನು ಈ ಕೇಸನ್ನು ಗೆದ್ದು ಬಂದರೆ ಸಾವಿರಾರು ಅಭಿಮಾನಿಗಳು ಮಾಲೆ ಹಿಡಿದು ಜೈಕಾರ ಹಾಕಲು ಕಾಯುತ್ತಿರುತ್ತಾರೆ! ಅಂಧಾಭಿಮಾನ ಈ ಮಟ್ಟಕ್ಕೆ ಹೋಗಬಾರದು.

ನಮ್ಮ ಖಾಸಗಿ ಜೀವನ ಮತ್ತು ವೃತ್ತಿ ಜೀವನ

ಪ್ರತಿಯೊಬ್ಬ ವ್ಯಕ್ತಿಗೂ ಒಂದು ಖಾಸಗಿ ಜೀವನ ಮತ್ತು ಇನ್ನೊಂದು ವೃತ್ತಿ ಜೀವನ ಇರುತ್ತದೆ. ಅದರ ಮಧ್ಯೆ ಒಂದು ಸಣ್ಣ ಗ್ಯಾಪ್ ಇದ್ದೇ ಇರುತ್ತದೆ. ಅದು ಸಹಜ ಕೂಡ.

ಆದರೆ ಅದೇ ಗ್ಯಾಪ್ ದೊಡ್ಡದಾದರೆ? ಒಬ್ಬ ಸಿನೆಮಾ ನಟ ತಾನು ಸಿನೆಮಾದಲ್ಲಿ ಮಾಡುವ ಪಾತ್ರಗಳಿಗೂ, ನಿಜ ಜೀವನದಲ್ಲಿ ಆತನ ವ್ಯಕ್ತಿತ್ವಕ್ಕೂ ಅಜಗಜಾಂತರ ಇದೆ ಅಂತಾದರೆ ಸಹಿಸಿಕೊಳ್ಳುವುದು ಹೇಗೆ? ಒಬ್ಬ ಸ್ಟಾರ್ ನಟ ಆಪಾದಿತನಾಗಿ ಕಟಕಟೆಯಲ್ಲಿ ತಲೆ ತಗ್ಗಿಸಿ ನಿಂತಾಗಲೂ ಜೈಕಾರ ಹಾಕುವ ಹುಚ್ಚು ಅಭಿಮಾನಿಗಳಿಗೆ ಏನೆಂದು ಹೇಳಬೇಕು? ಒಬ್ಬ ಸ್ಟಾರ್ ನಟನ ಕೋಟಿ ಅಭಿಮಾನಿಗಳು ಆತನ ಖಾಸಗಿ ಜೀವನವನ್ನು ಅನುಕರಣೆ ಮಾಡಲು ಹೋದರೆ ಸಮಾಜ ಹೇಗಿರಬಹುದು? ಒಬ್ಬ ಬಡ ಕುಟುಂಬದ ಹುಡುಗ ತನ್ನ ಪ್ರಿಯತಮೆಗೆ ಮೆಸೇಜ್ ಮಾಡಿ ತೊಂದರೆ ಕೊಟ್ಟ ಎಂಬ ಕಾರಣಕ್ಕೆ ಸ್ಟಾರ್ ನಟ ಮತ್ತು ಅವನ ಗೆಳೆಯರು ಹೊಡೆದು ಕೊಲೆ ಮಾಡುವ ಮಟ್ಟಕ್ಕೆ ಹೋಗುತ್ತಾರೆ (ನನಗೆ ಗೊತ್ತಿಲ್ಲ) ಅಂದರೆ ಅದೆಂತಹ ಕ್ರೌರ್ಯ? ದರ್ಶನ್ ಸಿನೆಮಾದಲ್ಲಿ ಮಾಡುವ ಪಾತ್ರಗಳಿಗೂ ಇಂತಹ ಘಟನೆಗಳಿಗೂ ಎಷ್ಟೊಂದು ವ್ಯತ್ಯಾಸ ಅಲ್ವಾ?

ಹುಚ್ಚು ಅಭಿಮಾನಿಗಳ ಅತಿರೇಕಗಳು!:

ಬಹಳ ಹಿಂದೆ ಡಾಕ್ಟರ್ ರಾಜಕುಮಾರ್ ಅವರ ‘ಸಮಯದ ಗೊಂಬೆ ‘ ಸಿನೆಮಾ ಬಿಡುಗಡೆ ಆಗಿತ್ತು. ನಾನು ಅದನ್ನು ಬೆಂಗಳೂರಿನ ಒಂದು ಥಿಯೇಟರ್ ಒಳಗೆ ಕೂತು ನೋಡುತ್ತಾ ಇದ್ದೆ. ಅದರಲ್ಲಿ ರಾಜ್ ಅವರದ್ದು ಒಬ್ಬ ಸಾಮಾನ್ಯ ಕಾರ್ ಡ್ರೈವರ್ ಪಾತ್ರ ಆಗಿತ್ತು. ನಟ ಶ್ರೀನಾಥ್ ಅವರದ್ದು ಆ ಕಾರ್ ಯಜಮಾನನ ಪಾತ್ರ. ಒಂದು ಭಾವನಾತ್ಮಕ ಪಾತ್ರದಲ್ಲಿ ಸಿಟ್ಟು ಮಾಡಿಕೊಂಡ ಶ್ರೀನಾಥ್ ತನ್ನ ಡ್ರೈವರ್ ಆದ ರಾಜಕುಮಾರ್ ಅವರ ಕಪಾಳಕ್ಕೆ ಹೊಡೆಯುವ ಸನ್ನಿವೇಶ. ಸಿನೆಮಾದ ಕಥೆಯೇ ಹಾಗಿತ್ತು. ಆದರೆ ಅದನ್ನು ರಾಜ್ ಅಭಿಮಾನಿಗಳು ಸಹಿಸಿಕೊಳ್ಳಲಿಲ್ಲ.
‘ಏನೋ, ನಮ್ಮ ಅಣ್ಣಾವ್ರಿಗೆ ಹೊಡೀತಿಯೇನೋ?’ ಎಂದೆಲ್ಲ ಕೂಗಾಡಿದರು. ಥಿಯೇಟರ್ ಮೇಲೆ ಕಲ್ಲು ಬಿತ್ತು. ಶ್ರೀನಾಥ್ ಎಂಬ ನಟನಿಗೆ ಬೈಗುಳದ ಅಭಿಷೇಕವೇ ಆಯಿತು. ಕೊನೆಗೆ ಚಿತ್ರ ನಿರ್ಮಾಪಕರು ಕ್ಷಮೆ ಕೇಳಿ ಆ ದೃಶ್ಯವನ್ನು ಕತ್ತರಿಸುವ ಭರವಸೆ ಕೊಟ್ಟ ನಂತರ ಪ್ರೇಕ್ಷಕರ ಆಕ್ರೋಶವು ತಣಿಯಿತು.

ತಮಿಳುನಾಡಿನಲ್ಲಿ ಈ ಹುಚ್ಚು ಅಭಿಮಾನ ಇನ್ನೂ ಜಾಸ್ತಿ. ಎಂ ಜಿ ಆರ್, ಜಯಲಲಿತಾ, ಅಜಿತ್, ವಿಜಯ್, ರಜನೀಕಾಂತ್ ಅವರನ್ನು ದೇವರಾಗಿ ಕಂಡ ಜನ ಅವರು. ನಟಿ ಖುಷ್ಬೂಗೆ ಒಂದು ದೇವಸ್ಥಾನವನ್ನು ಕಟ್ಟಿದ ಜನ ಅವರು! ಒಬ್ಬ ನಟನ ಅಭಿಮಾನಿಗಳು ಇನ್ನೊಬ್ಬ ನಟನ ಅಭಿಮಾನಿಗಳ ಮೇಲೆ ಹಲ್ಲೆ ನಡೆಸುವ ಘಟನೆಗಳು ಅಲ್ಲಿ ನಿತ್ಯವೂ ನಡೆಯುತ್ತವೆ. ಅಂತಹ ಅಂಧಾಭಿಮಾನಿಗಳಿಗೆ ಕಪಾಳಕ್ಕೆ ಹೊಡೆದ ಹಾಗೆ ನಡೆದಿದೆ ಈ ಮರ್ಡರ್ ಕಥೆ. ಆದರೆ ಬಲಿಯಾದದ್ದು ಒಬ್ಬ ಬಡ ಅಪ್ಪ , ಅಮ್ಮನ ಒಬ್ಬನೇ ಮಗ, ಕುಟುಂಬದ ಒಬ್ಬನೇ ಆಧಾರ ಅನ್ನೋದು, ಒಬ್ಬ ಚೊಚ್ಚಲ ಬಾಣಂತಿಯ ಗಂಡ ಅನ್ನೋದು ಮಾತ್ರ ದುರಂತ!

ಕರಾವಳಿಯ ಜನ ಬುದ್ಧಿವಂತರು!:

ಇಲ್ಲಿಯ ಸಿನೆಮಾ ಪ್ರೇಕ್ಷಕರು ಕೇವಲ ಮನರಂಜನೆಗಾಗಿ ಸಿನೆಮಾ ನೋಡುತ್ತಾರೆ. ಕಥೆ ಚೆನ್ನಾಗಿದ್ದರೆ ಮಾತ್ರ ನೋಡುತ್ತಾರೆ. ಯಾವ ಸ್ಟಾರ್ ನಟ ಅಥವಾ ಸ್ಟಾರ್ ನಟಿಯ ಸಿನೆಮಾ ಬಂದರೂ ಆ ಸ್ಟಾರಗಿರಿಗೆ ಮೆಚ್ಚಿ ಸಿನೆಮಾ ನೋಡಲು ಬರುವುದೇ ಇಲ್ಲ. ‘ಹೀರೋ ವರ್ಶಿಪ್ ‘ ಕರಾವಳಿಯಲ್ಲಿ ತುಂಬಾ ಕಡಿಮೆ. ಈ ಪ್ರಬುದ್ಧತೆಯೇ ಇಂದು ನಿಜವಾಗಿ ಬೇಕಾಗಿರುವುದು. ಹಾಗೆಯೇ ನಾನು ಹಿಂದೊಮ್ಮೆ ಬರೆದ ವರನಟ ರಾಜಕುಮಾರ್ ಅವರ ಮಾತುಗಳನ್ನು ಇಲ್ಲಿ ಉಲ್ಲೇಖ ಮಾಡಬೇಕು.

ಇದನ್ನೂ ಓದಿ: Rajeev Taranath : ಮಹೋನ್ನತ ಪ್ರತಿಭೆಯ ರಾಜೀವ್ ತಾರಾನಾಥ್ ಸರೋದ್ ಲೋಕದ ಅದ್ಭುತ!

‘ನಮ್ಮಂತಹ ನಟರನ್ನು ಸಾವಿರಾರು ಅಭಿಮಾನಿಗಳು ಅನುಕರಣೆ ಮಾಡುತ್ತಾರೆ. ಆದ್ದರಿಂದ ನಮ್ಮ ಖಾಸಗಿ ಜೀವನವೂ ಅವರಿಗೆ ಅನುಕರಣೀಯ ಆಗಿರಬೇಕು.’ ಅವರು ತೆರೆಯ ಮೇಲೆ ಯಾವ ಪಾತ್ರಗಳನ್ನು ಮಾಡಿದ್ದರೋ ಅದೇ ರೀತಿ ಬದುಕಿದ್ದರು. ‘ನನ್ನ ಜೀವನವೇ ನನ್ನ ಸಂದೇಶ ‘ ಅಂದಿದ್ದರು ಗಾಂಧೀಜಿ. ಅವರ ಬದುಕಿನಲ್ಲಿಯೂ ಕೆಲವು ಕಪ್ಪು ಪುಟಗಳು ಇದ್ದವು. ಅದ್ಯಾವುದನ್ನೂ ಅವರು ಮುಚ್ಚಿಡಲಿಲ್ಲ. ಅವರ ಆತ್ಮಚರಿತ್ರೆಯ ಪುಸ್ತಕವಾದ
‘ಸತ್ಯಾನ್ವೇಷಣೆ ‘ಯಲ್ಲಿ ಅವರು ಆ ಕಪ್ಪು ಪುಟಗಳನ್ನು ಬರೆಯಲು ಹೇಸಿಗೆ ಮಾಡಲಿಲ್ಲ. ಅದಕ್ಕಾಗಿ ಅವರು ಲೆಜೆಂಡ್ ಆದರು. ನಮ್ಮ ಬದುಕು ಕೂಡ ಒಂದು ತೆರೆದ ಪುಸ್ತಕ ಆಗೋದು ಯಾವಾಗ?

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಸಾಕೇತದ ಅಮಾತ್ಯ ಸುಮಂತ್ರ, ರಾಮಾಯಣದ ರಹಸ್ಯನಿಧಿ

ಧವಳ ಧಾರಿಣಿ ಅಂಕಣ: ರಾಮಾಯಣದಲ್ಲಿ ಮಂತ್ರಿ ಸುಮಂತ್ರನ ಪಾತ್ರ ಸಣ್ಣದಾದರೂ ಮಹತ್ವದ್ದು. ದಶರಥ ಮಹಾರಾಜನ ಬಾಲ್ಯದ ಒಡನಾಡಿ ಇವನಾಗಿದ್ದ. ಬಹುಶಃ ದಶರಥನದೇ ವಯಸ್ಸು ಈತನಿಗೆ. ಈ ಕಾರಣದಿಂದಲೇ ದಶರಥನಿಗೆ ಆತ ನಂಬಿಗಸ್ಥ ಮಂತ್ರಿಯಾಗಿದ್ದನು. ಆತನ ಅಂತರಂಗದ ಆಪ್ತನೂ ಆಗಿದ್ದನು.

VISTARANEWS.COM


on

ಧವಳ ಧಾರಿಣಿ ಅಂಕಣ dasharatha sumantra
Koo

ಸುಮಂತ್ರ ಭಾಗ 1; ರಾಜ್ಯದ ರಹಸ್ಯಗಳನ್ನು ನಿಗೂಢವಾಗಿರಿಸಿದ ಮುತ್ಸದ್ಧಿ

dhavala dharini by Narayana yaji

ಧವಳ ಧಾರಿಣಿ ಅಂಕಣ: ತಸ್ಯಾಮಾತ್ಯಾ ಗುಣೈರಾಸನ್ನಿಕ್ಷ್ವಾಕೋಸ್ತು ಮಹಾತ್ಮನಃ
ಮನ್ತ್ರಜ್ಞಾಶ್ಚೇಙ್ಗಿತಜ್ಞಾಶ್ಚ ನಿತ್ಯಂ ಪ್ರಿಯಹಿತೇ ರತಾ: ৷৷ಬಾ.7.1৷৷

ಇಕ್ಷ್ವಾಕು ವಂಶದಲ್ಲಿ ಹುಟ್ಟಿದ ಮಹಾತ್ಮನಾದ ದಶರಥನಿಗೆ (king Dasharatha) ಮಂತ್ರಾಲೋಚನೆಯಲ್ಲಿ ಸಮರ್ಥರಾದ, ಕಾರ್ಯವಿಚಾರತತ್ಪರರಾದ ಮತ್ತು ಪರರಮನಸಿನಲ್ಲಿರುವುದನ್ನು ಮುಖಭಾವದಿಂದಲೇ ತಿಳಿಯುಬಲ್ಲ, ಯಾವಾಗಲೂ ರಾಜನ ಹಿತರಕ್ಷಣೆಯಲ್ಲಿಯೇ ನಿರತರಾಗಿರುವ ಮಂತ್ರಿಗಳಿದ್ದರು.

ಮಂತ್ರಿಗಳ ವಿಚಾರಕ್ಕೆ ಬರುವಾಗ ರಾಮಾಯಣದ (Ramayana) ಪ್ರಾರಂಭದ ಬಾಲಕಾಂಡಗಳಿಂದ ಹಿಡಿದು ಕೊನೆಯ ಉತ್ತರಕಾಂಡದ ಸೀತಾವಿಯೋಗದ ವರೆಗಿನ ಭಾಗಗಳಲ್ಲಿ ಕಂಡುಬರುವ ಪ್ರಮುಖ ಹೆಸರು ಸುಮಂತ್ರ (Sumantra) ಎನ್ನುವ ಮಹಾ ಅಮಾತ್ಯನದ್ದು. ಅಯೋಧ್ಯೆಯ ಹಿತವನ್ನು ಕಾಪಾಡಲು ಅಷ್ಟ ಮಂತ್ರಿಗಳಾದ ಧೃಷ್ಟಿ, ಜಯಂತ, ವಿಜಯ, ಸಿದ್ಧಾರ್ಥ, ಅರ್ಥಸಾಧಕ, ಅಶೋಕ, ಮಂತ್ರಪಾಲ ಮತ್ತು ಸುಮಂತ್ರ ಎನ್ನುವ ಎಂಟು ಮಂತ್ರಿಗಳಿದ್ದರು. ಅವರಲ್ಲಿ ಸುಮಂತ್ರನೆನ್ನುವ ಕೇವಲ ಮಂತ್ರಿ ಎನ್ನುವುದಕ್ಕಿಂತ ರಾಜನ ಅಂತರಂಗದ ಆಪ್ತನೂ ಆಗಿದ್ದ. ಅರ್ಥಶಾಸ್ತ್ರದಲ್ಲಿ ಸುಬಧ್ರವಾದ ರಾಜ್ಯಕ್ಕೆ “ರಾಜ, ಅಮಾತ್ಯ, ಜನಪದ, ದುರ್ಗ, ಕೋಶ, ಸೈನ್ಯ ಅಥವಾ ದಂಡ ಮತ್ತು ಮಿತ್ರ” ಎನ್ನುವ ಸಪ್ತಾಂಗ ಬಹಳ ಮಹತ್ವದ್ದು. ಅಮಾತ್ಯರಲ್ಲಿ ಮಂತ್ರಿಗಳು ಮತ್ತು ಪುರೋಹಿತ ವರ್ಗ ಎನ್ನುವ ಎರಡು ವಿಧಗಳಿವೆ. ದಕ್ಷ ಆಡಳಿತಕ್ಕೆ ಯೋಗ್ಯರಾದ ಸಚಿವರು ಮತ್ತು ಧರ್ಮಮಾರ್ಗದಲ್ಲಿ ರಾಜ ಸದಾ ಇರುವಂತೆ ನೋಡಿಕೊಳ್ಳುವ ಪುರೋಹಿತರು ಬಹು ಮುಖ್ಯ. ರಾಜನಿಗೆ ಕೆಟ್ಟ ಹೆಸರಾಗಲಿ, ಒಳ್ಳೆಯ ಹೆಸರಾಗಲಿ ಬರುವುದರಲ್ಲಿ ಅಮಾತ್ಯ ಮತ್ತು ಪುರೋಹಿತರ ಪಾತ್ರ ದೊಡ್ಡದು.

ಸುಮಂತ್ರ ಎನ್ನುವ ಮಂತ್ರಿ ಅಯೋಧ್ಯೆಯ ಆಧಾರ ಸ್ತಂಭಗಳಲ್ಲಿ ಒಂದಾಗಿದ್ದ. ಆಯೋಧ್ಯೆಯಲ್ಲಿ ಸಚಿವ ಪದವಿಯೆನ್ನುವುದು ವಂಶಪರಂಪರೆಯ ಕಾರಣ ಮಾತ್ರದಿಂದಲೇ ಬರುತ್ತಿರಲಿಲ್ಲ. ಅವರಲ್ಲಿ ಯೋಗ್ಯತೆಯೂ ಇರಬೇಕಾಗಿತ್ತು. ಯಾರನ್ನಾದರೂ ಹುದ್ದೆಗೆ ನಿಯಕ್ತಿಗೊಳಿಸುವ ಮುನ್ನ ಅವರನ್ನು ಚನ್ನಾಗಿ ಪರೀಕ್ಷಿಸಲಾಗುತ್ತಿತ್ತು. ಅರ್ಥಶಾಸ್ತ್ರದಲ್ಲಿ ರಾಜನ ಆಸ್ಥಾನದಲ್ಲಿರುವವರನ್ನು ಪರೀಕ್ಷಿಸುವ ವಿಧಾನವನ್ನು ಹೇಳುವಾಗ ಧರ್ಮಾದಿ, ಉಪಧಾ, ಅರ್ಥೋಪಧಾ, ಕಾಮೋಪಧಾ, ಭಯೋಪಧಾಗಳ ಮೂಲಕ ಪರೀಕ್ಷಿಸಬೇಕು ಎಂದು ಹೇಳುತ್ತದೆ. ಅಂದರೆ ರಾಜನಲ್ಲಿ ಅಧರ್ಮವನ್ನು ಕಲ್ಪಿಸಿ ಅವನನ್ನು ಪಟ್ಟದಿಂದ ಇಳಿಸೋಣವೇ ಎನ್ನುವ ಆಮಿಷಕ್ಕೆ ಒಡ್ಡಿದಾಗಲೂ ಅದನ್ನು ಯಾವಾತ ತಿರಸ್ಕರಿಸುತ್ತಾನೋ, ಹಣದ ಆಮಿಷದ ಮೂಲಕ ರಾಜನಿಂದ ಬೇರ್ಪಡಿಸಲು ಸಾಧ್ಯವೋ ಎನ್ನುವುದನ್ನು ಪರೀಕ್ಷಿಸುವುದು, ರಾಣಿ ನಿನ್ನನ್ನು ಬಯಸಿದ್ದಾಳೆ, ಅವಳನ್ನು ಸೇರಿದರೆ ನಿನಗೆ ಕೈತುಂಬಾ ಹಣಸಿಗುವುದು ಎನ್ನುವ ಆಮಿಷವನ್ನು ಒಡ್ಡಿದಾಗಲೂ ಅದನ್ನು ತಿರಸ್ಕರಿಸುವಂಥವರು, ರಾಜನಿಂದ ಅವಮಾನಿತರಾದ (ಹಾಗೇ ನಟಿಸಿ) ಅಮಾತ್ಯನಾದವ ಇತರರನ್ನು ನಾವೆಯಲ್ಲಿ ಕರೆದುಕೊಂಡು ಹೋಗಿ ರಾಜನ ವಿರುದ್ಧ ಅವರನ್ನು ಎತ್ತಿಕಟ್ಟಿದಾಗ ಯಾರು ತಿರಸ್ಕರಿಸಿ ರಾಜನಿಗೆ ನಿಷ್ಠೆಯುಳ್ಳವರಾಗಿರುತ್ತಾರೆಯೋ ಅಂಥವರು ಮಾತ್ರ ಅಮಾತ್ಯರಾಗಲು ಯೋಗ್ಯರು ಎನ್ನುತ್ತದೆ.

ರಾಜನ ಆಪ್ತಸಲಹೆಗಾರ

ದಶರಥ ಮಹಾರಾಜನ ಬಾಲ್ಯದ ಒಡನಾಡಿ ಇವನಾಗಿದ್ದ. ಬಹುಶಃ ದಶರಥನದೇ ವಯಸ್ಸು ಈತನಿಗೆ. ಈ ಕಾರಣದಿಂದಲೇ ದಶರಥನಿಗೆ ಆತ ನಂಬಿಗಸ್ಥ ಮಂತ್ರಿಯಾಗಿದ್ದನು. ಆತನ ಅಂತರಂಗದ ಆಪ್ತನೂ ಆಗಿದ್ದನು. ದಶರಥ ಕೌಸಲ್ಯೆ ಮತ್ತು ಸುಮಿತ್ರೆ ಇಬ್ಬರನ್ನೂ ಮದುವೆಯಾಗಿ ಹಲವುಕಾಲ ಕಳೆದಿದ್ದರೂ ಅವರಿಬ್ಬರಲ್ಲಿ ಮಕ್ಕಳಾಗಿರಲಿಲ್ಲ. ಅಯೋಧ್ಯೆಯ ಸಿಂಹಾಸನಕ್ಕೆ ವಾರಸುದಾರರು ಇಲ್ಲದೆ ಇರುವ ಕಾರಣದಿಂದ ಮತ್ತೊಂದು ಮದುವೆಯಾಗಲು ಕನ್ಯಾನ್ವೇಷಣೆಗೆ ದೊರೆ ತೊಡಗಿದ. ಆಗ ಆತನಿಗೆ ಕೇಕೇಯದ ದೊರೆ ಅಶ್ವಪತಿಗೆ ಕೈಕೇಯಿ ಎನ್ನುವ ಸುಂದರಿಯಾದ ಮಗಳು ಇರುವ ವರ್ತಮಾನ ಬಂತು. ಆಕೆಯನ್ನು ಮದುವೆಯಾಗುವ ಉದ್ಧೇಶದಿಂದ ಅಶ್ವಪತಿರಾಜನಲ್ಲಿ ಕೇಳಿದಾಗ ಆ ದೊರೆ “ತನ್ನ ಮಗಳಲ್ಲಿ ಜನಿಸುವ ಪುತ್ರನಿಗೆ ರಾಜ್ಯದ ಉತ್ತರಾಧಿಕಾರ ಸಿಗಬೇಕೆಂದು” ನಿಯಮ ಹಾಕಿ ಅದಕ್ಕೆ ಒಪ್ಪುವುದಾದರೆ ಮಗಳನ್ನು ಕೊಡುವೆ ಎಂದ. ದಶರಥನಿಗೆ ಮದುವೆ ಆಗಬೇಕಾಗಿತ್ತು. ಅದಾಗಲೇ ಆತನಿಗೆ ಇಬ್ಬರು ಹೆಂಡತಿಯರ ಜೊತೆ ಇನ್ನು ಮುನ್ನೂರೈವತ್ತು ಉಪಪತ್ನಿಯರೂ ಇದ್ದರು. ಪಟ್ಟಮಹಿಷಿಯರಲ್ಲಿ ಜನಿಸಿದವರಿಗೆ ಮಾತ್ರ ರಾಜ್ಯದ ಅಧಿಕಾರಕ್ಕೆ ಏರುವ ಅರ್ಹತೆ ಇರುತ್ತಿತ್ತು. ಹೇಗಿದ್ದರೂ ಮೊದಲ ಇಬ್ಬರು ಪತ್ನಿಯರಿಗೆ ಮಕ್ಕಳಿಲ್ಲ, ಹಾಗಾಗಿ ಕೈಕೇಯಿಯಲ್ಲಿ ಜನಿಸಿದ ಮಕ್ಕಳಿಗೆ ಸಹಜವಾಗಿ ಅಧಿಕಾರ ಸಿಗುತ್ತದೆ ಎನ್ನುವ ಕಾರಣಕ್ಕೆ ದೊರೆ ಮರುಮಾತಿಲ್ಲದೇ ಒಪ್ಪಿಕೊಂಡ.

ಈ ವಿಷಯಕ್ಕೆ ಸಾಕ್ಷಿಯಾಗಿ ಸುಮಂತ್ರ ಮಾತ್ರವೇ ಇದ್ದ. ಆದರೆ ಬುದ್ಧಿವಂತನಾದ ದಶರಥ ಮತ್ತು ಸುಮಂತ್ರ ಇಬ್ಬರೂ ಈ ವಿಷಯವನ್ನು ಗೌಪ್ಯವಾಗಿಟ್ಟಿದ್ದರು. ಅಶ್ವಪತಿ ತನ್ನ ಮಗಳಾದ ಕೈಕೇಯಿಗೂ ಈ ಮಾತನ್ನು ಹೇಳಿರಲಿಲ್ಲ. ನಂತರ ಅದು ಹೇಗೋ ರಾಮನಿಗೆ ತಿಳಿದಿತ್ತು. ರಾಜನಾಗುವಿಕೆ ಎಂದರೆ ಅದಕ್ಕೆ ಇನ್ನಿತರ ಯೋಗ್ಯತೆಯೂ ಬೇಕಿತ್ತು. ಭರತ ವನವಾಸಕ್ಕೆ ಬಂದಾಗ ಆತನಲ್ಲಿ ರಾಮ, ದಶರಥ ಕನ್ಯಾಶುಲ್ಕವಾಗಿ ಕೋಸಲ ರಾಜ್ಯವನ್ನು ಕೊಟ್ಟಿರುವ ವಿಷಯ ಹೇಳುತ್ತಾನೆ. ಮದುವೆಯಾಗುವಾಗ ಸುಳ್ಳು ಹೇಳಬಹುದು ಎನ್ನುವ ಕಾರಣಕ್ಕೆ ರಾಜ್ಯದ ಹಿತರಕ್ಷಣೆಯಿಂದ ಸುಮಂತ್ರ ಈ ವಿಷಯನ್ನು ಮುಚ್ಚಿಟ್ಟಿದ್ದ. ಮಹಾಭಾರತದಲ್ಲಿ “ಮನ್ತ್ರಗೂಢಾ ಹಿ ರಾಜಸ್ಯ ಮನ್ತ್ರಿಣೋ ಯೇ ಮನೀಷಿಣಃ – ಬುದ್ಧಿವಂತರಾದ ಮಂತ್ರಿಗಳೇ ರಾಜ್ಯದ ರಾಜ ರಹಸ್ಯಗಳನ್ನು ನಿಗೂಢವಾಗಿರಿಸುತ್ತಾರೆ” ಎನ್ನುವ ವಾಕ್ಯವಿದೆ. ಅದಕ್ಕೆ ತಕ್ಕಂತೆ ಇದ್ದವ ಸುಮಂತ್ರ.

ರಾಜ ಮತ್ತು ಅಮಾತ್ಯ ಈ ಇಬ್ಬರ ನಡುವೆ ಇರುವ ಸಂಬಂಧ ಪತಿ ಮತ್ತು ಧಾರಾ ಭಾವದಲ್ಲಿರಬೇಕು. ರಾಜನ ನಿರ್ಣಯದಲ್ಲಿ ದೋಷಕಂಡು ಅದರಲ್ಲಿ ಬದಲಾವಣೆ ಆಗಬೇಕಾದಾಗ ಬಹಿರಂಗವಾಗಿ ಆ ಕುರಿತು ಚರ್ಚಿಸಕೂಡದು. ಸಭಾಸದರ ಎದುರು ಸತ್ಯವೇ ಆದರೂ ಅದನ್ನು ಪ್ರಕಟಿಸಿದರೆ ರಾಜನ ಮಹತ್ವ ಕಡಿಮೆಯಾಗಿಬಿಡುತ್ತದೆ. ಸಚಿವನಾದವ ಹೆಂಡತಿ ತನ್ನ ಗಂಡನಿಗೆ ಏಕಾಂತದಲ್ಲಿ ಹೇಗೆ ಎಲ್ಲವನ್ನು ತಿಳಿಸಿ ಹೇಳುತ್ತಾಳೆಯೋ ಅದೇ ರೀತಿ ರಾಜ ಏಕಾಂತದಲ್ಲಿರುವಾಗ ಆತ ತೆಗೆದುಕೊಂಡ ನಿರ್ಣಯಗಳ ಕುರಿತು ವಿಮರ್ಶಿಸಿ ಮಾಡಬೇಕಾದ ಬದಲಾವಣೆಗಳನ್ನು ತಿಳಿಸಿ ಕಾರ್ಯರೂಪಕ್ಕೆ ತರುವಂತೆ ನೋಡಿಕೊಳ್ಳಬೇಕು. ದಶರಥನಿಗೆ ಬಹುಕಾಲದವರೆಗೂ ಮಕ್ಕಾಳಾಗಿಲ್ಲದ ಕಾರಣದಿಂದ ಆತ ತನ್ನ ಮಂತ್ರಿಗಳನ್ನು ಪುರೋಹಿತರಾದ ವಶಿಷ್ಠ, ವಾಮದೇವರನ್ನೂ ಕರೆಯಿಸಿ ಅವರಲ್ಲಿ ಪರಿಹಾರ ಕೇಳಿದಾಗ, ಅವರು ರಾಜನಿಗೆ ಅಶ್ವಮೇಧ ಯಾಗವನ್ನು ಮಾಡಲು ಸಲಹೆನೀಡುತ್ತಾರೆ. ಅದಕ್ಕೆ ದೊರೆ ಒಪ್ಪಿಗೆ ಸೂಚಿಸಿಯೂ ಆಗುತ್ತದೆ. ಆದರೆ ಅಲ್ಲೇ ಇದ್ದ ಸುಮಂತ್ರನಿಗೆ ಈ ಸಲಹೆ ಪೂರ್ತಿ ಮನಸ್ಸಿಗೆ ಬರಲಿಲ್ಲ. ಆತ ರಾಜನ ಅಂತಃಪುರಕ್ಕೆ ಸಾಯಂಕಾಲ ಬಂದು ರಾಜನಿಗೆ ಮಹತ್ವದ ವಿಷಗಳ ಕುರಿತು ಹೇಳುತ್ತಾನೆ.

ಸುಮಂತ್ರನ ಪಾತ್ರ ಮಹಾಭಾರತದ ವಿದುರನ ಪಾತ್ರವನ್ನು ಹೋಲುತ್ತದೆ. ಆತನಿಗೂ ವಿದುರನಂತೆ ಮಹಾನ್ ಋಷಿಗಳ ಸಂಪರ್ಕವಿತ್ತು. ಅವರಲ್ಲಿ ತನ್ನ ವಯಕ್ತಿಕವಾದ ವಿಷಯಗಳನ್ನು ಕೇಳುವುದಕ್ಕಿಂತ ಆತ ರಾಜ್ಯದ ಕಲ್ಯಾಣದ ವಿಷಯಗಳನ್ನು ಕೇಳುತ್ತಿದ್ದ. ಅಯೋಧ್ಯೆಯ ಅರಸನಿಗೆ ಮಕ್ಕಳಾಗಿಲ್ಲದ ವಿಷಯಗಳ ಕುರಿತು ಸುಮಂತ್ರನಿಗೂ ಚಿಂತೆ ಆಗಿತ್ತು. ಆ ಕುರಿತು ಆತ ಪರಿಹಾರಕ್ಕಾಗಿ ಅನೇಕ ಋಷಿಗಳನ್ನು ಬೇಡಿಕೊಳ್ಳುತ್ತಿದ್ದ. ಒಂದುಸಲ ಸುಮಂತ್ರ ಮಹಾತ್ಮರಾದ ಸನತ್ಕುಮಾರ ಋಷಿಗಳನ್ನು ಇನ್ನಿತರ ಮುನಿಗಳ ಸಮ್ಮುಖದಲ್ಲಿ ಭೇಟಿಯಾಗಿ ರಾಜನಿಗೆ ಮಕ್ಕಳಾಗುವಂತೆ ಬೇಡಿಕೊಂಡ. ಅದಕ್ಕೆ ಅವರು ವಿಭಾಂಡಕ ಮುನಿಯ ಮಗನಾದ ಋಷ್ಯಶೃಂಗನ ವಿಚಾರವನ್ನು ಹೇಳಿ, ಆತನ ಚರಿತ್ರೆಯನ್ನು ಅಮಾತ್ಯನಿಗೆ ವಿವರಿಸುತ್ತಾರೆ. ಋಷ್ಯಶೃಂಗನನ್ನು ಹೆಣ್ಣುಗಳ ಮೋಹದಲ್ಲಿ ಕೆಡಹಿ ತನ್ನ ರಾಜ್ಯಕ್ಕೆ ಕರೆಯಿಸಿಕೊಂಡ ರೋಮಪಾದ ರಾಜ ತನ್ನ ಮಗಳಾದ ಶಾಂತಾದೇವಿಯನ್ನು ಕೊಟ್ಟು ಮದುವೆಮಾಡಿದ್ದಾನೆ. ಸುಮಂತ್ರನ ನಿಸ್ಪ್ರಹ ಪ್ರಾರ್ಥನೆಗೆ ಮೆಚ್ಚಿದ ಸನತ್ಕುಮಾರರು ಧಶರಥನಿಗೆ ಮಕ್ಕಳಾಗಬೇಕೆಂದಿದ್ದರೆ ಆತ ಅಂಗರಾಜ್ಯಕ್ಕೆ ಹೋಗಿ ರೋಮಪಾದನನ್ನು ಒಲಿಸಿ ಋಷ್ಯಶೃಂಗನನ್ನು ಅಯೋಧ್ಯೆಗೆ ಕರೆಯಿಸಿ ಆತನಿಂದ ಪುತ್ರಕಾಮೇಷ್ಥಿ ಯಾಗವನ್ನು ಮಾಡಿಸಿದರೆ ನಾಲ್ವರು ಮಕ್ಕಳಾಗುವರು ಎಂದು ಉಪಾಯವನ್ನೂ ಸಹ ಹೇಳಿದ್ದ. ಈ ವಿಷಯವನ್ನು ಸೂಕ್ತ ಸಮಯದಲ್ಲಿ ದಶರಥನಿಗೆ ಹೇಳಬೇಕೆಂದುಕೊಂಡು ಅದು ತನಕ ಹೇಳಿರಲಿಲ್ಲ.

ದೇವಗುಟ್ಟು, ಋಷಿ ಗುಟ್ಟುಗಳನ್ನು ಏಕಾಏಕೀ ಬಹಿರಂಗಪಡಿಸಬಾರದೆಂದು ಶಾಸ್ತ್ರ ಹೇಳುತ್ತದೆ. ಕಾಲವಲ್ಲದ ಕಾಲದಲ್ಲಿ ಅದನ್ನು ಹೇಳಿದರೆ ಅದು ಫಲ ನೀಡದೇ ಹೋಗಬಹುದು. ಅದೂ ಅಲ್ಲದೇ ಮನುಷ್ಯ ಪ್ರಯತ್ನ ಮೀರಿದಾಗ ಮಾತ್ರವೇ, ದೇವತೆಗಳಲ್ಲಿ ಅನುಗ್ರಹಕ್ಕಾಗಿ ಕೋರಬೇಕು. ಮಕ್ಕಳಾಗಲು ಅಶ್ವಮೇಧ ಯಾಗವನ್ನು ಮಾಡುವಂತೆ ವಶಿಷ್ಠರು ಸಲಹೆ ನೀಡಿದಾಗ ಸಭೆಯ ಮರ್ಯಾದೆಯ ದೃಷ್ಟಿಯಿಂದ ಅಲ್ಲಿ ಸುಮಂತ್ರ ಏನೂ ಹೇಳಲಿಲ್ಲ. ಮಂತ್ರಾಲೋಚನೆಯ ನೆಪದಲ್ಲಿ ಅಂತಃಪುರಕ್ಕೆ ಬಂದು ಅರಸನಿಗೆ ತಾನು ರಾಜನ ಸಲುವಾಗಿ ಸನತ್ಕುಮಾರರಲ್ಲಿ ಮಕ್ಕಳಾಗುವಂತೆ ವರಬೇಡಿದುದರ ವಿಷಯವನ್ನು ಬಹಿರಂಗಪಡಿಸುತ್ತಾನೆ. ಸನತ್ಕುಮಾರರೇ ಸಲಹೆ ನೀಡಿದಂತೆ ಪುತ್ರಕಾಮೇಷ್ಟಿಯಾಗವನ್ನು ಮಾಡಲು ಪ್ರೇರೇಪಿಸುತ್ತಾನೆ. ಪುತ್ರಕಾಮೇಷ್ಟಿಯಾಗ ಅಥರ್ವ ಮಂತ್ರಕ್ಕೆ ಸಂಬಂಧಿಸಿದುದರಿಂದ ಸಭೆಯಲ್ಲಿ ನೇರವಾಗಿ ಹೇಳಕೂಡದು ಎನ್ನುವ ಪ್ರಜ್ಞೆ ಸುಮಂತ್ರನಲ್ಲಿತ್ತು. ಪುರೋಹಿತರಾದ ವಶಿಷ್ಠರು ಆಸ್ಥಾನದಲ್ಲಿ ಇರುವಾಗ ಇನ್ನೊಬ್ಬ ಪುರೋಹಿತರನ್ನು ಕರೆಯಿಸಿ ಯಾಗ ಮಾಡುವ ಸಲಹೆ ನೀಡಿದರೆ ಅದರಿಂದ ವಶಿಷ್ಠರಿಗೆ ಅವಮಾನ ಆಗಿ ಕೋಪಿಸಿಕೊಳ್ಳಬಹುದೆನ್ನುವ ಆತಂಕವೂ ಮನೆಮಾಡಿತ್ತು.

ಈ ಹಿಂದೆ ವಶಿಷ್ಠ ಪರಂಪರೆಯ ಹಿರಿಯರು ಹರಿಶ್ಚಂದ್ರನ ತಂದೆ ಸತ್ಯವ್ರತ(ತ್ರಿಶಂಕು)ನಿಗೆ ಇನ್ನೊಬ್ಬ ಪುರೋಹಿತರನ್ನು ಕರೆದು ಯಾಗ ಮಾಡಿಸುವೆ ಎಂದಾಗ ಶಾಪ ಕೊಟ್ಟಿದ್ದ. ಈ ಕಾರಣದಿಂದ ಮಹಾರಾಜನೇ ಋಷ್ಯಶೃಂಗನನ್ನು ಕರೆತರುವ ವಿಚಾರದಲ್ಲಿ ವಶಿಷ್ಠರನ್ನು ಒಲಿಸಲಿ ಎನ್ನುವ ವಿವೇಕದ ನಡತೆ ಅವನಲ್ಲಿತ್ತು. ವಿದ್ವಾಂಸನೂ ಎಲ್ಲಾ ಕಾರ್ಯಗಳಲ್ಲಿ ಶುದ್ಧನಾಗಿರುವವನು, ದೇಶಿಯನು (ಜಾನಪದಃ), ತೀಕ್ಷ್ಣವಾದ ಬುದ್ಧಿಯುಳ್ಳವ (ಕೃತಪ್ರಜ್ಞಶ್ಚ) ಆದ ಮಂತ್ರಿಯನ್ನು ಅರಸ ಹೊಂದಿರಬೇಕೆನ್ನುವ ಶೃತಿವಾಕ್ಯಕ್ಕೆ ನಿದರ್ಶನನಾಗಿ ಸುಮಂತ್ರ ಇದ್ದ. ಸುಮಂತ್ರನ ಸಲಹೆಯನ್ನು ಸ್ವೀಕರಿಸಿದ ರಾಜ ವಶಿಷ್ಠರ ನೇತ್ರತ್ವದಲ್ಲಿ ಅಶ್ವಮೇಧ ಯಾಗವನ್ನೂ ಆ ನಂತರ ಋಷ್ಯಶೃಂಗರ ಅದ್ವರ್ಯದಲ್ಲಿ ಪುತ್ರಕಾಮೇಷ್ಟಿ ಯಾಗವನ್ನೂ ನಡೆಸಲು ವಶಿಷ್ಥರಿಂದ ಅನುಮತಿ ಪಡೆಯುತ್ತಾನೆ. ನಂತರ ದಶರಥನ ಪರಿವಾರದೊಡನೆ ಅಂಗದೇಶಕ್ಕೆ ಹೋಗಿ ರೋಮಪಾದನೊಡನೆ ಋಷ್ಯಶೃಂಗನನ್ನು ಯಾಗಕ್ಕಾಗಿ ಕರೆತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವ ಸುಮಂತ್ರನೇ.

ಮಂತ್ರಾಲೋಚನಾ ಪ್ರವೀಣ

ಸುಮಂತ್ರನಲ್ಲಿ ಮದ ಮತ್ಸರ ಕ್ರೋಧಗಳು ಮನೆಮಾಡಿರಲಿಲ್ಲ. ಅಯೋಧ್ಯೆಯಲ್ಲಿ ಮಂತ್ರಿಗಳಾಗುವವರನ್ನು ಕಾಯಕ, ವಾಚಕ, ಮಾನಸಿಕ, ಕರ್ಮಕೃತ ಮತ್ತು ಸಂಕೇತಜನಿತ ಎನ್ನುವ ಐದು ಅಂಗಗಳಿಂದ ಪರೀಕ್ಷಿಸಿ ತೇರ್ಗಡೆಯಾದವರನ್ನು ಮಂತ್ರಿಗಳಾಗಿ ತೆಗೆದುಕೊಳ್ಳಲಾಗುತ್ತಿತ್ತು. ಸುಮಂತ್ರ ಈ ಎಲ್ಲಾ ವಿಷಯಗಳಲ್ಲಿ ರಾಜನ ಮೊದಲ ಆಯ್ಕೆಯಾಗಿದ್ದ. ಸುಮಂತ್ರನೆನ್ನುವುದು ಈತನಿಗೆ ಅನ್ವರ್ಥನಾಮವಾಗಿದ್ದಿರಬೇಕು. ಮಂತ್ರಕ್ಕೆ ಸಚಿವ ಎನ್ನುವ ಅರ್ಥವಿದೆ. “ಸುಮಂತ್ರ” ಎಂದರೆ ಒಳ್ಳೆಯ ಸಲಹೆಯನ್ನು ಕೊಡುವವ ಎಂದು ಆಗುತ್ತದೆ. ಸುಮಂತ್ರ ಮಂತ್ರಾಲೋಚನೆಯಲ್ಲಿ ನಿಪುಣನಾಗಿದ್ದ. ಕುಮಾರವ್ಯಾಸನ ಭಾರತದಲ್ಲಿ ರಾಜನಿಗೆ ನೆರವಾಗಲು ಮಂತ್ರಾಲೋಚನೆಯಲ್ಲಿ ಸಮರ್ಥರಾದ ಸಚಿವರಿರಬೇಕು ಎನ್ನುತ್ತಾನೆ.

ಮಂತ್ರವುಳ್ಳವನವನೆ ಹಿರಿಯನು
ಮಂತ್ರವುಳ್ಳವನವನೆ ರಾಯನು
ಮಂತ್ರವುಳ್ಳವನವನೆ ಸಚಿವ ನಿಯೋಗಿಯೆನಿಸುವನು |
ಮಂತ್ರವಿಲ್ಲದ ಬರಿಯ ಬಲು ತಳ
ತಂತ್ರದಲಿ ಫಲವಿಲ್ಲವೈ ಸ್ವಾ
ತಂತ್ರವೆನಿಸಲ್ಕರಿವುದೇ ಭೂಪಾಲ ಕೇಳೆಂದ || ಸ. ಸಂ.1-49 ||

ರಾಜನಾದವ ಇಂಥ ಗುಣಲಕ್ಷಣಗಳನ್ನು ಹೊಂದಿರಬೇಕು, ಅಥವಾ ಅಂತವರನ್ನು ತನ್ನ ಆಪ್ತರನ್ನಾಗಿ ಆಯಾ ಹುದ್ಧೆಗಳಲ್ಲಿ ನಿಯುಕ್ತರನ್ನಾಗಿಸಿಕೊಳ್ಳಬೇಕು ಎನ್ನುವ ತಾತ್ಪರ್ಯ ಇದರಲ್ಲಿದೆ. ಸುಮಂತ್ರ ಈ ಎಲ್ಲಾ ಗುಣಗಳ ಸಾಕಾರ ಮೂರ್ತಿಯಾಗಿದ್ದ. ಅಯೋಧ್ಯೆಯಲ್ಲಿ ರಾಮನಿಗೆ ಪಟ್ಟಾಭಿಷೇಕವನ್ನು ನಡೆಸಲು ದಶರಥ ಹೂಡಿದ್ದ ಮಂತ್ರಾಲೋಚನೆ ಬಲು ಪ್ರಸಿದ್ಧ. ಅಲ್ಲಿ ಆತ ವಶಿಷ್ಠ, ವಾಮದೇವ ಮತ್ತು ಸುಮಂತ್ರನನ್ನು ಸೇರಿಸಿ ರಾಮನಿಗೆ ಯುವರಾಜ ಪಟ್ಟಾಭಿಷೇಕವನ್ನುಮಾಡುವ ತನ್ನ ಮನಸ್ಸಿನ ಆಶಯವನ್ನು ವ್ಯಕ್ತಪಡಿಸುತ್ತಾನೆ. ರಾಜನಿಗೆ ಅಶ್ವಪತಿಗೆ ಕೊಟ್ಟ ಮಾತು ತಪ್ಪಿಸಬೇಕಾಗಿದೆ. ಅದಕ್ಕೆ ಮಂತ್ರಿಗಳ ಒಪ್ಪಿಗೆ ಪಡೆದು ನಿಧಾನಕ್ಕೆ ಸಾಮಂತರ ಮತ್ತು ಪ್ರಜೆಗಳ ಒಪ್ಪಿಗೆಯನ್ನು ಪಡೆಯುವ ಹಂತದಲ್ಲಿ ಕರೆದ ಮಂತ್ರಾಲೋಚನೆ ಅದು. ಮಂತ್ರಾಲೋಚನೆಯ ವಿಷಯದಲ್ಲಿ ರಾಜ ಕೊಡಬೇಕಾದ ಮಹತ್ವವನ್ನು ಮಹಾಭಾರತದ ಶಾಂತಿಪರ್ವಲ್ಲಿ ವಿವರವಾಗಿ ಬಂದಿದೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

“ಮನ್ತ್ರಸಂಹನನೋ ರಾಜಾ ಮನ್ತ್ರಾಙ್ಗಾನೀತರೇ ಜನಾಃ – ಮಂತ್ರಾಲೋಚನೆಯೇ ರಾಜನ ದೇಹವಾಗಿರುತ್ತದೆ. ಮಂತ್ರಿಗಳು ರಾಜರಹಸ್ಯಕ್ಕೆ ಅಂಗಭೂತರಾಗಿರುತ್ತಾರೆ” ಮಂತ್ರಾಲೋಚನೆಯ ನಡೆಯುತ್ತಿರುವಾಗ ಆ ಸ್ಥಳದ ಸುತ್ತಮುತ್ತಲೂ ವಾಮನರೂ, ಕುಬ್ಜರೂ, ಸ್ತ್ರೀಯರೂ, ನಪುಂಸಕರೂ ಸುಳಿಯದಂತೆ ಎಚ್ಚರಿಕೆ ವಶಿಸಬೇಕೆಂದಿದೆ. ರಾಜ ಅಶ್ವಪತಿಗೆ ನೀಡಿದ ವರದ ಗುಟ್ಟು ತಿಳಿದಿರುವುದು ಅಲ್ಲಿ ಸೇರಿದ್ದ ಸುಮಂತ್ರನಿಗೆ ಮಾತ್ರ. ಹಾಗಾಗಿ ಅದನ್ನು ಮರೆಮಾಚಿ ರಾಮನಿಗೆ ಪಟ್ಟಕಟ್ಟುವ ವಿಷಯವನ್ನು ರಾಜನೇ ಪ್ರಸ್ತಾಪ ಮಾಡುವಾಗ ಅದನ್ನು ಮೌನವಾಗಿ ಅನುಮೋದಿಸುವವನು ಸುಮಂತ್ರ. ಇದರ ವಿವರವನ್ನು ದಶರಥನ ಭಾಗದಲ್ಲಿ ನೀಡಲಾಗಿದೆ. ಆನಂತರದಲ್ಲಿ ರಾಮನಿಗೆ ಅಯೋಧ್ಯೆಯ ಅಧಿಪತಿಯಾಗಿ ಪಟ್ಟಗಟ್ಟುವ ನಿರ್ಣಯವನ್ನು ತಿಳಿಸಲು ಕರೆತರಲು ಹೋಗುವುದೂ ಸಹ ಸುಮಂತ್ರನೇ. ರಾಜ ಸಭೆಯ ನಂತರ ಕೂಡಲೇ ದಶರಥ ಸುಮಂತ್ರನನ್ನು ಕರೆದು ಮಂತ್ರಾಲೋಚನೆ ಮಾಡುತ್ತಾನೆ. ರಾಜನಿಗೆ ಎಲ್ಲಿ ವಿಘ್ನಗಳು ಬಂದುಬಿಡುವವೋ ಎನ್ನುವ ಹೆದರಿಕೆ ಇದ್ದಿರಬೇಕು. ಆ ಕಾರಣಕ್ಕಾಗಿ ಇಬ್ಬರೂ ಸಮಾಲೋಚಿಸಿ ಮತ್ತೊಮ್ಮೆ ರಾಮನನ್ನು ದಶರಥನ ಅಂತಃಪುರಕ್ಕೆ ಕರೆತರಲು ಸುಮಂತ್ರನೇ ಹೋಗುತ್ತಾನೆ. ದಶರಥ ರಾಮನಲ್ಲಿ “ಭವನ್ತಿ ಬಹುವಿಘ್ನಾನಿ ಕಾರ್ಯಾಣ್ಯೇವಂವಿಧಾನಿ ಹಿ” ಎನ್ನುವ ಮೂಲಕ ಆತನ ಪಟ್ಟಾಭಿಷೇಕದ ವಿಷಯದಲ್ಲಿ ತನಗಿರುವ ಆತಂಕವನ್ನು ತೋಡಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ರಾಜನ ಸನಿಹದಲ್ಲಿದ್ದವ ಸುಮಂತ್ರ ಮಾತ್ರ. ರಾಮಾಯಣ ಮಹಾಕಾವ್ಯದಲ್ಲಿ ಸುಮಂತ್ರ ಮಾತನಾಡುವುದು ಬಲು ಕಡಿಮೆ. ಆದರೆ ಆತನ ಕಾರ್ಯದಕ್ಷತೆ ಪ್ರತಿಯೊಂದು ಸಂದರ್ಭಗಳಲ್ಲಿಯೂ ಎದ್ದು ಕಾಣುತ್ತದೆ.

ಸುಮಂತ್ರನ ರಾಜನಿಷ್ಠೆ ಮತ್ತು ಭಾವಪರವಶತೆಯ ಕುರಿತು ಮುಂದಿನ ಭಾಗದಲ್ಲಿ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ

Continue Reading
Advertisement
Karnataka Weather Forecast
ಮಳೆ30 seconds ago

Karnataka Weather : ಗುಡುಗು, ಸಿಡಿಲಿನ ಮಳೆಗೆ ಮನೆಯ ಗೋಡೆ ಕುಸಿತ; ನಾಳೆಗೂ ಇದೆ ಅಲರ್ಟ್‌

Narendra Modi
ದೇಶ14 mins ago

Narendra Modi: 3ನೇ ಸಲ ಗೆಲ್ಲಿಸಿದ ವಾರಾಣಸಿ ಜನತೆಗೆ ಧನ್ಯವಾದ ಎಂದ ಮೋದಿ; ಗೆದ್ದ ಬಳಿಕ ಮೊದಲ ಭೇಟಿ!

Electric Shock
ವಿಜಯಪುರ28 mins ago

Electric shock : ಮೀನು ಹಿಡಿಯಲು ಹೋದಾಗ ವಿದ್ಯುತ್‌ ಪ್ರವಹಿಸಿ ಬಾಲಕರಿಬ್ಬರು ಮೃತ್ಯು; ಕುಟುಂಬಸ್ಥರ ಆಕ್ರಂದನ

Woman having headache. stressed, Migraine, World Brain Tumor day
ಆರೋಗ್ಯ34 mins ago

Migraine Problem: ಮೈಗ್ರೇನ್‌ ಉಪಶಮನಕ್ಕೆ ರೋಸ್‌ಮೆರಿ ಸುಗಂಧ ತೈಲ ಮದ್ದು!

Indian Women
ವಿದೇಶ48 mins ago

ಭಾರತದಿಂದ ಅಮೆರಿಕಕ್ಕೆ ತೆರಳಿ, 29 ವರ್ಷದ ಯುವತಿಯನ್ನು ಕೊಂದ ಪಂಜಾಬ್‌ ವ್ಯಕ್ತಿ; ಇಷ್ಟೇಕೆ ಸೇಡು?

Pavithra Gowda
ಪ್ರಮುಖ ಸುದ್ದಿ51 mins ago

Pavithra Gowda: ಪೊಲೀಸ್ ಕಸ್ಟಡಿಯಲ್ಲಿದ್ದ ಪವಿತ್ರಾ ಗೌಡ ಅಸ್ವಸ್ಥ; ಆಸ್ಪತ್ರೆಗೆ ಶಿಫ್ಟ್‌

International Yoga Day 2024
ಫ್ಯಾಷನ್1 hour ago

International Yoga Day 2024: ಯುವತಿಯರ ಯೋಗಾಭ್ಯಾಸಕ್ಕೆ ಸಾಥ್‌ ನೀಡುವ 3 ಶೈಲಿಯ ಫ್ಯಾಷನ್‌ವೇರ್ಸ್

wild animals Attack
ಕೊಡಗು1 hour ago

Wild Animals Attack : ಮನೆಯಂಗಳವನ್ನು ಧ್ವಂಸ ಮಾಡಿದ ಆನೆಗಳು; ಗ್ರಾಮಕ್ಕೆ ಓಡೋಡಿ ಬಂದ ಕರಡಿ

Viral Video
ಕ್ರಿಕೆಟ್1 hour ago

Viral Video: ಅಭಿಮಾನಿ ಮೇಲೆ ಹಲ್ಲೆಗೆ ಯತ್ನಿಸಿದ ಪಾಕ್​ ವೇಗಿ; ತಡೆದು ನಿಲ್ಲಿಸಿದ ಪತ್ನಿ

Kempegowda Jayanti
ಕರ್ನಾಟಕ2 hours ago

Kempegowda Jayanti: ಬೆಂಗಳೂರಲ್ಲಿ ಜೂನ್ 27ಕ್ಕೆ ಕೆಂಪೇಗೌಡ ಜಯಂತಿ: ಡಿಸಿಎಂ ಡಿ.ಕೆ.ಶಿವಕುಮಾರ್‌

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು1 day ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 day ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ3 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ4 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ4 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌