ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕ ಸಂಕಲ್ಪದ ಹಿಂದಿನ ಗೂಢಗಳು - Vistara News

ಅಂಕಣ

ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕ ಸಂಕಲ್ಪದ ಹಿಂದಿನ ಗೂಢಗಳು

ಧವಳ ಧಾರಿಣಿ ಅಂಕಣ: ರಾಮಾಯಣದಲ್ಲಿ ದಶರಥನ ಮೇಲೆ ಇರುವ ದೊಡ್ಡ ಆಪಾದನೆ ಎಂದರೆ ಭರತನನ್ನು ತಪ್ಪಿಸಿ ರಾಮನಿಗೆ ಪಟ್ಟ ಕಟ್ಟಲು ಮುಂದಾದ ಎನ್ನುವುದು, ಇದು ನಿಜವೇ?

VISTARANEWS.COM


on

king dasharatha dhavala dharini
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಾತು ಮರೆತ ದಶರಥ

dhavala dharini by Narayana yaji

ವಿಪ್ರೋಷಿತಶ್ಚ ಭರತೋ ಯಾವದೇವ ಪುರಾದಿತಃ.
ತಾವದೇವಾಭಿಷೇಕಸ್ತೇ ಪ್ರಾಪ್ತಕಾಲೋ ಮತೋ ಮಮ৷৷ಅ.4.25৷৷

ಮೇಲಾಗಿ ಭರತನು ಈ ಸಮಯದಲ್ಲಿ ಪಟ್ಟಣದಿಂದ ದೂರವಿರುವನು. ನನ್ನ ಅಭಿಪ್ರಾಯದಂತೆ (ಆತನು ಹಿಂತಿರುಗಿ ಬರುವುದರೊಳಗಾಗಿ) ಈ ಸಮಯವೇ ನಿನ್ನ ಪಟ್ಟಾಭಿಷೇಕಕ್ಕೆ ಯೋಗ್ಯ ಪ್ರಾಪ್ತಕಾಲವಾಗಿದೆ.

ರಾಮಾಯಣದಲ್ಲಿ ದಶರಥನ ಮೇಲೆ ಇರುವ ಬಹುದೊಡ್ಡ ಆಪಾದನೆ ಎಂದರೆ ಆತ ಕೈಕೇಯಿಯನ್ನು ಮದುವೆಯಾಗುವ ಮೊದಲು ಆಕೆಯ ತಂದೆಯಾದ ಅಶ್ವಪತಿ ಮಹಾರಾಜನಿಗೆ “ಕೈಕೇಯಿಯ ಮಕ್ಕಳಿಗೆ ಕೋಸಲ ರಾಜ್ಯವನ್ನು ಕನ್ಯಾಶುಲ್ಕವಾಗಿ ಕೊಡುತ್ತೇನೆ” ಎನ್ನುವ ಭಾಷೆಯನ್ನು ಕೊಟ್ಟು ಮದುವೆಯಾಗಿದ್ದಾನೆ. ಅದನ್ನು ಮರೆಮಾಚಿ ರಾಮನಿಗೆ ಪಟ್ಟವನ್ನು ಕಟ್ಟಲು ಹೊರಟಿದ್ದಾನೆ. ಭಾಷೆಯ ವಿಷಯ ಆತನ ನಂಬಿಗಸ್ಥ ಮಂತ್ರಿಯಾದ ಸುಮಂತ್ರನಿಗೂ ಗೊತ್ತಿತ್ತು. ವಂಚನೆಯಿಂದ ಹೂಡಿದ ಈ ಕಾರಣಕ್ಕಾಗಿಯೇ ರಾಮನಿಗೆ ಪಟ್ಟಾಭಿಷೇಕದ ಯೋಗ ಮುರಿದು ಕಾಡಿಗೆ ಹೋಗಬೇಕಾಗಿ ಬಂತು. ರಾಮನಿಗೆ ಪಟ್ಟಗಟ್ಟುವ ನಿರ್ಣಯವನ್ನು ತೆಗೆದುಕೊಂಡಾಗ ದಶರಥ ಮೇಲೆ ಉಲ್ಲೇಖಿಸಿರುವ ಶ್ಲೋಕವನ್ನು ತನ್ನ ಮಗ ರಾಮನಲ್ಲಿ ಹೇಳಿರುವುದು. “ಭರತನೇನಾದರೂ ಕೇಕಯದಿಂದ ಬಂದುಬಿಟ್ಟರೆ ಕಷ್ಟವಾಗಿಬಿಡುತ್ತದೆ. “ಭವನ್ತಿ ಬಹು ವಿಘ್ನಾನಿ ಕಾರ್ಯಾಣ್ಯೇವಂವಿಧಾನಿ ಹಿ” ಮಹಾಕಾರ್ಯಗಳಾಗಬೇಕಾದರೆ ಬಹುವಿಧವಾದ ವಿಘ್ನಗಳು ಎದುರಾಗುತ್ತವೆ. ಹಾಗಾಗಿ ಭರತನ ವಿಷಯದಲ್ಲಿ ಆಲೋಚನೆ ಮಾಡದೇ ನೀನು ನಾಳೆಯೇ ಪಟ್ಟವನ್ನು ಏರಲೇ ಬೇಕು ಎನ್ನುವ ಜಾಗರೂಕತೆಯ ಮಾತುಗಳು ಇಲ್ಲಿವೆ.

ರಾಮನೂ ಮೌನವಾಗಿ ಈ ಮಾತುಗಳಿಗೆ ಅನುಮತಿಯನ್ನು ಸೂಚಿಸಿ ಮುಂದಿನ ಸಿದ್ಧತೆಗಾಗಿ ತೆರಳುತ್ತಾನೆ. ಈ ಸಂಭಾಷಣೆಗಳಿಗೆ ಅರ್ಥವನ್ನು ಹುಡುಕುವುದಾದರೆ ದಶರಥನ ರಾಜತ್ವದ ಹೊಣೆಯನ್ನು ಮತ್ತು ನಿಭಾಯಿಸಬೇಕಾದ ಕರ್ತವ್ಯಗಳನ್ನು ವಿವೇಚಿಸುವುದೊಳ್ಳೆಯದು. ಇಬ್ಬರು ರಾಣಿಯರನ್ನು ಮದುವೆಯಾದರೂ ಆತನಿಗೆ ಸಂತಾನ ಭಾಗ್ಯವಿರಲಿಲ್ಲ. ಬಹು ದೀರ್ಘಕಾಲ ರಾಜ್ಯವನ್ನಾಳಿದ ದಶರಥನಿಗೆ ಕೊನೆ ಕೊನೆಗೆ ರಾಜತ್ವದ ಹೊಣೆಯ ಕುರಿತು ಉದಾಸೀನ ಭಾವ ಬಂದುಬಿಟ್ಟಿತ್ತು. ಆತ ಕೊನೆಯ ಪ್ರಯತ್ನವೆನ್ನುವಂತೆ ಕೇಕಯ ರಾಜ ಅಶ್ವಪತಿಯಲ್ಲಿ ಹೋಗಿ ವಧುವನ್ನು ಬೇಡಿದ್ದ. ಪರಾಕ್ರಮಶಾಲಿ ಮತ್ತು ಪ್ರತಿಷ್ಠಿತ ಮನೆತನಕ್ಕೆ ಕನ್ಯೆಯನ್ನು ಕೊಡಲು ಅಶ್ವಪತಿಗೆ ಗೊಂದಲವುಂಟಾಗಿದೆ. ಇಲ್ಲ ಎನ್ನುವ ಹಾಗೆಯೂ ಇಲ್ಲ, ಕೊಟ್ಟರೆ ತನ್ನ ಮಗಳ ಭವಿಷ್ಯ ಹೇಗೋ ಎನ್ನುವ ಚಿಂತೆ.

ಹಾಗಾಗಿ ತಂದೆಯಾಗಿ ತನ್ನ ಮಗಳ ಸಂತಾನದ ಭದ್ರತೆಯ ಕುರಿತು ಪ್ರಶ್ನಿಸಿದ್ದರೆ ಅದು ಸಹಜ. ಹೇಗೂ ಮೊದಲ ಇಬ್ಬರ ಪತ್ನಿಯರಿಗೆ ಸಂತಾನ ಆಗಿಲ್ಲ. ಹಾಗಾಗಿ ಕೈಕೇಯಿಗೆ ಮಕ್ಕಳಾದರೆ ಸಹಜವಾಗಿಯೇ ಅವಳ ಮಕ್ಕಳಿಗೇ ದೊರೆತನ ಪ್ರಾಪ್ತವಾಗುತ್ತದೆ. ಸೂರ್ಯವಂಶದ ಅರಸು ಮನೆತನವಾಗಿರುವುದರಿಂದ, ಧರ್ಮಿಷ್ಟರಾದ ವಸಿಷ್ಠರು, ವಾಮದೇವ ಮುಂತಾದವರಿರುವುದರಿಂದ ರಾಜನಾಗಲು ಬೇಕಾಗಿರುವ ಅರ್ಹತೆಯ ವಿಷಯದಲ್ಲಿ ಯಥಾಯೋಗ್ಯವಾಗಿ ಅವರು ಸಿದ್ಧ ಮಾಡುತ್ತಾರೆ. ಹಾಗಾಗಿ ಕೋಸಲ ರಾಜ್ಯವನ್ನು ಕನ್ಯಾಶುಲ್ಕವಾಗಿ ದಶರಥ ಕೊಟ್ಟಿರುವುದು ಕಾಲೋಚಿತವಾಗಿ ಆಗಿರುವುದರಲ್ಲಿ ಯಾವ ಸಂದೇಹವೂ ಇಲ್ಲ. ಪ್ರಶ್ನೆ ಬಂದಿರುವುದು ರಾಮ ಪಟ್ಟಾಭಿಷೇಕದ ವಿಷಯದಲ್ಲಿ ದಶರಥ ತನ್ನ ಮಾತನ್ನು ಯಾಕೆ ನಡೆಸಿಲ್ಲವೆನ್ನುವುದು.

ಕಾವ್ಯವನ್ನು ವಿವೇಚಿಸಬೇಕಾದಾಗ ಕವಿಯ ಆಲೋಚನೆಯನ್ನು ಅಥವಾ ಆತ ಪಾತ್ರವನ್ನು ಸಮರ್ಥವಾಗಿ ನಿರೂಪಿಸಿಲ್ಲವೆಂದು ಟೀಕೆ ಮಾಡುವುದಲ್ಲ. ಕಾವ್ಯದ ತಿರುಳು ತರ್ಕದಲ್ಲಿ ಇರುವುದಿಲ್ಲ. ಬಿ. ಎಚ್. ಶ್ರೀಧರ ಅವರು ಸಾಹಿತ್ಯ ವಿಮರ್ಶೆಯ ಕುರಿತು “Logic of beauty-ರಸತರ್ಕವು ಪ್ರಸ್ತುತವಲ್ಲದೇ, Beauty of Logic-ಶುದ್ಧ ತರ್ಕದ ಸೌಂದರ್ಯವಲ್ಲ” ಎನ್ನುತ್ತಾರೆ. (ಕಾವ್ಯ ಸೂತ್ರ- ಬಿ. ಎಚ್. ಶ್ರೀಧರ) ರಾಮಾಯಣವನ್ನು ಆಸ್ವಾದಿಸಬೇಕಾದರೆ ಮೊದಲು ರಾಮನ ಪಟ್ಟಾಭಿಷೇಕದ ಸಂದರ್ಭವನ್ನು ಗಮನಿಸಬೇಕು. ಶ್ರೀರಾಮ ಪಟ್ಟಾಭಿಷೇಕವೆನ್ನುವುದು ರಾಮಯಣದ ಮಹತ್ವದ ಘಟ್ಟ. ಹಿರಿಯ ಮಗನಾಗಿ ರಾಮ ಪಟ್ಟವನ್ನೇರಿ ರಾಜನಾಗಿದ್ದರೆ ಸೂರ್ಯವಂಶದ ಮತ್ತೋರ್ವ ದೊರೆಯಾಗಿ ಮರೆಯಾಗುತ್ತಿದ್ದ. ರಾಮಾಯಣ ಕಾವ್ಯವೇ ಇರುತ್ತಿರಲಿಲ್ಲ. ರಾಮನ ಪಟ್ಟಾಭಿಷೇಕ ಭಂಗವಾಗಲೇ ಬೇಕಿತ್ತು. ಆದರೆ ಅದಕ್ಕಿರುವ ನಾಟಕೀಯ ತಿರುವು ಮಾತ್ರ ಯಾವ ಕಾಲಕ್ಕೂ ಪ್ರಸ್ತುತವಾದಂತವು.

ರಾಮಾಯಣ ಮನುಷ್ಯನ ಸಿಟ್ಟು, ಈರ್ಷ್ಯೆ, ಸೆಡವು, ದುಃಖ, ಸಂತಸಗಳನ್ನೆಲ್ಲವನ್ನು ಒಳಗೊಂಡಿದೆ. ಮಾನವ ಸಹಜವಾದ ದೌರ್ಬಲ್ಯ ಕಾವ್ಯಕುಂಚದಲ್ಲಿ ಕಲಾತ್ಮಕವಾಗಿ ಅರಳಿದೆ. ಎಲ್ಲವೂ ಸಹಜವಾಗಿ ನಡೆಯಿತು ಎನ್ನುವಾಗ ಅನಿರೀಕ್ಷಿತವಾದ ತಿರುವುಗಳು ರಾಮಾಯಣದಲ್ಲಿ ಬರುವಷ್ಟು ಬೇರೆ ಕಾವ್ಯದಲ್ಲಿ ಬರುವುದಿಲ್ಲ. ಮಹಾಭಾರತದ ಕಷ್ಟಗಳೆಲ್ಲವೂ ಮನುಷ್ಯನ ದೌರ್ಬಲ್ಯದ ಮೂಲದವು. ಅಲ್ಲಿ ಯಾರೂ ಆದರ್ಶರಾಗಿ ಕಾಣಿಸುವುದಿಲ್ಲ. ಅನುಕರಣೀಯರೂ ಆಲ್ಲ. “ರಾಮನ ನಡೆಯನ್ನು ಅನುಸರಿಸು, ಕೃಷ್ಣನ ತತ್ತ್ವವನ್ನು ಅರಿತು ಅನುಸರಿಸು” ಎನ್ನುವ ಗಾದೆ ರೂಢಿಯಲ್ಲಿದೆ. ರಘುಕುಲದ ಘನತೆಯ ದೊರೆ ಮಕ್ಕಳಿಲ್ಲದೇ ಬಹಳಕಾಲ ನೊಂದು ನಂತರ ಮಕ್ಕಳನ್ನು ಪಡೆದ. ಯಜ್ಞದಲ್ಲಿ ಮಹಾಪುರುಷನೇ ದೇವನಿರ್ಮಿತ ಪಾಯಸವನ್ನು ತಂದು ಕೊಟ್ಟಮೇಲೆ ತನ್ನಮಕ್ಕಳು ದೈವಾಂಶ ಸಂಭೂತರು ಎನ್ನುವ ಅರಿವು ದಶರಥನಿಗೆ ಆಗಬೇಕಿತ್ತು. ಅದಾಗಲಿಲ್ಲ. ತಾನೋರ್ವ ದೊರೆ ಎನ್ನುವುದನ್ನು ಮರೆತು ಲೋಕದ ಸಾಮಾನ್ಯ ತಂದೆಯಂತೆ ವರ್ತಿಸುತ್ತಿದ್ದ. ಅಶ್ವಮೇಧ ಯಾಗದಲ್ಲಿ ಎಲ್ಲವನ್ನೂ ದಾನಮಾಡಿ ಜಿತೇಂದ್ರಿಯತ್ವವನ್ನು ಪಡೆದಿರಬೇಕಾದ ರಾಜನಲ್ಲಿ ಮಕ್ಕಳ ಅದರಲ್ಲಿಯೂ ರಾಮನ ಮೇಲಿನ ಮೋಹವನ್ನು ಬಿಟ್ಟರೆ ಮತ್ತೇನೂ ಇರಲಿಲ್ಲ.

ಶಿವಧನುಸ್ಸನ್ನು ರಾಮ ಮುರಿಯುವಾಗ ದಶರಥ ಅಲ್ಲಿ ಇರಲಿಲ್ಲ. ಪರಶುರಾಮರು ಎದುರಾದಾಗ ವೈಷ್ಣವ ಧನಸ್ಸನ್ನು ಭಂಗಿಸಿದ ರಾಮನ ಪರಾಕ್ರಮವನ್ನು ಅಲ್ಲೇ ಇದ್ದೂ ಸಹ ದಶರಥ ನೋಡಲಿಲ್ಲ. ರಾಮನ ದಿವ್ಯ ರೂಪವನ್ನು ನೋಡುವ ಭಾಗ್ಯ ದಶರಥನಿಗೆ ಇಲ್ಲದೇ ಹೋಯಿತು. ಆತ ತನ್ನ ಕುಲದ ಅಭ್ಯುದಯಕ್ಕೆ ಮಕ್ಕಳನ್ನು ಬಯಸಿದ್ದ. ಹಾಗಾಗಿ ರಾಮನನ್ನು ಆತ ಕೇವಲ ಮುಪ್ಪಿನ ಕಾಲದಲ್ಲಿ ದೊರೆತ ಅಪೂರ್ವ ನಿಧಿಯಾಗಿ, ಪುನ್ನಾಮ ನರಕದಿಂದ ತಪ್ಪಿಸುವ ಪುತ್ರನಾಗಿ ನೋಡಿದನೇ ಹೊರತು ವಸಿಷ್ಠರಾಗಲಿ, ವಿಶ್ವಾಮಿತ್ರರಾಗಲಿ, ಅಗಸ್ತ್ಯರಾಗಲಿ ರಾಮನಲ್ಲಿ ಕಂಡ ಪರಮಧಾಮ ದೊರೆಗೆ ಬದುಕಿರುವಾಗ ಅರಿವಾಗಲೇ ಇಲ್ಲ. ಆತನ ಮಂತ್ರಿಯಾದ ಸುಮಂತ್ರನಿಗೆ ರಾಮ ಸಾಮಾನ್ಯನಲ್ಲ, ವಿಭೂತಿಪುರುಷ ಎನ್ನುವ ಅರಿವಿತ್ತು.

ರಾಮನ ಮೇಲೆ ದಶರಥನಿಗೆ ಮೋಹ ಉಂಟಾಗಲು ಕಾರಣ ಆತ ಹಿರಿಯ ಮಗನೆನ್ನುವುದು ಒಂದಾದರೆ ಇನ್ನೊಂದು ಆತನ ಗುಣಗಳು. ಅದರಲ್ಲಿಯೂ ಪರಶುರಾಮರನ್ನು ರಾಮ ಭಂಗಿಸಿದ ನಂತರ ಆತನ ಮೇಲಿನ ಅಭಿಮಾನವೇ ಅತಿಮೋಹವಾಗಿ ಪರಿಣಮಿಸಿತ್ತು. ತನ್ನ ಕುಲವನ್ನು ಕ್ಷತ್ರಿಯ ವೈರಿಯಿಂದ ರಕ್ಷಿಸಿದ ಮಹಾಶೂರ ಎನ್ನುವುದು ಕಾರಣವೂ ಇದ್ದಿರಬಹುದು. ಮಿಥಿಲೆಯಿಂದ ಅಯೋಧ್ಯೆಗೆ ಬಂದ ನಂತರ ರಾಜನ ಮನಸ್ಸಿನಲ್ಲಿ ಯಾವುದೋ ಒಂದು ಚಿಂತೆ ಕಾಡುತ್ತಿತ್ತು. ಇದ್ದಕ್ಕಿದ್ದಂತೆ ಒಂದು ದಿನ ಆತ ಭರತನನ್ನು ಕರೆದು ಕೇಕಯದಿಂದ “ನಿನ್ನ ಸೋದರಮಾವ ಯುಧಾಜಿತ್ತನೆನ್ನುವವ ಬಂದಿದ್ದಾನೆ. ಆತನ ಸಂಗಡ ನೀನು ನಿನ್ನ ಅಜ್ಜನ ಮನೆಗೆ ಹೋಗಬೇಕು” ಎನ್ನುವ ಮಾತುಗಳನ್ನು ಆಡುತ್ತಾನೆ. ಅದಕ್ಕೆ ಕೊಡುವ ಕಾರಣ ಮಕ್ಕಳೆಲ್ಲರ ಮದುವೆಯ ಸಂದರ್ಭದಲ್ಲಿ ಅವರ ಸಂಬಂಧಿಕರೂ ಮಿಥಿಲೆಗೆ ಬಂದಿದ್ದರು. ಸಹಜವಾಗಿ ಕೇಕಯದಿಂದ ಯುಧಾಜಿತ್ತ ಬಂದಿದ್ದಾನೆ. ಅವನ ತಂದೆ ಅಶ್ವಪತಿ ಬಹುಶಃ ವೃದ್ಧಾಪ್ಯದ ಕಾರಣದಿಂದ ಬಂದಿರಲಿಕ್ಕಿಲ್ಲ. ಆತ ತನ್ನ ಮೊಮ್ಮಗನನ್ನು ನೋಡುವ ಇಚ್ಛೆಯನ್ನು ವ್ಯಕ್ತಪಡಿಸಿರಬೇಕು. ಮಿಥಿಲೆಯಲ್ಲಿ ಸೇರಿದ್ದ ಮಹರ್ಷಿಗಳ ಮುಂದೆ ಯುಧಾಜಿತ್ ಭರತನನ್ನು ತನ್ನ ಜೊತೆ ಕಳುಹಿಸಿಕೊಡು ಎಂದು ಹೇಳಿದ್ದ. “ಪ್ರಾರ್ಥಿತಸ್ತೇನ ಧರ್ಮಜ್ಞ ಮಿಥಿಲಾಯಾಮಹಂ ತಥಾ”. ಅಯೋಧ್ಯೆಗೆ ಹೋದ ಮೇಲೆ ನೊಡೋಣ, ಈಗ ಬೇಡ ಎಂದು ರಾಜ ಹೇಳಿರಬೇಕು.

ಆಗ ದಶರಥನಿಗೆ ಮಕ್ಕಳೆಲ್ಲರ ಮೇಲೆ ಮೋಹವಿತ್ತು. ಆ ಮೋಹ ಈಗ ರಾಮನ ಮೇಲೆ ಮಾತ್ರ ತಿರುಗಿಬಿಟ್ಟಿತ್ತು. ಮಕ್ಕಳಲ್ಲಿಯೂ ಲಕ್ಷ್ಮಣ ಸದಾ ರಾಮನೊಂದಿಗೆ ಇರುತ್ತಿದ್ದರೆ, ಶತ್ರುಘ್ನ ಭರತನನ್ನು ಅಗಲಿ ಇರುತ್ತಿರಲಿಲ್ಲ. ನಾಲ್ಕು ದೇಹ ಎರಡು ಜೀವವಾಗಿ ಮಕ್ಕಳ ಆಟೋಟಗಳಿದ್ದವು. ಸೂಕ್ಷ್ಮವಾಗಿ ರಾಜ ಮಕ್ಕಳ ಈ ಸ್ವಭಾವವನ್ನು ಗಮನಿಸಿದ. ಅದೇ ಹೊತ್ತಿಗೆ ಯುಧಾಜಿತ್ತ ಅಯೋಧ್ಯೆಗೆ ಬಂದು ಭರತನನ್ನು ಕೇಕಯಕ್ಕೆ ಕರೆದೊಯ್ಯಲು ಬಂದಿದ್ದಾನೆ. ಅಜ್ಜನ ಮನೆಯ ನೆಪ ಸಿಕ್ಕಿದ್ದೇ ಭರತನಿಗೆ “ನಿನ್ನ ಮಾವನನ್ನು ಇಚ್ಛೆಯನ್ನು ನಡೆಸಬೇಕಾಗಿರುವುದು ನಿನ್ನ ಧರ್ಮ- ತಸ್ಯ ತ್ವಂ ಪ್ರೀತಿಂ ಕರ್ತುಮಿಹಾರ್ಹಸಿ” ಎಂದು ಹೇಳುತ್ತಾನೆ. ಭರತ ತನ್ನ ತಂದೆಗೆ ವಿಧೇಯನಾಗಿ ತನ್ನೊಟ್ಟಿಗೆ ಶತ್ರುಘ್ನನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ನಮಸ್ಕರಿಸಿ ಹೊರಟುಬಿಟ್ಟ. ಅಜ್ಜನ ಆಶೀರ್ವಾದವನ್ನು ಪಡೆಯಲು ಅವರ ಜೊತೆ ಪತ್ನಿಯರಾದ ಮಾಂಡವೀ ಮತ್ತು ಶ್ರುತಕೀರ್ತಿಯರು ಹೊರಟಿದ್ದಾರೆಂದು ಊಹಿಸಬಹುದು.

ದಶರಥ ಈಗ ನಿರುಮ್ಮಳನಾಗಿದ್ದಾನೆ. ಆತನ ಹೆಂಡತಿಯರಾದ ಸುಮಿತ್ರೆ, ಕೈಕೇಯಿ ಇಬ್ಬರೂ ಆಶೀರ್ವದಿಸಿ ಮಕ್ಕಳನ್ನು ಕಳುಹಿಸಿದರು. ಕೈಕೆ ಮುಗ್ಧಳೇನೂ ಅಲ್ಲ, ರಾಜಕಾರಣದಲ್ಲಿ ಅನಾಸಕ್ತಳೂ ಅಲ್ಲ. ಆಕೆಗೆ ಯುದ್ಧವಿದ್ಯೆ, ರಾಜನೀತಿಗಳ ಅರಿವು ಚನ್ನಾಗಿಯೇ ಇತ್ತು. ಯುದ್ಧ ಕೌಶಲ್ಯಕ್ಕೆ ಕೇಕಯ ರಾಜ್ಯ ಏಕೆ ಎನ್ನುವುದಕ್ಕೆ ಆಗಿನ ಕಾಲದ ಭೌಗೋಳಿಕ ಪರಿಸ್ಥಿತಿಯನ್ನು ಗಮನಿಸಿದರೆ ಈಗಿನ ಬಿಯಾಸ್ ಮತ್ತು ಗಾಂಧಾರ ದೇಶದ ನಡುವೆ ಕೇಕಯ ರಾಜ್ಯವಿತ್ತು. ಅಲ್ಲಿನ ದೊರೆ ಅಶ್ವಪತಿಗೆ ಪ್ರಾಣಿಗಳ ಭಾಷೆ ಅರ್ಥವಾಗುತ್ತಿತ್ತೆಂದು ಸುಮಂತ್ರ ಹೇಳುತ್ತಾನೆ. ಅಧ್ಯಾತ್ಮಿಕವಾಗಿ ಅಶ್ವಪತಿ ದೊರೆ ಬಹಳಷ್ಟು ಸಾಧನೆಯನ್ನು ಗೈದಿದ್ದ. ಉದ್ಧಾಲಕ ಮಹರ್ಷಿಗೆ ಪ್ರಾಚೀನಶಾಲಾ, ಬುಡಿಲ ಇನ್ನಿತರರು ವೈಶ್ವಾನರ ವಿದ್ಯೆಯನ್ನು ಕಲಿಯಲು ಬಂದಾಗ ತನಗೆ ಆ ಕುರಿತು ತಿಳಿದಿಲ್ಲ. ಕೇಕಯದ ರಾಜ ಅಶ್ವಪತಿ ಅದನ್ನು ಅರಿತಿದ್ದಾನೆ. ಅವನ ಹತ್ತಿರವೇ ಕಲಿಯೋಣವೆಂದು ಬಂದು ವೈಶ್ವಾನರ ವಿದ್ಯೆಯನ್ನು ಕಲಿತು ಲೋಕಕ್ಕೆ ನೀಡಿದ ಎಂದು ಛಾಂದೋಗ್ಯ ಉಪನಿಷತ್ತು ಹೇಳುತ್ತದೆ.

king dasharatha

ಯುಧಾಜಿತ್ ಯುದ್ಧವಿದ್ಯೆಯಲ್ಲಿಯೂ ನಿಪುಣನಾಗಿದ್ದ. ಪ್ರಬುದ್ಧ ಅರಸು ಮನೆತನವಾದ ಕೇಕಯದಲ್ಲಿ ರಾಜಕುಮಾರರಿಗೆ ಬೇಕಾಗಿರುವ ಎಲ್ಲಾವಿಧವಾದ ವಿದ್ಯೆಗಳೂ ಸಿಗುವುದರಲ್ಲಿ ಯಾವ ಅನುಮಾನವೂ ಇಲ್ಲದ ಕಾರಣದಿಂದ ಕೈಕೇಯಿಗಾಗಲೀ ಇನ್ನಿತರರಿಗಾಗಲೀ ಮಕ್ಕಳನ್ನು ಅಗಲುವಿಕೆಯ ನೋವು ಇಲ್ಲವಾಗಿತ್ತು. ಇತ್ತ ರಾಮಲಕ್ಷ್ಮಣರು ತಂದೆ ತಾಯಿಗಳ ಯೋಗಕ್ಷೇಮವನ್ನು ಚನ್ನಾಗಿಯೇ ನೋಡಿಕೊಳ್ಳುತ್ತಿದ್ದರು. ಅತ್ತ ಭರತ ಶತ್ರುಘ್ನರೂ ಸಹ ಅಜ್ಜನ ಮನೆಯಲ್ಲಿ ಸುಖವಾಗಿದ್ದರೂ ವೃದ್ಧನಾಗಿರುವ ತಮ್ಮ ತಂದೆ ತಾಯಿಗಳ ಸೇವೆಯನ್ನು ತಮಗೆ ಮಾಡಲು ಆಗುತ್ತಿರಲಿಲ್ಲವಲ್ಲಾ ಎನ್ನುವ ಕೊರಗು ಅವರನ್ನು ಆಗಾಗ ಕಾಡುತ್ತಿತ್ತು. ಕೆಲವೊಂದು ರಾಮಾಯಣದಲ್ಲಿ ಭರತ ಮತ್ತು ಶತ್ರುಘ್ನರು ವೃದ್ಧನಾಗಿರುವ ತಮ್ಮ ತಂದೆ ರಾಜ್ಯವನ್ನು ಹೇಗೆ ನಿರ್ವಹಿಸುತ್ತಾನೋ ಏನೋ! ಈಗಲಾದರೂ ರಾಮನನ್ನು ಯುವರಾಜನನ್ನಾಗಿ ಮಾಡಿರಬಹುದೇ ಎಂದು ಆಗಾಗ ಹೇಳಿಕೊಳ್ಳುತ್ತಿದ್ದರು ಎಂದಿದೆ. ಇದು ಪುಣೆಯ ಬಂಢಾರಕಾರ್ಸ್ ಇವರ ಸಂಶೋಧನೆಯಲ್ಲಿಲ್ಲ.

ಅಯೋಧ್ಯೆಯಲ್ಲಿ ದಶರಥ ಮಾತ್ರ ನಿರಾಳವಾಗಿದ್ದ. ಆದರೂ ಸಿಂಹಾಸನದ ವಾರಸುದಾರರ ಚಿಂತೆ ಆತನನ್ನು ಕಾಡುತ್ತಿತ್ತು. ಮದುವೆಯ ಕಾಲಕ್ಕೆ ಕೊಟ್ಟ ಕನ್ಯಾಶುಲ್ಕ ಅವನಿಗೆ ನೆನಪಿತ್ತು. ಪ್ರಾಚೀನ ಭಾರತದಲ್ಲಿ ಸೂರ್ಯವಂಶದ ದೊರೆತನವೆನ್ನುವುದು ವಂಶಪರಂಪರೆಯಾದರೂ ಅದಕ್ಕೆ ಮಾಂಡಲಿಕರ, ಋಷಿಗಳ, ಪ್ರಜಾಜನರ ಒಪ್ಪಿಗೆ ಬೇಕಿತ್ತು. ಯಜುರ್ವೇದದಲ್ಲಿ ರಾಜನಾದವನಿಗೆ ಇರಬೇಕಾದ ಗುಣಗಳನ್ನು ಅನೇಕ ಅಧ್ಯಾಯಗಳಲ್ಲಿ ವಿವರಿಸಲಾಗಿದೆ. ಯಜುರ್ವೇದದ 6ರಿಂದ 10ನೇಯ ಅಧ್ಯಾಯಗಳಲ್ಲಿ ಬರುವ ವಿವರಣೆಗಳ ಸಾರದಂತೆ ರಾಜನಾಗಿರುವವನಿಗೆ “ಪರಾಕ್ರಮದಲ್ಲಿ ಆತ ಇಂದ್ರನಿಗೆ ಸಮನಾಗಿರಬೇಕು. ಯಮ ಸೂರ್ಯ ಅಗ್ನಿ ವರುಣ ಚಂದ್ರ ಮತ್ತು ಕುಬೇರ ಇವರುಗಳ ಗುಣಗಳು ಆತನಲ್ಲಿರಬೇಕು. ಧುರಭಿಮಾನಿಗಳಾದ ಶತ್ರುಗಳನ್ನು ಗಿಡುಗಪಕ್ಷಿ ಹೇಗೆ ಶತ್ರುಗಳ ಮೇಲೆ ಬಿದ್ದು ಅವುಗಳನ್ನು ನಿಗ್ರಹಿಸುತ್ತದೆಯೋ ಅದೇ ರೀತಿ ಪರಾಕ್ರಮವನ್ನು ಹೊಂದಿದವನಾಗಿರಬೇಕು. “ರಾಯಸ್ಪೋಷದೇ” ಪ್ರಜೆಗಳಿಗೆಲ್ಲರಿಗೂ ಧನಸಮೃದ್ಧಿಯನ್ನು ಉಂಟುಮಾಡುವವ ಆತನಾಗಿರಬೇಕು. ಇಂತಹ ಗುಣಗಳು ಯಾರಲ್ಲಿ ಇರುತ್ತದೆಯೋ, ಅಂತಹ ಸಮರ್ಥನನ್ನು ಎಲ್ಲ ಪ್ರಜೆಗಳು ಸೇರಿ ಅಂಗೀಕರಿಸಲು ಬಯಸುತ್ತೇವೆ” ಎನ್ನುವ ವಿವರಣೆಗಳಿವೆ.

ವಂಶಪಾರಂಪರ್ಯ ಅರಸು ಪದ್ಧತಿ ಇರುವ ರಾಜ್ಯಗಳೂ ಅಂದು ಇದ್ದವು. ಇಂಗ್ಲೆಂಡಿನಲ್ಲಿಯೂ ರಾಜತ್ವ ವಂಶಪಾರಂಪರ್ಯವಾಗಿದೆ. ಹಾಗಂತ ರಾಜಕುಟುಂಬದಲ್ಲಿ ಹುಟ್ಟಿದ ಮಾತ್ರಕ್ಕೆ ಎಲ್ಲರೂ ರಾಜರಾಗಲು ಸಾಧ್ಯವಿಲ್ಲ. ಅಲ್ಲಿಯೂ ಕೆಲವೊಂದು ಅನುಸರಿಸಲೇಬೇಕಾದ ಕಠಿಣ ನಿಯಮಗಳಿವೆ. ಈ ಹಿನ್ನೆಲೆಯಲ್ಲಿ ದಶರಥ ಆಲೋಚಿಸಿರುವ ಸಾಧ್ಯತೆಗಳು ಹೆಚ್ಚಿವೆ. ವೃದ್ಧಾಪ್ಯದಲ್ಲಿ ಮಕ್ಕಳಾಗಿರುವುದರಿಂದ ದೊರೆಗೆ ಮಕ್ಕಳ ಮೇಲೆ ಮೋಹ ವಿಪರೀತವಾಗಿತ್ತು. ಅದರಲ್ಲಿಯೂ ರಾಮನ ಮೇಲಿನ ಮೋಹ ಇನ್ನುಳಿದ ಮೋಹವನ್ನು ಅಡಗಿಸಿಬಿಡುತ್ತಿತ್ತು. ಭರತ ಮತ್ತು ಶತ್ರುಘ್ನರ ಅಗಲಿಕೆ ಆತನನ್ನು ಆಗಾಗ ಬಾಧಿಸುತ್ತಿದ್ದರೂ ರಾಮನನ್ನು ನೋಡಿದ ತಕ್ಷಣ ಅದು ಪರಿಹಾರವಾಗುತ್ತಿತ್ತು. ತಮ್ಮನಾದ ಲಕ್ಷ್ಮಣನೊಂದಿಗೆ ರಾಮ ರಾಜ್ಯದ ಸಮಸ್ತ ಜವಾಬುದಾರಿಯನ್ನೂ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದ. ರಾಮನ ಕಡುಚಲುವು ಆತನ ಮನಸ್ಸನ್ನು ಸೆಳೆಯುತ್ತಿತ್ತು. ಅವನನ್ನು ನೊಡಿದವನಿಗೇ ಲೋಕವೇ ಮರೆತು ಹೋಗುತ್ತಿತ್ತು. ನಿರೋಗಕಾಯ, ತರುಣ, ವಾಗ್ಮಿ, ದೇಶಕಾಲವನ್ನು ತಿಳಿದವನು. ಯಾವ ಕಾಲದಲ್ಲಿ ಯಾವ ಸ್ಥಳದಲ್ಲಿ ಯಾವ ಯಾವ ಕೆಲಸವನ್ನು ಮಾಡಬೇಕೆನ್ನುವುದರ ವಿವೇಚನೆಯುಳ್ಳವನು. ಪರೇಂಗಿತಜ್ಞನು. ಅಪಕಾರಿಗಳ ವಿಷಯದಲ್ಲಿಯೂ ಪ್ರತಿಕ್ರಿಯೆ ತೋರದೇ ಸದ್ಭಾವದಿಂದಿರುವವನು. ಈ ಎಲ್ಲ ಗುಣಗುಳುಳ್ಳ ಏಕೈಕ ಪುರುಷನನ್ನು ಬ್ರಹ್ಮ ನಿರ್ಮಿಸಿದ್ದರೆ ಅದು ರಾಮರೂಪದಲ್ಲಿ ಎಂದು ಪ್ರಜೆಗಳು ಮಾತಾಡಿಕೊಳ್ಳುತ್ತಿದ್ದರು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಘನ ದಶರಥನಿಗೆ ನಿಲುಕದ ಅಪೂರ್ವ ಮಿಲನ

ಆತ ಲಕ್ಷ್ಮಣನೊಡಗೂಡಿ ರಾಜ್ಯದ ಸೀಮೆಯನ್ನು ಬಲಪಡಿಸಿದ್ದಲ್ಲದೇ ಶತ್ರುಗಳನ್ನು ಯುದ್ಧದಲ್ಲಿ ಜಯಿಸಿದ್ದನು. ಕೋಸಲ ಸೀಮೆ ರಾಮನ ನೇತೃತ್ವದಲ್ಲಿ ಮತ್ತಷ್ಟು ಬಲಿಷ್ಠವಾಯಿತು. ಸುಮಾರು ಹತ್ತು ವರ್ಷಗಳ ಕಾಲ ಕೋಸಲ ಸೀಮೆಯನ್ನು ರಾಮ ಲಕ್ಷ್ಮಣರು ಭದ್ರಪಡಿಸಿದ್ದರು. ರಾಮನಿಗೆ ಆಗ ಇಪ್ಪತ್ತೈದು ವರ್ಷವಾಗಿತ್ತು. ವಿಶ್ವಾಮಿತ್ರರ ಸಂಗಡ ರಾಮನನ್ನು ಕಳುಹಿಸುವಾಗ ರಾಮನಿಗೆ ಹದಿನೈದು ವರ್ಷಗಳಾಗಿತ್ತು. ಅರಣ್ಯಕ್ಕೆ ಹೋಗುವಾಗ ಅವನಿಗೆ ಇಪ್ಪತ್ತೈದು ವರ್ಷಗಳಾಗಿದ್ದವು ಎಂದು ಅರಣ್ಯಕಾಂಡದಲ್ಲಿ ಸೀತೆಯೇ ಸ್ವತಃ ರಾವಣನಿಗೆ ಹೇಳುತ್ತಾಳೆ. ದಿನನಿತ್ಯವೂ ರಾಮನ ಈ ಗುಣಗಳನ್ನು ನೋಡುತ್ತಿದ್ದಂತೆ ದಶರಥನ ಮನಸ್ಸಿನಲ್ಲಿ ಅದುಮಿಟ್ಟಿದ್ದ ಆಸೆಯೊಂದು ಎದ್ದು ಬಂತು. ಪ್ರಜೆಗಳ ಮನಸ್ಸನ್ನು ಗೆಲ್ಲುವ ಅವಕಾಶವನ್ನು ವಿಪುಲವಾಗಿ ಮಾಡಿಕೊಟ್ಟಿದ್ದ. ಮಂತ್ರಿ ಸುಮಂತ್ರ, ಗುರು ವಸಿಷ್ಠರ ಸಹಕಾರವೂ ಇದರೊಂದಿಗಿತ್ತು. ಈ ಎಲ್ಲದರ ಪರಿಣಾಮ ಅದ ಸಹಜವಾಗಿಯೇ ರಾಜನಿಗೆ ರಾಮನನ್ನು ರಾಜನನ್ನಾಗಿ ಪಟ್ಟಕ್ಕೆ ಏರಿಸಬೇಕೆಂದು ಮನಸಾದರೆ ಅದು ಸಹಜ. ಯಜುರ್ವೇದದಲ್ಲಿ ಹೇಳಿದ ಹೋಲಿಕೆಗೂ ರಾಮನ ಗುಣಗಳಿಗೂ ಹೋಲಿಕೆಯಾಗುವ ಶ್ಲೋಕವನ್ನು ವಾಲ್ಮೀಕಿ ಹೇಳುವುದು ಹೀಗೆ:

ಯಮಶಕ್ರಸಮೋ ವೀರ್ಯೇ ಬೃಹಸ್ಪತಿಸಮೋ ಮತೌ৷৷
ಮಹೀಧರಸಮೋ ಧೃತ್ಯಾಂ ಮತ್ತಶ್ಚ ಗುಣವತ್ತರಃ ৷৷ಅ.1.38৷৷

ಪರಾಕ್ರಮಗಳಲ್ಲಿ ಯಮ ಮತ್ತು ಇಂದ್ರರಿಗೆ ಸಮಾನನು, ಬುದ್ಧಿಯಲ್ಲಿ ಬೃಹಸ್ಪತಿಗೆ ಸಮಾನನು. ಪ್ರಜೆಗಳ ಧಾರಣ-ಪೋಷಣೆಯಲ್ಲಿ ಪರ್ವತಕ್ಕೆ ಸಮಾನನು. ಗಣದಲ್ಲಂತೂ ನನಗಿಂತಲೂ ಹೆಚ್ಚಿನವನು.

ಮೊದಲು ಪ್ರಜೆಗಳ ಮನಸ್ಸನ್ನು ತನ್ನ ಗುಣಗಳ ಮೂಲಕ ಗೆಲ್ಲುವ ಅವಕಾಶವನ್ನು ರಾಮನಿಗೆ ಕೊಟ್ಟ ದಶರಥನ ಮನಸ್ಸಿನಂತೆ ರಾಮನಲ್ಲಿ ಗುಣಗಳಿತ್ತು. ಸಹಜವಾಗಿಯೇ ಆತ ಮಳೆಗರೆಯುವ ಮೋಡವು ಹೇಗೆ ಪ್ರಿಯವಾಗುವುದೋ ಅದೇರೀತಿ ಪ್ರಜೆಗಳ ಮನಸ್ಸನ್ನು ಗೆದ್ದಿದ್ದನು. ಇದೇ ಸಮಯ ಎಂದುಕೊಂಡ ರಾಜನಿಗೆ ಒಮ್ಮೆ ಕನ್ನಡಿಯಲ್ಲಿ ಮುಖವನ್ನು ನೋಡಿಕೊಂಡಾಗ ಕಪ್ಪಾದ ತಲೆಕೂದಲಿನಲ್ಲಿ ಒಂದು ಬಿಳಿಯದಾದ ಕೂದಲು ಕಾಣಿಸಿತಂತೆ!? ತಡಮಾಡುವುದಲ್ಲ ಎಂದುಕೊಂಡವನೇ ಅವಸರವಸರವಾಗಿ ಸಭೆಯನ್ನು ಕರೆಯಲು ಮಂತ್ರಿಗಳಿಗೆ ಸೂಚನೆಯನ್ನು ನೀಡಿದ. ರಾಮನನ್ನು ಪಟ್ಟಕ್ಕೇರಿಸಲು ಆತನಿಗೆ ಒಂದು ನೆವ ಸಿಕ್ಕಂತಾಯಿತು.

ಪಟ್ಟಾಭಿಷೇಕದ ಈ ಹಿನ್ನೆಲೆಯಲ್ಲಿ ರಾಮ ಪಟ್ಟಾಭಿಷೇಕದ ವಿವರಣೆ ಮುಂದಿನ ಭಾಗದಲ್ಲಿ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಘುವಂಶದ ಘನತೆಯ ಚಕ್ರವರ್ತಿ ದಶರಥ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

ರಾಜಮಾರ್ಗ ಅಂಕಣ: ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು.

VISTARANEWS.COM


on

Koo

ಈ ಕಥೆಯಲ್ಲಿ ಅದ್ಭುತ ಸಂದೇಶ ಇದೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಕಥೆಗೆ ಮೂಲ ಯಾವುದು ಎಂದು ಕೇಳಬೇಡಿ. ಆದರೆ ಅದರಲ್ಲಿ ಅದ್ಭುತ ಸಂದೇಶ ಇರುವ ಕಾರಣ ಅದನ್ನು ಇಲ್ಲಿ ಬರೆಯುತ್ತಿದ್ದೇನೆ. ಇದು ಯಾವುದೋ ಒಂದು ವ್ಯಾಟ್ಸಪ್ ಗುಂಪಿನಲ್ಲಿ ಬಂದ ಲೇಖನ ಆಗಿದೆ.

ಹನುಮಂತನೂ ಒಂದು ರಾಮಾಯಣ ಬರೆದಿದ್ದ!

ವಾಲ್ಮೀಕಿ ರಾಮಾಯಣ ಬರೆದು ಮುಗಿಸಿದಾಗ ಅದನ್ನು ಓದಿದ ನಾರದನಿಗೆ ಅದು ಖುಷಿ ಕೊಡಲಿಲ್ಲ. ಆತ ಹೇಳಿದ್ದೇನೆಂದರೆ – ಇದು ಚೆನ್ನಾಗಿದೆ. ಆದರೆ ಹನುಮಂತ ಒಂದು ರಾಮಾಯಣ ಬರೆದಿದ್ದಾನೆ. ಅದಿನ್ನೂ ಚೆನ್ನಾಗಿದೆ!

ಈ ಮಾತು ಕೇಳದೆ ವಾಲ್ಮೀಕಿಗೆ ಸಮಾಧಾನ ಆಗಲಿಲ್ಲ. ಆತನು ತಕ್ಷಣ ನಾರದನನ್ನು ಕರೆದುಕೊಂಡು ಹನುಮಂತನನ್ನು ಹುಡುಕಿಕೊಂಡು ಹೊರಟನು. ಅಲ್ಲಿ ಹನುಮಂತನು ಧ್ಯಾನಮಗ್ನನಾಗಿ ಕುಳಿತು ಏಳು ಅಗಲವಾದ ಬಾಳೆಲೆಯ ಮೇಲೆ ಇಡೀ ರಾಮಾಯಣದ ಕಥೆಯನ್ನು ಚಂದವಾಗಿ ಬರೆದಿದ್ದನು. ಅದನ್ನು ಓದಿ ವಾಲ್ಮೀಕಿ ಜೋರಾಗಿ ಅಳಲು ಆರಂಭ ಮಾಡಿದನು. ಹನುಮಂತ “ಮಹರ್ಷಿ, ಯಾಕೆ ಅಳುತ್ತಿದ್ದೀರಿ? ನನ್ನ ರಾಮಾಯಣ ಚೆನ್ನಾಗಿಲ್ಲವೇ?” ಎಂದನು.

ಅದಕ್ಕೆ ವಾಲ್ಮೀಕಿ “ಹನುಮಾನ್, ನಿನ್ನ ರಾಮಾಯಣ ರಮ್ಯಾದ್ಭುತ ಆಗಿದೆ. ನಿನ್ನ ರಾಮಾಯಣ ಓದಿದ ನಂತರ ನನ್ನ ರಾಮಾಯಣ ಯಾರೂ ಓದುವುದಿಲ್ಲ!’ ಎಂದು ಮತ್ತೆ ಅಳಲು ಆರಂಭ ಮಾಡಿದನು. ಈ ಮಾತನ್ನು ಕೇಳಿದ ಹನುಮಾನ್ ತಾನು ರಾಮಾಯಣ ಬರೆದಿದ್ದ ಬಾಳೆಲೆಗಳನ್ನು ಅರ್ಧ ಕ್ಷಣದಲ್ಲಿ ಹರಿದು ಹಾಕಿದನು! ಅವನು ವಾಲ್ಮೀಕಿಗೆ ಹೇಳಿದ ಮಾತು ‘ಮಹರ್ಷಿ, ನೀವಿನ್ನು ಆತಂಕ ಮಾಡಬೇಡಿ. ಇನ್ನು ನನ್ನ ರಾಮಾಯಣ ಯಾರೂ ಓದುವುದಿಲ್ಲ!’

hanuman

ಹನುಮಾನ್ ಹೇಳಿದ ಜೀವನ ಸಂದೇಶ

‘ವಾಲ್ಮೀಕಿ ಮಹರ್ಷಿ. ನೀವು ರಾಮಾಯಣ ಬರೆದ ಉದ್ದೇಶ ನಿಮ್ಮನ್ನು ಜಗತ್ತು ನೆನಪಿಟ್ಟುಕೊಳ್ಳಬೇಕು ಎಂದು. ನನಗೆ ಆ ರೀತಿಯ ಆಸೆಗಳು ಇಲ್ಲ. ನಾನು ರಾಮಾಯಣ ಬರೆದ ಉದ್ದೇಶ ನನಗೆ ರಾಮ ನೆನಪಿದ್ದರೆ ಸಾಕು ಎಂದು! ರಾಮನ ಹೆಸರು ರಾಮನಿಗಿಂತ ದೊಡ್ಡದು. ರಾಮ ದೇವರು ನನ್ನ ಹೃದಯದಲ್ಲಿ ಸ್ಥಿರವಾಗಿದ್ದಾನೆ. ನನಗೆ ಇನ್ನು ಈ ರಾಮಾಯಣದ ಅಗತ್ಯ ಇಲ್ಲ!’

ಈಗ ವಾಲ್ಮೀಕಿ ಇನ್ನೂ ಜೋರಾಗಿ ಅಳಲು ತೊಡಗಿದನು. ಅವನ ಅಹಂಕಾರದ ಪೊರೆಯು ಕಳಚಿ ಹೋಗಿತ್ತು. ಆತನು ಒಂದಕ್ಷರವೂ ಮಾತಾಡದೆ ಹನುಮಂತನ ಪಾದಸ್ಪರ್ಶ ಮಾಡಿ ಹಿಂದೆ ಹೋದನು.

ಭರತ ವಾಕ್ಯ

ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

Continue Reading

ಅಂಕಣ

JEE Main 2024 Result: ದೇಶಕ್ಕೇ ಮೊದಲ ರ‍್ಯಾಂಕ್ ಪಡೆದ ರೈತನ ಮಗ! ಈತನ ಯಶಸ್ಸು ಸ್ಫೂರ್ತಿದಾಯಕ

JEE Main 2024 Result: ರೈತನ ಮಗನಾದ ಗಜರೆ ತಮ್ಮ ಗ್ರಾಮವನ್ನು ಬಿಟ್ಟು ನಾಗಪುರದಲ್ಲಿ ಜೆಇಇಗಾಗಿ ಕೋಚಿಂಗ್‌ ಪಡೆದಿದ್ದರು. ಅವರು ತಮ್ಮ 10ನೇ ತರಗತಿ ಪರೀಕ್ಷೆಗಳಲ್ಲಿ 97% ಅಂಕಗಳನ್ನು ಗಳಿಸಿದರು.

VISTARANEWS.COM


on

Nilkrishna Gajare JEE main 2024 result AIR 1
Koo

ಹೊಸದಿಲ್ಲಿ: ಮಹಾರಾಷ್ಟ್ರದ ವಾಶಿಮ್‌ನ ರೈತರ ಮಗ (farmer’s son) ನೀಲಕೃಷ್ಣ ಗಜರೆ (Nilkrishna Gajare) ಅವರು ಜೆಇಇ ಮೇನ್ 2024 ಪರೀಕ್ಷೆಯಲ್ಲಿ (JEE Main 2024 Result) ದೇಶಕ್ಕೇ ಅಗ್ರಸ್ಥಾನ (AIR 1, First Rank) ಪಡೆದಿದ್ದಾರೆ. ಪರೀಕ್ಷೆಯಲ್ಲಿ ಪರಿಪೂರ್ಣ ಅಂಕಗಳನ್ನು (100) ಗಳಿಸಿದ್ದಾರೆ. ದಕ್ಷೇಶ್ ಸಂಜಯ್ ಮಿಶ್ರಾ ಮತ್ತು ಆರವ್ ಭಟ್ ಕ್ರಮವಾಗಿ AIR 2 ಮತ್ತು 3 ಪಡೆದಿದ್ದಾರೆ. ದೇಶದ ವಿವಿಧ ರಾಜ್ಯಗಳ ಒಟ್ಟು 56 ವಿದ್ಯಾರ್ಥಿಗಳು ಪೂರ್ಣ ಅಂಕ ಗಳಿಸಿದ್ದಾರೆ.

ರೈತನ ಮಗನಾದ ಗಜರೆ ತಮ್ಮ ಗ್ರಾಮವನ್ನು ಬಿಟ್ಟು ನಾಗಪುರದಲ್ಲಿ ಜೆಇಇಗಾಗಿ ಕೋಚಿಂಗ್‌ ಪಡೆದಿದ್ದರು. ಅವರು ತಮ್ಮ 10ನೇ ತರಗತಿ ಪರೀಕ್ಷೆಗಳಲ್ಲಿ 97% ಅಂಕಗಳನ್ನು ಗಳಿಸಿದರು. “ಪರೀಕ್ಷೆಯನ್ನು ತೆಗೆದುಕೊಂಡ ನಂತರ, ನಾನು ಪ್ರಶ್ನೆ ಪತ್ರಿಕೆಯನ್ನು ವಿಶ್ಲೇಷಿಸಿದೆ. ನಾನು ದುರ್ಬಲ ವಿಷಯಗಳ ಮೇಲೆ ವಿಶೇಷ ಗಮನವನ್ನು ನೀಡುತ್ತಿದ್ದೇನೆ. JEEಯಂತಹ ಪರೀಕ್ಷೆಯನ್ನು ಉತ್ತರಿಸಲು ಸ್ಪಷ್ಟ ಪರಿಕಲ್ಪನೆಗಳನ್ನು ಹೊಂದಿರುವುದು ಬಹಳ ಮುಖ್ಯ. ಇದಲ್ಲದೆ ನಾನು ಒಂದಕ್ಕಿಂತ ಹೆಚ್ಚು ಬಾರಿ ಪ್ರಶ್ನೆಗಳನ್ನು ಅಭ್ಯಾಸ ಮಾಡುತ್ತೇನೆ” ಎಂದು ಗಜರೆ ಹೇಳಿದ್ದಾರೆ.

IIT- JEEಗೆ ತಯಾರಾಗಲು ಗಜರೆ 11ನೇ ತರಗತಿಯಲ್ಲಿ ALLEN ವೃತ್ತಿ ಸಂಸ್ಥೆಗೆ ಸೇರಿದರು. ಅವರು ತಮ್ಮ ಪ್ರಯಾಣದ ಅಡೆತಡೆಗಳನ್ನು ಹೇಗೆ ನಿವಾರಿಸಿಕೊಂಡರು ಎಂಬುದನ್ನು ಹಂಚಿಕೊಂಡಿದ್ದಾರೆ.

“ನನ್ನ ಜೆಇಇ ಪ್ರಯಾಣ 11ನೇ ತರಗತಿಯಲ್ಲಿ ಪ್ರಾರಂಭವಾದ ಮೊದಲ ಒಂದು ಅಥವಾ ಎರಡು ತಿಂಗಳುಗಳಲ್ಲಿ ನಾನು ಸ್ವಲ್ಪ ತೊಂದರೆಗಳನ್ನು ಎದುರಿಸಿದೆ. ಅಂದರೆ, 10ನೇ ತರಗತಿಗೆ ಹೋಲಿಸಿದರೆ 11 ಮತ್ತು 12ನೇ ತರಗತಿಗಳ ಪಠ್ಯಕ್ರಮವು ಸಾಕಷ್ಟು ವಿಸ್ತಾರವಾಗಿದೆ. ಆದ್ದರಿಂದ ನಾನು ಆರಂಭದಲ್ಲಿ ಕೆಲವು ತೊಂದರೆಗಳನ್ನು ಎದುರಿಸಿದೆ. ಆದರೆ ನಾನು ಕೈಬಿಡಲಿಲ್ಲ. ನನ್ನ ಅಧ್ಯಯನವನ್ನು ನಿರಂತರವಾಗಿ ಮುಂದುವರಿಸಿದೆ. ನಾನು ವಿದ್ಯಾರ್ಥಿಗಳಿಗೆ ನೀಡಲು ಬಯಸುವ ಸಂದೇಶ ಏನೆಂದರೆ, ನೀವು ಅಂತಹ ತೊಂದರೆಗಳನ್ನು ಎದುರಿಸಿದರೆ ಅಥವಾ ನನ್ನಿಂದ ಸಾಧ್ಯವೇ ಇಲ್ಲ ಎಂದು ಭಾವಿಸಿದರೆ, ಕೈಬಿಡಬೇಡಿ. ನಿಮ್ಮ ಸಿದ್ಧತೆಯನ್ನು ನಿರಂತರವಾಗಿ ಮುಂದುವರಿಸಿ. ಒಳ್ಳೆಯ ಫಲಿತಾಂಶ ದಕ್ಕುತ್ತದೆ” ಎಂದು ಅವರು ಇನ್‌ಸ್ಟಿಟ್ಯೂಟ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ವೇಳೆ ಹೇಳಿದರು.

“ಜೆಇಇ ಅಡ್ವಾನ್ಸ್ಡ್‌ನಲ್ಲಿ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್‌ ಸೀಟು ಪಡೆಯುವುದು ನನ್ನ ಗುರಿ. ಪ್ರಸ್ತುತ ಅದಕ್ಕಾಗಿ ತಯಾರಿ ನಡೆಸುತ್ತಿದ್ದೇನೆ” ಎಂದು ಗಜರೆ ಹೇಳಿದ್ದಾರೆ. ಐಐಟಿ-ಜೆಇಇ ಆಕಾಂಕ್ಷಿಗಳಿಗೆ ಗಜರೆ ಸಲಹೆಯನ್ನೂ ಹಂಚಿಕೊಂಡಿದ್ದಾರೆ. “ನಿಮ್ಮ ಗುರಿಯನ್ನು ಖಚಿತಪಡಿಸಿ. ಅದರ ಪ್ರಕಾರ ನಿಮ್ಮ ಸಿದ್ಧತೆಯನ್ನು ನಿರಂತರವಾಗಿ ಮಾಡಿ. ವಿಷಯಗಳನ್ನು ನಿಜವಾದ ಆಸಕ್ತಿಯಿಂದ ಅಧ್ಯಯನ ಮಾಡಿ. ಇದರಿಂದ ಅವು ಹೊರೆಯಾಗುವುದಿಲ್ಲ. ನಿಮ್ಮ ಸಿದ್ಧತೆಯನ್ನು ಸ್ಥಿರವಾಗಿ ಮತ್ತು ನಿರಂತರವಾಗಿ ಮಾಡಿ.”

56 ಅಭ್ಯರ್ಥಿಗಳಿಗೆ ಶೇ.100 ಅಂಕ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ಜೆಇಇ ಮುಖ್ಯ 2024 ಸೆಷನ್ 2 ಪರೀಕ್ಷಾ ಫಲಿತಾಂಶ (JEE Main 2024 Result session 2) ಪ್ರಕಟವಾಗಿದೆ. ಒಟ್ಟು 56 ಅಭ್ಯರ್ಥಿಗಳು (Students) ಶೇ.100 ಅಂಕಗಳನ್ನು ಗಳಿಸಿದ್ದು, ಕಳೆದ ಬಾರಿಗಿಂತ 13 ಹೆಚ್ಚು ವಿದ್ಯಾರ್ಥಿಗಳು ಇದನ್ನು ಪಡೆದಿದ್ದಾರೆ. ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು ಶೇ.100 ಅಂಕ ಪಡೆದಿದ್ದಾರೆ. ಕಟ್‌ಆಫ್‌ (Cut off marks) ಅಂಕಗಳನ್ನು ಕೂಡ 2.45%ರಷ್ಟು ಹೆಚ್ಚಿಸಲಾಗಿದೆ.

ಸಂಸ್ಥೆಯು ಇಂದು ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಖ್ಯ 2024 ಫಲಿತಾಂಶವನ್ನು ಬಿಡುಗಡೆ ಮಾಡಿದೆ. 2024ರ ಪರೀಕ್ಷೆಗಳಲ್ಲಿ ಒಟ್ಟು 9.24 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 8.2 ಲಕ್ಷ ಜನರು ಜನವರಿ ಮತ್ತು ಏಪ್ರಿಲ್‌ನಲ್ಲಿ ನಡೆದ JEE ಮುಖ್ಯ 2023 ಪರೀಕ್ಷೆಗಳಿಗೆ ಹಾಜರಾಗಿದ್ದರು. ಜೆಇಇ ಮುಖ್ಯ ಏಪ್ರಿಲ್ ಸೆಷನ್‌ಗೆ ಹಾಜರಾದವರು ತಮ್ಮ ಅಂಕಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು: jeemain.nta.ac.in.

ಇದನ್ನೂ ಓದಿ: JEE Main 2024 Result: ಜೆಇಇ ಮೇನ್‌ ಫಲಿತಾಂಶ ಪ್ರಕಟ, 56 ಅಭ್ಯರ್ಥಿಗಳಿಗೆ ಶೇ.100 ಅಂಕ, ಕಟ್‌ಆಫ್‌ 2.45% ಹೆಚ್ಚಳ

Continue Reading

ಅಂಕಣ

ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

ರಾಜಮಾರ್ಗ ಅಂಕಣ (Rajamarga column): ಅರ್ಜಿತ್ ಸಿಂಗ್‌ (Arijit Singh) ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷಿಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

VISTARANEWS.COM


on

arijit singh rajamarga column 2
Koo

ದ ಮ್ಯೂಸಿಕಲ್ ಲೆಜೆಂಡ್, ಜೇನು ದನಿಯ ಸರದಾರ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ (Rajamaraga Column): ಏಪ್ರಿಲ್ 25 ಬಂತು ಅಂದರೆ ಅದು ದೇಶದ ಯುವ ಸಂಗೀತ ಪ್ರೇಮಿಗಳಿಗೆ ಬಹಳ ದೊಡ್ಡ ಹಬ್ಬ. ಏಕೆಂದರೆ ಅದು ಅವರ ಹೃದಯದ ಬಡಿತವೇ ಆಗಿರುವ ಅರ್ಜಿತ್ ಸಿಂಗ್‌ (Arijit singh)) ಹುಟ್ಟಿದ ಹಬ್ಬ (Birthday)!

ಆತನ ವ್ಯಕ್ತಿತ್ವ, ಆತನ ಹಾಡುಗಳು, ಆತನ ಸ್ವರ ವೈವಿಧ್ಯ ಎಲ್ಲವೂ ಆತನ ಕೋಟಿ ಕೋಟಿ ಅಭಿಮಾನಿಗಳಿಗೆ ಹುಚ್ಚು ಹಿಡಿಸಿ ಬಿಟ್ಟಿವೆ. ಅದರಿಂದಾಗಿ ಇಂದು ಆತನಿಗೆ ದೇಶದಲ್ಲಿ ಸ್ಪರ್ಧಿಗಳೇ ಇಲ್ಲ ಎನ್ನುವುದನ್ನು ಅವನ ಸ್ಪರ್ಧಿಗಳೇ ಒಪ್ಪಿಕೊಂಡು ಬಿಟ್ಟಿದ್ದಾರೆ! ನಾನು ಇಂದು ಯಾವ ಕಾಲೇಜಿಗೆ ಹೋದರೂ ಅರ್ಜಿತ್ ಧ್ವನಿಯನ್ನು ಅನುಕರಣೆ ಮಾಡಿ ಹಾಡಲು ತೀವ್ರ ಪ್ರಯತ್ನ ಮಾಡುವ ಯುವಕ, ಯುವತಿಯರು ಇದ್ದಾರೆ. 2015ರಿಂದ ಆತನ ಜನಪ್ರಿಯತೆಯ ಗ್ರಾಫ್ ಕೆಳಗೆ ಬಂದದ್ದೇ ಇಲ್ಲ. ಅರ್ಜಿತ್ ಸಿಂಗ್‌ (Arijit Singh) ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷಿಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

ಆತನದ್ದು ಬಂಗಾಳದ ಸಂಗೀತದ ಹಿನ್ನೆಲೆಯ ಕುಟುಂಬ

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯಿಂದ ಬಂದವರು ಅರ್ಜಿತ್. ಅವನ ಅಜ್ಜಿ, ಅವನ ಅತ್ತೆ ಎಲ್ಲರೂ ಚೆನ್ನಾಗಿ ಹಾಡುತ್ತಿದ್ದರು. ಸಹಜವಾಗಿ ಹುಡುಗನಲ್ಲಿ ಸಂಗೀತದ ಆಸಕ್ತಿ ಮೂಡಿತ್ತು. ಒಂಬತ್ತನೇ ವರ್ಷಕ್ಕೆ ರಾಜೇಂದ್ರ ಪ್ರಸಾದ್ ಹಜಾರಿ ಎಂಬ ಶಾಸ್ತ್ರೀಯ ಸಂಗೀತದ ಗುರುವಿನಿಂದ ಸಂಗೀತದ ಕಲಿಕೆ ಆರಂಭವಾಯಿತು. ಬಂಗಾಳದಲ್ಲಿ ರಬೀಂದ್ರ ಸಂಗೀತದ ಪ್ರಭಾವದಿಂದ ಯಾರೂ ಹೊರಬರಲು ಸಾಧ್ಯವಿಲ್ಲ. ಅದರ ಜೊತೆಗೆ ವಿಶ್ವದ ಶ್ರೇಷ್ಠ ಸಂಗೀತಗಾರರಾದ ಮೊಜಾರ್ಟ್ ಮತ್ತು ಬೀತೊವೆನ್ ಅವರ ಹಾಡುಗಳನ್ನು ಕೇಳುತ್ತಾ ಅರ್ಜಿತ್ ಬೆಳೆದರು. ಅದರ ಜೊತೆಗೆ ಕಿಶೋರ್ ಕುಮಾರ್, ಮನ್ನಾಡೆ, ಹೇಮಂತ್ ಕುಮಾರ್ ಅವರ ಹಾಡುಗಳನ್ನು ಕೇಳುತ್ತಾ ಆರ್ಜಿತ್ ತನ್ನದೇ ಸಿಗ್ನೇಚರ್ ಧ್ವನಿಯನ್ನು ಸಂಪಾದನೆ ಮಾಡಿಕೊಂಡರು. ಸೂಫಿ ಹಾಡುಗಳು, ಗಜಲ್, ಪಾಪ್ ಹಾಡುಗಳು, ಶಾಸ್ತ್ರೀಯ ಹಾಡುಗಳು, ಭಜನ್, ಜಾನಪದ ಹಾಡುಗಳು….ಹೀಗೆ ಎಲ್ಲ ವಿಧವಾದ ಹಾಡುಗಳನ್ನು ಅದ್ಭುತವಾಗಿ ಹಾಡಲು ಕಲಿತರು.

ರಿಯಾಲಿಟಿ ಶೋದಲ್ಲಿ ಸೋಲು!

ಅರ್ಜಿತ್ ತನ್ನ 18ನೆಯ ವಯಸ್ಸಿನಲ್ಲಿ FAME GURUKUL ಎಂಬ ಟಿವಿ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು. ಚೆಂದವಾಗಿ ಹಾಡಿದರು ಕೂಡ. ಆದರೆ ಆಡಿಯೆನ್ಸ್ ಪೋಲ್ ಇದ್ದ ಕಾರಣ ಅದರಲ್ಲಿ ಸೋತರು. ಆದರೆ ಆತನ ಧ್ವನಿಯ ಮಾಧುರ್ಯವನ್ನು ಗುರುತಿಸಿದ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು ತನ್ನ ಮುಂದಿನ ಸಿನೆಮಾ ಸಾವರಿಯಾದಲ್ಲಿ ಒಂದು ಹಾಡನ್ನು ಆತನಿಂದ ಹಾಡಿಸಿದರು.

ಆದರೆ ಆ ಹಾಡು ಸಿನೆಮಾ ಎಡಿಟ್ ಆಗುವಾಗ ಬಿಟ್ಟು ಹೋಯಿತು! ಮುಂದೆ TIPS ಸಂಗೀತ ಕಂಪೆನಿ ಆತನೊಂದಿಗೆ ಒಪ್ಪಂದ ಮಾಡಿಕೊಂಡು ಹಲವು ಆಲ್ಬಂ ಸಾಂಗ್ಸ್ ರೆಕಾರ್ಡ್ ಮಾಡಿಕೊಂಡಿತು. ಆದರೆ ಅದ್ಯಾವುದೂ ಬಿಡುಗಡೆ ಆಗಲಿಲ್ಲ! ಆತನಲ್ಲಿ ಅಪ್ಪಟ ಪ್ರತಿಭೆ ಇದ್ದರೂ ದುರದೃಷ್ಟವು ಆತನಿಗಿಂತ ಮುಂದೆ ಇತ್ತು! ಆದರೆ ಈ ಸೋಲುಗಳ ನಡುವೆ ಅರ್ಜಿತ್ ಸಂಗೀತವನ್ನು ಬಿಟ್ಟು ಹೋಗಿಲ್ಲ ಅನ್ನೋದು ಅದ್ಭುತ!

ಮುಂದೆ ಇನ್ನೊಂದು ಟಿವಿ ರಿಯಾಲಿಟಿ ಶೋ (10ಕೆ 10ಲೆ ಗಯೇ ದಿಲ್)ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗೆದ್ದಾಗ ಆತನ ಬದುಕಿನಲ್ಲಿ ದೊಡ್ಡ ತಿರುವು ಉಂಟಾಯಿತು. ಆಗ ದೊರೆತ ಹತ್ತು ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ತಂದು ಮುಂಬೈಯಲ್ಲಿ ಒಂದು ಸ್ಟುಡಿಯೋ ಸ್ಥಾಪನೆ ಮಾಡಿದರು. ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ವಾಸ, ಒಂದು ಹೊತ್ತಿನ ಊಟವೂ ಕಷ್ಟ ಆಗಿದ್ದ ದಿನಗಳು ಅವು! ಅರ್ಜಿತ್ ಒಂದು ದೊಡ್ಡ ಬ್ರೇಕ್ ಥ್ರೂ ಕಾಯುತ್ತ ಕೂತಿದ್ದರು. ಈ ಅವಧಿಯಲ್ಲಿ ನೂರಾರು ಜಿಂಗಲ್, ಜಾಹೀರಾತುಗಳ ಸಂಗೀತವನ್ನು ಕಂಪೋಸ್ ಮಾಡಿ ಸ್ವತಃ ಹಾಡಿದರು.

arijit singh rajamarga column 2

2011ರಲ್ಲಿ ಅರ್ಜಿತ್ ಭಾಗ್ಯದ ಬಾಗಿಲು ತೆರೆಯಿತು!

ಆ ವರ್ಷ ಬಿಡುಗಡೆ ಆದ ಮರ್ಡರ್ 2 ಸಿನೆಮಾದ ‘ಫೀರ್ ಮೊಹಬ್ಬತೆ ‘ ಹಾಡು ಸೂಪರ್ ಹಿಟ್ ಆಯಿತು. ಬಾಲಿವುಡ್ ಆತನ ಟಿಪಿಕಲ್ ಧ್ವನಿಗೆ ಮಾರುಹೋಯಿತು. ಮುಂದೆ ರಬಟಾ ( ಏಜೆಂಟ್ ವಿನೋದ್), ಉಸ್ಕಾ ಹೀ ಬನಾನಾ (ಎವಿಲ್ ರಿರ್ಟರ್ನ್) ಲಾಲ್ ಇಷ್ಕ್ ಮತ್ತು ಗೋಲಿಯೋನ್ ಕಿ ರಾಸ ಲೀಲಾ (ರಾಮ್ ಲೀಲಾ) ಮೊದಲಾದ ಹಾಡುಗಳು ಭಾರೀ ಹಿಟ್ ಆದವು. ಮನವಾ ಲಾಗೇ ಮತ್ತು ಮಸ್ತ್ ಮಗನ್ ಹಾಡುಗಳು ಇಡೀ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದವು. ಪದ್ಮಾವತ್ ಸಿನೆಮಾದ ‘ಬಿನ್ ತೆ ದಿಲ್ ‘ ಹಾಡಿಗೆ ರಾಷ್ಟ್ರಪ್ರಶಸ್ತಿಯು ಒಲಿದು ಬಂತು. 7 ಫಿಲಂಫೇರ್ ಪ್ರಶಸ್ತಿಗಳು ಬಂದವು. ಹಿಂದೀ, ತೆಲುಗು, ತಮಿಳು, ಬಂಗಾಳಿ ಸಿನೆಮಾಗಳಲ್ಲಿ ಅರ್ಜಿತ್ ಅವರಿಗೆ ಭಾರೀ ಡಿಮಾಂಡ್ ಕ್ರಿಯೇಟ್ ಆಯಿತು. ಭಾರೀ ದೊಡ್ಡ ಫ್ಯಾನ್ ಬೇಸ್ ಡೆವಲಪ್ ಆಯಿತು. ಇಂದು ಅರ್ಜಿತ್ ತನ್ನ ಸಂಗೀತದ ಪ್ರತಿಭೆಯಿಂದ ಭಾರೀ ಎತ್ತರಕ್ಕೆ ಬೆಳೆದಿದ್ದಾರೆ.

ಜವಾನ್, ಡುಮ್ಕಿ, ಅನಿಮಲ್ ಮೊದಲಾದ ಇತ್ತೀಚಿನ ಸೂಪರ್ ಹಿಟ್ ಸಿನಿಮಾಗಳಲ್ಲಿ ಆರ್ಜಿತ್ ಹಾಡಿದ ಹಾಡುಗಳು ಇವೆ. ಆತ ಹಾಡಿದ ಎಲ್ಲ ಹಾಡುಗಳೂ ಸೂಪರ್ ಹಿಟ್ ಆಗಿವೆ.

ಸ್ಟುಡಿಯೋ ಹಾಡುಗಳು ಮತ್ತು ಸ್ಟೇಜ್ ಕಾರ್ಯಕ್ರಮಗಳು

ಹಿನ್ನೆಲೆ ಹಾಡುಗಳು ಮತ್ತು ಆಲ್ಬಂ ಹಾಡುಗಳನ್ನು ಸ್ಟುಡಿಯೋ ಒಳಗೆ ಹಾಡುವ ಟ್ಯಾಲೆಂಟ್ ಒಂದೆಡೆ. ಸ್ಟೇಜ್ ಮೇಲೆ ಲಕ್ಷಾಂತರ ಮಂದಿ ಹುಚ್ಚು ಅಭಿಮಾನಿಗಳ ಮುಂದೆ ಗಿಟಾರ್ ಹಿಡಿದುಕೊಂಡು ಹಾಡುವ ಟ್ಯಾಲೆಂಟ್ ಇನ್ನೊಂದೆಡೆ. ಆರ್ಜಿತ್ ಎರಡೂ ಕಡೆಯಲ್ಲಿ ಗೆದ್ದಿದ್ದಾರೆ. ದೇಶ ವಿದೇಶಗಳ ನೂರಾರು ವೇದಿಕೆಗಳಲ್ಲಿ ಅವರ ಲೈವ್ ಸ್ಟೇಜ್ ಶೋಗಳಿಗೆ ಅಭಿಮಾನಿಗಳು ಕಿಕ್ಕಿರಿದು ಸೇರುತ್ತಾರೆ. ಆರ್ಜಿತ್ ಮತ್ತು ಶ್ರೇಯಾ ಘೋಷಾಲ್ ಸಂಗೀತದ ಶೋಗಳಿಗೆ ಇಂದು ಭಾರೀ ಡಿಮಾಂಡ್ ಇದೆ!

ಲೆಟ್ ದೇರ್ ಬಿ ಲೈಟ್ ಎಂಬ NGO ಸ್ಥಾಪನೆ ಮಾಡಿ ಆರ್ಜಿತ್ ತನ್ನ ಸಂಪಾದನೆಯ ಬಹು ದೊಡ್ಡ ಭಾಗವನ್ನು ಚಾರಿಟಿ ಉದ್ದೇಶಕ್ಕೆ ಖರ್ಚು ಮಾಡುತ್ತಿರುವುದು ನಿಜಕ್ಕೂ ಅಭಿನಂದನೀಯ. ಆರ್ಜಿತ್ ಇಂದು ಭಾರತದ ನಂಬರ್ ಒನ್ ಹಿನ್ನೆಲೆ ಗಾಯಕ ಎಂದು ಸೋನು ನಿಗಮ್ ಸಾಕಷ್ಟು ವೇದಿಕೆಯಲ್ಲಿ ಹೇಳಿದ್ದಾರೆ. ಅವರಿಬ್ಬರೂ ಒಳ್ಳೆಯ ಗೆಳೆಯರು ಎಂದು ಕೂಡ ಸಾಬೀತಾಗಿದೆ.

ಅಂತಹ ಅನನ್ಯ ಪ್ರತಿಭೆ, ಜೇನು ದನಿಯ ಸರದಾರ ಅರ್ಜಿತ್ ಸಿಂಗ್ ಅವರಿಗೆ ಇಂದು ನೆನಪಲ್ಲಿ ಹುಟ್ಟುಹಬ್ಬದ ಶುಭಾಶಯ ಹೇಳಿ ಆಯ್ತಾ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಿಶ್ವವಿಜೇತನಾಗುವ ತವಕದಲ್ಲಿರುವ ಚೆಸ್ ಆಟಗಾರ ದೊಮ್ಮರಾಜು ಗುಕೇಶ್

Continue Reading

ಅಂಕಣ

ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

ದಶಮುಖ ಅಂಕಣ: ಹುಚ್ಚು ಎನ್ನುವುದನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಇತರರ ಖುಷಿಯನ್ನು ಬಯಸುವವರು ಹುಚ್ಚರೋ ಅಥವಾ ಇತರರ ಖರ್ಚಲ್ಲಿ ಖುಷಿ ಪಡುವವರೋ? ಇದಕ್ಕೆಲ್ಲ ಸಂವೇದನೆಗಳಿಗೆ ತಕ್ಕಂತೆ ಉತ್ತರ ಹುಡುಕುವುದೋ ಕಾಲಕ್ಕೆ ತಕ್ಕಂತೆಯೋ?

VISTARANEWS.COM


on

dashamukha column madness
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ದಶಮುಖ ಅಂಕಣ: ʻಹುಚ್ಚುʼ (madness) ಎಂಬ ಶಬ್ದ ಕಿವಿಗೆ ಬೀಳುತ್ತಿದ್ದಂತೆ ನೆನಪಾಗುವ ಚಿತ್ರಗಳ ಬಗ್ಗೆ ಹೆಚ್ಚು ಹೇಳುವುದು ಬೇಡವಲ್ಲ. ಯಾವುದೇ ದೇಶ, ಭಾಷೆ, ಸಂಸ್ಕೃತಿಗಳಲ್ಲಿ ನೋಡಿದರೂ ʻಹುಚ್ಚಿಗೆʼ ಹೆಚ್ಚಿಗೆ ಅರ್ಥಗಳಿಲ್ಲ… ಅದೊಂದೇ ಅರ್ಥ! ಹಾಗಾಗಿಯೇ ʻಅದೊಂಥರಾ ಹುಚ್ಚು, ಅವನಿಗೊಂದು ಹುಚ್ಚುʼ ಎಂಬಿತ್ಯಾದಿ ಮಾತುಗಳ ಬೆನ್ನಿಗೇ ʻಅಲ್ಲೇನೋ ಒಂದು ಅತಿರೇಕವಿದೆʼ ಎಂಬ ಭಾವ ಬಂದುಬಿಡುತ್ತದೆ. ಅದಕ್ಕಾಗಿಯೇ ʻಹುಚ್ಚು ಸಾಹಸ, ಹುಚ್ಚು ಪ್ರೀತಿʼ ಮುಂತಾದ ಪ್ರಯೋಗಗಳನ್ನು ಮಾಡುತ್ತಾ, ಬೈಯ್ಯುವುದಕ್ಕೆ, ವ್ಯಂಗ್ಯಕ್ಕೆ, ಕುಹಕಕ್ಕೆ, ಟೀಕೆಗೆ, ತಮಾಷೆಗೆ… ಅಥವಾ ಇಂಥದ್ದೇ ಋಣಾತ್ಮಕ ಎನ್ನಬಹುದಾದ ಛಾಯೆಗಳಲ್ಲಿ ಈ ಶಬ್ದವನ್ನು ಬಳಸುತ್ತೇವೆ. ನಿಜಕ್ಕೂ ಈ ಶಬ್ದವನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಬದುಕಿನಲ್ಲಿ ಪ್ರೀತಿ, ಸೌಖ್ಯ, ಖುಷಿಯನ್ನು ಅರಸುವವರಿಗೂ ಇದನ್ನು ಬಳಸಬಹುದೇ? ಸಾಹಿತ್ಯ-ಸಿನೆಮಾಗಳಲ್ಲಿ ಕಾಣುವ ಪ್ರೀತಿ, ಪ್ರೇಮಗಳಿಗೆ ಹುಚ್ಚನ್ನು ಪರ್ಯಾಯವಾಗಿ ಬಳಸುವುದು ಹೊಸದೇನಲ್ಲ. ಆದರೆ ಇಲ್ಲೀಗ ಅಂಥ ಹರೆಯದ ಪ್ರೀತಿಯ ಬಗ್ಗೆಯಲ್ಲ ಹೇಳುತ್ತಿರುವುದು. ಇತರರ ಸೌಖ್ಯದಲ್ಲಿ ತಮ್ಮ ಸ್ವಾಸ್ಥ್ಯವನ್ನು ಅರಸುವವರಿಗೂ ಈ ಶಬ್ದ ಸಲ್ಲುತ್ತದೆಯೇ?

ಇತ್ತೀಚೆಗೆ ಭೇಟಿ ಮಾಡಿದ ಒಂದಿಬ್ಬರು ವ್ಯಕ್ತಿಗಳು ಇಂಥದ್ದೊಂದು ಮಂಥನವನ್ನು ಹುಟ್ಟು ಹಾಕಿದ್ದು ಹೌದು. ಎಲ್ಲರಿಗಿಂತ ಭಿನ್ನವಾದ ಬದುಕನ್ನು ಆಯ್ದುಕೊಳ್ಳುವವರು, ತಮ್ಮ ಜೀವನದ ರೀತಿ-ನೀತಿಗಳನ್ನು ಅಥವಾ ಧ್ಯೇಯ-ಆದರ್ಶಗಳನ್ನು ʻಹುಚ್ಚುʼ ಎನ್ನುವಷ್ಟು ಪ್ರೀತಿಸದಿದ್ದರೆ, ಖುಷಿಯಿಂದ ಬದುಕುವುದು ಸಾಧ್ಯವೇ? ಎಷ್ಟೇ ಸುಭಿಕ್ಷವಾದ ಬದುಕನ್ನೂ ಹಳಿಯುತ್ತಲೇ ಬದುಕುವ ಇಂದಿನ ದಿನಗಳಲ್ಲಿ, ಇರುವ ಬದುಕಲ್ಲಿ ಸುಭಿಕ್ಷವನ್ನು ಸೃಷ್ಟಿಸುವ ಅವರನ್ನು ಹುಚ್ಚರೆಂದರೆ ಅತಿರೇಕವಾದೀತೇ? ಬದುಕನ್ನು ಕೊರಗಿನಲ್ಲೇ ಕಳೆಯುವುದು ಹುಚ್ಚೋ ಅಥವಾ ಇತರರ ಕೊರಗನ್ನು ಕಳೆಯುವುದು ಹುಚ್ಚೋ?

ಹೀಗೆನ್ನುವಾಗ ಅನಂತ್‌ ಸರ್‌ ನೆನಪಾಗುತ್ತಾರೆ. ಬದುಕಲ್ಲಿ ವಿದ್ಯೆ ದೊರೆಯದ ಮಕ್ಕಳನ್ನು ಶಿಕ್ಷಣದ ಹಾದಿಗೆ ಹಚ್ಚಿ, ನೆಲೆ ಕಾಣಿಸುವ ಅವರ ಸಾಹಸವನ್ನು ವರ್ಣಿಸುವುದಕ್ಕೆ ಬೇರೆ ಪದಗಳಿಗೆ ಸಾಧ್ಯವಿಲ್ಲ. ಮನೆ ಇದ್ದೂ ಇಲ್ಲದಂತಾದವರು, ಮನೆಯೇ ಇಲ್ಲದವರು, ಪಾಲಕರು ಇಲ್ಲದವರು, ಪಾಲಕರು ಯಾಕಾದರೂ ಇದ್ದಾರೋ ಎನ್ನುವಂಥ ಹಲವು ನಮೂನೆಯ ವಾತಾವರಣದಿಂದ ಬಂದ ಮಕ್ಕಳಿಗೆ ಊಟ, ವಸತಿಯ ಜೊತೆಗೆ ವಿದ್ಯೆ ನೀಡುವುದನ್ನೇ ಧ್ಯೇಯವಾಗಿಸಿಕೊಂಡವರು. ಹತ್ತು-ಹನ್ನೆರಡು ವರ್ಷಗಳವರೆಗೆ ಶಾಲೆಯ ಮುಖವನ್ನೂ ಕಾಣದವರು, ಎಂದೊ ಶಾಲೆಗೆ ಹೋಗಿ ನಡುವಲ್ಲೇ ಕಳೆದುಹೋದವರು- ಇಂಥ ನೂರಾರು ಮುಖಗಳಲ್ಲಿ ನಗು ಅರಳಿಸುವುದಕ್ಕೆ ಇರಬೇಕಾದ ಅದಮ್ಯ ಪ್ರೀತಿಯೂ ಒಂದು ಬಗೆಯ ಹುಚ್ಚೇ ತಾನೇ? ಹಾಗಿಲ್ಲದಿದ್ದರೆ, ಇಂಥ ಸಾಹಸಿಗಳು ಲೋಕದಲ್ಲಿ ನಮಗೆ ವಿರಳವಾಗಿ ಕಾಣುವುದೇಕೆ?

ಆರೇಳು ವರ್ಷದವರನ್ನು ಒಂದನೇ ಕ್ಲಾಸಿಗೆ ಕೂರಿಸುವಲ್ಲಿ ಅಷ್ಟೇನು ಸಮಸ್ಯೆಯಾಗಲಿಕ್ಕಿಲ್ಲ. ವರ್ಷದ ಆಧಾರದ ಮೇಲೆಯೇ ತಾನೆ ನಮ್ಮ ಶಿಕ್ಷಣ ವ್ಯವಸ್ಥೆ ರೂಪುಗೊಂಡಿರುವುದು. ಆದರೆ ಹದಿಹರೆಯಕ್ಕೆ ಕಾಲಿಟ್ಟವರು ಇನ್ನೂ ಶಾಲೆಯ ಮೆಟ್ಟಿಲನ್ನೇ ಹತ್ತದಿರುವಾಗ ಅವರನ್ನೂ ಒಂದನೇ ಕ್ಲಾಸಿಗೆ ಕೂರಿಸುವುದು ಹೇಗೆ? ʻಹಾಗಾಗಿಯೇ ದೈಹಿಕ ವಯಸ್ಸಿನ ಆಧಾರದ ಮೇಲಲ್ಲದೆ, ಮಕ್ಕಳ ಬೌದ್ಧಿಕ ವಯಸ್ಸಿಗೆ ಅನುಗುಣವಾಗಿ ಕಲಿಯುವ ಗುಂಪುಗಳನ್ನಾಗಿ ವಿಂಗಡಿಸಿಕೊಳ್ಳುತ್ತೇವೆ. ಹಾಗೆಯೇ ಅವರ ಕಲಿಕೆ ಮುಂದುವರಿಯುತ್ತದೆʼ ಎನ್ನುವುದು ಅನಂತ್‌ ಸರ್‌ ಹೇಳುವ ಮಾತು. ದೂರದ ಅಸ್ಸಾಂ, ಬಿಹಾರಗಳಿಂದ ಬಂದ ಮಕ್ಕಳಿಗೆ ಶಾಲೆಯ ಕಲ್ಪನೆಯೂ ಇಲ್ಲದಿರುವಾದ, ಇವರ ಭಾಷೆ ಅವರಿಗೆ-ಅವರ ಭಾಷೆ ಇವರಿಗೆ ತಿಳಿಯದಿರುವಾಗ, ವಿದ್ಯೆಯ ಶ್ರೀಕಾರ ಆಗುವುದು ಹೇಗೆ? ʻಇದೊಂಥರಾ ಹುಚ್ಚು. ಇದೂ ಆಗತ್ತೆʼ ಎನ್ನುವಾಗಿನ ಇವರ ಮುಖದ ನಗುವನ್ನು ಏನೆಂದು ಅರ್ಥ ಮಾಡಿಕೊಳ್ಳುವುದು?

ಈ ಚೌಕಟ್ಟಿನಾಚೆಯ ಮನೆಯಲ್ಲಿ ಕಲಿತು ಹೊರಬಿದ್ದು, ದುಡಿದು ಸಂಪಾದಿಸಿ ಬದುಕುತ್ತಿರುವ ತಮ್ಮ ಮಕ್ಕಳ ಬಗ್ಗೆ ಹೇಳುವಾಗ ಅವರ ಮುಖದ ನಗುವಿಗಿರುವ ಅರ್ಥದ ಅರಿವಾಗುತ್ತದೆ ನಮಗೆ. ಹುಚ್ಚಿಗೂ ಎಷ್ಟೊಂದು ಸುಂದರ, ಸಲ್ಲಕ್ಷಣಗಳಿವೆ ಎಂಬುದನ್ನು ತಿಳಿಯುವುದಕ್ಕೆ ಅದೊಂದು ನಗು ಸಾಕು. ಕೊರಗಿ ಕಳೆಯುವುದಕ್ಕಿಂತ, ಹೀಗೆ ಕೊರಗು ಕಳೆಯುವ ಹುಚ್ಚು ಒಳ್ಳೆಯದಲ್ಲವೇ? ನಮಗಿರುವ ಹುಚ್ಚು ಯಾವುದು ಎಂದು ಎಂದಾದರೂ ಯೋಚಿಸಿದ್ದೇವೆಯೇ?

ಈ ಎಲ್ಲ ಮಾತಿನ ನಡುವೆ ಪ್ರದೀಪ ಎನ್ನುವ ಆ ವ್ಯಕ್ತಿ ನೆನಪಾಗುತ್ತಾನೆ. ಕಪ್ಪು ಬಣ್ಣದ ಸಾಧಾರಣ ಮೈಕಟ್ಟಿನ ಆತ ಪುಟ್ಟ ದ್ವೀಪ ರಾಷ್ಟ್ರವೊಂದರ ನಿವಾಸಿ. ಅರಳಿದಂತಿರುವ ಕನ್ನಡಿಗಣ್ಣು, ಅವನದ್ದೇ ಆದ ವಿಶಿಷ್ಟ ಲಯದ ಇಂಗ್ಲಿಷ್‌ ಭಾಷೆಯ ಆತ ನಮಗೆ ಪರಿಚಯವಾಗಿದ್ದು ಪ್ರವಾಸವೊಂದರ ಭಾಗವಾಗಿ. ಅಲೆಯುವ ಹುಚ್ಚಿರುವ ಜನ ಲೋಕದಲ್ಲಿ ಎಷ್ಟೋ ಮಂದಿ ಇದ್ದಾರೆ. ಆದರೆ ಜೊತೆಗೆ ತಿರುಗಾಡುವವರ ಸೌಖ್ಯವೇ ತನಗೆ ಪ್ರೀತಿ ಎನ್ನುವವರೂ ಇದ್ದಾರೆಂಬುದು ತಿಳಿದಿದ್ದು ಆಗಲೇ. ಈತ ವೃತ್ತಿಯಲ್ಲಿ ಪ್ರವಾಸಿ ಗೈಡ್‌. ನಮ್ಮ ಯಾವುದೇ ಪ್ರವಾಸಿ ತಾಣಗಳಿಗೆ ಹೋದರೆ ಅಲ್ಲಿ ʻಗೈಡ್‌ ಬೇಕೆ?ʼ ಎಂದು ಮುತ್ತಿಗೆ ಹಾಕುವ ಗುಂಪಿನಲ್ಲಿ ಆತನೂ ಇರಬಹುದಾಗಿದ್ದವ. ಆದರೆ ತಮಗೆ ತಿಳಿದಷ್ಟನ್ನು ತೋಚಿದಂತೆ ಒದರಿ, ಬಂದವರಿಂದ ದುಡ್ಡು ಕಿತ್ತು ಕಳಿಸುವ ಗೈಡ್‌ಗಳ ಸಾಲಿನಿಂದ ಗಾವುದಗಟ್ಟಲೆ ದೂರದಲ್ಲಿ ಇರುವವ ಈತ.

ʻತಿರುಗಾಡಿದಷ್ಟೇ, ತಿರುಗಾಡಿಸುವುದೂ ನನಗಿಷ್ಟʼ ಎನ್ನುವ ಈತ, ತನ್ನ ಕಾರು ಓಡುವ ಪ್ರತಿಯೊಂದು ರಸ್ತೆಯ ಪರಿಚಯವನ್ನೂ ಮಾಡಿಕೊಡಬಲ್ಲ. ಯಾವ ಊರಿನ ಮಳೆ-ಬೆಳೆ ಹೇಗೆ ಎಂಬುದರಿಂದ ಹಿಡಿದು ಅಲ್ಲಿನ ಡೆಮಗ್ರಾಫಿಕ್‌ ವಿಶ್ಲೇಷಣೆಯನ್ನೂ ನೀಡಬಲ್ಲ. ʻಈ ಭಾಗದಲ್ಲಿ ತುಂಬಾ ಎಮ್ಮೆ ಸಾಕುತ್ತಾರೆ. ಮಣ್ಣಿನ ಗಡಿಗೆಯಲ್ಲಿ ಹಾಲು ಹೆಪ್ಪಾಕಿ, ಮೊಸರು ಮಾರುತ್ತಾರೆ. ಅದನ್ನೊಮ್ಮೆ ತಿನ್ನದಿದ್ದರೆ ಈ ರಸ್ತೆಯಲ್ಲಿ ಪ್ರಯಾಣ ಮಾಡಿದ್ದೇ ವ್ಯರ್ಥʼ ಎಂದು ಸರಕ್ಕನೆ ಗಾಡಿ ನಿಲ್ಲಿಸಿ, ಎರಡು ಪುಟ್ಟ ಗಡಿಗೆಗಳನ್ನು ಹಿಡಿದು ತರುತ್ತಾನೆ. ʻಇಷ್ಟು ದೂರ ಬಂದವರು ಈ ಸಿಹಿ ತಿನ್ನದಿದ್ದರೆ, ನಿಮ್ಮ ತಿರುಗಾಟವೇ ಅಪೂರ್ಣʼ ಎನ್ನುತ್ತಾ ಯಾವುದೋ ಸಿಹಿ ಎದುರಿಗಿಡುತ್ತಾನೆ. ʻಇಲ್ಲಿ ಭರಪೂರ ತರಕಾರಿ ಬೆಳೆಯುತ್ತಾರೆ. ಇದರಲ್ಲೊಂದು ಸಲಾಡ್‌ ಮಾಡುತ್ತೇನೆ ನೋಡಿ, ತಿನ್ನುವುದಕ್ಕೆ ಪುಣ್ಯ ಬೇಕುʼ ಎಂದು ಉಪಚಾರ ಮಾಡುತ್ತಾನೆ. ಇಂಥ ಯಾವುದನ್ನೂ ಮಾಡಬೇಕಾದ ಅಗತ್ಯ ಆತನಿಗಿಲ್ಲ. ನಮ್ಮ ಜಾಗಕ್ಕೆ ಕರೆದೊಯ್ದರೆ ಅವನ ಕೆಲಸ ಮುಗಿಯಿತು; ಅವನ ದುಡ್ಡು ಅವನ ಕೈ ಸೇರುತ್ತದೆ. ʻತಿರುಗಾಡುವುದು, ತಿರುಗಾಡಿಸುವುದು ನಂಗೊಂಥರಾ ಹುಚ್ಚು. ಹೊಸ ಜನರೊಂದಿಗೆ ನಂಟು ಬೆಸೆಯುವುದು, ಅವರನ್ನು ಖುಷಿಯಾಗಿಡುವುದು ನಂಗಿಷ್ಟʼ ಎನ್ನುತ್ತಾ ಹಿಂದಿ ನಟ ದೇವಾನಂದ್‌ ರೀತಿಯಲ್ಲಿ ನಗೆ ಬೀರುತ್ತಾನೆ.

ಇದನ್ನೂ ಓದಿ: ದಶಮುಖ ಅಂಕಣ: ಮೌನವೆಂಬ ಭಾವಸೇತು

ಗುರಿ ತಲುಪುವುದಕ್ಕಿಂತ ಖುಷಿ ನೀಡುವುದು ಗಮ್ಯದೆಡೆಗಿನ ದಾರಿಗಳಲ್ಲವೇ? ಯಾವುದೇ ದಾರಿಯಲ್ಲಿ ಎದುರಾಗುವ ಊರೊಂದರ ಹೆಸರಿನ ಹಿಂದಿನ ಗಮ್ಮತ್ತು ತಿಳಿಸುವುದು, ಯಾವುದೋ ದೇಶದಿಂದ ಬರುವ ಚಿತ್ರವಿಚಿತ್ರ ಅಲೆಮಾರಿಗಳ ಜಾಯಮಾನ ವಿಸ್ತರಿಸುವುದು- ಇವೆಲ್ಲ ತನ್ನ ಪ್ರಯಾಣಿಕರ ದಾರಿಯನ್ನು ಬೋರಾಗದಂತೆ ಕಳೆಯುವ ಮತ್ತು ಅವರೊಂದಿಗೆ ನಂಟು ಬೆಸೆಯುವ ಆತನ ಉದ್ದೇಶಕ್ಕೆ ಒದಗುವಂಥವು. ವಿಹಾರಕ್ಕೆ, ವಿರಾಮಕ್ಕೆ, ಅಧ್ಯಯನಕ್ಕೆ ಮುಂತಾದ ಹಲವು ಕಾರಣಗಳನ್ನು ಹೊತ್ತು ಬರುವ ಜನರ ಕಥೆಗಳು ಆತನ ಸಂಚಿಯಲ್ಲಿವೆ. ಎಲ್ಲರಿಗೂ ಅವರವರ ಉದ್ದೇಶ ಈಡೇರುವಂತೆ ಶ್ರಮಿಸುವುದು ತನಗೆ ಪ್ರಿಯವಾದ ಸಂಗತಿ ಎನ್ನುವ ಇಂಥವರು ಜೊತೆಗಿದ್ದರೆ, ಅಲ್ಲಾವುದ್ದೀನನ ಮಾಂತ್ರಿಕ ಚಾಪೆಯ ಮೇಲೆ ತೇಲಿದಂತೆ ದಾರಿ ಸಾಗುತ್ತದೆ. ಇಂಥವರನ್ನು ನೋಡಿದಾಗ, ಇನ್ನೊಬ್ಬರ ಸೌಖ್ಯದಲ್ಲಿ ತಮ್ಮ ಸ್ವಾಸ್ಥ್ಯವನ್ನು ಅರಸುವ ಸ್ವಭಾವದ ಬಗ್ಗೆ ಬೇರೆ ಶಬ್ದಗಳು ನೆನಪಾಗುತ್ತಿಲ್ಲ.

ಹಣ, ಸಂಪತ್ತು, ಖ್ಯಾತಿ, ಅಧಿಕಾರಗಳ ಹುಚ್ಚು ಅಂಟಿಸಿಕೊಂಡವರು ನಮ್ಮೆದುರಿಗೆ ಮೆರವಣಿಗೆ ಹೊರಟಿದ್ದಾರೆ ಈಗ. ಚುನಾವಣೆಯ ಕಣದಲ್ಲಿಳಿದು ಅಧಿಕಾರ ದಕ್ಕಿಸಿಕೊಳ್ಳಲು, ದಕ್ಕದಿದ್ದರೆ ಯಾವ ಮಟ್ಟಕ್ಕೂ ಇಳಿಯುವಷ್ಟು ಹುಚ್ಚರಾಗಿದ್ದಾರೆ ಇಂದು. ಯಾರಿಗಾಗಿ ತಾವು ಆಯ್ಕೆಯಾಗುತ್ತಿದ್ದೇವೆಯೋ ಅವರ ಸೌಖ್ಯವನ್ನು ಗಮನಿಸುವುದೇ ಮರುಳು ಎನಿಸುತ್ತಿದೆ ಅಭ್ಯರ್ಥಿಗಳಿಗೆ. ಇಂಥವುಗಳನ್ನು ನೋಡಿದಾಗ ಮತ್ತದೇ ಪ್ರಶ್ನೆಗಳು ಮೂಡುತ್ತವೆ. ಹುಚ್ಚು ಎನ್ನುವುದನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಇತರರ ಖುಷಿಯನ್ನು ಬಯಸುವವರು ಹುಚ್ಚರೋ ಅಥವಾ ಇತರರ ಖರ್ಚಲ್ಲಿ ಖುಷಿ ಪಡುವವರೋ? ಇದಕ್ಕೆಲ್ಲ ಸಂವೇದನೆಗಳಿಗೆ ತಕ್ಕಂತೆ ಉತ್ತರ ಹುಡುಕುವುದೋ ಕಾಲಕ್ಕೆ ತಕ್ಕಂತೆಯೋ? ಹುಚ್ಚಿಗೆ ಹೆಚ್ಚಿಗೆ ಅರ್ಥಗಳಿಲ್ಲವೆಂದು ಈಗಲೂ ಹೇಳಬಹುದೇ?

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

Continue Reading
Advertisement
Rakshit Shetty Richard Anthony Produce By Hombale
ಪ್ರಮುಖ ಸುದ್ದಿ28 seconds ago

Narendra Modi : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ದೇಶ11 mins ago

Usman Ghani: ಪ್ರಧಾನಿ ಮೋದಿಯನ್ನು ಟೀಕಿಸಿದ್ದ ಬಿಜೆಪಿ ಉಚ್ಛಾಟಿತ ನಾಯಕ ಅರೆಸ್ಟ್‌

Car Accident
ಪ್ರಮುಖ ಸುದ್ದಿ12 mins ago

Car Accident : ಯಮವೇಗದಲ್ಲಿ ಬಂದ ಇನೋವಾ ಕಾರು ಪಲ್ಟಿ, ಯುವತಿ ಸಾವು

Manvita Kamath Marriage Details Future Husband Arun
ಸ್ಯಾಂಡಲ್ ವುಡ್27 mins ago

Manvita Kamath: ‘ಟಗರು ಪುಟ್ಟಿʼ ಮಾನ್ವಿತಾದ್ದು ಲವ್ ಮ್ಯಾರೇಜ್? ಕೊನೆಗೂ ಸ್ಪಷ್ಟನೆ ಕೊಟ್ಟ ನಟಿ!

state JDS secretary R A Chabusab statement In Ripponpet
ಶಿವಮೊಗ್ಗ28 mins ago

Lok Sabha Election 2024: ಅತಿ ಹೆಚ್ಚು ಮತಗಳ ಅಂತರದಿಂದ ಬಿ.ವೈ.ರಾಘವೇಂದ್ರ ಗೆಲುವು: ಆರ್.ಎ. ಚಾಬುಸಾಬ್

Narendra Modi
ಪ್ರಮುಖ ಸುದ್ದಿ31 mins ago

Narendra Modi : ಪ್ರಧಾನಿ ವಿಮಾನ ಹಾರಾಟ ಹಿನ್ನೆಲೆ; ಸಿಎಂ ವಿಮಾನಕ್ಕೆ ಬೆಳಗಾವಿಯಲ್ಲಿ ಅನುಮತಿ ನಿರಾಕರಣೆ

Lok Sabha Election 2024
ರಾಜಕೀಯ1 hour ago

Yogi Adityanath:”ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಮುಸ್ಲಿಮರಿಗೆ ಬೀಫ್‌ ಸೇವನೆ ಹಕ್ಕು”- ಮತ್ತೆ ಗುಡುಗಿದ ಯೋಗಿ

Drinks for Summer
ಆರೋಗ್ಯ2 hours ago

Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

Fire Accident
ಪ್ರಮುಖ ಸುದ್ದಿ2 hours ago

Fire Accident : ಬೆಂಗಳೂರು ನಗರ ವಲಯದಲ್ಲಿ ಅರಣ್ಯಕ್ಕೆ ಬೆಂಕಿ, ಭಾರೀ ಹಾನಿ

karnataka weather forecast
ಮಳೆ3 hours ago

Karnataka Weather : ಹುಷಾರ್‌.. ನಾಲ್ಕೈದು ದಿನ ಮತ್ತಷ್ಟು ಏರಲಿದೆ ಉರಿ ಬಿಸಿಲು; ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rakshit Shetty Richard Anthony Produce By Hombale
ಪ್ರಮುಖ ಸುದ್ದಿ28 seconds ago

Narendra Modi : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 202417 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ21 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20242 days ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20242 days ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ2 days ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ3 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

ಟ್ರೆಂಡಿಂಗ್‌