ಧವಳ ಧಾರಿಣಿ ಅಂಕಣ | ಇಂದು ಗೀತಾಜಯಂತಿ | ವಿಷಾದದ ಅಂತಿಮ ಫಲವೇ ಯುದ್ಧವೆಂದು ಸಾರಿದ ವಿಷಾದಯೋಗ - Vistara News

ಅಂಕಣ

ಧವಳ ಧಾರಿಣಿ ಅಂಕಣ | ಇಂದು ಗೀತಾಜಯಂತಿ | ವಿಷಾದದ ಅಂತಿಮ ಫಲವೇ ಯುದ್ಧವೆಂದು ಸಾರಿದ ವಿಷಾದಯೋಗ

ವಿಷಾದ ಎಂಬುದು ಆತ್ಮಾವಲೋಕನದ ಕಾಲವೂ ಹೌದು. ಮಹಾಭಾರತದ ಅರ್ಜುನನ ವಿಷಾದವೂ ಆತ್ಮಾವಲೋಕನದ ಕಾಲ. ಯಾವುದೇ ಮಹತ್ತರ ಬದಲಾವಣೆಗೆ ಒಂದು ತಿರುವು ಬೇಕು. ಆ ತಿರುವು ಆತನಕದ ವಾಸ್ತವವನ್ನು ಮುರಿದುಹಾಕುತ್ತದೆ. ಗೀತೆಯ ಸನ್ನಿವೇಶ ಅಂಥದೊಂದು ತಿರುವು.

VISTARANEWS.COM


on

dhavala dharini
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

dhavala dharini

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ I
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ II
(ಭ. ಗೀ. 1-1)

(ಎಲೈ ಸಂಜಯನೆ, ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಯುದ್ಧ ಮಾಡಬೇಕೆಂದು ಅಭಿಲಾಷೆಯುಳ್ಳವರಾಗಿ ಸೇರಿದ ನನ್ನವರೂ ಪಾಂಡವರೂ ಏನು ಮಾಡಿದರು?)

ಭಗವದ್ಗೀತೆಯ ಮೊದಲ ಅಧ್ಯಾಯವನ್ನು ಅರ್ಜುನ ವಿಷಾದಯೋಗವೆಂದು ಕರೆಯುತ್ತಾರೆ. ಇಲ್ಲಿ ಅರ್ಜುನನಿಗೆ ಯುದ್ಧದ ಕುರಿತಾದ ಗೊಂದಲಗಳು ಏಕಾಏಕಿ ಉದ್ಭವಿಸುತ್ತವೆ. ವಾಲ್ಮೀಕಿಗೂ ಕ್ರೌಂಚ ಪಕ್ಷಿಯ ವಧೆಯನ್ನು ಕಂಡಾಗ ವಿಷಾದ ಉಂಟಾಗಿತ್ತು. ಅದರಿಂದಾಗಿ ರಾಮಾಯಣ ಮಹಾಕಾವ್ಯವೇ ಹುಟ್ಟಿತು. ವಿಷಾದ ಎನ್ನುವದು ಆತ್ಮಾವಲೋಕನೆಯ ಕಾಲವೂ ಹೌದು. ಮಹಾಭಾರತದ ಅರ್ಜುನನ ವಿಷಾದವೂ ಆತ್ಮಾವಲೋಕನೆಯ ಕಾಲವೂ ಆಗಿದೆ. ಯಾವುದೇ ಮಹತ್ತರ ಬದಲಾವಣೆಗೆ ಒಂದು ತಿರುವು ಬೇಕಾಗಿರುತ್ತದೆ. ಆ ತಿರುವು ಅದು ತನಕದ ವಾಸ್ತವವನ್ನು ಮುರಿದುಹಾಕುತ್ತದೆ. ಈ ತಕ್ಷಣದ ಮತ್ತು ತೀಕ್ಷ್ಣ ಬದಲಾವಣೆಯನ್ನು ಆ ಬದಲಾವಣೆಯನ್ನು ಬಯಸಿದವರೇ ಅದನ್ನು ಒಪ್ಪಿಕೊಳ್ಳಬೇಕೇ ಎಂದು ಅನೇಕಸಾರಿ ಗೊಂದಲಕ್ಕೆ ಒಳಗಾಗುತ್ತಾರೆ.

ಇಲ್ಲಿ ಅರ್ಜುನ ಈ ಸ್ಥಿತಿಗೆ ಬಂದಿದ್ದಾನೆ. ಆ ಕಾರಣಕ್ಕಾಗಿಯೇ ಆತ ಕೃಷ್ಣನ ಹತ್ತಿರ “ಸೇನೇಯೊರುಭಯೋರ್ಮಧ್ಯೆ ರಥಂ ಸ್ಥಾಪಯಮೇಚ್ಯುತ” ತನ್ನ ರಥವನ್ನು ಉಭಯಸೇನೆಯ ನಡುವೆ ಸಮಾನದೂರದಲ್ಲಿ ನಿಲ್ಲಿಸು ಎಂದು ವಿನಂತಿಸಿಕೊಳ್ಳುತ್ತಾನೆ. ಜನ್ಮದಾರಭ್ಯ ಪಾಂಡವ ದ್ವೇಷವನ್ನು ಅನುಭವಿಸಿ ತನ್ನ ತಾಯಿಯೇ ಪರದೇಶಿಗಳಂತೆ ಇನ್ನೊಬ್ಬರ ಮನೆಯಲ್ಲಿ ಬದುಕಬೇಕಾದ ಪರಿಸ್ಥಿತಿಗೆ ಕಾರಣವಾದ, ಹೆಂಡತಿಯ ಮಾನಹರಣಕ್ಕೆ ಕಾರಣೀಕರ್ತರಾದ ಮಹಾ ಬಲವಂತರಾದ ತಮ್ಮ ವ್ಯಕ್ತಿತ್ವವನ್ನು ಕುಗ್ಗಿಸಿ ಜೀತದಾಳಾಗಿ ಅಜ್ಞಾತವಾಸದಲ್ಲಿ ಕಳೆಯಬೇಕಾಗಿ ಬಂದಿರುವದಕ್ಕೆ ಕಾರಣೀಕರ್ತರನ್ನು ಮತ್ತು ತಮ್ಮ ಮೇಲಿನ ಅಭಿಮಾನದಿಂದ ಬಂದು ಸೇರಿದ ತನ್ನ ಬಂಧುಗಳು ಬಾಂಧವರು ಸಹೋದರರುಗಳನ್ನೆಲ್ಲಾ ಹಾಗೂ ತನ್ನೆಲ್ಲಾ ಸೈನ್ಯವನ್ನು ಸಮಾನದೂರದಲ್ಲಿ ನಿಂತು ನೋಡುವ ಮನಃಸ್ಥಿತಿ ಅರ್ಜುನನಲ್ಲಿ ಉಂಟಾಗುತ್ತದೆ.

ಇದಕ್ಕೂ ಸ್ವಲ್ಪಮೊದಲು ನಿರಾಯುಧನಾಗಿ ಧರ್ಮರಾಜ ಕೌರವ ಸೇನೆಯನ್ನು ಹೊಕ್ಕು ಭೀಷ್ಮಾದಿಗಳಲ್ಲಿ ಆಶೀರ್ವಾದವನ್ನು ಬೇಡಿಕೊಂಡು ಬಂದು ಅದೇ ತಾನೇ ತನ್ನ ಸ್ಥಾನದಲ್ಲಿ ಸನ್ನದ್ಧನಾಗಿ ನಿಂತು ಕೊಂಡಿದ್ದ. ಸದಾ ಧರ್ಮದ ಕುರಿತು ಚಿಂತಿಸುವ ಧರ್ಮರಾಜನಿಗೆ ಕಾಡದ ಚಿಂತೆ ಅರ್ಜುನನಲ್ಲಿ ವಿಷಾದವಾಗಿ ಕಾಣಿಸಿಕೊಂಡಿತು. ಈ ಅರ್ಜುನ ವಿಷಾದ ಭಗವದ್ಗೀತೆಗೆ ಪೀಠಿಕೆಯಾಯಿತು. ಇಲ್ಲಿ ಪರಂತಪ (ಶತ್ರುಗಳಿಗೆ ತಾಪವನ್ನುಂಟುಮಾಡುವವ, ಭಗವಂತನನ್ನು ಜ್ಞಾನದೃಷ್ಟಿಯಿಂದ ನೋಡುವವ) ಎಂದು ಕರೆಯಿಸಿಕೊಳ್ಳುವ ಅರ್ಜುನನ ವಿಷಾದಕ್ಕಿಂತ ಇನ್ನೆರಡು ಪಾತ್ರಗಳ ವಿಷಾದ ತುಂಬಾ ಮಹತ್ವದ್ದು. ಇದು ಮಾನಸಿಕ ದೌರ್ಬಲ್ಯ ಹೌದಾದರೂ ವಿಷಾದಕ್ಕೆ ಮೂಲ ಕಾರಣ ಕೃಪೆಯ ಅತಿರೇಕಕ್ಕೆ ಅರ್ಜುನ ಸಿಲುಕಿದ್ದಾನೆ ಎಂದು ಡಿವಿಜಿಯವರು ಅಭಿಪ್ರಾಯಪಟ್ಟಿದ್ದಾರೆ. ಗೀತೆಯ ಮೊದಲ ಅಧ್ಯಾಯದಲ್ಲಿ ಕೃಷ್ಣನ ಮೂಲಕವಾಗಿ ವ್ಯಾಸರು ತೋರುವ ಮನೋ ವಿಭಿನ್ನತೆಯ ನಡತೆಯನ್ನು ಆಧುನಿಕ ಮನಶಾಸ್ತ್ರದ Maladaptive behaviour theoryಗೆ ಹೋಲಿಸಬಹುದಾಗಿದೆ. ಈ ಅಸಮರ್ಪಕ ನಡವಳಿಕೆಯನ್ನು ಇಲ್ಲಿ ಅರ್ಜುನ ತೋರುವದಕ್ಕಿಂತ ಮೊದಲೇ ಧೃತರಾಷ್ಟ್ರ ನಂತರದಲ್ಲಿ ದುರ್ಯೋಧನ ತೋರಿದ್ದಾರೆ.

ವ್ಯಾಸರ ʻಜಯʼವೆನ್ನುವ ಈ ಮಹಾಕಾವ್ಯ ಒಂದು ವಿಶಿಷ್ಟವಾದ ಹಲವು ರಸ, ಭಾವನೆಗಳ ಧಾರೆ. ಇಲ್ಲಿ ಮನುಷ್ಯ ಸಹಜವಾದ ಎಲ್ಲಾ ಗುಣಗಳೂ ದೋಷ ಮತ್ತು ದೌರ್ಬಲ್ಯಗಳೂ ಇವೆ. ರಾಮಾಯಣದಲ್ಲಿ ಶ್ರೀರಾಮ ತಾನು ದಶರಥನ ಮಗ, ಮನುಷ್ಯನಾಗಿಯೇ ಹುಟ್ಟಿದ್ದೇನೆ ಎನ್ನುತ್ತಾ ತನ್ನ ಗುಣಗಳಿಂದಲೇ ದೇವತ್ವವನ್ನು ಪಡೆದವ. ಅಲ್ಲಿ ಮನುಷ್ಯರಿಗೆ ದೇವತೆಗಳ ಅನುಗ್ರಹ ಹೆಚ್ಚಿನ ಸಂದರ್ಭಗಳಲ್ಲಿ ವರಗಳ ಮೂಲಕವಾಗಿ. ಆದರೆ ಮಹಾಭಾರತದಲ್ಲಿ ದೇವ ಮನುಷ್ಯರ ಸಂಬಂಧ ವರಗಳ ಜೊತೆ ಇನ್ನಷ್ಟು ಗಾಢವಾದದ್ದು. ಚಂದ್ರವಂಶದ ರಾಜರುಗಳ ಮತ್ತು ದೇವತೆಗಳ ನಡುವೆ ರಕ್ತಸಂಬಂಧಗಳಾಗಿವೆ. ಕೃಷ್ಣನ ಜೀವಿತದ ಕಾಲದಲ್ಲಿಯೇ ತಾನು ದೇವರ ಅವತಾರವೆಂದು ಕರೆಯಿಸಿಕೊಳ್ಳಲ್ಪಟ್ಟವನು. ಭಗವದ್ಗೀತೆಯಲ್ಲಂತೂ ಆತನೇ ತಾನೇ ಈ ಜಗಕ್ಕೆಲ್ಲ ಮೂಲಕಾರಣ, ವರ್ತಮಾನ ಮತ್ತು ಅಂತ್ಯವೂ ತಾನೇ ಎಂದು ಘೋಷಿಸಿಕೊಳ್ಳುತ್ತಾನೆ.

ಈ ಭಗವದ್ಗೀತೆಯ ಮೊದಲ ಅಧ್ಯಾಯ ಪ್ರಾರಂಭವಾಗುವದೇ “ಅರ್ಜುನ ವಿಷಾದಯೋಗ” ಎನ್ನುವದರ ಮೂಲಕ. ಇಲ್ಲಿ ವಿಷಾದವೂ ಒಂದು ಯೋಗವಾಗಿದೆ. ಯೋಗವೆಂದರೆ ಒಂದುಗೂಡಿಸುವದೆಂದರ್ಥ. ಕೇವಲ ಯುದ್ಧವನ್ನು ಪ್ರಚೋದಿಸುವ ಗ್ರಂಥವೆಂದು ಮೇಲುನೋಟಕ್ಕೆ ಅನಿಸಿದರೂ ವ್ಯಾಸರು ಈ ಯುದ್ಧದ ಮೂಲಕ ಜಿವಾತ್ಮನನ್ನು ಪರಮಾತ್ಮನಲ್ಲಿ ಸೇರಿಸುವದಕ್ಕಿರುವ ಮಹತ್ವದ ಸಾಧನವೆನ್ನುವದನ್ನು ತೋರಿಸಿಕೊಟ್ಟಿದ್ದಾರೆ. ಹಾಗಾಗಿಯೇ ಯುದ್ಧಭೂಮಿಯಾದ ಕುರುಕ್ಷೇತ್ರ ಧರ್ಮಕ್ಷೇತ್ರ. ಒಂದು ಕಾವ್ಯವಾಗಿ ಗೀತೆಯನ್ನು ಆ ಮೂಲಕ ಮಹಾಭಾರತವನ್ನು ಓದಿದರೆ ವ್ಯಾಸರ ಕಥನಕಟ್ಟುವ ತಂತ್ರಗಳು ಈ ಕಾಲಕ್ಕೂ ಬೆರಗುಹುಟ್ಟಿಸುತ್ತವೆ. ಮೂಲ ಮಹಾಭಾರತದ ʻಭೀಷ್ಮ ಪರ್ವʼದಲ್ಲಿನ ಹದಿನೆಂಟು ಅಧ್ಯಾಯಗಳಲ್ಲಿ ಕೃಷ್ಣ ಅರ್ಜುನನಿಗೆ ಗೀತೆಯನ್ನು ವಿವರಿಸಿದ್ದಾನೆ.

dhavala dharini 1

ಗೀತೆಯನ್ನುವ ಯೋಗದ ಪ್ರವೇಶವಾಗುವದು ದೃತರಾಷ್ಟ್ರ ಸಂಜಯನಿಗೆ ರಣರಂಗದಲ್ಲಿ ನಡೆಯುವ ವಾರ್ತಗಳ ಕುರಿತು ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ. ತನ್ನ ಮಕ್ಕಳು ಮತ್ತು ಪಾಂಡವರೂ ಏನು ಮಾಡಿದರು ಎನ್ನುವದನ್ನು ಕೇಳುವದರ ಮೂಲಕ ಪಾಂಡವರನ್ನು ತನ್ನವರಲ್ಲ ಎನ್ನುವದನ್ನೇ ಸೂಚಿಸುತ್ತಿದ್ದಾನೆ. ಮಹತ್ವದ ವಿಷಯ ಎಂದರೆ ಪಾರ್ಥಸಾರಥಿ ಅರ್ಜುನನನ್ನು ನಿಮಿತ್ತವಾಗಿರಿಸಿಕೊಂಡು 700 ಶ್ಲೋಕಗಳ ಮೂಲಕ ವೇದೋಪನಿಷತ್ತಿನ ಸಾರಗಳನ್ನು ಜಗತ್ತಿಗೆ ಬೋಧಿಸಿದ. ಪಾರ್ಥನನ್ನುಳಿದು ಪ್ರಪಂಚಕ್ಕೆ ತಿಳಿಸಿರುವದೂ ಸಹ ಧೃತರಾಷ್ಟ್ರನ ಸಾರಥಿಯಾದ ಸಂಜಯನ ಮೂಲಕವಾಗಿಯೇ. ಗೀತಾಚಾರ್ಯ ಮೊದಲ ಶ್ಲೋಕದಲ್ಲಿಯೇ ಯುದ್ಧಮೋಹಿ ಬೀಜವಿರುವದು ದುರ್ಯೋಧನನಲ್ಲಲ್ಲ, ಅದು ಧೃತರಾಷ್ಟ್ರನಲ್ಲಿಯೇ ಎನ್ನುವದನ್ನು ಸೂಕ್ಷ್ಮವಾಗಿ ಹೇಳುತ್ತಿದ್ದಾನೆ.

ಎಲ್ಲರೂ ಆರೋಪಿಸುವಂತೆ ಕೃಷ್ಣ ಯುದ್ಧಾಕಾಂಕ್ಷಿಯಾಗಿರಲಿಲ್ಲ. ಸಂಧಾನಕ್ಕೆಂದು ಬಂದ ಕೃಷ್ಣ ಕುಂತಿಯಲ್ಲಿ “ಮಮ ಪ್ರಾಣಾಹಿ ಪಾಂಡವಾಃ” ಎಂದು ಹೇಳಿದ್ದ. ಆ ಪಾಂಡವರಲ್ಲಿ ಅರ್ಜುನ ಎಂದರೆ ಕೃಷ್ಣನಿಗೆ ಹೆಂಡತಿ, ಮಕ್ಕಳು ಬಾಂಧವರು ಇವರೆಲ್ಲರಿಗಿಂತಲೂ ಮಿಗಿಲು. ಅರ್ಜುನನಲ್ಲಿ ತನ್ನ ಸ್ನೇಹ ಶಾಶ್ವತವಾಗಿರಲಿ ಎಂದು ಈಶ್ವರನಲ್ಲಿ ವರ ಬೇಡಿಕೊಂಡವ ಆತ. ತಾನೇ ಅಪೇಕ್ಷಿಸಿ ಪಾರ್ಥಸಾರಥಿಯಾದವ. ಅಂತಹ ಕೃಷ್ಣನೂ ಯುದ್ಧವೆನ್ನುವದು ಯಾವಕಾರಣಕ್ಕೂ ಒಳ್ಳೆಯದಲ್ಲ ಎಂದು ಅಂದುಕೊಂಡವ. ಆತ ಈ ಮಹಾ ಸಂಭಾವ್ಯ ಸಂಗ್ರಾಮವನ್ನು ತಪ್ಪಿಸಲು ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡಿರುತ್ತಾನೆ. ಆತ ದುರ್ಯೋಧನನಿಗೆ ʻತ್ವಾಮೇವ ಸ್ಥಾಪಯಿಷನ್ತಿ ಯೌವರಾಜ್ಯೇ ಮಹಾರಥಾಃ I ಮಹಾರಾಜ್ಯೇ ಪಿತರಂ ಧೃತರಾಷ್ಟ್ರಂ ಜನೇಶ್ವರಮ್ IIʼ (ಮ. ಭಾ. ಉದ್ಯೋಗ ಪರ್ವ – 124-60) “ಮಹಾರಥರಾದ ಪಾಂಡವರು ನಿನ್ನನ್ನೇ ಯೌವರಾಜನನ್ನಾಗಿಯೂ ದೃತರಾಷ್ಟ್ರನನ್ನು ಮಹಾರಾಜನನ್ನಾಗಿಯೂ ನಿಯೋಜಿಸುತ್ತಾರೆ ಎಂದು ಸಂಧಾನಕಾರ್ಯವನ್ನು ವಿಫಲಗೊಳಿಸಬೇಡʼʼ ಎಂದು ಸಾರಿ ಸಾರಿ ವಿವೇಕವನ್ನು ಹೇಳಿದ್ದಾನೆ. ಯಾರ ವಿವೇಕವೂ ನಾಟದ ದುರ್ಯೋಧನ ಯುದ್ಧಕ್ಕೇ ಆತುಕೊಂಡಿದ್ದಾನೆ.

ಯುದ್ಧಕ್ಕೆ ಪಾಂಡವರು ಮತ್ತು ಕೌರವರು ತಮ್ಮ ಅಂತಿಮ ಹಣಾಹಣಿಗಾಗಿ ಎದುರುಬದುರು ನಿಂತಿದ್ದಾರೆ. ಮಾರ್ಗಶೀರ್ಷ ಶುದ್ಧ ಏಕಾದಶಿಯ ದಿವಸ ಅದು. ಸಂಧಾನ ಮಾಡಿಕೊಳ್ಳಿ ಎಂದ ಕೃಷ್ಣ ನಂತರದಲ್ಲಿ ಯುದ್ಧವೇ ಅಂತಿಮ ವಿಕಲ್ಪವಾದಾಗ ದಿಟ್ಟ ಧೋರಣೆಯನ್ನು ತೆಗೆದುಕೊಳ್ಳುತ್ತಾನೆ. ಧೃತರಾಷ್ಟ್ರನಿಗೆ ಯುದ್ಧ ಬೇಕು, ಅದನ್ನು ನೋಡುವೆಯೋ ದಿವ್ಯದೃಷ್ಟಿ ನೀಡುವೆ ಎಂದು ವ್ಯಾಸರು ಕೇಳಿದರೆ ನಿರಾಕರಿಸುತ್ತಾನೆ. ದಿವ್ಯದೃಷ್ಟಿ ಸಿಕ್ಕಿದ್ದರೆ ಆತನ ಧೋರಣೆ ಬದಲಾಗುತ್ತಿತ್ತೇನೋ. ತನ್ನ ಮಕ್ಕಳ ಜನನವನ್ನೂ ನೋಡದ ಕುರುಡನಿಗೆ ಮರಣವನ್ನು ನೋಡುವ ಧೈರ್ಯ ಸಾಲುವದಿಲ್ಲ. ಅದನ್ನೇ ಆತ “ನ ರೋಚಯೇ ಜ್ಞಾತಿವಧಂ ದ್ರಷ್ಟುಂ ಬ್ರಹ್ಮರ್ಷಿಸತ್ತಮ I ಯುದ್ಧಮೇತತ್ತ್ವಶೇಷೇಣ ಶ್ರುಣುಯಾಂ ತವ ತೇಜಸಾ” ಜ್ಞಾತಿವಧೆಯನ್ನು ಕಣ್ಣಿನಿಂದ ನೋಡಲಾರೆ; ಆದರೆ ಕೇಳುವ ಕುತೂಹಲ ಖಂಡಿತವಾಗಿಯೂ ಉಂಟು. ಹಾಗಾಗಿ ಆ ದೃಷ್ಟಿ ಸಂಜಯನಿಗೆ ದೊರಕುವಂತೇ ವರ ಕೇಳಿದ. ಸಾಯುವದು ತನ್ನ ಮಕ್ಕಳು ಎನ್ನುವ ಅಳಕು ಅವನಮನಸ್ಸಿನಲ್ಲಿ ಭಯವನ್ನುಂಟುಮಾಡಿದೆ, ಅದನ್ನು ಉದ್ಯೋಗ ಪರ್ವದಲ್ಲಿ ಆತ ತೋರಿಸಿಕೊಂಡಿದ್ದಾನೆ. ಆದರೂ ಅದನ್ನು ಜ್ಞಾತಿವಧೆ ಎನ್ನುವದರ ಮೂಲಕ ಪಾಂಡವರ ಸಾವನ್ನು ತನ್ನ ಮನಸ್ಸಿನಲ್ಲಿ ಬಯಸುತ್ತಿದ್ದಾನೆ.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ಮಾತೃತ್ವ ಮತ್ತು ಮಿತ್ರೆಯಾಗಿ ಸ್ಥಿತಪ್ರಜ್ಞತೆಯನ್ನು ತೋರಿದ ಮಹಾರಾಣಿ ಸುಮಿತ್ರೆ

ಅನಾಹುತವನ್ನು ನೋಡುವದಕ್ಕೆ ಧೈರ್ಯಬೇಕು. ಕೇಳುವದಕ್ಕೆ ಅಷ್ಟೆಲ್ಲಾ ಧೈರ್ಯ ಬೇಕಿಲ್ಲ. ಹಾಗಾಗಿ ಆತ ಈ ದೃಷ್ಟಿ ಸಂಜಯನಿಗೆ ದೊರಕುವಂತೆ ವರ ಕೇಳಿದ. ಈ ಕಾರಣದಿಂದಾಗಿಯೇ ಸಾರಥಿಯಿಂದ ಬೋಧಿಸಿದ ಸರ್ವೋಪನಿಷತ್ತಿನ ಸಾರ ಸಾರಥಿಯ ಮೂಲಕವಾಗಿಯೇ ಪ್ರಪಂಚಮುಖಕ್ಕೆ ತಿಳಿಯುವಂತಾದುದು. ಮಹಾಭಾರತವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ದಿವ್ಯದೃಷ್ಟಿ ಎಂದರೆ ತನ್ನದೇ ಆದ ವಾರ್ತಾವಾಹಕರ ಮೂಲಕವಾಗಿ ಶೀಘ್ರವಾಗಿ ರಣಭೂಮಿಯ ವಿಷಯ ತಿಳಿಯುವಂತೆ ಸಂಜಯ ಮಾಡಿಕೊಂಡಿರುವ ವ್ಯವಸ್ಥೆಯಾಗಿತ್ತು. ಆದರೆ ಕಾವ್ಯದ ಸೌಂದರ್ಯವನ್ನು ಆಸ್ವಾದಿಸಲು ದಿವ್ಯವಾದ ದೃಷ್ಟಿ ಎಂದಿಟ್ಟುಕೊಳ್ಳವದೇ ಸೊಗಸಾಗಿರುತ್ತದೆ.

ಮೊದಲೇ ತಿಳಿಸಿದ Maladptive behavior ಬೀಜ ದೃತರಾಷ್ಟ್ರನಲ್ಲಿ ಕಾಣಿಸುವದು ಯುದ್ಧಭೂಮಿಯಲ್ಲಲ್ಲ. ಅದು ಕೌರವಾದಿಗಳು ಹುಟ್ಟುವದಕ್ಕಿಂತ ಮೊದಲೇ ಕಾಣಿಸಿಕೊಂಡಿದೆ. ಶತಶೃಂಗ ಪರ್ವತದಲ್ಲಿ ಪಾಂಡುವಿಗೆ ಮಕ್ಕಳಾದ ವಿಷಯ ಅರಮನೆಗೆ ತಿಳಿದಿದೆ. ಈ ವಿಷಯ ತಿಳಿದ ಗಾಂಧಾರಿ ತನ್ನ ಗರ್ಭವನ್ನು ವಿಷಾದದಿಂದ ಕುಕ್ಕಿಕೊಳ್ಳುವದೂ ಸಹ ತನ್ನ ಮಗು ಅಧಿಕಾರದಿಂದ ವಂಚಿತನಾಗುತ್ತಾನಲ್ಲ ಎನ್ನುವ ಮನೋಭಾವನೆಯಿಂದಲೇ. ವ್ಯಾಸರ ಘೃತಭಾಂಡದ ಅನುಗ್ರಹದಿಂದ ನಂತರದಲ್ಲಿ ಕೌರವಾದಿಗಳ ಜನನವಾಗುತ್ತದೆ. ಆ ಸಂದರ್ಭದಲ್ಲಿ ಅನೇಕ ಅಪಶಕುನಗಳಾಗುತ್ತವೆ. ಎಷ್ಟೆಂದರೂ ಮಗ ಜನಿಸಿದ ಸಂಭ್ರಮದಲ್ಲಿರುವ ದೊರೆ ತನ್ನ ಮಂತ್ರಿಗಳನ್ನು ಮತ್ತು ವಿದುರನನ್ನೂ ಕರೆಯಿಸಿ ಹೇಳುವ ಮಾತು ತುಂಬಾ ಮಹತ್ವದ್ದು. ಇನ್ನೂ ಅರಿಯದ ತನ್ನ ಮಗು ಜನಿಸಿದ ಕೂಡಲೇ ಆತ ಮಂತ್ರಿಗಳಲ್ಲಿ ಕೇಳುವ ಮಾತು “ರಾಜಕುಮಾರರಲ್ಲಿಯೇ ಹಿರಿಯನಾದ ಯುಧಿಷ್ಠಿರನು ಚಂದ್ರಕುಲದ ವಂಶವರ್ಧಕನೆನ್ನುವದು ನಿಶ್ಚಯ. ಆತನಿಗೆ ಈ ರಾಜ್ಯಸಿಂಹಾಸನವೂ ಸೇರಲೇ ಬೇಕಾಗುತ್ತದೆ” ಎಂದಿದ್ದಾನೆ. ಮುಂದುವರಿದು “ತ್ವನನ್ತರಸ್ತಸ್ಮಾದಪಿ ರಾಜಾ ಭವಿಷ್ಯತಿ ಏತದ್ವಿಬ್ರೂತ ಮೇ ತಥ್ಯಂ ಯದತ್ರ ಭವಿತಾ ಧ್ರುವಮ್” (ಮ. ಭಾ. ಸಂ ಪ. 115-32) ಅವನ ನಂತರ ಜನಿಸಿರುವ ಈ ನನ್ನ ಮಗನೂ ರಾಜನಾಗಲೂ ಸಾಧ್ಯವಿದೆಯೇ ಎನ್ನುವ ಆಪ್ತಾಲೋಚನೆಯನ್ನು ಮಾಡುತ್ತಾನೆ. ಅಧಿಕಾರದ ಮೋಹವೆಂದರೆ ಹೀಗೆ. ಯಾವುದೋ ಕಾಲದಲ್ಲಿ ತನ್ನ ಅಧಿಕಾರ ಹೋಗಬಹುದೆನ್ನುವ ಕಾರಣಕ್ಕೆ ಆ ಮೊದಲೇ ಚಿಂತಿಸಿದ ಧೃತರಾಷ್ಟ್ರನ ಭಿತ್ತಿಯಲ್ಲಿಯೇ ಅಸಮರ್ಪಕ ನಡವಳಿಕೆಗಳ ಹುಟ್ಟು ಅಡಗಿದೆ. ತನ್ನ ಹೆಂಡತಿಯೇ ಮೊದಲೇ ಗರ್ಭವತಿಯಾದರೂ ಯುಧಿಷ್ಠರನೇ ಮೊದಲು ಜನಿಸಿದುದಕ್ಕೆ ಅಸಹನೆಯಿದೆ.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ರಾಮಾಯಣದಲ್ಲಿ ಗುಣಗೌರವಗಳಿಗೆ ಮೆರುಗನ್ನಿತ್ತ ಪಾತ್ರ ಸುಮಿತ್ರೆ

ಅರಮನೆಗೆ ಬಂದು ಸೇರಿದ ಕುಂತಿಯ ಮಕ್ಕಳನ್ನು ಭೀಷ್ಮಾದಿಗಳು ಒಪ್ಪಿದರೂ ಧೃತರಾಷ್ಟ್ರನ ಅಂತರಂಗದಲ್ಲಿ ಇವರು ಪಾಂಡವರು ಎನ್ನುವ ಬೇಧವಿತ್ತು ಎನ್ನುವದನ್ನು ವ್ಯಾಸರು ಇಲ್ಲಿ ಸೂಕ್ಷ್ಮವಾಗಿ ವಿವರಿಸುತ್ತಾರೆ. ಕೌರವ ವಂಶದಿಂದ ಪಾಂಡವರು ಹೊರಗಿನವರು ಎನ್ನುವ ಬೀಜ ಅರಮನೆಯಲ್ಲಿಯೇ ಮೊಳೆತಿತ್ತು. ಐದು ಸರೋವರಗಳಿಂದ ಆವೃತವಾದ ಕುರುಕ್ಷೇತ್ರ ಪರುಶರಾಮರು ಕ್ಷತ್ರಿಯರ ಸಂಹಾರಮಾಡಿದ ಮೇಲೆ ತನ್ನ ಕೊಡಲಿಯನ್ನು ತೊಳೆದುಕೊಂಡ ಸ್ಥಾನ. ಯುದ್ಧಭೂಮಿಯಲ್ಲಿ ಭಾವನೆಗಳು ಕುರುಡಾಗಿರುತ್ತದೆ. ಮಾನವೀಯ ಸಂಬಂಧಗಳು ಕಾಣಿಸುವದಿಲ್ಲ, ಹೇಗಾದರೂ ಸರಿ ಎದುರಾಳಿಯನ್ನು ಸೋಲಿಸಲೇ ಬೇಕೆನ್ನುವ ಕ್ರೌರ್ಯದ ಯುದ್ಧೋನ್ಮಾದ ಅಟ್ಟಹಾಸದ ನಗೆಯನ್ನು ಬೀರುತ್ತಿರುತ್ತದೆ. ರಣಭೂಮಿಯಲ್ಲಿ ಇರುವ ಮುಖಗಳು ತಾನು ಮತ್ತು ತನ್ನದಲ್ಲ. ತನ್ನದಲ್ಲವೆನ್ನುವದೆಲ್ಲವೂ ಅಳಿಯಬೇಕೆನ್ನುವ ಮನಸ್ಥಿತಿಯ ವೈಭವೀಕರಣವೇ ಯುದ್ಧವಾಗಿರುತ್ತದೆ. ಕೇವಲ ಕಣ್ಣಲ್ಲ; ಮಾನವೀಯತೆಯೇ ಕುರುಡಾಗಿರುವ ಕ್ಷೇತ್ರದಲ್ಲಿ ಕುರುಡುದೊರೆ ಯುದ್ಧದ ವಾರ್ತೆಯನ್ನು ಕೇಳುಲು ಉತ್ಸುಕನಾಗಿದ್ದಾನೆ, ಕಣ್ಣು ದೃಶ್ಯವನ್ನು ಯಥಾವತ್ತಾಗಿ ನೋಡುತ್ತದೆ. ಆದರೆ ಕಿವಿಯಿಂದ ನಮಗೆ ಬೇಕಾದುದನ್ನು ಕೇಳಿ ಬೇಡವಾದುದನ್ನು ಕೇಳಿಸಿಕೊಳ್ಳದಂತೆ ಇರಲು ಸಾಧ್ಯ. ಹಾಗಾಗಿಯೇ ದೊರೆಗೆ ವಿದುರನ ನೀತಿಗಿಂತ ಕಣಿಕನ ಮಾತು ಇಷ್ಟವಾಯಿತು.

ಮಾಮಕಾಃ ಪಾಂಡವಾಶ್ಚೈವ ಎನ್ನುವಲ್ಲಿ ತನ್ನ ಮತ್ತು ತನ್ನದಲ್ಲದ ಎನ್ನುವ ಭಾವನೆಯನ್ನು ಸ್ಪಷ್ಟವಾಗಿ ಕಾಣಬಹುದು. ನಾನು ಎನ್ನುವದು ಹೋದರೆ ಹೋಗಬಹುದು ಎನ್ನುವ ಕನಕದಾಸರ ಮಾತನ್ನು ಇಲ್ಲಿ ನೆನಪಿಸಿಕೊಂಡರೆ ವ್ಯಾಸರು ಭಾರತ ಯುದ್ಧಕ್ಕೆ ಭೂಮಿಕೆಯನ್ನು ಹಾಕಿದ್ದೇ ದುರ್ಯೋಧನನ ಜನನದ ಕಾಲಕ್ಕೆ ಎನ್ನುವದು ಸ್ಪಷ್ಟವಾಗುತ್ತದೆ. ಗೀತೆಯ ಮೊಟ್ಟ ಮೊದಲ ಶ್ಲೋಕ ಆರಂಭವಾಗುವದೇ ಕಣ್ಣಿಲ್ಲದವನ ಪ್ರಶ್ನೆಯಿಂದ. ಧೃತರಾಷ್ಟ್ರನಿಗೆ ಹೊರಗಣ್ಣಷ್ಟೇ ಅಲ್ಲ, ಒಳಗಣ್ಣೂ ತನ್ನವರು ಎನ್ನುವ ಭಾವನೆಯಿಂದ ಕುರುಡಾಗಿತ್ತು. Maladptive behavior ದೃಷ್ಟಿಯಿಂದ ನೋಡಿದರೆ ಗೀತೆಯ ಮೊದಲ ಅಧ್ಯಾಯ ವಿಷಾದಯೋಗಕ್ಕಿಂತಲೂ ಅಸಮರ್ಪಕ ಮನೋಭಾವವದ ನಿರ್ವಹಣೆಯ ಕೊರತೆಯನ್ನು ಕೌರವನ ಪಾಳಯದಲ್ಲಿ ನೋಡಬಹುದಾಗಿದೆ. ಜಗತ್ತನ್ನೇ ಕಾಣದ ದೊರೆಗೂ ಅಧಿಕಾರದ ವ್ಯಾಮೋಹ ಒಂದೆಡೆ ಆದರೆ ಆತನ ಮಗ ದುರ್ಯೋಧನನದ್ದು ಮತ್ತೊಂದು ರೀತಿ ಎನ್ನುವದನ್ನು ಎರಡನೆಯ ಶ್ಲೋಕ ವಿವರಿಸುತ್ತದೆ. ಅದನ್ನು ಮುಂದಿನ ಭಾಗದಲ್ಲಿ ನೋಡೋಣ.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ಭೋಗ ಮೀರಿದ ದೊರೆತನದ ಯೋಗ ಕಾಣಿಸಿದವನು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ಧವಳ ಧಾರಿಣಿ ಅಂಕಣ: ಸಾಕೇತದ ಅಮಾತ್ಯ ಸುಮಂತ್ರ, ರಾಮಾಯಣದ ರಹಸ್ಯನಿಧಿ

ಧವಳ ಧಾರಿಣಿ ಅಂಕಣ: ರಾಮಾಯಣದಲ್ಲಿ ಮಂತ್ರಿ ಸುಮಂತ್ರನ ಪಾತ್ರ ಸಣ್ಣದಾದರೂ ಮಹತ್ವದ್ದು. ದಶರಥ ಮಹಾರಾಜನ ಬಾಲ್ಯದ ಒಡನಾಡಿ ಇವನಾಗಿದ್ದ. ಬಹುಶಃ ದಶರಥನದೇ ವಯಸ್ಸು ಈತನಿಗೆ. ಈ ಕಾರಣದಿಂದಲೇ ದಶರಥನಿಗೆ ಆತ ನಂಬಿಗಸ್ಥ ಮಂತ್ರಿಯಾಗಿದ್ದನು. ಆತನ ಅಂತರಂಗದ ಆಪ್ತನೂ ಆಗಿದ್ದನು.

VISTARANEWS.COM


on

ಧವಳ ಧಾರಿಣಿ ಅಂಕಣ dasharatha sumantra
Koo

ಸುಮಂತ್ರ ಭಾಗ 1; ರಾಜ್ಯದ ರಹಸ್ಯಗಳನ್ನು ನಿಗೂಢವಾಗಿರಿಸಿದ ಮುತ್ಸದ್ಧಿ

dhavala dharini by Narayana yaji

ಧವಳ ಧಾರಿಣಿ ಅಂಕಣ: ತಸ್ಯಾಮಾತ್ಯಾ ಗುಣೈರಾಸನ್ನಿಕ್ಷ್ವಾಕೋಸ್ತು ಮಹಾತ್ಮನಃ
ಮನ್ತ್ರಜ್ಞಾಶ್ಚೇಙ್ಗಿತಜ್ಞಾಶ್ಚ ನಿತ್ಯಂ ಪ್ರಿಯಹಿತೇ ರತಾ: ৷৷ಬಾ.7.1৷৷

ಇಕ್ಷ್ವಾಕು ವಂಶದಲ್ಲಿ ಹುಟ್ಟಿದ ಮಹಾತ್ಮನಾದ ದಶರಥನಿಗೆ (king Dasharatha) ಮಂತ್ರಾಲೋಚನೆಯಲ್ಲಿ ಸಮರ್ಥರಾದ, ಕಾರ್ಯವಿಚಾರತತ್ಪರರಾದ ಮತ್ತು ಪರರಮನಸಿನಲ್ಲಿರುವುದನ್ನು ಮುಖಭಾವದಿಂದಲೇ ತಿಳಿಯುಬಲ್ಲ, ಯಾವಾಗಲೂ ರಾಜನ ಹಿತರಕ್ಷಣೆಯಲ್ಲಿಯೇ ನಿರತರಾಗಿರುವ ಮಂತ್ರಿಗಳಿದ್ದರು.

ಮಂತ್ರಿಗಳ ವಿಚಾರಕ್ಕೆ ಬರುವಾಗ ರಾಮಾಯಣದ (Ramayana) ಪ್ರಾರಂಭದ ಬಾಲಕಾಂಡಗಳಿಂದ ಹಿಡಿದು ಕೊನೆಯ ಉತ್ತರಕಾಂಡದ ಸೀತಾವಿಯೋಗದ ವರೆಗಿನ ಭಾಗಗಳಲ್ಲಿ ಕಂಡುಬರುವ ಪ್ರಮುಖ ಹೆಸರು ಸುಮಂತ್ರ (Sumantra) ಎನ್ನುವ ಮಹಾ ಅಮಾತ್ಯನದ್ದು. ಅಯೋಧ್ಯೆಯ ಹಿತವನ್ನು ಕಾಪಾಡಲು ಅಷ್ಟ ಮಂತ್ರಿಗಳಾದ ಧೃಷ್ಟಿ, ಜಯಂತ, ವಿಜಯ, ಸಿದ್ಧಾರ್ಥ, ಅರ್ಥಸಾಧಕ, ಅಶೋಕ, ಮಂತ್ರಪಾಲ ಮತ್ತು ಸುಮಂತ್ರ ಎನ್ನುವ ಎಂಟು ಮಂತ್ರಿಗಳಿದ್ದರು. ಅವರಲ್ಲಿ ಸುಮಂತ್ರನೆನ್ನುವ ಕೇವಲ ಮಂತ್ರಿ ಎನ್ನುವುದಕ್ಕಿಂತ ರಾಜನ ಅಂತರಂಗದ ಆಪ್ತನೂ ಆಗಿದ್ದ. ಅರ್ಥಶಾಸ್ತ್ರದಲ್ಲಿ ಸುಬಧ್ರವಾದ ರಾಜ್ಯಕ್ಕೆ “ರಾಜ, ಅಮಾತ್ಯ, ಜನಪದ, ದುರ್ಗ, ಕೋಶ, ಸೈನ್ಯ ಅಥವಾ ದಂಡ ಮತ್ತು ಮಿತ್ರ” ಎನ್ನುವ ಸಪ್ತಾಂಗ ಬಹಳ ಮಹತ್ವದ್ದು. ಅಮಾತ್ಯರಲ್ಲಿ ಮಂತ್ರಿಗಳು ಮತ್ತು ಪುರೋಹಿತ ವರ್ಗ ಎನ್ನುವ ಎರಡು ವಿಧಗಳಿವೆ. ದಕ್ಷ ಆಡಳಿತಕ್ಕೆ ಯೋಗ್ಯರಾದ ಸಚಿವರು ಮತ್ತು ಧರ್ಮಮಾರ್ಗದಲ್ಲಿ ರಾಜ ಸದಾ ಇರುವಂತೆ ನೋಡಿಕೊಳ್ಳುವ ಪುರೋಹಿತರು ಬಹು ಮುಖ್ಯ. ರಾಜನಿಗೆ ಕೆಟ್ಟ ಹೆಸರಾಗಲಿ, ಒಳ್ಳೆಯ ಹೆಸರಾಗಲಿ ಬರುವುದರಲ್ಲಿ ಅಮಾತ್ಯ ಮತ್ತು ಪುರೋಹಿತರ ಪಾತ್ರ ದೊಡ್ಡದು.

ಸುಮಂತ್ರ ಎನ್ನುವ ಮಂತ್ರಿ ಅಯೋಧ್ಯೆಯ ಆಧಾರ ಸ್ತಂಭಗಳಲ್ಲಿ ಒಂದಾಗಿದ್ದ. ಆಯೋಧ್ಯೆಯಲ್ಲಿ ಸಚಿವ ಪದವಿಯೆನ್ನುವುದು ವಂಶಪರಂಪರೆಯ ಕಾರಣ ಮಾತ್ರದಿಂದಲೇ ಬರುತ್ತಿರಲಿಲ್ಲ. ಅವರಲ್ಲಿ ಯೋಗ್ಯತೆಯೂ ಇರಬೇಕಾಗಿತ್ತು. ಯಾರನ್ನಾದರೂ ಹುದ್ದೆಗೆ ನಿಯಕ್ತಿಗೊಳಿಸುವ ಮುನ್ನ ಅವರನ್ನು ಚನ್ನಾಗಿ ಪರೀಕ್ಷಿಸಲಾಗುತ್ತಿತ್ತು. ಅರ್ಥಶಾಸ್ತ್ರದಲ್ಲಿ ರಾಜನ ಆಸ್ಥಾನದಲ್ಲಿರುವವರನ್ನು ಪರೀಕ್ಷಿಸುವ ವಿಧಾನವನ್ನು ಹೇಳುವಾಗ ಧರ್ಮಾದಿ, ಉಪಧಾ, ಅರ್ಥೋಪಧಾ, ಕಾಮೋಪಧಾ, ಭಯೋಪಧಾಗಳ ಮೂಲಕ ಪರೀಕ್ಷಿಸಬೇಕು ಎಂದು ಹೇಳುತ್ತದೆ. ಅಂದರೆ ರಾಜನಲ್ಲಿ ಅಧರ್ಮವನ್ನು ಕಲ್ಪಿಸಿ ಅವನನ್ನು ಪಟ್ಟದಿಂದ ಇಳಿಸೋಣವೇ ಎನ್ನುವ ಆಮಿಷಕ್ಕೆ ಒಡ್ಡಿದಾಗಲೂ ಅದನ್ನು ಯಾವಾತ ತಿರಸ್ಕರಿಸುತ್ತಾನೋ, ಹಣದ ಆಮಿಷದ ಮೂಲಕ ರಾಜನಿಂದ ಬೇರ್ಪಡಿಸಲು ಸಾಧ್ಯವೋ ಎನ್ನುವುದನ್ನು ಪರೀಕ್ಷಿಸುವುದು, ರಾಣಿ ನಿನ್ನನ್ನು ಬಯಸಿದ್ದಾಳೆ, ಅವಳನ್ನು ಸೇರಿದರೆ ನಿನಗೆ ಕೈತುಂಬಾ ಹಣಸಿಗುವುದು ಎನ್ನುವ ಆಮಿಷವನ್ನು ಒಡ್ಡಿದಾಗಲೂ ಅದನ್ನು ತಿರಸ್ಕರಿಸುವಂಥವರು, ರಾಜನಿಂದ ಅವಮಾನಿತರಾದ (ಹಾಗೇ ನಟಿಸಿ) ಅಮಾತ್ಯನಾದವ ಇತರರನ್ನು ನಾವೆಯಲ್ಲಿ ಕರೆದುಕೊಂಡು ಹೋಗಿ ರಾಜನ ವಿರುದ್ಧ ಅವರನ್ನು ಎತ್ತಿಕಟ್ಟಿದಾಗ ಯಾರು ತಿರಸ್ಕರಿಸಿ ರಾಜನಿಗೆ ನಿಷ್ಠೆಯುಳ್ಳವರಾಗಿರುತ್ತಾರೆಯೋ ಅಂಥವರು ಮಾತ್ರ ಅಮಾತ್ಯರಾಗಲು ಯೋಗ್ಯರು ಎನ್ನುತ್ತದೆ.

ರಾಜನ ಆಪ್ತಸಲಹೆಗಾರ

ದಶರಥ ಮಹಾರಾಜನ ಬಾಲ್ಯದ ಒಡನಾಡಿ ಇವನಾಗಿದ್ದ. ಬಹುಶಃ ದಶರಥನದೇ ವಯಸ್ಸು ಈತನಿಗೆ. ಈ ಕಾರಣದಿಂದಲೇ ದಶರಥನಿಗೆ ಆತ ನಂಬಿಗಸ್ಥ ಮಂತ್ರಿಯಾಗಿದ್ದನು. ಆತನ ಅಂತರಂಗದ ಆಪ್ತನೂ ಆಗಿದ್ದನು. ದಶರಥ ಕೌಸಲ್ಯೆ ಮತ್ತು ಸುಮಿತ್ರೆ ಇಬ್ಬರನ್ನೂ ಮದುವೆಯಾಗಿ ಹಲವುಕಾಲ ಕಳೆದಿದ್ದರೂ ಅವರಿಬ್ಬರಲ್ಲಿ ಮಕ್ಕಳಾಗಿರಲಿಲ್ಲ. ಅಯೋಧ್ಯೆಯ ಸಿಂಹಾಸನಕ್ಕೆ ವಾರಸುದಾರರು ಇಲ್ಲದೆ ಇರುವ ಕಾರಣದಿಂದ ಮತ್ತೊಂದು ಮದುವೆಯಾಗಲು ಕನ್ಯಾನ್ವೇಷಣೆಗೆ ದೊರೆ ತೊಡಗಿದ. ಆಗ ಆತನಿಗೆ ಕೇಕೇಯದ ದೊರೆ ಅಶ್ವಪತಿಗೆ ಕೈಕೇಯಿ ಎನ್ನುವ ಸುಂದರಿಯಾದ ಮಗಳು ಇರುವ ವರ್ತಮಾನ ಬಂತು. ಆಕೆಯನ್ನು ಮದುವೆಯಾಗುವ ಉದ್ಧೇಶದಿಂದ ಅಶ್ವಪತಿರಾಜನಲ್ಲಿ ಕೇಳಿದಾಗ ಆ ದೊರೆ “ತನ್ನ ಮಗಳಲ್ಲಿ ಜನಿಸುವ ಪುತ್ರನಿಗೆ ರಾಜ್ಯದ ಉತ್ತರಾಧಿಕಾರ ಸಿಗಬೇಕೆಂದು” ನಿಯಮ ಹಾಕಿ ಅದಕ್ಕೆ ಒಪ್ಪುವುದಾದರೆ ಮಗಳನ್ನು ಕೊಡುವೆ ಎಂದ. ದಶರಥನಿಗೆ ಮದುವೆ ಆಗಬೇಕಾಗಿತ್ತು. ಅದಾಗಲೇ ಆತನಿಗೆ ಇಬ್ಬರು ಹೆಂಡತಿಯರ ಜೊತೆ ಇನ್ನು ಮುನ್ನೂರೈವತ್ತು ಉಪಪತ್ನಿಯರೂ ಇದ್ದರು. ಪಟ್ಟಮಹಿಷಿಯರಲ್ಲಿ ಜನಿಸಿದವರಿಗೆ ಮಾತ್ರ ರಾಜ್ಯದ ಅಧಿಕಾರಕ್ಕೆ ಏರುವ ಅರ್ಹತೆ ಇರುತ್ತಿತ್ತು. ಹೇಗಿದ್ದರೂ ಮೊದಲ ಇಬ್ಬರು ಪತ್ನಿಯರಿಗೆ ಮಕ್ಕಳಿಲ್ಲ, ಹಾಗಾಗಿ ಕೈಕೇಯಿಯಲ್ಲಿ ಜನಿಸಿದ ಮಕ್ಕಳಿಗೆ ಸಹಜವಾಗಿ ಅಧಿಕಾರ ಸಿಗುತ್ತದೆ ಎನ್ನುವ ಕಾರಣಕ್ಕೆ ದೊರೆ ಮರುಮಾತಿಲ್ಲದೇ ಒಪ್ಪಿಕೊಂಡ.

ಈ ವಿಷಯಕ್ಕೆ ಸಾಕ್ಷಿಯಾಗಿ ಸುಮಂತ್ರ ಮಾತ್ರವೇ ಇದ್ದ. ಆದರೆ ಬುದ್ಧಿವಂತನಾದ ದಶರಥ ಮತ್ತು ಸುಮಂತ್ರ ಇಬ್ಬರೂ ಈ ವಿಷಯವನ್ನು ಗೌಪ್ಯವಾಗಿಟ್ಟಿದ್ದರು. ಅಶ್ವಪತಿ ತನ್ನ ಮಗಳಾದ ಕೈಕೇಯಿಗೂ ಈ ಮಾತನ್ನು ಹೇಳಿರಲಿಲ್ಲ. ನಂತರ ಅದು ಹೇಗೋ ರಾಮನಿಗೆ ತಿಳಿದಿತ್ತು. ರಾಜನಾಗುವಿಕೆ ಎಂದರೆ ಅದಕ್ಕೆ ಇನ್ನಿತರ ಯೋಗ್ಯತೆಯೂ ಬೇಕಿತ್ತು. ಭರತ ವನವಾಸಕ್ಕೆ ಬಂದಾಗ ಆತನಲ್ಲಿ ರಾಮ, ದಶರಥ ಕನ್ಯಾಶುಲ್ಕವಾಗಿ ಕೋಸಲ ರಾಜ್ಯವನ್ನು ಕೊಟ್ಟಿರುವ ವಿಷಯ ಹೇಳುತ್ತಾನೆ. ಮದುವೆಯಾಗುವಾಗ ಸುಳ್ಳು ಹೇಳಬಹುದು ಎನ್ನುವ ಕಾರಣಕ್ಕೆ ರಾಜ್ಯದ ಹಿತರಕ್ಷಣೆಯಿಂದ ಸುಮಂತ್ರ ಈ ವಿಷಯನ್ನು ಮುಚ್ಚಿಟ್ಟಿದ್ದ. ಮಹಾಭಾರತದಲ್ಲಿ “ಮನ್ತ್ರಗೂಢಾ ಹಿ ರಾಜಸ್ಯ ಮನ್ತ್ರಿಣೋ ಯೇ ಮನೀಷಿಣಃ – ಬುದ್ಧಿವಂತರಾದ ಮಂತ್ರಿಗಳೇ ರಾಜ್ಯದ ರಾಜ ರಹಸ್ಯಗಳನ್ನು ನಿಗೂಢವಾಗಿರಿಸುತ್ತಾರೆ” ಎನ್ನುವ ವಾಕ್ಯವಿದೆ. ಅದಕ್ಕೆ ತಕ್ಕಂತೆ ಇದ್ದವ ಸುಮಂತ್ರ.

ರಾಜ ಮತ್ತು ಅಮಾತ್ಯ ಈ ಇಬ್ಬರ ನಡುವೆ ಇರುವ ಸಂಬಂಧ ಪತಿ ಮತ್ತು ಧಾರಾ ಭಾವದಲ್ಲಿರಬೇಕು. ರಾಜನ ನಿರ್ಣಯದಲ್ಲಿ ದೋಷಕಂಡು ಅದರಲ್ಲಿ ಬದಲಾವಣೆ ಆಗಬೇಕಾದಾಗ ಬಹಿರಂಗವಾಗಿ ಆ ಕುರಿತು ಚರ್ಚಿಸಕೂಡದು. ಸಭಾಸದರ ಎದುರು ಸತ್ಯವೇ ಆದರೂ ಅದನ್ನು ಪ್ರಕಟಿಸಿದರೆ ರಾಜನ ಮಹತ್ವ ಕಡಿಮೆಯಾಗಿಬಿಡುತ್ತದೆ. ಸಚಿವನಾದವ ಹೆಂಡತಿ ತನ್ನ ಗಂಡನಿಗೆ ಏಕಾಂತದಲ್ಲಿ ಹೇಗೆ ಎಲ್ಲವನ್ನು ತಿಳಿಸಿ ಹೇಳುತ್ತಾಳೆಯೋ ಅದೇ ರೀತಿ ರಾಜ ಏಕಾಂತದಲ್ಲಿರುವಾಗ ಆತ ತೆಗೆದುಕೊಂಡ ನಿರ್ಣಯಗಳ ಕುರಿತು ವಿಮರ್ಶಿಸಿ ಮಾಡಬೇಕಾದ ಬದಲಾವಣೆಗಳನ್ನು ತಿಳಿಸಿ ಕಾರ್ಯರೂಪಕ್ಕೆ ತರುವಂತೆ ನೋಡಿಕೊಳ್ಳಬೇಕು. ದಶರಥನಿಗೆ ಬಹುಕಾಲದವರೆಗೂ ಮಕ್ಕಾಳಾಗಿಲ್ಲದ ಕಾರಣದಿಂದ ಆತ ತನ್ನ ಮಂತ್ರಿಗಳನ್ನು ಪುರೋಹಿತರಾದ ವಶಿಷ್ಠ, ವಾಮದೇವರನ್ನೂ ಕರೆಯಿಸಿ ಅವರಲ್ಲಿ ಪರಿಹಾರ ಕೇಳಿದಾಗ, ಅವರು ರಾಜನಿಗೆ ಅಶ್ವಮೇಧ ಯಾಗವನ್ನು ಮಾಡಲು ಸಲಹೆನೀಡುತ್ತಾರೆ. ಅದಕ್ಕೆ ದೊರೆ ಒಪ್ಪಿಗೆ ಸೂಚಿಸಿಯೂ ಆಗುತ್ತದೆ. ಆದರೆ ಅಲ್ಲೇ ಇದ್ದ ಸುಮಂತ್ರನಿಗೆ ಈ ಸಲಹೆ ಪೂರ್ತಿ ಮನಸ್ಸಿಗೆ ಬರಲಿಲ್ಲ. ಆತ ರಾಜನ ಅಂತಃಪುರಕ್ಕೆ ಸಾಯಂಕಾಲ ಬಂದು ರಾಜನಿಗೆ ಮಹತ್ವದ ವಿಷಗಳ ಕುರಿತು ಹೇಳುತ್ತಾನೆ.

ಸುಮಂತ್ರನ ಪಾತ್ರ ಮಹಾಭಾರತದ ವಿದುರನ ಪಾತ್ರವನ್ನು ಹೋಲುತ್ತದೆ. ಆತನಿಗೂ ವಿದುರನಂತೆ ಮಹಾನ್ ಋಷಿಗಳ ಸಂಪರ್ಕವಿತ್ತು. ಅವರಲ್ಲಿ ತನ್ನ ವಯಕ್ತಿಕವಾದ ವಿಷಯಗಳನ್ನು ಕೇಳುವುದಕ್ಕಿಂತ ಆತ ರಾಜ್ಯದ ಕಲ್ಯಾಣದ ವಿಷಯಗಳನ್ನು ಕೇಳುತ್ತಿದ್ದ. ಅಯೋಧ್ಯೆಯ ಅರಸನಿಗೆ ಮಕ್ಕಳಾಗಿಲ್ಲದ ವಿಷಯಗಳ ಕುರಿತು ಸುಮಂತ್ರನಿಗೂ ಚಿಂತೆ ಆಗಿತ್ತು. ಆ ಕುರಿತು ಆತ ಪರಿಹಾರಕ್ಕಾಗಿ ಅನೇಕ ಋಷಿಗಳನ್ನು ಬೇಡಿಕೊಳ್ಳುತ್ತಿದ್ದ. ಒಂದುಸಲ ಸುಮಂತ್ರ ಮಹಾತ್ಮರಾದ ಸನತ್ಕುಮಾರ ಋಷಿಗಳನ್ನು ಇನ್ನಿತರ ಮುನಿಗಳ ಸಮ್ಮುಖದಲ್ಲಿ ಭೇಟಿಯಾಗಿ ರಾಜನಿಗೆ ಮಕ್ಕಳಾಗುವಂತೆ ಬೇಡಿಕೊಂಡ. ಅದಕ್ಕೆ ಅವರು ವಿಭಾಂಡಕ ಮುನಿಯ ಮಗನಾದ ಋಷ್ಯಶೃಂಗನ ವಿಚಾರವನ್ನು ಹೇಳಿ, ಆತನ ಚರಿತ್ರೆಯನ್ನು ಅಮಾತ್ಯನಿಗೆ ವಿವರಿಸುತ್ತಾರೆ. ಋಷ್ಯಶೃಂಗನನ್ನು ಹೆಣ್ಣುಗಳ ಮೋಹದಲ್ಲಿ ಕೆಡಹಿ ತನ್ನ ರಾಜ್ಯಕ್ಕೆ ಕರೆಯಿಸಿಕೊಂಡ ರೋಮಪಾದ ರಾಜ ತನ್ನ ಮಗಳಾದ ಶಾಂತಾದೇವಿಯನ್ನು ಕೊಟ್ಟು ಮದುವೆಮಾಡಿದ್ದಾನೆ. ಸುಮಂತ್ರನ ನಿಸ್ಪ್ರಹ ಪ್ರಾರ್ಥನೆಗೆ ಮೆಚ್ಚಿದ ಸನತ್ಕುಮಾರರು ಧಶರಥನಿಗೆ ಮಕ್ಕಳಾಗಬೇಕೆಂದಿದ್ದರೆ ಆತ ಅಂಗರಾಜ್ಯಕ್ಕೆ ಹೋಗಿ ರೋಮಪಾದನನ್ನು ಒಲಿಸಿ ಋಷ್ಯಶೃಂಗನನ್ನು ಅಯೋಧ್ಯೆಗೆ ಕರೆಯಿಸಿ ಆತನಿಂದ ಪುತ್ರಕಾಮೇಷ್ಥಿ ಯಾಗವನ್ನು ಮಾಡಿಸಿದರೆ ನಾಲ್ವರು ಮಕ್ಕಳಾಗುವರು ಎಂದು ಉಪಾಯವನ್ನೂ ಸಹ ಹೇಳಿದ್ದ. ಈ ವಿಷಯವನ್ನು ಸೂಕ್ತ ಸಮಯದಲ್ಲಿ ದಶರಥನಿಗೆ ಹೇಳಬೇಕೆಂದುಕೊಂಡು ಅದು ತನಕ ಹೇಳಿರಲಿಲ್ಲ.

ದೇವಗುಟ್ಟು, ಋಷಿ ಗುಟ್ಟುಗಳನ್ನು ಏಕಾಏಕೀ ಬಹಿರಂಗಪಡಿಸಬಾರದೆಂದು ಶಾಸ್ತ್ರ ಹೇಳುತ್ತದೆ. ಕಾಲವಲ್ಲದ ಕಾಲದಲ್ಲಿ ಅದನ್ನು ಹೇಳಿದರೆ ಅದು ಫಲ ನೀಡದೇ ಹೋಗಬಹುದು. ಅದೂ ಅಲ್ಲದೇ ಮನುಷ್ಯ ಪ್ರಯತ್ನ ಮೀರಿದಾಗ ಮಾತ್ರವೇ, ದೇವತೆಗಳಲ್ಲಿ ಅನುಗ್ರಹಕ್ಕಾಗಿ ಕೋರಬೇಕು. ಮಕ್ಕಳಾಗಲು ಅಶ್ವಮೇಧ ಯಾಗವನ್ನು ಮಾಡುವಂತೆ ವಶಿಷ್ಠರು ಸಲಹೆ ನೀಡಿದಾಗ ಸಭೆಯ ಮರ್ಯಾದೆಯ ದೃಷ್ಟಿಯಿಂದ ಅಲ್ಲಿ ಸುಮಂತ್ರ ಏನೂ ಹೇಳಲಿಲ್ಲ. ಮಂತ್ರಾಲೋಚನೆಯ ನೆಪದಲ್ಲಿ ಅಂತಃಪುರಕ್ಕೆ ಬಂದು ಅರಸನಿಗೆ ತಾನು ರಾಜನ ಸಲುವಾಗಿ ಸನತ್ಕುಮಾರರಲ್ಲಿ ಮಕ್ಕಳಾಗುವಂತೆ ವರಬೇಡಿದುದರ ವಿಷಯವನ್ನು ಬಹಿರಂಗಪಡಿಸುತ್ತಾನೆ. ಸನತ್ಕುಮಾರರೇ ಸಲಹೆ ನೀಡಿದಂತೆ ಪುತ್ರಕಾಮೇಷ್ಟಿಯಾಗವನ್ನು ಮಾಡಲು ಪ್ರೇರೇಪಿಸುತ್ತಾನೆ. ಪುತ್ರಕಾಮೇಷ್ಟಿಯಾಗ ಅಥರ್ವ ಮಂತ್ರಕ್ಕೆ ಸಂಬಂಧಿಸಿದುದರಿಂದ ಸಭೆಯಲ್ಲಿ ನೇರವಾಗಿ ಹೇಳಕೂಡದು ಎನ್ನುವ ಪ್ರಜ್ಞೆ ಸುಮಂತ್ರನಲ್ಲಿತ್ತು. ಪುರೋಹಿತರಾದ ವಶಿಷ್ಠರು ಆಸ್ಥಾನದಲ್ಲಿ ಇರುವಾಗ ಇನ್ನೊಬ್ಬ ಪುರೋಹಿತರನ್ನು ಕರೆಯಿಸಿ ಯಾಗ ಮಾಡುವ ಸಲಹೆ ನೀಡಿದರೆ ಅದರಿಂದ ವಶಿಷ್ಠರಿಗೆ ಅವಮಾನ ಆಗಿ ಕೋಪಿಸಿಕೊಳ್ಳಬಹುದೆನ್ನುವ ಆತಂಕವೂ ಮನೆಮಾಡಿತ್ತು.

ಈ ಹಿಂದೆ ವಶಿಷ್ಠ ಪರಂಪರೆಯ ಹಿರಿಯರು ಹರಿಶ್ಚಂದ್ರನ ತಂದೆ ಸತ್ಯವ್ರತ(ತ್ರಿಶಂಕು)ನಿಗೆ ಇನ್ನೊಬ್ಬ ಪುರೋಹಿತರನ್ನು ಕರೆದು ಯಾಗ ಮಾಡಿಸುವೆ ಎಂದಾಗ ಶಾಪ ಕೊಟ್ಟಿದ್ದ. ಈ ಕಾರಣದಿಂದ ಮಹಾರಾಜನೇ ಋಷ್ಯಶೃಂಗನನ್ನು ಕರೆತರುವ ವಿಚಾರದಲ್ಲಿ ವಶಿಷ್ಠರನ್ನು ಒಲಿಸಲಿ ಎನ್ನುವ ವಿವೇಕದ ನಡತೆ ಅವನಲ್ಲಿತ್ತು. ವಿದ್ವಾಂಸನೂ ಎಲ್ಲಾ ಕಾರ್ಯಗಳಲ್ಲಿ ಶುದ್ಧನಾಗಿರುವವನು, ದೇಶಿಯನು (ಜಾನಪದಃ), ತೀಕ್ಷ್ಣವಾದ ಬುದ್ಧಿಯುಳ್ಳವ (ಕೃತಪ್ರಜ್ಞಶ್ಚ) ಆದ ಮಂತ್ರಿಯನ್ನು ಅರಸ ಹೊಂದಿರಬೇಕೆನ್ನುವ ಶೃತಿವಾಕ್ಯಕ್ಕೆ ನಿದರ್ಶನನಾಗಿ ಸುಮಂತ್ರ ಇದ್ದ. ಸುಮಂತ್ರನ ಸಲಹೆಯನ್ನು ಸ್ವೀಕರಿಸಿದ ರಾಜ ವಶಿಷ್ಠರ ನೇತ್ರತ್ವದಲ್ಲಿ ಅಶ್ವಮೇಧ ಯಾಗವನ್ನೂ ಆ ನಂತರ ಋಷ್ಯಶೃಂಗರ ಅದ್ವರ್ಯದಲ್ಲಿ ಪುತ್ರಕಾಮೇಷ್ಟಿ ಯಾಗವನ್ನೂ ನಡೆಸಲು ವಶಿಷ್ಥರಿಂದ ಅನುಮತಿ ಪಡೆಯುತ್ತಾನೆ. ನಂತರ ದಶರಥನ ಪರಿವಾರದೊಡನೆ ಅಂಗದೇಶಕ್ಕೆ ಹೋಗಿ ರೋಮಪಾದನೊಡನೆ ಋಷ್ಯಶೃಂಗನನ್ನು ಯಾಗಕ್ಕಾಗಿ ಕರೆತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವ ಸುಮಂತ್ರನೇ.

ಮಂತ್ರಾಲೋಚನಾ ಪ್ರವೀಣ

ಸುಮಂತ್ರನಲ್ಲಿ ಮದ ಮತ್ಸರ ಕ್ರೋಧಗಳು ಮನೆಮಾಡಿರಲಿಲ್ಲ. ಅಯೋಧ್ಯೆಯಲ್ಲಿ ಮಂತ್ರಿಗಳಾಗುವವರನ್ನು ಕಾಯಕ, ವಾಚಕ, ಮಾನಸಿಕ, ಕರ್ಮಕೃತ ಮತ್ತು ಸಂಕೇತಜನಿತ ಎನ್ನುವ ಐದು ಅಂಗಗಳಿಂದ ಪರೀಕ್ಷಿಸಿ ತೇರ್ಗಡೆಯಾದವರನ್ನು ಮಂತ್ರಿಗಳಾಗಿ ತೆಗೆದುಕೊಳ್ಳಲಾಗುತ್ತಿತ್ತು. ಸುಮಂತ್ರ ಈ ಎಲ್ಲಾ ವಿಷಯಗಳಲ್ಲಿ ರಾಜನ ಮೊದಲ ಆಯ್ಕೆಯಾಗಿದ್ದ. ಸುಮಂತ್ರನೆನ್ನುವುದು ಈತನಿಗೆ ಅನ್ವರ್ಥನಾಮವಾಗಿದ್ದಿರಬೇಕು. ಮಂತ್ರಕ್ಕೆ ಸಚಿವ ಎನ್ನುವ ಅರ್ಥವಿದೆ. “ಸುಮಂತ್ರ” ಎಂದರೆ ಒಳ್ಳೆಯ ಸಲಹೆಯನ್ನು ಕೊಡುವವ ಎಂದು ಆಗುತ್ತದೆ. ಸುಮಂತ್ರ ಮಂತ್ರಾಲೋಚನೆಯಲ್ಲಿ ನಿಪುಣನಾಗಿದ್ದ. ಕುಮಾರವ್ಯಾಸನ ಭಾರತದಲ್ಲಿ ರಾಜನಿಗೆ ನೆರವಾಗಲು ಮಂತ್ರಾಲೋಚನೆಯಲ್ಲಿ ಸಮರ್ಥರಾದ ಸಚಿವರಿರಬೇಕು ಎನ್ನುತ್ತಾನೆ.

ಮಂತ್ರವುಳ್ಳವನವನೆ ಹಿರಿಯನು
ಮಂತ್ರವುಳ್ಳವನವನೆ ರಾಯನು
ಮಂತ್ರವುಳ್ಳವನವನೆ ಸಚಿವ ನಿಯೋಗಿಯೆನಿಸುವನು |
ಮಂತ್ರವಿಲ್ಲದ ಬರಿಯ ಬಲು ತಳ
ತಂತ್ರದಲಿ ಫಲವಿಲ್ಲವೈ ಸ್ವಾ
ತಂತ್ರವೆನಿಸಲ್ಕರಿವುದೇ ಭೂಪಾಲ ಕೇಳೆಂದ || ಸ. ಸಂ.1-49 ||

ರಾಜನಾದವ ಇಂಥ ಗುಣಲಕ್ಷಣಗಳನ್ನು ಹೊಂದಿರಬೇಕು, ಅಥವಾ ಅಂತವರನ್ನು ತನ್ನ ಆಪ್ತರನ್ನಾಗಿ ಆಯಾ ಹುದ್ಧೆಗಳಲ್ಲಿ ನಿಯುಕ್ತರನ್ನಾಗಿಸಿಕೊಳ್ಳಬೇಕು ಎನ್ನುವ ತಾತ್ಪರ್ಯ ಇದರಲ್ಲಿದೆ. ಸುಮಂತ್ರ ಈ ಎಲ್ಲಾ ಗುಣಗಳ ಸಾಕಾರ ಮೂರ್ತಿಯಾಗಿದ್ದ. ಅಯೋಧ್ಯೆಯಲ್ಲಿ ರಾಮನಿಗೆ ಪಟ್ಟಾಭಿಷೇಕವನ್ನು ನಡೆಸಲು ದಶರಥ ಹೂಡಿದ್ದ ಮಂತ್ರಾಲೋಚನೆ ಬಲು ಪ್ರಸಿದ್ಧ. ಅಲ್ಲಿ ಆತ ವಶಿಷ್ಠ, ವಾಮದೇವ ಮತ್ತು ಸುಮಂತ್ರನನ್ನು ಸೇರಿಸಿ ರಾಮನಿಗೆ ಯುವರಾಜ ಪಟ್ಟಾಭಿಷೇಕವನ್ನುಮಾಡುವ ತನ್ನ ಮನಸ್ಸಿನ ಆಶಯವನ್ನು ವ್ಯಕ್ತಪಡಿಸುತ್ತಾನೆ. ರಾಜನಿಗೆ ಅಶ್ವಪತಿಗೆ ಕೊಟ್ಟ ಮಾತು ತಪ್ಪಿಸಬೇಕಾಗಿದೆ. ಅದಕ್ಕೆ ಮಂತ್ರಿಗಳ ಒಪ್ಪಿಗೆ ಪಡೆದು ನಿಧಾನಕ್ಕೆ ಸಾಮಂತರ ಮತ್ತು ಪ್ರಜೆಗಳ ಒಪ್ಪಿಗೆಯನ್ನು ಪಡೆಯುವ ಹಂತದಲ್ಲಿ ಕರೆದ ಮಂತ್ರಾಲೋಚನೆ ಅದು. ಮಂತ್ರಾಲೋಚನೆಯ ವಿಷಯದಲ್ಲಿ ರಾಜ ಕೊಡಬೇಕಾದ ಮಹತ್ವವನ್ನು ಮಹಾಭಾರತದ ಶಾಂತಿಪರ್ವಲ್ಲಿ ವಿವರವಾಗಿ ಬಂದಿದೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

“ಮನ್ತ್ರಸಂಹನನೋ ರಾಜಾ ಮನ್ತ್ರಾಙ್ಗಾನೀತರೇ ಜನಾಃ – ಮಂತ್ರಾಲೋಚನೆಯೇ ರಾಜನ ದೇಹವಾಗಿರುತ್ತದೆ. ಮಂತ್ರಿಗಳು ರಾಜರಹಸ್ಯಕ್ಕೆ ಅಂಗಭೂತರಾಗಿರುತ್ತಾರೆ” ಮಂತ್ರಾಲೋಚನೆಯ ನಡೆಯುತ್ತಿರುವಾಗ ಆ ಸ್ಥಳದ ಸುತ್ತಮುತ್ತಲೂ ವಾಮನರೂ, ಕುಬ್ಜರೂ, ಸ್ತ್ರೀಯರೂ, ನಪುಂಸಕರೂ ಸುಳಿಯದಂತೆ ಎಚ್ಚರಿಕೆ ವಶಿಸಬೇಕೆಂದಿದೆ. ರಾಜ ಅಶ್ವಪತಿಗೆ ನೀಡಿದ ವರದ ಗುಟ್ಟು ತಿಳಿದಿರುವುದು ಅಲ್ಲಿ ಸೇರಿದ್ದ ಸುಮಂತ್ರನಿಗೆ ಮಾತ್ರ. ಹಾಗಾಗಿ ಅದನ್ನು ಮರೆಮಾಚಿ ರಾಮನಿಗೆ ಪಟ್ಟಕಟ್ಟುವ ವಿಷಯವನ್ನು ರಾಜನೇ ಪ್ರಸ್ತಾಪ ಮಾಡುವಾಗ ಅದನ್ನು ಮೌನವಾಗಿ ಅನುಮೋದಿಸುವವನು ಸುಮಂತ್ರ. ಇದರ ವಿವರವನ್ನು ದಶರಥನ ಭಾಗದಲ್ಲಿ ನೀಡಲಾಗಿದೆ. ಆನಂತರದಲ್ಲಿ ರಾಮನಿಗೆ ಅಯೋಧ್ಯೆಯ ಅಧಿಪತಿಯಾಗಿ ಪಟ್ಟಗಟ್ಟುವ ನಿರ್ಣಯವನ್ನು ತಿಳಿಸಲು ಕರೆತರಲು ಹೋಗುವುದೂ ಸಹ ಸುಮಂತ್ರನೇ. ರಾಜ ಸಭೆಯ ನಂತರ ಕೂಡಲೇ ದಶರಥ ಸುಮಂತ್ರನನ್ನು ಕರೆದು ಮಂತ್ರಾಲೋಚನೆ ಮಾಡುತ್ತಾನೆ. ರಾಜನಿಗೆ ಎಲ್ಲಿ ವಿಘ್ನಗಳು ಬಂದುಬಿಡುವವೋ ಎನ್ನುವ ಹೆದರಿಕೆ ಇದ್ದಿರಬೇಕು. ಆ ಕಾರಣಕ್ಕಾಗಿ ಇಬ್ಬರೂ ಸಮಾಲೋಚಿಸಿ ಮತ್ತೊಮ್ಮೆ ರಾಮನನ್ನು ದಶರಥನ ಅಂತಃಪುರಕ್ಕೆ ಕರೆತರಲು ಸುಮಂತ್ರನೇ ಹೋಗುತ್ತಾನೆ. ದಶರಥ ರಾಮನಲ್ಲಿ “ಭವನ್ತಿ ಬಹುವಿಘ್ನಾನಿ ಕಾರ್ಯಾಣ್ಯೇವಂವಿಧಾನಿ ಹಿ” ಎನ್ನುವ ಮೂಲಕ ಆತನ ಪಟ್ಟಾಭಿಷೇಕದ ವಿಷಯದಲ್ಲಿ ತನಗಿರುವ ಆತಂಕವನ್ನು ತೋಡಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ರಾಜನ ಸನಿಹದಲ್ಲಿದ್ದವ ಸುಮಂತ್ರ ಮಾತ್ರ. ರಾಮಾಯಣ ಮಹಾಕಾವ್ಯದಲ್ಲಿ ಸುಮಂತ್ರ ಮಾತನಾಡುವುದು ಬಲು ಕಡಿಮೆ. ಆದರೆ ಆತನ ಕಾರ್ಯದಕ್ಷತೆ ಪ್ರತಿಯೊಂದು ಸಂದರ್ಭಗಳಲ್ಲಿಯೂ ಎದ್ದು ಕಾಣುತ್ತದೆ.

ಸುಮಂತ್ರನ ರಾಜನಿಷ್ಠೆ ಮತ್ತು ಭಾವಪರವಶತೆಯ ಕುರಿತು ಮುಂದಿನ ಭಾಗದಲ್ಲಿ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ

Continue Reading

ಅಂಕಣ

ಸೈಬರ್‌ ಸೇಫ್ಟಿ ಅಂಕಣ: ಭಾರತದ ಭವಿಷ್ಯಕ್ಕೆ ಬ್ಲಾಕ್‌ಚೈನ್‌ನ ಬೆನ್ನೆಲುಬು

ತಂತ್ರಜ್ಞಾನದಲ್ಲಿ ಆಗಲಿರುವ ಭವಿಷ್ಯದ ಬದಲಾವನೆಗಳು ಬ್ಲಾಕ್‌ಚೈನ್‌ ತಂತ್ರಜ್ಞಾನವನ್ನು ಅಧರಿಸಿರುತ್ತವೆ. ಬ್ಲಾಕ್‌ಚೈನ್‌ಗಳು ಕ್ರಿಪ್ಟೋಗ್ರಫಿ ಮೂಲಕ ಒಂದಕ್ಕೊಂದು ಲಿಂಕ್ ಮಾಡಲಾದ ಬ್ಲಾಕ್‌ಗಳಲ್ಲಿ ಡೇಟಾವನ್ನು ಸಂಗ್ರಹಿಸುತ್ತವೆ. ಇದರ ಇನ್ನಷ್ಟು ವಿವರ ಇಲ್ಲಿದೆ.

VISTARANEWS.COM


on

ಸೈಬರ್‌ ಸೇಫ್ಟಿ ಅಂಕಣ cyber safety column 2
Koo
cyber safety logo

ಸೈಬರ್‌ ಸೇಫ್ಟಿ ಅಂಕಣ: ವಿಶ್ವದಾದ್ಯಂತ ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗುತ್ತಿವೆ. ಅವುಗಳನ್ನು A, B, C… ಎಂದು ಪಟ್ಟಿ ಮಾಡುವುದಾದರೆ artificial intelligence, (ಕೃತಕ ಬುದ್ಧಿವಂತಿಕೆ) blockchain (ಬ್ಲಾಕ್ ಚೈನ್‌) ಮತ್ತು cloud computing (ಕ್ಲೌಡ್‌ ಕಂಪ್ಯೂಟಿಂಗ್) ಎಂದು ಪ್ರಮುಖವಾಗಿ ವಿಂಗಡಿಸಬಹುದು. ಬ್ಲಾಕ್‌ಚೈನ್‌ ಒಂದು ಹಂಚಿಕೆಯ (distributed) ಡೇಟಾಬೇಸ್ ಆಗಿದ್ದು ನಾವು ಬಳಸುತ್ತಿರುವ ಕೇಂದ್ರೀಕೃತ (centralised) ಕ್ಲೈಂಟ್ – ಸರ್ವರ್ ಡೇಟಾಬೇಸ್‌ಗಿಂತ ಮಾಹಿತಿಯನ್ನು ಸಂಗ್ರಹಿಸುವ ರೀತಿಯಲ್ಲಿ ಭಿನ್ನವಾಗಿರುತ್ತದೆ.

ಬ್ಲಾಕ್‌ಚೈನ್‌ಗಳು ಕ್ರಿಪ್ಟೋಗ್ರಫಿ ಮೂಲಕ ಒಂದಕ್ಕೊಂದು ಲಿಂಕ್ ಮಾಡಲಾದ ಬ್ಲಾಕ್‌ಗಳಲ್ಲಿ ಡೇಟಾವನ್ನು ಸಂಗ್ರಹಿಸುತ್ತವೆ. ಇದು ಪಿಯರ್-ಟು-ಪಿಯರ್ ನೆಟ್ವರ್ಕಿನಲ್ಲಿ ಕಾರ್ಯ ನಿರ್ವಹಿಸುತ್ತದೆ. ವಿವಿಧ ರೀತಿಯ ಮಾಹಿತಿಯನ್ನು ಬ್ಲಾಕ್‌ಚೈನ್‌ನಲ್ಲಿ ಸಂಗ್ರಹಿಸಬಹುದು. ಆದರೆ ವಹಿವಾಟುಗಳನ್ನು ದಾಖಲಿಸುವ ಸಾಮಾನ್ಯ ಲೆಡ್ಜರ್‌ನಂತೆ ಹೆಚ್ಚು ಬಳಕೆಯಾಗುತ್ತಿದೆ. ಎಲ್ಲಾ ಬ್ಲಾಕ್‌ಚೈನ್‌ಗಳು DLTಗಳೆ. ಆದರೆ ಎಲ್ಲಾ DLT ಗಳು ಬ್ಲಾಕ್‌ಚೈನ್‌ ಅಲ್ಲ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿನ ಸರ್ಕಾರಿ ಸಂಸ್ಥೆಯಾದ ಭಾರತದ ರಾಷ್ಟ್ರೀಯ ಮಾಹಿತಿ ಕೇಂದ್ರ (ನ್ಯಾಷನಲ್‌ ಇನ್‌ಫರ್‌ಮೆಟಿಕ್ಸ್‌ಸೆಂಟರ್‌ – NIC) 8 ಮಿಲಿಯನ್ ಪರಿಶೀಲಿಸಬಹುದಾದ ಸರ್ಕಾರ ನೀಡಿದ ದಾಖಲೆಗಳನ್ನು ಹೋಸ್ಟ್ ಮಾಡುತ್ತಿದೆ ಎಂದು ಇತ್ತೀಚೆಗೆ ವರದಿ ಮಾಡಿದೆ.

NIC ತನ್ನ ಬ್ಲಾಕ್‌ಚೈನ್ ಉಪಕ್ರಮಗಳನ್ನು ಹೈಲೈಟ್ ಮಾಡಲು ಹೊಸ ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ. ಶಿಕ್ಷಣ, ಆಸ್ತಿ, ನ್ಯಾಯಾಂಗ ಮತ್ತು ಔಷಧ ಲಾಜಿಸ್ಟಿಕ್ಸ್‌ನಂತಹ ಕ್ಷೇತ್ರಗಳನ್ನು ಒಳಗೊಂಡಿರುವ ಸುಮಾರು 7.93 ಮಿಲಿಯನ್ ದಾಖಲೆಗಳು ಈಗಾಗಲೇ ಬ್ಲಾಕ್‌ಚೈನ್‌ ನೆಟ್ವರ್ಕಿಗೆ ಸ್ಥಳಾಂತರಗೊಂಡಿದೆ.

ಭಾರತದಲ್ಲಿ, ಉತ್ಪನ್ನಗಳ ಅಭಿವೃದ್ಧಿಯು ಪ್ರಾಥಮಿಕವಾಗಿ ಮೂರು ಬ್ಲಾಕ್‌ಚೈನ್ ಪ್ಲಾಟ್‌ಫಾರ್ಮ್‌ಗಳನ್ನು ಅವಲಂಬಿಸಿದೆ: ಹೈಪರ್ಲೆಡ್ಜರ್ ಫ್ಯಾಬ್ರಿಕ್, ಹೈಪರ್ಲೆಡ್ಜರ್ ಸಾವ್ಟೂತ್ ಮತ್ತು ಎಥೆರಿಯಮ್. ದೇಶವು ಪ್ರಸ್ತುತ ಐದು ಬ್ಲಾಕ್‌ಚೈನ್ ಉತ್ಪನ್ನಗಳನ್ನು ಬಳಸಿಕೊಳ್ಳುತ್ತದೆ: ಪ್ರಮಾಣಪತ್ರ ಸರಪಳಿ, ಡಾಕ್ಯುಮೆಂಟ್ ಚೈನ್, ಡ್ರಗ್ ಲಾಜಿಸ್ಟಿಕ್ಸ್ ಚೈನ್, ನ್ಯಾಯಾಂಗ ಸರಪಳಿ ಮತ್ತು ಆಸ್ತಿ ಸರಪಳಿ.

ಆರು ವಿಭಿನ್ನ ರಾಜ್ಯಗಳ ದಾಖಲೆಗಳು ಮತ್ತು ಸರ್ಕಾರಿ ಇಲಾಖೆಗಳಾದ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, ಗ್ರಾಹಕ ವ್ಯವಹಾರಗಳ ಸಚಿವಾಲಯ ಮತ್ತು ನ್ಯಾಯ ಸಚಿವಾಲಯದ ಬಹುತೇಕ ದಾಖಲೆಗಳು ಈಗಾಗಲೇ ಬ್ಲಾಕ್‌ಚೈನ್‌ ನೆಟ್ವರ್ಕಿನಲ್ಲಿ ಅಳವಡಿಸಲ್ಪಟ್ಟಿದೆ.

ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಇಲಾಖೆಗಳು ಆಸ್ತಿ ಮಾಲೀಕತ್ವ, ಜನನ ಮತ್ತು ಮರಣ ಪ್ರಮಾಣಪತ್ರಗಳಿಗಾಗಿ ಪರಿಶೀಲನಾ ಸೇವೆಗಳನ್ನು ಜಾರಿಗೆ ತಂದಿವೆ, ಜೊತೆಗೆ ಔಷಧಿಗಳು ಮತ್ತು ಶೈಕ್ಷಣಿಕ ಪ್ರಮಾಣಪತ್ರಗಳಿಗೆ ಪೂರೈಕೆ ಸರಪಳಿ ನಿರ್ವಹಣಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ.

ಹೆಚ್ಚುವರಿಯಾಗಿ, ಭಾರತವು ಭೂ ದಾಖಲೆಗಳು, ರಕ್ತ ಬ್ಯಾಂಕುಗಳು, ಟ್ರ್ಯಾಕಿಂಗ್ ಸರಕು ಮತ್ತು ಸೇವಾ ತೆರಿಗೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಮೀಸಲಾಗಿರುವ ಪ್ರೂಫ್-ಆಫ್-ಕಾನ್ಸೆಪ್ಟ್ ಬ್ಲಾಕ್‌ಚೈನ್‌ಗಳನ್ನು ಸಕ್ರಿಯವಾಗಿ ಅಭಿವೃದ್ಧಿಪಡಿಸುತ್ತಿದೆ.

ಬ್ಲಾಕ್‌ಚೈನ್‌ನಲ್ಲಿ ಭಾರತದ ಆಸಕ್ತಿ ಹೊಸದೇನಲ್ಲ. 2023 ರಲ್ಲಿ, ಭಾರತದ ಅತಿದೊಡ್ಡ ತೈಲ ಮತ್ತು ಅನಿಲ ಕಂಪನಿಗಳಲ್ಲಿ ಒಂದಾದ ಹಿಂದೂಸ್ತಾನ್ ಪೆಟ್ರೋಲಿಯಂ, ಬ್ಲಾಕ್‌ಚೈನ್ ಆಧಾರಿತ ಡಿಜಿಟಲ್ ರುಜುವಾತು ತಂತ್ರಜ್ಞಾನವನ್ನು ಅದರ ಖರೀದಿ ಆದೇಶ ವ್ಯವಸ್ಥೆಯಲ್ಲಿ ಸಂಯೋಜಿಸಲು ಬ್ಲಾಕ್‌ಚೈನ್ ಸಾಫ್ಟ್‌ವೇರ್ ಸಂಸ್ಥೆ ಜುಪಲ್ ಲ್ಯಾಬ್ಸ್‌ನೊಂದಿಗೆ ಸಹಕರಿಸಿತು.

ಬ್ಲಾಕ್‌ಚೈನ್ ಅನ್ನು ಅಳವಡಿಸಿಕೊಳ್ಳುವ ಹಿಂದಿನ ಉದ್ದೇಶ ಡಾಕ್ಯುಮೆಂಟ್ ಫೋರ್ಜರಿ ಸಮಸ್ಯೆಯನ್ನು ಪರಿಹರಿಸುವುದಾಗಿದೆ. ಬ್ಲಾಕ್‌ಚೈನ್ ಅನ್ನು ನಿಯಂತ್ರಿಸುವ ಮೂಲಕ, ಭಾರತ ಸರ್ಕಾರವು ಡಿಜಿಟಲ್ ಆಗಿ ಪರಿಶೀಲಿಸಬಹುದಾದ ಮತ್ತು ಬದಲಾಯಿಸಲಾಗದ ಪ್ರಮಾಣಪತ್ರಗಳನ್ನು ನೀಡುತ್ತದೆ, ದುರುದ್ದೇಶಪೂರಿತ ಜನರಿಂದ ಬದಲಾವಣೆ ಅಥವಾ ದುರುಪಯೋಗವನ್ನು ತಡೆಯುತ್ತದೆ. ನಕಲಿ ದಾಖಲೆಗಳ ಹಾವಳಿಗೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ಇದು ಒಂದು ಉತ್ತಮ ಪ್ರಯತ್ನ.

ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ವಿವಿಧ ಕ್ಷೇತ್ರಗಳಲ್ಲಿ ಬಳಸಲು ಸ್ಥಾಪಿತವಾದ ಉತ್ಕೃಷ್ಟತೆಯ ಕೇಂದ್ರವು (CoE) ರಾಷ್ಟ್ರದಾದ್ಯಂತ ಒಂದು ಸಂಘಟಿತ, ಇಂಟರ್‌ಆಪರೇಬಲ್ ಬ್ಲಾಕ್‌ಚೈನ್ ಪರಿಸರ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಎಲ್ಲಾ ಪಾಲುದಾರರಿಗೆ ಹಂಚಿಕೆಯ ಕಲಿಕೆ, ಅನುಭವಗಳು ಮತ್ತು ಸಂಪನ್ಮೂಲಗಳಿಂದ ಪ್ರಯೋಜನ ಪಡೆಯಲು ಅನುವು ಮಾಡಿಕೊಡುತ್ತದೆ. ಉದ್ಯಮದ ತಿಳುವಳಿಕೆ ಮತ್ತು ಬ್ಲಾಕ್‌ಚೈನ್ ತಂತ್ರಜ್ಞಾನಗಳ ಅನುಷ್ಠಾನವನ್ನು ಅಭಿವೃದ್ಧಿಪಡಿಸಲು ಬ್ಲಾಕ್‌ಚೈನ್ ತಂತ್ರಜ್ಞಾನಗಳು, ಪ್ಲಾಟ್‌ಫಾರ್ಮ್‌ಗಳು, ಸ್ವತ್ತುಗಳು ಮತ್ತು ವ್ಯವಸ್ಥೆಗಳನ್ನು ಮುನ್ನಡೆಸುವುದರ ಮೇಲೆ CoE ಕೇಂದ್ರವು ಗಮನಹರಿಸುತ್ತದೆ.

ಈ CoE-BCT ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಎನ್‌ಐಸಿ ಕೈಗೊಂಡ ಯೋಜನೆಗಳಿಗೆ ಪರಿಹಾರಗಳನ್ನು ಪರೀಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ನವೀನ ಹೊಸ ಪರಿಹಾರಗಳಿಗೆ ಒಂದು ವೇದಿಕೆಯಾಗಿದೆ. ಪರಿಕಲ್ಪನೆಯ ಪುರಾವೆಯಿಂದ ಉತ್ಪಾದನೆಯವರೆಗೆ ನವೀನ ಬ್ಲಾಕ್‌ಚೈನ್ ಪರಿಹಾರಗಳ ಅಭಿವೃದ್ಧಿ ಮತ್ತು ಅನುಷ್ಠಾನವನ್ನು ಮುನ್ನಡೆಸಲು NIC CoE ತಂಡವು ಜಾಗತಿಕ ತಜ್ಞರೊಂದಿಗೆ ಸಹಕರಿಸುತ್ತದೆ. ಕೇಂದ್ರವು ಸಂಶೋಧನಾ-ನೇತೃತ್ವದ ಚಿಂತನೆಯ ನಾಯಕತ್ವವನ್ನು ಒದಗಿಸುತ್ತದೆ ಮತ್ತು ಸರ್ಕಾರಿ ಸೇವೆಗಳ ವಿತರಣೆಯನ್ನು ಸುಧಾರಿಸುವ ಕಡೆಗೆ ಆಡಳಿತದಲ್ಲಿನ ಸಂಕೀರ್ಣ ವ್ಯವಹಾರ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯತಂತ್ರದ ಬ್ಲಾಕ್‌ಚೈನ್ ಬೆಳವಣಿಗೆಗಳನ್ನು ಚಾಲನೆ ಮಾಡುತ್ತದೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಸ್ಮಾರ್ಟ್‌ ಫೋನಿನ ಸ್ಮಾರ್ಟ್ ಬಳಕೆಗೆ 12 ಸೂತ್ರಗಳು

ಬ್ಲಾಕ್‌ಚೈನ್ ತಂತ್ರಜ್ಞಾನಗಳ ಬಳಕೆಯನ್ನು ಉತ್ತೇಜನ, ಬ್ಲಾಕ್‌ಚೈನ್ ಆಧಾರಿತ ಪರಿಹಾರಗಳ ಕ್ಷಿಪ್ರ ಅಳವಡಿಕೆ ಮತ್ತು ಆನ್-ಬೋರ್ಡಿಂಗ್ ಅನ್ನು ಸುಗಮಗೊಳಿಸುವುದು, ಸರ್ಕಾರ, ಸಾರ್ವಜನಿಕ ಮತ್ತು ಖಾಸಗಿ ವಲಯಗಳ ನಡುವೆ ಬಲವಾದ ಸಹಯೋಗವನ್ನು ಬೆಳೆಸುವುದು ಮತ್ತು ಇತ್ತೀಚಿನ ತಾಂತ್ರಿಕ ಮಾನದಂಡಗಳನ್ನು ಸುರಕ್ಷಿತವಾಗಿ ಮತ್ತು ವಿಶ್ವಾಸಾರ್ಹ ರೀತಿಯಲ್ಲಿ ಲಭ್ಯವಾಗುವಂತೆ ಮಾಡಲು NIC ಸಹಕರಿಸುತ್ತದೆ.

ಬ್ಲಾಕ್‌ಚೈನ್ ತಂತ್ರಜ್ಞಾನದ ಹೊರಹೊಮ್ಮುವಿಕೆಯು ಕೆಲವು ಡೇಟಾ ಚಟುವಟಿಕೆಗಳ ಬಗ್ಗೆ ನಂಬಿಕೆ ಮತ್ತು ಹೆಚ್ಚಿನ ಪಾರದರ್ಶಕತೆಯನ್ನು ಬೆಳೆಸಲು ಮತ್ತು ನಾಗರಿಕರೊಂದಿಗೆ ಘರ್ಷಣೆಯಿಲ್ಲದ ವಹಿವಾಟುಗಳನ್ನು ಒದಗಿಸಲು ಸರ್ಕಾರಕ್ಕೆ ಭರವಸೆ ನೀಡುತ್ತದೆ.

ತಂತ್ರಜ್ಞಾನದ ಜೊತೆಗೆ ತಂತ್ರಜ್ಞಾನದ ಸರಿಯಾದ ಅನ್ವಯಗಳನ್ನು ನಿರ್ಧರಿಸುವುದು ಅದರ ಅಳವಡಿಕೆಯನ್ನು ವೇಗಗೊಳಿಸಲು ನಿರ್ಣಾಯಕ ಅಂಶವಾಗಿದೆ. ಪ್ರಬುದ್ಧ ವ್ಯವಸ್ಥೆಗಳಂತೆ, ಸರ್ಕಾರಿ ಬ್ಲಾಕ್‌ಚೈನ್ ಕಾರ್ಯಕ್ರಮಗಳ ಬೆಂಬಲಿಗರು ಅಂತಹ ಹೂಡಿಕೆಗಳು ಹಣವನ್ನು ಉಳಿಸುತ್ತದೆ ಮತ್ತು ಈಗಾಗಲೇ ಉತ್ತಮ ಸ್ಥಿತಿಯಲ್ಲಿರುವ ಸೇವೆಗಳನ್ನು ಸುಧಾರಿಸುತ್ತದೆ ಎಂದು ಬಲವಾದ ಪುರಾವೆಗಳನ್ನು ವಿವಿಧ ಕ್ಷೇತ್ರಗಳಲ್ಲಿ ಅದರ ಉಪಯೋಗದ ಬಗ್ಗೆ use-cases ತಯಾರಿಸಿದ್ದಾರೆ.

ಈ ರೀತಿ ಬ್ಲಾಕ್‌ಚೈನ್‌ ತಂತ್ರಜ್ಞಾನ ಆಧರಿತ ಅಂತರ್ಜಾಲ ವ್ಯವಸ್ಥೆ ಹೆಚ್ಚಿನ ಸುರಕ್ಷತೆಯನ್ನು ಕೊಡುವುದರ ಮೂಲಕ ಸೈಬರ್‌ ದಾಳಿಗಳನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: 2024ರ ಸೈಬರ್‌ ಸೆಕ್ಯುರಿಟಿ ಟ್ರೆಂಡ್‌ಗಳು

Continue Reading

ಅಂಕಣ

ರಾಜಮಾರ್ಗ ಅಂಕಣ: ಮನರಂಜನೆಯ ಮಹಾ ದೊರೆ, ಕನಸುಗಾರನ ನಿರ್ಗಮನ

ರಾಜಮಾರ್ಗ ಅಂಕಣ: ಹಳ್ಳಿಯ ಬಡ ಕುಟುಂಬವೊಂದರಿಂದ ಬಂದು, ಯಾವುದೇ ಗಾಡ್ ಫಾದರ್ ಇಲ್ಲದೆ ಕೋಟಿಗಟ್ಟಲೆ ಮೌಲ್ಯದ ಮನರಂನಾ ಸಾಮ್ರಾಜ್ಯವನ್ನು ಸೃಷ್ಟಿಸಿದ ಧೀಮಂತ ರಾಮೋಜಿ ರಾವ್.‌ ಹೈದರಾಬಾದ್‌ನ ಫಿಲಂ ಸಿಟಿ ಅವರ ಕರ್ತೃತ್ವ ಶಕ್ತಿಯ ದ್ಯೋತಕ.

VISTARANEWS.COM


on

ರಾಜಮಾರ್ಗ ಅಂಕಣ ramoji rao
Koo

ಒಬ್ಬ ವ್ಯಕ್ತಿ – ನೂರಾರು ಸಂಸ್ಥೆಗಳು, ಅವರು ರಾಮೋಜಿ ರಾವ್

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಜಗತ್ತಿನ ಅತೀ ದೊಡ್ಡ ಫಿಲಂ ಸಿಟಿ (Film City) ಕಟ್ಟಿದವರು ಅವರು. ಹೆಸರು ರಾಮೋಜಿ ರಾವ್ (Ramoji Rao).

ನಿನ್ನೆ ಹೈದರಾಬಾದ್ (Hyderabad) ನಗರದಿಂದ ಬಂದ ಒಂದು ಶಾಕಿಂಗ್ ನ್ಯೂಸ್ ಭಾರತದ ಕೋಟಿ ಕೋಟಿ ಸಿನೆಮಾ ಅಭಿಮಾನಿಗಳನ್ನು ತಲ್ಲಣ ಮಾಡಿ ಹೋಯಿತು. ಅದು ರಾಮೋಜಿ ರಾವ್ ಅವರ ನಿರ್ಗಮನ.

ನನ್ನ ತರಬೇತಿ ಮತ್ತು ಭಾಷಣಗಳಲ್ಲಿ ಅತೀ ಹೆಚ್ಚು ಉಲ್ಲೇಖ ಪಡೆದ ಒಬ್ಬ ಲೆಜೆಂಡ್ ಇದ್ದರೆ ಅದು ರಾಮೋಜಿ ರಾವ್. ಅವರನ್ನು ಅವರದ್ದೇ ಸ್ಟುಡಿಯೋದಲ್ಲಿ ಭೇಟಿ ಮಾಡಿದ ಕ್ಷಣಗಳು ನನಗೆ ಪ್ರೇರಣಾದಾಯಕ. ಅವರು ತನ್ನ 87 ವರ್ಷಗಳ ಬದುಕಿನಲ್ಲಿ ಹುಟ್ಟು ಹಾಕಿದ್ದು ನೂರಾರು ಸಂಸ್ಥೆಗಳನ್ನು. ಅವರು ಬಿಟ್ಟು ಹೋದ ಸ್ಥಾನವನ್ನು ಬೇರೆ ಯಾರೂ ತುಂಬಲು ಸಾಧ್ಯವೇ ಇಲ್ಲ.

ಶೂನ್ಯದಿಂದ ಆರಂಭ

ಆಂಧ್ರಪ್ರದೇಶದ ಒಂದು ಸಣ್ಣ ಹಳ್ಳಿಯಿಂದ ಒಂದು ಕೃಷಿಕ ಕುಟುಂಬದಿಂದ ಬಂದವರು ರಾಮೋಜಿ ರಾವ್. ಓದಿದ್ದು ವಿಜ್ಞಾನ ಪದವಿ. ಬಾಲ್ಯದಲ್ಲಿ ಹೈದರಾಬಾದನ ಗಲ್ಲಿಗಳಲ್ಲಿ ಬೈಸಿಕಲ್ ಹಿಂದೆ ಉಪ್ಪಿನಕಾಯಿ ಭರಣಿಗಳನ್ನು ಕಟ್ಟಿಕೊಂಡು ಮನೆಮನೆಗೆ ಮಾರಿ ಒಂದಿಷ್ಟು ದುಡ್ಡು ಸಂಪಾದನೆ ಮಾಡಿದ ಅನುಭವ ಅವರದ್ದು. ಮುಂದೆ ಅದೇ ವ್ಯವಹಾರವು ‘ಪ್ರಿಯಾ ಉಪ್ಪಿನಕಾಯಿ ‘ ಎಂಬ ಉದ್ಯಮದ ರೂಪವನ್ನು ತಾಳಿತು. ಅವರು ಕೈ ಹಾಕಿದ ಪ್ರತೀ ಒಂದು ಕ್ಷೇತ್ರವನ್ನೂ ಉದ್ಯಮವಾಗಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ರಿಸ್ಕ್ ತೆಗೆದುಕೊಳ್ಳುವ ಶಕ್ತಿ, ಪಕ್ಕಾ ವ್ಯವಹಾರ ಪ್ರಜ್ಞೆ, ಮಾರ್ಕೆಟಿಂಗ್ ಕೌಶಲಗಳು, ಶಿಸ್ತಿನ ಜೀವನ ಕ್ರಮ ಮುಂದೆ ಅವರನ್ನು ಬಹಳ ಎತ್ತರಕ್ಕೆ ಬೆಳೆಸಿದವು. ಮುಂದೆ ರಮಾದೇವಿ ಎಂಬವರನ್ನು ಮದುವೆ ಆದ ನಂತರ ಅವರು ಹಿಂದೆ ತಿರುಗಿ ನೋಡಿದ್ದೇ ಇಲ್ಲ.

ಮಾರ್ಗದರ್ಶಿ ಚಿಟ್ ಫಂಡ್ ಸ್ಥಾಪನೆ

ಆಂಧ್ರಪ್ರದೇಶದ ಬ್ಯಾಂಕಿಂಗ್ ಸೆಕ್ಟರಗೆ ಸವಾಲಾಗಿ 1962ರಲ್ಲಿ ಮಾರ್ಗದರ್ಶಿ ಚಿಟ್ ಫಂಡ್ ಎಂಬ ಹಣಕಾಸು ಸಂಸ್ಥೆಯನ್ನು ಅವರು ಆರಂಭ ಮಾಡಿದರು. ಒಂದೊಂದು ರೂಪಾಯಿಯನ್ನೂ ಜಾಗ್ರತೆಯಿಂದ ಬಳಸುವ ಅವರ ಜಾಣ್ಮೆಯು ಆ ಸಂಸ್ಥೆಯನ್ನು ದಕ್ಷಿಣ ಭಾರತದ ಮಹೋನ್ನತ ಹಣಕಾಸು ಸಂಸ್ಥೆಯಾಗಿ ಮಾಡಿತು. ಇಂದು ಅದು ನೂರಾರು ಶಾಖೆಗಳ ಮೂಲಕ 10,000 ಕೋಟಿ ರೂ.
ಬಂಡವಾಳದ ಸಂಸ್ಥೆಯಾಗಿ ಬೆಳೆದು ನಿಂತಿದೆ.

ಮಾಧ್ಯಮದ ದೈತ್ಯ – ಈ ನಾಡು ಪತ್ರಿಕೆ

ಒಂದು ಉದ್ಯಮದಲ್ಲಿ ಬಂದ ಲಾಭವನ್ನು ಇನ್ನೊಂದು ಉದ್ಯಮದಲ್ಲಿ ತೊಡಗಿಸುವುದು ರಾಮೋಜಿ ರಾವ್ ಅವರ ಪಾಲಿಸಿ. ಸಾಲ ಮಾಡಿ ಬಿಸಿನೆಸ್ ಮಾಡಬಾರದು ಎಂದವರು ಹೇಳುತ್ತಿದ್ದರು. 1974ರಲ್ಲಿ ಅವರು ಆಂಧ್ರಪ್ರದೇಶದಲ್ಲಿ ʼಈ ನಾಡು’ (Eenadu news paper) ಎಂಬ ದಿನಪತ್ರಿಕೆಯನ್ನು ಆರಂಭ ಮಾಡಿದರು. ಅವರು ಪತ್ರಿಕೋದ್ಯಮದ ಯಾವ ಪಾಠವನ್ನೂ ಕಲಿತಿರಲಿಲ್ಲ. ಆದರೆ ಜನರಿಗೆ ಏನು ಬೇಕು ಎಂದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಕೆಲವೇ ವರ್ಷಗಳಲ್ಲಿ ಅದು ತೆಲುಗಿನ ನಂಬರ್ ಒನ್ ಪತ್ರಿಕೆ ಆಗಿ ಬೆಳೆಯಿತು. ಅದೀಗ 23 ಪುರವಣಿಗಳನ್ನು ಹೊಂದಿದ್ದು ಲಕ್ಷಾಂತರ ಓದುಗರನ್ನು ತಲುಪುತ್ತಿದೆ. ಎಲ್ಲಾ ಕಡೆಗಳಲ್ಲಿ ಮಿಂಚಿದ್ದು ರಾಮೋಜಿ ರಾವ್ ಅವರ ವ್ಯವಹಾರ ಕುಶಲತೆ ಮತ್ತು ದಣಿವರಿಯದ ದುಡಿಮೆ.

ರಾಜಮಾರ್ಗ ಅಂಕಣ ramoji rao 2

ನೂರಾರು ಸಂಸ್ಥೆಗಳು ಮತ್ತು ಉದ್ಯಮಗಳು

ಅವರು ಮಹಾ ಶಿಸ್ತಿನ ಮನುಷ್ಯ. ದಿನವೂ 18 ಘಂಟೆಗಳ ದುಡಿತ. ಒಂದು ನಿಮಿಷ ವ್ಯರ್ಥ ಮಾಡುವುದು ಅವರಿಗೆ ಇಷ್ಟ ಆಗುವುದಿಲ್ಲ. ಹರಟೆ, ಗಾಸಿಪ್ಸ್ ಇಲ್ಲವೇ ಇಲ್ಲ. ನೆಗೆಟಿವ್ ವ್ಯಕ್ತಿಗಳನ್ನು ಹತ್ತಿರ ಸೇರಿಸಿಕೊಳ್ಳುವುದೇ ಇಲ್ಲ. ಪರಿಣಾಮವಾಗಿ ಅವರು ಒಬ್ಬ ಯಶಸ್ವೀ ಉದ್ಯಮಿಯಾಗಿ ಎಮರ್ಜ್ ಆದರು. ಅವರ ಪತ್ನಿ ರಮಾದೇವಿ ಗಂಡನ ಬಲಗೈ ಆಗಿ ನಿಂತು ವ್ಯವಹಾರವನ್ನು ಬೆಳೆಸಿದರು. ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್ಸ್, ರಮಾದೇವಿ ಶಿಕ್ಷಣ ಸಂಸ್ಥೆಗಳು, ಕಲಾಂಜಲಿ ಶಾಪಿಂಗ್ ಮಾಲ್ಸ್, ಪ್ರಿಯಾ ಉಪ್ಪಿನಕಾಯಿ …..ಹೀಗೆ ಅವರು ನೂರಾರು ಉದ್ಯಮಗಳನ್ನು ಸ್ಥಾಪನೆ ಮಾಡಿದರು. ಎಲ್ಲವನ್ನೂ ಗೆಲ್ಲಿಸಿದರು.

ರಾಮೋಜಿ ಫಿಲ್ಮ್ ಸಿಟಿ – ಇದು ಮ್ಯಾಗ್ನಮೋಪಸ್!

ರಾಜಮಾರ್ಗ ಅಂಕಣ ramoji rao

ರಾಮೋಜಿ ರಾವ್ ಅವರನ್ನು ಇಂದು ನಾವು ಅಗತ್ಯವಾಗಿ ನೆನಪಿಸಿಕೊಳ್ಳಬೇಕಾದದ್ದು ಈ ಫಿಲ್ಮ್ ಸ್ಟುಡಿಯೋ ಮೂಲಕ. ಹೈದರಾಬಾದ್ ನಗರದ ಹೃದಯ ಭಾಗದಲ್ಲಿ 1666 ಎಕರೆ ಜಾಗವನ್ನು ಅವರು ಖರೀದಿಸಿ ಅದರಲ್ಲಿ ತನ್ನ ಎಲ್ಲ ಕನಸುಗಳನ್ನು ಧಾರೆ ಎರೆದರು. ಎತ್ತರವಾದ ಪರ್ವತಗಳು, ಧುಮ್ಮಿಕ್ಕುವ ಜಲಪಾತಗಳು, ವಿಸ್ತಾರವಾದ ಬೀದಿಗಳು, ಹಸಿರು ಹೊದ್ದು ಮಲಗಿದ ಮೈದಾನಗಳು, ದಟ್ಟವಾದ ಅರಣ್ಯಗಳು, ಅರಮನೆಗಳು, ದೇಗುಲಗಳು ಕೋಟೆಗಳು…..ಹೀಗೆ ಎಲ್ಲವನ್ನೂ ಕೃತಕವಾಗಿ ನಿರ್ಮಿಸಿದರು. ಒಂದು ಚಿತ್ರ ನಿರ್ಮಾಣಕ್ಕೆ ಏನೆಲ್ಲ ಬೇಕೋ (ಹೊರಾಂಗಣ, ಒಳಾಂಗಣ, ಬೆಳಕು, ಸ್ಟುಡಿಯೋ, ಚಿತ್ರೀಕರಣ ಘಟಕ, ಟೆಕ್ನಿಕಲ್ ಸ್ಟಾಫ್) ಎಲ್ಲವನ್ನೂ ಒದಗಿಸಿದರು. ಒಬ್ಬ ನಿರ್ಮಾಪಕ ಮತ್ತು ನಿರ್ದೇಶಕ ದುಡ್ಡು ಮತ್ತು ಸ್ಟೋರಿ ತೆಗೆದುಕೊಂಡು ಅಲ್ಲಿಗೆ ಬಂದರೆ ಇಡೀ ಸಿನಿಮಾ ಶೂಟ್ ಮಾಡಿ, ಎಡಿಟಿಂಗ್ ಮಾಡಿ, ಮ್ಯೂಸಿಕ್, ಕಲರಿಂಗ್, VFX ಮುಗಿಸಿ ಸಿನಿಮಾ ತೆಗೆದುಕೊಂಡು ಹೋಗುವ ವ್ಯವಸ್ಥೆ ಅಲ್ಲಿ ಅವರು ಮಾಡಿದರು!

ಅದರ ಪರಿಣಾಮವಾಗಿ ಭಾರತದ ಸಾವಿರಾರು ಸಿನೆಮಾಗಳು ಅಲ್ಲಿ ನಿರ್ಮಾಣವಾದವು. ಬಾಹುಬಲಿ ( ಭಾಗ 1 ಮತ್ತು 2), ಕೆಜಿಎಫ್ ( ಭಾಗ 1 ಮತ್ತು 2), ಕ್ರಿಶ್, ರಾಜಕುಮಾರ ಮೊದಲಾದ ಮಹೋನ್ನತ ಸಿನೆಮಾಗಳು ಶೂಟಿಂಗ್ ಆದದ್ದು ಇದೇ ಸ್ಟುಡಿಯೋ ಒಳಗೆ! ನೂರಾರು ತೆಲುಗು, ಕನ್ನಡ, ಹಿಂದೀ ಧಾರಾವಾಹಿಗಳು ಅಲ್ಲಿ ಹುಟ್ಟು ಪಡೆದವು.

ರಾಮೋಜಿ ರಾವ್ ಅವರೇ ʼಉಷಾಕಿರಣ ಮೂವೀಸ್’ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪನೆ ಮಾಡಿ ನೂರಾರು ತೆಲುಗು, ತಮಿಳು, ಹಿಂದಿ, ಕನ್ನಡ ಸಿನಿಮಾಗಳನ್ನು ನಿರ್ಮಿಸಿದರು. ಸಿನೆಮಾ ಹಂಚಿಕೆ ಮಾಡಿದರು. ಆ ಸ್ಟುಡಿಯೋವನ್ನು ಒಂದು ಪ್ರವಾಸೀ ತಾಣವಾಗಿ ಕೂಡ ಅಭಿವೃದ್ಧಿ ಪಡಿಸಿದರು. ಈಗ ವರ್ಷಕ್ಕೆ ಕನಿಷ್ಟ ಒಂದು ಕೋಟಿ ಪ್ರವಾಸಿಗರು ಅಲ್ಲಿ ಭೇಟಿ ಕೊಡುತ್ತಿದ್ದಾರೆ.

ವರ್ಷದ 365 ದಿನವೂ ಸಿನೆಮಾ ಚಟುವಟಿಕೆ ಹೊಂದಿರುವ ಸ್ಟುಡಿಯೋ ಅದು. ಜೊತೆಗೆ ಅದು ಹಾಲಿವುಡ್ ಮೀರಿದ ವೈಭವವನ್ನು ಹೊಂದಿದೆ. ರಾಮೋಜಿ ಫಿಲ್ಮ್ ಸ್ಟುಡಿಯೋ ಇಂದು ಜಗತ್ತಿನ ಅತೀ ದೊಡ್ಡ ಫಿಲ್ಮ್ ಸ್ಟುಡಿಯೋ ಎಂದು ಗಿನ್ನೆಸ್ ದಾಖಲೆ ಮಾಡಿದೆ!

ಮನರಂಜನೆಯ ಮಹಾ ದೊರೆ!

ಎಂಬತ್ತರ ದಶಕದಲ್ಲಿ ಭಾರತದಲ್ಲಿ ದೂರದರ್ಶನ ಎಂಬ ಒಂದೇ ಟಿವಿ ಚಾನೆಲ್ ಇತ್ತು. ಮನರಂಜನೆಗಾಗಿ ಮೀಸಲಾದ ಯಾವುದೇ ಟಿವಿ ಚಾನೆಲ್ ಇರಲಿಲ್ಲ. ಈ ಕೊರತೆಯನ್ನು ಮನಗಂಡ ರಾಮೋಜಿ ರಾವ್ ʼಈ ಟಿವಿ’ ಎಂಬ ಮಹಾ ಟಿವಿ ಚಾನೆಲ್ ಆರಂಭ ಮಾಡಿದರು. ಅದರಲ್ಲಿ ಸಮೃದ್ಧವಾದ ಮನರಂಜನೆ, ಧಾರಾವಾಹಿ, ಸಂಗೀತ, ನೃತ್ಯ, ರಿಯಾಲಿಟಿ ಶೋಗಳನ್ನು ಹೆಣೆದರು. ಅದು ಅತ್ಯಂತ ಜನಪ್ರಿಯವಾಯಿತು. ಇಂದು ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳು ಮತ್ತು ಹಿಂದಿಯಲ್ಲಿ ಈ ಟಿವಿ ವಾಹಿನಿ ಇದೆ. ರಾಮೋಜಿ ರಾವ್ ಈ ಟಿವಿಯನ್ನು ಬಾನೆತ್ತರಕ್ಕೆ ಬೆಳೆಸಿದರು.

ರಾಜಕೀಯ ಪ್ರವೇಶ – ತೆಲುಗು ದೇಶಂ ಪಕ್ಷದ ಮಾರ್ಗದರ್ಶಕ

ಇಂದು ಅವರ ಉದ್ಯಮಗಳ ಮುಖಬೆಲೆಯು 37,583 ಕೋಟಿ ರೂಪಾಯಿ ಎಂದು ಅಂದಾಜು! ಶೂನ್ಯದಿಂದ ಆರಂಭ ಮಾಡಿ ಇಷ್ಟು ಎತ್ತರಕ್ಕೆ ಏರಿದ ಇನ್ನೊಬ್ಬ ಉದ್ಯಮಿ ನಮಗೆ ಭಾರತದಲ್ಲಿ ದೊರೆಯುವುದಿಲ್ಲ. ಅದೂ ಯಾವುದೇ ಗಾಡ್ ಫಾದರ್ ಇಲ್ಲದೆ! ಅವರು ಕಟ್ಟಿದ ಒಂದು ಉದ್ಯಮವೂ ನಷ್ಟ ಕಂಡಿಲ್ಲ ಅನ್ನೋದು ಅವರ ದುಡಿಮೆಗೆ ಒಂದು ತುರಾಯಿ.

ಇಷ್ಟೆಲ್ಲ ಸಾಧನೆ ಮಾಡಿದ ನಂತರ ರಾಜಕೀಯಕ್ಕೆ ಬಾರದಿದ್ದರೆ ಹೇಗೆ? ಎಂಬತ್ತರ ದಶಕದಲ್ಲಿ ತೆಲುಗು ಲೆಜೆಂಡ್ ನಟ NTR ತೆಲುಗು ದೇಶಂ (Telugu Desam party) ಪಕ್ಷವನ್ನು ಸ್ಥಾಪನೆ ಮಾಡಿದಾಗ ಆ ಪಕ್ಷದ ಮೆಂಟರ್ ಆಗಿ ನಿಂತವರು ರಾಮೋಜಿ ರಾವ್. ಹಲವು ಬಾರಿ ಅವರ ಪಕ್ಷ ಅಧಿಕಾರಕ್ಕೆ ಬಂದರೂ ಅವರು ಅಧಿಕಾರದ ಆಸೆ ಮಾಡದೇ ತೆರೆಯ ಮರೆಯಲ್ಲಿ ನಿಂತರು. ಕಿಂಗ್ ಮೇಕರ್ ಆದರು. ಸಾಯುವ ತನಕವೂ ತೆಲುಗು ದೇಶಂ ಪಕ್ಷದ ನಾಯಕರಲ್ಲಿ ಒಬ್ಬರಾಗಿ ಅದನ್ನು ಸ್ವಾಭಿಮಾನಿ ಪಕ್ಷವಾಗಿ ಬೆಳೆಸಿದರು.

ಪದ್ಮವಿಭೂಷಣ ಸೇರಿದಂತೆ ನೂರಾರು ಪ್ರಶಸ್ತಿಗಳು

ಭಾರತದ ಎರಡನೇ ಅತೀ ದೊಡ್ಡ ನಾಗರೀಕ ಪ್ರಶಸ್ತಿಯಾದ ಪದ್ಮ ವಿಭೂಷಣ ಸೇರಿದಂತೆ, ಸಿನೆಮಾ ನಿರ್ಮಾಣಕ್ಕೆ ರಾಷ್ಟ್ರ ಪ್ರಶಸ್ತಿ, ತೆಲುಗಿನ ಗೌರವದ ನಂದಿ ಪ್ರಶಸ್ತಿ, ಹತ್ತಾರು ಫಿಲಂ ಫೇರ್ ಪ್ರಶಸ್ತಿಗಳು ಅವರಿಗೆ ದೊರೆತಿವೆ. ಅವರೊಬ್ಬ ಶಿಸ್ತಿನ ಮನುಷ್ಯ. ಪ್ರಚಾರದಿಂದ ದೂರ ಉಳಿದ ಕಾಯಕ ಯೋಗಿ. ಯಾವಾಗಲೂ ಬಿಳಿ ಬಟ್ಟೆಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ನಗುಮುಖದ ವ್ಯಕ್ತಿತ್ವ.

ನಿನ್ನೆ (ಜೂನ್ 8) ಅವರ ನಿರ್ಗಮನದಿಂದ ಭಾರತದ ಅತೀ ಶ್ರೇಷ್ಟವಾದ ಉದ್ಯಮಿ, ಸಿನೆಮಾ ನಿರ್ಮಾಪಕ, ಜಗತ್ತಿನ ಅತೀ ದೊಡ್ಡ ಸ್ಟುಡಿಯೋ ಸ್ಥಾಪಕ, ಈ ಟಿವಿ, ಈ ನಾಡು ಸಂಸ್ಥಾಪಕ, ಮಹೋನ್ನತ ಮನೋರಂಜನಾ ದೊರೆ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೆ ಎಂಬ ಮಹಾ ಕನಸು!

Continue Reading

ಅಂಕಣ

ರಾಜಮಾರ್ಗ ಅಂಕಣ: ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೆ ಎಂಬ ಮಹಾ ಕನಸು!

ರಾಜಮಾರ್ಗ ಅಂಕಣ: ಜಾರ್ಜ್ ಭರವಸೆ ಕೊಟ್ಟ ಹಾಗೆ ಎಂಟು ವರ್ಷಗಳ ಒಳಗೆ ಈ ಪ್ರಾಜೆಕ್ಟ್ ಪೂರ್ತಿ ಆಯಿತು. 1998 ಜನವರಿ 26ರಂದು ಅಂದಿನ ಪ್ರಧಾನಿ ವಾಜಪೇಯಿ ಅವರು ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಕೊಂಕಣ ರೈಲ್ವೆಯ ಹೊಸ ಮಾರ್ಗವನ್ನು ಉದ್ಘಾಟನೆ ಮಾಡಿದರು. ತನ್ನ ತಂದೆ ಮರಣವನ್ನು ಹೊಂದಿದಾಗಲೂ ಕಣ್ಣೀರು ಹಾಕದೆ ಇದ್ದ ಉಕ್ಕಿನ ಮನುಷ್ಯ ಜಾರ್ಜ್ ಫರ್ನಾಂಡಿಸ್ ಅಂದು ಅಕ್ಷರಶಃ ಪುಟ್ಟ ಮಗುವಿನ ಹಾಗೆ ಕಣ್ಣೀರು ಹಾಕಿದ್ದರು!

VISTARANEWS.COM


on

George Fernandes ರಾಜಮಾರ್ಗ ಅಂಕಣ
Koo

ಇಂದು( ಜೂನ್ 3) ಜಾರ್ಜ್ ಫರ್ನಾಂಡಿಸ್ ಅವರ ಹುಟ್ಟಿದ ಹಬ್ಬ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: 1989ರ ಇಸವಿಯಲ್ಲಿ ಪ್ರಧಾನಿ ವಿ.ಪಿ ಸಿಂಗ್ (VP Singh) ಅವರ ಕ್ಯಾಬಿನೆಟ್‌ನಲ್ಲಿ ರೈಲ್ವೇ ಮಂತ್ರಿ (Railway minister) ಆಗಿ ಪ್ರತಿಜ್ಞೆ ಸ್ವೀಕರಿಸಿದ ತಕ್ಷಣ ಜಾರ್ಜ್ ಫರ್ನಾಂಡಿಸ್ (George Fernandes) ಉನ್ನತ ರೈಲ್ವೇ ಅಧಿಕಾರಿಗಳ ತುರ್ತು ಸಭೆಯನ್ನು ಕರೆದಿದ್ದರು.

ಜಾರ್ಜ್ ಫರ್ನಾಂಡಿಸ್ ಅಂದು ಹೇಳಿದ್ದು ಎರಡೇ ಮಾತು – ನನ್ನ ಮನಸಿನಲ್ಲಿ ಎರಡು ರೈಲ್ವೇಯ ಯೋಜನೆಗಳು ಇವೆ. ಒಂದು ಬಿಹಾರದಲ್ಲಿ ಚಿಟ್ಟೌನಿ, ಮತ್ತೊಂದು ಕರ್ನಾಟಕದಲ್ಲಿ ಕೊಂಕಣ ರೈಲ್ವೆ (Konkan Railway). ಮುಂದಿನ ಬಜೆಟ್ಟಿನಲ್ಲಿ ಅವುಗಳಿಗೆ ನಾನು ಹಣವನ್ನು ಮೀಸಲು ಇಡುತ್ತೇನೆ. ಅವೆರಡೂ ಪೂರ್ತಿ ಆಗಬೇಕು.

ಅವರು ಎರಡು ರೈಲ್ವೇ ಯೋಜನೆಗಳ ಹಿಂದೆ ಬಿದ್ದದ್ದೇಕೆ?

ಆಗ ಪತ್ರಕರ್ತರು ಅವೆರಡು ಯೋಜನೆಗಳು ಮಾತ್ರವೇ ಯಾಕೆ? ಎಂದು ಕೇಳಿದ್ದರು. ಅದಕ್ಕೆ ಜಾರ್ಜ್ ಫರ್ನಾಂಡೀಸ್ ಹೇಳಿದ್ದು – ಒಂದು ನನಗೆ ವೋಟನ್ನು ಹಾಕಿ ಗೆಲ್ಲಿಸಿದ ರಾಜ್ಯ ಬಿಹಾರ್. ಇನ್ನೊಂದು ನನ್ನ ಜನ್ಮ ಕೊಟ್ಟ ರಾಜ್ಯ ಕರ್ನಾಟಕ! ಎರಡು ರಾಜ್ಯಗಳ ಋಣವನ್ನು ಮರೆಯಲು ಸಾಧ್ಯವೇ?

ಜಾರ್ಜ್ ಅವರಿಗೆ ಮಂತ್ರಿಯಾಗಿ ಮುಂದೆ ತಾನು ಏನು ಮಾಡಬೇಕು ಅನ್ನುವುದು ಸ್ಪಷ್ಟ ಆಗಿತ್ತು! ನಾನು ಇವತ್ತು ʻಕೊಂಕಣ ರೈಲ್ವೆ’ ಎಂಬ ಮಹತ್ವಾಕಾಂಕ್ಷೆಯ ಯೋಜನೆಯು ಅನುಷ್ಠಾನವಾದ ಬಗ್ಗೆ ತುಂಬಾ ವಿಸ್ತಾರ ಆಗಿ ಬರೆಯಬೇಕು. ಏಕೆಂದರೆ ಜಾರ್ಜ್ ಇಲ್ಲವಾದ್ರೆ ಅದು ಇವತ್ತಿಗೂ ಪೂರ್ತಿ ಆಗುತ್ತಿರಲಿಲ್ಲ!

ʻಕೊಂಕಣ ರೈಲ್ವೆ ‘ ಎಂಬ ಮಹಾ ಮಿಷನ್!

ಭಾರತದ ಅತೀ ದೊಡ್ಡ, ಸವಾಲಿನ ರೈಲ್ವೇ ಪ್ರಾಜೆಕ್ಟ್ ಅದು! 70ರ ದಶಕದಲ್ಲಿ ಕರಾವಳಿ ಕರ್ನಾಟಕದ ಬೇರೆ ಬೇರೆ ಕಡೆಯಿಂದ ಮುಂಬೈಗೆ ಹೋಗಿ ಉದ್ಯಮ, ವ್ಯವಹಾರ ಆರಂಭ ಮಾಡಿದ್ದ ತುಳುವರಿಗೆ ಮುಂಬೈಗೆ ಹೋಗಲು ಆಗ 48 ಗಂಟೆ ಅವಧಿಯು ಬೇಕಾಗಿತ್ತು! ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರಭಸವಾಗಿ ಹರಿಯುತ್ತಿದ್ದ ದೊಡ್ಡ ದೊಡ್ಡ ನದಿಗಳಿಗೆ ಆಗ ಸೇತುವೆಗಳು ಆಗಿರಲಿಲ್ಲ.

ಕರಾವಳಿ ಕರ್ನಾಟಕದ ಮಂದಿಯು ರಸ್ತೆಯ ಮಾರ್ಗದಲ್ಲಿ ಚಿಕ್ಕಮಗಳೂರಿನವರೆಗೆ (ಕಡೂರು)ಹೋಗಿ ಅಲ್ಲಿಂದ ಟ್ರೈನನ್ನು ಏರಿಕೊಂಡು ಮುಂಬಯಿ ತಲುಪುವಾಗ ಎರಡು ದಿನ ಮತ್ತು ಎರಡು ರಾತ್ರಿಗಳು ಕಳೆದುಹೋಗುತ್ತಿದ್ದವು! ಬೇರೆ ಯಾವುದೇ ಮಾರ್ಗವು ಕೂಡ ಆಗ ಇರಲಿಲ್ಲ. ವಿಮಾನ ಆರಂಭ ಆಗಿರಲಿಲ್ಲ.

ಕೊಂಕಣ ರೈಲ್ವೇಗೆ ಎದುರಾಯಿತು ನೂರಾರು ಸವಾಲು

ಜಾರ್ಜ್ ತಾವು ಭರವಸೆ ಕೊಟ್ಟ ಹಾಗೆ ರೈಲ್ವೆ ಬಜೇಟಲ್ಲಿ ಕೊಂಕಣ್ ರೈಲ್ವೆಗೆ ಮಂಜೂರಾತಿ ಪಡೆದರು. ಒಂದಿಷ್ಟು ದುಡ್ಡು ಕೂಡ ಪಡೆದರು. ಆದರೆ ಅದು ‘ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆ’ ಎಂಬ ಹಾಗೆ ಇತ್ತು. ಆದರೆ ಜಾರ್ಜ್ ಹಿಡಿದ ಹಠ ಬಿಡುವ ಜಾಯಮಾನದವರೆ ಅಲ್ಲವಲ್ಲ!

ಮುಂದೆ ಒಂದೆರಡು ತಿಂಗಳ ಒಳಗೆ ಕೊಂಕಣ ರೈಲ್ವೆಸ್ ಕಂಪೆನಿಯು ಉದ್ಘಾಟನೆ ಆಯಿತು(1990 ಜುಲೈ 19). ಕೆಲವೇ ತಿಂಗಳ ಹಿಂದೆ ಕೇಂದ್ರ ಸರಕಾರದ ಸೇವೆಯಿಂದ ನಿವೃತ್ತಿ ಹೊಂದಿದ್ದ ಚೀಫ್ ಇಂಜಿನಿಯರ್ ಕೇರಳದ ಈ. ಶ್ರೀಧರನ್ ಅವರನ್ನು ಆ ಕಂಪೆನಿಯ ಮುಖ್ಯಸ್ಥರಾಗಿ ಆಗಮಿಸಲು ಜಾರ್ಜ್ ವಿನಂತಿ ಮಾಡಿದರು. ಶ್ರೀಧರನ್ ಒಪ್ಪಿದರು. ಅವರಿಗೆ ಜಾರ್ಜ್ ಹೇಳಿದ್ದು ಒಂದೇ ಮಾತು – ಸರ್, ನೀವು ಕೆಲಸ ಮಾಡ್ತಾ ಹೋಗಿ. ಕೆಲಸ ನಿಲ್ಲಬಾರದು. ದುಡ್ಡು ನಾನು ಹೊಂದಿಸುವೆ!

ನಾನು ರೈಲ್ವೆ ಮಂತ್ರಿ ಆಗಿರದಿದ್ದರೂ….!

ಮುಂದೆ ಶಿಲಾನ್ಯಾಸದ ಕಾರ್ಯಕ್ರಮ ನಡೆದಾಗ ರೈಲ್ವೆ ಮಂತ್ರಿ ಜಾರ್ಜ್ ಹೇಳಿದ್ದು – ಮುಂದೆ ನಾನು ರೈಲ್ವೆ ಮಂತ್ರಿ ಆಗಿರುತ್ತೇನೋ ಇಲ್ಲವೋ ಗೊತ್ತಿಲ್ಲ. ಎಂಟು ವರ್ಷಗಳ ಒಳಗೆ ಈ ಯೋಜನೆಯು ಖಂಡಿತವಾಗಿ ಪೂರ್ತಿ ಆಗುತ್ತದೆ. ಅದಕ್ಕೆ ಬೇಕಾದ ದುಡ್ಡು ನನ್ನ ಹೊಣೆ!

ಜಾರ್ಜ್ ಫರ್ನಾಂಡಿಸ್ ನುಡಿದ ಹಾಗೆ ನಡೆದರು. ಸರಕಾರದ ದುಡ್ಡು ಸಾಲದೆ ಹೋದಾಗ ಪಬ್ಲಿಕ್ ಇಶ್ಯುಸ್ ಮೂಲಕ ಫಂಡ್ಸ್ ಒಟ್ಟು ಮಾಡಿದರು. ಆ ಯೋಜನೆಯ ಫಲಾನುಭವಿಗಳ ಸಭೆ ಕರೆದು ಭಿಕ್ಷಾಪಾತ್ರೆ ಹಿಡಿದರು. ಜನರು ಹಿಂದೆ ಮುಂದೆ ನೋಡದೆ ಜಾರ್ಜ್ ಮೇಲೆ ಭರವಸೆ ಇಟ್ಟರು. ಜಾರ್ಜ್ ಅವರ ಕನ್ವಿನ್ಸಿಂಗ್ ಪವರ್ ತುಂಬಾ ಅದ್ಭುತ ಆಗಿತ್ತು. ಅವರ ಕೊಂಕಣಿ, ತುಳು, ಹಿಂದೀ, ಇಂಗ್ಲಿಷ್, ಮರಾಠಿ ಭಾಷೆಯ ಮಾತುಗಳು ಜನರಲ್ಲಿ ಭಾರೀ ಭರವಸೆ ಮೂಡಿಸಿದವು.

ಶ್ರೀಧರನ್ ಎಂಬ ಮಹಾನ್ ಕಾಯಕ ರಾಕ್ಷಸ

ಇನ್ನು ಈ ಶ್ರೀಧರನ್ ಸಾಮರ್ಥ್ಯದ ಬಗ್ಗೆ ಎಷ್ಟು ಬರೆದರೂ ಅದು ಕಡಿಮೆಯೇ! ಆತ ಮಹಾ ಕಾಯಕ ರಾಕ್ಷಸ! ತುಂಬಾ ಸ್ಟ್ರಾಂಗ್ ಆಗಿದ್ದ ಯುವ ಇಂಜಿನಿಯರಗಳ ತಂಡವನ್ನು ಕಟ್ಟಿಕೊಂಡ ಅವರು ಮುಂದಿನ ಎಂಟು ವರ್ಷಗಳ ಕಾಲ ಮಾಡಿದ್ದೆಲ್ಲವೂ ಅದ್ಭುತ! ಎಲ್ಲವೂ ಮಹೋನ್ನತ!

ಅತ್ಯಂತ ದುರ್ಗಮವಾದ ಪರ್ವತಗಳ ಶ್ರೇಣಿ! ಜಾರುವ ಬಂಡೆಗಳು! ಒಂದು ಮಳೆಗೆ ಜಾರಿ ಕುಸಿದು ಹೋಗುವ ಶೇಡಿ ಮಣ್ಣಿನ ನೆಲ! ಬೆಟ್ಟಗಳನ್ನು ಅಗೆದು ಮೈಲು ದೂರದ ಸುರಂಗಗಳನ್ನು ಕೊರೆಯುವ ಸವಾಲು! ಅದು ಇಡೀ ಭಾರತದ ರೈಲ್ವೆ ಇತಿಹಾಸದ ಅತ್ಯಂತ ಸಾಹಸದ ಮತ್ತು ಕಠಿಣ ಸವಾಲಿನ ಪ್ರಾಜೆಕ್ಟ್ ಆಗಿತ್ತು!

ಮೂರು ರಾಜ್ಯಗಳ ಹೃದಯದ ಮೂಲಕ ಹಾದು ಹೋಗುವ 760 ಕಿಲೋಮೀಟರ್ ರೈಲ್ವೆ ಹಳಿಗಳು! 2000 ಸಣ್ಣ ಸೇತುವೆಗಳು! 179 ದೊಡ್ಡ ಸೇತುವೆಗಳು! 92 ಭಾರೀ ಸುರಂಗಗಳು! ಅದರಲ್ಲಿ ಕೆಲವು ಮೈಲುಗಟ್ಟಲೆ ಉದ್ದ ಇವೆ! 59 ವೈಭವದ ನಿಲ್ದಾಣಗಳು! ಆಗಾಗ ಗುಡ್ಡದ ಕುಸಿತದ ಹಿನ್ನೆಲೆಯಲ್ಲಿ ಕೆಲಸವು ಕಷ್ಟ ಆಯ್ತು. ಆದರೆ ಈ. ಶ್ರೀಧರನ್ ಕೆಲಸವನ್ನು ನಿಲ್ಲಲು ಬಿಡಲಿಲ್ಲ! ಜಾರ್ಜ್ ಅವರನ್ನು ಬೆನ್ನು ಬಿಡಬೇಕಲ್ಲ!

ಜಾರ್ಜ್ ಫರ್ನಾಂಡಿಸ್ ನುಡಿದಂತೆ ನಡೆದರು

ಜಾರ್ಜ್ ಭರವಸೆ ಕೊಟ್ಟ ಹಾಗೆ ಎಂಟು ವರ್ಷಗಳ ಒಳಗೆ ಈ ಪ್ರಾಜೆಕ್ಟ್ ಪೂರ್ತಿ ಆಯಿತು. 1998 ಜನವರಿ 26ರಂದು ಅಂದಿನ ಪ್ರಧಾನಿ ವಾಜಪೇಯಿ ಅವರು ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಕೊಂಕಣ ರೈಲ್ವೆಯ ಹೊಸ ಮಾರ್ಗವನ್ನು ಉದ್ಘಾಟನೆ ಮಾಡಿದರು. ಆಗ ಕೇಂದ್ರದ ರಕ್ಷಣಾ ಮಂತ್ರಿ ಆಗಿದ್ದರು ಜಾರ್ಜ್ ಫರ್ನಾಂಡಿಸ್. ಅಂದು ವೇದಿಕೆಯಲ್ಲಿ ಇದ್ದು ಆನಂದ ಭಾಷ್ಪ ಸುರಿಸಿದರು! ತನ್ನ ತಂದೆ ಮರಣವನ್ನು ಹೊಂದಿದಾಗಲೂ ಕಣ್ಣೀರು ಹಾಕದೆ ಇದ್ದ ಉಕ್ಕಿನ ಮನುಷ್ಯ ಜಾರ್ಜ್ ಫರ್ನಾಂಡಿಸ್ ಅಂದು ಅಕ್ಷರಶಃ ಪುಟ್ಟ ಮಗುವಿನ ಹಾಗೆ ಕಣ್ಣೀರು ಹಾಕಿದ್ದರು! ಅಂದು ಮಂಗಳೂರು ಮುಂಬೈ ನಡುವೆ ಮೊದಲ ಟ್ರೈನ್ ಓಡಿತ್ತು!

ಕೊಂಕಣ ರೈಲು ಕ್ರಾಂತಿಯನ್ನೇ ಮಾಡಿತು!

ಅದುವರೆಗೆ ಮಂಗಳೂರು ಮುಂಬೈ ನಡುವಿನ ಪ್ರಯಾಣಕ್ಕೆ 48 ಗಂಟೆ ತೆಗೆದುಕೊಳ್ಳುತ್ತಿದ್ದ ಕರಾವಳಿಯ ಮಂದಿ ಅಂದು ಕೇವಲ 15 ಗಂಟೆಯಲ್ಲಿ ಮುಂಬೈ ತಲುಪಿದ್ದರು! ಈಗಇನ್ನೂ ಕಡಿಮೆಯ ಸಮಯವು ಸಾಕಾಗುತ್ತದೆ. ದೂರವು 1200 ಕಿಲೋಮೀಟರ್‌ನಿಂದ 760 ಕಿಲೋಮೀಟರ್‌ಗೆ ಇಳಿದಿದೆ. ಅತ್ಯಂತ ಆಕರ್ಷಕವಾದ 59 ಸ್ಟೇಶನ್‌ಗಳು ಕೂಡ ಮುಗಿದು ಬಿಟ್ಟಿದ್ದವು. ತುಳುವರ ಸಂತೋಷಕ್ಕೆ ಅಂದು ಪಾರವೇ ಇರಲಿಲ್ಲ. ಈ. ಶ್ರೀಧರನ್ ಈ ಪ್ರಾಜೆಕ್ಟನ್ನು ಪೂರ್ತಿ ಮಾಡಿ ಇನ್ನೊಂದು ಪ್ರಾಜೆಕ್ಟ್ ಹಿಂದೆ ಹೋದರು. ಅವರೆಲ್ಲಿ ವಿಶ್ರಾಂತಿ ಪಡೆಯುತ್ತಾರೆ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅಳಿಸಲಾಗದ ನೋವು ಬಿಟ್ಟು ಹೋದ ಮಂಗಳೂರು ವಿಮಾನ ದುರಂತ!

ಇಂದು ಅದೇ ಕೊಂಕಣ್ ರೈಲ್ವೆ ಹಳಿಗಳ ಮೂಲಕ ನೂರಾರು ಟ್ರೈನಗಳು ಓಡುತ್ತಿವೆ. ದಕ್ಷಿಣ ಭಾರತ ಮತ್ತು ಉತ್ತರ ಭಾರತವನ್ನು ಕನೆಕ್ಟ್ ಮಾಡುವ ಶ್ರೇಷ್ಟ ಸಾರಿಗೆ ವ್ಯವಸ್ಥೆ ಅದು. ಅದೇ ಹಳಿಗಳ ಮೇಲೆ ಈಗ ಭಾರತದ ಅತ್ಯಂತ ವೇಗವಾದ ರೈಲು ಕೂಡ ಓಡುತ್ತಿದೆ. ಖರ್ಚು ಕೂಡ ತುಂಬಾ ಕಡಿಮೆ.

ಜಾರ್ಜ್ ಫರ್ನಾಂಡಿಸ್ ಆದರು ಲೆಜೆಂಡ್

ಇಂದು( ಜೂನ್ 3) ಜಾರ್ಜ್ ಫರ್ನಾಂಡಿಸ್ ಅವರ ಹುಟ್ಟಿದ ಹಬ್ಬ. ಬದುಕಿದ್ದರೆ ಅವರಿಗೆ ಇಂದು 94ವರ್ಷ ಆಗಿರುತ್ತಿತ್ತು. ಅವರಿಂದು ಬದುಕಿಲ್ಲ. ಅವರು ಗತಿಸಿ ಐದು ವರ್ಷಗಳೇ ಆಗಿವೆ. ಆದರೆ ಪ್ರತೀ ದಿನವೂ ರೈಲಿನಲ್ಲಿ ಪ್ರಯಾಣ ಮಾಡುವ ಜನರ ಹೃದಯದಲ್ಲಿ ಅವರು ಸದಾ ಜೀವಂತ ಇರುತ್ತಾರೆ.

ಉಡುಪಿ ಇಂದ್ರಾಳಿ ಜಂಕ್ಷನನಿಂದ ರೈಲ್ವೆ ನಿಲ್ದಾಣದ ತನಕ ಹೋಗುವ ರಸ್ತೆಗೆ ಜಾರ್ಜ್ ಫರ್ನಾಂಡಿಸ್ ಅವರ ಹೆಸರು ಇಡಲಾಗಿದೆ. ಆದರೆ ಆ ನಾಮಫಲಕವು ಎಲ್ಲೋ ಮರೆಗೆ ಹೋಗಿದೆ. ಸರಕಾರಗಳು ಅವರನ್ನು ಮರೆತಿವೆ. ಅವರ ಬಗ್ಗೆ ನಿರ್ಲಕ್ಷ್ಯವು ಖಂಡಿತಾ ಸಲ್ಲದು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಸಾವನ್ನೇ ಆಹ್ವಾನಿಸಿದ ಸುಂದರಿ ಝೋರಯಾ ಟರ್ ಬ್ರೀಕ್

Continue Reading
Advertisement
Ind vs pak
ಪ್ರಮುಖ ಸುದ್ದಿ29 mins ago

IND VS PAK : ಭಾರತ- ಪಾಕಿಸ್ತಾನ ಪಂದ್ಯ ಅರ್ಧ ಗಂಟೆ ತಡ; ಟಾಸ್ ಗೆದ್ದ ಪಾಕ್​ನಿಂದ ಫೀಲ್ಡಿಂಗ್ ಆಯ್ಕೆ

Narendra Modi
ದೇಶ52 mins ago

Narendra Modi: ರಾಜಕೀಯದಾಚೆ ಕವಿ, ಗಾಳಿಪಟ ಪ್ರೇಮಿ; ಮೋದಿ ಬಗ್ಗೆ ನಿಮಗೆ ಗೊತ್ತಿರದ 20 ಸಂಗತಿ ಇಲ್ಲಿವೆ

Bus Accident
ಕ್ರೈಂ54 mins ago

Bus Accident: ಪಂಕಜಾ ಮುಂಡೆ ಸೋತರೆ ಸಾಯುತ್ತೇನೆ ಎಂದು ವಿಡಿಯೊ ಮಾಡಿದ್ದ ವ್ಯಕ್ತಿ ಅಪಘಾತದಲ್ಲಿ ಸಾವು!

HD Kumaraswamy
ಕರ್ನಾಟಕ58 mins ago

HD Kumaraswamy Profile: ಹರದನಹಳ್ಳಿಯಿಂದ ದೆಹಲಿವರೆಗೆ; ಕುಮಾರಸ್ವಾಮಿ ಸಾಗಿಬಂದ ದಾರಿ ಹೀಗಿದೆ

Narendra Modi
ದೇಶ1 hour ago

Narendra Modi: ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ; 3.0 ಯುಗಾರಂಭ!

Narendra Modi 3.0
ಪ್ರಮುಖ ಸುದ್ದಿ1 hour ago

Narendra Modi 3.0 : ಮೋದಿ ಪ್ರಮಾಣ ವಚನ; ಬಿರಿಯಾನಿ, ಹೋಳಿಗೆ ಹಂಚಿದ ಕರುನಾಡಿನ ಅಭಿಮಾನಿಗಳು

Farmer Death
ದಾವಣಗೆರೆ2 hours ago

Farmer Death : ಬ್ಯಾಂಕ್‌ ಅಧಿಕಾರಿಗಳಿಂದ ಮನೆ ಹರಾಜು ನೋಟಿಸ್‌; ವಿದ್ಯುತ್ ಕಂಬಕ್ಕೆ ನೇಣು ಹಾಕಿಕೊಂಡ ರೈತ

Modi 3.0 Cabinet BS Yediyurappa congratulates Pralhad Joshi
Lok Sabha Election 20242 hours ago

Modi 3.0 Cabinet: ಮತ್ತೆ ಮಂತ್ರಿಯಾಗಿ ದಾಖಲೆ ಬರೆದ ಪ್ರಲ್ಹಾದ್‌ ಜೋಶಿ; ಬೆನ್ನು ತಟ್ಟಿ ಆಶೀರ್ವದಿಸಿದ ಬಿಎಸ್‌ವೈ

Rishabh Pant
ಪ್ರಮುಖ ಸುದ್ದಿ2 hours ago

Rishbha Pant : ನನ್ನ ಕಾಲನ್ನು ತುಂಡರಿಬೇಕಿತ್ತು; ಅಪಘಾತದ ಭಯಾನಕ ಸಂಗತಿಗಳನ್ನು ಹೇಳಿದ ರಿಷಭ್ ಪಂತ್​

Health Tips
ಆರೋಗ್ಯ3 hours ago

Health Tips: ಆರೋಗ್ಯಕರ ಆಗಿರಬೇಕಿದ್ದರೆ ನಾವು ಪ್ರತಿದಿನ ಎಷ್ಟು ಪ್ರಮಾಣದಲ್ಲಿ ಆಹಾರ ಸೇವಿಸಬೇಕು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ2 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ6 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌