prerane spiritual column by sadhguru jaggi vasudev about formula for winningPrerane : ಗೆಲುವಿಗೆ ಸೂತ್ರಗಳಿವೆಯೇ? ಸದ್ಗುರು ಹೀಗೆನ್ನುತ್ತಾರೆ! Vistara News
Connect with us

ಅಂಕಣ

Prerane : ಗೆಲುವಿಗೆ ಸೂತ್ರಗಳಿವೆಯೇ? ಸದ್ಗುರು ಹೀಗೆನ್ನುತ್ತಾರೆ!

ಗೆಲುವನ್ನು ಕಂಡವರ ಜೀವನ, ನಮಗೆ ಒಂದು ಪ್ರೋತ್ಸಾಹದಾಯಕ ಶಕ್ತಿಯಾಗಿ ಮಾತ್ರ ಇರಲು ಸಾಧ್ಯವೇ ಹೊರತು ಅದನ್ನು ಗೆಲುವಿನ ಸೂತ್ರವನ್ನಾಗಿ ಹಿಡಿಯುವುದು ಅತ್ಯಂತ ಮೂರ್ಖತನವೆನಿಸುತ್ತದೆ ಎನ್ನುತ್ತಾರೆ ಸದ್ಗುರು. ಅವರ ವಿಶೇಷ ಲೇಖನ ಇಂದಿನ ಪ್ರೇರಣೆ (Prerane) ಅಂಕಣದಲ್ಲಿದೆ.

VISTARANEWS.COM


on

sadhguru jaggi vasudev Prerane
Koo

ಸದ್ಗುರು ಜಗ್ಗಿ ವಾಸುದೇವ್‌
ಅಂಗಡಿ, ಬೀದಿ, ಬಸ್ ನಿಲ್ದಾಣ, ಕಾಲೇಜು, ದೇವಾಲಯ ಹೀಗೆ ಎಲ್ಲಿ ಬೇಕಾದರೂ ಕೆಲವು ನಿಮಿಷಗಳು ನಿಂತುಕೊಂಡು, ಕಣ್ಣಿಗೆ ಕಾಣಿಸುವವರನ್ನು ಗಮನಿಸಿ. ಎಷ್ಟು ಮುಖಗಳು ಸಂತೋಷವಾಗಿರುತ್ತವೆ? ನೂರು ಮುಖಗಳನ್ನು ನೋಡಿದರೆ, ಅವುಗಳಲ್ಲಿ ನಾಲ್ಕೋ, ಐದೋ ಮುಖಗಳು ಮಾತ್ರ ನಗುತ್ತಿರುವುದು ಕಂಡುಬರುತ್ತವೆ.

ಅದೂ ಇಪ್ಪತ್ತೈದು ವಯಸ್ಸಿನ ಒಳಗಿರುವ ಮುಖಗಳು ಮಾತ್ರ!

ಮೂವತ್ತು ವಯಸ್ಸಾಯಿತೆಂದರೆ ಎಲ್ಲವನ್ನೂ ಕಳೆದುಕೊಂಡವರಂತೆ ಕಂಡುಬರುತ್ತಾರೆ. ದೀನವಾಗಿ ನೋಡುತ್ತಾ, ಶವಾಗಾರದಿಂದ ಹಿಂತಿರುಗುತ್ತಿರುವಂತೆ ಗಂಭೀರವಾಗಿರುವ ಮುಖದೊಂದಿಗೆ, ದಯನೀಯವಾಗಿರುತ್ತಾರೆ. ಹೊರಗಡೆ ಏಕೆ ಹೋಗಬೇಕು? ನಿಮ್ಮನ್ನೇ ನೀವು ಕನ್ನಡಿಯಲ್ಲಿ ನೋಡಿಕೊಳ್ಳಿ. ನಿಮ್ಮ ಐದನೆಯ ವಯಸ್ಸಿನಲ್ಲಿ ಒಂದು ಬಣ್ಣದ ಚಿಟ್ಟೆಯನ್ನು ಅಟ್ಟಿಸಿಕೊಂಡು ಓಡಿದಿರಿ. ಆಗ ನಿಮ್ಮ ಮುಖದಲ್ಲಿದ್ದ ಆನಂದ ಮತ್ತು ಉತ್ಸಾಹ ಈಗ ಇದೆಯೆ?

prerane

ಐದನೆಯ ವಯಸ್ಸಿನಲ್ಲಿ ಬಣ್ಣದ ಚಿಟ್ಟೆಯನ್ನು ಮುಟ್ಟಿದಾಗ, ಅದರ ಬಣ್ಣಗಳು ನಿಮ್ಮ ಕೈಯಲ್ಲಿ ಅಂಟಿಕೊಂಡು ಫಳಫಳವೆಂದು ಹೊಳೆದಾಗ ಅದಕ್ಕಿಂತ ಹೆಚ್ಚಿನದು ಪ್ರಪಂಚದಲ್ಲಿ ನಿಮಗೆ ಬೇರಾವುದೂ ತಿಳಿಯಲಿಲ್ಲ. ಆಗ ನೀವು ಅದೆಷ್ಟು ಹಿರಿಹಿರಿ ಹಿಗ್ಗಿ ಆನಂದವಾಗಿದ್ದಿರಿ? ಐದನೆಯ ವಯಸ್ಸಿನಲ್ಲಿ ನಿಮ್ಮಲ್ಲಿದ್ದುದು ಏನು? ಈಗ ಇರುವುದು ಏನು? ಅಗಾಧವಾದ ಓದು, ಕಂಪ್ಯೂಟರ್, ಮನೆ, ಕಾರು, ಒಂದನೆಯ ತಾರೀಖಿಗೆ ’ಠಣ್’ ಎಂದು ಬ್ಯಾಂಕ್ ಅಕೌಂಟಿಗೆ ಬಂದು ಬೀಳುವ ಸಂಬಳ. ನಿದ್ದೆಗೆ ಸಿದ್ಧವಾದಾಗಲೂ ಜತೆಯಲ್ಲಿಯೇ ಕೊಂಡೊಯ್ಯುವ ಸೆಲ್ ಫೋನ್, ಅದೆಷ್ಟನ್ನು ಕೂಡಿಸಿಕೊಂಡಿದ್ದೀರಿ? ಕೆಲವು ಶತಮಾನಗಳ ಹಿಂದೆ ಪ್ರಪಂಚವನ್ನೇ ಗೆದ್ದವೆಂದು ಹೇಳಿಕೊಂಡ ಮಹಾ ಚಕ್ರವರ್ತಿಗಳಿಗೂ ಇಷ್ಟೊಂದು ಸೌಲಭ್ಯಗಳಿರಲಿಲ್ಲ. ಹೀಗಿದ್ದರೂ ನಿಮ್ಮ ಸಂತೋಷ ಅದೇ ಪ್ರಮಾಣದಲ್ಲಿ ಬೆಳೆಯುತ್ತಿದೆಯೆ?

ಒಮ್ಮೆ ಕಂಠಪೂರ್ತಿ ಕುಡಿದಿದ್ದ ಶಂಕರನ್ ಪಿಳ್ಳೆ ಬಸ್‌ಸ್ಟಾಪಿಗೆ ಬಂದರು. ಅವರು ಹೋಗಬೇಕಾಗಿದ್ದ ಬಸ್ ಬಂತು. ಅದರಲ್ಲಿ ತುಂಬ ನೂಕುನುಗ್ಗಲಿತ್ತು. ಅದು ಹೇಗೋ ಕಷ್ಟ ಪಟ್ಟು ಬಸ್ಸಿಗೆ ಹತ್ತಿದರು. ಹತ್ತು ಹದಿನೈದು ಮುಂದಿಯ ಕಾಲುಗಳನ್ನು ತುಳಿದಾಡಿ, ನಾಲ್ಕೈದು ಮಂದಿಯ ಮುಖಗಳನ್ನು ಮೊಳಕೈಯಲ್ಲಿ ತಿವಿದು ದಾರಿ ಮಾಡಿಕೊಂಡು ಒಳಗೆ ನುಗ್ಗಿದರು.

ಒಬ್ಬ ವೃದ್ಧ ಮಹಿಳೆಯ ಪಕ್ಕದಲ್ಲಿ ಕುಳಿತಿದ್ದವರು, ಮೇಲೆ ಏಳುತ್ತಿರುವುದನ್ನು ನೋಡಿದ ಶಂಕರನ್ ಪಿಳ್ಳೆ, ಮತ್ತೆ ಕೆಲವರನ್ನು ಪಕ್ಕಕ್ಕೆ ತಳ್ಳಿ ಮುನ್ನುಗ್ಗಿದರು. ಕುಡುಕನ ಸಮೀಪ ನಿಲ್ಲುವುದು ಬೇಡವೆಂದು ಎಲ್ಲರೂ ದೂರದೂರವೇ ನಿಂತು ದಾರಿಮಾಡಿಕೊಟ್ಟರು.

ಆ ಜಾಗದಲ್ಲಿದ್ದವರು ಎದ್ದೇಳುತ್ತಿದ್ದಂತೆಯೇ ಶಂಕರನ್ ಪಿಳ್ಳೆ ಅಲ್ಲಿ ಕುಳಿತುಕೊಂಡರು. ಕುಳಿತ ರಭಸದಲ್ಲಿ ಅಲ್ಲಿ ಕುಳಿತಿದ್ದ ವೃದ್ಧೆಯ ಮೇಲೆ ಬಿದ್ದರು. ವೃದ್ಧೆಯ ತೊಡೆಯ ಮೇಲಿರಿಸಿಕೊಂಡಿದ್ದ ಎಲ್ಲ ಸಾಮಾನುಗಳೂ ಬಿದ್ದುಹೋದುವು. ಅವುಗಳನ್ನು ಒಟ್ಟುಗೂಡಿಸುತ್ತಾ ಆ ಮಹಿಳೆ ಕೋಪದಿಂದ ಅವರತ್ತ ದುರುಗುಟ್ಟಿ ನೋಡಿದರು.
‘ನೀನು ಸೀದಾ ನರಕಕ್ಕೇ ಹೋಗುತ್ತೀಯ’ ಎಂದು ಕೋಪದಿಂದ ಕೂಗಾಡಿದರು.

ಶಂಕರನ್ ಪಿಳ್ಳೆ ಗಾಬರಿಯಿಂದ ಮೇಲೆದ್ದು ಕೂಗಿಕೊಂಡರು, “ಗಾಡಿಯನ್ನು ನಿಲ್ಲಿಸಿ, ನಾನು ಹೋಗಬೇಕಾಗಿರುವುದು ಮೆಜೆಸ್ಟಿಕ್ ಗೆ, ತಪ್ಪು ಬಸ್ಸಿನಲ್ಲಿ ಹತ್ತಿ ಬಿಟ್ಟಿದ್ದೇನೆ….!!!”

ನಿಮ್ಮಲ್ಲಿ ಹಲವರು ಹೀಗೆಯೇ, ಯಾವ ಬಸ್ಸಿನಲ್ಲಿ ಹತ್ತಿದ್ದೀರಿ ಎಂಬುದನ್ನು ಸಹ ತಿಳಿಯದೆ ಆತಂಕಪಡುತ್ತಿದ್ದೀರಿ. ಹತ್ತುವುದಕ್ಕಾಗಲೀ ಇಳಿಯುವುದಕ್ಕಾಗಲೀ ತೋಚದೆ ಅತಂತ್ರ ಸ್ಥಿತಿಯಲ್ಲಿದ್ದೀರಿ. ಆಸೆ ಪಟ್ಟಿದ್ದು ದೊರಕಲಿಲ್ಲವೆಂದ ಮೇಲೆ, ದುಃಖದಿಂದ ಮುಖವನ್ನು ಬಾಡಿಸಿಕೊಳ್ಳುವುದು ಒಂದು ಮೂರ್ಖತನ. ಆಸೆಪಟ್ಟಿದ್ದು ದೊರೆತಾಗಲೂ ಅದೇಕೆ ಸಂಪೂರ್ಣವಾಗಿ ಸಂತೋಷವನ್ನು ಅನುಭವಿಸಲು ತಿಳಿಯದೆ ಒದ್ದಾಡುತ್ತೀರಿ?

ನಿಮಗೆ ತೆಂಡೂಲ್ಕರ್‌ ತರಹ ಕ್ರಿಕೆಟ್ ಆಡಬೇಕು, ಐಶ್ವರ್ಯ ರೈಯಂತೆ ಸುಂದರವಾಗಿರಬೇಕು, ಬಿಲ್ ಗೇಟ್ಸ್‌ನಂತೆ ಹಣವಂತರಾಗಬೇಕು. ಇಂತಹ ಒಂದು ಮನೆ, ಅಂತಹದೊಂದು ಕಾರ್, ಅವರ ಜೀವನದಂತೆ ಒಂದು ಜೀವನ ದೊರೆತಾಗ ಉಂಟಾಗುವ ಫಲವನ್ನು, ಮೊದಲೇ ತೀರ್ಮಾನಿಸಿದ್ದೀರಿ. ಅದನ್ನು ನಿರೀಕ್ಷಿಸಿ ಒಂದು ಕೆಲಸದಲ್ಲಿ ಇಳಿದಿದ್ದೀರಿ. ಅದು ನಿಮಗೆ ಒಪ್ಪಿಗೆಯಾಗುತ್ತದೆಯೋ ಇಲ್ಲವೋ, ಅಂತೂ ಅದನ್ನು ರೂಢಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಭಾರತದಲ್ಲಿ ಈಗ ಸಾಫ್ಟ್‌ವೇರ್ ಬಿಸಿನೆಸ್ ಮುಗಿಲಲ್ಲಿ ಹಾರಾಡುತ್ತಿದೆ ಎಂದು ಯಾರೋ ತಿಳಿಸಿದರು. ಅದಕ್ಕಾಗಿ ಈಗ ಸಿದ್ಧವಾಗುತ್ತಿದ್ದೀರಿ. ಬೇರೊಬ್ಬರು ನಿಮ್ಮತ್ತ ಕನಿಕರದಿಂದ ನೋಡುತ್ತಾರೆ. ಅಗೋ, ಅಲ್ಲಿ ಮಾಸಲು ಶರ್ಟು ತೊಟ್ಟು ಅಲೆಯುತ್ತಿದ್ದಾರಲ್ಲ, ಅವರು ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರು. ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಹೀಗಾಗಿ ಅವರು ಅಲ್ಲಿಂದ ಮರಳಿದ್ದಾರೆ. ಈಗ ಕೈಗಾಡಿಯಲ್ಲಿ ತಿಂಡಿ ಮಾರಾಟ ಮಾಡೋಣವೇ, ಎಂದು ಯೋಚನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಅದೆಲ್ಲಾ ಬೇಡ, ಷೇರ್ ಬಿಸಿನೆಸ್ ಮಾಡಿ ಎನ್ನುತ್ತಾರೆ.

ಷೇರ್ ಬಿಸಿನೆಸ್‌ನಲ್ಲಿರುವ ಹಾವು-ಚೇಳು ನಿಮ್ಮನ್ನು ಮಾತ್ರ ಬಿಟ್ಟುಬಿಡುತ್ತವೆಯೆ?

ತೆಂಡೂಲ್ಕರ್ ಧರಿಸುವಂತಹ ಶೂಗಳನ್ನು ಹಾಕಿಕೊಂಡು ಅಂತಹುದೇ ಪ್ಯಾಡುಗಳನ್ನು ಕಟ್ಟಿಕೊಂಡು ಮುಂದೆ ಬಂದರೆ ಕ್ರಿಕೆಟ್ ಬಂದು ಬಿಡುತ್ತದೆಯೆ? ತೆಂಡೂಲ್ಕರ್‘ ತನ್ನ ಬ್ಯಾಟನ್ನೇ ನಿಮ್ಮ ಕೈಗೆ ಕೊಟ್ಟರೂ, ಅವರು ಆಡುವಂತಹ ಆಟವನ್ನು ನೀವು ಆಡಲು ಸಾಧ್ಯವಾಗುತ್ತದೆಯೆ?

ಜೀವನ ಗೊಂದಲಮಯವೆನಿಸಿದರೆ ಸದ್ಗುರು ಅವರ ಮಾತುಗಳನ್ನು ಕೇಳಲು ಈ ವಿಡಿಯೋ ನೋಡಿ.

ಬೇರೊಬ್ಬರನ್ನು ನೋಡಿ ಅವರಂತೆಯೇ ಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿದರೆ, ನಮ್ಮ ಬೆಳವಣಿಗೆಯಲ್ಲಿ ಹಿನ್ನೆಡೆಯಾಗಿ ಮಂಗನಂತೆ ಆಗಿಬಿಡುತ್ತೇವೆ ಎಂಬುದಲ್ಲವೆ ಇದರ ಅರ್ಥ? ನಿಮ್ಮ ಸಾಮರ್ಥ್ಯವನ್ನು ಸಂಪೂರ್ಣಯಾಗಿ ಉಪಯೋಗಪಡಿಸಿಕೊಳ್ಳುವುದು ಎಂಬುದಲ್ಲವೆ ನಿಮ್ಮ ಲಕ್ಷ್ಯವಾಗಿರಬೇಕಾದದ್ದು?

ನಿಮ್ಮ ಗುಣ-ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳದೆ, ವಿರುದ್ಧ ದಿಕ್ಕಿನಲ್ಲಿ ಹೆಜ್ಜೆ ಹಾಕಿದರೆ ಜೀವನವು ನರಕವಾಗಿ ಪರಿಣಮಿಸುತ್ತದೆ.

ಹೀಗೆಯೇ ಶಂಕರನ್ ಪಿಳ್ಳೆ ಒಮ್ಮೆ ತನ್ನ ಇಬ್ಬರು ಸ್ನೇಹಿತರೊಂದಿಗೆ ರೈಲ್ವೆ ನಿಲ್ದಾಣಕ್ಕೆ ಬಂದರು. ಮೂವರಿಗೂ ಸೇರಿಸಿ ಒಂದೇ ಟಿಕೆಟ್ಟನ್ನು ತೆಗೆದುಕೊಂಡರು. ಅವರ ಹಿಂದೆಯೇ ಹಳ್ಳಿಯಿಂದ ಬಂದಿದ್ದ ಮೂವರು ಇದನ್ನು ಗಮನಿಸಿದರು. ಒಂದೇ ಟಿಕೆಟ್ಟಿನಲ್ಲಿ ಅದು ಹೇಗೆ ಮೂರು ಮಂದಿ ಪ್ರಯಾಣ ಮಾಡಲು ಸಾಧ್ಯವಾಗುತ್ತದೆ ಎಂಬುದು ಅವರ ಕುತೂಹಲವಾಗಿತ್ತು. ರೈಲಿನಲ್ಲಿ ಆ ಮೂವರೂ ಶಂಕರನ್ ಪಿಳ್ಳೆಯನ್ನೇ ಗಮನಿಸುತ್ತಿದ್ದರು.

ಟಿ.ಸಿ. ಬಂದದ್ದನ್ನು ನೋಡಿದ ಶಂಕರನ್ ಪಿಳ್ಳೆ ಮತ್ತು ಅವನ ಸ್ನೇಹಿತರು ಒಂದೇ ಟಾಯ್ಲೆಟ್‌ನಲ್ಲಿ ಅಡಗಿಕೊಂಡರು. ಬೇರೆಲ್ಲರ ಟಿಕೆಟ್‌ಗಳನ್ನು ನೋಡಿದ ಅನಂತರ ಟಿ.ಸಿ. ಟಾಯ್ಲೆಟ್ ಬಾಗಿಲನ್ನು ತಟ್ಟಿದ. ಒಳಗೆ ಯಾರು? ಟಿಕೆಟ್ ಪ್ಲೀಸ್ ಎಂದ. ಒಂದು ಟಿಕೆಟ್ ಹಿಡಿದ ಕೈಯೊಂದು ಹೊರಗೆ ಬಂತು. ಟಿ.ಸಿ. ಅದನ್ನು ನೋಡಿ ಮುಂದೆ ನಡೆದರು. ಅನಂತರ ಆ ಮೂವರು ಹೊರಗೆ ಬಂದು ಕುಳಿತುಕೊಂಡರು.

 spiritual column by sadhguru jaggi vasudev

ಹಳ್ಳಿಗರಿಗೆ ಶಂಕರನ್ ಪಿಳ್ಳೆಯ ಉಪಾಯ ಅರ್ಥವಾಯಿತು. ’ಆಹಾ ಒಳ್ಳೆ ಐಡಿಯಾ ಇದು’ ಎಂದು ಮನಸ್ಸಿನಲ್ಲಿಯೇ ಲೆಕ್ಕ ಹಾಕಿಕೊಂಡರು. ಊರಿಗೆ ಹಿಂತಿರುಗುವ ದಿನ ಬಂತು. ಆ ಮೂವರೂ ಸೇರಿ ಒಂದು ಟಿಕೆಟ್ ಪಡೆದರು. ಅವರ ಹಿಂದೆಯೇ ಶಂಕರನ್ ಪಿಳ್ಳೆ ತನ್ನಿಬ್ಬರು ಸ್ನೇಹಿತರೊಂದಿಗೆ ಬಂದರು. ಆದರೆ ಅಂದು ಅವರಾರೂ ಟಿಕೆಟ್ ಕೊಂಡುಕೊಳ್ಳಲೇ ಇಲ್ಲ. ಹಳ್ಳಿಗರಿಗೆ ಮತ್ತೆ ಗೊಂದಲವುಂಟಾಯಿತು. ಟಿ.ಸಿ. ಬಂದಾಗ ಪಿಳ್ಳೆ ಕಡೆಯವರು ಹೇಗೆ ನಿಭಾಯಿಸುತ್ತಾರೆಂಬುದು ಅವರಿಗೆ ಅರ್ಥವಾಗಲೇ ಇಲ್ಲ.

ಟಿ.ಸಿ. ಬರುವುದನ್ನು ನೋಡಿದ ಅವರು ಮೊದಲಿನಂತೆಯೇ ಒಂದು ಟಾಯ್ಲೆಟ್‌ನಲ್ಲಿ ಅವಿತುಕೊಂಡರು. ಶಂಕರನ್ ಪಿಳ್ಳೆ ತನ್ನ ಸ್ನೇಹಿತರೊಂದಿಗೆ ಎದ್ದರು. ಎದುರಿನಲ್ಲಿದ್ದ ಮತ್ತೊಂದು ಟಾಯ್ಲೆಟ್‌ನಲ್ಲಿ ಸ್ನೇಹಿತರಿಬ್ಬರು ಪ್ರವೇಶಿಸಿದರು. ಹಳ್ಳಿಯವರು ಅಡಗಿಕೊಂಡಿದ್ದ ಟಾಯ್ಲೆಟ್ಟಿನ ಬಾಗಿಲನ್ನು ಶಂಕರನ್ ಪಿಳ್ಳೆ ತಟ್ಟಿ, ಯಾರು ಒಳಗೆ? ಟಿಕೆಟ್ ಪ್ಲೀಸ್ ಎಂದರು. ಟಿ.ಸಿ. ಬಂದಿದ್ದಾರೆಂದು ತಿಳಿದುಕೊಂಡು ಒಳಗಡೆಯಿದ್ದವರಲ್ಲಿ ಒಬ್ಬರು ಟಿಕೆಟ್ಟನ್ನು ಹೊರೆಗೆ ಚಾಚಿದರು. ಹೊರಗಿದ್ದ ಶಂಕರನ್ ಪಿಳ್ಳೆ ಆ ಟಿಕೆಟನ್ನು ತೆಗೆದುಕೊಂಡು ಎದುರಿನ ಟಾಯ್ಲೆಟ್ಟಿನೊಳಗೆ ಹೋಗಿ ಸೇರಿಕೊಂಡರು.
ಬೇರೊಬ್ಬರು ಮಾಡಿದಂತೆ ನಾವು ಮಾಡಲು ಹೊರಟರೆ ಅದರಂತೆಯೇ ಫಲ ನಮಗೆ ದೊರೆಯುತ್ತದೆಯೆ?

ಶಂಕರನ್ ಪಿಳ್ಳೆಯಂತೆ ಮಾಡಲು ಹೊರಟ ಹಳ್ಳಿಗರಂತೆ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ. ಬೇರೊಬ್ಬರಿಗೆ ಹೋಲಿಸಿಕೊಳ್ಳುತ್ತ ಅವರಂತೆಯೇ ಇರಬೇಕು ಎಂದು ಚಿಕ್ಕ ವಯಸ್ಸಿನಿಂದಲೇ ನಮಗೆ ದೊಡ್ಡವರು ಉಪದೇಶ ಮಾಡುತ್ತಾ ಬಂದಿರುವುದರಿಂದಲೇ ಇಂತಹ ವ್ಯಾಧಿ ಎಲ್ಲೆಡೆಯೂ ವ್ಯಾಪಿಸಿದೆ. ಇದು ಹೆಚ್ಚು ಹರಡುವುದಕ್ಕೆ ಮುಂಚೆ ಈ ರೋಗವನ್ನು ಬುಡಸಮೇತ ಕಿತ್ತು ಹಾಕಿ.

ಇದನ್ನೂ ಓದಿ: Prerane : ನೀವು ಆಧ್ಯಾತ್ಮಿಕ ಸಾಧನೆ ಮಾಡಬೇಕೇ? ಹಾಗಾದರೆ ಖಾಲಿ ಹಾಳೆಯಂತಾಗಿ!

ಇಷ್ಟು ಕೋಟಿ ಜನಸಂಖ್ಯೆಯಲ್ಲಿ ಒಬ್ಬ ಮನುಷ್ಯನಲ್ಲಿರುವಂತಹ ಗುಣ ಇನ್ನೊಬ್ಬನಲ್ಲಿರುವುದಿಲ್ಲ. ನಿರ್ದಿಷ್ಟವಾದ ಯಾವುದಾದರೊಂದು ಸನ್ನಿವೇಶವನ್ನು ಬೇರೊಬ್ಬರು ಅರ್ಥ ಮಾಡಿಕೊಳ್ಳುವ ರೀತಿಯೇ ಬೇರೆ, ನೀವು ಅದನ್ನು ತಿಳಿದುಕೊಂಡಿರುವುದೇ ಬೇರೆ. ಗೆಲುವನ್ನು ಕಂಡವರ ಜೀವನ, ನಮಗೆ ಒಂದು ಪ್ರೋತ್ಸಾಹದಾಯಕ ಶಕ್ತಿಯಾಗಿ ಮಾತ್ರ ಇರಲು ಸಾಧ್ಯವೇ ಹೊರತು ಅದನ್ನು ಗೆಲುವಿನ ಸೂತ್ರವನ್ನಾಗಿ ಹಿಡಿಯುವುದು ಅತ್ಯಂತ ಮೂರ್ಖತನವೆನಿಸುತ್ತದೆ.

ಜೀವನದಲ್ಲಿ ನೀವು ಜಯಶಾಲಿಯಾಗಿ ಮೊದಲನೆಯವರಾಗಿ ಬರಬೇಕಾದರೆ ನಿಮ್ಮ ಶಕ್ತಿಗಳಿಗೆ ಉತ್ತೇಜನ ನೀಡಿ ಅವುಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ.

ಲೇಖಕರು ಸದ್ಗುರುಗಳು ಯೋಗಿಗಳು, ದಾರ್ಶನಿಕರು ಹಾಗೂ ಆಧ್ಯಾತ್ಮಿಕ ನಾಯಕರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಅಂಕಣ

Raja Marga Column : ಮೊದಲು ನಿಮ್ಮ ಹೃದಯವನ್ನು ನೀವು ಪ್ರೀತಿಸಿ, ಬೇರೆಯವರ ಹೃದಯ ಆಮೇಲೆ ನೋಡ್ಕೊಳೋಣ!

Raja Marga Column: ಪ್ರತಿ ದಿನ, ಪ್ರತಿಕ್ಷಣ ಕೆಲಸ ಮಾಡುವ ಹೃದಯಕ್ಕೂ ಒಂದು ದಿನ ಬೇಕು ಅಲ್ವಾ? ಸೆಪ್ಟೆಂಬರ್ 29-ವಿಶ್ವ ಹೃದಯ ದಿನ. ಹೃದಯವನ್ನು ಉಪಯೋಗಿಸಿ, ಹೃದಯವನ್ನು ಅರಿಯಿರಿ ಎನ್ನುವುದು ಈ ವರ್ಷದ ಘೋಷಣೆ. ಜಗತ್ತಿನ ಅತೀ ದೊಡ್ಡ ಕೊಲೆಗಡುಕ ಅಂದರೆ ಅದು ಹೃದಯಾಘಾತ ಅಂತಾರೆ. ಅದನ್ನು ಮೀರುವುದು ಹೇಗೆ ಎಂದರೆ ನಿಮ್ಮ ಹೃದಯವನ್ನು ನೀವೇ ಪ್ರೀತಿಸುವುದರಿಂದ.

VISTARANEWS.COM


on

Edited by

Raja Marga world heart day
Koo
RAJAMARGA

ಸೆಪ್ಟೆಂಬರ್ 29 – ವಿಶ್ವ ಹೃದಯ ದಿನ (World Heart day). ಈದಿನ ಜಗತ್ತಿನಾದ್ಯಂತ ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು, ರ‍್ಯಾಲಿಗಳು, ಸಭೆಗಳು, ಸಮಾರಂಭಗಳು ನಡೆಯುತ್ತವೆ. ಜಗತ್ತಿನ 90 ರಾಷ್ಟ್ರಗಳು ಸೆ. 29ರಂದು ಹೃದಯ ದಿನ ಆಚರಿಸುತ್ತವೆ

ಪ್ರತೀ ವರ್ಷವೂ ಹೃದಯ ದಿನಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು (World Health Organization) ಒಂದು ಘೋಷಣೆಯನ್ನು ಕೊಡುತ್ತಿದ್ದು ಈ ವರ್ಷದ ಘೋಷಣೆಯು – USE HEART, KNOW HEART ಆಗಿದೆ. ಮಾನವನ ಜೀವನದ ಉದ್ದಕ್ಕೂ ಅವಿಶ್ರಾಂತವಾಗಿ ದುಡಿಯುತ್ತ ರಕ್ತವನ್ನು ಪಂಪ್ ಮಾಡುವ ಕೆಲಸವನ್ನು ನಿರಂತರ ಮಾಡುತ್ತಿರುವ ಪುಟ್ಟ ಹೃದಯದ ಬಗ್ಗೆ ನಾವು ತುಂಬಾ ಮಾಹಿತಿ ತಿಳಿದುಕೊಳ್ಳಬೇಕಾದ ಅಗತ್ಯ (Let us Understand our own heart first) ಇದೆ (Raja marga Column).

ಮಿಡಿಯುವ ಪುಟ್ಟ ಹೃದಯ – 21 ಮಾಹಿತಿಗಳು

1. ಪ್ರತೀ ವರ್ಷವೂ ಸೆಪ್ಟೆಂಬರ್ 29ರಂದು ಹೃದಯದ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆಯು ಆಚರಣೆ ಮಾಡುತ್ತಾ ಬಂದಿದೆ. 2000ನೇ ಇಸವಿಯಿಂದ ಇದು ಜಾರಿಯಲ್ಲಿದೆ.

Sep 29 World heart day

2. ಹೃದಯಾಘಾತವನ್ನು ‘ಜಗತ್ತಿನ ಅತೀ ದೊಡ್ಡ ಕೊಲೆಗಡುಕ’ ಎಂದು ಕರೆಯಲಾಗುತ್ತದೆ. ಏಕೆಂದರೆ ಹೃದಯದ ಆಘಾತ ಮತ್ತು ಹೃದಯದ ಕಾಯಿಲೆಯಿಂದ ಜಗತ್ತಿನಾದ್ಯಂತ ಪ್ರತೀ ವರ್ಷ ಮೃತರಾಗುವ ವ್ಯಕ್ತಿಗಳ ಸಂಖ್ಯೆ 1.7 ಕೋಟಿ ಆಗಿದೆ! ಅಂದರೆ ಮನುಷ್ಯ ಮರಣದ ಒಟ್ಟು ಪ್ರಮಾಣದ 31% ಭಾಗವು ಕೇವಲ ಹೃದಯದ ಸಮಸ್ಯೆಗಳಿಂದ ಉಂಟಾಗುತ್ತಿದೆ.

3. ಮನುಷ್ಯನ ದೇಹದ ಎಲ್ಲ ಭಾಗಗಳೂ ವಿಶ್ರಾಂತಿ ಪಡೆಯುತ್ತವೆ. ಮೆದುಳು ಕೂಡ ವಿಶ್ರಾಂತಿ ಪಡೆಯುತ್ತದೆ. ಆದರೆ ಹೃದಯವು ಒಂದರ್ಧ ಕ್ಷಣ ಕೂಡ ವಿಶ್ರಾಂತಿ ಪಡೆಯುವುದೇ ಇಲ್ಲ. ಮುಷ್ಕರವನ್ನು ಕೂಡ ಮಾಡುವುದಿಲ್ಲ. ಹೃದಯವು ಹಗಲು ರಾತ್ರಿ ಏಕ ರೀತಿಯಲ್ಲಿ ಕೆಲಸ ಮಾಡುತ್ತದೆ.

World heart day

4. ಇದುವರೆಗೆ ವಿಜ್ಞಾನಿಗಳಿಗೆ ಹೃದಯಾಘಾತಕ್ಕೆ ಸರಿಯಾದ ಕಾರಣವನ್ನು ಸಂಶೋಧನೆ ಮಾಡಲು ಸಾಧ್ಯವೇ ಆಗಲಿಲ್ಲ. ಆನುವಂಶೀಯ ಕಾರಣಗಳು ಇವೆ. ಆದರೆ ಅದಕ್ಕೂ ಪುರಾವೆ ಇಲ್ಲ.

5. ಹೃದಯದ ಭದ್ರತೆಗೆ ನಾಲ್ಕು ರಕ್ಷಣಾ ಕವಚಗಳು ಇವೆ. ಆದರೂ ಮಾನವ ಹೃದಯವು ಯಾವಾಗ ಬೇಕಾದರೂ ಸ್ತಬ್ಧ ಆಗಬಹುದು.

6. ಪುರುಷರ ಹೃದಯಕ್ಕಿಂತ ಸ್ತ್ರೀಯರ ಹೃದಯವು ಸ್ವಲ್ಪ ಕಡಿಮೆ ತೂಕ ಇರುತ್ತದೆ. ಆರೋಗ್ಯಪೂರ್ಣ ಪುರುಷರ ಹೃದಯದ ತೂಕ ಸರಾಸರಿ 280-340 ಗ್ರಾಂ ಇದ್ದರೆ ಸ್ತ್ರೀಯರ ಹೃದಯದ ತೂಕವು 230- 280 ಗ್ರಾಂ.

world heart day

7. ಪುರುಷರಲ್ಲಿ ಹೋಲಿಸಿದರೆ ಮಹಿಳೆಯರಲ್ಲಿ ಹೃದಯಾಘಾತದ ಪ್ರಮಾಣ ಕೊಂಚ ಕಡಿಮೆ ಇದೆ.
(ಮಹಿಳೆಯರಲ್ಲಿ ಹೃದಯವೇ ಇರುವುದಿಲ್ಲ ಎಂದು ಹಾಸ್ಯ ಸಾಹಿತಿ ಬೀಚಿ ಒಮ್ಮೆ ಹೇಳಿದ್ದು ತಮಾಷೆಗೆ ಆಯ್ತಾ!)

8. ಮನುಷ್ಯನ ಹೃದಯಾಘಾತಕ್ಕೆ ಯಾವುದೇ ವಯಸ್ಸಿನ ಸಮೀಕರಣ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಸಣ್ಣ ಮಕ್ಕಳಲ್ಲಿ ಕೂಡ ಹೃದಯಾಘಾತಗಳು ಹೆಚ್ಚುತ್ತಿವೆ.

9. ವಾಯು ಮಾಲಿನ್ಯದ ಕಾರಣಕ್ಕೆ ಹೆಚ್ಚು ಹೃದಯಾಘಾತಗಳು ನಡೆಯುತ್ತವೆ ಎಂದು ಸಂಶೋಧನೆಗಳು ಹೇಳಿವೆ. ಒಟ್ಟು ಹೃದಯಾಘಾತಗಳಲ್ಲಿ 25% ಆಘಾತಗಳು ವಾಯು ಮಾಲಿನ್ಯದ ಕಾರಣಕ್ಕೆ ಆಗುತ್ತಿವೆ.

world heart day sep 29

10. ಆರೋಗ್ಯವಂತ ಮನುಷ್ಯನ ದೇಹದಲ್ಲಿ ಇರುವ ರಕ್ತದ ಪ್ರಮಾಣ ಐದರಿಂದ ಐದೂವರೆ ಲೀಟರ್. ಆದರೆ ಹೃದಯವು ದಿನಕ್ಕೆ 6000-7500 ಲೀಟರ್ ರಕ್ತವನ್ನು ಪಂಪ್ ಮಾಡುತ್ತದೆ ಅಂದರೆ ನಂಬಲೇ ಬೇಕು! ಒಮ್ಮೆ ಎದೆಯ ಬಡಿತ ಉಂಟಾದಾಗ ರಕ್ತವು ನಮ್ಮ ಇಡೀ ದೇಹವನ್ನು ತಲುಪುತ್ತದೆ.

11. ಆರೋಗ್ಯಪೂರ್ಣ ವ್ಯಕ್ತಿಯ ಹೃದಯವು ನಿಮಿಷಕ್ಕೆ 60-100 ಬಾರಿ ಲಬ್ ಡಬ್ ಎಂದು ಬಡಿಯುತ್ತದೆ. ನವಜಾತ ಶಿಶುಗಳಲ್ಲಿ ಇದು ಕೊಂಚ ಜಾಸ್ತಿ.

12. ಹೃದಯಕ್ಕೆ ಕನೆಕ್ಟ್ ಆದ ರಕ್ತನಾಳಗಳು ಬ್ಲಾಕ್ ಆಗುವ ಕಾರಣ ಹೆಚ್ಚು ಹೃದಯಾಘಾತಗಳು ನಡೆಯುತ್ತವೆ. ಅದಕ್ಕೆ ಮುಖ್ಯ ಕಾರಣ ಕೊಲೆಸ್ಟರಾಲ್ ಮತ್ತು ಹೆಚ್ಚು ರಕ್ತದ ಒತ್ತಡ (ಬಿಪಿ).

walking medicine for heart

13. ಏರೋಬಿಕ್ಸ್, ಸೈಕ್ಲಿಂಗ್, ವೇಗವಾಗಿ ನಡೆಯುವುದು, ಓಡುವುದು, ಸ್ವಿಮ್ಮಿಂಗ್, ಬ್ಯಾಡ್ಮಿಂಟನ್ ಆಡುವುದು ಮತ್ತು ರೋಪ್ ಜಂಪ್ ಇವುಗಳನ್ನು ದಿನವೂ ಮಾಡುವುದರಿಂದ ಹೃದಯದ ಆಯಸ್ಸನ್ನು ಜಾಸ್ತಿ ಮಾಡಬಹುದು.

14. ಸ್ಮೋಕಿಂಗ್ ಮತ್ತು ಡ್ರಿಂಕ್ಸ್ ಮಾಡುವವರಲ್ಲಿ ಹೃದಯಾಘಾತಗಳ ಸಾಧ್ಯತೆ ಹೆಚ್ಚು. ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುವವರು ಮತ್ತು ವಿಪರೀತ ಬೊಜ್ಜು ಬೆಳೆಸಿಕೊಂಡವರು ಬೇಗ ಹೃದಯದ ಕಾಯಿಲೆಗಳಿಗೆ ಒಳಗಾಗುತ್ತಾರೆ.

15. ಹೆಚ್ಚು ಸಕ್ಕರೆ ಕಾಯಿಲೆ ಇರುವ ವ್ಯಕ್ತಿಗಳಲ್ಲಿ ಹೃದಯಾಘಾತ ಸಾಧ್ಯತೆ ಹೆಚ್ಚು.

TMT test for heart

16. ಆಹಾರದಲ್ಲಿ ಸೋಡಿಯಂ ಪ್ರಮಾಣ ಕಡಿಮೆ ಮಾಡುವುದರಿಂದ ಹೃದಯದ ಜೋಪಾಸನೆ ಮಾಡಬಹುದು. ಉಪ್ಪು ಕಡಿಮೆ ಬಳಕೆ ಮಾಡುವುದು ಅಗತ್ಯ.

17. ಅನಾರೋಗ್ಯಪೂರ್ಣ ಜೀವನ ಕ್ರಮಗಳಿಂದ (Unhealthy life style) ಹೃದಯದ ಸಮಸ್ಯೆಗಳು ಹೆಚ್ಚುತ್ತವೆ. ಜಂಕ್ ಫುಡ್ ಸೇವನೆ ಮತ್ತು ನಿದ್ದೆ ಕಡಿಮೆ ಮಾಡುವುದರಿಂದ ಹೃದಯವು ದುರ್ಬಲ ಆಗುತ್ತದೆ.

18. ನಿರಂತರ ಮೆಡಿಕಲ್ ತಪಾಸಣೆ ಮಾಡುವುದು, ಇಸಿಜಿ (ECG) ಮಾಡುವುದು ಮತ್ತು ಬಾಡಿ ಮಾಸ್ ಇಂಡೆಕ್ಸ್ ಅಳತೆ ಮಾಡುವುದರಿಂದ ಹೃದಯದ ಆರೋಗ್ಯವನ್ನು ಪರೀಕ್ಷೆ ಮಾಡಬಹುದು ಮತ್ತು ಹೃದಯವನ್ನು ಕಾಪಾಡಬಹುದು.

heart foods

19. ಹೃದಯಾಘಾತಗಳು ಉಂಟಾಗುವ ಸಾಕಷ್ಟು ಮೊದಲು ಅದರ ಚಿಹ್ನೆಗಳು (Symptoms) ನಮ್ಮ ಗಮನಕ್ಕೆ ಬರುತ್ತವೆ. ಆಗ ತಕ್ಷಣ ಎಚ್ಚರವಾಗಿ ವೈದ್ಯಕೀಯ ನೆರವನ್ನು ಪಡೆದರೆ ಹೃದಯಾಘಾತ ತಡೆಗಟ್ಟಬಹುದು. ಆ ಅವಧಿಯನ್ನು ಗೋಲ್ಡನ್ ಪೀರಿಯಡ್ ಎಂದು ಕರೆಯುತ್ತಾರೆ.

20. ಹೃದಯಕ್ಕೆ ಕನೆಕ್ಟ್ ಆದ ರಕ್ತನಾಳಗಳು ಬ್ಲಾಕ್ ಆಗದ ಹಾಗೆ ನೋಡಿಕೊಳ್ಳುವುದು ತುಂಬಾ ಮುಖ್ಯ. ಅದಕ್ಕೆ ನಿರಂತರ ವೈದ್ಯಕೀಯ ತಪಾಸಣೆ ಅಗತ್ಯ.

heart day special

21. 1964ರಲ್ಲಿ ಜೇಮ್ಸ್ ಹಾರ್ಡಿ ಎಂಬ ವಿಜ್ಞಾನಿಯು ಮನುಷ್ಯನ ಹೃದಯವನ್ನು ಬದಲಾಯಿಸಿ ಅದರ ಸ್ಥಳದಲ್ಲಿ ಚಿಂಪಾಂಜಿ ಹೃದಯವನ್ನು ಕಸಿ ಮಾಡಿದ್ದ. ಆದರೆ ಆ ರೋಗಿ ಎರಡು ಘಂಟೆಗಳ ಒಳಗೆ ಮೃತ ಪಟ್ಟು ಈ ಪ್ರಯೋಗ ವಿಫಲ ಆಯಿತು.

22. 1967ರಲ್ಲಿ ದಕ್ಷಿಣ ಆಫ್ರಿಕಾದ ಒಂದು ಆಸ್ಪತ್ರೆಯಲ್ಲಿ ಒಬ್ಬ ಸರ್ಜನ್ ಕ್ರಿಶ್ಚಿಯನ್ ಬನಾರ್ಡ್ ರೋಗಿಯ ಅನಾರೋಗ್ಯ ಪೂರ್ಣ ಹೃದಯದ ಜಾಗದಲ್ಲಿ ಇನ್ನೊಂದು ಆರೋಗ್ಯಪೂರ್ಣ ಹೃದಯವನ್ನು ಕಸಿ ಮಾಡಿ ಯಶಸ್ವೀ ಅದನು. ಆ ಶಸ್ತ್ರಚಿಕಿತ್ಸೆಯನ್ನು ಇಂದು ಜಗತ್ತಿನಾದ್ಯಂತ ಸಾವಿರಾರು ಮಂದಿ ಮಾಡಿಕೊಳ್ಳುತ್ತಿದ್ದಾರೆ.

Sleep like a child
ಮಗುವಿನಂತೆ ಮಲಗಿ ಹೃದಯ ಜೋಪಾನ

ಇದನ್ನೂ ಓದಿ: Raja Marga Column : ಅಪ್ಪಾ ಪಾ!! ಅಮಿತಾಭ್ ಬಚ್ಚನ್ ಬದ್ಧತೆ, ಪ್ರಯೋಗಶೀಲತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ?

ಭರತ ವಾಕ್ಯ

peaceful family for hearts health
ನೆಮ್ಮದಿಯೇ ಹೃದಯದ ನಿಜವಾದ ಬಂಡವಾಳ

ಹೃದಯವು ಭಾವನೆಗಳ ಉಗಮ ಸ್ಥಾನ ಎಂದು ನಮ್ಮ ಹಿರಿಯರು ನಂಬಿದ್ದರು. ಪ್ರೀತಿಗಾಗಿ ಮಿಡಿಯುವುದು ಅದೇ ಹೃದಯ ಎಂದರು. ಇವೆಲ್ಲವೂ ವೈಜ್ಞಾನಿಕವಾಗಿ ಇನ್ನೂ ಸಾಬೀತು ಆಗಿಲ್ಲ. ಹೃದಯವು ಅತ್ಯಂತ ಸಕ್ಷಮವಾಗಿ ಮತ್ತು ವೇಗವಾಗಿ ಕೆಲಸ ಮಾಡುವ ಮಾಂಸ, ರಕ್ತ ಮತ್ತು ಸ್ನಾಯುಗಳ ಒಂದು ಪ್ರಮುಖ ದೇಹದ ಭಾಗ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ ಆ ಹೃದಯವನ್ನು ಪ್ರೀತಿ ಮಾಡಿ ಉಳಿಸಿಕೊಳ್ಳುವ ಹೊಣೆ ನಮ್ಮೆಲ್ಲರದು. ಲವ್ ಯುವರ್ ಹಾರ್ಟ್ ಅಂಡ್ ಲಿವ್ ಲಾಂಗ್.

Continue Reading

ಅಂಕಣ

ಸೈಬರ್‌ ಸೇಫ್ಟಿ ಅಂಕಣ: ಅಳಿವಿನ ಅಂಚಿನಲ್ಲಿ ಝಣ ಝಣ ಕಾಂಚಾಣ!

ತಂತ್ರಜ್ಞಾನದ ಬೆಳವಣಿಗೆ ಈಗ ನಾವು ವ್ಯವಹರಿಸುವ ಬಗೆಯನ್ನೇ ಬದಲಿಸುತ್ತಿದೆ. ಹಣದ ಬದಲಿಗೆ ಈಗ ಯುಪಿಐ (UPI payment). ಮುಂದೆ ಆ ಜಾಗಕ್ಕೆ ಕ್ರಿಪ್ಟೋಕರೆನ್ಸಿ (Cryptocurrency) ಬರಲೂಬಹುದು. ಹಣ ಯಾವುದೇ ರೂಪದಲ್ಲಿದ್ದರೂ ಅದನ್ನು ದೋಚಲು ಹೊಂಚುಹಾಕುವ ಖದೀಮರಿರುವಾಗ ನಾವು ಸದಾ ಜಾಣರಾಗಿ, ಜಾಗರೂಕರಾಗಿರಬೇಕು.

VISTARANEWS.COM


on

Edited by

cryptocurrency fraud
Koo

ಮುಂದಿನ ದಿನಗಳಲ್ಲಿ ಕ್ರಿಪ್ಟೋಕರೆನ್ಸಿನಾ ಅಥವಾ CBDCನಾ?

cyber safty logo

ಸೈಬರ್ ಸೇಫ್ಟಿ ಅಂಕಣದಲ್ಲಿ ಮನಿ ಮಾತು ಯಾಕೆ ಅಂತ ಅಚ್ಚರಿಯೇ? 1992ರಲ್ಲಿ ಬಂದ ಶಿವರಾಜ್ ಕುಮಾರ್ ನಟಿಸಿದ ಪುರುಷೋತ್ತಮ ಚಿತ್ರದ ಕಾಂಚಾಣ ಕಾಂಚಾಣ ಹಾಡು ಕೇಳಿದ್ದೀರಾ? ಹಂಸಲೇಖರ ಸಾಹಿತ್ಯ ಜಗದಲ್ಲಿನ ಹಣದ ಪ್ರಾಮುಖ್ಯತೆಯನ್ನು ಬಹಳ ಸೊಗಸಾಗಿ ತಿಳಿಸುತ್ತದೆ. “ಜನವಿರುವುದು ಜಗದೊಳಗೆ, ಜಗವಿರುವುದು ಹಣದೊಳಗೆ, ಜನ ಜಗದೊಳಗೆ, ಜಗ ಹಣದೊಳಗೆ, ಸುಖವಿರುವುದು ಇದರೊಳಗೆ” ಅದರಲ್ಲಿ ಬರುವ ಝಣ್ ಝಣ್ ಹಣ, ಟಂಣ್ ಟಂಣ್ ಹಣ ಇನ್ನು ಕೆಲವೇ ವರ್ಷಗಳಲ್ಲಿ ಸದ್ದು ಮಾಡುವುದನ್ನು ನಿಲ್ಲಿಸಲಿದೆ.

ಸೈಬರ್ ಜಗತ್ತಿನಲ್ಲೂ ದುಡ್ಡೇ ದೊಡ್ಡಪ್ಪ. ಯಾವುದೇ ಹ್ಯಾಕಿಂಗ್ ಇರಲಿ, ರಾನ್‌ಸಮ್‌ವೇರ್ ಅ್ಯಟಾಕ್‌ ಆಗಲಿ, ಡಾಟಾ ಕಳ್ಳತನವಾಗಿರಲಿ, ಸೋಷಿಯಲ್ ಇಂಜಿನಿಯರಿಂಗ್ ತಂತ್ರ ಬಳಸಿದ ದಾಳಿ ಇರಬಹುದು, ಎಲ್ಲದರ ಮುಖ್ಯ ಉದ್ದೇಶವೇ ಹಣ. ಅದು ಗರಿಗರಿ ನೋಟಿರಲಿ ಅಥವಾ ಕ್ರಿಪ್ಟೋಕರೆನ್ಸಿ ಇರಲಿ. ಅಂತರ್ಜಾಲದ ಅಂತರಂಗದ ಡೀಪ್ ಡಾರ್ಕ್ ವೆಬ್‌ನಲ್ಲಿ ಎಲ್ಲವೂ ಮಾನ್ಯ.

ತಂತ್ರಜ್ಞಾನದ ಬೆಳವಣಿಗೆ ಈಗ ನಾವು ವ್ಯವಹರಿಸುವ ಬಗೆಯನ್ನೇ ಬದಲಿಸುತ್ತಿದೆ. ಕಡಲೆಕಾಯಿ ಮಾರುವವರಿಂದ ಕಾಂಟಿನೆಂಟಲ್ ಊಟ ಬಡಿಸುವ ಹೋಟೆಲ್‌ವರೆಗೆ ನಗದಿಗಿಂತ ‘ಯುಪಿಐ’ ಪಾವತಿಯೇ ಸ್ವಾಗತಾರ್ಹ. ಪ್ರಪಂಚದಾದ್ಯಂತ ಚಲಾವಣೆಯಲ್ಲಿರುವ ಭೌತಿಕ (physical) ಹಣ ಕೇವಲ ಶೇಕಡ 8 ಮಾತ್ರ (8%). ಅಂದರೆ ಡಿಜಿಟಲ್ ರೂಪದಲ್ಲಿ ಚಲಾವಣೆ ಆಗ್ತಿರುವ ಹಣ ಶೇಕಡ 92. ಭಾರತದಲ್ಲೂ ಚಲಾವಣೆಯಲ್ಲಿರುವ ನಗದು ಹಣದ ಪ್ರಮಾಣ 2023 ಮಾರ್ಚ್ ಅಂತ್ಯಕ್ಕೆ ಶೇಕಡ 10.8ಕ್ಕೆ ತಲುಪಿದೆ. 2017ರಲ್ಲಿ ಇದರ ಪ್ರಮಾಣ ಶೇಕಡ 50% ಇತ್ತು.

ಅದರ ಜನಪ್ರಿಯತೆ ಮತ್ತು ಬಳಕೆಯ ಹೊರತಾಗಿಯೂ, ಹಣವು ಸಾಮಾಜಿಕವಾಗಿ ಸಾಕಷ್ಟು ಸಮಸ್ಯೆಗಳಿಗೂ ಕಾರಣವಾಗಿದೆ. ಹಣದ ಪರಿಕಲ್ಪನೆಯು ಅಸ್ತಿತ್ವಕ್ಕೆ ಬಂದಾಗಿನಿಂದ, ಇಬ್ಬರು (ಅಥವಾ ಹೆಚ್ಚು) ಅಪರಿಚಿತರು ಪರಿಚಯ ಮಾಡಿಕೊಳ್ಳದೆ ಅಥವಾ ಕೌಂಟರ್-ಪಾರ್ಟಿ ಅಪಾಯಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ವಹಿವಾಟು ನಡೆಸಲು, ವಿನಿಮಯ ಮಾಡಿಕೊಳ್ಳಲು ಸಹಕಾರಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ನೀವು ಕ್ರಿಪ್ಟೋಕರೆನ್ಸಿ, ಬಿಟ್‌ ಕಾಯಿನ್ ಅಂತ ಕೇಳಿರಬಹುದು. ಕ್ರಿಪ್ಟೋಕರೆನ್ಸಿ ಬಹುಶಃ ಹಣಕಾಸು ಮತ್ತು ತಂತ್ರಜ್ಞಾನದ ಡೊಮೇನ್‌ನಲ್ಲಿ ಅತಿದೊಡ್ಡ ಹೊಸತನ ತಂದ ಪರಿಕಲ್ಪನೆಯಾಗಿದೆ. ತುಲನಾತ್ಮಕವಾಗಿ ಬಹಳ ಕಡಿಮೆ ಅವಧಿಯಲ್ಲಿ, ಕ್ರಿಪ್ಟೋಕರೆನ್ಸಿಗಳು ವಿಶ್ವಾದ್ಯಂತ ಹಣಕಾಸು ಮೂಲಸೌಕರ್ಯಗಳನ್ನು ಪರಿವರ್ತಿಸುವ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿವೆ.

2008ರಲ್ಲಿ ಮೊದಲ ಬಾರಿಗೆ ಬಿಟ್‌ಕಾಯಿನ್ ಎನ್ನುವ ಕ್ರಿಪ್ಟೋಕರೆನ್ಸಿಯನ್ನು ಪರಿಚಯಿಸಿದಾಗಿನಿಂದ, ಕ್ರಿಪ್ಟೋಕರೆನ್ಸಿಗಳು ಬಹಳಷ್ಟು ಅಭಿವೃದ್ಧಿಯನ್ನು ಹೊಂದಿದೆ. ಆರಂಭದಲ್ಲಿ, ಕ್ರಿಪ್ಟೋಕರೆನ್ಸಿಗಳು ಜನಪ್ರಿಯವಾಗುವ ಮೊದಲು ಎಲ್ಲಾ ವಲಯಗಳಿಂದ ಅನಿಶ್ಚಿತತೆ ಮತ್ತು ಸಂದೇಹವನ್ನು ಎದುರಿಸಿದವು. ಈಗ, ಭ್ರಮನಿರಸನದ ಹಂತವನ್ನು ದಾಟಿ ಉಪಯುಕ್ತತೆಯ ಉತ್ತಮ ಪುರಾವೆಯೊಂದಿಗೆ ಪ್ರಬುದ್ಧವಾಗುತ್ತಿವೆ.

ಕ್ರಿಪ್ಟೋಕರೆನ್ಸಿ ಮೂಲತಃ ಡಿಜಿಟಲ್ ಕರೆನ್ಸಿಯಾಗಿದ್ದು ಅದನ್ನು ನೀವು ಆನ್‌ಲೈನ್‌ನಲ್ಲಿ ಮೌಲ್ಯವನ್ನು ವಿನಿಮಯ ಮಾಡಿಕೊಳ್ಳಲು ಬಳಸಬಹುದು. ಕ್ರಿಪ್ಟೋಕರೆನ್ಸಿಯ ಪ್ರಾಥಮಿಕ ಅಡಿಪಾಯ ಬ್ಲಾಕ್ಚೈನ್ ತಂತ್ರಜ್ಞಾನವಾಗಿದೆ. ಇದು ಕ್ರಿಪ್ಟೋಕರೆನ್ಸಿಗಳು ಇಂದು ಸಾಕಷ್ಟು ಜನಪ್ರಿಯವಾಗಿರುವ ವಿಕೇಂದ್ರೀಕರಣವನ್ನು ಒದಗಿಸುತ್ತದೆ. ವಿಕೇಂದ್ರೀಕರಣವು ಕ್ರಿಪ್ಟೋಕರೆನ್ಸಿಗಳನ್ನು ಕೇಂದ್ರೀಯ ಪ್ರಾಧಿಕಾರದ ನಿಯಂತ್ರಣದಿಂದ ಮುಕ್ತಗೊಳಿಸುತ್ತದೆ. ಪರಿಣಾಮವಾಗಿ, ಕ್ರಿಪ್ಟೋಕರೆನ್ಸಿ ಹೊಂದಿರುವವರು ತಮ್ಮ ಹಣದ ಮೇಲೆ ನಿಯಂತ್ರಣವನ್ನು ಸುಧಾರಿಸಿದ್ದಾರೆ ಮತ್ತು ಅದನ್ನು ಅವರು ಬಯಸಿದಂತೆ ಬಳಸುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ.

ಮೊಟ್ಟಮೊದಲ ಕ್ರಿಪ್ಟೋಕರೆನ್ಸಿ, ಬಿಟ್‌ಕಾಯಿನ್, ಬ್ಲಾಕ್‌ಚೈನ್ ತಂತ್ರಜ್ಞಾನದ ಆಧಾರದ ಮೇಲೆ ಎಲೆಕ್ಟ್ರಾನಿಕ್ ಪೀರ್-ಟು-ಪೀರ್ ನಗದು ವ್ಯವಸ್ಥೆಯಾಗಿ ಹೊರಹೊಮ್ಮಿತು. ಬಿಟ್‌ಕಾಯಿನ್‌ನ ಅನಾಮಧೇಯ ಸಂಸ್ಥಾಪಕ, ಸತೋಶಿ ನಕಾಮೊಟೊ ಅವರು 2008ರಲ್ಲಿ ಬಿಟ್‌ಕಾಯಿನ್‌ನಲ್ಲಿ ಶ್ವೇತಪತ್ರವನ್ನು ಬಿಡುಗಡೆ ಮಾಡಿದರು ಮತ್ತು ನಂತರ 2009ರಲ್ಲಿ ಕ್ರಿಪ್ಟೋಕರೆನ್ಸಿಯನ್ನು ಪ್ರಾರಂಭಿಸಿದರು.

crypto currency

ಕ್ರಿಪ್ಟೋಕರೆನ್ಸಿಗಳ ಮೌಲ್ಯವು ಹೆಚ್ಚಾಗಿ ಬ್ಲಾಕ್‌ಚೈನ್ ಸಂಬಂಧವನ್ನು ಅವಲಂಬಿಸಿರುತ್ತದೆ. ಬ್ಲಾಕ್‌ಚೈನ್ ಕ್ರಿಪ್ಟೋಕರೆನ್ಸಿಗಳಲ್ಲಿ ವಿಶ್ವಾಸಾರ್ಹವಲ್ಲದ (trustless), ಸುರಕ್ಷಿತ, ವಿಕೇಂದ್ರೀಕೃತ ಮತ್ತು ಕ್ರಿಪ್ಟೋಗ್ರಾಫಿಕ್ ಗುಣಲಕ್ಷಣಗಳನ್ನು ನೀಡುತ್ತದೆ. ಇದು ಎಲ್ಲಾ ವಹಿವಾಟುಗಳ ದಾಖಲೆಯೊಂದಿಗೆ ಬದಲಾಗದ ವಿತರಣಾ ಲೆಡ್ಜರ್ ಅನ್ನು ನೀಡುತ್ತದೆ, ಇದರಿಂದಾಗಿ ಎಲ್ಲಾ ವಹಿವಾಟುಗಳ ಪಾರದರ್ಶಕತೆ ಮತ್ತು ಸಮಗ್ರತೆಯನ್ನು ಖಾತ್ರಿಪಡಿಸುತ್ತದೆ.

2022ರಲ್ಲಿ, ಕ್ರಿಪ್ಟೋಕರೆನ್ಸಿಗಳ ಸಂಖ್ಯೆಯು 9,000 ಕ್ಕಿಂತ ಹೆಚ್ಚಿದೆ, ಪ್ರತಿದಿನ ಅನೇಕ ಹೊಸ ಕ್ರಿಪ್ಟೋಕರೆನ್ಸಿಗಳು ಮತ್ತು ಸ್ವತ್ತುಗಳು ಹೊರಹೊಮ್ಮುತ್ತಿವೆ. ಮಾರ್ಚ್ 2023ರ ಹೊತ್ತಿಗೆ, 22,904 ಕ್ರಿಪ್ಟೋಕರೆನ್ಸಿಗಳು ಅಸ್ತಿತ್ವದಲ್ಲಿವೆ. ಆದಾಗ್ಯೂ, ಎಲ್ಲಾ ಕ್ರಿಪ್ಟೋಕರೆನ್ಸಿಗಳು ಸಕ್ರಿಯ ಅಥವಾ ಮೌಲ್ಯಯುತವಾಗಿಲ್ಲ. ಅನೇಕ “ಡೆಡ್” ಕ್ರಿಪ್ಟೋಗಳನ್ನು ಗಣನೆಗೆ ತೆಗೆದುಕೊಳ್ಳದಿದ್ದರೂ ಸುಮಾರು 8,832 ಸಕ್ರಿಯ ಕ್ರಿಪ್ಟೋಕರೆನ್ಸಿಗಳು ಉಳಿಯುತ್ತವೆ. ಪ್ರಪಂಚದಾದ್ಯಂತ 300 ಮಿಲಿಯನ್ (30 ಕೋಟಿ) ಕ್ರಿಪ್ಟೋಕರೆನ್ಸಿ ಬಳಕೆದಾರರಿದ್ದಾರೆ.

ಕ್ರಿಪ್ಟೋಕರೆನ್ಸಿಯ ಬೆಲೆಯು ಆಗಾಗ್ಗೆ ಬದಲಾಗುತ್ತದೆ ಮತ್ತು ಹೆಚ್ಚು ಅನಿಶ್ಚಿತವಾಗಿರುತ್ತದೆ (volatile). ಬಿಟ್‌ಕಾಯಿನ್ (BTC), ಈಥೀರಿಯಮ್ ನೆಟ್‌ವರ್ಕ್‌ ಆಧಾರಿತ ಈಥರ್ (ETC), ಡಾಡ್ಚ್‌ಕಾಯಿನ್ (DODGE), ಲೈಟ್‌ಕಾಯಿನ್(LTC) ಮತ್ತು ರಿಪ್ಪಲ್ (XRP) ಅತ್ಯಂತ ಪ್ರಸಿದ್ಧ ಕ್ರಿಪ್ಟೋಕರನ್ಸಿಗಳಾಗಿವೆ. 20 ಸೆಪ್ಟೆಂಬರ್ 2023ರಂದು ಒಂದು ಬಿಟ್‌ಕಾಯಿನ್‌ ಬೆಲೆ 22,48,501 ರೂಪಾಯಿ ಮತ್ತು ಒಂದು ಈಥರ್ ಬೆಲೆ 1,35,085 ರೂಪಾಯಿ ಇದೆ. ಮುಂದಿನ ವಾರಗಳಲ್ಲಿ ಕ್ರಿಪ್ಟೋಕರನ್ಸಿಯನ್ನು ಡಿ-ಕ್ರಿಪ್ಟ್ ಮಾಡಿ ಸೈಬರ್ ಜಗತ್ತಿನಲ್ಲಿ ಇದರ ಬಳಕೆಯ ಬಗ್ಗೆಯೂ ಬೆಳಕು ಚೆಲ್ಲುವ ಪ್ರಯತ್ನ ಮಾಡ್ತೇನೆ.

crypto currency

ಕ್ರಿಪ್ಟೋಕರೆನ್ಸಿಗಳಿಂದ ಹೆಚ್ಚುತ್ತಿರುವ ಬೆದರಿಕೆ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಅನ್ವೇಷಿಸಲು ಬಹುಶಃ ಕೇಂದ್ರೀಯ ಬ್ಯಾಂಕ್‌ಗಳನ್ನು ಪ್ರಚೋದಿಸಿದೆ. ವಿಶ್ವಾದ್ಯಂತ ಬಹುತೇಕ ದೇಶಗಳು ತಮ್ಮದೇ ಆದ ಡಿಜಿಟಲ್ ಕರೆನ್ಸಿಯನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಬ್ಯಾಂಕ್ ಆಫ್ ಇಂಟರ್‌ನ್ಯಾಷನಲ್ ಸೆಟಲ್‌ಮೆಂಟ್ಸ್ (BIS) 2022 ರ ಸಮೀಕ್ಷೆಯ ಪ್ರಕಾರ, 93 ಪ್ರತಿಶತ ಕೇಂದ್ರೀಯ ಬ್ಯಾಂಕ್‌ಗಳು CBDC ಗಳನ್ನು ಅನ್ವೇಷಿಸುತ್ತಿವೆ ಮತ್ತು 58 ಪ್ರತಿಶತದಷ್ಟು ಅವರು ಸಣ್ಣ ಅಥವಾ ಮಧ್ಯಮ ಅವಧಿಯಲ್ಲಿ ಚಿಲ್ಲರೆ (retail) CBDC ಯನ್ನು ನೀಡುವ ಸಾಧ್ಯತೆಯಿದೆ. ವಾಸ್ತವವಾಗಿ, ಭಾರತದಲ್ಲಿ CBDC ಇ-ರೂಪಾಯಿ ಅಥವಾ ಇ-ರುಪಿ ಎಂದು ಕರೆಯಲ್ಪಡುತ್ತದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ರ ಕೇಂದ್ರ ಬಜೆಟ್‌ನಲ್ಲಿ CBDC ಯನ್ನು ಪರಿಚಯಿಸುವುದಾಗಿ ಘೋಷಿಸಿದರು. ಈ ಉದ್ದೇಶಕ್ಕಾಗಿ, ಹಣಕಾಸು ಮಸೂದೆ 2022ರ ಅಂಗೀಕಾರದೊಂದಿಗೆ RBI ಕಾಯಿದೆ 1934 ರ ಸಂಬಂಧಿತ ವಿಭಾಗಗಳಿಗೆ ಅಗತ್ಯ ತಿದ್ದುಪಡಿಗಳನ್ನು ಮಾಡಲಾಗಿದೆ.

2022ರಲ್ಲಿ, RBI ಡಿಜಿಟಲ್ ರೂಪಾಯಿ, ಭಾರತದ ಸ್ವಂತ CBDC ಮತ್ತು ಸಾರ್ವಭೌಮ ಕರೆನ್ಸಿಯ ಎಲೆಕ್ಟ್ರಾನಿಕ್ ರೂಪವನ್ನು ಅನಾವರಣಗೊಳಿಸಿತು. ಆ ಸಮಯದಲ್ಲಿ, ಕೇಂದ್ರೀಯ ಬ್ಯಾಂಕ್ ಇ-ರುಪಿಯನ್ನು ಎರಡು ಆವೃತ್ತಿಗಳಲ್ಲಿ ನೀಡಲು ಪ್ರಸ್ತಾಪಿಸಿತು- CBDC-ಸಗಟು (CBDC-W) ಮತ್ತು CBDC-ರಿಟೇಲ್ (CBDC-R). CBDC-W ಆಯ್ದ ಹಣಕಾಸು ಸಂಸ್ಥೆಗಳಿಗೆ ನಿರ್ಬಂಧಿತ ಪ್ರವೇಶಕ್ಕಾಗಿ, CBDC-R ಅನ್ನು ಖಾಸಗಿ ವಲಯ, ಹಣಕಾಸು-ಅಲ್ಲದ ಗ್ರಾಹಕರು ಮತ್ತು ವಹಿವಾಟುಗಳು, ವ್ಯಾಪಾರಸ್ಥರು ಸೇರಿದಂತೆ ಎಲ್ಲರೂ ಬಳಸಬಹುದು.

cyber safety

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು

ಸಗಟು CBDCಯ ಪ್ರಾಯೋಗಿಕ ಯೋಜನೆಗಾಗಿ ರಿಸರ್ವ್ ಬ್ಯಾಂಕ್ ಒಂಬತ್ತು ಬ್ಯಾಂಕುಗಳನ್ನು ಆರಿಸಿಕೊಂಡಿದೆ. ಈ ಬ್ಯಾಂಕ್‌ಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, HDFC ಬ್ಯಾಂಕ್, ICICI ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, YES ಬ್ಯಾಂಕ್, IDFC ಫಸ್ಟ್ ಬ್ಯಾಂಕ್ ಮತ್ತು HSBC ಸೇರಿವೆ. ರಿಟೇಲ್ ಇ-ರುಪಿಯ ಪ್ರಯೋಗ ನಾಲ್ಕು ಬ್ಯಾಂಕ್ ಮತ್ತು ಕೆಲವು ನಗರಗಳಲ್ಲಿ ಪ್ರಾರಂಭವಾಗಿ ಇತ್ತೀಚಿನ ವರದಿಯ ಪ್ರಕಾರ ಹದಿಮೂರು ಬ್ಯಾಂಕ್‌ಗಳ ಬಳಕೆದಾರರು ಈ ಬ್ಯಾಂಕ್‌ಗಳು ನೀಡುವ ಡಿಜಿಟಲ್ ವ್ಯಾಲೆಟ್ ಅನ್ನು ಬಳಸಿಕೊಂಡು ಡಿಜಿಟಲ್ ರೂಪಾಯಿಯೊಂದಿಗೆ ವಹಿವಾಟು ನಡೆಸಬಹುದಾಗಿದೆ. ಚಿಲ್ಲರೆ ಇ-ರೂಪಾಯಿಯನ್ನು 50 ಪೈಸೆ, 1, 2, 5, 10, 20, 50, 100, 200, 500 ಮತ್ತು 2000 ಮುಖಬೆಲೆಗಳಲ್ಲಿ ಲಭ್ಯವಿರುತ್ತದೆ. ಆದರೆ ಸಗಟು ಇ-ರೂಪಾಯಿಯು ಕೇಂದ್ರದ ಪ್ರಕಾರ ಯಾವುದೇ ಮುಖಬೆಲೆಯನ್ನು ಹೊಂದಿರುವುದಿಲ್ಲ.

ತಂತ್ರಜ್ಞಾನದ ಬಳಕೆ ನಮ್ಮ ಜೀವನವನ್ನು, ವ್ಯಾಪಾರವಹಿವಾಟುಗಳನ್ನು ಸುಗಮಗೊಳಿಸುವುದರೊಂದಿಗೆ ಹೊಸ ಬಗೆಯ ಅಪಾಯಗಳಿಗೂ ದಾರಿ ಮಾಡುತ್ತವೆ. ಹಣ ಯಾವುದೇ ರೂಪದಲ್ಲಿದ್ದರೂ ಅದನ್ನು ದೋಚಲು ಹೊಂಚುಹಾಕುವ ಖದೀಮರಿರುವಾಗ ನಾವು ಸದಾ ಜಾಣರಾಗಿ, ಜಾಗರೂಕರಾಗಿರಬೇಕು.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಅನುಕೂಲಗಳು ಹೆಚ್ಚಾದಂತೆ ಆತಂಕಕ್ಕೆ ನೂರು ದಾರಿಗಳು

Continue Reading

ಅಂಕಣ

Raja Marga Column : ಅಪ್ಪಾ ಪಾ!! ಅಮಿತಾಭ್ ಬಚ್ಚನ್ ಬದ್ಧತೆ, ಪ್ರಯೋಗಶೀಲತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ?

Raja Marga Column : ತಾನು ಎಷ್ಟು ದೊಡ್ಡ ನಟನಾಗಿ ಬೆಳೆದಿದ್ದರೂ ಗಾತ್ರದಲ್ಲೂ ಸಣ್ಣ ಪಾತ್ರವನ್ನು ಮಾಡಬಲ್ಲೆ ಎಂದು ಎಂದು ಅಮಿತಾಭ್‌ ಬಚ್ಚನ್‌ ನಿರೂಪಿಸಿದ ಸಿನಿಮಾ ಪಾ. ಇದು ಕೇವಲ ಸಿನಿಮಾ ಅಲ್ಲ, ಅಮಿತಾಭ್‌ ಎಂಬ ದೈತ್ಯ ನಟನ ಶ್ರದ್ಧೆ ಮತ್ತು ಪ್ರಯೋಗಶೀಲತೆಯ ದೈತ್ಯ ಉದಾಹರಣೆ.

VISTARANEWS.COM


on

Edited by

Amitabh Bachchan in Paa Movie
Koo
RAJAMARGA

ಭಾರತೀಯ ಸಿನಿಮಾರಂಗದ (Indian cinema) ಇತಿಹಾಸದಲ್ಲಿಯೇ ಅತ್ಯಂತ ಅಪರೂಪದ ಹಿಂದಿ ಸಿನಿಮಾ ಪಾ (Movie Paa)! ಅಮಿತಾಭ್‌ ಬಚ್ಚನ್ (Amitabh Bachchan) ಎಂಬ ಮಹಾನಟನ ಪ್ರಯೋಗಶೀಲತೆ (Trying New one), ಬದ್ಧತೆ (Committment of Amitabh) ಮತ್ತು ಸೃಜನಶೀಲ ಅಭಿನಯಕ್ಕೆ (Creative acting) ಸಾಕ್ಷಿ ಈ ಪಾ ಸಿನಿಮಾ! ಅದು ರೂಪುಗೊಂಡ ಕತೆಯೇ ಆ ಸಿನಿಮಾದ ಕತೆಗಿಂತ ಹೆಚ್ಚು ರೋಚಕವಾಗಿದೆ!

ಪಾ ಸಿನಿಮಾ ರೂಪುಗೊಂಡ ಕತೆಯನ್ನು ಆ ಸಿನಿಮಾದ ನಿರ್ದೇಶಕ ಬಾಲ್ಕಿ ಆರ್. (Balki R) ಅವರ ಮಾತುಗಳಲ್ಲಿ ಕೇಳುತ್ತಾ ಮುಂದೆ ಹೋಗೋಣ…

ನಾನು 1996ರಲ್ಲಿ ಬಿಡುಗಡೆಯಾದ ಹಾಲಿವುಡ್ ರೋಚಕ ಸಿನಿಮಾ ‘ಜಾಕ್’ (Hollywood film Jack) ನೋಡಿ ಮೆಚ್ಚಿದ್ದೆ .ಆ ಸಿನಿಮಾವು ನನ್ನ ಮಸ್ತಿಷ್ಕದಲ್ಲಿ ಗಟ್ಟಿಯಾಗಿ ಕೂತು ಬಿಟ್ಟಿತ್ತು. ಅದನ್ನು ಹಿಂದಿ ಭಾಷೆಯಲ್ಲಿ ಮರುನಿರ್ಮಾಣ ಮಾಡಬೇಕು ಎಂಬ ತುಡಿತ ಹೆಚ್ಚಾಯಿತು. ಅದಕ್ಕಾಗಿ ಎರಡು ವರ್ಷಗಳ ಕಾಲ ಸಮಯ ತೆಗೆದುಕೊಂಡು ಕತೆ ಮತ್ತು ಚಿತ್ರಕತೆ ಬರೆದು ಮುಗಿಸಿದ್ದೆ.

Paa Movie

ಅದರ ಕತೆಯನ್ನು ಚುಟುಕಾಗಿ ನಿಮಗೆ ನಾನು ಹೇಳಬೇಕು. ಅದರಲ್ಲಿ ಔರೋ ಎಂಬ ಬುದ್ಧಿವಂತ ಹುಡುಗನ ಪಾತ್ರ ಬರುತ್ತದೆ. ಆತನಿಗೆ ಹದಿಮೂರು ವರ್ಷದ ಪ್ರಾಯದಲ್ಲಿ ‘ಪ್ರೋಜೇರಿಯಾ’ (genetic disorder called progeria) ಎಂಬ ವಿಚಿತ್ರವಾದ ಕಾಯಿಲೆಯು ಬಂದಿರುತ್ತದೆ. ಅದು ಬಾಲ್ಯದಲ್ಲಿಯೇ ವೃದ್ಧಾಪ್ಯ ಅಮರುವ (Aging in childhood) ವಿಚಿತ್ರವಾದ ಕಾಯಿಲೆ! ಹತ್ತು ಲಕ್ಷ ಮಂದಿಯಲ್ಲಿ ಒಬ್ಬರಿಗೆ ಮಾತ್ರ ಬರುವ ಕಾಯಿಲೆ ಅದು! ಒಂದು ಕಡೆ ಮುದಿತನದ ಸಮಸ್ಯೆ ಆದರೆ ಮತ್ತೊಂದೆಡೆ ದೊಡ್ಡ ತಲೆ, ಸಣ್ಣ ಕೈ ಕಾಲು, ಉಬ್ಬಿದ ದವಡೆ, ಕೀರಲು ಸ್ವರ…..ಹೀಗೆಲ್ಲ ವಿಚಿತ್ರವಾದ ದೈಹಿಕ ಸಮಸ್ಯೆಗಳು!

Amitabh and Vidya Balan in Paa

ಬಾಲ್ಯದಿಂದ ಅಪ್ಪನ ಮುಖ ನೋಡದ ಔರೋ ತನ್ನ ಅಮ್ಮ (ವಿದ್ಯಾ ಬಾಲನ್-vidya Balan)ನನ್ನು ನನ್ನ ಅಪ್ಪ ಯಾರು ಎಂದು ದಿನವೂ ಕೇಳುತ್ತಾನೆ. ಅಮ್ಮ ಏನೇನೋ ಕಾರಣ ಹೇಳಿ ಗೋಡೆಯ ಮೇಲೆ ದೀಪ ಇಡುತ್ತಾಳೆ.

ಮುಂದೆ ಔರೋ ಕಲಿಯುತ್ತಿರುವ ಶಾಲೆಗೆ ಅವನ ಅಪ್ಪ ವಾರ್ಷಿಕೋತ್ಸವಕ್ಕೆ ಅತಿಥಿಯಾಗಿ ಬರುತ್ತಾನೆ. ಅಲ್ಲಿ ತನ್ನ ಪ್ರತಿಭೆಯ ಮೂಲಕ ಬಹುಮಾನ ಗೆದ್ದ ಔರೋ ಮತ್ತು ಅಪ್ಪನ ಗೆಳೆತನ ಬೆಳೆಯುತ್ತದೆ. ಮುಂದೇನಾಗುತ್ತದೆ ಎಂದು ಸಿನಿಮಾ ನೋಡಿ ನೀವು ಹೇಳಬೇಕು.

Amitabha and Abhishek in Paa

ನಾನು ಚಿತ್ರಕತೆಯನ್ನು ಬರೆಯುವಾಗ ಅಪ್ಪನ ಪಾತ್ರವನ್ನು ಅಮಿತಾಭ್‌ ಮಾಡಬೇಕು, ಮಗ ಔರೋ ಪಾತ್ರ ಅವರ ಮಗ ಅಭಿಷೇಕ್ ಬಚ್ಚನ್ (Abhishek Bachchan) ಮಾಡಲಿ ಎಂದು ಮನಸಲ್ಲಿ ಇಟ್ಟುಕೊಂಡು ಬರೆದಿದ್ದೆ. ಒಂದು ಫೈನ್ ಡೇ ನಾನು ಅವರ ಮನೆಗೆ ಹೋಗಿ ಕಾಲಿಂಗ್ ಬೆಲ್ ಒತ್ತಿದೆ.

ಅಂದು ಅಪ್ಪ, ಮಗ ಇಬ್ಬರೂ ಮನೆಯಲ್ಲಿಯೇ ಇದ್ದರು. ಇಬ್ಬರನ್ನೂ ಕೂರಿಸಿ ಇಡೀ ಸಿನಿಮಾದ ಕಥೆಯನ್ನು ಹೇಳಿದೆ. ಇಬ್ಬರೂ ಕೇಳಿದರು. ಅಪ್ಪನ ಪಾತ್ರ ಅಮಿತಾಬ್ ಮಾಡಲಿ ಎಂದೆ. ಮಗ ಅಭಿಷೇಕ್ ಕೂಡ ಪ್ರತಿಭಾವಂತ. ಅವರು ಔರೋ ಪಾತ್ರ ಮಾಡಲಿ ಎಂದೆ.

Amitabh in Paa

ಆಗ ಅಭಿಷೇಕ್ ಕಣ್ಣಲ್ಲಿ ಒಂದಷ್ಟು ಗೊಂದಲವು ನನಗೆ ಕಂಡಿತು. ಅವರು ಒಂದೆರಡು ಪ್ರಶ್ನೆ ಕೇಳಿ ಅಪ್ಪನ ಮುಖ ನೋಡುತ್ತಾ ಕೂತ. ಅವರ ಮನಸಿನ ಭಾವನೆ ಅಮಿತಾಭ್‌ಗೆ ಅರ್ಥ ಆಯ್ತು ಅಂತ ನನಗೆ ಅನ್ನಿಸಿತು.

ಅಮಿತಾಭ್ ತನ್ನ ಮಗನನ್ನು ಒಂದು ಕ್ಷಣ ಮನೆಯ ಒಳಗೆ ಕರೆದುಕೊಂಡು ಹೋಗಿ ಹಿಂದೆ ಬಂದರು. ಅವರಿಬ್ಬರೂ ಮಾತಾಡಿ ಒಂದು ನಿರ್ಧಾರಕ್ಕೆ ಬಂದ ಹಾಗೆ ನನಗೆ ಅನ್ನಿಸಿತು.

ಬಂದವರೇ ಅಮಿತಾಭ್ “ಬಾಲ್ಕೀ, ನಿಮಗೆ ಅಭ್ಯಂತರ ಇಲ್ಲಾಂದ್ರೆ ನಾನು ಔರೋ ಪಾತ್ರ ಮಾಡ್ತೇನೆ. ಅಭಿಷೇಕ್ ಅಪ್ಪನ ಪಾತ್ರ ಮಾಡಲಿ!” ಎಂದರು. ನಾನು ನಿಜವಾಗಿಯೂ ಬೆಚ್ಚಿ ಬಿದ್ದೆ! ಯಾಕೆಂದ್ರೆ ಅಂತಹ ಪ್ರಯೋಗ ಭಾರತೀಯ ಸಿನಿಮಾ ರಂಗದಲ್ಲಿ ಎಂದಿಗೂ ಆಗಿರಲಿಲ್ಲ!

Amitabh and Abhishek in Paa

ಆಗ ಅಮಿತಾಭ್‌ ಬಚ್ಚನ್ ಅವರ ವಯಸ್ಸು 67! ಅಂತಹ ಪ್ರಾಯದಲ್ಲಿ 13 ವರ್ಷದ ಹುಡುಗನ ಪಾತ್ರ ಮಾಡುವುದು ಅಂದರೆ..? ಅದು ಕೂಡ ಪ್ರೋಜೇರಿಯ ಸಂತ್ರಸ್ತ ಹುಡುಗನ ಪಾತ್ರ! ಅಲ್ಲದೆ ಅಪ್ಪ ಮಗನ ಪಾತ್ರ ಮಾಡುವುದು, ಮಗ ಅಪ್ಪನ ಪಾತ್ರ ಮಾಡುವುದು…….ಇದು ಹಿಂದೆ ಎಂದೂ ಆಗಿರಲಿಲ್ಲ!

ನನ್ನ ಮೌನ ಅಮಿತಾಭ್ ಅವರಿಗೆ ಅರ್ಥ ಆಯಿತು. ಅವರು “ಬಾಲ್ಕೀ. ನೀವೇನೂ ಆತಂಕ ಮಾಡಬೇಡಿ. ಎಲ್ಲವನ್ನೂ ನಾನು ಮೇನೇಜ್ ಮಾಡುತ್ತೇನೆ. ನನಗೆ ಪಾತ್ರಕ್ಕೆ ಸಿದ್ಧತೆ ಮಾಡಿಕೊಳ್ಳಲು ಮೂರು ತಿಂಗಳ ಸಮಯ ಬೇಕು. ನೀವು ಶೂಟಿಂಗ್ ರೆಡಿ ಮಾಡಿ. ನಾವಿಬ್ಬರೂ ಬರುತ್ತೇವೆ!” ಎಂದು ಕೈಮುಗಿದು ಕಳುಹಿಸಿದರು.

Amitatabh in Paa

ನಾನಿನ್ನೂ ಶಾಕ್ ನಿಂದ ಹೊರ ಬಂದಿರಲಿಲ್ಲ. ಮನೆಗೆ ಬಂದು ಮತ್ತೆ ಮೂರು ತಿಂಗಳು ತೆಗೆದುಕೊಂಡು ಚಿತ್ರಕಥೆಯನ್ನು ಹಲವು ಬಾರಿ ಟ್ರಿಮ್ ಮಾಡಿದೆ. ಅಮಿತಾಭ್ ಮಾಡುವ ಔರೋ ಪಾತ್ರವು ನನಗೆ ಹಗಲು ರಾತ್ರಿ ಕಣ್ಣ ಮುಂದೆ ಬರಲು ಆಗಲೇ ಆರಂಭ ಆಗಿತ್ತು.

ಅಮಿತಾಭ್ ಆ ಮೂರು ತಿಂಗಳ ಕಾಲ ಹತ್ತಾರು ವೈದ್ಯರನ್ನು ಸಂಪರ್ಕಿಸಿ ಪ್ರೊಜೇರಿಯ ಬಗ್ಗೆ, ಅದರ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳುತ್ತ ಹೋದರು. ಆ ಕಾಯಿಲೆಯು ಇರುವ ಮಕ್ಕಳನ್ನು, ಅವರ ಕುಟುಂಬಗಳನ್ನು ಭೇಟಿ ಮಾಡಿ ಬಂದರು. ಅವರ ಒಳಗೆ ಕೂಡ ಆ ಔರೋ ಪಾತ್ರವು ಆಗಲೇ ಇಳಿಯಲು ಆರಂಭ ಆಗಿತ್ತು!

ಇದನ್ನೂ ಓದಿ : Raja Marga Column : ಹೆಣ್ಮಕ್ಕಳು ಶಾಲೆಗೆ ಹೋಗೋದೇ ಕಷ್ಟ ಎಂಬ ಕಾಲದಲ್ಲೇ ಆಕೆ ಒಂದಲ್ಲ, ಎರಡು ನೊಬೆಲ್‌ ಗೆದ್ದರು!

2009ರ ಒಂದು ಶುಭ ಮುಹೂರ್ತದಲ್ಲಿ ಪಾ ಸಿನೆಮಾದ ಶೂಟಿಂಗ್ ಆರಂಭ ಆಗಿತ್ತು. ಅಮಿತಾಭ್ ಅವರ ವಿಶೇಷ ಮೇಕ‌ಪ್‌ಗಾಗಿ ಕ್ರಿಶ್ಚಿಯನ್ ಟಿನ್ಲೆ ಮತ್ತು ಡೊಮಿನಿ ಲಿನ್ ಎಂಬ ಇಬ್ಬರು ವಿದೇಶದ ಮೇಕಪ್ ಕಲಾವಿದರು ಬಂದರು. ಔರೋ ಪಾತ್ರದ ಮೇಕಪ್ ತುಂಬಾ ಸಂಕೀರ್ಣ ಆಗಿತ್ತು.

ದೊಡ್ಡ ಮಂಡೆ ರಚನೆ ಮಾಡಲು ಎಂಟರಿಂದ ಹತ್ತು ಒದ್ದೆ ಮಣ್ಣಿನ ಹೆಂಟೆಗಳನ್ನು ಅಮಿತಾಬ್ ತಲೆಗೆ ಮೆತ್ತುತ್ತಿದ್ದರು. ಅದರಲ್ಲಿ ಉಸಿರಾಟ ಮಾಡಲು ಎರಡು ರಂಧ್ರಗಳು ಮಾತ್ರ ಇರುತ್ತಿದ್ದವು. ಹಣೆ, ಮುಖ, ಕೆನ್ನೆ, ತುಟಿಗಳಿಗೆ ದಪ್ಪವಾದ ಬಟ್ಟೆಗಳ ಲೇಪನ! ಅದರ ಮೇಲೆ ದಪ್ಪವಾದ ಬಣ್ಣಗಳು. ಪಾತ್ರಕ್ಕಾಗಿ ಕಾಲು, ಕೈ, ಎದೆಯ ಮೇಲಿನ ಕೂದಲನ್ನು ಕೂಡ ಕೆರೆದು ತೆಗೆದಿದ್ದರು.

Making of Paa

ಪ್ರತೀ ದಿನ ಮೇಕಪ್ ಮಾಡಲು ಕನಿಷ್ಠ ಐದು ಘಂಟೆ ಮತ್ತು ತೆಗೆಯಲು ಎರಡು ಘಂಟೆಗಳ ಅವಧಿ ಬೇಕಾಗುತ್ತಿತ್ತು! 67 ವರ್ಷದ ಅಮಿತಾಬ್ ರಾತ್ರಿ ಹನ್ನೊಂದು ಗಂಟೆಗೆ ಮೇಕಪ್ ಮಾಡಲು ಕೂತರೆ ಬೆಳಿಗ್ಗೆ ನಾಲ್ಕೈದು ಗಂಟೆಗೆ ಮೇಕಪ್ ಮುಗಿಯುವುದು. ನಂತರ ಶೂಟಿಂಗ್ ಆರಂಭ. ಮೇಕಪ್ ತೆಗೆಯುವ ತನಕ ಒಂದು ತೊಟ್ಟು ನೀರು ಕೂಡ ಕುಡಿಯುವ ಅವಕಾಶ ಇಲ್ಲ! ಮೈ, ಮುಖ ಎಲ್ಲ ಕಡೆಯೂ ವಿಪರೀತ ತುರಿಕೆ ಮತ್ತು ನವೆ. ಅಮಿತಾಭ್ ಆ ಕನಸಿನ ಪಾತ್ರಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡರು. ನಗು,‌ ನಗುತ್ತಾ ದಿನವೂ ಶೂಟಿಂಗ್‌ನಲ್ಲಿ ಭಾಗವಹಿಸಿದರು.

ಕೆಲವೊಮ್ಮೆ ನನಗೇ ಮುಜುಗರ ಆಗುತ್ತಿತ್ತು. ಭಾರತೀಯ ಸಿನಿಮಾ ರಂಗದ ಸೂಪರ್ ಸ್ಟಾರ್ ಒಬ್ಬ, ಆ ಪ್ರಾಯದಲ್ಲಿ, ಆ ರೀತಿಯ ಪ್ರಯೋಗಕ್ಕೆ ಒಳಗಾಗುವುದು ಅಂದರೆ….! ಅದು ಅಮಿತಾಬ್ ಬಚ್ಚನ್ ಅಸ್ತಮಾ ರೋಗಿ ಆಗಿದ್ದರು! ಆ ರೀತಿಯ ತಾಳ್ಮೆ ಮತ್ತು ಬದ್ಧತೆಗಳು ಕೇವಲ ಅವರಿಗೆ ಮಾತ್ರ ಸಾಧ್ಯ ಆಗುವಂತದ್ದು.

Amitabh and Auro

ಮುಂದೆ ಪಾ ಸಿನಿಮಾ 2009ರ ಡಿಸೆಂಬರ್ ತಿಂಗಳಲ್ಲಿ ಎಲ್ಲ ಕಡೆ ಬಿಡುಗಡೆ ಆಯಿತು. ವಿದೇಶದಲ್ಲಿ ಕೂಡ ಬಿಡುಗಡೆ ಆಯಿತು. ಅದು ನಾವು ನಿರೀಕ್ಷೆ ಮಾಡಿದ್ದಕ್ಕಿಂತ ದೊಡ್ಡ ಹಿಟ್ ಆಯಿತು! ಆ ಸಕ್ಸಸ್ ದೊರೆಯಲು ಪ್ರಮುಖ ಕಾರಣ ಅದು ಖಂಡಿತವಾಗಿಯೂ ಅಮಿತಾಭ್ ಬಚ್ಚನ್ ಅಭಿನಯ ಮತ್ತು ಲವಲವಿಕೆ. ಆ ನಟನ ಜೀವನೋತ್ಸಾಹ ನಿಜಕ್ಕೂ ಒಂದು ಮಿರಾಕಲ್!

ಇಳಯರಾಜ ಸಂಗೀತ ಕೂಡ ಅದ್ಭುತವೇ ಆಗಿತ್ತು. ಇಡೀ ಸಿ‌ನಿಮಾದಲ್ಲಿ ಅಪ್ಪ ಮಗನ ಭಾವನಾತ್ಮಕ ಸಂಬಂಧದ ಅಂಡರ್ ಕರೆಂಟ್ ಇತ್ತು. ಇವೆಲ್ಲವೂ ಸಿನಿಮಾವನ್ನು ಭಾರಿ ಸಕ್ಸಸ್ ಮಾಡಿದವು.

Amitabh in Paa

ಈ ಸಿನಿಮಾದ ಅಭಿನಯಕ್ಕೆ ಅಮಿತಾಭ್‌ ಅವರಿಗೆ ಮೂರನೇ ಬಾರಿಗೆ ‘ಅತ್ಯುತ್ತಮ ನಟ’ ರಾಷ್ಟ್ರಪ್ರಶಸ್ತಿಯು ದೊರೆಯಿತು. ಹಾಗೆಯೇ ಐದನೇ ಫಿಲ್ಮ್ ಫೇರ್ ಅತ್ಯುನ್ನತ ನಟ ಪ್ರಶಸ್ತಿ ಕೂಡ ದೊರೆಯಿತು! ಅದು ಅಮಿತಾಭ್ ಬಚ್ಚನ್ ಅವರ ಬದ್ಧತೆ ಮತ್ತು ಪ್ರಯೋಗಶೀಲತೆಗೆ ದೊರೆತ ನಿಜವಾದ ಪ್ರಶಸ್ತಿ ಆಗಿತ್ತು!

ಈ ರೀತಿಯ ಸವಾಲು ಎದುರಿಸುವ ಶಕ್ತಿ ನಿಮಗೆ ಹೇಗೆ ಬಂತು? ಎಂದು ಪತ್ರಿಕೆಯವರು ಅಮಿತಾಬ್ ಅವರನ್ನು ಕೇಳಿದಾಗ ಅವರು ಕೊಟ್ಟ ಕಾರಣ ಅದ್ಭುತವೇ ಆಗಿತ್ತು.

“ನಾನು ಚಿಕ್ಕದಿರುವಾಗ ಒಮ್ಮೆ ನನ್ನ ಗೆಳೆಯರ ಕೈಯ್ಯಲ್ಲಿ ಪೆಟ್ಟು ತಿಂದು ಅಳುತ್ತಾ ಮನೆಗೆ ಬಂದಿದ್ದೆ. ಆಗ ಅಮ್ಮ ತೇಜಿ ಬಚ್ಚನ್ ನನಗೆ ಬೈದು ಒಂದು ಮಾತನ್ನು ಹೇಳಿದ್ದರು – ಮಗನೇ, ಇನ್ನು ಎಂದಿಗೂ ಅಳುತ್ತ ನನ್ನ ಮುಂದೆ ಬಂದು ನಿಲ್ಲಬೇಡ! ನೀನು ಆರಂಭ ಮಾಡಿದ ಯುದ್ಧವನ್ನು ನೀನೇ ಗೆಲ್ಲಬೇಕು ಎಂದು!”

ಪಾ ಸಿನಿಮಾದ ಮೂಲಕ ಅಮಿತಾಬ್ ಬಚ್ಚನ್ ಮತ್ತೆ ಕೀರ್ತಿಯ ಶಿಖರವನ್ನು ಏರಿದರು.

Continue Reading

ಅಂಕಣ

ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!

ಪ್ರತಿ ಭಾರತೀಯನೂ, ಈ ದೇಶ ನನ್ನದು, ನಾನು ನನ್ನ ಕರ್ತವ್ಯ ನಿರ್ವಹಿಸಿದರೆ ಮಾತ್ರ ದೇಶ ಏಳಿಗೆ ಆಗುತ್ತದೆ ಎಂದು ಭಾವಿಸಬೇಕು. ಆಗ ವಿಶ್ವದ ಯಾವ ಶಕ್ತಿಯೂ ಭಾರತದ ಬೆಳವಣಿಗೆಯನ್ನು ತಡೆಯಲು ಆಗುವುದಿಲ್ಲ.

VISTARANEWS.COM


on

Edited by

meri maati mera desh
Koo
Vistara Column @ Hariprakash Konemane

ಅಪಿ ಸ್ವರ್ಣಮಯಿ ಲಂಕಾ ನ ಮೇ ಲಕ್ಷ್ಮಣ ರೋಚತೇ,
ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ||

ರಾವಣನ ಜತೆಗಿನ ಯುದ್ಧದಲ್ಲಿ ಗೆದ್ದ ನಂತರ ಲಂಕೆಯ ನೆಲದಲ್ಲಿ ನಿಂತು ಶ್ರೀರಾಮ ಈ ಮಾತನ್ನು ಲಕ್ಷ್ಮಣನಿಗೆ ಹೇಳುತ್ತಾನೆ ಎಂಬ ಮಾತಿದೆ. ಇದು ಮೂಲ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ ಎಂದೂ ಕೆಲವರು ಹೇಳುತ್ತಾರೆ. ಅದಿರಲಿ, ಇದರ ಅರ್ಥ ಮಾತ್ರ ರಾಮನ ಸ್ವಭಾವಕ್ಕೆ ಸಹಜವಾಗಿಯೇ ಅನುಗುಣವಾಗಿದೆ. ಈ ಲಂಕೆಯು ಚಿನ್ನದಿಂದ ನಿರ್ಮಾಣ ಆಗಿರಬಹುದು, ಆದರೆ ತಾಯಿ ಮತ್ತು ತಾಯಿ ಭೂಮಿಯು ಸ್ವರ್ಗಕ್ಕಿಂತ ಹಿರಿದಾದದ್ದು ಎನ್ನುವುದು ಈ ಸಂಸ್ಕೃತ ಶ್ಲೋಕದ ಅರ್ಥ. ಶ್ರೀರಾಮನು ಎರಡು ವಿಚಾರಗಳನ್ನು ಇಲ್ಲಿ ಉಲ್ಲೇಖಿಸಿದ್ದಾನೆ. ಮೊದಲನೆಯದು ತಾಯಿ, ಎರಡನೆಯದು ತಾಯಿಭೂಮಿ.

ಲಕ್ಷ್ಮಣದ ಆಶಯದಂತೆ ಲಂಕೆಯಲ್ಲೇ ಇರಬೇಕೆಂದು ಶ್ರೀರಾಮ ನಿರ್ಧಾರ ಮಾಡಿದ್ದೇ ಆಗಿದ್ದರೆ ತಾಯಿ ಕೌಸಲ್ಯೆಯನ್ನು ಇಲ್ಲಿಗೇ ಕರೆತಂದು ವಾಸ ಮಾಡುವುದು ಕಷ್ಟವೇನೂ ಆಗಿರುತ್ತಿರಲಿಲ್ಲ. ಆದರೆ ಎರಡನೆಯದು ತಾಯಿಭೂಮಿ. ತಾಯಿಭೂಮಿ ಬೇಕೆಂದರೆ ಶ್ರೀರಾಮ ಮತ್ತೆ ಅಯೋಧ್ಯೆಗೇ ಮರಳಲೇಬೇಕು. ಅದು ಮಾತೃಭೂಮಿಯ ವಿಶೇಷತೆ. ಮಾತೃಭೂಮಿ ಎಂದರೆ ಏನು? ಅಲ್ಲಿನ ಅರಮನೆಯೇ? ಅಲ್ಲಿರುವ ಸ್ನೇಹಿತರೇ? ಅಲ್ಲಿರುವ ಬಂಧು ಬಳಗವೇ? ಅಲ್ಲಿರುವ ಸೇವಕರೇ? ಅಲ್ಲಿರುವ ಆಸ್ತಿಪಾಸ್ತಿಯೇ? ಇವೆಲ್ಲವೂ ಚಲಿಸುವಂತಹವು ಹಾಗೂ ಜಗತ್ತಿನಲ್ಲಿ ಎಲ್ಲಿಬೇಕಾದರೂ ನಿರ್ಮಾಣ ಮಾಡಿಕೊಳ್ಳಬಹುದಾದ ಸಂಗತಿಗಳು. ಆದರೆ, ಮಾತೃಭೂಮಿಯಲ್ಲಿ ಮಾತ್ರವೇ ಇರುವ ಏಕೈಕ ಅಂಶವೆಂದರೆ ಮಣ್ಣು. ನನ್ನ ಊರಿನ ಮಣ್ಣು, ಅದರ ವಾಸನೆ, ಅದರೊಂದಿಗಿನ ಒಡನಾಟ ಇಡೀ ವಿಶ್ವದ ಇನ್ನಾವ ಮಣ್ಣಿನಲ್ಲೂ ಸಿಗುವುದಿಲ್ಲ. ಅದು ಭಾರತೀಯರಿಗೆ ಮಣ್ಣಿನೊಂದಿಗಿರುವ ಸಂಬಂಧ.
ಸ್ವಾತಂತ್ರ್ಯ ಪ್ರಾಪ್ತಿಯ ಮಾರ್ಗದಲ್ಲಿ ದೇಶದಿಂದ ಬ್ರಿಟನ್ನಿನ ಕಡೆಗೆ ಸಾಗಿದವರು ವೀರ ಸಾವರ್ಕರ್. ಬ್ರಿಟಿಷರ ಗುಹೆಯೊಳಗೇ ನುಗ್ಗಿ ಬೆದರಿಸಿಬರುತ್ತೇನೆ ಎಂದೇನೊ ಸಾವರ್ಕರ್ ಹೊರಡುತ್ತಾರೆ. ಆ ಕಾರ್ಯದಲ್ಲಿ ಸಾಕಷ್ಟು ಯಶವನ್ನೂ ಕಾಣುತ್ತಾರೆ. ಆದರೆ ಅಲ್ಲಿಗೆ ತೆರಳಿದ ನಂತರ ಮಾತೃಭೂಮಿಯ ಮೇಲಿನ ಉತ್ಕಟ ಪ್ರೇಮವನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ಅಲ್ಲಿನ ಸಮುದ್ರದ ಬಳಿ ನಿಂತು ಭಾರತದ ಕಡೆಗೆ ತಿರುಗಿ ಕಣ್ಣೀರು ಹಾಕುತ್ತಾರೆ. ಓ ಮಾತೃಭೂಮಿ, ನಿನಗಾಗಿ ತ್ಯಾಗ ಮಾಡುವುದೇ ಜೀವನ, ನಿನ್ನ ಹೊರತಾಗಿ ಜೀವಿಸುವುದೇ ಮರಣ ಎಂದು ಹೇಳಿದವರು ಸ್ವಾತಂತ್ರ್ಯ ವೀರ ಸಾವರ್ಕರ್‌. ಸಮುದ್ರದ ಬಳಿ ನಿಂತು ʼಸಾಗರಾ ಪ್ರಾಣ ತಳಮಳಲಾ…” ಎಂದು ಹೇಳಿದ್ದು, “ಓ ಮಾತೃಭೂಮಿ…” ಎಂದು ಉಲ್ಲೇಖಿಸುವಾಗಲೂ ಸಾವರ್ಕರ್ ಕಣ್ಣಿನಲ್ಲಿ ಇದ್ದದ್ದು ಇಲ್ಲಿನ ಭೂಭಾಗ, ಅಂದರೆ ಮಣ್ಣೇ ಅಲ್ಲವೇ.

ಇದೇನು ಇಷ್ಟು ಮಹಾನ್ ವಿಚಾರ? ಎಂದು ಯಾರಾದರೂ ಕೇಳಬಹುದು. ಮಣ್ಣಿನ ಕುರಿತು ಈ ಮಟ್ಟಿಗಿನ ಉತ್ಕಟ ಪ್ರೇಮವನ್ನು ಹೊಂದಿರುವ ನಾಗರಿಕತೆಗಳು ಹೆಚ್ಚಿಲ್ಲ. ಜೀವನ ಎಲ್ಲಿದ್ದರೂ ನಡೆಯುತ್ತದೆಯಲ್ಲವೇ? ಮನುಷ್ಯನಿಗೆ ಬೇಕಿರುವುದು ರೋಟಿ, ಕಪಡಾ, ಮಕಾನ್ ತಾನೇ? ಎನ್ನುವವರಿಗೆ ಮಣ್ಣಿನ ಮಹತ್ವ ತಿಳಿಯುವುದಿಲ್ಲ. ಹಾಗೆ ನೋಡಿದರೆ, ಹುಟ್ಟಿದ ಮಣ್ಣಲ್ಲೇ ಮಣ್ಣಾಗಬೇಕು ಎಂಬುದು ಭಾರತದ ಅತಿದೊಡ್ಡ ನಂಬಿಕೆ. ಸತ್ತರೆ ತಮ್ಮ ದೇಹ ಹುಟ್ಟೂರಿನ ಮಣ್ಣಲ್ಲಿ ಸಮಾಧಿಯಾಗಬೇಕು ಇಲ್ಲವೇ ಸುಟ್ಟು ಭಸ್ಮವಾಗಬೇಕು ಎಂಬುದು ಎಲ್ಲರ ಅಂತಿಮ ಬಯಕೆಯೇ ಆಗಿರುತ್ತದೆ. ಹಾಗಾಗಿಯೇ ದೊಡ್ಡ ದೊಡ್ಡ ಸಾಧಕರು, ಮಹಾ ವ್ಯಕ್ತಿಗಳು ನಿಧನರಾದ ಬಳಿಕ, ಅವರ ದೇಹವನ್ನು ತಾಯ್ನೆಲದಲ್ಲಿಯೇ ಮಣ್ಣು ಮಾಡಲಾಗುತ್ತದೆ. ಏಕೆಂದರೆ, ಅವರೆಲ್ಲರೂ ಆ ಮಣ್ಣಿನ ಮಕ್ಕಳೇ ಆಗಿರುತ್ತಾರೆ.
ಮಣ್ಣಿನ ಮಗ ಎನಿಸಿಕೊಳ್ಳುವುದು ಶ್ರೀಸಾಮಾನ್ಯನಿಂದ ಅಸಾಮಾನ್ಯರವರೆಗೆ- ಎಲ್ಲರಿಗೂ ಅಭಿಮಾನದ ಸಂಗತಿ ಇಲ್ಲಿ.

ಈಗ ಪ್ರಧಾನಿ ನರೇಂದ್ರ ಮೋದಿಯವರು ಮೇರೀ ಮಾಠಿ-ಮೇರಾ ದೇಶ್ ಅಭಿಯಾನಕ್ಕೆ ಕರೆ ನೀಡಿದ್ದಾರೆ. ದೇಶಾದ್ಯಂತ ಈಗ ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮಾಚಣೆ ನಡೆಯುತ್ತಿದೆ. ಈ ಸಂಭ್ರಮಾಚರಣೆಯ ಸಮಾರೋಪಕ್ಕೆ ಮೇರೀ ಮಾಠಿ-ಮೇರಾ ದೇಶ್ ಅಂದರೆ ನನ್ನ ಮಣ್ಣು-ನನ್ನ ದೇಶ ಎಂಬ ಅಭಿಯಾನ. ಈ ಅಭಿಯಾನಕ್ಕೆ ಟ್ಯಾಗ್‌ಲೈನ್‌ ಎಂದರೆ ಮಿಟ್ಟೀ ಕೊ ನಮನ್-ವೀರೋಂ ಕಾ ವಂದನ್ ಎನ್ನುವುದು.

PM Narendra Modi

ನಮ್ಮ ದೇಶವನ್ನು ರಕ್ಷಣೆ ಮಾಡುವ ಸೈನಿಕರನ್ನು ಗೌರವಿಸುವುದು, ದೇಶದ ಸಾಧನೆಗಳನ್ನು ಸ್ಮರಿಸುವುದು. ಈ ಕಾರ್ಯಕ್ರಮಗಳನ್ನು ದೇಶದ ಹಳ್ಳಿ ಹಳ್ಳಿಗಳಲ್ಲೂ, ಜಿಲ್ಲಾ ಮಟ್ಟದಲ್ಲೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲೂ ಆಚರಿಸಲು ಕರೆ ನೀಡಿದ್ದಾರೆ. ಈ ಅಭಿಯಾನದಡಿ, ಗ್ರಾಮದಲ್ಲಿ ದೇಸಿ ಸಸಿಗಳನ್ನು ನೆಡುವುದು ಸೇರಿ ಅನೇಕ ಕಾರ್ಯಕ್ರಮಗಳಿವೆ. ದೇಶಕ್ಕೆ ಪ್ರಾಣತ್ಯಾಗ ಮಾಡಿದ ವೀರ ಸೈನಿಕರು, ಪೊಲೀಸರು, ಸ್ವಾತಂತ್ರ್ಯ ಹೋರಾಟಗಾರರ ಹೆಸರಿರುವ ಶಿಲಾಫಲಕವನ್ನು ಗ್ರಾಮ, ಗ್ರಾಮ ಪಂಚಾಯಿತಿಯಲ್ಲಿ ಸ್ಥಾಪಿಸುವುದೂ ಈ ಕಾರ್ಯದಲ್ಲಿ ಒಂದು. ಪಂಚ ಪ್ರಾಣ ಸಂಕಲ್ಪ, ಅಂದರೆ 1. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿಸುವ ಸಂಕಲ್ಪ, 2. ವಸಾಹತುಶಾಹಿ ಮಾನಸಿಕತೆಯ ಕುರುಹುಗಳನ್ನು ಕಿತ್ತೊಗೆಯುವುದು, 3. ನಮ್ಮ ಪರಂಪರೆಯಲ್ಲಿ ಹೆಮ್ಮೆ ಕಾಣುವುದು, 4. ನಮ್ಮ ಏಕತೆಯೇ ನಮ್ಮ ಶಕ್ತಿ ಎಂದು ತಿಳಿಯುವುದು, 5. ನಾಗರಿಕರಾಗಿ ಪ್ರಾಮಾಣಿಕತೆಯಿಂದ ನಮ್ಮ ಕರ್ತವ್ಯ ನಿರ್ವಹಿಸುವುದು. ಈ ಸಂಕಲ್ಪಗಳನ್ನು ಮಾಡುತ್ತ ಪ್ರತಿ ಗ್ರಾಮದಿಂದಲೂ ಮಣ್ಣನ್ನು ಸಂಗ್ರಹಿಸಿ ನವದೆಹಲಿಗೆ ಕಳಿಸಬೇಕು.

ನವದೆಹಲಿಯಲ್ಲಿ ಸೈನಿಕರ ನೆನಪಿನಲ್ಲಿ ಸ್ಥಾಪನೆಯಾಗಲಿರುವ ವನದಲ್ಲಿ, ದೇಶದ ವಿವಿಧೆಡೆಯಿಂದ ಬಂದ ಈ ಮಣ್ಣನ್ನು ಹಾಕಲಾಗುತ್ತದೆ. ಅಲ್ಲಿ ಸೈನಿಕರಿಗೆ ವಂದನೆ ಸಲ್ಲಿಸುವ ಗುರುತು, ವನ ನಿರ್ಮಾಣ ಮಾಡಲಾಗುತ್ತದೆ. ಪ್ರತಿ ಸೈನಿಕನೂ ಗಡಿಯಲ್ಲಿ ಕಾಯುವುದು ಮಣ್ಣನ್ನೇ. ದೇಶದ ಜನರಿಗೆ ಆಹಾರ ನೀಡುವ ರೈತನೂ, ಗಡಿಯಲ್ಲಿ ದೇಶವನ್ನು ಕಾಯುವ ಸೈನಿಕನೂ ತಾಯಿಯ ಸಂಬಂಧವನ್ನು ಹೊಂದುವುದು ಕೊನೆಗೆ ಮಣ್ಣಿನೊಂದಿಗೆ.

ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದವರು ಹೇಳುವುದು, ಈ ಮಣ್ಣಿಗಾಗಿ ಹೋರಾಡುವೆ ಎಂದು. ಸೈನಿಕರು ಹೇಳುವುದು, ಈ ಮಣ್ಣಿಗಾಗಿ ಪ್ರಾಣ ಕೊಡುವೆ ಎಂದು. ಆದರೆ ಮಣ್ಣು ಎನ್ನುವುದು ಇತ್ತೀಚಿನ ದಿನಗಳಲ್ಲಿ ರಿಯಲ್‌ ಎಸ್ಟೇಟ್‌ ವಸ್ತುವಾಗಿದೆ, ಇದು ನಮ್ಮ ಮೌಲ್ಯಗಳಿಗೆ ವಿರುದ್ಧವಾದದ್ದು. ಇಂದು ಹಣ ಎನ್ನುವುದು ಮನುಷ್ಯನನ್ನು ಎಷ್ಟು ಆವರಿಸಿಕೊಂಡಿದೆ ಎಂದರೆ, ಅವನಿಗೆ ಮಣ್ಣಿನ ಮೇಲಿನ ಮಾತೃ ಸಂಬಂಧ ಕಡಿಮೆಯಾಗುತ್ತಿದೆ. ರಿಯಲ್ ಎಸ್ಟೇಟ್ ಎನ್ನುವುದು ಒಂದು ಮಾಫಿಯಾವಾಗಿ ದಿನದಿನವೂ ಸಾವಿರಾರು ಎಕರೆ ಹೊಲ, ಗದ್ದೆಗಳನ್ನು ಲೇಔಟ್‌ಗಳಾಗಿ ಪರಿವರ್ತನೆ ಮಾಡುತ್ತಿದೆ. ಇದು ಕೇವಲ ಬೆಂಗಳೂರಿನ ಮಾತಲ್ಲ. ಜಿಲ್ಲಾ ಕೇಂದ್ರಗಳ ಸುತ್ತಮುತ್ತ, ತಾಲೂಕು ಕೇಂದ್ರದ ಆಸುಪಾಸಿನಲ್ಲೂ ಇದು ಹರಡಿಕೊಳ್ಳುತ್ತಿದೆ. ತಮ್ಮ ಜಮೀನನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಸಣ್ಣ ಅಳುಕೂ ಇಲ್ಲದೆ ರೈತರು ಕೋಟಿ ಕೋಟಿ ಹಣಕ್ಕೆ ಸಂತೋಷದಿಂದ ಭೂಮಿಯನ್ನು ಮಾರುವುದನ್ನು ಕಂಡರೆ ಬೇಸರವಾಗುತ್ತದೆ. ಇದೇ ಮಾನಸಿಕತೆ ನಿಧಾನವಾಗಿ ದೇಶದ ಕುರಿತೂ ಮೂಡುತ್ತದೆ.

freedom Fight

ಈ ಹಿಂದೆ ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಪ್ರತಿ ಗ್ರಾಮದಿಂದ ಇಟ್ಟಿಗೆಯನ್ನು ಪೂಜಿಸಿ ಕಳಿಸಿಕೊಡಲಾಗಿತ್ತು. ಕನ್ಯಾಕುಮಾರಿಯಲ್ಲಿ ನಿರ್ಮಾಣವಾದ ಸ್ವಾಮಿ ವಿವೇಕಾನಂದ ಶಿಲಾ ಸ್ಮಾರಕಕ್ಕೆ ದೇಶದ ಎಲ್ಲ ಸರ್ಕಾರಗಳಿಂದಲೂ ಹಣ ಸಂಗ್ರಹ ಮಾಡಲಾಗಿತ್ತು. ಗುಜರಾತ್‌ನಲ್ಲಿ ಇತ್ತೀಚೆಗೆ ನಿರ್ಮಿಸಿರುವ ಸರ್ದಾರ್‌ ಪಟೇಲರ ಪ್ರತಿಮೆಗೆ (ಏಕತೆಯ ಪ್ರತಿಮೆ) ದೇಶದ ಪ್ರತಿ ಗ್ರಾಮದಿಂದ, ಕೃಷಿಯಲ್ಲಿ ಬಳಸಿದ ಕಬ್ಬಿಣದ ತುಂಡನ್ನು ಸಂಗ್ರಹಿಸಲಾಗಿತ್ತು. ಈಗ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಪ್ರತಿ ಪ್ರಜೆಯೂ ಹಣದ ದೇಣಿಗೆ ನೀಡುವ ಮೂಲಕ ತನ್ನ ಕರ್ತವ್ಯ ಮೆರೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಿರ್ಮಾಣವಾದ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೂ ಪ್ರತಿ ಗ್ರಾಮದಿಂದ ಮಣ್ಣು ಸಂಗ್ರಹ ಮಾಡಲಾಗಿತ್ತು.

ಇದೆಲ್ಲ ಏನನ್ನು ಸಚಿಸುತ್ತದೆ? ದೇಶದ ನಿರ್ಮಾಣದಲ್ಲಿ ನಮ್ಮ ಪಾತ್ರವೂ ಇದೆ ಎನ್ನುವುದನ್ನು ಇದು ಜನಮಾನಸದಲ್ಲಿ ಮೂಡಿಸುತ್ತದೆ. ಈ ಪ್ರತಿಮೆ, ಮಂದಿರ ನಿರ್ಮಾಣದಲ್ಲಿ ನನ್ನ ಹಣ, ನನ್ನ ಊರಿನ ಮಣ್ಣು ಇದೆ ಎನ್ನುವುದೇ ಅದು ಸ್ವಂತದ ಅನುಭವ ನೀಡುತ್ತದೆ. ಈಗ ಮೇರಾ ಮಾಠಿ-ಮೇರಾ ದೇಶ್‌ ಅಭಿಯಾನವೂ ಪ್ರತಿ ಭಾರತೀಯನಲ್ಲಿ ಏಕತೆಯ ಭಾವನೆ ಮೂಡಿಸುತ್ತದೆ.

ಇದೆಲ್ಲ ಭಾವನಾತ್ಮಕ ವಿಚಾರಗಳು. ಈಗೇಕೆ? ಅಭಿವೃದ್ಧಿ ಕಡೆಗೆ ಗಮನ ನೀಡಬೇಕಲ್ಲವೇ ಎಂಬ ಪ್ರಶ್ನೆ ಏಳುತ್ತದೆ. ಈಗ ದೇಶದಲ್ಲಿ ಎಲ್ಲ ಸಂಪನ್ಮೂಲ ಇದೆ, ಮೂಲಸೌಕರ್ಯಗಳೂ ಎಂದಿಗಿಂತ ವೇಗವಾಗಿ ಬೆಳೆಯುತ್ತಿವೆ. ವಿಮಾನಗಳು ಇಳಿಯಬಹುದಾದಂತಹ ರಸ್ತೆಗಳನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ. ಆದರೆ ದೇಶದ ಜನರಲ್ಲಿ ಜಾತಿ, ಲಿಂಗ, ಉಪಾಸನೆ ಆಧಾರದಲ್ಲಿ ಭಿನ್ನತೆ ಮೂಡಿಸುವ ಪ್ರಯತ್ನವೂ ಅಷ್ಟೇ ವೇಗದಿಂದ ಸಾಗಿದೆ. ಸನಾತನ ಧರ್ಮವನ್ನು ನಾಶ ಮಾಡುತ್ತೇನೆ ಎನ್ನುವುದರಿಂದ, ಪ್ರತ್ಯೇಕ ಜಾತಿಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳೂ ಆತಂಕ ಮೂಡಿಸುವಂತಹವು. ಇಂತಹ ಒಡಕನ್ನು ಮೀರಿ ನಿಲ್ಲಲು ಬೇಕಿರುವುದು ಒಮ್ಮತ. ಹಾಗಾಗಿ ಭಾವ ಜಾಗರಣೆಯೇ ಇಂದಿನ ಅಗತ್ಯ.

ಸ್ವಾತಂತ್ರ್ಯ

ಇದನ್ನೂ ಓದಿ: ವಿಸ್ತಾರ ಅಂಕಣ: ತುರ್ತು ಪರಿಸ್ಥಿತಿ ಕಡೆಗೆ ಹೊರಳುತ್ತಿದೆ ಡಿಜಿಟಲ್ ನೈತಿಕ ಪೊಲೀಸ್ ಗಿರಿ

ಪ್ರತಿ ಭಾರತೀಯನೂ, ಈ ದೇಶ ನನ್ನದು, ನಾನು ನನ್ನ ಕರ್ತವ್ಯ ನಿರ್ವಹಿಸಿದರೆ ಮಾತ್ರ ದೇಶ ಏಳಿಗೆ ಆಗುತ್ತದೆ ಎಂದು ಭಾವಿಸಬೇಕು. ಆಗ ವಿಶ್ವದ ಯಾವ ಶಕ್ತಿಯೂ ಭಾರತದ ಬೆಳವಣಿಗೆಯನ್ನು ತಡೆಯಲು ಆಗುವುದಿಲ್ಲ. ಮನಸ್ಸೊಂದಿದ್ದರೆ ಮಾರ್ಗ ಇರುತ್ತದೆ ಎನ್ನುವುದನ್ನು ಕೋವಿಡ್ ಸಮಯದಲ್ಲಿ ಭಾರತ ನಿರೂಪಿಸಿದೆ. ಒಂದೂ ಪಿಪಿಇ ಕಿಟ್ ತಯಾರಾಗದಿದ್ದ ಭಾರತವು ಕೆಲವೇ ತಿಂಗಳಲ್ಲಿ ಪಿಪಿಇ ಕಿಟ್ ರಫ್ತುದಾರ ದೇಶವಾಯಿತು. ತನ್ನ ನೂರ ನಲವತ್ತು ಕೋಟಿ ಜನರಿಗೆ ಲಸಿಕೆ ಅಷ್ಟೆ ಅಲ್ಲದೆ, ವಿಶ್ವದ ಅನೇಕ ದೇಶಗಳಿಗೂ ಲಸಿಕೆಯನ್ನು ಸರಬರಾಜು ಮಾಡಿತು. ಹಾಗಾಗಿ ಇಂದು ಬೇಕಾಗಿರುವುದು ಭಾವಜಾಗೃತಿಯ ಕೆಲಸ. ನಮ್ಮೆಲ್ಲರ ಮೈಯಲ್ಲಿ ಹರಿಯುವ ರಕ್ತವೊಂದೆ, ನಮ್ಮೆಲ್ಲ ನೆಲದಲ್ಲಿನ ಮಣ್ಣು ಒಂದೆ, ನಾವೆಲ್ಲ ಭಾರತೀಯರು ಎಂಬ ಭಾವನೆ ಇಂದು ಬಲವಾಗಿ ಬೇರೂರಬೇಕು. ಈ ಮಂತ್ರವೊಂದೇ ಸಾಕು ನಮ್ಮನ್ನು ವಿಶ್ವಗುರು ಆಗಿಸಲು. ಸದ್ಯ ದೇಶದ ಪ್ರತಿ ಹೃದಯವನ್ನೂ ತಲುಪಬಲ್ಲ ವ್ಯಕ್ತಿ ಎಂದು ಯಾರಾದರೂ ಇದ್ದರೆ ಅದು ಪ್ರಧಾನಿ ನರೇಂದ್ರ ಮೋದಿ ಮಾತ್ರ. ಮೇರಿ ಮಾಠಿ-ಮೇರಾ ದೇಶ್ ರೀತಿಯ ಅಭಿಯಾನದ ಮೂಲಕ ದೇಶದಲ್ಲಿ ಭಾವಜಾಗರಣವನ್ನು ಮೋದಿಯವರಿಗಿಂತ ಉತ್ತಮವಾಗಿ ಬೇರೆ ಯಾರಿಂದ ಮೂಡಿಸಲು ಸಾಧ್ಯ? ನಾವೂ ಈ ಅಭಿಯಾನದಲ್ಲಿ ಭಾಗವಹಿಸೋಣ. ನಮ್ಮ ನೆಲ, ಮಣ್ಣಿನ ಮೇಲಿನ ಪ್ರೇಮವನ್ನು ನೈಜವಾಗಿಸಿಕೊಳ್ಳುವ ಮೂಲಕ ದೇಶಸೇವೆಗೆ ಅಳಿಲು ಸೇವೆ ಸಲ್ಲಿಸೋಣ ಅಲ್ಲವೇ?

ಕೊನೆ ಮಾತು: ಅಭಿಯಾನಕ್ಕಾಗಿಯೇ ವೆಬ್‌ಸೈಟ್‌ www.merimaatimeradesh.gov.inಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಕಾರ್ಯಕ್ರಮದ ಸಂಪೂರ್ಣ ವಿವರ ಅಲ್ಲಿದೆ. ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಪ್ರತಿಜ್ಞೆಯನ್ನು ಓದುವ ಜತೆಗೆ ಮಣ್ಣಿನ ಜತೆಗೆ ಫೋಟೊ ತೆಗೆದುಕೊಂಡು ಅಪ್‌ಲೋಡ್‌ ಕೂಡ ಮಾಡಬಹುದು. ಈ ಮೂಲಕ ದೇಶದಲ್ಲಿ ಈ ಕಾರ್ಯ ಕೈಗೊಂಡಿರುವ ಕೋಟ್ಯಂತರ ಜನರ ಜತೆಯಾಗಬಹುದು.

ಇದನ್ನೂ ಓದಿ: ವಿಸ್ತಾರ ಅಂಕಣ: ತಮಿಳುನಾಡಿನ ರಾಜಕಾರಣಿಗಳು ಜನರನ್ನು ನಿರಂತರವಾಗಿ ಹೇಗೆ ವಂಚಿಸುತ್ತಿದ್ದಾರೆ ಗೊತ್ತೇ?

Continue Reading
Advertisement
Indian Women Cricket Team
ಕ್ರಿಕೆಟ್1 hour ago

Asian Games 2023: ಬಾಂಗ್ಲಾ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ಸ್ಮೃತಿ ಮಂಧಾನಾ ಪಡೆ

Raja Marga world heart day
ಅಂಕಣ1 hour ago

Raja Marga Column : ಮೊದಲು ನಿಮ್ಮ ಹೃದಯವನ್ನು ನೀವು ಪ್ರೀತಿಸಿ, ಬೇರೆಯವರ ಹೃದಯ ಆಮೇಲೆ ನೋಡ್ಕೊಳೋಣ!

Sudha Murty
ಕರ್ನಾಟಕ2 hours ago

Sudha Murty: ಅಮೆರಿಕದಲ್ಲಿ ಕಾರ್ಯಕ್ರಮ ಎಂದು ಸುಧಾ ಮೂರ್ತಿ ಹೆಸರಲ್ಲಿ ವಂಚನೆ; ಇಬ್ಬರ ವಿರುದ್ಧ ಕೇಸ್‌

Cauvery water Dispute
ಕರ್ನಾಟಕ2 hours ago

Cauvery Dispute : ಸಮರ್ಥವಾಗಿ ವಾದ ಮಾಡದೆ ನಮಗೆ ಸೋಲಾಯಿತೇ? ಆರೋಪದಲ್ಲಿ ನಿಜವೆಷ್ಟು? ಸುಳ್ಳೆಷ್ಟು?

Bus Accident In Raichur
ಕರ್ನಾಟಕ2 hours ago

Bus Accident: ನಿಂತಿದ್ದ ಲಾರಿಗೆ ಸಾರಿಗೆ ಬಸ್‌ ಡಿಕ್ಕಿ; 32 ಜನರಿಗೆ ಗಾಯ, ಐವರ ಸ್ಥಿತಿ ಗಂಭೀರ

DUSU Election Result
ದೇಶ3 hours ago

DUSU Election: ದೆಹಲಿ ವಿವಿಯಲ್ಲಿ ಎಬಿವಿಪಿ ದರ್ಬಾರ್;‌ ಚುನಾವಣೆಯಲ್ಲಿ ಭಾರಿ ಗೆಲುವು, ದೇಶ ಮೊದಲು ಎಂದ ಬಿಜೆಪಿ

fruits and cold cough
ಆರೋಗ್ಯ3 hours ago

Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು!

new kannada book yabli
ಕಲೆ/ಸಾಹಿತ್ಯ4 hours ago

Sunday Read: ಹೊಸ ಪುಸ್ತಕ: ಯಾಬ್ಲಿ: ಯಥಾಪ್ರಕಾರ

cryptocurrency fraud
ಅಂಕಣ4 hours ago

ಸೈಬರ್‌ ಸೇಫ್ಟಿ ಅಂಕಣ: ಅಳಿವಿನ ಅಂಚಿನಲ್ಲಿ ಝಣ ಝಣ ಕಾಂಚಾಣ!

pak human right
ಕ್ರಿಕೆಟ್4 hours ago

ವಿಸ್ತಾರ ಸಂಪಾದಕೀಯ: ಮಾನವ ಹಕ್ಕುಗಳ ಪ್ರಶ್ನೆ; ಪಾಕ್‌ ಮೊದಲು ತನ್ನ ಹುಳುಕು ಸರಿಪಡಿಸಿಕೊಳ್ಳಲಿ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ2 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

dina bhavishya
ಪ್ರಮುಖ ಸುದ್ದಿ5 hours ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ನಂಬಿದ ವ್ಯಕ್ತಿಗಳು ಮೋಸ ಮಾಡ್ತಾರೆ ಹುಷಾರ್‌!

dina bhavishya
ಪ್ರಮುಖ ಸುದ್ದಿ6 days ago

Dina Bhavishya : ಆಪ್ತರೊಂದಿಗೆ ಜಗಳವಾದೀತು ಹುಷಾರ್‌!

Dina Bhavishya
ಪ್ರಮುಖ ಸುದ್ದಿ1 week ago

Dina Bhavishya : ಈ ರಾಶಿಯವರು ಇಂದು ಮುಟ್ಟಿದ್ದೆಲ್ಲಾ ಚಿನ್ನ!

Ramalinga Reddy
ಕರ್ನಾಟಕ1 week ago

ಇನ್ಮುಂದೆ ಹೇಗಂದ್ರೆ ಹಾಗೆ ದೇವಸ್ಥಾನ ಕಟ್ಟೋ ಹಾಗಿಲ್ಲ! ರಾಮಲಿಂಗಾ ರೆಡ್ಡಿ ಮಾಸ್ಟರ್ ಪ್ಲಾನ್

Bannerghatta Park
ಆರೋಗ್ಯ1 week ago

Nipah Virus : ನಿಫಾ ವೈರಸ್‌ ಭೀತಿ; ಬನ್ನೇರುಘಟ್ಟ ಪಾರ್ಕ್‌ನಲ್ಲಿ ಹೈ ಅಲರ್ಟ್

Villagers exclude menstruating women
ಕರ್ನಾಟಕ1 week ago

Tumkur News : ಮುಟ್ಟಾದ ಮಹಿಳೆಯರನ್ನು ಗ್ರಾಮದಿಂದ ಹೊರಗಿಟ್ಟು ಮೌಡ್ಯಾಚರಣೆ!

dina bhavishya
ಪ್ರಮುಖ ಸುದ್ದಿ1 week ago

Dina Bhavishya : ಈ ದಿನ ಭೂಮಿ, ಆಸ್ತಿ ಖರೀದಿಸುವ ಮುನ್ನ ಎಚ್ಚರ!

ಟ್ರೆಂಡಿಂಗ್‌