ಅಂಕಣ
ವಾರದ ವ್ಯಕ್ತಿಚಿತ್ರ : ಪಠಾಣ್ ಸಿನಿಮಾ ಮೂಲಕ ಗತವೈಭವ ಸೃಷ್ಟಿಸಲಿದ್ದಾರಾ ಬಾಲಿವುಡ್ ಬಾದ್ಶಾ ಶಾರುಖ್ ಖಾನ್?
ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ನಾಲ್ಕು ವರ್ಷಗಳ ನಂತರ ʼಪಠಾಣ್ʼ
(pathan Movie) ಸಿನಿಮಾದ ಮೂಲಕ ಹಿರಿತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಶಾರುಖ್ ಖಾನ್ (Sharukh Khan) ಮಾತ್ರವಲ್ಲ, ಬಾಲಿವುಡ್ನ ಭವಿಷ್ಯದ ದಿಕ್ಸೂಚಿಯೂ ಹೌದು.
| ಮಂದಾರ ಸಾಗರ
ಅದು 1990ರ ದಶಕ. ಆಗ ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್ ಮಿಂಚಿದಷ್ಟು ಬೇರಾವುದೇ ಭಾಷೆಯ ಸಿನಿಮಾಗಳು ಮಿಂಚುತ್ತಿರಲಿಲ್ಲ. ಆ ಕಾಲದಲ್ಲಿಯೇ ಹೀರೊ ಆಗಿ ಮಿಂಚಿ ವರ್ಷಕ್ಕೆ ನಾಲ್ಕೈದು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದು ಶಾರುಖ್ ಖಾನ್(Sharukh Khan). ಬಾಲಿವುಡ್ ಅಂಗಳದಲ್ಲಿ ಅವರಿಟ್ಟ ಹೆಜ್ಜೆಯನ್ನು ಗುರುತಿಸಿಯೇ ಅವರ ಅಭಿಮಾನಿಗಳು ಅವರಿಗೆ ‘ಬಾಲಿವುಡ್ ಬಾದ್ಶಾ’ ಎನ್ನುವ ಬಿರುದು ಕೊಟ್ಟಿದ್ದು. ಬಾಲಿವುಡ್ಅನ್ನೇ ಆಳಿದ್ದ ಸರದಾರ ಕಳೆದ ಕೆಲವು ವರ್ಷಗಳಲ್ಲಿ ಎಡವಿ ಬಿದ್ದಿದ್ದಂತು ಸುಳ್ಳಲ್ಲ. 2018ರಲ್ಲಿ ಬಿಡುಗಡೆಯಾದ ʼಜೀರೊʼ ಸಿನಿಮಾ ಕೂಡ ಬಾದ್ಶಾಗೆ ಗೆಲುವು ತಂದುಕೊಡಲಿಲ್ಲ. ಅದಾದ ನಂತರ ನಾಲ್ಕು ವರ್ಷಗಳ ಕಾಲ ಯಾವುದೇ ಸಿನಿಮಾಗಳಲ್ಲಿ ನಟಿಸದೆ ಸುಮ್ಮನಿದ್ದ ಶಾರುಖ್ ಇದೀಗ ಮತ್ತೆ ಹಿರಿತೆರೆಗೆ ಧುಮುಕಿದ್ದಾರೆ. ಪಠಾಣ್ (pathan Movie) ಮೂಲಕ 57 ವರ್ಷದ ನಟ ಮಿಂಚಲಾರಂಭಿಸಿದ್ದಾರೆ.
ಇದು ಬಿಡುಗಡೆಗೂ ಮೊದಲೇ ಭಾರಿ ಸುದ್ದಿಯಾದಂತಹ ಸಿನಿಮಾ. ಬಿಡುಗಡೆಗೂ ಮೊದಲೇ ಟ್ರೇಲರ್ ಲೀಕ್ ಆದದ್ದು, ಬೇಷರಮ್ ರಂಗ್ ಹಾಡಿನಲ್ಲಿ ದೀಪಿಕಾ ಅವರು ಉಡುಗೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ಅಸ್ಸಾಂ ಮುಖ್ಯಮಂತ್ರಿಗೆ ಶಾರುಖ್ ಅವರು ಮಧ್ಯರಾತ್ರಿ 2 ಗಂಟೆಗೆ ಕರೆ ಮಾಡಿದ್ದು, ಸಿನಿಮಾದ ಟಿಕೆಟ್ಗಳು ದಾಖಲೆಯ ಪ್ರಮಾಣದಲ್ಲಿ ಮುಂಗಡ ಬುಕ್ಕಿಂಗ್ ಆಗಿದ್ದು ಸೇರಿ ಎಲ್ಲವೂ ದೊಡ್ಡ ಮಟ್ಟದ ಸುದ್ದಿಯೇ ಆಗಿತ್ತು.
ಇದನ್ನೂ ಓದಿ: Pathaan Movie: ವಿಶ್ವಾದ್ಯಂತ ಪಠಾಣ್ ಗರ್ಜನೆ: ಭಾರತದಲ್ಲಿ 300 ಪ್ರದರ್ಶನಗಳನ್ನು ಹೆಚ್ಚಿಸಿದ ಚಿತ್ರತಂಡ
ಇದೀಗ ತೆರೆ ಕಂಡಿರುವ ಸಿನಿಮಾ 100ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆಯಾದ ಮೊದಲ ಐದೇ ದಿನಗಳಲ್ಲಿ 200 ಕೋಟಿ ರೂ. ಬಾಚಿಕೊಳ್ಳುವ ಸಾಧ್ಯತೆಯಿದೆ ಎನ್ನುತ್ತಿದ್ದಾರೆ ಸಿನಿಮಾ ರಂಗದ ಪಂಡಿತರು. ಶಾರುಖ್ ಜೀವನವನ್ನು ಈ ಸಿನಿಮಾ ಬದಲಿಸಬಹುದೇ? ತಳ ಹಿಡಿದಿರುವ ಬಾಲಿವುಡ್ ಬದುಕು ಈ ಸಿನಿಮಾದಿಂದಾಗಿ ಮತ್ತೆ ಚಿಗುರಬಹುದೇ ಎಂಬ ಪ್ರಶ್ನೆ, ನಿರೀಕ್ಷೆ, ಕುತೂಹಲ ಮೂಡಿದೆ.
ಶಾರುಖ್ ಬರೋಬ್ಬರಿ ನಾಲ್ಕು ವರ್ಷಗಳ ನಂತರ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅವರಿಗೆ ನೆಗೆಟಿವ್ ಆಗಬಹುದೇ ಎನ್ನುವ ಪ್ರಶ್ನೆಗೆ ಜನರು “ಇಲ್ಲವೇ ಇಲ್ಲ” ಎನ್ನುವ ಉತ್ತರ ಕೊಡುತ್ತಾರೆ. “ನಾಲ್ಕು ವರ್ಷಗಳ ಅಂತರವಿದೆ ಎನ್ನುವುದು ನಿಜ. ಆದರೆ ಈ ನಾಲ್ಕೂ ವರ್ಷಗಳಲ್ಲಿ ಶಾರುಖ್ ಆಗಾಗ ಸುದ್ದಿಯಾಗುತ್ತಲೇ ಇದ್ದವರು. ಅದಷ್ಟೇ ಅಲ್ಲದೆ ದಶಕಗಳ ಕಾಲ ರಂಜಿಸಿ ಅಪಾರ ಜನರ ಪ್ರೀತಿ ಗಳಿಸಿದವರು. ಈ ನಾಲ್ಕು ವರ್ಷಗಳಲ್ಲಿ ಎರಡು ವರ್ಷಗಳ ಕಾಲ ಲಾಕ್ಡೌನ್ ಇತ್ತು. ಆಗ ಬರೀ ಶಾರುಖ್ ಮಾತ್ರವಲ್ಲ ಪೂರ್ತಿ ಚಿತ್ರರಂಗವೇ ಸುಮ್ಮುನೆ ಕುಳಿತಿತ್ತು. ಹಾಗಾಗಿ ಈ ನಾಲ್ಕು ವರ್ಷ ಎನ್ನುವುದು ದೊಡ್ಡ ಅಂತರವೇನು ಆಗುವುದಿಲ್ಲ. ಅಂತರ ಇದೆ ಎನ್ನುವುದಕ್ಕೆ ಅವರ ಹೊಸ ಲುಕ್ ಬಗ್ಗೆ ಕಾತರ ಹೆಚ್ಚಾಗಿದೆ ಎನ್ನುವುದು ಸತ್ಯ” ಎನ್ನುತ್ತಾರೆ ಅಭಿಮಾನಿಗಳು.
ಎಲ್ಲ ಪಾತ್ರಕ್ಕೂ ಸೈ
“ಹೆಣ್ಣು ಮಕ್ಕಳಿಗೆ ಶಾರುಖ್ ಸ್ಟೈಲ್ ಇಷ್ಟವಾದರೆ, ಹಿರಿಯರಿಗೆ ಶಾರುಖ್ ಎಲ್ಲ ರೀತಿಯ ಪಾತ್ರದಲ್ಲಿ ಮಿಂಚುವುದು ಇಷ್ಟ. ರಾಜ್, ರಾಹುಲ್ ಹೀಗೆ ಎಷ್ಟೋ ಪಾತ್ರಗಳನ್ನು ಜನರು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ” ಎನ್ನುವುದು ಜನರ ಅಭಿಪ್ರಾಯ. ಶಾರುಖ್ ಖಾನ್ ತಮ್ಮ ಸಿನಿಮಾ ಜೀವನದಲ್ಲಿ ಎಲ್ಲ ರೀತಿಯ ಪಾತ್ರಗಳಲ್ಲೂ ಮಿಂಚಿದ್ದಾರೆ. ಹಾಸ್ಯಮಯ ಪಾತ್ರಗಳಿಂದ ಹಿಡಿದು, ಅತ್ಯಂತ ಗಂಭೀರ ಪಾತ್ರದವರೆಗೂ ಎಲ್ಲದರಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದರಿಂದಾಗಿ ಅವರದ್ದೇ ಆದ ಬ್ರ್ಯಾಂಡ್ ಒಂದು ಇದೆ ಎನ್ನುವುದು ಅಭಿಮಾನಿಗಳ ಮಾತು.
ಬದಲಾಗದ ನಟ
ಶಾರುಖ್ ಜನರ ಮೆಚ್ಚಿನ ನಟ. ಅವರನ್ನು ಅವರ ಮನೆಯ ಬಾಲ್ಕನಿಯಲ್ಲೇ ನೋಡಿ ಅಥವಾ ವಿಮಾನ ನಿಲ್ದಾಣದಲ್ಲಿಯೇ ನೋಡಿ, ಅವರಿರುವ ರೀತಿ ಒಂದೇ. ಎಲ್ಲಿಯೂ ಅವರ ನಡವಳಿಕೆಯಲ್ಲಿ ಬದಲಾವಣೆ ಕಾಣುವುದೇ ಇಲ್ಲ. ಈ ರೀತಿಯ ಒಳ್ಳೆ ಅಭ್ಯಾಸಗಳು ಅವರನ್ನು ಜನರಿಗೆ ಇನ್ನಷ್ಟು ಹತ್ತಿರವಾಗಿಸಿವೆ ಎನ್ನುತ್ತಾರೆ ಬಾಲಿವುಡ್ ಮಂದಿ. ಹಾಗಾಗಿಯೇ ಮೊದಲು ಮುಂಬೈನಲ್ಲಿ ಅಮಿತಾಭ್ ಮನೆಯನ್ನು ಹುಡುಕಿಕೊಂಡು ಹೋಗುತ್ತಿದ್ದ ಜನರು 1990ರ ಕಾಲದಿಂದಲೂ ಶಾರುಖ್ ಮನೆಯಾದ ʼಮನ್ನತ್ʼ ಅನ್ನೂ ಹುಡುಕೊಂಡು ಹೋಗುತ್ತಿದ್ದಾರೆ.
ಬ್ರ್ಯಾಂಡ್ ಅಂಬಾಸಿಡರ್
ಶಾರುಖ್ ಖಾನ್ ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಬ್ರ್ಯಾಂಡ್ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಡಿಶ್ ಟಿವಿ, ಹುಂಡೈ, ಲಕ್ಸ್, ಬೈಜುಸ್, ರಿಲಯನ್ಸ್ ಜಿಯೊ, ಎಲ್ಜಿ ಟಿವಿ, ಪೆಪ್ಸಿ, ಥಂಬ್ಸ್ ಅಪ್, ಡೆನ್ವರ್, ಐಸಿಐಸಿಐ ಬ್ಯಾಂಕ್, ಫೇರ್ ಆಂಡ್ ಹ್ಯಾಂಡ್ಸಂ ಸೇರಿ ಹಲವಾರು ಜಾಹೀರಾತುಗಳಲ್ಲಿ ಮಿಂಚಿದ್ದಾರೆ. ಆ ಮೂಲಕ ಜನರ ಕಣ್ಣೆದುರೇ ಇದ್ದಂತಿದ್ದರು. ಅದಷ್ಟೇ ಅಲ್ಲದೆ ದುಬೈ ಪ್ರವಾಸೋದ್ಯಮದ ಮುಖವಾಗಿ, ಪಶ್ಚಿಮ ಬಂಗಾಳದ ಬ್ರ್ಯಾಂಡ್ ಅಂಬಾಸಿಡರ್ ಆಗಿಯೂ ಕಾಣಿಸಿಕೊಂಡಿದ್ದರು.
ವಿವಾದಗಳೂ ಪ್ಲಸ್ ಪಾಯಿಂಟ್ಗಳೇ
ಶಾರುಖ್ ಖಾನ್ ಅವರ ಪಠಾಣ್ ಸಿನಿಮಾದ ಸುತ್ತ ಸುಳಿದಾಡಿದ ವಿವಾದಗಳು ಸಾಕಷ್ಟಿವೆ. ಆದರೆ ಈ ಎಲ್ಲ ವಿವಾದಗಳೂ ಸಿನಿಮಾಕ್ಕೆ ಒಂದು ರೀತಿಯಲ್ಲೇ ಪ್ರಚಾರವೇ ಎನ್ನುವುದು ತಜ್ಞರ ಅಭಿಪ್ರಾಯ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆದ ಮಾತ್ರಕ್ಕೆ ಜನರು ಆ ಸಿನಿಮಾವನ್ನು ನೋಡದೇ ಕುಳಿತುಬಿಡುವುದಿಲ್ಲ. ಯಾರೋ ಒಬ್ಬರು ಮಾಡುವ ಟ್ರೋಲ್ ಬೇರಿನ್ನಾರಿಗೂ ಸಿನಿಮಾ ನೋಡುವಂತೆ ಪ್ರೇರೇಪಿಸುತ್ತದೆ. ಹಾಗಾಗಿ ವಿವಾದಗಳು ಎಂದಿಗೂ ಸಿನಿಮಾಕ್ಕೆ ಹಿನ್ನಡೆ ಉಂಟು ಮಾಡುವುದಿಲ್ಲ ಎಂದಿದ್ದಾರೆ ತಜ್ಞರು.
ಬಾಲಿವುಡ್ ಭವಿಷ್ಯ
ಪಠಾಣ್ ಸಿನಿಮಾ ಗೆಲ್ಲುವುದು ಅಥವಾ ಸೋಲುವುದು ಕೇವಲ ಪಠಾಣ್ ಸಿನಿಮಾದ ಭವಿಷ್ಯವಾಗಿರುವುದಿಲ್ಲ. ಇದು ಪೂರ್ತಿ ಬಾಲಿವುಡ್ನ ಭವಿಷ್ಯವೇ ಆಗಿರುತ್ತದೆ. ದಕ್ಷಿಣ ಭಾರತದ ಸಿನಿಮಾಗಳು ದೇಶ ಮಾತ್ರವಲ್ಲದೆ ವಿಶ್ವದಲ್ಲೂ ಸುದ್ದಿಯಾಗುತ್ತಿರುವ ಈ ಸಮಯದಲ್ಲಿ ಬಾಲಿವುಡ್ನ ಸಿನಿಮಾಗಳು ಒದ್ದಾಡುತ್ತಿರುವುದು ಸುಳ್ಳಲ್ಲ. ನಮ್ಮ ಸಿನಿಮಾಗಳು ಸಾವಿರಾರು ಕೋಟಿ ರೂ. ಗಳಿಕೆ ಮಾಡಿಕೊಳ್ಳಲಾರಂಭಿಸಿದ್ದಾರೆ ಬಾಲಿವುಡ್ನ ಸಿನಿಮಾಗಳು 100 ಕೋಟಿ ಸಂಪಾದನೆ ದಾಟುವುದೂ ಕಷ್ಟವಾಗಿ ಕುಳಿತಿದೆ. ಈ ಸಂದರ್ಭದಲ್ಲಿ ಪಠಾಣ್ ಸಿನಿಮಾ ಬಂದಿದ್ದು, ಬಾಲಿವುಡ್ನಲ್ಲಿ ಮತ್ತೊಂದು ಆಶಾಭಾವ ಹುಟ್ಟಿಕೊಂಡಿದೆ. ಈ ಸಿನಿಮಾ ಹಿಟ್ ಆದರೆ ಮತ್ತೆ ಹಿಂದಿ ಸಿನಿಮಾಗಳಿಗೆ ಬೆಲೆ ಹೆಚ್ಚಬಹುದು, ಹಿಂದಿ ಸಿನಿಮಾಗಳು ಮತ್ತೆ ದೇಶಾದ್ಯಂತ ಮೆಚ್ಚುಗೆ ಪಡೆಯಬಹುದು ಎನ್ನುವ ನಿರೀಕ್ಷೆಯಿದೆ.
ಶಾರುಖ್ಗೆ 2023ನೇ ಇಸವಿ ಪ್ರಮುಖ
ಶಾರುಖ್ ಖಾನ್ ನಾಲ್ಕು ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರಾದರೂ ಈ ವರ್ಷ ಒಂದೇ ಸಿನಿಮಾಕ್ಕೆ ಅವರ ಪ್ರಯಾಣ ನಿಲ್ಲುತ್ತಿಲ್ಲ. ಪಠಾಣ್ ನಂತರ ʼಜವಾನ್ʼ ಮತ್ತು ʼದುಂಕಿʼ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ಮೂರು ಸಿನಿಮಾಗಳಲ್ಲಿ ಕನಿಷ್ಠ ಒಂದು ಅಥವಾ ಎರಡು ಸಿನಿಮಾವಾದರೂ ಹಿಟ್ ಆಗಲೇಬೇಕಿದೆ. ಹಾಗಾದರೆ ಮಾತ್ರ ಶಾರುಖ್ಗೆ ಸಿನಿಮಾ ರಂಗದಲ್ಲಿ ಇನ್ನಷ್ಟು ಅವಕಾಶಗಳು ಸಿಗಬಹುದು. ಅವರಿಗೆ ಒಂದು ಹಿಟ್ ಸಿನಿಮಾ ಕೂಡ ನೂರು ಅವಕಾಶಗಳ ದಾರಿಯನ್ನು ತೆರೆಯಬಹುದು. ಈ ಮೂರು ಸಿನಿಮಾಗಳ ಮೇಲೇ ಶಾರುಖ್ ಅವರ ಮುಂದಿನ ಭವಿಷ್ಯವಿದೆ ಎನ್ನುತ್ತಾರೆ ಬಾಲಿವುಡ್ ತಜ್ಞರು.
57ನೇ ವಯಸ್ಸಿನಲ್ಲೂ ಏಟ್ ಪ್ಯಾಕ್ಸ್!
ಸಿನಿಮಾ, ನಟನೆ, ಪಾತ್ರದ ಬೇಡಿಕೆ ವಿಚಾರದಲ್ಲಿ ಶಾರುಖ್ ಖಾನ್ ಅವರನ್ನು ಮೀರಿಸುವವರೇ ಇಲ್ಲ. ಅಷ್ಟರಮಟ್ಟಿಗೆ, ಅವರು ಬದ್ಧತೆ ಹೊಂದಿದ್ದಾರೆ. 57ನೇ ವಯಸ್ಸಿನಲ್ಲೂ ಪಠಾಣ್ ಸಿನಿಮಾಗಾಗಿ ಅವರು ಏಟ್ ಪ್ಯಾಕ್ ಆ್ಯಬ್ಸ್ ಹೊಂದಿದ್ದಾರೆ. ಸಾಮಾನ್ಯವಾಗಿ 50 ವರ್ಷ ದಾಟಿದ ಹೀರೊಗಳು ಏಟ್ ಪ್ಯಾಕ್ ಆ್ಯಬ್ಸ್ ಹೊಂದಲು ಬಯಸುವುದಿಲ್ಲ. ಆದರೆ, ವಯಸ್ಸಿನ ಲೆಕ್ಕಾಚಾರವನ್ನೂ ಮೀರಿ, ತಿಂಗಳುಗಟ್ಟಲೆ ಶ್ರಮವಹಿಸಿ, ಶಾರುಖ್ ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ, ಅಭಿಮಾನಿಗಳು ಅವರನ್ನು ತಲೆಮೇಲೆ ಹೊತ್ತು ಮೆರೆಸುತ್ತಾರೆ.
ವಿಶ್ವದ ಮೂರನೇ ಶ್ರೀಮಂತ ನಟ
ಶಾರುಖ್ ನಾಲ್ಕು ವರ್ಷಗಳ ಕಾಲ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಅವರ ದುಡಿಮೆಯೇನೂ ಕಡಿಮೆಯಾಗಿಲ್ಲ. ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಅವರು ಕೋಟ್ಯಂತರ ರೂ. ಸಂಪಾದಿಸಿದ್ದಾರೆ. ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್ 2021ರಲ್ಲಿ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಶಾರುಖ್ ಖಾನ್ ಇಡೀ ವಿಶ್ವದಲ್ಲೇ ಮೂರನೇ ಅತ್ಯಂತ ಶ್ರೀಮಂತ ನಟರಾಗಿದ್ದಾರೆ. ಅವರ ಆಸ್ತಿ ಮೌಲ್ಯ 6,270 ಕೋಟಿ ರೂ.ಗಿಂತ ಹೆಚ್ಚಿದೆ!
ಒಟ್ಟಿನಲ್ಲಿ 57ನೇ ವಯಸ್ಸಿನಲ್ಲೂ ದೇಶದ ಜನ ಮೆಚ್ಚುವಂತಹ, ಈಗಲೂ ಫಿಟ್ನೆಸ್ ಕಾಪಾಡಿಕೊಂಡಿರುವ ಶಾರುಖ್ ಖಾನ್ ಅವರು ಪಠಾಣ್ ಸಿನಿಮಾ ಮೂಲಕ ತಮ್ಮ ವೃತ್ತಿ ಹಾಗೂ ಬಾಲಿವುಡ್ಅನ್ನೇ ಸರಿದಾರಿಗೆ ತಂದಿದ್ದಾರೆ ಎಂದೇ ಹೇಳಲಾಗುತ್ತಿದೆ. ಶಾರುಖ್ ಖಾನ್ ಅವರ ಗತವೈಭವ ಮರುಕಳಿಸಲು, ಬಾಲಿವುಡ್ ಮಂದಿಯೂ ಹಿಟ್ ಸಿನಿಮಾ ಕಾಣುವಂತಾಗಿದ್ದರೆ ಅದಕ್ಕೆ ಪಠಾಣ್ ಸಿನಿಮಾ ಕಾರಣವಾಗಿದೆ. ಹಾಗೆಯೇ, ಇದು ಮುಂದಿನ ದಿನಗಳ ನಿರೀಕ್ಷೆಯನ್ನೂ ಹೆಚ್ಚಿಸಿದೆ.
ಅಂಕಣ
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ
ಪಾಕಿಸ್ತಾನದ ಜಿಹಾದಿಗಳು ಒಂದೆಡೆ ಮಾದಕ ದ್ರವ್ಯ ಕಳ್ಳ ಸಾಗಣೆ ಮೂಲಕ, ಇನ್ನೊಂದೆಡೆ ಪ್ರತ್ಯೇಕತಾವಾದಿ ಖಲಿಸ್ತಾನಿಗಳಿಗೆ ಬೆಂಬಲಿಸುವ ಮೂಲಕ ಭಾರತದ ವಿರುದ್ಧ ಪರೋಕ್ಷ ಯುದ್ಧವನ್ನೇ ಸಾರಿದ್ದಾರೆ. ಪಂಜಾಬ್ ಸರ್ಕಾರ ಕುತಂತ್ರಿಗಳ ಕೈಯಲ್ಲಿದೆ. ಪಂಜಾಬ್ ನಾಶವಾಗುತ್ತಿರುವುದನ್ನು ತುರ್ತಾಗಿ ತಪ್ಪಿಸಲೇಬೇಕಾಗಿದೆ.
ಈ ಅಂಕಣವನ್ನು ಇಲ್ಲಿ ಕೇಳಿ:
ಭಾರತದ ಶತ್ರುಗಳೇ ಹಾಗೆ. ಬಹಳ ಶಕ್ತಿಶಾಲಿಗಳು. ಶತಶತಮಾನಗಳಿಂದ ನಡೆಯುತ್ತಿರುವ ಈ ಪರೋಕ್ಷ ದಾಳಿಯನ್ನು, ಅವರ ವ್ಯೂಹವನ್ನು, ಅವರ ಕುತಂತ್ರಗಳನ್ನು ನಾವು ಅರ್ಥ ಮಾಡಿಕೊಳ್ಳಲೇಬೇಕಾದ ಮತ್ತು ಸಮಸ್ಯಾ ಪರಿಹಾರಕ್ಕೆ ಸನ್ನದ್ಧರಾಗಬೇಕಾದ ಸ್ಥಿತಿ ಬಂದೊದಗಿದೆ. ಬ್ರಿಟಿಷರು, ಬ್ರಿಟಿಷರ “ಪ್ರೀತಿಪಾತ್ರರು”, ಜಿಹಾದಿಗಳು, ಕ್ರುಸೇಡಿಗರು, ಮೆಕಾಲೆ-ವಾದಿಗಳು, ಕಮ್ಯೂನಿಸ್ಟರು… ಹೀಗೆ ಶತ್ರು ಸೈನ್ಯವು ದೊಡ್ಡದಿದೆ, ಅನೇಕ ಆಯಾಮಗಳಲ್ಲಿ ಭಾರತವನ್ನು ಧ್ವಂಸ ಮಾಡಲು ಈಗಲೂ ಕಾಯುತ್ತಿದೆ.
ಸಿಖ್ ಮತೀಯರನ್ನು, ಸಿಖ್ ಸಮುದಾಯವನ್ನು ನಾವು ಅರ್ಥ ಮಾಡಿಕೊಳ್ಳಲು ಸೋತಿದ್ದೇವೆ. ಸಭೆಯೊಂದರಲ್ಲಿ ಕೋಡಂಗಿ ಭಾಷಣಕಾರನೊಬ್ಬ “ಒಬ್ಬ ಸರ್ದಾರ್ಜಿ ಇದ್ದ…..” ಎಂದು ಶುರು ಹಚ್ಚಿಕೊಂಡನೋ ನಾವೆಲ್ಲಾ ನಾಚಿಕೆಯಿಲ್ಲದೇ ನಗಲಾರಂಭಿಸುತ್ತೇವೆ. ಜೋಕು ಹೇಳುವ ಮೊದಲೇ ನಮಗೆ ಅದರಲ್ಲಿ ಹಾಸ್ಯ ಕಾಣುತ್ತದೆ. ಈ ಸಿಖ್ಖರು ಹುಟ್ಟಾ ವೀರಯೋಧರು, ರಜಪೂತರಂತೆ ಕ್ಷಾತ್ರಕ್ಕೇ ಹೆಸರಾದವರು. ಶತಶತಮಾನಗಳ ಕಾಲ ಭಾರತದ ಮೇಲಿನ ಜಿಹಾದಿಗಳ – ಬ್ರಿಟಿಷರ ದಾಳಿಗೆ ಎದೆಯೊಡ್ಡಿದವರು, ಶತ್ರುಗಳಿಗೆ ಸಿಂಹ-ಸ್ವಪ್ನರೆನಿಸಿದವರು. ಸಿಖ್ಖರ 9ನೆಯ ಗುರು ತೇಗ್ ಬಹಾದುರ್ ಅವರನ್ನು ಔರಂಗಜೇಬನು ಅಮಾನುಷವಾಗಿ ಕೊಲ್ಲಿಸಿದ. ಅವರ ಮಗ ಗುರು ಗೋವಿಂದ ಸಿಂಹರು ತಮ್ಮ 9ನೆಯ ವಯಸ್ಸಿನಲ್ಲಿಯೇ ಸಿಖ್ಖರ 10ನೆಯ ಗುರು ಆದರು. ಅವರ ಕಣ್ಣೆದುರಿಗೇ ಅವರ ನಾಲ್ಕೂ ಮಕ್ಕಳ ಬಲಿದಾನವಾಯಿತು. ಸ್ವತಃ ಅವರನ್ನು ಸಹ ಅವರ 41ನೆಯ ವಯಸ್ಸಿನಲ್ಲಿ ಜಿಹಾದಿಗಳು ಮೋಸದಿಂದ ಕೊಂದರು. ಸಾಮಾನ್ಯಯುಗದ 17ನೆಯ ಶತಮಾನದಲ್ಲಿ ಗುರು ಗೋವಿಂದ ಸಿಂಹರು ಇಡೀ ಸಿಖ್ ಸಮುದಾಯವನ್ನೇ ವೀರರ ಪಡೆಯನ್ನಾಗಿ ಬೆಳೆಸಿದರು.
ಇತ್ತೀಚಿನ ಶತಮಾನಗಳಲ್ಲಿ ಜಿಹಾದಿಗಳ ವಿರುದ್ಧ, ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ಅದ್ಭುತವಾದ ಹೋರಾಟವನ್ನು ಮಾಡಿದವರೇ ಈ ಸಿಖ್ಖರು. 19ನೆಯ ಶತಮಾನದಲ್ಲಿ ಪಂಜಾಬಿನ ಸಿಂಹ ಎಂದೇ ಹೆಸರಾದ ಮಹಾರಾಜಾ ರಣಜಿತ್ ಸಿಂಹರು ಸಿಖ್ ಸಾಮ್ರಾಜ್ಯವನ್ನೇ ನಿರ್ಮಿಸಿದರು. ಅವರಿರುವವರೆಗೆ ಬ್ರಿಟಿಷರು ಭಾರತವನ್ನು ಆಪೋಶನ ತೆಗೆದುಕೊಳ್ಳಲು ಬಿಟ್ಟಿರಲಿಲ್ಲ. ತಮ್ಮ ಸಿಖ್ ಸೈನಿಕರಿಗೆ ಜಮೀನು ನೀಡಿ, ಶಾಂತಿಕಾಲದಲ್ಲಿ ಕೃಷಿಕರಾಗಲು ಅನುವು ಮಾಡಿಕೊಟ್ಟವರೇ ಈ ರಣಜಿತ್ ಸಿಂಹರು. ನಾವೋ ಇವೆಲ್ಲಾ ಮರೆತು ಸಿಖ್ಖರು ದಡ್ಡರು, ಪೆದ್ದರು, ಮೂರ್ಖರು ಎಂದುಕೊಂಡುಬಿಟ್ಟಿದ್ದೇವೆ. ಹಾಗೆ ಪರಿಭಾವಿಸುವ ನಾವು ಮೂರ್ಖರು, ಅಷ್ಟೇ. ಈ ಸಿಖ್ಖರು ಎಂತಹ ಶ್ರಮಜೀವಿಗಳೆಂದರೆ, ಭಿಕ್ಷೆ ಬೇಡುವ ಒಬ್ಬ ಸಿಖ್ಖನೂ ಎಲ್ಲಿಯೂ ಸಿಕ್ಕುವುದಿಲ್ಲ, ಎಂಬ ಖ್ಯಾತಿಯೇ ಇದೆ.
ಹೀಗಿದ್ದೂ ಸಿಖ್ಖರ ಕುರಿತಾಗಿ ನಕಾರಾತ್ಮಕವಾದ ಮತ್ತು ತೀರಾ ಲಘುವಾದ ಅಭಿಪ್ರಾಯಗಳು ಹುಟ್ಟುವಂತೆ ಮಾಡಲಾಗಿದೆ. ಸಿಖ್ಖರ ಕುರಿತ ಜೋಕುಗಳ ಪುಸ್ತಕಗಳೇ ಬಂದಿವೆ. ಹೀಗೆಯೇ, ಸಿಂಧಿಗಳ ಬಗೆಗೂ ನಕಾರಾತ್ಮಕವಾದ ಮತ್ತು ಅಶ್ಲೀಲವಾದ ಜೋಕುಗಳನ್ನು ಹುಟ್ಟಿಹಾಕಲಾಗಿದೆ, ಕೆಟ್ಟ ವಾತಾವರಣವನ್ನೇ ಸೃಷ್ಟಿಸಲಾಗಿದೆ. ಶತಶತಮಾನಗಳ ಕಾಲ ಜಿಹಾದಿಗಳ ಹಿಂಸೆಗೆ, ಅತ್ಯಾಚಾರಕ್ಕೆ ತುತ್ತಾಗಿ, ಸಾಲದೆಂಬಂತೆ ಮತ್ತೆ ದೇಶವಿಭಜನೆಯ ಕಾಲದಲ್ಲಿ ಇನ್ನಷ್ಟು ನರಹತ್ಯಾಕಾಂಡ, ಅತ್ಯಾಚಾರಗಳಿಗೆ ಬಲಿಯಾದ ಸಿಂಧಿಗಳ ಬಗೆಗೂ ಇದೇ ಬಗೆಯ ಅನಗತ್ಯ ದ್ವೇಷ, ವಿರೋಧಗಳನ್ನು ಗಮನಿಸಿ, ನಾನೇ ಸ್ವತಃ ಅಚ್ಚರಿಪಟ್ಟಿದ್ದೇನೆ. ಭಾರತದ್ವೇಷಿಗಳ ಕಬಂಧ ಬಾಹುಗಳು ಎಷ್ಟು ಉದ್ದ ಎಂದರೆ, ನಮ್ಮ ಕೆಲವು ಕನ್ನಡ ಹೋರಾಟಗಾರರು ಕೆಲವು ದಶಕಗಳ ಹಿಂದೆ, ಸಿಂಧಿಗಳ ಬಗೆಗೆ ಕೆಂಡ ಕಾರುತ್ತಿದ್ದರು ಮತ್ತು ಕನ್ನಡವನ್ನು ನಾಶ ಮಾಡಿ ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದ ಟಿಪ್ಪುವನ್ನು ಹೊಗಳಿಹಾಡುತ್ತಿದ್ದರು.
ಇವೆಲ್ಲಾ ಸರಳವಾಗಿ ಕಾಣುವುದಿಲ್ಲ. ಇವೆಲ್ಲಾ ಭಾರತ-ದ್ವೇಷಿ ಮಾಫಿಯಾದ ಅಗೋಚರ ಕೈಗಳು.
ನೂರಾರು ವರ್ಷಗಳಿಂದ ಸಿಖ್ ಸಮುದಾಯವನ್ನು ಪಕ್ಕಕ್ಕೆ ಸರಿಸುವ, ಹಿಂದುಗಳಿಂದ ಬೇರೆ ಮಾಡುವ, ಪ್ರತ್ಯೇಕತಾಭಾವವನ್ನು ಬೆಳೆಸುವ ಷಡ್ಯಂತ್ರವು ನಡೆಯುತ್ತಲೇ ಇದೆ. ಮಹಾರಾಜಾ ರಣಜಿತ್ ಸಿಂಹರ ಮರಣಾನಂತರ ಕುತಂತ್ರಿ ಬ್ರಿಟಿಷರು, 19ನೆಯ ಶತಮಾನದಲ್ಲಿಯೇ “ಸಿಖ್ ರೆಜಿಮೆಂಟ್” ಸ್ಥಾಪಿಸಿ, ಎರಡು ಮಹಾಯುದ್ಧಗಳೂ ಸೇರಿದಂತೆ, ಅನೇಕ ಯುದ್ಧಗಳಲ್ಲಿ ಬಳಸಿಕೊಂಡು ಬಿಸಾಡಿದರು. ಸಿಖ್ಖರಿಗೆ ಕೊಡಬೇಕಾಗಿದ್ದ ಗೌರವವನ್ನು, ಮಹತ್ತ್ವವನ್ನು, ಅಧಿಕಾರವನ್ನು ನೀಡಲೇ ಇಲ್ಲ. ಗುಟ್ಟಾಗಿ ತಮ್ಮ ಪ್ರೀತಿಪಾತ್ರ ದಳ್ಳಾಳಿಗಳನ್ನೇ ಬೆಳೆಸಿದರು. ದೇಶವಿಭಜನೆಯಾದಾಗ ಜಿಹಾದಿಗಳಿಗೆ ಪಾಕಿಸ್ತಾನ ಸಿಕ್ಕಿತು. ನೂರಾರು ವರ್ಷಗಳ ಕಾಲ ಬ್ರಿಟಿಷರಿಗೆ ಸೇವೆ ಸಲ್ಲಿಸಿದ ಸಿಖ್ಖರು ಬರೀ ನರಹತ್ಯಾಕಾಂಡ, ಅತ್ಯಾಚಾರಗಳನ್ನು ಎದುರಿಸಬೇಕಾಯಿತು.
ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಅಂತಃಸ್ಫೋಟದ ಅಂಚಿನಲ್ಲಿ ಪಾಪಿಸ್ತಾನ
ಅಕಾಲಿದಳವನ್ನು ನಿಗ್ರಹಿಸಲು ಇಂದಿರಾ ಗಾಂಧಿಯವರು ಭಿಂದ್ರನ್ ವಾಲೆ ಎಂಬ ಪ್ರತ್ಯೇಕತಾವಾದಿಯನ್ನು ಬೆಳೆಸಿದರು. ಅದು ಇನ್ನೊಂದು “ಫ್ರಾಂಕೆನ್ಸ್ಟೈನ್ ಕತೆ”ಯಾಯಿತು. ಆತ ಅಮೃತಸರದ ಸ್ವರ್ಣಮಂದಿರವನ್ನೇ ಖಲಿಸ್ತಾನಿಗಳ ಅಡ್ಡಾ ಮಾಡಿಕೊಂಡುಬಿಟ್ಟ. ಅನಂತರದ ಜೂನ್ 1984ರಲ್ಲಿ ನಡೆದ “ಆಪರೇಷನ್ ಬ್ಲೂಸ್ಟಾರ್” ನಮಗೆಲ್ಲಾ ಗೊತ್ತೇ ಇದೆ. ಅನಂತರ ಇಂದಿರಾ ಗಾಂಧಿಯವರ ಹತ್ಯೆಯೇ ನಡೆದುಹೋಯಿತು. ಅನಂತರ ಕಾಂಗ್ರೆಸ್ಸಿಗರು ನಡೆಸಿದ ಅಕ್ಷಮ್ಯ “ಸಿಖ್ ಹತ್ಯಾಕಾಂಡ” ಅತ್ಯಂತ ಅಮಾನುಷವಾಗಿತ್ತು. ಇದು ಸಹ 1948ರಲ್ಲಿ ಗಾಂಧೀ ಹತ್ಯೆಯ ಅನಂತರ, ನಿರ್ದಿಷ್ಟ ಸಮುದಾಯವೊಂದನ್ನು ಗುರಿ ಮಾಡಿಕೊಂಡು ಕಾಂಗ್ರೆಸ್ಸಿಗರೇ ನಡೆಸಿದ ಯೋಜಿತ ನಿರ್ಮಮ ಹತ್ಯಾಕಾಂಡದಂತೆಯೇ ಇತ್ತು. ಇಂತಹ ಹತ್ಯಾಕಾಂಡಗಳೇ ಹಾಗೆ. ಬಲಿಪಶುಗಳಾದ (ಹೆಂಗಸರೂ ಮಕ್ಕಳೂ ಸೇರಿದಂತೆ) ಮುಗ್ಧಜೀವಗಳಿಗೆ ಯಾರು, ಯಾವ ಕಾರಣಕ್ಕೆ, ಕೊಲ್ಲಲು, ಸುಟ್ಟುಹಾಕಲು, ಅತ್ಯಾಚಾರ ಮಾಡಲು ಬಂದಿದ್ದಾರೆ, ಎಂಬುದು ಗೊತ್ತೇ ಇರುವುದಿಲ್ಲ.
ಮತ್ತೆ ಈಗ ಪಂಜಾಬ್ ದಳ್ಳುರಿಯಲ್ಲಿ ಸಿಲುಕಿಕೊಳ್ಳುತ್ತಿದೆ. ಪಾಕಿಸ್ತಾನ್ ಮೂಲದ ಜಿಹಾದಿಗಳು ತಮ್ಮ ಭಾರತ-ದ್ವೇಷದ ಇನ್ನೊಂದು ವರಸೆಯನ್ನು ಪ್ರಾರಂಭಿಸಿದ್ದಾರೆ. ಒಂದೆಡೆ ಅಗಾಧ ಪ್ರಮಾಣದಲ್ಲಿ ಮಾದಕ ದ್ರವ್ಯಗಳನ್ನು ಕಳ್ಳ ಸಾಗಾಣಿಕೆ ಮಾಡಿ ಪಂಜಾಬಿನ ಯುವಜನಾಂಗವನ್ನು ನಾಶ ಮಾಡುತ್ತಿದ್ದಾರೆ. ಇನ್ನೊಂದೆಡೆ ಪ್ರತ್ಯೇಕತಾವಾದಿ ಖಲಿಸ್ತಾನಿಗಳನ್ನು ಬೆಂಬಲಿಸಿ ಪ್ರತ್ಯಕ್ಷ – ಪರೋಕ್ಷ ಯುದ್ಧವನ್ನೇ ಮಾಡಿಸುತ್ತಿದ್ದಾರೆ. ಯಾರು ತಮ್ಮ ಗುರುಗಳನ್ನು ಅಮಾನುಷವಾಗಿ ಹತ್ಯೆ ಮಾಡಿದರೋ, ಅಂತಹ ಜಿಹಾದಿಗಳ ಬೆಂಬಲ ಪಡೆದು, ಮೂರ್ಖ ಖಲಿಸ್ತಾನಿಗಳು ಭಾರತದ ವಿರುದ್ಧ ಸಮರವನ್ನೇ ಸಾರಿದ್ದಾರೆ.
ಈ ನಡುವೆ, ಕ್ರೈಸ್ತ ಕ್ರುಸೇಡಿಗರು ಅಪಾರ ಸಂಖ್ಯೆಯಲ್ಲಿ ಸಿಖ್ಖರ ಮತಾಂತರ ಮಾಡುತ್ತಿದ್ದಾರೆ. ಶತ್ರುಗಳ ಬಹು-ಆಯಾಮದ ಇಂತಹ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿರುವ ಸಿಖ್ಖರಿಗೆ ಮಿತ್ರರು ಯಾರು, ಶತ್ರುಗಳು ಯಾರು ಎಂಬ ಸರಳ ಸಂಗತಿಗಳೂ ತಿಳಿಯುತ್ತಿಲ್ಲ.
ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಸಾಂಚಿ ಎಂಬ ಅಚ್ಚರಿ
ಅಣ್ಣಾ ಹಜಾರೆ ಎಂಬ “ಮುಗ್ಧ” ಗಾಂಧೀವಾದಿಗೆ ಉಂಡೆನಾಮ ತಿಕ್ಕಿ, ಅನಂತರ ಅವರ ಬೆನ್ನಿಗೆ ಚೂರಿ ಹಾಕಿದ ಕುತಂತ್ರಿಯೊಬ್ಬ ದೆಹಲಿಯನ್ನೇ ಆಪೋಶನ ತೆಗೆದುಕೊಂಡುಬಿಟ್ಟ. ಅವನ ಅಗ್ಗದ ವಾಗ್ದಾನಗಳಿಗೆ ಮರುಳಾದ ದೆಹಲಿಯ ಮತದಾರರು ಮತ್ತೆ ಮತ್ತೆ ಅವನನ್ನೇ ಬೆಂಬಲಿಸುತ್ತಿರುವುದು ವಿಷಾದದ ಸಂಗತಿಯಾಗಿದೆ. “ಭ್ರಷ್ಟಾಚಾರ ವಿರೋಧೀ ಆಂದೋಲನ” ಎಂಬ ಮೆಟ್ಟಿಲು ಬಳಸಿಕೊಂಡ ಈತ ಸ್ವತಃ ಬಹಳ ದೊಡ್ಡ ಭ್ರಷ್ಟಾಚಾರಿ. ಅದಕ್ಕೂ ಹೆಚ್ಚಿನದೆಂದರೆ ಅಧಿಕಾರಕ್ಕಾಗಿ ಈತ ಯಾವುದೇ ಮಟ್ಟಕ್ಕೂ ಇಳಿಯಬಲ್ಲ. ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಲೂ ಹೇಸುವುದಿಲ್ಲ. “ಭಾರತ್ ತೇರೇ ತುಕಡೇ ಹೋಂಗೆ” ಗ್ಯಾಂಗ್ ಜೊತೆಗೂ ಸೇರಿಕೊಳ್ಳುತ್ತಾನೆ. ಪಂಜಾಬಿನ ಮುಗ್ಧ ಮತದಾರರು ಅಕಾಲಿ ದಳ, ಕಾಂಗ್ರೆಸ್ ಪಕ್ಷಗಳಿಗೆ ಬೇಸತ್ತು ಇವನನ್ನು ಬೆಂಬಲಿಸಿಬಿಟ್ಟರು. ಈತ ತನ್ನ ಚೇಲಾ ಒಬ್ಬನನ್ನು (ಕುಡುಕ, ಜೋಕರ್) ಮುಖ್ಯಮಂತ್ರಿಯನ್ನಾಗಿ ಮಾಡಿ ಪರೋಕ್ಷವಾಗಿ ತಾನೇ ಆಡಳಿತ ನಡೆಸುತ್ತಿದ್ದಾನೆ. ಪ್ರತ್ಯೇಕತಾವಾದಿಗಳ ಕಾಲದಲ್ಲಿ ತುಂಬ ತೊಂದರೆಗೊಳಗಾದ ಪಂಜಾಬ್, ಈಗ ಈ ಕುತಂತ್ರಿಯ ಕೈಗೆ ಸಿಲುಕಿ ಮತ್ತೆ ನರಳುತ್ತಿದೆ. ಪತ್ರಿಕೆಗಳಿರಲಿ, ಟ್ವಿಟ್ಟರ್, WhatsApp, Facebookಗಳಲ್ಲಿ ಇವನ ಪಕ್ಷವನ್ನು, ಇವನ ಕಾರ್ಯನೀತಿಗಳನ್ನು ಟೀಕಿಸುವ ಪತ್ರಕರ್ತರನ್ನು ಬೇಟೆಯಾಡಲಾಗುತ್ತಿದೆ. ಪತ್ರಕರ್ತರು ಈಗ ವರದಿ ಮಾಡಲು ಸಹ ಭಯ ಪಡುತ್ತಿದ್ದಾರೆ. ಕೆಲವು ಭ್ರಷ್ಟಾತಿಭ್ರಷ್ಟ ಪೊಲೀಸ್ ಅಧಿಕಾರಿಗಳಿಗೆ ಬಡ್ತಿ ನೀಡಲಾಗುತ್ತಿದೆ ಮತ್ತು “ಮಹತ್ತ್ವದ” ಸ್ಥಾನಗಳನ್ನು ನೀಡಲಾಗುತ್ತಿದೆ. ವಿಚಿತ್ರವೆಂದರೆ, ಈ ಕುತಂತ್ರಿಯ ಬೆಂಬಲ ಪಡೆದ ಕ್ರಿಮಿನಲ್ ಗೂಂಡಾಗಳು, ಇತ್ತೀಚೆಗೆ ದಕ್ಷ ಪೊಲೀಸ್ ಅಧಿಕಾರಿಗಳ ಮೇಲೆಯೇ ದಾಳಿ ಮಾಡಿದರು. ಅಮೃತಸರದ ಜೈಲಿನ ಮೇಲೆ NIA ದಾಳಿ ಮಾಡಿದಾಗ, ಅಲ್ಲಿ ಮಾದಕ ದ್ರವ್ಯಗಳ ದಾಸ್ತಾನೇ ಸಿಕ್ಕಿತು. 12 ವರ್ಷಗಳ ಹುಡುಗನೊಬ್ಬನ ಬಳಿ ಎಂಟು ಲಕ್ಷ ರೂ ನಗದು, ಮೂರು ಕೆಜಿ ಹೆರಾಯಿನ್ ಸಿಕ್ಕಾಗ, NIA ಅಧಿಕಾರಿಗಳೇ ದಂಗುಬಡಿದುಹೋದರು.
ಕಾಂಗ್ರೆಸ್ ಪಕ್ಷವು ನಾಶ ಮಾಡಿದ್ದು ಸಾಲದೆಂದು, ಈಗ ಈ ಕುತಂತ್ರಿ ಪಂಜಾಬನ್ನು ನಾಶ ಮಾಡುತ್ತಿದ್ದಾನೆ. ಕ್ಷಾತ್ರ-ಭಾರತದ ಹೆಬ್ಬಾಗಿಲು ಈ ಪಂಜಾಬ್. ಅಂತಹ ಪಂಜಾಬ್ ನಾಶವಾಗುತ್ತಿರುವುದನ್ನು ತುರ್ತಾಗಿ ತಪ್ಪಿಸಲೇಬೇಕಾಗಿದೆ.
ಇದನ್ನೂ ಓದಿ: ನನ್ನ ದೇಶ ನನ್ನ ದನಿ: ಒಂದೆಡೆ ಭೂಮಿಯ ಕೇಂದ್ರ ಮಹಾಕಾಲ, ಇನ್ನೊಂದೆಡೆ ಕಾಲಭೈರವನಿಗೆ ಮದ್ಯಾರ್ಪಣೆ: ಸೋಜಿಗದ ಉಜ್ಜಯಿನಿ
ಅಂಕಣ
ರಾಜ ಮಾರ್ಗ ಅಂಕಣ : ನಮ್ಮೊಳಗಿನ ಸಂತಸ ಹೆಚ್ಚಿಸಲು ಇಲ್ಲಿವೆ ಮೂವತ್ತು ಸಿಂಪಲ್ ಸಲಹೆಗಳು!
ರಾಜ ಮಾರ್ಗ ಅಂಕಣ: ದುಕಿನಲ್ಲಿ ಸಂತೋಷವನ್ನು ಕಂಡುಕೊಳ್ಳುವುದು ತುಂಬ ಸುಲಭ. ಅದಕ್ಕೆ ತುಂಬ ಯೋಚನೆ ಮಾಡಬೇಕಾಗಿಲ್ಲ. ಖರ್ಚು ಮಾಡಬೇಕಾಗಿಲ್ಲ. ಇಲ್ಲಿವೆ ಅಂಥ 30 ಸುಲಭ, ಸರಳ ಸಂತೋಷ ಹೆಚ್ಚಿಸುವ ಸಂಗತಿಗಳು.
1) ನಾವು ಕಲಿತ ಪ್ರೈಮರಿ ಶಾಲೆಯ ಜಗಲಿಯ ಮೇಲೆ ವಾರಕ್ಕೊಮ್ಮೆ ಹೋಗಿ ಒಂದಷ್ಟು ಹೊತ್ತು ಮೌನವಾಗಿ ಕುಳಿತು ಬರುವುದು.
2) ನಮ್ಮೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಯಾವುದಾದರೂ ಐದು ಜನರಿಗೆ ವಾರಕ್ಕೊಮ್ಮೆ ಕಾಲ್ ಮಾಡಿ ಕ್ಯಾಶುವಲ್ ಆಗಿ ಸ್ವಲ್ಪ ಹೊತ್ತು ಪ್ರೀತಿಯಿಂದ ಮಾತನಾಡುವುದು.
3) ದಿನಕ್ಕೊಂದು ಹದಿನೈದು ನಿಮಿಷ ಬಿಡುವು ಮಾಡಿಕೊಂಡು ಕಿವಿಗೆ ಇಯರ್ ಫೋನ್ ಚುಚ್ಚಿಕೊಂಡು ಮಾಧುರ್ಯದ ಹಾಡುಗಳನ್ನು ಕೇಳುವುದು.
4) ಹಸಿರು ಪರಿಸರದ ನಡುವೆ ಮೌನ ಆಗಿರುವ ಒಂದು ಆಪ್ತವಾದ ಸ್ಥಳವನ್ನು ಆಯ್ದುಕೊಂಡು ಅಲ್ಲಿ ಹೋಗಿ ಕೂತು ಬಿಡುವುದು ಮತ್ತು ಏಕಾಂತವನ್ನು ಫೀಲ್ ಮಾಡಿಕೊಳ್ಳುವುದು.
5) ವಾರಕ್ಕೊಮ್ಮೆ ಯಾವುದಾದರೂ ಅನಾಥಾಶ್ರಮದ ಮಕ್ಕಳೊಂದಿಗೆ ಅಥವಾ ವೃದ್ಧಾಶ್ರಮದ ಹಿರಿಯರೊಂದಿಗೆ ಸ್ವಲ್ಪ ಹೊತ್ತು ಕಳೆಯುವುದು. ಅವರೊಂದಿಗೆ ಸಾಧ್ಯವಾದರೆ ಊಟ ಮಾಡಿ ಬರುವುದು.
6) ತಾನು ಶಾಲೆ ಅಥವಾ ಕಾಲೇಜಿನಲ್ಲಿ ಮೊದಲು ಪ್ರೀತಿ ಮಾಡಿದ ಹುಡುಗಿಗೆ/ ಹುಡುಗನಿಗೆ ನವಿರಾದ ಭಾಷೆಯಲ್ಲಿ ಒಂದು ಪ್ರೇಮ ಪತ್ರ ಬರೆಯುವುದು ಮತ್ತು ಅದನ್ನು ಪೋಸ್ಟ್ ಮಾಡದೇ ಹರಿದು ಎಸೆಯುವುದು.
7) ಸಮುದ್ರದ ದಡಕ್ಕೆ ಹೋಗಿ ಮರಳ ಮೇಲೆ ಸೊಗಸಾದ ಚಿತ್ತಾರಗಳನ್ನು ಬರೆಯುವುದು ಮತ್ತು ಅಲೆಗಳಿಗೆ ಕಾಯುತ್ತಾ ಇರುವುದು.
8) ದಿನಕ್ಕೊಂದು ಪುಟ ಆದರೂ ದಿನಚರಿಯನ್ನು ಬರೆಯುವುದು.
9) ರಾತ್ರಿ ಮಲಗುವ ಮೊದಲು ತನಗೆ ಆ ದಿನದ ಅವಧಿಯಲ್ಲಿ ಹ್ಯಾಪಿನೆಸ್ ಕೊಟ್ಟಿರುವ ವ್ಯಕ್ತಿಗಳನ್ನು ಕೌಂಟ್ ಮಾಡಿ ಮನಸ್ಸಿನಲ್ಲಿಯೇ ಥ್ಯಾಂಕ್ಸ್ ಹೇಳುವುದು.
10) ನಮ್ಮ ಭೂತಕಾಲದ ಬಗ್ಗೆ ಯಾವುದೇ ವಿಷಾದ ಇಟ್ಟುಕೊಳ್ಳದೆ ಇರುವುದು ಮತ್ತು ಭವಿಷ್ಯದ ಬಗ್ಗೆ ಹೆಚ್ಚು ಆತಂಕ ಮಾಡದೇ ಇರುವುದು.
11) ಬತ್ತದ ಹಸಿರು ಗದ್ದೆಗಳ ನಡುವೆ ನಿಂತು ಅದರ ಬದುಗಳ ಮೇಲೆ ಖುಷಿಯಿಂದ ಜಿಗಿಯುತ್ತಾ ವೇಗವಾಗಿ ನಡೆಯುವುದು.
12) ತುಂಬಾ ಪಾಸಿಟಿವ್ ಎನರ್ಜಿ ಇರುವ ಒಂದು ಫಿಲ್ಮನ್ನು ಕಾಲೇಜು ವಿದ್ಯಾರ್ಥಿಗಳ ವಿಸಿಲ್ ಮತ್ತು ಕಾಮೆಂಟ್ಗಳ ನಡುವೆ ಕೂತು ನೋಡುವುದು.
13) ಯಾರನ್ನು ಕೂಡ ತಿದ್ದಲು ಹೋಗದೆ ಅವರು ಹೇಗೆ ಇರುತ್ತಾರೋ ಹಾಗೇ ಸ್ವೀಕರಿಸುವುದು.
14) ನಾವು ಇಷ್ಟ ಪಡುವ ವ್ಯಕ್ತಿಗಳಿಗೆ ದಿನದ ಒಂದಿಷ್ಟು ಹೊತ್ತು ಮೀಸಲು ಇಡುವುದು.
15) ಸಣ್ಣ ಮಕ್ಕಳನ್ನು ಮುಂದೆ ಕೂರಿಸಿ ಅವರಿಗೆ ಚಂದ ಚಂದದ ಕಾಲ್ಪನಿಕ ಕಥೆ ಹೇಳುವುದು.
16) ಯಾವ ಇಗೋ ಕೂಡ ಇಟ್ಟುಕೊಳ್ಳದೆ ತನ್ನ ಮೇಲೆಯೇ ಜೋಕುಗಳನ್ನು ಪ್ರಯೋಗ ಮಾಡಿ ಗಟ್ಟಿಯಾಗಿ ನಗುವುದು.
17) ತನಗೆ ಅದನ್ನು ಕೊಡು, ಇದನ್ನು ಕೊಡು ದೇವರೇ ಎಂದು ದೇವರನ್ನು ಬೇಡಿಕೊಳ್ಳದೆ ಇರುವುದು.
18) ತಾನೊಂದು ಸೆಲೆಬ್ರಿಟಿ ಎಂಬ ಕಿರೀಟವನ್ನು ಕಳಚಿ ಎಲ್ಲರ ಜೊತೆಗೂ ಚಂದವಾಗಿ ಬೆರೆಯುವುದು.
19) ಸಾಲವೆಂದು ಯಾರಿಗೂ ಹಣ ಕೊಡದೆ ಇರುವುದು. ಕೊಟ್ಟರೆ ಹಿಂದೆ ಕೇಳದೇ ಇರುವುದು.
20) ಜೀವನದ ಸಣ್ಣ ಸಣ್ಣ ಸಾಧನೆಗಳನ್ನು ಸೆಲೆಬ್ರೇಟ್ ಮಾಡುವುದು. ಉದಾಹರಣೆಗೆ ಹೊಸ ಗೆಳೆಯ/ ಗೆಳತಿಯ ಸಂಪಾದನೆ ಮಾಡಿದ್ದು, ಮೊದಲ ಬಾರಿ ಬೈಕ್ ಓಡಿಸಿದ್ದು, ಎಷ್ಟೋ ವರ್ಷ ನಂತರ ಸಿಕ್ಕಿದ ವ್ಯಕ್ತಿಯ ಗುರುತು ಹಿಡಿದು ಮಾತಾಡಿಸಿದ್ದು ………….ಹೀಗೆ!
21) ಯಾರ ಜೊತೆಗೂ ಸ್ಪರ್ಧೆಯನ್ನು ಮಾಡದೇ ಇರುವುದು. ಸ್ವತಃ ನಿಮ್ಮೊಂದಿಗೆ ಕೂಡ!
22) ತಾನು ಮಾಡಿದ್ದು ಎಲ್ಲವೂ ಸರಿ. ಬೇರೆಯವರು ಮಾಡಿದ್ದು ಸರಿಯಲ್ಲ ಎಂಬ ಭ್ರಮೆಗಳಿಂದ ಹೊರಬರುವುದು!
23) ಹೆಂಡತಿ ಅಥವಾ ಗಂಡ ಹೇಳಿದ್ದನ್ನು ಪೂರ್ತಿ ನಂಬುವುದು ಅಥವಾ ನಂಬಿದ ಹಾಗೆ ಅಭಿನಯ ಮಾಡುವುದು!
24) ಎಲ್ಲರ ಕಾಮೆಂಟ್ಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವುದು ಮತ್ತು ಯಾರ ಜೊತೆಗೂ ವಾದವನ್ನು ಮಾಡದಿರುವುದು!
25) ಯಾವುದೇ ಸಂಬಂಧವನ್ನು ಕಳೆದುಕೊಳ್ಳುವ ಮೊದಲು ನೂರು ಬಾರಿ ಯೋಚನೆ ಮಾಡುವುದು. ಕಳಚಿಕೊಂಡ ನಂತರ ಅವುಗಳ ಬಗ್ಗೆ ಒಂದಿನಿತೂ ಯೋಚನೆ ಮಾಡದೆ ಇರುವುದು.
26) ಯಾರ ಬಗ್ಗೆಯೂ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಇರುವುದು.
27) ಮುಜುಗರ ಪಟ್ಟುಕೊಳ್ಳದೆ ರಸ್ತೆ ಬದಿಯ ಪಾನಿಪುರಿ ಸ್ಟಾಲಿನಲ್ಲಿ ಪಾನಿಪುರಿ ತೆಗೆದುಕೊಂಡು ಚಪ್ಪರಿಸಿ ಚಪ್ಪರಿಸಿ ತಿನ್ನುವುದು.
28) ದಿನಕ್ಕೆ ಹದಿನೈದು ನಿಮಿಷ ಬಿಡುವು ಮಾಡಿಕೊಂಡು ಅಮ್ಮನ ಮಡಿಲಲ್ಲಿ ಮಗುವಾಗಿ ಮಲಗಿ ಬಿಡುವುದು.
29) ಬಟ್ಟೆ ಅಂಗಡಿಯಲ್ಲಿ ಸೀರೆ ಇತ್ಯಾದಿಯನ್ನು ಆಯ್ಕೆ ಮಾಡಲು ಹೋದಾಗ ಆ ಕೆಲಸವನ್ನು ಹೆಂಡತಿಗೇ ಬಿಟ್ಟು ಪಕ್ಕದಲ್ಲಿ ಎಟಿಎಂ ಯಂತ್ರದ ಹಾಗೆ ನಿಂತು ಬಿಡುವುದು.
30) ಪ್ರೀತಿಪಾತ್ರರು ವಾದಕ್ಕೆ ಇಳಿದಾಗ ಆದಷ್ಟು ಬೇಗ ಸೋತು ಬಿಡುವುದು.
ಇವುಗಳು ನನ್ನ ಕೆಲವು ಸಲಹೆಗಳು ಮಾತ್ರ. ಜೀವನದ ಸಣ್ಣ ಸಣ್ಣ ಸಂಗತಿಗಳಲ್ಲಿ ಹ್ಯಾಪಿನೆಸ್ ಹುಡುಕುವುದು ನನಗೆ ಅಭ್ಯಾಸ ಆಗಿದೆ. ನಿಮಗೆ ತುಂಬಾ ಹ್ಯಾಪಿನೆಸ್ ದೊರೆಯಲಿ ಎನ್ನುವುದೇ ನನ್ನ ಪ್ರಾರ್ಥನೆ.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಜ. ಕೆ.ಎಸ್ ಹೆಗ್ಡೆ; ಇವರು ಸುಪ್ರೀಂ ಜಡ್ಜ್ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಯ ಬೆಸ್ಟ್ ಸ್ಪೀಕರ್ ಆಗಿದ್ದರು!
ಇಲ್ಲಿನ ಕೆಲವು ಚಿತ್ರಗಳು: ರಾಮ್ ಅಜೆಕಾರ್
ಅಂಕಣ
ರಾಜ ಮಾರ್ಗ ಅಂಕಣ : ಜ. ಕೆ.ಎಸ್ ಹೆಗ್ಡೆ; ಇವರು ಸುಪ್ರೀಂ ಜಡ್ಜ್ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಯ ಬೆಸ್ಟ್ ಸ್ಪೀಕರ್ ಆಗಿದ್ದರು!
ರಾಜ ಮಾರ್ಗ ಅಂಕಣ : ತಮಗಿಂತ ಎಳೆಯ ವ್ಯಕ್ತಿಯನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿದ್ದನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಮುಂದೆ ರಾಜೀನಾಮೆ ನೀಡಿ ಲೋಕಸಭೆಯ ಸ್ಪೀಕರ್ ಕೂಡಾ ಆದರು. ಆವರೇ ಜ. ಕೆ.ಎಸ್. ಹೆಗ್ಡೆ.
1973ರ ಇಸವಿಯ ಹೊತ್ತಿಗೆ ಸುಪ್ರೀಮ್ ಕೋರ್ಟಿನ ಒಬ್ಬ ನ್ಯಾಯಾಧೀಶರು ತಮ್ಮ ನ್ಯಾಯಾಂಗ ಬದ್ಧತೆಗೆ ಭಾರಿ ಹೆಸರು ಮಾಡಿದ್ದರು. ಯಾವ ಮುಲಾಜೂ ಇಲ್ಲದೆ ಅವರು ನೇರ ಮತ್ತು ದಿಟ್ಟ ತೀರ್ಪನ್ನು ಕೊಡುತ್ತಿದ್ದರು. ಒಮ್ಮೆ ದೇಶದ ಪವರ್ಫುಲ್ ಪ್ರಧಾನಿ ಆಗಿದ್ದ ಇಂದಿರಾ ಗಾಂಧಿಯವರ ಒಂದು ಕೇಸ್ ವಿಚಾರಣೆಗೆ ಕೋರ್ಟಿಗೆ ಬಂದಾಗಲೂ ಯಾವ ಮುಲಾಜಿಗೆ ಬಗ್ಗದೆ ತೀರ್ಪು ನೀಡಿ ಹೆಸರಾಗಿದ್ದರು.
ಅವರೇ ಜಸ್ಟೀಸ್ ಕೆ.ಎಸ್ ಹೆಗ್ಡೆ.
ಅದೇ ಹೊತ್ತಿಗೆ ಕೇಶವಾನಂದ ಭಾರತಿ ತೀರ್ಥರು ವರ್ಸಸ್ ಕೇರಳ ಸರಕಾರದ ಅತ್ಯಂತ ಸೂಕ್ಷ್ಮವಾದ ಕೇಸ್ ವಿಚಾರಣೆಗೆ ಬಂದಾಗಲೂ ಒಂದಿಷ್ಟು ವಿಚಲಿತ ಆಗದೆ ತೀರ್ಪು ಕೊಟ್ಟಿದ್ದರು. ಅಂದು ಅವರು ಕೊಟ್ಟ ತೀರ್ಪಿನ ಮುಖ್ಯಾಂಶ ಎಂದರೆ..
“ಒಬ್ಬ ಶಾಸಕನನ್ನು ಕೋರ್ಟಿಗೆ ಕರೆದು ವಿಚಾರಣೆ ಮಾಡಬೇಕು ಅಂತಾದರೂ ಸ್ಪೀಕರ್ ಅನುಮತಿ ಪಡೆಯಬೇಕು! ಅಂತಹ ಸಂದರ್ಭದಲ್ಲಿ ಒಬ್ಬ ಶಂಕರಾಚಾರ್ಯ ಸಮಾನರಾದ ಓರ್ವ ಪೀಠಾಧಿಪತಿಯನ್ನು ವಿಚಾರಣೆ ಮಾಡಲು ಮಧ್ಯರಾತ್ರಿ ಅರೆಸ್ಟ್ ಮಾಡಿದ್ದು ಸಂವಿಧಾನದ ಘೋರ ಅಪಚಾರ! ಕೇರಳ ಸರಕಾರ ಅದರ ಹೊಣೆಯನ್ನು ಹೊರಬೇಕು” ಎಂದು ಗುಂಡು ಸಿಡಿದ ಹಾಗೆ ತೀರ್ಪು ನೀಡಿ ಸಂಚಲನ ಉಂಟು ಮಾಡಿದ್ದರು!
ಇಂತಹ ತೀರ್ಪನ್ನು ನೀಡಲು ತುಂಬಾ ಎದೆಗಾರಿಕೆ ಮತ್ತು ಸಂವಿಧಾನದ ನಿಷ್ಠೆಯೂ ಬೇಕು. ಅವೆರಡೂ ಕೂಡ ಸುಪ್ರೀಂ ಕೋರ್ಟಿನ ಅಂದಿನ ನ್ಯಾಯಮೂರ್ತಿ ಆಗಿದ್ದ ಜಸ್ಟೀಸ್ ಹೆಗ್ಡೆಯವರಿಗೆ ಇತ್ತು ಅನ್ನುವುದು ನಿಜಕ್ಕೂ ಗ್ರೇಟ್. ಅವರು ತಮ್ಮ ಕಠಿಣವಾದ ತೀರ್ಪಿನ ಕಾರಣಕ್ಕಾಗಿ ಯಾರನ್ನೂ ಎದುರು ಹಾಕಿಕೊಳ್ಳಲು ಹಿಂದೆ ಮುಂದೆ ನೋಡಿದವರೇ ಅಲ್ಲ! ಯಾವ ಪ್ರಭಾವ ಮತ್ತು ಮುಲಾಜುಗಳಿಗೂ ತಲೆ ಬಾಗಿದವರೇ ಅಲ್ಲ! ನ್ಯಾಯಾಂಗದ ಘನತೆಯನ್ನು ಎತ್ತರಿಸುವ ಯಾವ ಅವಕಾಶಗಳನ್ನು ಅವರು ಬಿಟ್ಟವರೆ ಅಲ್ಲ!
ಅವರು ನಮ್ಮ ಕಾರ್ಕಳ ತಾಲೂಕಿನ ಕೌಡೂರಿನವರು
ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೌಡೂರು ಎಂಬ ಹಳ್ಳಿಯಲ್ಲಿ ಹುಟ್ಟಿ, ಹಳ್ಳಿಯ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿ ಮುಂದೆ ತನಗೆ ಇಷ್ಟವಾದ ಕಾನೂನು ಪದವಿಯನ್ನು ಪಡೆದವರು. ಮುಂದೆ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ 1947-51ರವರೆಗೆ ಕೆಲಸ ಮಾಡಿದರು. ಆಗಲೂ ನೇರಾನೇರ ವಾದ ಮಂಡನೆ ಅವರದ್ದು. ಎಷ್ಟು ದುಡ್ಡು ಕೊಟ್ಟರೂ ಅಪರಾಧಿಗಳ ಪರವಾದ ಒಂದೇ ಒಂದು ಕೇಸ್ ಕೂಡ ಮುಟ್ಟುತ್ತಲೇ ಇರಲಿಲ್ಲ. ಅದೇ ಬಡವರ ನ್ಯಾಯಯುತವಾದ ಕೇಸ್ ಅಂತಾದರೆ ದುಡ್ಡು ಪಡೆಯದೆ ನಿಖರವಾದ ವಾದವನ್ನು ಮಾಡಿ ಕೇಸನ್ನು ಗೆಲ್ಲಿಸಿಕೊಡುತ್ತಿದ್ದರು.
ಸುಪ್ರೀಮ್ ಕೋರ್ಟಿನ ಜಡ್ಜ್ ಆಗಿ ಕೀರ್ತಿಯ ಶಿಖರ
ಮುಂದೆ ಅವರು ಸುಪ್ರೀಮ್ ಕೋರ್ಟಿನ ಜಡ್ಜ್ ಆದರು. ಆರು ವರ್ಷಗಳ ಕಾಲ ಅವರು ಅದೇ ಹುದ್ದೆಯಲ್ಲಿ ಮುಂದುವರಿದರು. ನ್ಯಾಯಪರತೆಗೆ ಹೆಸರಾದರು. ಎಷ್ಟೋ ನ್ಯಾಯವಾದಿಗಳು ಅವರ ಮುಂದೆ ಸುಳ್ಳು ಹೇಳಲು ಹೆದರುವ ಪ್ರಸಂಗ ಇತ್ತು! ನೀವು ನ್ಯಾಯವಾದಿಗಳಾಗಿ, ಕಾನೂನುವಾದಿಗಳು ಆಗುವುದು ಬೇಡ ಎನ್ನುವುದು ಅವರು ದಿನವೂ ವಕೀಲರಿಗೆ ಹೇಳುತ್ತಿದ್ದ ಮಾತುಗಳು.
ಕಾನೂನಿನ ಮತ್ತು ಸಂವಿಧಾನದ ಬಗ್ಗೆ ಆಳವಾದ ಜ್ಞಾನ ಮತ್ತು ಮಾತುಗಾರಿಕೆ ಹೊಂದಿದ್ದ ಜಸ್ಟೀಸ್ ಹೆಗ್ಡೆಯವರು ತನ್ನ ಜನಪ್ರಿಯತೆಯ ತುದಿಯಲ್ಲಿ ಇರುವಾಗಲೇ ತನ್ನ ಹುದ್ದೆಗೆ ರಾಜೀನಾಮೆಯನ್ನು ಕೊಟ್ಟು ಹೊರಬಂದರು. ಕಾರಣ ಅವರಿಗಿಂತ ಕಡಿಮೆ ವಯಸ್ಸು ಮತ್ತು ನ್ಯಾಯಾಂಗದ ಅನುಭವ ಹೊಂದಿದ್ದ ಜಸ್ಟೀಸ್ ಎ.ಎನ್ ರೇ ಅವರನ್ನು ಭಾರತ ಸರಕಾರವು ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಆಗಿ ನೇಮಕ ಮಾಡಿತ್ತು. ನ್ಯಾಯಮೂರ್ತಿಗಳ ಬಡ್ತಿಯ ವಿಷಯದಲ್ಲಿಯೂ ರಾಜಕೀಯ ಮಾಡುವ ಸರಕಾರಗಳು ಎಲ್ಲ ಕಾಲದಲ್ಲಿಯೂ ಇದ್ದವು. ಆದರೆ ಸ್ವಾಭಿಮಾನಿ ಹೆಗ್ಡೆಯವರು ಅದನ್ನು ಸಹಿಸುವುದು ಸಾಧ್ಯವೇ ಇರಲಿಲ್ಲ. ಒಂದು ಕ್ಷಣ ಕೂಡ ವಿಚಲಿತ ಆಗದ ಜಸ್ಟೀಸ್ ಹೆಗ್ಡೆಯವರು ತನ್ನ ರಾಜೀನಾಮೆಯನ್ನು ಬಿಸಾಡಿ ನ್ಯಾಯಾಂಗ ಸೇವೆಯಿಂದ ಹೊರಬಂದರು!
ಇದು ಅವರ ಸ್ವಾಭಿಮಾನದ ದಿಟ್ಟ ನಿರ್ಧಾರ ಆಗಿತ್ತು ಎಂದು ಅವರ ಜ್ಯೂನಿಯರ್ ಜಡ್ಜ್ ಆಗಿದ್ದ ಜಸ್ಟೀಸ್ ಎಂ.ಎಂ. ಇಸ್ಮಾಯಿಲ್ ಅವರು ಒಂದು ಕಡೆ ಅಭಿಪ್ರಾಯಪಡುತ್ತಾರೆ.
ರಾಜಕೀಯ ಶುದ್ಧೀಕರಣದ ಕೆಲಸ ಆರಂಭ!
ಮುಂದೆ ರಾಜ್ಯಸಭೆಯ ಸದಸ್ಯರಾಗಿ ಅವರು ಆರು ವರ್ಷಗಳ ಒಂದು ಪೂರ್ಣ ಅವಧಿಗೆ ಸೇವೆಯನ್ನು ಸಲ್ಲಿಸಿದರು. ಆಗ ಜಯಪ್ರಕಾಶ್ ನಾರಾಯಣ್ ಅವರು ರಚನೆ ಮಾಡಿದ ಜನತಾ ಪಕ್ಷದ ಮೂಲಕ ರಾಜಕೀಯಕ್ಕೆ ಧುಮುಕಿದರು. ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟದಲ್ಲಿ ಆಡ್ವಾಣಿ ಅವರ ಜೊತೆಗೆ ಹೋರಾಟಕ್ಕೆ ಇಳಿದರು. ಸೆರೆಮನೆ ವಾಸ ಅನುಭವಿಸಿದರು. 1977ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಗೆದ್ದು ಲೋಕಸಭೆಯನ್ನು ಪ್ರವೇಶ ಮಾಡಿದರು. ಆಗ ಅವರ ನಿಜವಾದ ಸಾಮರ್ಥ್ಯವನ್ನು ದೇಶವು ಕಂಡಿತು.
ಲೋಕಸಭೆಯ ಸ್ಪೀಕರ್ ಆಗಿ ಜಸ್ಟೀಸ್ ಹೆಗ್ಡೆಯವರು ತುಂಬಾ ಪವರ್ಫುಲ್!
ಅದು ಮೊದಲ ಕಾಂಗ್ರೆಸ್ಸೇತರ ಪಾರ್ಲಿಮೆಂಟ್. ಮೊರಾರ್ಜಿ ದೇಸಾಯಿ ಅವರು ಪ್ರಧಾನಿ ಆದರು. ಆಗ ಲೋಕಸಭೆಯ ಸ್ಪೀಕರ್ ಆಗಿದ್ದ ನೀಲಂ ಸಂಜೀವ ರೆಡ್ಡಿ ಅವರು ರಾಷ್ಟ್ರಪತಿಯಾಗಿ ಅವಿರೋಧ ಆಯ್ಕೆ ಆದ ಕಾರಣ ಸ್ಪೀಕರ್ ಹುದ್ದೆಯು ಖಾಲಿ ಆಯ್ತು. ಆಗ ಆಡ್ವಾಣಿ ಅವರು ಸೂಚನೆ ಮಾಡಿ, ಎಲ್ಲರ ಸಹಮತಿಯನ್ನು ಪಡೆದು ಜಸ್ಟೀಸ್ ಹೆಗ್ಡೆಯವರು ಲೋಕಸಭೆಯ ಸ್ಪೀಕರ್ ಆದರು.
ಮುಂದಿನ ಮೂರು ವರ್ಷಗಳಲ್ಲಿ ಅವರು ಸ್ಪೀಕರ್ ಆಗಿ ನೀಡಿದ ಹಲವಾರು ರೂಲಿಂಗಗಳು ತುಂಬಾನೇ ನಿಖರವಾಗಿ ಇದ್ದವು. ವಿರೋಧ ಪಕ್ಷಗಳು ತುಂಬಾ ಕ್ರಿಯಾಶೀಲ ಆಗಿದ್ದರಿಂದ ಮತ್ತು ಎಲ್ಲ ಹಿರಿಯ ನಾಯಕರು ಉತ್ತಮ ಮಾತುಗಾರರು ಆಗಿದ್ದ ಕಾರಣ ಅದು ನನ್ನ ಮುಳ್ಳಿನ ಮೇಲೆ ನಡಿಗೆ ಆಗಿತ್ತು ಎಂದು ಜಸ್ಟೀಸ್ ಹೆಗ್ಡೆಯವರು ಹೇಳಿದ್ದಾರೆ.
ಲಾಲ್ ಕೃಷ್ಣ ಆಡ್ವಾಣಿ, ವಾಜಪೇಯಿ, ಸೋಮನಾಥ್ ಚಟರ್ಜಿ, ಇಂದಿರಾ ಗಾಂಧಿ, ಮಧು ದಂಡವತೆ ಇಂತಹ ನಾಯಕರು ಸದನದಲ್ಲಿ ಇದ್ದರು. ವಾಜಪೇಯಿ, ಆಡ್ವಾಣಿ, ಪವರ್ ಫುಲ್ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೂಡ ಸ್ಪೀಕರ್ ಅವರ ಅನುಮತಿಯನ್ನು ಪಡೆದು ಮಾತಾಡುವಂತಹ ಪರಿಸ್ಥಿತಿಯು ಅಂದು ಇತ್ತು. ಅದು ಸ್ಪೀಕರ್ ಅವರಿಗೆ ಸಂವಿಧಾನವು ಕೊಟ್ಟ ಪವರ್. ಅವೆಲ್ಲ ಅಧಿಕಾರಗಳನ್ನು ಜಸ್ಟೀಸ್ ಹೆಗ್ಡೆಯವರು ಸಮರ್ಥವಾಗಿ ಬಳಸಿಕೊಂಡರು. ಅತ್ಯಂತ ಪ್ರಬಲವಾದ ಗೃಹ ಮಂತ್ರಿ ಆಗಿದ್ದ ಲಾಲ್ ಕೃಷ್ಣ ಆಡ್ವಾಣಿ ಅವರು ಜಸ್ಟೀಸ್ ಹೆಗ್ಡೆಯವರ ಉತ್ತಮ ಗೆಳೆಯ ಆಗಿದ್ದರೂ ಲೋಕಸಭೆಯ ಒಳಗೆ ಸ್ಪೀಕರ್ ತಮ್ಮ ಆದೇಶಗಳಿಗೆ ಬದ್ಧತೆ ತೋರುತ್ತಿದ್ದರು ಮತ್ತು ಆಡ್ವಾಣಿ ಅವರು ಸ್ಪೀಕರ್ ಹೆಗ್ಡೆಯವರ ಗೆಳೆತನವನ್ನು ಎಂದಿಗೂ ದುರುಪಯೋಗ ಮಾಡಲಿಲ್ಲ. ಆಗಿನ ರಾಜಕೀಯ ನಾಯಕರೂ ಮೌಲ್ಯಾಧಾರಿತ ಆಗಿದ್ದರು ಮತ್ತು ಜಸ್ಟೀಸ್ ಹೆಗ್ಡೆಯವರು ಎಲ್ಲರಿಗಿಂತ ಮುಂದೆ ಇದ್ದರು.
ಮುಂದೆ ಮೊರಾರ್ಜಿ ಸರಕಾರವು ವಿಸರ್ಜನೆ ಆಗಿ ಇಂದಿರಾ ಗಾಂಧೀಜಿ ಅವರು ಮತ್ತೆ ಪ್ರಧಾನಿ ಆದರು. ಸ್ಪೀಕರ್ ಆಗಿ ಜಸ್ಟೀಸ್ ಹೆಗ್ಡೆಯವರು ಸ್ಪೀಕರ್ ಆಗಿ ಮುಂದುವರಿಯಲಿ ಎಂದು ಆಗಿನ ಎಲ್ಲ ರಾಜಕೀಯ ಪಕ್ಷಗಳು ಅಭಿಪ್ರಾಯಪಟ್ಟವು. ಪ್ರಧಾನಿ ಇಂದಿರಾ ಗಾಂಧಿ ಅದೇ ಅಭಿಪ್ರಾಯ ಹೊಂದಿದ್ದರು. ಆದರೂ ಆತ್ಮಸಾಕ್ಷಿಗೆ ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಹೆಗ್ಡೆಯವರು ಸ್ಪೀಕರ್ ಹುದ್ದೆಗೆ ರಾಜೀನಾಮೆ ಕೊಟ್ಟು ಹೊರಬಂದರು.
ಮುಂದೆ ಉಡುಪಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದರೂ ಅವರಿಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಅಲ್ಲಿಗೆ ಅವರು ರಾಜಕೀಯದಲ್ಲಿ ಆಸಕ್ತಿಯನ್ನು ಕಳೆದುಕೊಂಡರು ಮತ್ತು ಶಿಕ್ಷಣ ಹಾಗೂ ಸಾಮಾಜಿಕ ರಂಗದಲ್ಲಿ ಕ್ರಿಯಶೀಲ ಆದರು.
ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಅರುಣೋದಯ
ಮುಂದೆ ತಮ್ಮ ಹೆಂಡತಿಯ ಊರಾದ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮಕ್ಕೆ ಬಂದು ವಾಸ ಮಾಡಲು ತೊಡಗಿದರು.
ಅಲ್ಲಿ ಅವರು 1979ರಲ್ಲಿ ನಿಟ್ಟೆ ವಿದ್ಯಾಸಂಸ್ಥೆಯನ್ನು ಸ್ಥಾಪನೆ ಮಾಡಿದರು ಮತ್ತು ಅಲ್ಲಿಯೇ ನೆಲೆ ನಿಂತರು. ಅವರ ಆ ನಿರ್ಧಾರವು ನಿಟ್ಟೆಯ ಭಾಗ್ಯದ ಬಾಗಿಲು ತೆರೆಯಲು ಕಾರಣವಾಯಿತು ಎಂದೇ ಹೇಳಬಹುದು! ಒಂದು ಸಣ್ಣ ಹೈಸ್ಕೂಲ್ ಮೂಲಕ ಆರಂಭ ಆಗಿದ್ದ ಈ ಸಂಸ್ಥೆಯು ಇಂದು ದೇಶದ ಅತ್ಯಂತ ಬಲಿಷ್ಠವಾದ ಯೂನಿವರ್ಸಿಟಿಯಾಗಿ ಬೆಳೆದಿದೆ. ಜಸ್ಟೀಸ್ ಹೆಗ್ಡೆಯವರ ದೂರದೃಷ್ಟಿಯ ಹಾಗೂ ಆಡಳಿತದ ಬಲದಿಂದ ಇದು ಸಾಧ್ಯವಾಯಿತು ಎಂದು ನನ್ನ ನಂಬಿಕೆ.
ಮುಂದಿನ ಹನ್ನೊಂದು ವರ್ಷ ಅವರು ನಿಟ್ಟೆಯ ವಿದ್ಯಾಸಂಸ್ಥೆಗಳ ಸ್ಫೂರ್ತಿಯ ಕೇಂದ್ರವೇ ಆಗಿದ್ದರು ಮತ್ತು ಮರಣದ ನಂತರವೂ ಪ್ರೇರಣೆಯಾಗಿ ನಿಂತರು.
ಇಂದು ನಿಟ್ಟೆ ವಿದ್ಯಾಸಂಸ್ಥೆಯು ಸ್ವಾಯತ್ತ ಯೂನಿವರ್ಸಿಟಿ ಆಗಿದ್ದು ಮೆಡಿಕಲ್, ಎಂಜಿನಿಯರಿಂಗ್, ಫಾರ್ಮಸಿ, ನಾನ್ ಟೆಕ್ನಿಕಲ್, ಟೆಕ್ನಿಕಲ್, ಆಡಳಿತ, ಐಟಿಐ, ನರ್ಸಿಂಗ್, ಪದವಿ ಕಾಲೇಜು, ಡೆಂಟಲ್ ಕಾಲೇಜು…..ಮೊದಲಾದ 27 ವಿದ್ಯಾಸಂಸ್ಥೆಗಳನ್ನು ಹೊಂದಿದೆ! ನಾಲ್ಕು ಬಹು ದೊಡ್ಡದಾದ ಕ್ಯಾಂಪಸ್ಗಳನ್ನು ಹೊಂದಿದೆ. ವಿದೇಶದಲ್ಲೂ ನಿಟ್ಟೆ ವಿದ್ಯಾಸಂಸ್ಥೆಯ ಕ್ಯಾಂಪಸ್ ಇದೆ. 25,000ರಷ್ಟು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ನಿಟ್ಟೆ ವಿವಿಯು ಬಹಳ ದೊಡ್ಡ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯನ್ನು (ಕ್ಷೇಮಾ) ಹೊಂದಿದೆ. ಈಗ ಅವರ ಮಗ ಡಾಕ್ಟರ್ ನಿಟ್ಟೆ ವಿನಯ ಹೆಗ್ಡೆಯವರು ಈ ವಿವಿಯ ಕುಲಾಧಿಪತಿ ಆಗಿದ್ದಾರೆ.
ಜಸ್ಟೀಸ್ ಕೆ.ಎಸ್ ಹೆಗ್ಡೆ ಅವರ ಇನ್ನೊಬ್ಬ ಪುತ್ರರಾದ ಜಸ್ಟೀಸ್ ಸಂತೋಷ್ ಹೆಗ್ಡೆ ಅವರು ಕೂಡ ತಮ್ಮ ತಂದೆಯ ಹಾಗೆ ಸುಪ್ರೀಮ್ ಕೋರ್ಟಿನ ಜಡ್ಜ್ ಆಗಿದ್ದು ಮುಂದೆ ಕರ್ನಾಟಕ ಲೋಕಾಯುಕ್ತದ ಮುಖ್ಯಸ್ಥರಾಗಿದ್ದು ದೇಶದಾದ್ಯಂತ ನ್ಯಾಯಪರವಾದ ಹಲವು ಹೋರಾಟಗಳನ್ನು ಲೀಡ್ ಮಾಡಿದ್ದಾರೆ.
ಮುಂದೆ 1990ರಲ್ಲಿ ಜಸ್ಟೀಸ್ ಕೆ.ಎಸ್.ಹೆಗ್ಡೆ ಅವರು ನಮ್ಮನ್ನು ಅಗಲಿದರು. ಆಗ ಅವರ ಕುಟುಂಬ ಮತ್ತು ಹಿತೈಷಿಗಳು ಸೇರಿಕೊಂಡು ಅವರ ಹೆಸರಿನಲ್ಲಿ ಒಂದು ಟ್ರಸ್ಟ್ ಸ್ಥಾಪನೆ ಮಾಡಿ ಅದರ ಮೂಲಕ ಗ್ರಾಮಾಭಿವೃದ್ದಿ ಕಾರ್ಯ ಮತ್ತು ಶೈಕ್ಷಣಿಕ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಆರೋಗ್ಯ ಇದ್ದಾಗ ಆಡ್ವಾಣಿಯವರು ವರ್ಷಕ್ಕೊಮ್ಮೆ ನಿಟ್ಟೆಗೆ ಬಂದು ಜಸ್ಟೀಸ್ ಹೆಗ್ಡೆಯವರನ್ನು ತಪ್ಪದೇ ಭೇಟಿ ಮಾಡುತ್ತಿದ್ದರು.
ನಿಟ್ಟೆಯಲ್ಲಿ ಜಸ್ಟೀಸ್ ಕೆ.ಎಸ್ ಹೆಗ್ಡೆಯವರ ಮ್ಯೂಸಿಯಂ ಸ್ಥಾಪನೆ ಆಗಿದ್ದು ಅಲ್ಲಿ ಅವರ ಹಲವು ಸಂಸ್ಮರಣದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಅವರು ಮಾಡಿದ ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಗಳ ಮೂಲಕ ಜಸ್ಟೀಸ್ ಕೆ ಎಸ್ ಹೆಗ್ಡೆಯವರು ಇನ್ನೂ ನಮ್ಮ ನಡುವೆ ಇದ್ದಾರೆ ಎಂದು ನನಗೆ ಅನ್ನಿಸುತ್ತದೆ.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಲಸಿಕಾ ವಿಜ್ಞಾನದ ಪಿತಾಮಹ ಎಡ್ವರ್ಡ್ ಜೆನ್ನರ್; ಅವನು ಯುದ್ಧವನ್ನೇ ನಿಲ್ಲಿಸಿದ ಶಸ್ತ್ರರಹಿತ ಸೇನಾನಿ!
ಅಂಕಣ
ರಾಜ ಮಾರ್ಗ ಅಂಕಣ : ಲಸಿಕಾ ವಿಜ್ಞಾನದ ಪಿತಾಮಹ ಎಡ್ವರ್ಡ್ ಜೆನ್ನರ್; ಅವನು ಯುದ್ಧವನ್ನೇ ನಿಲ್ಲಿಸಿದ ಶಸ್ತ್ರರಹಿತ ಸೇನಾನಿ!
ರಾಜ ಮಾರ್ಗ ಅಂಕಣ : ಸಿಡುಬಿಗೆ ಲಸಿಕೆ ಕಂಡು ಹಿಡಿದವರು ಎಡ್ವರ್ಡ್ ಜೆನ್ನರ್. ಈ ಮೂಲಕ ಲಕ್ಷಾಂತರ ಜನರಿಗೆ ಜೀವದಾನ ನೀಡಿದರು. 1980ರ ಬಳಿಕ ಸಿಡುಬಿನಿಂದ ಯಾರೂ ಸತ್ತಿಲ್ಲ ಎನ್ನುವುದು ಜೆನ್ನರ್ಗೆ ಸಿಕ್ಕಿದ ಅತಿ ದೊಡ್ಡ ಪ್ರಶಸ್ತಿ.
ಅದು ಜಗತ್ತಿನ ಮೊದಲ ಲಸಿಕೆ ಆಗಿತ್ತು!
ಇಂದು ವೈದ್ಯಕೀಯ ವಿಜ್ಞಾನವನ್ನು ಓದುತ್ತಿರುವ ಹಲವರಲ್ಲಿ ನಾನು ಮಾತಾಡುತ್ತೇನೆ. ಎಂಬಿಬಿಎಸ್ ಮಾಡಿ ಮುಂದೇನು ಮಾಡುತ್ತೀರಿ ಎನ್ನುವುದು ನನ್ನ ಸಾಮಾನ್ಯ ಪ್ರಶ್ನೆ. ಅದಕ್ಕೆ ಹೆಚ್ಚಿನವರು ಕೊಡುವ ಉತ್ತರ ನಾನು ಡಾಕ್ಟರ್ ಆಗಿ ಜನರ ಪ್ರಾಣ ಉಳಿಸುವ ಕೆಲಸ ಮಾಡುತ್ತೇನೆ ಎಂದು. ಇನ್ನೂ ಕೆಲವರು ನರ್ಸಿಂಗ್ ಹೋಮ್ ನಡೆಸುತ್ತೇನೆ ಅನ್ನುತ್ತಾರೆ. ಇನ್ನೂ ಕೆಲವರು ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕ ಆಗುತ್ತೇನೆ ಎಂದೆಲ್ಲ ಹೇಳುತ್ತಾರೆ. ನಾನು ಅವರು ಹೇಳಿದ ಎಲ್ಲ ಅಭಿಪ್ರಾಯಗಳನ್ನು ಗೌರವಿಸುತ್ತೇನೆ. ಆದರೆ…!
ವೈದ್ಯಕೀಯ ವಿಜ್ಞಾನದಲ್ಲಿ ಸಂಶೋಧನೆ ಮಾಡಬೇಕು ಎಂದು ಯಾರೂ ಹೇಳುವುದಿಲ್ಲ! ಎರಡು ವರ್ಷಗಳ ಹಿಂದೆ ಜಗತ್ತನ್ನು ಕೊರೊನಾ ಆವರಿಸಿದಾಗ ಅದಕ್ಕೆ ತುರ್ತು ಲಸಿಕೆ ಕಂಡು ಹಿಡಿಯುವ ಅಗತ್ಯ ಎಷ್ಟಿತ್ತು ಎಂದು ನಾವೆಲ್ಲರೂ ನೋಡಿದ್ದೇವೆ. ಅಂತಹ ಲಸಿಕಾ ವಿಜ್ಞಾನದ ಪಿತಾಮಹನ ಬಗ್ಗೆ ಇಂದು ನಾನು ಬರೆಯಬೇಕು.
ಎಡ್ವರ್ಡ್ ಜೆನ್ನರ್ ಎಂಬ ಹೆಸರಿನ ಅಸಾಮಾನ್ಯ ವೈದ್ಯ
ಇಂಗ್ಲೆಂಡ್ನಲ್ಲಿ 1749ರಲ್ಲಿ ಜನಿಸಿದ ಎಡ್ವರ್ಡ್ ಜೆನ್ನರ್ ತಂದೆ ಒಬ್ಬ ಧರ್ಮಗುರು ಆಗಿದ್ದರು. ಹೆತ್ತವರ ಒಂಬತ್ತು ಮಕ್ಕಳಲ್ಲಿ ಇವರು ಎಂಟನೆಯವರು. ಮನೆಯವರಲ್ಲಿ ತೀವ್ರ ಬಡತನ ಇತ್ತು. ಆದರೆ ಜೆನ್ನರ್ ತುಂಬಾ ಬುದ್ಧಿವಂತ ವಿದ್ಯಾರ್ಥಿ ಆಗಿದ್ದರು. ಸ್ವಂತ ಆಸಕ್ತಿಯಿಂದ ಮೆಡಿಕಲ್ ಸೈನ್ಸ್ ಓದಿದ ಅವರಿಗೆ ಸಂಶೋಧನೆ ಮಾಡುವುದೇ ಕನಸು. ಪದವಿ ಪಡೆದು ಇಂಗ್ಲೆಂಡಿನ ಆಗಿನ ಪ್ರಮುಖ ಆಸ್ಪತ್ರೆಯಾಗಿದ್ದ ಸೈಂಟ್ ಜಾರ್ಜ್ ಆಸ್ಪತ್ರೆಯಲ್ಲಿ ವೈದ್ಯರಾಗಿ ನೇಮಕವಾದ ಜೆನ್ನರ್ಗೆ ಜಾನ್ ಹಂಟರ್ ಎಂಬ ಶ್ರೇಷ್ಠ ಮಾರ್ಗದರ್ಶಕರು ದೊರೆಯುತ್ತಾರೆ. ಕೆಲವೇ ದಿನಗಳಲ್ಲಿ ಪ್ರಸಿದ್ಧಿ ಪಡೆಯುತ್ತಾರೆ. ಇಂಗ್ಲೆಂಡಿನ ರಾಜ ಕಿಂಗ್ ಜಾರ್ಜ್ ಅವರ ಖಾಸಗಿ ವೈದ್ಯರಾಗಿ ನೇಮಕ ಪಡೆಯುತ್ತಾರೆ. ಅವರ ಸೇವಾಪರತೆಯನ್ನು ಮೆಚ್ಚಿ ಅರಸನು ಅವರನ್ನು ಬರ್ಕಲೆ ಎಂಬ ಪ್ರಾಂತ್ಯದ ಮೇಯರ್ ಆಗಿ ನೇಮಕ ಮಾಡುತ್ತಾರೆ.
ವಕ್ಕರಿಸಿಯೇ ಬಿಟ್ಟಿತು ಸಿಡುಬು ಎಂಬ ಮಹಾಮಾರಿ!
1780ರ ಸುಮಾರಿಗೆ ಇಡೀ ಇಂಗ್ಲೆಂಡ್ ರಾಷ್ಟ್ರವು ಸಿಡುಬು ಎಂಬ ಮಹಾಮಾರಿಗೆ ತುತ್ತಾಯಿತು. ಆ ವೈರಸ್ ರೋಗವು ಹರಡುತ್ತಿದ್ದ ವೇಗಕ್ಕೆ ಇಡೀ ಲಂಡನ್ ಮಹಾನಗರವೇ ಬೆಚ್ಚಿ ಬಿದ್ದಿತ್ತು. ಒಂದೆರಡು ವರ್ಷಗಳ ಒಳಗೆ ಸಿಡುಬು ರೋಗವು ಜಗತ್ತಿನ 10% ಜನಸಂಖ್ಯೆಯನ್ನು ತಲುಪುವ ಅಪಾಯ ಇತ್ತು! ನಗರಗಳಲ್ಲಿ ಸಿಡುಬು ಇನ್ನೂ ವೇಗವಾಗಿ ಹರಡಿ 20% ಜನಸಂಖ್ಯೆಯನ್ನು ಆಕ್ರಮಿಸುವ ಅಪಾಯ ಇತ್ತು! ಆಗ ವೈದ್ಯಕೀಯ ವಿಜ್ಞಾನ ಅಷ್ಟೊಂದು ಮುಂದುವರಿದಿರಲಿಲ್ಲ. ವೈದ್ಯರಿಗೆ ಲಸಿಕೆ ಬಗ್ಗೆ ಗೊತ್ತೇ ಇರಲಿಲ್ಲ.
ಸಿಡುಬಿನ ಕಾರಣಕ್ಕೆ ಸಾಲು ಸಾಲು ನಗರಗಳು ಖಾಲಿ ಆದವು. ಹಳ್ಳಿಗಳು ತೀವ್ರವಾದ ಆರೋಗ್ಯ ಬಿಕ್ಕಟ್ಟುಗಳನ್ನು ಎದುರಿಸಬೇಕಾಯಿತು. ಆಸ್ಪತ್ರೆಯ ಎಲ್ಲ ವಾರ್ಡಗಳು ಭರ್ತಿ ಆದವು. ಪ್ರತೀ ದಿನವೂ ಹೆಣಗಳ ಸಾಲು ಉರುಳುತ್ತಿರುವ ಸಂದರ್ಭದಲ್ಲಿ ಎಲ್ಲ ತಜ್ಞ ವೈದ್ಯರು ಕೈಗಳನ್ನು ಕಟ್ಟಿ, ಕಣ್ಣುಗಳನ್ನು ಮುಚ್ಚಿ ಕುಳಿತುಕೊಳ್ಳಬೇಕಾಯಿತು.!
ಲಸಿಕೆ ಹುಡುಕಲು ಜೆನ್ನರ್ ಅವರ ತೀವ್ರ ಪ್ರಯತ್ನ
ಬಾಲ್ಯದಲ್ಲಿ ಒಮ್ಮೆ ಅವರಿಗೂ ಸಿಡುಬು ರೋಗ ಬಂದು ತೀವ್ರವಾಗಿ ಕಾಡಿತ್ತು. ಬದುಕುವ ಚಾನ್ಸ್ ಇಲ್ಲ ಎಂದು ವೈದ್ಯರು ಕೈಚೆಲ್ಲಿ ಆಗಿತ್ತು. ತಾನು ದೇವರ ಕೃಪೆಯಿಂದ ಬದುಕಿಬಂದೆ ಎಂದು ಜೆನ್ನರ್ ಹೇಳಿದ್ದಾರೆ.
ಅಂತಹ ಸಿಡುಬು ರೋಗಕ್ಕೆ ಲಸಿಕೆ ಹುಡುಕಬೇಕು ಎನ್ನುವ ತೀವ್ರವಾದ ಪ್ರಯತ್ನ ಅವರು ಆರಂಭ ಮಾಡಿದರು. ಆಗ ಮನುಷ್ಯರಿಗೆ ಸಿಡುಬು ಬಂದ ಹಾಗೆ ದನ, ಹಂದಿ, ಕುದುರೆಗಳಿಗೆ ಕೂಡ ಸಿಡುಬು ಬರುತ್ತಿತ್ತು. ಸಿಡುಬು ಬಂದ ದನಗಳ ಹಾಲು ಕರೆಯುವ ಹೆಂಗಸರಿಗೆ ಒಮ್ಮೆ ದನದ ಸಿಡುಬಿನ ಗುಳ್ಳೆಗಳು ಕಾಣಿಸಿಕೊಂಡು ನಿಧಾನವಾಗಿ ಗುಣವಾಗಿ ಬಿಡುತ್ತಿದ್ದವು. ಆದರೆ ಅವರಿಗೆ ಮಾನವರ ಸಿಡುಬು ಬರುತ್ತಲೇ ಇರಲಿಲ್ಲ. ಈ ಸೂಕ್ಷ್ಮ ವೀಕ್ಷಣೆ ಮುಂದೆ ಸಿಡುಬಿನ ಲಸಿಕೆ ಸಂಶೋಧನೆಗೆ ದಾರಿ ಆಯಿತು.
ದನದ ಸಿಡುಬಿನ ಗುಳ್ಳೆಯ ಕೀವು ತೆಗೆದು ಮನುಷ್ಯರಿಗೆ ಚುಚ್ಚಿದಾಗ ದೇಹದಲ್ಲಿ ಮಾನವ ಸಿಡುಬಿನ ವಿರುದ್ಧ ರಕ್ಷಣೆ ದೊರೆಯುವುದು ಖಾತ್ರಿಯಾಯಿತು. ನಿರಂತರ ಪ್ರಯೋಗಗಳು ದಶಕದ ಕಾಲ ನಡೆಯಿತು. ಆಗಿನ ಕಾಲದ ಆಧುನಿಕವಲ್ಲದ ಲ್ಯಾಬ್ಗಳು, ಆಸ್ಪತ್ರೆಗಳನ್ನು ಊಹೆ ಮಾಡಿ. ಅದರ ಜೊತೆಗೆ ಮೊದಲು ಲಸಿಕಾ ವಿಜ್ಞಾನ ಅಂಬೆಗಾಲು ಇಡುತ್ತಿತ್ತು! ಇಷ್ಟೆಲ್ಲ ಸವಾಲುಗಳ ನಡುವೆ ಜೆನ್ನರ್ ಅವರ ತೀವ್ರ ಪ್ರಯತ್ನದ ಫಲವಾಗಿ ಲಸಿಕೆ ಏನೋ ತಯಾರಾಯಿತು.
ಆದರೆ ಲಸಿಕೆ ಪ್ರಯೋಗ ಮಾಡುವುದು ಯಾರ ಮೇಲೆ?
ಇಲಿ ಮೊದಲಾದ ಪ್ರಾಣಿಗಳ ಮರಿಗಳ ಲಸಿಕೆ ಪ್ರಯೋಗ ಮಾಡಿ ಯಶಸ್ಸು ದೊರೆತಿತ್ತು. ಆದರೆ ಮನುಷ್ಯರ ಮೇಲೆ ಪ್ರಯೋಗ ಮಾಡದ ಹೊರತು ಆ ಲಸಿಕೆಯನ್ನು ಜಗತ್ತು ಒಪ್ಪುವುದು ಹೇಗೆ? ಇಬ್ಬರು ಹೆಂಗಸರು ಮುಂದೆ ಬಂದರಾದರೂ ಮುಂದೆ ಅಪನಂಬಿಕೆಯ ಮಾತಾಡಿದರು. ಪತ್ರಿಕಾ ಪ್ರಕಟಣೆ ಕೊಟ್ಟರೂ ಯಾರೂ ಮುಂದೆ ಬರಲಿಲ್ಲ. ಇಡೀ ಜಗತ್ತಿನಲ್ಲಿ ಆಗ ಸಿಡುಬು ರೋಗದ ಬಗ್ಗೆ ಭಯ ಇತ್ತು.
ಮುಂದೆ ಜೆನ್ನರನ ತೋಟದ ಮಾಲಿಯ ಮಗ ಎಂಟು ವರ್ಷದ ಹುಡುಗ ಜೇಮ್ಸ್ ಫಿಲಿಪ್ ಮುಂದೆ ಬಂದ. ಅವನ ಹೆತ್ತವರೂ ಒಪ್ಪಿದರು. ಅವನ ಎರಡೂ ಕೈಗಳಿಗೆ ಜೆನ್ನರ್ ತನ್ನ ಲಸಿಕೆಯನ್ನು ಚುಚ್ಚಿದರು. ಆತನನ್ನು ನಿರಂತರ ವೀಕ್ಷಣೆಯಲ್ಲಿ ಇರಿಸಿದರು. ಲಸಿಕೆ ನೂರಕ್ಕೆ ನೂರರಷ್ಟು ಫಲಿತಾಂಶ ನೀಡಿದಾಗ ಎಡ್ವರ್ಡ್ ಜೆನ್ನರ್ ಅವರ ಖುಷಿಗೆ ಪಾರವೇ ಇರಲಿಲ್ಲ!
1796 ಮೇ 14ರಂದು…..
ಎಡ್ವರ್ಡ್ ಜೆನ್ನರ್ ಅಂದು ಆ ನಗರದ ಎಲ್ಲ ವೈದ್ಯರನ್ನು ಕರೆದು ಆ ಲಸಿಕೆಯ ಯಶಸ್ಸನ್ನು ಘೋಷಣೆ ಮಾಡಿದರು. ಇಡೀ ವೈದ್ಯಕೀಯ ಜಗತ್ತು ಜೆನ್ನರ್ ಅವರಿಗೆ ಜಯಕಾರ ಹಾಕಿತು. ಇಂಗ್ಲೆಂಡ್ ಸೇರಿದಂತೆ ಜಗತ್ತಿನ ಎಲ್ಲ ರಾಷ್ಟ್ರಗಳು ಬಹು ದೊಡ್ಡ ಪ್ರಮಾಣದಲ್ಲಿ ಜೆನ್ನರನ ಲಸಿಕೆಯನ್ನು ಒಪ್ಪಿಕೊಂಡು ಭಾರಿ ಪ್ರಮಾಣದಲ್ಲಿ ಉತ್ಪಾದನೆ ಮಾಡಿ ತಮ್ಮ ಜನರಿಗೆ ಲಸಿಕೆ ನೀಡಿದವು. ಎಲ್ಲ ಕಡೆಯೂ ಹರಡಿದ್ದ ಸಿಡುಬು ರೋಗವು ನಿಧಾನವಾಗಿ ನಿಯಂತ್ರಣಕ್ಕೆ ಬಂದಿತು. ಅದು ಜಗತ್ತಿನ ಮೊದಲ ಲಸಿಕೆ ಆಗಿತ್ತು! ಅದನ್ನು ಕಂಡು ಹಿಡಿಯುವ ಮೂಲಕ ಎಡ್ವರ್ಡ್ ಜೆನ್ನರ್ ವಿಶ್ವಮಟ್ಟದ ಕೀರ್ತಿ ಪಡೆದರು.
ನೆಪೋಲಿಯನ್ ತನ್ನ ಎಲ್ಲ ಸೈನಿಕರಿಗೆ ಸಿಡುಬು ಲಸಿಕೆ ಹಾಕಿಸಿದ್ದ!
ಮುಂದೆ ಫ್ರಾನ್ಸ್ ದೇಶದ ಅಸಾಮಾನ್ಯ ದಂಡ ನಾಯಕ ನೆಪೋಲಿಯನ್ ಇಂಗ್ಲೆಂಡ್ ಮೇಲೆ ದಾಳಿ ನಡೆಸಿದನು. ಯುದ್ಧವು ಭೀಕರವಾಗಿ ನಡೆಯುತ್ತಿದ್ದಾಗ ನೆಪೋಲಿಯನ್ ಇದೇ ಜೆನ್ನರನನ್ನು ವಿನಂತಿ ಮಾಡಿ ತನ್ನ ಇಡೀ ಸೈನ್ಯಕ್ಕೆ ಸಿಡುಬು ಲಸಿಕೆ ಹಾಕಿಸಿದನು. ಆಗ ಮೆಚ್ಚಿಕೊಂಡ ನೆಪೋಲಿಯನ್ ಜೆನ್ನರನನ್ನು ಚಿನ್ನದ ಪದಕ ಕೊಟ್ಟು ಸನ್ಮಾನ ಮಾಡಿದನು. ಮುಂದೆ ಜೆನ್ನರನ ವಿನಂತಿಯ ಮೇರೆಗೆ ಯುದ್ಧವು ನಿಂತಿತು ಮತ್ತು ನೆಪೋಲಿಯನ್ ಇಂಗ್ಲೆಂಡಿನ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಿದನು. ಹೀಗೆ ಎರಡು ರಾಷ್ಟ್ರಗಳ ಮಿತ್ರತ್ವಕ್ಕೂ ಎಡ್ವರ್ಡ್ ಜೆನ್ನರ್ ಕಾರಣ ಆದರು.
ಇಡೀ ಜಗತ್ತಿಗೆ ಮಾನವೀಯ ಅಂತಃಕರಣದ ಪ್ರಯೋಜನ ಮಾಡಿಕೊಟ್ಟ ಎಡ್ವರ್ಡ್ ಜೆನ್ನರ್ 1823ರಲ್ಲಿ ನಿಧನರಾದರು. ಮುಂದೆ ವಿಶ್ವ ಆರೋಗ್ಯ ಸಂಸ್ಥೆ ಇದೇ ಲಸಿಕೆಯನ್ನು ಬಳಸಿಕೊಂಡು ಇಡೀ ಜಗತ್ತಿನಿಂದ ಸಿಡುಬು ಎಂಬ ಮಹಾ ಮಾರಿಯನ್ನು ಬೇರು ಸಹಿತ ಕಿತ್ತು ಬಿಸುಟಿತು. 1980ರಿಂದ ಜಗತ್ತಿನಲ್ಲಿ ಒಂದೇ ಒಂದು ಸಿಡುಬು ಪ್ರಕರಣ ವರದಿ ಆಗಿಲ್ಲ ಅನ್ನುವುದೇ ಎಡ್ವರ್ಡ್ ಜೆನ್ನರ್ ಅವರಿಗೆ ದೊರೆತ ಅತೀ ದೊಡ್ಡ ಪ್ರಶಸ್ತಿ!
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ರೋಬೋಟಿಗೂ ಇವರಿಗೂ ವ್ಯತ್ಯಾಸವಿಲ್ಲ! ಭಾವನೆಗಳೇ ಇಲ್ಲದವರ ಜತೆ ಬದುಕೋದು ಹೇಗೆ?
-
ಸುವಚನ14 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ20 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಕರ್ನಾಟಕ23 hours ago
Life changing story : ನಿಂದನೆಯೇ ವರವಾಯಿತು, ಹಠ ತೊಟ್ಟು ವಕೀಲನಾಗಿ ಕರಿಕೋಟು ಧರಿಸಿ ವಾದಿಸಿ ಗೆದ್ದ ಯುವಕ!
-
ಆಟೋಮೊಬೈಲ್21 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್5 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ9 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ8 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ9 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ