Virat Kohli: ವಿರಾಟ್ ಕೊಹ್ಲಿ… ಕ್ರಿಕೆಟ್ ಲೋಕದ 'ದೇವರ ದೇವ'!; ಇವರ ಬದುಕಿನ ಹಾದಿ ರೋಚಕ! - Vistara News

ಅಂಕಣ

Virat Kohli: ವಿರಾಟ್ ಕೊಹ್ಲಿ… ಕ್ರಿಕೆಟ್ ಲೋಕದ ‘ದೇವರ ದೇವ’!; ಇವರ ಬದುಕಿನ ಹಾದಿ ರೋಚಕ!

ಆಗ ಸಚಿನ್ ಜಮಾನಾ, ಈಗ ವಿರಾಟ್ ಜಮಾನಾ. ಇಬ್ಬರ ಆಟದಲ್ಲೂ ಸಾಕಷ್ಟು ವ್ಯತ್ಯಾಸವಿದೆ. ಕೊಹ್ಲಿ ರೌದ್ರಾವತಾರ ತಾಳಿಕೊಂಡು ಬ್ಯಾಸ್ ಬೀಸುತ್ತಿದ್ದರೆ, ಸಚಿನ್ ಸಮುದ್ರದ ಅಲೆಗಳಂತೆ ಬ್ಯಾಟ್ ಬೀಸುತ್ತಿದ್ದರು. ಏನೇ ಇರಲಿ, 35ರ ಹರೆಯದ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನ ನೂತನ ಸಾರ್ವಭೌಮ.

VISTARANEWS.COM


on

Virat Kohli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸನತ್ ರೈ, ಕ್ರೀಡಾಪಟು ಮತ್ತು ಕ್ರೀಡಾ ಬರಹಗಾರರು

ಕಿರು ನಗೆಯಿಂದಲೇ ಸೂಜಿಗಲ್ಲಿನಂತೆ ಆಕರ್ಷಿಸುವ ನೋಟ. ಆದ್ರೆ ನೋಡುವುದಕ್ಕೆ ಮಾತ್ರ ತುಂಬಾನೇ ಒರಟ. ವಯಸ್ಸು 35, ಆದ್ರೂ ಇನ್ನೂ ಬಿಟ್ಟಿಲ್ಲ ತುಂಟಾಟ. ಕ್ರಿಕೆಟ್‌ ಮೈದಾನಕ್ಕಿಳಿದ್ರೆ ಸಾಕು ನಡೆಸ್ತಾರೆ ಸುನಾಮಿಯನ್ನು ನಾಚಿಸುವಂತಹ ಆರ್ಭಟ. ಬೌಲರ್‌ಗಳಿಗೆ ಕೊಡ್ತಾರೆ ಸುಸ್ತು ಸುಸ್ತಾಗುವಷ್ಟು ಕಾಟ. ಎಂಥ ಒತ್ತಡದಲ್ಲೂ ಹಿತವಾಗಿ, ಮಜವಾಗಿ ಆಡುವುದು ಇವ್ರಿಗೆ ಪರಿಪಾಠ. ಎದುರಾಳಿ ಆಟಗಾರರು ಮಾತಿನ ಸಮರ ನಡೆಸಿದ್ರೆ ಹಿಂದೆ ಮುಂದೆ ನೋಡದೆ ಮಾಡ್ತಾರೆ ಕಿತ್ತಾಟ. ಬ್ಯಾಟಿಂಗ್ ಲಯವಿದ್ರೂ, ಲಯ ತಪ್ಪಿದ್ರೂ ಮೈದಾನದಲ್ಲೇ ಆಗುತ್ತೆ ರಂಪಾಟ. ಸೋಲನ್ನು ಒಪ್ಪಿಕೊಳ್ಳದ ಮನದಲ್ಲಿದೆ ಗೆಲ್ಲಲೇಬೇಕು ಅನ್ನೋ ಹಠ. ಕ್ರಿಕೆಟ್‌ನ ಎಲ್ಲಾ ಗ್ರಾಮರ್‌ಗಳನ್ನು ಮಾಡಿಕೊಂಡಿದ್ದಾರೆ ಕಂಠಪಾಠ. ಕ್ರಿಕೆಟ್‌ ಜಗತ್ತನ್ನು ಒಂದು ಕ್ಷಣ ಚಕಿತಗೊಳಿಸುವಂತೆ ಮಾಡುತ್ತೆ ಇವ್ರ ಬೊಂಬಾಟ್‌ ಆಟ. ಪ್ರತಿ ಕ್ಷಣವೂ ಯೋಚನೆಯಲ್ಲಿರುತ್ತೆ ಸಾಧನೆಯ ಹುಡುಕಾಟ. ಪ್ರೀತಿ ಪ್ರೇಮ- ಪ್ರಣಯದಲ್ಲೂ ಇದೆ ಹುಡುಗಾಟ. ಆಧುನಿಕ ಕ್ರಿಕೆಟ್‌ ಜಗತ್ತಿನಲ್ಲಿ ಈಗ ಇವ್ರದ್ದೇ ಚೆಲ್ಲಾಟ. ಪ್ರಬುದ್ಧ, ಪರಿಪಕ್ವ ಆಟದಿಂದಲೇ ಆಗುತ್ತಿದ್ದಾರೆ ವಿಶ್ವ ಸಾಮ್ರಾಟ..ಇದು ವಿರಾಟನ(Virat Kohli) ಹೆಜ್ಜೆ…ಗೆಜ್ಜೆಯ ಕುಣಿದಾಟ!

ಹೌದು, ವಿರಾಟ್‌ ಕೊಹ್ಲಿ ಮಾಡಿರುವ, ಮಾಡುತ್ತಿರುವ, ಮಾಡಲಿರುವ ಸಾಧನೆಯೇ ಅಂತಹುದ್ದು. ಅದನ್ನು ಯಾರೂ ಕೂಡ ಊಹೆ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಸಾಧನೆಯ ಹಿಂದಿನ ಒಂದೊಂದು ಹೆಜ್ಜೆಯಲ್ಲೂ ರಾಜ ಗಾಂಭೀರ್ಯವಿದೆ. ಅಷ್ಟೊಂದು ಅರ್ಥಗರ್ಭಿತವಾಗಿದೆ ವಿರಾಟ್‌ ಕೊಹ್ಲಿ ನಡೆದು ಬಂದಿರುವ ರಾಜಪಥದ ಹಾದಿ.
ಅದು… ನವೆಂಬರ್ 5, 1988. ರಾಜಧಾನಿ ದೆಹಲಿಯ ಮಧ್ಯಮ ವರ್ಗದಲ್ಲಿ ಹುಟ್ಟಿದ ಕೂಸು. ತಂದೆ ಪ್ರೇಮ್ ಕೊಹ್ಲಿ. ವೃತ್ತಿಯಲ್ಲಿ ವಕೀಲರು. ತಾಯಿ ಸರೋಜ ಕೊಹ್ಲಿ ಗೃಹಿಣಿ. ಅಣ್ಣ ಮತ್ತು ಅಕ್ಕನ ಪ್ರೀತಿಯ ತಮ್ಮ. ಹೆತ್ತವರಿಗೆ ಅಕ್ಕರೆಯ ಮಗ. ತುಂಟ ವಿರಾಟ್‌ನ ಕೀಟಲೆ ಅಷ್ಟಿಷ್ಟಲ್ಲ. ತಂದೆ ಪ್ರೇಮ್‌ ಕೊಹ್ಲಿಗೆ ಮಗನನ್ನು ಕ್ರಿಕೆಟಿಗನ್ನಾಗಿಸಬೇಕು ಅನ್ನೋ ಆಸೆ. ಅಂಬೆಗಾಲಿಡುತ್ತಿದ್ದಂತೆ ವಿರಾಟ್‌ ಕೊಹ್ಲಿಯ ಕೈಗೆ ಪ್ಲಾಸ್ಟಿಕ್ ಬ್ಯಾಟ್‌ ಸೇರಿಕೊಂಡಿತ್ತು. ಅದು ಎಷ್ಟರ ಮಟ್ಟಿಗೆ ಅಂದ್ರೆ ನಿದ್ದೆ ಮಾಡುವಾಗಲೂ ಕೂಡ ಎದೆಯ ಮೇಲೆ ಪ್ಲಾಸ್ಟಿಕ್‌ ಬ್ಯಾಟ್‌ ಇರಲೇಬೇಕಿತ್ತು. ಅಪ್ಪ ಪ್ರೇಮ್ ಕೊಹ್ಲಿ ಪ್ಲಾಸ್ಟಿಕ್ ಚೆಂಡಿನಲ್ಲಿ ಬೌಲಿಂಗ್ ಮಾಡುತ್ತಿದ್ರೆ ಮಗ ವಿರಾಟ್‌ ಕೊಹ್ಲಿ ತನ್ನ ಮೃದುವಾದ ಕೈಗಳಿಂದ ಪ್ಲಾಸ್ಟಿಕ್ ಬ್ಯಾಟ್‌ ಹಿಡಿದು ಬೀಸುತ್ತಿದ್ದ.

ನಂತರದ ದಿನಗಳಲ್ಲಿ ಅಕ್ಕ ಪಕ್ಕದ ಚಿಲ್ರೆ ಪಾರ್ಟಿ ಮಕ್ಕಳೊಂದಿಗೆ ವಿರಾಟ್‌ ಕೊಹ್ಲಿ ಗಲ್ಲಿ ಕ್ರಿಕೆಟ್ ಆಡುತ್ತಿದ್ರು. ಅಕ್ಕಪಕ್ಕದ ಮನೆಯ ಕಿಟಕಿಗಳು ಪುಡಿಯಾಗುತ್ತಿದ್ದವು. ಕ್ರಿಕೆಟ್‌ ಮೇಲಿನ ಪ್ರೀತಿ ಮತ್ತು ಪ್ರತಿಭೆಯನ್ನು ನೋಡುತ್ತಿದ್ದ ಪ್ರೇಮ್ ಕೊಹ್ಲಿಯ ಸ್ನೇಹಿತರು ವಿರಾಟ್‌ನನ್ನು ಕ್ರಿಕೆಟ್ ಅಕಾಡೆಮಿಗೆ ಸೇರಿಸುವಂತೆ ಸಲಹೆ ನೀಡಿದರು.1998ರಲ್ಲಿ ವಿರಾಟ್‌ ಕೊಹ್ಲಿ ತನ್ನ 10ರ ಹರೆಯದಲ್ಲಿ ವೆಸ್ಟ್‌ ದೆಹಲಿ ಕ್ರಿಕೆಟ್ ಅಕಾಡೆಮಿಗೆ ಸೇರಿಕೊಂಡರು. ಅಲ್ಲಿ ಗುರು ರಾಜ್ ಕುಮಾರ್ ಶರ್ಮಾ ಗರಡಿಯಲ್ಲಿ ಪಳಗಿದ ವಿರಾಟ್‌ ಕೊಹ್ಲಿ ನಂತ್ರ ಹಿಂದಿರುಗಿ ನೋಡಲೇ ಇಲ್ಲ. ಕ್ರಿಕೆಟ್‌ನ ಗ್ರಾಮರ್‌ಗಳನ್ನು ಕಲಿತುಕೊಂಡ ವಿರಾಟ್‌ ಕೊಹ್ಲಿ ಕೋಚ್‌ ರಾಜ್‌ ಕುಮಾರ್ ಅವ್ರ ಅಚ್ಚುಮೆಚ್ಚಿನ ಶಿಷ್ಯರಾದರು.

ಶಾಲಾ ಟೂರ್ನಿಗಳಲ್ಲಿ ಮನಬಂದಂತೆ ಬ್ಯಾಟ್‌ ಬೀಸುತ್ತಿದ್ದ ವಿರಾಟ್‌ ಕೊಹ್ಲಿ ಔಟೇ ಆಗುತ್ತಿರಲಿಲ್ಲ. ಅಷ್ಟೇ ಅಲ್ಲ ಸೋಲನ್ನು ಯಾವತ್ತೂ ಕೂಡ ಸಹಿಸುತ್ತಿರಲಿಲ್ಲ. ಒಂದು ವೇಳೆ ಸೋತರೂ ಅಥವಾ ಬೇಗ ಔಟಾದ್ರೆ ಸಾಕು ವಿರಾಟ್‌ ರಂಪಾಟವನ್ನೇ ಮಾಡುತ್ತಿದ್ದರು. ಆಗ ಕೋಚ್‌ ರಾಜ್ ಕುಮಾರ್‌ಶರ್ಮಾ ಬಂದು ಸಮಾಧಾನಪಡುತ್ತಿದ್ರು. ಇನ್ನು ಎಳವೆಯಲ್ಲಿ ತಂಡದ ನಾಯಕತ್ವವನ್ನು ವಹಿಸಿಕೊಂಡ ಕೊಹ್ಲಿ ಪಂದ್ಯವನ್ನು ಲಘುವಾಗಿ ಮುಗಿಸಬೇಕು ಅನ್ನೋ ತವಕದಲ್ಲಿರುತ್ತಿದ್ರು. ಎದುರಾಳಿ ತಂಡ ಅಲ್ಪ ಮೊತ್ತದ ಸವಾಲು ನೀಡಿದ್ರೆ ಸಾಕು ಕೊಹ್ಲಿ ಓಡೋಡಿ ಬಂದು ಕೋಚ್‌ ಬಳಿ ತಾನು ಆರಂಭಿಕನಾಗಿ ಕಣಕ್ಕಿಳಿಯುತ್ತೇನೆ ಎಂದು ಮನವಿ ಮಾಡಿಕೊಳ್ಳುತ್ತಿದ್ರು. ಹಾಗಂತ ಶಿಷ್ಯನ ಆಸೆಗೆ ಕೋಚ್‌ ರಾಜ್‌ಕುಮಾರ್ ಯಾವತ್ತೂ ತಣ್ಣೀರು ಹಾಕಲಿಲ್ಲ. ಶಿಷ್ಯ ವಿರಾಟ್‌ನ ಪ್ರತಿ ಹೆಜ್ಜೆಯಲ್ಲೂ ಗುರು ರಾಜ್‌ ಕುಮಾರ್ ಶರ್ಮಾ ಅವ್ರ ನೆರಳಿತ್ತು ಎಂಬುದು ಅಷ್ಟೇ ಸತ್ಯ.

ರನ್ ಸುರಿಮಳೆ…

ಶಾಲಾ ಟೂರ್ನಿಗಳಲ್ಲಿ ರನ್‌ ಮಳೆ ಸುರಿಸುತ್ತಿದ್ದ ವಿರಾಟ್‌ ಕೊಹ್ಲಿ ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳುವ ಹಠಕ್ಕೆ ಬಿದ್ದರು. ಕ್ರಿಕೆಟ್‌ ಮೇಲಿನ ಪ್ರೀತಿ- ಬದ್ಧತೆಯನ್ನು ಯಾರೂ ಕೂಡ ಪ್ರಶ್ನೆ ಮಾಡುವ ಹಾಗಿರಲಿಲ್ಲ. ಶಿಷ್ಯನ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಕೋಚ್‌ ರಾಜ್‌ ಕುಮಾರ್ ಶರ್ಮಾ, ಮುಂದೊಂದು ದಿನ ಈ ಹುಡುಗನಿಗೆ ಉಜ್ಜಲ ಭವಿಷ್ಯವಿದೆ ಎಂಬುದನ್ನು ಅಂತರಂಗದಲ್ಲೇ ಹೇಳಿಕೊಂಡಿದ್ರು. ಇದಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ನಡೆದಿತ್ತು. ಶಾಲಾ ಟೂರ್ನಿಯ ಪಂದ್ಯವೊಂದರಲ್ಲಿ ವಿರಾಟ್‌ ಕೊಹ್ಲಿ ಬೌಂಡರಿ ಲೈನ್‌ನಿಂದ ಚೆಂಡನ್ನು ನೇರವಾಗಿ ವಿಕೆಟ್ ಕೀಪರ್‌ನತ್ತ ಎಸೆದಿದ್ರು. ಅದನ್ನು ನೋಡಿದ ಕೋಚ್‌ ರಾಜ್‌ ಕುಮಾರ್ ಶರ್ಮಾ ಒಂದು ಕ್ಷಣ ಚಕಿತಗೊಂಡಿದ್ರು. ಅಷ್ಟೇ ಅಲ್ಲ, ವಿರಾಟ್‌ ಕೊಹ್ಲಿಯ ರಟ್ಟೆಯ ಶಕ್ತಿ ಏನು ಎಂಬುದು ಅವತ್ತೇ ಗುರುವಿಗೆ ಮನವರಿಕೆಯಾಯ್ತು.

ಶಾಲಾ ಟೂರ್ನಿಗಳ ಜತೆ ವಿವಿಧ ವಯೋಮಿತಿಯ ಟೂರ್ನಿಗಳಲ್ಲಿ ವಿರಾಟ್‌ ಕೊಹ್ಲಿ ರನ್‌ಗಳ ಸುರಿಮಳೆಗೈಯುತ್ತಿದ್ದರು. ಜತೆಗೆ ಏಕಾಂಗಿಯಾಗಿ ತಂಡವನ್ನು ಗೆಲ್ಲಿಸುವ ಪರಿಪಾಠವನ್ನು ಬೆಳೆಸಿಕೊಂಡಿದ್ದರು. ಇನ್ನೊಂದೆಡೆ ರಾಜಧಾನಿಯ ಶಾಲಾ ಮಟ್ಟದ ಟೂರ್ನಿಗಳಲ್ಲಿ ಸದ್ದು ಮಾಡಿದ ವಿರಾಟ್‌ ಕೊಹ್ಲಿ ಬಿಸಿಸಿಐ ಚಾವಡಿಯಲ್ಲೂ ಸುದ್ದಿ ಮಾಡಿದ್ರು. ಜತೆಗೆ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲೂ ಏಕಾಂಗಿ ಹೋರಾಟ ನಡೆಸಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ರು. ಕೊಹ್ಲಿಯ ಬ್ಯಾಟಿಂಗ್‌ ವೈಖರಿಗೆ ಮನ ಸೋತ ದೆಹಲಿ ಕ್ರಿಕೆಟ್‌ ಸಂಸ್ಥೆಯ ಆಯ್ಕೆಗಾರರು ದೆಹಲಿ ರಣಜಿ ತಂಡಕ್ಕೂ ಆಯ್ಕೆ ಮಾಡಿದ್ರು. 18ರ ಹರೆಯದಲ್ಲಿ ತಮಿಳುನಾಡು ವಿರುದ್ಧ ಚೊಚ್ಚಲ ರಣಜಿ ಪಂದ್ಯವನ್ನಾಡಿದ ವಿರಾಟ್‌ ಕೊಹ್ಲಿ ಕೇವಲ 18 ರನ್‌ ಗಳಿಸಿ ನಿರಾಸೆ ಅನುಭವಿಸಿದರು.

ಆದರೆ ಕರ್ನಾಟಕದ ವಿರುದ್ಧದ ರಣಜಿ ಪಂದ್ಯವನ್ನು ವಿರಾಟ್‌ ಯಾವತ್ತು ಮರೆಯೋಕೆ ಸಾಧ್ಯವಿಲ್ಲ. ಯಾಕಂದ್ರೆ ಅದು ಅಂತಿಂಥ ಪಂದ್ಯವಲ್ಲ. ಸಾವಿನ ನೋವಿನಲ್ಲೂ ತಂಡದ ಹಿತಕ್ಕಾಗಿ ಆಡಿದ ಪಂದ್ಯ. ಪಂದ್ಯ ನಡೆಯುತ್ತಿರುವಾಗಲೇ ತಂದೆಯ ಸಾವಿನ ಸುದ್ದಿ ಕೇಳಿದಾಗ ಎಂಥವರ ಮನ ಕೂಡ ಕರಗುತ್ತೆ. ಅಂತಹುದ್ರಲ್ಲಿ 18ರ ಹರೆಯದ ಬಾಲಕ ವಿರಾಟ್ ಕೊಹ್ಲಿಯ ಮನಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸಿಕೊಳ್ಳುವುದು ಕೂಡ ಕಷ್ಟ. ತಂದೆಯ ಸಾವಿನ ನೋವಿನಲ್ಲೂ ಕರ್ನಾಟಕದ ಬೌಲರ್‌ಗಳನ್ನು ಕಾಡಿದ ವಿರಾಟ್‌ ಕೊಹ್ಲಿ 90 ರನ್‌ ಗಳಿಸಿ ಔಟಾಗಿಬಿಟ್ರು. ಪಂದ್ಯ ಮುಗಿದ ನಂತರ ನೇರವಾಗಿ ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದರು. ತಂದೆಯ ಕನಸು ನನಸಾಗುವ ಸಮಯದಲ್ಲಿ ಇಹಲೋಕ ತ್ಯಜಿಸಿದರು ಎಂಬ ನೋವು ಕಾಡ್ತಾ ಇತ್ತು. ರಾತ್ರಿ ಇಡೀ ತಂದೆಯನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದರು. ಆದರೂ ಎಲ್ಲವನ್ನು ಸಹಿಸಿಕೊಂಡ ವಿರಾಟ್‌ ಕೊಹ್ಲಿ ಮರುದಿನ ಮೈದಾನದಲ್ಲಿ ಹಾಜರಾದರು. ಇದು ವಿರಾಟ್‌ ಕೊಹ್ಲಿಯವರ ಬದ್ಧತೆ ಮತ್ತು ಆಟದ ಮೇಲಿನ ಪ್ರೀತಿಯನ್ನು ತೋರಿಸುತ್ತದೆ.

ಭಾರತ ತಂಡ ಮುನ್ನಡೆಸುವ ಅವಕಾಶ

ದೇಶಿ ಪಂದ್ಯಗಳಲ್ಲಿ ರನ್‌ ಮಳೆ ಸುರಿಸುತ್ತಿದ್ದ ವಿರಾಟ್‌ ಕೊಹ್ಲಿಗೆ 19 ವಯೋಮಿತಿಯ ವಿಶ್ವ ಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ತಾನಾಗಿಯೇ ಒಲಿದು ಬಂತು. ಅನುಭವಿ ಆಟಗಾರನಂತೆ ಕಾಣಿಸಿಕೊಂಡ ವಿರಾಟ್‌ ಕೊಹ್ಲಿ ಏಕಾಂಗಿ ಹೋರಾಟ ನಡೆಸಿ ತಂಡವನ್ನು ಚಾಂಪಿಯನ್‌ಪಟ್ಟಕ್ಕೇರಿಸಿದ್ರು.ಈ ಗೆಲುವು ವಿರಾಟ್‌ ಕೊಹ್ಲಿಯ ಕ್ರಿಕೆಟ್‌ ಬದುಕಿಗೆ ಹೊಸ ತಿರುವು ನೀಡಿತ್ತು. ಆದ್ರೆ ಟೀಮ್ಇಂಡಿಯಾಗೆ ಎಂಟ್ರಿಯಾಗುವುದು ಅಷ್ಟೊಂದು ಸುಲಭವಿರಲಿಲ್ಲ. ಹಿರಿಯ ಆಟಗಾರರ ಅಬ್ಬರದ ಮುಂದೆ ವಿರಾಟ್ ಕೊಹ್ಲಿಯ ಆಟ ಸ್ವಲ್ಪ ಮಂಕಾಗಿ ಕಾಣತೊಡಗಿತ್ತು. ಆದ್ರೂ ಅವಕಾಶವನ್ನೇ ಎದುರು ನೋಡ್ತಾ ಇದ್ರು ದೆಹಲಿಯ ಚೀಕೂ.

ಐಪಿಎಲ್ ಹವಾ

ಈ ನಡುವೆ ಐಪಿಎಲ್‌ ಟೂರ್ನಿಯ ಹವಾ ಭಾರತದಲ್ಲಿ ಜೋರಾಗಿತ್ತು. ಯುವ ಆಟಗಾರರ ಲಿಸ್ಟ್‌ ನಲ್ಲಿ ಕಾಣಿಸಿಕೊಂಡ ವಿರಾಟ್‌ ಕೊಹ್ಲಿಯವರನ್ನು ರಾಯಲ್ ಚಾಲೆಂಜರ್ಸ್ ತನ್ನ ಬಲೆಯೊಳಗೆ ಬೀಳಿಸಿಕೊಂಡಿತ್ತು. ಮೊದಲೇ ಮಲ್ಯ ದರ್ಬಾರು ಬೇರೆ. ಶೋಕಿವಾಲಾ ವಿಜಯ್‌ ಮಲ್ಯ ರಾಯಲ್‌ ಚಾಲೆಂಜರ್ಸ್ ಆಟಗಾರರಿಗೆ ಇನ್ನಿಲ್ಲದ ಸವಲತ್ತುಗಳನ್ನು ನೀಡಿದ್ರು. ಇದು ವಿರಾಟ್‌ ಕೊಹ್ಲಿಯ ಮೇಲೂ ಗಾಢವಾದ ಪರಿಣಾಮ ಬೀರಿತ್ತು. ಕ್ರಿಕೆಟ್‌ ಬಿಟ್ಟು ಪಾರ್ಟಿ, ಪಬ್ ಅಂತ ಕುಣಿದಾಡಿದ ವಿರಾಟ್‌ ಕೊಹ್ಲಿ ಅಡ್ಡದಾರಿ ಹಿಡಿದಿದ್ರು. ಆಗಲೇ ವಿರಾಟ್‌ ಕೊಹ್ಲಿಯವರನ್ನು ಎಚ್ಚರಿಸಿದ್ದು ರಾಯಲ್‌ ಚಾಲೆಂಜರ್ಸ್ ತಂಡದ ಟೀಮ್ ಮ್ಯಾನೇಜ್‌ಮೆಂಟ್‌.

ಮೊದಲ ಐಪಿಎಲ್ ಟೂರ್ನಿಯಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿದ್ರೂ ರಾಯಲ್‌ ಚಾಲೆಂಜರ್ಸ್ ತಂಡ ಕೈಬಿಡಲಿಲ್ಲ. ರಾಹುಲ್ ದ್ರಾವಿಡ್‌, ವಿಜಯ್‌ ಭಾರಧ್ವಾಜ್‌, ಅವಿನಾಶ್‌ ವೈದ್ಯ, ಅನಿಲ್ ಕುಂಬ್ಳೆ, ಜತೆಗೆ ಸಚಿನ್ ತೆಂಡುಲ್ಕರ್‌ ಸೇರಿದಂತೆ ಹಿರಿಯ ಆಟಗಾರರು ಕೊಹ್ಲಿಗೆ ಬುದ್ಧಿವಾದ ಹೇಳಿದ್ರು. ತನ್ನ ತಪ್ಪನ್ನು ತಕ್ಷಣವೇ ತಿದ್ದಿಕೊಂಡ ವಿರಾಟ್‌ ಕೊಹ್ಲಿ ಆಟದ ಕಡೆ ಮತ್ತೆ ಗಮನ ಹರಿಸಿದ್ರು. ತಂದೆಯ ಕನಸನ್ನು ಸಾಕಾರಗೊಳಿಸಬೇಕು ಅಂತ ಪಣತೊಟ್ರು. ಕ್ರಿಕೆಟ್‌ಗೆ ಮೊದಲ ಆದ್ಯತೆ.. ಕ್ರಿಕೆಟ್ಟೇ ನನ್ನ ಉಸಿರು .. ಕ್ರಿಕೆಟ್ಟೇ ನನ್ನ ಬದುಕು ಎಂಬುದನ್ನು ಮೈಗೂಡಿಸಿಕೊಂಡ್ರು. ಕೊನೆಗೂ ತಂದೆಯ ಆಸೆಯಂತೆ ವಿರಾಟ್‌ ಕೊಹ್ಲಿ 2008ರಲ್ಲಿ ಟೀಮ್ ಇಂಡಿಯಾಗೆ ಎಂಟ್ರಿಯಾದ್ರು. ನಂತ್ರ ನಡೆದಿದ್ದು ಪವಾಡನೋ… ಆಕಸ್ಮಿಕನೋ… ಯಾರಿಗೂ ಏನು ಗೊತ್ತಿಲ್ಲ. ಕವಲುದಾರಿಯಲ್ಲಿ ಸಾಗುತ್ತಿದ್ದ ತನ್ನ ದಾರಿಯನ್ನು ರಹದಾರಿಯಲ್ಲಿ ಸಾಗುವಂತೆ ನೋಡಿಕೊಂಡರು.

ಇದನ್ನೂ ಓದಿ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾದ್ದೇ ಪಾರುಪತ್ಯ; ಇಲ್ಲಿದೆ 5 ಬಾರಿ ಚಾಂಪಿಯನ್ನರ ಸಾಹಸ… ​

ಟೀಮ್ ಇಂಡಿಯಾದೊಳಗೆ ಬರೋದು ಸುಲಭ ಆಗಿರಲಿಲ್ಲ

ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಅಂತಾರಲ್ಲ. ಹಾಗೇ ವಿರಾಟ್‌ ಕೊಹ್ಲಿಯ ಕ್ರಿಕೆಟ್‌ ಬದುಕು ಕೂಡ ಇದೆ. ಅಪ್ರತಿಮ ಪ್ರತಿಭೆ ಇದ್ರೂ ಟೀಮ್ ಇಂಡಿಯಾದ 11ರ ಬಳಗದಲ್ಲಿ ಕಾಣಿಸಿಕೊಳ್ಳುವುದು ಸುಲಭದ ಸಂಗತಿಯಾಗಿರಲಿಲ್ಲ. ಘಟಾನುಘಟಿ ಆಟಗಾರರ ದಂಡನ್ನೇ ಹೊಂದಿದ್ದ ಟೀಮ್ ಇಂಡಿಯಾದಲ್ಲಿ 19ರ ಹರೆಯದ ಹುಡುಗನಿಗೆ ಮಣೆ ಹಾಕಲು ಟೀಮ್ಇಂಡಿಯಾ ಆಯ್ಕೆಗಾರರು ಮನಸ್ಸು ಮಾಡಿರಲಿಲ್ಲ. ಆದ್ರೂ ತಂಡದಲ್ಲಿ ಇರಲಿ ಅಂತನೇ ಶ್ರೀಲಂಕಾ ಸರಣಿಗೆ ವಿರಾಟ್‌ ಕೊಹ್ಲಿ ಆಯ್ಕೆಯಾದ್ರು. ಆಗ ಟೀಮ್ ಇಂಡಿಯಾದ ಆರಂಭಿಕರಾದ ಸೆಹ್ವಾಗ್‌ ಮತ್ತು ಸಚಿನ್ ಗಾಯಗೊಂಡ ಕಾರಣ ಅನಿವಾರ್ಯವಾಗಿ ವಿರಾಟ್ ಕೊಹ್ಲಿ ಇನಿಂಗ್ಸ್‌ ಆರಂಭಿಸಿದ್ರೂ ಗಮನ ಸೆಳೆಯಲು ಮಾತ್ರ ವಿಫಲರಾದ್ರು. ಬಳಿಕ ವಿರಾಟ್‌ ಕೊಹ್ಲಿ ರಿಸರ್ವ್ ಆಟಗಾರನಾಗಿ ತಂಡಕ್ಕೆ ಬಂದು ಹೋಗುವ ಆತಿಥಿಯಾದರು.

ಬೆಂಚು ಕಾಯಿಸುವ ಕೆಲಸ

ಅದ್ರಲ್ಲೂ 2009ರಲ್ಲಿ ಒಂದಲ್ಲ.. ಎರಡಲ್ಲ… ಸತತ ಏಳು ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾದ 12ನೇ ಆಟಗಾರನಾಗಿ ಬೆಂಚು ಕಾಯಿಸುತ್ತಿದ್ರು. ಒಂದೇ ಒಂದು ಅವಕಾಶಕ್ಕಾಗಿ ಬಕ ಪಕ್ಷಿಯಂತೆ ಕಾಯುತ್ತಿದ್ದರೂ ತನ್ನ ಸಾಮರ್ಥ್ಯ ಏನು ಎಂಬುದನ್ನು ತೋರಿಸಲು ಹೊಂಚು ಹಾಕುತ್ತಿದ್ರು. ಆದ್ರೆ ಹಿರಿಯ ಆಟಗಾರರ ಅಬ್ಬರದಿಂದ ವಿರಾಟ್‌ ಅನುಭವಿಸಿದ್ದು ಬರಿ ನಿರಾಸೆ..ಕೊನೆಗೂ ಅವಕಾಶವೇ ಕೊಹ್ಲಿಯನ್ನು ಹುಡುಕಿಕೊಂಡು ಬಂತು. ಗೌತಮ್ ಗಂಭೀರ್‌ ಮತ್ತು ಯುವರಾಜ್‌ ಸಿಂಗ್‌ ಗಾಯಗೊಂಡ ಕಾರಣ ತಂಡದಲ್ಲಿ ಆಡುವ ಅವಕಾಶ ಸಿಕ್ಕಿಬಿಟ್ಟಿತ್ತು. ಆಗಲೇ ವಿರಾಟ್‌ ಕೊಹ್ಲಿ ಮನದಲ್ಲಿ ಅಚಲ ನಿರ್ಧಾರ ಮಾಡಿಬಿಟ್ಟಿದ್ರು.

ಕೊಹ್ಲಿ ಆಟ ಶುರು

The game has just begun”!
ಹೌದು, ವಿರಾಟ್ ಕೊಹ್ಲಿಯ ಆಟ ಶುರುವಾಗಿದ್ದೇ ಇಲ್ಲಿಂದ. ಅಪ್ರತಿಮ ಆಟಗಾರರ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಮಿಂಚು ಹರಿಸಿದ್ರು. ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡ್ರು. ಪಂದ್ಯದಿಂದ ಪಂದ್ಯಕ್ಕೆ ಪರಿಪಕ್ವತೆಯನ್ನು ಪಡೆದುಕೊಂಡ್ರು. ಆದ್ರೂ ಕೆಟ್ಟ ಫಾರ್ಮ್ ನಿಂದ ಸ್ವಲ್ಪ ವಿಚಲಿತರಾದ್ರೂ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲರಾದ್ರು. 2010ರಲ್ಲಿ ವಿರಾಟ್‌ ಕೊಹ್ಲಿ ತಮ್ಮ ವಯಸ್ಸಿಗೂ ಮೀರಿದ ಪ್ರಬುದ್ಧತೆ ಸಾಧಿಸಿದ್ರು. ಮುಖ್ಯವಾಗಿ ಎದುರಾಳಿ ತಂಡದ ಸವಾಲನ್ನು ಬೆನ್ನಟ್ಟುವಾಗ ವಿರಾಟ್‌ ಸ್ವಲ್ಪವೂ ಅಳುಕುವುದಿಲ್ಲ. ಯಾವುದೇ ಒತ್ತಡವಿಲ್ಲದೆ ಧೈರ್ಯದಿಂದ ಮುನ್ನುಗ್ಗಿ ತಂಡದ ಗೆಲುವಿಗೂ ಕಾರಣರಾಗುತ್ತಿದ್ರು. ಎಂಥ ಕಠಿಣ ಪರಿಸ್ಥಿತಿಯಲ್ಲೂ ಎದೆಗುಂದದೇ ಆಟವಾಡುವ ವಿರಾಟ್‌ ಆಟಕ್ಕೆ ವಿಶ್ವ ಕ್ರಿಕೆಟ್‌ ಬೆರಗುಗೊಂಡಿರುವುದಂತೂ ಸುಳ್ಳಲ್ಲ.

ಇದನ್ನೂ ಓದಿ Virat And Anushka:’ನೀನು ದೇವರ ಮಗು’ ಕೊಹ್ಲಿಗೆ ಅನುಷ್ಕಾ ಭಾವುಕ ಸಂದೇಶ

2011ರ ವಿಶ್ವಕಪ್ ನಲ್ಲಿ ಮಿಂಚು

2011ರ ವಿಶ್ವಕಪ್‌ನಲ್ಲಿ ವಿರಾಟ್‌ ಕೊಹ್ಲಿಯ ಆಟದ ಖದರಿಗೆ ಸರಿಸಾಟಿಯೇ ಇರಲಿಲ್ಲ. ಸಚಿನ್, ಸೆಹ್ವಾಗ್‌ರಂತ ಆಟಗಾರರೇ ವಿರಾಟ್‌ ಎದುರು ಮಂಕಾದಂತೆ ಕಾಣುತ್ತಿದ್ರು. ಅಲ್ಲದೆ 28 ವರ್ಷಗಳ ಬಳಿಕ ಟೀಮ್ ಇಂಡಿಯಾ ವಿಶ್ವಕಪ್‌ ಗೆಲ್ಲಲು ಕೊಹ್ಲಿಯ ಕೊಡುಗೆಯೂ ಅಪಾರವಿದೆ. ವಿರಾಟ್ ಆಟಕ್ಕೆ ಶರಣಾದ ಟೀಮ್ ಇಂಡಿಯಾದ ಆಯ್ಕೆಗಾರರು 2012ರಿಂದ ಏಕದಿನ ಕ್ರಿಕೆಟ್‌ನ ಉಪನಾಯಕನಾಗಿ ಹಾಗೂ 2014ರಿಂದ ಟೆಸ್ಟ್‌ ನಾಯಕನನ್ನಾಗಿ ಆಯ್ಕೆ ಮಾಡಿತ್ತು. ಅಲ್ಲದೆ ವಿಶ್ವ ಕ್ರಿಕೆಟ್‌ನ ಮೂರು ಮಾದರಿಯ ಆಟದಲ್ಲೂ ವಿರಾಟ್‌ ಕೊಹ್ಲಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ವಿರಾಟ್ ಕೊಹ್ಲಿ ಈ ಮಟ್ಟಕ್ಕೆ ಏರುತ್ತಾರೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಆದರೆ ವಿರಾಟ್‌ ಕೊಹ್ಲಿಗೆ ಮಾತ್ರ ಗೊತ್ತಿತ್ತು. ಯಾಕಂದ್ರೆ ವಿರಾಟ್ ಭವಿಷ್ಯವನ್ನು ವಿರಾಟ್‌ ಕೊಹ್ಲಿಯೇ ರೂಪಿಸಿಕೊಂಡಿರುವುದು.

ಇದನ್ನೂ ಓದಿ Virat Kohli: ಕ್ರಿಕೆಟ್​ ದೇವರ ‘ಈ’ ವಿಶೇಷ ದಿನದಂದೇ ಅವರ ದಾಖಲೆ ಮುರಿದ ವಿರಾಟ್​ ಕೊಹ್ಲಿ

ನಿಜ, ವಿರಾಟ್ ಆಟಕ್ಕೆ ಏನೆಂದು ಹೆಸರಿಡಲಿ. ಸೋಲಿನ ದವಡೆಯಿಂದ ಪಾರು ಮಾಡುವ ರೀತಿಯನ್ನು ಹೇಗಂತ ವರ್ಣಿಸುವುದು? ಒತ್ತಡದಲ್ಲೂ ಆಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಲಯಕ್ಕೆ ಏನಂತ ಹೇಳುವುದು? ವಿರೋಧಿಗಳು ತಲೆಬಾಗುವಂತೆ ಆಡುವ ವೈಖರಿಯನ್ನು ಯಾವ ಪರಿ ಕೊಂಡಾಡುವುದು? ಅಭಿಮಾನಿಗಳ ಮೊಗದಲ್ಲಿ ನಗುವಿನ ಚಿತ್ತಾರ ಬಿಡಿಸಿರುವುದನ್ನು ಹೇಗೆ ಮರೆಯಲು ಸಾಧ್ಯ? ಕ್ರಿಕೆಟ್‌ ಜಗತ್ತನ್ನು ಆಪೋಶನ ಮಾಡುವ ದಾಟಿಯನ್ನು ಯಾವ ಶಬ್ದದಿಂದ ಕರೆಯುವುದು?ಅಷ್ಟಕ್ಕೂ ಮೈದಾನದಲ್ಲಿ ವಿರಾಟ್‌ ನಡೆಸುವ ಒಡ್ಡೋಲಗವನ್ನು ಹೇಳಲು ಪದಪುಂಜಗಳು ಬರುತ್ತಿಲ್ಲ. ಏಕಾಂಗಿಯಾಗಿ ನಡೆಸಿದ ಹೋರಾಟದ ಹೋಲಿಕೆಗೆ ನವರಸಗಳು ಸಾಕಾಗುತ್ತಿಲ್ಲ. ಎದುರಾಳಿ ಬೌಲರ್‌ಗಳ ಎದುರು ಮಾಡುವ ತಾಂಡವ ನೃತ್ಯಕ್ಕೆ ಮನಸೋಲದವರಿಲ್ಲ. ಬ್ಯಾಟ್‌ ಅನ್ನು ಗದೆಯಂತೆ ತಿರುಗಿಸುತ್ತ ರನ್ ಗಳಿಸುವ ಚಾಣಾಕ್ಷ ಇನ್ನೊಬ್ಬನಿಲ್ಲ. ಸವಾಲನ್ನು ಸ್ವೀಕರಿಸಿ ತಂಡವನ್ನು ಗೆಲುವಿನ ದಡ ಸೇರಿಸುವ ವಿರಾಟ್‌ ಕೊಹ್ಲಿಯಂತಹ ಮ್ಯಾಚ್‌ ವಿನ್ನರ್‌ ಮತ್ತೊಬ್ಬನಿಲ್ಲ.

ಏನೇ ಆದ್ರೂ ಕ್ರಿಕೆಟ್ ಅನ್ನೋ ಇಂಗ್ಲೀಷರ ಆಟದಲ್ಲೂ ನವರಸಗಳನ್ನು ಬೆರೆಸಿದ ಮಹಾ ಮಾಂತ್ರಿಕ ವಿರಾಟ್‌ ಕೊಹ್ಲಿ. ಶೃಂಗಾರ ಕಾವ್ಯದಂತೆ ರನ್‌ಗಳಿಸುವ ಕಲಾಕಾರ. ಮಹೋನ್ನತ್ತ ಇನಿಂಗ್ಸ್‌ ನಡುವೆಯೇ ಹಾಸ್ಯ ಮಾಡುವ ಹಾಸ್ಯಗಾರ. ಕೆಣಕಲು ಬಂದ್ರೆ ಶುರುವಾಗುತ್ತೆ ಮೈದಾನದಲ್ಲೇ ರೌದ್ರಾವತಾರ. ಕಠಿಣ ಸಂದರ್ಭದಲ್ಲಿ ಕರುಣೆಯಿಂದಲೇ ಆಡುವ ಆಟಗಾರ. ಸವಾಲಿನ ಪ್ರಶ್ನೆ ಬಂದಾಗ ಭೀಭತ್ಸ ತೋರುವ ಮಹಾಶೂರ . ಅಷ್ಟೇ ಅಲ್ಲ, ಏಕಾಂಗಿಯಾಗಿ ಎದುರಾಳಿಯನ್ನು ಧ್ವಂಸಗೊಳಿಸುವ ವೀರ ಹೋರಾಟಗಾರ. ಎಂತಹ ಸನ್ನಿವೇಶದಲ್ಲೂ ಅದ್ಭುತ ಆಟ ಪ್ರದರ್ಶಿಸುವ ಜಾದುಗಾರ. ಕ್ರಿಸ್‌ಗೆ ಆಗಮಿಸುವಾಗಲೇ ಎದುರಾಳಿ ತಂಡಕ್ಕೆ ಭಯಮೂಡಿಸುವ ರಣಧೀರ. ಶಾಂತ ಚಿತ್ತದಿಂದಲೇ ಎಲ್ಲವನ್ನು ಅರಿತುಕೊಂಡು ಕ್ರಿಕೆಟ್‌ ಜಗತ್ತನ್ನು ಮೋಡಿ ಮಾಡುವ ಮೋಡಿಗಾರ.

ಜಿಮ್ ನಲ್ಲಿ ಕಸರತ್ತು

ಒಂದಂತೂ ಸತ್ಯ ವಿರಾಟ್ ಕೊಹ್ಲಿಗೆ ಕ್ರಿಕೆಟ್ ಬಿಟ್ಟು ಬೇರೇನೂ ಇಲ್ಲ. ಕ್ರಿಕೆಟ್‌ಗಾಗಿಯೇ ನಾಲ್ಕು ಗಂಟೆಗಳ ಕಾಲ ಜಿಮ್‌ನಲ್ಲಿ ಕಸರತ್ತು ನಡೆಸುತ್ತಾರೆ. ಬಳಿಕ ಮನಸ್ಸಿಗೆ ತೃಪ್ತಿಯಾಗುವಷ್ಟು ಕಾಲ ನೆಟ್‌ ಅಭ್ಯಾಸ ನಡೆಸುತ್ತಾರೆ. ಈ ನಡುವೆ ಬಿಡುವಿನ ವೇಳೆಯಲ್ಲಿ ತನ್ನನ್ನು ಹುಡುಕಿಕೊಂಡು ಬರುವ ಜಾಹೀರಾತು ಕಂಪೆನಿಗಳ ಶೂಟಿಂಗ್‌ನಲ್ಲಿ ಬಿಝೆಯಾಗಿರುತ್ತಾರೆ. ಇನ್ನು ಸ್ವಲ್ಪ ಸಮಯ ತನ್ನ ಫ್ಯಾಮಿಲಿ ಹಾಗೂ ಪ್ರೇಯಸಿಗಾಗಿ ಮೀಸಲಿಡುತ್ತಿದ್ದಾರೆ. ಆದ್ರೂ ಬದುಕನ್ನು ಮಾತ್ರ ಬಿಂದಾಸ್ಆಗಿ ಎಂಜಾಯ್ ಮಾಡುತ್ತಿದ್ದಾರೆ. ಆದ್ರೂ ವಿರಾಟ್‌ ಕೊಹ್ಲಿ ತನ್ನ ಕಷ್ಟದ ದಿನಗಳನ್ನು ಮಾತ್ರ ಮರೆತಿಲ್ಲ. ಹಣ, ಹೆಸರು, ಪ್ರಖ್ಯಾತಿ ಬಂದ್ರೂ ತನ್ನ ವರ್ತನೆಯನ್ನು ಮಾತ್ರ ಬದಲಾಯಿಸಿಕೊಂಡಿಲ್ಲ. ಯಾರು ಏನು ಬೇಕಾದ್ರೂ ಅಂದುಕೊಳ್ಳಲಿ ನಾನು ಇರುವುದೇ ಹೀಗೆ ಎಂಬುದನ್ನು ಯಾವುದೇ ಸಂಕೋಚವಿಲ್ಲದೆ ಹೇಳಿಕೊಳ್ತಾರೆ ವಿರಾಟ್‌ ಕೊಹ್ಲಿ..

ರಕ್ಷಕನೂ ಹೌದು…. ರಕ್ಕಸನೂ ಹೌದು!

ನೋ ಡೌಟ್‌.. ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನ ಮಾಸ್ಟರ್ ಪೀಸ್…! ಮೈದಾನದಲ್ಲಿ ಆಡುವ ಆಟದ ಪರಿಯೇ ಅದ್ಭುತ. ಎದುರಾಳಿ ತಂಡಗಳ ಪಾಲಿಗೆ ಘನಘೋರ ಅಸುರ. ಟೀಮ್ ಇಂಡಿಯಾದ ಗರ್ಭಗುಡಿಗೆ ಚೇಸಿಂಗ್ ಗಾಡ್‌.! ಅಬ್ಬಾ..ಕೊಹ್ಲಿ ಬ್ಯಾಟಿಂಗ್ ವೈಖರಿಯನ್ನು ಯಾವ ರೀತಿ ಬಣ್ಣಿಸಬೇಕು ಅಂತನೇ ತಿಳಿಯುತ್ತಿಲ್ಲ. ಯಾಕಂದ್ರೆ ವಿರಾಟ್‌ ಮೈದಾನದಲ್ಲಿ ಆಡುತ್ತಿರೋದು ಅಥವಾ ಯುದ್ಧ ಮಾಡುತ್ತಿರೋದು ಎಂಬುದೇ ಗೊತ್ತಾಗಲ್ಲ. ಮೈದಾನದಲ್ಲಿ ಆಡುವ ಪರಿಯನ್ನು ನೋಡಿದಾಗ ರಕ್ಷಕನೋ..ರಕ್ಕಸನೋ ಅನ್ನೋ ಅನುಮಾನ ಕೂಡ ಮೂಡದೇ ಇರುವುದಿಲ್ಲ.

ಹೌದು, ಪುರಾಣ ಕಥೆಗಳಲ್ಲಿ ಏಕಾಂಗಿಯಾಗಿ ಯುದ್ಧ ಮಾಡುವ ಮಹಾ ಶೂರರ ಕಥೆಗಳನ್ನು ಕೇಳಿದ್ರೂ ಕಣ್ಣಾರೆ ನೋಡಿಲ್ಲ. ಆದ್ರೆ 22 ಯಾರ್ಡ್ ನ ಕ್ರಿಕೆಟ್ ಮೈದಾನದಲ್ಲಿ ಕೊಹ್ಲಿ ಆಟವನ್ನು ಕಣ್ಣಾರೆ ನೋಡಿದಾಗ ಮೇಲೆ ಮಹಾ ಶೂರನಂತೆ ಕಾಣುವುದರಲ್ಲಿ ಯಾವುದೇ ಸಂದೇಹವಿಲ್ಲ. ಟೀಮ್ ಇಂಡಿಯಾದ ದಳಪತಿಯಾಗಿ ತಂಡವನ್ನು ರಕ್ಷಣೆ ಮಾಡುವುದು ತನ್ನ ಜವಾಬ್ದಾರಿ ಎಂಬುದನ್ನು ಮರೆಯುವುದಿಲ್ಲ. ತಂಡದ ಗೆಲುವಿಗಾಗಿ ನಡೆಸುವ ಹೋರಾಟಕ್ಕೆ ಭೇಷ್ ಅನ್ನದಿರಲು ಮನಸ್ಸು ಒಪ್ಪುವುದಿಲ್ಲ. ಹಾಗೇ ಟೀಮ್ ಇಂಡಿಯಾದ ಕ್ರಿಕೆಟ್ ಅಭಿಮಾನಿಗಳು ಚೇಸಿಂಗ್ ಮಾಸ್ಟರ್ ಅಂತ ಉಘೇ.. ಉಘೇ ಅನ್ನುವುದರಲ್ಲೂ ತಪ್ಪೇನೂ ಇಲ್ಲ.

ಯಾಕಂದ್ರೆ ಕೊಹ್ಲಿ ಆಡುವ ರೀತಿ ಹಾಗಿದೆ

ಚೆಂಡು ಬ್ಯಾಟ್‍ನ ಸಮರದಲ್ಲಿ ಕೋಪ, ರೋಷಾಗ್ನಿ ಜ್ವಾಲೆ ಕೊಹ್ಲಿ ಮುಖದಲ್ಲಿ ಪ್ರಜ್ವಲಿಸುತ್ತದೆ. ಮಾತಿಗೆ ಮಾತು.. ಏಟಿಗೆ ಏಟು.. ಅಲ್ಲೇ ಡ್ರಾ.. ಆಲ್ಲೇ ಬಹುಮಾನ ಎಂಬಂತೆ ತನ್ನನ್ನು ಕೆಣಕಿದವರಿಗೆ ವಿರಾಟ್‌ ಕೊಡುವ ತಿರುಗೇಟನ್ನು ಜೀವಮಾನದಲ್ಲೇ ಅವರು ಮರೆಯಲಿಕ್ಕಿಲ್ಲ. ಕಿಂಗ್ ಕೊಹ್ಲಿ ಗಳಿಸಿದ್ದ ಒಂದೊಂದು ರನ್‍ಗಳಿಗೂ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಇನ್ನು ಬೌಂಡರಿ – ಸಿಕ್ಸರ್‍ಗಳ ಅಬ್ಬರಕ್ಕೆ ಅಭಿಮಾನಿಗಳ ಕೂಗು ಝೇಂಕಾರದಂತೆ ಮಾರ್ದನಿಸುತ್ತದೆ. ಕೊಹ್ಲಿ ಆಟದ ಖದರ್, ಗರ್ವ, ಅಹಂಕಾರ.. ನಾಯಕತ್ವ.. ಲೀಡರ್‌ಶಿಪ್‌, ಗೆಲ್ಲಲೇಬೇಕು ಅನ್ನೋ ಕಿಚ್ಚು, ಹೋರಾಟವನ್ನು ನೋಡಿದಾಗ ನವರಸಗಳ ನರ್ತನದಂತೆ ಭಾಸವಾಗುತ್ತದೆ

ಅಂದು ಸಚಿನ್ ಜಮಾನ.. ಇಂದು ವಿರಾಟನ ಜಮಾನಾ!

ಅದೊಂದು ಜಮಾನವಿತ್ತು. ಅದು 1989ರಿಂದ 2013ರವರೆಗೆ… ಅಸುಪಾಸು ಸುಮಾರು ಎರಡೂವರೆ ದಶಕ…ಆ ಒಬ್ಬ ಚಾಂಪಿಯನ್ ಆಟಗಾರನಿಗೊಸ್ಕರ ಪಂದ್ಯ ನೋಡುತ್ತಿದ್ದ ಕಾಲವೊಂದಿತ್ತು. ಅಷ್ಟೆ ಯಾಕೆ ಕ್ರಿಕೆಟ್ ಆಟಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆ ತಂದುಕೊಟ್ಟ ಮಹಾನ್ ಕ್ರಿಕೆಟಿಗ ಆತ.
ಮೈದಾನದಲ್ಲಿ ಆತ ಆಡುತ್ತಿದ್ರೆ ಆತನ ಹೆಸರು ಮಂಗಳ ವಾದ್ಯದಂತೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಮೊಳಗುತ್ತಿತ್ತು. ಆತನ ಶತಕಕ್ಕಾಗಿ ಊಟ, ನಿದ್ರೆ ಬಿಟ್ಟು ಕ್ರಿಕೆಟ್ ಅಭಿಮಾನಿಗಳು ನೋಡುತ್ತಿದ್ದರು. ಶತಕದಂಚಿನಲ್ಲಿ ಎಡವಿದ್ರೆ ಅಯ್ಯೋ ಅಂತ ಕಣ್ಣೀರು ಹಾಕುತ್ತಿದ್ದರು. ಆತ ಬೇಗನೆ ಔಟಾದ್ರೆ ಪಂದ್ಯ ಸೋತಂತೆ ಅಂತ ಹೇಳುತ್ತಿದ್ದರು.

ಇನ್ನು ಕೆಲವರು ಆತ ದಾಖಲೆಗಳಿಗಾಗಿ ಆಡುತ್ತಾನೆ.. ಸ್ವಾರ್ಥಿ ಅಂತೆಲ್ಲಾ ಟೀಕೆ ಕೂಡ ಮಾಡುತ್ತಿದ್ದರು. ಆದ್ರೆ ಆತ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ತನ್ನ ದೇಹದಲ್ಲಿ ಶಕ್ತಿ ಇರುವ ತನಕ ಕ್ರಿಕೆಟ್ ಆಡುತ್ತ ವಿಶ್ವ ಕ್ರಿಕೆಟನ್ನೇ ಪರವಶಮಾಡಿಕೊಂಡುಬಿಟ್ಟ. ಕ್ರಿಕೆಟ್ ಜಗತ್ತು ಆತನಿಗೆ ಕ್ರಿಕೆಟ್ ದೇವರು ಅಂತ ಪಟ್ಟಕಟ್ಟಿತ್ತು. ಅಭಿಮಾನಿಗಳು ಭಕ್ತರಂತೆ ಆತನನ್ನು ಆರಾಧನೆ ಮಾಡಿದ್ರು. 24 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ಆತ ಮಾಡಿರುವ ಸಾಧನೆಗಳನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಆಡಿರುವ ಪ್ರತಿ ಪಂದ್ಯ, ಪ್ರತಿ ರನ್‍ಗಳು ಕೂಡ ಕ್ರಿಕೆಟ್ ನ ಇತಿಹಾಸ ಪುಟಗಳಲ್ಲಿ ದಾಖಲಾಗಿವೆ.
ಮುಂದೊಂದು ದಿನ ಈ ದಾಖಲೆಗಳನ್ನು ಯಾರಿಂದಲೂ ಅಳಿಸಿ ಹಾಕಲು ಸಾಧ್ಯವಿಲ್ಲ ಎಂದು ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ರು. ಯಾಕಂದ್ರೆ ಸ್ಪರ್ಧಾತ್ಮಕ ದಿನಗಳಲ್ಲಿ 24 ವರ್ಷ ಯಾರಿಂದಲೂ ಆಡಲು ಸಾಧ್ಯವಿಲ್ಲ. ಅದು ಕೂಡ 200 ಟೆಸ್ಟ್‍ನಲ್ಲಿ 51 ಶತಕ, 15921 ರನ್, 463 ಏಕದಿನ ಪಂದ್ಯಗಳಲ್ಲಿ 49 ಶತಕ, 18426 ರನ್ ಗಳಿಸುವುದು ಅಸಾಧ್ಯವೇ ಆಗಿತ್ತು. ಹೌದು, ವಿಶ್ವ ಕ್ರಿಕೆಟ್ ಅನ್ನು 24 ವರ್ಷಗಳ ಕಾಲ ಆಳಿದ ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡುಲ್ಕರ್ ಬರೆದಿರುವ ದಾಖಲೆಗಳು ದಾಖಲೆಗಳಾಗಿಯೇ ಉಳಿಯಲಿದೆ ಅಂತ ಅಂದುಕೊಂಡಿದ್ರು.

ಆದ್ರೆ ಸಚಿನ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳುವಾಗ ಮಾತೊಂದು ಹೇಳಿದ್ರು. ವಿಶ್ವ ಕ್ರಿಕೆಟ್ ನಲ್ಲಿ ನನ್ನ ದಾಖಲೆಗಳನ್ನು ಅಳಿಸಿ ಹಾಕುವ ಸಾಮರ್ಥ್ಯ ಇರೋದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಮಾತ್ರ. ಆಗ ಸಚಿನ್ ಹೇಳಿದಾಗ ಇದು ಅಸಾಧ್ಯವಾದ ಮಾತು.. ಈ ದಾಖಲೆಗಳನ್ನು ಅಳಿಸಿ ಹಾಕಲು ಕೊಹ್ಲಿ ಮತ್ತು ರೋಹಿತ್‍ಗೆ ಸಾಧ್ಯವೇ ಇಲ್ಲ ಎಂದು ಭಾವಿಸಿದ್ರು. ಆದ್ರೆ ಸಚಿನ್ ಹೇಳಿದ್ದ ಮಾತು ನಿಜವಾಗಿದೆ.

ಅಂದು ಸಚಿನ್ ನುಡಿದ ಭವಿಷ್ಯ ನಿಜವಾಗಿದೆ. ನೋಡ ನೋಡುತ್ತಲೇ ಪಂದ್ಯಗಳು ಕಳೆದು ಹೋಗ್ತಾವೆ.. ವರ್ಷಗಳು ಉರುಳುತ್ತಿವೆ. ವಿರಾಟ್ ಹೆಸರಿನಲ್ಲಿ ರನ್‍ಗಳು ಹೂವಿನ ಹಾರವಾಗುತ್ತಿವೆ. ಶತಕಗಳು ವಿರಾಟನ ಕಿರೀಟಕ್ಕೆ ಗರಿಗಳಾಗಿ ಸೇರಿಕೊಳ್ಳುತ್ತಿವೆ. ಮೂರು ವರ್ಷಗಳ ಕಾಲ ಶತಕಗಳ ಬರ ಎದುರಿಸಿದ್ದ ಕೊಹ್ಲಿ ಫಿನಿಕ್ಸ್‌ನಂತೆ ಎದ್ದು ಬಂದಿದ್ದಾರೆ. ಶತಕಗಳ ಮೇಲೆ ಶತಕ ಸಿಡಿಸುತ್ತಿದ್ದಾರೆ. 2023ರ ವಿಶ್ವಕಪ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಕೊಹ್ಲಿ ಈಗ ಏಕದಿನ ಕ್ರಿಕೆಟ್‌ನಲ್ಲಿ ಶತಕಗಳ ಅರ್ಧಶತಕವನ್ನು ಸಿಡಿಸಿದ್ದಾರೆ. ಈ ಮೂಲಕ ತನ್ನ ಆರಾಧ್ಯ ದೈವ ಸಚಿನ್ ತೆಂಡುಲ್ಕರ್ ಅವರ ಏಕದಿನ ಶತಕಗಳ ದಾಖಲೆಯನ್ನು ತನ್ನ ಹೆಸರಿಗೆ ಕೊಹ್ಲಿ ಬರೆಸಿಕೊಂಡಿದ್ದಾರೆ.

ಕ್ರಿಕೆಟ್‌ ಲೋಕದ ಎರಡನೇ ದೇವರು!

ಒಟ್ಟಿನಲ್ಲಿ ಅಂದು ವಿಶ್ವ ಕ್ರಿಕೆಟ್ ನಲ್ಲಿ ಸಚಿನ್ ಜಮಾನ.. ಇಂದಿನ ಕ್ರಿಕೆಟ್ ಜಗತ್ತಿನಲ್ಲಿ ವಿರಾಟನ ಜಮಾನ.. ಆದ್ರೆ ಒಬ್ಬರಿಗೊಬ್ಬರು ಹೋಲಿಕೆ ಮಾಡೋದು ಸರಿಯಲ್ಲ. ಅದು ಸಮಂಜಸವೂ ಅಲ್ಲ. ಇಬ್ಬರ ಆಟದಲ್ಲೂ ಸಾಕಷ್ಟು ವ್ಯತ್ಯಾಸವಿದೆ. ಕೊಹ್ಲಿ ರೌದ್ರವತಾರ ತಾಳಿಕೊಂಡು ಬ್ಯಾಸ್ ಬೀಸುತ್ತಿದ್ರೆ, ಸಚಿನ್ ಸಮುದ್ರದ ಅಲೆಗಳಂತೆ ಬ್ಯಾಟ್ ಬೀಸುತ್ತಿದ್ದರು. ಏನೇ ಇರಲಿ, 35ರ ಹರೆಯದ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನ ನೂತನ ಸಾರ್ವಭೌಮ. ಕ್ರಿಕೆಟ್ ದೇವರ ಹಾದಿಗಿಂತಲೂ ಪ್ರಖರವಾಗಿ ಪ್ರಜ್ವಲಿಸುತ್ತಿರುವ ಕೊಹ್ಲಿ, ಕ್ರಿಕೆಟ್ ಜಗತ್ತಿನ ಮತ್ತೊಬ್ಬ ಕ್ರಿಕೆಟ್ ಬ್ರಹ್ಮ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕ್ರಿಕೆಟ್ ಲೋಕದ ಎರಡನೇ ಕ್ರಿಕೆಟ್ ದೇವರ ಅವತಾರವೂ ಭಾರತಾಂಬೆಯ ಮಡಿಲಿನಿಂದಲೇ ಹೊರಹೊಮ್ಮಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

Mother Sentiment: ವ್ಯಾಸಂಗಕ್ಕಾಗಿ ಊರು ತೊರೆದು ಪಟ್ಟಣದ ಹಾಸ್ಟೆಲ್‌ ಸೇರುತ್ತಿರುವ ಮಗಳಿಗೆ ತಾಯಿ ಕರುಳಿನ ಭಾವುಕ ಪತ್ರ ಇದು…

ತಾಯಿ ಹೃದಯದ ಅಳಲು (Mother Sentiment) ನಿನಗಿನ್ನೂ ಗೊತ್ತಿಲ್ಲ. ನನ್ನ ಮನದಲ್ಲಿ ಹುದುಗಿಸಿರುವ ಪ್ರೀತಿ, ಮಮತೆ, ಅಕ್ಕರೆ, ಭಯ, ಆತಂಕಗಳ ಕುರಿತು ಇಲ್ಲಿ ಬರೆದಿರುವೆ. ಹಾಗೆಂದು ಇದು ನನ್ನೊಬ್ಬಳ ಅಳಲು ಅಲ್ಲ. ನನ್ನಂತೆ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಬೇರೆ ಊರುಗಳಲ್ಲಿ ಓದಲು, ನೌಕರಿ ಮಾಡಲು ಕಳುಹಿಸಿರುವ ಲಕ್ಷಾಂತರ ತಾಯಂದಿರ ಮನದ ಮಾತು…..ಇತ್ತೀಚೆಗೆ ಬಾಲಕಿಯರ ಮೇಲೆ ನಡೆಯುತ್ತಿರುವ ಅಮಾನುಷ ಕೃತ್ಯಗಳ ಹಿನ್ನೆಲೆಯಲ್ಲಿ ತಾಯಿಯೊಬ್ಬಳು ತನ್ನ ಮಗಳಿಗೆ ಬರೆದ ಸುದೀರ್ಘ ಪತ್ರದ ಸಾರ ಇಲ್ಲಿದೆ.

VISTARANEWS.COM


on

Mother Sentiment
Koo

| ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ

ಪ್ರೀತಿಯ ಮಗಳೇ,
ಅರೆ! ನಿನ್ನೆ ತಾನೆ ನನ್ನನ್ನು ಕಳಿಸಲು ಬಂದ ಅಮ್ಮ (Mother Sentiment) ಇಷ್ಟು ಬೇಗ ಪತ್ರ ಬರೆಯಲು ಕಾರಣವೇನು ಎಂದು ಗಾಬರಿಯಾಗಬೇಡ. ತಾಯಿ ಹೃದಯದ ಅಳಲು ನಿನಗಿನ್ನೂ ಗೊತ್ತಿಲ್ಲ. ನನ್ನ ಮನದಲ್ಲಿ ಹುದುಗಿಸಿರುವ ಪ್ರೀತಿ, ಮಮತೆ, ಅಕ್ಕರೆ, ಭಯ, ಆತಂಕಗಳ ಕುರಿತು ಇಲ್ಲಿ ಬರೆದಿರುವೆ. ಹಾಗೆಂದು ಇದು ನನ್ನೊಬ್ಬಳ ಅಳಲು ಅಲ್ಲ. ನನ್ನಂತೆ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಬೇರೆ ಊರುಗಳಲ್ಲಿ ಓದಲು, ನೌಕರಿ ಮಾಡಲು ಕಳುಹಿಸಿರುವ ಲಕ್ಷಾಂತರ ತಾಯಂದಿರ ಮನದ ಮಾತು.
ನಮ್ಮ ಮನೆಯಂಗಳದಲ್ಲಿ ಚಂದದ ಪ್ರಾಕು ಧರಿಸಿ, ಎರಡು ಪುಟ್ಟ ಜುಟ್ಟು ಹಾಕಿಕೊಂಡು, ಮುಖಕ್ಕೆ ಪೌಡರ್ ಸವರಿ, ಹಣೆಗೆ ಕಾಡಿಗೆಯ ಬೊಟ್ಟುಇಟ್ಟು ಕಾಲಿನ ಗೆಜ್ಜೆಯ ಸದ್ದು ಮಾಡುತ್ತಾ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮನೆಯೆಲ್ಲ ನಡೆಯುತ್ತಿದ್ದ, ಅರಳು ಹುರಿದಂತೆ ಮುದ್ದಾಗಿ ಬಾಯಿ ತುಂಬಾ ಮಾತನಾಡುತ್ತಿದ್ದ ಪುಟ್ಟ ಕಂದ ನೀನು, ಇಂದು ಕಾಲೇಜಿಗೆ ಹೋಗುವಷ್ಟು ದೊಡ್ಡವಳಾಗಿರುವೆ. ಅತ್ಯುತ್ತಮ ಅಂಕ ಗಳಿಸಿ ಒಳ್ಳೆಯ ಕಾಲೇಜಿನಲ್ಲಿ ಸೀಟು ಗಿಟ್ಟಿಸಿ ಉನ್ನತ ಶಿಕ್ಷಣ (Higher Education) ಪಡೆಯುವ ಆಸೆಯಲ್ಲಿ ನಾವು ಮನೆಯವರನ್ನೆಲ್ಲಾ ತೊರೆದು ಹಾಸ್ಟೆಲಿನಲ್ಲಿ ವಾಸವಾಗಲು ಹೋಗುತ್ತಿರುವೆ.

ತುಸುವೇ ಸಂಭ್ರಮ ನಮ್ಮೆಲ್ಲರಲ್ಲಿ ಮನೆ ಮಾಡಿದ್ದರೂ ಹೆಚ್ಚು ಆತಂಕ ಮನದಲ್ಲಿ ಇದೆ. ಕಾಣದ ಊರು, ಅರಿಯದ ಜನ, ಬದಲಾದ ವಾತಾವರಣ ಇದೆಲ್ಲಕ್ಕೂ ನೀನು ಅದು ಹೇಗೋ ಹೊಂದಿಕೊಂಡು ಬಿಡುವೆ ಎಂಬ ಭರವಸೆ ನನಗಿದೆ… ಆದರೆ ನನ್ನ ಭಯ ಅದಲ್ಲ, ಅದರ ಅರಿವಾಗಲು ನೀನು ನಾನಲ್ಲ.
‘ಅಯ್ಯೋ ಅಮ್ಮ! ಮತ್ತದೇ ರಾಗ ಆಡಬೇಡ ನೀನು’ ಎಂಬ ನಿನ್ನ ಗದರಿಕೆಯ ನಡುವೆಯೂ ಮನ ಆತಂಕದ ಗೂಡಾಗಿದೆ. ನಿನ್ನನ್ನು ಕಳಿಸಲು ಬಂದಾಗ ಹೇಳದ ಮಾತುಗಳನು ಬರೆಯಲೇಬೇಕಾದ, ಬರೆದು ತಿಳಿಸಲೇಬೇಕಾದ ಅನಿವಾರ್ಯತೆ ನನ್ನದು.

ಪ್ರೀತಿಯ ಕೂಸು ನೀನು

ನಮ್ಮ ಮನೆಯ ಪ್ರೀತಿಯ ಕೂಸು ನೀನು. ಅಜ್ಜ ಅಜ್ಜಿಯ ಚಿನ್ನುವಾಗಿ, ಅಪ್ಪನ ಮುದ್ದಿನ ಮಗಳಾಗಿ, ಅಕ್ಕ-ಅಣ್ಣಂದಿರ ನೆಚ್ಚಿನ ತಂಗಿಯಾಗಿ ನನ್ನ ಕಣ್ಮಣಿಯಾಗಿ ಸುರಕ್ಷಿತವಾದ ಗುಬ್ಬಚ್ಚಿ ಗೂಡಿನಂತಹ ಸಂಸಾರದಲ್ಲಿ ಬೆಳೆದಿರುವ ನಿನಗೆ ಹೊರಗಿನ ನಿಷ್ಕುರ ಪ್ರಪಂಚದ ಅರಿವಿಲ್ಲ. ಹಾಗೆಂದು ಇಡೀ ಜಗತ್ತೇ ಕೆಟ್ಟದು ಎಂದಲ್ಲ. ನನಗೆ ಎಲ್ಲವೂ ಗೊತ್ತಿದೆ ಎಂಬ ಹದಿಹರೆಯದ ಹುಮ್ಮಸ್ಸು, ಸುಣ್ಣದ ತಿಳಿ ನೀರನ್ನು ಕೂಡ ಹಾಲೆಂದು ನಂಬುವ ನಿನ್ನ ಬೋಳೆ ಸ್ವಭಾವ, ಸ್ನೇಹಕ್ಕಿಂತ ಮಿಗಿಲಾದದ್ದು ಬೇರೆ ಯಾವುದೂ ಇಲ್ಲ ಎಂಬ ಸ್ಲೋಗನ್‌ಗಳು, ಪ್ರೀತಿ ಮಾಡಬಾರದು, ಮಾಡಿದರೆ ಜಗಕ್ಕೆ ಹೆದರಬಾರದು ಎಂಬ ಧ್ಯೇಯ ವಾಕ್ಯಗಳು, ಜೀವನ ಇರೋದೇ ಎಂಜಾಯ್ ಮಾಡೋಕೆ, ಈ ಹದಿಹರೆಯದ ವಯಸ್ಸು ಮತ್ತೆ ಬರುತ್ತಾ ಎಂಬ ಮಾತುಗಳು ಹೆಚ್ಚು ರುಚಿಸುವ ಸಮಯ ಇದು.

ಯಾವುದೂ ತಪ್ಪಲ್ಲ ನಿಜ

ಯಾವುದೂ ತಪ್ಪಲ್ಲ ನಿಜ. ಆದರೆ ಅದೆಲ್ಲವೂ ಒಂದು ಮಿತಿಯಲ್ಲಿದ್ದಾಗ ಮಾತ್ರ. ಜೀವನದಲ್ಲಿ ಎಂಜಾಯ್ಮೆಂಟ್ ಇರಬೇಕೆ ಹೊರತು ಎಂಜಾಯ್ಮೆಂಟ್ ಒಂದೇ ಜೀವನದ ಮುಖ್ಯ ಉದ್ದೇಶ ಅಲ್ಲ. ನಮ್ಮ ಬದುಕನ್ನು ವ್ಯವಸ್ಥಿತವಾಗಿ ನಡೆಸಲು ಬೇಕಾಗುವ ವಿದ್ಯೆ, ಆರ್ಥಿಕ ಸ್ವಾವಲಂಬನೆಯನ್ನು ಕೊಡುವ ನೌಕರಿ, ಸಾಮಾಜಿಕ ವಲಯದಲ್ಲಿ ನಿನ್ನದೇ ಆದ ಒಂದು ಒಳ್ಳೆಯ ಗುರುತಿಸುವಿಕೆ ಇವು ಉನ್ನತ ಶಿಕ್ಷಣದ ಮುಖ್ಯ ಧ್ಯೇಯಗಳು.

ಈಗಾಗಲೇ ಬದುಕಿನಲ್ಲಿ ಒಂದು ಮಹತ್ತರ ಘಟ್ಟವನ್ನು ತಲುಪಿರುವ ಸೋದರ ಸಂಬಂಧಿಗಳು ನಾವಂತೂ ಎಂಜಾಯ್ ಮಾಡಲಿಲ್ಲ ನೀವಾದರೂ ಮಾಡಿ ಎಂದು ಲಘುವಾಗಿ ನಿಮಗೆ ಹೇಳಿರುವುದನ್ನು ನೀನು ಗಂಭೀರವಾಗಿ ತೆಗೆದುಕೊಳ್ಳಬೇಡ…. ಓಟದ ನಡುವೆ ಅಲ್ಲೊಂದು ಇಲ್ಲೊಂದು ಅಡೆತಡೆಗಳು ಇದ್ದರೆ ತೊಂದರೆ ಇಲ್ಲ, ಆದರೆ ಆಡೆ ತಡೆಗಳನ್ನೇ ದಾಟುತ್ತ ಮುಂದೆ ಸಾಗುವ ಹೊತ್ತಿಗೆ ನಿನ್ನ ಸಮಯ ವ್ಯರ್ಥವಾಗಬಹುದು, ನಿನ್ನ ಗುರಿ ನಿನ್ನ ಕೈತಪ್ಪಿ ಹೋಗಬಹುದು ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೋ.

ನಿನ್ನ ಕಾಲೇಜಿನಲ್ಲಿ, ಹಾಸ್ಟೆಲ್‌ನಲ್ಲಿ ಎಲ್ಲರೊಂದಿಗೆ ಒಳ್ಳೆಯ ಸ್ನೇಹವನ್ನು ಹೊಂದು ಆದರೆ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ. ಸದಾ ಒಂದು ಅಂತರವನ್ನು ಕಾಯ್ದುಕೋ. ಕಹಿ ಎನಿಸಿದರೂ ಜೀವನದ ಸತ್ಯ ಇದುವೇ. ಕೆಲ ಸ್ನೇಹ ಸಂಬಂಧಗಳು ಜೊತೆಗಿರುವವರೆಗೆ ಮಾತ್ರ.. ಒಂದೇ ಊರಿನವರಾದರೆ ಆಗಾಗ ಪರಸ್ಪರ ಭೇಟಿಯಾಗಿ ಕಷ್ಟ ಸುಖವನ್ನಾದರೂ ಹಂಚಿಕೊಳ್ಳುತ್ತಾರೆ, ಆದರೆ ದೂರದಲ್ಲಿರುವ ಸ್ನೇಹಿತರು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಭೇಟಿಯಾಗುತ್ತಾರೆ ಎಂಬುದನ್ನು ನೀನೇ ನೋಡುತ್ತಿರುವೆಯಲ್ಲ. ಹಾಗೆಂದು ಆ ಸ್ನೇಹದ ಕುರಿತು ತಿರಸ್ಕಾರ ಬೇಡ, ಒಳ್ಳೆಯ ಸ್ನೇಹಗಳು ಒಂದು ಮಧುರ ಅನುಭೂತಿಯಂತೆ ನಿನ್ನೊಂದಿಗೆ ಉಳಿದು ಹೋಗಬೇಕು ನಿಜ. ದುಸ್ವಪ್ನಗಳಂತಲ್ಲ.

ನಮ್ಮ ಜೊತೆಗೆ ಬರುವುದು ನಮ್ಮವರು ಮಾತ್ರ

ಜೀವಿತದ ಕೊನೆಯವರೆಗೂ ನಮ್ಮ ಜೊತೆಗೆ ಬರುವುದು ನಮ್ಮ ಅಪ್ಪ, ಅಮ್ಮ, ಅಣ್ಣ-ತಮ್ಮ, ಅಕ್ಕ- ತಂಗಿ ಮುಂತಾದ ರಕ್ತ ಸಂಬಂಧಗಳು ಮಾತ್ರ. ನಮ್ಮ ಕಷ್ಟ ಸುಖಕ್ಕೆ ನೋವು ನಲಿವಿಗೆ ಜೊತೆಯಾಗುವವರು ನಮ್ಮವರೇ. ಕೆಲ ಸ್ನೇಹಗಳು ಇದಕ್ಕೆ ಅಪವಾದ ಇರಬಹುದು. ನೀನು ಮನೆಯವರನ್ನೆಲ್ಲಾ ಬಿಟ್ಟು ಓದಲು ಹೋಗಿರುವ ಮುಖ್ಯ ಉದ್ದೇಶವನ್ನು ಸದಾ ನೆನಪಿನಲ್ಲಿಡು. ಓದು ಮತ್ತು ಅದಕ್ಕೆ ಸಂಬಂಧಪಟ್ಟ ಕೆಲಸಗಳಲ್ಲಿ ನಿನ್ನನ್ನು ನೀನು ತೊಡಗಿಸಿಕೋ. ಊಟದಲ್ಲಿ ಉಪ್ಪಿನಕಾಯಿ ಇರುವಂತೆ ತಮಾಷೆ, ಜೋಕುಗಳು, ಕಾಲೆಳೆಯುವುದು ಹಿತಮಿತವಾಗಿರಲಿ…. ಆದರೆ ಅದುವೇ ಮುಖ್ಯವಾಗದಿರಲಿ.

ಹಾಸ್ಟೆಲ್ ನಲ್ಲಿ ಕೊಡುವ ಆಹಾರಕ್ಕೆ ನಿನ್ನನ್ನು ನೀನು ಒಗ್ಗಿಸಿಕೊಳ್ಳುವುದನ್ನು ರೂಢಿ ಮಾಡಿಕೋ. ಬೇಕು ಬೇಕೆಂದಾಗ ಊಟ ಮಾಡಲು ಆಗುವುದಿಲ್ಲ. ಆದ್ದರಿಂದ ನಿಗದಿತ ಸಮಯದಲ್ಲಿ ಆಹಾರ ಸೇವಿಸು. ಅಲ್ಲಿ ಕೊಡುವ ಹಸಿ ತರಕಾರಿ ಸೊಪ್ಪುಗಳನ್ನು, ಹಣ್ಣುಗಳನ್ನು ಸೇವಿಸು. ಸಾಧ್ಯವಾದಷ್ಟು ಹೊರಗಿನ ಆಹಾರವನ್ನು ಅವಾಯ್ಡ್ ಮಾಡು. ಹಾಸ್ಟೆಲ್ನ ನಿಯಮಾವಳಿಗಳನ್ನು ಎಂದೂ ಮೀರದಿರು. ಅತಿಯಾಗಿ ರುಚಿಯ ಕಡೆ ಗಮನ ಕೊಡದೆ ಹಿತಮಿತವಾದ ಆಹಾರವನ್ನು ಸೇವಿಸು.

ಆರ್ಥಿಕ ಶಿಸ್ತು ಇರಲಿ

ಖರ್ಚಿನ ವಿಷಯದಲ್ಲಿ ಸ್ವಲ್ಪ ಹುಷಾರಾಗಿರು. ಯಾವುದೇ ಕಾರಣಕ್ಕೂ ಹಣದ ದುರ್ಬಳಕೆ ಬೇಡ. ಅದೆಷ್ಟೇ ಒಳ್ಳೆಯ ಸ್ನೇಹಿತರಾಗಿದ್ದರೂ ಕೂಡ ಯಾರೊಂದಿಗೂ ನಿನ್ನ ಖಾತೆಗೆ ಸಂಬಂಧಪಟ್ಟ ಮಾಹಿತಿಗಳನ್ನು ಮತ್ತು ಎಟಿಎಂನ ಪಾಸ್ವರ್ಡ್ ಅನ್ನು ಹಂಚಿಕೊಳ್ಳಬೇಡ. ನೀನು ಓದುತ್ತಿರುವೆಡೆಯಲ್ಲಾಗಲಿ, ವಾಸಿಸುತ್ತಿರುವ ಸ್ಥಳದಲ್ಲಾಗಲಿ ಪ್ರತಿ ಬಾರಿಯೂ ನಿನ್ನ ಮಾತೇ ನಡೆಯಬೇಕು ಎಂಬ ಹಟ ಬೇಡ. ಬೇರೆಯವರ ಮಾತಿಗೂ ಬೆಲೆ ಕೊಡು. ಬಹಳಷ್ಟು ಸಲ ನಿಮ್ಮ ಹಾಸ್ಟೆಲ್ ವಾರ್ಡನ್ ಗಳು ನಿಮಗೆ ಹೇಳುವ ಮಾತುಗಳು ಒರಟೆನಿಸಬಹುದು, ಬೇಧ ತೋರುತ್ತಾರೆ ಎಂದು ಕೂಡ ಅನಿಸಬಹುದು. ಆದರೆ ಅವರು ಕೂಡ ನಿಮ್ಮ ಒಳಿತಿಗಾಗಿ ಮತ್ತು ಸಂಸ್ಥೆಯ ಏಳಿಗೆಗಾಗಿ ದುಡಿಯುತ್ತಿರುವವರು. ನಿಮ್ಮ ಎಲ್ಲ ಆಗುಹೋಗುಗಳಿಗೆ ಜವಾಬ್ದಾರರು ಎಂಬುದು ಸದಾ ನೆನಪಿರಲಿ.

ಇನ್ನು ಮುಖ್ಯವಾಗಿ ನಮ್ಮ ಬದುಕಿನಲ್ಲಿ ಬಾಲ್ಯ, ಯೌವನ, ವೃದ್ಧಾಪ್ಯ ಹೇಗೆ ಒಂದರ ನಂತರ ಒಂದು ಕ್ರಮವಾಗಿ ಬರುತ್ತವೆಯೋ ಹಾಗೆಯೇ ವಿದ್ಯಾರ್ಥಿ ಜೀವನ, ಉದ್ಯೋಗ, ಸಂಗಾತಿ ಮತ್ತು ವಿವಾಹಗಳು ಕೂಡ ಅದೇ ಕ್ರಮದಲ್ಲಿ ಬರಬೇಕು. ಇದರಲ್ಲಿ ಮಧ್ಯದ ಎರಡು ವಿಷಯಗಳು ಹಿಂದು ಮುಂದಾದರೆ ಉಳಿದ ಎರಡು ವಿಷಯಗಳನ್ನು ನಿರೀಕ್ಷಿತ ಮಟ್ಟದಲ್ಲಿ ಸಾಧಿಸಲು ಆಗುವುದಿಲ್ಲ. ಆದ್ದರಿಂದ ಈಗ ಓದುವ ವಯಸ್ಸಿನಲ್ಲಿ ಕೇವಲ ನಿನ್ನ ಓದಿನೆಡೆ ಮಾತ್ರ ನಿನ್ನ ಗಮನವಿರಲಿ. ಹರೆಯದ ಆಕರ್ಷಣೆಗೆ ಒಳಗಾಗಿ ವಿರುದ್ಧ ಲಿಂಗಿಯ ಜೊತೆಗಿನ ಸ್ನೇಹಕ್ಕೆ ಪ್ರೀತಿ ಪ್ರೇಮದ ಬಣ್ಣ ಹಚ್ಚುವುದು ಬೇಡ. ನಿನ್ನ ತಂದೆ ತಾಯಿಯರಿಗೂ ನಿನ್ನ ಸ್ನೇಹಿತರನ್ನು ಪರಿಚಯಿಸಿ ಧೈರ್ಯವಾಗಿ ಮಾತನಾಡಬಲ್ಲಷ್ಟು ನಿಷ್ಕಲ್ಮಶ ಸ್ನೇಹವನ್ನು ಹೊಂದಿದ್ದರೆ ಸಾಕು. ನಮ್ಮ ಹಿರಿಯರು ಇದ್ದಂತೆ ನಾವಿಲ್ಲ ನಿಜ, ಆದರೆ ನಮ್ಮ ಹಿರಿಯರು ಹಾಕಿಕೊಟ್ಟ ದಾರಿ ನಮಗಿದ್ದೆ ಇದೆ.

ಕ್ಷಣಿಕ ಆಸೆಗೆ ಬಲಿಯಾಗಬೇಡ

ಮತ್ತೊಂದು ವಿಷಯ ಹೇಳಿದರೆ ನಿನಗೆ ಬೇಸರವಾಗಬಹುದು. ಇತ್ತೀಚೆಗೆ ಕೇಳಿ ಬರುತ್ತಿರುವ ಹೆಣ್ಣು ಮಕ್ಕಳ ಮೇಲಿನ ಬರ್ಬರ ಕೃತ್ಯಗಳು ಹೆತ್ತವರನ್ನು ಆತಂಕಕ್ಕೆ ಈಡು ಮಾಡಿವೆ. ಕ್ಷಣಿಕ ಆಕರ್ಷಣೆ ಬದುಕನ್ನು ನಾಶ ಮಾಡಬಹುದು. ಒಂದು ತಪ್ಪು ಹೆಜ್ಜೆ ಜೀವನವಿಡೀ ಪಶ್ಚಾತಾಪಕ್ಕೆ ದಾರಿ ಮಾಡಿಕೊಡುವುದು ಬೇಡ ಎಂಬ ಎಚ್ಚರ ನಿನಗಿದ್ದರೆ ಸಾಕು.
ಬದುಕಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಕಳೆದ ಒಂದುವರೆ ತಿಂಗಳಿನಲ್ಲಿ ನಡೆದ ಹೆಣ್ಣು ಮಕ್ಕಳ ಸಾಲು ಸಾಲು ಹತ್ಯೆಗಳನ್ನು ನೋಡಿ ಮನಸ್ಸಿಗೆ ಅನ್ನಿಸಿದ್ದು ಹೀಗೆ. ಅರಿಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ಗುಂಗಿಗೆ ಬಿದ್ದು, ತಂದೆ ತಾಯಿ ಬುದ್ಧಿ ಹೇಳಿದಾಗ ವಿದ್ಯಾರ್ಥಿ ದೆಸೆಯಲ್ಲಿ ತಾನು ತಪ್ಪು ಮಾಡುತ್ತಿರುವೆ ಎಂಬ ಅರಿವು ಉಂಟಾಗಿ ಪ್ರೀತಿಯಿಂದ ಹಿಂದೆ ಸರಿದ ತಪ್ಪಿಗೆ ಒಂದೊಮ್ಮೆ ತನ್ನನ್ನು ಪ್ರೀತಿಸಿದ ಹುಡುಗನೇ ತನ್ನನ್ನು ಕೊಚ್ಚಿ ಕೊಂದರೆ ಆಕೆಯನ್ನು ಇಷ್ಟು ವರ್ಷಗಳ ಕಾಲ ಲಾಲಿಸಿ ಪಾಲಿಸಿದ ತಂದೆ ತಾಯಿಗಳ ಪಾಡೇನು ಎಂದು ನೆನೆದಾಗ ಮೈಯಲ್ಲಿ ನಡುಕ ಉಂಟಾಗುತ್ತದೆ. ನಿಮ್ಮ ಬದುಕು ಕೇವಲ ನಿಮ್ಮದಲ್ಲ. ನಿಮ್ಮ ಬದುಕಿನ ಆಗುಹೋಗುಗಳ ಸುತ್ತ ನಿಮ್ಮ ಕುಟುಂಬ ಮತ್ತು ಸಮಾಜ ನಿಮ್ಮೊಂದಿಗೆ ಜೋಡಿಸಲ್ಪಟ್ಟಿ ರುತ್ತದೆ. ಆದ್ದರಿಂದ ನಿನ್ನ ಹುಷಾರಿನಲ್ಲಿ ನೀನಿರು ಎಂದು ಮಾತ್ರ ಹೇಳುತ್ತೇನೆ. ಸಮಾಜಕ್ಕೆ ಒಳ್ಳೆಯ ಉದಾಹರಣೆಯಾಗದಿದ್ದರೂ ಪರವಾಗಿಲ್ಲ ಆದರೆ ಕೆಟ್ಟ ಉದಾಹರಣೆಯಾಗಬಾರದು ಎಂಬ ಅರಿವಿನ ಪ್ರಜ್ಞೆ ನಿನ್ನಲ್ಲಿ ಸದಾ ಜಾಗೃತವಾಗಿರಲಿ.

ಅಷ್ಟಾಗಿಯೂ ನಿನಗೆ ಏನೇ ತೊಂದರೆಯಾದರೂ ಮುಕ್ತವಾಗಿ ಹೇಳಿಕೋ…. ಒಂದು ಸುಳ್ಳನ್ನು ಮುಚ್ಚಲು ನೂರಾರು ಸುಳ್ಳುಗಳನ್ನು ಹೇಳುವುದರ ಬದಲು ಒಂದು ಸತ್ಯವನ್ನು ಹೇಳಿ ಬೈಸಿಕೊಂಡರೂ ಪರವಾಗಿಲ್ಲ ಮನಸ್ಸು ನಿರಾಳವಾಗಿರುತ್ತದೆ ಎಂಬುದನ್ನು ಅರಿತುಕೋ.

ಬದುಕಿನ ಯಾವುದೇ ಹಂತದಲ್ಲಿಯಾದರೂ ನಮ್ಮ ತೋಳುಗಳ ಆಸರೆ ನಿನಗೆ ಇದ್ದೇ ಇರುತ್ತದೆ… ಆದರೆ ಆ ತೋಳುಗಳಲ್ಲಿ ಕಸುವು ತುಂಬುವ ಕೆಲಸ ಮಾತ್ರ ನಿನ್ನದು. ಅದು ನಿನ್ನ ನಡತೆಯಲ್ಲಿ, ವಿದ್ಯಾಭ್ಯಾಸದಲ್ಲಿ ಮತ್ತು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಸದಾ ಇರಲೇಬೇಕು. ನಿನ್ನ ಕುರಿತಾಗಿ ನನ್ನ ಆಸೆ ಆಕಾಂಕ್ಷೆಗಳಿಗೆ ಮಿತಿ ಇಲ್ಲ,ಭಯ ಆತಂಕಗಳು ನಿರಾಧಾರವಾದುದು ಎಂದು ನಿನಗೆ ಅನಿಸಿದರೆ ಅದು ನಿನ್ನ ತಪ್ಪಲ್ಲ. ನನ್ನಂತೆ ನೀನೂ ಕೂಡ ತಾಯಾಗಿ ನಿನ್ನ ಮಕ್ಕಳನ್ನು ಬೆಳೆಸುವಾಗ ನಿನಗೆ ಇದರ ಅನುಭವ ಖಂಡಿತವಾಗಿಯೂ ಆಗುತ್ತದೆ. ಪತ್ರ ತುಸು ದೊಡ್ಡದಾಯಿತು ಆದರೆ ಓದದೆ ಇರಬೇಡ. ನಿನ್ನ ಹಿತದಲ್ಲಿಯೇ ನಮ್ಮ ಕುಟುಂಬದ ಒಳಿತಿದೆ.

ಇದನ್ನೂ ಓದಿ: AR Rahman: ಪ್ರಶಸ್ತಿಗಳೆಲ್ಲ ಚಿನ್ನವೆಂದು ಭಾವಿಸಿ ಎಆರ್ ರೆಹಮಾನ್ ತಾಯಿ ಮಾಡಿದ್ದೇನು?

Continue Reading

ಅಂಕಣ

ರಾಜಮಾರ್ಗ ಅಂಕಣ: ಸಾವನ್ನೇ ಆಹ್ವಾನಿಸಿದ ಸುಂದರಿ ಝೋರಯಾ ಟರ್ ಬ್ರೀಕ್

ರಾಜಮಾರ್ಗ ಅಂಕಣ: ಝೋರಯಾ ಮಾನಸಿಕವಾಗಿ ಧೃಡವಾಗಿ ನಿಂತು ತಾನು ತನ್ನ ಮನೆಯ ಲಿವಿಂಗ್ ರೂಮಿನಲ್ಲಿ ಸೋಫಾದ ಮೇಲೆ ಕುಳಿತು ತನ್ನ ಮುದ್ದಿನ ಬೆಕ್ಕುಗಳನ್ನು ನೇವರಿಸುತ್ತಾ ಸಾವನ್ನು ಸ್ವಾಗತ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ತನ್ನ ದೇಹವನ್ನು ಪಂಚಭೂತಗಳಲ್ಲಿ ಲೀನ ಮಾಡಿ. ಅಂತ್ಯಸಂಸ್ಕಾರಕ್ಕೆ ಜನ ಸೇರಿಸುವ ಅಗತ್ಯ ಇಲ್ಲ. ನನ್ನ ಚಿತಾ ಭಸ್ಮವನ್ನು ಕಾಡಿನೊಳಗೆ ಹರಡಿ ಸಾಕು ಅಂದಿದ್ದಾರೆ.

VISTARANEWS.COM


on

ರಾಜಮಾರ್ಗ ಅಂಕಣ euthanasia zoraya ter beek
Koo

ನೆದರ್‌ಲ್ಯಾಂಡ್ ದೇಶದಲ್ಲೊಂದು ಹೃದಯ ವಿದ್ರಾವಕ ಘಟನೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಆಕೆ ಲೋಕೋತ್ತರ ಸುಂದರಿ. ವಯಸ್ಸು ಇನ್ನೂ 28. ಆಕೆ ಉತ್ಸಾಹದ ಖಣಿ. ಮೇಲ್ನೋಟಕ್ಕೆ 100% ಫಿಟ್ ಮತ್ತು ಆರೋಗ್ಯಪೂರ್ಣ ಆಗಿದ್ದಾರೆ. ಆದರೆ ಆಕೆ ತನ್ನ ದೇಶದ ಕಾನೂನಿನ ನೆರವು ಪಡೆದುಕೊಡು ತನ್ನ ಜೀವನಕ್ಕೊಂದು ಪೂರ್ಣವಿರಾಮ ಇಡಲು ನಿರ್ಧಾರ ಮಾಡಿದ್ದಾರೆ. ಅದಕ್ಕೆ ಅವರು ಆರಿಸಿಕೊಂಡ ವಿಧಾನ ಅಂದರೆ ದಯಾಮರಣ (euthanasia)! ಅಂದರೆ ತನ್ನ ಇಷ್ಟದ ಪ್ರಕಾರ, ಇಷ್ಟದ ಜಾಗದಲ್ಲಿ, ಇಷ್ಟದ ಜನರ ಮುಂದೆ, ಇಷ್ಟದ ರೀತಿಯಲ್ಲಿ ಸಾಯುವುದು..!

ದಯಾಮರಣ – ನೆದರ್‌ಲ್ಯಾಂಡ್‌ನಲ್ಲಿ ಕಾನೂನು ಸಮ್ಮತ

ನೆದರ್‌ಲ್ಯಾಂಡ್ (Netherlands) ದೇಶವು ದಯಾಮರಣಕ್ಕೆ ಕಾನಾನು ಸಮ್ಮತಿ ನೀಡಿ 22 ವರ್ಷಗಳೇ ಸಂದಿವೆ! ಅಸಹನೀಯ ನೋವು, ಗುಣಪಡಿಸಲು ಆಗದ ಕಾಯಿಲೆ, ಮಾನಸಿಕ ಅಸ್ವಾಸ್ಥ್ಯ ಸೇರಿದಂತೆ ಆರು ಕಾರಣಕ್ಕೆ ಸರಕಾರ ದಯಾಮರಣಕ್ಕೆ ಅನುಮತಿಯನ್ನು ನೀಡುತ್ತದೆ. 2022ರಲ್ಲಿ ಆ ದೇಶದಲ್ಲಿ ಕಾನೂನಿನ ನೆರವು ಪಡೆದು 8730 ಮಂದಿ ದಯಾಮರಣದ ಮೂಲಕ ತಮ್ಮ ಬದುಕನ್ನು ಕೊನೆಗೊಳಿಸಿದ್ದಾರೆ! ಇದು ಕಳೆದ ವರ್ಷಕ್ಕಿಂತ 14% ಅಧಿಕ ಎಂದು ಅಲ್ಲಿನ ಸರಕಾರ ಹೇಳಿದೆ.

ಝೋರಯಾಗೆ ಮಾನಸಿಕ ಕಾಯಿಲೆ

ಈ ಚಂದದ ಹುಡುಗಿ ಝೊರೆಯಾ (Zoraya Ter Beek) ಬಳಲುತ್ತಿರುವುದು ಖಿನ್ನತೆ, ಉದ್ವೇಗ ಆಕೆಯ ಬಾಲ್ಯದ ಒಡನಾಡಿಗಳು. ಇತ್ತೀಚೆಗೆ ಆಟಿಸಂ ಕೂಡ ಸೇರಿಕೊಂಡು ಆಕೆಗೆ ಬದುಕೇ ಅಸಹನೀಯವಾಗುತ್ತು. ಯಾವುದೆಲ್ಲ ಔಷಧಿ, ಚಿಕಿತ್ಸಾ ವಿಜ್ಞಾನ ಮತ್ತು ಕೌನ್ಸೆಲಿಂಗ್ ನಡೆದರೂ ಅವಳಿಗೆ ಅದ್ಯಾವುದೂ ರಿಲೀಫ್ ಕೊಡಲಿಲ್ಲ. ವೈದ್ಯರೂ ʼಇನ್ನು ಸಾಧ್ಯವಿಲ್ಲ’ ಎಂದು ಹೇಳಿದ ನಂತರ ಆಕೆ ಆರಿಸಿಕೊಂಡದ್ದು ಸಾವನ್ನು! ಆತ್ಮಹತ್ಯೆ ಮಾಡಿ ಸಾಯಲು ಮನಸಿಲ್ಲ ಎಂದಾಕೆ ಗಟ್ಟಿಯಾದ ನಿರ್ಧಾರ ತೆಗೆದುಕೊಂಡ ನಂತರ ಆಕೆಗೆ ಉಳಿದದ್ದು ಒಂದೇ ಪರಿಹಾರ – ಅದು ದಯಾಮರಣ! ಆಕೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದು 2020ರಲ್ಲಿ. ಅದೀಗ ಪರ ವಿರೋಧ ಚರ್ಚೆಯಾಗಿ ಈಗ ತೀರ್ಪು ಆಕೆಯ ಪರವಾಗಿ ಬಂದಿದೆ. ಅಂದರೆ ದಯಾಮರಣಕ್ಕೆ ಅನುಮತಿ ದೊರೆತಿದೆ.

ರಾಜಮಾರ್ಗ ಅಂಕಣ euthanasia zoraya ter beek

ದಯಾಮರಣ ಹೇಗೆ?

ಅರ್ಜಿದಾರರು ಇಷ್ಟಪಡುವ ಸ್ಥಳದಲ್ಲಿ, ಇಷ್ಟಪಡುವ ಸನ್ನಿವೇಶವನ್ನು ಕ್ರಿಯೇಟ್ ಮಾಡಿ ನಿಗದಿ ಪಡಿಸಿದ ದಿನದಂದು ವೈದ್ಯರು ಆಕೆಗೆ ಒಂದು ಅರಿವಳಿಕೆಯ ಇಂಜೆಕ್ಷನ್ ನೀಡುತ್ತಾರೆ. ಆಕೆ ಕೋಮಾ ತಲುಪುವುದನ್ನು ಕಾಯುವ ವೈದ್ಯರು ನಂತರ ಹೃದಯವು ನಿಧಾನವಾಗಿ ನಿಲ್ಲುವ ಔಷಧಿ ಕೊಡುತ್ತಾರೆ. ಒಂದಿಷ್ಟೂ ನೋವು ಪಡದೆ ಅರ್ಜಿದಾರರು ನಿಧಾನವಾಗಿ ಶಾಶ್ವತ ನಿದ್ದೆಗೆ ಜಾರುತ್ತಾರೆ. ಆಗ ದಯಾಮರಣ ಸಮಿತಿಯು ಅವರನ್ನು ಪರಿಶೀಲನೆ ಮಾಡಿ ಸಾವು ಸಂಭವಿಸಿದೆ ಎಂದು ಘೋಷಣೆ ಮಾಡಿದಲ್ಲಿಗೆ ಪ್ರಕ್ರಿಯೆ ಪೂರ್ತಿ ಆಗುತ್ತದೆ.

ಸಾವನ್ನು ಸ್ವಾಗತಿಸಲು ಮಾನಸಿಕ ಸಿದ್ಧತೆ

ಝೋರಯಾ ಮಾನಸಿಕವಾಗಿ ಧೃಡವಾಗಿ ನಿಂತು ತಾನು ತನ್ನ ಮನೆಯ ಲಿವಿಂಗ್ ರೂಮಿನಲ್ಲಿ ಸೋಫಾದ ಮೇಲೆ ಕುಳಿತು ತನ್ನ ಮುದ್ದಿನ ಬೆಕ್ಕುಗಳನ್ನು ನೇವರಿಸುತ್ತಾ ಸಾವನ್ನು ಸ್ವಾಗತ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ತನ್ನ ದೇಹವನ್ನು ಪಂಚಭೂತಗಳಲ್ಲಿ ಲೀನ ಮಾಡಿ. ಅಂತ್ಯಸಂಸ್ಕಾರಕ್ಕೆ ಜನ ಸೇರಿಸುವ ಅಗತ್ಯ ಇಲ್ಲ. ನನ್ನ ಚಿತಾ ಭಸ್ಮವನ್ನು ಕಾಡಿನೊಳಗೆ ಹರಡಿ ಸಾಕು ಅಂದಿದ್ದಾರೆ.

`ನನಗೆ ಪಾಪಪ್ರಜ್ಞೆ ಕಾಡುತ್ತಿಲ್ಲ. ನನಗಾಗಿ ಯಾರೂ ಕಣ್ಣೀರು ಸುರಿಸುವ ಅಗತ್ಯ ಇಲ್ಲ. ಇದು ನಾನೇ ಆರಿಸಿಕೊಂಡ ಸಾವು. ಹಾಗಾಗಿ ನನಗೆ ಯಾವ ವಿಷಾದವೂ ಇಲ್ಲ’ ಎಂದಾಕೆ ನಗುನಗುತ್ತಾ ಹೇಳುವಾಗ ಯಾರ ಮನಸ್ಸಾದರೂ ಕರಗದೆ ಇರದು!

ಹೋಗಿ ಬಾ ಝೊರೆಯಾ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅಳಿಸಲಾಗದ ನೋವು ಬಿಟ್ಟು ಹೋದ ಮಂಗಳೂರು ವಿಮಾನ ದುರಂತ!

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ

ಧವಳ ಧಾರಿಣಿ ಅಂಕಣ (Dhavall Dharini): ಗೌತಮ ಬುದ್ಧನೇ ನೇರವಾಗಿ ಬೋಧಿಸಿದ ತತ್ತ್ವಗಳನ್ನು ಗಮನಿಸಿದಾಗ ಆತನ ತತ್ತ್ವಗಳು ಭಾರತೀಯ ದರ್ಶನ ಶಾಸ್ತ್ರದ ಮುನ್ನುಡಿಯಾಗಿವೆ ಎನ್ನಬಹುದು. ಇಂದು ಬುದ್ಧ ಪೂರ್ಣಿಮಾ (Buddha Purnima) ಹಿನ್ನೆಲೆಯಲ್ಲಿ ಆತನ ಚಿಂತನೆಗಳ ಬಗ್ಗೆ ಒಂದು ಅವಲೋಕನ.

VISTARANEWS.COM


on

dhavala dharini column buddha ಧವಳ ಧಾರಿಣಿ
Koo
dhavala dharini by Narayana yaji

­ಧವಳ ಧಾರಿಣಿ ಅಂಕಣ: ಭಾರತದ ಇತಿಹಾಸದಲ್ಲಿ ಗೌತಮ ಬುದ್ಧ (Gautama Buddha) ಮಹತ್ವದ ಸ್ಥಾನ ಪಡೆಯುವುದು ಆತ ಹೊಸ ಧರ್ಮವನ್ನು ಸ್ಥಾಪಿಸಿದ್ದಾನೆ ಎನ್ನುವುದಕ್ಕೆ ಅಲ್ಲ. ಬೌದ್ಧ ಧರ್ಮವನ್ನು (buddhism) ನೇರವಾಗಿ ಬುದ್ಧನೇ ಸ್ಥಾಪಿಸಲಿಲ್ಲ. ಆತನ ನಿರ್ವಾಣದ ನಂತರದ ಇನ್ನೂರು ವರ್ಷಗಳ ನಂತರ ಆತನ ಶಿಷ್ಯರು ಒಂದೆಡೆ ಸೇರಿ ಬುಧ್ದನ ತತ್ತ್ವಕ್ಕೆ ಒಂದು ಧಾರ್ಮಿಕ ಸ್ವರೂಪವನ್ನು ಕೊಟ್ಟರು. ಶಾಕ್ಯಮುನಿ ಗೌತಮನಿಗೆ ಲೋಕದ ಜನತೆ ಬದುಕುತ್ತಿರುವ ವಿಧಾನದಲ್ಲಿ ಬದಲಾವಣೆ ತರಬೇಕಾಗಿತ್ತು. ವರ್ಣವ್ಯವಸ್ಥೆಯ ಮೂಲಕ ಅಸ್ತಿತ್ವಕ್ಕೆ ಬಂದ ಬ್ರಾಹ್ಮಣಿಕೆಯೆನ್ನುವುದು ಅದಾಗ ಜಾತಿಯಾಗಿ ಬದಲಾವಣೆಯಾಗಿತ್ತು. ಆದರೂ ಅದು ಅಷ್ಟು ಗಟ್ಟಿಯಾಗಿ ಅನುಷ್ಟಾನಕ್ಕೆ ಬಂದಿರಲಿಲ್ಲ. ಬ್ರಾಹ್ಮಣರ ಪಾರಮ್ಯವೆನ್ನುವುದು ಧಾರ್ಮಿಕ ರಂಗದಲ್ಲಿ ಇತ್ತು. ಆತನ ಜನನದ ಕಾಲಘಟ್ಟವಾದ ಸುಮಾರು ಕ್ರಿ. ಪೂ. 623 ಶತಮಾನದಲ್ಲಿ ಭಾರತ ಧಾರ್ಮಿಕವಾಗಿ ಹಲವು ಪಲ್ಲಟಗಳನ್ನು ಅನುಭವಿಸಿತ್ತು. ಸನಾತನ ಧರ್ಮದ ಆಚರಣೆಯಲ್ಲಿ ಸಮಗ್ರವಾದ ದಿಕ್ಕುಗಳನ್ನು ತೋರಿಸುವವರು ಇರಲಿಲ್ಲ. ಧಾರ್ಮಿಕ ನಾಯಕತ್ವವೆನ್ನುವದು ತತ್ವಜ್ಞಾನಿಗಳು ತಮಗೆ ತೋಚಿದ ದಿಕ್ಕಿನಲ್ಲಿ ಅರ್ಥೈಸಿಕೊಂಡು ಅದನ್ನೇ ಬೋಧಿಸುತ್ತಿದ್ದರು. ಈ ಕಾಲಘಟ್ಟದಲ್ಲಿಯೇ ತಂತ್ರಶಾಸ್ತ್ರ, ಅಘೋರಿಗಳು, ಕಾಪಾಲಿಕರು ಹೀಗೆ ಸಾಧನೆಗಳಿಗೆ ಸಾತ್ವಿಕಮಾರ್ಗಗಳ ಜೊತೆಗೆ ಹಟಯೋಗವೂ ಸೇರಿಹೋಗಿತ್ತು. ರಾಜರುಗಳು ಯಾವ ಹಾದಿಯನ್ನು ಹಿಡಿಯುತ್ತಿದ್ದಾರೋ ಅದೇ ಹಾದಿಯನ್ನು ಜನಸಾಮಾನ್ಯರು ನಡೆದುಕೊಳ್ಳುತ್ತಿದ್ದರು.

ಇಂತಹ ಹೊತ್ತಿನಲ್ಲಿ ಪ್ರವೇಶ ಮಾಡಿದ ಬುದ್ಧನ ಉಪದೇಶಗಳು ಸನಾತನ ಧರ್ಮಕ್ಕೇ ಹೊಸ ವ್ಯಾಖ್ಯಾನವನ್ನು ಕೊಟ್ಟವು. ಹಾಗಂತ ಆತ ಭಾರತೀಯ ದರ್ಶನ ಶಾಸ್ತ್ರಕ್ಕೆ ವಿಲೋಮವಾದದ್ದನ್ನು ತನ್ನು ಬೋಧನೆಯಲ್ಲಿ ಹೇಳಲಿಲ್ಲ. ಬುದ್ಧ ಅರ್ಥವಾಗಬೇಕಾದರೆ ಭಾರತೀಯ ತತ್ತ್ವಶಾಸ್ತ್ರ ಅರ್ಥವಾಗಬೇಕು. ಸ್ವರ್ಗಕಾಮಕ್ಕಾಗಿ ಯಜ್ಞ ಯಾಗಾದಿಗಳು ಎಂದು ಸಾರುತ್ತಿದ ಪುರಾಣಗಳ ನಡುವೆ ವೇದಾಂತದ ಪರಮ ಸತ್ಯವನ್ನು ಆತನ ಉಪದೇಶಗಳಲ್ಲಿ ಗಮನಿಸಬಹುದಾಗಿದೆ. “ವೇದಗಳಲ್ಲಿ ಅಡಗಿದ್ದ ಸತ್ಯಗಳನ್ನು ಹೊರತಂದು ಜಗತ್ತಿಗೆಲ್ಲ ಘಂಟಾಘೋಷವಾಗಿ ಸಾರಿದ ವಿಶಾಲಹೃದಯಿಯಾಗಿ ಬುದ್ದ ಕಾಣಿಸಿಸಿಕೊಳ್ಳುತ್ತಾನೆ ಎಂದು ವಿವೇಕಾನಂದರು ಹೇಳುತ್ತಾರೆ. “ಕಿಸಾಗೌತಮಿಗೆ ಆಕೆಯ ಮಗನ ಸಾವಿನ ನೋವನ್ನೂ ಮರೆಯಿಸಿ ಭವಚಕ್ರಗಳ ಬಂಧನದ ಜಗತ್ತಿನ ಮಾಯೆಯನ್ನು ಹೋಗಲಾಡಿಸಿದ ಬುದ್ಧ ಬಿಡಿಸಿದಷ್ಟೂ ಬಿಡಿಸಲಾಗದ ಒಗಟು”. ಸನಾತನ ಧರ್ಮದ ಸಾರವೇ ಬುದ್ಧನ ಉಪದೇಶವೆನ್ನಬಹುದಾಗಿದೆ. ಅದಕ್ಕೇ ಸ್ವಾಮಿ ವಿವೇಕಾನಂದರು ತಮ್ಮ ಕೃತಿಶ್ರೇಣಿಯಲ್ಲಿ “ಭಾರತದಲ್ಲಿ ಬೌದ್ಧಧರ್ಮವು ನಾಶವಾಗಲಿಲ್ಲ, ಉಪನಿಷತ್ತುಗಳಲ್ಲಿ ಹುಟ್ಟಿದೆ. ಅದು ನವಯುಗದ ಹಿಂದೂ ಧರ್ಮವಾಯಿತು” ಎನ್ನುತ್ತಾರೆ.

ಜೀವನದ ನಶ್ವರತೆಯೆನ್ನುವುದು ಬುದ್ಧನ ಬದುಕಿನಲ್ಲಿ ಬಂದ ಮೊದಲ ತಿರುವು. ಪ್ರಸಿದ್ಧವಾದ ಆತನ ವಾಕ್ಯ “ಆಸೆಯೇ ದುಃಖಕ್ಕೆ ಕಾರಣ” ಎನ್ನುವುದು ನೋಡಲು ಸರಳವಾಗಿ ಕಂಡರೂ ಈ ಸತ್ಯವನ್ನು ಮನಗಾಣುವಲ್ಲಿ ಬುದ್ಧ ಸುಮಾರು ಆರುವರ್ಷಗಳ ಕಾಲ ಹುಡುಕಾಡಿದ್ದಾನೆ. ತನ್ನ ಕುಲಗುರು ಅಸಿತದೇವಲನಿಂದ ಹಿಡಿದು ಆಲಾರಾ ಕಲಮ್, ಉದ್ಧತ ರಾಮಪುತ್ತ ಮುಂತಾದ ಅನೇಕರ ಹತ್ತಿರ ಈ ವಿಷಯವನ್ನು ಚರ್ಚಿಸಿದ್ದಾನೆ. ಹಿಮಾಲಯದ ತಪ್ಪಲಿನ ಕೆಲ ಸನ್ಯಾಸಿಗಳು ಪ್ರಾಪಂಚಿಕ ಸುಖ ಮತ್ತು ದುಃಖಗಳ ಕಾರಣವನ್ನು ಅರಿತು ವೇದೋಪನಿಷತ್ತುಗಳ ನಿಜವಾದ ಅರ್ಥಗಳನ್ನು ತಿಳಿದು ಅದನ್ನೇ ಬೊಧಿಸುತ್ತಿದ್ದರು. ಅವರೆಲ್ಲರೂ ಈತನಿಗೆ ತಮ್ಮಲ್ಲಿದ ವಿದ್ಯೆಯನ್ನು ಧಾರೆ ಎರೆದರೂ ಅವೆಲ್ಲವೂ ಬದುಕಿನ ಪರಮ ಸತ್ಯವನ್ನು ಸಾಧಿಸುವತ್ತ ಪ್ರಯೋಜನಕ್ಕೆ ಬಾರದವುಗಳು ಎನ್ನುವುದು ಅರಿವಾಯಿತು. ಉದ್ಧಕ ರಾಪಪುತ್ತನ ಹತ್ತಿರ ಸಮಾಧಿಗೆ ಹೋಗುವ ತಂತ್ರವನ್ನು ಕೇವಲ ಹದಿನೈದನೇ ದಿನಗಳಲ್ಲಿ ಕಲಿತ. ಆಗ ಅವನಿಗೆ ಅರಿವಾಗಿದ್ದು ಎಚ್ಚರಕ್ಕೂ ಮತ್ತು ಸಮಾಧಿಗೂ ಇರುವ ಸ್ಥಿತಿಯೆಂದರೆ ಗ್ರಹಿಕೆ ಮತ್ತು ಗ್ರಹಿಕೆಯಲ್ಲದ ಸ್ಥಿತಿ ಎನ್ನುವುದು. ಆದರೆ ಎಚ್ಚರಾದ ಮೇಲೆ ಮತ್ತೆ ಈ ಲೋಕದ ಅವಸ್ಥೆಗಳಲ್ಲೇ ಇರುತ್ತೇವೆ ಎನ್ನುವುದು ಅರಿತಾಗ ಸಮಾಧಿಯೆನ್ನುವುದು ಸ್ವಪ್ನ ಅಥವಾ ಸುಷುಪ್ತಿಯ ಅವಸ್ಥೆಗಳಲ್ಲಿರುವ ಸ್ಥಿತಿಯೇ ಹೊರತೂ ಬೇರೆನೂ ಅಲ್ಲವೆಂದು ಅರಿವಿಗೆ ಬಂತು. ಪರಿಪೂರ್ಣ ಜ್ಞಾನವೆನ್ನುವುದನ್ನು ಸಾಧಿಸಿದ ವ್ಯಕ್ತಿಗೆ ಮತ್ತೆ ಲೌಕಿಕ ಬಾಧಿಸಬಾರದು. ಹಾಗಾಗಿ ಯಾವುದು ಸ್ಥಾಯಿ ಸ್ವರೂಪವಲ್ಲವೋ ಅವೆಲ್ಲವೂ ಅವಿದ್ಯೆ ಎನ್ನುವ ತೀರ್ಮಾನಕ್ಕೆ ಬಂದವ ಗಯಾಕ್ಕೆ ಬಂದು ಅಲ್ಲಿನ ಸ್ಮಶಾನದಲ್ಲಿರುವ ಬೋಧಿವೃಕ್ಷದ ಕೆಳಗೆ ಧ್ಯಾನಮಾಡಲು ತೊಡಗಿದ. ಜ್ಞಾನವೆನ್ನುವದು ಪ್ರಾಪಂಚಿಕ ವಸ್ತುಗಳಿಂದ ವಿಮುಖನಾಗುವದಲ್ಲ, ನಮ್ಮ ಉಸಿರು, ಹಕ್ಕಿಯ ಹಾಡು, ಎಲೆ, ಸೂರ್ಯನ ಕಿರಣ ಇವೆಲ್ಲವೂ ಧ್ಯಾನಕ್ಕೆ ಸಾಧನವಾಗಬಹುದೆಂದು ಆತನಿಗೆ ಅನಿಸಿತು. ಒಂದು ಧೂಳಿನ ಕಣದಿಂದಲೇ ಸಮಗ್ರವಾಗಿ ಬ್ರಹ್ಮಾಂಡದ ಲಕ್ಷಣವನ್ನು ಅರಿಯಬಹುದೆನ್ನುವ ವಿಷಯ ಹೊಳೆಯಿತು. ಜ್ಞಾನೋದಯವೆನ್ನುವದು ವಾಸ್ತವ ಪ್ರಪಂಚದಲ್ಲಿದೆಯೇ ಹೊರತು ಕಾಣದ ಆತ್ಮ ಅಥವಾ ಬ್ರಹ್ಮದ ವಿಷಯದಲ್ಲಿ ಇಲ್ಲ. ಆತ್ಮ ಪ್ರತ್ಯೇಕವೆನ್ನುವ ಭಾವನೆಯನ್ನು ಮೀರಿ ಪ್ರಕೃತಿಯ ಪ್ರತೀ ವಸ್ತುವಿನಲ್ಲಿ ಸೌಂದರ್ಯವಿದೆಯೆನ್ನುವದನ್ನು ಗೌತಮನ ಅರಿತುಕೊಂಡ. ಪ್ರಪಂಚವೇ ಪರಸ್ಪರ ಅವಲಂಬಿತ ಮತ್ತು ಸ್ವಯಂ ಸ್ವಭಾವವುಳ್ಳ ಸತ್ಯವೆನ್ನುವ ಸೂತ್ರ ಆತನಿಗೆ ಅರಿವಾಯಿತು. ಜ್ಞಾನವೆನ್ನುವದು ಒಳಗಣ್ಣು ಎನ್ನುವ ಭ್ರಮೆಗಿಂತ ಹೊರಗಣ್ಣಿಗೆ ಕಾಣುವ ಪ್ರಪಂಚದ ಸಮಸ್ಥವಸ್ತುವಿನಲ್ಲಿ ಇದೆ ಎನ್ನುವದು ಸ್ಪಷ್ಟವಾಯಿತು.

buddha Purnima 2023

ಬುದ್ಧನ ಬೋಧನೆಗಳು ಮೊದಲನೆಯದಾಗಿ ಜೀವನವು ದುಃಖದಿಂದ ಕೂಡಿದೆ. ಜನನ, ಮರಣ, ರೋಗ, ವೃದ್ಧಾಪ್ಯ, ವಿರಹ, ಮನಸ್ಸು ಮತ್ತು ದೇಹಗಳ ವ್ಯವಸ್ಥೆಯೇ ದುಃಖಮಯ, ಎರಡನೆಯದಾಗಿ ಈ ದುಃಖಕ್ಕೆ ಕಾರಣವಿದೆ. ಮನುಷ್ಯ ತನ್ನ ಮೂಲರೂಪವನ್ನು ಅರಿಯದಿರುವದು, ಈ ಅಜ್ಞಾನಗಳಿಂದಾಗಿಯೇ ಆತ ದೇಹ-ಮನಸ್ಸುಗಳಿಗೆ ಅಂಟಿಕೊಳ್ಳುತ್ತಾನೆ. ಈ ಕಾರ್ಯಕಾರಣ ಸಂಬಂಧದಿಂದಾಗಿ ಕರ್ಮಚಕ್ರಗಳ ಮೂಲಕ ಪುನರ್ಜನದ ಭವಚಕ್ರಗಳಿಗೆ ಸಿಕ್ಕುಬೀಳುತ್ತಾನೆ, ಈ ಯಾತನೆಗಳಿಗೆ ಕಾರಣ ಆಯಾ ವ್ಯಕ್ತಿಯೇ ಹೊರತೂ ವಿಧಿ, ಆಕಸ್ಮಿಕ ಇತ್ಯಾದಿಗಳೆಲ್ಲ ಸುಳ್ಳು. ಮೂರನೆಯದು ಈ ಭವಚಕ್ರಗಳಿಂದ ಬಿಡುಗಡೆ. ಬುದ್ಧ ಇದು ಅವಿದ್ಯೆ, ಅಜ್ಞಾನಾವಸ್ಥೆಯೆನುತ್ತಾನೆ. ಲೋಕದಲ್ಲಿನ ಎಲ್ಲಾ ಅವಸ್ಥೆಗಳಿಗೂ ಇದೇ ಕಾರಣ, ಇದೇ “ಪ್ರತ್ಯೀತ್ಯಸಮುತ್ಪಾದ” ಸಿದ್ಧಾಂತ. ನಾಲ್ಕನೆಯದೇ ಈ ಭವಚಕ್ರಗಳಿಂದ ಬಿಡುಗಡೆಯ ಮಾರ್ಗವೆಂದರೆ ಈ ದುಃಖದಿಂದ ಬಿಡುಗಡೆ. ಅದೇ ಅವಿಧ್ಯಾ ಜಿವನದಿಂದ ಬಿಡುಗಡೆ. ಇದನ್ನು ಸಾಧಿಸಲು ಅಷ್ಟಾಂಗಿಕ ಮಾರ್ಗಗಳಾದ ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್ಕು, ಸಮ್ಯಕ್ ಕ್ರಿಯಾ ಸಮ್ಯಕ್ ಆಜೀವ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸ್ಮೃತಿ ಮತ್ತು ಸಮ್ಯಕ ಸಮಾಧಿಯ ಮೂಲಕ ಸಾಧಿಸಬಹುದು. ಈ ಅಷ್ಟಾಂಗ ಮಾರ್ಗವೆಂದರೆ ನೈತಿಕತೆ, ಸಾಧನೆ, ಸಾಕ್ಷಾತ್ಕಾರ, ಸ್ವಾರ್ಥವನ್ನು ತ್ಯಜಿಸುವದು, ಬೂತದಯೆಗಳು. ಬುದ್ದ ಇದನ್ನು ಸ್ವಯಂ ತನ್ನ ಕೊನೆಯಕ್ಷಣದವರೆಗೂತಾನೇ ಆಚರಿಸಿದ್ದನು. ಕುಂಡ ಕಮ್ಮಾರಪುತ್ತ ನೀಡಿದ ವಿಷಯುಕ್ತ ಆಹಾರದಿಂದ ಸಾಯುವ ಸಂದರ್ಭದಲ್ಲಿಯೂ ಅವನನ್ನು ಕ್ಷಮಿಸಿದನು. ಪ್ರಪಂಚದಲ್ಲಿ ಕಾಣುವ ವಸ್ತುಗಳನ್ನು ಅವು ಇರುವಂತೆಯೇ ತಿಳಿದವ ಬುದ್ಧ. ಹಾಗಂತ ಇದು ಚಾರ್ವಾಕ ಮತಕ್ಕೆ ಹತ್ತಿರವಾದಂತೆ ಕಂಡರೂ ಆತ ನಾಸ್ತಿಕವಾದಿಯಲ್ಲ. ಬುದ್ಧ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಾನೆ, ಅದು ಅದ್ವೈತವನ್ನು ಹೋಲುತ್ತದೆ. ಬೌದ್ಧರು ಆತ್ಮದ ಅಸ್ತಿತ್ವವನ್ನು ಒಪ್ಪುವದಿಲ್ಲ ಎನ್ನುವ ಸಾಮಾನ್ಯ ನಂಬಿಕೆ. ಆದರೆ ಇದಕ್ಕೆ ಆಧಾರವಿಲ್ಲ.

ಬೌದ್ಧ ದರ್ಶನಗಳಲ್ಲಿ ಬುದ್ಧತ್ತ್ವಕ್ಕೆ ಏರುವುದು ಅಂದರೆ ಅದು ತುರೀಯಾವಸ್ಥೆ. ಸಾಮಾನ್ಯ ವ್ಯಕ್ತಿ ಬುದ್ಧನಾಗಲಿಕ್ಕೆ ಅನೇಕ ಜನ್ಮಗಳನ್ನು ಪಡೆಯಬೇಕಾಗುತ್ತದೆ. ಅದರಲ್ಲಿಯೂ ಕೊನೆಯ ಮೂರು ಹಂತಗಳಾದ ಅರಿಹಂತ, ಪಚ್ಛೇಕ ಬುದ್ಧತ್ವವನ್ನು ಸಾಧಿಸಿದ ಮೇಲೆ ಗೌತಮ ಬುದ್ಧ ತಲುಪಿದ ಸ್ಥಿತಿ ಸಮ ಸಂಬುದ್ಧತ್ವದ ಸ್ಥಿತಿ. ಜಾತಕದ ಕತೆಗಳಲ್ಲಿ ಬುದ್ಧನ ಹಿಂದಿನ ಜನ್ಮದ ವಿವರಗಳು ಕಥೆಯ ರೂಪದಲ್ಲಿ ಬರುವುದನ್ನು ಗಮನಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮದ ಅಸ್ತಿತ್ವವನ್ನು ಬುದ್ಧ ಒಪ್ಪುವದೂ ಇಲ್ಲ ಅಥವಾ ನಿರಾಕರಿಸುವುದೂ ಇಲ್ಲ. ವಚ್ಚಗೋತ್ತ ಎನ್ನುವ ಬ್ರಾಹ್ಮಣ ಇದೇ ವಿಷಯದಲ್ಲಿ ಬುದ್ಧನ ಹತ್ತಿರ ಕೇಳುವ ಪ್ರಶ್ನೆ ತೆವಿಜ್ಜ ಸುತ್ತದಲ್ಲಿ ಬರುತ್ತದೆ. ಆತ ಬುದ್ಧನಲ್ಲಿ ಕೇಳುವ ಆತ್ಮವಿದೆಯೇ ಅಥವಾ ಇಲ್ಲವೇ ಎನ್ನುವ ಪ್ರಶ್ನೆಗೆ ಆತ ಮೌನವಾಗಿಬಿಡುತ್ತಾನೆ. ಆತನ ಪ್ರಕಾರ ಆತ್ಮವಿದೆ ಎಂದು ಸಾರಿದ್ದರೆ ಅನಿತ್ಯಕ್ಕೇ ನಿತ್ಯವೆಂದು ಆತನ ಶಿಷ್ಯರು ಪರಿಗಣಿಸಬಹುದು, ಇಲ್ಲವೆಂದರೆ ಉಚ್ಛೇದವಾದ (ವಿನಾಶವಾದ)ವನ್ನು ಉಪದೇಶಿಸುವ ದಾರ್ಶನಿಕರು ಹೇಳಿದ್ದು ಸತ್ಯವೆಂದು ಅವರು ನಂಬುತ್ತಾರೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

ಇದರ ಅರ್ಥವಿಷ್ಟೇ ಬುದ್ಧ ಅಸ್ತಿತ್ವವಾದಿಯಾಗಿದ್ದ. ತನ್ನ ಶಿಷ್ಯರಿಗೆ “ನಿಮಗೆ ನೀವೇ ಬೆಳಕಾಗಿರಿ” ಎಂದು ಉಪದೇಶವನ್ನು ಮಾಡಿದ್ದ. ಬದುಕಿನಲ್ಲಿ ಕಾಣುವ ವಸ್ತುಗಳಲ್ಲಿಯೇ ಆನಂದವಿದೆ ಎನ್ನುವದರ ಮೂಲಕವೇ ಆತನಿಗೆ ಜ್ಞಾನೋದಯವಾದದ್ದರಿಂದ ಆತ “ತಿವಿಜ್ಜಸುತ್ತ”ದಲ್ಲಿ ಹೇಳುವಂತೆ. “ಹಳೆಯ ಓಲೆಗರಿಯಲ್ಲಿ ಹೇಳಿದೆ ಎನ್ನುವ ಮಾತ್ರಕ್ಕೆ ನಂಬಬಾರದು. ಎಲ್ಲವನ್ನೂ ವಿಚಾರಣೆ ಮಾಡಿ ವಿಶ್ಲೇಷಿಸಿ ಅದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದಾದರೆ ಅದರಂತೆ ನೀವೂ ಬಾಳಿ” ಎಂದಿದ್ದಾನೆ. ಬುದ್ಧನ ಪ್ರಕಾರ ನಿರ್ವಾಣವೆಂದರೆ ಅದು ‘ಸಂವೇದನೆ ಮತ್ತು ಭಾವನೆಗಳು ನಿಂತುಹೋಗುವ ಕ್ರಿಯೆ’. ಇದು ಜ್ಞಾತ್ರಾಜ್ಞೇಯದ ಸಂಬಂಧದ ಆಭಾವ. ಈ ನಿರ್ವಾಣಕ್ರಿಯೆಯನ್ನು ಮಾಂಡುಕ್ಯೋಪನಿಷತ್ತಿನ ತುರೀಯಾವಸ್ಥೆಗೆ ಹೋಲಿಸಬಹುದು. (ನಾಂತಃಪ್ರಜ್ಞಂ ನ ಬಹಿಃಪ್ರಜ್ಞಂ..ಮಾಂಡೂಕ್ಯ-7) ಇವೆರಡರಲ್ಲೂ ಭಾವನಾತ್ಮಕವಾದ ವಿಷಯಗಳಿಲ್ಲ. ಅವು ವಿಷಯ, ವಿಷಯಿ ಸಂಬಂಧ, ದೇಶ ಕಾಲ ನಿಮಿತ್ತ ಇವುಗಳಿಗೆ ಅತೀತವಾಗಿದೆ. ಇವೆರಡರಲ್ಲೂ ಚೇತನಾವಿಷಯಗಳಿಲ್ಲ; ಚೈತನ್ಯಸ್ವರೂಪವಿದೆ. ಪಾಲಿ ಭಾಷೆಯಲ್ಲಿರುವ ತೇರವಾದ ಬೌದ್ಧಗ್ರಂಥ ‘ಉದಾನ”ದಲ್ಲಿ “ಅಜವೂ ಅನಾದಿಯೂ ಅಕೃತವೂ ಅಸಂಯುಕ್ತವೂ ಆದುದೊಂದಿದೆ. ಎಲೈ ಭಿಕ್ಕು, ಅದಿಲ್ಲವಾದರೆ ಹುಟ್ಟುಳ್ಳದ್ದೂ, ಸಾದಿಯೂ ಕೃತವೂ ಸಂಯುಕ್ತವೂ ಆದ ಜಗತ್ತಿನಿಂದ ಮುಕ್ತಿಯೇ ಇರುವದಿಲ್ಲ” (ಉದಾನ 8-3) ಎಂದಿದ್ದಾನೆ. ಆತ ನಿರ್ವಿಕಾರವೂ ಶಾಶ್ವತವೂ ಆದ ಶಾಶ್ವತ ಸತ್ಯವನ್ನು ಒಪ್ಪುತ್ತಾನೆಂಬುದು ಇದರಿಂದ ಸ್ಪಷ್ಟ. ಇದಲ್ಲದಿದ್ದರೆ ಅವನ ನಿರ್ವಾಣವಾದವೇ ಬಿದ್ದುಹೋಗುತ್ತದೆ. ಆತ ಹೇಳಿದ್ದು “ಆತ್ಮ ಮತ್ತು ಬ್ರಹ್ಮ ವಿಷಯಕವಾದ ವಿಚಾರಗಳಿಂದ ಯಾವ ಪ್ರಯೋಜನವೂ ಇಲ್ಲ, ಒಳ್ಳೆಯದನ್ನು ಮಾಡಿರಿ; ಒಳ್ಳೆಯವರಾಗಿರಿ, ಇದೇ ನಿಮ್ಮನ್ನು ನಿರ್ವಾಣಕ್ಕೆ ಕೊಂಡೊಯ್ಯುತ್ತದೆ”. ಬುದ್ಧನೇ ನೇರವಾಗಿ ಬೋಧಿಸಿದ ತತ್ತ್ವಗಳನ್ನು ಗಮನಿಸಿದಾಗ ಆತನ ತತ್ತ್ವಗಳು ಭಾರತೀಯ ದರ್ಶನ ಶಾಸ್ತ್ರದ ಮುನ್ನುಡಿಯಾಗಿವೆ ಎನ್ನಬಹುದು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

Continue Reading

ಅಂಕಣ

ರಾಜಮಾರ್ಗ ಅಂಕಣ: ಅಳಿಸಲಾಗದ ನೋವು ಬಿಟ್ಟು ಹೋದ ಮಂಗಳೂರು ವಿಮಾನ ದುರಂತ!

ರಾಜಮಾರ್ಗ ಅಂಕಣ: ರನ್ ವೇಯಲ್ಲಿ ಓಡಲು ತೊಡಗಿದ ವಿಮಾನ ನಿಯಂತ್ರಣಕ್ಕೆ ಬರಲಿಲ್ಲ. ರನ್ ವೇ ಪೂರ್ತಿ ಓಡಿದ ನಂತರವೂ ವೇಗ ಕಡಿಮೆ ಆಗಲಿಲ್ಲ. ಅಪಾಯದ ಗೆರೆ ದಾಟಿ ಓಡಿದ ವಿಮಾನ ಮುಂದೆ ಇರುವ ಕೆಂಜಾರು ಎಂಬ ಜಾಗದ ಕಂದಕದಲ್ಲಿ ಉರುಳಿ ಬಿದ್ದು ಎರಡು ಭಾಗವಾಯಿತು. ಕ್ಷಣ ಮಾತ್ರದಲ್ಲಿ ಇಂಜಿನ್ ಟ್ಯಾಂಕ್ ಬೆಂಕಿ ಹಿಡಿದು ವಿಮಾನ ಹೊತ್ತಿ ಉರಿಯಲು ಆರಂಭವಾಯಿತು.

VISTARANEWS.COM


on

rajamarga column mangalore flight crash 1
Koo
Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ (Mangalore Airport) 14 ವರ್ಷಗಳ ಹಿಂದೆ ಇದೇ ದಿನ (2010 ಮೇ 22) ನಡೆದ ಆ ಒಂದು ದುರ್ಘಟನೆಯು (Mangalore flight crash) ದೇಶದಾದ್ಯಂತ ಉಂಟುಮಾಡಿದ ನೋವಿನ ಅಲೆಗಳನ್ನು ಈಗ ಕಲ್ಪನೆ ಮಾಡಲೂ ಭಯವಾಗುತ್ತದೆ! ದಕ್ಷಿಣ ಭಾರತದ ಅತೀ ದೊಡ್ಡ ವಿಮಾನ ದುರಂತವದು.

ಅಂದು ಮೇ 22, 2010 ಮಧ್ಯರಾತ್ರಿ…

ದುಬೈಯಿಂದ ಹೊರಟ ಭಾರತದ ವೈಭವದ ಬೋಯಿಂಗ್ 737-800 ವಿಮಾನದಲ್ಲಿ 166 ಪ್ರಯಾಣಿಕರಿದ್ದರು. ಅದರಲ್ಲಿ ಎಲ್ಲ ಪ್ರಾಯದವರೂ ಇದ್ದರು. ಹೆಚ್ಚಿನವರು ಕರ್ನಾಟಕ ಮತ್ತು ಕೇರಳದವರು. ನೂರಾರು ಕನಸುಗಳನ್ನು ಹೊತ್ತು ತಮ್ಮ ತಾಯ್ನೆಲಕ್ಕೆ ಹೊರಟವರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮುಂಜಾನೆ ಸೂರ್ಯೋದಯಕ್ಕೆ ಮೊದಲು ಅವರು ಮಂಗಳೂರು ತಲುಪಿ ತಮ್ಮ ತಮ್ಮ ಊರಿಗೆ ಟ್ಯಾಕ್ಸಿ ಏರಬೇಕಾಗಿತ್ತು. ಆದರೆ ವಿಧಿಯ ಆಟ ಬೇರೆಯೇ ಇತ್ತು.

ಟೇಬಲ್ ಟಾಪ್ ರನ್ ವೇ…

ಮುಂಜಾನೆ ಆರು ಘಂಟೆಯ ಹೊತ್ತಿಗೆ ಜನರು ಕಣ್ಣುಜ್ಜಿ ಹೊರಗೆ ನೋಡಲು ತೊಡಗಿದಾಗ ವಿಮಾನ ಬಜಪೆ ವಿಮಾನ ನಿಲ್ದಾಣದ ರನ್ ವೇ ಸ್ಪರ್ಶ ಮಾಡಿ ಓಡತೊಡಗಿತ್ತು. ಅದು ಟೇಬಲ್ ಟಾಪ್ ರನ್ ವೇ. ಅಂದರೆ ಎತ್ತರದ ಪರ್ವತದ ಮೇಲೆ ಸಮತಟ್ಟು ಮಾಡಿ ನಿರ್ಮಿಸಿದ್ದ ರನ್ ವೇ. ವಿಮಾನದ ಕ್ಯಾಪ್ಟನ್ ಗ್ಲುಸಿಕಾ (Glusica) ಮತ್ತು ಫಸ್ಟ್ ಆಫೀಸರ್ ಹರಿಂದರ್ ಸಿಂಘ್ ಅಹ್ಲುವಾಲಿಯಾ ಇಬ್ಬರೂ ಅನುಭವಿಗಳು. ಅದರಲ್ಲಿ ಕ್ಯಾಪ್ಟನ್ ಗ್ಲುಸಿಕಾ ಅದೇ ರನ್ ವೇ ಮೇಲೆ ಹಿಂದೆ 16 ಬಾರಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ದಾಖಲೆ ಹೊಂದಿದ್ದರು. 2448 ಮೀಟರ್ ಉದ್ದವಾದ ರನ್ ವೇಯಲ್ಲಿ ವಿಮಾನವನ್ನು ನಿಯಂತ್ರಣಕ್ಕೆ ತಂದು ನಿಲ್ಲಿಸುವುದು ಕಷ್ಟ ಆಗಿರಲಿಲ್ಲ. ವಾತಾವರಣವೂ ಪೂರಕವಾಗಿತ್ತು. ಬಜಪೇ ವಿಮಾನ ನಿಲ್ದಾಣದಿಂದ ಪೂರಕ ಸಂಕೇತಗಳು ದೊರೆಯುತ್ತಿದ್ದವು.

ಕಣ್ಣು ಮುಚ್ಚಿ ತೆರೆಯುವ ಒಳಗೆ..

ಈ ಬಾರಿ ರನ್ ವೇಯಲ್ಲಿ ಓಡಲು ತೊಡಗಿದ ವಿಮಾನ ನಿಯಂತ್ರಣಕ್ಕೆ ಬರಲಿಲ್ಲ. ರನ್ ವೇ ಪೂರ್ತಿ ಓಡಿದ ನಂತರವೂ ವೇಗ ಕಡಿಮೆ ಆಗಲಿಲ್ಲ. ಅಪಾಯದ ಗೆರೆ ದಾಟಿ ಓಡಿದ ವಿಮಾನ ಮುಂದೆ ಇರುವ ಕೆಂಜಾರು ಎಂಬ ಜಾಗದ ಕಂದಕದಲ್ಲಿ ಉರುಳಿ ಬಿದ್ದು ಎರಡು ಭಾಗವಾಯಿತು. ಕ್ಷಣ ಮಾತ್ರದಲ್ಲಿ ಇಂಜಿನ್ ಟ್ಯಾಂಕ್ ಬೆಂಕಿ ಹಿಡಿದು ವಿಮಾನ ಹೊತ್ತಿ ಉರಿಯಲು ಆರಂಭವಾಯಿತು. ಆಕಾಶದ ಎತ್ತರಕ್ಕೆ ಬೆಂಕಿ ಮತ್ತು ಹೊಗೆ ಏರುತ್ತಾ ಹೋದಂತೆ ಒಳಗಿದ್ದ ಪ್ರಯಾಣಿಕರಿಗೆ ಏನಾಗ್ತಾ ಇದೆ ಎಂದು ಅರಿವಾಗುವ ಮೊದಲೇ ಇಡೀ ವಿಮಾನ ಸುಟ್ಟು ಹೋಯಿತು. ಸಣ್ಣಗೆ ಮಳೆ ಸುರಿಯುತ್ತಿದ್ದರೂ ವಿಮಾನದ ಬೆಂಕಿ ಆರಲಿಲ್ಲ.

ರೆಸ್ಕ್ಯೂ ಆಪರೇಶನ್ ಆರಂಭ.

ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಮಂಗಳೂರಿನಿಂದ ಅಗ್ನಿ ಶಾಮಕ ವಾಹನಗಳು, ಆಂಬ್ಯುಲೆನ್ಸಗಳು ಸ್ಥಳಕ್ಕೆ ಧಾವಿಸಿ ಬಂದವು. ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಜೀವದ ಹಂಗು ತೊರೆದು ಸ್ಥಳಕ್ಕೆ ಧಾವಿಸಿದರು. ಬೆಂಕಿ ಆರಿಸುವ ಪ್ರಯತ್ನವು ಹಲವು ಘಂಟೆ ನಡೆಯಿತು. ವಿಮಾನದಿಂದ ಸುಟ್ಟು ಕರಕಲಾದ ಶವಗಳನ್ನು ಹೊರಗೆ ತೆಗೆಯುವುದೇ ಕಷ್ಟ ಆಯಿತು. ತಮ್ಮವರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿತ್ತು.

ಅಂದು ಸುಟ್ಟು ಹೋದವರ ಸಂಖ್ಯೆಯೇ 158!

ವಿಮಾನದಲ್ಲಿ ಇದ್ದ ಪ್ರಯಾಣಿಕರ ಸಂಖ್ಯೆ 166. ಆರು ಜನ ಕ್ರೂ (Crew) ಸದಸ್ಯರು ಬೇರೆ ಇದ್ದರು. ಅಂದು ಬದುಕಿ ಉಳಿದವರ ಸಂಖ್ಯೆ 8 ಮಾತ್ರ. ತೀವ್ರವಾಗಿ ಗಾಯಗೊಂಡವರ ಸಂಖ್ಯೆ 8. ಅಂದರೆ 158 ಜನರು ಸುಟ್ಟು ಕರಕಲಾಗಿ ಹೋಗಿದ್ದರು! ಕ್ರೂ (Crew) ಸದಸ್ಯರೂ ಬೂದಿ ಆಗಿದ್ದರು. ಶವಗಳನ್ನು ಗುರುತು ಹಿಡಿಯುವುದು ತುಂಬಾನೇ ಕಷ್ಟ ಆಯಿತು. ಒಂದೊಂದು ಶವವನ್ನು ಎತ್ತಿ ಆಂಬುಲೆನ್ಸಗೆ ಸಾಗಿಸುವಾಗ ಜನರ ಆಕ್ರಂದನ ಹೃದಯ ವಿದ್ರಾವಕ ಆಗಿತ್ತು.

ಆಸ್ಪತ್ರೆಗೆ ಧಾವಿಸಿ ತಮ್ಮವರನ್ನು ಶವಗಳ ರಾಶಿಯಲ್ಲಿ ಹುಡುಕುತ್ತಾ ಅಳುವವರ ದೃಶ್ಯವು ನಿಜಕ್ಕೂ ಕರುಣಾಜನಕ ಆಗಿತ್ತು. ಅದರಲ್ಲಿಯೂ 12 ಶವಗಳ ಗುರುತು ಹಿಡಿಯುವುದೇ ಕಷ್ಟವಾಗಿ ಅವುಗಳನ್ನು ಮುಂದೆ ಕೂಳೂರಿನ ಫಲ್ಗುಣಿ ನದಿ ತೀರದಲ್ಲಿ ಸಾಮೂಹಿಕವಾಗಿ ಸಂಸ್ಕಾರ ಮಾಡಲಾಯಿತು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಭಾರತದಲ್ಲಿ ಕಡ್ಡಾಯ ಮತದಾನ ಕಾನೂನು ಯಾಕೆ ಸಾಧ್ಯವಿಲ್ಲ?

ಪೈಲಟ್ ನಿದ್ದೆ ರೆಕಾರ್ಡ್ ಆಗಿತ್ತು!

ಇಂತಹ ಅಪಘಾತಗಳು ನಡೆದಾಗ ಗಂಭೀರವಾದ ವಿಚಾರಣೆಗಳು ನಡೆಯುತ್ತವೆ. ಕಾಕ್‌ಪಿಟ್ ರೆಕಾರ್ಡರ್‌ನಲ್ಲಿ ಪೈಲಟ್ ಕ್ಯಾಪ್ಟನ್ ಗ್ಲುಸಿಕಾ ಅವರ ನಿದ್ದೆ ರೆಕಾರ್ಡ್ ಆಗಿತ್ತು. ಅಂದರೆ 55 ವರ್ಷ ಪ್ರಾಯದ ಆತನು ಸುಮಾರು ಹೊತ್ತು ವಿಮಾನದ ಹಾರಾಟದ ಅವಧಿಯಲ್ಲಿ ಮಲಗಿದ್ದು ನಿಚ್ಚಳವಾಯಿತು! ಇದೇ ಅಪಘಾತಕ್ಕೆ ಕಾರಣ ಎಂದು ಧೃಡವಾಗಿತ್ತು.

ಮುಂದೆ ಏನಾಯಿತು?

ರಾಜ್ಯ ಮತ್ತು ಕೇಂದ್ರ ಸರಕಾರಗಳು ಮೃತರಾದವರಿಗೆ ಪರಿಹಾರ ಕೊಟ್ಟವು. ವಿಮಾನ ಯಾನ ಸಂಸ್ಥೆ ಮತ್ತು ಖಾಸಗಿ ವಿಮಾ ಕಂಪೆನಿಗಳು ಪರಿಹಾರಗಳನ್ನು ನೀಡಿದವು. ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ದುರಂತದ ಸ್ಮಾರಕವನ್ನು ನಿರ್ಮಾಣ ಮಾಡಿ ಮೃತರಾದವರಿಗೆ ಶ್ರದ್ಧಾಂಜಲಿ ಕೊಟ್ಟಿತ್ತು. ಆದರೆ ತಮ್ಮವರನ್ನು ಕಳೆದುಕೊಂಡು ಇಂದಿಗೂ ರೋಧಿಸುತ್ತಿರುವ, ನೋವು ಪಡುತ್ತಿರುವ ಮಂದಿಗೆ ಈ ದುರಂತವು ಮರೆತು ಹೋಗುವುದು ಹೇಗೆ? ಅಂದು ಮಡಿದ ನೂರಾರು ಮಂದಿಗೆ ಒಂದು ಹನಿ ಕಣ್ಣೀರು ಸುರಿಸಿ ಶ್ರದ್ಧಾಂಜಲಿ ಕೊಡೋಣ ಅಲ್ಲವೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅವರ ನೆನಪೇ ನ್ಯಾಚುರಲ್‌ ಐಸ್‌ಕ್ರೀಂನ ತಾಜಾ ಹಣ್ಣಿನ ರುಚಿ, ಪರಿಮಳದಂತೆ!

Continue Reading
Advertisement
Lok Sabha Election
ದೇಶ32 mins ago

Lok Sabha Election: ಇಂದು ಕೊನೇ ಹಂತದ ಮತದಾನ; ಸಂಜೆ ಎಕ್ಸಿಟ್‌ ಪೋಲ್, ಇಂದೇ ತಿಳಿಯಲಿದೆ ಭವಿಷ್ಯ!

Dina Bhavishya
ಭವಿಷ್ಯ33 mins ago

Dina Bhavishya : ತಿಂಗಳ ಮೊದಲ ದಿನವೇ ಉದ್ಯೋಗದ ಸ್ಥಳದಲ್ಲಿ ಈ ರಾಶಿಯವರಿಗೆ ಕಿರಿಕಿರಿ ಅನುಭವ

Anti Islam Rally
ವಿದೇಶ5 hours ago

Anti Islam Rally: ಇಸ್ಲಾಂ ವಿರೋಧಿ ರ‍್ಯಾಲಿಯಲ್ಲಿ ಸಿಕ್ಕಸಿಕ್ಕವರಿಗೆ ಚಾಕು ಇರಿದ ವ್ಯಕ್ತಿ; ಗುಂಡಿಕ್ಕಿದ ಪೊಲೀಸರು

Modi Meditation
ದೇಶ6 hours ago

Modi Meditation: ವಿವೇಕಾನಂದರ ಮೂರ್ತಿ ಎದುರು ಮೋದಿ ಗಾಢ ಧ್ಯಾನ; ಇಲ್ಲಿವೆ ಫೋಟೊಗಳು

Yamaha has opened a new Blue Square outlet in Bengaluru
ಬೆಂಗಳೂರು7 hours ago

Yamaha: ಬೆಂಗಳೂರಿನಲ್ಲಿ ಹೊಸ ‘ಬ್ಲೂ ಸ್ಕ್ವೇರ್’ ಔಟ್‌ಲೆಟ್ ತೆರೆದ ಯಮಹಾ

Neha Hiremath
ಕರ್ನಾಟಕ7 hours ago

Neha Hiremath: ಲಿಂಗಾಯತಳಾದ ನೇಹಾ ಹಿರೇಮಠ ಎಸ್‌ಸಿ ಪ್ರಮಾಣಪತ್ರ ಮಾಡಿಸಿದ್ದೇಕೆ? ಸರ್ಟಿಫಿಕೇಟ್‌ ಫೋಟೊ ಈಗ ವೈರಲ್

Kanyakumari Tour
ಪ್ರವಾಸ8 hours ago

Kanyakumari Tour: ನಿಮ್ಮ ಕನ್ಯಾಕುಮಾರಿ ಪ್ರವಾಸದ ಪಟ್ಟಿಯಲ್ಲಿರಲಿ ಈ 10 ಸಂಗತಿಗಳು

Sri Huligemma Devi Maharathotsava in Hulagi
ಧಾರ್ಮಿಕ8 hours ago

Koppala News: ವಿಜೃಂಭಣೆಯಿಂದ ಜರುಗಿದ ಹುಲಗಿಯ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ

Vijayanagara ZP CEO Sadashiva Prabhu instructed that Dadara Rubella Lasika Abhiyan should be conducted neatly
ಆರೋಗ್ಯ8 hours ago

Vijayanagara News: ದಡಾರ, ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಸಿದ್ಧತೆ

District administration all preparations for vote counting says DC Prashanth Kumar Mishra
ಬಳ್ಳಾರಿ8 hours ago

Lok Sabha Election 2024: ಮತ ಎಣಿಕೆಗೆ ಬಳ್ಳಾರಿ ಜಿಲ್ಲಾಡಳಿತ ಸಕಲ ಸಿದ್ಧತೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ3 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ4 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ5 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌