ಪ್ರಮುಖ ಸುದ್ದಿ
ʼಆಕಾಸʼಕ್ಕೆ ಮೂರೇ ಗೇಣು! ಕೈಗೆಟಕುವ ದರದಲ್ಲಿ ವಿಮಾನ ಪ್ರಯಾಣ, ಭಾನುವಾರ ಶುರು!
ಭಾರತದ ವಿಮಾನ ರಂಗದಲ್ಲಿ ಹೊಸ ಭರವಸೆಗಳೊಂದಿಗೆ ಅಗ್ಗದ ದರದಲ್ಲಿ ಜನ ಸಾಮಾನ್ಯರಿಗೆ ವಿಮಾನ ಸೇವೆ ನೀಡಲು ಆಕಾಸ ಏರ್, ಆಗಸ್ಟ್ 7ರಂದು ತನ್ನ ಚೊಚ್ಚಲ ಹಾರಾಟವನ್ನು ಮುಂಬಯಿ-ಅಹಮದಾಬಾದ್ ನಡುವೆ ಆರಂಭಿಸುತ್ತಿದೆ.
ಭಾರತದ ಆಕಾಶದಲ್ಲಿ ಹೊಚ್ಚ ಹೊಸ ಏರ್ಲೈನ್ ಆಕಾಸ ಏರ್ ತನ್ನ ಹಾರಾಟವನ್ನು ಆಗಸ್ಟ್ ೭ರಂದು ಆರಂಭಿಸುತ್ತಿದ್ದು, ಪ್ರಯಾಣಿಕರನ್ನು ಆಕರ್ಷಿಸಲು ಸಜ್ಜಾಗಿದೆ. ಖ್ಯಾತ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಅವರ ಕನಸಿನ ಕೂಸಾಗಿರುವ ಆಕಾಸ ಏರ್ಲೈನ್, ಭಾರಿ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ! ಹಾಗಾದರೆ ಆಕಾಸ ಏರ್ಲೈನ್ ಹುಟ್ಟುಹಾಕಿರುವ ನಿರೀಕ್ಷೆಗಳೇನು? ಇದರಿಂದ ಭಾರತದ ವಿಮಾನಯಾನ ರಂಗದಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿವೆ? ಜನ ಸಾಮಾನ್ಯರಿಗೂ ವಿಮಾನದಲ್ಲಿ ಸುಲಭವಾಗಿ ಪ್ರಯಾಣಿಸುವಂತಾಗಲು ಆಕಾಸ ಏರ್ ನೆರವಾಗಲಿದೆಯೇ? ಏರ್ಟಿಕೆಟ್ ವೆಚ್ಚ ಕಡಿಮೆಯಾಗಲಿದೆಯೇ? ಈ ಎಲ್ಲ ಪ್ರಶ್ನೆಗಳಿಗೆ ವಿಸ್ತಾರ ನ್ಯೂಸ್ನ ಬಿಸಿನೆಸ್ & ಎಕಾನಮಿ ವಿಭಾಗದ ಕನ್ಸಲ್ಟಿಂಗ್ ಎಡಿಟರ್ ಆಗಿರುವ ಗಿರಿ ಪ್ರಕಾಶ್ ಅವರು ವಿವರಿಸಿದ್ದಾರೆ.
ಆಕಾಸ ಏರ್ನ ಮೊದಲ ವಿಮಾನ ಹಾರಾಟ ಆರಂಭ ಆ.೭ರಿಂದ ಶುರುವಾಗುತ್ತಿದೆ. ಹಾಗಾದರೆ ಭಾರತದ ವಿಮಾನಯಾನ ರಂಗದಲ್ಲಿ ಏನಾದರೂ ಹೊಸ ಬದಲಾವಣೆಯನ್ನು ನಿರೀಕ್ಷಿಸಬಹುದೇ?
ಬಹಳ ಬದಲಾವಣೆಯನ್ನು ನಿರೀಕ್ಷಿಸಬಹುದು. ಮೊದಲನೆಯದಾಗಿ ಪ್ರಯಾಣಿಕರಿಗೆ ಹೊಸ ಆಯ್ಕೆ ಸಿಗುತ್ತದೆ. ಏರ್ಲೈನ್ಗಳ ಸಂಖ್ಯೆ ಹೆಚ್ಚಾದರೆ ಏರ್ ಟಿಕೆಟ್ ದರ ಇಳಿಕೆಯಾಗಬಹುದು. ಆಕಾಸ ಏರ್ ಅಗ್ಗದ ವೆಚ್ಚದ ಏರ್ಲೈನ್ ವಿಭಾಗದಲ್ಲಿ ಇರುವುದರಿಂದ ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಟಿಕೆಟ್ ಸಿಗುವುದರಿಂದ ದೊಡ್ಡಮಟ್ಟಿನ ಅನುಕೂಲವಾಗಲಿದೆ. ಎರಡನೆಯದಾಗಿ ವಿಮಾನಯಾನದ ಸಂಪರ್ಕ ಹೆಚ್ಚುತ್ತದೆ. ಏರ್ಲೈನ್ಗಳ ನಡುವೆ ಪೈಪೋಟಿ ಉಂಟಾಗುತ್ತದೆ. ಇದು ಇಂಡಸ್ಟ್ರಿಗೂ, ಬಳಕೆದಾರರಿಗೂ ಅನುಕೂಲ.
ಜನ ಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ವಿಮಾನಯಾನದ ಕನಸು ನನಸಾಗಲಿದೆಯೇ?
ಹೌದು. ಆಕಾಸ ಏರ್ಲೈನ್ ಭಾನುವಾರ ಆರಂಭವಾಗುತ್ತಿದೆ. ಬಳಿಕ ಜೆಟ್ ಏರ್ವೇಸ್ ಪುನರಾರಂಭವಾಗುತ್ತದೆ. ಇನ್ನೂ ಒಂದೆರಡು ಏರ್ಲೈನ್ಗಳು ಅಸ್ತಿತ್ವಕ್ಕೆ ಬರಲಿದೆ. ಇದು ಬಹಳ ಒಳ್ಳೆಯದು. ಮೂಲತಃ ವಿಮಾನಗಳಲ್ಲಿ ಬಳಕೆಯಾಗುವ ಎಟಿಎಫ್ ( Aviation Turbine Fuel) ಇಂಧನದ ದರ ಹೆಚ್ಚಳವಾಗಿದೆ. ಎಟಿಎಫ್ ಜಿಎಸ್ಟಿ ವ್ಯಾಪ್ತಿಗೆ ಸದ್ಯ ಬಂದಿಲ್ಲ. ಇದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಷಯವಾಗಿದೆ. ರಾಜ್ಯ ಸರ್ಕಾರಗಳು ಎಟಿಎಫ್ ಮೇಲೆ ಅಬಕಾರಿ ಸುಂಕವನ್ನು ವಿಧಿಸುತ್ತವೆ. ಹೀಗಾಗಿ ಏರ್ ಟಿಕೆಟ್ ವೆಚ್ಚ ದುಬಾರಿಯಾಗಿದೆ. ಅದರ ಬದಲಿಗೆ ಎಟಿಎಫ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತಂದರೆ, ಅಥವಾ ರಾಜ್ಯ ಸರ್ಕಾರಗಳೇ ಎಟಿಎಫ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದರೆ, ಏರ್ಲೈನ್ಗಳಿಗೆ ಇಂಧನ ವೆಚ್ಚ ಕಡಿಮೆಯಾಗಲಿದೆ. ಹಾಗೂ ಅದನ್ನು ಗ್ರಾಹಕರಿಗೆ ವರ್ಗಾಯಿಸಬಹುದು. ಆಗ ಟಿಕೆಟ್ ದರ ಕಡಿಮೆಯಾಗುತ್ತದೆ. ಎರಡನೆಯದಾಗಿ ಹಲವು ಏರ್ಪೋರ್ಟ್ಗಳು ಖಾಸಗೀಕರಣವಾಗಿವೆ. ದಿಲ್ಲಿ, ಬೆಂಗಳೂರು, ಮುಂಬಯಿ, ಅಲ್ಲಿ ಏರ್ಲೈನ್ಗಳಿಗೆ ತಗಲುವ ವೆಚ್ಚ ಹೆಚ್ಚುತ್ತದೆ. ವಿಮಾನದ ಲ್ಯಾಂಡಿಂಗ್, ಟೇಕಾಫ್ಗೆ ತಗಲುವ ಖರ್ಚಿನಲ್ಲಿ ಹೆಚ್ಚಳವಾಗಿದೆ. ಆದರೆ ಇನ್ನೂ ಒಂದೆರಡು ವರ್ಷಗಳಲ್ಲಿ ಜನರಿಗೆ ರೈಲ್ವೆ ಟಿಕೆಟ್ನಂತೆ ಏರ್ ಟಿಕೆಟ್ ಕಡಿಮೆ ಬೆಲೆಗೆ ಸಿಗುವ ವಿಶ್ವಾಸ ಇದೆ.
ರಾಕೇಶ್ ಜುಂಜುನ್ವಾಲಾ ಷೇರು ಮಾರುಕಟ್ಟೆಯ ದಿಗ್ಗಜರು. ಏರ್ಲೈನ್ ಇಂಡಸ್ಟ್ರಿಯಲ್ಲಿ ಅವರಿಂದ ಏನನ್ನು ನಿರೀಕ್ಷಿಸಬಹುದು?
ಆಕಾಸ ಏರ್ನಲ್ಲಿ ರಾಕೇಶ್ ಜುಂಜುನ್ವಾಲಾ ೪೦% ಷೇರುಗಳನ್ನು ಹೊಂದಿದ್ದಾರೆ. ೨೫ ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದಾರೆ. (ಅಂದಾಜು ೧೯೭ ಕೋಟಿ ರೂ.) ಏರ್ಲೈನ್ ಕ್ಷೇತ್ರದಲ್ಲಿ ಸುದೀರ್ಘ ವೃತ್ತಿಪರ ಅನುಭವ ಇರುವವರನ್ನು ಆಕಾಸ ಏರ್ಗೆ ಕರೆ ತಂದಿದ್ದಾರೆ. ವಿನಯ್ ದುಬೆ ಅವರು ಆಕಾಸ್ ಏರ್ನ ಸಹ ಸಂಸ್ಥಾಪಕ ಮತ್ತು ಸಿಇಒ. ಅವರು ಈ ಹಿಂದೆ ಜೆಟ್ ಏರ್ವೇಸ್ನ ಸಿಇಒ ಆಗಿದ್ದರು. ಆದಿತ್ಯ ಘೋಷ್ ಹಲವಾರು ವರ್ಷ ಇಂಡಿಗೊದ ಸಿಇಒ ಆಗಿದ್ದರು. ಇಂಡಿಗೊ ಏರ್ಲೈನ್ ಈಗ ಮಾರುಕಟ್ಟೆಯಲ್ಲಿ ೫೮% ಪಾಲನ್ನು ಗಳಿಸಿರುವುದರಲ್ಲಿ ಅವರ ಪಾತ್ರ ದೊಡ್ಡದು. ಅವರು ಈಗ ಆಕಾಸ ಏರ್ಲೈನ್ಗೆ ಸೇರ್ಪಡೆಯಾಗಿದ್ದಾರೆ. ಆಕಾಸ ಏರ್ಲೈನ್ ಆಡಳಿತ ಮಂಡಳಿಯಲ್ಲಿ ರಾಕೇಶ್ ಜುಂಜುನ್ವಾಲಾ ಅವರನ್ನು ಪ್ರತಿನಿಧಿಸಲಿದ್ದಾರೆ. ಅದೇ ರೀತಿ ಪ್ರವೀಣ್ ನಾಯರ್ ಕೂಡ ಸಹ ಸಂಸ್ಥಾಪಕರು. ರಾಕೇಶ್ ಜುಂಜುನ್ವಾಲಾ ತಾವಾಗಿಯೇ ಆಕಾಸ ಏರ್ಲೈನ್ನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ವೃತ್ತಿಪರರ ಮೂಲಕ ನಡೆಸುತ್ತಾರೆ. ಅದು ಏರ್ಲೈನ್ಗೂ ಒಳ್ಳೆಯದು. ಸಾಮಾನ್ಯವಾಗಿ ಬೇರೆ ಏರ್ಲೈನ್ಗಳಲ್ಲಿ ಸ್ಥಾಪಕರೇ ನಡೆಸುತ್ತಾರೆ. ಅವರಿಗೆ ಏರ್ಲೈನ್ ನಡೆಸಿ ಅನುಭವ ಇರಲೂಬಹುದು, ಇಲ್ಲದೆಯೂ ಇರಬಹುದು. ಉದಾಹರಣೆಗೆ ವಿಜಯ್ ಮಲ್ಯ ಅವರಿಗೆ ಲಿಕ್ಕರ್ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದವರು. ಕಿಂಗ್ಫಿಶರ್ ಚೇರ್ಮನ್ ಆಗಿದ್ದರು. ಆದರೆ ಲಿಕ್ಕರ್ ಬಿಸಿನೆಸ್ ಅನ್ನು ಏರ್ಲೈನ್ ಬಿಸಿನೆಸ್ಗೆ ಹೋಲಿಸಲಾಗದು. ಮದ್ಯದ ಉದ್ದಿಮೆಯಲ್ಲಿ ೪೦ % ಲಾಭ ಸಿಗುತ್ತದೆ. ಆದರೆ ಏರ್ಲೈನ್ ಇಂಡಸ್ಟ್ರಿಯಲ್ಲಿ ೧೦ ವರ್ಷ ಆದ ಮೇಲೆ ೨% ಲಾಭ ಸಿಗುತ್ತದೆ. ಕಿಂಗ್ಫಿಶರ್ ವಿಫಲವಾಗಲು ಇದೂ ಒಂದು ಕಾರಣ. ಆಕಾಸ ಏರ್ಲೈನ್ ನುರಿತ ವೃತ್ತಿಪರರಿಂದ ನಡೆಯಲಿರುವುದರಿಂದ ಸಫಲವಾಗುವ ನಿರೀಕ್ಷೆ ಇದೆ.
ವಿಮಾನಯಾನದ ಸುರಕ್ಷತೆ ಕುರಿತ ಸ್ಥಿತಿ ಗತಿ ಹೇಗಿದೆ?
ಬೋಯಿಂಗ್ನ ಎರಡು ೭೩೭ ಮ್ಯಾಕ್ಸ್ ವಿಮಾನಗಳು ೨೦೧೮-೨೦೨೦ರ ಅವಧಿಯಲ್ಲಿ ಭೀಕರ ಅಪಘಾತಕ್ಕೀಡಾಯಿತು. ಬೋಯಿಂಗ್ ಸಂಸ್ಥೆ ವಿಮಾನದ ಉತ್ಪಾದನೆಯನ್ನೇ ಸ್ಥಗಿತಗೊಳಿಸಿತ್ತು. ಈಗ ಆಕಾಸ ಏರ್, ೭೨ ಬೋಯಿಂಗ್ ೭೩೭ ಮ್ಯಾಕ್ಸ್ ೮ ವಿಮಾನಗಳನ್ನು ಖರೀದಿಸುತ್ತಿದೆ. ಇದರ ಬೆಲೆ ೯ ಶತಕೋಟಿ ಡಾಲರ್ (ಅಂದಾಜು ೭೧,೧೦೦ ಕೋಟಿ ರೂ.). ಬಹಳ ಧೈರ್ಯ ಮಾಡಿ ಆಕಾಸ ಏರ್ ಈ ಮೆಗಾ ಆರ್ಡರ್ ಅನ್ನು ಮಾಡಿದೆ. ಮೊದಲ ಬಾರಿಗೆ ಬಾಡಿಗೆ ವಿಮಾನಗಳ ಬದಲಿಗೆ ಹೊಸ ವಿಮಾನಗಳನ್ನೇ ರಾಕೇಶ್ ಜುಂಜುನ್ವಾಲಾ ಖರೀದಿಸಿದ್ದಾರೆ. ಸಾಮಾನ್ಯವಾಗಿ ಹೊಸ ಏರ್ಲೈನ್ಗಳು ೪-೫ ವರ್ಷ ಹಳೆಯ ವಿಮಾನಗಳನ್ನು ಲೀಸ್ಗೆ ಪಡೆದು ಹಾರಾಟ ಆರಂಭಿಸುತ್ತಾರೆ. ಆದರೆ ಜುಂಜುನ್ವಾಲಾ ಹೊಸ ವಿಮಾನಗಳನ್ನೇ ಖರೀದಿಸುತ್ತಿದ್ದಾರೆ. ಮಾತ್ರವಲ್ಲದೆ ಬೋಯಿಂಗ್ ೭೩೭ ಮ್ಯಾಕ್ಸ್ನಂಥ ೧೮೯ ಪ್ರಯಾಣಿಕರನ್ನು ಕರೆದೊಯ್ಯಬಲ್ಲ ವಿಮಾನವನ್ನೇ ಖರೀದಿಸುತ್ತಿದ್ದಾರೆ. ಇದು ದೊಡ್ಡ ಸಾಹಸವೇ ಸರಿ. ಭಾರತದಲ್ಲಿ ಏರ್ಲೈನ್ ಯಶಸ್ವಿಯಾಗಬೇಕಾದ ಅಗತ್ಯ ಇದೆ.
ಆಕಾಸ ಏರ್ಗೆ ಮುಂದಿರುವ ಸವಾಲುಗಳೇನು?
ಆಕಾಸ ಏರ್ಗೆ ಸಹಜವಾಗಿ ದೊಡ್ಡ ಸವಾಲು ಇದೆ. ಇಂಡಿಗೊ ಏರ್ಲೈನ್ ಮಾರುಕಟ್ಟೆ ಪಾಲು ೫೮% ಇದೆ. ಪ್ರಯಾಣಿಕರಿಗೆ ಹೊಸ ವಿಮಾನಯಾನದ ಅನುಭವ ನೀಡುವುದಾಗಿ ಹೇಳಿದ್ದಾರೆ. ಅದು ಹೇಗೆ ಎಂಬುದು ಗೊತ್ತಿಲ್ಲ. ೧.೯ ಕೋಟಿ ಪ್ರಯಾಣಿಕರು ಭಾರತದಲ್ಲಿ ವಿಮಾನಗಳನ್ನು ಬಳಸುತ್ತಿದ್ದಾರೆ. ಅದು ಹೆಚ್ಚಿದರೆ ಆಕಾಸ ಏರ್ಗೆ ಅನುಕೂಲವಾಗಲಿದೆ. ಈಗ ಹಲವು ಮಂದಿ ಏರ್ ಟಿಕೆಟ್ ದರ ದುಬಾರಿಯಾದ್ದರಿಂದ ಪ್ರಯಾಣ ಮಾಡದಿರಬಹುದು. ಆಕಾಸ್ ಏರ್ ಎರಡು ಮಹತ್ವದ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡಿದೆ. ಅವೆಂದರೆ ಮುಂಬಯಿ-ಅಹಮದಾಬಾದ್ ಮತ್ತು ಬೆಂಗಳೂರು-ಕೊಚ್ಚಿನ್ ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸುತ್ತಿದ್ದಾರೆ. ಆದರೆ ಈ ಮಾರ್ಗದಲ್ಲಿ ಪೈಪೋಟಿಯೂ ಇದೆ.
ಬೆಂಗಳೂರಿಗರಿಗೆ ಆಕಾಸ ಏರ್ಲೈನ್ನಿಂದ ಪ್ರಯೋಜನ ಏನು?
ಆಕಾಸ ಏರ್ ಬೆಂಗಳೂರು-ಕೊಚ್ಚಿನ್ ನಡುವೆ ವಿಮಾನ ಹಾರಾಟ ಆರಂಭಿಸುತ್ತಿದೆ. ಮುಂಬಯಿ-ಅಹಮದಾಬಾದ್ ಬಳಿಕ ಎರಡನೇ ಮಾರ್ಗವಾಗಿ ಬೆಂಗಳೂರು-ಕೊಚ್ಚಿನ್ ಅನ್ನು ಆಯ್ಕೆ ಮಾಡಿರುವುದು ಗಮನಾರ್ಹ. ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಮಾರ್ಗಗಳಲ್ಲಿ ಇದೂ ಒಂದು. ಕಿಂಗ್ಫಿಶರ್ ಆರಂಭವಾದಾಗ ಮೊದಲ ವಿಮಾನ ಮುಂಬಯಿ-ಬೆಂಗಳೂರು ನಡುವೆ ಹಾರಿತ್ತು. ಬೆಂಗಳೂರಿಗೆ ಆಕಾಸ ಏರ್ ಭಾರಿ ಮಹತ್ವ ನೀಡಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೇ ಟರ್ಮಿನಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ನಲ್ಲಿ ಉದ್ಘಾಟಿಸಲಿದ್ದಾರೆ. ದಕ್ಷಿಣ ಏಷ್ಯಾದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಏರ್ಪೋರ್ಟ್ಗಳಲ್ಲಿ ಇದೂ ಒಂದಾಗಿದೆ. ಸ್ಪೈಸ್ ಜೆಟ್, ಏರ್ ವಿಸ್ತಾರ, ಗೋ ಫಸ್ಟ್, ಇಂಡಿಗೊ, ಏರ್ ಏಷ್ಯಾ, ಏರ್ ಇಂಡಿಯಾ, ಮುಂಬರಲಿರುವ ಆಕಾಸ ಏರ್ ಸೇರಿದಂತೆ ಏಳೆಂಟು ಏರ್ಲೈನ್ಗಳಿಂದ ಭಾರತದ ವೈಮಾನಿಕ ರಂಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಭವಿಷ್ಯದಲ್ಲಿ ನಿರೀಕ್ಷಿಸಬಹುದು.
ಆಕಾಸ ಏರ್ ಹಾರಾಟ ಯಾವಾಗ? ಎಲ್ಲಿಂದ ಎಲ್ಲಿಗೆ?
- ಆಕಾಸ ಏರ್ನ ಮೊದಲ ವಿಮಾನ ಹಾರಾಟ ಆಗಸ್ಟ್ ೭ರಂದು ಮುಂಬಯಿನಿಂದ ಅಹಮದಾಬಾದ್ಗೆ.
- ಆಗಸ್ಟ್ ೧೩ರಿಂದ ಬೆಂಗಳೂರಿನಿಂದ ಕೊಚ್ಚಿನ್ಗೆ ವಿಮಾನ ಹಾರಾಟ.
- ಆಗಸ್ಟ್ ೨೩ರಿಂದ ಬೆಂಗಳೂರು-ಅಹಮದಾಬಾದ್ಗೆ ಹಾರಾಟ.
- ಆಗಸ್ಟ್ ೩೦ರಿಂದ ಬೆಂಗಳೂರು-ಮುಂಬಯಿಗೆ ಹಾರಾಟ
ದೇಶ
ವಿಸ್ತಾರ ಸಂಪಾದಕೀಯ: ಖಲಿಸ್ತಾನಿ ಭಯೋತ್ಪಾದಕರ ಹೆಡೆಮುರಿ ಕಟ್ಟಲೇಬೇಕಿದೆ
Vistara Editorial: ಕೆನಡಾ ವಿಚಾರದಲ್ಲಿ ಭಾರತ ದೃಢ ನಿರ್ಧಾರ ತೆಗೆದುಕೊಂಡಿದೆ. ಭಾರತದ ನಡೆಗಳು ಖಲಿಸ್ತಾನಿಗಳಿಗೆ ನಡುಕ ಹುಟ್ಟಿಸಿರುವಂತೆಯೇ ಕೆನಡಾ ಸರ್ಕಾರಕ್ಕೆ ಎಚ್ಚರಿಕೆಯನ್ನೂ ರವಾನಿಸಿವೆ.
ಖಲಿಸ್ತಾನ್ ಉಗ್ರರು (Khalistani Terrorist) ಹಾಗೂ ಗ್ಯಾಂಗ್ಸ್ಟರ್ಗಳ ನಡುವಿನ ಲಿಂಕ್ಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಬುಧವಾರ ಆರು ರಾಜ್ಯಗಳ 50 ಸ್ಥಳಗಳಲ್ಲಿ ಬೃಹತ್ ಪ್ರಮಾಣದ ದಾಳಿ (NIA raid) ನಡೆಸಿದೆ. ಮೂಲಗಳ ಪ್ರಕಾರ, ಖಲಿಸ್ತಾನ್ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಹವಾಲಾ ಆಪರೇಟರ್ಗಳು, ದರೋಡೆಕೋರರು, ಮತ್ತಿತರ ಸಂಘಟಿತ ಅಪರಾಧ ಜಾಲಗಳಲ್ಲಿ ಸಕ್ರಿಯರಾದವರನ್ನು ಬಂಧಿಸಲು ದಾಳಿಗಳು ನಡೆಯುತ್ತಿವೆ. ಪಂಜಾಬ್ನಲ್ಲಿ 30, ರಾಜಸ್ಥಾನದಲ್ಲಿ 13, ಹರಿಯಾಣದಲ್ಲಿ 4, ಉತ್ತರಾಖಂಡದಲ್ಲಿ 2 ಮತ್ತು ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ತಲಾ 1 ಸ್ಥಳಗಳಲ್ಲಿ ದಾಳಿ ನಡೆದಿದೆ. ಭಾರತದಿಂದ ಪರಾರಿಯಾಗಿ ಬ್ರಿಟನ್, ಅಮೆರಿಕ, ಕೆನಡಾ, ದುಬೈ, ಪಾಕಿಸ್ತಾನ ಮತ್ತು ಇತರ ದೇಶಗಳಲ್ಲಿ ನೆಲೆಸಿರುವ 19 ಖಲಿಸ್ತಾನಿ ಭಯೋತ್ಪಾದಕರ ಪಟ್ಟಿಯನ್ನು ಈ ಹಿಂದೆ ಎನ್ಐಎ ಬಿಡುಗಡೆ ಮಾಡಿತ್ತು. ಇಲ್ಲಿರುವ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ. ಇಂಥದೊಂದು ವ್ಯಾಪಕ ಕಾರ್ಯಾಚರಣೆಯ ಅಗತ್ಯವಿತ್ತು(Vistara Editorial).
ಸದ್ಯ ಕೆನಡಾದಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಳಿಕ ಬಿಗಡಾಯಿಸಿರುವ ಕೆನಡಾ- ಭಾರತ ಸಂಬಂಧದ ಹಿನ್ನೆಲೆಯಲ್ಲಿ, ಭಾರತದಲ್ಲಿರುವ ಖಲಿಸ್ತಾನ್ ಸಹಾನುಭೂತಿಪರರ ಹೆಡೆಮುರಿ ಕಟ್ಟುವುದು ಎನ್ಐಎಯ ತಕ್ಷಣದ ಉದ್ದೇಶವಾಗಿರುವಂತಿದೆ. ಈಗಾಗಲೇ ಕೆನಡಾದಲ್ಲಿರುವ, ನಿಷೇಧಿತ ಖಲಿಸ್ತಾನಿ ಪರವಾದ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ಸದಸ್ಯ, ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಎಂಬಾತನ ಆಸ್ತಿಯನ್ನು ಎನ್ಐಎ ಮುಟ್ಟುಗೋಲು ಹಾಕಿಕೊಂಡಿದೆ. ನಿಷೇಧಿತ ಉಗ್ರ ಸಂಘಟನೆಯಾದ ಬಬ್ಬರ್ ಖಾಲ್ಸಾ ಇಂಟರ್ನ್ಯಾಶನಲ್ (ಬಿಕೆಐ) ನೊಂದಿಗೆ ಸಂಬಂಧ ಹೊಂದಿರುವ ಭಯೋತ್ಪಾದಕ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ ಮತ್ತು ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಾಂಡಾ ಅವರ ತಲೆಗೆ ತಲಾ 10 ಲಕ್ಷ ರೂಪಾಯಿ ಹಾಗೂ ಫಿರೋಜ್ಪುರದ ಪರ್ಮಿಂದರ್ ಸಿಂಗ್ ಕೈರಾ, ಪಂಜಾಬ್ನ ತರ್ನ್ ತರನ್ನ ಸತ್ನಾಮ್ ಸಿಂಗ್ ಮತ್ತು ಯದ್ವಿಂದರ್ ಸಿಂಗ್ ಎಂಬವರ ತಲೆಗೆ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಎನ್ಐಎ ಘೋಷಿಸಿದೆ.
ಒಂದು ಕಾಲದಲ್ಲಿ ಸಂಪೂರ್ಣ ನಾಶವಾಗಿದೆ ಎಂದು ಭಾವಿಸಲಾಗಿದ್ದ ಖಲಿಸ್ತಾನ್ ಚಳುವಳಿಯ ಪರ ಚಟುವಟಿಕೆ ಇತ್ತೀಚಿನ ಒಂದು ದಶಕದಲ್ಲಿ ನಿಧಾನವಾಗಿ ಹೆಚ್ಚುತ್ತ ಬಂದಿತ್ತು. ಕಾಶ್ಮೀರದಲ್ಲಿ ತನ್ನ ಆಟ ನಡೆಯುವುದಿಲ್ಲ ಎಂದು ಗೊತ್ತಾದ ಬಳಿಕ ಪಂಜಾಬ್ನತ್ತ ಪಾಕಿಸ್ತಾನ ತನ್ನ ದೃಷ್ಟಿಯನ್ನು ಹರಿಸಿದ್ದು, ಖಲಿಸ್ತಾನ ಚಳವಳಿಗಾರರಿಗೆ ಬೆಂಬಲ ನೀಡತೊಡಗಿದೆ. ಹೀಗಾಗಿ, ಇದು ಚಿಗುರುತ್ತಿರುವಾಗಲೇ ಚಿವುಟುವುದು ಅತ್ಯಂತ ಉತ್ತಮ. ಬೆಳೆಯಲು ಬಿಟ್ಟರೆ ಯಾವ ಬಗೆಯ ಅನಾಹುತವನ್ನು ಇದು ಎಸಗಬಹುದು ಎಂಬುದನ್ನು ತೊಂಬತ್ತರ ದಶಕದಲ್ಲಿ ನೋಡಿದ್ದಾಗಿದೆ. ಕಳೆದ ವರ್ಷ ಪಂಜಾಬ್ನ ತರಣ್ ತಾರಣ್ ಜಿಲ್ಲೆಯ ಪೊಲೀಸ್ ಠಾಣೆ ಮೇಲೆ ರಾಕೆಟ್ ಲಾಂಚರ್ನಿಂದ ಖಲಿಸ್ತಾನ್ ಉಗ್ರರು ದಾಳಿ ನಡೆಸಿದ್ದರು. ಅದೇ ವರ್ಷ ಮೇ ತಿಂಗಳಲ್ಲಿ ಪಂಜಾಬ್ ಗುಪ್ತಚರ ಇಲಾಖೆ ಪ್ರಧಾನ ಕಚೇರಿ ಮೇಲೂ ಇದೇ ರೀತಿಯ ದಾಳಿ ನಡೆಸಲಾಗಿತ್ತು. ರಾಕೆಟ್ ಲಾಂಚರ್ ಮೂಲಕ, ಡ್ರೋನ್ಗಳ ಮೂಲಕ ದಾಳಿ ನಡೆಸುವುದೆಂದರೆ ಮಿಲಿಟರಿ ಮಟ್ಟದ ದಾಳಿ. ಇದು ಗಡಿಯಾಚೆಯಿಂದ ಸ್ಮಗಲ್ ಆಗಿ ಬಂದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದರು. ಯುದ್ಧದ ಹಂತಕ್ಕೆ ಖಲಿಸ್ತಾನಿ ಉಗ್ರರು ಮುಟ್ಟಿದ್ದಾರೆ ಎಂದ ಬಳಿಕ ಇದನ್ನು ಗಂಭೀರವಾಗಿಯೇ ಪರಿಗಣಿಸಬೇಕಿದೆ.
ಈ ಸಂಪಾದಕೀಯವನ್ನೂ ಓದಿ: Khalistani Terrorist: ಖಲಿಸ್ತಾನ್- ಗ್ಯಾಂಗ್ಸ್ಟರ್ ಜಾಲ ಭೇದಿಸಲು 6 ರಾಜ್ಯಗಳ 50 ಕಡೆ NIA ದಾಳಿ
1980-90ರ ದಶಕದಲ್ಲಿ ಒಂದು ಚಳವಳಿಯಾಗಿ ಹುಟ್ಟಿಕೊಂಡ ಖಲಿಸ್ತಾನಿ ಬೇಡಿಕೆ ಮುಂದೆ ಭಾರತದೊಳಗೇ ರಣಗಾಯವಾಗಿ ಸೃಷ್ಟಿಯಾಗಿದ್ದು, ಭದ್ರತೆಗೆ ತಲೆನೋವಾಗಿ ಪರಿಣಮಿಸಿದ್ದು ನಮಗೆ ಗೊತ್ತಿದೆ. ಸುಮಾರು 12,000 ನಾಗರಿಕರು, 10,000 ಉಗ್ರರು ಆಗ ಬಲಿಯಾಗಿದ್ದರು. ಪ್ರಧಾನ ಮಂತ್ರಿಯ ಕಗ್ಗೊಲೆ ನಡೆಸುವ ಮಟ್ಟಕ್ಕೂ ಆ ಭಯೋತ್ಪಾದಕರು ಹೋಗಿದ್ದರು. ಈಗ ಮತ್ತೆ ಖಲಿಸ್ತಾನಿಗಳು ಬಾಲ ಬಿಚ್ಚುತ್ತಿದ್ದಾರೆ. ಸಿಖ್ ಪ್ರತ್ಯೇಕತಾವಾದಿ ಖಲಿಸ್ತಾನಿಗಳಿಗೆ ಪಾಕಿಸ್ತಾನ ಮಾತ್ರವಲ್ಲ ಕೆನಡಾವೂ ನೇರವಾಗಿ ಬೆಂಬಲ ನೀಡುತ್ತಿದೆ. ಕೆನಡಾದಲ್ಲಿ ಮಿತಿ ಮೀರಿರುವ ಸಿಖ್ ಪ್ರತ್ಯೇಕತಾವಾದಿ ಭಯೋತ್ಪಾದಕರ ವಿರುದ್ಧ ಅಲ್ಲಿನ ಆಡಳಿತವಾಗಲೀ, ರಾಜಕೀಯ ಪಕ್ಷಗಳಾಗಲೀ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಯಾಕೆಂದರೆ ಅಲ್ಲಿ ಗಣನೀಯವಾಗಿರುವ ಸಿಖ್ಖರು ಹಾಗೂ ಅವರ ಮತ ಬ್ಯಾಂಕ್. ಸಿಖ್ ಫಾರ್ ಜಸ್ಟಿಸ್ ಸಂಘಟನೆ ಕೆನಡಾದಿಂದಲೇ ಸಕ್ರಿಯವಾಗಿದ್ದುಕೊಂಡು ಪಂಜಾಬಿನಲ್ಲಿ ಮತ್ತೆ ಭಯೋತ್ಪಾದನೆ ಬಿತ್ತುತ್ತಿದೆ. ಸಾವಿರಾರು ಹಿಂದೂ ಕುಟುಂಬಗಳು ಕೆನಡಾ, ಆಸ್ಟ್ರೇಲಿಯಾದಲ್ಲಿ ವೃತ್ತಿ ಕಾರಣ ನೆಲೆಸಿವೆ. ಇದೀಗ ಇದೇ ಖಲಿಸ್ತಾನಿಗಳೇ ಕೆನಡಾ ಮತ್ತು ಭಾರತದ ನಡುವೆ ಸಂಬಂಧ ಹಳಸಲು ಕಾರಣರಾಗಿದ್ದಾರೆ. ಇವರನ್ನು ಬುಡದಿಂದಲೇ ಚಿವುಟಿ ಹಾಕಿದಾಗಲಷ್ಟೇ ಇವರ ಆವುಟ ತಣ್ಣಗಾಗಲು ಸಾಧ್ಯ.
ಸದ್ಯ ಕೆನಡಾ ವಿಚಾರದಲ್ಲಿ ಭಾರತ ದೃಢ ನಿರ್ಧಾರ ತೆಗೆದುಕೊಂಡಿದೆ. ಭಾರತದ ನಡೆಗಳು ಖಲಿಸ್ತಾನಿಗಳಿಗೆ ನಡುಕ ಹುಟ್ಟಿಸಿರುವಂತೆಯೇ ಕೆನಡಾ ಸರ್ಕಾರಕ್ಕೆ ಎಚ್ಚರಿಕೆಯನ್ನೂ ರವಾನಿಸಿವೆ. ಕೆನಡಾದಲ್ಲಿ ಖಲಿಸ್ತಾನಿ ಉಗ್ರರನ್ನು ಹೊಡೆದುರುಳಿಸಿದವರು ಭಾರತದ ಏಜೆಂಟರು ಎಂಬುದಕ್ಕೆ ಸಾಕ್ಷ್ಯವಿಲ್ಲವಾದರೂ, ಸತ್ತವರು ಆ ಶಿಕ್ಷೆಗೆ ಒಳಗಾಗಬೇಕಿದ್ದವರೇ ಎಂಬುದರಲ್ಲಿ ಸಂಶಯವಿಲ್ಲ. ಹಾಗೆಯೇ ಭಾರತದಲ್ಲಿರುವ ಖಲಿಸ್ತಾನಿ ಉಗ್ರರು ಮತ್ತು ಅವರ ಸಹಾನುಭೂತಿಪರರೂ ಕಾನೂನು ತನಿಖೆ, ನ್ಯಾಯಾಂಗ ವಿಚಾರಣೆ ಹಾಗೂ ಶಿಕ್ಷೆಯ ವ್ಯಾಪ್ತಿಯಡಿಗೆ ಬರಬೇಕು. ಎನ್ಐಎ ಈ ವಿಚಾರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಆಶಿಸೋಣ.
ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿ
Dina Bhavishya : ಈ ರಾಶಿಯವರಿಗೆ ಇಂದು ಕಿರಿಕಿರಿ, ಆತಂಕದ ಭಾವವೇ ಹೆಚ್ಚು; ಸ್ವಲ್ಪ ಎಚ್ಚರವಹಿಸಿ!
Dina Bhavishya : ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ ಚತುರ್ದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಚಂದ್ರನು ಗುರುವಾರ ರಾತ್ರಿವರೆಗೂ ಮೀನ ರಾಶಿಯಲ್ಲಿಯೇ ನೆಲಸಲಿದ್ದು, ರಾತ್ರಿ 8.17ಕ್ಕೆ ಮೇಷ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ಕನ್ಯಾ, ಧನಸ್ಸು, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮಿಥುನ ರಾಶಿಯವರು ಕುಟುಂಬದಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪವಾಗದಂತೆ ಎಚ್ಚರಿಕೆ ವಹಿಸಬೇಕಿದೆ. ವೃಶ್ಚಿಕ ರಾಶಿಯವರಿಗೆ ನೆರೆಹೊರೆಯವರೊಂದಿಗೆ ಜಗಳವಾಗುವ ಸಾಧ್ಯತೆ ಇದೆ. ಮಾತಿನಲ್ಲಿ ಆದಷ್ಟು ಹಿಡಿತವಿರಲಿ. ಮಕರ ರಾಶಿಯವರಿಗೆ ಇಂದು ನೀವು ಹಲವಾರು ಒತ್ತಡಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾಗಬಹುದು. ಇದು ನಿಮಗೆ ಕಿರಿಕಿರಿ ಹಾಗೂ ಆತಂಕದ ಭಾವನೆಗಳನ್ನು ಉಂಟು ಮಾಡಬಹುದು. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.
ಇಂದಿನ ಪಂಚಾಂಗ (kannada panchanga) (28-09-2023)
ಮೇಷ: ಅನಿರೀಕ್ಷಿತ ಖರ್ಚು ಹೆಚ್ಚಾಗಲಿದ್ದು, ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುವ ಸಾಧ್ಯತೆ ಇದೆ. ಹಾಸಿಗೆ ಇದ್ದಷ್ಟು ಕಾಲು ಚಾಚಿ. ಸ್ನೇಹಿತರು, ಮಿತ್ರರ ಆಗಮನದಿಂದ ಅವರೊಂದಿಗೆ ಸಮಯ ಕಳೆಯುವಿರಿ. ಸಹದ್ಯೋಗಿಗಳ ಸಹಕಾರ ಸಿಗಲಿದೆ. ಆರೋಗ್ಯದ ಬಗ್ಗೆ ಕೊಂಚ ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ. ದಾಂಪತ್ಯದಲ್ಲಿ ಮಧುರ ಭಾವ ಮೂಡಲಿದೆ.
ಅದೃಷ್ಟ ಸಂಖ್ಯೆ: 9
ವೃಷಭ: ದಿನದ ಆರಂಭದಲ್ಲಿ ಇಂದು ನೀವು ಯಾವುದೇ ಆರ್ಥಿಕ ನಷ್ಟವನ್ನು ಹೊಂದಬಹುದು. ಇದರಿಂದ ನಿಮ್ಮ ಪೂರ್ತಿ ದಿನ ಹದಗೆಡುವ ಸಾಧ್ಯತೆ ಇದ್ದು, ಈ ಬಗ್ಗೆ ಎಚ್ಚರಿಕೆ ಇರಲಿ. ಆದಷ್ಟು ದೈಹಿಕ ಹಾಗೂ ಮಾನಸಿಕ ದೃಢತೆಗಾಗಿ ಯೋಗ ಹಾಗೂ ಧ್ಯಾನ ಮಾಡುವುದು ಉತ್ತಮ. ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಮನೆಯಲ್ಲಿ ಅಪಸ್ವರಗಳು ಮೂಡದಂತೆ ಎಚ್ಚರಿಕೆ ವಹಿಸಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8
ಮಿಥುನ: ಉದ್ಯೋಗಿಗಳಿಗೆ ಆಪ್ತರಿಂದ ಸಲಹೆ ಸೂಚನೆಗಳು ಸಿಗಲಿವೆ. ಕುಟುಂಬದಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪವಾಗದಂತೆ ಎಚ್ಚರಿಕೆ ವಹಿಸಿ. ಶ್ರೇಷ್ಠ ಜನರ ಸಹವಾಸವು ನಿಮ್ಮಲ್ಲಿ ಒಳ್ಳೆಯ ವಿಚಾರಗಳನ್ನು ಹುಟ್ಟುಹಾಕುತ್ತದೆ. ಆರೋಗ್ಯ ಮಧ್ಯಮವಾಗಿರಲಿದೆ. ಆರ್ಥಿಕವಾಗಿ ಸಬಲರಾಗುವಿರಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6
ಕಟಕ: ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆರ್ಥಿಕವಾಗಿ ಸದೃಢರಾಗುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭ ಸಿಗಲಿದೆ. ಉದ್ಯೋಗಕ್ಕೆ ಸಂಬಂಧಿಸಿದ ಜನರು ಇಂದು ಕೆಲಸದ ಸ್ಥಳದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು, ತಾಳ್ಮೆಯಿಂದ ಇರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1
ಸಿಂಹ: ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಇದೆ. ನಿಮ್ಮ ಸರ್ವಾಧಿಕಾರಿ ಧೋರಣೆಯಿಂದಾಗಿ ನಿಮ್ಮ ಸಹೋದ್ಯೋಗಿಗಳಿಂದ ಟೀಕೆಗೆ ಗುರಿಯಾಗುವ ಸಾಧ್ಯತೆ ಹೆಚ್ಚು. ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ. ಆರ್ಥಿಕವಾಗಿ ಬಳಲುವ ಸಾಧ್ಯತೆ ಇದೆ. ಅನಗತ್ಯ ಖರ್ಚುಗಳ ಬಗ್ಗೆ ಹಿಡಿತವಿರಲಿ. ಕೌಟುಂಬಿಕವಾಗಿ ಮಿಶ್ರಫಲ.
ಅದೃಷ್ಟ ಸಂಖ್ಯೆ: 8
ಕನ್ಯಾ: ಅನಗತ್ಯ ಒತ್ತಡದಿಂದ ಹೊರಬರಲು ನಿಮ್ಮ ಪ್ರೀತಿ ಪಾತ್ರರೊಡನೆ ಸಮಯವನ್ನು ಕಳೆಯಿರಿ. ಅತಿಥಿಗಳ ಆಗಮನದಿಂದಾಗಿ ಕೊಂಚಮಟ್ಟಿಗೆ ಸಮಾಧಾನ ಸಿಗಲಿದೆ. ಕೆಲಸ ಕಾರ್ಯಗಳಲ್ಲಿ ಕೊಂಚಮಟ್ಟಿಗೆ ನಿಧಾನವಾದರೂ ಪ್ರಯತ್ನವನ್ನು ಬಿಡಬೇಡಿ. ಮುಂದೊಂದು ದಿನ ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆರೋಗ್ಯ ಮಧ್ಯಮವಾಗಿರಲಿದೆ. ಆರ್ಥಿಕವಾಗಿ ಉತ್ತಮಗೊಳ್ಳುವಿರಿ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 7
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ಆರೋಗ್ಯ ದೃಷ್ಟಿಯಿಂದ ಉತ್ತಮವಾದ ದಿನ. ನಿಮ್ಮ ಹರ್ಷಚಿತ್ತದ ಮನಸ್ಸು ನಿಮಗೆ ಇನ್ನಷ್ಟೂ ಆತ್ಮವಿಶ್ವಾಸ ತರಲಿದೆ. ಒಬ್ಬ ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಆರ್ಥಿಕವಾಗಿ ಸಾಧಾರಣ ಫಲ ನಿಮ್ಮದಾಗಲಿದೆ. ಉದ್ಯೋಗಿಗಳಿಗೆ ಮಿಶ್ರಫಲ ಉಂಟಾಗುವುದು. ಕೌಟುಂಬಿಕವಾಗಿ ಸಂತೋಷದ ವಾತಾವರಣ.
ಅದೃಷ್ಟ ಸಂಖ್ಯೆ: 9
ವೃಶ್ಚಿಕ: ನೆರೆಹೊರೆಯವರೊಂದಿಗೆ ಜಗಳವಾಗುವ ಸಾಧ್ಯತೆ ಇದೆ. ಮಾತಿನಲ್ಲಿ ಆದಷ್ಟು ಹಿಡಿತವಿರಲಿ. ಕುಟುಂಬದ ಸದಸ್ಯನ ಆರೋಗ್ಯ ಹದಗೆಡುವ ಕಾರಣ ಆರ್ಥಿಕವಾಗಿ ಬಳಲುವ ಸಾಧ್ಯತೆ ಇದೆ. ಕೆಲಸದ ನಿಧಾನಗತಿ ಸ್ವಲ್ಪ ಒತ್ತಡ ತರಲಿದೆ. ಉದ್ಯೋಗಿಗಳಿಗೆ ಹೆಚ್ಚಿದ ಕಿರಿಕಿರಿ. ಸಂಗಾತಿಯಿಂದ ಸಲಹೆ ಸಿಗಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 2
ಧನಸ್ಸು: ದೃಢ ವಿಶ್ವಾಸದ ನಿರ್ಧಾರದಿಂದಾಗಿ ಸುದೀರ್ಘವಾದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸ್ನೇಹಿತರಿಂದ ಆರ್ಥಿಕ ಸಹಾಯದ ಬೇಡಿಕೆ ಬರಲಿದೆ. ಹೀಗಾಗಿ ಆಲೋಚಿಸಿ ಸಹಾಯ ಮಾಡಿ. ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದ ಕಾರ್ಯಗಳು ಯಶಸ್ಸನ್ನು ತಂದುಕೊಡಲಿದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಉದ್ಯೋಗದ ಸ್ಥಳದಲ್ಲಿ ನಿಮಗೆ ಪ್ರಶಂಸೆ ಪ್ರೋತ್ಸಾಹ ಸಿಗಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 8
ಉಸಿರಾಟದ ಸಮಸ್ಯೆಗಳಿಗೆ ಈ ಕ್ಷೇತ್ರದಲ್ಲಿ ಸಿಗಲಿದೆ ಪರಿಹಾರ
ಮಕರ: ಇಂದು ನೀವು ಹಲವಾರು ಒತ್ತಡಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾಗಬಹುದು. ಇದು ನಿಮಗೆ ಕಿರಿಕಿರಿ ಹಾಗೂ ಆತಂಕದ ಭಾವನೆಗಳನ್ನು ಉಂಟು ಮಾಡಬಹುದು. ಕುಟುಂಬದವರ ಬೆಂಬಲ ಪ್ರೋತ್ಸಾಹದಿಂದಾಗಿ ಕೊಂಚಮಟ್ಟಿಗೆ ನಿರಾಳರಾಗುವಿರಿ. ಆರೋಗ್ಯದ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುವುದು ಉತ್ತಮ. ಉದ್ಯೋಗದ ಸ್ಥಳದಲ್ಲಿ ಒತ್ತಡ ಹೆಚ್ಚಲಿದೆ. ಖರ್ಚಿನಲ್ಲಿ ಹಿಡಿತವಿರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8
ಕುಂಭ: ಆರೋಗ್ಯ ಪರಿಪೂರ್ಣವಾಗಿರುತ್ತದೆ. ಯಾವುದೇ ದೀರ್ಘಕಾಲೀನ ಹೂಡಿಕೆಗಳನ್ನು ದಿನದ ಮಟ್ಟಿಗೆ ಮಾಡುವುದು ಬೇಡ. ಆತುರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಸ್ನೇಹಿತರ ಜತೆ ಉತ್ತಮ ಕ್ಷಣಗಳನ್ನು ಕಳೆಯುವ ಸಾಧ್ಯತೆ ಇದೆ. ಅಗತ್ಯವಿದ್ದರೆ ಸ್ನೇಹಿತರು ನಿಮ್ಮ ನೆರವಿಗೆ ಬರುತ್ತಾರೆ. ವ್ಯಾಪಾರ – ವ್ಯವಹಾರಗಳಲ್ಲಿ ಮಧ್ಯಮ ಲಾಭ ಇರಲಿದೆ. ಉದ್ಯೋಗಿಗಳಿಗೆ ಶುಭ ಫಲವಿದ್ದರೆ, ಕೌಟುಂಬಿಕವಾಗಿ ಮಿಶ್ರಫಲ ಇರಲಿದೆ.
ಅದೃಷ್ಟ ಸಂಖ್ಯೆ: 6
ಇದನ್ನೂ ಓದಿ : ತಾತಯ್ಯ ತತ್ವಾಮೃತಂ: ದೇಹದಲ್ಲಿ ಜೀವ ಇರುವಾಗ ಏನು ಮಾಡಬೇಕು?
ಮೀನ: ಇಂದು ನಿಮಗೆ ಹೂಡಿಕೆಯ ಲಾಭಾಂಶ ಸಿಗಲಿದೆ. ನೀವು ಯಾವುದೇ ದೊಡ್ಡ ಸಮಸ್ಯೆಯಿಂದ ಹೊರಬರಬಹುದು. ಪ್ರೀತಿ ಪಾತ್ರರೊಂದಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಉದ್ಯೋಗದ ಸ್ಥಳದಲ್ಲಿ ಭರವಸೆಯ ಹೊಸ ಅವಕಾಶಗಳು ಸಿಗಲಿವೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಅದೃಷ್ಟದ ದಿನಗಳು ಇಂದು ಫಲ ನೀಡಲಿದೆ.
ಅದೃಷ್ಟ ಸಂಖ್ಯೆ: 3
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | [email protected]
ದೇಶ
ಜಿಮೇಲ್ ಓಪನ್ ಆಗ್ಲಿಲ್ಲ, ಅದ್ಕೆ ಜೈಲಿನಿಂದ ಬಿಡಲಿಲ್ಲ! ಹೈಕೋರ್ಟ್ ಬೇಲ್ ನೀಡಿದ್ರೂ 3 ವರ್ಷ ಜೈಲಿನಲ್ಲೇ ಉಳಿದ ಯುವಕ!
Gujarat High Court: ಗುಜರಾತ್ ಹೈಕೋರ್ಟ್ ಜಾಮೀನು ನೀಡಿದರೂ ಜೈಲು ಅಧಿಕಾರಿಗಳು ಆರೋಪಿಯನ್ನು ಮೂರು ವರ್ಷಗಳ ಕಾಲ ಜೈಲಿನಲ್ಲಿ ಉಳಿಸಿಕೊಂಡಿದ್ದೇಕೆ?
ಅಹಮದಾಬಾದ್: ಜಾಮೀನು ನೀಡಿದರೂ 3 ವರ್ಷಗಳಿಂದ ಜೈಲಿನಿಂದ ಬಿಡುಗಡೆಯಾಗದ 27 ವರ್ಷದ ಯುವಕನಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಗುಜರಾತ್ ಹೈಕೋರ್ಟ್(Gujarat High Court), ಗುಜರಾತ್ ರಾಜ್ಯ ಸರ್ಕಾರಕ್ಕೆ (Gujarat State Government) ಬುಧವಾರ ಆದೇಶಿಸಿದೆ. 2020ರಲ್ಲಿ ಗುಜರಾತ್ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ, ಜೈಲು ಅಧಿಕಾರಿಗಳ (Jail Officials) ನಿರ್ಲಕ್ಷ್ಯದಿಂದಾಗಿ ಯುವಕ ಆಲ್ಮೋಸ್ಟ್ 3 ವರ್ಷಗಳವರೆಗೆ ಜೈಲಿನಲ್ಲಿ ಕೊಳೆಯುವಂತಾಯಿತು. ಅಲ್ಲದೇ, ಜೈಲು ಅಧಿಕಾರಿಗಳು ಕೊಟ್ಟಿರುವ ಕಾರಣ ಕೂಡ ವಿಚಿತ್ರವಾಗಿದೆ. ಜಿಮೇಲ್ ತೆರೆಯಲು (Gmail) ಸಾಧ್ಯವಾಗದ್ದಕ್ಕೆ ಜೈಲಿನಿಂದ ಬಿಡುಗಡೆ ಸಾಧ್ಯವಾಗಿಲ್ಲ ಎಂದು ಸಬೂಬು ಹೇಳಿರುವುದು ಅಪಹಾಸ್ಯಕ್ಕೆ ಕಾರಣವಾಗಿದೆ.
ಜಾಮೀನು ಆದೇಶವನ್ನು 2020ರ ಸೆಪ್ಟೆಂಬರ್ 29ರಂದು ನೀಡಲಾಯಿತು. ಆದರೆ ನಿನ್ನೆ, 2023ರ ಸೆಪ್ಟೆಂಬರ್ 21ರಂದು ಅಂತಿಮವಾಗಿ ಅಪರಾಧಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ನ್ಯಾಯಮೂರ್ತಿಗಳಾದ ಎಎಸ್ ಸುಪೇಹಿಯಾ ಮತ್ತು ಎಂಆರ್ ಮೆಂಗ್ಡೆ ಅವರ ಪೀಠವು 35 ಪುಟಗಳ ಆದೇಶದಲ್ಲಿ ತಿಳಿಸಿದೆ. ಕಾರಾಗೃಹ ಅನುಭವಿಸುತ್ತಿದ್ದ 27 ವರ್ಷದ ಚಂದನ್ಜಿ ಠಾಕೂರ್ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ಪೀಠವು ಈ ಆದೇಶವನ್ನು ನೀಡಿದೆ.
ಜೈಲು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹೈಕೋರ್ಟ್ ಆದೇಶದ ಹೊರತಾಗಿಯೂ ಜೈಲಿನಲ್ಲಿಯೇ ಉಳಿದಿರುವ ಅರ್ಜಿದಾರರ ದುರವಸ್ಥೆಯನ್ನು ಪರಿಗಣಿಸಿ, ಸುಮಾರು ಮೂರು ವರ್ಷಗಳ ಕಾಲ ಅಕ್ರಮವಾಗಿ ಜೈಲಿನಲ್ಲಿದ್ದಕ್ಕಾಗಿ ಪರಿಹಾರವನ್ನು ನೀಡಲು ನಾವು ಒಲವು ತೋರಿದ್ದೇವೆ. ಅರ್ಜಿದಾರರನ್ನು ಸಾಮಾನ್ಯ ಜಾಮೀನಿನ ಮೇಲೆ ಬಿಡುಗಡೆ ಮಾಡುವ ಈ ನ್ಯಾಯಾಲಯವು ಸೆಪ್ಟೆಂಬರ್ 2020 ರ ಜಾಮೀನು ಆದೇಶದ ಬಗ್ಗೆ ಹೈಕೋರ್ಟ್ನ ನೋಂದಾವಣೆ ಜೈಲು ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದೆ. ಜೈಲು ಅಧಿಕಾರಿಗಳಿಗೆ ಆದೇಶದ ಇ-ಮೇಲ್ ಬಂದಿಲ್ಲ ಎಂಬುದು ನಿಜವಲ್ಲ.ಅವರು ಇ-ಮೇಲ್ ಸ್ವೀಕರಿಸಿದ್ದರೂ, ಅಟ್ಯಾಚ್ಮೆಂಟ್ ಓಪನ್ ಮಾಡಲು ಸಾಧ್ಯವಾಗಿಲ್ಲ ಎಂದು ಕೋರ್ಟ್ ಹೇಳಿದೆ.
ಈ ಸುದ್ದಿಯನ್ನೂ ಓದಿ: Congress Guarantee : ಗೃಹಲಕ್ಷ್ಮಿ, ಗೃಹಜ್ಯೋತಿ ಜಾಹೀರಾತಿನಲ್ಲಿ ಸಿಎಂ, ಡಿಸಿಎಂ ಫೋಟೊ ಬಳಕೆ ಪ್ರಶ್ನಿಸಿದ ಅರ್ಜಿ ವಜಾ
ಜಾಮೀನು ಆದೇಶವನ್ನು ಒಳಗೊಂಡಿರುವ ಇಮೇಲ್ ಅನ್ನು ಮೆಹ್ಸಾನಾದ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ಆದೇಶದ ಸರಿಯಾದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ಯಾವುದೇ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿಲ್ಲ. ದುರದೃಷ್ಟವಶಾತ್, ನಿನ್ನೆಯವರೆಗೆ ಈ ವಿಷಯದ ಬಗ್ಗೆ ಯಾರೂ ತಲೆಯೇ ಕೆಡಿಸಿಕೊಂಡಿಲ್ಲ. ಆದ್ದರಿಂದ, ನ್ಯಾಯದ ಹಿತದೃಷ್ಟಿಯಿಂದ ಮತ್ತು ಜೈಲು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅರ್ಜಿದಾರರು ಜೈಲಿನಲ್ಲಿ ಉಳಿಯುಂತಾಯಿತು. ಹಾಗಾಗಿ ಅವರಿಗೆ 1 ಲಕ್ಷ ರೂ. ಪರಿಹಾರವನ್ನು ನೀಡುವಂತೆ ರಾಜ್ಯಕ್ಕೆ ನಿರ್ದೇಶಿಸುತ್ತಿದ್ದೇವೆ. ಲಕ್ಷ. 14 ದಿನಗಳ ಅವಧಿಯೊಳಗೆ ಪಾವತಿಸಬೇಕು ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಜೈಲು ದಾಖಲೆಗಳ ಪ್ರಕಾರ, ಅರ್ಜಿದಾರರು ಈಗಾಗಲೇ ಐದು ವರ್ಷಗಳಿಗಿಂತ ಹೆಚ್ಚು ಅವಧಿಯನ್ನು ಜೈಲಿನಲ್ಲಿ ಕಳೆದಿದ್ದಾರೆ.
ದೇಶ
Flipkart, Amazon Sale: ಹಬ್ಬದ ಸೀಸನ್ ಆನ್ಲೈನ್ ಖರೀದಿ, ಕ್ರೆಡಿಟ್ ಕಾರ್ಡ್ದಾರರು ತಿಳಿದುಕೊಳ್ಳಬೇಕಾದ ಸಂಗತಿಗಳು
Flipkart, Amazon Sale: ಫ್ಲಿಪ್ಕಾರ್ಟ್, ಅಮೆಜಾನ್ ಸೇರಿದಂತೆ ಆನ್ಲೈನ್ ಶಾಪಿಂಗ್ ಜಾಲತಾಣಗಳು ಬೃಹತ್ ಸೇಲ್ ಆರಂಭಿಸಲಿವೆ. ಈ ವೇಳೆ, ಕ್ರೆಡಿಟ್ ಕಾರ್ಡ್ ಲಾಭದಾಯಕವಾಗಿ ಬಳಸುವುದು ಹೇಗೆ?
ಭಾರತದಲ್ಲೀಗ ಈಗ ಹಬ್ಬಗಳ ಸಮಯ(Festive Season in India). ಹಾಗಾಗಿ, ಭರ್ಜರಿ ಸೇಲ್ಗಳ ಭರಾಟೆ ಇದ್ದೆ ಇರುತ್ತದೆ. ಈ ರೇಸ್ನಲ್ಲಿ ಆನ್ಲೈನ್ ಕಾಮರ್ಸ್ ತಾಣಗಳು ಕೂಡ ಹಿಂದೆ ಬಿದ್ದಿಲ್ಲ. ಫ್ಲಿಪ್ಕಾರ್ಟ್ (Flipkart), ಅಮೆಜಾನ್ನಂತ (Amazon) ದೈತ್ಯ ಆನ್ಲೈನ್ ಮಾರಾಟ ಕಂಪನಿಗಳು ಈ ಹಬ್ಬದ ಸಂದರ್ಭದಲ್ಲಿ ಸೇಲ್ಸ್ ಆರಂಭಿಸುತ್ತವೆ. ಈ ಹಬ್ಬದ ಸಮಯದಲ್ಲಿ ಭಾರತೀಯ ಕುಟುಂಬಗಳು ಸಾಕಷ್ಟು ಹಣವನ್ನು ಖರೀದಿಯ ಮೇಲೆ ವೆಚ್ಚ ಮಾಡುತ್ತವೆ. ಹಾಗಿದ್ದರೆ, ನೀವು ಆನ್ಲೈನ್ ಖರೀದಿಗೆ ಕ್ರೆಡಿಟ್ ಕಾರ್ಡ್ಗಳನ್ನು (Credit Cards) ಬಳಸುತ್ತಿದ್ದರೆ, ಒಂಚೂರು ಜಾಣ ತೋರಿಸಿದ್ರೆ ಸಾಕಷ್ಟು ಹಣವನ್ನು ಉಳಿತಾಯ (Save Money) ಮಾಡಬಹುದು. ಹೇಗೆ ವೆಚ್ಚ ಉಳಿತಾಯ ಮಾಡಬಹುದು ಎಂದು ನೋಡೋಣ ಬನ್ನಿ(Flipkart, Amazon Sale).
ಸೂಕ್ತ ಕಾರ್ಡ್ ಬಳಕೆ ಮಾಡಿ
ಆನ್ಲೈನ್ ಖರೀದಿಯ ಸಮಯದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಮೊಟ್ಟ ಮೊದಲ ವಿಷಯ ಏನೆಂದರೆ, ನೀವು ಸರಿಯಾದ ಕ್ರೆಡಿಟ್ ಕಾರ್ಡ್ ಅನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಯಾವುದೇ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವ ಮೊದಲು, ನೀವು ಅದರ ಎಲ್ಲಾ ಸೇವೆಗಳನ್ನು ಅವಶ್ಯಕತೆಗಳಿಗೆ ಅನುಗುಣವಾಗಿ ಪರಿಶೀಲಿಸಬೇಕು. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನಿಮಗೆ ಸೂಕ್ತವಾದ ಯಾವುದೇ ಕ್ರೆಡಿಟ್ ಮಿತಿಯನ್ನು ನೀವು ತೆಗೆದುಕೊಳ್ಳಬಹುದು. ಇದಲ್ಲದೆ, ಹಲವಾರು ಕಂಪನಿಗಳು ವಿವಿಧ ರೀತಿಯ ಕ್ರೆಡಿಟ್ ಕಾರ್ಡ್ಗಳನ್ನು ನೀಡುತ್ತವೆ. ಹಾಗಾಗಿ, ಕಾರ್ಡ್ ಪಡೆಯುವಾಗ ನಿಮ್ಮ ಅಗತ್ಯಗಳನ್ನು ಪೂರೈಸು ಕಾರ್ಡ್ ಪಡೆದುಕೊಳ್ಳಿ.
ಕ್ರೆಡಿಟ್ ಕಾರ್ಡ್ ಕೆಟಗರಿ ತಿಳಿದಿರಲಿ
ಕ್ರೆಡಿಟ್ ಕಾರ್ಡ್ ಬ್ಯಾಂಕ್ಗಳು ಅನೇಕ ವಿಧಗಳಲ್ಲಿ ಗ್ರಾಹಕರಿಗೆ ಆಫರ್ಗಳನ್ನು ನೀಡುತ್ತವೆ. ಹಾಗಾಗಿ, ಅವರ ಕ್ರೆಡಿಟ್ ಕಾರ್ಡ್ಗಳನ್ನು ಆಯ್ಕೆ ಮಾಡುವ ಮುನ್ನ ಅವುಗಳ ಬಗ್ಗೆ ತಿಳಿದುಕೊಳ್ಳಬೇಕಾದದ್ದು ಮಹತ್ವವಾಗುತ್ತದೆ. ನಿರ್ದಿಷ್ಟ ಕೆಟಗರಿಯ ಕೊಡುಗೆಗಳ ಪ್ರಕಾರ ಒಬ್ಬ ಕಾರ್ಡ್ ಹೋಲ್ಡರ್ ಶಾಪಿಂಗ್ ಮಾಡಿದರೆ, ನಂತರ ಆತನಿಗೆ ಕ್ಯಾಶ್ಬ್ಯಾಕ್, ರಿಯಾಯಿತಿಗಳು ಅಥವಾ ಪ್ರಯೋಜನಗಳು ದೊರೆಯುತ್ತವೆ. ಈ ಬಗ್ಗೆ ಗಮನಹರಿಸಬೇಕು.
ಕ್ರೆಡಿಟ್ ಕಾರ್ಡ್ ಬಳಕೆ ಎಷ್ಟು?
ಕ್ರೆಡಿಟ್ ಕಾರ್ಡ್ ಪಡೆಯುವಾಗ ನೀವು ಎಷ್ಟು ಬಾರಿ ಕ್ರೆಡಿಟ್ ಕಾರ್ಡ್ ಬಳಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಂಡರೆ ಉತ್ತಮ. ಒಂದು ವೇಳೆ ಅಗತ್ಯವೇ ಇಲ್ಲದಿದ್ದರೆ ಸುಮ್ಮನೆ ಕ್ರೆಡಿಟ್ ಕಾರ್ಡ್ ಪಡೆದುಕೊಂಡರೆ ಲಾಭವಿಲ್ಲ. ಅದು ನಿಮ್ಮ ಮೇಲೆ ಹಣಕಾಸಿನ ಹೊರೆಯಾಗುತ್ತದೆ. ದೈನಂದಿನ ವಹಿವಾಟುಗಳಿಗೆ ನೀವು ಕ್ರೆಡಿಟ್ ಕಾರ್ಡ್ಗಳನ್ನು ನಿಯಮಿತವಾಗಿ ಬಳಸಬೇಕಾಗುತ್ತದೆ ಎಂದು ತಜ್ಞರು ಸೂಚಿಸುತ್ತಾರೆ. ಆಹಾರ ಅಥವಾ ಇತರ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಕ್ರೆಡಿಟ್ ಕಾರ್ಡ್ಗಳನ್ನು ಬಳಸಬಹುದು. ಇದರೊಂದಿಗೆ, ಭವಿಷ್ಯದಲ್ಲಿ ಯಾವುದೇ ವಸ್ತುವಿನ ಬೆಲೆಯನ್ನು ಕಡಿಮೆ ಮಾಡಲು ಮತ್ತಷ್ಟು ಬಳಸಬಹುದಾದ ಕ್ರೆಡಿಟ್ ಕಾರ್ಡ್ ಬಹುಮಾನಗಳು ಅಥವಾ ಬೋನಸ್ ಅಂಕಗಳನ್ನು ಪಡೆಯಬಹುದು.
ಚೆಕ್ ಸೈನ್ಅಪ್ ಲಾಭಗಳು
ಹಲವಾರು ಬ್ಯಾಂಕುಗಳು ಮತ್ತು ಕಂಪನಿಗಳು ಸಹ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಸೈನ್ ಅಪ್ ಬೋನಸ್ ಮತ್ತು ವೆಲ್ಕಮ್ ಬೆನ್ಫಿಟ್ಸ್ ನೀಡುತ್ತವೆ. ಹಲವಾರು ಇತರ ಕಾರ್ಡ್ ವಿತರಕರು ಹೊಸ ಗ್ರಾಹಕರಿಗೆ ಕ್ಯಾಶ್ಬ್ಯಾಕ್ ಬಹುಮಾನಗಳು, ಕೂಪನ್ಗಳು ಮತ್ತು ರಿಯಾಯಿತಿಗಳನ್ನು ಸಹ ನೀಡುತ್ತಾರೆ. ಹಾಗಾಗಿ ಕಾರ್ಡ್ ಖರೀದಿಸುವ ಮುನ್ನ ಈ ರೀತಿಯ ಆಫರ್ಸ್, ಬೆನ್ಫಿಟ್ಸ್ ಇದೆಯಾ ಅಂತ ಚೆಕ್ ಮಾಡುವುದು ಉತ್ತಮ ನಡೆಯಾಗುತ್ತದೆ.
ಈ ಸುದ್ದಿಯನ್ನೂ ಓದಿ: ವಿಸ್ತಾರ Money Guide | ನಿಮ್ಮ ಡೆಬಿಟ್, ಕ್ರೆಡಿಟ್ ಕಾರ್ಡ್ ಸುರಕ್ಷತೆಗೆ ಆರ್ಬಿಐ ಟೋಕನ್ ಶೀಘ್ರ, ಏನಿದು?
ಕ್ರೆಡಿಟ್ ಕಾರ್ಡ್ಸ್ನ ವಿಶಿಷ್ಟ ಬೆನೆಫಿಟ್ಸ್
ಎಲ್ಲಾ ಕ್ರೆಡಿಟ್ ಕಾರ್ಡ್ಗಳು ವಿಶಿಷ್ಟ ಪ್ರಯೋಜನದ ರಚನೆಯನ್ನು ಹೊಂದಿವೆ. ಕಾರ್ಡ್ ಮಲಕ ವಹಿವಾಟುಗಳನ್ನು ನಡೆಸಿದಾಗ ಕ್ಯಾಶ್ಬ್ಯಾಕ್, ವ್ಯಾಪಾರಿ ಮಳಿಗೆಗಳಲ್ಲಿ ರಿಯಾಯಿತಿಗಳು, ಪಾಲುದಾರ ವ್ಯಾಪಾರಿಗಳಲ್ಲಿ ವೇಗವರ್ಧಿತ ರಿವಾರ್ಡ್ ಪಾಯಿಂಟ್ಗಳು, ಇಂಧನ ಸರ್ಚಾರ್ಜ್ ಮನ್ನಾ ಮತ್ತು ಇನ್ನೂ ಹೆಚ್ಚಿನ ಲಾಭಗಳು ದೊರೆಯುತ್ತವೆ. ಹಾಗಾಗಿ, ಕಾರ್ಡ್ ಅನ್ನು ಬಳಸುವ ಮೊದಲು ಅದರ ಸಂಪೂರ್ಣ ಪ್ರಯೋಜನದ ರಚನೆಯನ್ನು ನೀವು ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕೆಲವೊಮ್ಮೆ ನಷ್ಟವಾಗುವ ಸಾಧ್ಯತೆಗಳಿರುತ್ತವೆ.
-
ಪ್ರಮುಖ ಸುದ್ದಿ23 hours ago
Iraq Fire Accident: ಮದುವೆ ಮನೆಯಲ್ಲಿ ಅಗ್ನಿ ದುರಂತ; ಮದುಮಕ್ಕಳು ಸೇರಿ 114 ಜನರ ಸಾವು!
-
ಪ್ರಮುಖ ಸುದ್ದಿ13 hours ago
German Shepherd: ಸೀಕ್ರೆಟ್ ಸರ್ವಿಸ್ ಏಜೆಂಟ್ನಿಗೆ ಕಚ್ಚಿದ ಅಮೆರಿಕ ಅಧ್ಯಕ್ಷ ಬೈಡನ್ ಅವರ ‘ಕಮಾಂಡರ್’!
-
ವಿದೇಶ14 hours ago
Most expensive wedding: ಜಗತ್ತಿನ ದುಬಾರಿ ವಿವಾಹ ಯಾವುದು ಗೊತ್ತೆ? ಖರ್ಚಾಗಿದ್ದು ಇಷ್ಟು ಕೋಟಿ ರೂ.
-
ಸುವಚನ2 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕ್ರೈಂ18 hours ago
ಲೈಂಗಿಕ ದೌರ್ಜನ್ಯ; ರಕ್ತಸಿಕ್ತ ಬಾಲಕಿ ಮನೆಮನೆಗೆ ತೆರಳಿ ಗೋಳಾಡಿದರೂ ಸಹಾಯ ಮಾಡದ ನಿರ್ದಯಿಗಳು!
-
ಕರ್ನಾಟಕ14 hours ago
Car Accident: ಮರಕ್ಕೆ ಕಾರು ಡಿಕ್ಕಿ ಹೊಡೆದು ಚಾಲಕ ಸಾವು
-
ದೇಶ15 hours ago
Venus Mission: ಇಸ್ರೋಗೆ ‘ಶುಕ್ರ’ದೆಸೆ; ಚಂದ್ರ, ಸೂರ್ಯನ ಬಳಿಕ ಶುಕ್ರನತ್ತ ಚಿತ್ತ; ಉಡಾವಣೆ ಯಾವಾಗ?
-
ಕರ್ನಾಟಕ9 hours ago
PSI Recruitment Scam: ಕೊನೆಗೂ ಅಮೃತ್ ಪಾಲ್ ಸೆಂಟ್ರಲ್ ಜೈಲಿನಿಂದ ಬಿಡುಗಡೆ