ಪ್ರಮುಖ ಸುದ್ದಿ
ʼಆಕಾಸʼಕ್ಕೆ ಮೂರೇ ಗೇಣು! ಕೈಗೆಟಕುವ ದರದಲ್ಲಿ ವಿಮಾನ ಪ್ರಯಾಣ, ಭಾನುವಾರ ಶುರು!
ಭಾರತದ ವಿಮಾನ ರಂಗದಲ್ಲಿ ಹೊಸ ಭರವಸೆಗಳೊಂದಿಗೆ ಅಗ್ಗದ ದರದಲ್ಲಿ ಜನ ಸಾಮಾನ್ಯರಿಗೆ ವಿಮಾನ ಸೇವೆ ನೀಡಲು ಆಕಾಸ ಏರ್, ಆಗಸ್ಟ್ 7ರಂದು ತನ್ನ ಚೊಚ್ಚಲ ಹಾರಾಟವನ್ನು ಮುಂಬಯಿ-ಅಹಮದಾಬಾದ್ ನಡುವೆ ಆರಂಭಿಸುತ್ತಿದೆ.
ಭಾರತದ ಆಕಾಶದಲ್ಲಿ ಹೊಚ್ಚ ಹೊಸ ಏರ್ಲೈನ್ ಆಕಾಸ ಏರ್ ತನ್ನ ಹಾರಾಟವನ್ನು ಆಗಸ್ಟ್ ೭ರಂದು ಆರಂಭಿಸುತ್ತಿದ್ದು, ಪ್ರಯಾಣಿಕರನ್ನು ಆಕರ್ಷಿಸಲು ಸಜ್ಜಾಗಿದೆ. ಖ್ಯಾತ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಅವರ ಕನಸಿನ ಕೂಸಾಗಿರುವ ಆಕಾಸ ಏರ್ಲೈನ್, ಭಾರಿ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ! ಹಾಗಾದರೆ ಆಕಾಸ ಏರ್ಲೈನ್ ಹುಟ್ಟುಹಾಕಿರುವ ನಿರೀಕ್ಷೆಗಳೇನು? ಇದರಿಂದ ಭಾರತದ ವಿಮಾನಯಾನ ರಂಗದಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿವೆ? ಜನ ಸಾಮಾನ್ಯರಿಗೂ ವಿಮಾನದಲ್ಲಿ ಸುಲಭವಾಗಿ ಪ್ರಯಾಣಿಸುವಂತಾಗಲು ಆಕಾಸ ಏರ್ ನೆರವಾಗಲಿದೆಯೇ? ಏರ್ಟಿಕೆಟ್ ವೆಚ್ಚ ಕಡಿಮೆಯಾಗಲಿದೆಯೇ? ಈ ಎಲ್ಲ ಪ್ರಶ್ನೆಗಳಿಗೆ ವಿಸ್ತಾರ ನ್ಯೂಸ್ನ ಬಿಸಿನೆಸ್ & ಎಕಾನಮಿ ವಿಭಾಗದ ಕನ್ಸಲ್ಟಿಂಗ್ ಎಡಿಟರ್ ಆಗಿರುವ ಗಿರಿ ಪ್ರಕಾಶ್ ಅವರು ವಿವರಿಸಿದ್ದಾರೆ.
ಆಕಾಸ ಏರ್ನ ಮೊದಲ ವಿಮಾನ ಹಾರಾಟ ಆರಂಭ ಆ.೭ರಿಂದ ಶುರುವಾಗುತ್ತಿದೆ. ಹಾಗಾದರೆ ಭಾರತದ ವಿಮಾನಯಾನ ರಂಗದಲ್ಲಿ ಏನಾದರೂ ಹೊಸ ಬದಲಾವಣೆಯನ್ನು ನಿರೀಕ್ಷಿಸಬಹುದೇ?
ಬಹಳ ಬದಲಾವಣೆಯನ್ನು ನಿರೀಕ್ಷಿಸಬಹುದು. ಮೊದಲನೆಯದಾಗಿ ಪ್ರಯಾಣಿಕರಿಗೆ ಹೊಸ ಆಯ್ಕೆ ಸಿಗುತ್ತದೆ. ಏರ್ಲೈನ್ಗಳ ಸಂಖ್ಯೆ ಹೆಚ್ಚಾದರೆ ಏರ್ ಟಿಕೆಟ್ ದರ ಇಳಿಕೆಯಾಗಬಹುದು. ಆಕಾಸ ಏರ್ ಅಗ್ಗದ ವೆಚ್ಚದ ಏರ್ಲೈನ್ ವಿಭಾಗದಲ್ಲಿ ಇರುವುದರಿಂದ ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಟಿಕೆಟ್ ಸಿಗುವುದರಿಂದ ದೊಡ್ಡಮಟ್ಟಿನ ಅನುಕೂಲವಾಗಲಿದೆ. ಎರಡನೆಯದಾಗಿ ವಿಮಾನಯಾನದ ಸಂಪರ್ಕ ಹೆಚ್ಚುತ್ತದೆ. ಏರ್ಲೈನ್ಗಳ ನಡುವೆ ಪೈಪೋಟಿ ಉಂಟಾಗುತ್ತದೆ. ಇದು ಇಂಡಸ್ಟ್ರಿಗೂ, ಬಳಕೆದಾರರಿಗೂ ಅನುಕೂಲ.
ಜನ ಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ವಿಮಾನಯಾನದ ಕನಸು ನನಸಾಗಲಿದೆಯೇ?
ಹೌದು. ಆಕಾಸ ಏರ್ಲೈನ್ ಭಾನುವಾರ ಆರಂಭವಾಗುತ್ತಿದೆ. ಬಳಿಕ ಜೆಟ್ ಏರ್ವೇಸ್ ಪುನರಾರಂಭವಾಗುತ್ತದೆ. ಇನ್ನೂ ಒಂದೆರಡು ಏರ್ಲೈನ್ಗಳು ಅಸ್ತಿತ್ವಕ್ಕೆ ಬರಲಿದೆ. ಇದು ಬಹಳ ಒಳ್ಳೆಯದು. ಮೂಲತಃ ವಿಮಾನಗಳಲ್ಲಿ ಬಳಕೆಯಾಗುವ ಎಟಿಎಫ್ ( Aviation Turbine Fuel) ಇಂಧನದ ದರ ಹೆಚ್ಚಳವಾಗಿದೆ. ಎಟಿಎಫ್ ಜಿಎಸ್ಟಿ ವ್ಯಾಪ್ತಿಗೆ ಸದ್ಯ ಬಂದಿಲ್ಲ. ಇದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಷಯವಾಗಿದೆ. ರಾಜ್ಯ ಸರ್ಕಾರಗಳು ಎಟಿಎಫ್ ಮೇಲೆ ಅಬಕಾರಿ ಸುಂಕವನ್ನು ವಿಧಿಸುತ್ತವೆ. ಹೀಗಾಗಿ ಏರ್ ಟಿಕೆಟ್ ವೆಚ್ಚ ದುಬಾರಿಯಾಗಿದೆ. ಅದರ ಬದಲಿಗೆ ಎಟಿಎಫ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತಂದರೆ, ಅಥವಾ ರಾಜ್ಯ ಸರ್ಕಾರಗಳೇ ಎಟಿಎಫ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದರೆ, ಏರ್ಲೈನ್ಗಳಿಗೆ ಇಂಧನ ವೆಚ್ಚ ಕಡಿಮೆಯಾಗಲಿದೆ. ಹಾಗೂ ಅದನ್ನು ಗ್ರಾಹಕರಿಗೆ ವರ್ಗಾಯಿಸಬಹುದು. ಆಗ ಟಿಕೆಟ್ ದರ ಕಡಿಮೆಯಾಗುತ್ತದೆ. ಎರಡನೆಯದಾಗಿ ಹಲವು ಏರ್ಪೋರ್ಟ್ಗಳು ಖಾಸಗೀಕರಣವಾಗಿವೆ. ದಿಲ್ಲಿ, ಬೆಂಗಳೂರು, ಮುಂಬಯಿ, ಅಲ್ಲಿ ಏರ್ಲೈನ್ಗಳಿಗೆ ತಗಲುವ ವೆಚ್ಚ ಹೆಚ್ಚುತ್ತದೆ. ವಿಮಾನದ ಲ್ಯಾಂಡಿಂಗ್, ಟೇಕಾಫ್ಗೆ ತಗಲುವ ಖರ್ಚಿನಲ್ಲಿ ಹೆಚ್ಚಳವಾಗಿದೆ. ಆದರೆ ಇನ್ನೂ ಒಂದೆರಡು ವರ್ಷಗಳಲ್ಲಿ ಜನರಿಗೆ ರೈಲ್ವೆ ಟಿಕೆಟ್ನಂತೆ ಏರ್ ಟಿಕೆಟ್ ಕಡಿಮೆ ಬೆಲೆಗೆ ಸಿಗುವ ವಿಶ್ವಾಸ ಇದೆ.
ರಾಕೇಶ್ ಜುಂಜುನ್ವಾಲಾ ಷೇರು ಮಾರುಕಟ್ಟೆಯ ದಿಗ್ಗಜರು. ಏರ್ಲೈನ್ ಇಂಡಸ್ಟ್ರಿಯಲ್ಲಿ ಅವರಿಂದ ಏನನ್ನು ನಿರೀಕ್ಷಿಸಬಹುದು?
ಆಕಾಸ ಏರ್ನಲ್ಲಿ ರಾಕೇಶ್ ಜುಂಜುನ್ವಾಲಾ ೪೦% ಷೇರುಗಳನ್ನು ಹೊಂದಿದ್ದಾರೆ. ೨೫ ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದಾರೆ. (ಅಂದಾಜು ೧೯೭ ಕೋಟಿ ರೂ.) ಏರ್ಲೈನ್ ಕ್ಷೇತ್ರದಲ್ಲಿ ಸುದೀರ್ಘ ವೃತ್ತಿಪರ ಅನುಭವ ಇರುವವರನ್ನು ಆಕಾಸ ಏರ್ಗೆ ಕರೆ ತಂದಿದ್ದಾರೆ. ವಿನಯ್ ದುಬೆ ಅವರು ಆಕಾಸ್ ಏರ್ನ ಸಹ ಸಂಸ್ಥಾಪಕ ಮತ್ತು ಸಿಇಒ. ಅವರು ಈ ಹಿಂದೆ ಜೆಟ್ ಏರ್ವೇಸ್ನ ಸಿಇಒ ಆಗಿದ್ದರು. ಆದಿತ್ಯ ಘೋಷ್ ಹಲವಾರು ವರ್ಷ ಇಂಡಿಗೊದ ಸಿಇಒ ಆಗಿದ್ದರು. ಇಂಡಿಗೊ ಏರ್ಲೈನ್ ಈಗ ಮಾರುಕಟ್ಟೆಯಲ್ಲಿ ೫೮% ಪಾಲನ್ನು ಗಳಿಸಿರುವುದರಲ್ಲಿ ಅವರ ಪಾತ್ರ ದೊಡ್ಡದು. ಅವರು ಈಗ ಆಕಾಸ ಏರ್ಲೈನ್ಗೆ ಸೇರ್ಪಡೆಯಾಗಿದ್ದಾರೆ. ಆಕಾಸ ಏರ್ಲೈನ್ ಆಡಳಿತ ಮಂಡಳಿಯಲ್ಲಿ ರಾಕೇಶ್ ಜುಂಜುನ್ವಾಲಾ ಅವರನ್ನು ಪ್ರತಿನಿಧಿಸಲಿದ್ದಾರೆ. ಅದೇ ರೀತಿ ಪ್ರವೀಣ್ ನಾಯರ್ ಕೂಡ ಸಹ ಸಂಸ್ಥಾಪಕರು. ರಾಕೇಶ್ ಜುಂಜುನ್ವಾಲಾ ತಾವಾಗಿಯೇ ಆಕಾಸ ಏರ್ಲೈನ್ನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ವೃತ್ತಿಪರರ ಮೂಲಕ ನಡೆಸುತ್ತಾರೆ. ಅದು ಏರ್ಲೈನ್ಗೂ ಒಳ್ಳೆಯದು. ಸಾಮಾನ್ಯವಾಗಿ ಬೇರೆ ಏರ್ಲೈನ್ಗಳಲ್ಲಿ ಸ್ಥಾಪಕರೇ ನಡೆಸುತ್ತಾರೆ. ಅವರಿಗೆ ಏರ್ಲೈನ್ ನಡೆಸಿ ಅನುಭವ ಇರಲೂಬಹುದು, ಇಲ್ಲದೆಯೂ ಇರಬಹುದು. ಉದಾಹರಣೆಗೆ ವಿಜಯ್ ಮಲ್ಯ ಅವರಿಗೆ ಲಿಕ್ಕರ್ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದವರು. ಕಿಂಗ್ಫಿಶರ್ ಚೇರ್ಮನ್ ಆಗಿದ್ದರು. ಆದರೆ ಲಿಕ್ಕರ್ ಬಿಸಿನೆಸ್ ಅನ್ನು ಏರ್ಲೈನ್ ಬಿಸಿನೆಸ್ಗೆ ಹೋಲಿಸಲಾಗದು. ಮದ್ಯದ ಉದ್ದಿಮೆಯಲ್ಲಿ ೪೦ % ಲಾಭ ಸಿಗುತ್ತದೆ. ಆದರೆ ಏರ್ಲೈನ್ ಇಂಡಸ್ಟ್ರಿಯಲ್ಲಿ ೧೦ ವರ್ಷ ಆದ ಮೇಲೆ ೨% ಲಾಭ ಸಿಗುತ್ತದೆ. ಕಿಂಗ್ಫಿಶರ್ ವಿಫಲವಾಗಲು ಇದೂ ಒಂದು ಕಾರಣ. ಆಕಾಸ ಏರ್ಲೈನ್ ನುರಿತ ವೃತ್ತಿಪರರಿಂದ ನಡೆಯಲಿರುವುದರಿಂದ ಸಫಲವಾಗುವ ನಿರೀಕ್ಷೆ ಇದೆ.
ವಿಮಾನಯಾನದ ಸುರಕ್ಷತೆ ಕುರಿತ ಸ್ಥಿತಿ ಗತಿ ಹೇಗಿದೆ?
ಬೋಯಿಂಗ್ನ ಎರಡು ೭೩೭ ಮ್ಯಾಕ್ಸ್ ವಿಮಾನಗಳು ೨೦೧೮-೨೦೨೦ರ ಅವಧಿಯಲ್ಲಿ ಭೀಕರ ಅಪಘಾತಕ್ಕೀಡಾಯಿತು. ಬೋಯಿಂಗ್ ಸಂಸ್ಥೆ ವಿಮಾನದ ಉತ್ಪಾದನೆಯನ್ನೇ ಸ್ಥಗಿತಗೊಳಿಸಿತ್ತು. ಈಗ ಆಕಾಸ ಏರ್, ೭೨ ಬೋಯಿಂಗ್ ೭೩೭ ಮ್ಯಾಕ್ಸ್ ೮ ವಿಮಾನಗಳನ್ನು ಖರೀದಿಸುತ್ತಿದೆ. ಇದರ ಬೆಲೆ ೯ ಶತಕೋಟಿ ಡಾಲರ್ (ಅಂದಾಜು ೭೧,೧೦೦ ಕೋಟಿ ರೂ.). ಬಹಳ ಧೈರ್ಯ ಮಾಡಿ ಆಕಾಸ ಏರ್ ಈ ಮೆಗಾ ಆರ್ಡರ್ ಅನ್ನು ಮಾಡಿದೆ. ಮೊದಲ ಬಾರಿಗೆ ಬಾಡಿಗೆ ವಿಮಾನಗಳ ಬದಲಿಗೆ ಹೊಸ ವಿಮಾನಗಳನ್ನೇ ರಾಕೇಶ್ ಜುಂಜುನ್ವಾಲಾ ಖರೀದಿಸಿದ್ದಾರೆ. ಸಾಮಾನ್ಯವಾಗಿ ಹೊಸ ಏರ್ಲೈನ್ಗಳು ೪-೫ ವರ್ಷ ಹಳೆಯ ವಿಮಾನಗಳನ್ನು ಲೀಸ್ಗೆ ಪಡೆದು ಹಾರಾಟ ಆರಂಭಿಸುತ್ತಾರೆ. ಆದರೆ ಜುಂಜುನ್ವಾಲಾ ಹೊಸ ವಿಮಾನಗಳನ್ನೇ ಖರೀದಿಸುತ್ತಿದ್ದಾರೆ. ಮಾತ್ರವಲ್ಲದೆ ಬೋಯಿಂಗ್ ೭೩೭ ಮ್ಯಾಕ್ಸ್ನಂಥ ೧೮೯ ಪ್ರಯಾಣಿಕರನ್ನು ಕರೆದೊಯ್ಯಬಲ್ಲ ವಿಮಾನವನ್ನೇ ಖರೀದಿಸುತ್ತಿದ್ದಾರೆ. ಇದು ದೊಡ್ಡ ಸಾಹಸವೇ ಸರಿ. ಭಾರತದಲ್ಲಿ ಏರ್ಲೈನ್ ಯಶಸ್ವಿಯಾಗಬೇಕಾದ ಅಗತ್ಯ ಇದೆ.
ಆಕಾಸ ಏರ್ಗೆ ಮುಂದಿರುವ ಸವಾಲುಗಳೇನು?
ಆಕಾಸ ಏರ್ಗೆ ಸಹಜವಾಗಿ ದೊಡ್ಡ ಸವಾಲು ಇದೆ. ಇಂಡಿಗೊ ಏರ್ಲೈನ್ ಮಾರುಕಟ್ಟೆ ಪಾಲು ೫೮% ಇದೆ. ಪ್ರಯಾಣಿಕರಿಗೆ ಹೊಸ ವಿಮಾನಯಾನದ ಅನುಭವ ನೀಡುವುದಾಗಿ ಹೇಳಿದ್ದಾರೆ. ಅದು ಹೇಗೆ ಎಂಬುದು ಗೊತ್ತಿಲ್ಲ. ೧.೯ ಕೋಟಿ ಪ್ರಯಾಣಿಕರು ಭಾರತದಲ್ಲಿ ವಿಮಾನಗಳನ್ನು ಬಳಸುತ್ತಿದ್ದಾರೆ. ಅದು ಹೆಚ್ಚಿದರೆ ಆಕಾಸ ಏರ್ಗೆ ಅನುಕೂಲವಾಗಲಿದೆ. ಈಗ ಹಲವು ಮಂದಿ ಏರ್ ಟಿಕೆಟ್ ದರ ದುಬಾರಿಯಾದ್ದರಿಂದ ಪ್ರಯಾಣ ಮಾಡದಿರಬಹುದು. ಆಕಾಸ್ ಏರ್ ಎರಡು ಮಹತ್ವದ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡಿದೆ. ಅವೆಂದರೆ ಮುಂಬಯಿ-ಅಹಮದಾಬಾದ್ ಮತ್ತು ಬೆಂಗಳೂರು-ಕೊಚ್ಚಿನ್ ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸುತ್ತಿದ್ದಾರೆ. ಆದರೆ ಈ ಮಾರ್ಗದಲ್ಲಿ ಪೈಪೋಟಿಯೂ ಇದೆ.
ಬೆಂಗಳೂರಿಗರಿಗೆ ಆಕಾಸ ಏರ್ಲೈನ್ನಿಂದ ಪ್ರಯೋಜನ ಏನು?
ಆಕಾಸ ಏರ್ ಬೆಂಗಳೂರು-ಕೊಚ್ಚಿನ್ ನಡುವೆ ವಿಮಾನ ಹಾರಾಟ ಆರಂಭಿಸುತ್ತಿದೆ. ಮುಂಬಯಿ-ಅಹಮದಾಬಾದ್ ಬಳಿಕ ಎರಡನೇ ಮಾರ್ಗವಾಗಿ ಬೆಂಗಳೂರು-ಕೊಚ್ಚಿನ್ ಅನ್ನು ಆಯ್ಕೆ ಮಾಡಿರುವುದು ಗಮನಾರ್ಹ. ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಮಾರ್ಗಗಳಲ್ಲಿ ಇದೂ ಒಂದು. ಕಿಂಗ್ಫಿಶರ್ ಆರಂಭವಾದಾಗ ಮೊದಲ ವಿಮಾನ ಮುಂಬಯಿ-ಬೆಂಗಳೂರು ನಡುವೆ ಹಾರಿತ್ತು. ಬೆಂಗಳೂರಿಗೆ ಆಕಾಸ ಏರ್ ಭಾರಿ ಮಹತ್ವ ನೀಡಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೇ ಟರ್ಮಿನಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ನಲ್ಲಿ ಉದ್ಘಾಟಿಸಲಿದ್ದಾರೆ. ದಕ್ಷಿಣ ಏಷ್ಯಾದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಏರ್ಪೋರ್ಟ್ಗಳಲ್ಲಿ ಇದೂ ಒಂದಾಗಿದೆ. ಸ್ಪೈಸ್ ಜೆಟ್, ಏರ್ ವಿಸ್ತಾರ, ಗೋ ಫಸ್ಟ್, ಇಂಡಿಗೊ, ಏರ್ ಏಷ್ಯಾ, ಏರ್ ಇಂಡಿಯಾ, ಮುಂಬರಲಿರುವ ಆಕಾಸ ಏರ್ ಸೇರಿದಂತೆ ಏಳೆಂಟು ಏರ್ಲೈನ್ಗಳಿಂದ ಭಾರತದ ವೈಮಾನಿಕ ರಂಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಭವಿಷ್ಯದಲ್ಲಿ ನಿರೀಕ್ಷಿಸಬಹುದು.
ಆಕಾಸ ಏರ್ ಹಾರಾಟ ಯಾವಾಗ? ಎಲ್ಲಿಂದ ಎಲ್ಲಿಗೆ?
- ಆಕಾಸ ಏರ್ನ ಮೊದಲ ವಿಮಾನ ಹಾರಾಟ ಆಗಸ್ಟ್ ೭ರಂದು ಮುಂಬಯಿನಿಂದ ಅಹಮದಾಬಾದ್ಗೆ.
- ಆಗಸ್ಟ್ ೧೩ರಿಂದ ಬೆಂಗಳೂರಿನಿಂದ ಕೊಚ್ಚಿನ್ಗೆ ವಿಮಾನ ಹಾರಾಟ.
- ಆಗಸ್ಟ್ ೨೩ರಿಂದ ಬೆಂಗಳೂರು-ಅಹಮದಾಬಾದ್ಗೆ ಹಾರಾಟ.
- ಆಗಸ್ಟ್ ೩೦ರಿಂದ ಬೆಂಗಳೂರು-ಮುಂಬಯಿಗೆ ಹಾರಾಟ
ಪ್ರಮುಖ ಸುದ್ದಿ
Horoscope Today : ವಾರದ ರಜೆಯ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡೋಣ
ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ ಅಷ್ಟಮಿಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (Horoscope Today) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಇಂದಿನ ಪಂಚಾಂಗ (28-05-2023)
ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ.
ತಿಥಿ: ಅಷ್ಟಮಿ 09:56 ವಾರ: ಭಾನುವಾರ
ನಕ್ಷತ್ರ: ಹುಬ್ಬಾ 26:19 ಯೋಗ: ಹರ್ಷಣ 20:37
ಕರಣ: ಭವ 09:56 ಇಂದಿನ ವಿಶೇಷ: ಶುಕ್ಲಾದೇವಿ ಪೂಜೆ
ಅಮೃತಕಾಲ: ಸಂಜೆ 07 ಗಂಟೆ 14 ನಿಮಿಷದಿಂದ ರಾತ್ರಿ 09 ಗಂಟೆ 01ನಿಮಿಷದವರೆಗೆ.
ಸೂರ್ಯೋದಯ : 05:52 ಸೂರ್ಯಾಸ್ತ : 06:41
ರಾಹುಕಾಲ : ಸಂಜೆ 4.30 ರಿಂದ 6.00
ಗುಳಿಕಕಾಲ: ಮಧ್ಯಾಹ್ನ 3.00 ರಿಂದ 4.30
ಯಮಗಂಡಕಾಲ: ಮಧ್ಯಾಹ್ನ 12.00 ರಿಂದ 1.30
ಮೇಷ : ಭರವಸೆಯ ಹೊಸ ಅವಕಾಶಗಳು ಸಿಗುವ ಸಾಧ್ಯತೆ. ಹಣಗಳಿಸುವ ವಿವಿಧ ಮಾರ್ಗಗಳು ನಿಮ್ಮ ಗಮನಕ್ಕೆ ಬರಲಿವೆ. ಅನಗತ್ಯವಾಗಿ ಇತರರ ಬಗ್ಗೆ ಮನೆಯಲ್ಲಿ ಚರ್ಚಿಸುವುದು ಬೇಡ. ಇದರಿಂದ ಮನೆಯ ವಾತಾವರಣ ಕೆಡುವ ಸಾಧ್ಯತೆ. ಉದ್ಯೋಗ ಹಾಗೂ ಆರೋಗ್ಯದಲ್ಲಿ ಸಾಧಾರಣ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 9
ವೃಷಭ: ಗತಿಸಿದ ಘಟನೆಗಳ ಬಗ್ಗೆ ಚಿಂತಿಸಿ, ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ. ಸಾಧ್ಯವಾದಷ್ಟು ತಾಳ್ಮೆಯಿಂದ ಇರಿ. ಭೂಮಿ, ಆಸ್ತಿ ಖರೀದಿ ವ್ಯವಹಾರದಲ್ಲಿ ದಿನದ ಮಟ್ಟಿಗೆ ತೊಡಗುವುದು ಬೇಡ. ಖರ್ಚು ಹೆಚ್ಚಾಗಲಿದೆ. ಆರೋಗ್ಯ ಹಾಗೂ ಉದ್ಯೋಗದಲ್ಲಿ ಸಾಧಾರಣ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8
ಮಿಥುನ: ಅನಿವಾರ್ಯವಾಗಿ ಖರ್ಚು. ಪ್ರಯಾಣ ಮಾಡುವ ಸಾಧ್ಯತೆ. ಕುಟುಂಬದಲ್ಲಿ ಯಾವುದೋ ವಿಷಯಕ್ಕೆ ಪರಸ್ಪರರ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ. ತಾಳ್ಮೆಯಿಂದ ವರ್ತಿಸಿ. ಅರ್ಹ ನೌಕರರಿಗೆ ಇಂದು ಉದ್ಯೋಗದಲ್ಲಿ ಬಡ್ತಿ ಹೊಂದುವ ಅವಕಾಶ ಕೂಡಿ ಬರಲಿದೆ. ಆರೋಗ್ಯ ಉತ್ತಮ, ಕೌಟುಂಬಿಕವಾಗಿ ಮಿಶ್ರಫಲ.
ಅದೃಷ್ಟ ಸಂಖ್ಯೆ: 6
ಕಟಕ: ಹಳೆಯ ವಿಚಾರಗಳನ್ನು ಕೆದಕಿ ಮನಸ್ಸಿಗೆ ಘಾಸಿ ಮಾಡಿಕೊಳ್ಳುವುದು ಬೇಡ. ಮನರಂಜನೆಗಾಗಿ ಖರ್ಚು ಮಾಡುವ ಸಾಧ್ಯತೆ. ಸಭೆ ಸಮಾರಂಭದ ಆಮಂತ್ರಣ ಸಿಗಲಿದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗ ಹಾಗೂ ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1
ಸಿಂಹ: ಇಂದು ನಿಮ್ಮ ಕೆಲಸ ಕಾರ್ಯಗಳಿಗೆ ಇತರರಿಂದ ಪ್ರಶಂಸೆ ವ್ಯಕ್ತವಾಗಲಿದೆ. ಬಾಕಿ ಇರುವ ಸಾಲ ಮರುಪಾವತಿ ಆಗಲಿದೆ. ಆರ್ಥಿಕವಾಗಿ ಲಾಭ. ಹೊಸ ಹೂಡಿಕೆ ವ್ಯವಹಾರಗಳು ಗರಿಗೆದರಲಿವೆ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8
ಕನ್ಯಾ: ಹಳೆಯ ವಿಚಾರಗಳು ನಿಮ್ಮನ್ನು ಮಾನಸಿಕ ಕುಂದಿಸುವ ಸಾಧ್ಯತೆ. ವ್ಯರ್ಥ ಯೋಚನೆಗಳು ಬೇಡ. ಆರೋಗ್ಯದಲ್ಲಿ ವ್ಯತ್ಯಾಸ. ಹಣಕಾಸು ವ್ಯವಹಾರ ಉತ್ತಮ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ಸಮಯದ ಅಭಾವ. ವ್ಯಪಾರ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿವೆ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ. ಆರೋಗ್ಯ ಸಾಧಾರಣ. ಉದ್ಯೋಗಿಗಳಿಗೆ ಒತ್ತಡ, ತಾಳ್ಮೆ ಅತ್ಯವಶ್ಯ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9
ವೃಶ್ಚಿಕ: ನಕಾರಾತ್ಮಕ ಆಲೋಚನೆಗಳು ಬರದಂತೆ ಸೃಜನಾತ್ಮಕ ಕಾರ್ಯಗಳಲ್ಲಿ ತೊಡಗಿ. ಕುಲ ದೇವತಾ ದರ್ಶನ, ಅಧ್ಯಾತ್ಮ ಗುರುಗಳ ಮಾರ್ಗದರ್ಶನ ಪಡೆಯಿರಿ. ದಿನದ ಮಟ್ಟಿಗೆ ಖರ್ಚು. ಅತಿಥಿಗಳಿಗಳ ಆಗಮನದಿಂದ ಸಂತಸ. ಉದ್ಯೋಗಿಗಳಿಗೆ ಶುಭ ಫಲ.
ಅದೃಷ್ಟ ಸಂಖ್ಯೆ: 2
ಧನಸ್ಸು: ಸಾಮಾಜಿಕ ಜವಾಬ್ದಾರಿಗಳು ಹೆಚ್ಚಾಗಲಿವೆ. ಅದರ ಮಧ್ಯೆಯೂ ಆರೋಗ್ಯದ ಕುರಿತು ಕಾಳಜಿ ವಹಿಸಿ. ಸೌಂದರ್ಯ ಪ್ರಜ್ಞೆ ಮೂಡಲಿದೆ. ಭವಿಷ್ಯದ ಹೂಡಿಕೆಗಗಳ ಬಗ್ಗೆ ಆಲೋಚನೆ. ಉದ್ಯೋಗಿಗಳಿಗೆ ಯಶಸ್ಸು. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8
ಮಕರ: ಉದ್ವೇಗ ಹೆಚ್ಚಾಗಲಿದೆ. ಆತುರದಲ್ಲಿ ತೆಗೆದುಕೊಂಡ ನಿರ್ಧಾರ ಅಪಾಯ ತರುವುದು. ಕುಟುಂಬದಲ್ಲಿ ಪರಸ್ಪರರ ಮಧ್ಯೆ ಭಿನ್ನಾಭಿಪ್ರಾಯ. ತಂದೆ-ತಾಯಿಗಳ ಆರೋಗ್ಯದಲ್ಲಿ ವ್ಯತ್ಯಾಸ. ದಿನದ ಮಟ್ಟಿಗೆ ಖರ್ಚು. ಮಾತಿನಲ್ಲಿ ಹಿಡಿತವಿರಲಿ. ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8
ಕುಂಭ: ಆರೋಗ್ಯ ಉತ್ತಮ. ಆರ್ಥಿಕ ಹೂಡಿಕೆ ವ್ಯವಹಾರದಲ್ಲಿ ಪ್ರಗತಿ, ಲಾಭ. ವೃತ್ತಿಪರರಿಗೆ ಶುಭ ಫಲ. ಕಾರ್ಯದ ಒತ್ತಡದಿಂದ ಕುಟುಂಬದವರೊಂದಿಗೆ ಕಾಲ ಕಳೆಯಲು ಸಮಯದ ಅಭಾವ. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6
ಮೀನ: ಮಾನಸಿಕ ಆರೋಗ್ಯ ಹದಗೆಡಲಿದೆ. ತಾಳ್ಮೆಯಿಂದ ಇರಿ. ಯಾರದರೂ ಪರ ವಹಿಸಿ ಮಾತನಾಡುವುದು ಬೇಡ. ಇದು ನಿಮಗೆ ಅಪಾಯ ತರುವುದು. ಹಣಕಾಸು ಪ್ರಗತಿ ಸಾಧಾರಣ. ಸಂಗಾತಿಯ ವರ್ತನೆ ಮುಜುಗರ ಉಂಟು ಮಾಡುತ್ತದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | [email protected]
ಇದನ್ನೂ ಓದಿ : ಶುಕ್ರ ಗ್ರಹ ಲಗ್ನದಲ್ಲಿದ್ದರೆ ಉತ್ತಮ ಆರೋಗ್ಯ, ಉಳಿದ ಮನೆಯಲ್ಲಿದ್ದರೆ ಯಾವೆಲ್ಲಾ ಫಲ?
ಕರ್ನಾಟಕ
Karnataka Cabinet Expansion: ಸರ್ಕಾರ ಟೇಕಾಫ್ ಆದ ಬೆನ್ನಲ್ಲೇ ಅಸಮಾಧಾನದ ಹೊಗೆ; ಖಾತೆ ಬದಲಿಸಿದ ಸಿದ್ದು
Karnataka Cabinet Expansion: ಸಿದ್ದರಾಮಯ್ಯ ಅವರು ಸಿಎಂ ಆಗಿ, ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಕಾಂಗ್ರೆಸ್ ಸರ್ಕಾರ ಟೇಕಾಫ್ ಆಯಿತು ಎನ್ನುವಷ್ಟರಲ್ಲಿಯೇ ಸಚಿವರಿಗೆ ನೀಡಲಾದ ಖಾತೆ ಬಗ್ಗೆ ಅಸಮಾಧಾನ ಶುರುವಾಗಿದೆ. ಹಾಗಾಗಿ, ಕೆಲ ಖಾತೆಗಳನ್ನು ಸಿದ್ದರಾಮಯ್ಯ ಅವರು ಬದಲಾಯಿಸಿದ್ದಾರೆ.
ಬೆಂಗಳೂರು: ‘ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ’ ಎಂಬ ಮಾತಿನಂತೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದು, ಕಾಂಗ್ರೆಸ್ ಗೆಲುವು ಸಾಧಿಸಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ, ಸಚಿವ ಸಂಪುಟ ಸಭೆ ವಿಸ್ತರಣೆಯಾದರೂ ಪಕ್ಷದಲ್ಲಿ ಆಂತರಿಕ ಗೊಂದಲ, ಅಸಮಾಧಾನ ಮಾತ್ರ ನಿಂತಿಲ್ಲ. ಖಾತೆ ಹಂಚಿಕೆ ಬಳಿಕವೂ ಸಚಿವರ ಮಧ್ಯೆಯೇ ಅಸಮಾಧಾನದ ಹೊಗೆ ಜಾಸ್ತಿಯಾದ ಕಾರಣ ರಾತ್ರೋರಾತ್ರಿ ಸಿದ್ದರಾಮಯ್ಯ ಅವರು ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ.
ಹೌದು, ಎಂ.ಸಿ.ಸುಧಾಕರ್ ಅವರಿಗೆ ನೀಡಿದ್ದ ವೈದ್ಯಕೀಯ ಶಿಕ್ಷಣ ಶರಣ ಪ್ರಕಾಶ್ ಪಾಟೀಲ್ ಅವರಿಗೆ ನೀಡಲಾಗಿದೆ. ಇನ್ನು ಶರಣ ಪ್ರಕಾಶ್ ಪಾಟೀಲ್ ಅವರಿಗೆ ನೀಡಿದ್ದ ಉನ್ನತ ಶಿಕ್ಷಣ ಖಾತೆಯನ್ನು ಎಂ.ಸಿ.ಸುಧಾಕರ್ ಅವರಿಗೆ ನೀಡಿ ಸಮಾಧಾನ ಮಾಡಿದ್ದಾರೆ. ಹಾಗೆಯೇ, ಪ್ರಿಯಾಂಕ್ ಖರ್ಗೆ ಅವರಿಗೆ ಪಂಚಾಯತ್ ರಾಜ್ ಜತೆಗೆ ಐಟಿಬಿಟಿ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಕಾನೂನು ಸಂಸದೀಯ ಜತೆಗೆ ಪ್ರವಾಸೋದ್ಯಮ ಖಾತೆಯನ್ನು ಎಚ್.ಕೆ.ಪಾಟೀಲ್ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಬೋಸರಾಜು ಅವರಿಗೆ ಸಣ್ಣ ನೀರಾವರಿ ಖಾತೆ ಜತೆಗೆ ವೈಜ್ಞಾನ ಮತ್ತು ತಂತ್ರಜ್ಞಾನ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಮತ್ತೊಂದೆಡೆ, ಡಾ.ಜಿ.ಪರಮೇಶ್ವರ್ ಅವರಿಗೆ ಗೃಹ ಖಾತೆಯನ್ನು ನಿರ್ವಹಣೆ ಮಾಡಲು ಇಷ್ಟವಿಲ್ಲ. ರಾಮಲಿಂಗಾರೆಡ್ಡಿ ಅವರಿಗೆ ಸಾರಿಗೆ ಖಾತೆ ಸುತಾರಾಂ ಬೇಕಾಗಿಲ್ಲ. ಇವರಿಬ್ಬರು ಕೂಡ ಖಾತೆ ಬದಲಾವಣೆಗೆ ಪಟ್ಟು ಹಿಡಿದಿರುವುದು ಸಿದ್ದರಾಮಯ್ಯ ಅವರಿಗೆ ತಲೆನೋವು ತಂದಿದೆ. ಹಾಗಾಗಿಯೇ, ಸಚಿವರು ಹಾಗೂ ಅವರ ಖಾತೆ ಕುರಿತ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲು ವಿಳಂಬವಾಗಿದೆ ಎಂದು ತಿಳಿದುಬಂದಿದೆ.
ಇಲ್ಲಿದೆ ಸಚಿವರು ಹಾಗೂ ಅವರ ಖಾತೆಗಳ ಅಂತಿಮ ಪಟ್ಟಿ
ಮೂಲ-ವಲಸಿಗ ಜಗಳ
ಸಚಿವ ಸಂಪುಟ ವಿಸ್ತರಣೆ ನಂತರ ಸಚಿವರಲ್ಲಿ ಅಸಮಾಧಾನದ ಜತೆಗೆ ಕಾಂಗ್ರೆಸ್ನಲ್ಲಿ ಮತ್ತೆ ಮೂಲ ಹಾಗೂ ವಲಸಿಗ ಜಗಳ ಆರಂಭವಾಗಿದೆ. ಅತ್ಯಂತ ಹಿರಿಯ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದರೂ ಸಚಿವ ಸ್ಥಾನ ಸಿಗದೇ ಇರುವ ಬಗ್ಗೆ ಬಿ.ಕೆ. ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ʼಹೊರಗಿನಿಂದ ಬಂದʼ ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.
ಇದನ್ನೂ ಓದಿ: Karnataka Cabinet expansion: ಸಂಪುಟದಲ್ಲಿನ್ನು ಸೀಟಿಲ್ಲ; ನಾಯಕರ, ಬೆಂಬಲಿಗರ ಆಕ್ರೋಶಕ್ಕೆ ಬೆಲೆ ಇಲ್ಲ
ಸಚಿವ ಸ್ಥಾನ ಮಿಸ್ ಆದ ಕುರಿತು ಮಾತನಾಡಿದ ಹರಿಪ್ರಸಾದ್, ಸಿಎಂ ಏನು ಬೇಕೋ ಹಾಗೆ ಮಾಡಿಕೊಂಡಿದ್ದಾರೆ. ಸಭಾ ನಾಯಕನಿಗೆ ಸಚಿವ ಸ್ಥಾನ ನೀಡುವ ಪದ್ಧತಿ, ಸಂಪ್ರದಾಯ ಇತ್ತು. ಸಿಎಂ ಅದನ್ನು ಈಗ ಬದಲಾಯಿಸಿದ್ದಾರೆ. ಅಷ್ಟಕ್ಕೂ ನನ್ನನ್ನು ಮಂತ್ರಿ ಮಾಡಿ ಎಂದು ಯಾರಲ್ಲೂ ಕೇಳಿಕೊಂಡಿರಲಿಲ್ಲ. ಎಲ್ಲಿಯವರೆಗೂ ಹೇಳುತ್ತಾರೋ ಅಲ್ಲಿಯವರೆಗೂ ನಾನು ಇರುತ್ತೇನೆ ಎಂದರು. ಮತ್ತೊಂದೆಡೆ, ಖಾತೆ ಸಿಗದ ಕಾರಣ ಟಿ.ಬಿ.ಜಯಚಂದ್ರ ಅವರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶ
NITI Aayog Meeting: ವಿಕಸಿತ ಭಾರತದ ಕನಸು ಬಿತ್ತಿದ ಮೋದಿ; 11 ಸಿಎಂಗಳು ಗೈರಾದರೂ ಪ್ರಧಾನಿ ಅಭಿವೃದ್ಧಿ ಮಂತ್ರ
NITI Aayog Meeting: ಮುಖ್ಯಮಂತ್ರಿಗಳ ಗೈರು ಹಾಜರಿಯ ಮಧ್ಯೆಯೇ ನೀತಿ ಆಯೋಗದ ಸಭೆಯಲ್ಲಿ ನರೇಂದ್ರ ಮೋದಿ ಅವರು ಅಭಿವೃದ್ಧಿಯ ಮಂತ್ರ ಪಠಿಸಿದರು. ವಿಕಸಿತ ಭಾರತದ ಕನಸು ಬಿತ್ತಿದರು.
ನವದೆಹಲಿ: ನೀತಿ ಆಯೋಗದ ಎಂಟನೇ ಗವರ್ನಿಂಗ್ ಸಮಿತಿ ಸಭೆ ನಡೆದಿದ್ದು, 11 ಮುಖ್ಯಮಂತ್ರಿಗಳು ಗೈರಾಗಿದ್ದಾರೆ. ಉಳಿದ ಸಿಎಂಗಳು ಹಾಜರಾಗಿದ್ದು, ಇದೇ ವೇಳೆ ನರೇಂದ್ರ ಮೋದಿ ಅವರು 2047ರ ವೇಳೆಗೆ ಭಾರತದ ಅಭಿವೃದ್ಧಿಯ ನಕ್ಷೆ ಹಾಕಿದ್ದಾರೆ. “ಎಲ್ಲರೂ ಒಗ್ಗೂಡಿ ವಿಕಸಿತ ಭಾರತದ (ಅಭಿವೃದ್ಧಿ ಹೊಂದಿದ ಭಾರತ) ಕನಸು ನನಸು ಮಾಡೋಣ” ಎಂದು ಹೇಳಿದ್ದಾರೆ.
“ಭಾರತವು ಏಳಿಗೆ ಹೊಂದುತ್ತಿದ್ದು, ಸರ್ವ ಕ್ಷೇತ್ರಗಳಲ್ಲಿ ನಾವು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಒಕ್ಕೂಟದ ವ್ಯವಸ್ಥೆಯ ಬೇರುಗಳು ಇನ್ನಷ್ಟು ಬಲವಾಗಬೇಕು. ದೇಶದ ಜನರಿಗೆ ಸಕಲ ಮೂಲ ಸೌಕರ್ಯಗಳು ಸಿಗುವಂತಾಗಬೇಕು. ಜಲ ಸಂರಕ್ಷಣೆ, ಪರಿಸರ ರಕ್ಷಣೆ, ಆರ್ಥಿಕ ಶಿಸ್ತಿನಲ್ಲಿ ನಾವು ಇನ್ನಷ್ಟು ನೈಪುಣ್ಯ ಸಾಧಿಸಬೇಕು. ಜಾಗತಿಕ ಮಟ್ಟದ ಸ್ಪರ್ಧೆಗೆ ನಾವು ಇನ್ನಷ್ಟು ಮುಕ್ತವಾಗಬೇಕು. ಸಣ್ಣ ಕೈಗಾರಿಕೆಗಳು, ಎಂಎಸ್ಎಂಇಗಳ ಏಳಿಗೆಯಾಗಬೇಕು. ಇದರಿಂದ ಮಾತ್ರ ಭಾರತ ಏಳಿಗೆ ಹೊಂದಲು ಸಾಧ್ಯ. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಇಂತಹ ಮನೋಭಾವದೊಂದಿಗೆ 2047ರ ವೇಳೆಗೆ ವಿಕಸಿತ ಭಾರತದ ನಿರ್ಮಾಣ ಮಾಡಬೇಕು” ಎಂದು ಕರೆ ನೀಡಿದರು.
ನೀತಿ ಆಯೋಗದ ಸಭೆಯಲ್ಲಿ ದೇಶದ ಅಭಿವೃದ್ಧಿಯ ದೃಷ್ಟಿಯಿಂದ 100 ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್ಗಳು, ಕೇಂದ್ರ ಸಚಿವರು ಸಭೆಯಲ್ಲಿ ಭಾಗವಹಿಸಿ ಅಭಿವೃದ್ಧಿ ವಿಚಾರಗಳನ್ನು ಚರ್ಚಿಸಲಾಗಿದೆ. ಎಂಎಸ್ಎಂಇ, ಮೂಲ ಸೌಕರ್ಯ, ಹೂಡಿಕೆ, ಮಹಿಳಾ ಸಬಲೀಕರಣ, ಆರೋಗ್ಯ, ಕೌಶಲಾಭಿವೃದ್ಧಿ ಸೇರಿ ವಿವಿಧ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ.
#8thGCM | The Centre, States & UTs should work as Team 🇮🇳 & fulfil people's dreams & aspirations for a #VikasitBharat @ 2047. #NITIAayog can play a key role in helping them take a quantum leap towards achieving its vision of #AmritKaal: PM @narendramodi
— NITI Aayog (@NITIAayog) May 27, 2023
🔗https://t.co/2g1j5ywKZu pic.twitter.com/9EIJu9SebJ
ಗೈರಾದ ಸಿಎಂಗಳು ಯಾರು? ಏಕೆ?
ದೆಹಲಿಯಲ್ಲಿ ಆಡಳಿತ ಸೇವೆಗಳ ಮೇಲಿನ ನಿಯಂತ್ರಣ ಕುರಿತು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಭೆಗೆ ಹಾಜರಾಗಿಲ್ಲ. ಇನ್ನು, ಕೇಂದ್ರದಿಂದ ಅನುದಾನ ಸಿಗುತ್ತಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಕೂಡ ಗೈರಾಗಿದ್ದಾರೆ. ಕರ್ನಾಟಕದಲ್ಲಿ ಸಚಿವರ ಪ್ರಮಾಣವಚನ, ಖಾತೆ ಹಂಚಿಕೆ ಹಿನ್ನೆಲೆಯಲ್ಲಿ ನೂತನ ಸಿಎಂ ಸಿದ್ದರಾಮಯ್ಯ, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರು ಸಭೆಯಲ್ಲಿ ಪಾಲ್ಗೊಂಡಿಲ್ಲ.
ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಬೇರೆ ಕಾರ್ಯಕ್ರಮದಿಂದಾಗಿ ಒಡಿಶಾ ಸಿಎಂ ನವೀನ್ ಪಾಟ್ನಾಯಕ್, ಕೇಂದ್ರದ ಮೇಲಿನ ಅಸಮಾಧಾನದಿಂದಾಗಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಬಿಹಾರದ ನಿತೀಶ್ ಕುಮಾರ್, ತೆಲಂಗಾಣದ ಕೆ.ಚಂದ್ರಶೇಖರ ರಾವ್ ಹಾಗೂ ಯಾವುದೇ ಕಾರಣ ನೀಡದೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಸಭೆಯಲ್ಲಿ ಪಾಲ್ಗೊಂಡಿಲ್ಲ.
ಇದನ್ನೂ ಓದಿ: NITI Aayog Meeting: ಕೇಂದ್ರಕ್ಕೆ ಬಾಯ್ಕಾಟ್ ಬಿಸಿ; ದೀದಿ ಬಳಿಕ ನೀತಿ ಆಯೋಗದ ಸಭೆ ಬಹಿಷ್ಕರಿಸಿದ ಕೇಜ್ರಿವಾಲ್
ಪ್ರಮುಖ ಸುದ್ದಿ
ವಿಸ್ತಾರ ಸಂಪಾದಕೀಯ: ನೂತನ ಸಂಸತ್ ಕಟ್ಟಡ ಪ್ರಜಾತಂತ್ರವನ್ನು ಮತ್ತಷ್ಟು ಮೆರೆಸಲಿ
ನೂತನ ಹಾಗೂ ಸುಸಜ್ಜಿತ ಸಂಸತ್ ಭವನ ನಮ್ಮ ಈಗಿನ ಹಾಗೂ ಭವಿಷ್ಯದ ಅಗತ್ಯ. ಮುಂದೆ ಅದೇ ಭಾರತದ ಪ್ರಜಾತಂತ್ರದ ಭವ್ಯ ಲಾಂಛನವೂ ಆಗಿರಲಿದೆ.
ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಪೀಕರ್ ಓಂ ಬಿರ್ಲಾ ಭಾನುವಾರ ಉದ್ಘಾಟಿಸಲಿದ್ದಾರೆ. ಬದಲಾದ ಕಾಲಮಾನಕ್ಕೆ ತಕ್ಕಂತೆ ನೂತನ ಸಂಸತ್ ಭವನ ನಿರ್ಮಾಣ ಅಗತ್ಯವಾಗಿತ್ತು. ಈಗ ಬಳಕೆಯಾಗುತ್ತಿರುವ ಸಂಸತ್ ಭವನ ಶತಮಾನವನ್ನು ಸಮೀಪಿಸುತ್ತಿದ್ದು, ಅದರ ಗರಿಷ್ಠ ಬಳಕೆಯಾಗಿದೆ. ಮುಂದೆ ಸಂಸತ್ ಸದಸ್ಯರ ಸಂಖ್ಯೆ ಕೂಡ ಹೆಚ್ಚಾಗಲಿರುವುದರಿಂದ ಆಸನಗಳ ಸಂಖ್ಯೆಯೂ ಹೆಚ್ಚಿಸುವುದು ಅವಶ್ಯವಾಗಿತ್ತು. ಹಿಂದಿನ ಸಂಸತ್ ಭವನದಲ್ಲಿ ಲೋಕಸಭೆಯ ಆಸನಗಳ ಸಂಖ್ಯೆ 550 ಇದ್ದರೆ, ಹೊಸ ಕಟ್ಟಡದಲ್ಲಿ ಈ ಸಂಖ್ಯೆ 888ಕ್ಕೆ ಏರುತ್ತದೆ. ರಾಜ್ಯಸಭೆಯ ಆಸನಗಳ ಸಂಖ್ಯೆ 250ರಿಂದ 384ಕ್ಕೆ ಏರುತ್ತದೆ. ಪ್ರಾಕೃತಿಕ ಮತ್ತು ಭದ್ರತೆಯ ದೃಷ್ಟಿಯಿಂದ ಈಗಿನ ಕಟ್ಟಡ ಹಿಂದಿನ ಕಟ್ಟಡಕ್ಕಿಂತ ಹೆಚ್ಚು ಸುರಕ್ಷಿತವಾಗಿದೆ.
ಹಿಂದಿನ ಕಟ್ಟಡ ವಿಸ್ತೀರ್ಣ 24,281 ಚ.ಮೀ. ಇದ್ದರೆ, ಈಗಿನ ಕಟ್ಟಡ ವಿಸ್ತೀರ್ಣ 64,500 ಚ.ಮೀ ಇದೆ. ಪ್ರಜಾತಂತ್ರದ ದೇಗುಲ ಎನ್ನಲಾಗುವ ನೂತನ ಕಟ್ಟಡದ ಪಕ್ಷಿನೋಟವೇ ಅದ್ಭುತವಾಗಿದೆ. 971 ಕೋಟಿ ರೂ. ವೆಚ್ಚದ ಈ ಭವ್ಯ ಕಟ್ಟಡ ಕೇವಲ ಎರಡೇ ವರ್ಷದೊಳಗೆ ನಿರ್ಮಾಣ ಆಗಿರುವುದು ಅದ್ಭುತವೇ ಸರಿ. ಆಧುನಿಕ ತಂತ್ರಜ್ಞಾನವನ್ನೂ ಕಲಾಪಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಳಸಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು 60,000 ಕಾರ್ಮಿಕರನ್ನು ಸನ್ಮಾನಿಸಲಿರುವುದು ಕೂಡ ಅರ್ಥಪೂರ್ಣವಾಗಿದೆ. ಕ್ರಿ.ಶ. 3ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ್ದ ಚೋಳ ರಾಜರು ಬಳಸಿದ್ದ ಚಿನ್ನದ ಸೆಂಗೋಲ್ (ರಾಜದಂಡ) ಅನ್ನು ನೂತನ ಸಂಸತ್ ಭವನದಲ್ಲಿ ಭಾರತದ ಸ್ವಾತಂತ್ರ್ಯದ ಪ್ರತೀಕವಾಗಿ ಇರಿಸುತ್ತಿರುವುದು ಕೂಡ ಭಾರತೀಯ ಪರಂಪರೆಗೆ ನೀಡುತ್ತಿರುವ ಮಹತ್ವದ ಅಂಶ.
ಪ್ರತಿಯೊಂದು ರಾಷ್ಟ್ರವೂ ತನ್ನದೇ ಆದ ಮಹತ್ತು, ಭವ್ಯತೆಗಳನ್ನು ಹೊಂದಿರುವ ವಾಸ್ತುಶಿಲ್ಪಗಳನ್ನು ಸೃಷ್ಟಿಸುತ್ತದೆ. ಭಾರತದ ಹಳೆಯ ಸಂಸತ್ತು ಕೂಡ ಭವ್ಯವಾದುದು; ಆದರೆ ಅದು ಬ್ರಿಟಿಷರಿಂದ ನಿರ್ಮಿತವಾದುದು. ಬ್ರಿಟಿಷರಿಂದ ನಿರ್ಮಿತ ಎಂಬ ಕಾರಣಕ್ಕೇ ತ್ಯಾಜ್ಯವಾಗಬೇಕಿಲ್ಲ. ಆದರೆ, ನಮ್ಮನ್ನು ಆಳುವ ಸ್ವಾತಂತ್ರ್ಯ ಹಾಗೂ ಅಧಿಕಾರಗಳನ್ನು ನಾವೇ ಪಡೆದುಕೊಂಡಂತೆ, ಹಾಗೆ ಆಳುವ ಸರ್ಕಾರ ಕಾರ್ಯಾಚರಿಸುವ ಸಂಸತ್ ಭವನ ಕೂಡ ನಮ್ಮ ನಿರ್ಮಾಣವೇ ಆಗಿರಬೇಕು ಎಂಬ ಕನಸು ನಮಗಿರುವುದೂ ಸಹಜ. ನೂತನ ಹಾಗೂ ಸುಸಜ್ಜಿತ ಸಂಸತ್ ಭವನ ನಮ್ಮ ಈಗಿನ ಹಾಗೂ ಭವಿಷ್ಯದ ಅಗತ್ಯ. ಮುಂದೆ ಅದೇ ಭಾರತದ ಪ್ರಜಾತಂತ್ರದ ಭವ್ಯ ಲಾಂಛನವೂ ಆಗಿರಲಿದೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ರಾಜ್ಯಾದ್ಯಂತ ಗ್ಯಾರಂಟಿ ಭರವಸೆಯ ಗದ್ದಲ, ಹೊಸ ಸರ್ಕಾರ ಗೊಂದಲ ನಿವಾರಿಸಲಿ
ಈ ಮಧ್ಯೆ, ಉದ್ಘಾಟನೆ ಸಮಾರಂಭಕ್ಕೆ ಕೆಲವು ಪ್ರತಿಪಕ್ಷಗಳು ಬಹಿಷ್ಕಾರ ಹಾಕಿವೆ. ಲೋಕಸಭೆ- ರಾಜ್ಯಸಭೆ ನಡೆಯುತ್ತಿರುವಾಗ ನೆಪ ತೆಗೆದು ಮಾಡುವ ಸಭಾತ್ಯಾಗವೇ ಸಮಂಜಸವಲ್ಲ ಎಂದಾಗ, ದೇಶದ ಹೆಮ್ಮೆಯಾದ ನೂತನ ಸಂಸತ್ ಭವನದ ಉದ್ಘಾಟನೆಯನ್ನೇ ಬಹಿಷ್ಕರಿಸುವ ನಡೆ ಎಷ್ಟು ಸರಿ? ಇದು ಪ್ರಜಾಪ್ರಭುತ್ವದ ನೈಜ ಚೈತನ್ಯಕ್ಕೇ ಕೊಡಲಿಯೇಟು. ಪ್ರಧಾನಿ ಮೋದಿ, ನೂರ ಮೂವತ್ತು ಕೋಟಿ ಪ್ರಜೆಗಳ ಪ್ರತಿನಿಧಿಯಾಗಿ ಸಂಸತ್ತನ್ನು ಉದ್ಘಾಟಿಸುತ್ತಿದ್ದಾರೆ. ಇನ್ನೂ ನೂರಾರು ವರ್ಷಗಳ ಕಾಲ ಇದು ಅರ್ಥಪೂರ್ಣ ಕಲಾಪಗಳ ತಾಣವಾಗಬೇಕಿದೆ. ರಾಷ್ಟ್ರದ ವಿವೇಕಯುತ ಮುನ್ನಡೆಯನ್ನು ನಿರ್ಣಯಿಸುವ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಳವಾಗಿರಲಿದೆ. ಈ ನಿಟ್ಟಿನಲ್ಲಿ ಪ್ರತಿಪಕ್ಷಗಳು ತಮ್ಮ ನಿರ್ಧಾರ ಮರುಪರಿಶೀಲಿಸಿ ಸಮಾರಂಭದಲ್ಲಿ ಭಾಗವಹಿಸುವುದು ವಿವೇಕಯುತವಾಗಿರುತ್ತದೆ. ಅವರ ಸಮಾರಂಭ ಬಹಿಷ್ಕಾರದ ಕರೆಯ ನಡುವೆಯೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮುಂತಾದ ಪ್ರತಿಪಕ್ಷಗಳ ನಾಯಕರು ಭಾಗವಹಿಸುತ್ತಿರುವುದು ವಿವೇಕದ ನಿರ್ಧಾರ. ಅವರ ಈ ನಡೆ ಇತರರಿಗೆ ಮಾದರಿಯಾಗಲಿ. ನೂತನ ಸಂಸತ್ ಭವನ ಭಾರತದ ಪ್ರಜಾತಂತ್ರವನ್ನು ಮತ್ತಷ್ಟು ಮೆರೆಸಲಿ.
-
ಕರ್ನಾಟಕ16 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ19 hours ago
Karnataka Cabinet Expansion Live : 34 ಸಚಿವರಿಗೆ ಖಾತೆ ಹಂಚಿಕೆ; ಬಯಸಿದ ಖಾತೆ ಪಡೆದ ಡಿ ಕೆ ಶಿವಕುಮಾರ್
-
ಕರ್ನಾಟಕ16 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ15 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ11 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕಿರುತೆರೆ17 hours ago
Weekend With Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಅತಿಥಿಗಳು ಇವರು!
-
ಕ್ರಿಕೆಟ್6 hours ago
World Cup 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ
-
ಕರ್ನಾಟಕ7 hours ago
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ