ವಿಸ್ತಾರ Explainer | ಜಾಗತಿಕ ಆರ್ಥಿಕ ಹಿಂಜರಿತ, ಸಾವಿರಾರು ಜಾಬ್‌ ಕಟ್‌; ಭಾರತದ ಮೇಲೇನು ಎಫೆಕ್ಟ್‌? - Vistara News

EXPLAINER

ವಿಸ್ತಾರ Explainer | ಜಾಗತಿಕ ಆರ್ಥಿಕ ಹಿಂಜರಿತ, ಸಾವಿರಾರು ಜಾಬ್‌ ಕಟ್‌; ಭಾರತದ ಮೇಲೇನು ಎಫೆಕ್ಟ್‌?

ಅಮೆರಿಕ ಮೂಲದ ತಂತ್ರಜ್ಞಾನ ದಿಗ್ಗಜ ಕಂಪನಿಗಳಲ್ಲಿನ ಸಾಮೂಹಿಕ ಉದ್ಯೋಗ ಕಡಿತ ಪ್ರಕರಣಗಳು ಇಡೀ ಜಗತ್ತನ್ನು ಕಂಗಾಲಾಗಿಸಿದೆ. 2023ರಲ್ಲಿ ಮತ್ತೊಂದು ಆರ್ಥಿಕ ಹಿಂಜರಿತದ ಭೀತಿಯನ್ನು ಸೃಷ್ಟಿಸಿದೆ. ಹಾಗಾದರೆ ಏನಿದು? ಭಾರತಕ್ಕೆ ಇದರ ಪರಿಣಾಮವೇನು? (ವಿಸ್ತಾರ Explainer) ಇಲ್ಲಿದೆ ಒಳನೋಟ.

VISTARANEWS.COM


on

job loss
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೇಶವ್‌ ಪ್ರಸಾದ್‌ ಬಿ, ಬೆಂಗಳೂರು

ಇ-ಕಾಮರ್ಸ್‌ ದೈತ್ಯ ಅಮೆಜಾನ್‌, ತಂತ್ರಜ್ಞಾನ ಕಂಪನಿ ಮೈಕ್ರೊಸಾಫ್ಟ್‌, ಇಂಟರ್‌ನೆಟ್‌ ಸರ್ಚ್‌ ಎಂಜಿನ್‌ ದಿಗ್ಗಜ ಗೂಗಲ್, ಅತಿ ದೊಡ್ಡ ಸಾಮಾಜಿಕ ಜಾಲತಾಣ ಮೆಟಾ, ಟ್ವಿಟರ್‌..ಹೀಗೆ ಸಾಲು ಸಾಲು ಜನಪ್ರಿಯ ಕಂಪನಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ಕಡಿತದ ಆಘಾತಕಾರಿ ಬೆಳವಣಿಗೆ ಸಂಭವಿಸಿದೆ. ಇದು ಇಲ್ಲಿಗೇ ನಿಲ್ಲುತ್ತಿಲ್ಲ. ತಂತ್ರಜ್ಞಾನೇತರ ಕಂಪನಿಗಳಲ್ಲೂ ಇದೇ ಟ್ರೆಂಡ್‌ ಕಂಡು ಬಂದಿದೆ. ಮಾತ್ರವಲ್ಲದೆ, ಮುಂಬರುವ ತಿಂಗಳುಗಳಲ್ಲಿ ಇದೇ ಪ್ರವೃತ್ತಿ ಮತ್ತಷ್ಟು ಅಗಾಧವಾಗಿ ಹರಡಲಿದೆ ಎಂಬ ಭೀತಿ ಉಂಟಾಗಿದೆ. (ವಿಸ್ತಾರ Explainer) ಈಗಾಗಲೇ ಅಮೆರಿಕದಿಂದ ಉದ್ಯೋಗ ಕಳೆದುಕೊಂಡ ಟೆಕ್ಕಿಗಳು ಭಾರವಾದ ಹೃದಯದೊಂದಿಗೆ ಭಾರತಕ್ಕೆ (ವಿಸ್ತಾರ Explainer) ಮರಳುತ್ತಿದ್ದಾರೆ.

ಔದ್ಯೋಗಿಕ ವಲಯದ ಲೇಆಫ್ಸ್‌ ಡಾಟ್‌ ಫೈ (Layoffs.fyi) ವೆಬ್‌ ಸೈಟ್‌ ಪ್ರಕಾರ, 2022ರಲ್ಲಿ ಇದುವರೆಗೆ 853 ಕಂಪನಿಗಳು 1,37,492 ಉದ್ಯೋಗಿಗಳನ್ನು ವಜಾಗೊಳಿಸಿವೆ. ಬ್ಲೂಮ್‌ ಬರ್ಗ್‌, ಸ್ಯಾನ್‌ ಫ್ರಾನ್ಸಿಸ್ಕೊ ಬಿಸಿನೆಸ್‌ ಟೈಮ್ಸ್‌, ಟಿಸಿ ಟೆಕ್‌ ಕ್ರಂಚ್‌, ದಿ ನ್ಯೂಯಾರ್ಕ್‌ ಟೈಮ್ಸ್‌ ಮುಂತಾದ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಉದ್ಯೋಗ ನಷ್ಟ ಕುರಿತ ವರದಿಗಳನ್ನು ಆಧರಿಸಿ ಈ ಲೆಕ್ಕವನ್ನು ಅಂದಾಜಿಸಲಾಗಿದೆ. ಇದಕ್ಕೂ ಹೆಚ್ಚಿನ ಉದ್ಯೋಗ ನಷ್ಟ ಆಗಿರಬಹುದು. ಹಾಗಾದರೆ ಏನಿದು ಆರ್ಥಿಕ ಹಿಂಜರಿತ? ಇದರ ಪರಿಣಾಮಗಳೇನು? ಭಾರತಕ್ಕೂ ಕಾಡಲಿದೆಯೇ? ಇದರಿಂದ ಪಾರಾಗುವ ಬಗೆ ಹೇಗೆ? ಇಲ್ಲಿದೆ ವಿವರ.

ಏನಿದು ಆರ್ಥಿಕ ಹಿಂಜರಿತ?

ಅರ್ಥಶಾಸ್ತ್ರದ ಪ್ರಕಾರ ಆರ್ಥಿಕ ಬೆಳವಣಿಗೆಯ ಗಣನೀಯ ಇಳಿಕೆಯ ಅವಧಿಯನ್ನು ಆರ್ಥಿಕ ಹಿಂಜರಿತ ಎನ್ನುತ್ತಾರೆ. ಇದು ತಾತ್ಕಾಲಿಕ ಸ್ವರೂಪದಲ್ಲಿದ್ದರೂ, ಇದರ ಪರಿಣಾಮ ಸುದೀರ್ಘವಾಗಿರುತ್ತದೆ. ಹಿಂಜರಿತದ ಅಲೆ ಅಪ್ಪಳಿಸಿದ ಬಳಿಕ ಪೂರ್ಣಪ್ರಮಾಣದಲ್ಲಿ ಚೇತರಿಸಿಕೊಳ್ಳಲು ವರ್ಷಾನುಗಟ್ಟಲೆ ಕಾಲಾವಧಿ ಬೇಕಾಗುತ್ತದೆ. ಆದ್ದರಿಂದ ರಿಸೆಶನ್‌ ಎಂಬ ಪದ ಅನೇಕ ಮಂದಿಯಲ್ಲಿ ನಡುಕ ಹುಟ್ಟಿಸುತ್ತದೆ. ಸರ್ಕಾರಗಳಿಗೂ ಈ ಅನಿಶ್ಚಿತತೆಯನ್ನು ಎದುರಿಸುವುದು ಸವಾಲೇ ಸರಿ.

ಈ ಸಂದರ್ಭದಲ್ಲಿ ವ್ಯಾಪಾರ, ಉತ್ಪಾದನೆ ಮತ್ತು ಕೈಗಾರಿಕಾ ಚಟುವಟಿಕೆಗಳು ಕಡಿಮೆಯಾಗುತ್ತವೆ. ಸರಕು ಮತ್ತು ಸೇವೆಗಳಿಗೆ ಗ್ರಾಹಕರ ಬೇಡಿಕೆ ಕುಸಿಯುತ್ತದೆ. ಚಿಲ್ಲರೆ ಮಾರಾಟ (ರಿಟೇಲ್‌ ಸೇಲ್ಸ್) ಸೊರಗುತ್ತದೆ. ಇದರ ಪರಿಣಾಮವಾಗಿ ಕಂಪನಿಗಳು ತಮ್ಮ ಖರ್ಚು ವೆಚ್ಚಗಳನ್ನು ನಿಯಂತ್ರಿಸಲು ಸಾಮೂಹಿಕವಾಗಿ ಉದ್ಯೋಗ ಕಡಿತ ಮಾಡುತ್ತವೆ. ಹೊಸ ಯೋಜನೆಗಳನ್ನು, ಹೂಡಿಕೆಗಳನ್ನು ಮುಂದೂಡುತ್ತವೆ. ಆಗ ನಿರುದ್ಯೋಗ ಹೆಚ್ಚುತ್ತದೆ. ಸತತವಾಗಿ ಎರಡು ತ್ರೈಮಾಸಿಕಗಳಲ್ಲಿ, ಅಂದರೆ 6 ತಿಂಗಳುಗಳ ಕಾಲ ಆರ್ಥಿಕ ಬೆಳವಣಿಗೆ ಅಥವಾ ಜಿಡಿಪಿಯ ಪ್ರಮಾಣದಲ್ಲಿ ಇಳಿಕೆಯಾಗುವುದನ್ನು ಆರ್ಥಿಕ ಹಿಂಜರಿತ ಎಂದು ಕರೆಯಲಾಗುತ್ತದೆ.

ಇತಿಹಾಸದಲ್ಲಿ ಜಗತ್ತು ನಾನಾ ಕಾರಣಗಳಿಂದ ಹಲವು ಬಾರಿ ಆರ್ಥಿಕ ಹಿಂಜರಿತಕ್ಕೆ ಗುರಿಯಾಗಿದ್ದನ್ನು ಗುರುತಿಸಬಹುದು. 1974ರಲ್ಲಿ ಜ್ಯೂಲಿಯ್ಸ್‌ ಶಿಸ್ಕಿನ್‌ ಎಂಬುವರು ಸತತ ಎರಡು ತ್ರೈಮಾಸಿಕದಲ್ಲಿ ಜಿಡಿಪಿ ಕುಸಿಯುವುದನ್ನು ಆರ್ಥಿಕ ಹಿಂಜರಿತ ಎಂದು ಪರಿಗಣಿಸಬಹುದು ಎಂದು ವ್ಯಾಖ್ಯಾನಿಸಿದರು. ಇದು ಜನಪ್ರಿಯವಾಗಿದೆ. ಆರೋಗ್ಯಕರ ಎಕಾನಮಿ ಪ್ರತಿ ತ್ರೈಮಾಸಿಕದಲ್ಲೂ ಬೆಳವಣಿಗೆಯನ್ನು ದಾಖಲಿಸುತ್ತದೆ. ಹೀಗಾಗಿ ಸತತ ಎರಡು ತ್ರೈಮಾಸಿಕದಲ್ಲಿ ಮುಗ್ಗರಿಸಿದರೆ, ಆರ್ಥಿಕ ಹಿಂಜರಿತ ಎಂದು ಪರಿಗಣಿಸಬೇಕು ಎಂಬುದು ಅವರ ಸಿದ್ಧಾಂತವಾಗಿತ್ತು. ಇದು ಈಗ ಸಾರ್ವತ್ರಿಕವಾಗಿದೆ.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಏನೆನ್ನುತ್ತದೆ?

rbi

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೂಡ ಭಾರತದಲ್ಲಿ ಆರ್ಥಿಕ ಹಿಂಜರಿತವನ್ನು ಯಾವಾಗ ಆರಂಭವಾಯಿತು ಹಾಗೂ ಅಂತ್ಯವಾಯಿತು ಎಂಬುದನ್ನು ಗುರುತಿಸುತ್ತದೆ. ಆರ್‌ಬಿಐ ಪ್ರಕಾರವೂ ಸತತ ಆರು ತಿಂಗಳು ಅಥವಾ ಎರಡು ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆ ಕುಂಠಿತವಾದರೆ ಆರ್ಥಿಕ ಹಿಂಜರಿತವಾಗುತ್ತದೆ. ಹೀಗಿದ್ದರೂ, ನ್ಯಾಷನಲ್‌ ಬ್ಯೂರೊ ಆಫ್‌ ಎಕನಾಮಿಕ್‌ ರಿಸರ್ಚ್‌ (NBER) ಪ್ರಕಾರ ಹಲವಾರು ತಿಂಗಳುಗಳಲ್ಲಿ ಆರ್ಥಿಕ ಪ್ರಗತಿ ಮುಗ್ಗರಿಸಿದರೆ ಹಿಂಜರಿತ ಎನ್ನಬಹುದು.

ಅಮೆರಿಕದಲ್ಲಿ ಭಾರತೀಯ ಟೆಕ್ಕಿಗಳ ಯಾತನೆ

ಅಮೆರಿಕದ ಟೆಕ್‌ ಇಂಡಸ್ಟ್ರಿಯಲ್ಲಿ ಗೂಗಲ್‌, ಮೈಕ್ರೊಸಾಫ್ಟ್‌, ಟ್ವಿಟರ್‌, ಮೆಟಾ ಮತ್ತ ಅಮೆಜಾನ್‌ ಪ್ರಮುಖವಾಗಿವೆ. ಎಚ್1 ಬಿ ವೀಸಾ ಅಡಿಯಲ್ಲಿ ಅಲ್ಲಿನ ಕಂಪನಿಗಳಲ್ಲಿ ದುಡಿಯುತ್ತಿದ್ದ ಭಾರತೀಯರಲ್ಲಿ ಉದ್ಯೋಗ ಕಳೆದುಕೊಂಡವರು ತವರಿಗೆ ಮರಳುತ್ತಿದ್ದಾರೆ. ಈ ಬಗ್ಗೆ ಬಿಬಿಸಿ ಇತ್ತೀಚೆಗೆ ವರದಿ ಮಾಡಿದೆ. ನಿರುದ್ಯೋಗಿಗಳಾಗಿರುವ ಭಾರತೀಯ ಮೂಲದ ಟೆಕ್ಕಿಗಳನ್ನು ಅದು ಸಂದರ್ಶಿಸಿದೆ. ಅದರ ಸಾರಾಂಶ ಇಂತಿದೆ.

ಸುರಭಿ ಗುಪ್ತಾ ಎಂಬುವರು ಭಾರತೀಯ ಮೂಲದ ಎಂಜಿನಿಯರ್.‌ 2009ರಿಂದಲೂ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಈ ತಿಂಗಳು ಮೆಟಾ ದಿಢೀರ್‌ ಅವರನ್ನು ವಜಾಗೊಳಿಸಿದೆ. ” ನಾನು ಚೆನ್ನಾಗಿ ಕೆಲಸ ಮಾಡುತ್ತಿದ್ದೆ. ಆದರೂ ಈಗ ನಿರುದ್ಯೋಗಿಯಾಗಿದ್ದೇನೆʼʼ ಎಂದು ಅಳಲು ತೋಡಿಕೊಂಡಿದ್ದಾರೆ ಅವರು.

ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ವಾಟ್ಸ್ ‌ಆ್ಯಪ್‌ನ ಮಾತೃಸಂಸ್ಥೆಯಾದ ಮೆಟಾ ಕಳೆದ ನವೆಂಬರ್‌ 9ರಂದು ತನ್ನ ಸಿಬ್ಬಂದಿ ಬಲದಲ್ಲಿ 13% ಉದ್ಯೋಗ ಕಡಿತ ಘೋಷಿಸಿತ್ತು. ಕಂಪನಿಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ 11,000 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಯಾರೊಬ್ಬರಿಗೂ ಈಗ ರಾತ್ರಿ ನಿದ್ದೆ ಬರುತ್ತಿಲ್ಲ. ನನಗೆ ಬೆಳಗ್ಗೆ 6 ಗಂಟೆಗೆ ಇ-ಮೇಲ್‌ ಬಂತು. ನಾನು ಈಗ ನನ್ನ ಕಂಪ್ಯೂಟರ್‌ ಬಳಸುವಂತಿಲ್ಲ, ಆಫೀಸ್‌ ಜಿಮ್‌ಗೆ ಕೂಡ ಹೋಗುವಂತಿಲ್ಲ. ಕಂಪನಿಯಿಂದ ಬೇರೆಯಾದ ನೋವು ಅನುಭವಕ್ಕೆ ಬರುತ್ತಿದೆ ಎಂದು ಗುಪ್ತಾ ತಮ್ಮ ಯಾತನೆಯನ್ನು ಬಣ್ಣಿಸಿದ್ದಾರೆ.

ಸುರಭಿ ಗುಪ್ತಾ 2018ರಲ್ಲಿ ಮಿಸ್‌ ಭಾರತ್-ಕ್ಯಾಲಿಫೋರ್ನಿಯಾ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. ಇತ್ತೀಚಿನ ನೆಟ್‌ಫ್ಲಿಕ್ಸ್‌ ಶೋ ಇಂಡಿಯನ್‌ ಮ್ಯಾಚ್‌ಮೇಕಿಂಗ್‌ನ ಪ್ರಚಾರ ಅಭಿಯಾನದಲ್ಲಿ ಕಾಣಿಸಿದ್ದರು. ಆದರೆ ಈಗ ಅಮೆರಿಕದ ಟೆಕ್‌ ಕಂಪನಿಗಳಲ್ಲಿ ವಜಾಗೊಂಡಿರುವ ಸಾವಿರಾರು ಭಾರತೀಯರಲ್ಲಿ ಒಬ್ಬರಾಗಿದ್ದಾರೆ. ಅವರು ಎಚ್-‌೧ಬಿ ವೀಸಾ ಅಡಿಯಲ್ಲಿ ಅಲ್ಲಿ ಕೆಲಸದಲ್ಲಿದ್ದರು. ಇದು ನಾನ್-ಇಮಿಗ್ರೆಂಟ್‌ ವೀಸಾ ಆಗಿದ್ದು, ಅಮೆರಿಕದ ಕಂಪನಿಗಳಿಗೆ ವಿದೇಶಿಯರನ್ನು 6 ವರ್ಷದ ತನಕ ಉದ್ಯೋಗಿಗಳನ್ನಾಗಿ ನೇಮಿಸಲು ಅವಕಾಶ ಸಿಗುತ್ತದೆ. ಅಮೆರಿಕದ ಕಾಯಂ ನಿವಾಸಿಯಾಗಲು ಅರ್ಜಿ ಸಲ್ಲಿಸಲು ಮತ್ತು ಆಸ್ತಿ ಖರೀದಿಸಲು ಹಾದಿ ಸುಗಮವಾಗುತ್ತದೆ. ಇದೀಗ ಉದ್ಯೋಗ ನಷ್ಟಕ್ಕೀಡಾದವರು ವೀಸಾ ಉಳಿಸಿಕೊಳ್ಳಲು ಮತ್ತೊಂದು ಕೆಲಸ ಕಂಡುಕೊಳ್ಳಬೇಕಾಗಿದೆ.

ಭಾರತೀಯ ಮೂಲದ ಟೆಕ್ಕಿಗಳಲ್ಲಿ ಎಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂಬುದರ ಬಗ್ಗೆ ನಿಖರ ಅಂಕಿ ಅಂಶ ಸಿಗದಿದ್ದರೂ, ಇಮಿಗ್ರೇಶನ್‌ ಅಟಾರ್ನಿ ಸ್ವೇತಾ ಖಾಂಡೆಲ್‌ವಾಲ್‌ ಪ್ರಕಾರ, ಭಾರತೀಯ ಸಮುದಾಯದ ಜನತೆಗೆ ಹೆಚ್ಚು ನಷ್ಟವಾಗಿದೆ.

ಅಮೆರಿಕದಲ್ಲಿ ಉದ್ಯೋಗ ಕಳೆದುಕೊಂಡ ಭಾರತೀಯರ ವೀಸಾವನ್ನು 60 ದಿನಗಳೊಳಗೆ ಹೊಸ ಕಂಪನಿಗೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪೇಪರ್‌ ವರ್ಕ್‌ ಪೂರ್ಣವಾಗುವ ತನಕ ಅಲ್ಲಿ ಇರುವುದರ ಬದಲಿಗೆ ಭಾರತಕ್ಕೆ ಮರಳುವ ಟೆಕ್ಕಿಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ರಿಸೆಶನ್‌ ಭೂತ ಟೆಕ್ಕಿಗಳನ್ನು ಹಿಂಡತೊಡಗಿದೆ. ಅಮೆರಿಕದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಹೊಸ ಉದ್ಯೋಗ ಕಂಡುಕೊಳ್ಳುವುದು ಕೂಡ ಕಷ್ಟವಾಗುತ್ತಿದೆ ಎನ್ನುತ್ತಾರೆ ಸುರಭಿ ಗುಪ್ತಾ.

ಸಾಮೂಹಿಕ ಉದ್ಯೋಗ ಕಡಿತ ಮಾಡಿರುವ 10 ದಿಗ್ಗಜ ಟೆಕ್‌ ಕಂಪನಿಗಳು

ಟ್ವಿಟರ್:‌ ಉದ್ಯಮಿ ಎಲಾನ್‌ ಮಸ್ಕ್‌ ಕಳೆದ ತಿಂಗಳು ಟ್ವಿಟರ್‌ ಅನ್ನು ಸ್ವಾಧೀನಕ್ಕೆ ತೆಗೆದುಕೊಂಡ ಬಳಿಕ, ಕಂಪನಿಯನ್ನು ಲಾಭದ ಹಳಿಗೆ ತರಲು ಕಸರತ್ತು ನಡೆಸುತ್ತಿದ್ದಾರೆ. ಇದರ ಭಾಗವಾಗಿ 50% ಉದ್ಯೋಗ ಕಡಿತಕ್ಕೆ ನಿರ್ಧರಿಸಿದ್ದಾರೆ. ಬೇರೆ ದಾರಿಯೇ ಇಲ್ಲ ಎಂದಿದ್ದಾರೆ. ಸುಮಾರು 7,000 ಉದ್ಯೋಗಿಗಳನ್ನು ಒಳಗೊಂಡಿರುವ ಟ್ವಿಟರ್‌ನಲ್ಲಿ 3,500 ಮಂದಿ ಕೆಲಸ ಕಳೆದುಕೊಂಡಿದ್ದಾರೆ.

ಮೆಟಾ: ಈ ವರ್ಷ ಟೆಕ್‌ ಕಂಪನಿಗಳ ಪೈಕಿ ಮೆಟಾದಲ್ಲಿ ದೊಡ್ಡ ಮಟ್ಟಿನ ಉದ್ಯೋಗ ಕಡಿತ ಸಂಭವಿಸಿದೆ. ತನ್ನ ಸಿಬ್ಬಂದಿ ಬಲದ 13% ಅಂದರೆ 11,000 ಸಿಬ್ಬಂದಿಯನ್ನು ಮೆಟಾ ವಜಾಗೊಳಿಸುತ್ತಿದೆ. ಇದು ಫೇಸ್‌ಬುಕ್‌ನ ಮಾತೃಸಂಸ್ಥೆ. ಮಾರ್ಕ್‌ ಜುಕರ್‌ ಬರ್ಗ್‌ ಇದರ ಮುಖ್ಯಸ್ಥರು.

ಎಚ್‌ಪಿ: ಐಟಿ ವಲಯದ ಹೆವ್ಲೆಟ್-ಪ್ಯಾಕರ್ಡ್‌ ಕಂಪನಿ (ಎಚ್‌ಪಿ) ಮುಂದಿನ ಮೂರು ವರ್ಷಗಳಲ್ಲಿ 6,000 ಉದ್ಯೋಗ ಕಡಿತ ಮಾಡಲಿದೆ. ಪರ್ಸನಲ್‌ ಕಂಪ್ಯೂಟರ್‌ಗಳಿಗೆ ಬೇಡಿಕೆ ಕುಸಿಯುತ್ತಿರುವುದು, ಆದಾಯ ಇಳಿಕೆಯಾಗಿರುವುದು ಇದಕ್ಕೆ ಕಾರಣವಾಗಿದೆ.

ಗೂಗಲ್:‌ ಇಂಟರ್‌ನೆಟ್‌ ಸರ್ಚ್‌ ಎಂಜಿನ್‌ ಗೂಗಲ್‌, ಶೀಘ್ರದಲ್ಲಿಯೇ 10,000 ಉದ್ಯೋಗಗಳನ್ನು ಕಡಿತಗೊಳಿಸಲಿದೆ. ವೆಚ್ಚ ನಿಯಂತ್ರಣಕ್ಕೆ ಒತ್ತಡ ಹೆಚ್ಚಿದೆ.

ಸಿಸ್ಕೊ: ನೆಟ್‌ ವರ್ಕಿಂಗ್‌ ದಿಗ್ಗಜ ಸಿಸ್ಕೊ ಸದ್ಯ 4,000 ಉದ್ಯೋಗಿಗಳನ್ನು ಮನೆಗೆ ಕಳಿಸಲು ನಿರ್ಧರಿಸಿದೆ. ಒಟ್ಟು ಸಿಬ್ಬಂದಿ ಬಲದ 5% ಕಡಿತವಾಗಲಿದೆ.

ಅಮೆಜಾನ್:‌ ಇ-ಕಾಮರ್ಸ್‌ ದಿಗ್ಗಜ ಅಮೆಜಾನ್‌ ತನ್ನ ನಷ್ಟವನ್ನು ನಿಯಂತ್ರಿಸಲು 10,000 ಉದ್ಯೋಗಿಗಳನ್ನು ವಜಾಗೊಳಿಸಲು ಉದ್ದೇಶಿಸಿದೆ.

ಮೈಕ್ರೊಸಾಫ್ಟ್:‌ ಆರ್ಥಿಕ ಹಿಂಜರಿತದ ಪರಿಣಾಮಗಳನ್ನು ಎದುರಿಸುತ್ತಿರುವ ಮೈಕ್ರೊಸಾಫ್ಟ್‌ ಅಕ್ಟೋಬರ್‌ನಲ್ಲಿ 1,000 ಉದ್ಯೋಗಿಗಳನ್ನು ವಜಾಗೊಳಿಸಿದೆ.

ಬೈಜೂಸ್:‌ ಆನ್‌ಲೈನ್‌ ಶಿಕ್ಷಣ ವಲಯದ ದಿಗ್ಗಜ ಬೈಜೂಸ್‌, ಮುಂದಿನ 6 ತಿಂಗಳುಗಳಲ್ಲಿ 2,500 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಈಗಾಗಲೇ 15 ದಿನಗಳ ನೋಟಿಸ್‌ ಅನ್ನು ನೀಡಲು ಆರಂಭಿಸಿದೆ.

ನೆಟ್‌ಫ್ಲಿಕ್ಸ್‌ : ನೆಟ್‌ ಫ್ಲಿಕ್ಸ್‌ನಲ್ಲಿ ಈಗಾಗಲೇ ಎರಡು ಸುತ್ತಿನಲ್ಲಿ ಉದ್ಯೋಗ ಕಡಿತ ನಡೆದಿದೆ. ಕಂಪನಿಯ ಆದಾಯ ಕುಸಿಯುತ್ತಿರುವುದು ಇದಕ್ಕೆ ಕಾರಣ.

ಸ್ನ್ಯಾಪ್:‌ ಸ್ಯ್ನಾಪ್‌ ಸಿಇಒ ಇವಾನ್‌ ಸ್ಪೈಗೆಲ್‌, 1,000 ಕ್ಕೂ ಹೆಚ್ಚು ಮಂದಿಯನ್ನು ವಜಾಗೊಳಿಸಿದ್ದಾರೆ.

ಅಮೆರಿಕದಲ್ಲಿ ಮುಂದಿನ ವರ್ಷ ಆರ್ಥಿಕ ಹಿಂಜರಿತ?

ನಮ್ಮಲ್ಲಿ ಆರ್‌ಬಿಐ ಹೇಗೆಯೋ, ಅದೇ ರೀತಿ ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ಕಾರ್ಯನಿರ್ವಹಿಸುತ್ತದೆ. ಅದರ ಅರ್ಥಶಾಸ್ತ್ರಜ್ಞರ ಪ್ರಕಾರ, ಅಮೆರಿಕದಲ್ಲಿ ಮುಂದಿನ ವರ್ಷ ಆರ್ಥಿಕ ಹಿಂಜರಿತವಾಗುವ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲಿ ಗ್ರಾಹಕರ ವೆಚ್ಚಗಳು ಇಳಿಕೆಯಾಗುತ್ತಿರುವುದು, ಬಡ್ಡಿ ದರ ಏರಿಕೆ, ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಮುಂದಿನ ವರ್ಷ ಆರ್ಥಿಕ ಹಿಂಜರಿತ ಸಂಭವಿಸಬಹುದು.

ಭಾರತಕ್ಕೆ ಆರ್ಥಿಕ ಹಿಂಜರಿತದ ಆತಂಕ ಇದೆಯೇ?

cash

ಈ ಹಿಂದೆ 2008-09ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಸಂಭವಿಸಿದ್ದಾಗ (Great Recession) ಭಾರತವು ಅದರ ನೇರ ಪರಿಣಾಮಗಳಿಂದ ಪಾರಾಗಿತ್ತು. ಏಕೆಂದರೆ ಭಾರತದ ಹಣಕಾಸು ವಲಯದಲ್ಲಿ ಮುಖ್ಯವಾಗಿ ಬ್ಯಾಂಕ್‌ಗಳು ಜಾಗತಿಕ ಮಾರುಕಟ್ಟೆ ಅಥವಾ ಬ್ಯಾಂಕ್‌ಗಳ ಜತೆಗೆ ನೇರವಾಗಿ ಸಂಪರ್ಕದಲ್ಲಿ ಇದ್ದಿರಲಿಲ್ಲ. ಬಾಹ್ಯ ಮಾರುಕಟ್ಟೆಗಳಿಂದ ಸ್ವತಂತ್ರವಾಗಿತ್ತು. ಹೀಗಾಗಿ ಅದರ ಅಪಾಯವೂ ತಟ್ಟಿರಲಿಲ್ಲ. ಸ್ಥಳೀಯ ಮಾರುಕಟ್ಟೆಯೂ, ಬೇಡಿಕೆಯೂ ಪ್ರಬಲವಾಗಿದ್ದರಿಂದ ವ್ಯಾಪಾರೋದ್ದಿಮೆಗಳಿಗೂ ಭಾರಿ ಸಮಸ್ಯೆ ಆಗಿರಲಿಲ್ಲ. ಅಮೆರಿಕ ಮತ್ತು ಯುರೋಪಿನಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಸೆಂಟ್ರಲ್‌ ಬ್ಯಾಂಕ್‌ಗಳು ಬಡ್ಡಿ ದರವನ್ನು ಏರಿಸುತ್ತಿವೆ. ಆದರೆ ಈ ಬಡ್ಡಿ ದರ ಏರಿಕೆಯ ಪರಿಣಾಮ ಆರ್ಥಿಕ ಚಟುವಟಿಕೆಗಳೇ ಮಂದಗತಿಗೆ ತಿರುಗಿ ಹಿಂಜರಿತಕ್ಕೀಡಾಗದಂತೆ ನೋಡಿಕೊಳ್ಳಬೇಕಾಗಿದೆ. ಆರ್ಥಿಕ ತಜ್ಞರೂ ಕೂಡ ಬಡ್ಡಿ ದರ ಏರಿಕೆಯ ಪ್ರಮಾಣವನ್ನು ತಗ್ಗಿಸುವಂತೆ ಫೆಡರಲ್‌ ರಿಸರ್ವ್‌ಗೆ ಸಲಹೆ ನೀಡಿರುವುದನ್ನು ಗಮನಿಸಬಹುದು.

ವಿಶ್ವಬ್ಯಾಂಕ್‌, ಐಎಂಎಫ್‌ ಸೇರಿದಂತೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು 2023ರಲ್ಲಿ ಭಾರತದ ಜಿಡಿಪಿ ಮುನ್ನೋಟವನ್ನು ಕಡಿತಗೊಳಿಸಿದ ಬಳಿಕವೂ, ವಿಶ್ವದಲ್ಲೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಹೊರಹೊಮ್ಮಲಿದೆ. ಜಾಗತಿಕ ಜಿಡಿಪಿ 2023ರಲ್ಲಿ 3.1% ರಿಂದ 2.2%ಕ್ಕೆ ಇಳಿಕೆಯಾಗಬಹುದು. ಹೀಗಿದ್ದರೂ ಭಾರತವು ೨೦೨೨ರಲ್ಲಿ 6.6% ಹಾಗೂ 2023ರಲ್ಲಿ 5.7% ಪ್ರಗತಿ ದಾಖಲಿಸಬಹುದು ಎಂದು ಬಹುತೇಕ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಭವಿಷ್ಯ ನುಡಿದಿವೆ.

ಸೆನ್ಸೆಕ್ಸ್‌ ಸಾರ್ವಕಾಲಿಕ ಜಿಗಿತ: ಸಾಮಾನ್ಯವಾಗಿ ಷೇರು ಮಾರುಕಟ್ಟೆ ಸೂಚ್ಯಂಕಗಳು ಭವಿಷ್ಯದ ಮುನ್ನೋಟವನ್ನೂ ಬಿಂಬಿಸುತ್ತವೆ ಎಂಬ ಮಾತಿದೆ. ಈ ವಾದವನ್ನು ಆಧರಿಸಿ ಹೇಳುವುದಿದ್ದರೆ, ಸೆನ್ಸೆಕ್ಸ್‌ ಮತ್ತು ನಿಫ್ಟಿ ಇದೀಗ ಸಾರ್ವಕಾಲಿಕ ದಾಖಲೆಯ ಎತ್ತರಕ್ಕೇರಿವೆ. ವಿದೇಶಿ ಸಾಂಸ್ಥಿಕ ಹೂಡಿಕೆಯ ಏರಿಳಿತಗಳ ಹೊರತಾಗಿಯೂ, ರಿಟೇಲ್‌ ಹೂಡಿಕೆಯ ಪ್ರಮಾಣ ಕೂಡ ಹೆಚ್ಚುತ್ತಿದೆ. ಇದು ಭಾರತದ ಆರ್ಥಿಕತೆಯ ಬೆಳವಣಿಗೆಯ ಮೇಲೆ ಹೂಡಿಕೆದಾರರಿಗೆ ಇರುವ ವಿಶ್ವಾಸವನ್ನು ಬಿಂಬಿಸಿದೆ.

2023ರ ಆರ್ಥಿಕ ಹಿಂಜರಿತ ಭೀತಿಗೆ ಕಾರಣವೇನು?

ಕೋವಿಡ್-‌19 ಬಿಕ್ಕಟ್ಟಿನ ಬಳಿಕ ಜಾಗತಿಕ ಆರ್ಥಿಕತೆ ಅಯೋಮಯವಾಗಿದೆ. ನಾನಾ ದೇಶಗಳಲ್ಲಿ ತಿಂಗಳಾನುಗಟ್ಟಲೆ ಲಾಕ್‌ಡೌನ್‌ ಹಾಗೂ ನಿರ್ಬಂಧಗಳ ಪರಿಣಾಮ ವಿಶ್ವ ಆರ್ಥಿಕತೆ ಹಳಿ ತಪ್ಪಿತ್ತು. ಕೋವಿಡ್‌ ಪ್ರಕರಣಗಳು ಕಡಿಮೆಯಾದ ಬಳಿಕ ಆರ್ಥಿಕತೆ ಚೇತರಿಸಿದರೂ, ಹಣದುಬ್ಬರದ ಆಘಾತಕ್ಕೆ ಜಗತ್ತಿನ ನಾನಾ ದೇಶಗಳು ತತ್ತರಿಸಿವೆ. ಇದನ್ನು ನಿಯಂತ್ರಿಸಲು ಸೆಂಟ್ರಲ್‌ ಬ್ಯಾಂಕ್‌ಗಳು ಕೈಗೊಳ್ಳುತ್ತಿರುವ ಬಡ್ಡಿ ದರ ಏರಿಕೆಯಿಂದ ಆರ್ಥಿಕ ಚಟುವಟಿಕೆಗಳು ಮಂದಗತಿಗೆ ತಿರುಗಿ ಆರ್ಥಿಕ ಹಿಂಜರಿತ ಸಂಭವಿಸುವ ಭೀತಿ ಕಾಣಿಸಿದೆ.

ವಿದೇಶಗಳಲ್ಲಿ ಉಂಟಾಗಿರುವ ರಾಜಕೀಯ ವಿಪ್ಲವಗಳು, ಮುಖ್ಯವಾಗಿ ರಷ್ಯಾ-ಉಕ್ರೇನ್‌ ಸಂಘರ್ಷದ ಬಳಿಕ ಆರ್ಥಿಕ ಹಿಂಜರಿತದ ಭೀತಿ ಹೆಚ್ಚಿದೆ. ಉಕ್ರೇನ್‌ ವಿರುದ್ಧ ರಷ್ಯಾದ ದಾಳಿಯು 1945ರಿಂದೀಚೆಗೆ ಯುರೋಪ್‌ನಲ್ಲಿ ಅತಿ ದೊಡ್ಡ ಭೂ ಸಂಘರ್ಷವಾಗಿ ಪರಿಣಮಿಸಿದೆ.

ಅಮೆರಿಕ ಮತ್ತು ಚೀನಾದ ಸಂಬಂಧ ಹಳಸಿರುವುದು ಕೂಡ ಉದ್ವಿಗ್ನತೆಗೆ ಕಾರಣವಾಗಿದೆ. ಅಮೆರಿಕ ಮತ್ತು ಯುರೋಪ್‌ನಲ್ಲಿ ಕೋವಿಡ್‌ ಬಿಕ್ಕಟ್ಟಿನ ಬಳಿಕ ಹಣದುಬ್ಬರ ಉಲ್ಬಣಿಸಿದೆ. ಕಳೆದ ನಾಲ್ಕು ದಶಕಗಳಲ್ಲಿಯೇ ಗರಿಷ್ಠ ಮಟ್ಟದ ಹಣದುಬ್ಬರ ಈ ಪಾಶ್ಚಿಮಾತ್ಯ ವಲಯವನ್ನು ಕಾಡುತ್ತಿದೆ. ಹೀಗಿದ್ದರೂ, ಅಮೆರಿಕದಲ್ಲಿ ತೀವ್ರ ಪ್ರಮಾಣದ ಆರ್ಥಿಕ ಹಿಂಜರಿತದ ಅಪಾಯ ಇಲ್ಲ ಎಂಬ ವರದಿಗಳೂ ಇವೆ.‌

————–

” ಅಮೆರಿಕ-ಯುರೋಪ್‌ನಲ್ಲಿನ ತಂತ್ರಜ್ಞಾನ ಕಂಪನಿಗಳಲ್ಲಿ ಉದ್ಯೋಗ ನಷ್ಟ ಸಂಭವಿಸುತ್ತಿದ್ದರೂ, ಇದು ವಿಶ್ವವ್ಯಾಪಿ ಟ್ರೆಂಡ್‌ ಆಗಿಲ್ಲ. ಇದು ನಿರ್ದಿಷ್ಟ ಕಂಪನಿಗಳ ಅಗತ್ಯಗಳಿಗೆ ಸೀಮಿತವಾಗಿದೆ. ಹೀಗಿದ್ದರೂ, ಎಚ್ಚರದ ಅಗತ್ಯತೆ ಇದೆ. ಭಾರತದಲ್ಲೂ ಐಟಿ ಮತ್ತು ಸಂಬಂಧಿತ ಕಂಪನಿಗಳಲ್ಲಿ ಮಾತ್ರ ಸದ್ಯಕ್ಕೆ ಉದ್ಯೋಗ ನಷ್ಟದ ಆತಂಕ ಇದೆಯೇ ಹೊರತು ಉಳಿದ ವಲಯಗಳಲ್ಲಿ ಕಂಡು ಬಂದಿಲ್ಲʼʼ – ಋತುಪರ್ಣ ಚಕ್ರವರ್ತಿ, ಮುಖ್ಯಸ್ಥರು, ಟೀಮ್‌ಲೀಸ್

==============

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Lok Sabha Election 2024: ಜೈಲಿನಲ್ಲಿರುವ ಅಮೃತಪಾಲ್ ಚುನಾವಣೆಗೆ ಸ್ಪರ್ಧಿಸಬಹುದು, ಕೇಜ್ರಿವಾಲ್ ಮತ ಚಲಾಯಿಸುವಂತಿಲ್ಲ! ಏನಿದು ನಿಯಮ?

Lok Sabha Election 2024: ಜೈಲಿನಲ್ಲಿರುವ ಇಬ್ಬರು ಖೈದಿಗಳಲ್ಲಿ ಒಬ್ಬರಿಗೆ 2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ, ಇನ್ನೊಬ್ಬರಿಗೆ ಮತದಾನ ಮಾಡಲು ಅವಕಾಶ ನೀಡಲಾಗುತ್ತಿಲ್ಲ. ಏನಿದು ಚುನಾವಣೆ ಆಯೋಗದ ನಿಯಮ? ಇಲ್ಲಿದೆ ವಿಸ್ತೃತ ವಿವರಣೆ.

VISTARANEWS.COM


on

By

Lok Sabha Election-2024
Koo

ನವದೆಹಲಿ: ಪ್ರಪಂಚದಾದ್ಯಂತ ಚುನಾವಣೆಗಳಲ್ಲಿ (election) ವಿರೋಧಾಭಾಸಗಳು ಎದುರಾಗುತ್ತವೆ. ಇದರಲ್ಲಿ ಭಾರತವೂ ಹೊರತಾಗಿಲ್ಲ. ಇದೀಗ ಜೈಲಿನಲ್ಲಿರುವ (jail) ಇಬ್ಬರು ಕೈದಿಗಳಲ್ಲಿ (locked up) ಒಬ್ಬರಿಗೆ ಚುನಾವಣೆಗೆ ಸ್ಪರ್ಧಿಸಲು ಅನುಮತಿ ಸಿಕ್ಕಿದ್ದರೆ, ಇನ್ನೊಬ್ಬರಿಗೆ ಮತದಾನ (voting) ಮಾಡಲೂ ಅವಕಾಶ ನೀಡಲಾಗಿಲ್ಲ.

2024ರ ಲೋಕಸಭಾ ಚುನಾವಣೆಯ (Lok Sabha Election‌ 2024) ವೇಳೆ ಭಾರತದಲ್ಲಿ (india) ಅಂತಹ ಒಂದು ವಿರೋಧಾಭಾಸ ಕಾಣಿಸಿಕೊಂಡಿದೆ. 2,300 ಕಿ.ಮೀ. ದೂರದಲ್ಲಿರುವ ಎರಡು ವಿಭಿನ್ನ ಜೈಲುಗಳಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಇವರಲ್ಲಿ ಒಬ್ಬರಿಗೆ ಚುನಾವಣೆಗೆ ಸ್ಪರ್ಧಿಸಲು ಅನುಮತಿ ನೀಡಿದ್ದರೆ, ಇನ್ನೊಬ್ಬರಿಗೆ ಮತದಾನ ಮಾಡಲು ಅವಕಾಶ ಸಿಕ್ಕಿಲ್ಲ.

ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ (Amritpal Singh) ಅಸ್ಸಾಂನ ದಿಬ್ರುಗಢ್ ಜೈಲಿನಲ್ಲಿದ್ದರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ತಿಹಾರ್ ಜೈಲಿನಲ್ಲಿದ್ದಾರೆ.

ಇದನ್ನೂ ಓದಿ: Lok Sabha Election 2024: ದೇಶ, ರಾಜ್ಯಕ್ಕೆ ಬಿಜೆಪಿಯಿಂದ ಖಾಲಿ ಚೊಂಬು ಕೊಟ್ಟಿದ್ದಾರೆ: ರಾಹುಲ್‌ ಗಾಂಧಿ

ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾನೂನು ಅನುಮತಿ ನೀಡಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಂತಹ ಲಕ್ಷಾಂತರ ವಿಚಾರಣಾಧೀನ ಕೈದಿಗಳು ಮತ ಚಲಾಯಿಸಲು ಅನುಮತಿ ನೀಡಲಾಗಿಲ್ಲ. ಯಾಕೆಂದರೆ ಭಾರತ ಕಾನೂನು ಪ್ರಕಾರ ಭಾರತದಲ್ಲಿ ಜನರು ಜೈಲಿನಲ್ಲಿ ಇದ್ದು ಚುನಾವಣೆಗೆ ಸ್ಪರ್ಧಿಸಬಹುದು. ಆದರೆ ಜೈಲಿನಿಂದ ಮತ ಚಲಾಯಿಸಲು ಸಾಧ್ಯವಿಲ್ಲ!


ಅಮೃತ್ ಪಾಲ್ ಸ್ಪರ್ಧೆ

2023ರ ಏಪ್ರಿಲ್ 23ರಿಂದ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಜೈಲಿನಲ್ಲಿರುವ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಅವರು ಪಂಜಾಬ್‌ನ ಖಾದೂರ್ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ದಿಬ್ರುಗಢ ಕೇಂದ್ರ ಕಾರಾಗೃಹದಲ್ಲಿ ಭಾಯಿ ಸಾಹೇಬ್ ಅಮೃತಪಾಲ್ ಅವರನ್ನು ನಾನು ಭೇಟಿ ಮಾಡಿದ್ದೇನೆ. ಖಾಲ್ಸಾ ಪಂಥ್‌ನ ಹಿತಾಸಕ್ತಿಯಿಂದ ಅವರು ಈ ಬಾರಿ ಸಂಸದರಾಗಲು ಖದೂರ್ ಸಾಹಿಬ್‌ನಿಂದ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ನಾನು ಅವರಿಗೆ ವಿನಂತಿಸಿದೆ ಎಂದು ಅಮೃತಪಾಲ್ ಅವರ ವಕೀಲ ರಾಜದೇವ್ ಸಿಂಗ್ ಖಾಲ್ಸಾ ಈ ಹಿಂದೆ ಹೇಳಿದ್ದು, ಭಾಯಿ ಸಾಹೇಬ್ ಒಪ್ಪಿದ್ದಾರೆ ಮತ್ತು ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಅವರು ಹೇಳಿದರು.

ಬಂಧನಕ್ಕೆ ಒಳಗಾಗಿರುವುದು ಏಕೆ?

ಅಮೃತಪಾಲ್ ಸಿಂಗ್ ಅವರನ್ನು ಪಂಜಾಬ್‌ನ ಮೋಗಾ ಜಿಲ್ಲೆಯ ರೋಡ್ ಗ್ರಾಮದಲ್ಲಿ ವರ್ಷದ ಹಿಂದೆ ಬಂಧಿಸಲಾಗಿತ್ತು. ಅಮೃತ್‌ಪಾಲ್ ಸಿಂಗ್ ಅವರು ಬೆಂಬಲಿಗರೊಂದಿಗೆ ಬಂದೂಕು ಮತ್ತು ಕತ್ತಿಗಳನ್ನು ಹಿಡಿದುಕೊಂಡು ಅಮೃತಸರದ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದರಿಂದ ಅವರನ್ನು ಬಂಧಿಸಲಾಯಿತು. ಪ್ರತ್ಯೇಕತಾವಾದಿ ಈತ.

ಜೈಲಿನಿಂದ ಸ್ಪರ್ಧಿಸಿದವರು, ಗೆದ್ದವರಿವರು

1996 ರಲ್ಲಿ, ಡಾನ್- ಟರ್ನ್ಡ್ ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರು ಜೈಲಿನಲ್ಲಿದ್ದಾಗ ಬಿಎಸ್ಪಿ ಟಿಕೆಟ್‌ನಲ್ಲಿ ಉತ್ತರ ಪ್ರದೇಶದ ಮೌ ಅಸೆಂಬ್ಲಿ ಸ್ಥಾನಕ್ಕೆ ಸ್ಪರ್ಧಿಸಿದರು. ಕಳೆದ ತಿಂಗಳು ನಿಧನರಾದ ಅನ್ಸಾರಿ ಅವರು ಜೈಲಿನಿಂದಲೇ ಚುನಾವಣೆಯಲ್ಲಿ ಗೆದ್ದಿದ್ದರು.

2005ರಲ್ಲಿ ಸೆರೆವಾಸದಲ್ಲಿದ್ದ ಮುಖ್ತಾರ್ ಅನ್ಸಾರಿ ಅವರು ಜೈಲಿನಿಂದ 2007, 2012 ಮತ್ತು ಮತ್ತೆ 2017 ರಲ್ಲಿ ಒಟ್ಟು ಮೂರು ಬಾರಿ ಮೌ ಅಸೆಂಬ್ಲಿ ಸ್ಥಾನವನ್ನು ಗೆದ್ದರು.

ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ 1998ರ ಲೋಕಸಭೆ ಚುನಾವಣೆ ವೇಳೆ ಮೇವು ಹಗರಣದಲ್ಲಿ ಜೈಲು ಸೇರಿದ್ದರು. ಬಿಹಾರದ ಮಾಧೇಪುರ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ ಜೈಲಿನಲ್ಲಿದ್ದೇ ಗೆದ್ದಿದ್ದರು.


ಕೇಜ್ರಿವಾಲ್ ಮತದಾನ ಸಾಧ್ಯವಿಲ್ಲ

ಅಪರಾಧಗಳ ಆರೋಪ ಹೊತ್ತಿರುವ ಜನರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ, ಅಪರಾಧಿಗಳೆಂದು ಸಾಬೀತಾಗದ ವಿಚಾರಣಾಧೀನ ಕೈದಿಗಳು ತಮ್ಮ ಮತವನ್ನು ಚಲಾಯಿಸಲು ಸಾಧ್ಯವಿಲ್ಲ.

ತಪ್ಪಿತಸ್ಥರೆಂದು ಸಾಬೀತಾಗದವರಿಗೂ ಭಾರತದಲ್ಲಿ ಜೈಲುಗಳಿಂದ ಮತದಾನ ಮಾಡಲು ಯಾವುದೇ ಅವಕಾಶವಿಲ್ಲ. 2019 ರ ಪ್ರವೀಣ್ ಕುಮಾರ್ ಚೌಧರಿ ವಿರುದ್ಧ ಭಾರತ ಚುನಾವಣಾ ಆಯೋಗದ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಕೈದಿಗಳಿಗೆ ಮತದಾನದ ಹಕ್ಕನ್ನು ಹೊಂದಿಲ್ಲ ಎಂದು ಪುನರುಚ್ಚರಿಸಿದೆ.

ಮೇ 25ರಂದು ದೆಹಲಿ ಮತದಾನ ನಡೆಯಲಿದೆ. ಏಪ್ರಿಲ್ 29 ರಂದು ಸುಪ್ರೀಂ ಕೋರ್ಟ್‌ ನೀಡುವ ತೀರ್ಪಿನ ಮೇಲೆ ಕೇಜ್ರಿವಾಲ್ ಮತ ಚಲಾಯಿಸಬಹುದೇ ಅಥವಾ ಇಲ್ಲವೇ ಎಂಬುದು ನಿರ್ಧಾರವಾಗಲಿದೆ.

ಮಾರ್ಚ್ 21ರಂದು ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟ ಕೇಜ್ರಿವಾಲ್, ಬಹು ಕಸ್ಟಡಿ ವಿಸ್ತರಣೆಗಳು ಮತ್ತು ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ಅನಂತರ ಅವರನ್ನು ನವದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.

ಬಿಡುಗಡೆಯಾಗದೆ ಇದ್ದರೆ ಹೇಮಂತ್ ಸೊರೆನ್ ಗೂ ಅವಕಾಶ ಇಲ್ಲ

ಭಾರತದಲ್ಲಿ ಐದು ಲಕ್ಷಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳಿದ್ದು, ಅವರಿಗೂ ಮತ ಚಲಾಯಿಸಲು ಸಾಧ್ಯವಿಲ್ಲ. ಅಂತೆಯೇ, ಭೂ ಹಗರಣಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಅವರನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸದಿದ್ದರೆ ಮತದಾನ ಮಾಡಲಾಗುವುದಿಲ್ಲ.

ತನ್ನ ಬಂಧನವನ್ನು ಪ್ರಶ್ನಿಸಿ ಹೇಮಂತ್ ಸೊರೆನ್ ಬುಧವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಯಾಕೆ ಈ ತಾರತಮ್ಯ?

2021 ರ ರಾಷ್ಟ್ರೀಯ ಅಪರಾಧ ವರದಿಗಳ ಬ್ಯೂರೋ (NCRB) ವರದಿಯ ಪ್ರಕಾರ, ಭಾರತದಾದ್ಯಂತ ವಿವಿಧ ಜೈಲುಗಳಲ್ಲಿ ಒಟ್ಟು 5,54,034 ಕೈದಿಗಳನ್ನು ಬಂಧಿಸಲಾಗಿದೆ. ಅಮೃತಪಾಲ್ ಸಿಂಗ್ ಅವರಿಗೆ ಇನ್ನೂ ಶಿಕ್ಷೆಯಾಗದ ಕಾರಣ ಅವರು ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಶಿಕ್ಷೆಗೊಳಗಾದವರು ಕೂಡ ಜೈಲು ಶಿಕ್ಷೆ ಮುಗಿದ ಆರು ವರ್ಷಗಳ ಬಳಿಕ ಚುನಾವಣೆಗೆ ಸ್ಪರ್ಧಿಸಬಹುದು.

ಅಮೃತಪಾಲ್ ಸಿಂಗ್ ಅವರಂತಹ ಜೈಲಿನಲ್ಲಿರುವ ವ್ಯಕ್ತಿಗಳು ತಮ್ಮ ಪ್ರತಿನಿಧಿಯ ಸಹಾಯದಿಂದ ಜೈಲಿನಿಂದಲೇ ನಾಮಪತ್ರ ಸಲ್ಲಿಸಬಹುದು. ಒಂದು ವೇಳೆ ಜೈಲಿನಲ್ಲಿರುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದರೆ, ತಜ್ಞರ ಪ್ರಕಾರ ಜೈಲಿನೊಳಗೆ ಪ್ರಮಾಣ ವಚನ ಬೋಧಿಸಲು ಅವಕಾಶವಿಲ್ಲದ ಕಾರಣ, ಪ್ರಮಾಣ ವಚನ ಸ್ವೀಕರಿಸಲು ಜೈಲಿನಿಂದ ಬಿಡುಗಡೆ ಮಾಡಬಹುದು.

ಆದರೆ ಜೈಲಿನಲ್ಲಿರುವ ವ್ಯಕ್ತಿಯ ಪರವಾಗಿ ಬೇರೆಯವರು ಮತವನ್ನು ಚಲಾಯಿಸಲು ಸಾಧ್ಯವಿಲ್ಲ. ಪತಿ ಅರವಿಂದ್ ಕೇಜ್ರಿವಾಲ್ ಬಂಧನದ ಅ ನಂತರ ಗಮನ ಸೆಳೆದಿರುವ ಸುನೀತಾ ಕೇಜ್ರಿವಾಲ್, ಎಎಪಿ ಪರ ಪ್ರಚಾರ ಮಾಡಲಿದ್ದಾರೆ.

ಪ್ರಜಾಪ್ರತಿನಿಧಿ ಕಾಯಿದೆ 1951ರ ಸೆಕ್ಷನ್ 62 (5) ಪ್ರಕಾರ ಯಾವುದೇ ವ್ಯಕ್ತಿ ಪೊಲೀಸರ ಕಾನೂನುಬದ್ಧ ವಶದಲ್ಲಿದ್ದರೆ ಅಥವಾ ಜೈಲಿನಲ್ಲಿ ಬಂಧಿಯಾಗಿದ್ದಲ್ಲಿ ಯಾವುದೇ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ.

Continue Reading

ಆರೋಗ್ಯ

 Ayushman Bharat Yojana: ಆಪತ್ಕಾಲದಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?

Ayushman Bharat Yojana: ಆಯುಷ್ಮಾನ್ ಭಾರತ್ ಯೋಜನೆಯು ಭಾರತದಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆಯತ್ತ ಮಹತ್ವದ ಹೆಜ್ಜೆ. ದುರ್ಬಲ ಕುಟುಂಬಗಳಿಗೆ ಹೆಚ್ಚು ಅಗತ್ಯವಿರುವ ಆರ್ಥಿಕ ರಕ್ಷಣೆಯನ್ನು ನೀಡುತ್ತದೆ. ಇದರ ನೋಂದಣಿ ಪ್ರಕ್ರಿಯೆ ಹೇಗಿರುತ್ತದೆ, ಇದರಿಂದ ಸಿಗುವ ಪ್ರಯೋಜನಗಳ ಮಾಹಿತಿ ಇಲ್ಲಿದೆ.

VISTARANEWS.COM


on

By

Ayushman Bharat Yojana
Koo

ಲಕ್ಷಾಂತರ ಭಾರತೀಯರಿಗೆ (indian) ಆರೋಗ್ಯ (health) ಸೇವೆಯನ್ನು (service) ಹೆಚ್ಚು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವ ಗುರಿ ಹೊಂದಿರುವ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯ (Ayushman Bharat Yojana) ಪ್ರಯೋಜನ ಪಡೆಯುವುದು ಇನ್ನೂ ಹಲವಾರು ಮಂದಿಗೆ ಸವಾಲಾಗಿ ಪರಿಣಮಿಸಿದೆ. 2018ರಲ್ಲಿ ಜಾರಿಯಾಗಿರುವ ಆಯುಷ್ಮಾನ್ ಯೋಜನೆ ಇನ್ನೂ ಹಲವು ಮಂದಿಗೆ ಸರಿಯಾಗಿ ಅರ್ಥವೇ ಆಗಿಲ್ಲ. ಇದರಿಂದ ಸಾಕಷ್ಟು ಪರಿಣಾಮಕಾರಿಯಾಗಿ ಎಲ್ಲರನ್ನು ತಲುಪುವುದು ಸಾಧ್ಯವಾಗಿಲ್ಲ. ಭಾರತದಂತಹ ವಿಶಾಲ ಮತ್ತು ವೈವಿಧ್ಯಮಯವಾದ ದೇಶದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವುದು ಸವಾಲಾಗಿದೆ. ಇದನ್ನು ಗುರುತಿಸಿ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಾರಂಭಿಸಿತು. ಆಯುಷ್ಮಾನ್ ಭಾರತ್ ಯೋಜನೆಯು ಏನನ್ನು ಒಳಗೊಳ್ಳುತ್ತದೆ, ಆಯುಷ್ಮಾನ್ ಕಾರ್ಡ್ ಸೇರಿದಂತೆ ಅದರ ಪ್ರಯೋಜನಗಳಿಗಾಗಿ ಹೇಗೆ ನೋಂದಾಯಿಸಿಕೊಳ್ಳುವುದು ಎಂಬುದರ ಮಾಹಿತಿ ಇಲ್ಲಿದೆ.


ಏನಿದು ಆಯುಷ್ಮಾನ್ ಭಾರತ್ ಯೋಜನೆ?

ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (PMJAY) ಎಂದು ಕರೆಯಲ್ಪಡುವ ಆಯುಷ್ಮಾನ್ ಭಾರತ್ ಯೋಜನೆಯು ಭಾರತ ಸರ್ಕಾರವು ಪರಿಚಯಿಸಿದ ಪ್ರಮುಖ ಆರೋಗ್ಯ ಯೋಜನೆಯಾಗಿದೆ. ದುರಂತದ ಆರೋಗ್ಯ ವೆಚ್ಚಗಳ ವಿರುದ್ಧ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ನೀಡುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ಈ ಯೋಜನೆಯಡಿಯಲ್ಲಿ, ಅರ್ಹ ಫಲಾನುಭವಿಗಳು ನಿಗದಿತ ಆಸ್ಪತ್ರೆಗಳಲ್ಲಿ ನಿರ್ದಿಷ್ಟ ಮೊತ್ತದವರೆಗೆ ನಗದು ರಹಿತ ಆರೋಗ್ಯ ಸೇವೆಗಳನ್ನು ಪಡೆಯಬಹುದು.

ಇದನ್ನೂ ಓದಿ: ORS: ಒಆರ್‌ಎಸ್‌ ಜೀವಜಲ; ಯಾರು, ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು?

ನೋಂದಣಿ ಹೇಗೆ?

ಆಯುಷ್ಮಾನ್ ಭಾರತ್ ಯೋಜನೆಗೆ ನೋಂದಾಯಿಸಲು ಮೊದಲು ಅದರ ಬಗ್ಗೆ ತಿಳಿದುಕೊಳ್ಳಿ.

ಅರ್ಹತೆಯನ್ನು ಪರಿಶೀಲಿಸಿ

ಆಯುಷ್ಮಾನ್ ಭಾರತ್ ಯೋಜನೆಗೆ ನೋಂದಣಿ ನಡೆಸುವ ಮೊದಲು ಆಯುಷ್ಮಾನ್ ಭಾರತ್ ಯೋಜನೆ ಪಡೆಯುವ ಅರ್ಹತೆ ನಿಮಗಿದೆಯೇ ಎಂಬುದನ್ನು ತಿಳಿದುಕೊಳ್ಳಿ. ಇದು ಪ್ರಾಥಮಿಕವಾಗಿ ಸಾಮಾಜಿಕ ಆರ್ಥಿಕ ಅಂಶಗಳು ಮತ್ತು ಮನೆಯ ಆದಾಯವನ್ನು ಆಧರಿಸಿರುತ್ತದೆ.


ಸಾಮಾನ್ಯ ಸೇವಾ ಕೇಂದ್ರ, ನೆಮ್ಮದಿ ಕೇಂದ್ರ

ಆಯುಷ್ಮಾನ್ ಭಾರತ್ ಯೋಜನೆಗಾಗಿ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸಾಮಾನ್ಯ ಸೇವಾ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ನಿಮ್ಮ ಪ್ರದೇಶದಲ್ಲಿ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ, ನೆಮ್ಮದಿ ಕೇಂದ್ರಗಳನ್ನು ಪತ್ತೆ ಮಾಡಿ ಮತ್ತು ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಲ್ಲಿಗೆ ಭೇಟಿ ಮಾಡಿ.

ಅಗತ್ಯ ದಾಖಲೆಗಳನ್ನು ಒದಗಿಸಿ

ನೋಂದಣಿ ಪ್ರಕ್ರಿಯೆಯಲ್ಲಿ ನಿಮ್ಮ ಅರ್ಹತೆಯನ್ನು ಸ್ಥಾಪಿಸಲು ನೀವು ಕೆಲವು ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಇವುಗಳು ಗುರುತಿನ ಪುರಾವೆ, ವಿಳಾಸ ಪುರಾವೆ ಮತ್ತು ಆದಾಯ ಪ್ರಮಾಣಪತ್ರವನ್ನು ಒಳಗೊಂಡಿರುತ್ತದೆ.

ಸಂಪೂರ್ಣ ನೋಂದಣಿ ಅರ್ಜಿ

ಒದಗಿಸಿದ ಮಾಹಿತಿಯ ನಿಖರತೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಸಾಮಾನ್ಯ ಸೇವಾ ಕೇಂದ್ರದಲ್ಲಿ ಒದಗಿಸಲಾದ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ. ನಿಮ್ಮ ಕುಟುಂಬದ ಸದಸ್ಯರು, ಆದಾಯ ಮತ್ತು ಇತರ ಸಂಬಂಧಿತ ಮಾಹಿತಿಯ ಕುರಿತು ವಿವರಗಳನ್ನು ಒದಗಿಸಿ.

ಪರಿಶೀಲನೆ ಪ್ರಕ್ರಿಯೆ

ನೋಂದಣಿ ಫಾರ್ಮ್ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಅನಂತರ ಅಧಿಕಾರಿಗಳು ಆಯುಷ್ಮಾನ್ ಭಾರತ್ ಯೋಜನೆಗೆ ನಿಮ್ಮ ಅರ್ಹತೆಯನ್ನು ಪರಿಶೀಲಿಸುತ್ತಾರೆ. ಈ ಪರಿಶೀಲನಾ ಪ್ರಕ್ರಿಯೆಯು ಸರ್ಕಾರಿ ಡೇಟಾಬೇಸ್‌ಗಳೊಂದಿಗೆ ಒದಗಿಸಲಾದ ಮಾಹಿತಿಯನ್ನು ಕ್ರಾಸ್-ಚೆಕ್ ಮಾಡುವುದನ್ನು ಒಳಗೊಂಡಿರುತ್ತದೆ.

ಆಯುಷ್ಮಾನ್ ಕಾರ್ಡ್ ಸ್ವೀಕರಿಸಿ

ಅರ್ಹತೆಯ ಯಶಸ್ವಿ ಪರಿಶೀಲನೆಯ ಅನಂತರ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಹೊಂದಿರುವ ಆಯುಷ್ಮಾನ್ ಕಾರ್ಡ್ ಅನ್ನು ನಿಮಗೆ ನೀಡಲಾಗುತ್ತದೆ. ಈ ಕಾರ್ಡ್ ಯೋಜನೆಯಲ್ಲಿ ನಿಮ್ಮ ದಾಖಲಾತಿಗೆ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಎಂಪನೆಲ್ಡ್ ಆಸ್ಪತ್ರೆಗಳಲ್ಲಿ ನಗದು ರಹಿತ ಆರೋಗ್ಯ ಸೇವೆಗಳನ್ನು ಪ್ರವೇಶಿಸಲು ಅನುಮತಿ ನೀಡುತ್ತದೆ.

doctor

ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಿ

ಆಯುಷ್ಮಾನ್ ಕಾರ್ಡ್‌ನೊಂದಿಗೆ ನೀವು ಇದೀಗ ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಯಾವುದೇ ಎಂಪನೆಲ್ ಮಾಡಲಾದ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳನ್ನು ಪಡೆಯಬಹುದು. ನಗದು ರಹಿತ ಚಿಕಿತ್ಸಾ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಿಮ್ಮ ಕಾರ್ಡ್ ಅನ್ನು ಆಸ್ಪತ್ರೆಯ ಸ್ವಾಗತ ವಿಭಾಗದಲ್ಲಿ ನೀಡಿ.

ಪ್ರಯೋಜನಗಳು ಏನೇನು?

ಆಯುಷ್ಮಾನ್ ಕಾರ್ಡ್‌ ಹೊಂದಿರುವುದರಿಂದ ಪ್ರಮುಖ ಪ್ರಯೋಜನಗಳು ಇಂತಿವೆ.

ದುರ್ಬಲ ಕುಟುಂಬಗಳಿಗೆ ರಕ್ಷಣೆ

ಆಯುಷ್ಮಾನ್ ಭಾರತ್ ಯೋಜನೆಯು ಭಾರತದಾದ್ಯಂತ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹೆಚ್ಚಿನ ಆರೋಗ್ಯ ವೆಚ್ಚಗಳ ವಿರುದ್ಧ ಆರ್ಥಿಕ ರಕ್ಷಣೆ ನೀಡುತ್ತದೆ.

ನಗದು ರಹಿತ ಚಿಕಿತ್ಸೆ

ಯೋಜನೆಯ ಫಲಾನುಭವಿಗಳು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ ನಿಗದಿತ ಆಸ್ಪತ್ರೆಗಳಲ್ಲಿ 5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆಯನ್ನು ಪಡೆಯಬಹುದು.

ವ್ಯಾಪಕ ಆಸ್ಪತ್ರೆ ನೆಟ್‌ವರ್ಕ್

ಅಯುಷ್ಮಾನ್ ಯೋಜನೆಯು ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳನ್ನು ಒಳಗೊಂಡಂತೆ ನಿಗದಿತ ಆಸ್ಪತ್ರೆಗಳ ವ್ಯಾಪಕ ಜಾಲವನ್ನು ಹೊಂದಿದೆ. ಇದು ದೇಶದಾದ್ಯಂತ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪಡೆಯಲು ಸಹಕರಿಸುತ್ತದೆ.

Ayushman Card

ಆಯುಷ್ಮಾನ್ ಕಾರ್ಡಗೆ ಅಗತ್ಯವಿರುವ ದಾಖಲೆಗಳು

1. ನಿವಾಸದ ಗುರುತು ಪತ್ರ
2. ವಯಸ್ಸು ಮತ್ತು ಗುರುತಿನ ಪುರಾವೆ- ಉದಾಹರಣೆಗೆ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್
3. ಜಾತಿ ಪ್ರಮಾಣಪತ್ರ
4. ಸಂಪರ್ಕ ಮಾಹಿತಿ- ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಇತ್ಯಾದಿ
5. ಆದಾಯ ಪ್ರಮಾಣ ಪತ್ರ
6. ಪ್ರಸ್ತುತ ಕುಟುಂಬದ ಸ್ಥಿತಿಯನ್ನು ಸೂಚಿಸುವ ದಾಖಲೆಗಳು

Continue Reading

ವಾಣಿಜ್ಯ

Donkey milk: ಕತ್ತೆ ಹಾಲು ಲೀಟರ್‌ಗೆ 7000 ರೂ! ಈ ಹಾಲಿಗೆ ಏಕಿಷ್ಟು ಡಿಮ್ಯಾಂಡ್‌?

Donkey milk: ಹಾಲು ಉದ್ಯಮದಲ್ಲಿ ಕತ್ತೆಯ ಹಾಲು ಇಂದು ಬಿಳಿ ಚಿನ್ನವಾಗಿದೆ. ಗುಜರಾತ್‌ನಲ್ಲಿ ಧೀರೇನ್ ಸೋಲಂಕಿ ಅವರು ಕತ್ತೆಯ ಹಾಲು ಉತ್ಪಾದನೆಯಲ್ಲಿ ಕ್ರಾಂತಿಯನ್ನು ಮಾಡುತ್ತಿದ್ದಾರೆ. ಅವರು ಅದರ ಹಾಲನ್ನು ಗೋವಿನ ಪ್ರತಿಸ್ಪರ್ಧಿಗಳು ಉತ್ಪಾದಿಸುವ ಹಾಲಿನ 70 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇಷ್ಟಕ್ಕೂ ಈ ಕತ್ತೆ ಹಾಲಿಗೆ ಏಕಿಷ್ಟು ಡಿಮ್ಯಾಂಡ್‌? ಇದರ ಹಿನ್ನೆಲೆ ಏನು? ಇಲ್ಲಿದೆ ಕುತೂಹಲಕರ ಮಾಹಿತಿ.

VISTARANEWS.COM


on

By

donkey milk
Koo

ಹಾಲು (milk) ಮಾರಾಟ ಮಾಡಿ ತಿಂಗಳಿಗೊಂದು ಎಷ್ಟು ಆದಾಯ ಗಳಿಸಬಹುದು? ಅಬ್ಬಬ್ಬಾ ಎಂದರೆ 10 ಸಾವಿರ ರೂ. ಗಡಿ ದಾಟಿದರೆ ಬಹುದೊಡ್ಡದು. ಆದರೆ ಇಲ್ಲೊಬ್ಬರು ಹಾಲು ಮಾರಾಟದಿಂದಲೇ ತಿಂಗಳಿಗೆ 2- 3 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಆದರೆ ಇವರು ಮಾರುತ್ತಿರುವ ಹಾಲು ಹಸುವಿನದಲ್ಲ (cow) ಕತ್ತೆಯದ್ದು (Donkey milk).

ಹಾಲು ಉದ್ಯಮದಲ್ಲಿ ಕತ್ತೆಯ ಹಾಲು ಇಂದು ಬಿಳಿ ಚಿನ್ನವಾಗಿದೆ (white gold). ಗುಜರಾತ್‌ನಲ್ಲಿ (gujarat) ಧೀರೇನ್ ಸೋಲಂಕಿ ( Dhiren Solanki) ಅವರು ಕತ್ತೆಯ ಹಾಲು ಉತ್ಪಾದನೆಯಲ್ಲಿ ಕ್ರಾಂತಿಯನ್ನು ಮಾಡುತ್ತಿದ್ದಾರೆ. ಅವರು ಅದರ ಹಾಲನ್ನು ಗೋವಿನ ಪ್ರತಿಸ್ಪರ್ಧಿಗಳು ಉತ್ಪಾದಿಸುವ ಹಾಲಿನ 70 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಪಟಾನ್ ಜಿಲ್ಲೆಯಲ್ಲಿ 42 ಕತ್ತೆಗಳಿರುವ ಫಾರ್ಮ್ ಹೊಂದಿರುವ ಧೀರೇನ್ ಸೋಲಂಕಿ, ದಕ್ಷಿಣ ಪ್ರದೇಶಗಳಲ್ಲಿನ ಗ್ರಾಹಕರಿಗೆ ಬೆಲೆಬಾಳುವ ಹಾಲನ್ನು ಮಾರಾಟ ಮಾಡುವ ಮೂಲಕ ತಿಂಗಳಿಗೆ 2- 3 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಇದನ್ನೂ ಓದಿ: Tech Mahindra: ಫ್ರೆಶರ್‌ಗಳಿಗೆ ಗುಡ್‌ ನ್ಯೂಸ್;‌ 6 ಸಾವಿರ ಜನರನ್ನು ನೇಮಕ ಮಾಡಲಿದೆ ಮಹೀಂದ್ರಾ!

ಸುಮಾರು ಎಂಟು ತಿಂಗಳ ಹಿಂದೆ ಕೇವಲ 20 ಕತ್ತೆಗಳೊಂದಿಗೆ 22 ಲಕ್ಷ ರೂ.ಗಳ ಆರಂಭಿಕ ಹೂಡಿಕೆ ಮಾಡಿರುವ ಸೋಲಂಕಿ ಈಗ ಕೋಟ್ಯಂತರ ಮೌಲ್ಯದ ಹಾಲು ವ್ಯಾಪಾರ ನಡೆಸುತ್ತಿದ್ದಾರೆ.

ಪ್ರಾರಂಭದಲ್ಲಿ ಸವಾಲು

ಗುಜರಾತ್‌ ನಲ್ಲಿ ಕತ್ತೆ ಹಾಲಿಗೆ ಹೆಚ್ಚು ಬೇಡಿಕೆ ಇಲ್ಲದ ಕಾರಣ ಪ್ರಾರಂಭಿಸಿದ ಐದು ತಿಂಗಳು ಸೋಲಂಕಿ ಅವರು ತುಂಬಾ ಕಷ್ಟ ಪಟ್ಟಿದ್ದರು. ಅದರ ಅನಂತರ ಅವರು ದಕ್ಷಿಣ ಭಾರತದಲ್ಲಿ ಕತ್ತೆ ಹಾಲಿನ ಹೆಚ್ಚಿನ ಅಗತ್ಯತೆ ಇರುವಲ್ಲಿ ತಮ್ಮ ವ್ಯಾಪ್ತಿಯನ್ನು ಬೆಳೆಸುವ ನಿರ್ಧಾರವನ್ನು ಮಾಡಿದರು.

ಪ್ರಸ್ತುತ ಅವರು ಕತ್ತೆ ಹಾಲನ್ನು ಹೆಚ್ಚಾಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಒದಗಿಸುತ್ತಿದ್ದಾರೆ. ಅವರ ಕೆಲವು ಗ್ರಾಹಕರು ಕತ್ತೆಗಳ ಹಾಲನ್ನು ಬಳಸುವ ಸೌಂದರ್ಯವರ್ಧಕ ಸಂಸ್ಥೆಗಳಾಗಿವೆ.


ಲೀಟರ್‌ಗೆ 5ರಿಂದ 7 ಸಾವಿರ ರೂ.

ಸೋಲಂಕಿ ಪ್ರಕಾರ ಕತ್ತೆ ಹಾಲು ಮಾರುಕಟ್ಟೆಯಲ್ಲಿ ಪ್ರತಿ ಲೀಟರ್‌ಗೆ 5,000 ರಿಂದ 7,000 ರೂ. ಗೆ ಮಾರಾಟವಾಗುತ್ತಿದೆ. ಹಸುವಿನ ಹಾಲಿಗೆ ಹೋಲಿಸಿದರೆ ಲೀಟರ್‌ಗೆ 65 ರೂ. ಗೆ ಮಾರಾಟವಾಗುತ್ತದೆ. ಹಾಲಿನ ತಾಜಾತನವನ್ನು ಕಾಪಾಡಲು ರೆಫ್ರಿಜರೇಟರ್‌ಗಳಲ್ಲಿ ಇರಿಸಲಾಗುತ್ತದೆ.

ದುಬಾರಿಯಾಗಲು ಕಾರಣ

ಕತ್ತೆಯ ಹಾಲಿನ ಬಗ್ಗೆ ಜನಪ್ರಿಯತೆ ಈಗಷ್ಟೇ ಬೆಳೆಯುತ್ತಿದೆ. ಬಹುತೇಕ ಫಾರ್ಮ್‌ಗಳು ಚಿಕ್ಕದಾಗಿದ್ದು, ಐದರಿಂದ 30 ಹಾಲು ಕರೆಯುವ ಕತ್ತೆಗಳನ್ನು ಒಳಗೊಂಡಿರುತ್ತದೆ. ಪ್ರತಿ ದಿನವೂ ಸರಿಸುಮಾರು ನಾಲ್ಕು ಕಪ್ ಅಂದರೆ ಒಂದು ಲೀಟರ್ ಹಾಲನ್ನು ಮಾತ್ರ ಉತ್ಪಾದಿಸಲಾಗುತ್ತದೆ. ಹೀಗಾಗಿ ಹಾಲು ಸ್ವಲ್ಪ ದುಬಾರಿಯಾಗಿದೆ ಮತ್ತು ಪಡೆಯುವುದು ಕಷ್ಟವಾಗುತ್ತದೆ.

ಕತ್ತೆ ಹಾಲಿನ ಪ್ರಯೋಜನಗಳು

ಕತ್ತೆ ಹಾಲಿನ ಬಳಕೆ ಸುಮಾರು 10 ಸಾವಿರ ವರ್ಷಗಳಿಂದಲೂ ಇದೆ. ಅದರ ಪೌಷ್ಟಿಕಾಂಶ ದಿಂದಾಗಿ ಸೌಂದರ್ಯವರ್ಧಕಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಹಲವಾರು ಆರೋಗ್ಯ ಪ್ರಯೋಜನಗಳಿಂದಾಗಿ ಇದು ಇತ್ತೀಚಿನ ದಿನಗಳಲ್ಲಿ ಇದಕ್ಕೆ ಮತ್ತೆ ಬೇಡಿಕೆ ಹೆಚ್ಚಾಗುತ್ತಿದೆ.

ಕತ್ತೆ ಹಾಲಿನ ಇತಿಹಾಸ

ಹಿಂದಿನ ಕಾಲದಲ್ಲಿ ಶಿಶುಗಳ ಆಹಾರಕ್ಕಾಗಿ ಕತ್ತೆ ಹಾಲನ್ನು ಬಳಸುವುದು ಸಾಮಾನ್ಯವಾಗಿತ್ತು. ಈಜಿಪ್ಟಿನ ರಾಣಿ ಕ್ಲಿಯೋಪಾತ್ರ ಕೂಡ ಅದನ್ನು ಇಷ್ಟಪಟ್ಟಿದ್ದಳು. ಅವಳು ತನ್ನ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ಕತ್ತೆ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದಳು. ದಂತಕಥೆಯ ಪ್ರಕಾರ ಅವಳಿಗೆ ನಿತ್ಯ ಅಗತ್ಯವಾದ ಹಾಲು ಒದಗಿಸಲು ಸುಮಾರು 700 ಕತ್ತೆಗಳು ಬೇಕಾಗಿದ್ದವು ಎನ್ನಲಾಗುತ್ತದೆ.

ಕತ್ತೆ ಹಾಲು ಮುಖದ ಚರ್ಮದಿಂದ ಸುಕ್ಕುಗಳನ್ನು ನಿವಾರಿಸುತ್ತದೆ. ಚರ್ಮವನ್ನು ಮೃದು ಮತ್ತು ಬಿಳಿಯನ್ನಾಗಿ ಮಾಡುತ್ತದೆ ಎಂದು ನಂಬಲಾಗಿದೆ. ರೋಮನ್ ಚಕ್ರವರ್ತಿ ನೀರೋನ ಹೆಂಡತಿ ಪೊಪ್ಪಿಯಾ ಸ್ನಾನಕ್ಕೂ ಸಹ ಕತ್ತೆ ಬಳಸುತ್ತಿದ್ದಳು. ಈ ಕಾರಣಕ್ಕಾಗಿ, ಅವಳು ಪ್ರಯಾಣ ಮಾಡುವಾಗ ಕತ್ತೆಗಳ ಹಿಂಡುಗಳನ್ನು ಜೊತೆಗೆ ಕೊಂಡೊಯ್ಯುತ್ತಿದ್ದಳು.

ಕತ್ತೆ ಹಾಲಿನ ವಿಶೇಷತೆ

ಕತ್ತೆ ಹಾಲು ಹಸುವಿನ ಹಾಲು ಮತ್ತು ಮಾನವ ಎದೆ ಹಾಲು ಹಲವಾರು ಪೌಷ್ಟಿಕಾಂಶಗಳನ್ನು ಹೊಂದಿದೆ. ಪ್ರೋಟೀನ್ ಜೊತೆಗೆ ಇದು ಜೀವಸತ್ವ, ವಿಶೇಷವಾಗಿ ವಿಟಮಿನ್ ಡಿ ಮತ್ತು ಖನಿಜಗಳನ್ನು ಒಳಗೊಂಡಿರುತ್ತದೆ. ಕತ್ತೆ ಹಾಲು ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಹೊಂದಿದ್ದು, ಇವುಗಳಲ್ಲಿ ಹೆಚ್ಚಿನವು ಕಾರ್ಬೋಹೈಡ್ರೇಟ್‌ಗಳಿಂದ ಲ್ಯಾಕ್ಟೋಸ್ ಹಾಲಿನಲ್ಲಿರುವ ಸಕ್ಕರೆಯ ರೂಪದಲ್ಲಿರುತ್ತದೆ.

ಹಸುವಿನ ಹಾಲಿನ ಪ್ರೋಟೀನ್ ಅಲರ್ಜಿಯನ್ನು ಹೊಂದಿರುವ ಅನೇಕ ಜನರು ಕತ್ತೆ ಹಾಲನ್ನು ಅದರ ಕಡಿಮೆ ಕ್ಯಾಸೀನ್ ಮಟ್ಟದಿಂದ ಸೇವಿಸಬಹುದು. ಏಕೆಂದರೆ ಕತ್ತೆ ಹಾಲು ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡುವುದಿಲ್ಲ.


ಕತ್ತೆ ಹಾಲಿನಲ್ಲಿ ಲ್ಯಾಕ್ಟೋಸ್, ಕ್ಯಾಲ್ಸಿಯಂ ಅನ್ನು ಒಳಗೊಂಡಿದ್ದು, ಬಲವಾದ ಮೂಳೆಗಳಿಗೆ ಅಗತ್ಯವಾದ ಖನಿಜಾಂಶವನ್ನು ಇದು ಒಳಗೊಂಡಿದೆ.

2010ರ ಪ್ರಯೋಗಾಲಯದ ಅಧ್ಯಯನದ ಪ್ರಕಾರ ಕತ್ತೆ ಹಾಲು ಸೈಟೊಕಿನ್‌ಗಳ ಬಿಡುಗಡೆಯನ್ನು ಹೆಚ್ಚಿಸುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವ ಪ್ರೋಟೀನ್‌ಗಳಾಗಿವೆ. ಹಾಲು ನೈಟ್ರಿಕ್ ಆಕ್ಸೈಡ್ ಅನ್ನು ಉತ್ಪಾದಿಸಲು ಜೀವಕೋಶಗಳಿಗೆ ಕಾರಣವಾಗುತ್ತದೆ. ಇದು ರಕ್ತನಾಳಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಿ ರಕ್ತದ ಹರಿವನ್ನು ಸುಧಾರಿಸುತ್ತದೆ.

Continue Reading

EXPLAINER

ಚುನಾವಣೆ ಫಲಿತಾಂಶದ ಬಳಿಕ ಅಭ್ಯರ್ಥಿಗೆ ಇವಿಎಂ ಪರಿಶೀಲನೆ ಅವಕಾಶ; ಏನಿದು ಸುಪ್ರೀಂ ಆದೇಶ?

ದೇಶದಲ್ಲಿ ಬ್ಯಾಲಟ್‌ ಪೇಪರ್‌ ಮತದಾನ ವ್ಯವಸ್ಥೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಇವಿಎಂನಲ್ಲಿ ದಾಖಲಾದ ಎಲ್ಲ ಮತಗಳನ್ನು ವಿವಿಪ್ಯಾಟ್‌ ಜತೆ ತಾಳೆ ಮಾಡಬೇಕು ಎಂಬ ಅರ್ಜಿಯನ್ನೂ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಆದರೆ, ಚುನಾವಣೆ ಫಲಿತಾಂಶದ ಬಳಿಕ ಅಭ್ಯರ್ಥಿಗೆ ಗೊಂದಲ, ಅನುಮಾನ ಇದ್ದರೆ, ಆತನು ಮತಯಂತ್ರಗಳನ್ನು ಪರಿಶೀಲನೆ ಮಾಡಿಸುವ ಅವಕಾಶವನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಇದು ಮಹತ್ವದ ಆದೇಶ ಎನಿಸಿದೆ.

VISTARANEWS.COM


on

VVPAT Verification
Koo

ನವದೆಹಲಿ: ಚುನಾವಣೆ ಮತಯಂತ್ರಗಳ (EVM) ಬದಲು ಬ್ಯಾಲಟ್‌ ಪೇಪರ್‌ ಮತದಾನ ವ್ಯವಸ್ಥೆ ಜಾರಿಯಾಗಬೇಕು, ಇವಿಎಂ ಹ್ಯಾಕ್‌ ಮಾಡಲಾಗುತ್ತಿದೆ, ಇವಿಎಂ-ವಿವಿಪ್ಯಾಟ್‌ ತಾಳೆಯಾಗಬೇಕು ಎಂದು ವಾದಿಸುತ್ತಿದ್ದವರಿಗೆ ಸುಪ್ರೀಂ ಕೋರ್ಟ್‌ ತೀರ್ಪು ಕಹಿಯಾಗಿದೆ. ಬ್ಯಾಲಟ್‌ ಪೇಪರ್‌ ಮತದಾನ ವ್ಯವಸ್ಥೆ ಜಾರಿಗೆ ಬರಬೇಕು, ಇವಿಎಂನಲ್ಲಿ ದಾಖಲಾದ ಎಲ್ಲ ಮತಗಳನ್ನು ತಾಳೆ (EVM VVPAT Verification) ಹಾಕಬೇಕು ಎಂಬುದಾಗಿ ಸಲ್ಲಿಸಿದ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ (Supreme Court) ಶುಕ್ರವಾರ (ಏಪ್ರಿಲ್‌ 26) ತಿರಸ್ಕರಿಸಿದೆ. ಇದರ ಜತೆಗೆ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶವೊಂದನ್ನು ನೀಡಿದೆ. ಚುನಾವಣೆ ಫಲಿತಾಂಶದ ಬಳಿಕ ಗೊಂದಲ ಇದ್ದರೆ ಆ ಅಭ್ಯರ್ಥಿಗಳು ಮತಯಂತ್ರ ಪರಿಶೀಲನೆಯ ಸೌಲಭ್ಯ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಏನಿದು ಹೊಸ ತಂತ್ರಜ್ಞಾನ?

“ದೇಶದಲ್ಲಿ ಚುನಾವಣೆ ವೇಳೆ ಪ್ರತಿಯೊಂದು ಮತಯಂತ್ರಗಳಿಗೂ ಮೈಕ್ರೋ ಕಂಟ್ರೋಲರ್‌ ಪ್ರೋಗ್ರಾಮ್‌ಗಳನ್ನು ಅಳವಡಿಸಬೇಕು. ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಮೈಕ್ರೋಕಂಟ್ರೋಲರ್‌ ಪ್ರೋಗ್ರಾಮ್‌ ಸೌಲಭ್ಯ ನೀಡಬೇಕು. ಅಂದರೆ, ಚುನಾವಣೆ ಫಲಿತಾಂಶದ ಬಳಿಕ ಯಾವುದೇ ಗೊಂದಲ ಇದ್ದರೆ, ಆ ಕ್ಷೇತ್ರದ ವ್ಯಾಪ್ತಿಯ ಚುನಾವಣಾ ಮತಯಂತ್ರಗಳನ್ನು ಎಂಜಿಯನಿಯರ್‌ಗಳ ತಂಡವು ಪರಿಶೀಲನೆ ಮಾಡಬೇಕು. ಚುನಾವಣೆ ಫಲಿತಾಂಶ ಪ್ರಕಟವಾದ ಏಳು ದಿನಗಳ ಒಳಗೆ ಈ ಕುರಿತು ಅಭ್ಯರ್ಥಿಯು ಮನವಿ ಮಾಡಿದರೆ ಮಾತ್ರ ಮತಯಂತ್ರಗಳ ಪರಿಶೀಲನೆ ಮಾಡಬಹುದು” ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ಇದು ಮತಯಂತ್ರಗಳ ದಕ್ಷತೆ ಪ್ರಶ್ನಿಸುವವರಿಗೆ ಒಳ್ಳೆಯ ಅವಕಾಶ ಸಿಕ್ಕಂತಾಗಿದೆ. ಯಾವುದೇ ಗೊಂದಲ, ಅನುಮಾನ ಇದ್ದರೆ ಅಭ್ಯರ್ಥಿಯು ಇನ್ನುಮುಂದೆ ತಜ್ಞರ ನೆರವು ಪಡೆಯಬಹುದಾಗಿದೆ. ಇದಲ್ಲದೆ, ಸಿಂಬಲ್‌ ಲೋಡಿಂಗ್‌ ಪ್ರಕ್ರಿಯೆ ಮುಗಿದ ಬಳಿಕ ಸಿಂಬಲ್‌ ಲೋಡಿಂಗ್‌ ಯುನಿಟ್‌ಗಳನ್ನು (SLU) ಸೀಲ್‌ ಮಾಡಿ, 45 ದಿನ ಸಂಗ್ರಹಿಸಬೇಕು ಎಂಬುದು ಸುಪ್ರೀಂ ಕೋರ್ಟ್‌ನ ಮತ್ತೊಂದು ಆದೇಶವಾಗಿದೆ. ಇದರಿಂದ ಇವಿಎಂ ಡೇಟಾ ಚುನಾವಣೆ ಮುಗಿದ 45 ದಿನಗಳವರೆಗೆ ಸಂಗ್ರಹಿಸಿಡಲು ಸಾಧ್ಯವಾಗಲಿದೆ.

ಬ್ಯಾಲಟ್‌ ಪೇಪರ್‌ ಬೇಕಾಗಿಲ್ಲ

ಅರ್ಜಿದಾರರ ವಾದ-ಪ್ರತಿವಾದವನ್ನು ಆಲಿಸಿದ್ದ, ಚುನಾವಣೆ ಆಯೋಗದ ಮಾಹಿತಿಯನ್ನೂ ಪಡೆದಿದ್ದ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ದೀಪಾಂಕರ್‌ ದತ್ತ ಅವರು, ಎಲ್ಲ ಅರ್ಜಿಗಳನ್ನು ತಿರಸ್ಕರಿಸಿದರು. “ನಾವು ತಾಂತ್ರಿಕ ವಿಭಾಗದ ಎಲ್ಲ ಮಾಹಿತಿಯನ್ನು ಗಮನಿಸಿದ್ದೇವೆ. ಹಾಗಾಗಿ, ಇವಿಎಂ ಮತಗಳನ್ನು ವಿವಿಪ್ಯಾಟ್‌ ಜತೆ ತಾಳೆ ಮಾಡುವ ಅವಶ್ಯಕತೆ ಇಲ್ಲ. ದೇಶದಲ್ಲಿ ಬ್ಯಾಲಟ್‌ ಪೇಪರ್‌ ವ್ಯವಸ್ಥೆಯೂ ಬೇಕಾಗಿಲ್ಲ ಹಾಗಾಗಿ, ಎಲ್ಲ ಅರ್ಜಿಗಳನ್ನು ತಿರಸ್ಕರಿಸಿದ್ದೇವೆ. ” ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಏನಿದು ಪ್ರಕರಣ?

ಚುನಾವಣಾ ಮತಯಂತ್ರಗಳಲ್ಲಿ ದಾಖಲಾದ ಎಲ್ಲ ಮತಗಳನ್ನು ವಿವಿಪ್ಯಾಟ್‌ ಯಂತ್ರಗಳ ಜತೆ ತಾಳೆ ಹಾಕಬೇಕು ಎಂಬುದಾಗಿ ನಿರ್ದೇಶನ ನೀಡುವಂತೆ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಸಂಸ್ಥೆ ಸೇರಿ ಹಲವರು ಅರ್ಜಿ ಸಲ್ಲಿಸಿದ್ದಾರೆ. ಈಗ ಪ್ರತಿ ಕ್ಷೇತ್ರದಲ್ಲಿ ಐದು ಮತಯಂತ್ರಗಳನ್ನು ವಿವಿಪ್ಯಾಟ್‌ಗಳ ಜತೆ ತಾಳೆ ಮಾಡಲಾಗುತ್ತದೆ. ಶೇ.100ರಷ್ಟು ಇವಿಎಂಗಳನ್ನು ವಿವಿಪ್ಯಾಟ್‌ಗಳ ಜತೆ ತಾಳೆ ಮಾಡಲು ಆದೇಶ ನೀಡಬೇಕು ಎಂಬುದು ಅರ್ಜಿದಾರರ ವಾದವಾಗಿತ್ತು.

VVPAT ಎಂದರೇನು?

VVPAT ಎಂದರೆ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್. ಮತವನ್ನು ಸರಿಯಾಗಿ ಚಲಾಯಿಸಲಾಗಿದೆಯೇ ಮತ್ತು ಮತದಾರ ಚಲಾಯಿಸಿದ ಅಭ್ಯರ್ಥಿಗೇ ಆ ಮತ ಹೋಗಿದೆಯೇ ಎಂದು ನೋಡಲು ಅವಕಾಶವಿರುವ ಯಂತ್ರ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದಿನ ಬಟನ್ ಅನ್ನು ಒಮ್ಮೆ ಒತ್ತಿದರೆ, ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್‌ಗೆ ಸಂಪರ್ಕಗೊಂಡಿರುವ VVPAT, ಏಳು ಸೆಕೆಂಡುಗಳ ಕಾಲ ಮತದಾರರಿಗೆ ಗೋಚರಿಸುವ ಕಾಗದದ ಸ್ಲಿಪ್ ಅನ್ನು ಉತ್ಪಾದಿಸುತ್ತದೆ. ಅದರ ನಂತರ, ಪೇಪರ್ ಸ್ಲಿಪ್ VVPAT ಯಂತ್ರದಲ್ಲಿರುವ ಡ್ರಾಪ್ ಬಾಕ್ಸ್‌ಗೆ ಬೀಳುತ್ತದೆ.

ತಾಳೆ ಹೇಗೆ ಮಾಡಲಾಗುತ್ತದೆ?

ಪ್ರಸ್ತುತ, ಪ್ರತಿ ಅಸೆಂಬ್ಲಿ ವಿಭಾಗದಲ್ಲಿಯೂ 5 ವಿವಿಪ್ಯಾಟ್ ಯಂತ್ರಗಳಲ್ಲಿ ದಾಖಲಾದ ಮತಗಳನ್ನು ಇವಿಎಂಗಳೊಂದಿಗೆ ಕ್ರಾಸ್-ಚೆಕ್ ಮಾಡಲಾಗುತ್ತದೆ. 100 ಶೇಕಡ ಇವಿಎಂಗಳಲ್ಲಿ ದಾಖಲಾದ ಮತಗಳೊಂದಿಗೆ ವಿವಿಪ್ಯಾಟ್ ಸ್ಲಿಪ್‌ಗಳನ್ನು ಕ್ರಾಸ್ ಚೆಕ್ ಮಾಡಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳು ಬಯಸಿವೆ. ವಿವಿಪ್ಯಾಟ್‌ನಲ್ಲಿ ಏಳು ಸೆಕೆಂಡ್ ಲೈಟ್ ಆನ್ ಆಗಿದ್ದು, ಮತದಾರರು ತಮ್ಮ ಮತವನ್ನು ಸರಿಯಾಗಿ ದಾಖಲಿಸಲಾಗಿದೆಯೇ ಎಂದು ಪರಿಶೀಲಿಸಬಹುದು ಎಂದು ಅರ್ಜಿದಾರರು ಕೋರಿದ್ದಾರೆ. ಪೇಪರ್ ಸ್ಲಿಪ್ ಅನ್ನು ಮತದಾರರಿಗೆ ನೀಡುವುದು ಮತ್ತೊಂದು ಸಲಹೆಯಾಗಿದೆ. ಚುನಾವಣಾ ಆಯೋಗ ಇದನ್ನು ವಿರೋಧಿಸಿದೆ. ಇದು ಮತದಾನದ ಗೌಪ್ಯತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ದುರ್ಬಳಕೆಯಾಗಬಹುದು ಎಂದು ಹೇಳಿದೆ.

ಚುನಾವಣೆ ಆಯೋಗದ ವಾದ ಏನು?

ಚುನಾವಣಾ ಆಯೋಗದ ಪ್ರಕಾರ ಇವಿಎಂ ವ್ಯವಸ್ಥೆ ಫೂಲ್ ಪ್ರೂಫ್ ಆಗಿದೆ. ಇದು ಮತ ಎಣಿಕೆ ಸಮಯವನ್ನು ಉಳಿಸುತ್ತದೆ, ಟ್ಯಾಂಪರ್ ಪ್ರೂಫ್ ಮತ್ತು ಬಳಕೆದಾರ ಸ್ನೇಹಿಯಾಗಿದೆ ಎಂದು ಚುನಾವಣಾ ಸಂಸ್ಥೆ ಹೇಳಿದೆ. ಇವಿಎಂಗಳು ಹಗುರವಾಗಿವೆ ಮತ್ತು ಸದೃಢವಾಗಿವೆ- ಮತಗಟ್ಟೆ ಅಧಿಕಾರಿಗಳು ದೂರದ ಕುಗ್ರಾಮಗಳು, ಗುಡ್ಡಗಾಡು ಪ್ರದೇಶಗಳನ್ನು ತಲುಪಲು ಟ್ರೆಕ್ಕಿಂಗ್‌ ಮಾಡಬೇಕಾದ ದೇಶದಲ್ಲಿ ಇದು ನಿರ್ಣಾಯಕವಾಗಿದೆ. ಇವಿಎಂ ಸ್ವಯಂ ರೋಗನಿರ್ಣಯಕ್ಕೆ ಸಮರ್ಥವಾಗಿದೆ ಮತ್ತು ಸ್ವತಂತ್ರವಾಗಿದೆ.

ಇವಿಎಂಗಳಿಗೆ ವಿದ್ಯುತ್ ಅಗತ್ಯವಿಲ್ಲ ಮತ್ತು ಬ್ಯಾಟರಿ/ಪವರ್ ಪ್ಯಾಕ್‌ ಇದರೊಂದಿಗೆ ಬರುತ್ತದೆ. ಸ್ಥಿರವಾದ ವಿದ್ಯುತ್ ಸರಬರಾಜನ್ನು ಹೊಂದಿರದ ಪ್ರದೇಶಗಳಲ್ಲಿ ಮತದಾನವನ್ನು ಸಕ್ರಿಯಗೊಳಿಸಲು ಇದು ಮತ್ತೊಂದು ನಿರ್ಣಾಯಕ ವೈಶಿಷ್ಟ್ಯ. ಪ್ರತಿ ಚುನಾವಣೆಗೂ ಮುನ್ನ ಇವಿಎಂ ಮತ್ತು ವಿವಿಪ್ಯಾಟ್‌ಗಳ ಮೊದಲ ಹಂತದ ತಪಾಸಣೆ (ಎಫ್‌ಎಲ್‌ಸಿ) ನಡೆಸಲಾಗುತ್ತದೆ. ಈ ಪರಿಶೀಲನೆಯ ಸಮಯದಲ್ಲಿ, ಇವಿಎಂಗಳಲ್ಲಿನ ಡೇಟಾವನ್ನು ಅಳಿಸಲಾಗುತ್ತದೆ ಮತ್ತು ವಿವಿಧ ಘಟಕಗಳ ಕಾರ್ಯವನ್ನು ಪ್ರದರ್ಶಿಸಲಾಗುತ್ತದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಈ ಪರಿಶೀಲನೆ ನಡೆಸಲಾಗುತ್ತದೆ.

ಇದನ್ನೂ ಓದಿ: VVPAT Verification: ಬ್ಯಾಲಟ್‌ ಪೇಪರ್‌ ಬೇಕಿಲ್ಲ, ವಿವಿಪ್ಯಾಟ್‌ 100% ತಾಳೆಯೂ ಬೇಡ ಎಂದ ಸುಪ್ರೀಂ; ಇವಿಎಂ ವಿರೋಧಿಗಳಿಗೆ ಹಿನ್ನಡೆ

Continue Reading
Advertisement
Sleeping Tips
ಆರೋಗ್ಯ16 mins ago

Sleeping Tips: ದಿನಕ್ಕೆಷ್ಟು ತಾಸು ನಿದ್ದೆ ಮಾಡುತ್ತೀರಿ ನೀವು? ಇದು ಗಂಭೀರ ವಿಷಯ!

Rishabh Pant
ಅಂಕಣ19 mins ago

ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

Karnataka Weather
ಕರ್ನಾಟಕ46 mins ago

Karnataka Weather: ಇಂದು ಬೀದರ್, ಕಲಬುರಗಿ ಸೇರಿ ಹಲವೆಡೆ ಶಾಖದ ಅಲೆ ಎಚ್ಚರಿಕೆ; ಇನ್ನೂ ಎಲ್ಲಿಯವರೆಗೆ ಈ ರಣ ಬಿಸಿಲು?

Tooth Decay
ಆರೋಗ್ಯ1 hour ago

Tooth Decay: ನಮ್ಮ ಈ ದುರಭ್ಯಾಸಗಳು ಹಲ್ಲಿನ ಹುಳುಕಿಗೆ ಕಾರಣವಾಗುತ್ತವೆ

dina bhavishya read your daily horoscope predictions for April 29 2024
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

love jihad
ಕರ್ನಾಟಕ7 hours ago

Love Jihad Case: ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್; ಬಾಲಕಿಯನ್ನು ಪುಸಲಾಯಿಸಿ ಕರೆತಂದ ಅನ್ಯಕೋಮಿನ ಯುವಕ!

BUS
ಕರ್ನಾಟಕ7 hours ago

ಚಿಕ್ಕಮಗಳೂರಿನ ದತ್ತಪೀಠದಲ್ಲಿ 100 ಅಡಿ ಆಳಕ್ಕೆ ಬಿದ್ದ ಪ್ರವಾಸಿ ಬಸ್;‌ ಬಾಲಕ ಸಾವು, 29 ಮಂದಿಗೆ ಗಾಯ

ತುಮಕೂರು8 hours ago

Sira News: ಬಿಸಿಲ ಬೇಗೆಗೆ ಮತ್ಸ್ಯಗಳ ಮಾರಣಹೋಮ; ನೀರಿಲ್ಲದೇ ವಿಲವಿಲನೇ ಒದ್ದಾಡಿ ಸಾವಿರಾರು ಮೀನುಗಳ ಸಾವು

CSK vs SRH
ಕ್ರೀಡೆ8 hours ago

CSK vs SRH: ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದ ಚೆನ್ನೈ; ಹೈದರಾಬಾದ್​ ವಿರುದ್ಧ 78 ರನ್​ ಅಮೋಘ ಜಯ

Notes
ಕರ್ನಾಟಕ8 hours ago

ಬೆಂಗಳೂರಿನಲ್ಲಿ ಆರ್‌ಬಿಐ ನಿಯಮ ಉಲ್ಲಂಘಿಸಿ ನೋಟು ನಗದೀಕರಣ; ಇಬ್ಬರಿಗೆ 4 ವರ್ಷ ಜೈಲು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 29 2024
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 202414 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 202417 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 202419 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 202419 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ22 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ2 days ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

ಟ್ರೆಂಡಿಂಗ್‌