ಪ್ರಮುಖ ಸುದ್ದಿ
UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?
ಯುಪಿಐನ ಬಳಕೆಯ ಮೇಲೆ ಗ್ರಾಹಕರಿಗೆ ಯಾವುದೇ ಶುಲ್ಕ ಇರುವುದಿಲ್ಲ, ಸಾಮಾನ್ಯ ಹಾಗೂ ಬಹುತೇಕ ಯುಪಿಐ ಪಾವತಿ ಉಚಿತವಾಗಿದೆ ಎಂದು (UPI transactions ) ಎನ್ಪಿಸಿಐ ಹೇಳಿದೆ. ಹಾಗಾದರೆ ಯಾರಿಗೆ, ಯಾವುದಕ್ಕೆ
ಇತ್ತೀಚಿನ ಇಂಟರ್ಚೇಂಜ್ ಶುಲ್ಕ ಅನ್ವಯವಾಗುತ್ತದೆ? ಇಲ್ಲಿದೆ ವಿವರ.
ನವ ದೆಹಲಿ: ಬ್ಯಾಂಕ್ ಖಾತೆಗೆ ಲಿಂಕ್ ಹೊಂದಿರುವ ಯುಪಿಐ ಬಳಕೆಗೆ (UPI transactions) ಸಂಬಂಧಿಸಿ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಇದು ಉಚಿತ ಎಂದು ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಬುಧವಾರ ಸ್ಪಷ್ಟೀಕರಣ ನೀಡಿದೆ. ಇದರದೊಂದಿಗೆ ಯುಪಿಐ ಮೂಲಕ ಹಣ ಪಾವತಿಗೆ ಶುಲ್ಕ ( Interchange fee ) ವಿಧಿಸಲಾಗುತ್ತದೆ ಎಂಬ ವದಂತಿಗಳಿಗೆ ತೆರೆ ಎಳೆದಿದೆ.
ಸಾಮಾನ್ಯವಾಗಿ ಪೇಟಿಎಂ, ಗೂಗಲ್ ಪೇ, ಫೋನ್ ಪೇ ಇತ್ಯಾದಿ ಯುಪಿಐ ಆಧರಿತ ಆ್ಯಪ್ ಮೂಲಕ ನಡೆಯುವ ಹಣಕಾಸು ವರ್ಗಾವಣೆಗಳು ಬ್ಯಾಂಕ್ ಖಾತೆಗೆ ಲಿಂಕ್ ಹೊಂದಿರುತ್ತವೆ. 99.9% ವರ್ಗಾವಣೆಗಳು ಇಂಥದ್ದೇ ಆಗಿರುತ್ತವೆ. ಹಾಗೂ ಇವುಗಳು ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಸಂಪೂರ್ಣ ಉಚಿತವಾಗಿರುತ್ತದೆ ಎಂದು ಎನ್ಪಿಸಿಐ ತಿಳಿಸಿದೆ.
ಪ್ರಿ-ಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಗಳಿಗೆ ಮಾತ್ರ ಶುಲ್ಕ:
ಇತ್ತೀಚೆಗೆ ಪ್ರೀಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಸ್ಗಳಿಗೆ (PPI Wallets) ಯುಪಿಐ ಇಕೊಸಿಸ್ಟಮ್ ಭಾಗವಾಗಲು ಅನುಮತಿ ನೀಡಲಾಗಿದೆ. ಹೀಗಾಗಿ ಪಿಪಿಐ ಮರ್ಚೆಂಟ್ ಹಣಕಾಸು ವರ್ಗಾವಣೆಗೆ ಮಾತ್ರ ಇಂಟರ್ಚೇಂಜ್ ಶುಲ್ಕ ವಿಧಿಸಲು ಅವಕಾಶ ಇದೆ. ಇಲ್ಲೂ ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಎನ್ಪಿಸಿಐ ತಿಳಿಸಿದೆ. ಹಾಗಾದರೆ ಯಾರು ಶುಲ್ಕ ಕೊಡಬೇಕು?
1.1 % ಶುಲ್ಕ ಪಾವತಿಸುವವರು ಯಾರು?
ಗಿಫ್ಟ್ ವೋಚರ್, ವ್ಯಾಲೆಟ್ ಇತ್ಯಾದಿ ಪ್ರೀಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಗಳ ಮೂಲಕ 2,000 ರೂ.ಗಿಂತ ಹೆಚ್ಚಿನ ಯುಪಿಐ ವರ್ಗಾವಣೆಗಳಿಗೆ ಸಂಬಂಧಿಸಿ ಗ್ರಾಹಕರು ಅಥವಾ ವ್ಯಾಪಾರಿಗಳಿಗೆ 1.1% ಶುಲ್ಕ ಅನ್ವಯವಾಗುವುದಿಲ್ಲ. ಬದಲಿಗೆ ಈ ಗಿಫ್ಟ್ ವೋಚರ್, ವ್ಯಾಲೆಟ್ ನೀಡುವ ಪೇಟಿಎಂ, ಓಲಾ ಫೈನಾನ್ಷಿಯಲ್ ಸರ್ವೀಸ್ ಮೊದಲಾದ ಕಂಪನಿಗಳು ಅಥವಾ ಸಂಸ್ಥೆಗಳು ಈ 1.1% ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ವಿವಾದ ಸೃಷ್ಟಿಯಾಗಿದ್ದೇಕೆ?
ಗಿಫ್ಟ್ ಕಾರ್ಡ್, ವ್ಯಾಲೆಟ್ ಮತ್ತಿತರ ಪ್ರಿಪೇಯ್ಡ್ ಇನ್ಸ್ಟ್ರುಮೆಂಟ್ಗಳಲ್ಲಿ (Prepaid payment instruments transactions) 2000 ರೂ.ಗಿಂತ ಹೆಚ್ಚಿನ ಮೊತ್ತದ ಯುಪಿಐ ವರ್ಗಾವಣೆಗಳಿಗೆ 2023ರ ಏಪ್ರಿಲ್ 1ರಿಂದ 1.1% ಇಂಟರ್ಚೇಂಜ್ ಶುಲ್ಕ ಅನ್ವಯವಾಗುತ್ತದೆ ಎಂದು ವರದಿಯಾಗಿತ್ತು. ಆದರೆ ಈ ಶುಲ್ಕ ಯಾರಿಗೆ ಅನ್ವಯವಾಗುತ್ತದೆ ಎಂಬುದರ ಬಗ್ಗೆ ಗೊಂದಲ ಉಂಟಾಗಿತ್ತು. ಪ್ರತಿ ತಿಂಗಳೂ ಸರಾಸರಿ 800 ಕೋಟಿಗೂ ಹೆಚ್ಚು ಹಣಕಾಸು ವರ್ಗಾವಣೆಗಳು ಯುಪಿಐ ಮೂಲಕ ನಡೆಯುತ್ತಿರುವುದರಿಂದ ಗ್ರಾಹಕರಲ್ಲಿ ಗೊಂದಲ ಉಂಟಾಗಿತ್ತು. ಇದೀಗ ಎನ್ಪಿಸಿಐ ಗೊಂದಲಕ್ಕೆ ತೆರೆ ಎಳೆದಿದೆ. ಎನ್ಪಿಸಿಐ 2008ರಲ್ಲಿ ಸ್ಥಾಪನೆಯಾಗಿದ್ದು, ರಿಟೇಲ್ ಪೇಮೆಂಟ್ ಮತ್ತು ಸೆಟ್ಲ್ಮೆಂಟ್ ವ್ಯವಸ್ಥೆಗಳ ಒಕ್ಕೂಟ ವ್ಯವಸ್ಥೆಯಾಗಿದೆ. ಭಾರತದ ಡಿಜಿಟಲೀಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.
ದೇಶ
Mann Ki Baat : 101ನೇ ಮನ್ ಕಿ ಬಾತ್ನಲ್ಲಿ ವೀರ ಸಾವರ್ಕರ್ ವಿಚಾರಗಳ ಬಗ್ಗೆ ಮೋದಿ ಹೇಳಿದ್ದೇನು?
Mann Ki Baat ಪ್ರಧಾನಿ ನರೇಂದ್ರ ಮೋದಿ ಅವರು 101ನೇ ಮನ್ ಕಿ ಬಾತ್ನಲ್ಲಿ ವೀರ ಸಾವರ್ಕರ್, ಸಂತ ಕಬೀರ್ ದಾಸರು, ಎನ್ಟಿಆರ್ 100ನೇ ಜನ್ಮ ದಿನಾಚರಣೆ, ಯುವ ಸಂಗಮ, ಮ್ಯೂಸಿಯಂಗಳ ಮಹತ್ವ, ಕೆರೆಗಳ ಸಂರಕ್ಷಣೆ ಹೀಗೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು.
ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು 101ನೇ ಮನ್ ಕಿ ಬಾತ್ (Mann Ki Baat) ಬಾನುಲಿ ಕಾರ್ಯಕ್ರಮದಲ್ಲಿ ಭಾನುವಾರ, ವೀರ ಸಾವರ್ಕರ್ ಜನ್ಮದಿನದ ಪ್ರಯುಕ್ತ ಅವರ ಬದುಕು-ಸಾಧನೆಯನ್ನು ಸ್ಮರಿಸಿದರು.
ಇಂದು ಮೇ 28ರಂದು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಜನ್ಮ ದಿನ. ಅವರ ತ್ಯಾಗ, ಸಾಹಸ, ಹೋರಾಟ, ವಿಶಾಲ ವ್ಯಕ್ತಿತ್ವ, ಸ್ವಾಭಿಮಾನ, ದೃಢತೆ, ಜೀವನದ ಆದರ್ಶಗಳು ಇಂದಿಗೂ ಭಾರತೀಯರನ್ನು ಪ್ರೇರೇಪಿಸುತ್ತವೆ. ನಾನು ಅಂಡಮಾನ್ ನಿಕೋಬಾರ್ಗೆ ಹೋಗಿದ್ದಾಗ ಸಾವರ್ಕರ್ ಕಾಲಾಪಾನಿ ಶಿಕ್ಷೆ ಎದುರಿಸಿದ್ದ ಕಾರಾಗೃಹದ ಕೊಠಡಿಗೆ ಭೇಟಿ ನೀಡಿದ್ದೆ. ಆ ದಿನವನ್ನು ಎಂದಿಗೂ ಮರೆಯಲಾರೆ. ಸ್ವಾತಂತ್ರ್ಯ ಆಂದೋಲನದ ಜತೆಗೆ ಸಾಮಾಜಿಕ ಪರಿವರ್ತನೆಗೆ ಅವರ ಕೊಡುಗೆ ಅಮೋಘ ಎಂದು ಪ್ರಧಾನಿ ಮೋದಿ ವಿವರಿಸಿದರು.
ಸಂತ ಕಬೀರ್ ದಾಸರ ಸ್ಮರಣೆ:
ಜೂನ್ 4ರಂದು ಸಂತ ಕಬೀರ್ ದಾಸರ ಜಯಂತಿ ನಡೆಯಲಿದೆ. ಅವರ ಸಂದೇಶಗಳು ಇಂದಿಗೂ ಪ್ರಸ್ತುತ. ಸಮಾಜದ ಎಲ್ಲ ವರ್ಗದ ಜನರೂ ನೀರಿಗಾಗಿ ಕೆರೆ, ಬಾವಿಯನ್ನು ಆಶ್ರಯಿಸುತ್ತಾರೆ. ಎಲ್ಲರಿಗೂ ನೀರು ಸಮಾನ. ಅದು ಬೇರೆ ಬೇರೆಯಾಗಿರುವುದಿಲ್ಲ. ಅದೇ ರೀತಿ ಎಲ್ಲರೂ ಮಾನವರೇ ಎಂಬ ಸಮಾನತೆಯ ಆದರ್ಶವನ್ನು ಸಾರಿದವರು ಕಬೀರರು ಎಂದರು.
ಎನ್ಟಿಆರ್ 100ನೇ ಜನ್ಮದಿನಾಚರಣೆ:
ರಾಜಕಾರಣ ಮತ್ತು ಸಿನಿಮಾರಂಗದಲ್ಲಿ ಅಗಾಧ ಸಾಧನೆ ಮಾಡಿರುವ ಎನ್ಟಿ ಆರ್ ಅವರ (ಎನ್ಟಿ ರಾಮರಾವ್) ನೂರನೇ ಜನ್ಮ ದಿನವನ್ನು ಇಂದು ಆಚರಿಸಲಾಗುತ್ತಿದೆ. ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಐತಿಹಾಸಿಕ, ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಮ, ಕೃಷ್ಣರ ಪಾತ್ರಗಳಲ್ಲಿ ಮಿಂಚಿದ್ದಾರೆ. ರಾಜಕಾರಣದಲ್ಲೂ ಅಪಾರ ಸೇವೆ ನೀಡಿದ್ದಾರೆ. ಅವರಿಗೆ ನಮನಗಳು ಎಂದರು.
ಮನ್ ಕೀ ಬಾತ್ 101ನೇ ಸಂಚಿಕೆ:
ಮನ್ ಕೀ ಬಾತ್ 100ನೇ ಸಂಚಿಕೆಯನ್ನು ಪೂರ್ಣಗೊಳಿಸಿ 101ನೇ ಸಂಚಿಕೆಗೆ ಪದಾರ್ಪಣೆ ಮಾಡಿರುವ ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದರು. ಜಗತ್ತಿನಾದ್ಯಂತ ಜನತೆ ಮನ್ ಕೀ ಬಾತ್ ಈ ಬಾನುಲಿ ಕಾರ್ಯಕ್ರಮವನ್ನು ಆಲಿಸಿದ್ದಾರೆ. ನ್ಯೂಜಿಲೆಂಡ್ನಲ್ಲಿ ನೂರು ವರ್ಷದ ತಾಯಿಯೊಬ್ಬರು ಆಶೀರ್ವದಿಸಿದ ವಿಡಿಯೊ ಒಂದನ್ನೂ ನೋಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಯುವ ಸಂಗಮದ ಪ್ರಸ್ತಾಪ:
ಕಳೆದ ಸಲ ಮನ್ ಕಿ ಬಾತ್ನಲ್ಲಿ ಕಾಶಿ, ತಮಿಳು ಸಂಗಮದ ಬಗ್ಗೆ ಮಾತನಾಡಿದ್ದೆ. ವಾರಾಣಸಿಯಲ್ಲಿ ತಮಿಳು, ತೆಲುಗು ಸಂಗಮ ನಡೆದಿದೆ. ಇದು ಏಕ್ ಭಾರತ್, ಶ್ರೇಷ್ಠ ಭಾರತ್ ಭಾವನೆಯನ್ನು ಉದ್ದೀಪಿಸುತ್ತದೆ. ಈಗ ಯುವ ಸಂಗಮವೂ ನಡೆಯುತ್ತಿದೆ ಎಂದ ಪ್ರಧಾನಿ ಮೋದಿ, ಈ ಅಭಿಯಾನದಲ್ಲಿ ತೊಡಗಿಸಿರುವ ಇಬ್ಬರು ಯುವಕ-ಯುವತಿಯರನ್ನು ದೂರವಾಣಿ ಮೂಲಕ ಮಾತನಾಡಿಸಿದರು. ಅರುಣಾಚಲ ಪ್ರದೇಶದ ಗ್ಯಾಮರ್ ನುಕ್ಮ್ ಹಾಗೂ ಬಿಹಾರದ ವಿಶಾಖಾ ಸಿನ್ಹಾ ಜತೆ ಮಾತನಾಡಿದರು.
ಅರುಣಾಚಲಪ್ರದೇಶದ ಗ್ಯಾಮರ್ ನುಕುಮ್ ಅವರು ಎನ್ಐಟಿಯಲ್ಲಿ ಓದುತ್ತಿದ್ದಾರೆ. ಮೆಕಾನಿಕಲ್ ಎಂಜಿನಿಯರಿಂಗ್ ಕಲಿಯುತ್ತಿದ್ದಾರೆ. ತಂದೆ ಸಣ್ಣ ಪುಟ್ಟ ಬಿಸಿನೆಸ್, ಕೃಷಿ ಮಾಡುತ್ತಿದ್ದಾರೆ. ಯುವ ಸಂಗಮದ ಬಗ್ಗೆ ಇಂಟರ್ ನೆಟ್ನಲ್ಲಿ ತಿಳಿದ ಗ್ಯಾಮರ್ ಅವರು ಆಸಕ್ತಿ ಬೆಳೆಸಿದರು. ಯುವ ಸಂಗಮ ಅಡಿಯಲ್ಲಿ ರಾಜಸ್ಥಾನಕ್ಕೆ ತೆರಳಿದ್ದರು. ಅಲ್ಲಿನ ಅನುಭವ ಚೆನ್ನಾಗಿತ್ತು ಎಂದರು. ರಾಜಸ್ಥಾನದ ದೊಡ್ಡ ಸರೋವರಗಳನ್ನೂ ನೋಡಿದ್ದರಂತೆ. ಎರಡೂ ರಾಜ್ಯಗಳಲ್ಲಿ ದೇಶದ ಬಗ್ಗೆ ಪ್ರೀತಿ, ಅಭಿಮಾನ, ಗರ್ವವನ್ನು ನಾನು ಕಂಡೆ ಎಂದು ಪ್ರಧಾನಿ ಮೋದಿಯವರಿಗೆ ಗ್ಯಾಮರ್ ವಿವರಿಸಿದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರೆ, ಬ್ಲಾಗ್ಗಳಲ್ಲಿ ಬರೆಯುವಂತೆ ಪ್ರಧಾನಿ ಸಲಹೆ ನೀಡಿದರು.
ಬಿಹಾರದ ವಿಶಾಖಾ ಸಿನ್ಹಾ ಅವರು ಯುವ ಸಂಗಮ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ತಮಿಳುನಾಡಿಗೆ ಭೇಟಿ ನೀಡಿದ್ದರು. ಯುವಜನತೆಗೆ ಇಂಥ ಉತ್ತಮ ಕಾರ್ಯಕ್ರಮ ನೀಡಿದ್ದಕ್ಕೆ ಪ್ರಧಾನಿಗೆ ಧನ್ಯವಾದ ಸಲ್ಲಿಸಿದರು. ತಮಿಳುನಾಡು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಭೇಟಿ ಖುಶಿಯಾಯಿತು. ಅಲ್ಲಿ ಅನೇಕ ಹೊಸ ಸ್ನೇಹಿತರ ಪರಿಚಯವಾಯಿತು. ಇಸ್ರೊ ಕಚೇರಿಗೆ ಭೇಟಿ ನೀಡುವ ಅವಕಾಶವೂ ಸಿಕ್ಕಿತ್ತು. ತಮಿಳುನಾಡಿನ ಇಡ್ಲಿ, ಉಪ್ಪಿಟ್ಟು, ದೋಸೆಯನ್ನು ಸವಿಯುವ ಅವಕಾಶ ಕೂಡ ಸಿಕ್ಕಿತು ಎಂದರು.
ಹಿರೋಷಿಮಾ ಮ್ಯೂಸಿಯಂ ಬಗ್ಗೆ ಮಾತನಾಡಿದ ಮೋದಿ: ಪ್ರಧಾನಿ ಮೋದಿ ಅವರು ಇತ್ತೀಚೆಗೆ ಜಪಾನಿನ ಹಿರೋಷಿಮಾಗೆ ಭೇಟಿ ನೀಡಿದ್ದರು. ಅಲ್ಲಿ ನಿರ್ಮಿಸಿರುವ ಯುದ್ಧ ಸ್ಮಾರಕ ಮತ್ತು ಮ್ಯೂಸಿಯಂ ಬಗ್ಗೆ ಪ್ರಸ್ತಾಪಿಸಿದರು. ದೇಶದಲ್ಲೂ ಭಿನ್ನ ಮ್ಯೂಸಿಯಂ ನಿರ್ಮಾಣವಾಗುತ್ತಿದೆ. ದೇಶದ ಸಂಸ್ಕೃತಿ, ಇತಿಹಾಸ, ರಾಷ್ಟ್ರೀಯತೆಯನ್ನು ಅರಿತುಕೊಳ್ಳಲು ಎಲ್ಲರೂ ಮ್ಯೂಸಿಯಂಗಳಿಗೆ ಭೇಟಿ ನೀಡಬೇಕು. ಮಕ್ಕಳನ್ನು ಕರೆದುಕೊಂಡು ಹೋಗಬೇಕು ಎಂದರು.
50,000 ಅಮೃತ ಸರೋವರಗಳ ನಿರ್ಮಾಣ: ದೇಶದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ 75 ಸರೋವರಗಳನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ನಿಮಗೆ ಅಚ್ಚರಿಯಾಗಬಹುದು, ಇದುವರೆಗೆ 50,000ಕ್ಕೂ ಹೆಚ್ಚು ಅಮೃತ ಸರೋವರಗಳನ್ನು ನಿರ್ಮಿಸಲಾಗಿದೆ. ಇದು ಜಲ ಸಂರಕ್ಷಣೆ ದೃಷ್ಟಿಯಿಂದ ದೊಡ್ಡ ನಡೆಯಾಗಿದೆ ಎಂದರು. ಫ್ಲೋಕ್ಸ್ ಜೆನ್, ಲಿವ್ ಎನ್ ಸೈನ್ಸ್ ಎಂಬ ಜಲ ಸಂರಕ್ಷಣೆ ಕುರಿತ ಸ್ಟಾರ್ಟಪ್ಗಳ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು.
ಇದನ್ನೂ ಓದಿ: Mann Ki Baat: ಮೋದಿಯವರ ಮನ್ ಕೀ ಬಾತ್ ಒಂದು ಎಪಿಸೋಡ್ಗೆ 8.3 ಕೋಟಿ ರೂ.ವೆಚ್ಚ?; ವೈರಲ್ ಸಂದೇಶ ನಿಜವೇ?
ಅಂಕಣ
Savarkar Jayanti: ಭಾರತೀಯರನ್ನು ಸ್ವಸ್ವರೂಪದ ಅರಿವಿನೆಡೆಗೆ ನಡೆಸಿದ ವೀರ ಸಾವರ್ಕರ್
ಭಾರತವನ್ನೂ ಇಂಗ್ಲೆಂಡ್, ಅಮೆರಿಕ ಅಥವಾ ರಷ್ಯಾ, ಚೀನಾಗಳಂತೆ ಎರಕಹೊಯ್ಯುವ ಧಾವಂತದಲ್ಲಿ ಅಂದಿನ ರಾಜಕೀಯ ನೇತೃತ್ತ್ವ ಯೋಚಿಸುತ್ತಿದ್ದಾಗ, ತಮ್ಮ ಸ್ವತಂತ್ರ ಚಿಂತನೆಯಿಂದ ವಿಚಾರಮಂಥನ ನಡೆಸಿ ಪ್ರಸ್ಫುಟ ರಾಷ್ಟ್ರೀಯತೆಯ ದೃಷ್ಟಿಯನ್ನು ನೀಡಿದವರು ಸಾವರ್ಕರ್.
ಪು. ರವಿವರ್ಮ, ಉಪನ್ಯಾಸಕ
ಪ್ರಜಾಪ್ರಭುತ್ವದ ಮಂದಿರ ಎನಿಸಿರುವ ನವ ಸಂಸತ್ ಭವನ ಇಂದು ಸ್ವತ್ತ್ವದ, ಸ್ವಾಭಿಮಾನದ ಬುನಾದಿಯ ಮೇಲೆ ತಲೆಯೆತ್ತಿ ನಿಂತಿರುವುದು ರಾಷ್ಟ್ರದ ಸಾರ್ವಭೌಮ ಜೀವನದಲ್ಲಿ ಒಂದು ಸುವರ್ಣಸಂಧಿ. ಅದೂ ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಜನ್ಮದಿನದಂದೇ ಈ ಸ್ವತ್ತ್ವಪೂರ್ಣ ಸಂಸತ್ ಭವನದ ಲೋಕಾರ್ಪಣವಾಗುತ್ತಿರುವುದು ಸವಿಶೇಷ. ರಾಷ್ಟ್ರಜೀವನವನ್ನು ಯಾವ ಆದರ್ಶದ ಬೆಳಕಿನಲ್ಲಿ, ಯಾವ ಸಿದ್ಧಾಂತದ ಅಡಿಗಲ್ಲ ಮೇಲೆ ಮತ್ತೆ ಕಟ್ಟಬೇಕು ಎಂಬ ಸಂದಿಗ್ಧದ ಸಮಯದಲ್ಲಿ ಭಾರತದ ಅಸ್ಖಲಿತ ಅಭ್ಯುದಯಕ್ಕೆ ಸಮರ್ಥವಾದ ರಾಷ್ಟ್ರೀಯತೆಯ ರೂಪರೇಖೆಗಳನ್ನು ಲಕ್ಷಣೀಕರಿಸಿದವರು ವೀರ ಸಾವರ್ಕರ್. ರಾಷ್ಟ್ರವಿಮೋಚನೆಗೆ ಅವರಂತೆ ಆತ್ಯಂತಿಕ ತ್ಯಾಗ ಮಾಡಿದ ಸಾಹಸಿಗಳು ಜಗತ್ತಿನ ಇತಿಹಾಸದಲ್ಲಿ ದುರ್ಲಭ.
ಭಾರತವನ್ನೂ ಇಂಗ್ಲೆಂಡ್, ಅಮೆರಿಕ ಅಥವಾ ರಷ್ಯಾ, ಚೀನಾಗಳಂತೆ ಎರಕಹೊಯ್ಯುವ ಧಾವಂತದಲ್ಲಿ ಅಂದಿನ ರಾಜಕೀಯ ನೇತೃತ್ತ್ವ ಯೋಚಿಸುತ್ತಿದ್ದಾಗ, ತಮ್ಮ ಸ್ವತಂತ್ರ ಚಿಂತನೆಯಿಂದ ವಿಚಾರಮಂಥನ ನಡೆಸಿ ಪ್ರಸ್ಫುಟ ರಾಷ್ಟ್ರೀಯತೆಯ ದೃಷ್ಟಿಯನ್ನು ನೀಡಿದವರು ಸಾವರ್ಕರ್. 1857ರಲ್ಲಿ ನಡೆದಿದ್ದು ಸಿಪಾಯಿದಂಗೆಯಲ್ಲ, ಅದೊಂದು ಮಹಾಸಂಗ್ರಾಮ ಎಂಬುದನ್ನು ಮೊತ್ತಮೊದಲಿಗೆ ಪರಾಮರ್ಶನೆ ಮಾಡಿದವರು ಅವರೇ. ’ಭಾರತದ್ದು ಸೋಲಿನ ಇತಿಹಾಸ’ ಎಂದು ಸುಳ್ಳಾಡುತ್ತಿದ್ದ ಚರಿತ್ರೆಯ ಪುಟಗಳಲ್ಲಿ ’ಭಾರತದ್ದು ಸಂಘರ್ಷದ ಇತಿಹಾಸ’ ಎಂಬ ವಿಶುದ್ಧ ಸತ್ಯವನ್ನು ಈ ಶೋಧಕಾರ್ಯದ ಮೂಲಕ ಪುನರ್ನಿರೂಪಿಸಿದವರು ಸಾವರ್ಕರ್. ಆ ಮೂಲಕ ಭಾರತದ ತರುಣರ ಅಂತಃಕರಣದಲ್ಲಿದ್ದ ಉದಾಸೀನತೆ, ಕ್ರಿಯಾಶೂನ್ಯತೆ, ವಿಫಲತೆಗಳನ್ನು ನಿವಾರಿಸಿಕೊಂಡು ಸ್ವಯಂಪ್ರೇರಣೆ, ಕಾರ್ಯೋತ್ಸಾಹ, ತ್ಯಾಗ ಪೌರುಷಗಳು ಬೆಳೆದು ನಿಲ್ಲುವಂತಹ ಪ್ರೇರಣೆಯನ್ನು ನೀಡಿದವರು ಸಾವರ್ಕರ್.
ಹಿಂದುಗಳೇ ರಾಷ್ಟ್ರ!
ಭಾರತಕ್ಕೆ ’ತನ್ನತನ’ ದ ಅರಿವು ಮೂಡಿಸಿದ ಮಹನೀಯರಲ್ಲಿ ಸಾವರ್ಕರ್ ಪ್ರಮುಖರು. ಹಿಂದುಗಳೆಂದರೆ ಯಾರು? ಎಂಬ ಪ್ರಶ್ನೆಗೆ ಇಲ್ಲಿನ ವಿದ್ವಾಂಸರನೇಕರು ಹಲವು ಬಗೆಯಲ್ಲಿ ಚಿಂತಿಸಿ ವ್ಯಾಖ್ಯಾನಿಸಿ ಉಪಕರಿಸಿದ್ದಾರೆ. ಕೆಲವರು ಅಪವ್ಯಾಖ್ಯಾನಗಳನ್ನು ಮಾಡಿ ಅಪಕರಿಸಿಯೂ ಇದ್ದಾರೆ. ಆದರೆ ಸಾವರ್ಕರ್ ಈ ಪ್ರಶ್ನೆಗೆ ಒಂದು ತಾರ್ಕಿಕ ಸಮಾಧಾನವನ್ನು, ಎಲ್ಲರೂ ಒಪ್ಪಬಹುದಾದ ಮತ್ತು ಆ ಪದದ ಅರ್ಥದ ದೃಷ್ಟಿಯಿಂದಲೂ ಅತ್ಯಂತ ಸಮಂಜಸವಾಗಿರುವ ರೀತಿಯಲ್ಲಿ ಚಿಂತಿಸಿದ್ದಾರೆ. ಸಾವರ್ಕರ್ಗಿಂತ ಮೊದಲು ಲೊಕಮಾನ್ಯ ತಿಲಕರು ಹಿಂದು ಎಂದರೆ ಯಾರು? ಹಿಂದು ಧರ್ಮದ ವ್ಯಾಖ್ಯೆ ಏನು? ಇತ್ಯಾದಿ ಪ್ರಶ್ನೆಗಳಿಗೆ ತಮ್ಮದಾದ ಉತ್ತರವನ್ನು ಹುಡುಕಲು ಪ್ರಯತ್ನಿಸಿದ್ದಾರೆ. ಯಾರು ವರ್ಣಾಶ್ರಮದಲ್ಲಿ ನಂಬಿಕೆ ಇಡುವರೋ, ಯಾರು ವೇದಗಳನ್ನು ಒಪ್ಪುತ್ತಾರೋ, ಯಾರಿಗೆ ಇಲ್ಲಿನ ಉಪಾಸನ ಕ್ರಮಗಳ ಬಗ್ಗೆ ಶ್ರದ್ಧೆ ಉಂಟೋ ಅವರೇ ಹಿಂದುಗಳು ಎಂಬ ಸಮಗ್ರವಲ್ಲದ ವ್ಯಾಖ್ಯೆಯನ್ನು ತಿಲಕರು ಪ್ರತಿಪಾದಿಸಿದ್ದಾರೆ. ಹಾಗಾದರೆ ಈ ವ್ಯಾಖ್ಯೆಯ ಮಾಪದಂಡದ ಪ್ರಕಾರ ಚಾತುರ್ವರ್ಣ ಮತ್ತು ವೇದಗಳನ್ನು ಒಪ್ಪದ ಜೈನ, ಬೌದ್ಧ, ಲಿಂಗಾಯತ-ವೀರಶೈವ, ಸಿಕ್ಖರು ಇವರ್ಯಾರು ಹಿಂದುಗಳಲ್ಲವೇ? ಇಂತಹ ಗೊಂದಲದ ಪರಿಸ್ಥಿತಿ ಏರ್ಪಟ್ಟು ಮುಂದಿನ ದಿಕ್ಕು ದಾರಿಗಳ ಬಗೆಗೆ ಅನಿಶ್ಚಿತತೆ , ಸಂದಿಗ್ಧ ಇದ್ದಾಗ ಯಾವುದೋ ಒಂದು ರಾಜಿ ಸೂತ್ರಕ್ಕೆ ಒಳಪಟ್ಟು ಇರುವುದನ್ನೇ ಉಳಿಸಿಕೊಳ್ಳುವ ಮಾರ್ಗವನ್ನು ಬಿಟ್ಟು, ಒತ್ತಡದಿಂದ ಪಕ್ಕಕ್ಕೆ ಸರಿದು ಮೂಲಸ್ಥಿತಿಯ ಸತರ್ಕ ಚಿಂತನೆಗೆ ತೊಡಗಿ ಇಲ್ಲಣಗಳನ್ನು ಉಪಶಮನಗೊಳಿಸಿಕೊಳ್ಳುವುದು ಸಾವರ್ಕರ್ ಅನುಸರಿಸಿದ ಮಾರ್ಗ.
ಗಾಢವಾದ ಆತ್ಮವಿಸ್ಮೃತಿಯ ಕಾರಣಕ್ಕೆ ಹಲವು ಆಘಾತಗಳನ್ನು ಎದುರಿಸಿದ್ದ ಸಮಾಜ ಆಂತರಿಕವಾಗಿ ಕುಗ್ಗಿಹೋಗಿದ್ದಾಗ ಆ ಸಮಾಜಕ್ಕೆ ಅದರ ಸ್ವಸ್ವರೂಪ ಯಾವುದೆಂಬ ಪರಿಜ್ಞಾನವನ್ನು ಮೂಡಿಸಬೇಕೆಂಬುದು ಸಾವರ್ಕರ್ ಗುರುತಿಸಿದ ಅನಿವಾರ್ಯತೆ. ಇದನ್ನೇ ವ್ಯಕ್ತಿಗತ ನೆಲೆಯಲ್ಲಿ ಅರ್ಜುನನಿಗೆ ಶ್ರೀ ಕೃಷ್ಣ ಮಾಡಿದ್ದು. ಸಾಮಾಜಿಕ ನೆಲೆಯಲ್ಲಿ ಸ್ವಾಮಿ ವಿವೇಕಾನಂದರು ಶ್ರಮಿಸಿ ಯಶಸ್ವಿಯಾದದ್ದು ಇದೇ ಕಾರ್ಯದಲ್ಲಿ. ಇಪ್ಪತ್ತನೇ ಶತಮಾನದಲ್ಲಿ ಹಿಂದೂ ಸಮಾಜ ಈಗ ಮತ್ತೆ ಅದೇ ಸ್ಥಿತಿಯನ್ನು ಚಾಕ್ರಿಕವಾದ ತಿರುವಿನಲ್ಲಿ ನಿಂತು ಅನುಭವಿಸುತ್ತಿತ್ತು.
ಹಿಂದೂ ಸಮಾಜದ ಪಾರಂಪರಿಕ ರೂಪ-ಆಕಾರಗಳನ್ನು ಸಾಮಾಜಿಕ-ರಾಷ್ಟ್ರೀಯ ನೆಲೆಯಲ್ಲಿ ವಿವರಿಸಿ ಆ ಜನಾಂಗವನ್ನೇ ರಾಷ್ಟ್ರವೆಂದು ವ್ಯಾಖ್ಯಾನಿಸುವುದು ಸಾವರ್ಕರ್ ಆವಿಷ್ಕರಿಸಿದ ಉತ್ತರ.
ಆಸಿಂಧು ಸಿಂಧುಪರ್ಯಂತಾ ಯಸ್ಯ ಭಾರತ ಭೂಮಿಕಾ|
ಪಿತೃಭೂಃ ಪುಣ್ಯಭೂಶೈವ ಸ ವೈ ಹಿಂದುರಿತಿ ಸ್ಮೃತಃ ||
ತಾತ್ಪರ್ಯ: ಯಾರಿಗೆಲ್ಲ ಭಾರತ ಜನ್ಮಭೂಮಿ ಮಾತ್ರವಲ್ಲದೇ ಹಿಮಾಚಲದಿಂದ ಕಡಲ ತಡಿಯವರೆಗಿನ ಈ ನೆಲೆಯು ಪಿತೃಭೂಮಿಯು, ಪುಣ್ಯ ಭೂಮಿಯೂ ಆಗಿದೆಯೋ ಅವರೆಲ್ಲರೂ ಹಿಂದುತ್ವದ ಪರಿದಿಯೊಳಗೆ ಬರುತ್ತಾರೆ ಮತ್ತು ಅವರೇ ಹಿಂದುಗಳು. ಸಾವರ್ಕರ್ ಅವರ ಈ ನಿರೂಪಣೆಯಲ್ಲಿ ಮತಪ್ರಸಕ್ತಿ ಇಲ್ಲ. ಇಲ್ಲಿ ಆಸ್ತಿಕ, ನಾಸ್ತಿಕ, ವರ್ಣಾಶ್ರಮ ಪರ-ವಿರೋಧಿಗಳೆಲ್ಲರೂ ಈ ಹಿಂದುತ್ವದ ಪರಿಧಿಯೊಳಗೇ ನಿಲ್ಲುತ್ತಾರೆ. ಇದು Inclusive ಹಿಂದುತ್ವ, Exclusive ಅಲ್ಲ!
’ಉತ್ತರಂ ಯತ್ ಸಮುದ್ರಸ್ಯ ಹಿಮಾದ್ರೇಶೈವ ದಕ್ಷಿಣಮ್ |
ವರ್ಷಂ ತದ್ ಭಾರತಂ ನಾಮ ಭಾರತೀ ಯತ್ರ ಸಂತತಿಃ ||
ವಿಷ್ಣು ಪುರಾಣದ ಈ ಪ್ರಸಿದ್ಧ ಶ್ಲೋಕ ”ಸಮುದ್ರಕ್ಕೆ ಉತ್ತರದಲ್ಲಿಯೂ ಹಿಮಾಲಯಕ್ಕೆ ದಕ್ಷಿಣದಲ್ಲಿಯೂ ಇರುವ ನಾಡು ಭಾರತವೆನಿಸಿದೆ. ಇಲ್ಲಿ ಜನಿಸಿ ವಾಸ ಮಾಡುತ್ತಿರುವ ನಾಗರೀಕರೇ ಭಾರತೀಯರು.” ಎಂದು ವ್ಯಾಖ್ಯಾನಿಸಿದೆ. ಇದರಲ್ಲಿ ಕೇವಲ ಬೌಗೋಳಿಕ ಗಡಿಗಳನ್ನು ಮಾತ್ರವೇ ಆಧಾರವಾಗಿಟ್ಟುಕೊಂಡು ಭಾರತೀಯರು ಎಂದರೆ ಯಾರು?, ಭಾರತ ಯಾವುದು? ಎಂಬುದನ್ನು ವಿವರಿಸಿದೆ. ಆದರೆ ಸಾವರ್ಕರ್ ಚಿಂತನೆ ಇದನ್ನು ಇನ್ನೊಂದು ಹಂತ ಮೇಲೇರಿಸಿ ಪ್ರಸ್ಫುಟಗೊಳಿಸಿತ್ತು.
ರಾಷ್ಟೀಯತೆ ಎನ್ನುವುದು ಕೇವಲ ಗಡಿಯ ಮಾನದಂಡದ ಅಳತೆಯಲ್ಲಿ ಅಳೆದು ಬಿಡಬಹುದಾದ ವಿಷಯವಲ್ಲ, ಅದರಲ್ಲಿ ಭಾರತೀಯ ಮೌಲ್ಯಗಳ ಸ್ಫೂರ್ತಿಸ್ಥಾನಗಳೂ ಸೇರಬೇಕಾಗಿವೆ ಎಂಬುದು ಸಾವರ್ಕರ್ ಚಿಂತನೆಯಾಗಿತ್ತು. ಆದ್ದರಿಂದಲೇ ತಮ್ಮ ಲಕ್ಷಣ ನಿರೂಪಣಾ ಕ್ರಮವನ್ನು ವೈದಿಕ ಪರಂಪರೆಗೆ ಅನುಸ್ಯೂತವಾಗಿಯೇ ಇರಬೇಕೆಂಬ ಶ್ರದ್ಧೆಯನ್ನು ಸಾವರ್ಕರ್ ತಮ್ಮ ವ್ಯಾಖ್ಯೆಯಲ್ಲಿ ವಹಿಸಿರುವುದು ಕಾಣುತ್ತದೆ. ಹೀಗಾಗಿ “ಆಸಿಂಧು ಸಿಂಧು ಪರ್ಯಂತ..” ಶ್ಲೋಕವು ಇಂದಿನ ಪೀಳಿಗೆಗೆ ಇದಾವುದೋ ಧರ್ಮಶಾಸ್ತ್ರದ, ಉಪನಿಷತ್ತಿನ ಇಲ್ಲವೇ ಯಾವುದೋ ಪುರಾಣದ ಉಲ್ಲೇಖ ಇರಬೇಕು ಎಂಬತಹ ಗೌರವಭಾವ ಇದೆ.
’ಹಿಂದೂ’ ಹೆಸರೇ ಏಕೆ?
ನಮ್ಮ ಶತ್ರುಗಳು ನಮ್ಮನ್ನು ಹಿಂದುಗಳೆಂಬ ಕಾರಣಕ್ಕೇ ವಿರೋಧಿಸುತ್ತಾರೆ. ನಮ್ಮ ಮಿತ್ರರೂ ನಾವು ಹಿಂದುಗಳೆಂಬ ಕಾರಣದಿಂದಲೇ ಸ್ನೇಹ ತೋರಿದ್ದಾರೆ. ಈ ನೆಲದಲ್ಲಿ ನಡೆದ ಎಲ್ಲ ಹೋರಾಟಗಳು ಹಿಂದೂ ಸಂಸ್ಕೃತಿಯ ರಕ್ಷಣೆಗಾಗಿ ನಡೆದ ಹೋರಾಟಗಳೇ ಆಗಿವೆ. ಇಲ್ಲಿ ನೋವನ್ನು ಅನುಭವಿಸಿದ ಸನಾತನಿಗಳು, ಸಿಕ್ಖರು, ಮರಾಠರು, ಮದ್ರಾಸಿನವರು, ಬ್ರಾಹ್ಮಣರು, ದಲಿತರು ಎಲ್ಲರೂ ಹಿಂದುಗಳೆಂಬ ಕಾರಣದಿಂದಲೇ ನೋವು ತಿಂದಿದ್ದಾರೆ. ಹೀಗೆ ನಮ್ಮನ್ನು ಅವಮಾನಿಸಿದವರು, ಸಮ್ಮಾನಿಸಿದವರು, ಸಂಕಟಕ್ಕೀಡುಮಾಡಿದವರು, ಸಂರಕ್ಷಿಸಿದವರೆಲ್ಲರೂ ಎಲ್ಲರೂ ಇಲ್ಲಿ ಗುರುತಿಸಿರುವುದು ಹಿಂದು ಮತ್ತು ಹಿಂದುತ್ವವನ್ನೇ.
ಭಾರತವನ್ನು ಆರ್ಯಾವರ್ತವೆನ್ನಿ, ದಕ್ಷಿಣಪಥವೆನ್ನಿ, ಜಂಬೂದ್ವೀಪವೆನ್ನಿ ಅಥವಾ ಭರತವರ್ಷವೇ ಅನ್ನಿ ಇವಾವುವು ಹಿಂದುಸ್ತಾನ ಎಂಬ ಪದ ನೀಡಬಹುದಾದ ರಾಜಕೀಯ ಮತ್ತು ಸಾಂಸ್ಕೃತಿಕ ವ್ಯಾಖ್ಯಾನವನ್ನು ನೀಡಲಾರವು ಎಂಬುದು ಸಾವರ್ಕರ್ ಖಚಿತವಾಗಿ ಕಂಡುಕೊಂಡ ಹಿಂದೂ ಸಮಾಜದ ಸ್ವರೂಪ. ಸಿಂಧೂ ನದಿಯ ಕಾರಣಕ್ಕೆ ಪ್ರಯೋಗವಾದ ಶಬ್ದ ಹಿಂದು, ಮತ್ತು ಅದೇ ವಾಸ್ತವವಾಗಿ ದೇಶವಾಚಿ ಶಬ್ದ ಎಂಬುದು ಸಾವರ್ಕರ್ ಅವರ ನಿಲುವು. ಯವನರ ಮತ್ತು ಅರಬ್ಬರ ಬಾಯಲ್ಲಿ ಸಿಂಧೂ ಶಬ್ದವೇ ’ಹಿಂದೂ’ ವಾಗಿ ತದ್ಭವಗೊಂಡಿತು. ಕಾರಣ ಅವರ ವರ್ಣಮಾಲೆಯಲ್ಲಿ ಸಕಾರ ಇಲ್ಲದಿರುವುದು.
”ಹಿಂದುತ್ವ ಎಂದರೆ ನೂರಾರು ಯುದ್ಧಭೂಮಿಗಳಲ್ಲಿ ಹಾಗೂ ಮುತ್ಸದ್ದಿತನ ಕಾರುಭಾರಿನ ರಂಗದಲ್ಲಿ ಹಿಂದುಧರ್ಮ ನಡೆಸಿದ ಸಂಘರ್ಷ. ಈ ಹಿಂದುತ್ವ ಎಂಬ ಒಂದು ಪದ ಇಡೀ ನಮ್ಮ ರಾಜಕೀಯ ದೇಹದಲ್ಲಿ ಬಲಿಷ್ಠ ಬೆನ್ನುಮೂಳೆಯಂತೆ ಉದ್ದಕ್ಕೂ ಹರಿದು ಬಂದಿದೆ.” ಎಂಬುದು ತಮ್ಮ ಹಿಂದುತ್ವ ಪುಸ್ತಕದಲ್ಲಿ ಸಾವರ್ಕರ್ ಅವರದ್ದೇ ಮಾತು.
“ಹಿಂದುಗಳ ಭೂತ, ವರ್ತಮಾನ ಮತ್ತು ಭವಿಷ್ಯಕಾಲಗಳೆಲ್ಲ ಹಿಂದೂಸ್ಥಾನಕ್ಕೇನೇ ನಿಕಟ ಸಂಬಂಧವಾಗಿವೆ. ಹಿಂದುಗಳಿಗೆ ಇದೇ ಪಿತೃಭೂಮಿ ಮತ್ತು ಪುಣ್ಯಭೂಮಿ. ಆದಕಾರಣ “ಹಿಂದು” ರಾಷ್ಟೀಯತ್ವದ ಅಡಿಗಲ್ಲು “ಹಿಂದುತ್ವ”ವೇ ಆಗಿದೆ.” ಎಂಬುದು ಸಾವರ್ಕರ್ ಅವರ ರಾಷ್ಟೀಯತೆ ಕುರಿತಾದ ಸುಸ್ಪಷ್ಟ ಚಿಂತನೆ. ಭಾರತದ ಈ ಸುವರ್ಣಸಂಧಿಯ ಕಾಲದಲ್ಲಿ ಸಾವರ್ಕರ್ ಅವರ ಈ ಓಜಸ್ವಿ ಚಿಂತನೆ ರಾಷ್ಟ್ರದ ಅನೇಕ ವಿಕಟ ಸಮಸ್ಯೆ-ಸವಾಲುಗಳಿಗೆ ಸಮರ್ಪಕವಾದ ಸಮಾಧಾನ ನೀಡಬಲ್ಲಂತಹ ವಿಚಾರ ಸಂಪತ್ತು ಒಳಗೊಂಡಿದೆ.
ಇದನ್ನೂ ಓದಿ: New Parliament Building: ಸಾವರ್ಕರ್ ಜಯಂತಿಯಂದೇ ನೂತನ ಸಂಸತ್ ಭವನಕ್ಕೆ ಮೋದಿ ಚಾಲನೆ
ಕಲೆ/ಸಾಹಿತ್ಯ
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ: ಪ್ರಥಮ ಬಹುಮಾನ 55,000 ರೂ. ಪಡೆದ ಕಥೆ: ಸೋಮನ ಕುಣಿತ
ವಿಸ್ತಾರ ಯುಗಾದಿ ಕಥಾಸ್ಪರ್ಧೆ- 2023ರಲ್ಲಿ ಮೊದಲ ಬಹುಮಾನ ಗಳಿಸಿ, ರೂ.55,000 ತನ್ನದಾಗಿಸಿಕೊಂಡ ಕಥೆ ʼಸೋಮನ ಕುಣಿತʼ ಇಲ್ಲಿದೆ.
ಮೊದಲ ಬಹುಮಾನ ರೂ.55,000 ತನ್ನದಾಗಿಸಿಕೊಂಡ ಕಥೆ ಇಲ್ಲಿದೆ
:: ಚಂದ್ರಶೇಖರ ಡಿ.ಆರ್.
“ಓಓಓಓಓಹ್
ಆರು ಕೋಳಿ ನಿನಗೆ
ಸೂರಬೆಲ್ಲ ನಿನಗೆ
ದಾವಣಿ ಕುರಿಕೋಳಿ ನಿನಗಿಲ್ಲಿ…
ದಾವಣಿ ಕುರಿಕೋಳಿ ನಿನಗಿಲ್ಲಿ…
ಗ್ರಾಮ ಕಾದಿರುವ ಗರತೀಗೆ…”
ಅಸಾದಿ ಉನ್ಮತ್ತನಾಗಿ ಹಾಡುತ್ತಿದ್ದ. ಪ್ರತಿ ಪದಗಳಾದ ಮೇಲೂ ತಮಟೆಯಂತಿರುವ ರಣ ಹಲಗೆ ನೆಲಕ್ಕೆ ಅಭಿಮುಖವಾಗಿ ಹಿಡಿದು ಬಡಿಯುತ್ತಾ ಮುಂದುವರೆಯುತ್ತಿದ್ದ. ಪ್ರತೀ ಬಾರಿ ಹಾಡಿನ ಸಾಲು ಹೇಳಿ ನಿಂತಾಗಲೂ ವಾದ್ಯಗಳು ಜೋರಾಗುತ್ತಿದ್ದವು. ಅಸಾದಿಯ ಪದಗಳಿಗೆ ಶ್ಲೀಲ-ಅಶ್ಲೀಲಗಳ ಗಡಿಯಿಲ್ಲ. ಇದು ಕೊಂಡಮ್ಮ ದೇವಿ ಸಮ್ಮುಖದಲ್ಲಿ ನಡೆಯುತ್ತಿರುವ ಘಟನಾವಳಿಗಳು. ಕಳಸ ಹೊತ್ತು ನಿಂತ ಹೆಣ್ಣುಮಗಳು ಹಿಂದೆಮುಂದೆ ತೂಗುತ್ತಿದ್ದಾಳೆ. ಕೆಳ ಅರ್ಧಬಾಗ ಚಿವುಟಿ ಹೊಂಬಾಳೆಯ ತುದಿಗೆ ಜೋಡಿಸಿದ್ದ ಕನಕಾಂಬರ ಮತ್ತು ಮಲ್ಲಿಗೆ ಹೂಗಳು ತೂಗುವಿಕೆಗೆ ಅನುಗುಣವಾಗಿ ಹೊಂಬಾಳೆ ಗರಿಗಳೊಂದಿಗೆ ಒಯ್ದಾಡುತ್ತಿವೆ. ಅದೇ ಸಮಯಕ್ಕೆ ಸೋಮನನ್ನು ಹೊತ್ತಿದ್ದ ರಂಗಯ್ಯನ ಆಗಮನವಾಗಿತು. ಒಂದೊಂದೆ ಹೆಜ್ಜೆ ತಮಟೆ, ಅರೆ, ದೋಣಿನ ಲಯಕ್ಕೆ ಅನುಗುಣವಾಗಿ ಭೂಮಿಗೆ ದೊಪ್ಪನೆ ಇಡುತ್ತಿದ್ದಾನೆ. ಕುಣಿತದಲ್ಲಿ ತನ್ಮಯತೆಯಿದೆ ಅವ್ಯಕ್ತ ಆಲಾಪವಿದೆ. ಸುಮಾರು ಇಪ್ಪತ್ತರ ಆಸುಪಾಸಿನ ವಯಸ್ಸು ಕಟ್ಟುಮಸ್ತಾದ ದೇಹ. ಎಲ್ಲರೂ ಎಲ್ಲವೂ ನಿಶ್ಯಬ್ಧ. ವಾದ್ಯಗೋಷ್ಟಿಗಳದಷ್ಟೇ ಅಬ್ಬರ. ಒಂದೋ ರಂಗನ ಪಾದ ಮರಗಟ್ಟಿ ನಿಲ್ಲಬೇಕು, ಇಲ್ಲ ದೇವಿಯೇ ಎದ್ದು ಬಂದು ಸಾಕು ಎನಬೇಕು.
ಕಥೆಯ ಬಗ್ಗೆ ತೀರ್ಪುಗಾರರು ಬರೆದ ಟಿಪ್ಪಣಿ ಇಲ್ಲಿದೆ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೀರ್ಪುಗಾರರ ಟಿಪ್ಪಣಿ: ಸಾಮಾಜಿಕ ಪ್ರಸ್ತುತತೆಯೇ ಜೀವಾಳವಾಗಿರುವ ಕತೆಗಳು
ಬೂತಾಳೆ ಮರದಿಂದ ತಯಾರಿಸಿದ ಸೋಮನ ಮುಖವಾಡ. ಅಗಲವಾದ ಹಣೆ, ವಿಶಾಲವಾದ ಕಣ್ಣು, ಕಿವಿ, ದೊಡ್ಡ ಮೂಗು. ಬಿದಿರಿನಿಂದ ರಂಗಯ್ಯನ ಹಿಂದೆ ಕಮಾನಿನಂತೆ ರಚಿಸಿ ವಿವಿಧ ಬಣ್ಣ ಬಣ್ಣದ ಸೀರೆಗಳನ್ನು ಇಳಿಬಿಟ್ಟು ಪ್ರಭಾವಳಿಯನ್ನು ರಚಿಸಲಾಗಿದೆ. ಕಾಲಿಗೆ ಗೆಜ್ಜೆ, ಕೈಗಳಿಗೆ ಕಡಗಗಳು, ಹಾಗೆ ಮೂರೇ ಬೆರಳಿದ್ದ ಎಡಕೈಯಲ್ಲಿ ಬೆಳ್ಳಿ ಕಟ್ಟಿನ ನೀಳವಾದ ಬೆತ್ತ. ಕೊಂಡಮ್ಮಳಿಗೆ ಇಬ್ಬರು ಸೋಮರು ಅಂಗರಕ್ಷಕರು. ರೌದ್ರನಾದ ಕೆಂಪುಸೋಮನಿಗೆ ನಾಮಬಳಿದಿದ್ದಾರೆ. ಹಳದಿ ಬಣ್ಣದ ಸೋಮ ವಿಭೂತಿ ಬಳಿದುಕೊಂಡ ಸೌಮ್ಯಮೂರ್ತಿ. ರಂಗನ ತಮ್ಮ ಸುಮ್ಮನೆ ಹೊತ್ತು ನಿಂತಿದ್ದಾನೆ. ಸುತ್ತ ಹತ್ತು ಹಳ್ಳಿಗಳನ್ನು ಹುಡುಕಿದರೂ ಹದಿನೈದು ಕೆ.ಜಿ.ಗೂ ಮಿಕ್ಕಿ ತೂಕದ ರೌದ್ರ ಸೋಮನನ್ನು ರಂಗಯ್ಯನಂತೆ ಹೊತ್ತು ಕುಣಿಯುವವರು ಯಾರೂ ಇಲ್ಲ. ಇಲ್ಲಿ ಯಾವುದಕ್ಕೂ ಪ್ರಶ್ನೆಯೂ ಇಲ್ಲ ಉತ್ತರವೂ ಇಲ್ಲ.
ಮಾರನೇದಿನ ಕೊಂಡಮ್ಮ ದೇವಿಯ ದೇವಾಲಯದ ಮುಂದೆ ವಿಶೇಷ ಕೊಂಡ ವ್ಯವಸ್ಥೆ. ಎಲ್ಲರೂ ಭಕ್ತಿ ಭಾವದಿಂದ ಮೈಮರೆತರು. ಇಲ್ಲದ್ದನ್ನು ತಾಯಿಯ ಹತ್ತಿರ ಬೇಡಿಕೊಂಡರು. ತಮ್ಮೊಳಗಿನ ಬೇಗೆಯನ್ನೂ ಕಾವನ್ನೂ ದೇವಿಯ ಮುಂದೆ ತುಳಿದು ಹೋಗಬೇಕು. ಸೋಮನ ಹೊತ್ತೇ ಮೊದಲನೆಯವನಾಗಿ ಕೊಂಡ ತುಳಿದು, ಅದರ ಕಾವು ತಣಿಯುವ ಮೊದಲೇ ಸಿರಾದ ಬೇವಿನಹಳ್ಳಿಯ ಕಲಾತಂಡದೊಟ್ಟಿಗೆ ರಂಗಯ್ಯ ಮರೆಯಾದ. ಹೋಗುವಾಗ ಹಟ್ಟಿಗಳೆಡೆ ಒಮ್ಮೆ ತಿರುಗಿದವ ಮತ್ತೆ ತಿರುಗಲಿಲ್ಲ. ಅಲ್ಲಿಂದ ಅವನ ಸುಳಿವೆ ಇಲ್ಲ. ಬೆಂಗಳೂರಿಗೆ ಯಾವುದೋ ಕೆಲಸದ ನಿಮಿತ್ತಾ ಹೋದ ಊರವರೊಬ್ಬರು ಯಾವುದೋ ಕಲೋತ್ಸವದಲ್ಲಿ ಕಂಡರಂತೆ. ಆಮೇಲೆ ಅವನ ಬಗ್ಗೆ ಒಂದು ಮಾತೂ ಇಲ್ಲ.
**
ಸಾಕವ್ವ ಕರ್ ಮೀನ್ ಸಾರ್ ಮಾಡಿ ಊಟಕ್ಕಿಟ್ಟು ಆಚೆ ಬಂದು ನೋಡೊದ್ರೊಳಗೆ ಒಟ್ಟು ಮಾಡಿದ್ದ ಕಸಾನೆಲ್ಲಾ ಪಿಳ್ಳೆಗುಳ್ನ ಬೆನ್ನಿಗಾಕಂಡು ಓಡಾಡ್ತಿದ್ದ ರತ್ನಿ ಯಾಟೆ ಕೆದಕಿ ಹಾಕಿತ್ತು. ಪಿಳ್ಳೆಗುಳ್ನ ನೆನ್ನೆ ಹಂಗೆ ಹದ್ದು ಕದ್ದೋಯ್ವಾಗ ಮತ್ತೆ ತಡಿಬಾರ್ದು ಅನ್ಕಂಡು ಶಪಿಸುತ್ತಾ, ಮತ್ತೆ ಗುಡಿಸಿಹಾಕಲು ಸೊಂಪ್ಲಿನ ಕಡೆ ತೆಂಗಿನ್ ಗರಿ ಪರ್ಕೆ ತೆಗೆದುಕೊಳ್ಳುವುದಕ್ಕೆ ಹೋದಳು. ಒಳಗೆ ಕೂತು ಬೆಂದ ಕಡ್ಲೆಕಾಳಿಗೆ ಕರಿಮೀನು ತೋಯಿಸಿ ಮೆಲ್ಲುತ್ತಿದ್ದ ನರಸಿಂಹಯ್ಯ ಜನ್ರ ಬಾಯಲ್ಲಿ ಬರಬರುತ್ತ ನರಸುಮ್ಮಣ್ಣನಿಗೆ ಹೆಂಡತಿ ಹೊರಗೆ ನಿಂತು ಹೇಳುತ್ತಿದ್ದ ಯಾವ ಮಾತುಗಳು ಕಿವಿಯ ಮೇಲೆ ಬೀಳುತ್ತಿರಲಿಲ್ಲ. ಕೆಲವು ದಿನಗಳಿಂದ ಅವನು ಅನ್ಯಮನಸ್ಕನಾಗಿ ಇರುವುದಕ್ಕೆ ಬಲವಾದ ಕಾರಣಗಳು ಇದ್ದವು.
ಜೀವನೋಪಾಯಕ್ಕೆ ಅಂತ ಇದ್ದ ತಮಟೆಯ ಚರ್ಮ ಸವೆದು ಹರಿದು ತಿಂಗಳಾಗುತ್ತಾ ಬಂದಿದೆ. ದುಸ್ತರ ಬದುಕು. ಪಕ್ಕದೂರು ದೊಡ್ಡಮಧುರೆ ಮತ್ತು ಸ್ವಾಂದೇನಾಹಳ್ಳಿಯಲ್ಲಿ ಮುಂದಿನ ತಿಂಗಳು ಜಾತ್ರೆಗೆ ಕಡಿಯುವ ಕೋಣದ ಚರ್ಮಕ್ಕೆ ಇನ್ನಿಲ್ಲದಂತೆ ಕಾಯುವ ಹಾಗೆ ಆಗಿದೆ. ಮಗಳು ಪುಟ್ಟಕ್ಕನನ್ನು ಕೊಟ್ಟಿರುವುದು ಅದೇ ದೊಡ್ಡ ಮಧುರೆಗೆ.ತುಂಬಾ ಅನುಕೂಲಸ್ಥರೇನಲ್ಲದಿದ್ದರೂ ಅಳಿಯ ಪಕ್ಕದ ಸ್ವಾಂದೇನಾಹಳ್ಳಿಯಲ್ಲಿ ಬಂಡೆ ಕೆಲಸಕ್ಕೆ ಹೋಗುತ್ತಾನೆ. ಮಗಳ ಬದುಕು ಹೇಗೋ ಕಟ್ಟಿಕೊಂಡಿದೆ. ಜಾತ್ರೆಗೆ ಮಗಳ ಮನೆಗೆ ಹೋಗುವ ಶಾಸ್ತ್ರವು ಜೊತೆಗೆ ನಡೆಯುತ್ತದೆ. ಅದಾಗಿ ತಮಟೆಗೆ ಚರ್ಮ ಸಿಕ್ಕರೆ ಸುತ್ತ ಊರುಗಳಲ್ಲಿ ನಡೆಯುವ ಜಾತ್ರೆ, ಸಾವಿನ ಮನೆಗಳು ಮತ್ತು ಊರ ಸುದ್ದಿ ಸಾರುವುದು ಇದನ್ನೆಲ್ಲಾ ಮಾಡಿಕೊಂಡು ಹೇಗೋ ಜೀವನ ಒಂದು ಹದಕ್ಕೆ ಬರುತ್ತದೆ. ಮೊದಲಾದರೆ ಮರಿ-ಕೋಣ ಬಲಿಕೊಡುವವರು ತಮಟೆಯವರಿಗಾಗೆ ಮಿಸಲಿಟ್ಟು ಕೊಡುತ್ತಿದ್ದರು. ಕಾಲ ಬದಲಾಗಿ ಆ ಸಂಪ್ರದಾಯವೂ ಮುರುಟಿಹೋಗಿದೆ. ಬರಗಾಲವಾದದ್ದರಿಂದ ಕೂಲಿ ಕೆಲಸವು ಅಷ್ಟಾಗಿ ಸಿಗುತ್ತಿಲ್ಲ. ಇದೆಲ್ಲಾ ಯೋಚನೆಗಳಲ್ಲಿ ನರಸುಮ್ಮಣ್ಣ ಮುಳುಗಿಹೋಗಿದ್ದಾನೆ. ನೆನಪಿನ ದೋಣಿ ಹಿಮ್ಮುಕವಾಗಿ ಚಲಿಸುತ್ತಿತ್ತು.
ಸುಮಾರು ಅರವತ್ತರ ದಶಕ. ದೇವರಾಯನದುರ್ಗದ ತಪ್ಪಲಲ್ಲಿ ಇದ್ದ ಕೊಂಡಜ್ಜಿ ಗ್ರಾಮದ ಹೊಲೆ-ಮಾದಿಗರ ಕೇರಿ ಗೊತ್ತಿದ್ದು ಗೊತ್ತಿಲ್ಲದೇ ಭಾರತದ ಭೂಪಟದಲ್ಲಿ ಉಚಿತವಾಗಿ ಬರುವ ಶ್ರೀಲಂಕಾದ ಹಾಗೆ ಊರ ಹೊರಗೆ ಐದಾರು ಹಟ್ಟಿಗಳಿಗೆ ವ್ಯಾಪಿಸಿ ಊರಿನ ಭಾಗವಾ ಅನ್ನುವ ಅನುಮಾನದೊಟ್ಟಿಗೆ ಇತ್ತು. ಈ ಕಡೆ ಹಟ್ಟಿಯ ಮೊದಲನೆ ಮನೆಯಲ್ಲಿ ಸೀನಿದರೆ ಕೊನೆಯ ಸಾಲಿನ ಕೊನೆಯ ಮನೆಯ ಕೆಂಪಣ್ಣನೂ ಯಾರ ಸೀನೆಂದು ಊಹಿಸುವಷ್ಟು ಚಿಕ್ಕ ಪ್ರಪಂಚ. ಮೇಗಳ ಹಟ್ಟಿಯ ಮೂಲೆ ಮನೆಯವರ ಹೊಲ-ತೋಟದಲ್ಲಿ ಕೂಲಿ ಕೆಲಸ, ಬಡಗಿ, ಚಮ್ಮಾರಿಕೆ ಇವು ಮುಖ್ಯ ಕಸುಬುಗಳು. ಆಗಾಗ್ಗೆ ಹಟ್ಟಿಯಲ್ಲಿ ತಮಟೆಯ ಸದ್ದು ಊರನ್ನೇ ಎಚ್ಚರಿಸುತ್ತಿತ್ತು. ಅದು ಕುಂಭಿಯ ಮನೆ.
ಕಥಾಸ್ಪರ್ಧೆಯ ಬಹುಮಾನ ವಿರತಣೆ : ವಿಸ್ತಾರ ಯುಗಾದಿ ಕಥಾಸ್ಪರ್ಧೆ: ನೋಡುಗನನ್ನು ಓದುಗನನ್ನಾಗಿಸುವ ಪ್ರಯತ್ನ: ನಾಗತಿಹಳ್ಳಿ ಚಂದ್ರಶೇಖರ್
ತಮಟೆ ಕುಂಭಯ್ಯನಿಗೆ ಇಬ್ಬರು ಮಕ್ಕಳು. ರಂಗಯ್ಯ ಮತ್ತು ನರಸಿಂಹಯ್ಯ. ದೇವರಾಯನದುರ್ಗದ ಕುಂಭಿ ನರಸಿಂಹನಿಗೆ ಹರಕೆ ಹೊತ್ತು ಹುಟ್ಟಿದ ಕಾರಣಕ್ಕೆ ಮಗನಿಗೂ ದೇವರ ಹೆಸರೇ ಇಟ್ಟಿದ್ದರು. ಚಿಕ್ಕವಯಸ್ಸಿಂದ ತಮಟೆ, ಹರೆ, ದೋಣು, ನಗಾರಿಯ ಬಗ್ಗೆ ಆಸಕ್ತಿ ಹುಟ್ಟಿ ಅವರಿವರ ಹಿಂದೆ ತಿರುಗಿ ತಮಟೆ ಬಾರಿಸುವುದು ಚರ್ಮ ಹದಗೊಳಿಸಿ ವಾದ್ಯ ಕಟ್ಟುವ ಕಲೆಯನ್ನು ಕರಗತ ಮಾಡಿಕೊಂಡಿದ್ದ. ಎರಡನೇ ಮಗ ಹುಟ್ಟಿ ಐದಾರು ವರ್ಷಕ್ಕೆ ಹೆಂಡತಿ ಜ್ವರವೆಂದು ಮಲಗಿ ಮತ್ತೆ ಉಸಿರಾಡಿರಲಿಲ್ಲ. ಅವನ ಕೋಪದ ಜ್ವಾಲೆ ಪರಿಚಯವಿದ್ದುದರಿಂದ ಯಾರು ಅವನಿಗೆ ಹೆಣ್ಣು ಕೊಡಲು ಮುಂದೆ ಬಂದಿರಲಿಲ್ಲ. ಇಬ್ಬರು ಮಕ್ಕಳಾದ ಮೇಲೆ ದೇವರ ಮೇಲಿದ್ದ ಭಕ್ತಿಗೋ ಊರಿನ ಕೊಂಡಮ್ಮತಾಯಿಯ ಅನುಗ್ರಹವೋ ಇಬ್ಬರು ಮಕ್ಕಳಿಗೂ ತಮಟೆ ಕಟ್ಟುವುದು ಮತ್ತು ಕೊಂಡಮ್ಮಳಿಗೆ ಅಂಗರಕ್ಷಕರಂತಿದ್ದ ಸೋಮರ ಕುಣಿತ ಕಲಿಸಿ ಬದುಕು ಹಸನು ಮಾಡಬೇಕೆಂದು ತವಕಿಸುತ್ತಿದ್ದ.
ಮೊದಲ ಮಗ ರಂಗಯ್ಯನಿಗೆ ಅದೆಷ್ಟು ಬಾರಿ ತೀಡಿ ತಿದ್ದಿದರೂ ತಮಟೆ ಚರ್ಮ ಹೊಸೆಯುವ ಕಲೆ ಒದಗಿಬರಲಿಲ್ಲ. ಸೋಮನ ಕುಣಿತದಲ್ಲಿ ನೈಪುಣ್ಯತೆ ಇದ್ದರೂ ಮೂರು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತಿದುದರಿಂದ ಅದರಿಂದ ಬರುತ್ತಿದ್ದ ಆದಾಯವು ಅಷ್ಟಕಷ್ಟೆ. ಪ್ರತೀಕಾರವೆಂಬಂತೆ ಬಂದು ಹೋದವರ ಮುಂದೆ ಮಗನ ದಡ್ಡತನಕ್ಕೆ ಬಯ್ಯೋದು ಅವಮಾನಿಸೋದು ತುಚ್ಛವಾಗಿ ಮಾತನಾಡಿ ಹೀಯಾಳಿಸುವುದು ಯಥೇಚ್ಛವಾಗಿ ನಡೆಯುತ್ತಿತ್ತು. ಅವತ್ತೊಂದು ದಿನ ರಂಗಯ್ಯನ ಸಂಯಮದ ಕಟ್ಟೆಯೂ ಓಡೆದಿತ್ತು. ಅವತ್ತು ಮಗ ಗೊತ್ತಾಗದಂತೆ ಬಿಸಿಲಿಗೆ ಒಣಗಲು ಇಟ್ಟಿದ ಅಪರೂಪಕ್ಕೆ ಸಿಕ್ಕಿದ ಎರಡು ಮೂರು ಕರ ಈದ ದನದ ಚರ್ಮ ತುಳಿದ ಕಾರಣಕ್ಕೆ ವ್ಯಾಘ್ರನಾದ ಕುಂಭಯ್ಯ ಮಗನ ಮೇಲೆ ಹಾರಿಹಾಯ್ದಿದ್ದ. ದುಡಿಯುವ ಮಾರ್ಗ ಹಿಡಿತಿಲ್ಲ ಎನ್ನೋ ಕೋಪಕ್ಕೆ ಕಾಲಲ್ಲಿ ಒದ್ದು ಜುಟ್ಟು ಹಿಡಿದು ಕೊಂಡಮ್ಮನ ದೇವಸ್ಥಾನದ ಕೊಂಡ ಹಾಯುವ ಜಾಗದಲ್ಲಿ ಎಳೆದುಹಾಕಿ ಬಂದಿದ್ದ. ವ್ಯಾಕುಲನಾದ ರಂಗಯ್ಯ, ಮನೆಗೆ ರೊಯ್ಯನೆ ಬಂದು ಕಡಗೋಲು ತೆಗೆದುಕೊಂಡು ಎಡಗೈ ಹೆಬ್ಬೆರಳು ತೋರ್ಬೆರಳೆರಡನ್ನೂ ಕಡಿದುಕೊಂಡಿದ್ದ. ಸುದ್ದಿ ಕೇಳಿ ಹಟ್ಟಿಗೆ ಹಟ್ಟಿಯೇ ಬೆಚ್ಚಿ ಬಿದ್ದಿತ್ತು.ಇನ್ಯಾವತ್ತು ತಮಟೆ ವಿಚಾರ ಮಗನ ಮುಂದೆ ಮಾತನಾಡಲು ತಂದೆಗೆ ಧೈರ್ಯ ಬರಲಿಲ್ಲ.ಮಗ ತಮಟೆಯನ್ನು ಮುಟ್ಟಲು ಆಗಲಿಲ್ಲ.
ಅದಾದ ಮೇಲೆ ರಂಗಯ್ಯ ಮೊದಲಿನಂತೆ ಇರಲಿಲ್ಲ. ತಂದೆಯನ್ನು ಮಾತಾಡಿಸದೇ ತನ್ನ ಪಾಡಿಗೆ ತಾನಿರುತ್ತಿದ್ದ. ಕರಗತ ಮಾಡಿಕೊಂಡಿದ್ದ ಸೋಮನ ಕುಣಿತ ಕೊಂಡಮ್ಮನ ಜಾತ್ರೆಯ ದಿನ ತಂದೆಯನ್ನೇ ಚಕಿತಗೊಳಿಸಿತ್ತು. ದೈತ್ಯ ಕೋರೆಹಲ್ಲು ಚಿತ್ರ ಎದೆ ಎಲುಬನ್ನು ಇರಿಯುವಂತಿತ್ತು. ಸೋಮನ ಮೂಗಿನಿಂದ ಹೊರಬರುತ್ತಿದ್ದ ಬಿಸಿಯುಸಿರು ಸುಡುವಂತಿತ್ತು. ದೇವಿಯ ಒಂದು ಅಂಶಕ್ಕೇ ಕೇಡೆಸಗಿ ಪಾಪದ ಕೆಲಸ ಮಾಡಿದೆ ಎಂದು ಪಶ್ಚಾತಾಪದಲ್ಲಿ ಹಾಸಿಗೆ ಹಿಡಿದ ಕುಂಭಿ ತಿಂಗಳ ಜಾತ್ರೆಯಷ್ಟೊತ್ತಿಗೆ ಮಣ್ಣು ಸೇರಿದ. ಮಣ್ಣಿನ ದಿನ ರಂಗಯ್ಯನನ್ನ ಊರಿನವರು ಎಷ್ಟು ಹುಡುಕಿದರೂ ಎಲ್ಲಿಯೂ ಕಾಣಲಿಲ್ಲ. ಊರೂರು ಅಲೆಯುತ್ತಾ ಸೋಮ ಕುಣಿಯುತ್ತಾ ರಂಗಯ್ಯ ತನ್ನದೇ ದಾರಿಯಲ್ಲಿ ಆನೆಯಾಗತೊಡಗಿದ. ಕುಣಿಯುವ ಮುಂಚೆ ಸೋಮನ ಮುಂದೆ ಒಂದೆರಡು ನಿಮಿಷ ಕುಳಿತಿರುತ್ತಿದ್ದ ರಂಗಯ್ಯನ ಕಣ್ಣುಗಳು ನಿಗಿನಿಗಿ ಉರಿಯೋ ಕೆಂಡದಂತಾಗಿರುತ್ತಿದ್ದವು. ಬದುಕಲು ದಾರಿ ಅರಸುತ್ತಾ ಅಲೆಯುತ್ತಿದ್ದವನಿಗೆ ಸೋಮನ ಕುಣಿತ ಕೈಹಿಡಿದಿತ್ತು.
ಎರಡನೇ ಮಗನಿಗೆ ತಮಟೆ ಕಟ್ಟುವುದು ಒಲಿದು ಬಂದಿತ್ತು. ಧ್ಯಾನಸ್ಥನಾಗಿ ಕುಳಿತು, ತಂದ ಚರ್ಮವನ್ನು ನೆಲಕ್ಕೆ ಹರವಿ ಮೂರು ದಿನ ಸುಡು ಬಿಸಿಲಲ್ಲಿ ಎಳ್ಳಷ್ಟೂ ಹರಿಯದಂತೆ ಮೊಳೆ ಹೊಡೆದು, ಕುಂತು ಜತನದಿಂದ ಒಣಗಿಸುವುದು. ಒಣಗಿದ ಚರ್ಮ ನಿರಿಗೆ ಮಾಡಿ ಸುತ್ತಿ ನಂತರ ಅದನ್ನು ಕೆಲಕಾಲ ನೀರಲ್ಲಿ ನೆನೆಸಿಟ್ಟು, ನೆಂದ ಚರ್ಮವನ್ನು ಹರವಿ ಅದರ ಒಳಹೊರಗೆ ಕೊಳೆಯನ್ನು ವೈನ ಮಾಡಿ ತೆಗಿಯುತ್ತಿದ್ದ. ನೆಂದು ಹದವಾದ ಚರ್ಮದ ಕೂದಲನ್ನು ರಂಪಿನಿಂದ ತೆಗೆಯಬೇಕು. ಹಿಂದೆ ಮುಂದೆ ಚರ್ಮ ಕಸರನ್ನು ತೆಗೆದಾಗ ಅದು ಚರ್ಮದ ರೂಪ ಬಿಟ್ಟು ಬಿಳಿಹಾಳೆಯಂತಾಗುತ್ತಿತ್ತು. ಇಲ್ಲಿಗೆ ಸಂತಸದ ನಿಟ್ಟುಸಿರು. ಕೊನೆಗೆ ಹಸುವಿನ ಚರ್ಮದ ಲಾಡಿಯಂತ ಎಳೆಯಿಂದ ದುಂಡನೆಯ ಆಕಾರದ ಕಬ್ಬಿಣಕ್ಕೆ ಎಳೆದು ಕಟ್ಟಬೇಕು. ಇದೆಲ್ಲವೂ ಏಕಾಂತದಲ್ಲಿ ತುಂಬು ಭಕುತಿಯಿಂದ ಕೂತು ನರಸುಮ್ಮ ಮಾಡುತ್ತಿದ್ದ. ಅಣ್ಣ ತಮ್ಮಂದಿರಲ್ಲಿ ಅದೆಂತಾ ವೈರುಧ್ಯ, ಎರಡೂ ಭಕ್ತಿಯ ವಿಭಿನ್ನ ಮಾರ್ಗಗಳು. ಒಂದು ಬಿಟ್ಟರೆ ಒಂದಿಲ್ಲ.
ಅಣ್ಣ ರಂಗ ಕುಣಿಯುತ್ತಿದ್ದ ಸೋಮ, ಅಧಿಕ ದೈಹಿಕ ಕ್ಷಮತೆ ಬೇಡುವ ಕುಣಿತ. ಅಷ್ಟಾಗಿ ಅದರಲ್ಲಿ ನೈಪುಣ್ಯತೆಯನ್ನು ಸುತ್ತಲಿನ ಊರಿನ ಯಾವ ಗಂಡಾಳು ಹೊಂದಿರಲಿಲ್ಲ. ಹಳದಿ ಸೋಮನ ಜವಾಬ್ದಾರಿಯನ್ನು ನರಸುಮ್ಮ ಹೊತ್ತು ಕೆಲಕಾಲ ಸುಮ್ಮನೆ ನಿಂತಿರುತ್ತಿದ್ದ.ಅದಕ್ಕೆ ದೊರೆಯುತ್ತಿದ್ದ ಕಾಸು ಅಷ್ಟಕ್ಕಷ್ಟೆ. ಅದನ್ನ ಯಾರಾದರೂ ಮಾಡುತ್ತಿದ್ದರು. ಬಹುಮುಖ್ಯವಾಗಿ ತಮಟೆ ಕಟ್ಟುವುದ ನೆಚ್ಚಿಕೊಂಡಿದ್ದರಿಂದ ಕೋಣ, ದನ ಹಾಗು ಎರಡು ಮೂರು ಮರಿ ಹಾಕಿದ ಆಡಿನ ಚರ್ಮ ಸಿಕ್ಕಾಗ ಸಿದ್ಧಪಡಿಸಿಕೊಂಡಿರುತ್ತಿದ್ದ.
ಇದೆಲ್ಲಾ ಆಗಿ ಮೂರು ದಶಕಗಳು ಸಂದಿವೆ. ನರಸುಮ್ಮನಿಗೂ ಐವತ್ತು ಹತ್ತಿರ ವರ್ಷವಾಗಿದೆ. ಚರ್ಮವೂ ಸುಕ್ಕುಗಟ್ಟಿ ಇಳಿವಯಸ್ಸನ್ನು ಸಾರಿ ಹೇಳುತ್ತಿದೆ. ಜೀವನ ಮೊದಲಿನಂತೆ ಇಲ್ಲ. ಅದ್ಯಾವುದೋ ಸಂಘಟನೆಗಳ ಪರಿಣಾಮ ಜಾನುವಾರುಗಳ ಚರ್ಮ ಕೂಡ ಈಗ ಮೊದಲಿನಂತೆ ಸಿಗುತ್ತಿಲ್ಲ. ಸತ್ತದನದ ಬಳಿಯೂ ಹೋಗಬಾರದೆಂದು ಅದ್ಯಾರೋ ಬಂದು ತಾಕೀತು ಮಾಡಿದ್ದಾರೆ. ಚರ್ಮ ವಾದ್ಯಕ್ಕೆ ಪರ್ಯಾಯವಾಗಿ ಪ್ಲಾಸ್ಟಿಕ್ಕಿನಿಂದ ತಯಾರಿಸಿದ ವಾದ್ಯಗಳು ಕ್ಯಾತ್ಸಂದ್ರ ಸಂತೆಯಲ್ಲಿ ಸಿಗಲು ಶುರುವಾಗಿವೆ . ಅಪ್ಪ ಸತ್ತ ಮೂರನೇ ವರ್ಷದ ಜಾತ್ರೆಯ ದಿನ ಸೋಮನ ಕುಣಿಯುತ್ತಾ ರಂಗಯ್ಯ ಕೆಂಡ ತುಳಿದು ಪರವೂರಿನವರೊಂದಿಗೆ ಮರೆಯಾದವನು ಇಷ್ಟು ವರ್ಷವಾದರೂ ತಿರುಗಿ ಮನೆ ಕಡೆ ನೋಡಿಲ್ಲ. ಪ್ರತೀ ವರ್ಷ ಮಾರ್ನಾಮಿ ಹಬ್ಬಕ್ಕೆ ಅಪ್ಪನಿಗೆ ಎಡೆ ಇಡುವಾಗ ಅಣ್ಣನೂ ನೆನಪಾಗುತ್ತಿದ್ದ.
ಅವತ್ತು ಹಟ್ಟಿಯ ಬಾಗಿಲಲ್ಲಿ ಎರಡು ಮರದ ಕುರ್ಚಿಗಳು ನೆಲವೂರಿದ್ದವು. ಅದರಲ್ಲಿ ಎಡಭಾಗಕ್ಕೆ ಬಾಬು ಜಗಜೀವನ್ ರಾಮ್ ಬಲಭಾಗದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಗಳು. “ನೋಡಿ ನಿಮಗೆಲ್ಲಾ ಶಿಕ್ಷಣ ಇಲ್ಲ. ನಿಮಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟದ ಮನೋಭಾವ ಬೆಳೆಸಿಕೊಳ್ಳೋದು ತುಂಬಾ ಮುಖ್ಯ. ಸರ್ಕಾರ ಜಾನುವಾರು ವಧೆ ನಿಷೇಧ ವಿಧೇಯಕವನ್ನು ವಿರೋಧದ ಮಧ್ಯೆಯೂ ಜಾರಿಗೆ ತರುವ ಪ್ರಯತ್ನ ಮಾಡ್ತಿದೆ. ಪಕ್ಕದೂರಿನಲ್ಲಿ ಸತ್ತ ದನ ಮುಟ್ಟಿದ್ದಕ್ಕೆ ನಮ್ಮವರನ್ನ ಜೈಲಿಗೆ ಹಾಕಿದ್ದಾರೆ” ದಲಿತ ಸಂಘಟನೆಯ ಮುಖ್ಯಸ್ಥರೊಬ್ಬರು ನೀಲಿ ಬಣ್ಣದ ಶಾಲು ಹೆಗಲಿಗೇರಿಸಿಕೊಂಡು ಮಾತನಾಡುತ್ತಿದ್ದರು “ ಪ್ರಭುತ್ವದ ಕೆಲಸ ಎಂದೂ ಜನರ ತಟ್ಟೆಯಲ್ಲಿ ಏನಿರಬೇಕು ಎಂದು ಹೇಳುವುದಲ್ಲ. ಊಟ ಬಟ್ಟೆ ವಸತಿ ಇವು ಮೂಲಭೂತ ಅಗತ್ಯಗಳು.ಸಾಂವಿಧಾನಿಕವಾಗಿ ಯಾವುದೇ ತೊಡಕುಗಳಿಲ್ಲದೇ ಯಾವೊಂದೂ ಭೇದಭಾವವಿಲ್ಲದೆ ದೊರೆಯುವಂತಾಗಬೇಕು. ಇದು ಸಂವಿಧಾನದ ಆಶಯ”
“ಭೌಗೋಳಿಕವಾಗಿ ಅಷ್ಟೆ ಅಲ್ಲ ಆಹಾರದ ವಿಧಾನದಲ್ಲೂ ವೈವಿಧ್ಯತೆ ಇರುವ ದೇಶ ನಮ್ಮದು. ಮಠದ ಸ್ವಾಮಿಗಳು ಇಂದು ಶಾಲೆಯ ಮಕ್ಕಳಿಗೆ ಕೊಡುವ ಊಟದಲ್ಲಿ ನೇರವಾಗಿ ಅದು ಕೊಡಬೇಡಿ ಇದು ಕೊಡಿ ಅಂತ ಹೇಳುತ್ತಾರೆ. ಲೌಕಿಕ ಜಗತ್ತಿನ ಜೊತೆ ಅವರಿಗೆಂತಾ ನಂಟು. ಅದರಿಂದ ಅವರು ಸಾಧಿಸಬಲ್ಲಂತ ಸಾಮಾಜಿಕ ಬದಲಾವಣೆಯಾದರೂ ಏನು? ಅಪೌಷ್ಟಿಕತೆಯಿಂದ ಬಳಲುತ್ತಿರುವ ಬಡವರ ಮಕ್ಕಳ ಬಗೆಗೆ ಇವರಿಗೇನಾದರೂ ಕಾಳಜಿ ಇದೆಯಾ, ಅದಕ್ಕೇನಾದರೂ ಇವರ ಬಳಿ ಉತ್ತರ ಇದೆಯಾ?. ನಮ್ಮಗಳ ಸಹನೆ ನಮ್ಮ ದುರ್ಬಲತೆ ಅಲ್ಲ.ನಮಗೂ ಧ್ವನಿ ಇದೆ ಹೋರಟದ ಕಿಚ್ಚು ನಮ್ಮ ಎದೆಯಲ್ಲಿ ಇದೆ. ಆ ಕಿಚ್ಚಿನಿಂದ ಅಸಮಾನತೆ ಸುಡೋ ಶಕ್ತಿ ಇದೆ ಅಂತ ನಿರೂಪಿಸೋ ಸಮಯ ಬಂದಿದೆ.” ರೋಷದಿಂದ ಅವರು ಮಾತಾಡುತ್ತಿದ್ದರು. ಮುಂದಿನ ತಿಂಗಳು ಡಿ.ಸಿ. ಆಫೀಸಿನ ಎದುರಿನ ಅಮಾನಿಕೆರೆ ಅಂಗಳದಲ್ಲಿ ಇದರ ವಿರುದ್ಧ ನಡೆಯುವ ತಮಟೆ ಚಳುವಳಿಗೆ ತಪ್ಪಿಸದೇ ಬಂದು ನಿಮ್ಮ ಪ್ರತಿರೋಧ ದಾಖಲಿಸಿ ಎಂದು ಕೆಲವು ಕರಪತ್ರ ಕೊಟ್ಟು ಹೊರಟು ಹೋದರು. ಜೀವನ ಮರುಕ್ಷಣವೇ ತನ್ನ ಹಳಿಗೆ ಮರಳಿತು.
“ತಮಟೆ ಇದ್ರೆ ಬಾ ಜೊತೆ ಹೋಗನ” ಸೀನಪ್ಪ ಮೂರ್ನಾಲ್ಕು ಜನರೊಟ್ಟಿಗೆ ಚೇಳೂರಿನ ಕರಿಯಮ್ಮ ದೇವರಿಗೆ ವಾದ್ಯಕ್ಕೆ ಹೋಗುವಾಗ ಅಂದಿದ್ದ. ಮೂರ್ನಾಲ್ಕು ದಿನದ ಜಾತ್ರೆಯಾದ್ದರಿಂದ ಒಳ್ಳೆ ದುಡಿಮೆಯಂತೂ ಆಗುತ್ತಿತ್ತು.
“ನೀನೇ ನೋಡಿದ್ಯಲ್ಲಾ ಎಂಗೆ ಆಗೈತೆ ಅಂತ. ಮಧುರೆ ಜಾತ್ರೆ ಆಗ್ಲಿ. ಆ ನಮ್ಮವ್ವ ಕಣ್ ಬಿಟ್ರೆ ವರ್ಸ್ವೆಲ್ಲಾ ಉಣ್ಬೋದು”
ಸ್ವಲ್ಪ ಹಿಂಜರಿಕೆಯಿಂದಲೆ ಸೀನಪ್ಪ “ಹಂಗೆ ಆಗ್ಲಿ. ಬರೋ ಹಂಗಿದ್ರೆ ಮೊಟಣ್ಣನ್ ತಮಟೆ ವಡಿವಂತೆ. ಅವ್ನಿಗೆ ಒಂದೀಟ್ ಕಾಸ್ ಕೊಟ್ರೆ ನಡಿತೈತೆ. ಅವ್ನು ಬತ್ತಾ ಇಲ್ಲ” ಎನ್ನುತ್ತಾ ತಮಟೆಯ ಹಿಂಬದಿ ಹುರಿ ಬಿಗಿಗೊಳಿಸಿದ.
ರೊಚ್ಚಿಗೆದ್ದ ನರಸುಮ್ಮಣ್ಣ “ಅಯ್ಯೋ ಅವ್ನ ಮಕಕ್ ನನ್ ಎಕ್ಡ ಸಿಗಾಕ. ತಮಟೆ ಚರ್ಮ ಇದ್ರು ಇಲ್ಲ ಅಂತಾನೆ. ಅವ್ನಂತಾವ್ ಏನ್ ಕೇಳದು ಬಿಡ ಸೀನಪ್ಪ” ಮೊಟಣ್ಣನ ಬುದ್ಧಿ ಗೊತ್ತಿದ್ದರಿಂದ ಸೀನಪ್ಪ ಮತ್ತೂ ಬಲವಂತ ಮಾಡುವುದಕ್ಕೆ ಹೋಗಲಿಲ್ಲ
ಏನೋ ಜ್ಞಾಪಿಸಿಕೊಂಡವನಂತೆ ಮರಳಿ “ಮೊನ್ನೆ ಸ್ವಾಂದೇನಾಹಳ್ಳಿ ಯಜಮಾನ್ರು ಸಿಕ್ಕಿದ್ರು. ಆ ಊರಿನ ಮಾರಮ್ಮನ್ ಜಾತ್ರೆಗೆ ಕುಂಭಿ ಮನೆಯಿಂದ ಸೋಮನ ಕುಣಿಸೋಕೆ ಇದ್ರೆ ಹೇಳು ಅಂತ ಅಂದ್ರು. ಕೇಳಿ ಹೇಳ್ತಿನಿ ಅಂದೆ ”
ಸೋಮ ಎನ್ನುತ್ತಲೆ ಮ್ಲಾನವದನನಾದ ನರಸುಮ್ಮ “ ನಿಂಗೆ ಗೊತ್ತಲ್ಲ ಸೀನಪ್ಪ. ಹತ್ ಹದಿನೈದು ಕೆಜಿ ಸೋಮನ್ನ ಕುಣಿಸೋ ತ್ರಾಣ ನನಗಿಲ್ಲ. ವಯಸ್ಸಿನ ಹುಡುಗುರೇ ಹಿಂದೆ ಮುಂದೆ ನೋಡ್ತಾರೆ ಈಗ. ನಂಕೈಲಿ ಆಗಕಿಲ್ಲ ಬಿಡು”.
ತಡವಾಯಿತು ಎನ್ನುತ್ತಾ. ತನ್ನ ಬೆಟಾಲಿಯನ್ನು ಬೆನ್ನಿಗಂಟಿಕೊಂಡು ಸೀನಪ್ಪ ಹೊರಟುಹೋದ. ತಮಟೆ ಅರೆಗಳನ್ನು ನೋಡಿ ತಾನೇನೊ ಗುಂಪಿಗೆ ಸೇರದ ಪದವಾಗಿಬಿಟ್ಟೆನಾ ಎಂದು ಎನಿಸತೊಡಗಿತು.
ಕೊನೆಯ ಬಾರಿ ಮೊಟಣ್ಣನ ತಮಟೆ ಬಡಿದದ್ದಕ್ಕೆ ಬಂದ ಐವತ್ತು ರೂಪಯಿಯಲ್ಲಿ ನಲವತ್ತು ಅವನೆ ಇಸಿದು ಕೊಂಡಿದ್ದ. ಮೂವತ್ತಕ್ಕೆ ಮಾತಾಡಿದ್ದನಾದರೂ “ಹತ್ತು ಇರಲಿ. ಮುಂದಿನ ಸಲಿ ಹೋಗುವಾಗ ಅದಕ್ಕೆ ಸಮಾ ಮಾಡ್ಕಳನ” ಎಂದು ಹೇಳಿ ತೆಪ್ಪಗಾಗಿಸಿದ್ದ. ಉಚ್ಚೇಲಿ ಮೀನ್ ಹಿಡಿಯೋ ಅಂತವನ ಬಳಿ ಸಹಾಯ ಕೇಳಿದ್ದೆ ತಪ್ಪು ಅನಿಸಿತು. ದೊಡ್ಡ ಮಧುರೆ ಜಾತ್ರೆ ಮುಗಿದು ಇದೆಲ್ಲದರಿಂದ ಬೇಗ ಮುಕ್ತಿ ಸಿಕ್ಕರೆ ಸಾಕಿತ್ತು.
ಹೆಂಡತಿ ಸಾಕವ್ವನೊಟ್ಟಿಗೆ ಐದು ಮೈಲಿ ದೂರದ ದೊಡ್ಡ ಮಧುರೆಗೆ ನಡೆದುಹೋಗುತ್ತಿದ್ದರು.ಮಧ್ಯಾಹ್ನದ ಉರಿಬಿಸಿಲು ಕರಗಿ ತಂಪೊತ್ತು ಆವರಿಸಿದಾಗ ಹೊರಟು ಕತ್ತಲು ಕವಿಯುವ ಮೊದಲೆ ಮಗಳ ಮನೆ ಸೇರಿದರು. ತಂದೆ ತಾಯಿಯ ಕಂಡು ಮಗಳು ಪುಟ್ಟಕ್ಕನ ಸಂತಸ ಇಮ್ಮಡಿಯಾಯಿತು.”ಇದ್ಯಾಕಪ್ಪ ಕಣ್ ಎಲ್ಲಾ ಒಳಿಕ್ ಹೋದಂಗೆ ಆಗೈತೆ. ಉಷಾರಿಲ್ವಾ??” ಅಂತೆಲ್ಲಾ ವಿಚಾರಿಸತೊಡಗಿದಳು. ವಯಸ್ಸಾಗುತ್ತಿರುವ ಕೊಡುಗೆಗಳು ಎಂದು ಹೇಳಿ ಮಗಳಿಗರ ಸುಮ್ಮನಾಗಿಸಿದ.ಮಗಳಿಗೆ ಎಂತದೋ ಆತಂಕ. ಮಕ್ಕಳಿಗೆ ತಮ್ಮ ಪೋಷಕರಿಗೆ ವಯಸ್ಸಾಗುತ್ತಿದೆ ಎಂದು ಅರಿವಾಗದತೊಡಗಿದಾಗ ಒಂದು ಬಗೆಯ ದಿಗಿಲಾಗುತ್ತದೆ. ಕಣ್ಣಿನ ತುಂಬ ನೀರು ತುಂಬಿಕೊಂಡು”ಇಲ್ಲೆ ಬಂದು ಇರಪ್ಪ. ನಮ್ಜೊತೆನೆ” ಎಂದಳು. ಅಳಿಯನ ದುಡಿಮೆಯ ಅರಿವಿದ್ದುದರಿಂದ ಇದನ್ನು ನಯವಾಗೆ ತಿರಸ್ಕರಿಸಿದ.ಮಗಳು ಸುಮ್ಮನಾದಳು. ಅಳಿಯನು ಜಾತ್ರೆ ಗಡಿಬಿಡಿಯಲ್ಲಿ ತೊಡಗಿಕೊಂಡಿದ್ದ. ಮನೆಯಲ್ಲಿ ಮರುದಿನದಿಂದ ಹಬ್ಬದ ಸಂಭ್ರಮ.
ಪ್ರತೀ ಸಲದಂತೆ ಬೆಳಗ್ಗೆ ಆರಕ್ಕೆಲ್ಲಾ ಕೋಣದ ಬಲಿ ನಡೆಯುತ್ತಿತ್ತು. ಸರಸುಮ್ಮನಿಗೆ ರಾತ್ರಿಯೆಲ್ಲಾ ನಿದ್ದೆ ಸರಿಯಾಗಿ ಬರಲಿಲ್ಲ. ಕಣ್ಣು ಮುಚ್ಚಿದರೆ ತಮಟೆಯ ಸದ್ದು ಕಿವಿ ತುಂಬುತ್ತಿತ್ತು. ಇನ್ನು ಕತ್ತಲು ಇರುವಾಗಲೆ ಒಂದು ಚೂರಿ ಗೋಣಿಚೀಲ ಕೈಲಿಡಿದು ಬರಬರನೆ ಹೆಜ್ಜೆ ಹಾಕತೊಡಗಿದ. ಬಿಳಿ ಪಂಚೆ. ದೊಗಲೆ ಅಂಗಿ. ಮಣಿಕಟ್ಟಿನವರೆಗೂ ಬಂದ ಅಂಗಿಯ ತೋಳು. ಅರ್ಧ ತುಂಡಾಗಿದ್ದ ಅಂಗಿಯ ತೋಳಿನ ಗುಂಡಿಗಳು. ದೇವಸ್ಥಾನದ ಬಳಿ ಬಂದರೆ ಅಲ್ಲಿ ಎಲ್ಲವು ಖಾಲಿ. ಬೆಳಗ್ಗೆ ಇನ್ನು ಕತ್ತಲೆ ಇರುವಾಗಲೆ ಬಂದಿದ್ದರಿಂದ ಕೊಂಚ ಸಮಯ ಆಗಬಹುದೆಂದು ಕಾಯಬೇಕೆಂದುಕೊಂಡ. ಆದರೆ ವಧಾಸ್ಥಂಭದಲ್ಲಿ ಕೋಣ ಕಾಣದೆ ಇರುವುದ ಕಂಡು ದಿಗಿಲಾಯಿತು. ಕರಿಕವರಿನಲ್ಲಿ ಗುಡ್ಡೆಬಾಡು ತುಂಬಿ ನಡೆಯುತ್ತಿದ್ದವರೊಬ್ಬರು ಕಣ್ಣಿಗೆ ಬಿದ್ದರು. ಕೋಣವಧೆಯ ಬಗ್ಗೆ ಅವರ ಬಳಿ ವಿಚಾರಿಸಿದ. ಜಿಲ್ಲಾಡಳಿತಕ್ಕೆ ಹೆದರಿ ಹತ್ತಿರದ ಮಾವಿನ ತೋಪಿನಲ್ಲಿ ಕೋಣವಧೆ ನಡೆಯುತ್ತಿದ್ದುದನ್ನ ಅವರು ಹೇಳಿ ನಿಲ್ಲದೇ ಹೊರಟುಹೋದರು. ಆತಂಕಗೊಂಡು ಬೇಗ ಬೇಗನೆ ಹೆಜ್ಜೆ ಹಾಕುತ್ತಿದ್ದ ನರಸುಮ್ಮನ ಉಸಿರಾಟ ಜೋರಾಗುತ್ತಾ ಹೋಯಿತು. ಅಲ್ಲಿ ಹೋಗುವಷ್ಟರಲ್ಲಿ ಎಲ್ಲಾ ಕಾರ್ಯವು ಆಗಲೇ ಮುಗಿದಿತ್ತು. ಉಳಿದಿದ್ದ ಮೂರ್ನಾಲ್ಕು ಗುಡ್ಡೆ ಮಾಂಸಕ್ಕಾಗಿ ದುಡ್ಡು ಕೊಟ್ಟಿದ್ದ ಜನರಿಗೆ ಯುವಕರು ಕಾಯುತ್ತಿದ್ದರು. ಕೋಣ ಕಡಿಯುವ ಅಜಾನುಬಾಹು ತಲವಾರನನ್ನು ವಿಚಾರಿಸಿದಾಗ, ಮೇಲಿಂದ ಕೆಳಗೆ ಇವನನ್ನು ಕೆಕ್ಕರಿಸಿ ” ಇಂತ ವತ್ನಲ್ಲಿ ಕೋಣ ಕಡ್ದಿದ್ದೆ ಹೆಚ್ಚು ಅಂತದ್ರಲ್ಲಿ ಚಕ್ಕಳ ಯಾವನ್ ನೋಡ್ಕೊಂಡ್ ಕುತ್ಕೊತಾನೆ. ಅಲ್ಲೆ ಬೇಲಿ ಮೇಲೆ ಎಸ್ದಿರ್ಬೇಕು ನೋಡು..” ಎನ್ನುತ್ತಾ ಬಾಯಲ್ಲಿದ್ದ ಬಿಡಿಯ ತುಂಡು ಹೊರತೆಗೆದು ಅದರ ಅಂಡಿನ ಮೇಲೆ ನಯವಾಗಿ ನಾಟಿದ. ಬೆಳ್ಳಗಾಗಿದ್ದ ಬೂದಿ ಮೂರ್ನಾಲ್ಕು ಹೋಳಾಗಿ ನೆಲದ ಮೇಲೆ ಬಿದ್ದಿತು. ನರಸುಮ್ಮನಿಗೆ ಎದೆಯೇ ಒಡೆದು ಹೋದಂತಾಯಿತು. ಅಳಿಯನಿಗೆ ಹೇಳಿದ್ದನಾದರೂ ಗಲಾಟೆಯ ಮಧ್ಯೆ ಮತ್ತೆ ಜ್ಞಾಪಿಸುವುದನ್ನು ಮರೆತಿದ್ದ. ಅವನು ಕೈತೋರಿಸಿದ ಬೇಲಿಯ ಕಡೆ ಓಡತೊಡಗಿದ. ಅಲ್ಲಿ ಹೋದಾಗ ಅಲ್ಲಿದ್ದ ದೃಶ್ಯ ಕಂಡು ಯಾರೋ ಕರುಳು ಹೊರಗೆಳೆದಂತಾಯಿತು. ಮಾಂಸದ ವಾಸನೆ ಅರಸಿ ಬಂದಿದ್ದ ಬೀದಿನಾಯಿಗಳು ಹಸಿ ಕೋಣದ ಚರ್ಮವನ್ನು ದರದರನೆ ಎಳೆದು ತಿನ್ನುತ್ತಿದ್ದವು. ಎಳೆದೆಳೆದು ಸುಸ್ತಾಗಿದ್ದ ನಾಯಿಗಳು ನಾಲಿಗೆ ಹೊರಚಾಚಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದವು. ಅದಾಗಲೆ ತುಂಡು ತುಂಡಾದ ಅಂಗೈ ಅಗಲ ಚರ್ಮ ಅಲ್ಲಲ್ಲಿ ಬಿದ್ದಿದ್ದವು. ಸಾವರಿಸಿಕೊಳ್ಳುತ್ತಾ ಭಾರವಾದ ಹೆಜ್ಜೆ ಇಡುತ್ತಾ ಮಗಳ ಮನೆಯ ದಾರಿ ಹಿಡಿದ. ಹೋಗುವಾಗ ಇದ್ದ ನಾಲ್ಕು ಗುಡ್ಡೆ ಮಾಂಸವೂ ಖಾಲಿಯಾಗಿತ್ತು.
ದೇವಸ್ಥಾನ ಹಾದು ಹೋಗುವಾಗ ನಾಡಿದ್ದು ನಡೆಯುವ ಸ್ವಾಂದೇನಾಹಳ್ಳಿಯ ಜಾತ್ರೆ ನೆನಪಿಗೆ ಬಂದು ಹೊಸ ಚೈತನ್ಯ ಮೂಡಿದಂತಾಯಿತು. ಬೇಗ ಹೋಗಿ ಕಾದರೆ ಸಿಗುಬಹುದಾದ ಸಾಧ್ಯತೆಯೂ ನೆನಪಿಗೆ ಬಂತು. ಬೆಳಗ್ಗೆ ಏನೂ ತಿನ್ನದೆ ಬಂದಿದ್ದಕ್ಕೋ ಹೆಚ್ಚು ಓಡಾಡಿದ್ದಕ್ಕೋ ಹಸಿವು ಹೊಟ್ಟೆಯನ್ನು ಸುಡುತ್ತಿರುವ ಅನುಭವವಾಯಿತು.ಅಲ್ಲೂ ಹಿಂಗೆ ಏನಾದರೂ ಆಗಿದ್ದರೆ ಅನಿಸಿ ಮತ್ತೂ ದಿಗಿಲುಗೊಂಡ. ಇತ್ತಕಡೆ ಸಾಕವ್ವ ತಟ್ಟೆಯ ಮುಂದೆ ಕೂತು ಗಂಡನಿಗೆ ಕಾಯುತ್ತಿದ್ದಳು. ಸ್ವಲ್ಪ ಹೊತ್ತು ಕಾದು ಅಳಿಯನನ್ನು ಕಳುಹಿಸುವ ಯೋಚನೆಯಲ್ಲಿದ್ದಳು. ನರಸುಮ್ಮನಿಗೆ ವರ್ಷದ ಕೂಳಿನ ಮುಂದೆ ಎಲ್ಲವೂ ನಗಣ್ಯ ಎನಿಸಿತು. ಮನೆಯ ದಾರಿಯ ಕಡೆ ತಿರುಗಲಿಲ್ಲ.
ದೊಡ್ಡ ಮಧುರೆಯ ಕೆರೆಯ ಏರಿ ಹತ್ತಿ ಇಳಿದರೆ ಸ್ವಾಂದೇನಾಹಳ್ಳಿಗೆ ಎರಡು ಮೈಲಿಯ ದಾರಿ. ನೀರಿಲ್ಲದೆ ಬಣಗುಡುತ್ತಿದ್ದ ಮಧುರೆಯ ಕೆರೆ ಇವನ ದಾಹ ತೀರಿಸುವ ಶಕ್ತಿಯನ್ನು ಕಳೆದುಕೊಂಡಿತ್ತು. ಊರು ಹತ್ತಿರವಾಗುತ್ತ ಹೆಜ್ಜೆಗಳು ಶಕ್ತಿ ಕಳೆದುಕೊಳ್ಳುತ್ತಿದ್ದವು. ಕಂಕುಳಲ್ಲಿ ಇದ್ದ ಗೋಣಿಚೀಲ ಬೆವರನ್ನ ಹೊದ್ದಿಕೊಂಡಿತ್ತು. ಮಾರಮ್ಮ ಗುಡಿಯ ಬಳಿ ಬರುತ್ತಿದ್ದಂತೆ ಕೋಣ ಕಂಡಂತಾಗಿ ಹೊಸ ಚೈತನ್ಯ ಮೂಡಿತು. ತನ್ನ ಮುಂದಿದ್ದ ಸಾವನ್ನು ಕಡೆಗಣಿಸಿ ತಂದು ಹಾಕಿದ್ದ ಒಣ ಹುಲ್ಲನ್ನು ಸಾವಕಾಶವಾಗಿ ಮೆಲ್ಲುತ್ತಿತ್ತು. ಕಣ್ಣು ಎವೆಯಿಕ್ಕದೆ ಅದನ್ನೆ ನರಸುಮ್ಮ ನೋಡುತ್ತಿದ್ದ. ಇನ್ನೆರಡು ದಿನ ಜೀವ ಹಿಂಗಿದರೂ ಈ ಜಾಗ ಬಿಟ್ಟು ಒಂದಿಂಚೂ ಕದಲಬಾರದೆಂದು ನಿರ್ಧರಿಸಿದ. ನಿಧಾನವಾಗಿ ಅದರ ಹತ್ತಿರ ಹೋಗಬೇಕೆಂದೆನಿಸಿತು.
ಹತ್ತಿರವಾಗುತ್ತಿದ್ದಂತೆ ಯಾರೋ ಕೈ ಹಿಡಿದು ಜಗ್ಗಿದರೆನಿಸಿ ತಿರುಗಿದ. ಖಾಕಿ ಬಟ್ಟೆ ತೊಟ್ಟಿದ್ದ ಕ್ಯಾತ್ಸಂದ್ರ ಠಾಣೆಯ ದಪ್ಪೆದಾರ್ “ನಿಂತ್ಕಳೋ ಕುಡುಕ್ ಬೇವರ್ಸಿ ನನ್ ಮಗನೆ. ಎಲ್ಲಿಗ್ ದನ ನುಗ್ದಂಗೆ ನುಗ್ತಿದ್ಯಾ…” ಎನ್ನುತ್ತಾ ಹಿಂಬದಿ ಕೊರಳಪಟ್ಟಿ ಹಿಡಿದು ಎಳೆದು ಬಿಸಾಡಿದ.ಬಿದ್ದ ರಭಸಕ್ಕೆ ಮೈಯೆಲ್ಲಾ ಕೊಂಚ ಮಣ್ಣಾದಂತಾಯಿತು. ಯಾವುದೋ ಟೆಂಪೊ ಹಿಂಬದಿಯಿಂದ ಒಂದು ಹಲಗೆ ಇಳಿಬಿಟ್ಟು ಕೋಣವನ್ನು ಅದರ ಮೂಲಕ ಅದರೊಳಗೆ ಹತ್ತಿಸಿದರು. “ತುಮಕೂರು ಜಿಲ್ಲಾಡಳಿತ” ಎಂದು ವಾಹನದ ಮೇಲೆ ಮಾಡಿದ್ದ ಪೈಂಟು ಅಲ್ಲಲ್ಲಿ ಬಣ್ಣ ಕಳೆದುಕೊಂಡಿತ್ತು. ಜಿಲ್ಲಾಡಳಿತದ ವತಿಯಿಂದ ಬಂದಿದ್ದ ಒಂದಿಬ್ಬರು ಊರಿನ ಗೋಡೆಯ ಮೇಲೆ ನಿಷೇಧ ಕಾಯ್ದೆಯ ಪೋಸ್ಟರ್ ಅಂಟಿಸಿದರು. ಕೋಣ ತನ್ನ ಬಾಯಲ್ಲಿದ್ದ ಒಣ ಹುಲ್ಲು ಹಾಗೆ ನಿಧಾನವಾಗಿ ಮೆಲ್ಲುತ್ತಾ ಟೆಂಪೋದೊಳಗಿಂದ ನಿರ್ಭಾವುಕತೆಯಿಂದ ಊರ ಜನರನ್ನು ನೋಡುತ್ತಿತ್ತು. ಟೆಂಪೋಗಾಡಿ ದೂಳಿನ ಮರೆಯಲ್ಲಿ ಕಾಣದಾಯಿತು. ಅದರ ಹಿಂದೆ ಕ್ಯಾತ್ಸಂದ್ರ ಪೋಲೀಸರ ಗಾಡಿ ಕೂಡ ಓಡತೊಡಗಿತು. ಊರಿನ ಯಾವ ಗಂಡಾಳೂ ಇದನ್ನು ತಡೆಯಲಿಲ್ಲ.
ಸಾವರಿಸಿಕೊಂಡು ಎದ್ದ ನರಸುಮ್ಮನಿಗೆ ಆಕಾಶವೇ ಕಳಚಿ ತನ್ನ ಮೇಲೆ ಬಿದ್ದಂತಾಯಿತು. ಜಾತ್ರೆಯ ಸಿದ್ದತೆಯಲ್ಲಿದ್ದ ಊರಿನ ಹಟ್ಟಿಯ ಯಜಮಾನ್ರು ಕೂಡ ವಾಹನ ತಡೆಯದೆ ಹಾಗೆ ನಿಂತಿದ್ದರು. ದೇವಾಲಯದ ಪ್ರಾಂಗಣದಲ್ಲಿ ಜಾತ್ರೆಯ ಸಿದ್ಧತೆಗೆ ವಾದ್ಯ ಹೊತ್ತಿದ್ದ ಸ್ವಾಂದೆನಹಳ್ಳಿಯ ಯುವಕರು “ನೆನ್ನೆನೆ ಕಡ್ದಾಕಿದ್ರೆ ಆಗಿರದು ಮದ್ರೆ ಹುಡ್ಗುರಂಗೆ…” ಎನ್ನುತ್ತಾ ತಪ್ಪಿದ ಅವಕಾಶಕ್ಕೆ ಕೈ ಕೈ ಹಿಸುಕಿಕೊಂಡರು. ನರಸುಮ್ಮನಿಗೆ ಕಣ್ಣಿಗೆ ಕತ್ತಲು ಕವಿದಂತಾಯಿತು. ಕಣ್ಣಿಂದ ಧಾರಾಕಾರವಾಗಿ ನೀರು ಹರಿಯಲು ಶುರುವಾದವು. ತಂದೆ ಕುಂಭಯ್ಯ, ಹೆಂಡತಿ ಸಾಕವ್ವ, ಸೀನಪ್ಪ, ಮೊಟಪ್ಪ, ಮಗಳು ಪುಟ್ಟವ್ವ ಎಲ್ಲರೂ ಕಣ್ಣ ಮುಂದೆ ಬಂದರು. ಚೀಲ ಚೂರಿ ಬಿಸುಟು ಮಾರಮ್ಮ ಗುಡಿಯ ಮುಂದೆ ನಿಂತು ರೋಧಿಸತೊಡಗಿದ. ಕೆಲವರಿಗಷ್ಟೆ ಅಲ್ಲಿ ಪರಿಚಯವಿದ್ದುದರಿಂದ ಕಂಡೂ ಕಾಣದಂತೆ ಸುಮ್ಮನಾದರು.
ಕಾಲುಗಳನ್ನು ಅಲ್ಲಿಂದ ಕೀಳಲಾಗಲಿಲ್ಲ. ದಪ್ಪೆದಾರ್ ಬಿಸುಟ ರಭಸಕ್ಕೆ ಕಾಲ್ಬೆರಳ ಸಂದುಗಳಿಂದ ರಕ್ತ ಒಸರತೊಡಗಿತು. ಉರುಳುತ್ತಾ ಅವನು ಕೊಂಡ ಹಾಕುವ ಜಾಗದಲ್ಲಿ ಬಿದ್ದಿದ್ದ. ಅಣ್ಣ ರಂಗಯ್ಯ ಗಾಢವಾಗಿ ನೆನಪಾಗತೊಡಗಿದ. ಮಾರಮ್ಮನ ದೇವಾಲಯದ ಬಾಗಿಲು ತೆರೆದಿತ್ತು. ವಾಪಸ್ಸಾಗುತ್ತಿದ್ದ ಊರ ಜನರು ಆಗುತ್ತಿದ್ದ ಅನಿಶ್ಚಿತ ಘಟನೆ ಕಂಡು ತಿರುಗಿನಿಂತರು. ರೌದ್ರ ಸೋಮನನ್ನು ಹೊತ್ತ ನರಸುಮ್ಮ ಕೋಣವಧೆಯ ಜಾಗದಲ್ಲಿ ನಿಂತು ಉನ್ಮತ್ತನಾಗಿ ಕುಣಿಯತೊಡಗಿದ. ಪ್ರತೀ ಹೆಜ್ಜೆಗೂ ನೆಲ ಕಂಪಿಸಿದಂತಾಗುತ್ತಿತ್ತು. ವಾದ್ಯ ಹೊತ್ತಿದ್ದ ಹುಡುಗರು ತಮಗರಿವಿಲ್ಲದಂತೆ ಶುರುಮಾಡಿದರು. ತಮಟೆ ಹರೆ ದೋಣು ಜಿದ್ದಿಗೆ ಬಿದ್ದವಂತೆ ಊರಿನ ಸುತ್ತ ಆದೆಷ್ಟೋ ಶತಮಾನಗಳಿಂದ ನಿಂತಿದ್ದ ಬೆಟ್ಟಗುಡ್ಡಗಳು ಪ್ರತಿಧ್ವನಿಸುವಂತೆ ಬಾರಿಸತೊಡಗಿದವು. ಊರಿನ ಜನ ಅಪ್ರಚೋದಿತರಾಗಿ ಕೈಮುಗಿದು ನಿಂತರು. ಯಾರೋ ಒಂದು ಬಿಂದಿಗೆಯಲ್ಲಿ ನೀರು ತಂದು ರಕ್ತ ಒಸರುತ್ತಿದ್ದ ನರಸುಮ್ಮನ ಕಾಲಿಗೆ ನೀರು ಸುರಿದು ಅರಿಶಿಣ ಕುಂಕುಮ ಇಟ್ಟರು. ದೇವಸ್ಥಾನದ ಆವರಣದಲ್ಲಿ ಕುಣಿದ ಮೇಲೆ ಬಂದ ದಾರಿಯ ಕಡೆಗೆ ಹಜ್ಜೆಗಳು ಹೋಗತೊಡಗಿದವು. ಕುಣಿಯುತ್ತಾ ದೊಡ್ಡ ಮಧುರೆ ಕೆರೆ ಏರಿ ಮೂಲಕ ಕೊಂಡಜ್ಜಿ ದಾರಿ ಹಿಡಿದಾಗಿತ್ತು. ಬಂದ ದಾರಿಯಲ್ಲಿ ವಾದ್ಯಗಳು ಹೆಜ್ಜೆಗಳಿಗೆ ಅನುಗುಣವಾಗಿ ಝೇಂಕರಿಸುತ್ತಿದ್ದವು. ಸಾಕವ್ವ ಆಗಲೇ ಗಂಡನನ್ನು ಹುಡುಕಿಕೊಂಡು ಊರ ದಾರಿಯಲ್ಲಿ ಕಾಯುತ್ತಿದ್ದಳು. ಗಂಡನನ್ನು ಕಂಡು ದಿಗ್ಬ್ರಾಂತಳಾದಳು. ನರಸುಮ್ಮನಿಗೆ ಯಾರೂ ಕಣ್ಣಿಗೆ ಬೀಳುತ್ತಿರಲಿಲ್ಲ. ಕೊಂಡಜ್ಜಿಗೆ ಬರುವಷ್ಟರಲ್ಲಿ ಮೂರು ಊರಿನ ವಾದ್ಯದವರು ಜೊತೆಗೂಡಿದ್ದರು. ದಿನ ರಾತ್ರಿಗಳು ಉರುಳಿದರೂ ಸೋಮನ ಕುಣಿತ ನಿಲ್ಲಲಿಲ್ಲ. ತ್ರಾಣ ಇರೋಗಂಟ ಕುಣಿತ ಸಾಗಬೇಕಿತ್ತು.
ಕಥೆಗಾರರ ಪರಿಚಯ:
ಚಂದ್ರಶೇಖರ ಡಿ.ಆರ್.
ತುಮಕೂರಿನಲ್ಲಿ ಹುಟ್ಟಿ ಬೆಳೆದು ಇದೀಗ ಹತ್ತು ವರ್ಷದಿಂದ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಸೇವೆ. ಪ್ರಸಕ್ತ ಮಧುಗಿರಿಯಲ್ಲಿ ಡೆಪ್ಯುಟಿ ಮ್ಯಾನೇಜರ್. ಅಕ್ಷರಗಳೆಂದರೆ ಖುಷಿ.
ಕರ್ನಾಟಕ
Bandipur National Park: ಬಂಡೀಪುರವೀಗ ಫುಲ್ ರಶ್, ದಿನಕ್ಕೆ 8 ಲಕ್ಷ ರೂ. ಆದಾಯ; ಇದು ಮೋದಿ ಎಫೆಕ್ಟ್!
Bandipur Safari: ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಈಗ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಪ್ರತಿ ದಿನಕ್ಕೆ ಎರಡರಿಂದ ಮೂರು ಸಾವಿರ ಮಂದಿ ಭೇಟಿ ನೀಡುತ್ತಿದ್ದು, ಏಳರಿಂದ ಎಂಟು ಲಕ್ಷ ರೂಪಾಯಿ ವರೆಗೂ ಆದಾಯ ಬರುತ್ತಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಹೋದ ಮೇಲೆ ಇಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಆಗಿದೆ ಎಂದು ಹೇಳಲಾಗುತ್ತಿದೆ.
ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನವನ (Bandipur National Park) ಈಗ ಮತ್ತಷ್ಟು ಕಳೆಗಟ್ಟಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಭೇಟಿ ಬಳಿಕ ಇಲ್ಲಿಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ವಾರಾಂತ್ಯವಾದರೆ ಸಾಕು ಬಂಡಿಪುರ ಸಫಾರಿಗೆ ಪ್ರವಾಸಿಗರು ಹರಿದು ಬರುತ್ತಿದ್ದಾರೆ.
2023ರ ಏಪ್ರಿಲ್ 9ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಂಡಿಪುರದಲ್ಲಿ ಸಫಾರಿ ನಡೆಸಿದ್ದರು. ಪ್ರಾಜೆಕ್ಟ್ ಟೈಗರ್ನ (Project Tiger) 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಬಂಡೀಪುರದಲ್ಲಿ ಹುಲಿ ಸಂರಕ್ಷಣೆ ಸಂಬಂಧಿತ ಕಾರ್ಯಕ್ರಮ ಮತ್ತು ಹುಲಿಗಣತಿ ಬಿಡುಗಡೆ ಸೇರಿದಂತೆ ಹಲವು ಕಾರಣಗಳಿಗಾಗಿ ಅವರು ಆಗಮಿಸಿದ್ದರು. ಈ ವೇಳೆ ಮೋದಿ ಸುಮಾರು 2 ಗಂಟೆ ಕಾಲ ಬಂಡೀಪುರ ಉದ್ಯಾನವನವನ್ನು ಸುತ್ತಿದ್ದರು.
ಬಂಡೀಪುರ ಅಭಯಾರಣ್ಯದ ಸೊಬಗಿನ ಜತೆಗೆ ಕಾಲ ಕಳೆದಿದ್ದ ನರೇಂದ್ರ ಮೋದಿ ಅವರು ವನ್ಯಜೀವಿ, ನೈಸರ್ಗಿಕ ಸೌಂದರ್ಯವನ್ನು ವೀಕ್ಷಿಸಿ ಖುಷಿಪಟ್ಟಿದ್ದರು. ಸುದೀರ್ಘ 2 ಗಂಟೆ 15 ನಿಮಿಷ ಟೈಗರ್ ಸಫಾರಿ ನಡೆಸಿ, ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಿ ಅವುಗಳ ಫೋಟೊ ತೆಗೆದು ಖುಷಿಪಟ್ಟಿದ್ದರು. ಇದಾದ ಬಳಿಕ ಪರಿಸರ ಪ್ರೇಮಿಗಳು, ಪ್ರವಾಸಿ ಪ್ರೇಮಿಗಳಿಗೆ ಇದು ಫೇವರಿಟ್ ತಾಣವಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದಲ್ಲದೆ, ಕೇರಳ-ತಮಿಳುನಾಡು ಸೇರಿದಂತೆ ಇನ್ನಿತರ ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ಹೊಸ ಸಂಸತ್ ಭವನದಲ್ಲಿ ಸೆಂಗೋಲ್ ಪ್ರತಿಷ್ಠಾಪನೆ; ಕೈಮುಗಿದುಕೊಂಡು ರಾಜದಂಡ ಹಿಡಿದು ಬಂದ ಪ್ರಧಾನಿ ಮೋದಿ
ನಿತ್ಯ 2 ಸಾವಿರ ಜನ ಭೇಟಿ
ಪ್ರತಿ ನಿತ್ಯ ಒಂದೂವರೆಯಿಂದ ಎರಡು ಸಾವಿರ ಜನರ ಭೇಟಿ ನೀಡುತ್ತಿದ್ದು, ಸಫಾರಿಯಿಂದಲೇ ಪ್ರತಿ ದಿನ 7 ರಿಂದ 8 ಲಕ್ಷ ರೂಪಾಯಿ ಆದಾಯ ಸಂಗ್ರಹವಾಗುತ್ತಿದೆ. ಪ್ರವಾಸಿಗರ ಹೆಚ್ಚಳದಿಂದ ಅರಣ್ಯ ಇಲಾಖೆಯ ಆದಾಯದಲ್ಲಿಯೂ ಹೆಚ್ಚಳವಾಗುತ್ತಿದೆ.
ಹೊಸ ವಾಹನಗಳ ಖರೀದಿ
ಸಾರ್ವಜನಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು 4 ಹೊಸ ವಾಹನಗಳನ್ನು ಖರೀದಿಸಿದೆ. ಸಫಾರಿಗಾಗಿ ಮತ್ತೆ 2 ಬಸ್, 2 ಜೀಪ್ಗಳನ್ನು ಖರೀದಿ ಮಾಡಲಾಗಿದೆ.
ಟಿಕೆಟ್ಗಾಗಿ ಪರದಾಟ
ಆನ್ಲೈನ್ ಟಿಕೆಟ್ ವ್ಯವಸ್ಥೆ ಮಾಡಿರುವುದರಿಂದ ಮೊದಲೇ ಬುಕ್ಕಿಂಗ್ ನಡೆಯುತ್ತಿದ್ದು, ಸೋಲ್ಟ್ಔಟ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಆಫ್ಲೈನ್ ಟಿಕೆಟ್ ಕಡಿಮೆ ಪ್ರಮಾಣದಲ್ಲಿಟ್ಟಿದ್ದರಿಂದ ಅವುಗಳು ಎಲ್ಲರಿಗೂ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದ್ದು, ಟಿಕೆಟ್ ಸಿಗದೇ ಪ್ರವಾಸಿಗರು ನಿರಾಸೆಯಿಂದ ವಾಪಸ್ ಆಗುತ್ತಿರುವ ಸನ್ನಿವೇಶವೂ ಇದೆ.
912.04 ಚದರ ಕಿ.ಮೀ ವಿಸ್ತೀರ್ಣ
ಬಂಡೀಪುರ ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ಮೀಸಲು ಪ್ರದೇಶವು ಭಾರತದ 2ನೇ ಅತಿ ದೊಡ್ಡ ಹುಲಿ ಸಂರಕ್ಷಣಾ ತಾಣವಾಗಿದ್ದು, 912.04 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಈ ಬಂಡೀಪುರ ರಾಷ್ಟ್ರೀಯ ಉದ್ಯಾನವು ವಯನಾಡ್ (ವನ್ಯಜೀವಿ ಅಭಯಾರಣ್ಯ), ಮುದುಮಲೈ ಮತ್ತು ನಾಗರಹೊಳೆಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಇನ್ನು ಈ ಬಂಡೀಪುರವು ದಕ್ಷಿಣ ಭಾರತದ ಅತಿದೊಡ್ಡ ಸಂರಕ್ಷಿತ ಪ್ರದೇಶಗಳಲ್ಲಿ ಒಂದು ಎಂಬ ಖ್ಯಾತಿಯನ್ನು ಹೊಂದಿದೆ. ದಕ್ಷಿಣ ಏಷ್ಯಾದ ಕಾಡಾನೆಗಳ ಅತಿ ದೊಡ್ಡ ಆವಾಸ ಸ್ಥಾನವೂ ಇದಾಗಿದೆ. ಇದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿದೆ.
ಇದನ್ನೂ ಓದಿ: Weather Report: ಭಾನುವಾರ ಈ ಜಿಲ್ಲೆಗಳಲ್ಲಿ ವರುಣನ ಅಬ್ಬರ; ಗಾಳಿ ವೇಗವೂ ಹೆಚ್ಚಲಿದೆ ಎಂದ ಹವಾಮಾನ ಇಲಾಖೆ
ಇಲ್ಲಿರುವ ವನ್ಯಜೀವಿಗಳು
ಹುಲಿಗಳು, ಚಿರತೆ, ಜಿಂಕೆ, ಕಡವೆಗಳು, ಕಾಡು ನಾಯಿಗಳು, ಕಾಡುಹಂದಿ, ಕರಡಿಗಳು, ದೈತ್ಯ ಮಲಬಾರ್ ಅಳಿಲುಗಳು, ಕಾಡೆಮ್ಮೆ ಇತ್ಯಾದಿಗಳು ವನ್ಯಜೀವಿಗಳನ್ನು ಬಂಡಿಪುರದಲ್ಲಿ ಕಾಣಬಹುದಾಗಿದೆ.
ದಿನಕ್ಕೆರಡು ಬಾರಿ ಅರಣ್ಯ ಸಫಾರಿ
ಬಂಡೀಪುರದಲ್ಲಿ ಪ್ರತಿದಿನ ಎರಡು ಬಾರಿ ಸಫಾರಿ ನಡೆಸಲಾಗುತ್ತದೆ. ಇಲ್ಲಿ ಎರಡು ರೀತಿಯ ಸಫಾರಿಗೆ ಅವಕಾಶವನ್ನು ಕಲ್ಪಿಸಲಾಗಿದ್ದು, ಬಸ್ ಹಾಗೂ ಜೀಪ್ ವ್ಯವಸ್ಥೆ ಇದೆ. ಬಸ್ನಲ್ಲಿ ಹೆಚ್ಚಿನ ಜನರು ಒಮ್ಮೆಲೆಗೆ ಹೋಗಬಹುದಾಗಿದ್ದು, ಇದು 45 ನಿಮಿಷಗಳಿಂದ 1 ಗಂಟೆಯ ಅವಧಿಯನ್ನು ಹೊಂದಿರುತ್ತದೆ. ಇನ್ನು ಜೀಪ್ ಸಫಾರಿಯಲ್ಲಿ ಸರಿಸುಮಾರು 2 ಗಂಟೆಗಳ ಅವಧಿ ಇರುತ್ತದೆ. ಈ ಎರಡೂ ಸಫಾರಿಗಳು ಬೆಳಗ್ಗೆ 6 ರಿಂದ 9 ಮತ್ತು ಮಧ್ಯಾಹ್ನ 3 ರಿಂದ 6 ಗಂಟೆ ನಡುವೆ ಕಾರ್ಯನಿರ್ವಹಿಸುತ್ತವೆ. ಇನ್ನು ನೀವು ಕ್ಯಾಮೆರಾಗಳನ್ನು ಕೊಂಡೊಯ್ಯುವುದಾದರೆ ಅದಕ್ಕೆ ಹೆಚ್ಚುವರಿ ಶುಲ್ಕವಿರುತ್ತದೆ.
ಎಷ್ಟು ದೂರ?
ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಮೀಸಲು ಬೆಂಗಳೂರಿನಿಂದ 220 ಕಿ.ಮೀ ದೂರದಲ್ಲಿದೆ. ಮೈಸೂರು ನಗರವು ಹತ್ತಿರದ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣವಾಗಿದೆ (ಬಂಡೀಪುರದಿಂದ 73 ಕಿ.ಮೀ). ಮೈಸೂರಿನಿಂದ ಬಂಡೀಪುರ ತಲುಪಲು ಬಸ್ಗಳು ಅಥವಾ ಟ್ಯಾಕ್ಸಿಗಳು ಸಿಗುತ್ತವೆ.
ವಸತಿ ವ್ಯವಸ್ಥೆಯೂ ಇದೆ
ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ರಾಷ್ಟ್ರೀಯ ಉದ್ಯಾನವನದ ಹೊರಗಡೆ ಬಂಡೀಪುರ ಸಫಾರಿ ಲಾಡ್ಜ್ ಅನ್ನು ನಡೆಸುತ್ತಿದೆ. ಕೆಲವು ಖಾಸಗಿ ರೆಸಾರ್ಟ್ಗಳು ಲಭ್ಯವಿವೆ. ಮೈಸೂರು ನಗರದಲ್ಲಿ ಹೆಚ್ಚಿನ ವಾಸ್ತವ್ಯದ ಆಯ್ಕೆಗಳೂ ಇದ್ದು, ಪ್ರವಾಸಿಗರು ಅನುಕೂಲಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿಕೊಳ್ಳಬಹುದು.
ಯಾವ ಸಮಯ ಹೆಚ್ಚು ಸೂಕ್ತ
ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ವರ್ಷದ ಯಾವ ಸಮಯದಲ್ಲಿ ಭೇಟಿ ನೀಡಬಹುದಾದರೂ ಮುಂಗಾರು ನಂತರದ ಅಂದರೆ, ಅಕ್ಟೋಬರ್ನಿಂದ ಫೆಬ್ರವರಿವರೆಗೆ ಭೇಟಿ ನೀಡುವುದು ಉತ್ತಮ ಸಮಯ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ವಿಸ್ತಾರ Explainer: ಹೊಸ ಸಂಸತ್ ಭವನದಲ್ಲಿ ಸ್ಥಾಪಿತಗೊಂಡ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದರ ಮಹತ್ವ?
ರಾತ್ರಿ ಸಂಚಾರ ನಿಷೇಧ
ರಾತ್ರಿ 9 ರಿಂದ ಬೆಳಗ್ಗೆ 6 ರವರೆಗೆ ಬಂಡೀಪುರ ಕಾಡಿನ ಮೂಲಕ ವಾಹನಗಳ ಸಂಚಾರವನ್ನು ನಿಷೇಧ ಮಾಡಲಾಗಿದೆ. ಕಾರಣ ರಾತ್ರಿ ವಾಹನಗಳ ಸಂಚಾರದಿಂದ ಅಪಘಾತಗಳು ಸಂಭವಿಸಿ ಕಾಡು ಪ್ರಾಣಿಗಳು ಮೃತಪಡುತ್ತವೆ. ಹೀಗಾಗಿ ರಾತ್ರಿ ಸಂಚಾರವನ್ನು ನಿಷೇಧ ಮಾಡಲಾಗಿದೆ.
-
ಕರ್ನಾಟಕ24 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ23 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ22 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ18 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕ್ರಿಕೆಟ್13 hours ago
World Cup 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ
-
ಕರ್ನಾಟಕ14 hours ago
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ
-
ದೇಶ6 hours ago
New Parliament Building: ಇಂದು ಹೊಸ ಸಂಸತ್ ಭವನ ಉದ್ಘಾಟನೆ; ಹೇಗೆ ನಡೆಯಲಿದೆ ಕಾರ್ಯಕ್ರಮ?
-
ಕರ್ನಾಟಕ13 hours ago
DA Hike: ಶೇ.4 ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ; ಸಿಎಂ ಸಿದ್ದರಾಮಯ್ಯಗೆ ಸರ್ಕಾರಿ ನೌಕರರ ಅಭಿನಂದನೆ