ಪ್ರಮುಖ ಸುದ್ದಿ
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ ಚೌತಿಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (Horoscope Today) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಇಂದಿನ ಪಂಚಾಂಗ (07-06-2023)
ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷ.
ತಿಥಿ: ಚೌತಿ 21:50 ವಾರ: ಬುಧವಾರ
ನಕ್ಷತ್ರ: ಉತ್ತರಾಷಾಢ 21:01 ಯೋಗ: ಬ್ರಹ್ಮ 22:21
ಕರಣ: ಭವ 11:19 ಇಂದಿನ ವಿಶೇಷ: ಸಂಕಷ್ಟ ಚತುರ್ಥಿ, ವಿಶ್ವ ಆಹಾರ ಸುರಕ್ಷತಾ ದಿನ
ಅಮೃತಕಾಲ: ಮಧ್ಯಾಹ್ನ 03 ಗಂಟೆ 13 ನಿಮಿಷದಿಂದ ಸಂಜೆ 04 ಗಂಟೆ 41 ನಿಮಿಷದವರೆಗೆ.
ಸೂರ್ಯೋದಯ : 05:53 ಸೂರ್ಯಾಸ್ತ : 06:44
ರಾಹುಕಾಲ : ಮಧ್ಯಾಹ್ನ 12.00 ರಿಂದ 1.30
ಗುಳಿಕಕಾಲ: ಬೆಳಗ್ಗೆ 10.30 ರಿಂದ 12.00
ಯಮಗಂಡಕಾಲ: ಬೆಳಗ್ಗೆ 7.30 ರಿಂದ 9.00
ಮೇಷ: ಆರೋಗ್ಯದಲ್ಲಿ ಪ್ರಗತಿ. ವ್ಯಾಪಾರ ವ್ಯವಹಾರದಲ್ಲಿ ಲಾಭ. ಅತಿಯಾದ ಸಂಶಯಾತ್ಮಕ ಸ್ವಭಾವ ನಿಮ್ಮ ಮನಸ್ಸಿಗೇ ಘಾಸಿ ಮಾಡುವ ಸಾಧ್ಯತೆ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5
ವೃಷಭ: ಕೈಗೆ ಬಂದ ತುತ್ತು ಬಾಯಿಗೆ ಬರುವ ಮುನ್ನ ಕೋಪದಿಂದ ಪರಿಸ್ಥಿತಿ ಹದಗೆಡಲು ಹಾದಿ ಮಾಡಿಕೊಳ್ಳುವುದು ಬೇಡ. ತಾಳ್ಮೆಯಿಂದ ವರ್ತಿಸಿ. ಕೆಲಸ ಕಾರ್ಯಗಳಲ್ಲಿ ಮಂದಗತಿ. ಕುಟುಂಬದ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4
ಮಿಥುನ: ಆಪ್ತ ವ್ಯಕ್ತಿಗಳಿಂದ ಸಲಹೆ ದೊರೆಯಲಿದೆ. ಆರ್ಥಿವಾಗಿ ಬಲ ಸಿಗಲಿದೆ. ದ್ವಿಸ್ವಭಾವದವರಾದ ನೀವು ಆಂತರಿಕವಾಗಿ ಯಾವುದಾದರೂ ಭಯದಿಂದ ಬಳಲುತ್ತೀರಿ. ಆರೋಗ್ಯದಲ್ಲಿ ಪ್ರಗತಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2
ಕಟಕ: ಹಾಸ್ಯ ಪ್ರಜ್ಞೆಯಿಂದ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಹೊಸ ವ್ಯವಹಾರದಲ್ಲಿ ತೊಡಗುವಿರಿ. ಆತುರದ ತಿರ್ಮಾನಗಳು ಬೇಡ. ಕುಟುಂಬದ ಸದಸ್ಯರೊಂದಿಗೆ ಚರ್ಚೆ ನಡೆಸುವಿರಿ. ಸಂಗಾತಿಯ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5
ಸಿಂಹ: ಅತಿಯಾದ ವ್ಯಾಮೋಹ ದುಃಖಕ್ಕೆ ಕಾರಣವಾಗಬಹುದು. ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಪ್ರೀತಿ ಮೇಲುಗೈ ಸಾಧಿಸುತ್ತದೆ. ನಿಮ್ಮ ಶಕ್ತಿ ಮತ್ತು ನಿಮ್ಮ ಮುಂದಿನ ಯೋಜನೆಗಳನ್ನು ಮರು ನಿರ್ಣಯಿಸುವ ಸಮಯ ಇದು. ಆರೋಗ್ಯದಲ್ಲಿ ಪ್ರಗತಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4
ಕನ್ಯಾ: ಆರೋಗ್ಯದ ಕಡೆಗೆ ಗಮನ ಹರಿಸಿ. ಅತಿಥಿಗಳ ಆಗಮನ ಸಂತಸ ತರುವುದು. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ಆಪ್ತರ ಮಾತುಗಳು ಅಗಾದ ಪರಿಣಾಮ ಬೀರುವ ಸಾಧ್ಯತೆ. ಹಣಕಾಸಿನ ವ್ಯವಹಾರದಲ್ಲಿ ಕುಂಠಿತ. ಕುಟುಂಬದ ಸದಸ್ಯರ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ದೃತಿಗೆಡದೆ ಕಾರ್ಯದಲ್ಲಿ ಮುನ್ನುಗ್ಗಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5
ವೃಶ್ಚಿಕ: ಆಹಾರ ಕ್ರಮದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ. ಅನಗತ್ಯ ಖರ್ಚುಗಳು ಹೆಚ್ಚಾಗುವ ಸಾಧ್ಯತೆ. ನಿಮ್ಮ ಉದಾರ ವರ್ತನೆಯನ್ನು ಬಳಸಿ ಕೊಂಡು ಬೆರೆಯವರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6
ಧನಸ್ಸು: ಇಂದು ನಿಮಗೆ ದೈಹಿಕವಾಗಿ ಆಯಾಸವಾಗುವುದು. ಅತಿಯಾದ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆ. ಉದ್ಯೋಗದಲ್ಲಿ ಮಿಶ್ರ ಫಲ. ಕೆಲಸಕಾರ್ಯಗಳಲ್ಲಿ ನಿಧಾನ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3
ಮಕರ: ಆರೋಗ್ಯದ ದೃಷ್ಟಿಯಿಂದ ಉತ್ತಮವಾದ ದಿನ. ಎಂದಿಗಿಂತ ಇಂದು ಉತ್ಸಾಹದಿಂದ ಇರುವಿರಿ. ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ಸಿಗಲಿದೆ. ಪ್ರೀತಿ ಅಂಕುರವಾಗುವ ಸಾಧ್ಯತೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3
ಕುಂಭ: ಭರವಸೆಯು ನಿಮ್ಮ ಕೆಲಸದಲ್ಲಿ ಸಹಾಯ ಮಾಡುವುದು. ಕುಟುಂಬದ ಸದಸ್ಯರ ಬೆಂಬಲ ದೊರೆಯಲಿದೆ. ವ್ಯಾಪಾರ-ವ್ಯವಹಾರದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡು ಬರುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1
ಮೀನ: ಪ್ರೀತಿ, ಭರವಸೆ, ನಂಬಿಕೆ, ಸಹಾನುಭೂತಿ, ಆಶಾವಾದ ಮತ್ತು ನಿಷ್ಠೆಗಳಂಥ ಧನಾತ್ಮಕ ಭಾವನೆಗಳನ್ನು ಗ್ರಹಿಸಲು ಮನಸ್ಸು ಪ್ರೋತ್ಸಾಹಿಸುವುದು. ಕಾರ್ಯದಲ್ಲಿ ಪ್ರಗತಿ. ಹಿರಿಯರ ಆಶೀರ್ವಾದ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | [email protected]
ಇದನ್ನೂ ಓದಿ : ಶುಕ್ರ ಗ್ರಹ ಲಗ್ನದಲ್ಲಿದ್ದರೆ ಉತ್ತಮ ಆರೋಗ್ಯ, ಉಳಿದ ಮನೆಯಲ್ಲಿದ್ದರೆ ಯಾವೆಲ್ಲಾ ಫಲ?
ಕರ್ನಾಟಕ
Sudha Murty: ಅಮೆರಿಕದಲ್ಲಿ ಕಾರ್ಯಕ್ರಮ ಎಂದು ಸುಧಾ ಮೂರ್ತಿ ಹೆಸರಲ್ಲಿ ವಂಚನೆ; ಇಬ್ಬರ ವಿರುದ್ಧ ಕೇಸ್
Sudha Murty: ಅಮೆರಿಕದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ, ಸುಧಾ ಮೂರ್ತಿ ಅವರು ಆಗಮಿಸಲಿದ್ದಾರೆ ಎಂದು ಹೇಳಿಕೊಂಡು ವಂಚಿಸಿದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಬೆಂಗಳೂರು: ಅಮೆರಿಕದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಆ ಕಾರ್ಯಕ್ರಮಕ್ಕೆ ಇನ್ಫೋಸಿಸ್ ಪ್ರತಿಷ್ಠಾನದ (Infosys Foundation) ಸುಧಾ ಮೂರ್ತಿ ಅವರು ಆಗಮಿಸಲಿದ್ದಾರೆ ಎಂದು ಹೇಳಿಕೊಂಡು, ಸುಧಾ ಮೂರ್ತಿ (Sudha Murty) ಅವರ ಫೋಟೊ ಬಳಸಿ ವಂಚನೆ ಮಾಡಿದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರ ವಿರುದ್ಧ ಸುಧಾ ಮೂರ್ತಿ ಅವರ ಆಪ್ತ ಸಹಾಯಕಿ (Personal Assistant) ಮಮತಾ ಸಂಜಯ್ ದೂರು ದಾಖಲಿಸಿದ್ದಾರೆ.
ಸುಧಾ ಮೂರ್ತಿ ಅವರ ಹೆಸರು, ಫೋಟೊ ಬಳಸಿಕೊಂಡು ವಂಚನೆ ಮಾಡಿದ ಹಿನ್ನೆಲೆಯಲ್ಲಿ ಶ್ರುತಿ ಹಾಗೂ ಲಾವಣ್ಯ ಎಂಬುವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಮಮತಾ ಸಂಜಯ್ ಅವರು ದೂರು ನೀಡಿದ್ದಾರೆ. ಕಂಪನಿಯಲ್ಲಿ ಪರಿಶೀಲನೆ ನಡೆಸಿದಾಗ ಸುಧಾ ಮೂರ್ತಿ ಅವರ ಹೆಸರು ಬಳಸಿಕೊಂಡು ಜನರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಕೇಸ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ದಾಖಲಾದ ಎಫ್ಐಆರ್ ಪ್ರತಿ
ಏನಿದು ಪ್ರಕರಣ?
ಅಮೆರಿಕದಲ್ಲಿ ಕನ್ನಡ ಕೂಟ ಆಫ್ ನಾರ್ತನ್ ಕ್ಯಾಲಿಫೋರ್ನಿಯಾ (KKNC) ವತಿಯಿಂದ ಕಳೆದ ಏಪ್ರಿಲ್ನಲ್ಲಿ 50ನೇ ವಾರ್ಷಿಕೋತ್ಸವ ಆಯೋಜಿಸಲಾಗಿತ್ತು. ಸುಧಾ ಮೂರ್ತಿ ಅವರಿಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂಬುದಾಗಿ ಇ-ಮೇಲ್ ಮೂಲಕ ಆಹ್ವಾನ ನೀಡಲಾಗಿತ್ತು. ಆದರೆ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ ಎಂದು ಸುಧಾ ಮೂರ್ತಿ ಅವರು ಇ-ಮೇಲ್ ಮೂಲಕ ತಿಳಿಸಿದ್ದರು. ಆದರೆ, ಕೆಕೆಎನ್ಸಿ ಕಾರ್ಯಕ್ರಮದಲ್ಲಿ ಸುಧಾ ಮೂರ್ತಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರುತಿ ಹಾಗೂ ಲಾವಣ್ಯ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Sudha Murty: ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನೋಡಿ ಶ್ಲಾಘಿಸಿದ ಸುಧಾ ಮೂರ್ತಿ
ಸುಧಾ ಮೂರ್ತಿ ಅವರು ಅಮೆರಿಕಕ್ಕೆ ಆಗಮಿಸಲಿದ್ದಾರೆ. ಮೀಟ್ ಆ್ಯಂಡ್ ಗ್ರೀಟ್ ವಿತ್ ಡಾ.ಸುಧಾ ಮೂರ್ತಿ (Meet And Greet With Dr. Sudha Murty) ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಇಬ್ಬರು ಆರೋಪಿಗಳು ಜನರನ್ನು ವಂಚಿಸಿದ್ದಾರೆ. ಒಂದು ಟಿಕೆಟ್ಗೆ 40 ಡಾಲರ್ (ಸುಮಾರು 3,300 ರೂ.) ಪಡೆದು ವಂಚಿಸಲಾಗಿದೆ. ಸುಧಾ ಮೂರ್ತಿ ಕಚೇರಿ ಹೆಸರಿನಲ್ಲಿ, ಸುಧಾ ಮೂರ್ತಿ ಅವರ ಫೋಟೊ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಹಾಗಾಗಿ, ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸುಧಾ ಮೂರ್ತಿ ಅವರ ಆಪ್ತ ಸಹಾಯಕಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಜಯನಗರ ಠಾಣೆಯಲ್ಲಿ ಐಟಿ ಕಾಯ್ದೆಯ 66 C, 66 D ಸೆಕ್ಷನ್ ಹಾಗೂ ಐಪಿಸಿ 419, 420 ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕ
Cauvery Dispute : ಸಮರ್ಥವಾಗಿ ವಾದ ಮಾಡದೆ ನಮಗೆ ಸೋಲಾಯಿತೇ? ಆರೋಪದಲ್ಲಿ ನಿಜವೆಷ್ಟು? ಸುಳ್ಳೆಷ್ಟು?
Cauvery Dispute: ಕಾವೇರಿ ವಿಚಾರದಲ್ಲಿ ಎಲ್ಲ ಹಂತಗಳಲ್ಲಿ ನಮಗೆ ಸೋಲಾಗಲು ಪ್ರಮುಖ ಕಾರಣ, ನಾವು ಸರಿಯಾಗಿ ವಾದ ಮಾಡದೆ ಇರುವುದು, ವಾಸ್ತವಾಂಶ ತಿಳಿಸದೆ ಇರುವುದು. ಈ ಆರೋಪ ನಿಜವೇ? ಹಾಗಿದ್ದರೆ ಕರ್ನಾಟಕದ ವಾದ ಏನಿತ್ತು? ಬಾರ್ ಎಂಡ್ ಬೆಂಚ್ ವೆಬ್ಸೈಟ್ ಪ್ರಸ್ತುತಪಡಿಸಿದ ಅಧ್ಯಯನಾತ್ಮಕ ಅಂಶಗಳನ್ನು ನಿಮ್ಮ ಮುಂದಿಡಲಾಗಿದೆ.
ಬೆಂಗಳೂರು: ಕಾವೇರಿ ನೀರು ವಿಚಾರದಲ್ಲಿ (Cauvery Dispute) ಕರ್ನಾಟಕ ಎಲ್ಲ ಹಂತಗಳಲ್ಲೂ ಹಿನ್ನಡೆ ಅನುಭವಿಸಲು ಕಾರಣ ರಾಜ್ಯದ ಅಧಿಕಾರಿಗಳು (Officials of Karnataka) ಸರಿಯಾದ ವಾದ ಮಂಡಿಸದೇ ಇರುವುದು ಎನ್ನುವುದು ಹೆಚ್ಚಿನವರ ಆಪಾದನೆ. ಅದರಲ್ಲೂ ಕರ್ನಾಟಕದ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಾದ ಮಾಡಿದ್ದರಿಂದ ಸೋಲಾಯಿತು ಎನ್ನುವುದು ಇನ್ನೊಂದು ವಾದ. ಹಾಗಿದ್ದರೆ ಈ ಆರೋಪ ಸತ್ಯವೇ? ಅಥವಾ ರಾಜಕೀಯಪ್ರೇರಿತವೇ? ಹಾಗಿದ್ದರೆ ಕರ್ನಾಟಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (Cauvery Water Management Authority) ಮುಂದೆ ಏನೇನು ವಾದ ಮಾಡಿತ್ತು?
ಎಲ್ಲರಿಗೂ ತಿಳಿದಿರುವಂತೆ ಸೆ. 21ರಂದು ನಡೆದ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್ (Supreme Court) ಎತ್ತಿ ಹಿಡಿದದ್ದು ಸೆ. 19ರಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶವನ್ನು. ಅದರಾಚೆಗೆ ಅದು ಯಾವ ಅಂಶವನ್ನೂ ಕೇಳಿಸಿಕೊಳ್ಳಲಿಲ್ಲ. ಹಾಗಿದ್ದರೆ ಸೆ. 19ರ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕ ತನ್ನ ವಾದದಲ್ಲಿ ಸೋಲು ಕಂಡಿತೇ? ಹಾಗಾಗಿ ಪ್ರಾಧಿಕಾರ ಕರ್ನಾಟಕದ ವಿರುದ್ಧವಾಗಿ ತೀರ್ಪು ನೀಡಲು, ನೀರು ಬಿಡುಗಡೆಗೆ ಆದೇಶ ನೀಡಲು ಕಾರಣವಾಯಿತೇ ಎನ್ನುವುದು ಮುಖ್ಯ ಪ್ರಶ್ನೆ.
ಇದನ್ನು ತಿಳಿಯಬೇಕು ಎಂದಾದರೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೆ.19ರಂದು ನಡೆಸಿರುವ 24ನೇ ಸಭೆಯ (ತುರ್ತು ಸಭೆ) ನಡಾವಳಿಗಳನ್ನು ಗಮನಿಸಬೇಕು.
ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೆ. 12ರಂದು ನೀಡಿದ ಆದೇಶದಲ್ಲಿ ಪ್ರತಿದಿನ 5000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಸೂಚಿಸಿತ್ತು. ವಾಸ್ತವವಾಗಿ ತಮಿಳುನಾಡಿನ ಅಧಿಕಾರಿಗಳು ಪ್ರತಿದಿನ 12,500 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಬೇಕು ಎಂದು ಕೋರಿದ್ದರು. ಇದಕ್ಕೆ ಪ್ರತಿಯಾಗಿ ಕರ್ನಾಟಕದ ಅಧಿಕಾರಿಗಳು ವಾಸ್ತವಾಂಶಗಳನ್ನು ಮುಂದಿಟ್ಟು ತಮಿಳುನಾಡು ಕೋರಿಕೆಯನ್ನು ಮನ್ನಿಸಲು ಸಾಧ್ಯವಿಲ್ಲ. ತಾವು ಕೆಆರ್ಎಸ್ ಹಾಗೂ ಕಬಿನಿಯಿಂದ ಒಟ್ಟು 2500 ಕ್ಯೂಸೆಕ್ಸ್ ನೀರು ಮಾತ್ರ ಹರಿಸಬಹುದು ಎಂದು ವಾದ ಮಾಡಿದ್ದರು. ಅಂತಿಮವಾಗಿ ಪ್ರಾಧಿಕಾರವು ಪ್ರತಿದಿನ 5000 ಕ್ಯೂಸೆಕ್ಸ್ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿಯ (ಸಿಡಬ್ಲುಆರ್ಸಿ) ಸೆ.12ರ ಅದೇಶವನ್ನು ಎತ್ತಿಹಿಡಿದಿತ್ತು. ಹಾಗಿದ್ದರೆ 2500 ಕ್ಯೂಸೆಕ್ ನೀರು ಬಿಡಬಹುದು ಎಂದು ಒಪ್ಪಿದ್ದಾದರೂ ಯಾಕೆ ಎನ್ನುವ ಪ್ರಶ್ನೆಯೂ ಎದ್ದು ಬರುತ್ತದೆ. ಹೀಗೆ ಮಾಡಿದ್ದರಿಂದ ಸಮನ್ವಯ ಸೂತ್ರವಾಗಿ ಪ್ರಾಧಿಕಾರ 5000 ಕ್ಯೂಸೆಕ್ ನೀರು ಬಿಡಿ ಎಂದು ಹೇಳಿದೆ. ಕೊಡುವುದೇ ಇಲ್ಲ ಎಂದು ವಾದಿಸಬೇಕಿತ್ತು ಎನ್ನುವುದು ಕೆಲವರ ವಾದ.
ಹಾಗಿದ್ದರೆ ಒಟ್ಟಾರೆಯಾಗಿ ಪ್ರಾಧಿಕಾರದ ಅಂದಿನ ಸಭೆಯಲ್ಲಿ ಕರ್ನಾಟಕ ಮಾಡಿದ ವಾದ ಏನಾಗಿತ್ತು? ತಮಿಳುನಾಡು ಏನು ಹೇಳಿತ್ತು. ಬಾರ್ ಎಂಡ್ ಬೆಂಚ್ ವೆಬ್ ಸೈಟ್ ಸಂಗ್ರಹಿಸಿದ ಸಮಗ್ರ ಮಾಹಿತಿಯ ಸಾರವನ್ನು ಇಲ್ಲಿ ನೀಡಲಾಗಿದೆ.
ಪ್ರಾಧಿಕಾರದ ಮುಂದೆ ಕರ್ನಾಟಕದ ವಾದ ಏನಿತ್ತು?
- ಪ್ರಸಕ್ತ ವರ್ಷದಲ್ಲಿ ಮಳೆಯ ಅಭಾವ ಉಂಟಾಗಿದ್ದು, ಶೇ.75ರಷ್ಟು ನೈರುತ್ಯ ಮುಂಗಾರು ಇದಾಗಲೇ ಪೂರ್ಣಗೊಂಡಿದೆ. ಮಳೆ ಸಾಧ್ಯತೆ ಕ್ಷೀಣಿಸಿದ್ದು, ಒಂದೊಮ್ಮೆ ಮಳೆಯಾದರೂ ಕಾವೇರಿ ಜಲಾನಯನ ಪ್ರದೇಶದಲ್ಲಿನ ಪರಿಸ್ಥಿತಿ ಬದಲಾಗುವುದಿಲ್ಲ. ಪರಿಸ್ಥಿತಿಯು ಇನ್ನೂ ಕೆಟ್ಟ ಸ್ಥಿತಿಗೆ ಹೊರಳಬಹುದು ಎಂಬುದು ನಮ್ಮ ಆತಂಕವಾಗಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಸಂಕಷ್ಟ ಹಂಚಿಕೆಗೆ ಮುಂದಾಗಬೇಕಿದೆ. ಕಾವೇರಿ ನೀರು ವಿವಾದ ನ್ಯಾಯ ಮಂಡಳಿಯ ಅಧಿಸೂಚನೆಯ ಕಲಂ VII ಜೊತೆಗೆ ಕಲಂ XIX(ಎ) ಅಡಿ ನಿರ್ದೇಶಿಸಿರುವಂತೆ ಸೂಕ್ತ ಅನುಪಾತದ ಅನ್ವಯ ನೀರು ಹಂಚಿಕೆಗೆ ಮುಂದಾಗಬೇಕು. ಈ ವಿಚಾರವನ್ನು ಸುಪ್ರೀಂ ಕೋರ್ಟ್ 2018ರ ತೀರ್ಪಿನಲ್ಲಿಯೂ ಬದಲು ಮಾಡಿಲ್ಲ.
- 2023ರ ಸೆಪ್ಟೆಂಬರ್ 12ರಂದು ನಡೆದ ಸಭೆಯಲ್ಲಿ ಸಿಡಬ್ಲ್ಯುಆರ್ಸಿ ಪ್ರತಿ ದಿನ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ತಪ್ಪಾಗಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 19ರಂದು ಸಿಡಬ್ಲ್ಯುಆರ್ಸಿಗೆ ಪತ್ರ ಬರೆದು ಹೊಸದಾಗಿ ಪ್ರಕರಣ ಪರಿಗಣಿಸಿ, ನಿರ್ದೇಶಿಸುವಂತೆ ಕೋರಲಾಗಿದೆ.
- ಜೂನ್ 1ರಿಂದ ಸೆಪ್ಟೆಂಬರ್ 11ರವರೆಗೆ ಕರ್ನಾಟಕದ ಜಲಾಶಗಳಿಗೆ 104.273 ಟಿಎಂಸಿ ನೀರು ಮಾತ್ರ ಹರಿದುಬಂದಿದೆ. ಕಳೆದ 30 ವರ್ಷಗಳ ಸರಾಸರಿ ಮಳೆ ಪ್ರಮಾಣದ ಹೋಲಿಕೆಯಲ್ಲಿ ಶೇ. 54.42ರಷ್ಟು ಕೊರತೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 228.793 ಟಿಎಂಸಿ ನೀರು ಹರಿದು ಬರುತ್ತಿತ್ತು.
- ಜೂನ್ 1ರಿಂದ ಸೆಪ್ಟೆಂಬರ್ 11ರವರೆಗೆ 46.271 ಟಿಎಂಸಿ ನೀರನ್ನು ಕಬಿನಿ ಮತ್ತು ಕೆಆರ್ಎಸ್ ಜಲಾಶಯದಿಂದ ಹರಿಸಲಾಗಿದೆ. ಕರ್ನಾಟಕವು ನೈರುತ್ಯ ಮುಂಗಾರಿನಿಂದ ಕೇವಲ 25.689 ಟಿಎಂಸಿ ನೀರು ಸಂಗ್ರಹಿಸಿದೆ. ತಮಿಳುನಾಡು ರಾಜ್ಯವು ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಬೆಳೆಗಳಿಗೆ ಈಶಾನ್ಯ ಮಾರುತ ಆಧರಿಸಿದ್ದು, ಕ್ಯಾರಿಓವರ್ ಸ್ಟೋರೇಜ್ (ಮುಂಬಳಕೆ ಸಂಗ್ರಹ) ಅನ್ನು ದುರ್ಬಳಕೆ ಮಾಡಿ ಈಗಾಗಲೇ 100 ಟಿಎಂಸಿ ನೀರನ್ನು ಕರ್ನಾಟಕದಿಂದ ಪಡೆದಿದೆ. ಸಂಕಷ್ಟದ ಸಂದರ್ಭದಲ್ಲಿ ತಮಿಳುನಾಡು ನೀರು ದುರ್ಬಳಕೆ ಮಾಡಿಕೊಂಡಿರುವುದನ್ನು ಎಲ್ಲರೂ ಕಾಣಬಹುದಾಗಿದೆ.
- ಮಳೆ ಕೊರತೆಯನ್ನು ನಿರ್ಧರಿಸುವಾಗ ನಿಯಂತ್ರಣ ಸಮಿತಿಯು ಕಾವೇರಿ ಪಾತ್ರದ ಒಟ್ಟು 81,155 ಚದರ ಕಿ ಮೀ ಜಲಾನಯನ ಪ್ರದೇಶವನ್ನು ಪರಿಗಣಿಸುವ ಬದಲಾಗಿ ಕರ್ನಾಟಕದ ನಾಲ್ಕು ಜಲಾಶಯಗಳ ಜಲಾನಯನ ಪ್ರದೇಶ 12,812 ಚದರ ಕಿ ಮೀ ಅನ್ನು ಮಾತ್ರವೇ ಪರಿಗಣಿಸುವ ಮೂಲಕ ಸ್ವೇಚ್ಛೆಯಿಂದ ನಿರ್ಧಾರ ತಳೆದಿದೆ. ಮಳೆಯ ಕೊರತೆಯನ್ನು ಆಧರಿಸಿ ಮಾತ್ರವೇ ಸಂಕಷ್ಟ ನಿರ್ಧರಿಸುವಂತಿಲ್ಲ. ಬದಲಿಗೆ ನದೀ ಮುಖಜ ಭೂಮಿಯಲ್ಲಿರುವ ಅಂತರ್ಜಲದ ಲಭ್ಯತೆಯನ್ನು ಪರಿಗಣಿಸಬೇಕು. ಅಲ್ಲದೇ, ನದೀ ಮುಖಜ ಭಾಗದಲ್ಲಿನ ಈಶಾನ್ಯ ಮಳೆಮಾರುತವನ್ನೂ ಸಹ ಪರಿಗಣಿಸಬೇಕು. ಸಂಕಷ್ಟದ ಸಂದರ್ಭದಲ್ಲಿ ರಾಜ್ಯಗಳ ಕನಿಷ್ಠ ಅವಶ್ಯಕತೆ ಹಾಗೂ ವಾಸ್ತವಿಕ ಅಂಶಗಳನ್ನು ಆಧರಿಸಿ ನೀರು ಹಂಚಿಕೆ ಮಾಡುವುದು ಸೂಕ್ತವಾದ ಮಾನದಂಡವಾಗಿದೆ.
- ಸಿಡಬ್ಲ್ಯುಆರ್ಸಿಯು ಕಳೆದ 30 ವರ್ಷಗಳ ಸರಾಸರಿ ಮಳೆ ಹಾಗೂ 2023ರ ಜೂನ್ 1ರಿಂದ ಸೆಪ್ಟೆಂಬರ್ 11ರವರೆಗಿನ ಬೆಳೆ ಆಧರಿಸಿ ಕೊರತೆ ಅಂದಾಜಿಸಿದೆ. ಆದರೆ, ಕಾವೇರಿ ನ್ಯಾಯ ಮಂಡಳಿಯು 1938-35ರಿಂದ 1971-27ರವರೆಗಿನ ಅಂಕಿ ಅಂಶ ಆಧರಿಸಿ ಸಾಮಾನ್ಯ ಮಳೆ ವರ್ಷದಲ್ಲಿ ಕಾವೇರಿ ಕೊಳ್ಳದ ನೀರು ಲಭ್ಯತೆಯನ್ನು 740 ಟಿಎಂಸಿ ಎಂದು ನಿರ್ಧರಿಸಿತ್ತು.
- ಕರ್ನಾಟಕ ಜಲಾಶಯಗಳ ಜಲಾನಯನ ಪ್ರದೇಶಗಳ ವಿಚಾರದಲ್ಲಿ, ಕರ್ನಾಟಕದ ಅಣೆಕಟ್ಟುಗಳ ಕೆಳಗಿರುವ ಹಾಗೂ ಬಿಳಿಗುಂಡ್ಲು ಅಂತರ ರಾಜ್ಯ ಗಡಿಗಿಂತ ಮೇಲಿರುವ ಸುಮಾರು 23,921 ಚ.ಕಿಮೀ ವ್ಯಾಪ್ತಿಯ ಮಧ್ಯಂತರ ಜಲಾನಯನ ಪ್ರದೇಶದಲ್ಲಿನ ಮಳೆ ಕೊರತೆಯನ್ನು ಸಿಡಬ್ಲ್ಯುಆರ್ಸಿಯು ಪ್ರಜ್ಞಾಪೂರ್ವಕವಾಗಿ ಮರೆಮಾಚಿದೆ. ಇದರ ವ್ಯಾಪ್ತಿಯು 23,921 ಚದರ ಕಿ ಮೀ ಆಗಿದೆ. ಈ ಪ್ರದೇಶದಲ್ಲಿನ ಮಳೆ ಕೊರತೆಯು ಕರ್ನಾಟಕದ ಅಣೆಕಟ್ಟುಗಳ ಮೇಲ್ಭಾಗದಲ್ಲಿರುವ ಜಲಾನಯನ ಪ್ರದೇಶದಲ್ಲಿ ಮಳೆಕೊರತೆ ಪ್ರಮಾಣವಾದ ಶೇ.54.42 ಕ್ಕಿಂತ ಹೆಚ್ಚಿದೆ.
- ಈ ಮಧ್ಯಂತರ ಜಲಾನಯನ ಪ್ರದೇಶದ 23,921 ಚದರ ಕಿಮೀ ವ್ಯಾಪ್ತಿಯಲ್ಲಿ 2023ರ ಜೂನ್ 1ರಿಂದ ಸೆಪ್ಟೆಂಬರ್ 11ರ ಅವಧಿಯಲ್ಲಿ ಅಂದಾಜು 14.286 ಟಿಎಂಸಿ ಹರಿಯುವ ನಿರೀಕ್ಷೆ ಇತ್ತು. ಆದರೆ, ಇದರಿಂದ 2 ಟಿಎಂಸಿಗೂ ಕಡಿಮೆ ಪ್ರಮಾಣದ ಕನಿಷ್ಠ ಹರಿವಾಗಿದೆ.
- ಸಾಮಾನ್ಯ ವರ್ಷದಲ್ಲಿ ಸೆಪ್ಟೆಂಬರ್ ತಿಂಗಳ ಕೋಟಾ ಪ್ರಕಾರ 36.76 ಟಿಎಂಸಿ ನೀರನ್ನು ಬಿಳಿಗುಂಡ್ಲು ಮೂಲಕ ಹರಿಸಬೇಕು. 2023ರ ಸೆಪ್ಟೆಂಬರ್ 13ರಿಂದ 27ರ ಅವಧಿಯಲ್ಲಿ 18.38 ಟಿಎಂಸಿ ಬಿಡಬೇಕಿದೆ. ಆದರೆ, ಮಳೆ ಕೊರತೆಯ ಕಾರಣಕ್ಕೆ 10.002 ಟಿಎಂಸಿ ಕಳೆದು 8.378 ಟಿಎಂಸಿ ಅಥವಾ ಪ್ರತಿ ದಿನ 6400 ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ನಿರ್ಧರಿಸುವ ಮೂಲಕ ಸಿಡಬ್ಲ್ಯುಆರ್ಸಿ ಪ್ರಮಾದ ಎಸಗಿದೆ. ಈ ಅಂದಾಜು ಸ್ವೇಚ್ಛೆಯಿಂದ ಕೂಡಿದೆ. ಏಕೆಂದರೆ ಸೆಪ್ಟೆಂಬರ್ನಲ್ಲಿ ನೈರುತ್ಯ ಮುಂಗಾರು ವಿಫಲವಾಗಿದೆ. ಅಲ್ಲದೆ, ಹವಾಮಾನ ಇಲಾಖೆಯ ಅಂದಾಜನ್ನು ಗಣನೆಗೆ ತೆಗೆದುಕೊಂಡರೆ ಮಧ್ಯಂತರ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆ ಇನ್ನೂ ಹೆಚ್ಚಿರಲಿದೆ. ಈ ನೆಲೆಯಲ್ಲಿ 2023ರ ಸೆಪ್ಟೆಂಬರ್ 27ರವರೆಗೆ ಪ್ರತಿದಿನ 5000 ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶಿಸುವ ಮೂಲಕ ಸಿಡಬ್ಲ್ಯುಆರ್ಸಿ ತರ್ಕದಲ್ಲಿ ವಿಫಲವಾಗಿದೆ.
- ನದಿ ಮುಖಜ ಭಾಗದಲ್ಲಿನ ಅಂತರ್ಜಲ ಲಭ್ಯತೆಯನ್ನು ಸಿಡಬ್ಲ್ಯುಆರ್ಸಿ ಅನುಕೂಲಕ್ಕೆ ತಕ್ಕಂತೆ ಅವಗಣನೆ ಮಾಡಿದೆ. ಈಶಾನ್ಯ ಮಾರುತವು ತಮಿಳುನಾಡಿನ ಕೊರತೆಯನ್ನು ತುಂಬುವ ಸಾಧ್ಯತೆ ಇದೆ. ಇದನ್ನು ಸಿಡಬ್ಲ್ಯುಆರ್ಸಿ ಪರಿಗಣಿಸಿಲ್ಲ. ಬಾಕಿ ಇರುವ ತಿಂಗಳ ಅವಧಿಗೆ (ಮುಂದಿನ ಜೂನ್ವರೆಗೆ) ಕರ್ನಾಟಕಕ್ಕೆ ಕನಿಷ್ಠ ಅಗತ್ಯವಾಗಿ 106 ಟಿಎಂಸಿ ನೀರು ಬೇಕಿದೆ ಎಂಬುದನ್ನು ಸಿಡಬ್ಲ್ಯುಆರ್ಸಿ ಗಣನೆಗೆ ತೆಗೆದುಕೊಳ್ಳುವಲ್ಲಿ ಎಡವಿದೆ. ಕರ್ನಾಟಕದ ಜಲಾಶಯಗಳಲ್ಲಿ ಸದ್ಯ 54.114 ಟಿಎಂಸಿ ನೀರು ಇದ್ದು, ಸರಾಸರಿ ಮಳೆಯ ಪ್ರಮಾಣಕ್ಕೆ ಶೇ.54 ಮಳೆ ಕೊರತೆಯನ್ನು ಸೇರಿಸಿದರೆ ಒಳಹರಿವು 44.78 ಟಿಎಂಸಿ ಮಾತ್ರ ಇರುವ ಸಾಧ್ಯತೆ ಇದೆ. ಈ ಲೆಕ್ಕದಲ್ಲಿ ಒಟ್ಟ ನೀರು ಲಭ್ಯತೆಯ ಪ್ರಮಾಣ 98.854 ಟಿಎಂಸಿ ಮಾತ್ರ ಆಗಲಿದೆ. ಆದರೆ, ನಾವು ಕಳೆದ ಮೂವತ್ತು ವರ್ಷಗಳ ಅತಿ ಹೆಚ್ಚು ಮಳೆ ಕೊರತೆಯ ವರ್ಷಗಳಲ್ಲಿನ ಪ್ರತಿ ತಿಂಗಳ ಕನಿಷ್ಠ ಒಳಹರಿವನ್ನು ಪರಿಗಣಿಸಿ ಲೆಕ್ಕ ಹಾಕಿದರೆ ಸೆಪ್ಟೆಂಬರ್ ತಿಂಗಳ ಉಳಿಕೆ ಅವಧಿಯ 10 ಟಿಎಂಸಿಯೂ ಸೇರಿದಂತೆ ಡಿಸೆಂಬರ್ ವರೆಗಿನ ನೀರು ಲಭ್ಯತೆಯ ಪ್ರಮಾಣ ಒಟ್ಟು 20 ಟಿಎಂಸಿ ದಾಟುವುದಿಲ್ಲ. ಈ ನೆಲೆಯಲ್ಲಿ ಗಮನಿಸಿದರೆ ಕರ್ನಾಟಕಕ್ಕೆ ಲಭ್ಯವಾಗುವ ನೀರಿನ ಪ್ರಮಾಣ 74.114 ಟಿಎಂಸಿ ಮೀರುವ ಸಾಧ್ಯತೆ ಇಲ್ಲ. ಹಾಗಾಗಿ, ಕರ್ನಾಟಕದ ಅಗತ್ಯ ಬಳಕೆಗೆ ಮಿತಿಗೊಳಿಸಲಾದ 106 ಟಿಎಂಸಿ ನೀರಿನ ಪ್ರಮಾಣವು ಸಹ ಲಭ್ಯವಾಗದೆ ಹೋಗಬಹುದು.
- ಸಿಡಬ್ಲ್ಯುಆರ್ಸಿಯು ಬಿಳಿಗುಂಡ್ಲುವಿನಲ್ಲಿ ಕರ್ನಾಟಕದಿಂದ ಹರಿಸಬೇಕಾದ ನೀರಿನ ಪ್ರಮಾಣದಲ್ಲಿ 7.799 ಟಿಎಂಸಿ ಕೊರತೆಯಾಗಿದೆ ಎಂದು ಅಂದಾಜಿಸಿರುವುದು ಸಂಪೂರ್ಣವಾಗಿ ದೋಷಪೂರಿತವಾಗಿದೆ. ಇದಕ್ಕೆ ಯಾವುದೇ ಆಧಾರವಿಲ್ಲ. ಬರುವ ತಿಂಗಳುಗಳಲ್ಲಿ ಸಿಡಬ್ಲ್ಯುಆರ್ಸಿ ಅಂದಾಜಿಸಿರುವ ಕೊರತೆಯು ಶೇ. 45.58 ಮಾತ್ರವಲ್ಲ. ಇದು ಇನ್ನೂ ಹೆಚ್ಚಾಗಲಿದೆ.
- ಈಶಾನ್ಯ ಮಳೆಮಾರುತವು ತಮಿಳುನಾಡಿನಲ್ಲಿ ಸಾಧಾರಣವಾಗಿ 45 ದಿನ ಇರಲಿದೆ. ತಮಿಳುನಾಡಿನಲ್ಲಿ ಅಂತರ್ಜಲವು 20ರಿಂದ 30 ಟಿಎಂಸಿ ಇದ್ದು, ಹಾಲಿ ನೀರು ಸಂಗ್ರಹ ಮತ್ತು ಅಂದಾಜು 60 ಟಿಎಂಸಿ ನೀರು ಮಧ್ಯಂತರ ಜಲಾನಯನ ಪ್ರದೇಶದಿಂದ ಹರಿದು ಬರುವುದರಿಂದ ತಮಿಳುನಾಡು ಪರಿಸ್ಥಿತಿಯನ್ನು ನಿರ್ವಹಿಸಬಹುದಾಗಿದೆ. ಕರ್ನಾಟಕದ ರೈತರಿಗೆ ಅಗತ್ಯವಾಗಿರುವ ಕನಿಷ್ಠ ನೀರಾವರಿ ಅಗತ್ಯತೆ ಹಾಗೂ ಕುಡಿಯುವ ನೀರಿನ ಅಗತ್ಯತೆಯ ದೃಷ್ಟಿಯಿಂದ ನೀರು ಬಿಡುಗಡೆ ಮಾಡಲಾಗದು. ವಿಶೇಷವಾಗಿ ಜಗತ್ತಿನ ತಂತ್ರಜಾನ ಹಬ್ ಆಗಿರುವ ಬೆಂಗಳೂರು ವಾರ್ಷಿಕ 100 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಗಳಿಕೆ ಮಾಡುತ್ತಿದ್ದು, ಇದರ ಕುಡಿಯುವ ನೀರಿನ ಅವಶ್ಯಕತೆಯ ದೃಷ್ಟಿಯಿಂದ ನೀರು ಹರಿಸಲಾಗದು.
- ಕರ್ನಾಟಕದಲ್ಲಿ ಬರ ಪರಿಸ್ಥಿತಿ ಇದ್ದು, ಕಾವೇರಿ ಪ್ರದೇಶದಲ್ಲಿ ಬರುವ 15 ತಾಲ್ಲೂಕುಗಳು ಬರಪೀಡಿತವಾಗಿವೆ. ಇದನ್ನು ಸಹ ಪ್ರಾಧಿಕಾರವು ಪರಿಣಿಸಬೇಕಿದೆ.
ಇದನ್ನೂ ಓದಿ: Cauvery Dispute : ಕಾವೇರಿ ವಿವಾದದಲ್ಲಿ ಪ್ರಧಾನಿ ಮಧ್ಯಪ್ರವೇಶ ಕೋರುವುದು ತಪ್ಪಲ್ಲ; ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ ಆಚಾರ್ಯ
ಹಾಗಿದ್ದರೆ ತಮಿಳುನಾಡು ವಾದ ಏನಾಗಿತ್ತು?
- ತಮಿಳುನಾಡಿನಲ್ಲಿ ನೀರಾವರಿ ಪ್ರದೇಶ ವಿಸ್ತರಿಸಲಾಗಿದೆ ಮತ್ತು ದೊಡ್ಡ ಮಟ್ಟದಲ್ಲಿ ಫಸಲು ಬೆಳೆಯಲಾಗುತ್ತಿದೆ ಎಂಬ ಕರ್ನಾಟಕದ ವಾದದಲ್ಲಿ ಸತ್ಯವಿಲ್ಲ.
- ನೀರು ಸಂಗ್ರಹಕ್ಕೆ ಸೌಲಭ್ಯ ಇದ್ದರೂ ತಮಿಳುನಾಡು ಸಮರ್ಥವಾಗಿ ನೀರು ಬಳಕೆ ಮಾಡುತ್ತಿಲ್ಲ ಎಂಬ ವಾದ ಸರ್ವಥಾ ಸರಿಯಲ್ಲ. ಕುರುವೈಗೆ ನ್ಯಾಯಮಂಡಳಿಯ ಬೆಳೆ ನೀರು ಅಗತ್ಯದ (ಸಿಡಬ್ಲುಆರ್) ಪ್ರಕಾರ ಜೂನ್-ಆಗಸ್ಟ್ನಲ್ಲಿ 30 ಟಿಎಂಸಿ ಬೇಕಿದೆ. ಜುಲೈ-ಆಗಸ್ಟ್ನಲ್ಲಿ ಸಾಂಬಾ ಬೆಳೆಗೆ 32 ಟಿಎಂಸಿ ನೀರು ಬೇಕಿದೆ. ಭೂಮಿ ಹದಗಳಿಸಲು ಮತ್ತು ಬಿತ್ತನೆಗೆ ಹೆಚ್ಚಿನ ನೀರು ಬೇಕಿದೆ. ಒಟ್ಟಾರೆ 95 ಟಿಎಂಸಿ ನೀರು ಬೇಕಿದ್ದು, ಜೂನ್ 12ರಿಂದ 31ರವರೆಗೆ ಮೆಟ್ಟೂರಿನಲ್ಲಿ 68.357 ಟಿಎಂಸಿ ಮಾತ್ರ ನೀರಿದೆ.
- ಈಶಾನ್ಯ ಮಳೆಮಾರುತದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗುವುದಿಲ್ಲ. ಈ ವೇಳೆ ಚಂಡಮಾರುತದಿಂದಾಗಿ ಬೆಳೆಗೆ ಹಾನಿ ಉಂಟಾಗಿದ್ದೂ ಇದೆ. ನೈರುತ್ಯ ಮಾನ್ಸೂನ್ ವಿಫಲವಾಗಿರುವುದರಿಂದ ಈಶಾನ್ಯ ಮಾನ್ಸೂನ್ ಸಹ ವಿಫಲವಾಗುವ ಸಾಧ್ಯತೆ ಇದೆ.
- ಪ್ರಸಕ್ತ ವರ್ಷದಲ್ಲಿ ಕರ್ನಾಟಕ 1.701 ಲಕ್ಷ ಎಕರೆ ಪ್ರದೇಶದಲ್ಲಿ ಫಸಲು ಮಾಡಿದೆ ಎಂದು ಹೇಳಿದೆ. 2023ರ ಜೂನ್ 1ರಿಂದ ಸೆಪ್ಟೆಂಬರ್ 11ರವರೆಗೆ ಕರ್ನಾಟಕವು 25.662 ಟಿಎಂಸಿ ನೀರನ್ನು ನಾಲ್ಕು ಪ್ರಮುಖ ಜಲಾಶಯಗಳಿಂದ ಕಾಲುವೆಗಳ ಮೂಲಕ ಹರಿಸಿಕೊಂಡಿದೆ. ಇದರ ಜೊತೆಗೆ ಕೆಆರ್ಎಸ್ ಮತ್ತು ಕಬಿನಿ ಅಣೆಕಟ್ಟುಗಳ ಕಾಲುವೆಗಳ ಮೂಲಕ ಹರಿಸಿರುವ ನೀರಿನ ಮಾಹಿತಿಯನ್ನು ಕರ್ನಾಟಕ ನೀಡಿಲ್ಲ.
- 2023ರ ಜೂನ್ನಿಂದ 2024ರ ಜನವರಿಯವರೆಗೆ ನಾಲ್ಕು ಜಲಾಶಯಗಳಿಂದ 72 ಟಿಎಂಸಿ ಕರ್ನಾಟಕಕ್ಕೆ ಬೇಕಿದೆ. ಆದರೆ, ಕರ್ನಾಟಕವು ಈಗಾಗಲೇ ಶೇ. 50ರಷ್ಟು ನೀರುಬಳಕೆ ಮಾಡಿದೆ.
- ತಮಿಳುನಾಡು ವಾದವನ್ನು ಪರಿಗಣಿಸದೇ ಸೆಪ್ಟೆಂಬರ್ 13ರಿಂದ 15 ದಿನ ಪ್ರತಿದಿನ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಕರ್ನಾಟಕಕ್ಕೆ ಸಿಡಬ್ಲ್ಯುಅರ್ಸಿ ಆದೇಶಿಸಿದೆ. ಪ್ರೊ-ರಾಟಾ ತತ್ವದ ಅಡಿ ವಿಮುಖವಾಗಿರುವುದು ಮತ್ತು 12,500 ಕ್ಯೂಸೆಕ್ಸ್ನಿಂದ 5 ಸಾವಿರ ಕ್ಯೂಸೆಕ್ಸ್ಗೆ ಇಳಿಸಿರುವುದಕ್ಕೆ ಯಾವುದೇ ಕಾರಣ ನೀಡಲಾಗಿಲ್ಲ ಎಂದು ತಮಿಳುನಾಡಿನ ಅಧಿಕಾರಿಗಳು ವಾದಿಸಿದ್ದಾರೆ.
ದೇಶ
DUSU Election: ದೆಹಲಿ ವಿವಿಯಲ್ಲಿ ಎಬಿವಿಪಿ ದರ್ಬಾರ್; ಚುನಾವಣೆಯಲ್ಲಿ ಭಾರಿ ಗೆಲುವು, ದೇಶ ಮೊದಲು ಎಂದ ಬಿಜೆಪಿ
DUSU Election: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಚುನಾವಣೆಯಲ್ಲಿ ಎಬಿವಿಪಿ ಭರ್ಜರಿ ಗೆಲುವು ಸಾಧಿಸಿದೆ. ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿ ಹುದ್ದೆಗಳು ಎಬಿವಿಪಿ ಪಾಲಾದರೆ, ಉಪಾಧ್ಯಕ್ಷ ಸ್ಥಾನ ಎನ್ಎಸ್ಯುಐ ಪಾಲಾಗಿದೆ.
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಒಕ್ಕೂಟದ (DUSU) ಚುನಾವಣೆಯಲ್ಲಿ (DUSU Election) ಎಬಿವಿಪಿ (ABVP) ಭರ್ಜರಿ ಗೆಲುವು ಸಾಧಿಸಿದೆ. ಡಿಯುಎಸ್ಯು ಅಧ್ಯಕ್ಷ ಸೇರಿ ಕೇಂದ್ರೀಯ ಸಮಿತಿ ನಾಲ್ಕು ಪ್ರಮುಖ ಹುದ್ದೆಗಳಲ್ಲಿ ಮೂರು ಹುದ್ದೆಗಳು ಆರ್ಎಸ್ಎಸ್ ವಿದ್ಯಾರ್ಥಿ ಘಟಕವಾದ ಎಬಿವಿಪಿ ಪಾಲಾದರೆ, ಉಪಾಧ್ಯಕ್ಷ ಸ್ಥಾನವು ಕಾಂಗ್ರೆಸ್ ವಿದ್ಯಾರ್ಥಿ ಘಟಕವಾದ ಎನ್ಎಸ್ಯುಐ ಪಾಲಾಗಿದೆ.
ಎಬಿವಿಪಿಯ ತುಷಾರ್ ದೆಢಾ ಅವರು ಎನ್ಎಸ್ಯುಐನ ಹಿತೇಶ್ ಗುಲಿಯಾ ವಿರುದ್ಧ ಗೆಲುವು ಸಾಧಿಸಿದ್ದಾರೆ. ಎನ್ಎಸ್ಯುಐನ ಅಭಿ ದಾಹಿಯಾ ಡಿಯುಎಸ್ಯು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಾಗೆಯೇ, ಎಬಿವಿಪಿಯ ಅಪರಾಜಿತಾ ಕಾರ್ಯದರ್ಶಿ ಹಾಗೂ ಸಚಿನ್ ಬೈಸ್ಲಾ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ದೆಹಲಿ ವಿವಿಯಲ್ಲಿ ಇನ್ನು ಎಬಿವಿಪಿ ಮತ್ತಷ್ಟು ಪ್ರಬಲವಾಗಿದೆ.
#WATCH | Delhi: On DUSU elections, ABVP's winning candidate for the President's seat, Tushar Dedha says, "The main task we will do is to get metro concession passes for the students of Delhi University…" pic.twitter.com/71ykva7kxC
— ANI (@ANI) September 23, 2023
3 ವರ್ಷದ ಬಳಿಕ ಚುನಾವಣೆ
ದೆಹಲಿ ವಿವಿಯಲ್ಲಿ 2019ರಲ್ಲಿ ನಡೆದ ಚುನಾವಣೆಯಲ್ಲೂ ಎಬಿವಿಪಿಯು ನಾಲ್ಕು ಪ್ರಮುಖ ಹುದ್ದೆಗಳಲ್ಲಿ ಮೂರು ಹುದ್ದೆಗಳನ್ನು ಪಡೆದಿತ್ತು. ಇದಾದ ಬಳಿಕ ಕೊರೊನಾ ಹಿನ್ನೆಲೆಯಲ್ಲಿ 2020 ಹಾಗೂ 2021ರಲ್ಲಿ ಡಿಯುಎಸ್ಯು ಚುನಾವಣೆ ನಡೆದಿರಲಿಲ್ಲ. ಅಕಾಡೆಮಿಕ್ ಕ್ಯಾಲೆಂಡರ್ನಲ್ಲಿ ಏರುಪೇರಾದ ಕಾರಣ 2022ರಲ್ಲೂ ಡಿಯುಎಸ್ಯು ಚುನಾವಣೆ ನಡೆದಿರಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ 24 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಎಬಿವಿಪಿ ಸಂಭ್ರಮಾಚರಣೆ, ಅಮಿತ್ ಶಾ ಅಭಿನಂದನೆ
ಡಿಯುಎಸ್ಯು ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವಿವಿ ಕ್ಯಾಂಪಸ್ನಲ್ಲಿ ಎಬಿವಿಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಪಟಾಕಿ ಸಿಡಿಸಿ, ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದರು. ಇನ್ನು ಎಬಿವಿಪಿ ಗೆಲುವಿನ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿ ಬಿಜೆಪಿಯ ಹಲವು ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. ಹಾಗೆಯೇ, ದೇಶದ ಹಿತಾಸಕ್ತಿ ಮೊದಲು ಎಂಬ ಉದ್ದೇಶದಿಂದ ಎಬಿವಿಪಿ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ.
दिल्ली विश्वविद्यालय छात्र संघ के चुनाव में @ABVPVoice को मिली प्रचंड जीत पर परिषद् के सभी कार्यकर्ताओं को हार्दिक बधाई।
— Amit Shah (@AmitShah) September 23, 2023
यह जीत राष्ट्रहित को सर्वप्रथम मानने वाली विचारधारा में युवा पीढ़ी के विश्वास को दर्शाती है। मुझे पूर्ण विश्वास है कि परिषद् के कार्यकर्ता युवाओं में स्वामी…
ಇದನ್ನೂ ಓದಿ: New JNU Rules: ಜೆಎನ್ಯುನಲ್ಲಿ ಪ್ರತಿಭಟನೆ ಮಾಡಿದರೆ 20 ಸಾವಿರ ರೂ., ದುರ್ವರ್ತನೆಗೆ 50 ಸಾವಿರ ರೂ. ದಂಡ
“ಎಬಿವಿಪಿ ನಾಯಕರು ದೆಹಲಿ ವಿವಿಯ ಕೇಂದ್ರೀಯ ಸಮಿತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ವಿಶ್ವಾಸವಿದೆ. ಹಾಗೆಯೇ, ಸ್ವಾಮಿ ವಿವೇಕಾನಂದರ ಆಶಯ, ವಿಚಾರಗಳ ಪಾಲನೆ, ಯುವಕರಲ್ಲಿ ರಾಷ್ಟ್ರೀಯವಾದದ ಜಾಗೃತಿ ಹೆಚ್ಚಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸಲಿದೆ ಎಂಬ ದೃಢ ನಂಬಿಕೆ ಇದೆ” ಎಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಕಲೆ/ಸಾಹಿತ್ಯ
Sunday Read: ಹೊಸ ಪುಸ್ತಕ: ಯಾಬ್ಲಿ: ಯಥಾಪ್ರಕಾರ
ಎಚ್. ಆರ್ ರಮೇಶ ಅವರು ಸಣ್ಣಕಥೆಗಳ ಸಂಕಲನ ʼಯಾಬ್ಲಿʼ ಇಂದು ಬಿಡುಗಡೆಯಾಗುತ್ತಿದೆ. ಈ ಸಂಕಲನದಿಂದ ಒಂದು ಕಥೆಯ ಆಯ್ದ ಭಾಗ ಇಲ್ಲಿದೆ. ಇದು ಇಂದಿನ Sunday read.
:: ಎಚ್.ಆರ್ ರಮೇಶ
ಸಾವಜ್ಜಿಗೆ ರಾತ್ರಿ ನಿದ್ರೆಯಲ್ಲಿ ಕನಸು. ಭೂಮಿ ಸುಟ್ಟು ಹೋಗಿತ್ತು. ಸುಡುವ ಬೆಂಕಿಯ ಝಳದಲ್ಲಿ ಒಂದು ಬಿಳಿಯ ಹಂಸ ಹಾರಿ ಹೋಗುತ್ತಿತ್ತು ಆಕಾಶದ ಕಡೆ ಮುಖಮಾಡಿ. ಸಾವಜ್ಜಿ ನೋಡುತ್ತಲೇ ಇದ್ದಳು ಅದನ್ನು. ಅಂತರಿಕ್ಷದಲ್ಲಿ ಅದು ಹಾರಿಹೋಗುತ್ತಿತ್ತು. ಅದನ್ನು ಸಾವಜ್ಜಿ ನೋಡುತ್ತಲೇ ಇದ್ದಳು. ಸಾವಜ್ಜಿ ಅದನ್ನು ನೋಡುತ್ತಲೇ ಇದ್ದಳು. ಕಲ್ಲು ನೀರು ಕರಗುವ ಹೊತ್ತು ಈ ಕನಸು ಬಿದ್ದ ಹೊತ್ತು. ಅದು ಕರಗದೆ ಹಾಗೇ ಇತ್ತು ಅವಳ ಸುಕ್ಕುಗಳ ಮೇಲೆ ಅಡುಗೆ ಕೋಣೆಯ ಕಿಟಕಿಯಿಂದ ಸೂರ್ಯನ ಕಿರಣಗಳು ಹರಿದು ಹೋಗುವ ತನಕ. ಅವಳ ಕೆನ್ನೆಗಳ ಮೇಲೆ ಮೂಡಿದ್ದ ಸುಕ್ಕುಗಳು ನುಣುಪು ಬೆಣಚು ಕಲ್ಲುಗಳಾಗಿದ್ದವು. ಬೆಣಚು ಕಲ್ಲುಗಳ ಸಂದುಗೊಂದುಗಳಲ್ಲೆಲ್ಲ ಜುಳು ಜುಳು ಸದ್ದುಮಾಡಿಕೊಂಡು ಹರಿವ ತೊರೆಯ ನೀರು ಅವಳ ಕೆನ್ನೆಯ ಸುಕ್ಕುಗಳ ಮೇಲೆ ಹರಿವ ಸೂರ್ಯನ ಕಿರಣಗಳು. ಎಚ್ಚರವಾಯಿತು.
ಎದ್ದಳು ನಿಧಾನ. ಮಾಳಿಗೆ ಮನೆಯ ನಡುಮನೆಯಲ್ಲಿ ಮಲಗಿದ್ದಳು. ಗೋಡೆಯ ಮೇಲೆ ನೇತುಹಾಕಿದ್ದ ಶಿವನ ಪಟಕ್ಕೆ ಕೈ ಮುಗಿದು, ‘ಶಿವನೇ ಏನೇಳ್ಲಪ್ಪ ನಿನ್ನ ಮಯಿಮೇನ, ಇಷ್ಟು ದಿನ ಕರಕಂಬದ್ದಲ್ಲಪ್ಪ, ಏನೇಳ್ಲಿ ನಿನ್ನ ಪವಾಡಕೆ’ ಎಂದುಕೊಳ್ಳುತ್ತ ನಿಧಾನ ಎದ್ದಳು. ಹಳೆಯ ಸೀರೆಗಳನ್ನು ಒಂದಕ್ಕೊಂದು ಸೇರಿಸಿ ಹೊಲೆದು, ಮೆತ್ತನೆಯ ಹಾಸಿಗೆಯ ಥರ ಮಾಡಿಕೊಂಡಿದ್ದ ಅದನ್ನು ನೀಟಾಗಿ, ಚೌಕಾಕಾರದಲ್ಲಿ ಮಡಿಚಿ, ಆ ನಡುಮನೆಯ ಕೋಣೆಯ ತಾನು ಮಲಗಿದ್ದ ಬಲಭಾಗದ ಮೂಲೆಯಲ್ಲಿ ಅದನ್ನು ಮತ್ತು ಅದರ ಜೊತೆಗೆ ದಿಂಬನ್ನು ಇಟ್ಟಳು. ದಿಂಬಿಗೆ ಹಳೆಯ ಸೀರೆಯನ್ನು ಕವರನ್ನಾಗಿ ಹೊಲಿದಿದ್ದು, ಅದರಲ್ಲಿನ ಹೂವಿನ ಚಿತ್ರಗಳು ಎಣ್ಣೆಯ ಜಿಡ್ಡಿಗೆ ತಮ್ಮ ಕಳೆಯನ್ನು ಕಳೆದುಕೊಂಡಿದ್ದವು. ಎದ್ದು, ಬಾಗಿಲ ಹಿಂದೆ ಇದ್ದ ಮರದ ಅಗಳಿಯನ್ನು ಸರಿಸಿ ಬಾಗಿಲನ್ನು ಹಿಂದಕ್ಕೆ ಎಳೆದುಕೊಂಡಳು. ಇವಳು ಬಾಗಿಲು ತೆಗೆಯುವುದನ್ನೇ ಕಾಯುತ್ತಿತ್ತೇನೋ ಎಂಬಂತಿದ್ದ ಹೊರಗಿದ್ದ ಬೆಳಗಿನ ಬೆಳಕು, ಇವಳು ಬಾಗಿಲನ್ನು ತೆಗೆಯುತ್ತಿದ್ದಂತೇ ಒಳನುಗ್ಗಿತು.
ತುಸು ಎತ್ತರದ ಹೊಸ್ತಿಲನ್ನು ನಿಧಾನ ದಾಟಿ, ಬೆಳಕನ್ನು ಸೀಳಿಕೊಂಡು ಹೊರನಡೆದು, ಮನೆಯ ಬಲಗಡೆ ಸಂದಿಯಲ್ಲಿ ಅವಳ ಗಂಡನಕಾಲದ ಪುಟ್ಟ ಶೌಚಾಲಯಕ್ಕೆ ಹೋಗಿ ಬೆಳಗಿನ ನಿತ್ಯಕರ್ಮಗಳನ್ನು ಮುಗಿಸಿ, ಹೊರಗಿನ ಗುಡಾಣದಲ್ಲಿರುವ ನೀರನ್ನು ಗುಡಾಣದ ಮುಚ್ಚುಳದ ಮೇಲೆ ಕಾಲದ ಸಾಕ್ಷಿಯೆಂಬಂತೆ ಇದ್ದ ಲಬಿಕಿದ ಅಲ್ಯುಮಿನಿಯಮ್ ತಂಬಿಗೆಯಲ್ಲಿ ತುಂಬಿಸಿಕೊಂಡು, ಮತ್ತೊಮ್ಮೆ ಕೈ ತೊಳೆದು, ಕಾಲಿನ ಹಿಮ್ಮಡಿಯು ನೆನೆಯುವಂತೆ ಎರಡೂ ಪಾದಗಳ ಮೇಲೆ ನೀರನ್ನು ಹಾಕಿಕೊಂಡು ಒಳನಡೆದಳು. ಅಡುಗೆ ಕೋಣೆಯು ನಡುಮನೆಗೆ ಹೊಂದಿಕೊಂಡಿತ್ತು. ನಿಧಾನ ಅಡುಗೆ ಕೋಣೆಯೊಳಗೆ ಪಾದಗಳ ಇಡತೊಡಗಿದಳು. ಒಲೆಯ ಪಕ್ಕ ಇದ್ದ ಬಚ್ಚಲು ಮನೆಗೆ ಎಡ್ಲಿಯಲ್ಲಿ ತಾಮ್ರದ ತಂಬಿಗೆಯನ್ನು ಅದ್ದಿದಳು. ಆಗ ಅಲ್ಲಿ ನೀರು ತಂಬಿಗೆ ಒಳಗಡೆ ಸೇರುವ ಗುಡುಗುಡು ಸದ್ದು. ನೀರು ತುಂಬಿಸಿಕೊಂಡು, ಇದ್ದಿಲಿನ ಪುಡಿಯಲ್ಲಿ ಹಲ್ಲುಗಳನ್ನು ಉಜ್ಜಿ, ಮುಖವನ್ನು ತೊಳೆದುಕೊಂಡು, ನಿಧಾನ ಬಚ್ಚಲಿಗೆ ಅಡ್ಡಲಾಗಿಟ್ಟಿದ್ದ ಕಲ್ಲನ್ನು ದಾಟಿ ಹೊರ ನಡೆದಳು. ಸೂರ್ಯನ ಕಿರಣಗಳು ಅವಳ ಬೆನ್ನಿನ ಮೇಲೆ ಬಂಗಾರದ ನೀರನ್ನು ಸುರಿಯುತ್ತಿರುವಂತೆ ಕಾಣುತ್ತಿತ್ತು. ನಡುಮನೆಯ ಎಡಭಾಗದ ಗೋಡೆಗೆ ಸಮೀಪ ಬಿದಿರಿನ ಒಂದು ಉದ್ದನೆಯ ಗಳವನ್ನು ತೆಂಗಿನ ಹುರಿಯಲ್ಲಿ ಜಂತೆಯ ತೊಲೆಗೆ ಕಟ್ಟಿ ನೇತು ಬಿಡಲಾಗಿತ್ತು. ಆ ದಂಡಿಗೆಯ ಮೇಲೆ ಸೀರೆ, ರವಿಕೆ, ಮತ್ತಿತರೆ ಬಟ್ಟೆಗಳನ್ನು ಮಡಿಚಿ ನೇತುಹಾಕಲಾಗಿತ್ತು.
ಅದರ ಮೇಲೆ ನೇತಾಡುತ್ತಿದ್ದ ಟವಲನ್ನು ಎಳೆದುಕೊಂಡು, ಅದರಿಂದ ಮುಖವನ್ನು ಒರೆಸಿ ಕೊಂಡು, ಅದನ್ನು ಮತ್ತೆ ತನ್ನ ಭುಜದ ಮೇಲೆ ಹಾಕಿಕೊಂಡು ಮುಂದಕ್ಕೆ ಹೆಜ್ಜೆಗಳನ್ನು ಇಟ್ಟಳು. ಅವಳ ಮನೆ ಪಶ್ಚಿಮಾಭಿಮುಖವಾಗಿದ್ದುದರಿಂದ, ಸೂರ್ಯ ಕಾಣಿದಿದ್ದರೂ, ಅವಳ ಮನೆಯ ಬಾಗಿಲಿನ ಕಡೆ ಅಂದರೆ ಪೂರ್ವ ದಿಕ್ಕಿನ ಕಡೆ ತಿರುಗಿ ಒಂದು ನಮಸ್ಕಾರ ಹಾಕಿದಳು. ಹಾಕಿ, ಮನೆಯ ಮುಂಭಾಗದ ಬಲಗಡೆಯಲ್ಲಿ ಇಬ್ಬರು ಕುಳಿತುಕೊಳ್ಳಬಹುದಾಗಿದ್ದ ಒಂದು ಸಣ್ಣಕಲ್ಲು ಹಾಸಿನ ಕೆಳಗೆ ಕೈ ಹಾಕಿ ಪೊರಕೆಯನ್ನು ತೆಗೆದುಕೊಂಡಳು. ಕಸ ಗುಡಿಸಿ, ಅಲ್ಲೆ ಗುಡಾಣದಲ್ಲಿದ್ದ ನೀರನ್ನು ತಂಬಿಗೆಯಲ್ಲಿ ತುಂಬಿಕೊಂಡು ಬಾಗಿಲಿಗೆ ನೀರನ್ನು ಚಿಮುಕಿಸಿದಳು. ಮುಂಬಾಗಿಲಿನ ಕೈಗೆಟುಕುವ ಎತ್ತರದಲ್ಲಿದ್ದ ಒಂದು ಪುಟ್ಟ ಗೂಡೊಳಗೆ ಕೈ ಹಾಕಿ ಅರಿಶಿಣ, ಕುಂಕುಮ ಮತ್ತು ರಂಗೋಲಿ ಹಿಟ್ಟು ಇದ್ದ ಒಂದು ಬಟ್ಟಲನ್ನು ತೆಗೆದುಕೊಂಡು, ಹೊಸ್ತಿಲ ಮೇಲೆ ಮೂರುಕಡೆ ಮೂರು ಗೆರೆಗಳನ್ನು, ಅವುಗಳ ಅಂತರದಲ್ಲಿ ಸುರುಳಿಯಾಕಾರದ ಚಕ್ರ, ಇಂಟು ಆಕಾರದ ಎರಡು ಎಲೆಗಳಂತಿರುವ ಎಳೆಗಳನ್ನು ಎಳೆದು, ಹೊಸ್ತಿಲಿನ ಮುಂಭಾಗಕ್ಕೆ ಕುಂಕುಮ ಮತ್ತು ಅರಿಶಿಣವನ್ನು ಇಟ್ಟಳು. ಮನೆಯ ಅಂಗಳಕ್ಕೆ ದಾರಿಗೆ ಹೊಂದಿಕೊಂಡು ಮರದಂತೆ ಬೆಳೆದಿದ್ದ ಎಕ್ಕದ ಹೂವುಗಳನ್ನು ಕಿತ್ತು ಇಟ್ಟಳು. ಅದರ ಪಕ್ಕದಲ್ಲೇ ಇದ್ದ ಮಧ್ಯಾಹ್ನ ಮಲ್ಲಿಗೆ ಹೂವು ಸಂಜೆ ಅರಳಿದ್ದರಿಂದ, ಮುದುಡಿ ಮಲಗಿದ್ದವು. ಕೆಲವು ಗಿಡದ ಬುಡದಲ್ಲಿ ಬಿದ್ದಿದ್ದವು. ತಂಬಿಗೆಯಲ್ಲಿ ಉಳಿದಿದ್ದ ನೀರಿನಲ್ಲಿ ಕೈಗಳನ್ನು ತೊಳೆದುಕೊಂಡು, ಭುಜದ ಮೇಲೆ ಹಾಕಿಕೊಂಡಿದ್ದ ಟವಲನ್ನು ಮನೆಯ ಮುಂಭಾಗದ ಗೋಡೆಗೆ ಮತ್ತು ಅಂಗಳದ ಗೂಟಕ್ಕೆ ಕಟ್ಟಿದ್ದ ತಂತಿಯ ಮೇಲೆ ನೇತುಹಾಕಿ ಒಳ ನಡೆದಳು.
ಸಾವಜ್ಜಿಯ ಮಾಳಿಗೆ ಮನೆ, ಎರಡು ಕೋಣೆಗಳಿದ್ದರೂ, ತುಂಬಾ ವಿಶಾಲವಾಗಿತ್ತು. ಮನೆಯ ಅಡುಗೆ ಕೋಣೆಯು ಐದಾರು ಜನ ಕೂತು ಊಟ ಮಾಡುವಷ್ಟು ವಿಶಾಲ ವಾಗಿತ್ತು. ಮೂಲೆಯಲ್ಲಿ ಮಣ್ಣಿನ ಸೋರೆಗಳನ್ನು ಹೈಕಳು ಲಗೋರಿ ಆಟವಾಡುವಾಗ ಒಂದರ ಮೇಲೊಂದು ಜೋಡಿಸುವ ಬಿಲ್ಲೆಗಳಂತೆ ಜೋಡಿಸಿಡಲಾಗಿತ್ತು. ನೀರು ಕುಡಿಯಲು ಕಂಚಿನ ವೃತ್ತಾಕಾರದ ಗಿಂಡಿ, ಅದರ ಪಕ್ಕ ಒಂದು ಸ್ಟೀಲಿನ ಕೊಳಗ ಅದರ ಪಕ್ಕ ಮಣ್ಣಿನ ಗುಡಾಣ. ತರಕಾರಿಗಳನ್ನು ಇಡಲು ಜಾಲರ ರೂಪದ ನೇತಾಡುವ ಬುಟ್ಟಿಯನ್ನು ಗೋಡೆಗೆ ಮೊಳೆ ಹೊಡೆದು ನೇತುಹಾಕಲಾಗಿತ್ತು. ಅಡುಗೆ ಮನೆಯಲ್ಲಿ ಮೂರು ಕಂಬಗಳಿದ್ದವು. ಅವುಗಳಿಗೆ ಹುರಮಂಜನ್ನು ಬಳಿಯಲಾಗಿತ್ತು. ಅಡುಗೆ ಕೋಣೆಯ ಬಾಗಿಲ ಮೇಲೆ ಇಡಲಾಗಿದ್ದ ಅಡ್ಡಕಲ್ಲಿನ ಮೇಲೆ ಐದಾರು ತಾಮ್ರದ, ಸ್ಟೀಲಿನ ಡಬ್ಬಿಗಳಿದ್ದವು. ಮೂರು ನಿಲುವುಗಳಿದ್ದು, ಒಂದರಲ್ಲಿ ಹಾಲಿನ ಬಟ್ಟಲು, ಮತ್ತೊಂದರಲ್ಲಿ ಕುಂಬಳಕಾಯಿ ಇದ್ದು, ಮೂರನೆಯದು ಖಾಲಿಯಿತ್ತು. ಅಡುಗೆ ಕೋಣೆಯ ಬಲಭಾಗದಲ್ಲಿ ಪುಟ್ಟದಾದ ದೇವರಗೂಡು. ಅದರಲ್ಲಿ ಹುಲಿ ವಾಹನದ ಮೇಲೆ ಕುಳಿತುಕೊಂಡಿರುವ ದೇವಿಯ ಚಿತ್ರ. ಅದಕ್ಕೆ ಗಾಜಿನ ಕಟ್ಟನ್ನು ಹಾಕಲಾಗಿತ್ತು. ಕುಂಕುಮ, ವಿಭೂತಿ, ಮತ್ತು ಅಂಟಿಕೊಂಡಿದ್ದ ಬಸವನ ಪಾದದ ಹೂವುಗಳು. ಫೋಟೋದ ಮುಂದೆ ಒಂದು ದಪ್ಪನೆಯ ಪುಸ್ತಕ. ಅದರ ಮೇಲೆಲ್ಲ ವಿಭೂತಿ, ಕುಂಕುಮ, ತೀರ್ಥದ ಕಲೆಗಳು. ಅದರ ಪಕ್ಕದಲ್ಲಿ ವಿಭೂತಿ, ಕುಂಕುಮ, ಅರಿಶಿಣ. ವಿಭೂತಿಯನ್ನು ಎತ್ತಿಕೊಂಡು ತನ್ನ ಬಲಗೈಯ ಮೂರು ಅಂಗೈ ಬೆರಳುಗಳಿಗೆ ಅದನ್ನು ಬಳಿದುಕೊಂಡು ಆ ಮೂರು ಬೆರಳುಗಳಿಂದ ತನ್ನ ಹಣೆಯ ಮೇಲೆ ಮೂರು ಅಡ್ಡ ವಿಭೂತಿಯ ಗೆರೆಗಳನ್ನು ಎಳೆದುಕೊಂಡಳು. ಮತ್ತು ಉಂಗುರದ ಬೆರಳ ತುದಿಯಿಂದ ಒಂದಿಷ್ಟಗÀಲದ ಕುಂಕುಮವನ್ನು ತನ್ನ ಎರಡು ಹುಬ್ಬುಗಳ ನಡುವೆ ಹಚ್ಚಿಕೊಂಡಳು. ದೇವಿ ಫೋಟೋದ ಪಕ್ಕ ಬಿದಿರಿನ ಕೊಳವೆಯಲ್ಲಿದ್ದ ಊದುಬತ್ತಿಗಳಲ್ಲಿ ಎರಡನ್ನು ಹೊರಗೆ ಎಳೆದುಕೊಂಡು ಅಲ್ಲೇ ದೇವರ ಗೂಡಲ್ಲಿದ್ದ ಬೆಂಕಿಪೊಟ್ಟಣವನ್ನು ಹುಡುಕಿ ತೆಗೆದು, ಕಡ್ಡಿಯನ್ನು ಗೀರಿ ಊದುಬತ್ತಿಗಳ ತುದಿಗೆ ತಾಗಿಸಿದಳು. ಹಳದಿ ಮತ್ತು ಕೆಂಪು ಮಿಶ್ರಿತ ಪುಟ್ಟದಾದ ಜ್ವಾಲೆ ಎರಡು ಸೆಕೆಂಡು ಮೂಡಿ, ಊದುಬತ್ತಿಯ ತುದಿಯಲ್ಲಿ ಕೆಂಡದ ಬಣ್ಣದಕಿಡಿ ಮಾತ್ರ ಸ್ಠಾಪಿತಗೊಂಡಿತು. ಗೊಂಡು, ಪರಿಮಳದ ಹೊಗೆ ಆ ಅಡುಗೆ ಕೋಣೆಯಲ್ಲಿ ಹಬ್ಬತೊಡಗಿತು.
ಅವುಗಳನ್ನು ಬಲಗೈಯಲ್ಲಿ ಹಿಡಿದು ಫೋಟೋಕ್ಕೆ ಮೂರುಸಲ ಬೆಳಗಿದಳು. ಅಡುಗೆ ಕೋಣೆಯ ನಡುವಲ್ಲಿ ನೇತಾಡುತ್ತಿದ್ದ ಹಾಲಿನ ನೆಲುವಿನ ಬಳಿ ಹೋಗಿ, ಅದರಲ್ಲಿದ್ದ ಬಟ್ಟಲನ್ನು ಎತ್ತಿಕೊಂಡು, ಅದರೊಳಗಿದ್ದ ಹಾಲನ್ನು ಒಂದು ಪುಟ್ಟ ಪಾತ್ರೆಯಲ್ಲಿ ಸುರುವಿದಳು. ಎರಡು ಒಲೆಗಳು ಅವುಗಳ ಹಿಂದೆ ಎರಡು ಮೂರು ಚಿಕ್ಕ ಪಾತ್ರೆಗಳನ್ನು ಇಡಬಹುದಾದಷ್ಟು ಜಾಗವಿತ್ತು. ಎಡಗಡೆಯ ಒಲೆಯ ಪಕ್ಕ ಎಡಲಿ. ಅದರ ಪಕ್ಕ ಅಡ್ಡಲಾಗಿ ಒಂದು ಆಳು ಉದ್ದದ ಮದ್ದಕ್ಕನ ಹಳ್ಳಿ ಕಲ್ಲು. ಅದರಾಚೆ ಬಚ್ಚಲು. ಮನೆಯ ಗೋಡೆಗೆ ಹೊಂದಿಕೊಂಡಂತಿದ್ದ ಅದು ಅಡ್ಡವಾಗಿ ದಾಟಿ ಹೋಗಬಹುದಾದ ಎತ್ತರದ ಕಲ್ಲನ್ನು ಹೊಂದಿತ್ತು. ಮತ್ತು ಬಿದಿರಿನ ಅಡ್ಡ ಬಾಗಿಲನ್ನು ಹೊಂದಿತ್ತು. ಆ ಬಚ್ಚಲಿನ ಒಳಗೆ ಒಂದು ಪುಟ್ಟ ಕಿಟಕಿಯೂ ಇತ್ತು. ಬಲ ಒಲೆಯ ಪಕ್ಕ ಒಂದು ಆಳು ಕುಳಿತುಕೊಂಡಾಗ ಇರುವ ಎತ್ತರದಷ್ಟು ಇಟ್ಟಿಗೆ ತಡೆಗೋಡೆ. ಅದರ ಆಚೆ ಸೌದೆಗಳನ್ನು ಪೇರಿಸಿ ಇಡಲಾಗಿತ್ತು. ಅದರ ಪಕ್ಕ ಒಂದೆರಡು ಮೂರು ಅಡಿ ದೂರದಲ್ಲಿ ನುಸಿರೋಗ ಬಂದು ಒಳಗೆ ಟೊಳ್ಳಾಗಿರುವ ತೆಂಗಿನಮರದ ಥರ ಉದ್ದನೆಯ ಕಡಗೋಲು ತಾನೇನು ಮಾಡುತ್ತಿದ್ದೆ ಎನ್ನುವುದರ ನೆನಪು ಇಲ್ಲದೆ ನಿಸ್ತೇಜಗೊಂಡು ನಿಂತಿತ್ತು ಗೋಡೆಗೆ ಒರಗಿ. ಇದರ ಎದುರಿನ ಗೋಡೆಯ ಹತ್ತಿರ ಒಂದು ಸಣ್ಣದಾದ ಪೆಟ್ಟಿಗೆ ಅನಾದಿಕಾಲದಿಂದ ಮಲಗಿದಂತೆ ಇತ್ತು. ಒಲೆಯ ಹಿಂಭಾಗದ ಹಾಸಿನ ಮೇಲಿನ ಮೂಲೆಯಲ್ಲಿ ಬೆಕ್ಕು ತಪಸ್ಸಿಗೆ ಕುಳಿತ ಮುನಿಯಂತೆ ಇತ್ತು. ಸಾವಜ್ಜಿ ಹಾಲನ್ನು ಸುರುವ ಸದ್ದಿಗೆ ಎಚ್ಚರಗೊಂಡು ಅಥವಾ ಎಚ್ಚರವಾಗಿತ್ತೇನೋ, ಆ ಕಡೆ ಕಣ್ಣು ನೆಟ್ಟಿತು. ನೆಟ್ಟು ನನಗೂ ಅದಕ್ಕೂ ಸಂಬಂಧವಿಲ್ಲ ವೇನೋ ಎನ್ನುವಂತೆ ಮತ್ತೆ ಕಣ್ಣು ಮುಚ್ಚಿಕೊಂಡಿತು. ಇದನ್ನು ಕಂಡು ಅವಳು ನಕ್ಕಳು. ಹಾಲಿನ ಪಾತ್ರೆಯನ್ನು ಹಿಡಿದುಕೊಂಡು ಒಲೆಯ ಹತ್ತಿರ ಹೋಗಿ, ಒಲೆಯ ಮೇಲೆ ಇಟ್ಟಳು.
ಒಲೆಯ ಮುಂದೆ ಕುಳಿತರೆ ಕೈಗೆ ತಾಗುವ ಅಂತರದಲ್ಲಿ ಒಂದು ಮರದ ಕಂಬ. ಅದರ ಬುಡದಲ್ಲಿ ಇದ್ದ ಮಣೆಯನ್ನು ಎಳೆದುಕೊಂಡು ಅದರ ಮೇಲೆ ಕುಳಿತಳು. ಪಾತ್ರೆಯನ್ನು ಮತ್ತೆ ತೆಗೆದು ತನ್ನ ಪಕ್ಕ ಇಟ್ಟುಕೊಂಡಳು. ತಂಬಿಗೆಯನ್ನು ತೆಗೆದುಕೊಂಡು ಎಡಲಿಯಲ್ಲಿ ನೀರನ್ನು ತುಂಬಿಕೊಂಡು ಪಕ್ಕಕ್ಕೆ ಇಟ್ಟುಕೊಂಡಳು. ಸೌದೆಗಳನ್ನು ಪೇರಿಸಿಟ್ಟ ಜಾಗದಲ್ಲಿ ಎರಡು ಅಂಗೈಯಗಲದ ಚಚ್ಚೌಕಾಕಾರದ ಮರದ ಹಲಗೆಯನ್ನು ತೆಗೆದುಕೊಂಡು, ಅದನ್ನು ಎಡಗೈಯಲ್ಲಿ ಹಿಡಿದು, ಬಲಗೈಯಲ್ಲಿ ಸೌದೆಯ ಬಳಿಯೇ ಇದ್ದ ಕಾಯಿಯ ಮೇಲಿನ ಚಿಪ್ಪನ್ನು ಎತ್ತಿಕೊಂಡು ಒಲೆಗಳಲ್ಲಿದ್ದ ಬೂದಿಯನ್ನು ಎಳೆದುಕೊಂಡಳು. ಅದನ್ನು ಸೌದೆಯ ಮುಂಭಾಗಕ್ಕೆ ಇಟ್ಟು, ಮತ್ತೆ ಕೈಗಳನ್ನು ತೊಳೆದುಕೊಂಡು ಹಾಲಿನ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಮುಚ್ಚುಳವನ್ನು ಮುಚ್ಚಿದಳು ಸೌದೆಗಳಲ್ಲಿ ಪುರಳೆಗಳಂತವುಗಳನ್ನು ಆಯ್ದುಕೊಂಡು, ಮುರಿದು, ಒಲೆ ಯೊಳಗೆ ಇಟ್ಟಳು. ನಂತರ ಒಲೆಯ ಹಾಸಿನ ಒಂದು ಜಾಗದಲ್ಲಿ ಇದ್ದ ಬೆಂಕಿಪೊಟ್ಟಣವನ್ನು ಒಂದು ಪುಟ್ಟ ಸೀಮೆ ಎಣ್ಣೆಯ ಬುಡ್ಡಿಗೆ ಹಚ್ಚಿ ಅದರ ಜ್ವಾಲೆಗೆ ಕೆಲವು ಪುರುಳೆಗಳನ್ನು ಹಿಡಿದು ಅವು ಹೊತ್ತಿಕೊಂಡಾಗ ಅವನ್ನು ಈಗಾಗಲೇ ಒಲೆಯಲ್ಲಿ ಇಟ್ಟಿದ್ದ ಪುರುಳೆಗಳಿಗೆ ತುಸು ತಾಗಿಸಿ ಬೆಂಕಿ ಮಾಡಿದಳು. ಆಮೇಲೆ ಒಂದೆರಡಮೂರು ಗಟ್ಟಿ ಸೌದೆಗಳನ್ನು ಎತ್ತಿಕೊಂಡು ಒಲೆಯಲ್ಲಿ ಇಟ್ಟಳು. ಬೆಂಕಿ ನಿಧಾನವಾಗಿ ಎಲ್ಲ ಸೌದೆಗಳಿಗೆ ಹಬ್ಬತೊಡಗಿತು. ಈಗ ಮುಚ್ಚಳವನ್ನು ತೆರೆದಳು. ಎದ್ದು ಅಡುಗೆ ಕೋಣೆಯ ಬಾಗಿಲಿನ ಒಳ ನಿಲುವಿನ ಮೇಲೆ ಇದ್ದ ಡಬ್ಬ ಒಂದನ್ನು ಎತ್ತಿಕೊಂಡು ತನ್ನ ಅಂಗೈಯಿಯ ಬೊಗಸೆಯಲ್ಲಿ ಬೆಲ್ಲದ ಪುಡಿಯನ್ನು ಸುರುವಿಕೊಂಡು, ವಾಪಸ್ಸು ಒಲೆಯ ಹತ್ತಿರ ಬಂದು ಅದನ್ನು ಹಾಲಿನಲ್ಲಿ ಸುರುವಿದಳು. ಉಕ್ಕುತ್ತಿದ್ದ ಹಾಲು ಇದನ್ನು ಹಾಕುತ್ತಿದ್ದ ಹಾಗೆ ಡೌನಾಗತೊಡಗಿತು. ಒಲೆಯ ಹಿಂಭಾಗದ ಗೋಡೆಗೆ ಒಂದು ಪುಟ್ಟಗೂಡು ಹೊಂದಿಕೊಂಡಿತ್ತು.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ಪುನರ್ನವ: ಅಳಿದುಳಿದ ಕುರುಕ್ಷೇತ್ರದಲ್ಲಿ
ಆ ಗೂಡಿನ ಒಳಗಡೆ ಕೈ ಹಾಕಿ ಒಂದು ಸಣ್ಣದಾದ, ಹೊಗೆ ಮತ್ತು ಮಸಿಗೆ ಕಪ್ಪಾಗಿರುವ, ತಾಮ್ರದ ಡಬ್ಬಿಯನ್ನು ಎತ್ತಿಕೊಂಡಳು. ಅದರ ಮುಚ್ಚಳ ವನ್ನು ಬಿಚ್ಚಿ ಅದರೊಳಗಿನ ಚಿಕ್ಕ ಚಮಚದಲ್ಲಿ ಅದರೊಳಗಿದ್ದ ಕಾಫಿ ಪುಡಿಯನ್ನು ತುಂಬಿಕೊಂಡು ಒಲೆಯ ಮೇಲಿನ ಪಾತ್ರೆಗೆ ಸುರುವಿ ಡಬ್ಬಿಯನ್ನು ತನ್ನ ಸ್ವಸ್ಥಳಕ್ಕೆ ತಲುಪಿಸಿದಳು. ಹಾಲಿನ ಪಾತ್ರೆಯನ್ನು ಇಳಿಸಿ, ಅಲ್ಲೇ ಗೋಡೆಯ ಮೊಳೆಯೊಂದಕ್ಕೆ ನೇತು ಹಾಕಲ್ಪಟ್ಟ ಸೋಸುವ ಜಾಲರವನ್ನು ಎತ್ತಿಕೊಂಡು, ಅದರ ಪಕ್ಕ ಮರದ ರಿಪೀಸನ್ನು ಗೋಡೆಯ ಎರಡು ಮೊಳೆಗಳ ಮೇಲಿಟ್ಟು ಅದರ ಮೇಲೆ ಮಗುಚಿ ಇಟ್ಟಿದ್ದ ಐದಾರು ಸ್ಟೀಲಿನ ಕಪ್ಪುಗಳಲ್ಲಿ ಒಂದನ್ನು ಎತ್ತಿಕೊಂಡು ಅದರಲ್ಲಿ ಸೋಸಿದಳು. ಕಿಟಕಿಯಿಂದ ತೂರಿ ಬರುತ್ತಿದ್ದ ಸೂರ್ಯನ ಬೆಳಕಿಗೆ ಮನೆಯೊಳಗಿನ ಧೂಳಿನ ಕಣಗಳು ಮತ್ತು ಅವುಗಳ ಜೊತೆಗೆ ಹೊಗೆ ಆಟವಾಡುತ್ತಿದ್ದವು ಬೆಳಕಿನ ಓರೆಯಾಕಾರದ ದಾರಿ ಮಾಡಿಕೊಂಡು. ಗವಾಕ್ಷಿಯಿಂದ ಇನ್ನೂ ಬೆಳಕು ನಿಚ್ಚಳವಾಗಿ ಹರಿದು ಬರುತ್ತಿರು ವಂತೆ ಕಾಣುತ್ತಿರಲಿಲ್ಲ. ಅವಳು ಕಾಫಿಯನ್ನು ಕುಡಿಯಲು ಬಲಗೈಯನ್ನು ಆಡಿಸುವಾಗ ಅವಳ ಕೈಯಲ್ಲಿದ್ದ ಎರಡೋ ಮೂರೋ ಬಳೆಗಳು ಒಂದು ಹಿನ್ನಲೆ ಸಂಗೀತವನ್ನು ಒದಗಿಸುತ್ತಿದ್ದವು. ಸ್ಟೀಲಿನ ಕಪ್ಪಿನ ಮೇಲೆ ಅವಳ ಪುಟ್ಟದಾದ ಆಕೃತಿ ಮೂಡಿತ್ತು. ಅವಳು ಕುಡಿಯುವ ಸಂದರ್ಭದಲ್ಲೆ ಅವಳ ಮನಸ್ಸು ಇನ್ನು ಒಂದು ಗಂಟೆ ಅಥವಾ ಒಂದೂವರೆ ಗಂಟೆಯಲ್ಲಿ ಅವಳು ಮಾಡಬಹುದಾಗಿದ್ದ ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಉಪ್ಪು, ಜೀರಿಗೆ, ಎಳ್ಳು ಹಾಕಿ ರಾಗಿಯ ತಪ್ಪಲೆ ರೊಟ್ಟಿಯನ್ನು ರೂಪಿಸುತ್ತಿತ್ತು.
ಕಸಗುಡಿಸಿ, ಕಸವನ್ನು ಮತ್ತು ಬೂದಿಯನ್ನು ಒಂದು ಮೊರದಲ್ಲಿ ತುಂಬಿಕೊಂಡು ಮನೆಯ ಹಿಂಭಾಗದ ತಿಪ್ಪೆಗೆ ಹಾಕಿ, ನಂತರ ಒಂದು, ಒಂದೂವರೆ ಗಂಟೆಯಲ್ಲಿ ಇದೂ ಆಗಿ, ಮುಂಬಾಗಿಲಿನಿಂದ ಹಗಲಿನ ಬೆಳಕು ಒಳಗಡೆ ಬಂದು ಸೆಟ್ಲಾಗತೊಡಗುತ್ತಿತ್ತು. ಆ ಬೆಳಕಿನಲ್ಲಿ ನಡುಮನೆಯಲ್ಲಿ ಕುಳಿತು ರೊಟ್ಟಿಯ ಕೊನೆಯ ತುತ್ತನ್ನು ಮುಗಿಸಿ ಕೈ ತೊಳೆದುಕೊಳ್ಳುತ್ತಿದ್ದಳು. ಅಷ್ಟೊತ್ತಿಗೆ, ಅಜ್ಜಿ ಅಜ್ಜಿ ಎಂದು ಪುಟ್ಟ ಹುಡುಗಿ ಕೂಗಿಕೊಂಡು ಬಂದಳು. ‘ಯಾಕೆ ರಶ್ಮಿ, ಏನಾಯ್ತೆ, ನಿಮ್ಮಪ್ಪ, ದೊಡ್ಡಪ್ಪ ಮತ್ತೆ ಗುದ್ದಾಡ್ತಿದರೇನೆ?’ ಎಂದು ಕೇಳಿದಳು. ‘ಅಜ್ಜಿ ಇಬ್ಬರೂ ಮನೆ ಮುಂದಿನ ತೆಂಗಿನ ಮರದ ಬೇಲಿಯೊಳಗಡೆ ಬಿದ್ದಿದ್ದಾರೆ’ ಎಂದಳು. ‘ಮೂರು ಬಿಟ್ಟೋವು, ನನ್ನ ಹೊಟ್ಟೆಗೆ ಯಾಕರ ಹುಟ್ಟಿದವೋ ಏನೋ’ ಎಂದು ಶಪಿಸಿಕೊಂಡಳು. ಮೂರು ದಿನದ ಹಿಂದೆ, ಅಂದರೆ, ಇವೊತ್ತು ಸೋಮವಾರ ಅಲ್ಲವೆ, ಭಾನುವಾರ, ಶನಿವಾರ, ಹ್ಞಾ ಶುಕ್ರವಾರ ಮಧ್ಯಾಹ್ನ ಹೀಗಾಗಿತ್ತು: ಸಾರು ಮಾಡಲು ಸೊಪ್ಪು ಕಿತ್ತುಕೊಂಡು ಬರಲು ಹೊಲದ ಕಡೆ ಹೋಗಿದ್ದ ಅವಳು ತನ್ನ ಚಿಕ್ಕ ಮಗ ರಂಗ ಮತ್ತು ದೊಡ್ಡ ಮಗ ಓಬ ಇಬ್ಬರೂ ಒಬ್ಬರಿಗೊಬ್ಬರು ಕುತ್ತಿಗೆಯನ್ನು ಬಿಗಿಯಾಗಿ ಹಿಡಿದುಕೊಂಡು ಸೆಣಸಾಟಕ್ಕೆ ಇಳಿದಿದ್ದುದನ್ನು ಕಂಡಿದ್ದಳು. ಥೂ ಮಾನಮರ್ಯಾದೆ ಇಲ್ಲದವೆ, ಯಾಕರ ಹುಟ್ಟಿದರೋ, ನಿಮ್ಮಪ್ಪ ಹೋದನು ಹೋದ ತಣ್ಣಗೆ, ನನ್ನೂ ಅವನ ಜೊತೆ ಕರಕೊಂಡು ಹೋಗಬಾರದಿತ್ತ, ಈ ಎಲ್ಡು ನೇತ್ರಗಳಿಂದ ಏನೆಲ್ಲ ನೋಡಬೇಕೋ ಎಂದು ಮಡಿಲಲ್ಲಿ ಸೊಪ್ಪನ್ನು ಬಿಗಿಯಾಗಿ ಕಟ್ಟಿಕೊಂಡು ಅವರನ್ನು ಬಿಡಿಸಲು ಹೋಗಿದ್ದಳು. ಚಿಕ್ಕ ಮಗ ರಂಗ ‘ನಿಮ್ಮವ್ವನ್ನ ನೀನ್ಯಾಕೆ ಬಂದೆ ಹೋಗೆ ಇಲ್ಲಿ’ ಎಂದು ಅವಳನ್ನು ದೂಡಿದ. ಅವಳು ಮಾರುದೂರ ಹೋಗಿ ಬಿದ್ದಳು. ‘ದೊಡ್ಡೋನು ಅನ್ನಿಸಿಕೊಂಡೋನು ನಿನಗೂ ಬುದ್ದೀ ಇಲ್ಲವೇನಲೇ ಓಬ, ಅವನು ದೂಕಿದರೂ ಸುಮ್ಮನಿದಿಯಾ ಎಂದು ಬೈದುಕೊಳ್ಳುತ್ತ ಸಾಯಿರಿ, ನಿಮ್ಮಿಂದ ಯಾವ ದೇಶ ಉದ್ಧಾರ ಆಗಬೇಕು, ಯಾವ ಕೇರಿಗೆ ಒಳ್ಳೆದು ಆಗಬೇಕು, ಹೊಲ ಉಳಿಸಿದ್ದಕ್ಕೆ ನಿಮಗೆ ಇಷ್ಟೊಂದು ಧಿಮಾಕು, ಅವಾಗ್ಲೆ ಎಲ್ಲ ಮಾರಿದ್ದಿದ್ದರೆ ಚೆನ್ನಾಗಿರ್ತಿತ್ತು’ ಎಂದು ಬೈದುಕೊಂಡ ತನ್ನನ್ನು ತಾನೇ ಶಪಿಸಿಕೊಳ್ಳುತ್ತ ಮನೆಯ ಕಡೆ ಬಂದಿದ್ದಳು.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ಎಡಬಲಗಳ ಸುತ್ತಮುತ್ತ: ಮಾತಿನ ಧೂಳು
ಕೃತಿ: ಯಾಬ್ಲಿ (ಸಣ್ಣಕತೆಗಳು)
ಲೇಖಕ: ಎಚ್. ಆರ್ ರಮೇಶ
ಪ್ರಕಾಶನ: ಅಂಕಿತ ಪುಸ್ತಕ
ಬೆಲೆ: 160 ರೂ.
-
ಸುವಚನ4 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ವೈರಲ್ ನ್ಯೂಸ್14 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ಕರ್ನಾಟಕ19 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
South Cinema16 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!
-
ಪ್ರಮುಖ ಸುದ್ದಿ12 hours ago
Sandalwood : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ; ಗೆದ್ದವರ ವಿವರ ಇಲ್ಲಿದೆ
-
ದೇಶ23 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
ಬಾಲಿವುಡ್20 hours ago
Rashmika Mandanna: ಕತ್ತಿನಲ್ಲಿ ತಾಳಿ, ಕೆಂಪು ಬಾರ್ಡರ್ ಸೀರೆಯುಟ್ಟು ಫಸ್ಟ್ ಲುಕ್ನಲ್ಲೇ ನಾಚಿ ನೀರಾದ ರಶ್ಮಿಕಾ!
-
ಕರ್ನಾಟಕ18 hours ago
Mother-Child death : 3 ವರ್ಷದ ಮಗುವಿನ ಕತ್ತು ಹಿಸುಕಿ ಬಾವಿಗೆ ಹಾರಿದ ತಾಯಿ; ಎಷ್ಟು ಕಷ್ಟ ಅನುಭವಿಸಿದ್ದಳೋ?