ಕರ್ನಾಟಕ
ಪಂಚಮಸಾಲಿ ಸಮುದಾಯಕ್ಕೆ 3ಬಿ ಮೀಸಲಾತಿ ಕೊಟ್ಟಿದ್ದೇ ಬಿಎಸ್ವೈ: ವಿಜಯೇಂದ್ರ ಪ್ರತ್ಯುತ್ತರ
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವಲ್ಲಿ ಯಡಿಯೂರಪ್ಪ ಅವರೇ ಅಡ್ಡಿಯಾಗಿದ್ದರು ಎಂದು ಸ್ವಪಕ್ಷೀಯ ಶಾಸಕ ಯತ್ನಾಳ್ ನೀಡಿರುವ ಹೇಳಿಕೆಗೆ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಒಬಿಸಿ 3ಬಿ ಮೀಸಲಾತಿ ಕೊಟ್ಟಿದ್ದೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಅವರು ಈ ಮೀಸಲಾತಿ ಪರವಾಗಿಯೇ ಇದ್ದಾರೆ. ಸದನದಲ್ಲೂ ಸಹ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ನಮ್ಮ ಮೇಲೆ ರಾಜಕೀಯ ಆರೋಪ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಪಂಚಮಸಾಲಿ ಸಮುದಾಯಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರೇ ಅಡ್ಡಿ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಯತ್ನಾಳ್ ಅವರಿಗೆ ನಮ್ಮ ಮೇಲೆ ಪ್ರೀತಿ ಜಾಸ್ತಿ. ಆಗಾಗ ನಮ್ಮ ಹೆಸರನ್ನು ಬಳಸುತ್ತಾರೆ. ಆದರೆ, ಅವರ ಆರೋಪದಲ್ಲಿ ಹುರುಳಿಲ್ಲ. ಯಡಿಯೂರಪ್ಪ ಅವರು ಪಂಚಮಸಾಲಿಗಳ ಪರವಾಗಿಯೇ ಇದ್ದಾರೆ. ಇದನ್ನು ಸದನದಲ್ಲೂ ಪ್ರಸ್ತಾಪ ಮಾಡುವ ಮೂಲಕ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪ ಅವರನ್ನು ರಾಜ್ಯದ ಜನ ಜಾತ್ಯತೀತವಾಗಿ ಒಪ್ಪಿದ್ದಾರೆ. ಅವರು ಎಲ್ಲ ಸಮುದಾಯಗಳ ಪರ ಕೆಲಸ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ವಿನಾಕಾರಣ ರಾಜಕಾರಣ ಮಾಡುತ್ತಿದೆ. ಆದರೆ ಈಗ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡುವ ಮೂಲಕ ನಮಗಷ್ಟೇ ಅಲ್ಲ, ಪಕ್ಷಕ್ಕೂ ಡ್ಯಾಮೇಜ್ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಅಸಮಾಧಾನ ಹೊರಹಾಕಿದರು.
ಇದು ಕಾಂಗ್ರೆಸ್ ಪಿತೂರಿ
ಯಡಿಯೂರಪ್ಪ ಅವರು ಸದಾ ಪಂಚಮಸಾಲಿ ಮೀಸಲಾತಿಯ ಪರವಾಗಿದ್ದವರು. ಇದು ಕಾಂಗ್ರೆಸ್ ಪಿತೂರಿಯಾಗಿದೆ. ಪಂಚಮಸಾಲಿ ಸಮುದಾಯದವರನ್ನು ಎತ್ತಿಕಟ್ಟುವ ಕೆಲಸವನ್ನು ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವನ್ನು ತಂದರು. ಲಿಂಗಾಯತ ಸಮುದಾಯಕ್ಕೆ ಒಳ್ಳೆಯದು ಮಾಡುವ ಉದ್ದೇಶ ಇದರ ಹಿಂದೆ ಇರಲಿಲ್ಲ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ತಂದರು ಎಂದು ಸುದ್ದಿಗಾರರಿಗೆ ವಿಜಯೇಂದ್ರ ಉತ್ತರಿಸಿದರು.
ಇದನ್ನೂ ಓದಿ | ಪಂಚಮಸಾಲಿ ಮೀಸಲಾತಿಗೆ ಬಿ.ಎಸ್. ಯಡಿಯೂರಪ್ಪ ಅಡ್ಡ ಬಂದಿದ್ದಾರ?: ಈ ಕುರಿತು ಸಚಿವ ನಿರಾಣಿ ಸ್ಪಷ್ಟನೆ
30 ಕೇಸ್ ಆಗಿದೆ, 31ನೇ ಕೇಸನ್ನೂ ಎದುರಿಸುತ್ತೇವೆ- ವಿಜಯೇಂದ್ರ
ಬಿಡಿಎ ವಸತಿ ಯೋಜನೆಯಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಕೇಳಿಬಂದಿರುವ ಅಕ್ರಮ ಆರೋಪದಲ್ಲಿ ಕೇಸ್ ವಿಚಾರದಲ್ಲಿ ಯಾವುದೇ ಹುರುಳಿಲ್ಲ. ರಾಜ್ಯದ ಇತಿಹಾಸದಲ್ಲಿ ಒಬ್ಬ ಮಾಜಿ ಮುಖ್ಯಮಂತ್ರಿ ವಿರುದ್ಧ 28, 30 ಕ್ರಿಮಿನಲ್ ಕೇಸ್ ಹಾಕಿದ ಉದಾಹರಣೆಯೇ ಇಲ್ಲ. ನಾವು ಬಹುತೇಕ ಎಲ್ಲ ಕೇಸ್ಗಳಲ್ಲಿ ಜಯಶಾಲಿ ಆಗಿದ್ದೇವೆ. ಈಗ ಮೂವತ್ತೊಂದನೇ ಕೇಸ್ ಅನ್ನೂ ಅಷ್ಟೇ ಸಮರ್ಥವಾಗಿ ಎದುರಿಸುತ್ತೇವೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರ ವಿರುದ್ಧದ ಲೋಕಾಯುಕ್ತ ತನಿಖೆಗೆ ಸುಪ್ರೀಂ ಕೋರ್ಟ್ ಸ್ಟೇ ಕೊಟ್ಟಿದೆ. ಯಾವ ಪುಣ್ಯಾತ್ಮ ಯಡಿಯೂರಪ್ಪ ಕುಟುಂಬದ ವಿರುದ್ಧ ಪಿತೂರಿ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡಿದ್ದರೋ ಅವರ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ. ಈಗಾಗಲೇ ಕೋರ್ಟ್ನಲ್ಲಿ ವಿಚಾರಣೆ ಆಗಿದೆ. ಪ್ರಕರಣ ತಾರ್ಕಿಕ ಹಂತಕ್ಕೆ ಬಂದಿದೆ ಎಂದು ತಿಳಿಸಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಬಿಡಿಎ ಇಲಾಖೆಯಲ್ಲಿ ಖಾಸಗಿ ಕಂಪನಿಗೆ ಗುತ್ತಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪ ಮಾಡೋರು ಯಾವ ಕಂಪನಿಗೆ ಗುತ್ತಿಗೆ ಕೊಟ್ಟಿದ್ದಾರೆ ಅಂತಲೂ ಹೇಳಬೇಕಲ್ಲವೇ? ಅದನ್ನು ಎಲ್ಲೂ ಅರ್ಜಿದಾರರು ಉಲ್ಲೇಖ ಮಾಡಿಲ್ಲ. ಯಡಿಯೂರಪ್ಪ ಅವರು ಬಿಡಿಎದಲ್ಲಿ ಯಾವ ಕಂಪನಿಗೂ ಗುತ್ತಿಗೆ ಕೊಟ್ಟಿಲ್ಲ. ಆ ಕಂಪನಿಯಿಂದ ಕೋಲ್ಕತ್ತಾ ಮೂಲದ ಐದು ಕಂಪನಿಗಳಿಗೆ 7.5 ಕೋಟಿ ರೂ. ಸಂದಾಯವಾಗಿದೆ ಎಂಬ ಆರೋಪವನ್ನು ಮಾಡಲಾಗಿದೆ. ಒಂದು ರೂಪಾಯಿಯೂ ಸಂದಾಯ ಆಗಿಲ್ಲ. ಇದೆಲ್ಲದರ ಬಗ್ಗೆ ನಾವು ಮಾನನಷ್ಟ ಪ್ರಕರಣದಲ್ಲಿ ಪ್ರಶ್ನಿಸಿದ್ದೇವೆ ಎಂದು ತಿಳಿಸಿದರು.
ಈಗಾಗಲೇ ಈ ಆರೋಪದ ಬಗ್ಗೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಪೊಲೀಸ್ ಠಾಣೆಯಲ್ಲಿ ತನಿಖೆ ಆಗಿದೆ. ಎಸಿಬಿಯಲ್ಲಿ ಇದೇ ಅಬ್ರಹಾಂ ದೂರು ಕೊಟ್ಟಿದ್ದರು. ರಾಜ್ಯಪಾಲರಿಗೆ ಅನುಮತಿ ಕೋರಿದಾಗ ಅವರು ತಿರಸ್ಕರಿಸಿದ್ದರು ಎಂದು ವಿಜಯೇಂದ್ರ ತಿಳಿಸಿದರು.
ಯಡಿಯೂರಪ್ಪ ಮೇಲಿನ ಆರೋಪದಲ್ಲಿ 0.1%ರಷ್ಟೂ ಸತ್ಯ ಇಲ್ಲ. ನಾವು ಹೆದರಿ ಓಡಿ ಹೋಗುವುದಿಲ್ಲ. ನ್ಯಾಯಾಲಯದ ಮೇಲೆ ನಮಗೆ ವಿಶ್ವಾಸ ಇದೆ. ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಬೇಕು ಎಂಬ ಕುತಂತ್ರ ಇದು. ವಿಜಯೇಂದ್ರ ರಾಜಕೀಯವಾಗಿ ಬೆಳೆಯಬಾರದು ಎಂದು ಕುತಂತ್ರ ಹೂಡಲಾಗಿದೆ. ಇದಕ್ಕೆ ತಕ್ಕ ಉತ್ತರವನ್ನು ಎಲ್ಲಿ ಕೊಡಬೇಕು? ಯಾರಿಗೆ ಕೊಡಬೇಕು ಎಂಬುದು ಗೊತ್ತಿದೆ. ಇಂತಹ ಸವಾಲು ಬಂದಾಗಲೇ ನಾವು ಬೆಳೆಯಲು ಸಾಧ್ಯವಾಗುವುದು. ನಮ್ಮ ರಾಜಕೀಯ ಬೆಳವಣಿಗೆ ಸಹಿಸದವರು ಇದನ್ನು ಮಾಡುತ್ತಿದ್ದಾರೆ. ವಿಜಯೇಂದ್ರ ಪಕ್ಷದಲ್ಲಿ ಎಷ್ಟು? ಯಾವ ರೀತಿ ಬೆಳೆಯಬೇಕು ಎಂದು ಕೇಂದ್ರ ನಾಯಕರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ನಾನು ಸಮುದಾಯವನ್ನು ಎಳೆದು ತರಲ್ಲ
ಕಾಂಗ್ರೆಸ್ ನಡೆಸುತ್ತಿರುವ ಪೇಸಿಎಂ ಅಭಿಯಾನ ಲಿಂಗಾಯತ ಸಿಎಂಗೆ ಅಪಮಾನ ಎಂಬ ಫೋಸ್ಟರ್ ವೈರಲ್ ಆಗುತ್ತಿರುವ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ, ನಾನು ಸಮುದಾಯವನ್ನು ಎಳೆದು ತರಲು ಇಷ್ಟಪಡುವುದಿಲ್ಲ. ಕಾಂಗ್ರೆಸ್ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಕಾಂಗ್ರೆಸ್ ಅಭಿಯಾನಕ್ಕೆ ಜನರೇ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತಾರೆ ಎಂದು ಹೇಳಿದರು.
ಯಡಿಯೂರಪ್ಪ ಅವರ ಮುಗಿಸಲು ಆಗಲ್ಲ
ಯಡಿಯೂರಪ್ಪ ಸಿಎಂ ಆಗುವುದನ್ನು ತಪ್ಪಿಸಲು ಯಾರಿಂದಲೂ ಆಗಲಿಲ್ಲ. ರಾಜಕೀಯ ವಿರೋಧಿಗಳು ಯಡಿಯೂರಪ್ಪ ರಾಜಕೀಯ ಭವಿಷ್ಯ ಮುಗಿಸಲು ಏನೇ ಷಡ್ಯಂತ್ರ ಮಾಡಿದರೂ ಆಗಲಿಲ್ಲ. ಮುಂದೆಯೂ ಅದರಲ್ಲಿ ಯಶಸ್ವಿ ಆಗಲಾರರು. ಅವರೂ ಮುನ್ನುಗ್ಗಿ ಪಕ್ಷ ಸಂಘಟನೆ ಮಾಡುತ್ತಾರೆ ಎಂದು ವಿಜಯೇಂದ್ರ ಹೇಳಿದರು.
ಇದನ್ನೂ ಓದಿ | STAY | ಯಡಿಯೂರಪ್ಪ ವಿರುದ್ಧದ ಲೋಕಾಯಕ್ತ ತನಿಖೆಗೆ ಸುಪ್ರೀಂ ಕೋರ್ಟ್ ತಡೆ, ಉಳಿದವರ ವಿಚಾರಣೆ ಅಬಾಧಿತ
ಕರ್ನಾಟಕ
CBSE Exam Results: ಸಿಬಿಎಸ್ಸಿಯಲ್ಲಿ ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಸಂಸ್ಥೆಯ ಅಮೋಘ ಸಾಧನೆ
CBSE Exam Results: ಸಿಬಿಎಸ್ಸಿ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿಗೆ ಟಾಪರ್ ಆಗಿ ಹೊರ ಹೊಮ್ಮಿರುವ ಎಸ್.ಎಸ್. ಆಕಾಂಕ್ಷ್ ಸೇರಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿದೆ.
ಬೆಂಗಳೂರು: ಸಿಬಿಎಸ್ಸಿ ದ್ವಿತೀಯ ಪಿಯುಸಿ ಪರೀಕ್ಷೆಯ (CBSE Exam Results) ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿಗೆ ಟಾಪರ್ ಆಗಿ ಹೊರ ಹೊಮ್ಮಿರುವ ಎಸ್.ಎಸ್. ಆಕಾಂಕ್ಷ್ ಸೇರಿ ಉತ್ತಮ ಸಾಮರ್ಥ್ಯ ತೋರಿದ ಪ್ರತಿಭಾವಂತ ವಿದ್ಯಾರ್ಥಿಗಳು, ಶಿಕ್ಷಕರನ್ನು ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಶಾಲೆಯಿಂದ ಸನ್ಮಾನಿಸಲಾಯಿತು.
ನಗರದಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ವಿಜಯ್ ಕಿರಣ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ಎನ್. ವಿಜಯ ಕುಮಾರ್ ಮಾತನಾಡಿ, ಎಲ್ಲಾ ವಿಭಾಗಗಳಲ್ಲೂ ವಿದ್ಯಾರ್ಥಿಗಳ ಸಾಧನೆ ಗಣನೀಯವಾಗಿ ಹೆಚ್ಚಿದ್ದು, ವಿದ್ಯಾರ್ಥಿಗಳನ್ನು ಶಿಕ್ಷಕರು ಅತ್ಯುತ್ತಮ ರೀತಿಯಲ್ಲಿ ಸಿದ್ಧಗೊಳಿಸುತ್ತಿದ್ದಾರೆ. ಸಿಬಿಎಸ್ಸಿ ವಿದ್ಯಾರ್ಥಿಗಳಿಗೆ ಬಹುಬೇಗ ತರಗತಿಗಳನ್ನು ಆರಂಭಿಸಿ ಡಿಸೆಂಬರ್ ವೇಳೆಗೆ ಪಠ್ಯ ಕ್ರಮ ಪೂರ್ಣಗೊಳಿಸುತ್ತೇವೆ. ಆ ನಂತರ ಪರೀಕ್ಷೆಗೆ ಸಜ್ಜುಗೊಳಿಸುತ್ತೇವೆ ಎಂದರು.
ಶಿಕ್ಷಣದ ಇತ್ತೀಚಿನ ಪರಿಕಲ್ಪನೆ, ಆಧುನಿಕ ತಂತ್ರಜ್ಞಾನ ಕುರಿತು ಶಿಕ್ಷಣಕರಿಗೆ ವ್ಯಾಪಕ ತರಬೇತಿ ನೀಡುತ್ತಿದ್ದು, ಇದಕ್ಕಾಗಿಯೇ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಸುಸಜ್ಜಿತ ತರಬೇತಿ ಕೇಂದ್ರ ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಇದನ್ನೂ ಓದಿ | Education News : ಮೇ 29 ರಿಂದ ನೂತನ ಶೈಕ್ಷಣಿಕ ವರ್ಷ ಆರಂಭ; ಮೇ 31 ರಿಂದ ತರಗತಿಗಳು ಶುರು
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಕಿರಣ್, ಮುಖ್ಯ ಕಾರ್ಯಾಚರಣೆ ಅಧಿಕಾರಿ ಸುನಾಲಿನಿ ಬೆಂಜಮಿನ್ ಮತ್ತಿತರರು ಭಾಗವಹಿಸಿದ್ದರು.
ಕರ್ನಾಟಕ
Karnataka Cabinet Expansion: ಸರ್ಕಾರ ಟೇಕಾಫ್ ಆದ ಬೆನ್ನಲ್ಲೇ ಅಸಮಾಧಾನದ ಹೊಗೆ; ಖಾತೆ ಬದಲಿಸಿದ ಸಿದ್ದು
Karnataka Cabinet Expansion: ಸಿದ್ದರಾಮಯ್ಯ ಅವರು ಸಿಎಂ ಆಗಿ, ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಕಾಂಗ್ರೆಸ್ ಸರ್ಕಾರ ಟೇಕಾಫ್ ಆಯಿತು ಎನ್ನುವಷ್ಟರಲ್ಲಿಯೇ ಸಚಿವರಿಗೆ ನೀಡಲಾದ ಖಾತೆ ಬಗ್ಗೆ ಅಸಮಾಧಾನ ಶುರುವಾಗಿದೆ. ಹಾಗಾಗಿ, ಕೆಲ ಖಾತೆಗಳನ್ನು ಸಿದ್ದರಾಮಯ್ಯ ಅವರು ಬದಲಾಯಿಸಿದ್ದಾರೆ.
ಬೆಂಗಳೂರು: ‘ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ’ ಎಂಬ ಮಾತಿನಂತೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದು, ಕಾಂಗ್ರೆಸ್ ಗೆಲುವು ಸಾಧಿಸಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ, ಸಚಿವ ಸಂಪುಟ ಸಭೆ ವಿಸ್ತರಣೆಯಾದರೂ ಪಕ್ಷದಲ್ಲಿ ಆಂತರಿಕ ಗೊಂದಲ, ಅಸಮಾಧಾನ ಮಾತ್ರ ನಿಂತಿಲ್ಲ. ಖಾತೆ ಹಂಚಿಕೆ ಬಳಿಕವೂ ಸಚಿವರ ಮಧ್ಯೆಯೇ ಅಸಮಾಧಾನದ ಹೊಗೆ ಜಾಸ್ತಿಯಾದ ಕಾರಣ ರಾತ್ರೋರಾತ್ರಿ ಸಿದ್ದರಾಮಯ್ಯ ಅವರು ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ.
ಹೌದು, ಎಂ.ಸಿ.ಸುಧಾಕರ್ ಅವರಿಗೆ ನೀಡಿದ್ದ ವೈದ್ಯಕೀಯ ಶಿಕ್ಷಣ ಶರಣ ಪ್ರಕಾಶ್ ಪಾಟೀಲ್ ಅವರಿಗೆ ನೀಡಲಾಗಿದೆ. ಇನ್ನು ಶರಣ ಪ್ರಕಾಶ್ ಪಾಟೀಲ್ ಅವರಿಗೆ ನೀಡಿದ್ದ ಉನ್ನತ ಶಿಕ್ಷಣ ಖಾತೆಯನ್ನು ಎಂ.ಸಿ.ಸುಧಾಕರ್ ಅವರಿಗೆ ನೀಡಿ ಸಮಾಧಾನ ಮಾಡಿದ್ದಾರೆ. ಹಾಗೆಯೇ, ಪ್ರಿಯಾಂಕ್ ಖರ್ಗೆ ಅವರಿಗೆ ಪಂಚಾಯತ್ ರಾಜ್ ಜತೆಗೆ ಐಟಿಬಿಟಿ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಕಾನೂನು ಸಂಸದೀಯ ಜತೆಗೆ ಪ್ರವಾಸೋದ್ಯಮ ಖಾತೆಯನ್ನು ಎಚ್.ಕೆ.ಪಾಟೀಲ್ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಬೋಸರಾಜು ಅವರಿಗೆ ಸಣ್ಣ ನೀರಾವರಿ ಖಾತೆ ಜತೆಗೆ ವೈಜ್ಞಾನ ಮತ್ತು ತಂತ್ರಜ್ಞಾನ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಮತ್ತೊಂದೆಡೆ, ಡಾ.ಜಿ.ಪರಮೇಶ್ವರ್ ಅವರಿಗೆ ಗೃಹ ಖಾತೆಯನ್ನು ನಿರ್ವಹಣೆ ಮಾಡಲು ಇಷ್ಟವಿಲ್ಲ. ರಾಮಲಿಂಗಾರೆಡ್ಡಿ ಅವರಿಗೆ ಸಾರಿಗೆ ಖಾತೆ ಸುತಾರಾಂ ಬೇಕಾಗಿಲ್ಲ. ಇವರಿಬ್ಬರು ಕೂಡ ಖಾತೆ ಬದಲಾವಣೆಗೆ ಪಟ್ಟು ಹಿಡಿದಿರುವುದು ಸಿದ್ದರಾಮಯ್ಯ ಅವರಿಗೆ ತಲೆನೋವು ತಂದಿದೆ. ಹಾಗಾಗಿಯೇ, ಸಚಿವರು ಹಾಗೂ ಅವರ ಖಾತೆ ಕುರಿತ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲು ವಿಳಂಬವಾಗಿದೆ ಎಂದು ತಿಳಿದುಬಂದಿದೆ.
ಇಲ್ಲಿದೆ ಸಚಿವರು ಹಾಗೂ ಅವರ ಖಾತೆಗಳ ಅಂತಿಮ ಪಟ್ಟಿ
ಮೂಲ-ವಲಸಿಗ ಜಗಳ
ಸಚಿವ ಸಂಪುಟ ವಿಸ್ತರಣೆ ನಂತರ ಸಚಿವರಲ್ಲಿ ಅಸಮಾಧಾನದ ಜತೆಗೆ ಕಾಂಗ್ರೆಸ್ನಲ್ಲಿ ಮತ್ತೆ ಮೂಲ ಹಾಗೂ ವಲಸಿಗ ಜಗಳ ಆರಂಭವಾಗಿದೆ. ಅತ್ಯಂತ ಹಿರಿಯ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದರೂ ಸಚಿವ ಸ್ಥಾನ ಸಿಗದೇ ಇರುವ ಬಗ್ಗೆ ಬಿ.ಕೆ. ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ʼಹೊರಗಿನಿಂದ ಬಂದʼ ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.
ಇದನ್ನೂ ಓದಿ: Karnataka Cabinet expansion: ಸಂಪುಟದಲ್ಲಿನ್ನು ಸೀಟಿಲ್ಲ; ನಾಯಕರ, ಬೆಂಬಲಿಗರ ಆಕ್ರೋಶಕ್ಕೆ ಬೆಲೆ ಇಲ್ಲ
ಸಚಿವ ಸ್ಥಾನ ಮಿಸ್ ಆದ ಕುರಿತು ಮಾತನಾಡಿದ ಹರಿಪ್ರಸಾದ್, ಸಿಎಂ ಏನು ಬೇಕೋ ಹಾಗೆ ಮಾಡಿಕೊಂಡಿದ್ದಾರೆ. ಸಭಾ ನಾಯಕನಿಗೆ ಸಚಿವ ಸ್ಥಾನ ನೀಡುವ ಪದ್ಧತಿ, ಸಂಪ್ರದಾಯ ಇತ್ತು. ಸಿಎಂ ಅದನ್ನು ಈಗ ಬದಲಾಯಿಸಿದ್ದಾರೆ. ಅಷ್ಟಕ್ಕೂ ನನ್ನನ್ನು ಮಂತ್ರಿ ಮಾಡಿ ಎಂದು ಯಾರಲ್ಲೂ ಕೇಳಿಕೊಂಡಿರಲಿಲ್ಲ. ಎಲ್ಲಿಯವರೆಗೂ ಹೇಳುತ್ತಾರೋ ಅಲ್ಲಿಯವರೆಗೂ ನಾನು ಇರುತ್ತೇನೆ ಎಂದರು. ಮತ್ತೊಂದೆಡೆ, ಖಾತೆ ಸಿಗದ ಕಾರಣ ಟಿ.ಬಿ.ಜಯಚಂದ್ರ ಅವರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ
DA Hike: ಶೇ.4 ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ; ಸಿಎಂ ಸಿದ್ದರಾಮಯ್ಯಗೆ ಸರ್ಕಾರಿ ನೌಕರರ ಅಭಿನಂದನೆ
DA Hike: ಶೇ.4 ತುಟ್ಟಿಭತ್ಯೆ ಹೆಚ್ಚಳ ಮಾಡಲು ಕಡತ ಸಲ್ಲಿಕೆಯಾದ 24 ಗಂಟೆಯೊಳಗೆ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸರ್ಕಾರಿ ನೌಕರರು ಅಭಿನಂದನೆ ಸಲ್ಲಿಸಿದ್ದಾರೆ.
ಬೆಂಗಳೂರು: ಶೇ.4 ತುಟ್ಟಿಭತ್ಯೆ (DA Hike) ಹೆಚ್ಚಳ ಮಾಡಲು ಕಡತ ಸಲ್ಲಿಕೆಯಾದ 24 ಗಂಟೆಯೊಳಗೆ ಅನುಮೋದನೆ ನೀಡಿ ಆರ್ಥಿಕ ಇಲಾಖೆಗೆ ರವಾನಿಸಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯ ಸರ್ಕಾರಿ ನೌಕರರು ಮತ್ತು ಶಿಕ್ಷಕರ ಸಂಘದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಸೇರಿ ವಿವಿಧ ಪದಾಧಿಕಾರಿಗಳು, ನಗರದಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ | 7th Pay Commission : ವೇತನ ಆಯೋಗದ ಮಹತ್ವದ ಸಭೆ; ನೌಕರರ ಬೇಡಿಕೆ ಮಂಡಿಸಿದ ರಾಜ್ಯ ಸರ್ಕಾರಿ ನೌಕರರ ಸಂಘ
ಇದೇ ವೇಳೆ ಶೇ.4 ತುಟ್ಟಿಭತ್ಯೆ ಹೆಚ್ಚಳ ಮಾಡಲು ಆರ್ಥಿಕ ಇಲಾಖೆಯಿಂದ ಸೋಮವಾರ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳು ಸಿಎಂಗೆ ಮನವಿ ಮಾಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಾಗೆಯೇ ರಾಜ್ಯದ ಶಿಕ್ಷಕರ ಜ್ವಲಂತ ಸಮಸ್ಯೆಗಳಾದ ವರ್ಗಾವಣೆ ಇನ್ನಿತರ ಸಮಸ್ಯೆಗಳ ಬಗ್ಗೆ ಕೂಡ ಪದಾಧಿಕಾರಿಗಳು ಸಿಎಂ ಗಮನಕ್ಕೆ ತಂದಿದ್ದಾರೆ.
ಕರ್ನಾಟಕ
New Parliament Building: ಸಂಸತ್ ಭವನ ಉದ್ಘಾಟನೆ ಬಹಿಷ್ಕಾರ ನಾಚಿಕೆಗೇಡಿನ ಸಂಗತಿ: ಎನ್. ರವಿಕುಮಾರ್
New Parliament Building: ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭ ಬಹಿಷ್ಕರಿಸಿರುವ ಮೂಲಕ ಕಾಂಗ್ರೆಸ್ ಸೇರಿ ಕೆಲ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ರಾಜಕೀಯ ದ್ವೇಷ ಸಾಧಿಸುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ.
ಬೆಂಗಳೂರು: ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಮೇ 28ರಂದು ನವದೆಹಲಿಯಲ್ಲಿ ನೂತನ ಸಂಸತ್ ಭವನವನ್ನು ಕೇಂದ್ರ ಸರ್ಕಾರವು ಉದ್ಘಾಟನೆ (New Parliament Building) ಮಾಡುತ್ತಿದೆ. ಆದರೆ, ರಾಷ್ಟ್ರಪತಿಯವರನ್ನು ಆಹ್ವಾನಿಸಿಲ್ಲವೆಂದು ಆರೋಪ ಮಾಡುತ್ತಾ ಕಾಂಗ್ರೆಸ್ ಸೇರಿ ಕೆಲ ವಿರೋಧ ಪಕ್ಷಗಳು ರಾಜಕೀಯ ದ್ವೇಷ ಸಾಧಿಸುತ್ತಿರುವುದು ಸರಿಯಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್ಸಿ ಎನ್.ರವಿಕುಮಾರ್ ತಿಳಿಸಿದ್ದಾರೆ.
ಅಲ್ಲದೇ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ ಅವರ ಜನ್ಮದಿನದಂದು ನೂತನ ಸಂಸತ್ ಉದ್ಘಾಟನೆಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸ್ವಾತಂತ್ರ್ಯ ನಂತರ ಭಾರತದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಹಲವು ನಾಯಕರು ಸಂಸತ್ತಿನಲ್ಲಿ ಕುಳಿತು ದೇಶವನ್ನು ಮುನ್ನಡೆಸಬೇಕಿತ್ತು, ವಿಪರ್ಯಾಸವೆಂದರೆ ನೆಹರು ಕುಟುಂಬಸ್ಥರು ಇಡೀ ದೇಶವನ್ನೇ ತಮ್ಮ ಕುಟುಂಬದ ಸುಪರ್ದಿಗೆ ನೀಡುವ ಮೂಲಕ ಸಂಸತ್ತನ್ನು ತಮ್ಮ ಕುಟುಂಬಕ್ಕೆ ಸೀಮಿತ ಮಾಡಿಬಿಟ್ಟರು ಎಂದು ಕಿಡಿ ಕಾರಿದ್ದಾರೆ.
ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆಯ ಬಗ್ಗೆ ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುವ ಕಾಂಗ್ರೆಸ್, ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುತ್ತಿದೆ. ನೂತನ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿಯವರನ್ನು ಆಹ್ವಾನಿಸಿಲ್ಲವೆಂದು ಆರೋಪ ಮಾಡುತ್ತಾ ರಾಜಕೀಯ ದ್ವೇಷ ಸಾಧಿಸುತ್ತಿರುವುದು ಸರಿಯಲ್ಲ. ಈ ಹಿಂದೆ 1987ರಲ್ಲಿ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸಂಸತ್ತಿನ ನೂತನ ಗ್ರಂಥಾಲಯ ಉದ್ಘಾಟನೆಯನ್ನು ಅವರೇ ಮಾಡಿದ್ದರು, ಅಂದಿನ ರಾಷ್ಟ್ರಪತಿಗಳಿಗೆ ಕೂಡ ಆಹ್ವಾನವಿರಲಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | New Parliament Building: ರಾಜಸ್ಥಾನದ ಶಿಲೆ, ಮಹಾರಾಷ್ಟ್ರದ ತೇಗದ ಮರ; ವೈವಿಧ್ಯತೆಯಲ್ಲಿ ಏಕತೆಯ ಸಂಕೇತ ಈ ಸಂಸತ್ ಭವನ
ಇನ್ನು 2010ರಲ್ಲಿ ಸೋನಿಯಾ ಗಾಂಧಿ ಅವರು ‘ಅಟಲ್ ಟನೆಲ್’ಗೆ ಭೂಮಿ ಪೂಜೆ ಮಾಡಿದ್ದರು. ಕೇಂದ್ರ ಸರ್ಕಾರದ ಯೋಜನೆಯೊಂದಕ್ಕೆ ಭೂಮಿ ಪೂಜೆ ಮಾಡಲು ಸೋನಿಯಾ ಗಾಂಧಿ ಯಾಕೆ ಬರಬೇಕಿತ್ತು? 2009ರಲ್ಲಿ ಮುಂಬೈ ನಗರದ ‘ಬಾಂದ್ರಾ ಮತ್ತು ವರ್ಲಿ’ ಸೀ ಲಿಂಕ್ ಉದ್ಘಾಟನೆಯನ್ನು ಸೋನಿಯಾ ಗಾಂಧಿ ಅವರು ಮಾಡಿದ್ದರು. ತನ್ನ ಅಧಿಕಾರಾವಧಿಯಲ್ಲಿ ಜಾರಿಗೆ ತಂದಿರುವ ಅಷ್ಟೂ ಯೋಜನೆಗಳಿಗೆ ತಮ್ಮ ಕುಟುಂಬ ಸದಸ್ಯರ ಹೆಸರನ್ನೇ ಬಳಸಿಕೊಂಡಿರುವ ನೆಹರು ಕುಟುಂಬದ ಕುಡಿಗಳು ಈಗ ಸೆಂಟ್ರಲ್ ವಿಸ್ಟಾ ಬಗ್ಗೆ ಈಗ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಅಲ್ಲದೇ ಪಕ್ಕದ ರಾಜ್ಯವಾದ ತೆಲಂಗಾಣದಲ್ಲಿ ಸಿಎಂ ಚಂದ್ರಶೇಖರ್ ರಾವ್ ಅವರು ಹೈದರಾಬಾದ್ನಲ್ಲಿ ನೂತನ ಸಚಿವಾಲಯ ಉದ್ಘಾಟನೆಗೆ ತೆಲಂಗಾಣದ ‘ರಾಜ್ಯಪಾಲ’ರನ್ನೂ ಆಹ್ವಾನಿಸಿರಲಿಲ್ಲ, ಆದರೆ ಈಗ ಸೆಂಟ್ರಲ್ ವಿಸ್ಟಾ ಉದ್ಘಾಟನೆಗೆ ರಾಷ್ಟ್ರಪತಿಗಳು ಬರದಿರುವುದರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
1947 ರಲ್ಲಿ ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರಿಸಿದ ಸಂದರ್ಭದಲ್ಲಿ ಮೊದಲ ಪ್ರಧಾನಮಂತ್ರಿಯಾಗಿದ್ದ ನೆಹರು ಅವರಿಗೆ ನೀಡಿದ್ದ ತಮಿಳುನಾಡಿನ ‘ಸೆಂಗೋಲ್’ ಅನ್ನು ನೂತನ ಸಂಸತ್ತಿನಲ್ಲಿ ಸ್ಪೀಕರ್ ಕುರ್ಚಿ ಬಳಿ ಇಡುತ್ತಿರುವುದು ಮತ್ತೊಂದು ವಿಶೇಷ. ಬ್ರಿಟಿಷರಿಂದ ಅಧಿಕಾರ ಹಸ್ತಾಂತರವಾಗಿದ್ದರೂ ಅವರು ಕಟ್ಟಿಸಿದ್ದ ಸಂಸತ್ತಿನಿಂದ ನಾವು ಹೊರಬಂದಿರಲಿಲ್ಲ. ಬ್ರಿಟಿಷರ ಮನಸ್ಥಿತಿಯನ್ನೇ ತೋರುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಭಾರತೀಯರೇ ನಿರ್ಮಾಣ ಮಾಡಿರುವ ನೂತನ ಸಂಸತ್ ಕಟ್ಟಡ ಇಷ್ಟವಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ | New Parliament Building: ಸೆಂಗೋಲ್ ಎಂಬ ರಾಜದಂಡ ಸ್ವಾತಂತ್ರ್ಯದ ಸಂಕೇತ; ಪ್ರತಿಷ್ಠಾಪನೆಗೆ ಕಾರಣ ತಿಳಿಸಿದ ಮೋದಿ
ನೂತನ ಸಂಸತ್ ಭವನದ ಉದ್ಘಟನಾ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಭಾಗವಹಿಸುತ್ತಿರುವುದು ಸಂತೋಷದ ಸಂಗತಿ. ಆದರೆ ಇಲ್ಲಸಲ್ಲದ ನೆಪವೊಡ್ಡಿ ಸೆಂಟ್ರಲ್ ವಿಸ್ಟಾ ಉದ್ಘಾಟನೆಯ ಕಾರ್ಯಕ್ರಮವನ್ನು ಕೆಲ ವಿರೋಧ ಪಕ್ಷಗಳು ಬಹಿಷ್ಕರಿಸುವುದಾಗಿ ಹೇಳಿರುವುದು ಸರಿಯಲ್ಲ. ಸಂಸತ್ ಭವನ ಕೇವಲ ಕಟ್ಟಡವಲ್ಲಿ ಅದು ದೇಶದ ಪ್ರಜಾಪ್ರಭುತ್ವ ಎಂಬುದನ್ನು ವಿರೋಧಪಕ್ಷಗಳು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
-
ಕರ್ನಾಟಕ16 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ19 hours ago
Karnataka Cabinet Expansion Live : 34 ಸಚಿವರಿಗೆ ಖಾತೆ ಹಂಚಿಕೆ; ಬಯಸಿದ ಖಾತೆ ಪಡೆದ ಡಿ ಕೆ ಶಿವಕುಮಾರ್
-
ಕರ್ನಾಟಕ16 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ15 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ10 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕಿರುತೆರೆ17 hours ago
Weekend With Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಅತಿಥಿಗಳು ಇವರು!
-
ಕ್ರಿಕೆಟ್19 hours ago
IPL 2023: ಶತಕ ಬಾರಿಸಿ ಸೆಹವಾಗ್ ದಾಖಲೆ ಮುರಿದ ಶುಭಮನ್ ಗಿಲ್
-
ಕರ್ನಾಟಕ7 hours ago
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ