ಕರ್ನಾಟಕ
Barisu Kannada Dindimava: ಕರ್ನಾಟಕದ ಹೊರತಾಗಿ ಭಾರತದ ವೈವಿಧ್ಯತೆ ಅಪೂರ್ಣ, ನರೇಂದ್ರ ಮೋದಿ ಶ್ಲಾಘನೆ
Barisu Kannada Dindimava: ಬಾರಿಸು ಕನ್ನಡ ಡಿಂಡಿಮವ ಸಾಂಸ್ಕೃತಿಕ ಸಂಭ್ರಮಕ್ಕೆ ಚಾಲನೆ ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ನವದೆಹಲಿ: “ಭಾರತವು ಕಳೆದ ೭೫ ವರ್ಷಗಳಲ್ಲಿ ಏಳಿಗೆಯತ್ತ ಮುಖ ಮಾಡಿದೆ. ಕರ್ನಾಟಕ ಸಂಘಕ್ಕೂ ೭೫ ವರ್ಷ ತುಂಬುತ್ತಿದ್ದು, ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ದೇಶದ ಏಳಿಗೆಗೆ ಕರ್ನಾಟಕದ ಜನರೂ ಮತ್ತಷ್ಟು ಕೊಡುಗೆ ನೀಡಲಿ. ರಾಮಾಯಣದ ಕಾಲದಿಂದಲೂ ಹನುಮಂತನ ರೂಪದಲ್ಲಿ ದೇಶಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಹನುಮಂತನ ಹೊರತಾಗಿ ರಾಮಾಯಣ ಪೂರ್ಣವಾಗುವುದಿಲ್ಲ. ಕರ್ನಾಟಕದ ಹೊರತಾಗಿ ಭಾರತದ ವೈವಿಧ್ಯತೆ ಪೂರ್ಣವಾಗುವುದಿಲ್ಲ” ಎಂದು (Barisu Kannada Dindimava) ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದೆಹಲಿಯ ಕರ್ನಾಟಕ ಸಂಘದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದೆಹಲಿಯ ತಾಲಕಟೋರಾ ಸ್ಟೇಡಿಯಂನಲ್ಲಿ ಆಯೋಜಿಸಿರುವ ‘ಬಾರಿಸುವ ಕನ್ನಡ ಡಿಂಡಿಮವ ಸಾಂಸ್ಕೃತಿಕ ಸಂಭ್ರಮ’ಕ್ಕೆ (Barisu Kannada Dindimava) ಮೋದಿ ಅವರು ಚಾಲನೆ ನೀಡಿದ ಬಳಿಕ ಮಾತನಾಡಿದರು.
“ದೇವರ ದಾಸೀಮಯ್ಯ, ಬಸವಣ್ಣ, ಡೋಹರ ಕಕ್ಕಯ್ಯ, ಮಾದಾರ ಚನ್ನಯ್ಯ, ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು ಅನಾದಿ ಕಾಲದಲ್ಲಿ ಭಾರತಕ್ಕೆ ಪ್ರೇರಣೆ ನೀಡಿದ್ದಾರೆ. ಹಾಗೆಯೇ, ಆಧುನಿಕ ಕಾಲದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಸರ್ ಎಂ.ವಿಶ್ವೇಶ್ವರಯ್ಯ, ಕುವೆಂಪು ಅವರು ದೇಶಕ್ಕೆ ಸ್ಫೂರ್ತಿಯಾಗಿದ್ದಾರೆ” ಎಂದು ಸ್ಮರಿಸಿದರು.
ಕರ್ನಾಟಕದ ಕುರಿತು ಮೋದಿ ಮಾತು
ಕುವೆಂಪು ಅವರನ್ನು ಸ್ಮರಿಸಿದ ಪ್ರಧಾನಿ
ರಾಷ್ಟ್ರಕವಿ ಕುವೆಂಪು ಅವರನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದರು. “ಕುವೆಂಪು ಅವರು ಕರ್ನಾಟಕದ ನಾಡಗೀತೆ ರಚಿಸಿದರು. ಭಾರತ ಮಾತೆಯ ಪುತ್ರಿ ಕರ್ನಾಟಕ ಎಂದು ಗೀತೆ ರಚಿಸಿದರು. ಇದು ಅವರ ಏಕ ಭಾರತ್, ಶ್ರೇಷ್ಠ ಭಾರತ್ ಕಲ್ಪನೆಯ ದ್ಯೋತಕವಾಗಿದೆ. ಬಸವಣ್ಣನವರು ಜಗತ್ತಿಗೆ ಜ್ಞಾನದ ಬೆಳಕು ನೀಡಿದರು. ಅವರ ಮೂರ್ತಿಯನ್ನು ಲಂಡನ್ನಲ್ಲಿ ಪ್ರತಿಷ್ಠಾಪಿಸಲಾಗಿದೆ. ಕರ್ನಾಟಕವು ತಂತ್ರಜ್ಞಾನ, ಸಂಸ್ಕೃತಿ, ಕೃತಕ ಬುದ್ಧಿಮತ್ತೆಯ ತವರೂರಾಗಿದೆ” ಎಂದು ಬಣ್ಣಿಸಿದರು.
“ಬೆಂಗಳೂರಿನಲ್ಲಿ ಜಿ-೨೦ ಸಭೆ ನಡೆಯುತ್ತಿದೆ. ಸಂಪ್ರದಾಯ ಹಾಗೂ ತಂತ್ರಜ್ಞಾನವು ಭಾರತದ ಏಳಿಗೆಯ ಸಂಕೇತವಾಗಿದೆ. ಇಂತಹ ಔನ್ನತ್ಯಪೂರ್ಣ ವಿಚಾರಗಳೊಂದಿಗೆ ಭಾರತ ಮುನ್ನುಗ್ಗುತ್ತಿದೆ. ಭಾರತದಲ್ಲಿ ಪ್ರಾಚೀನ ದೇವಾಲಯ (ರಾಮಮಂದಿರ)ವನ್ನೂ ಸ್ಥಾಪಿಸಲಾಗುತ್ತಿದೆ. ಹಾಗೆಯೇ, ಡಿಜಿಟಲ್ ಪೇಮೆಂಟ್ ವ್ಯವಸ್ಥೆಯು ಭಾರತವು ಜಗತ್ತಿಗೆ ಮಾದರಿಯಾಗಿದೆ” ಎಂದರು.
ಎಲ್ಲಾದರೂ ಇರು, ಎಂತಾದರೂ ಇರು ಎಂದ ಮೋದಿ
ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಸಾಲುಗಳನ್ನು ನರೇಂದ್ರ ಮೋದಿ ನೆನೆದರು. “ದೇಶವು ಸ್ವಾತಂತ್ರ್ಯ ಗಳಿಸಿ ೭೫ನೇ ವರ್ಷದ ಸಂಭ್ರಮ ಆಚರಿಸುತ್ತಿರುವ ವೇಳೆಯೇ ದೆಹಲಿ ಕರ್ನಾಟಕ ಸಂಘವೂ ಅಮೃತ ಮಹೋತ್ಸವ ಆಚರಿಸುತ್ತಿರುವುದು ಸಂತಸದ ವಿಷಯ” ಎಂದು ಹೇಳಿದರು.
“ನಾವು ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕಕ್ಕೆ ವಾರ್ಷಿಕ ೩೦ ಸಾವಿರ ಕೋಟಿ ರೂ. ನೀಡಲಾಗುತ್ತಿದೆ. ಕರ್ನಾಟಕದ ರೈಲು ವ್ಯವಸ್ಥೆಗೆ ೨೦೦೯ರಿಂದ ೨೦೧೪ರ ಐದು ವರ್ಷದಲ್ಲಿ ಕರ್ನಾಟಕಕ್ಕೆ ೪ ಸಾವಿರ ಕೋಟಿ ರೂ. ನೀಡಲಾಗಿತ್ತು. ಆದರೆ, ನಾವು ಇದೇ ವರ್ಷದ ಬಜೆಟ್ನಲ್ಲಿ ೭ ಸಾವಿರ ಕೋಟಿ ರೂ. ಕರ್ನಾಟಕಕ್ಕೆ ನೀಡಿದ್ದೇವೆ. ಆ ಮೂಲಕ ಕರ್ನಾಟಕದ ಏಳಿಗೆಗೆ ಕೇಂದ್ರ ಸರ್ಕಾರ ಕೊಡುಗೆ ನೀಡಿದೆ” ಎಂದು ಮಾಹಿತಿ ನೀಡಿದರು.
“ದೆಹಲಿಯಲ್ಲಿರುವ ಕರ್ನಾಟಕ ಸಂಘವು ಮುಂದಿನ ೨೫ ವರ್ಷಗಳವರೆಗೆ ಮತ್ತಷ್ಟು ಉತ್ಸಾಹದಿಂದ ಕಾರ್ಯನಿರ್ವಹಿಸಲಿ. ಕನ್ನಡ ಭಾಷೆಯು ತುಂಬ ಸುಂದರವಾಗಿದೆ, ಸಾಹಿತ್ಯವು ತುಂಬ ಸಮೃದ್ಧವಾಗಿದೆ. ಇಂದು ಕನ್ನಡದಲ್ಲಿ ಯಾವುದೇ ಪುಸ್ತಕ ಪ್ರಕಟವಾಗಲಿ, ಅದು ಕೆಲವೇ ದಿನಗಳಲ್ಲಿ ಮರುಮುದ್ರಣವಾಗುತ್ತದೆ. ಇದು ಕನ್ನಡ ಭಾಷೆಯ ಶಕ್ತಿ” ಎಂದು ಹೇಳಿದರು.
ಕನ್ನಡ ಕಲಿಯಿರಿ, ಕನ್ನಡ ಕಲಿಸಿರಿ: ಮೋದಿ ಕರೆ
“ದೆಹಲಿಯಲ್ಲಿರುವ ಕನ್ನಡಿಗರ ಮಕ್ಕಳು ಕನ್ನಡದಲ್ಲಿಯೇ ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಇದು ಕನ್ನಡಿಗರ ಜತೆ ಬೇರೆಯವರೂ ಕನ್ನಡ ಕಲಿಯಲು ನೆರವಾಗುತ್ತದೆ. ಕನ್ನಡ ಕಲಿಯಿರಿ, ಕನ್ನಡ ಕಲಿಸಿರಿ ಎಂಬ ಧ್ಯೇಯ ನಿಮ್ಮದಾಗಲಿ. ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸಂತಸ ತಂದಿದೆ. ಭರತನಾಟ್ಯದಿಂದ ಯಕ್ಷಗಾನದವರೆಗೆ ಕರ್ನಾಟಕದ ಕಲಾವಿದರು ಕಲೆಯನ್ನು ಬೆಳಗಿದ್ದಾರೆ. ಇದೇ ರೀತಿ ದೆಹಲಿ ಕರ್ನಾಟಕ ಸಂಘವು ಮತ್ತಷ್ಟು ಮಹೋನ್ನತ ಕಾರ್ಯಕ್ರಮಗಳನ್ನು ಆಯೋಜಿಸಲಿ. ದೆಹಲಿ ಕನ್ನಡಿಗರು ಕನ್ನಡತನ, ಕರ್ನಾಟಕದ ವೈಭವವನ್ನು ಮೆರೆಯಲಿ” ಎಂದು ಮೋದಿ ಹೇಳಿದರು.
ಕರ್ನಾಟಕವು ಭಾರತ ಸಿರಿಧಾನ್ಯಗಳ ಪ್ರಮುಖ ಕೇಂದ್ರ: ಮೋದಿ
“ಸಿರಿಧಾನ್ಯ ವರ್ಷವನ್ನು ಆಚರಿಸಲಾಗುತ್ತಿದೆ. ಭಾರತದಲ್ಲಿ ಕರ್ನಾಟಕವು ಸಿರಿಧಾನ್ಯದ ಪ್ರಮುಖ ಕೇಂದ್ರವಾಗಿದೆ. ಅನ್ನ, ರಾಗಿಯ ನಾಡಾಗಿ ಕರ್ನಾಟಕವು ಸಿರಿಧಾನ್ಯಗಳ ವಿಷಯದಲ್ಲಿ ಸಮೃದ್ಧವಾಗಿದೆ. ಸಿರಿಧಾನ್ಯಗಳಿಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿರುವುದರಿಂದ ಕರ್ನಾಟಕದ ಸಣ್ಣ ರೈತರಿಗೆ ಅನುಕೂಲವಾಗಲಿದೆ”
ಇದನ್ನೂ ಓದಿ: Barisu Kannada Dindimava: ದೆಹಲಿಯಲ್ಲಿ ನಗಾರಿ ಬಾರಿಸಿ ‘ಬಾರಿಸು ಕನ್ನಡ ಡಿಂಡಿಮವ’ ಕಾರ್ಯಕ್ರಮಕ್ಕೆ ಮೋದಿ ಚಾಲನೆ
ಕರ್ನಾಟಕ
Suicide Case: ಕೌಟುಂಬಿಕ ಕಲಹ; ಪತ್ನಿ ಆತ್ಮಹತ್ಯೆ ಕಂಡು ಪತಿಯೂ ನೇಣಿಗೆ ಶರಣು
Suicide Case: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ. ಶೆಟ್ಟಿಹಳ್ಳಿಯಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಂಡ್ಯ: ಕೌಟುಂಬಿಕ ಕಲಹಕ್ಕೆ ಮನನೊಂದು ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ. ಮಾಡಿಕೊಂಡಿರುವ ಘಟನೆ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ. ಶೆಟ್ಟಿಹಳ್ಳಿಯಲ್ಲಿ ನಡೆದಿದೆ.
ವಿದ್ಯಾ (32), ಪುರುಷೋತ್ತಮ (46) ಮೃತರು. ಮೊದಲಿಗೆ ಪತಿ ಕೆಲಸಕ್ಕೆ ತೆರಳಿದ್ದಾಗ ಪತ್ನಿ ವಿದ್ಯಾ (32) ಗುರುವಾರ ಸಂಜೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ವಿಷಯ ತಿಳಿದು ಮನೆಗೆ ಬಂದ ಪತಿ ಪುರುಷೋತ್ತಮ ಮನೆ ಪಕ್ಕದ ಜಮೀನಿಗೆ ತೆರಳಿ ನೇಣಿಗೆ ಶರಣಾಗಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Road Accident : ಹಾಸನದಲ್ಲಿ ಬೈಕ್ ಮೇಲೆಯೇ ಹರಿದ ಬಸ್: ಸವಾರ ಸ್ಥಳದಲ್ಲೇ ಮೃತ್ಯು, ಯುವತಿಗೆ ಗಾಯ
ಮಂಗಳೂರಿನಲ್ಲಿ ಬಸ್ಸಿನಡಿಗೆ ಬಿದ್ದು ಮಹಿಳೆ ಸಾವು
ಮಂಗಳೂರು: ನಗರದ ಬೆಂದೂರುವೆಲ್ ವೃತ್ತದಲ್ಲಿ ಬಸ್ಸಿನಡಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಖಾಸಗಿ ಬಸ್ಸಿನಿಂದ ಇಳಿದು ರಸ್ತೆ ದಾಟುವಾಗ ಅದೇ ಬಸ್ಸಿನಡಿಗೆ ಬಿದ್ದು ಮಹಿಳೆ ಸಾವಿಗೀಡಾಗಿದ್ದಾರೆ. ಐರಿನ್ ಡಿಸೋಜ (65) ಮೃತ ಮಹಿಳೆ. ಅಪಘಾತದ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳೂರಿನಲ್ಲಿ ಖಾಸಗಿ ಬಸ್ಸಿನ ಧಾವಂತಕ್ಕೆ ನಾಲ್ಕು ದಿನದಲ್ಲಿ ಎರಡನೇ ಬಲಿ ಇದಾಗಿದೆ.
ಪರೀಕ್ಷೆ ಭಯದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆ; ನದಿಯಲ್ಲಿ ಶವ ಪತ್ತೆ
ಕಡಬ (ಮಂಗಳೂರು): ಮಾರ್ಚ್ 31ರಿಂದ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಗೊಳ್ಳುತ್ತಿದೆ. ಶಿಕ್ಷಣ ಇಲಾಖೆ ಮತ್ತು ವಿದ್ಯಾರ್ಥಿಗಳು ಇದಕ್ಕೆ ಎಲ್ಲ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇಷ್ಟರ ನಡುವೆಯೇ ಪರೀಕ್ಷೆ ಭಯದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ (Student death) ಮಾಡಿಕೊಂಡಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೋಡಿಂಬಾಳ ಗುಂಡಿಮಜಲ್ ಗ್ರಾಮದಲ್ಲಿ ಅದ್ವೈತ್ ಶೆಟ್ಟಿ (15) ಎಂಬ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದ ಅದ್ವೈತ್ ಬುಧವಾರ ಸಂಜೆಯಿಂದ ನಾಪತ್ತೆಯಾಗಿದ್ದ. ಮನೆಯಿಂದ ಹೊರಗೆ ಹೋದವನು ಕಣ್ಮರೆಯಾಗಿದ್ದ ಆತನಿಗಾಗಿ ಮನೆಯವರು ರಾತ್ರಿ ಇಡೀ ಹುಡುಕಾಟ ನಡೆಸಿದರು. ಬೆಳಗ್ಗೆವರೆಗೂ ಬಾಲಕ ಪತ್ತೆಯಾಗಿರಲಿಲ್ಲ.
ಗುರುವಾರ ಮುಂಜಾನೆಯೂ ಹುಡುಕಾಟ ಮುಂದುವರಿದಾಗ ಕುಮಾರಧಾರಾ ನದಿಯ ನಾಕೂರು ಗಯಾ ಎಂಬಲ್ಲಿ ನದಿಯ ಪಕ್ಕದಲ್ಲಿ ಸ್ಕೂಲ್ ಬ್ಯಾಗ್ ಪತ್ತೆಯಾಯಿತು. ಬಳಿಕ ಪುತ್ತೂರು ಅಗ್ನಿಶಾಮಕ ದಳದಿಂದ ನದಿಯಲ್ಲಿ ಶೋಧ ಕಾರ್ಯ ನಡೆಸಲಾಯಿತು. ಈ ವೇಳೆ ನದಿಯಲ್ಲಿ ಮೃತದೇಹ ಪತ್ತೆಯಾಯಿತು.
ಕಡಬ ಹಾಗೂ ಬೆಳ್ಳಾರೆ ಪೊಲೀಸರು ಆಗಮಿಸಿದ್ದು, ಪೋಷಕರ ಬಳಿ ವಿವರಣೆ ಪಡೆದಿದ್ದಾರೆ. ಮನೆಯವರಿಗೂ ಈ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಮಾರ್ಚ್ 31ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿರುವುದರಿಂದ ಅದರ ಭಯದಿಂದಲೇ ಪ್ರಾಣ ಕಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಕರ್ನಾಟಕ
SELCO India: ಡಿಜಿಟಲ್ ಕಂದಕ ದಾಟಲು ಸೌರಚಾಲಿತ ವ್ಯವಸ್ಥೆ ಅತ್ಯುತ್ತಮ ಸಾಧನ: ಮನಮೋಹನ್ ಲಾಲ್ವಾನಿ
SELCO India: ಎಲ್ಲರಿಗೂ ಡಿಜಿಟಲ್ ಸೌಲಭ್ಯಗಳು ಕೈಗೆಟಕುವಂತೆ ಮಾಡಲು ನಮ್ಮ ನಡುವೆ ಇರುವ ಡಿಜಿಟಲ್ ಕಂದಕವನ್ನು ತುಂಬಬೇಕಿದೆ ಎಂದು ನೆಕ್ಸ್ಟ್ ಎಜುಕೇಷನ್ನ ಉಪಾಧ್ಯಕ್ಷ ಮನಮೋಹನ್ ಲಾಲ್ವಾನಿ ತಿಳಿಸಿದ್ದಾರೆ.
ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಶೈಕ್ಷಣಿಕವಾಗಿ ಸೃಷ್ಟಿಯಾಗುವ ವಿದ್ಯುನ್ಮಾನ (ಡಿಜಿಟಲ್) ಕಂದಕವನ್ನು ಯಶಸ್ವಿಯಾಗಿ ದಾಟಲು (SELCO India) ಸೌರಚಾಲಿತ ಶೈಕ್ಷಣಿಕ ಕಾರ್ಯಕ್ರಮವು (ಡಿಇಪಿ) ಅತ್ಯುತ್ತಮ ಪರ್ಯಾಯ ಸಾಧನವಾಗಿದೆ ಎಂದು ನೆಕ್ಸ್ಟ್ ಎಜುಕೇಷನ್ನ ಉಪಾಧ್ಯಕ್ಷ ಮನಮೋಹನ್ ಲಾಲ್ವಾನಿ ಅಭಿಪ್ರಾಯಪಟ್ಟರು.
ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಗುರುವಾರ ನಡೆದ ಸೆಲ್ಕೊ ಸಂಸ್ಥೆಯ 29ನೇ ಸಂಸ್ಥಾಪನಾ ದಿನದ ಸಮಾರಂಭದಲ್ಲಿ ಅವರು ಮಾತನಾಡಿದರು.
ಯುನೆಸ್ಕೋ ಅಂದಾಜಿಸಿರುವಂತೆ ಭಾರತದಲ್ಲಿ ಸುಮಾರು 26 ಕೋಟಿ ಜನರಿಗೆ ಸರ್ಕಾರಿ ಶಾಲೆಗಳಲ್ಲಿರುವ ಡಿಜಿಟಲ್ ಸೌಲಭ್ಯಗಳು ಇನ್ನೂ ಕೈಗೆಟಕುತ್ತಿಲ್ಲ. ಹೀಗಾಗಿ ನಮ್ಮ ನಡುವೆ ಇರುವ ಇಂತಹ ಡಿಜಿಟಲ್ ಕಂದಕವನ್ನು ತುಂಬಬೇಕಿದೆ. ಸೆಲ್ಕೋ ಜತೆಗಿನ ಸಹಪಯಣದ ಸವಿನೆನಪಿಗಾಗಿ ನೆಕ್ಸ್ಟ್ ಎಜುಕೇಷನ್ ಸಂಸ್ಥೆಯು ರಾಜ್ಯದ ನಾಲ್ಕು ಸರ್ಕಾರಿ ಶಾಲೆಗಳಿಗೆ ಸಂಪೂರ್ಣ ಉಚಿತವಾಗಿ ವಿದ್ಯುನ್ಮಾನ ಶೈಕ್ಷಣಿಕ ವ್ಯವಸ್ಥೆಯ ಮೂಲಭೂತ ಸೌಕರ್ಯವನ್ನು ಒದಗಿಸಲಿದೆ ಎಂದು ಘೋಷಿಸಿದರು.
ಬೈಲಕುಪ್ಪೆಯ ತ್ಸೋ-ಇ-ಖಾಂಗಸರ್ ಚಾರಿಟಿ ಆಸ್ಪತ್ರೆಯ ಕಾಯನಿರ್ವಾಹಕ ಕಾರ್ಯದರ್ಶಿ ಸೋನಮ್ ಯೌಗ್ಯಾಲ್ ಮಾತನಾಡಿ, ಮುಂಬರುವ ದಿನಗಳಲ್ಲಿ ಎಲ್ಲ ವ್ಯವಸ್ಥೆಗಳೂ ಸೌರಮಯವಾಗುವುದರಲ್ಲಿ ಸಂಶಯವಿಲ್ಲ. ಅನಿಯಮಿತ ವಿದ್ಯುತ್ ವ್ಯವಸ್ಥೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಬಹಳ ಸಮಸ್ಯೆಗಳಾಗುತ್ತಿವೆ. ಈ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೆಕಿದ್ದು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಅತ್ಯಂತ ತ್ವರಿತವಾಗಿ ಸೌರೀಕರಣಗೊಳ್ಳಬೇಕಿದೆ ಎಂದರು.
ಸಮಾರಂಭದಲ್ಲಿ ಸಾಧಕ ಮಹಿಳೆಯರಾದ ಕಲಬುರ್ಗಿಯ ಸೌರ ಉದ್ಯಮಿ ಭುವನೇಶ್ವರಿ, ಬೆಳಗಾವಿಯ ಸೌರ ಇಂಧನ ಸೇವೆಗಳ ಉದ್ಯಮಿ ರೇಣುಕಾತಾಯಿ ಪರಪ್ಪಗೊಳ್ ಮತ್ತು ಸೆಲ್ಕೊ ನೌಕರ ಎನ್. ಲೋಕೇಶ್ ಅವರನ್ನು ಹಾಗೂ ಸೌರಚಾಲಿತ ಶೈಕ್ಷಣಿಕ ಕಾರ್ಯಕ್ರಮ (ಡಿಇಪಿ)ವನ್ನು ಅಳವಡಿಸಿಕೊಂಡು ಅತ್ಯುತ್ತಮ ಸಾಧನೆ ಮಾಡಿರುವ ಐದು ಶಾಲೆಗಳ ಶಿಕ್ಷಕ ಪ್ರತಿನಿಧಿಗಳನ್ನು ನೆಕ್ಸ್ಟ್ ಎಜುಕೇಷನ್ ವತಿಯಿಂದ ಗೌರವಿಸಲಾಯಿತು.
ಪುಸ್ತಕ ಬಿಡುಗಡೆ
ಸೆಲ್ಕೊ ಸಂಸ್ಥೆಯಿಂದ ಕಳೆದ ವರ್ಷ ರಾಜ್ಯಾದ್ಯಂತ ಪತ್ರಕರ್ತರಿಗಾಗಿ ಏರ್ಪಡಿಸಲಾಗಿದ್ದ 4 ಕಾರ್ಯಾಗಾರಗಳ ಅವಲೋಕನ ಕುರಿತ ಪುಸ್ತಕವನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಸೆಲ್ಕೋ ಸಂಸ್ಥಾಪಕರು ಮತ್ತು ಮ್ಯಾಗ್ಸೆಸ್ಸೆ ಪುರಸ್ಕೃತರಾದ ಹರೀಶ್ ಹಂದೆ, ಸೆಲ್ಕೊ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಭಾಸ್ಕರ ಹೆಗಡೆ, ಸೆಲ್ಕೋ ಫೌಂಡೇಷನ್ ಮುಖ್ಯ ಹಣಕಾಸು ಅಧಿಕಾರಿ ವಿ.ಕೆ. ಜೋಬಿ, ನಿರ್ದೇಶಕರಾದ ಹುದಾ ಜಾಫರ್, ಸೆಲ್ಕೋ ಇಂಡಿಯಾದ ಮಹಾ ಪ್ರಬಂಧಕರಾದ ಜಗದೀಶ್ ಪೈ ಹಾಗೂ ಸಿಬ್ಬಂದಿ ಹಾಜರಿದ್ದರು.
ಕರ್ನಾಟಕ
Tumkur News: ಒತ್ತುವರಿ ತೆರವಿಗೆ ಆಕ್ಷೇಪಿಸಿದ್ದಕ್ಕೆ ಲಾಠಿ ಚಾರ್ಜ್ ಮಾಡಿದ ಅರಣ್ಯ ಸಿಬ್ಬಂದಿ; 4 ರೈತರಿಗೆ ಗಂಭೀರ ಗಾಯ
Tumkur News: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಅರಣ್ಯ ಪ್ರದೇಶ ಒತ್ತುವರಿ ತೆರವಿಗೆ ರೈತರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಅರಣ್ಯ ಸಿಬ್ಬಂದಿ ಲಾಠಿ ಪ್ರಹಾರ ಮಾಡಿದ್ದಾರೆ.
ತುಮಕೂರು: ಅರಣ್ಯ ಪ್ರದೇಶ ಒತ್ತುವರಿ ತೆರವಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ರೈತರ ಮೇಲೆ ಅರಣ್ಯ ಸಿಬ್ಬಂದಿ ಮನಸೋ ಇಚ್ಛೇ ಲಾಠಿ ಚಾರ್ಜ್ ಮಾಡಿದ್ದರಿಂದ ನಾಲ್ವರು ರೈತರಿಗೆ ಗಂಭೀರ ಗಾಯಗಳಾಗಿವೆ. ಜಿಲ್ಲೆಯ (Tumkur News) ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಗಂಗಯ್ಯನಪಾಳ್ಯದಲ್ಲಿ ಘಟನೆ ನಡೆದಿದ್ದು, ಅರಣ್ಯ ಇಲಾಖೆಗೆ ಲಾಠಿ ಚಾರ್ಜ್ ಮಾಡುವ ಅಧಿಕಾರ ಕೊಟ್ಟವರು ಯಾರು ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.,
ಬಗರ್ ಹುಕುಂ ಭೂಮಿಯಲ್ಲಿ ಟ್ರಂಚ್ ಹೊಡೆಯಲು ಗ್ರಾಮಸ್ಥರು ವಿರೋಧಿಸಿದ್ದರು. ಆದರೆ, ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲು ಅಧಿಕಾರಿಗಳು ಮುಂದಾಗಿದ್ದರಿಂದ ಕಳೆದ 15 ದಿನಗಳಿಂದ ಅರಣ್ಯ ಇಲಾಖೆ ಮತ್ತು ರೈತರ ನಡುವೆ ಜಟಾಪಟಿ ನಡೆಯುತ್ತಿತ್ತು.
ಗುರುವಾರ ನೂರಕ್ಕೂ ಹೆಚ್ಚು ಸಿಬ್ಬಂದಿ ಜತೆ ಬಂದು ಅಧಿಕಾರಿಗಳು ಟ್ರಂಚ್ ಹೊಡೆಯಲು ಮುಂದಾಗಿದ್ದರು. ಈ ವೇಳೆ ರೈತರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ. ಗಲಾಟೆ ತಾರಕಕ್ಕೇರಿದಾಗ ಅರಣ್ಯ ಸಿಬ್ಬಂದಿ ರೈತರ ಮೇಲೆ ಲಾಠಿ ಬೀಸಿದ್ದಾರೆ. ಈ ವೇಳೆ ಮಹಿಳೆಯರು ಸೇರಿ ಹತ್ತಾರು ರೈತರಿಗೆ ಪೆಟ್ಟಾಗಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಇದೇ ವೇಳೆ ಅರಣ್ಯ ಸಿಬ್ಬಂದಿಗೂ ಗಾಯಗಳಾಗಿವೆ.
ಇದನ್ನೂ ಓದಿ | Road Accident : ಹಾಸನದಲ್ಲಿ ಬೈಕ್ ಮೇಲೆಯೇ ಹರಿದ ಬಸ್: ಸವಾರ ಸ್ಥಳದಲ್ಲೇ ಮೃತ್ಯು, ಯುವತಿಗೆ ಗಾಯ
ಗಲಾಟೆ ವೇಳೆ ರೈತ ಹೋರಾಟದ ನೇತೃತ್ವ ವಹಿಸಿದ್ದ ರೈತ ಮುಖಂಡ ದೊಡ್ಡನಂಜಯ್ಯ ಅವರನ್ನು ಕಾಲಲ್ಲಿ ತುಳಿದು ಜೀಪ್ನಲ್ಲಿ ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಅರಣ್ಯ ಸಿಬ್ಬಂದಿ ವಿರುದ್ಧ ಕೇಳಿಬಂದಿದೆ. ರೈತ ಮುಖಂಡ ದೊಡ್ಡನಂಜಯ್ಯ ಅವರನ್ನು ವಾಪಸ್ ಕಳುಹಿಸಿ ಎಂದು ಆಗ್ರಹಿಸಿ ಸ್ಥಳದಲ್ಲೇ ರೈತರು ಪ್ರತಿಭಟನೆ ಕೈಗೊಂಡಿದ್ದಾರೆ. ಹೀಗಾಗಿ ಸ್ಥಳಕ್ಕೆ ಪೊಲೀಸರು ಆಗಮಿಸಿ ಮೊಕ್ಕಾಂ ಹೂಡಿದ್ದಾರೆ.
ಶ್ರೀರಾಮ ನವಮಿ ಮೆರವಣಿಗೆ ವೇಳೆ ಗುಂಪು ಘರ್ಷಣೆ; ಲಘು ಲಾಠಿ ಪ್ರಹಾರ
ಯಾದಗಿರಿ: ಜಿಲ್ಲೆಯ ಸುರಪುರ ನಗರದಲ್ಲಿ ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ದೇವರ ಮೆರವಣಿಗೆ ವೇಲೆ ಕಾಲು ತುಳಿದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು. ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಸುರಪುರ ಪಟ್ಣದ ಗಾಂಧಿ ವೃತ್ತದಲ್ಲಿ ರಾಮಸೇನೆಯಿಂದ ಆಂಜನೇಯ ಹಾಗೂ ಶ್ರೀರಾಮನ ಮೂರ್ತಿ ಮೆರವಣಿಗೆ ಮಾಡುವ ವೇಳೆ ಗಲಾಟೆ ನಡೆದಿದೆ. ಡಿಜೆ ಸೌಂಡ್ಗೆ ಡಾನ್ಸ್ ಮಾಡುವಾಗ ಒಬ್ಬರಿಗೊಬ್ಬರು ಕಾಲು ತುಳಿತ ವಿಚಾರಕ್ಕೆ ಜಗಳ ಆರಂಭವಾಗಿದೆ. ಹೀಗಾಗಿ ಪೊಲೀಸ್ ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ.
ಕರ್ನಾಟಕ
ChatGPT Subscription: ದಕ್ಷತೆ ಹೆಚ್ಚಳ; ನೌಕರರಿಗೆ ಚಾಟ್ಜಿಪಿಟಿ ಉಚಿತ ಸಬ್ಸ್ಕ್ರಿಪ್ಶನ್ ನೀಡಿದ ಬೆಂಗಳೂರು ಕಂಪನಿ
ChatGPT Subscription: ಚಾಟ್ಜಿಪಿಟಿಯು ಬಹುತೇಕ ಕ್ಷೇತ್ರಗಳನ್ನು ಆವರಿಸುತ್ತಿದೆ. ಬೆಂಗಳೂರಿನ ಕ್ಯಾಪಿಟಲ್ ಮೈಂಡ್ ಎಂಬ ಕಂಪನಿಯು ಚಾಟ್ಜಿಪಿಟಿಯ ಮಹತ್ವವನ್ನು ಅರಿತು, ಅದರ ನೋಂದಣಿಯನ್ನು ಉದ್ಯೋಗಿಗಳಿಗೆ ಉಚಿತವಾಗಿ ನೀಡಲು ತೀರ್ಮಾನಿಸಿದೆ.
ಬೆಂಗಳೂರು: ಚಾಟ್ಜಿಪಿಟಿ ಚಾಟ್ಬಾಟ್ ಬಗ್ಗೆಯೇ ಈಗ ಎಲ್ಲಡೆ ಮಾತು ಕೇಳಿಬರುತ್ತಿವೆ. ಅದರಲ್ಲೂ, ಕೃತಕ ಬುದ್ಧಿಮತ್ತೆಯಿಂದ (Artificial Intelligence) ಇದು ಕಾರ್ಯನಿರ್ವಹಿಸುತ್ತಿರುವ ಕಾರಣ ಚಾಟ್ಜಿಪಿಟಿ ತಂತ್ರಜ್ಞಾನವನ್ನು ಬಹುತೇಕರು ಬಳಸುತ್ತಿದ್ದಾರೆ. ಹಾಗೆಯೇ, ಇದು ಯಾವುದೇ ವಿಷಯದ ಬಗ್ಗೆ ಲೇಖನ ಬರೆಯುವುದರಿಂದ ಹಿಡಿದು, ಕೋಡಿಂಗ್ವರೆಗೆ ಎಲ್ಲ ಕೆಲಸ ಮಾಡುತ್ತಿರುವ ಕಾರಣ ಮುಂದೊಂದು ದಿನ ಚಾಟ್ಜಿಪಿಟಿಯು ಉದ್ಯೋಗ ಕಸಿಯಲಿದೆ ಎಂಬ ಚರ್ಚೆಗಳು ಕೇಳಿಬರುತ್ತಿವೆ. ಹೀಗಿರುವ ಮಧ್ಯೆಯೇ, ಬೆಂಗಳೂರಿನ ಕಂಪನಿಯು ತನ್ನ ಉದ್ಯೋಗಿಗಳಿಗೆ ಚಾಟ್ಜಿಪಿಟಿಯ ಸಬ್ಸ್ಕ್ರಿಪ್ಶನ್ಅನ್ನು (ChatGPT Subscription) ಉಡುಗೊರೆಯಾಗಿದೆ ನೀಡಿದೆ.
ಬೆಂಗಳೂರು ಮೂಲದ ಕ್ಯಾಪಿಟಲ್ ಮೈಂಡ್ (Capital Mind) ಎಂಬ ಕಂಪನಿಯು ಉದ್ಯೋಗಿಗಳಿಗೆ ಉಚಿತವಾಗಿ ಚಾಟ್ಜಿಪಿಟಿ ಸಬ್ಸ್ಕ್ರಿಪ್ಶನ್ ನೀಡಿದೆ. ಇತ್ತೀಚೆಗೆ ಚಾಟ್ಜಿಪಿಟಿ ಬಳಕೆಯಿಂದ ಕಂಪನಿಯ ನೌಕರರ ಕಾರ್ಯದಕ್ಷತೆ ಹಾಗೂ ಉತ್ಪಾದಕೆಯು ಜಾಸ್ತಿಯಾದ ಕಾರಣ ಚಾಟ್ಜಿಪಿಟಿಯ ನೋಂದಣಿಯ ಶುಲ್ಕವನ್ನು ಕಂಪನಿಯೇ ಭರಿಸಲಿದೆ ಎಂದು ಘೋಷಿಸಲಾಗಿದೆ. ಚಾಟ್ಜಿಪಿಟಿಯ ನೋಂದಣಿ ಶುಲ್ಕವು ಮಾಸಿಕ 1,640 ರೂ. (20 ಡಾಲರ್) ಆಗಲಿದೆ. ಇಷ್ಟನ್ನೂ ಕಂಪನಿಯೇ ನೀಡಲಿದೆ.
ಕಂಪನಿ ಸಿಇಒ ಟ್ವೀಟ್
“ಚಾಟ್ಜಿಪಿಟಿಯಿಂದ ನೌಕರರ ಉತ್ಪಾದಕತೆ ಹೆಚ್ಚಾಗಿದೆ. ಅದರಲ್ಲೂ, ಕಿರಿಯ ಉದ್ಯೋಗಿಗಳ ಉತ್ಪಾದಕತೆಯು 5 ಪಟ್ಟು ಜಾಸ್ತಿಯಾಗಿದೆ. ಕೋಡಿಂಗ್ ರಚನೆ ಸೇರಿ ಹಲವು ವಿಧಗಳಲ್ಲಿ ನೌಕರರಿಗೆ ಚಾಟ್ಜಿಪಿಟಿಯು ಅನುಕೂಲವಾಗಿದೆ. ಬೇರೆ ವ್ಯಕ್ತಿಯ ನೆರವಿಲ್ಲದೆ, ಚಾಟ್ಜಿಟಿಪಿಯ ಸಹಾಯದಿಂದಲೇ ನೌಕರರು ಹಲವು ವಿಷಯಗಳನ್ನು ಕಲಿಯುತ್ತಿದ್ದಾರೆ. ಇದರಿಂದ ಕಂಪನಿಯ ಉತ್ಪಾದಕತೆಯು ಹೆಚ್ಚಾಗಿದೆ. ಎಲ್ಲ ಕೆಲಸವೂ ಈಗ ಉತ್ಕೃಷ್ಟ ಮಟ್ಟದಲ್ಲಿ ಸಾಗುತ್ತಿದೆ. ಹಾಗಾಗಿ, ನೌಕರರಿಗೆ ಉಚಿತವಾಗಿ ಚಾಟ್ಜಿಪಿಟಿ ನೋಂದಣಿ ನೀಡಲಾಗುತ್ತಿದೆ” ಎಂದು ಕಂಪನಿಯ ಸಿಇಒ ವಶಿಷ್ಠ ಅಯ್ಯರ್ ಮಾಹಿತಿ ನೀಡಿದ್ದಾರೆ.
ಉದ್ಯೋಗ/ಉದ್ಯಮ ವಲಯವನ್ನು ಚಾಟ್ ಜಿಪಿಟಿ ಕಬಳಿಸುತ್ತಿದೆ, ಮನುಷ್ಯರು ಮಾಡುವ ಹಲವು ಸೃಜನಾತ್ಮಕ ಕೆಲಸಗಳನ್ನು ಇದು ಮಾಡುತ್ತಿರುವ ಕಾರಣ, ಅನೇಕರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂಬ ಆತಂಕವೂ ಮನೆಮಾಡಿದೆ. ಚಾಟ್ಜಿಪಿಟಿ ಬಳಕೆ ಮಾಡುತ್ತಿರುವ ಅನೇಕರು ಒಂದಲ್ಲ ಒಂದು ಕಾರಣಕ್ಕೆ ಇದನ್ನು ಹೊಗಳುತ್ತಿದ್ದಾರೆ. ಲೇಖಕರು, ಕಂಟೆಂಟ್ ರೈಟರ್ಗಳು, ಕೋಡಿಂಗ್ ಕ್ಷೇತ್ರದಲ್ಲಿರುವವರಿಗೆ ಚಾಟ್ಜಿಪಿಟಿಯು ಮಾರಕ ಎಂಬ ವರದಿಗಳು ಕೂಡ ಲಭ್ಯವಾಗಿವೆ.
ಅಷ್ಟೇ ಅಲ್ಲ, ಇತ್ತೀಚೆಗಷ್ಟೇ ಚಾಟ್ ಜಿಪಿಟಿಯಿಂದ ನನ್ನ ನಾಯಿ ಬದುಕುಳಿಯಿತು ಎಂದು ವ್ಯಕ್ತಿಯೊಬ್ಬರು ಟ್ವಿಟರ್ನಲ್ಲಿ ತಿಳಿಸಿದ್ದರು. ಟ್ವಿಟರ್ ಬಳಕೆದಾರರೊಬ್ಬರು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಚಾಟ್ಬಾಟ್ ಚಾಟ್ಜಿಪಿಟಿಯಿಂದ ತಮಗೆ ಆದ ಸಹಾಯವನ್ನು ಬರೆದುಕೊಂಡಿದ್ದಾರೆ. ‘ನನ್ನ ಪ್ರೀತಿಯ ನಾಯಿಯ ಜೀವನನ್ನು ಉಳಿಸಿದ್ದು ಚಾಟ್ಜಿಪಿಟಿ’ ಎಂದು ಬರೆದುಕೊಂಡಿದ್ದು, ಅದು ಹೇಗೆ ಎಂಬುದನ್ನೂ ವಿವರಿಸಿದ್ದರು. @peakcooper ಎಂಬ ಟ್ವಿಟರ್ ಅಕೌಂಟ್ನಲ್ಲಿ ಈ ಸ್ಟೋರಿ ಹಂಚಿಕೊಳ್ಳಲಾಗಿದೆ. ಅನಾರೋಗ್ಯಕ್ಕೀಡಾದ ನನ್ನ ನಾಯಿ ಸ್ಯಾಸಿಗೆ ಏನಾಗಿದೆ ಎಂದು ಕಂಡು ಹಿಡಿಯಲು ಪಶುವೈದ್ಯರಿಗೂ ಸಾಧ್ಯವಾಗಲಿಲ್ಲ. ಆದರೆ ಚಾಟ್ಬಾಟ್ ಚಾಟ್ಜಿಪಿಟಿ ನನ್ನ ನಾಯಿಯ ರೋಗ ಪತ್ತೆ ಮಾಡಿ, ಅದನ್ನು ಉಳಿಸಿಕೊಟ್ಟಿತು’ ಎಂದಿದ್ದರು.
ಇದನ್ನೂ ಓದಿ: ChatGpt: ನಾಯಿಯ ಜೀವ ಉಳಿಸಿದ ಚಾಟ್ಜಿಪಿಟಿ; ಪಶುವೈದ್ಯರಿಗೂ ಗೊತ್ತಾಗಲಿಲ್ಲ ಎಂದ ಶ್ವಾನದ ಮಾಲೀಕ
-
ಕರ್ನಾಟಕ15 hours ago
High Court order: ತುಮಕೂರು ಗ್ರಾಮಾಂತರ ಜೆಡಿಸ್ ಶಾಸಕ ಗೌರಿಶಂಕರ್ ಶಾಸಕತ್ವದಿಂದ ಅನರ್ಹ: ಕೋರ್ಟ್ ಆದೇಶ
-
ಕ್ರಿಕೆಟ್16 hours ago
IND VS PAK: ಏಕದಿನ ವಿಶ್ವಕಪ್; ತಟಸ್ಥ ತಾಣದಲ್ಲಿ ನಡೆಯಲಿದೆ ಪಾಕಿಸ್ತಾನದ ಪಂದ್ಯಗಳು!
-
ಕರ್ನಾಟಕ12 hours ago
Karnataka BJP: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಚಿಂತನೆ: ಖಚಿತಪಡಿಸಿದ ಬಿ.ಎಸ್. ಯಡಿಯೂರಪ್ಪ
-
ಕ್ರಿಕೆಟ್13 hours ago
ICC World Cup 2023: ಭಾರತದಲ್ಲೇ ನಡೆಯಲಿದೆ ವಿಶ್ವ ಕಪ್ ಪಂದ್ಯ; ಐಸಿಸಿ ಸ್ಪಷ್ಟನೆ
-
ಕರ್ನಾಟಕ13 hours ago
Anjanadri Hill: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮನ ಭಕ್ತ
-
ಕರ್ನಾಟಕ14 hours ago
Karnataka BJP: ಮುಸ್ಲಿಂ ಬಾಂಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಬಿ.ಎಸ್. ಯಡಿಯೂರಪ್ಪ
-
ದೇಶ14 hours ago
ಸ್ಮೃತಿ ಇರಾನಿಯನ್ನು ಡಾರ್ಲಿಂಗ್ ಎಂದು ಬಿಜೆಪಿ ನಾಯಕ ಟ್ವೀಟ್, ಮಾನಹಾನಿ ನೋಟಿಸ್ ಕಳುಹಿಸಿದ ಕೈ ನಾಯಕ!
-
ಕ್ರಿಕೆಟ್10 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ