ಕರ್ನಾಟಕ
Kempe Gowda Jayanti 2023 : ನಾಡು ಕಟ್ಟಿದ ಕಲಿ ಕೆಂಪೇಗೌಡ
ನಾಡಿನ ಅಭ್ಯುದಯಕ್ಕೆ ಯಾವ ತ್ಯಾಗಕ್ಕೂ ಸಿದ್ಧರಾಗಿದ್ದ ಮಹಾನ್ ಚೇತನ ನಾಡಪ್ರಭು ಕೆಂಪೇಗೌಡ. ಬೆಂಗಳೂರು ನಗರವನ್ನು ಕಟ್ಟಿ, ಇಲ್ಲಿಯ ಸಂಸ್ಕೃತಿ-ಪ್ರಕೃತಿಗೆ ರಕ್ಷಣೆ ನೀಡದ ಈ ಚೇತನವನ್ನು ಇಂದು (Kempe Gowda Jayanti 2023) ಸ್ಮರಿಸೋಣ, ನಮಿಸೋಣ.
ಅಲಕಾ ಕೆ
ಜಾಗತಿಕ ಭೂಪಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿ (Kempe Gowda Jayanti 2023) ಇಂದು. ಕೆಂಪೇಗೌಡರ ಬಗ್ಗೆ ನಾವ್ಯಾರೂ ಅರಿಯದವರಲ್ಲ. ಆಧುನಿಕ ಬೆಂಗಳೂರಿನ ನಿರ್ಮಾತೃ, ಕೆರೆಗಳನ್ನು ನಿರ್ಮಿಸಿದವರು, ಮರಗಳನ್ನು ಬೆಳೆಸಿದವರು, ಕೋಟೆ-ಕೊತ್ತಲಗಳು ಮತ್ತು ದೇವಾಲಯಗಳನ್ನು ಕಟ್ಟಿಸಿದವರು- ಇತ್ಯಾದಿ ನಮಗೆ ತಿಳಿದಿದೆ.
ಆದರೆ ಇವುಗಳನ್ನೆಲ್ಲಾ ಆ ಕಾಲದ ಬಹಳಷ್ಟು ರಾಜರು, ರಾಜವಂಶಗಳು ಮಾಡಿರುವುದೇ ಅಲ್ಲವೇ? ಹಾಗಿದ್ದ ಮೇಲೆ ಕೆಂಪೇಗೌಡರೇ ಏಕೆ ನಾಡಪ್ರಭು ಎಂದು ಕರೆಸಿಕೊಳ್ಳಬೇಕು? ಹಲವು ಶತಮಾನಗಳ ಹಿಂದೆ ಬೆಂಗಳೂರು ಕಟ್ಟಿ ಕಾಲವಾದವರನ್ನು ಇಂದಿನ ಕಾಲದವರು ಏಕಾಗಿ ನೆನಪಿಸಿಕೊಳ್ಳಬೇಕು? ಇಂದಿಗೂ ಅವರೇಕೆ ಪ್ರಸ್ತುತ? – ಇಂಥ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವಿದು.
ನಾಗರಿಕತೆಯ ಹೆಸರಿನಲ್ಲಿ ಊರುಗಳನ್ನು, ನಗರಗಳನ್ನು ನಿರ್ಮಿಸಿಕೊಳ್ಳುವುದು ಇಂದು-ನಿನ್ನೆಯದಲ್ಲ. ಕ್ರಿಸ್ತಪೂರ್ವದ ಕಾಲದಲ್ಲೂ ವ್ಯವಸ್ಥಿತವಾದ ನಗರಗಳಿದ್ದವು ಎಂಬುದು ಹಲವಾರು ಉತ್ಖನನಗಳಲ್ಲಿ ಸ್ಪಷ್ಟವಾಗಿದೆ. ಹಾಗಿದ್ದೂ ನವ ಬೆಂಗಳೂರಿಗೆ ಭಾಷ್ಯ ಬರೆದವರೆಂದು ಕೆಂಪೇಗೌಡರನ್ನು ನಾವು ನೆನಪಿಸಿಕೊಳ್ಳಬೇಕಾಗಿರುವುದು ಬೆಂಗಳೂರು ಕಟ್ಟಿಸಿದ್ದಕ್ಕೆ ಮಾತ್ರವಲ್ಲ; ಅವರ ಅತ್ಯಪೂರ್ವ ದೂರದರ್ಶಿತ್ವಕ್ಕೆ, ಪ್ರಬುದ್ಧ ಮುತ್ಸದ್ದಿತನಕ್ಕೆ, ಆರ್ಥಿಕ ಅಭಿವೃದ್ಧಿಗೆ, ಪರಿಸರದ ಬಗೆಗಿನ ಕಾಳಜಿಗೆ, ಯೋಜನಾಬದ್ಧ ಧಾರ್ಮಿಕ ಚಟುವಟಿಕೆಗಳಿಗೆ, ಕಲೆ- ವಾಸ್ತುಶಿಲ್ಪಕ್ಕೆ ನೀಡಿದ ಪ್ರೋತ್ಸಾಹಕ್ಕೆ, ಸುಸ್ಥಿರ ಆಡಳಿತ ಮತ್ತು ಪ್ರಜಾ ವಾತ್ಸಲ್ಯಕ್ಕೆ.
ಹೀಗಿತ್ತು ಕೆಂಪೇಗೌಡರ ಬಾಲ್ಯದ ಜೀವನ
ಯಲಹಂಕದ ನಾಡಪ್ರಭು ಕೆಂಪನಂಜೇಗೌಡ ಮತ್ತು ಲಿಂಗಮಾಂಬೆ ಅವರ ಮಗನಾಗಿ 1510ರಲ್ಲಿ ಜನಿಸಿದವರು ಮೊದಲನೇ ಕೆಂಪೇಗೌಡರು. (ಮಾಗಡಿಯಲ್ಲಿ ಇದೇ ವಂಶದ ಇನ್ನೂ ಒಬ್ಬ ಕೆಂಪೇಗೌಡರು ಆಳಿದ್ದರಿಂದ ಇವರು ಮೊದಲನೇ ಕೆಂಪೇಗೌಡರು) ಆವತಿ ವಂಶದ ಕುಲದೇವಿ ಕೆಂಪಮ್ಮನ ಮತ್ತು ಭೈರವನ ಅನುಗ್ರಹದಿಂದ ಜನಿಸಿದ ಮಗುವನ್ನು ಕೆಂಪಯ್ಯ, ಕೆಂಪಣ್ಣ ಎಂದು ಕರೆಯಲಾಯಿತು. ಅದೇ ಮುಂದುವರೆದು ಕೆಂಪರಾಯ, ಕೆಂಪೇಗೌಡ ಎಂದಾಯಿತು.
ಮೊದಲಿನಿಂದಲೂ ವಿಜಯನಗರದ ಸಾಮಂತರಾಗಿದ್ದ ಯಲಹಂಕದ ಈ ಪಾಳೇಗಾರರು, ಕೃಷ್ಣದೇವರಾಯರ ಆಡಳಿತ ಮತ್ತು ಶಿಸ್ತಿನಿಂದ ಅತೀವ ಪ್ರಭಾವಗೊಂಡಿದ್ದರು. ತಂದೆಯೊಂದಿಗೆ ವಿಜಯನಗರದ ರಾಜಧಾನಿಗೆ ಭೇಟಿ ನೀಡಿದ್ದ ಬಾಲಕ ಕೆಂಪಣ್ಣನ ಮನದಲ್ಲಿ ಹಂಪಿಯ ಅಚ್ಚುಕಟ್ಟುತನ ಅಚ್ಚೊತ್ತಿತ್ತು. ಐಗಂಡಪುರದ ಮಾಧವ ಭಟ್ಟರಲ್ಲಿ ಬಾಲಕನ ವಿದ್ಯಾಭ್ಯಾಸ, ಶಸ್ತ್ರಾಭ್ಯಾಸಗಳೆಲ್ಲ ನಡೆದವು. ಗುರುಕುಲದಲ್ಲಿ ಅಭ್ಯಾಸ ಪೂರ್ಣಗೊಂಡ ಮೇಲೆ, ಅವರ ಸೋದರಮಾವನ ಮಗಳಾದ ಚೆನ್ನಾಂಬೆಯೊಂದಿಗೆ ವಿವಾಹವಾಯಿತು.
ಇದೇ ಸಮಯದಲ್ಲಿ ಯುವರಾಜ ನಾಗಿಯೂ ಅಭಿಷೇಚನಗೊಂಡರು. ನಾಡಿನ ಆಡಳಿತದಲ್ಲಿ ತಂದೆಯೊಂದಿಗೆ ತೊಡಗಿಸಿಕೊಳ್ಳುವ ಕೆಂಪೇಗೌಡರಿಗೆ ರಾಜ್ಯಾಡಳಿತದ ಪಟ್ಟುಗಳು ಕರಗತವಾಯಿತು. ಈ ಹೊತ್ತಿನಲ್ಲಿ ಮುಪ್ಪಿನಲ್ಲಿದ್ದ ಕೆಂಪನಂಜೇಗೌಡರು, ಮಗನಿಗೆ ನಾಡಪ್ರಭುವಿನ ಪಟ್ಟ ಕಟ್ಟುತ್ತಾರೆ- ಎನ್ನುವಲ್ಲಿಗೆ, ʻನಾಡಪ್ರಭುʼ ಎಂಬ ಪಟ್ಟ ಕೆಂಪೇಗೌಡರಿಗೆ ವಂಶಪಾರಂಪರ್ಯವಾಗಿ ಬಂದಿದ್ದು! ಆದರೆ ಅಷ್ಟೇ ಅಲ್ಲ.
ಸಮಾಜ ಸುಧಾರಕ ನಾಡಪ್ರಭು
ಮೊದಲನೇ ಕೆಂಪೇಗೌಡರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ವಿಜಯನಗರದಲ್ಲಿ ಕೃಷ್ಣದೇವರಾಯರು ತೀರಿಕೊಂಡಿದ್ದರು. ಆ ರಾಜ್ಯಕ್ಕೆ ಸಾಮಂತರಾಗಿದ್ದ ಅನೇಕರು ತಮ್ಮನ್ನು ಸ್ವತಂತ್ರ ಎಂದು ಘೋಷಿಸಿಕೊಂಡಿದ್ದರು. ಗಡಿಯಲ್ಲಿ ಬಹಮನಿ ಸುಲ್ತಾನರಿಂದ ಕಿರುಕುಳ ಹೆಚ್ಚಿತ್ತು. ತಮ್ಮನ್ನು ಸ್ವತಂತ್ರ ಎಂದು ಘೋಷಿಸಿಕೊಳ್ಳಲು ಮನಸ್ಸು ಮಾಡದ ಕೆಂಪೇಗೌಡರು, ಸೋದರರಾದ ಸೋಮೇಗೌಡ ಮತ್ತು ಬಸವೇಗೌಡರೊಂದಿಗೆ ಸೇರಿ ವಿಜಯನಗರದ ಪರವಾಗಿ ಯುದ್ಧ ಮಾಡುತ್ತಾರೆ; ರಾಜ್ಯ ಅಖಂಡವಾಗಿರುವುದಕ್ಕೆ ಶ್ರಮಿಸುತ್ತಾರೆ. ಸಣ್ಣ ಪಾಳಯಪಟ್ಟೊಂದು ಸುರಕ್ಷಿತವಾಗಿರುವುದಕ್ಕೆ ಎದುರಾಗುವ ತೊಡಕುಗಳು ಹಲವಾರು. ಪದೇ ಪದೆ ಯುದ್ಧ ಎದುರಾದರೆ ಜೀವಹಾನಿ, ಧನಹಾನಿ, ಮಾನಹಾನಿಗಳೇ ಬದುಕಾಗುತ್ತವೆ. ಅಭಿವೃದ್ಧಿ ಕನ್ನಡಿ ಗಂಟಾಗುತ್ತದೆ.
ಬದಲಿಗೆ ದೊಡ್ಡದೊಂದು ಸಾಮ್ರಾಜ್ಯದ ಛತ್ರಛಾಯೆಯಲ್ಲಿ ಸುರಕ್ಷಿತವಾಗಿ ಬದುಕುವುದಕ್ಕೆ ಹಲವು ದಾರಿಗಳು ದೊರೆಯಬಹುದು. ಹಾಗಾಗಿ ತಮ್ಮ ಪ್ರಜೆಗಳ ಹಿತದೃಷ್ಟಿಯಿಂದ ವಿಜಯನಗರ ಇರುವವರೆಗೂ ಅದರ ಸಾಮಂತರಾಗಿಯೇ ಕೆಂಪೇಗೌಡರು ಉಳಿಯುತ್ತಾರೆ. ಶೌರ್ಯಕ್ಕೆ ಹೆಸರಾದ ಆವತಿ ವಂಶದಲ್ಲಿ ಹುಟ್ಟಿಯೂ, ತಮ್ಮ ನಾಡನ್ನು ಯುದ್ಧಕ್ಕೆ ದೂಡದೆ, ಶಾಂತಿ-ಅಭಿವೃದ್ಧಿಯನ್ನು ಸಾಧಿಸಿದ ಕಾರಣಕ್ಕಾಗಿಯೇ ಇರಬಹುದು- ಕೆಂಪೇಗೌಡರ ಆಳ್ವಿಕೆಯ ದಿನಗಳಿಗೆ ಸೇರಿದ ಮಹಾಸತಿ ಕಲ್ಲು ಮತ್ತು ವೀರಗಲ್ಲುಗಳು ಬೆಂಗಳೂರಿನ ಪ್ರದೇಶದಲ್ಲಿ ದೊರಕಿಲ್ಲ ಎನ್ನಲಾಗುತ್ತದೆ. ಇದಿಷ್ಟೇ ಅಲ್ಲ, ತಮ್ಮ ಕುಲದಲ್ಲಿ ಚಾಲ್ತಿಯಲ್ಲಿದ್ದ ವಿವಾಹ ವಯಸ್ಕ ಹೆಣ್ಣು ಮಕ್ಕಳ ಬೆರಳುಗಳನ್ನು ಕತ್ತರಿಸುವ ಕ್ರೂರ ಸಂಪ್ರದಾಯವೊಂದಕ್ಕೆ ಕೆಂಪೇಗೌಡರು ಅಂತ್ಯ ಹಾಡಿದ ಉಲ್ಲೇಖವಿದೆ. ಹಾಗಾಗಿ ಸಮಾಜ ಸುಧಾರಣೆಯೂ ಅವರ ಆಚರಣೆಯಲ್ಲಿತ್ತು.
ಕೃಷ್ಣದೇವರಾಯರ ಕಾಲದ ಸಮೃದ್ಧಿಯನ್ನು ಬಾಲ್ಯದಲ್ಲೇ ಕಂಡಿದ್ದ ಕೆಂಪೇಗೌಡರಿಗೆ ತಮ್ಮಲ್ಲೂ ಅಂತಹದ್ದೇ ರಾಜಧಾನಿ ನಿರ್ಮಿಸಬೇಕು ಎಂಬ ಕನಸಿತ್ತು. ನಗರ ನಿರ್ಮಾಣಕ್ಕೆ ಸೂಕ್ತ ಸ್ಥಳವನ್ನರಸುತ್ತಾ, ಯಲಹಂಕದಿಂದ ದಕ್ಷಿಣ ದಿಕ್ಕಿನಲ್ಲಿ ಸಂಚರಿಸುತ್ತಿದ್ದಾಗ ಅವರಿಗೊಂದು ವಿಚಿತ್ರ ಕಾಣಿಸಿತು. ಪುಟ್ಟ ಮೊಲವೊಂದು ಬೇಟೆ ನಾಯಿಯನ್ನು ಅಟ್ಟಿಸಿಕೊಂಡು ಹೋಗುತ್ತಿತ್ತು. ಪುಟ್ಟ ಮೊಲಕ್ಕೇ ಇಷ್ಟು ಧೈರ್ಯವಿರಬೇಕಾದರೆ ಇದೊಂದು ವೀರಭೂಮಿಯೇ ಇರಬೇಕು ಎಂದುಕೊಂಡ ಕೆಂಪೇಗೌಡರು, ಹಸಿರು ಕಾನನದಿಂದ ಕೂಡಿದ ಅದೇ ಸ್ಥಳದಲ್ಲಿ ರಾಜಧಾನಿ ಕಟ್ಟಲು ಯೋಚಿಸಿದರು. ಆ ಪ್ರದೇಶದ ಮುಖ್ಯ ನದಿಯಾಗಿದ್ದ ಅರ್ಕಾವತಿಗೆ ಸುತ್ತಲಿನ ಹಲವಾರು ತೊರೆಗಳು ಬಂದು ಸೇರುತ್ತಿದ್ದುದರಿಂದ ನೀರಾವರಿಗೂ ಈ ಭೂಮಿ ಯೋಗ್ಯ ಎಂಬುದು ಅವರ ಅನಿಸಿಕೆಯಾಗಿತ್ತು.
ಇದಕ್ಕೀಗ ಅಪಾರ ಪ್ರಮಾಣದಲ್ಲಿ ಜನ-ಧನ ಒದಗಿಬರಬೇಕಿತ್ತು. 1532ರಲ್ಲಿ ಯಲಹಂಕ, ವರ್ತೂರು, ಬೇಗೂರು, ಹಲಸೂರು, ಕೆಂಗೇರಿ, ತಲಘಟ್ಟಪುರ, ಜಿಗಣಿ, ಕುಂಬಳಗೋಡು ಮುಂತಾದ ಹಲವು ಹೋಬಳಿಗಳನ್ನು ವಿಜಯನಗರ ಸಾಮ್ರಾಜ್ಯವು ಕೆಂಪೇಗೌಡರ ಪಾಳೆಯಗಾರಿಕೆಗೆ ಬಿಟ್ಟುಕೊಟ್ಟಿತ್ತು. ಆದರೆ ಅಲ್ಲಿ ಸಂಗ್ರಹವಾಗುವ ಕಂದಾಯದಲ್ಲಿ ಒಂದಂಶವನ್ನು ಇರಿಸಿಕೊಂಡು ಉಳಿದಿದ್ದನ್ನು ಸಾಮ್ರಾಜ್ಯಕ್ಕೆ ಒಪ್ಪಿಸಬೇಕಿತ್ತು. ಹಾಗಾಗಿ, ಅರಸರ ಸನ್ನಿಧಾನಕ್ಕೆ ಧನಸಹಾಯ ಕೋರಿ ಅರಿಕೆಯನ್ನು ಕಳುಹಿಸುವ ಕೆಂಪೇಗೌಡರು, ಪ್ರಜೆಗಳಿಂದಲೂ ನೆರವು ಕೋರುತ್ತಾರೆ. ಈ ಎಲ್ಲಾ ಕಡೆಗಳಲ್ಲಿ ಪೂರಕವಾಗಿಯೇ ಅವರಿಗೆ ಪ್ರತಿಕ್ರಿಯೆ ದೊರೆಯುತ್ತದೆ. ನಗರ ನಿರ್ಮಾಣಕ್ಕಾಗಿ ಎಷ್ಟೆಷ್ಟು ಪೇಟೆ-ಕೋಟೆಗಳು, ಎಲ್ಲೆಲ್ಲಿ ಕೆರೆ-ಉದ್ಯಾನಗಳು, ಗುಡಿ-ಗುಂಡಾರಗಳು ಎಲ್ಲವನ್ನೂ ಒಳಗೊಂಡ ವಿಸ್ತೃತವಾದ ನೀಲನಕ್ಷೆ ಸಿದ್ಧಗೊಳ್ಳುತ್ತದೆ.
ಉದ್ಯಾನ ನಗರ ನಿರ್ಮಾಣ
ಆರ್ಥಿಕ, ಕೃಷಿ, ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳು ಯಾವುದೇ ನಾಡಿನ ಆಧಾರ ಸ್ತಂಭಗಳು ಎಂಬುದನ್ನು ಅರಿತಿದ್ದ ಕೆಂಪೇಗೌಡರು, ಅದಕ್ಕೆ ತಕ್ಕಂತೆಯೇ ರಾಜಧಾನಿಯನ್ನು ಕಟ್ಟಲು ಯೋಜಿಸಿದ್ದರು. ರಾಜಧಾನಿಗೆ ನವದ್ವಾರಗಳು ಬೇಕು ಎಂಬ ಉದ್ದೇಶದಿಂದ ಪೂರ್ವಕ್ಕೆ ಹಲಸೂರು, ಪಶ್ಚಿಮಕ್ಕೆ ಸೊಂಡೆಕೊಪ್ಪ, ಉತ್ತರಕ್ಕೆ ಯಲಹಂಕ ಮತ್ತು ದಕ್ಷಿಣಕ್ಕೆ ಆನೇಕಲ್ನಲ್ಲಿ ನಾಲ್ಕು ಮಹಾದ್ವಾರಗಳನ್ನು ನಿರ್ಮಿಸಲಾಗಿತ್ತು. ಜೊತೆಗೆ, ವರ್ತೂರು, ಸರ್ಜಾಪುರ, ಕೆಂಗೇರಿ, ಯಶವಂತಪುರ ಮತ್ತು ಕನಕಪುರಗಳಲ್ಲಿ ಐದು ಕಿರುದ್ವಾರಗಳನ್ನು ನಿರ್ಮಿಸಲಾಗಿತ್ತು. ಬೆಂಗಳೂರು ಕೋಟೆ, ಮಾಗಡಿ ಕೋಟೆ, ಸಾವನದುರ್ಗ ಕೋಟೆ, ಹುತ್ರಿ ದುರ್ಗ, ಹುಲಿಯೂರು ದುರ್ಗದ ಕೋಟೆ ಸೇರಿದಂತೆ, ನಾಡಿನ ಆಯಕಟ್ಟಿನ ಸ್ಥಳಗಳಲ್ಲಿ ಏಳು ಕೋಟೆಗಳನ್ನು ನಿರ್ಮಿಸಲಾಗಿತ್ತು. ಊರಿನ ನಾಲ್ಕೂ ದಿಕ್ಕುಗಳಲ್ಲಿ ಕಾವಲು ಗೋಪುರಗಳನ್ನು ನಿಲ್ಲಿಸಲಾಗಿತ್ತು.
ಕುಡಿಯುವ ನೀರು ಮತ್ತು ಕೃಷಿ ನೀರಾವರಿಗೆ ಎಂದಿಗೂ ತೊಂದರೆಯಾಗದಂತೆ ನಾಡಿನೆಲ್ಲೆಡೆ ಕೆರೆ-ಕಟ್ಟೆಗಳನ್ನು ನಿರ್ಮಿಸಿದ್ದರು. ಧರ್ಮಾಂಬುಧಿ ಕೆರೆ, ಕೆಂಪಾಂಬುಧಿ ಕೆರೆ, ಗಿಡ್ಡಪ್ಪನ ಕೆರೆ, ಸಂಪಂಗಿರಾಮ ಕೆರೆ, ಚೆನ್ನಮ್ಮನ ಕೆರೆ, ಯಡಿಯೂರು ಕೆರೆ, ಕಾರಂಜಿ ಕೆರೆ, ಹಲಸೂರು ಕೆರೆ, ಕೆಂಪಾಪುರ ಕೆರೆ… ಒಂದೇ ಎರಡೇ? ನಗರ ಎಷ್ಟೇ ಬೆಳೆದರೂ ಜನಬಳಕೆಯ ನೀರಿಗೆ ಕೊರತೆಯಾಗಕೂಡದು ಎಂಬುದು ಅವರ ಯೋಜನೆಯಲ್ಲಿ ಸ್ಪಷ್ಟವಾಗಿತ್ತು. ಅಂದಿನ ಕಾಲಕ್ಕೆ ತಕ್ಕಂತೆ ಎಲ್ಲಾ ದೇವಾಲಯಗಳ ಬಳಿಯಲ್ಲಿಯೂ ಕಲ್ಯಾಣಿಗಳನ್ನು ನಿರ್ಮಿಸಲಾಗಿತ್ತು.
ನಗರಗಳಲ್ಲಿ ಈಗಿರುವಂಥ ವಿಸ್ತರಣೆಗಳು, ಬಡಾವಣೆಗಳು ಬೇರೆಯದೇ ರೀತಿಯಲ್ಲಿ ಅಂದಿನ ಕಾಲದಲ್ಲೂ ಇದ್ದವು ಎಂದರೆ ತಪ್ಪಾಗಲಾರದು. ವಾಣಿಜ್ಯ ಚಟುವಟಿಕೆಗಳು ಸಾಂಗವಾಗಿ ನೆರವೇರುವ ದೃಷ್ಟಿಯಿಂದ ವೃತ್ತಿಯಾಧರಿತ ಪೇಟೆಗಳನ್ನು ನಿರ್ಮಾಣ ಮಾಡಲಾಗಿತ್ತು. ಉದಾ, ಅರಳೇಪೇಟೆ, ಅಕ್ಕಿಪೇಟೆ, ಕುಂಬಾರಪೇಟೆ, ಅಂಚೆಪೇಟೆ, ತರಗುಪೇಟೆ, ಬಳೇಪೇಟೆ, ಮೇದರ ಪೇಟೆ, ಮಡಿವಾಳ ಪೇಟೆ, ಮುತ್ಯಾಲ ಪೇಟೆ, ಉಪ್ಪಾರ ಪೇಟೆ, ಚಿಕ್ಕಪೇಟೆ, ದೊಡ್ಡಪೇಟೆ- ಮುಂತಾದ ಹಲವಾರು ಪೇಟೆ-ಉಪಪೇಟೆಗಳನ್ನು ನಿರ್ಮಿಸಿ ವರ್ತಕರಿಗೆ ಮತ್ತು ಕುಶಲಕರ್ಮಿಗಳಿಗೆ ಉತ್ತೇಜನ ನೀಡಲಾಗಿತ್ತು. ನಾಡಿನಲ್ಲಿ ಸಂಪತ್ತಿನ ಕ್ರೋಢೀಕರಣಕ್ಕೆ ಪ್ರಭುಗಳು ಕೈಗೊಂಡ ಅತ್ತ್ಯುತ್ತಮ ಕ್ರಮವಿದು.
ದೇವಾಲಯಗಳ ನಿರ್ಮಾಣ
ರಾಜಧಾನಿಯ ಸುತ್ತಲು ಹಲವು ದೇವಾಲಯಗಳನ್ನು ನಿರ್ಮಿಸಿ, ಹಲವಾರು ಹಳೆಯ ಗುಡಿಗಳ ಜೀರ್ಣೋದ್ಧಾರ ಮಾಡಿಸಿದ್ದರು ಕೆಂಪೇಗೌಡರು. ಬೆಂಗಳೂರಿನ ದೊಡ್ಡ ಬಸವನ ಗುಡಿ ಮತ್ತು ಅಲ್ಲಿನ ಏಕಶಿಲೆಯ ನಂದಿ ಅವರು ನಿರ್ಮಿಸಿದ ಭವ್ಯತೆಗಳಲ್ಲಿ ಒಂದು. ಪ್ರತಿವರ್ಷ ಇಲ್ಲಿ ನಡೆಯುವ ಕಡಲೆಕಾಯಿ ಪರಿಷೆಯು ಕೃಷಿ ಸಮೃದ್ಧಿಗೂ ಧಾರ್ಮಿಕ ಚಟುವಟಿಕೆಗಳಿಗೂ ಇರುವ ಸಂಬಂಧವನ್ನು ಸೂಚಿಸುತ್ತದೆ. ಗವಿಗಂಗಾಧರೇಶ್ವರ ಗುಹಾಂತರ ದೇವಾಲಯ, ಆಂಜನೇಯ ದೇಗುಲ, ನಗರ ದೇವತೆ ಅಣ್ಣಮ್ಮ ದೇವಾಲಯಗಳು ಈ ಕಾಲದಲ್ಲೇ ನಿರ್ಮಾಣಗೊಂಡವು. ಹಲಸೂರಿನ ಶ್ರೀ ಸೋಮೇಶ್ವರ ದೇವಾಲಯ ಕೆಂಪೇಗೌಡರ ಕಾಲದಲ್ಲಿ ಜೀರ್ಣೋದ್ಧಾರಗೊಂಡಿತು. ಇವುಗಳಲ್ಲದೆ, ಕೋಟೆಯ ಸುತ್ತಮುತ್ತ ದೇವಾಲಯಗಳನ್ನು ಕಟ್ಟಿಸುವುದು ಅಂದಿನ ಪ್ರಭುಗಳ ಪರಿಪಾಠವಾಗಿತ್ತು.
ಶಿಲ್ಪಕಲೆಗೆ ನಾಡಪ್ರಭುಗಳ ಕೊಡುಗೆಯೋ ಎಂಬಂತೆ, ಗಿರಿಜಾ ಕಲ್ಯಾಣ ಮತ್ತು ರಾಮಾಯಣ ಕಥನಗಳ ಸಾಲುಗಳನ್ನು ಕೋಟೆ ವೆಂಕಟರಮಣ, ಹಲಸೂರಿನ ಸೋಮೇಶ್ವರ ಮತ್ತು ಶಿವಗಂಗೆಯ ಕಲ್ಯಾಣಿಯ ಗೋಡೆಗಳ ಮೇಲೆ ಇಂದಿಗೂ ಕಾಣಬಹುದು. ಸುಸಜ್ಜಿತ ರಸ್ತೆ ಮಾರ್ಗಗಳು, ಸಾಲು ಮರಗಳು, ಉದ್ದಗಲಕ್ಕೂ ಉದ್ಯಾನವನಗಳು, ಕುಡಿಯಲು ಮತ್ತು ಕೃಷಿಗೆ ಸಮೃದ್ಧವಾದ ನೀರಾವರಿ ವ್ಯವಸ್ಥೆ, ನಾಡಿನ ರಕ್ಷಣೆಗೆ ಕೋಟೆ, ಕಾವಲುಗೋಪುರ ಹಾಗೂ ದ್ವಾರಗಳು, ಸುಸ್ಥಿರ ಆರ್ಥಿಕತೆಗಾಗಿ ವಾಣಿಜ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ, ಕಲೆ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಇಂಬು- ಇವನ್ನೆಲ್ಲಾ ಮಾಡಿದವರು ಯಾವುದೋ ಸಾಮ್ರಾಜ್ಯದ ಅರಸನಲ್ಲ; ಸಾಮಂತ ನಾಡೊಂದರ ಪಾಳೆಯಗಾರ.
ಇದನ್ನೂ ಓದಿ : Kempegowda Jayanti: ಕೆಂಪೇಗೌಡ ಜಯಂತಿಗೆ ರಾಜ್ಯಮಟ್ಟದ 2 ಕಾರ್ಯಕ್ರಮ: ಹಾಸನದಲ್ಲೊಂದು, ಬೆಂಗಳೂರಲ್ಲೊಂದು
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಯಾವ ಸಿಂಹಾಸನ, ಅರಸೊತ್ತಿಗೆಯ ಹಂಗಿಲ್ಲದೆಯೇ ಜನಮನದ ಅರಸನಾಗಿದ್ದವರು- ನಿಜವಾದ ಅರ್ಥದಲ್ಲಿ ʻನಾಡಪ್ರಭುʼ! ಬೆಂಗಳೂರಿನ ಇಂದಿನ ಸ್ಥಿತಿ ಏನೇ ಇದ್ದರೂ, ಭವ್ಯ ಮತ್ತು ಉದಾತ್ತ ಧ್ಯೇಯೋದ್ದೇಶಗಳ ಜೊತೆಗೆ ಅತ್ಯಂತ ವ್ಯವಸ್ಥಿತ ಬೆಂಗಳೂರನ್ನು ಕಟ್ಟಿದ್ದ ಕೆಂಪೇಗೌಡರನ್ನು ಎಲ್ಲರೂ ಸ್ಮರಿಸಲೇಬೇಕಾದ ಹೊತ್ತಿದು. ನಾಡು ಪ್ರಭು ಕೆಂಪೇಗೌಡರನ್ನು ಸ್ಮರಿಸೋಣ, ನಮಿಸೋಣ.
ಕರ್ನಾಟಕ
CM Siddaramaiah: CWRC ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ಧಾರ ಎಂದ ಸಿದ್ದರಾಮಯ್ಯ
CM Siddaramaiah: ಮತ್ತೆ 18 ದಿನ 3000 ಕ್ಯುಸೆಕ್ ನೀರು ಬಿಡಬೇಕು ಎಂಬ ಆದೇಶವನ್ನು ಪ್ರಶ್ನೆ ಮಾಡಲಾಗುವುದು ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.
ಚಾಮರಾಜನಗರ (ಹನೂರು): ಕಾವೇರಿ ನೀರು ನಿಯಂತ್ರಣ ಸಮಿತಿಯು (Cauvery water regulation Committee) ತಮಿಳುನಾಡಿಗೆ ಪ್ರತಿದಿನ 3000 ಕ್ಯೂಸೆಕ್ ನೀರನ್ನು (3000 Cusec water) ಹರಿಸಲು ಆದೇಶಿಸಿದೆ. ಈ ಬಗ್ಗೆ ಕಾನೂನು ತಂಡದೊಂದಿಗೆ ಚರ್ಚಿಸಿದ್ದು ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಕಾನೂನು ತಂಡ ಸಲಹೆ ನೀಡಿದೆ. ನೀರು ಬಿಡಲು ನಮ್ಮ ಬಳಿ ನೀರಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಅವರು ಶ್ರೀ ಮಲೈ ಮಹದೇಶ್ವರ ಬೆಟ್ಟದ (Male mahadeshwara betta) ಬಳಿ ಮಾಧ್ಯಮದವರಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು.
ಕಾವೇರಿ ನೀರು ನಿಯಂತ್ರಣ ಸಮಿತಿಯು ಮಂಗಳವಾರ ನೀಡಿದ ಆದೇಶದಲ್ಲಿ ಸೆ. 28ರಿಂದ ಅಕ್ಟೋಬರ್ 15ರವರೆಗೆ ಪ್ರತಿದಿನವೂ 3000 ಕ್ಯೂಸೆಕ್ ನೀರು ಬಿಡಲು ಆದೇಶ ನೀಡಿತ್ತು. ಇದನ್ನು ಪ್ರಾಧಿಕಾರದ ಮುಂದೆ ಪ್ರಶ್ನಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.
ಸಿಎಂ ಮತ್ತು ಡಿಸಿಎಂ ಇಬ್ಬರೂ ನಮ್ಮಲ್ಲಿ ನೀರು ಇಲ್ಲ ಎಂದು ಹೇಳುತ್ತಲೇ ಪ್ರಾಧಿಕಾರ ಹೇಳಿದಷ್ಟು ನೀರು ಬಿಡುಗಡೆ ಮಾಡಿದ್ದೇ ಸಮಿತಿಗೆ ಸರಾಗ ಆದೇಶ ನೀಡಲು ಕಾರಣವಾಗಿದೆ ಎಂದು ಆರೋಪಿಸಲಾಗಿದೆ. ಇದೀಗ ಸೆ. 29ರಂದು ಇದರ ವಿರುದ್ಧ ರಾಜ್ಯವ್ಯಾಪಿ ಬಂದ್ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಮಳೆಗಾಗಿ ಮಹದೇಶ್ವರನಲ್ಲಿ ಪ್ರಾರ್ಥನೆ
ಮಳೆ ಕೈಕೊಟ್ಟು 195 ತಾಲ್ಲೂಕು ಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಮಹದೇಶ್ವರನಲ್ಲಿ ಮಳೆಗಾಗಿ, ರಾಜ್ಯದ ಜನರಿಗೆ, ರೈತರಿಗೆ ಸೌಖ್ಯವಾಗಲಿ ಎಂದು ಪ್ರಾರ್ಥಿಸಿರುವುದಾಗಿ ಸಿದ್ದರಾಮಯ್ಯ ತಿಳಿಸಿದರು.
ಮೂಢನಂಬಿಕೆ, ಮೌಢ್ಯ, ಕಂದಾಚಾರದಲ್ಲಿ ನಂಬಿಕೆ ಇಲ್ಲ
ಮೂಢನಂಬಿಕೆ, ಮೌಢ್ಯ, ಕಂದಾಚಾರದಲ್ಲಿ ನಂಬಿಕೆ ಇಲ್ಲ. ಅದಕ್ಕಾಗಿಯೇ ಹಿಂದೆ ಮುಖ್ಯಮಂತ್ರಿ ಯಾದ ಕೂಡಲೇ ಚಾಮರಾಜನಗರಕ್ಕೆ ಭೇಟಿ ನೀಡಿದೆ. ಸುಮಾರು 12 ಬಾರಿ ಭೇಟಿ ನೀಡಿದ್ದು, 5 ವರ್ಷ ಗಟ್ಟಿಯಾಗಿ ಇದ್ದೆ. ಚಾಮರಾಜನಗರ ಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಢ್ಯ ಈಗ ಹೋಗಿದೆ ಎಂದರು.
ಬಂದ್ನಿಂದ ಯಾರಿಗೂ ತೊಂದರೆಯಾಗಬಾರದು
ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್ ಗೆ ಕರೆನೀಡಿರುವ ಬಗ್ಗೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಗೆ ಅವಕಾಶವಿದೆ. ಆದರೆ ಇತರರಿಗೆ ತೊಂದರೆಯಾಗಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ನಾವು ಈ ಆದೇಶ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತೇವೆ ಎಂದರು.
ಇದನ್ನೂ ಓದಿ: CM Siddaramaiah: ಕೃಷಿಗೆ ಸಾಲ ಮಾಡಿ ಮದುವೆ ಛಮಾಡುವುದನ್ನು ನಿಲ್ಲಿಸಿ: ಸಿಎಂ ಸಿದ್ದರಾಮಯ್ಯ ಮನವಿ
ಕರ್ನಾಟಕ
BJP JDS alliance : ವಿಜಯದಶಮಿ ನಂತರ ಜೆಡಿಎಸ್ ಸೀಟು ಹಂಚಿಕೆ ಅಂತಿಮ ಮಾತುಕತೆ!
BJP JDS alliance : ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಸೀಟು ಹಂಚಿಕೆ ಯಾವಾಗ ಎಂಬ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. ವಿಜಯದಶಮಿ ನಂತರ ಈ ಬಗ್ಗೆ ಬಿಜೆಪಿ ವರಿಷ್ಠರೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ (Lok Sabha Election 2024) ಸಂಬಂಧ ಬಿಜೆಪಿ ಜತೆ ಕೈಜೋಡಿಸಿರುವ ಜೆಡಿಎಸ್ ರಾಜ್ಯದಲ್ಲಿ ಹಲವಾರು ರಾಜಕೀಯ ತಂತ್ರಗಳನ್ನು (Political Strategy) ಹೆಣೆಯುತ್ತಿದೆ. ಈ ಸಂಬಂಧ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ (Former Prime Minister and JDS supremo HD DeveGowda) ಅವರು ಬುಧವಾರ (ಸೆಪ್ಟೆಂಬರ್ 27) ಸುದ್ದಿಗೋಷ್ಠಿ ನಡೆಸಿ ತಾವು ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರ ಜತೆ ಮೈತ್ರಿ (BJP JDS alliance) ಕುರಿತಾಗಿ ಮೊದಲು ಚರ್ಚೆ ನಡೆಸಿದ್ದಾಗಿ ಹೇಳಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಬಳಿ ಈ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಸೀಟು ಹಂಚಿಕೆ ಬಗ್ಗೆ ಪ್ರಶ್ನೆ ಕೇಳಿದಾಗ ವಿಜಯದಶಮಿ ಹಬ್ಬದ (Vijayadashami Festival) ಬಳಿಕ ಬಿಜೆಪಿಯೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸ್ಪಷ್ಟಪಡಿಸಿದ್ದಾರೆ. ಇದರ ಜತೆಗೆ ಆ ಸನ್ನಿವೇಶ ಬಂದಾಗ ಚರ್ಚೆ ಮಾಡುತ್ತೇವೆ ಎಂದು ದೇವೇಗೌಡರು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ಅವರು, ಮೈತ್ರಿ ಸೀಟು ಹಂಚಿಕೆ ಸಂಬಂಧ ವಿಜಯದಶಮಿ ಮುಗಿದ ಬಳಿಕ ಬಿಜೆಪಿ ವರಿಷ್ಠರ ಜತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಅದಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಸಹ ಧನಿಗೂಡಿಸಿದ್ದು, ಆ ಸನ್ನಿವೇಶ ಬರಲಿ, ಆಗ ಚರ್ಚೆ ಮಾಡುತ್ತೇವೆ ಎಂದು ಸೂಚ್ಯವಾಗಿ ಉತ್ತರಿಸಿದ್ದಾರೆ.
ಮೈತ್ರಿಕೂಟ ಸೇರಿದ್ದಷ್ಟೇ
ಈಚೆಗೆ ನವದೆಹಲಿಗೆ ಎಚ್.ಡಿ. ಕುಮಾರಸ್ವಾಮಿ ಅವರು ಭೇಟಿ ನೀಡಿದ್ದಾಗ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆ ಪ್ರಾಥಮಿಕ ಹಂತದ ಮಾತುಕತೆಯನ್ನು ನಡೆಸಿದ್ದರು. ಇದರ ಭಾಗವಾಗಿ ಅಂದೇ ಬಿಜೆಪಿ – ಜೆಡಿಎಸ್ ಮೈತ್ರಿ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗಿತ್ತು. ಎನ್ಡಿಎ ಮೈತ್ರಿಕೂಟವನ್ನು ಜೆಡಿಎಸ್ ಸೇರಿದೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿತ್ತು. ಆದರೆ, ಇದರ ನಂತರ ಸೀಟು ಹಂಚಿಕೆ ಸಂಬಂಧ ಯಾವುದೇ ರೀತಿಯ ಅಂತಿಮ ಹಂತದ ಚರ್ಚೆ ಆಗಿಲ್ಲ ಎಂದು ಹೇಳಲಾಗಿದೆ.
ಐದು ಕ್ಷೇತ್ರ ಕೇಳಿರುವ ಜೆಡಿಎಸ್
ಮೂಲಗಳ ಪ್ರಕಾರ ಜೆಡಿಎಸ್ ಒಟ್ಟು ಐದು ಲೋಕಸಭಾ ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ರಾಯಚೂರು ಸೇರಿದಂತೆ ಇತ್ತ ಮಂಡ್ಯ, ಹಾಸನ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಕೇಳಿತ್ತು. ಆದರೆ, ಈ ಸಂಬಂಧ ಬಿಜೆಪಿ ನಾಯಕರಲ್ಲಿ ಒಮ್ಮತ ಮೂಡಿಲ್ಲ.
ಇದನ್ನೂ ಓದಿ: BJP JDS alliance : ಜೆಡಿಎಸ್ಗೆ ಕಾಂಗ್ರೆಸ್ ಮಾಡಿದ ಮೋಸದ ಬಗ್ಗೆ 100 ಕಾರಣ ಹೇಳುವೆ: ಗುಡುಗಿದ ದೇವೇಗೌಡ
ಬಿಜೆಪಿ ನಾಯಕರ ವಿರೋಧ
ಜೆಡಿಎಸ್ಗೆ ಯಾವುದೇ ಕಾರಣಕ್ಕೂ ಐದು ಸೀಟನ್ನು ಬಿಟ್ಟುಕೊಡುವುದು ಬೇಡ. ಮೂರು ಕ್ಷೇತ್ರವನ್ನು ಬಿಟ್ಟುಕೊಟ್ಟರೆ ಸಾಕು. ಉಳಿದ ಕಡೆ ಅವರಿಗೆ ಕೊಟ್ಟರೆ ಸೋಲು ನಿಶ್ಚಿತ. ಇದು ಬಿಜೆಪಿಗೆ ನಷ್ಟವನ್ನುಂಟು ಮಾಡುತ್ತದೆ ಎಂದು ರಾಜ್ಯದ ಕೆಲವು ನಾಯಕರು ಈಗಾಗಲೇ ವರದಿ ಒಪ್ಪಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿಜಯ ದಶಮಿ ನಂತರ ನಡೆಯುವ ಮಾತುಕತೆ ಕುತೂಹಲ ಮೂಡಿಸಿದೆ.
ಕರ್ನಾಟಕ
Murder Case : ಕುಡಿದ ಮತ್ತಿನಲ್ಲಿ ಮೂತ್ರ ಸಿಡಿಸಿದ; ಪ್ರಶ್ನೆ ಮಾಡಿದ ವ್ಯಾಪಾರಿಯ ಮನೆಗೆ ನುಗ್ಗಿ ಕೊಂದ ಕಿರಾತಕ!
Murder Case: ತನ್ನ ಮೇಲೆ ಮೂತ್ರ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಧೂರ್ತನೊಬ್ಬ ಕೊಲೆಯನ್ನೇ ಮಾಡಿದ್ದಾನೆ. ಅದೂ ಆತನ ಮನೆಗೆ ನುಗ್ಗಿ. ಒಬ್ಬ ಸಜ್ಜನನ ಕೊಲೆ ಗೌನಿಪಲ್ಲಿಯ ಜನರ ಮನ ಕಲಕಿದೆ.
ಕೋಲಾರ: ಕುಡಿತದ ಮತ್ತು ಹಾಗೂ ದುರಂಹಕಾರ ಸೇರಿಕೊಂಡರೆ ಒಬ್ಬ ಮನುಷ್ಯ ಅದೆಷ್ಟು ಕ್ರೂರಿಯಾಗಬಲ್ಲ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಕುಡಿತದ ಮತ್ತಿನಲ್ಲಿದ್ದ (Alcoholic) ಆತ ಮೂತ್ರ (Urination) ಮಾಡುವಾಗ ಇನ್ನೊಬ್ಬನ ಮೇಲೆ ಸಿಡಿಸಿದ. ಅದನ್ನು ಪ್ರಶ್ನೆ ಮಾಡಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಿದ್ದು ಮಾತ್ರವಲ್ಲ, ಮನೆಗೇ ನುಗ್ಗಿ ಕೊಲೆ (Murder Case) ಮಾಡಿದ್ದಾನೆ.
ಇಂಥಹುದೊಂದು ಭಯಾನಕ ಘಟನೆ ನಡೆದಿರುವುದು ಕೋಲಾರ ಜಿಲ್ಲೆಯ (Kolara News) ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ. ಮಂಗಳವಾರ ಸಂಜೆ ಇಬ್ಬರು ವ್ಯಕ್ತಿಗಳ ನಡುವಿನ ಒಂದು ಕ್ಷುಲ್ಲಕ ಜಗಳ ಸಾವಿನಲ್ಲಿ ಅಂತ್ಯಗೊಂಡಿದೆ.
ಗೌನಿಪಲ್ಲಿ ತರಕಾರಿ ವ್ಯಾಪಾರ ಮಾಡುತ್ತಾ ಎಲ್ಲರ ಜತೆ ಒಳ್ಳೆಯತನದಿಂದ ಬೆರೆಯುತ್ತಾ ಜನಮನ್ನಣೆ ಪಡೆದಿದ್ದ ಸಂಸಾವಂದಿಗ ವೆಂಕಟರಾಯಪ್ಪ ಅವರೇ ಪ್ರಾಣ ಕಳೆದುಕೊಂಡ ದುರ್ದೈವಿ. ಅವರಿಗೆ ವಯಸ್ಸು 55. ಅವರ ಮೇಲೆ ಮೂತ್ರ ಸಿಡಿಸಿದ್ದಲ್ಲದೆ ಪ್ರಶ್ನೆ ಮಾಡಿದ್ದಕ್ಕೆ ಕೊಂದೇ ಹಾಕಿದವನ ಹೆಸರು ಶಂಕರಪ್ಪ. ಸುಮಾರು 45 ವರ್ಷದ ಇವನು ಸದಾ ಕುಡಿದ ಮತ್ತಿನಲ್ಲೇ ಇರುತ್ತಾನೆ, ಸದಾ ಜಗಳ, ಹೊಡೆದಾಟಗಳೇ ಇವನ ಐಡೆಂಟಿಟಿ ಎನ್ನುತ್ತಾರೆ ಗೌನಿಪಲ್ಲಿ ಜನ.
ಮಂಗಳವಾರ ಸಂಜೆ ಏನಾಯಿತು?
ಮಂಗಳವಾರ ಸಂಜೆಯ ಹೊತ್ತಿಗೆ ವೆಂಕಟರಾಯಪ್ಪ ಅವರು ತಮ್ಮ ವ್ಯಾಪಾರ ನಡುವೆ ಮೂತ್ರ ಬರುತ್ತದೆ ಎಂದು ಸಂತೆ ಮೈದಾನದ ಕೊನೆಗೆ ಹೋದರು. ಆಗ ಅವರ ಹಿಂದೆಯೇ ಶಂಕರಪ್ಪ ಕೂಡಾ ಬಂದಿದ್ದ. ಅವರಿಬ್ಬರೂ ಹತ್ತಿರ ಹತ್ತಿರ ನಿಂತೇ ಮೂತ್ರ ಮಾಡಿದ್ದರು. ಈ ವೇಳೆ ಕುಡಿತದ ಮತ್ತಿನಲ್ಲಿದ್ದ ಮನೋಹರ ಬೇಕು ಎಂತಲೇ ವೆಂಕಟರಾಯಪ್ಪ ಅವರ ಮೇಲೆಯೇ ಮೂತ್ರ ಸಿಡಿಸಿದ್ದ.
ವೆಂಕಟರಾಯಪ್ಪ ಅವರು ಇದನ್ನು ಪ್ರಶ್ನೆ ಮಾಡಿದ್ದಾರೆ. ನೀನು ಮಾಡಿದ್ದು ಸರಿಯಾ ಎಂದು ಕೇಳಿದ್ದಾರೆ. ಆದರೆ, ಶಂಕರಪ್ಪ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು ಅವರ ಮೇಲೆಯೇ ಎಗರಾಡಿದ್ದಾನೆ. ನಾನು, ನನ್ನ ಮೂತ್ರ ಎಲ್ಲಿ ಬೇಕಾದರೂ ಮಾಡುತ್ತೇನೆ, ನೀನು ಯಾರು ಕೇಳುವುದಕ್ಕೆ ಎಂದೆಲ್ಲ ಗಲಾಟೆ ಮಾಡಿದ್ದಾನೆ.
ಇವನ ಬಳಿ ಮಾತನಾಡುವುದು ಬೇಡ ಎಂದು ವೆಂಕಟರಾಯಪ್ಪ ತನ್ನ ಅಂಗಡಿ ಕಡೆಗೆ ಬಂದಿದ್ದಾರೆ. ಆದರೆ, ಮನೋಹರ ಅವರನ್ನು ಬೆನ್ನಟ್ಟಿಕೊಂಡೇ ಬಂದು ನನ್ನನ್ನು ಪ್ರಶ್ನೆ ಮಾಡುತ್ತೀಯಾ ಎಂದು ಕೇಳಿ ಹಲ್ಲೆ ಮಾಡಿದ್ದಾನೆ. ಆಗ ಗೌನಿಪಲ್ಲಿ ಸಂತೆ ಮೈದಾನದಲ್ಲಿದ್ದವರು ಮತ್ತು ವ್ಯಾಪಾರಿಗಳು ಸೇರಿ ಜಗಳ ಬಿಡಿಸಿದ್ದಾರೆ.
ವೆಂಕಟರಾಯಪ್ಪ ಅವರ ಮೇಲೆ ಹಲ್ಲೆ ಮಾಡಿದ್ದರಿಂದ ಸಿಟ್ಟುಕೊಂಡ ವ್ಯಾಪಾರಿಗಳೆಲ್ಲ ಸೇರಿ ಈ ಗುಂಡ್ರುಗೋವಿ ಶಂಕರಪ್ಪನನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬುದ್ಧಿ ಮಾತೂ ಹೇಳಿದ್ದಾರೆ. ಅಲ್ಲಿಗೆ ಅದು ಮುಕ್ತಾಯಗೊಂಡಿದೆ.
ಮನೆಗೇ ಬಂದು ಬಾಗಿಲು ಬಡಿದ ಕಿರಾತಕ
ರಾತ್ರಿಯಾಗುತ್ತಿದ್ದಂತೆಯೇ ವೆಂಕಟರಾಯಪ್ಪ ಅವರು ವ್ಯಾಪಾರ ಮುಗಿಸಿ ಮನೆಗೆ ತೆರಳಿದ್ದಾರೆ. ಸ್ವಲ್ಪ ಹೊತ್ತಿಗೆ ಮನೆಯ ಬಾಗಿಲು ಬಡಿಯಿತು. ಯಾರೆಂದು ಬಾಗಿಲು ತೆರೆದು ನೋಡಿದರೆ ಶಂಕರಪ್ಪ ನಿಂತಿದ್ದ. ಏನು ಎಂದು ಕೇಳಲೂ ಅವಕಾಶವಿಲ್ಲದಂತೆ ಶಂಕರಪ್ಪ ಮನೆಯೊಳಗೆ ನುಗ್ಗಿದ್ದ.
ಮನೆಯಲ್ಲಿ ವೆಂಕಟರಾಯಪ್ಪ ಅವರ ಪುತ್ರ ಮನೋಹರ, ಪತ್ನಿ ಮತ್ತು ಇತರರು ಇದ್ದರು. ಅವರೆಲ್ಲ ಏನಾಗುತ್ತಿದೆ ಎಂದು ನೋಡನೋಡುತ್ತಿದ್ದಂತೆಯೇ ಶಂಕರಪ್ಪ ವೆಂಕಟರಾಯಪ್ಪರನ್ನು ನೆಲಕ್ಕೆ ಕೆಡವಿ ಹಾಕಿ ಎದೆಗೆ ಗುದ್ದತೊಡಗಿದ್ದಾನೆ. ಜತೆಗೆ ಮೂತ್ರ ಮಾಡುವ ವಿಷಯದಲ್ಲಿ ಜಗಳ ಮಾಡುತ್ತೀಯಾ ಎಂದು ಮೂತ್ರ ಮಾಡುವ ಜಾಗಕ್ಕೂ ಹೊಡೆದಿದ್ದಾನೆ. 55 ವರ್ಷದ ಸಜ್ಜನ ಹಿರಿಯ ಜೀವ ವೆಂಕಟರಾಯಪ್ಪ ಅವರು ಶಂಕರಪ್ಪನ ಹೊಡೆತಗಳಿಗೆ ತತ್ತರಿಸಿ ಹೋಗಿದ್ದಾರೆ. ಸ್ವಲ್ಪ ಹೊತ್ತು ಹಾಗೆಯೇ ಹೊಡೆದ ಶಂಕರಪ್ಪ ಮನೆಯವರನ್ನು ಹೆದರಿಸಿ ಹೊರಗೆ ಹೋಗಿದ್ದಾನೆ.
ಎದೆಗೆ, ಮರ್ಮಾಂಗಕ್ಕೆ ಗುದ್ದಿದ್ದ ಧೂರ್ತ
ಅದಾದ ಕೂಡಲೇ ಮನೆಯವರು ವೆಂಕಟರಾಯಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದರು. ಆದರೆ, ಎದೆಗೆ, ಮರ್ಮಾಂಗಕ್ಕೆ ಬಿದ್ದ ಹೊಡೆತಗಳಿಂದ ತತ್ತರಿಸಿ ಜರ್ಜರಿತರಾಗಿದ್ದ ವೆಂಕಟರಾಯಪ್ಪ ಅವರು ಶ್ರೀನಿವಾಸಪುರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದರು.
ಇದನ್ನೂ ಓದಿ: Instagram fight: ಇನ್ಸ್ಟಾಗ್ರಾಂನಲ್ಲಿ ಬೈದ ಎಂದು 16ರ ಬಾಲಕನನ್ನು ತಲ್ವಾರ್ನಿಂದ ಕಡಿದು ಕೊಂದ ಸ್ನೇಹಿತರು!
ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ. ಗೌನಿಪಲ್ಲಿಯ ವ್ಯಾಪಾರಸ್ಥರು, ನಾಗರಿಕರು ವೆಂಕಟರಾಯಪ್ಪ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಅಂದ ಹಾಗೆ, ವೆಂಕಟರಾಯಪ್ಪ ಅವರಿಗೂ ಶಂಕರಪ್ಪ ಅವರಿಗೂ ಮುಖ ಪರಿಚಯ ಇಲ್ಲವೇ ಇಲ್ಲ. ಅವರಿಬ್ಬರು ಹಿಂದೆಂದು ಮುಖಾಮುಖಿ ಆಗಿರಲೇ ಇಲ್ಲ. ಯಾರೆಂದು ಗೊತ್ತೇ ಇಲ್ಲ. ಕೇವಲ ಒಂದು ಮೂತ್ರದ ಸಿಡಿತದಿಂದ ಒಂದು ಮನೆಯ ಬೆಳಕು ಆರಿತು. ಹೀಗೆ ಕೊಲೆ ಮಾಡಿದ ಧೂರ್ತನಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.
ಕರ್ನಾಟಕ
BJP JDS alliance : ಜೆಡಿಎಸ್ಗೆ ಕಾಂಗ್ರೆಸ್ ಮಾಡಿದ ಮೋಸದ ಬಗ್ಗೆ 100 ಕಾರಣ ಹೇಳುವೆ: ಗುಡುಗಿದ ದೇವೇಗೌಡ
BJP JDS alliance : ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಬಿಜೆಪಿ ಜತೆಗಿನ ಮೈತ್ರಿ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಕಾಂಗ್ರೆಸ್ನಿಂದ ಪಕ್ಷಕ್ಕಾದ ಅನ್ಯಾಯದ ಬಗ್ಗೆ ಹೇಳಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿದ್ದು ಯಾರು ಎಂಬ ಬಗ್ಗೆಯೂ ಚರ್ಚೆ ಮಾಡೋಣ ಎಂದು ಸವಾಲು ಹಾಕಿದ್ದಾರೆ.
ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ (BJP JDS alliance) ಬಗ್ಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ (Former Prime Minister and JDS supremo HD DeveGowda) ಅಧಿಕೃತವಾಗಿ ಮಾತನಾಡಿದ್ದಾರೆ. ಮೈತ್ರಿ ಹಿಂದಿನ ಉದ್ದೇಶ ಏನು ಎಂಬುದನ್ನು ಹೇಳಿದ್ದಾರೆ. ಅಲ್ಲದೆ, ಮುಸ್ಲಿಂ ಮುಖಂಡರನ್ನು (Muslim leaders) ಜೆಡಿಎಸ್ ತೊರೆಯುತ್ತಿರುವ ಬಗ್ಗೆ ಪ್ರಸ್ತಾಪ ಮಾಡುತ್ತಾ, ಮುಸ್ಲಿಂ ನಾಯಕರನ್ನು ಕಾಂಗ್ರೆಸ್ ಸೋಲಿಸಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ಪಕ್ಷದ ಬಿ ಟಿಂ ಜೆಡಿಎಸ್ ಎಂದು ಹೇಳುವವರು ಮೊದಲು ತಾವೇನು ಮಾಡಿದ್ದಾರೆಂಬುದನ್ನು ನೋಡಬೇಕು. ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಸರ್ಕಾರವನ್ನು ಕೆಡವಿದ್ದು ಯಾರು ಎಂಬುದನ್ನು ಚರ್ಚೆ ಮಾಡೋಣ ಎಂದು ಪಂಥಾಹ್ವಾನ ನೀಡಿದ್ದಾರೆ. ಜತೆಗೆ ಕಾಂಗ್ರೆಸ್ ಮಾಡಿರುವ ಮೋಸದ ಬಗ್ಗೆ 100 ಕಾರಣಗಳನ್ನು ಹೇಳುವೆ ಎಂದು ದೇವೇಗೌಡರು ಗುಡುಗಿದ್ದಾರೆ. ಇದಕ್ಕೆಲ್ಲ ವಿ ಡೋಂಟ್ ಕೇರ್ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ, ರಾಜ್ಯಸಭೆಯಲ್ಲಿ ಫಾರೂಕ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದೆ, ಯಾರು ಸೋತರು? 8 ಜನ ನಾಯಕರನ್ನು ಕರೆದುಕೊಂಡು ಹೋದಿರಿ. ಅಲ್ಪಸಂಖ್ಯಾತರನ್ನು ಆ ದಿನ ಸೋಲಿಸಿದ್ದು ಯಾರು? ಜೆಡಿಎಸ್ಗೆ ಕಾಂಗ್ರೆಸ್ ಮೋಸ ಮಾಡಿರುವ 100 ಉದಾಹರಣೆಗಳನ್ನು ಕೊಡುತ್ತೇನೆ. ಕಾಂಗ್ರೆಸ್ ಹಲವಾರು ಬಾರಿ ಬ್ಲಂಡರ್ ಮಾಡಿದೆ. ನೀವು ಜಾತ್ಯತೀತ ಬಗ್ಗೆ ಮಾತನಾಡುತ್ತಿರಾ? ನಾವು ಯಾವುದಕ್ಕೂ ಕೇರ್ ಮಾಡಲ್ಲ ಎಂದು ಹೇಳಿದರು.
ಅಮಿತ್ ಶಾ ಜತೆ ಮೈತ್ರಿ ಚರ್ಚೆ ಮಾಡಿದ್ದೇನೆ
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಭಾರತೀಯ ಜನತಾ ಪಾರ್ಟಿಯ ಜತೆ ಹೋಗಬೇಕಾದರೆ, ನಾನು ಮೊದಲು ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರ ಜತೆ ಚರ್ಚೆ ಮಾಡಿದ್ದೆ. ನಾವು ಕಳೆದ 60 ವರ್ಷದಿಂದ ಯಾವುದೇ ಸಮಯಕ್ಕೆ ಅನ್ಯಾಯವಾಗಲು ಬಿಟ್ಟಿಲ್ಲ. ಕರ್ನಾಟಕದಲ್ಲಿ ಕುಮಾರಸ್ವಾಮಿಯವರ ಸರ್ಕಾರದಲ್ಲಿದ್ದ 17 ಜನರು ಶಾಸಕರನ್ನು ಮುಂಬೈಗೆ ಕರೆಸಿಕೊಂಡವರು ಯಾರು? ಇದೆಲ್ಲವೂ ಚರ್ಚೆಯಾಗಲಿ, ಚರ್ಚೆ ಮಾಡೋಣ. ಕರ್ನಾಟಕದಲ್ಲಿ ಕುಮಾರಸ್ವಾಮಿ ಅವರ ಸರ್ಕಾರವನ್ನು ಕೆಡವಿದ್ದು ಯಾರು? ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರೋದಕ್ಕೆ ಅವಕಾಶ ಮಾಡಿದ ಬಗ್ಗೆ ಚರ್ಚೆ ಮಾಡೋಣ. ಯಾರು ಇದಕ್ಕೆ ಜವಾಬ್ದಾರಿ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ಪ್ರಶ್ನಿಸಿದರು.
ಎಚ್ಡಿಕೆಯನ್ನು ಸಿಎಂ ಮಾಡುವಂತೆ ಒತ್ತಾಯ ಮಾಡಿದ್ದು ಯಾರು?
ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಬೇಕೆಂದು ಯಾರು ಬಂದಿದ್ದು? ನನಗೆ ಅವರನ್ನೇ ಸಿಎಂ ಮಾಡುವಂತೆ ಒತ್ತಾಯ ಮಾಡಿದರು. ಯಾವ ಕಾರಣಕ್ಕೂ ನಿಮ್ಮ ಸಹವಾಸ ಬೇಡ ಅಂತಾ ಹೇಳಿದ್ದೆ. ರಾತ್ರಿ 12 ಗಂಟೆಗೆ ಸುಪ್ರೀಂ ಕೋರ್ಟ್ಗೆ ಹೋಗಿದ್ದಾರೆ. ಇವತ್ತು ಬಿಜೆಪಿ ಜತೆ ಸಂಬಂಧ ಯಾಕೆ ಬೆಳೆಸಿದ್ದೀರಿ ಎಂದು ಮಾಧ್ಯಮಗಳಲ್ಲಿ ಕೇಳುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: Weather report : ಇನ್ನೆರಡು ದಿನ ಉತ್ತರ ಕರ್ನಾಟಕದ 7 ಜಿಲ್ಲೆ ಸೇರಿ ಕರಾವಳಿಯಲ್ಲಿ ಭಾರಿ ಮಳೆ
ದೇಶದಲ್ಲಿ ಒಂದೇ ಕುಟುಂಬ ಆಡಳಿತ ಮಾಡಬೇಕಾ?
ನಾನು ಯಾವುದೇ ಕಾರಣಕ್ಕೂ ಅಧಿಕಾರಕ್ಕಾಗಿ ರಾಜಕೀಯ ಮಾಡಿಲ್ಲ. ರಾಹುಲ್ ಗಾಂಧಿ ಕೈಯಲ್ಲಿ ಜೆಡಿಎಸ್ ಬಿಜೆಪಿ ಬಿ ಟೀಮ್ ಅಂತ ಹೇಳಿಸಿದರು. ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಾಗ ಏನ್ ಮಾಡಿದ್ರು ಅಂತ ನಾನು ನೋಡಲಿಲ್ವಾ? ಈಗ ಮೈತ್ರಿ ಬಗ್ಗೆ ಚರ್ಚೆ ಮಾಡ್ತಿದ್ದಾರೆ. ದೇಶದಲ್ಲಿ ಒಂದೇ ಕುಟುಂಬ ಆಡಳಿತ ಮಾಡಬೇಕಾ? ನಾನು 10 ವರ್ಷದಲ್ಲಿ ಮೊದಲ ಬಾರಿ ಮೈತ್ರಿ ಬಗ್ಗೆ ಮಾತನಾಡಿದ್ದೇನೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.
-
ದೇಶ14 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ವಿದೇಶ21 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ಸುವಚನ9 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ14 hours ago
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
-
ದೇಶ15 hours ago
GST Evasion: ಜಿಎಸ್ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
-
ಆಟೋಮೊಬೈಲ್21 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ21 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್18 hours ago
Ruturaj Gaikwad : ಚೀನಾಗೆ ಹೊರಡುವ ಮೊದಲು ಪುಣೆಯ ಗಣೇಶ ಮಂದಿರಕ್ಕೆ ಭೇಟಿ ನೀಡಿದ ಋತುರಾಜ್