ಪ್ರಮುಖ ಸುದ್ದಿ
ಬೇರೆ ದೇಶದ ಜನರಾಗಿದ್ದರೆ ಕಲ್ಲು ಹೊಡೆಯುತ್ತ, ಬೆಂಕಿ ಹಚ್ಚುತ್ತಾ ನಡೆಯುತ್ತಿದ್ದರು : ಭಾರತದ ಜನರ ಕುರಿತು ಬಿ.ಎಲ್. ಸಂತೋಷ್ ಪ್ರಶಂಸೆ
ಕೋವಿಡ್ನಿಂದಾಗಿ ಉಂಟಾದ ಪರಿಸ್ಥಿತಿ ಬಗ್ಗೆ ಜನರಿಗೆ ಬೇಸರವಿತ್ತೇ ವಿನಃ ಸರ್ಕಾರದ ಮೇಲೆ ಆಗಿರಲಿಲ್ಲ ಎಂದು ಬಿ.ಎಲ್. ಸಂತೋಷ್ ಹೇಳಿದರು.
ಮೈಸೂರು: ಕೋವಿಡ್ ಸಮಯದಲ್ಲಿ ಆತಂಕದಿಂದಾಗಿ ದೂರದೂರುಗಳಿಗೆ ನಡೆದು ಹೋಗುತ್ತಿದ್ದ ಕೋಟ್ಯಂತರ ಭಾರತೀಯರು ಅತ್ಯಂತ ಸಂಯಮದಿಂದ ವರ್ತಿಸಿದರು ಎಂದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಬೇರೆ ದೇಶದಲ್ಲಾಗಿದ್ದರೆ ಪರಿಸ್ಥಿತಿ ಭಯಾನಕವಾಗುತ್ತಿತ್ತು ಎಂದರು.
ಮೈಸೂರಿನಲ್ಲಿ ಆಯೋಜಿಸಿರುವ ಸುತ್ತೂರು ಜಾತ್ರೆ ಕಾರ್ಯಕ್ರಮದಲ್ಲಿ ʼಭಜನಾ ಮೇಳʼದ ಸಮಾರೋಪ ಭಾಷಣ ಮಾಡಿದರು.
ಕೋವಿಡ್ ಕಾರಣಕ್ಕೆ ಯಾವುದೇ ವಾಹನ ಇಲ್ಲದೆ, ಮನಸ್ಸಿನಲ್ಲಿದ್ದ ಯಾವುದೋ ಅಭದ್ರತೆಯ ಕಾರಣಕ್ಕೆ ಒಂದೂವರೆ ಕೋಟಿ ಜನರು ದೇಶದ ವಿವಿಧ ರಾಜ್ಯಗಳಿಂದ ತಮ್ಮ ರಾಜ್ಯಕ್ಕೆ ನಡೆದು ಹೊರಟತು. ಉತ್ತರ ಪ್ರದೇಶ, ಬಿಹಾರ ಸೇರಿ ಅನೇಕ ರಾಜ್ಯಗಳಿಗೆ ಸುಮಾರು 800-900 ಕಿ.ಮೀ. ನಡೆದು ಹೋಗುತ್ತಿದ್ದರೂ ಅತ್ಯಂತ ಸಂಯಮ ವಹಿಸಿದರು. ಇದೇ ಸ್ಥಿತಿ ಬೇರೆ ದೇಶಗಳಲ್ಲಿ ಈ ರೀತಿ ಜನರು ನಡೆದು ಹೋಗುತ್ತಿದ್ದರೆ ದಾರಿ ಮಧ್ಯದಲ್ಲಿ ಬೆಂಕಿ ಹಚ್ಚಿ, ಕಲ್ಲು ತೂರಿ ಹೋಗುತ್ತಿದ್ದರು.
ಆದರೆ ಈ ಜನರು ದುಃಖದ ನಡುವೆಯೂ ಸಮಾಧಾನದಿಂದ ಹೋಗುತ್ತಿದ್ದರು. ಅನೇಕರ ಕಾಲಿಗೆ ಚಪ್ಪಲಿಯೇ ಇರಲಿಲ್ಲ. ನಮ್ಮ ಸಂಘಟನೆ ವತಿಯಿಂದಲೇ ಅನೇಕರಿಗೆ ಚಪ್ಪಲಿ ನೀಡಿದೆವು. ಕೊರೊನಾ ಪರಿಸ್ಥಿತಿ ಬಗ್ಗೆ ಬೇಜಾರಿದೆಯೇ ಹೊರತು ಸರ್ಕಾರದ ಬಗ್ಗೆ ಅಲ್ಲ. ಸರ್ಕಾರ ಕೂಡ ಎಷ್ಟು ಮಾಡಲಾಗುತ್ತದೆ? ಎಂದು ಅನೇಕರು ಹೇಳುತ್ತಿದ್ದರು.
ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಜನರು ಸಂಯಮ ತೋರಿದರು. ಏಳು ಲಕ್ಷಕ್ಕೂ ಹೆಚ್ಚು ಜನರು ವಿದೇಶಗಳಿಂದ ಭಾರತಕ್ಕೆ ಆಗಮಿಸಿದರು. ಒಂದಿಬ್ಬರು ಕೊಂಕು ಮಾತನಾಡಿದ್ದು ಬಿಟ್ಟರೆ ಎಲ್ಲರೂ ಸುಮ್ಮನಿದ್ದರು. ಭಾರತ ಸರ್ಕಾರ ಮಾಡಿದ ಕಾರ್ಯ, ಅನೇಕ ಕಡೆಗಳಲ್ಲಿ ಮಾಧ್ಯಮಗಳು ಮಾಡಿದ ಸೇವೆ ಮಾತ್ರ ಇದಕ್ಕೆ ಕಾರಣೌಲ್ಲ. ಈ ಸಮಾಜದ ಮಾನಸಿಕತೆಯನ್ನು ಕಾಪಾಡಿಕೊಳ್ಳುವ, ಸುತ್ತೂರು ಕ್ಷೇತ್ರದಂತಹ ಲಕ್ಷಾಂತರ ದೇವಸ್ಥಾನಗಳು ಈ ದೇಶದಲ್ಲಿವೆ. ಅವುಗಳ ಕಾರಣಕ್ಕಾಗಿ ಸಮಾಜದಲ್ಲಿ ಸಂಯಮ, ಶಿಸ್ತು ಇದೆ. ಸಾಮಾಜಿಕ ವ್ಯವಸ್ಥೆಯನ್ನು ಮಠಗಳು ಕಾಯುತ್ತಿವೆ ಎಂದು ಸಂತೋಷ್ ಹೇಳಿದರು.
ಸಮಾಜದ ಆರೋಗ್ಯd ದೃಷ್ಟಿಯಿಂದ ಸತ್ಯ – ಸುಳ್ಳಿನ ಅಂತರ ಹೆಚ್ಚಾಗಬೇಕು. ಒಬ್ಬನೆ ಮನುಷ್ಯ ಕಾಲಕ್ಕೆ ತಕ್ಕಂತೆ ಒಳ್ಳೆಯದು ಮಾಡುತ್ತಾನೆ, ಕೆಟ್ಟದು ಮಾಡುತ್ತಾನೆ. ಒಬ್ಬನೇ ಮನುಷ್ಯನೊಳಗೆ ಒಳ್ಳೆಯವನೂ ಕೆಟ್ಟವನೂ ಇದ್ದಾನೆ.
ಸುತ್ತೂರಿನಂತh ಧಾರ್ಮಿಕ ಕ್ಷೇತ್ರಗಳ ಮೂಲಕ ಮಾತ್ರ ಮನುಷ್ಯನ ಈ ವರ್ತನೆಗಳು ಬದಲಾಗುತ್ತವೆ ಎಂದರು.
ದೇಶ
DUSU Election: ದೆಹಲಿ ವಿವಿಯಲ್ಲಿ ಎಬಿವಿಪಿ ದರ್ಬಾರ್; ಚುನಾವಣೆಯಲ್ಲಿ ಭಾರಿ ಗೆಲುವು, ದೇಶ ಮೊದಲು ಎಂದ ಬಿಜೆಪಿ
DUSU Election: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಚುನಾವಣೆಯಲ್ಲಿ ಎಬಿವಿಪಿ ಭರ್ಜರಿ ಗೆಲುವು ಸಾಧಿಸಿದೆ. ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿ ಹುದ್ದೆಗಳು ಎಬಿವಿಪಿ ಪಾಲಾದರೆ, ಉಪಾಧ್ಯಕ್ಷ ಸ್ಥಾನ ಎನ್ಎಸ್ಯುಐ ಪಾಲಾಗಿದೆ.
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಒಕ್ಕೂಟದ (DUSU) ಚುನಾವಣೆಯಲ್ಲಿ (DUSU Election) ಎಬಿವಿಪಿ (ABVP) ಭರ್ಜರಿ ಗೆಲುವು ಸಾಧಿಸಿದೆ. ಡಿಯುಎಸ್ಯು ಅಧ್ಯಕ್ಷ ಸೇರಿ ಕೇಂದ್ರೀಯ ಸಮಿತಿ ನಾಲ್ಕು ಪ್ರಮುಖ ಹುದ್ದೆಗಳಲ್ಲಿ ಮೂರು ಹುದ್ದೆಗಳು ಆರ್ಎಸ್ಎಸ್ ವಿದ್ಯಾರ್ಥಿ ಘಟಕವಾದ ಎಬಿವಿಪಿ ಪಾಲಾದರೆ, ಉಪಾಧ್ಯಕ್ಷ ಸ್ಥಾನವು ಕಾಂಗ್ರೆಸ್ ವಿದ್ಯಾರ್ಥಿ ಘಟಕವಾದ ಎನ್ಎಸ್ಯುಐ ಪಾಲಾಗಿದೆ.
ಎಬಿವಿಪಿಯ ತುಷಾರ್ ದೆಢಾ ಅವರು ಎನ್ಎಸ್ಯುಐನ ಹಿತೇಶ್ ಗುಲಿಯಾ ವಿರುದ್ಧ ಗೆಲುವು ಸಾಧಿಸಿದ್ದಾರೆ. ಎನ್ಎಸ್ಯುಐನ ಅಭಿ ದಾಹಿಯಾ ಡಿಯುಎಸ್ಯು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಾಗೆಯೇ, ಎಬಿವಿಪಿಯ ಅಪರಾಜಿತಾ ಕಾರ್ಯದರ್ಶಿ ಹಾಗೂ ಸಚಿನ್ ಬೈಸ್ಲಾ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ದೆಹಲಿ ವಿವಿಯಲ್ಲಿ ಇನ್ನು ಎಬಿವಿಪಿ ಮತ್ತಷ್ಟು ಪ್ರಬಲವಾಗಿದೆ.
#WATCH | Delhi: On DUSU elections, ABVP's winning candidate for the President's seat, Tushar Dedha says, "The main task we will do is to get metro concession passes for the students of Delhi University…" pic.twitter.com/71ykva7kxC
— ANI (@ANI) September 23, 2023
3 ವರ್ಷದ ಬಳಿಕ ಚುನಾವಣೆ
ದೆಹಲಿ ವಿವಿಯಲ್ಲಿ 2019ರಲ್ಲಿ ನಡೆದ ಚುನಾವಣೆಯಲ್ಲೂ ಎಬಿವಿಪಿಯು ನಾಲ್ಕು ಪ್ರಮುಖ ಹುದ್ದೆಗಳಲ್ಲಿ ಮೂರು ಹುದ್ದೆಗಳನ್ನು ಪಡೆದಿತ್ತು. ಇದಾದ ಬಳಿಕ ಕೊರೊನಾ ಹಿನ್ನೆಲೆಯಲ್ಲಿ 2020 ಹಾಗೂ 2021ರಲ್ಲಿ ಡಿಯುಎಸ್ಯು ಚುನಾವಣೆ ನಡೆದಿರಲಿಲ್ಲ. ಅಕಾಡೆಮಿಕ್ ಕ್ಯಾಲೆಂಡರ್ನಲ್ಲಿ ಏರುಪೇರಾದ ಕಾರಣ 2022ರಲ್ಲೂ ಡಿಯುಎಸ್ಯು ಚುನಾವಣೆ ನಡೆದಿರಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ 24 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಎಬಿವಿಪಿ ಸಂಭ್ರಮಾಚರಣೆ, ಅಮಿತ್ ಶಾ ಅಭಿನಂದನೆ
ಡಿಯುಎಸ್ಯು ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವಿವಿ ಕ್ಯಾಂಪಸ್ನಲ್ಲಿ ಎಬಿವಿಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಪಟಾಕಿ ಸಿಡಿಸಿ, ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದರು. ಇನ್ನು ಎಬಿವಿಪಿ ಗೆಲುವಿನ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿ ಬಿಜೆಪಿಯ ಹಲವು ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. ಹಾಗೆಯೇ, ದೇಶದ ಹಿತಾಸಕ್ತಿ ಮೊದಲು ಎಂಬ ಉದ್ದೇಶದಿಂದ ಎಬಿವಿಪಿ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ.
दिल्ली विश्वविद्यालय छात्र संघ के चुनाव में @ABVPVoice को मिली प्रचंड जीत पर परिषद् के सभी कार्यकर्ताओं को हार्दिक बधाई।
— Amit Shah (@AmitShah) September 23, 2023
यह जीत राष्ट्रहित को सर्वप्रथम मानने वाली विचारधारा में युवा पीढ़ी के विश्वास को दर्शाती है। मुझे पूर्ण विश्वास है कि परिषद् के कार्यकर्ता युवाओं में स्वामी…
ಇದನ್ನೂ ಓದಿ: New JNU Rules: ಜೆಎನ್ಯುನಲ್ಲಿ ಪ್ರತಿಭಟನೆ ಮಾಡಿದರೆ 20 ಸಾವಿರ ರೂ., ದುರ್ವರ್ತನೆಗೆ 50 ಸಾವಿರ ರೂ. ದಂಡ
“ಎಬಿವಿಪಿ ನಾಯಕರು ದೆಹಲಿ ವಿವಿಯ ಕೇಂದ್ರೀಯ ಸಮಿತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ವಿಶ್ವಾಸವಿದೆ. ಹಾಗೆಯೇ, ಸ್ವಾಮಿ ವಿವೇಕಾನಂದರ ಆಶಯ, ವಿಚಾರಗಳ ಪಾಲನೆ, ಯುವಕರಲ್ಲಿ ರಾಷ್ಟ್ರೀಯವಾದದ ಜಾಗೃತಿ ಹೆಚ್ಚಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸಲಿದೆ ಎಂಬ ದೃಢ ನಂಬಿಕೆ ಇದೆ” ಎಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಕಲೆ/ಸಾಹಿತ್ಯ
Sunday Read: ಹೊಸ ಪುಸ್ತಕ: ಯಾಬ್ಲಿ: ಯಥಾಪ್ರಕಾರ
ಎಚ್. ಆರ್ ರಮೇಶ ಅವರು ಸಣ್ಣಕಥೆಗಳ ಸಂಕಲನ ʼಯಾಬ್ಲಿʼ ಇಂದು ಬಿಡುಗಡೆಯಾಗುತ್ತಿದೆ. ಈ ಸಂಕಲನದಿಂದ ಒಂದು ಕಥೆಯ ಆಯ್ದ ಭಾಗ ಇಲ್ಲಿದೆ. ಇದು ಇಂದಿನ Sunday read.
:: ಎಚ್.ಆರ್ ರಮೇಶ
ಸಾವಜ್ಜಿಗೆ ರಾತ್ರಿ ನಿದ್ರೆಯಲ್ಲಿ ಕನಸು. ಭೂಮಿ ಸುಟ್ಟು ಹೋಗಿತ್ತು. ಸುಡುವ ಬೆಂಕಿಯ ಝಳದಲ್ಲಿ ಒಂದು ಬಿಳಿಯ ಹಂಸ ಹಾರಿ ಹೋಗುತ್ತಿತ್ತು ಆಕಾಶದ ಕಡೆ ಮುಖಮಾಡಿ. ಸಾವಜ್ಜಿ ನೋಡುತ್ತಲೇ ಇದ್ದಳು ಅದನ್ನು. ಅಂತರಿಕ್ಷದಲ್ಲಿ ಅದು ಹಾರಿಹೋಗುತ್ತಿತ್ತು. ಅದನ್ನು ಸಾವಜ್ಜಿ ನೋಡುತ್ತಲೇ ಇದ್ದಳು. ಸಾವಜ್ಜಿ ಅದನ್ನು ನೋಡುತ್ತಲೇ ಇದ್ದಳು. ಕಲ್ಲು ನೀರು ಕರಗುವ ಹೊತ್ತು ಈ ಕನಸು ಬಿದ್ದ ಹೊತ್ತು. ಅದು ಕರಗದೆ ಹಾಗೇ ಇತ್ತು ಅವಳ ಸುಕ್ಕುಗಳ ಮೇಲೆ ಅಡುಗೆ ಕೋಣೆಯ ಕಿಟಕಿಯಿಂದ ಸೂರ್ಯನ ಕಿರಣಗಳು ಹರಿದು ಹೋಗುವ ತನಕ. ಅವಳ ಕೆನ್ನೆಗಳ ಮೇಲೆ ಮೂಡಿದ್ದ ಸುಕ್ಕುಗಳು ನುಣುಪು ಬೆಣಚು ಕಲ್ಲುಗಳಾಗಿದ್ದವು. ಬೆಣಚು ಕಲ್ಲುಗಳ ಸಂದುಗೊಂದುಗಳಲ್ಲೆಲ್ಲ ಜುಳು ಜುಳು ಸದ್ದುಮಾಡಿಕೊಂಡು ಹರಿವ ತೊರೆಯ ನೀರು ಅವಳ ಕೆನ್ನೆಯ ಸುಕ್ಕುಗಳ ಮೇಲೆ ಹರಿವ ಸೂರ್ಯನ ಕಿರಣಗಳು. ಎಚ್ಚರವಾಯಿತು.
ಎದ್ದಳು ನಿಧಾನ. ಮಾಳಿಗೆ ಮನೆಯ ನಡುಮನೆಯಲ್ಲಿ ಮಲಗಿದ್ದಳು. ಗೋಡೆಯ ಮೇಲೆ ನೇತುಹಾಕಿದ್ದ ಶಿವನ ಪಟಕ್ಕೆ ಕೈ ಮುಗಿದು, ‘ಶಿವನೇ ಏನೇಳ್ಲಪ್ಪ ನಿನ್ನ ಮಯಿಮೇನ, ಇಷ್ಟು ದಿನ ಕರಕಂಬದ್ದಲ್ಲಪ್ಪ, ಏನೇಳ್ಲಿ ನಿನ್ನ ಪವಾಡಕೆ’ ಎಂದುಕೊಳ್ಳುತ್ತ ನಿಧಾನ ಎದ್ದಳು. ಹಳೆಯ ಸೀರೆಗಳನ್ನು ಒಂದಕ್ಕೊಂದು ಸೇರಿಸಿ ಹೊಲೆದು, ಮೆತ್ತನೆಯ ಹಾಸಿಗೆಯ ಥರ ಮಾಡಿಕೊಂಡಿದ್ದ ಅದನ್ನು ನೀಟಾಗಿ, ಚೌಕಾಕಾರದಲ್ಲಿ ಮಡಿಚಿ, ಆ ನಡುಮನೆಯ ಕೋಣೆಯ ತಾನು ಮಲಗಿದ್ದ ಬಲಭಾಗದ ಮೂಲೆಯಲ್ಲಿ ಅದನ್ನು ಮತ್ತು ಅದರ ಜೊತೆಗೆ ದಿಂಬನ್ನು ಇಟ್ಟಳು. ದಿಂಬಿಗೆ ಹಳೆಯ ಸೀರೆಯನ್ನು ಕವರನ್ನಾಗಿ ಹೊಲಿದಿದ್ದು, ಅದರಲ್ಲಿನ ಹೂವಿನ ಚಿತ್ರಗಳು ಎಣ್ಣೆಯ ಜಿಡ್ಡಿಗೆ ತಮ್ಮ ಕಳೆಯನ್ನು ಕಳೆದುಕೊಂಡಿದ್ದವು. ಎದ್ದು, ಬಾಗಿಲ ಹಿಂದೆ ಇದ್ದ ಮರದ ಅಗಳಿಯನ್ನು ಸರಿಸಿ ಬಾಗಿಲನ್ನು ಹಿಂದಕ್ಕೆ ಎಳೆದುಕೊಂಡಳು. ಇವಳು ಬಾಗಿಲು ತೆಗೆಯುವುದನ್ನೇ ಕಾಯುತ್ತಿತ್ತೇನೋ ಎಂಬಂತಿದ್ದ ಹೊರಗಿದ್ದ ಬೆಳಗಿನ ಬೆಳಕು, ಇವಳು ಬಾಗಿಲನ್ನು ತೆಗೆಯುತ್ತಿದ್ದಂತೇ ಒಳನುಗ್ಗಿತು.
ತುಸು ಎತ್ತರದ ಹೊಸ್ತಿಲನ್ನು ನಿಧಾನ ದಾಟಿ, ಬೆಳಕನ್ನು ಸೀಳಿಕೊಂಡು ಹೊರನಡೆದು, ಮನೆಯ ಬಲಗಡೆ ಸಂದಿಯಲ್ಲಿ ಅವಳ ಗಂಡನಕಾಲದ ಪುಟ್ಟ ಶೌಚಾಲಯಕ್ಕೆ ಹೋಗಿ ಬೆಳಗಿನ ನಿತ್ಯಕರ್ಮಗಳನ್ನು ಮುಗಿಸಿ, ಹೊರಗಿನ ಗುಡಾಣದಲ್ಲಿರುವ ನೀರನ್ನು ಗುಡಾಣದ ಮುಚ್ಚುಳದ ಮೇಲೆ ಕಾಲದ ಸಾಕ್ಷಿಯೆಂಬಂತೆ ಇದ್ದ ಲಬಿಕಿದ ಅಲ್ಯುಮಿನಿಯಮ್ ತಂಬಿಗೆಯಲ್ಲಿ ತುಂಬಿಸಿಕೊಂಡು, ಮತ್ತೊಮ್ಮೆ ಕೈ ತೊಳೆದು, ಕಾಲಿನ ಹಿಮ್ಮಡಿಯು ನೆನೆಯುವಂತೆ ಎರಡೂ ಪಾದಗಳ ಮೇಲೆ ನೀರನ್ನು ಹಾಕಿಕೊಂಡು ಒಳನಡೆದಳು. ಅಡುಗೆ ಕೋಣೆಯು ನಡುಮನೆಗೆ ಹೊಂದಿಕೊಂಡಿತ್ತು. ನಿಧಾನ ಅಡುಗೆ ಕೋಣೆಯೊಳಗೆ ಪಾದಗಳ ಇಡತೊಡಗಿದಳು. ಒಲೆಯ ಪಕ್ಕ ಇದ್ದ ಬಚ್ಚಲು ಮನೆಗೆ ಎಡ್ಲಿಯಲ್ಲಿ ತಾಮ್ರದ ತಂಬಿಗೆಯನ್ನು ಅದ್ದಿದಳು. ಆಗ ಅಲ್ಲಿ ನೀರು ತಂಬಿಗೆ ಒಳಗಡೆ ಸೇರುವ ಗುಡುಗುಡು ಸದ್ದು. ನೀರು ತುಂಬಿಸಿಕೊಂಡು, ಇದ್ದಿಲಿನ ಪುಡಿಯಲ್ಲಿ ಹಲ್ಲುಗಳನ್ನು ಉಜ್ಜಿ, ಮುಖವನ್ನು ತೊಳೆದುಕೊಂಡು, ನಿಧಾನ ಬಚ್ಚಲಿಗೆ ಅಡ್ಡಲಾಗಿಟ್ಟಿದ್ದ ಕಲ್ಲನ್ನು ದಾಟಿ ಹೊರ ನಡೆದಳು. ಸೂರ್ಯನ ಕಿರಣಗಳು ಅವಳ ಬೆನ್ನಿನ ಮೇಲೆ ಬಂಗಾರದ ನೀರನ್ನು ಸುರಿಯುತ್ತಿರುವಂತೆ ಕಾಣುತ್ತಿತ್ತು. ನಡುಮನೆಯ ಎಡಭಾಗದ ಗೋಡೆಗೆ ಸಮೀಪ ಬಿದಿರಿನ ಒಂದು ಉದ್ದನೆಯ ಗಳವನ್ನು ತೆಂಗಿನ ಹುರಿಯಲ್ಲಿ ಜಂತೆಯ ತೊಲೆಗೆ ಕಟ್ಟಿ ನೇತು ಬಿಡಲಾಗಿತ್ತು. ಆ ದಂಡಿಗೆಯ ಮೇಲೆ ಸೀರೆ, ರವಿಕೆ, ಮತ್ತಿತರೆ ಬಟ್ಟೆಗಳನ್ನು ಮಡಿಚಿ ನೇತುಹಾಕಲಾಗಿತ್ತು.
ಅದರ ಮೇಲೆ ನೇತಾಡುತ್ತಿದ್ದ ಟವಲನ್ನು ಎಳೆದುಕೊಂಡು, ಅದರಿಂದ ಮುಖವನ್ನು ಒರೆಸಿ ಕೊಂಡು, ಅದನ್ನು ಮತ್ತೆ ತನ್ನ ಭುಜದ ಮೇಲೆ ಹಾಕಿಕೊಂಡು ಮುಂದಕ್ಕೆ ಹೆಜ್ಜೆಗಳನ್ನು ಇಟ್ಟಳು. ಅವಳ ಮನೆ ಪಶ್ಚಿಮಾಭಿಮುಖವಾಗಿದ್ದುದರಿಂದ, ಸೂರ್ಯ ಕಾಣಿದಿದ್ದರೂ, ಅವಳ ಮನೆಯ ಬಾಗಿಲಿನ ಕಡೆ ಅಂದರೆ ಪೂರ್ವ ದಿಕ್ಕಿನ ಕಡೆ ತಿರುಗಿ ಒಂದು ನಮಸ್ಕಾರ ಹಾಕಿದಳು. ಹಾಕಿ, ಮನೆಯ ಮುಂಭಾಗದ ಬಲಗಡೆಯಲ್ಲಿ ಇಬ್ಬರು ಕುಳಿತುಕೊಳ್ಳಬಹುದಾಗಿದ್ದ ಒಂದು ಸಣ್ಣಕಲ್ಲು ಹಾಸಿನ ಕೆಳಗೆ ಕೈ ಹಾಕಿ ಪೊರಕೆಯನ್ನು ತೆಗೆದುಕೊಂಡಳು. ಕಸ ಗುಡಿಸಿ, ಅಲ್ಲೆ ಗುಡಾಣದಲ್ಲಿದ್ದ ನೀರನ್ನು ತಂಬಿಗೆಯಲ್ಲಿ ತುಂಬಿಕೊಂಡು ಬಾಗಿಲಿಗೆ ನೀರನ್ನು ಚಿಮುಕಿಸಿದಳು. ಮುಂಬಾಗಿಲಿನ ಕೈಗೆಟುಕುವ ಎತ್ತರದಲ್ಲಿದ್ದ ಒಂದು ಪುಟ್ಟ ಗೂಡೊಳಗೆ ಕೈ ಹಾಕಿ ಅರಿಶಿಣ, ಕುಂಕುಮ ಮತ್ತು ರಂಗೋಲಿ ಹಿಟ್ಟು ಇದ್ದ ಒಂದು ಬಟ್ಟಲನ್ನು ತೆಗೆದುಕೊಂಡು, ಹೊಸ್ತಿಲ ಮೇಲೆ ಮೂರುಕಡೆ ಮೂರು ಗೆರೆಗಳನ್ನು, ಅವುಗಳ ಅಂತರದಲ್ಲಿ ಸುರುಳಿಯಾಕಾರದ ಚಕ್ರ, ಇಂಟು ಆಕಾರದ ಎರಡು ಎಲೆಗಳಂತಿರುವ ಎಳೆಗಳನ್ನು ಎಳೆದು, ಹೊಸ್ತಿಲಿನ ಮುಂಭಾಗಕ್ಕೆ ಕುಂಕುಮ ಮತ್ತು ಅರಿಶಿಣವನ್ನು ಇಟ್ಟಳು. ಮನೆಯ ಅಂಗಳಕ್ಕೆ ದಾರಿಗೆ ಹೊಂದಿಕೊಂಡು ಮರದಂತೆ ಬೆಳೆದಿದ್ದ ಎಕ್ಕದ ಹೂವುಗಳನ್ನು ಕಿತ್ತು ಇಟ್ಟಳು. ಅದರ ಪಕ್ಕದಲ್ಲೇ ಇದ್ದ ಮಧ್ಯಾಹ್ನ ಮಲ್ಲಿಗೆ ಹೂವು ಸಂಜೆ ಅರಳಿದ್ದರಿಂದ, ಮುದುಡಿ ಮಲಗಿದ್ದವು. ಕೆಲವು ಗಿಡದ ಬುಡದಲ್ಲಿ ಬಿದ್ದಿದ್ದವು. ತಂಬಿಗೆಯಲ್ಲಿ ಉಳಿದಿದ್ದ ನೀರಿನಲ್ಲಿ ಕೈಗಳನ್ನು ತೊಳೆದುಕೊಂಡು, ಭುಜದ ಮೇಲೆ ಹಾಕಿಕೊಂಡಿದ್ದ ಟವಲನ್ನು ಮನೆಯ ಮುಂಭಾಗದ ಗೋಡೆಗೆ ಮತ್ತು ಅಂಗಳದ ಗೂಟಕ್ಕೆ ಕಟ್ಟಿದ್ದ ತಂತಿಯ ಮೇಲೆ ನೇತುಹಾಕಿ ಒಳ ನಡೆದಳು.
ಸಾವಜ್ಜಿಯ ಮಾಳಿಗೆ ಮನೆ, ಎರಡು ಕೋಣೆಗಳಿದ್ದರೂ, ತುಂಬಾ ವಿಶಾಲವಾಗಿತ್ತು. ಮನೆಯ ಅಡುಗೆ ಕೋಣೆಯು ಐದಾರು ಜನ ಕೂತು ಊಟ ಮಾಡುವಷ್ಟು ವಿಶಾಲ ವಾಗಿತ್ತು. ಮೂಲೆಯಲ್ಲಿ ಮಣ್ಣಿನ ಸೋರೆಗಳನ್ನು ಹೈಕಳು ಲಗೋರಿ ಆಟವಾಡುವಾಗ ಒಂದರ ಮೇಲೊಂದು ಜೋಡಿಸುವ ಬಿಲ್ಲೆಗಳಂತೆ ಜೋಡಿಸಿಡಲಾಗಿತ್ತು. ನೀರು ಕುಡಿಯಲು ಕಂಚಿನ ವೃತ್ತಾಕಾರದ ಗಿಂಡಿ, ಅದರ ಪಕ್ಕ ಒಂದು ಸ್ಟೀಲಿನ ಕೊಳಗ ಅದರ ಪಕ್ಕ ಮಣ್ಣಿನ ಗುಡಾಣ. ತರಕಾರಿಗಳನ್ನು ಇಡಲು ಜಾಲರ ರೂಪದ ನೇತಾಡುವ ಬುಟ್ಟಿಯನ್ನು ಗೋಡೆಗೆ ಮೊಳೆ ಹೊಡೆದು ನೇತುಹಾಕಲಾಗಿತ್ತು. ಅಡುಗೆ ಮನೆಯಲ್ಲಿ ಮೂರು ಕಂಬಗಳಿದ್ದವು. ಅವುಗಳಿಗೆ ಹುರಮಂಜನ್ನು ಬಳಿಯಲಾಗಿತ್ತು. ಅಡುಗೆ ಕೋಣೆಯ ಬಾಗಿಲ ಮೇಲೆ ಇಡಲಾಗಿದ್ದ ಅಡ್ಡಕಲ್ಲಿನ ಮೇಲೆ ಐದಾರು ತಾಮ್ರದ, ಸ್ಟೀಲಿನ ಡಬ್ಬಿಗಳಿದ್ದವು. ಮೂರು ನಿಲುವುಗಳಿದ್ದು, ಒಂದರಲ್ಲಿ ಹಾಲಿನ ಬಟ್ಟಲು, ಮತ್ತೊಂದರಲ್ಲಿ ಕುಂಬಳಕಾಯಿ ಇದ್ದು, ಮೂರನೆಯದು ಖಾಲಿಯಿತ್ತು. ಅಡುಗೆ ಕೋಣೆಯ ಬಲಭಾಗದಲ್ಲಿ ಪುಟ್ಟದಾದ ದೇವರಗೂಡು. ಅದರಲ್ಲಿ ಹುಲಿ ವಾಹನದ ಮೇಲೆ ಕುಳಿತುಕೊಂಡಿರುವ ದೇವಿಯ ಚಿತ್ರ. ಅದಕ್ಕೆ ಗಾಜಿನ ಕಟ್ಟನ್ನು ಹಾಕಲಾಗಿತ್ತು. ಕುಂಕುಮ, ವಿಭೂತಿ, ಮತ್ತು ಅಂಟಿಕೊಂಡಿದ್ದ ಬಸವನ ಪಾದದ ಹೂವುಗಳು. ಫೋಟೋದ ಮುಂದೆ ಒಂದು ದಪ್ಪನೆಯ ಪುಸ್ತಕ. ಅದರ ಮೇಲೆಲ್ಲ ವಿಭೂತಿ, ಕುಂಕುಮ, ತೀರ್ಥದ ಕಲೆಗಳು. ಅದರ ಪಕ್ಕದಲ್ಲಿ ವಿಭೂತಿ, ಕುಂಕುಮ, ಅರಿಶಿಣ. ವಿಭೂತಿಯನ್ನು ಎತ್ತಿಕೊಂಡು ತನ್ನ ಬಲಗೈಯ ಮೂರು ಅಂಗೈ ಬೆರಳುಗಳಿಗೆ ಅದನ್ನು ಬಳಿದುಕೊಂಡು ಆ ಮೂರು ಬೆರಳುಗಳಿಂದ ತನ್ನ ಹಣೆಯ ಮೇಲೆ ಮೂರು ಅಡ್ಡ ವಿಭೂತಿಯ ಗೆರೆಗಳನ್ನು ಎಳೆದುಕೊಂಡಳು. ಮತ್ತು ಉಂಗುರದ ಬೆರಳ ತುದಿಯಿಂದ ಒಂದಿಷ್ಟಗÀಲದ ಕುಂಕುಮವನ್ನು ತನ್ನ ಎರಡು ಹುಬ್ಬುಗಳ ನಡುವೆ ಹಚ್ಚಿಕೊಂಡಳು. ದೇವಿ ಫೋಟೋದ ಪಕ್ಕ ಬಿದಿರಿನ ಕೊಳವೆಯಲ್ಲಿದ್ದ ಊದುಬತ್ತಿಗಳಲ್ಲಿ ಎರಡನ್ನು ಹೊರಗೆ ಎಳೆದುಕೊಂಡು ಅಲ್ಲೇ ದೇವರ ಗೂಡಲ್ಲಿದ್ದ ಬೆಂಕಿಪೊಟ್ಟಣವನ್ನು ಹುಡುಕಿ ತೆಗೆದು, ಕಡ್ಡಿಯನ್ನು ಗೀರಿ ಊದುಬತ್ತಿಗಳ ತುದಿಗೆ ತಾಗಿಸಿದಳು. ಹಳದಿ ಮತ್ತು ಕೆಂಪು ಮಿಶ್ರಿತ ಪುಟ್ಟದಾದ ಜ್ವಾಲೆ ಎರಡು ಸೆಕೆಂಡು ಮೂಡಿ, ಊದುಬತ್ತಿಯ ತುದಿಯಲ್ಲಿ ಕೆಂಡದ ಬಣ್ಣದಕಿಡಿ ಮಾತ್ರ ಸ್ಠಾಪಿತಗೊಂಡಿತು. ಗೊಂಡು, ಪರಿಮಳದ ಹೊಗೆ ಆ ಅಡುಗೆ ಕೋಣೆಯಲ್ಲಿ ಹಬ್ಬತೊಡಗಿತು.
ಅವುಗಳನ್ನು ಬಲಗೈಯಲ್ಲಿ ಹಿಡಿದು ಫೋಟೋಕ್ಕೆ ಮೂರುಸಲ ಬೆಳಗಿದಳು. ಅಡುಗೆ ಕೋಣೆಯ ನಡುವಲ್ಲಿ ನೇತಾಡುತ್ತಿದ್ದ ಹಾಲಿನ ನೆಲುವಿನ ಬಳಿ ಹೋಗಿ, ಅದರಲ್ಲಿದ್ದ ಬಟ್ಟಲನ್ನು ಎತ್ತಿಕೊಂಡು, ಅದರೊಳಗಿದ್ದ ಹಾಲನ್ನು ಒಂದು ಪುಟ್ಟ ಪಾತ್ರೆಯಲ್ಲಿ ಸುರುವಿದಳು. ಎರಡು ಒಲೆಗಳು ಅವುಗಳ ಹಿಂದೆ ಎರಡು ಮೂರು ಚಿಕ್ಕ ಪಾತ್ರೆಗಳನ್ನು ಇಡಬಹುದಾದಷ್ಟು ಜಾಗವಿತ್ತು. ಎಡಗಡೆಯ ಒಲೆಯ ಪಕ್ಕ ಎಡಲಿ. ಅದರ ಪಕ್ಕ ಅಡ್ಡಲಾಗಿ ಒಂದು ಆಳು ಉದ್ದದ ಮದ್ದಕ್ಕನ ಹಳ್ಳಿ ಕಲ್ಲು. ಅದರಾಚೆ ಬಚ್ಚಲು. ಮನೆಯ ಗೋಡೆಗೆ ಹೊಂದಿಕೊಂಡಂತಿದ್ದ ಅದು ಅಡ್ಡವಾಗಿ ದಾಟಿ ಹೋಗಬಹುದಾದ ಎತ್ತರದ ಕಲ್ಲನ್ನು ಹೊಂದಿತ್ತು. ಮತ್ತು ಬಿದಿರಿನ ಅಡ್ಡ ಬಾಗಿಲನ್ನು ಹೊಂದಿತ್ತು. ಆ ಬಚ್ಚಲಿನ ಒಳಗೆ ಒಂದು ಪುಟ್ಟ ಕಿಟಕಿಯೂ ಇತ್ತು. ಬಲ ಒಲೆಯ ಪಕ್ಕ ಒಂದು ಆಳು ಕುಳಿತುಕೊಂಡಾಗ ಇರುವ ಎತ್ತರದಷ್ಟು ಇಟ್ಟಿಗೆ ತಡೆಗೋಡೆ. ಅದರ ಆಚೆ ಸೌದೆಗಳನ್ನು ಪೇರಿಸಿ ಇಡಲಾಗಿತ್ತು. ಅದರ ಪಕ್ಕ ಒಂದೆರಡು ಮೂರು ಅಡಿ ದೂರದಲ್ಲಿ ನುಸಿರೋಗ ಬಂದು ಒಳಗೆ ಟೊಳ್ಳಾಗಿರುವ ತೆಂಗಿನಮರದ ಥರ ಉದ್ದನೆಯ ಕಡಗೋಲು ತಾನೇನು ಮಾಡುತ್ತಿದ್ದೆ ಎನ್ನುವುದರ ನೆನಪು ಇಲ್ಲದೆ ನಿಸ್ತೇಜಗೊಂಡು ನಿಂತಿತ್ತು ಗೋಡೆಗೆ ಒರಗಿ. ಇದರ ಎದುರಿನ ಗೋಡೆಯ ಹತ್ತಿರ ಒಂದು ಸಣ್ಣದಾದ ಪೆಟ್ಟಿಗೆ ಅನಾದಿಕಾಲದಿಂದ ಮಲಗಿದಂತೆ ಇತ್ತು. ಒಲೆಯ ಹಿಂಭಾಗದ ಹಾಸಿನ ಮೇಲಿನ ಮೂಲೆಯಲ್ಲಿ ಬೆಕ್ಕು ತಪಸ್ಸಿಗೆ ಕುಳಿತ ಮುನಿಯಂತೆ ಇತ್ತು. ಸಾವಜ್ಜಿ ಹಾಲನ್ನು ಸುರುವ ಸದ್ದಿಗೆ ಎಚ್ಚರಗೊಂಡು ಅಥವಾ ಎಚ್ಚರವಾಗಿತ್ತೇನೋ, ಆ ಕಡೆ ಕಣ್ಣು ನೆಟ್ಟಿತು. ನೆಟ್ಟು ನನಗೂ ಅದಕ್ಕೂ ಸಂಬಂಧವಿಲ್ಲ ವೇನೋ ಎನ್ನುವಂತೆ ಮತ್ತೆ ಕಣ್ಣು ಮುಚ್ಚಿಕೊಂಡಿತು. ಇದನ್ನು ಕಂಡು ಅವಳು ನಕ್ಕಳು. ಹಾಲಿನ ಪಾತ್ರೆಯನ್ನು ಹಿಡಿದುಕೊಂಡು ಒಲೆಯ ಹತ್ತಿರ ಹೋಗಿ, ಒಲೆಯ ಮೇಲೆ ಇಟ್ಟಳು.
ಒಲೆಯ ಮುಂದೆ ಕುಳಿತರೆ ಕೈಗೆ ತಾಗುವ ಅಂತರದಲ್ಲಿ ಒಂದು ಮರದ ಕಂಬ. ಅದರ ಬುಡದಲ್ಲಿ ಇದ್ದ ಮಣೆಯನ್ನು ಎಳೆದುಕೊಂಡು ಅದರ ಮೇಲೆ ಕುಳಿತಳು. ಪಾತ್ರೆಯನ್ನು ಮತ್ತೆ ತೆಗೆದು ತನ್ನ ಪಕ್ಕ ಇಟ್ಟುಕೊಂಡಳು. ತಂಬಿಗೆಯನ್ನು ತೆಗೆದುಕೊಂಡು ಎಡಲಿಯಲ್ಲಿ ನೀರನ್ನು ತುಂಬಿಕೊಂಡು ಪಕ್ಕಕ್ಕೆ ಇಟ್ಟುಕೊಂಡಳು. ಸೌದೆಗಳನ್ನು ಪೇರಿಸಿಟ್ಟ ಜಾಗದಲ್ಲಿ ಎರಡು ಅಂಗೈಯಗಲದ ಚಚ್ಚೌಕಾಕಾರದ ಮರದ ಹಲಗೆಯನ್ನು ತೆಗೆದುಕೊಂಡು, ಅದನ್ನು ಎಡಗೈಯಲ್ಲಿ ಹಿಡಿದು, ಬಲಗೈಯಲ್ಲಿ ಸೌದೆಯ ಬಳಿಯೇ ಇದ್ದ ಕಾಯಿಯ ಮೇಲಿನ ಚಿಪ್ಪನ್ನು ಎತ್ತಿಕೊಂಡು ಒಲೆಗಳಲ್ಲಿದ್ದ ಬೂದಿಯನ್ನು ಎಳೆದುಕೊಂಡಳು. ಅದನ್ನು ಸೌದೆಯ ಮುಂಭಾಗಕ್ಕೆ ಇಟ್ಟು, ಮತ್ತೆ ಕೈಗಳನ್ನು ತೊಳೆದುಕೊಂಡು ಹಾಲಿನ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಮುಚ್ಚುಳವನ್ನು ಮುಚ್ಚಿದಳು ಸೌದೆಗಳಲ್ಲಿ ಪುರಳೆಗಳಂತವುಗಳನ್ನು ಆಯ್ದುಕೊಂಡು, ಮುರಿದು, ಒಲೆ ಯೊಳಗೆ ಇಟ್ಟಳು. ನಂತರ ಒಲೆಯ ಹಾಸಿನ ಒಂದು ಜಾಗದಲ್ಲಿ ಇದ್ದ ಬೆಂಕಿಪೊಟ್ಟಣವನ್ನು ಒಂದು ಪುಟ್ಟ ಸೀಮೆ ಎಣ್ಣೆಯ ಬುಡ್ಡಿಗೆ ಹಚ್ಚಿ ಅದರ ಜ್ವಾಲೆಗೆ ಕೆಲವು ಪುರುಳೆಗಳನ್ನು ಹಿಡಿದು ಅವು ಹೊತ್ತಿಕೊಂಡಾಗ ಅವನ್ನು ಈಗಾಗಲೇ ಒಲೆಯಲ್ಲಿ ಇಟ್ಟಿದ್ದ ಪುರುಳೆಗಳಿಗೆ ತುಸು ತಾಗಿಸಿ ಬೆಂಕಿ ಮಾಡಿದಳು. ಆಮೇಲೆ ಒಂದೆರಡಮೂರು ಗಟ್ಟಿ ಸೌದೆಗಳನ್ನು ಎತ್ತಿಕೊಂಡು ಒಲೆಯಲ್ಲಿ ಇಟ್ಟಳು. ಬೆಂಕಿ ನಿಧಾನವಾಗಿ ಎಲ್ಲ ಸೌದೆಗಳಿಗೆ ಹಬ್ಬತೊಡಗಿತು. ಈಗ ಮುಚ್ಚಳವನ್ನು ತೆರೆದಳು. ಎದ್ದು ಅಡುಗೆ ಕೋಣೆಯ ಬಾಗಿಲಿನ ಒಳ ನಿಲುವಿನ ಮೇಲೆ ಇದ್ದ ಡಬ್ಬ ಒಂದನ್ನು ಎತ್ತಿಕೊಂಡು ತನ್ನ ಅಂಗೈಯಿಯ ಬೊಗಸೆಯಲ್ಲಿ ಬೆಲ್ಲದ ಪುಡಿಯನ್ನು ಸುರುವಿಕೊಂಡು, ವಾಪಸ್ಸು ಒಲೆಯ ಹತ್ತಿರ ಬಂದು ಅದನ್ನು ಹಾಲಿನಲ್ಲಿ ಸುರುವಿದಳು. ಉಕ್ಕುತ್ತಿದ್ದ ಹಾಲು ಇದನ್ನು ಹಾಕುತ್ತಿದ್ದ ಹಾಗೆ ಡೌನಾಗತೊಡಗಿತು. ಒಲೆಯ ಹಿಂಭಾಗದ ಗೋಡೆಗೆ ಒಂದು ಪುಟ್ಟಗೂಡು ಹೊಂದಿಕೊಂಡಿತ್ತು.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ಪುನರ್ನವ: ಅಳಿದುಳಿದ ಕುರುಕ್ಷೇತ್ರದಲ್ಲಿ
ಆ ಗೂಡಿನ ಒಳಗಡೆ ಕೈ ಹಾಕಿ ಒಂದು ಸಣ್ಣದಾದ, ಹೊಗೆ ಮತ್ತು ಮಸಿಗೆ ಕಪ್ಪಾಗಿರುವ, ತಾಮ್ರದ ಡಬ್ಬಿಯನ್ನು ಎತ್ತಿಕೊಂಡಳು. ಅದರ ಮುಚ್ಚಳ ವನ್ನು ಬಿಚ್ಚಿ ಅದರೊಳಗಿನ ಚಿಕ್ಕ ಚಮಚದಲ್ಲಿ ಅದರೊಳಗಿದ್ದ ಕಾಫಿ ಪುಡಿಯನ್ನು ತುಂಬಿಕೊಂಡು ಒಲೆಯ ಮೇಲಿನ ಪಾತ್ರೆಗೆ ಸುರುವಿ ಡಬ್ಬಿಯನ್ನು ತನ್ನ ಸ್ವಸ್ಥಳಕ್ಕೆ ತಲುಪಿಸಿದಳು. ಹಾಲಿನ ಪಾತ್ರೆಯನ್ನು ಇಳಿಸಿ, ಅಲ್ಲೇ ಗೋಡೆಯ ಮೊಳೆಯೊಂದಕ್ಕೆ ನೇತು ಹಾಕಲ್ಪಟ್ಟ ಸೋಸುವ ಜಾಲರವನ್ನು ಎತ್ತಿಕೊಂಡು, ಅದರ ಪಕ್ಕ ಮರದ ರಿಪೀಸನ್ನು ಗೋಡೆಯ ಎರಡು ಮೊಳೆಗಳ ಮೇಲಿಟ್ಟು ಅದರ ಮೇಲೆ ಮಗುಚಿ ಇಟ್ಟಿದ್ದ ಐದಾರು ಸ್ಟೀಲಿನ ಕಪ್ಪುಗಳಲ್ಲಿ ಒಂದನ್ನು ಎತ್ತಿಕೊಂಡು ಅದರಲ್ಲಿ ಸೋಸಿದಳು. ಕಿಟಕಿಯಿಂದ ತೂರಿ ಬರುತ್ತಿದ್ದ ಸೂರ್ಯನ ಬೆಳಕಿಗೆ ಮನೆಯೊಳಗಿನ ಧೂಳಿನ ಕಣಗಳು ಮತ್ತು ಅವುಗಳ ಜೊತೆಗೆ ಹೊಗೆ ಆಟವಾಡುತ್ತಿದ್ದವು ಬೆಳಕಿನ ಓರೆಯಾಕಾರದ ದಾರಿ ಮಾಡಿಕೊಂಡು. ಗವಾಕ್ಷಿಯಿಂದ ಇನ್ನೂ ಬೆಳಕು ನಿಚ್ಚಳವಾಗಿ ಹರಿದು ಬರುತ್ತಿರು ವಂತೆ ಕಾಣುತ್ತಿರಲಿಲ್ಲ. ಅವಳು ಕಾಫಿಯನ್ನು ಕುಡಿಯಲು ಬಲಗೈಯನ್ನು ಆಡಿಸುವಾಗ ಅವಳ ಕೈಯಲ್ಲಿದ್ದ ಎರಡೋ ಮೂರೋ ಬಳೆಗಳು ಒಂದು ಹಿನ್ನಲೆ ಸಂಗೀತವನ್ನು ಒದಗಿಸುತ್ತಿದ್ದವು. ಸ್ಟೀಲಿನ ಕಪ್ಪಿನ ಮೇಲೆ ಅವಳ ಪುಟ್ಟದಾದ ಆಕೃತಿ ಮೂಡಿತ್ತು. ಅವಳು ಕುಡಿಯುವ ಸಂದರ್ಭದಲ್ಲೆ ಅವಳ ಮನಸ್ಸು ಇನ್ನು ಒಂದು ಗಂಟೆ ಅಥವಾ ಒಂದೂವರೆ ಗಂಟೆಯಲ್ಲಿ ಅವಳು ಮಾಡಬಹುದಾಗಿದ್ದ ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಉಪ್ಪು, ಜೀರಿಗೆ, ಎಳ್ಳು ಹಾಕಿ ರಾಗಿಯ ತಪ್ಪಲೆ ರೊಟ್ಟಿಯನ್ನು ರೂಪಿಸುತ್ತಿತ್ತು.
ಕಸಗುಡಿಸಿ, ಕಸವನ್ನು ಮತ್ತು ಬೂದಿಯನ್ನು ಒಂದು ಮೊರದಲ್ಲಿ ತುಂಬಿಕೊಂಡು ಮನೆಯ ಹಿಂಭಾಗದ ತಿಪ್ಪೆಗೆ ಹಾಕಿ, ನಂತರ ಒಂದು, ಒಂದೂವರೆ ಗಂಟೆಯಲ್ಲಿ ಇದೂ ಆಗಿ, ಮುಂಬಾಗಿಲಿನಿಂದ ಹಗಲಿನ ಬೆಳಕು ಒಳಗಡೆ ಬಂದು ಸೆಟ್ಲಾಗತೊಡಗುತ್ತಿತ್ತು. ಆ ಬೆಳಕಿನಲ್ಲಿ ನಡುಮನೆಯಲ್ಲಿ ಕುಳಿತು ರೊಟ್ಟಿಯ ಕೊನೆಯ ತುತ್ತನ್ನು ಮುಗಿಸಿ ಕೈ ತೊಳೆದುಕೊಳ್ಳುತ್ತಿದ್ದಳು. ಅಷ್ಟೊತ್ತಿಗೆ, ಅಜ್ಜಿ ಅಜ್ಜಿ ಎಂದು ಪುಟ್ಟ ಹುಡುಗಿ ಕೂಗಿಕೊಂಡು ಬಂದಳು. ‘ಯಾಕೆ ರಶ್ಮಿ, ಏನಾಯ್ತೆ, ನಿಮ್ಮಪ್ಪ, ದೊಡ್ಡಪ್ಪ ಮತ್ತೆ ಗುದ್ದಾಡ್ತಿದರೇನೆ?’ ಎಂದು ಕೇಳಿದಳು. ‘ಅಜ್ಜಿ ಇಬ್ಬರೂ ಮನೆ ಮುಂದಿನ ತೆಂಗಿನ ಮರದ ಬೇಲಿಯೊಳಗಡೆ ಬಿದ್ದಿದ್ದಾರೆ’ ಎಂದಳು. ‘ಮೂರು ಬಿಟ್ಟೋವು, ನನ್ನ ಹೊಟ್ಟೆಗೆ ಯಾಕರ ಹುಟ್ಟಿದವೋ ಏನೋ’ ಎಂದು ಶಪಿಸಿಕೊಂಡಳು. ಮೂರು ದಿನದ ಹಿಂದೆ, ಅಂದರೆ, ಇವೊತ್ತು ಸೋಮವಾರ ಅಲ್ಲವೆ, ಭಾನುವಾರ, ಶನಿವಾರ, ಹ್ಞಾ ಶುಕ್ರವಾರ ಮಧ್ಯಾಹ್ನ ಹೀಗಾಗಿತ್ತು: ಸಾರು ಮಾಡಲು ಸೊಪ್ಪು ಕಿತ್ತುಕೊಂಡು ಬರಲು ಹೊಲದ ಕಡೆ ಹೋಗಿದ್ದ ಅವಳು ತನ್ನ ಚಿಕ್ಕ ಮಗ ರಂಗ ಮತ್ತು ದೊಡ್ಡ ಮಗ ಓಬ ಇಬ್ಬರೂ ಒಬ್ಬರಿಗೊಬ್ಬರು ಕುತ್ತಿಗೆಯನ್ನು ಬಿಗಿಯಾಗಿ ಹಿಡಿದುಕೊಂಡು ಸೆಣಸಾಟಕ್ಕೆ ಇಳಿದಿದ್ದುದನ್ನು ಕಂಡಿದ್ದಳು. ಥೂ ಮಾನಮರ್ಯಾದೆ ಇಲ್ಲದವೆ, ಯಾಕರ ಹುಟ್ಟಿದರೋ, ನಿಮ್ಮಪ್ಪ ಹೋದನು ಹೋದ ತಣ್ಣಗೆ, ನನ್ನೂ ಅವನ ಜೊತೆ ಕರಕೊಂಡು ಹೋಗಬಾರದಿತ್ತ, ಈ ಎಲ್ಡು ನೇತ್ರಗಳಿಂದ ಏನೆಲ್ಲ ನೋಡಬೇಕೋ ಎಂದು ಮಡಿಲಲ್ಲಿ ಸೊಪ್ಪನ್ನು ಬಿಗಿಯಾಗಿ ಕಟ್ಟಿಕೊಂಡು ಅವರನ್ನು ಬಿಡಿಸಲು ಹೋಗಿದ್ದಳು. ಚಿಕ್ಕ ಮಗ ರಂಗ ‘ನಿಮ್ಮವ್ವನ್ನ ನೀನ್ಯಾಕೆ ಬಂದೆ ಹೋಗೆ ಇಲ್ಲಿ’ ಎಂದು ಅವಳನ್ನು ದೂಡಿದ. ಅವಳು ಮಾರುದೂರ ಹೋಗಿ ಬಿದ್ದಳು. ‘ದೊಡ್ಡೋನು ಅನ್ನಿಸಿಕೊಂಡೋನು ನಿನಗೂ ಬುದ್ದೀ ಇಲ್ಲವೇನಲೇ ಓಬ, ಅವನು ದೂಕಿದರೂ ಸುಮ್ಮನಿದಿಯಾ ಎಂದು ಬೈದುಕೊಳ್ಳುತ್ತ ಸಾಯಿರಿ, ನಿಮ್ಮಿಂದ ಯಾವ ದೇಶ ಉದ್ಧಾರ ಆಗಬೇಕು, ಯಾವ ಕೇರಿಗೆ ಒಳ್ಳೆದು ಆಗಬೇಕು, ಹೊಲ ಉಳಿಸಿದ್ದಕ್ಕೆ ನಿಮಗೆ ಇಷ್ಟೊಂದು ಧಿಮಾಕು, ಅವಾಗ್ಲೆ ಎಲ್ಲ ಮಾರಿದ್ದಿದ್ದರೆ ಚೆನ್ನಾಗಿರ್ತಿತ್ತು’ ಎಂದು ಬೈದುಕೊಂಡ ತನ್ನನ್ನು ತಾನೇ ಶಪಿಸಿಕೊಳ್ಳುತ್ತ ಮನೆಯ ಕಡೆ ಬಂದಿದ್ದಳು.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ಎಡಬಲಗಳ ಸುತ್ತಮುತ್ತ: ಮಾತಿನ ಧೂಳು
ಕೃತಿ: ಯಾಬ್ಲಿ (ಸಣ್ಣಕತೆಗಳು)
ಲೇಖಕ: ಎಚ್. ಆರ್ ರಮೇಶ
ಪ್ರಕಾಶನ: ಅಂಕಿತ ಪುಸ್ತಕ
ಬೆಲೆ: 160 ರೂ.
ಅಂಕಣ
ಸೈಬರ್ ಸೇಫ್ಟಿ ಅಂಕಣ: ಅಳಿವಿನ ಅಂಚಿನಲ್ಲಿ ಝಣ ಝಣ ಕಾಂಚಾಣ!
ತಂತ್ರಜ್ಞಾನದ ಬೆಳವಣಿಗೆ ಈಗ ನಾವು ವ್ಯವಹರಿಸುವ ಬಗೆಯನ್ನೇ ಬದಲಿಸುತ್ತಿದೆ. ಹಣದ ಬದಲಿಗೆ ಈಗ ಯುಪಿಐ (UPI payment). ಮುಂದೆ ಆ ಜಾಗಕ್ಕೆ ಕ್ರಿಪ್ಟೋಕರೆನ್ಸಿ (Cryptocurrency) ಬರಲೂಬಹುದು. ಹಣ ಯಾವುದೇ ರೂಪದಲ್ಲಿದ್ದರೂ ಅದನ್ನು ದೋಚಲು ಹೊಂಚುಹಾಕುವ ಖದೀಮರಿರುವಾಗ ನಾವು ಸದಾ ಜಾಣರಾಗಿ, ಜಾಗರೂಕರಾಗಿರಬೇಕು.
ಮುಂದಿನ ದಿನಗಳಲ್ಲಿ ಕ್ರಿಪ್ಟೋಕರೆನ್ಸಿನಾ ಅಥವಾ CBDCನಾ?
ಸೈಬರ್ ಸೇಫ್ಟಿ ಅಂಕಣದಲ್ಲಿ ಮನಿ ಮಾತು ಯಾಕೆ ಅಂತ ಅಚ್ಚರಿಯೇ? 1992ರಲ್ಲಿ ಬಂದ ಶಿವರಾಜ್ ಕುಮಾರ್ ನಟಿಸಿದ ಪುರುಷೋತ್ತಮ ಚಿತ್ರದ ಕಾಂಚಾಣ ಕಾಂಚಾಣ ಹಾಡು ಕೇಳಿದ್ದೀರಾ? ಹಂಸಲೇಖರ ಸಾಹಿತ್ಯ ಜಗದಲ್ಲಿನ ಹಣದ ಪ್ರಾಮುಖ್ಯತೆಯನ್ನು ಬಹಳ ಸೊಗಸಾಗಿ ತಿಳಿಸುತ್ತದೆ. “ಜನವಿರುವುದು ಜಗದೊಳಗೆ, ಜಗವಿರುವುದು ಹಣದೊಳಗೆ, ಜನ ಜಗದೊಳಗೆ, ಜಗ ಹಣದೊಳಗೆ, ಸುಖವಿರುವುದು ಇದರೊಳಗೆ” ಅದರಲ್ಲಿ ಬರುವ ಝಣ್ ಝಣ್ ಹಣ, ಟಂಣ್ ಟಂಣ್ ಹಣ ಇನ್ನು ಕೆಲವೇ ವರ್ಷಗಳಲ್ಲಿ ಸದ್ದು ಮಾಡುವುದನ್ನು ನಿಲ್ಲಿಸಲಿದೆ.
ಸೈಬರ್ ಜಗತ್ತಿನಲ್ಲೂ ದುಡ್ಡೇ ದೊಡ್ಡಪ್ಪ. ಯಾವುದೇ ಹ್ಯಾಕಿಂಗ್ ಇರಲಿ, ರಾನ್ಸಮ್ವೇರ್ ಅ್ಯಟಾಕ್ ಆಗಲಿ, ಡಾಟಾ ಕಳ್ಳತನವಾಗಿರಲಿ, ಸೋಷಿಯಲ್ ಇಂಜಿನಿಯರಿಂಗ್ ತಂತ್ರ ಬಳಸಿದ ದಾಳಿ ಇರಬಹುದು, ಎಲ್ಲದರ ಮುಖ್ಯ ಉದ್ದೇಶವೇ ಹಣ. ಅದು ಗರಿಗರಿ ನೋಟಿರಲಿ ಅಥವಾ ಕ್ರಿಪ್ಟೋಕರೆನ್ಸಿ ಇರಲಿ. ಅಂತರ್ಜಾಲದ ಅಂತರಂಗದ ಡೀಪ್ ಡಾರ್ಕ್ ವೆಬ್ನಲ್ಲಿ ಎಲ್ಲವೂ ಮಾನ್ಯ.
ತಂತ್ರಜ್ಞಾನದ ಬೆಳವಣಿಗೆ ಈಗ ನಾವು ವ್ಯವಹರಿಸುವ ಬಗೆಯನ್ನೇ ಬದಲಿಸುತ್ತಿದೆ. ಕಡಲೆಕಾಯಿ ಮಾರುವವರಿಂದ ಕಾಂಟಿನೆಂಟಲ್ ಊಟ ಬಡಿಸುವ ಹೋಟೆಲ್ವರೆಗೆ ನಗದಿಗಿಂತ ‘ಯುಪಿಐ’ ಪಾವತಿಯೇ ಸ್ವಾಗತಾರ್ಹ. ಪ್ರಪಂಚದಾದ್ಯಂತ ಚಲಾವಣೆಯಲ್ಲಿರುವ ಭೌತಿಕ (physical) ಹಣ ಕೇವಲ ಶೇಕಡ 8 ಮಾತ್ರ (8%). ಅಂದರೆ ಡಿಜಿಟಲ್ ರೂಪದಲ್ಲಿ ಚಲಾವಣೆ ಆಗ್ತಿರುವ ಹಣ ಶೇಕಡ 92. ಭಾರತದಲ್ಲೂ ಚಲಾವಣೆಯಲ್ಲಿರುವ ನಗದು ಹಣದ ಪ್ರಮಾಣ 2023 ಮಾರ್ಚ್ ಅಂತ್ಯಕ್ಕೆ ಶೇಕಡ 10.8ಕ್ಕೆ ತಲುಪಿದೆ. 2017ರಲ್ಲಿ ಇದರ ಪ್ರಮಾಣ ಶೇಕಡ 50% ಇತ್ತು.
ಅದರ ಜನಪ್ರಿಯತೆ ಮತ್ತು ಬಳಕೆಯ ಹೊರತಾಗಿಯೂ, ಹಣವು ಸಾಮಾಜಿಕವಾಗಿ ಸಾಕಷ್ಟು ಸಮಸ್ಯೆಗಳಿಗೂ ಕಾರಣವಾಗಿದೆ. ಹಣದ ಪರಿಕಲ್ಪನೆಯು ಅಸ್ತಿತ್ವಕ್ಕೆ ಬಂದಾಗಿನಿಂದ, ಇಬ್ಬರು (ಅಥವಾ ಹೆಚ್ಚು) ಅಪರಿಚಿತರು ಪರಿಚಯ ಮಾಡಿಕೊಳ್ಳದೆ ಅಥವಾ ಕೌಂಟರ್-ಪಾರ್ಟಿ ಅಪಾಯಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ವಹಿವಾಟು ನಡೆಸಲು, ವಿನಿಮಯ ಮಾಡಿಕೊಳ್ಳಲು ಸಹಕಾರಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ನೀವು ಕ್ರಿಪ್ಟೋಕರೆನ್ಸಿ, ಬಿಟ್ ಕಾಯಿನ್ ಅಂತ ಕೇಳಿರಬಹುದು. ಕ್ರಿಪ್ಟೋಕರೆನ್ಸಿ ಬಹುಶಃ ಹಣಕಾಸು ಮತ್ತು ತಂತ್ರಜ್ಞಾನದ ಡೊಮೇನ್ನಲ್ಲಿ ಅತಿದೊಡ್ಡ ಹೊಸತನ ತಂದ ಪರಿಕಲ್ಪನೆಯಾಗಿದೆ. ತುಲನಾತ್ಮಕವಾಗಿ ಬಹಳ ಕಡಿಮೆ ಅವಧಿಯಲ್ಲಿ, ಕ್ರಿಪ್ಟೋಕರೆನ್ಸಿಗಳು ವಿಶ್ವಾದ್ಯಂತ ಹಣಕಾಸು ಮೂಲಸೌಕರ್ಯಗಳನ್ನು ಪರಿವರ್ತಿಸುವ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿವೆ.
2008ರಲ್ಲಿ ಮೊದಲ ಬಾರಿಗೆ ಬಿಟ್ಕಾಯಿನ್ ಎನ್ನುವ ಕ್ರಿಪ್ಟೋಕರೆನ್ಸಿಯನ್ನು ಪರಿಚಯಿಸಿದಾಗಿನಿಂದ, ಕ್ರಿಪ್ಟೋಕರೆನ್ಸಿಗಳು ಬಹಳಷ್ಟು ಅಭಿವೃದ್ಧಿಯನ್ನು ಹೊಂದಿದೆ. ಆರಂಭದಲ್ಲಿ, ಕ್ರಿಪ್ಟೋಕರೆನ್ಸಿಗಳು ಜನಪ್ರಿಯವಾಗುವ ಮೊದಲು ಎಲ್ಲಾ ವಲಯಗಳಿಂದ ಅನಿಶ್ಚಿತತೆ ಮತ್ತು ಸಂದೇಹವನ್ನು ಎದುರಿಸಿದವು. ಈಗ, ಭ್ರಮನಿರಸನದ ಹಂತವನ್ನು ದಾಟಿ ಉಪಯುಕ್ತತೆಯ ಉತ್ತಮ ಪುರಾವೆಯೊಂದಿಗೆ ಪ್ರಬುದ್ಧವಾಗುತ್ತಿವೆ.
ಕ್ರಿಪ್ಟೋಕರೆನ್ಸಿ ಮೂಲತಃ ಡಿಜಿಟಲ್ ಕರೆನ್ಸಿಯಾಗಿದ್ದು ಅದನ್ನು ನೀವು ಆನ್ಲೈನ್ನಲ್ಲಿ ಮೌಲ್ಯವನ್ನು ವಿನಿಮಯ ಮಾಡಿಕೊಳ್ಳಲು ಬಳಸಬಹುದು. ಕ್ರಿಪ್ಟೋಕರೆನ್ಸಿಯ ಪ್ರಾಥಮಿಕ ಅಡಿಪಾಯ ಬ್ಲಾಕ್ಚೈನ್ ತಂತ್ರಜ್ಞಾನವಾಗಿದೆ. ಇದು ಕ್ರಿಪ್ಟೋಕರೆನ್ಸಿಗಳು ಇಂದು ಸಾಕಷ್ಟು ಜನಪ್ರಿಯವಾಗಿರುವ ವಿಕೇಂದ್ರೀಕರಣವನ್ನು ಒದಗಿಸುತ್ತದೆ. ವಿಕೇಂದ್ರೀಕರಣವು ಕ್ರಿಪ್ಟೋಕರೆನ್ಸಿಗಳನ್ನು ಕೇಂದ್ರೀಯ ಪ್ರಾಧಿಕಾರದ ನಿಯಂತ್ರಣದಿಂದ ಮುಕ್ತಗೊಳಿಸುತ್ತದೆ. ಪರಿಣಾಮವಾಗಿ, ಕ್ರಿಪ್ಟೋಕರೆನ್ಸಿ ಹೊಂದಿರುವವರು ತಮ್ಮ ಹಣದ ಮೇಲೆ ನಿಯಂತ್ರಣವನ್ನು ಸುಧಾರಿಸಿದ್ದಾರೆ ಮತ್ತು ಅದನ್ನು ಅವರು ಬಯಸಿದಂತೆ ಬಳಸುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ.
ಮೊಟ್ಟಮೊದಲ ಕ್ರಿಪ್ಟೋಕರೆನ್ಸಿ, ಬಿಟ್ಕಾಯಿನ್, ಬ್ಲಾಕ್ಚೈನ್ ತಂತ್ರಜ್ಞಾನದ ಆಧಾರದ ಮೇಲೆ ಎಲೆಕ್ಟ್ರಾನಿಕ್ ಪೀರ್-ಟು-ಪೀರ್ ನಗದು ವ್ಯವಸ್ಥೆಯಾಗಿ ಹೊರಹೊಮ್ಮಿತು. ಬಿಟ್ಕಾಯಿನ್ನ ಅನಾಮಧೇಯ ಸಂಸ್ಥಾಪಕ, ಸತೋಶಿ ನಕಾಮೊಟೊ ಅವರು 2008ರಲ್ಲಿ ಬಿಟ್ಕಾಯಿನ್ನಲ್ಲಿ ಶ್ವೇತಪತ್ರವನ್ನು ಬಿಡುಗಡೆ ಮಾಡಿದರು ಮತ್ತು ನಂತರ 2009ರಲ್ಲಿ ಕ್ರಿಪ್ಟೋಕರೆನ್ಸಿಯನ್ನು ಪ್ರಾರಂಭಿಸಿದರು.
ಕ್ರಿಪ್ಟೋಕರೆನ್ಸಿಗಳ ಮೌಲ್ಯವು ಹೆಚ್ಚಾಗಿ ಬ್ಲಾಕ್ಚೈನ್ ಸಂಬಂಧವನ್ನು ಅವಲಂಬಿಸಿರುತ್ತದೆ. ಬ್ಲಾಕ್ಚೈನ್ ಕ್ರಿಪ್ಟೋಕರೆನ್ಸಿಗಳಲ್ಲಿ ವಿಶ್ವಾಸಾರ್ಹವಲ್ಲದ (trustless), ಸುರಕ್ಷಿತ, ವಿಕೇಂದ್ರೀಕೃತ ಮತ್ತು ಕ್ರಿಪ್ಟೋಗ್ರಾಫಿಕ್ ಗುಣಲಕ್ಷಣಗಳನ್ನು ನೀಡುತ್ತದೆ. ಇದು ಎಲ್ಲಾ ವಹಿವಾಟುಗಳ ದಾಖಲೆಯೊಂದಿಗೆ ಬದಲಾಗದ ವಿತರಣಾ ಲೆಡ್ಜರ್ ಅನ್ನು ನೀಡುತ್ತದೆ, ಇದರಿಂದಾಗಿ ಎಲ್ಲಾ ವಹಿವಾಟುಗಳ ಪಾರದರ್ಶಕತೆ ಮತ್ತು ಸಮಗ್ರತೆಯನ್ನು ಖಾತ್ರಿಪಡಿಸುತ್ತದೆ.
2022ರಲ್ಲಿ, ಕ್ರಿಪ್ಟೋಕರೆನ್ಸಿಗಳ ಸಂಖ್ಯೆಯು 9,000 ಕ್ಕಿಂತ ಹೆಚ್ಚಿದೆ, ಪ್ರತಿದಿನ ಅನೇಕ ಹೊಸ ಕ್ರಿಪ್ಟೋಕರೆನ್ಸಿಗಳು ಮತ್ತು ಸ್ವತ್ತುಗಳು ಹೊರಹೊಮ್ಮುತ್ತಿವೆ. ಮಾರ್ಚ್ 2023ರ ಹೊತ್ತಿಗೆ, 22,904 ಕ್ರಿಪ್ಟೋಕರೆನ್ಸಿಗಳು ಅಸ್ತಿತ್ವದಲ್ಲಿವೆ. ಆದಾಗ್ಯೂ, ಎಲ್ಲಾ ಕ್ರಿಪ್ಟೋಕರೆನ್ಸಿಗಳು ಸಕ್ರಿಯ ಅಥವಾ ಮೌಲ್ಯಯುತವಾಗಿಲ್ಲ. ಅನೇಕ “ಡೆಡ್” ಕ್ರಿಪ್ಟೋಗಳನ್ನು ಗಣನೆಗೆ ತೆಗೆದುಕೊಳ್ಳದಿದ್ದರೂ ಸುಮಾರು 8,832 ಸಕ್ರಿಯ ಕ್ರಿಪ್ಟೋಕರೆನ್ಸಿಗಳು ಉಳಿಯುತ್ತವೆ. ಪ್ರಪಂಚದಾದ್ಯಂತ 300 ಮಿಲಿಯನ್ (30 ಕೋಟಿ) ಕ್ರಿಪ್ಟೋಕರೆನ್ಸಿ ಬಳಕೆದಾರರಿದ್ದಾರೆ.
ಕ್ರಿಪ್ಟೋಕರೆನ್ಸಿಯ ಬೆಲೆಯು ಆಗಾಗ್ಗೆ ಬದಲಾಗುತ್ತದೆ ಮತ್ತು ಹೆಚ್ಚು ಅನಿಶ್ಚಿತವಾಗಿರುತ್ತದೆ (volatile). ಬಿಟ್ಕಾಯಿನ್ (BTC), ಈಥೀರಿಯಮ್ ನೆಟ್ವರ್ಕ್ ಆಧಾರಿತ ಈಥರ್ (ETC), ಡಾಡ್ಚ್ಕಾಯಿನ್ (DODGE), ಲೈಟ್ಕಾಯಿನ್(LTC) ಮತ್ತು ರಿಪ್ಪಲ್ (XRP) ಅತ್ಯಂತ ಪ್ರಸಿದ್ಧ ಕ್ರಿಪ್ಟೋಕರನ್ಸಿಗಳಾಗಿವೆ. 20 ಸೆಪ್ಟೆಂಬರ್ 2023ರಂದು ಒಂದು ಬಿಟ್ಕಾಯಿನ್ ಬೆಲೆ 22,48,501 ರೂಪಾಯಿ ಮತ್ತು ಒಂದು ಈಥರ್ ಬೆಲೆ 1,35,085 ರೂಪಾಯಿ ಇದೆ. ಮುಂದಿನ ವಾರಗಳಲ್ಲಿ ಕ್ರಿಪ್ಟೋಕರನ್ಸಿಯನ್ನು ಡಿ-ಕ್ರಿಪ್ಟ್ ಮಾಡಿ ಸೈಬರ್ ಜಗತ್ತಿನಲ್ಲಿ ಇದರ ಬಳಕೆಯ ಬಗ್ಗೆಯೂ ಬೆಳಕು ಚೆಲ್ಲುವ ಪ್ರಯತ್ನ ಮಾಡ್ತೇನೆ.
ಕ್ರಿಪ್ಟೋಕರೆನ್ಸಿಗಳಿಂದ ಹೆಚ್ಚುತ್ತಿರುವ ಬೆದರಿಕೆ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಅನ್ವೇಷಿಸಲು ಬಹುಶಃ ಕೇಂದ್ರೀಯ ಬ್ಯಾಂಕ್ಗಳನ್ನು ಪ್ರಚೋದಿಸಿದೆ. ವಿಶ್ವಾದ್ಯಂತ ಬಹುತೇಕ ದೇಶಗಳು ತಮ್ಮದೇ ಆದ ಡಿಜಿಟಲ್ ಕರೆನ್ಸಿಯನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಬ್ಯಾಂಕ್ ಆಫ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ಸ್ (BIS) 2022 ರ ಸಮೀಕ್ಷೆಯ ಪ್ರಕಾರ, 93 ಪ್ರತಿಶತ ಕೇಂದ್ರೀಯ ಬ್ಯಾಂಕ್ಗಳು CBDC ಗಳನ್ನು ಅನ್ವೇಷಿಸುತ್ತಿವೆ ಮತ್ತು 58 ಪ್ರತಿಶತದಷ್ಟು ಅವರು ಸಣ್ಣ ಅಥವಾ ಮಧ್ಯಮ ಅವಧಿಯಲ್ಲಿ ಚಿಲ್ಲರೆ (retail) CBDC ಯನ್ನು ನೀಡುವ ಸಾಧ್ಯತೆಯಿದೆ. ವಾಸ್ತವವಾಗಿ, ಭಾರತದಲ್ಲಿ CBDC ಇ-ರೂಪಾಯಿ ಅಥವಾ ಇ-ರುಪಿ ಎಂದು ಕರೆಯಲ್ಪಡುತ್ತದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ರ ಕೇಂದ್ರ ಬಜೆಟ್ನಲ್ಲಿ CBDC ಯನ್ನು ಪರಿಚಯಿಸುವುದಾಗಿ ಘೋಷಿಸಿದರು. ಈ ಉದ್ದೇಶಕ್ಕಾಗಿ, ಹಣಕಾಸು ಮಸೂದೆ 2022ರ ಅಂಗೀಕಾರದೊಂದಿಗೆ RBI ಕಾಯಿದೆ 1934 ರ ಸಂಬಂಧಿತ ವಿಭಾಗಗಳಿಗೆ ಅಗತ್ಯ ತಿದ್ದುಪಡಿಗಳನ್ನು ಮಾಡಲಾಗಿದೆ.
2022ರಲ್ಲಿ, RBI ಡಿಜಿಟಲ್ ರೂಪಾಯಿ, ಭಾರತದ ಸ್ವಂತ CBDC ಮತ್ತು ಸಾರ್ವಭೌಮ ಕರೆನ್ಸಿಯ ಎಲೆಕ್ಟ್ರಾನಿಕ್ ರೂಪವನ್ನು ಅನಾವರಣಗೊಳಿಸಿತು. ಆ ಸಮಯದಲ್ಲಿ, ಕೇಂದ್ರೀಯ ಬ್ಯಾಂಕ್ ಇ-ರುಪಿಯನ್ನು ಎರಡು ಆವೃತ್ತಿಗಳಲ್ಲಿ ನೀಡಲು ಪ್ರಸ್ತಾಪಿಸಿತು- CBDC-ಸಗಟು (CBDC-W) ಮತ್ತು CBDC-ರಿಟೇಲ್ (CBDC-R). CBDC-W ಆಯ್ದ ಹಣಕಾಸು ಸಂಸ್ಥೆಗಳಿಗೆ ನಿರ್ಬಂಧಿತ ಪ್ರವೇಶಕ್ಕಾಗಿ, CBDC-R ಅನ್ನು ಖಾಸಗಿ ವಲಯ, ಹಣಕಾಸು-ಅಲ್ಲದ ಗ್ರಾಹಕರು ಮತ್ತು ವಹಿವಾಟುಗಳು, ವ್ಯಾಪಾರಸ್ಥರು ಸೇರಿದಂತೆ ಎಲ್ಲರೂ ಬಳಸಬಹುದು.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು
ಸಗಟು CBDCಯ ಪ್ರಾಯೋಗಿಕ ಯೋಜನೆಗಾಗಿ ರಿಸರ್ವ್ ಬ್ಯಾಂಕ್ ಒಂಬತ್ತು ಬ್ಯಾಂಕುಗಳನ್ನು ಆರಿಸಿಕೊಂಡಿದೆ. ಈ ಬ್ಯಾಂಕ್ಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, HDFC ಬ್ಯಾಂಕ್, ICICI ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, YES ಬ್ಯಾಂಕ್, IDFC ಫಸ್ಟ್ ಬ್ಯಾಂಕ್ ಮತ್ತು HSBC ಸೇರಿವೆ. ರಿಟೇಲ್ ಇ-ರುಪಿಯ ಪ್ರಯೋಗ ನಾಲ್ಕು ಬ್ಯಾಂಕ್ ಮತ್ತು ಕೆಲವು ನಗರಗಳಲ್ಲಿ ಪ್ರಾರಂಭವಾಗಿ ಇತ್ತೀಚಿನ ವರದಿಯ ಪ್ರಕಾರ ಹದಿಮೂರು ಬ್ಯಾಂಕ್ಗಳ ಬಳಕೆದಾರರು ಈ ಬ್ಯಾಂಕ್ಗಳು ನೀಡುವ ಡಿಜಿಟಲ್ ವ್ಯಾಲೆಟ್ ಅನ್ನು ಬಳಸಿಕೊಂಡು ಡಿಜಿಟಲ್ ರೂಪಾಯಿಯೊಂದಿಗೆ ವಹಿವಾಟು ನಡೆಸಬಹುದಾಗಿದೆ. ಚಿಲ್ಲರೆ ಇ-ರೂಪಾಯಿಯನ್ನು 50 ಪೈಸೆ, 1, 2, 5, 10, 20, 50, 100, 200, 500 ಮತ್ತು 2000 ಮುಖಬೆಲೆಗಳಲ್ಲಿ ಲಭ್ಯವಿರುತ್ತದೆ. ಆದರೆ ಸಗಟು ಇ-ರೂಪಾಯಿಯು ಕೇಂದ್ರದ ಪ್ರಕಾರ ಯಾವುದೇ ಮುಖಬೆಲೆಯನ್ನು ಹೊಂದಿರುವುದಿಲ್ಲ.
ತಂತ್ರಜ್ಞಾನದ ಬಳಕೆ ನಮ್ಮ ಜೀವನವನ್ನು, ವ್ಯಾಪಾರವಹಿವಾಟುಗಳನ್ನು ಸುಗಮಗೊಳಿಸುವುದರೊಂದಿಗೆ ಹೊಸ ಬಗೆಯ ಅಪಾಯಗಳಿಗೂ ದಾರಿ ಮಾಡುತ್ತವೆ. ಹಣ ಯಾವುದೇ ರೂಪದಲ್ಲಿದ್ದರೂ ಅದನ್ನು ದೋಚಲು ಹೊಂಚುಹಾಕುವ ಖದೀಮರಿರುವಾಗ ನಾವು ಸದಾ ಜಾಣರಾಗಿ, ಜಾಗರೂಕರಾಗಿರಬೇಕು.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಅನುಕೂಲಗಳು ಹೆಚ್ಚಾದಂತೆ ಆತಂಕಕ್ಕೆ ನೂರು ದಾರಿಗಳು
ಪ್ರಮುಖ ಸುದ್ದಿ
Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!
Dina Bhavishya : ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ ನವಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಚಂದ್ರನು ಮಕರ ರಾಶಿಯಿಂದ ಭಾನುವಾರ ರಾತ್ರಿ 07:29ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮಿಥುನ, ಕಟಕ, ತುಲಾ, ಧನಸ್ಸು, ಕುಂಭ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ವೃಷಭ ರಾಶಿಯವರು ಅಪರಿಚಿತರೊಂದಿಗೆ ಅನಿವಾರ್ಯ ಕಾರಣಗಳಿಂದ ವಾದಕ್ಕೆ ಇಳಿಯುವಂತೆ ಆಗಬಹುದು. ಹೀಗಾಗಿ ಮಾತು ಮಿತವಾಗಿರಲಿ. ಸಿಂಹ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಧನಸ್ಸು ರಾಶಿಯವರು ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ, ಯಾವುದೇ ಹಣಕಾಸು ಒಪ್ಪಂದಗಳನ್ನು ಮಾಡಿಕೊಳ್ಳುವುದು ಬೇಡ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.
ಇಂದಿನ ಪಂಚಾಂಗ (kannada panchanga) (24-09-2023)
ಮೇಷ: ಹಣಕಾಸಿನ ಹೂಡಿಕೆ ವ್ಯವಹಾರದಲ್ಲಿ ಹೊಸ ಆಲೋಚನೆಗಳನ್ನು ಮಾಡುವಿರಿ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಸಮಯ ವ್ಯರ್ಥ ಮಾಡದೆ ಕಾರ್ಯದಲ್ಲಿ ಮುನ್ನುಗ್ಗಿ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8
ವೃಷಭ: ಹಿರಿಯರ ಸಲಹೆ ಆರ್ಥಿಕವಾಗಿ ಲಾಭ ತರುವುದು. ಕುಟುಂಬದ ಸದಸ್ಯರ ಬೆಂಬಲ ಕೆಲಸ ಕಾರ್ಯಗಳಲ್ಲಿ ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಅಭಿಪ್ರಾಯಗಳಿಗೆ ಮನ್ನಣೆ ಸಿಕ್ಕು ಪ್ರಶಂಸೆ ಪಡೆಯುವಿರಿ. ಅಪರಿಚಿತರೊಂದಿಗೆ ಅನಿವಾರ್ಯ ಕಾರಣಗಳಿಂದ ವಾದಕ್ಕೆ ಇಳಿಯುವಂತೆ ಮಾಡಬಹುದು, ಮಾತು ಮಿತವಾಗಿರಲಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8
ಮಿಥುನ: ಆಶಾವಾದಿಗಳಾಗಿರಿ, ಆತ್ಮವಿಶ್ವಾಸದಿಂದ ಮಾಡಿದ ಕಾರ್ಯ ಯಶಸ್ಸುನ್ನು ತಂದು ಕೊಡುವುದು. ಅನಿವಾರ್ಯ ಕಾರಣಗಳಿಂದ ಖರ್ಚು ಮಾಡುವ ಸಾಧ್ಯತೆ ಇದೆ. ಹಳೆಯ ಪರಿಚಿತರ ಸಂಪರ್ಕ ಪುನಃ ಸ್ಥಾಪಿತವಾಗುವುದು. ವೈವಾಹಿಕ ಜೀವನಕ್ಕೆ ಹಿರಿಯರಿಂದ ಮಾರ್ಗದರ್ಶನ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6
ಕಟಕ: ಅವಿರತವಾಗಿ ಶ್ರಮಿಸಿದ ಜೀವಕೆ ವಿಶ್ರಾಂತಿಯು ಸಿಗಲಿದೆ. ಸಂಗಾತಿಯೊಂದಿಗೆ ಹೂಡಿಕೆ ಕುರಿತಾಗಿ ಚರ್ಚೆ ಮಾಡುವಿರಿ. ಉತ್ತಮ ವ್ಯಕ್ತಿಗಳ ಸಂಪರ್ಕ, ಮಾರ್ಗದರ್ಶನ ಸಿಗಲಿದೆ. ಆರ್ಥಿಕವಾಗಿ ಲಾಭ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ ಇದೆ ತಾಳ್ಮೆಯಿಂದ ಸಹಕರಿಸಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9
ಸಿಂಹ: ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ವ್ಯಕ್ತಿಗಳನ್ನು ಭೇಟಿಯಾಗುವಿರಿ. ಹಣಕಾಸು ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ಅಗತ್ಯ ವಸ್ತುಗಳ ಖರೀದಿಸುವಿರಿ. ಆತುರದ ಮಾತುಗಳು ಸುತ್ತಮುತ್ತಲಿನ ಜನರೊಂದಿಗೆ ವಾದಕ್ಕೆ ಇಳಿಯುವಂತೆ ಮಾಡಬಹುದು ಎಚ್ಚರಿಕೆ ಇರಲಿ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8
ಕನ್ಯಾ: ಹೊಸ ಆರ್ಥಿಕ ಒಪ್ಪಂದಗಳು ಗರಿಗೆದರಲಿವೆ. ಆಪ್ತರಿಂದ ಆಮಂತ್ರಣ ಸಿಗಲಿದೆ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಆಸ್ತಿ ಖರೀದಿ ವ್ಯವಹಾರದ ಕುರಿತು ಚರ್ಚೆ ಮಾಡುವಿರಿ. ಸಂಗಾತಿಯ ಮಾತುಗಳಿಗೆ ಮನ್ನಣೆ ಸಿಗದೇ ಇರುವುದರಿಂದ ನಿಮ್ಮ ಮೇಲೆ ಕೋಪಿಸಿಕೊಳ್ಳುವ ಸಾಧ್ಯತೆ ಇದೆ. ನಗುವಿನ ಮೂಲಕ ಪರಿಸ್ಥಿತಿ ತಿಳಿಗೊಳಿಸಿ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 6
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ಗಾಳಿಯಲ್ಲಿ ಗೋಪುರ ಕಟ್ಟಿಕೊಂಡು ಸಮಯ, ವ್ಯರ್ಥ ಪ್ರಯತ್ನ,ಮಾಡಬೇಡಿ. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ. ಕುಟುಂಬದ ಸದಸ್ಯರ ಮಾರ್ಗದರ್ಶನ ಪಡೆಯುವುದು ಒಳ್ಳೆಯದು. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಸ್ವಲ್ಪ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಸಂಗಾತಿಯ ಮಧುರ ಪ್ರೀತಿ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:
ವೃಶ್ಚಿಕ: ಆತ್ಮವಿಶ್ವಾಸದಿಂದ ಕಾರ್ಯದಲ್ಲಿ ಯಶಸ್ಸು ಸಿಗುವುದು. ಹಣಕಾಸಿನ ವ್ಯವಹಾರ ನಿರೀಕ್ಷಿಸಿದಷ್ಟು ಸಾಧ್ಯವಿಲ್ಲ. ಅತಿಥಿಗಳ ಆಗಮನದಿಂದ ನಿಮ್ಮ ಯೋಚಿತ ಕಾರ್ಯ ವಿಳಂಬವಾಗುವ ಸಾಧ್ಯತೆ ಇದೆ. ಆತುರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳಲಾಗುವುದು ಬೇಡ. ಆರೋಗ್ಯ ಉತ್ತಮ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1
ಧನಸ್ಸು: ಕುಟುಂಬದ ಸದಸ್ಯರೊಂದಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ, ಯಾವುದೇ ಹಣಕಾಸು ಒಪ್ಪಂದಗಳನ್ನು ಮಾಡಿಕೊಳ್ಳುವುದು ಬೇಡ. ಪ್ರೀತಿ ಪಾತ್ರರೊಂದಿಗೆ ಆತುರದ ಮಾತುಗಳಿಂದ ಹಳಿಸುವ ಸಾಧ್ಯತೆ ಇದೆ. ಹೀಗಾಗಿ ನಿಧಾನಿಸಿ, ಯೋಚಿಸಿ ಮಾತನಾಡಿ.ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7
12 ರಾಶಿಯ ವಾರ ಭವಿಷ್ಯ ಹೇಗಿದೆ ನೋಡಿ
ಮಕರ: ಬಹಳ ದಿನಗಳ ಕನಸು ನನಸಾಗುವ ಕಾಲ. ಆತುರದಲ್ಲಿ ಯಾವುದೇ ಸಂಕಲ್ಪ ಮಾಡುವುದು ಬೇಡ. ಸ್ನೇಹಿತರ ಕಷ್ಟಕಾಲಕ್ಕೆ ಸ್ಪಂದಿಸುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7
ಕುಂಭ: ಅತಿಯಾದ ಒತ್ತಡದಿಂದ ಹೊರಬರಲು ವ್ಯಸನಗಳ ಮೊರೆ ಹೋಗುವದು ಬೇಡ, ಆಧ್ಯಾತ್ಮಿಕ ವ್ಯಕ್ತಿಗಳ ಮಾರ್ಗದರ್ಶನ ಪಡೆಯಿರಿ.ತಾಳ್ಮೆಯಿಂದ ವರ್ತಿಸಿ.ಆತುರದಿಂದ ಮಾತನಾಡುವುದು ಬೇಡ. ಉದ್ಯೋಗಿಗಳಿಗೆ ಹೆಚ್ಚಿನ ಒತ್ತಡ ಇರಲಿದೆ. ಕುಟುಂಬದ ಬೆಂಬಲ ಸಿಗಲಿದೆ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5
ಇದನ್ನೂ ಓದಿ : ತಾತಯ್ಯ ತತ್ವಾಮೃತಂ: ದೇಹದಲ್ಲಿ ಜೀವ ಇರುವಾಗ ಏನು ಮಾಡಬೇಕು?
ಮೀನ: ಕೋಪದಿಂದ ಅಪಾಯ ತಂದುಕೊಳ್ಳುವುದು ಬೇಡ. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆಗುವ ಸಾಧ್ಯತೆ ಕಾಳಜಿ ವಹಿಸುವುದು ಸೂಕ್ತ. ವ್ಯಾಪಾರ ವ್ಯವಹಾರದಲ್ಲಿ ಸಾಧಾರಣ.ದಿನದ ಮಟ್ಟಿಗೆ ಖರ್ಚು.ಸಂಗಾತಿಯ ವರ್ತನೆ ನಿಮಗೆ ಕೋಪ ತರಿಸಬಹುದು.ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | [email protected]
-
ಸುವಚನ3 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ವೈರಲ್ ನ್ಯೂಸ್13 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ಕರ್ನಾಟಕ18 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
South Cinema15 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!
-
ಪ್ರಮುಖ ಸುದ್ದಿ12 hours ago
Sandalwood : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ; ಗೆದ್ದವರ ವಿವರ ಇಲ್ಲಿದೆ
-
ದೇಶ23 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
ಬಾಲಿವುಡ್19 hours ago
Rashmika Mandanna: ಕತ್ತಿನಲ್ಲಿ ತಾಳಿ, ಕೆಂಪು ಬಾರ್ಡರ್ ಸೀರೆಯುಟ್ಟು ಫಸ್ಟ್ ಲುಕ್ನಲ್ಲೇ ನಾಚಿ ನೀರಾದ ರಶ್ಮಿಕಾ!
-
ಕ್ರಿಕೆಟ್19 hours ago
Varanasi Stadium: ವಾರಾಣಸಿ ಕ್ರಿಕೆಟ್ ಸ್ಟೇಡಿಯಂ ಶಿವಮಯ; ಹೀಗಿರಲಿದೆ ಇದರ ವೈಭವ, ವೈಶಿಷ್ಟ್ಯ