Veer Savarkar | ವೀರ ಸಾವರ್ಕರ್‌ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದಿದ್ದೇಕೆ? - Vistara News

ಕರ್ನಾಟಕ

Veer Savarkar | ವೀರ ಸಾವರ್ಕರ್‌ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದಿದ್ದೇಕೆ?

ಸ್ವಾತಂತ್ರ್ಯ ವೀರ ಸಾವರ್ಕರ್‌ ಕುರಿತು ಅನೇಕ ಚರ್ಚೆ, ವಿವರಣೆಗಳ ನಂತರವೂ ವಿವಾದಗಳು ಮುಂದುವರಿದಿವೆ. ಈ ಕುರಿತು ಸ್ಪಷ್ಟತೆ ನೀಡುವ ಮತ್ತೊಂದು ಪ್ರಯತ್ನವನ್ನು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾಡಿದ್ದಾರೆ. ಅವರು ಬರೆದಿರುವ ʼವೀರ ಸಾವರ್ಕರ್‌: ಸಾಹಸ, ಯಾತನೆ, ಅವಮಾನʼ ಕೃತಿಯ ಪೂರ್ಣಪಠ್ಯ ಇಲ್ಲಿದೆ.

VISTARANEWS.COM


on

savarkar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಜ್ಯದಲ್ಲೀಗ ವೀರ ಸಾವರ್ಕರ್‌ ಹೆಸರು ಭಾರಿ ಸುದ್ದಿಯಲ್ಲಿದೆ. ಸಾವರ್ಕರ್‌ ಸ್ವಾತಂತ್ರ್ಯ ವೀರ ಎಂದು ಬಿಜೆಪಿಯವರು ಅಭಿಯಾನ ನಡೆಸುತ್ತಿದ್ದರೆ, ಕಾಂಗ್ರೆಸ್‌ ಮುಖಂಡರು ಸಾವರ್ಕರ್‌ ಹೇಡಿ ಎಂದು ಟೀಕಿಸುತ್ತಿದ್ದಾರೆ. ಈ ನಡುವೆ ಚಕ್ರವರ್ತಿ ಸೂಲಿಬೆಲೆ ಅವರು ಸಾವರ್ಕರ್‌ ಕುರಿತ ಕಿರು ಪುಸ್ತಕ ಬರೆದಿದ್ದಾರೆ. ಈ ಪುಸ್ತಕದಲ್ಲಿನ ಸಂಗತಿಗಳ ಬಗ್ಗೆ ಭಾರಿ ಕುತೂಹಲ ಮೂಡಿದೆ. ಇಷ್ಟಕ್ಕೂ ಈ ಪುಸ್ತಕದಲ್ಲಿ ಏನಿದೆ?

ಕರಿನೀರ ಶಿಕ್ಷೆ: ನರಕವನ್ನೂ ಸ್ವರ್ಗವಾಗಿಸಿದ ಸಾಹಸಗಾಥೆ!

1960ಕ್ಕೆ ನನ್ನ ಬಿಡುಗಡೆಯಾಗುತ್ತದೆ ಎಂಬುದನ್ನು ಕೇಳಿ ಯಮುನಾ ದಂಗುಬಡಿದು ಹೋಗಿದ್ದಳು. ಆಗಿನ್ನೂ 1910ರ ಮಧ್ಯಭಾಗ ಅಷ್ಟೆ. ಇನ್ನೂ ಪೂರ್ಣ ಐವತ್ತು ವರ್ಷಗಳ ಕಾಲ ತಾನು ಕೈಹಿಡಿದ ಗಂಡನನ್ನು ಸರಳುಗಳ ಹಿಂದೆಯೇ ಕಾಣಬೇಕಲ್ಲ ಎಂಬುದು ಅವಳ ಆತಂಕ. ಆಗಿನ್ನೂ ಅಂಡಮಾನ್‌ಗೆ ನನ್ನನ್ನು ಕಳಿಸಿರಲಿಲ್ಲ. ಥಾಣೆಯ ಜೈಲಿನಲ್ಲೇ ಇದ್ದೆ. ನನಗೆ ಕೈದಿಯ ಬಟ್ಟೆ ಕೊಡಲಾಗಿತ್ತು. ಕಳೆದ ವರ್ಷ ಇದೇ ವೇಳೆ ನಾನು ಲಂಡನ್ನಿನಲ್ಲಿ ಸೂಟು, ಕೋಟು ತೊಟ್ಟು ಮಿರಮಿರ ಮಿಂಚುತ್ತಿದ್ದೆ. ಇಂದು ಸರಳುಗಳ ಹಿಂದೆ ಒಬ್ಬಂಟಿ. ಅಚಾನಕ್ಕಾಗಿ ಯಮುನಾಳನ್ನು ಕಂಡೊಡನೆ ಎದೆ ಝಲ್ಲೆಂದಿತು. ಆಕೆಯ ದುಃಖದ ಕಟ್ಟೆ ಒಡೆದು ಕಣ್ಣೀರಾಗಿ ಹರಿದು ಹೋಗುತ್ತಲೇ ಇತ್ತು.

ನಾನೇ ಸಮಾಧಾನ ಮಾಡಿದೆ. ನಾನು “ಅದೇ ಹಳೆಯ ವ್ಯಕ್ತಿ, ಬಟ್ಟೆ ಬದಲಾಗಿದೆ ಅಷ್ಟೆ. ಇಲ್ಲಿನ ಚಳಿಯನ್ನು ತಡೆದುಕೊಳ್ಳಲು ಈ ಬಟ್ಟೆ ಸೂಕ್ತ ಎಂದು ಕೊಟ್ಟಿದ್ದಾರೆ ಅಷ್ಟೆ’ ಎಂದು ಸಾಂತ್ವನ ಹೇಳುವ ಪ್ರಯತ್ನ ಮಾಡಿದೆ. ಆಕೆ ಮತ್ತಷ್ಟು ಅತ್ತಳು. ಅತ್ತ ಆಕೆ ಹೊರಡುತ್ತಿದ್ದಂತೆ ಇತ್ತ ಸೆಲ್‌ನಲ್ಲಿ ಗೂಡುಕಟ್ಟಿದ್ದ ಪಾರಿವಾಳಗಳು ಅರಚಾಡುತ್ತಿದ್ದವು. ಆಹಾರ ತರಲೆಂದು ಹೊರಟ ತಾಯಿ ಪಾರಿವಾಳ ಆಗಂತುಕನ ಗುಂಡಿಗೆ ಬಲಿಯಾಗಿತ್ತು. ಆಸರೆಯಿಲ್ಲದೆ, ಭರವಸೆಯೂ ಇಲ್ಲದೇ ನರಳುತ್ತಿರುವ ಪಾರಿವಾಳಗಳನ್ನು ಕಂಡು ನನಗೆ ನನ್ನ ಮನೆ ನೆನಪಾಯ್ತು. ಹೆಂಡತಿ, ಅತ್ತಿಗೆ ಎಷ್ಟು ಕಣ್ಣೀರಿಡುತ್ತಿರಬಹುದು ಎಂಬುದು ಮನಸ್ಸಿಗೆ ಬರುತ್ತಿದ್ದಂತೆ ದುಃಖದ ಕಟ್ಟೆ ಒಡೆಯಿತು. ಮನಸಾರೆ ಅತ್ತುಬಿಟ್ಟೆ.

1911 ಜೂನ್ 25. ಎಸ್ ಎಸ್ ಮಹಾರಾಜ ಎಂಬ ಹಡಗು ಈ ಮಹಾರಾಜನನ್ನು ಹೊತ್ತೊಯ್ಯಲು ಸಿದ್ಧವಾಗಿ ನಿಂತಿತ್ತು. ಕೆಲವರ ಕಂಗಳಲ್ಲಿ ಐವತ್ತು ವರ್ಷಗಳ ಜೀವಾವಧಿ ಶಿಕ್ಷೆ ಪಡೆದ ನಾನು ಮಹಾರಾಜ ಎನಿಸಿಕೊಂಡಿದ್ದೆ. ಬಹುತೇಕರು ನನ್ನ ಈ ನನ್ನ ಈ ಅಂಡಮಾನ್ ಯಾತ್ರೆಯನ್ನು ಅಂತಿಮಯಾತ್ರೆ ಎಂಬಂತೆ ಕಾಣುತ್ತಿದ್ದರು. ಅಂಡಮಾನಿನ ಜೈಲು ಹಾಗೆಯೇ, ಅನ್ವರ್ಥವಾಗುವಂತೆ ಕಾಲಾಪಾನಿ ಎಂಬ ಹೆಸರು ಬೇರೆ. ಅಲ್ಲಿ ನೀರು ಕಪ್ಪು, ಜೊತೆಗೆ ಅಲ್ಲಿಗೆ ಹೋದ ಕೈದಿಗಳ ಬದುಕೂ ಕಾರ್ಗತ್ತಲು. ಇಷ್ಟು ಸುದೀರ್ಘವಾದ ಶಿಕ್ಷೆಯನ್ನು ಪಡೆದು ಹೊರಟಿದ್ದ ರಾಜಕೀಯ ಕೈದಿ ನಾನೊಬ್ಬನೇ ಆಗಿದ್ದೆ. ಸರ್ಕಾರವನ್ನು ಎರಡೆರಡು ಜೀವಾವಧಿ ಶಿಕ್ಷೆಗಳು ಏಕಕಾಲಕ್ಕೆ ನಡೆಯುವಂತೆ ಅವಕಾಶ ಮಾಡಿಕೊಡಬಲ್ಲಿರಾ?’ ಎಂದು ಕೇಳಿಕೊಂಡಿದ್ದೆ.

ಐವತ್ತು ವರ್ಷಗಳ ಶಿಕ್ಷೆಯನ್ನು 25 ವರ್ಷಗಳಲ್ಲಿ ಮುಗಿಸುವ ಧಾವಂತ ಅದು. ನ್ಯಾಯಾಲಯ ತಿರಸ್ಕರಿಸಿತು. ಸುದ್ದಿ ಮುಟ್ಟಿಸಿದ ಜೈಲರ್ ವಿಕೃತವಾದ ನಗೆ ನಕ್ಕಿದ್ದ. ನಾನೇನು ಕಡಿಮೆ ಆಸಾಮಿಯಲ್ಲ. ಪುನರ್ಜನ್ಮ ನಂಬದ ಕ್ರಿಶ್ಚಿಯನ್ ದೊರೆಗಳು ನನಗಾಗಿ ಎರಡು ಜೀವಾವಧಿ ಶಿಕ್ಷೆ ಕೊಟ್ಟಿದ್ದಾರೆಂದರೆ ಹಿಂದೂಧರ್ಮವನ್ನು ಮಾನ್ಯ ಮಾಡಿದಂತೆ ಅಲ್ಲವೇನು? ಸಾರ್ಥಕವಾಯ್ತು ನನ್ನ ಬದುಕು ಎಂದು ಮುಗುಳಕ್ಕೆ ಆತನ ಮುಖಭಾವದಲ್ಲೇ ನನ್ನ ಧಿಮಾಕು ಇನ್ನೂ ಇಳಿದಿಲ್ಲ ಎಂಬುದು ಅವನಿಗೆ ಅರ್ಥವಾದಂತಿತ್ತು.

ಐವತ್ತು ಜನರು ಆರಾಮವಾಗಿ ಕುಳಿತುಕೊಳ್ಳಲಾಗದ ಜಾಗದಲ್ಲಿ ನೂರಾರು ಮಂದಿಯನ್ನು ತುರುಕಿ ಹಡಗಿನಲ್ಲಿ ಒಯ್ಯಲಾಗುತ್ತಿತ್ತು. ನನ್ನನ್ನಂತೂ ಮಲ ವಿಸರ್ಜಿಸುವ ಸ್ಥಳದಲ್ಲೇ ಮಲಗಿಸುತ್ತಿದ್ದರು. ದಿನ ಕಳೆದಂತೆ ಕೆಟ್ಟ ವಾಸನೆಯಿಂದ ಗಾಳಿ-ಬೆಳಕು ಇಲ್ಲದ ಆ ಜಾಗ ಅಸಹ್ಯವಾದ ವಾತಾವರಣವನ್ನು ರೂಪಿಸಿಬಿಟ್ಟಿತ್ತು. ಖುಷಿಯೇನು ಗೊತ್ತೇ? ಯಾತ್ರಿಕರಾಗಿ ಬಂದಿದ್ದ ಕೆಲವು ಬಿಳಿಯರು ಸ್ವಾತಂತ್ರ್ಯಕ್ಕಾಗಿ ನಾನು ಮಾಡಿದ ಹೋರಾಟದ ಅಭಿಮಾನಿಗಳಾಗಿದ್ದರು. ನನ್ನೊಂದಿಗಿದ್ದ ಎಲ್ಲ ಕೈದಿಗಳಿಗೂ ಒಂದು ಹೊತ್ತಿನ ಊಟವನ್ನು ಕೊಟ್ಟು ತಮ್ಮ ಅಭಿಮಾನವನ್ನು ತೋರ್ಪಡಿಸಿದ್ದರು. ಆಗಲೇ ಕೈದಿಗಳಿಗೆ ನನ್ನ ಮೇಲೆ ವಿಶೇಷವಾದ ಗೌರವ ಬಂದಿದ್ದು, ಯಾವ ಗೌರವ ಪಡೆದುಕೊಂಡಾದರೂ ಮಾಡುವುದೇನಿದೆ? ಇನ್ನು ಐವತ್ತು ವರ್ಷಗಳ ಕಾಲ ನನ್ನ ಬದುಕು

ಯಮಯಾತನೆಯದ್ದು ಅಷ್ಟೆ!

ಎಂಟು ದಿನಗಳ ಪ್ರಯಾಣ. ಅಂಡಮಾನಿನ ತೀರದಲ್ಲಿ ಇಳಿದು ಸೆಲ್ಯುಲರ್ ಜೈಲಿನ ಒಳಹೊಕ್ಕೆ, ನಾನೇ ಕೊನೆಯವ. ನಾನು ಒಳ ಹೋಗುತ್ತಿದ್ದಂತೆ ಬಾಗಿಲನ್ನು ಮುಚ್ಚಿಬಿಟ್ಟರು. ಇನ್ನು ನಾನು ಬದುಕಿದ್ದಾಗಲೇ ಅದು ನನಗಾಗಿ ತೆರೆಯುವುದು ಅನುಮಾನ ಎಂಬುದು ನನಗೆ ಗೊತ್ತಾಗಿಬಿಟ್ಟಿತ್ತು ಮತ್ತು ಬ್ರಿಟೀಷರು ನನ್ನನ್ನು ಸುಲಭಕ್ಕೆ ಬಿಡಲಾರರು ಎಂಬುದಕ್ಕೆ ಅವರು ನನ್ನ ಕುತ್ತಿಗೆಗೆ ಇಳಿಬಿಟ್ಟಿದ್ದ ಬಿಲ್ಲೆಯ ಮೇಲೆ ಬರೆಸಿದ್ದ ಡಿ ಎಂಬ ಅಕ್ಷರವೇ ಸಾಕ್ಷಿಯಾಗಿತ್ತು. ಡಿ ಎನ್ನುವುದರ ಅರ್ಥ ಡೇಂಜರ್ ಎಂಬುದು ಅರಿವಾಗಲು ನನಗೆ ಬಹಳ ಸಮಯ ಹಿಡಿಯಲಿಲ್ಲ.

ಸೆಲ್ಯುಲಾರ್ ಜೈಲಿನ ಕ್ರೂರಿ ಅಧಿಕಾರಿ ಬ್ಯಾರಿ, ನನ್ನ ಎದೆಯ ಬಿಲ್ಲೆಯ ಮೇಲೆ 1910 ಮತ್ತು 1960 ಎಂಬ ಎರಡು ಸಂಖ್ಯೆಗಳಿದ್ದವು. “1960ರಲ್ಲಿ ಪರಮದಯಾಳು ಬ್ರಿಟೀಷ್ ಸರ್ಕಾರ ನಿನ್ನನ್ನು ಖಂಡಿತ ಬಿಡುವುದು. ಯೋಚನೆ ಮಾಡಬೇಡ’ ಎಂದು ಬಾಗಿಲಿನಲ್ಲೇ ಬ್ಯಾರಿ ಕಿಚಾಯಿಸಿದ. ಇವತ್ತು ವರ್ಷಗಳ ಕಾಲ ಆತನಧೀನವಾಗಿಯೇ ಬದುಕಿರಬೇಕೆಂಬುದನ್ನು ಆತ ನೆನಪಿಸಿದ ಪರಿ ಅದು. ನಾನೇನು ಕಡಿಮೆ ನೀರು ಕುಡಿದವನಲ್ಲ. ಅಲ್ಲಿಯವರೆಗೂ ಬ್ರಿಟೀಷ್ ಸರ್ಕಾರ ಇರುವುದೆಂಬ ಖಾತ್ರಿ ಇದೆಯೇನು?’ ಎಂದು ಖಡಕ್ಕಾಗಿಯೇ ಪ್ರಶ್ನಿಸಿದೆ. ಬ್ಯಾರಿ ತಣ್ಣೀರು ಮೈಮೇಲೆ ಬಿದ್ದವನಂತಾದ.

ಕಾಲಾಪಾನಿಯ ಒಂದಷ್ಟು ಪರಿಚಯ ನಿಮಗೆ ಮಾಡಿಸಬೇಕು. ಇಲ್ಲಿ ಒಟ್ಟು 698 ಸೆಲ್ಲುಗಳಿವೆ. ಇತರೆ ಜೈಲುಗಳಂತೆ ಬ್ಯಾರಾಕುಗಳಿಲ್ಲ. ಹೀಗಾಗಿ ಇದನ್ನು ಸೆಲ್ಯುಲಾರ್ ಜೈಲ್ ಎಂದು ಕರೆಯಲಾಗುತ್ತದೆ. ಪ್ರತಿ ಸೆಲ್ ಕೂಡ 13.6 ಅಡಿ ಉದ್ದ ಮತ್ತು 7.6 ಅಡಿ ಅಗಲವಿದೆ. ಒಳಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಒಂದು ಕೋಣೆಯಲ್ಲಿರುವ ಕೈದಿಯೊಬ್ಬ ಮತ್ತೊಂದು ಕೋಣೆಯಲ್ಲಿರುವ ಕೈದಿಯೊಂದಿಗೆ ಮಾತನಾಡುವುದು ಹೆಚ್ಚು ಕಡಿಮೆ ಅಸಾಧ್ಯವೆಂಬಂತೆ ಈ ಜೈಲುಗಳನ್ನು ರೂಪಿಸಲಾಗಿದೆ. ನನಗೆ ಏಳನೇ ನಂಬರಿನ ಸೆಲ್ ಅನ್ನು ವ್ಯವಸ್ಥೆ ಮಾಡಿಕೊಡಲಾಯ್ತು. ಇದು ನೇಣಿಗೆ ಹೋಗುವ ಮಂದಿಗೆ ಅತ್ಯಂತ ಹತ್ತಿರವಿರುವ ಸೆಲ್ಲು. ಆ ಮೂಲಕ ಸಾಯುವ ಮಂದಿಯನ್ನು ನೋಡಿ ಮಾನಸಿಕವಾಗಿ ನಾನು ಜರ್ಝರಿತಗೊಳ್ಳಲಿ ಎಂಬುದು ಅಧಿಕಾರಿಗಳ ಬಯಕೆ! ಇಲ್ಲಿನ ವ್ಯವಸ್ಥೆಗಳೂ ಬಲು ವಿಚಿತ್ರ ಸ್ನಾನಕ್ಕೆ ಬಿಸಿನೀರು ಬಿಡಿ, ಶುದ್ಧ ಸಿಹಿನೀರೂ ಇಲ್ಲ. ಸುತ್ತಲೂ ಭೋರ್ಗರೆವ ಸಮುದ್ರವಿತ್ತಲ್ಲ. ಅಲ್ಲಿಂದಲೇ ಸ್ನಾನಕ್ಕೂ ನೀರು ಬರುತ್ತಿತ್ತು.

ಉಪ್ಪುನೀರನ್ನು ಮೈಮೇಲೆ ಹಾಕಿಕೊಂಡು ಜಮಾದಾರ ಹೇಳಿದಂತೆ ಸ್ನಾನ ಮಾಡುವುದು ಬಲುಕಠಿಣ. ಸ್ನಾನ ಮಾಡುವಾಗ ಬೇರೆ ಬಟ್ಟೆಗಳು ಸಿಗುತ್ತಿರಲಿಲ್ಲವಾದ್ದರಿಂದ ಹೆಚ್ಚುಕಡಿಮೆ ನಗ್ನವಾಗಿಯೇ ಸ್ನಾನ ಮಾಡಬೇಕಾಗುತ್ತಿತ್ತು. ಸ್ನಾನದ ವೇಳೆಗೆ ಆತ ಕೊಡುತ್ತಿದ್ದ ಅಂಗೈ ಅಗಲದ ಬಟ್ಟೆ ಯಾವ ಮೂಲೆಯಿಂದಲೂ ಮಾನ ಮುಚ್ಚಿಕೊಳ್ಳಲು ಸಾಕಾಗುತ್ತಿರಲಿಲ್ಲ. ಒಳಗೆ ಬಂದೊಡನೆ ಜನಿವಾರವನ್ನು ತೆಗಿಸಿಬಿಡುತ್ತಿದ್ದರು. ಆದರೆ ಮುಸಲ್ಮಾನರಿಗೆ ಮಾತ್ರ ಎಲ್ಲ ಆಚರಣೆಗಳಿಗೂ ಮುಕ್ತ ಅವಕಾಶವಿತ್ತು. ಸೆಲ್ಲಿನೊಳಗೆ ಶೌಚಾಲಯವಿಲ್ಲದಿದ್ದುದರಿಂದ ಜಮಾದಾರ ಬೆಳಿಗ್ಗೆ ಹೊರಬಿಟ್ಟಾಗಲೇ ಶೌಚಾದಿ ಕ್ರಿಯೆಗಳನ್ನೆಲ್ಲ ಮುಗಿಸಿಕೊಳ್ಳಬೇಕಾಗುತ್ತಿತ್ತು. ಅಪ್ಪಿ ತಪ್ಪಿ ಮತ್ತೊಮ್ಮೆ ಶೌಚಕ್ಕೆ ಹೋಗಬೇಕೆನಿಸಿದರೆ ಅಸಾಧ್ಯವೇ ಆಗಿತ್ತು.

ರಾತ್ರಿ ಸೆಲ್ಲಿನೊಳಗೆ ಹೋದನಂತರ ಹೊಟ್ಟೆಕೆಟ್ಟು ಶೌಚಕ್ಕೆ ಹೋಗಬೇಕೆಂದರೆ ಬದಿಯಲ್ಲಿಟ್ಟಿದ್ದ ಪುಟ್ಟ ಮಡಕೆಯಲ್ಲೇ ಅದನ್ನು ತುಂಬಿಸಬೇಕಾಗುತ್ತಿತ್ತು. ಮಡಕೆ ಎಷ್ಟು ಪುಟ್ಟದ್ದೆಂದರೆ ಒಮ್ಮೆ ಶೌಚಕ್ಕೆ ಹೋದರೆ ಅದು ತುಂಬಿ ಹೋಗುತ್ತಿತ್ತು. ಆನಂತರ ಇಡಿಯ ಸೆಲ್ಲು ಕೊಳಕು. ಜಮಾದಾರ ಅದನ್ನು ನೋಡಿದರೆ ಮರುದಿನ ರಾತ್ರಿಯಿಡೀ ಗೋಡೆಗೆ ತೂಗುಹಾಕಿದ ಬೇಡಿಗಳಿಗೆ ಕೈಗಳನ್ನು ಹಾಕಿ ಕಟ್ಟಿಬಿಡುತ್ತಿದ್ದ. ಅಲ್ಲಿಗೆ ಇಡೀ ರಾತ್ರಿ ನಿಂತಲ್ಲೇ ನಿದ್ದೆ-ಶೌಚ ಎಲ್ಲವೂ!
ಕೈದಿಗಳಿಗೆ ಶಿಕ್ಷೆ ಎಂದರೆ ತೆಂಗಿನ ನಾರನ್ನು ತೆಗೆದು ಅದನ್ನು ಹಗ್ಗವಾಗಿ ಹೊಸೆಯುವುದು. ಈ ಬಗೆಯ ಕಾರ್ಯಗಳ ಅನುಭವವೇ ಇಲ್ಲದಿದ್ದ ನನಗೆ ಆರಂಭದಲ್ಲಿಯೇ ಕೈಗಳು ಬಾತುಕೊಂಡು ರಕ್ತ ಒಸರಲಾರಂಭಿಸಿತು.

ನಿಗದಿತ ಪ್ರಮಾಣದ ಹಗ್ಗ ಹೊಸೆಯದಿದ್ದರೆ ಜಮಾದಾರರ ಕೆಟ್ಟ ಬೈಗುಳಗಳನ್ನು ಕೇಳಬೇಕಾಗುತ್ತಿತ್ತು. ಮತ್ತೆ ರಾತ್ರಿಯಿಡೀ ಸೆಲ್ಲಿನೊಳಗೆ ನಿಂತೇ ಇರುವ ಶಿಕ್ಷೆ. ಹೀಗಾಗಿ ನಾರು ಚರ್ಮವನ್ನು ಸೀಳಿ ರಕ್ತ ಹರಿಯುತ್ತಿದ್ದರೂ ಕೆಲಸ ಮಾಡುವುದನ್ನು ನಿಲ್ಲಿಸುತ್ತಿರಲಿಲ್ಲ. ಬಂದ ಒಂದು ತಿಂಗಳಲ್ಲೇ ನನಗೆ ಗಾಣ ಸುತ್ತುವ ಕೆಲಸ ಕೊಡಲಾಯ್ತು. ಒಣಗಿದ ತೆಂಗಿನ ಕಾಯಿಯನ್ನು ಗಾಣಕ್ಕೆ ಹಾಕಿ ಎತ್ತಿನ ಬದಲು ನಮ್ಮನ್ನು ಹೂಡಲಾಗುತ್ತಿತ್ತು. ಒಂದರೆಕ್ಷಣ ಪುರಸೊತ್ತಿಲ್ಲದೇ ಗಾಣವನ್ನು ಸುತ್ತಿ 30 ಪೌಂಡುಗಳಷ್ಟು ಎಣ್ಣೆ ತೆಗೆಯಬೇಕಾಗುತ್ತಿತ್ತು.

ಹೀಗೆ ಎಣ್ಣೆಯ ಪ್ರಮಾಣ ಕಮ್ಮಿಯಾದರೆ ಮತ್ತೆ ಶಿಕ್ಷೆ ಕಾಯುತ್ತಲೇ ಇರುತ್ತಿತ್ತು. ಅದಕ್ಕೆ ನನ್ನಂತಹ ಅನೇಕರು ಊಟದ ಅವಧಿಯಲ್ಲಿ ದೊರೆಯುತ್ತಿದ್ದ ಒಂದೆರಡು ಗಂಟೆಗಳ ಬಿಡುವನ್ನೂ ಪಕ್ಕಕ್ಕಿಟ್ಟು ಗಾಣ ಸುತ್ತುತ್ತಿದ್ದೆವು. ನನ್ನ ಬಗ್ಗೆ ಕೇಳಿ ತಿಳಿದುಕೊಂಡಿದ್ದ ಕೆಲವು ರಾಜಕೀಯ ಖೈದಿಗಳು ಮೇಲ್ವಿಚಾರಕರು ಇಲ್ಲದಿರುವ ಸಮಯವನ್ನು ನೋಡಿಕೊಂಡು ನನ್ನ ಬಳಿ ಬಂದು ಗಾಣವನ್ನು ಸುತ್ತಲು ಸಹಾಯ ಮಾಡುತ್ತಿದ್ದರು. ನನ್ನ ಮೇಲಿನ ಗೌರವದಿಂದ ಬಟ್ಟೆಗಳನ್ನು, ಪಾತ್ರೆಗಳನ್ನು ಒಗೆದುಕೊಡಲು ಧಾವಿಸುತ್ತಿದ್ದರು. ನನಗಾದರೋ ಸಹಿಸಲಾಗದಷ್ಟು ಮುಜುಗರ, ನಾನು ಕದ್ದುಮುಚ್ಚಿ ಅವರ ತಟ್ಟೆಯನ್ನೂ ತೊಳೆದಿಟ್ಟು ಮುಜುಗರದಿಂದ ಪಾರಾಗಿಬಿಡುತ್ತಿದ್ದೆ.

ಕಾಲಾಪಾನಿಯ ಊಟದ ಕಥೆ ಕೇಳಲೇಬೇಡಿ. ಪ್ರತಿಯೊಬ್ಬ ಕೈದಿಗೂ ಎರಡೆರಡು ರೊಟ್ಟಿಯನ್ನು ಕೊಡಲಾಗುತ್ತಿತ್ತು. ಅದನ್ನೂ ಕೆಲವು ಸಮಯಸಾಧಕ ಜಮಾದಾರರು ವಂಚಿಸಿ ತಿಂದುಬಿಡುತ್ತಿದ್ದರು. ಊಟಕ್ಕೆಂದು ಬಡಿಸುತ್ತಿದ್ದ ಸಾರಿನ ಕಥೆಯೂ ಅಷ್ಟೇ ಭಯಾನಕವಾದ್ದು. ಬೆಳಗಿನ ಜಾವ ಇನ್ನೂ ಕತ್ತಲೆ ಇರುವಾಗಲೇ ಜೈಲಿನ ಹೊರಗೆ ಸೊಪ್ಪು ತರಲೆಂದು ಹೋಗುತ್ತಿದ್ದ ಕೈದಿಗಳು ಕತ್ತಲಿನಲ್ಲಿ ಕೈಗೆ ಸಿಕ್ಕಿದ್ದನ್ನೆಲ್ಲ ಕತ್ತರಿಸಿಕೊಂಡು ಬರುತ್ತಿದ್ದರು. ಅನೇಕ ಬಾರಿ ಹಾವು, ಹಲ್ಲಿ, ಹುಳ-ಹುಪ್ಪಟೆಗಳು ಅದರಲ್ಲಿರುತ್ತಿದ್ದವು. ಊಟ ಮಾಡುವಾಗ ಇವುಗಳು ಸಿಕ್ಕರೆ ಅದನ್ನು ಪಕ್ಕಕ್ಕಿಟ್ಟು ತಿನ್ನುತ್ತಿದ್ದೆವು; ಬದುಕಬೇಕಲ್ಲ! ಹಾಗಂತ ಸಾಯಬೇಕು ಎಂದೆನಿಸಲಿಲ್ಲವೆಂದೇನಲ್ಲ.

ಅಲ್ಲಿ ಸುಮಾರು 11 ವರ್ಷಗಳನ್ನು ಕಳೆದೆನಲ್ಲ, ಎರಡು ಬಾರಿ ಸಾಯುವ ಮನಸ್ಥಿತಿ ನನ್ನದಾಗಿಬಿಟ್ಟಿತ್ತು. ಮೊದಲನೆಯ ಬಾರಿಗೆ ಇಂದು ಭೂಷಣರಾಯ್ ನೇಣು ಬಿಗಿದುಕೊಂಡು ತೀರಿಹೋದ ಕೆಲವೇ ದಿನಗಳಲ್ಲಿ ನನಗೆ ದೇಹತ್ಯಾಗವೇ ಈ ಎಲ್ಲ ನೋವುಗಳಿಗೆ ಪರಿಹಾರ ಎನಿಸಿಬಿಟ್ಟಿತ್ತು. ಆಗಿಂದಾಗ್ಗೆ ಅಂತರಂಗ ಕೂಗಿ ಹೇಳಿತು ʼಕೊಲ್ಲುತ್ತಾ ಕೊಲ್ಲುತ್ತಾ ಸಾಯಬೇಕು. ಹೀಗೇ ಸಾಯುವುದರಲ್ಲಿ ಪುರಷಾರ್ಥವೇನಿದೆ?’ ಅಂತ. ನನ್ನ ಆಲೋಚನೆಯನ್ನು ಬದಲಾಯಿಸಿಕೊಂಡೆ. ಮತ್ತೊಮ್ಮೆ ಗಾಣ ಸುತ್ತುವಾಗ ಸಹಿಸಲಸಾಧ್ಯವಾದ ಹೊಟ್ಟೆನೋವು ಬಂದು ದೇಹ ಕುಸಿದುಬಿತ್ತು.

ಕೆಲಸಕ್ಕೆ ಬಾರದ ಈ ದೇಹವನ್ನು ಕಾಪಾಡಿಟ್ಟುಕೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ಸಾಧ್ಯವಾಗದೇ ಹೋದರೆ ಬದುಕಿದ್ದು ಪ್ರಯೋಜನವಾದರೂ ಏನು ಎಂದೆನಿಸಿದರೂ ತಕ್ಷಣ ನನ್ನ ನಾನು ಪ್ರಯೋಗಕ್ಕೊಡ್ಡಿಕೊಂಡೆ. ಮುಂದಿನ 60 ದಿನಗಳಲ್ಲಿ ಎಷ್ಟು ದಿನಗಳ ಅವಧಿಯಲ್ಲಿ ದೇಹ ಬಲಿಷ್ಠವಾಗಿದೆ ಎಂಬುದನ್ನು ಗುರುತು ಹಾಕಿಕೊಂಡೆ. 15 ದಿನಗಳ ಕಾಲ ಅನಾರೋಗ್ಯವಿಲ್ಲದೇ ಸದೃಢನಾಗಿ ಬದುಕಿದ್ದು ಗಮನಕ್ಕೆ ಬಂದಾಗ ರಾಷ್ಟ್ರಕ್ಕೆ ನಾನು ಮಾಡುವುದು ಸಾಕಷ್ಟಿದೆ ಎಂದೆನಿಸಿ ಮತ್ತೆ ಸಾಯುವ ಆಲೋಚನೆ ಕೈಬಿಟ್ಟಿದ್ದೆ.

ನಾನು ಅಂಡಮಾನಿಗೆ ಹೋದ ಹನ್ನೊಂದನೇ ದಿನಕ್ಕೆ ನನ್ನನ್ನು ಏಕಾಂತವಾಸಕ್ಕೆ ದೂಡಿಬಿಟ್ಟರು. ಮುಂದಿನ ಆರು ತಿಂಗಳಕಾಲ ನಾನು ಪೂರ್ಣವಾಗಿ ಒಂಟಿ, ಅಕ್ಕಪಕ್ಕದಲ್ಲಿ ಯಾರಿದ್ದಾರೆ? ಏನು ಮಾಡುತ್ತಿದ್ದಾರೆಜಗತ್ತು ಹೇಗಿದೆ? ಯಾವುದೂ ನನಗೆ ಗೊತ್ತಾಗುತ್ತಿರಲಿಲ್ಲ. ಬೆಳಿಗ್ಗೆ ಬಲುಬೇಗನೇ ಜಮಾದಾರ ಬಂದು ನನ್ನನ್ನು ಶೌಚಾಲಯಕ್ಕೆ ಕರೆದೊಯ್ಯುತ್ತಿದ್ದಇತರರೊಡನೆ ಮಾತನಾಡುವುದಿರಲಿ ಅಕ್ಕಪಕ್ಕ ಕಣ್ಣು ಹಾಯಿಸುವಂತೆಯೂ . ತೆಂಗಿನ ನಾರನ್ನು ತಂದು ನಾನಿದ್ದ ಜಾಗಕ್ಕೆ ಸುರಿಯಲಾಗುತ್ತಿತ್ತು. ಗೋಣು ಹಗ್ಗ ಹೊಸೆಯಬೇಕಿತ್ತಷ್ಟೆ. ಆಯಾ ಸಮಯಕ್ಕೆ ಸರಿಯಾಗಿ ಊಟವನ್ನು ತಂದು ಕೊಡಲಾಗುತ್ತಿತ್ತು. ಈ ಏಕಾಂತ ವಾಸದಿಂದ ಹೊರಬರುವ ಘಟಾನುಘಟಿಗಳೂ ಸೋತುಬಿಡುತ್ತಾರೆ, ಮಾನಸಿಕವಾಗಿ ಜರ್ಝರಿತರಾಗಿಬಿಡುತ್ತಾರೆ.

ಹಾಗೆಂದೇ ಸುದೀರ್ಘವಾದ ಆರು ತಿಂಗಳಕಾಲ ನನ್ನನ್ನು ಮಣಿಸುವ ಪ್ರಯತ್ನಕ್ಕೆ ಜೈಲು ಕೈ ಹಾಕಿತ್ತು. ನಾನು ಸೋಲಲಿಲ್ಲ, ಬ್ರಿಟೀಷ್ ಸರ್ಕಾರ ಗೆಲ್ಲಲಿಲ್ಲ. ಅಲ್ಲಿಂದ ಹೊರಬರುತ್ತಿದ್ದಂತೆ ನಿಧಾನವಾಗಿ ಮಿತ್ರರನ್ನು ಸಂಪಾದಿಸತೊಡಗಿದೆ. ಕುಗ್ಗಿ ಹೋಗುತ್ತಿದ್ದ ಆತ್ಮವಿಶ್ವಾಸವನ್ನು ಮರುಸ್ಥಾಪಿಸುವ ಮಾಡಿದೆ. ಅದು ಸುಲಭವಾಗಿರಲಿಲ್ಲ. ಅರವಿಂದರ ಸಂಪರ್ಕದಲ್ಲಿದ್ದು ಭವಾನಿ ಮಂದಿರದ ಕಲ್ಪನೆಯನ್ನು ಕಟ್ಟಿಕೊಂಡು, ಮಾಣಿಕ್‌ಲಾ ಬಾಂಬ್ ಕೇಸಿನಲ್ಲಿ ಸಿಕ್ಕು ಹಾಕಿಕೊಂಡು ಒಳಬಂದಿದ್ದ ಇಂದುಭೂಷಣ್ ರಾಮ್ ಈ ಶಿಕ್ಷೆಯನ್ನು ತಾಳಲಾಗದೇ ಕುಸಿದುಹೋಗಿಬಿಟ್ಟಿದ್ದ. ಅವನ ಮುಖಭಾವವನ್ನು ನೋಡುವಾಗಲೇ ಅವಘಡ ಸಂಭವಿಸಲಿದೆ ಎಂದು ನನಗೆ ಅಂದಾಜಾಗುತ್ತಿತ್ತು. ಸಮಾಧಾನ ಪಡಿಸಲು ಸಾಕಷ್ಟು ಪ್ರಯತ್ನಪಟ್ಟೆ. ಆದರೆ ಆತ ಕೇಳಲೇ ಇಲ್ಲ. ಕೊನೆಗೂ ನೇಣಿಗೆ ಶರಣಾಗಿಯೇಬಿಟ್ಟ. ಇದಕ್ಕೆ ವಿರುದ್ಧವಾದ ಚಿಂತನೆ ಸ್ವರಾಜ್ ಪತ್ರಿಕೆಯ ಸಂಪಾದಕನಾಗಿದ್ದ ನಾನಿಗೋಪಾಲನದ್ದು. ಆತ ಜೈಲಿನ ಯಾವ ನಿಯಮಗಳನ್ನೂ ತಲೆಗೆ ಹಾಕಿಕೊಂಡವನೇ ಅಲ್ಲ. ಕೊಟ್ಟ ಕೆಲಸವನ್ನು ತನ್ನಿಚ್ಛೆಗೆ ತಕ್ಕಂತೆ ಮಾಡುತ್ತಿದ್ದನೇ ಹೊರತು ನಿಯಮಕ್ಕನುಗುಣವಾಗಿ ಅಲ್ಲ. ಕೊನೆಗೆ ಉಪವಾಸ ಸತ್ಯಾಗ್ರಹಕ್ಕೆ ಮುಂದುಮಾಡಿ ಸಾಯುವವರೆಗೆ ಅನ್ನ ಸ್ವೀಕರಿಸಲಾರೆ ಎಂದು ಪ್ರತಿಜ್ಞೆಯನ್ನೂ ಮಾಡಿಬಿಟ್ಟ. ಇಂದುಭೂಷಣ್ ರಾಮ್ ನೇಣಿಗೆ ಶರಣಾದನಲ್ಲ, ನಾನಿಗೋಪಾಲನದ್ದು ಮತ್ತೊಂದು ಬಗೆಯ ಆತ್ಮಹತ್ಯೆ ಅಷ್ಟೇ, ದಿನಗಳುರುಳುತ್ತಾ ಹೋದಂತೆ ಆತ ಮೂಳೆ ಚಕ್ಕಳವಾದ. ಸಾಯುವುದು ಖಾತ್ರಿಯಾಯ್ತು.

ಬ್ಯಾರಿ ನಾನಿಗೋಪಾಲನ ಮನವೊಲಿಸುವಂತೆ ನನ್ನನ್ನೇ ಕೇಳಿಕೊಂಡ. ನಾನು ಆತ್ಮಹತ್ಯೆಯ ವಿರೋಧಿ. ಅದರಲ್ಲೂ ಕ್ರೂರಿಗಳೆದುರಿಗೆ ಆತ್ಮಹತ್ಯೆಗೆ ಶರಣಾಗುವುದು ಹೇಡಿತನ ಎಂದೇ ನನ್ನ ಭಾವನೆ. ಹೀಗಾಗಿ ನಾನಿಗೋಪಾಲ ನಿತ್ರಾಣನಾಗಿ ಮಲಗಿದ್ದ ಕಡೆಗೆ ಹೋದೆ. ಮೈದಡವಿದೆ, “ಸಾಯುವುದಿದ್ದರೆ ಕೊಲ್ಲುತ್ತಾ ಸಾಯಬೇಕೇ ಹೊರತು ಹೀಗೆ ವ್ಯರ್ಥವಾಗಿ ಅಲ್ಲ’ ಎಂದು ಕಿವಿಯಲ್ಲಿ ಹೇಳಿದೆ. ನಾನಿಗೋಪಾಲ ಬುದ್ಧಿವಂತ, ನಿಧಾನವಾಗಿ ಕರೆದ. ನಾನು ಎಲ್ಲರಿಗೂ ಕೇಳುವಂತೆಯೇ ಹೇಳಿದೆ, ‘ಮನಸ್ಸಿಗೆ ಬಂದಷ್ಟು ತಿನ್ನಿ. ಪೊಗದಸ್ತಾಗಿ ಬೆಳೆಯಿರಿ. ಆದರೆ ಇವರು ಕೊಟ್ಟ ಕೆಲಸವನ್ನು ಮಾತ್ರ ಮಾಡಬೇಡಿ’ ಎಂದೆ. ಇಡೀ ಅಂಡಮಾನು ಪ್ರತಿಭಟನೆಗೆ ಸಜ್ಜಾಗಿಬಿಡ್ತು. ಆನಂತರ ಬ್ಯಾರಿಯ ನಿದ್ದೆ ಹಾಳಾಗಿಹೋಯ್ತು. ದಿನಬೆಳಗಾದರೆ ಪ್ರತಿಭಟನೆ, ಹೋರಾಟಗಳು. ಇಷ್ಟೇ ಅಲ್ಲ, ಜೈಲಿನಿಂದ ಬಿಡುಗಡೆಯಾಗಿ ಹೊರಹೋಗುತ್ತಿದ್ದ ಕ್ರಾಂತಿಕಾರಿಗಳು ಇಲ್ಲಿನ ಹೃದಯ ವಿದ್ರಾವಕ ಪರಿಸ್ಥಿತಿಯನ್ನು ಅಲ್ಲಿ ಪತ್ರಿಕೆಗಳ ಮೂಲಕ ಎಲ್ಲರಿಗೂ ತಿಳಿಯುವಂತೆ ಬಣ್ಣಿಸುತ್ತಿದ್ದರು. ನಮ್ಮ ಜೊತೆಯಲ್ಲೇ ಇದ್ದ ಹೋತಿಲಾಲ್ ವರ್ಮಾನಂತೂ ವಿಸ್ತಾರವಾಗಿ ಎಲ್ಲವನ್ನೂ ಬರೆದು ಕದ್ದುಮುಚ್ಚಿ ಸುರೇಂದ್ರನಾಥ ಬ್ಯಾನರ್ಜಿಯವರಿಗೇ ಕಳಿಸಿಬಿಟ್ಟ. ಅದು ಅಲ್ಲಿನ ಪತ್ರಿಕೆಗಳಲ್ಲಿ ಪ್ರಕಟಗೊಂಡು ಎಲ್ಲೆಡೆ ಗಲಾಟೆಗಳು ಆರಂಭವಾಗಿ ಬ್ರಿಟೀಷ್ ಸರ್ಕಾರ ಕೈಕೈ ಹಿಸುಕಿಕೊಳ್ಳುವಂತಾಯ್ತು. ಹೀಗಾಗಿಯೇ ನಮ್ಮ ಪ್ರತಿಭಟನೆಗಳ ನಂತರ ಅನಿವಾರ್ಯವಾಗಿ ಊಟದ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾಯ್ತು. ಶಿಕ್ಷೆಗಳ ಸ್ವರೂಪವನ್ನು ಬದಲಾಯಿಸಬೇಕಾಯ್ತು. ಕೊನೆಗೆ ಗ್ರಂಥಾಲಯವೊಂದರ ವ್ಯವಸ್ಥೆಯನ್ನೂ ಮಾಡಬೇಕಾಯ್ತು. ನಾನು ಆರಂಭದಲ್ಲಿ ಇಲ್ಲಿಗೆ ಬಂದಾಗ ಬರೆಯುವುದಕ್ಕೆ ಒಂದು ಹಾಳೆಯನ್ನೂ ಕೊಡುತ್ತಿರಲಿಲ್ಲ. ನಾನು ಹೊರಗೆ ಕೆಲಸಕ್ಕೆ ಹೋದಾಗ ಮೊಳೆಯೊಂದನ್ನು ಸಂಪಾದಿಸಿಕೊಂಡು ಬಂದು ಅದನ್ನು ಬಳಸಿಯೇ ಆ ಜೈಲಿನ ಗೋಡೆಯ ಮೇಲೆ ಕಾವ್ಯದ ಸಾಲುಗಳನ್ನು ಕೆತ್ತುತ್ತಿದ್ದೆ. ಬಹುಶಃ ಇಂತಹ ಸಾಹಸವನ್ನು ಜಗತ್ತಿನ ಮತ್ಯಾವ ಖೈದಿಯೂ ಮಾಡಿರಲಾರ!

ಆಮೇಲಿನ ದಿನಗಳಲ್ಲಿ ಭಾರತದ ಜೈಲಿನ ವ್ಯವಸ್ಥೆಯೂ ಸಾಕಷ್ಟು ಸುಧಾರಿಸಿತೆನ್ನಿ, ಜೈಲಿಗೆ ಹೋದ ಗಾಂಧಿ, ನೆಹರೂ, ಪಟೇಲರು ಹೂದೋಟಗಳನ್ನು ಮಾಡಿಕೊಳ್ಳುತ್ತಿದ್ದರಂತೆ. ಆಡುತ್ತಿದ್ದರಂತೆ ಮತ್ತು ತಮ್ಮ ಆತ್ಮಕಥೆಗಳನ್ನೂ ನಮಗೆ ಅದ್ಯಾವುದರ ಭಾಗ್ಯವೂ ವಾಲಿಬಾಲ್ ಬರೆಯುತ್ತಿದ್ದರಂತೆ! ಇರಲಿಲ್ಲ. ಆದರೆ ಆನಂತರದ ದಿನಗಳಲ್ಲಿ ನಾವು ಅಲ್ಲಿ ನಿರ್ಮಿಸಿದ ಗ್ರಂಥಾಲಯ ಒಟ್ಟಾರೆ ಭಾರತದ ಜೈಲುಗಳಲ್ಲಿಯೇ ಶ್ರೇಷ್ಠ ಗ್ರಂಥಾಲಯವೆನಿಸಿತು. ನನ್ನೊಳಗಿನ ಸ್ವಾತಂತ್ರ್ಯದ ಕಿಚ್ಚು ಬ್ರಿಟೀಷರ ಯಾವ ಪ್ರಯತ್ನಕ್ಕೂ ತಣ್ಣಗಾಗಲಿಲ್ಲ. ಹೊರ ಜಗತ್ತಿನಲ್ಲಿ ಹೋರಾಡಲು ಸಾಧ್ಯವಾಗಲಿಲ್ಲವೆಂದ ಮಾತ್ರಕ್ಕೆ ನಾನು ಸುಮ್ಮನೆ ಕೂತೆನೆಂದಲ್ಲ. ಜೈಲಿನ ಒಳಗೆ ರಾಜಕೀಯ ಖೈದಿಗಳ ವ್ಯವಸ್ಥೆ ಸುಧಾರಣೆಗೆ ಸಾಧ್ಯವಾದಷ್ಟೂ ಜೀವತೈದೆ.

ಅಭಿನವ ಭಾರತದ ಶ್ರದ್ಧೆಯ ಯೋಧ!

ಆದರೂ ಕೆಲವೊಮ್ಮೆ ಒಬ್ಬನೇ ಕುಳಿತಾಗ ಹಳೆಯ ದಿನಗಳು ನೆನಪಾಗುತ್ತಿದ್ದವು. ಅಮ್ಮನ ಮುಖ ನೋಡಿದ್ದು ಎಷ್ಟು ಪ್ರಯತ್ನಪಟ್ಟರೂ ನೆನಪಾಗುತ್ತಿರಲಿಲ್ಲ. ಅಪ್ಪ ಮಾತ್ರ ಪ್ರಯತ್ನಪಟ್ಟರೂ ಸ್ಮತಿಪಟಲದಿಂದ ಮರೆಯಾಗುತ್ತಿರಲಿಲ್ಲ. ನಾನು ಬಾಲ್ಯದಲ್ಲಿರುವಾಗಲೇ ಅಮ್ಮನನ್ನು ಕಳಕೊಂಡಿದ್ದೆ. ಮೂರು ಅಣ್ಣ-ತಮ್ಮಂದಿರು, ಮತ್ತೊಬ್ಬ ತಂಗಿ. ಇಷ್ಟು ಮಂದಿಯನ್ನು ನೋಡಿಕೊಳ್ಳಲು ಮತ್ತೊಂದು ಮದುವೆಯಾಗೆಂದರೂ ಅಪ್ಪಯ್ಯ ಒಪ್ಪಲಿಲ್ಲ. ನನ್ನೂರಿಗೆ ಪ್ಲೇಗ್ ಅಮರಿಕೊಂಡಾಗ ಇತರೆಲ್ಲರ ಸೇವೆಗಾಗಿ ಹಗಲು-ರಾತ್ರಿ ದುಡಿಯುತ್ತಿದ್ದವ ಆತ.

ಈ ಮಾರಿ ಆತನನ್ನೇ ಹಿಡಿದುಕೊಂಡಾಗ ಸದ್ದಿಲ್ಲದೇ ಮನೆಯ ಮೇಲಿನ ಕೋಣೆ ಸೇರಿಕೊಂಡ. ನೀರು ಬೇಕೆಂದು ಆತ ಚೀರಾಡುವಾಗ ವೈದ್ಯರ ಸಲಹೆಯ ಮೇರೆಗೆ ನಾವು ನೀರು ಕೊಡಲಿಲ್ಲ. ಆತ ನೋವಿನಲ್ಲಿಯೇ ನರಳಿ ಸತ್ತ. ಆತನ ಸಾವು ನನ್ನನ್ನು ಆವರಿಸಿಕೊಂಡುಬಿಟ್ಟಿತು. ಮನುಷ್ಯ ಸಾಯಲೇಬೇಕೆಂದಿದ್ದರೆ ಒಂದು ಸಾಧಾರಣ ಇಲಿಯೂ ಕಾರಣವಾಗಿಬಿಡುತ್ತದೆ. ಆದರೆ ಆತ ಆದರ್ಶಕ್ಕಾಗಿ ಬದುಕಲೇಬೇಕೆಂದಿದ್ದರೆ ಸಾವೂ ಕೂಡ ಆತನನ್ನು ಅಲುಗಾಡಿಸಲಾರದು ಎಂಬುದು ಪಾಠವಾಗಿ ನನಗೊದಗಿತು.

ಶಿವಾಜಿಯ ಕಥೆಗಳು ಬಾಲ್ಯದಿಂದಲೂ ನನ್ನ ಗೆಳೆಯರಂತೆ. ಒಂದೆಡೆ ರಿಚರ್ಡ್ ಟೆಂಪಲ್‌ನ ಬದುಕನ್ನೇ ದುರ್ಭರಗೊಳಿಸಿದ್ದ ಫಡೆ, ಮತ್ತೊಂದೆಡೆ ದುಷ್ಟ ಬ್ಯಾಂಡ್‌ನ ಹತ್ಯೆ ಮಾಡಿದ ಚಾಫೇಕರ್ ಸಹೋದರರು ನನ್ನ ಪಾಲಿನ ಶಾಶ್ವತ ಆದರ್ಶಗಳು. ಕಾಳಾ ಪತ್ರಿಕೆ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಮಾರ್ಗದರ್ಶನ ನನಗೆ ಮಾಡಿದರೆ, ಕೇಸರಿ ಪತ್ರಿಕೆಯ ಮೂಲಕ ನಾನು ತಿಲಕರ ಏಕಲವ್ಯನೇ ಆಗಿದ್ದೆ. ಮೊದಲ ಬಾರಿಗೆ ತಿಲಕರನ್ನು ಮಾತನಾಡಿಸುವ ಅವಕಾಶ ಸಿಕ್ಕಾಗ ನನಗಾದ ಆನಂದವನ್ನು ಅಂಡಮಾನಿನ ಜೈಲಿನೊಳಗೆ ನೆನಪಿಸಿಕೊಂಡಾಗಲೂ ಆಹಾ ಎನಿಸುತ್ತಿತ್ತು. ನಾವೇ ಕಟ್ಟಿದ್ದ ಅಭಿನವ ಭಾರತದ ಕಾರ್ಯಕ್ರಮಕ್ಕೆ ತಿಲಕರು ಬಂದು ನಮ್ಮನ್ನು ಹುರಿದುಂಬಿಸಿ ಹೋಗಿದ್ದರು. ಅಭಿನವ ಭಾರತ ಇಟಲಿಯ ಮ್ಯಾಜಿನಿ ಕಟ್ಟಿದ ಕ್ರಾಂತಿಕಾರಿಗಳ ಪಡೆಯಂತೆ. ಇರಬೇಕು ಎಂಬುದು ನಮ್ಮ ಕನಸಾಗಿತ್ತು. ಹೀಗಾಗಿ ಮಿತ್ರಮೇಳವೆಂಬ ಸಾಮಾಜಿಕ ಸಂಘಟನೆಯೊಂದನ್ನು ಕಟ್ಟಿಕೊಂಡು ಸಮಾಜದ ಕೆಲಸಗಳನ್ನು ಮಾಡುತ್ತಾ ಅಲ್ಲಿಂದ ಬಂದ ಸಮರ್ಥ ತರುಣರನ್ನು ಅಭಿನವ ಭಾರತದ ಮೂಲಕ ವಿಶೇಷ ಕ್ರಾಂತಿಕಾರಿಗಳಾಗಿ ರೂಪಿಸುತ್ತಿದ್ದೆವು.

ನನಗೆ 20 ವರ್ಷವಾಗುವ ವೇಳೆಗಾಗಲೇ ರಾಷ್ಟ್ರದ ಎಲ್ಲ ಕ್ರಾಂತಿಕಾರಿಗಳನ್ನೂ ಒಂದೇ ಛತ್ರದಡಿ ಬೆಸೆಯುವ ಮತ್ತು ಮದ್ದು-ಗುಂಡುಗಳನ್ನು ಸದ್ದಿಲ್ಲದೇ ತರಿಸಿಕೊಂಡು ಬ್ರಿಟೀಷರ ವಿರುದ್ಧ ವ್ಯವಸ್ಥಿತ ಕ್ರಾಂತಿಯನ್ನು ಹುಟ್ಟುಹಾಕುವ ಯೋಜನೆ ರೂಪಿಸಿಬಿಟ್ಟಿದ್ದೆವು. ತಿಲಕರು ಗಣೇಶೋತ್ಸವವನ್ನು ಆರಂಭಿಸಿದರಲ್ಲ, ನನಗೂ ನಮ್ಮ ಕಾರ್ಯಕರ್ತರಿಗೂ ಅದು ನಿಜವಾದ ಹಬ್ಬ, ನೆಪ ಗಣೇಶನದ್ದು, ನೀಡುತ್ತಿದ್ದ ಸಂದೇಶ ಮಾತ್ರ ರಾಷ್ಟ್ರದ್ದು. ತಿಲಕರಿಗೆ ಇದು ಸಾಲದೆನಿಸಿ ಮಹಾರಾಷ್ಟ್ರದ ಜನತೆಯನ್ನು ವಿಶೇಷವಾಗಿ ಒಗ್ಗೂಡಿಸಲು ಶಿವಾಜಿ ಜಯಂತಿಯನ್ನು ಆರಂಭಿಸಿಬಿಟ್ಟರು.

ಆಮೇಲೇನು? ನಾವು ಶಿವಾಜಿಯ ಕಥೆಯನ್ನು ಹೇಳುತ್ತಾ ಹೇಳುತ್ತಲೇ ತರುಣರ ಹೃದಯಗಳಲ್ಲಿ ಕ್ರಾಂತಿಯ ಬೀಜವನ್ನು ಬಿತ್ತಿಬಿಡುತ್ತಿದ್ದೆವು. ನಮ್ಮ ಈ ಆಲೋಚನೆಗೆ ಮೊದಲು ಮನಸೋತವನೇ ನನ್ನಣ್ಣ. ವಿವೇಕಾನಂದರ ಹಿಂದೆ ಆಲೋರಾಕ್ಕೆ ಹೋಗಿ ರಾಜಯೋಗದಲ್ಲಿ ತಲ್ಲೀನನಾಗಿ ಆಧ್ಯಾತ್ಮ ಸಾಧನೆ ಮಾಡಬೇಕೆಂದಿದ್ದವ ಕ್ರಾಂತಿಕಾರ್ಯಕ್ಕೆ ತನ್ನನ್ನು ತೆರೆದುಕೊಂಡು ನನಗಿಂತ ಮುಂಚೆಯೇ ಅಂಡಮಾನಿನ ಜೈಲು ಸೇರಿಬಿಟ್ಟ. ಜೈಲಿನ ನಾಲ್ಕು ಗೋಡೆಗಳೇ ಅವನಿಗೀಗ ರಾಜಯೋಗದ ತಾಣ!

1905ರಲ್ಲಿ ಬಂಗಾಳದ ವಿಭಜನೆಯಾದಾಗ ನಮಗೆಲ್ಲರಿಗೂ ರಾಷ್ಟ್ರೀಯತೆಯ ಉದ್ದೀಪನಕ್ಕೆ ಬಲುದೊಡ್ಡ ಅವಕಾಶ ಸಿಕ್ಕಂತಾಯ್ತು. ತಿಲಕರ ಬಳಿಗೆ ಹೋಗಿ ವಿದೇಶೀ ವಸ್ತಗಳ ದಹನದ ನನ್ನ ಆಲೋಚನೆಯನ್ನು ವಿವರಿಸಿದೆ. ಅವರ ಮುಖ ಅರಳಿತು. ‘ಈ ಹೋಳಿ ಸಣ್ಣಪುಟ್ಟ ಹೋಳಿಯಾಗಬಾರದು. ಬಲುದೊಡ್ಡ ಹಬ್ಬವಾಗಬೇಕು’ ಎಂಬ ಸಂದೇಶ ಕೊಟ್ಟರು ಅಷ್ಟೇ. ನಮ್ಮದ್ದೊಂದು ತರುಣರ ಪಡೆ ಇದ್ದೇ ಇತ್ತಲ್ಲ, ಮನೆ-ಮನೆಗೂ ಹೋಗಿ ಬ್ರಿಟೀಷರ ವಿರುದ್ಧದ ಸಂದೇಶವನ್ನು ಸೂಕ್ಷ್ಮವಾಗಿ ಕೊಟ್ಟು, ವಿದೇಶೀ ಬಟ್ಟೆಗಳನ್ನು ಸಂಗ್ರಹಿಸಿ ತಂದೆವು.

ಒಂದು ಎತ್ತಿನಗಾಡಿ ತುಂಬುವಷ್ಟು ಈ ಬಟ್ಟೆಯ ರಾಶಿಯನ್ನು ಒಂದೆಡೆ ಸುರುವಿ ಅದಕ್ಕೆ ಗುಲಾಲು ಸುರಿದು ಬೆಂಕಿಕಡ್ಡಿ ಗೀರಿದೆವು ನೋಡಿ, ಅತ್ತ ಬೆಂಕಿಯ ಕೆನ್ನಾಲಗೆಗಳು ಆಗಸಕ್ಕೆ ಚಾಚುತ್ತಿದ್ದಂತೆ ಇತ್ತ ಜನರ ಹೃದಯದಲ್ಲಿ ಬ್ರಿಟೀಷರ ವಿರುದ್ಧದ ಆಕ್ರೋಶ ಭುಗಿಲೇಳುತ್ತಿತ್ತು. ಈ ರೀತಿ ವಿದೇಶೀ ವಸ್ತ್ರಗಳ ದಹನಕ್ರಿಯೆ ದೇಶದಲ್ಲೇ ಮೊದಲ ಬಾರಿಗೆ ಆಗಿದ್ದಂತೆ. ಆನಂತರ ಅನೇಕ ಕಾಂಗ್ರೆಸ್ಸಿಗರು. ಇಂತಹ ಚಟುವಟಿಕೆಗಳನ್ನು ಮಾಡಿದರಾದರೂ ಅದರ ಮೊದಲ ಗೌರವ ಅಭಿನವ ಭಾರತಕ್ಕೇ.

ಶತ್ರುವಿನ ಗುಹೆಗೆ ಹೊಕ್ಕಿತ್ತು ಸಿಂಹ!

ಆಗಲೇ ಕಾಳಾ ಪತ್ರಿಕೆಯಲ್ಲಿ ಲಂಡನ್ನಿನಲ್ಲಿ ಅಧ್ಯಯನಕ್ಕೆ ವಿದ್ಯಾರ್ಥಿವೇತನ ನೀಡುವ ಕುರಿತಂತಹ ಜಾಹಿರಾತು ಪ್ರಕಟವಾದದ್ದು. ನಾನು ಅರ್ಜಿ ಗುಜರಾಯಿಸಿದೆ. ಜಾಹಿರಾತು ಕೊಟ್ಟ ಆಸಾಮಿ ಸಾಮಾನ್ಯದವನಾಗಿರಲಿಲ್ಲ. ಲಂಡನ್ನಿನಲ್ಲಿ ಅಧ್ಯಯನ ಮುಗಿಸಿ ಬ್ರಿಟೀಷ್ ನೌಕರಿಗೆ ಸೇರುವುದಿಲ್ಲ ಎಂಬ ಮುಚ್ಚಳಿಕೆ ಮೊದಲೇ ಬರೆದುಕೊಡಬೇಕಿತ್ತು. ನನಗದೇನೂ ದೊಡ್ಡ ವಿಷಯವಾಗಿರಲಿಲ್ಲ. ತಿಲಕರ ಬಳಿಹೋಗಿ ಪ್ರಭಾವಪತ್ರವೊಂದನ್ನು ತಂದೆ. ‘ಈ ಹುಡುಗ ರಾಷ್ಟ್ರ ಕೈಂಕರ್ಯಕ್ಕೆ ಉಪಯೋಗಿಯಾಗುತ್ತಾನೆ’ ಎಂದು ಅವರು ಬರೆದಿದ್ದ ಸಾಲುಗಳು ನನಗೆ ಈಗಲೂ ಹೆಮ್ಮೆ ತರಿಸುತ್ತವೆ. ಇಲ್ಲವಾದರೆ ಅಂಡಮಾನಿನ ಈ ಯಾತನಾಮಯ ಜೈಲಿನಲ್ಲಿ ಕಾಲ ಕಳೆಯುವುದು ಸಾಧ್ಯವಾಗುತ್ತಿತ್ತೇನು? ಸಹಜವಾಗಿಯೇ ವಿದ್ಯಾರ್ಥಿ ವೇತನ ನನಗೇ ದಕ್ಕಿತು. ಲಂಡನ್ನಿನ ಭಾರತ ಭವನಕ್ಕೆ ನಾನೀಗ ವಿದ್ಯಾರ್ಥಿಯಾಗಿ ಸೇರಿಕೊಂಡೆ.

ಎಲ್ಲರಂತೆ ಆರಂಭದ ದಿನಗಳಲ್ಲಿ ಸುಲಭವಾಗಿ ಎಲ್ಲರೊಂದಿಗೂ ಬೆರೆಯುವುದಕ್ಕೆ ನನಗೂ ಕಷ್ಟವಾಗುತ್ತಿತ್ತು. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಿತ್ತು, ಅಲ್ಲಿನವರಂತೆ ಬದುಕುವ ಪ್ರಯತ್ನ ಮಾಡಬೇಕಿತ್ತು ಮತ್ತು ತರಗತಿಗಳು ಆರಾಮವಾಗಿಯೇ ನಡೆಯುತ್ತಿದ್ದುದರಿಂದ ಅಧ್ಯಯನದ ಹೊರೆಯೂ ಕಡಿಮೆಯಿತ್ತು. ಹೀಗಾಗಿ ನಾನು ಭಾರತ ಭವನದ ಗ್ರಂಥಾಲಯ ಹೊಕ್ಕು ಇಟಲಿಯ ಕ್ರಾಂತಿಕಾರಿ ಮ್ಯಾಜಿನಿಯ ಜೀವನವನ್ನು ಅಧ್ಯಯನ ಮಾಡತೊಡಗಿದೆ. ಒಟ್ಟು ಆರು ಸಂಪುಟಗಳ ವಿಸ್ತಾರ ಕೃತಿ ಅದು. ಆತನ ಹೋರಾಟದ ಹಾದಿಯನ್ನು ಎಳೆಎಳೆಯಾಗಿ ವಿವರಿಸಲಾಗಿತ್ತು. ನಾನು ಮೈಮರೆತು ಕೃತಿಯೊಳಗೆ ಹೊಕ್ಕಿಬಿಟ್ಟೆ. ಒಂದೊಂದು ಸಂಪುಟವನ್ನೂ ಒಂದೆರಡು ದಿನದಲ್ಲಿಯೇ ಓದಿ ಮುಗಿಸಿಬಿಡುತ್ತಿದ್ದೆ. ನನ್ನ ತುಡಿತ ಹೇಗಿತ್ತೆಂದರೆ ಅಷ್ಟೂ ಕೃತಿಯನ್ನು ಬರವಣಿಗೆಗಿಳಿಸಬೇಕು ಎನ್ನುವಷ್ಟು, ತಡಮಾಡಲಿಲ್ಲ. ಮ್ಯಾಜಿನಿಯ ಜೀವನ, ಸಾಧನೆ ಓತಪ್ರೋತವಾಗಿ ಹರಿಯಲಾರಂಭಿಸಿತು.

ಕೃತಿ ಮುಗಿಸಿ ಅದಕ್ಕೆ ಮುನ್ನುಡಿಯನ್ನು ಬರೆದು ಅಣ್ಣ ಬಾಬಾನಿಗೆ ಕಳಿಸಿಕೊಟ್ಟೆ. ಆಗಿನ್ನೂ ನನ್ನ ಮೇಲೆ ಬ್ರಿಟೀಷರ ಪಹರೆ ಜೋರಾಗಿರಲಿಲ್ಲ. ಭಾರತದಿಂದ ನಾನು ಲಂಡನ್ನಿಗೆ ಹೊರಟು ಬಂದಾಗ ನನಗಿಂತ ಮುಂಚೆ ಭಾರತೀಯ ಪೊಲೀಸರು ಸ್ಕಾಟ್‌ಲ್ಯಾಂಡ್ ಯಾರ್ಡಿನ ಪೊಲೀಸರಿಗೆ ಬರೆದ ಪತ್ರ ಬಂದು ತಲುಪಿತ್ತು. ಈ ವ್ಯಕ್ತಿ ಅಪಾಯಕಾರಿಯಾಗಬಲ್ಲ. ಆದರೆ ತೀರಾ ತಲೆಕೆಡಿಸಿಕೊಳ್ಳಬೇಕಿಲ್ಲ’ ಎಂದಿತ್ತು. ಹೀಗಾಗಿ ನನ್ನ ಸುತ್ತ ಪಹರೆಯವರೇನೂ ಇರುತ್ತಿರಲಿಲ್ಲ. ಆದರೂ ಎಚ್ಚರಿಕೆಯಿಂದಲೇ ಪುಸ್ತಕ ಅಣ್ಣನ ಕೈಗೆ ತಲುಪುವಂತೆ ನೋಡಿಕೊಂಡಿದ್ದೆ. ಆತ ಅದನ್ನು ತಿಲಕರಿಗೆ ಒಯ್ದು ತೋರಿಸಿದ. ಆರಂಭದಲ್ಲಿ ಅವರು ಗಾಬರಿಯಾದರಂತೆ. ಎಚ್ಚರಿಕೆಯಿಂದ ಮುದ್ರಣ ಮಾಡಿ ಎಂಬ ಕಿವಿಮಾತೂ ಹೇಳಿದರಂತೆ. ಮುದ್ರಕರಾರೂ ಒಪ್ಪಲಿಲ್ಲ. ನನ್ನಣ್ಣನೂ ಬಿಡಲಿಲ್ಲ. ತನ್ನ ಪ್ರಭಾವವನ್ನು ಬಳಸಿ ಎರಡು ಸಾವಿರ ಪ್ರತಿಗಳನ್ನು ಮುದ್ರಿಸಿಯೇಬಿಟ್ಟ. ಕಾಳಾ ಪತ್ರಿಕೆ ಈ ಕುರಿತಂತೆ ಬಲು ಸುಂದರವಾಗಿ ಬರೆದಿತ್ತು. ‘ಸಾವರ್ಕರ್ ವಿದೇಶಕ್ಕೆ ಹೋದರೂ ಭಾರತವನ್ನು ಮರೆಯಲಿಲ್ಲ.

ಅಲ್ಲಿನ ಕಟ್ಟಡಗಳು, ಕಾರ್ಖಾನೆಗಳು, ಅಪಾರ ಸಂಪತ್ತೂ ಅವರನ್ನು ಸೆಳೆಯುವಲ್ಲಿ ಸೋತಿದೆ. ಅಲ್ಲಿಂದಲೂ ಅವರು ರಾಷ್ಟ್ರ ಕಾಯಕವನ್ನೇ ಮಾಡುತ್ತಿದ್ದಾರೆ’ ಎಂದು. ಮ್ಯಾಜಿನಿಯ ಕುರಿತು ನಾನು ಬರೆದ ಪುಸ್ತಕವನ್ನು ಅವರು ರಾಷ್ಟ್ರಕಾರ್ಯವೆಂದು ಗುರುತಿಸಿ ಗೌರವಿಸಿದ್ದರು. ಎರಡೂ ಸಾವಿರ ಪ್ರತಿಗಳು ಬಿಸಿ ದೋಸೆಯಂತೆ ಖರ್ಚಾದವು. ತರುಣರು ಅಭಿನವ ಭಾರತದ ಕಾರ್ಯಕ್ರಮಗಳಲ್ಲಿ ಅದನ್ನು ಪಾರಾಯಣ ಮಾಡುತ್ತಿದ್ದರಂತೆ. ಸಾರ್ವಜನಿಕರು ಅದನ್ನು ಓದುವಾಗ ಹೆಮ್ಮೆ ತಾಳುತ್ತಿದ್ದರಂತೆ. ಬ್ರಿಟೀಷರಿಗೆ ಪೀಕಲಾಟವಿಟ್ಟುಕೊಂಡಿತ್ತು. ಅಧಿಕಾರಿಯೊಬ್ಬ “ಓದಿದವರಿಗೆ ಇದು ಪ್ರಭುತ್ವ ವಿರೋಧಿ ಎಂದು ಗೊತ್ತಾಗುತ್ತದೆ. ಆದರೆ ಅದನ್ನು ನ್ಯಾಯಾಲಯಗಳಲ್ಲಿ ಸಾಬೀತುಪಡಿಸುವ ಒಂದೇ ಒಂದು ವಾಕ್ಯವನ್ನೂ ನಾವು ಹುಡುಕಿ ತೋರಿಸಲಾಗುವುದಿಲ್ಲ. ಇತಿಹಾಸ ಬೋಧನೆಯ ನೆಪದಲ್ಲಿ ಜನರನ್ನು ನಮ್ಮ ವಿರುದ್ಧ ಭಡಕಾಯಿಸುವ ಪ್ರಯತ್ನ ಈ ಕೃತಿ’ ಎಂದಿದ್ದನಂತೆ. ಅದೂ ನಿಜವೇ. ಕೃತಿ ರಚನೆಯ ಹೊತ್ತಲ್ಲಿ ನಾನೆಷ್ಟು ಎಚ್ಚರಿಕೆ ವಹಿಸಿದ್ದೆನೆಂದರೆ ಯಾವ ಕಾರಣಕ್ಕೂ ಈ ಕೃತಿಯನ್ನು ನಿಷೇಧ ಮಾಡುವುದಾಗಲೀ ನನ್ನನ್ನು ಬಂಧಿಸುವುದಾಗಲೀ ಸಾಧ್ಯವಾಗದಂತೆ ಬ್ರಿಟೀಷರಿಗೂ ನ್ಯಾಯಕ್ಕೂ ಸಂಬಂಧವೇ ನೋಡಿಕೊಂಡಿದ್ದೆ. ಇಲ್ಲ. ಇಲ್ಲ. ಆದರೇನು? ಪುಸ್ತಕದ ಪುಸ್ತಕದ ಎರಡನೇ ಮುದ್ರಣವನ್ನು ಅವರು ತಡೆದೇಬಿಟ್ಟರು. ಮನೆ-ಮನೆಗಳಲ್ಲಿದ್ದ ಈ ಕೃತಿಯನ್ನು ಝಡತಿ ಮಾಡಿದರು. ಅನೇಕರು ಇಟ್ಟಿಗೆಗಳಂತೆ ಈ ಪುಸ್ತಕವನ್ನು ಜೋಡಿಸಿ ಸಿಮೆಂಟಿನಿಂದ ಮುಚ್ಚಿ ಕಾಪಾಡಿಕೊಂಡಿದ್ದರಂತೆ. ಅಚ್ಚರಿಯೇನು ಗೊತ್ತೇ? ಇದರ ಎರಡನೇ ಆವೃತ್ತಿ ಪ್ರಕಟಗೊಂಡಿದ್ದು 1946ರಲ್ಲಿ. ಆಗ ಬಿಡುಗಡೆ ಕಾರ್ಯಕ್ರಮಕ್ಕೆ ನಾನೇ ಅಧ್ಯಕ್ಷನಾಗಿದ್ದೆ. ಒಂದು ಪುಸ್ತಕ ಮುಗಿಯಿತೆನ್ನುವಷ್ಟರಲ್ಲಿ ನನ್ನ ತಲೆ ನೂರು ದಿಕ್ಕಿನಲ್ಲಿ ಓಡುತ್ತಿತ್ತು.

ನಾನು ಲಂಡನ್ನಿಗೆ ಬಂದದ್ದು ಐಷಾರಾಮಿ ಬದುಕು ಸಾಗಿಸಲು ಅಲ್ಲವೇ ಅಲ್ಲ. ನನ್ನ ದೇಶಕ್ಕೆ ಬಂದು ಈ ಬಿಳಿಯ ಮಂದಿ ನಮ್ಮನ್ನೇ ಶೋಷಣೆ ಮಾಡಬಹುದಾದರೆ ಅವರ ದೇಶಕ್ಕೆ ನುಗ್ಗಿ ಅವರ ಎದೆಗೊಂದು ಗುದ್ದು ಕೊಡುವುದು ನನಗೆ ಸಾಧ್ಯವಿಲ್ಲವೇನು? ಹಾಗೆಂದೇ 1857ರ ಸಂಗ್ರಾಮದ ಕಡತಗಳನ್ನು ಹುಡುಕಿಕೊಂಡು ಹೊರಟೆ. ಬ್ರಿಟೀಷರ ಅಧೀನದಲ್ಲಿದ್ದ ಈ ಗ್ರಂಥಾಲಯಕ್ಕೆ ಹೋಗಲು ಪಾಸು ಪಡೆಯುವಷ್ಟರಲ್ಲಿ ಸಾಕುಸಾಕಾಗಿತ್ತು. ಬೆಳಿಗ್ಗೆ ಗ್ರಂಥಾಲಯದ ಬಾಗಿಲು ತೆರೆಯುವ ಮುನ್ನ ಹೋಗಿ ಕುಳಿತರೆ ಗ್ರಂಥಾಲಯದ ಬಾಗಿಲು ಮುಚ್ಚುವವರೆಗೂ ಅಧ್ಯಯನವೋ ಅಧ್ಯಯನ, ನನ್ನ ಅಧ್ಯಯನದ ತುಡಿತ ಮತ್ತು ನಾನು ಆಗಾಗ ಭಾರತೀಯರನ್ನು ತುಚ್ಛವಾಗಿ ಬೈಯ್ಯುವ ರೀತಿಯನ್ನು ಕಂಡು ಗ್ರಂಥಪಾಲಕ ಸಂತುಷ್ಟನಾಗಿ ಒಳಗಿನ ಕೋಣೆಯಲ್ಲಿ ಹುದುಗಿದ್ದ ದಾಖಲೆಗಳನ್ನೂ ನನ್ನೆದುರಿಗೆ ತಂದಿರಿಸಿದ. ನಾನೂ ಬಿಡಲಿಲ್ಲ. ವಿಸ್ತಾರವಾದ ಕೃತಿ ರಚಿಸಿದೆ.

ಆಗಲೇ ನನಗೆ ಗೊತ್ತಾಗಿದ್ದು ಬ್ರಿಟೀಷರು ಹೇಳುವಂತೆ ಈ ಹೋರಾಟ ಸಿಪಾಯಿಗಳು ನಡೆಸಿದ ದಂಗೆಯಷ್ಟೇ ಆಗಿರಲಿಲ್ಲ; ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೇ ಆಗಿತ್ತು. ಬ್ರಿಟೀಷರನ್ನು ಭಾರತದಿಂದ ಓಡಿಸಬೇಕೆಂಬ ನಮ್ಮೆಲ್ಲರ ಒಕ್ಕೊರಲಿನ ದನಿಯಾಗಿತ್ತು. ಈ ವೇಳೆಗಾಗಲೇ ನನ್ನ ವಿರುದ್ಧ ಕತ್ತಿ ಮಸಿಯುತ್ತಿದ್ದ ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ಭಾರತ ಭವನದೊಳಗೇ ತಮ್ಮ ಗೂಢಚಾರರನ್ನು ಇರಿಸಿಬಿಟ್ಟಿದ್ದರು. ಇವರ ಮೂಲಕವೇ ಅವರ ಕೈ ಸೇರಿದ್ದು ನನ್ನ ಈ ಕೃತಿಯ ಮೊದಲೆರಡು ಅಧ್ಯಾಯ. ಅದನ್ನು ಓದಿ ಹೌಹಾರಿದ ಬ್ರಿಟೀಷರು ಪುಸ್ತಕ ಪ್ರಕಟವಾಗುವ ಮುನ್ನವೇ ಅದನ್ನು ನಿಷೇಧಿಸಿಬಿಟ್ಟರು. ನನಗೆ ಗ್ರಂಥಾಲಯಕ್ಕೆ ಹೋಗುವ ಅವಕಾಶ ನಿರಾಕರಿಸಲ್ಪಟ್ಟಿತು. ಈ ವೇಳೆಗಾಗಲೇ ಪುಸ್ತಕ ರಚನೆಯ ಕಾರ್ಯ ಮುಗಿದಿದ್ದರಿಂದ ನಾನೂ ತುಂಬಾ ತಲೆಕೆಡಿಸಿಕೊಳ್ಳಲಿಲ್ಲ. ಪ್ರಕಟಗೊಳ್ಳುವ ಮುನ್ನವೇ ಹೆದರಿಕೆಯಿಂದ ಪುಸ್ತಕ ನಿಷೇಧ ಮಾಡಿದ ತಮ್ಮ ಬಳಿ ಪುಸ್ತಕದ ಪ್ರತಿ ಇದ್ದರೆ ತೋರಿಸಿ ಎಂದು ಸವಾಲೆಸೆದೆ. ಅವರೇ ರಚಿಸಿದ್ದ ಕಾನೂನುಗಳನ್ನು ಬಳಸಿ ಅವರಿಗೆ ನಾನು ತಿವಿಯುತ್ತಿದ್ದ ಪರಿ ನಮ್ಮೆಲ್ಲರಿಗೂ ಮೋಜಿನಾಟವಾಗಿದ್ದರೆ, ಅವರಿಗೆ ಪ್ರಾಣ ಸಂಕಟವೇ ಆಗಿತ್ತು.

ಎಂದಿನಂತೆ ಪುಸ್ತಕವನ್ನು ಕದ್ದುಮುಚ್ಚಿ ಅಣ್ಣನಿಗೆ ಕಳಿಸಿಕೊಟ್ಟೆ. ಈ ಬಾರಿ ಇದು ಸಲೀಸಾದ ಕಾರ್ಯವಾಗಿರಲಿಲ್ಲ. ಏಕೆಂದರೆ ಬ್ರಿಟೀಷರ ಗೂಢಚಾರ ಪಡೆ ನನ್ನನ್ನು ನನ್ನ ನೆರಳಿಗಿಂತ ಜೋರಾಗಿ ಹಿಂಬಾಲಿಸುತ್ತಿತ್ತು. ನನ್ನಣ್ಣ ಕೃತಿಯನ್ನು ನೋಡಿದ, ಅನೇಕ ಮುದ್ರಕರೆದುರು ಅದನ್ನು ಹಿಡಿದ. ಬ್ರಿಟೀಷರ ಹೆದರಿಕೆಯಿಂದ ಯಾರೊಬ್ಬರೂ ಪ್ರಕಟ ಮಾಡಲು ಮುಂದೆ ಬರಲಿಲ್ಲ. ಬಾಬಾ ಕೈಚೆಲ್ಲಿ ಅದನ್ನು ಮರಳಿ ಭಾರತ ಭವನಕ್ಕೆ ಕಳಿಸಿಬಿಟ್ಟ. ಮರಾಠಿಯ ಈ ಕೃತಿಯನ್ನು ಜರ್ಮನಿಯಲ್ಲಿ ಮುದ್ರಿಸುವ ಪ್ರಯತ್ನ ಮಾಡಿದೆವು, ಸೋತೆವು. ಆಗಲೇ ಇಂಗ್ಲೀಷಿಗೆ ಅನುವಾದ ಮಾಡುವುದೊಳಿತು ಎಂಬುವ ಆಲೋಚನೆ ಬಂದಿದ್ದು, ಇಂಗ್ಲೀಷಿನ ಕೃತಿಕಾರ್ಯ ಮುಗಿದ ನಂತರ ಇಂಗ್ಲೆಂಡಿನಲ್ಲಿ ಮುದ್ರಿಸೋಣವೆಂದರೆ ಪೊಲೀಸರ ಪಹರೆ, ಫ್ರಾನ್ಸ್‌ನಲ್ಲೂ ನಮಗಿದು ಸಾಧ್ಯವಾಗಲಿಲ್ಲ. ಜರ್ಮನಿಯಲ್ಲೂ ಯಾರೊಬ್ಬರೂ ಒಪ್ಪಲಿಲ್ಲ. ಕೊನೆಗೆ ಫ್ರಾನ್ಸ್‌ನಲ್ಲಿ ಮುದ್ರಿಸುತ್ತಿದ್ದೇವೆ ಎಂದು ಬ್ರಿಟೀಷ್ ಪೋಲಿಸರಿಗೆ ಸುಳ್ಳು ಸುದ್ದಿ ನೀಡಿ ಹಾಲೆಂಡಿನಲ್ಲಿ ಪುಸ್ತಕವನ್ನು ಮುದ್ರಿಸಿ ಅದಕ್ಕೆ ಭಿನ್ನಭಿನ್ನ ಕಾದಂಬರಿಗಳ ಮುಖಪುಟವನ್ನು ಹೊದಿಸಿ ಭಾರತಕ್ಕೆ ಕಳಿಸಿಕೊಡಲಾಯ್ತು. ಫ್ರಾನ್ಸ್, ಜರ್ಮನಿ, ಇಂಗ್ಲೆಂಡು ಇಲ್ಲೆಲ್ಲವೂ ಅಪಾರ ಸಂಖ್ಯೆಯ ಭಾರತೀಯರು ಈ ಪುಸ್ತಕವನ್ನು ಕೊಂಡುಕೊಂಡರು.

ಭಾರತದಲ್ಲಂತೂ ಇದರ ಅಧ್ಯಯನ ರಾಷ್ಟ್ರೀಯತೆಯ ಉದ್ದೀಪನಕ್ಕೆ ಕಾರಣವಾಗುವ ಸಂಗತಿ ಎಂದೇ ಎಲ್ಲರೂ ಭಾವಿಸುತ್ತಿದ್ದರು. ಬ್ರಿಟೀಷರು ಸದಾ ಗೆಲ್ಲುವ ಕುದುರೆಗಳೇ ಅಲ್ಲ. ಭಾರತೀಯರು ಅವರನ್ನು ಸೋಲಿಸಿದ್ದರು ಎನ್ನುವ ಸಂಗತಿ ಇಲ್ಲಿನ ತರುಣರಿಗೆ ಅರಿವಾಗುತ್ತಿದ್ದಂತೆ ಅವರ ಆತ್ಮವಿಶ್ವಾಸ ನೂರ್ಮಡಿಯಾಯ್ತು. ಬ್ರಿಟೀಷರನ್ನು ಮುಂದಿನ ದಿನಗಳಲ್ಲಿ ನೇರವಾಗಿ ಎದುರಿಸಲು ಈ ಕೃತಿ ಸಾಕಷ್ಟು ಪ್ರೇರಣೆ ನೀಡಿತು. ಅಚ್ಚರಿಯೇನು ಗೊತ್ತೇ? ಈ ಕೃತಿಯ ಮೂರನೇ ಮುದ್ರಣ ಪ್ರಕಾಶನಗೊಂಡಿದ್ದು ಗದರ್ ಕ್ರಾಂತಿಕಾರಿಗಳ ಮೂಲಕ. ನಾಲ್ಕನೇ ಮುದ್ರಣ ಭಗತ್‌ಸಿಂಗ್ ಮತ್ತವನ ಮಿತ್ರರು ಸೇರಿ ಮುದ್ರಣ ಮಾಡಿಸಿ, ಮಾರಿ ತಮ್ಮ ಕ್ರಾಂತಿಕಾರ್ಯಕ್ಕೆ ನಿಧಿ ಸಂಗ್ರಹಿಸಿಕೊಂಡರು. ಮುಂದೆ 1940ರ ದಶಕದಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸರು ಐದನೇ ಮುದ್ರಣಕ್ಕೆ ಕಾರಣವಾದರು. ಅವರಂತೂ ಅಪಾರ ಸಂಖ್ಯೆಯಲ್ಲಿರುವ ತಮಿಳು ಸೈನಿಕರಿಗೆ ಪ್ರೇರಣೆ ಸಿಗಲೆಂದು ಇಡಿಯ ಕೃತಿಯನ್ನು ತಮಿಳು ಭಾಷೆಗೂ ಅನುವಾದಿಸಿದರು. ನಾನು ಈ ಪುಸ್ತಕವನ್ನು ಬರೆದಿದ್ದು 1908ರಲ್ಲಿ. ಇದು ಐದನೇ ಮುದ್ರಣ ಕಂಡಿದ್ದು ಸುಮಾರು 1942ರಲ್ಲಿ. ಹೆಚ್ಚು ಕಡಿಮೆ ಮೂರೂವರೆ ದಶಕಗಳ ಕಾಲ ಈ ಕೃತಿ ಭಾರತದಲ್ಲಿನ ಕ್ರಾಂತಿ ಕಾರ್ಯಕ್ಕೆ ಭೂಮಿಕೆ ಒದಗಿಸಿತು. ಒಬ್ಬ ಬರಹಗಾರನಿಗೆ ಇದಕ್ಕಿಂತಲೂ ಹೆಚ್ಚಿನ ಆನಂದ ಮತ್ತೇನು ಹೇಳಿ? ಹಾಗೆ ನೋಡಿದರೆ ಬ್ರಿಟೀಷರು ಹೆದರುತ್ತಿದ್ದುದು ನನ್ನ ಬರಹಗಳಿಗೇ.

ನಾನು ಬರೆಯುವ ಪ್ರತೀ ಸಾಲೂ ಮೇಲ್ನೋಟಕ್ಕೆ ಕಾಣುವುದಕ್ಕಿಂತ ಭಿನ್ನವಾದ ಅರ್ಥ ಹೊಮ್ಮಿಸುತ್ತದೆ ಎಂಬುದು ನಮ್ಮವರಿಗಿಂತ ಅವರಿಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿಯೇ ನಾನು ಎಷ್ಟು ಬಾರಿ ನನ್ನನ್ನು ಬಿಡುಗಡೆ ಮಾಡಿ ಎಂದು ಕೇಳಿಕೊಂಡರೂ ಅವರು ಒಪ್ಪಿಕೊಳ್ಳಲೇ ಇಲ್ಲ. ನನ್ನ ಕ್ಷಮಾಪಣೆಯ ಪತ್ರವನ್ನು, ಅದರಲ್ಲಿ ನಾನು ಬರೆದ “ನಿಮಗೆ ನಿಷ್ಠನಾಗಿರುತ್ತೇನೆ’ ಎಂಬ ಸಾಲನ್ನು ಅವರೆಂದಿಗೂ ನಂಬಲೇ ಇಲ್ಲ. ಅವರಿಗೆ ನನ್ನ ಬರಹದ ಪ್ರತೀ ಸಾಲಿನ ಹಿಂದೆಯೂ ಇರಬಹುದಾದ ತನ್ನ ದೇಶಭಕ್ತಿಯ ತುಡಿತ ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಕೈಗೆ ಗನ್ನು ಸಿಕ್ಕರೆ ನಾನೇನು ಮಾಡುತ್ತೇನೋ ಬಿಡುತ್ತೇನೋ ಗೊತ್ತಿಲ್ಲ, ಆದರೆ ಪೆನ್ನು ಸಿಕ್ಕರೆ ಸಾಕು ಕ್ರಾಂತಿಯನ್ನೇ ಮಾಡಿಬಿಡಬಲ್ಲೆ ಎಂಬುದು ಅವರಿಗೆ ಸ್ಪಷ್ಟವಾಗಿತ್ತು.

ಹೀಗಾಗಿಯೇ ನನ್ನನ್ನು ಕ್ರಾಂತಿಯ ಮುಖ್ಯಭೂಮಿಕೆಯಿಂದ ಹೊರಗಿಡಲೆಂದೇ ಕಾಲಾಪಾನಿಗೆ ಕಳಿಸಿದ್ದು. ಇಲ್ಲವಾದಲ್ಲಿ ನನ್ನ ಮೇಲಿದ್ದ ಆರೋಪಗಳು ಐವತ್ತು ವರ್ಷಗಳ ಜೀವಾವಧಿ ಶಿಕ್ಷೆಗೆ ಕಾರಣವಾಗುವಂಥದ್ದೇ ಅಲ್ಲ! ನಾನು ಲಂಡನ್ನಿಗೆ ಹೋಗುವ ಮುನ್ನ 1906ರಲ್ಲಿ ಮಾಡಿದ ಭಾಷಣಗಳು ದೇಶದ್ರೋಹದಿಂದ ಕೂಡಿದಂಥವು ಎಂಬುದು ಅವರ ಆಪಾದನೆ. ಹಾಗಿದ್ದರೆ ನನ್ನನ್ನು ಆಗಲೇ ಬಂಧಿಸಲಿಲ್ಲವೇಕೆ? ಹೋಗಲಿ, ವಿದೇಶಕ್ಕೆ ಹೋಗುವುದಕ್ಕೆ ತಡೆಯನ್ನಾದರೂ ಕೊಡಬೇಕಿತ್ತಲ್ಲ. ನಾನು ವಿದೇಶಕ್ಕೆ ಹೋಗುವಾಗಲೂ ಲಂಡನ್ನಿನ ಪೊಲೀಸರಿಗೆ ಇವರು ಹೇಳಿದ್ದ ಕಿವಿಮಾತು “ತಲೆಕೆಡಿಸಿಕೊಳ್ಳಬೇಡಿ’ ಎಂದೇ ಅಲ್ಲವೇನು? ಈ ಭಾಷಣದ ಸಾಲುಗಳಿಗೆ 25 ವರ್ಷ ಜೀವಾವಧಿ ಶಿಕ್ಷೆಯೇ? ಮತ್ತೊಂದು ಆರೋಪ ಏನು ಗೊತ್ತೇ? ನಾಸಿಕ್‌ನ ಕಲೆಕ್ಟರ್ ಜಾಕ್ಸನ್ ಹತ್ಯೆ ಮಾಡಿದ ಹದಿನೆಂಟರ ಹೋರ ಅನಂತ ಲಕ್ಷ್ಮಣ ಕಾವೇರೆಗೆ ನಾನೇ ಬಂದೂಕು ಕಳಿಸಿಕೊಟ್ಟಿದ್ದು ಎಂಬುದು. ಇದಕ್ಕೂ ಅವರು ಪ್ರಸ್ತುತಪಡಿಸಿದ ಸಾಕ್ಷಿಗಳು ಎಂಥವಿದ್ದವೆಂದರೆ ಒಬ್ಬ ಸಾಮಾನ್ಯ ವಕೀಲ ತನ್ನ ಪಾಟೀಸವಾಲಿನಲ್ಲಿ ಅದನ್ನು ಸುಳ್ಳೆಂದು ಸಾಬೀತುಪಡಿಸುವಷ್ಟು ಆದರೆ ಬ್ರಿಟೀಷ್ ಕಾನೂನಿಗೆ ಇವ್ಯಾವುದೂ ಬೇಕಿರಲಿಲ್ಲ. ಅವರಿಗೆ ನನ್ನನ್ನು ಮುಖ್ಯವಾಹಿನಿಯಿಂದ ದೂರವಿಡುವುದಷ್ಟೇ ಬೇಕಾಗಿದ್ದುದು. ಹಾಗೆಯೇ ಮಾಡಿದರು.

ಈ ಜೈಲಿಗೆ ಬಂದಾಗ ನನಗೆ ಯಾವ ಒಂಟಿತನವೂ ಕಾಡಲಿಲ್ಲ. ಕಗ್ಗತ್ತಲ ಕೂಪದಲ್ಲೂ ಹಾಯಾಗಿ ಇದ್ದು ಬಿಟ್ಟೆ. ಸಂಕಟವಾಗುತ್ತಿದ್ದುದು ಯಾವಾಗ ಗೊತ್ತೇ? ಓದಲು ಪುಸ್ತಕ ಕೊಡದಿದ್ದಾಗ, ಬರೆಯಲು ಲೇಖನಿ ಮತ್ತು ಹಾಳೆಯನ್ನು ನಿರಾಕರಿಸಿದಾಗ, ಲಂಡನ್ನಿನಲ್ಲಿದ್ದಾಗ ನನ್ನ ಖದರು ಬೇರೆಯೇ ಇತ್ತು. ಬ್ರಿಟೀಷರನ್ನು ನಡುಗಿಸಿಯೇಬಿಟ್ಟಿದ್ದೆ. ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಸಹಾನುಭೂತಿ ತೋರುತ್ತಿದ್ದ ಅನೇಕ ಬ್ರಿಟೀಷರನ್ನು ನನ್ನ ಗೆಳೆಯರನ್ನಾಗಿಸಿಕೊಂಡು ಅವರ ಮೂಲಕ ಇಂಗ್ಲೀಷ್ ಪತ್ರಿಕೆಗಳಲ್ಲೇ ನಮ್ಮ ಪರವಾದ ವರದಿಗಳು ಬರುವಂತೆ ನೋಡಿಕೊಳ್ಳುತ್ತಿದ್ದೆ. ಇಷ್ಟಕ್ಕೇ ನಿಲ್ಲದೇ ಅಧ್ಯಯನಕ್ಕೆಂದು ಬರುತ್ತಿದ್ದ ಸಿರಿವಂತರ ಮಕ್ಕಳನ್ನು ಮಾತನಾಡಿಸಿ ಪ್ರಭಾವ ಬೀರಿ ಅವರೊಳಗೆ ದೇಶಭಕ್ತಿಯ ಬೀಜವನ್ನು ಬಿತ್ತುತ್ತಿದ್ದೆ. ನಾಸಿಕ್‌ನಲ್ಲಿ ಮೈದಳೆದಿದ್ದ ಅಭಿನವ ಭಾರತ ಈಗ ಇಲ್ಲೂ ಹಬ್ಬಿತ್ತು. ಅನೇಕರಿಗೆ ಸಂಘಟನೆಯ ದೀಕ್ಷೆಯನ್ನು ಕೊಟ್ಟಿದ್ದೆ. ಮುಂದೆ ಗದರ್ ಎಂಬ ಕ್ರಾಂತಿಕಾರಿ ಸಂಸ್ಥೆಯನ್ನು ಕಟ್ಟಿ ವಿದೇಶೀ ಭಾರತದ ನೆಲದಿಂದ ಸ್ವಾತಂತ್ರ್ಯ ಹೋರಾಟಕ್ಕೆ ಭದ್ರವಾದ ಬುನಾದಿ ಹಾಕಿದನಲ್ಲ ಲಾಲಾ ಆತ ಸಿಕ್ಕಿದ್ದು ಹರದಯಾಳ್, ಇಲ್ಲಿಯೇ. ಕರ್ಜನ್‌ವೈಲಿಯ ಹತ್ಯೆಗೈದ ಮದನ್‌ಲಾಲ್ ಧಿಂಗ್ರಾ ಬಿಳಿ ಹುಡುಗಿಯರ ಹಿಂದೆ ಸುತ್ತಾಡಿಕೊಂಡು ಹಾಯಾಗಿದ್ದ.

ಭಾರತ ಭವನದ ಸಂಪರ್ಕಕ್ಕೆ ಬಂದಮೇಲೆ ಪೂರ್ಣವಾಗಿ ಬದಲಾದ. ಆತನಿಗೆ ನನ್ನ ಭಾಷಣಗಳನ್ನು ಕೇಳುವುದಾಗುತ್ತಿರಲಿಲ್ಲ. ಏನಾದರೂ ಕೆಲಸ ಮಾಡಬೇಕು ಎನ್ನುವ ತುಡಿತ ಅವನದ್ದು.
ಬ್ರಿಟೀಷ್ ಅಧಿಕಾರಿಗಳನ್ನು ಹತ್ಯೆಗೈಯ್ಯುವ ನನ್ನ ಮನದಿಂಗಿತವನ್ನು ಹಂಚಿಕೊಂಡೆ. ಸಿದ್ಧನಾಗಿಯೇಬಿಟ್ಟ. ಕರ್ಜನ್‌ವೈಲಿಗೆ ಧಿಂಗ್ರಾನ ಕುಟುಂಬ ಬಲು ಆಪ್ತವಾಗಿತ್ತು. ಆದರೆ ಅದೇ ಕರ್ಜನ್‌ವೈಲಿ ಭಾರತೀಯ ಕ್ರಾಂತಿಕಾರಿಗಳನ್ನು ಮಟ್ಟಹಾಕುವ ಯೋಜನೆ ರೂಪಿಸುತ್ತಿದ್ದ. ನಮ್ಮ ಗುರಿ, ಅವನತ್ತಲೇ ತಿರುಗಿತು. ಮದನ್ ಸೂಕ್ತ ಸಂದರ್ಭ ನೋಡಿಕೊಂಡು ಲಂಡನ್ನಿನ ತುಂಬಿದ ಸಭೆಯೊಂದರಲ್ಲಿ ಕರ್ಜನ್‌ವೈಲಿಯನ್ನು ಗುಂಡಿಟ್ಟು ಸಂಹಾರ ಮಾಡಿಯೇಬಿಟ್ಟ! ಮದನ್, ಬಂಧಿತನಾದನೇನೋ ನಿಜ. ಆದರೆ ಪತರಗುಟ್ಟಿದ್ದು ಇಡಿಯ ಇಂಗ್ಲೆಂಡು, 1857ರ ಸಂಗ್ರಾಮದಂತೆ ಮತ್ತೊಮ್ಮೆ ಹೋರಾಟ ಜಾಗತಿಕ ಮಟ್ಟದಲ್ಲಿ ಹಬ್ಬಿದರೆ ಕಥೆಯೇನು ಎಂಬ ಭಯ ಅವರಿಗಿದ್ದೇ ಇತ್ತು. ನಾವೂ ಅದಾಗಲೇ ಇಂತಹ ಪ್ರಯತ್ನವನ್ನು ಮಾಡಿದ್ದೆವು.

ಜರ್ಮನಿಯ ಸ್ಟುಟ್‌ಗಾರ್ಟ್‌ನಲ್ಲಿ ನಡೆದ ಅಂತರ್‌ರಾಷ್ಟ್ರೀಯ ಕಾರ್ಮಿಕರ ಸಮಾವೇಶದಲ್ಲಿ ಭಾರತದ ಧ್ವಜವನ್ನು ಜಗತ್ತಿಗೆ ಪರಿಚಯ ಮಾಡಿಕೊಡುವಂತೆ ಮೇಡಂ ಕಾಮಾರನ್ನು ಕೇಳಿಕೊಂಡಿದ್ದೆ. ಭಾರತದಲ್ಲಿ ಕ್ರಾಂತಿಕಾರಿಗಳ ಜಾಲ ಬೆಸೆದಂತೆ ಇಟಲಿ, ಜರ್ಮನಿ, ಫ್ರಾನ್ಸ್ ಮುಂತಾದ ದೇಶಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಕುರಿತಂತೆ ಸಹಾನುಭೂತಿ ಹುಟ್ಟಿಕೊಳ್ಳುವಂತೆ ನೋಡಿಕೊಂಡಿದ್ದೆ. ಬ್ರಿಟೀಷರಿಗೆ ಅಂದಾಜಿತ್ತು. ಇವೆಲ್ಲಕ್ಕೂ ಕೇಂದ್ರ ಸ್ವರೂಪಿಯಾಗಿದ್ದ ಭಾರತ ಭವನವನ್ನೇ ಮುಚ್ಚಿಬಿಟ್ಟರೆ ಇವರ ಹೋರಾಟದ ಕಥೆಯೇ ಮುಗಿಯುವುದೆಂಬುದು ಅವರ ನಿರ್ಣಯ, ನಾನೀಗ ಅಲೆಮಾರಿಯಾಗಿದ್ದೇನೆ, ಅನಾಥನೂ ಹೌದು.

ಎಲ್ಲಿಗೆ ಹೋದರೂ ನನಗೆ ನೆಲೆಯಿಲ್ಲ. ಕೊನೆಗೆ ಸಮುದ್ರ ತೀರದ ನಗರವೊಂದರಲ್ಲಿ ಮಿತ್ರರೊಂದಿಗೆ ಒಂದೆರಡು ದಿನ ಕಳೆದೆ. ಈ ವೇಳೆಗೆ ನನ್ನ ಮಗ ತೀರಿಕೊಂಡ ಸುದ್ದಿ ಬಂತು. ಲಂಡನ್ನಿಗೆ ಹೊರಡುವ ಮುನ್ನ ಆತನಿಗೆ ಸಿಡುಬಿನ ವಿರುದ್ಧ ಲಸಿಕೆ ಕೊಡಿಸುವಂತೆ ಕೇಳಿಕೊಂಡಿದ್ದೆ. ಮನೆಯವರೆಲ್ಲ ಮೈಮರೆತರೆಂದು ಕಾಣುತ್ತದೆ. ನಾಲ್ಕು ವರ್ಷದ ಆ ಮಗು ಕಣ್ಮುಚ್ಚಿಯೇಬಿಟ್ಟಿತು. ನನಗೋ ಚಡಪಡಿಕೆ. ಅವನ ಮುಖವನ್ನು ಕೊನೆಯಬಾರಿಗೆ ನೋಡಲೂ ಸಾಧ್ಯವಾಗದ ಹತಭಾಗ್ಯ ತಂದೆಯಾಗಿಬಿಟ್ಟೆ! ಕೆಲವೇ ತಿಂಗಳುಗಳ ಮುನ್ನ ಎಲ್ಲ ಕಾರ್ಯಗಳೂ ನಾನೆಣಿಸಿದಂತೆ ನಡೆಯುತ್ತಿದ್ದವು. ಈಗೇಕೋ ಭಾಗ್ಯವೇ ಬದಲಾಯ್ತು. ನನ್ನ ಬಲಗೈಯಂತಿದ್ದ ಧಿಂಗ್ರಾ ತೀರಿಕೊಂಡ. ಭಾರತ ಭವನದ ನೆಲೆ ಇಲ್ಲವಾಯ್ತು. ನಾವೆಲ್ಲ ಮಿತ್ರರೂ ಚೆಲ್ಲಾಪಿಲ್ಲಿಯಾದೆವು. ನನ್ನ ವಿರುದ್ಧ ಪೊಲೀಸರು ಕೈತೊಳೆದುಕೊಂಡು ಬಿದ್ದಿದ್ದರು. ಎಲ್ಲರ ಅಪೇಕ್ಷೆಯಂತೆ ಯಾರಿಗೂ ಅರಿವಾಗದಂತೆ ಫ್ರಾನ್ಸ್ ಸೇರಿಕೊಂಡೆ. ಎಲ್ಲ ದೃಷ್ಟಿಯಿಂದಲೂ ಅಲ್ಲಿ ಆರಾಮವಾಗಿಯೇ ಇದ್ದೆ. ನನ್ನ ಮನಕಲುಕುವ ಘಟನೆಯೊಂದು ಪತ್ರಿಕೆಯಲ್ಲಿ ವರದಿಯಾಯ್ತು. ಕಲೆಕ್ಟರ್ ಜಾಕ್ಸನ್‌ನ ಹತ್ಯೆ ಮಾಡಿದ್ದ ಅನಂತ ಲಕ್ಷ್ಮಣ ಕಾಯ್ದೆರೆಗೆ ಬ್ರಿಟೀಷ್ ಸರ್ಕಾರ ನೇಣು ಶಿಕ್ಷೆ ವಿಧಿಸಿತ್ತು.

ನನ್ನ ಮಾತು, ಬರಹಗಳಿಂದ ಪ್ರೇರಣೆ ಪಡೆದವರೆಲ್ಲ ಬಲಿವೇದಿಗೆ ಸಮರ್ಪಿಸಿಕೊಳ್ಳುತ್ತಿರುವಾಗ ನಾನೊಬ್ಬ ಹಿಂದೆ ನಿಂತಿರುವುದು ತರವೇನು? ಹಾಗೆಂಬ ಭಾವನೆ ಮನದಲ್ಲಿ ಮೂಡಿದೊಡನೆ ಮತ್ತೆ ಇಂಗ್ಲೆಂಡಿಗೆ ಹೊರಡಲು ಸಜ್ಜಾದೆ. ಪಾಪ ಮೇಡಂ ಕಾಮಾ ಪ್ರತಿಭಟಿಸಿದರು. ಶ್ಯಾಮ್‌ಜೀ ಕೃಷ್ಣವರ್ಮರು ನನ್ನ ನಿರ್ಣಯವನ್ನು ವಿರೋಧಿಸಿದರು. ನಾನು ನಿಶ್ಚಯ ಮಾಡಿಯಾಗಿತ್ತು. ಪ್ಯಾರಿಸಿನಿಂದ ಲಂಡನ್ನಿಗೆ ರೈಲಿನಲ್ಲಿ ಬಂದಿಳಿಯಬೇಕಷ್ಟೇ, ಲಂಡನ್ನಿನ ಪೊಲೀಸರು ಸುತ್ತುವರೆದರು, ಬಂಧಿಸಿದರು.

ತುರ್ತು ವಿಚಾರಣೆ ನಡೆಸಿ ಭಾರತಕ್ಕಟ್ಟುವ ನಿರ್ಣಯವನ್ನೂ ಕೊಟ್ಟುಬಿಟ್ಟರು. ಲಂಡನ್ನಿನ ಜೈಲುಗಳಿಂದ ತಪ್ಪಿಸಿಕೊಳ್ಳುವ ಯೋಜನೆಯನ್ನು ರೂಪಿಸಿಕೊಂಡಿದ್ದೆವು. ದೈವದ ಬೆಂಬಲ ದಕ್ಕಲಿಲ್ಲ. ಆದರೇನು? ಹೋರಾಟದ ಕೆಚ್ಚು ಆರಬೇಕಲ್ಲ. ಹೀಗಾಗಿ ಪುರುಷ ಪ್ರಯತ್ನಕ್ಕೆ ಸಜ್ಜಾದೆ. ನನ್ನನ್ನು ಭಾರತಕ್ಕೆ ಕರೆದೊಯ್ಯುತ್ತಿದ್ದ ಹಡಗು ಫ್ರಾನ್ಸಿನ ತೀರದಲ್ಲಿ ನಿಂತಿದ್ದಾಗ ತಪ್ಪಿಸಿಕೊಳ್ಳಲೇಬೇಕೆಂದು ನಿಶ್ಚಯಿಸಿ ಹಡಗಿನ ಶೌಚಾಲಯಕ್ಕೆ ಹೋಗಿ ಅಲ್ಲಿರುವ ಕಿಂಡಿಯ ಮೂಲಕ ನನ್ನ ದೇಹವನ್ನು ನುಗ್ಗಿಸಿ ಸಮುದ್ರಕ್ಕೆ ಹಾರಿಬಿಟ್ಟೆ. ಹೀಗೆ ದೇಹವನ್ನು ನುಗ್ಗಿಸುವಾಗ ಮೈಮೇಲೆ ತರಚು ಗಾಯಗಳಾಗಿದ್ದವಲ್ಲ, ಉಪ್ಪುನೀರು ತಾಕಿದೊಡನೆ ಅವೆಲ್ಲವೂ ಚುರುಗುಟ್ಟಲಾರಂಭಿಸಿತ್ತು.

ನನಗೆ ಅದ್ಯಾವುದರ ಪರಿವೆಯೂ ಇರಲಿಲ್ಲ. ಈಜುತ್ತಾ ಮುನ್ನುಗ್ಗಿದೆ. ಅಟ್ಟಿಸಿಕೊಂಡು ಬಂದ ಪೇದೆಗಳಿಗಿಂತ ಮುಂಚಿತವಾಗಿ ದಡವನ್ನು ಸೇರಿದೆ. ನಾನೀಗ ಸಂಪೂರ್ಣ ಸ್ವತಂತ್ರವಾಗಿದೆ. ಏಕೆಂದರೆ ನಾನಿದ್ದುದು ಫ್ರಾನ್ಸಿನ ವ್ಯಾಪ್ತಿಯಲ್ಲಿ, ಅಲ್ಲಿನ ಪೇದೆಗೆ ಕೈಮುಗಿದು ನನಗೆ ಗೊತ್ತಿರುವಷ್ಟು ಫ್ರೆಂಚ್ ಭಾಷೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಕರೆದೊಯ್ಯುವಂತೆ ಕೇಳಿಕೊಂಡೆ. ಅಷ್ಟರವೇಳೆಗೆ ಹಿಂದಿನಿಂದ ಧಾವಿಸಿದ ಬ್ರಿಟೀಷ್ ಪೊಲೀಸರು ಫ್ರಾನ್ಸ್ ಪೊಲೀಸನ ಕೈಗೆ ಒಂದಿಷ್ಟು ಕಾಸನ್ನಿತ್ತು ನನ್ನನ್ನು ಮತ್ತೆ ಎಳೆದೊಯ್ದುಬಿಟ್ಟರು.

ಪುರುಷ ಪ್ರಯತ್ನಕ್ಕೆ ಕೊರತೆಯಿರಲಿಲ್ಲ, ದೈವ ಮತ್ತೊಮ್ಮೆ ಕೈಕೊಟ್ಟಿತು! ಬಹುಶಃ ನಾನು ಜೀವನದಲ್ಲಿ ಮಾಡಿದ ದೊಡ್ಡ ತಪ್ಪು ಇದು. ನನಗೆ ಎರಡು ಜೀವಾವಧಿ ಶಿಕ್ಷೆ ಸಿಗುವಲ್ಲಿ ಬ್ರಿಟೀಷರ ಮೇಲೆ ಈ ಘಟನೆಯ ಪ್ರೇರಣೆಯೂ ಖಂಡಿತವಾಗಿಯೂ ಇದ್ದೇ ಇತ್ತು. ಈ ಘಟನೆಯ ಕಾರಣಕ್ಕಾಗಿಯೇ ನನ್ನನ್ನು ಡೇಂಜರ್ ಎಂದು ವಿಶೇಷವಾಗಿ ಪರಿಗಣಿಸಲಾಯ್ತು. ಕಾಲಾಪಾನಿ ಜೈಲಿನಲ್ಲೂ ಕೆಲ ವರ್ಷಗಳ ನಂತರ ಖೈದಿಗಳನ್ನು ಜೈಲಿನ ಹೊರಗಿನ ಕೆಲಸಗಳಿಗೆ ಕಳಿಸಲಾಗುತ್ತಿತ್ತು. ನಾನು ಸಮುದ್ರಕ್ಕೂ ಹಾರಿ ತಪ್ಪಿಸಿಕೊಳ್ಳುತ್ತೇನೆ ಎಂಬ ಇತಿಹಾಸವುಳ್ಳವನಾದ್ದರಿಂದ ನನಗೆ ಜೈಲಿನ ಹೊರಗೆ ಕಾಲಿಡುವ ಅವಕಾಶವನ್ನು ಎಂದಿಗೂ ಕೊಡಲಿಲ್ಲ. ಅಷ್ಟೇ ಅಲ್ಲ, ನಮ್ಮನ್ನು ಬಿಡುಗಡೆ ಮಾಡಿರೆಂದು ಬ್ರಿಟೀಷರನ್ನು ಕೇಳಿಕೊಂಡ ಅನೇಕ ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡಲಾಗಿತ್ತು. ನನ್ನನ್ನು ಮಾತ್ರ ಎಂದಿಗೂ ಬಿಡುಗಡೆ ಮಾಡಲು ಒಪ್ಪಲೇ ಇಲ್ಲ.

ನಾನೂ ಕ್ಷಮಾಪಣಾ ಪತ್ರ ಬರೆದಿದ್ದೆ; ಏಕೆ ಗೊತ್ತಾ?

ಹೌದು, ನಾನು ಎಂಟತ್ತು ಬಾರಿ ನನ್ನನ್ನು ಬಿಡುಗಡೆ ಮಾಡಿರಿ ಎಂದು ಕೇಳಿಕೊಂಡಿದ್ದೆ. ಒಮ್ಮೆಯಂತೂ 1911ರಲ್ಲಿ ದೆಹಲಿ ದರ್ಬಾರು ನಡೆದಾಗ ಕ್ಷಮಾಪಣೆ ಪತ್ರ ಬರೆದವರನ್ನೆಲ್ಲ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ನಾನು ಬಹಳಷ್ಟು ಯೋಚಿಸಿದೆ. ಈ ರೀತಿಯ ಪತ್ರ ಬರೆಯುವುದು ಸರಿಯೇ? ಬ್ರಿಟೀಷರಿಂದ ನಾವು ಯಾಚಿಸಬೇಕೆ? ಕ್ಷಮೆ ಎಂದು ಮತ್ತೆ ಮತ್ತೆ ನನ್ನನ್ನೇ ಪ್ರಶ್ನಿಸಿಕೊಳ್ಳುತ್ತಿದ್ದೆ. ಈ ನರಕದಲ್ಲೇ ಇದ್ದು ಏನೂ ಮಾಡಲಾಗದಂತೆ ಅಸಹಾಯಕರಾಗಿ ಇರುವ ಬದಲು ನನ್ನಣ್ಣನನ್ನು ಸೇರಿದಂತೆ ರಾಜಕೀಯ ಇಲ್ಲಿಂದ ಕೈದಿಗಳನ್ನು ಬಿಡಿಸಿಕೊಂಡು ಹೊರಟರೆ ಶಾಂತವಾಗಿ ಕ್ರಾಂತಿಯ ಕಾರ್ಯ ನಡೆಸಬಹುದು ಎಂದುಕೊಂಡು ಕ್ಷಮಾಪಣಾ ಅರ್ಜಿಯನ್ನು ಬರೆದೆ ಮತ್ತು ಹೀಗೆ ಕ್ಷಮಾಪಣಾ ಅರ್ಜಿಯನ್ನು ಬರೆಯುವುದು ಅಲ್ಲಿನ ನಿಯಮಗಳಲ್ಲೊಂದಾಗಿತ್ತು.

ರಾಜಕೀಯ ಕೈದಿಗಳಿಗೆ ತಮ್ಮ ನಡತೆಯನ್ನು ಸರಿಯಾಗಿಸಿಕೊಳ್ಳುವ ಭರವಸೆ ಕೊಟ್ಟು ಅಂಡಮಾನಿನಿಂದ ಭಾರತದ ಜೈಲುಗಳಿಗೆ ಮರಳುವ ಅವಕಾಶವನ್ನು ಸರ್ಕಾರ ಕಲ್ಪಿಸುತ್ತಿತ್ತು. ಅರ್ಜಿ ಗುಜರಾಯಿಸುವಾಗಲೇ ಇದು ತಿರಸ್ಕರಿಸಲ್ಪಡುತ್ತದೆ ಎಂದು ನನಗೆ ಚೆನ್ನಾಗಿ ಗೊತ್ತಿತ್ತು. ಹಾಗೆಯೇ ಆಯ್ತು ಕೂಡ. ಆದರೆ ನನಗೆ ಆಗಲೂ ಖುಷಿಯಾಗಿದ್ದು ಏಕೆ ಗೊತ್ತೇ? 1905ರಲ್ಲಿ ನಾವು ವಿದೇಶೀ ವಸ್ತ್ರಗಳ ಹೋಳಿಯನ್ನು ಆಚರಿಸಿ ಸ್ವದೇಶಿ ಕಿಚ್ಚನ್ನು ಹೊತ್ತಿಸಿದ್ದೆವಲ್ಲ, ಅದಕ್ಕೆ ಕಾರಣವಾದ ಬಂಗಾಳದ ವಿಭಜನೆ ರದ್ದಾಗಿತ್ತು. ಇದು ನಮ್ಮ ಗೆಲುವಿನ ಆರಂಭ ಮತ್ತು ಬ್ರಿಟೀಷರ ಸೋಲಿನ ಮುನ್ನುಡಿ ಎಂಬುದು ನನಗೆ ಅರಿವಾಯ್ತು! ಮುಂದೆ ಮತ್ತೆ ಕೆಲವು ಬಾರಿ ಕ್ಷಮಾಪಣಾ ಪತ್ರ ಬರೆಯುವ ಅವಕಾಶ ಬಂತು.

ಆರಂಭದಲ್ಲಿ ಸ್ವಲ್ಪ ಆಸ್ಥೆಯಿಂದ ಈ ಕೆಲಸ ಮಾಡುತ್ತಿದ್ದ ನಾನು ಆನಂತರ ಅದರಲ್ಲಿ ಭರವಸೆಯನ್ನೇ ಕಳೆದುಕೊಂಡೆ. ಒಮ್ಮೆಯಂತೂ ನಾನು, ಬಾರೀಂದ್ರರಾದಿಯಾಗಿ ರಾಜಕೀಯ ಕೈದಿಗಳೆಲ್ಲ ಕಳಿಸಿಕೊಟ್ಟ ಕ್ಷಮಾಪಣಾ ಪತ್ರದ ಕಥೆ ಏನಾಯ್ತು ಗೊತ್ತೇ? ನಾನು ಕಳಿಸಿದ ಪತ್ರ ನಾಲ್ವೇ ದಿನಗಳಲ್ಲಿ ತಿರಸ್ಕರಿಸಲ್ಪಟ್ಟಿದೆ ಎಂದು ಉತ್ತರ ಪಡೆಯಿತು. ಉಳಿದವರದ್ದಕ್ಕೆ ಪುರಸ್ಕಾರವೂ ಇಲ್ಲ, ತಿರಸ್ಕಾರವೂ ಇಲ್ಲ. ಬ್ರಿಟೀಷರಿಗೆ ನನ್ನ ಕುರಿತಂತೆ ಇದ್ದ ಆತಂಕ ಎಂಥದ್ದು ಎಂದು ನನಗೆ ನಗು ತಡೆದುಕೊಳ್ಳಲಾಗಲಿಲ್ಲ.

ಗದರ್‌ನ ಕ್ರಾಂತಿಕಾರಿಗಳು ಬ್ರಿಟೀಷರ ನಿದ್ದೆ ಕೆಡಿಸಿಬಿಟ್ಟಿದ್ದರು. ತಮ್ಮ ಪತ್ರಿಕೆಗಳಲ್ಲಿ ನಾನು ಗಾಣಸುತ್ತುವ, ಛಡಿಯೇಟಿಗೆ ಬೆನ್ನು ಕೊಟ್ಟಿರುವ ಚಿತ್ರಗಳನ್ನು ಪ್ರಕಟಿಸಿ ದೇಶ-ವಿದೇಶಗಳಲ್ಲಿ ಬೆಂಕಿಯನ್ನೇ ಹಚ್ಚಿಬಿಟ್ಟಿದ್ದರು. ಆ ವೇಳೆಗೆ ಇಲ್ಲಿ ಬ್ರಿಟೀಷರು ನಡೆದುಕೊಳ್ಳುತ್ತಿರುವ ರೀತಿ, ರಾಜಕೀಯ ಖೈದಿಗಳನ್ನು ಕ್ರೂರವಾಗಿ ನಡೆಸಿಕೊಳ್ಳುವ ವ್ಯವಸ್ಥೆಯ ಕುರಿತಂತೆ ಸಾಕಷ್ಟು ಸುದ್ದಿಯಾಗಿ ಸರ್ ರೆಜಿನಾಲ್ಡ್ ಕ್ರೆಡಾಕ್ ಇಲ್ಲಿಗೆ ಬಂದಿದ್ದ. ಅವನು ಭಾರತ ಸರ್ಕಾರದ ಗೃಹ ಕಾರ್ಯದರ್ಶಿ, ನನ್ನ ಕ್ಷಮಾಪಣಾ ಪತ್ರಗಳನ್ನು ನೋಡಿ ನಾನೆಷ್ಟು ಬದಲಾಗಿದ್ದೇನೆ ಎಂದು ತಿಳಿದುಕೊಳ್ಳುವುದು ಅವನ ಉದ್ದೇಶವಾಗಿತ್ತು. ಮಾತಿಗೆ ನಾನೇ ಆರಂಭಿಸಿದೆ, “ಸರ್ಕಾರ ಸುಧಾರಣೆಯ ಆಲೋಚನೆಯಲ್ಲಿದೆ.

ಹೀಗಾಗಿ ಕ್ರಾಂತಿಕಾರ್ಯದಲ್ಲಿದ್ದವರೆಲ್ಲ ಈಗ ಶಾಂತಿಯುತವಾದ ಹೋರಾಟಕ್ಕೆ ಮರಳುತ್ತಾರೆ? ಎಂದೆ. ಕ್ರೆಡಾಕ್, ‘ಹೊರಗಂತೂ ನಿನ್ನ ಹೆಸರನ್ನು ಹೇಳಿಯೇ ಕ್ರಾಂತಿಕಾರ್ಯ ನಡೆಯುತ್ತಿದೆ’ ಎಂದು ನೇರ ಆರೋಪ ಮಾಡಿದ. ನಿನ್ನೆಲ್ಲ ಮಿತ್ರರಿಗೂ ಕ್ರಾಂತಿಕಾರ್ಯ ನಿಲ್ಲಿಸುವಂತೆ ಪತ್ರ ಬರೆಯುವೆಯಾ ಎಂದೂ ಸವಾಲೆಸೆದ. ನಾನು ಇಲ್ಲವೆನ್ನಲಿಲ್ಲ. ಆದರೆ ನಿಮ್ಮ ಮೂಲಕ ಪತ್ರ ಬರೆಯಲಾರೆ, ನೇರವಾಗಿ ನನ್ನ ಮಿತ್ರರೊಂದಿಗೆ ನಾನೇ `ಮಾತನಾಡುವೆ ಎಂದೆ. ಇದರ ಪರಿಣಾಮಗಳೇನಾಗಬಹುದು ಎಂದು ಕೆಡಾಕಿಗೆ ಗೊತ್ತಿರಲಿಲ್ಲವೆಂದೇನಲ್ಲ. ಕುಪಿತನಾಗಿಯೇ ಆತ “ನಮ್ಮ ರಷ್ಯಾ ಇದ್ದಿದ್ದರೆ ಸ್ಥಾನದಲ್ಲಿ ರಷ್ಯಾ ನಿಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿತ್ತು ಗೊತ್ತಾ?’ ಎಂದ. “ಹೇಗೆ ಸೈಬೀರಿಯನ್ನರಿಗೆ ಇಂದು ಸಮಾನವಾದ ಸ್ಥಾನಮಾನವನ್ನು ತಮ್ಮ ಕೊಡುತ್ತಿದ್ದಾರೋ ಹಾಗೆ ನಮಗೂ ಕೊಟ್ಟಿರುತ್ತಿದ್ದರು’ ಎಂದೆ. ಕ್ರೆಡಾಕ್‌ನ ಮುಖ ಇಂಗುತಿಂದ ಮಂಗನಂತಾಗಿತ್ತು.

ನಾನೇ ಸ್ವಲ್ಪ ದನಿ ಎತ್ತರಿಸಿ ಅವರೇನಾದರೂ ನೀವು ಮಾಡಿದಂತೆಯೇ ನಮ್ಮ ಮೇಲೆ ಏರಿಬಂದಿದ್ದರೆ ಹೇಗೆ ಮೊಘಲರಿಂದ ದೇಶವನ್ನು ಕಿತ್ತುಕೊಂಡೆವೋ ಹಾಗೆ ಅವರಿಂದಲೂ ಕಸಿಯುತ್ತಿದ್ದೆವು ಎಂದೆ. ಬ್ರಿಟೀಷರ ವಿರುದ್ಧ ನನ್ನ ಹೋರಾಟದ ಕಿಚ್ಚು ಆರಿಲ್ಲವೆಂಬುದಕ್ಕೆ ಆತನಿಗೆ ಇದೊಂದೇ ಉದಾಹರಣೆ ಸಾಕಿತ್ತು. ಆತ ಮರಳಿ ಹೋಗುವಾಗ ದಾರಿಯಲ್ಲಿಯೇ ವರದಿ ಬರೆದ. ತನ್ನ ಕೃತ್ಯಕ್ಕೆ ಒಂದಿನಿತೂ ದುಃಖ, ಪಶ್ಚಾತ್ತಾಪ ಸಾವರ್ಕ‌್ರನಿಗಿಲ್ಲ. ಈತನನ್ನು ಭಾರತದ ಯಾವ ಜೈಲಿಗೆ ಕಳಿಸಿಕೊಟ್ಟರೂ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ಅಂಡಮಾನ್ ಜೈಲಿನ ಹೊರಗೆ ಕಳಿಸಿದರೂ ವಿದೇಶಿ ಕ್ರಾಂತಿಕಾರಿಗಳು ವ್ಯವಸ್ಥಿತವಾಗಿ ಇವನನ್ನು ಹಾರಿಸಿಕೊಂಡು ಹೋಗುತ್ತಾರೆ. ಆತ ಬ್ರಿಟೀಷ್ ಸರ್ಕಾರಕ್ಕೆ ಎಷ್ಟು ಅಪಾಯಕಾರಿ ಎಂಬುದು ಬ್ರಿಟೀಷ್ ಸರ್ಕಾರ ಭಾರತೀಯರೊಂದಿಗೆ ನಡೆದುಕೊಳ್ಳುವ ರೀತಿಯ ಮೇಲೆ ಅವಲಂಬಿಸಿದೆ ಎಂದು ಹೇಳುವ ಆತನ ಮಾತುಗಳು ಆತನಲ್ಲಿ ಒಂದಿನಿತೂ ಬದಲಾವಣೆಯನ್ನು ಸೂಚಿಸುವುದಿಲ್ಲ. ಹೀಗಾಗಿ ಆತನನ್ನು ಬಿಡಲೇಬಾರದು’ ಎಂದಿದ್ದ.

ಇದನ್ನು ನನ್ನ ಕ್ಷಮಾಪಣೆಯ ಪತ್ರ ಎಂದು ಮೂದಲಿಸುವ ಜನರಿಗೆ ಗೊತ್ತಿರಬೇಕಾದ ಒಂದೇ ಸಂಗತಿ ಏನು ಗೊತ್ತೆ? ಡಾಕ್ ಬಂದುಹೋದ ಮರುದಿನದಿಂದಲೇ ನನ್ನನ್ನು ಮತ್ತೆ ಒಂದು ತಿಂಗಳ ಏಕಾಂತವಾಸಕ್ಕೆ ತಳ್ಳಲಾಗಿತ್ತು. ನಾನು ಮಾನಸಿಕವಾಗಿ ಒಂದಿನಿತೂ ಜರ್ಝರಿತವಾಗಿಲ್ಲ ಎಂಬುದು ಈ ಶಿಕ್ಷೆಗೆ ಕಾರಣ. ನಾನು ಮಾನಸಿಕವಾಗಿ ಸೋತಿದ್ದೇನೆ ಎಂದು ಅರಿವಾಗಲೆಂದೇ ಮತ್ತೆ ಕ್ಷಮಾಪಣಾ ಪತ್ರಗಳನ್ನು ಬರೆದೆ. ಸರ್ಕಾರ ಕರುಣೆ ತೋರಿ ನನ್ನನ್ನು ಬಿಡುಗಡೆ ಮಾಡಲಿ. ನಾನು ಕಾನೂನಿಗೆ ಬದ್ಧನಾಗಿ ನಡೆಯುವುದನ್ನು ಕಂಡು ಅನೇಕ ತರುಣರು ಸರಿದಾರಿಗೆ ಬರುತ್ತಾರೆ. “ನಾನು ಸರ್ಕಾರಕ್ಕೆ ಈ ನಿಟ್ಟನಲ್ಲಿ ಯಾವ ರೀತಿಯಲ್ಲಿ ಬೇಕಿದ್ದರೂ ಸಹಕರಿಸಬಲ್ಲೆ. ನನ್ನನ್ನು ಜೈಲಿನಲ್ಲಿಟ್ಟು ನೀವೇನು ಸಾಧಿಸಬಲ್ಲಿರೋ ನಾನು ಹೊರಗೆ ಬಂದರೆ ನಿಮಗೆ ಅದಕ್ಕಿಂತಲೂ ಹೆಚ್ಚಿನ ಲಾಭವಾಗಬಲ್ಲದು’ ಎಂದೆಲ್ಲ ಬರೆದೆ. ಊಹೂಂ! ಆದರೂ ಅವರ ಮನಸ್ಸು ಕರಗಲಿಲ್ಲ. ಕೊನೆಗೊಮ್ಮೆ ಮನದಾಳದ ಬಯಕೆಯನ್ನೂ ಪತ್ರದಲ್ಲಿ ಹೇಳಿಕೊಂಡೆ, “ನನಗಾಗಿ ಈ ಪತ್ರ ಬರೆಯುತ್ತಿದ್ದೇನೆ ಎಂದು ಭಾವಿಸಿದರೆ ಅಥವಾ ಈ ಬಿಡುಗಡೆಗೆ ನಾನೇ ಅಡ್ಡಗಾಲು ಎಂದು ನಿಮಗನಿಸಿದರೆ ಸರ್ಕರ ನನ್ನ ಹೆಸರು ಕೈಬಿಟ್ಟರೂ ಚಿಂತಿಲ್ಲ.

ಇತರ ರಾಜಕೀಯ ಹೋರಾಟಗಾರರು ಬಿಡುಗಡೆಯಾದರೆ ನಾನೇ ಬಿಡುಗಡೆಯಾದಷ್ಟು ಸಂತಸ ನನಗೆ’ ಎಂತಲೂ ಹೇಳಿದೆ. ಇದರಲ್ಲೂ ನನ್ನದೊಂದು ಗುಪ್ತನೀತಿ ಇದೆ ಎಂದು ಭಾವಿಸಿದ ಸರ್ಕಾರ ನನ್ನ ಅಥವಾ ನನ್ನ ಜೊತೆಗಾರರ ಬಿಡುಗಡೆಗೆ ಒಪ್ಪಲೇ ಇಲ್ಲ. ನಾನೂ ಸುಮ್ಮನಿರಲಿಲ್ಲ. ಇರುವ ವ್ಯಾಪ್ತಿಯಲ್ಲಿಯೇ ಬದಲಾವಣೆಗಳನ್ನು ತರಲಾರಂಭಿಸಿದೆ.
ಈ ವೇಳೆಯಲ್ಲಿಯೇ ಶ್ರದ್ಧೆಯಿಂದ ಬೈಬಲ್ ಮತ್ತು ಕುರಾನ್‌ಗಳನ್ನು ಓದಿ ಮುಗಿಸಿದೆ. ಅಲ್ಲಿದ್ದ ಮುಸಲ್ಮಾನರ ಮಾತುಗಳಿಂದ ಅವರು ಹೇಗೆ ಹಿಂದೂಧರ್ಮದ ನಾಶಕ್ಕೆ ಸಿದ್ದವಾಗುತ್ತಿದ್ದಾರೆ ಎಂಬುದನ್ನು ಅರಿತುಕೊಂಡೆ. ಕೊನೆಗೆ ಹಿಂದೂಗಳನ್ನು ಮುಸಲ್ಮಾನರನ್ನಾಗಿ ಮತಾಂತರಿಸುತ್ತಿದ್ದ ಆ ಅಯೋಗ್ಯರಿಗೆ ಸವಾಲೆಸೆದು ಜೈಲಿನಲ್ಲಿಯೇ ಮುಸಲ್ಮಾನನೊಬ್ಬನನ್ನು ಹಿಂದೂಧರ್ಮಕ್ಕೆ ಮರಳಿ ಕರೆತಂದು ಎಲ್ಲರ ಹುಬ್ಬೇರುವಂತೆ ಮಾಡಿಬಿಟ್ಟೆ ಅಂಡಮಾನಿನ ತುಂಬ ಉರ್ದು ತುಂಬಿಕೊಂಡಿತ್ತು. ಹಿಂದಿಗೆ ಅಡಿಪಾಯ ಹಾಕಿಸಿದೆ. ಹಿಂದೂಗಳಲ್ಲಿ ಕಳೆದುಹೋಗಿದ್ದ ಆತ್ಮವಿಶ್ವಾಸವನ್ನು ಮರಳಿ ತುಂಬಿ ಮುಸಲ್ಮಾನ ಗೂಂಡಾಗಳನ್ನು ಎದುರಿಸುವ ತಾಕತ್ತು ತುಂಬಿದೆ. ರಾಜಕೀಯ ಕೈದಿಗಳಿಗೆ ಇತಿಹಾಸದ ಪಾಠ ಮಾಡುತ್ತಿದ್ದೆ. ಕೊನೆ ದಿನಗಳಲ್ಲಂತೂ ಬ್ಯಾರಿ ನನ್ನ ವಿರೋಧಕ್ಕೆ ಹೆದರುತ್ತಿದ್ದ.

ಒಮ್ಮೆ ನಮ್ಮೆಲ್ಲ ಸೆಲ್‌ಗಳ ಮೇಲೂ ಆತ ತನ್ನ ತಂಡದ ಮೂಲಕ ದಾಳಿ ಮಾಡಿಸಿದ್ದ. ಆಮೇಲೆ ಗೊತ್ತಾಯ್ತು ಅಂಡಮಾನ್ ಜೈಲುಗಳ ಹೊರಗೆ ಬಾಂಬ್ ತಯಾರಿಕೆ ನಡೆಯುತ್ತಿದೆ ಎಂಬ ಸುದ್ದಿ ಅವರ ಕಿವಿಗೆ ಬಿದ್ದಿತ್ತು ಮತ್ತು ಅದರ ಸೂತ್ರಧಾರಿ ನಾನೇ ಎಂಬುದು ಅವರ ನಂಬಿಕೆಯಾಗಿತ್ತು. ಒಟ್ಟಿನಲ್ಲಿ ಅಂಡಮಾನಿನ ಹೊರಗೆ ಕಾಲಿರಿಸದೆಯೂ ನಾನು ಆತಂಕಕ್ಕೆ ಕಾರಣವಾಗಿದ್ದೆ. ಬ್ಯಾರಿ ನಿವೃತ್ತನಾಗಿ ಹೋಗುವಾಗ ನನ್ನ ಬಳಿ ಬಂದು ಗೋಗರೆದಿದ್ದ. ನನ್ನ ಹಡಗು ಭಾರತದ ಮೂಲಕ ಹಾದುಹೋಗುವಾಗ ನಿನ್ನ ಕ್ರಾಂತಿಕಾರಿ ಮಿತ್ರರು ನನ್ನನ್ನು ಕೊಲ್ಲುವುದು ಖಚಿತ. ದಯಮಾಡಿ ನನ್ನ ಜೀವ ಕಾಪಾಡು’ ಎಂದಿದ್ದ. ನಾನು ನಕ್ಕು ಸುಮ್ಮನಾಗಿದ್ದೆ. ಪುಣ್ಯಾತ್ಮ ಭಾರತದ ಹತ್ತಿರವೂ ಹೋಗದಂತೆ ತನ್ನ ಯಾತ್ರೆಯನ್ನು ರೂಪಿಸಿಕೊಂಡ. ಅವನ ನಂತರ ಬರಬೇಕಿದ್ದ ಮತ್ತೊಬ್ಬ ಮುಸಲ್ಮಾನ ಜೈಲರ್ ನನ್ನನ್ನು ಕಂಡರೆ ಎಷ್ಟು ಹೆದರುತ್ತಿದ್ದನೆಂದರೆ ನಾನು ಅವನ ಕೊಲೆಗೆ ಹೊಂಚು ಹಾಕಿ ಬ್ಲಾಕ್‌ಮ್ಯಾಜಿಕ್ ಮಾಡಿಸಿದ್ದೇನೆ ಎನ್ನುತ್ತಿದ್ದ. ಒಟ್ಟಿನಲ್ಲಿ ನಾನು ಕುಂತರೂ ನಿಂತರೂ ಹೆದರಿಕೆ.

ಸ್ವಾತಂತ್ರ್ಯಾನಂತರ ಕಾಂಗ್ರೆಸ್‌ ವರ್ತನೆ ಹೇಗಿತ್ತು?

ಸ್ವಾತಂತ್ರ್ಯಾನಂತರ ಕಾಂಗ್ರೆಸ್ ನನ್ನೊಂದಿಗೆ ಹೀಗೆಯೇ ವರ್ತಿಸಿತ್ತಲ್ಲ! ಪಾಕಿಸ್ತಾನವನ್ನು ರಚಿಸಿಕೊಂಡ ಲಿಯಾಖತ್ ಅಲಿಖಾನ್ ಭಾರತಕ್ಕೆ ಬರುತ್ತಾನೆಂದರೆ ಪ್ರಧಾನಿ ನೆಹರೂ ನನ್ನನ್ನು ಬಂಧಿಸಿ ಜೈಲಿಗೆ ತಳ್ಳುತ್ತಿದ್ದರು. ಮಹಾತ್ಮ ಗಾಂಧೀಜಿಯವರ ಹತ್ಯೆಗೆ ನನ್ನನ್ನೂ ಕಾರಣವಾಗಿಸಲಾಯ್ತು. ಗಾಂಧೀಜಿಯವರೊಂದಿಗೆ ನನಗೆ ಸೈದ್ಧಾಂತಿಕವಾದ ಭಿನ್ನತೆ ಇದ್ದಿರಬಹುದು ಆದರೆ ಕೊಲೆ ಮಾಡುವಂಥದ್ದಲ್ಲ. ನಮ್ಮ ಜನರನ್ನೇ ಕೊಲೆ ಮಾಡುವಷ್ಟು ನೀಚ ಮಟ್ಟಕ್ಕೆ ಹೋಗುವುದನ್ನು ನಾನು ಸಹಿಸುವುದೂ ಇಲ್ಲ. ಹಿಂದೂಧರ್ಮ ಈ ಬಗೆಯ ಕೊಲೆಯನ್ನು ಹೇಳಿಕೊಡುವೂದೂ ಇಲ್ಲ. ಸೈದ್ಧಾಂತಿಕ ವಿಚಾರವನ್ನು ವೈಚಾರಿಕ ನೆಲೆಕಟ್ಟಿನಲ್ಲಿ ವಿರೋಧಿಸುತ್ತೇವೆಯೇ ಹೊರತು ವ್ಯಕ್ತಿಯನ್ನೇ ಇಲ್ಲವಾಗಿಸುವಷ್ಟು ಹೇಡಿಗಳಲ್ಲ ನಾವು. ಬೇಕಂತಲೇ ನನ್ನನ್ನೂ ಆರೋಪಿಯನ್ನಾಗಿಸಲಾಯ್ತು.

ಪಕ್ಷದ ಕಾರ್ಯಕರ್ತರು ನನ್ನ ಮನೆಯ ಮೇಲೆ ಕಲ್ಲೆಸೆದರು. ಬಾಳ ನನ್ನ ತಮ್ಮನಾಗಿದ್ದ ಎಂಬ ಒಂದೇ ಕಾರಣಕ್ಕೆ ಕಲ್ಲಿನಿಂದಲೇ ಆತನ ತಲೆ ಒಡೆದರು. ಒಂದಷ್ಟು ಮಂದಿ ನನ್ನ ಜಾತಿಯವರಾಗಿದ್ದರು ಎಂಬ ಕಾರಣಕ್ಕೆ ಅವರ ಮೇಲೆ ಗೂಬೆ ಕೂರಿಸಲಾಯ್ತು. ಅವರು ಭಯಭೀತರಾಗಿ ಮುಕ್ತವಾಗಿ ಓಡಾಡದಿರುವಂತೆ ಮಾಡಲಾಯ್ತು. ನನ್ನನ್ನು ಬಂಧಿಸಲು ಬಂದ ಪೊಲೀಸ್‌ ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದರೆ ‘ಬಾಗಿಲು ಹಾಕಿಕೊಳ್ಳಬೇಡ. ನೀನು ಎಲ್ಲಿಂದ ಬೇಕಿದ್ದರೂ ತಪ್ಪಿಸಿಕೊಳ್ಳಬಹುದಾದಷ್ಟು ಅಪಾಯಕಾರಿ ವ್ಯಕ್ತಿ’ ಎಂದಾಗ ನಾನು ನಿಸ್ಸಹಾಯಕವಾಗಿ ನಕ್ಕಿದ್ದೆ. ಠಾಣೆಯಲ್ಲಿ ನನಗೆ ಹೃದಯಕ್ಕೆ ಇರಿಯುವಂತಹ ಪ್ರಶ್ನೆಗಳನ್ನು ಕೇಳುತ್ತಿದ್ದಾಗ ನಾನು ತಲೆತಗ್ಗಿಸಿ ನೊಂದು ಕುಳಿತಿದ್ದೆ. ಸ್ಕಾಟ್‌ಲ್ಯಾಂಡ್ ಯಾರ್ಡಿನ ಪೊಲೀಸರಿಗೆ ಮುಖಕ್ಕೆ ಹೊಡೆದಂತೆ ಉತ್ತರ ಕೊಡುತ್ತಿದ್ದ ನಾನು ನನ್ನದೇ ಮಂದಿ ಕೇಳುವ ಪ್ರಶ್ನೆಗಳಿಗೆ ನಿರುತ್ತರಿಯಾಗಿದ್ದೆ! ಕೋರ್ಟಿನ ಕಟಕಟೆಯಲ್ಲಿ ಕುಳಿತು ಸ್ವತಂತ್ರ ಭಾರತದಲ್ಲಿ ಹತ್ಯೆಯ ಆರೋಪವನ್ನು ಎದುರಿಸಬೇಕಾದಾಗ ನನಗಾದ ಸಂಕಟ ಯಾರೊಂದಿಗೆ ಹಂಚಿಕೊಳ್ಳಲಿ! ಸ್ವತಃ ನ್ಯಾಯಾಧೀಶರು ವಿಚಾರಣೆಗಳನ್ನು ಆಲಿಸಿ ನನ್ನ ಪರವಾಗಿ ನಿಂತು ಗೌರವದಿಂದ ಬೀಳ್ಕೊಟ್ಟರು. ಆದರೆ ಗಾಂಧಿ ಹತ್ಯೆಯ ಆರೋಪ ನನ್ನ ತಲೆಯ ಮೇಲಿಂದ ಹೋಗಲು ಕಾಂಗ್ರೆಸ್ಸಿಗರು ಬಿಡಲೇ ಇಲ್ಲ.

1960ರಲ್ಲಿ ಕಾಲಾಪಾನಿಯಿಂದ ನಾನು ಬಿಡುಗಡೆಯಾಗಬೇಕಿತ್ತು. ಆ ದಿನವನ್ನು ನನ್ನೆಲ್ಲ ಪ್ರೀತಿಯ ಮಿತ್ರರೂ ಮೃತ್ಯುಂ ಜಯ ದಿವಸವನ್ನಾಗಿ ಆಚರಿಸಿದರು. ಇದರ ವರದಿ ರೆಡಿಯೊದಲ್ಲಿ ಒಂದಿನಿತೂ ಬರದಂತೆ ನೋಡಿಕೊಂಡಿದ್ದು ಅಂದಿನ ಪ್ರಧಾನಿ. ಬ್ರಿಟೀಷರಿಗೆ ನಾನು ಕ್ಷಮಾಪಣಾ ಪತ್ರ ಬರೆದಿದ್ದೆ ಎಂದು ಮೂದಲಿಸುವ ಮಾತುಗಳನ್ನು ನಿರಂತರವಾಗಿ ಆಡಿಸಿದರು. ನಾನು ಈ ಪತ್ರಗಳನ್ನು ಏಕೆ ಬರೆದಿದ್ದೆ ಎಂಬುದುನ್ನು ವಿವರಿಸಬೇಕಿತ್ತೇನು? ರಜಪೂತ ರಾಜರಿಗೆ ಶಿವಾಜಿ ಮಹಾರಾಜರು ಪತ್ರ ಬರೆದಿರಲಿಲ್ಲವೇ? ರಾಜ ಜಯಸಿಂಹನಿಗೆ ಪತ್ರ ಬರೆದು “ಔರಂಗಜೇಬನ ಬದಲು ನೀನೇ ರಾಜನಾಗು. ನಾನು ನಿನ್ನ ಸೇವೆ ಮಾಡಿಕೊಂಡಿರುತ್ತೇನೆ” ಎಂದಿರಲಿಲ್ಲವೇ? ಸ್ವತಃ ಔರಂಗಜೇಬನ ಬಂಧನದಲ್ಲಿದ್ದಾಗ ಹತ್ತಾರು ಪತ್ರಗಳನ್ನು ಬರೆದು ಬಾದಶಹನ ಸೇವೆಗೆ ಸಿದ್ಧ ಎಂದು ಹೇಳಿರಲಿಲ್ಲವೇ? ಇವೆಲ್ಲವೂ ರಾಜತಾಂತ್ರಿಕ ನಡೆಗಳೇ ವಿನಃ ಹತಾಶ ಮನೋಭಾವವಲ್ಲ. ಈ ರೀತಿಯ ಪತ್ರಗಳನ್ನು ಬರೆದವ ನಾನೊಬ್ಬನೇ ಅಲ್ಲ. ಬಹುತೇಕ ಎಲ್ಲ ರಾಜಕೀಯ ಕೈದಿಗಳು ಕಾಲಾಪಾನಿಯಿಂದ ಹೊರಬಿದ್ದರೆ ಸಾಕು ಎಂಬ ಭಾವನೆಯೊಂದಿಗೆ ಇರುತ್ತಿದ್ದರು. ಆ ಜೈಲು ಅಷ್ಟು ಕ್ರೂರಿ.

ನೆಹರೂ ನಭಾ ಜೈಲಿನಲ್ಲಿ ಕಳೆದ 12 ದಿನಗಳ ವಿಚಾರ ನಿಮಗೆ ಗೊತ್ತಲ್ಲ? ಹಾಗೆ ನೋಡಿದರೆ ನೆಹರೂ ನಿಜವಾದ ಜೈಲಿನಲ್ಲಿದ್ದದ್ದು ಅದೊಮ್ಮೆ ಮಾತ್ರ ಅವರ ತಂದೆ ಮೋತಿಲಾಲ್ ನೆಹರೂ ಹನ್ನೆರಡೇ ದಿನದಲ್ಲಿ ಕ್ಷಮಾಪಣಾ ಪತ್ರವನ್ನು ಬರೆದು ಬಿಡುಗಡೆಗೆ ಕೋರಿಕೊಂಡಿದ್ದರು. ನಭಾಕ್ಕೆ ಕಾಲಿಡುವುದಿಲ್ಲ ಎಂಬ ಮಾತನ್ನು ನೆಹರೂ ಎಷ್ಟು ಚೆನ್ನಾಗಿ ಪಾಲಿಸಿದ್ದರೆಂದರೆ ಗಾಂಧಿಯವರಂತೂ ನೆಹರೂ ವಿಚಾರದಲ್ಲಿ ಇನ್ನೊಮ್ಮೆ ಇಂತಹ ಆತಂಕವನ್ನೆದುರಿಸಲು ಸಿದ್ಧವಿಲ್ಲ ಎಂದೇ ಹೇಳಿಬಿಟ್ಟಿದ್ದರು. ಒಂದು ಜೈಲಿನಲ್ಲಿ ಕಠಿಣ ಶಿಕ್ಷೆಯನ್ನು ಕೆಲವು ದಿನಗಳ ಕಾಲ ಎದುರಿಸಲಾಗದೇ ಮಂಡಿಯೂರಿದ್ದ ಈ ಮಂದಿ ಹತ್ತಾರು ವರ್ಷಗಳ ಕಾಲ ಕಾಲಾಪಾನಿಯಂತಹ ಯಮಲೋಕದಲ್ಲಿ ಬದುಕು ಕಳೆದವರನ್ನು 27 ಹಂಗಿಸುತ್ತಾರಲ್ಲ! ಏನು ಹೇಳೋದು.

ಇಷ್ಟಕ್ಕೂ ಹನ್ನೊಂದು ವರ್ಷಗಳ ನಂತರ ನನ್ನನ್ನು, ಅಣ್ಣನನ್ನು ಬ್ರಿಟೀಷ್ ಸರ್ಕಾರ ಕಾಲಾಪಾನಿಯಿಂದ ಬಿಡುಗಡೆ ಮಾಡಿತ್ತಲ್ಲ, ಅದು ನಾವು ಕಳಿಸಿದ ಕ್ಷಮಾಪಣಾ ಪತ್ರಕ್ಕಲ್ಲ, ಬದಲಿಗೆ ನಮ್ಮೆಲ್ಲರ ಅವ್ಯಕ್ತವಾದ ಹೋರಾಟಗಳ ಪರಿಣಾಮವಾಗಿ ಆ ಜೈಲನ್ನೇ ಮುಚ್ಚಿಬಿಡಬೇಕೆಂದು ಅವರು ನಿರ್ಧರಿಸಿದ್ದರಿಂದ.

ಒಂದಂತೂ ಹೆಮ್ಮೆ ನನಗಿದೆ. ನಾನು ಕಾಲಾಪಾನಿಗೆ ಹೋದದ್ದರಿಂದ ಸ್ವಾತಂತ್ರ್ಯ ಹೋರಾಟದ ತೀವ್ರತೆಯಲ್ಲಿ ಸ್ವಲ್ಪ ಹಿನ್ನಡೆಯಾಗಿದ್ದಿರಬಹುದು. ಆದರೆ ನನ್ನ ಆಗಮನದ ನಂತರ ಕಾಲಾಪಾನಿಯ ಮೇಲೆ ಎಲ್ಲರ ಗಮನವೂ ಕೇಂದ್ರೀಕೃತಗೊಂಡು ಆ ಜೈಲು ಮುಚ್ಚುವಂತಾಯ್ತಲ್ಲ, ನೂರಾರು ಮಂದಿ ಕ್ರಾಂತಿಕಾರಿ ತರುಣರ ಬದುಕು ನಷ್ಟವಾಗುವುದು ನಿಂತಿತು ಅಷ್ಟೆ. ನಿಜಕ್ಕೂ ಬಿಟ್ಟುಹೋಗುವ ಸಮಯ ಈಗ ಬಂತು! ನಿಂದನೆಯ ಕೂರಂಬುಗಳು ನನ್ನನ್ನು ಇರಿಯುತ್ತಲೇ ಇದ್ದವು. ನಾನು ಬೇಸತ್ತು ಹೋಗಿದ್ದೆ. ಬದುಕು ಸಾಕೆನಿಸಿತ್ತು. ಒಮ್ಮೆಯಂತೂ ಸಮುದ್ರಕ್ಕೆ ನನ್ನನ್ನು ಸಮರ್ಪಿಸಿಕೊಳ್ಳಬೇಕೆಂದು ನಿಶ್ಚಯಿಸಿ ಹೊರಟುಬಿಟ್ಟೆ. ಜೊತೆಯಲ್ಲಿದ್ದವರು ಬಿಡಲಿಲ್ಲ. ಅಂಡಮಾನಿನ ಯಮಯಾತನೆಯನ್ನು ಸಹಿಸಿ ಬದುಕಬೇಕೆಂದು ನಿಶ್ಚಯಿಸಿದ್ದ ನಾನು ಸ್ವತಂತ್ರ ಭಾರತದಲ್ಲಿ ನಮ್ಮವರ ಇರಿತವನ್ನು ತಾಳಲಾಗದೇ ಸಾಯಬೇಕೆಂಬ ಸಂಕಲ್ಪ ಮಾಡಿದ್ದೆ. ಜೊತೆಗಿದ್ದವರು ಬಿಡಲಿಲ್ಲ.

ನನಗೆ ಸಾಕೆನಿಸಿಬಿಟ್ಟಿತ್ತು. 82 ವರ್ಷಗಳ ನನ್ನ ತುಂಬು ಬದುಕಿನಲ್ಲಿ ನಾನು ಬಿಎ ಪದವಿ ಕಳೆದುಕೊಂಡೆ, ವಿದೇಶದಲ್ಲಿ ಹೋಗಿ ಸಂಪಾದಿಸಿದ ಬ್ಯಾರಿಸ್ಟರ್ ಪದವಿ ಕಳೆದುಕೊಂಡೆ, ಅಣ್ಣನನ್ನು, ಅತ್ತಿಗೆಯನ್ನು, ನನ್ನ ಮುದ್ದಿನ ಪ್ರಭಾಕರನನ್ನು, ನನ್ನ ಆಸ್ತಿ-ಪಾಸ್ತಿ ಎಲ್ಲವನ್ನೂ, ಕೊನೆಗೆ ಯೌವ್ವನದ ಅತ್ಯಮೂಲ್ಯ ವರ್ಷಗಳನ್ನು ರಾಷ್ಟ್ರಯಜ್ಞಕ್ಕೆ ಹವಿಸ್ಸಾಗಿ ಅರ್ಪಿಸಿದೆ. ಇನ್ನು ನನ್ನ ಬಳಿ ಅರ್ಪಿಸಲು ಹತಾಶೆ ಬಿಟ್ಟರೆ ಮತ್ತೇನೂ ಇರಲಿಲ್ಲ. ಸ್ವತಂತ್ರ ಭಾರತದಲ್ಲಿ ಜಾತಿ-ಮತ-ಪಂಥಗಳ ತಾಕಲಾಟವನ್ನು ತೊಡೆಯಲು ನಾನು ತುಳಿತಕ್ಕೊಳಗಾದವರೊಂದಿಗೆ ಸೇರಿ ಮಾಡಿದ ಹೋರಾಟ ನನಗೀಗ ಆನಂದವನ್ನು ಕೊಡುತ್ತಿತ್ತು.

ಐಷಾರಾಮಿ ಜೈಲುಗಳಲ್ಲಿ ಮೆರೆದವರೆಲ್ಲ ಅಧಿಕಾರದ ಗದ್ದುಗೆಯ ಮೇಲೆ ಕುಳಿತು ಸ್ವಾತಂತ್ರ್ಯಕ್ಕಾಗಿ ರಕ್ತ ಚೆಲ್ಲಿದವರನ್ನು ಅವಮಾನಿಸುತ್ತಿದ್ದರು. ಇನ್ನು ನೋಡಲಾಗುವುದಿಲ್ಲವೆಂದು ಅನ್ನ, ನೀರು ತ್ಯಜಿಸಿಬಿಟ್ಟೆ. ಬಹಳ ದಿನಗಳೇನೂ ಇಲ್ಲ. ಸುಮಾರು ಇಪ್ಪತ್ತೋ ಇಪ್ಪತ್ತೊಂದು ದಿನಗಳೋ ಆಗಿರಬಹುದು. ನನ್ನ ಪ್ರಾಣಪಕ್ಷಿ ಹಾರಿಹೋಯ್ತು. ಸ್ವರ್ಗಕ್ಕೇ ಹೋಗಬಹುದಿತ್ತೇನೋ. ಭಾರತಕ್ಕಿಂತಲೂ ಮಿಗಿಲಾದ ಸ್ವರ್ಗ ಯಾವುದಿದೆ ಎಂದು ಇಲ್ಲಿಯೇ ತಿರುಗಾಡುತ್ತಾ ಉಳಿದೆ!
ಆದರೆ ಸತ್ತ ನಂತರವೂ ನನ್ನ ಮೇಲಿನ ನಿಂದನೆಗಳು ನಿಲ್ಲಲೇ ಇಲ್ಲವೆಂದಾಗ ಸಂಕಟವೆನಿಸಿತು. ಸಂಸತ್ ಭವನದಲ್ಲಿ ನನ್ನದೊಂದು ಚಿತ್ರ ಅನಾವರಣ ಮಾಡುತ್ತಾರೆಂದಾಗ ಅರಳಿದ ನಗು ಬಹಳ ಕಾಲ ಉಳಿಯಲಿಲ್ಲ. ಕಾಂಗ್ರೆಸ್ಸಿನ ನಾಯಕಿ ಇಟಲಿಯ ಸೋನಿಯಾ ಆ ಕಾರ್ಯಕ್ರಮಕ್ಕೆ ಬರಲೇ ಇಲ್ಲ. ದೇಶದ್ರೋಹಿಯ ಚಿತ್ರ ಅನಾವರಣಕ್ಕೆ ನಾನು ಬರುವುದಿಲ್ಲ ಎಂದುಬಿಟ್ಟಳಂತೆ.

ಒಂದು ಕಾಲದಲ್ಲಿ ಆಕೆಯ ದೇಶದ ಮ್ಯಾಜಿನಿಯನ್ನು ದೇಶಭಕ್ತನೆಂದು ಕರೆದು ನಾನು ಬರೆದಿದ್ದ ಪುಸ್ತಕ ನೆನಪಾಯಿತು. ನಾವೆಲ್ಲ ಜೀವತೇಯ್ದ ಅಂಡಮಾನಿನ ಜೈಲಿನ ಹೊರಗೆ ನನ್ನ ಹೇಳಿಕೆಯ ಫಲಕವೊಂದನ್ನು ಹಾಕಿದ್ದರೆ ಕಾಂಗ್ರೆಸ್ ಮಂತ್ರಿ ಮಣಿಶಂಕರ್ ಅಯ್ಯರ್ ಅದನ್ನು ಕಿತ್ತೆಸೆದ. ದೇಶದ್ರೋಹಿಯ ಹೇಳಿಕೆ ಇಲ್ಲೇಕೆ ಎಂದ. ನನ್ನ ದೇಹವಿರಲಿಲ್ಲ. ಆದರೆ ಇವರ ಬೈಗುಳಕ್ಕೆ ಕೊನೆಯೂ ಇರಲಿಲ್ಲ. ಈಗ ಸಿದ್ದರಾಮಯ್ಯ ನನ್ನನ್ನು ದೇಶದ್ರೋಹಿ ಎನ್ನುತ್ತಿದ್ದಾನೆ. ಮುಸಲ್ಮಾನರಿರುವ ಜಾಗದಲ್ಲಿ ನನ್ನ ಫೋಟೊ ಕೂಡ ಹಾಕಬಾರದಂತೆ.

ಭಾರತವನ್ನೇ ಬಿಟ್ಟುಹೋಗಬೇಕಾದ ಸಂದರ್ಭ ಕೊನೆಗೂ ಬಂತೇನು?! ನನ್ನೆಲ್ಲ ದೇಶಭಕ್ತ ಮಕ್ಕಳನ್ನು ಆಶೀರ್ವದಿಸಿ ನಾನಿನ್ನು ಹೊರಟುಬಿಡಲೇ? ಈ ದೇಶದ ಕುರಿತಂತೆ ನಾವುಗಳು ಕಟ್ಟಿದ ಕನಸುಗಳು ನನಸಾಗುವುದನ್ನು ನಾನು ಕಾಣಲು ಸಾಧ್ಯವೇ ಇಲ್ಲವೇ? ನನ್ನ ಹೃದಯ ಭಾರವಾಗಿಬಿಟ್ಟಿದೆ. ನಿಮ್ಮ ಹೃದಯದಲ್ಲಾದರೂ ನಿಂದನೆಗಳಿಲ್ಲದೇ ನನಗೊಂದು ಸ್ಥಳ ಸಿಕ್ಕರೆ ಅದೇ ನನ್ನ ಭಾಗ್ಯ. ನೀವೆಲ್ಲರೂ ಸುಖವಾಗಿ ಸಮೃದ್ಧವಾಗಿದ್ದು ನನ್ನ ಭಾರತ ಶ್ರೇಷ್ಠ ಭಾರತವಾದರೆ ನನಗಷ್ಟೇ ಸಾಕು. ಸ್ವಾತಂತ್ರ್ಯಕ್ಕಾಗಿ ಜೀವತೇಯ್ದ ನಾನು ರಾಷ್ಟ್ರ ವಿಶ್ವಗುರುತ್ವದ ಪದವಿಯನ್ನೇರಲಿಕ್ಕಾಗಿ ಎಷ್ಟೇ ಬೈಗುಳಗಳನ್ನು ತಿನ್ನಲೂ ಸಿದ್ಧ. ಅದೊಂದು ಹೇಳಬೇಕಿತ್ತು, ಅದಕ್ಕಾಗಿ ಬಂದಿದ್ದೇನೆ ಅಷ್ಟೇ!

ಇದನ್ನೂ ಓದಿ | ವೀರ ಸಾವರ್ಕರ್‌ ಕುರಿತ ಸತ್ಯವನ್ನು ಎಲ್ಲರಿಗೂ ತಿಳಿಸಲು ಪುಸ್ತಕ ಪ್ರಕಟಿಸಿದ್ದೇವೆ ಎಂದ ಚಕ್ರವರ್ತಿ ಸೂಲಿಬೆಲೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

CET 2024: ಸಿಇಟಿ ಮರು ಪರೀಕ್ಷೆಯೋ? ಗ್ರೇಸ್‌ ಮಾರ್ಕ್ಸ್‌ ಭಾಗ್ಯವೋ? ನಾಳೆ ನಿರ್ಧಾರ ಪ್ರಕಟ?

CET 2024: ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗಳನ್ನು ಕೇಳಿರುವುದು ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿದೆ. ಇದರ ಬೆನ್ನಲ್ಲೇ, ತಜ್ಞರ ಸಮಿತಿಯ ವರದಿ ಆಧಾರದ ಮೇಲೆ ಸೋಮವಾರ ರಾಜ್ಯ ಸರ್ಕಾರವು ಅಂತಿಮ ನಿರ್ಧಾರ ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿ, ಎಲ್ಲರ ಗಮನವೀಗ ರಾಜ್ಯ ಸರ್ಕಾರದ ತೀರ್ಮಾನದ ಮೇಲಿದೆ.

VISTARANEWS.COM


on

CET
Koo

ಬೆಂಗಳೂರು: ಎಂಜಿನಿಯರಿಂಗ್‌ ಸೇರಿ ಹಲವು ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (CET 2024) ಔಟ್‌ ಆಫ್‌ ಸಿಲಬಸ್‌ (Out Of Syllabus) ಪ್ರಶ್ನೆಗಳನ್ನು ಕೇಳಿರುವ ಬಗ್ಗೆ ಪರಿಶೀಲನೆ ನಡೆಸಲು ರಚಿಸಿರುವ ತಜ್ಞರ ಸಮಿತಿಯು ರಾಜ್ಯ ಸರ್ಕಾರಕ್ಕೆ (Karnataka Government) ವರದಿ ಸಲ್ಲಿಸಿದೆ. ತಜ್ಞರ ಸಮಿತಿಯ ವರದಿ ಅನ್ವಯ ರಾಜ್ಯ ಸರ್ಕಾರವು ಸೋಮವಾರ (ಏಪ್ರಿಲ್‌ 29) ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದ್ದು, ಮರು ಪರೀಕ್ಷೆ ನಡೆಸಲಾಗುತ್ತದೆಯೋ ಅಥವಾ ಗ್ರೇಸ್‌ ಅಂಕಗಳನ್ನು ನೀಡಲಾಗುತ್ತದೆಯೋ ಎಂಬ ಕುತೂಹಲ ವಿದ್ಯಾರ್ಥಿಗಳಲ್ಲಿ ಮೂಡಿದೆ.

ಪಿಯು ಬೋರ್ಡ್‌ ಹಾಗೂ ಕೆಇಎ ನಡುವೆ ಪಠ್ಯಕ್ರಮದ ಕುರಿತು ಪತ್ರಗಳ ಸಮರ ನಡೆದಿದೆ. ಇದರ ಮಧ್ಯೆಯೇ, ಸಿಇಟಿ ಗೊಂದಲವೂ ವಿದ್ಯಾರ್ಥಿಗಳನ್ನು ಆತಂಕಕ್ಕೀಡು ಮಾಡಿದೆ. ಹಾಗಾಗಿ, ಸಿಇಟಿ ವೇಳೆ ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗಳನ್ನು ಕೇಳಲು ಏನು ಕಾರಣ? ಎಲ್ಲಿ ಲೋಪವಾಯಿತು ಎಂಬುದರ ಕುರಿತು ವರದಿ ಆಧರಿಸಿ ರಾಜ್ಯ ಸರ್ಕಾರವು ಸೋಮವಾರವೇ ತೀರ್ಮಾನ ಪ್ರಕಟಿಸಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನವೀಗ ರಾಜ್ಯ ಸರ್ಕಾರದ ಮೇಲಿದೆ.

cet exam karnataka exam authority

ಎಂಜಿನಿಯರಿಂಗ್‌ ಸೇರಿ ಇನ್ನಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಏಪ್ರಿಲ್‌ 18 ಮತ್ತು 19ರಂದು ಸಿಇಟಿ ಪರೀಕ್ಷೆಯಲ್ಲಿ ಔಟ್‌ ಆಫ್‌‌‌ ಸಿಲಬಸ್‌‌ ಪ್ರಶ್ನೆಗಳ ಕುರಿತಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರ ಆಕ್ರೋಶ ಈಗಾಗಲೇ ಭುಗಿಲೆದ್ದಿದೆ. 4 ವಿಷಯಗಳಲ್ಲಿ ಕನಿಷ್ಠ 45 ಪ್ರಶ್ನೆಗಳು ಕೈಬಿಟ್ಟ ಪಠ್ಯದಿಂದ ಬಂದಿರುವುದಾಗಿ ಆರೋಪ ಮಾಡಲಾಗಿದೆ. ಭೌತಶಾಸ್ತ್ರ, ರಾಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರದಲ್ಲಿ ಔಟ್ ಆಫ್ ಸಿಲೆಬಸ್ ಪ್ರಶ್ನೆ ಕೇಳಲಾಗಿತ್ತು. ಹೀಗಾಗಿ ಪಿಯು ಬೋರ್ಡ್‌ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಡುವೆ ಪತ್ರ ಸಮರವೂ ನಡೆದಿತ್ತು. ಕೊನೆಗೆ ಎಚ್ಚೆತ್ತ ಸರ್ಕಾರ ತಜ್ಞರ ಸಮಿತಿ ರಚಿಸಿ ಆದೇಶ ಹೊರಡಿಸಿತ್ತು.

ಪ್ರತಿ ಪತ್ರಿಕೆಯೂ 60 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಎಷ್ಟು ಪ್ರಶ್ನೆಗಳು ಪಠ್ಯಕ್ಕೆ ಹೊರತಾಗಿವೆಯೋ ಅಷ್ಟು ಕೃಪಾಂಕ ನೀಡಬಹುದು. ಹಾಗೆ ನೀಡಿದರೆ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ. ಪಿಯು ಅಂಕಗಳನ್ನಷ್ಟೇ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸಿದರೆ ಸಿಇಟಿ ಉದ್ದೇಶ, ಮಾಡಿದ ಖರ್ಚು ವ್ಯರ್ಥವಾಗುತ್ತದೆ. ಹಾಗಾಗಿ, ಮರು ಪರೀಕ್ಷೆ ನಡೆಸುವ ಅಥವಾ ಪಠ್ಯಕ್ಕೆ ಹೊರತಾದ ಪ್ರಶ್ನೆಗಳನ್ನು ಕೈಬಿಟ್ಟು ಉಳಿದ ಪ್ರಶ್ನೆಗಳನ್ನಷ್ಟೇ ಮೌಲ್ಯಮಾಪನ ಮಾಡಿ ಶೇ.100ಕ್ಕೆ ಪರಿಗಣಿಸಿ ಫಲಿತಾಂಶ ಪ್ರಕಟಿಸಲು ಕೆಇಎ ಹಾಗೂ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಪದವಿ ಪೂರ್ಣ ಶಿಕ್ಷಣ ಇಲಾಖೆಯು 2023-24ನೇ ಶೈಕ್ಷಣಿಕ ಸಾಲಿನಲ್ಲಿ ಕೈಬಿಟ್ಟಿರುವ ಪಾಠದ ಪ್ರಶ್ನೆಗಳನ್ನು ಕೇಳಿರುವ ಕುರಿತು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಆರೋಪಿಸಿದ್ದರು. ಹಾಗಾಗಿ, ರಾಜ್ಯ ಸರ್ಕಾರವು ಪರಿಶೀಲನೆ ನಡೆಸಲು ತಜ್ಞರ ಸಮಿತಿ ರಚಿಸಿತ್ತು. ತಜ್ಞರ ಸಮಿತಿಯು ಏಪ್ರಿಲ್‌ 25ರಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಇದನ್ನೂ ಓದಿ: UPSC EXAM-2023: ಲಕ್ಷಾಂತರ ರೂಪಾಯಿ ಸಂಬಳವಿದ್ದ ಉದ್ಯೋಗವನ್ನೇ ತೊರೆದಿದ್ದ ಯುಪಿಎಸ್‌ಸಿ ಟಾಪರ್ ಆದಿತ್ಯ ಶ್ರೀವಾಸ್ತವ

Continue Reading

ಕ್ರೀಡೆ

YAJAMANA PREMIER LEAGUE SEASON-3: ಈ ಬಾರಿ ಟಿ10 ಮಾದರಿಯಲ್ಲಿ ನಡೆಯಲಿದೆ ಯಜಮಾನ ಪ್ರೀಮಿಯರ್ ಲೀಗ್​

YAJAMANA PREMIER LEAGUE SEASON-3: ಈ ಬಾರಿ ISPL ಮಾದರಿಯಲ್ಲಿ ಯಜಮಾನ ಪ್ರೀಮಿಯರ್ ಲೀಗ್ T10 ಟಚ್ ಕೊಡಲಾಗಿದೆ. ಪ್ರತಿ ತಂಡಗಳಿಗೂ ಮೆಂಟರ್ಸ್ ಗಳಿದ್ದು, ಶ್ರೇಯಸ್ ಮಂಜು, ಸಿಂಪಲ್ ಸುನಿ, ರೋಷನ್ ಬಚ್ಚನ್, ಜಯರಾಮ್ ಕಾರ್ತಿಕ್ ಸೇರಿದಂತೆ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಸಾಥ್ ಕೊಟ್ಟಿದ್ದಾರೆ.

VISTARANEWS.COM


on

YAJAMANA PREMIER LEAGUE SEASON-3 (2)
Koo

ಬೆಂಗಳೂರು: ಮೂರನೇ ಆವೃತ್ತಿಯ ಯಜಮಾನ ಪ್ರೀಮಿಯರ್ ಲೀಗ್(ವೈಪಿಎಲ್-3)ನ(YAJAMANA PREMIER LEAGUE SEASON-3) ದಿನಾಂಕ ಪ್ರಕಟಗೊಂಡಿದೆ. ಮೇ 4 ಮತ್ತು 5 ರಂದು ಎರಡು ದಿನಗಳ ಕಾಲ‌ ಟೂರ್ನಿ ನಡೆಯಲಿದೆ. ಶನಿವಾರ ತಂಡದ ಜರ್ಸಿ ಕೂಡ ಬಿಡುಗಡೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟ ಜಯರಾಮ್ ಕಾರ್ತಿಕ್ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದರು.

ಜೆರ್ಸಿ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ನಟ ಜಯರಾಮ್ ಕಾರ್ತಿಕ್, ಒಂದು ಕ್ರಿಕೆಟ್ ಪಂದ್ಯಾವಳಿ ನಡೆಸುವುದು ಎಷ್ಟು ಕಷ್ಟ ಎನ್ನುವುದನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಯಜಮಾನ ಪ್ರೀಮಿಯರ್ ಲೀಗ್​ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಇದು ಸಂತಸದ ವಿಚಾರ. ಈ ಲೀಗ್​ 100 ಆವೃತ್ತಿಯನ್ನು ಕಾಣಲಿ ಎಂದು ಹಾರೈಸುತ್ತೇನೆ. ವಿಷ್ಣು ಸರ್​ ಎಲ್ಲರಿಗೂ ಅಚ್ಚುಮೆಚ್ಚು. ಅವರ ಹೆಸರಿಗೆ ತಕ್ಕಂತೆ ಲೀಗ್​ಗೆ ಯಜಮಾನ ಲೀಗ್​ ಎಂದು ಹೆಸರಿಟ್ಟಿದ್ದು ಚೆನ್ನಾಗಿದೆ. ಇದು ನಮ್ಮ ಹೃದಯಕ್ಕೆ ಹತ್ತಿರವಾಗಿದೆ. ವಿಷ್ಣು ಸರ್ ನಮಗೆ ಸ್ಫೂರ್ತಿ. ಈ ಲೀಗ್​ನಲ್ಲಿ ಪಾಲ್ಗೊಳ್ಳುವ ಎಲ್ಲ ತಂಡಗಳಿಗೂ ಆಲ್ ದಿ ಬೆಸ್ಟ್ ಎಂದರು.


ಇದನ್ನೂ ಓದಿ RCB vs GT: ವಿಲ್​ ಜ್ಯಾಕ್ಸ್ ಅಜೇಯ ಶತಕ; ಆರ್​ಸಿಬಿಗೆ 9 ವಿಕೆಟ್​ ಭರ್ಜರಿ ಗೆಲುವು

ಯದುನಂದನ್ ಗೌಡ ಮಾತನಾಡಿ, ಯಜಮಾನ ಪ್ರೀಮಿಯರ್ ಲೀಗ್ ನ ಮೂರು ವರ್ಷಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಶುರು ಮಾಡಿದ್ದೇವು.‌ ಪ್ರೀಮಿಯರ್, ಐಪಿಎಲ್ ಅಂತಾ ಕ್ರಿಕೆಟ್ ಪಂದ್ಯಾವಳಿ ಮಾಡುತ್ತಾರೆ. ನಾವು ಯಾಕೆ ವಿಷ್ಣು ಸರ್(Dr.Vishnu Sena Samiti) ಹೆಸರಿನಲ್ಲಿ ಮಾಡಬಾರದು ಎಂದು ಅವರ ಹೆಸರಲ್ಲಿ ಶುರು ಮಾಡಿದೆವು. ಕನ್ನಡ ಇಂಡಸ್ಟ್ರೀಗೆ ಕ್ರಿಕೆಟ್ ಪರಿಚಯಿಸಿದ್ದು,ನಮ್ಮ ಯಜಮಾನರು. ವಿಷ್ಣು ಸರ್ ಕನಸುಗಳಿಗೆ ಬಣ್ಣ ಹಚ್ಚುವ ಕೆಲಸ ನಡೆಯುತ್ತಿಲ್ಲ. ಹೀಗಾಗಿ ಅಭಿಮಾನಿಗಳೇ ಸೇರಿಕೊಂಡು ಯಜಮಾನ ಪ್ರೀಮಿಯರ್ ಲೀಗ್ ಪ್ರಾರಂಭಿಸಿದೆವು. ಸ್ಟಾರ್​ ವಾರ್​ ಬಿಟ್ಟು ಕನ್ನಡ ಚಿತ್ರರಂಗದ ಅಭಿಮಾನಿಗಳನ್ನು ಒಂದೇ ವೇದಿಕೆಯಲ್ಲಿ ತರುವ ಕೆಲಸವನ್ನು ಯಜಮಾನ ಪ್ರೀಮಿಯರ್ ಲೀಗ್ ಮೂಲಕ ಮಾಡಲಾಗಿದೆ. ನಿಮ್ಮ ಸಹಕಾರ ಇದ್ದರೆ ಈ ಪಂದ್ಯಾವಳಿಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದರು.

ಟಿ10 ಮಾದರಿಯಲ್ಲಿ ಟೂರ್ನಿ


ಬೆಂಗಳೂರಿನ ಅಶೋಕ್ ರೈಸಿಂಗ್ ಕ್ರಿಕೆಟ್ ಗ್ರೌಂಡ್ ನಲ್ಲಿ ಪಂದ್ಯಾವಳಿ ನಡೆಯಲಿದೆ. ಈ ಬಾರಿ ISPL ಮಾದರಿಯಲ್ಲಿ ಯಜಮಾನ ಪ್ರೀಮಿಯರ್ ಲೀಗ್ T10 ಟಚ್ ಕೊಡಲಾಗಿದೆ. ಪ್ರತಿ ತಂಡಗಳಿಗೂ ಮೆಂಟರ್ಸ್ ಗಳಿದ್ದು, ಶ್ರೇಯಸ್ ಮಂಜು, ಸಿಂಪಲ್ ಸುನಿ, ರೋಷನ್ ಬಚ್ಚನ್, ಜಯರಾಮ್ ಕಾರ್ತಿಕ್ ಸೇರಿದಂತೆ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಸಾಥ್ ಕೊಟ್ಟಿದ್ದಾರೆ. ವೈಪಿಎಲ್ ಅನ್ನು ವಿಷ್ಣು ಸೇನಾ ಸಮಿತಿಯ ಬೆಂಗಳೂರಿನ ಜಿಲ್ಲಾಧ್ಯಕ್ಷ ಯದುನಂದನ್ ಗೌಡ ನಡೆಸುತ್ತಿದ್ದು, ರಾಜ್ಯ ಪ್ರಧಾನ ಕಾರ್ಯದರ್ಶಿಸಿ ಮಲ್ಲಿಕಾರ್ಜುನ್ ಅವರಿಗೆ ಸಾಥ್ ಕೊಡುತ್ತಿದ್ದಾರೆ.


ಸ್ಯಾಂಡಲ್ ವುಡ್ ನಲ್ಲಿ ಕ್ರಿಕೆಟ್ ಪಂದ್ಯ ಶುರು ಮಾಡಿದ ಕೀರ್ತಿ ಡಾ.ವಿಷ್ಣುವರ್ಧನ್ ಅವರಿಗೆ ಸಲ್ಲುತ್ತದೆ. ಸಿನಿಮಾ ತಂಡಗಳನ್ನು ಕಟ್ಟಿಕೊಂಡು ವಿಷ್ಣುವರ್ಧನ್​ ಸದಾ ಕ್ರಿಕೆಟ್ ಆಡುತ್ತಿದ್ದರು. ವೃತ್ತಿಪರ ಕ್ರಿಕೆಟ್ ಆಟಗಾರರ ಜತೆಯೂ ಅವರು ಪಂದ್ಯಾವಳಿಗಳನ್ನು ಆಡಿದ್ದರು. ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಅವರ ಅಭಿಮಾನಿಗಳು ಕೂಡ ‘ಯಜಮಾನ ಪ್ರೀಮಿಯರ್ ಲೀಗ್’ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದಾರೆ.

Continue Reading

ಕರ್ನಾಟಕ

Jatra Rathotsava: ಇಂಡಿಯ ಕಮರಿಮಠದ ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ದುರ್ಮರಣ; ಮತ್ತೊಬ್ಬ ಗಂಭೀರ

Jatra Rathotsava: ಭಾನುವಾರ ಸಂಜೆ ಗೋಧೋಳಿ ಮುಹೂರ್ತದಲ್ಲಿ ಶ್ರೀ ಸಿದ್ದಲಿಂಗ ಮಹರಾಜರ ರಥೋತ್ಸವ ನಡೆದಿದ್ದು, ಸಾವಿರಾರು ಜನರು ಭಾಗಿಯಾಗಿದ್ದರು. ಜಾತ್ರೆಯಲ್ಲಿನ ನೂಕು ನುಗ್ಗಲಿನಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡ ಮತ್ತೊಬ್ಬನನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತರಿಬ್ಬರು ಲಚ್ಯಾಣ ಗ್ರಾಮದವರು ಎಂದು ತಿಳಿದುಬಂದಿದ್ದು, ಗಂಭೀರವಾಗಿ ಗಾಯಗೊಂಡ ಮತ್ತೊಬ್ಬ ಮಹಾರಾಷ್ಟ್ರದ ತಡವಾಳ ಗ್ರಾಮದ ನಿವಾಸಿಯಾಗಿದ್ದಾನೆ.

VISTARANEWS.COM


on

Jatra Rathotsava Two killed and one serious after being hit by wheel of a chariot at Indi Kamarimath
Koo

ವಿಜಯಪುರ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಆರಾಧ್ಯ ದೈವ ಶ್ರೀ ಸಿದ್ದಲಿಂಗ ಮಹಾರಾಜರ ಕಮರಿಮಠದ ಜಾತ್ರೆಯಲ್ಲಿ (Kamarimatha Fair) ನಡೆದ ರಥೋತ್ಸವ (Jatra Rathotsava) ವೇಳೆ ರಥದ ಚಕ್ರ ಹಾಯ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿವೆ.

ಭಾನುವಾರ ಸಂಜೆ ಗೋಧೋಳಿ ಮುಹೂರ್ತದಲ್ಲಿ ಶ್ರೀ ಸಿದ್ದಲಿಂಗ ಮಹರಾಜರ ರಥೋತ್ಸವ ನಡೆದಿದ್ದು, ಸಾವಿರಾರು ಜನರು ಭಾಗಿಯಾಗಿದ್ದರು. ಜಾತ್ರೆಯಲ್ಲಿನ ನೂಕು ನುಗ್ಗಲಿನಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡ ಮತ್ತೊಬ್ಬನನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮೃತರಿಬ್ಬರು ಲಚ್ಯಾಣ ಗ್ರಾಮದವರು ಎಂದು ತಿಳಿದುಬಂದಿದ್ದು, ಗಂಭೀರವಾಗಿ ಗಾಯಗೊಂಡ ಮತ್ತೊಬ್ಬ ಮಹಾರಾಷ್ಟ್ರದ ತಡವಾಳ ಗ್ರಾಮದ ನಿವಾಸಿಯಾಗಿದ್ದಾನೆ. ಘಟನಾ ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ.

Sahil Khan: ಬೆಟ್ಟಿಂಗ್​ ಅಕ್ರಮದಲ್ಲಿ ಭಾಗಿ; ನಟ ಸಾಹಿಲ್ ಖಾನ್ ಅರೆಸ್ಟ್‌

ಬೆಂಗಳೂರು: ಮಹದೇವ್ ಬೆಟ್ಟಿಂಗ್ ಆ್ಯಪ್ (Mahadev betting app case) ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ (Betting App Case) ನಟ ಮತ್ತು ಫಿಟ್‌ನೆಸ್‌ ಪ್ರಭಾವಿ ಸಾಹಿಲ್ ಖಾನ್ (Sahil Khan Arrested) ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಛತ್ತೀಸ್‌ಗಢದಲ್ಲಿ ಮುಂಬೈ ಸೈಬರ್ ಸೆಲ್‌ನ ವಿಶೇಷ ತನಿಖಾ ತಂಡ (ಎಸ್‌ಐಟಿ) ನಟನನ್ನು ಬಂಧಿಸಿದ್ದು, ಬಾಂಬೆ ಹೈಕೋರ್ಟ್‌ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಇದಕ್ಕೂ ಮೊದಲು, 2023ರ ಡಿಸೆಂಬರ್‌ನಲ್ಲಿ ಸಾಹಿಲ್ ಮತ್ತು ಇದೇ ಪ್ರಕರಣಕ್ಕೆ ಸಂಬಂಧಿಸಿದ ಇನ್ನುಳಿದ ಮೂವರನ್ನು ವಿಶೇಷ ತನಿಖಾ ತಂಡ ವಿಚಾರಣೆಗೆ ಕರೆದಿತ್ತು. ಆದರೆ, ಅವರು ಹಾಜರಾಗಲಿಲ್ಲ. ತಾವು ಕೇವಲ ಬ್ರ್ಯಾಂಡ್ ಪ್ರಮೋಟರ್‌ ಎಂದು ಹೇಳಿಕೊಂಡು ಬಂದಿದ್ದರು. ಆದರೆ, ಸಾಹಿಲ್ ಆ್ಯಪ್‌ನ ಸಹ ಮಾಲೀಕ ಎಂಬುದು ಪೊಲೀಸರಿಗೆ ತನಿಖೆಯಲ್ಲಿ ಗೊತ್ತಾಗಿದೆ. ಸಾಹಿಲ್‌ ಈ ಬೆಟ್ಟಿಂಗ್ ಆ್ಯಪ್‌ ಸಂಬಂಧಿಸಿದ ಪ್ರಚಾರದ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ತಿಂಗಳಿಗೆ 3 ಲಕ್ಷ ರೂ. ಹಣವನ್ನು ಪಡೆದುಕೊಳ್ಳುತ್ತಿದ್ದರು ಎಂದು ವರದಿಯಾಗಿದೆ. ಮಾತ್ರವಲ್ಲ 24 ತಿಂಗಳುಗಳ ಕಾಲ ಈ ಆ್ಯಪ್‌ ಜತೆಗೆ ಒಪ್ಪಂದ ಮಾಡಿಕೊಂಡಿದ್ದರು ಎಂದು ತನಿಖೆ ವೇಳೆ ಬಹಿರಂಗವಾಗಿತ್ತು.

ಇದರ ಹೊರತಾಗಿಯೂ, ಕಾನೂನುಬಾಹಿರ ಕಾರ್ಯಾಚರಣೆಯಲ್ಲಿ ನೇರವಾಗಿ ಭಾಗಿಯಾಗಿರುವುದನ್ನು ಉಲ್ಲೇಖಿಸಿ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ʻಸ್ಟೈಲ್ʼ ಮತ್ತು ʻಎಕ್ಸ್‌ಕ್ಯೂಸ್ ಮಿʼ ಸಿನಿಮಾ ಪಾತ್ರಗಳಿಗೆ ಹೆಸರುವಾಸಿಯಾದ ಸಾಹಿಲ್ ಈಗ ಫಿಟ್‌ನೆಸ್‌ನತ್ತ ಗಮನಹರಿಸಿದ್ದಾರೆ.

ಇದನ್ನೂ ಓದಿ: The Rulers: ಅಂಬೇಡ್ಕರ್ ಹೆಸರಲ್ಲಿ ಸಿನಿಮಾ ಮಾಡಿದ್ದಕ್ಕೆ` ರೌಡಿ ಶೀಟರ್ʼ ಪಟ್ಟ ಕೊಡ್ತಾ ಕಾಂಗ್ರೆಸ್ ಸರ್ಕಾರ? ನಟ ಹೇಳಿದ್ದೇನು?

2023ರಲ್ಲಿ, ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದ ವಿಚಾರಣೆ ನಡೆಸಿದ ಕ್ರೈಂ ಬ್ರ್ಯಾಂಚ್‌ ವಿಭಾಗವು ಡಿಸೆಂಬರ್ 15ರಂದು ತಮ್ಮ ಹೇಳಿಕೆಗಳನ್ನು ದಾಖಲಿಸಲು ಸಾಹಿಲ್ ಖಾನ್ ಮತ್ತು ಇತರ ಮೂವರಿಗೆ ಸಮನ್ಸ್ ನೀಡಿತ್ತು ಎಂದು ವರದಿಯಾಗಿದೆ. ಆದರೆ, ಸಾಹಿಲ್ ಖಾನ್ ತನಿಖೆಗಾಗಿ ಪೊಲೀಸರ ಮುಂದೆ ಹಾಜರಾಗಲಿಲ್ಲ. ಇದಲ್ಲದೆ ಸೋಷಿಯಲ್‌ ಮೀಡಿಯಾಗಳಲ್ಲಿ ನಿರಂತರವಾಗಿ ಪೋಸ್ಟ್‌ ಮಾಡುತ್ತಲೇ ಇರುತ್ತಿದ್ದರು. ಪೊಲೀಸರ ಸಮನ್ಸ್‌ಗಳನ್ನು ಅವರು ನಿರ್ಲಕ್ಷಿಸುತ್ತಿರುವುದನ್ನು ಕಂಡು ನೆಟ್ಟಿಗರಿಂದ ಟೀಕೆಗೆ ಗುರಿಯಾಗುತ್ತಿದ್ದರು. ವರದಿಗಳ ಪ್ರಕಾರ, ಸಾಹಿಲ್ ಖಾನ್ ಅವರು ಈ ಆ್ಯಪ್ ಪ್ರಚಾರ ಮಾಡಲು ಸೆಲೆಬ್ರಿಟಿ ಕೂಟಗಳನ್ನು ಆಯೋಜಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏನಿದು ಮಹದೇವ್​ ಬೆಟ್ಟಿಂಗ್​ ಪ್ರಕರಣ?

ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆಗೆ (Chhattisgarh Polls) ಕೆಲವೇ ದಿನಗಳು ಬಾಕಿ ಇರುವ ಮಧ್ಯೆಯೇ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಭಾಗಿಯಾಗಿದ್ದಾರೆ ಎನ್ನಲಾದ ಬೆಟ್ಟಿಂಗ್ ಹಗರಣವೊಂದು ಹೊರಕ್ಕೆ ಬಂದಿತ್ತು. ಮಹದೇವ್‌ ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್ ಪ್ರಮೋಟರ್‌ಗಳಿಂದ (Mahadev Betting App Promoters) ಇದುವರೆಗೆ ಭೂಪೇಶ್‌ ಬಘೇಲ್‌ (Bhupel Bhaghel) ಅವರಿಗೆ ಸುಮಾರು 508 ಕೋಟಿ ರೂ. ಲಂಚ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ಹೇಳಿದ್ದರು. ಚುನಾವಣೆ ಹೊತ್ತಿನಲ್ಲೇ ಇ.ಡಿ ಪ್ರಸ್ತಾಪಿಸಿದ ವಿಷಯವು ಚರ್ಚೆಗೆ ಗ್ರಾಸವಾಗಿತ್ತು.

ಅಕ್ರಮವಾಗಿ ಹಣದ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಇ.ಡಿ ಅಧಿಕಾರಿಗಳು ಈಗಾಗಲೇ ಮಹದೇವ್‌ ಬೆಟ್ಟಿಂಗ್‌ ಆ್ಯಪ್ ಪ್ರವರ್ತಕರನ್ನು ವಿಚಾರಣೆ ನಡೆಸುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿ 5.39 ಕೋಟಿ ರೂಪಾಯಿಯನ್ನು ವಶಪಡಿಸಿಕೊಂಡಿತ್ತು. ಅಷ್ಟೇ ಅಲ್ಲ, 15 ಕೋಟಿ ರೂ. ಇರುವ ಬ್ಯಾಂಕ್‌ ಖಾತೆಯನ್ನೂ ಜಪ್ತಿ ಮಾಡಿತ್ತು. ಆಸಿಂ ದಾಸ್‌ ಎಂಬಾತನನ್ನು ಕೂಡ ಇ.ಡಿ ಬಂಧಿಸಿತ್ತು. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರೇ ಲಂಚ ಸ್ವೀಕರಿಸಿದ್ದಾರೆ ಎಂದು ಇ.ಡಿ ತಿಳಿಸಿತ್ತು.

Continue Reading

ಕರ್ನಾಟಕ

Karnataka Weather: ರಾಜ್ಯದಲ್ಲಿ ಮೇ 2ರವರೆಗೆ ಬಿಸಿಗಾಳಿ ತೀವ್ರತೆ ಹೆಚ್ಚಳ; ಆರೆಂಜ್‌ ಅಲರ್ಟ್‌ ಘೋಷಣೆ

Karnataka Weather: ರಾಜ್ಯದಲ್ಲಿ ಭಾನುವಾರ ಉಷ್ಣಾಂಶದಲ್ಲಿ ಸಾಮಾನ್ಯಕ್ಕಿಂತ ಏರಿಕೆ ಕಂಡುಬಂದಿದ್ದು, ದಕ್ಷಿಣ ಒಳನಾಡಿನ ಹಲವು ಕಡೆ ಮತ್ತು ಉತ್ತರ ಒಳನಾಡಿನ ಕೆಲವು ಕಡೆ 3.5ರಿಂದ 5 ಡಿ. ಸೆಲ್ಸಿಯಸ್‌ವರೆಗೆ ಉಷ್ಣಾಂಶ ಏರಿಕೆ ದಾಖಲಾಗಿದೆ.

VISTARANEWS.COM


on

Karnataka Weather
Koo

ಬೆಂಗಳೂರು: ರಾಜ್ಯದಲ್ಲಿ ಅಲ್ಲಲ್ಲಿ ಸುರಿಯುತ್ತಿದ್ದ ಮಳೆಯು, ಕಳೆದ ನಾಲ್ಕೈದು ದಿನಗಳಿಂದ ಕಣ್ಮರೆಯಾಗಿದ್ದರಿಂದ ಹಲವೆಡೆ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು, ಭಾನುವಾರ ಸಹ 38.5 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ (Karnataka Weather) ವರದಿಯಾಗಿದೆ. ಇನ್ನು ಕಲಬುರಗಿಯಲ್ಲಿ 42.9 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದ್ದು, 8 ವರ್ಷಗಳ ಬಳಿಕ ಗರಿಷ್ಠ ತಾಪಮಾನಕ್ಕೆ ನಗರ ಸಾಕ್ಷಿಯಾಗುತ್ತಿದೆ. ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಮೇ 2 ರವರೆಗೆ ಬಿಸಿಗಾಳಿ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

ರಾಜ್ಯದಲ್ಲಿ ಭಾನುವಾರ ಉಷ್ಣಾಂಶದಲ್ಲಿ ಸಾಮಾನ್ಯಕ್ಕಿಂತ ಏರಿಕೆ ಕಂಡುಬಂದಿದ್ದು, ದಕ್ಷಿಣ ಒಳನಾಡಿನ ಹಲವು ಕಡೆ ಮತ್ತು ಉತ್ತರ ಒಳನಾಡಿನ ಕೆಲವು ಕಡೆ 3.5ರಿಂದ 5 ಡಿ. ಸೆಲ್ಸಿಯಸ್‌ವರೆಗೆ ಉಷ್ಣಾಂಶ ಏರಿಕೆಯಾಗಿದೆ. ಇನ್ನು ಮೇ 2 ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಂದಿನ 5 ದಿನಗಳಲ್ಲಿ ರಾಜ್ಯದಲ್ಲಿ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ.

ಶಾಖದ ಅಲೆಯ ಎಚ್ಚರಿಕೆ

ಏಪ್ರಿಲ್ 29ರಂದು ಬೀದರ್, ಕಲಬುರಗಿ, ಬಿಜಾಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶಾಖದ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದೇ ರೀತಿಯ ಪರಿಸ್ಥಿತಿ ಮೇ 5ರವರೆಗೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ

ಮುಂದಿನ 48 ಗಂಟೆಗಳು: ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 38°C ಮತ್ತು 23°C ಇರುವ ಸಾಧ್ಯತೆ ಇದೆ.

ಇದನ್ನೂ ಓದಿ | Karnataka Weather : ಹುಷಾರ್‌.. ನಾಲ್ಕೈದು ದಿನ ಮತ್ತಷ್ಟು ಏರಲಿದೆ ಉರಿ ಬಿಸಿಲು; ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ

Continue Reading
Advertisement
CET
ಕರ್ನಾಟಕ7 mins ago

CET 2024: ಸಿಇಟಿ ಮರು ಪರೀಕ್ಷೆಯೋ? ಗ್ರೇಸ್‌ ಮಾರ್ಕ್ಸ್‌ ಭಾಗ್ಯವೋ? ನಾಳೆ ನಿರ್ಧಾರ ಪ್ರಕಟ?

YAJAMANA PREMIER LEAGUE SEASON-3 (2)
ಕ್ರೀಡೆ28 mins ago

YAJAMANA PREMIER LEAGUE SEASON-3: ಈ ಬಾರಿ ಟಿ10 ಮಾದರಿಯಲ್ಲಿ ನಡೆಯಲಿದೆ ಯಜಮಾನ ಪ್ರೀಮಿಯರ್ ಲೀಗ್​

Lok Sabha Election 2024
Lok Sabha Election 202441 mins ago

Lok Sabha Election 2024: ಒವೈಸಿ ಪ್ರಕಾರ ಮುಸ್ಲಿಮರೇ ಹೆಚ್ಚು ಕಾಂಡೋಮ್ ಬಳಸುತ್ತಾರಂತೆ!

Virat Kohli
ಕ್ರಿಕೆಟ್51 mins ago

Virat Kohli: ಟೀಕೆಗಳಿಗೆ ಬಹಿರಂಗವಾಗಿಯೇ ತಿರುಗೇಟು ನೀಡಿದ ಕಿಂಗ್​ ಕೊಹ್ಲಿ​

Jatra Rathotsava Two killed and one serious after being hit by wheel of a chariot at Indi Kamarimath
ಕರ್ನಾಟಕ1 hour ago

Jatra Rathotsava: ಇಂಡಿಯ ಕಮರಿಮಠದ ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ದುರ್ಮರಣ; ಮತ್ತೊಬ್ಬ ಗಂಭೀರ

Karnataka Weather
ಕರ್ನಾಟಕ1 hour ago

Karnataka Weather: ರಾಜ್ಯದಲ್ಲಿ ಮೇ 2ರವರೆಗೆ ಬಿಸಿಗಾಳಿ ತೀವ್ರತೆ ಹೆಚ್ಚಳ; ಆರೆಂಜ್‌ ಅಲರ್ಟ್‌ ಘೋಷಣೆ

Amrita Pandey
ಸಿನಿಮಾ1 hour ago

Amrita Pandey: ಭೋಜ್‌ಪುರಿ ಜನಪ್ರಿಯ ನಟಿ ಅಮೃತಾ ಪಾಂಡೆ ಆತ್ಮಹತ್ಯೆ; ಸಾವಿಗೆ ಮುನ್ನ ಬರೆದ ವಾಟ್ಸಾಪ್ ಸ್ಟೇಟಸ್‌ನಲ್ಲಿ ಏನಿದೆ?

PM Narendra Modi
ಕರ್ನಾಟಕ1 hour ago

PM Narendra Modi: ಪುಕ್ಕಲ ನಾಯಕ ದೇಶ ಆಳಬಲ್ಲನೇ? ರಾಹುಲ್‌ ಗಾಂಧಿಗೆ ಮೋದಿ ಟಾಂಗ್!

Narendra Modi
Lok Sabha Election 20242 hours ago

Narendra Modi: ನಿಮ್ಮ ಸೇವೆಗೆಂದೇ ಭಗವಂತ ನನ್ನನ್ನು ಈ ಭೂಮಿಗೆ ಕಳುಹಿಸಿದ್ದಾನೆ, ಈ ಜೀವ ದೇಶಕ್ಕಾಗಿ ಎಂದ ಮೋದಿ

RCB vs GT
ಕ್ರೀಡೆ2 hours ago

RCB vs GT: ವಿಲ್​ ಜ್ಯಾಕ್ಸ್ ಅಜೇಯ ಶತಕ; ಆರ್​ಸಿಬಿಗೆ 9 ವಿಕೆಟ್​ ಭರ್ಜರಿ ಗೆಲುವು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Congress fears defeat over EVMs Congress will not win a single seat in Karnataka says PM Narendra Modi
Lok Sabha Election 20244 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20247 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20248 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20249 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ12 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ16 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20241 day ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ1 day ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

ಟ್ರೆಂಡಿಂಗ್‌