ಕರ್ನಾಟಕ
ಬೀಡಾ, ಬೀಡಿ, ಶೇಂದಿ, ಬ್ರಾಂಡಿಪ್ರಿಯ ಈ ಪವಾಡಪುರುಷ ಕೊರಗಜ್ಜ ಯಾರು?
ತುಳುನಾಡಿನ ಜನರಿಗೆ ಕೊರಗಜ್ಜನ ಮೇಲೆ ಅಪಾರ ಭಕ್ತಿ. ಅಲ್ಲಿ ಬಹಳಷ್ಟು ಜನ ತಮ್ಮ ವಸ್ತು ಕಳುವಾದರೆ ಪೊಲೀಸ್ ಠಾಣೆಗೆ ಹೋಗುವುದಿಲ್ಲ, ಬದಲಿಗೆ ಕೊರಗಜ್ಜನ ಮೊರೆ ಹೋಗುತ್ತಾರೆ! ಸಾವಿನ ಅಂಚಿನಲ್ಲಿದ್ದ ಮಗುವೊಂದು ಕೊರಗಜ್ಜನ ಪವಾಡದಿಂದ ಬಚಾವಾಗಿದೆ ಎಂಬ ಸುದ್ದಿಯೊಂದು ಈಗ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೊರಗಜ್ಜನ ಹಿನ್ನೆಲೆಯ ನೋಟ ಇಲ್ಲಿದೆ.
ಉಡುಪಿ: ಕರಾವಳಿ ಭೂಮಿಯ ಒಂದು ಕಾರ್ಣಿಕ ಶಕ್ತಿ ಕೊರಗಜ್ಜ ಎನ್ನಲಾಗುತ್ತದೆ. ಶತಶತಮಾನಗಳಿಂದಲೂ ತುಳುನಾಡಿನಲ್ಲಿ ದೈವೀ ಶಕ್ತಿಯ ದರ್ಶನ ಮಾಡಿಸುತ್ತಿರುವ ಆ ನಂಬಿಕೆಯ ದೈವವೇ ಸ್ವಾಮಿ ಕೊರಗಜ್ಜ. ತುಳುನಾಡಿನ ಜನ ಇಂದಿಗೂ ತಮ್ಮ ವಸ್ತುಗಳು ಕಾಣೆಯಾದರೆ ಮೊದಲು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವುದಿಲ್ಲ. ಬದಲಾಗಿ ತಾವಿದ್ದ ಜಾಗದಲ್ಲೇ ಕಾರ್ಣಿಕ ಪುರುಷ ಕೊರಗಜ್ಜನ ನೆನೆದು ಭಕ್ತಿಯಿಂದ ಪ್ರಾರ್ಥಿಸಿಕೊಳ್ಳುತ್ತಾರೆ. ಇಷ್ಟಾದರೆ ಸಾಕು ತಾವು ಕಳೆದುಕೊಂಡ ವಸ್ತುಗಳು ಮತ್ತೆ ಕೈ ಸೇರುವುದು ಸತ್ಯ ಎನ್ನುವುದು ಕೊರಗಜ್ಜನ ಭಕ್ತರ ನಂಬಿಕೆಯ ನುಡಿ.
ಇನ್ನು ಕಷ್ಟಗಳು ಎದುರಾದಾಗಲೂ ಭಕ್ತರು ಕೊರಗಜ್ಜನ ಹೆಸರು ಕೂಗಿದರೆ ಸಾಕು ಕಷ್ಟಗಳೆಲ್ಲ ಕಣ್ಣು ಮುಚ್ಚಿ ತೆಗೆಯುವುದರೊಳಗೆ ಮಾಯವಾಗುತ್ತದೆ ಎನ್ನುವ ಅಚಲ ನಂಬಿಕೆ ಹೊಂದಿದ್ದಾರೆ. ಇದೇ ಕಾರಣಕ್ಕೆ ತುಳುನಾಡಿನ ಆರಾಧ್ಯ ದೈವವಾಗಿ ʼಕೊರಗಜ್ಜʼ ಎಂದು ಕರೆಯಲ್ಪಡುವ ಕೊರಗ ತನಿಯನನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಲಾಗುತ್ತಿದೆ.
ಧರ್ಮ ಮತ್ತು ಸತ್ಯದ ಪ್ರತೀಕವಾಗಿ ನಂಬಿದವರಿಗೆ ಇಂಬು ಕೊಡುವ ಧರ್ಮದೈವವಾಗಿ ಕೊರಗಜ್ಜ ತುಳುನಾಡಿನಲ್ಲಿ ನೆಲೆ ನಿಂತಿದ್ದಾನೆ. ತುಳುನಾಡಿನಲ್ಲಿ ದೈವಗಳನ್ನು ಪ್ರೀತಿಯಿಂದ ಏಕವಚನದಲ್ಲಿ ಕರೆಯುವುದಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೊರಗಜ್ಜನ ಪವಾಡಗಳು ಇಂದಿಗೂ ನಡೆಯುತ್ತಿದ್ದು, ಅನೇಕ ಉದಾಹರಣೆಗಳು ಕಾಣಸಿಗುತ್ತವೆ.
ತುಳುನಾಡಿನ ದೈವರಾಧನೆಯ ಒಂದು ಭಾಗವಾಗಿ ಕೊರಗಜ್ಜನ ಆರಾಧನೆಯನ್ನು ಮಾಡಲಾಗುತ್ತದೆ. ಕೊರಗಜ್ಜನ ಮೂಲಸ್ಥಾನ ಕುತ್ತಾರಿನಲ್ಲಿದ್ದರೂ ಅವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ನಂಬಲಾಗುತ್ತಿದೆ. ಮಾನವನ ರೂಪದಲ್ಲಿ ಇದ್ದ ಕೊರಗತನಿಯ ಮಾಯಾ ರೂಪವನ್ನು ಪಡೆದು ದೈವೀ ಪುರುಷನಾಗುತ್ತಾನೆ ಎಂಬ ಪ್ರತೀತಿ ಇದೆ.
ಹಾಗಾಗಿ ಮನುಷ್ಯರು ತಿನ್ನುವ ವಸ್ತುಗಳನ್ನೇ ಹರಕೆಯ ರೂಪದಲ್ಲಿ ಅಜ್ಜನಿಗೆ ನೀಡಲಾಗುತ್ತದೆ. ಉದಾಹರಣೆಗೆ ವೀಳ್ಯದೆಲೆ, ಅಡಿಕೆ ಸುಣ್ಣ, ತಂಬಾಕು, ಬೀಡಿ, ಶೇಂದಿ, ಚಕ್ಕುಲಿ, ಮದ್ಯ ಹೆಚ್ಚಾಗಿ ಹರಕೆಯಾಗಿ ನೀಡಲಾಗುತ್ತದೆ. ಅಮೂಲ್ಯವಾದ ಅಥವಾ ಯಾವುದೇ ಸಣ್ಣ ವಸ್ತು ಕಳೆದು ಹೋದರೂ ಅಜ್ಜನನ್ನು ಮನಸ್ಸಿನಲ್ಲಿ ನೆನೆದು ಹರಕೆಯನ್ನು ಹೇಳಿದರೆ ಸಾಕು ಆ ವಸ್ತು ಮತ್ತೆ ಕೈ ಸೇರಿದ ಅನೇಕ ಉದಾಹರಣೆಗಳು ಇದೆ ಎಂಬ ಬಲವಾದ ನಂಬಿಕೆ ಇಂದಿಗೂ ಕೂಡ ತುಳುನಾಡಿನ ಜನರಲ್ಲಿ ಇದೆ.
ಯಾವುದರಲ್ಲೂ ಭಕ್ತಿ ಮುಖ್ಯವಾಗಿ ಬೇಕಾಗುತ್ತದೆ. ಯಾವುದೇ ಜಾಗದಲ್ಲಿ ನಿಂತು ಮನಸಾರೆ ಅಜ್ಜ ಎಂದು ಕರೆದರೆ ನಾವಿದ್ದ ಜಾಗಕ್ಕೆ ಅಜ್ಜ ಬರುತ್ತಾನೆ ಎಂಬುವುದು ಭಕ್ತರ ನಂಬಿಕೆ. ಕೊರಗಜ್ಜ ಅಥವಾ ಕೊರಗತನಿಯ ಎಂದು ಪ್ರೀತಿಯಿಂದ ಆರಾಧಿಸುವ ಅಜ್ಜನ ಮೇಲೆ ತುಳುನಾಡಿನ ಜನರಿಗೆ ಎಲ್ಲಿಲ್ಲದ ನಂಬಿಕೆ.
ಯಾರೂ ಕೈ ಬಿಟ್ಟರೂ ಅಜ್ಜ ನಂಬಿದವರನ್ನು ಕೈ ಬಿಡುವುದಿಲ್ಲ ಎಂಬ ಮಾತು ಈ ಭಾಗದಲ್ಲಿ ಭಕ್ತರ ಬಾಯಿಯಲ್ಲಿ ಕೇಳಿ ಬರುತ್ತದೆ. ಯಾವುದೇ ಶುಭ ಸಮಾರಂಭದ ಸಂದರ್ಭದಲ್ಲಿ, ಹಟ್ಟಿಯಲ್ಲಿ ದನ ಕರು ಹಾಕುವ ಸಂದರ್ಭ, ಮಗು ಹುಟ್ಟಿದ ಸಂದರ್ಭದಲ್ಲಿ ಅಜ್ಜನಿಗೆ ವಿಶೇಷವಾಗಿ ಮದ್ಯ, ಶೇಂದಿ ಅಥವಾ ಅಜ್ಜನಿಗೆ ಪ್ರಿಯವಾದ ಪದಾರ್ಥಗಳನ್ನು ಭಕ್ತಿಯಿಂದ ನೀಡಲಾಗುತ್ತದೆ.
ಹೊಸ ವಾಹನವನ್ನು ಖರೀದಿಸುವರು ಅಜ್ಜನ ಹೆಸರನ್ನು ತಮ್ಮ ವಾಹನದಲ್ಲಿ ಸ್ವಾಮಿ ಕೊರಗಜ್ಜ ಎಂದು ಹಾಕುತ್ತಾರೆ. ಈ ಮೂಲಕ ಅಜ್ಜನನ್ನು ತುಳುನಾಡಿನ ಪ್ರತಿಯೊಬ್ಬರು ಭಕ್ತಿಯಿಂದ ಆರಾಧಿಸುವುದನ್ನು ಕಾಣಬಹುದು. ನಂಬಿದವರನ್ನು ಕೈಬಿಡುವುದಿಲ್ಲ. ಅಪಚಾರ ಮಾಡಿದರೆ ಸುಮ್ಮನೆ ಬಿಡುವುದಿಲ್ಲ ಎಂಬ ಕೊರಗಜ್ಜನ ಮಾತಿಗೆ ಉದಾಹರಣೆ ಎಂಬಂತೆ ಇತ್ತೀಚೆಗೆ ನಡೆದ ಘಟನೆಯೇ ಸಾಕ್ಷಿಯಾಗಿದೆ.
ಹುಂಡಿಗೆ ಅಪಚಾರ ಬಗೆದವರಿಗೆ ತಕ್ಕ ಶಾಸ್ತಿ!
ಪಡುಬಿದ್ರೆಯ ಕಟಪಾಡಿ ಪೇಟೆಬೆಟ್ಟುವಿನ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಕೊರಗಜ್ಜನ ಆರಾಧನೆಯೂ ನಡೆಯುತ್ತದೆ. ಅನ್ಯಕೋಮಿನ ಯುವಕರು ಕ್ಷೇತ್ರದ ಕಾಣಿಕೆ ಹುಂಡಿಯ ಹಣ ಕದ್ದು ಮೂತ್ರ ವಿಸರ್ಜನೆ ಮಾಡುತ್ತಾರೆ. ಅಷ್ಟೇ ಅಲ್ಲದೇ ಅದೇ ಹುಂಡಿಗೆ ಕಾಂಡೋಮ್ ಹಾಕುತ್ತಾರೆ. ಈ ಘಟನೆ ನಡೆದು ಕೆಲವೇ ದಿನಗಳಲ್ಲಿ ಅವರಲ್ಲಿ ಒಬ್ಬನಿಗೆ ಕಿಡ್ನಿ ಸಂಬಂಧಿ ಕಾಯಿಲೆ ಹಾಗೂ ಮತ್ತೊಬ್ಬನಿಗೆ ಎರಡೂ ಕಾಲು ಬಲಹೀನವಾಗುತ್ತದೆ.
ತಜ್ಞರನ್ನು ಕಂಡು ಪರೀಕ್ಷಿಸಿದರೂ ಪ್ರಯೋಜನವಾಗದೇ ಜ್ಯೋತಿಷಿಯ ಬಳಿ ಕೇಳಿದಾಗ ಅಸಲಿ ಸಂಗತಿಯ ಬಗ್ಗೆ ತಿಳಿದು ಬರುತ್ತದೆ. ನಂತರ ಅವರು ಈ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಬಂದು ದೈವಗಳ ಮುಂದೆ ಕ್ಷಮೆಯಾಚಿಸಿದ ಘಟನೆಯನ್ನು ಈ ಸಂದರ್ಭದಲ್ಲಿ ನೆಪಿಸಿಕೊಳ್ಳಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಕೊರಗಜ್ಜನ ಬಗ್ಗೆ ಅಪಹಾಸ್ಯ ಮಾಡಿದ್ದ ಮನೋಜ್ ಪಂಡಿತ್ ಎಂಬಾತನ ವಿರುದ್ಧ ಕೇಸು ದಾಖಲಾಗಿತ್ತು.
ಬಳಿಕ ಈತನ ತಾಯಿಗೆ ತೀವ್ರ ಅನಾರೋಗ್ಯವಾಗಿ ತನ್ನ ತಪ್ಪಿನಿಂದ ಹಾಗೂ ದೈವನಿಂದನೆಯಿಂದ ಹೀಗಾಗಿದೆ ಎಂದು ತಿಳಿದ ನಂತರ, ತಾನು ವಿಚಾರವಾದಿ ಎಂದುಕೊಳ್ಳುತ್ತಿದ್ದ ಈತನೂ ಕೊರಗಜ್ಜನ ಕ್ಷೇತ್ರಕ್ಕೆ ಬಂದು ಹರಕೆ ಒಪ್ಪಿಸಿ ಕ್ಷೆಮೆಯಾಚಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಕೊರಗ ತನಿಯ ಕೊರಗಜ್ಜನಾದ ಕಥೆ…
ಪಣಂಬೂರಿನ ಓಡಿ ಮತ್ತು ಅಚ್ಚು ಮೈರೆದಿ ಎಂಬ ಕೊರಗ ದಂಪತಿಗೆ ಒಂದು ಗಂಡು ಮಗು ಹುಟ್ಟುತ್ತದೆ. ಅವನಿಗೆ ತನಿಯ ಎಂಬ ಹೆಸರನ್ನು ಇಟ್ಟಿದ್ದರು. ತನಿಯಯನಿಗೆ ಕೇವಲ 30 ದಿವಸವಾಗುತ್ತಲೇ ಅವನ ತಂದೆ ಮತ್ತು ತಾಯಿ ವಿಧಿವಶವಾಗುತ್ತಾರೆ. ತನಿಯ ಅನಾಥನಾಗುತ್ತಾನೆ. ಅವನು ಅಳುತ್ತಿರುವಾಗ ಬೈದೆರೆ ಜಾತಿಗೆ ಸೇರಿದ ಮೈರಕ್ಕ ಬೈದೆದಿ ಮತ್ತು ಅವರ ಮಗ ಚೆನ್ನಯ್ಯನನ್ನು ತನಿಯ ನೋಡುತ್ತಾನೆ. ಮೈರಕ್ಕನ ಬಳಿ ಬಂದು ಅಮ್ಮಾ ನನಗೆ ಬಟ್ಟೆ ಕೊಡಿ ಎಂದು ಕೇಳುವಾಗ ಅವರು ತನ್ನ ತಲೆಯ ನೀರು ಹೀರಿಕೊಳ್ಳಲು ಕಟ್ಟಿದ ಬಟ್ಟೆಯನ್ನೇ ಆ ಮಗುವಿಗೆ ಕೊಟ್ಟು ಮಗುವನ್ನು ತನ್ನ ಜೊತೆ ಕರೆದುಕೊಂಡು ಹೋಗುತ್ತಾರೆ.
ಮೈರಕ್ಕ ಶೇಂದಿ ಮಾರುವವರಾಗಿದ್ದರು. ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದ ತನಿಯ ಎಷ್ಟೇ ದೊಡ್ಡ ಕೆಲಸವಾದರೂ ಅದನ್ನು ಮಾಡಿ ಮುಗಿಸುತ್ತಿದ್ದ. ಹೀಗಿರುವಾಗ ಒಂದು ದಿನ ತನಿಯನ ಬಳಿ ತಂದ ಶೇಂದಿಯನ್ನು ಹಂಡೆಗೆ ತುಂಬಿಸಲು ಹೇಳುತ್ತಾರೆ. ಅವನು ತುಂಬಿಸುತ್ತಾನೆ. ಆದರೆ ಇಲ್ಲಿ ವಿಚಿತ್ರ ಏನೆಂದರೆ ಏಳು ರಾತ್ರಿ ಏಳು ಹಗಲು ಕಳೆದರೂ ಶೇಂದಿ ಖಾಲಿಯೇ ಆಗುವುದಿಲ್ಲ! ಮುಂದೆ ತನಿಯ ದೊಡ್ಡವನಾಗುತ್ತ ಹೋದಂತೆ ಪವಾಡಗಳು ನಡೆಯುತ್ತ ಹೋಗುತ್ತವೆ ಎಂಬ ಪ್ರತೀತಿ ತುಳುನಾಡಿನಲ್ಲಿದೆ.
ಇದನ್ನೂ ಓದಿ| ಮಂಗಳೂರು | ಕೊರಗಜ್ಜನ ಪವಾಡ | ಮಗು ಬದುಕುಳಿಯುವುದು ಕಷ್ಟ ಎಂದಿದ್ದ ವೈದ್ಯರು; ಮತ್ತೆ ಕಿಲಕಿಲನೆ ನಗುವಂತೆ ಮಾಡಿದ ಕೊರಗಜ್ಜ!
ಕರ್ನಾಟಕ
Ramalinga Reddy: 4 ಸಾರಿಗೆ ನಿಗಮಗಳ ಅಧ್ಯಕ್ಷರಾಗಿ ರಾಮಲಿಂಗಾರೆಡ್ಡಿ ನೇಮಕ
Ramalinga Reddy: ರಾಜ್ಯ ಸಾರಿಗೆ ಇಲಾಖೆಯ ಬಿಎಂಟಿಸಿ, ಕೆಎಸ್ಆರ್ಟಿಸಿ, ಎನ್ಡಬ್ಲ್ಯುಕೆಆರ್ಟಿಸಿ ಹಾಗೂ ಕೆಕೆಆರ್ಟಿಸಿ ಅಧ್ಯಕ್ಷರಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ನೇಮಿಸಲಾಗಿದೆ.
ಬೆಂಗಳೂರು: ಸಾರಿಗೆ ಇಲಾಖೆಯ 4 ಸಾರಿಗೆ ನಿಗಮಗಳಿಗೆ ಅಧ್ಯಕ್ಷರಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನೇಮಕವಾಗಿದ್ದಾರೆ. ಸಾರಿಗೆ ಇಲಾಖೆ ಅಧೀನದಲ್ಲಿರುವ ಬಿಎಂಟಿಸಿ, ಕೆಎಸ್ಆರ್ಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ರಾಮಲಿಂಗಾರೆಡ್ಡಿ ಅವರನ್ನು ನೇಮಿಸಿ ಸಾರಿಗೆ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿ ವಿ.ಎಸ್. ಪುಷ್ಪ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ | Hosakerehalli Lake: ಕೆರೆಯಲ್ಲಿ ರಸ್ತೆ; ಡಿಕೆಶಿ ಸೂಚನೆ ಬೆನ್ನಲ್ಲೇ ಬಿಬಿಎಂಪಿಯ ಇಬ್ಬರು ಅಧಿಕಾರಿಗಳ ಅಮಾನತು
ಸಾಮಾನ್ಯವಾಗಿ ನಾಲ್ಕು ನಿಗಮಗಳಿಗೆ ಪ್ರತ್ಯೇಕವಾಗಿ ಅಧ್ಯಕ್ಷರ ನೇಮಕವಾಗುತ್ತಿತ್ತು. ಆದರೆ, ಈ ಬಾರಿ ಪ್ರತ್ಯೇಕವಾಗಿ ಅಧ್ಯಕ್ಷರನ್ನು ನೇಮಿಸದೆ ಸಚಿವ ರಾಮಲಿಂಗಾರೆಡ್ಡಿ ಅವರಿಗೇ ನಾಲ್ಕೂ ನಿಗಮಗಳ ಜವಾಬ್ದಾರಿ ನೀಡಲಾಗಿದೆ.
ಕರ್ನಾಟಕ
Hosakerehalli Lake: ಕೆರೆಯಲ್ಲಿ ರಸ್ತೆ; ಡಿಕೆಶಿ ಸೂಚನೆ ಬೆನ್ನಲ್ಲೇ ಬಿಬಿಎಂಪಿಯ ಇಬ್ಬರು ಅಧಿಕಾರಿಗಳ ಅಮಾನತು
Hosakerehalli Lake: ಬೆಂಗಳೂರಿನ ಹೊಸಕೆರೆಹಳ್ಳಿ ಕೆರೆಯ ಮಧ್ಯೆ ರಸ್ತೆ ನಿರ್ಮಾಣ ಯೋಜನೆ ರೂಪಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿಯ ಇಬ್ಬರು ಮಹಿಳಾ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಬೆಂಗಳೂರು: ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಹೊಸಕೆರೆಹಳ್ಳಿ ಕೆರೆಯ (Hosakerehalli Lake) ಮಧ್ಯೆ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಿದ ಬಿಬಿಎಂಪಿಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕ್ರಮ ಕೈಗೊಳ್ಳಲು ಸೂಚಿಸಿದ ಬೆನ್ನಲ್ಲೇ ಇಬ್ಬರು ಮಹಿಳಾ ಅಧಿಕಾರಿಗಳನ್ನು ಅಮಾನತು ಮಾಡಿ ಬಿಬಿಎಂಪಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎನ್.ಕೆ.ಲಕ್ಷ್ಮೀಸಾಗರ್ ಆದೇಶ ಹೊರಡಿಸಿದ್ದಾರೆ.
ಘನತ್ಯಾಜ್ಯ ವಿಭಾಗದ ಇಇ ಎಚ್.ಎಸ್.ಮೇಘ ಹಾಗೂ ಎಇ ಶಿಲ್ಪ ಅಮಾನತುಗೊಂಡ ಅಧಿಕಾರಿಗಳು. ಪ್ರಭಾವಿ ಅಪಾರ್ಟ್ಮೆಂಟ್ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಹೊಸಕೆರೆಹಳ್ಳಿ ಕೆರೆಯ ಮಧ್ಯೆ ರಸ್ತೆ ನಿರ್ಮಾಣಕ್ಕೆ ಕಾರಣಕರ್ತರಾದ ಅಧಿಕಾರಿಗಳು, ಎಂಜಿನಿಯರ್ಗಳನ್ನು ಸೋಮವಾರ (ಜೂನ್ 5) ಸಂಜೆ ಒಳಗೆ ಸೇವೆಯಿಂದ ಅಮಾನತು ಮಾಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರಿಗೆ ಸೂಚನೆ ನೀಡಿದ್ದರು. ಹೀಗಾಗಿ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ.
ಇದನ್ನೂ ಓದಿ | ಗ್ಲೋಬಲ್ ಬೆಂಗಳೂರು ಮಾಡಲು ಸಲಹಾ ಸಮಿತಿ; ಇದು ಡಿಕೆಶಿ ಮಾಸ್ಟರ್ ಪ್ಲ್ಯಾನ್!
ಕೆರೆ ಮಧ್ಯೆ ರಸ್ತೆ ನಿರ್ಮಾಣ ಮಾಡುವ ಐಡಿಯಾ ಕೊಟ್ಟವರು ಯಾರು? ಯೋಜನೆ ರೂಪಿಸಿದವರು ಯಾರು? ಅನುಷ್ಠಾನಕ್ಕೆ ತಂದವರು ಯಾರು? ಯಾಕಾಗಿ ಇದನ್ನು ಮಾಡಿದಿರಿ? ಯಾರಿಗೆ ಅನುಕೂಲ ಮಾಡಿಕೊಡಲು ಮಾಡಿದಿರಿ? ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದೀರಿ ಎಂದು ಶಿವಕುಮಾರ್ ಅವರು ಸೋಮವಾರ ಮಧ್ಯಾಹ್ನ ಸಭೆಯಲ್ಲಿ ಬಿಬಿಎಂಪಿ ಆಯುಕ್ತರನ್ನು ಪ್ರಶ್ನಿಸಿದ್ದರು. ಅಧಿಕಾರಿಗಳು ಇದಕ್ಕೆ ಉತ್ತರಿಸಲು ತಡಬಡಾಯಿಸಿದರು. ತಕ್ಷಣವೇ ಉಪ ಮುಖ್ಯಮಂತ್ರಿಗಳು ಹೊಸಕೆರೆಹಳ್ಳಿ ಕೆರೆ ಭಾಗ ಮಾಡಿ ರಸ್ತೆ ನಿರ್ಮಾಣ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸೂಚನೆ ನೀಡಿದ್ದರು.
ಕರ್ನಾಟಕ
Koppal News: ಕನಕಗಿರಿಯಲ್ಲಿ ಕಲುಷಿತ ನೀರು ಸೇವಿಸಿ ವೃದ್ಧೆ ಸಾವು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ
Koppal News: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವೃದ್ಧೆ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ.
ಕೊಪ್ಪಳ: ರಾಯಚೂರು ಜಿಲ್ಲೆಯ ರೇಖಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಒಬ್ಬ ಬಾಲಕ ಮೃತಪಟ್ಟು, 30ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಪ್ರಕರಣ ನಡೆದ ಬೆನ್ನಲ್ಲೇ ಅಂತಹುದೇ ಪ್ರಕರಣ ಜಿಲ್ಲೆಯಲ್ಲಿ (Koppal News) ನಡೆದಿದೆ. ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವೃದ್ಧೆಯೊಬ್ಬರು ಸಾವಿಗೀಡಾಗಿದ್ದು, 10ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ.
ಹೊನ್ನಮ್ಮ ಶಿವಪ್ಪ (65) ಮೃತ ಮಹಿಳೆ. ಬಸರಿಹಾಳ ಗ್ರಾಮದಲ್ಲಿ ಸುಮಾರು ಮೂರು ದಿನಗಳಿಂದ ವಾಂತಿ- ಭೇದಿಯಿಂದ ಹಲವು ಜನರು ಬಳಲುತ್ತಿದ್ದರು. ಅಸ್ವಸ್ಥಗೊಂಡವರನ್ನು ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಮೃತಪಟ್ಟಿದ್ದಾರೆ. ಮೂರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಲುಷಿತ ನೀರು ಪೂರೈಕೆಯಾಗಿದೆ ಸ್ಥಳೀಯರು ಆರೋಪಿಸಿದ್ದಾರೆ. ವೃದ್ಧೆ ಸಾವು ಬಳಿಕ ದಿನದಿಂದ ದಿನಕ್ಕೆ ಅಸ್ವಸ್ಥರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆಯ ಗಮನಕ್ಕೆ ತಾರದೆ ನಿರ್ಲಕ್ಷ್ಯ ವಹಿಸಿದ ಆರೋಪ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕೇಳಿಬಂದಿದೆ.
ಇದನ್ನೂ ಓದಿ | ಸರ್ಕಾರಿ ಬಸ್ ಓಡಿಸಿದ ಖಾಸಗಿ ವ್ಯಕ್ತಿ; ಕ್ರೂಸರ್ಗೆ ಡಿಕ್ಕಿ, ತಪ್ಪಿತು ಭಾರೀ ಅನಾಹುತ
ಟಯರ್ ಸಿಡಿದು ಪಲ್ಟಿ ಹೊಡೆದ ಕಾರು; ಐವರಿಗೆ ಗಾಯ
ಮಂಡ್ಯ: ಟಯರ್ ಸಿಡಿದು ಕಾರು ಪಲ್ಟಿಯಾಗಿದ್ದರಿಂದ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರ ವಲಯದ ಚಿಕ್ಕಮಂಡ್ಯ ಬಳಿ ಸೋಮವಾರ ನಡೆದಿದೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಬೆಂಗಳೂರು ಮೂಲದ ಅರ್ಜುನ್, ಮಂಜುನಾಥ್ ಜಿ.ಅಡಿಗ, ಶ್ರೀಕಾಂತ್, ಕೃಷ್ಣ, ಮೂರ್ತಿ ಗಾಯಗೊಂಡವರು.
ಬೆಂಗಳೂರು ಕಡೆಯಿಂದ ಮೈಸೂರಿನತ್ತ ತೆರಳುತ್ತಿದ್ದಾಗ ಚಿಕ್ಕಮಂಡ್ಯ ಸಮೀಪಿಸುತ್ತಿದ್ದಂತೆ ಕಾರಿನ ಟಯರ್ ಸ್ಫೋಟಗೊಂಡಿದೆ. ಹೀಗಾಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.
ಕರ್ನಾಟಕ
World Environment Day: ಶಿವಮೊಗ್ಗದಲ್ಲಿ ಸಹಸ್ರ ವೃಕ್ಷಾರೋಪಣ; ಸಾವಿರ ಗಿಡ ನೆಡುವ ಅಭಿಯಾನಕ್ಕೆ ಚಾಲನೆ
World Environment Day: ಶಿವಮೊಗ್ಗದ ತುಂಗಾ ಮೇಲ್ದಂಡೆ ಕಾಲುವೆಯ ಇಕ್ಕೆಲಗಳಲ್ಲಿ ಸಹಸ್ರ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಶಿವಮೊಗ್ಗ: ಪರಿಸರ ದಿನಾಚರಣೆ ನಿಮಿತ್ತ ವಿಸ್ತಾರ ನ್ಯೂಸ್ ಹಮ್ಮಿಕೊಂಡಿದ್ದ ಅಭಿಯಾನಕ್ಕೆ (World Environment Day) ಶಿವಮೊಗ್ಗದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. ತುಂಗಾ ಮೇಲ್ದಂಡೆ ಕಾಲುವೆಯ ಇಕ್ಕೆಲಗಳಲ್ಲಿ ಸಹಸ್ರ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ದೊರಕಿದೆ. ನಗರ ವ್ಯಾಪ್ತಿಯ 11 ಕಿ.ಮೀ. ಉದ್ದದ ಕಾಲುವೆಯ ಎರಡೂ ಬದಿಗಳಲ್ಲಿ ಸಾವಿರ ಗಿಡಗಳನ್ನು ನೆಡುವ ಬೃಹತ್ ಅಭಿಯಾನಕ್ಕೆ ಆರ್ಎಸ್ಎಸ್ ದಕ್ಷಿಣ ಪ್ರಾಂತ ಕಾರ್ಯವಾಹ ಪಟ್ಟಾಭಿರಾಮ ಚಾಲನೆ ನೀಡಿದರು.
ನಿರ್ಮಲ ತುಂಗಾ ಅಭಿಯಾನ ತಂಡ, ಪರ್ಯಾವರಣ ಸಂರಕ್ಷಣೆ, ಸರ್ಜಿ ಫೌಂಡೇಶನ್, ವಿಸ್ತಾರ ನ್ಯೂಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲಾಡಳಿತ, ತುಂಗಾ ಮೇಲ್ದಂಡೆ ಯೋಜನೆ, ಅರಣ್ಯ ಇಲಾಖೆ ಸಹಯೋಗ ನೀಡಿದ್ದು, ನಗರದ ಪರಿಸರ ಪ್ರೇಮಿಗಳು ಪರಿಸರ ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.
ಆರ್ಎಸ್ಎಸ್ ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್, ಜಿಲ್ಲಾ ಸಂಘಚಾಲಕ ರಂಗನಾಥ, ಸರ್ಜಿ ಫೌಂಡೇಶನ್ ಮುಖ್ಯಸ್ಥ ಡಾ. ಧನಂಜಯ ಸರ್ಜಿ, ಮಾಚೇನಹಳ್ಳಿ ಕೈಗಾರಿಕಾ ವಸಾಹತು ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ, ದಿನೇಶ್ ಶೇಟ್, ತ್ಯಾಗರಾಜ ಮಿತ್ಯಾಂತ, ಬಾಲಕೃಷ್ಣ ನಾಯ್ಡು, ಗೊ.ಕೃ. ಭಾಗವತ್, ರಂಗಭೂಮಿ ಮಂಜು, ನಾಗಭೂಷಣ್ ಸ್ವಾಮಿ, ಕುಮಾರಿಪ್ರಣಮ್ಯ, ಪ್ರಣೀತಾ, ಮುಂತಾದವರು ಇದ್ದರು.
-
ಕರ್ನಾಟಕ19 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ17 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕರ್ನಾಟಕ14 hours ago
Murder Case: ಟೋಲ್ ವಿಚಾರಕ್ಕೆ ಕಿರಿಕ್; ಹಾಕಿ ಸ್ಟಿಕ್ನಿಂದ ಬಡಿದು ಕೊಂದೇಬಿಟ್ಟರು ದುರುಳರು
-
ಕರ್ನಾಟಕ10 hours ago
DK Shivakumar: ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ಮಾಡಿದ್ದಕ್ಕೆ ಜಾಡಿಸಿದ ಡಿಕೆಶಿ; ಅಧಿಕಾರಿಗಳ ಅಮಾನತಿಗೆ ಆದೇಶ
-
ದೇಶ15 hours ago
Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು
-
ದೇಶ18 hours ago
world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್ ತಿಳಿಯಿರಿ
-
ಕರ್ನಾಟಕ7 hours ago
ಸರ್ಕಾರಿ ಬಸ್ ಓಡಿಸಿದ ಖಾಸಗಿ ವ್ಯಕ್ತಿ; ಕ್ರೂಸರ್ಗೆ ಡಿಕ್ಕಿ, ತಪ್ಪಿತು ಭಾರೀ ಅನಾಹುತ
-
ಪರಿಸರ10 hours ago
ವಿಶ್ವ ಪರಿಸರ ದಿನ: ‘ಸಸಿ ನೆಡಿ, ಫೋಟೊ ಕಳುಹಿಸಿ’ ವಿಸ್ತಾರ ಅಭಿಯಾನ; ನಿಮ್ಮ ಮತ್ತಷ್ಟು ಫೋಟೊಗಳು ಇಲ್ಲಿವೆ