ಕಿಡ್ಸ್ ಕಾರ್ನರ್
ಮಕ್ಕಳ ಕಥೆ | ರಾಜಕುಮಾರಿ ಮತ್ತು ಬುರುಡೆ ಭೂತ
ತನಗೇ ಗೊತ್ತಿಲ್ಲದೇ ತಲೆಬುರುಡೆ ಭೂತವನ್ನು ಮದುವೆಯಾದಳಾ ರಾಜಕುಮಾರಿ. ಭೂತಗಳ ರಾಜ್ಯಕ್ಕೆ ಹೋಗಿ ಸೇರಿಕೊಂಡ ಆಕೆ ಅಲ್ಲಿಂದ ಪಾರಾಗುವುದು ಹೇಗೆ? ಓದಿ ಈ ಮಕ್ಕಳ ಕಥೆ.
ಈ ಕತೆಯನ್ನು ಇಲ್ಲಿ ಕೇಳಿ:
ಒಂದಾನೊಂದು ಕಾಲದಲ್ಲಿ ಒಂದಾನೊಂದು ಊರಿನಲ್ಲಿ ರಾಜನೊಬ್ಬ ಇದ್ದ. ಅವನಿಗೊಬ್ಬಳು ಚೆಂದುಳ್ಳಿ ಚೆಲುವೆಯಾದ ಮಗಳಿದ್ದಳು. ಪ್ರಾಯಪ್ರಬುದ್ಧಳಾಗಿದ್ದ ರಾಜಕುಮಾರಿಗೆ ಮದುವೆ ಮಾಡಬೇಕು ಅನ್ನೋದು ರಾಜ ಮತ್ತು ರಾಣಿಯರ ಆಸೆಯಾಗಿತ್ತು. ಅದಕ್ಕೆ ತಕ್ಕ ಹಾಗೆ, ಇಡೀ ರಾಜ್ಯದ ಪ್ರಾಯದ ಹುಡುಗರೆಲ್ಲಾ ರಾಜಕುಮಾರಿಯನ್ನು ಮದುವೆಯಾಗಬೇಕು ಅಂತ ಕನಸು ಕಾಣ್ತಾ ಇದ್ದರು. ಆದರೆ ಅವರಾರೂ ಬೇಡ ತನಗೆ ಎಂದು ರಾಜಕುಮಾರಿ ನಿರಾಕರಿಸುತ್ತಾ ಇದ್ದಳು. ತನ್ನನ್ನು ವಿವಾಹವಾಗಲು ಬಂದ ಒಬ್ಬೊಬ್ಬರಿಗೂ ಒಂದೊಂದು ಕಾರಣ ಹೇಳಿ ಹಿಂದಕ್ಕೆ ಕಳಿಸುತ್ತಿದ್ದಳು. ಅವಳಿಗೆ ತನ್ನ ಅಂದ-ಚಂದದ ಬಗ್ಗೆ ತುಂಬಾ ಗರ್ವವಿತ್ತು. ಇದರಿಂದಾಗಿ ರಾಜ ಮತ್ತು ರಾಣಿ ಬಹಳ ಬೇಸರಗೊಂಡಿದ್ದರು.
ಬೇರೆ ಬೇರೆ ಕಡೆಯಿಂದ ಸಂಬಂಧಗಳನ್ನು ತಂದರೂ ರಾಜಕುಮಾರಿ ನಿರಾಕರಿಸುತ್ತಿದ್ದಳು. ತನ್ನ ರಾಜ್ಯದ ಯಾವ ಹುಡುಗರೂ ಬೇಡ. ದೂರದ ರಾಜ್ಯದಿಂದ ತುಂಬ ಚಂದದ, ಶಕ್ತಿಶಾಲಿಯಾದ ರಾಜಕುಮಾರ ಬಂದು ತನ್ನನ್ನು ಮದುವೆ ಮಾಡಿಕೊಂಡು ಯಾವುದೋ ದೇಶಕ್ಕೆ ಕರೆದೊಯ್ಯಬೇಕು ಅಂತೆಲ್ಲಾ ಏನೇನೋ ಹೇಳುತ್ತಿದ್ದಳು. ಅದನ್ನೆಲ್ಲಾ ಕೇಳಿದ ಆಕೆಯ ತಂದೆ-ತಾಯಿಯ ಬೇಸರ ಮತ್ತಷ್ಟು ಹೆಚ್ಚುತ್ತಿತ್ತು. ಎಷ್ಟು ಹೇಳಿದರೂ ಇವಳಿಗೇಕೆ ಅರ್ಥವಾಗುತ್ತಿಲ್ಲ ಎಂದು ಅವರಿಬ್ಬರೂ ತಳಮಳಗೊಳ್ಳುತ್ತಿದ್ದರು.
ಒಂದು ದಿನ ಆ ಊರಿಗೆ ಹೊಸ ಯುವಕನೊಬ್ಬ ಬಂದ. ಮಾರುಕಟ್ಟೆಯಲ್ಲಿ ಏನೋ ಖರೀದಿಗೆ ತೊಡಗಿದ್ದ. ಅವನ ಎತ್ತರ, ಅಗಲ, ಅಂದ-ಚಂದ ನೋಡಲು ಊರಿನ ಜನರೆಲ್ಲಾ ಸೇರಿದ್ದರು. ವಿಷಯ ಅರಮನೆಯನ್ನೂ ತಲುಪಿತು. ಅವನನ್ನು ಅರಮನೆಗೆ ಕರೆತರುವಂತೆ ರಾಜಕುಮಾರಿ ಹೇಳಿದಳು. ಮಾತ್ರವಲ್ಲ, ಅವನನ್ನು ನೋಡಿದ ಕೂಡಲೇ, ʻಆದರೆ ಇವನನ್ನೇ ಮದುವೆಯಾಗಬೇಕುʼ ಎಂದು ನಿರ್ಧರಿಸಿಯೂಬಿಟ್ಟಳು. ಅವನ ಬಗ್ಗೆ ಏನನ್ನೂ ವಿಚಾರಿಸದೆಯೇ, ಯಾವುದೋ ಊರಿನ ರಾಜಕುಮಾರನೇ ಇರಬೇಕು ಈತ ಎಂದು ತೀರ್ಮಾನಿಸಿಬಿಟ್ಟಿದ್ದಳು. ಆದರೆ ಮಗಳ ನಿರ್ಧಾರ ರಾಜ-ರಾಣಿಗೆ ಒಪ್ಪಿಗೆಯಾಗಲಿಲ್ಲ. ʻಅವನು ಯಾವ ಊರಿನ ರಾಜಕುಮಾರ? ಅಲ್ಲಿ ಯಾರೆಲ್ಲಾ ಇದ್ದಾರೆ? ಅವನು ಇಲ್ಲಿಗೇಕೆ ಬಂದಿದ್ದಾನೆ… ಎಲ್ಲವನ್ನೂ ವಿಚಾರಿಸಬೇಕು. ಸ್ವಲ್ಪ ತಾಳು, ಅವಸರ ಮಾಡಬೇಡʼ ಎಂದು ಬುದ್ಧಿ ಹೇಳಿದರು. ಆದರೆ ರಾಜಕುಮಾರಿ ಉತ್ಸಾಹ ಮೇರೆ ಮೀರಿತ್ತು. ಬೇರೆ ದಾರಿಕಾಣದೆ, ಅವರಿಬ್ಬರಿಗೂ ರಾಜ-ರಾಣಿ ಮದುವೆ ಮಾಡಿದರು.
ಕೆಲವು ದಿನಗಳು ಸುಖವಾಗಿಯೇ ಕಳೆದವು. ನಂತರ ತನ್ನ ರಾಜ್ಯಕ್ಕೆ ಹೋಗೋಣ ಎಂದು ರಾಜಕುಮಾರ ಹೇಳಿದ. ಆದರೆ ರಾಜ-ರಾಣಿಗೆ ಮನಸ್ಸಿರಲಿಲ್ಲ. ಯಾವುದಕ್ಕೂ ರಾಜಕುಮಾರಿ ಕೇಳಬೇಕಲ್ಲ ಅವರ ಮಾತನ್ನು. ತಂದೆ-ತಾಯಿಯ ಮಾತನ್ನು ತೆಗೆದುಹಾಕಿ, ರಾಜಕುಮಾರನೊಂದಿಗೆ ಯಾವುದೋ ದೂರದ ದೇಶಕ್ಕೆ ಕುದುರೆಯ ಮೇಲೆ ಹೊರಟಳು. ಯಾವತ್ತೂ ಇಲ್ಲದಷ್ಟು ಸಂತೋಷದಲ್ಲಿ ಮಗಳಿದ್ದರೆ, ತಂದೆ-ತಾಯಿಗೆ ಎಂದೂ ಇಲ್ಲದಷ್ಟು ದುಃಖ!
ಹಲವಾರು ದಿನಗಳ ಕಾಲ ಪ್ರಯಾಣ ಮಾಡಿದ ನಂತರ, ಮಾನವರ ರಾಜ್ಯದ ಗಡಿ ಮುಗಿದು ಭೂತಗಳ ರಾಜ್ಯ ಆರಂಭವಾಯಿತು. ಹುಚ್ಚುಚ್ಚಾಗಿ ಗಾಳಿ ಬೀಸುತ್ತಿದ್ದುದನ್ನು ಕಂಡು ರಾಜಕುಮಾರಿಗೆ ಏನೋ ಹೇಳಲಾರದ ಭಯವೂ ಪ್ರಾರಂಭವಾಯಿತು. ಇದಕ್ಕಿದ್ದಂತೆ ಚಿತ್ರ-ವಿಚಿತ್ರ ಘಟನೆಗಳು ಆರಂಭವಾದವು. ಭೂತವೊಂದು ಬಂದು ರಾಜಕುಮಾರನ ಕುದುರೆ ಕಿತ್ತುಕೊಂಡು ಹೋಯಿತು. ಮತ್ತೊಂದಿಷ್ಟು ಭೂತಗಳು ಬಂದು, ʻನನ್ನ ಕೈಕೊಡು, ನನ್ನ ಕಾಲ್ಕೊಡು, ನನ್ನ ಬೆನ್ಕೊಡು…ʼ ಎಂದೆಲ್ಲಾ ಹೇಳಿ ಅವನ ಕೈ-ಕಾಲುಗಳನ್ನೆಲ್ಲಾ ಕಿತ್ತುಕೊಂಡು ಹೋದವು. ಈ ಭೂತಚೇಷ್ಟೆಗಳ ನಂತರ, ಈಗ ರಾಜಕುಮಾರ ಎಂದರೆ ಒಂದು ತಲೆಬುರುಡೆ ಮಾತ್ರ! ಹೆದರಿ ಕಿರುಚಾಡಿದಳು ರಾಜಕುಮಾರಿ. ಆದರೆ ಕೇಳುವವರ್ಯಾರು? ʻನಡಿ ನನ್ನ ಮನೆಗೆʼ ಎನ್ನುತ್ತಾ ಅವಳನ್ನು ತನ್ನ ಮನೆಗೆ ಕರೆದೊಯ್ದಿತು ಆ ಬುರುಡೆಭೂತ.
ಇದನ್ನೂ ಓದಿ: ಮಕ್ಕಳ ಕಥೆ | ಕಳೆದುಹೋದ ಒಂಟೆಯನ್ನು ತೆನಾಲಿರಾಮ ಹುಡುಕಿದ್ದು ಹೇಗೆ?
ನಿಜಕ್ಕೂ ಆತ ಯಾವ ಊರಿನ ರಾಜಕುಮಾರನೂ ಆಗಿರಲಿಲ್ಲ. ಈ ಭೂತ ರಾಜ್ಯದಲ್ಲಿ ಅದೂ ಒಂದು ಭೂತವಾಗಿತ್ತಷ್ಟೆ. ಉಳಿದ ಭೂತಗಳಿಂದ ದೇಹವನ್ನೆಲ್ಲಾ ಎರವಲು ಪಡೆದು ರಾಜಕುಮಾರಿಯ ಊರಿಗೆ ಮನುಷ್ಯ ರೂಪದಲ್ಲಿ ಬಂದಿದ್ದ ಆತ. ಆತನ ಬಗ್ಗೆ ವಿಚಾರಿಸೋಣ ಎಂದು ರಾಜ-ರಾಣಿ ಹೇಳಿದಾಗ ಮಗಳು ಕೇಳಿದ್ದರೆ ಒಳ್ಳೆಯದಿತ್ತೇನೋ. ಆದರೀಗ ಕಾಲ ಮಿಂಚಿತ್ತು. ಆ ಬುರುಡೆಭೂತದ ಮನೆಯಲ್ಲಿ ಕೈಲಾಗದ ಮುದುಕಿಯೊಬ್ಬಳಿದ್ದಳು. ಅವಳನ್ನು ನೋಡಿಕೊಳ್ಳುವ ಕೆಲಸ ರಾಜಕುಮಾರಿಯ ಪಾಲಿಗೆ ಬಂತು. ಅವಳಿಗೆ ಅಡುಗೆ ಮಾಡಿಕೊಡುವುದು, ಬಿಸಿನೀರು ಕಾಯಿಸಿ ಸ್ನಾನ ಮಾಡಿಸುವುದು, ತಲೆ ಬಾಚುವುದು… ಹೀಗೆ ಎಲ್ಲಾ ಕೆಲಸಗಳನ್ನು ರಾಜಕುಮಾರಿ ಮಾಡುತ್ತಿದ್ದಳು. ಅವಳನ್ನು ಕಂಡು ಮುದುಕಿಗೆ ಪಾಪ ಎನಿಸಿತು. ಬುರುಡೆಭೂತ ಮನೆಯಲ್ಲಿದ್ದ ಹೊತ್ತಿನಲ್ಲಿ ರಾಜಕುಮಾರಿಯನ್ನು ಹತ್ತಿರ ಕರೆದಳು ಮುದುಕಿ.
ʻನೋಡು, ಇಲ್ಲಿಂದ ತಪ್ಪಿಸಿಕೊಳ್ಳುವುದಕ್ಕೆ ನಾ ನಿನಗೆ ಸಹಾಯ ಮಾಡಬಲ್ಲೆ. ಆದರೆ ನನಗೊಂದು ಮಾತು ಕೊಡಬೇಕು ನೀನುʼ ಎಂದಳು ಮುದುಕಿ. ರಾಜಕುಮಾರಿಗೆ ಮತ್ತೆ ಚಿಂತೆಯಾಯಿತು- ಇವಳಿನ್ನೇನು ಕೇಳುವಳೋ ಎಂದು. ʻಹೆದರಬೇಡ. ನಾನೇನೂ ಕೇಳುವುದಿಲ್ಲ. ನೀನು ಮರಳಿ ಊರಿಗೆ ಹೋದ ಮೇಲೆ ನಿನ್ನ ತಂದೆ-ತಾಯಿ ಹೇಳಿದ ಹಾಗೆ ಕೇಳಿಕೊಂಡಿರಬೇಕು. ಮಾತು ಕೊಡುತ್ತೀಯಾ?ʼ ಎಂಬ ಮುದುಕಿಯ ಮಾತಿಗೆ ತಕ್ಷಣವೇ ಒಪ್ಪಿದಳು ರಾಜಕುಮಾರಿ. ತನ್ನ ಗಾಳಿ ಗೆಳೆಯನನ್ನು ಕರೆದ ಮುದುಕಿ, ರಾಜಕುಮಾರಿಯನ್ನು ಅವಳ ತಂದೆ-ತಾಯಿಯ ಬಳಿ ಬಿಟ್ಟುಬರುವಂತೆ ಹೇಳಿದಳು. ಜೋರಾಗಿ ಬೀಸಿದ ಗಾಳಿ, ಯಾರಿಗೂ ಗೊತ್ತಾಗದಂತೆ ಅವಳನ್ನೆತ್ತಿಕೊಂಡು ಅರಮನೆಯ ಬಳಿ ಬಿಟ್ಟುಬಂತು.
ರಾಜ-ರಾಣಿಗಂತೂ ಸಂಭ್ರಮವೋ ಸಂಭ್ರಮ. ಅವಳನ್ನಿನ್ನು ತಮ್ಮ ಜೀವಮಾನದಲ್ಲಿ ಮತ್ತೆ ನೋಡುವುದಿಲ್ಲ ಎಂದು ಶೋಕಿಸುತ್ತಿದ್ದ ಅವರಿಗೆ, ಇದನ್ನು ನಂಬಲೇ ಆಗುತ್ತಿರಲಿಲ್ಲ. ʻಇಷ್ಟು ದಿನ ಎಲ್ಲಿದ್ದೆ, ಹೇಗಿದ್ದೆ…ʼ ಎಂದೆಲ್ಲಾ ಅವಳನ್ನು ವಿಚಾರಿಸಿದರು. ಅವಳು ತನ್ನ ಭಯಾನಕ ಕಥೆಯನ್ನೆಲ್ಲಾ ಹೇಳಿದಳು. ಮಾತ್ರವಲ್ಲ, ಅವರ ಮಾತನ್ನು ಧಿಕ್ಕರಿಸಿದ್ದಕ್ಕೆ ತನಗೆ ಶಾಸ್ತಿಯಾಯಿತು ಎಂದು ಕಣ್ಣೀರಿಟ್ಟಳು. ಅಂತೂ ಎಲ್ಲ ಸುಖಾಂತ್ಯವಾಗಿದ್ದಕ್ಕೆ ಇಡೀ ರಾಜ್ಯದಲ್ಲಿ ಮೂರು ದಿನಗಳ ಹಬ್ಬವನ್ನು ಆಚರಿಸಲಾಯಿತು. ಹಾಗೆಯೇ, ರಾಜ-ರಾಣಿಯೇ ಒಳ್ಳೆಯ ಹುಡುಗನನ್ನು ಹುಡುಕಿ, ಮಗಳಿಗೆ ಮದುವೆ ಮಾಡಿದರು… ಎನ್ನುವಲ್ಲಿಗೆ ಈ ಕಥೆ ಮುಗಿಯಿತು.
ಇದನ್ನೂ ಓದಿ: ಮಕ್ಕಳ ಕಥೆ | ರಾಜಕುಮಾರನ ಹೊಟ್ಟೆಯೊಳಗಿನ ಹಾವು
ಕಿಡ್ಸ್ ಕಾರ್ನರ್
ಮಕ್ಕಳ ಕಥೆ: ಎಲ್ಲಿ ಕಳೆದು ಹೋಯ್ತು ಚುಕ್ಕಿ ಚಿರತೆಯ ನಗು?
ಪ್ರಾಣಿಗಳು ಕೇಳೋ ಯಾವ ಪ್ರಶ್ನೆಗೂ ಚುಕ್ಕಿ ಚಿರತೆಗೆ ಉತ್ತರ ಕೊಡೋದಕ್ಕೇ ಆಗ್ಲಿಲ್ಲ. ಮುಂದೇನಾಯಿತು? ಕಥೆ ಓದಿ.
ಒಂದು ಕಾಡು. ಆ ಕಾಡಲ್ಲೊಂದು ಚುಕ್ಕಿ ಚಿರತೆ ವಾಸ ಮಾಡ್ತಿತ್ತು. ಒಂದು ದಿನ ಆ ಚಿರತೆಗೆ ಸಿಕ್ಕಾಪಟ್ಟೆ ಬೇಜಾರಾಗೋಯ್ತು. ವಿಷಯ ಏನಪಾ ಅಂದ್ರೆ, ತನ್ನ ನಗು ಕಳೆದೋಗಿದೆ ಅಂತ ಚುಕ್ಕಿ ಚಿರತೆಗೆ ಚಿಂತೆ ಆಗಿತ್ತು. ʻಎಷ್ಟು ದಿನ ಆಯ್ತು ನಾನು ನಕ್ಕು! ಎಲ್ಲಿ ಕಳೆದೋಯ್ತು ನನ್ನ ನಗುʼ ಅಂತ ತನ್ನ ಸುತ್ತಮುತ್ತೆಲ್ಲಾ ಹುಡುಕಾಡಿದ್ರೂ ಅದಕ್ಕೆ ನಗು ಸಿಕ್ಕಿರಲಿಲ್ಲ. ಅದಕ್ಕೆ ಹ್ಯಾಪ್ ಮೋರೆ ಹಾಕ್ಕೊಂಡು ಕೂತಿತ್ತು. ಕಾಡಿನ ಪ್ರಾಣಿಗಳೆಲ್ಲಾ ಅದರ ಹತ್ತಿರ ಬಂದು, ʻಚಿಕ್ಕಿ ಚಿರತೆ, ಯಾಕೆ ಅಳತಾ ಕೂತೆ?ʼ ಅಂತ ವಿಚಾರಿಸಿದ್ವು. ಅಷ್ಟ್ ಕೇಳಿದ್ದೇ ಗೋಳೋ ಅಂತಾಳೋದಕ್ಕೆ ಶುರು ಮಾಡಿತು ಚಿರತೆ. ʻನನ್ನ ನಗುವೇ ಕಳೆದೋಗಿದೆ. ಎಲ್ಲಿ ಹುಡುಕಿದ್ರೂ ಸಿಗ್ತಿಲ್ಲ. ಏನ್ ಮಾಡ್ಲಿ?ʼ ಅಂತ ಬಿಕ್ಕುತ್ತಾ ಹೇಳಿತು. ಉಳಿದೆಲ್ಲಾ ಪ್ರಾಣಿಗಳಿಗೂ ಪಾಪ ಅನ್ನಿಸಿ, ಅವೂ ಚುಕ್ಕಿ ಚಿರತೆಯ ಕಳೆದೋದ ನಗುವನ್ನು ಹುಡುಕೋದಕ್ಕೆ ಶುರು ಮಾಡಿದ್ವು. ʻಚುಕ್ಕಿ, ನಿನ್ನ ನಗು ಎಷ್ಟು ದೊಡ್ಡದು?ʼ ಅಂತ ಒಂದು ಪ್ರಾಣಿ ಕೇಳಿದ್ರೆ, ಇನ್ನೊಂದು ʻನಿನ್ನ ನಗು ಯಾವ ಬಣ್ಣಕ್ಕಿತ್ತು?ʼ ಅಂತ ಕೇಳಿತು. ಹೀಗೆ ಪ್ರಾಣಿಗಳು ಕೇಳೋ ಯಾವ ಪ್ರಶ್ನೆಗೂ ಚುಕ್ಕಿ ಚಿರತೆಗೆ ಉತ್ತರ ಕೊಡೋದಕ್ಕೇ ಆಗ್ಲಿಲ್ಲ. ನೀನು ಏನೂ ಹೇಳದಿದ್ರೆ ನಾವಾದ್ರೂ ಹೇಗೆ ಹುಡುಕೋದು ಅಂತ ಉಳಿದ ಪ್ರಾಣಿಗಳು ಹೊರಟೋದ್ವು.
ಚುಕ್ಕಿ ಚಿರತೆಯ ಬೇಸರ ಇನ್ನೂ ಹೆಚ್ಚಾಯ್ತು. ತನ್ನ ಸಹಾಯಕ್ಕೆ ಯಾರೂ ಬರಲಿಲ್ಲ ಅಂತ ಬೇಜಾರಿನಿಂದ ಕಾಡೊಳಗೆ ಹೋಗ್ತಾ ಇರಬೇಕಾದ್ರೆ ಜಿರಾಫೆಯೊಂದು ಕಂಡಿತು. ʻಇದ್ಯಾಕೆ ಚುಕ್ಕಿ. ಆಕಾಶ ತಲೆ ಮೇಲೆ ಬಿದ್ದಂಗಿದ್ದೀಯ?ʼ ಅಂತ ಕೇಳಿತು ಜಿರಾಫೆ. ʻಏನ್ ಹೇಳಲಿ ಜಿರಾಫೆಯಕ್ಕ, ನನ್ನ ನಗು ಕಳೆದೋಗಿದೆ. ನೀ ತುಂಬಾ ಎತ್ತರ ಇದೀಯಲ್ಲಾ… ನೋಡು, ಮೇಲೆ ಗಾಳಿಲ್ಲೆಲ್ಲಾದ್ರೂ ಇದೆಯಾ ನಗು ಅಂತʼ ಕೇಳಿತು ಚುಕ್ಕಿ ಚಿರತೆ. ಮೇಲೆಲ್ಲಾ ಹುಡುಕಾಡಿದ ಜಿರಾಫೆ, ʻಊಹುಂ! ಕಾಣ್ತಿಲ್ವಲ್ಲೇ ಚುಕ್ಕಿ ಗಾಳಿಲ್ಲೆಲ್ಲೂ. ಎಲ್ಲಿ ಕಳಕೊಂಡಿದ್ದೀಯೊ ಏನೊʼ ಅಂತು.
ಅಲ್ಲಿಂದ ಗೋಳಾಡುತ್ತಾ ಮುಂದು ಹೋಗಬೇಕಾದ್ರೆ ಹೆಗ್ಗಣವೊಂದು ಎದುರಾಯ್ತು. ʻಇದೇನೆ ಚುಕ್ಕಿ, ಹಿಂಗೆ ಹರಳೆಣ್ಣೆ ಕುಡಿದ ಮುಖ ಮಾಡ್ಕಂಡಿದ್ದೀಯಲ್ಲೇʼ ಅಂತ ವಿಚಾರಿಸಿತು ಹೆಗ್ಗಣ್ಣ. ʻನೀನಾದ್ರೂ ಇದೀಯಲ್ಲ ನನ್ನ ಕಷ್ಟಕ್ಕೆ ಹೆಗ್ಗಣ್ಣ! ನನ್ನ ನಗು ಕಳೆದೋಗಿದೆ. ಭೂಮಿ ಒಳಗೆಲ್ಲಾದ್ರೂ ಇದೆಯಾ ನೋಡು ಸ್ವಲ್ಪʼ ವಿನಂತಿಸಿತು ಚಿರತೆ. ಭೂಮಿಯೊಳಗಿಳಿದ ಹೆಗ್ಗಣ್ಣ ಅಲ್ಲೆಲ್ಲಾ ಹುಡುಕಾಡಿ, ಎಲ್ಲೂ ಸಿಗದೆ ಪೆಚ್ಚ ಮೋರೆಯೊಂದಿಗೆ ಮೇಲೆ ಬಂತು. ಈಗಂತೂ ಚುಕ್ಕಿ ಚಿರತೆಯ ಗೋಳು ಇನ್ನೂ ಹೆಚ್ಚಾಯ್ತು.
ಸ್ವಲ್ಪ ನೀರಾದ್ರೂ ಕುಡಿಯೋಣ ಅಂತ ನದೀ ಹತ್ರ ಹೋಯ್ತು ಚಿರತೆ. ನೀರೆಲ್ಲಾ ಕುಡಿದು ಉಸ್ಸಪ್ಪಾ ಅಂತ ಕೂತಿದ್ದಾಗ, ʻಏನ್ ಚುಕ್ಕಿ, ಚನ್ನಾಗಿದ್ದೀಯ?ʼ ಅನ್ನೋ ಧ್ವನಿ ಕೇಳಿತು. ಯಾರದು ಮಾತಾಡಿದ್ದು ಅಂತ ಆಚೀಚೆ ನೋಡ್ತಿದ್ದಾಗ, ನೀರೊಳಗಿಂದ ನೀರಾನೆಯೊಂದು ಹೊರಬಂತು. ʻಓಹ್ ನೀನಾ!ʼ ಅಂದ ಚುಕ್ಕಿ, ಅದರ ಹತ್ರವೂ ತನ್ನ ಕಷ್ಟ ಹೇಳಿಕೊಂಡ್ತು. ʻಸ್ವಲ್ಪ ನೀರೊಳಗೆ ನೋಡ್ತೀಯಾ, ಅಲ್ಲೆಲ್ಲಾದ್ರೂ ಬಿದ್ದೋಗಿದ್ರೆ…ʼ ಅನ್ನೋ ಮನವಿಗೆ ನೀರಾನೆ ಹೊಳೆಯೊಳಗಿಳಿದು ಹುಡುಕಾಡ್ತು. ʻಇಲ್ಲ ಕಣೆ ಚುಕ್ಕಿ. ಎಲ್ ಬಿಟ್ಯೋ ಏನೋʼ ಅಂತು ನೀರಾನೆ. ಗಾಳಿ, ನೀರು, ಭೂಮಿ ಎಲ್ಲೂ ಇಲ್ವಲ್ಲಾ ತನ್ನ ನಗು ಅಂತ ಬಿಕ್ಕಿಬಿಕ್ಕಿ ಅಳುತ್ತಾ ಬರುವಾಗ ಅದಕ್ಕೊಂದು ಮಂಗಣ್ಣ ಎದುರಾಯ್ತು.
ʻಇದೇನು ಹಿಂಗೆ ಅಳ್ತಿದ್ದೀಯ? ಅಂಥದ್ದೇನಾಯ್ತು?ʼ ಕೇಳಿತು ಮಂಗಣ್ಣ. ತನ್ನ ನಗು ಕಳೆದ ಕಥೆಯನ್ನು ಮಂಗಣ್ಣನಿಗೂ ಒಪ್ಪಿಸಿತು ಚುಕ್ಕಿ. ಅದರ ಕಥೆಯನ್ನೆಲ್ಲಾ ಕೇಳಿದ ಮಂಗಣ್ಣ, ʻನಿನ್ನ ನಗು ಯಾವತ್ತು ಕಳೆದೋಯ್ತು?ʼ ವಿಚಾರಿಸ್ತು. ʻಯಾವತ್ತೂಂದ್ರೆ…!ʼ ಯೋಚನೆ ಮಾಡ್ತು ಚುಕ್ಕಿ. ʻನಾನು ಚಿಕ್ಕವಳಿರಬೇಕಾದ್ರೆ ತುಂಬಾ ನಗ್ತಿದ್ದೆ. ಆದರೆ ದೊಡ್ಡವಳಾಗ್ತಾ, ನಾನು ನಗ್ತಿದ್ದಂತೆ ನನ್ನ ಕೋರೆ ಹಲ್ಲುಗಳು ಹೊರಗೆ ಬರೋದನ್ನ ನೋಡಿ, ಉಳಿದ ಪ್ರಾಣಿಗಳು ಹೆದರಿ ನನ್ನ ಹತ್ರನೇ ಬರ್ತಿರಲಿಲ್ಲ. ಹಂಗಾಗಿ ನಗೋದನ್ನು ಕಡಿಮೆ ಮಾಡಿದೆ. ಅದ್ಯಾವತ್ತು ಕಳೆದೋಯ್ತು ಅನ್ನೋದೆ ನಂಗೆ ಗೊತ್ತಾಗ್ಲಿಲ್ಲʼ ಅಂತು ಚಿರತೆ.
ಸೀದಾ ಮರವೊಂದನ್ನು ಏರಿದ ಮಂಗ, ಅಲ್ಲಿದ್ದ ಹಕ್ಕಿಯ ಗೂಡೊಂದರಿಂದ ಪುಕ್ಕವೊಂದನ್ನು ತಂತು. ಅದನ್ನು ಚುಕ್ಕಿಯ ಕಿವಿಯೊಳಗೆ ಹಾಕಿ ತಿರುಗಿಸತೊಡಗಿತು. ಮಂಗಣ್ಣ ನೀಡುತ್ತಿದ್ದ ಕಚುಗುಳಿಯನ್ನು ತಡೆಯಲಾಗದ ಚುಕ್ಕಿ, ನಗುತ್ತಾ ಉರುಳಾಡೋದಕ್ಕೆ ಶುರು ಮಾಡ್ತು. ʻಅಯ್ಯೋ, ಸಾಕು ಸಾಕು ಮಂಗಣ್ಣಾ, ನಗು ತಡೆಯೋದಕ್ಕಾಗ್ತಿಲ್ಲ. ಹೊಟ್ಟೆಯಲ್ಲಾ ನೋವು ಬಂತುʼ ಅಂತು ಚಿರತೆ ಬಿದ್ದೂಬಿದ್ದು ನಗುತ್ತಾ. ಚುಕ್ಕಿಯ ನಗುವ ಧ್ವನಿಗೆ ಕಾಡಿನ ಪ್ರಾಣಿಗಳೆಲ್ಲಾ ಬಂದು ಸೇರಿದವು. ʻನಗು ಎಲ್ಲಿ ಸಿಗ್ತು?ʼ ಅನ್ನೋದೊಂದೇ ಅವುಗಳ ಪ್ರಶ್ನೆ.
ಇದನ್ನೂ ಓದಿ : ಮಕ್ಕಳ ಕಥೆ: ಪ್ರಾಣಿಗಳ ರಜಾ ದಿನ ಹೇಗಿತ್ತು ಗೊತ್ತಾ?
ʻಸಿಗೋದಕ್ಕೆ ಚುಕ್ಕಿಯ ನಗು ಎಲ್ಲೂ ಕಳೆದಿರಲಿಲ್ಲ, ಅವಳ ಒಳಗೇ ಇತ್ತು. ನಂನಮ್ಮ ನಗು ನಮ್ಮೊಳಗೇ ಇರತ್ತೆ. ಅದನ್ನು ಹುಡುಕಬೇಕಾದ್ದು ನಾವು. ಚುಕ್ಕಿ ನಕ್ಕಾಗ ಅವಳ ಹಲ್ಲುಗಳು ಎಷ್ಟು ಚಂದ ಕಾಣತ್ತೆ ನೋಡಿʼ ಅಂತು ಮಂಗಣ್ಣ. ಉಳಿದ ಪ್ರಾಣಿಗಳಿಗೂ ಈಗ ಚುಕ್ಕಿಯ ಹಲ್ಲು ಹೆದರಿಕೆ ಹುಟ್ಟಿಸುವ ಬದಲು, ಸುಂದರವಾಗಿ ಕಂಡಿತು. ಚುಕ್ಕಿಯ ನಗು ಮರಳಿ ಬಂತು.
ಕಿಡ್ಸ್ ಕಾರ್ನರ್
ಮಕ್ಕಳ ಕಥೆ: ಪ್ರಾಣಿಗಳ ರಜಾ ದಿನ ಹೇಗಿತ್ತು ಗೊತ್ತಾ?
ಇನ್ನೊಂದು ವಾರ ನಾವೆಲ್ಲಾ ಕೆಲಸಕ್ಕೆ ರಜೆ ತೆಗೆದುಕೊಳ್ಳಲಿದ್ದೇವೆ” ಎಂಬ ಕೆಂಪಿಕೋಳಿಯ ಮಾತಿಗೆ ಉಳಿದ ಕೋಳಿಗಳೆಲ್ಲಾ ಖುಷಿಯಿಂದ ರೆಕ್ಕೆ ಬಡಿದವು. ಮುಂದೇನಾಯಿತು? ಕಥೆ ಓದಿ.
ಅಂದು ಬೆಳಗ್ಗೆಯೇ ರಾಜು ರೈತನ ತೋಟದ ಕೋಳಿಗಳೆಲ್ಲಾ ಸಭೆ ಸೇರಿದ್ದವು. ಆ ಕೋಳಿಗಳ ಮುಖಂಡನ ಸ್ಥಾನದಲ್ಲಿ ನಿಂತು, ತನ್ನ ದೊಡ್ಡ ರೆಕ್ಕೆಗಳನ್ನು ಅಗಲಿಸುತ್ತಾ ಏರುಶ್ರುತಿಯಲ್ಲಿ ಮಾತಾಡುತ್ತಿತ್ತು ಕೆಂಪಿಕೋಳಿ. “ನನ್ನ ಪ್ರೀತಿಯ ಕುಕ್ಕುಟ ಬಾಂಧವರೇ! ಈ ವಾರ ನಾವೆಲ್ಲರೂ ಸಿಕ್ಕಾಪಟ್ಟೆ ಕೆಲಸ ಮಾಡಿದ್ದೇವೆ. ನಮ್ಮಲ್ಲಿ ಕೆಲವರು ಮಾಡಿದ ಕೆಲಸ ಹೆಚ್ಚಾಗಿ, ಬಸವಳಿದು ಬೆಂಡಾಗಿ, ರೆಕ್ಕೆ-ಪುಕ್ಕಗಳೆಲ್ಲಾ ಉದುರಿ ಹೋಗುವಷ್ಟಾಗಿದ್ದಾರೆ. ಹಾಗಾಗಿ ಇನ್ನೊಂದು ವಾರ ನಾವೆಲ್ಲಾ ಕೆಲಸಕ್ಕೆ ರಜೆ ತೆಗೆದುಕೊಳ್ಳಲಿದ್ದೇವೆ” ಎಂಬ ಕೆಂಪಿಕೋಳಿಯ ಮಾತಿಗೆ ಉಳಿದ ಕೋಳಿಗಳೆಲ್ಲಾ ಖುಷಿಯಿಂದ ರೆಕ್ಕೆ ಬಡಿದವು.
ಅಲ್ಲಿಯೇ ಮೇಯುತ್ತಿದ್ದ ಹಸುಗಳಿಗೆ ಕೋಳಿಗಳ ವ್ಯವಹಾರ ಕಂಡು ಅಚ್ಚರಿಯಾಯಿತು. ಇದ್ದಕ್ಕಿದ್ದಂತೆ ತಿಂಡಿ ಬುಟ್ಟಿಗಳನ್ನೆಲ್ಲ ತುಂಬಿಸಿಕೊಂಡು, ಮಕ್ಕಳು ಮರಿಗಳನ್ನೆಲ್ಲಾ ದಬ್ಬಿಕೊಂಡು ಈ ಕೋಳಿಗಳು ಹಳ್ಳದತ್ತ ಯಾಕಾಗಿ ಹೋಗುತ್ತಿವೆ ಎಂಬ ಕುತೂಹಲ ತಡೆಯಲಾಗದ ಹಸುಗಳು, ಕೋಳಿಗಳನ್ನು ಅಡ್ಡಗಟ್ಟಿದವು. “ಎಲ್ಲೋ ಹೊರಟಂಗಿದೆ ಎಲ್ಲರೂ” ಎಂಬ ಹಸುಗಳ ಮಾತಿಗೆ, “ಹೂಂ, ನಾವೆಲ್ಲಾ ಇನ್ನೊಂದು ವಾರ ರಜ ತಗೊಂಡಿದ್ದೀವಿ. ಅದ್ಕೆ ಹಳ್ಳದ ದಂಡೆಗೆ ಪಿಕ್ನಿಕ್ ಹೋಗ್ತಿದ್ದೀವಿ” ಎಂದವು ಕೋಳಿಗಳು. “ನಿಮಗ್ಯಾಕೆ ರಜ? ಯಾರ್ಕೊಟ್ಟೋರು?” ಕೇಳಿದವು ಹಸುಗಳು.
“ಈಗ ಮಳೆಗಾಲ ಅಲ್ವಾ… ಬೆಳಗ್ಗೆ ಯಾರೂ ಎಷ್ಟೊತ್ತಾದ್ರೂ ಏಳೋದೇ ಇಲ್ಲ. ಎಲ್ಲರನ್ನೂ ಎಬ್ಬಿಸೋಕೆ ಅಂತೆ ಬೆಳಗ್ಗೆ ಅರಚೀಅರಚಿ ಇಡಬೇಕು. ಅದೂ ಅಲ್ದೆ ಈ ತಿಂಗಳು ಯದ್ವಾತದ್ವಾ ಮೊಟ್ಟೆ ಇಟ್ಟಿದೀವಿ. ಎಷ್ಟೊತ್ತು ಕೂತ್ಕೋಬೇಕು ಗೊತ್ತಾ ಕಾವು ಕೊಡೋದಕ್ಕೆ. ಆಮೇಲೆ ಈ ಮರಿಗಳನ್ನು ಬೇರೆ ನೋಡ್ಕೋಬೇಕು… ಉಸ್ಸಪ್ಪಾ! ಅದ್ಕೆ ಈ ವಾರ ಪೂರ್ತಿ ರಜೆ ಹಾಕಿದ್ದೀವಿ” ಅಂದವು ಕೋಳಿಗಳು. ಹಸುಗಳಿಗೆ ಹೌದು ಅನಿಸಿತು.
ಅಷ್ಟರಲ್ಲಿ ಹಸುಗಳ ಗುಂಪಿನಲ್ಲಿದ್ದ ಬೆಳ್ಳಿ ಹಸು ತಕರಾರು ತೆಗೆಯಿತು. “ಏನು ಅವರು ಮಾತ್ರ ಕೆಲಸ ಮಾಡೋದಾ? ನಾವ್ಯಾರೂ ಮಾಡಲ್ವಾ? ಹೊತ್ತು ಹೊತ್ತಿಗೆ ಒಂದೊಂದ್ ಬಕೀಟು ಹಾಲು ಕೊಡೋದಕ್ಕೆ ಅಂತ ರಾಶಿಗಟ್ಟಲೆ ತಿನ್ನಬೇಡ್ವಾ? ಅದಕ್ಕೇಂತ ದಿನವಿಡೀ ಸುತ್ತೀಸುತ್ತಿ ಮೇಯಬೇಕು. ರಾಜು ರೈತನಿಗೆ ರಾಶಿಗಟ್ಟಲೆ ಗೊಬ್ಬರ ಕೊಡಬೇಕು. ಇಷ್ಟೆಲ್ಲಾ ಕೆಲಸ ಮಾಡಿಲ್ವಾ ನಾವೂನು… ನಾವೂ ರಜೆ ತಗೊಳ್ಳೋಣ” ಎಂಬ ಬೆಳ್ಳಿ ಹಸುವಿನ ಮಾತುಗಳು ಎಲ್ಲ ಹಸುಗಳಿಗೂ ನಿಜ ಎನಿಸಿದವು. ಅವೆಲ್ಲವೂ ಹೊಳೆ ದಡಕ್ಕೆ ಹೋಗಿ ಬಿದ್ದುಕೊಂಡು ಮೆಲುಕು ಹಾಕುವ ತೀರ್ಮಾನ ಮಾಡಿದವು.
ಈ ವಿಷಯ ಬೆಕ್ಕುಗಳಿಗೆ ಗೊತ್ತಾಯಿತು. “ಏನು… ಇವರೊಂದೇ ಕೆಲಸ ಮಾಡೋದಾ ಈ ತೋಟದಲ್ಲಿ ನಾವಂತೂ ಈ ವಾರ ಹಿಡಿದು ತಿಂದ ಇಲಿಗಳ ಲೆಕ್ಕ ಇಟ್ಟವರೇ ಇಲ್ಲ. ನಾವಷ್ಟು ಕೆಲಸ ಮಾಡದಿದ್ರೆ ಈ ಹಸುಗಳಿಗೆ ಎಲ್ಲಿರ್ತಿತ್ತು ಬೂಸಾ? ನಮಗೂ ಸ್ವಲ್ಪ ರೆಸ್ಟ್ ಬೇಕಪ್ಪಾ” ಎನ್ನುವ ತೀರ್ಮಾನಕ್ಕೆ ಬಂದವು. ಬೆಕ್ಕುಗಳ ತೀರ್ಮಾನ ನಾಯಿಗಳಿಗೆ ತಿಳಿಯದೇ ಇದ್ದೀತೆ? “ನಾವು ಸಹ ಈ ತೋಟ, ಮನೆಗಳನ್ನೆಲ್ಲಾ ಹಗಲು-ರಾತ್ರಿ ಕಾಯ್ತಿದ್ದೀವಿ. ಎಷ್ಟು ಕಾದಿದ್ದೀವಿ ಅಂದರೆ ನಮ್ಮ ಕರೀನಾಯಿಯ ಬಣ್ಣನೂ, ಪಾಪ… ಕೆಂಪಾಗೋಗಿದೆ ಕಾದು ಕಾದು. ನಮಗೂ ರಜೆ ಬೇಕಲ್ಲ” ಎಂದು ಮನೆ ಕಾಯುವ ಕೆಲಸಕ್ಕೆ ರಜೆ ಹಾಕಲು ನಾಯಿಗಳು ನಿರ್ಧರಿಸಿದವು.
ಹೀಗೆ ಕೋಳಿ, ಹಸು, ಬೆಕ್ಕು, ನಾಯಿಗಳೆಲ್ಲಾ ರಜೆಯ ಮೇಲೆ ಹೋಗಿರುವುದನ್ನು ಕಂಡ ತೋಟದ ಮರಗಳಿಗೆ ಕೋಪಬಂತು. “ಏಯ್ ಎದ್ದೇಳ್ರೋ ಸೋಮಾರಿಗಳಾ! ಏನ್ ಹಾಗೆ ಎಲ್ಲರೂ ಬಿದ್ದುಕೊಂಡಿದ್ದೀರಿ” ಎಂದು ಮರಗಳು ಅಬ್ಬರಿಸಿದವು. ಎಲ್ಲ ಪ್ರಾಣಿಗಳಿಗೂ ಅಚ್ಚರಿಯಾಯಿತು. ಯಾವತ್ತೂ ಸುಮ್ಮನಿರುವ ಮರಗಳು ಇಂದೇಕೆ ಗದ್ದಲ ಮಾಡುತ್ತಿವೆ ಎಂಬುದು ಅವುಗಳಿಗೆ ಅರ್ಥವಾಗಲಿಲ್ಲ. “ಯಾಕೆ ಇಷ್ಟೊಂದು ಗಲಾಟೆ ಮಾಡ್ತಿದ್ದೀರಿ?” ಮರಗಳನ್ನು ಕೇಳಿದವು ಪ್ರಾಣಿಗಳು.
ಇದನ್ನೂ ಓದಿ : ಮಕ್ಕಳ ಕಥೆ: ಮಾವಿನ ಹಣ್ಣು ಹುಡುಕುತ್ತಾ ಬಂದ ಅರಸನಿಗೆ ಕಂಡಿದ್ದೇನು?
“ಇನ್ನೇನು ಮತ್ತೆ! ಏನೋ ಮಹಾ ಕಡಿದು ಗುಡ್ಡ ಹಾಕಿದ್ದೀರಿ ಅನ್ನುವ ಹಾಗೆ ಎಲ್ಲರೂ ರಜೆ ತಗೊಂಡು ಕೂತಿದ್ದೀರಲ್ಲಾ. ಎದೇಳಿ ಮೇಲೆ, ಎಲ್ಲರೂ ಹೋಗಿ ನಿಮ್ನಿಮ್ಮ ಕೆಲಸಕ್ಕೆ” ಎಂದು ಮರಗಳು ಗುರುಗುಟ್ಟಿದವು. ಆದ್ರೆ ರಜಾ-ಮಜಾ ಅನ್ನುವ ನಿರ್ಧಾರ ಮಾಡಿದ್ದ ಪ್ರಾಣಿಗಳು ಕೂತಲ್ಲಿಂದ ಏಳಲಿಲ್ಲ. ಈ ಮರಗಳು ಬೈದರೆ ಬೈಯಲಿ ಎಂದು ತಮ್ಮಷ್ಟಕ್ಕೆ ತೂಕಡಿಸಿದವು ಪ್ರಾಣಿಗಳು.
“ವರ್ಷಕ್ಕೆ ಎಷ್ಟೊಂದು ಹೂವು-ಮಿಡಿ-ಕಾಯಿ-ಹಣ್ಣುಗಳನ್ನು ಬಿಡುತ್ತೇವೆ ನಾವು ಎಂಬ ಕಲ್ಪನೆ ಲೋಕದಲ್ಲಿ ಯಾರಿಗೂ ಇಲ್ಲ. ನಮ್ಮ ಸೊಪ್ಪು-ಎಲೆಗಳು ಲೋಕದಲ್ಲಿ ಎಲ್ಲರಿಗೂ ಬೇಕು. ನಾವು ಬೀಸುವ ಗಾಳಿ ಇಲ್ಲದಿದ್ದರೆ ನೀವೆಲ್ಲ ಎಲ್ಲಿ ಉಳಿಯುತ್ತೀರಿ? ನಾವು ಉತ್ಪತ್ತಿ ಮಾಡುವ ಪ್ರಾಣವಾಯುವಿಗೆ ಲೆಕ್ಕ ಇದೆಯೇ? ನಿಮ್ಮಗಳ ಹಾಗೆ ನಾವೂ ರಜೆ ತೆಗೆದುಕೊಂಡರೆ ಹೇಗೆ?” ಎಂದು ಮರಗಳು ಕೇಳುತ್ತಿದ್ದಂತೆ ಪ್ರಾಣಿಗಳಿಗೆಲ್ಲಾ ಚುರುಕು ಮುಟ್ಟಿತು. ಹೌದಲ್ಲಾ! ಆಮ್ಲಜನಕ ಉತ್ಪಾದನೆ ಮಾಡುವುದನ್ನೇ ಬಿಟ್ಟು, ಈ ಮರಗಳೂ ರಜೆ ತೆಗೆದುಕೊಂಡರೆ ಲೋಕದ ಗತಿಯೇನು ಎಂದು ಕಂಗಾಲಾದ ಪ್ರಾಣಿಗಳು ಧಡಕ್ಕನೆದ್ದು, ತಂತಮ್ಮ ಕೆಲಸಗಳಿಗೆ ತಕ್ಷಣವೇ ಮರಳಿದವು.
ಕಿಡ್ಸ್ ಕಾರ್ನರ್
Positive Parenting Tips: ನಮ್ಮ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವುದು ಹೇಗೆ? ಇಲ್ಲಿವೆ ಉಪಯುಕ್ತ ಸಲಹೆ
ತಮ್ಮ ಮಕ್ಕಳ ಭವಿಷ್ಯ (Positive Parenting Tips) ಉಜ್ವಲವಾಗಿರಬೇಕು ಎನ್ನುವುದು ಎಲ್ಲ ಪೋಷಕರ ಆಸೆ. ಆದರೆ ಬಾಲ್ಯದಲ್ಲೇ ಮಕ್ಕಳನ್ನು ನಾವು ಹೇಗೆ ಪೋಷಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಆ ಕುರಿತ ಮಾಹಿತಿ ಇಲ್ಲಿದೆ.
ಪೋಷಕರಾಗುವುದು (Positive Parenting Tips) ಸುಲಭದ ಕೆಲಸವಲ್ಲ. ಅದು ದೊಡ್ಡದೊಂದು ಜವಾಬ್ದಾರಿಯನ್ನು ಜೀವನ ಪೂರ್ತಿಗೆ ವಹಿಸಿಕೊಂಡಂತೆ. ಈ ಸವಾಲಿನ ಕೆಲಸಕ್ಕೆ ನೀವು ಮಾನಸಿಕವಾಗಿಯೂ ಸಿದ್ಧರಾಗಿರಬೇಕಾಗುತ್ತದೆ. ಪ್ರಪಂಚದಲ್ಲೇ ಅತ್ಯಂತ ದೊಡ್ಡ ಕೆಲಸವಾಗಿರುವ ಪೋಷಕರ ಕೆಲಸಕ್ಕೆ ಕೆಲವು ಉತ್ತಮ ಸಲಹೆಗಳು ಇಲ್ಲಿವೆ.
ಸ್ವಾಭಿಮಾನ
ಮಕ್ಕಳು ಪೋಷಕರನ್ನೇ ಅನುಸರಿಸುತ್ತಾರೆ. ನೀವು ಆಡುವ ಪ್ರತಿ ಮಾತನ್ನು ಅವರು ಕಲಿಯಲು ಆರಂಭಿಸುತ್ತಾರೆ. ನಿಮ್ಮ ಮಕ್ಕಳು ಚಿಕ್ಕ ಚಿಕ್ಕ ಕೆಲಸಗಳನ್ನು ಮಾಡಿದಾಗಲೂ ಅದನ್ನು ಶ್ಲಾಘಿಸಿ. ಏಕೆಂದರೆ ಈ ರೀತಿಯ ಪ್ರೋತ್ಸಾಹದಿಂದ ಮಕ್ಕಳು ತಮ್ಮ ಬಗ್ಗೆ ತಾವು ಹೆಮ್ಮೆ ಪಡುವುದಷ್ಟೇ ಅಲ್ಲದೆ ಸ್ವತಂತ್ರರಾಗುತ್ತ ಹೋಗುತ್ತಾರೆ. ಸ್ವಾಭಿಮಾನಿಗಳಾಗಲಾರಂಭಿಸುತ್ತಾರೆ. ಇತರರಿಗೆ ಹೋಲಿಸಿ ಹೊಗಳದೇ ಹೋದಲ್ಲಿ ಅವರು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ.
ನಕಾರಾತ್ಮಕತೆ ಬೇಡ
ಮಕ್ಕಳಿಗೆ ನಕಾರಾತ್ಮಕವಾಗಿ ಬೈಯುವುದಕ್ಕೆ ಹೋಗಬೇಡಿ. ಕೆಲವು ಪೋಷಕರು ಮಕ್ಕಳನ್ನು ಹೊಗಳುವುದಕ್ಕಿಂತ ಅವರನ್ನು ಟೀಕಿಸುವಂತಹ ಕೆಲಸವನ್ನೇ ಮಾಡುತ್ತಾರೆ. ಅದರ ಬದಲು ಅವರಿಗೆ ಪ್ರೀತಿ ತೋರಿಸಿ, ಅಪ್ಪುಗೆ, ಚುಂಬನ ನೀಡಿ. ಹೀಗೆ ಮಾಡುವುದರಿಂದ ಅವರು ಇನ್ನಷ್ಟು ಧನಾತ್ಮಕವಾಗಿ ಚಿಂತಿಸಿ ಅದರಂತೆ ನಡೆದುಕೊಳ್ಳಲಾರಂಭಿಸುತ್ತಾರೆ.
ಅಶಿಸ್ತು ಬೇಡ
ಮಕ್ಕಳನ್ನು ಎಷ್ಟೇ ಪ್ರೀತಿಯಿಂದ ಬೆಳೆಸಿದರೂ ಅವರಿಗೆ ಶಿಸ್ತು ಕಲಿಸುವುದು ಅತಿಮುಖ್ಯ. ಅದಕ್ಕಾಗಿ ನೀವು ಕೆಲವು ನಿಯಮಗಳನ್ನು ಮಾಡಿಕೊಳ್ಳಿ. ಯಾವ ಸಮಯದಲ್ಲಿ ಟಿವಿ ನೋಡಬೇಕು, ಯಾವ ಸಮಯದಲ್ಲಿ ಆಟವಾಡಬೇಕು, ಯಾವಾಗ ಊಟ ಮಾಡಬೇಕು ಎನ್ನುವುದರ ಬಗ್ಗೆ ಶಿಸ್ತಿರಲಿ. ಅವರು ನಿಮ್ಮ ಮಾತನ್ನು ಕೇಳುವಂತೆ ಸ್ಪಷ್ಟವಾಗಿ ಅವರಿಗೆ ನಿರ್ದೇಶನ ನೀಡಿ.
ಮಕ್ಕಳೊಂದಿಗೆ ಸಮಯ
ಈಗ ಕೆಲಸದ ಒತ್ತಡದಲ್ಲಿರುವ ಪೋಷಕರು ಮಕ್ಕಳಿಗಾಗಿ ಸಮಯವನ್ನು ಕೊಡುವುದನ್ನೇ ಮರೆತುಬಿಡುತ್ತಾರೆ. ಹಾಗಾಗಿ ಮಕ್ಕಳು ಟಿವಿ, ವಿಡಿಯೊ ಗೇಮ್, ಫೋನ್ಗಳಲ್ಲಿ ಸಮಯ ವ್ಯರ್ಥ ಮಾಡಲಾರಂಭಿಸಿಬಿಡುತ್ತಾರೆ. ಆ ರೀತಿ ಮಾಡಲು ಬಿಡದೆ ಮಕ್ಕಳೊಂದಿಗೆ ನೀವು ಸಮಯ ಕಳೆಯಿರಿ. ಮನೆ ಕೆಲಸದಲ್ಲಿ ಸಹಾಯ ಮಾಡುವುದಕ್ಕೆ ಅವರಿಗೆ ಹೇಳಿಕೊಡಿ. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿ. ಆ ದಿನದಲ್ಲಿ ಅವರಿಗೆ ಏನಾದರೂ ಸಮಸ್ಯೆ ಆಯಿತೇ ಎಂದು ಕೇಳಿ ಅದನ್ನು ಸರಿಪಡಿಸುವತ್ತ ಗಮನ ಕೊಡಿ. ಹಾಗೆಯೇ ಅವರ ಸಂತೋಷದ ವಿಚಾರವನ್ನೂ ನೀವು ಕೇಳಿ.
ನಿಮ್ಮ ನಡವಳಿಕೆ
ಮಕ್ಕಳಿಗೆ ಪೋಷಕರೇ ದೊಡ್ಡ ಉದಾಹರಣೆ. ನೀವು ಏನು ಮಾಡುತ್ತೀರೋ ಅವರೂ ಅದನ್ನೇ ಅನುಸರಿಸುತ್ತಾರೆ. ಹಾಗಾಗಿ ಯಾವುದೇ ವರ್ತನೆಗೆ ಮೊದಲು ಅದು ನಿಮ್ಮ ಮಗುವಿನ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವುದನ್ನು ಆಲೋಚಿಸಿ. ನಿಮ್ಮ ಮಕ್ಕಳಿಗೆ ಸೂಕ್ತ ಎನ್ನುವಂತಹ ನಡವಳಿಕೆಯನ್ನು ಮಾತ್ರವೇ ಅವರೆದುರು ಮಾಡಿ.
ಸಂವಹನ ಮುಖ್ಯ
ಎಷ್ಟೋ ಮನೆಗಳಲ್ಲಿ ಮಕ್ಕಳು ಮತ್ತು ಪೋಷಕರ ನಡುವೆ ಮಾತುಕತೆಯೇ ನಡೆಯುವುದಿಲ್ಲ. ಪರಸ್ಪರ ವಿಷಯಗಳನ್ನು ಹಂಚಿಕೊಳ್ಳುವುದೇ ಇಲ್ಲ. ಆದರೆ ನೀವು ಹಾಗೆ ಮಾಡಬೇಡಿ. ಮಕ್ಕಳೊಂದಿಗೆ ಅವರ ಜೀವನದ ಬಗ್ಗೆ ಮಾತನಾಡಿ. ಅವರಿಗೆ ಸೂಕ್ತ ಮಾರ್ಗದರ್ಶನ ಕೊಡಿ. ಹಾಗೆಯೇ ನಿಮ್ಮ ಬದುಕಿನ ಕೆಲವು ಅನುಭವಗಳನ್ನೂ ಅವರೊಂದಿಗೆ ಹಂಚಿಕೊಳ್ಳಿ.
ಅತಿಯಾದ ನಿರೀಕ್ಷೆ ಬೇಡ
ತಂದೆ, ತಾಯಿ ಎಂದ ಮೇಲೆ ಮಕ್ಕಳ ಮೇಲೆ ನಿರೀಕ್ಷೆ ಇದ್ದೇ ಇರುತ್ತದೆ. ಆದರೆ ಅವಾಸ್ತವಿಕವಾದ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡಿ. ಅವರನ್ನು ಪ್ರೇರೇಪಿಸುವುದು ತಪ್ಪಲ್ಲ. ಆದರೆ ಒತ್ತಾಯಿಸುವುದು ತಪ್ಪಾಗುತ್ತದೆ. ಶಿಕ್ಷಣದಲ್ಲಿ ಅವರು ಮುಂದಿಲ್ಲದಿದ್ದರೆ ಬೇರೆ ಕ್ಷೇತ್ರದಲ್ಲಿ ಒಂದು ಕೈ ಮೇಲಿರಬಹುದು. ಹಾಗಾಗಿ ಅವರಿಗೆ ಒತ್ತಡ ಹೇರದೆ, ಅವರ ಇಷ್ಟ ಕಷ್ಟಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ.
ಕಾಳಜಿ ಹೆಚ್ಚಾಗಲೂ ಬಾರದು, ಇರದೆಯೂ ಇರಬಾರದು
ಕೆಲವು ಪೋಷಕರು ಮಕ್ಕಳ ಬಗ್ಗೆ ಅತಿ ಹೆಚ್ಚು ಕಾಳಜಿ ಹೊಂದಿರುತ್ತಾರೆ. ಅವರಿಗೆ ಏನಾದರೂ ಆಗಬಹುದು ಎನ್ನುವ ಭಯದಿಂದ ಮಕ್ಕಳನ್ನು ಸಾಮಾಜಿಕವಾಗಿ ವ್ಯವಹರಿಸುವುದಕ್ಕೇ ಬಿಡುವುದಿಲ್ಲ. ಇನ್ನು ಕೆಲವರು ಮಕ್ಕಳು ಏನು ಮಾಡಿದರೂ ಅದರ ಬಗ್ಗೆ ಗಮನವನ್ನೇ ಕೊಡುವುದಿಲ್ಲ. ಈ ಎರಡೂ ವರ್ತನೆ ತಪ್ಪಾಗುತ್ತದೆ. ಮಕ್ಕಳ ಬಗ್ಗೆ ಕಾಳಜಿ ಇರಲಿ ಅದರ ಜತೆಯಲ್ಲಿ ಅವರಿಗೆ ಅಗತ್ಯವಾದ ಸ್ವಾತಂತ್ರ್ಯವನ್ನೂ ಕೊಡಿ.
ಅವರಿಗೂ ಇರಲಿ ಸ್ಥಾನಮಾನ
ನಿಮ್ಮ ಮಕ್ಕಳಿಗೆ ನಿಮ್ಮ ಅವಶ್ಯಕತೆ ಇರುವಂತೆಯೇ ನಿಮಗೂ ಕೂಡ ಅವರ ಅವಶ್ಯಕತೆ ಇರುತ್ತದೆ. ಅವರು ನಿಮ್ಮ ಕುಟುಂಬ ಹಾಗೂ ಬೆಂಬಲ. ನೀವು ಮಕ್ಕಳಿಗೂ ಕೂಡ ಸೂಕ್ತವಾದ ಸ್ಥಾನಮಾನವನ್ನು ಕೊಡಬೇಕಾಗುತ್ತದೆ. ನಿಮಗೆ ಅವರ ಅಗತ್ಯ ಇದೆ ಎನ್ನುವುದು ಅವರ ಅರಿವಿಗೆ ಬಂದರೆ ಅವರು ಇನ್ನಷ್ಟು ವಯಸ್ಕತೆಯನ್ನು ಪಡೆದುಕೊಳ್ಳುತ್ತಾರೆ.
ಬಂಧ ಬಲವಾಗಲಿ
ಹುಟ್ಟುತ್ತ ಮಕ್ಕಳಾದವರು ಬೆಳೆಯುತ್ತ ಸ್ನೇಹಿತರಾಗಬೇಕು. ಮಕ್ಕಳು ಒಂದು ಹಂತಕ್ಕೆ ಬೆಳೆದ ನಂತರ ಅವರನ್ನು ಸ್ನೇಹಿತರಂತೆಯೇ ಕಾಣಬೇಕು. ಹಾಗೆಂದ ಮಾತ್ರಕ್ಕೆ ಅತಿಯಾದ ಸ್ನೇಹ ಮಾಡಿಕೊಂಡು ಬಿಡಬೇಡಿ. ಯಾವಾಗ ಎಲ್ಲಿ ಗೆರೆ ಎಳೆಯಬೇಕು ಎನ್ನುವುದು ನಿಮಗೆ ಗೊತ್ತಿರಬೇಕು. ಮಕ್ಕಳೊಂದಿಗೆ ಬಾಂಧವ್ಯವನ್ನು ಬಲವಾಗಿಸಿಕೊಳ್ಳಿ. ಯಾವ ಸಮಯದಲ್ಲೂ ಅವರು ನಿಮ್ಮನ್ನು ಬಿಟ್ಟುಕೊಡದಂತಹ ಬಂಧವನ್ನು ಬೆಳೆಸಿಕೊಳ್ಳಿ.
ಇದನ್ನೂ ಓದಿ: Vastu Tips For Students: ವಿದ್ಯಾರ್ಥಿಗಳು ಸ್ಟಡಿ ಮಾಡುವಾಗ ಈ ವಾಸ್ತು ಸೂತ್ರ ಪಾಲಿಸಿದರೆ ಸಕ್ಸೆಸ್!
ಕಿಡ್ಸ್ ಕಾರ್ನರ್
ಮಕ್ಕಳ ಕಥೆ: ಮಾವಿನ ಹಣ್ಣು ಹುಡುಕುತ್ತಾ ಬಂದ ಅರಸನಿಗೆ ಕಂಡಿದ್ದೇನು?
ಎರಡು ದೊಡ್ಡ ದೋಣಿಗಳಲ್ಲಿ ಮನುಷ್ಯರು ಹೊಳೆದಾಟಿ ತಮ್ಮ ಕಾಡಿನತ್ತ ಬರುವುದು ಕಪಿಗಳಿಗೆ ಕಾಣಿಸಿತು. ಇದನ್ನು ಕಂಡು ಆತಂಕಗೊಂಡ ವಾನರರು, ತಮ್ಮ ರಾಜನಿಗೆ ವಿಷಯ ತಿಳಿಸಿದರು. ಆಗ ಕಪಿರಾಜ ಏನು ಮಾಡಿದ? ಓದಿ, ಈ ಮಕ್ಕಳ ಕಥೆ.
ಈ ಕಥೆಯನ್ನು ಇಲ್ಲಿ ಆಲಿಸಿ:
ಒಂದಾನೊಂದು ಕಾಡು. ಆ ಕಾಡಲ್ಲೊಂದು ನದಿ ಹರಿಯುತಿತ್ತು. ಆ ನದಿಯಂಚಿಗೆ ದೊಡ್ಡ ಮಾವಿನ ಮರವೊಂದಿತ್ತು. ಹಣ್ಣಿನ ಋತುವಿನಲ್ಲಿ ಅದರಲ್ಲಿ ಕೆಂಪಾದ ರಸಭರಿತ ಮಾವಿನ ಹಣ್ಣುಗಳು ಇರ್ತಾಯಿದ್ದವು. ಆ ಮರದ ಸುತ್ತಲಿನ ಪ್ರದೇಶದಲ್ಲಿ ಮಂಗಗಳ ದೊಡ್ಡ ಹಿಂಡೊಂದು ವಾಸವಾಗಿತ್ತು. ಆ ಹಿಂಡಿಗೆ ಬೃಹತ್ ಗಾತ್ರದ ಗಡವ ಕೋತಿಯೊಂದು ರಾಜನಾಗಿತ್ತು. ತನ್ನ ಪ್ರಜೆಗಳನ್ನು ಅದು ಪ್ರೀತಿಯಿಂದ ನೋಡಿಕೊಳ್ಳುತ್ತಿತ್ತು. ಮರಿಮಂಗ, ಹಿರಿಮಂಗ ಸಹಿತ ಎಲ್ಲರ ಕಾಳಜಿ ಮಾಡುತ್ತಿತ್ತು.
ಹೊಳೆಯಂಚಿಗಿದ್ದ ಮಾವಿನ ಮರದಿಂದ ಒಂದೂ ಹಣ್ಣು ಹೊಳೆಗೆ ಬೀಳದಂತೆ ಎಚ್ಚರಿಕೆ ವಹಿಸಬೇಕೆಂದು ಅದು ತನ್ನ ಪ್ರಜೆಗಳಿಗೆ ಪದೇಪದೆ ಹೇಳುತ್ತಿತ್ತು. ಹೊಳೆ ನೀರಿಗೆ ಹಣ್ಣು ಬಿದ್ದರೇನು ಸಮಸ್ಯೆ ಎಂದರೆ- ಆ ಹಣ್ನು ನೀರಿನಲ್ಲಿ ತೇಲಿಕೊಂಡು ಹೋಗಿ ಯಾವುದಾದರೂ ಊರು ತಲುಪುತ್ತದೆ; ಮನುಷ್ಯರ ಕೈ ಸೇರುತ್ತದೆ; ಆ ಹಣ್ಣನ್ನು ಹುಡುಕಿಕೊಂಡು ಅವರು ಕಾಡಿಗೆ ಬರುತ್ತಾರೆ; ಆಗ ಕಾಡಿನಲ್ಲಿರುವ ಪ್ರಾಣಿಗಳಿಗೆ ಉಳಿಗಾಲವಿಲ್ಲ- ಇದು ಕಪಿರಾಜನ ನಿಲುವಾಗಿತ್ತು. ಹಾಗಾಗಿ ಹಣ್ಣು ನೀರಿಗೆ ಬೀಳದಂತೆ ಎಲ್ಲ ಕಪಿಗಳೂ ಎಚ್ಚರಿಕೆ ವಹಿಸುತ್ತಿದ್ದವು.
ಒಮ್ಮೆ ಜೋರು ಮಳೆ ಬಂತು. ಮಳೆಯ ಜೊತೆಗೆ ಗಾಳಿಯ ಆರ್ಭಟವೂ ಇತ್ತು. ಅದು ಮಾವಿನ ಹಣ್ಣಿನ ಕಾಲವೂ ಆಗಿದ್ದರಿಂದ, ಗಾಳಿಯ ರಭಸಕ್ಕೆ ನಾಲ್ಕಾರು ಹಣ್ಣುಗಳು ಹೊಳೆ ನೀರಿನಲ್ಲಿ ಕೊಚ್ಚಿಹೋದವು. ಹಾಗೆ ಹೋದಂಥ ಹಣ್ಣುಗಳಲ್ಲಿ ಒಂದೆರಡು ಹಣ್ಣುಗಳು ನದಿಯಾಚೆಯ ದಡ ತಲುಪಿದವು. ಆಚೆ ದಡದಲ್ಲಿ ಬಟ್ಟೆ ತೊಳೆಯುತ್ತಿದ್ದ ಅಗಸನೊಬ್ಬನಿಗೆ ಒಂದು ಹಣ್ಣು ಸಿಕ್ಕಿತು. ನೋಡುವುದಕ್ಕೆ ಕೆಂಪಗೆ ಆಕರ್ಷಕವಾಗಿದ್ದ ಈ ಹಣ್ಣನ್ನು ತಾನು ತಿನ್ನದೆ, ಊರಿನ ರಾಜನಿಗೆ ಆತ ಕಾಣಿಕೆಯಾಗಿ ನೀಡಿದ.
ಆ ಹಣ್ಣನ್ನು ಸವಿದ ರಾಜನಿಗೆ ಇಂಥ ಅದ್ಭುತವಾದ ಮಾವು ಇನ್ನಷ್ಟು ಬೇಕು ಎನಿಸಿತು. ಅಗಸನನ್ನು ಆತ ಕರೆಸಿ ಕೇಳಿದಾಗ, ತನಗದು ಹೊಳೆ ದಡದಲ್ಲಿ ಸಿಕ್ಕಿದ್ದಾಗಿ ತಿಳಿಸಿದ.ಹೊಳೆಯಂಚಲ್ಲೇ ಎಲ್ಲೋ ಈ ಹಣ್ಣಿನ ಮರ ಇರಬೇಕೆಂದು ತರ್ಕಿಸಿದ ರಾಜನ ಭಟರು ಈವರೂರಿನ ದಂಡೆಯನ್ನೆಲ್ಲಾ ಹುಡುಕಾಡಿದರು. ಆದರೆ ಅಷ್ಟು ಸಿಹಿಯಾದ ಮಾವಿನ ಹಣ್ಣಿನ ಮರ ಕಾಣಲಿಲ್ಲ. ಹಾಗಾದರೆ ಇನ್ನೊಂದು ದಡದಲ್ಲಿ ಇರಬೇಕೆಂದು ತರ್ಕಿಸಿದ ರಾಜ, ತನ್ನ ಭಟರು ಮತ್ತು ಈಜುಗಾರರ ಪಡೆಯೊಂದಿಗೆ ತಾನೇ ಹೊರಟ.
ಎರಡು ದೊಡ್ಡ ದೋಣಿಗಳಲ್ಲಿ ಮನುಷ್ಯರು ಹೊಳೆದಾಟಿ ತಮ್ಮ ಕಾಡಿನತ್ತ ಬರುವುದು ಕಪಿಗಳಿಗೆ ಕಾಣಿಸಿತು. ಇದನ್ನು ಕಂಡು ಆತಂಕಗೊಂಡ ವಾನರರು, ತಮ್ಮ ರಾಜನಿಗೆ ವಿಷಯ ತಿಳಿಸಿದರು. ಅವರ ಮಾವಿನ ಮರವನ್ನೇ ಹುಡುಕುತ್ತಿರಬಹುದು ಎಂದು ಅಂದಾಜಿಸಿದ ಕಪಿರಾಜ, ಎಲ್ಲಾ ಮಂಗಗಳನ್ನೂ ಹೊಳೆಯಾಚೆಯ ಕಾಡಿಗೆ ಸಾಗಿಸಲು ತೀರ್ಮಾನಿಸಿದ. ಚುರುಕಾಗಿ ಒಂದಿಷ್ಟು ಬಳ್ಳಿಗಳನ್ನು ತಂದು, ಒಂದಕ್ಕೊಂದು ಬಿಗಿದು, ಉದ್ದ ಹಗ್ಗವನ್ನಾಗಿ ಮಾಡಿ, ಹೊಳೆಯಾಚೆಯ ಮರದ ರೆಂಬೆಗೆ ಬಿಗಿದ. ಈ ದಡದಲ್ಲಿದ್ದ ಒಂದೊಂದೇ ಕಪಿಗಳನ್ನು ಆ ಬಳ್ಳಿಗಳ ಹಗ್ಗದ ಮೂಲಕ ಆಚೆ ದಡಕ್ಕೆ ರವಾನಿಸಲಾಯಿತು. ಇದಕ್ಕೆ ಕಪಿರಾಜ ತಾನೇ ಉಸ್ತುವಾರಿ ವಹಿಸಿ ಓಡಾಡುತ್ತಿದ್ದ. ಮರಿಕಪಿ, ಹಿರಿಕಪಿಗಳನ್ನು ಅತ್ಯಂತ ಜಾಗ್ರತೆಯಿಂದ ಸಾಗಿಸಲಾಯಿತು.
ದೋಣಿಯಲ್ಲಿ ಹೊಳೆ ದಾಟುತ್ತಿದ್ದ ಅರಸನ ಮಂಗಗಳ ಹಗ್ಗದ ನಡಿಗೆಯನ್ನು ಗಮನಿಸಿದ. ಇಂಥದ್ದೊಂದು ವಿಚಿತ್ರವನ್ನು ಆತ ಹಿಂದೆಂದೂ ಕಂಡಿರಲಿಲ್ಲ. ಕಪಿಗಳು ಹೀಗೇಕೆ ಮಾಡುತ್ತಿವೆ ಎಂಬುದು ಅಲ್ಲಿದ್ದ ಯಾರಿಗೂ ಅರ್ಥವಾಗದೆ ಈ ವಿದ್ಯಮಾನವನ್ನೇ ಗಮನಿಸತೊಡಗಿದರು. ದೊಡ್ಡ ಗಾತ್ರದ ಗಡವವೊಂದು ಎಲ್ಲರನ್ನೂ ಸಂಭಾಳಿಸುತ್ತಿದೆ ಎನ್ನುವುದು ಅವರ ಕಣ್ಣಿಗೆ ಬಿತ್ತು. ಆ ಹಿಂಡಿನ ನಾಯಕನಿರಬೇಕು ಅದು ಎಂದು ರಾಜ ತೀರ್ಮಾನಿಸಿದ. ದೋಣಿಯಲ್ಲೇ ಕೂತು ಮುಂದೇನಾಗುತ್ತದೆ ಎಂಬುದನ್ನು ಆತ ವೀಕ್ಷಿಸುತ್ತಿದ್ದ.
ಎಲ್ಲಾ ಕಪಿಗಳೂ ಆಚೆ ದಡ ದಾಟಿದ್ದವು, ರಾಜನ ಹೊರತಾಗಿ. ಅಷ್ಟರಲ್ಲಾಗಲೇ ನೂರಾರು ಕಪಿಗಳು ದಾಟಿದ್ದರಿಂದ ಬಳ್ಳಿಯ ಹಗ್ಗ ಬಲ ಕಳೆದುಕೊಂಡಿತ್ತು. ಜೊತೆಗೆ ಕಪಿರಾಜನ ಗಾತ್ರವೂ ದೊಡ್ಡದಾಗಿದ್ದರಿಂದ, ಬಳ್ಳಿಯ ಆಧಾರದಿಂದ ಹೊಳೆ ದಾಟುತ್ತಿರುವಾದಲೇ ಆ ಹಗ್ಗ ಹರಿದುಬಿತ್ತು. ಕಪಿರಾಜ ನೀರಿಗೆ ಬಿದ್ದ. ಇದನ್ನೆಲ್ಲಾ ನೋಡುತ್ತಿದ್ದ ಅರಸ, ಕೋತಿಯನ್ನು ರಕ್ಷಿಸುವಂತೆ ತನ್ನ ಈಜುಗಾರರಿಗೆ ಆದೇಶಿಸಿದ. ಮಂಗರಾಜನ ಜೀವ ಉಳಿಯಿತು.
ಇದನ್ನೂ ಓದಿ: ಮಕ್ಕಳ ಕಥೆ: ಬೆಸ್ತನಿಗೆ ಬಂದ ಭಾಗ್ಯ
“ಕೋತಿಯೇ! ನಿನ್ನ ಸಾಹಸವನ್ನು ಬಹಳ ಹೊತ್ತಿನಿಂದ ಗಮನಿಸುತ್ತಿದ್ದೆ. ಎಲ್ಲರನ್ನೂ ರಕ್ಷಿಸಿ ಕಡೆಯದಾಗಿ ನಿನ್ನ ಸುರಕ್ಷೆಯ ಬಗ್ಗೆ ನೀನು ಗಮನ ನೀಡಿದ್ದು ನನಗೆ ಮೆಚ್ಚುಗೆಯಾಗಿದೆ. ದಣಿದಂಥ ನೀನು ಕೆಲವು ದಿನಗಳು ನಮ್ಮ ಅರಮನೆಯಲ್ಲಿ ವಿಶ್ರಮಿಸಬಹುದು” ಎಂದು ಹೇಳಿದ ಅರಸ. “ಅರಸನೇ, ನಿನ್ನ ಮೆಚ್ಚುಗೆಗೆ ನಾ ಆಭಾರಿ. ನನ್ನ ಪ್ರಜೆಗಳ ಸುರಕ್ಷತೆಯ ಬಗ್ಗೆ ಗಮನ ನೀಡುವುದು ರಾಜನಾಗಿ ನನಗೆ ಕರ್ತವ್ಯ. ಅದನ್ನೇ ಮಾಡಿದ್ದೇನಷ್ಟೆ. ನಿನ್ನ ಅರಮನೆಗೆ ಆಹ್ವಾನಿಸಿದ್ದಕ್ಕೆ ಧನ್ಯವಾದಗಳು. ಆದರೆ ನನ್ನವರ ಬಿಟ್ಟು ನಾ ಬರಲಾರೆ. ಅವರ ಯೋಗಕ್ಷೇಮ ಹೊರತಾಗಿ ನನಗೆ ಬೇರೆ ಧ್ಯಾನವಿಲ್ಲ” ಎಂಬ ಮಾತುಗಳು ಕಪಿರಾಜ ಬಾಯಿಂದ ಬಂದವು.
“ಆದರೆ ನೀವೆಲ್ಲಾ ನಿನ್ನೊಂದು ದಡಕ್ಕೆ ಹೋಗುತ್ತಿರುವುದೇಕೆ?” ಕೇಳಿದ ಅರಸ.
“ಮಾನವರು ಬಂದಲ್ಲೆಲ್ಲಾ ಪ್ರಾಣಿಗಳ ಶಾಂತಿ ಕದಡುವುದು ಸಾಮಾನ್ಯ. ಹಾಗಾಗಿ ನನ್ನ ಹಿಂಡಿನ ಶಾಂತಿ, ನೆಮ್ಮದಿಗೆ ಭಂಗ ಬಾರದಿರಲೆಂದು ಈ ಕೆಲಸ ಮಾಡಬೇಕಾಯಿತು” ಎಂದಿತು ಕೋತಿ.
“ಆಕೃತಿಯಲ್ಲಿ ವಾನರನಾದ ನಿನ್ನಿಂದ ಕಲಿಯುವುದಕ್ಕೆ ಬಹಳಷ್ಟಿದೆ. ಕಾಡಿನ ಜಾಗದಲ್ಲಿದ್ದ ಮಾವಿನ ಹಣ್ಣಿನ ಆಸೆಗೆ ಬಂದವನೇ ಹೊರತು ನಿಮ್ಮ ನೆಮ್ಮದಿ ಹಾಳು ಮಾಡುವ ಉದ್ದೇಶವಿಲ್ಲ. ಆದರೆ ಅದು ನಿಮ್ಮ ಜಾಗ. ಅದರಲ್ಲಿರುವುದನ್ನು ನಿಮ್ಮಿಂದ ಕಸಿಯುವುದು ಸರಿಯಲ್ಲ. ಹಾಗಾಗಿ ನಿಮ್ಮ ಜಾಗ ನಿಮಗೇ ಇರಲಿ” ಎನ್ನುತ್ತಾ ಮರಳಿ ಹೊರಡಲು ಅನುವಾದ ರಾಜ. “ಒಂದು ಕ್ಷಣ ನಿಲ್ಲಿ” ಎನ್ನುತ್ತಾ ಮಾವಿನ ಮರದತ್ತ ಜಿಗಿಯಿತು ಕಪಿರಾಜ.
ಅಲ್ಲಿಂದ ಮರಳಿ ಬರುವಾಗ ಒಂದಿಷ್ಟು ರುಚಿಯಾದ ಮಾವಿನ ಹಣ್ಣುಗಳನ್ನು ತಂದು ರಾಜನಿಗೆ ಒಪ್ಪಿಸಿತು. ರಾಜ ಸಂತೋಷದಿಂದ ಮರಳಿ ಹೋದ. ರಾಜನಿಗೆ ಹಣ್ಣೂ ಸಿಕ್ಕಿತು, ಮಂಗಗಳಿಗೆ ನೆಮ್ಮದಿಯೂ ಉಳಿಯಿತು.
ಇದನ್ನೂ ಓದಿ: ಮಕ್ಕಳ ಕಥೆ: ಹೆಬ್ಬೆಟ್ಟಿನ ಹುಡುಗ
-
ವೈರಲ್ ನ್ಯೂಸ್5 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ಕರ್ನಾಟಕ10 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
ದೇಶ15 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
South Cinema7 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!
-
ಅಂಕಣ18 hours ago
ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
-
ಬಾಲಿವುಡ್11 hours ago
Rashmika Mandanna: ಕತ್ತಿನಲ್ಲಿ ತಾಳಿ, ಕೆಂಪು ಬಾರ್ಡರ್ ಸೀರೆಯುಟ್ಟು ಫಸ್ಟ್ ಲುಕ್ನಲ್ಲೇ ನಾಚಿ ನೀರಾದ ರಶ್ಮಿಕಾ!
-
ಕ್ರಿಕೆಟ್11 hours ago
Varanasi Stadium: ವಾರಾಣಸಿ ಕ್ರಿಕೆಟ್ ಸ್ಟೇಡಿಯಂ ಶಿವಮಯ; ಹೀಗಿರಲಿದೆ ಇದರ ವೈಭವ, ವೈಶಿಷ್ಟ್ಯ
-
ಪ್ರಮುಖ ಸುದ್ದಿ4 hours ago
Sandalwood : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ; ಗೆದ್ದವರ ವಿವರ ಇಲ್ಲಿದೆ