ಆರೋಗ್ಯ
Food Tips: ಇಡ್ಲಿ ಎಂಬ ಆರಾಧ್ಯ ದೈವ: ಇಲ್ಲಿದೆ ಹಬೆಯಾಡುವ ಬಗೆಬಗೆಯ ಇಡ್ಲಿಗಳು!
ದಕ್ಷಿಣ ಭಾರತೀಯರ ಆರಾಧ್ಯ ದೈವ ಇಡ್ಲಿ ಎಂಬ ದಿನನಿತ್ಯದ ಬೆಳಗಿನ ಆಹಾರದ ಮೇಲಿನ ಪ್ರೀತಿ ಒಂದೆರಡು ದಿನದ್ದಲ್ಲ. ಸಾಮಾನ್ಯ ಇಡ್ಲಿಗಿಂತ ಭಿನ್ನವಾದ ಐದು ಬಗೆಯ ಯಾವೆಲ್ಲ ಇಡ್ಲಿಗಳ ಪ್ರಯೋಗ ನಾವು ಮಾಡಬಹುದು ನೋಡೋಣ.
ದಕ್ಷಿಣ ಭಾರತೀಯರ ಆರಾಧ್ಯ ದೈವ ಇಡ್ಲಿ ಎಂಬ ದಿನನಿತ್ಯದ ಬೆಳಗಿನ ಆಹಾರದ ಮೇಲಿನ ಪ್ರೀತಿ ಒಂದೆರಡು ದಿನದ್ದಲ್ಲ. ಇಡ್ಲಿ ಎಂಬ ಸಾರ್ವಕಾಲಿಕ ಆರೋಗ್ಯದ ಗುಟ್ಟನ್ನು ನಾವು ದಕ್ಷಿಣ ಭಾರತೀಯರು ಕಂಡುಕೊಂಡದ್ದಾಗಿದೆ. ಹಾಗಾಗಿ ಇಡ್ಲಿಯನ್ನು ಮಲ್ಲಿಗೆಯಂತೆ ಹಗುರವೂ ಮೆತ್ತಗೆಯೂ ಹೇಗೆ ಮಾಡಬಹುದು ಎಂಬುದರಿಂದ ಹಿಡಿದು ಬಗೆಬಗೆಯ ಇಡ್ಲಿಯ ಸಾಧ್ಯತೆಗಳನ್ನು, ಇಡ್ಲಿಯ ಜೊತೆಗೆ ಸರಿಹೊಂದುವ ಬಗೆಬಗೆಯ ಚಟ್ನಿ ಸಾಂಬಾರಿನ ಸಾಧ್ಯತೆಗಳನ್ನೂ ಕಂಡುಕೊಂಡದ್ದಾಗಿದೆ. ಈ ಅನ್ವೇಷಣೆಯ ಹಾದಿ ಎಂದಿಗೂ ಮುಗಿಯದ್ದೂ ಆಗಿದೆ. ಇಡ್ಲಿಪ್ರಿಯ ಜನರು, ಈ ಹೊಸ ಜಗತ್ತಿನ ಶೋಧವನ್ನು ಎಂದಿಗೂ ಕೈಬಿಡಲಾರರು. ಅದಕ್ಕಾಗಿಯೇ ಇತ್ತೀಚೆಗೆ ಸ್ಟಾಂಡ್ಅಪ್ ಕಾಮಿಡಿಯನ್ ಒಬ್ಬರು ಇಡ್ಲಿಯ ಬಗೆಗೆ ಅದೊಂದು ರುಚಿಯೇ ಇಲ್ಲದ ಬಿಳಿ ಸ್ಪಾಂಜಿನ ತುಂಡು ಎಂದು ನಗೆಯಾಡಿದ್ದಕ್ಕೆ ಸರಿಯಾಗಿ ರುಬ್ಬಿದ್ದರು. ಹೀಗೆ ಇಡ್ಲಿ ಭಕ್ತರು ಇರುವುದರಿಂದಲೇ ಇಡ್ಲಿಯ ಜಗತ್ತು ವಿಸ್ತಾರವಾಗಿದೆ. ಹಾಗಾದರೆ ಬನ್ನಿ, ಸಾಮಾನ್ಯ ಇಡ್ಲಿಗಿಂತ ಭಿನ್ನವಾದ ಐದು ಬಗೆಯ ಯಾವೆಲ್ಲ ಇಡ್ಲಿಗಳ ಪ್ರಯೋಗ ನಾವು ಮಾಡಬಹುದು ನೋಡೋಣ.
1. ತರಕಾರಿ ಇಡ್ಲಿ: ಮಕ್ಕಳು ತರಕಾರಿ ತಿನ್ನುವುದಿಲ್ಲ ಎಂದು ತಲೆಬಿಸಿ ಮಾಡುವ ಅಮ್ಮಂದಿರಿಂದ ಹಿಡಿದು, ತೂಕ ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂದು ತಲೆಬಿಸಿ ಮಾಡಿಕೊಳ್ಳುವ ಮಧ್ಯವಯಸ್ಕ ಮಂದಿಯವರೆಗೆ ಈ ಇಡ್ಲಿ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ. ಕತ್ತರಿಸಿದ ಬೀನ್ಸ್, ಕ್ಯಾರೆಟ್, ಈರುಳ್ಳಿ ಮತ್ತಿತರ ತರಕಾರಿಗಳನ್ನು ಇಡ್ಲಿ ಹಿಟ್ಟಿಗೆ ಸೇರಿಸಿ ಬೇಯಿಸಿದರೆ ಮುಗೀತು, ತರಕಾರಿ ಇಡ್ಲಿ ರೆಡಿ. ತೆಂಗಿನಕಾಯಿ ಚಟ್ನಿಯೋ, ಟೊಮೆಟೋ ಚಟ್ನಿಯೋ, ಪುದಿನ ಅಥವಾ ಕೊತ್ತಂಬರಿ ಸೊಪ್ಪಿನ ಚಟ್ನಿಯೋ ಇದರ ಜೊತೆಗೆ ತಿನಲು ಮಾಡಿದರೆ, ಬೆಳಗಿನ ಉಪಾಹಾರಕ್ಕೆ ಬೇರೇನೂ ಬೇಕಿಲ್ಲ!
2. ಜೋಳದ ಇಡ್ಲಿ: ಅಮೆರಿಕನ್ ಕಾರ್ನ್ ಅಥವಾ ಜೋಳದ ತೆನೆಯನ್ನು ಮಾರುಕಟ್ಟೆಯಿಂದ ತಂದಿದ್ದೀರಾ? ಈ ಸಿಹಿಯಾದ ಜೋಳವನ್ನು ಸೂಪ್ ಬಿಟ್ಟರೆ ಬೇರೇನು ಮಾಡಲಿ ಎಂದು ಯೋಚಿಸಿದ್ದೀರಾ? ಅಥವಾ ಸಂಜೆ ಬೇಯಿಸಿಟ್ಟ ಜೋಳವನ್ನು ಯಾರೂ ತಿನ್ನದೆ ಹಾಗೆಯೇ ಉಳಿದು ಬಿಟ್ಟಿದೆಯಾ? ಹಾಗಾದರೆ ಇಡ್ಲಿ ಮಾಡಿ. ಬೇಯಿಸಿದ ಜೋಳವನ್ನು ಇಡ್ಲಿ ಹಿಟ್ಟಿನ ಜೊತೆಗೆ ಸೇರಿಸಿ ಬೇಯಿಸಿ. ಜೋಳದ ರುಚಿಯನ್ನು ಇಡ್ಲಿಯ ಜೊತೆ ಸವಿದು ನೋಡಿ.
3. ಪಾಲಕ್ ಇಡ್ಲಿ: ಬೆಳ್ಳಗಿನ ಇಡ್ಲಿ ನೋಡಿ, ತಿಂದು ಬೋರಾಗಿದೆಯೇ? ಹಾಗಾದರೆ ಹಸಿರು ಇಡ್ಲಿ ಮಾಡಿ. ಸ್ವಾತಂತ್ರ್ಯ ದಿನವೋ, ಗಣರಾಜ್ಯ ದಿನವೋ ಬಂದರೆ ಹಸಿರು ಬಣ್ಣದ ತಿಂಡಿಗೆ ಈ ಇಡ್ಲಿ ಬೆಸ್ಟ್. ಭರಪೂರ ಕಬ್ಬಿಣಾಂಶವಿರುವ, ಎಲ್ಲ ಬಗೆಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಪಾಲಕ್ ಇಡ್ಲಿ ನೋಡಲು ಚಂದ ಕಂಡಷ್ಟೇ ಆರೋಗ್ಯಕ್ಕೂ ಒಳ್ಳೆಯದು.
ಇದನ್ನೂ ಓದಿ: Foods For Memory: ಮರೆವು ಹೆಚ್ಚಾಯಿತೇ? ಈ ಆಹಾರಗಳನ್ನು ನೆನಪಿಟ್ಟು ತಿನ್ನಿ!
4. ಬೀಟ್ರೂಟ್ ಅಥವಾ ಕ್ಯಾರೆಟ್ ಇಡ್ಲಿ: ಪಿಂಕ್ ಬಣ್ಣದ ಆಕರ್ಷಕ ಇಡ್ಲಿ ಮಾಡಬೇಕೆಂದರೆ ಬೀಟ್ರೂಟ್ ಬಿಟ್ಟರೆ ಯಾರಿದ್ದಾರೆ ಹೇಳಿ. ಬೀಟ್ರೂಟ್ ಹಾಕಿ ಮಾಡಿದ ಇಡ್ಲಿ ತಿನ್ನಲು ರುಚಿ ಎಂಬುದು ಸತ್ಯವಾದರೂ, ರುಚಿಗಿಂತ ಹೆಚ್ಚು ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಅಗತ್ಯವಾಗಿ ಬೇಕಾಗಿರುವಂಥವು. ಹಿಟ್ಟಿನ ಜೊತೆಗೆ ಬೀಟ್ರೂಟನ್ನೂ ಸೇರಿಸಿ ಹಿಟ್ಟು ಮಾಡಿ ಅದನ್ನು ಇಡ್ಲಿ ತಟ್ಟೆಯಲ್ಲಿ ಹಾಕಿ ಬೇಯಿಸಿದರೆ ರೆಡಿಯಾಗಿರುವ ಈ ಇಡ್ಲಿ ಈಗಷ್ಟೇ ರೋಗಗಳಿಂದ ಚೇತರಿಸುವಂಥ ಮಂದಿಗೆ, ಮಕ್ಕಳಿಗೆ ಅತ್ಯಂತ ಒಳ್ಳೆಯದು. ಬೀಟ್ರೂಟಿನ ಜೊತೆಗೆ ಕ್ಯಾರೆಟ್ಟನ್ನೂ ಸೇರಿಸಬಹುದು. ಅಥವಾ ಕ್ಯಾರೆಟ್ಟಿನದೇ ಇಡ್ಲಿ ಮಾಡಬಹುದು.
5. ಪೊಡಿ ಇಡ್ಲಿ: ತಮಿಳುನಾಡು, ಆಂಧ್ರಪ್ರದೇಶದಲ್ಲಿ ಸಾಕಷ್ಟು ಪ್ರಸಿದ್ಧವಾಗಿರುವ ಪೊಡಿ ಇಡ್ಲಿಯನ್ನು ಮನೆಯಲ್ಲೂ ಮಾಡಬಹುದು. ಬೆಳಗ್ಗೆ ಮಾಡಿದ ಇಡ್ಲಿ ಉಳಿದರೆ, ಇಡ್ಲಿಯನ್ನು ತವಾದಲ್ಲಿ ಹಾಕಿ. ಚೆನ್ನಾಗಿ ತುಪ್ಪವನ್ನು ಹಾಕಿ ಅದರ ಎರಡೂ ಬದಿಗಳಿಗೆ ದಾಲ್ನಿಂದ ಮಾಡಿದ ಚಟ್ನಿ ಪುಡಿಯನ್ನು ಉದುರಿಸಿದರೆ ಅತ್ಯಂತ ರುಚಿ. ಆರೋಗ್ಯಕ್ಕೂ ಒಳ್ಳೆಯದು.
ಇದನ್ನೂ ಓದಿ: Food Care For Health: ತಿಂದಿದ್ದು ಸಿಕ್ಕಾಪಟ್ಟೆಯಾಯ್ತೇ? ರಿಪೇರಿ ಹೀಗೆ ಮಾಡಬಹುದು!
ಆರೋಗ್ಯ
New Virus: ಕೊರೊನಾ ಬೆನ್ನಲ್ಲೇ ಪತ್ತೆಯಾಯ್ತು ಮತ್ತೊಂಡು ಡೆಡ್ಲಿ ವೈರಸ್! ಭಾರತದಲ್ಲೇ ಮೊದಲ ಕೇಸ್!
ಕೊರೊನಾ ಸೋಂಕಿನ ಬೆನ್ನಲ್ಲೇ ಮತ್ತೊಂದು ಸೋಂಕಿನ (New Virus) ಸುದ್ದಿ ಎಲ್ಲೆಡೆ ಹರಿದಾಡಿದೆ. ಸಿಲ್ವರ್ ಲೀಫ್ ಡಿಸೀಸ್ ಹೆಸರಿನ ಕಾಯಿಲೆ ಭಾರತದಲ್ಲಿ ಮೊದಲನೆಯದಾಗಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ನವದೆಹಲಿ: ಕೊರೊನಾ ಸೋಂಕು ವಿಶ್ವಾದ್ಯಂತ ಭಾರೀ ತಲ್ಲಣವನ್ನೇ ಉಂಟುಮಾಡಿತ್ತು. ಲಕ್ಷಾಂತರ ಜೀವಗಳು ಈ ಸೋಂಕಿನಿಂದಾಗಿ ಸಾವನ್ನಪ್ಪಿವೆ. ಅದರ ಬೆನ್ನಲ್ಲೇ ಇದೀಗ ಮತ್ತೊಂದು ವೈರಸ್ (New Virus) ಬಂದಿರುವ ಬಗ್ಗೆ ಸುದ್ದಿ ಹರಿದಾಡಲಾರಂಭಿಸಿದೆ. ಅದರಲ್ಲೂ ಭಾರತದಲ್ಲಿಯೇ ಮೊದಲನೆಯದಾಗಿ ಸೋಂಕು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Covid-19 Cases: ಕೊರೊನಾ ಸೋಂಕಿನ ಕೇಸ್ನಲ್ಲಿ 24ಗಂಟೆಯಲ್ಲಿ ಶೇ.40 ಏರಿಕೆ; ಇಂದು 3ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು
ಹೌದು. ಭಾರತದಲ್ಲಿ ಸಸ್ಯಗಳಿಗೆ ಹೆಚ್ಚಾಗಿ ಕಾಡುವ ರೋಗವೆಂದರೆ ಅದು ಸಿಲ್ವರ್ ಲೀಫ್ ರೋಗ. ಈ ರೋಗದ ವೈರಸ್ ಇದೀಗ ಮಾನವನ ದೇಹಕ್ಕೂ ಹೊಗ್ಗಿರುವುದಾಗಿ ವರದಿಯಾಗಿದೆ. ಭಾರತದ ರೈತನೊಬ್ಬನಿಗೆ ಈ ಸೋಂಕು ತಗುಲಿದ್ದು, ಆತನಲ್ಲಿ ಜ್ವರ, ಕೆಮ್ಮುವಿನಂತಹ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ. ಇದುವರೆಗೆ ಈ ಸೋಂಕು ಯಾವುದೇ ದೇಶದಲ್ಲಿಯೂ ಮನುಷ್ಯರಿಗೆ ಹಬ್ಬಿರಲಿಲ್ಲ. ಇದೇ ಮೊದಲನೇ ಬಾರಿಗೆ ಇಂತದ್ದೊಂದು ಪ್ರಕರಣ ವರದಿಯಾಗಿದೆ.
ಅಂದ ಹಾಗೆ ಈ ಸೋಂಕು ಯಾವಾಗ ರೈತನಿಗೆ ತಗುಲಿದ್ದು ಎನ್ನುವ ವಿಚಾರದಲ್ಲಿ ಸ್ಪಷ್ಟ ಮಾಹಿತಿಯಿಲ್ಲ. ಆದರೆ ಈ ಕುರಿತಾದ ವರದಿಯೊಂದು ʼಮೆಡಿಕಲ್ ಮೈಕೋಲಜಿ ಕೇಸ್ ರಿಪೋರ್ಟ್ಸ್ʼ ಜರ್ನಲ್ನಲ್ಲಿ ದಾಖಲಾಗಿದೆ.
ಇದನ್ನೂ ಓದಿ: Coronavirus: ಇಂದು 1800ಕ್ಕೂ ಅಧಿಕ ಕೊರೊನಾ ಕೇಸ್ಗಳು ಪತ್ತೆ; ಏಪ್ರಿಲ್ನಲ್ಲಿ 2 ದಿನ ಆಸ್ಪತ್ರೆಗಳಲ್ಲಿ ಅಣುಕು ಕಾರ್ಯಾಚರಣೆ
ಇತ್ತೀಚೆಗೆ ಅಮೆರಿಕದ ಆರೋಗ್ಯ ಅಧಿಕಾರಿಗಳು ವೈರಸ್ ಒಂದರ ಬಗ್ಗೆ ಎಚ್ಚರಿಕೆ ಕೊಟ್ಟಿದ್ದರು. ಕ್ಯಾಂಡಿಡಾ ಔರಿಸ್ ಫಂಗಸ್ ಹೆಸರಿನ ಸೋಂಕು ಇತ್ತೀಚಿನ ದಿನಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದರು. ಹಾಗೆಯೇ ಈ ಸೋಂಕಿಗೆ ತುತ್ತಾಗುವವರಲ್ಲಿ ಶೇ.60 ಮಂದಿ ಸಾವನ್ನಪ್ಪುವ ಸಾಧ್ಯತೆಯಿದೆ ಎಂದೂ ಅವರು ತಿಳಿಸಿದ್ದರು. ಅದರ ಬೆನ್ನಲ್ಲೇ ಇದೀಗ ಭಾರತದಲ್ಲಿ ಮತ್ತೊಂದು ಸೋಂಕಿನ ವಿಚಾರ ಸುದ್ದಿಯಾಗಿದೆ. ಇದರ ಬಗ್ಗೆ ಭಾರತೀಯ ಆರೋಗ್ಯ ಇಲಾಖೆಯಿಂದ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ.
ಆರೋಗ್ಯ
Shivamogga News: ವಿನ್ಲೈಫ್ ಟ್ರಸ್ಟ್ ವತಿಯಿಂದ ಏ. 2ರಂದು ಆರೋಗ್ಯ ಉತ್ಸವ ಜನ ಜಾಗೃತಿ ಸಮಾವೇಶ
Shivamogga News: ಆರೋಗ್ಯ ಉತ್ಸವ ಜನಜಾಗೃತಿ ಸಮಾವೇಶದಲ್ಲಿ ಜೀವ ರಕ್ಷಕ ತರಬೇತಿ, ಕಿರು ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ವಿನ್ಲೈಫ್ ಟ್ರಸ್ಟಿ ಡಾ.ಪೃಥ್ವಿ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ: ವಿನ್ಲೈಫ್ ಟ್ರಸ್ಟ್ (WinLife Trust) ವತಿಯಿಂದ ಕುವೆಂಪು ರಂಗ ಮಂದಿರದಲ್ಲಿ ಏ.2 ರಂದು ಆರೋಗ್ಯ ಉತ್ಸವ ಜನ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿನ್ಲೈಫ್ ಟ್ರಸ್ಟಿ ಡಾ.ಪೃಥ್ವಿ, “ಈ ಸಮಾವೇಶದಲ್ಲಿ ತುರ್ತು ಜೀವ ರಕ್ಷಕ ತರಬೇತಿ ಮತ್ತು ಕಾರ್ಯಾಗಾರ ನಡೆಯಲಿದ್ದು, ದೈನಂದಿನ ಬದುಕಿನಲ್ಲಿ ಒತ್ತಡ ನಿರ್ವಹಣೆ, ಮಧುಮೇಹ @360 ಈ ವಿಷಯ ಕುರಿತು ಅರಿವು ಮೂಡಿಸಲಾಗುವುದು. ಆರೋಗ್ಯ ಕುರಿತು ಪ್ರಾಯೋಗಿಕ ತರಬೇತಿ, ಕಾರ್ಯಾಗಾರ, ಯೋಗ, ವಸ್ತು ಪ್ರದರ್ಶನ, ಕಿರು ನಾಟಕ ಪ್ರದರ್ಶನ, ಸಮಾಲೋಚನೆ ಹಾಗೂ ಉಪನ್ಯಾಸವನ್ನು ಏರ್ಪಡಿಸಲಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: Ananya Panday: ತನ್ನನ್ನು ಎಸಿಪಿ ಎಂದು ಕರೆಯದಂತೆ ಮಾಧ್ಯಮಗಳಿಗೆ ವಿನಂತಿಸಿದ ಅನನ್ಯಾ ಪಾಂಡೆ
ಸುದ್ದಿಗೋಷ್ಠಿಯಲ್ಲಿ ವಿನ್ಲೈಫ್ ನಿರ್ದೇಶಕರಾದ ಡಾ.ಶಂಕರ್, ಡಾ.ವಿಜಯ ಕುಮಾರ್, ರೆಹಮತ್ ಹಾಗೂ ಬದ್ರಿನಾಥ್ ಉಪಸ್ಥಿತರಿದ್ದರು.
ಆರೋಗ್ಯ
Import duty exemption : ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧಗಳ ದರ ಇಳಿಕೆ
ಅಪರೂಪದ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸುವ ಔಷಧ ಹಾಗೂ ಆಹಾರ ವಸ್ತುವಿನ ಮೇಲೆ ಆಮದು ಸುಂಕ ವಿನಾಯಿತಿಯನ್ನು ಕೇಂದ್ರ ಸರ್ಕಾರ ಏಪ್ರಿಲ್ 1ರಿಂದ ಅನ್ವಯಿಸುವಂತೆ ನೀಡಿದೆ. (Import duty exemption) ಹೀಗಾಗಿ ಅವುಗಳ ದರ ಇಳಿಕೆಯಾಗಲಿದೆ.
ನವ ದೆಹಲಿ: ಕೇಂದ್ರ ಸರ್ಕಾರವು ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧ ಹಾಗೂ ಆಹಾರಗಳ ದರ ಇಳಿಕೆಗೆ ಪೂರಕವಾಗಿ, ಅವುಗಳಿಗೆ ಆಮದು ಸುಂಕದಿಂದ ವಿನಾಯಿತಿ (Import duty exemption) ನೀಡಿದೆ. ಏಪ್ರಿಲ್ 1ರಿಂದ ಈ ಆಮದು ಸುಂಕ ವಿನಾಯಿತಿ ಅನ್ವಯವಾಗಲಿದೆ.
ಅಪರೂಪದ ಕಾಯಿಲೆಗಳ ಕುರಿತ ರಾಷ್ಟ್ರೀಯ ನೀತಿಯ (National policy for rare diseases 2021) ಅಡಿಯಲ್ಲಿ ಎಲ್ಲ ಬಗೆಯ ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧ, ಆಹಾರಗಳಿಗೆ ಆಮದು ಸುಂಕದಿಂದ ವಿನಾಯಿತಿ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಯಾವ ಔಷಧಗಳಿಗೆ ಆಮದು ಸುಂಕ ವಿನಾಯಿತಿ:
ಕೇಂದ್ರ ಸರ್ಕಾರ ಹಲವಾರು ಬಗೆಯ ಕ್ಯಾನ್ಸರ್ಗಳ ಚಿಕಿತ್ಸೆಯಲ್ಲಿ ಬಳಸುವ ಔಷಧವಾಗಿರುವ ಕೀಟ್ರುಡಾ (Keytruda) ಮೇಲಿನ ಆಮದು ಸುಂಕವನ್ನು ವಿನಾಯಿತಿಯ ಪಟ್ಟಿಗೆ ಸೇರಿಸಿದೆ. ಬೇಸಿಕ್ ಕಸ್ಟಮ್ಸ್ ಸುಂಕ ಅಥವಾ ಆಮದು ಸುಂಕವು 10% ಇರುತ್ತದೆ. ಲೈಫ್ ಸೇವಿಂಗ್ ಔಷಧ, ಲಸಿಕೆಗಳಿಗೆ 5% ಇರುತ್ತದೆ. ಕೆಲ ಔಷಧಗಳಿಗೆ ವಿನಾಯಿತಿ ನೀಡುತ್ತದೆ.
ವಿಶೇಷ ವೈದ್ಯಕೀಯ ಉದ್ದೇಶಕ್ಕಾಗಿ ನೀಡುವ ಆಹಾರಗಳು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವವರಿಗೆ ನೀಡಬೇಕಾಗುತ್ತದೆ. ಇದು ಅವರ ಆಹಾರ ಪಥ್ಯದ ಭಾಗವಾಗಿರುತ್ತದೆ. ಇಂಥ ಆಹಾರಗಳಿಗೆ ಆಮದು ಸುಂಕ ವಿನಾಯಿತಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಈ ಸುಂಕ ವಿನಾಯಿತಿಯನ್ನು ಪಡೆಯಲು ಆಮದುದಾರರು ಕೇಂದ್ರ ಅಥವಾ ರಾಜ್ಯದ ಆಹಾರ ಇಲಾಖೆಯ ಸರ್ಟಿಫಿಕೇಟ್ ಪಡೆಯಬೇಕಾಗುತ್ತದೆ. ಜಿಲ್ಲಾ ವೈದ್ಯಾಧಿಕಾರಿಯ ಸರ್ಟಿಫಿಕೇಟ್ ಕೂಡ ಆಗುತ್ತದೆ. ಆರೋಗ್ಯ ಸಚಿವಾಲಯದ ಪ್ರಕಾರ, 10 ಕೆ.ಜಿ ತೂಕವಿರುವ ಮಗುವಿಗೆ ಅಪರೂಪದ ಕಾಯಿಲೆ ಇದ್ದರೆ, ಚಿಕಿತ್ಸೆಗೆ ವಾರ್ಷಿಕ 10 ಲಕ್ಷ ರೂ.ಗಳಿಂದ 1 ಕೋಟಿ ರೂ. ತನಕ ಖರ್ಚಾಗುತ್ತದೆ. ಹೀಗಾಗಿ ಈ ಆಮದು ಸುಂಕ ಇಳಿಕೆಯ ನಿರ್ಧಾರವು ರೋಗಿಗಳಿಗೆ ರಿಲೀಫ್ ನೀಡಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇತ್ತೀಚೆಗೆ ಕೆಲ ಔಷಧಗಳಿಗೆ ದರ ಮಿತಿಯನ್ನು ವಿಧಿಸಲಾಗಿದೆ. ವಿವರ ಇಲ್ಲಿದೆ. ರಾಷ್ಟ್ರೀಯ ಔಷಧ ದರ ಪ್ರಾಧಿಕಾರ (National pharmaceutical pricing authority-NPPA) ಸೋಮವಾರ 74 ಔಷಧಗಳ ದರಗಳಿಗೆ ಮಿತಿ ವಿಧಿಸಿದೆ. ಇದರಲ್ಲಿ ಡಯಾಬಿಟಿಸ್, ರಕ್ತದೊತ್ತಡ (ಬಿಪಿ) ಸೇರಿದಂತೆ ನಾನಾ ಕಾಯಿಲೆಗಳಿಗೆ ಬಳಸುವ ಔಷಧಗಳು ಸೇರಿವೆ. 2023ರ ಫೆಬ್ರವರಿ 21ರಂದು ನಡೆದ ಪ್ರಾಧಿಕಾರದ 109ನೇ ಸಭೆಯ ನಿರ್ಣಯದ ಪ್ರಕಾರ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಯಾವ ಔಷಧಗಳು ಅಗ್ಗ?
ಡಪಾಗ್ಲಿಪ್ಲೊಜಿನ್ ಸಿಟಾಗ್ಲಿಪ್ಟಿನ್ (Dapagliflozin Sitagliption) : 27.75 ರೂ.
ಮೆಟ್ಫಾರ್ಮಿನ್ ಹೈಡ್ರೊಕ್ಲೋರೈಡ್ : 27.75 ರೂ.
ಡಪಾಗ್ಲಿಪ್ಲೊಜಿನ್ ಟೆಲ್ಮಿಸರ್ಟಾನ್ ( Dapagliflozin sitagliptin) : 10.92 ರೂ.
ಬಿಸೊಪ್ರೊಲೋಲ್ ಫ್ಯುಮರಾರಾಟ್ (Bisoprolol fumarate) 10.92 ರೂ.
ಸೋಡಿಯಂ ವಾಲ್ಪ್ರೊರೇಟ್: 3.20 ರೂ.
ಆರೋಗ್ಯ
Health Tips: ಬಾರ್ಲಿ ನೀರು: ಬೇಸಿಗೆಗೆ ಬೇಕೇ ಬೇಕು ಈ ಪುರಾತನ ಪೇಯ!
ಬಾರ್ಲಿಯ ಮಹತ್ವ ತಿಳಿದರೂ, ಬೇಸಗೆಯಲ್ಲಿ ಬಾರ್ಲಿ ದೇಹಕ್ಕೆ ತಂಪು ಎಂಬುದು ಗೊತ್ತಿದ್ದರೂ ಇದನ್ನು ಬಳಸುವುದು ಹೇಗೆ ಎಂಬ ಸಂಶಯ ಹಲವರದ್ದು. ಇದಕ್ಕೆ ಉತ್ತರ ಬಾರ್ಲಿ ನೀರು. ಬಾರ್ಲಿ ನೀರನ್ನು ಕುಡಿಯುವುದರಿಂದ ದೇಹ ತಂಪಾಗುವುದಲ್ಲದೆ, ಹಲವು ಆರೋಗ್ಯಕರ ಲಾಭಗಳನ್ನೂ ನಾವು ಪಡೆಯಬಹುದು.
ಫ್ಯಾಷನ್ ಇರಬಹುದು, ಆಹಾರ ಇರಬಹುದು ಹಳೆಯದೆಲ್ಲ ಮತ್ತೆ ಹೊಸ ಟ್ರೆಂಡ್ ಆಗಿ ಮರಳಿ ಬರುವುದುಂಟು. ಹಲೆಯ ಕಾಲದ ಪುರಾತನ ಪದ್ಧತಿಗಳು, ಆಹಾರ ಕ್ರಮ ಮತ್ತೆ ಒಳ್ಳೆಯದು ಎಂಬ ಹೆಸರಿನಲ್ಲಿ ಹೊಸ ರೂಪದಿಂದ ಆವರಿಸಿಕೊಳ್ಳುವುದುಂಟು. ಕೆಲವೊಮ್ಮೆ, ಹಳೆಯ ಆಹಾರ ಪದ್ಧತಿಗಳ ನಿಜವಾದ ಮಹತ್ವ ಈಗ ಅರಿವಾಗಿ ನಾವು ಹಿಂದಿನ ಆಹಾರಕ್ರಮಗಳ, ಆರೋಗ್ಯಕರ ಜೀವನ ಪದ್ಧತಿಗಳತ್ತ ಮತ್ತೆ ನಿಧಾನವಾಗಿ ಆಕರ್ಷಿತರಾಗುತ್ತಿದ್ದೇವೆ. ಇಂತಹುಗಳ ಪೈಕಿ ಬಾರ್ಲಿ ಎಂಬ ಧಾನ್ಯವೂ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿದೆ.
ಬಾರ್ಲಿಯ ಮಹತ್ವ ತಿಳಿದರೂ, ಬೇಸಗೆಯಲ್ಲಿ ಬಾರ್ಲಿ ದೇಹಕ್ಕೆ ತಂಪು (Summer drink) ಎಂಬುದು ಗೊತ್ತಿದ್ದರೂ ಇದನ್ನು ಬಳಸುವುದು ಹೇಗೆ ಎಂಬ ಸಂಶಯ ಹಲವರದ್ದು. ಇದಕ್ಕೆ ಉತ್ತರ ಬಾರ್ಲಿ ನೀರು (Barley water benefits). ಬಾರ್ಲಿ ನೀರನ್ನು ಕುಡಿಯುವುದರಿಂದ ದೇಹ ತಂಪಾಗುವುದಲ್ಲದೆ, ಹಲವು ಆರೋಗ್ಯಕರ ಲಾಭಗಳನ್ನೂ ನಾವು ಪಡೆಯಬಹುದು.
ಬಾರ್ಲಿ ನೀರು ಮಾಡುವುದು ಹೇಗೆ?: ಎರಡು ಲೋಟ ನೀರಿಗೆ ಒಂದು ಚಮಚ ಬಾರ್ಲಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಬಾರ್ಲಿ ಕಾಳುಗಳು ಅನ್ನ ಬೆಂದಾಗ ಉಬ್ಬಿಕೊಳ್ಳುವ ಹಾಗೆ ಚೆನ್ನಾಗಿ ಉಬ್ಬಿಕೊಂಡ ಮೇಲೆ ಅಂದರೆ ಸಣ್ಣ ಉರಿಯಲ್ಲಿ ಸುಮಾರು ಅರ್ಧಗಂಟೆ ಕಾಲ ಕುದಿಸಿ ನಂತರ ಸೋಸಿಕೊಳ್ಳಿ. ಈ ನೀರಿಗೆ ಚಿಟಿಕೆ ಉಪ್ಪು ಸೇರಿಸಿ ಕುಡಿಯಬಹುದು. ಉಪ್ಪು ಬೇಡವಾಗಿದ್ದರೆ, ನಿಂಬೆಹಣ್ಣು, ಜೇನುತುಪ್ಪವನ್ನೂ ಸೇರಿಸಿ ಕುಡಿಯಬಹುದು. ಸೋಂಪು ಹಾಗೂ ಚಿಟಿಕೆ ದಾಲ್ಚಿನಿ ಪುಡಿ ಸೇರಿಸಿಯೂ ಕುಡಿಯಬಹುದು.
ಹಾಗಾದರೆ, ಇನ್ನು ಉದ್ಭವಿಸುವ ಪ್ರಶ್ನೆ ಎಂದರೆ ದಿನವೂ ಬಾರ್ಲಿ ನೀರು ಕುಡಿಯಬಹುದೇ ಎಂಬುದು. ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಬಾರ್ಲಿ ಒಳ್ಳೆಯದು, ತಂಪು ಎಂದುಕೊಂಡು ನಿತ್ಯವೂ ಬಾರ್ಲಿ ನೀರು ಕುಡಿಯುವುದು ಖಂಡಿತವಾಗಿಯೂ ಒಳ್ಳೆಯದಲ್ಲ. ವಾರಕ್ಕೆ ಹೆಚ್ಚೆಂದರೆ ಎರಡು ಬಾರಿ ಬಾರ್ಲಿ ನೀರು ಕುಡಿಯಬಹುದು. ಮೂತ್ರನಾಳದ ಇನ್ಫೆಕ್ಷನ್ ಸಮಸ್ಯೆ ಆಗಾಗ ಎದುರಿಸುವ ಮಂದಿಗೆ ಬಾರ್ಲಿ ನೀರು ಅತ್ಯುತ್ತಮ. ಹೆಚ್ಚಿನ ಮಾಹಿತಿಗೆ ನಿಮ್ಮ ವೈದ್ಯರನ್ನೊಮ್ಮೆ ಭೇಟಿ ಮಾಡಿ ಅವರ ಸಲಹೆ ಪಡೆಯುವುದು ಒಳ್ಳೆಯದು.
ಬಾರ್ಲಿಯ ಪ್ರಯೋಜನಗಳು:
1. ಬಾರ್ಲಿಯಲ್ಲಿ ನಾರಿನಂಶ ಹೆಚ್ಚಿದೆ. ಹಾಗಾಗಿ ಇದು ಜೀರ್ಣಕ್ರಿಯೆಯ ಸಮಸ್ಯೆ ಇದರುವ ಮಂದಿಗೆ ಜೀರ್ಣವಾಗಲು ಸಹಾಯ ಮಾಡುತ್ತದೆ. ಬಾರ್ಲಿ ನೀರನ್ನು ಕುಡಿಯುವುದರಿಂದ ಈಂಥ ಸಮಸ್ಯೆಗಳನ್ನು ಸರಳವಾಗಿಸಬಹುದು. ತಲೆತಲಾಂತರಗಳಿಂದ ಬಾರ್ಲಿನೀರನ್ನು ಮನೆಗಳಲ್ಲಿ ಹೊಟ್ಟೆ ಸಂಬಂಧೀ ಸಮಸ್ಯೆಗಳ ಪರಿಹಾರಕ್ಕೆ ಮನೆಮದ್ದಾಗಿ ಬಳಸುತ್ತಿದ್ದರು.
ಇದನ್ನೂ ಓದಿ: Health tips: ಋತುಚಕ್ರದ ಹೊಟ್ಟೆಯುಬ್ಬರಕ್ಕೆ ಮಾಡಿ ಕುಡಿಯಿರಿ ಈ ಮ್ಯಾಜಿಕ್ ಡ್ರಿಂಕ್!
2. ನೀವು ತೂಕ ಇಳಿಸಲು ಸನ್ನದ್ಧರಾಗಿದ್ದರೆ, ಬಾರ್ಲಿ ನೀರು ಆರಾಮವಾಗಿ ಕುಡಿಯಬಹುದು. ಬಾರ್ಲಿ ನೀರು ತೂಕ ಇಳಿಸುವ ಮಂದಿಯ ಆಹಾರಕ್ರಮಕ್ಕೆ ಪೂರಕವಾಗಿ ವರ್ತಿಸುತ್ತದೆ. ಇದರಲ್ಲಿ ಕಡಿಮೆ ಕ್ಯಾಲರಿ ಇರುವುದುರಿಂದ ತೂಕ ಹೆಚ್ಚಾಗದೆ, ಪೋಷಕಾಂಶಗಳನ್ನು ದೇಹಕ್ಕೆ ನೀಡುತ್ತದೆ.
3. ಮಧುಮೇಹಿಗಳಿಗೂ ಬಾರ್ಲಿ ನೀರು ಅತ್ಯುತ್ತಮ. ಬಾರ್ಲಿ ನೀರಿನಲ್ಲಿ ದೇಹದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಸಮತೋಲನಗೊಳಿಸುವ ಶಕ್ತಿ ಇರುವುದರಿಂದ ಹಾಗೂ ಕಡಿಮೆ ಗ್ಲಿಸೆಮಿಕ್ ಇಂಡೆಕ್ಸ್ ಇರುವುದರಿಂದ ಮಧುಮೇಹಿಗಳು ಚಿಂತೆಯಿಲ್ಲದೆ ಇದನ್ನು ಸೇವಿಸಿ ಪ್ರಯೋಜನ ಪಡೆಯಬಹುದು.
4. ಬಾರ್ಲಿ ನೀರು ಅತ್ಯುತ್ತಮ ಡಿಟಾಕ್ಸ್ ಡ್ರಿಂಕ್ ಕೂಡಾ. ಇದು ದೇಹದಿಂದ ಕಶ್ಮಲಗಳನ್ನು ಹೊರಕ್ಕೆ ಕಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.
5. ಬಾರ್ಲಿ ನೀರು ಕುಡಿಯುವುದರಿಂದ ಚರ್ಮ ಹಾಗೂ ಕೂದಲಿನ ಆರೋಗ್ಯವೂ ಚೆನ್ನಾಗಿರುತ್ತದೆ.
6. ಬಾರ್ಲಿ ನೀರು ಡೈ ಯುರೇಟಿಕ್ ಆಗಿರುವುದರಿಂದ ಇದು ಮೂತ್ರ ಸಂಬಂಧೀ ಸಮಸ್ಯೆಗಳಿಗೆ ಅತ್ಯುತ್ತಮ ಮನೆಮದ್ದು. ಮೂತ್ರನಾಳದ ಇನ್ಫೆಕ್ಷನ್ ಇರುವ ಮಂದಿ, ಉರಿಮೂತ್ರದ ಸಮಸ್ಯೆ ಇದ್ದವರು ಬಾರ್ಲಿ ನೀರನ್ನು ಕುಡಿಯುವ ಮೂಲಕ ಸಮಸ್ಯೆಯಿಂದ ಮುಕ್ತರಾಗಬಹುದು.
ಇದನ್ನೂ ಓದಿ: Health Tips: ನಿಮಗೆ ಈ ಸಮಸ್ಯೆಗಳಿದ್ದರೆ ಕ್ಯಾಲ್ಶಿಯಂ ಕೊರತೆಯಿದೆ ಎಂದರ್ಥ!
-
ಸುವಚನ10 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ7 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಪ್ರಮುಖ ಸುದ್ದಿ16 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕರ್ನಾಟಕ8 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಕ್ರಿಕೆಟ್24 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ವೈರಲ್ ನ್ಯೂಸ್23 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ20 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್20 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ