ಆರೋಗ್ಯ
Mono diet: ತೂಕ ಇಳಿಸಬೇಕೆ? ಮೂರೂ ಹೊತ್ತು ಒಂದೇ ಆಹಾರ ತಿಂದು ನೋಡಿ!
ಬಹಳಷ್ಟು ಜನರಿಗೆ ಈಗ ತೂಕ ಇಳಿಸುವುದೇ ದೊಡ್ಡ ಕಾರ್ಯ ಆಗಿ ಬಿಟ್ಟಿದೆ. ಹಾಗಾದರೆ ತೂಕ ಇಳಿಸಿಕೊಳ್ಳುವುದು ಹೇಗೆ? ಹಲವು ಉಪಾಯಗಳಲ್ಲಿ ಏಕ ಆಹಾರ ಸೇವನೆಯೂ ಒಂದು. ಇದರಿಂದ ತೂಕ ಇಳಿಯುವುದೇ? ಈ ಲೇಖನ ಓದಿ.
ಇಂಥ ಮೊನೊ ಡಯೆಟ್ (mono diet) ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ. ಹೆಚ್ಚು ಶ್ರಮವಿಲ್ಲದೆ, ಖರ್ಚಿಲ್ಲದೆ, ಗುದ್ದಾಟವಿಲ್ಲದೆ ಯಾರು ಬೇಕಿದ್ದರೂ ಪಾಲಿಸಬಹುದಾದ ಸರಳ ಆಹಾರ ಪದ್ಧತಿಯಿದು. ಆದರೆ ಈ ಕ್ರಮ ಸಾಧುವೇ? ಇಂಥ ಪ್ರಯೋಗಗಳಿಗೆ ಅಡ್ಡ ಪರಿಣಾಮಗಳಿಲ್ಲವೇ?
ಈಗಿನ ಜೀವನಶೈಲಿಯಲ್ಲಿ ಯಾವುದೇ ಪ್ರಾಯದವರಾದರೂ, ಒಂದು ಜಪ ಇದ್ದೇ ಇರುತ್ತದೆ. ದೇವರನಾಮವಲ್ಲ- ತೂಕ ಇಳಿಕೆಯದ್ದು! ಸಣ್ಣ ಪ್ರಾಯದವರಿಗೆ ಸೌಂದರ್ಯಕ್ಕಾಗಿ ತೂಕ ಇಳಿಸುವ (ಅಥವಾ ಏರಲು ಬಿಡದಿರುವ) ಹುಕಿ ಬಂದರೆ, ಯೌವನದಲ್ಲಿದ್ದವರಿಗೆ ಫಿಟ್ನೆಸ್ ಜಪ. ನಲವತ್ತರ ಮೇಲಿನವರಿಗೆ ಏರುತ್ತಿರುವ ತೂಕವನ್ನು, ಹಿಗ್ಗುತ್ತಿರುವ ಹೊಟ್ಟೆಯನ್ನು ಹಿಡಿತದಲ್ಲಿ ಇರಿಸುವ ತವಕ, ಹಿರಿಯ ನಾಗರಿಕರಿಗೆ ಮಂಡಿನೋವು ಇನ್ನಿತರ ಕಾಡುತ್ತಿರುವ ನೋವುಗಳ ದೆಸೆಯಿಂದ ತೂಕ ನಿಯಂತ್ರಿಸುವುದು ಅನಿವಾರ್ಯ. ಅಂತೂ, ತೂಕದ ಜಪ ಇಲ್ಲದ ದಿನ- ದಿನವೇ ಅಲ್ಲ!
ಸಮತೋಲನ ಸಾಧಿಸಲು ಯತ್ನ
ಇದಕ್ಕಾಗಿ ಬೆವರಿಳಿಸುವವರು ಒಂದಿಷ್ಟು ಜನರಾದರೆ, ಆಹಾರದಲ್ಲಿ ಆರೋಗ್ಯ ಅರಸುವವರು ಇನ್ನಷ್ಟು ಮಂದಿ. ಎರಡನ್ನೂ ಸಮತೂಕಕ್ಕೆ ತೂಗಲು ಯತ್ನಿಸುವುದು ಸೂಕ್ತ ಹೌದಾದರೂ, ಅಷ್ಟು ಸಮಯ, ವ್ಯವಧಾನ ಎಲ್ಲರಿಗೂ ಇರಬೇಕಲ್ಲ. ಅಂಥ ಹೊತ್ತಿನಲ್ಲಿ ಅನುಕೂಲ ಎನಿಸುವುದು ಹಲವು ರೀತಿಯ ಚುಟುಕು ಡಯೆಟ್ಗಳು. ಅಂಥದ್ದರಲ್ಲಿ ಒಂದು ಮೊನೊ ಡಯೆಟ್ (mono diet) ಅಥವಾ ಏಕಾಹಾರ ಪದ್ಧತಿ. ಅಂದರೆ, ಯಾವುದಾದರೂ ಒಂದು ಆಹಾರವನ್ನು ಆರಿಸಿಕೊಂಡು, ದಿನದ ಎಲ್ಲಾ ಹೊತ್ತಿನಲ್ಲೂ ಕೇವಲ ಅದೊಂದನ್ನೇ ತಿನ್ನುವುದು. ಉದಾ, ಬಾಳೆಹಣ್ಣನ್ನು ಆರಿಸಿಕೊಂಡರೆ ಹಲವಾರು ದಿನಗಳ ಅಥವಾ ವಾರಗಳ ಕಾಲ ಮೂರೂ ಹೊತ್ತು ಕೇವಲ ಬಾಳೆಹಣ್ಣನ್ನು ಮಾತ್ರವೇ ತಿನ್ನುವುದು.
ಇದನ್ನೂ ಓದಿ: Mono Diet: ಏಕಾಹಾರ ಪದ್ಧತಿಯೆಂಬ ಶಾರ್ಟ್ಕಟ್: ದಿಢೀರ್ ತೂಕ ಇಳಿಕೆ ಒಳ್ಳೆಯದೇ?
ಸರಳ ಪರಿಹಾರ
ಇಂಥ ಮೊನೊ ಡಯೆಟ್ (mono diet) ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ. ಹೆಚ್ಚು ಶ್ರಮವಿಲ್ಲದೆ, ಖರ್ಚಿಲ್ಲದೆ, ಗುದ್ದಾಟವಿಲ್ಲದೆ, ಯಾರು ಬೇಕಿದ್ದರೂ ಪಾಲಿಸಬಹುದಾದ ಸರಳ ಆಹಾರ ಪದ್ಧತಿಯಿದು. ಮಾತ್ರವಲ್ಲ, ತೂಕ ಇಳಿಕೆಯೂ ನಿಶ್ಚಿತ ಎಂಬಂಥ ಮಾತುಗಳು ಕೇಳಿಬರುತ್ತವೆ. ಆದರೆ ಹೀಗೆ ಒಂದೇ ಆಹಾರವನ್ನು ಎಷ್ಟೋ ದಿನಗಳ ಕಾಲ ಸತತವಾಗಿ ತಿನ್ನುವುದರಿಂದ ತೂಕ ಇಳಿಸಲು ಸಾಧ್ಯವೇ? ಈ ಕ್ರಮವೇ ಸಾಧುವೇ? ಇಂಥ ಪ್ರಯೋಗಗಳಿಗೆ ಅಡ್ಡ ಪರಿಣಾಮಗಳಿಲ್ಲವೇ? ಇತ್ಯಾದಿ ಬಹಳಷ್ಟು ಪ್ರಶ್ನೆಗಳು ಮುಂದಿವೆ.
ತೂಕ ಇಳಿಯುವುದೇ?
ಮೊನೊ ಡಯೆಟ್ನಿಂದ ತೂಕ ಇಳಿಯುವುದೇ ಎಂದು ಕೇಳಿದರೆ ಹೌದು, ಇಳಿಯುತ್ತದೆ. ಆದರೆ ಈ ಇಳಿಕೆ ತಾತ್ಕಾಲಿಕ ಮತ್ತು ಆರೋಗ್ಯಕರ ಇಳಿಕೆಯೂ ಅಲ್ಲ. ಅದೂ ಅಲ್ಲದೆ, ಜೀವನಪೂರ್ತಿ ಅದೊಂದನ್ನೇ ತಿಂದುಕೊಂಡಿರುವುದಕ್ಕೆ ಸಾಧ್ಯವಿಲ್ಲವಲ್ಲ. ಹಾಗಾಗಿ ಏಕಾಹಾರ ಪದ್ಧತಿಯಿಂದ ಎಂದಿನ ಆಹಾರಕ್ರಮಕ್ಕೆ ಮರಳಿದ ಕೂಡಲೇ ತೂಕ ಮತ್ತೆ ಹೆಚ್ಚುವುದು ಖಂಡಿತ. ಇದೇ ಕಾರಣದಿಂದ ಹೆಚ್ಚಿನ ಮಂದಿ ತೂಕ ಇಳಿಸಲು ಡಯೆಟ್ ಆರಂಭಿಸುವ ಪೂರ್ವದಲ್ಲಿ ಏಕಾಹಾರ ಪದ್ಧತಿಯತ್ತ ಒಲವು ತೋರುತ್ತಾರೆ. ಒಂದಿಷ್ಟು ತೂಕ ಇಳಿಯುತ್ತಿದ್ದಂತೆ, ತೂಕ ಇಳಿಕೆಯ ಮುಂದಿನ ಹಂತಕ್ಕೆ ಜಾರುತ್ತಾರೆ. ದೀರ್ಘಕಾಲೀನ ಪರಿಣಾಮಗಳನ್ನು ಕಾಣುವುದಕ್ಕೆ ಮೊನೊ ಡಯೆಟ್ಗಳು ಸುರಕ್ಷಿತವೂ ಅಲ್ಲ, ಸುಸ್ಥಿರವೂ ಅಲ್ಲ. ಏನಿದರ ಅಡ್ಡ ಪರಿಣಾಮಗಳು?
ಇದನ್ನೂ ಓದಿ: Mono diet: ಏನಿದು ಏಕಾಹಾರ ಪದ್ಧತಿ? ತೂಕ ಇಳಿಕೆಗೆ ಇದು ಸೂಕ್ತವೇ?
ತಿನ್ನುವ ಬಯಕೆ ಹೆಚ್ಚುತ್ತದೆ
ಇದಂತೂ ಹದಿನಾರಾಣೆ ಸತ್ಯ! ಕೇವಲ ಕಾರ್ಬ್ ಇರುವ ಆಹಾರವನ್ನು ಈ ಡಯೆಟ್ಗಾಗಿ ಆಯ್ದುಕೊಂಡಿರೋ, ಶರೀರ ಪ್ರೊಟೀನ್ ಬೇಡುತ್ತದೆ. ಕೇವಲ ಪ್ರೊಟೀನ್ ತಿನ್ನುತ್ತಿದ್ದರೆ, ಕೊಬ್ಬೂ ಬೇಕಲ್ಲ ದೇಹಕ್ಕೆ. ಅಂದರೆ ದೇಹಕ್ಕೆ ಅಗತ್ಯವಾದ್ದನ್ನು ನಾಲಿಗೆ ಬೇಡಲು ಆರಂಭಿಸುತ್ತದೆ. ಈ ಬಾಯಿರುಚಿಗೆ ಕಡಿವಾಣ ಹಾಕಲು ಕಷ್ಟವೆನಿಸಿದರೆ, ಸಿಕ್ಕಿದ್ದೆಲ್ಲಾ ತಿನ್ನುವಂತಾಗಿ ತೂಕ ಏರಲಾರಂಭಿಸುತ್ತದೆ.
ತೂಕ ಇಳಿಕೆ ತಾತ್ಕಾಲಿಕ
ದೇಹಕ್ಕೆ ಅಗತ್ಯ ಕ್ಯಾಲರಿಗಳು ದೊರೆಯದೆ ಹೋದರೆ ತೂಕ ದಿಢೀರ್ ಇಳಿಯಬಹುದು. ಇದರಿಂದ ದೇಹದ ಕೊಬ್ಬು ಶೇಖರಣೆಯಲ್ಲಿ ಹೆಚ್ಚಿನ ವ್ಯತ್ಯಾಸ ಆಗದಿದ್ದರೂ, ಮಾಂಸಖಂಡಗಳು ಕಡಿಮೆಯಾಗುತ್ತವೆ. ಇದರಿಂದ ದೇಹದ ಚಯಾಪಚಯ ಕ್ರಿಯೆಯೂ ಕುಂಠಿತವಾಗಿ, ತೂಕ ಇಳಿಕೆಯ ಮುಂದಿನ ಹಾದಿ ಕಠಿಣವಾಗುತ್ತದೆ.
ಅತಿಯಾದ ಕಡಿವಾಣ
ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳು, ಸರಿಯಾದ ಪ್ರಮಾಣದಲ್ಲಿ ಬೇಕಾಗುತ್ತದೆ. ಮೊನೊ ಡಯೆಟ್ನ ಅತಿಯಾದ ಅಡಿವಾಣದಿಂದ ಕೇವಲ ಪ್ರೊಟೀನ್ ತಿನ್ನುತ್ತಾ ಕುಳಿತರೆ ಮಲಬದ್ಧತೆಯಂಥ ಸಮಸ್ಯೆ ಕಾಡಬಹುದು. ಬರೀ ನಾರು ತಿನ್ನುತ್ತಿದ್ದರೆ ನಿರ್ಜಲೀಕರಣ, ಸುಸ್ತು ಇತ್ಯಾದಿಗಳು ಗಂಟು ಬೀಳಬಹುದು. ಯಾವುದೇ ಒಂದು ಆಹಾರಕ್ಕೆ ನಮ್ಮ ಊಟ ಸೀಮಿತವಾದರೆ ದೇಹದಲ್ಲಿ ಎಲೆಕ್ಟ್ರೋಲೈಟ್ ಏರುಪೇರು, ಮಾಸಿಕ ಸ್ರಾವದಲ್ಲಿ ವ್ಯತ್ಯಾಸ, ವಿಟಮಿನ್ ಮತ್ತು ಖನಿಜಗಳ ಕೊರತೆ, ಅಪೌಷ್ಟಿಕತೆ- ಹೀಗೆ ಹಲವು ರೀತಿಯ ಸಮಸ್ಯೆಗಳು ಎದುರಾಗುವುದು ನಿಶ್ಚಿತ. ಹಾಗಾಗಿ ತೂಕ ಇಳಿಸುವ ಇರಾದೆ ಇದ್ದವರು ಯಾವ ಡಯೆಟ್ ತಮಗೆ ಸೂಕ್ತ ಎಂಬುದನ್ನು ತಜ್ಞರಿಂದ ಅರಿತು ನಡೆಯುವುದು ಆರೋಗ್ಯಕ್ಕೆ ಹಿತ.
ಆರೋಗ್ಯ
World Lung Day: ಶ್ವಾಸಕೋಶದ ಸಮಸ್ಯೆ ಉಂಟಾಗದಿರಲು ಹೀಗೆ ಮಾಡಿ
ದೇಹದ ಉಳಿದೆಲ್ಲ ಅಂಗಗಳಿಗೆ ಅನ್ವಯಿಸುವ ಬಹಳಷ್ಟು ನಿಯಮಗಳು ನಮ್ಮ ಪುಪ್ಪುಸಗಳಿಗೂ ಅನ್ವಯಿಸುತ್ತವೆ. ಸಮತೋಲಿತವಾದ ಆಹಾರ ಶ್ವಾಸಕೋಶಗಳ (World Lung Day) ದೀರ್ಘ ಬಾಳಿಕೆಗೆ ನಾಂದಿ ಹಾಡಬಲ್ಲದು. ಒತ್ತಡ ನಿವಾರಣೆಯ ಪ್ರಮುಖ ತಂತ್ರವಾದ ಪ್ರಾಣಾಯಾಮವು ಶ್ವಾಸಕೋಶಗಳಿಗೆ ಶಕ್ತಿ ತುಂಬಬಲ್ಲದು. ನಿಯಮಿತ ವ್ಯಾಯಾಮ ಬಹಳಷ್ಟು ಮಾಡಬಲ್ಲದು.
ಇವು ಜಟಿಲ ಪ್ರಶ್ನೆಗಳು- ಉಸಿರಾಡುವ ಗಾಳಿ ಇಷ್ಟೊಂದು ಕಲುಷಿತವಾಗಿರುವಾಗ ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಸೋಂಕುಗಳು ನೇರವಾಗಿ ಶ್ವಾಸಕೋಶಕ್ಕೇ ದಾಳಿ ಇಡುವಾಗ, ಅದನ್ನು ಜೋಪಾನ ಮಾಡುವುದು ಸಾಧ್ಯವೇ? ಪುಪ್ಪುಸಗಳ ಅನಾರೋಗ್ಯ ಎಂಬುದು ಅತ್ಯಂತ ಸಾಮಾನ್ಯ ವಿಷಯ ಎನಿಸಿರುವ ದಿನಗಳಲ್ಲಿ, ಅವುಗಳ ದೀರ್ಘ ಬಾಳಿಕೆಗೆ ಏನು ಮಾಡಬೇಕು? ಸೆಪ್ಟೆಂಬರ್ 25ನೇ ದಿನ ವಿಶ್ವ ಶ್ವಾಸಕೋಶ ದಿನವನ್ನಾಗಿ (World Lung Day) ಆಚರಿಸುತ್ತಿರುವುದು, ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಮಹತ್ವವನ್ನು ಹೆಚ್ಚಿಸಿಕೊಂಡಿದೆ.
ಗಾಳಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯುವಲ್ಲಿ ಸಮುದಾಯದ ಇಚ್ಛಾಶಕ್ತಿ ಬೇಕು. ಏಕಾಂಗಿಯಾಗಿ ಹೋರಾಡಿ ಯಶಸ್ಸು ಪಡೆದವರಿಲ್ಲವೆಂದಲ್ಲ; ಆದರೆ ಅದು ಎಲ್ಲರಿಗೂ ಸಾಧ್ಯವೇ ಎಂಬುದೂ ಯೋಚಿಸುವ ವಿಚಾರ. ಈ ವಿಷಯದ ಹೊರತಾಗಿ, ಇನ್ನೇನನ್ನಾದರೂ ವೈಯಕ್ತಿವಾಗಿ ನಾವು ಮಾಡಬಹುದೇ? ಖಂಡಿತ, ದೇಹದ ಉಳಿದೆಲ್ಲಾ ಅಂಗಗಳಿಗೆ ಅನ್ವಯಿಸುವ ಬಹಳಷ್ಟು ನಿಯಮಗಳು ನಮ್ಮ ಪುಪ್ಪುಸಗಳಿಗೂ ಅನ್ವಯಿಸುತ್ತವೆ. ಸಮತೋಲಿತವಾದ ಆಹಾರ ಶ್ವಾಸಕೋಶಗಳ (World Lung Day) ದೀರ್ಘ ಬಾಳಿಕೆಗೆ ನಾಂದಿ ಹಾಡಬಲ್ಲದು. ಒತ್ತಡ ನಿವಾರಣೆಯ ಪ್ರಮುಖ ತಂತ್ರವಾದ ಪ್ರಾಣಾಯಾಮವು ಶ್ವಾಸಕೋಶಗಳಿಗೆ ಶಕ್ತಿ ತುಂಬಬಲ್ಲದು. ನಿಯಮಿತ ವ್ಯಾಯಾಮ ಬಹಳಷ್ಟು ಮಾಡಬಲ್ಲದು. ಇವುಗಳನ್ನೇ ವಿವರವಾಗಿ ನೋಡುವುದಾದರೆ-
ಬಿಸಿಯಾದ, ತಾಜಾ ಆಹಾರ ಸೇವಿಸಿ
ಅಡುಗೆ ಮಾಡುವುದಕ್ಕೆ ಸಮಯವೇ ಇಲ್ಲ ಎಂಬ ನೆವ ಇಟ್ಟುಕೊಂಡು ಸಿಕ್ಕಿದಲ್ಲಿ, ಸಿಕ್ಕಿದ್ದನ್ನು ತಿಂದುಕೊಂಡು ಕಾಲ ಹಾಕುವುದು ಖಂಡಿತಕ್ಕೂ ಆರೋಗ್ಯದ ಮೇಲೆ ಬರೆ ಹಾಕುತ್ತದೆ. ಅದರಲ್ಲೂ ತಂಗಳು ತಿನ್ನುವುದು, ಫ್ರಿಜ್ನಲ್ಲಿರುವ ಅತಿಯಾದ ತಣ್ಣನೆಯ ಆಹಾರ, ಹಲ್ಲು ಜುಂಮ್ಮೆನ್ನುವಂಥ ಜ್ಯೂಸ್, ಸೋಡಾಗಳು ಶ್ವಾಸಕೋಶಗಳ ಉರಿಯೂತವನ್ನು ಹೆಚ್ಚಿಸುತ್ತವೆ. ಹಾಗಾಗಿ ಇಡೀ ಧಾನ್ಯಗಳನ್ನು ಮತ್ತು ಬಿಸಿಯಾದ ಆಹಾರಗಳನ್ನು ತಾಜಾ ಇರುವಾಗಲೇ ಸೇವಿಸುವುದು ಒಳ್ಳೆಯದು
ಸಾಂಬಾರ್ ಪದಾರ್ಥಗಳು
ಭಾರತೀಯ ಅಡುಗೆ ಮನೆಗಳಲ್ಲಿ ಬಳಕೆಯಾಗುವ ಬಹಳಷ್ಟು ಸಾಂಬಾರ್ ಪದಾರ್ಥಗಳು ರುಚಿಗೆ ಮಾತ್ರವೇ ಅಲ್ಲ, ಪಚನ ಕಾರ್ಯಕ್ಕೂ ಸೈ. ಅರಿಶಿನ, ಜೀರಿಗೆ, ಧನಿಯಾ, ಕಾಳು ಮೆಣಸು, ಶುಂಠಿ, ಚಕ್ಕೆ ಮುಂತಾದವು ಜೀರ್ಣಕ್ರಿಯೆಯನ್ನು ಚುರುಕು ಮಾಡುತ್ತವೆ. ಸರಿಯಾಗಿ ಜೀರ್ಣವಾಗದ ಆಹಾರಗಳು ಕಫಕ್ಕೂ ಕಾರಣವಾಗಬಹುದು. ಕೆಲವೊಮ್ಮೆ ಅಲರ್ಜಿಯಂಥ ಪ್ರತಿಕ್ರಿಯೆಗಳನ್ನೂ ದೇಹ ತೋರಿಸಬಹುದು. ಹಾಗಾಗಿ ಸಾಂಬಾರ ಪದಾರ್ಥಗಳನ್ನು ನಿಯಮಿತ ಮತ್ತು ಮಿತವಾಗಿ ಬಳಸಿ
ಹರ್ಬಲ್ ಚಹಾಗಳು ಅಥವಾ ಕಷಾಯಗಳು
ತುಳಸಿ, ಅತಿಮಧುರ, ಶುಂಠಿ, ನಿಂಬೆಹುಲ್ಲು, ಪುದೀನಾ ಮುಂತಾದ ಮೂಲಿಕೆಗಳ ಚಹಾ ಇಲ್ಲವೇ ಕಷಾಯಗಳು ಶ್ವಾಸಕೋಶಗಳ ಆರೋಗ್ಯಕ್ಕೆ ಹಿತಕಾರಿ. ಇವು ರೋಗ ನಿರೋಧಕ ಶಕ್ತಿಯನ್ನು ಚುರುಕು ಮಾಡುವುದೇ ಅಲ್ಲದೆ, ಗಂಟಲಿಗೆ ಆರಾಮ ನೀಡಿ, ಕಫ ಕರಗಿಸಲೂ ನೆರವು ನೀಡುತ್ತವೆ
ಆರೋಗ್ಯಕರ ಕೊಬ್ಬು
ಕೊಬ್ಬೆಲ್ಲ ಕೆಟ್ಟದ್ದು ಎಂದು ಭಾವಿಸಿದವರಿಗೆ ಇಲ್ಲೊಂದು ಕಿವಿ ಮಾತು- ಸಂಸ್ಕರಿತ ಕೊಬ್ಬುಗಳನ್ನು, ಕರಿದ ಆಹಾರಗಳನ್ನು ದೂರ ಇರಿಸಿದಷ್ಟೂ ಕ್ಷೇಮ. ಆದರೆ ಆರೋಗ್ಯಕರ ಕೊಬ್ಬುಗಳು ದೇಹಕ್ಕೆ ದೊರೆಯಲೇಬೇಕು. ತುಪ್ಪ, ಕೊಬ್ಬರಿ ಎಣ್ಣೆ, ಆಲಿವ್ ಎಣ್ಣೆ, ಅಗಸೆ ಎಣ್ಣೆ ಮುಂತಾದವು ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಇದು ಶ್ವಾಸಕೋಶಗಳ ಸಾಮರ್ಥ್ಯ ಹೆಚ್ಚಳಕ್ಕೂ ಬೇಕಾದವು.
ಜೇನುತುಪ್ಪ
ಯಾವುದೇ ಸಂಸ್ಕರಣೆಗೆ ಒಳಗಾಗದ ನೈಸರ್ಗಿಕ ಜೇನುತುಪ್ಪ ಶ್ವಾಸಕೋಶ ಆರೋಗ್ಯಕ್ಕೆ ಬಹಳ ಒಳ್ಳೆಯದು. ಗಂಟಲಲ್ಲಿ ಕಿರಿಕಿರಿ, ನೆಗಡಿ, ಕೆಮ್ಮಿನಂಥ ಲಕ್ಷಣಗಳಿದ್ದರೆ, ಜೇನುತುಪ್ಪದೊಂದಿಗೆ ತುಳಸಿ ರಸ ಅಥವಾ ಶುಂಠಿ ರಸ ಮುಂತಾದ ಸರಳ ಮನೆಮದ್ದುಗಳು ಉಪಶಮನ ನೀಡುತ್ತವೆ.
ಸಂಸ್ಕರಿತ/ರಿಫೈನ್ಡ್ ಆಹಾರಗಳು ಬೇಡ
ಬಿಳಿ ಅಕ್ಕಿ, ರಿಫೈನ್ಡ್ ಎಣ್ಣೆ, ಬಿಳಿ ಬ್ರೆಡ್, ಬಿಳಿ ಪಾಸ್ತಾ, ಮೈದಾದಿಂದ ತಯಾರಾದ ಆಹಾರಗಳು- ಇಂಥವೆಲ್ಲವೂ ಸಂಸ್ಕರಿತ ಆಹಾರಗಳ ಪಟ್ಟಿಯಲ್ಲಿ ಬರುತ್ತವೆ. ಆಹಾರ ಸಂಸ್ಕಾರಗೊಂಡಷ್ಟೂ ದೇಹದಲ್ಲಿ ಉರಿಯೂತಕ್ಕೆ ಕಾರಣವಾಗುತ್ತವೆ. ಅದರಲ್ಲೂ ಶ್ವಾಸಕೋಶಗಳ ಉರಿಯೂತವೆಂದರೆ ಕೆಮ್ಮು, ಉಬ್ಬಸ, ಅಸ್ತಮಾದಂಥ ಲಕ್ಷಣಗಳು ಕಾಡತೊಡಗುತ್ತವೆ. ಹಾಗಾಗಿ ಉರಿಯೂತಕ್ಕೆ ಕಾರಣವಾಗುವ ಆಹಾರಗಳನ್ನು ದೂರ ಮಾಡಿ.
ನೀರು-ನಿದ್ದೆ ಬೇಕು
ದಿನಕ್ಕೆ ಎಂಟು ತಾಸುಗಳ ನಿದ್ದೆಯು ದೇಹದಲ್ಲಿ ಅಗತ್ಯ ದುರಸ್ತಿ ಕಾರ್ಯಗಳನ್ನು ಮಾಡಿಸಲು ನೆರವಾಗುತ್ತದೆ. ದಿನಕ್ಕೆಂಟು ಗ್ಲಾಸ್ ನೀರು ಕುಡಿಯುವುದು ದೇಹದ ಒಟ್ಟಾರೆ ಸ್ವಾಸ್ಥ್ಯಕ್ಕೆ ಅಗತ್ಯ.
ಇದನ್ನೂ ಓದಿ: Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು!
ಆರೋಗ್ಯ
Tips For Eyes: ಕಣ್ಣು ಅದುರುವುದಕ್ಕೆ ಶಕುನ ಕಾರಣವಲ್ಲ! ಮತ್ತೇನು ಕಾರಣ?
ಕಣ್ಣು ಅದುರುವುದು (Tips For Eyes) ಸಾಮಾನ್ಯ. ಆದರೆ ಇದು ಶಕುನದ ಸೂಚಕ ಎಂದು ಹೇಳುವವರೇ ಹೆಚ್ಚು. ಆದರೆ ಇದಕ್ಕೆ ಅಸಲಿ ಕಾರಣ ಏನು? ಪರಿಹಾರ ಏನು? ಈ ಲೇಖನ ಓದಿ.
ಕಣ್ಣು ಅದುರುತ್ತಿದೆಯೇ? (Tips For Eyes) ಎಡಗಣ್ಣೋ- ಬಲಗಣ್ಣೋ? ಇದೆಂಥಾ ಶಕುನವೆಂದು ಪಂಚಾಂಗ ನೋಡುವುದೋ ಅಥವಾ ಯಾರಲ್ಲೋ ಶಾಸ್ತ್ರ ಕೇಳುವವರಿಗೇನೂ ಬರವಿಲ್ಲ. ಮುಂದಾಗಲಿರುವ ಯಾವುದನ್ನೋ, ಅದುರುವ ಮೂಲಕ ಸೂಚಿಸುವುದಕ್ಕೆ ಕಣ್ಣುಗಳಿಗೆ ಸಾಧ್ಯವಿಲ್ಲದಿದ್ದರೂ, ದೇಹದ ಕುರಿತಾಗಿ ಬೇರೇನನ್ನೋ ಅವು ಸೂಚಿಸುವುದು ಹೌದು. ಅಂದರೆ, ಕಣ್ಣುಗಳ ಮೇಲೆ ಒತ್ತಡ, ಆಯಾಸ ಹೆಚ್ಚಿದಾಗ, ನೇತ್ರಗಳಲ್ಲಿ ಶುಷ್ಕತೆಯಿದ್ದರೆ, ಅತಿಯಾದ ಕೆಫೇನ್ ಅಥವಾ ಆಲ್ಕೊಹಾಲ್ ಸೇವನೆ, ನಿರ್ಜಲೀಕರಣ- ಇಂಥ ಸಂದರ್ಭಗಳಲ್ಲಿ ಕಣ್ಣುಗಳು ಅದುರುವುದಿದೆ. ಇದಲ್ಲದೆಯೂ ಬೇರೆ ಕಾರಣಗಳು ಇರಬಹುದು. ವಿಟಮಿನ್ ಬಿ12 ಕೊರತೆ, ಸ್ಕ್ರೀನ್ಗಳನ್ನು ಅತಿಯಾಗಿ ನೋಡಿದಾಗ ಉಂಟಾಗುವ ಆಯಾಸ, ಒತ್ತಡ, ಧೂಮಪಾನ, ಖಿನ್ನತೆಯಂಥ ಕಾರಣಗಳಿಗೂ ಕಣ್ಣು ಅದುರಬಹುದು.
ಏನು ಮಾಡಬೇಕು?
ಕಣ್ಣುಗಳು ನಮ್ಮ ಮಾತಿಗೆ ಬೆಲೆ ಕೊಡದಂತೆ ತಮ್ಮಷ್ಟಕ್ಕೆ ತಾವೇ ಅದುರುತ್ತಿದ್ದರೆ, ಕಿರಿಕಿರಿಯ ಸಂಗತಿಯದು. ಒಂದೊಮ್ಮೆ ಕಣ್ಣು ಒಣಗಿದಂತಾಗಿ ಅದುರುತ್ತಿದ್ದರೆ, ನೇತ್ರಗಳನ್ನು ಬಿಗಿಯಾಗಿ ಮುಚ್ಚಿಕೊಳ್ಳಿ. ಮತ್ತೆ ದೊಡ್ಡದಾಗಿ ಕಣ್ಣಗಲಿಸಿ. ಇದೊಂದು ರೀತಿಯಲ್ಲಿ ಅತಿಯಾಗಿ ಮಿಟುಕಿಸಿದಂತೆ. ಹೀಗೆ ಮಾಡುವುದರಿಂದ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳುತ್ತವೆ. ಒಣಗಿದ ಅನುಭವ ಕಡಿಮೆಯಾಗುತ್ತದೆ. ಮಾತ್ರವಲ್ಲ, ಕಣ್ಣು ಮತ್ತು ಮುಖದ ಮಾಂಸಖಂಡಗಳಿಗೆ ಸಣ್ಣ ವ್ಯಾಯಾಮವಾದಂತಾಗಿ ಈ ಭಾಗಗಳಲ್ಲಿ ರಕ್ತ ಸಂಚಾರ ವೃದ್ಧಿಯಾಗುತ್ತದೆ.
ಮಸಾಜ್
ಬೆರಳಿನಿಂದ ಕಣ್ಣುಗಳ ಕೆಳ ರೆಪ್ಪೆಯ ಅಡಿಗೆ ಸಣ್ಣದಾಗಿ ಮಸಾಜ್ ಮಾಡಬಹುದು. ಈ ಸಂದರ್ಭದಲ್ಲಿ ಕಣ್ಣುಗಳನ್ನು ಸತತವಾಗಿ ಮಿಟುಕಿಸಲೂ ಬಹುದು. ಆದರೆ ಈ ಕೆಲಸ ಮಾಡುವಾಗ ಕೈಗಳನ್ನು ಮೊದಲು ಶುಚಿ ಮಾಡಿಕೊಳ್ಳಬೇಕಾಗುತ್ತದೆ. ಹಾಗಿಲ್ಲದಿದ್ದರೆ ಸೋಂಕಾಗುವ ಸಾಧ್ಯತೆ ಇಲ್ಲದಿಲ್ಲ. ಹೀಗೆ ಮಸಾಜ್ ಮಾಡುವುದರಿಂದ ಕಣ್ಣುಗಳಿಗೆ ರಕ್ತ ಸಂಚಾರ ವೃದ್ಧಿಸುವುದೇ ಅಲ್ಲದೆ, ಈ ಭಾಗದ ಮಾಂಸಖಂಡಗಳು ಬಲಗೊಳ್ಳುತ್ತವೆ.
ಇದನ್ನೂ ಓದಿ: Eye health foods | ಕಣ್ಣು ಆರೋಗ್ಯವಾಗಿ ಇರಬೇಕಿದ್ದರೆ ಇವನ್ನೆಲ್ಲ ತಿನ್ನುತ್ತಿರಿ!
ವ್ಯಾಯಾಮ
ದೃಷ್ಟಿಯ ಚಲನೆಯನ್ನು ಮೇಲೆ-ಕೆಳಗೆ-ಎಡಕ್ಕೆ-ಬಲಕ್ಕೆ-ವೃತ್ತಾಕಾರದಲ್ಲಿ ಹಾಗೂ ಮುಚ್ಚಿ-ಬಿಟ್ಟು ಮಾಡಿ ಕಣ್ಣುಗಳಿಗೆ ವ್ಯಾಯಾಮ ಮಾಡಿಸಬಹುದು. ಇದರಿಂದ ಸತತವಾಗಿ ಸ್ಕ್ರೀನ್ ನೋಡಿದರಿಂದ ಉಂಟಾದ ಒತ್ತಡ, ಆಯಾಸ ಕಡಿಮೆಯಾಗುತ್ತದೆ.
ಆಲ್ಕೊಹಾಲ್ ಸೇವನೆ ನಿಲ್ಲಿಸಿ
ಕೆಫೇನ್ ಮತ್ತು ಆಲ್ಕೊಹಾಲ್ ಸೇವನೆ ಹೆಚ್ಚಿದರೂ ಈ ಕಿರಿಕಿರಿ ಎದುರಾದೀತು. ಇದೇ ಕಾರಣ ಹೌದಾದರೆ, ಪರಿಹಾರ ನಿಮ್ಮ ಕೈಯಲ್ಲೇ ಇದೆ. ದೇಹಕ್ಕೆ ನೀರು ಕಡಿಮೆಯಾದರೂ ಕಣ್ಣದುರುವುದುಂಟು. ಹಾಗಾಗಿ ಸಾಕಷ್ಟು ನೀರು ಕುಡಿಯಿರಿ.
ಶುದ್ಧ ನೀರಿನಿಂದ ತೊಳೆಯಿರಿ
ಬೆಚ್ಚಗಿನ ಮತ್ತು ತಂಪಾದ ಶುದ್ಧ ನೀರಿನಿಂದ ಕಣ್ಣು ತೊಳೆಯಬಹುದು. ಅಂದರೆ, ಮುಚ್ಚಿದ ಕಣ್ಣುಗಳ ಮೇಲೆ ಒಮ್ಮೆ ಬೆಚ್ಚಗಿನ ನೀರು, ಇನ್ನೊಮ್ಮೆ ತಣ್ಣೀರು ಹಾಕಿ ತೊಳೆಯುವುದು. ತಣ್ಣೀರಿನಿಂದ ಕಣ್ಣಿನ ರಕ್ತನಾಳಗಳು ಸಂಕುಚಿತಗೊಂಡರೆ, ಬೆಚ್ಚಗಿನ ನೀರಿನಿಂದ ಅವು ವಿಕಸನಗೊಳ್ಳುತ್ತವೆ. ಕಣ್ಣುಗಳು ತುಂಬಾ ಅದುರುತ್ತಿದ್ದರೆ, ಇದನ್ನು ದಿನಕ್ಕೆ ನಾಕಾರು ಬಾರಿ ಮಾಡಬಹುದು. ಕಣ್ಣಿನ ರಕ್ತ ಪರಿಚಲನೆ ಉತ್ತಮಗೊಂಡು, ಅದುರುವುದು ಕಡಿಮೆಯಾಗುತ್ತದೆ.
ಈ ಎಲ್ಲಾ ಪ್ರಯತ್ನಗಳ ನಂತರವೂ ಸಮಸ್ಯೆ ಪರಿಹಾರವಾಗಲಿಲ್ಲ ಎಂದರೆ, ದೃಷ್ಟಿಯಲ್ಲಿ ದೋಷ ಕಂಡುಬಂದರೆ, ಕಣ್ಣುಗಳಲ್ಲಿ ಈವರೆಗಿಲ್ಲದ ಯಾವುದಾದರೂ ಸಮಸ್ಯೆ ಪ್ರಾರಂಭವಾದರೆ, ಅದುರುವಾಗ ಕಣ್ಣುಗಳು ಸಂಪೂರ್ಣ ಮುಚ್ಚಿಕೊಳ್ಳುತ್ತಿದ್ದರೆ ವೈದ್ಯರನ್ನು ಕಾಣಬಹುದು.
ಅಂಕಣ
Raja Marga Column : ಮೊದಲು ನಿಮ್ಮ ಹೃದಯವನ್ನು ನೀವು ಪ್ರೀತಿಸಿ, ಬೇರೆಯವರ ಹೃದಯ ಆಮೇಲೆ ನೋಡ್ಕೊಳೋಣ!
Raja Marga Column: ಪ್ರತಿ ದಿನ, ಪ್ರತಿಕ್ಷಣ ಕೆಲಸ ಮಾಡುವ ಹೃದಯಕ್ಕೂ ಒಂದು ದಿನ ಬೇಕು ಅಲ್ವಾ? ಸೆಪ್ಟೆಂಬರ್ 29-ವಿಶ್ವ ಹೃದಯ ದಿನ. ಹೃದಯವನ್ನು ಉಪಯೋಗಿಸಿ, ಹೃದಯವನ್ನು ಅರಿಯಿರಿ ಎನ್ನುವುದು ಈ ವರ್ಷದ ಘೋಷಣೆ. ಜಗತ್ತಿನ ಅತೀ ದೊಡ್ಡ ಕೊಲೆಗಡುಕ ಅಂದರೆ ಅದು ಹೃದಯಾಘಾತ ಅಂತಾರೆ. ಅದನ್ನು ಮೀರುವುದು ಹೇಗೆ ಎಂದರೆ ನಿಮ್ಮ ಹೃದಯವನ್ನು ನೀವೇ ಪ್ರೀತಿಸುವುದರಿಂದ.
ಸೆಪ್ಟೆಂಬರ್ 29 – ವಿಶ್ವ ಹೃದಯ ದಿನ (World Heart day). ಈದಿನ ಜಗತ್ತಿನಾದ್ಯಂತ ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು, ರ್ಯಾಲಿಗಳು, ಸಭೆಗಳು, ಸಮಾರಂಭಗಳು ನಡೆಯುತ್ತವೆ. ಜಗತ್ತಿನ 90 ರಾಷ್ಟ್ರಗಳು ಸೆ. 29ರಂದು ಹೃದಯ ದಿನ ಆಚರಿಸುತ್ತವೆ
ಪ್ರತೀ ವರ್ಷವೂ ಹೃದಯ ದಿನಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು (World Health Organization) ಒಂದು ಘೋಷಣೆಯನ್ನು ಕೊಡುತ್ತಿದ್ದು ಈ ವರ್ಷದ ಘೋಷಣೆಯು – USE HEART, KNOW HEART ಆಗಿದೆ. ಮಾನವನ ಜೀವನದ ಉದ್ದಕ್ಕೂ ಅವಿಶ್ರಾಂತವಾಗಿ ದುಡಿಯುತ್ತ ರಕ್ತವನ್ನು ಪಂಪ್ ಮಾಡುವ ಕೆಲಸವನ್ನು ನಿರಂತರ ಮಾಡುತ್ತಿರುವ ಪುಟ್ಟ ಹೃದಯದ ಬಗ್ಗೆ ನಾವು ತುಂಬಾ ಮಾಹಿತಿ ತಿಳಿದುಕೊಳ್ಳಬೇಕಾದ ಅಗತ್ಯ (Let us Understand our own heart first) ಇದೆ (Raja marga Column).
ಮಿಡಿಯುವ ಪುಟ್ಟ ಹೃದಯ – 21 ಮಾಹಿತಿಗಳು
1. ಪ್ರತೀ ವರ್ಷವೂ ಸೆಪ್ಟೆಂಬರ್ 29ರಂದು ಹೃದಯದ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆಯು ಆಚರಣೆ ಮಾಡುತ್ತಾ ಬಂದಿದೆ. 2000ನೇ ಇಸವಿಯಿಂದ ಇದು ಜಾರಿಯಲ್ಲಿದೆ.
2. ಹೃದಯಾಘಾತವನ್ನು ‘ಜಗತ್ತಿನ ಅತೀ ದೊಡ್ಡ ಕೊಲೆಗಡುಕ’ ಎಂದು ಕರೆಯಲಾಗುತ್ತದೆ. ಏಕೆಂದರೆ ಹೃದಯದ ಆಘಾತ ಮತ್ತು ಹೃದಯದ ಕಾಯಿಲೆಯಿಂದ ಜಗತ್ತಿನಾದ್ಯಂತ ಪ್ರತೀ ವರ್ಷ ಮೃತರಾಗುವ ವ್ಯಕ್ತಿಗಳ ಸಂಖ್ಯೆ 1.7 ಕೋಟಿ ಆಗಿದೆ! ಅಂದರೆ ಮನುಷ್ಯ ಮರಣದ ಒಟ್ಟು ಪ್ರಮಾಣದ 31% ಭಾಗವು ಕೇವಲ ಹೃದಯದ ಸಮಸ್ಯೆಗಳಿಂದ ಉಂಟಾಗುತ್ತಿದೆ.
3. ಮನುಷ್ಯನ ದೇಹದ ಎಲ್ಲ ಭಾಗಗಳೂ ವಿಶ್ರಾಂತಿ ಪಡೆಯುತ್ತವೆ. ಮೆದುಳು ಕೂಡ ವಿಶ್ರಾಂತಿ ಪಡೆಯುತ್ತದೆ. ಆದರೆ ಹೃದಯವು ಒಂದರ್ಧ ಕ್ಷಣ ಕೂಡ ವಿಶ್ರಾಂತಿ ಪಡೆಯುವುದೇ ಇಲ್ಲ. ಮುಷ್ಕರವನ್ನು ಕೂಡ ಮಾಡುವುದಿಲ್ಲ. ಹೃದಯವು ಹಗಲು ರಾತ್ರಿ ಏಕ ರೀತಿಯಲ್ಲಿ ಕೆಲಸ ಮಾಡುತ್ತದೆ.
4. ಇದುವರೆಗೆ ವಿಜ್ಞಾನಿಗಳಿಗೆ ಹೃದಯಾಘಾತಕ್ಕೆ ಸರಿಯಾದ ಕಾರಣವನ್ನು ಸಂಶೋಧನೆ ಮಾಡಲು ಸಾಧ್ಯವೇ ಆಗಲಿಲ್ಲ. ಆನುವಂಶೀಯ ಕಾರಣಗಳು ಇವೆ. ಆದರೆ ಅದಕ್ಕೂ ಪುರಾವೆ ಇಲ್ಲ.
5. ಹೃದಯದ ಭದ್ರತೆಗೆ ನಾಲ್ಕು ರಕ್ಷಣಾ ಕವಚಗಳು ಇವೆ. ಆದರೂ ಮಾನವ ಹೃದಯವು ಯಾವಾಗ ಬೇಕಾದರೂ ಸ್ತಬ್ಧ ಆಗಬಹುದು.
6. ಪುರುಷರ ಹೃದಯಕ್ಕಿಂತ ಸ್ತ್ರೀಯರ ಹೃದಯವು ಸ್ವಲ್ಪ ಕಡಿಮೆ ತೂಕ ಇರುತ್ತದೆ. ಆರೋಗ್ಯಪೂರ್ಣ ಪುರುಷರ ಹೃದಯದ ತೂಕ ಸರಾಸರಿ 280-340 ಗ್ರಾಂ ಇದ್ದರೆ ಸ್ತ್ರೀಯರ ಹೃದಯದ ತೂಕವು 230- 280 ಗ್ರಾಂ.
7. ಪುರುಷರಲ್ಲಿ ಹೋಲಿಸಿದರೆ ಮಹಿಳೆಯರಲ್ಲಿ ಹೃದಯಾಘಾತದ ಪ್ರಮಾಣ ಕೊಂಚ ಕಡಿಮೆ ಇದೆ.
(ಮಹಿಳೆಯರಲ್ಲಿ ಹೃದಯವೇ ಇರುವುದಿಲ್ಲ ಎಂದು ಹಾಸ್ಯ ಸಾಹಿತಿ ಬೀಚಿ ಒಮ್ಮೆ ಹೇಳಿದ್ದು ತಮಾಷೆಗೆ ಆಯ್ತಾ!)
8. ಮನುಷ್ಯನ ಹೃದಯಾಘಾತಕ್ಕೆ ಯಾವುದೇ ವಯಸ್ಸಿನ ಸಮೀಕರಣ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಸಣ್ಣ ಮಕ್ಕಳಲ್ಲಿ ಕೂಡ ಹೃದಯಾಘಾತಗಳು ಹೆಚ್ಚುತ್ತಿವೆ.
9. ವಾಯು ಮಾಲಿನ್ಯದ ಕಾರಣಕ್ಕೆ ಹೆಚ್ಚು ಹೃದಯಾಘಾತಗಳು ನಡೆಯುತ್ತವೆ ಎಂದು ಸಂಶೋಧನೆಗಳು ಹೇಳಿವೆ. ಒಟ್ಟು ಹೃದಯಾಘಾತಗಳಲ್ಲಿ 25% ಆಘಾತಗಳು ವಾಯು ಮಾಲಿನ್ಯದ ಕಾರಣಕ್ಕೆ ಆಗುತ್ತಿವೆ.
10. ಆರೋಗ್ಯವಂತ ಮನುಷ್ಯನ ದೇಹದಲ್ಲಿ ಇರುವ ರಕ್ತದ ಪ್ರಮಾಣ ಐದರಿಂದ ಐದೂವರೆ ಲೀಟರ್. ಆದರೆ ಹೃದಯವು ದಿನಕ್ಕೆ 6000-7500 ಲೀಟರ್ ರಕ್ತವನ್ನು ಪಂಪ್ ಮಾಡುತ್ತದೆ ಅಂದರೆ ನಂಬಲೇ ಬೇಕು! ಒಮ್ಮೆ ಎದೆಯ ಬಡಿತ ಉಂಟಾದಾಗ ರಕ್ತವು ನಮ್ಮ ಇಡೀ ದೇಹವನ್ನು ತಲುಪುತ್ತದೆ.
11. ಆರೋಗ್ಯಪೂರ್ಣ ವ್ಯಕ್ತಿಯ ಹೃದಯವು ನಿಮಿಷಕ್ಕೆ 60-100 ಬಾರಿ ಲಬ್ ಡಬ್ ಎಂದು ಬಡಿಯುತ್ತದೆ. ನವಜಾತ ಶಿಶುಗಳಲ್ಲಿ ಇದು ಕೊಂಚ ಜಾಸ್ತಿ.
12. ಹೃದಯಕ್ಕೆ ಕನೆಕ್ಟ್ ಆದ ರಕ್ತನಾಳಗಳು ಬ್ಲಾಕ್ ಆಗುವ ಕಾರಣ ಹೆಚ್ಚು ಹೃದಯಾಘಾತಗಳು ನಡೆಯುತ್ತವೆ. ಅದಕ್ಕೆ ಮುಖ್ಯ ಕಾರಣ ಕೊಲೆಸ್ಟರಾಲ್ ಮತ್ತು ಹೆಚ್ಚು ರಕ್ತದ ಒತ್ತಡ (ಬಿಪಿ).
13. ಏರೋಬಿಕ್ಸ್, ಸೈಕ್ಲಿಂಗ್, ವೇಗವಾಗಿ ನಡೆಯುವುದು, ಓಡುವುದು, ಸ್ವಿಮ್ಮಿಂಗ್, ಬ್ಯಾಡ್ಮಿಂಟನ್ ಆಡುವುದು ಮತ್ತು ರೋಪ್ ಜಂಪ್ ಇವುಗಳನ್ನು ದಿನವೂ ಮಾಡುವುದರಿಂದ ಹೃದಯದ ಆಯಸ್ಸನ್ನು ಜಾಸ್ತಿ ಮಾಡಬಹುದು.
14. ಸ್ಮೋಕಿಂಗ್ ಮತ್ತು ಡ್ರಿಂಕ್ಸ್ ಮಾಡುವವರಲ್ಲಿ ಹೃದಯಾಘಾತಗಳ ಸಾಧ್ಯತೆ ಹೆಚ್ಚು. ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುವವರು ಮತ್ತು ವಿಪರೀತ ಬೊಜ್ಜು ಬೆಳೆಸಿಕೊಂಡವರು ಬೇಗ ಹೃದಯದ ಕಾಯಿಲೆಗಳಿಗೆ ಒಳಗಾಗುತ್ತಾರೆ.
15. ಹೆಚ್ಚು ಸಕ್ಕರೆ ಕಾಯಿಲೆ ಇರುವ ವ್ಯಕ್ತಿಗಳಲ್ಲಿ ಹೃದಯಾಘಾತ ಸಾಧ್ಯತೆ ಹೆಚ್ಚು.
16. ಆಹಾರದಲ್ಲಿ ಸೋಡಿಯಂ ಪ್ರಮಾಣ ಕಡಿಮೆ ಮಾಡುವುದರಿಂದ ಹೃದಯದ ಜೋಪಾಸನೆ ಮಾಡಬಹುದು. ಉಪ್ಪು ಕಡಿಮೆ ಬಳಕೆ ಮಾಡುವುದು ಅಗತ್ಯ.
17. ಅನಾರೋಗ್ಯಪೂರ್ಣ ಜೀವನ ಕ್ರಮಗಳಿಂದ (Unhealthy life style) ಹೃದಯದ ಸಮಸ್ಯೆಗಳು ಹೆಚ್ಚುತ್ತವೆ. ಜಂಕ್ ಫುಡ್ ಸೇವನೆ ಮತ್ತು ನಿದ್ದೆ ಕಡಿಮೆ ಮಾಡುವುದರಿಂದ ಹೃದಯವು ದುರ್ಬಲ ಆಗುತ್ತದೆ.
18. ನಿರಂತರ ಮೆಡಿಕಲ್ ತಪಾಸಣೆ ಮಾಡುವುದು, ಇಸಿಜಿ (ECG) ಮಾಡುವುದು ಮತ್ತು ಬಾಡಿ ಮಾಸ್ ಇಂಡೆಕ್ಸ್ ಅಳತೆ ಮಾಡುವುದರಿಂದ ಹೃದಯದ ಆರೋಗ್ಯವನ್ನು ಪರೀಕ್ಷೆ ಮಾಡಬಹುದು ಮತ್ತು ಹೃದಯವನ್ನು ಕಾಪಾಡಬಹುದು.
19. ಹೃದಯಾಘಾತಗಳು ಉಂಟಾಗುವ ಸಾಕಷ್ಟು ಮೊದಲು ಅದರ ಚಿಹ್ನೆಗಳು (Symptoms) ನಮ್ಮ ಗಮನಕ್ಕೆ ಬರುತ್ತವೆ. ಆಗ ತಕ್ಷಣ ಎಚ್ಚರವಾಗಿ ವೈದ್ಯಕೀಯ ನೆರವನ್ನು ಪಡೆದರೆ ಹೃದಯಾಘಾತ ತಡೆಗಟ್ಟಬಹುದು. ಆ ಅವಧಿಯನ್ನು ಗೋಲ್ಡನ್ ಪೀರಿಯಡ್ ಎಂದು ಕರೆಯುತ್ತಾರೆ.
20. ಹೃದಯಕ್ಕೆ ಕನೆಕ್ಟ್ ಆದ ರಕ್ತನಾಳಗಳು ಬ್ಲಾಕ್ ಆಗದ ಹಾಗೆ ನೋಡಿಕೊಳ್ಳುವುದು ತುಂಬಾ ಮುಖ್ಯ. ಅದಕ್ಕೆ ನಿರಂತರ ವೈದ್ಯಕೀಯ ತಪಾಸಣೆ ಅಗತ್ಯ.
21. 1964ರಲ್ಲಿ ಜೇಮ್ಸ್ ಹಾರ್ಡಿ ಎಂಬ ವಿಜ್ಞಾನಿಯು ಮನುಷ್ಯನ ಹೃದಯವನ್ನು ಬದಲಾಯಿಸಿ ಅದರ ಸ್ಥಳದಲ್ಲಿ ಚಿಂಪಾಂಜಿ ಹೃದಯವನ್ನು ಕಸಿ ಮಾಡಿದ್ದ. ಆದರೆ ಆ ರೋಗಿ ಎರಡು ಘಂಟೆಗಳ ಒಳಗೆ ಮೃತ ಪಟ್ಟು ಈ ಪ್ರಯೋಗ ವಿಫಲ ಆಯಿತು.
22. 1967ರಲ್ಲಿ ದಕ್ಷಿಣ ಆಫ್ರಿಕಾದ ಒಂದು ಆಸ್ಪತ್ರೆಯಲ್ಲಿ ಒಬ್ಬ ಸರ್ಜನ್ ಕ್ರಿಶ್ಚಿಯನ್ ಬನಾರ್ಡ್ ರೋಗಿಯ ಅನಾರೋಗ್ಯ ಪೂರ್ಣ ಹೃದಯದ ಜಾಗದಲ್ಲಿ ಇನ್ನೊಂದು ಆರೋಗ್ಯಪೂರ್ಣ ಹೃದಯವನ್ನು ಕಸಿ ಮಾಡಿ ಯಶಸ್ವೀ ಅದನು. ಆ ಶಸ್ತ್ರಚಿಕಿತ್ಸೆಯನ್ನು ಇಂದು ಜಗತ್ತಿನಾದ್ಯಂತ ಸಾವಿರಾರು ಮಂದಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Raja Marga Column : ಅಪ್ಪಾ ಪಾ!! ಅಮಿತಾಭ್ ಬಚ್ಚನ್ ಬದ್ಧತೆ, ಪ್ರಯೋಗಶೀಲತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ?
ಭರತ ವಾಕ್ಯ
ಹೃದಯವು ಭಾವನೆಗಳ ಉಗಮ ಸ್ಥಾನ ಎಂದು ನಮ್ಮ ಹಿರಿಯರು ನಂಬಿದ್ದರು. ಪ್ರೀತಿಗಾಗಿ ಮಿಡಿಯುವುದು ಅದೇ ಹೃದಯ ಎಂದರು. ಇವೆಲ್ಲವೂ ವೈಜ್ಞಾನಿಕವಾಗಿ ಇನ್ನೂ ಸಾಬೀತು ಆಗಿಲ್ಲ. ಹೃದಯವು ಅತ್ಯಂತ ಸಕ್ಷಮವಾಗಿ ಮತ್ತು ವೇಗವಾಗಿ ಕೆಲಸ ಮಾಡುವ ಮಾಂಸ, ರಕ್ತ ಮತ್ತು ಸ್ನಾಯುಗಳ ಒಂದು ಪ್ರಮುಖ ದೇಹದ ಭಾಗ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ ಆ ಹೃದಯವನ್ನು ಪ್ರೀತಿ ಮಾಡಿ ಉಳಿಸಿಕೊಳ್ಳುವ ಹೊಣೆ ನಮ್ಮೆಲ್ಲರದು. ಲವ್ ಯುವರ್ ಹಾರ್ಟ್ ಅಂಡ್ ಲಿವ್ ಲಾಂಗ್.
ಆರೋಗ್ಯ
Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು!
ಶೀತ ನೆಗಡಿ ಆದಾಗ ಕೆಲವು ಹಣ್ಣಗಳ ಸೇವನೆ ಸೂಕ್ತವಲ್ಲ. ಬನ್ನಿ, ಯಾವೆಲ್ಲ ಹಣ್ಣುಗಳನ್ನು ಶೀತ, ನೆಗಡಿಯಾಗಿದ್ದಾಗ ತಿನ್ನುವುದು ಅಷ್ಟಾಗಿ ಒಳ್ಳೆಯದಲ್ಲ (health tips) ಎಂಬುದನ್ನು ನೋಡೋಣ.
ಶೀತ, ನೆಗಡಿ (Cold, runny nose) ಆದಾಗ, ಮೂಗು ಹಿಡಿದುಕೊಂಡು ಸೀನುತ್ತಾ, ಅಯ್ಯೋ, ನನ್ನ ಶತ್ರುವಿಗೂ ಶೀತ ನೆಗಡಿ ಆಗೋದು ಮಾತ್ರ ಬೇಡಪ್ಪಾ ಅನ್ನುವಷ್ಟು ಕಿರಿಕಿರಿ ಆಗೋದು ಸಹಜ. ʻಔಷಧಿ ತೆಗೆದುಕೊಳ್ಳದಿದ್ರೆ ಒಂದು ವಾರದಲ್ಲಿ ಶೀತ ಕಡಿಮೆಯಾಗುತ್ತೆ, ಔಷಧಿ ತೆಗೊಂಡ್ರೆ ಒಂದೇ ವಾರದಲ್ಲಿ ಶೀತ ಮಾಯʼ ಎಂಬ ಜೋಕುಗಳೂ ಜನಜನಿತ. ʻಶೀತ ಬಂತೆಂದು ಮೂಗೇ ಕೊಯ್ದುಕೊಂಡರೆ ಆದೀತೇʼ ಎಂಬ ನುಡಿಗಟ್ಟೂ ಚಾಲ್ತಿಯಲ್ಲಿರುವುದು ನಮಗೆ ಗೊತ್ತು. ಇಂತಿಪ್ಪ ಶೀತದ ಮಹಾತ್ಮೆಯನ್ನು ಎಷ್ಟು ವಿವರಿಸಿದರೂ ಸಾಲದು. ಯಾಕೆಂದರೆ, ಎಷ್ಟೇ ಔಷಧಿ, ಮನೆಮದ್ದು ಮಾಡಿದರೂ ಶೀತ ಮಾತ್ರ ಅಷ್ಟು ಸುಲಭದಲ್ಲಿ ಹೋಗದು. ಆದರೆ, ಬಹಳಷ್ಟು ಸಾರಿ ನಮಗೆ, ಶೀತ, ನೆಗಡಿ ಆಗಿದ್ದಾಗ ಎಂಥ ಆಹಾರ ತಿಂದರೆ ಒಳ್ಳೆಯದು, ಯಾವುದು ಒಳ್ಳೆಯದಲ್ಲ ಎಂಬ ಬಗ್ಗೆ ಸಾಕಷ್ಟು ಗೊಂದಲಗಳಾಗುತ್ತವೆ. ಯಾಕೆಂದರೆ, ಒಬ್ಬೊಬ್ಬರು ಒಂದೊಂದು ವಿಧವಾಗಿ ತಮ್ಮ ಜ್ಞಾನವನ್ನು ಮತ್ತೊಬ್ಬರ ಜೊತೆಗೆ ಹಂಚಿಕೊಳ್ಳುವವರೇ, ಸಲಹೆ ಕೊಡುವವರೇ. ಹಾಗಾದರೆ, ಬನ್ನಿ, ಯಾವೆಲ್ಲ ಹಣ್ಣುಗಳನ್ನು ಶೀತ, ನೆಗಡಿಯಾಗಿದ್ದಾಗ ತಿನ್ನುವುದು ಅಷ್ಟಾಗಿ ಒಳ್ಳೆಯದಲ್ಲ (health tips) ಎಂಬುದನ್ನು ನೋಡೋಣ.
1. ಸಿಟ್ರಸ್ ಹಣ್ಣುಗಳು: ಸಿಟ್ರಸ್ ಹಣ್ಣುಗಳಾದ ಮುಸಂಬಿ, ನಿಂಬೆ, ಕಿತ್ತಳೆ ಮತ್ತಿತರ ಹಣ್ಣುಗಳು ವಿಟಮಿನ್ ಸಿಯಿಂದ ಶ್ರೀಮಂತವಾದ ಹಣ್ಣುಗಳು. ವಿಟಮಿನ್ ಸಿ ಶೀತ, ನೆಗಡಿಗೆ ಒಳ್ಳೆಯದು ನಿಜ. ಆದರೆ, ಮುಖ್ಯವಾಗಿದು ಶೀತ ನೆಗಡಿಗೂ ಮುನ್ನ ಇಂತಹ ಹಣ್ಣುಗಳನ್ನು ತಿನ್ನುತ್ತಿದ್ದರೆ, ನಮ್ಮ ನಿತ್ಯಾಹಾರ ಪದ್ಧತಿಯಲ್ಲಿದ್ದರೆ, ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿ, ಶೀತ ನೆಗಡಿ ನಮ್ಮ ಬಳಿ ಅಷ್ಟು ಸುಲಭವಾಗಿ ಸುಳಿಯದು. ಆದರೆ, ಶೀತ, ನೆಗಡಿ ಅತಿಯಾದಾಗ ಇಂತಹ ಹಣ್ಣುಗಳನ್ನು ತಿಂದರೆ ನೆಗಡಿ ಅತಿಯಾಗುವ ಸಂಭವವೂ ಇದೆ. ಕಾರಣವೇನೆಂದರೆ, ಇದರಲ್ಲಿರುವ ಆಸಿಡ್ ಅಂಶ ಶೀತವನ್ನು ಇನ್ನಷ್ಟು ತೀವ್ರಗೊಳಿಸುತ್ತದೆ. ಅದಕ್ಕಾಗಿ, ಶೀತ ಅಥವಾ ನೆಗಡಿಯಾದ ಮೇಲೆ ಈ ಹಣ್ಣುಗಳನ್ನು ತಿನ್ನುವುದರಿಂದ ದೂರ ಇರುವುದು ಒಳ್ಳೆಯದು.
2. ಅನನಾಸು: ಕೆಲವು ಮಂದಿಗೆ ಅನನಾಸಿನಲ್ಲಿರುವ ಬ್ರೊಮೆಲನಿನ್ ಎಂಬ ಕಿಣ್ವವು ಅಲರ್ಜಿಯನ್ನು ತರುವ ಸಂಭವ ಇರುತ್ತದೆ. ಶೀತದ ಜೊತೆಗೆ ಗಂಟಲು ನೋವೂ ಇದ್ದರೆ, ಅನನಾಸಿನಿಂದ ಅದು ಹೆಚ್ಚಾಗು ಸಂಭವವೂ ಇರುತ್ತದೆ.
3. ಟೊಮೇಟೋ: ಟೊಮೇಟೋ ಹಣ್ಣಿನಂತೆ ಬಳಸುವುದಿಲ್ಲವಾದರೂ ನಿತ್ಯವೂ ತರಕಾರಿಯಂತೆ ಊಟದಲ್ಲಿ ಬಳಸುವುದೇ ಹೆಚ್ಚು. ಆದರೆ, ಶೀತ, ನೆಗಡಿಯಾದಾಗ, ಈ ಟೊಮೇಟೋ ಹಣ್ಣಿನಿಂದ ದೂರವಿರುವುದು ಒಳ್ಳೆಯದು. ಟೊಮೇಟೋ ಸಾಸ್, ಕೆಚಪ್, ರಸಂ ಇತ್ಯಾದಿಗಳನ್ನು ತಿನ್ನುವುದರಿಂದ ಗಂಟಲು ಇನ್ನಷ್ಟು ಕೆಡುವ ಸಂಭವವಿರುತ್ತದೆ.
4. ಕಿವಿ: ಕಿವಿ ಹಣ್ಣಿನಲ್ಲಿ ಅತ್ಯಧಿಕ ಸಿ ವಿಟಮಿನ್ ಇದ್ದರೂ ಇದರಿಂದ ಶೀತ, ನೆಗಡಿಯ ಸಂದರ್ಭ ಮಾತ್ರ ಇದರಿಂದ ಗಂಟಲು ಕೆರೆತ ಉಂಟಾಗುವ ಸಂಭವ ಹೆಚ್ಚು. ಹೀಗಾಗಿ ನೆಗಡಿಯ ಸಂದರ್ಭ ಕಿವಿ ಹಣ್ಣನ್ನು ತಿನ್ನುವ ಮೊದಲು ಯೋಚಿಸಿ.
5. ಬೆರ್ರಿ: ಬೆರ್ರಿ ಹಣ್ಣುಗಳಾದ, ಸ್ಟ್ರಾಬೆರಿ, ರಸ್ಬೆರ್ರಿ, ಬ್ಲೂಬೆರ್ರಿ ಹಣ್ಣುಗಳಲ್ಲೂ ಅಸಿಡಿಕ್ ಅಂಶಗಳಿರುವುದರಿಂದ ಗಂಟಲಿಗೆ ಕೊಂಚ ಕಿರಿಕಿರಿ ಮಾಡುವ ಸಂಭವ ಹೆಚ್ಚು. ಹೀಗಾಗಿ ಇಂತಹ ಹುಳಿ ಹಣ್ಣುಗಳನ್ನು ಶೀತ, ನೆಗಡಿಯ ಸಂದರ್ಭ ಅತಿಯಾಗಿ ತಿನ್ನುವುದರಿಂದ ದೂರ ಉಳಿಯುವುದೇ ಒಳ್ಳೆಯದು.
ಇದನ್ನೂ ಓದಿ: Dates Health Benefits: ಸಮೃದ್ಧ ಹಣ್ಣು ಖರ್ಜೂರವನ್ನು ನಾವು ಏಕೆ ಬೆಳಗ್ಗೆ ತಿನ್ನಬೇಕು ಗೊತ್ತೇ?
6. ಪಪ್ಪಾಯಿ: ಪಪ್ಪಾಯಿಯಲ್ಲಿ ಏನಿದೆ ಎನ್ನಬಹುದು. ಆದರೆ, ಪಪ್ಪಾಯಿಯಲ್ಲಿರುವ ಪಪೈನ್ ಎಂಬ ಕಿಣ್ವವು ಗಂಟಲಿಗೆ ಕಿರಿಕಿರಿ ಮಾಡುವ ಕಾರಣ ಹೆಚ್ಚು ತಿನ್ನದಿರುವುದು ಒಳ್ಳೆಯದು.
7. ದ್ರಾಕ್ಷಿ: ದ್ರಾಕ್ಷಿಯಲ್ಲಿ ನೈಸರ್ಗಿಕ ಸಕ್ಕರೆ ಹೇರಳವಾಗಿದ್ದು ಇದರಿಂದಾಗಿ ಕೆಲವೊಮ್ಮೆ ಒಳಗೆ ಕಫ ಗಟ್ಟಿಯಾಗುತ್ತದೆ. ಆಮೇಲೆ ಕಫವನ್ನು ಹೊರಗೆ ತೆಗೆಯುವುದೇ ಕಷ್ಟವಾಗಬಹುದು. ಕೆಮ್ಮು ಹಾಗೂ ಕಫದ ಪರಿಣಾಮ ತೀವ್ರವಾಗುವ ಸಂಭವ ಇರುವುದರಿಂದ ದ್ರಾಕ್ಷಿಯಿಂದ ಶೀತ ಹಾಗೂ ನೆಗಡಿಯಂತಹ ಸಂದರ್ಭಗಳಲ್ಲಿ ದೂರ ಇರುವುದೇ ಒಳ್ಳೆಯದು.
ಇದನ್ನೂ ಓದಿ: Fruits To Lower Cholesterol: ಕೊಲೆಸ್ಟ್ರಾಲ್ ಕಡಿಮೆ ಮಾಡುವ ಹಣ್ಣುಗಳ ಬಗ್ಗೆ ಗೊತ್ತೇ?
-
ವಿದೇಶ14 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ಸುವಚನ23 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ12 hours ago
PSI Scam : ಪಿಎಸ್ಐ ನೇಮಕಾತಿ ಅಕ್ರಮ; ಕೊನೆಗೂ ಅಮೃತ್ ಪಾಲ್ಗೆ ಜಾಮೀನು
-
ದೇಶ7 hours ago
Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’
-
ಅಂಕಣ14 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?
-
ಕರ್ನಾಟಕ8 hours ago
Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?
-
ದೇಶ12 hours ago
Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್ಐ’ ಎಂದು ಬರೆದ ದುರುಳರು!
-
South Cinema10 hours ago
Darshan Thoogudeepa: ನಟ ದರ್ಶನ್ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ; ಕ್ಷಮೆಗೆ ಆಗ್ರಹ