ಆರೋಗ್ಯ
Saffron Health Benefits: ಕೇಸರಿ, ಆರೋಗ್ಯಕ್ಕೆ ಇದೇ ಸರಿ! ಮರೆವಿನ ಕಾಯಿಲೆಗೂ ಇದರಲ್ಲಿ ಮದ್ದಿದೆ!
ಅತ್ಯಂತ ದುಬಾರಿ ಎಂಬ ಕಿರೀಟ ಹೊತ್ತ ಇದರಿಂದ ಸಾಕಷ್ಟು ಆರೋಗ್ಯಕರ ಲಾಭಗಳೂ (Saffron Health Benefits) ಇವೆ. ಬನ್ನಿ, ಕೇಸರಿಯ ಸೇವನೆಯಿಂದ ಯಾವೆಲ್ಲ ಆರೋಗ್ಯಕರ ಲಾಭಗಳನ್ನು (Health tips) ಪಡೆಯಬಹುದು ಎಂಬುದನ್ನು ನೋಡೋಣ.
ಕಾಶ್ಮೀರ ಎಂದರೆ ಥಟ್ಟನೆ ನೆನಪಿಗೆ ಬರುವುದು ನಯನ ಮನೋಹರ ಸ್ವರ್ಗಸದೃಶ ದೃಶ್ಯದ ನಡುವೆ ಕೇಸರಿ (Saffron). ಕಾಶ್ಮೀರದ ಕೇಸರಿಯನ್ನು (Kashmir Saffron) ಜತನದಿಂದ ಕಾಪಾಡಿಕೊಂಡು ಮನೆಯಲ್ಲಿ ಹಬ್ಬದಡುಗೆ ಮಾಡುವಾಗಲೋ, ಪಾಯಸಕ್ಕೋ ಯಾವಾಗಲಾದರೊಮ್ಮೆ ಬಳಸುವ ಬಲು ಅಪರೂಪದ ವಿಶೇಷ ವಸ್ತು. ಕೇಸರಿ ಎಂದರೆ ಅದು ಶ್ರೀಮಂತರ ಸೊತ್ತು ಎಂಬ ನಂಬಿಕೆಯಿದೆ. ಒಂದಿಷ್ಟು ಎಸಳುಗಳು ಸೇರಿ ಗ್ರಾಂ ಲೆಕ್ಕದಲ್ಲಿ ಬಿಕರಿಯಾಗುವ ಈ ವಿಶೇಷ ಘಮದ ಮಸಾಲೆ ಕಾಶ್ಮೀರದ ಹೆಸರನ್ನೂ ತನ್ನಲ್ಲಿ ಹೊತ್ತುಕೊಂಡಿದೆ. ಅತ್ಯಂತ ದುಬಾರಿ ಎಂಬ ಕಿರೀಟ ಹೊತ್ತ ಇದರಿಂದ ಸಾಕಷ್ಟು ಆರೋಗ್ಯಕರ ಲಾಭಗಳೂ (Saffron Health Benefits) ಇವೆ. ಬನ್ನಿ, ಕೇಸರಿಯ ಸೇವನೆಯಿಂದ ಯಾವೆಲ್ಲ ಆರೋಗ್ಯಕರ ಲಾಭಗಳನ್ನು (Health tips) ಪಡೆಯಬಹುದು ಎಂಬುದನ್ನು ನೋಡೋಣ.
1. ಕೇಸರಿ ಅತ್ಯಂತ ಶಕ್ತಿಯುತವಾದ ಆಂಟಿಆಕ್ಸಿಡೆಂಟ್ ಅನ್ನು ತನ್ನಲ್ಲಿ ಹೊಂದಿದೆ. ಈ ಆಂಟಿ ಆಕ್ಸಿಡೆಂಟ್ಗಳು ಹಲವು ಬಗೆಯ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಮುಖ್ಯವಾಗಿ, ಗರ್ಭಿಣಿ ಸ್ತ್ರೀಯರು ಕೇಸರಿಯನ್ನು ನಿತ್ಯವೂ ಕೊಂಚ ಕೊಂಚವಾಗಿ ಸೇವಿಸುವುದು ಅವರ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು ಎನ್ನಲಾಗುತ್ತದೆ. ಇದರಿಂದ ಗರ್ಭಪಾತದ ಸಂಭವನೀಯತೆ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಗರ್ಭಿಣಿಯರಲ್ಲಿ ಕಂಡು ಬರುವ ಮೈಕೈ ನೋವು, ಒತ್ತಡ, ಹಾಗೂ ಮಾನಸಿಕ ತುಮುಲಗಳು, ಮೂಡು ಬದಲಾವಣೆ ಇತ್ಯಾದಿಗಳಿಗೂ ಒಳ್ಳೆದಂತೆ.
2. ಮಾನಸಿಕ ಒತ್ತಡ ಹಾಗೂ ಖಿನ್ನತೆಯಂತಹ ಸಮಸ್ಯೆಗಳಿಗೂ ಕೇಸರಿ ಒಳ್ಳೆಯದು. ಅದಕ್ಕೇ ಇದನ್ನು ಸೂರ್ಯನ ಬೆಳಕಿಗೆ ಹೋಲಿಸಲಾಗುತ್ತದೆ. ಸೂರ್ಯನ ಬೆಳಕು ತರುವಂತೆ ಇದು ಮಾನಸಿಕ ಪ್ರಫುಲ್ಲತೆಯನ್ನು ತರುತ್ತದೆ. ಬಾಡಿದ್ದ ಮನಸ್ಸನ್ನು ಚಿಗಿತುಕೊಳ್ಳುವಂತೆ ಮಾಡುವ ಶಕ್ತಿ ಇದಕ್ಕಿದೆ. ಇದು ಸಂಶೋಧನೆಗಳಿಂದಲೂ ದೃಢಪಟ್ಟಿದೆ.
3. ಕೇಸರಿಯಲ್ಲಿರುವ ಆಂಟಿ ಆಕ್ಸಿಡೆಂಟ್ಗಳು ಕ್ಯಾನ್ಸರ್ ವಿರುದ್ಧವೂ ಹೋರಾಡುತ್ತದೆ. ಇದು ಅಪಾಯಕಾರಿಯೆನಿಸುವ ಫ್ರೀ ರ್ಯಾಡಿಕಲ್ಸ್ಗಳ ವಿರುದ್ಧ ಹೋರಾಡಿ ಕ್ಯಾನ್ಸರ್ನಂತಹ ಮಾರಕ ರೋಗಗಳು ಬರದಂತೆ ತಡೆಯುತ್ತದೆ ಎನ್ನುತ್ತದೆ ಸಂಶೋಧನೆಗಳು.
4. ಮುಖ್ಯವಾಗಿ ಮಹಿಳೆಯರಲ್ಲಿ ಸಾಮಾನ್ಯವಾಗಿರುವ ಋತುಚಕ್ರದ ಸಮಸ್ಯೆಗಳಿಗೂ ಇದು ಪರಿಹಾರ ನೀಡುತ್ತದೆ. ಋತುಚಕ್ರಕ್ಕೂ ಮೊದಲು ಹಾಗೂ ಮುಟ್ಟಿನ ಸಂದರ್ಭ ಅತೀವ ಸೊಂಟನೋವು, ಕೆಳಹೊಟ್ಟೆಯಲ್ಲಿ ನೋವು, ಕಾಲುಗಳ ಸೆಳೆತ, ಬೆನ್ನುನೋವು, ಸುಸ್ತು ಸೇರಿದಂತೆ ದೈಹಿಕ ಸಮಸ್ಯೆಗಳು ಹಾಗೂ ಮಾನಸಿಕ ಸಮಸ್ಯೆಗಳುಂಟಾಗುವುದನ್ನು ಇದು ಕಡಿಮೆ ಮಾಡುತ್ತದೆ. ಇವುಗಳಿಂದ ಆರಾಮ ದೊರೆಯುತ್ತದೆ.
5. ಆಂಟಿ ಡಿಪ್ರೆಸೆಂಟ್ ಹಾಗೂ ಅತೀವ ಔಷಧಿಗಳನ್ನು ಸೇವಿಸಿ ಉಂಟಾಗಿರುವ ಲೈಂಗಿಕ ಸಮಸ್ಯೆಗಳಿಗೂ ಇದು ಒಳ್ಳೆಯ ಮದ್ದು. ಲೈಂಗಿಕಾಸಕ್ತಿ ಮೊಳೆಯುವಲ್ಲಿ, ಪುರುಷರಲ್ಲಿ ಉದ್ದೀಪನ ಶಕ್ತಿ ಕಡಿಮೆಯಾದಾಗ ಸೇರಿದಂತೆ ಲೈಂಗಿಕ ಸಮಸ್ಯೆಗಳಿಗೆ ಇದು ಪರಿಹಾರ ನೀಡಬಲ್ಲದು.
6. ದಿನವೂ ಆಹಾರದ ಮೂಲಕ ಸ್ವಲ್ಪ ಕೇಸರಿಯನ್ನು ಸೇವಿಸುವಿದರಿಂದ ತೂಕವನ್ನೂ ಕಡಿಮೆ ಮಾಡಬಹುದದಂತೆ. ಅಂದರೆ, ಕೇಸರಿಯನ್ನು ಸೇವಿಸಿದ ಮಂದಿ, ಹೆಚ್ಚು ಹಸಿವೆಯಾಗುವ ಸಮಸ್ಯೆಯಿಂದ ಪಾರಾಗುವುದರಿಂದ ಸಹಜವಾಗಿಯೇ ಆಗಾಗ ಏನಾದರೊಂದು ತಿನ್ನುವ ಚಟದಿಂದ ಹೊರಬಂದು ತೂಕದಲ್ಲಿಯೂ ಇಳಿಕೆ ಕಾಣುತ್ತಾರೆ. ಮುಖ್ಯವಾಗಿ ಆರೋಗ್ಯ ಉತ್ತಮವಾಗುತ್ತದೆ.
7. ಹೃದಯದ ಸಮಸ್ಯೆಗಳಿಗೂ ಕೇಸರಿ ಸಹಾಯ ಮಾಡುತ್ತದಂತೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ಗಳು ಕೊಲೆಸ್ಟೆರಾಲ್ ಮಟ್ಟವನ್ನು ಕಡಿಮೆಗೊಳಿಸುವುದಷ್ಟೇ ಅಲ್ಲದೆ, ಹೃದಯದ ರಕ್ತನಾಳಗಳಲ್ಲಿ ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ ಹಾಗೂ ರಕ್ತ ಪರಿಚಲನೆ ಸರಾಗವಾಗಿ ಆಗುವಂತೆ ಮಾಡುತ್ತದೆ.
8. ಮಧುಮೇಹಿಗಳಿಗೂ ಕೇಸರಿ ಒಳ್ಳೆಯದೇ. ಇದು ಸಕ್ಕರೆಯ ಮಟ್ಟ್ವನ್ನೂ ಕಡಿಮೆಗೊಳಿಸಲು ಕೊಂಚ ಸಹಾಯ ಮಾಡುತ್ತದೆ.
ಇದನ್ನೂ ಓದಿ: Morning walk benefits: ಸಂಜೆಗಿಂತ, ಬೆಳಗ್ಗೆ ಎದ್ದ ಕೂಡಲೇ ವಾಕಿಂಗ್ ಮಾಡುವುದು ಯಾಕೆ ಒಳ್ಳೆಯದು ಗೊತ್ತೇ?
9. ಕಣ್ಣಿನ ಆರೋಗ್ಯಕ್ಕೂ ಇದು ಅತ್ಯುತ್ತಮ. ವಯಸ್ಕರಲ್ಲಿರುವ ಕಣ್ಣಿನ ತೊಂದರೆಗಳಿಗೆ ಇದು ಒಳ್ಳೆಯ ಮನೆಮದ್ದು. ದೃಷ್ಟಿದೋಷಗಳನ್ನು ಇದು ನಿಧಾನವಾಗಿ ಕಡಿಮೆಗೊಳಿಸಲು ತನ್ನದೇ ಕಾಣಿಕೆ ನೀಡುತ್ತದೆ ಎನ್ನುತ್ತವೆ ಸಂಶೋಧನೆಗಳು.
10. ಸ್ಮರಣ ಶಕ್ತಿಗೂ ಇದು ಅತ್ಯಂತ ಒಳ್ಳೆಯದು. ಹಿರಿಯರಲ್ಲಿ ಕಾಣಿಸಿಕೊಳ್ಳುವ ಅಲ್ಜೈಮರ್ ಕಾಯಿಲೆಯಂತರ ಸ್ಮರಣ ಶಕ್ತಿಯ ಸಮಸ್ಯೆಗಳಿಗೂ ಸೇರಿದಂತೆ, ಮರೆವಿಗೆ ಇದು ಅತ್ಯುತ್ತಮ ಮದ್ದು. ಇದರಲ್ಲಿರು ಆಂಟಿ ಆಕ್ಸಿಡೆಂಟ್ಗಳು ನೆನಪುಶಕ್ತಿಯನ್ನು ಹೆಚ್ಚಿಸುತ್ತವೆ.
ಆದರೆ, ಅತಿಯಾದರೆ ಅಮೃತವೂ ವಿಷ ಎಂಬ ಸತ್ಯ ಇಲ್ಲಿಗೂ ಹೊಂದಿಕೆಯಾಗುತ್ತದೆ. ಹೆಚ್ಚು ಕೇಸರಿ ಸೇವನೆ ವಿಷಕಾರಿ. ದಿನವೂ ಸೇವಿಸುವವರು ದಿನಕ್ಕೆ ಹೆಚ್ಚೆಂದರೆ ಐದಾರು ದಳಗಳನ್ನು ಸೇವಿಸಬಹುದು.
ಇದನ್ನೂ ಓದಿ: Nails Health Tips: ಆರೋಗ್ಯದ ಗುಟ್ಟು ರಟ್ಟಾಗಬೇಕಿದ್ದರೆ ಉಗುರುಗಳನ್ನು ನೋಡಿ!
ಆರೋಗ್ಯ
Dengue Fever foods: ಡೆಂಗ್ಯು ಜ್ವರ ಬಂದಾಗ ಯಾವೆಲ್ಲ ಆಹಾರ ಸೇವನೆ ಬಹಳ ಮುಖ್ಯ ಗೊತ್ತೇ?
ಡೆಂಗ್ಯು ಜ್ವರ ಬಂದಾಗ ಯಾವ ಆಹಾರವನ್ನು ತೆಗೆದುಕೊಂಡರೆ ಒಳ್ಳೆಯದು, ಹಾಗೂ ಯಾವುದರ ಸೇವನೆ ಒಳ್ಳೆಯದಲ್ಲ ಎಂಬ ವಿಚಾರಗಳನ್ನು ತಿಳಿದಿರುವುದೂ ಬಹಳ ಮುಖ್ಯ. ಯಾವೆಲ್ಲ ಆಹಾರ ಡೆಂಗ್ಯುವಿನ ಸಮಯದಲ್ಲಿ ನಾವು ಸೇವಿಸಬೇಕು (Dengue Fever foods) ಎಂಬುದನ್ನು ನೋಡೋಣ.
ಡೆಂಗ್ಯು ಎಂಬ ಜ್ವರ (Dengue Fever) ಆಗಾಗ ಎಲ್ಲೆಡೆ ಸದ್ದು ಮಾಡುತ್ತಲೇ ಇರುತ್ತದೆ. ಸೊಳ್ಳೆಯಿಂದ (Mosquito bite) ಬರುವ ಈ ಜ್ವರವೆಂದರೆ, ಹೆಚ್ಚಿದ ಉಷ್ಣಾಂಶ, ಮೈಮೇಲೆ, ಕೆಂಪನೆಯ ಸಣ್ಣ ಗುಳ್ಳೆಗಳೇಳುವುದು, ತಲೆನೋವು, ಮೈಕೈ ನೋವು ಇತ್ಯಾದಿ ಇತ್ಯಾದಿ ಲಕ್ಷಣಗಳೊಂದಿಗೆ ಬರುತ್ತದೆ. ಈ ಜ್ವರ ಎಲ್ಲ ಜ್ವರದಂತಲ್ಲ. ಅಪಾಯವಿಲ್ಲ ಎಂದುಕೊಂಡರೂ ಕೆಲವೊಮ್ಮೆ ಹಠಾತ್ತನೆ ಅಪಾಯಕ್ಕೆ ದೂಡುತ್ತದೆ. ಇಂತಹ ಸಂದರ್ಭ ನಾವು ಸೇವಿಸುವ ಆಹಾರದ ಬಗೆಗಿನ ಕಾಳಜಿ ಅತ್ಯಂತ ಅವಶ್ಯಕ. ಇದು ಬಂದಾಗ ಯಾವ ಆಹಾರವನ್ನು ತೆಗೆದುಕೊಂಡರೆ ಒಳ್ಳೆಯದು, ಹಾಗೂ ಯಾವುದರ ಸೇವನೆ ಒಳ್ಳೆಯದಲ್ಲ ಎಂಬ ವಿಚಾರಗಳನ್ನು ತಿಳಿದಿರುವುದೂ ಬಹಳ ಮುಖ್ಯ. ಹಾಗಾಗಿ, ಬನ್ನಿ, ಯಾವೆಲ್ಲ ಆಹಾರ ಡೆಂಗ್ಯುವಿನ ಸಮಯದಲ್ಲಿ ನಾವು ಸೇವಿಸಬೇಕು (Dengue Fever foods) ಎಂಬುದನ್ನು ನೋಡೋಣ.
1. ನೀರು: ನೀರು ಕುಡಿಯುವುದು ಅತ್ಯಂತ ಒಳ್ಳೆಯದು. ಡೆಂಗ್ಯು ಬಂದಾಗ ಸಾಧ್ಯವಾದಷ್ಟು ನೀರು ಕುಡಿಯುತ್ತಿದ್ದರೆ, ನಿರ್ಜಲೀಕರಣ ಇತ್ಯಾದಿ ಸಮಸ್ಯೆಗಳು ಬಾರದು. ಇದರಿಂದ ಜ್ವರದ ಉಷ್ಣಾಂಶವೂ ಕೂಡಾ ಗರಿಷ್ಠ ಮಟ್ಟಕ್ಕೇರುಬುದು ತಪ್ಪುತ್ತದೆ. ದೇಹದಲ್ಲಿ ನೀರಿನಂಶದ ಸಮತೋಲನವೂ ಕಾಯ್ದುಕೊಳ್ಳುತ್ತದೆ.
2. ಎಳನೀರು: ಎಳನೀರಿನಲ್ಲಿ ಸಾಕಷ್ಟು ಪ್ರಮಾಣದ ಎಲೆಕ್ಟ್ರೋಲೈಟ್ಗಳು ನೈಸರ್ಗಿಕವಾಗಿ ಸಮೃದ್ಧವಾಗಿರುವುದರಿಂದ ಜ್ವರದ ಸಂದರ್ಭ ದೇಹದಲ್ಲಿ ನಿರ್ಜಲೀಕರಣವಾಗದಂತೆ ಇದು ತಡೆಯುತ್ತದೆ. ಅಷ್ಟೇ ಅಲ್ಲ ಈ ಸಂದರ್ಭದಲ್ಲಿ, ದೇಹಕ್ಕೆ ಬೇಕಾದ ಎಲ್ಲ ಪೋಷಕಾಂಶಗಳನ್ನೂ ಅಂದರೆ, ಖನಿಜಾಂಶಗಳಾದ ಪೊಟಾಶಿಯಂ, ಸೋಡಿಯಂ, ಕ್ಯಾಲ್ಶಿಯಂಗಳನ್ನು ಒದಗಿಸಿ ಸಹಾಯ ಮಾಡುತ್ತದೆ.
3. ಹಣ್ಣುಗಳು: ಹಣ್ಣುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಹಾಗೂ ಖನಿಜ ಲವಣಗಳೂ ಇರುವುದರಿಂದ ಡೆಂಗ್ಯು ಸಂದರ್ಭ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇವುಗಳನ್ನು ತಿನ್ನುವುದು ಬಹಳ ಮುಖ್ಯ. ಹಣ್ಣುಗಳಲ್ಲಿರುವ ಆಂಟಿ ಇನ್ಫ್ಲಮೇಟರಿ ಗುಣಗಳು ರೋಗಗಳ ವಿರುದ್ಧ ಕೆಲಸ ಮಾಡುತ್ತವೆ. ಅಷ್ಟೇ ಅಲ್ಲ, ಬಾಳೆಹಣ್ಣು, ಪಪ್ಪಾಯಿ, ಕಲ್ಲಂಗಡಿಯಂತಹ ಹಣ್ಣುಗಳನ್ನು ಸುಲಭವಾಗಿ ಜೀರ್ಣ ಮಾಡಬಹುದಾದ್ದರಿಂದ ಹಾಗೂ ಇವುಗಳಲ್ಲಿ ಹೇರಳವಾಗಿ ಪೋಷಕಾಂಶಗಳು ಬಹುಬೇಗನೆ ದೇಹ ಸೇರುವುದರಿಂದ ಹಣ್ಣುಗಳನ್ನು ತಿನ್ನುವುದು ಬಹಳ ಮುಖ್ಯ.
4. ಹರ್ಬಲ್ ಚಹಾಗಳು: ಶುಂಠಿ, ಕ್ಯಾಮೋಮೈಲ್ ಮತ್ತಿತರ ಹರ್ಬಲ್ ಚಹಾಗಳು ಜ್ವರದ ಸಂದರ್ಭ ಕುಡಿದಾಗ ಹಾಯೆನಿಸುವಂತೆ ಮಾಡಬಲ್ಲ ಶಕ್ತಿ ಇದೆ. ಸಾಮಾನ್ಯ ಚಹಾ, ಕಾಫಿಗಳು ರುಚಿಯೆನಿಸಿದರೂ, ಜ್ವರದ ಸಂದರ್ಭ ಇಂತಹ ಹರ್ಬಲ್ ಚಹಾಗಳು ಒಳ್ಳೆಯದು. ಶುಂಠಿ ಚಹಾದಲ್ಲಿ, ಆಂಟಿ ಇನ್ಫ್ಲಮೇಟರಿ ಗುಣಗಳು ಹೇರಳವಾಗಿ ಇರುವುದರಿಂದ ಜ್ವರದ ಹಲವು ಲಕ್ಷಣಗಳನ್ನು ಗುಣಪಡಿಸುವಲ್ಲಿಯೂ ಇದು ಸಹಾಯ ಮಾಡುತ್ತದೆ.
5. ಧಾನ್ಯಗಳು: ಧಾನ್ಯಗಳಿಂದ ಮಾಡಿದ ಆಹಾರಗಳಾದ ಅನ್ನ, ಓಟ್ಸ್, ಇಡ್ಲಿ, ದೋಸೆ, ಉಪ್ಪಿಟ್ಟು, ದಲಿಯಾ ಮತ್ತಿತರ ಆಹಾರಗಳ ಸೇವನೆ ಒಳ್ಳೆಯದು. ಇದರಿಂದ ದೇಹಕ್ಕೆ ಬೇಕಾದ ಶಕ್ತಿ ಸರಿಯಾದ ಪ್ರಮಾಣದಲ್ಲಿ ಸಿಗುತ್ತದೆ. ಸರಿಯಾಗಿ ಬೇಯಿಸಿದ, ಹೆಚ್ಚು ಅನಗತ್ಯ ಮಸಾಲೆಗಳಿಲ್ಲದ, ಹದವಾದ ತಿನಿಸುಗಳು, ಹಬೆಯಲ್ಲಿ ಬೇಯಿಸಿದ ತಿಂಡಿಗಳು ಇಂತಹ ಸಂದರ್ಭ ಅತ್ಯಂತ ಒಳ್ಳೆಯದು.
6. ಹಸಿರು ತರಕಾರಿಗಳು: ಹಸಿರು ತರಕಾರಿಗಳಲ್ಲಿ ಸಾಕಷ್ಟು ರೋಗ ನಿರೋಧಕ ಶಕ್ತಿಯೂ, ವಿಟಮಿನ್, ಖನಿಜಾಂಶಗಳು ಹಾಗೂ ಲವಣಗಳೂ ಇರುವುದರಿಂದ ಇವುಗಳ ಸೇವನೆ ಅತ್ಯಂತ ಮುಖ್ಯ. ಸಹಜವಾಗಿ ಸುಲಭವಾಗಿ ಕರಗಬಲ್ಲ ಹಸಿರು ತರಕಾರಿಗಳು, ಬೇಯಿಸಿ ತಿನ್ನಬಹುದಾದ, ಸೂಪ್ ಮಾಡಿ ಕುಡಿಯಬಹುದಾದ ಹೀಗೆ, ಹಲವು ಬಗೆಯಲ್ಲಿ ಹಸಿರು ತರಕಾರಿಗಳನ್ನು ಆದಷ್ಟು ಹೊಟ್ಟೆ ಸೇರುವಂತೆ ಮಾಡಬಹುದು.
7. ಪ್ರೊಟೀನ್: ಪ್ರೊಟೀನ್ನಿಂದ ಸಮೃದ್ಧ ಆಹಾರ ಈ ಸಂದರ್ಭ ಅತ್ಯಂತ ಅಗತ್ಯ. ಚಿಕನ್, ಟೋಫು, ಮೀನು ಇತ್ಯಾದಿಗಳನ್ನೂ ಹಿತಮಿತವಾಗಿ ಸೇವಿಸಿ ಪ್ರೊಟೀನ್ನ ಪೂರೈಕೆ ಮಾಡಬಹುದು. ಚೆನ್ನಾಗಿ ಬೇಯಿಸಿದ, ಸಮೃದ್ಧ ಆಹಾರಗಳನ್ನೂ ಸೇವಿಸುವ ಮೂಲಕ ದೇಹದಲ್ಲಿ ಮತ್ತೆ ಮಾಂಸಖಂಡಗಳು ಬಲಗೊಂಡು ಆರೋಗ್ಯ ಹೊಂದುವತ್ತ ಹೆಜ್ಜೆ ಹಾಕಬಹುದು.
ಆರೋಗ್ಯ
Side Effects of Sugar: ಸಿಹಿ ತಿನ್ನಬೇಕು, ಆದರೆ ಎಷ್ಟು?
Side Effects of Sugar: ನೈಸರ್ಗಿಕ ಸಕ್ಕರೆಯಲ್ಲಿ ಇದ್ದಷ್ಟು ಸತ್ವಗಳು ನಾವೇ ಸೇರಿಸಿಕೊಳ್ಳುವ ಸಕ್ಕರೆಯಲ್ಲಿ (Added Sugar) ಅಥವಾ ಸಿಹಿ ತಿಂಡಿಯಲ್ಲಿ ದೊರೆಯುವುದಿಲ್ಲ. ಸಿಕ್ಕಾಪಟ್ಟೆ ಸಕ್ಕರೆ ತಿನ್ನುವುದು ಅಲ್ಪಕಾಲೀನ ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಹಾಗಾಗಿಯೇ ಸಿಹಿ ತಿನಿಸುಗಳ ಸೇವನೆಗೆ ಮಿತಿ ಬೇಕು ಎನ್ನುವುದು.
ಬೆಂಗಳೂರು: ಶ್ರಾವಣದ ಹಬ್ಬಗಳ ಸಾಲು (Side Effects of Sugar) ಮುಗಿದಿದೆ. ಮೊನ್ನೆಯಷ್ಟೇ ಭಾದ್ರಪದದ ಚತುರ್ಥಿಯನ್ನೂ ಆಚರಿಸಿದ್ದಾಯ್ತು. ಇನ್ನೀಗ ನವರಾತ್ರಿ, ಆದಾದ ಮೇಲೆ ದೀಪಾವಳಿ. ಇಷ್ಟೊಂದು ಹಬ್ಬಗಳ ಆಚರಣೆ ಎಂದರೆ ಹುಡುಗಾಟವೇ? ಹೀಗೆ ಸಾಲು ಸಾಲು ಹಬ್ಬಗಳನ್ನು ಸಿಹಿ ತಿನ್ನದೆ ಕಳೆಯುವುದಾದರೂ ಹೇಗೆ? ಸಿಹಿ ಇಲ್ಲದ್ದು ಹಬ್ಬ ಎನಿಸೀತೆ? ಹಾಗೆಂದು ಪ್ರತೀ ಹಬ್ಬಕ್ಕೂ ಗಡದ್ದಾಗಿ ಸಿಹಿ ಬಾರಿಸಿದರೆ ನಮ್ಮ ಆರೋಗ್ಯದ ಗತಿ ಏನು? ಸಿಕ್ಕಾಪಟ್ಟೆ ಸಕ್ಕರೆ ತಿನ್ನುವುದರಿಂದ ನಮ್ಮ ದೇಹದ ಮೇಲಾಗುವ ಪರಿಣಾಮಗಳೇನು (What Happens When You Have Too Much Sugar) ಎನ್ನುವುದನ್ನು ತಿಳಿಯೋಣವೇ?
ಸಕ್ಕರೆ ಬೇಕು!
ಹೌದು, ನಮ್ಮ ದೇಹಕ್ಕೆ ಸಕ್ಕರೆಯೂ ಬೇಕು. ಸಕ್ಕರೆಯೆಂದರೆ ಒಂದು ತೆರನಾದ ಪಿಷ್ಟ. ಅದನ್ನು ವಿಘಟಿಸುವ ದೇಹ ಗ್ಲೂಕೋಸ್ ಆಗಿ ಪರಿವರ್ತಿಸಿ, ತನ್ನ ಶಕ್ತಿಯ ಅಗತ್ಯಗಳಿಗೆ ಬಳಸಿಕೊಳ್ಳುತ್ತದೆ. ಜೇನುತುಪ್ಪ, ಖರ್ಜೂರ, ಹಣ್ಣುಗಳು, ಡೈರಿ ಉತ್ಪನ್ನಗಳು ಮುಂತಾದ ಹಲವಾರು ಆಹಾರಗಳಲ್ಲಿ ಸಕ್ಕರೆ ತಾನಾಗಿಯೇ ಇರುತ್ತದೆ. ಇಂಥ ನೈಸರ್ಗಿಕ ಸಕ್ಕರೆಯಂಶ ನಮ್ಮ ದೇಹಕ್ಕೆ ಬೇಕು. ಮೆದುಳು, ನರವ್ಯೂಹಗಳು ಮತ್ತು ಕೆಂಪು ರಕ್ತಕಣಗಳಂಥವು ಸರಿಯಾಗಿ ಕೆಲಸ ಮಾಡಲು ಈ ನೈಸರ್ಗಿಕ ಸಕ್ಕರೆಯ ಅಗತ್ಯವಿದೆ.
ಆದರೆ ನಿಸರ್ಗದತ್ತವಾದ ಸಕ್ಕರೆ ಸತ್ವದ ಹೊರತಾಗಿ ಹೆಚ್ಚುವರಿ, ಅಂದರೆ ನಾವೇ ಸೇರಿಸಿದ ಸಕ್ಕರೆಯಂಶ ದೇಹಕ್ಕೇನೂ ಬೇಕೆಂದಿಲ್ಲ. ಹಾಗಾಗಿಯೇ ಸಿಹಿ ತಿನಿಸುಗಳ ಸೇವನೆಗೆ ಮಿತಿ ಬೇಕು ಎನ್ನುವುದು. ನೈಸರ್ಗಿಕ ಸಕ್ಕರೆಯಲ್ಲಿ ಇದ್ದಷ್ಟು ಸತ್ವಗಳು ನಾವೇ ಸೇರಿಸಿಕೊಳ್ಳುವ ಸಕ್ಕರೆಯಲ್ಲಿ ಅಥವಾ ಸಿಹಿ ತಿಂಡಿಯಲ್ಲಿ ದೊರೆಯುವುದಿಲ್ಲ. ತಜ್ಞರ ಪ್ರಕಾರ, ವಯಸ್ಕರು ದಿನವೊಂದಕ್ಕೆ 30 ಗ್ರಾಂ ಗಿಂತ ಹೆಚ್ಚಿನ ಸಕ್ಕರೆಯನ್ನು ತಿನ್ನಬಾರದು. ಮಕ್ಕಳಿಗೆ 25 ಗ್ರಾಂ ಒಳಗೇ ಸಾಕು. ಇದರಲ್ಲಿ ನಮ್ಮ ಆಹಾರದಲ್ಲಿರುವ ನೈಸರ್ಗಿಕ ಸಕ್ಕರೆಯನ್ನ ಸೇರಿಸಬೇಕಿಲ್ಲ.
ಇದನ್ನೂ ಓದಿ: National Nutrition Week 2023: ರಾತ್ರಿ ಊಟ ಬೇಗ ಮಾಡುವುದರಿಂದಲೂ ಆರೋಗ್ಯ ಹಾಳು?
ಹೆಚ್ಚು ತಿಂದರೇನಾಗುತ್ತದೆ?
ಸಿಕ್ಕಾಪಟ್ಟೆ ಸಕ್ಕರೆ ತಿನ್ನುವುದು ಅಲ್ಪಕಾಲೀನ ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಅತಿಯಾಗಿ ಸಿಹಿ ತಿಂದಾಗ ದೇಹದ ಶಕ್ತಿ ಹೆಚ್ಚುವ ಬದಲು, ಸುಸ್ತು, ಆಯಾಸ ಕಾಣಿಸಬಹುದು. ಮೂಡ್ ಬದಲಾವಣೆ, ಹೊಟ್ಟೆ ಉಬ್ಬರ, ಅಜೀರ್ಣ, ವಾಕರಿಕೆ ಇಂಥವು ಅಲ್ಪಕಾಲೀನ ಪರಿಣಾಮಗಳಾಗಿ ಕಾಣಿಸಿಕೊಳ್ಳಬಹುದು. ಆದರೆ ಹೆಚ್ಚು ಸಿಹಿ ತಿನ್ನುವುದನ್ನು ಮುಂದುವರಿಸಿದರೆ ದೀರ್ಘಕಾಲದಲ್ಲಿ ಪರಿಣಾಮಗಳು ಸಮಸ್ಯೆಗಳಾಗಿ ಮಾರ್ಪಡುವುದು ನಿಶ್ಚಿತ.
ಟೈಪ್-2 ಮಧುಮೇಹ
ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವಾಗ ರಕ್ತದಲ್ಲಿ ಸಕ್ಕರೆಯ ಮಟ್ಟ ಏರದಂತೆ ನಿಯಂತ್ರಿಸಲು ನಮಗೆ ಇನ್ಸುಲಿನ್ ಎಂಬ ಚೋದಕ ಬೇಕು. ಇದನ್ನು ಉತ್ಪತ್ತಿ ಮಾಡುವುದು ನಮ್ಮ ಮೇದೋಜೀರಕ ಗ್ರಂಥಿ. ಆಹಾರದಲ್ಲಿರುವ ಸಕ್ಕರೆಯಂಶ ರಕ್ತಕ್ಕೆ ಸೇರುತ್ತಿದ್ದಂತೆ ಇನ್ಸುಲಿನ್ ಉತ್ಪತ್ತಿ ಮಾಡುವಂತೆ ಈ ಗ್ರಂಥಿಗೆ ಸಂದೇಶ ಹೋಗುತ್ತದೆ. ಆಗ ರಕ್ತದಲ್ಲಿ ಸಕ್ಕರೆ ಮಟ್ಟ ಏರದಂತೆ ನಿಯಂತ್ರಣವಾಗಿ, ಉಳಿದ ಅಂಗಾಂಗಗಳಿಗೆ ಶಕ್ತಿ ಪೂರೈಕೆಯಾಗುತ್ತದೆ. ಒಂದೊಮ್ಮೆ ದೇಹದ ಕೋಶಗಳು ಇನ್ಸುಲಿನ್ಗೆ ಸ್ಪಂದಿಸುವುದನ್ನು ನಿಲ್ಲಿಸಿದರೆ ಸಮಸ್ಯೆ ಶುರುವಾಗುತ್ತದೆ. ಹೆಚ್ಚೆಚ್ಚು ಸಿಹಿ ತಿಂದರೆ ನಮ್ಮ ಮೇದೋಜೀರಕ ಗ್ರಂಥಿ ಹೆಚ್ಚು ಕೆಲಸ ಮಾಡಬೇಕು, ಅತಿಯಾಗಿ ಉತ್ಪತ್ತಿಯಾಗುವ ಇನ್ಸುಲಿನ್ಗೆ ದೇಹ ಕೆಲವೊಮ್ಮೆ ಸ್ಪಂದಿಸದೇ (Insulin resistance) ಹೋಗಬಹುದು. ಇದೇ ಅವಸ್ಥೆಯನ್ನು ಟೈಪ್-2 ಮಧುಮೇಹ ಎನ್ನುತ್ತೇವೆ.
ಬೊಜ್ಜು
ಈಗ ಆರೇಳು ವರ್ಷಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ವಿಶ್ವದಲ್ಲಿ 100 ಕೋಟಿಗೂ ಅಧಿಕ ಮಂದಿ ಬೊಜ್ಜಿನಿಂದಲೇ (Obesity) ನಾನಾ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಸಂಸ್ಕರಿಸಿದ ಆಹಾರಗಳಿಂದ (ಜ್ಯೂಸ್, ಸೋಡಾ, ಕೇಕ್ ಇತ್ಯಾದಿ) ದೇಹ ಸೇರುವ ಸಕ್ಕರೆಯಿಂದಲೇ ಬೊಜ್ಜಿಗೆ ತೊತ್ತಾದವರು. ಅತಿಯಾಗಿ ಸಕ್ಕರೆ ತಿನ್ನುವುದರಿಂದ ದೇಹಕ್ಕೆ ಬೇಕಾಗಿದ್ದಕ್ಕಿಂತ ಹೆಚ್ಚೇ ಕ್ಯಾಲರಿ ದೊರೆಯುತ್ತದೆ; ಆದರೆ ಇವೆಲ್ಲವೂ ಪೋಷಕಾಂಶವಿಲ್ಲದ ಸತ್ವಹೀನ ಕ್ಯಾಲರಿಗಳು. ಹಾಗಾಗಿ ಪೋಷಕಾಂಶಗಳ ಕೊರತೆಯಾಗುತ್ತಿದ್ದಂತೆ ಇನ್ನಷ್ಟು ತಿನ್ನಬೇಕೆಂಬ ಬಯಕೆ ದೇಹಕ್ಕೆ ಮೂಡುತ್ತದೆ. ತೂಕ ಹೆಚ್ಚಲು ಇಷ್ಟು ಸಾಲದೇ?
ಇದನ್ನೂ ಓದಿ: PM Modi Birthday: 73ರಲ್ಲೂ 23ರ ರಣೋತ್ಸಾಹ; ಇಲ್ಲಿದೆ ಮೋದಿ ಆರೋಗ್ಯದ ಗುಟ್ಟು
ಹೃದಯದ ತೊಂದರೆಗಳು
ಸಕ್ಕರೆಭರಿತ ಆಹಾರಗಳು ಬೊಜ್ಜು ಹೆಚ್ಚಿಸುವುದು ಮಾತ್ರವಲ್ಲ, ದೇಹದಲ್ಲಿ ಟ್ರೈಗ್ಲಿಸರೈಡ್ ಅಂಶವನ್ನು ಹೆಚ್ಚಿಸುತ್ತವೆ. ಇದೇ ಮುಂದುವರಿದು ರಕ್ತನಾಳಗಳಲ್ಲಿ ಕೊಬ್ಬು ಜಮೆಯಾಗುತ್ತದೆ; ರಕ್ತದೊತ್ತಡ ಏರುತ್ತದೆ. ಮಧುಮೇಹದ ಜೊತೆಗೆ ಇವಿಷ್ಟು ಸಮಸ್ಯೆಗಳು ಸಾಕು ಹೃದಯವನ್ನು ಸಂಕಷ್ಟಕ್ಕೆ ಈಡು ಮಾಡಲು. ಇದರಿಂದ ಹೃದಯದ ತೊಂದರೆಗಳು ಮಾತ್ರವಲ್ಲ. ಪಾರ್ಶ್ವವಾಯುವಿನ ಭೀತಿಯೂ ಎದುರಾಗುತ್ತದೆ.
ಫ್ಯಾಟಿ ಲಿವರ್
ದೇಹದಲ್ಲಿ ಖರ್ಚಾಗದೆ ಉಳಿಯುವ ಶಕ್ತಿಯೆಲ್ಲಾ ಜಮೆಯಾಗುವುದು ಕೊಬ್ಬಿನ ರೂಪದಲ್ಲಿ. ಇಂಥ ಹೆಚ್ಚುವರಿ ಕೊಬ್ಬು ಜಮೆಯಾಗುವುದು ಯಕೃತ್ತಿನಲ್ಲಿ. ಆಗಿಂದಾಗ ಈ ಕೊಬ್ಬು ಖಾಲಿಯಾಗುತ್ತಿದ್ದರೆ ಹೆಚ್ಚಿನ ಜಮಾವಣೆ ಇರುವುದಿಲ್ಲ. ಆದರೆ ಅನಗತ್ಯ ಕ್ಯಾಲರಿಗಳು ಹೆಚ್ಚಾಗಿ ಕೊಬ್ಬು ಹೆಚ್ಚೆಚ್ಚು ದಾಸ್ತಾನಾಗುವುದಕ್ಕೆ ಪ್ರಾರಂಭವಾದರೆ, ಯಕೃತ್ನಲ್ಲಿದ್ದ ಆರೋಗ್ಯಪೂರ್ಣ ಕೋಶಗಳು ನಾಶವಾಗಿ ಈ ಕೊಬ್ಬಿನ ಕೋಶಗಳೇ ತುಂಬಲಾರಂಭಿಸುತ್ತವೆ. ಫ್ಯಾಟಿ ಲಿವರ್ ಕಾಡುವುದು ಹೀಗೆ. ಮದ್ಯಪಾನ ಮಾಡದೆಯೂ ಯಕೃತ್ತಿನ ಕೊಬ್ಬು ಇತ್ತೀಚೆಗೆ ಬಹಳಷ್ಟು ಜನರನ್ನು ಕಾಡಲು ಇದುವೇ ಕಾರಣ.
ಅತಿಯಾದ ಸಿಹಿಯಿಂದ ಹಲ್ಲು ಮತ್ತು ಬಾಯಿಯ ಆರೋಗ್ಯವೂ ಕ್ರಮೇಣ ನಶಿಸುತ್ತದೆ. ಅತಿ ಸಿಹಿ ಉತ್ಪತ್ತಿ ಮಾಡುವ ಆಮ್ಲಗಳಿಗೆ ಹಲ್ಲುಗಳ ಎನಾಮಲ್ ನಾಶವಾಗಿ, ಕುಳಿಗಳು ಬೀಳುತ್ತವೆ. ಒಸಡುಗಳ ಮೇಲೂ ಇದು ಪರಿಣಾಮ ಬೀರುತ್ತದೆ. ಹಾಗಾಗಿ ದೇಹಕ್ಕೆ ಅಗತ್ಯವಾದ ಸಕ್ಕರೆಯಂಶವನ್ನು ನೈಸರ್ಗಿಕ ತಿನಿಸುಗಳಿಂದ ಒದಗಿಸುವುದು ಕ್ಷೇಮವೇ ಹೊರತು ನಾವೇ ಬೆಲ್ಲ/ ಸಕ್ಕರೆ ಸುರಿದು ಮಾಡಿದ ಸಿಹಿತಿಂಡಿಗಳಿಂದ ಅಲ್ಲ. ಇದರರ್ಥ ಸಿಹಿ ತಿನ್ನುವುದನ್ನು ಸಂಪೂರ್ಣ ನಿಲ್ಲಿಸಬೇಕೆಂದಲ್ಲ. ಆದರೆ ತಿನ್ನುವ ಪ್ರಮಾಣದ ಮೇಲೆ ಖಂಡಿತವಾಗಿ ಮಿತಿ ಇರಲೇಬೇಕು.
ಆರೋಗ್ಯ
Pneumonia Remedy: ನ್ಯುಮೋನಿಯಾಗೆ ಸೂಪರ್ಫುಡ್ ಯಾವುವೆಂದು ತಿಳಿದಿದೆಯೇ?
ನ್ಯುಮೋನಿಯಾ ಸಂದರ್ಭ ಹಾಗೂ, ಗುಣಮುಖರಾದ ಮೇಲೂ ಯಾವೆಲ್ಲ ಕೆಲವು ಆಹಾರಗಳು ನ್ಯುಮೋನಿಯಾದಿಂದ ಬಹುಬೇಗನೆ ಗುಣಮುಖರಾಗುವಂತೆ (pneumonia remedy) ಮಾಡುತ್ತದೆ ಎಂಬುದನ್ನು ನೋಡೋಣ.
ಕೆಲವೊಮ್ಮೆ ಕೆಲವರಿಗೆ ಸಾಮಾನ್ಯ ಜ್ವರ ನ್ಯುಮೋನಿಯಾಕ್ಕೆ (pneumonia) ತಿರುಗುವುದುಂಟು. ಸಾಮಾನ್ಯ ಜ್ವರ (viral fever) ಎಂದುಕೊಂಡು ಔಷಧಿಗಳನ್ನು ತೆಗೆದುಕೊಂಡರೂ, ದಿನಗಳೆದಂತೆ, ಕಫ, ಮೂಗು ಕಟ್ಟಿರುವುದು, ಕಡಿಮೆಯಾಗದ ಜ್ವರ, ಜೊತೆಗೆ ಚಳಿ ಎಲ್ಲವೂ ಉಲ್ಬಣಿಸಿ ಇದು ನ್ಯುಮೋನಿಯಾ ಎಂಬ ತೀರ್ಮಾನಕ್ಕೆ ವೈದ್ಯರು ಪರೀಕ್ಷೆಗಳಿಂದ ದೃಢಪಡಿಸುತ್ತಾರೆ. ಶ್ವಾಸಕೋಶದೊಳಗಿನ ಗಾಳಿಚೀಲಗಳಿಗೂ ಇನ್ಫೆಕ್ಷನ್ (Infection) ಹರಡಿಕೊಂಡು ಎದೆನೋವು ಕೂಡಾ ಕಾಣಿಸಿಕೊಳ್ಳುತ್ತದೆ. ಉಸಿರಾಟಕ್ಕೆ ಕಷ್ಟವಾಗುವುದು, ನಿರ್ಜಲೀಕರಣ (dehydration), ನಿತ್ರಾಣ, ಉಬ್ಬಸದಂತಹ ಸಮಸ್ಯೆ, ಕೆಮ್ಮಿನ ಸಂದರ್ಭ ಹಸಿರು ಮಿಶ್ರಿತ ಹಳದಿ ಬಣ್ಣದ ಕಫ ಹೊರಗೆ ಬರುವುದು, ಕೆಲವೊಮ್ಮೆ ರಕ್ತವೂ ಸೇರಿ ಕಫ ಹೊರಗೆ ಬರುವುದು ಇತ್ಯಾದಿಗಳೆಲ್ಲ ಆಗಿ ನ್ಯುಮೋನಿಯಾ ಬಹಳವಾಗಿ ಕಾಡುತ್ತದೆ. ಹೀಗೆ ನ್ಯುಮೋನಿಯಾ ಜ್ವರದಿಂದ ಬಳಲಿ ವೈದ್ಯರ ಆರೈಕೆಯ ನಂತರ ಗುಣಮುಖರಾದರೂ ಕೂಡಾ, ಬಹಳ ದಿನಗಳವರೆಗೆ ಶಿಸ್ತುಬದ್ಧ ಆಹಾರ ಸೇವನೆ, ಆರೋಗ್ಯದ ಬಗ್ಗೆ ಕಾಳಜಿ ಎಲ್ಲವೂ ಅತ್ಯಂತ ಅಗತ್ಯ. ಇದರ ನಿರ್ಲಕ್ಷ್ಯ ಸಲ್ಲದು. ಅತ್ಯಂತ ಕಾಳಜಿಯುಕ್ತ ಆಹಾರ ಸೇವನೆಯೂ (Food habit) ಅಗತ್ಯ. ಹಾಗಾಗಿ ಬನ್ನಿ, ನ್ಯುಮೋನಿಯಾ ಸಂದರ್ಭ ಹಾಗೂ, ಗುಣಮುಖರಾದ (pneumonia cure) ಮೇಲೂ ಯಾವೆಲ್ಲ ಕೆಲವು ಆಹಾರಗಳು ನ್ಯುಮೋನಿಯಾದಿಂದ ಬಹುಬೇಗನೆ ಗುಣಮುಖರಾಗುವಂತೆ (pneumonia remedy) ಮಾಡುತ್ತದೆ ಎಂಬುದನ್ನು ನೋಡೋಣ.
1. ಜೇನುತುಪ್ಪ: ಜೇನುತುಪ್ಪ ಶ್ವಾಸಕೋಶದ ಸಮಸ್ಯೆಗಳಿಗೆ ಅತ್ಯಂತ ಒಳ್ಳೆಯದು. ಇದು ಕಫ, ಶೀತ, ನೆಗಡಿ ಮತ್ತಿತರ ಸಮಸ್ಯೆಗಳಿಗೂ ಅತ್ಯುತ್ತಮ ಪರಿಹಾರ ನೀಡುತ್ತದೆ. ನಿತ್ಯವೂ ಒಂದು ಚಮಚ ಜೇನುತುಪ್ಪ ಸೇವನೆಯಿಂದ ಅಥವಾ ಜೇನುತುಪ್ಪದ ಜೊತೆಗೆ ತುಳಸಿರಸ, ಶುಂಠಿರಸ ಸೇರಿಸಿ ಸೇವಿಸುವುದರಿಂದ ಕಫ ಬಹುಬೇಗನೆ ಕರಗಿ ಶ್ವಾಸಕೋಶಗಳಿಗೆ ಆರಾಮ ದೊರೆಯುತ್ತದೆ.
2. ಅರಿಶಿನ: ನಿತ್ಯವೂ ಭಾರತೀಯರು ಅಡುಗೆಯಲ್ಲಿ ಬಳಸುವ ಮಸಾಲೆಗಳಲ್ಲಿ ಒಂದು. ಇದನ್ನು ನಮ್ಮ ಹಲವು ಸಮಸ್ಯೆಗಳಿಗೂ ನಮಗೆ ಬಳಸಿ ಗೊತ್ತು. ಯಾಕೆಂದರೆ ಇದು ತನ್ನಲ್ಲಿ ಆಂಟಿಸೆಪ್ಟಿಕ್ ಗುಣಗಳನ್ನು ಹೊಂದಿರುವ ಮಸಾಲೆ ಪದಾರ್ಥ. ಇದರ ಸೇವನೆಯಿಂದಲೂ ಕೂಡಾ ಇನ್ಫೆಕ್ಷನ್ ಬಹುಬೇಗನೆ ದೇಹದಿಂದ ವಾಸಿಯಾಗಿ, ಆರೋಗ್ಯ ನಮ್ಮದಾಗುತ್ತದೆ.
3. ಶುಂಠಿ: ಶೀತ, ಕಫ, ನೆಗಡಿಯಂತಹ ಸಮಸ್ಯೆಗಳಿಗೆ ಎಲ್ಲರಿಗೂ ಮೊದಲು ನೆನಪಾಗುವ ಮನೆಮದ್ದು ಎಂದರೆ ಶುಂಠಿ. ಈ ಶುಂಠಿಯೂ ನ್ಯುಮೋನಿಯಾದಂತಹ ಸಮಸ್ಯೆಗೂ ಕೂಡಾ ಅತಯುತ್ತಮ ಕೆಲಸವನ್ನೇ ಮಾಡುತ್ತದೆ. ಜೇನುತುಪ್ಪದ ಜೊತೆ ಶುಂಠಿ ರಸ ಸೇರಿಸಿ ಸೇವನೆ ಮಾಡುವುದು, ಶುಂಠಿ ಸೇರಿಸಿ ಕಷಾಯ ಮಾಡುವುದು ಅಥವಾ ಶುಂಠಿ ಟೀ ಮಾಡಿ ಕುಡಿಯುವುದರಿಂದಲೂ ಸಮಸ್ಯೆಗೆ ಉತ್ತಮ ಫಲ ಸಿಗುತ್ತದೆ.
ಇದನ್ನೂ ಓದಿ: Cashew Health Tips: ಗೋಡಂಬಿ ತಿಂದರೆ ಏನಾಗುತ್ತದೆ?
4. ಸಿಟ್ರಸ್ ಹಣ್ಣುಗಳು: ನಿಂಬೆಹಣ್ಣು, ಮುಸಂಬಿ ಹಾಗೂ ಕಿತ್ತಳೆ ಹಣ್ಣುಗಳಲ್ಲಿ ಹೇರಳವಾಗಿ ವಿಟಮಿನ್ ಸಿ ಇರುವುದರಿಂದ ಇವು ಕೂಡಾ ಶೀತ, ನೆಗಡಿ, ಕಫದಂತಹ ಸಮಸ್ಯೆಗಳಿಗೆ ನೆರವಾಗಬಲ್ಲುದು. ನ್ಯುಮೋನಿಯಾ ನಂತರಕ್ಕಿಂತ, ಇವನ್ನು ಮೊದಲೇ ನಮ್ಮ ಆಹಾರಗಳಲ್ಲಿ ಸೇವಿಸುವುದರಿಂದ ದೇಹಕ್ಕೆ ಮೊದಲೇ ವಿಟಮಿನ್ ಸಿ ಸರಿಯಾಗಿ ಲಭ್ಯವಾಗುವ ಮೂಲಕ ಇಂತಹ ಇನ್ಫೆಕ್ಷನ್ಗಳಿಂದ ಇವು ನಮ್ಮನ್ನು ದೂರ ಇರಿಸುವಲ್ಲಿ ನೆರವಾಗುತ್ತವೆ. ರೋಗನಿರೋಧಕ ಶಕ್ತಿಯನ್ನು ಇವು ಹೆಚ್ಚಿಸುವ ಮೂಲಕ ಇನ್ಫೆಕ್ಷನ್ಗಳಿಂದ ನಮ್ಮನ್ನು ದೂರವಿರಿಸುತ್ತವೆ.
5. ಬೀಜಗಳು: ಬಾದಾಮಿ, ಪಿಸ್ತಾ, ವಾಲ್ನಟ್ನಂತಹ ಬೀಜಗಳನ್ನು ಸೇವನೆ ಮಾಡುವ ಮೂಲಕವೂ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಪ್ರೊಟೀನ್ ಹಾಗೂ ಪೋಷಕಾಂಶಗಳನ್ನು ನೀಡುತ್ತಾ ರೋಗಗಳಿಂದ ರಕ್ಷಿಸಿಕೊಳ್ಳಬಹುದು.
ಇದನ್ನೂ ಓದಿ: Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!
ಆರೋಗ್ಯ
Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!
ʻಮ್ಯಾಜಿಕ್ ಡ್ರಿಂಕ್ʼ ಎಳನೀರಿನಿಂದ ಲಾಭಗಳಿರುವಷ್ಟೇ, ತೊಂದರೆಗಳೂ ಇವೆ. ಅವು ಯಾವುವು, ಹೇಗೆ, ಅದನ್ನು ತಪ್ಪಿಸುವುದು ಹೇಗೆ (Health tips) ಎಂಬುದನ್ನು ಇಲ್ಲಿ ನೋಡೋಣ.
ಕಲ್ಪವೃಕ್ಷದಿಂದ ಬರುವ ಎಳನೀರು (Tender coconut) ಅಮೃತವೆಂದರೆ ತಪ್ಪಿಲ್ಲ ನಿಜ. ನಿಸರ್ಗದತ್ತವಾಗಿ ಲಭ್ಯವಿರುವ ಪೋಷಕಾಂಶಯುಕ್ತ (Nutrient rich) ಪಾನೀಯವಿದು. ನಮ್ಮ ದಾಹ ತಣಿಸುವ ಅಷ್ಟೇ ಅಲ್ಲದೆ, ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಖನಿಜ ಲವಣಗಳನ್ನು ಪೂರೈಸುವ ಈ ಪಾನೀಯ ನಿಜಕ್ಕೂ ನೈಸರ್ಗಿಕ ಅದ್ಭುತಗಳಲ್ಲಿ ಒಂದು. ಇದರಲ್ಲಿ, ರೋಗನಿರೋಧಕ ಶಕ್ತಿ (Immunity power) ನಮ್ಮನ್ನು ಹಲವು ರೋಗಗಳಿಂದ ರಕ್ಷಿಸುವುದಲ್ಲದೆ, ದೇಹಕ್ಕೆ ದಿಢೀರ್ ಶಕ್ತಿಯನ್ನೂ ಚೈತನ್ಯವನ್ನೂ ನೀಡುತ್ತದೆ. ಇಂತಹ ಎಳನೀರು ಅಮೃತವೆಂದು ಸಿಕ್ಕಾಪಟ್ಟೆ ಕುಡಿದರಾದೀತೇ ಹೇಳಿ? ಅಮೃತ ವಿಷವಾಗುವುದರಲ್ಲಿ ಸಂದೇಹವೇ ಇಲ್ಲ. ಹಾಗಾದರೆ, ಬನ್ನಿ, ಈ ʻಮ್ಯಾಜಿಕ್ ಡ್ರಿಂಕ್ʼ ಎಳನೀರಿನಿಂದ ಲಾಭಗಳಿರುವಷ್ಟೇ, ತೊಂದರೆಗಳೂ ಇವೆ. ಅವು ಯಾವುವು, ಹೇಗೆ, ಅದನ್ನು ತಪ್ಪಿಸುವುದು ಹೇಗೆ (Health tips) ಎಂಬುದನ್ನು ಇಲ್ಲಿ ನೋಡೋಣ.
1. ಅತಿಯಾಗಿ ಎಳನೀರು ಕುಡಿಯುವುದರಿಂದ ನಮ್ಮ ಜೀರ್ಣಾಂಗವ್ಯೂಹಕ್ಕೆ ತೊಂದರೆಯಾಗುತ್ತದೆ. ಇದರಲ್ಲಿ ಲಾಕ್ಸೇಟಿವ್ ಗುಣಗಳೂ ಇರುವುದರಿಂದ ಅತಿಯಾಗಿ ಕುಡಿದ ತಕ್ಷಣ ಅಜೀರ್ಣವಾಗಿ ಭೇದಿ ಶುರುವಾಗಬಹುದು. ಅಷ್ಟೇ ಅಲ್ಲ, ದೇಹ ಅತಿಯಾಗಿ ತಂಪಾಗಿ ಮೊದಲೇ ಶೀತಪ್ರಕೃತಿಯ ದೇಹವಿರುವ ಮಂದಿಗಂತೂ ಇದು ಥಂಡಿಗೆ ತಿರುಗಬಹುದು. ಹೀಗಾಗಿ ಎಳನೀರು ಅತಿಯಾಗದಂತೆಯೂ ಜಾಗ್ರತೆ ವಹಿಸುವುದು ಅತ್ಯಂತ ಮುಖ್ಯ.
2. ಅಥ್ಲೀಟ್ಗಳಿಗೂ ಎಳನೀರು ಒಳ್ಳೆಯದಲ್ಲ. ನೀರಿಗೆ ಬದಲಾಗಿ ಎಳನೀರು ಕುಡಿದು ಆಟೋಟಗಳ ಅಭ್ಯಾಸ ಒಳ್ಳೆಯದಲ್ಲ. ಅದರ ಬದಲು ಅವರಿಗೆ ಖಾಲಿ ನೀರೇ ಒಳ್ಳೆಯದು. ಇದು ನೈಸರ್ಗಿಕವಾಗಿ ಸಿಗುವ ಎಲೆಕ್ಟ್ರೋಲೈಟ್ ಆಗಿದ್ದರೂ, ಇದರಲ್ಲಿ ಸಾಕಷ್ಟು ಖನಿಜ ಲವಣಗಳಿದ್ದರೂ ಇದು ಯುವ ಅಥ್ಲೀಟ್ಗಳಿಗೆ ಯಾವಾಗಲೂ ಒಳ್ಳೆಯದಲ್ಲ. ಅತಿಯಾದ ವರ್ಕೌಟ್ ಹಾಗೂ ನಿರಂತರ ತರಬೇತಿಗಳಿದ್ದ ಸಂದರ್ಭ ಶಕ್ತಿಗಾಗಿ ಇವನ್ನು ಕುಡಿಯಬಹುದೇ ಹೊರತು, ಸಾಮಾನ್ಯ ನಿತ್ಯದ ತರಬೇತಿಗಳಿಗೆ ನಿತ್ಯವೂ ಎಳನೀರಿನ ಅಗತ್ಯವಿಲ್ಲ. ಅದರ ಬದಲಾಗಿ ನೀರನ್ನೇ ಕುಡಿಯುವುದು ಅತ್ಯುತ್ತಮ ಎನ್ನುತ್ತಾರೆ ತಜ್ಞರು.
3. ಎಳನೀರಿನ ಇನ್ನೊಂದು ಸಮಸ್ಯೆ ಎಂದರೆ, ಇದನ್ನು ಕುಡಿದರೆ, ಆಗಾಗ ವಾಶ್ರೂಂ ಹೋಗಬೇಕಾಗುತ್ತದೆ ಎಂಬುದು. ಇದರ ಡೈಯೂರೆಟಿಕ್ ಗುಣಗಳಿಂದಾಗಿ ಇದು ಸಾಮಾನ್ಯ ನೀರಿಗಿಂತ ಆಗಾಗ ಮೂತ್ರವಿಸರ್ಜನೆಯನ್ನು ಪ್ರೇರೇಪಿಸುತ್ತದೆ.
4. ಇದು ಆರೋಗ್ಯಕರ ಎಂಬುದರಲ್ಲಿ ಎರಡು ಮಾತಿಲ್ಲ ಎಂಬುದು ನಿಜವೇ ಆದರೂ, ಇದರಲ್ಲಿ ಹೇರಳವಾಗಿ ನೈಸರ್ಗಿಕ ಸಕ್ಕರೆಯ ಅಂಶವೂ ಇದೆ. ಹಣ್ಣುಗಳಿಗೆ ಹೋಲಿಸಿದರೆ, ಇದರಲ್ಲಿರುವ ಸಕ್ಕರೆಯ ಅಂಶ ಕಡಿಮೆಯಾದರೂ, ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಾರ್ಬೋಹೈಡ್ರೇಟುಗಳೂ ಇವೆ. ಹಾಗಾಗಿ ಇದು ಸಹಜವಾಗಿಯೇ ಹೆಚ್ಚು ಕ್ಯಾಲರಿಯ ಪೇಯ. ಒಂದು ಕಪ್ ಎಳನೀರಿನಲ್ಲಿ ಸುಮಾರು 60 ಕ್ಯಾಲರಿಗಳಿರುವುದರಿಂದ ಹಾಗೂ ಇದರಲ್ಲಿ ಹೇರಳವಾಗಿ ಪೊಟಾಶಿಯಂ ಹಾಗೂ ಸೋಡಿಯಂ ಕೂಡಾ ಇರುವುದರಿಂದ, ಕ್ಯಾಲರಿಯ ಆಧಾರದಲ್ಲಿ ಆಹಾರ ತೆಗೆದುಕೊಳ್ಳುವ ಮಂದಿಗೆ ಇದು ವರವಾಗಲಾರದು. ಹಾಗೆ ಯೋಚಿಸುವ ಮಂದಿಗೆ ದಾಹ ಇಳಿಸಲು ನೀರೇ ಸೂಕ್ತ.
ಆದರೆ, ಇದರಲ್ಲಿರುವ ಪೋಷಕಾಂಶಗಳನ್ನು ಗಣನೆಗೆ ತೆಗೆದುಕೊಂಡರೆ, ಇದು ಅಮೃತ ಎಂಬುದರಲ್ಲಿ ಅನುಮಾಣವಿಲ್ಲ. ಹಾಗಾಗಿ ನಿತ್ಯವೂ ಅಲ್ಲದಿದ್ದರೂ, ಆಗಾಗ ಹಿತಮಿತವಾಗಿ ಎಳನೀರಿನ ಸೇವನೆ ಮಾಡುವುದು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು. ಆದರೆ, ಪೊಟಾಶಿಯಂ ಹಾಗೂ ಸೋಡಿಯಂ ಏರಿಳಿತದ ಸಮಸ್ಯೆಯಿರುವ ಮಂದಿ ಎಳನೀರು ಕುಡಿಯುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಇದನ್ನೂ ಓದಿ: Health Tips: ಚಹಾದ ಜೊತೆಗೆ ಈ ಬಗೆಯ ಆಹಾರಗಳನ್ನು ತಿನ್ನುವ ಅಭ್ಯಾಸ ಒಳ್ಳೆಯದಲ್ಲ ಗೊತ್ತೇ?!
-
ಪ್ರಮುಖ ಸುದ್ದಿ24 hours ago
Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
-
ಪ್ರಮುಖ ಸುದ್ದಿ15 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ21 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಸುವಚನ5 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಗ್ಯಾಜೆಟ್ಸ್18 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ಕ್ರೈಂ16 hours ago
Assault Case : ಕೈ ತಾಗಿದ್ದಕ್ಕೆ ಯುವಕರ ಮಧ್ಯೆ ಕಿರಿಕ್; ಖಾನಾಪುರದಲ್ಲಿ ಬಿಗುವಿನ ವಾತಾವರಣ
-
ದೇಶ16 hours ago
Prisoners Escape: ವ್ಯಾನ್ನಿಂದ ಜಿಗಿದು ಇಬ್ಬರು ಕೈದಿಗಳು ಪರಾರಿ; ಕತ್ತೆ ಕಾಯುತ್ತಿದ್ದ ಪೊಲೀಸರು!
-
ಉಡುಪಿ14 hours ago
Dr HS Shetty : ಯಶಸ್ವೀ ಉದ್ಯಮಿ ಡಾ. ಎಚ್.ಎಸ್ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ; ಸಾಧನೆ, ಸೇವೆಯ ವಿಸ್ತಾರಕ್ಕೆ ನಮಿಸಿದ ಜನ