Raja Marga Column : ಅಸ್ಮಿತಾಯ್: ಕೊಂಕಣಿ ಭಾಷೆ, ಸಂಸ್ಕೃತಿ, ಸಂಪ್ರದಾಯಗಳ ವಿರಾಟ್ ಕ್ಯಾನ್ವಾಸ್ - Vistara News

ಅಂಕಣ

Raja Marga Column : ಅಸ್ಮಿತಾಯ್: ಕೊಂಕಣಿ ಭಾಷೆ, ಸಂಸ್ಕೃತಿ, ಸಂಪ್ರದಾಯಗಳ ವಿರಾಟ್ ಕ್ಯಾನ್ವಾಸ್

Raja Marga Column : ಕೊಂಕಣಿ ಭಾಷೆಯಲ್ಲೊಂದು ಅದ್ಭುತವಾದ ಸಿನಿಮಾ. ಆಂತರ್ಯದಲ್ಲೊಂದು ಪ್ರೀತಿ ಕಥೆಯನ್ನು ಹೊತ್ತು ಸಾಗುವ ಈ ಸಿನಿಮಾದಲ್ಲಿ ದೊಡ್ಡ ಮಟ್ಟದಲ್ಲಿ ಡಿಪಿಕ್ಟ್‌ ಆಗುವುದು ಮಹೋನ್ನತವಾದ ಕೊಂಕಣಿ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ವಿರಾಟ್‌ ಸ್ವರೂಪಗಳು.

VISTARANEWS.COM


on

Osmitoy Konkani cinema
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
RAJAMARGA

ಸುಮಾರು ವರ್ಷಗಳ ನಂತರ ಒಂದು ಸಿನಿಮಾ ನನ್ನನ್ನು ಹಿಡಿದು ಅಲ್ಲಾಡಿಸಿ ಬಿಟ್ಟಿತ್ತು. ಸೆ. 15ಸಿನಿಮಾ ನೋಡಿ ಬಂದು ಹಲವು ದಿನ ಆದರೂ ಅದರ ಹ್ಯಾಂಗ್ ಓವರಿನಿಂದ ಹೊರಗೆ ಬರಲು ನನಗೆ ಸಾಧ್ಯವೇ ಆಗಲಿಲ್ಲ ಅಂದರೆ ಆ ಸಿನಿಮಾ ಅದ್ಭುತವೇ ಹೌದು. ಭಾರತದ ಒಂದು ಅತ್ಯಂತ ಶ್ರೀಮಂತ ಭಾಷೆಯ ಸಾಂಸ್ಕೃತಿಕ ಶ್ರೀಮಂತಿಕೆ, ಜಾನಪದ, ಸಂಗೀತ ಮತ್ತು ಸಂಪ್ರದಾಯಗಳನ್ನು ಇಷ್ಟೊಂದು ಶ್ರೀಮಂತವಾಗಿ ಶೋಕೇಸ್ ಮಾಡಿರುವ ‌ʻಅಸ್ಮಿತಾಯ್‌ʼ (Osmitay – In search of Konkani Identity) ಒಂದು ಮ್ಯಾಗ್ನಮಾಪಸ್ ಸಿನಿಮಾ ಖಂಡಿತ ಹೌದು (Raja Marga Column).

ಕೊಂಕಣಿ ಭಾಷೆಯು ಯಾಕೆ ಅಷ್ಟೊಂದು ಶ್ರೀಮಂತ ?

ಗೋಪಾಲಕೃಷ್ಣ ಪೈ (Gopalakrishna Pai) ಅವರ ‘ಸ್ವಪ್ನ ಸಾರಸ್ವತ’ ಕಾದಂಬರಿ (Swapna Saraswata Novel) ನಾನು ಓದಿದ್ದೆ. ಸಾವಿರಾರು ವರ್ಷಗಳ ಹಿಂದೆ ಸರಸ್ವತಿ ನದಿ ತೀರದಲ್ಲಿ ಉಗಮವಾದ ಈ ಪ್ರಾಕೃತ ಭಾಷೆಯು ಅದರ ಉತ್ಪನ್ನವೇ ಆಗಿರುವ ಶ್ರೀಮಂತವಾದ ಸಂಸ್ಕೃತಿ, ಜಾನಪದ, ಸಾಹಿತ್ಯ, ಕಲೆ, ಸಂಗೀತ, ಸಂಪ್ರದಾಯಗಳನ್ನು ಹುಟ್ಟು ಹಾಕಿತ್ತು. ಆದರೆ ಆಗ ನಡೆದ ಭೂಕಂಪದಿಂದ ಸರಸ್ವತಿ ನದಿಯು ಭೂಮಿಯ ಒಡಲನ್ನು ಸೇರಿ ಅದೃಶ್ಯವಾಯಿತು. ಆಗ ಹಸಿವು, ಬಾಯಾರಿಕೆ, ಉದ್ಯೋಗ, ಬದುಕು ಅರಸಿಕೊಂಡು ಕೊಂಕಣಿ ಸಮುದಾಯವು (Konkani Community) ಒಂದು ಮಹಾ ವಲಸೆಗೆ (Mass Exodus) ಹೊರಟಿತು. ಅವರು ದಕ್ಷಿಣಾಭಿಮುಖವಾಗಿ ಹೊರಟು ಭಾರತದ ಅಲ್ಲಲ್ಲಿ ನೆಲೆ ನಿಂತರು. ಅದರಲ್ಲಿ ಬಹಳ ದೊಡ್ಡ ಸಂಖ್ಯೆಯ ಕೊಂಕಣಿಗರು ಬಂದು ನೆಲೆಸಿದ್ದು ಗೋವಾದಲ್ಲಿ (Goa State). ಅಲ್ಲಿ ಬೇರೆ ಬೇರೆ ಉದ್ಯೋಗವನ್ನು ಮಾಡುತ್ತ, ದೇವಸ್ಥಾನಗಳನ್ನು ಕಟ್ಟುತ್ತಾ ಕೊಂಕಣಿ ಸಂಸ್ಕೃತಿಯನ್ನು ಹರಡುತ್ತ ನೆಲೆ ನಿಂತವರು ಅವರು.

Swapna Saraswata novel by Gopalakrishna pai

ಪೋರ್ಚುಗೀಸ್ ದಾಳಿ ಅವರನ್ನು ಮತ್ತೆ ಸಂತ್ರಸ್ತ ಮಾಡಿತ್ತು

16ನೆ ಶತಮಾನದಲ್ಲಿ ಗೋವಾ ಪೋರ್ಚುಗೀಸರ ದಾಳಿಗೆ ತುತ್ತಾಗಿ ಅವರ ವಸಾಹತು ಆಯಿತು. ಸಾಮೂಹಿಕ ಮತಾಂತರಗಳು, ಸಂಸ್ಕೃತಿ ನಾಶದ ಕೃತ್ಯಗಳು, ಹಿಂಸೆ, ರಕ್ತಪಾತಗಳು ನಿರಂತರ ನಡೆದವು. ಕೊಂಕಣಿ ಜನಾಂಗ, ಅವರ ನಂಬಿಕೆ, ಸಂಪ್ರದಾಯಗಳು ಮತ್ತೆ ತುಳಿತಕ್ಕೆ ಒಳಗಾದವು. ಮತಾಂತರಕ್ಕೆ ಒಪ್ಪದವರನ್ನು ಸಾವಿರಾರು ಜನರ ಮುಂದೆ ಬಹಿರಂಗವಾಗಿ ವಿಚಾರಣೆ ಮಾಡಿ (OPEN INQUISITION ) ಸುಟ್ಟು ಹಾಕುವ ಕೃತ್ಯಗಳು ದೊಡ್ಡ ಮಟ್ಟದಲ್ಲಿ ನಡೆದವು. ಆಗಲೂ ಕೊಂಕಣಿ ಸಮುದಾಯ ತಮ್ಮ ನಂಬಿಕೆ ಮತ್ತು ಭಾಷೆಯ ಮೇಲಿನ ಪ್ರೀತಿಗಳನ್ನು ಉಳಿಸಿಕೊಂಡು ಬಂದಿತ್ತು. ನಿರಂತರ ಅಲೆಮಾರಿ ಆದ ಮತ್ತು ದಾಳಿಗೆ ಒಳಗಾದ ಸಮುದಾಯದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾವಿರಾರು ಜನರು ಬಲಿದಾನ ಮಾಡಿದ ಉದಾಹರಣೆಗಳು ನಮಗೆ ಇತಿಹಾಸದಲ್ಲಿ ದೊರೆಯುತ್ತವೆ. ಭಾಷೆಯ ಮೇಲಿನ ಸರಣಿ ಆಘಾತಗಳನ್ನು ಆ ಭಾಷಿಗರು ಹೇಗೆ ಗೆದ್ದರು ಅನ್ನೋದು ಈಗ ಒಂದು ರೋಮಾಂಚಕ ಇತಿಹಾಸದ ಭಾಗ.

Osmitay Konkani movie

ಏನುಂಟು, ಏನಿಲ್ಲ ಈ ಅಸ್ಮಿತಾಯ್ ಸಿನಿಮಾದಲ್ಲಿ?

ಅಸ್ಮಿತಾಯ್ (IDENTITY-ಅಸ್ಮಿತೆ) ಒಂದು ಅದ್ಭುತವಾದ ಜರ್ನಿ. ಅಮೆರಿಕಾದಲ್ಲಿ ಹುಟ್ಟಿ ಅಲ್ಲಿಯೇ ಓದುತ್ತಿದ್ದ ವಿವೇಕ್ ಎಂಬ ಕೊಂಕಣಿ ಮೂಲದ ಹುಡುಗನಿಗೆ ಒಮ್ಮೆ ತುಂಬಾ ಅಪಮಾನವಾಗಿ ತನ್ನ ಮೂಲದ ಸಂಸ್ಕೃತಿಯನ್ನು ಹುಡುಕಲೇ ಬೇಕಾದ ಪ್ರಸಂಗ ಬರುತ್ತದೆ. ಅವನು ತನ್ನ ಹೆತ್ತವರ ಆಶಯದಂತೆ ಭಾರತಕ್ಕೆ, ಅಂದರೆ ಮಂಗಳೂರಿಗೆ ಬರುತ್ತಾನೆ. ಅಲ್ಲಿ ಅವನಿಗೆ ಸಮಾನ ಆಸಕ್ತಿಯ ಚಂದದ ಹುಡುಗಿ ಸುಷ್ಮಾ ದೊರೆಯುತ್ತಾಳೆ. ಅವರಿಬ್ಬರೂ ಕೊಂಕಣಿ ಸಂಸ್ಕೃತಿಯ ಮಹಾ ಆರಾಧಕ ಕಲಾವಿದ ಸಿಮಾವ್ ಪೆರಿಸ್ ಅವರಿಂದ ಮಾರ್ಗದರ್ಶನ ಪಡೆದು ತಮ್ಮ ಬೇರುಗಳನ್ನು ಹುಡುಕುತ್ತ ಗೋವಾ ತಲುಪುತ್ತಾರೆ. ಹೋಗುವ ದಾರಿಯಲ್ಲಿ ಮತ್ತು ಗೋವಾದಲ್ಲಿ ಅವರಿಗೆ ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ವಿಶ್ವರೂಪ ದರ್ಶನ ಆಗುತ್ತದೆ. ಕೊಂಕಣಿ ಭಾಷೆಯ ಸ್ವಾಭಿಮಾನಕ್ಕೆ ತಮ್ಮ ಪ್ರಾಣವನ್ನು ಬಲಿ ಕೊಟ್ಟ ಹಿರಿಯರ ತ್ಯಾಗದ ಕಥೆಗಳು, ಘಟನೆಗಳು ಅವರ ಮನವನ್ನು ಕಲಕುತ್ತವೆ. ಗೋವಾದ ಶ್ರೀಮಂತ ಕೊಂಕಣಿ ಸಂಸ್ಕೃತಿಯ ವಿರಾಟ್ ದರ್ಶನ ಆಗುತ್ತದೆ. ಕೊನೆಗೆ ಏನಾಯಿತು ಎಂದು ನೀವು ಈ ಎರಡೂವರೆ ಘಂಟೆಯ ಸಿನೆಮಾ ನೋಡಿ ಅರ್ಥ ಮಾಡಿಕೊಳ್ಳಬೇಕು.

Osmitay Konkani movie

ಆಸ್ಮಿತಾಯ್ – ಕೇವಲ ಒಂದು ಸಿನಿಮಾ ಅಲ್ಲ, ಅದೊಂದು ಫೀಲ್!

ಕೊಂಕಣಿ ಭಾಷೆಯ ಮತ್ತು ಸಾಂಸ್ಕೃತಿಕ ಪ್ರಸಾರದ ಪ್ರಮುಖ ಸಂಸ್ಥೆ ‘ಮಾಂಡ್ ಸೋಭಾಣ್’ (Mandd SoBhan) ಈ ಸಿನಿಮಾವನ್ನು ಪ್ರಸ್ತುತ ಪಡಿಸಿದೆ. ಆ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ಎರಿಕ್ ಓಜಾರಿಯೋ (Eric Ozario) ಈ ಸಿನಿಮಾದ ಕಥೆಯನ್ನು ಬರೆದಿದ್ದಾರೆ. ಒಂದು ದಶಕಕ್ಕೂ ಅಧಿಕ ವರ್ಷದ ಅವಧಿಯಲ್ಲಿ ಅವರು ಸಂಶೋಧನೆ ಮಾಡಿ ಬರೆದ ಕಥೆಯಿದು. ಚಿತ್ರಕಥೆ ಮತ್ತು ಸಂಭಾಷಣೆ ಜೋಯೆಲ್ ಪಿರೇರಾ ಬರೆದಿದ್ದಾರೆ. ಯುವ ನಿರ್ದೇಶಕ ವಿಲಾಸ್ ರತ್ನಾಕರ್ ಕ್ಷತ್ರಿಯ (Vilas Ratnakar Kshatriya) ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಲೂಯಿಸ್ ಪಿಂಟೋ (Luis Pinto) ಚಿತ್ರ ನಿರ್ಮಾಣ ಮಾಡಿದ್ದಾರೆ. ವಿವೇಕ್ ಮತ್ತು ಸುಷ್ಮಾ ಆಗಿ ಇಡೀ ಸಿನಿಮಾ ಆವರಿಸಿದ ಯುವ ಜೋಡಿ ಅಶ್ವಿನ್ ಡಿಕೊಸ್ಟಾ ಮತ್ತು ವೆನ್ಸಿಟಾ ಡಯಾಸ್ ತಮ್ಮ ಮುಗ್ಧ ಅಭಿನಯದ ಮೂಲಕ ನಮಗೆ ಮೋಡಿ ಮಾಡುತ್ತಾರೆ. ಕರಾವಳಿಯ ಮತ್ತು ಗೋವಾದ ಸುಮಾರು 500 ಜನ ಕಲಾವಿದರು ಈ ಸಿನಿಮಾದಲ್ಲಿ ಅಭಿನಯ ಮಾಡಿದ್ದು ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ಇಡೀ ಸಿನಿಮಾದ ಕಥೆಯನ್ನು ಲೀಡ್ ಮಾಡುವ ಹತ್ತಾರು ಅದ್ಭುತವಾದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಈ ಸಿನಿಮಾದ ಬಹಳ ದೊಡ್ಡ ಆಕರ್ಷಣೆ. ಈ ಸಂಗೀತದ ಹಿಂದೆ ಕೂಡ ಎರಿಕ್ ಓಜೋರಿಯೋ ಅವರ ಬಂಗಾರದ ಸ್ಪರ್ಶ ಇದೆ.

Osmitay Konkani movie Eric Ozario
ಎರಿಕ್‌ ಒಝಾರಿಯೊ

ಅಸ್ಮಿತಾಯ್ – ನನಗೆ ಯಾಕೆ ಇಷ್ಟ ಆಯ್ತು?

1. ಇಡೀ ಸಿನೆಮಾದಲ್ಲಿ ಪ್ರೀತಿ ಅಂಡರ್ ಕರೆಂಟ್ ಆಗಿದ್ದರೂ ವಿಜೃಂಭಿಸಿದ್ದು ಕೊಂಕಣಿ ಭಾಷೆಯ ಸಂಸ್ಕೃತಿ ಮತ್ತು ಪರಂಪರೆ.

Osmitay Konkani movie

2. ಕೊಂಕಣಿ ಭಾಷೆ ಮಾತಾಡುವ ಹದಿನೈದಕ್ಕೂ ಹೆಚ್ಚು ಸಮುದಾಯಗಳು ಇವೆ. ಅದರಲ್ಲಿ ಸಿದ್ದಿ, ಕುಡುಬಿ, ನವಾಯತ್, ಖಾರ್ವಿ, ಸಾರಸ್ವತ, ಗೌಡ ಸಾರಸ್ವತ ಮೊದಲಾದ ಸಮುದಾಯಗಳ ಸಾಂಪ್ರದಾಯಕ ಆಚರಣೆಗಳಿಗೆ ಇಲ್ಲಿ ಸ್ಪೇಸ್ ನೀಡಲಾಗಿದೆ.

3. ಗೋವಾದ ಜಾನಪದ ಬೆಸ್ತರ ನೃತ್ಯ, ಕೊಂಕಣಿ ನೃತ್ಯ ಮತ್ತು ಮದುವೆ ಗೀತೆಗಳು ಇಲ್ಲಿ ತುಂಬಾ ಶ್ರೀಮಂತವಾಗಿ ಪೋರ್ಟ್ರೇಟ್ ಆಗಿವೆ.

4. ಇಡೀ ಸಿನಿಮಾದ ಕಥೆಯನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡು ಹೋಗುವ ಸಿಮಾವ್ ಪೆರಿಸ್ ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ. ಅದನ್ನು ‘ಕೊಂಕಣಿ ಸಾಂಸ್ಕೃತಿಕ ರಾಯಭಾರಿ’ ಎಂದು ಎರಿಕ್ ಓಜೋರಿಯೋ ಕರೆಯುತ್ತಾರೆ.

ಇದನ್ನೂ ಓದಿ: Raja Marga Column : ಎಲ್ಲಿಯ ಸಂಗೀತ, ಎಲ್ಲಿಯ ಎಂಜಿನಿಯರ್; ಕಾಣದಾ ಕಡಲಿಗೆ ಹಂಬಲಿಸಿದ ಸಿ. ಅಶ್ವತ್ಥ್‌‌!

5. ಗೋವಾದಲ್ಲಿ ಪೋರ್ಚುಗೀಸ್ ಹಿಂಸೆಗೆ ಬಲಿಯಾದ ಲಕ್ಷ್ಮಣ್ ಶಿರೋಡಿ ಪೈ ಮತ್ತು ಅವರದ್ದೇ ಕುಟುಂಬದ ಕೊಂಡಿ ಆದ ಶ್ರೀನಿವಾಸ್ ಶ್ರೀಧರ್ ಪೈ (ಶಿನೂ ಮಾಮ್) ಪಾತ್ರಗಳು ಜೀವಂತವಾಗಿ ಮೂಡಿವೆ.

6. ಕ್ಯಾಥೋಲಿಕ್ ಕ್ರೈಸ್ತ ಬಂಧುಗಳ ಸಾಂಪ್ರದಾಯಿಕ ಮದುವೆ, ರೋಸ್ ಮೊದಲಾದ ಆಚರಣೆಗಳನ್ನು ಹಾಗೆಯೇ ಡಿಪಿಕ್ಟ್ ಮಾಡಲಾಗಿದೆ. ಎಲ್ಲಿಯೂ ಆಧುನಿಕತೆಯ ಸ್ಪರ್ಶ ಇಲ್ಲ.

7. ಬಾಲರಾಜ್ ಅವರ ಕ್ಯಾಮೆರಾ ತೆರೆದು ತೋರಿಸಿದ ಒಳಾಂಗಣ ಮತ್ತು ಹೊರಾಂಗಣ ದೃಶ್ಯಗಳು ಅದ್ಭುತ. ಎಡಿಟಿಂಗ್ ವರ್ಕ್ ಕೂಡ ಕ್ಲಾಸ್. ಒಂದೇ ಒಂದು ದೃಶ್ಯವೂ ಕಳಪೆ ಇಲ್ಲ. ಎಲ್ಲ ಕಡೆಯಲ್ಲಿಯೂ ದೃಶ್ಯ ವೈಭವ ಕಣ್ಣಿಗೆ ರಾಚುತ್ತದೆ.

Osmitay Konkani movie Love story

8. ನಾಯಕ, ನಾಯಕಿ ಆಗಿ ವಿವೇಕ್ ಮತ್ತು ಸುಷ್ಮಾ ಫುಲ್ ಮಾರ್ಕ್ ಪಡೆಯುತ್ತಾರೆ.

9. ಈ ರೀತಿಯ ಸಿನಿಮಾ ಪ್ರಾದೇಶಿಕ ಭಾಷೆಗಳಲ್ಲಿಯೇ ಹೊಸತು. ನಿರೂಪಣೆಯಲ್ಲಿ ವೇಗ ಮತ್ತು ಫ್ರೆಷ್ ಫೀಲ್ ಇದೆ.

೧೦. ಇದುವರೆಗೆ ಕೊಂಕಣಿ ಭಾಷೆಯಲ್ಲಿ 145 (ಕರ್ನಾಟಕ ಮತ್ತು ಗೋವಾ) ಸಿನಿಮಾಗಳು ಬಂದಿದ್ದು ಅಸ್ಮಿತಾಯ್ ಅತ್ಯಂತ ಮಧುರವಾದ ‘ಐಸ್ ಕ್ರೀಮ್ ತುದಿಯ ಚೆರಿ ‘ ಎಂಬ ಅಭಿಪ್ರಾಯಗಳು ವಿಮರ್ಶಾ ವಲಯದಲ್ಲಿ ಕೇಳಿ ಬರುತ್ತಿದ್ದು ಅದು ನೂರಕ್ಕೆ ನೂರರಷ್ಟು ನಿಜವಾಗಿದೆ. ಒಂದು ಡಾಕ್ಯುಮೆಂಟರಿ ಆಗಿ ಬಿಡುತ್ತಿದ್ದ ಈ ಸಿನಿಮಾವನ್ನು ಒಂದು ಮಾಸ್ಟರ್ ಪೀಸ್ ಆಗಿ ಪ್ರಸ್ತುತಿ ಮಾಡಿದ ಎಲ್ಲರಿಗೂ ನನ್ನ ಅಭಿನಂದನೆಗಳು.

ಭರತ ವಾಕ್ಯ: ಕೊಂಕಣಿ ಭಾಷೆಯನ್ನು ಪ್ರೀತಿಸುವ ಮತ್ತು ಗೌರವಿಸುವ ಎಲ್ಲರೂ ನೋಡಬೇಕಾದ ಸಿನಿಮಾ ಇದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

Mother Sentiment: ವ್ಯಾಸಂಗಕ್ಕಾಗಿ ಊರು ತೊರೆದು ಪಟ್ಟಣದ ಹಾಸ್ಟೆಲ್‌ ಸೇರುತ್ತಿರುವ ಮಗಳಿಗೆ ತಾಯಿ ಕರುಳಿನ ಭಾವುಕ ಪತ್ರ ಇದು…

ತಾಯಿ ಹೃದಯದ ಅಳಲು (Mother Sentiment) ನಿನಗಿನ್ನೂ ಗೊತ್ತಿಲ್ಲ. ನನ್ನ ಮನದಲ್ಲಿ ಹುದುಗಿಸಿರುವ ಪ್ರೀತಿ, ಮಮತೆ, ಅಕ್ಕರೆ, ಭಯ, ಆತಂಕಗಳ ಕುರಿತು ಇಲ್ಲಿ ಬರೆದಿರುವೆ. ಹಾಗೆಂದು ಇದು ನನ್ನೊಬ್ಬಳ ಅಳಲು ಅಲ್ಲ. ನನ್ನಂತೆ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಬೇರೆ ಊರುಗಳಲ್ಲಿ ಓದಲು, ನೌಕರಿ ಮಾಡಲು ಕಳುಹಿಸಿರುವ ಲಕ್ಷಾಂತರ ತಾಯಂದಿರ ಮನದ ಮಾತು…..ಇತ್ತೀಚೆಗೆ ಬಾಲಕಿಯರ ಮೇಲೆ ನಡೆಯುತ್ತಿರುವ ಅಮಾನುಷ ಕೃತ್ಯಗಳ ಹಿನ್ನೆಲೆಯಲ್ಲಿ ತಾಯಿಯೊಬ್ಬಳು ತನ್ನ ಮಗಳಿಗೆ ಬರೆದ ಸುದೀರ್ಘ ಪತ್ರದ ಸಾರ ಇಲ್ಲಿದೆ.

VISTARANEWS.COM


on

Mother Sentiment
Koo

| ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ

ಪ್ರೀತಿಯ ಮಗಳೇ,
ಅರೆ! ನಿನ್ನೆ ತಾನೆ ನನ್ನನ್ನು ಕಳಿಸಲು ಬಂದ ಅಮ್ಮ (Mother Sentiment) ಇಷ್ಟು ಬೇಗ ಪತ್ರ ಬರೆಯಲು ಕಾರಣವೇನು ಎಂದು ಗಾಬರಿಯಾಗಬೇಡ. ತಾಯಿ ಹೃದಯದ ಅಳಲು ನಿನಗಿನ್ನೂ ಗೊತ್ತಿಲ್ಲ. ನನ್ನ ಮನದಲ್ಲಿ ಹುದುಗಿಸಿರುವ ಪ್ರೀತಿ, ಮಮತೆ, ಅಕ್ಕರೆ, ಭಯ, ಆತಂಕಗಳ ಕುರಿತು ಇಲ್ಲಿ ಬರೆದಿರುವೆ. ಹಾಗೆಂದು ಇದು ನನ್ನೊಬ್ಬಳ ಅಳಲು ಅಲ್ಲ. ನನ್ನಂತೆ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಬೇರೆ ಊರುಗಳಲ್ಲಿ ಓದಲು, ನೌಕರಿ ಮಾಡಲು ಕಳುಹಿಸಿರುವ ಲಕ್ಷಾಂತರ ತಾಯಂದಿರ ಮನದ ಮಾತು.
ನಮ್ಮ ಮನೆಯಂಗಳದಲ್ಲಿ ಚಂದದ ಪ್ರಾಕು ಧರಿಸಿ, ಎರಡು ಪುಟ್ಟ ಜುಟ್ಟು ಹಾಕಿಕೊಂಡು, ಮುಖಕ್ಕೆ ಪೌಡರ್ ಸವರಿ, ಹಣೆಗೆ ಕಾಡಿಗೆಯ ಬೊಟ್ಟುಇಟ್ಟು ಕಾಲಿನ ಗೆಜ್ಜೆಯ ಸದ್ದು ಮಾಡುತ್ತಾ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮನೆಯೆಲ್ಲ ನಡೆಯುತ್ತಿದ್ದ, ಅರಳು ಹುರಿದಂತೆ ಮುದ್ದಾಗಿ ಬಾಯಿ ತುಂಬಾ ಮಾತನಾಡುತ್ತಿದ್ದ ಪುಟ್ಟ ಕಂದ ನೀನು, ಇಂದು ಕಾಲೇಜಿಗೆ ಹೋಗುವಷ್ಟು ದೊಡ್ಡವಳಾಗಿರುವೆ. ಅತ್ಯುತ್ತಮ ಅಂಕ ಗಳಿಸಿ ಒಳ್ಳೆಯ ಕಾಲೇಜಿನಲ್ಲಿ ಸೀಟು ಗಿಟ್ಟಿಸಿ ಉನ್ನತ ಶಿಕ್ಷಣ (Higher Education) ಪಡೆಯುವ ಆಸೆಯಲ್ಲಿ ನಾವು ಮನೆಯವರನ್ನೆಲ್ಲಾ ತೊರೆದು ಹಾಸ್ಟೆಲಿನಲ್ಲಿ ವಾಸವಾಗಲು ಹೋಗುತ್ತಿರುವೆ.

ತುಸುವೇ ಸಂಭ್ರಮ ನಮ್ಮೆಲ್ಲರಲ್ಲಿ ಮನೆ ಮಾಡಿದ್ದರೂ ಹೆಚ್ಚು ಆತಂಕ ಮನದಲ್ಲಿ ಇದೆ. ಕಾಣದ ಊರು, ಅರಿಯದ ಜನ, ಬದಲಾದ ವಾತಾವರಣ ಇದೆಲ್ಲಕ್ಕೂ ನೀನು ಅದು ಹೇಗೋ ಹೊಂದಿಕೊಂಡು ಬಿಡುವೆ ಎಂಬ ಭರವಸೆ ನನಗಿದೆ… ಆದರೆ ನನ್ನ ಭಯ ಅದಲ್ಲ, ಅದರ ಅರಿವಾಗಲು ನೀನು ನಾನಲ್ಲ.
‘ಅಯ್ಯೋ ಅಮ್ಮ! ಮತ್ತದೇ ರಾಗ ಆಡಬೇಡ ನೀನು’ ಎಂಬ ನಿನ್ನ ಗದರಿಕೆಯ ನಡುವೆಯೂ ಮನ ಆತಂಕದ ಗೂಡಾಗಿದೆ. ನಿನ್ನನ್ನು ಕಳಿಸಲು ಬಂದಾಗ ಹೇಳದ ಮಾತುಗಳನು ಬರೆಯಲೇಬೇಕಾದ, ಬರೆದು ತಿಳಿಸಲೇಬೇಕಾದ ಅನಿವಾರ್ಯತೆ ನನ್ನದು.

ಪ್ರೀತಿಯ ಕೂಸು ನೀನು

ನಮ್ಮ ಮನೆಯ ಪ್ರೀತಿಯ ಕೂಸು ನೀನು. ಅಜ್ಜ ಅಜ್ಜಿಯ ಚಿನ್ನುವಾಗಿ, ಅಪ್ಪನ ಮುದ್ದಿನ ಮಗಳಾಗಿ, ಅಕ್ಕ-ಅಣ್ಣಂದಿರ ನೆಚ್ಚಿನ ತಂಗಿಯಾಗಿ ನನ್ನ ಕಣ್ಮಣಿಯಾಗಿ ಸುರಕ್ಷಿತವಾದ ಗುಬ್ಬಚ್ಚಿ ಗೂಡಿನಂತಹ ಸಂಸಾರದಲ್ಲಿ ಬೆಳೆದಿರುವ ನಿನಗೆ ಹೊರಗಿನ ನಿಷ್ಕುರ ಪ್ರಪಂಚದ ಅರಿವಿಲ್ಲ. ಹಾಗೆಂದು ಇಡೀ ಜಗತ್ತೇ ಕೆಟ್ಟದು ಎಂದಲ್ಲ. ನನಗೆ ಎಲ್ಲವೂ ಗೊತ್ತಿದೆ ಎಂಬ ಹದಿಹರೆಯದ ಹುಮ್ಮಸ್ಸು, ಸುಣ್ಣದ ತಿಳಿ ನೀರನ್ನು ಕೂಡ ಹಾಲೆಂದು ನಂಬುವ ನಿನ್ನ ಬೋಳೆ ಸ್ವಭಾವ, ಸ್ನೇಹಕ್ಕಿಂತ ಮಿಗಿಲಾದದ್ದು ಬೇರೆ ಯಾವುದೂ ಇಲ್ಲ ಎಂಬ ಸ್ಲೋಗನ್‌ಗಳು, ಪ್ರೀತಿ ಮಾಡಬಾರದು, ಮಾಡಿದರೆ ಜಗಕ್ಕೆ ಹೆದರಬಾರದು ಎಂಬ ಧ್ಯೇಯ ವಾಕ್ಯಗಳು, ಜೀವನ ಇರೋದೇ ಎಂಜಾಯ್ ಮಾಡೋಕೆ, ಈ ಹದಿಹರೆಯದ ವಯಸ್ಸು ಮತ್ತೆ ಬರುತ್ತಾ ಎಂಬ ಮಾತುಗಳು ಹೆಚ್ಚು ರುಚಿಸುವ ಸಮಯ ಇದು.

ಯಾವುದೂ ತಪ್ಪಲ್ಲ ನಿಜ

ಯಾವುದೂ ತಪ್ಪಲ್ಲ ನಿಜ. ಆದರೆ ಅದೆಲ್ಲವೂ ಒಂದು ಮಿತಿಯಲ್ಲಿದ್ದಾಗ ಮಾತ್ರ. ಜೀವನದಲ್ಲಿ ಎಂಜಾಯ್ಮೆಂಟ್ ಇರಬೇಕೆ ಹೊರತು ಎಂಜಾಯ್ಮೆಂಟ್ ಒಂದೇ ಜೀವನದ ಮುಖ್ಯ ಉದ್ದೇಶ ಅಲ್ಲ. ನಮ್ಮ ಬದುಕನ್ನು ವ್ಯವಸ್ಥಿತವಾಗಿ ನಡೆಸಲು ಬೇಕಾಗುವ ವಿದ್ಯೆ, ಆರ್ಥಿಕ ಸ್ವಾವಲಂಬನೆಯನ್ನು ಕೊಡುವ ನೌಕರಿ, ಸಾಮಾಜಿಕ ವಲಯದಲ್ಲಿ ನಿನ್ನದೇ ಆದ ಒಂದು ಒಳ್ಳೆಯ ಗುರುತಿಸುವಿಕೆ ಇವು ಉನ್ನತ ಶಿಕ್ಷಣದ ಮುಖ್ಯ ಧ್ಯೇಯಗಳು.

ಈಗಾಗಲೇ ಬದುಕಿನಲ್ಲಿ ಒಂದು ಮಹತ್ತರ ಘಟ್ಟವನ್ನು ತಲುಪಿರುವ ಸೋದರ ಸಂಬಂಧಿಗಳು ನಾವಂತೂ ಎಂಜಾಯ್ ಮಾಡಲಿಲ್ಲ ನೀವಾದರೂ ಮಾಡಿ ಎಂದು ಲಘುವಾಗಿ ನಿಮಗೆ ಹೇಳಿರುವುದನ್ನು ನೀನು ಗಂಭೀರವಾಗಿ ತೆಗೆದುಕೊಳ್ಳಬೇಡ…. ಓಟದ ನಡುವೆ ಅಲ್ಲೊಂದು ಇಲ್ಲೊಂದು ಅಡೆತಡೆಗಳು ಇದ್ದರೆ ತೊಂದರೆ ಇಲ್ಲ, ಆದರೆ ಆಡೆ ತಡೆಗಳನ್ನೇ ದಾಟುತ್ತ ಮುಂದೆ ಸಾಗುವ ಹೊತ್ತಿಗೆ ನಿನ್ನ ಸಮಯ ವ್ಯರ್ಥವಾಗಬಹುದು, ನಿನ್ನ ಗುರಿ ನಿನ್ನ ಕೈತಪ್ಪಿ ಹೋಗಬಹುದು ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೋ.

ನಿನ್ನ ಕಾಲೇಜಿನಲ್ಲಿ, ಹಾಸ್ಟೆಲ್‌ನಲ್ಲಿ ಎಲ್ಲರೊಂದಿಗೆ ಒಳ್ಳೆಯ ಸ್ನೇಹವನ್ನು ಹೊಂದು ಆದರೆ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ. ಸದಾ ಒಂದು ಅಂತರವನ್ನು ಕಾಯ್ದುಕೋ. ಕಹಿ ಎನಿಸಿದರೂ ಜೀವನದ ಸತ್ಯ ಇದುವೇ. ಕೆಲ ಸ್ನೇಹ ಸಂಬಂಧಗಳು ಜೊತೆಗಿರುವವರೆಗೆ ಮಾತ್ರ.. ಒಂದೇ ಊರಿನವರಾದರೆ ಆಗಾಗ ಪರಸ್ಪರ ಭೇಟಿಯಾಗಿ ಕಷ್ಟ ಸುಖವನ್ನಾದರೂ ಹಂಚಿಕೊಳ್ಳುತ್ತಾರೆ, ಆದರೆ ದೂರದಲ್ಲಿರುವ ಸ್ನೇಹಿತರು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಭೇಟಿಯಾಗುತ್ತಾರೆ ಎಂಬುದನ್ನು ನೀನೇ ನೋಡುತ್ತಿರುವೆಯಲ್ಲ. ಹಾಗೆಂದು ಆ ಸ್ನೇಹದ ಕುರಿತು ತಿರಸ್ಕಾರ ಬೇಡ, ಒಳ್ಳೆಯ ಸ್ನೇಹಗಳು ಒಂದು ಮಧುರ ಅನುಭೂತಿಯಂತೆ ನಿನ್ನೊಂದಿಗೆ ಉಳಿದು ಹೋಗಬೇಕು ನಿಜ. ದುಸ್ವಪ್ನಗಳಂತಲ್ಲ.

ನಮ್ಮ ಜೊತೆಗೆ ಬರುವುದು ನಮ್ಮವರು ಮಾತ್ರ

ಜೀವಿತದ ಕೊನೆಯವರೆಗೂ ನಮ್ಮ ಜೊತೆಗೆ ಬರುವುದು ನಮ್ಮ ಅಪ್ಪ, ಅಮ್ಮ, ಅಣ್ಣ-ತಮ್ಮ, ಅಕ್ಕ- ತಂಗಿ ಮುಂತಾದ ರಕ್ತ ಸಂಬಂಧಗಳು ಮಾತ್ರ. ನಮ್ಮ ಕಷ್ಟ ಸುಖಕ್ಕೆ ನೋವು ನಲಿವಿಗೆ ಜೊತೆಯಾಗುವವರು ನಮ್ಮವರೇ. ಕೆಲ ಸ್ನೇಹಗಳು ಇದಕ್ಕೆ ಅಪವಾದ ಇರಬಹುದು. ನೀನು ಮನೆಯವರನ್ನೆಲ್ಲಾ ಬಿಟ್ಟು ಓದಲು ಹೋಗಿರುವ ಮುಖ್ಯ ಉದ್ದೇಶವನ್ನು ಸದಾ ನೆನಪಿನಲ್ಲಿಡು. ಓದು ಮತ್ತು ಅದಕ್ಕೆ ಸಂಬಂಧಪಟ್ಟ ಕೆಲಸಗಳಲ್ಲಿ ನಿನ್ನನ್ನು ನೀನು ತೊಡಗಿಸಿಕೋ. ಊಟದಲ್ಲಿ ಉಪ್ಪಿನಕಾಯಿ ಇರುವಂತೆ ತಮಾಷೆ, ಜೋಕುಗಳು, ಕಾಲೆಳೆಯುವುದು ಹಿತಮಿತವಾಗಿರಲಿ…. ಆದರೆ ಅದುವೇ ಮುಖ್ಯವಾಗದಿರಲಿ.

ಹಾಸ್ಟೆಲ್ ನಲ್ಲಿ ಕೊಡುವ ಆಹಾರಕ್ಕೆ ನಿನ್ನನ್ನು ನೀನು ಒಗ್ಗಿಸಿಕೊಳ್ಳುವುದನ್ನು ರೂಢಿ ಮಾಡಿಕೋ. ಬೇಕು ಬೇಕೆಂದಾಗ ಊಟ ಮಾಡಲು ಆಗುವುದಿಲ್ಲ. ಆದ್ದರಿಂದ ನಿಗದಿತ ಸಮಯದಲ್ಲಿ ಆಹಾರ ಸೇವಿಸು. ಅಲ್ಲಿ ಕೊಡುವ ಹಸಿ ತರಕಾರಿ ಸೊಪ್ಪುಗಳನ್ನು, ಹಣ್ಣುಗಳನ್ನು ಸೇವಿಸು. ಸಾಧ್ಯವಾದಷ್ಟು ಹೊರಗಿನ ಆಹಾರವನ್ನು ಅವಾಯ್ಡ್ ಮಾಡು. ಹಾಸ್ಟೆಲ್ನ ನಿಯಮಾವಳಿಗಳನ್ನು ಎಂದೂ ಮೀರದಿರು. ಅತಿಯಾಗಿ ರುಚಿಯ ಕಡೆ ಗಮನ ಕೊಡದೆ ಹಿತಮಿತವಾದ ಆಹಾರವನ್ನು ಸೇವಿಸು.

ಆರ್ಥಿಕ ಶಿಸ್ತು ಇರಲಿ

ಖರ್ಚಿನ ವಿಷಯದಲ್ಲಿ ಸ್ವಲ್ಪ ಹುಷಾರಾಗಿರು. ಯಾವುದೇ ಕಾರಣಕ್ಕೂ ಹಣದ ದುರ್ಬಳಕೆ ಬೇಡ. ಅದೆಷ್ಟೇ ಒಳ್ಳೆಯ ಸ್ನೇಹಿತರಾಗಿದ್ದರೂ ಕೂಡ ಯಾರೊಂದಿಗೂ ನಿನ್ನ ಖಾತೆಗೆ ಸಂಬಂಧಪಟ್ಟ ಮಾಹಿತಿಗಳನ್ನು ಮತ್ತು ಎಟಿಎಂನ ಪಾಸ್ವರ್ಡ್ ಅನ್ನು ಹಂಚಿಕೊಳ್ಳಬೇಡ. ನೀನು ಓದುತ್ತಿರುವೆಡೆಯಲ್ಲಾಗಲಿ, ವಾಸಿಸುತ್ತಿರುವ ಸ್ಥಳದಲ್ಲಾಗಲಿ ಪ್ರತಿ ಬಾರಿಯೂ ನಿನ್ನ ಮಾತೇ ನಡೆಯಬೇಕು ಎಂಬ ಹಟ ಬೇಡ. ಬೇರೆಯವರ ಮಾತಿಗೂ ಬೆಲೆ ಕೊಡು. ಬಹಳಷ್ಟು ಸಲ ನಿಮ್ಮ ಹಾಸ್ಟೆಲ್ ವಾರ್ಡನ್ ಗಳು ನಿಮಗೆ ಹೇಳುವ ಮಾತುಗಳು ಒರಟೆನಿಸಬಹುದು, ಬೇಧ ತೋರುತ್ತಾರೆ ಎಂದು ಕೂಡ ಅನಿಸಬಹುದು. ಆದರೆ ಅವರು ಕೂಡ ನಿಮ್ಮ ಒಳಿತಿಗಾಗಿ ಮತ್ತು ಸಂಸ್ಥೆಯ ಏಳಿಗೆಗಾಗಿ ದುಡಿಯುತ್ತಿರುವವರು. ನಿಮ್ಮ ಎಲ್ಲ ಆಗುಹೋಗುಗಳಿಗೆ ಜವಾಬ್ದಾರರು ಎಂಬುದು ಸದಾ ನೆನಪಿರಲಿ.

ಇನ್ನು ಮುಖ್ಯವಾಗಿ ನಮ್ಮ ಬದುಕಿನಲ್ಲಿ ಬಾಲ್ಯ, ಯೌವನ, ವೃದ್ಧಾಪ್ಯ ಹೇಗೆ ಒಂದರ ನಂತರ ಒಂದು ಕ್ರಮವಾಗಿ ಬರುತ್ತವೆಯೋ ಹಾಗೆಯೇ ವಿದ್ಯಾರ್ಥಿ ಜೀವನ, ಉದ್ಯೋಗ, ಸಂಗಾತಿ ಮತ್ತು ವಿವಾಹಗಳು ಕೂಡ ಅದೇ ಕ್ರಮದಲ್ಲಿ ಬರಬೇಕು. ಇದರಲ್ಲಿ ಮಧ್ಯದ ಎರಡು ವಿಷಯಗಳು ಹಿಂದು ಮುಂದಾದರೆ ಉಳಿದ ಎರಡು ವಿಷಯಗಳನ್ನು ನಿರೀಕ್ಷಿತ ಮಟ್ಟದಲ್ಲಿ ಸಾಧಿಸಲು ಆಗುವುದಿಲ್ಲ. ಆದ್ದರಿಂದ ಈಗ ಓದುವ ವಯಸ್ಸಿನಲ್ಲಿ ಕೇವಲ ನಿನ್ನ ಓದಿನೆಡೆ ಮಾತ್ರ ನಿನ್ನ ಗಮನವಿರಲಿ. ಹರೆಯದ ಆಕರ್ಷಣೆಗೆ ಒಳಗಾಗಿ ವಿರುದ್ಧ ಲಿಂಗಿಯ ಜೊತೆಗಿನ ಸ್ನೇಹಕ್ಕೆ ಪ್ರೀತಿ ಪ್ರೇಮದ ಬಣ್ಣ ಹಚ್ಚುವುದು ಬೇಡ. ನಿನ್ನ ತಂದೆ ತಾಯಿಯರಿಗೂ ನಿನ್ನ ಸ್ನೇಹಿತರನ್ನು ಪರಿಚಯಿಸಿ ಧೈರ್ಯವಾಗಿ ಮಾತನಾಡಬಲ್ಲಷ್ಟು ನಿಷ್ಕಲ್ಮಶ ಸ್ನೇಹವನ್ನು ಹೊಂದಿದ್ದರೆ ಸಾಕು. ನಮ್ಮ ಹಿರಿಯರು ಇದ್ದಂತೆ ನಾವಿಲ್ಲ ನಿಜ, ಆದರೆ ನಮ್ಮ ಹಿರಿಯರು ಹಾಕಿಕೊಟ್ಟ ದಾರಿ ನಮಗಿದ್ದೆ ಇದೆ.

ಕ್ಷಣಿಕ ಆಸೆಗೆ ಬಲಿಯಾಗಬೇಡ

ಮತ್ತೊಂದು ವಿಷಯ ಹೇಳಿದರೆ ನಿನಗೆ ಬೇಸರವಾಗಬಹುದು. ಇತ್ತೀಚೆಗೆ ಕೇಳಿ ಬರುತ್ತಿರುವ ಹೆಣ್ಣು ಮಕ್ಕಳ ಮೇಲಿನ ಬರ್ಬರ ಕೃತ್ಯಗಳು ಹೆತ್ತವರನ್ನು ಆತಂಕಕ್ಕೆ ಈಡು ಮಾಡಿವೆ. ಕ್ಷಣಿಕ ಆಕರ್ಷಣೆ ಬದುಕನ್ನು ನಾಶ ಮಾಡಬಹುದು. ಒಂದು ತಪ್ಪು ಹೆಜ್ಜೆ ಜೀವನವಿಡೀ ಪಶ್ಚಾತಾಪಕ್ಕೆ ದಾರಿ ಮಾಡಿಕೊಡುವುದು ಬೇಡ ಎಂಬ ಎಚ್ಚರ ನಿನಗಿದ್ದರೆ ಸಾಕು.
ಬದುಕಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಕಳೆದ ಒಂದುವರೆ ತಿಂಗಳಿನಲ್ಲಿ ನಡೆದ ಹೆಣ್ಣು ಮಕ್ಕಳ ಸಾಲು ಸಾಲು ಹತ್ಯೆಗಳನ್ನು ನೋಡಿ ಮನಸ್ಸಿಗೆ ಅನ್ನಿಸಿದ್ದು ಹೀಗೆ. ಅರಿಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ಗುಂಗಿಗೆ ಬಿದ್ದು, ತಂದೆ ತಾಯಿ ಬುದ್ಧಿ ಹೇಳಿದಾಗ ವಿದ್ಯಾರ್ಥಿ ದೆಸೆಯಲ್ಲಿ ತಾನು ತಪ್ಪು ಮಾಡುತ್ತಿರುವೆ ಎಂಬ ಅರಿವು ಉಂಟಾಗಿ ಪ್ರೀತಿಯಿಂದ ಹಿಂದೆ ಸರಿದ ತಪ್ಪಿಗೆ ಒಂದೊಮ್ಮೆ ತನ್ನನ್ನು ಪ್ರೀತಿಸಿದ ಹುಡುಗನೇ ತನ್ನನ್ನು ಕೊಚ್ಚಿ ಕೊಂದರೆ ಆಕೆಯನ್ನು ಇಷ್ಟು ವರ್ಷಗಳ ಕಾಲ ಲಾಲಿಸಿ ಪಾಲಿಸಿದ ತಂದೆ ತಾಯಿಗಳ ಪಾಡೇನು ಎಂದು ನೆನೆದಾಗ ಮೈಯಲ್ಲಿ ನಡುಕ ಉಂಟಾಗುತ್ತದೆ. ನಿಮ್ಮ ಬದುಕು ಕೇವಲ ನಿಮ್ಮದಲ್ಲ. ನಿಮ್ಮ ಬದುಕಿನ ಆಗುಹೋಗುಗಳ ಸುತ್ತ ನಿಮ್ಮ ಕುಟುಂಬ ಮತ್ತು ಸಮಾಜ ನಿಮ್ಮೊಂದಿಗೆ ಜೋಡಿಸಲ್ಪಟ್ಟಿ ರುತ್ತದೆ. ಆದ್ದರಿಂದ ನಿನ್ನ ಹುಷಾರಿನಲ್ಲಿ ನೀನಿರು ಎಂದು ಮಾತ್ರ ಹೇಳುತ್ತೇನೆ. ಸಮಾಜಕ್ಕೆ ಒಳ್ಳೆಯ ಉದಾಹರಣೆಯಾಗದಿದ್ದರೂ ಪರವಾಗಿಲ್ಲ ಆದರೆ ಕೆಟ್ಟ ಉದಾಹರಣೆಯಾಗಬಾರದು ಎಂಬ ಅರಿವಿನ ಪ್ರಜ್ಞೆ ನಿನ್ನಲ್ಲಿ ಸದಾ ಜಾಗೃತವಾಗಿರಲಿ.

ಅಷ್ಟಾಗಿಯೂ ನಿನಗೆ ಏನೇ ತೊಂದರೆಯಾದರೂ ಮುಕ್ತವಾಗಿ ಹೇಳಿಕೋ…. ಒಂದು ಸುಳ್ಳನ್ನು ಮುಚ್ಚಲು ನೂರಾರು ಸುಳ್ಳುಗಳನ್ನು ಹೇಳುವುದರ ಬದಲು ಒಂದು ಸತ್ಯವನ್ನು ಹೇಳಿ ಬೈಸಿಕೊಂಡರೂ ಪರವಾಗಿಲ್ಲ ಮನಸ್ಸು ನಿರಾಳವಾಗಿರುತ್ತದೆ ಎಂಬುದನ್ನು ಅರಿತುಕೋ.

ಬದುಕಿನ ಯಾವುದೇ ಹಂತದಲ್ಲಿಯಾದರೂ ನಮ್ಮ ತೋಳುಗಳ ಆಸರೆ ನಿನಗೆ ಇದ್ದೇ ಇರುತ್ತದೆ… ಆದರೆ ಆ ತೋಳುಗಳಲ್ಲಿ ಕಸುವು ತುಂಬುವ ಕೆಲಸ ಮಾತ್ರ ನಿನ್ನದು. ಅದು ನಿನ್ನ ನಡತೆಯಲ್ಲಿ, ವಿದ್ಯಾಭ್ಯಾಸದಲ್ಲಿ ಮತ್ತು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಸದಾ ಇರಲೇಬೇಕು. ನಿನ್ನ ಕುರಿತಾಗಿ ನನ್ನ ಆಸೆ ಆಕಾಂಕ್ಷೆಗಳಿಗೆ ಮಿತಿ ಇಲ್ಲ,ಭಯ ಆತಂಕಗಳು ನಿರಾಧಾರವಾದುದು ಎಂದು ನಿನಗೆ ಅನಿಸಿದರೆ ಅದು ನಿನ್ನ ತಪ್ಪಲ್ಲ. ನನ್ನಂತೆ ನೀನೂ ಕೂಡ ತಾಯಾಗಿ ನಿನ್ನ ಮಕ್ಕಳನ್ನು ಬೆಳೆಸುವಾಗ ನಿನಗೆ ಇದರ ಅನುಭವ ಖಂಡಿತವಾಗಿಯೂ ಆಗುತ್ತದೆ. ಪತ್ರ ತುಸು ದೊಡ್ಡದಾಯಿತು ಆದರೆ ಓದದೆ ಇರಬೇಡ. ನಿನ್ನ ಹಿತದಲ್ಲಿಯೇ ನಮ್ಮ ಕುಟುಂಬದ ಒಳಿತಿದೆ.

ಇದನ್ನೂ ಓದಿ: AR Rahman: ಪ್ರಶಸ್ತಿಗಳೆಲ್ಲ ಚಿನ್ನವೆಂದು ಭಾವಿಸಿ ಎಆರ್ ರೆಹಮಾನ್ ತಾಯಿ ಮಾಡಿದ್ದೇನು?

Continue Reading

ಅಂಕಣ

ರಾಜಮಾರ್ಗ ಅಂಕಣ: ಸಾವನ್ನೇ ಆಹ್ವಾನಿಸಿದ ಸುಂದರಿ ಝೋರಯಾ ಟರ್ ಬ್ರೀಕ್

ರಾಜಮಾರ್ಗ ಅಂಕಣ: ಝೋರಯಾ ಮಾನಸಿಕವಾಗಿ ಧೃಡವಾಗಿ ನಿಂತು ತಾನು ತನ್ನ ಮನೆಯ ಲಿವಿಂಗ್ ರೂಮಿನಲ್ಲಿ ಸೋಫಾದ ಮೇಲೆ ಕುಳಿತು ತನ್ನ ಮುದ್ದಿನ ಬೆಕ್ಕುಗಳನ್ನು ನೇವರಿಸುತ್ತಾ ಸಾವನ್ನು ಸ್ವಾಗತ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ತನ್ನ ದೇಹವನ್ನು ಪಂಚಭೂತಗಳಲ್ಲಿ ಲೀನ ಮಾಡಿ. ಅಂತ್ಯಸಂಸ್ಕಾರಕ್ಕೆ ಜನ ಸೇರಿಸುವ ಅಗತ್ಯ ಇಲ್ಲ. ನನ್ನ ಚಿತಾ ಭಸ್ಮವನ್ನು ಕಾಡಿನೊಳಗೆ ಹರಡಿ ಸಾಕು ಅಂದಿದ್ದಾರೆ.

VISTARANEWS.COM


on

ರಾಜಮಾರ್ಗ ಅಂಕಣ euthanasia zoraya ter beek
Koo

ನೆದರ್‌ಲ್ಯಾಂಡ್ ದೇಶದಲ್ಲೊಂದು ಹೃದಯ ವಿದ್ರಾವಕ ಘಟನೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಆಕೆ ಲೋಕೋತ್ತರ ಸುಂದರಿ. ವಯಸ್ಸು ಇನ್ನೂ 28. ಆಕೆ ಉತ್ಸಾಹದ ಖಣಿ. ಮೇಲ್ನೋಟಕ್ಕೆ 100% ಫಿಟ್ ಮತ್ತು ಆರೋಗ್ಯಪೂರ್ಣ ಆಗಿದ್ದಾರೆ. ಆದರೆ ಆಕೆ ತನ್ನ ದೇಶದ ಕಾನೂನಿನ ನೆರವು ಪಡೆದುಕೊಡು ತನ್ನ ಜೀವನಕ್ಕೊಂದು ಪೂರ್ಣವಿರಾಮ ಇಡಲು ನಿರ್ಧಾರ ಮಾಡಿದ್ದಾರೆ. ಅದಕ್ಕೆ ಅವರು ಆರಿಸಿಕೊಂಡ ವಿಧಾನ ಅಂದರೆ ದಯಾಮರಣ (euthanasia)! ಅಂದರೆ ತನ್ನ ಇಷ್ಟದ ಪ್ರಕಾರ, ಇಷ್ಟದ ಜಾಗದಲ್ಲಿ, ಇಷ್ಟದ ಜನರ ಮುಂದೆ, ಇಷ್ಟದ ರೀತಿಯಲ್ಲಿ ಸಾಯುವುದು..!

ದಯಾಮರಣ – ನೆದರ್‌ಲ್ಯಾಂಡ್‌ನಲ್ಲಿ ಕಾನೂನು ಸಮ್ಮತ

ನೆದರ್‌ಲ್ಯಾಂಡ್ (Netherlands) ದೇಶವು ದಯಾಮರಣಕ್ಕೆ ಕಾನಾನು ಸಮ್ಮತಿ ನೀಡಿ 22 ವರ್ಷಗಳೇ ಸಂದಿವೆ! ಅಸಹನೀಯ ನೋವು, ಗುಣಪಡಿಸಲು ಆಗದ ಕಾಯಿಲೆ, ಮಾನಸಿಕ ಅಸ್ವಾಸ್ಥ್ಯ ಸೇರಿದಂತೆ ಆರು ಕಾರಣಕ್ಕೆ ಸರಕಾರ ದಯಾಮರಣಕ್ಕೆ ಅನುಮತಿಯನ್ನು ನೀಡುತ್ತದೆ. 2022ರಲ್ಲಿ ಆ ದೇಶದಲ್ಲಿ ಕಾನೂನಿನ ನೆರವು ಪಡೆದು 8730 ಮಂದಿ ದಯಾಮರಣದ ಮೂಲಕ ತಮ್ಮ ಬದುಕನ್ನು ಕೊನೆಗೊಳಿಸಿದ್ದಾರೆ! ಇದು ಕಳೆದ ವರ್ಷಕ್ಕಿಂತ 14% ಅಧಿಕ ಎಂದು ಅಲ್ಲಿನ ಸರಕಾರ ಹೇಳಿದೆ.

ಝೋರಯಾಗೆ ಮಾನಸಿಕ ಕಾಯಿಲೆ

ಈ ಚಂದದ ಹುಡುಗಿ ಝೊರೆಯಾ (Zoraya Ter Beek) ಬಳಲುತ್ತಿರುವುದು ಖಿನ್ನತೆ, ಉದ್ವೇಗ ಆಕೆಯ ಬಾಲ್ಯದ ಒಡನಾಡಿಗಳು. ಇತ್ತೀಚೆಗೆ ಆಟಿಸಂ ಕೂಡ ಸೇರಿಕೊಂಡು ಆಕೆಗೆ ಬದುಕೇ ಅಸಹನೀಯವಾಗುತ್ತು. ಯಾವುದೆಲ್ಲ ಔಷಧಿ, ಚಿಕಿತ್ಸಾ ವಿಜ್ಞಾನ ಮತ್ತು ಕೌನ್ಸೆಲಿಂಗ್ ನಡೆದರೂ ಅವಳಿಗೆ ಅದ್ಯಾವುದೂ ರಿಲೀಫ್ ಕೊಡಲಿಲ್ಲ. ವೈದ್ಯರೂ ʼಇನ್ನು ಸಾಧ್ಯವಿಲ್ಲ’ ಎಂದು ಹೇಳಿದ ನಂತರ ಆಕೆ ಆರಿಸಿಕೊಂಡದ್ದು ಸಾವನ್ನು! ಆತ್ಮಹತ್ಯೆ ಮಾಡಿ ಸಾಯಲು ಮನಸಿಲ್ಲ ಎಂದಾಕೆ ಗಟ್ಟಿಯಾದ ನಿರ್ಧಾರ ತೆಗೆದುಕೊಂಡ ನಂತರ ಆಕೆಗೆ ಉಳಿದದ್ದು ಒಂದೇ ಪರಿಹಾರ – ಅದು ದಯಾಮರಣ! ಆಕೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದು 2020ರಲ್ಲಿ. ಅದೀಗ ಪರ ವಿರೋಧ ಚರ್ಚೆಯಾಗಿ ಈಗ ತೀರ್ಪು ಆಕೆಯ ಪರವಾಗಿ ಬಂದಿದೆ. ಅಂದರೆ ದಯಾಮರಣಕ್ಕೆ ಅನುಮತಿ ದೊರೆತಿದೆ.

ರಾಜಮಾರ್ಗ ಅಂಕಣ euthanasia zoraya ter beek

ದಯಾಮರಣ ಹೇಗೆ?

ಅರ್ಜಿದಾರರು ಇಷ್ಟಪಡುವ ಸ್ಥಳದಲ್ಲಿ, ಇಷ್ಟಪಡುವ ಸನ್ನಿವೇಶವನ್ನು ಕ್ರಿಯೇಟ್ ಮಾಡಿ ನಿಗದಿ ಪಡಿಸಿದ ದಿನದಂದು ವೈದ್ಯರು ಆಕೆಗೆ ಒಂದು ಅರಿವಳಿಕೆಯ ಇಂಜೆಕ್ಷನ್ ನೀಡುತ್ತಾರೆ. ಆಕೆ ಕೋಮಾ ತಲುಪುವುದನ್ನು ಕಾಯುವ ವೈದ್ಯರು ನಂತರ ಹೃದಯವು ನಿಧಾನವಾಗಿ ನಿಲ್ಲುವ ಔಷಧಿ ಕೊಡುತ್ತಾರೆ. ಒಂದಿಷ್ಟೂ ನೋವು ಪಡದೆ ಅರ್ಜಿದಾರರು ನಿಧಾನವಾಗಿ ಶಾಶ್ವತ ನಿದ್ದೆಗೆ ಜಾರುತ್ತಾರೆ. ಆಗ ದಯಾಮರಣ ಸಮಿತಿಯು ಅವರನ್ನು ಪರಿಶೀಲನೆ ಮಾಡಿ ಸಾವು ಸಂಭವಿಸಿದೆ ಎಂದು ಘೋಷಣೆ ಮಾಡಿದಲ್ಲಿಗೆ ಪ್ರಕ್ರಿಯೆ ಪೂರ್ತಿ ಆಗುತ್ತದೆ.

ಸಾವನ್ನು ಸ್ವಾಗತಿಸಲು ಮಾನಸಿಕ ಸಿದ್ಧತೆ

ಝೋರಯಾ ಮಾನಸಿಕವಾಗಿ ಧೃಡವಾಗಿ ನಿಂತು ತಾನು ತನ್ನ ಮನೆಯ ಲಿವಿಂಗ್ ರೂಮಿನಲ್ಲಿ ಸೋಫಾದ ಮೇಲೆ ಕುಳಿತು ತನ್ನ ಮುದ್ದಿನ ಬೆಕ್ಕುಗಳನ್ನು ನೇವರಿಸುತ್ತಾ ಸಾವನ್ನು ಸ್ವಾಗತ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ತನ್ನ ದೇಹವನ್ನು ಪಂಚಭೂತಗಳಲ್ಲಿ ಲೀನ ಮಾಡಿ. ಅಂತ್ಯಸಂಸ್ಕಾರಕ್ಕೆ ಜನ ಸೇರಿಸುವ ಅಗತ್ಯ ಇಲ್ಲ. ನನ್ನ ಚಿತಾ ಭಸ್ಮವನ್ನು ಕಾಡಿನೊಳಗೆ ಹರಡಿ ಸಾಕು ಅಂದಿದ್ದಾರೆ.

`ನನಗೆ ಪಾಪಪ್ರಜ್ಞೆ ಕಾಡುತ್ತಿಲ್ಲ. ನನಗಾಗಿ ಯಾರೂ ಕಣ್ಣೀರು ಸುರಿಸುವ ಅಗತ್ಯ ಇಲ್ಲ. ಇದು ನಾನೇ ಆರಿಸಿಕೊಂಡ ಸಾವು. ಹಾಗಾಗಿ ನನಗೆ ಯಾವ ವಿಷಾದವೂ ಇಲ್ಲ’ ಎಂದಾಕೆ ನಗುನಗುತ್ತಾ ಹೇಳುವಾಗ ಯಾರ ಮನಸ್ಸಾದರೂ ಕರಗದೆ ಇರದು!

ಹೋಗಿ ಬಾ ಝೊರೆಯಾ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅಳಿಸಲಾಗದ ನೋವು ಬಿಟ್ಟು ಹೋದ ಮಂಗಳೂರು ವಿಮಾನ ದುರಂತ!

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ

ಧವಳ ಧಾರಿಣಿ ಅಂಕಣ (Dhavall Dharini): ಗೌತಮ ಬುದ್ಧನೇ ನೇರವಾಗಿ ಬೋಧಿಸಿದ ತತ್ತ್ವಗಳನ್ನು ಗಮನಿಸಿದಾಗ ಆತನ ತತ್ತ್ವಗಳು ಭಾರತೀಯ ದರ್ಶನ ಶಾಸ್ತ್ರದ ಮುನ್ನುಡಿಯಾಗಿವೆ ಎನ್ನಬಹುದು. ಇಂದು ಬುದ್ಧ ಪೂರ್ಣಿಮಾ (Buddha Purnima) ಹಿನ್ನೆಲೆಯಲ್ಲಿ ಆತನ ಚಿಂತನೆಗಳ ಬಗ್ಗೆ ಒಂದು ಅವಲೋಕನ.

VISTARANEWS.COM


on

dhavala dharini column buddha ಧವಳ ಧಾರಿಣಿ
Koo
dhavala dharini by Narayana yaji

­ಧವಳ ಧಾರಿಣಿ ಅಂಕಣ: ಭಾರತದ ಇತಿಹಾಸದಲ್ಲಿ ಗೌತಮ ಬುದ್ಧ (Gautama Buddha) ಮಹತ್ವದ ಸ್ಥಾನ ಪಡೆಯುವುದು ಆತ ಹೊಸ ಧರ್ಮವನ್ನು ಸ್ಥಾಪಿಸಿದ್ದಾನೆ ಎನ್ನುವುದಕ್ಕೆ ಅಲ್ಲ. ಬೌದ್ಧ ಧರ್ಮವನ್ನು (buddhism) ನೇರವಾಗಿ ಬುದ್ಧನೇ ಸ್ಥಾಪಿಸಲಿಲ್ಲ. ಆತನ ನಿರ್ವಾಣದ ನಂತರದ ಇನ್ನೂರು ವರ್ಷಗಳ ನಂತರ ಆತನ ಶಿಷ್ಯರು ಒಂದೆಡೆ ಸೇರಿ ಬುಧ್ದನ ತತ್ತ್ವಕ್ಕೆ ಒಂದು ಧಾರ್ಮಿಕ ಸ್ವರೂಪವನ್ನು ಕೊಟ್ಟರು. ಶಾಕ್ಯಮುನಿ ಗೌತಮನಿಗೆ ಲೋಕದ ಜನತೆ ಬದುಕುತ್ತಿರುವ ವಿಧಾನದಲ್ಲಿ ಬದಲಾವಣೆ ತರಬೇಕಾಗಿತ್ತು. ವರ್ಣವ್ಯವಸ್ಥೆಯ ಮೂಲಕ ಅಸ್ತಿತ್ವಕ್ಕೆ ಬಂದ ಬ್ರಾಹ್ಮಣಿಕೆಯೆನ್ನುವುದು ಅದಾಗ ಜಾತಿಯಾಗಿ ಬದಲಾವಣೆಯಾಗಿತ್ತು. ಆದರೂ ಅದು ಅಷ್ಟು ಗಟ್ಟಿಯಾಗಿ ಅನುಷ್ಟಾನಕ್ಕೆ ಬಂದಿರಲಿಲ್ಲ. ಬ್ರಾಹ್ಮಣರ ಪಾರಮ್ಯವೆನ್ನುವುದು ಧಾರ್ಮಿಕ ರಂಗದಲ್ಲಿ ಇತ್ತು. ಆತನ ಜನನದ ಕಾಲಘಟ್ಟವಾದ ಸುಮಾರು ಕ್ರಿ. ಪೂ. 623 ಶತಮಾನದಲ್ಲಿ ಭಾರತ ಧಾರ್ಮಿಕವಾಗಿ ಹಲವು ಪಲ್ಲಟಗಳನ್ನು ಅನುಭವಿಸಿತ್ತು. ಸನಾತನ ಧರ್ಮದ ಆಚರಣೆಯಲ್ಲಿ ಸಮಗ್ರವಾದ ದಿಕ್ಕುಗಳನ್ನು ತೋರಿಸುವವರು ಇರಲಿಲ್ಲ. ಧಾರ್ಮಿಕ ನಾಯಕತ್ವವೆನ್ನುವದು ತತ್ವಜ್ಞಾನಿಗಳು ತಮಗೆ ತೋಚಿದ ದಿಕ್ಕಿನಲ್ಲಿ ಅರ್ಥೈಸಿಕೊಂಡು ಅದನ್ನೇ ಬೋಧಿಸುತ್ತಿದ್ದರು. ಈ ಕಾಲಘಟ್ಟದಲ್ಲಿಯೇ ತಂತ್ರಶಾಸ್ತ್ರ, ಅಘೋರಿಗಳು, ಕಾಪಾಲಿಕರು ಹೀಗೆ ಸಾಧನೆಗಳಿಗೆ ಸಾತ್ವಿಕಮಾರ್ಗಗಳ ಜೊತೆಗೆ ಹಟಯೋಗವೂ ಸೇರಿಹೋಗಿತ್ತು. ರಾಜರುಗಳು ಯಾವ ಹಾದಿಯನ್ನು ಹಿಡಿಯುತ್ತಿದ್ದಾರೋ ಅದೇ ಹಾದಿಯನ್ನು ಜನಸಾಮಾನ್ಯರು ನಡೆದುಕೊಳ್ಳುತ್ತಿದ್ದರು.

ಇಂತಹ ಹೊತ್ತಿನಲ್ಲಿ ಪ್ರವೇಶ ಮಾಡಿದ ಬುದ್ಧನ ಉಪದೇಶಗಳು ಸನಾತನ ಧರ್ಮಕ್ಕೇ ಹೊಸ ವ್ಯಾಖ್ಯಾನವನ್ನು ಕೊಟ್ಟವು. ಹಾಗಂತ ಆತ ಭಾರತೀಯ ದರ್ಶನ ಶಾಸ್ತ್ರಕ್ಕೆ ವಿಲೋಮವಾದದ್ದನ್ನು ತನ್ನು ಬೋಧನೆಯಲ್ಲಿ ಹೇಳಲಿಲ್ಲ. ಬುದ್ಧ ಅರ್ಥವಾಗಬೇಕಾದರೆ ಭಾರತೀಯ ತತ್ತ್ವಶಾಸ್ತ್ರ ಅರ್ಥವಾಗಬೇಕು. ಸ್ವರ್ಗಕಾಮಕ್ಕಾಗಿ ಯಜ್ಞ ಯಾಗಾದಿಗಳು ಎಂದು ಸಾರುತ್ತಿದ ಪುರಾಣಗಳ ನಡುವೆ ವೇದಾಂತದ ಪರಮ ಸತ್ಯವನ್ನು ಆತನ ಉಪದೇಶಗಳಲ್ಲಿ ಗಮನಿಸಬಹುದಾಗಿದೆ. “ವೇದಗಳಲ್ಲಿ ಅಡಗಿದ್ದ ಸತ್ಯಗಳನ್ನು ಹೊರತಂದು ಜಗತ್ತಿಗೆಲ್ಲ ಘಂಟಾಘೋಷವಾಗಿ ಸಾರಿದ ವಿಶಾಲಹೃದಯಿಯಾಗಿ ಬುದ್ದ ಕಾಣಿಸಿಸಿಕೊಳ್ಳುತ್ತಾನೆ ಎಂದು ವಿವೇಕಾನಂದರು ಹೇಳುತ್ತಾರೆ. “ಕಿಸಾಗೌತಮಿಗೆ ಆಕೆಯ ಮಗನ ಸಾವಿನ ನೋವನ್ನೂ ಮರೆಯಿಸಿ ಭವಚಕ್ರಗಳ ಬಂಧನದ ಜಗತ್ತಿನ ಮಾಯೆಯನ್ನು ಹೋಗಲಾಡಿಸಿದ ಬುದ್ಧ ಬಿಡಿಸಿದಷ್ಟೂ ಬಿಡಿಸಲಾಗದ ಒಗಟು”. ಸನಾತನ ಧರ್ಮದ ಸಾರವೇ ಬುದ್ಧನ ಉಪದೇಶವೆನ್ನಬಹುದಾಗಿದೆ. ಅದಕ್ಕೇ ಸ್ವಾಮಿ ವಿವೇಕಾನಂದರು ತಮ್ಮ ಕೃತಿಶ್ರೇಣಿಯಲ್ಲಿ “ಭಾರತದಲ್ಲಿ ಬೌದ್ಧಧರ್ಮವು ನಾಶವಾಗಲಿಲ್ಲ, ಉಪನಿಷತ್ತುಗಳಲ್ಲಿ ಹುಟ್ಟಿದೆ. ಅದು ನವಯುಗದ ಹಿಂದೂ ಧರ್ಮವಾಯಿತು” ಎನ್ನುತ್ತಾರೆ.

ಜೀವನದ ನಶ್ವರತೆಯೆನ್ನುವುದು ಬುದ್ಧನ ಬದುಕಿನಲ್ಲಿ ಬಂದ ಮೊದಲ ತಿರುವು. ಪ್ರಸಿದ್ಧವಾದ ಆತನ ವಾಕ್ಯ “ಆಸೆಯೇ ದುಃಖಕ್ಕೆ ಕಾರಣ” ಎನ್ನುವುದು ನೋಡಲು ಸರಳವಾಗಿ ಕಂಡರೂ ಈ ಸತ್ಯವನ್ನು ಮನಗಾಣುವಲ್ಲಿ ಬುದ್ಧ ಸುಮಾರು ಆರುವರ್ಷಗಳ ಕಾಲ ಹುಡುಕಾಡಿದ್ದಾನೆ. ತನ್ನ ಕುಲಗುರು ಅಸಿತದೇವಲನಿಂದ ಹಿಡಿದು ಆಲಾರಾ ಕಲಮ್, ಉದ್ಧತ ರಾಮಪುತ್ತ ಮುಂತಾದ ಅನೇಕರ ಹತ್ತಿರ ಈ ವಿಷಯವನ್ನು ಚರ್ಚಿಸಿದ್ದಾನೆ. ಹಿಮಾಲಯದ ತಪ್ಪಲಿನ ಕೆಲ ಸನ್ಯಾಸಿಗಳು ಪ್ರಾಪಂಚಿಕ ಸುಖ ಮತ್ತು ದುಃಖಗಳ ಕಾರಣವನ್ನು ಅರಿತು ವೇದೋಪನಿಷತ್ತುಗಳ ನಿಜವಾದ ಅರ್ಥಗಳನ್ನು ತಿಳಿದು ಅದನ್ನೇ ಬೊಧಿಸುತ್ತಿದ್ದರು. ಅವರೆಲ್ಲರೂ ಈತನಿಗೆ ತಮ್ಮಲ್ಲಿದ ವಿದ್ಯೆಯನ್ನು ಧಾರೆ ಎರೆದರೂ ಅವೆಲ್ಲವೂ ಬದುಕಿನ ಪರಮ ಸತ್ಯವನ್ನು ಸಾಧಿಸುವತ್ತ ಪ್ರಯೋಜನಕ್ಕೆ ಬಾರದವುಗಳು ಎನ್ನುವುದು ಅರಿವಾಯಿತು. ಉದ್ಧಕ ರಾಪಪುತ್ತನ ಹತ್ತಿರ ಸಮಾಧಿಗೆ ಹೋಗುವ ತಂತ್ರವನ್ನು ಕೇವಲ ಹದಿನೈದನೇ ದಿನಗಳಲ್ಲಿ ಕಲಿತ. ಆಗ ಅವನಿಗೆ ಅರಿವಾಗಿದ್ದು ಎಚ್ಚರಕ್ಕೂ ಮತ್ತು ಸಮಾಧಿಗೂ ಇರುವ ಸ್ಥಿತಿಯೆಂದರೆ ಗ್ರಹಿಕೆ ಮತ್ತು ಗ್ರಹಿಕೆಯಲ್ಲದ ಸ್ಥಿತಿ ಎನ್ನುವುದು. ಆದರೆ ಎಚ್ಚರಾದ ಮೇಲೆ ಮತ್ತೆ ಈ ಲೋಕದ ಅವಸ್ಥೆಗಳಲ್ಲೇ ಇರುತ್ತೇವೆ ಎನ್ನುವುದು ಅರಿತಾಗ ಸಮಾಧಿಯೆನ್ನುವುದು ಸ್ವಪ್ನ ಅಥವಾ ಸುಷುಪ್ತಿಯ ಅವಸ್ಥೆಗಳಲ್ಲಿರುವ ಸ್ಥಿತಿಯೇ ಹೊರತೂ ಬೇರೆನೂ ಅಲ್ಲವೆಂದು ಅರಿವಿಗೆ ಬಂತು. ಪರಿಪೂರ್ಣ ಜ್ಞಾನವೆನ್ನುವುದನ್ನು ಸಾಧಿಸಿದ ವ್ಯಕ್ತಿಗೆ ಮತ್ತೆ ಲೌಕಿಕ ಬಾಧಿಸಬಾರದು. ಹಾಗಾಗಿ ಯಾವುದು ಸ್ಥಾಯಿ ಸ್ವರೂಪವಲ್ಲವೋ ಅವೆಲ್ಲವೂ ಅವಿದ್ಯೆ ಎನ್ನುವ ತೀರ್ಮಾನಕ್ಕೆ ಬಂದವ ಗಯಾಕ್ಕೆ ಬಂದು ಅಲ್ಲಿನ ಸ್ಮಶಾನದಲ್ಲಿರುವ ಬೋಧಿವೃಕ್ಷದ ಕೆಳಗೆ ಧ್ಯಾನಮಾಡಲು ತೊಡಗಿದ. ಜ್ಞಾನವೆನ್ನುವದು ಪ್ರಾಪಂಚಿಕ ವಸ್ತುಗಳಿಂದ ವಿಮುಖನಾಗುವದಲ್ಲ, ನಮ್ಮ ಉಸಿರು, ಹಕ್ಕಿಯ ಹಾಡು, ಎಲೆ, ಸೂರ್ಯನ ಕಿರಣ ಇವೆಲ್ಲವೂ ಧ್ಯಾನಕ್ಕೆ ಸಾಧನವಾಗಬಹುದೆಂದು ಆತನಿಗೆ ಅನಿಸಿತು. ಒಂದು ಧೂಳಿನ ಕಣದಿಂದಲೇ ಸಮಗ್ರವಾಗಿ ಬ್ರಹ್ಮಾಂಡದ ಲಕ್ಷಣವನ್ನು ಅರಿಯಬಹುದೆನ್ನುವ ವಿಷಯ ಹೊಳೆಯಿತು. ಜ್ಞಾನೋದಯವೆನ್ನುವದು ವಾಸ್ತವ ಪ್ರಪಂಚದಲ್ಲಿದೆಯೇ ಹೊರತು ಕಾಣದ ಆತ್ಮ ಅಥವಾ ಬ್ರಹ್ಮದ ವಿಷಯದಲ್ಲಿ ಇಲ್ಲ. ಆತ್ಮ ಪ್ರತ್ಯೇಕವೆನ್ನುವ ಭಾವನೆಯನ್ನು ಮೀರಿ ಪ್ರಕೃತಿಯ ಪ್ರತೀ ವಸ್ತುವಿನಲ್ಲಿ ಸೌಂದರ್ಯವಿದೆಯೆನ್ನುವದನ್ನು ಗೌತಮನ ಅರಿತುಕೊಂಡ. ಪ್ರಪಂಚವೇ ಪರಸ್ಪರ ಅವಲಂಬಿತ ಮತ್ತು ಸ್ವಯಂ ಸ್ವಭಾವವುಳ್ಳ ಸತ್ಯವೆನ್ನುವ ಸೂತ್ರ ಆತನಿಗೆ ಅರಿವಾಯಿತು. ಜ್ಞಾನವೆನ್ನುವದು ಒಳಗಣ್ಣು ಎನ್ನುವ ಭ್ರಮೆಗಿಂತ ಹೊರಗಣ್ಣಿಗೆ ಕಾಣುವ ಪ್ರಪಂಚದ ಸಮಸ್ಥವಸ್ತುವಿನಲ್ಲಿ ಇದೆ ಎನ್ನುವದು ಸ್ಪಷ್ಟವಾಯಿತು.

buddha Purnima 2023

ಬುದ್ಧನ ಬೋಧನೆಗಳು ಮೊದಲನೆಯದಾಗಿ ಜೀವನವು ದುಃಖದಿಂದ ಕೂಡಿದೆ. ಜನನ, ಮರಣ, ರೋಗ, ವೃದ್ಧಾಪ್ಯ, ವಿರಹ, ಮನಸ್ಸು ಮತ್ತು ದೇಹಗಳ ವ್ಯವಸ್ಥೆಯೇ ದುಃಖಮಯ, ಎರಡನೆಯದಾಗಿ ಈ ದುಃಖಕ್ಕೆ ಕಾರಣವಿದೆ. ಮನುಷ್ಯ ತನ್ನ ಮೂಲರೂಪವನ್ನು ಅರಿಯದಿರುವದು, ಈ ಅಜ್ಞಾನಗಳಿಂದಾಗಿಯೇ ಆತ ದೇಹ-ಮನಸ್ಸುಗಳಿಗೆ ಅಂಟಿಕೊಳ್ಳುತ್ತಾನೆ. ಈ ಕಾರ್ಯಕಾರಣ ಸಂಬಂಧದಿಂದಾಗಿ ಕರ್ಮಚಕ್ರಗಳ ಮೂಲಕ ಪುನರ್ಜನದ ಭವಚಕ್ರಗಳಿಗೆ ಸಿಕ್ಕುಬೀಳುತ್ತಾನೆ, ಈ ಯಾತನೆಗಳಿಗೆ ಕಾರಣ ಆಯಾ ವ್ಯಕ್ತಿಯೇ ಹೊರತೂ ವಿಧಿ, ಆಕಸ್ಮಿಕ ಇತ್ಯಾದಿಗಳೆಲ್ಲ ಸುಳ್ಳು. ಮೂರನೆಯದು ಈ ಭವಚಕ್ರಗಳಿಂದ ಬಿಡುಗಡೆ. ಬುದ್ಧ ಇದು ಅವಿದ್ಯೆ, ಅಜ್ಞಾನಾವಸ್ಥೆಯೆನುತ್ತಾನೆ. ಲೋಕದಲ್ಲಿನ ಎಲ್ಲಾ ಅವಸ್ಥೆಗಳಿಗೂ ಇದೇ ಕಾರಣ, ಇದೇ “ಪ್ರತ್ಯೀತ್ಯಸಮುತ್ಪಾದ” ಸಿದ್ಧಾಂತ. ನಾಲ್ಕನೆಯದೇ ಈ ಭವಚಕ್ರಗಳಿಂದ ಬಿಡುಗಡೆಯ ಮಾರ್ಗವೆಂದರೆ ಈ ದುಃಖದಿಂದ ಬಿಡುಗಡೆ. ಅದೇ ಅವಿಧ್ಯಾ ಜಿವನದಿಂದ ಬಿಡುಗಡೆ. ಇದನ್ನು ಸಾಧಿಸಲು ಅಷ್ಟಾಂಗಿಕ ಮಾರ್ಗಗಳಾದ ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್ಕು, ಸಮ್ಯಕ್ ಕ್ರಿಯಾ ಸಮ್ಯಕ್ ಆಜೀವ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸ್ಮೃತಿ ಮತ್ತು ಸಮ್ಯಕ ಸಮಾಧಿಯ ಮೂಲಕ ಸಾಧಿಸಬಹುದು. ಈ ಅಷ್ಟಾಂಗ ಮಾರ್ಗವೆಂದರೆ ನೈತಿಕತೆ, ಸಾಧನೆ, ಸಾಕ್ಷಾತ್ಕಾರ, ಸ್ವಾರ್ಥವನ್ನು ತ್ಯಜಿಸುವದು, ಬೂತದಯೆಗಳು. ಬುದ್ದ ಇದನ್ನು ಸ್ವಯಂ ತನ್ನ ಕೊನೆಯಕ್ಷಣದವರೆಗೂತಾನೇ ಆಚರಿಸಿದ್ದನು. ಕುಂಡ ಕಮ್ಮಾರಪುತ್ತ ನೀಡಿದ ವಿಷಯುಕ್ತ ಆಹಾರದಿಂದ ಸಾಯುವ ಸಂದರ್ಭದಲ್ಲಿಯೂ ಅವನನ್ನು ಕ್ಷಮಿಸಿದನು. ಪ್ರಪಂಚದಲ್ಲಿ ಕಾಣುವ ವಸ್ತುಗಳನ್ನು ಅವು ಇರುವಂತೆಯೇ ತಿಳಿದವ ಬುದ್ಧ. ಹಾಗಂತ ಇದು ಚಾರ್ವಾಕ ಮತಕ್ಕೆ ಹತ್ತಿರವಾದಂತೆ ಕಂಡರೂ ಆತ ನಾಸ್ತಿಕವಾದಿಯಲ್ಲ. ಬುದ್ಧ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಾನೆ, ಅದು ಅದ್ವೈತವನ್ನು ಹೋಲುತ್ತದೆ. ಬೌದ್ಧರು ಆತ್ಮದ ಅಸ್ತಿತ್ವವನ್ನು ಒಪ್ಪುವದಿಲ್ಲ ಎನ್ನುವ ಸಾಮಾನ್ಯ ನಂಬಿಕೆ. ಆದರೆ ಇದಕ್ಕೆ ಆಧಾರವಿಲ್ಲ.

ಬೌದ್ಧ ದರ್ಶನಗಳಲ್ಲಿ ಬುದ್ಧತ್ತ್ವಕ್ಕೆ ಏರುವುದು ಅಂದರೆ ಅದು ತುರೀಯಾವಸ್ಥೆ. ಸಾಮಾನ್ಯ ವ್ಯಕ್ತಿ ಬುದ್ಧನಾಗಲಿಕ್ಕೆ ಅನೇಕ ಜನ್ಮಗಳನ್ನು ಪಡೆಯಬೇಕಾಗುತ್ತದೆ. ಅದರಲ್ಲಿಯೂ ಕೊನೆಯ ಮೂರು ಹಂತಗಳಾದ ಅರಿಹಂತ, ಪಚ್ಛೇಕ ಬುದ್ಧತ್ವವನ್ನು ಸಾಧಿಸಿದ ಮೇಲೆ ಗೌತಮ ಬುದ್ಧ ತಲುಪಿದ ಸ್ಥಿತಿ ಸಮ ಸಂಬುದ್ಧತ್ವದ ಸ್ಥಿತಿ. ಜಾತಕದ ಕತೆಗಳಲ್ಲಿ ಬುದ್ಧನ ಹಿಂದಿನ ಜನ್ಮದ ವಿವರಗಳು ಕಥೆಯ ರೂಪದಲ್ಲಿ ಬರುವುದನ್ನು ಗಮನಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮದ ಅಸ್ತಿತ್ವವನ್ನು ಬುದ್ಧ ಒಪ್ಪುವದೂ ಇಲ್ಲ ಅಥವಾ ನಿರಾಕರಿಸುವುದೂ ಇಲ್ಲ. ವಚ್ಚಗೋತ್ತ ಎನ್ನುವ ಬ್ರಾಹ್ಮಣ ಇದೇ ವಿಷಯದಲ್ಲಿ ಬುದ್ಧನ ಹತ್ತಿರ ಕೇಳುವ ಪ್ರಶ್ನೆ ತೆವಿಜ್ಜ ಸುತ್ತದಲ್ಲಿ ಬರುತ್ತದೆ. ಆತ ಬುದ್ಧನಲ್ಲಿ ಕೇಳುವ ಆತ್ಮವಿದೆಯೇ ಅಥವಾ ಇಲ್ಲವೇ ಎನ್ನುವ ಪ್ರಶ್ನೆಗೆ ಆತ ಮೌನವಾಗಿಬಿಡುತ್ತಾನೆ. ಆತನ ಪ್ರಕಾರ ಆತ್ಮವಿದೆ ಎಂದು ಸಾರಿದ್ದರೆ ಅನಿತ್ಯಕ್ಕೇ ನಿತ್ಯವೆಂದು ಆತನ ಶಿಷ್ಯರು ಪರಿಗಣಿಸಬಹುದು, ಇಲ್ಲವೆಂದರೆ ಉಚ್ಛೇದವಾದ (ವಿನಾಶವಾದ)ವನ್ನು ಉಪದೇಶಿಸುವ ದಾರ್ಶನಿಕರು ಹೇಳಿದ್ದು ಸತ್ಯವೆಂದು ಅವರು ನಂಬುತ್ತಾರೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

ಇದರ ಅರ್ಥವಿಷ್ಟೇ ಬುದ್ಧ ಅಸ್ತಿತ್ವವಾದಿಯಾಗಿದ್ದ. ತನ್ನ ಶಿಷ್ಯರಿಗೆ “ನಿಮಗೆ ನೀವೇ ಬೆಳಕಾಗಿರಿ” ಎಂದು ಉಪದೇಶವನ್ನು ಮಾಡಿದ್ದ. ಬದುಕಿನಲ್ಲಿ ಕಾಣುವ ವಸ್ತುಗಳಲ್ಲಿಯೇ ಆನಂದವಿದೆ ಎನ್ನುವದರ ಮೂಲಕವೇ ಆತನಿಗೆ ಜ್ಞಾನೋದಯವಾದದ್ದರಿಂದ ಆತ “ತಿವಿಜ್ಜಸುತ್ತ”ದಲ್ಲಿ ಹೇಳುವಂತೆ. “ಹಳೆಯ ಓಲೆಗರಿಯಲ್ಲಿ ಹೇಳಿದೆ ಎನ್ನುವ ಮಾತ್ರಕ್ಕೆ ನಂಬಬಾರದು. ಎಲ್ಲವನ್ನೂ ವಿಚಾರಣೆ ಮಾಡಿ ವಿಶ್ಲೇಷಿಸಿ ಅದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದಾದರೆ ಅದರಂತೆ ನೀವೂ ಬಾಳಿ” ಎಂದಿದ್ದಾನೆ. ಬುದ್ಧನ ಪ್ರಕಾರ ನಿರ್ವಾಣವೆಂದರೆ ಅದು ‘ಸಂವೇದನೆ ಮತ್ತು ಭಾವನೆಗಳು ನಿಂತುಹೋಗುವ ಕ್ರಿಯೆ’. ಇದು ಜ್ಞಾತ್ರಾಜ್ಞೇಯದ ಸಂಬಂಧದ ಆಭಾವ. ಈ ನಿರ್ವಾಣಕ್ರಿಯೆಯನ್ನು ಮಾಂಡುಕ್ಯೋಪನಿಷತ್ತಿನ ತುರೀಯಾವಸ್ಥೆಗೆ ಹೋಲಿಸಬಹುದು. (ನಾಂತಃಪ್ರಜ್ಞಂ ನ ಬಹಿಃಪ್ರಜ್ಞಂ..ಮಾಂಡೂಕ್ಯ-7) ಇವೆರಡರಲ್ಲೂ ಭಾವನಾತ್ಮಕವಾದ ವಿಷಯಗಳಿಲ್ಲ. ಅವು ವಿಷಯ, ವಿಷಯಿ ಸಂಬಂಧ, ದೇಶ ಕಾಲ ನಿಮಿತ್ತ ಇವುಗಳಿಗೆ ಅತೀತವಾಗಿದೆ. ಇವೆರಡರಲ್ಲೂ ಚೇತನಾವಿಷಯಗಳಿಲ್ಲ; ಚೈತನ್ಯಸ್ವರೂಪವಿದೆ. ಪಾಲಿ ಭಾಷೆಯಲ್ಲಿರುವ ತೇರವಾದ ಬೌದ್ಧಗ್ರಂಥ ‘ಉದಾನ”ದಲ್ಲಿ “ಅಜವೂ ಅನಾದಿಯೂ ಅಕೃತವೂ ಅಸಂಯುಕ್ತವೂ ಆದುದೊಂದಿದೆ. ಎಲೈ ಭಿಕ್ಕು, ಅದಿಲ್ಲವಾದರೆ ಹುಟ್ಟುಳ್ಳದ್ದೂ, ಸಾದಿಯೂ ಕೃತವೂ ಸಂಯುಕ್ತವೂ ಆದ ಜಗತ್ತಿನಿಂದ ಮುಕ್ತಿಯೇ ಇರುವದಿಲ್ಲ” (ಉದಾನ 8-3) ಎಂದಿದ್ದಾನೆ. ಆತ ನಿರ್ವಿಕಾರವೂ ಶಾಶ್ವತವೂ ಆದ ಶಾಶ್ವತ ಸತ್ಯವನ್ನು ಒಪ್ಪುತ್ತಾನೆಂಬುದು ಇದರಿಂದ ಸ್ಪಷ್ಟ. ಇದಲ್ಲದಿದ್ದರೆ ಅವನ ನಿರ್ವಾಣವಾದವೇ ಬಿದ್ದುಹೋಗುತ್ತದೆ. ಆತ ಹೇಳಿದ್ದು “ಆತ್ಮ ಮತ್ತು ಬ್ರಹ್ಮ ವಿಷಯಕವಾದ ವಿಚಾರಗಳಿಂದ ಯಾವ ಪ್ರಯೋಜನವೂ ಇಲ್ಲ, ಒಳ್ಳೆಯದನ್ನು ಮಾಡಿರಿ; ಒಳ್ಳೆಯವರಾಗಿರಿ, ಇದೇ ನಿಮ್ಮನ್ನು ನಿರ್ವಾಣಕ್ಕೆ ಕೊಂಡೊಯ್ಯುತ್ತದೆ”. ಬುದ್ಧನೇ ನೇರವಾಗಿ ಬೋಧಿಸಿದ ತತ್ತ್ವಗಳನ್ನು ಗಮನಿಸಿದಾಗ ಆತನ ತತ್ತ್ವಗಳು ಭಾರತೀಯ ದರ್ಶನ ಶಾಸ್ತ್ರದ ಮುನ್ನುಡಿಯಾಗಿವೆ ಎನ್ನಬಹುದು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

Continue Reading

ಅಂಕಣ

ರಾಜಮಾರ್ಗ ಅಂಕಣ: ಅಳಿಸಲಾಗದ ನೋವು ಬಿಟ್ಟು ಹೋದ ಮಂಗಳೂರು ವಿಮಾನ ದುರಂತ!

ರಾಜಮಾರ್ಗ ಅಂಕಣ: ರನ್ ವೇಯಲ್ಲಿ ಓಡಲು ತೊಡಗಿದ ವಿಮಾನ ನಿಯಂತ್ರಣಕ್ಕೆ ಬರಲಿಲ್ಲ. ರನ್ ವೇ ಪೂರ್ತಿ ಓಡಿದ ನಂತರವೂ ವೇಗ ಕಡಿಮೆ ಆಗಲಿಲ್ಲ. ಅಪಾಯದ ಗೆರೆ ದಾಟಿ ಓಡಿದ ವಿಮಾನ ಮುಂದೆ ಇರುವ ಕೆಂಜಾರು ಎಂಬ ಜಾಗದ ಕಂದಕದಲ್ಲಿ ಉರುಳಿ ಬಿದ್ದು ಎರಡು ಭಾಗವಾಯಿತು. ಕ್ಷಣ ಮಾತ್ರದಲ್ಲಿ ಇಂಜಿನ್ ಟ್ಯಾಂಕ್ ಬೆಂಕಿ ಹಿಡಿದು ವಿಮಾನ ಹೊತ್ತಿ ಉರಿಯಲು ಆರಂಭವಾಯಿತು.

VISTARANEWS.COM


on

rajamarga column mangalore flight crash 1
Koo
Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ (Mangalore Airport) 14 ವರ್ಷಗಳ ಹಿಂದೆ ಇದೇ ದಿನ (2010 ಮೇ 22) ನಡೆದ ಆ ಒಂದು ದುರ್ಘಟನೆಯು (Mangalore flight crash) ದೇಶದಾದ್ಯಂತ ಉಂಟುಮಾಡಿದ ನೋವಿನ ಅಲೆಗಳನ್ನು ಈಗ ಕಲ್ಪನೆ ಮಾಡಲೂ ಭಯವಾಗುತ್ತದೆ! ದಕ್ಷಿಣ ಭಾರತದ ಅತೀ ದೊಡ್ಡ ವಿಮಾನ ದುರಂತವದು.

ಅಂದು ಮೇ 22, 2010 ಮಧ್ಯರಾತ್ರಿ…

ದುಬೈಯಿಂದ ಹೊರಟ ಭಾರತದ ವೈಭವದ ಬೋಯಿಂಗ್ 737-800 ವಿಮಾನದಲ್ಲಿ 166 ಪ್ರಯಾಣಿಕರಿದ್ದರು. ಅದರಲ್ಲಿ ಎಲ್ಲ ಪ್ರಾಯದವರೂ ಇದ್ದರು. ಹೆಚ್ಚಿನವರು ಕರ್ನಾಟಕ ಮತ್ತು ಕೇರಳದವರು. ನೂರಾರು ಕನಸುಗಳನ್ನು ಹೊತ್ತು ತಮ್ಮ ತಾಯ್ನೆಲಕ್ಕೆ ಹೊರಟವರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮುಂಜಾನೆ ಸೂರ್ಯೋದಯಕ್ಕೆ ಮೊದಲು ಅವರು ಮಂಗಳೂರು ತಲುಪಿ ತಮ್ಮ ತಮ್ಮ ಊರಿಗೆ ಟ್ಯಾಕ್ಸಿ ಏರಬೇಕಾಗಿತ್ತು. ಆದರೆ ವಿಧಿಯ ಆಟ ಬೇರೆಯೇ ಇತ್ತು.

ಟೇಬಲ್ ಟಾಪ್ ರನ್ ವೇ…

ಮುಂಜಾನೆ ಆರು ಘಂಟೆಯ ಹೊತ್ತಿಗೆ ಜನರು ಕಣ್ಣುಜ್ಜಿ ಹೊರಗೆ ನೋಡಲು ತೊಡಗಿದಾಗ ವಿಮಾನ ಬಜಪೆ ವಿಮಾನ ನಿಲ್ದಾಣದ ರನ್ ವೇ ಸ್ಪರ್ಶ ಮಾಡಿ ಓಡತೊಡಗಿತ್ತು. ಅದು ಟೇಬಲ್ ಟಾಪ್ ರನ್ ವೇ. ಅಂದರೆ ಎತ್ತರದ ಪರ್ವತದ ಮೇಲೆ ಸಮತಟ್ಟು ಮಾಡಿ ನಿರ್ಮಿಸಿದ್ದ ರನ್ ವೇ. ವಿಮಾನದ ಕ್ಯಾಪ್ಟನ್ ಗ್ಲುಸಿಕಾ (Glusica) ಮತ್ತು ಫಸ್ಟ್ ಆಫೀಸರ್ ಹರಿಂದರ್ ಸಿಂಘ್ ಅಹ್ಲುವಾಲಿಯಾ ಇಬ್ಬರೂ ಅನುಭವಿಗಳು. ಅದರಲ್ಲಿ ಕ್ಯಾಪ್ಟನ್ ಗ್ಲುಸಿಕಾ ಅದೇ ರನ್ ವೇ ಮೇಲೆ ಹಿಂದೆ 16 ಬಾರಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ದಾಖಲೆ ಹೊಂದಿದ್ದರು. 2448 ಮೀಟರ್ ಉದ್ದವಾದ ರನ್ ವೇಯಲ್ಲಿ ವಿಮಾನವನ್ನು ನಿಯಂತ್ರಣಕ್ಕೆ ತಂದು ನಿಲ್ಲಿಸುವುದು ಕಷ್ಟ ಆಗಿರಲಿಲ್ಲ. ವಾತಾವರಣವೂ ಪೂರಕವಾಗಿತ್ತು. ಬಜಪೇ ವಿಮಾನ ನಿಲ್ದಾಣದಿಂದ ಪೂರಕ ಸಂಕೇತಗಳು ದೊರೆಯುತ್ತಿದ್ದವು.

ಕಣ್ಣು ಮುಚ್ಚಿ ತೆರೆಯುವ ಒಳಗೆ..

ಈ ಬಾರಿ ರನ್ ವೇಯಲ್ಲಿ ಓಡಲು ತೊಡಗಿದ ವಿಮಾನ ನಿಯಂತ್ರಣಕ್ಕೆ ಬರಲಿಲ್ಲ. ರನ್ ವೇ ಪೂರ್ತಿ ಓಡಿದ ನಂತರವೂ ವೇಗ ಕಡಿಮೆ ಆಗಲಿಲ್ಲ. ಅಪಾಯದ ಗೆರೆ ದಾಟಿ ಓಡಿದ ವಿಮಾನ ಮುಂದೆ ಇರುವ ಕೆಂಜಾರು ಎಂಬ ಜಾಗದ ಕಂದಕದಲ್ಲಿ ಉರುಳಿ ಬಿದ್ದು ಎರಡು ಭಾಗವಾಯಿತು. ಕ್ಷಣ ಮಾತ್ರದಲ್ಲಿ ಇಂಜಿನ್ ಟ್ಯಾಂಕ್ ಬೆಂಕಿ ಹಿಡಿದು ವಿಮಾನ ಹೊತ್ತಿ ಉರಿಯಲು ಆರಂಭವಾಯಿತು. ಆಕಾಶದ ಎತ್ತರಕ್ಕೆ ಬೆಂಕಿ ಮತ್ತು ಹೊಗೆ ಏರುತ್ತಾ ಹೋದಂತೆ ಒಳಗಿದ್ದ ಪ್ರಯಾಣಿಕರಿಗೆ ಏನಾಗ್ತಾ ಇದೆ ಎಂದು ಅರಿವಾಗುವ ಮೊದಲೇ ಇಡೀ ವಿಮಾನ ಸುಟ್ಟು ಹೋಯಿತು. ಸಣ್ಣಗೆ ಮಳೆ ಸುರಿಯುತ್ತಿದ್ದರೂ ವಿಮಾನದ ಬೆಂಕಿ ಆರಲಿಲ್ಲ.

ರೆಸ್ಕ್ಯೂ ಆಪರೇಶನ್ ಆರಂಭ.

ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಮಂಗಳೂರಿನಿಂದ ಅಗ್ನಿ ಶಾಮಕ ವಾಹನಗಳು, ಆಂಬ್ಯುಲೆನ್ಸಗಳು ಸ್ಥಳಕ್ಕೆ ಧಾವಿಸಿ ಬಂದವು. ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಜೀವದ ಹಂಗು ತೊರೆದು ಸ್ಥಳಕ್ಕೆ ಧಾವಿಸಿದರು. ಬೆಂಕಿ ಆರಿಸುವ ಪ್ರಯತ್ನವು ಹಲವು ಘಂಟೆ ನಡೆಯಿತು. ವಿಮಾನದಿಂದ ಸುಟ್ಟು ಕರಕಲಾದ ಶವಗಳನ್ನು ಹೊರಗೆ ತೆಗೆಯುವುದೇ ಕಷ್ಟ ಆಯಿತು. ತಮ್ಮವರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿತ್ತು.

ಅಂದು ಸುಟ್ಟು ಹೋದವರ ಸಂಖ್ಯೆಯೇ 158!

ವಿಮಾನದಲ್ಲಿ ಇದ್ದ ಪ್ರಯಾಣಿಕರ ಸಂಖ್ಯೆ 166. ಆರು ಜನ ಕ್ರೂ (Crew) ಸದಸ್ಯರು ಬೇರೆ ಇದ್ದರು. ಅಂದು ಬದುಕಿ ಉಳಿದವರ ಸಂಖ್ಯೆ 8 ಮಾತ್ರ. ತೀವ್ರವಾಗಿ ಗಾಯಗೊಂಡವರ ಸಂಖ್ಯೆ 8. ಅಂದರೆ 158 ಜನರು ಸುಟ್ಟು ಕರಕಲಾಗಿ ಹೋಗಿದ್ದರು! ಕ್ರೂ (Crew) ಸದಸ್ಯರೂ ಬೂದಿ ಆಗಿದ್ದರು. ಶವಗಳನ್ನು ಗುರುತು ಹಿಡಿಯುವುದು ತುಂಬಾನೇ ಕಷ್ಟ ಆಯಿತು. ಒಂದೊಂದು ಶವವನ್ನು ಎತ್ತಿ ಆಂಬುಲೆನ್ಸಗೆ ಸಾಗಿಸುವಾಗ ಜನರ ಆಕ್ರಂದನ ಹೃದಯ ವಿದ್ರಾವಕ ಆಗಿತ್ತು.

ಆಸ್ಪತ್ರೆಗೆ ಧಾವಿಸಿ ತಮ್ಮವರನ್ನು ಶವಗಳ ರಾಶಿಯಲ್ಲಿ ಹುಡುಕುತ್ತಾ ಅಳುವವರ ದೃಶ್ಯವು ನಿಜಕ್ಕೂ ಕರುಣಾಜನಕ ಆಗಿತ್ತು. ಅದರಲ್ಲಿಯೂ 12 ಶವಗಳ ಗುರುತು ಹಿಡಿಯುವುದೇ ಕಷ್ಟವಾಗಿ ಅವುಗಳನ್ನು ಮುಂದೆ ಕೂಳೂರಿನ ಫಲ್ಗುಣಿ ನದಿ ತೀರದಲ್ಲಿ ಸಾಮೂಹಿಕವಾಗಿ ಸಂಸ್ಕಾರ ಮಾಡಲಾಯಿತು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಭಾರತದಲ್ಲಿ ಕಡ್ಡಾಯ ಮತದಾನ ಕಾನೂನು ಯಾಕೆ ಸಾಧ್ಯವಿಲ್ಲ?

ಪೈಲಟ್ ನಿದ್ದೆ ರೆಕಾರ್ಡ್ ಆಗಿತ್ತು!

ಇಂತಹ ಅಪಘಾತಗಳು ನಡೆದಾಗ ಗಂಭೀರವಾದ ವಿಚಾರಣೆಗಳು ನಡೆಯುತ್ತವೆ. ಕಾಕ್‌ಪಿಟ್ ರೆಕಾರ್ಡರ್‌ನಲ್ಲಿ ಪೈಲಟ್ ಕ್ಯಾಪ್ಟನ್ ಗ್ಲುಸಿಕಾ ಅವರ ನಿದ್ದೆ ರೆಕಾರ್ಡ್ ಆಗಿತ್ತು. ಅಂದರೆ 55 ವರ್ಷ ಪ್ರಾಯದ ಆತನು ಸುಮಾರು ಹೊತ್ತು ವಿಮಾನದ ಹಾರಾಟದ ಅವಧಿಯಲ್ಲಿ ಮಲಗಿದ್ದು ನಿಚ್ಚಳವಾಯಿತು! ಇದೇ ಅಪಘಾತಕ್ಕೆ ಕಾರಣ ಎಂದು ಧೃಡವಾಗಿತ್ತು.

ಮುಂದೆ ಏನಾಯಿತು?

ರಾಜ್ಯ ಮತ್ತು ಕೇಂದ್ರ ಸರಕಾರಗಳು ಮೃತರಾದವರಿಗೆ ಪರಿಹಾರ ಕೊಟ್ಟವು. ವಿಮಾನ ಯಾನ ಸಂಸ್ಥೆ ಮತ್ತು ಖಾಸಗಿ ವಿಮಾ ಕಂಪೆನಿಗಳು ಪರಿಹಾರಗಳನ್ನು ನೀಡಿದವು. ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ದುರಂತದ ಸ್ಮಾರಕವನ್ನು ನಿರ್ಮಾಣ ಮಾಡಿ ಮೃತರಾದವರಿಗೆ ಶ್ರದ್ಧಾಂಜಲಿ ಕೊಟ್ಟಿತ್ತು. ಆದರೆ ತಮ್ಮವರನ್ನು ಕಳೆದುಕೊಂಡು ಇಂದಿಗೂ ರೋಧಿಸುತ್ತಿರುವ, ನೋವು ಪಡುತ್ತಿರುವ ಮಂದಿಗೆ ಈ ದುರಂತವು ಮರೆತು ಹೋಗುವುದು ಹೇಗೆ? ಅಂದು ಮಡಿದ ನೂರಾರು ಮಂದಿಗೆ ಒಂದು ಹನಿ ಕಣ್ಣೀರು ಸುರಿಸಿ ಶ್ರದ್ಧಾಂಜಲಿ ಕೊಡೋಣ ಅಲ್ಲವೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅವರ ನೆನಪೇ ನ್ಯಾಚುರಲ್‌ ಐಸ್‌ಕ್ರೀಂನ ತಾಜಾ ಹಣ್ಣಿನ ರುಚಿ, ಪರಿಮಳದಂತೆ!

Continue Reading
Advertisement
ರಾಹುಲ್‌ ಗಾಂಧಿ rahul gandhi ippb account 2
ಪ್ರಮುಖ ಸುದ್ದಿ5 mins ago

ಅಧಿಕಾರಕ್ಕೆ ಬಂದ್ರೆ ನಿಮ್ಮ ಖಾತೆಗೆ ಟಕಾಟಕ್ 1 ಲಕ್ಷ ಎಂದಿದ್ದ ರಾಹುಲ್ ಗಾಂಧಿ! ಪೋಸ್ಟ್ ಆಫೀಸ್ ಮುಂದೆ ಮುಸ್ಲಿಂ ಮಹಿಳೆಯರ ನೂಕುನುಗ್ಗಲು!!

All Eyes on Rafah
ವಿದೇಶ13 mins ago

All Eyes on Rafah: ಪ್ಯಾಲೆಸ್ತೀನ್‌ಗೆ ಬೆಂಬಲಿಸಿ ರೋಹಿತ್‌ ಪತ್ನಿ ಪೋಸ್ಟ್‌; ಫುಲ್‌ ಟ್ರೋಲ್‌- ಏನಿದು ʼಆಲ್‌ ಐಸ್‌ ಆನ್‌ ರಫಾʼ?

Sujay Hegde Manasare actor Engagement with Prerana
ಕಿರುತೆರೆ17 mins ago

Sujay Hegde: ನಿಶ್ಚಿತಾರ್ಥ ಮಾಡಿಕೊಂಡ ‘ಮನಸಾರೆ’ ಧಾರಾವಾಹಿಯ ನಟ ಸುಜಯ್ ಹೆಗಡೆ

Viral News
ವೈರಲ್ ನ್ಯೂಸ್48 mins ago

Viral News: ರೈಲಿನಲ್ಲಿ ಅಶ್ಲೀಲವಾಗಿ ಮೈ ಕುಣಿಸಿದ ಮಹಿಳೆ; ರೀಲ್ಸ್ ಮಾಡುವವರ ಕಾಟವಿಲ್ಲದ ಪ್ರಯಾಣ ಅಸಾಧ್ಯ ಎಂದ ನೆಟ್ಟಿಗರು

Rahul Gandhi
ದೇಶ50 mins ago

Rahul Gandhi: ನೋಡ ನೋಡ್ತಿದ್ದಂತೆ ತಲೆ ಮೇಲೆ ನೀರು ಸುರಿದುಕೊಂಡ ರಾಹುಲ್‌ ಗಾಂಧಿ! ವಿಡಿಯೋ ಇದೆ

dk shivakumar jagdeep dhankar
ಪ್ರಮುಖ ಸುದ್ದಿ52 mins ago

DK Shivakumar: ಕುತೂಹಲ ಕೆರಳಿಸಿದ ಡಿಕೆಶಿ- ಉಪರಾಷ್ಟ್ರಪತಿ ಭೇಟಿ; ʼಬಿಜೆಪಿಗೆ ಸೇರ್ತೀರಾʼ ಎಂದ ನೆಟ್ಟಿಗರು!

Pushpa 2 SOOSEKI Couple Song Lyrical Video out
ಟಾಲಿವುಡ್55 mins ago

Pushpa 2: ʼಪುಷ್ಪ 2ʼ ಸಿನಿಮಾದ ಎರಡನೇ ಹಾಡು ರಿಲೀಸ್‌: ಅಲ್ಲು ಜತೆ ಹೆಜ್ಜೆ ಹಾಕಿದ ರಶ್ಮಿಕಾ!

UPI Safety Tips
ವಾಣಿಜ್ಯ55 mins ago

UPI Safety Tips: ಈ ಟಿಪ್ಸ್ ಪಾಲಿಸಿ, ಮೊಬೈಲ್ ನಿಂದ ಹಣ ಪಾವತಿಸುವಾಗ ಆಗುವ ವಂಚನೆಯಿಂದ ಪಾರಾಗಿ

Shakhahaari Movie 1 cr minutes of streaming amazon prime
ಸ್ಯಾಂಡಲ್ ವುಡ್1 hour ago

Shakhahaari Movie: ಪ್ರೇಕ್ಷಕರನ್ನು ಆವರಿಸಿದ ‘ಶಾಖಾಹಾರಿ’: ಪರಭಾಷಿಕರಿಂದಲೂ ಚಿತ್ರಕ್ಕೆ ಮೆಚ್ಚುಗೆ!

Arvind Kejriwal
ದೇಶ1 hour ago

Arvind Kejriwal: ಜಾಮೀನು ಅವಧಿ ವಿಸ್ತರಣೆಗೆ ಕೋರಿ ಅರ್ಜಿ; ಸುಪ್ರೀಂನಲ್ಲಿ ಕೇಜ್ರಿವಾಲ್‌ಗೆ ಭಾರೀ ಹಿನ್ನಡೆ-ಮತ್ತೆ ಜೈಲು ಫಿಕ್ಸ್‌!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ18 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌