ವಿಸ್ತಾರ Explainer: ಏನಿದು ಎಚ್‌3ಎನ್‌2 ವೈರಸ್?‌ ಲಕ್ಷಣಗಳು ಯಾವವು? ಮುನ್ನೆಚ್ಚರಿಕೆ ಕ್ರಮ ಏನು? Vistara News
Connect with us

EXPLAINER

ವಿಸ್ತಾರ Explainer: ಏನಿದು ಎಚ್‌3ಎನ್‌2 ವೈರಸ್?‌ ಲಕ್ಷಣಗಳು ಯಾವವು? ಮುನ್ನೆಚ್ಚರಿಕೆ ಕ್ರಮ ಏನು?

ವಿಸ್ತಾರ Explainer: ಕೊರೊನಾ ಹಾವಳಿ ಬೆನ್ನಲ್ಲೇ ದೇಶದ ಜನರಿಗೆ ಎಚ್‌3ಎನ್‌2 ಸೋಂಕಿನ ಭೀತಿ ಎದುರಾಗಿದೆ. ಸೋಂಕಿನ ಲಕ್ಷಣ, ಪರಿಣಾಮ, ಪರಿಹಾರ ಸೇರಿ ವಿವಿಧ ಮಾಹಿತಿ ಇಲ್ಲಿದೆ.

VISTARANEWS.COM


on

H3N2
Koo

ಕೊರೊನಾ ಸಾಂಕ್ರಾಮಿಕ ಪಿಡುಗಿನಿಂದ ದೇಶ ಹೊರಬರುತ್ತಿರುವ, ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಎಚ್‌3ಎನ್‌2 ಇನ್‌ಫ್ಲುಯೆಂಜಾ ಸೋಂಕು ಜನರನ್ನು ಭೀತಿಗೊಳಗಾಗಿಸಿದೆ. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಒಬ್ಬರು ಹಾಗೂ ಹರಿಯಾಣದಲ್ಲಿ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಎಚ್‌3ಎನ್‌2 ಸೋಂಕಿನ 90 ಪ್ರಕರಣಗಳಿವೆ ಎಂಬುದಾಗಿ ಕೇಂದ್ರ ಸರ್ಕಾರವೇ ಮಾಹಿತಿ ನೀಡಿದೆ. ಸೋಂಕಿನ ಪರಿಣಾಮ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದೆ. ಹಾಗಾದರೆ, ಏನಿದು ಎಚ್‌3ಎನ್‌2 ವೈರಸ್‌? ಇದರ ಪರಿಣಾಮ ಏನು? ಲಕ್ಷಣಗಳು ಯಾವವು ಎಂಬುದರ ಮಾಹಿತಿ ಹೀಗಿದೆ.

ಏನಿದು ಎಚ್‌3ಎನ್‌2?

ಎಚ್‌3ಎನ್‌2 ಸೋಂಕು ಇನ್‌ಫ್ಲುಯೆಂಜಾ ಎ ವೈರಸ್‌ನ ಉಪ ತಳಿಯಾಗಿದೆ. ವಯಸ್ಸಾದವರು ಹಾಗೂ ಮಕ್ಕಳಲ್ಲಿ ಇದು ಜಾಸ್ತಿ ಕಾಣಿಸುತ್ತಿದೆ. ಗಾಳಿಯಿಂದ ಹರಡುವ ಸೋಂಕು ಇದಾಗಿದ್ದು, ಜ್ವರ ಸೇರಿ ಹಲವು ರೀತಿಯಲ್ಲಿ ಮನುಷ್ಯನನ್ನು ಬಾಧಿಸುತ್ತದೆ. ಆರ್ಥೋಮಿಕ್ಸೊವೈರಿಡೆ ಪ್ರಭೇದಕ್ಕೆ ಸೇರಿರುವ (Orthomyxoviridae) ಸೋಂಕು ಮೊದಲ ಬಾರಿಗೆ 1968ರಲ್ಲಿ ಪತ್ತೆಯಾಗಿದೆ. ಆದರೆ, ಕೆಲ ತಿಂಗಳಿಂದ ಇದು ಭಾರತದಲ್ಲಿ ಹೆಚ್ಚು ಬಾಧಿಸುತ್ತಿದೆ. ಈಗ ಜನ ಸೋಂಕಿಗೆ ಬಲಿಯಾಗುತ್ತಿರುವುದು ಜನರ ಆತಂಕ ಹೆಚ್ಚಿಸಿದೆ.

73 Year Old Man Who Tested Positive For H3N2 Virus Dies In Maharashtra

ಇದೆಷ್ಟು ಅಪಾಯಕಾರಿ?

ಎಚ್‌3ಎನ್‌2 ವೈರಸ್‌ ಇತ್ತೀಚೆಗೆ ಮಾರಣಾಂತಿಕವಾಗಿ ಪರಿಣಮಿಸಿದೆ. ಸೋಂಕಿತರಲ್ಲಿ ಹೆಚ್ಚಿನ ಜನ ಆಸ್ಪತ್ರೆಗಳಿಗೆ ದಾಖಲಾಗಿದ್ದು, ಇದಿನ್ನೂ ಹೆಚ್ಚು ವ್ಯಾಪಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಕೆಮ್ಮು, ಸೀನುವುದರಿಂದ ಸೋಂಕು ಹೆಚ್ಚಾಗಿ ಹರಡುತ್ತಿದೆ. ಸೋಂಕು ತಗುಲಿದವರಲ್ಲಿ ಶೇ.92ರಷ್ಟು ಜನರಿಗೆ ಜ್ವರ, ಶೇ.86ರಷ್ಟು ಮಂದಿಗೆ ಕೆಮ್ಮು, ಶೇ.27ರಷ್ಟು ಸೋಂಕಿತರಿಗೆ ಉಸಿರಾಟದ ತೊಂದರೆ ಕಾಣಿಸಿದೆ. ಈ ಸೋಂಕು 50 ವರ್ಷ ದಾಟಿದವರು ಹಾಗೂ 15 ವರ್ಷದೊಳಗಿನವರಿಗೆ ಹೆಚ್ಚು ಬಾಧಿಸುತ್ತಿದೆ ಎಂದು ಇಂಡಿಯನ್‌ ಮೆಡಿಕಲ್‌ ಅಸೋಸಿಯೇಷನ್‌ ವರದಿ ತಿಳಿಸಿದೆ.

ಐಸಿಎಂಆರ್‌ ಸೂಚನೆಗಳು ಹೀಗಿವೆ

ಲಕ್ಷಣಗಳು ಯಾವುವು?

ಜ್ವರ, ಕೆಮ್ಮು, ನೆಗಡಿ ಸೇರಿ ಎಚ್‌3ಎನ್‌2 ಹಲವು ಲಕ್ಷಣಗಳನ್ನು ಹೊಂದಿದೆ. ಮೈ ಕೈ ನೋವು, ತಲೆನೋವು, ಅತಿಯಾದ ಸುಸ್ತು, ವಾಂತಿಯಾಗುವುದು, ಭೇದಿ, ಪದೇಪದೆ ಸೀನುವುದು ಸೋಂಕಿನ ಲಕ್ಷಣಗಳಾಗಿವೆ. ಕೆಲವೊಂದು ಸಲ ನ್ಯುಮೋನಿಯಾ, ಉಸಿರಾಟದ ತೊಂದರೆಯಂತಹ ಸಮಸ್ಯೆಯೂ ಎದುರಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಒಂದು ವಾರದವರೆಗೆ ಲಕ್ಷಣಗಳು ಇರಲಿದ್ದು, ಜನರಿಗೆ ಈ ಲಕ್ಷಣಗಳು ಕಂಡುಬಂದ ಕೂಡಲೇ ಆಸ್ಪತ್ರೆಗೆ ತೆರಳಬೇಕು ಎಂದು ಸೂಚಿಸಿದ್ದಾರೆ.

ಸೋಂಕು ನಿಗ್ರಹ ಹೇಗೆ?

ಮಾತ್ರೆಗಳನ್ನು ತೆಗೆದುಕೊಳ್ಳುವ ಮೂಲಕ ಎಚ್‌3ಎನ್‌2 ಸೋಂಕಿನಿಂದ ಮುಕ್ತರಾಗಬಹುದಾಗಿದೆ. ಒಸೆಲ್ಟಾಮಿವಿರ್‌ (Oseltamivir), ಜನಾಮಿವಿರ್‌ (Zanamivir), ಪೆರಾಮಿವಿರ್‌ (Peramivir) ಹಾಗೂ ಬೊಲಾಕ್ಸೇವಿರ್‌ (Bolaxavir) ಮಾತ್ರೆಗಳನ್ನು ಸೇವಿಸಬಹುದಾಗಿದೆ. ಆದರೆ, ವೈದ್ಯರು ಸೂಚಿಸಿದರೆ ಮಾತ್ರೆ ಈ ಮಾತ್ರಗಳನ್ನು ಮೆಡಿಕಲ್‌ ಶಾಪ್‌ಗಳಲ್ಲಿ ನೀಡಲಾಗುತ್ತದೆ. ಹಾಗಾಗಿ, ಸೋಂಕಿನ ಲಕ್ಷಣ ಕಂಡುಬಂದ ಕೂಡಲೇ ತಪಾಸಣೆ ಮಾಡಿಸಿ, ವೈದ್ಯರ ಸೂಚನೆ ಮೇರೆಗೆ ಈ ಮಾತ್ರೆಗಳನ್ನು ಸೇವಿಸಬಹುದಾಗಿದೆ.

ಯಾರೆಲ್ಲ ಹೆಚ್ಚಿನ ಜಾಗ್ರತರಾಗಿರಬೇಕು?

ಐದು ವರ್ಷಕ್ಕಿಂತ ಕಡಿಮೆ ಹಾಗೂ 65 ವರ್ಷ ದಾಟಿದವರು ಹೆಚ್ಚಿನ ಪ್ರಮಾಣದಲ್ಲಿ ಜಾಗ್ರತರಾಗಿ ಇರಬೇಕು. ಸುದೀರ್ಘ ಅವಧಿಯಿಂದ ಅಸ್ತಮಾ, ಸಕ್ಕರೆ ಕಾಯಿಲೆ, ಹೃದ್ರೋಗ ಸೇರಿ ಹಲವು ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕ್ಷಿಪ್ರವಾಗಿ ಎಚ್‌3ಎನ್‌2 ಸೋಂಕು ತಗುಲುವ ಸಾಧ್ಯತೆ ಇದೆ. ಹಾಗಾಗಿ, ಇವರು ಸಾಧ್ಯವಾದಷ್ಟು ಜನಸಂದಣಿ ಇರುವ ಕಡೆ ತೆರಳದೆ, ಮದುವೆಯಂತಹ ಸಮಾರಂಭಗಲ್ಲಿ ಭಾಗವಹಿಸದೆ, ಮನೆಯಲ್ಲಿಯೇ ಇರಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: H3N2 Virus: ಎಚ್‌3ಎನ್‌2ಗೆ ಮೊದಲ ಬಲಿ ರಾಜ್ಯದಲ್ಲಿ; ಕೋವಿಡ್‌ ಮೊದಲ ಸಾವು ನೆನಪಿಸಿದ ವೈರಸ್

ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು

ಕೊರೊನಾದಂರೆ ಎಚ್‌3ಎನ್‌2 ಕೂಡ ಸಾಂಕ್ರಾಮಿಕ ವೈರಸ್‌ ಆದ ಕಾರಣ ಜನರು ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯವಶ್ಯವಾಗಿದೆ.
-ಆಗಾಗ ಕೈ ತೊಳೆಯಬೇಕು. ಅದರಲ್ಲೂ, ಊಟ ಮಾಡುವ ಮೊದಲು ಸಾಬೂನು ಹಚ್ಚಿ ಕೈ ತೊಳೆಯಬೇಕು.
-ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದು.
-ಆಗಾಗ ಮೂಗು ಮತ್ತು ಬಾಯಿಯನ್ನು ಮುಟ್ಟಿಕೊಳ್ಳಬಾರದು
– ಹೆಚ್ಚು ನೀರು ಕುಡಿಯುವುದು
– ಸ್ಯಾನಿಟೈಸರ್‌ ಬಳಸುವುದು

EXPLAINER

Yogi Adityanath: ನಿರಂತರ 6 ವರ್ಷ ಸಿಎಂ, ಯೋಗಿ ಹೊಸ ದಾಖಲೆ; ಬುಲ್ಡೋಜರ್​ ಬಾಬಾನಿಂದ ವಿಕಾಸ ಪುರುಷನವರೆಗೆ…

ಯೋಗಿ ಆದಿತ್ಯನಾಥ್​ ಅವರು ತಮ್ಮ ಮೊದಲನೇ ಅವಧಿಯಲ್ಲಿ ನಡೆಸಿದ ಆಡಳಿತವೇ ದೇಶದಾದ್ಯಂತ ಜನಪ್ರಿಯತೆ ಗಳಿಸಿದೆ. ‘ಕಾನೂನು ಸುವ್ಯವಸ್ಥೆ ಕಾಪಾಡಲು, ಸಮಾಜ-ದೇಶ ವಿರೋಧಿ ಕೃತ್ಯಗಳನ್ನು ಹತ್ತಿಕ್ಕಲು ಅವರು ಜಾರಿಗೊಳಿಸಿದ ಕೆಲವು ಕ್ರಮಗಳನ್ನು ಬೇರೆ ರಾಜ್ಯಗಳ ಜನರೂ ಹೊಗಳುತ್ತಿದ್ದಾರೆ. ‘ಯೋಗಿ ಮಾದರಿ’ ಆಡಳಿತ ಎಂದೇ ಫೇಮಸ್​ ಆಗಿದೆ.

VISTARANEWS.COM


on

Edited by

Achievements of Uttar Pradesh CM Yogi Adityanath in 6 years
Koo

ಉತ್ತರ ಪ್ರದೇಶದಲ್ಲಿ ಸತತ 2ನೇ ಬಾರಿಗೆ ಮುಖ್ಯಮಂತ್ರಿ ಗದ್ದುಗೆಗೆ ಏರುವ ಮೂಲಕ ದಾಖಲೆ ಸೃಷ್ಟಿಸಿರುವ ಯೋಗಿ ಆದಿತ್ಯನಾಥ್​ (Yogi Adityanath) ಕಳೆದ ವರ್ಷ ಇದೇ ದಿನ, ಅಂದರೆ 2022ನೇ ಇಸ್ವಿಯ ಮಾರ್ಚ್​ 25ರಂದು 2ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಅಲ್ಲಿನ ಅಟಲ್​ ಬಿಹಾರಿ ವಾಜಪೇಯಿ ಇಕಾನಾ ಸ್ಟೇಡಿಯಂನಲ್ಲಿ ನಡೆದಿದ್ದ ಅದ್ಧೂರಿ ಸಮಾರಂಭದಲ್ಲಿ ಪ್ರಧಾನಿ ಮೋದಿ, ಅಮಿತ್​ ಶಾ, ಜೆಪಿ ನಡ್ಡಾ ಮತ್ತಿತರ ಗಣ್ಯರೂ ಪಾಲ್ಗೊಂಡಿದ್ದರು. ಹೀಗೆ ಉತ್ತರ ಪ್ರದೇಶದಲ್ಲಿ ಎರಡನೇ ಅವಧಿಗೆ ಸಿಎಂ ಆಗಿ ಇಂದಿಗೆ (ಮಾರ್ಚ್​ 25) ಅವರು ಒಂದು ವರ್ಷ ಪೂರೈಸಿದ್ದಾರೆ. ಎರಡನೇ ಅವಧಿಯ ಯೋಗಿ ಆಡಳಿತದ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಉತ್ತರ ಪ್ರದೇಶ ಸರ್ಕಾರ ಸಜ್ಜಾಗಿದೆ.

ಯೋಗಿ ಆದಿತ್ಯನಾಥ್​ ಅವರು ತಮ್ಮ ಮೊದಲನೇ ಅವಧಿಯಲ್ಲಿ ನಡೆಸಿದ ಆಡಳಿತವೇ ದೇಶದಾದ್ಯಂತ ಜನಪ್ರಿಯತೆ ಗಳಿಸಿದೆ. ‘ಕಾನೂನು ಸುವ್ಯವಸ್ಥೆ ಕಾಪಾಡಲು, ಸಮಾಜ-ದೇಶ ವಿರೋಧಿ ಕೃತ್ಯಗಳನ್ನು ಹತ್ತಿಕ್ಕಲು ಅವರು ಜಾರಿಗೊಳಿಸಿದ ಕೆಲವು ಕ್ರಮಗಳನ್ನು ಬೇರೆ ರಾಜ್ಯಗಳ ಜನರೂ ಹೊಗಳುತ್ತಿದ್ದಾರೆ. ‘ಯೋಗಿ ಮಾದರಿ’ ಆಡಳಿತ ಎಂದೇ ಫೇಮಸ್​ ಆಗಿದೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯೂ ಈ ಹಿಂದೆ ಯೋಗಿ ಮಾದರಿ ಸರ್ಕಾರದ ಪ್ರಸ್ತಾಪ ಮಾಡಿದ್ದರು. ಕರ್ನಾಟಕದಲ್ಲೂ ಅದೇ ತರದ ಆಡಳಿತ ಜಾರಿ ಮಾಡಬೇಕಾಗುತ್ತದೆ ಎಂದು ಹೇಳಿದ್ದರು. ಹೀಗೆ ಮೊದಲನೇ ಅವಧಿಯಲ್ಲಿ ಕಾನೂನು-ಸುವ್ಯವಸ್ಥೆ, ಕ್ರೈಂಗಳ ಹತ್ತಿಕ್ಕಲು ಹೆಚ್ಚಿನ ಗಮನ ಹರಿಸಿದ್ದ ಯೋಗಿ ಆದಿತ್ಯನಾಥ್​, ಎರಡನೇ ಅವಧಿಯಲ್ಲಿ ‘ಹೂಡಿಕೆ’ ‘ಪ್ರವಾಸೋದ್ಯಮ ಅಭಿವೃದ್ಧಿ’ ಮತ್ತು ಇತರ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದೀಗ ಒಂದು ವರ್ಷ ಪೂರ್ಣಗೊಂಡ ಬೆನ್ನಲ್ಲೇ ಸರ್ಕಾರ, ಈ ಒಂದು ವರ್ಷದಲ್ಲಿ ಏನೆಲ್ಲ ಆಯಿತು ಎಂಬುದನ್ನು ಹೈಲೈಟ್ ಮಾಡಿ ತೋರಿಸಲು ಮುಂದಾಗಿದೆ.

ಯೋಗಿ ಆದಿತ್ಯನಾಥ್​ರನ್ನು ನಾಯಕ ಎಂದು ಬಿಂಬಿಸಲು ಯೋಜನೆ
ಉತ್ತರ ಪ್ರದೇಶದಲ್ಲಿ ಬುಲ್ಡೋಜರ್​ ಸದಾ ಸಿದ್ಧವಾಗಿರುತ್ತದೆ. ಯಾವುದೇ ಕೇಸ್​​ನಲ್ಲಿ ಅಪರಾಧಿ ಎನ್ನಿಸಿದವರ ಮನೆ, ಆಸ್ತಿ-ಪಾಸ್ತಿ ಧ್ವಂಸವಾಗುತ್ತದೆ. ಹೀಗಾಗಿ ಯೋಗಿ ಆದಿತ್ಯನಾಥ್​ರನ್ನು ಇಷ್ಟುದಿನ ಇಡೀ ದೇಶ ಬುಲ್ಡೋಜರ್ ಬಾಬಾ, ಡೆಮೋಲಿಶನ್​ ಮ್ಯಾನ್​ ಎಂಬಿತ್ಯಾದಿ ಹೆಸರಲ್ಲೆಲ್ಲ ಕರೆಯುತ್ತಿದೆ ಮತ್ತು ಅವರನ್ನು ಜನರು ಹಾಗೇ ನೋಡುತ್ತಿದ್ದಾರೆ. ಆದರೆ ಇಷ್ಟುದಿನ ಅವರಿಗಿದ್ದ ಈ ಬುಲ್ಡೋಜರ್ ಬಾಬಾ ಇಮೇಜ್​​ನ್ನು ತೊಡೆದು ಹಾಕಿ, ಅವರನ್ನೊಬ್ಬ ‘ ಪ್ರಭಾವಿ ನಾಯಕ’ ಎಂದು ಬಿಂಬಿಸಲು ಸಿದ್ಧತೆ ನಡೆಯುತ್ತಿದೆ. ಯೋಗಿ ಅವರ ಅಭಿವೃದ್ಧಿ ಮಾದರಿಯು ‘ನಂಬಿಕೆಗೆ ಕೊಟ್ಟ ಗೌರವ’ ಎಂಬ ಅಜೆಂಡಾದಡಿ ಹೆಣೆಯಲ್ಪಟ್ಟಿದ್ದು ಎಂದು ಜನತೆಗೆ ತೋರಿಸುವ, ಈ ಮೂಲಕ ‘ನಿಮ್ಮ ನಂಬಿಕೆಯನ್ನು ಯೋಗಿ ಆದಿತ್ಯನಾಥ್​ ಎಂದಿಗೂ ಹುಸಿ ಮಾಡುವುದಿಲ್ಲ, ಅಭಿವೃದ್ಧಿ ಕಾರ್ಯಕ್ಕೆ ಸದಾ ಬದ್ಧ’ ಎಂದು ಸಾರುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ.

ಅಯೋಧ್ಯೆ ಅಭಿವೃದ್ಧಿಯಲ್ಲಿ ಸಿಂಹಪಾಲು
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಕಾನೂನು ತೊಡಕುಗಳೆಲ್ಲ ಮೀರಿ ಅಲ್ಲಿ ಶ್ರೀರಾಮನ ದೇಗುಲ ಚೆಂದವಾಗಿ ರೂಪುಗೊಳ್ಳುತ್ತಿದೆ. ಇದು ಕೇಂದ್ರ ಸರ್ಕಾರದ ವೈಯಕ್ತಿಕ ಆಸಕ್ತಿಯೂ ಹೌದು. ಆದರೆ ಅದರ ಅಭಿವೃದ್ಧಿಯಲ್ಲಿ ಸಿಂಹಪಾಲು ಯೋಗಿಯವರದ್ದು. 2024ರ ಲೋಕಸಭೆ ಚುನಾವಣೆಯೊಳಗೆ ರಾಮಮಂದಿರ ಭಕ್ತರ ಪ್ರವೇಶಕ್ಕೆ ಮುಕ್ತವಾಗಬೇಕು ಎಂಬುದು ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಮುಖ್ಯ ಉದ್ದೇಶ. ಅದರಲ್ಲೂ ಯೋಗಿ ಆದಿತ್ಯನಾಥ್​ ಅವರು ಇಡೀ ಅಯೋಧ್ಯೆಯನ್ನೇ ಸಂಪೂರ್ಣವಾಗಿ ಅಭಿವೃದ್ಧಿಗೊಳಿಸುತ್ತಿದ್ದಾರೆ. ಹೀಗಾಗಿ ಖುದ್ದಾಗಿ ತಾವೇ ನಿಂತು ಅಯೋಧ್ಯೆ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಆಗಾಗ ಅಲ್ಲಿಗೆ ಭೇಟಿ ಕೊಡುತ್ತಿದ್ದಾರೆ. ಅಯೋಧ್ಯೆಯನ್ನು ಮಾದರಿ ಸೌರ ನಗರ ಎಂದು ರೂಪಿಸುವಲ್ಲಿಂದ ಹಿಡಿದು, ಅಲ್ಲಿನ ರಸ್ತೆ ಅಗಲೀಕರಣ, ಹೊಸ ಬಸ್ ಸ್ಟೇಶನ್​, ಏರ್​ಪೋರ್ಟ್​ ನಿರ್ಮಾಣವೆಲ್ಲ ಕಾರ್ಯಸೂಚಿಯಲ್ಲಿ ಇದೆ. ಅವೆಲ್ಲವನ್ನೂ ನಿಗದಿತ ಸಮಯದೊಳಗೆ ಮುಗಿಸುವ ಧಾವಂತದಲ್ಲಿದ್ದಾರೆ ಯೋಗಿ ಆದಿತ್ಯನಾಥ್​. ಅಯೋಧ್ಯೆ ಅಭಿವೃದ್ಧಿ ಹೇಗೆ ನಡೆಯುತ್ತಿದೆ ಎಂಬ ಬಗ್ಗೆಯೂ ದೇಶದ ಜನರಿಗೆ ತೋರಿಸುವ ಸಿದ್ಧತೆಯನ್ನು ಅಲ್ಲಿನ ಸರ್ಕಾರ ಮಾಡಿಕೊಂಡಿದೆ ಎನ್ನಲಾಗಿದೆ.

ಬರೀ ಅಯೋಧ್ಯೆಯಷ್ಟೇ ಅಲ್ಲ, ಇನ್ನಿತರ ಧಾರ್ಮಿಕ ಪ್ರದೇಶಗಳ ಅಭಿವೃದ್ಧಿಯನ್ನೂ ಉತ್ತರ ಪ್ರದೇಶ ಸರ್ಕಾರ ತನ್ನ ಎರಡನೇ ಅವಧಿ ಕಾರ್ಯಸೂಚಿಯಲ್ಲಿ ಸೇರಿಸಿಕೊಂಡಿದೆ. ಪ್ರಯಾಗ್​ರಾಜ್​​ನಲ್ಲಿ 2025ರಲ್ಲಿ ನಡೆಯಲಿರುವ ಮಹಾಕುಂಭಮೇಳಕ್ಕೆ ಈಗಾಗಲೇ ಸಿದ್ಧತೆಯನ್ನು ಶುರು ಮಾಡಿಕೊಂಡಿದೆ. ಅದರೊಂದಿಗೆ ಸೀತಾಪುರದಲ್ಲಿ ನೈಮಿಶರಣ, ಯುಪಿ ಪಶ್ಚಿಮ ಭಾಗದಲ್ಲಿರುವ ಬ್ರಜ್​, ಪೂರ್ವದಲ್ಲಿರುವ ವಿಂದ್ಯಾ ಮತ್ತು ಚಿತ್ರಕೂಟ ಧಾಮಗಳ ಅಭಿವೃದ್ಧಿಯತ್ತಲೂ ಗಮನ ಹರಿಸುತ್ತಿದೆ.

ಉತ್ತಮ ಪ್ರದೇಶದಿಂದ ನಿವೇಶ್​ ಪ್ರದೇಶದತ್ತ
ಆಗಲೇ ಹೇಳಿದಂತೆ ಉತ್ತರ ಪ್ರದೇಶ ಸರ್ಕಾರ ಮೊದಲ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆಯೇ ಹೆಚ್ಚಿನ ಗಮನಹರಿಸಿತ್ತು. ಉತ್ತರ ಪ್ರದೇಶವನ್ನು ಉತ್ತಮ ಪ್ರದೇಶವನ್ನಾಗಿ ರೂಪಿಸುವುದು ಮೊದಲ ಆದ್ಯತೆ ಎಂದು ಹೇಳಿತ್ತು. ಅದರಂತೆ ಮಾಡಿದೆ ಕೂಡ. ಈಗ ಎರಡನೇ ಅವಧಿಗೆ ಉತ್ತರ ಪ್ರದೇಶವನ್ನು ನಿವೇಶ್​ ಪ್ರದೇಶ (ಹೂಡಿಕೆ ಪ್ರದೇಶ)ವನ್ನಾಗಿ ಬದಲಿಸುವತ್ತ ಗಮನ ಹರಿಸಿದೆ. ಉತ್ತರ ಪ್ರದೇಶದಲ್ಲಿ ಹೂಡಿಕೆಗೆ ಹೆಚ್ಚೆಚ್ಚು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸುತ್ತಿದೆ. ಇತ್ತೀಚೆಗೆ ಲಖನೌನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ 35 ಲಕ್ಷ ಕೋಟಿ ರೂಪಾಯಿಗಳಷ್ಟು ಮೊತ್ತದ ಹೂಡಿಕೆ ಪ್ರಸ್ತಾವನೆಯನ್ನು ಸ್ವೀಕರಿಸಿದ್ದಾಗಿ ಯುಪಿ ಗವರ್ನ್​ಮೆಂಟ್ ಹೇಳಿಕೊಂಡಿದೆ. ‘ಉತ್ತರ ಪ್ರದೇಶ, ರಾಷ್ಟ್ರರಾಜಧಾನಿ ಪ್ರದೇಶವನ್ನೂ ಮೀರಿ, ಬೇರೆ ಪ್ರದೇಶಗಳ ಹೂಡಿಕೆದಾರರನ್ನೂ ಸೆಳೆಯುವಲ್ಲಿ ನಾವು ಯಶಸ್ವಿಯಾಗುತ್ತಿದ್ದೇವೆ ಎಂದು ತಿಳಿಸಿದೆ. ಅದರೊಂದಿಗೆ ಸೆಪ್ಟೆಂಬರ್​ ತಿಂಗಳಲ್ಲಿ ಐದು ದಿನಗಳ ಯುಪಿ ಅಂತಾರಾಷ್ಟ್ರೀಯ ವ್ಯಾಪಾರ -2023 (UP International Trade 2023) ಸಮಾವೇಶ ನಡೆಸಲೂ ಸಿದ್ಧತೆಗಳು ಪ್ರಾರಂಭವಾಗಿವೆ.

ಇದನ್ನೂ ಓದಿ: Best Chief Minister | ಈ ಬಾರಿಯೂ ಯೋಗಿ ಆದಿತ್ಯನಾಥ್‌ ದೇಶದ ಬೆಸ್ಟ್‌ ಸಿಎಂ, ನಂತರದ ಸ್ಥಾನ ಯಾರಿಗೆ?

ಒಟ್ಟಾರೆ ಈ ಎರಡನೇ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ, ಕೃಷಿ ಉತ್ಪನ್ನ, ಸಾಮಾಜಿಕ ಭದ್ರತೆ, ಮೂಲ ಸೌಕರ್ಯ ಮತ್ತು ಉದ್ಯಮ, ನಗರ ಅಭಿವೃದ್ಧಿ, ಗ್ರಾಮೀಣ ಅಭಿವೃದ್ಧಿ, ವೈದ್ಯಕೀಯ ಮತ್ತು ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ, ಸಾಂಸ್ಕೃತಿಕ, ಆದಾಯ ಸಂಗ್ರಹ ಕ್ಷೇತ್ರಗಳಲ್ಲಿ ಸುಧಾರಣೆ ಮತ್ತು ಅಭಿವೃದ್ಧಿ ಮಾಡಲು ಉತ್ತರ ಪ್ರದೇಶ ಸರ್ಕಾರ ಮುಂದಡಿ ಇಡುತ್ತಿದ್ದು, ಇದಕ್ಕೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹಾಗೇ, ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಯೋಗಿ ಆಯ್ಕೆಯೇ ಒಂದು ಅಚ್ಚರಿಯಾಗಿತ್ತು
ಉತ್ತರ ಪ್ರದೇಶದಲ್ಲಿ 2017ರಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅಲ್ಲಿನ ಮುಖ್ಯಮಂತ್ರಿಯನ್ನಾಗಿ ಯೋಗಿ ಆದಿತ್ಯನಾಥ್​ ಅವರನ್ನು ಆಯ್ಕೆ ಮಾಡಿದ್ದೇ ಬಹುದೊಡ್ಡ ಅಚ್ಚರಿಯಾಗಿತ್ತು. ಗೋರಖ್​ನಾಥ್ ಪೀಠದ ಮುಖ್ಯಸ್ಥ, ಸನ್ಯಾನಿ ರಾಜ್ಯಾಭಾರ ಮಾಡುತ್ತಾನಾ? ಎಂದು ವ್ಯಂಗ್ಯವಾಡಿದವರೂ ಅನೇಕರು. ಆದರೆ ಬರುಬರುತ್ತ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡ ಯೋಗಿ, ಉತ್ತರ ಪ್ರದೇಶದಲ್ಲಿ ಇದುವರೆಗೆ ಅತ್ಯಂತ ಹೆಚ್ಚಿನ ಅವಧಿಗೆ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 1954ರಿಂದ 1960ರವರೆಗೆ ಒಟ್ಟು 5ವರ್ಷ 345 ದಿನಗಳ ಕಾಲ ಕಾಂಗ್ರೆಸ್​​ನ ಡಾ. ಸಂಪೂರ್ಣಾನಂದ ಅವರು ಸಿಎಂ ಆಗಿ ಆಡಳಿತ ನಡೆಸಿದ್ದರು. ಅವರ ದಾಖಲೆಯನ್ನು ಆದಿತ್ಯನಾಥ್ ಮುರಿದಿದ್ದಾರೆ. 2023ರ ಮಾರ್ಚ 1ರ ಲೆಕ್ಕಾಚಾರದಂತೆ ಯೋಗಿಯವರು ಐದು ವರ್ಷ, 346 ದಿನಗಳ ಕಾಲ ಸಿಎಂ ಆಗಿ ಆಡಳಿತ ಮಾಡಿದ್ದಾರೆ ಮತ್ತು ಅವರ ಆಡಳಿತ ಮುಂದುವರಿದಿದೆ.

2017ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಸಿಎಂ ಯೋಗಿ ಆದಿತ್ಯನಾಥ್ ಅವರು ಹಿಂದು ತ್ವ ಸ್ಥಾಪನೆ, ಕ್ರೈಂ/ಮಾಫಿಯಾ, ಸಂಘಟಿತ ಅಪರಾಧಗಳಿಗೆ ಕಡಿವಾಣ ಹಾಕುವಲ್ಲಿ ಅತ್ಯಂತ ಹೆಚ್ಚು ಶ್ರಮಿಸಿದ್ದಾರೆ. ಗೋಹತ್ಯೆ ನಿಷೇಧ, ಅಕ್ರಮ ಕಸಾಯಿ ಖಾನೆಗಳ ಮುಚ್ಚುವಿಕೆಯಂಥ ನಿರ್ಧಾರಗಳನ್ನು ಅಧಿಕಾರ ಸ್ವೀಕರಿಸಿದ ಕೆಲವೇ ಸಮಯದಲ್ಲಿ ಅವರು ಜಾರಿಗೊಳಿಸಿದ್ದಾರೆ. ಅವರ ಈ ಆಡಳಿತವೇ ಅವರಿಗೆ ಅಪಾರ ಸಂಖ್ಯೆಯ ಅನುಯಾಯಿಗಳನ್ನು ತಂದುಕೊಟ್ಟಿದೆ.

ಯುವಜನರ ಮೇಲೆ ಫೋಕಸ್​
ಉತ್ತರ ಪ್ರದೇಶದಲ್ಲಿ ಯುವಜನರಿಗೆ ಉದ್ಯೋಗ ಸಿಗುತ್ತಿಲ್ಲ. ಉದ್ಯೋಗ ಸೃಷ್ಟಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅಲ್ಲಿನ ಪ್ರತಿಪಕ್ಷಗಳು ಒಂದೇ ಸಮನೆ ಆರೋಪ ಮಾಡುತ್ತಿವೆ. ಅದರ ಬೆನ್ನಲ್ಲೇ ಯೋಗಿ ಸರ್ಕಾರ ಯುವಜನರ ಮೇಲೆ ಹೆಚ್ಚಿನ ಫೋಕಸ್​ ಮಾಡುತ್ತಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಕ್ರಮ ಕೈಗೊಳ್ಳುತ್ತಿದೆ. ಕ್ರೀಡೆ, ಕೌಶಲಾಭಿವೃದ್ಧಿ, ಹಳ್ಳಿಗಳ ಮಟ್ಟದಲ್ಲಿ ವ್ಯಾಯಾಮ ಶಾಲೆಗಳನ್ನು ತೆರೆಯಲು ಉತ್ತೇಜಿಸುತ್ತಿದೆ.

ಸದ್ಯ ಉತ್ತರ ಪ್ರದೇಶವನ್ನು ಒಂದು ಟ್ರಿಲಿಯನ್ ಆರ್ಥಿಕತೆಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಅವರ ಪ್ರಯತ್ನ ಶುರುವಾಗಿದೆ. ಉತ್ತರ ಪ್ರದೇಶದಲ್ಲಿ ಈಗಾಗಲೇ ಕಾನೂನು ಸುವ್ಯವಸ್ಥೆ ಸುಧಾರಿಸಿದೆ, ಪ್ರವಾಸಿ ತಾಣಗಳ ಅಭಿವೃದ್ಧಿಯೂ ಶರವೇಗದಿಂದ ಆಗುತ್ತಿದ್ದು, ಹೂಡಿಕೆ ಕ್ಷೇತ್ರದಲ್ಲೂ ದಾಪುಗಾಲು ಹಾಕುತ್ತಿದೆ. ಉತ್ತರ ಪ್ರದೇಶ ಹೂಡಿಕೆಗೆ ಯೋಗ್ಯವಲ್ಲ ಎಂಬ ಮಾತನ್ನು ಸುಳ್ಳು ಮಾಡಲು ಯೋಗಿ ಆದಿತ್ಯನಾಥ್ ಪಣತೊಟ್ಟು ಅದರಂತೆ ರೂಪುರೇಷೆಗಳನ್ನು ಹೆಣೆಯುತ್ತಿದ್ದಾರೆ. ಆರು ವರ್ಷಗಳಲ್ಲಿ ಮಾಡಿದ ಈ ಸಾಧನೆಗಳನ್ನೆಲ್ಲ ಜನರ ಮುಂದಿಡಲು ಅಲ್ಲಿನ ಸರ್ಕಾರ ಪ್ಲ್ಯಾನ್ ಮಾಡಿದೆ.

Continue Reading

EXPLAINER

ವಿಸ್ತಾರ Explainer: ರಾಹುಲ್‌ ಗಾಂಧಿ ಅನರ್ಹತೆ: ಏನಿದು? ಮುಂದೇನಾಗಲಿದೆ?

ಕಾಂಗ್ರೆಸ್‌ ಮುಖಂಡ, ವಯನಾಡ್‌ ಸಂಸದ ರಾಹುಲ್‌ ಗಾಂಧಿ ಅವರಿಗೆ ವಿಧಿಸಲಾಗಿರುವ ಅನೂರ್ಹತೆ ಎಲ್ಲಿಯವರೆಗೆ ಊರ್ಜಿತ? ಯಾವಾಗ, ಹೇಗೆ ತೆರವಾಗಬಹುದು? ಈಗ ಅವರ ಮುಂದಿರುವ ದಾರಿಯೇನು? ಇಲ್ಲಿದೆ ವಿವರ.

VISTARANEWS.COM


on

Edited by

Rahul Gandhi Disqualified
Koo

ಕಾಂಗ್ರೆಸ್‌ ಮುಖಂಡ, ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ಸೂರತ್ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ನಂತರ ತಮ್ಮ ಲೋಕಸಭಾ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಇದರಿಂದಾಗಿ ಮುಂದೆ ಯಾವ ಸನ್ನಿವೇಶಗಳು ಉಂಟಾಗಬಹುದು? ಒಂದು ವಿಶ್ಲೇಷಣೆ ಇಲ್ಲಿದೆ.

ವಯನಾಡ್ ಸಂಸದ ರಾಹುಲ್ ಗಾಂಧಿ ಅವರನ್ನು ಸೂರತ್‌ನ ಸ್ಥಳೀಯ ನ್ಯಾಯಾಲಯವು ದೋಷಿ ಎಂದು ಘೋಷಿಸಿ ಶಿಕ್ಷೆ ವಿಧಿಸಿದ ನಂತರ ಸಂಸತ್ತಿನ ಸದಸ್ಯತ್ವವನ್ನು ಗುರುವಾರ ರದ್ದುಗೊಳಿಸಲಾಗಿದೆ. ಲೋಕಸಭೆಯ ಕಾರ್ಯಾಲಯ ಶುಕ್ರವಾರ ಹೊರಡಿಸಿದ ಅಧಿಸೂಚನೆಯಲ್ಲಿ “ಸಂವಿಧಾನದ 102 (1) (ಇ) ವಿಧಿಯ ನಿಬಂಧನೆಗಳ ಪ್ರಕಾರ, ಹಾಗೂ ಭಾರತ ಪ್ರಜಾಪ್ರತಿನಿಧಿ ಕಾಯಿದೆ- 1951ರ ಸೆಕ್ಷನ್ 8ರ ಪ್ರಕಾರ, 2023ರ ಮಾರ್ಚ್ 23ರಿಂದ, ಅವರ ಅಪರಾಧ ಸಾಬೀತಾದ ದಿನಾಂಕದಿಂದ ಲೋಕಸಭೆಯ ಸದಸ್ಯತ್ವದಿಂದ ರಾಹುಲ್‌ ಗಾಂಧಿ ಅನರ್ಹರಾಗಿದ್ದಾರೆ” ಎಂದಿದೆ.

ಏಕೆ ಈ ಅಧಿಸೂಚನೆ?

ಇದು ಲೋಕಸಭೆ ಕಾರ್ಯಾಲಯದ ಪ್ರಕ್ರಿಯೆಯ ಒಂದು ಭಾಗ. ಹಾಲಿ ಸಂಸದರು ಅಥವಾ ಶಾಸಕರು ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದರೆ ಅದನ್ನು ಸ್ಪೀಕರ್ ಅಥವಾ ಸಭಾಪತಿಯವರ ಹಾಗೂ ಆಯಾ ರಾಜ್ಯದ ಚುನಾವಣಾ ಆಯೋಗ ಮುಖ್ಯಸ್ಥರ ಗಮನಕ್ಕೆ ತರುವುದನ್ನು ಖಚಿತಪಡಿಸಿಕೊಳ್ಳುವಂತೆ ಆಯಾ ಇಲಾಖೆಗಳಿಗೆ ಅಕ್ಟೋಬರ್ 13, 2015ರಂದು, ಭಾರತೀಯ ಚುನಾವಣಾ ಆಯೋಗ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶಿಸಿತ್ತು. ಇದು ಶಿಕ್ಷೆಯ ಆದೇಶ ಬಂದು ಏಳು ದಿನಗಳಲ್ಲಿ ಆಗಬೇಕಿದೆ.

ಪ್ರಜಾಪ್ರತಿನಿಧಿ ಕಾಯಿದೆ- 1951ರ ಸೆಕ್ಷನ್ 8(3) ಹೀಗೆ ಹೇಳುತ್ತದೆ: “ಯಾವುದೇ ಅಪರಾಧದಲ್ಲಿ ತಪ್ಪಿತಸ್ಥರೆಂದು ನಿರ್ಣಯವಾಗಿ ಎರಡು ವರ್ಷಕ್ಕಿಂತ ಕಡಿಮೆಯಿಲ್ಲದ ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ಅಂತಹ ಅಪರಾಧ ನಿರ್ಣಯದ ದಿನಾಂಕದಿಂದ ಅನರ್ಹಗೊಳಿಸಲಾಗುತ್ತದೆ. ಹಾಗೂ ಆತನ ಬಿಡುಗಡೆಯ ನಂತರದ ಮುಂದಿನ ಆರು ವರ್ಷಗಳ ಅವಧಿಯವರೆಗೂ ಅನರ್ಹತೆ ಮುಂದುವರಿಯುತ್ತದೆ.

ಇದರ ಪ್ರಕಾರ, ಅನರ್ಹತೆಯು ಉಂಟಾಗುವುದು ನ್ಯಾಯಾಲಯ ನೀಡಿರುವ ಶಿಕ್ಷೆಯಿಂದಲೇ ಹೊರತು ಲೋಕಸಭೆಯ ಅಧಿಸೂಚನೆಯಿಂದಲ್ಲ. ಹೀಗಾಗಿ ಶುಕ್ರವಾರ ಲೋಕಸಭೆಯಲ್ಲಿದ್ದ ರಾಹುಲ್‌ಗೆ ಈ ಸೂಚನೆ ನೀಡಿರುವುದು ಸದನವನ್ನು ಮುಂದೂಡುವ ಮುನ್ನದ ಒಂದು ಔಪಚಾರಿಕ ಸೂಚನೆ.

ಅನರ್ಹಗೊಂಡ ಶಾಸಕರ ಪ್ರಕರಣದಲ್ಲಿ ಸಂಬಂಧಿಸಿದ ವಿಧಾನಸಭೆಯಿಂದ ನೋಟಿಸ್ ನೀಡಲಾಗುತ್ತದೆ. ಉದಾಹರಣೆಗೆ, ಸಮಾಜವಾದಿ ಪಕ್ಷದ ಶಾಸಕ ಅಜಂ ಖಾನ್ ಪ್ರಕರಣದಲ್ಲಿ, ಉತ್ತರ ಪ್ರದೇಶ ವಿಧಾನಸಭೆಯ ಸೆಕ್ರೆಟರಿಯೇಟ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅರಿಗೆ ಅನರ್ಹತೆಯ ಸೂಚನೆಯನ್ನು ನೀಡಿತ್ತು.

ಈ ನಿಟ್ಟಿನಲ್ಲಿ ಸ್ಪೀಕರ್ ಅಧಿಕಾರ ಅಂತಿಮವೇ?

ಲೋಕ್ ಪ್ರಹರಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ (2018) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಒಂದು ತೀರ್ಪು ನೀಡಿದೆ. ಅದರ ಪ್ರಕಾರ, ಮೇಲಿನ ನ್ಯಾಯಾಲಯವು ಅಪರಾಧ ನಿರ್ಣಯಕ್ಕೆ ತಡೆ ನೀಡಿದರೆ, ಈ ಅನರ್ಹತೆಯನ್ನು ರದ್ದುಗೊಳಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. “ಮೇಲ್ಮನವಿಯ ವಿಚಾರಣೆ ಬಾಕಿ ಇರುವಾಗ, ಶಿಕ್ಷೆಯನ್ನು ತಡೆಹಿಡಿಯಲಾಗುತ್ತದೆ. ಹಾಗಾಗಿ ಶಿಕ್ಷೆಯ ಪರಿಣಾಮವಾಗಿ ಜಾರಿಗೆ ಬರುವ ಅನರ್ಹತೆಯು ಜಾರಿಯಲ್ಲಿರಲು ಅಥವಾ ಉಳಿಯಲು ಸಾಧ್ಯವಿಲ್ಲ” ಎಂದು ತೀರ್ಪು ಹೇಳಿದೆ.

ಅಂದರೆ, ಕೋರ್ಟ್‌ ರಾಹುಲ್ ಗಾಂಧಿ ಅವರ ಶಿಕ್ಷೆಗೆ ತಡೆಯಾಜ್ಞೆ ನೀಡಿದರೆ, ಸದನ ಸಚಿವಾಲಯದ ಅಧಿಸೂಚನೆಯು ರದ್ದಾಗುತ್ತದೆ.

ಅನರ್ಹತೆಗೆ ಕಾರಣವಾದ ಕಾನೂನುಗಳ್ಯಾವುದು?

ಸಂವಿಧಾನದ ಆರ್ಟಿಕಲ್ 102(1)(ಇ) ಮತ್ತು ಜನಪ್ರತಿನಿಧಿ ಕಾಯಿದೆಯ (ಆರ್‌ಪಿ ಕಾಯಿದೆ) ಸೆಕ್ಷನ್ 8 ಸಂಸದೀಯ ಸದಸ್ಯರ ಅನರ್ಹತೆಗೆ ಕಾರಣಗಳನ್ನು ನೀಡುತ್ತದೆ. ಸಂವಿಧಾನದ 102ನೇ ವಿಧಿಯ ಉಪ ಕಲಂ (ಇ) ಹೇಳುವಂತೆ ಸಂಸದರೊಬ್ಬರು “ಸಂಸತ್ ಮಾಡಿದ ಯಾವುದೇ ಕಾನೂನಿನ ಅಡಿಯಲ್ಲಿ ಅನರ್ಹರಾಗಿದ್ದರೆ” ಅವರು ಸದನದ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಈ ಪ್ರಕರಣದಲ್ಲಿರುವುದು ಆರ್‌ಪಿ ಕಾಯಿದೆ.

RP ಕಾಯಿದೆಯ ಸೆಕ್ಷನ್ 8 ಕೆಲವು ಅಪರಾಧಗಳಲ್ಲಿ ಶಾಸಕರು ಶಿಕ್ಷೆ ಪಡೆದರೆ ಅವರ ಅನರ್ಹತೆಯ ಬಗ್ಗೆ ತಿಳಿಸುತ್ತದೆ. “ರಾಜಕೀಯದ ಅಪರಾಧೀಕರಣವನ್ನು ತಡೆಗಟ್ಟುವುದು ಮತ್ತು ʼಕಳಂಕಿತ’ ಶಾಸಕರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯುವ ಗುರಿಯನ್ನುʼ ಈ ಕಾಯಿದೆ ಹೊಂದಿದೆ.

Jail sentence for Rahul Gandhi A cautionary lesson for politicians who make lofty statements

ರಾಹುಲ್ ಕಳೆದುಕೊಳ್ಳುವುದೇನು?

ಲೋಕಸಭಾ ಸಂಸದರಾಗಿ ರಾಹುಲ್ ಅವರು ಲ್ಯುಟೆನ್ಸ್‌ ದೆಹಲಿಯಲ್ಲಿ ಮನೆಯನ್ನು ಹೊಂದಿದ್ದರು. ಅವರ ಅನರ್ಹತೆಯ ನಂತರ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮೂಲಗಳ ಪ್ರಕಾರ, ಅವರ 12 ತುಘಲಕ್ ಲೇನ್ ಮನೆಯನ್ನು ಖಾಲಿ ಮಾಡಬೇಕು. ಇದಕ್ಕೆ ಅವರಿಗೆ ಒಂದು ತಿಂಗಳ ಕಾಲಾವಕಾಶವಿದೆ. 2004ರಲ್ಲಿ ಅಮೇಠಿಯಿಂದ ಸಂಸದರಾಗಿ ಆಯ್ಕೆಯಾದ ಬಳಿಕ ರಾಹುಲ್‌ಗೆ ಮನೆ ಮಂಜೂರು ಮಾಡಲಾಗಿತ್ತು.

ಮುಂದಿನ ಕ್ರಮಕ್ಕಾಗಿ ಲೋಕಸಭಾ ಸಚಿವಾಲಯವು ಅನರ್ಹತೆಯ ಅಧಿಸೂಚನೆಯ ಪ್ರತಿಯನ್ನು ಎಸ್ಟೇಟ್ ನಿರ್ದೇಶನಾಲಯದ ಸಂಪರ್ಕ ಅಧಿಕಾರಿಗೆ ಕಳುಹಿಸಿದೆ. ಬಂಗಲೆಯು ಲೋಕಸಭೆಯ ವಸತಿ ಆಸ್ತಿಗಳಿಗೆ ಸೇರಿರುವುದರಿಂದ, ಇದನ್ನು ತೆರವು ಮಾಡುವ ಕ್ರಮವನ್ನು ಲೋಕಸಭೆ ಸಚಿವಾಲಯ ನಿರ್ವಹಿಸಬೇಕಾಗುತ್ತದೆ. ಸಂಸದರು ಅನುಭವಿಸುವ ಎಲ್ಲಾ ಇತರ ಸವಲತ್ತುಗಳನ್ನು ಸಹ ರಾಹುಲ್ ಕಳೆದುಕೊಳ್ಳುತ್ತಾರೆ.

ಈಗ ವಯನಾಡ್‌ ಕ್ಷೇತ್ರದ ಗತಿಯೇನು?

ಚುನಾವಣಾ ಆಯೋಗವು ರಾಹುಲ್‌ ಪ್ರತಿನಿಧಿಸುತ್ತಿದ್ದ ವಯನಾಡ್‌ ಸಂಸತ್‌ ಸ್ಥಾನಕ್ಕೆ ಉಪಚುನಾವಣೆಯನ್ನು ಘೋಷಿಸಬಹುದು. ಅಜಮ್ ಖಾನ್ ಅವರ ಪ್ರಕರಣದಲ್ಲಿ, ಖಾನ್ ಅವರ 37-ರಾಮ್‌ಪುರ ಸ್ಥಾನಕ್ಕೆ (ದೇಶದಾದ್ಯಂತ ನಾಲ್ಕು ಇತರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಉಪಚುನಾವಣೆಗಳ ಜೊತೆಗೆ) ಉಪಚುನಾವಣೆಯನ್ನು ಕೆಲವೇ ದಿನಗಳಲ್ಲಿ ಘೋಷಿಸಲಾಗಿತ್ತು.

ಇದನ್ನೂ ಓದಿ: Rahul Gandhi Disqualified: ‘ನಾನು ಎಲ್ಲದಕ್ಕೂ ಸಿದ್ಧ’, ಅನರ್ಹತೆ ಬಳಿಕ ರಾಹುಲ್‌ ಗಾಂಧಿ ಹೇಳಿದ್ದೇನು?

ಆದರೂ ಲಕ್ಷದ್ವೀಪ ಸಂಸದ ಪಿಪಿ ಮೊಹಮ್ಮದ್ ಫೈಸಲ್ ಅವರ ಇತ್ತೀಚಿನ ಪ್ರಕರಣದಲ್ಲಿ, ಸಂಸದರಿಗೆ ಶಿಕ್ಷೆಯಾದ ನಂತರ ಜನವರಿ 18ರಂದು ಉಪಚುನಾವಣೆ ಘೋಷಿಸಲಾಗಿತ್ತು. ಜನವರಿ 30ರಂದು ಕೇರಳ ಹೈಕೋರ್ಟ್ ಫೈಸಲ್ ಅವರ ಶಿಕ್ಷೆಯನ್ನು ರದ್ದುಗೊಳಿಸಿದ ಬಳಿಕ ಚುನಾವಣೆ ಆಯೋಗವು ಈ ಘೋಷಣೆಯನ್ನು ಹಿಂಪಡೆಯಬೇಕಾಯಿತು.

ಇಲ್ಲಿ ರಾಹುಲ್ ಗಾಂಧಿಗೆ ಯಾವ ಆಯ್ಕೆಗಳಿವೆ?

ಒಂದು ವೇಳೆ ಉನ್ನತ ನ್ಯಾಯಾಲಯವು ಶಿಕ್ಷೆಗೆ ತಡೆ ನೀಡಿದರೆ ಅಥವಾ ಅವರ ಪರವಾಗಿ ಮೇಲ್ಮನವಿಯನ್ನು ನಿರ್ಧರಿಸಿದರೆ ಅವರ ಅನರ್ಹತೆಯನ್ನು ರದ್ದುಗೊಳಿಸಬಹುದು. ಮೊದಲು ಅವರು ಸೂರತ್ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಮಾಡಬೇಕಾಗುತ್ತದೆ. ಅಲ್ಲಿ ಆಗದಿದ್ದರೆ ಮುಂದೆ ಗುಜರಾತ್ ಹೈಕೋರ್ಟಿನ ಮುಂದೆ ಹೋಗಬೇಕಾಗುತ್ತದೆ.

ನ್ಯಾಯಾಲಯದಿಂದ ಅವರು ಪರಿಹಾರ ಪಡೆಯದಿದ್ದರೆ ಎಂಟು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗುತ್ತಾರೆ. ಅಂದರೆ ಅವರ ಶಿಕ್ಷೆಯ ಎರಡು ವರ್ಷಗಳು, ಜೊತೆಗೆ RP ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ನಂತರದ ಆರು ವರ್ಷಗಳು. ಒಟ್ಟು ಎಂಟು.

ಈಗಾಗಲೇ ಮೇಲ್ಮನವಿ ಸಲ್ಲಿಸಲು ಸಮಯ ಕೋರಿ ಅವರ ವಕೀಲ ಕಿರಿತ್ ಪನ್ವಾಲಾ ಶುಕ್ರವಾರ ಸೂರತ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: Rahul Gandhi Disqualified: ರಾಹುಲ್‌ ಗಾಂಧಿ ಅನರ್ಹತೆ ಬೆನ್ನಲ್ಲೇ ಜನಪ್ರತಿನಿಧಿ ಕಾಯ್ದೆ ಮಾನ್ಯತೆ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

Continue Reading

EXPLAINER

ವಿಸ್ತಾರ Explainer: ಯಾರು ಈ ಖಲಿಸ್ತಾನಿ, ಪ್ರತ್ಯೇಕತಾವಾದಿ ನಾಯಕ ಅಮೃತ್​ಪಾಲ್​ ಸಿಂಗ್‌?

ಕ್ಲೀನ್‌ ಶೇವ್‌ ಮಾಡಿಕೊಂಡಿರುತ್ತಿದ್ದ ಅಮೃತ್‌ಪಾಲ್‌ ಉದ್ದ ಗಡ್ಡ ಬಿಟ್ಟು ಖಲಿಸ್ತಾನ್‌ ಚಳವಳಿಯ ಮುಖವಾಣಿಯಾದ ಬೆಳವಣಿಗೆ ಬಲು ಶೀಘ್ರವಾಗಿ ನಡೆದಿದೆ. ಆತ ಭಿಂದ್ರಾನ್‌ವಾಲೆಯಂತೆಯೇ ದಿರಿಸು ಧರಿಸಿಕೊಳ್ಳುತ್ತಾನೆ. ಕೆಲವರು ಅವನನ್ನು ಈಗಾಗಲೇ ʼಎರಡನೇ ಭಿಂದ್ರಾನ್‌ವಾಲೆʼ ಎಂದು ಕರೆಯಲಾರಂಭಿಸಿದ್ದಾರೆ.

VISTARANEWS.COM


on

Edited by

Amritpal
Koo

ಖಲಿಸ್ತಾನಿಗಳ ನಾಯಕ, ಬೋಧಕ, ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತ್​ ಪಾಲ್​ ಸಿಂಗ್​ನನ್ನು ಪಂಜಾಬ್​ ಪೊಲೀಸರು ಬೆನ್ನಟ್ಟಿದ್ದಾರೆ. ಈತನನ್ನು ನಾಕೋದರ್​​ನ ಬಳಿ ಅರೆಸ್ಟ್ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿತ್ತಾದರೂ, ಆ ಬಳಿಕ ಆತ ಪರಾರಿಯಾದ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಸಖತ್​ ಸದ್ದು ಮಾಡುತ್ತಿದ್ದ, ರಕ್ಷಣಾ ವ್ಯವಸ್ಥೆಗೆ ಬೆದರಿಕೆಯೊಡ್ಡಿದ್ದ ಈ ಅಮೃತ್​ ಪಾಲ್​ ಸಿಂಗ್ ಯಾರು? ಅವನ ಹಿನ್ನೆಲೆ ಏನು..ಇಲ್ಲಿದೆ ವಿಸ್ತೃತ ಮಾಹಿತಿ.

ಫೆಬ್ರವರಿಯಲ್ಲಿ ಅಮೃತಸರದ ಬಳಿಯ ಅಜ್ನಾಲಾದಲ್ಲಿ ಪೊಲೀಸ್‌ ಠಾಣೆ ಮೇಲೆ ನಡೆದ ದಾಳಿ ನಡೆದಿತ್ತು. ಪೊಲೀಸ್‌ ಠಾಣೆಗಳ ಮೇಲೆ ಗುಂಪು ದಾಳಿ ಭಾರತದಲ್ಲಿ ಹೊಸತಲ್ಲ. ಆದರೆ ಈ ಸಲ ಖಲಿಸ್ತಾನ್‌ ಪ್ರತಿಪಾದಕ ಅಮೃತ್‌ಪಾಲ್‌ ಸಿಂಗ್‌ ನೇತೃತ್ವದಲ್ಲಿ ದಾಳಿ ಈಗ ಹೊಸ ಆತಂಕಕ್ಕೆ ಕಾರಣವಾಗಿತ್ತು. ಅಲ್ಲಿಂದಲೂ ಆತನ ವಿರುದ್ಧದ ಪೊಲೀಸ್ ಕಾರ್ಯಾಚರಣೆ ತೀವ್ರಗೊಂಡಿತ್ತು.

ಈ ದಾಳಿಗೇನು ಕಾರಣ?
ಅಮೃತ್‌ಪಾಲ್‌ ಸಿಂಗ್‌ನ ಸಹಚರ ಲವ್‌ಪ್ರೀತ್‌ ಸಿಂಗ್‌ ತೂಫಾನ್‌ ಎಂಬಾತನನ್ನು ಪೊಲೀಸರು ಬಂಧಿಸಿ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದ್ದರು. ಅಮೃತ್‌ಪಾಲ್‌ ಸಿಂಗ್‌ನನ್ನು ಕಟುವಾಗಿ ಟೀಕಿಸುತ್ತಿದ್ದ ಒಬ್ಬ ವ್ಯಕ್ತಿಯನ್ನು ಅಪಹರಿಸಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾನೆ ಎಂಬುದು ಲವ್‌ಪ್ರೀತ್‌ನ ಮೇಲಿದ್ದ ದೂರು. ಇದರಿಂದ ಕೆರಳಿದ ಅಮೃತ್‌ಪಾಲ್‌ ಮತ್ತು ಆತನ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ದೊಣ್ಣೆ ಕತ್ತಿಗಳನ್ನು ಹಿಡಿದುಕೊಂಡು ಅಜ್ನಾಲಾ ಪೊಲೀಸ್‌ ಠಾಣೆಗೆ ನುಗ್ಗಿದರು. ಇದರಿಂದ ಬೆದರಿದ ಪೊಲೀಸರು ಲವ್‌ಪ್ರೀತ್‌ನನ್ನು ಬಿಡುಗಡೆ ಮಾಡಿದ್ದೂ ಅಲ್ಲದೇ, ಆತ ನಿರ್ದೋಷಿ ಎಂದು ಸಾಬೀತುಪಡಿಸುವ ಸಾಕ್ಷ್ಯಗಳು ದೊರೆತಿವೆ ಎಂದು ತಾವೇ ಘೋಷಿಸಿಯೂ ಬಿಟ್ಟರು. ಇದೀಗ ಅಮೃತ್‌ಪಾಲ್‌ ವಿಜಯದ ನಗು ನಗುತ್ತಿದ್ದಾನೆ. ಇದರಿಂದ ಅಭಿಮಾನಿಗಳ ಕಣ್ಣಿನಲ್ಲಿ ಆತನ ತೂಕ ಇನ್ನಷ್ಟು ಹೆಚ್ಚಿದೆ. ಸಮಾಜಘಾತುಕ ಶಕ್ತಿಯ ಮುಂದೆ ಪೊಲೀಸರು ಮಂಡಿಯೂರಿದ ಈ ಘಟನೆ ದೇಶದ ಚಿತ್ತ ಇತ್ತ ಹರಿಯುವಂತೆ ಮಾಡಿದೆ.

ಯಾರಿವನು ಅಮೃತ್‌ಪಾಲ್?‌
ಅಮೃತಸರದ ಜಲ್ಲುಪುರ್‌ ಖೇರಾ ಎಂಬ ಗ್ರಾಮದಲ್ಲಿ 1993ರಲ್ಲಿ ಜನಿಸಿದ ಅಮೃತ್‌ಪಾಲ್‌, 12ನೇ ತರಗತಿವರೆಗೆ ಓದಿದ. 2012ರಲ್ಲಿ ಭಾರತ ತೊರೆದು, ದುಬೈಯಲ್ಲಿ ತನ್ನ ಚಿಕ್ಕಪ್ಪನ ಟ್ರಾನ್ಸ್‌ಪೋರ್ಟ್‌ ಕಂಪನಿಯಲ್ಲಿ ದುಡಿದ. ಈತ ಪಂಜಾಬ್‌ನ ಪೊಲೀಸರ ಹಾಗೂ ರಾಜಕಾರಣಿಗಳ ಗಮನಕ್ಕೆ ಬಂದುದೇ ಆರು ತಿಂಗಳ ಹಿಂದೆ- ʼವಾರಿಸ್‌ ಪಂಜಾಬ್‌ ದೇʼ ಸಂಘಟನೆಯ ಮುಖ್ಯಸ್ಥನಾಗಿ ನಿಯುಕ್ತನಾದ ಸಂದರ್ಭದಲ್ಲಿ. ಈ ಸಂಘಟನೆಯನ್ನು ಸ್ಥಾಪಿಸಿದವನು ನಟ, ಚಳವಳಿಗಾರ ದೀಪ್‌ ಸಿಧು. ಇವನು 2022ರ ಫೆಬ್ರವರಿಯಲ್ಲಿ ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದ. ಇವನನ್ನು ಸರ್ಕಾರ ಸಾಯಿಸಿದೆ ಎಂದು ಅಮೃತ್‌ಪಾಲ್‌ ಮತ್ತು ಬೆಂಬಲಿಗರು ಆರೋಪಿಸುತ್ತ ಬಂದಿದ್ದಾರೆ.

ಅಮೃತ್‌ಪಾಲ್‌ ಯಾವತ್ತೂ ಸಿಧುವನ್ನು ಭೇಟಿ ಮಾಡಿದವನೇ ಅಲ್ಲ. ಆದರೆ ಆನ್‌ಲೈನ್‌ನಲ್ಲಿ ತನ್ನನ್ನು ಅತ್ಯಂತ ಪ್ರಭಾವಿಸಿದ್ದ ಎಂದು ಹೇಳಿಕೊಳ್ಳುತ್ತಾನೆ. ಸಿಧುವಿನ ಸಾವಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಸಿಧುವಿನ ಸಲಹೆಯಂತೆ ತಾನು ಗಡ್ಡ ಟ್ರಿಮ್‌ ಮಾಡಿಕೊಳ್ಳುವುದು ಬಿಟ್ಟಿರುವುದಾಗಿ ಹೇಳಿದ.

ಕಳೆದ ಸೆಪ್ಟೆಂಬರ್‌ 25ರಂದು ಆನಂದ್‌ಪುರ ಸಾಹಿಬ್‌ನಲ್ಲಿ ನಡೆದ ಸಿಖ್‌ ಧರ್ಮದ ಸಾಂಪ್ರದಾಯಿಕ ಬ್ಯಾಪ್ಟಿಸಂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಮೃತ್‌ಪಾಲ್‌, ʼಅಮೃತಧಾರಿ ಸಿಖ್‌ʼ ಎನಿಸಿದ. ಈ ಕಾರ್ಯಕ್ರಮಕ್ಕೆ ಹರಿದುಬಂದ ಜನಸಾಗರ ನೋಡಿ ಪಂಜಾಬ್‌ ಅವಾಕ್ಕಾಯಿತು. ಇದಾದ ನಾಲ್ಕು ದಿನಗಳ ನಂತರ ಸೆ.29ರಂದು ಮಹತ್ವದ ಹೊಣೆ ಹೊರುವವರು ಈಡೇರಿಸುವ ಪೇಟ ಧರಿಸುವ ʼದಸ್ತರ್‌ ಬಂದಿʼ ಕಾರ್ಯಕ್ರಮ ನಡೆಯಿತು. ಇದಕ್ಕೂ ದಾಖಲೆ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ಇದು ನಡೆದುದು ರೋಡೆ ಗ್ರಾಮದಲ್ಲಿ. ಅದು ಖಲಿಸ್ತಾನ್‌ ಚಳವಳಿಯ ರಾಕ್ಷಸ ಭಯೋತ್ಪಾದಕನಾಗಿದ್ದ ಜರ್ನೈಲ್‌ ಸಿಂಗ್‌ ಭಿಂದ್ರಾನ್‌ವಾಲೆಯ ಜನ್ಮಸ್ಥಳ.

ಕ್ಲೀನ್‌ ಶೇವ್‌ ಮಾಡಿಕೊಂಡಿರುತ್ತಿದ್ದ ಅಮೃತ್‌ಪಾಲ್‌ ಉದ್ದ ಗಡ್ಡ ಬಿಟ್ಟು ಖಲಿಸ್ತಾನ್‌ ಚಳವಳಿಯ ಮುಖವಾಣಿಯಾದ ಬೆಳವಣಿಗೆ ಬಲು ಶೀಘ್ರವಾಗಿ ನಡೆದಿದೆ. ಆತ ಭಿಂದ್ರಾನ್‌ವಾಲೆಯಂತೆಯೇ ದಿರಿಸು ಧರಿಸಿಕೊಳ್ಳುತ್ತಾನೆ. ಕೆಲವರು ಅವನನ್ನು ಈಗಾಗಲೇ ʼಎರಡನೇ ಭಿಂದ್ರಾನ್‌ವಾಲೆʼ ಎಂದು ಕರೆಯಲಾರಂಭಿಸಿದ್ದಾರೆ. ದುಬೈಯಿಂದ ಮರಳುತ್ತಿದ್ದಾಗ ತನ್ನನ್ನು ಸಣ್ಣದೊಂದು ತನಿಖೆಗೊಳಪಡಿಸಿದ್ದ ತನಿಖಾ ಸಂಸ್ಥೆಗಳ ಕ್ರಮದ ಬಗ್ಗೆ ಅವನು ಹಿಂದೆಯೇ ಕಿಡಿಕಾರಿದ್ದ. ಸಿಖ್‌ ಯುವಕನೊಬ್ಬ ತನ್ನ ತಾಯ್ನಾಡಿಗೆ ಹಿಂದಿರುಗುತ್ತಿರುವುದನ್ನು ಪ್ರಶ್ನೆ ಮಾಡುವದುಉ ಗುಲಾಮಿ ಮನಸ್ಥಿತಿ ಎಂದು ಜರೆದಿದ್ದ.

bhindranvale

ಖಲಿಸ್ತಾನ ಪರ ನಿಲುವು
ಹಲವು ಸಮಯದಿಂದ ಆತ ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಖಲಿಸ್ತಾನ್ ಪರ ಪೋಸ್ಟ್‌ಗಳನ್ನು ಹಾಕುತ್ತಿದ್ದಾನೆ. ಹಿಂದು ರಾಷ್ಟ್ರ ವಾದ ಸರಿ ಎಂದಾದರೆ ಖಲಿಸ್ತಾನ್‌ ಯಾಕೆ ತಪ್ಪು ಎಂದು ಪ್ರಶ್ನಿಸುತ್ತಾನೆ. ಇವನು ಪಾರಂಪರಿಕ ಧಾರ್ಮಿಕ ತರಬೇತಿ ಪಡೆದು ಮುಖ್ಯಸ್ಥನಾಗಿಲ್ಲ. ರಾಜಕೀಯ ವಿಚಾರದಿಂದ ಆರಂಭಿಸಿ ಮತೀಯ ಗುರು ಎನಿಸಿಕೊಂಡವನು. ಧಾರ್ಮಿಕ ವಿಷಯಗಳನ್ನು ಉಲ್ಲೇಖಿಸುವಾಗ ಈತನ ತಿಳಿವಳಿಕೆಯ ಪೊಳ್ಳುತನ ಎದ್ದು ಕಾಣಿಸುತ್ತದೆ. ಆದರೂ ಈತನ ಕಠೋರ ರಾಜಕೀಯ ನಿಲುವುಗಳಿಂದಾಗಿ ಅಭಿಮಾನಿಗಳು ಈತನನ್ನು ಸುತ್ತುವರಿಯುತ್ತಾರೆ.

2021ರಲ್ಲಿ ಕೆಂಪು ಕೋಟೆಯ ಮೇಲೆ ನಡೆದ ಗುಂಪು ದಾಳಿಯ ವೇಳೆ ಅದರ ನೇತೃತ್ವ ವಹಿಸಿದ್ದ ದೀಪ್‌ ಸಿಧುವಿನ ಕೃತ್ಯವನ್ನು ಈತ ಸಮರ್ಥಿಸಿಕೊಂಡಿದ್ದ. ಹೀಗಾಗಿ ದೀಪ್‌ ಸಿಧುವಿನ ಬೆಂಬಲಿಗರು ಈಗ ಈತನ ಕಡೆಗೆ ಸೇರಿಕೊಂಡಿದ್ದಾರೆ. ಆದರೆ ಕಳೆದ ಒಂದು ದಶಕದಿಂದ ಸಿಕ್ಖರ ಒಂದು ವರ್ಗದಲ್ಲಿ ಉಲ್ಬಣಿಸುತ್ತಿರುವ ವ್ಯಗ್ರತೆ ಈತನನ್ನು ಸೇರಿಕೊಳ್ಳುವಲ್ಲಿ ವ್ಯಕ್ತವಾಗುತ್ತಿದೆ. 2015ರ ಬೆಹ್ಬಲ್‌ ಕಾಲನ್‌ ಪೊಲೀಸ್‌ ಫೈರಿಂಗ್‌, ಬರ್ಗಾರಿ ಧರ್ಮನಿಂದನೆ ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ ಎಂಬ ಸಿಟ್ಟಿದೆ. ಪಂಜಾಬಿನ ಸ್ಥಳೀಯ ಚಾನೆಲೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಅಮೃತ್‌ಪಾಲ್‌ ಈ ಘಟನೆಗಳನ್ನು ಉಲ್ಲೇಖಿಸಿದ್ದಾನೆ. ಕ್ರೈಸ್ತ ಮಿಷನರಿಗಳ ಮೇಲೆ ಕಿಡಿ ಕಾರುತ್ತಾನೆ. ಇದೂ ಆತನ ಜನಪ್ರಿಯತೆಗೆ ಕಾರಣ. ಪಂಜಾಬ್‌ ಮೇಲ್ನೋಟಕ್ಕೆ ಶಾಂತವಾಗಿದ್ದರೂ 80-90ರ ದಶಕದ ಗಾಯಗಳು ಹಾಗೆಯೇ ಇವೆ.

ಖಾಲಿತನ ತಂದಿಟ್ಟ ನಾಯಕತ್ವ
ಸಿಖ್‌ ರಾಜಕೀಯದಲ್ಲೂ ಅಮೃತ್‌ಪಾಲ್‌ ಅಂಥವರ ಸೃಷ್ಟಿಗೆ ಕಾರಣವಾಗಬಹುದಾದ ಒಂದು ನಿರ್ವಾತವಿದೆ. ಸಿಖ್‌ ರಾಜಕಾರಣಕ್ಕೆ ಇನ್ನೊಂದು ಹೆಸರಾಗಿದ್ದ ಶಿರೋಮಣಿ ಅಕಾಲಿ ದಳ ನಿಧಾನವಾಗಿ ತನ್ನ ನೆಲೆಯನ್ನು ಕಳೆದುಕೊಂಡಿದೆ. ಅಕಾಲಿ ದಳದ ಆಡಳಿತದ ಅಡಿಯಲ್ಲಿಯೇ ಸಂಭವಿಸಿದ ಹಲವಾರು ಘಟನೆಗಳಲ್ಲಿ ತಮಗೆ ನ್ಯಾಯ ದೊರಕಿಲ್ಲ ಎಂಬ ಆಕ್ರೋಶ ಸಿಕ್ಖರಲ್ಲಿದೆ. ಕಳೆದ ವರ್ಷದ ರಾಜ್ಯ ಚುನಾವಣೆಯಲ್ಲಿ ಅಕಾಲಿ ದಳ ಕೇವಲ ಮೂರು ಸ್ಥಾನಕ್ಕೆ ಇಳಿದಿದೆ. ಸಿಖ್ಖರ ಶ್ರೇಷ್ಠ ಧಾರ್ಮಿಕ ಹುದ್ದೆಯಾದ ಅಖಾಲ್‌ ತಖ್ತ್‌ನ ಜತೇದಾರ್‌ ಹಾಗೂ ಗುರುದ್ವಾರ ಸಮಿತಿಗಳು ಕೂಡ ಸಿಕ್ಖರ ಮೇಲಿನ ತಮ್ಮ ಹಿಡಿತ ಕಳೆದುಕೊಳ್ಳುತ್ತಿವೆ. ಮಾಜಿ ಜತೇದಾರ್‌ ಗುರ್‌ಬಚನ್‌ ಸಿಂಗ್‌ ಅವರನ್ನು, ಡೇರಾ ಸಚ್ಚಾ ಸೌಧಾದ ಗುರ್ಮೀತ್‌ ರಾಮ್‌ ರಹೀಮ್‌ನನ್ನು ಮನ್ನಿಸಿದ್ದಕ್ಕಾಗಿ ಖಂಡಿಸಸಲಾಗಿತ್ತು. 70ರ ದಶಕದಲ್ಲಿ ಇಂಥದೇ ಬೆಳವಣಿಗೆಗಳು ಭೀಂದ್ರಾನ್‌ವಾಲೆಯ ಹುಟ್ಟಿಗೆ ಕಾರಣವಾಗಿದ್ದವು. 1978ರಲ್ಲಿ ಬಾದಲ್‌ ಸರ್ಕಾರ ಇದ್ದಾಗ ನಿರಂಕಾರಿಗಳ ಜತೆಗಿನ ಸಂಘರ್ಷದಲ್ಲಿ 13 ಸಿಕ್ಖರು ಬಲಿಯಾದ ಘಟನೆ ಸಿಕ್ಖರನ್ನು ಹತಾಶಗೊಳಿಸಿತ್ತು. ಇಂದೂ ಅಂಥದೇ ಹತಾಶೆ ಅಮೃತ್‌ಪಾಲ್‌ನ ಬೆಳವಣಿಗೆಗೆ ಮುನ್ನುಡಿ ಹಾಡುತ್ತಿದೆ.

khalistan

ಇಂದು ಅಮೃತ್‌ಪಾಲ್‌ನಲ್ಲಿ ಆಯುಧ ಧರಿಸಿದ ಆತನ ಬೆಂಬಲಿಗರು ಸದಾ ಕಾಯುತ್ತಿರುತ್ತಾರೆ. ಆತನ ಮಾತುಗಳು ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಶೇರ್‌ ಆಗುತ್ತವೆ, ಜನಪ್ರಿಯವಾಗುತ್ತವೆ. ಇವನ ಮಾತುಗಳು ಪಂಜಾಬಿ ಚಾನೆಲ್‌ಗಳ ಟಿಆರ್‌ಪಿ ಹೆಚ್ಚಿಸುತ್ತವೆ. ಈತನನ್ನು ಹಿಡಿತದಲ್ಲಿಡಲು ಪಂಜಾಬಿನ ಪೊಲೀಸರಿಗಾಗಲೀ ಸರ್ಕಾರದ ಬಳಿಯಾಗಲೀ ಯಾವುದೇ ಯೋಜನೆ ಇದ್ದಂತಿಲ್ಲ. ಸದ್ಯಕ್ಕೆ ಇವನು ಏನಾದರೂ ಕಾಲು ಜಾರಿ ತಪ್ಪು ಮಾಡಿದರೆ ಹಿಡಿಯುವುದಷ್ಟೇ ಇವರಿಗೆ ಸಾಧ್ಯವಾಗಲಿದೆ.

ಇದನ್ನೂ ಓದಿ: Pak New Plan | ಲಾಹೋರ್ ಗುರುದ್ವಾರಗಳಲ್ಲಿ ಖಲಿಸ್ತಾನ್ ಉಗ್ರರು, ಭಾರತೀಯ ಭಕ್ತರಿಗೆ ಬ್ರೈನ್ ವಾಷ್?

Continue Reading

EXPLAINER

ವಿಸ್ತಾರ Explainer: ಮರಳಿ ಸುದ್ದಿಯಲ್ಲಿರುವ ಲೋಕಾಯುಕ್ತ; ಎಷ್ಟಿದೆ ಇದರ ಅಧಿಕಾರ, ಆಳ ಮತ್ತು ಅಗಲ?

ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನ ಲಂಚ ಪ್ರಕರಣ ಲೋಕಾಯುಕ್ತದ ಸಾಮರ್ಥ್ಯವನ್ನು ಮತ್ತೆ ಮುನ್ನಲೆಗೆ ತಂದು ನಿಲ್ಲಿಸಿದೆ. ಲೋಕಾಯುಕ್ತದ ವ್ಯಾಪ್ತಿ, ಅಧಿಕಾರ ಎಷ್ಟು? ಯಾರು ಇದನ್ನು ಕಟ್ಟಿದರು, ಯಾರು ನಾಶ ಮಾಡಲು ಯತ್ನಿಸಿದರು? ಇಲ್ಲಿದೆ ಒಂದು ನೋಟ.

VISTARANEWS.COM


on

Edited by

lokayukta
Koo

ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಮನೆಯ ಮೇಲಿನ ಲೋಕಾಯುಕ್ತ ದಾಳಿ (Lokayukta Raid) , ಅಲ್ಲಿ ಸಿಕ್ಕಿದ ಎಂಟು ಕೋಟಿ ರೂಪಾಯಿ ಅಕ್ರಮ ಹಣಕಾಸು ಪ್ರಕರಣ ಇದೀಗ ಲೋಕಾಯುಕ್ತದ ಮುಂದೆ ವಿಚಾರಣೆಯ ಪ್ರಕ್ರಿಯೆಯಲ್ಲಿದೆ. ಚುನಾವಣೆಗೆ ಮುನ್ನ ನಡೆದ ಈ ಘಟನೆ ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕವನ್ನು ಕಂಗೆಡಿಸಿದೆ ಕೂಡ.

ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು ಕೆಎಸ್‌ಡಿಎಲ್‌ನ ಅಧ್ಯಕ್ಷರೂ ಆಗಿದ್ದರು. ಅವರ ಪುತ್ರ ಪ್ರಶಾಂತ್‌ ಮಾಡಾಳು ಬೆಂಗಳೂರು ನೀರು ಮತ್ತು ಒಳಚರಂಡಿ ಮಂಡಳಿಯ ಹಣಕಾಸು ಸಲಹೆಗಾರರಾಗಿದ್ದರು. ಇದೀಗ, ತಮಗೆ ಬೇಕಾದವರಿಗೆ ಟೆಂಡರ್‌ ನೀಡಲು ದೊಡ್ಡ ಮೊತ್ತದ ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ.

ಇದಾದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ʼʼಈ ಹಿಂದಿನ ಕಾಂಗ್ರೆಸ್‌ ಸರ್ಕಾರ ಶಿಥಿಲಗೊಳಿಸಿದ್ದ ಲೋಕಾಯುಕ್ತವನ್ನು ನಮ್ಮ ಪಕ್ಷವೇ ಮರಳಿ ತಂದಿದೆ. ಕಾಂಗ್ರೆಸ್‌ನ ಅವಧಿಯಲ್ಲಿ ಎಷ್ಟೋ ಭ್ರಷ್ಟಾಚಾರ ಪ್ರಕರಣಗಳು ಹಾಗೆಯೇ ಮುಚ್ಚಿಹೋಗಿದ್ದವುʼʼ ಎಂದು ಆರೋಪಿಸಿದ್ದಾರೆ. ʼʼಲೋಕಾಯುಕ್ತ ಸ್ವಾಯತ್ತ ಸಂಸ್ಥೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆʼʼ ಎಂದಿದ್ದಾರೆ.

Madalu prashant money

ಲೋಕಾಯುಕ್ತ ಎಷ್ಟು ಸ್ವಾಯತ್ತ?

ಹೌದೆ? ಲೋಕಾಯುಕ್ತ ಅಷ್ಟೊಂದು ಸ್ವಾಯತ್ತವೇ? ಲೋಕಾಯುಕ್ತ ಎಂದರೇನು?

ಕೇಂದ್ರದ ಲೋಕಪಾಲ್‌ನ ಸಮಾನಾಂತರ ಸಂಸ್ಥೆಗಳು ರಾಜ್ಯದ ಲೋಕಾಯುಕ್ತಗಳು. ಲೋಕಪಾಲ್‌ ಮತ್ತು ಲೋಕಾಯುಕ್ತ ಕಾಯಿದೆ- 2013 ಹೇಳುವಂತೆ ʼʼಪ್ರತಿ ರಾಜ್ಯವೂ ಆಯಾ ರಾಜ್ಯದಲ್ಲಿ ಅಲ್ಲಿನ ಶಾಸನಸಭೆಯಲ್ಲಿ ರೂಪಿಸಲಾದ ಕಾಯಿದೆಯಡಿ ಕಾರ್ಯಾಚರಿಸುವ ಸಂಸ್ಥೆಯನ್ನು ಈ ಕಾಯಿದೆ ಬಂದ ಒಂದು ವರ್ಷದ ಒಳಗಾಗಿ ಸ್ಥಾಪಿಸಬೇಕು. ಅದು ಅಲ್ಲಿನ ಸಾರ್ವಜನಿಕ ಆಡಳಿತಗಾರರ ಮೇಲೆ ಬರುವ ಭ್ರಷ್ಟಾಚಾರದ ದೂರುಗಳನ್ನು ತನಿಖೆಗೊಳಪಡಿಸಬೇಕು.ʼʼ

ಇದನ್ನು ಲೋಕಪಾಲ್‌ ಹೇಳಿದ್ದು 2013ರಲ್ಲಿ. ಪ್ರತಿ ರಾಜ್ಯದಲ್ಲೂ ಲೋಕಾಯುಕ್ತವನ್ನು ಕಡ್ಡಾಯಗೊಳಿಸುವುದು ಅದರ ಗುರಿಯಾಗಿತ್ತು. ಆದರೆ ಆಗಿನ ಪ್ರತಿಪಕ್ಷಗಳು, ಬಿಜೆಪಿಯೂ ಸೇರಿದಂತೆ, ಇದು ಒಕ್ಕೂಟ ವ್ಯವಸ್ಥೆಯ ಚೈತನ್ಯಕ್ಕೆ ವಿರುದ್ಧ ಎಂದು ಗಲಾಟೆ ಎಬ್ಬಿಸಿದವು. ಹೀಗಾಗಿ, ಆಗ ರಚನೆಯಾದ ಕಾಯಿದೆಯು, ಲೋಕಾಯುಕ್ತ ರಚನೆಯ ಹೊಣೆಯನ್ನು ಆಯಾ ರಾಜ್ಯಗಳಿಗೆ ಬಿಟ್ಟುಬಿಟ್ಟಿತು.

ಕೇಂದ್ರದ ಲೋಕಪಾಲ್‌ ಕಾಯಿದೆ 2014ರ ಜನವರಿ ಒಂದರಂದು ರಾಷ್ಟ್ರಪತಿಗಳ ಅಂಕಿತ ಪಡೆದು ಜನವರಿ 16ರಂದು ಜಾರಿಗೆ ಬಂತು. ಈ ಕಾಯಿದೆ ಅಣ್ಣಾ ಹಜಾರೆಯಂಥವರು ಮಾಡಿದ ಲೋಕಪಾಲ್‌ ಚಳವಳಿ ಮುಂತಾದ ಹಲವಾರು ಹೋರಾಟಗಳ ಫಲವಾಗಿತ್ತು.

ಈ ಕಾಯಿದೆಯಿಂದಾಗಿ ಆಗಿದ್ದು ಎಂದರೆ ಲೋಕಪಾಲ್‌ ಸೃಷ್ಟಿ. ಇದರ ಅಧ್ಯಕ್ಷರು ದೇಶದ ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶ, ಅಥವಾ ನಿರ್ದಿಷ್ಟ ಅರ್ಹತೆಗಳನ್ನು ಹೊಂದಿರುವ ಉನ್ನತ ಹುದ್ದೆಯ ವ್ಯಕ್ತಿಯಾಗಿರಬೇಕು. ಇದು 8 ಸದಸ್ಯರನ್ನು ಹೊಂದಿರಬೇಕು. ಇವರು ನ್ಯಾಯಾಂಗದವರಾಗಿರಬೇಕು. ಇದರಲ್ಲಿ 50% ಸದಸ್ಯರು ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತ ವರ್ಗ ಮತ್ತು ಮಹಿಳೆಯರಾಗಿರಬೇಕು. ಆದರೆ ಸದ್ಯಕ್ಕೆ ಕೇಂದ್ರದ ಲೋಕಾಯುಕ್ತ ಸಕ್ರಿಯವಾಗಿಲ್ಲ. ನಾಮಕಾವಸ್ಥೆ ಎಂಬಂತಿದೆ.

ಕರ್ನಾಟಕದ ಮಾದರಿ

ಈ ಕಾಯಿದೆ ಜಾರಿಗೆ ಬಂದಾಗ ಆಗಲೇ ಹಲವು ರಾಜ್ಯಗಳಲ್ಲಿ ಲೋಕಾಯುಕ್ತವಿತ್ತು ಮತ್ತು ಚುರುಕಾಗಿಯೇ ಅವು ಕಾರ್ಯ ನಿರ್ವಹಿಸುತ್ತಿದ್ದವು. ಮಧ್ಯಪ್ರದೇಶ ಹಾಗೂ ಕರ್ನಾಟಕಗಳಲ್ಲಿತ್ತು. ಲೋಕಪಾಲ್‌ ಕಾಯಿದೆ ಹಾಗೂ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶದ ಬಳಿಕ ಇಂದು ಎಲ್ಲ ರಾಜ್ಯಗಳಲ್ಲೂ ಲೋಕಾಯುಕ್ತ ಸೃಷ್ಟಿಯಾಗಿದೆ. ಆದರೆ ಚುರುಕಾಗಿರುವುದು ಕೆಲವೇ ಕಡೆ ಮಾತ್ರ.

venkatachala
ನ್ಯಾಎನ್‌ ವೆಂಕಟಾಚಲ

ರಾಮಕೃಷ್ಣ ಹೆಗಡೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದಾಗ, ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತ ವಿಧೇಯಕವನ್ನು ವಿಧಾನಸಭೆಯಲ್ಲಿ (1983) ಮಂಡಿಸಲಾಯಿತು. ಅದು ಅವರ ಚುನಾವಣಾ ಪ್ರಣಾಳಿಕೆಯಲ್ಲಿಯೂ ಇತ್ತು. ಕರ್ನಾಟಕ ಲೋಕಾಯುಕ್ತ ಕಾಯಿದೆ-1984 ಜಾರಿಗೆ ಬಂದದ್ದು 1986, ಜನವರಿ 15ರಂದು. ಸಾರ್ವಜನಿಕ ಆಡಳಿತದ ಗುಣಮಟ್ಟವನ್ನು ಉತ್ತಮಗೊಳಿಸುವುದು, ಆಡಳಿತಗಾರರ ಭ್ರಷ್ಟಾಚಾರ ಪತ್ತೆ ಹಚ್ಚುವುದು ಮತ್ತು ತನಿಖೆಗೊಳಪಡಿಸುವುದು ಇದರ ಗುರಿ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಶಿಸ್ತಿಗೆ ಶಿಕ್ಷೆ ಕೂಡ ಇದರ ವ್ಯಾಪ್ತಿ. 1908ರ ಕೋಡ್‌ ಆಫ್‌ ಸಿವಿಲ್‌ ಪ್ರೊಸೀಜರ್‌ ಪ್ರಕಾರ ಸರ್ಚ್‌ ವಾರಂಟ್‌ ಹೊರಡಿಸುವ, ವಿಚಾರಣೆ ನಡೆಸುವ, ಸಿವಿಲ್‌ ಕೋರ್ಟ್‌ಗಳ ಅಧಿಕಾರ ಲೋಕಾಯುಕ್ತಕ್ಕೂ ದತ್ತವಾಗಿದೆ.

N Santhosh hegde
ನ್ಯಾ ಸಂತೋಷ್‌ ಹೆಗ್ಡೆ

ಕರ್ನಾಟಕದ ಮೊದಲ ಲೋಕಾಯುಕ್ತರಾದವರು ಏ.ಡಿ. ಕೋಶಲ್. ಅವರು ಜನವರಿ 1986ರಿಂದ 1991ರವರೆಗೆ ಅಧಿಕಾರದಲ್ಲಿದ್ದರು. ಬಳಿಕ ರವೀಂದ್ರನಾಥ ಪೈ, ಅಬ್ದುಲ್ ಹಕೀಮ್ ಅವರು ಅಧಿಕಾರಕ್ಕೆ ಬಂದರು. ಕರ್ನಾಟಕದಲ್ಲಿ ಲೋಕಾಯುಕ್ತರಾಗಿ ಸಕ್ರಿಯವಾಗಿ ಕೆಲಸ ನಿರ್ವಹಿಸಿದ ಮಾಜಿ ನ್ಯಾಯಮೂರ್ತಿಗಳಾದ ಎನ್.‌ ವೆಂಕಟಾಚಲ(2001-2006), ಸಂತೋಷ್‌ ಹೆಗ್ಡೆ (2006-2011) ಭ್ರಷ್ಟರಲ್ಲಿ ಇನ್ನಿಲ್ಲದ ನಡುಕ ಹುಟ್ಟಿಸಿದರು. ಅವರ ಆಗಮನವಾದರೆ ಸಾಕು, ಸರ್ಕಾರಿ ಅಧಿಕಾರಿಗಳು ಗಡಗಡ ನಡುಗುತ್ತಿದ್ದರು. ಇವರು ದಾಳಿ ನಡೆಸಿದ ವೇಳೆ ಬೆದರಿ ಮೂರ್ಛೆ ಹೋದ ಅಧಿಕಾರಿಗಳೂ ಇದ್ದರು. ಹಲವರು ರಾಜಕಾರಣಿಗಳಿಗೂ ಲೋಕಾಯುಕ್ತ ತನಿಖೆಯ ಬಿಸಿ ಮುಟ್ಟಿತು. ಲೋಕಾಯುಕ್ತದ ಪರಿಣಾಮಕಾರಿ ಕಾರ್ಯತಂತ್ರ, ಹೆಚ್ಚುತ್ತಿದ್ದ ಲೋಕಪಾಲ ಚಳವಳಿಯ ಬಿಸಿ ರಾಜಕಾರಣಿಗಳಿಗೂ ಮುಟ್ಟಿತು. ಬಳಿಕ ಶಿವರಾಜ್ ಪಾಟೀಲ್, ವೈ.ಭಾಸ್ಕರ್ ರಾವ್, ಪಿ. ವಿಶ್ವನಾಥ ಶೆಟ್ಟಿ, ನ್ಯಾ. ಬಿ ಎಸ್ ಪಾಟೀಲ್ ಅಧಿಕಾರ ನಿರ್ವಹಿಸಿದ್ದಾರೆ.

ಎಸಿಬಿ ರಚನೆ

ಇದರಿಂದೆಲ್ಲ ಬೆದರಿದ ರಾಜಕಾರಣಿಗಳು ಲೋಕಾಯುಕ್ತವನ್ನು ಶಿಥಿಲಗೊಳಿಸುವ ತಂತ್ರದ ಮೊರೆ ಹೋದರು. ಅಂಥ ಒಂದು ಪ್ರಯತ್ನವೆಂದರೆ 2016ರ ಮಾರ್ಚ್‌ 14ರಂದು ಸಿದ್ದರಾಮಯ್ಯನವರ ಕಾಂಗ್ರೆಸ್‌ ಸರ್ಕಾರ ಸೃಷ್ಟಿಸಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ). ಭ್ರಷ್ಟಾಚಾರ ತಡೆ ಕಾಯಿದೆ-1988ರ ಬಹುತೇಕ ಎಲ್ಲಾ ಅಧಿಕಾರಗಳನ್ನು ಲೋಕಾಯುಕ್ತದಿಂದ ಎಸಿಬಿಗೆ ಸರ್ಕಾರ ವರ್ಗಾಯಿಸಿತು.

ಎಸಿಬಿ ರಚನೆಗೂ ಮುನ್ನ ಲೋಕಾಯುಕ್ತ ತನಗೆ ಬಂದ ದೂರುಗಳ ತನಿಖೆಯನ್ನು ತನ್ನದೇ ಪೊಲೀಸ್ ವಿಭಾಗದಿಂದ ಮಾಡುತ್ತಿತ್ತು. ಸಂಸ್ಥೆಗೆ 1988ರ ಭ್ರಷ್ಟಾಚಾರ ತಡೆ ಕಾಯ್ದೆಯ ಪ್ರಕಾರ ಈ ಅಧಿಕಾರ ಇತ್ತು. ಆದರೆ ಈ ಬಳಿಕ ಸಂಸ್ಥೆಗೆ ತನಿಖೆ ನಡೆಸುವ ಅಧಿಕಾರ ಇಲ್ಲವಾಯ್ತು. ಅದು ಕೇವಲ ದೂರುಗಳನ್ನು ಮಾತ್ರ ಸ್ವೀಕರಿಸಿ ಎಸಿಬಿಗೆ ತನಿಖೆ ನಡೆಸಲು ಸೂಚಿಸಬೇಕಾಯಿತು. ಇದು ಲೋಕಾಯುಕ್ತದ ಶಕ್ತಿಗುಂದಿಸಿತು. ಆದರೆ ಇತ್ತೀಚೆಗೆ ಹೈ ಕೋರ್ಟ್‌ ತೀರ್ಪಿನಿಂದಾಗಿ ಮತ್ತೆ ಲೋಕಾಯುಕ್ತಕ್ಕೆ ಕಳೆದುಹೋಗಿದ್ದ ಸ್ಥಾನಮಾನ ಮತ್ತೆ ಪ್ರಾಪ್ತವಾಗಿದೆ. 2022ರಲ್ಲಿ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಇದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ (ಚಿದಾನಂದ ಅರಸ್‌ V/S ಕರ್ನಾಟಕ ರಾಜ್ಯ ಸರ್ಕಾರ) ಒಂದು ತೀರ್ಪು ನೀಡಿ, ಏಸಿಬಿಯನ್ನು ರದ್ದುಗೊಳಿಸಿ, ಲೋಕಾಯುಕ್ತದ ಅಧಿಕಾರಗಳನ್ನು ಮರುಸ್ಥಾಪಿಸಿತು.

ಲೋಕಾಯುಕ್ತ ತನಿಖೆಯ ವ್ಯಾಪ್ತಿ ಎಷ್ಟು?

ಹತ್ತು ವರ್ಷಗಳ ಅವಧಿಗೆ ಹೈಕೋರ್ಟ್‌ನ ನ್ಯಾಯಾಧೀಶ ಹುದ್ದೆಯನ್ನು ಅಲಂಕರಿಸಿದ ಯಾವುದೇ ವ್ಯಕ್ತಿಯನ್ನು ಲೋಕಾಯುಕ್ತ ಮತ್ತು ಐದು ವರ್ಷ ಉಪ ಲೋಕಾಯುಕ್ತನನ್ನಾಗಿ ನೇಮಿಸಬಹುದು. ಲೋಕಾಯುಕ್ತವು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸ್ವತಂತ್ರ ಸಂಸ್ಥೆ. ಕರ್ನಾಟಕ ರಾಜ್ಯಪಾಲರು, ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮತ್ತು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರೊಂದಿಗೆ ಸಮಾಲೋಚಿಸಿ ನೇಮಕ ಮಾಡಲಾಗುತ್ತದೆ. ಇವರು ಐದು ವರ್ಷಗಳ ಅಧಿಕಾರ ಹೊಂದಿರುತ್ತಾರೆ. ಇವರ ಅವಧಿಯನ್ನು ಅಗತ್ಯ ಬಿದ್ದರೆ ವಿಸ್ತರಿಸಬಹುದು.

ಇದನ್ನೂ ಓದಿ: Lokayukta raid : ಕೊನೆಗೂ ಲೋಕಾಯುಕ್ತ ಮುಂದೆ ಹಾಜರಾದ ಶಾಸಕ ಮಾಡಾಳ್‌; ಮೂರು ತಾಸು ವಿಚಾರಣೆ, ಪ್ರಶ್ನೆಗಳ ಸುರಿಮಳೆ

CM agrees to 17 salary increase Formation of committee to decide cancellation of NPS

ಲೋಕಾಯುಕ್ತವು ಮುಖ್ಯಮಂತ್ರಿ, ಯಾವುದೇ ಸಚಿವ ಅಥವಾ ಕಾರ್ಯದರ್ಶಿ, ರಾಜ್ಯ ಶಾಸಕಾಂಗದ ಸದಸ್ಯ ಅಥವಾ ಯಾವುದೇ ಇತರ ಸಾರ್ವಜನಿಕ ಸೇವಕ (ಅಧಿಕಾರಿ) ಕೈಗೊಂಡ ಕ್ರಮಗಳ ಕುಂದುಕೊರತೆಯ ಬಗ್ಗೆ ಅಥವಾ ಅವರ ಮೇಲೆ ಬಂದ ಭ್ರಷ್ಟಾಚಾರದ ಆರೋಪವನ್ನು ತನಿಖೆ ಮಾಡಬಲ್ಲ ಅಧಿಕಾರವನ್ನು ಹೊಂದಿದೆ. 1988ರಲ್ಲಿ ಮಾಡಲಾದ ತಿದ್ದುಪಡಿಯ ಪ್ರಕಾರ, ಆರೋಪಿ ಮಾಡಿದ ಕೃತ್ಯದ ದೂರು ಆರು ತಿಂಗಳ ನಂತರ ಬಂದರೆ, ಅದನ್ನು ಸ್ವೀಕರಿಸಬೇಕಿಲ್ಲ. ಭ್ರಷ್ಟಾಚಾರದ ಕೇಸ್‌ಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬಹುದು. ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡುವ ಅಧಿಕಾರ ಹೊಂದಿದ್ದಾರೆ. ಭ್ರಷ್ಟಾಚಾರ ಅಥವಾ ದುರಾಡಳಿತದ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಶಿಫಾರಸು ಮಾಡಬಹುದು. ಅಗತ್ಯವಿದ್ದರೆ ಪ್ರಕರಣಗಳನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಉಲ್ಲೇಖಿಸುವ ಅಧಿಕಾರವನ್ನು ಹೊಂದಿದೆ. ಇದು ನೇರವಾಗಿ ರಾಜ್ಯ ಶಾಸಕಾಂಗಕ್ಕೆ ವರದಿ ಮಾಡಿಕೊಳ್ಳುತ್ತದೆ. ಯಾವುದೇ ಕಾರ್ಯಕಾರಿ ಪ್ರಾಧಿಕಾರದ ನಿಯಂತ್ರಣಕ್ಕೆ ಒಳಪಡುವುದಿಲ್ಲ. ಆದರೆ ಇವರು ಶಿಕ್ಷೆ ಘೋಷಿಸುವ ಅಧಿಕಾರವನ್ನು ಹೊಂದಿಲ್ಲ.

ಈ ಹಿಂದೆ ಹಲವು ಹೈ ಪ್ರೊಫೈಲ್‌ ಭ್ರಷ್ಟಾಚಾರ ಪ್ರಕರಣಗಳನ್ನು ಲೋಕಾಯುಕ್ತ ಕೈಗೆತ್ತಿಕೊಂಡು ತನಿಖೆ ನಡೆಸಿ ನ್ಯಾಯ ಒದಗಿಸಿದೆ. ಅಕ್ರಮ ಗಣಿಗಾರಿಕೆ ಕುರಿತ ತನಿಕೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅಧಿಕಾರ ಕಳೆದುಕೊಂಡದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಮಾಜಿ ಸಚಿವರು ಭಾಗಿಯಾಗಿದ್ದ ಭೂ ಹಗರಣ, ವಸತಿ ಹಗರಣ, ಅಕ್ರಮ ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಅಧಿಕಾರಿಗಳ ಬಂಧನವಾಗಿದೆ. 2015ರಲ್ಲಿ ಅಂದಿನ ಲೋಕಾಯುಕ್ತರ ವಿರುದ್ಧವೇ ಅಧಿಕಾರಿಗಳಿಗೆ ಅನುಕೂಲಕರ ಹುದ್ದೆ ನೀಡಲು ಲಂಚ ಪಡೆದ ಆರೋಪ ಬಂದು, ಅವರ ರಾಜೀನಾಮೆಗೂ ಮೂಲವಾಯಿತು.

ಇದನ್ನೂ ಓದಿ: Lokayukta raid : ಮಾಡಾಳು ವಿರೂಪಾಕ್ಷಪ್ಪ ಮಧ್ಯಂತರ ಜಾಮೀನು ರದ್ದು ಕೋರಿ ಸು.ಕೋರ್ಟ್‌ಗೆ ಲೋಕಾಯುಕ್ತ ಮೊರೆ

Continue Reading
Advertisement
Uttara Kannada News
ಉತ್ತರ ಕನ್ನಡ1 hour ago

Uttara Kannada News: ವಾಕ್ಪ್ರತಿಯೋಗಿತಾ ಸ್ಪರ್ಧೆ; ಉಮ್ಮಚಗಿಯ ಶ್ರೀ ಮಾತಾ ಸಂಸ್ಕೃತ ಮಹಾಪಾಠ ಶಾಲೆ ಉತ್ತಮ ಸಾಧನೆ

Modi in Karnataka
ಕರ್ನಾಟಕ1 hour ago

Modi in Karnataka: ಮೋದಿ ರೋಡ್ ಶೋ ವೇಳೆ ಭದ್ರತಾ ವೈಫಲ್ಯ; ನಿಷೇಧಿತ ಪ್ರದೇಶಕ್ಕೆ ನುಗ್ಗಿದ ಇಬ್ಬರು ವಶಕ್ಕೆ

rahul-gandhi-will-act-like-a-martyr-with-an-eye-on-karnataka-elections-bjp
ದೇಶ2 hours ago

ಕರ್ನಾಟಕ ಚುನಾವಣೆ ಮೇಲೆ ಕಣ್ಣಿಟ್ಟು ಹುತಾತ್ಮನಂತೆ ನಟಿಸ್ತಾ ಇರೋ ರಾಹುಲ್ ಗಾಂಧಿ: ಬಿಜೆಪಿ

Your rules don't apply to the Gandhi family; Spark of Congress MP!
ದೇಶ2 hours ago

Rahul Gandhi Disqualified : ನಿಮ್ಮ ರೂಲ್ಸ್​ ಗಾಂಧಿ ಫ್ಯಾಮಿಲಿಗೆ ಅನ್ವಯವಾಗಲ್ಲ; ಕಾಂಗ್ರೆಸ್​ ಸಂಸದನ ಕಿಡಿ!

Zaheer Khan: Team India is still sailing in an old boat; Why did Zaheer Khan say this?
ಕ್ರಿಕೆಟ್2 hours ago

Zaheer Khan: ಟೀಮ್​ ಇಂಡಿಯಾ ಇನ್ನೂ ಹಳೆಯ ಬೋಟ್​ನಲ್ಲೇ ಪ್ರಯಾಣಿಸುತ್ತಿದೆ; ಜಹೀರ್​ ಖಾನ್​ ಹೀಗೆ ಹೇಳಿದ್ದು ಏಕೆ?

Amit Shah to visit karnataka on march 26 and Participate in various programmes
ಕರ್ನಾಟಕ3 hours ago

Amit Shah Visit: ಭಾನುವಾರ ಅಮಿತ್‌ ಶಾ ರಾಜ್ಯ ಪ್ರವಾಸ; ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

heavy rainfall likely to occur at isolated places in the karnataka on March 26 and 27
ಕರ್ನಾಟಕ3 hours ago

Karnataka Rain: ಮಾ.26, 27 ರಂದು ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ

Tricolor flag flown in America; Patriots strike back at Khalistanis
ದೇಶ3 hours ago

ವಿಸ್ತಾರ ಸಂಪಾದಕೀಯ: ಅಮೆರಿಕದಲ್ಲಿ ಹಾರಾಡಿದ ತ್ರಿವರ್ಣ ಧ್ವಜ; ಖಲಿಸ್ತಾನಿಗಳಿಗೆ ದೇಶಪ್ರೇಮಿಗಳ ತಿರುಗೇಟು

WPL 2023: Nita Ambani dances with team players in Khasi in finals; The video is viral
ಕ್ರಿಕೆಟ್3 hours ago

WPL 2023: ಫೈನಲ್​ಗೆ ಲಗ್ಗೆಯಿಟ್ಟ ಖಷಿಯಲ್ಲಿ ತಂಡದ ಆಟಗಾರ್ತಿಯರೊಂದಿಗೆ ಕುಣಿದು ಕುಪ್ಪಳಿಸಿದ ನೀತಾ ಅಂಬಾನಿ; ವಿಡಿಯೊ ವೈರಲ್

Final race of Moto GP today in Portugal
ಕ್ರೀಡೆ3 hours ago

Moto GP : ಫೋರ್ಚುಗಲ್​ನಲ್ಲಿ ಭಾನುವಾರ ಮೋಟೊ ಜಿಪಿ ಮೊದಲ ಸುತ್ತಿನ ಫೈನಲ್​ ರೇಸ್​

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ1 month ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ1 month ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Paid leave for govt employees involved in the strike
ನೌಕರರ ಕಾರ್ನರ್3 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ5 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ2 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

Post Office Recruitment 2023
ಉದ್ಯೋಗ2 months ago

India Post GDS Recruitment 2023 : ಅಂಚೆ ಇಲಾಖೆಯಲ್ಲಿ 40,889 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ

ಕರ್ನಾಟಕ4 days ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ5 days ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ5 days ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ6 days ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ6 days ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ6 days ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

Auto services to be stopped from Sunday midnight, Drivers protest against whiteboard bike taxi
ಕರ್ನಾಟಕ6 days ago

Bengaluru Auto Bandh: ಬೈಕ್‌ ಟ್ಯಾಕ್ಸಿಗೆ ವಿರೋಧ; ಭಾನುವಾರ ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ

Organizing our Power Run Marathon in the name of puneeth rajkumar
ಕರ್ನಾಟಕ6 days ago

Puneeth Rajkumar: ಅಪ್ಪು ಹೆಸರಲ್ಲಿ ನಮ್ಮ ಪವರ್ ರನ್ ಮ್ಯಾರಥಾನ್; ಅಶ್ವಿನಿ ಪುನೀತ್‌ ಚಾಲನೆ

Due to heavy rains, motorists struggle on Bengaluru-Mysuru dashapatha
ಕರ್ನಾಟಕ1 week ago

Karnataka Rain: ಸರಾಗವಾಗಿ ಹರಿಯದ ಮಳೆ ನೀರು, ಕೈಕೊಟ್ಟ ವಾಹನ; ಬೆಂಗಳೂರು-ಮೈಸೂರು ದಶಪಥದಲ್ಲಿ ದಿಕ್ಕೆಟ್ಟ ಪ್ರಯಾಣಿಕರು!

ಕರ್ನಾಟಕ1 week ago

Karnataka Election 2023: ಧ್ರುವನಾರಾಯಣ ಪುತ್ರ ದರ್ಶನ್‌ಗಾಗಿ ನಂಜನಗೂಡು ಟಿಕೆಟ್ ತ್ಯಾಗ ಮಾಡಿದ ಎಚ್.ಸಿ. ಮಹದೇವಪ್ಪ

ಟ್ರೆಂಡಿಂಗ್‌

error: Content is protected !!