ಕರ್ನಾಟಕ ಎಲೆಕ್ಷನ್
V. Somanna: ವಿಜಯೇಂದ್ರ ವಯಸ್ಸೆಷ್ಟು? ನನ್ನ ವಯಸ್ಸೆಷ್ಟು?: ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಗರಂ ಆದ ಸಚಿವ ವಿ. ಸೋಮಣ್ಣ
ತಾವು ಯಾವುದೇ ಕಾರಣಕ್ಕೆ ಬಿಜೆಪಿ ಬಿಡುವುದಿಲ್ಲ ಎಂದು ಸಚಿವ ಸೋಮಣ್ಣ (V. Somanna) ಹೇಳಿದರೆ, ಅತ್ತ ಬಿ.ವೈ. ವಿಜಯೇಂದ್ರ ವಿರುದ್ಧ ಸೋಮಣ್ಣ ಪುತ್ರ ಅರುಣ್ ಸೋಮಣ್ಣ ವಾಗ್ದಾಳಿ ನಡೆಸಿದ್ದು ಕುತೂಹಲ ಮೂಡಿಸಿತ್ತು.
ನವದೆಹಲಿ: ಪಕ್ಷ ಬಿಡುವ ಕುರಿತು ಚರ್ಚೆಗೆ ಮುಕ್ತಾಯ ಹಾಡಲು ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದ ವಸತಿ ಸಚಿವ ವಿ. ಸೋಮಣ್ಣ (V. Somanna) ಇದ್ದಕ್ಕಿದ್ದಂತೆ ನವದೆಹಲಿಗೆ ತೆರಳಿದ್ದಾರೆ. ಇಲ್ಲಿ ವಿವಿಧ ಮುಖಂಡರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಕೇಳಲಾದ ಪ್ರಶ್ನೆಗೆ ಮಾಧ್ಯಮಗಳ ವಿರುದ್ಧ ಸಚಿವ ಸೋಮಣ್ಣ ಸಿಡಿಮಿಡಿಗೊಂಡಿದ್ದಾರೆ.
ಬಿಜೆಪಿ ತೊರೆಯುವ ಕುರಿತು ಮಾದ್ಯಮಗಳ ಪ್ರಶ್ನೆಗೆ ಗರಂ ಆದ ವಿ. ಸೋಮಣ್ಣ, ನಾನು ಬಿಜೆಪಿ ಬಿಡ್ತಿನಿ ಅಂತ ಯಾರ್ರಿ ಹೇಳಿದ್ದು? ನೀವೆ ಮಾದ್ಯಮದವರೆ ಸೃಷ್ಟಿ ಮಾಡ್ತಿರಾ, ನೀವೆ ಹೇಳ್ತಿರ. ನಾನು ಏನು ಹೇಳಬೇಕು ಎಲ್ಲಾ ನಿನ್ನೆಯೆ ಹೇಳಿದ್ದೇನೆ. ನಾನು ಇವತ್ತು ದೆಹಲಿಗೆ ಬಂದಿರೋದು ಇಲಾಖೆಯ ಕೆಲಸದ ಹಿನ್ನಲೆ. ಪ್ರಲ್ಹಾದ್ ಜೋಶಿಯವರನ್ನು ಭೇಟಿ ಮಾಡಿ ಮಾತನಾಡಲು ಬಂದಿದ್ದೇನೆ ಎಂದರು.
ವಿಜಯೇಂದ್ರ ಬಗೆಗಿನ ಪ್ರಶ್ನೆಗೂ ಸಿಡಿಮಿಡಿಗೊಂಡ ಸೋಮಣ್ಣ, ನನ್ನ ವಯಸ್ಸಿಗೆ ತಕ್ಕಂತೆ ಪ್ರಶ್ನೆ ಕೇಳ್ರಿ ಅಂತ ಗರಂ ಆದರು. ವಿಜಯೇಂದ್ರ ವಯಸ್ಸು ಎಷ್ಟು ನಂದು ಎಷ್ಟು? ನಂಗೆ ಅವರಿಗೆ ಯಾಕೆ ಹೋಲಿಕೆ ಮಾಡ್ತೀರಿ? ಅವರಿಗೆ ನನ್ನ ಬಗ್ಗೆ ಏನು ಅನಿಸಿಕೆ ಇದೆಯೋ ಗೊತ್ತಿಲ್ಲ. ಅವರು ನಮ್ಮ ಮಾಜಿ ಸಿಎಂ ಯಡಿಯೂರಪ್ಪನವರ ಮಗ. ನನ್ನ ಮಗ ಮತ್ತು ವಿಜಯೇಂದ್ರ ಮಧ್ಯೆ ಏನಾಗಿದೆಯೋ ಗೊತ್ತಿಲ್ಲ. ಏನು ಗೊಂದಲ ಇದೆಯೋ ಅದನ್ನ ಅವರ ಬಳಿ ಕೇಳಿ. ನನ್ನ ಬಳಿ ಏಕೆ ಕೇಳುತ್ತೀರಿ?
ಏನೇ ಸಮಸ್ಯೆ ಆಗಿದ್ರೆ ಕ್ರಮ ಕೈಗೊಳ್ಳಿ ಅಂತ ಈಗಾಗಲೇ ಹೇಳಿದ್ದೀನಿ. ಯಡಿಯೂರಪ್ಪ ಮತ್ತು ನಮ್ಮ ಕುಟುಂಬದ ಮಧ್ಯೆ ಬಿಕ್ಕಟ್ಟು ವಿಚಾರರನ್ನುವುದೆಲ್ಲ ನಂಗೆ ಗೊತ್ತಿಲ್ಲ. 45 ವರ್ಷದಿಂದ ಜನಸೇವೆ ಮಾಡಿದ್ದೇನೆ. ನನಗೆ ವ್ಯಾಮೋಹ ಇಲ್ಲ. ಮಾಧ್ಯಮದವರು ಅಭಿವೃದ್ಧಿ ಬಗ್ಗೆ ಗಮನ ಕೊಡಿ. ದಿನಾ ಸೋಮಣ್ಣ, ಯಡಿಯೂರಪ್ಪ ಅಂತ ಸಮಯ ಹಾಳು ಮಾಡಬೇಡಿ. ನನ್ನಿಂದ ಬಿಜೆಪಿಗೆ ಅಪಚಾರ ಆಗಲ್ಲ. ಸಿದ್ದಗಂಗಾ ಮಠಕ್ಕೂ ನಂಗೂ ಯಾವುದೇ ಮನಸ್ತಾಪ ಇಲ್ಲ. ಅಲ್ಲಿನ ಕಾರ್ಯಕ್ರಮಕ್ಕೆ ಹೋಗದೆ ಇದ್ದದ್ದು ನನ್ನ ವೈಯಕ್ತಿಕ ತೀರ್ಮಾನ. ನನಗೆ ಮಠ ಮಾನ್ಯಗಳ ಬಗ್ಗೆ ಅಪಾರ ಗೌರವ ಇದೆ. ಜೀವನವನ್ನೇ ಅದರ ಜತೆ ಬೆರೆತು ಹೋಗಿದೆ.
ವೀರಶೈವ ಧರ್ಮಕ್ಕೆ ಶತಮಾನಗಳ ಇತಿಹಾಸವಿದೆ. ಇನ್ನೊಬ್ಬರ ಬಗ್ಗೆ ದ್ವೇಷ ಮಾಡಬೇಡಿ ಎನ್ನವುದು ನಾನು ಕಲಿತುಕೊಂಡ ಧರ್ಮ. ಯಡಿಯೂರಪ್ಪನವರ ಬಗ್ಗೆ ನನಗೆ ಸಿಟ್ಟಿಲ್ಲ. ಅವರು ಕರೆದರೆ ಹೋಗುವೆ, ಇವತ್ತಿನವರೆಗೆ ಅವರು ಕರೆದಿಲ್ಲ. ನನ್ನದು ಯಡಿಯೂರಪ್ಪ ನವರದ್ದು ತಂದೆ ಮಗ ಸಂಬಂಧ. ನಾನು ಸತ್ಯ ಮಾತಡ್ತೇನೆ. ಒಮ್ಮೊಮ್ಮೆ ಅದು ಕಹಿ ಆಗುತ್ತೆ, ಏನು ಮಾಡಲಿ ಹೇಳಿ? ಯಡಿಯೂರಪ್ಪನವರ ಬಗ್ಗೆ ದ್ವೇಷ ಮಾಡಿ ನಂಗೆ ಏನು ಲಾಭ? ಅವರ ಬಗ್ಗೆ ವಿನಾಕಾರಣ ಮಾತಾಡೋದು ಅಪ್ರಸ್ತುತ. ದಯವಿಟ್ಟು ನನ್ನ ಬಿಟ್ಟು ಬಿಡ್ರಪ್ಪ ಎಂದರು.
ಹೈಕಮಾಂಡ್ ನಾಯಕರ ಭೇಟಿ ಮಾಡ್ತಿರಾ ಎಂಬ ಪ್ರಶ್ನೆಗೆ, ಏನೂ ಉತ್ತರ ನೀಡದೆ ಮೌನವಾಗಿ ತೆರಳಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿ ಮಾಡಲಿದ್ದು, ಸಂಜೆ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ ಎನ್ನಲಾಗಿದೆ.
ಕರ್ನಾಟಕ
Karnataka Election: ಜೆಡಿಎಸ್, ಬಿಜೆಪಿಯ ತಲಾ ಒಂದು ವಿಕೆಟ್ ಪತನ: A.T. ರಾಮಸ್ವಾಮಿ, N.Y. ಗೋಪಾಲಕೃಷ್ಣ ರಾಜೀನಾಮೆ
ಅನೇಕ ವರ್ಷ ಕಾಂಗ್ರೆಸ್ನಲ್ಲಿದ್ದ ಗೋಪಾಲಕೃಷ್ಣ ಮತ್ತೆ ಅದೇ ಪಕ್ಷಕ್ಕೆ ತೆರಳಬಹುದು ಎನ್ನಲಾಗಿದ್ದು, ಎ.ಟಿ. ರಾಮಸ್ವಾಮಿ ಬಿಜೆಪಿ ಸೇರುವ ಸಾಧ್ಯತೆಯಿದೆ.
ಬೆಂಗಳೂರು: ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಇಬ್ಬರು ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದು, ಒಬ್ಬರು ಬಿಜೆಪಿಗೆ, ಮತ್ತೊಬ್ಬರು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆಯಿದೆ.
ಅರಕಲಗೂಡು ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎ.ಟಿ. ರಾಮಸ್ವಾಮಿ ಬೆಂಗಳೂರಿನಲ್ಲಿ ವಿಧಾನಸಭೆ ಕಾರ್ಯದರ್ಶಿ ಮೂಲಕ ಸ್ಪೀಕರ್ಗೆ ರಾಜೀನಾಮೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎ.ಟಿ. ರಾಮಸ್ವಾಮಿ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಸಂತೋಷದಿಂದ ರಾಜೀನಾಮೆ ನೀಡಿದ್ದೇನೆ. ಕಾರ್ಯದರ್ಶಿ ಗೆ ರಾಜೀನಾಮೆ ನೀಡಿದ್ದೇನೆ, ಸ್ಪೀಕರ್ ಬಂದ ಬಳಿಕ ಅಂಗೀಕಾರ ಮಾಡುವಂತೆ ಮನವಿ ಮಾಡುತ್ತೇನೆ ಎಂದರು.
ನಾನು ಇಂದೇ ಶಾಸಕರ ಭವನದ ಕೊಠಡಿ ಬಿಟ್ಟು ಕೊಡುತ್ತಿದ್ದೇನೆ. ಜೆಡಿಎಸ್ ನಾಯಕರು ನನಗೆ ಅವಕಾಶ ಮಾಡಿಕೊಟ್ಟಿದಕ್ಕೆ ಧನ್ಯವಾದಗಳನ್ನ ಸಲ್ಲಿಸುತ್ತೇನೆ. ನಾನು ಅಧಿಕಾರ ಆಸೆ ಪಡೆದವನಲ್ಲ. ನಾನು ವಿರೋಧ ಪಕ್ಷದವರ ಜತೆ ಸಹ ಉತ್ತಮವಾಗಿದ್ದೇನೆ. ನಾನು ರಾಜಕೀಯ ವಿರೋಧಿಗಳಿಗೂ ಒಳ್ಳೆಯದಾಗ್ಲಿ ಎಂದು ಭಾವಿಸುತ್ತೇನೆ. ಜನ ಸೇವೆಗಾಗಿ ಅವಕಾಶ ಸಿಕ್ಕಿತ್ತು.
ಮುಂದೆ ಅವಕಾಶ ಸಿಕ್ರೆ ಜನರ ಸೇವೆಗೆ ಮುಡುಪಾಗಿ ಇಡುತ್ತಿದ್ದೇನೆ. ಕರ್ನಾಟಕದ ರಾಜಕಾರಣ ಕೆಟ್ಟು ಹೋಗಿದೆ. ಒಲೈಕೆ ರಾಜಕಾರಣ ಜಾಸ್ತಿ ಆಗಿದೆ. ವಿಧಾನ ಸಭೆ ಮತ್ತು ಪರಿಷತ್ ಹಣದ ಸಭೆ ಆಗದೇ ಜನರ ಸಭೆ ಆಗಲಿ. ಜನರ ಹಿತಾಸಕ್ತಿಗೆ ಕೆಲಸ ಮಾಡಿಕೊಂಡು ಬಂದಿದ್ದೇನೆ. ನಾನು ಜೆಡಿಎಸ್ ಬಿಡಲಿಲ್ಲ. ಎಂದೂ ಸಹ ಸಹ ಜೆಡಿಎಸ್ ಬಿಡಲಿಲ್ಲ. ಎಲ್ಲ ಪಕ್ಷಗಳಲ್ಲೂ ಲೋಪದೋಷಗಳಿವೆ. ಮನಿ ಪವರ್ ಮುಂದೆ ಬಲಿಪಶು ಆದೆ. ಅಕ್ರಮಗಳನ್ನ ಎತ್ತಿ ಹಿಡಿದಿದ್ದೆ ಶಾಪ ಎನ್ನುವುದಾದರೆ ಅದನ್ನು ಚಾಲೆಂಜ್ ಆಗಿ ಸ್ವೀಕರಿಸುತ್ತೇನೆ ಎಂದರು.
ಯಾವ ಪಕ್ಷ ಸೇರುತ್ತೇನೆ ಎನ್ನುವ ಕುರಿತು ರಾಮಸ್ವಾಮಿ ಸ್ಪಷ್ಟವಾಗಿ ತಿಳಿಸಿಲ್ಲ. ಅವರು ಬಿಜೆಪಿ ಅಭ್ಯರ್ಥಿಯಾಗಿ ಅರಕಲಗೂಡಿನಿಂದ ಸ್ಪರ್ಧೆ ಮಾಡಬಹುದು ಎನ್ನಲಾಗುತ್ತಿದೆ.
ಗೋಪಾಲಕೃಷ್ಣ ರಾಜೀನಾಮೆ
ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಶಾಸಕ ಎನ್.ವೈ. ಗೋಪಾಲಕೃಷ್ಣ ರಾಜೀನಾಮೆ ನೀಡಿದ್ದಾರೆ. ಶಿರಸಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನೆಗೆ ತೆರಳಿ ರಾಜೀನಾಮೆ ನೀಡಿದ್ದಾರೆ. ವಯಸ್ಸಿನ ಕಾರಣಕ್ಕೆ ರಾಜಕೀಯ ನಿವೃತ್ತಿ ಪಡೆಯಲು ರಾಜೀನಾಮೆ ನೀಡುತ್ತೇನೆ ಎಂದು ಗೋಪಾಲಕೃಷ್ಣ ಹೇಳಿದ್ದಾರೆ.
ಆದರೆ ಅವರು ಮೊಳಕಾಲ್ಮೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸಾಧ್ಯತೆಯಿದೆ. ಮೊಳಕಾಲ್ಮೂರು ಕ್ಷೇತ್ರದ ಟಿಕೆಟ್ ಕನ್ಪರ್ಮ್ ಮಾಡಿಕೊಂಡೇ ರಾಜೀನಾಮೆ ನೀಡಿದ್ದಾರೆ. ಹಿಂದಿನ ಎಲೆಕ್ಷನ್ ನಲ್ಲಿ ಟಿಕೆಟ್ ನಿಂದ ವಂಚಿತ ಆಗಿದ್ದ ಗೋಪಾಲಕೃಷ್ಣ, ಜನಾರ್ದನ ರೆಡ್ಡಿ, ಶ್ರೀರಾಮುಲು ಪ್ರಭಾವದಿಂದ ಕೂಡ್ಲಿಗಿಯಿಂದ ಸ್ಪರ್ಧಿಸಿದ್ದರು. ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: Karnataka Elections : ಕೂಡ್ಲಿಗಿ ಶಾಸಕ ಗೋಪಾಲಕೃಷ್ಣ ನಾಳೆ ಬಿಜೆಪಿಗೆ ರಾಜೀನಾಮೆ, ಕಾಂಗ್ರೆಸ್ಗೆ ಸೇರ್ಪಡೆ
ಕರ್ನಾಟಕ
Hiriyur News: ಕಾಂಗ್ರೆಸ್ ಸೇರಿದ ನಗರಸಭೆ ಮಾಜಿ ಅಧ್ಯಕ್ಷ ಟಿ. ಚಂದ್ರಶೇಖರ್; ಬಿಜೆಪಿಗೆ ಆಘಾತ
Hiriyur News: ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿದ ನಗರ ಸಭೆಯ ಮಾಜಿ ಅಧ್ಯಕ್ಷ ಟಿ. ಚಂದ್ರಶೇಖರ್ ಅವರನ್ನು ಮಾಜಿ ಸಚಿವ ಡಿ. ಸುಧಾಕರ್ ಅವರು ಪಕ್ಷಕ್ಕೆ ಬರ ಮಾಡಿಕೊಂಡರು.
ಹಿರಿಯೂರು: ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ, ನಗರಸಭೆಯ (city council) ಮಾಜಿ ಅಧ್ಯಕ್ಷ ಹಾಗೂ ಭೋವಿ ಸಮಾಜದ ನಾಯಕ ಟಿ. ಚಂದ್ರಶೇಖರ್ ಬಿಜೆಪಿಗೆ ಸದ್ದಿಲ್ಲದೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿದ್ದಾರೆ.
ಟಿ. ಚಂದ್ರಶೇಖರ್, ಎಸ್ಟಿ ಮೋರ್ಚಾ ಅಧ್ಯಕ್ಷ ಮಂಜುನಾಥ್, ತಿಮ್ಮಭೋವಿ, ರಂಗಸ್ವಾಮಿ ಸೇರಿದಂತೆ ಮತ್ತಿತರರನ್ನು ಕಾಂಗ್ರೆಸ್ ಪಕ್ಷದ ಬಾವುಟ ನೀಡಿ ಮಾಜಿ ಸಚಿವ ಡಿ. ಸುಧಾಕರ್ ಅವರು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ.
ಕಾಂಗ್ರೆಸ್ನಲ್ಲಿದ್ದ ಟಿ. ಚಂದ್ರಶೇಖರ್ ಅವರು, ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದರು. ನಂತರ ನಗರಸಭಾ ಅಧ್ಯಕ್ಷರಾಗಿದ್ದರು. ಬಳಿಕ ನಡೆದ ನಗರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಆದರೆ ಶಾಸಕಿ ಕೆ. ಪೂರ್ಣಿಮಾ ಅವರ ಪತಿ ಡಿ.ಟಿ. ಶ್ರೀನಿವಾಸ್ ಅವರ ಜತೆಗಿದ್ದ ಚಂದ್ರಶೇಖರ್ ಅವರು ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಂತರ ಕಾಯ್ದುಕೊಂಡಿದ್ದರು. ಇದೀಗ ಗುರುವಾರ (ಮಾ.30) ರಾತ್ರಿ ಮಾಜಿ ಸಚಿವ ಡಿ. ಸುಧಾಕರ್ ಅವರು ತಮ್ಮ ಮನೆಯಲ್ಲಿಯೇ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.
ಚಂದ್ರಶೇಖರ್ ಅವರು ಬಿಜೆಪಿ ತೊರೆದಿರುವುದರಿಂದ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಹಿನ್ನಡೆ ಉಂಟಾಗಲಿದೆ ಎಂಬ ವಿಶ್ಲೇಷಣೆ ಸಹ ಈ ವೇಳೆ ನಡೆಯುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭೋವಿ ಸಮಾಜದ ಮತಗಳು ಹೆಚ್ಚು ಬಂದಿದ್ದವು. ಆದರೆ, ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಸಹಕಾರಿಯಾಗಲಿದೆಯೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಪಕ್ಷ ಸೇರ್ಪಡೆ ಕುರಿತು ಮಾತನಾಡಿದ ಮಾಜಿ ಸಚಿವ ಡಿ. ಸುಧಾಕರ್, ಚಂದ್ರಶೇಖರ್ ಅವರು ಕಾಂಗ್ರೆಸ್ನ ತತ್ತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ವಾಪಸ್ ಬಂದಿದ್ದರಿಂದ ನಮಗೆ ಆನೆ ಬಲ ಬಂದಂತಾಗಿದೆ. ಕ್ಷೇತ್ರದಲ್ಲಿ ಭ್ರಷ್ಟಾಚಾರ, ಜನ ವಿರೋಧಿ ಆಡಳಿತ ಕೊನೆಗೊಂಡಿದೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ
BJP Karnataka: ರಾಜ್ಯಾದ್ಯಂತ ಬಿಜೆಪಿ ಆಂತರಿಕ ಚುನಾವಣೆ: ತಲಾ ಮೂವರು ಅಭ್ಯರ್ಥಿಗಳ ಹೆಸರು ಸೂಚಿಸಿದ ಪದಾಧಿಕಾರಿಗಳು
ಕಾರ್ಯಕರ್ತರ ಒಲವು ಯಾವ ಆಕಾಂಕ್ಷಿಗಳ ಪರವಾಗಿದೆ ಎನ್ನುವುದನ್ನು ಅರಿಯುವ ಸಲುವಾಗಿ ಬಿಜೆಪಿ ಅಭಿಪ್ರಾಯ ಸಂಗ್ರಹ ನಡೆಸುತ್ತಿದೆ.
ಬೆಂಗಳೂರು: ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಚುರುಕುಗೊಳಿಸಿರುವ ಬಿಜೆಪಿ ರಾಜ್ಯಾದ್ಯಂತ ಕಾರ್ಯಕರ್ತರಿಂದ ಆಂತರಿಕ ಚುನಾವಣೆ ನಡೆಸುತ್ತಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಂಗಳೂರು ಕೇಂದ್ರ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಮತದಾನ ಮೂಲಕ ಅಭಿಪ್ರಾಯ ಸಂಗ್ರಹ ನಡೆಯಿತು. ರಾಜಾಜಿನಗರ, ಗಾಂಧಿ ನಗರ, ಚಾಮರಾಜಪೇಟೆ, ಶಿವಾಜಿನಗರ, ಶಾಂತಿನಗರ, ಸರ್ವಜ್ಞ ನಗರ, ಸಿ. ವಿ. ರಾಮನ್ ನಗರ, ಮಹದೇವಪುರ ಕ್ಷೇತ್ರಗಳ ಕುರಿತು ಪದಾಧಿಕಾರಿಗಳು ಅಭಿಪ್ರಾಯ ನೀಡುತ್ತಿದ್ದಾರೆ.
ಬೆಳಗಾವಿ ಧರ್ಮನಾಥ ಭವನದಲ್ಲಿ ಬೆಳಗಾವಿ ಬಿಜೆಪಿ ಮಹಾನಗರ ಹಾಗೂ ಗ್ರಾಮಾಂತರ ಜಿಲ್ಲಾ ಚುನಾವಣಾ ಸಿದ್ದತಾ ಸಭೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ನಡೆಯಿತು. ಬಳ್ಳಾರಿಯಲ್ಲಿ ಬಿಜೆಪಿ ರಾಜಾಧ್ಯಕ್ಷ ನಳೀನಕುಮಾರ್ ಕಟೀಲ್ ನೇತೃತ್ವದಲ್ಲಿ ಚುನಾವಣೆ ನಡೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕಟೀಲ್, ಇಡೀ ರಾಜ್ಯದಲ್ಲಿ ಜಿಲ್ಲೆಗಳಿಗೆ ತಂಡಗಳನ್ನ ಕಳುಹಿಸಿ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದೇವೆ. ಅಭಿಪ್ರಾಯ ಸಂಗ್ರಹದ ನಂತರ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಒಂದು ವಾರದೊಳಗೆ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲಿದೆ ಎಂದರು.
ಇದನ್ನೂ ಓದಿ: ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
ಹಾವೇರಿಯಲ್ಲಿ ಸಚಿವ ಶ್ರೀರಾಮುಲು ಅಧ್ಯಕ್ಷತೆಯಲ್ಲಿ ಚುನಾವಣೆ ನಡೆದಿದೆ. ರಾಜ್ಯದ ಎಲ್ಲ 36 ಸಂಘಟನಾ ಜಿಲ್ಲೆಗಳಲ್ಲೂ ಚುನಾವಣೆ ನಡೆದಿದೆ. ಇದೇ ಮೊದಲ ಬಾರಿಗೆ ಬಿಜೆಪಿ ಇಂತಹ ಪ್ರಕ್ರಿಯೆ ನಡೆಸುತ್ತಿದೆ. ಜಿಲ್ಲಾ ಕೇಂದ್ರ ದಲ್ಲಿ ಪ್ರಕ್ರಿಯೆ ನಡೆದರೂ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಪ್ರತ್ಯೇಕ ಅಭಿಪ್ರಾಯ ಸಂಗ್ರಹ ನಡೆದಿದೆ.
ಪದಾದಿಕಾರಿಗಳು ಮೂವರು ಅಭ್ಯರ್ಥಿಗಳ ಹೆಸರನ್ನ ಬರೆದು ಮತಪೆಟ್ಟಿಗೆಯಲ್ಲಿ ಹಾಕಿದ್ದಾರೆ. ಈ ಕಾರ್ಯನಿರ್ವಹಣೆ ಮೇಲ್ವಿಚಾರಣೆಗೆ ವೀಕ್ಷಕರ ನೇಮಕ ಮಾಡಲಾಗಿದೆ. ಅಭಿಪ್ರಾಯ ಸಂಗ್ರಹ ಮುಗಿದ ಬಳಿಕ, ಅದನ್ನ ವೀಕ್ಷಕರು ರಾಜ್ಯ ಘಟಕಕ್ಕೆ ಸಲ್ಲಿಸಲಿದ್ದಾರೆ. ಇದರ ಆಧಾರದ ಮೇಲೆ ಏಪ್ರಿಲ್ 2 ಅಥವಾ 3 ರಂದು ರಾಜ್ಯ ಪಧಾದಿಕಾರಿಗಳ ಸಭೆ ನಡೆಯಲಿದೆ. ಸಭೆ ಬಳಿಕ ಈ ಅಭಿಪ್ರಾಯವನ್ನ ಕೇಂದ್ರ ಸಂಸದೀಯ ಮಂಡಳಿಗೆ ರವಾನಿಸಲಾಗುತ್ತೆ.
ಬ್ಯಾಲೇಟ್ ಪೇಪರ್ ಮೂಲಕ ಸಂಗ್ರಹವಾಗುವ ಅಭ್ಯರ್ಥಿಗಳ ಹೆಸರನ್ನು ರಾಜ್ಯ ಪದಾಧಿಕಾರಿಗಳು ಶನಿವಾರ ಶಾರ್ಟ್ ಲಿಸ್ಟ್ ಮಾಡಲಿದ್ದಾರೆ. ಬೆಂಗಳೂರಿನ ಹೊರ ಹೊಲಯದ ಖಾಸಗಿ ರೆಸಾರ್ಟ್ನಲ್ಲಿ ನಡೆಯಲಿರುವ ಸಭೆಗಳಲ್ಲಿ ಅಭ್ಯರ್ಥಿಗಳ ಶಿಫಾರಸನ್ನು ಕೇಂದ್ರಕ್ಕೆ ರವಾನೆ ಮಾಡಲಾಗುತ್ತದೆ.
ಇದನ್ನೂ ಓದಿ: ರಾಮ ರಾಮ! ಶ್ರೀರಾಮನ ಕಾಲಿನ ಮೇಲೆ ನಿಂತು ಪ್ರತಿಮೆಗೆ ಹೂವಿನ ಹಾರ ಹಾಕಿದ ಬಸವಕಲ್ಯಾಣ ಬಿಜೆಪಿ ಶಾಸಕ!
ಕರ್ನಾಟಕ
Karnataka Election: ಕನ್ನಡಿಗರ ವಿರುದ್ಧ ತಮಿಳರನ್ನು ಮುನಿರತ್ನ ಎತ್ತಿಕಟ್ಟುತ್ತಿದ್ದಾರೆ: ಆಡಿಯೊ ಬಿಡುಗಡೆ ಮಾಡಿದ ಡಿ.ಕೆ. ಸುರೇಶ್
ತಮಿಳು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ತಮಿಳಿನಲ್ಲೆ ಮುನಿರತ್ನ ಧ್ವೇಷಪೂರಿತ ಭಾಷಣ ಮಾಡಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.
ಬೆಂಗಳೂರು: ರಾಜರಾಜೇಶ್ವರಿನಗರ ಶಾಸಕ ಹಾಗೂ ಸಚಿವ ಮುನಿರತ್ನ ಅವರು ಕನ್ನಡಿಗರ ವಿರುದ್ಧ ತಮಿಳರನ್ನು ಎತ್ತಿಕಟ್ಟಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ. ಮುನಿರತ್ನ ಅವರು ಮಾತನಾಡಿದ್ದಾರೆ ಎನ್ನಲಾದ ವಿಡಿಯೊವನ್ನೂ ಅವರು ಬಿಡುಗಡೆ ಮಾಡಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಶ್, ಕರ್ನಾಟಕ ಶಾಂತಿ ಪ್ರಿಯಾ ರಾಜ್ಯ. ಎಲೆಕ್ಷನ್ ಸಂದರ್ಭದಲ್ಲಿ ಗಲಾಟೆ, ಕೋಮು ಗಲಭೆ ಆಗಿಲ್ಲ. ಕನ್ನಡಿಗರು ಸ್ವಾಭಿಮಾನಗಳು. ಬೆಂಗಳೂರಿನಲ್ಲಿ ಅನೇಕ ಭಾಷಿಕರು ಇದ್ದಾರೆ. ತಮೀಳರು, ತೆಲುಗು ಸೇರಿದಂತೆ ಅನೇಕ ಭಾಷಿಕರು ಇದ್ದಾರೆ. ಎಂದೂ ಬಾಂಧವ್ಯಕ್ಕೆ ಬಂದಿಲ್ಲ. ಆದರೆ ಇದೀಗಸಚಿವ ಮುನಿರತ್ನ, ಕನ್ನಡಿಗರ ಮೇಲೆ ತಮಿಳರನ್ನು ಎತ್ತಿಕಟ್ಟಿದ್ದಾರೆ.
ಮಾರ್ಚ್ 19ನೇ ತಾರೀಖು ರಾತ್ರಿ 9:30-10 ಗಂಟೆಗೆ ಘಟನೆ ನಡೆದಿದೆ. ರಾಜರಾಜೇಶ್ವರಿ ನಗರ ಕ್ಷೇತ್ರದ ಜಾಲಹಳ್ಳಿ ವಾರ್ಡ್ನ ಖಾತಾ ನಗರದಲ್ಲಿ ಭಾಷಣ ಮಾಡಿದ್ದಾರೆ. ಆ ಪ್ರದೇಶದಲ್ಲಿ ತಮಿಳರು ಹೆಚ್ಚು ವಾಸ ಇದ್ದಾರೆ. ಯಾರೇ ಮತ ಕೇಳಲು ಬಂದರೂ, ಹೊಡೆಯಿರಿ ನಾನು ಇದ್ದೇನೆ, ಮುಂದೆ ನೋಡಿಕೊಳ್ಳುತ್ತೇನೆ ಎಂದಿದ್ದಾರೆ.
ಕನ್ನಡಿಗರ ಮೇಲೆ ತಮಿಳರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಒಬ್ಬ ಒಕ್ಕಲಿಗ ಮಹಿಳೆ ಮೇಲೆ ತಮಿಳರನ್ನು ಎತ್ತಿಕಟ್ಟಿದ್ದಾರೆ. ತಮಿಳರು ಕನ್ನಡಿಗರು ವಿಶ್ವಾಸದಿಂದ ಇದ್ದಾರೆ. ಮುನಿರತ್ನ ವ್ಯಾಪಾರಕ್ಕೆ ಬಂದವರು. ಪೊಲೀಸರ ಮುಂದೆಯೇ ಘಟನೆ ನಡೆದಿದೆ. ಸ್ವಯಂಚಾಲಿತವಾಗಿ ದೂರು ದಾಖಲು ಮಾಡಿಕೊಳ್ಳಬೇಕಿತ್ತು.
ಈ ಕುರಿತು ಸಿಎಂ ಬೊಮ್ಮಾಯಿ ಅವರಿಗೆ ಒತ್ತಾಯ ಮಾಡುತ್ತೇನೆ. ಕೂಡಲೇ ಅವರನ್ನು ಬಂಧಿಸಬೇಕು. ಹೊರಗಡೆ ಇದ್ದರೆ ಅಶಾಂತಿ ಸೃಷ್ಟಿ ಮಾಡುತ್ತಾರೆ ಎಂದರು.
ಈ ಕುರಿತು ಪೊಲೀಸ್ ಆಯುಕ್ತರಿಗೆ ರಾಜರಾಜೇಶ್ವರಿ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ದೂರು ನೀಡಿದ್ದಾರೆ. “ಯಾರಾದ್ರೂ ಒಳಗಡೆ ಬಂದ್ರೆ ಓಡಾಡಿಸಿಕೊಂಡು ಹೊಡೀರಿ. ಮಿಕ್ಕಿದ್ದು ನಾನು ನೋಡಿಕೊಳ್ತೀನಿ. ಯಾವ ತರಹ ಹೊಡೀಬೇಕು ಅಂದ್ರೆ ಅವರು ತಿರುಗಿ ನೋಡಬಾರದು. ಆ ತರಹ ಹೊಡೀರಿ. ಯಾರ್ಯಾರು ಹೊಡೀತೀರ ಕೈ ಎತ್ತಿ… ನಾಳೆ ನಮ್ಮದು.ಯಾವಾಗ ನಮ್ಮದು? ನಾಳೆ ಓಟ್ ಹಾಕುತ್ತೀರಲ್ಲ? ಆ ನಾಳೆ ನಮ್ಮದು” ಎಂದು ಮುನಿರತ್ನ ಹೇಳಿದ್ದಾರೆ ಎಂದು ಕುಸುಮಾ ದೂರಿನಲ್ಲಿ ತಿಳಿಸಿದ್ದಾರೆ.
-
ಸುವಚನ9 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ6 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ7 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಪ್ರಮುಖ ಸುದ್ದಿ15 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕ್ರಿಕೆಟ್22 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ವೈರಲ್ ನ್ಯೂಸ್22 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ18 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್19 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ