ಕರ್ನಾಟಕ ಬಜೆಟ್
Karnataka Budget 2023 : ಬಜೆಟ್ನಲ್ಲಿ ಪ್ರಸ್ತಾಪವಾಗದ 7ನೇ ವೇತನ ಆಯೋಗ; ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು?
ಶುಕ್ರವಾರ ಮಂಡನೆಯಾದ ರಾಜ್ಯ ಬಜೆಟ್ನಲ್ಲಿ (Karnataka Budget 2023) 7ನೇ ವೇತನ ಆಯೋಗದ ಶಿಫಾರಸುಗಳ ಕುರಿತು ಯಾವುದೇ ಪ್ರಸ್ತಾಪವಿಲ್ಲ. ಆದರೆ ಬಜೆಟ್ ಮಂಡನೆ ನಂತರ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಈ ಕುರಿತು ಹೇಳಿದ್ದೇನು? ಇಲ್ಲಿ ಓದಿ.
ಬೆಂಗಳೂರು: ಈ ಬಾರಿಯ ಬಜೆಟ್ನಲ್ಲಿ (Karnataka Budget 2023) 7ನೇ ವೇತನ ಆಯೋಗದ (7th Pay Commission) ಜಾರಿಗೆ ರಾಜ್ಯ ಸರ್ಕಾರವು ಬದ್ಧತೆ ವ್ಯಕ್ತಪಡಿಸಿ, ಅನುದಾನ ತೆಗೆದಿರಿಸಲಿದೆ ಎಂದು ನಿರೀಕ್ಷಿಸಿದ್ದ ರಾಜ್ಯ ಸರ್ಕಾರಿ ನೌಕರರಿಗೆ ನಿರಾಸೆಯಾಗಿದೆ.
ಕಳೆದ ನವೆಂಬರ್ನಲ್ಲಿ ರಚನೆಗೊಂಡಿರುವ ಆಯೋಗವು ಇನ್ನೂ ಮಾಹಿತಿ ಕಲೆಹಾಕುವ ಕೆಲಸ ಮಾಡುತ್ತಿದೆ. ಆದರೆ ಈ ಆಯೋಗದ ಶಿಫಾರಸನ್ನು ಜಾರಿಗೆ ತರುವುದಾಗಿ ಪ್ರಕಟಿಸಿ, ಬಜೆಟ್ನಲ್ಲಿ 10 ಸಾವಿರ ಕೋಟಿ ತೆಗೆದಿರಿಸಲಾಗುತ್ತದೆ ಎಂದು ನಿರೀಕ್ಷಿಸಲಾಗುತ್ತಿತ್ತು. ಗುರುವಾರ ʻವಿಸ್ತಾರ ನ್ಯೂಸ್ʼ ನೊಂದಿಗೆ ಮಾತನಾಡಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಕೂಡ ಈ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಬಜೆಟ್ನಲ್ಲಿ, 7ನೇ ವೇತನ ಆಯೋಗದ ಪ್ರಸ್ತಾಪವನ್ನೇ ಮಾಡಿಲ್ಲ. ಅಲ್ಲದೆ ನೌಕರ ವರ್ಗಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ.
ಆರನೇ ವೇತನ ಆಯೋಗದ ಅವಧಿಯು ಕಳೆದ ಜನವರಿಗೇ ಅಂತ್ಯಗೊಂಡಿದೆ. ಹೀಗಾಗಿ ಬಜೆಟ್ನಲ್ಲಿ 7ನೇ ವೇತನ ಆಯೋಗದ ಜಾರಿಯ ಕುರಿತು ಪ್ರಕಟಿಸಲಾಗುತ್ತದೆ. ಇಲ್ಲವಾದಲ್ಲಿ, ಮಧ್ಯಂತರ ಪರಿಹಾರವನ್ನಾದರೂ ಘೋಷಿಸಲಾಗುತ್ತದೆ ಎಂದು ಸರ್ಕಾರಿ ನೌಕರರು ನಿರೀಕ್ಷಿಸುತ್ತಿದ್ದರು. ಅವರಿಗೆಲ್ಲಾ ಈಗ ನಿರಾಸೆಯಾಗಿದೆ.
ಆಯೋಗದ ಶಿಫಾರಸು ಜಾರಿಗೆ ಬದ್ಧ
ಆದರೆ ಬಜೆಟ್ ಮಂಡಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸರವಾರ ಬೊಮ್ಮಾಯಿ, 7ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಇದನ್ನು ನಮ್ಮ ಸರ್ಕಾರ 2023-24 ನೇ ಸಾಲಿನಲ್ಲಿಯೇ ಜಾರಿಗೆ ತರಲಿದೆ ಎಂದು ಘೋಷಿಸಿದ್ದಾರೆ.
ಕಳೆದ ನವೆಂಬರ್ನಲ್ಲಿ ಆಯೋಗ ರಚಿಸಿದ್ದೇವೆ. ಇದರ ಶಿಫಾರಸುಗಳ ಜಾರಿಗೆ ಬದ್ಧವಾಗಿದ್ದೇವೆ. ಸರ್ಕಾರಕ್ಕೆ ಶಿಫಾರಸು ಸಲ್ಲಿಸುತ್ತಿದ್ದಂತೆಯೇ ಜಾರಿಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಅವಿವರಿಸಿದ್ದಾರೆ. ಬಜೆಟ್ನಲ್ಲಿ 6 ಸಾವಿರ ಕೋಟಿ ಹಣವನ್ನು ಇದಕ್ಕಾಗಿ ಮೀಸಲಿಟ್ಟಿದ್ದೇವೆ ಎಂದು ಹೇಳಿದ್ದಾರೆ.
ಎಲ್ಲವನ್ನೂ ಬಜೆಟ್ನಲ್ಲಿ ಹೇಳಲಾಗು. ಅಲೋಕೇಷನ್ನಲ್ಲಿ ಇದಕ್ಕಾಗಿ ಹಣ ತೆಗೆದಿರಿಸಿದ್ದೇವೆ. ಒಂದು ವೇಳೆ ಹೆಚ್ಚುವರಿ ಹಣ ಬೇಕಾದರೆ ಅದನ್ನು ಸಪ್ಲಿಮೆಂಟರಿ ಬಜೆಟ್ನಲ್ಲಿ ಒದಗಿಸುತ್ತೇವೆ. ಒಟ್ಟಾರೆ ಆಯೋಗದ ಶಿಫಾರಸುಗಳ ಜಾರಿಗೆ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ವೇತನ ಆಯೋಗವು ಮಧ್ಯಂತರ ವರದಿ ನೀಡಿದರೆ ಅದನ್ನು ಜಾರಿಗೆ ತರುತ್ತೇವೆ. ಪೂರ್ಣ ವರದಿ ನೀಡದರೆ ಅದನ್ನೇ ಜಾರಿಗೆ ತರುತ್ತೇವೆ. ಒಟ್ಟಾರೆ ಯಾವುದೇ ತೊಂದರೆಯಾಗದಂತೆ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲಾಗುವುದು. ಇದರ ಬಗ್ಗೆ ಅನುಮಾನವೇ ಬೇಡ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹೋರಾಟ ಎಚ್ಚರಿಕೆ ನೀಡಿದ ಷಡಾಕ್ಷರಿ
7ನೇ ವೇತನ ಆಯೋಗದ ಶಿಫಾರಸುಗಳ ಜಾರಿಯ ಕುರಿತು ಬಜೆಟ್ನಲ್ಲಿ ಘೋಷಣೆ ಮಾಡದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ, ಸರ್ಕಾರದ ಈ ನಿರ್ಧಾರದಿಂದ ಸರ್ಕಾರಿ ನೌಕರರಿಗೆ ಭ್ರಮನಿರಸನ ಆಗಿದೆ ಎಂದು ಹೇಳಿದ್ದಾರೆ.
ಬಜೆಟ್ನಲ್ಲಿ 7 ನೇ ವೇತನ ಆಯೋಗದ ಶಿಫಾರಸುಗಳ ಜಾರಿಯನ್ನು ಘೋಷಿಸುವುದರ ಜತೆಗೆ ಅಗತ್ಯವಾಗಿರುವ 10 ಸಾವಿರ ಕೋಟಿ ಅನುದಾನವನ್ನೂ ಕಾಯ್ದಿರಿಸುವ ವಿಶ್ವಾಸವಿತ್ತು. ಆದರೆ ಸರ್ಕಾರದ ಈ ಕ್ರಮದಿಂದ ನಮಗೆ ಬಹಳ ನೋವಾಗಿದೆ ಎಂದಿರುವ ಅವರು ಇಂದು ರಾಜ್ಯ ಅಭಿವೃದ್ಧಿಯಲ್ಲಿ ಐದನೇ ಸ್ಥಾನದಲ್ಲಿದೆ ಎಂದರೆ ಅದಕ್ಕೆ ಕಾರಣ ಸರ್ಕಾರಿ ನೌಕರರು. ಇದನ್ನು ಸರ್ಕಾರ ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಬಜೆಟ್ನಲ್ಲಿ ಏಕೆ ಈ ವಿಷಯವನ್ನು ಸೇರಿಸಿಲ್ಲ ಎಂಬುದರ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸುತ್ತೇವೆ ಎಂದಿರುವ ಷಡಾಕ್ಷರಿ, ಸರ್ಕಾರಿ ನೌಕರರು ಹೋರಾಟಕ್ಕೆ ಇಳಿದರೆ ಏನಾಗಲಿದೆ ಎಂಬುದು ಸರ್ಕಾರಕ್ಕೆ ಚೆನ್ನಾಗಿ ಗೊತ್ತಿದೆ ಎಂದು ಎಚ್ಚರಿಕೆ ಸಹ ನೀಡಿದ್ದಾರೆ.
ಹೊಸ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ, ಹಳೆ ಪಿಂಚಣಿ ಯೋಜನೆಯನ್ನು (ಓಪಿಎಸ್) ಜಾರಿಗೆ ತರಬೇಕೆಂಬ ನಮ್ಮ ಬೇಡಿಕೆಯ ಕುರಿತೂ ಯಾವುದೇ ತೀರ್ಮಾನ ಪ್ರಕಟಿಸಲಾಗಿಲ್ಲ.
ಮುಖ್ಯಮಂತ್ರಿಗಳ ಭೇಟಿಯ ಸಂದರ್ಭದಲ್ಲಿ ನಮ್ಮ ಬೇಡಿಕೆಗಳ ಕುರಿತು ಸರ್ಕಾರ ಸಕರಾತ್ಮಕವಾಗಿ ಸ್ಪಂದನೆ ಮಾಡದೇ ಇದ್ದರೆ ಮುಂದೇನು ಮಾಡಬೇಕು ಎಂಬುದರ ಕುರಿತು ಮುಂದಿನ ಮಂಗಳವಾರ ಪದಾಧಿಕಾರಿಗಳ ಸಭೆ ನಡೆಸಿ ಚರ್ಚಿಸುತ್ತೇವೆ ಎಂದು ಷಡಾಕ್ಷರಿ ಹೇಳಿದ್ದಾರೆ.
ಯಡಿಯೂರಪ್ಪ ಅಸಮಾಧಾನ
7ನೇ ವೇತನ ಆಯೋಗದ ಜಾರಿಗೆ ಬಜೆಟ್ನಲ್ಲಿ ಬದ್ಧತೆ ವ್ಯಕ್ತಪಡಿಸಿ, ಅನುದಾನ ತೆಗೆದಿರಿಸದೇ ಇರುವುದಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೂಡ ಅಸಮಧಾನ ವ್ಯಕ್ತಪಡಿಸಿದ್ದಾರೆ. ʻʻಈ ಬಗ್ಗೆ ಸರ್ಕಾರಿ ನೌಕರರಿಗೆ ನಾನು ಭರವಸೆ ನೀಡಿದ್ದೆ, ಅದರೆ ಮುಖ್ಯಮಂತ್ರಿ ಬಸವರಾ ಬೊಮ್ಮಾಯಿಯವರು ತಮ್ಮ ಸಲಹೆಯನ್ನು ಪರಿಗಣಿಸಿಲ್ಲʼʼ ಎಂದು ಅವರು ಆಕ್ರೋಶ ತೋಡಿಕೊಂಡಿದ್ದಾರೆ.
ಬಜೆಟ್ ಮಂಡನೆಯಾಗುತ್ತಿದ್ದಂತೆಯೇ ಸರ್ಕಾರಿ ನೌಕರರ ಸಂಘ ಸರ್ಕಾರದ ಈ ಕ್ರಮಕ್ಕೆ ಅಸಮಧಾನ ವ್ಯಕ್ತಪಡಿಸಿದ್ದು, ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರನ್ನು ಭೇಟಿಯಾಗಿ ಈ ಬಗ್ಗೆ ದೂರಿದ್ದು, ಈ ಸಂದರ್ಭದಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ.
ಬಜೆಟ್ ಮಂಡನೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಬಜೆಟ್ನಲ್ಲಿ 7ನೇ ವೇತನ ಆಯೋಗದ ಕುರಿತು ಪ್ರಸ್ತಾಪಿಸದೇ ಇರುವುದನ್ನು ಖಂಡಿಸಿದ್ದಾರೆ.
ಇದನ್ನೂ ಓದಿ : Karnataka Budget 2023 : ಒಂದು ಲಕ್ಷ ಸರ್ಕಾರಿ ಹುದ್ದೆಗಳಿಗೆ ನೇಮಕ; ಬಜೆಟ್ನಲ್ಲಿ ಬೊಮ್ಮಾಯಿ ಘೋಷಣೆ
ಅಂಕಣ
D ಕೋಡ್ ಅಂಕಣ: ಬಿಜೆಪಿ ಹಳಿ ತಪ್ಪುತ್ತಿರುವುದೆಲ್ಲಿ? ಅಳೆಯಲು ಒರೆಗಲ್ಲು ಯಾವುದು?
ಬಿಜೆಪಿಯು ಸಮಾಜದಲ್ಲಿ ಎಲ್ಲ ವರ್ಗಗಳನ್ನೂ ತಲುಪಲು ಪ್ರಯತ್ನಿಸಬೇಕು. ಆಗಮಾತ್ರ ಚುನಾವಣಾ ರಾಜಕೀಯದಲ್ಲಿ ಸಕ್ಸೆಸ್ ಆಗಲು ಸಾಧ್ಯ. ಈ ಭರದಲ್ಲಿ ತನ್ನ ಮೂಲ ತತ್ವಗಳನ್ನೇ ಮರೆತರೆ ಬೇರೆ ಪಕ್ಷಗಳೊಂದಿಗಿನ ಭಿನ್ನತೆಯೇ ಉಳಿಯುವುದಿಲ್ಲ.
ಬಹುಶಃ ಕರ್ನಾಟಕ ರಾಜಕಾರಣದಲ್ಲಿ ಸೋತ ಪಕ್ಷವನ್ನು ಈ ಬಾರಿ ಮಾಡಿದಷ್ಟು ವಿಶ್ಲೇಷಣೆಯನ್ನು ಯಾವಾಗಲೂ ಮಾಡಿಲ್ಲವೇನೊ. ಮೇ 13ರಂದು ಫಲಿತಾಂಶ ಬಂದ ನಂತರದಲ್ಲಿ ಎರಡು ತಿಂಗಳು ಕಳೆದರೂ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವೇನು ಎಂದು ಇನ್ನೂ ಪಟ್ಟಿ ಮಾಡಲಾಗುತ್ತಲೇ ಇದೆ.
ಡಿ ಕೋಡ್ ಅಂಕಣವೂ ಸೇರಿ ನಾಡಿನ ಸುಪ್ರಸಿದ್ಧ ದಿನಪತ್ರಿಕೆಗಳು, ಸಂಪಾದಕರುಗಳು ತಮ್ಮ ಕಾಲಮ್ಗಳಲ್ಲಿ ವಿಶ್ಲೇಷಣಾತ್ಮಕ ವರದಿಗಳಲ್ಲಿ, ಟಿವಿ ಡಿಬೇಟ್ಗಳಲ್ಲಿ ಸಾಕಷ್ಟು ಚರ್ಚೆ ನಡೆಸಲಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್, ಸಿ.ಟಿ. ರವಿ, ಎಂ.ಪಿ. ರೇಣುಕಾಚಾರ್ಯ ಸೇರಿ ಅನೇಕ ಬಿಜೆಪಿ ನಾಯಕರೇ ವಿಶ್ಲೇಷಣೆ ಮಾಡಿದ್ದಾರೆ. ಅಡ್ಜಸ್ಟ್ಮೆಂಟ್ ರಾಜಕಾರಣ, ಹಿಂದುತ್ವವನ್ನು ಮರೆತದ್ದು, ವೀರಶೈವ ಲಿಂಗಾಯತರನ್ನು ಕಡೆಗಣಿಸಿದ್ದು, ಕಾಂಗ್ರೆಸ್ನ ಗ್ಯಾರಂಟಿ ಸ್ಕೀಂಗಳು… ಹೀಗೆ ಅನೇಕ ಕಾರಣ ನೀಡಿದ್ದಾರೆ.
ಬಿಜೆಪಿ ಸೋಲಿಗೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೇ ಕಾರಣ ಎನ್ನುವಂತೆ ನೇರವಾಗಿ ಹಾಗೂ ಪರೋಕ್ಷವಾಗಿಯೂ ʼದಾಳಿʼಗನ್ನು ನಡೆಸಲಾಗಿದೆ. ಟಿಕೆಟ್ ಘೋಷಣೆಯನ್ನು ತಡವಾಗಿ ಮಾಡಿದರು ಎನ್ನುವುದರಿಂದ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿದ್ದವರು ಸಿಡುಕುತ್ತಿದ್ದರು ಎನ್ನುವವರೆಗೆ ವಿಶ್ಲೇಷಣೆ ಆಗಿದೆ. ಇದರಿಂದಲೇ ಬಿಜೆಪಿ ಸೋತಿದೆ, ಈ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಅನೇಕರು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳೇನು ಹಿಂದೆ ಬಿದ್ದಿಲ್ಲ. ವೃತ್ತಿಪರ ಪತ್ರಕರ್ತರಿಗಿಂತಲೂ ಹೆಚ್ಚಿನ ಅಂಶಗಳನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಪಟ್ಟಿ ಮಾಡಿ, ಬಿಜೆಪಿ ಗೆಲ್ಲಬೇಕು ಎಂದರೆ ಏನೇನು ಮಾಡಬೇಕು ಎಂಬ ರೆಸಿಪಿಯನ್ನೂ ಕೊಟ್ಟಿದ್ದಾರೆ. ಚುನಾವಣೆಯಲ್ಲಿ ಸೋತ ತಕ್ಷಣ ಫ್ರೀಜ್ ಆಗುವ ಬದಲಿಗೆ, ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರನ್ನಾಗಲಿ, ರಾಜ್ಯ ಘಟಕದ ಅಧ್ಯಕ್ಷರನ್ನಾಗಲಿ ಬಿಜೆಪಿ ಆಯ್ಕೆ ಮಾಡಿದ್ದರೆ ಬಹುಶಃ ಜನರ ಗಮನ ಬೇರೆಡೆ ಹೊರಳುತ್ತಿತ್ತೇನೊ. ಹಾಗಾಗಿ ಇಷ್ಟೆಲ್ಲ ಸುದೀರ್ಘ ಚರ್ಚೆ ನಡೆಯಲು ಬಿಜೆಪಿಯೂ ಕಾರಣ ಎನ್ನಬಹುದು!
ಆದರೆ ಇಲ್ಲಿ ಒಂದು ಯೋಚನೆ ಮಾಡಬೇಕು. ಇದೆಲ್ಲವೂ ಆ ಪಕ್ಷದ ಆಯ್ಕೆಗಳು. ಯಾವಾಗ ಟಿಕೆಟ್ ಘೋಷಣೆ ಮಾಡಬೇಕು, ಯಾರಿಗೆ ಟಿಕೆಟ್ ಕೊಡಬೇಕು, ಟಿಕೆಟ್ ತಪ್ಪಿಸಿದ್ದಕ್ಕೆ ಕಾರಣವನ್ನು ಹೇಳಬೇಕೊ ಬೇಡವೊ, ಮೋದಿಯವರು ಪ್ರವಾಸವನ್ನು ಎಷ್ಟು ಸಾರಿ ಆಯೋಜಿಸಬೇಕು ಎನ್ನುವುದೆಲ್ಲ ಆ ಪಕ್ಷದ ನಿರ್ಧಾರ. ಚುನಾವಣೆ ಸಂದರ್ಭದಲ್ಲಿ ಯಾವ ನಿರ್ಧಾರ ಕೈಗೊಂಡರೆ ಒಳ್ಳೆಯದು ಅದನ್ನು ತೆಗೆದುಕೊಳ್ಳುವ ಅಧಿಕಾರ ಆ ಪಕ್ಷಕ್ಕಿದೆ. ನಾವು ಯಾರ ಮೇಲೆಯೂ ಸಿಡುಕುವುದಿಲ್ಲ, ಟಿಕೆಟ್ ಘೋಷಣೆಯನ್ನು ಚುನಾವಣೆಗೆ 45 ದಿನ ಮೊದಲು ಮಾಡುತ್ತೇವೆ, ಹಿರಿಯರಿಗೆ ಟಿಕೆಟ್ ತಪ್ಪಿಸುವಾಗ 30 ದಿನದ ನೋಟಿಸ್ ಕೊಡುತ್ತೇವೆ… ಹೀಗೆ ಎಲ್ಲಾದರೂ ಬರೆದಿದೆಯ? ಬಿಜೆಪಿ ತನ್ನ ಸಂವಿಧಾನದಲ್ಲಿ ಎಲ್ಲಾದರೂ ಇದನ್ನು ಘೋಷಿಸಿಕೊಂಡಿದೆಯ? ಇಲ್ಲ. ಒಂದು ರಾಜಕೀಯ ಪಕ್ಷವನ್ನು ಮೇಲಿನ ಎಲ್ಲ ಕಾರಣಕ್ಕೂ ಪ್ರಶ್ನಿಸಬಹುದು. ಆದರೆ ಅದಕ್ಕೂ ಮಿಗಿಲಾದ ಆಧಾರದದ ಜತೆಗೆ ಪ್ರಶ್ನಿಸಬೇಕಾಗಿದೆ. ನಿಜಕ್ಕೂ ಬಿಜೆಪಿ ಹಳಿತಪ್ಪುತ್ತಿರುವುದೆಲ್ಲಿ? ಅದನ್ನು ಪ್ರಶ್ನಿಸಲು ಅಡಿಪಾಯ ಯಾವುದು? ತಾನೇ ಒಪ್ಪಿಕೊಂಡು, ಅಪ್ಪಿಕೊಂಡಿರುವ ಸೈದ್ಧಾಂತಿಕ ನೆಲೆಯ ಒರೆಗಲ್ಲಿಗೆ ಈಗಿನ ನಡವಳಿಕೆಯನ್ನು ಉಜ್ಜಿ ನೋಡುವ ಒಂದು ಸಣ್ಣ ಪ್ರಯತ್ನ ಇಲ್ಲಿ ಮಾಡಬಹುದು.
ಸೈದ್ಧಾಂತಿಕ ಬದ್ಧತೆ ಎಲ್ಲಿ?
ನಿಜಕ್ಕೂ ಬಿಜೆಪಿ ಗಂಭೀರವಾಗಿ ಆಲೋಚನೆ ಮಾಡಬೇಕಾದ ಸಮಯ ಇದು. ಅದು ಸೋತಿದೆ ಎಂಬ ಕಾರಣಕ್ಕೆ ಅಲ್ಲ. ಅದು ಸೋತಿರುವುದರಿಂದ ಈಗ ಆಲೋಚನೆ ಮಾಡಲು ಸಾಕಷ್ಟು ಸಮಯ ಸಿಕ್ಕಿದೆ ಎಂಬ ಕಾರಣಕ್ಕೆ. ಬಿಜೆಪಿಯು ಈಗಾಗಲೆ ಲಿಖಿತವಾಗಿ, ತನ್ನ ಸೈದ್ಧಾಂತಿಕ ಮೂಲವಾದ ಆರ್ಎಸ್ಎಸ್ ಚಿಂತನೆಗಳಿಗೆ ಅನುಗುಣವಾಗಿ ಅಥವಾ ಅದರ ಉನ್ನತ ನಾಯಕರ ನಡೆ ನುಡಿಗೆ ಅನುಗುಣವಾಗಿ ನಡೆಯುತ್ತಿದೆಯೇ ಇಲ್ಲವೇ ಎನ್ನುವುದು ಮುಖ್ಯ.
ಬಿಜೆಪಿಯ ಸಂವಿಧಾನದ ಮೊದಲ ಪುಟದಲ್ಲೇ ಉದ್ದೇಶವನ್ನು ತಿಳಿಸಲಾಗಿದೆ. ಅದರಲ್ಲಿ ಕೊನೆಯ ಸಾಲು, “ದೇಶದ ಸಾರ್ವಭೌಮತೆ, ಏಕತೆ ಹಾಗೂ ಸಮಗ್ರತೆಯನ್ನು ಎತ್ತಿಹಿಡಿಯುತ್ತೇನೆ” ಎಂದಿದೆ. ಬಿಜೆಪಿಯು ಎಂದಿಗೂ ದೇಶವನ್ನು ಒಂದೇ ರೀತಿಯಾಗಿ ನೋಡುತ್ತದೆ. ಉತ್ತರ ಭಾರತ, ದಕ್ಷಿಣ ಭಾರತ ಎಂಬ ಭೇದ ಬಿಜೆಪಿಯಲ್ಲಿ ಇರುವುದಿಲ್ಲ. ರಾಜ್ಯ ರಾಜ್ಯಗಳ ನಡುವಿನ ಭಿನ್ನಾಭಿಪ್ರಾಯವೂ ಬಿಜೆಪಿ ಪ್ರತಿಪಾದಿಸುವ ಸಾಂಸ್ಕೃತಿಕ ರಾಷ್ಟ್ರೀಯತೆಗೆ ಸೈದ್ಧಾಂತಿಕವಾಗಿ ಅಪಥ್ಯ. ಆದರೆ ಮಂಗಳವಾರ ವಿಧಾನ ಪರಿಷತ್ ಕಲಾಪ ವೀಕ್ಷಿಸುತ್ತಿರುವಾಗ ಅಚ್ಚರಿಯಾಯಿತು. ಜಿಎಸ್ಟಿ ತಿದ್ದುಪಡಿ ಕಾಯ್ದೆಯ ಕುರಿತು ಬಿಜೆಪಿಯ ಸದಸ್ಯ ಪಿ.ಎಂ. ಮುನಿರಾಜುಗೌಡ (ತುಳಸಿ) ಮಾತನಾಡುತ್ತಿದ್ದರು. “ಜಿಎಸ್ಟಿ ಸಂಗ್ರಹಕ್ಕೆ ಅಧಿಕಾರಿಗಳು ಬರುವವರು ಉತ್ತರ ಭಾರತದವರು. ಬಿಹಾರ, ಒಡಿಶಾ ಕೇಡರ್ನವರು. ಅವರಿಗೆ ಇಲ್ಲಿನ ಸ್ಥಳೀಯ ಸಮಸ್ಯೆಗಳು ಗೊತ್ತಿಲ್ಲ. ನಮ್ಮನ್ನು ಕಳ್ಳರು ಎನ್ನುವಂತೆ ನೋಡುತ್ತಾರೆ. ಎಲ್ಲ ರೀತಿಯಲ್ಲೂ ನಾವು ಸರಿಯಾಗಿದ್ದರೂ ಏನಾದರೂ ಒಂದು ಹೇಳಿ ತೆರಿಗೆ ಕಟ್ಟಬೇಕು ಎನ್ನುತ್ತಾರೆ”. ಆ ನಂತರ ಮುನಿರಾಜುಗೌಡ ಅವರು ಅನೇಕ ಮೌಲಿಕ ಅಂಶಗಳನ್ನು ಪ್ರಸ್ತಾಪಿಸಿದರು. ಜಿಎಸ್ಟಿ ತೆರಿಗೆ ಸೋರಿಕೆ ಆಗದಂತೆ ತಡೆಯಲು ಏನೇನು ಮಾಡಬೇಕು ಎಂದು ಹೇಳಿದರು, ಅದು ಬೇರೆ ವಿಷಯ. ಆದರೆ ಉತ್ತರ ಭಾರತ-ದಕ್ಷಿಣ ಭಾರತ ಎಂದು ನೋಡುವುದು ಬಿಜೆಪಿಯ ಸೈದ್ಧಾಂತಿಕ ನೆಲೆಯೇ?
ಜನಸಂಘದ ಸಂಸ್ಥಾಪಕರಲ್ಲೊಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಮಾತು ಇಲ್ಲಿ ಉಲ್ಲೇಖಾರ್ಹ. ರಾಜ್ಯಗಳ ಪುನರ್ವಿಂಗಡಣೆ ಕುರಿತು ಅವರು ಮಾತನಾಡುವಾಗ, “ಒಂದು ಆಡಳಿತ ಘಟಕವನ್ನು ನಿರ್ಮಿಸುವುದರಲ್ಲಿ ಭಾಷೆಯೂ ಒಂದು ಪ್ರಮುಖ ಅಂಶ. ಆದರೆ ಅದೇ ಏಕೈಕ ಒರೆಗಲ್ಲು ಅಲ್ಲ. ಆಡಳಿತದಲ್ಲಿ ಭಾಷೆಗೂ ಮಹತ್ವದ ಸ್ಥಾನವಿದೆ. ಆದರೆ ಭಾಷೆಯ ಗಡಿಗಳೇ ಸಾಮಾನ್ಯವಾಗಿ ಪ್ರದೇಶದ ಗಡಿಗಳಾಗಿಬಿಟ್ಟಿವೆ. ಆದರೆ ಕೆಲವರು ಭಾಷೆಯನ್ನು ಕುರಿತು ಎಷ್ಟು ಅತಿರೇಕದ ಹಾಗೂ ಏಕೀಕೃತ ಸ್ವರೂಪದ ಆಲೋಚನೆಯನ್ನು ಹೊಂದಿರುತ್ತಾರೆ ಎಂದರೆ ಅದರಿಂದ ʼಉಪರಾಷ್ಟ್ರವಾದʼದ ದುರ್ಗಂಧ ಬರತೊಡಗುತ್ತದೆ” ಎಂದಿದ್ದಾರೆ. ಇಡೀ ರಾಷ್ಟ್ರವನ್ನು ಒಂದೇ ಘಟಕದಂತೆ ನೋಡುವುದು ಬಿಜೆಪಿ ಪಕ್ಷದ ಸೈದ್ಧಾಂತಿಕ ನೆಲೆ. ಆದರೆ ಬೇರೆ ಬೇರೆ ಪಕ್ಷಗಳ ಪ್ರಭಾವಕ್ಕೆ ಒಳಗಾಗಿರುವ ಬಿಜೆಪಿಯ ಅನೇಕರು ತಮ್ಮ ಮೂಲ ನೆಲೆಯನ್ನು ಮರೆತು ಉಪರಾಷ್ಟ್ರವಾದದ ಮಾತನ್ನು ತಮಗೆ ಅರಿವಿಲ್ಲದೆಯೇ ಮಾತನಾಡುತ್ತಿರುವುದಕ್ಕೆ ಪರಿಷತ್ನ ಮಾತು ಒಂದು ಉದಾಹರಣೆ ಅಷ್ಟೆ.
ದ್ರಾವಿಡ ವಾದದ ತೊಟ್ಟಿಲು ಎಂದಾಗಿದ್ದ ತಮಿಳುನಾಡಿನಲ್ಲಿ ಬಿಜೆಪಿಗೆ ಅಣ್ಣಾಮಲೈ ಅವರನ್ನು ಅಧ್ಯಕ್ಷರಾಗಿ ನೇಮಿಸಲಾಗಿದೆ. ಶೇ.18 ಜನರು ದೇಶದ ಉಳಿದ ಶೇ.82 ಜನರನ್ನು ಸಾಕುತ್ತಿದ್ದಾರೆ, ತಮಿಳುನಾಡಿನ ತೆರಿಗೆ ಹಣವನ್ನು ಉತ್ತರ ಪ್ರದೇಶ, ಬಿಹಾರದಲ್ಲಿ ವೆಚ್ಚ ಮಾಡಲಾಗುತ್ತಿದೆ, ಸಂಸ್ಕೃತ ವರ್ಸಸ್ ತಮಿಳು ಎಂಬಂತಹ ವಾದಗಳು ಕನಿಷ್ಠ ತಿಂಗಳಿಗೆ ಒಂದು ಆ ರಾಜ್ಯದಲ್ಲಿ ಚರ್ಚೆ ಆಗುತ್ತದೆ. ಐಪಿಎಸ್ ಅಧಿಕಾರಿಯಾಗಿ ನಿವೃತ್ತರಾಗಿ ಇತ್ತೀಚೆಗಷ್ಟೆ ಬಿಜೆಪಿ ಸೇರಿರುವ ಅಣ್ಣಾಮಲೈ ಈ ವಿಚಾರಗಳಿಗೆ ಉತ್ತರ ನೀಡುವಾಗ ಬಿಜೆಪಿಯ ಸೈದ್ಧಾಂತಿಕ ನೆಲೆಯಿಂದ ಒಂದಿಂಚೂ ಆಚೀಚೆ ಹೋಗುವುದಿಲ್ಲ. ಕೆಲವೊಮ್ಮೆ ನಾಯಕರ ನಿರ್ಧಾರಗಳಿಗೆ ಮುಜುಗರ ಆಗುತ್ತದೆ ಎನ್ನುವಂತಹ ಮಾತುಗಳನ್ನು ಆಡಿದ್ದಾರಾದರೂ, ಅದು ಒಟ್ಟಾರೆ ಬಿಜೆಪಿಯ ಸಿದ್ಧಾಂತಕ್ಕೆ ಅನುಗುಣವಾಗಿಯೇ ಇರುತ್ತದೆ. ಆದರೆ ಕರ್ನಾಟಕದಲ್ಲಿ ಇಷ್ಟು ಸುದೀರ್ಘ ಸಂಘಟನಾತ್ಮಕ ಅನುಭವವಿರುವ ಕರ್ನಾಟಕ ಬಿಜೆಪಿಯಲ್ಲಿ ಅದರ ಕೊರತೆ ಢಾಳಾಗಿ ಕಾಣುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 7ರಂದು ಬಜೆಟ್ ಮಂಡಿಸಿದರು. ತಮ್ಮ 14 ನೇ ದಾಖಲೆಯ ಬಜೆಟ್ನಲ್ಲಿ ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಪ್ರಮುಖ ಬಜೆಟ್ ಎಂಬ ಸಂದೇಶವನ್ನೂ ನೀಡಿದರು. ರಾಜ್ಯದಲ್ಲಿ ಹಿಂದೆ ಇದ್ದ ಬಿಜೆಪಿ ಸರ್ಕಾರದ ಅವಧಿಯನ್ನು ʼಅಂಧಕಾರʼ ಎಂದು ಹೇಳಿದರು. ಈಗ (ಕಾಂಗ್ರೆಸ್ ಗೆದ್ದ ನಂತರ) ರಾಜ್ಯವು ಕತ್ತಲಿನಿಂದ ಹೊರಬಂದಿದೆ ಎಂದರು.
ದೇಶದಲ್ಲಿ ಇನ್ನೂ ಅಂಧಕಾರ ಇದೆ, ಅದನ್ನು ಹೋಗಲಾಡಿಸಬೇಕಿದೆ. ಅಂಧಕಾರದಲ್ಲಿರುವ ಇಂದಿನ ಭಾರತದಲ್ಲಿ ಲಕ್ಷಾಂತರ ಭಾರತೀಯರ ಕನಸುಗಳಿಗೆ ರೆಕ್ಕೆ ಮೂಡಿಸಲು ಕರ್ನಾಟಕ ಸರ್ಕಾರ ಶ್ರಮಿಸಲಿದೆ. ಎಲ್ಲರನ್ನೂ ಒಳಗೊಳ್ಳುವಿಕೆಯಲ್ಲಿ ವಿಶ್ವಾಸವಿದೆಯೇ ಹೊರತು ಸರ್ವಾಧಿಕಾರದಲ್ಲಲ್ಲ. ಭೇದಭಾವ ತೋರುವುದು, ಧ್ರುವೀಕರಣ ಮಾಡುವುದು, ಸಮಾಜವನ್ನು ಒಡೆಯುವುದು ನ್ಯಾಯವಲ್ಲ ಎಂದರು.
ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿರುವುದನ್ನು ಟೀಕಿಸುತ್ತಿರುವವರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ಕೇಂದ್ರ ಸರ್ಕಾರದ ಕೆಟ್ಟ ನೀತಿಗಳ ಕಾರಣಕ್ಕೆ ಬೆಲೆಯೇರಿಗೆ, ನಿರುದ್ಯೋಗ ಹೆಚ್ಚಾಗಿರುವುದರಿಂದಲೇ ಈ ಯೋಜನೆಗಳ ಮೂಲಕ ಜನರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದರು. ಒಟ್ಟಿನಲ್ಲಿ ರಾಜಕೀಯವಾಗಿ ಬಿಜೆಪಿಯನ್ನು, ಅದರಲ್ಲೂ ಕೇಂದ್ರ ಸರ್ಕಾರವನ್ನು ಟೀಕಿಸುವ ಯಾವ ಅವಕಾಶವನ್ನೂ ಸಿದ್ದರಾಮಯ್ಯ ಬಿಡಲಿಲ್ಲ.
ಬಜೆಟ್ ದಾಖಲೆ ಎಂದರೆ ಒಂದು ಆರ್ಥಿಕ ಲೆಕ್ಕಾಚಾರ. ಸಮಾಜವನ್ನು ಅದು ಅಡ್ರೆಸ್ ಮಾಡಬೇಕಿರುವುದರಿಂದ ಸಾಮಾಜಿಕ ಆಯಾಮವೂ ಇರುತ್ತದೆ. ಬಜೆಟ್ ಮಂಡನೆ ಎನ್ನುವುದು ಒಂದು ಸಂವಿಧಾನದ ಅವಶ್ಯಕತೆಯೂ ಹೌದು. ಆದರೆ ಬಜೆಟ್ ಮಂಡನೆ ವೇಳೆ ಒಕ್ಕೂಟ ವ್ಯವಸ್ಥೆಯ ಕೇಂದ್ರವಾದ ಕೇಂದ್ರ ಸರ್ಕಾರವನ್ನು ಹಿಗ್ಗಾಮುಗ್ಗಾ ಟೀಕಿಸುವುದು ವಾಡಿಕೆಯಲ್ಲಿಲ್ಲ. ಗ್ಯಾರಂಟಿ ಯೋಜನೆಗಳಿಂದಾಗಿ ಕೈ ಸಾಕಷ್ಟು ಖಾಲಿಯಾಗಿದೆ. ಮುಂಬರುವ ಲೋಕಸಭೆ ಚುನಾವಣೆಗೂ ಒಂದು ಸ್ಟೇಜ್ ಸೆಟ್ ಮಾಡುವ ಸಲುವಾಗಿ ಸಿಎಂ ಈ ಮಾತುಗಳನ್ನು ಪ್ರಸ್ತಾಪಿಸಿದ್ದಾರೆ, ಅವರ ದೃಷ್ಟಿಯಲ್ಲಿ ಅದು ಸರಿಯಾಗಿದೆ. ಆದರೆ ಬಿಜೆಪಿಯು ರಾಷ್ಟ್ರೀಯತೆ ಮಾತನಾಡುವ ಪಕ್ಷ. ಕೇಂದ್ರದ ಸರ್ಕಾರವನ್ನು ರಾಜ್ಯ ಸರ್ಕಾರದ ಬಜೆಟ್ನಲ್ಲಿ ಟೀಕಿಸುವುದು ರಾಷ್ಟ್ರೀಯತೆಗೆ ವಿರುದ್ಧ, ಉಪರಾಷ್ಟ್ರವಾದದ ಪ್ರತಿಪಾದನೆ ಎಂದು ವಿಧಾನಸಭೆಯಲ್ಲಿ ಕುಳಿತಿದ್ದ ಬಿಜೆಪಿಗರಿಗೆ ಅನ್ನಿಸಬೇಕಿತ್ತಲ್ಲವೇ? ರಾಜ್ಯ ಹಾಗೂ ಕೇಂದ್ರದ ನಡುವೆ ಉತ್ತಮ ಬಾಂಧವ್ಯ ಇದ್ದರೆ ಸಾರ್ವಭೌಮತೆ ಉಳಿಯುತ್ತದೆ. ಆದರೆ ತನ್ನ ಅಧಿಕೃತ ದಾಖಲೆಯಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವನ್ನು ಟೀಕಿಸುವುದನ್ನು ಬಿಜೆಪಿ ಪ್ರತಿಭಟಿಸಬೇಕಿತ್ತಲ್ಲ? ಎಲ್ಲ ಸದಸ್ಯರೂ ಹೆಡ್ಫೋನ್ ಅಳವಡಿಸಿಕೊಂಡು ಭಾಷಣ ಕೇಳುತ್ತಿದ್ದರು. ಹೋಗಲಿ ಭಾಷಣ ಮುಗಿದ ನಂತರವಾದರೂ ಅದನ್ನು ಪ್ರಸ್ತಾಪಿಸಿದ್ದು ಕೇವಲ ಒಬ್ಬ ವಿಧಾನ ಪರಿಷತ್ ಸದಸ್ಯರು(ರವಿಕುಮಾರ್). ಇದು ಜನಸಾಮಾನ್ಯರ ವಿರೋಧಿ ಬಜೆಟ್, ಅಭಿವೃದ್ಧಿ ವಿರೋಧಿ ಬಜೆಟ್ ಎಂಬ ರೆಕಾರ್ಡೆಡ್ ಕ್ಯಾಸೆಟ್ಗಳನ್ನು ಬಿಜೆಪಿ ಸದಸ್ಯರು ಪ್ಲೇ ಮಾಡಿದರೇ ಹೊರತಾಗಿ ತಮ್ಮ ಪಕ್ಷ ಇಷ್ಟು ವರ್ಷ ಪ್ರತಿಪಾದಿಸಿಕೊಂಡು ಬಂದ ಸಿದ್ಧಾಂತಕ್ಕೇ ಧಕ್ಕೆಯಾಗುತ್ತಿದೆ ಎನ್ನುವುದು ಅನುಭವಕ್ಕೇ ಬರಲಿಲ್ಲ.
ರಾಜ್ಯದಲ್ಲಷ್ಟೆ ಅಲ್ಲ, ಕೇಂದ್ರದಲ್ಲೂ ಬಿಜೆಪಿ ನಾಯಕರು ಹೀಗೆ ನಡೆದುಕೊಳ್ಳುತ್ತಾರೆ. ಬುಡಕಟ್ಟು ಸಮುದಾಯದವರಿಗೆ “ಆದಿವಾಸಿ” ಎಂಬ ಪದಪ್ರಯೋಗ ಮಾಡುತ್ತಾರೆ. ನಿಜವಾಗಿ ಈ ಆದಿವಾಸಿ ಎಂಬ ಶಬ್ದದ ಅರ್ಥ ಏನು? ಈ ನೆಲದ ಮೂಲ ನಿವಾಸಿಗಳು ಎಂದಲ್ಲವೇ? ಬುಡಕಟ್ಟು ಸಮುದಾಯದವರು ಆದಿವಾಸಿಗಳು ಎಂದಾದರೆ ಉಳಿದವರೆಲ್ಲರೂ ಹೊರಗಿನಿಂದ ಬಂದವರು, ಆಕ್ರಮಣಕಾರರು ಎಂದಾಗುವುದಿಲ್ಲವೇ? ಈ ವಿಚಾರ ನೇರವಾಗಿ ಆರ್ಯ-ದ್ರಾವಿಡ ಸಿದ್ಧಾಂತಕ್ಕೆ ಕರೆದೊಯ್ಯುತ್ತದೆ. ಆದಿವಾಸಿ ಎಂಬ ಶಬ್ದವನ್ನು ಬಳಸಿದೊಡನೆಯೇ ನೇರವಾಗಿ ಆರ್ಯ-ದ್ರಾವಿಡ ಸಿದ್ಧಾಂತಕ್ಕೆ ಸಹಮತಿ ವ್ಯಕ್ತಪಡಿಸಿದಂತಾಗುತ್ತದೆ. ಆದರೆ ಸೈದ್ಧಾಂತಿಕವಾಗಿ ಬಿಜೆಪಿಯು ಆರ್ಯ-ದ್ರಾವಿಡ ವಾದದ ವಿರೋಧಿ. 2022ರ ಗುಜರಾತ್ ವಿಧಾನಸಭೆ ಚುನಾವಣೆ ಸಮಯದಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಈ ವಿಚಾರಕ್ಕೆ ವಾಗ್ವಾದ ನಡೆದಿತ್ತು. ಬಿಜೆಪಿಯವರು ವನವಾಸಿ ಎಂದೇ ಏಕೆ ಬಳಸುತ್ತಾರೆ ಎಂದರೆ ಅವರು ನಿಮ್ಮನ್ನು ಕಾಡಿನಲ್ಲಿಯೇ ಇರಿಸಲು ಬಯಸುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹೇಳಿದ್ದರು. ಇದಕ್ಕೆ ಬಿಜೆಪಿಯೂ ತಿರುಗೇಟು ನೀಡಿ, ವನವಾಸಿ ಪದವೇ ಸರಿಯಾದದ್ದು ಎಂದಿತ್ತು.
ಆರ್ಯ ದ್ರಾವಿಡ ಸಿದ್ಧಾಂತವನ್ನು ಒಪ್ಪದವರು ಆದಿವಾಸಿ ಎಂಬ ಪದಬಳಕೆಯನ್ನು ಮಾಡಲು ಸಾಧ್ಯವಿಲ್ಲ ಎಂದಷ್ಟೆ ಹೇಳಬಹುದು. ಬಿಜೆಪಿಯ ಸೈದ್ಧಾಂತಿಕ ಮಾತೃ ಸಂಸ್ಥೆ ಆರ್ಎಸ್ಎಸ್ ಸಹ ವನವಾಸಿ ಶಬ್ದವನ್ನೇ ಬಳಸುತ್ತದೆ. ಅದಕ್ಕಾಗಿಯೇ, ಆರ್ಎಸ್ಎಸ್ ಪರಿವಾರ ಸಂಸ್ಥೆಗೆ ʼವನವಾಸಿ ಕಲ್ಯಾಣʼ ಎಂಬ ಹೆಸರಿಡಲಾಗಿದೆ, ಆದರೆ ಇಂದಿಗೂ ಅನೇಕ ಬಿಜೆಪಿ ನಾಯಕರು ಆದಿವಾಸಿ ಎಂಬ ಶಬ್ದವನ್ನೇ ಬಳಸುತ್ತಾರೆ.
ಇವು ಬಿಜೆಪಿಯನ್ನು ಕಾಡುತ್ತಿರುವ ನಿಜವಾದ ಸಮಸ್ಯೆಗಳು. ತನ್ನ ಘೋಷಿತ, ಪ್ರಕಟಿತ ಸೈದ್ಧಾಂತಿಕ ಹಿನ್ನೆಲೆಯನ್ನೂ ಆ ಪಕ್ಷದ ಸದಸ್ಯರು ಸ್ಪಷ್ಟ ಧ್ವನಿಯಲ್ಲಿ ತಿಳಿಸಲಾಗದಷ್ಟು ಅಸ್ಪಷ್ಟತೆ ಆವರಿಸಿದೆ. ಈ ಸಮಯದಲ್ಲಿ ಬಿಜೆಪಿ ನಾಯಕರಾದ ಎಲ್.ಕೆ. ಆಡ್ವಾಣಿಯವರ ಒಂದು ಮಾತು ಉಲ್ಲೇಖಿಸಬಹುದು.
ಎಲ್.ಕೆ. ಆಡ್ವಾಣಿಯವರು 2005ರಲ್ಲಿ ಚೆನ್ನೈಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಆಡಿದ ಮಾತು ಇಲ್ಲಿ ಸೂಕ್ತ. “… ಬಿಜೆಪಿಯು ಜನರಿಗೆ ಉತ್ತರದಾಯಿಯಾಗಿದ್ದು, ಕಾಲಕಾಲಕ್ಕೆ ಚುನಾವಣೆಗಳನ್ನು ಎದುರಿಸುವ ಮೂಲಕ ತನ್ನನ್ನು ಪರೀಕ್ಷೆಗೆ ಒಡ್ಡಿಕೊಳ್ಳುತ್ತದೆ. ಪ್ರಜಾಪ್ರಭುತ್ವದಲ್ಲಿ, ಬಹುಪಕ್ಷೀಯ ವ್ಯವಸ್ಥೆಯಲ್ಲಿ ಬಿಜೆಪಿಯಂತಹ ಸೈದ್ಧಾಂತಿಕ ಪಕ್ಷವೊಂದು ತನ್ನ ಮೂಲಭೂತ ನಿಲುವುಗಳನ್ನು ಉಳಿಸಿಕೊಂಡು ಮತ್ತು ಅದೇ ಸಮಯದಲ್ಲಿ ತನ್ನನ್ನು ಎಲ್ಲ ಸೈದ್ಧಾಂತಿಕ ಪದರಗಳಿಂದ ಹೊರಗೊಯ್ದು ಹೆಚ್ಚಿನ ವರ್ಗಗಳ ಜನರನ್ನು ತಲುಪುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ” ಎಂದು ಹೇಳಿದ್ದರು.
ಅಂದರೆ ಬಿಜೆಪಿಯು ಸಮಾಜದಲ್ಲಿ ಎಲ್ಲ ವರ್ಗಗಳನ್ನೂ ತಲುಪಲು ಪ್ರಯತ್ನಿಸಬೇಕು. ಆಗಮಾತ್ರ ಚುನಾವಣಾ ರಾಜಕೀಯದಲ್ಲಿ ಸಕ್ಸೆಸ್ ಆಗಲು ಸಾಧ್ಯ. ಇದಕ್ಕಾಗಿ ವಿಭಿನ್ನ ವರ್ಗಗಳ, ಹಿನ್ನೆಲೆಯ ನಾಯಕರು, ಮತದಾರರನ್ನು ತನ್ನೆಡೆಗೆ ಸೆಳೆಯಬೇಕು. ಆದರೆ ಹೆಚ್ಚು ಜನರನ್ನು ತಲುಪಬೇಕು ಎನ್ನುವ ಭರದಲ್ಲಿ ತನ್ನ ಮೂಲ ತತ್ವಗಳನ್ನೇ ಮರೆತರೆ ಬೇರೆ ಪಕ್ಷಗಳೊಂದಿಗಿನ ಭಿನ್ನತೆಯೇ ಉಳಿಯುವುದಿಲ್ಲ. ಬಿಜೆಪಿಗೆ ಈಗ ಸಾಕಷ್ಟು ಸಮಯವಿದೆ. ತನ್ನದೇ ಮೂಲ ಪಠ್ಯ, ನಾಯಕರ ಭಾಷಣಗಳು, ಸಂವಿಧಾನ, ಘೋಷಿತ ಪ್ರಸ್ತಾವನೆಗಳನ್ನು ಒಮ್ಮೆ ಮೆಲುಕು ಹಾಕಲು ಸದವಕಾಶ. ಅಥವಾ ಈಗಿನ ಸದಸ್ಯರು ವರ್ತನೆ ಮಾಡುತ್ತಿರುವ ರೀತಿಯೇ ಸರಿ ಎನ್ನುವುದಾದರೆ ತನ್ನ ಘೋಷಿತ ಪಠ್ಯಗಳಲ್ಲಿಯೇ ಬದಲಾವಣೆ ಮಾಡಿಕೊಳ್ಳಲೂ ಅವಕಾಶವಿದೆ. ಒಟ್ಟಿನಲ್ಲಿ ತನ್ನ ಲಿಖಿತ, ಘೋಷಿತ, ಪ್ರಕಟಿತ ಸೈದ್ಧಾಂತಿಕ ನಿಲುವಿಗೆ ಆದಷ್ಟೂ ಹತ್ತಿರದಲ್ಲಿ ಇರುವಂತೆ ಪ್ರಯತ್ನಿಸುವುದೇ ಬಿಜೆಪಿಯ ಪುನರುಜ್ಜೀವನದ ಆರಂಭ ಎನ್ನಬಹುದು. ಈ ಚುನಾವಣೆಯಲ್ಲಿ ಸೋತ ಬಿಜೆಪಿ, ಮುಂದೆ ಗೆಲ್ಲಬಹುದು. ಆದರೆ ಸೈದ್ಧಾಂತಿಕ ಸ್ಪಷ್ಟತೆಯ ವಿಚಾರವು ಕೇವಲ ಒಂದು ಚುನಾವಣೆಯ ಸೋಲು ಅಥವಾ ಗೆಲುವಿಗಿಂತಲೂ ದೊಡ್ಡದು ಎನ್ನುವುದಂತೂ ಸ್ಪಷ್ಟ.
ಕರ್ನಾಟಕ
Mrs India : ಮಂಗಳೂರಿನ ಮುಸ್ಲಿಂ ಯುವತಿಗೆ ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್ ನ್ಯಾಷನಲ್ ಕಿರೀಟ
Mrs India : ಮುಸ್ಲಿಂ ಸಮುದಾಯದ ಯುವತಿಯೊಬ್ಬರು ರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಮಿಸೆಸ್ ಇಂಡಿಯಾ ಕಿರೀಟ ಧರಿಸಿದ್ದಾರೆ. ಅವರೀಗ ಜಾಗತಿಕ ಸ್ಪರ್ಧೆಗೆ ಅಣಿಯಾಗಿದ್ದಾರೆ. ಅವರೇ ಮಂಗಳೂರಿನ ಶಮಾ ವಾಜಿದ್.
ಮಂಗಳೂರು: ಕರಾವಳಿಯ ಮುಸ್ಲಿಂ ಯುವತಿ (Muslim woman from Mangalore) ಶಮಾ ವಾಜಿದ್ (Shama Wajid) ಅವರು ಪ್ರತಿಷ್ಠಿತ ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್ನ್ಯಾಷನಲ್ ಯೂನಿವರ್ಸ್ – 2023 (Global mrs india international universe 2023) ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗ್ಲೋಬಲ್ ಇಂಡಿಯಾ (Mrs India) ಎಂಟರ್ಟೈನ್ಮೆಂಟ್ ಪ್ರೊಡಕ್ಷನ್ಸ್ ಆಯೋಜಿಸಿರುವ ಸ್ಪರ್ಧೆಯಲ್ಲಿ ವಿಜಯಿಯಾಗಿರುವ ಅವರು ಇದೀಗ 2024ರ ಗ್ಲೋಬಲ್ ಮಿಸೆಸ್ ಯೂನಿವರ್ಸ್ (Global Mrs Universe) ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಮುಸ್ಲಿಂ ಸಮುದಾಯದವರು ಫ್ಯಾಷನ್ ಲೋಕಕ್ಕೆ ಕಾಲಿಡುವುದು ಅಪರೂಪ. ಅಂತಹದರಲ್ಲಿ ಶಮಾ ವಾಜಿದ್ ಮುಸ್ಲಿಂ ಸಮುದಾಯವರಾದರೂ ಕುಟುಂಬದವರ ಪ್ರೋತ್ಸಾಹದಿಂದ ಫ್ಯಾಷನ್ ಲೋಕದಲ್ಲಿ ಸಾಧನೆ ಮಾಡಿದ್ದಾರೆ. ಶಮಾ ವಾಜಿದ್ ಅವರು ಶ್ರೀನಿವಾಸ ಆರ್ಕಿಟೆಕ್ಟ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
22ಕ್ಕೂ ಅಧಿಕ ರಾಜ್ಯಗಳಲ್ಲಿ ನಡೆದಿತ್ತು ಆಡಿಷನ್, ಟಾಪ್ 40ರಲ್ಲಿ ಆಯ್ಕೆ
ದೇಶದ 22ಕ್ಕೂ ಅಧಿಕ ರಾಜ್ಯಗಳಲ್ಲಿ ಸ್ಪರ್ಧೆಯ ಆಡಿಷನ್ ನಡೆದಿದೆ. ಸಾವಿರಾರು ಮಹಿಳೆಯರಲ್ಲಿ ಶಮಾ ವಾಜಿದ್ ನವದೆಹಲಿಯಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಗೆ ತಲುಪಿದ ಟಾಪ್ 40ರಲ್ಲಿ ಒಬ್ಬರಾಗಿದ್ದರು. ಎಲ್ಲಾ ಫೈನಲಿಸ್ಟ್ಗಳು 5 ದಿನಗಳ ಕಾಲ ಮಾರ್ಗದರ್ಶಕರಿಂದ ಕ್ಯಾಟ್ವಾಕ್, ಗ್ರೂಮಿಂಗ್, ಕೊರಿಯೋಗ್ರಫಿ, ಇಮೇಜ್ ಕನ್ಸಲ್ಟಿಂಗ್, ಆತಂಕ ನಿರ್ವಹಣೆ, ದೈಹಿಕ ಫಿಟ್ನೆಸ್ ಇತ್ಯಾದಿಗಳ ಉತ್ತಮ ಅಂಶಗಳಲ್ಲಿ ಕಠಿಣ ತರಬೇತಿಯನ್ನು ಪಡೆದರು.
ಕರ್ನಾಟಕವನ್ನು ಪ್ರತಿನಿಧಿಸಿದ್ದರು ಶಮಾ ವಾಜಿದ್
ಕರ್ನಾಟಕವನ್ನು ಪ್ರತಿನಿಧಿಸಿದ ಶಮಾ ವಾಜಿದ್ ಫೂಲ್ ರೌಂಡ್, ಎಕ್ನಿಕ್ ರೌಂಡ್, ಟ್ಯಾಲೆಂಟ್ ರೌಂಡ್ ಮತ್ತು ಫಾರ್ಮಲ್ ಸುತ್ತುಗಳಂತಹ ವಿವಿಧ ಸುತ್ತುಗಳಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿ ಅಗ್ರ 10 ಫೈನಲಿಸ್ಟ್ ಗಳಲ್ಲಿ ಸ್ಥಾನ ಪಡೆದರು. ಅಂತಿಮವಾಗಿ ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್ ನ್ಯಾಷನಲ್ ಯೂನಿವರ್ಸ್ 2023ರ ಕಿರೀಟವನ್ನು ಬಾಲಿವುಡ್ ಸೆಲೆಬ್ರಿಟಿ ಮಲೈಕಾ ಅರೋರಾ ಅವರಿಂದ ಮುಡಿಗೇರಿಸಿದರು.
13 ತಿಂಗಳ ಪುಟ್ಟ ಮಗುವಿನ ತಾಯಿ
ಮಿಸ್ ಯುನಿವರ್ಸ್, ಮಿಸ್ ವರ್ಲ್ಡ್ ಮಾದರಿಯಲ್ಲೇ ನಡೆಯುವ ಈ ಮಿಸೆಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಮದುವೆಯಾದ ಮಹಿಳೆಯರಿಗೆ ಮಾತ್ರ ಅವಕಾಶವಿದೆ. ಶಮಾ ವಾಜಿದ್ ಅವರಿಗೆ 13 ತಿಂಗಳ ಗಂಡು ಮಗುವಿದೆ. ಅವರು ಪುಟ್ಟ ಮಗುವಿನ ಲಾಲನೆ ಪಾಲನೆ ಮಾಡುತ್ತಲೇ ಸ್ಪರ್ಧೆಗೆ ಸಿದ್ಧತೆ ಮಾಡಿಕೊಂಡಿದ್ದಲ್ಲದೆ, ಈಗ ವಿಜಯಿಯಾಗಿ ಹೊರಹೊಮ್ಮಿದ್ದಾರೆ.
ಕರ್ನಾಟಕ
Assembly Session: ಸ್ಟಾಂಪ್ ಡ್ಯೂಟಿ ಹೆಚ್ಚಿಸಲ್ಲ; ಜನರಿಗೆ ಹೊರೆ ತಪ್ಪೋಲ್ಲ: ‘ಗ್ಯಾರಂಟಿʼ ಕಲೆಕ್ಷನ್ಗೆ ಸರ್ಕಾರದ ಮಾಸ್ಟರ್ ಪ್ಲ್ಯಾನ್!
ಹೆಚ್ಚುವರಿ 6 ಸಾವಿರ ಕೋಟಿ ರೂ. ಸಂಗ್ರಹಿಸುವ ಸಲುವಾಗಿ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಸರ್ಕಾರ ಹೆಚ್ಚಿಸುತ್ತದೆ ಎಂಬ ಅನುಮಾನಗಳಿದ್ದವು. ಆದರೆ ಸರ್ಕಾರ ಬೇರೆ ಮಾರ್ಗ ಕಂಡುಕೊಂಡಿದೆ.(Assembly Session)
ಬೆಂಗಳೂರು: ಕಾಂಗ್ರೆಸ್ ಸರ್ಕಾರ ವಿಧಾನಸಭೆ (Assembly Session) ಚುನಾವಣೆಗೂ ಮುನ್ನ ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಅನೇಕ ಇಲಾಖೆಗಳಿಗೆ ಟಾರ್ಗೆಟ್ ಹೆಚ್ಚಿಸಿದ್ದು, ಕಂದಾಯ ಇಲಾಖೆಗೂ 6 ಸಾವಿರ ಕೋಟಿ ರೂ. ಗುರಿ ಹೆಚ್ಚಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಸಲುವಾಗಿ ರಾಜ್ಯದ ಬಜೆಟ್ ಗಾತ್ರವೂ ಹೆಚ್ಚಳವಾಗಿದೆ. ಇದರ ಜತೆಗೆ ತೆರಿಗೆ ಇಲಾಖೆ, ಅಬಕಾರಿ ಇಲಾಖೆಗಳಿಗೂ ಗುರಿ ಹೆಚ್ಚಿಸಲಾಗಿದೆ. ಅದರಂತೆ 2021-22ರಲ್ಲಿ ಬಿಜೆಪಿ ಸರ್ಕಾರ ಮಂಡಿಸಿದ ಬಜೆಟ್ನಲ್ಲಿ ಕಂದಾಯ ಇಲಾಖೆಯ, ನೋಂದಣಿ ಮತ್ತು ಮುದ್ರಾಂಕ ಶೂಲ್ಕದಿಂದ 15 ಸಾವಿರ ಕೋಟಿ ರೂ. ನಿರೀಕ್ಷೆ ಮಾಡಲಾಗಿತ್ತು. ಆದರೆ ವರ್ಷದ ಅಂತ್ಯಕ್ಕೆ ಅದು ಗುರಿ ಮೀರಿ 17 ಸಾವಿರ ಕೋಟಿ ರೂ. ಸಂಗ್ರಹವಾಗಿತ್ತು. ಫೆಬ್ರವರಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ನಲ್ಲಿ ಗುರಿಯನ್ನು 19 ಸಾವಿರ ಕೋಟಿ ರೂ.ಗೆ ಏರಿಕೆ ಮಾಡಲಾಗಿತ್ತು. ಆದರೆ ಇದೇ ವರ್ಷ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಗುರಿಯನ್ನು 25 ಸಾವಿರ ಕೋಟಿ ರೂ.ಗೆ ಹೆಚ್ಚಿಸಿದ್ದಾರೆ.
ಈ ಹೆಚ್ಚುವರಿ 6 ಸಾವಿರ ಕೋಟಿ ರೂ. ಸಂಗ್ರಹಿಸುವ ಸಲುವಾಗಿ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಸರ್ಕಾರ ಹೆಚ್ಚಿಸುತ್ತದೆ ಎಂಬ ಅನುಮಾನಗಳಿದ್ದವು. ಆದರೆ ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲಿ ಹೆಚ್ಚಳ ಮಾಡಿದರೆ ಜನರಿಂದ ವಿರೋಧ ಹಾಗೂ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಬಹುದು ಎಂಬ ಕಾರಣಕ್ಕೆ ಸರ್ಕಾರ ಬುದ್ಧಿವಂತಿಕೆಯ ʼಮಾರ್ಗʼ ಕಂಡುಕೊಂಡಿದೆ. ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಬದಲಿಗೆ, ಜಮೀನಿನ ಮಾರ್ಗಸೂಚಿ ದರವನ್ನೇ (Guidance Value) ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ಈ ಕುರಿತು ವಿಧಾನ ಪರಿಷತ್ನಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ ಉತ್ತರ ನೀಡಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ವಿರೋಧ ಪಕ್ಷದ ಸದಸ್ಯರಾದ ಮುನಿರಾಜೇಗೌಡ ಅವರು, ಮುದ್ರಾಂಕ ಶುಲ್ಕ ಪರಿಷ್ಕರಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಸರ್ಕಾರಕ್ಕೆ ಮುದ್ರಾಂಕ ಶುಲ್ಕ ಪರಿಷ್ಕರಿಸುವ ಆಲೋಚನೆ ಇಲ್ಲ. ಆದರೆ, ರೈತರಿಗಾಗುತ್ತಿರುವ ಅನ್ಯಾಯವನ್ನು ತಡೆಯುವ ನಿಟ್ಟಿನಲ್ಲಿ ಜಮೀನಿನ ಮೌಲ್ಯ ಪರಿಷ್ಕರಣೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಕೃಷ್ಣಭೈರೇಗೌಡ ಹೇಲಿದ್ದಾರೆ. “ಮುದ್ರಾಂಕ ಶುಲ್ಕವನ್ನು ಪರಿಷ್ಕರಿಸುವ ಬಗ್ಗೆ ಸರ್ಕಾರಕ್ಕೆ ಯಾವುದೇ ಆಲೋಚನೆ ಇಲ್ಲ. ಆದರೆ ಜಮೀನಿನ ಮೌಲ್ಯ ಪರಿಷ್ಕರಣೆ ನಡೆಸಿ ಕನಿಷ್ಟ ನಾಲ್ಕು ವರ್ಷವಾಗಿದೆ. ಹೀಗಾಗಿ ಜಮೀನು ಮೌಲ್ಯ ಪರಿಷ್ಕರಣೆ ನಡೆಸಲಾಗುವುದು. ಜಮೀನಿನ ಮೌಲ್ಯ ಪರಿಷ್ಕರಣೆಯ ಆಧಾರದಲ್ಲಿ ರೈತರ ಭೂಮಿಗಳಿಗೆ ಮಾರುಕಟ್ಟೆ ಮೌಲ್ಯ ನಿಗದಿಯಾಗುತ್ತದೆ. ಆದರೆ, ಕಳೆದ ನಾಲ್ಕು ವರ್ಷದಿಂದ ಮೌಲ್ಯ ಪರಿಷ್ಕರಣೆಯಾಗದ ಕಾರಣ ರೈತರಿಗೆ ಅನ್ಯಾಯವಾಗುತ್ತಿದೆ. ರೈತರು ಜಮೀನು ಮಾರಾಟಕ್ಕೆ ಮುಂದಾಗುವಾಗ ಅವರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಅಲ್ಲದೆ, ಜಮೀನು ಮಾರಾಟ ಪ್ರಕ್ರಿಯೆಯಲ್ಲಿ ಹಣ ವಹಿವಾಟು ಅಧಿಕವಾಗಿದ್ದು ಕಪ್ಪು ಹಣ ಪರಿವರ್ತನೆಗೂ ಕಾರಣವಾಗಿದೆ. ಹೀಗಾಗಿ ಜಮೀನಿನ ಮೌಲ್ಯವನ್ನು ಶೀಘ್ರದಲ್ಲೇ ಪರಿಷ್ಕರಿಸಲಾಗುವುದು” ಎಂದು ಸ್ಪಷ್ಟನೆ ನೀಡಿದರು.
ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ನಿಗದಿಪಡಿಸಲಾಗುತ್ತದೆ. ಅಂದರೆ ರೈತರಿಗೆ ಅನ್ಯಾಯ ಆಗುತ್ತಿದೆ ಎಂಬ ಕಾರಣ ನೀಡಿ ಮಾರ್ಗಸೂಚಿ ದರವನ್ನು ಹೆಚ್ಚಿಸಿದರೆ ಸರ್ಕಾರಕ್ಕೆ ನೇರವಾಗಿ ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಆದಾಯ ಹೆಚ್ಚಾಗುತ್ತದೆ. ಈ ಮೂಲಕ, ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಾಗಿರುವ ಹಣವನ್ನು ಹೊಂದಿಸಲು ರಾಜ್ಯ ಸರ್ಕಾರ ಮಾಸ್ಟರ್ ಪ್ಲ್ಯಾನ್ ಮಾಡಿದೆ.
ಮೂಲಭೂತ ಸೌಕರ್ಯ ಕಲ್ಪಿಸಿ
ಇದೇ ಸಂದರ್ಭದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದು, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಇದೆ ಎಂದೂ ಪರಿಷತ್ ಸದಸ್ಯ ಮುನಿರಾಜೇಗೌಡ ಸದನದ ಗಮನ ಸೆಳೆದರು. ” ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಅಧಿಕ ಸಂಖ್ಯೆಯಲ್ಲಿ ಜನ ಬರುವ ಕಾರಣ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ನಿರ್ವಹಣೆ ಸವಾಲಿನ ಕೆಲಸವಾಗಿದೆ. ಆದರೆ ಮುಂದಿನ ಒಂದು ವರ್ಷದಲ್ಲಿ ಎಲ್ಲ ಕಚೇರಿಗಳಲ್ಲೂ ಉತ್ತಮ ಜನಸ್ನೇಹಿ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗುತ್ತದೆ. ಪಾಸ್ಪೋರ್ಟ್ ಕಚೇರಿಗಳ ಮಾದರಿಯಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲೂ ಉತ್ತಮ ಮೂಲಭೂತ ಸೌಲಭ್ಯ ನೀಡಲಾಗುವುದು” ಎಂದು ಕೃಷ್ಣ ಭೈರೇಗೌಡ ಭರವಸೆ ನೀಡಿದರು.
ಕರ್ನಾಟಕ
Congress Guarantee: ಸೋಮವಾರದಿಂದ ಅನ್ನಭಾಗ್ಯ ಚಾಲನೆ: ನೇರವಾಗಿ ಅಕೌಂಟಿಗೆ ಬಂದು ಬೀಳಲಿದೆ 170 ರೂ.!
ಕಾಂಗ್ರೆಸ್ ಗ್ಯಾರಂಟಿ ಅನ್ನಭಾಗ್ಯ(Congress Guarantee) ರಾಜಕೀಯ ಹಗ್ಗಜಗ್ಗಾಟ ನಡೆದಿದೆ. ಕೇಂದ್ರ ಸರ್ಕಾರವು ಅನಗತ್ಯವಾಗಿ ಅಡ್ಡಿಪಡಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಸೇರಿ ಅನೇಕರು ಆರೋಪಿಸಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳಲ್ಲೊಂದಾದ (Congress Guarantee) ಅನ್ನಭಾಗ್ಯಕ್ಕೆ ಸೋಮವಾರದಿಂದ ಚಾಲನೆ ಸಿಗಲಿದೆ. ರಾಜ್ಯಕ್ಕೆ ಅಗತ್ಯವಾದ 2.3 ಮೆಟ್ರಿಕ್ ಟನ್ ಅಕ್ಕಿ ದೊರಕದ ಕಾರಣ ಅಲ್ಲಿವರೆಗೆ ಫಲಾನುಭವಿಗಳ ಖಾತೆಗೆ ಮಾಸಿಕ 170 ರೂ. ಹಾಕುವ ಕಾರ್ಯಕ್ಕೆ ಸೋಮವಾರದಿಂದ ಚಾಲನೆ ನೀಡಲಾಗುತ್ತಿದೆ.
ಈಗಾಗಲೆ ಕೇಂದ್ರ ಸರ್ಕಾರ ನೀಡುತ್ತಿರುವ ತಲಾ ಐದು ಕೆ.ಜಿ. ಅಕ್ಕಿ ಜತೆಗೆ ಮತ್ತೆ ಐದು ಕೆ.ಜಿ. ಸೇರಿಸಿ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಭರವಸೆ ನೀಡಿತ್ತು. ಅದರಂತೆ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಮೊದಲ ಸಂಪುಟ ಸಭೆಯಲ್ಲೇ ಎಲ್ಲ ಐದು ಗ್ಯಾರಂಟಿಗಳನ್ನೂ ಈಡೇರಿಸುವುದಾಗಿ ತಿಳಿಸಿತ್ತು.
ಆದರೆ ಅನ್ನ ಭಾಗ್ಯ ಯೋಜನೆಗೆ 2.3 ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದ್ದರಿಂದ ಕೇಂದ್ರ ಸರ್ಕಾರದ ಅಧೀನದ ಭಾರತೀಯ ಆಹಾರ ನಿಗಮವನ್ನು (ಎಫ್ಸಿಐ) ರಾಜ್ಯ ಸರ್ಕಾರ ಸಂಪರ್ಕಿಸಿತ್ತು. ಮೊದಲಿಗೆ ಅಕ್ಕಿಯನ್ನು ತಲಾ 34 ರೂ.ನಂತೆ ನೀಡುವುದಾಗಿ ಎಫ್ಸಿಐ ಒಪ್ಪಿತ್ತು. ಆದರೆ ದೇಶದಲ್ಲಿ ಅಕ್ಕಿ ದರ ನಿಯಂತ್ರಿಸುವ ಸಲುವಾಗಿ ರಾಜ್ಯಗಳಿಗೆ ಅಕ್ಕಿ ನೀಡದಂತೆ ಕೇಂದ್ರ ಸರ್ಕಾರ ಎಫ್ಸಿಐಗೆ ಪತ್ರ ಬರೆದಿತ್ತು.
ಇದರ ನಂತರ ರಾಜಕೀಯ ಹಗ್ಗಜಗ್ಗಾಟ ನಡೆದಿದೆ. ಕೇಂದ್ರ ಸರ್ಕಾರವು ಕಾಂಗ್ರೆಸ್ ಪಕ್ಷದ ಯೋಜನೆಯ ಸಫಲತೆಯನ್ನು ತಡೆಯಲು ಅನಗತ್ಯವಾಗಿ ಅಡ್ಡಿಪಡಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಸೇರಿ ಅನೇಕರು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಯೋಜನೆಯನ್ನು ಜಾರಿ ಮಾಡಲಾಗದೆ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದೆ ಎಂದು ಬಿಜೆಪಿ ಹೇಳುತ್ತಿದೆ.
ಇದೆಲ್ಲದರ ನಡುವೆ, ಅಕ್ಕಿ ದೊರೆಯುವವರೆಗೂ ಪ್ರತಿ ಫಲಾನುಭವಿಗೆ ತಲಾ ಕೆ.ಜಿ. ಅಕ್ಕಿಗೆ ತಗಲುತ್ತಿದ್ದ 34 ರೂ.ನಂತೆ 5 ಕೆ.ಜಿ. ಅಕ್ಕಿಗೆ 170 ರೂ.ನಂತೆ ಕುಟುಂಬದ ಮುಖ್ಯಸ್ಥರ ಪಡಿತರ ಚೀಟಿಯೊಂದಿಗೆ ಸಂಪರ್ಕ ಹೊಂದಿರುವ ಖಾತೆಗೆ ಜಮಾ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಈ ಕಾರ್ಯಕ್ಕೆ ಸೋಮವಾರದಿಂದ ಚಾಲನೆ ನೀಡಲಾಗುತ್ತಿದೆ. ಮಾಸಿಕ ಅಂದಾಜು 850 ಕೋಟಿ ರೂ. ಇದಕ್ಕೆ ತಗುಲಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: Congress Guarantee: ಅಕ್ಕಿಗಾಗಿ ಮತ್ತೆ ಕೇಂದ್ರಕ್ಕೆ ಮೊರೆಯಿಟ್ಟ ಕರ್ನಾಟಕ: ಫಲಿತಾಂಶ ಜೀರೊ ಎಂದ ಸಚಿವ ಮುನಿಯಪ್ಪ
ಸೋಮವಾರ ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದದಾರೆ. ಡಿಬಿಟಿ ಮೂಲಕ ಹಣ ವರ್ಗಾವಣೆಗೆ ಸರ್ಕಾರ ನಿರ್ಧಾರ ಮಾಡಲಾಗಿದ್ದು, 15 ದಿನಗಳ ಒಳಗೆ ಸಂಪೂರ್ಣ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸಲು ಸರ್ಕಾರ ನಿರ್ಧರಿಸಿದೆ. ಅಂದಾಜು1.29 ಕೋಟಿ ಬಿಪಿಎಲ್ ಕಾರ್ಡ್ದಾರರಿಗೆ ಹಣ ವರ್ಗಾವಣೆ ಸಾಧ್ಯತೆಯಿದೆ.
ರಾಜಕೀಯವಾಗಿಯೂ ಈ ಯೋಜನೆಯನ್ನು ಬಳಸಿಕೊಳ್ಳಲು ಕಾಂಗ್ರೆಸ್ ಪ್ಲಾನ್ ಮಾಡಿದ್ದು, ಲೋಕಸಭಾ ಚುನಾವಣಾ ದೃಷ್ಟಿಯಿಂದ ಅನ್ನಭಾಗ್ಯ ಯೋಜನೆಯನ್ನೆ ಅಸ್ತ್ರ ಮಾಡಿಕೊಳ್ಳಬಹುದು ಎನ್ನಲಾಗುತ್ತಿದೆ.
-
ವಿದೇಶ18 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ಕರ್ನಾಟಕ16 hours ago
PSI Scam : ಪಿಎಸ್ಐ ನೇಮಕಾತಿ ಅಕ್ರಮ; ಕೊನೆಗೂ ಅಮೃತ್ ಪಾಲ್ಗೆ ಜಾಮೀನು
-
ದೇಶ11 hours ago
Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’
-
ಕರ್ನಾಟಕ12 hours ago
Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?
-
South Cinema15 hours ago
Darshan Thoogudeepa: ನಟ ದರ್ಶನ್ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ; ಕ್ಷಮೆಗೆ ಆಗ್ರಹ
-
ಅಂಕಣ19 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?
-
ದೇಶ16 hours ago
Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್ಐ’ ಎಂದು ಬರೆದ ದುರುಳರು!
-
ದೇಶ9 hours ago
Lawyer Sara Sunny: ಸುಪ್ರೀಂ ಕೋರ್ಟ್ನಲ್ಲಿ ಮೊದಲ ಬಾರಿಗೆ ಸಂಜ್ಞೆ ಭಾಷೆಯಲ್ಲಿ ವಾದ ಮಂಡನೆ! ಇತಿಹಾಸ ಸೃಷ್ಟಿಸಿದ ಸಾರಾ