ಕ್ರಿಕೆಟ್
INDvsAUS : ಭಾರತವನ್ನು ಹೀನಾಯವಾಗಿ ಸೋಲಿಸುವ ಮೂಲಕ ಹೊಸ ದಾಖಲೆ ಬರೆದ ಆಸ್ಟ್ರೇಲಿಯಾ ತಂಡ
ಆಸ್ಟ್ರೇಲಿಯಾ ತಂಡ ವಿದೇಶ ಪ್ರವಾಸದ ಸರಣಿಯಲ್ಲಿ ಅತಿ ಕಡಿಮೆ ಎಸೆತಗಳಲ್ಲಿ ರನ್ ಚೇಸ್ ಮಾಡುವ ಮೂಲಕ ಏಕ ದಿನ ಮಾದರಿಯಲ್ಲಿ ಹೊಸ ದಾಖಲೆ ಸೃಷ್ಟಿಸಿತು.
ಹೈದರಾಬಾದ್: ಭಾರತದ ಆತಿಥ್ಯದಲ್ಲಿ ಏಕ ದಿನ ವಿಶ್ವ ಕಪ್ ನಡೆಯಲಿದೆ. ಅದಕ್ಕೆ ಇನ್ನು ಕೆಲವೇ ತಿಂಗಳುಗಳು ಮಾತ್ರ ಬಾಕಿ ಉಳಿದಿವೆ. ಆದರೆ, ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯ (INDvsAUS) ಎರಡನೇ ಪಂದ್ಯದಲ್ಲಿ ಭಾರತ ತಂಡ ನೀಡಿದ ಪ್ರದರ್ಶನ ವಿಶ್ವ ಕಪ್ ಸಿದ್ಧತೆಗೆ ಪೂರಕವಾಗಿಲ್ಲ ಎಂಬ ಅಭಿಪ್ರಾಯ ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿದೆ. ಆಸ್ಟ್ರೇಲಿಯಾ ತಂಡ ಹೈದರಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಸಂಪೂರ್ಣವಾಗಿ ಮೇಲುಗೈ ಸಾಧಿಸಿತ್ತು. ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಪ್ರವಾಸಿ ತಂಡವೇ ದರ್ಬಾರ್ ನಡೆಸಿತು. ಹೀಗಾಗಿ ರೋಹಿತ್ ಶರ್ಮಾ ನೇತೃತ್ವದ ಬಳಗ 10 ವಿಕೆಟ್ ಹೀನಾಯ ಸೋಲಿಗೆ ಒಳಗಾಯಿತು. ಟೀಮ್ ಇಂಡಿಯಾವನ್ನು ಬೃಹತ್ ಅಂತರದಿಂದ ಸೋಲಿಸಿದ ಆಸ್ಟ್ರೇಲಿಯಾ ತಂಡ ಇದೇ ವೇಳೆ ಏಕ ದಿನ ಮಾದರಿಯಲ್ಲಿ ಒಂದು ವಿಶಿಷ್ಟ ದಾಖಲೆಯನ್ನು ಮಾಡಿದೆ.
ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 26 ಓವರ್ಗಳಲ್ಲಿ 117 ರನ್ಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 11 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 121 ರನ್ ಬಾರಿಸಿ ವಿಜಯ ಸಾಧಿಸಿದೆ. ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್ಗಳಾದ ಮಿಚೆಲ್ ಮಾರ್ಷ್ (ಅಜೇಯ 66) ಹಾಗೂ ಟ್ರಾವಿಡ್ ಹೆಡ್ (ಅಜೇಯ 51) ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 66 ಎಸೆತಗಳಲ್ಲಿ (11 ಓವರ್) ವಿಕೆಟ್ ನಷ್ಟವಿಲ್ಲದೆ ಭಾರತ ತಂಡ ನೀಡಿದ್ದ 118 ರನ್ಗಳ ಗುರಿ ಬೆನ್ನಟ್ಟಿದೆ. ಇದು ಏಕ ದಿನ ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾ ತಂಡದ ದಾಖಲಿಸಿದ ಅತ್ಯುತ್ತಮ ಗೆಲುವು.
ಅಂದ ಹಾಗೆ ಆಸೀಸ್ ಬಳಗ ತವರು ನೆಲದಲ್ಲಿ ಇದಕ್ಕಿಂತಲೂ ಕಡಿಮೆ ಓವರ್ಗಳಲ್ಲಿ ಏಕ ದಿನ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. 2013ರಲ್ಲಿ ಪರ್ತ್ನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಆಸ್ಟ್ರೇಲಿಯಾ ತಂಡ 9.2 ಓವರ್ಗಳಲ್ಲಿ ಚೇಸ್ ಮಾಡಿ ಗೆಲುವು ಸಾಧಿಸಿತ್ತು. ಆ ಪಂದ್ಯದಲ್ಲಿ ಆಸೀಸ್ 1 ವಿಕೆಟ್ಗೆ 71 ರನ್ ಗಳಿಸಿತ್ತು. ಇಲ್ಲಿ ಆಸ್ಟ್ರೇಲಿಯಾ ತಂಡ ಒಂದು ವಿಕೆಟ್ ನಷ್ಟ ಮಾಡಿಕೊಂಡಿತ್ತು. ಅದಕ್ಕಿಂತ ಮೊದಲು 2003ರಲ್ಲಿ ಸಿಡ್ನಿಯಲ್ಲಿ ಇಂಗ್ಲೆಂಡ್ ತಂಡ ನೀಡಿದ್ದ 118 ರನ್ಗಳ ಗುರಿಯನ್ನು ಮೀರಿತ್ತು. ಇಲ್ಲಿ ವಿಕೆಟ್ ನಷ್ಟವಾಗಿರಲಿಲ್ಲ. ಆದರೆ, 12.2 ಓವರ್ಗಳನ್ನು ತೆಗೆದುಕೊಂಡಿತ್ತು.
ಭಾರತದ ಬ್ಯಾಟಿಂಗ್ ವೈಫಲ್ಯ
ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ನಾಯಕತ್ವ ವಹಿಸಿಕೊಂಡರು. ಆದರೆ ಅವರ ಆಗಮನ ತಂಡಕ್ಕೆ ಯಾವುದೇ ಪ್ರಯೋಜನಾಗಲಿಲ್ಲ ಅವರು 13 ರನ್ಗೆ ಆಟ ಮುಗಿಸಿದರು. ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿಯೂ ಶೂನ್ಯಕ್ಕೆ ಔಟಾಗುವ ಮೂಲಕ ಘೋರ ವೈಫಲ್ಯ ಕಂಡರು. ಮೊದಲ ಪಂದ್ಯದಲ್ಲಿಯೂ ಅವರು ಸ್ಟಾರ್ಕ್ ಎಸೆತಕ್ಕೆ ಶೂನ್ಯ ಸುತ್ತಿದ್ದರು.
ಮುಂಬಯಿ ಪಂದ್ಯದ ಗೆಲುವಿನ ಹೀರೋ ಕೆ.ಎಲ್. ರಾಹುಲ್(9) ಕೂಡ ಈ ಪಂದ್ಯದಲ್ಲಿ ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲರಾದರು. ವಿರಾಟ್ ಕೊಹ್ಲಿ 31 ರನ್ ಗಳಿಸಿದರು. ಅಂತಿಮವಾಗಿ ಅಕ್ಷರ್ ಪಟೇಲ್ ಅವರು ನಡೆಸಿದ ಹೋರಾಟದಿಂದಾಗಿ ಭಾರತ 100 ಗಡಿ ದಾಟಿತು. ಅಕ್ಷರ್ ಪಟೇಲ್ ಅಜೇಯ 29 ರನ್ ಬಾರಿಸಿದರು. ಇವರಿಗೆ ಒಬ್ಬ ಆಟಗಾರ ಸಾಥ್ ನೀಡುತ್ತಿದ್ದರೂ ಭಾರತ 150 ಗಡಿ ದಾಟುತ್ತಿತ್ತು.
ಇದನ್ನೂ ಓದಿ : WTC 2023 Final: ಓವಲ್ ಕದನಕ್ಕೆ ಕಾಯುತ್ತಿದ್ದೇವೆ; ಫೈನಲ್ಗೂ ಮುನ್ನವೇ ರೋಹಿತ್ ಪಡೆಗೆ ಎಚ್ಚರಿಕೆ ನೀಡಿದ ಸ್ಮಿತ್
ಮಿಚೆಲ್ ಸ್ಟಾರ್ಕ್ ಮತ್ತು ಸೀನ್ ಅಬೋಟ್ ಅವರು ಸೇರಿಕೊಂಡು ಭಾರತದ ಬ್ಯಾಟರ್ಗಳಿಗೆ ಪೆವಿಲಿಯನ್ ದಾರಿ ತೋರಿಸುವಲ್ಲಿ ಯಶಸ್ಸು ಕಂಡರು. ಅದರಲ್ಲಿಯೂ ಸ್ಟಾರ್ಕ್ ಅವರ ದಾಳಿ ತುಂಬಾನೆ ಘಾತಕವಾಗಿತ್ತು. ಆರಂಭಿಕ ನಾಲ್ಕು ವಿಕೆಟ್ ಕೀಳುವ ಮೂಲಕ ಭಾರತಕ್ಕೆ ಆರಂಭಿಕ ಆಘಾತವಿಕ್ಕಿದರು. 8 ಓವರ್ ಎಸೆದ ಅವರು ಒಂದು ಮೇಡನ್ ಸಹಿತ 53 ರನ್ ವೆಚ್ಚದಲ್ಲಿ 5 ವಿಕೆಟ್ ಕಿತ್ತು ಮಿಂಚಿದರು. ಸೀನ್ ಅಬೋಟ್ 3 ವಿಕೆಟ್ ಕಿತ್ತರು.
ಮಿಚೆಲ್ ಸ್ಟಾರ್ಕ್ ಅವರ ಸ್ವಿಂಗ್ ದಾಳಿಗೆ ತತ್ತರಿಸಿದ ಭಾರತ(IND VS AUS) ತಂಡ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಕೇವಲ 117 ರನ್ಗೆ ಕುಸಿತ ಕಂಡಿದೆ. ಇದು ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗಳಿಸಿದ ಅತಿ ಕಡಿಮೆ ಮೊತ್ತವಾಗಿದೆ. ಆದರೆ 1981ರಲ್ಲಿ ಸಿಡ್ನಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತ 63 ರನ್ಗೆ ಆಲೌಟ್ ಆದ ಸಂಕಟಕ್ಕೆ ಸಿಲುಕಿತ್ತು.
ಕ್ರಿಕೆಟ್
WPL 2023: ಸೋಲಿನೊಂದಿಗೆ ಅಭಿಯಾನ ಮುಗಿಸಿದ ಆರ್ಸಿಬಿ
ಮುಂಬೈ ಇಂಡಿಯನ್ಸ್ ವಿರುದ್ಧದ ಮಂಗಳವಾರದ ಅಂತಿಮ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ವಿಕೆಟ್ಗಳ ಸೋಲಿಗೆ ತುತ್ತಾಗಿದೆ.
ಮುಂಬಯಿ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ ಸ್ಮೃತಿ ಮಂಧಾನ ಸಾರಥ್ಯದ ಆರ್ಸಿಬಿ(Royal Challengers Bangalore) ತಂಡ ಇದೀಗ ಸೋಲಿನೊಂದಿಗೆಯೇ ತನ್ನ ಅಭಿಯಾನವನ್ನು ಮುಗಿಸಿದೆ. ಮಂಗಳವಾರ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ 4 ವಿಕೆಟ್ಗಳ ಸೋಲು ಕಂಡಿದೆ. ಮುಂಬೈ ಇಂಡಿಯನ್ಸ್ ಈ ಗೆಲುವಿನೊಂದಿಗೆ ಮತ್ತೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
ಮುಂಬಯಿಯ ಡಿ.ವೈ. ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಡಬಲ್ ಹೆಡ್ಡರ್ ಮುಖಾಮುಖಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ರಿಚಾ ಘೋಷ್ ಮತ್ತು ಎಲ್ಲಿಸ್ ಪೆರ್ರಿ ಅವರ ಸಣ್ಣ ಹೋರಾಟದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಬಾರಿಸಿತು. ಜಬಾಬಿತ್ತ ಮುಂಬೈ ಇಂಡಿಯನ್ಸ್ 16.3 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 129 ರನ್ ಬಾರಿಸಿ ಗೆಲುವು ದಾಖಲಿಸಿತು.
ಸಣ್ಣ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈಗೆ ಯಾಸ್ತಿಕಾ ಭಾಟಿಯಾ ಮತ್ತು ಹೇಲಿ ಮ್ಯಾಥ್ಯೂಸ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ಗೆ 53 ರನ್ಗಳ ಜತೆಯಾಟ ನಡೆಸಿತು. ಯಾಸ್ತಿಕಾ 30 ರನ್ ಗಳಿಸಿದರೆ, ಮ್ಯಾಥ್ಯೂಸ್ 24 ರನ್ ಬಾರಿಸಿದರು. ಉಭಯ ಆಟಗಾರ್ತಿಯ ವಿಕೆಟ್ ಪತನದ ಬೆನ್ನಲ್ಲೇ ತಂಡ ನಾಯಕೀಯ ಕುಸಿತ ಕಂಡಿತು. ನಾಯಕಿ ಹರ್ಮನ್ಪ್ರೀತ್ ಕೌರ್(2), ನ್ಯಾಟ್ ಸ್ಕಿವರ್-ಬ್ರಂಟ್ (13) ಅಲ್ಪ ಮೊತ್ತಕ್ಕೆ ಔಟಾದರು. ತಂಡದ ಮೊತ್ತ 74 ಆಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಮುಂಬೈ ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿತು.
ನಾಟಕೀಯ ಕುಸಿತ ಕಂಡ ಮುಂಬೈ ತಂಡಕ್ಕೆ ಬೌಲಿಂಗ್ನಲ್ಲಿ ಮೂರು ವಿಕೆಟ್ ಕಿತ್ತು ಪ್ರಮುಖ ಪಾತ್ರ ನಿರ್ವಹಿಸಿದ್ದ ಅಮೇಲಿಯಾ ಕೆರ್ ಮತ್ತು ಪೂಜಾ ವಸ್ತ್ರಾಕರ್ ಕೆಳ ಕ್ರಮಾಂಕದಲ್ಲಿ ತಾಳ್ಮೆಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಂಡರು. ತಂಡದ ಗೆಲುವಿಗೆ 6 ರನ್ ಅಗತ್ಯವಿದ್ದಾಗ ಪೂಜಾ ವಿಕೆಟ್ ಕೈಚೆಲ್ಲಿದರು. ಅವರು 19 ರನ್ ಗಳಿಸಿದರು. ಅಮೇಲಿಯಾ ಕೆರ್ ಅಜೇಯ 31 ರನ್ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಈ ಅಜೇಯ ಇನಿಂಗ್ಸ್ ಆಟದ ವೇಳೆ 4 ಬೌಂಡರಿ ಸಿಡಿಯಿತು.
ಮಂದ ಗತಿಯ ಬ್ಯಾಟಿಂಗ್ ನಡೆಸಿದ ಮಂಧಾನ ಪಡೆ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಆರ್ಸಿಬಿ ಆರಂಭಿಕ ಆಘಾತ ಕಂಡಿತು. ಗುಜರಾತ್ ಜೈಂಟ್ಸ್ ವಿರುದ್ಧ ಸಿಡಿಲಬ್ಬರ ಬ್ಯಾಟಿಂಗ್ ನಡೆಸಿ ನಡುಕ ಹುಟ್ಟಿಸಿದ್ದ ನ್ಯೂಜಿಲ್ಯಾಂಡ್ನ ಸ್ಟಾರ್ ಆಲ್ ರೌಂಡರ್ ಸೋಫಿ ಡಿವೈನ್ ಅವರು ಈ ಪಂದ್ಯದಲ್ಲಿ ರನೌಟ್ ಸಂಕಟಕ್ಕೆ ಸಿಲುಕಿದರು. ಇಲ್ಲದ ರನ್ ಕದಿಯಲೆತ್ನಿಸಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಅನುಭಸಿದರು.
ನಾಯಕಿ ಸ್ಮೃತಿ ಮಂಧಾನ ಅವರ ಆಟ ಈ ಪಂದ್ಯದಲ್ಲಿಯೂ ಮಂದ ಗತಿಯಿಂದ ಕೂಡಿತ್ತು. 25 ಎಸೆತ ಎದುರಿಸಿ 24 ರನ್ ಗಳಿಸಿದರು. ಇದರೊಂದಿಗೆ ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಮಂಧಾನ ಸಂಪೂರ್ಣ ವೈಫಲ್ಯ ಕಂಡಂತಾಯಿತು. ಈ ಮೂಲಕ ಮುಂದಿನ ಬಾರಿಯ ಆವೃತ್ತಿಯಲ್ಲಿ ಅವರು ಆರ್ಸಿಬಿ ತಂಡದಲ್ಲಿಯೇ ಉಳಿಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಆರಂಭಿಕ ಆಟಗಾರ್ತಿಯರ ವಿಕೆಟ್ ಪತನದ ಬಳಿಕ ಆಡಲಿಳಿದ ಆಸ್ಟ್ರೇಲಿಯಾದ ಆಲ್ರೌಂಡರ್ ಎಲ್ಲಿಸ್ ಪೆರ್ರಿ ತಂಡಕ್ಕೆ ಆಸರೆಯಾದರು. ಪ್ರತಿ ಓವರ್ನಲ್ಲಿ ಒಂದು ಬೌಂಡರಿ ಬಾರಿಸುವ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸಲಾರಂಭಿಸಿದರು. ಆದರೆ ಇವರಿಗೆ ಮತ್ತೊಂದು ತುದಿಯಲ್ಲಿ ಯಾರು ಕೂಡ ಉತ್ತಮ ಸಾಥ್ ನೀಡಲಿಲ್ಲ. ಹೀತರ್ ನೈಟ್ ಮತ್ತು ಕನಿಕಾ ಅಹುಜಾ ತಲಾ 12 ರನ್ಗೆ ಆಟ ಮುಗಿಸಿದರು. ಇದರ ಬೆನ್ನಲ್ಲೇ ಎಲ್ಲಿಸ್ ಪೆರ್ರಿ ಕೂಡ ನ್ಯಾಟ್ ಸ್ಕಿವರ್ ಬ್ರಂಟ್ ಎಸೆತದಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. 38 ಎಸೆತ ಎದುರಿಸಿದ ಅವರು ಮೂರು ಬೌಂಡರಿ ನೆರವಿನಿಂದ 29 ರನ್ ಬಾರಿಸಿದರು. ಸ್ಕಿವರ್ ಬ್ರಂಟ್ 24 ರನ್ಗೆ 2 ವಿಕೆಟ್ ಉರುಳಿಸಿದರು.
ಇದನ್ನೂ ಓದಿ WPL 2023 : ಸೇಡು ತೀರಿಸಿಕೊಂಡ ಡೆಲ್ಲಿ ಪಡೆ, ಮುಂಬಯಿ ವಿರುದ್ಧ 9 ವಿಕೆಟ್ ಸುಲಭ ಜಯ
ಅಂತಿಮ ಹಂತದಲ್ಲಿ ರಿಚಾ ಘೋಷ್ ಬಿರುಸಿನ ಬ್ಯಾಟಿಂಗ್ ನಡೆಸಿದ ಪರಿಣಾಮ ಆರ್ಸಿಬಿ 100ರ ಗಡಿ ದಾಟಿತು. ಕ್ರೀಸ್ ಗಿಳಿದ ಆರಂಭದಿಂದಲೇ ಸಿಕ್ಸರ್, ಬೌಂಡರಿಗಳ ಮೂಲಕ ಮುಂಬೈ ಬೌಲರ್ಗಳ ಸಣ್ಣ ಮೊತ್ತದ ಯೋಜನೆಯನ್ನು ತಲೆಕೆಳಗಾಗಿಸಿದರು. ಆದರೆ ಅಂತಿಮ ಓವರ್ ಮೊದಲ ಎಸೆತದಲ್ಲೇ ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದರು. ಅವರ ವಿಕೆಟ್ ಉರುಳಿದ ಬಳಿಕ ತಂಡದ ಮೊತ್ತವೂ ಕುಸಿಯಿತು. ಒಟ್ಟು 13 ಎಸೆತ ಎದುರಿಸಿದ ಅವರು ಮೂರು ಬೌಂಡರಿ 2 ಸಿಕ್ಸರ್ ಬಾರಿಸಿ 29 ರನ್ ಕಲೆಹಾಕಿದರು. ಮುಂಬೈ ಪರ ಅಮೇಲಿಯಾ ಕೆರ್ 22 ರನ್ ವೆಚ್ಚದಲ್ಲಿ ಮೂರು ವಿಕೆಟ್ ಪಡೆದರು. ಸೈಕಾ ಇಶಾಖ್ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಆರ್ಸಿಬಿ; 20 ಓವರ್ಗಳಲ್ಲಿ 9 ವಿಕೆಟ್ಗೆ 125( ಎಲ್ಲಿಸ್ ಪೆರ್ರಿ 29, ರಿಚಾ ಘೋಷ್ 29, ಅಮೇಲಿಯಾ ಕೆರ್ 22ಕ್ಕೆ 3). ಮುಂಬೈ ಇಂಡಿಯನ್ಸ್: 16.3 ಓವರ್ಗಳಲ್ಲಿ 6 ವಿಕೆಟ್ಗೆ 129( ಅಕೇಲಿಯಾ ಕೆರ್ ಅಜೇಯ 31, ಮ್ಯಾಥ್ಯೂಸ್ 24, ಯಾಸ್ತಿಕಾ ಭಾಟಿಯಾ 30)
ಕ್ರಿಕೆಟ್
WPL 2023: ಮುಂಬೈ ಬೌಲಿಂಗ್ ದಾಳಿಗೆ ಬೆದರಿ 125ಕ್ಕೆ ಕುಸಿದ ಆರ್ಸಿಬಿ
ಮುಂಬೈ ಇಂಡಿಯನ್ಸ್ ವಿರುದ್ಧದ ಮಂಗಳವಾರದ ಮೊದಲ ಪಂದ್ಯದಲ್ಲಿ ಆರ್ಸಿಬಿ 125 ರನ್ ಗಳಿಸಿ ಸವಾಲೊಡ್ಡಿದೆ.
ಮುಂಬಯಿ: ಮುಂಬೈ ಇಂಡಿಯನ್ಸ್ ತಂಡದ ಸಂಘಟಿತ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮಂಗಳವಾರದ ಮಹಿಳಾ ಪ್ರೀಮಿಯರ್ ಲೀಗ್ನ(WPL 2023) ಹಗಲು ಪಂದ್ಯದಲ್ಲಿ 125 ರನ್ ಗಳಿಸಿ ಸವಾಲೊಡ್ಡಿದೆ.
ಮುಂಬಯಿಯ ಡಿ.ವೈ. ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ನ ದಿನದ ಮೊದಲ ಮುಖಾಮುಖಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಬಾರಿಸಿದೆ. ಮುಂಬೈ ಗೆಲುವಿಗೆ 126 ರನ್ ಬಾರಿಸಬೇಕಿದೆ.
ಗುಜರಾತ್ ಜೈಂಟ್ಸ್ ವಿರುದ್ಧ ಸಿಡಿಲಬ್ಬರ ಬ್ಯಾಟಿಂಗ್ ನಡೆಸಿ ನಡುಕ ಹುಟ್ಟಿಸಿದ್ದ ನ್ಯೂಜಿಲ್ಯಾಂಡ್ನ ಸ್ಟಾರ್ ಆಲ್ ರೌಂಡರ್ ಸೋಫಿ ಡಿವೈನ್ ಅವರು ಈ ಪಂದ್ಯದಲ್ಲಿ ರನೌಟ್ ಸಂಕಟಕ್ಕೆ ಸಿಲುಕಿದರು. ಇಲ್ಲದ ರನ್ ಕದಿಯಲೆತ್ನಿಸಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಅನುಭಸಿದರು.
ನಾಯಕಿ ಸ್ಮೃತಿ ಮಂಧಾನ ಅವರ ಆಟ ಈ ಪಂದ್ಯದಲ್ಲಿಯೂ ಮಂದ ಗತಿಯಿಂದ ಕೂಡಿತ್ತು. 25 ಎಸೆತ ಎದುರಿಸಿ 24 ರನ್ ಗಳಿಸಿದರು. ಇದರೊಂದಿಗೆ ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಮಂಧಾನ ಸಂಪೂರ್ಣ ವೈಫಲ್ಯ ಕಂಡಂತಾಯಿತು. ಈ ಮೂಲಕ ಮುಂದಿನ ಬಾರಿಯ ಆವೃತ್ತಿಯಲ್ಲಿ ಅವರು ಆರ್ಸಿಬಿ ತಂಡದಲ್ಲಿಯೇ ಉಳಿಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಆರಂಭಿಕ ಆಟಗಾರ್ತಿಯರ ವಿಕೆಟ್ ಪತನದ ಬಳಿಕ ಆಡಲಿಳಿದ ಆಸ್ಟ್ರೇಲಿಯಾದ ಆಲ್ರೌಂಡರ್ ಎಲ್ಲಿಸ್ ಪೆರ್ರಿ ತಂಡಕ್ಕೆ ಆಸರೆಯಾದರು. ಪ್ರತಿ ಓವರ್ನಲ್ಲಿ ಒಂದು ಬೌಂಡರಿ ಬಾರಿಸುವ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸಲಾರಂಭಿಸಿದರು. ಆದರೆ ಇವರಿಗೆ ಮತ್ತೊಂದು ತುದಿಯಲ್ಲಿ ಯಾರು ಕೂಡ ಉತ್ತಮ ಸಾಥ್ ನೀಡಲಿಲ್ಲ. ಹೀತರ್ ನೈಟ್ ಮತ್ತು ಕನಿಕಾ ಅಹುಜಾ ತಲಾ 12 ರನ್ಗೆ ಆಟ ಮುಗಿಸಿದರು. ಇದರ ಬೆನ್ನಲ್ಲೇ ಎಲ್ಲಿಸ್ ಪೆರ್ರಿ ಕೂಡ ನ್ಯಾಟ್ ಸ್ಕಿವರ್ ಬ್ರಂಟ್ ಎಸೆತದಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. 38 ಎಸೆತ ಎದುರಿಸಿದ ಅವರು ಮೂರು ಬೌಂಡರಿ ನೆರವಿನಿಂದ 29 ರನ್ ಬಾರಿಸಿದರು. ಸ್ಕಿವರ್ ಬ್ರಂಟ್ 24 ರನ್ಗೆ 2 ವಿಕೆಟ್ ಉರುಳಿಸಿದರು.
ಇದನ್ನೂ ಓದಿ WPL 2023 : ಸೇಡು ತೀರಿಸಿಕೊಂಡ ಡೆಲ್ಲಿ ಪಡೆ, ಮುಂಬಯಿ ವಿರುದ್ಧ 9 ವಿಕೆಟ್ ಸುಲಭ ಜಯ
ಅಂತಿಮ ಹಂತದಲ್ಲಿ ರಿಚಾ ಘೋಷ್ ಬಿರುಸಿನ ಬ್ಯಾಟಿಂಗ್ ನಡೆಸಿದ ಪರಿಣಾಮ ಆರ್ಸಿಬಿ 100ರ ಗಡಿ ದಾಟಿತು. ಕ್ರೀಸ್ ಗಿಳಿದ ಆರಂಭದಿಂದಲೇ ಸಿಕ್ಸರ್, ಬೌಂಡರಿಗಳ ಮೂಲಕ ಮುಂಬೈ ಬೌಲರ್ಗಳ ಸಣ್ಣ ಮೊತ್ತದ ಯೋಜನೆಯನ್ನು ತಲೆಕೆಳಗಾಗಿಸಿದರು. ಆದರೆ ಅಂತಿಮ ಓವರ್ ಮೊದಲ ಎಸೆತದಲ್ಲೇ ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದರು. ಅವರ ವಿಕೆಟ್ ಉರುಳಿದ ಬಳಿಕ ತಂಡದ ಮೊತ್ತವೂ ಕುಸಿಯಿತು. ಒಟ್ಟು 13 ಎಸೆತ ಎದುರಿಸಿದ ಅವರು ಮೂರು ಬೌಂಡರಿ 2 ಸಿಕ್ಸರ್ ಬಾರಿಸಿ 29 ರನ್ ಕಲೆಹಾಕಿದರು. ಮುಂಬೈ ಪರ ಅಮೇಲಿಯಾ ಕೆರ್ 22 ರನ್ ವೆಚ್ಚದಲ್ಲಿ ಮೂರು ವಿಕೆಟ್ ಪಡೆದರು. ಸೈಕಾ ಇಶಾಖ್ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಆರ್ಸಿಬಿ; 20 ಓವರ್ಗಳಲ್ಲಿ 9 ವಿಕೆಟ್ಗೆ 125( ಎಲ್ಲಿಸ್ ಪೆರ್ರಿ 29, ರಿಚಾ ಘೋಷ್ 29, ಅಮೇಲಿಯಾ ಕೆರ್ 22ಕ್ಕೆ 3)
ಕ್ರಿಕೆಟ್
IND VS AUS: ಅಂತಿಮ ಏಕದಿನ ಪಂದ್ಯದಿಂದ ಸೂರ್ಯಕುಮಾರ್ಗೆ ಕೊಕ್ ಸಾಧ್ಯತೆ
ಆಸ್ಟ್ರೇಲಿಯಾ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ನಡೆಸಿದ ಸೂರ್ಯಕಯಮಾರ್ ಯಾದವ್ಗೆ ಅಂತಿಮ ಏಕದಿನ ಪಂದ್ಯದಲ್ಲಿ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ.
ಚೆನ್ನೈ: ಆಸ್ಟ್ರೇಲಿಯಾ(IND VS AUS) ವಿರುದ್ಧ ಆಡಿದ ಎರಡು ಏಕದಿನ ಪಂದ್ಯದಲ್ಲಿಯೂ ಶೂನ್ಯ ಸುತ್ತಿದ ಸೂರ್ಯಕುಮಾರ್ ಯಾದವ್((Suryakumar Yadav)) ಅವರನ್ನು ಅಂತಿಮ ಏಕದಿನ ಪಂದ್ಯದಿಂದ ಕೈ ಬಿಡಲಾಗುವುದು ಎಂದು ತಿಳಿದುಬಂದಿದೆ. ಭಾರತ ಮತ್ತು ಆಸೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯ ಬುಧವಾರ(ಮಾರ್ಚ್ 22) ಚೆನ್ನೈಯಲ್ಲಿ ನಡೆಯಲಿದೆ.
ಟ್ವಿ 20 ಕ್ರಿಕೆಟ್ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಸೂರ್ಯಕುಮಾರ್ ಯಾದವ್ ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಇನ್ನೂ ಖಾತೆ ತೆರೆಯುವಲ್ಲಿ ವಿಫಲರಾಗಿದ್ದಾರೆ. ಎರಡೂ ಪಂದ್ಯಗಳಲ್ಲಿಯೂ ಮಿಚೆಲ್ ಸ್ಟಾರ್ಕ್ ಅವರ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದಿದ್ದರು. ಇದೀಗ ಸರಣಿ ನಿರ್ಣಾಯಕ ಪಂದ್ಯದಲ್ಲಿ ಅವರನ್ನು ಆಡಿಸುವುದು ಅನುಮಾನ ಎನ್ನಲಾಗಿದೆ.
ಅಂತಿಮ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಬದಲು ಇಶಾನ್ ಕಿಶನ್(Ishan Kishan) ಆಡುವ ಬಳಗದಲ್ಲಿ ಕಾಣಿಸಿಕೊಳ್ಳವುದು ಬಹುತೇಕ ಖಚಿತ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ ಸ್ಪಿನ್ನರ್ ಕುಲ್ದೀಪ್ ಯಾದವ್(Kuldeep Yadav) ಬದಲು ಯಜುವೇಂದ್ರ ಚಹಲ್(Yuzvendra Chahal) ಆಡುವ ಸಾಧ್ಯತೆ ಇದೆ. ಕುಲ್ದೀಪ್ ಕಳೆದ ಎರಡು ಪಂದ್ಯಗಳಲ್ಲಿ ವಿಕೆಟ್ ಕೀಳಲು ವಿಫಲವಾಗುವ ಜತೆಗೆ ಅತ್ಯಂತ ದುಬಾರಿಯಾಗಿ ಪರಿಣಮಿಸಿದ್ದರು.
ಭಾರತ ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಒಂದೊಮ್ಮೆ ಭಾರತ ಈ ಪಂದ್ಯದಲ್ಲಿ ಸೋತರೆ ಸರಣಿಯ ಜತೆಗೆ ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನ ಕಳೆದುಕೊಳ್ಳಲಿದೆ. ಹೀಹಾಗಿ ಭಾರತಕ್ಕೆ ಈ ಪಂದ್ಯ ಎರಡು ಕಾರಣಗಳಿಂದ ಮಹತ್ವದಾಗಿದೆ.
ಇದನ್ನೂ ಓದಿ IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
ಭಾರತ ಸಂಭಾವ್ಯ ತಂಡ
ಶುಭಮನ್ ಗಿಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ , ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯಜುವೇಂದ್ರ ಚಹಲ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ.
ಕ್ರಿಕೆಟ್
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಬದಲು ಇಶಾನ್ ಕಿಶನ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಚೆನ್ನೈ: ಪ್ರವಾಸಿ ಆಸ್ಟ್ರೇಲಿಯಾ(IND VS AUS) ಮತ್ತು ಆತಿಥೇಯ ಭಾರತ ವಿರುದ್ಧದ ಅಂತಿಮ ಏಕದಿನ ಪಂದ್ಯ ಬುಧವಾರ(ಮಾರ್ಚ್ 22) ಚೆನ್ನೈನಲ್ಲಿ(Chennai) ನಡೆಯಲಿದೆ. ಈಗಾಗಲೇ ಉಭಯ ತಂಡಗಳು 1-1 ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿದೆ. ಹೀಗಾಗಿ ಸರಣಿ ಗೆಲುವು ದಾಖಲಿಸಲು ಇತ್ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದೆ. ಈ ಪಂದ್ಯದ ಪಿಚ್ ರಿಪೋರ್ಟ್ ಮತ್ತು ಸಂಭಾವ್ಯ ತಂಡಗಳ ಮಾಹಿತಿ ಇಂತಿದೆ.
ಪಿಚ್ ರಿಪೋರ್ಟ್
ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನ(MA Chidambaram Stadium) ಪಿಚ್ ಸ್ಪಿನ್ ಸ್ನೇಹಿಯಾಗಿದೆ. ಇಲ್ಲಿ ಸ್ಪಿನರ್ಗಳು ಉತ್ತಮ ದಾಖಲೆ ಹೊಂದಿದ್ದಾರೆ. ಹೀಗಾಗಿ ಉಭಯ ತಂಡಗಳು ಸ್ಪಿನ್ಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. ಇಲ್ಲಿ ಒಟ್ಟು 21 ಏಕದಿನ ಪಂದ್ಯಗಳು ನಡೆದಿತ್ತು. ದೊಡ್ಡ ಮೊತ್ತ ದಾಖಲಾಗಿಲ್ಲ. ಎವರೇಜ್ 250 ರಿಂದ 280 ರನ್ ಬಾರಿಸಿದರೆ ಇದು ದೊಡ್ಡ ಮೊತ್ತ ಎನ್ನಬಹುದು. ಮೊದಲು ಬ್ಯಾಟಿಂಗ್ ನಡೆಸಿದ ತಂಡ ಇಲ್ಲಿ 13 ಬಾರಿ ಗೆದ್ದಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದರೆ ಒಳಿತು.
ವಿರಾಟ್ ಉತ್ತಮ ದಾಖಲೆ
ಚೆನ್ನೈಯಲ್ಲಿ ನಡೆದ 7 ಏಕ ದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಇದುವರೆಗೆ 283 ರನ್ ಬಾರಿಸಿದ್ದಾರೆ. ಇದರಲ್ಲಿ ಒಂದು ಶತಕವೂ ಸೇರಿದೆ. ಜತೆಗೆ ಈ ಮೈದಾನದಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಇಲ್ಲಿ 2017 ರಲ್ಲಿ ಕೊನೆಯ ಏಕದಿನ ಪಂದ್ಯ ನಡೆದಿತ್ತು. ಈ ಪಂದ್ಯ ಡಕ್ವರ್ತ್ ಲೂಯಿಸ್ ನಿಯಮದನ್ವಯ ಭಾರತ 26 ರನ್ಗಳಿಂದ ಜಯ ಸಾಧಿಸಿತ್ತು.
ಸಂಭಾವ್ಯ ತಂಡಗಳು
ಭಾರತ: ಶುಭಮನ್ ಗಿಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್/ ಇಶಾನ್ ಕಿಶನ್, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ , ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ.
ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್ (ನಾಯಕ), ಮಾರ್ನಸ್ ಲಬುಶೇನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮೆರೂನ್ ಗ್ರೀನ್, ನಥಾನ್ ಎಲ್ಲಿಸ್, ಮಾರ್ಕಸ್ ಸ್ಟೋಯಿನಿಸ್, ಸೀನ್ ಅಬೋಟ್, ಮಿಚೆಲ್ ಸ್ಟಾರ್ಕ್, ಆ್ಯಂಡ ಜಂಪಾ.
-
ಸುವಚನ14 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ20 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಕರ್ನಾಟಕ23 hours ago
Life changing story : ನಿಂದನೆಯೇ ವರವಾಯಿತು, ಹಠ ತೊಟ್ಟು ವಕೀಲನಾಗಿ ಕರಿಕೋಟು ಧರಿಸಿ ವಾದಿಸಿ ಗೆದ್ದ ಯುವಕ!
-
ಆಟೋಮೊಬೈಲ್21 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್5 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ9 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ7 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ9 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ