ದಸರಾ ಸಂಭ್ರಮ
Navaratri 2022 | ನವರಾತ್ರಿ ನವವರ್ಣ: ವಿಸ್ತಾರ ವಿಡಿಯೊ ಸಂಭ್ರಮಕ್ಕೆ ಭರ್ಜರಿ ಪ್ರತಿಕ್ರಿಯೆ
ನವರಾತ್ರಿಯನ್ನು (Navaratri 2022 ) ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೇವಿಯ ಆರಾಧನೆಯ ಜತೆಗೆ ಆಯಾ ದಿನದ ವರ್ಣದ ದಿರಸನ್ನು ಧರಿಸಿ ಮಹಿಳೆಯರು ಸಂಭ್ರಮ ಪಡುತ್ತಿದ್ದಾರೆ. ಇದರ ವಿಡಿಯೊವನ್ನು ವಿಸ್ತಾರ ಡಿಜಿಟಲ್ ವೇದಿಕೆಯಲ್ಲಿ ಹಂಚಿಕೊಂಡು ತಮ್ಮವರೂ ಸಂಭ್ರಮ ಪಡುವಂತೆ ಮಾಡುತ್ತಿದ್ದಾರೆ.
ಬೆಂಗಳೂರು: ನಾಡ ಹಬ್ಬ ನವರಾತ್ರಿಯ (Navaratri 2022) ಸಂಭ್ರಮವನ್ನು ಹೆಚ್ಚಿಸಲು “ವಿಸ್ತಾರ ನ್ಯೂಸ್ʼʼ ಆರಂಭಿಸಿರುವ ನವರಾತ್ರಿ ನವವರ್ಣ ವಿಡಿಯೊ ಸಂಭ್ರಮ ಡಿಜಿಟಲ್ ವೇದಿಕೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನವರಾತ್ರಿಯ ಮೊದಲೆರಡು ದಿನಗಳಲ್ಲಿಯೇ ನೂರಾರು ವಿಡಿಯೊಗಳು ಹರಿದು ಬಂದಿವೆ.
ನವರಾತ್ರಿಯ ಪ್ರತಿದಿನವೂ ಮಹಿಳೆಯರು ನಿಗದಿತ ಬಣ್ಣದ ಉಡುಗೆ ಧರಿಸಿ ಸಂಭ್ರಮಿಸುವುದು ಸಾಮಾನ್ಯ. ಈ ಬಾರಿ ತಾವು ಸಂಭ್ರಮ ಪಡುತ್ತಿರುವ ಸಂದರ್ಭವನ್ನು ವಿಡಿಯೊ ಮಾಡಿ ಕಳುಹಿಸಲು “ವಿಸ್ತಾರ ನ್ಯೂಸ್ʼʼ ಕೋರಿತ್ತು. ಇದಕ್ಕೆ ನಿರೀಕ್ಷೆಗೂ ಮೀರಿ ನಾಡಿನ ಮಹಿಳೆಯರು ಸ್ಪಂದಿಸಿದ್ದು, ವಿಡಿಯೊದ ಮೂಲಕ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಇವುಗಳಲ್ಲಿ ಆಯ್ದ ವಿಡಿಯೊಗಳನ್ನು ಮಾತ್ರ ನಮ್ಮ ಡಿಜೆಟಲ್ ವೇದಿಕೆಯಲ್ಲಿ ಪ್ರಸ್ತುತಪಡಿಸಲಾಗಿದೆ.
ನವರಾತ್ರಿಯ ಸಂದರ್ಭದಲ್ಲಿ ದೇವಿಯ ಒಂಬತ್ತು ರೂಪಗಳಲ್ಲಿ ಪ್ರತಿದಿನ ಒಂದೊಂದು ರೂಪದಂತೆ ಆವಾಹಿಸಿ ಪೂಜಿಸಲಾಗುತ್ತದೆ. ಪ್ರತಿ ದೇವಿಗೆ ವಿಶೇಷವಾದ ಸ್ತ್ರೋತ್ರಗಳಿರುವಂತೆ ವಿಶೇಷವಾದ ವರ್ಣ, ಪುಷ್ಪ, ನೈವೇದ್ಯ, ರಾಗಗಳೂ ಇವೆ. ಆಯಾ ದಿನದಂದು ಪೂಜಿಸುವ ದೇವಿಗೆ ಇಷ್ಟವಾದ ವರ್ಣದ ದಿರಸನ್ನು ಧರಿಸಿ ಮಹಿಳೆಯರು ಸಂಭ್ರಮಿಸುತ್ತಾರೆ. ಈ ಸಂಭ್ರಮವನ್ನು ಈಗ ವಿಡಿಯೊ ಮೂಲಕ ಹಂಚಿಕೊಂಡು ತಮ್ಮವರೆಲ್ಲರೂ ಸಂಭ್ರಮ ಪಡುವಂತೆ ಮಾಡುತ್ತಿದ್ದಾರೆ.
ನವರಾತ್ರಿಯ ಮೊದಲೆರಡು ದಿನ ಆಯಾ ದಿನದ ವರ್ಣದ ದಿರಸನ್ನು ಧರಿಸಿ ನೃತ್ಯ ಮಾಡಿದ, ಕೋಲಾಟ ಆಡಿದ, ಭಜನೆ ಮಾಡಿದ ವಿಡಿಯೊಗಳಲ್ಲದೆ, ತಾವು ವಿಶೇಷವಾಗಿ ಸಂಭ್ರಮಿಸಿದ ವಿಡಿಯೊಗಳನ್ನು ವಿಸ್ತಾರ ನ್ಯೂಸ್ ಓದುಗರು, ನೋಡುಗರು ಕಳುಹಿಸಿಕೊಟ್ಟಿದ್ದಾರೆ. ಮೊದಲ ದಿನ ಬಿಳಿಯ ವಸ್ತ್ರ ಧರಿಸಿದ ಮಹಿಳೆಯರು ಫ್ಯಾಷನ್ ಶೋನಂತೆ ಹೆಜ್ಜೆ ಹಾಕಿದ ಮತ್ತು ಸಮೂಹ ನೃತ್ಯ ಮಾಡಿದ ವಿಡಿಯೊಗಳು ರಾಜ್ಯದ ಗಮನ ಸೆಳೆದಿವೆ.
ನೀವು ನಿಮ್ಮ ವಿಡಿಯೊ ಕಳುಹಿಸಬಹುದು
ಈ ಡಿಜಿಟಲ್ ಸಂಭ್ರಮದಲ್ಲಿ ನೀವೂ ಕೂಡ ಭಾಗವಹಿಸಬಹುದು. ನಿಮ್ಮ ಕುಟುಂಬದ ಮಹಿಳಾ ಸದಸ್ಯರು, ಬಂಧುಗಳು, ಸ್ನೇಹಿತರು, ಅಕ್ಕ-ಪಕ್ಕದ ಮನೆಯವರು, ಕಾಲೇಜು ಸಹಪಾಠಿಗಳು, ಸಹೋದ್ಯೋಗಿಗಳು, ಸಂಘ ಸಂಸ್ಥೆಯ ಸದಸ್ಯರು ಹೀಗೆ ನಿಮ್ಮ ಆಪ್ತರೊಂದಿಗೆ ನೀವು ಆ ದಿನದ ಬಣ್ಣದ ಉಡುಗೆ ತೊಟ್ಟು (ನೆನಪಿರಲಿ ಎಲ್ಲರೂ ನಿಗದಿತ ಒಂದೇ ವರ್ಣದ ದಿರಸು ಧರಿಸಿರಬೇಕು) ವಿಶೇಷ ರೀತಿಯಲ್ಲಿ ನಿಮ್ಮ ಮೊಬೈಲ್ನಲ್ಲಿಯೇ ವಿಡಿಯೊ ಮಾಡಿಕೊಳ್ಳಿ. ಅದನ್ನು ನಮಗೆ ಕಳುಹಿಸಿ.
ನಿಮ್ಮ ವಿಡಿಯೊವನ್ನು ಇನ್ನಷ್ಟು ಆಕರ್ಷಣೀಯವಾಗಿಸಿ ವಿಸ್ತಾರ ಯುಟ್ಯೂಬ್ ಚಾನೆಲ್ನಲ್ಲಿ ಪ್ರಸಾರ ಮಾಡಲಾಗುತ್ತದೆ. ನೀವು ನಿಮ್ಮವರೊಂದಿಗೆ ಲಿಂಕ್ ಹಂಚಿಕೊಂಡು ಅವರೂ ಸಂಭ್ರಮ ಪಡುವಂತೆ ಮಾಡಬಹುದು.
ವಿಡಿಯೊ ಕಳುಹಿಸುವುದು ಹೇಗೆ?
ಸಿಂಪಲ್. ಈ ಕೆಳಗಿನ ವಾಟ್ಸ್ ಆ್ಯಪ್ ನಂಬರ್ಗೆ ವಿಡಿಯೊವನ್ನು ಕಳುಹಿಸಿ. ವಿಡಿಯೊ ಕಳುಹಿಸುವಾಗ ನಿಮ್ಮ ತಂಡದ ಒಬ್ಬರ ಹೆಸರು ಮತ್ತು ಊರನ್ನು ತಿಳಿಸಲು ಮರೆಯಬೇಡಿ.
ವಾಟ್ಸ್ ಆ್ಯಪ್ ನಂಬರ್: 96069 42037
ಯಾವ ದಿನ ಯಾವ ಬಣ್ಣ?
ಈ ವಿಷಯ ನಿಮ್ಮ ಗಮನದಲ್ಲಿರಲಿ…
- ಮಹಿಳೆಯರು, ಯುವತಿಯರು ಮತ್ತು ಬಾಲಕಿಯರಿಗೆ ಮಾತ್ರ ಅವಕಾಶ.
- ಗುಣಮಟ್ಟದ ಕ್ಯಾಮೆರಾ ಇರುವ ಮೊಬೈಲ್ನಿಂದ ವಿಡಿಯೊ ಮಾಡಿ, ವಿಡಿಯೊ ಗುಣಮಟ್ಟ ಉತ್ತಮವಾಗಿರಲಿ, ಹಾಗೂ ನೀವು ಚಿತ್ರಿಸಿದ ವಿಡಿಯೊದ ಅವಧಿ ಒಂದು ನಿಮಿಷದೊಳಗಿರಲಿ.
- ನವರಾತ್ರಿಯ ಪ್ರತಿದಿನ ಕೂಡ ನೀವು ವಿಡಿಯೊ ಮಾಡಿಕಳುಹಿಸಬಹುದು. ಆದರೆ ನಿಮ್ಮ ವಿಡಿಯೊ ಮಧ್ಯಾಹ್ನ 2 ಗಂಟೆಯ ಒಳಗೆ ನಮಗೆ ತಲುಪಿರಬೇಕು.
- ನೀವು ಒಬ್ಬರೋ, ಇಬ್ಬರೋ ವಿಡಿಯೊ ಮಾಡಿ ಕಳುಹಿಸಿದರೆ ಸಾಲದು. ನಿಮ್ಮ ವಿಡಿಯೊದಲ್ಲಿ ಕನಿಷ್ಠ ಐದು ಮಂದಿಯಾದರೂ ಇರಬೇಕು.
ಇದನ್ನೂ ಓದಿ | Navaratri 2022 | ನವರಾತ್ರಿಯಲ್ಲಿ ಕನ್ಯಾ ಪೂಜೆ ಹೇಗೆ ಮಾಡಬೇಕು? ಏನು ಫಲ?
ದಸರಾ ಸಂಭ್ರಮ
Navaratri 2022 | ತಾಯಿ ಶಾರದೆ ಲೋಕ ಪೂಜಿತೆ
ಭಾರತೀಯ ಸಂಸ್ಕೃತಿಗೆ ದೈವೀ ಶಕ್ತಿಯೇ ಮೂಲ, ಮುಖ್ಯವಾದ ಜೀವಾಳ. ಹೀಗಾಗಿ ಶಕ್ತಿ ಆರಾಧನೆಯ ನವರಾತ್ರಿಗೆ (Navaratri 2022 ) ಎಲ್ಲಿಲ್ಲದ ಮಹತ್ವ. ಸಾತ್ವಿಕ ,ರಾಜಸ, ತಾಮಸ ಮೂರು ರೂಪಗಳಿಂದ ಶಕ್ತಿಯ ಉಪಾಸನೆ ನಡೆಯುತ್ತದೆ. ಇದರಲ್ಲಿ ಸಾತ್ವಿಕ ಸತ್ವದ ಶಾರದಾಪೂಜೆ ಕೂಡ ಮಾಡಲಾಗುತ್ತದೆ. ಇಂದು ಸರಸ್ವತಿ ಪೂಜೆ. ತನ್ನಿಮಿತ್ತ ಲೇಖನ ಇಲ್ಲಿದೆ.
ರಮ್ಯ ಗುಹಾ ದ್ವಾರಕಾನಾಥ್ | ಡಾ. ಮೇಖಲ ದ್ವಾರಕನಾಥ್
ನಮ್ಮ ಭಾರತ ದೇಶವು ಪುಣ್ಯ ಭೂಮಿ. ಋಷಿ ಪರಂಪರೆಯ ಅತ್ರಿ ಮಹಾಮುನಿಗಳಿಂದ ಹಿಡಿದು ಎಲ್ಲಾ ಋಷಿಮುನಿಗಳು ರಾಷ್ಟ್ರದ ಉಳಿವಿಗಾಗಿ, ಧರ್ಮ, ಭಕ್ತಿಯನ್ನು, ಎಲ್ಲಕ್ಕಿಂತ ಮಿಗಿಲಾಗಿ ಜ್ಞಾನಕಾಂಡ, ಭಕ್ತಿಕಾಂಡ, ಮುಕ್ತಿಕಾಂಡದ ಜಾಗೃತಿಯ ಮೂಲಕ ಮಾನವ ಕುಲವನ್ನು ಉದ್ದರಿಸಿದ್ದಾರೆ.
ಇವರಲ್ಲಿಯೂ ನಾವು ನವರಾತ್ರಿಯ (Navaratri 2022) ಈ ಹೊತ್ತಿನಲ್ಲಿ ನೆನೆಯಬೇಕಾದವರೆಂದರೆ ಶ್ರೀ ಶಂಕರ ಭಗವತ್ಪಾದರು. ಶ್ರೀಚಕ್ರದ ಮೂಲಕ ಮಹಾಲಕ್ಷ್ಮೀ, ಮಹಾಸರಸ್ವತೀ, ಮಹಾಕಾಳಿ ಐಕ್ಯರೂಪವನ್ನು ಸ್ಥಾಪಿಸಿ, ಸ್ತ್ರೀಯ ಶಕ್ತಿಯನ್ನು ತೋರಿಸಿ ಕೊಟ್ಟವರು ಇವರು. ಶೃಂಗೇರಿಯಲ್ಲಿ ಶಾರದೆಯೇ ಶಂಕರರ ಕರೆಗೆ ಬಂದು ನೆಲೆಸಿದ್ದಾಳೆ. ಮನುಷ್ಯರು ಯಾವುದೇ ಜ್ಞಾನ ಸಂಪಾದನೆ ಮಾಡಬೇಕಾದರೂ ತಮ್ಮಲ್ಲಿರುವ ದುಷ್ಟಗುಣಗಳನ್ನು ತ್ಯಜಿಸಬೇಕು, ಇದಕ್ಕಾಗಿ ಮಹಾಕಾಳಿಯನ್ನು, ಮಹಾಲಕ್ಷ್ಮೀಯನ್ನು ಪೂಜಿಸಬೇಕು. ಮಹಾಜ್ಞಾನ ನೀಡುವ ಸರಸ್ವತಿಯನ್ನು ಜ್ಞಾನ ಪಡೆಯಲು ಅರ್ಚಿಸಬೇಕು.
‘ದಿಯೋ ಯೋನ ಪ್ರಚೋದಯಾತ್’ ಎಂದರೆ ಬುದ್ಧಿಯೇ ಪ್ರಚೋದನೆ ನೀಡುವಂಥದ್ದು. ಭಗವತಿಯ ಮೂರು ಅಂಶಗಳಲ್ಲಿ ಶಾರದೆ ಒಬ್ಬಳಾಗಿದ್ದು, ಬ್ರಹ್ಮನ ಸಂಗಾತಿಯಾಗಿ ಸೃಷ್ಟಿಕಾರ್ಯದಲ್ಲಿ ಸಹಾಯಕಳಾಗಿದ್ದರಿಂದ ಇವಳಿಗೆ ಬ್ರಾಹ್ಮೀ ಎನ್ನುವರು. ಶರನ್ನವರಾತ್ರಿಯಲ್ಲಿ ದುರ್ಗೆಯನ್ನು ಸರಸ್ವತಿ ರೂಪದಲ್ಲಿ ಪೂಜಿಸಿ ಎಂದು ಶಾಸ್ತ್ರಕಾರರು ಮಾನವಕುಲಕ್ಕೆ ಸಾರಿದ್ದಾರೆ. ಏನು ಮಾಡಬೇಕು, ಮಾಡಬಾರದು ಎಂದು ತಿಳಿಸುವ ಮೂಲರೂಪವೇ ದುರ್ಗೆಯಲ್ಲಿ ಐಕ್ಯರೂಪವಾಗಿರುವ ಸರಸ್ವತಿ ಎಂದು ಋಷಿಗಳು ತಿಳಿಸಿದ್ದಾರೆ. ಮಾನವನು ದುರ್ಗೆಯ ಆರಾಧನೆಯಿಂದ ರಾಕ್ಷಸತ್ವವನ್ನು, ದುರಿತಗಳನ್ನು- ಪಾಪಗಳನ್ನು ಕಳೆದುಕೊಳ್ಳುತ್ತಾನೆ ಹಾಗೂ ಸರಸ್ವತಿಯನ್ನು ಪೂಜಿಸುವ ಮೂಲಕ ಜ್ಞಾನ ಸಂಪಾದನೆ ಮಾಡುತ್ತಾನೆ. ಸರಸ್ವತಿಯ ಆರಾಧನೆಯ ಮೂಲ ಉದ್ದೇಶವೇ ಇದಾಗಿರುತ್ತದೆ.
ಮೋಕ್ಷ ಸಂಪಾದಿಸುವ ವ್ರತ
ಸಕಲ ಸೌಕರ್ಯಗಳೂ ಇದ್ದು, ದೇವಿಯನ್ನು ಪೂಜಿಸು ಮನಸ್ಸಿದ್ದರೆ ನವರಾತ್ರಿಯ ಮೊದಲ ದಿನದಂದು ಅಂದರೆ ಪಾಡ್ಯದಂದು ಕಲಶ ಸ್ಥಾಪಿಸಿ, ದೇವಿಯನ್ನು ಆವಾಹಿಸಿ, ಪೂಜಿಸಿ ಸಕಲ ಸೌಭಾಗ್ಯ, ಜ್ಞಾನ ಮೋಕ್ಷವನ್ನು ಸಂಪಾದಿಸುವ ವ್ರತವನ್ನು ಮಾಡುವುದು ಉಚಿತ. ಶಾಸ್ತ್ರದಲ್ಲಿ ತಿಳಿಸಿರುವಂತೆ ಮನುಷ್ಯರು ಜಾತಿ-ಮತ-ಭೇದವನ್ನು ಮರೆತು ದುರ್ಗೆ ಮತ್ತು ಸರಸ್ವತಿಯನ್ನು ಏಕಮುಖದಲ್ಲಿ ಆರಾಧಿಸಬೇಕು.
ಗಣಪತಿಯು ನೈವೇದ್ಯ ಪ್ರಿಯನಾದರೆ ಶಿವನು ಅಭಿಷೇಕಪ್ರಿಯನಾಗಿರುತ್ತಾನೆ. ವಿಷ್ಣು ಅಲಂಕಾರ ಪ್ರಿಯನಾದರೆ, ದೇವಿಯು ನಾಮಪ್ರಿಯೆ. ನಾನಾ ನಾಮಗಳಿಂದ ಅವಳನ್ನು ಕೊಂಡಾಡಿ ಧ್ಯಾನಿಸಿದರೆ ನಮ್ಮ ಹೃದಯ ಸಿಂಹಾಸನದಲ್ಲಿ ಆಕೆ ರಾರಾಜಿಸುವುದರಲ್ಲಿ ಸಂದೇಹವಿಲ್ಲ.
ರತ್ನೈಃ ಕಲ್ಪಿತಮಾನಸಂ ಹಿಮಜಲೈಃ | ಸ್ನಾನಂಚ ದಿವ್ಯಾಂಬರಂ ॥
ನಾನಾ ರತ್ನವಿಭೂಷಣಂ ಮೃಗಮದಾ | ಮೋದಾಂಕಿತಂ ಚಂದನಂ॥
ಜಾಜೀ ಚಂಪಕ ಮಲ್ಲಿಕಾಸುರಬಿಲಂ| ಪುಷ್ಪಂಚ ಧೂಪಂ ತಥಾ॥
ದೀಪಂ ದೇವಿ ದಯಾನಿದೇ॥
ಕೇವಲ ಪ್ರಾರ್ಥನಾ ಶ್ಲೋಕವನ್ನು ಹೇಳಿದರೆ ಸಾಕು ಮನಶುದ್ಧಿಯಾಗಿ, ಮನಸಂಕಲ್ಪ ಈಡೇರುವುದು ಖಂಡಿತ. ಒಂಬತ್ತು ದಿನವೂ ಪೂಜೆ ಮಾಡಲಾಗದವರು ಪಂಚಮಿಯಿಂದ ನವಮಿಯವರಗೆ ಆಗಲೀ, ಸಪ್ತಮಿಯಿಂದ- ನವಮಿಯರೆಗೆ ಪೂಜೆ ಮಾಡಿದರೂ ಯಥಾವತ್ಫ ಲವು ಸಿಗುವುದರಲ್ಲಿ ಸಂದೇಹವಿಲ್ಲ. ಈ ವ್ರತವನ್ನು ಮಾಡಿದರೆ ಮನುಷ್ಯನು ಅಂತ್ಯದಲ್ಲಿ ದುರ್ಗಾಲೋಕ ಸೇರುತ್ತಾರೆಂದು ಸೂತಪುರಾಣಿಕರು ಶೌನಕಾದಿ ಋಷಿಗಳಿಗೆ ಹೇಳಿರುತ್ತಾರೆ.
ವ್ರತದ ಹಿನ್ನೆಲೆ ಕತೆ
ಸುಕೇತ ಎಂಬ ರಾಜನಿಗೆ ಲಾವಣ್ಯದಿಂದ ಕೂಡಿದ ಸುಭೇದಿ ಭಾರ್ಯೆ (ಪತ್ನಿ)ಯಾಗಿದ್ದಳು. ಅವನ ರಾಜ್ಯದಲ್ಲಿ ದುರ್ಭಿಕ್ಷ, ಅಧರ್ಮ, ಅಸತ್ಯ, ಪ್ರಜಾದ್ರೋಹ, ಪ್ರಜೆಗಳ ತೇಜೋವಧೆ, ವೈರ- ದ್ವೇಷ ಯಾವುದೂ ಇರಲಿಲ್ಲ. ಹೀಗಿದ್ದಾಗಲೂ ಜ್ಞಾತಿಗಳ ಪಿತೂರಿಯಿಂದ ಯುದ್ಧದಲ್ಲಿ ರಾಜ ಸುಕೇತನು ಅಧಿಕಾರ ಐಶ್ವರ್ಯ ಕಳೆದುಕೊಂಡನು. ಜೀವ ಭಯದಿಂದ ಪತ್ನಿಯೊಡನೆ ವನವನ್ನು ಪ್ರವೇಶಿಸಿದನು.
ಯುದ್ಧದಲ್ಲಿ ಬಳಲಿ ರೋಗಗ್ರಸ್ತನಾದ ಪತಿಯನ್ನು ಕಂಡು ಸುಭೇದಿಯು ಆತನನ್ನು ಭುಜದ ಮೇಲೆ ಹೊತ್ತು
ಅರಣ್ಯದಲ್ಲಿ ಅಂಗೀರಸ ಮುನಿಯನ್ನು ಭೇಟಿ ಮಾಡುತ್ತಾಳೆ. ತಮ್ಮ ಶೋಕ ಶಮನ ಮಾಡಲು ಮತ್ತು ರಾಜ್ಯವನ್ನು ಮರಳಿ ಪಡೆಯಲು ದಾರಿ ತೋರಿಸುವಂಥೆ ಅಂಗೀರಸ ಮುನಿಗಳಿಗೆ ಬೇಡಿಕೊಳ್ಳುತ್ತಾಳೆ. ಮುನಿಯು ಆಕೆಯ ದುಃಖವನ್ನು ನೀಗಿಸಿ, ಸಕಲ ಸಂಪತ್ತನ್ನು ಮರಳಿ ಕೊಡುವೆನೆಂದು ಭರವಸೆ ನೀಡುತ್ತಾರೆ.
ಅಲ್ಲಿಂದ ಸುಭೇದಿಯನ್ನು ಪಂಚವಟಿ ಕ್ಷೇತ್ರಕ್ಕೆ ಕರೆದುಕೊಂಡು ಬರುತ್ತಾರೆ. ಅಲ್ಲಿ ದೇವಿಯನ್ನು ಪೂಜಿಸಿ ಎಲ್ಲವನ್ನೂ ಪಡೆದುಕೋ ಎಂದು ಸುಭೇದಿಗೆ ಸಾಂತ್ವಾನ ಹೇಳುತ್ತಾರೆ. ಅವರ ಮಾರ್ಗದರ್ಶನದಂತೆಯೇ ರಾಜಪತ್ನಿ ಸುಭೇದಿಯು ಪತಿಯನ್ನು ಭುಜದ ಮೇಲೆ ಹೊತ್ತು ಗೊಂಡಾರಣ್ಯದಲ್ಲಿ ನಡೆದು ಪಂಚವಟಿ ಕ್ಷೇತ್ರದಲ್ಲಿ ಸ್ನಾನಮಾಡಿ ಪತಿಯೊಡನೆ ಮುನಿಪುಂಗವರೊಡನೆ ದುರ್ಗಾ ಎಂಬ ಹೆಸರುಳ್ಳ ಸರಸ್ವತಿಯನ್ನು ಪೂಜಿಸುತ್ತಾಳೆ.
ಮಗನಿಂದ ಮರಳಿ ರಾಜ್ಯ
ಸುಭೇದಿಯು ಪೂಜೆ ಆರಂಭಿಸಿದಂದು ಅಶ್ವಯುಜ ಮಾಸದ ಶುಕ್ಲಪಕ್ಷದ ಪಾಡ್ಯ. ಅಂದಿನಿಂದ ಆರಂಭವಾಗಿ ನವಮಿ ಪರ್ಯಾಂತ ಉಪವಾಸವಿದ್ದು, ಹತ್ತನೇ ದಿನ ಪರಮಾನ್ನವನ್ನು ಮಾಡಿ ದೇವರ ಮುಂದೆ ನೈವೇದ್ಯ ಮಾಡುತ್ತಾಳೆ. ಬಳಿಕ ಅಂಗೀರಸ ಮಹರ್ಷಿ ದಂಪತಿಯನ್ನು ಪೂಜಿಸಿ, ಲಭ್ಯವಿದ್ದ ಧಾನ್ಯಗಳನ್ನು ದಕ್ಷಿಣೆಯಿತ್ತು, ಆ ಮುನಿಗಳ ಆಶ್ರಮದಲ್ಲಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಸುಂದರವಾದ ಮಗುವನ್ನು ಪಡೆದು ಆತನಿಗೆ ಸೂರ್ಯಪ್ರತಾಪನೆಂದು ನಾಮಕರಣ ಮಾಡುತ್ತಾಳೆ.
ಸರ್ವಮಾನ್ಯ ದೇವಿ ಸರಸ್ವತಿ
ಸರಸ್ವತಿ ವಾಗ್ದೇವತೆ, ವಿದ್ಯಾಧಿದೇವತೆ, ಜ್ಞಾನದೇವತೆ. “ಶಾರದಾಯೈ ನಮಸ್ತುಭ್ಯಂ ವರದೇಕಾಮರೂಪಿಣೇ| ವಿದ್ಯಾರಂಭೇ ಕರಿಷ್ಟಾಮಿ ಸಿದ್ಧರ್ಬವತು ಮೇ ಸದಾ॥ʼʼ ವಿದ್ಯಾರಂಭ ಮಾಡುವವರು ಶಾರದೆಯನ್ನು ಪ್ರಾರ್ಥಿಸಿ ಪ್ರಾರಂಭಿಸುತ್ತಾರೆ. ನಮ್ಮ ದೇಶದಲ್ಲಿ ಬೌದ್ಧ ಹಾಗೂ ಜೈನರೂ ಕೂಡಾ ಶಾರದೆಯನ್ನು ಪೂಜಿಸಿದ್ದು, ಸೋತ್ರಗಳನ್ನು ರಚಿಸಿದ್ದಾರೆ. ವೀಣಾಪಾಣಿ, ವಿದ್ಯಾದೇವಿ, ನೃತ್ಯ ಸರಸ್ವತಿ ಮುಂತಾದ ಅನೇಕ ಬಗೆಯ ವಿಗ್ರಹಗಳನ್ನು ಕಾಣಬಹುದಾಗಿದೆ. ಶಾರದೆ ಸರ್ವವಂದ್ಯಳು, ಸರ್ವಮಾನ್ಯಳೂ ಆಗಿದ್ದಾಳೆ.
ಪಾಂಡಿತ್ಯದಿಂದಲೂ, ಅಂಗೀರಸ ಮುನಿಗಳ ತಪೋಬಲದಿಂದಲೂ ಬೆಳೆದ ಪುತ್ರನು ಶತ್ರುಗಳ ಮೇಲೆ ಯುದ್ಧ ಘೋಷಿಸಿ ಹೆತ್ತವರ ಜೊತೆಗೆ ಸ್ವರಾಜ್ಯಕ್ಕೆ ಮರಳಿ ಬ್ರಹ್ಮಲೋಕವನ್ನು ಪಡೆಯುತ್ತಾನೆ. ರಾಜಪತ್ನಿಯು ಪ್ರತಿ ಸಂವತ್ಸರದಲ್ಲೂ ದುರ್ಗಾವ್ರತವನ್ನು ಮಾಡಿ ಅಖಂಡ ಸೌಭಾಗ್ಯವತಿಯಾಗಿ, ತನ್ನ ಪತಿ ಸಹಿತವಾಗಿ ದುರ್ಗಾಲೋಕ ಸೇರುತ್ತಾಳೆ. ನವರಾತ್ರಿಯಲ್ಲಿ ವ್ರತ ಮಾಡುವವರು ಈ ಕತೆಯನ್ನು ಕೇಳಬೇಕು.
ಧರ್ಮ ಸಮ್ಮತವಾಗಿ ಶ್ರದ್ಧೆಯಿಂದ ಭಾರತದ ಉದ್ದಗಲಕ್ಕೂ ಈ ವ್ರತ ಮಾಡಿ ದುರ್ಗೆಯನ್ನು ಪೂಜಿಸಬೇಕು. ಆಗ ದೇಶ ದಲ್ಲಿ ಶಾಂತಿ-ನೆಮ್ಮದಿ ನಿರಂತರವಾಗಿರುತ್ತದೆ.
ಇದನ್ನೂ ಓದಿ | Navaratri 2022 | ಭೂತ, ಪ್ರೇತ ಇತ್ಯಾದಿ ಭಯ ದೂರವಾಗಲು ನವರಾತ್ರಿಯ 7ನೇ ದಿನ ಈ ದೇವಿಯನ್ನು ಪೂಜಿಸಿ
ಕರ್ನಾಟಕ
Mysore dasara | ಯುವ ದಸರಾದಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಭರ್ಜರಿ ಡ್ಯಾನ್ಸ್
ಯುವ ದಸರಾ ಕಾರ್ಯಕ್ರಮದಲ್ಲಿ ಸಚಿವ ಸೋಮಶೇಖರ್ ಜತೆಗೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕುಣಿಯುವ ಮೂಲಕ ಸಂಭ್ರಮಿಸಿದ್ದಾರೆ.
ಮೈಸೂರು: ನಾಡ ಹಬ್ಬ ದಸರಾ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರತಿ ನಿತ್ಯ ವಿವಿಧ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗಿದ್ದು, ವೀಕ್ಷಿಸಲು ಸಾವಿರಾರು ಜನ ಆಗಮಿಸುತ್ತಿದ್ದಾರೆ. ಈ ನಡುವೆ ಯುವ ದಸರಾದಲ್ಲಿ(Mysore dasara) ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿಂದಿ ಹಾಡಿಗೆ ಸಚಿವ ಸೋಮಶೇಖರ್ ಸಖತ್ ಸ್ಟೆಪ್ಸ್ ಹಾಕಿ ನೆರೆದಿರುವವರ ಗಮನ ಸೆಳೆದರು. ಈ ವೇಳೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಚಿವರ ಜತೆ ಹೆಜ್ಜೆ ಹಾಕಿದರು.
ಇದನ್ನೂ ಓದಿ | Mysore Dasara 2022 | ಮೈಸೂರು ದಸರಾದಲ್ಲಿ ವಿಂಟೇಜ್ ಕಾರು ಮೋಡಿ; 6ನೇ ದಿನದ ಸಂಭ್ರಮ ಹೀಗಿತ್ತು ನೋಡಿ
ಕರ್ನಾಟಕ
Mysore Dasara 2022 | ಮೈಸೂರು ದಸರಾದಲ್ಲಿ ವಿಂಟೇಜ್ ಕಾರು ಮೋಡಿ; 6ನೇ ದಿನದ ಸಂಭ್ರಮ ಹೀಗಿತ್ತು ನೋಡಿ
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ (Mysore Dasara 2022) ದಿನೇದಿನೆ ರಂಗೇರುತ್ತಿದೆ. ಶನಿವಾರ ಶಾಲಾ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಎಲ್ಲರನ್ನೂ ಆಕರ್ಷಿಸಿದರೆ, 70-80 ವರ್ಷ ಹಳೆಯದಾದ ವಿಂಟೇಜ್ ಕಾರುಗಳು ನೋಡುಗರ ಕಣ್ಮನ ಸೆಳೆದವು.
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ (Mysore Dasara 2022) ಆರನೇ ದಿನಕ್ಕೆ ಕಾಲಿಟ್ಟಿದೆ. ಶನಿವಾರವೂ ವೈವಿದ್ಯಮಯ ಕಾರ್ಯಕ್ರಮಕ್ಕೆ ಉತ್ಸವ ಸಾಕ್ಷಿಯಾಯಿತು. ಶಾಲಾ ಮಕ್ಕಳಿಗಾಗಿ ನಡೆದ ಚಿತ್ರ ಬಿಡಿಸುವ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು. ಭಾರಿ ಉತ್ಸಾಹದೊಂದಿಗೆ ಸ್ಪರ್ಧೆಯಲ್ಲಿ ನೂರಾರು ಪುಟಾಣಿಗಳು ಭಾಗವಹಿಸಿದ್ದರು.
ಮೈಸೂರು ಅರಮನೆ, ಮಹಿಷಾಸುರ, ದೊಡ್ಡ ಗಡಿಯಾರ, ಕೆಂಪುಕೋಟೆ, ಜಂಬೂ ಸವಾರಿ, ಭಗತ್ ಸಿಂಗ್, ಸರ್. ಎಂ.ವಿಶ್ವೇಶ್ವರಯ್ಯ, ಗಂಡಭೇರುಂಡ, ಅಂಬಾರಿ, ಪುನೀತ್ ರಾಜಕುಮಾರ್, ಡಾ.ಬಿ.ಆರ್.ಅಂಬೇಡ್ಕರ್, ಚಾಮುಂಡಿಬೆಟ್ಟ, ನಂದಿ ಹೀಗೆ ತರಹೇವಾರಿ ಚಿತ್ರಗಳ ರಚನೆ ಮಾಡಿದ ಪುಟಾಣಿಗಳು ಗಮನ ಸೆಳೆದರು.
ಇದೇ ಸಮಯದಲ್ಲಿ ಕಲಾ ಮಂದಿರದಲ್ಲೇ ನಡೆದ ನೇಯ್ಗೆ ಕಲೆಗೆ ಮೆಚ್ಚುಗೆ ಸೂಚಿಸಿದ ಸಚಿವ ಸೋಮಶೇಖರ್, 23 ಟವಲ್ಗಳ ಖರೀದಿ ಮಾಡಿದರು. ಈ ವೇಳೆ ಮಾತನಾಡಿದ ಅವರು ಮಕ್ಕಳ ಕಲೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಜತೆಗೆ 23 ಟವಲ್ ಅಷ್ಟೆ ಇತ್ತು, ಇನ್ನೂ ಹೆಚ್ಚಾಗಿದ್ದರೆ ಅವುಗಳನ್ನೂ ತೆಗೆದುಕೊಳ್ಳುತ್ತಿದ್ದೆ ಎಂದು ಕಲಾವಿದರಿಗೆ ಪ್ರೋತ್ಸಾಹಿಸಿದರು.
ವಿಂಟೇಜ್ ಕಾರ್ನಲ್ಲಿ ಸಚಿವ ಸೋಮಶೇಖರ್ ರೈಡ್
ದಸರಾ ಮಹೋತ್ಸವದಲ್ಲಿಂದು ವಿಂಟೇಜ್ ಕಾರ್ ಶೋ ಕೂಡ ಕೇಂದ್ರ ಬಿಂದುವಾಗಿತ್ತು. ಸಚಿವ ಎಸ್.ಟಿ. ಸೋಮಶೇಖರ್ ವಿಂಟೇಂಜ್ ಕಾರ್ವೊಳಗೆ ಕುಳಿತು ಖುಷಿ, ಫೋಟೊಗೆ ಪೋಸ್ ಕೊಟ್ಟರು.ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಉದ್ಯಮಿ ಗೋಪಿನಾಥ್ ಶೆಣೈ ಎಂಬುವರು ವಿಂಟೇಜ್ ಕಾರ್ ಶೋ ಆಯೋಜಿಸಿದ್ದರು. ಐತಿಹಾಸಿಕ ಕಾರುಗಳು ನೋಡುಗರ ಕಣ್ಮನ ಸೆಳೆದ್ದವು. ವಿವಿಧ ಕಂಪನಿಗಳ ಹೆಚ್ಚು ಬೆಲೆಬಾಳುವ ಮತ್ತು ಅಷ್ಟೇ ಹಳೆಯದಾಗಿರುವ 30 ಕಾರು, 20 ಬೈಕ್ಗಳನ್ನು ಪ್ರದರ್ಶನ ಮಾಡಲಾಗಿದೆ.
ಕಾರ್ಗಳ ಕ್ರೇಜ್ ಹೊಂದಿರುವ ಗೋಪಿನಾಥ್ ಶೆಣೈ 1930ರಿಂದ ಕಲೆಕ್ಷನ್ ಇಟ್ಟಿದ್ದು, ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆ ಹೆಚ್ಚಿಸಿಕೊಳ್ಳುವುದರ ಜತೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸುವ ಚಿಂತನೆಯಲ್ಲಿ ಇರುವುದಾಗಿ ಉದ್ಯಮಿ ಗೋಪಿನಾಥ್ ಶೆಣೈ ತಿಳಿಸಿದ್ದಾರೆ.
ಪಾರಂಪರಿಕ ನಡಿಗೆ
ಬೆಳ್ಳಂ ಬೆಳ್ಳಗೆ ಪಾರಂಪರಿಕ ನಡಿಗೆ ಕಾರ್ಯಕ್ರಮವು ನಡೆಯಿತು. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ಆಯೋಜನೆ ಮಾಡಲಾಗಿದ್ದ ನಡಿಗೆ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮೈಸೂರಿನ ಇತಿಹಾಸ, ಪಾರಂಪರಿಕ ಕಟ್ಟಡಗಳ ಹಿನ್ನೆಲೆ, ಪ್ರಾಮುಖ್ಯತೆ ಹಾಗೂ ವಾಸ್ತುಶಿಲ್ಪ ಶೈಲಿಯ ಮಹತ್ವದ ಬಗ್ಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ದೊಡ್ಡ ಗಡಿಯಾರ, ಪ್ರಿಮೇಶನ್, ಕಬ್, ಚಾಮರಾಜ ಒಡೆಯರ್ ವೃತ್ತ, ಅರಮನೆ, ನಾಲ್ಕನೇ ಕೃಷ್ಣರಾಜ ಒಡೆಯರ್ ವೃತ್ತ, ಚಿಕ್ಕ ಗಡಿಯಾರ, ದೇವರಾಜ ಮಾರುಕಟ್ಟೆ, ಕೃಷ್ಣರಾಜ ಆಸ್ಪತ್ರೆ, ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್, ಎಂಪೋರಿಯಮ್, ಮೈಸೂರು ಮೆಡಿಕಲ್ ಕಾಲೇಜು ಹಾಗೂ ಸರ್ಕಾರಿ ಆಯುರ್ವೇದ ಕಾಲೇಜು ಮಾರ್ಗದಲ್ಲಿ ಕೈಗೊಂಡಿದ್ದ ಪಾರಂಪರಿಕ ನಡಿಗೆಯಲ್ಲಿ ಕಟ್ಟಡಗಳ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಸಿಕೊಡಲಾಯಿತು.
ಇವೆಲ್ಲದರ ಜತೆಗೆ ರೈತ ದಸರಾದಲ್ಲಿ ನೂರಾರು ರೈತರು ಮೂಟೆ ಹೊತ್ತು ಓಡುವ ಸ್ಪರ್ಧೆ ಹಾಗೂ ಗೋಣಿ ಚೀಲ ಜಿಗಿತ, ಬಿಲ್ಲುಗಾರಿಕೆ ಸೇರಿದಂತೆ ಹಲವು ಸ್ಪರ್ಧೆಗಳು ನಡೆದವು. ಹಾಗೆ ರಾಘವೇಂದ್ರ ಸ್ವಾಮೀಜಿಯವರ ಜೀವನಚರಿತ್ರೆ ಕುರಿತ ಬೊಂಬೆಗಳ ಪ್ರದರ್ಶನ ಗಮನ ಸೆಳೆದವು.
ಇದನ್ನೂ ಓದಿ | Mysuru dasara | ದಸರಾ ಗೋಲ್ಡ್ ಕಾರ್ಡ್ ಕಾಳಸಂತೆ ದಂಧೆ, 5000 ರೂ. ಕಾರ್ಡ್ ಡಬಲ್ ರೇಟಿಗೆ ಮಾರಾಟ, ತನಿಖೆಗೆ ಆದೇಶ
ದಸರಾ ಸಂಭ್ರಮ
Navaratri Colour Trend | ನವರಾತ್ರಿಯ 7ನೇ ದಿನ ಕಿತ್ತಳೆ ವರ್ಣದ ಟ್ರೆಡಿಷನಲ್ ವೇರ್ನಲ್ಲಿ ಕಂಗೊಳಿಸಿ
ನವರಾತ್ರಿಯ 7ನೇ ದಿನ (Navaratri Colour Trend ) ಕಿತ್ತಳೆ ವರ್ಣದಲ್ಲಿ ಆಕರ್ಷಕವಾಗಿ ಕಂಗೊಳಿಸಲು ಸ್ಟೈಲಿಸ್ಟ್ಗಳು ಒಂದಿಷ್ಟು ಐಡಿಯಾ ನೀಡಿದ್ದಾರೆ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಿತ್ತಳೆ ವರ್ಣ ನೋಡಲು ಆಕರ್ಷಕವಾಗಿ ಕಾಣುವುದು ಮಾತ್ರವಲ್ಲ, ನೂರು ಜನರ ಮಧ್ಯೆಯೂ ಎದ್ದು ಕಾಣುವಂತಹ ವರ್ಣವಿದು. ಹಾಗಾಗಿಯೇ ಫ್ಯಾಷನಿಸ್ಟಾಗಳು ಈ ಬಣ್ಣವನ್ನು ಬೋಲ್ಡ್ ಕಲರ್ಲಿಸ್ಟ್ಗೆ ಸೇರಿಸಿದ್ದಾರೆ. ಅಲ್ಲದೇ, ಕಿತ್ತಳೆ ವರ್ಣವನ್ನು ಹ್ಯಾಪಿ ಕಲರ್ (Navaratri Colour Trend ) ಎಂದು ಕರೆಯಲಾಗುತ್ತದೆ. ಕಿತ್ತಳೆ ಶೇಡ್ನ ಡಿಸೈನರ್ವೇರ್ ಧರಿಸುವವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ ಅತ್ಯಾಕರ್ಷಕವಾಗಿ ಕಾಣುವುದರ ಬಗ್ಗೆ ಯಾವುದೇ ಸಂದೇಹವಿಲ್ಲ ಎನ್ನುತ್ತಾರೆ ಡಿಸೈನರ್ಸ್.
ಕಿತ್ತಳೆಯ ನಾನಾ ಶೇಡ್ಗಳು
ಅಂದ ಹಾಗೆ, ಕಿತ್ತಳೆಯಲ್ಲೂ ನಾನಾ ಶೇಡ್ಗಳು ಸೇರಿವೆ. ಕಿತ್ತಳೆ ವರ್ಣದಲ್ಲಿ ಕೇಸರಿ, ತಿಳಿ ಕೇಸರಿ, ಮಾರ್ಸೆಲ್ಲಾ, ಬ್ರಿಕ್ ಆರೆಂಜ್ ಹೀಗೆ ಸಾಕಷ್ಟು ವರ್ಣಗಳು ಕಂಬೈನ್ ಆಗಿವೆ. ಈ ವರ್ಣ ಭಾರತೀಯರಿಗೆ ಅತಿ ಹೆಚ್ಚು ಹೊಂದುತ್ತದೆ ಎಂದು ಸಾಕಷ್ಟು ಬ್ಯೂಟಿ ಸಮೀಕ್ಷೆಗಳು ಸಾಬೀತು ಪಡಿಸಿವೆ ಕೂಡ. ಇದಕ್ಕೆ ಪೂರಕ ಎಂಬಂತೆ, ಹಿಂದೂ ಧರ್ಮದ ಪ್ರತೀಕ ಎಂಬಂತೆ ಸನ್ಯಾಸಿಗಳು, ಗುರೂಜೀಗಳು, ಬಹುತೇಕ ಹಿಂದುತ್ವ ಪ್ರತಿಪಾದಿಸುವವರು ಈ ವರ್ಣದ ಉಡುಪುಗಳನ್ನೇ ಧರಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಕಿತ್ತಳೆ ವರ್ಣದ ಸೀರೆ
ನವರಾತ್ರಿಗೆ ಕಿತ್ತಳೆ ವರ್ಣದ ಸೀರೆಯನ್ನು ಧರಿಸಿದಾಗ ಆದಷ್ಟೂ ಕಾಂಟ್ರಸ್ಟ್ ಬ್ಲೌಸ್ಗಳನ್ನು ಆವಾಯ್ಡ್ ಮಾಡಿ. ಎಲ್ಲದಕ್ಕಿಂತ ಹೆಚ್ಚಾಗಿ ಈ ವರ್ಣಕ್ಕೆ ಹೆಚ್ಚು ಆಕ್ಸೆಸರೀಸ್ನ ಅಗತ್ಯವಿಲ್ಲ. ಯಾಕೆಂದರೆ, ಸೀರೆಯೇ ಎದ್ದು ಕಾಣುವುದರಿಂದ ಸಿಂಪಲ್ ಆಕ್ಸೆಸರೀಸ್ಗಳನ್ನು ಧರಿಸಿದರಾಯಿತು ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಈಗಾಗಲೇ ನಿಮ್ಮ ಬಳಿ ರೇಷ್ಮೆಯ ಆರೆಂಜ್ ಸೀರೆಗಳು ಇದ್ದಲ್ಲಿ ಅವನ್ನು ಡಿಫರೆಂಟ್ ಡ್ರೆಪಿಂಗ್ ಮಾಡಿ, ಧರಿಸಿ. ಆಗ ವಿಭಿನ್ನ ಲುಕ್ ನಿಮ್ಮದಾಗುವುದು. ಇವಕ್ಕೆ ಗೋಲ್ಡನ್ ಜ್ಯುವೆಲರಿಗಳು ಮ್ಯಾಚ್ ಆಗುತ್ತವೆ.
ಕಿತ್ತಳೆವರ್ಣದ ಡಿಸೈನರ್ವೇರ್
ಇಂದು ಕಿತ್ತಳೆ ವರ್ಣದ ಮ್ಯಾಕ್ಸಿ, ಗೌನ್ ಹಾಗೂ ಲೆಹೆಂಗಾಗಳು ಗ್ರ್ಯಾಂಡ್ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿವೆ. ಅದರಲ್ಲೂ ಫ್ರಾಕ್ ಶೈಲಿಯವು ಸೆಮಿ ಎಥ್ನಿಕ್ನಲ್ಲಿ ಬಂದಿವೆ. ಇವುಗಳನ್ನು ಧರಿಸಿದಾಗ ಇಂಡೋ-ವೆಸ್ಟರ್ನ್ ಲುಕ್ ನೀಡುತ್ತವೆ.
ಹೇರ್ಸ್ಟೈಲ್ಗೆ ಹೂವಿನ ಅಲಂಕಾರ
ಕಿತ್ತಳೆ ವರ್ಣದ ಡಿಸೈನರ್ವೇರ್ ಹಾಗೂ ಸೀರೆ ಧರಿಸಿದಾಗ ಕೂದಲಿಗೆ ಕನಕಾಂಬರ ಹೂವಿನ ದಂಡೆಯನ್ನು ಮುಡಿದರೆ ಚೆನ್ನಾಗಿ ಕಾಣುತ್ತದೆ. ಇನ್ನು ಗೋಲ್ಡನ್ ಆರ್ಟಿಫಿಶಿಯಲ್ ದಂಡೆಗಳನ್ನು ಹಾಕಿಕೊಳ್ಳಬಹುದು. ಇದು ಗ್ರ್ಯಾಂಡ್ ಲುಕ್ ನೀಡುತ್ತದೆ.
ಕಿತ್ತಳೆ ವರ್ಣದ ಉಡುಪು ಅಥವಾ ಸೀರೆ ಪ್ರಿಯರು ಪಾಲಿಸಬೇಕಾದ ಟಿಪ್ಸ್
- ಗೋಲ್ಡನ್ ಜ್ಯುವೆಲರಿಗಳು ಮ್ಯಾಚ್ ಆಗುತ್ತವೆ.
- ಹೇರ್ಬನ್ ಅಥವಾ ಬ್ರೈಡ್ ಡಿಸೈನ್ ಹಾಕಿಕೊಳ್ಳಿ.
- ಟ್ರೆಡಿಷನಲ್ ಹಾಗೂ ವೆಸ್ಟರ್ನ್ ಲುಕ್ ಎರಡೂ ಓಕೆ.
- ಹಣೆಗೆ ಅಗಲವಾದ ಬಂಗಾಲಿ ಬಿಂದಿ ಇಡಿ.
ಇದನ್ನೂ ಓದಿ |Navaratri colour trend | ಹೀಗಿರಲಿ ನವರಾತ್ರಿಯ 6ನೇ ದಿನದ ಬೂದು ಬಣ್ಣದ ಡ್ರೆಸ್ಕೋಡ್
-
ಕರ್ನಾಟಕ18 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ15 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕರ್ನಾಟಕ9 hours ago
DK Shivakumar: ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ಮಾಡಿದ್ದಕ್ಕೆ ಜಾಡಿಸಿದ ಡಿಕೆಶಿ; ಅಧಿಕಾರಿಗಳ ಅಮಾನತಿಗೆ ಆದೇಶ
-
ಕರ್ನಾಟಕ13 hours ago
Murder Case: ಟೋಲ್ ವಿಚಾರಕ್ಕೆ ಕಿರಿಕ್; ಹಾಕಿ ಸ್ಟಿಕ್ನಿಂದ ಬಡಿದು ಕೊಂದೇಬಿಟ್ಟರು ದುರುಳರು
-
ದೇಶ13 hours ago
Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು
-
ದೇಶ17 hours ago
world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್ ತಿಳಿಯಿರಿ
-
ಪರಿಸರ9 hours ago
ವಿಶ್ವ ಪರಿಸರ ದಿನ: ‘ಸಸಿ ನೆಡಿ, ಫೋಟೊ ಕಳುಹಿಸಿ’ ವಿಸ್ತಾರ ಅಭಿಯಾನ; ನಿಮ್ಮ ಮತ್ತಷ್ಟು ಫೋಟೊಗಳು ಇಲ್ಲಿವೆ
-
ಕರ್ನಾಟಕ15 hours ago
ಕಲಬುರಗಿಯಲ್ಲಿ ಚಂಡಿಕಾ ಹೋಮದ ಬೆಂಕಿಯಲ್ಲಿ ಕಾಣಿಸಿಕೊಂಡ ದುರ್ಗಾ ದೇವಿ!; ಇಲ್ಲಿದೆ ನೋಡಿ ಫೋಟೊ