ಸಣ್ಣ ಕಥೆ | ಕಾಲ ವಟಿ - Vistara News

ಕಲೆ/ಸಾಹಿತ್ಯ

ಸಣ್ಣ ಕಥೆ | ಕಾಲ ವಟಿ

ಭೂತ ಭವಿಷ್ಯದ ಭಾರದಿಂದ ಮುಕ್ತವಾಗಿ ಮಾಡುವ ಆ ಅಪರೂಪದ ಔಷಧ ಕೈಲಾಜಿಗೆ ಸಿಕ್ಕಿತು. ಆದರೆ ಅದರ ಹಿಂದಿನ ಕಥೆ? ಆ ಸುಂದರಿಯೂ ಅದರ ಹಿಂದಿದ್ದಾಳೆಯೇ? ಓದಿ, ಡಾ.ಅಜಿತ್‌ ಹರೀಶಿ ಬರೆದ ಸಣ್ಣ ಕಥೆ.

VISTARANEWS.COM


on

short story
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
ajith harishi

| ಡಾ. ಅಜಿತ್ ಹರೀಶಿ

‘ರಾತ್ರಿಯಿಡೀ ಒಂದು ಹನಿ ಕಣ್ಣು ಮುಚ್ಚಲಿಲ್ಲ. ಅರಮನೆ, ಐಶ್ವರ್ಯ ಕೊಡಿ ಅಂತೇನೂ ನಾನು ನಿಮಗೆ ಕೇಳಲಿಲ್ಲ. ಒಂದು ನೆಮ್ಮದಿಯ ನಿದ್ದೆಯನ್ನು ಕೇಳಿ ಪಡೆದು ಬಂದಿಲ್ಲ ನಾನು ಈ ಮನೆಗೆ. ಬೆಳಿಗ್ಗೆ ಏನೂ ಮಾಡಿ ಹಾಕುವ ವಶ ಸಾ ಇರಲಿಲ್ಲ ನಂಗೆ. ಆದರೆ ದುಡಿಯೋ ಗಂಡಸಿಗೆ ಕೈಲಾಗಿದ್ದು ಬೇಯಿಸಿ ಹಾಕಬೇಕು ಅನ್ನುವಷ್ಟು ಸಂಸ್ಕಾರ ನಮ್ಮಮ್ಮ ನನಗೆ ಕೊಟ್ಟಿದ್ದಾರೆ.’ ಹೆಂಡತಿ ಮಾಡಿದ ಬಿಸಿ ಒಗ್ಗರಣೆ ಅವಲಕ್ಕಿಯ ತುತ್ತು ಗಂಟಲಿನಲ್ಲಿ ಇಳಿಯದೇ ಒದ್ದಾಡುತ್ತಿದ್ದ ಕೈಲಾಜಿ, ಅವಳಿಗೆ ಗೊತ್ತಾಗದಂತೆ ಪ್ಲೇಟಿನಲ್ಲಿದ್ದ ಅವಲಕ್ಕಿಯನ್ನು ಚೆಲ್ಲಲು ಹೋಗಿ ಮತ್ತಷ್ಟು ಅವಾಂತರ ಮಾಡಿಕೊಂಡಿದ್ದ. ನಿಜಕ್ಕೂ ಆತನಿಗೆ ಅವಲಕ್ಕಿ ಎಂದರೆ ಅಲರ್ಜಿಯಾಗಿತ್ತು. ಅದನ್ನು ಬೆಳಿಗ್ಗೆ ತಿಂದರೆ ಹೊಟ್ಟೆ ನಿಬ್ಬರ, ಗ್ಯಾಸು ಆಗುತ್ತಿತ್ತು. ಆದರೆ ಹಿಂದಿನ ದಿನ ಮಾಡಿದ ತಪ್ಪಿಗಾಗಿ ಆತ ಸುಮ್ಮನೆ ತಿಂದು ಎದ್ದು ಹೋಗಿದ್ದರೆ ಒಳಿತಾಗುತ್ತಿತ್ತು. ಒಳಿತು- ಪದವನ್ನು ಭಗವಂತ ತನ್ನ ಬದುಕಿನ ನಿಘಂಟಿನಿಂದ ಎಗುರಿಸಿ ಯಾವುದೋ ಕಾಲವಾಯಿತು ಎಂಬ ಯೋಚನೆ ಒಮ್ಮೆ ಕೈಲಾಜಿಯ ಮನಸ್ಸಿನಲ್ಲಿ ಸುಳಿದು ಹೋಯಿತು.

ʻಏನೋ… ಸಂಸಾರ ಎಂದಮೇಲೆ ಒಂದು ಮಾತು ಬರುತ್ತದೆ, ಹೋಗುತ್ತದೆ. ಆಹಾರದ ಮೇಲೆ, ಅದರಲ್ಲಿಯೂ ಸುಧಾಮನ, ಕೃಷ್ಣನ ಪ್ರೀತಿಯ ಅವಲಕ್ಕಿ ಮೇಲ್ಯಾಕೆ ಸಿಟ್ಟು ತೀರಿಸ್ತೀರಿ? ನಿನ್ನೆ ರಾತ್ರಿನೂ ನಾನು ಬೈತಾ ಇದ್ದೆ. ಗ್ಲಾಸಿನಲ್ಲಿದ್ದ ನಿಮ್ಮ ಪರಮಾತ್ಮನ್ನ ಚೆಲ್ಲಿ ಬರಬಹುದಿತ್ತಲ್ವಾ? ಸಿಟ್ಟು ಬಂದರೆ ಮೂಡಾಫ್ ಆದರೆ ಅದು ಒಳಕ್ಕೆ, ಇದು ಹೊರಕ್ಕೆ ಯಾಕೋ? ಒಟ್ನಲ್ಲಿ ನಮ್ ಪ್ರಾಣ ತಿಂತೀರ. ನಂಗಂತೂ ಸಾಕಾಯ್ತು ಬದುಕು. ಮಕ್ಕಳ ಮುಖ ನೋಡ್ಕೊಂಡು ಬದುಕಿದೀನಿ.’ ಮರುದಿನ ಅವಳ ಮಾತು ಕೇಳುವಾಗಲೆಲ್ಲ ಕೈಲಾಶ್ ಕೈಲಾಜಿಗೆ ಇನ್ನೆಂದೂ ಕುಡಿಯಬಾರದು ಅನ್ಸುತ್ತಿತ್ತು. ಆದರೆ ಸದ್ಯದ ತನ್ನ ಪರಿಸ್ಥಿತಿ ಹಾಗಿದೆ ಎಂಬ ಸಮರ್ಥನೆಯೂ ಸೆಲ್ಫ್ ಡಿಫೆನ್ಸ್‌ಗೆ ಬರುತ್ತಿತ್ತು. ಮಾತಿಗೆ ಮಾತು ಎಂದೂ ಮುಗಿಯದ್ದು ಎಂದುಕೊಳ್ಳುತ್ತಾ ಎದ್ದು ಹೋದ. ‘ಟಿಫನ್ ಕ್ಯಾರಿಯರ್ ಟೇಬಲ್ ಮೇಲಿದೆ. ಬರ್ತಾ ಕೊತ್ತಂಬರಿ ಸೊಪ್ಪು ತರಲು ಮರೆಯಬೇಡಿ. ಈ ಜಗತ್ತಿನಲ್ಲಿ ನೀವೊಬ್ಬರೇ ಬ್ಯಾಂಕ್ ಕೆಲಸ ಮಾಡೋದು ಅಂತ ಕಾಣುತ್ತೆ’ ಧ್ವನಿ ದೂರವಾಗಲು ಆತ ಬೈಕಿನ ಕಿಕ್ ಹೊಡೆದು, ಎಕ್ಸಲರೇಟರ್ ಮತ್ತಷ್ಟು ತಿರುಪಿ ಕ್ಲಚ್ ಬಿಟ್ಟ.

ಕೈಲಾಶ್ ಕೈಲಾಜಿ ಗ್ರಾಮೀಣ ಬ್ಯಾಂಕ್ ಒಂದರಲ್ಲಿ ಕ್ಲರ್ಕ್ ಹುದ್ದೆಗೆ ಸೇರಿ ಹತ್ತಾರು ಕಡೆ ನೌಕರಿ ಮಾಡಿ, ಮುಂಬಡ್ತಿ ಪಡೆದು ಮ್ಯಾನೇಜರ್ ಆಗಿದ್ದ. ಮೊದಮೊದಲು ಸಣ್ಣ ಹಳ್ಳಿಗಳಲ್ಲಿ ಕೆಲಸ ಮಾಡಿದ್ದ ಆತನಿಗೆ ಒಳ್ಳೆಯ ಹೆಸರಿತ್ತು. ಹೋದಲ್ಲೆಲ್ಲಾ ಹೊಸಬರನ್ನು ಬೇಗ ಪರಿಚಯ ಮಾಡಿಕೊಳ್ಳುತ್ತಿದ್ದ. ಬ್ಯಾಂಕಿನಲ್ಲಿ ಜನರನ್ನು ಕಾಯಿಸುತ್ತಿರಲಿಲ್ಲ. ಹಳ್ಳಿಗಳಲ್ಲಿ ಬ್ಯಾಂಕುಗಳು ಆಗಷ್ಟೇ ಸ್ಥಾಪಿತವಾಗುತ್ತಿದ್ದವು. ಶಿಕ್ಷಕರು, ವೈದ್ಯರ ಜೊತೆಗೆ ಊರವರು ಇವರಿಗೂ ವಿಶೇಷ ಗೌರವ ಕೊಡುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಮಧ್ಯಾಹ್ನದ ಊಟಕ್ಕೆ ಕರೆಯ ಬರುತ್ತಿತ್ತು. ಮಧ್ಯಾಹ್ನ ಆಗದಿದ್ದರೆ ಸಂಜೆ ಆದರೂ ಬನ್ನಿ ಎಂದಾಗ ಅದರ ಗಮ್ಮತ್ತು ಕೈಲಾಜಿಗೆ ತಿಳಿಯಿತು. ಆಮೇಲೆ ಆತ ಮಧ್ಯಾಹ್ನ ಊಟಕ್ಕೆ ಹೋಗುವುದು ಕಡಿಮೆಯಾಯಿತು. ಮೂತ್ರಪಿಂಡದಲ್ಲಿ ಕಲ್ಲಿನ ಫಾರ್ಮೇಶನ್ ಆಗುವ ಬಗೆಯಂತೆ, ಊಟಕ್ಕೆ ಹಿಂದೆ ಮುಂದೆ ತೀರ್ಥ ಮತ್ತು ಇಸ್ಪೀಟಾಟಗಳು ಸೇರಿಕೊಂಡವು. ರಾತ್ರಿ ಅವಕ್ಕೆ ಕೈಲಾಜಿ ಬರುತ್ತಾನೆಂಬ ಸೂಟು ಸಿಕ್ಕ ಕೂಡಲೇ ಸಾಲ ಮಂಜೂರಾತಿ ಪಡೆಯುವವರ ಮನೆಯಲ್ಲಿ ದೇವಕಾರ್ಯಗಳು ಯೋಜಿತಗೊಳ್ಳತೊಡಗಿದವು. ಅದು ಶಾಕಾಹಾರಿ ಕೈಲಾಜಿಯನ್ನು ಆರಿದ್ರಾ ಮಳೆಯ ಹಬ್ಬದ ಬೋನಿನವರೆಗೂ ತಂದುಬಿಟ್ಟಿತ್ತು. ಕ್ರಮೇಣ ಆತ ವರ್ಷಾಂತ್ಯದಲ್ಲಿ ಲೋನ್ ರಿನೀವಲ್ ಮಾಡಿಕೊಟ್ಟು ಬಡ್ಡಿ ಪೀಕುವ ಮಾಫಿಯಾ ಹೆಗಲ ಮೇಲೆ ಕೈಯಿಟ್ಟ. ಪ್ರತಿ ವ್ಯವಸ್ಥೆಯೂ ಸಣ್ಣದೋ, ದೊಡ್ಡದೋ ರೂಪದಲ್ಲಿ ಸರ್ವಾಂತರ್ಯಾಮಿ ಎಂಬ ಸತ್ಯ ಕೈಲಾಜಿಗೆ ಅರಿವಾಗತೊಡಗಿತ್ತು. ಮದುವೆಯಾದ ಮೇಲೆ, ಹತ್ತಿರದ ಪೇಟೆಯಲ್ಲಿ ಸಂಸಾರ ಹೂಡಿದ್ದು, ಹೆಂಡತಿಗೆ ಪ್ರೆಸ್ಟೀಜೂ, ಕೈಲಾಜಿಯ ಕಾರುಬಾರಿಗೆ ನಿರ್ವಿಘ್ನವೂ ಆಗಿತ್ತು. ವಾರಕ್ಕೊಮ್ಮೆ ಪೇಟೆಗೆ ಹೋದರಾಗಿತ್ತು. ಮಕ್ಕಳು, ವಿದ್ಯಾಭ್ಯಾಸ ಅಂತ ಅವನ ಖರ್ಚು ಏರತೊಡಗಿತ್ತು. ಅವನ ವ್ಯಾಪ್ತಿಯೂ ವಿಸ್ತರಿಸುತ್ತಾ, ಕೆಲಸ ಮಾಡಿದ ಬ್ರಾಂಚುಗಳ ವಿಶೇಷ ಕಸ್ಟಮರುಗಳೆಲ್ಲಾ ಆಗಾಗ ಕರೆಯ ಕಳಿಸುತ್ತಿದ್ದರು. ಸಂಬಳವನ್ನು ಬಿಟ್ಟು ಬೇರೆ ಆಮದನಿ ಹುಡುಕಿಕೊಳ್ಳುವುದು ಕೈಲಾಜಿಗೆ ಅನಿವಾರ್ಯವಾಗತೊಡಗಿತು. ಆತ ಪಳಗತೊಡಗಿದ. ಬಾಹುಗಳು ವಿಸ್ತಾರವಾದವು. ಸ್ವಲ್ಪ ಮುಂಚೆಯೇ ಮ್ಯಾನೇಜರ್ ಆಗಿ ಭಡ್ತಿ ಪಡೆದುಕೊಂಡ. ಸ್ವತಃ ಒಂದು ಹಂತದ ಲೋನ್ ಸ್ಯಾಂಕ್ಷನ್ ಮಾಡುವ ಪವರ್ ಬಂತು. ಹೆಡ್ಡಾಫೀಸಿನ ಲೋನ್ ಸ್ಯಾಂಕ್ಷನ್ ವಿಭಾಗದ ಜೊತೆ ಬೈಠಕ್ ಕನೆಕ್ಷನ್ ಆದಮೇಲೆ ಎಲ್ಲವೂ ಸರಾಗವಾಗಿತ್ತು. ಬಹುಶಃ ಆ ದಿನಗಳು ಕೈಲಾಜಿಯ ಬದುಕಿನ ಸುವರ್ಣ ಯುಗವಾಗಿತ್ತು.

ಕೈಲಾಜಿಯು ಕೈಗೆ ಮದರಂಗಿ ಹಚ್ಚಿಕೊಂಡಿದ್ದು ಎಂದು ಭಾವಿಸಿದ್ದು ಇಡೀ ದೇಹಕ್ಕೆ, ಬದುಕಿಗೆ ಮೆತ್ತಿಕೊಂಡ ಬಣ್ಣವಾಗಿತ್ತು. ಮೊದಮೊದಲು ಎದ್ದು ಕಾಣುತ್ತಿದ್ದ ಗಾಢವಾದ ವರ್ಣಗಳು ಕಪ್ಪುಗೂಡತೊಡಗಿದ್ದವು. ರಂಜನೆಗೆ ಎಂದು ಶುರುವಾದ ಹವ್ಯಾಸಗಳು ಪ್ರಜ್ಞಾಪರಾಧದ ಬೇಗುದಿಗೆ ಸಿಕ್ಕು, ಅದೇ ಮರೆಯುವ ಮತ್ತಾಗಿದ್ದು ಆತನ ಗಮನಕ್ಕೆ ಬಂದಿರಲಿಲ್ಲ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಮಾಡಿಕೊಂಡಿದ್ದವನೊಬ್ಬ ಇದೇ ವೇಳೆಗೆ ಮಂದ ಬೆಳಕಿನಲ್ಲಿ ಭೇಟಿಯಾದ ಹೊಸ ಸ್ನೇಹಿತನಾಗಿದ್ದ. ಕೈಲಾಜಿಯ ಬ್ಯಾಂಕಿನ ಬ್ರಾಂಚಿದ್ದ ಊರಿನ ಹತ್ತಿರವೇ ಉದ್ಯಮಿಯ ಜಮೀನಿತ್ತು. ಆದರೆ ಆತನಿಗೆ ಬೇಕಾಗಿದ್ದು ಅದರ ಹತ್ತುಪಟ್ಟು ಮೊತ್ತ. ಅದನ್ನು ಮಂಜೂರಾತಿ ಪಡೆಯುವವರೆಗಿನ ಖರ್ಚುವೆಚ್ಚಗಳನ್ನು ಮತ್ತು ಕೈಲಾಜಿಗೆ ದೊಡ್ಡ ಮೊತ್ತದ ಕಮಿಷನ್ ನೀಡುವ ಆಮಿಷವನ್ನು ಅವನು ನೀಡಿದ್ದ. ಬೆಂಗಳೂರಿನ ಫೈನಾನ್ಸ್ ಫಂಟರುಗಳನ್ನು ಹ್ಯಾಂಡಲ್ ಮಾಡಿದ್ದ ಹುಲಿ ಅವನು. ಆದರೆ ಮಂಜೂರಾತಿ ವಿಭಾಗದಲ್ಲಿ ಯಾಕೋ ಫೈಲ್ ಮೂವ್ ಆಗಿರಲಿಲ್ಲ. ಉದ್ಯಮಿಯ ಸಿಬಿಲ್ ಸ್ಕೋರ್ ಗೋತಾ ಹೊಡೆದಿತ್ತು. ಅದರ ವಿವರ ತೆಗೆಯಲಾಗಿ ಕ್ರೆಡಿಟ್ ಕಾರ್ಡ್ ರೀಪೇಮೆಂಟ್ ಬಾಕಿ ಉಳಿದಿತ್ತು. ಕೈಲಾಜಿ ಅವನಿಗೆ ವಿಷಯ ತಿಳಿಸಿದಾಗ ‘ನೀವು ಅದೊಂದು ತುಂಬಿ, ರೆಡಿ ಮಾಡಿ ಪ್ಲೀಸ್. ನಂದೊಂದು ಪ್ರಾಪರ್ಟಿ ಡೀಲ್ ಆದರೆ ನಿಮಗೊಂದು ಸೈಟ್ ಫ್ರೀ ಕೊಡೋಣ. ನಿಮ್ಮ ಕೈಗುಣ ಚೆನ್ನಾಗಿದೆ ಅಂತ ಜನ ಹೇಳ್ತಾರೆ, ಹಾಗಾಗಲಿ. ಸದ್ಯ ನಿಮ್ಮ ಬಾಯಿಗೆ ಬೆಲ್ಲ ಹಾಕಿಸುವ ಬನ್ನಿ.’

ಆನೆಗಾತ್ರದ ಕಾರನ್ನು ನಿಲ್ಲಿಸುತ್ತಾ ಉದ್ಯಮಿ ಕೇಳಿದ ‘ನೀವು ಕಲ್ಯಾಣಿ ನೋಡಿದ್ದೀರಾ?’
‘ಈ ಊರಿನಲ್ಲಿ ಕಲ್ಯಾಣಿಯಾ ಇಲ್ವಲ್ಲ?’
‘ಆ ಕಲ್ಯಾಣಿಯಲ್ಲ. ಅವಳು… ಅವಳು… ಬಕ್ಕೆ ಕಲ್ಯಾಣಿ, ಗೊತ್ತಿಲ್ವಾ?’

‘ಓಹ್! ಕೇಳಿದ್ದೇನೆ ಅಷ್ಟೇ. ಅವತ್ತೊಬ್ಬ ರೈತ ಕಾಡಿನಿಂದ ಹಲಸಿನ ಹಣ್ಣು ತಂದುಕೊಟ್ಟಿದ್ದ. ಮನೆಗೆ ಒಯ್ದಿದ್ದೆ. ಒಳ್ಳೆಯ ಚಂದ್ರಬಕ್ಕೆ. ಅದರ ತೊಳೆಗಳ ಕಲರ್ ಬಣ್ಣಿಸೋದು ಕಷ್ಟ. ಕವಿಯಾಗಿರಬೇಕಿತ್ತು ಅಂತ ಅನ್ನಿಸಿಬಿಡ್ತು. ಬಿಳಿಯಾ? ಬಿಳಿಯಲ್ಲ! ಮುಟ್ಟಿದರೆ ಕೆಂಪಾಗಿ ಬಿಡಬಹುದು ಅನ್ನಿಸಿತು. ಕಿತ್ತಳೆ ಅನ್ನೊದು ಕಷ್ಟ. ಜೇನು ತುಪ್ಪದಲ್ಲಿ ಅದ್ದಿ ಬಾಯಿಗಿಟ್ಟರೆ ಎಂತಹ ರುಚಿ ಅಂತೀರಾ! ಆಮೇಲೆ ಒಂದು ದಿನ ಮತ್ತೆ ತಿನ್ನಬೇಕೆಂಬ ಆಸೆಯಾಗಿ, ಸ್ನೇಹಿತರೊಬ್ಬರಿಗೆ ಕೇಳ್ದೆ. ಅವರು ನಗಲಿಕ್ಕೇ ಶುರುಮಾಡಿದರು. ಬೇಣದಲ್ಲಿ ಒಂಟಿಯಾಗಿರುವ ಆ ಮರವನ್ನು ಹತ್ತಿ, ಯಾರು ಬೇಕಾದರೂ ತಿನ್ನಬಹುದು. ಹಾಗೇ ಈ ಊರಿನಲ್ಲಿ ಇರುವ ಕಲ್ಯಾಣಿ ಎಂಬ ಹೆಂಗಸನ್ನೂ… ಎಂದರು. ಅಷ್ಟು ಮಾತ್ರ ಗೊತ್ತು’

‘ಅವೆಲ್ಲ ಪೂರ್ತಿ ನಿಜವಲ್ಲ ಕೈಲಾಜಿ ಸಾಹೇಬ್ರೇ. ಕಲ್ಯಾಣಿ ಹಾಗೆಲ್ಲ ಅಡ್ನಾಡಿಗಳಿಗೆ ಆಹಾರವಾದವಳಲ್ಲ. ಅವರು ಹೊಟ್ಟೆಕಿಚ್ಚಿನಿಂದ ಹೇಳೋದು ಅದು. ಅವಳು ಸೆಲೆಕ್ಟಿವ್ ಮತ್ತು ಕಾಸ್ಟ್ಲೀ. ಇನ್ನು ಅವಳನ್ನು ವರ್ಣಿಸೋದು, ನೀವು ಹೇಳಿದ ಹಣ್ಣಿನ ವರ್ಣನೆಯ ಹಾಗೆ. ಬನ್ನಿ ಬನ್ನಿ…’ ಆತ ಡೋರ್ ತೆಗೆದು ಇಳಿದ.

ಕಲ್ಯಾಣಿಯ ಮನೆಯ ಬಾಗಿಲು ತೆರೆದುಕೊಂಡೇ ಇತ್ತು. ಡೋರ್ ಲಾಕ್ ಸದ್ದು ಕೇಳಿ ಅವಳು ಹೊರಗೆ ಬಂದಿದ್ದಳು. ಅವನನ್ನು ನೋಡಿ ನಕ್ಕು ಕೈಲಾಜಿಗೆ ನಮಸ್ಕಾರ ಮಾಡಿದಳು. ʻʻಇವರು ಕೈಲಾಜಿ ಸಾಹೇಬ್ರು. ಬ್ಯಾಂಕ್ ಮ್ಯಾನೇಜರ್. ಬ್ಯಾಂಕ್ ಕೆಲಸ ಟೆನ್ಶನ್ ನೋಡು, ರಿಲಾಕ್ಸ್ ಆಗೋಕೆ ಸಮಯವೇ ಇರುವುದಿಲ್ಲ. ಕಲ್ಯಾಣಿ ಬಕ್ಕೆ ರಾಶಿ ಇಷ್ಟ ಆಯ್ತಂತೆ. ಕೊಡು ಅವ್ರಿಗೆ’ʼ

ʻʻನಾನು ಬ್ಯಾಂಕಿಗೆ ಹೋಗೋದು ಕಮ್ಮಿ, ಆದರೂ ಇವರನ್ನು ನೋಡಿದ್ದೆ. ಸಾಹೇಬರು ಈ ಬಡವಿಯನ್ನು ನೋಡಿಲ್ಲ. ಕ್ಯಾಶ್ ಕೌಂಟರ್‌ನಲ್ಲಿ ಕೆಲಸ ಅಷ್ಟೇ ಅಲ್ಲವ್ರಾ ನಮಿಗೆ! ಬನ್ನಿ ದೊರೆ ಒಳಗೆ.’ ಕೈಲಾಜಿ ಕಲ್ಯಾಣಿಯನ್ನು ಹಿಂಬಾಲಿಸಿದ.

ಉದ್ಯಮಿ ಫೋನ್ ಬಂದ ನೆವದಲ್ಲಿ ಹೊರಗೆ ಹೋದ. ಹಲಸಿನ ಹಣ್ಣು ಹೊರಗಿನಿಂದ ಆಕರ್ಷಕವಾಗಿಯೇನೂ ಕಾಣಲಿಲ್ಲ ಕೈಲಾಜಿಗೆ. ಬಲಿತಿದ್ದು, ಸೀಳಿದ ಯಾಂತ್ರಿಕವಾಗಿ. ತಿನ್ನಬೇಕು ಅನ್ನಿಸಲಿಲ್ಲ. ಒಂದು ತೊಳೆಯನ್ನು ತಿಂದರೂ ಮೇಣ ಕೈಗೆ ಅಂಟಿತ್ತು. ರುಚಿಯನ್ನು ರಸನೇಂದ್ರಿಯ ಗ್ರಹಿಸಲಿಲ್ಲವೋ, ಮೆದುಳಿಗೆ ರವಾನಿಸಲಿಲ್ಲವೋ ತಿಳಿಯದಾಯಿತು. ಎಣ್ಣೆ ಹಚ್ಚಿಕೊಳ್ಳಬೇಕಿತ್ತು, ತಿನ್ನದೆಯೂ ಇರಬಹುದಿತ್ತು ಎಂದೆಲ್ಲಾ ಅನ್ನಿಸಿತ್ತು. ಕ್ರಿಯೆ ಯಾಂತ್ರಿಕವಾಗಿತ್ತು. ಕಲ್ಯಾಣಿ ಗ್ರಹಿಸಿದ್ದಳು, ಜೇನುತುಪ್ಪದ ಪ್ರಯೋಗ ಮಾಡಿದ್ದಳು. ‘ಪ್ರೀತಿ ಹುಟ್ಟಿದವರು ಕಲಾ ಅಂತ ಕರೆಯಬಹುದು’ ಕಲ್ಯಾಣಿ ಹೇಳುತ್ತಿದ್ದಾಗ, ಕೈಲಾಜಿಗೆ ಫೋನ್ ಕರೆ ಬಂದು ಬಚಾವಾದೆ ಎಂದುಕೊಂಡು, ಅವಳಿಗೆ ಬೈ ಎಂದು ಸನ್ನೆ ಮಾಡುತ್ತಾ ಕಾರಿನ ಬಳಿ ಬಂದಿದ್ದ. ‘ಬೇಗ ಬಂದ್ರಿ, ಈಗಲೇ ಹೀಗೆ ಆಕೆ. ಇಪ್ಪತ್ತು ವರ್ಷಗಳ ಹಿಂದೆ ಹೇಗಿರಬೇಡ. ಜನರಿಗೆ ಅಸೂಯೆ ಅವಳ ಬಗ್ಗೆ” ಆತನ ಪ್ರವರಕ್ಕೆ ಗಮನ ಕೊಡದೇ ವಾಹನ ಚಲಾಯಿಸಲು ಸಿಗ್ನಲ್ ಮಾಡಿ, ಕೈಲಾಜಿ ಇನ್ನೊಂದು ಕರೆ ಸ್ವೀಕರಿಸಿದ. ‘ಪೇಟೆಯ ಕ್ಲಬ್ಬಿನಲ್ಲಿ ಎಲೆ ಹಿಡಿಯುವ ಬನ್ನಿ’ ಉದ್ಯಮಿ ಪಟ್ಟು ಸಡಿಲಿಸಲಿಲ್ಲ.

*

ಆ ಕೋಟಿ ವ್ಯವಹಾರದ ಕೇಸಿನಲ್ಲಿ ಕೈಲಾಜಿ ಸಿಕ್ಕಿಬಿದ್ದ, ರಿಯಲ್ ಎಸ್ಟೇಟ್ ಕುಳ ಕೈಯೆತ್ತಿ ಬಿಟ್ಟ. ಅತ್ತ ಲೋನ್ ಕಂತುಗಳು ಹಾಗೆ ಉಳಿದವು, ಅದು ಸಾಯಲಿ, ಕೈಲಾಜಿಯ ಸ್ವಂತ ದುಡ್ಡೂ ಕೈಬಿಟ್ಟಿತ್ತು. ಅಲ್ಲಿಂದ ಶುರುವಾದ ಸಣ್ಣ ಹೊಂಡ ಮುಚ್ಚುವ ಕೆಲಸ, ಕೈಲಾಜಿಗೆ ಬದುಕಿನ ಕಂದಾಯ ಕಟ್ಟುವಂತೆ ಮಾಡಿತ್ತು. ಆತನ ಹಣಕಾಸಿನ ಪರಿಸ್ಥಿತಿಯನ್ನು ಅಲ್ಲೋಲ ಕಲ್ಲೋಲ ಮಾಡಿತ್ತು. ಸಾಲ ಸಾಗರದಷ್ಟಾಗಿತ್ತು. ಹಾರಲು ಹತ್ತಿರ ಕಡಲೂ ಇರಲಿಲ್ಲ. ಮೇಲಧಿಕಾರಿಗಳಿಗೆ ದೂರು ಹೋಗತೊಡಗಿದವು. ಒಂದು ದಿನ ಬಂದು ಕುಳಿತ ಅವರು ಎಲ್ಲ ಲೆಕ್ಕ ತೆಗೆದು ಡಿಸ್ಮಿಸ್ ಮಾಡುವುದು ಅನಿವಾರ್ಯವಾಗುತ್ತದೆ. ಯಪರಾತಪರಾ ಆದ ಹಣವನ್ನು ಸೈಲೆಂಟ್ ಆಗಿ ಕಟ್ಟಿ ಬಿಟ್ಟುಹೋಗಿ. ರಿಸೈನ್ ಮಾಡಿದೆ, ಬ್ಯುಸಿನೆಸ್ ಮಾಡುವೆ ಅಂತ ಹೇಳಿಕೊಳ್ಳಲು ನಮ್ಮ ಅಭ್ಯಂತರವಿಲ್ಲ ಎಂದರು. ಒಂದಿಷ್ಟು ಆತ್ಮೀಯರು ತಾತ್ಪೂರ್ತಿಕ ಸಮಸ್ಯೆ ಬಗೆಹರಿಸಿದರು. ಕೈಲಾಜಿ ಬ್ಯಾಂಕಿನಿಂದ ಬಿಡುಗಡೆಯಾದ. ಆದರೆ ಮನೆಯಲ್ಲಿ ಹೇಳಲಿಲ್ಲ, ಧಗೆಯನ್ನು ಮುಚ್ಚಿಟ್ಟ. ಸಂಭಾವ್ಯ ದಾರಿಗಳನ್ನು ಹುಡುಕತೊಡಗಿದ. ಸಾಯುವುದೇ ಮೇಲು ಎಂದು ಅನ್ನಿಸತೊಡಗಿದಾಗ, ಅವನಿಗೆ ಗೆಳೆಯರ ಬಳಗದ ಅದ್ಯಾರೋ ಸೂಚಿಸಿದ್ದು ಕುಂಟ ಪಂಡಿತರ ಹೆಸರನ್ನ!

*

ಕುಂಟ ಪಂಡಿತರು ಪೇಟೆಯ ಹೊರವಲಯದ ಕಾಲೋನಿಯೊಂದರಲ್ಲಿ ವಾಸಿಸುತ್ತಿದ್ದರು. ಅವರು ಪಾರಂಪರಿಕ ಔಷಧಿಗಳನ್ನು ತಯಾರಿಸಿ ಕೊಡುತ್ತಿದ್ದರು. ಇದು ತಲೆತಲಾಂತರದಿಂದ ಬಂದ ವೃತ್ತಿ. ಜೊತೆಗೆ ಜಾತಕ, ಹಸ್ತ ಸಾಮುದ್ರಿಕಾಶಾಸ್ತ್ರದ ಜ್ಞಾನವಿತ್ತು. ಅವತ್ತು ಹೆಂಡತಿಯ ಏರು ಧ್ವನಿಯಿಂದ ದೂರವಾಗುತ್ತ ಹೊರಟ ಕೈಲಾಜಿ ಬಂದು ತಲುಪಿದ್ದು ಇವರ ಧನ್ವಂತರಿ ದವಾಖಾನೆಗೆ. ಅಷ್ಟು ಮುಂಚೆ ಸಾಮಾನ್ಯವಾಗಿ ಪಂಡಿತರ ದವಾಖಾನೆಯ ಮುಂದೆ ಜನರು ಇರುತ್ತಿರಲಿಲ್ಲ. ಹಾಗಾಗಿ ಅವರಿಗೆ ಕೈಲಾಜಿಯೊಂದಿಗೆ ಪ್ರತಿಸ್ಪಂದನಕ್ಕೆ ಹೆಚ್ಚು ಸಮಯ ದೊರಕಿತು. ಅವರು ಒಂದು ಮಣೆಯ ಮೇಲೆ ಕುಳಿತಿದ್ದರು. ಮುಖ್ಯವಾದ ಔಷಧಿಗಳನ್ನು ಅವರು ಕೈಗೆಟುಕುವ ದೂರದಲ್ಲಿ ಇಟ್ಟುಕೊಂಡಿದ್ದರು. ಬಿಳಿಯಾದ ಉದ್ದನೆಯ ಕೂದಲನ್ನು ಗಂಟುಕಟ್ಟಿ ಸ್ವಲ್ಪ ಇಳಿಬಿಟ್ಟಿದ್ದರು. ಮೀಸೆಯು ತುಟಿಗಳನ್ನು ಆವರಿಸಿತ್ತು ಮತ್ತು ಗಡ್ಡವನ್ನು ಹಣಿಗೆಯಲ್ಲಿ ಬಾಚಿ ಕೆಳಗೆ ಬಿಟ್ಟಂತೆ ನೀಟಾಗಿತ್ತು. ಆ ಗಡ್ಡದ ಕೆಲವು ಕೂದಲುಗಳ ತುದಿ ಚಕ್ರಾಸನ ಹಾಕಿ ಕುಳಿತ ಸ್ಥಿತಿಯಲ್ಲಿ ತೊಡೆಗೆ ತಾಗುತ್ತಿತ್ತು.

ಮೊದಲ ನೋಟಕ್ಕೆ ಗೌರವ ಭಾವನೆ ಕೈಲಾಜಿಗೆ ಉಂಟಾಯಿತು. ಸೋತು ಸೊರಗಿದಾಗ ಹೀಗಾಗಬಹುದು ಎಂದುಕೊಂಡ. ಇಂತಹವರ ಬಳಿ ಹೆಚ್ಚು ಬಾಯಿಬಿಡಬಾರದು ಎಂದುಕೊಂಡ. ಅವರು ‘ಏನಾಯ್ತು ತಮ್ಮಾ’ ಎಂದು ಕೇಳಿದಾಗಲೂ, ‘ಸ್ವಲ್ಪ ನಿದ್ದೆ ಬರ್ತಿಲ್ಲ. ವಿಚಿತ್ರ ಯೋಚನೆಗಳು ಕಾಡುತ್ತವೆ. ಹೀಗಾದಾಗ ಬೆಳಿಗ್ಗೆ ಕೆಲಸಕ್ಕೆ ಹೋಗಲು ತೊಂದರೆ ಆಗುತ್ತದೆ’ ಅಂದ. ಅವರು ಇವನನ್ನೇ ದಿಟ್ಟಿಸಿ ನೋಡುತ್ತಾ ಇದ್ದರು. ಮುಂದೆ ಆತನಿಗೆ ತನ್ನನ್ನು ತಾನು ನಿಗ್ರಹಿಸಿಕೊಳ್ಳಲು ಆಗಲಿಲ್ಲ. ಎಲ್ಲವನ್ನೂ ಕಾರಿದ, ಬಿಕ್ಕಿ ಬಿಕ್ಕಿ ಅತ್ತ, ಕುಸಿದು ಕುಳಿತ. ಪಂಡಿತರು ಅವರ ತಲೆಯನ್ನು ನೇವರಿಸಿದರು. ಹಣೆಯನ್ನು ಹೆಬ್ಬೆಟ್ಟಿನ ತುದಿಯಿಂದ ಒತ್ತಿ ಏನನ್ನೋ ಗುನುಗುನಿಸಿದರು. ‘ಸಮಾಧಾನ’ ಎನ್ನುತ್ತಾ ಎದ್ದು ಒಳಗಡೆ ಹೋಗಿ ಬಂದರು. ಜನ ಹೇಳುವಷ್ಟು ತೀರಾ ಕುಂಟರಲ್ಲ ಅವರು ಎಂಬುದನ್ನು ಕೈಲಾಜಿ ಗಮನಿಸಿದ್ದ. ‘ಕುಂಟ ಅಂದರೆ ಕುಂಟ ಅಂತಲ್ಲ ಅರ್ಥ! ನಡಿಗೆ ಸರಿಯಿಲ್ಲ ಎಂಬರ್ಥವೂ ಇರಬಹುದು. ಸಾಮಾನ್ಯವಾಗಿ ಸಮಾಜಕ್ಕೆ ನ್ಯೂನತೆಯನ್ನು ಹುಡುಕುವ ಚಪಲ. ಅದಕ್ಕೆ ಅನುಕಂಪ ವ್ಯಕ್ತಪಡಿಸುವ ಹಂಬಲ, ಕೊನೆಗೆ ಹಂಗಿಸುವ ಮನೋಭಾವ’ ಇವನ ನೋಟವನ್ನು ಗಮನಿಸಿ ಪಂಡಿತರು ಹೇಳಿದ್ದರು.

ಇದನ್ನೂ ಓದಿ | ಸಾಲಭಂಜಿಕೆ ಅಂಕಣ | ಬಂಗಾರದಂಥ ಹುಡುಗಿ ನಗ ಬಯಸಿದಳೇ?

ಕೈಯಲ್ಲಿ ಕಾಕೆಹಣ್ಣಿನ ಬಣ್ಣದ, ಗುಲಗಂಜಿ ಗಾತ್ರದ ಗುಳಿಗೆಗಳನ್ನು ಹಿಡಿದುಕೊಂಡು ಬಂದು, ಒಂದು ಕಾಗದದಲ್ಲಿ ಹಾಕಿ, ಮಡಚಿ ಪಟ್ಟಲ ಮಾಡಿ ಕೊಡುತ್ತಾ ಪಂಡಿತರು ‘ಇದರಲ್ಲಿನ ಎರಡು ಮಾತ್ರೆಗಳನ್ನು ವಿಶ್ರಾಂತಿ ಮಾಡಬಹುದಾದ ಸ್ಥಳದಲ್ಲಿ ಸೇವಿಸು. ಸದ್ಯಕ್ಕೆ ನಿನ್ನ ಮಾನಸಿಕ ಪರಿಸ್ಥಿತಿಗೆ ಮೂರು ಹೊತ್ತು ತೆಗೆದುಕೊಳ್ಳಬೇಕು. ನಂತರ ಎರಡು ಬಾರಿ, ಆಮೇಲೆ ದಿನಕ್ಕೆ ಒಂದು ಬಾರಿ ಮಾಡುತ್ತಾ, ಎರಡರಿಂದ ಒಂದು ಮಾತ್ರೆಗೆ ತರೋಣ. ಇದಕ್ಕೆ ಆರೆಂಟು ತಿಂಗಳು ಬೇಕಾಗಬಹುದು’ ಎಂದರು. ‘ಗುರುಗಳೇ…’ ಅಯಾಚಿತವಾಗಿ ಕೈಲಾಜಿಯ ಬಾಯಿಯಿಂದ ಈ ಶಬ್ದ ಅವನ ಊಹೆಗೂ ಮೀರಿ ಬಂದಿತ್ತು. ‘ನಾನು ಮನೆಗಾಗಲಿ, ಬ್ಯಾಂಕಿಗಾಗಲಿ ಹೋಗುವಂತಿಲ್ಲ. ಬೇರೆ ಸ್ಥಳವಿಲ್ಲ!’

‘ಸರಿ ಹಾಗಾದರೆ, ಅಡುಗೆ ಮನೆಯಲ್ಲಿ ಕೊಡದಲ್ಲಿ ನೀರಿದೆ ನೋಡು, ಮಾತ್ರೆ ಸೇವಿಸಿ, ಹಿಂಬದಿ ಪಕ್ಕದಲ್ಲಿರುವ ಕೋಣೆಗೆ ಹೋಗಿ ವಿಶ್ರಾಂತಿ ಪಡೆ. ಆಮೇಲೆ ನೋಡೋಣ’ ಪಂಡಿತರು ಪರಿಹಾರ ತೋರಿದರು. ನಿಧಾನವಾಗಿ ಬೇರೆ ಬೇರೆ ಸಮಸ್ಯೆ ಇದ್ದವರು, ಅಲ್ಲಿಗೆ ಬರಲು ಆರಂಭಿಸಿದ್ದರು. ಕೈಲಾಜಿ ಮಾತ್ರೆ ಸೇವಿಸಿ, ಒಳಗೆ ಕೋಣೆಯಲ್ಲಿದ್ದ ಚಾಪೆ ಹಾಸಿ ಮಲಗಿದ. ಅರೆನಿದ್ರಾವಸ್ಥೆ ಅಥವಾ ಕನಸಿನ ಸ್ಥಿತಿಯಲ್ಲಿ ಅವನ ಬದುಕು, ಸಿನಿಮಾ ದೃಶ್ಯಗಳಂತೆ ಒಂದಿಷ್ಟು ಚಲಿಸಿ, ರೀಲ್ ಕಟ್ ಆದಂತಾಗಿ ಗಾಢಾಂಧಕಾರ ಆವರಿಸಿತು. ಮತ್ತೆ ಎಷ್ಟು ಕಣ್ಣು ಮುಚ್ಚಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೆಲವು ಸಮಯದ ನಂತರ ಪಂಡಿತರು ಬಂದು ಕೇಳಿದರು. ತನಗಾದ ಅನುಭವವನ್ನು ಕೈಲಾಜಿ ಹೇಳಿದ. ‘ಮನೆಯ ಹಿಂದುಗಡೆ ಒಂದಿಷ್ಟು ಬೇರುಗಳಿವೆ. ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಲು ಬರುತ್ತದಾ?’ ಎಂದು ಪಂಡಿತರು ಕೇಳಿದಾಗ, ಹೂಂ ಎಂದು ತಲೆಯಾಡಿಸಿದ. ಮಧ್ಯಾಹ್ನ ಊಟವನ್ನು ಒಟ್ಟಿಗೆ ಮಾಡುತ್ತಾ ‘ಅಡಿಗೆ ಮಾಡಲು ಬರುತ್ತದೆಯೇ?’ ಎಂದು ಕೇಳಿದರು. ‘ಮದುವೆಗಿಂತ ಮುಂಚೆ ಸ್ವಂತ ಅಡುಗೆ ಮಾಡಿಕೊಳ್ಳುತ್ತಿದ್ದೆ. ನಾಳೆಯಿಂದ ನಾನೇ ಮಾಡ್ಲಾ?’ ಕೊನೆಯ ಸಾಲು ಹೆಚ್ಚಾಯಿತು ಅಂತ ತುಟಿ ಕಚ್ಚಿಕೊಂಡ ಕೈಲಾಜಿ. ‘ಹಾಗೇ ಮಾಡು’ ಕೊನೆಯಲ್ಲಿ ಉಳಿದ ಮಜ್ಜಿಗೆ ಸುರಿಯುತ್ತಾ ಪಂಡಿತರು ಹೇಳಿದ್ದರು. ಊಟವಾದ ಮೇಲೆ ಮತ್ತೆರಡು ಮಾತ್ರೆಗಳನ್ನು ನುಂಗಿದರೂ ಕೈಲಾಜಿಗೆ ಪರಿಣಾಮ ಕಾಣಲಿಲ್ಲ. ಬ್ಯಾಂಕ್ ಬಿಡುವ ಸಮಯಕ್ಕೆ ಮನೆಗೆ ಹೊರಟ ಕೈಲಾಜಿಗೆ ಪಂಡಿತರು ಕೇಳಿದ್ದರು ‘ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮನದಲ್ಲಿ ಸುಳಿಯುತ್ತಿದೆಯೇ?’. ಕೈಲಾಜಿ ತಲೆತಗ್ಗಿಸಿದ್ದ. ‘ಆಗುವುದು ಆಗಿಹೋಯಿತು, ಬದುಕಿದ್ದರೆ ಸಂಸಾರ ದಡ ಸೇರುತ್ತದೆ. ಇಲ್ಲಾಂದ್ರೆ ನೀನು ಹೋಗುವುದರ ಜೊತೆಗೆ ಆ ಹೆಣ್ಣುಮಗಳು, ಹಸುಳೆಗಳನ್ನು ಮುಳುಗಿಸಿ ಹೋಗುತ್ತಿ. ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಸಲುವಾಗಿ ಬದುಕು. ದುಡಿದು ದುಡಿದು ಪರಿಹಾರ ಕಂಡುಕೋ. ನಿನ್ನ ಸಮಸ್ಯೆ ಹೆಚ್ಚೆಂದರೆ ಐದು ವರ್ಷಗಳಲ್ಲಿ ಬಗೆಹರಿಯುತ್ತದೆ. ನಿಧಾನವಾಗಿ ಕುಟುಂಬಕ್ಕೆ ಸತ್ಯ ಹೇಳು. ಜಗತ್ತನ್ನು ಎದುರಿಸು. ನಾಳೆ ಬಾ. ದೃಢವಾಗಿ ಸಾಯುವುದಿಲ್ಲ ಎಂದು ನಿರ್ಧರಿಸಿ ಬಾ.’

ಇದನ್ನೂ ಓದಿ | ಕೇರಂ ಬೋರ್ಡ್‌ ಅಂಕಣ | ಉಸಿರು ಹಿಡಿದು ಹಾಡುವೆ, ಕೇಳಡಿ ಕಣ್ಮಣಿ!

ಮರುದಿನದಿಂದ ಅಡುಗೆ, ದಿನನಿತ್ಯದ ಕೆಲಸ, ಔಷಧ ತಯಾರಿಕೆಯಲ್ಲಿ ಪಂಡಿತರಿಗೆ ಕೈಲಾಜಿ ಸಹಾಯ ಮಾಡತೊಡಗಿದ್ದ. ಆನಂತರ ಅವನಿಗೆ ಕ್ರಮೇಣವಾಗಿ ಔಷಧಿ ಕೆಲಸ ಮಾಡತೊಡಗಿತು. ಅವನಿಗೆ, ಕಾಲದಿಂದ ಮುಂದಕ್ಕೆ ಹೋಗಿ ತನ್ನ ಜೀವನವನ್ನು ಕಾಣುವ ಅಪರೂಪದ ಶಕ್ತಿ ಪ್ರಾಪ್ತವಾಯಿತು. ದಿನಾಲೂ ಅಷ್ಟಷ್ಟೇ ಮುಂದಿನ ದಿನಮಾನಗಳು ಕಣ್ಮುಂದೆ ಬರಲಾರಂಭಿಸಿದವು. ಆ ದೃಶ್ಯಗಳಲ್ಲಿ ಆತ ನಿಧಾನವಾಗಿ ಸಹಜ ಸ್ಥಿತಿಗೆ ಬರಲಾರಂಭಿಸಿದ್ದ. ಸಂಸಾರದಲ್ಲಿ ಸಾಮರಸ್ಯ ಸಾಧ್ಯವಾಗಿತ್ತು. ಬ್ಯಾಂಕ್ ಬಿಟ್ಟು ಪಂಡಿತರ ಜೊತೆ ಔಷಧ ತಯಾರಿಕೆಯಲ್ಲಿ ಕೆಲಸ ಮಾಡುತ್ತೇನೆ ಎಂದು ಹೆಂಡತಿಗೆ ಹೇಳಿದ. ಆಕೆ ಒಂದೆರಡು ದಿನ ಅಸಮಾಧಾನ ವ್ಯಕ್ತಪಡಿಸಿದಳು. ನಂತರ ಬದಲಾದ ಕೈಲಾಜಿಯ ಮನಸ್ಥಿತಿ ಆಕೆಯನ್ನು ಒಲಿಸಿತು. ಮುಂದೊಂದು ದಿನ ಆಕೆಗೆ ನಿಜವಾದ ವಿಷಯವನ್ನು ಅರುಹಿದಾಗಲೂ ಅದನ್ನು ಆಕೆ ಸಮಾಧಾನ ಚಿತ್ತದಿಂದಲೇ ಸ್ವೀಕರಿಸಿದಳು.

ನಿಧಾನವಾಗಿ ಪಂಡಿತರು ಗುಳಿಗೆಯ ಅವಧಿಯನ್ನು ಇಳಿಸಿದರು. ಪ್ರತಿ ಹಂತದಲ್ಲೂ ಕೈಲಾಜಿ ಅವರ ವಿಶ್ವಾಸ ಗಳಿಸಿದ್ದ. ‘ಗುರುಗಳೇ ಈ ಗುಳಿಗೆಯ ಹೆಸರೇನು?’

ʻಇಲ್ಲಿಯವರೆಗೆ ಬಹಳ ಕಡಿಮೆ ಜನರಿಗೆ ಈ ಔಷಧ ಕೊಟ್ಟಿದ್ದೇನೆ. ಇದರ ಹೆಸರನ್ನು ಯಾರೂ ಕೇಳಲಿಲ್ಲ. ಕೇಳಿದ್ದರೆ ಹೇಳುತ್ತಿದ್ದೆನೋ, ಇಲ್ಲವೋ. ಎಷ್ಟು ಹೇಳುತ್ತಿದ್ದೆನೋ ಗೊತ್ತಿಲ್ಲ! ಕೇಳು ಇವತ್ತು ಎಲ್ಲ ಹೇಳಿಬಿಡುತ್ತೇನೆ.’ ದೀರ್ಘವಾಗಿ ಉಸಿರನ್ನು ಒಳಗೆ ಎಳೆದುಕೊಂಡು ಹೇಳಿದ್ದರು. ದವಾಖಾನೆ ಮುಚ್ಚಿ, ಒಳಬಂದು ದೇವರ ಕೋಣೆಯಲ್ಲಿ ಜಮಖಾನ ಹಾಸಿ ಕುಳಿತುಕೊಂಡು, ಕೈಲಾಜಿಗೆ ಕುಳಿತುಕೊಳ್ಳಲು ಹೇಳಿದರು.

ʻಐವತ್ತು ವರ್ಷಗಳ ಹಿಂದೆ ನಾನು ಹೀಗೆ ಸೋತು ಬಂದು ನಿನ್ನ ಹಾಗೆ ನನ್ನ ಗುರುಗಳ ಎದುರು ಕುಳಿತಿದ್ದೆ. ನಾನು ಅವತ್ತಿನ ಕಾಲದಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಪಾಸಾದವ. ಬಿಸಿರಕ್ತದ ಯುವಕ, ಏನೋ ಸಾಹಸ ಮಾಡಲು ಹೋಗಿ ಇನ್ನೇನೋ ಆಗಿತ್ತು. ಅವಿಭಕ್ತ ಕುಟುಂಬ, ಮನೆಯಿಂದ ಹೊರಗೆ ಹಾಕಿದರು. ಅವೆಲ್ಲ ಒಂದು ದೊಡ್ಡ ಕಥೆ, ಅದು ಬಿಡು. ಗುರುಗಳು ಕಲಿಸಿದ್ದು ಕಲಿಯುತ್ತಾ ಹೋದೆ. ಒಂದು ದಿನ ಅವರ ಬಳಿಯಿದ್ದ ಗ್ರಂಥದಲ್ಲಿ ಒಂದು ಅಪರೂಪದ ವಟಿಯ ವಿವರಣೆ ಇತ್ತು. ಅದನ್ನು ಆ ಗ್ರಂಥದಲ್ಲಿ ವಯ ವಟಿ ಎಂದು ಕರೆದಿದ್ದರು. ನಾನು ಅದರಲ್ಲಿ ಹೇಳಿದ್ದ ಗಿಡಮೂಲಿಕೆಗಳನ್ನು ಗುರುಗಳ ಸಹಾಯದಿಂದ ತಿಳಿದು, ಈ ವಟಿಯನ್ನು ತಯಾರಿಸಿದೆ. ನನ್ನ ಮೇಲೆಯೇ ಪ್ರಯೋಗಿಸಿಕೊಂಡೆ. ಅದು ಕಾಲವನ್ನು ಮುಂದೆ ಹೋಗಿ ನೋಡುವ ವಿಶಿಷ್ಟ ಅನುಭವವನ್ನು ನೀಡಿತ್ತು. ಅದನ್ನು ತಯಾರಿಸಿ, ಪ್ರಯೋಗಿಸಿದಾಗ ನನಗೆ ಒಂದು ಭ್ರಮೆ ಆವರಿಸಿತು. ಏನೋ ಆಗುತ್ತದೆ ಅನ್ನಿಸುತ್ತಿತ್ತು, ಹುಚ್ಚು ಹಿಡಿದ ಹಾಗೆ! ಅಪರೂಪದ್ದು ಸಿದ್ಧಿಸುವಾಗ ಹೀಗಾಗುತ್ತದೆ ಎಂದು ಗುರುಗಳು ಧೈರ್ಯ ತುಂಬಿದರು. ಆದರೂ ಏನೋ ಹಸಿವು, ಅರ್ಥವಾಗದ ಕ್ಷೋಭೆ. ಏನು ಮಾಡಲಿ, ಏನು ಬಿಡಲಿ, ಎನ್ನುವಾಗ ಗುರುಗಳನ್ನು ಹುಡುಕಿಕೊಂಡು ಒಂದು ಸುಂದರ ತರುಣಿ ಬಂದಿದ್ದಳು. ಎಂತಹ ಚೆಂದವದು ಎಂದು ಬಾಯಿಮಾತಿನಲ್ಲಿ ಹೇಳಲಾಗದು. ಅಧ್ಯಯನ ಮಾಡುತ್ತಿದ್ದವನ ಮನಸ್ಸು ಚಂಚಲವಾಯಿತು. ಅವಳನ್ನು ಹೊಂದುವುದು ಪರಮ ಗುರಿಯಾಯಿತು. ಅವಳಿಗೆ ಏನೂ ತಿಳಿಯದ ವಯಸ್ಸು. ನಾನು ಕಾಮಿಸಿದೆ. ಅವಳು ಆರಾಧಿಸಿದಳು. ಗುರುಗಳು ಸಾಕು ಬಿಡು ಎಂದು ಎಚ್ಚರಿಸುವವರೆಗೂ ಮುಂದುವರೆದಿತ್ತು. ಅವಳನ್ನು ಮುಂದೆಂದೂ ಭೇಟಿಯಾಗಲಿಲ್ಲ. ಆಕೆ ಮತ್ತೆ ಇಲ್ಲಿ ಬರದಿದ್ದುದು ಅಚ್ಚರಿ ಮೂಡಿಸಿತ್ತು. ಅದನ್ನು ಮರೆಯಲೆಂಬಂತೆ ಈ ಅಪರೂಪದ ವಟಿಯ ಮೇಲೆ ಮತ್ತಷ್ಟು ಪ್ರಯೋಗ ನಡೆಸಿದೆ. ಗುರುಗಳ ಸಹಾಯದಿಂದ ರಸೌಷಧ ಸೇರಿಸಿದೆ. ಈ ಕಾರಣದಿಂದಾಗಿ, ಇನ್ನೊಂದಿಷ್ಟು ಹೆಚ್ಚಿನ ಪ್ರಯೋಜನ ಈ ವಟಿಯಿಂದ ಜನರಿಗೆ ಸಿಗುವ ಹಾಗಾಯಿತು. ಗ್ರಂಥದಿಂದ ಹೊರತಾಗಿ ಇದನ್ನು ತಯಾರಿಸಿದ್ದರಿಂದ ಬೇರೆಯದೇ ಹೆಸರಿಡುವಂತೆ ಗುರುಗಳು ಸೂಚಿಸಿದರು. ಬಹಳ ಆಲೋಚನೆ ಮಾಡಿದೆ. ಆ ತರುಣಿಯ ಮೋಹ ಕೆಲಸ ಮಾಡಿತೋ, ಪಶ್ಚಾತ್ತಾಪದಿಂದ ಆಯಿತೋ ಒಂದು ನಾಮವನ್ನು- ಕಲಾ ವಟಿ- ನಿದ್ದೆಯಲ್ಲಿ ಉಚ್ಛರಿಸಿದ್ದೆ ಎಂದು ಗುರುಗಳು ಹೇಳಿದ್ದರು’ ಒಮ್ಮೆ ಪಂಡಿತರು ಮೌನ ತಾಳಿದರು.

ಇದನ್ನೂ ಓದಿ | ಸವಿಸ್ತಾರ ಅಂಕಣ | ‘ಭಾರತದ ಜಾತ್ಯತೀತತೆʼ ಎನ್ನುವುದು ʼತುಷ್ಟೀಕರಣʼಕ್ಕೆ ಹೊದಿಸಿದ ಕವಚ

‘ಆ ತರುಣಿಯ ಹೆಸರು ಕಲಾ ಎಂದಾಗಿತ್ತೆ?’ ಕೈಲಾಜಿ ಕುತೂಹಲ ತಡೆಯಲಾಗದೆ ಕೇಳಿದ್ದ. ‘ಅವಳ ಹೆಸರನ್ನು ಹೇಳುವುದು ತಪ್ಪಾಗುತ್ತದೆ. ಅದು ಅವಳ ಹೆಸರಲ್ಲ. ನಾನು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು.’ ಕೈಲಾಜಿ ಒಮ್ಮೆ ನಡುಗಿಹೋದ. ಅವತ್ತು ರಾತ್ರಿ ಅವನಿಗೆ ವಿಪರೀತ ಜ್ವರ ಬಂದಿತ್ತು. ಆತ ಜ್ವರ ಏರಿ ಏನೇನೋ ಬಡಬಡಿಸಿದ್ದ ಎಂದು ಮರುದಿನ ಬೆಳಿಗ್ಗೆ ಅವನ ಹೆಂಡತಿ ಹೇಳಿದ್ದಳು.

ಮರುದಿನ ಊಟ ಮಾಡುವಾಗ ಕೈಲಾಜಿ, ಪಂಡಿತರ ಬಳಿ ಕೇಳಿದ, `ಹಾಗಾದರೆ ಈ ಮಾತ್ರೆಯನ್ನು ಕಲಾ ವಟಿ ಎಂದು ಕರೆಯಬೇಕೇ?’

ಗಡ್ಡವನ್ನು ಎಡಗೈಯಿಂದ ನೀವುತ್ತಾ ಪಂಡಿತರು ಹೇಳಿದ್ದರು ‘ಇಲ್ಲ, ಗುರುಗಳು ತಿದ್ದಿದ್ದರು. ಕಾಲ ವಟಿ ಅಂತ. ಆಂಗ್ಲ ಭಾಷೆಯಲ್ಲಿ ಅದನ್ನು ಬರೆದು ನೋಡು, ಎಲ್ಲಾ ಒಂದೇ! ಆಮೇಲೆ ನಾನು ಅದನ್ನೆಂದೂ ಉಪಯೋಗಿಸಲಿಲ್ಲ. ನಿನಗೆ ಪ್ರಯೋಜನ ತಂದಿತಲ್ಲ. ಅಷ್ಟು ಸಾಕು. ಇನ್ನೊಂದು ವಿಶೇಷವೆಂದರೆ ಇದು, ಈಗಿನ ಹೊಸ ತಲೆಮಾರಿಗೆ ಬೇರೆಯದೇ ಪರಿಣಾಮ ಬೀರುತ್ತಿದೆ ಎಂದು ತಿಳಿಯಿತು, ಕೆಲವು ಯುವಕರಿಗೆ ಕೊಟ್ಟಾಗ. ಅದು ಅವರನ್ನು ವರ್ತಮಾನದಲ್ಲಿ ಮಾತ್ರ ಇಡುತ್ತದೆ. ಭೂತ, ಭವಿಷ್ಯದ ಭಾರದಿಂದ ಮುಕ್ತರಾಗಿ, ತುಂಬಾ ಉತ್ಸಾಹದಿಂದ ಆರೋಗ್ಯವಂತರಾಗಿ ಜೀವನ ನಡೆಸುತ್ತಿದ್ದಾರೆ. ಇವಿಷ್ಟು ನಾನು ಹೇಳಬೇಕಿತ್ತು. ಇನ್ನು ಕೊನೆಯ ದಿನ ನೀನು ಈ ಮಾತ್ರೆ ಸೇವಿಸಬೇಕು. ಅಲ್ಲಿಗೆ ಈ ಚಿಕಿತ್ಸೆ ನಿನಗೆ ಕೊನೆಗೊಳ್ಳುತ್ತದೆ. ಸ್ವಾರ್ಥಕ್ಕೆ ಸೇವಿಸಿದರೆ ಇನ್ನೆಂದೂ, ಈ ವಿದ್ಯೆ ಒಲಿಯದು.’ ಎಂದು ಹೇಳುತ್ತಾ ದೇವರ ಮುಂದೆ ಪ್ರಮಾಣ ಮಾಡಿಸಿ, ತಯಾರಿಯ ವಿಧಾನವನ್ನು ಕೈಲಾಜಿಗೆ ಧಾರೆ ಎರೆದಿದ್ದರು. ಮೊದಲ ಬಾರಿಗೆ ಕೈಲಾಶ್ ಕೈಲಾಜಿಗೆ ಕಾಲ ವಟಿ ಸೇವಿಸದೆಯೂ, ತನ್ನ ಭವಿಷ್ಯ ಕಣ್ಮುಂದೆ ಗೋಚರಿಸತೊಡಗಿತ್ತು….. ಎಲ್ಲಿದ್ದೇನೆ ಎಂದು ಅರೆಕ್ಷಣ ಯೋಚಿಸುವಂತಾಯಿತು. ಒಮ್ಮೆಲೇ ಕೈಲಾಜಿಗೆ ಪತ್ನಿಯು ಕೊತ್ತಂಬರಿ ಸೊಪ್ಪು ತರಲು ಹೇಳಿದ್ದು ನೆನಪಾಯಿತು. ಆದರೆ ಯಾವಾಗ ಹೇಳಿದ್ದು ಎಂಬುದು ಮರೆತುಹೋಗಿತ್ತು. ಯಾವುದಕ್ಕೂ ಇರಲಿ, ಒಂದು ಕಟ್ಟು ಕೊತ್ತಂಬರಿ ಸೊಪ್ಪು ಒಯ್ದರೆ ಗಂಟೇನೂ ಹೋಗುವುದಿಲ್ಲ ಎಂದು ತಲೆ ಕೆರೆದುಕೊಳ್ಳುತ್ತಾ, ಕೈಲಾಜಿ ಮುಂದೆ ಹೆಜ್ಜೆ ಹಾಕತೊಡಗಿದ.

(ಡಾ. ಅಜಿತ್ ಹರೀಶಿ ಪ್ರಸ್ತುತ ಹರೀಶಿಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರವಣಿಗೆಯನ್ನು ತಮ್ಮ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬಿಳಿಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು, ಕನಸಿನ ದನಿ ಪ್ರಕಟಿತ ಕವನ ಸಂಕಲನಗಳು. ಪರಿಧಾವಿ, ಕಾಮೋಲ ಮತ್ತು ಮೂಚಿಮ್ಮ ಪ್ರಕಟಿತ ಕಥಾಸಂಕಲನಗಳು. ಆರೋಗ್ಯದ ಅರಿವು (ವೈದ್ಯಕೀಯ ಸಾಹಿತ್ಯ) ಮತ್ತು ಕೃತಿಕರ್ಷ (ವಿಮರ್ಶಾ ಕೃತಿ) ಪ್ರಕಟಗೊಂಡಿವೆ.)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಚೀನಾ ದೇಶದ ಪ್ರಾಚೀನ ದೊರೆಗಳು ನಮಗೆ ಪ್ರೇರಣೆ ನೀಡಲಿ

ನನ್ನ ದೇಶ ನನ್ನ ದನಿ ಅಂಕಣ: ಕಳೆದ ಎರಡು ಶತಮಾನಗಳಲ್ಲಿ ಭಾರತದ ಜ್ಞಾನಸಂಪತ್ತನ್ನು ಕೊಳ್ಳೆಹೊಡೆಯಲು ಬ್ರಿಟಿಷರು ಏನೇನು ಬೇಕೋ ಅಷ್ಟನ್ನೂ ಮಾಡಿದರು. ಬ್ರಿಟಿಷರ ಮೂಗಿನ ನೇರಕ್ಕೆ ಅನೇಕ ಭಾಷಾಂತರಗಳೂ ಆದವು. ಆದರೆ ಅನಂತರದ ಕಾಲಾವಧಿಯಲ್ಲಿ ಭಾಷಾಂತರಕ್ಕೆ ಸಿಕ್ಕಬೇಕಾದ ಪ್ರಾಮುಖ್ಯ ಸಿಕ್ಕಲೇ ಇಲ್ಲ. ಕನ್ನಡದ ವಿದ್ವಲ್ಲೋಕದಲ್ಲಿಯೂ “ಅನುವಾದವೇ, ಒಂದು ಡಿಕ್ಷನರಿ ಇದ್ದರಾಯಿತು” ಎಂಬಂತಹ ಔದಾಸೀನ್ಯ.

VISTARANEWS.COM


on

nanna desha nanna dani column
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath

ನನ್ನ ದೇಶ ನನ್ನ ದನಿ ಅಂಕಣ: ಅನುವಾದ ಮತ್ತು ಭಾಷಾಂತರ ಕ್ಷೇತ್ರಗಳ ಮಹತ್ತ್ವವೇ ನಮಗೆ ತಿಳಿಯದು. ಸಾಮಾನ್ಯರಿರಲಿ, ವಿಶ್ವವಿದ್ಯಾಲಯಗಳಲ್ಲಿ ವಿರಾಜಮಾನರಾಗಿರುವ ಬಹುತೇಕ ಪ್ರಭೃತಿಗಳಿಗೂ ತಿಳಿಯದು. ಭಾಷಾಂತರ ಕ್ಷೇತ್ರದ ಆಳ – ಅಗಲಗಳ ಸರಿಯಾದ ಅಂದಾಜೇ ನಮಗಿಲ್ಲ. ಕಳೆದ ಆರೇಳು ದಶಕಗಳಲ್ಲಿ ಇಂಗ್ಲಿಷ್ ಭಾಷೆ ಮತ್ತು ರೋಮನ್ ಲಿಪಿಗಳ ಅಟ್ಟಹಾಸ, ಅಬ್ಬರಗಳ ಮಹಾಪೂರದಲ್ಲಿ ಭಾರತೀಯ ಭಾಷೆಗಳು ಸೊರಗುತ್ತಿವೆ, ನಿಧಾನವಾಗಿ ನೇಪಥ್ಯಕ್ಕೂ ಸೇರುತ್ತಿವೆ. ಇನ್ನೂ ಹೆಚ್ಚಿನ ದುರಂತವೆಂದರೆ, ನಮ್ಮ ಸೋ ಕಾಲ್ಡ್ ಶಿಕ್ಷಣ ತಜ್ಞರಿಗೆ ಇದರ ಅಂದಾಜೂ ಆಗುತ್ತಿಲ್ಲ. ಇತ್ತೀಚಿನ ಒಂದೆರಡು ದಶಕಗಳಲ್ಲಿ, ಸಂವಾದ – ಚರ್ಚೆ – ಉಪನ್ಯಾಸಮಾಲೆ – ಎಲ್ಲವೂ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಎಂಬಂತಾಗಿವೆ. ಈ ಪಿಡುಗು ಇನ್ನಷ್ಟು ಮುಂದುವರಿದು ಸಂಗೀತ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮೊದಲ್ಗೊಂಡು, ಶಾಲಾ ಕಾಲೇಜುಗಳ ವಿದ್ಯಾರ್ಥಿ ಸಂಘಗಳ ಕಾರ್ಯಕ್ರಮಗಳನ್ನೂ ಇಂಗ್ಲಿಷ್ ಭಾಷೆ ಆವರಿಸಿಕೊಂಡುಬಿಟ್ಟಿದೆ. ಇನ್ನು ಇಡೀ ದೇಶದ ಬೌದ್ಧಿಕ – ಶೈಕ್ಷಣಿಕ ಕ್ಷೇತ್ರಗಳು, ಇಂಗ್ಲಿಷ್ ಭಾಷೆ – ಇಂಗ್ಲಿಷ್ ಮಾಧ್ಯಮಗಳ ಉಪೋತ್ಪನ್ನಗಳಾಗಿ ಹೋಗಿರುವುದು, ಈ ಎಲ್ಲಾ ಅಪಸವ್ಯಗಳಿಗೆ ಕಲಶವಿಟ್ಟಂತಾಗಿದೆ.

ಪ್ರಾಚೀನ ಭಾರತ, ಅಷ್ಟೇಕೆ, ಪ್ರಾಚೀನ ಜಗತ್ತಿನ ಬಹುಪಾಲು ಆಳರಸರಿಗೆ ಭಾಷಾಂತರ ಕ್ಷೇತ್ರದ ಮಹತ್ತ್ವ ತಿಳಿದಿತ್ತು. ಭಾಷೆಗಳನ್ನು ಯಾರೂ ಸಮಸ್ಯೆಯನ್ನಾಗಿ ಮಾಡಿಕೊಂಡಿರಲಿಲ್ಲ. ಹಿಂದೀ – ತಮಿಳು ಭಾಷೆಗಳನ್ನು ಮತ್ತು ಭಾಷಿಕರನ್ನು ದ್ವೇಷಿಸುವ ನಮ್ಮ ಇಂದಿನ ಯುಗಮಾನದ ಅವಿವೇಕ ಅಂದಿನವರಿಗೆ ಇರಲಿಲ್ಲ. ನಾಲ್ಕೈದು ದಶಕಗಳ ಹಿಂದೆ ಬಂಗಾಳಿ, ತಮಿಳು, ತೆಲುಗು, ಮರಾಠೀ ಮುಂತಾದ ಭಾಷೆಗಳಿಂದ ನೇರವಾಗಿ ಅನುವಾದ ಮಾಡುವವರು ನಮ್ಮಲ್ಲಿಯೇ ಇದ್ದರು. ಈಗ ವಿಚಿತ್ರವೆಂದರೆ, ಭಾರತೀಯ ಭಾಷೆಗಳ ನಡುವಣ ಕೊಡುಕೊಳ್ಳುವಿಕೆಗೂ ಇಂಗ್ಲಿಷ್ ಭಾಷೆಯು ಅನಿವಾರ್ಯ ಮಾಧ್ಯಮ ಎಂಬಂತಾಗುತ್ತಿದೆ. ಇದಕ್ಕಿಂತ ದೊಡ್ಡ ದುರಂತವಿನ್ನೇನು ಇದ್ದೀತು!

ಸಾವಿರಾರು ವರ್ಷಗಳ ನಿಜೇತಿಹಾಸಾಧ್ಯಯನ ನಮ್ಮ ದಿಗ್ಭ್ರಮೆಗೆ ಕಾರಣವಾಗುತ್ತದೆ. ನೋಡಿ, ನಮಗೆ ಯುವಾನ್ ಚ್ವಾಂಗ್ (ಇದು ಸರಿಯಾದ ಉಚ್ಚಾರಣೆ, ಹಿಂದೆ ಹ್ಯೂ ಎನ್ ತ್ಸಾಂಗ್ ಎನ್ನಲಾಗುತ್ತಿತ್ತು) ಫಾಹಿಯಾನ್ ಮಾತ್ರ ಗೊತ್ತು. ಅವರೆಲ್ಲ ಚೀನಾ ದೇಶದಿಂದ ಇಲ್ಲಿಗೆ ಬಂದು ಜ್ಞಾನಸಂಪತ್ತನ್ನು ಅಲ್ಲಿಗೆ ಕೊಂಡೊಯ್ದವರು. ಅವರು, ಅಂತಹವರು ಭಾಷಾಂತರದಿಂದ ಅದ್ಭುತವಾದ ಸಂಪತ್ತನ್ನು ಸಂಗ್ರಹಿಸಿದರು ಮತ್ತು ಅವರ ದೇಶದಲ್ಲಿ ಕಾಪಿಟ್ಟುಕೊಂಡರು. ನಿಜೇತಿಹಾಸದ ಇನ್ನಷ್ಟು ವಿವರಗಳು ಅಕ್ಷರಶಃ ನಮ್ಮನ್ನು ದಿಗ್ಭ್ರಮೆಗೊಳಿಸುತ್ತವೆ. ಇಲ್ಲಿಂದ ಅಲ್ಲಿಗೆ ಹೋಗಿ ಭಾಷಾಂತರ ಮಾಡಿದ ಭಾರತೀಯ ಮೂಲದ ವಿದ್ವಾಂಸರ ವಿವರಗಳು ಸಹ ದಿಕ್ಸೂಚಿಯಾಗಿವೆ.

ಸಾಮಾನ್ಯ ಯುಗದ ಮೊದಲನೆಯ ಶತಮಾನದಲ್ಲಿ (1st Century of Common Era) ಚೀನಾ ದೇಶದ ಸಮ್ರಾಟ ಮಿಂಗ್-ತಿ ಬೌದ್ಧ ಸಿದ್ಧಾಂತದ ಅಧ್ಯಯನಕ್ಕಾಗಿ 18 ಜನರ ತಂಡವನ್ನು ಭಾರತಕ್ಕೆ ಕಳುಹಿಸಿದ. ಅವರು ಇಲ್ಲಿಂದ ದೊಡ್ಡ ಸಂಖ್ಯೆಯ ಗ್ರಂಥಗಳನ್ನು ಪ್ರತಿ ಮಾಡಿಕೊಂಡು, ಅನುವಾದಿಸಿಕೊಂಡು ತೆಗೆದುಕೊಂಡುಹೋದರು ಮತ್ತು ಕಶ್ಯಪ ಮಾತಂಗ ಮತ್ತು ಧರ್ಮರತ್ನ ಎಂಬ ಬೌದ್ಧ ವಿದ್ವಾಂಸರನ್ನೂ ಕರೆದುಕೊಂಡುಹೋದರು. ಕಶ್ಯಪರು ಆಗ ಗಾಂಧಾರದಲ್ಲಿದ್ದರು (ಗಾಂಧಾರ ಎಂದರೆ ಇಂದಿನ ಆಫಘನಿಸ್ತಾನ. ಅದು ಇಸ್ಲಾಂ ಆಕ್ರಮಣಕ್ಕೆ ಮುಂಚೆ ಸಾವಿರಾರು ವರ್ಷಗಳ ಕಾಲ ಬೌದ್ಧ ಧರ್ಮಕ್ಕೆ ಹೆಸರಾಗಿತ್ತು). ಚೀನಾ ದೇಶದ ತರ್ಕೆಸ್ತಾನ್ ಪ್ರದೇಶದ ಪರ್ವತಗಳನ್ನು ಮತ್ತು ಗೋಬೀ ಮರುಭೂಮಿಯನ್ನು ದಾಟಿಹೋಗಲು ಕಶ್ಯಪರು ಪ್ರಯಾಸಪಡಬೇಕಾಯಿತು. ಆದರೆ, ಅವರ ಆ ಪರಿಶ್ರಮದ ಭೇಟಿಯ ಕಾರಣದಿಂದಲೇ ಅನಂತರದ ಅವಧಿಯಲ್ಲಿ, ಪ್ರಾಚೀನ ಭಾರತದ ವಿಶ್ವವಿದ್ಯಾಲಯಗಳಿಂದ ನೂರಾರು ಜನ ವಿದ್ವಾಂಸರು ಚೀನಾ ದೇಶದಲ್ಲಿಯೇ ಕುಳಿತು ಭಾಷಾಂತರ ಮಾಡುವಂತಹ ವ್ಯವಸ್ಥೆ ಬೆಳೆಯಲು ಸಾಧ್ಯವಾಯಿತು. ಅಗಾಧ ಪ್ರಮಾಣದ ಸಂಸ್ಕೃತ ಗ್ರಂಥಗಳನ್ನು ಅವರೆಲ್ಲ ಪ್ರತಿ ಮಾಡಿಕೊಂಡು ಇಲ್ಲಿಂದ ತೆಗೆದುಕೊಂಡುಹೋದರು. ಹಾಗೆ ಹೋದ ವಿದ್ವಾಂಸರಲ್ಲಿ ಸಂಘವರ್ಮ, ಧರ್ಮಸತ್ಯ, ಧರ್ಮಕಾಲ, ಮಹಾಬಲ, ವಿಘ್ನ, ಧರ್ಮಫಲ, ಕಲಾಸಿವಿ, ಕಲಾರುಚಿ ಮತ್ತು ಲೋಕರುಚಿ ಅವರು ಪ್ರಮುಖರಾದವರು.

nalanda and muslim invaders

ಆಗ ಕಾಶ್ಮೀರವೂ ಪ್ರಾಚೀನ ಭಾರತದ ಬಹಳ ದೊಡ್ಡ ಬೌದ್ಧ ಅಧ್ಯಯನ ಕೇಂದ್ರವಾಗಿತ್ತು. ಕಾಶ್ಮೀರದ ರಾಜವಂಶಕ್ಕೆ ಸೇರಿದ ಗುಣವರ್ಮರು ತಮ್ಮ ಪಾಂಡಿತ್ಯಕ್ಕೇ ಹೆಸರಾಗಿದ್ದರು. ಅವರು ಮೊದಲು ಶ್ರೀಲಂಕಾ ಮತ್ತು ಜಾವಾ ದೇಶಗಳಿಗೆ ಹೋಗಿ ಖ್ಯಾತರಾದರು. ಗುಣವರ್ಮರನ್ನು ಚೀನಾ ದೇಶದ ಚಕ್ರವರ್ತಿ ಆಹ್ವಾನಿಸಿದ. ಅಷ್ಟೇ ಅಲ್ಲ, ನಾಂಕಿಂಗ್ ಎಂಬ ಪಟ್ಟಣಕ್ಕೆ ಹೋಗಿ ಸ್ವತಃ ಗುಣವರ್ಮರನ್ನು ಎದುರುಗೊಂಡ. ಅವರ ಶಿಷ್ಯನೂ ಆದ. ಅವರಿಗಾಗಿ ಒಂದು ಬೌದ್ಧ ದೇವಾಲಯವನ್ನೂ ನಿರ್ಮಿಸಿದ. ಗುಣವರ್ಮರಂತೆಯೇ ಕಾಶ್ಮೀರದಿಂದ ಚೀನಾ ದೇಶಕ್ಕೆ ಹೋದ ವಿದ್ವಾಂಸರೆಂದರೆ ಬುದ್ಧಯಶಸ್, ಧರ್ಮಯಶಸ್, ಧರ್ಮಕ್ಷೇಮ, ಬುದ್ಧಜೀವ ಮತ್ತು ಧರ್ಮಮಿತ್ರ. ಈ ವಿವರಗಳು ಅದೆಷ್ಟು ಸಂತೋಷನೀಡುತ್ತವೆ ಎಂದರೆ, ನೋಡಿ, ದಕ್ಷಿಣ ಭಾರತದಿಂದಲೂ ಹಲವಾರು ವಿದ್ವಾಂಸರು ಚೀನಾ ದೇಶಕ್ಕೆ ಹೋದರು. ಹಾಗೆ ಹೋದ ಧರ್ಮರುಚಿ ಇಪ್ಪತ್ತು ವರ್ಷಗಳ ಕಾಲ (ಸಾಮಾನ್ಯ ಯುಗದ 693ರಿಂದ 713) ಚೀನಾ ದೇಶದಲ್ಲಿದ್ದು, ದಾಖಲೆ ಪ್ರಮಾಣದ ಐವತ್ಮೂರು ಗ್ರಂಥಗಳನ್ನು ಭಾಷಾಂತರಿಸಿದರು. ಚೀನೀ ಭಾಷೆಗೆ ವ್ಯವಸ್ಥಿತವಾದ ವ್ಯಾಕರಣವಿಲ್ಲ, ಒಂದು ಪದವನ್ನು ಒಂದು ಅಕ್ಷರವೋ – ಒಂದು ಚಿಹ್ನೆಯೋ ಪ್ರತಿನಿಧಿಸಿಬಿಡುತ್ತದೆ, ಎನ್ನುವ ಹಿನ್ನೆಲೆಯಲ್ಲಿ ಅತ್ಯಂತ ವ್ಯವಸ್ಥಿತವಾದ ಸಂಸ್ಕೃತ ಮತ್ತು ಇನ್ನಿತರ ಭಾರತೀಯ ಭಾಷೆಗಳಿಂದ ಅನುವಾದಿಸುವುದು ಅದೆಷ್ಟು ಶ್ರಮದಾಯಕ, ಕ್ಲಿಷ್ಟಕರ ಎಂಬುದನ್ನು ನಾವಿಲ್ಲಿ ಅರ್ಥಮಾಡಿಕೊಳ್ಳಬೇಕಿದೆ. ಭಾಷಾಂತರದ ಆಯಾಮವೇ ಹಾಗೆ. ಸಂಸ್ಕೃತಿಗಳ – ರೀತಿನೀತಿಗಳ ವ್ಯತ್ಯಾಸ ಮತ್ತು ಅಂತರಗಳೂ ಪ್ರಮುಖ ಪಾತ್ರ ವಹಿಸುತ್ತವೆ.

ಬಹಳ ಮುಖ್ಯವಾದ ಅಂಶವೊಂದನ್ನು ಇಲ್ಲಿ ಪ್ರಸ್ತಾಪಿಸಬೇಕಿದೆ. ಜ್ಞಾನದ ಸಂಪತ್ತನ್ನು ವಿವಿಧ ಸಮುದಾಯಗಳಿಗೆ, ಅನೇಕ ದೇಶಗಳಿಗೆ ಹಂಚಲು ನೀಡಲು ಭಾಷಾಂತರದ ಇಂತಹ ಪ್ರಮುಖ ಆಯಾಮಕ್ಕೆ ರಾಜಾಶ್ರಯ ಇತ್ತು, ಇರಬೇಕು ಎನ್ನುವುದನ್ನು ಸಹ ನಾವಿಲ್ಲಿ ಗಮನಿಸಬೇಕಿದೆ. ಭಾರತ, ಚೀನಾ ಮುಂತಾದ ದೇಶಗಳಲ್ಲಿ ಅನೇಕ ರಾಜರು ಪ್ರೋತ್ಸಾಹ ನೀಡಿದುದರಿಂದಲೇ ಜ್ಞಾನ ಪರಂಪರೆ ಮುಂದುವರಿಯಲು ಮತ್ತು ಉಳಿದುಕೊಂಡು ಬರಲು ಸಾಧ್ಯವಾಯಿತು.

ಕಳೆದ ಎರಡು ಶತಮಾನಗಳಲ್ಲಿ ಭಾರತದ ಜ್ಞಾನಸಂಪತ್ತನ್ನು ಕೊಳ್ಳೆಹೊಡೆಯಲು ಬ್ರಿಟಿಷರು ಏನೇನು ಬೇಕೋ ಅಷ್ಟನ್ನೂ ಮಾಡಿದರು. ಬ್ರಿಟಿಷರ ಮೂಗಿನ ನೇರಕ್ಕೆ ಅನೇಕ ಭಾಷಾಂತರಗಳೂ ಆದವು. ಆದರೆ ಅನಂತರದ ಕಾಲಾವಧಿಯಲ್ಲಿ ಭಾಷಾಂತರಕ್ಕೆ ಸಿಕ್ಕಬೇಕಾದ ಪ್ರಾಮುಖ್ಯ ಸಿಕ್ಕಲೇ ಇಲ್ಲ. ಕನ್ನಡದ ವಿದ್ವಲ್ಲೋಕದಲ್ಲಿಯೂ “ಅನುವಾದವೇ, ಒಂದು ಡಿಕ್ಷನರಿ ಇದ್ದರಾಯಿತು” ಎಂಬಂತಹ ಔದಾಸೀನ್ಯ. ಹಾಗೆಂದೇ, ಕನಿಷ್ಠ ಎಂಬತ್ತು ಪ್ರತಿಶತ ಅನುವಾದಗಳು ಕಳಪೆ ಗುಣಮಟ್ಟದವಾಗಿಬಿಟ್ಟಿವೆ. ಇನ್ನು ಪ್ರಶಸ್ತಿ, ಸ್ಥಾನಮಾನಗಳನ್ನು ಅನುವಾದಕರು ನಿರೀಕ್ಷಿಸುವಂತೆಯೇ ಇಲ್ಲ. ಒಂದೋ ಎರಡೋ ಕು-ಕವನಗಳನ್ನು ಬರೆದವರು ತಾವು ಬರೆದ ಕವನಗಳಿಗಿಂತ ಹೆಚ್ಚು ಸಂಖ್ಯೆಯ ಪ್ರಶಸ್ತಿಗಳನ್ನು ಗಳಿಸಿಬಿಡುತ್ತಾರೆ. ಕನ್ನಡದಲ್ಲಿ “ಕುವೆಂಪು ಭಾಷಾ ಭಾರತಿ ಪ್ರಾಧಿಕಾರ”ವು, ಭಾಷಾಂತರಕ್ಕೆ ಒಳ್ಳೆಯ ಸಂಭಾವನೆಯನ್ನು ಕೊಡುತ್ತಿರುವುದು ಸ್ವಾಗತಾರ್ಹವೇ ಆದರೂ, ಮುಖ್ಯ ವಿಷಯ ಅದಲ್ಲ. ನಮ್ಮ ಪರಂಪರೆಯ ಹಾಗೂ ಅನೇಕ ಪ್ರಮುಖ ಗ್ರಂಥಗಳ ಸಮರ್ಥ ಮತ್ತು ಅಧಿಕೃತ ಅನುವಾದಗಳು ಆಗಬೇಕಿದೆ. ಅದು ಬರಿಯ ಸಂಭಾವನೆಯ ಸಂಗತಿಯನ್ನು ಮೀರಿದುದು. ಕೆಲವು ಗ್ರಂಥಗಳ ಅನುವಾದಕ್ಕೆ ಪ್ರತ್ಯೇಕ ಆದ್ಯತೆಯನ್ನೇ ನೀಡಬೇಕಾಗುತ್ತದೆ ಮತ್ತು ಬರಿಯ ಸಂಭಾವನೆ ಸಾಲದೆಹೋಗುತ್ತದೆ. ಈ ಕಾರ್ಯಕ್ಕೆಂದೇ ಪೂರ್ಣಾವಧಿ ಭಾಷಾಂತರಕಾರರ ನೇಮಕವಾಗಬೇಕಾಗಿದೆ.

ಹಿಂದೆ ರಾಜಾಶ್ರಯ ಇದ್ದ ಹಾಗೆ, ಈಗ ಸರ್ಕಾರೀ ಮತ್ತು ಸೇವಾ ಸಂಸ್ಥೆಗಳು ಪೂರ್ಣಾವಧಿ ಭಾಷಾಂತರಕಾರರನ್ನೇ ನೇಮಿಸಿಕೊಂಡು ಈ ಕಾರ್ಯವನ್ನು ಕೈಗೊಳ್ಳಬೇಕು. ಆಗ ಮಾತ್ರ ನಮ್ಮ ಪರಂಪರೆ ಮತ್ತು ನಿಜ-ಇತಿಹಾಸ ಗ್ರಂಥಗಳನ್ನು ಉಳಿಸಿಕೊಳ್ಳಲು ಸಾಧ್ಯ. ಹಾಗಾದಾಗ ಮಾತ್ರವೇ, ಪರೋಕ್ಷವಾಗಿ ಎಲ್ಲ ಭಾರತೀಯ ಭಾಷೆಗಳನ್ನೂ ಉಳಿಸಲು, ಉಳಿಸಿಕೊಳ್ಳಲು ಸಾಧ್ಯ.

ಅದೆಷ್ಟು ಪ್ರಮಾಣದಲ್ಲಿ ಮಹತ್ತ್ವದ ಗ್ರಂಥಗಳು ಬೇರೆ ಬೇರೆ ಭಾಷೆಗಳಲ್ಲಿ ಬರಬೇಕಾಗಿವೆ ಎಂದರೆ, ಭಾರತಾದ್ಯಂತ ಹತ್ತಾರು ಸಾವಿರ ಪೂರ್ಣಾವಧಿ ಭಾಷಾಂತರಕಾರರ ಅಗತ್ಯವಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಆ ಕರಾಳ ದಿನಗಳನ್ನು ನೆನಪಿಸಿ ಅಂತರಂಗ ಕಲಕುವ ಬುಗುರಿ

ವಿಚಿತ್ರ ನೋಡಿ. ಅಮೆರಿಕಾ, ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳ ದರೋಡೆಕಾರರಿಗೆ ನಮ್ಮ ಪ್ರಾಚೀನ ಗ್ರಂಥಗಳ ನಿಜ-ಮೌಲ್ಯ ಗೊತ್ತಿತ್ತು. ಈ ಮೂರೂ ದೇಶಗಳ ವಿದ್ವಾಂಸರು ಒಟ್ಟಾಗಿ ಕುಳಿತು, ಸಾಮಾನ್ಯ ಯುಗದ 17 – 18ನೆಯ ಶತಮಾನಗಳಲ್ಲಿ, ನಮ್ಮ “ಸೂರ್ಯ ಸಿದ್ಧಾಂತ” ಗ್ರಂಥವನ್ನು ಅನುವಾದಿಸಿಕೊಂಡು ಹೋದರು. ಖಗೋಳ ಶಾಸ್ತ್ರದ ಆ ಅಮೌಲ್ಯ ಗ್ರಂಥದ ಪ್ರಮುಖ ವೈಜ್ಞಾನಿಕ ಅಂಶಗಳನ್ನು ಅವರು ಬಳಸಿಕೊಂಡರು. ಮೆಕಾಲೆ ಹುಟ್ಟುಹಾಕಿದ ನಮ್ಮ ದೇಶದ ಇಂದಿನ ವಿಕೃತ ಶಿಕ್ಷಣ ವ್ಯವಸ್ಥೆ ಹೇಗಿದೆಯೆಂದರೆ, ಇಂದು ನಮ್ಮ ವಿಶ್ವವಿದ್ಯಾಲಯಗಳ ಮಹಾಶಯರಿಗೆ “ಸೂರ್ಯ ಸಿದ್ಧಾಂತ”ದ ಬಗೆಗೆ ಕೇಳಿದರೆ, ಅವರು “ಅದು ಬೆಕ್ಕೋ – ನಾಯಿಯೋ ಇರಬಹುದು” ಎಂದಾರು. ಕಮ್ಯೂನಿಸ್ಟರು ಅವರ ತಲೆಗೆ ತುಂಬಿರುವಂತೆ, ಪ್ರಾಚೀನ ಭಾರತವೆಂದರೆ ಅವರ ಪಾಲಿಗೆ “ಸತೀ ಸಹಗಮನ, ಅಸ್ಪೃಶ್ಯತೆ, ಜಾತೀಯತೆ, ಮೂಢ ನಂಬಿಕೆಗಳು, ಭೇದಭಾವ, ಶೋಷಣೆ, ಇತ್ಯಾದಿ” ಮಾತ್ರ!

ಅತ್ಯಂತ ನಿರುಪಯುಕ್ತವಾದ ಕೆಮಿಸ್ಟ್ರಿ (ಶಾಲಾ ಕಾಲೇಜುಗಳಲ್ಲಿ ನಾನೂ ಕೆಮಿಸ್ಟ್ರಿ ವಿದ್ಯಾರ್ಥಿಯೇ. ಅದರಿಂದ ಮೂರುಕಾಸಿನ ಪ್ರಯೋಜನವೂ ಇಲ್ಲವೆಂಬುದನ್ನು, ಕಳೆದ ಅರ್ಧ ಶತಮಾನದಲ್ಲಿ ಅರ್ಥ ಮಾಡಿಕೊಂಡಿದ್ದೇನೆ) ಮುಂತಾದವನ್ನು ಕೈಬಿಟ್ಟು, ಆಗಬೇಕಾದ ವಿಭಾಗಗಳಲ್ಲಿ ಆಗಬೇಕಾದ ಕೆಲಸಗಳಿಗೆ ಆದ್ಯತೆ ಕೊಟ್ಟರೆ, ನಮ್ಮ ವಿಶ್ವವಿದ್ಯಾಲಯಗಳೂ ಅರ್ಥಪೂರ್ಣ ಕೊಡುಗೆ ನೀಡಬಹುದು.

ಇಲ್ಲಿ ಇನ್ನೂ ಒಂದು ಪ್ರಮುಖ ಸಂಗತಿಯನ್ನು ಪ್ರಸ್ತಾಪಿಸಬಹುದು. ಮೇಲೆ ಉಲ್ಲೇಖಿಸಿದ ಉದಾಹರಣೆಗಳು, ಮತಧರ್ಮಗಳ ಶಾಸ್ತ್ರಗ್ರಂಥಗಳ ಅನುವಾದಕ್ಕೆ ಸಂಬಂಧಿಸುತ್ತವೆ, ಅದರ ಹಿಂದೆ ಧರ್ಮಶ್ರದ್ಧೆಯ ಆಯಾಮವಿದೆ ಎಂದು ಕೆಲವರು ಮೂಗು ಮುರಿಯಬಹುದು. ಚೀನಾ ದೇಶದ ಈ ಮೇಲಿನ ಯೋಜನೆಗಳಲ್ಲಿ, ಅವರಿಗೆ ಜೊತೆಜೊತೆಯಲ್ಲಿಯೇ ತರ್ಕಶಾಸ್ತ್ರ, ಔಷಧಶಾಸ್ತ್ರ, ಆಯುರ್ವೇದ ಮುಂತಾದ ಅನೇಕ ಜ್ಞಾನಶಾಖೆಗಳ ಲಾಭವೂ ಆಯಿತು. ನಮ್ಮ ಭಾರತ-ಮೂಲದ ಗಣಿತ, ಅಂಕಿಗಳು, ಕ್ಯಾಲ್ಕುಲಸ್, ಬುದ್ಧಿವಂತರ ಆಟ ಎಂದೇ ಹೆಸರಾದ ಚದುರಂಗದಾಟ (Chess) ಇತ್ಯಾದಿ ಮಹತ್ತ್ವದ ಸಂಗತಿಗಳು ಅರೇಬಿಯಾ ಮೂಲಕ ಯೂರೋಪಿಗೆ ಪರಿಚಯವಾದವು. ಪರೋಕ್ಷವಾಗಿ ಯೂರೋಪಿನಲ್ಲಿ ಆಧುನಿಕ ವಿಜ್ಞಾನದ ವಿಕಾಸ ಸಂಶೋಧನೆಗಳಿಗೆ ಇವೆಲ್ಲಾ ಸಾಧನಗಳಾದವು, ಎಂಬುದನ್ನೂ ನಾವು ಮರೆಯುವಂತಿಲ್ಲ.

ಹೌದು, ಭಾಷಾಂತರ ಕ್ಷೇತ್ರಕ್ಕೆ ಈಗಲಾದರೂ ಆದ್ಯತೆ ದೊರೆಯಬೇಕಿದೆ. ಭಾರತೀಯ ಸಮಾಜದ ಬೌದ್ಧಿಕ ಲೋಕದ ಚುಕ್ಕಾಣಿ ಹಿಡಿದವರು ಈ ನಿಟ್ಟಿನಲ್ಲಿ ತೀವ್ರ ಗಮನ ನೀಡಬೇಕಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಜೈಶಂಕರ್‌ ಕೃತಿ ʻಭಾರತ ಪಥʼ ತೆರೆದಿಡುವ ವಿದೇಶಾಂಗ ಸಂಬಂಧಗಳ ರೋಚಕ ಆಯಾಮ

Continue Reading

ಬೆಂಗಳೂರು

Music Festival: ಬೆಂಗಳೂರಿನಲ್ಲಿ ಮೇ 12ರಂದು ಸಪ್ತಕ ʼಸಂಗೀತ ಸಂಭ್ರಮʼ

Music Festival: ಬೆಂಗಳೂರಿನ ಮಲ್ಲೇಶ್ವರದ ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಸಭಾ ಭವನದಲ್ಲಿ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

Music Festival
Koo

ಬೆಂಗಳೂರು: ಸಪ್ತಕ ಸಂಸ್ಥೆಯ 19ನೇ ವಾರ್ಷಿಕ ಸಂಗೀತ ಉತ್ಸವದ ನಿಮಿತ್ತ ಮೇ 12ರಂದು ಸಂಜೆ 5.30ಕ್ಕೆ ಸಂಗೀತ ಸಂಭ್ರಮ 552ನೇ ಕಾರ್ಯಕ್ರಮವನ್ನು (Music Festival) ನಗರದ ಮಲ್ಲೇಶ್ವರದ ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಪ್ತಕ ಸಂಚಾಲಕರಾದ ಜಿ.ಎಸ್‌.ಹೆಗಡೆ ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಕಾಡೆಮಿ ಆಫ್‌ ಮ್ಯೂಸಿಕ್‌ ಪ್ರಾಯೋಕತ್ವದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ. ಕೆ ಧರಿಣಿದೇವಿ ಮಾಲಗತ್ತಿ ಭಾಗವಹಿಸಲಿದ್ದಾರೆ.

ಕೋಲ್ಕೊತಾ ಗಾಯಕಿ ವಿದುಷಿ ರುಚಿರಾ ಪಾಂಡಾ, ಬೆಂಗಳೂರಿನ ತಬಲಾ ವಾದಕ ಪಂ. ರಾಜೇಂದ್ರ ನಾಕೋಡ, ಹಾರ್ಮೋನಿಯಂ ವಾದಕ ಪಂ. ವ್ಯಾಸಮೂರ್ತಿ ಕಟ್ಟಿ, ಮುಂಬಯಿಯ ತಬಲಾ ಸೋಲೋ ಕಲಾವಿದ ಪಂ. ಯೋಗೀಶ ಸಂಸಿ, ಪುಣೆಯ ಹಾರ್ಮೋನಿಯಮ್ ಲೆಹರಾ ಕಲಾವಿದರಾದ ತನ್ಮಯ ದೇವಚಕೆ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Book Release: ಮೈಸೂರಿನಲ್ಲಿ ಮೇ 9ರಂದು ಐತಿಚಂಡ ರಮೇಶ ಉತ್ತಪ್ಪ ಅವರ 4 ಪುಸ್ತಕ ಬಿಡುಗಡೆ, ಸಂವಾದ

Continue Reading

ಮೈಸೂರು

Book Release: ಮೈಸೂರಿನಲ್ಲಿ ಮೇ 9ರಂದು ಐತಿಚಂಡ ರಮೇಶ ಉತ್ತಪ್ಪ ಅವರ 4 ಪುಸ್ತಕ ಬಿಡುಗಡೆ, ಸಂವಾದ

Book Release: ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

Ithichanda Ramesh Uthappaʼs Four books to be released in Mysore on May 9
Koo

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ, ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶನ ಹಾಗೂ ಮೈಸೂರು ಕಲ್ಚರಲ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ (Ithichanda Ramesh Uthappa) ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮವನ್ನು (Book Release) ನಗರದ ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು ಉದ್ಘಾಟಿಸಲಿದ್ದು, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಹಾಗೂ ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಭಾಗವಹಿಸಲಿದ್ದಾರೆ.

ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ.ಎಸ್. ಸಪ್ನ ಅವರು ಅಧ್ಯಕ್ಷತೆ ವಹಿಸಲಿದ್ದು, ವಿಶೇಷ ಅತಿಥಿಗಳಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ ಹಾಜರಿರಲಿದ್ದಾರೆ.

ಇದನ್ನೂ ಓದಿ | ರಾಜಮಾರ್ಗ ಅಂಕಣ: ಶೇಕ್ಸ್‌ಪಿಯರ್‌ ನೆನಪಿನಲ್ಲಿ ಓದುವ ಸುಖ ನೆನಪಿಸಿಕೊಳ್ಳುವ ಹೊತ್ತು

ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ಕೆ.ಪುಟ್ಟಸ್ವಾಮಿ, ಸಹ ಪ್ರಾಧ್ಯಾಪಕರಾದ ಪ್ರೊ. ಎನ್. ಮಮತ, ಪುಸ್ತಕಗಳ ಲೇಖಕರಾದ ಐತಿಚಂಡ ರಮೇಶ್ ಉತ್ತಪ್ಪ, ಪ್ರಕಾಶಕ ಚೇತನ್ ಕಣಬೂರು, ಮೈಸೂರು ಕಲ್ಬರಲ್ ಅಸೋಸಿಯೇಷನ್‌ನ ಎ.ಪಿ.ನಾಗೇಶ್ ಉಪಸ್ಥಿತರಿರಲಿದ್ದಾರೆ.

ಬಿಡುಗಡೆಯಾಗಲಿರುವ ಕೃತಿಗಳು

  • ಕಾಡು ಹೇಳಿದ ಕಥೆ: ವೈಲ್ಡ್‌ ಲೈಫ್ ರಿಪೋರ್ಟಿಂಗ್
  • ಹಾವು: ನಂಬಿಕೆ ಹಾಗೂ ಮನೋವೈಜ್ಞಾನಿಕ ವಿಶ್ಲೇಷಣೆ
  • ಆನೆ: ಬದಲಾದ ವರ್ತನೆ
  • ಅರ್ಜುನ ನಿನ್ನ ಮರೆಯಲೆಂತು ನಾ..!
Continue Reading

ಅಂಕಣ

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

ಧವಳ ಧಾರಿಣಿ ಅಂಕಣ: ಕಾಮವೆನ್ನುವುದು ಎಂತಹವರನ್ನೂ ತಲೆಕೆಡಿಸಿಬಿಡುತ್ತದೆ. ಕಾಮದ ಹುಚ್ಚಿನಲ್ಲಿರುವ ದಶರಥ ತನ್ನ ಸುಖಕ್ಕಾಗಿ ಏನನ್ನು ಮಾಡಲೂ ಹೇಸದ ಸ್ಥಿತಿಗೆ ತಲುಪಿದ್ದಾನೆ. ವಧಾರ್ಹನಲ್ಲದವನನ್ನು ವಧಿಸಲೇ, ಮರಣದಂಡನೆಗೆ ಗುರಿಯಾದವನನ್ನು ಬಿಡಿಸಲೇ, ದರಿದ್ರನನ್ನು ಶ್ರೀಮಂತನನ್ನಾಗಿ ಮಾಡಲೇ, ಶ್ರೀಮಂತನನ್ನು ದರಿದ್ರನನ್ನಾಗಿ ಮಾಡಲೇ; ನಿನ್ನ ಪ್ರೀತಿಗಾಗಿ ಏನನ್ನೂ ಮಾಡಲೂ ತಾನು ಸಿದ್ಧ ಎನ್ನುತ್ತಾನೆ.

VISTARANEWS.COM


on

king dasharatha kaikeyi dhavala dharini column
Koo

ಪ್ರಾಣಕ್ಕಿಂತ ಪ್ರಿಯಳಾದ ಸತಿಯಿಂದ ಪ್ರಾಪ್ತವಾದ ಪುತ್ರ ವಿಯೋಗ

dhavala dharini by Narayana yaji

ಧವಳ ಧಾರಿಣಿ ಅಂಕಣ: ಸ ಕೈಕೇಯ್ಯಾ ಗೃಹಂ ಶ್ರೇಷ್ಠಂ ಪ್ರವಿವೇಶ ಮಹಾಯಶಾಃ
ಪಾಣ್ಡುರಾಭ್ರಮಿವಾಕಾಶಂ ರಾಹುಯುಕ್ತಂ ನಿಶಾಕರಃ ৷৷ಅ.ಯೋ.10.11৷৷

ಬಿಳಿಯದಾದ ಮೋಡಗಳಿಂದ ಕೂಡಿದ ಆಕಾಶದಲ್ಲಿ ರಾಹುವಿಗೆ ಗ್ರಾಸವಾಗುವ ಸಲುವಾಗಿ ಚಂದ್ರನು ಪ್ರವೇಶಿಸುವಂತೆ ಮಹಾಯಶೋವಂತನಾದ ರಾಜನು ಭವ್ಯವಾದ ಕೈಕೇಯಿಯ ಅಂತಃಪುರವನ್ನು ಪ್ರವೇಶಿಸಿದನು.

ಕವಿಸಮಯವೆನ್ನುವದು ರಾಮಾಯಣ ಕಾವ್ಯದ ವಿಶೇಷ. ವಾಲ್ಮೀಕಿ ಕಾವ್ಯವನ್ನು ಕೇವಲ ಉಅಪದೇಶಕ್ಕಾಗಿಯಲ್ಲ, ಅದನ್ನು ತಾಳವಾದ್ಯಗಳೊಂದಿಗೆ ರಾಗವಾಗಿ ಹಾಡಲು ಅನುಕೂಲವಾಗುವಂತೆ ಬರೆದಿದ್ದಾನೆ. ಹಾಡುಗಾರಿಕೆಯಲ್ಲಿ ವರ್ಣನೆಗೆ ಮಹತ್ವ ಬರುತ್ತದೆ. ಕಾವ್ಯದ ಮುಂಗಾಣ್ಕೆ ಅಲ್ಲಲ್ಲಿ ವ್ಯಕ್ತವಾಗುತ್ತಾ ಹೋಗುತ್ತದೆ. ಕೈಕೇಯಿಯ ಅರಮನೆಗೆ ಹೋಗುವ ರಾಜನ ಕುರಿತು ವರ್ಣಿಸುವಾಗ ಬಿಳಿಯದಾದ ಮೋಡ, ರಾಹು, ಆಕಾಶ, ಚಂದ್ರ ಎನ್ನುವ ಉಪಮೆಗಳ ಮೂಲಕ ಹೇಳಿದ್ದಾನೆ. ಆಕಾಶ ಎನ್ನುವುದು ಮನಸ್ಸಿನಲ್ಲಿ ಆಸೆಗಳ ವಿಸ್ತಾರದವನ್ನು ಸೂಚಿಸಿದೆ. ಬಿಳಿಯದಾದ ಮೋಡವೆನ್ನುವದು ಅರ್ಥಪೂರ್ಣವಾದ ಉಪಮೆ. ನೀರಿನಿಂದ ಯುಕ್ತವಾದ ಮೋಡ ಕಪ್ಪಾಗಿರುತ್ತದೆ. ಮನಸ್ಸಿನಲ್ಲಿ ತನ್ನ ಮಗನ ಪಟ್ಟಾಭಿಷೇಕದ ಕುರಿತು ಯಾವ ಆಸೆಯನ್ನೇ ಇರಿಸಿಕೊಳ್ಳಲಿ, ಅದೆಲ್ಲವೂ ನೀರಿಲ್ಲದ ಮೋಡದಂತೆ ವ್ಯರ್ಥವಾಗಿ ಹಾರಿಹೋಗುತ್ತದೆ ಎನ್ನುವುದನ್ನು ಹೇಳುತ್ತಾನೆ. ರಾಹು ಮತ್ತು ಕೇತುಗಳು ಭಾರತೀಯ ಖಗೋಳಶಸ್ತ್ರದ ಪ್ರಕಾರ ಎರಡು ವಿರುದ್ಧದಿಕ್ಕುಗಳಲ್ಲಿರುವ ಬಿಂದುಗಳು. ಈ ಬಿಂದುವಿಗೆ ಸೂರ್ಯಚಂದರು ಬಂದಾಗ ಗ್ರಹಣವಾಗುತ್ತದೆ. ಚಂದ್ರ ಮನಸ್ಸಿನ ಕಾರಕ. ಸಂತೊಷ ಮತ್ತು ಕಾಮವಿಕಾರಗಳು ಮನಸ್ಸಿನಲ್ಲಿ ಉತ್ಪನ್ನವಾಗುವಂತವು. ಚಂದ್ರ ತನ್ನ ಪರಿಭ್ರಮಣದಲ್ಲಿ ರಾಹುವಿನ ಬಿಂದುವಿಗೆ ಬಂದಾಗ ಗ್ರಹಣವಾಗಿ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತಾನೋ ಅದೇರಿತಿ ರಾಜ ತನ್ನೆಲ್ಲ ಕನಸನ್ನು ಕಳೆದುಕೊಂಡು ನಿಶ್ಚಿತವಾಗಿ ಮರಣದತ್ತ ಸಾಗಲು ಬಂದಿದ್ದಾನೆ ಎನ್ನುವುದನ್ನು ಉಪಮಾಮಲಂಕಾರದಲ್ಲಿ ಕವಿ ವರ್ಣಿಸಿದ್ದಾನೆ.

ದಶರಥನ ಪಾತ್ರವನ್ನು ವಿವೇಚಿಸುವಾಗ ಮೊದಲಿನಿಂದಲೂ ಕಂಡುಬಂದ ಅಂಶವೆಂದರೆ ಮಹಾನ್ ರಾಜರ್ಶಿಯಾಗಿದ್ದ ದೊರೆ ರಾಮನ ಕುರಿತು ಕಡುಲೋಭಿಯಾಗಿ ಪರಿವರ್ತನೆಯಾಗಿರುವುದನ್ನು ಗಮನಿಸಬಹುದು. ದಶರಥನ ವ್ಯಕ್ತಿತ್ವವೆನ್ನುವುದು ಸಂಕೀರ್ಣವೇನೂ ಅಲ್ಲ. ಶೂರನಾಗಿದ್ದ; ಸೂರ್ಯವಂಶದ ಧ್ಯೇಯೋದ್ಧಶವಾದ ಧರ್ಮಸ್ಥಾಪನೆಯ ವಿಷಯದಲ್ಲಿ ಸದಾ ನಿರತನಾಗಿದ್ದ. ಅದೇ ಕಾಲಕ್ಕೆ ಅಯೋಧ್ಯೆಯ ಸಿಂಹಾಸನವೆನ್ನುವುದು ಗಣತಂತ್ರವ್ಯವಸ್ಥೆಯಲ್ಲಿ ಇತ್ತು. ರಾಜರಾಗುವವರು ಯಾರೇ ಆದರೂ ಅದಕ್ಕೆ ಪ್ರಜೆಗಳ ಒಪ್ಪಿಗೆ ಪಡೆಯಬೇಕಾಗಿತ್ತು. ಪ್ರಾಚೀನ ಗ್ರೀಸಿನಲ್ಲಿದ್ದ ರೀತಿಯ ಗಣತಂತ್ರವ್ಯವಸ್ಥೆ ಅಯೋಧ್ಯೆಯಲ್ಲಿ ಇತ್ತು ಎನ್ನುವುದಕ್ಕೆ ವಾಲ್ಮೀಕಿಯ ರಾಮಾಯಣವನ್ನು ಮತ್ತು ಮತ್ತು ಪ್ಲೇಟೋವಿನ “The Republic” ಕೃತಿಯನ್ನು ತುಲನೆ ಮಾಡಿದಾಗ ಅನಿಸುತ್ತದೆ. ಅದನ್ನು ಕೇವಲ ತೋರಿಕೆಗಾಗಿ ಆಚರಣೆಯಲ್ಲಿ ಇಟ್ಟು ತನಗೆ ಬೇಕಾದಂತೆ ಉತ್ತರಾಧಿಕಾರಿಯನ್ನು ಆರಿಸುವ ತಂತ್ರವನ್ನು ದಶರಥ ಅನುಸರಿಸಿರುವುದು ರಾಮನಿಗೆ ಪಟ್ಟಗಟ್ಟಬೇಕೆನ್ನುವ ಸಂದರ್ಭದಲ್ಲಿ ಕಾಣಬಹುದು. ಆತನ ಚಾಣಾಕ್ಷನಡೆಯ ಒಳಗಿರುವದು ತನ್ನದು ಎನ್ನುವ ಮೋಹದ ಅರಿವು ಎನ್ನುವುದು ಯಾರ ಗಮನಕ್ಕೂ, ಹೆಚ್ಚೇನು ರಾಮನ ಅರಿವಿಗೂ ಬಾರದ ಹಾಗೆ ನಡೆದುಕೊಂಡಿದ್ದಾನೆ. ಪರಿಪೂರ್ಣ ವ್ಯಕ್ತಿತ್ವದ ರಾಮನಂತಹ ದೊರೆ ತಮಗೆ ಸಿಗುತ್ತಾನೆ ಎನ್ನುವ ಕಾರಣಕ್ಕೆ ಪ್ರಜೆಗಳು ಸಂಭ್ರಮಿಸುವುದು ಸಹಜವೇ ಆಗಿದೆ. ತಾನು ಅಶ್ವಪತಿಗೆ ಕೊಟ್ಟ ಮಾತುಗಳು ಹೀಗೆ ಮರೆಯಾದ ಕಾರಣ ಅದು ದೊರೆಗೆ ಅಪರಿಮಿತ ಸಂತೋಷವನ್ನು ಕೊಟ್ಟಿದೆ. ಇಳಿವಯಸ್ಸಿನಲ್ಲಿ ಕಿರಿಯ ಚಲುವೆಯಾದ ಕೈಕೇಯಿಯ ಹಿಂದೆ ಬಿದ್ದಿದ್ದ ದೊರೆಗೆ ವೃದ್ದಾಪ್ಯದಲ್ಲಿ ಮಕ್ಕಳಾದ ಮೇಲೆ ರಾಮ ಎನ್ನುವ ಕುರುಡು ಮೋಹ ಆವರಿಸಿಕೊಂಡಿತ್ತು. ಆತನ ಕುರಿತು ಮಂಥರೆ ಹೇಳುವ ಮಾತು

ಧರ್ಮವಾದೀ ಶಠೋ ಭರ್ತಾ ಶ್ಲಕ್ಷ್ಣವಾದೀ ಚ ದಾರುಣಃ
ಶುದ್ಧಭಾವೇ ನ ಜಾನೀಷೇ ತೇನೈವ ಮತಿಸಂಧಿತಾ৷৷ಬಾ.ಕಾಂ.7.24৷৷

ನಿನ್ನ ಗಂಡನು ಮೇಲೆಮೇಲೆ ಧರ್ಮಸಮ್ಮತವಾದ ಮಾತುಗಳನ್ನು ಆಡುತ್ತಿದ್ದರೂ ಅಂತರಂಗದಲ್ಲಿ ಬಹಳ ಕಪಟಸ್ವಭಾವದವನು. ಬಾಯಲ್ಲಿ ಮೃದುವಾದ ಮಾತುಗಳನ್ನು ಆಡುತ್ತಿದ್ದರೂ ನಂಬಿಸಿ ಮೋಸಮಾಡುವುದು ಹೇಗೆಂದು ಯೋಚಿಸುತ್ತಿರುತ್ತಾನೆ. ಕರುಣೆಯೆನ್ನುವುದೇ ಇಲ್ಲ, ಬಹಳ ಋಜುಸ್ವಭಾವದವಳಾದ ನೀನು ಆತನ ಕಪಟವನ್ನು ಅರಿಯದೇ ಹೋದೆಯಲ್ಲವೇ.

ಮಂಥರೆ ಇಲ್ಲಿ ಕೈಕೇಯಿಯ ಮನಸ್ಸನ್ನು ತಿರುಗಿಸಲು ಹೇಳಿರುವಳಾದರೂ ಪಾಯಸವನ್ನು ತನ್ನ ರಾಣಿಯರಿಗೆ ಹಂಚುವಲ್ಲಿಂದ ಹಿಡಿದು ರಾಮಪಟ್ಟಾಭಿಷೇಕದ ವರೆಗೆ ದಶರಥ ಏಕಪಕ್ಷೀಯವಾಗಿ ತೆಗೆದುಕೊಂಡ ತೀರ್ಮಾನವನ್ನು ಗಮನಿಸಿದಾಗ ನಮ್ಮ ದೌರ್ಬಲ್ಯ ಶತ್ರುಗಳಿಗೆ ಆಯುಧ ಎನ್ನುವ ನೀತಿಶಾಸ್ತ್ರದ ಮಾತನ್ನು ನೆನಪಿಸುತ್ತದೆ. ಅಂತೂ ತನ್ನ ಕಾರ್ಯವಾದ ರಾಮನ ಪಟ್ಟಾಭಿಷೇಕದ ವಿಷಯದಲ್ಲಿ ಯಾವ ತೊಂದರೆಯಿಲ್ಲದೇ ಸಾಂಗವಾಗಿ ನಡೆಯುವುದು ಎನ್ನುವ ನಂಬಿಕೆಯೊಂದಿಗೆ ಸಂತೊಷವೆನ್ನುವುದು ಅತಿರೇಕಕ್ಕೆ ಹೋಗಿತ್ತು. ಸಂತೋಷ ಅತಿರೇಕಕ್ಕೆ ಹೋದಾಗ ಅದು ಮದಕ್ಕೆ ತಿರುಗುತ್ತದೆ. ಮದವೆನ್ನುವುದು ಕಾಮಕ್ಕೆ ಮೂಲ. ಅದನ್ನು ಇಳಿಸಿಕೊಳ್ಳಲು ಸಂಗಾತಿಯನ್ನು ಹುಡಿಕಿಕೊಳ್ಳುವುದು ಜೀವಿಗಳ ಸಹಜ ಕ್ರಿಯೆ. ಅರಸನಿಗೆ ತನ್ನ ಆಲೋಚನೆಯನ್ನು ಹಂಚಿಕೊಳ್ಳುವ ಸಂಗಾತಿಯ ಅಗತ್ಯ ತುರ್ತಾಗಿ ಎದುರಾಯಿತು. ವಶಿಷ್ಠರಲ್ಲಿಯಾಗಲಿ, ವಾಮದೇವರಲ್ಲಿಯಾಗಲಿ ಇದನ್ನೆಲ್ಲವನ್ನು ಹಂಚಿಕೊಳ್ಳಲು ಅವರೇನು ಸಾಮಾನ್ಯದವರಾಗಿರಲಿಲ್ಲ.

ರಾಮ ಯುವರಾಜ ಪಟ್ಟಕ್ಕೆ ಅರ್ಹನಾಗಿದ್ದರೂ, ಅಯೋಧ್ಯೆಯಲ್ಲಿ ಆ ಸಾಯಂಕಾಲ ನಡೆದ ಸಿದ್ಧತೆ ದಶರಥನ ವೈಯಕ್ತಿಕ ಕಾಮನೆಯ ಫಲವಾಗಿತ್ತು. ಪ್ರಜೆಗಳು ರಾಮನನ್ನು ರಾಜನ್ನಾಗಿ ನೋಡಲು ಬಯಸಿದ್ದರೆನ್ನುವುದು ನಿಜವಾದರೂ ಇಲ್ಲಿಮೊದಲ ಸಾರಿ ರಾಮನ ಪಟ್ಟಾಭಿಷೇಕಕ್ಕಾಗಿ ದಶರಥ ಹೇಗೆಲ್ಲಾ ಮಂಡಿಗೆಯನ್ನು ಹಾಕಿದ್ದ ಎನುವುದನ್ನು ಹಿಂದಿನ ಭಾಗಗಳಲ್ಲಿ ನೋಡಿದ್ದೇವೆ. ರಾಮನನ್ನು ಕೇವಲ ಮಗನಾಗಿ ಮಾತ್ರ ನೋಡಿದ್ದಾನೆಯೇ ಹೊರತು ವಿಶ್ವಾಮಿತ್ರ, ವಶಿಷ್ಠರು, ಪರಶುರಾಮ ಮೊದಲಾದವರಿಗೆ ರಾಮನ ಅವತಾರದ ಹಿಂದಿರುವ ದೈವತ್ವದ ದರ್ಶನ ಅರಸನಿಗೆ ಸಾಯುವವರೆಗೂ ಆಗಲೇ ಇಲ್ಲ. ರಾಮನಿಗೆ ಪಟ್ಟಗಟ್ಟುವ ತನ್ನ ಮನಸ್ಸಿನ ಮಂಡಿಗೆ ಯಶಸ್ವಿಯಾದ ವಿಷಯವನ್ನು ವಿವರವಾಗಿ ವರ್ಣಿಸಿ ಹೇಳಲು ಕಿರಿಯ ರಾಣಿಯಷ್ಟು ಆಪ್ತರು ಬೇರೆ ಯಾರೂ ಇಲ್ಲ. ಕೌಸಲ್ಯೆಗೆ ಹೇಳಿದರೆ ಆಕೆಗೆ ಸಂತೋಷವೇನೋ ಆಗಬಹುದಾದರೂ ಆಕೆಯಲ್ಲಿ ಕಾಮದ ಆಕರ್ಷಣೆ ದೊರೆಗೆ ಬತ್ತಿಹೋಗಿತ್ತು. ಸುಮಿತ್ರೆಯೂ ಅಷ್ಟೇ. ಚಿಕ್ಕವಯಸ್ಸಿನ ಕೈಕೆಯಿಯನ್ನು ಚೆನ್ನಾಗಿ ಮರಳುಮಾಡಿ ಇಟ್ಟುಕೊಂಡಿದ್ದ. ತನಗೆ ಬೇಕಾದ ಹಾಗೆ ಸುಖವನ್ನು ಅವಳಿಂದ ಪಡೆಯುತ್ತಿದ್ದ. ಆಕೆ ರಾಜನಿಗೋಸ್ಕರ ಅಲಂಕರಿಸಿಕೊಂಡು ನಗುಮುಖದಿಂದ ಯಾವತ್ತಿಗೂ ಸ್ವಾಗತಿಸಲು ಸಿದ್ಧಳಾಗಿರುತ್ತಿದ್ದಳು. ಕೈಕೇಯಿ ಮಂಥರೆಯ ಮಾತಿನಿಂದ ಪ್ರಭಾವಿತಳಾಗಿ ರಾಜನನ್ನು ಮಣಿಸಲೇ ಬೇಕೆಂದು ಕೋಪಾಗಾರವನ್ನು ಸೇರಿದರೆ ಇಳಿವಯಸ್ಸಿನ ರಾಜ “ರಾಮಾಭಿಷೇಕದ ಸಂತೋಷದ ವಾರ್ತೆಯನ್ನು ಕೈಕೇಯಿಗೆ ತಿಳಿಸಿ ರತಿಸುಖವನ್ನು ಪಡೆಯಬೇಕೆಂದು ಬಯಸಿ ಅತ್ಯಾಸೆಯಿಂದ ಕೈಕೇಯಿಯ ಅಂತಃಪುರಕ್ಕೆ ಧಾವಿಸಿ ಬರುತ್ತಾನೆ”.

ಕೈಕೇಯಿ ಅಂತಃಪುರದಲ್ಲಿ ಇಲ್ಲವಾಗಿರುವುದನ್ನು ಕಂಡವನಿಗೆ ವ್ಯಾಕುಲವಾಯಿತು. ಪ್ರತಿಹಾರಿ ಹೇಳಿದ “ದೇವ ದೇವಿ ಬೃಶಂ ಕ್ರುದ್ಧಾ ಕ್ರೋಧಾಗಾರಮಭಿದ್ರುತಾ-ಪರಮ ಕ್ರುದ್ಧೆಯಾಗಿ ದೇವಿ ಕೋಪಾಗಾರವನ್ನು ಸೇರಿದ್ದಾಳೆ” ಎನ್ನುವ ಮಾತನ್ನು ಕೇಳಿ ಕಂಗಾಲಾದ. ಕೋಪಾಗಾರಕ್ಕೆ ಧಾವಿಸಿ ನೋಡಿದರೆ ತನ್ನ ಪ್ರೇಯಸಿ ಅಸ್ತವ್ಯಸ್ತವಾಗಿ ನೆಲದ ಮೇಲೆ ಮಲಗಿದ್ದಾಳೆ. ಪ್ರಿಯತಮೆಯನ್ನು ಆಕಾಶದಿಂದ ಚ್ಯುತಳಾದ ಅಪ್ಸರೆಯಂತೆ ಕಂಡವನಿಗೆ ಎದೆಯೊಡೆದು ಹೋಯಿತು. “ನಿಷ್ಕಳಂಕನಾದ ದಶರಥ ಪಾಪಸಂಕಲ್ಪವನ್ನು ಹೊತ್ತ ಕೈಕೇಯಿಯನ್ನು ಕಂಡ” ಎನ್ನುವ ಮಾತು ಇಲ್ಲಿ ಬರುತ್ತದೆ. ಸಂಕಲ್ಪವೆನ್ನುವುದು ಹೊಸ ಕಾರ್ಯಕ್ಕೆ ಹೇತು. ಮುಂದಿನ ಘಟನೆಗೆ ಇಲ್ಲಿ ನಾಂದಿಯಾಗುತ್ತಿದೆ. ಧರ್ಮಮಾರ್ಗದಲ್ಲಿ ಸದಾ ನಡೆಯುತ್ತಿದ್ದ ಅರಸ ಕಾಮಮೋಹಿತನಾಗಿ ಕೈಕೇಯಿಯನ್ನು ಸಮಾಧಾನ ಮಾಡಲು ಹೇಳುವ ಮಾತುಗಳು ಸೂರ್ಯವಂಶಕ್ಕೆ ಹೇಳಿಸಿದ್ದಲ್ಲ.

ಅವಧ್ಯೋ ವಧ್ಯತಾಂ ಕೋ ವಾ ವಧ್ಯಃ ಕೋವಾ ವಿಮುಚ್ಯತಾಮ್.
ದರಿದ್ರಃ ಕೋ ಭವದಾಢ್ಯೋ ದ್ರವ್ಯವಾನ್ಕೋSಪ್ಯಕಿಂಚನಃ৷৷ಅ. ಕಾಂ.10.33৷৷

ಕಾಮವೆನ್ನುವುದು ಎಂತವರನ್ನೂ ತಲೆಕೆಡಿಸಿಬಿಡುತ್ತದೆ. ಕಾಮದ ಹುಚ್ಚಿನಲ್ಲಿರುವ ದಶರಥ ತನ್ನ ಸುಖಕ್ಕಾಗಿ ಏನನ್ನು ಮಾಡಲೂ ಹೇಸದ ಸ್ಥಿತಿಗೆ ತಲುಪಿದ್ದಾನೆ. ವಧಾರ್ಹನಲ್ಲದವನನ್ನು ವಧಿಸಲೇ, ಮರಣದಂಡನೆಗೆ ಗುರಿಯಾದವನನ್ನು ಬಿಡಿಸಲೇ, ದರಿದ್ರನನ್ನು ಶ್ರೀಮಂತನನ್ನಾಗಿ ಮಾಡಲೇ, ಶ್ರೀಮಂತನನ್ನು ದರಿದ್ರನನ್ನಾಗಿ ಮಾಡಲೇ; ನಿನ್ನ ಪ್ರೀತಿಗಾಗಿ ಏನನ್ನೂ ಮಾಡಲೂ ತಾನು ಸಿದ್ಧ ಎನ್ನುವ ಮಾತುಗಳು ದೊರೆತನಕ್ಕೆ ತಕ್ಕುದಲ್ಲ. ಆತ ಅವಳನ್ನು ಸಮಾಧಾನಿಸುತ್ತಾ “ಪ್ರಿಯತಮೆಯಲ್ಲಿ ನನಗೆ ನಿನಗಿಂತ- ಮನುಜರಲ್ಲಿ ರಾಮನಿಗಿಂತ ಹೆಚ್ಚಿನವರು ಯಾರೂ ಇಲ್ಲ” ಎನ್ನುವಲ್ಲಿ ರಾಮನ ಹೆಸರನ್ನು ಕೇಳಿದ ಆಕೆಗೆ ಮತ್ತುಷ್ಟು ಉರಿ ಹತ್ತಿತು. ದೊರೆ ಮನ್ಮಥನ ಬಾಣಕ್ಕೆ ಈಡಾಗಿರುವುದನ್ನು ಪಕ್ಕಾ ಮಾಡಿಕೊಂಡಳು. ಸ್ವಲ್ಪ ಹೊತ್ತು ಕಾಡಿಸಬೇಕು ಎಂದು ಸುಮ್ಮನಾದವಳು. ದಶರಥನಿಗೆ ಸಹಿಸಲಾಗಿಲ್ಲ. ಆಕೆಯ ರೂಪಲಾವಣ್ಯಕ್ಕೆ ಸೋತಿದ್ದ. ಅವಳ ನೋವನ್ನು ಬಗೆಹರಿಸುವುದು ತನ್ನ ಆದ್ಯ ಕರ್ತವ್ಯವೆಂದು ಬಗೆದ.. ಅದು ತನಕ ತಾನು ಗಳಿಸಿದ ಸುಕೃತದ ಮೇಲೆ ಆಣೆಯಿಟ್ಟು ಅವಳ ಬಯಕೆಯನ್ನು ಈಡೇರಿಸುವೆ ಎಂದು ಅಂಗಲಾಚಿದ.

dhavala dharini king dasharatha

ಆದರೂ ಸುಮ್ಮನಿದ್ದ ಕೈಕೇಯಿಗೆ ಕೊನೆಯದಾಗಿ “ನನ್ನ ರಾಮನಾಣೆಗೂ ನೀನು ಹೇಳುವ ಕಾರ್ಯವನ್ನು ಮಾಡುತ್ತೇನೆ” ಎಂದು ಪ್ರತಿಜ್ಞೆ ಮಾಡಿಬಿಟ್ಟ. ಗಾಳದಲ್ಲಿ ಚಿಕ್ಕಮೀನನ್ನು ಚುಚ್ಚಿ ದೊಡ್ಡಮೀನನ್ನು ಸೆಳೆಯುವಂತೆ ಚಕ್ರವರ್ತಿಯನ್ನು ಮಟ್ಟುಹಾಕಿ ತನ್ನ ಕಾರ್ಯಸಾಧಿಸಲು ಇದೇ ಸಮಯವೆಂದು ತಿಳಿದ ಕೈಕೇಯಿ ಬಯಕೆಯನ್ನು ಹೇಳುವ ಮುನ್ನ ರಾಜನಲ್ಲಿನ ಧರ್ಮಪ್ರಜ್ಞೆಯನ್ನು ಜಾಗ್ರತಗೊಳಿಸಲು “ನೀನು ಮಾಡಿದ ಈ ಪ್ರತಿಜ್ಞೆಯನ್ನು ಮೂವತ್ತುಮೂರು ಕೋಟಿ ದೇವತೆಗಳು ಕೇಳಲಿ, ಚಂದ್ರಸೂರ್ಯರೂ ಕೇಳಲಿ, ಆಕಾಶವೂ ಇದಕ್ಕೆ ಸಾಕ್ಷಿಯಾಗಲಿ, ನವಗ್ರಹಗಳು, ಹಗಲು-ರಾತ್ರಿಗಳು, ಎಂಟುದಿಕ್ಕುಗಳು,ಗಂಧರ್ವರಾಕ್ಷಸರನ್ನೊಳಗೊಂಡಿರುವ ಸ್ವರ್ಗ-ಮರ್ತ್ಯ-ಪಾತಾಳ, ನಿಶಾಚರರೂ, ಪಿಶಾಚಗಳೂ, ಭೂತಗಣಗಳೂ, ಗೃಹದೇವತೆಗಳೂ ಸಹಿತ ಎಲ್ಲರೂ ನೀನು ಹೇಳಿದ ಈ ಪ್ರತಿಜ್ಞಾವಾಕ್ಯಕ್ಕೆ ಸಾಕ್ಷಿಗಳಾಗಲಿ” ಎಂದವಳೇ ಆತನನ್ನು ಸಂಪೂರ್ಣವಾಗಿ ಖೆಡ್ಡಾಕ್ಕೆ ತೋಡುವ ಈ ಮಾತನ್ನು ಆಡುತ್ತಾಳೆ.

ಸತ್ಯಸಂಧೋ ಮಹಾತೇಜಾಃ ಧರ್ಮಜ್ಞಃ ಸುಸಮಾಹಿತಾಃ.
ವರಂ ಮಮ ದದಾತ್ಯೇಷಃ ತನ್ಮೇ ಶ್ರೃಣ್ವನ್ತು ದೈವತಾಃ৷৷ಅಯೋ.11.16৷৷

ಎಲೈ ದೇವತೆಗಳಿರಾ! ನೀವೆಲ್ಲರೂ ಕೇಳಿರಿ. ಸತ್ಯಸಂಧನಾದ ಮಹಾತೇಜಸ್ವಿಯಾದ, ಧರ್ಮಜ್ಞನಾದ ಧಶರಥನು ಸಮಾಧಾನಚಿತ್ತನಾಗಿ ತಾನು ಪ್ರತಿಜ್ಞೆ ಮಾಡಿರುವಂತೆ ನನಗೆ ವರವನ್ನು ದಯಪಾಲಿಸಲಿದ್ದಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಕವಿಗೆ ಕಾಡಿದ ಮೂರು ಚಿಂತೆಗಳು

ವ್ಯಾಧನ ಧ್ವನಿಯಿಂದ ಆಕರ್ಷಿತಳಾಗಿ ಬಲೆಗೆ ಬೀಳುವ ಜಿಂಕೆಯಂತೆ ರಾಜನು ತನ್ನ ವಿನಾಶಕ್ಕಾಗಿ ಧರ್ಮಪಾಶವನ್ನು ಕುತ್ತಿಗೆಗೆ ಬಿಗಿದುಕೊಂಡಿದ್ದು ಹೀಗೆ. ಅವನಿಗೆ ಮುಂದೆ ಮಾತಾಡಲು ಅವಕಾಶಕೊಡದಂತೆ ಆತನನ್ನು ಬಿಗಿದಪ್ಪಿ ತನಗೆ ಹಿಂದೆ ಕೊಟ್ಟಿದ್ದ ವರಗಳನ್ನು ಅಪೇಕ್ಷಿಸಿ ಅದಕ್ಕೆ ರಾಜ ಬೇರೆ ಏನನ್ನಾದರೂ ಹೇಳಬಾರದೆಂದು, “ರಾಮನಿಗೆ ಪಟ್ಟಾಭಿಷೇಕಕ್ಕೆ ಯಾವೆಲ್ಲಾ ಸಿದ್ಧತೆಗಳಾಗಿವೆಯೋ ಅದೇ ಸಾಂಬಾರಪದಾರ್ಥಗಳಿಂದ ಭರತನಿಗೆ ಪಟ್ಟಾಭಿಷೇಕವಾಗಬೇಕು. ಎರಡನೇಯ ವರವನ್ನೂ ಹೇಳಿಯೇಬಿಡುವೆ.

ನವ ಪಞ್ಚ ಚ ವರ್ಷಾಣಿ ದಣ್ಡಕಾರಣ್ಯಮಾಶ್ರಿತಃ
ಚೀರಾಜಿನಜಟಾಧಾರೀ ರಾಮೋ ಭವತು ತಾಪಸಃ.

ಹದಿನಾಲ್ಕು ವರುಷಗಳ ಕಾಲ ರಾಮನು ದಂಡಕಾರಣ್ಯಕ್ಕೆ ಹೋಗಿ ಅಲ್ಲಿ ಅವನು ಜಟಾಧಾರಿಯಾಗಿ ನಾರಮುಡಿಯನ್ನುಟ್ಟು ಕೃಷ್ಣಾಜಿನವನ್ನು ಧರಿಸಿ ತಾಪಸನಂತೆ ಇರಬೇಕು.

ಕೈಕೇಯಿ ಇಷ್ಟಕ್ಕೇ ನಿಲ್ಲಿಸುವುದಿಲ್ಲ. “ಆದ್ಯ ಚೈವ ಹಿ ಪಶ್ಯೇಯಂ ಪ್ರಯಾನ್ತಂ ರಾಘವಂ ವನಮ್- ರಾಘವನು ಚೀರಾಜಿನ-ಜಟಾಧಾರಿಯಾಗಿ ಕಾಡಿಗೆ ಹೋಗುವುದನ್ನು ಈಗಲೇ ನಾನು ನೋಡಬೇಕು, ಸತ್ಯವಚನನಾದ ನೀನು ಈಗಲೇ ನಡೆಸಿಕೊಡು” ತನ್ನ ಇಬ್ಬರು ಪ್ರಿಯರಲ್ಲಿ ಒಬ್ಬನಾದ ರಾಮನಿಗೆ ಆಘಾತಕಾರಿಯಾದ ವಿಷಯಗಳನ್ನು ಹೇಳುವ ಮಾತುಗಳು ದಶರಥನ ಕಾಮದ ಪಿತ್ಥವನ್ನು ಜರ್ರನೆ ಇಳಿಸಿಯೇಬಿಟ್ಟಿತು; ಜೊತೆಗೆ ಆತನ ಮನೋಧೈರ್ಯವನ್ನೂ ಸಹ! ಲೋಕದ ಎಲ್ಲಾ ರಾಜರನ್ನು, ಪ್ರಜೆಗಳನ್ನು ಮತ್ತು ವಶಿಷ್ಠರಾದಿಯಾಗಿರುವ ಎಲ್ಲಾ ಋಷಿಗಳನ್ನು ತನ್ನ ಇಷ್ಟಕ್ಕೆ ಒಗ್ಗಿಕೊಳ್ಳುವಂತೆ ತಂತ್ರವನ್ನು ಹೂಡಿದ ಅರಸನ ಇಚ್ಛೆ ಇಲ್ಲಿ ತರಗೆಲೆಗಳಂತೆ ಗಾಳಿಗೆ ಹಾರಿಹೋಯಿತು. ಯಾವ ಉದ್ಧೇಶಕ್ಕಾಗಿ ಕೈಕೇಯಿಯ ಅರಮನೆಗೆ ಬಂದಿದ್ದನೋ ಅವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಕದಡಿಹೋಯಿತು. ಅವನ ಜೀವನದಲ್ಲಿ ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿವದೊಂದೇ ಗುರಿ ಇದ್ದಿದ್ದು. ತನ್ನ ಪ್ರೀತಿಯ ರಾಣಿಯಿಂದಲೇ ಹೀಗೆ ವಿಘ್ನಬರಬಹುದೆಂದು ರಾಜ ಎಣಿಸಿರಲಿಲ್ಲ. ಅಂಥ ಸ್ವಲ್ಪ ಅನುಮಾನ ಬಂದಿದ್ದರೂ ಆತ ಕೈಕೇಯಿಯ ಅರಮನೆಗೆ ಬರುತ್ತಲೇ ಇರಲಿಲ್ಲ. ಒಮ್ಮೆಲೇ ಎಚ್ಚರತಪ್ಪಿ ಬಿದ್ದ. ತನ್ನ ರಾಜತ್ವಕ್ಕೆ ಧಿಕ್ಕಾರ ಹಾಕಿಕೊಂಡ. ಕೊನೆಗೆ ಅನಿವಾರ್ಯವಾಗಿ ಕೈಕೇಯಿಗೆ ನಮಸ್ಕರಿಸಿಕೊಂಡು “ನಿನ್ನ ಕಾಲನ್ನು ಬೇಕಾದರೂ ಹಿಡಿಯುತ್ತೇನೆ, ರಾಮನನ್ನು ರಕ್ಷಿಸು. ವರದಾನವೆನ್ನುವ ಒಂದು ಪ್ರತಿಜ್ಞೆಯಲ್ಲಿ ನನ್ನನ್ನು ಸಿಕ್ಕಿಹಾಕಿಸಿ ನಿರಪರಾಧಿಯನ್ನು ಕಾಡಿಗಟ್ಟಿದ ದೋಷ ನನಗೆ ಬಾರದಿರಲಿ” ಎಂದು ನೆಲದಲ್ಲಿ ಹೊರಳಾಡತೊಡಗಿದ.

ಮೂಂದಿನ ಭಾಗದಲ್ಲಿ ತನ್ನ ಕರ್ಮಫಲವನ್ನು ತಾನು ಉಂಡ ಮಹಾರಾಜ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ

Continue Reading
Advertisement
Pune
ದೇಶ42 mins ago

ಹಾಸ್ಟೆಲ್‌ ಬಾತ್‌ರೂಮ್‌ನಲ್ಲಿ ತೆಗೆದ ನೂರಾರು ಯುವತಿಯರ ಬೆತ್ತಲೆ ವಿಡಿಯೊಗಳನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ!

ಉತ್ತರ ಕನ್ನಡ1 hour ago

Bheemanna Naik: ಶಿರಸಿ ಶಾಸಕ ಭೀಮಣ್ಣ ನಾಯ್ಕ್‌ ಮೇಲೆ ಜೇನು ದಾಳಿ; ಆಸ್ಪತ್ರೆಗೆ ದಾಖಲು

Kulgam
ದೇಶ1 hour ago

Kulgam: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ಮತ್ತೊಬ್ಬ ಉಗ್ರನ ಎನ್‌ಕೌಂಟರ್‌, 2 ದಿನದಲ್ಲಿ 3ನೇ ಬಲಿ

ವಿಸ್ತಾರ ಗ್ರಾಮದನಿ Vistara Gramadaani
ಕರ್ನಾಟಕ2 hours ago

ವಿಸ್ತಾರ ಗ್ರಾಮ ದನಿ: ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಮತದಾನ, SSLC ಫಲಿತಾಂಶದಂತೆ!

LSG vs SRH
ಕ್ರೀಡೆ2 hours ago

LSG vs SRH: ಹೆಡ್, ಅಭಿಷೇಕ್ ಬ್ಯಾಟಿಂಗ್​ ಸುಂಟರಗಾಳಿಗೆ ತತ್ತರಿಸಿದ ಲಕ್ನೋ; 10 ವಿಕೆಟ್​ ಹೀನಾಯ ಸೋಲು

Hindu Girl
ದೇಶ2 hours ago

Hindu Girl: ಹಿಂದು ಬಾಲಕಿಯ ಅತ್ಯಾಚಾರಗೈದು, ಇಸ್ಲಾಂ ಪಾಲಿಸುವಂತೆ ಒತ್ತಾಯ; ಇಬ್ರಾಹಿಂ ವಿರುದ್ಧ ಕೇಸ್

Monty Panesar
ಕ್ರಿಕೆಟ್3 hours ago

Monty Panesar: ರಾಜಕೀಯಕ್ಕೆ ಎಂಟ್ರಿ ಕೊಟ್ಟು ಒಂದೇ ವಾರದಲ್ಲಿ ಗುಡ್​ ಬೈ ಹೇಳಿದ ಇಂಗ್ಲೆಂಡ್​ ಸ್ಪಿನ್ನರ್

Murder Case
ಕರ್ನಾಟಕ3 hours ago

Murder Case: ಶಿವಮೊಗ್ಗದಲ್ಲಿ ಗ್ಯಾಂಗ್ ವಾರ್; ಹಾಡಹಗಲೇ ಇಬ್ಬರು ರೌಡಿಶೀಟರ್‌ಗಳ ಭೀಕರ ಹತ್ಯೆ

Virat Kohli
ಕ್ರೀಡೆ3 hours ago

Virat Kohli: ಪಂಜಾಬಿ ಮಾತನಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Poonch Terrorists
ದೇಶ3 hours ago

Poonch Terrorists: ಪೂಂಚ್‌ನಲ್ಲಿ ಸೇನೆ ಮೇಲೆ ದಾಳಿ ಮಾಡಿದ 3 ಉಗ್ರರ ಫೋಟೊ ರಿಲೀಸ್; ಹತ್ಯೆಗೆ ಪ್ಲಾನ್!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ20 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ1 day ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ1 day ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ1 day ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌