ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೃತೀಯ ಬಹುಮಾನ ಪಡೆದ ಕಥೆ: ಅದು ಅವರ ಪ್ರಾಬ್ಲಮ್ - Vistara News

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೃತೀಯ ಬಹುಮಾನ ಪಡೆದ ಕಥೆ: ಅದು ಅವರ ಪ್ರಾಬ್ಲಮ್

ಮ್ಯಾಡಿ ಎಂಬ ಸ್ಟೈಲಿಶ್‌ ತರುಣನ ಮೇಲೆ ಮ್ಯಾಡ್‌ ಮ್ಯಾಡ್‌ ಆಗಿ ಕ್ರಶ್‌ ಮೂಡಿದ ಆಕೆಗೆ ಮುಂದೆ ಆದ ಸತ್ಯದರ್ಶನ ಬೇರೆ. ಅದು ಆಕೆಯನ್ನು ರೆಬೆಲ್‌ ಆಗುವಂತೆ ಮಾಡಿತು… ಅದೊಂದು ಮೌನ ಬಂಡಾಯ. ಓದಿ, ವಿಸ್ತಾರ ಕಥಾಸ್ಪರ್ಧೆಯ ಮೂರನೇ ಬಹುಮಾನ ಪುರಸ್ಕೃತ ಕಥೆ.

VISTARANEWS.COM


on

purnima story
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
ಪೂರ್ಣಿಮಾ ಮಾಳಗಿಮನಿ

:: ಪೂರ್ಣಿಮಾ ಮಾಳಗಿಮನಿ    

ನಿಜ ಹೇಳಬೇಕೆಂದರೆ ನೆನ್ನೆ ಬೆಳಿಗ್ಗೆ ನಾಲ್ಕು ಘಂಟೆಗೆ ಫಾಲ್ಗುಣಿ ಫೋನ್ ಮಾಡಿ, “ಇನ್ನು ಹದಿನೈದು ನಿಮಿಷದಲ್ಲಿ ಬಂದು ಪಿಕ್ ಮಾಡ್ತೀನಿ” ಎಂದಾಗ ಯಾಕಾದರೂ ಈ ಟ್ರಿಪ್ ಗೆ ಹೋಗೋಕೆ ಒಪ್ಪಿಕೊಂಡೆನೋಂತ ಚಿಂತೆಯಾಗಿ, “ಯಾಕೋ ಹೊಟ್ಟೆ ನೋಯ್ತಿದೆ ಕಣೇ, ಮೋಸ್ಟ್ಲಿ ಪಿರಿಯಡ್ಸ್ ಆಗಬಹುದು, ನಾನು ಬರೋಕಾಗಲ್ಲ” ಎಂದು ಸುಳ್ಳು ಹೇಳಿದ್ದೆ. ಆಗವಳು, “ಅಯ್ಯೋ ದಡ್ಡಿ, ಇವತ್ತೇನಾದ್ರೂ ನೀನು ತಪ್ಪಿಸಿಕೊಂಡ್ರೆ, ಮ್ಯಾಡಿನ ನೋಡಿ ಮಾತಾಡ್ಸಿ, ಪಟಾಯಿಸಿಕೊಳ್ಳೋ ಚಾನ್ಸ್ ಕಳ್ಕೋತೀಯ ಅಷ್ಟೇ! ” ಎಂದೊಡನೆ ಸುಳ್ಳು ಹೇಳಿ ಸಿಕ್ಕಿಕೊಂಡ ನಾಚಿಕೆಯಿಲ್ಲದೆ, “ನಿಜ್ವಾಗ್ಲೂ?” ಎಂದು ಕೂಗಿ, ಚಕ್ಕಂತ ರೆಡಿಯಾಗಿದ್ದೆ. ಆದ್ರೆ ಎರಡನೇ ದಿನವೇ ನಿಜಕ್ಕೂ ಪೀರಿಯಡ್ಸ್ ಆಗಿ ನಾನು ಈ ಟ್ರಿಪ್ ಗೆ ಬರದಿದ್ದಿದ್ರೆ ಚೆನ್ನಾಗಿತ್ತು ಅನಿಸಿತು!

     ಅಗತ್ಯವಿರುವವರಿಗೆ ಧನ ಸಹಾಯ, ಬೀದಿ ನಾಟಕಗಳಾಡಿಸುವುದು, ಉಚಿತ ಹೆಲ್ತ್ ಕ್ಯಾಂಪ್ಸ್, ಮಕ್ಕಳಿಗೆ ಕೆರಿಯರ್ ಕೌನ್ಸೆಲಿಂಗ್ ಮುಂತಾದವನ್ನು ಮಾಡುತ್ತಿದ್ದ ನಾವು ಸಾಮಾನ್ಯವಾಗಿ ವೀಕೆಂಡುಗಳಲ್ಲಿ ನಮ್ಮ ನಮ್ಮ ಗಾಡಿಗಳಲ್ಲಿ ಹಳ್ಳಿಗಳನ್ನು ಸುತ್ತುತ್ತಿದ್ದೆವು.  ನನ್ನತ್ರ ಒಂದು ಸ್ಕೂಟಿ ಕೂಡ ಇರಲಿಲ್ಲವಾದ್ದರಿಂದ ಸದ್ಯಕ್ಕೆ ಫಾಲ್ಗುಣಿಯ ಕಾರಿನಲ್ಲೇ ಹೋಗುತ್ತಿದ್ದೆ. ಈ ರೀತಿ ಸೋಶಿಯಲ್ ಸರ್ವಿಸ್ ಮಾಡೋದೆಲ್ಲಾ ನಂಗಿಷ್ಟವಿಲ್ಲ ಎಂದೆಷ್ಟೇ ಹೇಳಿದರೂ ಬಿಡದೆ ಈ ಗುಂಪಿಗೆ ನನ್ನನ್ನು ಬಲವಂತವಾಗಿ ಸೇರಿಸಿದ್ದಳು ಫಾಲ್ಗುಣಿ. ನನ್ನ ಆಸಕ್ತಿಗಳು ಸಿನೆಮಾ, ನಾಟಕ, ಅಭಿನಯ, ಪೇಂಟಿಂಗ್ ಇತರೆಯಾಗಿದ್ದರೂ ‘ಏನ್ ಟ್ಯಾಲೆಂಟು ನಿಂದು, ಎಂಥಾ ಬ್ಯೂಟಿ, ಎಫರ್ಟ್ಲೆಸ್ ಆಕ್ಟಿಂಗ್’ ಎಂದೆಲ್ಲಾ ಜ್ಯಾಕ್ ಎತ್ತಿ ಅವಳ ಗುಂಪಿನ ಉದ್ದೇಶ ಈಡೇರಿಸುವಂಥ ಕೆಲಸ ತೆಗೆಯಬಹುದೆಂದು ಅರಿತಿದ್ದಳು. ನನಗೆ ಯಾವುದೇ ವಿಷಯ ಕೊಟ್ಟರೂ ಅದನ್ನು ಬೀದಿ ನಾಟಕವಾಡಿಸುವುದು ಕಷ್ಟವೇನಿರಲಿಲ್ಲ. ಮೈಕ್ ಇಲ್ಲದೆಯೂ ನೆರೆದವರಿಗೆಲ್ಲಾ ಕೇಳಿಸುವಂಥ ನನ್ನ ಜೋರುದನಿ ಅವಳ ಕೆಲಸವನ್ನು ಸುಲಭ ಮಾಡಿತ್ತು. 

     ನಮ್ಮ ವಯಸ್ಸಿನವರು ಸಿನಿಮಾ, ಶಾಪಿಂಗ್, ಟ್ರೆಕ್ಕಿಂಗ್, ಪಬ್ಬಿಂಗ್ ಅಂತೆಲ್ಲಾ ಮಜಾ ಮಾಡ್ತಿದ್ರೆ ನಾವ್ಯಾಕೆ ಈ ಆಂಟಿ ಅಂಕಲ್ಗಳ ಜೊತೆ ಸೋಶಿಯಲ್ ಸರ್ವಿಸ್ ಮಾಡಬೇಕೂಂತ ಫಾಲ್ಗುಣಿ ಜೊತೆ ಜಗಳವಾಡುತ್ತಿದ್ದೆ. ಆಗ ‘ಬರೀ ಆಂಟಿ ಅಂಕಲ್ಗಳಷ್ಟೇ ಅಲ್ಲ, ಒಬ್ಬ ಹಾಟ್ ಹುಡುಗ ಮ್ಯಾಡಿ ಅಂತಿದಾನೆ. ಅವನಂತೂ ನಿನ್ನ ಹೈಟ್ ನೋಡೇ ಬಿದ್ದೋಗ್ ಬಿಡ್ತಾನೆ, ನಿನ್ ಪರ್ಫಾರ್ಮೆನ್ಸ್ ನೋಡಿದ್ರಂತೂ ಕ್ಲೀನ್ ಬೋಲ್ಡ್, ಇಂಟ್ರೊಡ್ಯೂಸ್ ಮಾಡಿಸ್ತೀನಿ ಬಾ’ ಎಂದಾಗ ಮ್ಯಾಡಿ ಫೋಟೋ ನೋಡಿಯೇ ಕನಸೊಂದು ಚಿಗುರಿತ್ತು. ಮೂರು ತಿಂಗಳುಗಳಾಗಿದ್ದರೂ ಒಮ್ಮೆಯೂ ಅವನ ದರ್ಶವಾಗಿರಲೇಯಿಲ್ಲ. ಹಾಗಾಗಿ ಅವನು ಬರ್ತಾನೆಂದೊಡನೆ ನಾನು ಸ್ವಾರ್ಥದಿಂದಲೇ ಹೊರಟಿದ್ದೆ.

     ಈ ಗಣರಾಜ್ಯೋತ್ಸವವನ್ನು ಯಾವುದಾದರೂ ದೂರದ ಹಳ್ಳಿಯ ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ವಿಶೇಷವಾಗಿ ಆಚರಿಸೋದು, ಚಾಕಲೇಟ್ಸ್, ನೋಟಬುಕ್ಸ್, ಶೂಸ್ ಇತರೆ ಗಿಫ್ಟ್ಸ್ ಕೊಡೋದು, ಡ್ರಾಯಿಂಗ್ ಮಾಡಿಸೋದು, ನಾಟಕ ಮಾಡೋದಂತ ನಿರ್ಧಾರವಾಗಿತ್ತು. ಪೂರ್ತಿ ಟ್ರಿಪ್ಪಿನ ರೂಟ್ ಮ್ಯಾಪ್ ಮಾಡಿ ತಂಡವನ್ನು ಲೀಡ್ ಮಾಡುವ ಕೆಲಸ ಮ್ಯಾಡಿಯದಾಗಿತ್ತು. ನಾನು ಅಂಬೇಡ್ಕರ್ ರೂಪಿಸಿದ ಸಂವಿಧಾನದಿಂದ ಹೇಗೆ ಭಾರತದಲ್ಲಿ ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕು ಬ್ರಿಟಿಷರಿಗಿಂತಲೂ ಮೊದಲೇ ಸಿಕ್ಕಿತ್ತು ಎನ್ನುವ ಕುರಿತು ನಾಟಕ ಮಾಡುವುದೆಂದೆಣಿಸಿದ್ದೆ. ಅದಕ್ಕೆ ಬೇಕಾದ ಸೈನ್ ಬೋರ್ಡ್ ಗಳನ್ನೆಲ್ಲಾ ತಡ ರಾತ್ರಿಯ ತನಕ ಕುಳಿತು ಚಾರ್ಟ್ ಪೇಪರು, ವಾಟರ್ ಪೇಂಟ್ಸ್, ಸ್ಕೆಚ್ ಪೆನ್ಸ್, ಮಾರ್ಕರುಗಳನ್ನೆಲ್ಲಾ ಹರಡಿಕೊಂಡು ಬರೆಯುತ್ತಿದ್ದಾಗ ಮ್ಯಾಡಿಯನ್ನು ಇಂಪ್ರೆಸ್ ಇಷ್ಟೆಲ್ಲಾ ಮಾಡ್ತಿದ್ದೀನಾ ಅಂತ ನನ್ನನ್ನೇ ಕೇಳಿಕೊಂಡು ನಾಚಿಕೊಂಡಿದ್ದೆ. 

ನೆನ್ನೆ ಬೆಂಗಳೂರಿನಿಂದ ಹೊರಟಾಗಲೂ ನಾವು ಇದೇ ಹೋಟೆಲಿನಲ್ಲೇ ಊಟಕ್ಕೆ ನಿಲ್ಲಿಸಿದ್ದೆವು. ನೆನ್ನೆ ಮ್ಯಾಡಿಯನ್ನು ಅಷ್ಟು ಹತ್ತಿರದಿಂದ ನೋಡಿದಾಗ ನನ್ನ ಖುಷಿಯನ್ನು ಹತ್ತಿಕ್ಕಲು ಹೆಣಗಿದ್ದು, ಅವನ ಫ್ಯಾಟ್ ಬಾಯ್ ಹಾರ್ಲೆ ಡೇವಿಡ್ಸನ್ ಬೈಕನ್ನು ಮುಟ್ಟಿ ಪುಳಕಗೊಂಡಿದ್ದು, ನೆಪ ಮಾಡಿ ಮಾತಾಡಿಸುತ್ತಿದ್ದುದೆಲ್ಲಾ ನೆನಪಾಯಿತು.

“ಮ್ಯಾಡಿ ನೀವ್ಯಾಕೆ ಹೆಚ್ಚಾಗಿ ಟ್ರಿಪ್‌ಗಳಿಗೆ ಬರಲ್ಲ?” ಎಂದು ತಡೆಯಲಾರದೆ ಕೇಳಿಬಿಟ್ಟಾಗ, “ಹಾನೆಸ್ಟ್ಲಿ, ನನಗೆ ಈ ರೀತಿ ಸೋಶಿಯಲ್ ಸರ್ವಿಸ್ ಮಾಡೋದೆಲ್ಲಾ ಇಷ್ಟವಿಲ್ಲ. ಈ ರೀತಿ ಬಡಮಕ್ಕಳಿಗೆ ಗಿಫ್ಟ್ಸ್ ಕೊಟ್ಟು, ಅದರ ಫೋಟೋ, ವಿಡಿಯೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿಕೊಳ್ಳುವುದೆಲ್ಲಾ ಒಂದು ರೀತಿಯ ಶೋ-ಆಫ್! ನಾವು ಕೊಡೋ ಒಂದು ನೋಟಬುಕ್‌ನಿಂದ, ಸೈಜ್ ಚೆಕ್ ಮಾಡದೇ ತರೋ ಶೂಸ್‌ನಿಂದ ಅವರ ಲೈಫ್ ಏನೂ ಬದ್ಲಾಗಿಬಿಡಲ್ಲ” ಎಂದಿದ್ದ.  ಸೋಶಿಯಲ್ ಸರ್ವಿಸ್ ಬಗ್ಗೆ ಅವನಿಗೂ ನನ್ನಂತೆ ಆಸಕ್ತಿಯಿಲ್ಲ ಎನ್ನುವುದು ಒಂಥರಾ ಖುಷಿಕೊಟ್ಟಿತ್ತು. 

     ನಾನು ಕುಳಿತಿದ್ದ ಟೇಬಲ್ನಿಂದ ಹೊರಗೆ ಮರದ ಕೆಳಗೆ ನಿಂತು ಸಿಗರೇಟ್ ಸೇದುತ್ತಿದ್ದ ಮ್ಯಾಡಿಯ ಬೆನ್ನು ಮಾತ್ರ ಕಾಣಿಸುತಿತ್ತು. ನೆನ್ನೆಯಿಂದ ಮೊದಲ ಬಾರಿಗೆ ದೂರದಿಂದಲೇ ಅದು ಅವನೇ ಎಂದು ಗುರುತಿಸಲು ಅವನ ಬೈಕಾಗಲೀ,  ದುಬಾರಿ ಜಾಕೆಟಾಗಲೀ, ಬೋಡು ತಲೆ ಮೇಲೆರಡು ಕೊಂಬು ಮೂಡಿದಂತಿದ್ದ ಹೆಲ್ಮೆಟ್ ಆಗಲೀ, ಸಿಗರೇಟಿನ ವಾಸನೆಯಾಗಲೀ, ಹತ್ತಿರ ಸುಳಿದರೆ ಸಾಕು ಉಸಿರೆಳೆದುಕೊಳ್ಳಬೇಕೆನ್ನಿಸುವ ಸೆಂಟಾಗಲೀ, ಅವತಾರ್ ಸಿನಿಮಾದ ಹೀರೋನಂಥ ಎತ್ತರದ ನಿಲುವಾಗಲೀ ಬೇಕಾಗಲಿಲ್ಲ!

ಫಾಲ್ಗುಣಿ ನೆನ್ನೆಯಿಂದಲೂ ಫೋನಿನಲ್ಲಿ ತೆಗೆದಿದ್ದ ಫೋಟೋಗಳನ್ನು ಒಂದೊಂದೇ ನೋಡುತ್ತಾ, ಇನ್ಸ್ಟಾಗ್ರಾಮ್, ಫೇಸ್ಬುಕ್ನಲ್ಲಿ ಪೋಸ್ಟ್ ಮಾಡುತ್ತಾ, ಖುಷಿಯಿಂದ ತೋರಿಸುತ್ತಿದ್ದರೆ, ನಾನು ಬೆಳಿಗ್ಗೆಯಿಂದ ಸ್ಕೂಲಿನಲ್ಲಿ ನಡೆದದ್ದನ್ನೆಲ್ಲಾ ಒಡಲಲ್ಲಿ ಬೆಂಕಿಯಂತಿಟ್ಟುಕೊಂಡು ಮಂಕಾಗಿ ಕೂತುಬಿಟ್ಟಿದ್ದೆ.

“ಏನಾಯ್ತೆ ನಿಂಗೆ? ಯಾಕ್ ಹಾಗೆ ಸಾಂಬಾರ್ ಇಲ್ದಿರೋ ಇಡ್ಲಿ ಥರ ಸಪ್ಪಗಿದೀಯ?” 

ನನಗೆ ಖಾಲಿಯಾಗಿದ್ದ ಅವಳ ಸಾಂಬಾರ್ ಬಟ್ಟಲಿನಲ್ಲೇ ಮುಳುಗಿ ಸಾಯಬೇಕೆನಿಸುತಿತ್ತು. 

“ಅಥವಾ ಪೀಟಿ ಮೇಷ್ಟ್ರೋ, ಹೆಡ್ ಮೇಷ್ಟ್ರೋ ಲೈನ್ ಹೊಡಿತಿದ್ರಾ?”

ನಾನು ಅದಕ್ಕೂ ಪ್ರತಿಕ್ರಿಯಿಸದೆ ಮ್ಯಾಡಿ ಕಡೆಗೇ ನೋಡುತ್ತಾ ಕುಳಿತಿದ್ದೆ.

“ಓಹ್, ಸೋ ಯು ಆರ್ ಮ್ಯಾಡ್ ಅಬೌಟ್ ಮ್ಯಾಡಿ ಈಸ್ ಇಟ್? ಗಾಡ್ ಸೇವ್ ಯು ಫ್ರಮ್ ದಟ್ ಹಾರ್ನಿ ಫೆಲೋ” 

ನಾನು ಅಚ್ಚರಿಯಿಂದ ಅವಳ ಕಡೆ ನೋಡಿದೆ.

“ಅವನ ಹೆಲ್ಮೆಟ್ ಮೇಲೆ ಎರಡೆರಡು ಕೋಡುಗಳಿದಾವಲ್ಲ ಅದಕ್ಕೇ ತಮಾಷೆ ಮಾಡಿದೆ ಅಷ್ಟೇ, ನಂಗೇನ್ ಗೊತ್ತು ಅವನೆಷ್ಟು ಹಾರ್ನಿ ಅಂತ. ನಮ್ಮಕ್ಕನಿಗೆ ಕೇಳಿದ್ರೆ ಗೊತ್ತಾಗಬಹುದು”

“ಏನು?”

“ಅಯ್ಯೋ ಹಾಗಲ್ಲ… ಅಂದ್ರೆ… ಅವ್ನು ನಮ್ಮಕ್ಕನ ಮನೆಯೆದುರಿಗೇ ಇರೋದು. ಫ್ಯಾಮಿಲಿ-ಫ್ರೆಂಡ್ಸ್ ಅಂತ ಹೇಳಿದೆನಷ್ಟೇ.” ಎಂದು ನಕ್ಕು, “ಅವ್ನು ತುಂಬಾ ಒಳ್ಳೇವ್ನಂತ  ಕೇಳಿದೀನಿ. ಅಕ್ಕನ ಮಗನ ಜೊತೆ ತುಂಬಾ ಆಡ್ತಾನಂತೆ. ಎಷ್ಟೊಂದು ಸಲ ಬೈಕಲ್ಲಿ ರೌಂಡ್ ಹೊಡುಸ್ತಾನಂತೆ.”

     ನನಗೆ ಅವಳ ಮಾತಿನಲ್ಲಿ ಆಸಕ್ತಿ ಹುಟ್ಟಿದ್ದಕ್ಕಿಂತ ಆತಂಕವೇ ಹೆಚ್ಚಾಗಿದ್ದನ್ನು ನೋಡಿ, “ಯಾವಾಗ್ಲೂ ನೆಗಟಿವ್ ಆಗೇ ಯೋಚಿಸ್ಬೇಡ, ಮೇ ಬಿ ಯು ಆರ್ ಮಿಸ್ಟೇಕನ್” ಎಂದಳು. ನಾನು ಮತ್ತೆ ಮ್ಯಾಡಿ ಕಡೆ ನೋಡಿದೆ. ಅವನ ತಲೆಯ ಮೇಲಿನಿಂದ ಸಿಗರೇಟಿನ ಹೊಗೆ ಹರಡಿಕೊಳ್ಳುತ್ತಿದ್ದರೆ ನನ್ನ ಕಣ್ಮುಂದೆ ಬೆಳಗಿನ ಘಟನೆಗಳೆಲ್ಲಾ ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತಿದ್ದವು.

***
     ಬೆಳಿಗ್ಗೆ ಶಾಲೆಯಲ್ಲಿ ಮೇಷ್ಟುಗಳು, ಮಕ್ಕಳು ಮತ್ತು ಪೋಷಕರನ್ನೆಲ್ಲಾ ಕಾಯಿಸಬಾರದು, ಸರಿಯಾದ ಸಮಯಕ್ಕೆ ಹಾಜರಾಗಲೇಬೇಕೆಂದು ಫಾಲ್ಗುಣಿ ಎಲ್ಲರನ್ನೂ ಬಲವಂತವಾಗಿ ಏಳಿಸಿ, ಬೇಗನೇ ಹೊರಡಿಸಿಕೊಂಡು ಬಂದಿದ್ದಳು. ನಮ್ಮ ಗುಂಪಿನ ಲೋಗೋ ಇದ್ದ ಬಿಳಿ ಟಿ-ಶರ್ಟ್, ನೀಲಿಜೀನ್ಸ್ ಹಾಕಿಕೊಂಡು, ನಮ್ಮ ಗಾಡಿಗಳಿಗೆ ಬಾವುಟಗಳನ್ನು ಸಿಕ್ಕಿಸಿಕೊಂಡು, ಗದ್ದಲವೆಬ್ಬಿಸುತ್ತಾ ನಾವುಗಳು ಶಾಲೆಯ ಕಾಂಪೌಂಡ್ ಒಳಗೆ ಹೋಗುತ್ತಿದ್ದಂತೆಯೇ ನಿದ್ದೆಗಣ್ಣಿನ ಮಕ್ಕಳ ಕಣ್ಣುಗಳು ಮಿಂಚಿದ್ದವು! ಸಂಭ್ರಮದಿಂದಿದ್ದ ಚಿಕ್ಕಮಕ್ಕಳೆಲ್ಲಾ ಹೋ ಎಂದು ಖುಷಿಯಿಂದ ಕೂಗುತ್ತಾ ನಮ್ಮತ್ತ ಓಡಿಬರುವುದನ್ನು ಟೀಚರುಗಳು ಅಸಹಾಯಕರಾಗಿ ನೋಡುತ್ತಾ ನಿಂತುಬಿಟ್ಟಿದ್ದರು. ನಮ್ಮತ್ರ ಬಂದು ಬಾವುಟವನ್ನು ಕೈಗೆತ್ತಿಕೊಳ್ಳುವುದು, ಮ್ಯಾಡಿಗೆ ಒಂದು ರೌಂಡ್ ಬೈಕಲ್ಲಿ ಕರ್ಕೊಂಡು ಹೋಗ್ತೀರಾ ಎಂದೆಲ್ಲಾ ಕೇಳುವುದು, ಅವನ ಹೆಲ್ಮೆಟ್ ಹಾಕಿಕೊಂಡು ಗುಮ್ ಬುಡ್ತೀನಿ ಎಂದೆಲ್ಲಾ ತರಲೆ ಮಾಡತೊಡಗಿದರು. ಸ್ವಲ್ಪ ದೊಡ್ಡಮಕ್ಕಳು ವಯಸ್ಸಿಗೆ ಸಹಜವಾದ ಸಂಕೋಚದಿಂದ ಅಲ್ಲಲ್ಲೇ ನಿಂತಿದ್ದರು.

ಫಾಲ್ಗುಣಿ, “ಈ ಪುಟ್ಟಮಕ್ಕಳನ್ನು ನೋಡಿದ್ರೆ ನನಗೆ ನನ್ನಕ್ಕನ ಮಗ ಗುಂಡನ ನೆನಪಾಗ್ತಿದೆ” ಎಂದಳು.

     ಅಷ್ಟರಲ್ಲಿ ಪೀಟಿ ಮೇಷ್ಟ್ರು ಬಂದು ಮಕ್ಕಳನ್ನು ಗದರಿಕೊಂಡು, ನಮ್ಮನ್ನು ಸ್ವಾಗತಿಸಿದರು. ಅಂಗಳದಲ್ಲಿ ಪುಟಾಣಿ ವೇದಿಕೆಯಿತ್ತು. ಕುಂಟದಂತೆ ಕಲ್ಲಿಟ್ಟ ಕಾಲು ಮುರಿದ ಕುರ್ಚಿಯೊಂದರ ಮೇಲಿದ್ದ ಗಾಂಧೀಜಿಯ ಫೋಟೋ, ಕಂಠ ಸೀಳಿದೊಂದು ಸ್ಟೀಲ್ ಕಪ್ ಒಳಗೆ ಗಂಧದಕಡ್ಡಿಗಳನ್ನು ನಿಲ್ಲಿಸಿಕೊಂಡಿದ್ದ ಮರಳು, ಹೊಟ್ಟೆ ತುಂಬಾ ಹೂವುಗಳನ್ನು ತುಂಬಿಕೊಂಡು ಹಾರಾಡಲು ಕಾಯುತ್ತಿದ್ದ  ಬಾವುಟ,  ಅಡ್ಡಾದಿಡ್ಡಿ ಓಡಾಡುವ ಮಕ್ಕಳ ಕಾಲುಗಳಿಗೆ ಕಣ್ಣುಬರಿಸಿದ್ಧ ಬಣ್ಣ ಬಣ್ಣದ ರಂಗೋಲಿ, ಮಂದಾರ, ದಾಸವಾಳಗಳ ಮಕರಂದ ತುಂಬಿಕೊಂಡಿದ್ದ ಚಹಾ ಕಪ್ ಎಲ್ಲಾ ಸರಳವಾದೊಂದು ಸಂಭ್ರಮಕ್ಕೆ ಸಜ್ಜಾದಂತಿದ್ದವು. ಅಲ್ಲಲ್ಲಿ ಹರಿದಿದ್ದರೂ ಬಿಸಿಲುಕೋಲುಗಳನ್ನು ಇಳಿಸಿಕೊಡುತಿದ್ದ ಶಾಮಿಯಾನ ಮಕ್ಕಳನ್ನು ಬೆಚ್ಚಗಾಗಿಸಿತ್ತು. ಹುಡುಗಿಯರ ಬಟ್ಟೆಗಳ ಮೇಲಿನ ಚಮಕಿಗಳು ಪ್ರತಿಫಲಿಸಿ  ಹಲ್ಲುದುರಿದ ಮಕ್ಕಳ ನಗುವನ್ನೂ ಹೊಳೆಯಿಸಿತ್ತು. ಜಮಖಾನದಲ್ಲಿದ್ದ ತೂತುಗಳಲ್ಲಿ ಬೆರಳು ತೂರಿಸಿ ಇನ್ನಷ್ಟು ದೊಡ್ಡದು ಮಾಡುತ್ತಾ ಕೆಲವು ಮಕ್ಕಳು ತುಂಟಾಟದಲ್ಲಿ ತೊಡಗಿದ್ದರು. 

     ಇದೆಲ್ಲದರ ನಡುವೆ ನನ್ನ ಕಣ್ಣುಗಳು ಮಾತ್ರ ನಾನೆಷ್ಟು ಲೈನ್ ಹೊಡೀತಿದ್ರೂ ಕಾಳು ಹಾಕದೆ ತಪ್ಪಿಸಿಕೊಂಡು ಹೋಗುತ್ತಿದ್ದ ಮ್ಯಾಡಿಯನ್ನೇ ಹುಡುಕುತ್ತಿದ್ದವು. ನಾವು ಹುಡುಗಿಯರು ಯಾಕಿಂಗೆ ಜೊಲ್ಲು ಪಾರ್ಟಿ ಹುಡುಗರನ್ನು ಇಗ್ನೋರ್ ಮಾಡಿ, ನಮ್ಮನ್ನು ಇಗ್ನೋರ್ ಮಾಡುವ ಹುಡುಗರ ಹಿಂದೆ ಬೀಳ್ತೀವಂತ ಹಳಿದುಕೊಂಡೆ.

    “ಇವತ್ತು ಬೆಂಗಳೂರಿನಿಂದ ಯಾರೋ ಬತ್ತರೆ, ಏನಾರ ಗಿಫ್ಟ್ಸ್ ಕೊಡ್ತಾರೆ, ತಪ್ಪಿಸ್ಕಳ್ಳಬಾರ್ದು ಅಂತ ಎಲ್ಲಾ ಮಕ್ಳು ಬಂದವ್ರೆ” ಪೀಟಿ ಮೇಷ್ಟ್ರು ತಮಾಷೆಯೆನ್ನುವಂತೆ ಹೇಳಿ, ಜಮಖಾನದ ಹಿಂದಿದ್ದ ಬೆಂಚುಗಳ ಮೇಲೆ ನಮಗೆ ಕುಳಿತುಕೊಳ್ಳುವಂತೆ ಸೂಚಿಸಿದರು. ವೇದಿಕೆ ಮೇಲೆ ಗ್ರಾಮದ ಗಣ್ಯರು, ಅತಿಥಿಗಳು, ಹೆಡ್-ಮೇಷ್ಟ್ರು ಕುಳಿತಿದ್ದರು. ಅವರ ಎಡಕ್ಕೆ ಸ್ವಲ್ಪ ದೂರದಲ್ಲಿ ಹತ್ತಾರು ಮಕ್ಕಳು ಬ್ಯಾಂಡ್ ಸೆಟ್ ಹಿಡಿದು ತಮ್ಮ ಸರದಿಗಾಗಿ ಕಾಯುತ್ತಾ ಬೇಸರಗೊಂಡಂತಿದ್ದರು. ಶಾಲೆಯ ಮತ್ತೊಂದು ಬದಿಯಲ್ಲಿ ಬಿಸಿ ಬಿಸಿ ಉಪ್ಪಿಟ್ಟು ಸಿದ್ಧವಾಗುತ್ತಿತ್ತು!

     ನಾನು ಉಡುಗೊರೆಗಳನ್ನೆಲ್ಲಾ ಬೆಂಚುಗಳ ಮೇಲೆ ಜೋಡಿಸಿಟ್ಟು ಪೆಚ್ಚಾಗಿ ನೋಡಿದೆ. ಮ್ಯಾಡಿ ಮಾತು ನೆನಪಾಗಿ ನಿಟ್ಟುಸಿರಿಟ್ಟು ಮಕ್ಕಳ ಕಡೆ ನೋಡಿದರೆ ಅವರೆಲ್ಲಾ ಉಡುಗೊರೆಗಳನ್ನೇ ಆಸೆಯಿಂದ ನೋಡುತ್ತಿದ್ದರು. ನಾನು ಮುಗುಳ್ನಕ್ಕು, “ಪ್ರೋಗ್ರಾಮ್ ಮುಗಿಯೋ ತನಕ ಸೈಲೆಂಟ್ ಆಗಿ ಕೂತಿರಿ, ಎಲ್ಲರಿಗೂ ಸಿಗುತ್ತೆ.” ಎಂದೆ. ಅವಸರದಲ್ಲಿ ಮಾಡಿದ್ದ ನನ್ನ ನಾಟಕದ ಸೈನ್ ಬೋರ್ಡುಗಳಿಗೆ ಮಾರ್ಕರುಗಳಿಂದ ಕಲಾತ್ಮಕವಾಗಿ ಫೈನಲ್ ಟಚ್ ಕೊಡುತ್ತಾ ಕುಳಿತೆ. ನನ್ನ ಜೊತೆ ನಾಟಕದಲ್ಲಿ ಪಾರ್ಟ್ ಮಾಡುವ ಹುಡುಗರು  ಸ್ಕ್ರಿಪ್ಟ್ ಹಿಡಿದುಕೊಂಡು ಆಗಾಗ ಕಣ್ಣಾಡಿಸುತ್ತಿದ್ದರು.

     ಮಕ್ಕಳ ಆಶಯವನ್ನರಿಯದೆ ಉರುಹೊಡೆದ ಬಡಿದೇಳಿಸುವ ಭಾಷಣಗಳು, ಹುರುಪಿಲ್ಲದ ಹಾಡುಗಳು, ನವೆಯಾಗಿಸುವ ನೃತ್ಯಗಳು ನನಗೆ ಬಹಳ ಕಿರಿಕಿರಿಯಾಗುತ್ತಿತ್ತು.  

    “ಇಂಥ ಹಳ್ಳಿಗೆ ಬಂದು ರಂಗಶಂಕರದಂಥ ಪರ್ಫಾರ್ಮೆನ್ಸ್ ಎಕ್ಸ್ಪೆಕ್ಟ್ ಮಾಡ್ಬೇಡ, ಮುಗ್ಧ ಮಕ್ಕಳ ಉತ್ಸಾಹ ಮುಖ್ಯ” ಎಂದು ಫಾಲ್ಗುಣಿಯಿಂದ ಬೈಸಿಕೊಂಡು ನಾನು ತೆಪ್ಪನೆ ಅತ್ತಿತ್ತ ನೋಡತೊಡಗಿದೆ. ಶಾಲೆಯ ಸುತ್ತ ಕಾಂಪೌಂಡ್ ಇದ್ದರೂ ಒಂದು ಮೂಲೆಯಲ್ಲಿ ಗೋಡೆ ಕುಸಿದಿತ್ತು. ಅಲ್ಲಿಂದ ಮೊದಲು ಒಂದು ನಾಯಿಮರಿ ಜಿಗಿಯುತ್ತಾ ಬಂತು. ಅದರ ಹಿಂದೆಯೇ ನಾಲ್ಕೈದು ವರ್ಷದ ಬಾಲಕನೊಬ್ಬ ಜಿಗಿದು ಬಂದ. ಗಮನಿಸಿದರೆ ನಿಕ್ಕರ್ ತೊಟ್ಟೇ ಇಲ್ಲ! ಇದೇನು ಬಡತನವೋ, ಉದ್ಧಟತನವೋ ಎಂದು ನನಗೆ ಮುಜುಗರವಾಯಿತು. ಕೂಡಲೇ ಅವನ ಹಿಂದೆಯೇ ಒಬ್ಬ ಹೆಂಗಸು ಬಂದು ಅವನನ್ನು ಎಳೆದುಕೊಂಡು ಮತ್ತೆ ಮೋಟುಗೋಡೆಯ ಹಿಂಬದಿಗೆ ಹೋದಳು. “ಯವ್ವಾ ಬಿಡೇ, ಬಿಡೇ” ಅವನು ಕೂಗಿಕೊಳ್ಳುತ್ತಿದ್ದ. ನಾನಿದೇನು ತಮಾಷೆಯೆಂದು  ಅತ್ತಲೇ ನೋಡುತ್ತಿದ್ದೆ. ಆನಂತರ ನಾಯಿಮರಿಯೂ ತನ್ನ ಸ್ನೇಹಿತನಿಗಾಗಿ ಮರಳಿತು. ಕೆಲನಿಮಿಷಗಳ ಬಳಿಕ ನಾಯಿಮರಿ, ಹುಡುಗ ಇಬ್ಬರೂ ಓಡೋಡಿ ಬಂದರು. ಈಗವನು ನಿಕ್ಕರ್ ಹಾಕಿಕೊಂಡಿದ್ದು ನನಗೆ ಸಮಾಧಾನವಾಯಿತು. ಅವನು ನಾನು ಕುಳಿತಿದ್ದ ಬೆಂಚಿನಿಂದ ಸ್ವಲ್ಪವೇ ಮುಂದೆ ಕುಳಿತಿದ್ದ ಒಬ್ಬನೇ ಪುಟ್ಟ ಹುಡುಗನ ಜೊತೆ ಕುಳಿತು ನನ್ನ ಕಡೆ ನೋಡಿ ದೊಡ್ಡದಾಗಿ ನಕ್ಕನು.

“ನಿನ್ನ ಹೆಸರೇನು?” 

“ರಾಮಲಿಂಗ, ಒನ್ನೇ ಕ್ಲಾಸು” ಎಂದು ಹೇಳಿ ಹಲ್ಕಿರಿದು, “ಇವ್ನು ಚೆನ್ನ, ಇವ್ನಿಗೆ ಕೈ ಮುರ್ದೋಗೈತೆ, ನೆನ್ನೆ ಮರ ಹತ್ತಕೋಗಿ ಬಿದ್ದೋದ, ಪಾಪ” ಎಂದು ರಾಗವಾಗಿ ಹೇಳಿದ.

     ಚೆನ್ನನ ಬಲಗೈ ಮುರಿದಿತ್ತು. ಒಂದು ಮಾಸಿದ ಟವೆಲನ್ನು ಕೊರಳಿಗೆ ಕಟ್ಟಿ, ಪ್ಲಾಸ್ಟರ್ ಹಾಕಿದ ಅವನ ಕೈಯನ್ನು ಅದರಲ್ಲಿ ತೂರಿಸಿಡಲಾಗಿತ್ತು. ಆ ಎಳೆವಯಸ್ಸಿನ ಮುಖದ ಮೇಲೆ ನೋವೆಷ್ಟು ದಟ್ಟವಾಗಿತ್ತೆಂದರೆ ಅವನಿಗೆ ಯಾವುದರಲ್ಲಿಯೂ ಆಸಕ್ತಿಯಿದ್ದಂತಿರಲಿಲ್ಲ. ಅಪ್ಪ-ಅಮ್ಮನ ಬಲವಂತಕ್ಕೋ, ಮೇಷ್ಟ್ರುಗಳ ಹೆದರಿಕೆಯಿಂದಲೋ ಸುಮ್ಮನೆ ಬಂದು ಕುಳಿತಂತಿತ್ತು. ನಾನು, “ಓಹ್, ತುಂಬಾ ನೋಯ್ತಾ ಇದೆಯಾ ಪುಟ್ಟಾ?” ಎಂದು ಕೇಳಿದೆ. ಅಷ್ಟು ಕೇಳಿದ್ದೇ ಸಾಕು, ರಾಮಲಿಂಗ ನನ್ನೆಡೆಗೆ ಎದ್ದು ಬಂದು, “ಊಂ ಆಂಟಿ, ನೆನ್ನೆಯಿಂದ ಅಳ್ತಾ ಅವ್ನೆ, ಏನ್ ಕೊಟ್ಟರೂ ಸುಮ್ಕಾಯ್ತಾನೇ ಇಲ್ಲ” ಎಂದು ಹೇಳಿ ನಾವು ಜೋಡಿಸಿಟ್ಟ ತಿನಿಸು ಉಡುಗೊರೆಗಳ ಕಡೆ ನೋಡತೊಡಗಿದ. ನಾನು ತಡೆಯಲಾರದೆ ಎದ್ದು ಹೋಗಿ ಒಂದು ಚಾಕೊಲೇಟ್ ತಂದು ಚೆನ್ನನ ಕೈಗೆ ಕೊಟ್ಟೆ. ಅವನ ಮುಖದ ಮೇಲೆ ಬಲವಂತವಾಗಿ ಸಣ್ಣ ನಗು ಮಿಂಚಿತು. ನಾನು ಮರಳಿ ಬಂದಾಗ ರಾಮಲಿಂಗ ಇನ್ನೇನು ತನ್ನ ಸರದಿ ಎಂದು ಉತ್ಸುಕನಾಗಿ ನಿಂತಿದ್ದ. ಅಷ್ಟರಲ್ಲಿ ಪೀಟಿ ಮೇಷ್ಟ್ರು ಇತ್ತ ಕಡೆಯೇ ಬಂದು ಅವನಿಗೆ ಕುಳಿತುಕೊಳ್ಳುವಂತೆ ಗದರಿಸಿದರು. ನಾನು ಆಮೇಲೆ ಕೊಡ್ತೀನಿ ಎಂದು ಕಣ್ಣಿನಲ್ಲೇ ಸನ್ನೆ ಮಾಡಿ ಹೇಳಿ ಕುಳಿತು ಮಕ್ಕಳ ನೃತ್ಯ ನೋಡತೊಡಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ಮುಗಿದಾಗ ನೋಡಿದರೆ ರಾಮಲಿಂಗ ಮತ್ತವನ ನಾಯಿಮರಿ ಯಾವಾಗಲೋ ಎದ್ದು ಹೋಗಿಬಿಟ್ಟಿದ್ದರು. ಅವನು ಮರಳಿ ಬರುವುದರೊಳಗೆ ಎಲ್ಲಾ ಚಾಕೊಲೇಟ್ಸ್ ಖಾಲಿಯಾಗಿಬಿಟ್ಟಾವೆಂದು ಒಂದು ಚಾಕಲೇಟನ್ನು ನನ್ನ ಬ್ಯಾಗಿನೊಳಗಿಟ್ಟುಕೊಂಡೆ. ಇನ್ನೇನು ಉಡುಗೊರೆಗಳನ್ನು ಪಡೆಯುವ ಸಮಯವೆಂದು ಮಕ್ಕಳೆಲ್ಲಾ ಖುಷಿಯಿಂದ ಸಾಲಾಗಿ ನಿಂತರು. ನಾನು ಅವರಿಗೆಲ್ಲಾ ಹಂಚುತ್ತಾ ಅತ್ತಿತ್ತ ಕಣ್ಣಾಯಿಸಿದಾಗ ಮ್ಯಾಡಿ ಮಾತ್ರ ಎಲ್ಲೂ ಕಾಣಲಿಲ್ಲ.

     ಹೆಡ್ ಮೇಷ್ಟ್ರು ‘ತಿಂಡಿ ತಿಂದ ಮೇಲೆ ಬೆಂಗಳೂರಿನ ತಂಡದಿಂದ ಹಲವಾರು ಕಾರ್ಯಕ್ರಮಗಳಿವೆ, ಯಾರೂ ಹೋಗಬಾರದು’ ಎಂದು ಅನೌನ್ಸ್ ಮಾಡಿದರು. ಆಗಲೇ ಸಮಯ ಹತ್ತೂವರೆಯಾಗಿತ್ತು, ಚೆನ್ನಾಗಿ ಹಸಿದಿದ್ದ ನಾವು ಬಿಸಿಬಿಸಿ ಉಪ್ಪಿಟ್ಟು ಸವಿಯಲು ಎದ್ದೆವು. ಆಗಲೂ ಮ್ಯಾಡಿ ಕಾಣಲಿಲ್ಲ. ತಿಂಡಿ ಮುಗಿಸಿ ನಾನೂ, ಫಾಲ್ಗುಣಿ ಕೈ ತೊಳೆದುಕೊಳ್ಳಲು ಶೌಚಾಲಯದ ಕಡೆಗೆ ಹೋಗುತ್ತಿರುವಾಗ ಮೋಟುಗೋಡೆಯ ಮೇಲಿನಿಂದ ಮತ್ತೆ ಜಿಗಿದು ರಾಮಲಿಂಗ ಒಳಗೋಡಿ ಬಂದ.

“ಏಯ್ ರಾಮಲಿಂಗ, ನಿಂತುಕೊಳ್ಳೋ, ಎಲ್ಲೋ ಹೋಗಿದ್ದೆ, ತಗೋ … ” ಎಂದು ಕೂಗಿ ಕರೆದೆ. ಅವನೋ ಚಾಕಲೇಟ್ ಫ್ಯಾಕ್ಟರಿಯೇ ತನ್ನ ನಿಕ್ಕರಿನ ಜೇಬಿನಲ್ಲಿರುವಂತೆ ಅದನ್ನು ಹಿಡಿದುಕೊಂಡು ಕುಣಿದಾಡುತ್ತಾ ಚೆನ್ನ ಕುಳಿತಿದ್ದ ಕಡೆಗೆ ಹೋಗುತ್ತಿದ್ದ. ನಾನು ಮತ್ತೆ ಕರೆದಾಗ, ಬಲವಂತಕ್ಕೆ ನನ್ನ ಬಳಿ ಬಂದ.

“ಎಲ್ಲೋ ಹೋಗಿದ್ದೆ? ನೀನ್ಯಾಕೆ ಯಾವಾಗ್ಲೂ ಕಾಂಪೌಂಡು ಹಾರಿ ಬರ್ತೀಯ, ಗೇಟಿಂದ ಬರ್ಬೇಕು ತಾನೇ?” ನನ್ನ ಪ್ರಶ್ನೆಯಿಂದಲೇ ಮೊದಲ ಬಾರಿಗೆ ಅವನೂ ಆ ಕುರಿತು ಯೋಚಿಸುತ್ತಿರುವುದೆನಿಸಿತು.

“ಕಳ್ಳ ದಾರೀಲಿ ಕಲ್ಲು ಮುಳ್ಳುಗಳಿರ್ತವೆ ಕಣೋ” ಫಾಲ್ಗುಣಿ ನಗುತ್ತಾ ಗದರಿದಳು.

“ಅವ್ನಿಗೆ ತೆಗ್ದಿರೋ ಗೇಟೂ, ಬಿದ್ದೋಗಿರೋ ಗೋಡೆ ಎರಡೂ ದಾರಿಗಳಷ್ಟೇ; ಕಳ್ಳ ದಾರಿ ಸುಳ್ಳು ದಾರಿ ಅನ್ನೋ ಮುಳ್ಳುಗಳು ಚುಚ್ಚೋದಿಕ್ಕೆ ಇನ್ನೂ ನಾಜೂಕಾಗ್ಬೇಕು ಅವನ ಕಾಲುಗಳು”

“ಓಹೋ, ಇದೇನು ನಿನ್ನ ಮುಂದಿನ ನಾಟಕದ ಡೈಲಾಗಾ?”

“ಹೇಗಿದೆ?” 

“ಸೂಪರ್” ಎಂದು ಹೇಳಿ ಕೈ ತೊಳೆದುಕೊಳ್ಳಲು ಹೋದಳು.

ಛೇ, ಇನ್ನೊಂಚೂರು ಡೀಟೈಲ್ ಆಗಿ ಹೊಗಳಬಾರದಿತ್ತಾ ಇವ್ಳು ಎಂದುಕೊಂಡು ಮತ್ತೆ ರಾಮಲಿಂಗನಿಗೆ, “ಬಾರೋ ಇಲ್ಲಿ, ಚಾಕ್ಲೇಟ್ ಬೇಡ್ವಾ” ಅಂತ ನನ್ನ ಬ್ಯಾಗಿನಿಂದ ಚಾಕ್ಲೇಟ್ ತೆಗೆದು ಹತ್ತಿರಕ್ಕೆ ಕರೆದೆ. ಅವನು ಅನುಮಾನಿಸುತ್ತಲೇ ಬಂದು ಮೆಲ್ಲನೆ, “ಇಲ್ನೋಡಿ… ” ಎಂದು ತನ್ನ ನಿಕ್ಕರಿನ ಜೇಬಿನಿಂದ ಚಾಕೊಲೇಟಿನ ದೊಡ್ಡ ಬಾರ್ ತೆಗೆದು ತೋರಿಸಿದ. ನಾವು ಮಕ್ಕಳಿಗೆ ತಂದಿದ್ದು ಅದಕ್ಕಿಂತ ಚಿಕ್ಕ ಚಾಕೊಲೇಟ್ಸ್ ಆಗಿದ್ದವು.

“ಈ ಚಾಕೊಲೇಟ್ ಯಾರು ಕೊಟ್ರು? ನಾವು ಇಂಥದ್ದು ತಂದೇ ಇಲ್ವಲ್ಲ?” ನಾನು ಅಚ್ಚರಿಯಿಂದ ಕೇಳಿದೆ.

“ಒಬ್ಬರು ಅಂಕಲ್ ಕೊಟ್ರು, ಶ್ ಯಾರಿಗೂ ಹೇಳ್ಬೇಡ ಅಂದವ್ರೆ” ಎಂದು ಚಾಕೊಲೇಟ್ ಅನ್ನು ಜೇಬಿನಲ್ಲಿಟ್ಟುಕೊಂಡ.

“ಓಹೋ ನಿಂದೇ ಚಾನ್ಸ್ ಬಿಡಪ್ಪ. ಎಷ್ಟು ದೊಡ್ಡ ಚಾಕಲೇಟ್ ಸಿಕ್ಕಿದೆ ನಿಂಗೆ. ನಂಗೊಂದು ಕೊಡುಸ್ತೀಯಾ?” ನಾನು ತಮಾಷೆ ಮಾಡಿದೆ.

ಅವನು ಜೋರಾಗಿ ನಗತೊಡಗಿದ.

“ಯಾಕೆ ಬರೀ ಚಿಕ್ ಮಕ್ಳಿಗಷ್ಟೇನಾ ಆವಂಕಲ್ ಕೊಡೋದು?”

“ಅಯ್ಯೋ ಪೆದ್ದು ಆಂಟಿ, ನಿನ್ನತ್ರ ಬುಲ್ಲಕಾಯಿ ಇಲ್ವಲ್ಲಾ?”

“ಏನು?” ನನಗೆ ಅವನು ಹೇಳಿದ್ದು ಅರ್ಥವಾಗದೆ, “ಏಯ್ ಸರಿಯಾಗಿ ಹೇಳೋ, ಏನದು ಬುಲ್ಲಕಾಯಿ ಅಂದ್ರೆ?”
“ಅಯ್ಯೋ ನಿಂಗೆ ಚಾಕಲೇಟ್ ಸಿಗಾಕಿಲ್ಲ ಬುಡಾಂಟಿ, ಇಲ್ಲಿ ಇಂಗೆ ಚಡ್ಡಿ ತೆಗ್ದಿ ಬುಲ್ಲಕಾಯಿ ತೋರ್ಸುದ್ರೆ ಅಸ್ಟೆ ಚಾಕಲೇಟ್ ಕೊಡದು ಆವಂಕಲು” ಎಂದು ಅವಸರದಲ್ಲಿ ಹೇಳಿ ಓಡಿ ಹೋದ.

ನನ್ನ ಕೈಲಿದ್ದ ಚಾಕ್ಲೇಟ್ ನೆಲಕ್ಕೆ ಬಿತ್ತು!

     ಸಿಟ್ಟಿನಿಂದ ಕಂಪಿಸುತ್ತಾ ಯಾರಿರಬಹುದು ಈ ನೀಚ ಎಂದು ಹಾಗೇ ಮೋಟುಗೋಡೆ ಕಡೆ ತಿರುಗಿದಾಗ ಮೋಟುಗೋಡೆಯ ಹಿಂದಿನಿಂದ ಸಿಗರೇಟ್ ಹೊಗೆ ಕಾಣಿಸಿತು. ಏನೋ ಕೆಡುಕೆನಿಸಿ, ನನ್ನ ಮನಸ್ಸು ‘ದೇವ್ರೇ, ಅದು ಮ್ಯಾಡಿ ಆಗಿಲ್ದೇ ಇರ್ಲಿ’ ಎಂದು ಬೇಡಿಕೊಂಡಿತು. ಗಾಬರಿ ಬಿದ್ದು ಹಾಗೇ ನೋಡುತ್ತಿದ್ದಾಗ ಕೋಡುಗಳಿದ್ದ ಹೆಲ್ಮೆಟ್ ಅನ್ನು ಎರಡು ಕೈಗಳು ಮೇಲಕ್ಕೆತ್ತಿ ಹಿಡಿದು ಮತ್ತೆ ಕೆಳಗಿಳಿಸಿದ್ದು ಕಂಡಿತು. ಆನಂತರ ಮ್ಯಾಡಿಯ ಬೈಕ್ ಗುಡುಗುಡು ಸದ್ದು ಮಾಡುತ್ತಾ ಹೋಗುವುದು ಕಾಣಿಸುತ್ತಿದ್ದಂತೆಯೇ ನಾನು ನಿಂತಲ್ಲೇ ಕುಸಿದೆ!

ಒಬ್ಬಳು ಮುದ್ದಾದ ಹುಡುಗಿ ಸೀರೆ ಉಟ್ಟುಕೊಂಡು, ನಮ್ಮ ಗುಂಪಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಳು!      ವೇದಿಕೆಯಿಂದ ದೂರ ಮಿಸುಕಾಡದೆ ಕುಳಿತೇಯಿದ್ದ ನನ್ನನ್ನು ಫಾಲ್ಗುಣಿ ಕೈ ಬೀಸಿ ಕರೆಯುತ್ತಿದ್ದಳು. ಅವಳ ಮುಖದಲ್ಲಿ ಉದ್ವೇಗ, ಅಚ್ಚರಿ, ಗೊಂದಲ ಕಾಣುತ್ತಿದ್ದವು. ಅವಳಿಗೆ ನನ್ನೆದೆಯಲ್ಲಿ ಸ್ಪೋಟಗೊಂಡಿದ್ದ ಜ್ವಾಲಾಮುಖಿ ಕಾಣುವಂತಿದ್ದರೆ ಎನಿಸಿತು. ಆಗಲೇ ನಾಟಕದ ಇತರ ಪಾತ್ರಧಾರಿಗಳು ವೇದಿಕೆ ತಲುಪಿ ನನಗಾಗಿ ಕಾಯುತ್ತಿದ್ದರು. ನಿಧಾನವಾಗಿ ನಾನು ಎದ್ದು ಅವರನ್ನು ಸೇರಿಕೊಂಡೆ. ಆದರೆ ನನ್ನ ಮುಖ ನೋಡಿ ಅವರಿಗೆಲ್ಲಾ ಇನ್ನಷ್ಟು ಗೊಂದಲವಾಯಿತು.

“ಆರ್ ಯು ಆಲ್ರೈಟ್?” ಫಾಲ್ಗುಣಿ ಹತ್ತಿರ ಬಂದು, “ಪಿರಿಯಡ್ಸ್ ಆಗಿಬಿಡ್ತಾ?” ಕೇಳಿದಳು.

     ನಾನು ತಲೆಯನ್ನು ಅತ್ತಿಂದಿತ್ತ ಆಡಿಸಿ, ಅಸಹಾಯಕಳಾಗಿ, ದುಃಖದಿಂದ ಅವಳನ್ನು ನೋಡಿದೆ. ಆದರೆ ಎಲ್ಲರೂ ನಮ್ಮನ್ನು ನೋಡುತ್ತಿರುವುದು, ನಮ್ಮ ನಾಟಕಕ್ಕಾಗಿ ಕಾಯುತ್ತಿರುವುದು ನೆನಪಾಗಿ ಸ್ವಲ್ಪ ಸುಧಾರಿಸಿಕೊಂಡು ಶುರು ಮಾಡಿದೆ. ಹೆಣ್ಣು ಮಕ್ಕಳ ವೋಟಿಂಗ್ ಹಕ್ಕುಗಳ ಬಗ್ಗೆ ಡೈಲಾಗ್ ಹೇಳುತ್ತಿದ್ದಂತೆಯೇ ನನಗೆ ಅರಿವಿಲ್ಲದಂತೆ, ಲೈಂಗಿಕ ಶೋಷಣೆ, ಮಾನಸಿಕ ಶೋಷಣೆ ಎಂದೆಲ್ಲಾ ಬಡಬಡಾಯಿಸಿದೆ. ಆಸಕ್ತಿ ಕಳೆದುಕೊಳ್ಳುತ್ತಿದ್ದ ಮಕ್ಕಳು ನಿಧಾನವಾಗಿ ಗುಜುಗುಜು ಮಾತಾಡತೊಡಗಿದ್ದು ಗೊತ್ತಾಗುತ್ತಿತ್ತು. 

ಬರೀ ಹೆಣ್ಣು ಮಕ್ಕಳಲ್ಲ ಇಂದು ಗಂಡು ಮಕ್ಕಳು ಕೂಡ ಸೇಫ್ ಇಲ್ಲ…

ಕಾಮುಕರು ಎಲ್ಲೆಡೆ ಇರುತ್ತಾರೆ, ನಿಮ್ಮ ಹತ್ತಿರದವರೇ …

ಗುಡ್ ಟಚ್ ಬ್ಯಾಡ್ ಟಚ್  …

ನನ್ನ ಮಾತು ಎತ್ತೆತ್ತಲೋ ಹೋಗುತ್ತಿತ್ತು.

     ನಾನಿನ್ನೂ ಮುಗಿಸಿರಲಿಲ್ಲ, ಫಾಲ್ಗುಣಿ ಮೈಕ್ ಕಸಿದುಕೊಂಡು, “ಇಲ್ಲಿಗೆ ನಮ್ಮ ನಾಟಕ ಮುಕ್ತಾಯವಾಯಿತು. ಮುಂದೆ ಡ್ರಾಯಿಂಗ್ ಮಾಡೋಕೆ ಆಸಕ್ತಿ ಇರೋ ಮಕ್ಕಳು ಬನ್ನಿ” ಎಂದಳು. ಎಲ್ಲರೂ ಸದ್ಯ ಏನೋ ಒಂದು ಅಹಿತಕರವಾದದ್ದು ಮುಗಿಯಿತೆನ್ನುವ ನಿರಾಳತೆಯಿಂದ ಚೆದುರಿದರು. “ವಾಟ್ ದ ಹೆಲ್ ವಾಸ್ ದಟ್?” ಫಾಲ್ಗುಣಿ ಸಿಟ್ಟಿನಿಂದ ನನ್ನ ತೋಳು ಹಿಡಿದು ಶೌಚಾಲಯದತ್ತ ಎಳೆದುಕೊಂಡು ಹೋದಳು. “ಹೇಳು ಏನಾಯ್ತು?” ಅವಳ ಕಣ್ಣುಗಳಲ್ಲಿ ಸಿಟ್ಟಿತ್ತು.

“ಮ್ಯಾಡಿ …” ನನಗೆ ಮಾತನಾಡಲು ಆಗಲಿಲ್ಲ.

“ನೀನೇ ಪ್ರೊಪೋಸ್ ಮಾಡಿಬಿಟ್ಯ? ರಿಜೆಕ್ಟ್ ಮಾಡಿದ್ನಾ? ಅಷ್ಟ್ಯಾಕ್ ಅರ್ಜೆಂಟ್ ಮಾಡಿದೆ?”

“ಅವನೇನು ರಿಜೆಕ್ಟ್ ಮಾಡೋದು ನನ್ನ?” ನಾನು ಅವುಡುಗಚ್ಚಿ, ಟಾಯ್ಲೆಟ್ ಬಾಗಿಲಿಗೆ ಗುದ್ದಿದೆ. ತುಕ್ಕು ಹಿಡಿದಿದ್ದ ಅದರ ಚಿಲಕ ಮುರಿದು ಬಿತ್ತು. ನಾನು ನಡೆದುದ್ದನ್ನು ಹೇಳುತ್ತಿದ್ದಂತೆ ಫಾಲ್ಗುಣಿಯ ಸಿಟ್ಟು ಹೆಚ್ಚಾಗತೊಡಗಿತು.

“ನೀನು ರಿಜೆಕ್ಷನ್ ತಡ್ಕೊಳೋಕಾಗ್ದೆ ರಿವೇಂಜ್ ತಗೋತ್ತಿಲ್ಲ ತಾನೇ?” 

ನನಗೆ ತಲೆ ಗಿರ್ ಅಂತು. ಇಂಥವರನ್ನು ಬಯಲಿಗೆಳೆಯುವಾಗ ಯಾಕೆ ಎಲ್ಲರೂ ನಮ್ಮದೇನಾದರೂ ಮೋಟಿವ್ ಇದೆಯಾಂತ ಕೆದಕುತ್ತಾರೆ ಎಂದು ಚಿಂತೆಯಾಯಿತು. 

“ನಾನು ನಿಂಗೆ ಏನೂ ಪ್ರೂವ್ ಮಾಡ್ಬೇಕಾಗಿಲ್ಲ” ನಾನು ಸಿಟ್ಟಿನಿಂದ ಹೊರನಡೆಯತೊಡಗಿದೆ. 

“ಸೀರಿಯಸ್ಲೀ? ಇಷ್ಟಕ್ಕೇ ಯಾವ್ದೋ ಮರ್ಡರ್ ಗೆ ವಿಟ್ನೆಸ್ ಆಗಿದ್ದೋಳಂಗೆ ಆಡ್ತಿಯಲ್ಲೇ? ಅವ್ನಿಗೆ ಆಮೇಲೆ ಹೇಳ್ಬೋದಿತ್ತು ಹಿಂಗೆಲ್ಲ ಮಾಡ್ಬೇಡಾಂತ, ಅಷ್ಟಕ್ಕೂ ಆ ಹುಡುಗ ಮೊದ್ಲು ಚಡ್ಡಿನೇ ಹಾಕ್ಕೊಂಡು ಬಂದಿರಲಿಲ್ವಲ್ಲಾ?” ನನ್ನ ಕೈ ಹಿಡಿದೆಳೆದು ನಿಲ್ಲಿಸಿ ಕೇಳಿದಳು. 

     ನನಗೆ ನಾನು ನಡೆದಿದ್ದನ್ನೆಲ್ಲಾ ಸರಿಯಾಗಿ ಹೇಳಿದೆನೋ ಇಲ್ಲವೋ ಎಂದು ಅನುಮಾನವಾಯಿತು. “ಅಲ್ವೇ ಬಟ್ಟೆಯಿಂದ ಹೇಗೆ ಮೈ ಮುಚ್ಚಿಕೊಳ್ಳೋದು ಅಂತಾನೂ ಗೊತ್ತಿಲ್ದಿರೋ ಮಗೂಗೆ ಚಾಕ್ಲೇಟ್ ಆಸೆ ತೋರಿಸಿ ಬಟ್ಟೆ ಬಿಚ್ಚಿಸೋದು ಎಂಥ ವಿಕೃತಿ? ಮ್ಯಾಡಿಗೆ ನಿಜಕ್ಕೂ ಚಾರಿಟಿಯಲ್ಲಿ ನಂಬಿಕೆಯಿಲ್ಲ. ಅವನು ಬಂದಿದ್ದೇ ಚಿಕ್ಕ ಮಕ್ಕಳು ಸಿಗ್ತಾರೆ ಅಂತ. ಹಿ ಈಸ್ ಸಿಕ್ ” ನಾನು ಚೀರಿದೆ.

“ಆರ್ ಯು ಕ್ರೇಝಿ? ಅಷ್ಟಕ್ಕೂ ಏನ್ ಪ್ರೂಫ್ ಇದೆ ನಿನ್ನತ್ರ? ಅವನು ನಮ್ಮ ಫ್ಯಾಮಿಲಿ ಫ್ರೆಂಡ್ …” 

     ಇವಳು ನಿಜಕ್ಕೂ ನನ್ನ ಸ್ನೇಹಿತೆ ಫಾಲ್ಗುಣಿಯೇ? ನಾವು ಇಷ್ಟು ಬೇರೆ ಬೇರೆಯಾಗಿ ಯೋಚಿಸ್ತಿವಾ? ಇಂಥ ಸೀರಿಯಸ್ಸಾದ ವಿಷಯವಾದರೂ ಇವಳಿಷ್ಟು ತಣ್ಣಗೆ ಮಾತಾಡುತ್ತಿದ್ದಾಳಲ್ಲಾಂತ  ಸಿಟ್ಟೂ ಬಂತು.

“ಫಾಲು ನಿಂಗೆ … ” ನಾನು ಮಾತಾಡ್ತಿದ್ರೂ ಅವಳು ಹೋಗ್ಬಿಟ್ಳು. 

     ನಾನು ಯಾವ ಕಾರಣಕ್ಕೂ ಈ ವಿಷಯವನ್ನು ಇಲ್ಲಿಗೇ ಬಿಡಬಾರದೆಂದು ರಾಮಲಿಂಗನನ್ನು ಹುಡುಕಿ, “ನಿಮ್ಮಮ್ಮನತ್ರ ಕರ್ಕೊಂಡೋಗು” ಎಂದೆ. ಅವನು ಎಲ್ಲಿ ತನ್ನ ಚಡ್ಡಿ ಜೇಬು ಹಿಡಿಸದಷ್ಟು ದೊಡ್ಡ ಚಾಕ್ಲೇಟ್ ತಿನ್ನುವ ಮೊದಲೇ ಕಳೆದುಹೋಗುತ್ತೋ ಎನ್ನುವ ಭಯದಿಂದ ಒಂದು ಕೈಯಲ್ಲಿ ಅದನ್ನು ಹಿಡಿದುಕೊಂಡೇ ಮನೆಯತ್ತ ನಡೆಯುತ್ತಾ, “ಯಾಕ್ ಆಂಟಿ? ಯಾಕ್ ಅಂತೇಳಿ ಪಷ್ಟು?” ಎಂದು ಗೋಗರೆಯತೊಡಗಿದ. ಕುಡಿಯುವ ನೀರಿನ ಟ್ಯಾಂಕಿ ಹತ್ತಿರ ಬಿಂದಿಗೆಗಳಲ್ಲಿ ನೀರು ತುಂಬಿಸಿಕೊಳ್ಳುತ್ತಿದ್ದ ಆಕೆ ನನ್ನನ್ನು ನೋಡಿದೊಡನೆ ನಾಚಿಕೊಂಡು, “ಅಯ್ಯೋ ಮೇಡಮ್ಮೊರೇ ನೀವ್ಯಾಕೆ ಇಲ್ಲಿಗಂಟ ಬರಾಕೋದ್ರಿ, ನಮ್ ಮಗಾ ಏನಾರ ತರ್ಲೆ ಮಾಡುದ್ನಾ?” ಎಂದು ಮೈಯೆಲ್ಲಾ ಹಿಡಿ ಮಾಡಿಕೊಂಡು, ಅವನ ತಲೆ ಮೊಟಕಿ, ಕೇಳಿದಳು.

ನಾನು ಆಕೆಯನ್ನು ಹತ್ತಿರ ಕರೆದು ನಡೆದುದ್ದನ್ನೆಲ್ಲಾ ಹೇಳಿ, “ನೀವು ತಕ್ಷಣ ನನ್ ಜೊತೆ ಬನ್ನಿ, ಹೆಡ್ ಮೇಷ್ಟ್ರುಗೆ ಕಂಪ್ಲೇಂಟ್ ಕೊಡಿ” ಎಂದೆ. ಆಕೆ ಸೆರಗಿನಿಂದ ಬಾಯಿ ಮುಚ್ಚಿಕೊಂಡು ನಗುತ್ತಾ, “ಏ ಬುಡಿ ಮೇಡಮ್ಮೋರೆ, ಬುದ್ದಿ ಬಂದ್ಮ್ಯಾಕೆ ನಮ್ ರಾಮಲಿಂಗ ಅಂಗೆಲ್ಲಾ ಮಾಡಾಕಿಲ್ಲ” ಎನ್ನುತ್ತಾ ಹೊರಟೇ ಹೋದಳು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ದ್ವಿತೀಯ ಬಹುಮಾನ ಪಡೆದ ಕಥೆ: ಅಂತಃಕರಣದ ಟಿಪ್ಪಣಿಗಳು

ನನಗೆ ಆ ಟ್ಯಾಂಕಿಗೆ ನನ್ನ ತಲೆ ಚಚ್ಚಿಕೊಳ್ಳಲೇ ಎನಿಸಿತು.

     ನಾನು ವಾಪಸ್ ಸ್ಕೂಲಿಗೆ ಬಂದು ಮಕ್ಕಳಿಂದ ಬ್ಯಾಂಡ್ ಸೆಟ್ ಗಳನ್ನು ಎತ್ತಿ ಒಳಗಿಡಿಸುತ್ತಿದ್ದ ಪೀಟಿ ಮೇಷ್ಟ್ರತ್ರ ಹೋದೆ. ಆತನೋ, ಎಲ್ಲಾ ಕೇಳಿದ್ಮೇಲೆ, “ಮೇಡಂ, ಇಂಥ ಒಂದು ಖುಸಿ ಟೆಮಲ್ಲಿ, ಏನೋ ನಮಳ್ಳಿ ಮಕ್ಳಿಗೆ ಒಳ್ಳೇದಾಗ್ಲಿ ಅಂತವ ನೀವೆಲ್ಲಾ ಬಂದಿರುವಾಗ, ಇದೆಲ್ಲಾ ಕೆಟ್ ಮಾತಾಡಿ ಮನ್ಸ್ ಕೆಡಿಸ್ಕಳದು ಯಾಕೆ ಬುಡಿ, ನಾನು ನಮ್ಮ ಉಡುಗ್ರುಗೆ ಆಮ್ಯಾಕೆ ಹೇಳ್ತಿನಿ.” ಎಂದುಬಿಟ್ಟರು. ನನಗೆ ಅವರು ಕುತ್ತಿಗೆಗೆ ಹಾಕಿಕೊಂಡಿದ್ದ ವಿಶಲ್ ಕಸಿದುಕೊಂಡು, ಜೋರಾಗಿ ಊದಿ, ಈ ಮ್ಯಾಡಿ ಎಂಥ ಹಲ್ಕಟ್ ನನ್ಮಗಾಂತ ಕೂಗಿ ಹೇಳಬೇಕನ್ನಿಸಿತು. ಮಕ್ಕಳು ಡ್ರಾಯಿಂಗ್ ಮಾಡುತ್ತಿದ್ದುದ್ದನ್ನು ಸಂತೋಷದಿಂದ ನೋಡುತ್ತಾ, ತಮ್ಮ ಮೊಬೈಲ್ ನಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದ ಹೆಡ್ ಮೇಷ್ಟ್ರ ಬಳಿ ಹೋದೆ. ಅವರಂತೂ ನಾನು ಗುಡ್ ಟಚ್ ಬ್ಯಾಡ್ ಟಚ್ ಎಂದೆಲ್ಲಾ ಮಾತನಾಡಲು ಶುರು ಮಾಡಿದಾಗಿನಿಂದಲೂ ಮುಖ ಕೊಟ್ಟು ಮಾತನಾಡಿಸಿರಲೇ ಇಲ್ಲ. ಅವರತ್ತಲೇ ಬಿರುಸಾಗಿ ನಡೆದು ಬರುತ್ತಿದ್ದ ನನ್ನನ್ನು ನೋಡುತ್ತಿದ್ದಂತೆಯೇ ಮೆಲ್ಲಗೆ ತಪ್ಪಿಸಿಕೊಂಡು ಬಿಟ್ಟರು.

     ಅಷ್ಟರಲ್ಲಿ ಫಾಲ್ಗುಣಿ, ಗ್ರೂಪ್ ಫೋಟೋಗಾಗಿ ನನ್ನನ್ನು ಹುಡುಕಿಕೊಂಡು ಬಂದಳು. ನಾನು ಇಲ್ಲಿಂದ ಹೊರಡುವ ಮೊದಲು ಯಾರಿಗಾದರೂ ಹೇಳಲೇಬೇಕೆಂದು ಒದ್ದಾಡಿ ಪ್ರಯೋಜನವಾಗದೇ, ಹತಾಶಳಾಗಿ, ಫೋಟೋಗಳಿಗೆ ಪೋಸ್ ಕೊಟ್ಟೆ. ನಂತರ ಎಲ್ಲರೂ ವಾಪಸ್ ಹೊರಡಲನುವಾದರು. ನಾನು ಕೊನೇಪಕ್ಷ ರಾಮಲಿಂಗನಿಗಾದರೂ ಬುದ್ದಿ ಹೇಳಬೇಕೆಂದು ಅವನನ್ನು ಹುಡುಕಿದೆ. ಚೆನ್ನನ ಪಕ್ಕ ಕುಳಿತು ಹೊಸ ಚಾಕೊಲೇಟ್ ಅನ್ನು ತೋರಿಸಿಕೊಂಡು ಜಂಭ ಪಡುತ್ತಾ ತಿನ್ನುತ್ತಿದ್ದ.  ನನ್ನನ್ನು ನೋಡಿದೊಡನೆ, “ಆಂಟಿ, ನೀವು ನೆಕ್ಸ್ಟ್ ಟೆಮ್ ಬರೋತ್ಗೆ ನಾನೂ ಕೈ ಮುರ್ಕೊಂಡಿರ್ತೀನಿ, ಆಗ ನಂಗೂ ಪಸ್ಟ್ ಚಾಕೊಲೇಟ್ ಕೊಡ್ಬೇಕು” ಎಂದು ಪೆದ್ದು ಪೆದ್ದಾಗಿ ಹೇಳಿದ.

ನಾನು ಅಷ್ಟು ಹೊತ್ತೂ ತಡೆದಿಟ್ಟುಕೊಂಡಿದ್ದ ಕಣ್ಣೀರನ್ನು ಹರಿಯಲು ಬಿಟ್ಟು, ಮಂಡಿಯೂರಿ ಕುಳಿತು, ಅವನನ್ನು ತಬ್ಬಿಕೊಂಡೆ.

“ಹಾಗೆಲ್ಲಾ ಅನ್ನಬಾರದು ದಡ್ಡ, ನಾವು ನೆಕ್ಸ್ಟ್ ಟೈಮ್ ಬರೋ ಹೊತ್ತಿಗೆ, ನಿಂಗೆ ಬುಲ್ಲಕಾಯಿ ತೋರಿಸು ಅಂತ ಕೇಳೋವ್ರ ಕೈ ಮುರೀಬೇಕು, ಆಯ್ತಾ?” ಅವನು ಗೊಂದಲದಿಂದ ನಾನು ಅಳುವುದನ್ನೇ ನೋಡಿದ. “ಕೈ ಮುರ್ಕೊಂಡು ಕೂತ್ರೆ ನಿನ್ನ ನೋಡಿ ಅಯ್ಯೋ ಪಾಪ ಅಂತಾರೆ. ಅದೂ ಗ್ಯಾರಂಟಿ ಇಲ್ಲ. ಕೆಲವರು ನಿನ್ನತ್ರಿರೋ ಚಾಕ್ಲೇಟ್ನ ಕಸ್ಕೊಂಡು ಬಿಡಬೋದು. ಹಂಗಾಗಬಾರ್ದಲ್ವಾ? ರಾಮಲಿಂಗ ಅಂದ್ರೆ ತುಂಬಾ ಸ್ಟ್ರಾಂಗು, ಅವನ ಹತ್ರ ನಾಯಿ ಮರಿ ಬೇರೆ ಇದೆ, ಅವನ ತಂಟೆಗೋಗ್ಬೇಡಿ ಅಂತ ಹೇಳ್ಬೇಕು. ಆಯ್ತಾ?”

     ನನ್ನ ಮಾತು ಅವನಿಗಾಗಲೀ, ಚೆನ್ನನಿಗಾಗಲೀ ಅರ್ಥವಾಗಲೇ ಇಲ್ಲ. ಬೇಸರದಿಂದಲೇ ಅಲ್ಲಿಂದ ಹೊರಟು, ನಾನು ಫಾಲ್ಗುಣಿ ಕಾರಿನಲ್ಲಿ ಕುಳಿತುಕೊಂಡೆ. ದಾರಿಯುದ್ದಕ್ಕೂ ಫಾಲ್ಗುಣಿ ಆ ಟಾಪಿಕ್ ಮಾತಾಡೋದೇ ಬೇಡವೆಂದುಬಿಟ್ಟಿದ್ದಳು. ಆಗಾಗ ನಮ್ಮ ಕಾರಿನ ಮುಂದೆ ಹಾದು ಹೋಗುತ್ತಿದ್ದ ಮ್ಯಾಡಿಯ ಬೈಕ್ ಬೇಡವೆಂದರೂ ಅದೇ ನೆನಪುಗಳಿಂದ ನನ್ನನ್ನು ವ್ಯಗ್ರಗೊಳಿಸುತಿತ್ತು. ಮೊದಲೇ ನಿರ್ಧರಿಸಿದ್ದಂತೆ ಅದೇ ಹೋಟೆಲಿನಲ್ಲಿ ಊಟಕ್ಕೆ ನಿಲ್ಲಿಸಿದಾಗ ನನಗಂತೂ ಹಸಿವೇ ಇರಲಿಲ್ಲ.

***

     ನಾನು ಫಾಲ್ಗುಣಿಯನ್ನು ದಿಟ್ಟಿಸಿ ನೋಡಿ, “ಫಾಲು, ಮಿಸ್ ಬಿಹೇವ್ ಮಾಡಿದವ್ರನ್ನ ತೆಗೆದಾಕದಿದ್ರೆ ನಾಳೆ ಗ್ರೂಪಿಗೇ ಕೆಟ್ಟೆಸರು ಬರಲ್ವಾ?” ಎಂದು ಕೇಳಿದೆ.

“ನೀನು ಹಿಂಗೆ ಓವರ್ ರಿಯಾಕ್ಟ್ ಮಾಡ್ಬಾರ್ದು. ಆ ಹೆಡ್ ಮೇಷ್ಟ್ರು ನಿನ್ ಬಗ್ಗೆ ಏನು ಹೇಳಿದ್ರು ಗೊತ್ತಾ? ಟೈಮಿಗೆ ಸರಿಯಾಗಿ ಮದ್ವೆ ಮಾಡಲಿಲ್ಲ ಅಂದ್ರೆ ಹೆಣ್ಮಕ್ಳು ಹಿಂಗೇ … “

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾ ಸ್ಪರ್ಧೆ: ಪ್ರಥಮ ಬಹುಮಾನ 55,000 ರೂ. ಪಡೆದ ಕಥೆ: ಸೋಮನ ಕುಣಿತ

“ಸಮಸ್ಯೆಯಿದೆ ಅಂತಾನೇ ಒಪ್ಪಿಕೊಳ್ಳದವರು ಪರಿಹಾರ ಹುಡುಕುತ್ತಾರ?”

“ಹೋಗ್ಲಿ ಬಿಡೇ, ಏನಾದ್ರೂ ಇಂಟೆರೆಸ್ಟಿಂಗ್ ಮಾತಾಡೋಣ? ಸ್ಕೂಟರ್ ಯಾವಾಗ ತಗೋತಿದೀಯ? ಮ್ಯಾಡಿಯಂಥ ಬೈಕ್ ತಗೊಂಡುಬಿಡು. ಅಷ್ಟೇ ಹುಡುಗ್ರೆಲ್ಲಾ ಫಿದಾ ಆಗ್ಬಿಡ್ತಾರೆ. ಇಲ್ಲಾಂದ್ರೂ ಬೀದಿಲಿರೋ ಮಕ್ಳೆಲ್ಲಾ , ಒಂದ್ ರೌಂಡ್ ಅಂತ ಗೋಗರಿತಾರೆ. ನನ್ನ ಅಕ್ಕನ ಮಗನ ಬಗ್ಗೆ ಹೇಳ್ತಿದ್ದನಲ್ಲ, ಅವನಿಗಂತೂ ಮ್ಯಾಡಿ ಜೊತೆ ಬೈಕ್ ನಲ್ಲಿ ಒಂದು ರೌಂಡ್ ಹೋಗೋದಂದ್ರೆ…”

“ಮ್ಯಾಡಿ ಜೊತೆನಾ?” ನಾನು ಹೆಚ್ಚು ಕಡಿಮೆ ಚೀರಿದೆ.

     ಫಾಲ್ಗುಣಿ ಇದ್ದಕ್ಕಿದ್ದಂತೆ ಸೈಲೆಂಟ್ ಆದಳು. ಏನೋ ಯೋಚಿಸುತ್ತಾ, “ಆದ್ರೆ ಮೊದ್ಲಿನಷ್ಟು ಇಷ್ಟ ಪಡ್ತಿಲ್ಲಾಂತ ಹೇಳ್ತಿದ್ಲು ಅಕ್ಕ. ಈಗೀಗ ಯಾಕೋ ಮಂಕಾಗಿರ್ತಾನೆ, ಚಾಕ್ಲೇಟ್ ಕೊಟ್ಟರೂ … ” ಅವಳ ಮನಸ್ಸು ಏನೋ ಒದ್ದಾಟದಲ್ಲಿ ಸಿಲುಕಿರುವುದು ಸ್ಪಷ್ಟವಾಗಿತ್ತು.

“ಫಾಲು?” ಮ್ಯಾಡಿನ ಏನೂಂತ ಸರಿಯಾಗಿ ಗುರುತಿಸುವಲ್ಲಿ ಗೆದ್ದೆನೆನ್ನುವ ಖುಷಿಗಿಂತ ನೋವೇ ಹೆಚ್ಚಾಗತೊಡಗಿತು.  
“ಛೇ, ಹಾಗಿರಲ್ಲ ಬಿಡೇ, ಅಕ್ಕನತ್ರ ಗುಂಡ ಹೇಳ್ಕೊತಿದ್ದ ಅಲ್ವಾ? ಅಲ್ದೆ ಅವ್ನಿಗೆ ಎದುರು ಮನೆಯವರ ಜೊತೆಲೇ ಹಾಗೆ ನಡ್ಕೊಳೋವಷ್ಟು ಧೈರ್ಯ ಹೇಗೆ …ನಂಗಾದ್ರು ಗೊತ್ತಾಗಬಾರದ … ಪಾಪ ಗುಂಡ” ಅವಳ ಕೈಗಳು ಕಂಪಿಸುತ್ತಿದ್ದುದು ಕಾಣಿಸುತಿತ್ತು. ಇಡ್ಲಿ ತಿನ್ನುತ್ತಿದ್ದ ಎರಡೂ ಚಮಚೆಗಳು ತಟ್ಟೆಯೊಳಗೆ ಬಿದ್ದವು. ಅವಳ ತುಟಿಗಳು ನೋವಿನಿಂದ ಅದುರತೊಡಗಿ, ಕಣ್ಣುಗಳು ತುಂಬಿಕೊಂಡವು.

“ಅಕ್ಕನಿಗೆ ಹೇಗೇಳೋದು?”

“… “

“ಸುಮ್ನೆ ಬಿಡಲ್ಲ ಅವನನ್ನ.” ಸಿಟ್ಟಿನಿಂದ ಎದ್ದು ನಿಂತವಳು,  “ಐ ಯಾಮ್ ಸಾರಿ ಕಣೇ” ಎಂದಳು.  

“ಯಾಕೆ?”

“ಮ್ಯಾಡಿ ನನ್ನ ಸ್ವಂತ ಅಕ್ಕನ ಮಗನ್ನೇ ಅಬ್ಯೂಸ್ ಮಾಡ್ತಿದಾನೇಂತ ಗೊತ್ತಾಗ್ದಿದ್ರೆ ನಾನೂ ಅವನನ್ನ ಎಕ್ಸ್ಪೋಸ್ ಮಾಡೋದ್ರ ಬಗ್ಗೆ ತಲೆ ಕೆಡಿಸ್ಕೊಳ್ತಿರ್ಲಿಲ್ಲಾನ್ಸುತ್ತೆ. ನಮ್ಮ ಬುಡಕ್ಕೆ ಬರೋ ತನಕ ಅದು ನಮ್ ಪ್ರಾಬ್ಲಮ್ ಅನ್ಸೋದೇ ಇಲ್ವಲ್ಲ?”

“ನಿವ್ಯಾರೂ ಸಪೋರ್ಟ್ ಮಾಡದಿದ್ರೂ ನಾನು ಅವನನ್ನು ಸುಮ್ನೆ ಬಿಡಲ್ಲ. ವಿ ನೀಡ್ ಟು ಆಕ್ಟ್, ನೌ!” ನಾನು ರೋಷದಿಂದ ಹೇಳಿದೆ.

“ಯಸ್”

***
     ನಾನು ಮ್ಯಾಡಿ ಹತ್ತಿರ ಹೋಗಿ ಮುಗುಳುನಕ್ಕು, “ನಾನು ಸ್ವಲ್ಪ ದೂರ ನಿಮ್ಮ ಬೈಕಲ್ಲಿ ಹಿಂದೆ ಕೂತ್ಕೊಬಹುದಾ?” ಎಂದೆ. 

“ಅಫ್ ಕೋರ್ಸ್” ನಿರ್ಭಾವುಕನಾಗಿ ಹೇಳಿದ. ನಾನೂ ಒಬ್ಬಳು ಪುಟ್ಟ ಹುಡುಗಿಯಾಗಿದ್ದರೆ ಖುಷಿಯಿಂದ ಒಪ್ಪಿಕೊಳ್ತಿದ್ದನೇನೋ ರಾಸ್ಕಲ್ ಎಂದು ಬೈದುಕೊಂಡು ನನ್ನ ಬ್ಯಾಗನ್ನು ನಡುವೆ ಇಟ್ಟುಕೊಂಡು ಕುಳಿತೆ. ನೆನ್ನೆಯಿಂದ ಆಸೆಪಡುತಿದ್ದ ಈ ಸೀಟು ಇಷ್ಟು ಬೇಗ ಹೇಸಿಗೆ ಹುಟ್ಟಿಸುತ್ತದೆಯೆಂದು ಯಾವೋಳಿಗೆ ಗೊತ್ತಿತ್ತು? ಸುಮಾರು ಹತ್ತು ಕಿಲೋಮೀಟರ್ ಹೋಗಿದ್ದೆವೇನೋ ಅಷ್ಟೇ. 

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ನೋಡುಗನನ್ನು ಓದುಗನನ್ನಾಗಿಸುವ ಪ್ರಯತ್ನ: ನಾಗತಿಹಳ್ಳಿ‌ ಚಂದ್ರಶೇಖರ್

“ಮ್ಯಾಡಿ ಪ್ಲೀಸ್ ನಿಲ್ಲುಸ್ತೀರಾ? ನನಗೆ ಭಯ ಆಗ್ತಿದೆ. ಹೆಲ್ಮೆಟ್ ಬೇರೆ ಇಲ್ಲ. ಸಾರಿ ನಾನು ಫಾಲ್ಗುಣಿ ಜೊತೆಲೇ ಬರ್ತೀನಿ. ಪ್ಲೀಸ್” 

“ಶ್ಯೂರ್”

     ಇಡೀ ಗುಂಪನ್ನು ಲೀಡ್ ಮಾಡುತ್ತಿದ್ದ ಅವನು ತನ್ನ ಬಲಗೈಯನ್ನು ಎತ್ತಿ ಎಲ್ಲರಿಗೂ ನಿಲ್ಲಿಸುತ್ತಿರುವ ಸೂಚನೆ ಕೊಟ್ಟ. ನಮ್ಮನ್ನು ಫಾಲೋ ಮಾಡುತ್ತಿದ್ದ ಎಲ್ಲರೂ ಗಕ್ಕನೆ ನಿಲ್ಲಿಸಿ ಕುತೂಹಲದಿಂದ ನಮ್ಮನ್ನೇ ನೋಡತೊಡಗಿದರು. ನಾನು ಇಳಿದು ಫಾಲ್ಗುಣಿ ಕಾರ್ ಹತ್ತಿದೆ.

“ನಿಂಗೆ ಸೋಶಿಯಲ್ ಸರ್ವಿಸ್ ಮಾಡೋದೆಲ್ಲಾ ಇಷ್ಟ ಇಲ್ಲಾಂತ ಯಾವತ್ತೂ ಹೇಳ್ಬೇಡ” ಫಾಲು ಭಾವುಕಳಾಗಿ ಹೇಳಿದಳು.

     ಮ್ಯಾಡಿ ಹೊರಡೋಣವೇ ಎಂದು ಸಿಗ್ನಲ್ ಮಾಡುತ್ತಿದ್ದರೂ ಯಾರೂ ಹೊರಡಲೇ ಇಲ್ಲ. ಎಲ್ಲಾ ಬಿಟ್ಟ ಬಾಯಿ ಬಿಟ್ಟಂತೆಯೇ ಮ್ಯಾಡಿಯ ದುಬಾರಿ ತಿಳಿ ಬೂದು ಬಣ್ಣದ ಜಾಕೆಟ್ ಮೇಲೆ ನಾನು ಕಪ್ಪು ಮಾರ್ಕರ್ ನಿಂದ ದೊಡ್ಡದಾಗಿ ಬರೆದಿದ್ದ ‘ಐ ಯಾಮ್ ಎ ಪೀಡೊಫೈಲ್’ ಎನ್ನುವ ಪದಗಳನ್ನೇ ಕೆಕ್ಕರಿಸಿಕೊಂಡು ನೋಡತೊಡಗಿದರು!

***

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದಕ್ಷಿಣ ಕನ್ನಡ

Yakshagana Artist: ವೇಷ ಕಳಚುತ್ತಿರುವಾಗಲೇ ಹೃದಯ ಸ್ತಬ್ಧ ; ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

Gangadhar Puttur : ವೇಷ ಕಳಚುತ್ತಿರುವಾಗಲೇ ಯಕ್ಷಗಾನ ಕಲಾವಿದ (Yakshagana Artist) ಗಂಗಾಧರ ಪುತ್ತೂರು ಇಹಲೋಕ ತ್ಯಜಿಸಿದ್ದಾರೆ. ಮುಖದ ಬಣ್ಣವನ್ನು ಅಳಿಸುತ್ತಿರುವಾಗ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

VISTARANEWS.COM


on

By

Yakshagana Artist No more
Koo

ಮಂಗಳೂರು: ವೇಷ ಕಳಚುತ್ತಿರುವಾಗಲೇ ಹೃದಯಾಘಾತದಿಂದ (Heart attack) ಧರ್ಮಸ್ಥಳ ಯಕ್ಷಗಾನ ಮೇಳದ ಸವ್ಯಸಾಚಿ ಕಲಾವಿದ (Yakshagana Artist) ಗಂಗಾಧರ ಪುತ್ತೂರು(60) ಅವರು ಇಹಲೋಕ ತ್ಯಜಿಸಿದ್ದಾರೆ.

ನಿನ್ನೆ ಬುಧವಾರ (ಮೇ 1) ರಾತ್ರಿ ಕೋಟ ಗಾಂಧಿಮೈದಾನದ ಬಳಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಅವರು ಕುಕ್ಕಿಂತ್ತಾಯ ದೈವದ ವೇಷವನ್ನು ನಿರ್ವಹಿಸಿದ್ದರು. ಬಳಿಕ ಚೌಕಿಗೆ ಆಗಮಿಸಿ ಕಿರೀಟ, ಯಕ್ಷಗಾನದ ಆಭರಣ ತೆಗೆದಿಟ್ಟು, ಮುಖದ ಬಣ್ಣವನ್ನು ಅಳಿಸುತ್ತಿರುವಾಗ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಪುತ್ತೂರಿನ ಸೇಡಿಯಾಪು ನಿವಾಸಿಯಾಗಿರುವ ಇವರು ಏಳನೇ ತರಗತಿಯವರೆಗೆ ವಿದ್ಯಾಭ್ಯಾಸ ಹೊಂದಿದ್ದರು. ತಮ್ಮ 18ನೇ ವಯಸ್ಸಿಗೆ ಯಕ್ಷಗಾನ ತಿರುಗಾಟ ಆರಂಭಿಸಿದ ಗಂಗಾಧರ ಪುತ್ತೂರು ಸುದೀರ್ಘ 40 ವರ್ಷಗಳಷ್ಟು ಕಾಲ ಯಕ್ಷಗಾನ ರಂಗದಲ್ಲಿ ವ್ಯವಸಾಯ ಮಾಡಿದ್ದರು. ಕರ್ಗಲ್ಲು ವಿಶ್ವೇಶ್ವರ ಭಟ್ ಹಾಗೂ ಕೆ.ಗೋವಿಂದ ಭಟ್ ಅವರಿಂದ ನಾಟ್ಯಾಭ್ಯಾಸ ಮಾಡಿದರು.

ಯಕ್ಷಗಾನ ರಂಗದ ಸವ್ಯಸಾಚಿ ಕಲಾವಿದರಾದ ಇವರು ಸ್ತ್ರೀವೇಷದಿಂದ ಹಿಡಿದು ಪುಂಡುವೇಷ, ರಾಜವೇಷ, ಹೆಣ್ಣುಬಣ್ಣ ಸಮರ್ಥವಾಗಿ ನಿರ್ವಹಿಸುತ್ತಿದ್ದರು. 30 ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಗಂಗಾಧರ ಪುತ್ತೂರು ಧರ್ಮಸ್ಥಳ ಮೇಳದಲ್ಲಿಯೇ ಕಲಾವಿದರಾಗಿ ತಿರುಗಾಟ ಮಾಡಿದ್ದರು.

ಇದನ್ನೂ ಓದಿ: Prajwal Revanna case: ತಲೆಮರೆಸಿಕೊಂಡ ಪ್ರಜ್ವಲ್‌ ರೇವಣ್ಣಗೆ ಲುಕೌಟ್‌ ನೋಟಿಸ್‌ ಜಾರಿ, ಬಂದ ಕೂಡಲೇ ಬಂಧನ!

ತೀವ್ರ ಹೃದಯಾಘಾತದಿಂದ ಹಿರಿಯ ಸಂಸದ ಶ್ರೀನಿವಾಸ್‌ ಪ್ರಸಾದ್‌ ವಿಧಿವಶ

ಬೆಂಗಳೂರು: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ (76) (Srinivas Prasad) ಅವರು ತೀವ್ರ ಹೃದಯಾಘಾತದಿಂದ (Heart Aattack) ವಿಧಿವಶರಾದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಲದಿನಗಳ ಹಿಂದೆ ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ 1:20ಕ್ಕೆ (Manipal Hospital ) ಅವರು ನಿಧನರಾಗಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀನಿವಾಸ್ ಪ್ರಸಾದ್ ಅವರು ಏಪ್ರಿಲ್ 22ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎನ್ನಲಾಗಿದೆ.

ಇನ್ನು ಈ ಬಗ್ಗೆ ಶ್ರೀನಿವಾಸ್ ಪ್ರಸಾದ್ ಅಳಿಯ ಹರ್ಷವರ್ಧನ್ ಮಾಹಿತಿ ನೀಡಿದ್ದು, ಶ್ರೀನಿವಾಸ್ ಪ್ರಸಾದ್ ಅವರು ರಾತ್ರಿ 1:20ರ ಸುಮಾರಿಗೆ ತೀವ್ರವಾದ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ರೀತಿಯಲ್ಲಿ ಪ್ರಯತ್ನ ಮಾಡಿದ್ದರು. ಅವರ ಈ ಅಗಲಿಕೆ ಇಡೀ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟ. ನನಗೆ ರಾಜಕೀಯಕ್ಕೆ ಜನ್ಮ ಕೊಟ್ಟಂತವರು. ರಾಜಕೀಯದಲ್ಲಿ ಏಕಾಂಗಿಯಾಗಿ ಹೋರಾಟ ಮಾಡೋದಕ್ಕೆ ಬಿಟ್ಟು ಹೋಗಿದ್ದಾರೆ. ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡಿದ್ದಾರೆ, ಹೋರಾಟದ ಜೀವಿ ಅವರು. ಐದು ವರ್ಷದ ಹಿಂದೆ ನಾನು ನಂಜನಗೂಡಿನಲ್ಲಿ ಗೆದ್ದಾಗ ಅವರು ಲೋಕಸಭೆಯಲ್ಲಿ ಸ್ಪರ್ಧೆ ಮಾಡ್ತಿನಿ ಅಂದರು. ನನ್ನನ್ನು ಅವರು ತಂದೆ ಸ್ಥಾನದಲ್ಲಿ ನಿಂತು ರಾಜಕೀಯವಾಗಿ ಬೆಳೆಸಿದ್ದಾರೆ ಯಾವುದೆ ವಿಚಾರ ಆಗಿದ್ದರೂ ಅವರ ಜೊತೆ ಚರ್ಚೆ ಮಾಡಿಯೇ ನಿರ್ಧಾರಕ್ಕೆ ಬರುತ್ತಿದೆ. ಈಗ ಯಾರ ಬಳಿ ಹೋಗಿ ಕೇಳಲಿ ಎಂದು ಅನಿಸಿ ಬಿಟ್ಟಿದೆ ಎಂದು ಭಾವುಕರಾಗಿ ಮಾತನಾಡಿದರು.

ಇದನ್ನೂ ಓದಿ:Raja Marga Column :‌ ಕಣ್ಣೇ ಕಾಣದ ಆಕೆ ಎರಡು ಬಾರಿ ಐಎಎಸ್‌ ಪಾಸ್‌ ಮಾಡಿದ್ದರು!

ಚಾಮರಾಜನಗರ ಕ್ಷೇತ್ರದಿಂದ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಶ್ರೀನಿವಾಸ್‌ ಪ್ರಸಾದ್‌ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇನ್ನು 2013ರಿಂದ 2016ರವರೆಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಸಚಿವರಾಗಿದ್ದರು . 24 ಡಿಸೆಂಬರ್ 2016 ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದ ಅವರು 2019ರಲ್ಲಿ ಚಾಮರಾಜನಗರ ಸಂಸದರಾಗಿ ಆಯ್ಕೆ.ಯಾಗಿದ್ದರು. ಅನಾರೋಗ್ಯ ಸಮಸ್ಯೆಯಿಂದಾಗಿ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ ಅವರು 2024 ಮಾರ್ಚ್ 17ರಂದು ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Kaladarpana-Art Reflects: ಬೆಂಗಳೂರಿನಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

Kaladarpana-Art Reflects: ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.

VISTARANEWS.COM


on

Kaladarpana-Art Reflects
Koo

ಬೆಂಗಳೂರು: ಕಲಾ ದರ್ಪಣ- ಆರ್ಟ್‌ ರಿಫ್ಲೆಕ್ಟ್ಸ್‌ (Kaladarpana-Art Reflects) ವತಿಯಿಂದ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ನಗರದ ನಾಗರಬಾವಿ 2ನೇ ಹಂತದ ಎನ್‌ಜಿಇಎಫ್‌ ಲೇಔಟ್‌ನ ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಭಾನುವಾರ (ಮೇ 5ರಂದು) ಬೆಳಗ್ಗೆ 8.30ಕ್ಕೆ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, 9ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.

ಅಂತರಾಷ್ಟ್ರೀಯ ಖ್ಯಾತಿಯ ತಬಲ ವಾದಕ ಪಂಡಿತ್ ಡಾ. ಸತೀಶ್ ಹಂಪಿಹೊಳಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಜಾವಾಣಿ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಮತ್ತು ಮಾರುತಿ ಮೆಡಿಕಲ್ಸ್ ಮಾಲೀಕರು ಮಹೇಂದ್ರ ಮುಣೋತ್ ಜೈನ್ ಅವರು ಭಾಗವಹಿಸಲಿದ್ದಾರೆ. ಈ ಮೂವರು ಗಣ್ಯರು, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕಲಾದರ್ಪಣ ಪ್ರಶಸ್ತಿ ಪುರಸ್ಕೃತರು

  • ಗೋ.ನಾ. ಸ್ವಾಮಿ, ಅಂತಾರಾಷ್ಟ್ರೀಯ ಖ್ಯಾತಿಯ ಜನಪದ ಗಾಯಕರು
  • ವಿದುಷಿ ಅನಸೂಯ ದ್ವಾರಕನಾಥ, ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು

ಇದನ್ನೂ ಓದಿ | Film festival: ಬೆಂಗಳೂರಿನಲ್ಲಿ ಮೇ 4, 5ರಂದು ಗುರುದತ್‌ ಚಲನ ಚಿತ್ರೋತ್ಸವ ಮತ್ತು ಸಂಗೀತ ರಸ ಸಂಜೆ

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಕರ್ನಾಟಕ ಚಿತ್ರಕಲಾ ಪರಿಷತ್‌ನ ಪ್ರಾಧ್ಯಾಪಕ ಪ್ರೊ. ವಿ.ಎಸ್. ನಾಯಕ ಬಳಕೂರು, ಎಸ್.ಎಸ್.ವಿ.ಎಸ್.ಪಿ.ಎಸ್. ಶಾಲೆ ಪ್ರಾಂಶುಪಾಲೆ ಲತಾ ಎಸ್. ಅವರು ಆಗಮಿಸಲಿದ್ದಾರೆ. ಕಲಾ ದರ್ಪಣ- ಆರ್ಟ್‌ ರಿಫ್ಲೆಕ್ಟ್ಸ್‌ ಸಂಸ್ಥೆಯ ಹೇಮಾ ವಿನಾಯಕ್‌ ಪಾಟೀಲ್‌ ಹಾಗೂ ವಿನಾಯಕ್‌ ಪಾಟೀಲ್‌ ಅವರು ಉಪಸ್ಥಿತರಿರಲಿದ್ದಾರೆ. ಖ್ಯಾತ ನಿರೂಪಕಿ ಭವಾನಿ ಲೋಕೇಶ್‌ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Continue Reading

ಅಂಕಣ

ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

ರಾಜಮಾರ್ಗ ಅಂಕಣ: ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು.

VISTARANEWS.COM


on

Koo

ಈ ಕಥೆಯಲ್ಲಿ ಅದ್ಭುತ ಸಂದೇಶ ಇದೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಕಥೆಗೆ ಮೂಲ ಯಾವುದು ಎಂದು ಕೇಳಬೇಡಿ. ಆದರೆ ಅದರಲ್ಲಿ ಅದ್ಭುತ ಸಂದೇಶ ಇರುವ ಕಾರಣ ಅದನ್ನು ಇಲ್ಲಿ ಬರೆಯುತ್ತಿದ್ದೇನೆ. ಇದು ಯಾವುದೋ ಒಂದು ವ್ಯಾಟ್ಸಪ್ ಗುಂಪಿನಲ್ಲಿ ಬಂದ ಲೇಖನ ಆಗಿದೆ.

ಹನುಮಂತನೂ ಒಂದು ರಾಮಾಯಣ ಬರೆದಿದ್ದ!

ವಾಲ್ಮೀಕಿ ರಾಮಾಯಣ ಬರೆದು ಮುಗಿಸಿದಾಗ ಅದನ್ನು ಓದಿದ ನಾರದನಿಗೆ ಅದು ಖುಷಿ ಕೊಡಲಿಲ್ಲ. ಆತ ಹೇಳಿದ್ದೇನೆಂದರೆ – ಇದು ಚೆನ್ನಾಗಿದೆ. ಆದರೆ ಹನುಮಂತ ಒಂದು ರಾಮಾಯಣ ಬರೆದಿದ್ದಾನೆ. ಅದಿನ್ನೂ ಚೆನ್ನಾಗಿದೆ!

ಈ ಮಾತು ಕೇಳದೆ ವಾಲ್ಮೀಕಿಗೆ ಸಮಾಧಾನ ಆಗಲಿಲ್ಲ. ಆತನು ತಕ್ಷಣ ನಾರದನನ್ನು ಕರೆದುಕೊಂಡು ಹನುಮಂತನನ್ನು ಹುಡುಕಿಕೊಂಡು ಹೊರಟನು. ಅಲ್ಲಿ ಹನುಮಂತನು ಧ್ಯಾನಮಗ್ನನಾಗಿ ಕುಳಿತು ಏಳು ಅಗಲವಾದ ಬಾಳೆಲೆಯ ಮೇಲೆ ಇಡೀ ರಾಮಾಯಣದ ಕಥೆಯನ್ನು ಚಂದವಾಗಿ ಬರೆದಿದ್ದನು. ಅದನ್ನು ಓದಿ ವಾಲ್ಮೀಕಿ ಜೋರಾಗಿ ಅಳಲು ಆರಂಭ ಮಾಡಿದನು. ಹನುಮಂತ “ಮಹರ್ಷಿ, ಯಾಕೆ ಅಳುತ್ತಿದ್ದೀರಿ? ನನ್ನ ರಾಮಾಯಣ ಚೆನ್ನಾಗಿಲ್ಲವೇ?” ಎಂದನು.

ಅದಕ್ಕೆ ವಾಲ್ಮೀಕಿ “ಹನುಮಾನ್, ನಿನ್ನ ರಾಮಾಯಣ ರಮ್ಯಾದ್ಭುತ ಆಗಿದೆ. ನಿನ್ನ ರಾಮಾಯಣ ಓದಿದ ನಂತರ ನನ್ನ ರಾಮಾಯಣ ಯಾರೂ ಓದುವುದಿಲ್ಲ!’ ಎಂದು ಮತ್ತೆ ಅಳಲು ಆರಂಭ ಮಾಡಿದನು. ಈ ಮಾತನ್ನು ಕೇಳಿದ ಹನುಮಾನ್ ತಾನು ರಾಮಾಯಣ ಬರೆದಿದ್ದ ಬಾಳೆಲೆಗಳನ್ನು ಅರ್ಧ ಕ್ಷಣದಲ್ಲಿ ಹರಿದು ಹಾಕಿದನು! ಅವನು ವಾಲ್ಮೀಕಿಗೆ ಹೇಳಿದ ಮಾತು ‘ಮಹರ್ಷಿ, ನೀವಿನ್ನು ಆತಂಕ ಮಾಡಬೇಡಿ. ಇನ್ನು ನನ್ನ ರಾಮಾಯಣ ಯಾರೂ ಓದುವುದಿಲ್ಲ!’

hanuman

ಹನುಮಾನ್ ಹೇಳಿದ ಜೀವನ ಸಂದೇಶ

‘ವಾಲ್ಮೀಕಿ ಮಹರ್ಷಿ. ನೀವು ರಾಮಾಯಣ ಬರೆದ ಉದ್ದೇಶ ನಿಮ್ಮನ್ನು ಜಗತ್ತು ನೆನಪಿಟ್ಟುಕೊಳ್ಳಬೇಕು ಎಂದು. ನನಗೆ ಆ ರೀತಿಯ ಆಸೆಗಳು ಇಲ್ಲ. ನಾನು ರಾಮಾಯಣ ಬರೆದ ಉದ್ದೇಶ ನನಗೆ ರಾಮ ನೆನಪಿದ್ದರೆ ಸಾಕು ಎಂದು! ರಾಮನ ಹೆಸರು ರಾಮನಿಗಿಂತ ದೊಡ್ಡದು. ರಾಮ ದೇವರು ನನ್ನ ಹೃದಯದಲ್ಲಿ ಸ್ಥಿರವಾಗಿದ್ದಾನೆ. ನನಗೆ ಇನ್ನು ಈ ರಾಮಾಯಣದ ಅಗತ್ಯ ಇಲ್ಲ!’

ಈಗ ವಾಲ್ಮೀಕಿ ಇನ್ನೂ ಜೋರಾಗಿ ಅಳಲು ತೊಡಗಿದನು. ಅವನ ಅಹಂಕಾರದ ಪೊರೆಯು ಕಳಚಿ ಹೋಗಿತ್ತು. ಆತನು ಒಂದಕ್ಷರವೂ ಮಾತಾಡದೆ ಹನುಮಂತನ ಪಾದಸ್ಪರ್ಶ ಮಾಡಿ ಹಿಂದೆ ಹೋದನು.

ಭರತ ವಾಕ್ಯ

ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

Continue Reading

ಅಂಕಣ

ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

ರಾಜಮಾರ್ಗ ಅಂಕಣ (Rajamarga column): ಅರ್ಜಿತ್ ಸಿಂಗ್‌ (Arijit Singh) ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷಿಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

VISTARANEWS.COM


on

arijit singh rajamarga column 2
Koo

ದ ಮ್ಯೂಸಿಕಲ್ ಲೆಜೆಂಡ್, ಜೇನು ದನಿಯ ಸರದಾರ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ (Rajamaraga Column): ಏಪ್ರಿಲ್ 25 ಬಂತು ಅಂದರೆ ಅದು ದೇಶದ ಯುವ ಸಂಗೀತ ಪ್ರೇಮಿಗಳಿಗೆ ಬಹಳ ದೊಡ್ಡ ಹಬ್ಬ. ಏಕೆಂದರೆ ಅದು ಅವರ ಹೃದಯದ ಬಡಿತವೇ ಆಗಿರುವ ಅರ್ಜಿತ್ ಸಿಂಗ್‌ (Arijit singh)) ಹುಟ್ಟಿದ ಹಬ್ಬ (Birthday)!

ಆತನ ವ್ಯಕ್ತಿತ್ವ, ಆತನ ಹಾಡುಗಳು, ಆತನ ಸ್ವರ ವೈವಿಧ್ಯ ಎಲ್ಲವೂ ಆತನ ಕೋಟಿ ಕೋಟಿ ಅಭಿಮಾನಿಗಳಿಗೆ ಹುಚ್ಚು ಹಿಡಿಸಿ ಬಿಟ್ಟಿವೆ. ಅದರಿಂದಾಗಿ ಇಂದು ಆತನಿಗೆ ದೇಶದಲ್ಲಿ ಸ್ಪರ್ಧಿಗಳೇ ಇಲ್ಲ ಎನ್ನುವುದನ್ನು ಅವನ ಸ್ಪರ್ಧಿಗಳೇ ಒಪ್ಪಿಕೊಂಡು ಬಿಟ್ಟಿದ್ದಾರೆ! ನಾನು ಇಂದು ಯಾವ ಕಾಲೇಜಿಗೆ ಹೋದರೂ ಅರ್ಜಿತ್ ಧ್ವನಿಯನ್ನು ಅನುಕರಣೆ ಮಾಡಿ ಹಾಡಲು ತೀವ್ರ ಪ್ರಯತ್ನ ಮಾಡುವ ಯುವಕ, ಯುವತಿಯರು ಇದ್ದಾರೆ. 2015ರಿಂದ ಆತನ ಜನಪ್ರಿಯತೆಯ ಗ್ರಾಫ್ ಕೆಳಗೆ ಬಂದದ್ದೇ ಇಲ್ಲ. ಅರ್ಜಿತ್ ಸಿಂಗ್‌ (Arijit Singh) ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷಿಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

ಆತನದ್ದು ಬಂಗಾಳದ ಸಂಗೀತದ ಹಿನ್ನೆಲೆಯ ಕುಟುಂಬ

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯಿಂದ ಬಂದವರು ಅರ್ಜಿತ್. ಅವನ ಅಜ್ಜಿ, ಅವನ ಅತ್ತೆ ಎಲ್ಲರೂ ಚೆನ್ನಾಗಿ ಹಾಡುತ್ತಿದ್ದರು. ಸಹಜವಾಗಿ ಹುಡುಗನಲ್ಲಿ ಸಂಗೀತದ ಆಸಕ್ತಿ ಮೂಡಿತ್ತು. ಒಂಬತ್ತನೇ ವರ್ಷಕ್ಕೆ ರಾಜೇಂದ್ರ ಪ್ರಸಾದ್ ಹಜಾರಿ ಎಂಬ ಶಾಸ್ತ್ರೀಯ ಸಂಗೀತದ ಗುರುವಿನಿಂದ ಸಂಗೀತದ ಕಲಿಕೆ ಆರಂಭವಾಯಿತು. ಬಂಗಾಳದಲ್ಲಿ ರಬೀಂದ್ರ ಸಂಗೀತದ ಪ್ರಭಾವದಿಂದ ಯಾರೂ ಹೊರಬರಲು ಸಾಧ್ಯವಿಲ್ಲ. ಅದರ ಜೊತೆಗೆ ವಿಶ್ವದ ಶ್ರೇಷ್ಠ ಸಂಗೀತಗಾರರಾದ ಮೊಜಾರ್ಟ್ ಮತ್ತು ಬೀತೊವೆನ್ ಅವರ ಹಾಡುಗಳನ್ನು ಕೇಳುತ್ತಾ ಅರ್ಜಿತ್ ಬೆಳೆದರು. ಅದರ ಜೊತೆಗೆ ಕಿಶೋರ್ ಕುಮಾರ್, ಮನ್ನಾಡೆ, ಹೇಮಂತ್ ಕುಮಾರ್ ಅವರ ಹಾಡುಗಳನ್ನು ಕೇಳುತ್ತಾ ಆರ್ಜಿತ್ ತನ್ನದೇ ಸಿಗ್ನೇಚರ್ ಧ್ವನಿಯನ್ನು ಸಂಪಾದನೆ ಮಾಡಿಕೊಂಡರು. ಸೂಫಿ ಹಾಡುಗಳು, ಗಜಲ್, ಪಾಪ್ ಹಾಡುಗಳು, ಶಾಸ್ತ್ರೀಯ ಹಾಡುಗಳು, ಭಜನ್, ಜಾನಪದ ಹಾಡುಗಳು….ಹೀಗೆ ಎಲ್ಲ ವಿಧವಾದ ಹಾಡುಗಳನ್ನು ಅದ್ಭುತವಾಗಿ ಹಾಡಲು ಕಲಿತರು.

ರಿಯಾಲಿಟಿ ಶೋದಲ್ಲಿ ಸೋಲು!

ಅರ್ಜಿತ್ ತನ್ನ 18ನೆಯ ವಯಸ್ಸಿನಲ್ಲಿ FAME GURUKUL ಎಂಬ ಟಿವಿ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು. ಚೆಂದವಾಗಿ ಹಾಡಿದರು ಕೂಡ. ಆದರೆ ಆಡಿಯೆನ್ಸ್ ಪೋಲ್ ಇದ್ದ ಕಾರಣ ಅದರಲ್ಲಿ ಸೋತರು. ಆದರೆ ಆತನ ಧ್ವನಿಯ ಮಾಧುರ್ಯವನ್ನು ಗುರುತಿಸಿದ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು ತನ್ನ ಮುಂದಿನ ಸಿನೆಮಾ ಸಾವರಿಯಾದಲ್ಲಿ ಒಂದು ಹಾಡನ್ನು ಆತನಿಂದ ಹಾಡಿಸಿದರು.

ಆದರೆ ಆ ಹಾಡು ಸಿನೆಮಾ ಎಡಿಟ್ ಆಗುವಾಗ ಬಿಟ್ಟು ಹೋಯಿತು! ಮುಂದೆ TIPS ಸಂಗೀತ ಕಂಪೆನಿ ಆತನೊಂದಿಗೆ ಒಪ್ಪಂದ ಮಾಡಿಕೊಂಡು ಹಲವು ಆಲ್ಬಂ ಸಾಂಗ್ಸ್ ರೆಕಾರ್ಡ್ ಮಾಡಿಕೊಂಡಿತು. ಆದರೆ ಅದ್ಯಾವುದೂ ಬಿಡುಗಡೆ ಆಗಲಿಲ್ಲ! ಆತನಲ್ಲಿ ಅಪ್ಪಟ ಪ್ರತಿಭೆ ಇದ್ದರೂ ದುರದೃಷ್ಟವು ಆತನಿಗಿಂತ ಮುಂದೆ ಇತ್ತು! ಆದರೆ ಈ ಸೋಲುಗಳ ನಡುವೆ ಅರ್ಜಿತ್ ಸಂಗೀತವನ್ನು ಬಿಟ್ಟು ಹೋಗಿಲ್ಲ ಅನ್ನೋದು ಅದ್ಭುತ!

ಮುಂದೆ ಇನ್ನೊಂದು ಟಿವಿ ರಿಯಾಲಿಟಿ ಶೋ (10ಕೆ 10ಲೆ ಗಯೇ ದಿಲ್)ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗೆದ್ದಾಗ ಆತನ ಬದುಕಿನಲ್ಲಿ ದೊಡ್ಡ ತಿರುವು ಉಂಟಾಯಿತು. ಆಗ ದೊರೆತ ಹತ್ತು ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ತಂದು ಮುಂಬೈಯಲ್ಲಿ ಒಂದು ಸ್ಟುಡಿಯೋ ಸ್ಥಾಪನೆ ಮಾಡಿದರು. ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ವಾಸ, ಒಂದು ಹೊತ್ತಿನ ಊಟವೂ ಕಷ್ಟ ಆಗಿದ್ದ ದಿನಗಳು ಅವು! ಅರ್ಜಿತ್ ಒಂದು ದೊಡ್ಡ ಬ್ರೇಕ್ ಥ್ರೂ ಕಾಯುತ್ತ ಕೂತಿದ್ದರು. ಈ ಅವಧಿಯಲ್ಲಿ ನೂರಾರು ಜಿಂಗಲ್, ಜಾಹೀರಾತುಗಳ ಸಂಗೀತವನ್ನು ಕಂಪೋಸ್ ಮಾಡಿ ಸ್ವತಃ ಹಾಡಿದರು.

arijit singh rajamarga column 2

2011ರಲ್ಲಿ ಅರ್ಜಿತ್ ಭಾಗ್ಯದ ಬಾಗಿಲು ತೆರೆಯಿತು!

ಆ ವರ್ಷ ಬಿಡುಗಡೆ ಆದ ಮರ್ಡರ್ 2 ಸಿನೆಮಾದ ‘ಫೀರ್ ಮೊಹಬ್ಬತೆ ‘ ಹಾಡು ಸೂಪರ್ ಹಿಟ್ ಆಯಿತು. ಬಾಲಿವುಡ್ ಆತನ ಟಿಪಿಕಲ್ ಧ್ವನಿಗೆ ಮಾರುಹೋಯಿತು. ಮುಂದೆ ರಬಟಾ ( ಏಜೆಂಟ್ ವಿನೋದ್), ಉಸ್ಕಾ ಹೀ ಬನಾನಾ (ಎವಿಲ್ ರಿರ್ಟರ್ನ್) ಲಾಲ್ ಇಷ್ಕ್ ಮತ್ತು ಗೋಲಿಯೋನ್ ಕಿ ರಾಸ ಲೀಲಾ (ರಾಮ್ ಲೀಲಾ) ಮೊದಲಾದ ಹಾಡುಗಳು ಭಾರೀ ಹಿಟ್ ಆದವು. ಮನವಾ ಲಾಗೇ ಮತ್ತು ಮಸ್ತ್ ಮಗನ್ ಹಾಡುಗಳು ಇಡೀ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದವು. ಪದ್ಮಾವತ್ ಸಿನೆಮಾದ ‘ಬಿನ್ ತೆ ದಿಲ್ ‘ ಹಾಡಿಗೆ ರಾಷ್ಟ್ರಪ್ರಶಸ್ತಿಯು ಒಲಿದು ಬಂತು. 7 ಫಿಲಂಫೇರ್ ಪ್ರಶಸ್ತಿಗಳು ಬಂದವು. ಹಿಂದೀ, ತೆಲುಗು, ತಮಿಳು, ಬಂಗಾಳಿ ಸಿನೆಮಾಗಳಲ್ಲಿ ಅರ್ಜಿತ್ ಅವರಿಗೆ ಭಾರೀ ಡಿಮಾಂಡ್ ಕ್ರಿಯೇಟ್ ಆಯಿತು. ಭಾರೀ ದೊಡ್ಡ ಫ್ಯಾನ್ ಬೇಸ್ ಡೆವಲಪ್ ಆಯಿತು. ಇಂದು ಅರ್ಜಿತ್ ತನ್ನ ಸಂಗೀತದ ಪ್ರತಿಭೆಯಿಂದ ಭಾರೀ ಎತ್ತರಕ್ಕೆ ಬೆಳೆದಿದ್ದಾರೆ.

ಜವಾನ್, ಡುಮ್ಕಿ, ಅನಿಮಲ್ ಮೊದಲಾದ ಇತ್ತೀಚಿನ ಸೂಪರ್ ಹಿಟ್ ಸಿನಿಮಾಗಳಲ್ಲಿ ಆರ್ಜಿತ್ ಹಾಡಿದ ಹಾಡುಗಳು ಇವೆ. ಆತ ಹಾಡಿದ ಎಲ್ಲ ಹಾಡುಗಳೂ ಸೂಪರ್ ಹಿಟ್ ಆಗಿವೆ.

ಸ್ಟುಡಿಯೋ ಹಾಡುಗಳು ಮತ್ತು ಸ್ಟೇಜ್ ಕಾರ್ಯಕ್ರಮಗಳು

ಹಿನ್ನೆಲೆ ಹಾಡುಗಳು ಮತ್ತು ಆಲ್ಬಂ ಹಾಡುಗಳನ್ನು ಸ್ಟುಡಿಯೋ ಒಳಗೆ ಹಾಡುವ ಟ್ಯಾಲೆಂಟ್ ಒಂದೆಡೆ. ಸ್ಟೇಜ್ ಮೇಲೆ ಲಕ್ಷಾಂತರ ಮಂದಿ ಹುಚ್ಚು ಅಭಿಮಾನಿಗಳ ಮುಂದೆ ಗಿಟಾರ್ ಹಿಡಿದುಕೊಂಡು ಹಾಡುವ ಟ್ಯಾಲೆಂಟ್ ಇನ್ನೊಂದೆಡೆ. ಆರ್ಜಿತ್ ಎರಡೂ ಕಡೆಯಲ್ಲಿ ಗೆದ್ದಿದ್ದಾರೆ. ದೇಶ ವಿದೇಶಗಳ ನೂರಾರು ವೇದಿಕೆಗಳಲ್ಲಿ ಅವರ ಲೈವ್ ಸ್ಟೇಜ್ ಶೋಗಳಿಗೆ ಅಭಿಮಾನಿಗಳು ಕಿಕ್ಕಿರಿದು ಸೇರುತ್ತಾರೆ. ಆರ್ಜಿತ್ ಮತ್ತು ಶ್ರೇಯಾ ಘೋಷಾಲ್ ಸಂಗೀತದ ಶೋಗಳಿಗೆ ಇಂದು ಭಾರೀ ಡಿಮಾಂಡ್ ಇದೆ!

ಲೆಟ್ ದೇರ್ ಬಿ ಲೈಟ್ ಎಂಬ NGO ಸ್ಥಾಪನೆ ಮಾಡಿ ಆರ್ಜಿತ್ ತನ್ನ ಸಂಪಾದನೆಯ ಬಹು ದೊಡ್ಡ ಭಾಗವನ್ನು ಚಾರಿಟಿ ಉದ್ದೇಶಕ್ಕೆ ಖರ್ಚು ಮಾಡುತ್ತಿರುವುದು ನಿಜಕ್ಕೂ ಅಭಿನಂದನೀಯ. ಆರ್ಜಿತ್ ಇಂದು ಭಾರತದ ನಂಬರ್ ಒನ್ ಹಿನ್ನೆಲೆ ಗಾಯಕ ಎಂದು ಸೋನು ನಿಗಮ್ ಸಾಕಷ್ಟು ವೇದಿಕೆಯಲ್ಲಿ ಹೇಳಿದ್ದಾರೆ. ಅವರಿಬ್ಬರೂ ಒಳ್ಳೆಯ ಗೆಳೆಯರು ಎಂದು ಕೂಡ ಸಾಬೀತಾಗಿದೆ.

ಅಂತಹ ಅನನ್ಯ ಪ್ರತಿಭೆ, ಜೇನು ದನಿಯ ಸರದಾರ ಅರ್ಜಿತ್ ಸಿಂಗ್ ಅವರಿಗೆ ಇಂದು ನೆನಪಲ್ಲಿ ಹುಟ್ಟುಹಬ್ಬದ ಶುಭಾಶಯ ಹೇಳಿ ಆಯ್ತಾ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಿಶ್ವವಿಜೇತನಾಗುವ ತವಕದಲ್ಲಿರುವ ಚೆಸ್ ಆಟಗಾರ ದೊಮ್ಮರಾಜು ಗುಕೇಶ್

Continue Reading
Advertisement
English Alphabet
ಬೆಂಗಳೂರು59 seconds ago

English Alphabet: ಇಂಗ್ಲಿಷ್‌ನಲ್ಲಿ ಹೊಸ ಅಕ್ಷರ ವಿನ್ಯಾಸಕ್ಕಾಗಿ ಫ್ರಾನ್ಸ್‌ ವಿದ್ಯಾರ್ಥಿಗಳ ಪ್ರಯತ್ನ

Crime News
ಕ್ರೈಂ3 mins ago

Crime News: ಪತ್ನಿಯ ಪ್ರಿಯಕರನ ದ್ವೇಷಕ್ಕೆ ಬಲಿಯಾಯ್ತು ಎರಡು ಜೀವ; ಪಾರ್ಸಲ್‌ ಬಾಂಬ್‌ ಸ್ಫೋಟಕ್ಕೆ ಅಪ್ಪ-ಮಗಳು ಸಾವು

Viral News
ವೈರಲ್ ನ್ಯೂಸ್26 mins ago

Viral News: 17 ವರ್ಷದ ಯುವತಿ ಎರಡು ಬಾರಿ ಗರ್ಭಿಣಿ; ಪೋಷಕರು ಸೇರಿ 16 ಜನರ ವಿರುದ್ಧ ಕೇಸ್‌

Gratuity
ದೇಶ36 mins ago

Gratuity: ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್;‌ ಗ್ರಾಚ್ಯುಟಿ, ಶಿಕ್ಷಣ ಭತ್ಯೆ ಶೀಘ್ರವೇ 25% ಹೆಚ್ಚಳ!

Prajwal Revanna Case I was raped at gunpoint JDS women leader files complaint against Prajwal
ಹಾಸನ37 mins ago

Prajwal Revanna Case‌: ಗನ್‌ ಪಾಯಿಂಟ್‌ನಲ್ಲಿ ಜೆಡಿಎಸ್‌ ನಾಯಕಿ ಮೇಲೆ ಪ್ರಜ್ವಲ್‌ರಿಂದ ರೇಪ್‌? ಎಫ್‌ಐಆರ್‌ನಲ್ಲಿದೆ ಇಂಚಿಂಚು ಡಿಟೇಲ್ಸ್!

icc men's test team rankings
ಕ್ರೀಡೆ51 mins ago

ICC Men’s Test Team Rankings: ಅಗ್ರಸ್ಥಾನದಿಂದ ಕುಸಿತ ಕಂಡ ಭಾರತ; ವಿಶ್ವ ಚಾಂಪಿಯನ್​ ಆಸೀಸ್​ ನಂ.1

Bengaluru Rains
ಮಳೆ55 mins ago

Bengaluru Rains : ಬೆಂಗಳೂರಲ್ಲಿ ಶುರುವಾಯ್ತು ಮಳೆಗಾಲ; ಕವಿದ ಕಾರ್ಮೋಡ, ಭಯಂಕರ ವರ್ಷಧಾರೆ

Press Freedom Day
Latest1 hour ago

Press Freedom Day: ಇಂದು ಪತ್ರಿಕಾ ಸ್ವಾತಂತ್ರ್ಯ ದಿನ; ಏನಿದರ ಮಹತ್ವ?

Job Alert
ಉದ್ಯೋಗ1 hour ago

Job Alert: 76 ಮೋಟಾರ್ ವೆಹಿಕಲ್ ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಇಂದೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Prajwal Revanna Case Another case against Revanna transferred to SIT Notice to Bhavani
ಕ್ರೈಂ2 hours ago

Prajwal Revanna Case: ರೇವಣ್ಣ ಮೇಲಿನ ಮತ್ತೊಂದು ಕೇಸ್‌ ಎಸ್‌ಐಟಿಗೆ ವರ್ಗ; ಭವಾನಿಗೂ ನೋಟಿಸ್‌!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ21 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ1 day ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20245 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಟ್ರೆಂಡಿಂಗ್‌