ವಿಸ್ತಾರ ಸಂಪಾದಕೀಯ: ಬರ ನಿರ್ವಹಣೆ ಚುರುಕಾಗಲಿ, ಜಲ ದಾಹ ನೀಗಲಿ - Vistara News

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಬರ ನಿರ್ವಹಣೆ ಚುರುಕಾಗಲಿ, ಜಲ ದಾಹ ನೀಗಲಿ

ರಾಜ್ಯದ ಜನ, ರೈತರು, ಜಾನುವಾರುಗಳು ತೀವ್ರ ಬರದಿಂದ ನಲುಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಹಲವು ಸೂಚನೆ ನೀಡಿದ್ದಾರೆ. ಈಗಾಗಲೇ ಬಿಸಿಲಿನ ಝಳ ಜಾಸ್ತಿಯಾಗುತ್ತಿದ್ದು, ನೀರಿಗಾಗಿ ಸಂಘರ್ಷ ಶುರುವಾಗುವ ಮೊದಲೇ ಸರ್ಕಾರ, ಅಧಿಕಾರಿಗಳು ಬರ ನಿರ್ವಹಣೆ, ಪರಿಹಾರ ವಿತರಣೆ, ನೀರಿನ ಪೂರೈಕೆಗೆ ಕ್ಷಿಪ್ರವಾಗಿ ಕ್ರಮ ತೆಗೆದುಕೊಳ್ಳಬೇಕು.

VISTARANEWS.COM


on

Drought In Karnataka
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಜ್ಯಾದ್ಯಂತ ತೀವ್ರ ಬರಗಾಲ (Drought In Karnataka) ಎದುರಾಗಿದೆ. ರೈತರೂ ಸೇರಿ ಜನ-ಜಾನುವಾರುಗಳು ಆಗಸ ನೋಡುವಂತಾಗಿದೆ. ಮಳೆ ಬಾರದೆ, ಬೆಳೆ ಇಲ್ಲದೆ ಜಮೀನುಗಳು ಆಟದ ಮೈದಾನದಂತಾಗಿವೆ. ಕೆರೆ-ಕಟ್ಟೆಗಳೆಲ್ಲ ಒಣಗಿ, ಬಾಯ್ತೆರೆದುಕೊಂಡಿವೆ. ಇದರ ಮಧ್ಯೆಯೇ, ಬೇಸಿಗೆಯ ಬಿಸಿಲಿನ ಝಳ ದಿನೇದಿನೆ ಜಾಸ್ತಿಯಾಗುತ್ತಿದ್ದು, ಹನಿ ನೀರಿಗೂ ತತ್ವಾರ ಎದುರಾಗುವ ದಿನಗಳು ತುಂಬ ದೂರವಿಲ್ಲ. ಇನ್ನೊಂದು ತಿಂಗಳಲ್ಲಿ ರಣಬಿಸಿಲು ರಾಜ್ಯವನ್ನು ಬಾಧಿಸಲಿದ್ದು, ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಎದುರಾಗಲಿದೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಬರ ನಿರ್ವಹಣೆಗಾಗಿ (Drought Management) ಸಹಾಯವಾಣಿ ಹಾಗೂ ಕಂಟ್ರೋಲ್ ರೂಂ ಸ್ಥಾಪಿಸಲು ಅಧಿಕಾರಿಗಳಿಗೆ ಸೂಚಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದರೂ, ಬರ ನಿರ್ವಹಣೆಯು ಚುರುಕಾಗದಿದ್ದರೆ, ಅಧಿಕಾರಿಗಳು ದಕ್ಷವಾಗಿ ಕಾರ್ಯನಿರ್ವಹಿಸದಿದ್ದರೆ ರಾಜ್ಯದ ಜನ ಪರದಾಡುತ್ತಾರೆ.

ಕರ್ನಾಟಕದ 223 ತಾಲೂಕುಗಳಲ್ಲಿ ಬರಗಾಲ ತಾಂಡವವಾಡುತ್ತಿದೆ. ಅದರಲ್ಲೂ, 194 ತಾಲೂಕುಗಳು ತೀವ್ರ ಬರದ ಬರೆಗೆ ನಲುಗಿ ಹೋಗಿವೆ. ರೈತರಂತೂ ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ. ಕುಟುಂಬಕ್ಕೆ ಕುಟುಂಬಗಳೇ ಗುಳೆ ಹೋಗುತ್ತಿರುವ ದೃಶ್ಯಗಳು ಸಾಮಾನ್ಯ ಎಂಬಂತಾಗಿವೆ. ಮಳೆ ಇಲ್ಲದೆ ಮುಂಗಾರು ಬೆಳೆ ಹಾನಿ, ಜಲಾಶಯ, ಕೆರೆಗಳಲ್ಲಿ ಹನಿ ನೀರಿಲ್ಲದೆ ಹಿಂಗಾರಿನಲ್ಲಿ ಬಿತ್ತನೆಯೇ ಆಗದಿರುವುದು ನಾಡಿನ ಬೆನ್ನೆಲುಬಾಗಿರುವ ರೈತರ ಬೆನ್ನೆಲುಬನ್ನೇ ಮುರಿದಂತಾಗಿದೆ. ಹಾಗಾಗಿ, ರಾಜ್ಯ ಸರ್ಕಾರವು ಕ್ಷಿಪ್ರವಾಗಿ ಬರ ನಿರ್ವಹಣೆ ಕಾರ್ಯ ಕೈಗೊಳ್ಳದಿದ್ದರೆ, ರೈತರಿಗೆ ಆಶ್ರಯ, ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಯಾಗದಿದ್ದರೆ, ಬೆಳೆಯಿಲ್ಲದೆ ಜೇಬುಗಳನ್ನು ಖಾಲಿ ಮಾಡಿಕೊಂಡು, ಮೈತುಂಬ ಸಾಲ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಬರ ಪರಿಹಾರ ವಿತರಣೆಯಾಗದಿದ್ದರೆ ಅವರ ಆಕ್ರೋಶ ಕಟ್ಟೆಯೊಡೆಯುವುದು ನಿಶ್ಚಿತವಾಗಿದೆ.

ಕೃಷಿ ಫಸಲು ಕೈಕೊಟ್ಟರೂ ರೈತರು ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದಾರೆ. ಇದರ ಮಧ್ಯೆಯೇ ಕುಡಿಯುವ ನೀರಿನ ಸಮಸ್ಯೆಯೂ ಒಕ್ಕರಿಸಿದೆ. ರಾಜ್ಯದ 98 ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೆರೆ-ಕಟ್ಟೆಗಳು ಒಣಗಿಹೋಗಿ, ಬೋರ್‌ವೆಲ್‌ಗಳಲ್ಲಿ ನೀರು ಬಾರದಂತಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ, ಕ್ಷಿಪ್ರವಾಗಿ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಪ್ರತಿದಿನ ಸರಿಯಾದ ಸಮಯಕ್ಕೆ ಗ್ರಾಮಗಳಿಗೆ ನೀರು ಪೂರೈಕೆಯಾಗಬೇಕು. ಆರೋಗ್ಯ ಸಮಸ್ಯೆ ಎದುರಾಗುವ ಕಾರಣ ಬೋರ್‌ಗಳ ನೀರನ್ನು ಶುದ್ಧೀಕರಿಸಿ ಪೂರೈಸಲು ಕೂಡ ಕ್ರಮ ತೆಗೆದುಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಜನರಷ್ಟೇ ಜಾನುವಾರುಗಳ ಸಂಖ್ಯೆಯೂ ಇರುವುದರಿಂದ ಅವುಗಳಿಗೂ ಕುಡಿಯುವ ನೀರಿನ ಪೂರೈಕೆಗೆ ಕ್ರಮ ತೆಗೆದುಕೊಳ್ಳಬೇಕು.

ಇದನ್ನೂ ಓದಿ: Water Crisis: ಬೆಂಗಳೂರಲ್ಲಿ ಹಾಲಿನ ಟ್ಯಾಂಕರ್ ಮೂಲಕ ನೀರು ಪೂರೈಕೆ; ಬರದ ವಾಸ್ತವ ಬಿಚ್ಚಿಟ್ಟ ಎಚ್.ಡಿ. ದೇವೇಗೌಡ!

ಗ್ರಾಮಗಳ ಜತೆಗೆ ಪಟ್ಟಣಗಳು, ನಗರಗಳ ಕಡೆಗೂ ರಾಜ್ಯ ಸರ್ಕಾರ ಗಮನ ಹರಿಸಬೇಕು. ಪಟ್ಟಣ, ನಗರ ಹಾಗೂ ಮಹಾ ನಗರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಲೇ ಟ್ಯಾಂಕರ್‌ ನೀರು ಪೂರೈಕೆಯ ದಂಧೆ ಶುರುವಾಗುತ್ತದೆ. ಈಗಾಗಲೇ ನಗರಗಳಲ್ಲಿ ಒಂದು ಟ್ಯಾಂಕರ್‌ ನೀರಿಗೆ 2-3 ಸಾವಿರ ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಲೆಕ್ಕವಿಲ್ಲದಷ್ಟು ಬೋರ್‌ವೆಲ್‌ಗಳನ್ನು ಕೊರೆದು, ಜನರ ಬಳಿ 2-3 ಪಟ್ಟು ಹಣ ವಸೂಲಿ ಮಾಡುವ ದಂಧೆ ಆರಂಭವಾಗಿದೆ. ಇದನ್ನು ಕೂಡ ರಾಜ್ಯ ಸರ್ಕಾರ ತಡೆಗಟ್ಟಬೇಕು. ನೀರಿನ ದಂಧೆಯಲ್ಲಿ ತೊಡಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಎಗ್ಗಿಲ್ಲದೆ ಬೋರ್‌ವೆಲ್‌ ಕೊರೆದು ಅಂತರ್ಜಾಲಕ್ಕೆ ಕುತ್ತು ತರುವ ಜಾಲವನ್ನು ನಿಯಂತ್ರಿಸಬೇಕು. ಆ ಮೂಲಕ ಜನರ ದಾಹ ನೀಗಿಸುವ ಜತೆಗೆ ಹಣದ ಮೇಲಿನ ಮೋಹಕ್ಕೆ ನಡೆಯುವ ದಂಧೆಯನ್ನೂ ತಡೆಗಟ್ಟಬೇಕು. ಇಲ್ಲದಿದ್ದರೆ, ನೀರಿಗಾಗಿ ಸಂಘರ್ಷಗಳೇ ನಡೆಯುವ ಸಾಧ್ಯತೆಗಳನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ರಾಜ್ಯದಲ್ಲಿ ಕೊಲೆಗಳ‌ ಸರಮಾಲೆ; ಪೊಲೀಸ್ ಇಲಾಖೆ ಯಾಕಿಷ್ಟು‌ ದುರ್ಬಲವಾಗಿದೆ?

ಈ ಅಪರಾಧಗಳ ನಡುವೆ ಎದ್ದು ಕಾಣಿಸುತ್ತಿರುವುದು, ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಹೆಚ್ಚಳ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಕೊಲೆ, ಅಂಜಲಿ ಅಂಬಿಗೇರ ಕೊಲೆ ಪ್ರಕರಣ, ಕೊಡಗಿನ ಮೀನಾ ಕೊಲೆ ಪ್ರಕರಣಗಳು ಇದಕ್ಕೆ ಇತ್ತೀಚಿನ ನಿದರ್ಶನಗಳಾಗಿವೆ. ಇನ್ನೂ ಹತ್ತು ಹಲವನ್ನು ಉದಾಹರಿಸಬಹುದು. ರಾಜ್ಯದಲ್ಲಿ ಪೊಲೀಸ್ ಇಲಾಖೆ ಹಿಂದೆಂದೂ ಇಲ್ಲದಷ್ಟು ದುರ್ಬಲವಾದಂತೆ ಕಾಣುತ್ತಿದೆ.

VISTARANEWS.COM


on

Karnataka Police
Koo

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (National crime records bureau- NCRB) ಇತ್ತೀಚೆಗಿನ ಅಪರಾಧಗಳ ಅಂಕಿ ಅಂಶವನ್ನು ಪ್ರಕಟಿಸಿದ್ದು, ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳ (crimes) ಸಂಖ್ಯೆ ಮಿತಿ ಮೀರಿ ಹೆಚ್ಚಿರುವುದು ಕಂಡುಬಂದಿದೆ. ರಾಜ್ಯದಲ್ಲಿ ಕಳೆದ ಜನವರಿಯಿಂದ ಏಪ್ರಿಲ್‌ವರೆಗೆ ಏರಿಕೆ ಪ್ರಮಾಣದಲ್ಲಿ ಕೊಲೆ (murder), ಅತ್ಯಾಚಾರ (physical abuse), ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು (Pocso) ನಡೆದಿವೆ. 2024ರ ಜನವರಿಯಿಂದ ಏಪ್ರಿಲ್ 30ರವರೆಗೆ ಅಂದರೆ 4 ತಿಂಗಳಲ್ಲಿ ಸುಮಾರು 430 ಕೊಲೆಗಳು (Murder), 198 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 2327 ಮಹಿಳೆಯರ ಮೇಲೆ ದೌರ್ಜನ್ಯ, 1262 ಮಕ್ಕಳ ಮೇಲೆ ದೌರ್ಜನ್ಯ, 7421 ಸೈಬರ್ ಕ್ರೈಂ, 450 ರಾಬರಿಗಳು ಸಂಭವಿಸಿವೆ. ಲೈಂಗಿಕ ದೌರ್ಜನ್ಯ ಹಾಗೂ ಸೈಬರ್ ವಂಚನೆ (cyber crime) ಗಗನಕ್ಕೆ ಏರಿವೆ. ಹಲ್ಲೆ, ಮಾರಣಾಂತಿಕ ಹಲ್ಲೆ ಕೇಸ್‌ಗಳು ಅಧಿಕವಾಗುತ್ತಾ ಸಾಗುತ್ತಿವೆ. ಇದು ಆತಂಕಕ್ಕೆ ಕಾರಣವಾಗಿದೆ.

ಎಂದಿನಂತೆ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ಈ ಅಸ್ತ್ರವನ್ನು ಹಿಡಿದುಕೊಂಡು ಸರ್ಕಾರದ ಮೇಲೆ ದಾಳಿಗೆ ಇಳಿದಿವೆ. “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಹಾದಿಬೀದಿಯಲ್ಲಿ ಕೊಲೆಗಳಾಗುತ್ತಿವೆ. ರಾಜ್ಯವು ಅತ್ಯಾಚಾರಿಗಳ ಆಡೊಂಬೊಲವಾಗಿದೆ. ಬೆಂಗಳೂರು ಮಹಾನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ. ಕೇವಲ 4 ತಿಂಗಳಲ್ಲಿ ಇಷ್ಟೆಲ್ಲಾ ನಡೆದಿದೆ. ರಾಜ್ಯ ಗೃಹ ಇಲಾಖೆ ಎನ್ನುವುದು ಕೆಲಸ ಮಾಡುತ್ತಿದೆಯಾ?” ಎಂದು ವಿಪಕ್ಷ ನಾಯಕರು ಟೀಕಿಸಿದ್ದಾರೆ. ಜನಸಾಮಾನ್ಯರ ಮನದಲ್ಲಿರುವ ಪ್ರಶ್ನೆಯನ್ನೇ ಅವರು ಕೇಳಿದ್ದಾರೆ ಎನ್ನಬೇಕು. ಈ ಪ್ರಶ್ನೆಯನ್ನು ಕೇಳಿ ಅರ್ಧದಲ್ಲೇ ಕೈಬಿಡಬಾರದು. ಇದನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವತ್ತ ಪ್ರಯತ್ನಿಸಬೇಕು. ಗೃಹ ಸಚಿವರು, ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಬೇಕು.

ಆದರೆ ಗೃಹ ಸಚಿವರು ಇದನ್ನು ಒಂದು ವಿಷಯವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. “ಒಂದೊಂದು ಘಟನೆಗೂ ಒಂದೊಂದು ಕಾರಣ ಅಂತ ಇರುತ್ತದೆ. ಅವರ (ಪ್ರತಿಪಕ್ಷದ) ಕಾಲದಲ್ಲಿ ಎಷ್ಟು ಮರ್ಡರ್ ಆಗಿತ್ತು ಅಂತೆ ಹೇಳಿದರೆ ಯಾವ ಸರ್ಕಾರದಲ್ಲಿ ಸುರಕ್ಷತೆ ಇತ್ತು ಅನ್ನೋದು ತಿಳಿಯುತ್ತೆ” ಎಂದಿದ್ದಾರೆ. “ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಯೇ ಇದೆ. ಇವರನ್ನು ಹೇಳ್ಕೊಂಡು, ಕೇಳ್ಕೊಂಡು ಸರ್ಕಾರ ಕಾನೂನು ಸುವ್ಯವಸ್ಥೆ ಮಾಡೋಕೆ ಆಗೊಲ್ಲ. ಏನು ಕ್ರಮ ಬೇಕಾದ್ರೂ ತಗೊಳ್ತೇವೆ” ಎಂದಿದ್ದಾರೆ. ಇದು ಒಬ್ಬರು ಇನ್ನೊಬ್ಬರ ಮೇಲೆ ದೂರು ಹಾಕಿ ಮುಗಿಸಬೇಕಾದ ಸಂಗತಿಯಲ್ಲ. ಯಾರೂ ಇಂಥ ವಿಚಾರಗಳಲ್ಲಿ ಸುಮ್ಮಸುಮ್ಮನೆ ಆರೋಪ ಮಾಡುವುದಿಲ್ಲ. ಮೇಲಾಗಿ, ಇದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಒದಗಿಸಿದ ಅಂಕಿಸಂಖ್ಯೆಗಳನ್ನು ಆಧರಿಸಿದೆ. ಹೀಗಾಗಿ ಆಳುವವರು ಇದನ್ನು ಗಂಭೀರವಾಗಿಯೇ ಪರಿಗಣಿಸಬೇಕಿದೆ.

ಈ ಅಪರಾಧಗಳ ನಡುವೆ ಎದ್ದು ಕಾಣಿಸುತ್ತಿರುವುದು, ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಹೆಚ್ಚಳ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಕೊಲೆ, ಅಂಜಲಿ ಅಂಬಿಗೇರ ಕೊಲೆ ಪ್ರಕರಣ, ಕೊಡಗಿನ ಮೀನಾ ಕೊಲೆ ಪ್ರಕರಣಗಳು ಇದಕ್ಕೆ ಇತ್ತೀಚಿನ ನಿದರ್ಶನಗಳಾಗಿವೆ. ಇನ್ನೂ ಹತ್ತು ಹಲವನ್ನು ಉದಾಹರಿಸಬಹುದು. ಹುಬ್ಬಳ್ಳಿಯಲ್ಲಿ ಕೊಲೆ ಮಾಡಿದವನು ಅಂಜಲಿ ಕೊಲೆ ಮಾಡಿದವನು, ತಾನು ನೇಹಾ ಕೊಲೆ ಮಾದರಿಯಲ್ಲಿ ಕೊಲ್ಲುತ್ತೇನೆ ಎಂದು ಮೊದಲೇ ಹೇಳಿಯೇ ಇದನ್ನು ಮಾಡುತ್ತಾನೆ. ಇದನ್ನು ಪೊಲೀಸರ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುವುದಿಲ್ಲ. ಅಂದರೆ ಇಲ್ಲಿ ಪೊಲೀಸರು ಎಷ್ಟು ಕಾರ್ಯಪ್ರವೃತ್ತರಾಗಿದ್ದಾರೆ ಎಂಬ ಅಂದಾಜು ಸಿಗುತ್ತದೆ. ಬಡವರು ಅನ್ಯಾಯಕ್ಕೊಳಗಾದರೆ ಕೇಳುವವರೇ ಇಲ್ಲವೇ? ಇಲ್ಲಿ ಪ್ರಜ್ವಲ್‌ ರೇವಣ್ಣನಂಥ ಪ್ರಭಾವಿ ಅಪರಾಧಿಗಳನ್ನು ರಾಜಕೀಯ ಕಾರಣಗಳಿಗಾಗಿ ಬೆನ್ನು ಹತ್ತಲಾಗುತ್ತದೆ; ಆದರೆ ಶ್ರೀಸಾಮಾನ್ಯರಿಗೆ ಇಲ್ಲಿ ಯಾವ ರಕ್ಷಣೆಯೂ ಇಲ್ಲವೇ? ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ನೂರಾರು ಹೆಣ್ಣು ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಹರಿಬಿಡಲಾಗಿದೆ. ನೂರಾರು ಕುಟುಂಬಗಳನ್ನು ಛಿದ್ರಗೊಳಿಸುವಂತಹ ಇಂಥ ಅಪರಾಧಿಗಳ ಮೇಲೆ ಯಾವ ಕ್ರಮವೂ ಇಲ್ಲ! ಬದಲಾಗಿ ಅವರನ್ನು ರಕ್ಷಿಸಲಾಗುತ್ತಿದೆ.

ಇವೆಲ್ಲವೂ ಅಪಾಯಕಾರಿ ಬೆಳವಣಿಗೆ. “ಹೆಣ್ಣು ನಡುರಾತ್ರಿಯಲ್ಲಿ ಒಬ್ಬಳೇ ಓಡಾಡುವಂತಾದರೆ ದೇಶ ಸ್ವತಂತ್ರವಾದುದಕ್ಕೆ ಸಾರ್ಥಕ” ಎಂದು ಗಾಂಧೀಜಿ ಹೇಳಿದ್ದರಂತೆ. ನಡುರಾತ್ರಿಯಲ್ಲಿ ಬೇಡ, ನಡುಹಗಲಿನಲ್ಲಾದರೂ ಸುರಕ್ಷಿತವಾಗಿ ಓಡಾಡುವಂತಾದರೆ ಸಾಕು! ಕಾಲೇಜಿಗೆ ಹೋಗುವುದು, ಮನೆಯಲ್ಲಿರುವುದು ಮುಂತಾದ ಸರಳ ಕ್ರಿಯೆಗಳ ಸಂದರ್ಭದಲ್ಲಿ ಕೂಡ ಪಾತಕಿಗಳು ದಾಳಿ ನಡೆಸುತ್ತಾರೆ ಎಂದರೆ ಏನು ಹೇಳೋಣ? ಬೆಂಗಳೂರಿನ ಬೀದಿಗಳಲ್ಲಿ ರೌಡಿ ಶೀಟರ್‌ಗಳು ಯಾರ ಭಯವಿಲ್ಲದೆ ಗ್ಯಾಂಗ್‌ ಕಟ್ಟಿಕೊಂಡು ಹೊಡೆದಾಡುವುದು, ಸರ ಎಗರಿಸುವುದು, ಹಲ್ಲೆ, ಬೈಕ್‌ ವ್ಹೀಲಿಂಗ್‌ ನಡೆಸುತ್ತಿದ್ದಾರೆ. ಗೃಹ ಇಲಾಖೆ ದುರ್ಬಲವಾದಾಗ, ಪುಂಡರಿಗೆ ರಾಜಕಾರಣಿಗಳೇ ಕುಮ್ಮಕ್ಕು ನೀಡಿದಾಗ ಇಂಥ ಪ್ರವೃತ್ತಿ ಹೆಚ್ಚುತ್ತದೆ. ಇದಕ್ಕೆ ಈಗಲೇ ಕಡಿವಾಣ ಹಾಕದೆ ಹೋದರೆ ಮುಂದಿನ ದಿನಗಳ ದುರ್ಭರವಾಗಲಿವೆ.

ಇದನ್ನೂ ಓದಿ: Anjali Murder Case: ಅಂಜಲಿ ಕೊಂದವನ ಎನ್‌ಕೌಂಟರ್ ಮಾಡಿ: ಸಹೋದರಿ ಪೂಜಾ ಆಗ್ರಹ

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಗ್ರೇಸ್‌ ಮಾರ್ಕ್ಸ್‌ ಅಲ್ಲ, ಗುಣಮಟ್ಟದ ಶಿಕ್ಷಣವೇ ಫಲಿತಾಂಶಕ್ಕೆ ದಾರಿ

ಕೃಪಾಂಕಗಳನ್ನು ನೀಡಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಬಹುದು ಎಂದು ಇಲಾಖೆ ಭಾವಿಸಿದರೆ, ಅದು ಸಾಧ್ಯವಾಗದ ಮಾತು. ಕೃಪಾಂಕ ಪಡೆದು ಪಿಯುಸಿಗೋ ಇತರ ಕೋರ್ಸ್‌ಗಳಿಗೋ ಹೋದ ವಿದ್ಯಾರ್ಥಿ ಅಲ್ಲಿ ಕಂಗಾಲಾಗುತ್ತಾನೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೇ ತೊಂದರೆ. ಇಲ್ಲಿ ಕೃಪಾಂಕ ಪಡೆದವರು ಅಲ್ಲೂ ಅದನ್ನೇ ನಿರೀಕ್ಷಿಸಿದರೆ ಆಶ್ಚರ್ಯವಿಲ್ಲ. ಆದರೆ ಅಲ್ಲಿ ಹಾಗೆ ನಡೆಯುವುದಿಲ್ಲ. ಜೀವನದಲ್ಲಿಯೂ ಯಾರೂ ಗ್ರೇಸ್‌ ಮಾರ್ಕ್ಸ್‌ ಕೊಡುವುದಿಲ್ಲ. ಪ್ರತಿಭೆಯಿಂದಲೇ ಮೇಲೆ ಬರಬೇಕಾಗುತ್ತದೆ.

VISTARANEWS.COM


on

Siddaramaiah
Koo

ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿರುವ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ, ಈ ಬಾರಿಯ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 20 ಗ್ರೇಸ್‌ ಮಾರ್ಕ್ಸ್‌ (SSLC Grace Marks) ಕೊಟ್ಟಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾರನ್ನು ಕೇಳಿ ಹೆಚ್ಚುವರಿ ಅಂಕವನ್ನು ಕೊಟ್ಟಿರಿ? ಹೀಗೆ ಅಂಕ ಕೊಡುವ ಅಗತ್ಯತೆ ಏನಿತ್ತು? ಶಿಕ್ಷಣ ಗುಣಮಟ್ಟ ಕುಸಿದಿದ್ದು ಏಕೆ? ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿಕ್ಷಣದ ಗುಣಮಟ್ಟ ಕುಸಿದಿದ್ದೇಕೆ? ಗ್ರೇಸ್ ಮಾರ್ಕ್ಸ್ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಶಿಕ್ಷಣ ತಜ್ಞರು ಸೇರಿ ಹಲವರಿಂದ ವಿರೋಧಗಳು ಕೇಳಿ ಬರುತ್ತಿವೆ. ಗ್ರೇಸ್ ಮಾರ್ಕ್ಸ್ ಕೊಡುವುದು ಅವೈಜ್ಞಾನಿಕ ಎಂಬ ಬಗ್ಗೆ ಅಭಿಪ್ರಾಯಗಳು ಬರುತ್ತಿವೆ. ಹಾಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರೇಸ್‌ ಮಾರ್ಕ್ಸ್ ಕೊಡುವ ಬಗ್ಗೆ ಮರುಪರಿಶೀಲನೆ ಮಾಡಿ ಎಂದು ಶಿಕ್ಷಣ ಸಚಿವರಿಗೆ ಹಾಗೂ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶಿಕ್ಷಣ ಸಚಿವರು ಹೇಳುವ ಪ್ರಕಾರ, ಎಸ್‌ಎಸ್‌ಎಲ್‌ಸಿಯಲ್ಲಿ ಈ ಹಿಂದೆಯೂ ಶೇಕಡಾ 5ರಷ್ಟು ಕೃಪಾಂಕಗಳು ಇತ್ತು. ಕೋವಿಡ್ ವೇಳೆ ಅದನ್ನು ಶೇಕಡಾ 10ಕ್ಕೆ ಏರಿಕೆ ಮಾಡಲಾಗಿತ್ತು. ಈ ಬಾರಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಳಕ್ಕಾಗಿ ಶೇಕಡಾ 20ರಷ್ಟು ಗ್ರೇಸ್‌ ಮಾರ್ಕ್ಸ್‌ ಕೊಡಲಾಗಿದೆ. ಮುಂದಿನ ವರ್ಷದಿಂದ ಇದು ಮುಂದುವರಿಯುವುದಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ಕೃಪಾಂಕಗಳನ್ನು ಯಾಕೆ ಕೊಡಬೇಕಾಯಿತು ಎಂದು ನೋಡೋಣ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತ (SSLC Result 2024) ಕಂಡಿದೆ. 2022-23ರಲ್ಲಿ 83.89% ಇತ್ತು. ಈ ಬಾರಿ ಗಾಬರಿಗೊಳಿಸುವ ಪ್ರಮಾಣದಲ್ಲಿ, ಅಂದರೆ ಶೇ.30ರಷ್ಟು ಫಲಿತಾಂಶ ಕುಸಿದಿದೆ. ಅಂದರೆ ನಿಜವಾಗಿ ಬಂದಿರುವುದು ಶೇ. 53 ಫಲಿತಾಂಶ ಮಾತ್ರ. ಇದರಿಂದ ಗಾಬರಿಯಾದ ಶಿಕ್ಷಣ ಇಲಾಖೆ, ಮುಖಂಭಂಗ ತಪ್ಪಿಸಿಕೊಳ್ಳುವುದಕ್ಕಾಗಿ ಬರೋಬ್ಬರಿ 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌ ಅನ್ನು ಕೊಟ್ಟಿದೆ. ಈ ವರೆಗೆ ಇದ್ದ ಪಾಸಿಂಗ್‌ ಮಾರ್ಕ್ಸ್‌ ಶೇಕಡಾ 35 ಅನ್ನು ಶೇಕಡಾ 25ಕ್ಕೆ ಇಳಿಸಿದೆ. ಅಂದರೆ 35 ಅಂಕಗಳ ಬದಲಿಗೆ 25 ಅಂಕವನ್ನು ಪಡೆದ ವಿದ್ಯಾರ್ಥಿಯೂ ಪಾಸ್‌ ಎಂದು ಮಾಡಲಾಗಿದೆ. ಅಲ್ಲದೆ, ಕೃಪಾಂಕದ ಪ್ರಮಾಣವನ್ನು ಶೇ. 10ರಿಂದ ಶೇ. 20ಕ್ಕೆ ಹೆಚ್ಚಿಸಲಾಗಿದೆ. ಈ ಎರಡೂ ಕ್ರಮದಿಂದಾಗಿ ಒಟ್ಟಾರೆ 1 ಲಕ್ಷದ 70 ಸಾವಿರ ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ಇಲ್ಲವಾದರೆ ಇಷ್ಟು ಮಕ್ಕಳು ನಪಾಸಾಗುತ್ತಿದ್ದರು. ಇಷ್ಟು ಕೃಪಾಂಕ ನೀಡಿದರೂ ದೊರೆತ ಫಲಿತಾಂಶ ಮಾತ್ರ 73.40% ಅಷ್ಟೇ. ಅಂದರೆ ಕಳೆದ ಸಲಕ್ಕಿಂತ ಶೇಕಡಾ 10.49ರಷ್ಟು ಕಡಿಮೆ. ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಸರ್ಕಸ್ ಮಾಡಿದರೂ ಕಡಿಮೆ ಫಲಿತಾಂಶ ದಾಖಲಾಗಿದೆ.

ಇದೇಕೆ ಹೀಗಾಯಿತು? ಇದು ವೆಬ್‌ ಕಾಸ್ಟಿಂಗ್‌ನಿಂದ ಎಂದು ಶಿಕ್ಷಣ ಇಲಾಖೆಯೇ ಒಪ್ಪಿಕೊಂಡಿದೆ. ಪ್ರಪ್ರಥಮ ಬಾರಿಗೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲಕ ವೆಬ್ ಕಾಸ್ಟಿಂಗ್ ಮಾಡುವ ಹೊಸ ಪದ್ಧತಿಯನ್ನು ಪರಿಚಯಿಸಲಾಗಿದೆ. ಪರೀಕ್ಷಾ ಕೊಠಡಿಗಳ ದೃಶ್ಯಾವಳಿಗಳನ್ನು ಮೇಲ್ವಿಚಾರಣೆ ಮಾಡಲು ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿತ್ತು. ಹೀಗಾಗಿ ಮೇಲ್ವಿಚಾರಣೆ ಬಿಗಿಯಾಗಿದೆ. ಅಂದರೆ ನಕಲು ಮಾಡಲು ಸಾಧ್ಯವಾಗಲಿಲ್ಲ ಎಂದು ನೇರವಾಗಿ ಹೇಳಬಹುದು. ಅಂದರೆ ಪರೋಕ್ಷವಾಗಿ, ನಕಲು ಮಾಡುವುದಕ್ಕೆ ಅವಕಾಶ ಇದ್ದುದರಿಂದಲೇ ಮೊದಲು ಇಷ್ಟೊಂದು ಫಲಿತಾಂಶ ಬರುತ್ತಿತ್ತು ಎಂದು ಒಪ್ಪಿಕೊಂಡಂತಾಯಿತಲ್ಲವೆ? ಈ ಸಲದ ಫಲಿತಾಂಶ ಕಡಿಮೆ ಎನ್ನುವುದಕ್ಕಿಂತಲೂ, ನಕಲು ಮಾಡಿಯೇ ನಾವು ಹೆಚ್ಚಿನ ಫಲಿತಾಂಶ ಪಡೆಯುತ್ತಿದ್ದೆವು ಎನ್ನುವ ಕಟುವಾಸ್ತವ ನಮ್ಮನ್ನು ಹೆಚ್ಚು ಕುಟುಕಬೇಕು.

ಸರಿ, ಈಗ ಪರೀಕ್ಷಾ ಪದ್ಧತಿ ಬಿಗಿಯಾದಂತಾಯಿತು. ಆದರೆ ಕೃಪಾಂಕಗಳನ್ನು ನೀಡಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಬಹುದು ಎಂದು ಇಲಾಖೆ ಭಾವಿಸಿದರೆ, ಅದು ಸಾಧ್ಯವಾಗದ ಮಾತು. ಕೃಪಾಂಕ ಪಡೆದು ಪಿಯುಸಿಗೋ ಇತರ ಕೋರ್ಸ್‌ಗಳಿಗೋ ಹೋದ ವಿದ್ಯಾರ್ಥಿ ಅಲ್ಲಿ ಕಂಗಾಲಾಗುತ್ತಾನೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೇ ತೊಂದರೆ. ಇಲ್ಲಿ ಕೃಪಾಂಕ ಪಡೆದವರು ಅಲ್ಲೂ ಅದನ್ನೇ ನಿರೀಕ್ಷಿಸಿದರೆ ಆಶ್ಚರ್ಯವಿಲ್ಲ. ಆದರೆ ಅಲ್ಲಿ ಹಾಗೆ ನಡೆಯುವುದಿಲ್ಲ. ಜೀವನದಲ್ಲಿಯೂ ಯಾರೂ ಗ್ರೇಸ್‌ ಮಾರ್ಕ್ಸ್‌ ಕೊಡುವುದಿಲ್ಲ. ಪ್ರತಿಭೆಯಿಂದಲೇ ಮೇಲೆ ಬರಬೇಕಾಗುತ್ತದೆ. ಕೃಪಾಂಕಗಳ ಬದಲು ಸರ್ಕಾರ ಗುಣಮಟ್ಟದ ಬೋಧನೆ, ಅರ್ಹ ಶಿಕ್ಷಕರ ನೇಮಕ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಇಂಗ್ಲಿಷ್‌ ಕಲಿಕೆ, ಸ್ಪರ್ಧಾತ್ಮಕ ಶಿಕ್ಷಣದ ಪರಿಚಯ, ಗಟ್ಟಿಮುಟ್ಟಾದ ಶಾಲೆ ಕಟ್ಟಡ ತರಗತಿಗಳು, ಪ್ರಯೋಗಾಲಯ ಹಾಗೂ ಲ್ಯಾಬ್‌ಗಳು, ಅನ್ಯ ಕೆಲಸಗಳಿಂದ ಶಿಕ್ಷಕರಿಗೆ ಮುಕ್ತಿ- ಇವುಗಳನ್ನೆಲ್ಲ ಕಲ್ಪಿಸಬೇಕು. ಆಗ ಉತ್ತಮ ಫಲಿತಾಂಶ ಕೊಡಿ ಎಂದು ಕಟ್ಟುನಿಟ್ಟು ಮಾಡುವುದರಲ್ಲಿ ಅರ್ಥವಿದೆ. ಶಿಕ್ಷಕರಿಂದ ಎಲ್ಲ ಸಾಧ್ಯತೆಗಳನ್ನೂ ಕಿತ್ತುಕೊಂಡು ಒಳ್ಳೆಯ ಫಲಿತಾಂಶ ನೀಡಿ ಎಂದರೆ ಹೇಗೆ ಸಾಧ್ಯ?

ಇದನ್ನೂ ಓದಿ: SSLC Grace Marks: ಯಾರನ್ನು ಕೇಳಿ ಶೇ. 20 ಗ್ರೇಸ್‌ ಮಾರ್ಕ್ಸ್‌ ಕೊಟ್ಟಿರಿ? ಶಿಕ್ಷಣ ಇಲಾಖೆ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ!

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಒಪ್ಪಿಕೊಂಡರೆ ಸಾಲದು, ಪಾಕ್‌ ತನ್ನನ್ನು ಸರಿಪಡಿಸಿಕೊಳ್ಳಲಿ

ಭಾರತವನ್ನು ದ್ವೇಷಿಸುತ್ತ ಪಾಕ್‌ ಹುಟ್ಟುಹಾಕಿದ ಮತಾಂಧ ಭಯೋತ್ಪಾದನೆ ಇಂದು ಅದನ್ನೇ ತಿನ್ನುತ್ತಿದೆ. ಇನ್ನಾದರೂ ಪಾಕ್ ಆಡಳಿತಗಾರರಿಗೆ, ಸೇನಾಧಿಕಾರಿಗಳಿಗೆ ಬುದ್ಧಿ ಬರಲಿ. ಕಾಶ್ಮೀರ ಮತ್ತಿತರ ವಿಚಾರಗಳನ್ನು ಪ್ರಸ್ತಾಪಿಸುತ್ತ ಭಾರತಕ್ಕೆ ಮುಜುಗರ ಸೃಷ್ಟಿಸಲು ವಿಫಲ ಪ್ರಯತ್ನ ಮಾಡುತ್ತಿರುವ ಪಾಕ್‌ ತನ್ನ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಮೊದಲು ಗಮನಿಸಲಿ.

VISTARANEWS.COM


on

Pakistan
Koo

ಕೆಲವು ದಿನಗಳ ಹಿಂದೆ ಪಾಕ್‌(Pakistan) ಸಂಸತ್‌ನಲ್ಲೇ ಅಲ್ಲಿನ ವಿಪಕ್ಷ ನಾಯಕನೇ ಭಾರತವನ್ನು ಹಾಡಿ ಹೊಗಳಿರುವ ವಿಡಿಯೋವೊಂದು ವೈರಲ್‌(Viral Video) ಆಗಿತ್ತು. ಇದೀಗ ಮತ್ತೊಬ್ಬ ಸಂಸದ ಭಾರತದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಸಂಸತ್‌ನಲ್ಲಿ ಮಾತನಾಡಿದ ಸಂಸದ ಸಯ್ಯದ್‌ ಮುಸ್ತಾಫಾ ಕಮಲ್‌ ಭಾರತ ಮತ್ತು ಪಾಕಿಸ್ತಾನವನ್ನು ಹೋಲಿಕೆ ಮಾಡಿ ಮಾತನಾಡಿದ್ದು, ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಆದರೆ ಪಾಕಿಸ್ತಾನದ ಸ್ಥಿತಿ ಹೇಗಿದೆ ನೋಡಿ ಎಂದು ಹೇಳಿದ್ದಾರೆ. ಇದೀಗ ಇವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಆದರೆ ಪಾಕಿಸ್ತಾನ ಮಾತ್ರ ಮಕ್ಕಳು ಚರಂಡಿ ಬೀಳುತ್ತಿರುವ ಬಗ್ಗೆ ವರದಿ ಮಾಡುತ್ತಿದ್ದೇವೆ. ಕರಾಚಿಯಲ್ಲಿ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ದೇಶದಲ್ಲಿ 2.6 ಕೋಟಿ ಮಕ್ಕಳಿದ್ದು, ಅವರಿಗೆ ಶಿಕ್ಷಣ ಸೌಲಭ್ಯವೂ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಇಡೀ ಪ್ರಪಂಚದಲ್ಲೇ ಭಾರತ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿದೆ. ನಾವು ಮಾತ್ರ ಹಣಕಾಸಿನ ಸಹಾಯಕ್ಕಾಗಿ ಭಿಕ್ಷೆ ಬೇಡುತ್ತಿದ್ದೇವೆ ಎಂದು ಪಾಕಿಸ್ತಾನದ ವಿಪಕ್ಷ ನಾಯಕ ಮೌಲಾನ ಫಜ್ಲೂರ್‌ ರೆಹಮಾನ್‌ ಹೇಳಿದ್ದರು. ಅವರು ಪಾಕಿಸ್ತಾನ ಸಂಸತ್‌ನಲ್ಲಿ ಸರ್ಕಾರ ವೈಫಲ್ಯದ ವಿರುದ್ಧ ವಾಗ್ದಾಳಿ ನಡೆಸುತ್ತಾ, ಭಾರತ ಜಾಗತಿಕ ಮಟ್ಟದಲ್ಲಿ ಸೂಪರ್‌ ಪವರ್‌ಫುಲ್‌ ರಾಷ್ಟ್ರವಾಗಿ ಬೆಳೆಯುತ್ತಿದೆ ಪಾಕಿಸ್ತಾನ ಮಾತ್ರ ದಿವಾಳಿತನದತ್ತ ಸಾಗುತ್ತಿದೆ. 1947ರಲ್ಲಿ ಭಾರತ ಮತ್ತು ಪಾಕಿಸ್ತಾನ ಸ್ವಾತಂತ್ರ್ಯ ಪಡೆದುಕೊಂಡಿತ್ತು. ಇಂದು ಭಾರತದ ಸ್ಥಿತಿ ಎಲ್ಲಿದೆ ಹಾಗೂ ನಮ್ಮ ಸ್ಥಿತಿ ಎಲ್ಲಿದೆ? ಇಷ್ಟಕ್ಕೆಲ್ಲಾ ಯಾರು ಹೊಣೆ ಎಂದು ಕಟುವಾಗಿ ಪ್ರಶ್ನಿಸಿದ್ದರು.

ಪಾಕಿಸ್ತಾನದ ವೈಫಲ್ಯಗಳ ಪಟ್ಟಿ ಮಾಡಹೊರಟರೆ ಮುಗಿಯುವುದೇ ಇಲ್ಲ. ಶುದ್ಧ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಸರಿಯಾದ ಆಧುನಿಕ ಶಿಕ್ಷಣ ಕಲಿಸುವ ಶಾಲೆಗಳಿಲ್ಲ. ಸಿಂಧ್‌ ಪ್ರಾಂತ್ಯದಲ್ಲಿ 70 ಲಕ್ಷ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಅಲ್ಲಿ ಒಟ್ಟು 2.62 ಕೋಟಿ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಮತಾಂಧತೆ ಕಲಿಸುವ ಮದ್ರಸ ಶಿಕ್ಷಣ ಮಾತ್ರ ವ್ಯಾಪಕವಾಗಿದೆ. ಹಣದುಬ್ಬರದ ಏರಿಕೆಯಿಂದಾಗಿ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆಯು ದಿನೇದಿನೆ ಜಾಸ್ತಿಯಾಗುತ್ತಿದ್ದು, ಜನ ಹೈರಾಣಾಗುತ್ತಿದ್ದಾರೆ. ಒಂದು ಲೀಟರ್‌ ಪೆಟ್ರೋಲ್‌ಗೆ 290 ರೂ. (ಪಾಕಿಸ್ತಾನದ ರೂಪಾಯಿ) ಆದರೆ, ಒಂದು ಕೆ.ಜಿ ಗೋಧಿ ಹಿಟ್ಟಿಗೆ 800 ರೂ. ಕೊಡಬೇಕಾಗಿದೆ. ಒಂದು ರೊಟ್ಟಿಗೆ 25 ರೂ. ನೀಡಬೇಕಾಗಿದೆ. ಇದರಿಂದಾಗಿ ಸಾಮಾನ್ಯ ಜನ ಮೂರು ಹೊತ್ತು ಊಟ ಮಾಡಲು ಕೂಡ ತೊಂದರೆಯಾಗುತ್ತಿದೆ. ಹಣಕಾಸಿನ ಕೊರತೆಯಿಂದ ಬಳಲುತ್ತಿರುವ ಪಾಕ್‌ನ ವಿದೇಶಿ ವಿನಿಮಯ ಮೀಸಲು ನಿಧಿ ಆಮದನ್ನು ಪೂರೈಸಲು ಸಾಕಾಗುತ್ತಿಲ್ಲ.

ಉಗ್ರರ ಪೋಷಣೆ, ಅವರಿಗೆ ಹಣಕಾಸು ನೆರವು, ಅಸಮರ್ಥ ನಾಯಕತ್ವ, ಕೊರೊನಾ ಬಿಕ್ಕಟ್ಟು ಸೇರಿ ಹಲವು ಕಾರಣಗಳಿಂದ ಪಾಕಿಸ್ತಾನ ದಿವಾಳಿಯಾಗಿದೆ. ಇದೇ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಎದುರು ಹಣಕ್ಕಾಗಿ ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಈಗಾಗಲೇ ಐಎಂಎಫ್‌ 3 ಶತಕೋಟಿ ಡಾಲರ್‌ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ. ಆದರೆ, ಮುಂದಿನ ಮೂರು ವರ್ಷಗಳವರೆಗೆ 6 ಶತಕೋಟಿ ಡಾಲರ್‌ ಸಾಲ ನೀಡಿ ಎಂದು ಪಾಕಿಸ್ತಾನ ಮನವಿ ಮಾಡುತ್ತಿದೆ. ಆದರೆ, ಪಾಕ್‌ನಲ್ಲಿ ದಿನೇದಿನೆ ಹಣದುಬ್ಬರದ ಏರಿಕೆಯಾಗುತ್ತಿರುವ ಕಾರಣ ಸಾಲ ನೀಡಲು ಐಎಂಎಫ್‌ ಹಿಂದೇಟು ಹಾಕುತ್ತಿದೆ. ಇದಕ್ಕಾಗಿಯೇ, ಆಡಳಿತ ಕಾರ್ಯತಂತ್ರದ ಘಟಕಗಳನ್ನು ಹೊರತುಪಡಿಸಿ ಎಲ್ಲ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಐಎಂಎಫ್‌ ಪಾಕಿಸ್ತಾನಕ್ಕೆ ಸೂಚಿದ ಶಿಫಾರಸ್ಸಿನ ಪಟ್ಟಿಯಲ್ಲಿ ನಷ್ಟದಲ್ಲಿರುವ ಸರ್ಕಾರಿ ಉದ್ಯಮಗಳ ಖಾಸಗೀಕರಣವೂ ಸೇರಿದೆ.

ಭಾರತವನ್ನು ದ್ವೇಷಿಸುತ್ತ ಪಾಕ್‌ ಹುಟ್ಟುಹಾಕಿದ ಮತಾಂಧ ಭಯೋತ್ಪಾದನೆ ಇಂದು ಅದನ್ನೇ ತಿನ್ನುತ್ತಿದೆ. ಇನ್ನಾದರೂ ಪಾಕ್ ಆಡಳಿತಗಾರರಿಗೆ, ಸೇನಾಧಿಕಾರಿಗಳಿಗೆ ಬುದ್ಧಿ ಬರಲಿ. ಕಾಶ್ಮೀರ ಮತ್ತಿತರ ವಿಚಾರಗಳನ್ನು ಪ್ರಸ್ತಾಪಿಸುತ್ತ ಭಾರತಕ್ಕೆ ಮುಜುಗರ ಸೃಷ್ಟಿಸಲು ವಿಫಲ ಪ್ರಯತ್ನ ಮಾಡುತ್ತಿರುವ ಪಾಕ್‌ ತನ್ನ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಮೊದಲು ಗಮನಿಸಲಿ. ಅಲ್ಲಿನ ರಾಜಕೀಯ ನಾಯಕರೇ ತಮ್ಮ ಸ್ಥಿತಿಯನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಾಗ, ತಿದ್ದಿಕೊಳ್ಳಲು ಸರಿಯಾದ ಕಾಲ ಬಂದಿದೆ ಎಂದರ್ಥ.

ಇದನ್ನೂ ಓದಿ: CAA: ಪಾಕಿಸ್ತಾನದಿಂದ ಬಂದ ಹಿಂದುಗಳಿಗೆ ಸಿಎಎ ಅನ್ವಯ ಭಾರತದ ಪೌರತ್ವ; ದೆಹಲಿಯಲ್ಲಿ ಸಂಭ್ರಮ, Video ಇಲ್ಲಿದೆ

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಸಿಎಎ ಅನುಷ್ಠಾನ ಮೋದಿ ಸರ್ಕಾರದ ದಿಟ್ಟ ನಿರ್ಧಾರ

ಅಲ್ಪಸಂಖ್ಯಾತರನ್ನು ಗುರಿಯಾಗಿಸಲು ಸಿಎಎ ಮತ್ತು ಅಷ್ಟೇ ವಿವಾದಾತ್ಮಕ ಎನ್ಆರ್​​ಸಿ ಅಥವಾ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ತರಲಾಗಿದೆ ಎಂಬ ಭಯವನ್ನು ಗೃಹ ಸಚಿವರು ಆಗಾಗ ಹೇಳಿಕೆಗಳ ಮೂಲಕ ನಿವಾರಿಸುತ್ತ ಬಂದಿದ್ದಾರೆ. ಸಿಎಎ ಬಗ್ಗೆ ಅಪಪ್ರಚಾರಗಳ ಮೂಲಕ ಈಗಲೂ ಮುಸ್ಲಿಮರನ್ನು ದಾರಿ ತಪ್ಪಿಸಲು ಯತ್ನಿಸಲಾಗುತ್ತಿದೆ. ಇದು ಯಾರ ಪೌರತ್ವವನ್ನೂ ಕಸಿದುಕೊಳ್ಳಲು ಇರುವುದಲ್ಲ.

VISTARANEWS.COM


on

CAA
Koo

ಭಾರಿ ಆಕ್ಷೇಪದ ಮಧ್ಯೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಡಿ (ಸಿಎಎ) ಮೊದಲ ಕಂತಿನಲ್ಲಿ 14 ಜನರಿಗೆ ಭಾರತೀಯ ನಾಗರಿಕತ್ವವನ್ನು ನೀಡಲಾಗಿದೆ. ಎಲ್ಲರಿಗೂ ಪೌರತ್ವ ಪ್ರಮಾಣಪತ್ರವನ್ನು ಬುಧವಾರ ವಿತರಿಸಲಾಯಿತು. ಈ ಮೂಲಕ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ರಾಷ್ಟ್ರೀಯತೆ ನೀಡುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಅಧಿಕೃತ ಚಾಲನೆ ನೀಡಿದೆ. ದೆಹಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು, 14 ಜನರು ಆನ್​ಲೈನ್​ ಮೂಲಕ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿದ ನಂತರ ಭಾರತೀಯ ಪೌರತ್ವ ನೀಡಿದ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದರು. ಜಿಲ್ಲಾ ಮಟ್ಟದ ಸಮಿತಿಗಳು ಗೊತ್ತುಪಡಿಸಿದ ಅಧಿಕಾರಿಗಳ ನೇತೃತ್ವದಲ್ಲಿ ದಾಖಲೆಗಳ ಪರಿಶೀಲನೆಯ ನಂತರ ಅರ್ಜಿಗಳನ್ನು ಅಖೈರು ಮಾಡಲಾಗಿದೆ.

ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ನಾಲ್ಕು ವರ್ಷಗಳ ನಂತರ ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯಿದೆಯನ್ನು ಈ ವರ್ಷ ಜಾರಿ ಮಾಡಿದೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರು 2014ರ ಡಿಸೆಂಬರ್ 31ಕ್ಕೂ ಮೊದಲು ಭಾರತಕ್ಕೆ ಬಂದಿದ್ದಲ್ಲಿ ಅವರಿಗೆ ಭಾರತದ ನಾಗರಿಕತ್ವ ನೀಡಲು ಕೇಂದ್ರ ಸರ್ಕಾರ ಸಿಎಎ ಕಾಯ್ದೆ ಜಾರಿಗೆ ತಂದಿದೆ. 2019ರಲ್ಲಿ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಇದರಲ್ಲಿ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಕಾಯ್ದೆಯಡಿ ಬರುತ್ತಾರೆ. 2019ರಲ್ಲಿ ಜಾರಿಯಾದರೂ ಇದರ ನಿಯಮಗಳನ್ನು ರೂಪಿಸಲು ಸರ್ಕಾರ 4 ವರ್ಷ ಸಮಯಾವಕಾಶ ತೆಗೆದುಕೊಂಡಿತು. 2024ರ ಮಾರ್ಚ್ 11ರಂದು ಅಧಿಕೃತ ನಿಯಮಾವಳಿಗಳನ್ನು ರೂಪಿಸಿ ಆದೇಶ ಹೊರಡಿಸಿತು. ನಿಗದಿಪಡಿಸಿದ ಪೋರ್ಟಲ್​ ಮೂಲಕ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು. ಇವುಗಳನ್ನು ಜಿಲ್ಲಾ ಮಟ್ಟದ ಸಮಿತಿ (ಡಿಎಲ್​ಸಿ), ರಾಜ್ಯ ಮಟ್ಟದ ಸಶಕ್ತ ಸಮಿತಿಯಿಂದ (ಇಸಿ) ಪರಿಶೀಲನೆ ಮಾಡಿದ ಬಳಿಕ ಪೌರತ್ವ ನೀಡಬೇಕೆ ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ.

ಇದೊಂದು ಐತಿಹಾಸಿಕ ಘಟ್ಟ. ಇತಿಹಾಸದ ಸಂಕಷ್ಟಗಳಲ್ಲಿ ನೊಂದವರು ಒಂದು ನೆಲೆಯನ್ನು ಪಡೆಯಲು ಇಂದು ಸಾಧ್ಯವಾಗಿದೆ. ಯಥಾಪ್ರಕಾರ, ಕೇಂದ್ರ ಸರ್ಕಾರದ ಎದುರಾಳಿಗಳು ಈ ಕ್ರಮವನ್ನು ಹಳಿಯುತ್ತಿದ್ದಾರೆ. ಇದು ಸಂಸತ್​ನಲ್ಲಿ ಅಂಗೀಕಾರಗೊಂಡಾಗ ದೆಹಲಿಯಯಲ್ಲಿ ಮತ್ತು ಅಸ್ಸಾಂನಲ್ಲಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಇದೀಗ ಸರ್ಕಾರ ಎಲ್ಲ ಸಿದ್ಧತೆಗಳ ಬಳಿಕ ಜಾರಿಗೆ ತಂದಿದೆ. ಪಶ್ಚಿಮ ಬಂಗಾಳ, ಕೇರಳದಂಥ ಕೆಲವು ರಾಜ್ಯಗಳು ಇದನ್ನು ಜಾರಿಗೆ ತರುವುದಿಲ್ಲ ಎಂದು ಹೇಳಿದ್ದೂ ಉಂಟು. ಆದರೆ ಕಾಲಕ್ರಮೇಣ ಇದರ ಕುರಿತು ಇದ್ದ ಪ್ರತಿಭಟನೆಯ ಅಂಶ ಕಡಿಮೆಯಾಗಿದೆ. ಆದರೆ ಇದರ ಬಗೆಗೆ ಕೆಲವು ವಲಯದಲ್ಲಿ ಇನ್ನೂ ತಪ್ಪು ಕಲ್ಪನೆ ಉಳಿದಂತಿದೆ. ಇದು ನಿವಾರಣೆ ಆಗುವುದು ಮತ್ತು ಎಲ್ಲರೂ ಇದರ ಜಾರಿಗೆ ಸಹಕರಿಸುವುದು ಮುಖ್ಯ.

ಅಲ್ಪಸಂಖ್ಯಾತರನ್ನು ಗುರಿಯಾಗಿಸಲು ಸಿಎಎ ಮತ್ತು ಅಷ್ಟೇ ವಿವಾದಾತ್ಮಕ ಎನ್ಆರ್​​ಸಿ ಅಥವಾ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ತರಲಾಗಿದೆ ಎಂಬ ಭಯವನ್ನು ಗೃಹ ಸಚಿವರು ಆಗಾಗ ಹೇಳಿಕೆಗಳ ಮೂಲಕ ನಿವಾರಿಸುತ್ತ ಬಂದಿದ್ದಾರೆ. ಸಿಎಎ ಬಗ್ಗೆ ಅಪಪ್ರಚಾರಗಳ ಮೂಲಕ ಈಗಲೂ ಮುಸ್ಲಿಮರನ್ನು ದಾರಿ ತಪ್ಪಿಸಲು ಯತ್ನಿಸಲಾಗುತ್ತಿದೆ. ಇದು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಿರುಕುಳವನ್ನು ಎದುರಿಸಿ ಭಾರತಕ್ಕೆ ಬಂದವರಿಗೆ ಮಾತ್ರ ಪೌರತ್ವ ನೀಡುವ ಉದ್ದೇಶವನ್ನು ಹೊಂದಿದೆ. ಇದು ಯಾರ ಪೌರತ್ವವನ್ನೂ ಕಸಿದುಕೊಳ್ಳಲು ಇರುವುದಲ್ಲ. ಈ ಕಾಯ್ದೆಯಲ್ಲಿ ಮುಸ್ಲಿಮರನ್ನು ಕೈಬಿಟ್ಟ ಕಾರಣ ವಿರೋಧ ಪಕ್ಷಗಳಿಂದ ಮತ್ತು ಮುಸ್ಲಿಂ ಸಮುದಾಯದಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ ಇದರಲ್ಲಿ ಹುರುಳಿಲ್ಲ. ಮುಸ್ಲಿಮರಿಗೂ ಈ ಕಾಯಿದೆಗೂ ಯಾವುದೇ ಸಂಬಂಧವಿಲ್ಲ.

ಹಿಂದೂ, ಸಿಖ್, ಬೌದ್ಧರಿಗೆ ಭಾರತ ಹೊರತುಪಡಿಸಿ ಪೌರತ್ವ ಪಡೆಯಲು ಬೇರೆ ದೇಶಗಳೇ ಇಲ್ಲ. ಇತಿಹಾಸವನ್ನು ನೋಡಿದರೆ, ಭಾರತ, ಅಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶದ ಗಡಿಯುದ್ದಕ್ಕೂ ವಲಸೆ ನಡೆದಿರುವುದು ತಿಳಿಯುತ್ತದೆ. ಧರ್ಮದ ಕಾರಣಕ್ಕಾಗಿ ದೌರ್ಜನ್ಯಕ್ಕೆ ಒಳಗಾಗಿ ಭಾರತಕ್ಕೆ ಆಶ್ರಯ ಕೋರಿ ಬಂದಿರುವ ಸಮುದಾಯಗಳಲ್ಲಿ ಅನೇಕರ ಟ್ರಾವೆಲ್‌ ಡಾಕ್ಯುಮೆಂಟ್‌ಗಳ ಅವಧಿ ಮುಗಿದಿದೆ ಅಥವಾ ಅಪೂರ್ಣ ದಾಖಲೆಗಳಿವೆ ಅಥವಾ ಅವರ ಬಳಿ ದಾಖಲೆಗಳೇ ಇಲ್ಲ. ಮೋದಿ ಸರ್ಕಾರವು ತನ್ನ ಮೊದಲನೇ ಅವಧಿಯಲ್ಲಿ ಈ ರೀತಿಯ ವಲಸಿಗರಿಗೆ ಪಾಸ್‌ಪೋರ್ಟ್‌ ಅಧಿನಿಯಮ (ಭಾರತ ಪ್ರವೇಶಕ್ಕೆ) 1920ರ ಹಾಗೂ ವಿದೇಶಿ ಅಧಿನಿಯಮ 1946ರ ಪ್ರತಿಕೂಲ ದಂಡನಾರ್ಹ ಅಂಶಗಳಿಂದಲೂ ವಿನಾಯಿತಿ ನೀಡಿದೆ. ಇದಷ್ಟೇ ಅಲ್ಲದೇ 2016ರಲ್ಲಿ ಮೋದಿ ಸರ್ಕಾರ ಈ ನಿರಾಶ್ರಿತರಿಗೆ ದೀರ್ಘ‌ಕಾಲಿಕ ವೀಸಾ ಪಡೆಯಲೂ ಅರ್ಹರನ್ನಾಗಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಒಟ್ಟಲ್ಲಿ, ಧಾರ್ಮಿಕ ಹಿಂಸೆಗೆ ತುತ್ತಾಗಿರುವವರಿಗೆ ನಾಗರಿಕತೆ ದೊರಕುವಂತೆ ಮಾಡಲು ಸಶಕ್ತಗೊಳಿಸುತ್ತದೆ.

ಸಂವಿಧಾನದ ಅನುಚ್ಛೇದ 25, ಪ್ರತಿಯೊಬ್ಬ ವ್ಯಕ್ತಿಗೂ ತನಗೆ ಇಷ್ಟವಾದ ಧರ್ಮವನ್ನು ಮುಕ್ತವಾಗಿ ಅನುಸರಿಸಲು, ಆಚರಿಸಲು ಸಮಾನ ಹಕ್ಕನ್ನು ನೀಡುತ್ತದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಯಾವುದೇ ರೀತಿಯಲ್ಲೂ ಈ ಅಂಶಗಳನ್ನು ಉಲ್ಲಂಘಿಸಿಲ್ಲ. ಸಿಎಎಯಿಂದಾಗಿ ಭಾರತೀಯ ಅಲ್ಪಸಂಖ್ಯಾತರ ಹಕ್ಕುಗಳ, ಭಾರತೀಯ ಜಾತ್ಯತೀತ ಮೌಲ್ಯಗಳ ಮತ್ತು ಸಂಪ್ರದಾಯಗಳ ಹನನವಾಗುವುದಿಲ್ಲ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ. ಸಿಎಎ ಎನ್ನುವುದು ಅನ್ಯಾಯವನ್ನು ಎದುರಿಸುತ್ತಿರುವ ಸಾವಿರಾರು ನಿರ್ವಸಿತ ಕುಟುಂಬಗಳನ್ನು ಸಬಲೀಕರಣಗೊಳಿಸುವ ಐತಿಹಾಸಿಕ ಹೆಜ್ಜೆಯಾಗಿದೆ. ಇದು ಸಮರ್ಪಕವಾಗಿ ಅನುಷ್ಠಾನಕ್ಕೂ ಬರುತ್ತಿದೆ ಎಂದು ಸಂತೋಷಪಡೋಣ.

ಇದನ್ನೂ ಓದಿ: CAA: ಸಿಎಎ ಕಾಯ್ದೆಯಡಿ 14 ವಲಸಿಗರಿಗೆ ಭಾರತದ ಪೌರತ್ವ; ಏನಿದು ಕಾಯ್ದೆ? ಭಾರತದ ಮುಸ್ಲಿಮರಿಗೆ ತೊಂದರೆ ಇದೆಯೇ?

Continue Reading
Advertisement
Pavithra Jayaram Trinayani Serial Son Prajwal Reaction
ಸಿನಿಮಾ8 mins ago

Pavithra Jayaram: ಅಮ್ಮ ಮತ್ತು ಚಂದ್ರಕಾಂತ್‌ ಒಡನಾಟ ಹೇಗಿತ್ತು ಅಂತ ನಮಗೆ ಗೊತ್ತು ಎಂದ ಪವಿತ್ರ ಜಯರಾಮ್ ಮಗ!

Karnataka Rain
ಮಳೆ34 mins ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Viral News
ವೈರಲ್ ನ್ಯೂಸ್37 mins ago

Viral News: ಬಾಯ್‌ಫ್ರೆಂಡ್‌ನ ಗುಪ್ತಾಂಗವನ್ನೇ ಕಟ್‌ ಮಾಡಿ ಕಸದ ಬುಟ್ಟಿಗೆ ಎಸೆದ ಮಹಿಳೆ

Job Alert
ಉದ್ಯೋಗ49 mins ago

Job Alert: ನೈವೇಲಿ ಲಿಗ್ನೈಟ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆಯ ದಿನ

Electric shock in udupi
ಉಡುಪಿ2 hours ago

Electric shock : ಮಳೆಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿ; ಶಾಕ್‌ನಿಂದ ವ್ಯಕ್ತಿ ಸ್ಪಾಟ್‌ ಡೆತ್‌

Anjali Murder Case
ಕರ್ನಾಟಕ2 hours ago

Anjali Murder Case: ಅಂಜಲಿ ಹತ್ಯೆ ಪ್ರಕರಣ; ಆತ್ಮಹತ್ಯೆಗೆ ಯತ್ನಿಸಿದ ಸಹೋದರಿ ಚೇತರಿಕೆ

IT Raid
ದೇಶ2 hours ago

IT Raid: ಶೂ ವ್ಯಾಪಾರಿಗಳಿಗೆ ಐಟಿ ಶಾಕ್‌; 40 ಕೋಟಿ ರೂ. ಸೀಜ್‌-ಕಂತೆ ಕಂತೆ ನೋಟು ನೋಡಿ ದಂಗಾದ ಅಧಿಕಾರಿಗಳು

Suspicious Case in Mysuru
ಮೈಸೂರು2 hours ago

Suspicious Case : ಮೈಸೂರಿನಲ್ಲಿ ದಂಪತಿ ಅನುಮಾನಾಸ್ಪದ ಸಾವು; ಕೊಲೆಯೋ.. ಆತ್ಮಹತ್ಯೆಯೋ?

IPL 2024 The people paid revenge for the controversial post ashwini Puneeth Rajkumar
ಸ್ಯಾಂಡಲ್ ವುಡ್2 hours ago

IPL 2024 : ʻಅಶ್ವಿನಿ ದೊಡ್ಮನೆಯ ಅದೃಷ್ಟ ದೇವತೆ’: ತುಚ್ಛ ಪದ ಬಳಸಿದವರಿಗೆ ಭಾರೀ ತಿರುಗೇಟು!

Kattappa To Turn Modi Sathyaraj To Play Biopic On Prime Minister
ಬಾಲಿವುಡ್2 hours ago

Kattappa To Turn Modi: ಮೋದಿ ಪಾತ್ರದಲ್ಲಿ `ಬಾಹುಬಲಿ’ ಕಟ್ಟಪ್ಪ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ2 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ2 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ3 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು3 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ4 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ4 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ5 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20245 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌