ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಪರಸೆ - Vistara News

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಪರಸೆ

ಕಷ್ಟಪಟ್ಟು ಕಣ್ಣು ತೆರೆಯುವ ಪ್ರಯತ್ನ ಮಾಡಿದ ಗಾಯತ್ರಿ ಅವರಿಗೆ ಇದು ಹಳ್ಳಿಯೋ ಬೇರೆ ಊರೋ ತಿಳಿಯಲಿಲ್ಲ. ಅಕ್ಕಪಕ್ಕ ನೋಡಿದರೆ ಬರೀ ಜನ. ಬೇರೆಯದೇ ವೇಷಭೂಷಣದಲ್ಲಿರುವ ಜನ. ಎಲ್ಲರೂ ಅಪರಿಚಿತರು.

VISTARANEWS.COM


on

parase short story
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
bhagyarekha deshpande

:: ಭಾಗ್ಯರೇಖಾ ದೇಶಪಾಂಡೆ

ಮೇಲೆ ಹೋಗುವ ಗುಂಡಿ ಒತ್ತಿದರೂ ಕೆಳಗಿನಿಂದ ಮೂರನೆಯ ಮಹಡಿಗೆ ಲಿಫ್ಟ್ ಸರಸರನೆ ಬರಲಿಲ್ಲ! ಕೆಳಗಿನ ಮಹಡಿಯಲ್ಲಿ ಹೊರಹೋಗುವವರು ಹೋದರೂ ಒಳಬರುವವರಲ್ಲಿ ಒಂದು ಸಣ್ಣ ಗದ್ದಲವೇ
ನಡೆದಿತ್ತು! ಒಂದೇ ಕುಟುಂಬದ ಏಳು ಜನ ಒಮ್ಮೆಲೇ ಒಳಹೊಕ್ಕಲು ಪ್ರಯತ್ನ ನಡೆಸಿದ್ದರು ಆದರೆ ಅದು ಲಿಫ್ಟ್‍ನ ಸಾಮಥ್ರ್ಯ ಮೀರಿದ್ದ ಕಾರಣ ಆಪರೇಟರ್ ಆ ಕುಟುಂಬದ ಮೂರು ಜನ ಯುವಕರಿಗೆ ಮುಂದಿನ ಸರತಿಗೆ ಕಾಯಲು ಅಥವಾ ಮೆಟ್ಟಿಲನ್ನು ಉಪಯೋಗಿಸಲು ಹೇಳಿದ್ದೇ ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಈಗಾಗಲೇ ಒಳಹೊಕ್ಕಿದ್ದವರು ಹಾಳಾಗುತ್ತಿದ್ದ ತಮ್ಮ ಸಮಯಕ್ಕೆ ಕುಟುಂಬದವರ ಮೇಲೆ ರೇಗಾಡಿ ಒಂದೆರಡು ಅವಾಚ್ಯ ಶಬ್ದಗಳನ್ನೂ ಉದುರಿಸಿದ್ದರು. ಸಣ್ಣದಾಗಿ ಆರಂಭಗೊಂಡಿದ್ದ ವಾಕ್ಕಲಹ ಬಲಪ್ರಯೋಗಕ್ಕೆ ತಿರುಗುವ ಎಲ್ಲ ಸಾಧ್ಯತೆಗಳು ಕಂಡುಬಂದಿತು. ಒಂದಿಬ್ಬರು ಹೆಂಗಸರು ಹೆದರಿ ಹೊರನಡೆದು ಚದುರಲು ಇಚ್ಛಿಸದ ಒಗ್ಗಟ್ಟಿನ ಕುಟುಂಬಕ್ಕೆ ದಾರಿಮಾಡಿಕೊಟ್ಟು ಮೆಟ್ಟಿಲುಗಳತ್ತ ಸಾಗಿದರು.

ಮೂರನೆಯ ಮಹಡಿಯಲ್ಲಿ ಲಿಫ್ಟ್‍ಗಾಗಿ ಕಾಯುತ್ತಿದ್ದ ಗಾಯತ್ರಿ ಅವರು ಈ ಬಾರಿಯೂ ಅದು ನಿಲ್ಲದೆ ಮೇಲೆ ಚಲಿಸುವುದನ್ನು ಅದು ಕಣ್ಮರೆಯಾಗುವ ತನಕ ಗೋಣು ಎತ್ತರಿಸಿ ನೋಡಿದರು. ಅದರ ಗಾಜಿನ
ಬಾಗಿಲಿನ ಮೂಲಕ ಒಳಗೆ ತುಂಬಿದ್ದ ಜನರನ್ನೂ ಕಣ್ತುಂಬಿಕೊಂಡರು. ಎಲ್ಲರೂ ಅಪರಿಚಿತರು. ತಮಗೆ ಅವರು, ಅವರಿಗೆ ತಾವು. ಇಲ್ಲಿಯೇ ನಿಂತು ಕಾಯಬೇಕೋ ಅಥವಾ ಬೇಡವೋ ಎಂಬ ಗೊಂದಲದಲ್ಲಿಯೇ ಕೆಲ ಹೊತ್ತು ಕಳೆದರು. ಮತ್ತೆ ಅದು ಕೆಳಗೆ ಬರುವಾಗ ತಾವಿದ್ದಲ್ಲಿ ನಿಲ್ಲದೆ ಕೆಳಗಿನ ಮಹಡಿಗೆ ಹೋದದ್ದನ್ನು ನೋಡಿ ಆ ದೊಡ್ಡ ಮಾಲ್‍ನ ಅದೇ ಮಹಡಿಯಲ್ಲಿ ನಡೆದಾಡಲು ಮನಸ್ಸು ಮಾಡಿ ಲಿಫ್ಟ್‌ಗೆ ಬೆನ್ನು ತೋರಿಸಿದರು.

ಮೊದಲಿನ ಹಾಗೆ ರಸ್ತೆಯ ಮೂಲೆಯಲ್ಲಿದ್ದ ಸಣ್ಣ ಕಿರಾಣಿ ಅಂಗಡಿಗೆ ಹೋಗಿ ಸಾಮಾನಿನ ಪಟ್ಟಿ ಕೊಟ್ಟು ತಿಂಗಳಿಗೆ ಬೇಕಾಗುವಷ್ಟು ಸಾಮಾನುಗಳನ್ನು ಖರೀದಿ ಮಾಡುವ ಕ್ರಮ ಇತ್ತೀಚೆಗೆ ಬದಲಾಗಿತ್ತು. ಈಗ ಪ್ರತಿದಿನವೂ ಶಾಪಿಂಗ್ ಮಾಡುವ ಹುಚ್ಚನ್ನು ಜನರು ಹೆಚ್ಚಿಸಿಕೊಂಡಿರುವುದು ಆ ಮಹಡಿಯ ಅಂಗಡಿಗಳಲ್ಲಿದ್ದ ಜನರ ಹಿಂಡು ಮತ್ತು ಅವರ ಕೈಗಳಲ್ಲಿದ್ದ ಚೀಲಗಳು ಸಾರಿಹೇಳುತ್ತಿದ್ದವು. ಝಗಮಗಿಸುವ ದೀಪಗಳಿಂದ ಬೆಳಗುತ್ತಿದ್ದ ದೊಡ್ಡ ಬಟ್ಟೆ ಅಂಗಡಿಗಳ ಮುಂದೆ ನಿಲ್ಲಿಸಿದ್ದ ಎಲ್ಲ ಮನುಷ್ಯಾಕೃತಿಯ ಗೊಂಬೆಗಳು ಬಣ್ಣಬಣ್ಣದ ಬಟ್ಟೆಗಳನ್ನು ತೊಟ್ಟು ಗ್ರಾಹಕರನ್ನು ಸೆಳೆಯುತ್ತಿದ್ದವು. ತುಂಡು ಬಟ್ಟೆ, ಜಿಮ್ ಬಟ್ಟೆ, ಸ್ವಿಮ್ಮಿಂಗ್ ಬಟ್ಟೆ, ಪಾರ್ಟಿ ಬಟ್ಟೆ, ಹಬ್ಬದ ಬಟ್ಟೆ, ಮಕ್ಕಳ ಬಟ್ಟೆ, ಕೆಲಸದ ಬಟ್ಟೆ, ಮನೆಯ ಬಟ್ಟೆ… ಹೀಗೆ ವಿವಿಧ ಬಗೆಯ ಉಡುಪುಗಳು ಕಣ್ಸೆಳೆಯುತ್ತಿದ್ದವು. ಬಟ್ಟೆಗಳನ್ನು ಕೊಳ್ಳದೆ ಕೇವಲ ಅವುಗಳನ್ನು ನೋಡಿಹೋಗಲು ಕೆಲವರು ಬಂದಂತಿತ್ತು. ಕೆಲ ಕಾಲೇಜು ಗೆಳತಿಯರು ಒಂದಿಷ್ಟು ಉಡುಪುಗಳನ್ನು ಆರಿಸಿ ಅಂಗಡಿಯಲ್ಲಿದ್ದ ಟ್ರಯಲ್ ರೂಮಿನಲ್ಲಿ ಅವುಗಳನ್ನು ತೊಟ್ಟು ಕನ್ನಡಿಯ ಮುಂದೆ ಒಂದಿಷ್ಟು ಸೆಲ್ಫೀ ಕ್ಲಿಕ್ಕಿಸಿಕೊಂಡು ಮತ್ತೆ ಆ ಬಟ್ಟೆಗಳನ್ನು ತೆಗೆದಿಡುತ್ತಿದ್ದರು!

ನಡೆದಾಡಲು ಓಡಲು ವ್ಯಾಯಾಮಕ್ಕೆಂದು ದಿನಬಳಕೆಗೆ ಮತ್ತು ಪಾರ್ಟಿವೇರ್ ಎಂದೇ ವಿಂಗಡಿಸಿ ಇಟ್ಟಿದ್ದ ಹಲವು ಬಗೆಯ ಚಪ್ಪಲಿಗಳುಳ್ಳ ಅಂಗಡಿಗಳೂ ಇದ್ದವು. ಆ ಅಂಗಡಿಯಲ್ಲಿ ಇದೀಗ ಪ್ರೇಮಪಾಶಕ್ಕೆ ಬಿದ್ದಂತೆ ಕಾಣುತ್ತಿದ್ದ ಯುವಕನೋರ್ವ ತಾನೇ ಚಪ್ಪಲಿಯನ್ನು ಅವನ ಪ್ರಿಯತಮೆಗೆ ತೊಡಿಸುತ್ತ ಆಕೆಗಾಗಿ ಅವನು ಆಕೆಯ ಕೈ ಮಾತ್ರ ಅಲ್ಲ ಕಾಲನ್ನು ಹಿಡಿಯಲೂ ಸಿದ್ಧ ಎಂದು ಸಾಬೀತು ಮಾಡುತ್ತಿರುವಂತೆ ತೋರಿತು!

ನಾಜೂಕಾದ ಗಾಜಿನ ತೂಗುದೀಪಗಳು, ಮರದ ಪೀಠೋಪಕರಣಗಳು, ಪುಸ್ತಕಗಳು, ವ್ಯಾಯಾಮದ ಸಲಕರಣೆಗಳ ಅಂಗಡಿಗಳು ಇದ್ದರೂ ಅಲ್ಲಿ ಹೆಚ್ಚಿನ ಗ್ರಾಹಕರಿರದೆ ಉಸಿರಾಟಕ್ಕೆ ಅವಕಾಶವಿರುವಷ್ಟು ಜಾಗವಿತ್ತು.
ಅದಕ್ಕೆ ವಿರುದ್ಧ ಎಂಬಂತೆ ಕಾಫಿ ಅಂಗಡಿಯಲ್ಲಿ ಗಿಚ್ಚು ಹೆಚ್ಚಾಗಿತ್ತು! ಒಂದು ಕಪ್ ಕಾಫಿಯಿಂದ ಏನು ಬೇಕಾದರೂ ಆಗಬಹುದು ಎನ್ನುವ ಸಿದ್ಧಾಂತ ಹೊಂದಿದ್ದ ಆ ಅಂಗಡಿಯಲ್ಲಿ ಎಲ್ಲ ವಯೋಮಾನದವರು ಕಂಡುಬಂದರೂ ಯುವಕ ಯುವತಿಯರ ಸಂಖ್ಯೆ ಹೆಚ್ಚಾಗಿತ್ತು. ಹೊಸದಾಗಿ ಪರಿಚಯ ಆದವರು, ಸ್ನೇಹಿತರು, ಪ್ರೇಮಿಗಳು, ಕೆಲಸದ ನಿಮಿತ್ತ ಬಂದವರು ಎಲ್ಲರಿಗೂ ಇದೊಂದು ಭೇಟಿಯ ತಾಣವಾಗಿ ಪರಿಣಮಿಸಿತ್ತು. ಅಲ್ಲಿ ಸಿಗುವ ದುಬಾರಿ ಕಾಫಿಗಿಂತ ಹೆಚ್ಚಾಗಿ ಆರಾಮಾಗಿ ಗಂಟೆಗಟ್ಟಲೆ ಹರಟಲು ಮತ್ತು ಏಕಾಂತದಲ್ಲಿ ಮನಸ್ಸಿನ ಮಾತನ್ನು ಆಡಲು ಈ ಜಾಗ ಲಭ್ಯವಿದ್ದದ್ದೆ ಅಲ್ಲಿನ ವ್ಯಾಪಾರಕ್ಕೆ ಮುಖ್ಯ ಕಾರಣ ಎಂದು ತೋರುತ್ತಿತ್ತು!

ಗಾಯತ್ರಿ ಅವರಿಗೆ ಕಿರಾಣಿ ಸಾಮಾನುಗಳಲ್ಲಿದ್ದ ಆಕರ್ಷಣೆ ಉಳಿದ ಸಾಮಾನುಗಳಲ್ಲಿ ಇರಲಿಲ್ಲ. ಈ ವಾರದ ವಿಶೇಷ ರಿಯಾಯತಿಯ ಮಾಹಿತಿಯನ್ನುಳ್ಳ ಸೆಲೆಬ್ರಿಟಿ ಚಿತ್ರದ ಪೋಸ್ಟರ್ ಅದೇ ಮಹಡಿಯಲ್ಲಿದ್ದ
ಸೂಪರ್‍ಮಾರ್ಕೆಟ್ ಅಂಗಡಿಯ ಮುಂದೆ ರಾರಾಜಿಸುತ್ತಿತ್ತು. ಅದೂ ಅವರ ನೆಚ್ಚಿನ ಅಮಿತಾಭ್ ಬಚ್ಚನ್ ತಮ್ಮ ಮುಗ್ಧ ನಗುವಿನೊಂದಿಗೆ ಜಾಹೀರಾತಿನಲ್ಲಿ ಕೊಡುಗೆಯ ಬಗ್ಗೆ ಮಾಹಿತಿ ನೀಡುವ ಚಿತ್ರವಿದ್ದರೆ ಅವರ ಕಾಲು ಆ ಅಂಗಡಿಯೊಳಗೆ ಹೋಗುವುದು ಸಹಜವೇ ಸರಿ. ಆದರೂ ಹೋಗುವ ಮುನ್ನ ಮತ್ತೊಮ್ಮೆ ಲಿಫ್ಟ್‍ನತ್ತ ಅವರು ತಿರುಗಿ ನೋಡಿದರು, ಅದು ಮತ್ತೊಂದಿಷ್ಟು ಜನರನ್ನು ತುಂಬಿಕೊಂಡು ಇಳಿಯುತ್ತಿತ್ತು!

ಉದ್ದ ನಡೆದಷ್ಟೂ ಅಂಗಡಿ ಬೆಳೆಯುತ್ತಲೇ ಇದೆಯೇನೋ ಎನ್ನುವಂತೆ ವಿಶಾಲವಾದ ಜಾಗದಲ್ಲಿ ಸೂಪರ್‍ಮಾರ್ಕೆಟ್ ವಹಿವಾಟನ್ನು ನಡೆಸುತ್ತಿತ್ತು. ತಿಂಡಿ ತಿನಿಸುಗಳು, ಧಾನ್ಯಗಳು, ತರಕಾರಿ ಹಣ್ಣುಗಳು,
ದಿನಬಳಕೆಯ ವಸ್ತುಗಳು, ಡೈರಿ ಸಾಮಾನುಗಳು, ಗೃಹೋಪಯೋಗಿ ವಸ್ತುಗಳು, ಪೂಜಾ ಸಾಮಗ್ರಿಗಳು, ಬಟ್ಟೆ ಚಪ್ಪಲಿಗಳು, ಮಕ್ಕಳ ವಸ್ತುಗಳು… ಹೀಗೆ ಪದಾರ್ಥಗಳ ಬಗೆಯ ಆಧಾರದ ಮೇಲೆ ಪ್ರತ್ಯೇಕ ಜಾಗವೇ ಅಲ್ಲಿ ಅವುಗಳಿಗೆ ಮೀಸಲಿತ್ತು. ಗಾಯತ್ರಿ ಸುತ್ತಲೂ ಕಣ್ಣಾಡಿಸುತ್ತ ಒಂದೊಂದೇ ವಿಭಾಗವನ್ನು ಗಮನಿಸುತ್ತ ಹೊರಟರು…

ಒಂದು ಜಾಗ ಥರೇವಾರಿ ಬಿಸ್ಕತ್ತು ಸಿಹಿ ಪದಾರ್ಥಗಳು ಮತ್ತು ತಿಂಡಿ ತಿನಿಸುಗಳಿಗಾಗಿ ಮೀಸಲಿತ್ತು. ತಮಗೆ ಗೊತ್ತಿರುವ ಒಂದೆರಡು ಬಿಸ್ಕತ್ತುಗಳ ಜೊತೆಗೆ ಇನ್ನೂ ಅನೇಕ ಬಗೆಯ ಬಿಸ್ಕತ್ತುಗಳ ಜೋಡಣೆ ನೋಡಿ ಗಾಯತ್ರಿ ಅಚ್ಚರಿಪಟ್ಟರು. ಇಷ್ಟೆಲ್ಲ ಹೊಸ ಹೆಸರಿನ ಬಿಸ್ಕತ್ತುಗಳು ಯಾವಾಗ ಮಾರುಕಟ್ಟೆಗೆ ಬಂದವೋ ಎಂದುಕೊಳ್ಳುತ್ತ ತಮ್ಮ ನೆಚ್ಚಿನ ಬಿಸ್ಕತ್ತಿನ ದೊಡ್ಡ ಫ್ಯಾಮಿಲಿ ಪ್ಯಾಕ್ ನೋಡಿ ಖುಷಿಪಟ್ಟರು. ಈ ಒಂದು ಪೊಟ್ಟಣ ಕೊಂಡರೆ ಮನೆಯವರೆಲ್ಲ ತಿನ್ನಬಹುದೆಂದು ಲೆಕ್ಕ ಹಾಕಿದರು. ಇದೇ ಬಿಸ್ಕತ್ತನ್ನು ಅವರ ತಂದೆ ಆಫೀಸಿನಿಂದ ಮನೆಗೆ ಬರುವಾಗ ತರುತ್ತಿದ್ದರು. ತಂದೆಯ ಜೊತೆ ಬಿಸ್ಕತ್ತನ್ನು ಚಹಾದಲ್ಲಿ ಎದ್ದಿ ತಿನ್ನುತ್ತ ಹರಟುತ್ತಿದ್ದ ಗಳಿಗೆಗಳು ಗಾಯತ್ರಿ ಅವರಿಗೆ ಅಚ್ಚುಮೆಚ್ಚು. ತಮ್ಮ ಮನೆಯ ಮಾವಿನ ಮರದ ಕೆಳಗೆ ಆರಾಮ ಕುರ್ಚಿಯಲ್ಲಿ ಕೂರುತ್ತಿದ್ದ ತಂದೆ ಚಹಾ ಕುಡಿಯುವಾಗ ಅದೆಷ್ಟು ವಿಷಯಗಳನ್ನು ಹೇಳುತ್ತಿದ್ದರು, ತಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದರು. ಮಧ್ಯೆ ತಾವು ಹೂಂ ಎನ್ನದಿದ್ದರೆ ಸಣ್ಣದಾಗಿ ಗದರುತ್ತಿದ್ದರು. ಈ ಬಿಸ್ಕತ್ತುಗಳು ತಮ್ಮ ಜೀವನದ ಭಾಗವೇನೋ ಎನ್ನುವಂತೆ ಒಂದು ದೊಡ್ಡ ಪೊಟ್ಟಣವನ್ನು ಕೈಯಲ್ಲಿ ಹಿಡಿದರು. ಅಷ್ಟರಲ್ಲಿ ಸಮವಸ್ತ್ರ ಧರಿಸಿದ್ದ ಆ ಅಂಗಡಿಯ ಸಹಾಯಕಿಯೋರ್ವಳು ಲೋಹದ ಗಾಲಿಬುಟ್ಟಿಯೊಂದನ್ನು ದೂಡುತ್ತ ಅವರ ಮುಂದೆ ತಂದಿಟ್ಟು `ಟ್ರಾಲಿ ಮ್ಯಾಮ್’ ಎಂದಳು. ಅವರಿಗೆ ಅದು ಬೇಕಿತ್ತೋ ಇಲ್ಲವೋ ಅಂತೂ ಅದನ್ನು ಅವಳಿಂದ ಪಡೆದು ಅದರಲ್ಲಿ ಬಿಸ್ಕತ್ತನ್ನು ಹಾಕಿದರು, ತಂದೆಯೊಂದಿಗಿನ ಮಾತುಕತೆಯ ಸಮಯವನ್ನು ಕಾಯ್ದಿರಿಸಿಕೊಳ್ಳುವಂತೆ!

ಗಾಲಿಬುಟ್ಟಿಯ ಚಕ್ರಗಳು ನಡೆಸಿದತ್ತ ಹೋಗುತ್ತಿದ್ದ ಗಾಯತ್ರಿ ಅವರ ಕಣ್ಣಿಗೆ ಈಳಿಗೆ ಮಣೆಗಳು ಕಂಡಾಗ ಅದರ ಮೇಲೆ ಕುಳಿತು ಕಾಯಿ ತುರಿಯುತ್ತಿದ್ದ ಅಮ್ಮ ಕಣ್ಮುಂದೆ ಬಂದಳು. ಅಪ್ಪ ತೆಂಗಿನಕಾಯಿ ಒಡೆದರೆ ಅಮ್ಮ ಕಾಯಿ ತುರಿಯುತ್ತಿದ್ದಳು. ಕೊಬ್ಬರಿ ಇಲ್ಲದ ಅಡಿಗೆ ಅವರಿಗೆ ರುಚಿಸದು. ಈಳಿಗೆಯ ತುದಿಗೆ ಕಾಯಿ ಹತ್ತಿದಾಗ ಆಗುತ್ತಿದ್ದ ಸದ್ದು, ವೇಗವಾಗಿ ಅಮ್ಮ ಕಾಯಿ ತುರಿದಾಗ ಕೆಳಗಿಡುತ್ತಿದ್ದ ತಟ್ಟೆಯಲ್ಲಿ ಬೀಳುತ್ತಿದ್ದ ಬಿಳಿ ಬಣ್ಣದ ಹಸಿ ಕೊಬ್ಬರಿ, ಅಮ್ಮನ ವಿಶೇಷ ಕೂಟಿನ ಜೊತೆಗೆ ಕೆಲವೊಮ್ಮೆ ಕೊಬ್ಬರಿಯಿಂದ ತಯಾರಾಗುತ್ತಿದ್ದ ರುಚಿಕರ ಮಿಠಾಯಿಯ ನೆನಪಾಗಿ ಬಾಯಿಯಲ್ಲಿ ನೀರೂರಿತು. ಎಷ್ಟೋ ದಿನಗಳಿಂದ ಈಳಿಗೆಮಣೆಯ ಹರಿತ ಕಡಿಮೆ ಆಗಿದೆ ಎಂದು ಅಮ್ಮ ಹೇಳುತ್ತಿದ್ದದ್ದು ನೆನಪಾಯಿತು. ಅದನ್ನು ಹರಿತ ಮಾಡುವವರು ಇತ್ತೀಚೆಗೆ ಮನೆಯ ಮುಂದೆಯೂ ಬಂದಿರಲಿಲ್ಲ. ಅಂತೂ ಗಾಯತ್ರಿ ಅವರ ಗಾಲಿಬುಟ್ಟಿಯಲ್ಲಿ ಒಂದು ಈಳಿಗೆ ಮಣೆಯೂ ಸೇರಿತು.

ಪುಸ್ತಕ ಪೆನ್ನುಗಳ ರಾಶಿ ಅಂಗಡಿಯಲ್ಲಿ ಒಂದೆಡೆಗೆ ಜಾಗ ಪಡೆದಿದ್ದವು. ಮಕ್ಕಳಿಗಾಗಿ ಬಣ್ಣಬಣ್ಣದ ಚಿತ್ರಗಳಿದ್ದ ಕಥೆಯ ಪುಸ್ತಕಗಳೂ ಸಾಕಷ್ಟಿದ್ದವು. ಅಲ್ಲಿಯೇ ಚಿಕ್ಕ ದೊಡ್ಡ ಕಾರುಗಳು ಲಾರಿ ಟ್ರಕ್ಕು ವಿಮಾನುಗಳು ರೊಬೋಟುಗಳು ರಿಮೋಟ್ ಕಂಟ್ರೋಲ್ಡ್ ಡ್ರೋನುಗಳನ್ನು ಹೊಂದಿಸಿಡಲಾಗಿತ್ತು. ವಿವಿಧ ಆಕಾರ ಆಕೃತಿಗಳಲ್ಲಿ ಜೋಡಿಸುವ ಬ್ಲಾಕ್‍ಗಳು, ಪ್ರಶ್ನೋತ್ತರಗಳ ಆಟಗಳು, ಆಧುನಿಕ ಸ್ಲೇಟುಗಳು, ಗೊಂಬೆಗಳು ಎಲ್ಲವೂ ಇದ್ದವು. ಮಕ್ಕಳು ಆ ಜಾಗಕ್ಕೆ ಬಂದರೆ ಸಾಕು ಅವರು ಏನನ್ನಾದರೂ ಖರೀದಿಸದೆ ಹಿಂತಿರುಗುವ ಸಾಧ್ಯತೆಯೇ ಇರಲಿಲ್ಲ. ಓದುವ ಮಕ್ಕಳಿಗೆ ಇಷ್ಟೆಲ್ಲ ಸಲಕರಣೆಗಳು ಯಾವಾಗ ಎಲ್ಲಿಂದ ಬಂದವು ಎಂಬ ಕುತೂಹಲ ಗಾಯತ್ರಿ ಅವರಿಗೆ ಆಗಿತ್ತು. ಕೆಲವು ಆಟಿಕೆಗಳನ್ನು ಹೇಗೆ ಉಪಯೋಗಿಸಬೇಕೋ ಎಂಬುದನ್ನೇ ತಿಳಿಯದಾದರು. ಅಷ್ಟೆಲ್ಲ ಸಾಮಾನುಗಳ ಮಧ್ಯೆ ಹಿಂದೆ ರಬ್ಬರ್ ಜೋಡಿಸಿದ್ದ ಹತ್ತು ಪೆನ್ಸಿಲ್ಲುಗಳ ಒಂದು ಡಬ್ಬಿ ಮಾತ್ರ ಅವರಿಗೆ ಆಕರ್ಷಕವಾಗಿ ಕಂಡಿತು. ತಮ್ಮನ ಚಿತ್ರಕಲೆಗೆ ಇಂತಹದ್ದೇ ಪೆನ್ಸಿಲ್ಲುಗಳು ಬೇಕಿತ್ತು. ಅವನು ತನಗೆ ತೋಚಿದ್ದನ್ನು ಚಿತ್ರ ಬಿಡಿಸುತ್ತ ನಡುನಡುವೆ ಪೆನ್ಸಿಲ್ಲಿನ ಹಿಂಭಾಗದಲ್ಲಿದ್ದ ರಬ್ಬರಿನಿಂದ ಅಳಿಸುತ್ತ ಆ ರಬ್ಬರಿನ ಚೂರುಗಳನ್ನು ಹಾಳೆಯ ಮೇಲಿಂದ ಉಫ್ ಎಂದು ಊದುತ್ತ ಸಾಕಷ್ಟು ಸಮಯ ಕಳೆಯುತ್ತಿದ್ದ. ಚಿತ್ರಗಳನ್ನು ಬಿಡಿಸದೆ ಕೇವಲ ಓದುವುದೆಂದರೆ ಅವನಿಗೆ ಆಗದ ಕೆಲಸ, ಅವನ ಚಿತ್ರದ ಹಾಳೆಗಳು ಮರೆಯಾದರೋ ಅಪ್ಪಿತಪ್ಪಿ ತುದಿ ಒಂದಿಷ್ಟು ಹರಿದರೆ ಅವನು ಅಳುತ್ತ ಕೂರುತ್ತಿದ್ದ! ಪೆನ್ಸಿಲ್ಲಿನ ಡಬ್ಬಿಯ ಜೊತೆಗೆ ಒಂದು ಕಟ್ಟು ಹಾಳೆಗಳನ್ನೂ ಸೇರಿಸಿಕೊಂಡು ಗಾಯತ್ರಿ ಮುನ್ನಡೆದರು.

ವಿವಿಧ ಗಾತ್ರದ ದೊಡ್ಡ ಪರದೆಗಳನ್ನುಳ್ಳ ಅನೇಕ ಟಿ.ವಿ.ಗಳನ್ನು ಒಂದು ಗೋಡೆಯ ತುಂಬ ನೇತುಹಾಕಿದ್ದರು. ಅವುಗಳೆಲ್ಲ ಹುಲಿ ಸಿಂಹ ಚಿರತೆಗಳ ಬಗ್ಗೆ ಮಾಡಿದ್ದ ಕಾರ್ಯಕ್ರಮವನ್ನು ಒಟ್ಟಿಗೇ ಪ್ರಸಾರ ಮಾಡುತ್ತಿದ್ದವು. ಅದರ ಮುಂದೆ ಒಂದೆರಡು ಕುರ್ಚಿಗಳು ಇದ್ದವು. ಒಂದರ ಮೇಲೆ ಪುಟ್ಟ ಹುಡುಗಿ ಒಬ್ಬಳು ಕುಳಿತಿದ್ದಳು. ಪಕ್ಕದಲ್ಲಿ ಖಾಲಿ ಇದ್ದ ಕುರ್ಚಿಯ ಮೇಲೆ ಗಾಯತ್ರಿ ಅವರು ಆಸೀನರಾದರು. ಪಕ್ಕದಲ್ಲಿದ್ದ ಹುಡುಗಿ ಟಿ.ವಿ.ಯಲ್ಲಿ ಆನೆಗಳ ಹಿಂಡು ನೀರಿನಲ್ಲಿ ಆಡುವುದನ್ನು ಕಂಡು ಚಪ್ಪಾಳೆ ತಟ್ಟುತ್ತಿದ್ದಳು. ಗಾಯತ್ರಿ ಅವರೂ ತಲ್ಲೀನರಾಗಿ ಅದನ್ನು ವೀಕ್ಷಿಸುತ್ತ ಕುಳಿತುಬಿಟ್ಟರು!

ಒಂದೆರಡು ಗಂಟೆ ಕಳೆದು ವನ್ಯಜೀವಿಗಳ ಕುರಿತಾದ ಆ ಕಾರ್ಯಕ್ರಮ ಮುಗಿದು ಜಾಹೀರಾತು ಪ್ರಸಾರವಾಗತೊಡಗಿದಾಗ ಪಕ್ಕಕ್ಕೆ ನೋಡಿದರು, ಪುಟ್ಟ ಹುಡುಗಿ ಈಗ ಅಲ್ಲಿರಲಿಲ್ಲ, ಆಕೆ ಅದು ಯಾವ ಸಮಯ
ಅಲ್ಲಿಂದ ಎದ್ದುಹೋದಳೋ ಅವರಿಗೆ ತಿಳಿದಿಲ್ಲ. ಈಗ ಆ ಕುರ್ಚಿಯ ಮೇಲೆ ಒಬ್ಬ ಗಂಡಸು ಮೊಬೈಲಿನಲ್ಲಿ ಜೋರು ದನಿಯಲ್ಲಿ ಮಾತನಾಡುತ್ತ ಕುಳಿತಿದ್ದ. ಗಾಯತ್ರಿ ಎದ್ದು ನಿಂತು ಸರಸರನೆ ಹೊರಟರು, ಆದರೆ, ಮೊದಲು ಗಾಲಿಬುಟ್ಟಿಯನ್ನು ತಂದಿದ್ದ ಅಂಗಡಿಯ ಸಹಾಯಕಿ ಈಗ ಮತ್ತೆ ಪ್ರತ್ಯಕ್ಷವಾಗಿ ಅವರ ಹಿಂದಿದ್ದ ಗಾಲಿಬುಟ್ಟಿಯನ್ನು ಅವರ ಕೈ ಸೇರಿಸಿದಳು! ಬಿಲ್ಲಿಂಗ್ ಕೌಂಟರ್ ಯಾವ ಕಡೆಗೆ ಇದೆ ಎಂಬುದನ್ನೂ ಬೆರಳು ಮಾಡಿ ತೋರಿಸಿದಳು! ಗಾಯತ್ರಿ ಅವರು ಆಕೆಯ ಸೂಚನೆಯಂತೆ ಗಾಲಿಬುಟ್ಟಿಯನ್ನು ದೂಡುತ್ತ ಹೊರಟರು.

ಬಿಲ್ಲಿಂಗ್ ಕೌಂಟರ್ ಹಾದಿಯಲ್ಲಿದ್ದ ಶೆಲ್ಫ್‍ನಿಂದ ಕೊಬ್ಬರಿ ಎಣ್ಣೆಯ ಬಾಟಲಿಯೊಂದನ್ನು ಹಾಕಿಕೊಂಡು ಸಾಲಿನಲ್ಲಿ ನಿಂತರು. ತಮ್ಮ ತಂಗಿಯ ತಲೆಯ ಸ್ನಾನಕ್ಕೆ ಕೊಬ್ಬರಿ ಎಣ್ಣೆ ಬೇಕಿತ್ತು. ಅವರಿಬ್ಬರು ವಾರಕ್ಕೊಮ್ಮೆ ಒಬ್ಬರ ಕೂದಲಿಗೆ ಮತ್ತೊಬ್ಬರು ಎಣ್ಣೆ ಹಚ್ಚುತ್ತ ಹರಟೆ ಹೊಡೆಯುತ್ತಿದ್ದರು. ಕೆಲವೊಮ್ಮೆ ಅಮ್ಮ ಎಣ್ಣೆಯನ್ನು ಬಿಸಿ ಮಾಡಿ ಕೊಡುತ್ತಿದ್ದರು. ಆಗೆಲ್ಲ ಮುಖ ಕೈ ಕಾಲುಗಳಿಗೂ ಎಣ್ಣೆಯ ಲೇಪನವಾಗುತ್ತಿತ್ತು. ಬಿಸಿಮಾಡಿದ ಕೊಬ್ಬರಿ ಎಣ್ಣೆಯ ಪರಿಮಳ ತಂಗಿಗೆ ಬಹಳ ಹಿಡಿಸುತ್ತಿತ್ತು.

ಐದು ಹತ್ತು ನಿಮಿಷ ಕಳೆದರೂ ಬಿಲ್ಲಿಂಗ್ ಕೌಂಟರಿನ ಸಾಲು ಇದ್ದ ಹಾಗೇ ಇತ್ತು! ಹಣ ಪಾವತಿಗಾಗಿಯೇ ಇದ್ದ ಹಲವು ಕೌಂಟರ್‍ಗಳ ಮುಂದೆ ಅನೇಕ ಜನರ ಸಾಲುಗಳಿದ್ದವು. ಕೆಲವರು ಕುಟುಂಬಸಮೇತರಾಗಿ ಮಾತನಾಡುತ್ತ ನಿಂತಿದ್ದರು. ಕೆಲವರು ಜೊತೆಗೆ ಬಂದವರನ್ನು ಒಂದೆಡೆಗೆ ನಿಲ್ಲಿಸಿ ಒಬ್ಬರೇ ಸಾಲಿನಲ್ಲಿ ನಿಂತಿದ್ದರು. ಈ ದಿನ ಈ ಸಮಯದಲ್ಲಿ ಎಷ್ಟು ಜನ ಸಾಮಾನು ಖರೀದಿ ಮಾಡಿದ್ದಾರೆ ಎಂಬುದಕ್ಕೆ ಈ ಸಾಲುಗಳೇ ಸಾಕ್ಷಿ ಆದಂತಿದ್ದವು! ಕೆಲವರ ಸಾಮಾನಿನ ಬುಟ್ಟಿಗಳು ತುಂಬಿ ತುಳುಕುತ್ತ ಸಾಮಾನುಗಳು ಉದುರಿ ಬೀಳಬಹುದೇನೋ ಎನ್ನುವಂತಿತ್ತು! ಸಾಕಷ್ಟು ಜನ ಮೊಬೈಲಿನ ಮೂಲಕ ಇಲ್ಲವೇ ತಮ್ಮ ಬ್ಯಾಂಕಿನ ಕಾರ್ಡಿನ ಮೂಲಕವೇ ಹಣ ಪಾವತಿಸುತ್ತಿದ್ದರು. ಒಂದಿಬ್ಬರು ಹಣ ಕೊಟ್ಟು ಚಿಲ್ಲರೆ ಸಿಗದೆ ಅದಕ್ಕಾಗಿಯೇ ನಿಮಿಷಗಟ್ಟಲೇ ಕೌಂಟರಿನ ಮುಂದೆ ನಿಂತುಬಿಟ್ಟಿದ್ದರು. ಬಿಲ್ ಮಾಡುತ್ತಿದ್ದವರು `ಕ್ಷಮಿಸಿ, ನಮ್ಮ ಬಳಿ ಚಿಲ್ಲರೆ ಇಲ್ಲ, ಕಾರ್ಡ್ ಪೇಮೆಂಟ್ ಅಥವಾ ಕ್ಯೂಆರ್ ಸ್ಕ್ಯಾನ್ ಮಾಡಿ ಯುಪಿಐ ಪೇಮೆಂಟ್ ಮಾಡಿಬಿಡಿ ಪ್ಲೀಜ್’ ಎಂದು ವಿನಂತಿಸಿಕೊಳ್ಳುತ್ತಿದ್ದರು. ಆದರೆ ಹಣವನ್ನೇ ಕೊಡುತ್ತೇವೆ ಎನ್ನುವವರು ಇಷ್ಟು ವ್ಯಾಪಾರ ವಹಿವಾಟು ಇರುವವರು ಐನೂರಕ್ಕೆ ಎರಡು ಸಾವಿರಕ್ಕೆ ಚಿಲ್ಲರೆ ಇಟ್ಟುಕೊಂಡಿಲ್ಲವೇ ಎಂದು ಪ್ರಶ್ನಿಸುತ್ತಿದ್ದರು!

ಅಷ್ಟು ಕೌಂಟರ್‌ಗಳು, ಡಿಜಿಟಲ್ ಹಣ ಪಾವತಿಯ ಸೌಲಭ್ಯಗಳು ಇದ್ದರೂ ಆಗಬೇಕಿದ್ದ ವೇಗದಲ್ಲಿ ಸಾಲು ಕಡಿಮೆ ಆಗುತ್ತಿರಲಿಲ್ಲ, ವಿಶೇಷವಾಗಿ ಸಮಯ ಉಳಿದಂತೆ ಕಾಣಲಿಲ್ಲ. ಈ ಎಲ್ಲ ಯಂತ್ರಗಳು ಸೌಲಭ್ಯಗಳು ಮಾನವನ ಕೈ ಕೆಲಸಕ್ಕಿಂತ ವೇಗವಾಗಿ ಮುಗಿಯಬೇಕಿದ್ದರೂ ಅಂತಹ ವ್ಯತ್ಯಾಸವೇನು ಅಲ್ಲಿ ಕಂಡುಬರುತ್ತಿರಲಿಲ್ಲ! ಒಂದು ಕೌಂಟರಿನ ಸಾಲಿನಲ್ಲಿದ್ದ ಎಷ್ಟೋ ಜನರಂತೂ ಆ ಕೌಂಟರಿನ ಮುಂದೆ ಇದ್ದಕ್ಕಿದ್ದಂತೆ ಇಟ್ಟ `ಸರ್ವರ್ ಡೌನ್ – ವ್ಹಿ ರಿಗ್ರೆಟ್ ದಿ ಇನ್‍ಕನ್ವೀನಿಯೆನ್ಸ್’ ಬೋರ್ಡ್ ನೋಡುತ್ತಲೇ ತಮಗೆ ತೋಚಿದ ಉಳಿದ ಸಾಲುಗಳಲ್ಲಿ ಸೇರಿಕೊಳ್ಳತೊಡಗಿದರು. ಮತ್ತೊಮ್ಮೆ ಹಿಂದೆಮುಂದೆ ತಳ್ಳುವುದು ಮುಂದಿನವರು ಗುರಾಯಿಸುವುದು ಶುರು ಆಯಿತು. ಎಲ್ಲೆಂದರಲ್ಲಿ ಹೀಗೆ ಜನ ಜಮಾಯಿಸಿ ತಳ್ಳಾಡುತ್ತ ಮೈ ಮೇಲೆ ಬೀಳುತ್ತ ವಾದ ಮಾಡಿ ಜಗಳ ಆಡುವುದೂ ಆಧುನಿಕತೆಯ ಲಕ್ಷಣವಿರಬೇಕೇನೋ!

ಗಾಯತ್ರಿ ಅವರ ಮುಂದೆಯೂ ಮೂರ್ನಾಲ್ಕು ಯುವಕರು ತೂರಿಕೊಂಡರು. ಗಾಯತ್ರಿ ಅವರಿಗೆ ಈಗ ಇದ್ದಕ್ಕಿದ್ದಂತೆ ತಮ್ಮ ಕಾಲೇಜಿನ ದಿನಗಳಲ್ಲಿ ಊರಿನ ಸಿನೆಮಾ ಮಂದಿರಕ್ಕೆ ಗೆಳತಿಯರೊಂದಿಗೆ ಹೋಗಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸುತ್ತಿದ್ದ ದಿನಗಳು ಜ್ಞಾಪಕವಾಗಿ ಮುಗುಳ್ನಕ್ಕರು. ಈ ಸಲ ಅವರ ಮಂದಹಾಸಕ್ಕೆ ಪ್ರತ್ಯುತ್ತರವಾಗಿ ಮುಗುಳ್ನಗೆ ಬೀರುತ್ತಿದ್ದಂತೆ ನಟಿ ಹೇಮಾ ಮಾಲಿನಿ ಮತ್ತೊಂದು ಜಾಹೀರಾತಿನ ಭಿತ್ತಿಪತ್ರದಲ್ಲಿ ಮಿಂಚುತ್ತಿದ್ದಳು. ಅರ್ಧ ಗಂಟೆ ಕಳೆದ ನಂತರ ಗಾಯತ್ರಿ ಅವರ ಸರದಿ ಬಂತು. ಬಿಲ್ ಮಾಡುವ ಯುವಕ `ಮೇಡಮ್ ಬ್ಯಾಗ್ ಬೇಕೇನು? ಚಿಕ್ಕದಕ್ಕೆ ಎಂಟು, ದೊಡ್ಡದಕ್ಕೆ ಹದಿನೈದು’ ಎಂದು ಕೇಳಿದ. ಗಾಯತ್ರಿ ಅವರು ಕೊಂಚ ಗಲಿಬಿಲಿಗೊಂಡರು. ಬ್ಯಾಗ್ ಬೇಡ ಎಂದರು. ಆದರೆ ಸಾಮಾನುಗಳನ್ನು ಹಾಕಿಕೊಳ್ಳಲು ತಮ್ಮ ಬಳಿ ಬ್ಯಾಗ್ ಇಲ್ಲವಲ್ಲ ಎಂದು ಯೋಚಿಸಿ ಚಿಕ್ಕ ಬ್ಯಾಗ್ ಕೊಡಲು ಸೂಚಿಸಿದರು. ಯುವಕ ಎಲ್ಲ ಸಾಮಾನುಗಳನ್ನು ಹಾಕಿ ಅವರ ಕೈಗೆ ಕೊಡುತ್ತ ಒಟ್ಟು ಮೊತ್ತವನ್ನು ಹೇಳಿದ. ಗಾಯತ್ರಿ ಮತ್ತೆ ಗಲಿಬಿಲಿಗೊಂಡು ಎಡ ಬಲ ಭುಜಗಳ ಮೇಲೆ ಕೈಯಾಡಿಸುತ್ತ ಬ್ಯಾಗಿಗಾಗಿ ಹುಡುಕಾಡತೊಡಗಿದರು…

ಸಾಲಿನಲ್ಲಿ ಹಿಂದೆ ನಿಂತಿದ್ದ ಮೂರು ಜನರ ಕುಟುಂಬ ಬೇಸರಪಡುತ್ತ ಗಾಯತ್ರಿ ಅವರಿಗೆ ಬೇಗನೆ ದುಡ್ಡು ಕೊಡಲು ಸೂಚಿಸಿದರು. ಒಂದೆರಡು ನಿಮಿಷದಲ್ಲಿ ಆ ಕುಟುಂಬದ ಗಂಡಸು `ಛೀ ಥೂ ಅದ್ಯಾಕಾದ್ರೂ ಬರ್ತಾರಪ್ಪ ಸುಮ್ಮನೆ! ರೀ ಸರೀರಿ ರೀ…’ ಎಂದೆಲ್ಲ ಗದರಲು ಶುರುಮಾಡಿದ. ಮತ್ತೆ ದೊಡ್ಡ ರಂಪ ಆಗುವ ಮೊದಲು ಗಾಯತ್ರಿ ಅವರೇ ಪಕ್ಕಕ್ಕೆ ಸರಿದು ನಿಂತರು. ಗಾಲಿಬುಟ್ಟಿಯನ್ನು ಕೊಟ್ಟ ಅಂಗಡಿಯ ಸಹಾಯಕಿ ಮತ್ತೆ ಅವರ ಕಡೆಗೆ ಧಾವಿಸಿ ಸಮಸ್ಯೆ ಏನೆಂದು ಕೇಳಿದಳು. ಅವರು ತಮ್ಮ ಬ್ಯಾಗು ಕಳೆದುಹೋಗಿದೆ ಎಂದು ಹೇಳುತ್ತಲೆ ಸಹಾಯಕಿ ಮಾಲ್‍ನಲ್ಲಿ ಪ್ರತ್ಯೇಕ ಜಾಗದಲ್ಲಿ ಕುಳಿತಿದ್ದ ಅಧಿಕಾರಿಯ ಬಳಿ ಗಾಯತ್ರಿ ಅವರನ್ನು ಕರೆದೊಯ್ದಳು.

ಅಧಿಕಾರಿ ಗಾಯತ್ರಿ ಅವರನ್ನು ವಿಚಾರಿಸತೊಡಗಿದ. ಹೆಸರು ಊರು ಮನೆಯ ವಿಳಾಸ ಬ್ಯಾಗಿನ ಬಣ್ಣ ಆಕಾರ ಅಂಗಡಿಯ ಒಳಗೆ ಬರುವಾಗ ಅದು ಅವರ ಬಳಿ ಇತ್ತೋ ಇಲ್ಲವೋ ಅಂತೆಲ್ಲ ಪ್ರಶ್ನೆಗಳ ಮಳೆಯನ್ನು ಸುರಿಸಿದ. ಆದರೆ ಗಾಯತ್ರಿ ಅವರು ಕೊಡೆ ಹಿಡಿದು ಮಳೆಯಿಂದ ಪಾರಾಗುವವರಂತೆ ಸಮರ್ಪಕ ಉತ್ತರ ಕೊಡಲಾರದೆ ತಮಗೆ ತೋಚಿದ್ದನ್ನು ಊಹೆ ಮಾಡಿ ಹೇಳುವಂತೆ ತಡವರಿಸುತ್ತಿದ್ದರು. ಅವರಿಗೆ ಇಲ್ಲಿಗೆ ಬಂದಾಗ ಬ್ಯಾಗು ತಮ್ಮ ಬಳಿ ಇತ್ತೋ ಇಲ್ಲವೋ ನೆನಪಾಗಲಿಲ್ಲ. ತಾವು ಬಳಸುವ ಬ್ಯಾಗಿನ ಬಣ್ಣ ಕೆಂಪೋ ಕಪ್ಪೋ ಎಂಬ ಗೊಂದಲ ಅವರನ್ನು ಕಾಡಿತು. ಇಲ್ಲಿಗೆ ಬರುವ ಮುನ್ನ ಅವರು ಬೇರೆ ಎಲ್ಲಿಗೆ ಹೋಗಿದ್ದರು ಎನ್ನುವ ಪ್ರಶ್ನೆ ಮೂಡಿತು!

ಅಧಿಕಾರಿ ಅವರಿಗೆ ಕುಡಿಯಲು ನೀರು ಕೊಟ್ಟು ಕೊಂಚ ಹೊತ್ತು ಸುಧಾರಿಸಿಕೊಳ್ಳಲು ಸೂಚಿಸಿದ. ಅಗತ್ಯ ಮಾಹಿತಿ ದೊರೆಯದ ಕಾರಣ ತಾನೇ ಸಿಸಿಟಿವಿಯಲ್ಲಿ ಪರಿಶೀಲನೆ ಮಾಡುವುದಾಗಿ ತಿಳಿಸಿದ. ಗಾಯತ್ರಿ ಅವರು ಅಧಿಕಾರಿಯ ಬಳಿ ಇದ್ದ ಕುರ್ಚಿಯ ಮೇಲೆ ಆಸೀನರಾದರು. ಸುತ್ತಲೂ ಗಿರಾಕಿಗಳ ಗದ್ದಲ. ಮಕ್ಕಳ ಅಳು, ಹೆಂಗಸರ ಮಾತಿನ ದನಿ, ನಡುನಡುವೆ ಅಂಗಡಿಯವರು ಮೈಕ್‍ನಲ್ಲಿ ಮಾಡುತ್ತಿದ್ದ ಘೋಷಣೆ. ಈ ಎಲ್ಲ ಶಬ್ದಗಳು ಗಾಯತ್ರಿ ಅವರ ಕಿವಿಯಲ್ಲಿ ಗುಂಯ್‍ಗುಟ್ಟಿದಂತೆ ಆಗುತ್ತಿತ್ತು ಆದರೂ ಅವರು ಕುಳಿತಲ್ಲಿಯೇ ಸಣ್ಣ ನಿದ್ರೆಗೆ ಜಾರಿದರು…

“ಹಳ್ಳಿಯ ಜಾತ್ರೆಯಲ್ಲಿ ಎತ್ತ ನೋಡಿದರತ್ತ ಜನ. ದೊಡ್ಡವರು ಸಣ್ಣವರು ಗಂಡಸರು ಹೆಂಗಸರು ಎತ್ತುಗಳು ಕುರಿಗಳು ಕೋಳಿಗಳು. ತಳ್ಳುವ ಗಾಡಿಯಲ್ಲಿ ಮಾರುತ್ತಿದ್ದ ಬಣ್ಣಬಣ್ಣದ ಗಾಜಿನ ಬಳೆಗಳು, ರಿಬ್ಬನ್‍ಗಳು, ಕಿವಿ ಓಲೆ, ಸರಗಳು. ಸುವಾಸನೆ ಬೀರುವ ಹೂವುಗಳು. ಮಕ್ಕಳಿಗಾಗಿ ಪುಟ್ಟಪುಟ್ಟ ಆಟಿಕೆಗಳು, ಪೀಪಿ, ಬಲೂನುಗಳು. ಎಲ್ಲ ಕಡೆಗೂ ಕರಿದ ಪದಾರ್ಥಗಳು, ಬೆಂಡು ಬತ್ತಾಸಿನ ರಾಶಿ ಹಾಕಿಕೊಂಡು ಮಾರಾಟಕ್ಕೆ ಕುಳಿತಿದ್ದ ಅಂಗಡಿಯವರು!

`ಒಂದು ಕೈಗೆ ಕೆಂಪು ಗಾಜಿನ ಬಳೆ ಮತ್ತೊಂದಕ್ಕೆ ಹಸಿರು ಹಾಕಿದರೆ ಹೇಗೆ?’ ಅಕ್ಕನ ಪ್ರಶ್ನೆ.

`ಅದೂ ಚೆಂದ. ನಾನೂ ಹಾಗೇ ಮಾಡ್ತೀನಿ’ ತಂಗಿಯ ಉತ್ತರ.

ಎರಡು ಡಜನ್ ಬಳೆಗಳನ್ನು ಕೊಳ್ಳುವಷ್ಟರಲ್ಲಿ ಕಡ್ಲೆಕಾಯಿ ತಿನ್ನಲು ಕಾಯುತ್ತಿದ್ದ ತಮ್ಮ. ಜೊತೆಗೆ ಉಪ್ಪುಖಾರದ ಪೇರಲಕಾಯಿ ಮತ್ತು ಐಸ್ ಕ್ಯಾಂಡಿಯನ್ನೂ ಖರೀದಿಸಿ ತೇರಿನ ಹತ್ತಿರ ಬಂದಾಗ ನೂಕುನುಗ್ಗಲು. ಕೈ ಎಲ್ಲೋ ಕಾಲು ಎಲ್ಲೋ ಕೈಯಲ್ಲಿದ್ದ ಸಾಮಾನುಗಳು ಮತ್ತೆಲ್ಲೋ! ಗುಂಪಿನಲ್ಲಿ ಗೋವಿಂದ ಎನ್ನುವಂತೆ ಮೂವರು ತಮ್ಮನ್ನು ತಾವು ಮುಂದೆ ಸಾಗಿಸಿಕೊಂಡು ತೇರಿನ ಬಳಿ ಬರಲು ಸಾಹಸ ಮಾಡುತ್ತಿದ್ದರು. ತೇರಿನಿಂದ ಆಗಾಗ ಬೀಳುತ್ತಿದ್ದ ಹೂವು ಹಣ್ಣು ಉತ್ತತ್ತಿಯ ಪ್ರಸಾದಕ್ಕೆ ಎಲ್ಲರ ಕೈಗಳು ಮುಂದೆ ಚಾಚುತ್ತಿದ್ದವು. ಹಾಗೆ ಚಾಚಿದ ಕೈಗಳು ಮುಂದಿದ್ದವರ ಗಲ್ಲ ತಲೆಗಳಿಗೂ ಬಡಿಯುತ್ತಿದ್ದವು. ಪೆಟ್ಟು ಬಿದ್ದರೂ, ನೂಕುನುಗ್ಗಲಿದ್ದರೂ ಜನರ ಉತ್ಸಾಹಕ್ಕೇನು ಕಡಿಮೆ ಇರಲಿಲ್ಲ. ದೇವರ ಹೆಸರಿನ ಘೋಷಣೆ ಮಾಡುತ್ತ ತೇರಿನ ಸುತ್ತ ಭಕ್ತರ ದಂಡು ಸೇರುತ್ತಲೇ ಇತ್ತು! ತೇರಿನ ಗಾಲಿಗಳು ಮೆಲ್ಲನೆ ಮುಂದೆ ಸಾಗುತ್ತಿದ್ದಂತೆ ಅದನ್ನು ಎಳೆಯುತ್ತಿದ್ದವರ ಸಂಭ್ರಮ ದುಪ್ಪಟ್ಟಾಗಿ ಇನ್ನೂ ಹೆಚ್ಚಿನ ಶಕ್ತಿ ಹಾಕಿ ಅದನ್ನು ಮುಂದೆ ಎಳೆಯುತ್ತಿದ್ದರು.

ಬಹುತೇಕ ಎಲ್ಲರು ಹುರುಪಿನಿಂದಿದ್ದರೂ ಬಿಸಿಲಿನ ತಾಪಕ್ಕೆ ನಡುವಯಸ್ಸಿನ ವ್ಯಕ್ತಿಯೊಬ್ಬ ಅಲ್ಲಿಯೇ ಪ್ರಜ್ಞೆತಪ್ಪಿ ಬಿದ್ದುಬಿಟ್ಟಿದ್ದ. ಅವನನ್ನು ಗಮನಿಸಿದರೂ ಗಮನಿಸದಂತೆ ಬಹಳಷ್ಟು ಜನ ತಮ್ಮಲ್ಲೆ ತಾವಿದ್ದರು. ಆದರೆ ಮೂರ್ನಾಲ್ಕು ಜನ ಮಾತ್ರ ಅವನ ಮುಖಕ್ಕೆ ನೀರು ಚಿಮುಕಿಸಿ ಬಾಯಿಯಲ್ಲಿ ನೀರು ಹಾಕುತ್ತ ಏಳಿ, ಎಚ್ಚೆತ್ತುಕೊಳ್ಳಿ. ಕಣ್ಬಿಟ್ಟು ನೋಡಿ... ತಾವು ಒಬ್ಬರೇ ಬಂದಿರುವಿರೇನು? ಇಲ್ಲಿ ನೋಡಿ...' ಎಂದು ಎಚ್ಚರಪಡಿಸುತ್ತ ಅವನ ಸಹಾಯಕ್ಕೆ ನಿಂತಿದ್ದರು. ಅವನಿಗೆ ಎಚ್ಚರವಾದಂತೆ ಕಂಡುಬಂದರೂ ತತ್ತಕ್ಷಣವೇ ಕಣ್ಣು ತೆರೆಯಲು ಆಗುತ್ತಿರಲಿಲ್ಲ. ಅವನ ಸುತ್ತಲಿದ್ದ ಜನ ಏಳಿ… ಇಲ್ಲಿ ನೋಡಿ…’ ಎಂದೆನ್ನುತ್ತ ಅವನನ್ನು ಎಬ್ಬಿಸುತ್ತಲೇ ಇದ್ದರು…”

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಕಸೂತಿ‍

`ಏಳಿ… ಎಚ್ಚೆತ್ತುಕೊಳ್ಳಿ… ಇಲ್ಲಿ ನೋಡಿ’ ಮತ್ತೆ ಮತ್ತೆ ಅದೇ ಮಾತುಗಳು… ಸುರುಳಿಯಾಗಿ ಕಿವಿಯ ಪರದೆಗೆ ತಾಕುತ್ತ ಎಬ್ಬಿಸುವ ಪ್ರಯತ್ನಮಾಡುವ ಪದಗಳು. ಜೊತೆಗೆ ಭುಜ ತಟ್ಟುವ ಅನುಭವ ಬೇರೆ! ಕಷ್ಟಪಟ್ಟು ಕಣ್ಣುತೆರೆಯುವ ಪ್ರಯತ್ನ ಮಾಡಿದ ಗಾಯತ್ರಿ ಅವರಿಗೆ ಇದು ಹಳ್ಳಿಯೋ ಬೇರೆ ಊರೋ ತಿಳಿಯಲಿಲ್ಲ. ಅಕ್ಕಪಕ್ಕ ನೋಡಿದರೆ ಬರೀ ಜನ. ಬೇರೆಯದೇ ವೇಷಭೂಷಣದಲ್ಲಿರುವ ಜನ. ಎಲ್ಲರೂ ಅಪರಿಚಿತರು ಆದರೆ ಅದೇ ಹಳ್ಳಿಯ ಪರಸೆಯಂತೆ ಗದ್ದಲ! ಗುಜುಗುಜು. ಮಾತುಕತೆ. ಘೋಷಣೆ. ತಾವೀಗ ಕಂಡದ್ದು ಕನಸೋ ಅಥವಾ ಈಗ ಕಾಣುತ್ತಿರುವುದು ಕನಸೋ ಎಂಬ ಪ್ರಶ್ನೆ ಗಾಯತ್ರಿ ಅವರನ್ನು ದಿಕ್ಕುತೋಚದಂತೆ ಮಾಡಿತು.

`ಓಹ್! ಅಂತೂ ಎಚ್ಚರವಾಯಿತಲ್ಲ!’ ಗಾಯತ್ರಿ ಅವರ ಕೈ ಹಿಡಿದಿದ್ದ ಗೋಪಾಲ ನಿಟ್ಟುಸಿರುಬಿಟ್ಟ.

ವಿಚಾರಮಗ್ನರಾಗಿದ್ದ ಗಾಯತ್ರಿ ಅವರ ಗಮನ ಗೋಪಾಲನತ್ತ ಹೋಯಿತು. ಅವರು ಇದೀಗ ಎಚ್ಚರಗೊಂಡಂತೆ ಕಣ್ಣುಗಳನ್ನು ಇನ್ನಷ್ಟು ಅಗಲ ಮಾಡಿ ತೆರೆದರು.

`ಏ ಗೋಪಾಲ ನೀನು ಯಾವಾಗ ಬಂದೆ? ನಾವು ಒಟ್ಟಿಗೆ ಬಂದಿದ್ದೆವೇನು? ನಾವೆಲ್ಲಿದೀವಿ? ನಾವು ಜಾತ್ರೆಗೆ ಬಂದಿದ್ದಲ್ಲವೇನು? ತೇರು ಹೊರಟುಹೋಯಿತೇ?’ ಗಾಯತ್ರಿ ಅವರು ಕುತೂಹಲದಿಂದ ಮುಂದಿದ್ದ ಮಗನಿಗೆ ಪ್ರಶ್ನೆ ಕೇಳಿದರು.

`ಹೌದು. ನಾವು ಒಟ್ಟಿಗೆ ಬಂದಿದ್ದು. ಆದರೆ ಜಾತ್ರೆಗಲ್ಲ, ಇಲ್ಲಿ ಸಾಮಾನು ಖರೀದಿ ಮಾಡೋದಕ್ಕೆ. ನಿನಗೆ ಕಾಲುನೋವು ಅಂತ ನಾನೇ ಇಲ್ಲಿ ಕೂರಿಸಿದೆ. ನೀನು ಬೇಸತ್ತು ಸಣ್ಣ ನಿದ್ರೆಗೆ ಜಾರಿರಬೇಕು. ನಡಿ. ಮನೆಗೆ ಹೊರಡೋಣ.’

`ಓಹ್! ಹೌದೇನು? ನಡಿ. ನನಗೆಲ್ಲೋ ಈ ಗದ್ದಲದಲ್ಲಿ ಜಾತ್ರೆಗೆ ಬಂದ ಹಾಗಾಗಿತ್ತು!’ ಗಾಯತ್ರಿ ಅವರಿಗೆ ಇನ್ನೂ ಗಲಿಬಿಲಿ ಕಡಿಮೆ ಆಗಿರಲಿಲ್ಲ.

`ಅಮ್ಮ, ಇನ್ನೊಂದು ನಿಮಿಷ ನೀನು ಇಲ್ಲಿಯೇ ಕುಳಿತಿರು. ನಾನು ಈಗ ಬಂದೆ’ ಎಂದವನೇ ಗೋಪಾಲ ಸನಿಹದಲ್ಲಿದ್ದ ಸಹಾಯಕಿಗೆ ತಾಯಿಯನ್ನು ಕೊಂಚ ಹೊತ್ತು ನೋಡಿಕೊಳ್ಳುವಂತೆ ಕೋರಿದ. ಕುತೂಹಲದಿಂದ ಇವರತ್ತಲೇ ನೋಡುತ್ತ ಅಲ್ಲಿಯೇ ನಿಂತಿದ್ದ ಅಧಿಕಾರಿಯನ್ನು ಕೊಂಚ ಪಕ್ಕಕ್ಕೆ ಕರೆದ. ಅಧಿಕಾರಿಯ ಕೈ ಕುಲುಕಿ ತಾಯಿಯ ಬಗ್ಗೆ ಕರೆಮಾಡಿ ವಿಷಯ ತಿಳಿಸಿದ್ದಕ್ಕೆ ಧನ್ಯವಾದ ಹೇಳಿದ.

`ಸರ್, ಇದು ನಮ್ಮ ಕರ್ತವ್ಯ. ನಿಮ್ಮ ತಾಯಿಯನ್ನು ನೋಡಿದರೆ ಒಳ್ಳೆಯ ಕುಟುಂಬದವರು ಎನಿಸಿದರು. ಆದರೆ ಸಾಮಾನನ್ನು ಖರೀದಿ ಮಾಡಿ ಹಣ ಕೊಡುವಾಗ ಬ್ಯಾಗ್ ಕಳೆದಿದೆ ಎಂದರು. ನಮ್ಮ ಸಿಸಿಟಿವಿ ದೃಶ್ಯಾವಳಿಯಲ್ಲಿ ಅವರು ಒಳಗೆ ಬಂದಾಗ ಜೊತೆಗೆ ಏನನ್ನೂ ತರದೆ ಖಾಲಿ ಕೈಯಲ್ಲಿ ಬಂದಿದ್ದು ಗೊತ್ತಾಯಿತು. ಜೊತೆಗೆ ನಾವು ಏನೇ ಪ್ರಶ್ನೆ ಕೇಳಿದರೂ ಅವರಿಂದ ಸಮರ್ಪಕ ಉತ್ತರ ಬರದೆ ಇದ್ದಾಗ ನಮಗೆ ಅನುಮಾನ ಮೂಡಿ ಅವರಿಗೆ ಇಲ್ಲಿಯೇ ಕುಳಿತಿರಲು ತಿಳಿಸಿ ಹತ್ತಿರದ ಪೊಲೀಸಿಗೆ ವಿಷಯ ಮುಟ್ಟಿಸಿದೆವು. ನೀವೂ ನಿಮ್ಮ ತಾಯಿ ಕಾಣೆಯಾಗಿದ್ದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ವರದಿ ಮಾಡಿದ್ದರಿಂದ ಅವರು ಬಹುಬೇಗನೆ ತಮಗೆ ವಿಷಯ ತಿಳಿಸಿದ್ದಾರೆ. ಆದರೆ ನೀವೇಕೆ ಅವರಿಗೆ ನೀವು ಒಟ್ಟಿಗೆ ಬಂದೆವೆಂದು ಹೇಳಿದಿರಿ?’

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಉರಿವ ರಾತ್ರಿ ಸುರಿದ ಮಳೆ

ನಮ್ಮ ತಾಯಿಯವರಿಗೆ ಮರೆವಿನ ಕಾಯಿಲೆ ಸುಮಾರು ಎರಡು ಮೂರು ವರ್ಷಗಳಿಂದ ಇದೆ. ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ ಎಂದೇ ಹೇಳಬೇಕು. ಅವರು ರಿಟೈರ್ಡ್ ಟೀಚರ್. ವೃತ್ತಿಯಲ್ಲಿದ್ದಾಗ ಶಾಲೆಯಲ್ಲಿ ತುಂಬಾ ಹೆಸರುವಾಸಿ. ನಿವೃತ್ತಿ ಆದನಂತರ ಮನೆಯಲ್ಲಿ ಹೆಚ್ಚಿನ ಹೊತ್ತು ಕಾಲ ಕಳೆಯುತ್ತಿದ್ದರು. ಆದರೂ ತಮಗೆ ಸಾಧ್ಯವಾದಷ್ಟು ಮನೆಯ ಕೆಲಸ ಮಾಡುತ್ತ ನನ್ನ ಮಕ್ಕಳಿಗೂ ವಿದ್ಯಾಭ್ಯಾಸದಲ್ಲಿ ಸಹಾಯ ಮಾಡುತ್ತಿದ್ದರು. ಆಗಾಗ ಸಣ್ಣಪುಟ್ಟ ವಿಷಯಗಳನ್ನು ಮರೆತಾಗ ನಾವು ಅಷ್ಟೇನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ ಅದು ಸಾಕಷ್ಟು ವಿಷಯಗಳಲ್ಲಿ ಮರುಕಳಿಸತೊಡಗಿದಾಗ ನಮಗೆ ಕಾಳಜಿ ಆಗತೊಡಗಿತು. ಅದರಲ್ಲೂ ಅವರು ಕೆಲವೊಮ್ಮೆ ತಮ್ಮ ಬಾಲ್ಯದಲ್ಲಿ ತಂದೆ ಅಣ್ಣ-ತಮ್ಮ ತಂಗಿಯ ಜೊತೆಗೆ ಇದ್ದ ದಿನಗಳಲ್ಲಿ ಇದ್ದಂತೆ ವರ್ತಿಸತೊಡಗಿದಾಗ ನಮ್ಮನ್ನು ಬೇರೆಯವರಂತೆ ಕಾಣತೊಡಗಿದಾಗ ನಾವು ವೈದ್ಯರನ್ನು ಕಂಡೆವು. ವೈದ್ಯರು ನನ್ನ ತಾಯಿಗೆ ಮರೆವಿನ ಕಾಯಿಲೆ ಇರುವ ಬಗ್ಗೆ ದೃಢಪಡಿಸಿದರು!' ಗೋಪಾಲ ಆ ದಿನ ಆಸ್ಪತ್ರೆಯಲ್ಲಿ ವೈದ್ಯರು ಕೆಲ ಪರೀಕ್ಷೆಗಳನ್ನು ಮಾಡಿ ದಿಸ್ ಈಜ್ ಏ ಕೇಸ್ ಆಫ್ ಡಿಮೆನ್ಶಿಯಾ ಮಿಸ್ಟರ್ ಗೋಪಾಲ್’ ಎಂದು ಹೇಳಿದ್ದನ್ನು ನೆನಪಿಸಿಕೊಂಡು ಕೊಂಚ ಭಾವುಕನಾದ. ಆ ದಿನದಿಂದ ಅವನ ಜೀವನವೂ ಮೊದಲಿನಂತೆ ಸಹಜವಾಗಿ ಇರಲೇ ಇಲ್ಲ! ಪ್ರತಿದಿನ ತಾಯಿಯ ಸುರಕ್ಷತೆಯದೇ ಚಿಂತೆ!

`ಕ್ಷಮಿಸಿ ಸರ್, ನಿಮ್ಮ ತಾಯಿಯವರು ಈ ದಿನ ಇಲ್ಲಿಗೆ ಬಂದಂತೆ ಮತ್ತೆಲ್ಲಾದರೂ ಹೋಗಬಹುದಲ್ಲ?’ ಅಧಿಕಾರಿಯ ದನಿಯಲ್ಲಿ ಕಾಳಜಿ ಇತ್ತು.

`ಹೌದು! ಎಷ್ಟೇ ಎಚ್ಚರವಹಿಸಿದರೂ ಒಂದೆರಡು ಸಲ ಪಾರ್ಕಿಗೆ, ಮತ್ತೊಮ್ಮೆ ಒಂದು ಚರ್ಚಿಗೆ ಹೋಗಿದ್ದರು. ವಾಹನಗಳ ದಟ್ಟಣೆ ಇರುವ ರಸ್ತೆಗಳಲ್ಲಿ ಹೆಚ್ಚಿಗೆ ಲಕ್ಷ್ಯವಿರದೆ ಒಬ್ಬರೇ ಓಡಾಡುವುದನ್ನು ನೆನೆಯಲೂ ಭಯವಾಗುತ್ತದೆ. ಅವರಿಗೆ ಕಾಯಿಲೆಯ ವಿಷಯ ತಿಳಿಸಿದರೂ ಅದು ತಿಳಿಯುವುದೂ ಇಲ್ಲ ನೆನಪಿನಲ್ಲಿಯೂ ಉಳಿಯುವುದಿಲ್ಲ. ಅವರನ್ನು ಒಂದು ಕಡೆಗೆ ಕಟ್ಟಿಹಾಕಲೂ ಸಾಧ್ಯವಿಲ್ಲ! ಸಹಜವಾಗಿಯೇ ಹಿಂದಿನ ದಿನಗಳ ನೆನಪು ಮತ್ತು ಇಂದಿನ ದಿನಗಳಲ್ಲಿ ಇರುತ್ತಾರೆ. ಈ ದಿನವೂ ಮನೆಯಲ್ಲಿ ನನ್ನ ಹೆಂಡತಿ ಮತ್ತು ಮಗಳ ಕಣ್ತಪ್ಪಿಸಿ ಇಲ್ಲಿ ಬಂದುಬಿಟ್ಟಿದ್ದಾರೆ. ನನ್ನ ಮಗಳು ನನಗೆ ಕರೆಮಾಡಿ ವಿಷಯ ತಿಳಿಸಿದ ಕೂಡಲೇ ಆಫೀಸಿನಿಂದ ನೇರವಾಗಿ ಪೊಲೀಸ್ ಠಾಣೆಗೆ ಹೋಗಿದ್ದೆ. ಅಂತೂ ಕೆಲವೇ ಗಂಟೆಗಳಲ್ಲಿ ಅವರ ಪತ್ತೆ ಆಯಿತು. ನಿಮ್ಮ ಪರಿಶ್ರಮಕ್ಕೆ ತುಂಬಾ ಥ್ಯಾಂಕ್ಸ್. ಸರಿಯಾಗಿ ಗಮನಿಸಿ ನನ್ನ ತಾಯಿ ನಮಗೆ ಸಿಗುವಂತೆ ಮಾಡಿದ್ದೀರಿ.’ ಗೋಪಾಲ ಅಧಿಕಾರಿಯ ಕೈ ಮತ್ತೊಮ್ಮೆ ಕುಲುಕಿ ಹೊರಟ.

ಕುಳಿತಿದ್ದ ಗಾಯತ್ರಿ ಅವರು ಈಗ ಎದ್ದುನಿಂತು ಹೂದಾನಿಯನ್ನು ನೋಡತೊಡಗಿದ್ದರು. ತಾಯಿ ಖರೀದಿಸಿದ್ದ ಸಾಮಾನುಗಳಿಗೆ ಹಣ ಪಾವತಿಸಿದ ಗೋಪಾಲ ಸಾಮಾನುಗಳ ಚೀಲದೊಂದಿಗೆ ತಾಯಿಯ ಕೈ ಹಿಡಿದು
ಮನೆಗೆ ಕರೆದುಕೊಂಡು ಹೊರಟ. ತಾನು ಚಿಕ್ಕವನಿದ್ದಾಗ ಶಾಲೆಯಿಂದ ಮನೆಗೆ ಅಮ್ಮ ಹೀಗೆಯೇ ಕರೆದುಕೊಂಡು ಹೋಗುತ್ತಿದ್ದರು. ತಾನು ಕೈ ಬಿಡಿಸಿಕೊಳ್ಳುತ್ತ ಮುಂದೆ ಓಡುತ್ತಿದ್ದೆ. ಮಗ ದಾರಿತಪ್ಪಬಾರದೆಂದು ಕಳೆದುಹೋಗಬಾರದೆಂದು ಹಿಂದೆ ಓಡಿಬರುತ್ತಿದ್ದ ಅಮ್ಮನ ಆತಂಕ ಈಗ ಗೋಪಾಲನಿಗೆ ಹೆಚ್ಚು ಅರ್ಥವಾಗಿತ್ತು.

ಈ ಬಾರಿ ಮೇಲಿನಿಂದ ಕೆಳಗಿಳಿಯುತ್ತಿದ್ದ ಲಿಫ್ಟ್ ಮೂರನೆಯ ಮಹಡಿಯಲ್ಲಿ ನಿಂತು ಬಾಗಿಲನ್ನು ತೆರೆಯಿತು. ಮಗನೊಂದಿಗೆ ಅದರೊಳಗೆ ಹೋದ ಗಾಯತ್ರಿ ಅವರು ಅದು ಮತ್ತೆ ಕೆಳಗಿಳಿಯುತ್ತಿದ್ದಂತೆ ಗಾಜಿನ ಬಾಗಿಲಿನ ಮೂಲಕ ಹೊರಗೆ ಕಾಣಿಸುತ್ತಿದ್ದ ಅಂಗಡಿಗಳನ್ನು ಮತ್ತು ಜನರನ್ನು ವೀಕ್ಷಿಸತೊಡಗಿದರು, ತಮ್ಮೂರಿನ ಪರಸೆಯಲ್ಲಿ ತಂದೆಯೊಂದಿಗೆ ತಿರುಗುಣಿಯಲ್ಲಿ ಕುಳಿತಾಗ ಕೆಳಗಿನ ದೃಶ್ಯಗಳನ್ನು ಕೌತುಕದಿಂದ ನೋಡುತ್ತಿದ್ದಂತೆ..!

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಶ್ರಾವಣಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮೈಸೂರು

Book Release: ಮೈಸೂರಿನಲ್ಲಿ ಮೇ 9ರಂದು ಐತಿಚಂಡ ರಮೇಶ ಉತ್ತಪ್ಪ ಅವರ 4 ಪುಸ್ತಕ ಬಿಡುಗಡೆ, ಸಂವಾದ

Book Release: ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

Ithichanda Ramesh Uthappaʼs Four books to be released in Mysore on May 9
Koo

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ, ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶನ ಹಾಗೂ ಮೈಸೂರು ಕಲ್ಚರಲ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ (Ithichanda Ramesh Uthappa) ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮವನ್ನು (Book Release) ನಗರದ ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು ಉದ್ಘಾಟಿಸಲಿದ್ದು, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಹಾಗೂ ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಭಾಗವಹಿಸಲಿದ್ದಾರೆ.

ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ.ಎಸ್. ಸಪ್ನ ಅವರು ಅಧ್ಯಕ್ಷತೆ ವಹಿಸಲಿದ್ದು, ವಿಶೇಷ ಅತಿಥಿಗಳಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ ಹಾಜರಿರಲಿದ್ದಾರೆ.

ಇದನ್ನೂ ಓದಿ | ರಾಜಮಾರ್ಗ ಅಂಕಣ: ಶೇಕ್ಸ್‌ಪಿಯರ್‌ ನೆನಪಿನಲ್ಲಿ ಓದುವ ಸುಖ ನೆನಪಿಸಿಕೊಳ್ಳುವ ಹೊತ್ತು

ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ಕೆ.ಪುಟ್ಟಸ್ವಾಮಿ, ಸಹ ಪ್ರಾಧ್ಯಾಪಕರಾದ ಪ್ರೊ. ಎನ್. ಮಮತ, ಪುಸ್ತಕಗಳ ಲೇಖಕರಾದ ಐತಿಚಂಡ ರಮೇಶ್ ಉತ್ತಪ್ಪ, ಪ್ರಕಾಶಕ ಚೇತನ್ ಕಣಬೂರು, ಮೈಸೂರು ಕಲ್ಬರಲ್ ಅಸೋಸಿಯೇಷನ್‌ನ ಎ.ಪಿ.ನಾಗೇಶ್ ಉಪಸ್ಥಿತರಿರಲಿದ್ದಾರೆ.

ಬಿಡುಗಡೆಯಾಗಲಿರುವ ಕೃತಿಗಳು

  • ಕಾಡು ಹೇಳಿದ ಕಥೆ: ವೈಲ್ಡ್‌ ಲೈಫ್ ರಿಪೋರ್ಟಿಂಗ್
  • ಹಾವು: ನಂಬಿಕೆ ಹಾಗೂ ಮನೋವೈಜ್ಞಾನಿಕ ವಿಶ್ಲೇಷಣೆ
  • ಆನೆ: ಬದಲಾದ ವರ್ತನೆ
  • ಅರ್ಜುನ ನಿನ್ನ ಮರೆಯಲೆಂತು ನಾ..!
Continue Reading

ಅಂಕಣ

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

ಧವಳ ಧಾರಿಣಿ ಅಂಕಣ: ಕಾಮವೆನ್ನುವುದು ಎಂತಹವರನ್ನೂ ತಲೆಕೆಡಿಸಿಬಿಡುತ್ತದೆ. ಕಾಮದ ಹುಚ್ಚಿನಲ್ಲಿರುವ ದಶರಥ ತನ್ನ ಸುಖಕ್ಕಾಗಿ ಏನನ್ನು ಮಾಡಲೂ ಹೇಸದ ಸ್ಥಿತಿಗೆ ತಲುಪಿದ್ದಾನೆ. ವಧಾರ್ಹನಲ್ಲದವನನ್ನು ವಧಿಸಲೇ, ಮರಣದಂಡನೆಗೆ ಗುರಿಯಾದವನನ್ನು ಬಿಡಿಸಲೇ, ದರಿದ್ರನನ್ನು ಶ್ರೀಮಂತನನ್ನಾಗಿ ಮಾಡಲೇ, ಶ್ರೀಮಂತನನ್ನು ದರಿದ್ರನನ್ನಾಗಿ ಮಾಡಲೇ; ನಿನ್ನ ಪ್ರೀತಿಗಾಗಿ ಏನನ್ನೂ ಮಾಡಲೂ ತಾನು ಸಿದ್ಧ ಎನ್ನುತ್ತಾನೆ.

VISTARANEWS.COM


on

king dasharatha kaikeyi dhavala dharini column
Koo

ಪ್ರಾಣಕ್ಕಿಂತ ಪ್ರಿಯಳಾದ ಸತಿಯಿಂದ ಪ್ರಾಪ್ತವಾದ ಪುತ್ರ ವಿಯೋಗ

dhavala dharini by Narayana yaji

ಧವಳ ಧಾರಿಣಿ ಅಂಕಣ: ಸ ಕೈಕೇಯ್ಯಾ ಗೃಹಂ ಶ್ರೇಷ್ಠಂ ಪ್ರವಿವೇಶ ಮಹಾಯಶಾಃ
ಪಾಣ್ಡುರಾಭ್ರಮಿವಾಕಾಶಂ ರಾಹುಯುಕ್ತಂ ನಿಶಾಕರಃ ৷৷ಅ.ಯೋ.10.11৷৷

ಬಿಳಿಯದಾದ ಮೋಡಗಳಿಂದ ಕೂಡಿದ ಆಕಾಶದಲ್ಲಿ ರಾಹುವಿಗೆ ಗ್ರಾಸವಾಗುವ ಸಲುವಾಗಿ ಚಂದ್ರನು ಪ್ರವೇಶಿಸುವಂತೆ ಮಹಾಯಶೋವಂತನಾದ ರಾಜನು ಭವ್ಯವಾದ ಕೈಕೇಯಿಯ ಅಂತಃಪುರವನ್ನು ಪ್ರವೇಶಿಸಿದನು.

ಕವಿಸಮಯವೆನ್ನುವದು ರಾಮಾಯಣ ಕಾವ್ಯದ ವಿಶೇಷ. ವಾಲ್ಮೀಕಿ ಕಾವ್ಯವನ್ನು ಕೇವಲ ಉಅಪದೇಶಕ್ಕಾಗಿಯಲ್ಲ, ಅದನ್ನು ತಾಳವಾದ್ಯಗಳೊಂದಿಗೆ ರಾಗವಾಗಿ ಹಾಡಲು ಅನುಕೂಲವಾಗುವಂತೆ ಬರೆದಿದ್ದಾನೆ. ಹಾಡುಗಾರಿಕೆಯಲ್ಲಿ ವರ್ಣನೆಗೆ ಮಹತ್ವ ಬರುತ್ತದೆ. ಕಾವ್ಯದ ಮುಂಗಾಣ್ಕೆ ಅಲ್ಲಲ್ಲಿ ವ್ಯಕ್ತವಾಗುತ್ತಾ ಹೋಗುತ್ತದೆ. ಕೈಕೇಯಿಯ ಅರಮನೆಗೆ ಹೋಗುವ ರಾಜನ ಕುರಿತು ವರ್ಣಿಸುವಾಗ ಬಿಳಿಯದಾದ ಮೋಡ, ರಾಹು, ಆಕಾಶ, ಚಂದ್ರ ಎನ್ನುವ ಉಪಮೆಗಳ ಮೂಲಕ ಹೇಳಿದ್ದಾನೆ. ಆಕಾಶ ಎನ್ನುವುದು ಮನಸ್ಸಿನಲ್ಲಿ ಆಸೆಗಳ ವಿಸ್ತಾರದವನ್ನು ಸೂಚಿಸಿದೆ. ಬಿಳಿಯದಾದ ಮೋಡವೆನ್ನುವದು ಅರ್ಥಪೂರ್ಣವಾದ ಉಪಮೆ. ನೀರಿನಿಂದ ಯುಕ್ತವಾದ ಮೋಡ ಕಪ್ಪಾಗಿರುತ್ತದೆ. ಮನಸ್ಸಿನಲ್ಲಿ ತನ್ನ ಮಗನ ಪಟ್ಟಾಭಿಷೇಕದ ಕುರಿತು ಯಾವ ಆಸೆಯನ್ನೇ ಇರಿಸಿಕೊಳ್ಳಲಿ, ಅದೆಲ್ಲವೂ ನೀರಿಲ್ಲದ ಮೋಡದಂತೆ ವ್ಯರ್ಥವಾಗಿ ಹಾರಿಹೋಗುತ್ತದೆ ಎನ್ನುವುದನ್ನು ಹೇಳುತ್ತಾನೆ. ರಾಹು ಮತ್ತು ಕೇತುಗಳು ಭಾರತೀಯ ಖಗೋಳಶಸ್ತ್ರದ ಪ್ರಕಾರ ಎರಡು ವಿರುದ್ಧದಿಕ್ಕುಗಳಲ್ಲಿರುವ ಬಿಂದುಗಳು. ಈ ಬಿಂದುವಿಗೆ ಸೂರ್ಯಚಂದರು ಬಂದಾಗ ಗ್ರಹಣವಾಗುತ್ತದೆ. ಚಂದ್ರ ಮನಸ್ಸಿನ ಕಾರಕ. ಸಂತೊಷ ಮತ್ತು ಕಾಮವಿಕಾರಗಳು ಮನಸ್ಸಿನಲ್ಲಿ ಉತ್ಪನ್ನವಾಗುವಂತವು. ಚಂದ್ರ ತನ್ನ ಪರಿಭ್ರಮಣದಲ್ಲಿ ರಾಹುವಿನ ಬಿಂದುವಿಗೆ ಬಂದಾಗ ಗ್ರಹಣವಾಗಿ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತಾನೋ ಅದೇರಿತಿ ರಾಜ ತನ್ನೆಲ್ಲ ಕನಸನ್ನು ಕಳೆದುಕೊಂಡು ನಿಶ್ಚಿತವಾಗಿ ಮರಣದತ್ತ ಸಾಗಲು ಬಂದಿದ್ದಾನೆ ಎನ್ನುವುದನ್ನು ಉಪಮಾಮಲಂಕಾರದಲ್ಲಿ ಕವಿ ವರ್ಣಿಸಿದ್ದಾನೆ.

ದಶರಥನ ಪಾತ್ರವನ್ನು ವಿವೇಚಿಸುವಾಗ ಮೊದಲಿನಿಂದಲೂ ಕಂಡುಬಂದ ಅಂಶವೆಂದರೆ ಮಹಾನ್ ರಾಜರ್ಶಿಯಾಗಿದ್ದ ದೊರೆ ರಾಮನ ಕುರಿತು ಕಡುಲೋಭಿಯಾಗಿ ಪರಿವರ್ತನೆಯಾಗಿರುವುದನ್ನು ಗಮನಿಸಬಹುದು. ದಶರಥನ ವ್ಯಕ್ತಿತ್ವವೆನ್ನುವುದು ಸಂಕೀರ್ಣವೇನೂ ಅಲ್ಲ. ಶೂರನಾಗಿದ್ದ; ಸೂರ್ಯವಂಶದ ಧ್ಯೇಯೋದ್ಧಶವಾದ ಧರ್ಮಸ್ಥಾಪನೆಯ ವಿಷಯದಲ್ಲಿ ಸದಾ ನಿರತನಾಗಿದ್ದ. ಅದೇ ಕಾಲಕ್ಕೆ ಅಯೋಧ್ಯೆಯ ಸಿಂಹಾಸನವೆನ್ನುವುದು ಗಣತಂತ್ರವ್ಯವಸ್ಥೆಯಲ್ಲಿ ಇತ್ತು. ರಾಜರಾಗುವವರು ಯಾರೇ ಆದರೂ ಅದಕ್ಕೆ ಪ್ರಜೆಗಳ ಒಪ್ಪಿಗೆ ಪಡೆಯಬೇಕಾಗಿತ್ತು. ಪ್ರಾಚೀನ ಗ್ರೀಸಿನಲ್ಲಿದ್ದ ರೀತಿಯ ಗಣತಂತ್ರವ್ಯವಸ್ಥೆ ಅಯೋಧ್ಯೆಯಲ್ಲಿ ಇತ್ತು ಎನ್ನುವುದಕ್ಕೆ ವಾಲ್ಮೀಕಿಯ ರಾಮಾಯಣವನ್ನು ಮತ್ತು ಮತ್ತು ಪ್ಲೇಟೋವಿನ “The Republic” ಕೃತಿಯನ್ನು ತುಲನೆ ಮಾಡಿದಾಗ ಅನಿಸುತ್ತದೆ. ಅದನ್ನು ಕೇವಲ ತೋರಿಕೆಗಾಗಿ ಆಚರಣೆಯಲ್ಲಿ ಇಟ್ಟು ತನಗೆ ಬೇಕಾದಂತೆ ಉತ್ತರಾಧಿಕಾರಿಯನ್ನು ಆರಿಸುವ ತಂತ್ರವನ್ನು ದಶರಥ ಅನುಸರಿಸಿರುವುದು ರಾಮನಿಗೆ ಪಟ್ಟಗಟ್ಟಬೇಕೆನ್ನುವ ಸಂದರ್ಭದಲ್ಲಿ ಕಾಣಬಹುದು. ಆತನ ಚಾಣಾಕ್ಷನಡೆಯ ಒಳಗಿರುವದು ತನ್ನದು ಎನ್ನುವ ಮೋಹದ ಅರಿವು ಎನ್ನುವುದು ಯಾರ ಗಮನಕ್ಕೂ, ಹೆಚ್ಚೇನು ರಾಮನ ಅರಿವಿಗೂ ಬಾರದ ಹಾಗೆ ನಡೆದುಕೊಂಡಿದ್ದಾನೆ. ಪರಿಪೂರ್ಣ ವ್ಯಕ್ತಿತ್ವದ ರಾಮನಂತಹ ದೊರೆ ತಮಗೆ ಸಿಗುತ್ತಾನೆ ಎನ್ನುವ ಕಾರಣಕ್ಕೆ ಪ್ರಜೆಗಳು ಸಂಭ್ರಮಿಸುವುದು ಸಹಜವೇ ಆಗಿದೆ. ತಾನು ಅಶ್ವಪತಿಗೆ ಕೊಟ್ಟ ಮಾತುಗಳು ಹೀಗೆ ಮರೆಯಾದ ಕಾರಣ ಅದು ದೊರೆಗೆ ಅಪರಿಮಿತ ಸಂತೋಷವನ್ನು ಕೊಟ್ಟಿದೆ. ಇಳಿವಯಸ್ಸಿನಲ್ಲಿ ಕಿರಿಯ ಚಲುವೆಯಾದ ಕೈಕೇಯಿಯ ಹಿಂದೆ ಬಿದ್ದಿದ್ದ ದೊರೆಗೆ ವೃದ್ದಾಪ್ಯದಲ್ಲಿ ಮಕ್ಕಳಾದ ಮೇಲೆ ರಾಮ ಎನ್ನುವ ಕುರುಡು ಮೋಹ ಆವರಿಸಿಕೊಂಡಿತ್ತು. ಆತನ ಕುರಿತು ಮಂಥರೆ ಹೇಳುವ ಮಾತು

ಧರ್ಮವಾದೀ ಶಠೋ ಭರ್ತಾ ಶ್ಲಕ್ಷ್ಣವಾದೀ ಚ ದಾರುಣಃ
ಶುದ್ಧಭಾವೇ ನ ಜಾನೀಷೇ ತೇನೈವ ಮತಿಸಂಧಿತಾ৷৷ಬಾ.ಕಾಂ.7.24৷৷

ನಿನ್ನ ಗಂಡನು ಮೇಲೆಮೇಲೆ ಧರ್ಮಸಮ್ಮತವಾದ ಮಾತುಗಳನ್ನು ಆಡುತ್ತಿದ್ದರೂ ಅಂತರಂಗದಲ್ಲಿ ಬಹಳ ಕಪಟಸ್ವಭಾವದವನು. ಬಾಯಲ್ಲಿ ಮೃದುವಾದ ಮಾತುಗಳನ್ನು ಆಡುತ್ತಿದ್ದರೂ ನಂಬಿಸಿ ಮೋಸಮಾಡುವುದು ಹೇಗೆಂದು ಯೋಚಿಸುತ್ತಿರುತ್ತಾನೆ. ಕರುಣೆಯೆನ್ನುವುದೇ ಇಲ್ಲ, ಬಹಳ ಋಜುಸ್ವಭಾವದವಳಾದ ನೀನು ಆತನ ಕಪಟವನ್ನು ಅರಿಯದೇ ಹೋದೆಯಲ್ಲವೇ.

ಮಂಥರೆ ಇಲ್ಲಿ ಕೈಕೇಯಿಯ ಮನಸ್ಸನ್ನು ತಿರುಗಿಸಲು ಹೇಳಿರುವಳಾದರೂ ಪಾಯಸವನ್ನು ತನ್ನ ರಾಣಿಯರಿಗೆ ಹಂಚುವಲ್ಲಿಂದ ಹಿಡಿದು ರಾಮಪಟ್ಟಾಭಿಷೇಕದ ವರೆಗೆ ದಶರಥ ಏಕಪಕ್ಷೀಯವಾಗಿ ತೆಗೆದುಕೊಂಡ ತೀರ್ಮಾನವನ್ನು ಗಮನಿಸಿದಾಗ ನಮ್ಮ ದೌರ್ಬಲ್ಯ ಶತ್ರುಗಳಿಗೆ ಆಯುಧ ಎನ್ನುವ ನೀತಿಶಾಸ್ತ್ರದ ಮಾತನ್ನು ನೆನಪಿಸುತ್ತದೆ. ಅಂತೂ ತನ್ನ ಕಾರ್ಯವಾದ ರಾಮನ ಪಟ್ಟಾಭಿಷೇಕದ ವಿಷಯದಲ್ಲಿ ಯಾವ ತೊಂದರೆಯಿಲ್ಲದೇ ಸಾಂಗವಾಗಿ ನಡೆಯುವುದು ಎನ್ನುವ ನಂಬಿಕೆಯೊಂದಿಗೆ ಸಂತೊಷವೆನ್ನುವುದು ಅತಿರೇಕಕ್ಕೆ ಹೋಗಿತ್ತು. ಸಂತೋಷ ಅತಿರೇಕಕ್ಕೆ ಹೋದಾಗ ಅದು ಮದಕ್ಕೆ ತಿರುಗುತ್ತದೆ. ಮದವೆನ್ನುವುದು ಕಾಮಕ್ಕೆ ಮೂಲ. ಅದನ್ನು ಇಳಿಸಿಕೊಳ್ಳಲು ಸಂಗಾತಿಯನ್ನು ಹುಡಿಕಿಕೊಳ್ಳುವುದು ಜೀವಿಗಳ ಸಹಜ ಕ್ರಿಯೆ. ಅರಸನಿಗೆ ತನ್ನ ಆಲೋಚನೆಯನ್ನು ಹಂಚಿಕೊಳ್ಳುವ ಸಂಗಾತಿಯ ಅಗತ್ಯ ತುರ್ತಾಗಿ ಎದುರಾಯಿತು. ವಶಿಷ್ಠರಲ್ಲಿಯಾಗಲಿ, ವಾಮದೇವರಲ್ಲಿಯಾಗಲಿ ಇದನ್ನೆಲ್ಲವನ್ನು ಹಂಚಿಕೊಳ್ಳಲು ಅವರೇನು ಸಾಮಾನ್ಯದವರಾಗಿರಲಿಲ್ಲ.

ರಾಮ ಯುವರಾಜ ಪಟ್ಟಕ್ಕೆ ಅರ್ಹನಾಗಿದ್ದರೂ, ಅಯೋಧ್ಯೆಯಲ್ಲಿ ಆ ಸಾಯಂಕಾಲ ನಡೆದ ಸಿದ್ಧತೆ ದಶರಥನ ವೈಯಕ್ತಿಕ ಕಾಮನೆಯ ಫಲವಾಗಿತ್ತು. ಪ್ರಜೆಗಳು ರಾಮನನ್ನು ರಾಜನ್ನಾಗಿ ನೋಡಲು ಬಯಸಿದ್ದರೆನ್ನುವುದು ನಿಜವಾದರೂ ಇಲ್ಲಿಮೊದಲ ಸಾರಿ ರಾಮನ ಪಟ್ಟಾಭಿಷೇಕಕ್ಕಾಗಿ ದಶರಥ ಹೇಗೆಲ್ಲಾ ಮಂಡಿಗೆಯನ್ನು ಹಾಕಿದ್ದ ಎನುವುದನ್ನು ಹಿಂದಿನ ಭಾಗಗಳಲ್ಲಿ ನೋಡಿದ್ದೇವೆ. ರಾಮನನ್ನು ಕೇವಲ ಮಗನಾಗಿ ಮಾತ್ರ ನೋಡಿದ್ದಾನೆಯೇ ಹೊರತು ವಿಶ್ವಾಮಿತ್ರ, ವಶಿಷ್ಠರು, ಪರಶುರಾಮ ಮೊದಲಾದವರಿಗೆ ರಾಮನ ಅವತಾರದ ಹಿಂದಿರುವ ದೈವತ್ವದ ದರ್ಶನ ಅರಸನಿಗೆ ಸಾಯುವವರೆಗೂ ಆಗಲೇ ಇಲ್ಲ. ರಾಮನಿಗೆ ಪಟ್ಟಗಟ್ಟುವ ತನ್ನ ಮನಸ್ಸಿನ ಮಂಡಿಗೆ ಯಶಸ್ವಿಯಾದ ವಿಷಯವನ್ನು ವಿವರವಾಗಿ ವರ್ಣಿಸಿ ಹೇಳಲು ಕಿರಿಯ ರಾಣಿಯಷ್ಟು ಆಪ್ತರು ಬೇರೆ ಯಾರೂ ಇಲ್ಲ. ಕೌಸಲ್ಯೆಗೆ ಹೇಳಿದರೆ ಆಕೆಗೆ ಸಂತೋಷವೇನೋ ಆಗಬಹುದಾದರೂ ಆಕೆಯಲ್ಲಿ ಕಾಮದ ಆಕರ್ಷಣೆ ದೊರೆಗೆ ಬತ್ತಿಹೋಗಿತ್ತು. ಸುಮಿತ್ರೆಯೂ ಅಷ್ಟೇ. ಚಿಕ್ಕವಯಸ್ಸಿನ ಕೈಕೆಯಿಯನ್ನು ಚೆನ್ನಾಗಿ ಮರಳುಮಾಡಿ ಇಟ್ಟುಕೊಂಡಿದ್ದ. ತನಗೆ ಬೇಕಾದ ಹಾಗೆ ಸುಖವನ್ನು ಅವಳಿಂದ ಪಡೆಯುತ್ತಿದ್ದ. ಆಕೆ ರಾಜನಿಗೋಸ್ಕರ ಅಲಂಕರಿಸಿಕೊಂಡು ನಗುಮುಖದಿಂದ ಯಾವತ್ತಿಗೂ ಸ್ವಾಗತಿಸಲು ಸಿದ್ಧಳಾಗಿರುತ್ತಿದ್ದಳು. ಕೈಕೇಯಿ ಮಂಥರೆಯ ಮಾತಿನಿಂದ ಪ್ರಭಾವಿತಳಾಗಿ ರಾಜನನ್ನು ಮಣಿಸಲೇ ಬೇಕೆಂದು ಕೋಪಾಗಾರವನ್ನು ಸೇರಿದರೆ ಇಳಿವಯಸ್ಸಿನ ರಾಜ “ರಾಮಾಭಿಷೇಕದ ಸಂತೋಷದ ವಾರ್ತೆಯನ್ನು ಕೈಕೇಯಿಗೆ ತಿಳಿಸಿ ರತಿಸುಖವನ್ನು ಪಡೆಯಬೇಕೆಂದು ಬಯಸಿ ಅತ್ಯಾಸೆಯಿಂದ ಕೈಕೇಯಿಯ ಅಂತಃಪುರಕ್ಕೆ ಧಾವಿಸಿ ಬರುತ್ತಾನೆ”.

ಕೈಕೇಯಿ ಅಂತಃಪುರದಲ್ಲಿ ಇಲ್ಲವಾಗಿರುವುದನ್ನು ಕಂಡವನಿಗೆ ವ್ಯಾಕುಲವಾಯಿತು. ಪ್ರತಿಹಾರಿ ಹೇಳಿದ “ದೇವ ದೇವಿ ಬೃಶಂ ಕ್ರುದ್ಧಾ ಕ್ರೋಧಾಗಾರಮಭಿದ್ರುತಾ-ಪರಮ ಕ್ರುದ್ಧೆಯಾಗಿ ದೇವಿ ಕೋಪಾಗಾರವನ್ನು ಸೇರಿದ್ದಾಳೆ” ಎನ್ನುವ ಮಾತನ್ನು ಕೇಳಿ ಕಂಗಾಲಾದ. ಕೋಪಾಗಾರಕ್ಕೆ ಧಾವಿಸಿ ನೋಡಿದರೆ ತನ್ನ ಪ್ರೇಯಸಿ ಅಸ್ತವ್ಯಸ್ತವಾಗಿ ನೆಲದ ಮೇಲೆ ಮಲಗಿದ್ದಾಳೆ. ಪ್ರಿಯತಮೆಯನ್ನು ಆಕಾಶದಿಂದ ಚ್ಯುತಳಾದ ಅಪ್ಸರೆಯಂತೆ ಕಂಡವನಿಗೆ ಎದೆಯೊಡೆದು ಹೋಯಿತು. “ನಿಷ್ಕಳಂಕನಾದ ದಶರಥ ಪಾಪಸಂಕಲ್ಪವನ್ನು ಹೊತ್ತ ಕೈಕೇಯಿಯನ್ನು ಕಂಡ” ಎನ್ನುವ ಮಾತು ಇಲ್ಲಿ ಬರುತ್ತದೆ. ಸಂಕಲ್ಪವೆನ್ನುವುದು ಹೊಸ ಕಾರ್ಯಕ್ಕೆ ಹೇತು. ಮುಂದಿನ ಘಟನೆಗೆ ಇಲ್ಲಿ ನಾಂದಿಯಾಗುತ್ತಿದೆ. ಧರ್ಮಮಾರ್ಗದಲ್ಲಿ ಸದಾ ನಡೆಯುತ್ತಿದ್ದ ಅರಸ ಕಾಮಮೋಹಿತನಾಗಿ ಕೈಕೇಯಿಯನ್ನು ಸಮಾಧಾನ ಮಾಡಲು ಹೇಳುವ ಮಾತುಗಳು ಸೂರ್ಯವಂಶಕ್ಕೆ ಹೇಳಿಸಿದ್ದಲ್ಲ.

ಅವಧ್ಯೋ ವಧ್ಯತಾಂ ಕೋ ವಾ ವಧ್ಯಃ ಕೋವಾ ವಿಮುಚ್ಯತಾಮ್.
ದರಿದ್ರಃ ಕೋ ಭವದಾಢ್ಯೋ ದ್ರವ್ಯವಾನ್ಕೋSಪ್ಯಕಿಂಚನಃ৷৷ಅ. ಕಾಂ.10.33৷৷

ಕಾಮವೆನ್ನುವುದು ಎಂತವರನ್ನೂ ತಲೆಕೆಡಿಸಿಬಿಡುತ್ತದೆ. ಕಾಮದ ಹುಚ್ಚಿನಲ್ಲಿರುವ ದಶರಥ ತನ್ನ ಸುಖಕ್ಕಾಗಿ ಏನನ್ನು ಮಾಡಲೂ ಹೇಸದ ಸ್ಥಿತಿಗೆ ತಲುಪಿದ್ದಾನೆ. ವಧಾರ್ಹನಲ್ಲದವನನ್ನು ವಧಿಸಲೇ, ಮರಣದಂಡನೆಗೆ ಗುರಿಯಾದವನನ್ನು ಬಿಡಿಸಲೇ, ದರಿದ್ರನನ್ನು ಶ್ರೀಮಂತನನ್ನಾಗಿ ಮಾಡಲೇ, ಶ್ರೀಮಂತನನ್ನು ದರಿದ್ರನನ್ನಾಗಿ ಮಾಡಲೇ; ನಿನ್ನ ಪ್ರೀತಿಗಾಗಿ ಏನನ್ನೂ ಮಾಡಲೂ ತಾನು ಸಿದ್ಧ ಎನ್ನುವ ಮಾತುಗಳು ದೊರೆತನಕ್ಕೆ ತಕ್ಕುದಲ್ಲ. ಆತ ಅವಳನ್ನು ಸಮಾಧಾನಿಸುತ್ತಾ “ಪ್ರಿಯತಮೆಯಲ್ಲಿ ನನಗೆ ನಿನಗಿಂತ- ಮನುಜರಲ್ಲಿ ರಾಮನಿಗಿಂತ ಹೆಚ್ಚಿನವರು ಯಾರೂ ಇಲ್ಲ” ಎನ್ನುವಲ್ಲಿ ರಾಮನ ಹೆಸರನ್ನು ಕೇಳಿದ ಆಕೆಗೆ ಮತ್ತುಷ್ಟು ಉರಿ ಹತ್ತಿತು. ದೊರೆ ಮನ್ಮಥನ ಬಾಣಕ್ಕೆ ಈಡಾಗಿರುವುದನ್ನು ಪಕ್ಕಾ ಮಾಡಿಕೊಂಡಳು. ಸ್ವಲ್ಪ ಹೊತ್ತು ಕಾಡಿಸಬೇಕು ಎಂದು ಸುಮ್ಮನಾದವಳು. ದಶರಥನಿಗೆ ಸಹಿಸಲಾಗಿಲ್ಲ. ಆಕೆಯ ರೂಪಲಾವಣ್ಯಕ್ಕೆ ಸೋತಿದ್ದ. ಅವಳ ನೋವನ್ನು ಬಗೆಹರಿಸುವುದು ತನ್ನ ಆದ್ಯ ಕರ್ತವ್ಯವೆಂದು ಬಗೆದ.. ಅದು ತನಕ ತಾನು ಗಳಿಸಿದ ಸುಕೃತದ ಮೇಲೆ ಆಣೆಯಿಟ್ಟು ಅವಳ ಬಯಕೆಯನ್ನು ಈಡೇರಿಸುವೆ ಎಂದು ಅಂಗಲಾಚಿದ.

dhavala dharini king dasharatha

ಆದರೂ ಸುಮ್ಮನಿದ್ದ ಕೈಕೇಯಿಗೆ ಕೊನೆಯದಾಗಿ “ನನ್ನ ರಾಮನಾಣೆಗೂ ನೀನು ಹೇಳುವ ಕಾರ್ಯವನ್ನು ಮಾಡುತ್ತೇನೆ” ಎಂದು ಪ್ರತಿಜ್ಞೆ ಮಾಡಿಬಿಟ್ಟ. ಗಾಳದಲ್ಲಿ ಚಿಕ್ಕಮೀನನ್ನು ಚುಚ್ಚಿ ದೊಡ್ಡಮೀನನ್ನು ಸೆಳೆಯುವಂತೆ ಚಕ್ರವರ್ತಿಯನ್ನು ಮಟ್ಟುಹಾಕಿ ತನ್ನ ಕಾರ್ಯಸಾಧಿಸಲು ಇದೇ ಸಮಯವೆಂದು ತಿಳಿದ ಕೈಕೇಯಿ ಬಯಕೆಯನ್ನು ಹೇಳುವ ಮುನ್ನ ರಾಜನಲ್ಲಿನ ಧರ್ಮಪ್ರಜ್ಞೆಯನ್ನು ಜಾಗ್ರತಗೊಳಿಸಲು “ನೀನು ಮಾಡಿದ ಈ ಪ್ರತಿಜ್ಞೆಯನ್ನು ಮೂವತ್ತುಮೂರು ಕೋಟಿ ದೇವತೆಗಳು ಕೇಳಲಿ, ಚಂದ್ರಸೂರ್ಯರೂ ಕೇಳಲಿ, ಆಕಾಶವೂ ಇದಕ್ಕೆ ಸಾಕ್ಷಿಯಾಗಲಿ, ನವಗ್ರಹಗಳು, ಹಗಲು-ರಾತ್ರಿಗಳು, ಎಂಟುದಿಕ್ಕುಗಳು,ಗಂಧರ್ವರಾಕ್ಷಸರನ್ನೊಳಗೊಂಡಿರುವ ಸ್ವರ್ಗ-ಮರ್ತ್ಯ-ಪಾತಾಳ, ನಿಶಾಚರರೂ, ಪಿಶಾಚಗಳೂ, ಭೂತಗಣಗಳೂ, ಗೃಹದೇವತೆಗಳೂ ಸಹಿತ ಎಲ್ಲರೂ ನೀನು ಹೇಳಿದ ಈ ಪ್ರತಿಜ್ಞಾವಾಕ್ಯಕ್ಕೆ ಸಾಕ್ಷಿಗಳಾಗಲಿ” ಎಂದವಳೇ ಆತನನ್ನು ಸಂಪೂರ್ಣವಾಗಿ ಖೆಡ್ಡಾಕ್ಕೆ ತೋಡುವ ಈ ಮಾತನ್ನು ಆಡುತ್ತಾಳೆ.

ಸತ್ಯಸಂಧೋ ಮಹಾತೇಜಾಃ ಧರ್ಮಜ್ಞಃ ಸುಸಮಾಹಿತಾಃ.
ವರಂ ಮಮ ದದಾತ್ಯೇಷಃ ತನ್ಮೇ ಶ್ರೃಣ್ವನ್ತು ದೈವತಾಃ৷৷ಅಯೋ.11.16৷৷

ಎಲೈ ದೇವತೆಗಳಿರಾ! ನೀವೆಲ್ಲರೂ ಕೇಳಿರಿ. ಸತ್ಯಸಂಧನಾದ ಮಹಾತೇಜಸ್ವಿಯಾದ, ಧರ್ಮಜ್ಞನಾದ ಧಶರಥನು ಸಮಾಧಾನಚಿತ್ತನಾಗಿ ತಾನು ಪ್ರತಿಜ್ಞೆ ಮಾಡಿರುವಂತೆ ನನಗೆ ವರವನ್ನು ದಯಪಾಲಿಸಲಿದ್ದಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಕವಿಗೆ ಕಾಡಿದ ಮೂರು ಚಿಂತೆಗಳು

ವ್ಯಾಧನ ಧ್ವನಿಯಿಂದ ಆಕರ್ಷಿತಳಾಗಿ ಬಲೆಗೆ ಬೀಳುವ ಜಿಂಕೆಯಂತೆ ರಾಜನು ತನ್ನ ವಿನಾಶಕ್ಕಾಗಿ ಧರ್ಮಪಾಶವನ್ನು ಕುತ್ತಿಗೆಗೆ ಬಿಗಿದುಕೊಂಡಿದ್ದು ಹೀಗೆ. ಅವನಿಗೆ ಮುಂದೆ ಮಾತಾಡಲು ಅವಕಾಶಕೊಡದಂತೆ ಆತನನ್ನು ಬಿಗಿದಪ್ಪಿ ತನಗೆ ಹಿಂದೆ ಕೊಟ್ಟಿದ್ದ ವರಗಳನ್ನು ಅಪೇಕ್ಷಿಸಿ ಅದಕ್ಕೆ ರಾಜ ಬೇರೆ ಏನನ್ನಾದರೂ ಹೇಳಬಾರದೆಂದು, “ರಾಮನಿಗೆ ಪಟ್ಟಾಭಿಷೇಕಕ್ಕೆ ಯಾವೆಲ್ಲಾ ಸಿದ್ಧತೆಗಳಾಗಿವೆಯೋ ಅದೇ ಸಾಂಬಾರಪದಾರ್ಥಗಳಿಂದ ಭರತನಿಗೆ ಪಟ್ಟಾಭಿಷೇಕವಾಗಬೇಕು. ಎರಡನೇಯ ವರವನ್ನೂ ಹೇಳಿಯೇಬಿಡುವೆ.

ನವ ಪಞ್ಚ ಚ ವರ್ಷಾಣಿ ದಣ್ಡಕಾರಣ್ಯಮಾಶ್ರಿತಃ
ಚೀರಾಜಿನಜಟಾಧಾರೀ ರಾಮೋ ಭವತು ತಾಪಸಃ.

ಹದಿನಾಲ್ಕು ವರುಷಗಳ ಕಾಲ ರಾಮನು ದಂಡಕಾರಣ್ಯಕ್ಕೆ ಹೋಗಿ ಅಲ್ಲಿ ಅವನು ಜಟಾಧಾರಿಯಾಗಿ ನಾರಮುಡಿಯನ್ನುಟ್ಟು ಕೃಷ್ಣಾಜಿನವನ್ನು ಧರಿಸಿ ತಾಪಸನಂತೆ ಇರಬೇಕು.

ಕೈಕೇಯಿ ಇಷ್ಟಕ್ಕೇ ನಿಲ್ಲಿಸುವುದಿಲ್ಲ. “ಆದ್ಯ ಚೈವ ಹಿ ಪಶ್ಯೇಯಂ ಪ್ರಯಾನ್ತಂ ರಾಘವಂ ವನಮ್- ರಾಘವನು ಚೀರಾಜಿನ-ಜಟಾಧಾರಿಯಾಗಿ ಕಾಡಿಗೆ ಹೋಗುವುದನ್ನು ಈಗಲೇ ನಾನು ನೋಡಬೇಕು, ಸತ್ಯವಚನನಾದ ನೀನು ಈಗಲೇ ನಡೆಸಿಕೊಡು” ತನ್ನ ಇಬ್ಬರು ಪ್ರಿಯರಲ್ಲಿ ಒಬ್ಬನಾದ ರಾಮನಿಗೆ ಆಘಾತಕಾರಿಯಾದ ವಿಷಯಗಳನ್ನು ಹೇಳುವ ಮಾತುಗಳು ದಶರಥನ ಕಾಮದ ಪಿತ್ಥವನ್ನು ಜರ್ರನೆ ಇಳಿಸಿಯೇಬಿಟ್ಟಿತು; ಜೊತೆಗೆ ಆತನ ಮನೋಧೈರ್ಯವನ್ನೂ ಸಹ! ಲೋಕದ ಎಲ್ಲಾ ರಾಜರನ್ನು, ಪ್ರಜೆಗಳನ್ನು ಮತ್ತು ವಶಿಷ್ಠರಾದಿಯಾಗಿರುವ ಎಲ್ಲಾ ಋಷಿಗಳನ್ನು ತನ್ನ ಇಷ್ಟಕ್ಕೆ ಒಗ್ಗಿಕೊಳ್ಳುವಂತೆ ತಂತ್ರವನ್ನು ಹೂಡಿದ ಅರಸನ ಇಚ್ಛೆ ಇಲ್ಲಿ ತರಗೆಲೆಗಳಂತೆ ಗಾಳಿಗೆ ಹಾರಿಹೋಯಿತು. ಯಾವ ಉದ್ಧೇಶಕ್ಕಾಗಿ ಕೈಕೇಯಿಯ ಅರಮನೆಗೆ ಬಂದಿದ್ದನೋ ಅವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಕದಡಿಹೋಯಿತು. ಅವನ ಜೀವನದಲ್ಲಿ ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿವದೊಂದೇ ಗುರಿ ಇದ್ದಿದ್ದು. ತನ್ನ ಪ್ರೀತಿಯ ರಾಣಿಯಿಂದಲೇ ಹೀಗೆ ವಿಘ್ನಬರಬಹುದೆಂದು ರಾಜ ಎಣಿಸಿರಲಿಲ್ಲ. ಅಂಥ ಸ್ವಲ್ಪ ಅನುಮಾನ ಬಂದಿದ್ದರೂ ಆತ ಕೈಕೇಯಿಯ ಅರಮನೆಗೆ ಬರುತ್ತಲೇ ಇರಲಿಲ್ಲ. ಒಮ್ಮೆಲೇ ಎಚ್ಚರತಪ್ಪಿ ಬಿದ್ದ. ತನ್ನ ರಾಜತ್ವಕ್ಕೆ ಧಿಕ್ಕಾರ ಹಾಕಿಕೊಂಡ. ಕೊನೆಗೆ ಅನಿವಾರ್ಯವಾಗಿ ಕೈಕೇಯಿಗೆ ನಮಸ್ಕರಿಸಿಕೊಂಡು “ನಿನ್ನ ಕಾಲನ್ನು ಬೇಕಾದರೂ ಹಿಡಿಯುತ್ತೇನೆ, ರಾಮನನ್ನು ರಕ್ಷಿಸು. ವರದಾನವೆನ್ನುವ ಒಂದು ಪ್ರತಿಜ್ಞೆಯಲ್ಲಿ ನನ್ನನ್ನು ಸಿಕ್ಕಿಹಾಕಿಸಿ ನಿರಪರಾಧಿಯನ್ನು ಕಾಡಿಗಟ್ಟಿದ ದೋಷ ನನಗೆ ಬಾರದಿರಲಿ” ಎಂದು ನೆಲದಲ್ಲಿ ಹೊರಳಾಡತೊಡಗಿದ.

ಮೂಂದಿನ ಭಾಗದಲ್ಲಿ ತನ್ನ ಕರ್ಮಫಲವನ್ನು ತಾನು ಉಂಡ ಮಹಾರಾಜ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ

Continue Reading

ದಕ್ಷಿಣ ಕನ್ನಡ

Yakshagana Artist: ವೇಷ ಕಳಚುತ್ತಿರುವಾಗಲೇ ಹೃದಯ ಸ್ತಬ್ಧ ; ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

Gangadhar Puttur : ವೇಷ ಕಳಚುತ್ತಿರುವಾಗಲೇ ಯಕ್ಷಗಾನ ಕಲಾವಿದ (Yakshagana Artist) ಗಂಗಾಧರ ಪುತ್ತೂರು ಇಹಲೋಕ ತ್ಯಜಿಸಿದ್ದಾರೆ. ಮುಖದ ಬಣ್ಣವನ್ನು ಅಳಿಸುತ್ತಿರುವಾಗ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

VISTARANEWS.COM


on

By

Yakshagana Artist No more
Koo

ಮಂಗಳೂರು: ವೇಷ ಕಳಚುತ್ತಿರುವಾಗಲೇ ಹೃದಯಾಘಾತದಿಂದ (Heart attack) ಧರ್ಮಸ್ಥಳ ಯಕ್ಷಗಾನ ಮೇಳದ ಸವ್ಯಸಾಚಿ ಕಲಾವಿದ (Yakshagana Artist) ಗಂಗಾಧರ ಪುತ್ತೂರು(60) ಅವರು ಇಹಲೋಕ ತ್ಯಜಿಸಿದ್ದಾರೆ.

ನಿನ್ನೆ ಬುಧವಾರ (ಮೇ 1) ರಾತ್ರಿ ಕೋಟ ಗಾಂಧಿಮೈದಾನದ ಬಳಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಅವರು ಕುಕ್ಕಿಂತ್ತಾಯ ದೈವದ ವೇಷವನ್ನು ನಿರ್ವಹಿಸಿದ್ದರು. ಬಳಿಕ ಚೌಕಿಗೆ ಆಗಮಿಸಿ ಕಿರೀಟ, ಯಕ್ಷಗಾನದ ಆಭರಣ ತೆಗೆದಿಟ್ಟು, ಮುಖದ ಬಣ್ಣವನ್ನು ಅಳಿಸುತ್ತಿರುವಾಗ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಪುತ್ತೂರಿನ ಸೇಡಿಯಾಪು ನಿವಾಸಿಯಾಗಿರುವ ಇವರು ಏಳನೇ ತರಗತಿಯವರೆಗೆ ವಿದ್ಯಾಭ್ಯಾಸ ಹೊಂದಿದ್ದರು. ತಮ್ಮ 18ನೇ ವಯಸ್ಸಿಗೆ ಯಕ್ಷಗಾನ ತಿರುಗಾಟ ಆರಂಭಿಸಿದ ಗಂಗಾಧರ ಪುತ್ತೂರು ಸುದೀರ್ಘ 40 ವರ್ಷಗಳಷ್ಟು ಕಾಲ ಯಕ್ಷಗಾನ ರಂಗದಲ್ಲಿ ವ್ಯವಸಾಯ ಮಾಡಿದ್ದರು. ಕರ್ಗಲ್ಲು ವಿಶ್ವೇಶ್ವರ ಭಟ್ ಹಾಗೂ ಕೆ.ಗೋವಿಂದ ಭಟ್ ಅವರಿಂದ ನಾಟ್ಯಾಭ್ಯಾಸ ಮಾಡಿದರು.

ಯಕ್ಷಗಾನ ರಂಗದ ಸವ್ಯಸಾಚಿ ಕಲಾವಿದರಾದ ಇವರು ಸ್ತ್ರೀವೇಷದಿಂದ ಹಿಡಿದು ಪುಂಡುವೇಷ, ರಾಜವೇಷ, ಹೆಣ್ಣುಬಣ್ಣ ಸಮರ್ಥವಾಗಿ ನಿರ್ವಹಿಸುತ್ತಿದ್ದರು. 30 ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಗಂಗಾಧರ ಪುತ್ತೂರು ಧರ್ಮಸ್ಥಳ ಮೇಳದಲ್ಲಿಯೇ ಕಲಾವಿದರಾಗಿ ತಿರುಗಾಟ ಮಾಡಿದ್ದರು.

ಇದನ್ನೂ ಓದಿ: Prajwal Revanna case: ತಲೆಮರೆಸಿಕೊಂಡ ಪ್ರಜ್ವಲ್‌ ರೇವಣ್ಣಗೆ ಲುಕೌಟ್‌ ನೋಟಿಸ್‌ ಜಾರಿ, ಬಂದ ಕೂಡಲೇ ಬಂಧನ!

ತೀವ್ರ ಹೃದಯಾಘಾತದಿಂದ ಹಿರಿಯ ಸಂಸದ ಶ್ರೀನಿವಾಸ್‌ ಪ್ರಸಾದ್‌ ವಿಧಿವಶ

ಬೆಂಗಳೂರು: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ (76) (Srinivas Prasad) ಅವರು ತೀವ್ರ ಹೃದಯಾಘಾತದಿಂದ (Heart Aattack) ವಿಧಿವಶರಾದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಲದಿನಗಳ ಹಿಂದೆ ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ 1:20ಕ್ಕೆ (Manipal Hospital ) ಅವರು ನಿಧನರಾಗಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀನಿವಾಸ್ ಪ್ರಸಾದ್ ಅವರು ಏಪ್ರಿಲ್ 22ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎನ್ನಲಾಗಿದೆ.

ಇನ್ನು ಈ ಬಗ್ಗೆ ಶ್ರೀನಿವಾಸ್ ಪ್ರಸಾದ್ ಅಳಿಯ ಹರ್ಷವರ್ಧನ್ ಮಾಹಿತಿ ನೀಡಿದ್ದು, ಶ್ರೀನಿವಾಸ್ ಪ್ರಸಾದ್ ಅವರು ರಾತ್ರಿ 1:20ರ ಸುಮಾರಿಗೆ ತೀವ್ರವಾದ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ರೀತಿಯಲ್ಲಿ ಪ್ರಯತ್ನ ಮಾಡಿದ್ದರು. ಅವರ ಈ ಅಗಲಿಕೆ ಇಡೀ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟ. ನನಗೆ ರಾಜಕೀಯಕ್ಕೆ ಜನ್ಮ ಕೊಟ್ಟಂತವರು. ರಾಜಕೀಯದಲ್ಲಿ ಏಕಾಂಗಿಯಾಗಿ ಹೋರಾಟ ಮಾಡೋದಕ್ಕೆ ಬಿಟ್ಟು ಹೋಗಿದ್ದಾರೆ. ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡಿದ್ದಾರೆ, ಹೋರಾಟದ ಜೀವಿ ಅವರು. ಐದು ವರ್ಷದ ಹಿಂದೆ ನಾನು ನಂಜನಗೂಡಿನಲ್ಲಿ ಗೆದ್ದಾಗ ಅವರು ಲೋಕಸಭೆಯಲ್ಲಿ ಸ್ಪರ್ಧೆ ಮಾಡ್ತಿನಿ ಅಂದರು. ನನ್ನನ್ನು ಅವರು ತಂದೆ ಸ್ಥಾನದಲ್ಲಿ ನಿಂತು ರಾಜಕೀಯವಾಗಿ ಬೆಳೆಸಿದ್ದಾರೆ ಯಾವುದೆ ವಿಚಾರ ಆಗಿದ್ದರೂ ಅವರ ಜೊತೆ ಚರ್ಚೆ ಮಾಡಿಯೇ ನಿರ್ಧಾರಕ್ಕೆ ಬರುತ್ತಿದೆ. ಈಗ ಯಾರ ಬಳಿ ಹೋಗಿ ಕೇಳಲಿ ಎಂದು ಅನಿಸಿ ಬಿಟ್ಟಿದೆ ಎಂದು ಭಾವುಕರಾಗಿ ಮಾತನಾಡಿದರು.

ಇದನ್ನೂ ಓದಿ:Raja Marga Column :‌ ಕಣ್ಣೇ ಕಾಣದ ಆಕೆ ಎರಡು ಬಾರಿ ಐಎಎಸ್‌ ಪಾಸ್‌ ಮಾಡಿದ್ದರು!

ಚಾಮರಾಜನಗರ ಕ್ಷೇತ್ರದಿಂದ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಶ್ರೀನಿವಾಸ್‌ ಪ್ರಸಾದ್‌ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇನ್ನು 2013ರಿಂದ 2016ರವರೆಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಸಚಿವರಾಗಿದ್ದರು . 24 ಡಿಸೆಂಬರ್ 2016 ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದ ಅವರು 2019ರಲ್ಲಿ ಚಾಮರಾಜನಗರ ಸಂಸದರಾಗಿ ಆಯ್ಕೆ.ಯಾಗಿದ್ದರು. ಅನಾರೋಗ್ಯ ಸಮಸ್ಯೆಯಿಂದಾಗಿ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ ಅವರು 2024 ಮಾರ್ಚ್ 17ರಂದು ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Kaladarpana-Art Reflects: ಬೆಂಗಳೂರಿನಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

Kaladarpana-Art Reflects: ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.

VISTARANEWS.COM


on

Kaladarpana-Art Reflects
Koo

ಬೆಂಗಳೂರು: ಕಲಾ ದರ್ಪಣ- ಆರ್ಟ್‌ ರಿಫ್ಲೆಕ್ಟ್ಸ್‌ (Kaladarpana-Art Reflects) ವತಿಯಿಂದ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ನಗರದ ನಾಗರಬಾವಿ 2ನೇ ಹಂತದ ಎನ್‌ಜಿಇಎಫ್‌ ಲೇಔಟ್‌ನ ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಭಾನುವಾರ (ಮೇ 5ರಂದು) ಬೆಳಗ್ಗೆ 8.30ಕ್ಕೆ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, 9ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.

ಅಂತರಾಷ್ಟ್ರೀಯ ಖ್ಯಾತಿಯ ತಬಲ ವಾದಕ ಪಂಡಿತ್ ಡಾ. ಸತೀಶ್ ಹಂಪಿಹೊಳಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಜಾವಾಣಿ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಮತ್ತು ಮಾರುತಿ ಮೆಡಿಕಲ್ಸ್ ಮಾಲೀಕರು ಮಹೇಂದ್ರ ಮುಣೋತ್ ಜೈನ್ ಅವರು ಭಾಗವಹಿಸಲಿದ್ದಾರೆ. ಈ ಮೂವರು ಗಣ್ಯರು, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕಲಾದರ್ಪಣ ಪ್ರಶಸ್ತಿ ಪುರಸ್ಕೃತರು

  • ಗೋ.ನಾ. ಸ್ವಾಮಿ, ಅಂತಾರಾಷ್ಟ್ರೀಯ ಖ್ಯಾತಿಯ ಜನಪದ ಗಾಯಕರು
  • ವಿದುಷಿ ಅನಸೂಯ ದ್ವಾರಕನಾಥ, ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು

ಇದನ್ನೂ ಓದಿ | Film festival: ಬೆಂಗಳೂರಿನಲ್ಲಿ ಮೇ 4, 5ರಂದು ಗುರುದತ್‌ ಚಲನ ಚಿತ್ರೋತ್ಸವ ಮತ್ತು ಸಂಗೀತ ರಸ ಸಂಜೆ

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಕರ್ನಾಟಕ ಚಿತ್ರಕಲಾ ಪರಿಷತ್‌ನ ಪ್ರಾಧ್ಯಾಪಕ ಪ್ರೊ. ವಿ.ಎಸ್. ನಾಯಕ ಬಳಕೂರು, ಎಸ್.ಎಸ್.ವಿ.ಎಸ್.ಪಿ.ಎಸ್. ಶಾಲೆ ಪ್ರಾಂಶುಪಾಲೆ ಲತಾ ಎಸ್. ಅವರು ಆಗಮಿಸಲಿದ್ದಾರೆ. ಕಲಾ ದರ್ಪಣ- ಆರ್ಟ್‌ ರಿಫ್ಲೆಕ್ಟ್ಸ್‌ ಸಂಸ್ಥೆಯ ಹೇಮಾ ವಿನಾಯಕ್‌ ಪಾಟೀಲ್‌ ಹಾಗೂ ವಿನಾಯಕ್‌ ಪಾಟೀಲ್‌ ಅವರು ಉಪಸ್ಥಿತರಿರಲಿದ್ದಾರೆ. ಖ್ಯಾತ ನಿರೂಪಕಿ ಭವಾನಿ ಲೋಕೇಶ್‌ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Continue Reading
Advertisement
Bengaluru Rain
ಕರ್ನಾಟಕ1 hour ago

Bengaluru Rain: ಸಿಲಿಕಾನ್‌ ಸಿಟಿಯಲ್ಲಿ ವರುಣನ ಆರ್ಭಟ; ಜಲಾವೃತವಾದ ರಸ್ತೆಗಳು, ನೆಲಕ್ಕುರುಳಿದ 16 ಮರ

Rohit Sharma
ಪ್ರಮುಖ ಸುದ್ದಿ1 hour ago

Rohit Sharma : 4 ರನ್​ಗೆ ಔಟಾಗಿ ಕಣ್ಣೀರು ಸುರಿಸಿದ ರೋಹಿತ್​ ಶರ್ಮಾ; ಇಲ್ಲಿದೆ ವಿಡಿಯೊ

PM Narendra Modi
ದೇಶ2 hours ago

ತಮ್ಮ ಬಗ್ಗೆ ಟ್ರೋಲ್‌ ಮಾಡಿದ್ದನ್ನೂ ಮೆಚ್ಚಿದ ಮೋದಿ; ಮಮತಾ ಬ್ಯಾನರ್ಜಿ ನೋಟಿಸ್; ಯಾರು ಸರ್ವಾಧಿಕಾರಿ?

School Children
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ, ಇ-ಮೇಲ್‌ ಕಿಡಿಗೇಡಿಗಳಿಗೆ ಕಠಿಣ ಪಾಠ ಕಲಿಸಬೇಕಿದೆ

IPL 2024
ಕ್ರೀಡೆ2 hours ago

IPL 2024 : ಸೂರ್ಯನ ಪ್ರತಾಪಕ್ಕೆ ಮಂಕಾದ ಸನ್​; ಮುಂಬೈಗೆ 7 ವಿಕೆಟ್​ ಭರ್ಜರಿ ಗೆಲುವು

Narendra Modi
ದೇಶ2 hours ago

Maldives: ಭಾರತೀಯರೇ, ದಯಮಾಡಿ ಬನ್ನಿ ಎಂದ ಮಾಲ್ಡೀವ್ಸ್‌ ಸಚಿವ; ಬಾಯ್ಕಾಟ್‌ ಪೆಟ್ಟಿಗೆ ಥಂಡಾ!

DK Shivakumar
ಕರ್ನಾಟಕ2 hours ago

Prajwal Revanna Case: ದೇವರಾಜೇಗೌಡ ನನ್ನ ವಿರುದ್ಧ ಸುಳ್ಳು ಅಪಾದನೆ ಮಾಡಿದ್ದಾರೆ ಎಂದ ಡಿಕೆಶಿ

T20 World Cup 2024
ಕ್ರೀಡೆ2 hours ago

T20 World Cup 2024 : ಕೇಸರಿಯ ರಂಗು; ಟೀಮ್​ ಇಂಡಿಯಾದ ಟಿ20 ವಿಶ್ವ ಕಪ್​​ ಜೆರ್ಸಿ ಬಿಡುಗಡೆ

108 Ambulance
ಕರ್ನಾಟಕ3 hours ago

108 Ambulance: 108 ಸಿಬ್ಬಂದಿಗೆ ಸರ್ಕಾರದಿಂದ ವೇತನ ಬಾಕಿ ಉಳಿಸಿಕೊಂಡಿಲ್ಲ: ದಿನೇಶ್ ಗುಂಡೂರಾವ್

IPL 2024
ಪ್ರಮುಖ ಸುದ್ದಿ3 hours ago

IPL 2024 : ಮುಂಬೈ ಚಾ ರಾಜಾ ರೋಹಿತ್​ ಶರ್ಮಾ ಎಂದು ಕೂಗಿದ ಹೇಡನ್​ ಪುತ್ರಿ ಗ್ರೇಸ್​​; ಇಲ್ಲಿದೆ ವಿಡಿಯೊ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ6 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ7 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ7 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ20 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ1 day ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ1 day ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ1 day ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌