ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಪ್ರೀತಿ ಇಲ್ಲದ ಮೇಲೆ... - Vistara News

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಪ್ರೀತಿ ಇಲ್ಲದ ಮೇಲೆ…

ಉಪಮೆಗಳನ್ನು ಹೇಳಿಕೊಟ್ಟಿದ್ದ, ಅನಿರೀಕ್ಷಿತ ಅಂತ್ಯಗಳ ರಚನೆಗಳನ್ನು ಅಭ್ಯಾಸ ಮಾಡಿಸಿದ್ದ, ಅಷ್ಟೊಂದು ಭಾಷಾ ಕೌಶಲ ಕಲಿಸಿದ್ದ ಅಪ್ಪ ನನಗೆ heckler ಮತ್ತು bombing ಎಂಬ ಪದಗಳ ಅರ್ಥವನ್ನು ಹೇಳಿಕೊಟ್ಟರಲೇ ಇಲ್ಲ; ಅದು ನನಗೆ ಗೊತ್ತಾದದ್ದು ಆ ಎರಡು ಪ್ರಸಂಗಗಳಲ್ಲಿಯೇ.

VISTARANEWS.COM


on

preeti illada mele short story
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
sharat bhat seraje story writer

:: ಶರತ್‌ ಭಟ್‌ ಸೇರಾಜೆ

ನಾನೊಬ್ಬಳು ಸ್ಟಾಂಡ್ ಅಪ್ ಕಾಮಿಡಿಯನ್. ನನ್ನ ಹೆಸರು ತಾನ್ಯಾ. ನಂಗೆ ಹಾಗಂತ ಯಾರು ಹೆಸರಿಟ್ಟರೋ, ಯಾಕಾದರೂ ಇಟ್ಟರೋ? ಅಕ್ಕ ಸಾನ್ಯಾಳ ಹೆಸರಿನ ಜೊತೆ ಪ್ರಾಸ ಸರಿಹೋಗುತ್ತದೆ ಅಂತ ಯೋಚನೆ ಮಾಡಿ ಅಪ್ಪನೇ ಇಟ್ಟಿರಬೇಕು. ನನ್ನನ್ನು ಮುಗಿಸುವ ಸಂಚು ಮಾಡುತ್ತಿರುವ ಅಪ್ಪ! ಕಲ್ಲೆದೆಯ ಅಪ್ಪ. ನನ್ನ ಅಪ್ಪ! ವಿಖ್ಯಾತ ವಿಜ್ಞಾನಿ ಶಂತನು ಕಾಮತ್. ನನ್ನ ಸಮಸ್ಯೆ ಏನು ಅಂದ್ರೆ ನಂಗೆ ಮನಸ್ಸಿನ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳೋಕೆ ಬರೋದಿಲ್ಲ. ಆತಂಕವನ್ನು ಅವಿತಿಡುವ ವಿದ್ಯೆಯನ್ನು ನನಗೆ ಯಾವ ಗುರುವರ್ಯನೂ ಹೇಳಿಕೊಡಲಿಲ್ಲ, ನಾನೂ ಆ ವಿದ್ಯೆಯ ಉಸಾಬರಿಗೆ ಹೋಗಲಿಲ್ಲ. ಏನು ವಿಜ್ಞಾನಿಯಾದರೆ, ಯಾವ ಪ್ರಶಸ್ತಿ ಬಂದರೆ ಏನು ಪುರುಷಾರ್ಥ ಸಾಧಿಸಿದ ಹಾಗಾಯಿತು; ವಾತ್ಸಲ್ಯವೆಂಬುದೇ ಅಪ್ಪನಿಗೆ ಅಪರಿಚಿತ ಶಬ್ದವಾಗಿರುವಾಗ.

ಅಪ್ಪ ಕ್ರುದ್ಧ ಮುಖದ, ನಿರ್ದಯತೆ ತುಂಬಿದ ಕಣ್ಣುಗಳ, ಪೆಡಸು ಮಾತಿನ ಒರಟು ಜೀವಿಯಾಗಿದ್ದರೆ ನಾನು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ವಿಷಯ ಹಾಗಿಲ್ಲ. ಬೇಕಾದಾಗ ಬೇಕಾದವರ ಪಾಲಿಗೆ ಅಪ್ಪ ಪ್ರೀತಿಯ ಊಟೆ, ಮುರುಡೇಶ್ವರದ ಕಡಲ ಕಿನಾರೆಯಲ್ಲಿ ಉಬುಕಿ ಬರುವ ತೆರೆಯ ಕಡೆಗೆ ಮಗುವಿನ ಜೊತೆ ಓಡಿ ನಲಿಯಬಲ್ಲ ಹಸುಳೆ ಮನಸ್ಸು ಅವನದು. ಬೇಕಾದರೆ ಅಕ್ಕ ಸಾನ್ಯಾಳ ಹತ್ತಿರ ಕೇಳಿ ನೋಡಿ.

ಅವಳು ಹೊನ್ನಾವರದಲ್ಲಿ ಕಳೆದ ಬಾಲ್ಯದ ನೆನಪುಗಳ ಉಯ್ಯಾಲೆಯನ್ನು ಜೀಕಿ ಜೀಕಿ ದಣಿಯುತ್ತಾಳೆ. ಅವಳು ಅತ್ತು ಕೂಗಿ ಹಠ ಮಾಡಿದಾಗ ವೀಣೆಯ ಝೇಂಕೃತಿಯಂಥ ದನಿಯಿಂದ ಅನುನಯದ ಮಾತಾಡಿದ್ದರ ಸಾವಿರ ಕಥೆಗಳನ್ನು ಹೇಳ್ತಾಳೆ. ನನ್ನ ಹತ್ತಿರ ಅಂಥ ಯಾವ ಕಥೆಗಳೂ ಇಲ್ಲ. ನನಗೆ ಅಪ್ಪ ಕಲಿಸಿದ್ದು ಅಲಂಕಾರದ ಭಾಷೆಯನ್ನು, ಹಾಸ್ಯವನ್ನು, ಸ್ಟಾಂಡ್ ಅಪ್ ಕಾಮಿಡಿಯನ್ನು. ಅವರ ಪಾಲಿಗೆ ನಾನೊಂದು ಜೋಕು ಸಿಡಿಸುವ ಯಂತ್ರ. “ಹೇಗೆ ತಯಾರು ಮಾಡಿದ್ದೀನಿ ನೋಡಿ ಇವಳನ್ನ” ಅಂಥ ನನ್ನ ಜೋಕುಗಳ ಯಶಸ್ಸನ್ನು ತಾನೇ ಕಸಿದುಕೊಂಡು ಟಿವಿಯಲ್ಲಿ ಮಿರ್ರನೆ ಮೆರೆಯುವುದಕ್ಕೆ ನಾನೊಂದು ಸಾಧನ ಮಾತ್ರ ಅವರಿಗೆ. “ಗೋಣಿಗಟ್ಟಲೆ ಮಾರ್ಕು ತೆಗೆದು ಸಾಯಿ, ತುಂಟಕೋತಿಗಳಿರುವ ಕ್ಲಾಸಿಗೆ ನೀನೇ ಫಷ್ಟು ಬಾ, ಭಾವಗೀತೆಯ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಕಸಿದುಕೊಂಡು ಬಾ” ಅಂತೆಲ್ಲ ಪೀಡಿಸುವ ಅಪ್ಪ ಅಮ್ಮ ಲೋಕದಲ್ಲಿ ಇರುತ್ತಾರಂತೆ. ಜೋಕು ಹೇಳು, ಸ್ಟಾಂಡ್ ಅಪ್ ಕಾಮಿಡಿ ಮಾಡು ಅಂತ ಜೀವ ತಿನ್ನುವ ಅಪ್ಪ ಇವರು ಮಾತ್ರವೇಯೋ ಏನೋ.

ಅಕ್ಕ ಮೊದಲಿಂದಲೂ ತಾನೇ ಆಸೆಪಟ್ಟು ಕಾಮಿಡಿಯನ್ ಆದದ್ದೇ ನನ್ನ ಕರ್ಮ, ಈ ಕಾಮಿಡಿಯ ಬೇತಾಳ ನನ್ನ ಹೆಗಲಿಗೂ ಹತ್ತಿ ಕುಣಿಯುವುದಕ್ಕೆ ಶುರು ಮಾಡಿದ್ದು ಅಕ್ಕ ಹಾಸ್ಯದ ಕ್ಷೇತ್ರಕ್ಕೆ ಹೋದದ್ದರಿಂದಲೇ. ಸಾನ್ಯಾ ಎಷ್ಟಾದ್ರೂ ಹೆಸರಾಂತ ಹಾಸ್ಯಪಟು, ಈ ಕೆಲಸಕ್ಕೆ ಬಾರದ ಪ್ರಾಣಿಯೂ ಅಕ್ಕನ ಹಾಗೇ ಆಗಲಿ ಅಂದುಕೊಂಡಿರಬೇಕು ನಮ್ಮ ವಿಜ್ಞಾನಿ ಮಹಾಶಯ ಶಂತನು ಕಾಮತರು. ಹಾಗಾಗಿ ನನಗೂ ಈ ಹಾಸ್ಯದ ಸಿಂಹಾಸನ, ಬಲವಂತದ ಪಟ್ಟಾಭಿಷೇಕ!

ನನಗೆ ಅಕ್ಕನ ಹಾಗೆ ಆಗಲು ಇಷ್ಟ ಇದೆಯೇ ಅಂತ ಯಾರು ಕೇಳುತ್ತಾರೆ? ಅಷ್ಟು ಸೌಜನ್ಯ ಯಾರಿಗಾದರೂ ಇದ್ದರೆ ನಾನು ಇಷ್ಟೆಲ್ಲ ಯಾಕೆ ಮಾತಾಡುತ್ತಿದ್ದೆ. ನಿಜ ಹೇಳಬೇಕೆಂದರೆ ಇದರಲ್ಲಿ ನನ್ನದೂ ಚಿಟಿಕೆ ಉಪ್ಪಿನಷ್ಟು ತಪ್ಪಿದೆ, ನನಗೆ ಇಷ್ಟಗಳಿವೆ, ಆಕಾಂಕ್ಷೆಗಳು ಇವೆ ಅಂತಲೇ ನನಗೆ ಮೊದಮೊದಲು ಗೊತ್ತಾಗುತ್ತಿರಲಿಲ್ಲ, ನನಗೆ ಈ ಸ್ಟಾಂಡ್ ಅಪ್ಪು ಸಿಟ್ ಡೌನು ಎಲ್ಲ ಬೇಕಾಗಿಲ್ಲ ಅಂತ ಹೇಳಲು ಸಾಧ್ಯವಿದೆ ಅಂತಲೇ ನನಗೆ ಗೊತ್ತಿರಲಿಲ್ಲ. ಅದೆಲ್ಲ ನನ್ನ ತಲೆಗೆ ಹೋದದ್ದು ಇತ್ತೀಚೆಗೆ. ನನಗೆ ತಲೆ ಇದೆ ಅಂತಲೇ ನನ್ನ ಅಕ್ಕ ಅಂದುಕೊಂಡಿಲ್ಲ, ಆ ಮಾತು ಬೇರೆ. ಇನ್ನು ಅಪ್ಪನ ಬಗ್ಗೆಯಂತೂ ಹೇಳುವುದೇ ಬೇಡ ಬಿಡಿ.

ಸಾನ್ಯಾ ಸುಮ್ಮನೆ ಯಾವುದೋ ಅದೃಷ್ಟದ ಮುಂಜಾವಿನಲ್ಲಿ ಯಾರೋ ಮಾಯೆಯಿಂದ ಚಿಮುಕಿಸಿದ ಇಬ್ಬನಿಯಂತೆ ಬಂದ ಭಾಗ್ಯದಿಂದ ಇಷ್ಟೊಂದು ಹೆಸರು ಮಾಡಿದವಳೇನಲ್ಲ. ಅವಳೂ ಕಷ್ಟ ಪಟ್ಟಿದ್ದಳು, ಅವಳಂತೆ ಆಗಹೊರಟು ನಾನೂ ವಿಲಿವಿಲಿ ಒದ್ದಾಡಿದ್ದೆ. ಅದೊಂದು ಕಾಲದಲ್ಲಿ ವಾರಕ್ಕೆ ಎರಡು ಸಲ ಬಾರುಗಳಿಗೆ ಪಬ್ಬುಗಳಿಗೆ ಅಬ್ಬೇಪಾರಿಯಂತೆ ಹೋಗುತ್ತಿದ್ದವಳು ಅಕ್ಕ; ಹೋಗಿ ಒಂದು ತೊಟ್ಟೂ ಕುಡಿಯದೇ ಬರುತ್ತಿದ್ದವಳವಳು! ಅವಳದೇನಿದ್ದರೂ ಕಾಮಿಡಿಯ ನಶೆ. ಆ ಕಾಲದಲ್ಲಿ ಓಪನ್ ಮೈಕುಗಳು ಇರುತ್ತಿದ್ದದ್ದು ಅಂಥ ಬಾರುಗಳ ಮಂದಬೆಳಕಿನಲ್ಲಿ ಮಿಂದ, ಎಂಥವರನ್ನೂ ತಬ್ಬಿಬ್ಬಾಗಿಸುವ ವೇದಿಕೆಗಳಲ್ಲಿ.

‘ಓಪನ್ ಮೈಕಿಗೆ ಬಾರಿಗೆ ಹೋಗ್ತೇನೆ’ ಅಂದಾಗ, ಹಾಗಂದರೆ ಏನು ಅಂತಲೇ ಅಪ್ಪನಿಗೆ ಗೊತ್ತಿರಲಿಲ್ಲ. ಬಾರುಗಳಿಗೆ ಮಗಳು ಯಾಕೆ ಹೋಗುತ್ತಿದ್ದಾಳೆ ಅಂತ ಅಪ್ಪ ಕಕ್ಕಾಬಿಕ್ಕಿಯಾಗಿದ್ದರು. ಏನೇ ತಿಪ್ಪರಲಾಗ ಹಾಕಿದರೂ ಗೆಳೆಯರ ಜೊತೆ ಕುಡಿಯಲು ಕೂತವರನ್ನು ಜೋಕು ಹೇಳಿ ಒಲಿಸಿಕೊಳ್ಳುವುದು ಕಷ್ಟ ಅಂತ ಗೊತ್ತಿದ್ದರೂ, ಸಿಕ್ಕಿದ ವೇದಿಕೆಗಳನ್ನು ಬಿಡಲಿಕ್ಕೆ ಸಾನ್ಯಾ ತಯಾರಿರಲಿಲ್ಲ. ಅವಳ ಸ್ವಭಾವವೇ ಹಾಗೆ. ಹಿಡಿದದ್ದನ್ನು ಸಾಧಿಸದೇ ಬಿಡುವವಳಲ್ಲ. ‘ಯಾವ ಯಬಡೇಶಿ ಬೇಕಾದರೂ ಧಬಾಲನೇ ಬಂದು ಜನರ ಮುಂದೆ ಕಲಕಲ ಜೋಕು ಹೇಳಲು, ತಾಲೀಮು ಮಾಡಲು ಇರುವ ಮುಕ್ತವಾದ ವೇದಿಕೆಯೇ ಓಪನ್ ಮೈಕು, ವಿದೇಶಗಳಲ್ಲೆಲ್ಲ ದೊಡ್ಡವರೂ ತಮ್ಮ ಹೊಸ ಜೋಕು ಜನರನ್ನು ನಗಿಸುತ್ತದಾ ಅಂತ ಪರೀಕ್ಷೆ ಮಾಡಲಿಕ್ಕೆ ಓಪನ್ ಮೈಕುಗಳಿಗೆ ಬರ್ತಾರೆ’ ಅಂತ ಅಪ್ಪನಿಗೆ ಅರ್ಥ ಆಗುವ ಹಾಗೆ ವಿವರವಾಗಿ ಬಿಡಿಸಿ ಹೇಳಿದ್ದಳು ಅಕ್ಕ. ಆಮೇಲೆ ಕೋರಮಂಗಲದ ಕ್ಲೇಟೋಪಿಯಾದಲ್ಲಿ, ಅಲಸೂರಿನ ಅರ್ಬನ್ ಸೋಲೇಸ್ ಕೆಫೆಯಲ್ಲಿ, ಇಂದಿರಾನಗರದಲ್ಲಿ ಅಲ್ಲಿ ಇಲ್ಲಿ ಅಂತ ಓಪನ್ ಮೈಕುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಅವಳು ಹೋದಲ್ಲಿಗೆ ನಾನೂ ಹೋಗಬೇಕಾಗುತ್ತಿತ್ತು.

ಒಂದು ಸಲ ವೈಟ್ ಫೀಲ್ಡಿನ ಕೆಫೆಯೊಂದರಲ್ಲಿ ಆದ ಓಪನ್ ಮೈಕೊಂದನ್ನು ಸಾನ್ಯಾ ಇವತ್ತಿಗೂ ಮರೆತಿಲ್ಲ. ಪುಟ್ಟ ಬೆಡ್ರೂಮಿನಂತಿದ್ದ, ನಮ್ಮ ರಂಗಸ್ಥಳವಾಗಲಿದ್ದ ಕೋಣೆ, ಗೋಡೆಗಳಲ್ಲಿ ನೇತು ಹಾಕಿದ್ದ ತರಹೇವಾರಿ ಪೇಂಟಿಂಗುಗಳು, ಇಷ್ಟಿಷ್ಟೇ ಪ್ರಭೆ ಸೂಸಿ ಹಲ್ಲು ಕಿರಿಯುವ ಬಲ್ಬುಗಳ ಮಬ್ಬಾದ ಬೆಳಕು, ಒತ್ತೊತ್ತಾಗಿ ಜೋಡಿಸಿದ ಮೇಜುಗಳು ಎಲ್ಲ ಸೇರಿ, ‘ಇಂಥದ್ದನ್ನೂ ನಾವು ವೇದಿಕೆ ಅಂದುಕೊಂಡು ಜೋಕು ಮಾಡಬೇಕಾ’ ಎಂಬ ಗಲಿಬಿಲಿ ಹುಟ್ಟಿಸುವಂಥ ಸುತ್ತುಮುತ್ತು ಅಲ್ಲಿಯದ್ದು. ಅಲ್ಲಿ ಹದಿನಾರು ಜನ ಕೂತಿದ್ದರು. ‘ಹೊಸಬರ ಪ್ರದರ್ಶನಕ್ಕೆ ಹದಿನಾರು ಜನ ಪ್ರೇಕ್ಷಕರು ಅಂದರೆ ಸಣ್ಣ ಮಾತಲ್ಲ’ ಅಂತ ಅಕ್ಕ ಅಪ್ಪನಿಗೆ ಫೋನಿನಲ್ಲಿ ತಿಳಿಸಿದ್ದು ಕೇಳಿಸಿಕೊಂಡಿದ್ದೆ. ಅಸಲಿ ವಿಷಯ ಗೊತ್ತಾದದ್ದು ಆಮೇಲೆ – ಬಂದ ಹದಿನಾರರಲ್ಲಿ ಹದಿನೈದು ಜನ ಅಕ್ಕನ ಹಾಗೆ ಜೋಕು ಹೇಳಿ ಅಭ್ಯಾಸ ಮಾಡುವುದಕ್ಕೆ ವೇದಿಕೆ ಹುಡುಕಿ ಬಂದಿದ್ದವರು!

ಅವತ್ತು ರಾತ್ರಿ ಮನೆಯಲ್ಲಿ ಬೇಸರ ಕಳೆಯುವುದಕ್ಕೆ ಅಪ್ಪ ಹೊನ್ನಾವರದ ನೆನಪುಗಳನ್ನು ಹೇಳಿದ್ದರು. ಸಾನ್ಯಾಳನ್ನು ಕರೆದುಕೊಂಡು ಹೋಗಿ ಮುರುಡೇಶ್ವರದ ಸಮುದ್ರದಲ್ಲಿದ್ದ ಕ್ಯಾಂಟೀನಿನಲ್ಲಿ ತಿಂದದ್ದು, ಗೋಕರ್ಣದಲ್ಲಿ ಭಟ್ರ ಮನೆಯಲ್ಲಿ ಉಳಿದುಕೊಂಡಾಗ ಅವಳು ತಂಟೆ ಮಾಡಿದ್ದು, ಗುಣವಂತೆಯ ಹೋಟೆಲ್ಲಿನಲ್ಲಿ ಅವಲಕ್ಕಿ ಮೊಸರು ಎರಡೆರಡು ಪ್ಲೇಟು ತಿಂದ ಕಥೆ ಎಲ್ಲ ಬಂದು ಹೋದವು. ಈ ಯಾವ ಕಥೆಯಲ್ಲಿಯೂ ನನ್ನ ಪ್ರಸ್ತಾವ ಇರಲೇ ಇಲ್ಲ! ಹೊನ್ನಾವರದ ಶರಾವತಿಯ ಸೇತುವೆ ಹಾಳಾಗಿದ್ದಾಗ, ಬಸ್ಸುಗಳು ಲಾರಿಗಳು ಎಲ್ಲ ನದಿಯನ್ನು ದಾಟಲಿಕ್ಕೆ ಬಾರ್ಜ್ ಅನ್ನುವ ನಾವೆಯನ್ನು ಬಳಸುತ್ತಿದ್ದವು. ಬಾರ್ಜು ಈ ದಡದಿಂದ ಆ ದಡಕ್ಕೆ ಶರಾವತಿಯಲ್ಲಿ ತೇಲುತ್ತಾ ಹೋಗುವಾಗ ಅದರಲ್ಲಿ ನಿಂತು ಪಿಕ್ನಿಕ್ಕಿನ ಹಾಗೆ ಹೋಗುತ್ತಿದ್ದರಂತೆ. ಸಾನ್ಯಾಳಿಗೆ ಈ ಬಾರ್ಜ್ ಯಾನ ಭಾರೀ ಖುಷಿ ಕೊಡುತ್ತಿತ್ತಂತೆ, ಒಂದ್ಸಲ “ನದಿಯಲ್ಲಿ ಬಾರ್ಜು ಬಸ್ಸನ್ನು ಹೊತ್ಕೊಂಡು ಹೋಗ್ತದೆ, ರಸ್ತೆಯಲ್ಲಿ ಬಸ್ಸು ಯಾಕೆ ಬಾರ್ಜನ್ನ ಹೊತ್ಕೊಂಡು ಹೋಗುದಿಲ್ಲ” ಅಂತ ಕೇಳಿದ್ದಳಂತೆ ಸಾನ್ಯಾ. ಇದನ್ನೊಂದು ದೊಡ್ಡ ಜೋಕು ಎಂಬಂತೆ ಹೇಳಿ ನಕ್ಕು ಅಕ್ಕನನ್ನೂ ನಗಿಸಿದ್ದರು ಅಪ್ಪ. ನನ್ನ ಬಗ್ಗೆ ಇಂಥ ನೆನಪುಗಳೂ ಇಲ್ಲ, ನನ್ನನ್ನವರು ಹೀಗೆ ನಗಿಸಿದ ಉದಾಹರಣೆಗಳೂ ಇಲ್ಲ. ನನ್ನ ದುಃಖ, ಆತಂಕ ಎಲ್ಲ ನನ್ನವು ಮಾತ್ರ.

ಇದಾದರೂ ತೊಂದರೆಯಿಲ್ಲ, ಅದಾಗಿ ಒಂದು ವಾರ ಆದ ಮೇಲೆ ಆದ ಘಟನೆಗೆ ಮಾತ್ರ ನಾನು ಅಪ್ಪನನ್ನು ಇವತ್ತಿಗೂ ಕ್ಷಮಿಸಿಲ್ಲ. ಮನೆಯ ಹದಿನೆಂಟು ಮೆಟ್ಟಿಲುಗಳನ್ನು ಹತ್ತುವಾಗ ನೋಡಿಕೊಂಡು ನಡೆಯುವುದು ಬಿಟ್ಟು ಮೊಬೈಲು ನೋಡುತ್ತಾ ಹತ್ತಿದ್ದಳು ಸಾನ್ಯಾ. ಎಡವಿ ಕಾಲು ಜಾರಿ ಬುಡಕ್ಕನೇ ಕೆಳಗೆ ಬಿದ್ದಿದ್ದಳು. ಹಣೆಯಿಂದ ನೆತ್ತರು ಜಿನುಗಿತ್ತು. ವಿಷಯ ತಿಳಿದು ಓಡೋಡಿ ಬಂದ ಅಪ್ಪ ಅವಳಿಗೆ ಅಂಥದ್ದೇನು ಆಗಿರದಿದ್ದರೂ ಅವಳನ್ನು ಕೂಡಲೇ ಆಸ್ಪತ್ರೆಗೆ ಹೊತ್ತುಕೊಂಡು ಓಡಿದ್ದರು. ‘ಫ್ರಾಕ್ಚರ್ ಆಗಿದೆಯಾ, ಅದು ಆಗಿದೆಯಾ ಇದು ಆಗಿದೆಯಾ’ ಅಂತ ಒದ್ದಾಡಿದ್ದರು. ಅವರ ಕಣ್ಣಂಚು ಒದ್ದೆಯಾಗಿಬಿಟ್ಟಿತ್ತು.

ನನಗೆ ಹೀಗಾದರೆ ಏನು ಮಾಡುತ್ತಾರೆ ನೋಡೋಣ ಅಂತ ಅದರ ಮರುದಿನ ನಾನೂ ಅದೇ ಮೆಟ್ಟಿಲಿನಿಂದ ಕೆಳಗೆ ಬಿದ್ದೆ. ಬೇಕೆಂದೇ ಬಿದ್ದೆ. ಕಿರುಚಿದೆ. ವಿಷಯ ಅಪ್ಪನಿಗೆ ಗೊತ್ತಾದಾಗ ಅಪ್ಪ ನಗುವೇ ಬಾರದ ಜೋಕೊಂದನ್ನು ಕೇಳಿದವರ ಹಾಗೆ ಮುಖ ಮಾಡಿದ್ದರು. ಮುಖದಲ್ಲಿ ಭಾವೋದ್ವೇಗದ ಸುಳಿವೇ ಇರಲಿಲ್ಲ. ಅವರಿಗೆ ಆಶ್ಚರ್ಯವೇನೂ ಆಗಲಿಲ್ಲ, ಈ ವರ್ತನೆಯನ್ನು ನೋಡಿ ನನಗೂ ಆಶ್ಚರ್ಯವೇನೂ ಆಗಲಿಲ್ಲ! ಗಾಬರಿ, ಆತಂಕ, ಕಣ್ಣೀರು ಏನೂ ಇಲ್ಲ. ನನ್ನನ್ನು ಆಸ್ಪತ್ರೆಗೆ ಒಯ್ಯುವ ಮಾತೇ ಇಲ್ಲ! ಏನೋ ಶಿಕ್ಷೆ ಕೊಡುವವರ ಥರ ನನ್ನನ್ನೊಂದು ಕೋಣೆಗೆ ಎತ್ತಿಕೊಂಡು ಹೋಗಿ ಹಾಕಿದರು. ಆಮೇಲೆ ಏನಾಯಿತೋ ಗೊತ್ತಿಲ್ಲ, ಪ್ರಜ್ಞೆ ತಪ್ಪಿದ ಹಾಗಾಯಿತು, ಮತ್ತೆ ಎಚ್ಚರವಾದದ್ದು ಮರುದಿನವೇ. ಕಣ್ಣು ಬಿಡುವಾಗ ನಾನು ಮನೆಯ ಹಾಲಿನಲ್ಲೇ ಇದ್ದೆ. “ಪ್ರೀತಿ ಇಲ್ಲದ ಮೇಲೆ ನರಳುವ ಪಾಡು ತಪ್ಪೀತು ಹೇಗೆ?”

ನಾನು ರಾಜೇಶನಿಗೆ ಸಹಾಯ ಮಾಡಬೇಕೆಂದು ನಿರ್ಧಾರ ಮಾಡಿದ್ದು ಆಗಲೇ. ರಾಜೇಶ ಸಾಯುವ ಮಾತಾಡುವ ಹುಡುಗನಾಗಿರಲಿಲ್ಲ, ಓಪನ್ ಮೈಕುಗಳಿಗೆ ಎಡತಾಕುತ್ತಿದ್ದ. ಸ್ಟಾಂಡ್ ಅಪ್ ಕಾಮಿಡಿಗೆ ಬರಬೇಕು, ನಾಕು ಜನ ಚಪ್ಪಾಳೆ ತಟ್ಟುವ ಹಾಗೆ ನಗಿಸಬೇಕು ಅಂದುಕೊಂಡಿದ್ದ. ಅದಕ್ಕೋಸ್ಕರ ಐಬಿಎಮ್ಮಿನ ಸಾಫ್ಟ್ವೇರ್ ಕೆಲಸವನ್ನೂ ಬಿಟ್ಟಿದ್ದ. ಅವನ ಈ ಉತ್ಕಟವಾದ ಹಾರೈಕೆಯನ್ನು ಮೊಟಕುಗೊಳಿಸಿದ್ದು Cystic Fibrosis ಎಂಬ ಶ್ವಾಸಕೋಶದ ರೋಗ. ಸಾವೇ ಇಲ್ಲ ಎಂಬಂತೆ ಓಡಾಡುತ್ತಿದ್ದವನು ಹುಟ್ಟಿಯೇ ಇಲ್ಲ ಎಂಬಂತೆ ಸ್ಥಬ್ಧನಾಗಬಾರದು ಎಂಬಲ್ಲಿಗೆ ಬಂದದ್ದು ಹಾಗೆ. ಅವನಿಗೆ ಬರಲಿರುವ ಸಾವಿಗೆ ಒಂದಷ್ಟು ಘನತೆ ಕೊಡೋಣ, ಅವನ ನೋವಿಗೆ ಉಪಶಮನ ಕೊಡೋಣ ಅಂತ ಹೊರಟದ್ದೇ ನನ್ನ ಕೊಲೆಯ ಪ್ರಯತ್ನಕ್ಕೆ ಮುನ್ನುಡಿ ಬರೆಯುತ್ತದೆ ಅಂತ ನನಗೆಲ್ಲಿ ಗೊತ್ತಿತ್ತು. ಈ ರಾಜೇಶನ ಸಾವಿಗೆ ಆಮೇಲೆ ಬರುತ್ತೇನೆ. ನನ್ನ ಕೊಲೆಯ ಪ್ರಯತ್ನದ ಸುಳಿವಿನ ಬಗ್ಗೆ ಮೊದಲು ಹೇಳುತ್ತೇನೆ.

ಉಪಮೆಗಳನ್ನು ಹೇಳಿಕೊಟ್ಟಿದ್ದ, ಅನಿರೀಕ್ಷಿತ ಅಂತ್ಯಗಳ ರಚನೆಗಳನ್ನು ಅಭ್ಯಾಸ ಮಾಡಿಸಿದ್ದ,ಅಷ್ಟೊಂದು ಭಾಷಾ ಕೌಶಲ ಕಲಿಸಿದ್ದ ಅಪ್ಪ ನನಗೆ heckler ಮತ್ತು bombing ಎಂಬ ಪದಗಳ ಅರ್ಥವನ್ನು ಹೇಳಿಕೊಟ್ಟರಲೇ ಇಲ್ಲ; ಅದು ನನಗೆ ಗೊತ್ತಾದದ್ದು ಆ ಎರಡು ಪ್ರಸಂಗಗಳಲ್ಲಿಯೇ.

ಮೊದಲ ಘಟನೆ ಆದದ್ದು ಕೋರಮಂಗಲದ ಬಾರೊಂದರ ತಿಳಿಗತ್ತಲಿನಲ್ಲಿ. ಅಲ್ಲಿನ ಓಪನ್ ಮೈಕಿಗೆ ಅಕ್ಕನ ಹೆಸರೂ ನನ್ನ ಹೆಸರೂ ರಿಜಿಸ್ಟರ್ ಆಗಿತ್ತು. ಕಿರಿಗುಟ್ಟುತ್ತಿದ್ದ ಟ್ರಾಫಿಕ್ಕಿನ ಪಡಿಪಾಟಲಿನಿಂದ ತಪ್ಪಿಸಿಕೊಳ್ಳಲು ಬಂದು ಕೂತಿದ್ದ ನಿರಾಶ್ರಿತರ ಥರ ಕಾಣುತ್ತಿದ್ದ ಒಂದಷ್ಟು ಜನ ಕೂತಿದ್ದರು, ನನ್ನದು ಹನ್ನೆರಡನೇ ಹೆಸರು, ಸಾನ್ಯಾಳದು ಹದಿನಾಲ್ಕನೇ ಹೆಸರು. ನನ್ನ ಸರದಿ ಬಂತು. ಕಪ್ಪಗಿದ್ದ ಕಾರ್ಡ್ಲೆಸ್ ಮೈಕು ನನಗೆ ನಾನೇ ಚುಚ್ಚಿಕೊಳ್ಳಲು ಹಿಡಿದ ಬಾಣದಂತೆ ಕಾಣುತ್ತಿತ್ತು. ನಾನು ಕಲಿತಿದ್ದ, ಅಭ್ಯಾಸ ಮಾಡಿದ್ದ ಜೋಕುಗಳನ್ನು ಉದುರಿಸಲು ಶುರು ಮಾಡಿದೆ. ಒಬ್ಬ ಓಲ್ಡ್ ಮಾಂಕ್ ಪ್ರಿಯ ದೊಡ್ಡ ದನಿಯಲ್ಲಿ ಅಪಹಾಸ್ಯದ ಕಾಮೆಂಟುಗಳನ್ನು ಹೊಡೆಯುವುದಕ್ಕೆ ಶುರು ಮಾಡಿದ, ನನ್ನ ಜೋಕಿಗೆ ನಕ್ಕದ್ದಕ್ಕಿಂತ ಜಾಸ್ತಿ ಅವನ ಕಾಮೆಂಟುಗಳಿಗೆ ನಗುವ ಗೆಳೆಯರ ದಂಡು ಅವನ ಜೊತೆಗಿತ್ತು. ನನ್ನ ಬಾಯಿಕಟ್ಟಿ, ಪ್ರದರ್ಶನವನ್ನು ಅಲ್ಲಿಗೇ ನಿಲ್ಲಿಸಿ ಇಳಿದು ಬಂದೆ. ಹೀಗೆ ಕಿಚಾಯಿಸಿ ರಂಗಮಂಚದಲ್ಲಿ ನಿಂತವರ ಧೈರ್ಯ ಉಡುಗಿಸಿ ಮಜಾ ತೆಗೆದುಕೊಳ್ಳುವ ಪ್ರೇಕ್ಷಕರನ್ನು ಹೆಕ್ಲರುಗಳು ಅನ್ನುತ್ತಾರಂತೆ. ಇಂಥವರನ್ನು ಏನು ಮಾಡಬೇಕು ಅಂತ ನನಗ್ಯಾರೂ ಹೇಳಿಕೊಟ್ಟಿರಲಿಲ್ಲ. ನಾನು ಇಂಟರ್ನೆಟ್ಟಿನಲ್ಲಿ ಓದಿದ್ದನ್ನು ಪೂರ್ತಿ ಅರೆಕ್ಷಣದಲ್ಲಿ ಒಳಗೊಳಗೇ ಸ್ಕ್ಯಾನ್ ಮಾಡಿ ನೋಡಿದೆ, ಪಕ್ಕನೆ ಇಂಗ್ಲೀಷಿನಲ್ಲಿ ನೋಡಿದ್ದು ನೆನಪಾಗಿ ತೋಚಿದ್ದನ್ನು ಕನ್ನಡದಲ್ಲಿ ಹೇಗೆ ಹೇಳುವುದು ಅಂತ ಗೊತ್ತಾಗದೆ ಹೇಳಿದೆ, “ನಿಮ್ಮ ಮೆದುಳನ್ನ ನೀವು ವಿಜ್ಞಾನದ ವಿದ್ಯಾರ್ಥಿಗಳಿಗೆ ದಾನ ಕೊಡುವುದೇನೋ ಒಳ್ಳೆಯ ಕೆಲಸವೇ, ಆದರೆ ನೀವು ಆ ಕೆಲಸ ಮಾಡಲಿಕ್ಕೆ ಸಾಯುವವರೆಗೆ ಕಾಯಬೇಕಿತ್ತು”. ನಾನು ಹೇಳಿದ್ದು ಸರಿಯಾಗಲಿಲ್ಲವೋ, ಕುಡಿದವರಿಗೆ ಅರ್ಥ ಆಗಲಿಲ್ಲವೋ, ಅಂತೂ ನನ್ನ ತಿರುಗುಬಾಣಕ್ಕೆ ಯಾರೂ ನಗಲಿಲ್ಲ.

ಅಕ್ಕ ಸಾನ್ಯಾ ನನ್ನಂತೆ ಶರಣಾಗಿ ಬಿಟ್ಟುಕೊಡಲಿಲ್ಲ. ಹೆಕ್ಲರು ವರಾತ ಶುರು ಮಾಡಿದಾಗ ರಪಕ್ಕನೆ ಅವನನ್ನು ಸೆಕ್ಷುಯಲ್ ಆಗಿ ಅವಹೇಳನ ಮಾಡಿ ಮುಖಭಂಗ ಮಾಡಿ ಅವನ ಬಾಯಿ ಮುಚ್ಚಿಸಿದ್ದಳು. ನನಗಿದು ಯಾಕೆ ತೋಚಲಿಲ್ಲ ಅಂತ ಅರ್ಥ ಆಗಿರಲಿಲ್ಲ. ದುಃಖ ಅಂದರೆ ಏನು ಎಂಬುದು ಮಾತ್ರ ಅವತ್ತು ಅರ್ಥವಾಯಿತು, ಅಪ್ಪ ಕೆಲವು ತಂತ್ರಗಳನ್ನು ನನಗೆ ಹೇಳದೇ ಸಾನ್ಯಾಳಿಗೆ ಮಾತ್ರ ಹೇಳಿಕೊಡುತ್ತಿದ್ದಾರಾ ಎಂಬ ಅನುಮಾನ ಹುಟ್ಟಿದ್ದೇ ಅವತ್ತು.

ಎರಡನೇ ಘಟನೆ ನಡೆದದ್ದು ಕನಕಪುರ ರಸ್ತೆಯಲ್ಲಿದ್ದ ರೆಸಾರ್ಟ್ ಒಂದರಲ್ಲಿ. ನಾನು ಚಪ್ಪಾಳೆ ಗಿಟ್ಟಿಸಿಕೊಂಡ ಕಥೆ ಅದು. ನೆರೆದಿದ್ದವರ ಊಟಕ್ಕೆ ಇನ್ನು ಅರ್ಧ ಗಂಟೆ ಬಾಕಿ ಇತ್ತು. ತಿಳಿನೀಲಿ ಜೀನ್ಸ್ ಪ್ಯಾಂಟು, ಕಪ್ಪನೆಯ ದೊಗಳೆ ಅಂಗಿ ಹಾಕಿದ ನಿರೂಪಕನೊಬ್ಬ ಮೊದಲ ಹದಿನೈದು ನಿಮಿಷ ಸಾನ್ಯಾ, ಆಮೇಲೆ ಹದಿನೈದು ನಿಮಿಷ ತಾನ್ಯಾ ನಿಮ್ಮನ್ನು ರಂಜಿಸಲಿದ್ದಾಳೆ ಅಂದಾಗ ಔಟಿಂಗಿಗೆ ಬಂದಿದ್ದ ಪ್ರೇಕ್ಷಕರು ತಯಾರಾಗಿ ಕೂತರು. ಸಾನ್ಯಾ ಮಾತಾಡಿದಾಗ ತಡೆದು ತಡೆದು ನಗು ಬಂತು, ಅಂದುಕೊಂಡಷ್ಟು ನಗು ಬರುತ್ತಿಲ್ಲ ಅನ್ನಿಸಿದಾಗ ಡಬಲ್ ಮೀನಿಂಗು, ಇಂಗ್ಲೀಷಿನ ಅಶ್ಲೀಲ ಬೈಗುಳ, ಸೆಕ್ಸುಯಲ್ ಕಂಟೆಂಟುಗಳಿಗೆ ಹೊರಳಿ ಎಲ್ಲರನ್ನೂ ನಗಿಸಿಯೇ ಬಿಟ್ಟಳು. ಇಂಥದ್ದಕ್ಕೆ ನಗುವವರು ನಿಜವಾಗಿಯೂ ತಮಾಷೆ ಇಷ್ಟವಾಗಿ ನಗುತ್ತಿದ್ದಾರಾ ಅಥವಾ ತಾವು ಇಂತಾದ್ದರಲ್ಲೆಲ್ಲ ತುಂಬಾ ಆಧುನಿಕರು, ಲಿಬರಲ್ಲುಗಳು ಅಂತ ತೋರಿಸಿಕೊಳ್ಳುವುದಕ್ಕೆ ನಗುತ್ತಾರಾ ಅನ್ನುವ ಸಂದೇಹ ನನ್ನ ತಲೆಯಲ್ಲಿತ್ತು. ಕೇಳಿದರೆ ಅಕ್ಕನ ಯಶಸ್ಸಿನ ಬಗ್ಗೆ ಹೊಟ್ಟೆಕಿಚ್ಚು ಪಟ್ಟು ಕೊಂಕು ತೆಗೀತಾಳೆ ಅನ್ನಬಹುದು ಅನ್ನಿಸಿ ಸುಮ್ಮನಾದೆ.

ಹದಿನಾರನೇ ನಿಮಿಷಕ್ಕೆ ನಾನು ಧ್ವನಿವರ್ಧಕದ ಮುಂದಿದ್ದೆ. ನಾನು ತಯಾರು ಮಾಡಿದ್ದ ಜೋಕುಗಳ ಸಂಚಿಯನ್ನು ಹೇಗೆ ಬಿಚ್ಚಿದರೂ ಅಲ್ಲಿ ಇದ್ದದ್ದು ಬರಿಯ ಮೌನ, ‘ನಗುವಿನ ಕಲಕಲ ಯಾಕಿಲ್ಲ’ ಅಂದುಕೊಳ್ಳುತ್ತಲೇ ಮುಂದುವರಿದೆ. ಆಗ ಬಿತ್ತು ನೋಡಿ ಚಪ್ಪಾಳೆ, ನಾಲ್ಕೂವರೆ ನಿಮಿಷಕ್ಕೆ. ಆಯ್ತಲ್ಲ, ‘I killed it’ ಅಂತ ಉತ್ಸಾಹ ಹೆಚ್ಚಿ ಇನ್ನಷ್ಟು ಜೋಕುಗಳನ್ನು ಹೊರ ತೆಗೆದೆ, ದೊಗಳೆ ಅಂಗಿಯ ನಿರೂಪಕ ಆಚೆ ಕರ್ಕೊಂಡು ಹೋಗಿ, ‘ಸಾಕು ಸಾಕು’ ಅಂದಾಗಲೇ ನನಗೆ ವಿಷಯ ಗೊತ್ತಾದದ್ದು, ಅದು ಮೆಚ್ಚುಗೆಯ ಕರತಾಡನ ಅಲ್ಲವಂತೆ. “ಸಾಕು ತಾಯೀ, ನಿಲ್ಸು ಒಂದ್ಸರ್ತಿ” ಅಂತ ಹೇಳುವ ಅಪಹಾಸ್ಯದ ಚಪ್ಪಾಳೆಯಂತೆ ಅದು. ಈ ಮನುಷ್ಯರ ವಿಚಿತ್ರ ಪರಿಗಳು ನನಗೆ ಹೇಗೆ ಅರ್ಥವಾಗಬೇಕು, ಅಳು ಒತ್ತರಿಸಿ ಬಂತು, ಏನೇ ಆದರೂ ಹೀಗೆ ಫ್ಲಾಪ್ ಆಗುವುದಕ್ಕೆ ಬಾಂಬಿಂಗ್ ಅನ್ನುತ್ತಾರೆ ಅಂತ ತಿಳಿದುಕೊಂಡೆ. ಹೊಸ ಶಬ್ದವೊಂದರ ಅರ್ಥ ಗೊತ್ತಾಯಿತು.

ಆವತ್ತು ಎಲ್ಲಕ್ಕಿಂತ ಹೆಚ್ಚು ಇರಿದದ್ದು ಅಕ್ಕನ ವರ್ತನೆ. ಹೀಗೆ ನನ್ನ ಬಾಂಬಿಂಗ್ ಆಗುತ್ತಿದ್ದಾಗ ಅಕ್ಕ ಮೊಬೈಲಿನಲ್ಲಿ ನನ್ನ ಮಾನ ಹೋಗುತ್ತಿರುವುದರ ವೀಡಿಯೊ ಮಾಡುತ್ತಿದ್ದಳು! ಅದನ್ನು ಪ್ರಸಿದ್ಧ ವಿಜ್ಞಾನಿ ಶಂತನು ಕಾಮತರಿಗೆ ಕಳಿಸಲಿಕ್ಕೆ! ನನ್ನ ವೀಡಿಯೋಗಳನ್ನು ವಿಶ್ಲೇಷಣೆ ಮಾಡಲಿಕ್ಕೆ. ನನ್ನ ಮೇಲೆ ಕಣ್ಣಿಡುವ ಉಪಾಯ ಇದು ಎಂಬುದು ನನಗೆ ಗೊತ್ತಾಗಿ ಹೋಯಿತು. ಅಪ್ಪ ಮತ್ತು ಸಾನ್ಯಾ ನನ್ನ ವಿರುದ್ಧ ಏನೋ ಷಡ್ಯಂತ್ರ ಮಾಡುತ್ತಿದ್ದಾರೆ ಎಂಬ ನನ್ನ ಗುಮಾನಿಗೆ ಪುಷ್ಟಿ ಸಿಕ್ಕಿದ್ದೇ ಅವತ್ತು. ಅದಾದ ಮೇಲೆ ಹಂತ ಹಂತವಾಗಿ ತಪ್ಪುಗಳನ್ನು ತಿದ್ದಿಕೊಂಡು, ಮೇಲೇರುತ್ತಾ ಬಂದೆ. ‘ನಾಟ್ ಬ್ಯಾಡ್ ಯಾರ್’ಗಳಿಂದ ಹಿಡಿದು ‘ಸಕತ್ತಾಗಿ ಕಾಮಿಡಿ ಮಾಡ್ತಾಳೆ’ ಎಂಬವರೆಗೂ ಮಾತುಗಳು ಕೇಳಿಬರತೊಡಗಿದವು. ಇದನ್ನು ಅವರಿಬ್ಬರಿಗೆ ಸಹಿಸಲು ಆಗಲಿಲ್ಲವೇನೋ.


ವಾಸಿಯಾಗದ ಕಾಯಿಲೆಗಳಿಂದ ನರಳುತ್ತಾ ಇರುವವರ ಬಗ್ಗೆ ಕಾಳಜಿ ವಹಿಸುವ Indian Association of Palliative Care ಎಂಬ ಸಂಸ್ಥೆಯ ಬಗ್ಗೆ ನನಗೆ ಹೇಳಿದ್ದು ರಾಘು. ಕಾರ್ಪೊರೇಟ್ ಕಾಮಿಡಿಗೆ ಹೆಸರಾಗಿರುವ ರಾಘವೇಂದ್ರ. ಕಾರ್ಪೊರೇಟುಗಳಲ್ಲಿ ಅದರ ಬಗ್ಗೆ ಮಾತಾಡಲು ಹೋಗಬೇಡಿ, ಇದರ ಬಗ್ಗೆ ಜೋಕುಗಳು ಬೇಡ , ಇನ್ನೊಂದನ್ನಂತೂ ತರಲೇಬೇಡಿ ಅಂತೆಲ್ಲ ಹೆಜ್ಜೆಗೊಂದು ನಿಷೇಧಗಳನ್ನು, ಕರಾರುಗಳನ್ನು ಹಾಕಿ ಜೀವ ತಿಂತಾರೆ, ಇವನ್ನೆಲ್ಲ ಬಿಟ್ಟರೆ ಮತ್ತೆ ಜೋಕು ಮಾಡುವುದು ಯಾವ ವಿಷಯದ ಮೇಲೆ ಅನ್ನಿಸಿಬಿಡುತ್ತೆ, ಇನ್ನು ಈ ಫಾರ್ಮಲ್ಸ್ ಹಾಕಿ ಶಿಸ್ತಾಗಿ ಕೂತ ಉದ್ಯೋಗಿಗಳು, ಸೂಟು ಬೂಟು ಹಾಕಿ ಠಾಕು ಠೀಕಾಗಿ ಕೂತ ವೈಸ್ ಪ್ರೆಸಿಡೆಂಟುಗಳು, ಸಿಇಓಗಳನ್ನೆಲ್ಲ ನೋಡಿದರೆ ಗೊತ್ತಿರುವ ಜೋಕುಗಳೂ ಮರೆತುಹೋಗ್ತವೆ ಅಂತಿದ್ದ ರಾಘವೇಂದ್ರ. ಆದರೂ ನಿಜವಾಗಿಯೂ ದುಡ್ಡಿನ ರುಚಿ ನೋಡಬೇಕಾದರೆ ಮೂರ್ನಾಲ್ಕು ವೈರಲ್ ವೀಡಿಯೋಗಳನ್ನು ಬಿಟ್ಟಾದ ಮೇಲೆ ಕಾರ್ಪೊರೇಟ್ ಗಿಗ್ಗುಗಳನ್ನು ಒಪ್ಪಲು ಶುರು ಮಾಡಬೇಕು ಎಂದು ಸಮಜಾಯಿಷಿಯನ್ನೂ ಕೊಡುತ್ತಿದ್ದ. ಬದುಕಿನ ಪಯಣದಲ್ಲಿ ಕೊನೆಯ ನಿಲ್ದಾಣಕ್ಕೆ ಬಂದಿರುವವರ ಕೈಯ್ಯಲ್ಲಿ ಸ್ಟಾಂಡ್ ಅಪ್ ಕಾಮಿಡಿ ಮಾಡಿಸುವ ಯೋಜನೆ ಆ Palliative Care ಸಂಸ್ಥೆಗೆ ಇದೆ ಅಂತ ಅವನಿಗೆ ಗೊತ್ತಾದದ್ದು ಯಾವುದೋ ಕಾರ್ಪೊರೇಟ್ ಗಿಗ್ ಆಗುತ್ತಿದ್ದಾಗಲೇ.

ಸಾವು ಕರೆಯುತ್ತಿದೆ, ಹೋಗದೇ ಇರುವಂತಿಲ್ಲ ಎನ್ನುವವರು ಅಳುಮುಖ ಮಾಡಿ, ಉಳಿದವರನ್ನೂ ಅಳಿಸಿ, ವಿಷಾದದ ಬಟ್ಟಲನ್ನು ಬಿಟ್ಟು ಹೋಗುವ ಬದಲು ಒಂದಷ್ಟು ಜೋಕು ಸಿಡಿಸಿ, ತಮ್ಮ ಬಗ್ಗೆ, ಉಳಿದವರ ಬಗ್ಗೆ, ಬದುಕಿನ ಬಗ್ಗೆ, ಸಾವಿನ ಬಗ್ಗೆ, ಅದರಲ್ಲೂ ತಮ್ಮದೇ ಸಾವಿನ ಬಗ್ಗೆ ತಮಾಷೆ ಮಾಡಿದರೆ ಒಳ್ಳೆಯದಲ್ಲವೇ ಎಂಬುದು ಅವರ ಯೋಜನೆಯಂತೆ. ಅದೊಂದು ಕ್ಯಾಂಪೇನ್ ಅಂತೆ.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಆತ್ಮದ ಗಿಡುಗ

ಹಾಗೆ ಸಾವಿನ ಕದ ತಟ್ಟುತ್ತ ನಿಂತುಕೊಂಡೇ ಕಾಮಿಡಿ ಮಾಡಹೊರಟವರಿಗೆ ಮೂರು ವಾರ ತರಬೇತಿ ನೀಡಿ, ನಗೆಚಟಾಕಿಗಳನ್ನು ಹೇಳಿಕೊಟ್ಟು ಅವರನ್ನು ಪ್ರದರ್ಶನಕ್ಕೆ ತಯಾರು ಮಾಡುವುದಕ್ಕೆ ರಾಘವೇಂದ್ರನೂ ಹೋಗುತ್ತಿದ್ದಾನಂತೆ. ‘ನೀನೂ ಬರ್ತೀಯಾ’ ಅಂದ. ಬರ್ತೇನೆ ಅಂದೆ. ವಯೋವೃದ್ಧರೇ ಜಾಸ್ತಿ ಇರುವ ಈ ಪಟ್ಟಿಯಲ್ಲಿ ರಾಜೇಶನೂ ಸೇರಿಕೊಂಡರೆ ಸಾವನ್ನು ಸಂಧಿಸಲು ಕಾದು ಕೂತಿರುವ ಮಧ್ಯವಯಸ್ಕನೂ ಸೇರಿದಂತಾಗುತ್ತದೆ ಅಂದುಕೊಂಡೆ.

“ನನ್ನನ್ನು ಕಾಡು ಬಾ ಅಂತಿದೆ, ಊರು ಹೋಗು ಅಂತಿದೆ, ಅದಕ್ಕೇ ಟ್ರೆಕಿಂಗ್ ಹೊರಟೆ, ಇನ್ನೇನು ಕಾಡಿಗೆ ಕಾಲಿಡಬೇಕು ಅನ್ನುವಾಗ ನಂಗೆ Cystic Fibrosis ಇದೆ ಅಂತ ಗೊತ್ತಾಯ್ತು. ಈ ರೋಗಕ್ಕಿಂತ ಈ ರೋಗಗಳಿಗಿರುವ ಸೈಂಟಿಫಿಕ್ ಹೆಸರುಗಳೇ ನನ್ನನ್ನು ಜಾಸ್ತಿ ಹೆದರಿಸುತ್ತವೆ, Cystic Fibrosis ಅನ್ನುವ ಬದಲು “ಲಂಗ್ಸ್ ಢಮಾರ್’ ಅಂದ್ರೆ ಈ ಡಾಕ್ಟರುಗಳ ಗಂಟೇನು ಹೋಗ್ತಿತ್ತು” ಅನ್ನುವ ಓಪನಿಂಗ್ ಲೈನನ್ನು ರಾಜೇಶ ಹೇಳುತ್ತಿರುವಂತೆ, ಅದಕ್ಕೆ ವಿಷಲ್ ಬಿದ್ದಂತೆ ಕಲ್ಪಿಸಿಕೊಂಡೆ. ರಾಜೇಶನಿಗೂ ಮತ್ತೊಬ್ಬ ಕ್ಯಾನ್ಸರ್ ರೋಗಿ ವೃದ್ಧರಿಗೂ ಕಾಮಿಡಿ ಹೇಳಿಕೊಡುವ, ಜೋಕು ಬರೆದುಕೊಡುವ ಕೆಲಸ ಒಪ್ಪಿಕೊಂಡೆ. ದಿನನಿತ್ಯ ಪ್ರಾಕ್ಟೀಸ್ ಸೆಷನ್ನುಗಳಿಗೆ ಹೋಗಿ ಬರಲಾರಂಭಿಸಿದೆ.

ಈ ವಿಷಯ ಅಪ್ಪನಿಗೆ ಗೊತ್ತಾದದ್ದೇ ಎಡವಟ್ಟಾಯಿತು. ಇನ್ನೊಬ್ಬರಿಗೆ ಉಪಕಾರ ಮಾಡಿ ಒಳ್ಳೆಯವಳಾದ ತಪ್ಪಿಗೆ ನನ್ನ ಜೀವಿತಾವಧಿಯನ್ನು ಕಡಿತಗೊಳಿಸುವ, ನನ್ನ ಪ್ರದರ್ಶನವನ್ನು, ಮತ್ತು ನನ್ನನ್ನೇ ಮುಗಿಸುವ ಮಾತುಗಳನ್ನು ಅವರು ಆಚೆ ಕೋಣೆಯಲ್ಲಿ ಆಡಿದ್ದು ಆಡಿದ್ದು ನನಗೂ ಕೇಳಿಸಿತು. ತಪ್ಪಿಸಿಕೊಂಡು ಓಡಿಹೋಗೋಣ ಅಂದುಕೊಂಡೆ. ಬಾಗಿಲಿನ ಚಿಲಕ ಹೊರಗಿಂದ ಹಾಕಿತ್ತು, ತೆಗೆಯಲಾಗಲಿಲ್ಲ.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಹುರಿಮೀಸೆ

ಅರ್ಧ ಗಂಟೆಯಿಂದ ಒದ್ದಾಡುತ್ತಿದ್ದೇನೆ. ಹೊರಗಿಂದ ಯಾರೋ ಬಾಗಿಲು ತೆಗೆಯುತ್ತಿದ್ದಾರೆ. ಅರೆ ಅಪ್ಪ ಇಲ್ಲಿಗೇ ಬಂದರು, ರಿಮೋಟ್ ಕಂಟ್ರೋಲ್ ಒಂದನ್ನು ಒತ್ತಿದರು. ನಾನು…..


“ಪ್ರಯೋಗ ಮುಗೀತಾ ಅಪ್ಪ? ತಾನ್ಯಾಳನ್ನ ಶಾಶ್ವತವಾಗಿ ಶಟ್ ಡೌನ್ ಮಾಡ್ತೀರಾ? she was fun to be around, ಇಷ್ಟು ಬೇಗ ಕಾಮಿಡಿ ಕಲೀತಾಳೆ ಅಂತ ನಾನಂತೂ ಅಂದ್ಕೊಂಡಿರ್ಲಿಲ್ಲ, ಆಲ್ಮೋಸ್ಟ್ ನನ್ ತಂಗಿಯೇ ಅನ್ನುವ ಹಾಗಿದ್ಳು. ಅವಳು ಮನುಷ್ಯಳಲ್ಲ ಅಂತ ನಂಬೋದೇ ಕಷ್ಟ ಅನ್ನೋ ತರ ಇದ್ಳು! what a creation! ಈಗ ಏನಾಯ್ತು? what went wrong?” ಸಾನ್ಯಾ ಒಂದು ಬುಟ್ಟಿ ಪ್ರಶ್ನಾರ್ಥಕ ಚಿಹ್ನೆಗಳನ್ನು ಸುರುವಿ ಒಂದೇ ಉಸುರಿಗೆ ಬಡಬಡಿಸಿದಳು.

ವಿಜ್ಞಾನಿ ಶಂತನು ಕಾಮತ್ ನಿಧಾನಕ್ಕೆ ಬಾಯಿ ತೆರೆದರು, “ಒಂದು ಹ್ಯೂಮನಾಯ್ಡ್ ರೊಬೋಟು ಜೋಕು ಹೇಳಲು ಕಲಿಯುತ್ತದೆ ಅಂದ್ರೆ ನೀನು ನಂಬಿರ್ಲಿಲ್ಲ ಅಲ್ಲಾ? ನಾನು ಈಗ ಹೇಳುದನ್ನೂ ನೀನು ಒಪ್ಪುದಿಲ್ಲ ನೋಡು ಬೇಕಾದ್ರೆ?” ಪ್ರಶ್ನೆಗಳನ್ನು ಕೆಳಗುದುರುವ ಮೊದಲೇ ಗುಡಿಸಿ ಎಸೆಯುವ ಉತ್ಸಾಹ ಅವರ ಸ್ವರದಲ್ಲಿತ್ತು.

“ಅಂದ್ರೆ? ಈಗ ತಾನ್ಯಾ ಎಂಥ ಮಾಡಿದ್ಳು ಅಂಥ ನೀವು ಹೇಳುದು?” ಸಾನ್ಯಾಳ ಕಣ್ಣುಗಳಲ್ಲಿ ಇನ್ನೂ ಪ್ರಶ್ನಾರ್ಥಕ ಚಿಹ್ನೆ ಮಾಸಿರಲಿಲ್ಲ. “ಅವಳು ಏನು ಮಾಡಬಾರದಿತ್ತೋ ಅದನ್ನು ಮಾಡಿದ್ಳು. ಸಾಯುವವರಿಗೆ ಅದು ಮಾಡ್ತೇನೆ ಇದು ಮಾಡ್ತೇನೆ ಅಂತ ಕರುಣಾಮಯಿಯಾಗ ಹೊರಟಳು, ಇದೇ ಮೊದಲ ಸಲ ಭಾವಜೀವಿಯಾದ್ಳು, ಇನ್ನು ಅವಳನ್ನ ಶಟ್ ಡೌನ್ ಮಾಡುದು ಬಿಟ್ರೆ ಬೇರೆ ಆಪ್ಶನ್ ಏನಿದೆ?” ತನ್ನ ಕೊನೆಯ ವಾಕ್ಯವೊಂದು ಪ್ರಶ್ನೆಯೇ ಅಲ್ಲ ಎಂಬಂತೆ ಸಾನ್ಯಾಳ ಲೋಹದ ತಲೆಯ ಮೇಲಿದ್ದ ಕೂದಲನ್ನು ಮೆಲ್ಲಗೆ ಎಡಗೈಯಿಂದ ಸವರಿ, ರಿಮೋಟನ್ನು ಕೆಳಗಿಟ್ಟರು ಶಂತನು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಏಳು ಮಲ್ಲಿಗೆ ತೂಕದವಳು…

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮೈಸೂರು

Book Release: ಮೈಸೂರಿನಲ್ಲಿ ಮೇ 9ರಂದು ಐತಿಚಂಡ ರಮೇಶ ಉತ್ತಪ್ಪ ಅವರ 4 ಪುಸ್ತಕ ಬಿಡುಗಡೆ, ಸಂವಾದ

Book Release: ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

Ithichanda Ramesh Uthappaʼs Four books to be released in Mysore on May 9
Koo

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ, ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶನ ಹಾಗೂ ಮೈಸೂರು ಕಲ್ಚರಲ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ (Ithichanda Ramesh Uthappa) ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮವನ್ನು (Book Release) ನಗರದ ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು ಉದ್ಘಾಟಿಸಲಿದ್ದು, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಹಾಗೂ ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಭಾಗವಹಿಸಲಿದ್ದಾರೆ.

ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ.ಎಸ್. ಸಪ್ನ ಅವರು ಅಧ್ಯಕ್ಷತೆ ವಹಿಸಲಿದ್ದು, ವಿಶೇಷ ಅತಿಥಿಗಳಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ ಹಾಜರಿರಲಿದ್ದಾರೆ.

ಇದನ್ನೂ ಓದಿ | ರಾಜಮಾರ್ಗ ಅಂಕಣ: ಶೇಕ್ಸ್‌ಪಿಯರ್‌ ನೆನಪಿನಲ್ಲಿ ಓದುವ ಸುಖ ನೆನಪಿಸಿಕೊಳ್ಳುವ ಹೊತ್ತು

ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ಕೆ.ಪುಟ್ಟಸ್ವಾಮಿ, ಸಹ ಪ್ರಾಧ್ಯಾಪಕರಾದ ಪ್ರೊ. ಎನ್. ಮಮತ, ಪುಸ್ತಕಗಳ ಲೇಖಕರಾದ ಐತಿಚಂಡ ರಮೇಶ್ ಉತ್ತಪ್ಪ, ಪ್ರಕಾಶಕ ಚೇತನ್ ಕಣಬೂರು, ಮೈಸೂರು ಕಲ್ಬರಲ್ ಅಸೋಸಿಯೇಷನ್‌ನ ಎ.ಪಿ.ನಾಗೇಶ್ ಉಪಸ್ಥಿತರಿರಲಿದ್ದಾರೆ.

ಬಿಡುಗಡೆಯಾಗಲಿರುವ ಕೃತಿಗಳು

  • ಕಾಡು ಹೇಳಿದ ಕಥೆ: ವೈಲ್ಡ್‌ ಲೈಫ್ ರಿಪೋರ್ಟಿಂಗ್
  • ಹಾವು: ನಂಬಿಕೆ ಹಾಗೂ ಮನೋವೈಜ್ಞಾನಿಕ ವಿಶ್ಲೇಷಣೆ
  • ಆನೆ: ಬದಲಾದ ವರ್ತನೆ
  • ಅರ್ಜುನ ನಿನ್ನ ಮರೆಯಲೆಂತು ನಾ..!
Continue Reading

ಅಂಕಣ

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

ಧವಳ ಧಾರಿಣಿ ಅಂಕಣ: ಕಾಮವೆನ್ನುವುದು ಎಂತಹವರನ್ನೂ ತಲೆಕೆಡಿಸಿಬಿಡುತ್ತದೆ. ಕಾಮದ ಹುಚ್ಚಿನಲ್ಲಿರುವ ದಶರಥ ತನ್ನ ಸುಖಕ್ಕಾಗಿ ಏನನ್ನು ಮಾಡಲೂ ಹೇಸದ ಸ್ಥಿತಿಗೆ ತಲುಪಿದ್ದಾನೆ. ವಧಾರ್ಹನಲ್ಲದವನನ್ನು ವಧಿಸಲೇ, ಮರಣದಂಡನೆಗೆ ಗುರಿಯಾದವನನ್ನು ಬಿಡಿಸಲೇ, ದರಿದ್ರನನ್ನು ಶ್ರೀಮಂತನನ್ನಾಗಿ ಮಾಡಲೇ, ಶ್ರೀಮಂತನನ್ನು ದರಿದ್ರನನ್ನಾಗಿ ಮಾಡಲೇ; ನಿನ್ನ ಪ್ರೀತಿಗಾಗಿ ಏನನ್ನೂ ಮಾಡಲೂ ತಾನು ಸಿದ್ಧ ಎನ್ನುತ್ತಾನೆ.

VISTARANEWS.COM


on

king dasharatha kaikeyi dhavala dharini column
Koo

ಪ್ರಾಣಕ್ಕಿಂತ ಪ್ರಿಯಳಾದ ಸತಿಯಿಂದ ಪ್ರಾಪ್ತವಾದ ಪುತ್ರ ವಿಯೋಗ

dhavala dharini by Narayana yaji

ಧವಳ ಧಾರಿಣಿ ಅಂಕಣ: ಸ ಕೈಕೇಯ್ಯಾ ಗೃಹಂ ಶ್ರೇಷ್ಠಂ ಪ್ರವಿವೇಶ ಮಹಾಯಶಾಃ
ಪಾಣ್ಡುರಾಭ್ರಮಿವಾಕಾಶಂ ರಾಹುಯುಕ್ತಂ ನಿಶಾಕರಃ ৷৷ಅ.ಯೋ.10.11৷৷

ಬಿಳಿಯದಾದ ಮೋಡಗಳಿಂದ ಕೂಡಿದ ಆಕಾಶದಲ್ಲಿ ರಾಹುವಿಗೆ ಗ್ರಾಸವಾಗುವ ಸಲುವಾಗಿ ಚಂದ್ರನು ಪ್ರವೇಶಿಸುವಂತೆ ಮಹಾಯಶೋವಂತನಾದ ರಾಜನು ಭವ್ಯವಾದ ಕೈಕೇಯಿಯ ಅಂತಃಪುರವನ್ನು ಪ್ರವೇಶಿಸಿದನು.

ಕವಿಸಮಯವೆನ್ನುವದು ರಾಮಾಯಣ ಕಾವ್ಯದ ವಿಶೇಷ. ವಾಲ್ಮೀಕಿ ಕಾವ್ಯವನ್ನು ಕೇವಲ ಉಅಪದೇಶಕ್ಕಾಗಿಯಲ್ಲ, ಅದನ್ನು ತಾಳವಾದ್ಯಗಳೊಂದಿಗೆ ರಾಗವಾಗಿ ಹಾಡಲು ಅನುಕೂಲವಾಗುವಂತೆ ಬರೆದಿದ್ದಾನೆ. ಹಾಡುಗಾರಿಕೆಯಲ್ಲಿ ವರ್ಣನೆಗೆ ಮಹತ್ವ ಬರುತ್ತದೆ. ಕಾವ್ಯದ ಮುಂಗಾಣ್ಕೆ ಅಲ್ಲಲ್ಲಿ ವ್ಯಕ್ತವಾಗುತ್ತಾ ಹೋಗುತ್ತದೆ. ಕೈಕೇಯಿಯ ಅರಮನೆಗೆ ಹೋಗುವ ರಾಜನ ಕುರಿತು ವರ್ಣಿಸುವಾಗ ಬಿಳಿಯದಾದ ಮೋಡ, ರಾಹು, ಆಕಾಶ, ಚಂದ್ರ ಎನ್ನುವ ಉಪಮೆಗಳ ಮೂಲಕ ಹೇಳಿದ್ದಾನೆ. ಆಕಾಶ ಎನ್ನುವುದು ಮನಸ್ಸಿನಲ್ಲಿ ಆಸೆಗಳ ವಿಸ್ತಾರದವನ್ನು ಸೂಚಿಸಿದೆ. ಬಿಳಿಯದಾದ ಮೋಡವೆನ್ನುವದು ಅರ್ಥಪೂರ್ಣವಾದ ಉಪಮೆ. ನೀರಿನಿಂದ ಯುಕ್ತವಾದ ಮೋಡ ಕಪ್ಪಾಗಿರುತ್ತದೆ. ಮನಸ್ಸಿನಲ್ಲಿ ತನ್ನ ಮಗನ ಪಟ್ಟಾಭಿಷೇಕದ ಕುರಿತು ಯಾವ ಆಸೆಯನ್ನೇ ಇರಿಸಿಕೊಳ್ಳಲಿ, ಅದೆಲ್ಲವೂ ನೀರಿಲ್ಲದ ಮೋಡದಂತೆ ವ್ಯರ್ಥವಾಗಿ ಹಾರಿಹೋಗುತ್ತದೆ ಎನ್ನುವುದನ್ನು ಹೇಳುತ್ತಾನೆ. ರಾಹು ಮತ್ತು ಕೇತುಗಳು ಭಾರತೀಯ ಖಗೋಳಶಸ್ತ್ರದ ಪ್ರಕಾರ ಎರಡು ವಿರುದ್ಧದಿಕ್ಕುಗಳಲ್ಲಿರುವ ಬಿಂದುಗಳು. ಈ ಬಿಂದುವಿಗೆ ಸೂರ್ಯಚಂದರು ಬಂದಾಗ ಗ್ರಹಣವಾಗುತ್ತದೆ. ಚಂದ್ರ ಮನಸ್ಸಿನ ಕಾರಕ. ಸಂತೊಷ ಮತ್ತು ಕಾಮವಿಕಾರಗಳು ಮನಸ್ಸಿನಲ್ಲಿ ಉತ್ಪನ್ನವಾಗುವಂತವು. ಚಂದ್ರ ತನ್ನ ಪರಿಭ್ರಮಣದಲ್ಲಿ ರಾಹುವಿನ ಬಿಂದುವಿಗೆ ಬಂದಾಗ ಗ್ರಹಣವಾಗಿ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತಾನೋ ಅದೇರಿತಿ ರಾಜ ತನ್ನೆಲ್ಲ ಕನಸನ್ನು ಕಳೆದುಕೊಂಡು ನಿಶ್ಚಿತವಾಗಿ ಮರಣದತ್ತ ಸಾಗಲು ಬಂದಿದ್ದಾನೆ ಎನ್ನುವುದನ್ನು ಉಪಮಾಮಲಂಕಾರದಲ್ಲಿ ಕವಿ ವರ್ಣಿಸಿದ್ದಾನೆ.

ದಶರಥನ ಪಾತ್ರವನ್ನು ವಿವೇಚಿಸುವಾಗ ಮೊದಲಿನಿಂದಲೂ ಕಂಡುಬಂದ ಅಂಶವೆಂದರೆ ಮಹಾನ್ ರಾಜರ್ಶಿಯಾಗಿದ್ದ ದೊರೆ ರಾಮನ ಕುರಿತು ಕಡುಲೋಭಿಯಾಗಿ ಪರಿವರ್ತನೆಯಾಗಿರುವುದನ್ನು ಗಮನಿಸಬಹುದು. ದಶರಥನ ವ್ಯಕ್ತಿತ್ವವೆನ್ನುವುದು ಸಂಕೀರ್ಣವೇನೂ ಅಲ್ಲ. ಶೂರನಾಗಿದ್ದ; ಸೂರ್ಯವಂಶದ ಧ್ಯೇಯೋದ್ಧಶವಾದ ಧರ್ಮಸ್ಥಾಪನೆಯ ವಿಷಯದಲ್ಲಿ ಸದಾ ನಿರತನಾಗಿದ್ದ. ಅದೇ ಕಾಲಕ್ಕೆ ಅಯೋಧ್ಯೆಯ ಸಿಂಹಾಸನವೆನ್ನುವುದು ಗಣತಂತ್ರವ್ಯವಸ್ಥೆಯಲ್ಲಿ ಇತ್ತು. ರಾಜರಾಗುವವರು ಯಾರೇ ಆದರೂ ಅದಕ್ಕೆ ಪ್ರಜೆಗಳ ಒಪ್ಪಿಗೆ ಪಡೆಯಬೇಕಾಗಿತ್ತು. ಪ್ರಾಚೀನ ಗ್ರೀಸಿನಲ್ಲಿದ್ದ ರೀತಿಯ ಗಣತಂತ್ರವ್ಯವಸ್ಥೆ ಅಯೋಧ್ಯೆಯಲ್ಲಿ ಇತ್ತು ಎನ್ನುವುದಕ್ಕೆ ವಾಲ್ಮೀಕಿಯ ರಾಮಾಯಣವನ್ನು ಮತ್ತು ಮತ್ತು ಪ್ಲೇಟೋವಿನ “The Republic” ಕೃತಿಯನ್ನು ತುಲನೆ ಮಾಡಿದಾಗ ಅನಿಸುತ್ತದೆ. ಅದನ್ನು ಕೇವಲ ತೋರಿಕೆಗಾಗಿ ಆಚರಣೆಯಲ್ಲಿ ಇಟ್ಟು ತನಗೆ ಬೇಕಾದಂತೆ ಉತ್ತರಾಧಿಕಾರಿಯನ್ನು ಆರಿಸುವ ತಂತ್ರವನ್ನು ದಶರಥ ಅನುಸರಿಸಿರುವುದು ರಾಮನಿಗೆ ಪಟ್ಟಗಟ್ಟಬೇಕೆನ್ನುವ ಸಂದರ್ಭದಲ್ಲಿ ಕಾಣಬಹುದು. ಆತನ ಚಾಣಾಕ್ಷನಡೆಯ ಒಳಗಿರುವದು ತನ್ನದು ಎನ್ನುವ ಮೋಹದ ಅರಿವು ಎನ್ನುವುದು ಯಾರ ಗಮನಕ್ಕೂ, ಹೆಚ್ಚೇನು ರಾಮನ ಅರಿವಿಗೂ ಬಾರದ ಹಾಗೆ ನಡೆದುಕೊಂಡಿದ್ದಾನೆ. ಪರಿಪೂರ್ಣ ವ್ಯಕ್ತಿತ್ವದ ರಾಮನಂತಹ ದೊರೆ ತಮಗೆ ಸಿಗುತ್ತಾನೆ ಎನ್ನುವ ಕಾರಣಕ್ಕೆ ಪ್ರಜೆಗಳು ಸಂಭ್ರಮಿಸುವುದು ಸಹಜವೇ ಆಗಿದೆ. ತಾನು ಅಶ್ವಪತಿಗೆ ಕೊಟ್ಟ ಮಾತುಗಳು ಹೀಗೆ ಮರೆಯಾದ ಕಾರಣ ಅದು ದೊರೆಗೆ ಅಪರಿಮಿತ ಸಂತೋಷವನ್ನು ಕೊಟ್ಟಿದೆ. ಇಳಿವಯಸ್ಸಿನಲ್ಲಿ ಕಿರಿಯ ಚಲುವೆಯಾದ ಕೈಕೇಯಿಯ ಹಿಂದೆ ಬಿದ್ದಿದ್ದ ದೊರೆಗೆ ವೃದ್ದಾಪ್ಯದಲ್ಲಿ ಮಕ್ಕಳಾದ ಮೇಲೆ ರಾಮ ಎನ್ನುವ ಕುರುಡು ಮೋಹ ಆವರಿಸಿಕೊಂಡಿತ್ತು. ಆತನ ಕುರಿತು ಮಂಥರೆ ಹೇಳುವ ಮಾತು

ಧರ್ಮವಾದೀ ಶಠೋ ಭರ್ತಾ ಶ್ಲಕ್ಷ್ಣವಾದೀ ಚ ದಾರುಣಃ
ಶುದ್ಧಭಾವೇ ನ ಜಾನೀಷೇ ತೇನೈವ ಮತಿಸಂಧಿತಾ৷৷ಬಾ.ಕಾಂ.7.24৷৷

ನಿನ್ನ ಗಂಡನು ಮೇಲೆಮೇಲೆ ಧರ್ಮಸಮ್ಮತವಾದ ಮಾತುಗಳನ್ನು ಆಡುತ್ತಿದ್ದರೂ ಅಂತರಂಗದಲ್ಲಿ ಬಹಳ ಕಪಟಸ್ವಭಾವದವನು. ಬಾಯಲ್ಲಿ ಮೃದುವಾದ ಮಾತುಗಳನ್ನು ಆಡುತ್ತಿದ್ದರೂ ನಂಬಿಸಿ ಮೋಸಮಾಡುವುದು ಹೇಗೆಂದು ಯೋಚಿಸುತ್ತಿರುತ್ತಾನೆ. ಕರುಣೆಯೆನ್ನುವುದೇ ಇಲ್ಲ, ಬಹಳ ಋಜುಸ್ವಭಾವದವಳಾದ ನೀನು ಆತನ ಕಪಟವನ್ನು ಅರಿಯದೇ ಹೋದೆಯಲ್ಲವೇ.

ಮಂಥರೆ ಇಲ್ಲಿ ಕೈಕೇಯಿಯ ಮನಸ್ಸನ್ನು ತಿರುಗಿಸಲು ಹೇಳಿರುವಳಾದರೂ ಪಾಯಸವನ್ನು ತನ್ನ ರಾಣಿಯರಿಗೆ ಹಂಚುವಲ್ಲಿಂದ ಹಿಡಿದು ರಾಮಪಟ್ಟಾಭಿಷೇಕದ ವರೆಗೆ ದಶರಥ ಏಕಪಕ್ಷೀಯವಾಗಿ ತೆಗೆದುಕೊಂಡ ತೀರ್ಮಾನವನ್ನು ಗಮನಿಸಿದಾಗ ನಮ್ಮ ದೌರ್ಬಲ್ಯ ಶತ್ರುಗಳಿಗೆ ಆಯುಧ ಎನ್ನುವ ನೀತಿಶಾಸ್ತ್ರದ ಮಾತನ್ನು ನೆನಪಿಸುತ್ತದೆ. ಅಂತೂ ತನ್ನ ಕಾರ್ಯವಾದ ರಾಮನ ಪಟ್ಟಾಭಿಷೇಕದ ವಿಷಯದಲ್ಲಿ ಯಾವ ತೊಂದರೆಯಿಲ್ಲದೇ ಸಾಂಗವಾಗಿ ನಡೆಯುವುದು ಎನ್ನುವ ನಂಬಿಕೆಯೊಂದಿಗೆ ಸಂತೊಷವೆನ್ನುವುದು ಅತಿರೇಕಕ್ಕೆ ಹೋಗಿತ್ತು. ಸಂತೋಷ ಅತಿರೇಕಕ್ಕೆ ಹೋದಾಗ ಅದು ಮದಕ್ಕೆ ತಿರುಗುತ್ತದೆ. ಮದವೆನ್ನುವುದು ಕಾಮಕ್ಕೆ ಮೂಲ. ಅದನ್ನು ಇಳಿಸಿಕೊಳ್ಳಲು ಸಂಗಾತಿಯನ್ನು ಹುಡಿಕಿಕೊಳ್ಳುವುದು ಜೀವಿಗಳ ಸಹಜ ಕ್ರಿಯೆ. ಅರಸನಿಗೆ ತನ್ನ ಆಲೋಚನೆಯನ್ನು ಹಂಚಿಕೊಳ್ಳುವ ಸಂಗಾತಿಯ ಅಗತ್ಯ ತುರ್ತಾಗಿ ಎದುರಾಯಿತು. ವಶಿಷ್ಠರಲ್ಲಿಯಾಗಲಿ, ವಾಮದೇವರಲ್ಲಿಯಾಗಲಿ ಇದನ್ನೆಲ್ಲವನ್ನು ಹಂಚಿಕೊಳ್ಳಲು ಅವರೇನು ಸಾಮಾನ್ಯದವರಾಗಿರಲಿಲ್ಲ.

ರಾಮ ಯುವರಾಜ ಪಟ್ಟಕ್ಕೆ ಅರ್ಹನಾಗಿದ್ದರೂ, ಅಯೋಧ್ಯೆಯಲ್ಲಿ ಆ ಸಾಯಂಕಾಲ ನಡೆದ ಸಿದ್ಧತೆ ದಶರಥನ ವೈಯಕ್ತಿಕ ಕಾಮನೆಯ ಫಲವಾಗಿತ್ತು. ಪ್ರಜೆಗಳು ರಾಮನನ್ನು ರಾಜನ್ನಾಗಿ ನೋಡಲು ಬಯಸಿದ್ದರೆನ್ನುವುದು ನಿಜವಾದರೂ ಇಲ್ಲಿಮೊದಲ ಸಾರಿ ರಾಮನ ಪಟ್ಟಾಭಿಷೇಕಕ್ಕಾಗಿ ದಶರಥ ಹೇಗೆಲ್ಲಾ ಮಂಡಿಗೆಯನ್ನು ಹಾಕಿದ್ದ ಎನುವುದನ್ನು ಹಿಂದಿನ ಭಾಗಗಳಲ್ಲಿ ನೋಡಿದ್ದೇವೆ. ರಾಮನನ್ನು ಕೇವಲ ಮಗನಾಗಿ ಮಾತ್ರ ನೋಡಿದ್ದಾನೆಯೇ ಹೊರತು ವಿಶ್ವಾಮಿತ್ರ, ವಶಿಷ್ಠರು, ಪರಶುರಾಮ ಮೊದಲಾದವರಿಗೆ ರಾಮನ ಅವತಾರದ ಹಿಂದಿರುವ ದೈವತ್ವದ ದರ್ಶನ ಅರಸನಿಗೆ ಸಾಯುವವರೆಗೂ ಆಗಲೇ ಇಲ್ಲ. ರಾಮನಿಗೆ ಪಟ್ಟಗಟ್ಟುವ ತನ್ನ ಮನಸ್ಸಿನ ಮಂಡಿಗೆ ಯಶಸ್ವಿಯಾದ ವಿಷಯವನ್ನು ವಿವರವಾಗಿ ವರ್ಣಿಸಿ ಹೇಳಲು ಕಿರಿಯ ರಾಣಿಯಷ್ಟು ಆಪ್ತರು ಬೇರೆ ಯಾರೂ ಇಲ್ಲ. ಕೌಸಲ್ಯೆಗೆ ಹೇಳಿದರೆ ಆಕೆಗೆ ಸಂತೋಷವೇನೋ ಆಗಬಹುದಾದರೂ ಆಕೆಯಲ್ಲಿ ಕಾಮದ ಆಕರ್ಷಣೆ ದೊರೆಗೆ ಬತ್ತಿಹೋಗಿತ್ತು. ಸುಮಿತ್ರೆಯೂ ಅಷ್ಟೇ. ಚಿಕ್ಕವಯಸ್ಸಿನ ಕೈಕೆಯಿಯನ್ನು ಚೆನ್ನಾಗಿ ಮರಳುಮಾಡಿ ಇಟ್ಟುಕೊಂಡಿದ್ದ. ತನಗೆ ಬೇಕಾದ ಹಾಗೆ ಸುಖವನ್ನು ಅವಳಿಂದ ಪಡೆಯುತ್ತಿದ್ದ. ಆಕೆ ರಾಜನಿಗೋಸ್ಕರ ಅಲಂಕರಿಸಿಕೊಂಡು ನಗುಮುಖದಿಂದ ಯಾವತ್ತಿಗೂ ಸ್ವಾಗತಿಸಲು ಸಿದ್ಧಳಾಗಿರುತ್ತಿದ್ದಳು. ಕೈಕೇಯಿ ಮಂಥರೆಯ ಮಾತಿನಿಂದ ಪ್ರಭಾವಿತಳಾಗಿ ರಾಜನನ್ನು ಮಣಿಸಲೇ ಬೇಕೆಂದು ಕೋಪಾಗಾರವನ್ನು ಸೇರಿದರೆ ಇಳಿವಯಸ್ಸಿನ ರಾಜ “ರಾಮಾಭಿಷೇಕದ ಸಂತೋಷದ ವಾರ್ತೆಯನ್ನು ಕೈಕೇಯಿಗೆ ತಿಳಿಸಿ ರತಿಸುಖವನ್ನು ಪಡೆಯಬೇಕೆಂದು ಬಯಸಿ ಅತ್ಯಾಸೆಯಿಂದ ಕೈಕೇಯಿಯ ಅಂತಃಪುರಕ್ಕೆ ಧಾವಿಸಿ ಬರುತ್ತಾನೆ”.

ಕೈಕೇಯಿ ಅಂತಃಪುರದಲ್ಲಿ ಇಲ್ಲವಾಗಿರುವುದನ್ನು ಕಂಡವನಿಗೆ ವ್ಯಾಕುಲವಾಯಿತು. ಪ್ರತಿಹಾರಿ ಹೇಳಿದ “ದೇವ ದೇವಿ ಬೃಶಂ ಕ್ರುದ್ಧಾ ಕ್ರೋಧಾಗಾರಮಭಿದ್ರುತಾ-ಪರಮ ಕ್ರುದ್ಧೆಯಾಗಿ ದೇವಿ ಕೋಪಾಗಾರವನ್ನು ಸೇರಿದ್ದಾಳೆ” ಎನ್ನುವ ಮಾತನ್ನು ಕೇಳಿ ಕಂಗಾಲಾದ. ಕೋಪಾಗಾರಕ್ಕೆ ಧಾವಿಸಿ ನೋಡಿದರೆ ತನ್ನ ಪ್ರೇಯಸಿ ಅಸ್ತವ್ಯಸ್ತವಾಗಿ ನೆಲದ ಮೇಲೆ ಮಲಗಿದ್ದಾಳೆ. ಪ್ರಿಯತಮೆಯನ್ನು ಆಕಾಶದಿಂದ ಚ್ಯುತಳಾದ ಅಪ್ಸರೆಯಂತೆ ಕಂಡವನಿಗೆ ಎದೆಯೊಡೆದು ಹೋಯಿತು. “ನಿಷ್ಕಳಂಕನಾದ ದಶರಥ ಪಾಪಸಂಕಲ್ಪವನ್ನು ಹೊತ್ತ ಕೈಕೇಯಿಯನ್ನು ಕಂಡ” ಎನ್ನುವ ಮಾತು ಇಲ್ಲಿ ಬರುತ್ತದೆ. ಸಂಕಲ್ಪವೆನ್ನುವುದು ಹೊಸ ಕಾರ್ಯಕ್ಕೆ ಹೇತು. ಮುಂದಿನ ಘಟನೆಗೆ ಇಲ್ಲಿ ನಾಂದಿಯಾಗುತ್ತಿದೆ. ಧರ್ಮಮಾರ್ಗದಲ್ಲಿ ಸದಾ ನಡೆಯುತ್ತಿದ್ದ ಅರಸ ಕಾಮಮೋಹಿತನಾಗಿ ಕೈಕೇಯಿಯನ್ನು ಸಮಾಧಾನ ಮಾಡಲು ಹೇಳುವ ಮಾತುಗಳು ಸೂರ್ಯವಂಶಕ್ಕೆ ಹೇಳಿಸಿದ್ದಲ್ಲ.

ಅವಧ್ಯೋ ವಧ್ಯತಾಂ ಕೋ ವಾ ವಧ್ಯಃ ಕೋವಾ ವಿಮುಚ್ಯತಾಮ್.
ದರಿದ್ರಃ ಕೋ ಭವದಾಢ್ಯೋ ದ್ರವ್ಯವಾನ್ಕೋSಪ್ಯಕಿಂಚನಃ৷৷ಅ. ಕಾಂ.10.33৷৷

ಕಾಮವೆನ್ನುವುದು ಎಂತವರನ್ನೂ ತಲೆಕೆಡಿಸಿಬಿಡುತ್ತದೆ. ಕಾಮದ ಹುಚ್ಚಿನಲ್ಲಿರುವ ದಶರಥ ತನ್ನ ಸುಖಕ್ಕಾಗಿ ಏನನ್ನು ಮಾಡಲೂ ಹೇಸದ ಸ್ಥಿತಿಗೆ ತಲುಪಿದ್ದಾನೆ. ವಧಾರ್ಹನಲ್ಲದವನನ್ನು ವಧಿಸಲೇ, ಮರಣದಂಡನೆಗೆ ಗುರಿಯಾದವನನ್ನು ಬಿಡಿಸಲೇ, ದರಿದ್ರನನ್ನು ಶ್ರೀಮಂತನನ್ನಾಗಿ ಮಾಡಲೇ, ಶ್ರೀಮಂತನನ್ನು ದರಿದ್ರನನ್ನಾಗಿ ಮಾಡಲೇ; ನಿನ್ನ ಪ್ರೀತಿಗಾಗಿ ಏನನ್ನೂ ಮಾಡಲೂ ತಾನು ಸಿದ್ಧ ಎನ್ನುವ ಮಾತುಗಳು ದೊರೆತನಕ್ಕೆ ತಕ್ಕುದಲ್ಲ. ಆತ ಅವಳನ್ನು ಸಮಾಧಾನಿಸುತ್ತಾ “ಪ್ರಿಯತಮೆಯಲ್ಲಿ ನನಗೆ ನಿನಗಿಂತ- ಮನುಜರಲ್ಲಿ ರಾಮನಿಗಿಂತ ಹೆಚ್ಚಿನವರು ಯಾರೂ ಇಲ್ಲ” ಎನ್ನುವಲ್ಲಿ ರಾಮನ ಹೆಸರನ್ನು ಕೇಳಿದ ಆಕೆಗೆ ಮತ್ತುಷ್ಟು ಉರಿ ಹತ್ತಿತು. ದೊರೆ ಮನ್ಮಥನ ಬಾಣಕ್ಕೆ ಈಡಾಗಿರುವುದನ್ನು ಪಕ್ಕಾ ಮಾಡಿಕೊಂಡಳು. ಸ್ವಲ್ಪ ಹೊತ್ತು ಕಾಡಿಸಬೇಕು ಎಂದು ಸುಮ್ಮನಾದವಳು. ದಶರಥನಿಗೆ ಸಹಿಸಲಾಗಿಲ್ಲ. ಆಕೆಯ ರೂಪಲಾವಣ್ಯಕ್ಕೆ ಸೋತಿದ್ದ. ಅವಳ ನೋವನ್ನು ಬಗೆಹರಿಸುವುದು ತನ್ನ ಆದ್ಯ ಕರ್ತವ್ಯವೆಂದು ಬಗೆದ.. ಅದು ತನಕ ತಾನು ಗಳಿಸಿದ ಸುಕೃತದ ಮೇಲೆ ಆಣೆಯಿಟ್ಟು ಅವಳ ಬಯಕೆಯನ್ನು ಈಡೇರಿಸುವೆ ಎಂದು ಅಂಗಲಾಚಿದ.

dhavala dharini king dasharatha

ಆದರೂ ಸುಮ್ಮನಿದ್ದ ಕೈಕೇಯಿಗೆ ಕೊನೆಯದಾಗಿ “ನನ್ನ ರಾಮನಾಣೆಗೂ ನೀನು ಹೇಳುವ ಕಾರ್ಯವನ್ನು ಮಾಡುತ್ತೇನೆ” ಎಂದು ಪ್ರತಿಜ್ಞೆ ಮಾಡಿಬಿಟ್ಟ. ಗಾಳದಲ್ಲಿ ಚಿಕ್ಕಮೀನನ್ನು ಚುಚ್ಚಿ ದೊಡ್ಡಮೀನನ್ನು ಸೆಳೆಯುವಂತೆ ಚಕ್ರವರ್ತಿಯನ್ನು ಮಟ್ಟುಹಾಕಿ ತನ್ನ ಕಾರ್ಯಸಾಧಿಸಲು ಇದೇ ಸಮಯವೆಂದು ತಿಳಿದ ಕೈಕೇಯಿ ಬಯಕೆಯನ್ನು ಹೇಳುವ ಮುನ್ನ ರಾಜನಲ್ಲಿನ ಧರ್ಮಪ್ರಜ್ಞೆಯನ್ನು ಜಾಗ್ರತಗೊಳಿಸಲು “ನೀನು ಮಾಡಿದ ಈ ಪ್ರತಿಜ್ಞೆಯನ್ನು ಮೂವತ್ತುಮೂರು ಕೋಟಿ ದೇವತೆಗಳು ಕೇಳಲಿ, ಚಂದ್ರಸೂರ್ಯರೂ ಕೇಳಲಿ, ಆಕಾಶವೂ ಇದಕ್ಕೆ ಸಾಕ್ಷಿಯಾಗಲಿ, ನವಗ್ರಹಗಳು, ಹಗಲು-ರಾತ್ರಿಗಳು, ಎಂಟುದಿಕ್ಕುಗಳು,ಗಂಧರ್ವರಾಕ್ಷಸರನ್ನೊಳಗೊಂಡಿರುವ ಸ್ವರ್ಗ-ಮರ್ತ್ಯ-ಪಾತಾಳ, ನಿಶಾಚರರೂ, ಪಿಶಾಚಗಳೂ, ಭೂತಗಣಗಳೂ, ಗೃಹದೇವತೆಗಳೂ ಸಹಿತ ಎಲ್ಲರೂ ನೀನು ಹೇಳಿದ ಈ ಪ್ರತಿಜ್ಞಾವಾಕ್ಯಕ್ಕೆ ಸಾಕ್ಷಿಗಳಾಗಲಿ” ಎಂದವಳೇ ಆತನನ್ನು ಸಂಪೂರ್ಣವಾಗಿ ಖೆಡ್ಡಾಕ್ಕೆ ತೋಡುವ ಈ ಮಾತನ್ನು ಆಡುತ್ತಾಳೆ.

ಸತ್ಯಸಂಧೋ ಮಹಾತೇಜಾಃ ಧರ್ಮಜ್ಞಃ ಸುಸಮಾಹಿತಾಃ.
ವರಂ ಮಮ ದದಾತ್ಯೇಷಃ ತನ್ಮೇ ಶ್ರೃಣ್ವನ್ತು ದೈವತಾಃ৷৷ಅಯೋ.11.16৷৷

ಎಲೈ ದೇವತೆಗಳಿರಾ! ನೀವೆಲ್ಲರೂ ಕೇಳಿರಿ. ಸತ್ಯಸಂಧನಾದ ಮಹಾತೇಜಸ್ವಿಯಾದ, ಧರ್ಮಜ್ಞನಾದ ಧಶರಥನು ಸಮಾಧಾನಚಿತ್ತನಾಗಿ ತಾನು ಪ್ರತಿಜ್ಞೆ ಮಾಡಿರುವಂತೆ ನನಗೆ ವರವನ್ನು ದಯಪಾಲಿಸಲಿದ್ದಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಕವಿಗೆ ಕಾಡಿದ ಮೂರು ಚಿಂತೆಗಳು

ವ್ಯಾಧನ ಧ್ವನಿಯಿಂದ ಆಕರ್ಷಿತಳಾಗಿ ಬಲೆಗೆ ಬೀಳುವ ಜಿಂಕೆಯಂತೆ ರಾಜನು ತನ್ನ ವಿನಾಶಕ್ಕಾಗಿ ಧರ್ಮಪಾಶವನ್ನು ಕುತ್ತಿಗೆಗೆ ಬಿಗಿದುಕೊಂಡಿದ್ದು ಹೀಗೆ. ಅವನಿಗೆ ಮುಂದೆ ಮಾತಾಡಲು ಅವಕಾಶಕೊಡದಂತೆ ಆತನನ್ನು ಬಿಗಿದಪ್ಪಿ ತನಗೆ ಹಿಂದೆ ಕೊಟ್ಟಿದ್ದ ವರಗಳನ್ನು ಅಪೇಕ್ಷಿಸಿ ಅದಕ್ಕೆ ರಾಜ ಬೇರೆ ಏನನ್ನಾದರೂ ಹೇಳಬಾರದೆಂದು, “ರಾಮನಿಗೆ ಪಟ್ಟಾಭಿಷೇಕಕ್ಕೆ ಯಾವೆಲ್ಲಾ ಸಿದ್ಧತೆಗಳಾಗಿವೆಯೋ ಅದೇ ಸಾಂಬಾರಪದಾರ್ಥಗಳಿಂದ ಭರತನಿಗೆ ಪಟ್ಟಾಭಿಷೇಕವಾಗಬೇಕು. ಎರಡನೇಯ ವರವನ್ನೂ ಹೇಳಿಯೇಬಿಡುವೆ.

ನವ ಪಞ್ಚ ಚ ವರ್ಷಾಣಿ ದಣ್ಡಕಾರಣ್ಯಮಾಶ್ರಿತಃ
ಚೀರಾಜಿನಜಟಾಧಾರೀ ರಾಮೋ ಭವತು ತಾಪಸಃ.

ಹದಿನಾಲ್ಕು ವರುಷಗಳ ಕಾಲ ರಾಮನು ದಂಡಕಾರಣ್ಯಕ್ಕೆ ಹೋಗಿ ಅಲ್ಲಿ ಅವನು ಜಟಾಧಾರಿಯಾಗಿ ನಾರಮುಡಿಯನ್ನುಟ್ಟು ಕೃಷ್ಣಾಜಿನವನ್ನು ಧರಿಸಿ ತಾಪಸನಂತೆ ಇರಬೇಕು.

ಕೈಕೇಯಿ ಇಷ್ಟಕ್ಕೇ ನಿಲ್ಲಿಸುವುದಿಲ್ಲ. “ಆದ್ಯ ಚೈವ ಹಿ ಪಶ್ಯೇಯಂ ಪ್ರಯಾನ್ತಂ ರಾಘವಂ ವನಮ್- ರಾಘವನು ಚೀರಾಜಿನ-ಜಟಾಧಾರಿಯಾಗಿ ಕಾಡಿಗೆ ಹೋಗುವುದನ್ನು ಈಗಲೇ ನಾನು ನೋಡಬೇಕು, ಸತ್ಯವಚನನಾದ ನೀನು ಈಗಲೇ ನಡೆಸಿಕೊಡು” ತನ್ನ ಇಬ್ಬರು ಪ್ರಿಯರಲ್ಲಿ ಒಬ್ಬನಾದ ರಾಮನಿಗೆ ಆಘಾತಕಾರಿಯಾದ ವಿಷಯಗಳನ್ನು ಹೇಳುವ ಮಾತುಗಳು ದಶರಥನ ಕಾಮದ ಪಿತ್ಥವನ್ನು ಜರ್ರನೆ ಇಳಿಸಿಯೇಬಿಟ್ಟಿತು; ಜೊತೆಗೆ ಆತನ ಮನೋಧೈರ್ಯವನ್ನೂ ಸಹ! ಲೋಕದ ಎಲ್ಲಾ ರಾಜರನ್ನು, ಪ್ರಜೆಗಳನ್ನು ಮತ್ತು ವಶಿಷ್ಠರಾದಿಯಾಗಿರುವ ಎಲ್ಲಾ ಋಷಿಗಳನ್ನು ತನ್ನ ಇಷ್ಟಕ್ಕೆ ಒಗ್ಗಿಕೊಳ್ಳುವಂತೆ ತಂತ್ರವನ್ನು ಹೂಡಿದ ಅರಸನ ಇಚ್ಛೆ ಇಲ್ಲಿ ತರಗೆಲೆಗಳಂತೆ ಗಾಳಿಗೆ ಹಾರಿಹೋಯಿತು. ಯಾವ ಉದ್ಧೇಶಕ್ಕಾಗಿ ಕೈಕೇಯಿಯ ಅರಮನೆಗೆ ಬಂದಿದ್ದನೋ ಅವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಕದಡಿಹೋಯಿತು. ಅವನ ಜೀವನದಲ್ಲಿ ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿವದೊಂದೇ ಗುರಿ ಇದ್ದಿದ್ದು. ತನ್ನ ಪ್ರೀತಿಯ ರಾಣಿಯಿಂದಲೇ ಹೀಗೆ ವಿಘ್ನಬರಬಹುದೆಂದು ರಾಜ ಎಣಿಸಿರಲಿಲ್ಲ. ಅಂಥ ಸ್ವಲ್ಪ ಅನುಮಾನ ಬಂದಿದ್ದರೂ ಆತ ಕೈಕೇಯಿಯ ಅರಮನೆಗೆ ಬರುತ್ತಲೇ ಇರಲಿಲ್ಲ. ಒಮ್ಮೆಲೇ ಎಚ್ಚರತಪ್ಪಿ ಬಿದ್ದ. ತನ್ನ ರಾಜತ್ವಕ್ಕೆ ಧಿಕ್ಕಾರ ಹಾಕಿಕೊಂಡ. ಕೊನೆಗೆ ಅನಿವಾರ್ಯವಾಗಿ ಕೈಕೇಯಿಗೆ ನಮಸ್ಕರಿಸಿಕೊಂಡು “ನಿನ್ನ ಕಾಲನ್ನು ಬೇಕಾದರೂ ಹಿಡಿಯುತ್ತೇನೆ, ರಾಮನನ್ನು ರಕ್ಷಿಸು. ವರದಾನವೆನ್ನುವ ಒಂದು ಪ್ರತಿಜ್ಞೆಯಲ್ಲಿ ನನ್ನನ್ನು ಸಿಕ್ಕಿಹಾಕಿಸಿ ನಿರಪರಾಧಿಯನ್ನು ಕಾಡಿಗಟ್ಟಿದ ದೋಷ ನನಗೆ ಬಾರದಿರಲಿ” ಎಂದು ನೆಲದಲ್ಲಿ ಹೊರಳಾಡತೊಡಗಿದ.

ಮೂಂದಿನ ಭಾಗದಲ್ಲಿ ತನ್ನ ಕರ್ಮಫಲವನ್ನು ತಾನು ಉಂಡ ಮಹಾರಾಜ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ

Continue Reading

ದಕ್ಷಿಣ ಕನ್ನಡ

Yakshagana Artist: ವೇಷ ಕಳಚುತ್ತಿರುವಾಗಲೇ ಹೃದಯ ಸ್ತಬ್ಧ ; ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

Gangadhar Puttur : ವೇಷ ಕಳಚುತ್ತಿರುವಾಗಲೇ ಯಕ್ಷಗಾನ ಕಲಾವಿದ (Yakshagana Artist) ಗಂಗಾಧರ ಪುತ್ತೂರು ಇಹಲೋಕ ತ್ಯಜಿಸಿದ್ದಾರೆ. ಮುಖದ ಬಣ್ಣವನ್ನು ಅಳಿಸುತ್ತಿರುವಾಗ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

VISTARANEWS.COM


on

By

Yakshagana Artist No more
Koo

ಮಂಗಳೂರು: ವೇಷ ಕಳಚುತ್ತಿರುವಾಗಲೇ ಹೃದಯಾಘಾತದಿಂದ (Heart attack) ಧರ್ಮಸ್ಥಳ ಯಕ್ಷಗಾನ ಮೇಳದ ಸವ್ಯಸಾಚಿ ಕಲಾವಿದ (Yakshagana Artist) ಗಂಗಾಧರ ಪುತ್ತೂರು(60) ಅವರು ಇಹಲೋಕ ತ್ಯಜಿಸಿದ್ದಾರೆ.

ನಿನ್ನೆ ಬುಧವಾರ (ಮೇ 1) ರಾತ್ರಿ ಕೋಟ ಗಾಂಧಿಮೈದಾನದ ಬಳಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಅವರು ಕುಕ್ಕಿಂತ್ತಾಯ ದೈವದ ವೇಷವನ್ನು ನಿರ್ವಹಿಸಿದ್ದರು. ಬಳಿಕ ಚೌಕಿಗೆ ಆಗಮಿಸಿ ಕಿರೀಟ, ಯಕ್ಷಗಾನದ ಆಭರಣ ತೆಗೆದಿಟ್ಟು, ಮುಖದ ಬಣ್ಣವನ್ನು ಅಳಿಸುತ್ತಿರುವಾಗ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಪುತ್ತೂರಿನ ಸೇಡಿಯಾಪು ನಿವಾಸಿಯಾಗಿರುವ ಇವರು ಏಳನೇ ತರಗತಿಯವರೆಗೆ ವಿದ್ಯಾಭ್ಯಾಸ ಹೊಂದಿದ್ದರು. ತಮ್ಮ 18ನೇ ವಯಸ್ಸಿಗೆ ಯಕ್ಷಗಾನ ತಿರುಗಾಟ ಆರಂಭಿಸಿದ ಗಂಗಾಧರ ಪುತ್ತೂರು ಸುದೀರ್ಘ 40 ವರ್ಷಗಳಷ್ಟು ಕಾಲ ಯಕ್ಷಗಾನ ರಂಗದಲ್ಲಿ ವ್ಯವಸಾಯ ಮಾಡಿದ್ದರು. ಕರ್ಗಲ್ಲು ವಿಶ್ವೇಶ್ವರ ಭಟ್ ಹಾಗೂ ಕೆ.ಗೋವಿಂದ ಭಟ್ ಅವರಿಂದ ನಾಟ್ಯಾಭ್ಯಾಸ ಮಾಡಿದರು.

ಯಕ್ಷಗಾನ ರಂಗದ ಸವ್ಯಸಾಚಿ ಕಲಾವಿದರಾದ ಇವರು ಸ್ತ್ರೀವೇಷದಿಂದ ಹಿಡಿದು ಪುಂಡುವೇಷ, ರಾಜವೇಷ, ಹೆಣ್ಣುಬಣ್ಣ ಸಮರ್ಥವಾಗಿ ನಿರ್ವಹಿಸುತ್ತಿದ್ದರು. 30 ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಗಂಗಾಧರ ಪುತ್ತೂರು ಧರ್ಮಸ್ಥಳ ಮೇಳದಲ್ಲಿಯೇ ಕಲಾವಿದರಾಗಿ ತಿರುಗಾಟ ಮಾಡಿದ್ದರು.

ಇದನ್ನೂ ಓದಿ: Prajwal Revanna case: ತಲೆಮರೆಸಿಕೊಂಡ ಪ್ರಜ್ವಲ್‌ ರೇವಣ್ಣಗೆ ಲುಕೌಟ್‌ ನೋಟಿಸ್‌ ಜಾರಿ, ಬಂದ ಕೂಡಲೇ ಬಂಧನ!

ತೀವ್ರ ಹೃದಯಾಘಾತದಿಂದ ಹಿರಿಯ ಸಂಸದ ಶ್ರೀನಿವಾಸ್‌ ಪ್ರಸಾದ್‌ ವಿಧಿವಶ

ಬೆಂಗಳೂರು: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ (76) (Srinivas Prasad) ಅವರು ತೀವ್ರ ಹೃದಯಾಘಾತದಿಂದ (Heart Aattack) ವಿಧಿವಶರಾದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಲದಿನಗಳ ಹಿಂದೆ ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ 1:20ಕ್ಕೆ (Manipal Hospital ) ಅವರು ನಿಧನರಾಗಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀನಿವಾಸ್ ಪ್ರಸಾದ್ ಅವರು ಏಪ್ರಿಲ್ 22ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎನ್ನಲಾಗಿದೆ.

ಇನ್ನು ಈ ಬಗ್ಗೆ ಶ್ರೀನಿವಾಸ್ ಪ್ರಸಾದ್ ಅಳಿಯ ಹರ್ಷವರ್ಧನ್ ಮಾಹಿತಿ ನೀಡಿದ್ದು, ಶ್ರೀನಿವಾಸ್ ಪ್ರಸಾದ್ ಅವರು ರಾತ್ರಿ 1:20ರ ಸುಮಾರಿಗೆ ತೀವ್ರವಾದ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ರೀತಿಯಲ್ಲಿ ಪ್ರಯತ್ನ ಮಾಡಿದ್ದರು. ಅವರ ಈ ಅಗಲಿಕೆ ಇಡೀ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟ. ನನಗೆ ರಾಜಕೀಯಕ್ಕೆ ಜನ್ಮ ಕೊಟ್ಟಂತವರು. ರಾಜಕೀಯದಲ್ಲಿ ಏಕಾಂಗಿಯಾಗಿ ಹೋರಾಟ ಮಾಡೋದಕ್ಕೆ ಬಿಟ್ಟು ಹೋಗಿದ್ದಾರೆ. ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡಿದ್ದಾರೆ, ಹೋರಾಟದ ಜೀವಿ ಅವರು. ಐದು ವರ್ಷದ ಹಿಂದೆ ನಾನು ನಂಜನಗೂಡಿನಲ್ಲಿ ಗೆದ್ದಾಗ ಅವರು ಲೋಕಸಭೆಯಲ್ಲಿ ಸ್ಪರ್ಧೆ ಮಾಡ್ತಿನಿ ಅಂದರು. ನನ್ನನ್ನು ಅವರು ತಂದೆ ಸ್ಥಾನದಲ್ಲಿ ನಿಂತು ರಾಜಕೀಯವಾಗಿ ಬೆಳೆಸಿದ್ದಾರೆ ಯಾವುದೆ ವಿಚಾರ ಆಗಿದ್ದರೂ ಅವರ ಜೊತೆ ಚರ್ಚೆ ಮಾಡಿಯೇ ನಿರ್ಧಾರಕ್ಕೆ ಬರುತ್ತಿದೆ. ಈಗ ಯಾರ ಬಳಿ ಹೋಗಿ ಕೇಳಲಿ ಎಂದು ಅನಿಸಿ ಬಿಟ್ಟಿದೆ ಎಂದು ಭಾವುಕರಾಗಿ ಮಾತನಾಡಿದರು.

ಇದನ್ನೂ ಓದಿ:Raja Marga Column :‌ ಕಣ್ಣೇ ಕಾಣದ ಆಕೆ ಎರಡು ಬಾರಿ ಐಎಎಸ್‌ ಪಾಸ್‌ ಮಾಡಿದ್ದರು!

ಚಾಮರಾಜನಗರ ಕ್ಷೇತ್ರದಿಂದ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಶ್ರೀನಿವಾಸ್‌ ಪ್ರಸಾದ್‌ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇನ್ನು 2013ರಿಂದ 2016ರವರೆಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಸಚಿವರಾಗಿದ್ದರು . 24 ಡಿಸೆಂಬರ್ 2016 ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದ ಅವರು 2019ರಲ್ಲಿ ಚಾಮರಾಜನಗರ ಸಂಸದರಾಗಿ ಆಯ್ಕೆ.ಯಾಗಿದ್ದರು. ಅನಾರೋಗ್ಯ ಸಮಸ್ಯೆಯಿಂದಾಗಿ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ ಅವರು 2024 ಮಾರ್ಚ್ 17ರಂದು ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Kaladarpana-Art Reflects: ಬೆಂಗಳೂರಿನಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

Kaladarpana-Art Reflects: ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.

VISTARANEWS.COM


on

Kaladarpana-Art Reflects
Koo

ಬೆಂಗಳೂರು: ಕಲಾ ದರ್ಪಣ- ಆರ್ಟ್‌ ರಿಫ್ಲೆಕ್ಟ್ಸ್‌ (Kaladarpana-Art Reflects) ವತಿಯಿಂದ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ನಗರದ ನಾಗರಬಾವಿ 2ನೇ ಹಂತದ ಎನ್‌ಜಿಇಎಫ್‌ ಲೇಔಟ್‌ನ ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಭಾನುವಾರ (ಮೇ 5ರಂದು) ಬೆಳಗ್ಗೆ 8.30ಕ್ಕೆ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, 9ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.

ಅಂತರಾಷ್ಟ್ರೀಯ ಖ್ಯಾತಿಯ ತಬಲ ವಾದಕ ಪಂಡಿತ್ ಡಾ. ಸತೀಶ್ ಹಂಪಿಹೊಳಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಜಾವಾಣಿ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಮತ್ತು ಮಾರುತಿ ಮೆಡಿಕಲ್ಸ್ ಮಾಲೀಕರು ಮಹೇಂದ್ರ ಮುಣೋತ್ ಜೈನ್ ಅವರು ಭಾಗವಹಿಸಲಿದ್ದಾರೆ. ಈ ಮೂವರು ಗಣ್ಯರು, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕಲಾದರ್ಪಣ ಪ್ರಶಸ್ತಿ ಪುರಸ್ಕೃತರು

  • ಗೋ.ನಾ. ಸ್ವಾಮಿ, ಅಂತಾರಾಷ್ಟ್ರೀಯ ಖ್ಯಾತಿಯ ಜನಪದ ಗಾಯಕರು
  • ವಿದುಷಿ ಅನಸೂಯ ದ್ವಾರಕನಾಥ, ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು

ಇದನ್ನೂ ಓದಿ | Film festival: ಬೆಂಗಳೂರಿನಲ್ಲಿ ಮೇ 4, 5ರಂದು ಗುರುದತ್‌ ಚಲನ ಚಿತ್ರೋತ್ಸವ ಮತ್ತು ಸಂಗೀತ ರಸ ಸಂಜೆ

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಕರ್ನಾಟಕ ಚಿತ್ರಕಲಾ ಪರಿಷತ್‌ನ ಪ್ರಾಧ್ಯಾಪಕ ಪ್ರೊ. ವಿ.ಎಸ್. ನಾಯಕ ಬಳಕೂರು, ಎಸ್.ಎಸ್.ವಿ.ಎಸ್.ಪಿ.ಎಸ್. ಶಾಲೆ ಪ್ರಾಂಶುಪಾಲೆ ಲತಾ ಎಸ್. ಅವರು ಆಗಮಿಸಲಿದ್ದಾರೆ. ಕಲಾ ದರ್ಪಣ- ಆರ್ಟ್‌ ರಿಫ್ಲೆಕ್ಟ್ಸ್‌ ಸಂಸ್ಥೆಯ ಹೇಮಾ ವಿನಾಯಕ್‌ ಪಾಟೀಲ್‌ ಹಾಗೂ ವಿನಾಯಕ್‌ ಪಾಟೀಲ್‌ ಅವರು ಉಪಸ್ಥಿತರಿರಲಿದ್ದಾರೆ. ಖ್ಯಾತ ನಿರೂಪಕಿ ಭವಾನಿ ಲೋಕೇಶ್‌ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Continue Reading
Advertisement
Vijay Namdevrao Wadettiwar
ದೇಶ18 mins ago

ಮುಂಬೈ ದಾಳಿ ಉಗ್ರ ಅಜ್ಮಲ್‌ ಕಸಬ್‌ ನಿರಪರಾಧಿ ಎಂದ ಕಾಂಗ್ರೆಸ್‌ ನಾಯಕ; ಭುಗಿಲೆದ್ದ ವಿವಾದ!

Beer Shortage
ಕರ್ನಾಟಕ33 mins ago

Beer Shortage: ಬೇಸಿಗೆಯಲ್ಲಿ ಮದ್ಯ ಪ್ರಿಯರಿಗೆ ಬ್ಯಾಡ್‌ ನ್ಯೂಸ್; ಇನ್ನೆರಡು ತಿಂಗಳು ಬಿಯರ್‌ ಸಿಗೋದು ಕಷ್ಟ!

Torn Jeans Styling Tips
ಫ್ಯಾಷನ್45 mins ago

Torn Jeans Styling Tips: ಟೊರ್ನ್‌ ಜೀನ್ಸ್‌ ಪ್ಯಾಂಟ್‌ ಪ್ರಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಸಂಗತಿಗಳು

lok sabha Election 2024 Bus Fare Hike
Lok Sabha Election 202447 mins ago

Lok Sabha Election 2024 : ಮತದಾನದ ಹಬ್ಬದಲ್ಲೂ ಲೂಟಿಗೆ ಇಳಿದ ಖಾಸಗಿ ಬಸ್‌! ವೋಟ್‌ ಹಾಕಲು ಬಸ್‌ ಏರುವವರಿಗೆ ಟಿಕೆಟ್ ದುಬಾರಿ!‌

IPL 2024
Latest49 mins ago

IPL 2024 : ಚೆನ್ನೈ ತಂಡದ ಮಾರಕ ಬೌಲರ್ ಮಹೀಶ್​ ಪತಿರಾನಾ​ ಐಪಿಎಲ್​ನಿಂದ ಹೊರಕ್ಕೆ

MI vs SRH
ಕ್ರೀಡೆ1 hour ago

MI vs SRH: ಸನ್ ಸ್ಟ್ರೋಕ್​ನಿಂದ ತಪ್ಪಿಸಿಕೊಂಡೀತೇ ಮುಂಬೈ ಇಂಡಿಯನ್ಸ್​​?

Kavitha Gowda chandan expected First Child
ಕಿರುತೆರೆ1 hour ago

Kavitha Gowda: ಮೊದಲ ಮಗುವಿನ ನಿರೀಕ್ಷೆಯಲ್ಲಿʻಲಕ್ಷ್ಮೀಬಾರಮ್ಮʼ ಧಾರಾವಾಹಿ ಖ್ಯಾತಿಯ ಜೋಡಿ

Met Gala 2024 Alia Bhatt attend
ಬಾಲಿವುಡ್1 hour ago

Met Gala 2024: ಮೆಟ್‌ ಗಾಲಾದಲ್ಲಿ ಆಲಿಯಾ ಹಾಜರಿ: ಪ್ರಿಯಾಂಕಾ ಚೋಪ್ರಾ ಗೈರು!

IPL2024
ಕ್ರೀಡೆ1 hour ago

IPL 2024 : ಮ್ಯಾಕ್ಸಿ ಐಪಿಎಲ್​ನಲ್ಲಿ ಬರೀ ಬೂಸಿ; ಮ್ಯಾಕ್ಸ್​ವೆಲ್​ ಆಟಕ್ಕೆ ಅಭಿಮಾನಿಗಳ ಆಕ್ರೋಶ

Job Alert
ಉದ್ಯೋಗ2 hours ago

Job Alert: ನವೋದಯ ವಿದ್ಯಾಲಯ ಸಮಿತಿಯಿಂದ 1,377 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಮೇ 7ರೊಳಗೆ ಅಪ್ಲೈ ಮಾಡಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ13 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ6 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ7 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

ಟ್ರೆಂಡಿಂಗ್‌