ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಏಳು ಮಲ್ಲಿಗೆ ತೂಕದವಳು… - Vistara News

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಏಳು ಮಲ್ಲಿಗೆ ತೂಕದವಳು…

ಯೌವ್ವನವೆಂಬುದು ಹೂವಾಗಿ, ಕಾಯಾಗಿ, ಹಣ್ಣೊಡೆದು, ಹಣ್ಣಾದ ಈ ಹದಿಮೂರು ವರ್ಷದಲ್ಲಿ ಒಮ್ಮೆಯೂ ನೀಲವ್ವ ನೀರು ತಪ್ಪಿಸಲಿಲ್ಲ. ಇನ್ನೇನು ಈ ಬದುಕು ಇಷ್ಟೇ!? ಹಾಡು ಮರೆತ ಕೋಗಿಲೆಯಂತಹದು! ಅಕ್ಕಸಾಲಿಗನ ಕೈಗೆ ಸಿಗದ ಬಂಗಾರದ ಬುಗುಡೆಯಂತಹದು ಎಂದುಕೊಂಡ ಕ್ಷಣದಲ್ಲೇ…

VISTARANEWS.COM


on

elu mallige tukadavalu vistara ugadi short story
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
sharanabasava gudadinni

:: ಶರಣಬಸವ ಕೆ. ಗುಡದಿನ್ನಿ

ಕಲ್ಲು-ಮಣ್ಣು ಹದವಾಗಿ ಬೆರೆಸಿ ಕಟ್ಟಿದ ಜಲದುರ್ಗ ಕೋಟೆ.ಕೋಟೆಯ ಒಳಗೆ ಬಲಕ್ಕೆ ಅರಮನೀಯಂತ ಧಣೇರ ವಾಡೇ.ಅದರ ಮುಂದಿದ್ದ ಸವಾರಿ ಬಂಡಿಯ ಕಡಾಣಿಗೆ ಕೀಲೆಣ್ಣೆ ಬಿಡುತ್ತಿದ್ದ ಹನುಮ ಒಳಗಿಂದ ತೂರಿ ಬಂದ ದನಿಗೆ ಬೆಚ್ಚಿ ಎದ್ದು ನಿಂತ.

“ಧಣೇರ ಸೊಸೀ ನೀಲವ್ವ ಹೊಳಿ ಮುಂದ್ಲ ಸಂಗಮೇಶ್ವರನ ಗುಡೀಗಿ ಹೊಕ್ಕಾಳಂತ ಬಂಡಿ ಕಟ್ಟು” ಅಂತ ಕೂಗಿ ಹೇಳಿಕ್ಯಾಂತ ತಳವಾರ ನಿಂಗವ್ವ ಮುದೇಕಿ ಮೆತ್ತಗ ಕಾಲೂರಿಕೋಂತ ಪ್ಯಾಂಟಿಗಿ ಇಳೀತಿದ್ಲು.

ಹನುಮ ಕಣ್ಣಿಗಿ ಬಿದ್ದ ಕ್ಷಣಕ್ಕ ಆಕಿ ಮುಖದ ಮ್ಯಾಲ ಅನುಮಾನ ಅಂಬೋದು ಅಂಚೇಬಟ್ಟಿನಷ್ಟು ನಿಚ್ಛಳವಾಗಿ “ನೀ ಹಾಲಬಾವಿ ಲಚುಮನ ಮಗ ಹನುಮ ಅಲ್ಲೇನು? ಅಂತ ಕೇಳಿದಳು. ಹೌದು ಎಂಬಂತೆ ಹನುಮ ತಲೆಯಾಡಿಸಿದ. “ವಯಸ್ಸಿಗಿ ಬಂದ ಹೋರೀಕರ ಆಗಿದ್ದಿ! ಅವ್ವೋರು ಜೋಪಾನ, ನಿಮಪ್ಪ ಕ್ವಾಟೀಗಿ ದುಡುದು ಮುಪ್ಪಾದ್ರೂ ಒಂದೀಟು ಹೆಸ್ರೀಗಿ ಮಣ್ಣ ಬಡಕಂಡವ್ನಲ್ಲ! ಅಂತೇಳಿ ಕ್ವಾಟಿ ಮುಂದಲಿನ ಹನುಮಪ್ಪಗ ಕೈಮುಗಿದು ಹಾದಿ ಹಿಡಿದು ಹೊಂಟಳು.

ಹದಿನಾರು ಅಂಕಣದ ಗ್ವಾದಲಿಯಿಂದ ಕೊಂಬು ಸವರಿ ಹುರಿ ಮಾಡಿದ, ಶನಿವಾರದ ಸಂತೆಗೆ ಬಂದಿದ್ದ ಗುರುಗುಂಟಾದ ಇಮಾಮಸಾಬನ ಕೈಯಿಂದ ಕಾಲ ಗೊರಸು ತೆಗೆಸಿ ನಾಲು ಹೊಡೆಸಿದ,ಹಾಲಬಣ್ಣದ ಸೀಮಿ ಎತ್ತಿನ ಮುಗುದಾಣಿ ಹಿಡಿದು ತಂದು ನೊಗ ಎತ್ತಿ ಬಂಡಿಗೆ ಕಟ್ಟಿದ.ಬಂಡಿಗೆ ಕಟ್ಟಿದ್ದ ಸವಾರಿಯ ಛತ್ತಿಗೆ ಹೊಸ ಜಮಖಾನ ಹೊದೆಸಿ ಸೂರ್ಯನ ಒಂದು ಕಿರಣವೂ ಬಂಡಿಯೊಳಗೆ ನುಸುಳದಷ್ಟು ಜತನ ಮಾಡಿದ.

ಅಷ್ಟೊತ್ತಿಗೆ ಕೋಟೆಯ ಪೂರ್ವದ ಕೋಣೆಯ ತಾರಸಿಯಿಂದ ರಾಣಿ ಅಚ್ಚಮ್ಮನ ಗಡಸು ದನಿ ಕೇಳಿ ಹನುಮ ಎಚ್ಚರವಾದವನಂತೆ ತಲೆತಗ್ಗಿಸಿ ಎತ್ತಿನ ಹಗ್ಗ ಹಿಡಿದು ನೊಗ ಸಾಗಿ ಚಕ್ಕಡಿಯೊಳಗೆ ಸೇರುವಲ್ಲಿ ಜಾಗ ಮಾಡಿಕೊಂಡು ಕೂತ. ಆಗ ಮೆಟ್ಟಿಲ ಮೇಲಿಂದ ರಾಣಿ ಅಚ್ಚಮ್ಮನ ಸೊಸೆ ನೀಲವ್ವ ನವಿಲಿನಂತೆ ಕುಣಿಯುತ್ತ, ಕುಲುಕುಲು ನಗುತ್ತ ಕೈಯಲ್ಲಿ ಕಾಯಿ-ಕರ್ಪೂರವಿದ್ದ ಬೆಳ್ಳಿ ಕೈಬಟ್ಟಲು ಹಿಡಿದು ಇಳಿದು ಬಂದಳು. ಅವಳ ಮುಖವನ್ನ ನೋಡದೆಯೇ ಇರುವಂತೆ ಹನುಮ ನೋಡಿದ!

ಇಡೀ ಚಂದಿರನ ಬೆಳದಿಂಗಳೆಲ್ಲ ಅವಳ ಮುಖವೇ ಕಡಾ ತಗಂಡಂತಿತ್ತು! ಮುಂದಲೆಯ ಕೂದಲು ಬಾಗಿ ಅವಳ ಕೆನ್ನೆಯನ್ನ ತಾಕುತಿದ್ದರೆ ನಾಜೂಕಿನಿಂದ ಅವಕ್ಕೆ ಕಿರು ಬೆರಳಲ್ಲಿ ಬುದ್ದಿ ಹೇಳಿ ಮತ್ತೆ ಹಣ್ಣೆತ್ತಿ ಮ್ಯಾಲೆ ಕೂಡಿಸುತ್ತಿದ್ದಳು. ಗಿಣಿ ಮೂಗಿನ, ಜುಮುಕಿ ತೊಟ್ಟ ಕಿವಿಯ ನೀಲವ್ವ ಹನುಮನ ಮೊದಲ ನೋಟಕ್ಕೆ ಅವ್ವ ಹೇಳುವ ಕತೆಯ ಏಳು ಮಲ್ಲಿಗೆ ತೂಕದ ಸುಂದರಿ ಎನಿಸಿಬಿಟ್ಟಳು!

ಕನಸು ಕಾಣುವ ವ್ಯಾಳೆ ಅದಲ್ಲವಾದರೂ ಹುಚ್ಚು ಹರೆಯ ಜೀನು ಬಿಚ್ಚಿದ ಕುದುರೆಯಂತೆ ಅಂಡಲೆಯುತ್ತಿತ್ತು.ಒಂಟೆತ್ತಿನ ಬಂಡಿಯಲಿ ಇಬ್ಬರು ಮನೆಯಾಳುಗಳ ಸಂಗಡ ಬಂದು ಕೂತ ನೀಲವ್ವ ಲಚುಮನ ಜಾಗದಲ್ಲಿ ಮತ್ಯಾರೋ ಮಣ್ಣಿನ ಬಣ್ಣದ ಹುಡುಗ ಕೂತಿರುವದನ್ನು ಕಂಡು ಚೂರು ವಿಚಲಿತಳಾದರೂ ತೋರಿಸಿಕೊಳ್ಳದೆ ಲಚುಮ ಬಂದಿಲ್ಲೇನು? ಅಂತ ಜಬರಿಸಿ ಕೇಳಿದಳು.

ಇಲ್ಲ ಎಂಬಂತೆ ತಲೆಯಾಡಿಸಿದ ಹನುಮ ಹೊಳ್ಳಿ ನೋಡಲೇನು ಅಂತ ನಾಕಾರು ಸಲ ಯೋಚಿಸಿ ತಳವಾರ ನಿಂಗವ್ವ ಅಂದ ಮಾತು ನೆಪ್ಪಿಗೆ ಬಂದು ತಲೆ ಕೊಡವಿ ಎತ್ತಿನ ಬಾಲ ಮುರಿದು ಹ್ಯಾಅ..ಅಂತ ಒದರಿದ.ಅವನ ಒರಟು ಕೈಗಳು ಬಾಲ ತಿರುವಿದೇಟಿಗೆ ಬೆದರಿದಂತಾದ ಎತ್ತು ನಾಗಾಲೋಟಕ್ಕೆ ಬಿದ್ದು ಕ್ವಾಟಿಯನ್ನು ಸುತ್ತು ಬಳಸಿ ಧಣೇರ ಸೇದಾಬಾವಿ ದಾಟಿ ಕಣ್ಣು ತೆರೆದು ಬಿಡೋವತ್ತಿಗೆ ಸಂಗಮೇಶ್ವರನ ಗುಡಿ ಮುಟ್ಟಿತ್ತು.

ಬಂಡಿ ನಿಂತ ಮರುಕ್ಷಣ ಹರಿವ ಹೊಳೆಯ ದಂಡೆಗೆ ಇಳಿದ ನೀಲವ್ವ ತನ್ನ ಬಿಳಿಯ ಅಂಗಾಲನ್ನ ತೋಯುವಷ್ಟು ನೀರಿಗದ್ದಿ ಬಂಗಾರದ ಕಾಲಚೈನು ನೀರಿನಲ್ಲಿ ಅಲುಗುತ್ತ ಹೊಳೆಯುವದನ್ನ ಸಣ್ಣ ಮಗುವಿನಂತೆ ನೋಡತೊಡಗಿದಳು. ಒಂದು ಕೈಯೊಳಗೆ ಕಾಯಿ ಕರ್ಪೂರದ ಹೂಬುಟ್ಟಿ ಇದ್ದರೆ ಇನ್ನೊಂದು ಕೈಯಲ್ಲಿ ನೀರಿಗಂಟದಂತೆ ಉಟ್ಟ ಮಡಿ ಸೀರೆಯನ್ನ ಎತ್ತಿ ಹಿಡಿದಿದ್ದಳು. ಮೊಳಕಾಲ ಸಮೀಪದವರೆಗೆ ಮೇಲೇರಿದ್ದ ಸೀರೆ ಮೀನಖಂಡವನ್ನು ಬೆತ್ತಲೆಗೊಳಿಸಿ ನೋಡಿದ ಎದೆಗೆ ಬೆಂಕಿ ಬೀಳುವಂತೆ ಚೆಲ್ಲಾಟವಾಡುತ್ತಿತ್ತು.

ಎತ್ತಿನ ಕೊಳ್ಳರಿದು ಮರದ ನೆರಳಿಗೆ ಅದರ ಮುಗುದಾಣಿ ಹಿಡಿದು ನಿಂತಿದ್ದ ಹನುಮ ನೀಲವ್ವ ಮೇಲೆ ಬಂದರೆ ತಾನಿಳಿದು ಎತ್ತಿಗೆ ನೀರು ಕುಡಿಸುವವನಿದ್ದ.ಆದರೆ ಅವಳು ಬರಲೊಲ್ಲಳು! ನೀರು ಕಂಡ ಪುಟ್ಟ ಮಗುವಿನಂತೆ ಜೊತೆ ಬಂದ ಗಿರಿಜಾ-ಲಕ್ಷ್ಮೀಯರಿಗೆ ನೀರುಗ್ಗಿ ಆಟದಲ್ಲಿ ಮುಳುಗಿದ್ದಳು.ಅವಳ ಹುಡುಗಾಟದ ಮದ್ಯೆ ಎದೆಗಿದ್ದ ಸೆರಗು ಜಾರಿ ಕುಪ್ಪುಸದ ಮೇರೆ ದಾಟಿ ಹೊರಗೆ ಇಣುಕುತ್ತಿದ್ದ ಅವಳ ಯೌವ್ವನ ಹನುಮನ ಕಣ್ಣನ್ನು ತಾಕಿ ನಿಧಿ ನೋಡಿದವನಂತೆ ತಲ್ಲಣಿಸಿದ.

ತಾನು ಹಾಗೆ ನೋಡಿದ್ದರ ಅರಿವು ಆಕೆಗೆ ಕೊನೆ ಕ್ಷಣದಲ್ಲಿ ಕಾಣಿಸಿ ಅದೇ ಅನುಮಾನದಲ್ಲಿ ನೀಲವ್ವ ಸೆರಗಷ್ಟೇ ಅಲ್ಲದೇ ಮೇಲೇರಿದ್ದ ಸೀರೆಯನ್ನೂ ನೀರಿನ ಮುಲಾಜು ಇಲ್ಲದೆ ಇಳಿಬಿಟ್ಟು ಕಣ್ಣು ಕಿರಿದು ಮಾಡಿ ಇವನೆಡಗೆ ನೋಡಿದಳು. ಹನುಮ ಎದೆ ಒಡೆದಂತವನಂತಾಗಿ ಎತ್ತಿನ ಕೊಳ್ಳ ಗಂಟೆಯನ್ನು ವಿನಾಕಾರಣ ಸರಿ ಮಾಡತೊಡಗಿದ. ಅವಳು ಖಿಲ್ಲನೆ ನಗುತ್ತ ಗುಡಿಯ ಒಳಗೆ ಹೋದಳು.

ಹನುಮ ಈ ಹಿಂದೆಯೂ ಈ ಗುಡಿಗೆ ಅಪ್ಪ ಲಚುಮನ ಜೊತೆ ಬಂದಿದ್ದ. ಈ ಗುಡಿಯ ತಳಪಾಯ ಹಾಕುವಾಗ ಗುರುಗುಂಟಾದ ಗುಡ್ಡದಿಂದ ದೊಡ್ಡ,ದೊಡ್ಡ ಗುಂಡಾಕಲ್ಲುಗಳನ್ನ ತಂದವರೆ ಹಾಲಬಾವಿ-ಯರಗುಂಟಿಯ ಹನುಮನ ಬಳಗದವರು. ಅಂತಹ ಕಲ್ಲುಗಳನ್ನ ತಳಪಾಯಕ್ಕೆ ಹಾಕಿ ಇಲಕಲ್ಲಿನಿಂದ ತಂದ ಮೊಸರಿನ ಬಣ್ಣದ ಕಂಬಗಳ ಬಳಸಿ ಗುಡಿ ಕಟ್ಟುವಾಗೆಲ್ಲ ಲಚುಮ ಧಣೇರೊಂದಿಗೆ ಗಾಳಿಯಂತೆ ತಿರುಗಿದ್ದ. ಗುಡಿಯಾಗಿ, ಅದಕ್ಕೊಂದು ಕಳಸವಾಗಿ, ಆ ದೇವರಿಗೆ ಜಾತ್ರಿಯಾದಾಗ ಲಚುಮ ಹನುಮನನ್ನ ಹೆಗಲ ಮೇಲೆ ಕೂಡಿಸಿಕೊಂಡು ಜಾತ್ರೆ, ಊರು, ಕ್ವಾಟೆ ತೋರಿಸಿದ್ದ. ಹನುಮನಿಗೆ ಬುದ್ದಿ ತಿಳಿದಾಗಿನಿಂದ ಅಪ್ಪ ಧಣೇರ ಕೋಟೆಯೊಳಗೆ ಜೀತ ದುಡಿಯುತ್ತಿದ್ದ. ಈಗ ಎರಡ್ಮೂರು ದಿನದಿಂದ ಆತ ಹೊಟ್ಟೆಯಿಡಿದು ಮಲಗಿದಾಗಿನಿಂದ ಬೇರೆ ದಾರಿ ಕಾಣದೆ ಧಣಿಗಳ ಅಪ್ಪಣೆ ಮೇರೆಗೆ ಹನುಮ ಕೆಲಸಕ್ಕೆ ಹಾಜರಾಗಿದ್ದ. ಈ ತರಹದ ಕೆಲಸಗಳನ್ನು ಮಾಡಿ ಹನುಮನಿಗೆ ಅಭ್ಯಾಸವೇ ಇಲ್ಲ!

ಬೆಳಗ್ಗೆದ್ದರೆ ಸಾಕು ಹಿಂಡುವ ಎಮ್ಮೆಯ ಎರಡು ತಂಬಿಗೆ ಹಸಿ ಹಾಲು ಕುಡಿದು ಮೈಯನ್ನ ಮಣಿಸಿ ತಾಸುಗಟ್ಟಲೆ ಗರಡಿ ಮನೆಯಲ್ಲಿ ಕಳೆಯುತ್ತಿದ್ದ. ಸುತ್ತ ಎಲ್ಲೇ ಕುಸ್ತಿ ನಡೆದರೂ ಹನುಮ ಒಂದೇ ಏಟಿಗೆ ಚಿತ್ ಮಾಡಿ ಹೆಸರು ಮಾಡಿದ್ದ. ಬಣ್ಣ ಕಪ್ಪಾದರೂ ಕಂಬದಂತ ಕೈಕಾಲುಗಳು, ಹರವಾದ ಎದೆ, ಕಿರಿದಾದ ಕಣ್ಣು, ಚೂಪನ ಮೂಗು, ಆಗಷ್ಟೇ ಚಿಗುರುತ್ತಿದ್ದ ಮೀಸೆ, ಇಷ್ಟೆ ಮುರಿದು ಬಾತುಕೊಂಡ ಕಿವಿ ನೋಡಿದರೆ ಒಂದೇಟಿಗೆ ಹರೆಯದ ಹುಡುಗಿಯರು ಆಸೆ ಪಡಬೇಕು ಹಂಗಿದ್ದ ಹನುಮ.

ಗುಡಿಯ ಒಳಗೆ ಪೂಜೆಗೆ ಹೋಗಿದ್ದ ನೀಲವ್ವ ಹೊರ ಬರೊವೊತ್ತಿಗೆ ಮುಖ ಬಾಡಿ, ಕಣ್ಣೆಂಬವು ಇನ್ನೇನು ನಂದಿ ಹೋಗುವ ದೀಗಿಯಂತೆ ಅಸಾಹಯಕವಾಗಿ ಓಲಾಡುತ್ತಿದ್ದವು.ಆಕೆ ಮೆಟ್ಟಿಲು ಇಳಿಯುವೊತ್ತಿಗೆ ಹನುಮ ಬಂಡಿಗೆ ಎತ್ತು ಹೂಡಿ ಮನೆಯ ದಾರಿಯ ಕಡೆ ತಿರುಗಿಸಿ ನಿಂತ. ಬಾರವಾದ ಹೆಜ್ಜೆಗಳನ್ನಿಟ್ಟ ನೀಲವ್ವ ಮತ್ತು ಅವಳ ಸಂಗಡಿಗರು ಕೂತಾಗ ಹೊರಡಿಸಿದ ಬಿಸಿಯುಸಿರು ಹನುಮನ ಬೆನ್ನನ್ನ ತಾಕಿ ಕಳವಳಗೊಂಡ. ನಿಡುಸುಯ್ವ ನಿರಾಸೆಯ ಮದ್ಯೆಯೂ ನೀಲವ್ವ ಹನುಮನ ಹೆಬ್ಬಂಡೆಯಂತಹ ಬೆನ್ನು ಅದಕ್ಕೆ ಟಿಸಿಲೊಡೆದ ಬಲಿಷ್ಠ ತೋಳುಗಳನ್ನ ಆಸೆಯಿಂದ ನೋಡಿದಳು. ಅವನು ಅದಿಷ್ಟು ಜಾಗ ಆಕೃಮಿಸಿ ಕೂತದ್ದನ್ನು ಕಂಡು ಅಚ್ಚರಿಯಾದಳು.
“ದಿನಾ ನೀನಾ ಬರತೀಯೇನು ಕ್ವಾಟೀಗಿ? ಅನಿರೀಕ್ಷಿತವಾಗಿ ಬಂದ ಪ್ರಶ್ನೆಗೆ ಹನುಮ ತಬ್ಬಿಬ್ಬಾದ.

ಏನು ಹೇಳಬೇಕೊ ತಿಳಿಯಲಿಲ್ಲ.ಮನೆಯಲ್ಲಿ ಮಲಗಿದ ಅಪ್ಪನೆಂಬೊ ಜೀವ ಸದ್ಯಕ್ಕೆ ಗುಣವಾಗಿ ಕೆಲಸಕ್ಕೆ ಬರುವ ಸ್ಥಿತಿಯಲ್ಲಿ ಇಲ್ಲ.ಹಾಗಂತ ಆ ಕೆಲಸಕ್ಕೆ ಬರುವ ಇಚ್ಛೆ ಹನುಮನಿಗೂ ಇಲ್ಲ ಆದರೆ ನೀಲವ್ವನ ದ್ವನಿಯೊಳಗಿನ ಆರ್ದ್ರತೆ ಇಲ್ಲ ಅನಗೊಡಿಸಲಿಲ್ಲ.

“ಹೂನ್ರೀ ನಾನ ಬರತೀನಿ ನಮಪ್ಪಗ ಮೈಯಾಗ ಬೇಸಿಲ್ಲ” ಅಂದ. ಅವನ ಮಾತಿಂದ ನೀಲವ್ವನ ಮುಖ ಚೂರು ಗೆಲುವಾಗಿದ್ದನ್ನ ಗೆಳತಿಯರು ಗಮನಿಸಿದರು. ಆಡಾಡುತ್ತ ಜಿಂಕೆಯಂತೆ ಗುಡಿಯೊಳಗೆ ಹೋಗಿದ್ದ ದೊರೆಸಾನಿಯ ಮುಖದ ಮೇಲಿನ ನಗು, ಉಲ್ಲಾಸಗಳನ್ನ ಪೂಜಾರಿಯ ಒಂದೇ ಮಾತು ಕಸಿದುಬಿಟ್ಟಿತ್ತು! “ಧಣೇರ ಬಾಳ ಇಳ್ದೋಗ್ಯಾರ ಮೊನ್ನೆ ಔಷ್ದಿ ಕೊಡಾಕ ಬಂದಿದ್ದೆ! ಅವ್ರು ಹೋಗಾಕಿನ ಮುಂದ ನಿಮ್ ಹೊಟ್ಯಾಗೊಂದು ಬೀಜ ಮೂಡಿದ್ರ ಚೊಲೊ ಇತ್ತು” ಅಂತ ನಿಟ್ಟುಸಿರು ಬಿಟ್ಟಿದ್ದ ಡೊಳ್ಳು ಹೊಟ್ಟೆಯ ಪೂಜಾರಿ. ಅವನ ಕಣ್ಣೊಳಗೊಂದು ಅಸಹ್ಯದ ಆಸೆ ಆಗಷ್ಟೇ ಚಿಗುರುತ್ತಿತ್ತು. ಸಂಗಮೇಶ್ವರನ ಮುಂದೆ ನಗುನಗುತ್ತ ನಿಂತಿದ್ದ ನೀಲವ್ವ ಆ ಮಾತಿನಿಂದ ಬಿಳಚಿಕೊಂಡು ಕುಸಿದುಬಿಟ್ಟಿದ್ದಳು.

ಪೂಜಾರಿ ಹೇಳಿದ್ದೇನು ಹೊಸದಲ್ಲ! ಆದರೆ ಅದು ಜಪ್ತಿಗೆ ಬಂದರೆ ಸಾಕು ನೀಲವ್ವ ಇನ್ನಿಲ್ಲದಂತೆ ಕೊರಗುತ್ತಿದ್ದಳು. ಎಲ್ಲಾ ಮರೆತು ನಾಕು ದಿನ ತಣ್ಣಗ ಇರಬೇಕೆಂದು ಗೆಲುವಾಗುತ್ತಿದ್ದವಳ ಹಕ್ಕಿ ಮನಸನ್ನ ಕುಕ್ಕಲು ಕೋಟೆಯ ಪ್ರತೀ ಕಂಬಕ್ಕೂ ಪೂಜಾರಿಯಂತಹ ಹದ್ದುಗಳಿದ್ದವು. ಇಂತಹ ಯೌವ್ವನ ತುಂಬಿದ ದೇಹವಿದ್ದರೂ ಅದರೊಳಗೊಂದು ಜೀವ ಕುಡಿಯೊಡಿಸಲು ದಾರಿಯಿಲ್ಲ ಎಂಬುದನ್ನ ನೆನೆನೆನೆದು ದುಖಃದಿಂದ ಹದಿಮೂರು ವರ್ಷದಿಂದ ಹಗಲು-ರಾತ್ರಿಯೆನ್ನದೆ ಹಲುಬುತ್ತಿದ್ದಳು.

ಮಾಡಿಕೊಂಡಾಗಲೇ ಹಾಸಿಗೆಯಿಂದ ಎದ್ದು ಬಂದಂತಿದ್ದ ಧಣಿ ನೀಲವ್ವನೊಡನೆ ರಾತ್ರಿಗಳಲಿ ಈಜಿದ್ದು ಕಡಿಮೆಯೇ. ಇಲ್ಲವೆಂದರೂ ಆದೀತು! ಮೈಮರೆತು ಕೈಕಾಲು ಬಡಿದರೂ ಅದು ಈಜು ಬಾರದವನ ವ್ಯರ್ಥ ಪ್ರಯತ್ನವಷ್ಟೆ! ಆವಾಗೆಲ್ಲ ನೀಲವ್ವನಿಗೆ ಕೋಟೆಯ ಯಾವದಾದರೂ ಜಂತಿಗೆ ನೇಣು ಹಾಕಿಕೊಳ್ಳಬೇಕು ಎನಿಸುತ್ತಿತ್ತು. ನಾಳೆ ಸರಿ ಹೋದೀತು ಅಂತ ಮಲಗುತ್ತಿದ್ದಳು. ಮತ್ತೆ ಆಟ ಶುರು ಆದಾಗಲೂ ಅದೇ ಗತಿ. ಮೊದಲ ಓಟಕ್ಕೆ ಧಣಿ ಏದುಸಿರು ಬಿಡುತ್ತಿದ್ದ. ಆಟ ಶುರಯವಾಗುವ ಮುಂಚೆಯೇ ನೀರಾಗಿ ಕರಗಿ ಅವಳ ಮೇಲೆ ಸೋತು ಬೀಳುತ್ತಿದ್ದ! ಈಚೆಗಂತೂ ಹಾಸಿಗೆ ಬಿಟ್ಟೇಳುವದೇ ಅಪರೂಪ. ಮಲಗಿದಲ್ಲೇ ಎಲ್ಲವೂ ಆಗಬೇಕು.

ಅತ್ತೆ ದೊರೆಸಾನಿ ಅಚ್ಚಮ್ಮನಿಗೆ ಎಲ್ಲಾ ಗೊತ್ತು! ಆದರೆ ಗಂಡನ ಸೇವೆ ಮಾಡು ದೇವರು ಕಣ್ತೆರೆಯುತ್ತಾನೆ ಅಂತ ಗದರಿಸುತ್ತಾಳೆ. ಅದೆಲ್ಲವನ್ನೂ ದಾಟಿ “ನೆಮ್ಮದಿ ಕೊಡು ಸಿವನೇ ಸಂಗಮೇಶ್ವರ” ಅಂತ ಉದ್ದ ಬೀಳಲು ಬಂದರೆ ಪೂಜಾರಿ ಎಂಬುವವ ಹಾರಾಡುತ್ತಿದ್ದ ಹಕ್ಕಿಯ ಎದೆಗೆ ಜಾಲಿಮುಳ್ಳು ಚುಚ್ಚಿದ.ಹಾಗೆ ಯೋಚಿಸುತ್ತ ಕುಳಿತ ನೀಲವ್ವ ಬದುಕಿನಲ್ಲಿ ಮೊಟ್ಟಮೊದಲ ಸಲ ಪರಪುರುಷನೊಬ್ಬನ ಬೆನ್ನನ್ನ ಆಸೆಯಿಂದ ನೋಡುತ್ತ ಆ ಬೆನ್ನಿಂದ ಕಣ್ಣು ತೆಗೆಯಲಾಗದೆ ಒದ್ದಾಡಿದಳು.


ಅಪರಾತ್ರಿಯಲ್ಲಿ ಮನೆಗೆ ಬಂದ ಹನುಮನನ್ನ ಬಾಗಿಲು ದಾಟುವ ಮೊದಲೇ ತಡೆದು ಅವನವ್ವ ಕಾಲ್ತೊಳಕಂಡು ಬಾ ಯಪ್ಪಾ ಒಳ್ಗಾ! ಅಂದಳು. ನಾನೇನು ಹೇಲಾಗೇರಿಗೆ ಹೋಗಿದ್ನೇನು? ಕ್ವಾಟಿಯೊಳಗ ಹೂವಿನ ಮ್ಯಾಲ ನಡದು ಬಂದೀನಿ, ಹಸುವಾಗ್ಯಾದ ಮೊದಲು ಉಣ್ಣಾಕಚ್ಚು ಅಂತ ತಲ ಬಾಗಿಲು ತುಳ್ಯಾವಿದ್ದ.

“ನಿಂದ್ರರಂದ್ರ ತಿಳ್ಯಾದಿಲ್ಲೇನು ಕಬರಗೇಡಿ, ನಾವೇಟು ಹೊಯ್ಕ್ಯಂಡ್ರೂ ನಿಂದಾ ನಿನಗಾ” ಅಂತ ಅವಸರೀಲಿ ಬಂದು ತಳ ನೆಗ್ಗಿದ ಚರಿಗ್ಯಾಗ ನೀರು ತಂದು ಅವನ ಕಾಲಿಗಾಕಿ ತಲಿ ಮ್ಯಾಲ ಎಲ್ಡು ಕಾಳುಗ್ಗಿ ನಮವ್ವ ಕಾಪಾಡವ್ವ ಅಂತ ಗುಡ್ಡದ ಎಲ್ಲವ್ವಗ ಬೇಡಿ ಬಾ ಕುಂದ್ರು ಉಣಾಕ ಅಂತ ಸಂಜ್ಞೆ ಮಾಡಿದಳು. ಜಂಪದ ಕಟಿಗೀಗಿ ಸಿಗೆಬಿದ್ದಿದ್ದ ಮೂಲೇ ಹರದ ಲಚುಮೂನ ಹಳೇ ಶೆಲ್ಯಾವ ತಗಂಡು ಮುಖ, ಕಾಲು, ತಲೀ ಒರಿಸಿಗ್ಯಾಂತ ಬಂದು ಅಡಿಗಿ ಮನೀ ಅಂಬೋ ಸಣ್ಣ ಕೋಲ್ಯಾಗ ಅವ್ವನ ಮುಂದ ಚಕಳಮುಕಳ ಹಾಕ್ಯಾಂಡು ಕುಂತ.

ಗಂಗಾಳ್ದಾಗ ಬಂದು ಬಿದ್ದ ರೊಟ್ಟಿ ಮನೀ ಇಂದಲ ಬಳ್ಯಾಗ ದಿನಕ್ಹೆಂಟು ಬಿಡೋ ಈರೇಕಾಯಿಯ ಪಲ್ಯವನ್ನ ತುತ್ತು ಮಾಡಿ ಬಾಯಾಗ ಇಟಗಳಾ ಹೊತ್ತಿಗೆ ಒಂದು ಮುದ್ದೆ ಬೆಣ್ಣೆ ತಂದು ರೊಟ್ಟಿಯ ಮುಖಕ್ಕೆ ಬಡಿದಳು.
ಬೆಣ್ಣೆ ನೋಡಿ ಹನುಮನ ಮುಖ ಅರಳಿದರೂ “ಚಂದ ಕಾಸೀ ಛಾವಣಿ ಸಂತ್ಯಾಗ ಮಾರಿದ್ರ ನಾಕು ದುಡ್ಡು ಬಂದು ಅಪ್ಪಗ ಔಷದಕ ಬರತಿತ್ತಬೇ” ಅಂತ ಕಾಳಜಿ ಮಾಡಿದ.ಆ ಮಾತಿಗೀ ಅವ್ವನ ಮುಖದಾಗ ಯಾವ ವ್ಯತ್ಯಾಸ ಆಗಲಾರದ, ಉತ್ರಾನೂ ಬರಲಾರದ ಅವ್ವ ಯಾವ್ದೊ ಲೋಕದಾಗ ಮುಳುಗಿ ಚಿಂತಿ ಮಾಡಕತ್ಯಾಳ ಅನಿಸ್ತು.

“ಯವ್ವಾss ಏ ಯವ್ವಾ” ಅಂತ ಹನುಮಾ ಅಲುಗ್ಯಾಡಸವರೆಗೂ ಅವ್ವಗ ಈಕಡೇ ಧ್ಯಾನಿದ್ದಿಲ್ಲ. ಮಗ ಕೈ ಬಡದು ಅಲ್ಲಾಡಿಸ್ದದಕ ದಡಗ್ಗನ ಬೆದರಿದಂಗಾಗಿ “ಏನಿಲ್ಲಪ ಹಂಗ್ಯ ಏನೊ ನೆಪ್ಪಾತಿ” ಅಂತ ಬಾಯಿ ಸವರಿದಳು. ಬರಾಮುಂದನ ಕಾಲು ತೊಳ್ಕೊ ಮಾರಿ ತೊಳ್ಕೊ ಅದಾಗಲೇ ಕೇಳಾಂವಿದ್ದ! ಇದೇನಬೇ ಹೊಸ ನಡೀ? ಅಂತ.

ಮುಂಜಾನೆ ಮೈಯೀಗಿ ನೀರಬಿದ್ರೇ ಮತ್ತೆ ಮರಾಮುಂಜಾನೆ ತನಾ ನೀರ್ ಕಾಣ್ಸಾವಲ್ಲ ಅಂತದ್ರಾಗ ನೀss ಅಂತ ಓಘಕ್ಕಿಳಿದವ ಮಾತು ಕತ್ತರಿಸಿ “ನೀ ಹೋದಾ ಕ್ವಾಟೀ ಸಣ್ಣ ಕತೀದಲ್ಲೋ ಮುದೇತಾ!ಎಂಟು ತಲೀಲಿಂದ ಆ ಕ್ವಾಟೀ ಮನೆತನಕ್ಕ ಮಕ್ಳಾ ಆಗಿಲ್ಲ!ತೊಟ್ಲಾ ತೂಗಿಲ್ಲ! ಅದರ ನೆದರು ನಿನ ಮ್ಯಾಲ ಬಿದ್ದು ನಮ್ಮನೀ ದೀಪ ಹೊಯ್ದಾಡಬಾರದು ಅಂತ ಅಂಜಿಕೆಂಡ್ಯಾ” ಅಂತ ನಿಟ್ಟುಸಿರು ಬಿಟ್ಟಳು. ಹನುಮ ಸಣ್ಣಾವಿದ್ದಾಗಿಂದ ಈ ಕತೆಯನ್ನ ಅಷ್ಟು ಇಷ್ಟು ಕೇಳಿದ್ದಾನಾದರೂ ಯಾವದೂ ಸ್ಪಷ್ಟ ಇರಲಿಲ್ಲ. ಏನಾದರೂ ಕೇಳಿದಾಗ ಅವ್ವನಾಗಲಿ, ಅಪ್ಪನಾಗಲಿ “ಅದೆಲ್ಲ ನಿನಗ್ಯಾಕ ಮೂಳಾ” ಅಂತ ಗದರಿಸುತ್ತಿದ್ದರೆ ವಿನಃ ತುಟಿ ಬಿಚ್ಚುತ್ತಿರಲಿಲ್ಲ. ಆಮೇಲೆ ದೊಡ್ಡವನಾಗಿ ಬೆಳ್ದ ಘಳಿಗೆಯಲ್ಲೂ ಅವರಿಗೆ ಅದನ್ನ ಹೇಳಬೇಕಿನಿಸಿದ್ದಿಲ್ಲ! ಆದರೀವಾಗ ಮಗ ಕೋಟೆಯೊಳಗೆ ಹೋಗಬೇಕಾಗಿ ಬಂದದ್ದರಿಂದ ಬೇರೆ ದಾರಿ ಇರಲಿಲ್ಲ.ಅಲ್ಲದೆ ಮುಂಜಾನೆಯಿಂದ ನೀಲವ್ವನ ಗುಂಗಿನಲ್ಲೇ ಇದ್ದ ಹನುಮನಿಗೆ ಕ್ವಾಟಿಯ ಕತೆ ಕೇಳುವ ಹುಕಿ ಬಂದು ಬಿಟ್ಟಿತ್ತು.

“ಧಣೇರಿಗಿ ದೇಸ್ಗತಿ ಬರೋ ಮುಂಚೆ ಏನೇನು ಇರಲಿಲ್ಲಂತ! ಹೀಂಗ ಎಂಟು ತಲೀ ಹಿಂದ ಈಗ ಹಾಸಿಗ್ಯಾಗ ಬಿದ್ದು ಇವತ್ತಾ ನಾಳೀ ಅನ್ನಾಂಗಿರೋ ನಿಂಗರಾಜ ಧಣಿಯ ತಾತ, ಮುತ್ತಾತನ, ಮುತ್ತಾತನ, ಮುತ್ತಾತ! ಹೇಳುವದನ್ನ ನಿಲ್ಲಿಸಿ ಗೊತ್ತಾತೇನು? ಅಂಬಂಗ ಮಗನ ಕಡೆ ನೋಡಿದಳು. “ಹೇ ಗೊತ್ತಾತೇಳಬೇ ಈಗ್ಗೆ ಎಂಟು ತಲೀ ಹಿಂದ ಮೊದಲ್ನೇದವ” ಅಂತ ಚೂರು ಸಿಟ್ಟಿನಿಂದಲೇ ಅವ್ವನ ಮೇಲೆ ಹರಿಹಾಯ್ದ. ನಾ ಏಟು ಬೆಳೆದ್ರೂ ಇವರಿಗೀ ಗ್ಯಾನಿಲ್ಲ ಇನ್ನಾ ಹಾಲ್ಕುಡ್ಯಾ ಕೂಸ ಅನಕಂಡಾರ ಅಂತ ಸಿಟ್ಟು ಬಂತು.

“ನವಾಬರು ಯುದ್ದ ಮಾಡಿ ಗೆದ್ದ ರೊಕ್ಕ, ಬೆಳ್ಳಿ, ಬಂಗಾರನ ಹದಿನೇಳು ಒಂಟೀ ಮ್ಯಾಲ ಸಾಗಸಾಕತ್ತಿದ್ದರು! ಅದರಾಗ ಒಂದು ಒಂಟಿ ನ ಧಣೇರ ಮುತ್ತಾತ ಕಳ್ತನ ಮಾಡಿ ಊರಿಗಿ ಹೊಡಕಂಡು ಬಂದ್ರಂತ! ಆಮ್ಯಾಲಿದು ಗೊತ್ತಾಗಿ ಗುಲ್ಬರ್ಗಾದ ನವಾಬ ಇವ್ರ ಮುತ್ತಾತನ ಕರಿಸಿ ಜೀವ ತೆಗ್ಯಾಕ ಸಂಚು ಮಾಡಿದ್ರಂತ! ಸೈನಿಕರು ಬಂದು ಸರಪಳಿ ಹಾಕಿ ಕರಕೊಂಡು ಹೋಗುವಾಗ ದಾರೀಲಿ ಕಾಣಿಸಿದ ದರಗದಾಗ ಬಾಬಾನ ಕಾಲಿಗಿ ಬಿದ್ದು
“ನನ್ನ ಹೆಂಗಾರ ಪಾರು ಮಾಡೋ ಯಪ್ಪ ನೀ ಕೇಳಿದ್ದು ಕೊಡ್ತೀನಿ” ಅಂತ ಬೇಡಿಕೊಂಡ್ನಂತ.

ದರಗದಾಗಿನ ಬಾಬಾ ಧಣೇರ ಮುತ್ಯಾಗ ಮೂರಳ್ಳು ಮಂತ್ರಿಸಿ ಕೊಟ್ಟು “ನಿನಗ ಹುಚ್ಚು ಕುದುರೀ ಮ್ಯಾಗ ಕುಂದ್ರಿಸಿ ಗುಡ್ಡದ ಮ್ಯಾಲಿಂದ ಬೂಳುಸ್ತಾರ, ಆ ಕುದುರಿ ಮ್ಯಾಲ ಕುಂತೋರು ಇಲ್ಲೀತನ ಯಾರೂ ಉಳ್ದಿಲ್ಲ! ಈ ಮೂರು ಅಳ್ಳಿನ್ಯಾಗ ಕುದುರಿ ಮ್ಯಾಗ ಕುಂತಾಗ ಒಂದಳ್ಳು ಹೊಗಿ, ಕುದುರಿ ಓಡಿ ಹೋಗಾಗ ಒಂದಳ್ಳು ಹೋಗಿ,ಕುದುರಿ ನಿಂತ ಮ್ಯಾಗ ಒಂದಳ್ಳು ಹೊಗಿ” ಅಂದನಂತ.

ಬಾಬಾ ಹೇಳಿದ ಮಾತು ಎಷ್ಟು ಸತ್ಯ ಇತ್ತಂದ್ರ!? ನವಾಬರ ದರ್ಬಾರದಾಗ ಜಾಸ್ತಿ ಮಾತಾ ಆಡಲಿಲ್ಲ. ರೊಕ್ಕದ ಒಂಟಿ ಕದ್ದಾಂವಗ ಹುಚ್ಚು ಕುದುರಿ ಮ್ಯಾಗ ಕುಂದ್ರಿಸಿ ಸಾಯಿಸ್ರೀ”ಅಂದು ಕುದುರಿ ಮ್ಯಾಲ ಕುಂದ್ರಿಸಿ ಗುಡ್ಡದ ಕಡೀ ಓಡಿಸಿದ್ರಂತ.

ಕುದುರಿ ಅಂಬೋದು ಹುಲಿಯಂಗ ಓಡಕಲಕ ಧಣೇರು ಒಂದು ಅಳ್ಳು ಒಗದ್ರಂತ.
ಕುದುರಿ ಓಡಾದು ಕಮ್ಮಿ ಆತಂತ! ಆದ್ರ ಗುಡ್ಡದ ಕೊನಿಗಿ ಹಂಗ ಹೊಂಟಿತ್ತಂತ!

ಇನ್ನೊಂದು ಹಳ್ಳು ಹೊಗದ್ರ ಓಡೋ ಕುದುರಿ ನಿಂತು ಮತ್ತೆ ನವಾಬರ ದರ್ಬಾರಿನ ಕಡೆ ಹೊಳ್ಳಿ ನಿಂತಿತಂತ!
ಉಳ್ದ ಇನ್ನೊಂದು ಅಳ್ಳು ಹೊಗದ್ರ ವಳ್ಳಿ ಹೂವಿನಂಗ ನವಾಬರ ದರಬಾರದಾಗ ತಂದು ನಿಲ್ಲಿಸಿತಂತ.

“ಅಲೇ ಇವ್ನೌನ ಈ ಕುದುರಿ ಇಷ್ಟು ದಿನ್ದಾಗ ಒಬ್ರೂನು ಉಳಿಸಿಲ್ಲ ಈ ಗಡಿ ಗಟ್ಟೈತಿ” ಅನಕೊಂಡು ಅವತ್ತಾ ಅದಾ ದರ್ಬಾರದಾಗ ಮೂವತ್ತು ಮೂರು ಹಳ್ಳಿ ದೇಸ್ಗತಿ ಮತ್ಯ ಒಂಟಿ ಮ್ಯಾಲ ತಂದ ಸಂಪತ್ತು ಧಣೇರಿಗಿ ಕೊಟ್ಟು ಕಳಿಸಿದ್ರಂತ.ಕತೆಯನ್ನ ಅಷ್ಟಕ್ಕೆ ಮೊಟಕುಗೊಳಿಸಿ ಮಗನ ಮುಖ ನೋಡಿದಳು.ಇಷ್ಟೊತ್ತಿಗಿ ಕೂಕಡಿಸಿ ಸಾಕಬಿಡಬೇ ನಿದ್ದಿ ಬಂದಾದ ಅಂತಾನ ಮಗ ಅಂದ್ರ, ಕಣ್ಣಂಬವು ಕಂದೀಲಿ ಮಾಡಿಕೆಂಡು ಮುಂದಾ ಹೇಳು ಅಂತ ದುಂಬಾಲು ಬಿದ್ದ.

“ಯಪ್ಪ ಹಗಲೆಲ್ಲ ದುಡದು ಹೈರಾಣಾಗಿ ಬಂದೀದಿ ಮಕ್ಕ ನಾಳಿ ಪೂರಾ ಹೇಳ್ತೀನಿ” ಅಂತೇಳಿ ಎದ್ದು ಹೊಂಟಳು.ಎಂಟ ತಲೆಮಾರಿಗಿ ಮಕ್ಳು ಯಾಕಿಲ್ಲ, ನೀಲವ್ವ ಯಾವ ಊರ್ ರಾಜ್ಕುಮಾರಿ ಅಂಬೋದನ್ನ ಕೇಳಬೇಕು ಅನ್ನೊ ಕುಶಾಲಿಯಲ್ಲಿದ್ದ ಹನುಮನಿಗೆ ಅರ್ದ ಕತೀ ಕೇಳಿ ತಲ್ಯಾಗ ಹುಳ ಬಿಟ್ಟಂಗ್ಹಾತಿ.ಹೆಂಗ ನಾಳಿ ಹೇಳತಾಳಲ ಬುಡು ಅನಕೊಂಡು ನಿದ್ದೆಗೆ ಜಾರಿದ.

ಮಲಗಿ ಜೊಂಪತ್ತಿ ಗೊರಕೀ ಹೊಡಿಯೋ ಹೊತ್ತಿಗೆ ಅವನ ಕಣ್ಣ ತುಂಬಾ ಕನಸೊಂದು ಬಿತ್ತು.

ಕಾಲಗೆಜ್ಜೆ ಕುಣಿಸುತ್ತ ಯಾರೋ ಓಣಿ ತುಂಬಾ ನಡೆದು ಬಂದಂಗಾತಿ! ಕಾಲ್ಗೆಜ್ಜೆ ಸಮೀಪವಾಗಿ ಕಾಲ್ದೆಸೆಯಲ್ಲೆ ಕುಂತಂತಾಗಿ ಮಲಗಿದಲ್ಲೇ ಮಿಸುಕಾಡಿದ. ಕುಂತವರ ಮುಖವನ್ನೊಮ್ಮೆ ನೋಡುವ ಪ್ರಯತ್ನದಲ್ಲಿ ಇರುವಾಗಲೇ ರಟ್ಟೆ ಹಿಡಿದು ಕ್ಷಣಾರ್ದದಲ್ಲೇ ಅಷ್ಟು ದೂರದ ಕೋಟೆಯೊಳಗೆ ಎಳೆದೊಯ್ದಂತಾಯಿತು!

ಕೈ ಹಿಡಿದವರ ಮುಖವನ್ನೊಮ್ಮೆ ನೋಡಿದ. ನೀಲವ್ವ! ಒಂದರೆಕ್ಷಣ ಬೆಚ್ಚಿಬಿದ್ದ. ಮರುಕ್ಷಣ ಬಿಡಿಸಿಕೊಳ್ಳಲು ಹವಣಿಸಿದ. ಅಷ್ಟೊತ್ತಿಗೆ ಕ್ವಾಟಿಯ ಅಷ್ಟು ಧಣಿಗಳು, ಹೆಂಗಸರು, ಆಳುಗಳು ಕೊಡಲಿ, ಭರ್ಚಿಗಳೊಂದಿಗೆ ಮೇಲೆ ಮುಗಿಬಿದ್ದರು.

ಮೊದಲು ಎದೆಗೆ
ನಂತರ ಹೊಟ್ಟೆಗೆ
ಎಲ್ಲೆಂದರಲ್ಲಿ ಇರಿಯುತ್ತಿರುವಾಗಲೇ ಅಚ್ಚಮ್ಮ ದೊರೆಸಾನಿ ಬೀಸಿದ ಖಡ್ಗ ಕೊರಳು ಸೀಳಿದಂತಾಗಿ ಯವ್ವೋ ಅಂತ ಗಟ್ಟಿಸಿ ಚೀರಿಬಿಟ್ಟ!

ಪುಟ್ಟ ಗುಡಿಸಲು ಅದುರಿ ಹೋಯಿತು. ಮೂಲೆಯಲ್ಲಿ ಮಲಗಿದ್ದ ಅವನವ್ವ ಓಡಿ ಬಂದಳು. ಕನಸಿಂದ ಎದ್ದು ಕೂತವನ ಮೈ ತೋಯ್ದು ತೊಪ್ಪೆಯಾಗಿತ್ತು.ಒಲೆಯ ಆಧಾರ ತಂದು ಮಗನ ಹಣೆಗಚ್ಚಿ “ಕೆಟ್ಟ ಕನಸು ಮತ್ತೆ ಬೀಳದಿಲ್ಲ ಮಲಕೊ” ಅಂತ ಅಲ್ಲೇ ಕೂತ ಮಗನ ಹಣೆಗೆ ಚೋ ಬಡಿಯತೊಡಗಿದಳು.

*

ಸೂರ್ಯ ಮೂಡುವ ಮೊದಲೇ ಹನುಮ ಧಣೇರ ಕ್ವಾಟೆಯೊಳಗಿದ್ದ.ರಾತ್ರಿ ಬಿದ್ದ ಕನಸು ಮುಖದ ಮೂಲೆಯಲ್ಲಿ ಅವಿತು ಅವನಿನ್ನೂ ನಿರಮ್ಮಳ ಆಗಿರಲಿಲ್ಲ. ಘಳಿಗೆಗೊಮ್ಮೆ ಕ್ವಾಟಿಯ ಬಾಗಿಲು ತೆರೆಯುವದನ್ನ ಕಾಯುತ್ತಿದ್ದ. ತಿಕ್ಕಿದ ಕುದುರೆಯ ಬೆನ್ನನ್ನೆ ಮತ್ತೆ ತಿಕ್ಕಿದ. ಬಂಡಿಯ ಕಡಾಣಿ ಬಿಚ್ಚದೆಯೇ ವಿನಾಕಾರಣ ಉಚ್ಚಿ ಉಪಚರಿಸಿ ಮತ್ತೆ ಸಿಗಾಕಿದ.

ಊಹೂಂ ಏನೂ ಮಾಡಿದರೂ ಮನಸು ತಹಬಂದಿಗೆ ಬರಲೊಲ್ಲದು.ಇದೆಲ್ಲ ಮಾಡುತ್ತಿರುವ ಹೊತ್ತಿಗೆ ಅವನಿಗೆ ತಿಳಿಯದೆ ಅವನ ಹರವಾದ ಅಗಸಿಗೆ ಹಾಸಿದ ಬಂಡೆಯಂತಹ ಬೆನ್ನನ್ನೂ,ದೋತರದ ಹಂಗಿಲ್ಲದ ಕರಿ ತೊಡೆಗಳನ್ನು ಉಪ್ಪರಿಗೆ ಮೇಲಿನಿಂದ ಜೋಡಿ ಕಣ್ಗಳು ಆಸೆಯಿಂದ ನೋಡುತ್ತಿದ್ದವು!

ಆ ಕಣ್ಗಳಲಿ ಆಸೆಯೆಂಬುದು ಹದ್ದಾಗಿ, ಕಲ್ಲಿನಲ್ಲಿ ಕಡೆದಿಟ್ಟಂತಹ ದೇಹದ ಮೇಲೆ ತೆಗೆಯದಂತೆ ಕಣ್ಣು ನೆಟ್ಟಿದ್ದವು. ಆ ಕ್ಷಣದಲ್ಲೇ ನೆಲುವಿನ ಮೇಲಿನ ಹಾಲಿಗೆ ಜಿಗಿಯಲಿದ್ದ ಬೆಕ್ಕಿಗೆ ಗದರಿಸುವ ಘಟವಾಣಿಯಂತೆ ಬಾಗಿಲಲ್ಲಿ ರಾಣಿ ಅಚ್ಚಮ್ಮ ಪ್ರತ್ಯಕ್ಷವಾಗಿದ್ದು. “ನೀಲವ್ವ ನೀ ಆಸಿ ಬೆನ್ನತ್ತಿದ್ದು ನಿನ್ನ ಕಣ್ಣ ಕನ್ನಡ್ಯಾಗಿನ ಚಿತ್ರ ಆಗಿ ಕಂಡೋರಿಗಿ ಕಾಣಕತ್ಯಾದ, ಅದರ ಖಬರ ಐತೇನು ನಿನಗ?” ಅಂತ ಗದರಿಸಿದರು. ನೀಲವ್ವ ಒಮ್ಮೆಲೇ ಹಾವು ತುಳಿದವಳಂತೆ ಮೆಟ್ಟಿ ಬಿದ್ದು ಬೆದರಿದಳು.

ಸಟ್ಟನೆ ಕಿಟಕಿಯಿಂದ ಕಣ್ಣನ್ನೂ ಮತ್ತು ಆಕಡೆ ವಾಲಿದ್ದ ದೇಹವನ್ನ ಈಚೆ ಎಳೆದುಕೊಂಡು ಅಡಸಲಬಡಸಲ ಒಳಗೆ ಓಡಿದಳು. ಪ್ರತೀ ಕಂಬಕ್ಕೂ ಕೈ ಬಡಿದು, ಕಾಲ್ ಎಡವಿ, ಬಿದ್ದು-ಎದ್ದು ತೆರೆದ ಬಾಗಿಲ ಮುಚ್ಚುವ ಪರಿವೆ ಇಲ್ಲದೆ ಹಾಸಿಗೆ ಮೇಲೆ ಬೋರಲು ಬಿದ್ದು ಕಣ್ಣೀರು ಖಾಲಿ ಆಗೋವರೆಗೂ ಅತ್ತಳು. ಸಮಾಧಾನವನ್ನುವಾಗಲಿಲ್ಲ! ಬಾಲ್ಯದಲ್ಲೇ ಕಳೆದುಕೊಂಡ ಅವ್ವ ಕಣ್ಣ ಮುಂದೆ ಬಂದಳು. ಮತ್ತೀಟು ಅತ್ತಳು.

ಅಜಮಾಸು ಹತ್ತು ವರ್ಷಗಳ ಮೇಲಾಯ್ತು ಈ ಮನೆಗೆ ನಡೆಯಲು ಬಂದು! ಆದರೆ ಒಂದೇ ಒಂದು ದಿನವೂ ಅಚ್ಚಮ್ಮ ಹೀಗೆ ಗದರಿಸಿರಲಿಲ್ಲ. ಹೆಸರಿಡಿದು ಕರೆದಿರಲಿಲ್ಲ. ತಾಯಿಯಿಲ್ಲದ ತಬ್ಬಲಿ ಅಂತ ಒಂದರಪಾವು ಹೆಚ್ಚೇ ಪ್ರೀತಿ ಕೊಟ್ಟಿದ್ದಳು. ಇಪ್ಪತ್ತರ ಹರೆಯದಲ್ಲೇ ಮುದುಕನಂತೆ ಗೂರುತ್ತ ಕೂಡುವ ಕ್ವಾಟೆಯ ರಾಜ್ಕುಮಾರನಿಗೆ ಹೆಣ್ಣು ಕೊಡವವರು ಯಾರೂ ಇರಲಿಲ್ಲ.

ಸಿರಿ-ಸಂಪತ್ತು ಸೇರುಗಟ್ಟಲೆ ಇತ್ತಾದರೂ ಏಳೆಂಟು ತಲೆಮಾರುಗಳಿಂದ ವಂಶದ ಕುಡಿ ಇಲ್ಲದೆ ದತ್ತಕ ನಡೆದ ಮನೆತನಕ್ಕೆ ಕೊಟ್ಟರೆ ತಮ್ಮ ಮಗಳ ಹೊಟ್ಟೆಗೂ ಕೇರು ಬಿದ್ದೀತು ಅಂತ ಹೆದರಿದ್ದರು. ಇಂತಹ ಘಳಿಗೆಯಲ್ಲೇ ಮಲತಾಯಿಯ ಕೈಯಲ್ಲಿ ಹಣ್ಣಾಗುತ್ತಿದ್ದ ಸೊಲ್ಲಾಪುರ ಕಡೆಯ ನೀಲವ್ವ ಅಚ್ಚಮ್ಮನ ಕಣ್ಣಿಗೆ ಬಿದ್ದು ಕೋಟೆಯೊಳಗೆ ಸೊಸೆಯಾಗಿ ನಡೆದು ಬಂದಿದ್ದಳು.

ಉದ್ದ ಮೂಗಿನ, ದುಂಡು ಮುಖದ ಆಗಷ್ಟೇ ಹರೆಯ ಹಬ್ಬಿದ ಬಳ್ಳಿಯಂತಿದ್ದ ನೀಲವ್ವನ್ನ ಮುಖವನ್ನ ತನ್ನ ಎರಡೂ ಕೈಯಲ್ಲಿಡಿದು ಘಳಿಗೆಗೊಮ್ಮೆ ರಾಣಿ ಲಟಿಕೆ ಮುರಿಯುತ್ತಿದ್ದಳು. “ನನ್ನ ಸೊಸೆ ಮುದ್ದು ಈಕಿ ಕಾಲ್ದೆಸೆಯಿಂದ ನಮ್ಮುಡುಗ್ಹಾನು ಎಚ್ಚರಾತದ, ಈ ಕ್ವಾಟೀ ಕಂಬಕೊಂದು ಆಡೋ ಕೂಸೂ ಬರತಾವ” ಅಂತ ದಿನಕ್ಕ ನಾಕು ಸಲ ಅನ್ನುತ್ತಿದ್ದಳು. ಆರಂಭದಲ್ಲಿ ನೀಲವ್ವನ ಗಂಡ ಸಣ್ಣ ಧಣಿ ಚೇತರಿಸಿಕೊಂಡಂತೆ ಕಾಣಿಸಿತು. ಆದರದು ಕ್ರಮೇಣ ಭ್ರಮೆಯ ಬೀಜ ಅಂಬೋದು ಅಪೂಟ ಗೊತ್ತಾಯಿತು. ಆತನಿಗಿದ್ದ ಕ್ಷಯ ದಿನದಿಂದ ದಿನಕ್ಕೆ ಕಟಿಗೆಯೊಳಗಿನ ಹುಳದಂತೆ ಇಂಚಿಂಚು ತಿನ್ನುತ್ತಿತ್ತು.

ರಾತ್ರಿ ಬಾಜು ಮಲಗಿದರೆ ಸೂರ್ಯ ಹುಟ್ಟೋವರೆಗೆ ಬರೀ ಕೆಮ್ಮು, ಕೆಮ್ಮಿನ ಕಫ, ಮತ್ತು ಕೆಮ್ಮಿ ಸರಿಮಾಡಿಕೊಂಡ ಗಂಟಲಿನ ಗರಗರ ಸದ್ದಷ್ಟೆ! ಅದರಾಚೆ ಆಟ ಸಾಗುತ್ತಿರಲಿಲ್ಲ!

ಯೌವ್ವನವೆಂಬದು
ಹೂವಾಗಿ,
ಕಾಯಾಗಿ,
ಹಣ್ಣೊಡೆದು,
ಹಣ್ಣಾದ
ಈ ಹದಿಮೂರು ವರ್ಷದಲ್ಲಿ ಒಮ್ಮೆಯೂ ನೀಲವ್ವ ನೀರು ತಪ್ಪಿಸಲಿಲ್ಲ. ಇನ್ನೇನು ಈ ಬದುಕು ಇಷ್ಟೇ!? ಹಾಡು ಮರೆತ ಕೋಗಿಲೆಯಂತಹದು! ಅಕ್ಕಸಾಲಿಗನ ಕೈಗೆ ಸಿಗದ ಬಂಗಾರದ ಬುಗುಡೆಯಂತಹದು
ಎಂದುಕೊಂಡ ಕ್ಷಣದಲ್ಲೇ ಹನುಮ ಕಣ್ಣಿಗೆ ಬಿದ್ದಿದ್ದ. ಹೊಕ್ಕುಳದಾಳದಲ್ಲಿ ಬಾಡಿ ಹೋಗಿದ್ದ ಆಸೆಯ ಹೂ ಮತ್ತೆ ಅರಳುವ ಮನಸು ಮಾಡಿತ್ತು. ಕಣ್ಣ ಕೊನೆಯ ಕಾಮವೆಂಬುದು ಬಸಿರಿನ ಬಯಕೆವೊತ್ತ ಬಾವುಗವಾಗಿ ಬೇಟೆಯ ಜಾಡು ಹಿಡಿದಿತ್ತು.

ಬೈಯ್ಯುವದೇನೋ ಬೈಯ್ದಳು ಆದರೆ ರಾಣಿ ಅಚ್ಚಮ್ಮನಿಗೆ ಜೀವ ಸಮಾಧಾನವಾಗಲಿಲ್ಲ. ಆಕೆಯೂ ಒಂದು ಕಾಲಕ್ಕೆ ಈ ದೆವ್ವದಂತಹ ಕ್ವಾಟಿಗೆ ಸೊಸೆಯಾಗಿಯೇ ಬಂದವಳು! ನೂರು ಕಂಬಗಳ ನಡುವಿನ ಒಂಟಿತನ, ಹತ್ತಾರೂ ಜನರ ಮದ್ಯೆಯೂ ಕಾಡುವ ಖಾಲೀತನವನ್ನ ಉಂಡು ಬೆಳೆದವಳೇ.

ದೈವಕ್ಕೆ ಧಣಿ ಸಿದ್ಧರಾಮ ರಸಿಕನಿದ್ದ. ಹಣೆಗೆ, ಹಣೆ ಹಚ್ಚಿ ಪ್ರೀತಿಗೆ ನಿಲ್ಲುತ್ತಿದ್ದ! ಆಡುವ ಪ್ರತೀ ಮಾತಿಗೆ ಜೇನು ತುಂಬಿರುತ್ತಿದ್ದ. ತಬ್ಬುಗೆಯೆಂಬುದು ಮರ ಬಳಸಿದ ಬಳ್ಳಿಯಂತೆ ಅಪ್ಯಾಯಮಾನ. ಕತ್ತಲು ಹೊತ್ತಿಗೆ ತಳಿಕೆ ಬೀಳುವ ಹಾವಿನಂತಾಗುತ್ತಿದ್ದ ಧಣಿ ಈಜಿ ಧಣಿದನೇ ಹೊರತು ಅಲ್ಲೂ ಒಂದು ಸಸಿ ಮೊಳಕೆಯೊಡೆಯಲಿಲ್ಲ.

ಸುಖವೆಂಬುದು ಕಲ್ಲಮೇಲೆ ಸುರಿದ ಮಳೆಯಂತೆ ಸರಿದು ಹೋಯಿತೆ ವಿನಃ ನೆಲ ಇಂಗಿ ಒಳಗಿಂದ ಬೀಜವೊಂದು ಮೊಳಕೆಯೊಡೆಯಲಿಲ್ಲ. ಆವತ್ತಿಗೂ ಕ್ವಾಟೆಯಲ್ಲಿ ಹತ್ತು ಹಲವು ಗಂಡಸರಿದ್ದರು. ಧಣಿಯೊಂದಿಗೆ ಬೇಟೆ ಆಡುವ ಬೇಡರ ಕಟ್ಟುಮಸ್ತಾದ ಹುಡುಗರಿದ್ದರು. ಅಷ್ಟೇ ಏಕೆ ಇವತ್ತು ನೀಲವ್ವನ ಕಣ್ಣಲಿ ಚಿತ್ರವಾಗಿ ಕದಲುತ್ತಿರುವ ಹನುಮನ ತಂದೆ ಹಾಲಬಾವಿಯ ಲಚುಮನಿದ್ದ. ಎಂತಹ ಗರತಿಯೂ ತೆಕ್ಕೆಗೆ ಬೀಳಬೇಕು ಅಂತ ಕಬ್ಬಿಣದ ಮೈಯ್ಯವನು.

ಆದರೆ ಧಣಿಯೊಂದಿಗಿನ ಎಂದೂ ಮುಗಿಯದ ಪ್ರೇಮ ಅದಕ್ಕೆ ಅವಕಾಶ ನೀಡಲಿಲ್ಲ. ಇದೆಲ್ಲದರ ಕೊನೆ ಎಂಬಂತೆ ಮನೆತನದ ಎಂಟನೇ ತಲೆಗೆ ನಿಂಗರಾಜನನ್ನು ದತ್ತು ತೆಗೆದುಕೊಂಡರು. ಹುಟ್ಟುತ್ತ ಚೂರು ಕೃಶವಾಗಿದ್ದ ನಿಂಗರಾಜ ಅಚ್ಚಮ್ಮನ ತವರಿನ ಬಳ್ಳಿ. ಆ ಕಕ್ಕುಲಾತಿಗೆ ಬಿದ್ದು ಅವನನ್ನೇ ದತ್ತಿಗೆ ನಿಕ್ಕಿ ಮಾಡಿದ್ದಳು. ಕೋಟೆಯ ಹೊಸ್ತಿಲು ತುಳಿದು ಹಾಲು-ತುಪ್ಪದ ಅಭ್ಯಂಜನಕ್ಕೆ ಹುಡುಗ ತಿರುಗಿಯಾನು ಅಂತ ಕನಸು ಕಂಡಿದ್ದಳು.

ಧಣಿ ಮರು ಮಾತಾಡಿರಲಿಲ್ಲ. ಅವಳ ಪ್ರತೀ ನಿರ್ದಾರಕೂ ಮುಗುಳು ನಗೆಯಷ್ಟೇ! ಅದೇ ಒಪ್ಪಿಗೆ ಅದೇ ಒಲವು ಬದುಕ್ಕಿದ್ದಷ್ಟು ದಿವಸ. ಆದರೆ ವಿಧಿ ಲಿಖಿತ ಬೇರೆ ಇತ್ತು. ಇಪ್ಪತ್ತರ ಹರೆಯಕ್ಕೆ ನಿಂಗರಾಜನಿಗೆ ಕ್ಷಯ ಅಂಟಿಕೊಂಡಿತು. ಇನ್ನೇನು ಅವನು ಕರಗಿ ಕರ್ಪೂರವಾಗುವ ಮೊದಲೇ ಮನೆಗೊಂದು ದಿಕ್ಕಾಗಲಿ ಅಂತ ಹಂಬಲಿಸುತ್ತಿದ್ದ ದಿನಗಳಲ್ಲಿ ಅಷ್ಟು ದಿನದ ಗೆಣೆಕಾರ ದೊಡ್ಡ ಧಣಿಯೂ ಸಿವನ ಪಾದ ಸೇರಿದ.

ಆಗ ಅಕ್ಷರಶಃ ರಾಣಿ ಅಚ್ಚಮ್ಮ ಒಂಟಿಯಾದಳು. ಕಣ್ಣ ಕೊನೆಯಲ್ಲೊಂದು ದಾರ್ಷ್ಟ್ಯ, ಮಾತಿನ ಕೊನೆಯಲ್ಲೊಂದು ಅಹಂನ್ನು ರೂಢಿಸಿಕೊಂಡು ಕೋಟೆಗೂ ವಂಶಕೂ ದಿಕ್ಕಾದಳು.

ಆದರೆ ನೀಲವ್ವನದು ಆಸೆಯ ವಯಸ್ಸು! ನಾನು ಹಾಗೆ ಒಮ್ಮೆಲೇ ಹರಿಹಾಯಬಾರದಿತ್ತು ಅಂತ ಮತ್ತೊಂದು ಸಲ ಮನಸಲ್ಲೇ ಅಂದುಕೊಂಡಳು.ಬಹಳ ಹೊತ್ತು ಅಲ್ಲಿ ಕುಂದ್ರಲಾಗದೆ ನೀಲವ್ವನ ಕೋಣೆಯ ದಿಕ್ಕಿಗೆ ನಡೆದಳು. ಮುಂದು ಮಾಡಿದ ಬಾಗಿಲ ಸರಿಸಿ “ನೀಲವ್ವಾ” ಎಂದಳಷ್ಟೇ! ಮೈಮೇಲಿನ ಗ್ಯಾನವಿಲ್ಲದೆ ಹಾಸಿಗೆ ಮೇಲೆ ಬಿದ್ದು ಕಣ್ಣೀರಾಗಿದ್ದ ನೀಲವ್ವ ಮಲಗಿದಲ್ಲಿಂದ ಚಂಗನೇ ನೆಗೆದು ಅಸ್ತವ್ಯಸ್ತವಾಗಿದ್ದ ಸೀರೆಯ ಮಡಿ ಸರಿ ಮಾಡಿಕೊಳ್ಳುತ್ತ ಸೆರಗು ತಲೆ ಮೇಲೆ ಹೊತ್ತು ಅಂಜುತ್ತ, ಅಳುಕುತ್ತ ಮುಂದೆ ಬಂದು ನಿಂತಳು.

ಕಕ್ಕುಲಾತಿಯಿಂದ ಸೊಸೆಯ ಹಣ್ಣೆತ್ತಿ ಸವರಿ “ಆಸೇ ಅಂಬೋದು ಹುಚ್ಚು ಕುದುರಿ, ಅದು ಗುರಿ ಕಾಣ್ಸುತ್ತೊ?ಇಲ್ಲ ಕೆಳಗ ಕೆಡವಿ ಮಣ್ಣು ಮುಕ್ಸುತ್ತೋ ಗೊತ್ತಾಗೊದಿಲ್ಲ ತಂಗೀ! ನಿನಗ ಆ ಹೂವಿನ ಮ್ಯಾಲ ಆಸೀ ಇತ್ತಂದ್ರ ಮುಡಿ! ಆದ್ರ ಮುಡುದ ಮರುದಿನ ಆ ಗಿಡಾ ಉಳ್ಯಾಣಿಲ್ಲ! ನೆನಪಿಟ್ಕೊ! ಆಸೆಯಿಂದ ತಬ್ಕ್ಯಂಡ ಕೈಯೀನೇ ಹಗ್ಗ ಆಗಬೇಕಾತದ! ಕ್ವಾಟಿ ಮೂಲ್ಯಾಗಿನ ಖಾಲೀ ಜಾಗದಾಗ ಸಮಾದಿ ಏಳ್ತದ! ನಿನ್ನ ಹೊಟ್ಯಾಗೊಂದು ಹುಳಾ ಹುಟ್ತಾದಂದ್ರ ಅದೂ ಆಗ್ಲಿ ಬಿಡು” ಅಂತೇಳಿ ಎರಡೂ ಕೈಯಿಂದ ಪ್ರೀತಿಯ ನೆಟಿಗೆ ಮುರಿದು ಮರೆಯಾದಳು.

ಅತ್ತೆ ಕೊಟ್ಟಿದ್ದು ಅನುಮತಿಯಾ? ಎಚ್ಚರಿಕೆಯಾ?ಎಂಬುದು ತಿಳಿಯದೆ ನೀಲವ್ವ ತುಂಬಾ ಹೊತ್ತು ಹಾಸಿಗೆಯಲ್ಲಿ ಬಿದ್ದು ಹೊರಳಾಡಿದಳು.


ಇದೆಲ್ಲ ಆಗಿ ಸುಮಾರು ಹಗಲು-ರಾತ್ರಿಗಳು ಉರುಳಿ ಹನುಮ-ನೀಲವ್ವರ ಮದ್ಯೆ ಪ್ರೇಮವೆಂಬುದು ಮಿಡಿನಾಗರವಾಗಿ ಹರಿದಾಡತೊಡಗಿತ್ತು. ಎದಿರು ಕಂಡರೆ ಸಾಕು ಆಸೆ ಎಂಬುದು ಕಣ್ಗಳಲಿ ಹುಟ್ಟಿ ನಿಟ್ಟುಸಿರಲಿ ಸಾಯುತ್ತಿತ್ತು. ನೂರು ಕಣ್ಗಾವಲಿನ ಮದ್ಯೆಯೂ ಒಂದು ಅಮೃತ ಘಳಿಗೆಗಾಗಿ ಕಾಯುತ್ತಿದ್ದ ಜೀವಗಳು ಅದೊಂದು ದಿನ ಮಿತಿಯ ಪಾಜಿ ದಾಟಿ ಬಿಟ್ಟವು. ಅದೊಂದು ಇಳಿಸಂಜೆಯ ಹೊತ್ತು.

ಕೋಟೆಯ ಮುಂದಿನ ಹನಮಂದೇವರ ಗುಡಿಯ ಪೂಜೆಯ ಗಂಟೆಯ ಶಬ್ದ ನಿಚ್ಛಳವಾಗಿ ಕಿವಿಗೆ ಬೀಳುತ್ತಿದ್ದಾಗ್ಯೂ ನೀಲವ್ವ ಹನುಮ ಹೊಸ್ತಿಲ ದಾಟಿ ಒಳಗೆ ಕಾಲಿಡುವುದನ್ನೆ ಕಾಯುತ್ತಿದ್ದಳು. ಕಟ್ಟಿಗೆಯ ಸಣ್ಣ ಹೊರೆಯನ್ನ ಕೈಲಿಡಿದು ಅಡಿಗೆಯ ಅಂಗಳಕ್ಕೆ ಬಿಸಾಕಿ ಹೋಗುವ ಇಂಗಿತದಲ್ಲಿದ್ದವನನ್ನು ಆಗಷ್ಟೆ ಹಬ್ಬುತ್ತಿದ್ದ ನೀಳ ಕತ್ತಲೊಳಗೆ ಅನಾಮತ್ತು ಎಳೆದುಕೊಂಡು ಬಿಟ್ಟಳು!

ಬೇಟೆಗೆ ಬಲಿಯಾದ ಹರಿಣಿಯಂತೆ ಹನುಮ ಮೊದಲ ಕ್ಷಣಕ್ಕೆ ತಬ್ಬಿಬ್ಬಾದರೂ ಮರುಕ್ಷಣ ಕತ್ತಲೆಯನ್ನ ಅರ್ಥ ಮಾಡಿಕೊಂಡ! ಮರುಕ್ಷಣದಲ್ಲೇ ಅವರು ಕೋಟೆಯೊಳಗಿದ್ದರು. ಕ್ವಾಟಿಗೆ ನೂರು ಕಂಬ, ಪ್ರತೀ ಕಂಬದ ಮ್ಯಾಲ ಬಗೆ, ಬಗೆಯ ಚಿತ್ತಾರ ಆ ಕಂಬಗಳ ದಾಟಿ ಹಜಾರ ಇಳಿದು ಒಳಕೋಣೆಗೆ ಹೊರಟರೆ ಅಲ್ಲಿ ಬೆಳಗುತ್ತಿದ್ದ ಹತ್ತಾರು ದೀಪಗಳಲಿ ಬರೀ ತುಪ್ಪದ್ದೆ ಘಮಲು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಒಂದು ಗುಡ್ ಮಾರ್ನಿಂಗ್ ಮೆಸೇಜು

ಹೊಳೆ ದಂಡಿಗೆ ಕಾಣಿಸಿದ್ದ, ಕನಸಲಿ ಕಾಡಿದ್ದ ಆಕೆಯ ಇಪ್ಪತ್ತೈದರ ಹರೆಯ ಈಗ ಅವನ ಮುಂದೆ ಅಕ್ಷರಶಃ ಬೆತ್ತಲಾಗಿತ್ತು. ಇನ್ನೂ ಮಡಿಕೆಗಳಿಲ್ಲದ ತೆಳು ಸೊಂಟ ತಬ್ಬಲು ಆಹ್ವಾನಿಸುತ್ತಿತ್ತು. ಅವಳು ಪಿಸು ಮಾತು ನುಡಿವಂತೆ ಅವನ ಕಿವಿ ಹತ್ತಿರ ಬಂದಳು. ಉಸಿರು ಬಿಗಿ ಹಿಡಿದು ಏನೋ ಹೇಳಲು ಬಂದವಳು ಏನೂ ಹೇಳದೆ ಅವನ ಹೆಗಲಿಗೆ ಜೋತು ಬಿದ್ದು ತಬ್ಬಿದಳು. ಅಂತಹ ಕೊರೆಯುವ ಚಳಿಯಲ್ಲೂ ಮೈ ಬೆಚ್ಚಗಾಗಿ ಹನುಮ ಆಕೆಯ ಇಡೀ ದೇಹವನ್ನು ಹೊತ್ತು ಅಲ್ಲೇ ಮಲಗುವ ಕೋಣೆಯ ವಸ್ತಿಲ ಬಳಿಯೇ ನೆಲದ ಮೇಲೆ ಅಂಗಾತ ಬಿದ್ದ.

ಆಕೆ ನಿಪುಣ ಬೇಟೆಗಾರ್ತಿಯಂತೆ ಅವನ ದೇಹದ ಇಂಚಿಂಚನ್ನು ಹುಡುಕಿದಳು. ಅವನು, ಅವಳು ನುಡಿಸಿದಂತೆ ನುಡಿಯುತ್ತ ಕಣ್ಣೆವೇ ತೆರೆಯದೇ ಸ್ವರ್ಗದ ಹಾದಿಯಲ್ಲಿ ಸಾಗತೊಡಗಿದ. ಅವಳು ಕಚ್ಚಿದಳು, ಅವನು ಬೆಚ್ಚಿದ!
ನೀಲವ್ವನಲಿ ಬೆದೆಗೆ ಬಂದ ಬೆಕ್ಕಿನ ದಾರ್ಷ್ಯ್ಟವಿತ್ತು! ಇಬ್ಬರೂ ಕೇಳಿಯಲ್ಲಿ ತೊಡಗಿದ ಪುನುಗು ಬೆಕ್ಕುಗಳಂತೆ ಮುನುಗಿದರು. ಪರಸ್ಪರ ಕಾದರು, ಕೆರಳಿದರು, ಬೆರಳ ಉಗುರಿಂದ ಪರಚಿದರು.

ಮಳೆಗೆ ಕಾಯ್ವ ನೆಲದಂತೆ ಬಿರಿದು ಹೋಗಿದ್ದ ನೀಲವ್ವ ಹೂವ್ವಿನಂತೆ ಅರಳಿ ಭೂಮಿಯಂತೆ ತೋಯ್ದಳು. ಅವನು ಮತ್ತೆ, ಮತ್ತೆ ತಬ್ಬಿಕೊಂಡ, ಕಿರುಗಾಲುವೆಯೊಳಗೆ ಹರಿವ ಸ್ವಚ್ಛಂದ ಮೀನಂತೆ ಹರಿದಾಡಿದ. ಆಟ ಇನ್ನೇನು ಮುಗಿಯಬೇಕು ನೀಲವ್ವನ ಕೈಗಳು ಬಿರುಸಾಗಿ ಮರಕ್ಕಂಟುವ ಬಳ್ಳಿಯಂತೆ ಕುತ್ತಿಗೆಯ ಸುತ್ತ ಹಬ್ಬತೊಡಗಿದ್ದವು!

ಅರೆಕ್ಷಣ! ಅವಳ ಮನಸು ಬದಲಾಗುವ ಕಾಲದಂತೆ, ಋತುವಿನಂತೆ ತಾನೇ, ತಾನಾಗಿ ಪಲ್ಲಟಗೊಂಡಿತು. ಮನದ ಮೂಲೆಯಲ್ಲಿ ಪ್ರೇಮದ ತಂತಿಯೊಂದು ಅವನಿಗಾಗಿ ಮಿಡಿಯಿತು! ಅವಳ ಎದೆಯ ತುಂಬೆಲ್ಲ ಅವನ ಕುರಿತು ಪ್ರೀತಿ ತುಂಬಿ ಅವನನ್ನ ಮಗುವಂತೆ ಮುದ್ದಿಸುತ್ತ ಬಂಡೆಯಂತಹ ಅವನ ಎದೆಯ ಮೇಲೆ ಒರಗಿದಳು. ಬರಡು ನೆಲದ ಮೇಲೆ ಮಳೆ ಸುರಿಸಿದವನನ್ನ ತಬ್ಬುಗೆಯಲ್ಲೇ ಉಸಿರುಗಟ್ಟಿಸುವಂತ ಪ್ರಮಾದ ಮಾಡಿಬಿಡುತ್ತಿದ್ದೆನಲ್ಲ ಅಂತ ಮತ್ತೊಮ್ಮೆ ಬೆವರಿದಳು. ಅವನು ಗಾಳಿ ಹೋದ ಪೀಪಿಯಂತೆ ಕೈಕಾಲು ಉಸೂರ್ ಅನಿಸಿದಂತೆ ಭೂಮಿಯನ್ನ ಹಾಸಿಗೆ ಮಾಡಿ ಅಂಗಾತ ಮಲಗಿದ್ದ.

ಇಂತಹದ್ದೊಂದು ತಿರುವು ಪಡೆದ ಬದುಕನ್ನ ಈ ಹಾಳು ಅರಮನೆ ಬದುಕಲು ಬಿಟ್ಟೀತಾ? ತಲೆ ತುಂಬಾ ಆಲೋಚನೆಗಳು ಜೇನು ಹುಳುವಿನಂತೆ ದಾಳಿ ಮಾಡತೊಡಗಿದ್ದವು. ಸ್ವಲ್ಪ ಹೊತ್ತಿನ ಹಿಂದೆ ಇದ್ದ ಹುಂಬುತನ ಮಾಯವಾಗಿ ಆ ಜಾಗದಲ್ಲಿ ಭಯವೆಂಬುದು ಮಳೆ ಬರುವ ಮುನ್ನ ಆಗಸವಿಡೀ ಆವರಿಸುವ ಕಪ್ಪು ಮೋಡದಂತೆ ಮನಪೂರ ಆವರಿಸತೊಡಗಿತು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಕಿಂಡಿ

ಹಾಸಿಗೆ ಹಿಡಿದ ಅಪ್ಪ, ಸದಾ ಮನೀಗಾಗಿ ದುಡುದು ಹೈರಾಣಾದ ಅವ್ವ,ಇಂದೋ ನಾಳೆಯೇ ಹಡೆಯಲು ತವರಿಗೆ ಬರುವ ತಂಗಿ ಎಲ್ಲರೂ ಕಣ್ಣ ಮುಂದೆ ಬಂದರು. ಯಾಕೋ ಕೈಕಾಲು ನಡುಗಿದವು! ಎಡಗಣ್ಣು ಬೇಡವೆಂದರೂ ಅದುರಿ ಎದೆ ಬಡಿತ ಹೆಚ್ಚಿಸಿತು.ಅಲ್ಲಿರುವುದು ಜೀವಕ್ಕೆ ಅಪಾಯ ಎಂಬುದನ್ನ ಇಂದ್ರಿಯ ಒತ್ತಿ ಒತ್ತಿ ಹೇಳತೊಡಗಿತು. ಎದೆಯ ಮೇಲೆ ಜೀವ ಇಲ್ಲದ ಗೊಂಬೆಯಂತೆ ನಿಸೂರಾಗಿ ಮಲಗಿದ್ದ ನೀಲವ್ವನನ್ನ ಬಗುಲಿಗೆ ನೂಕಿ ದಡಗ್ಗನೆ ಎದ್ದು ನಿಂತ.

ನೀಲವ್ವ ಎದ್ದು ನಿಂತ ಅವನ ದೋತರದ ಚುಂಗನ್ನ ಹಿಡಿದಳು. ಅವಳ ಕಣ್ಣಲ್ಲಿ ಎಂದೂ ಮುಗಿಯದ ದುಖಃದ ಮಡುವಿತ್ತು. ಮುಂದೇನೋ ಘಟಿಸಲಿದೆ ಎಂಬ ಅಸ್ಪಷ್ಟ ಸಂದೇಶ ಆಕೆಯ ಕಣ್ಣಲ್ಲಿ ಕೆನೆ ಕಟ್ಟಿತ್ತು. ಇನ್ನೂ ಸ್ವಲ್ಪ ಹೊತ್ತಾದರು ಜೊತೆಗಿರು ಎಂಬಂತೆ ಕಣ್ಣಲ್ಲೇ ಬೇಡಿದಳು.

ಅವನು ದಾವಂತದಲ್ಲಿದ್ದ. ಬಿರಬಿರನೆ ನಡೆದುಬಿಟ್ಟ. ತನ್ನನ್ನ ಯಾರೋ ಹಿಂಬಾಲಿಸುತ್ತಿದ್ದಾರೆ, ಅರಮನೆಯ ಪ್ರತೀ ಕಂಬದ ಹಿಂದೆ ಯಾರೋ ಅಡಗಿ ಕೂತು ಮಸಲತ್ತು ನಡೆಸಿದ್ದಾರೆ ಎನಿಸಿ ಎದೆ ಬಿಗಿ ಹಿಡಿದು ಕಾಲೂರಿ ನೆಟ್ಟಗೆ ನಿಂತು ದೆವ್ವನಂತಹ ಬಾಗಿಲು ತಳ್ಳಿ ಇಷ್ಟೆತ್ತರದ ತಲಬಾಗಿಲನ್ನು ಜಿಗಿಯಲೆತ್ನಿಸಿದ.

ಆವಾಗಲೇ ಆ ಕ್ಷಣದಲ್ಲೇ ನೀಲವ್ವನಿಗೆ ಕೋಟೆಯ ತಲಬಾಗಿಲ ಬಳಿ ಕೆಟ್ಟ ದನಿಯ ಆರ್ತನಾದ ಕೇಳಿದ್ದು. ಇಡೀ ಸನ್ನಿವೇಶ ಒಮ್ಮೆಲೆ ಅರ್ಥ ಆದವಳಂತೆ ನೀಲವ್ವ ಚೀರುತ್ತ ಬಾಗಿಲಿಗೆ ಬಂದಳು. ಕಣ್ಣು ಕತ್ತಲಾಗಿ ಹೆಜ್ಜೆ ಎತ್ತಿ ಇಡಲಾರದಂತಾಗಿ ತನ್ನ ಕೋಣೆಯ ಬಾಗಿಲಲ್ಲಿ ದೊಪ್ಪನೆ ಬಿದ್ದಳು. ಸ್ಮೃತಿ ಇಲ್ಲದೆ ಬಿದ್ದರೂ ಅವಳ ಕಣ್ಣಿಂದ ಕಣ್ಣೀರು ಇಳಿಯುತ್ತಲೇ ಇತ್ತು..

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಚೆಕ್‍ಔಟ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮೈಸೂರು

Book Release: ಮೈಸೂರಿನಲ್ಲಿ ಮೇ 9ರಂದು ಐತಿಚಂಡ ರಮೇಶ ಉತ್ತಪ್ಪ ಅವರ 4 ಪುಸ್ತಕ ಬಿಡುಗಡೆ, ಸಂವಾದ

Book Release: ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

Ithichanda Ramesh Uthappaʼs Four books to be released in Mysore on May 9
Koo

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ, ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶನ ಹಾಗೂ ಮೈಸೂರು ಕಲ್ಚರಲ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ (Ithichanda Ramesh Uthappa) ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮವನ್ನು (Book Release) ನಗರದ ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು ಉದ್ಘಾಟಿಸಲಿದ್ದು, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಹಾಗೂ ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಭಾಗವಹಿಸಲಿದ್ದಾರೆ.

ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ.ಎಸ್. ಸಪ್ನ ಅವರು ಅಧ್ಯಕ್ಷತೆ ವಹಿಸಲಿದ್ದು, ವಿಶೇಷ ಅತಿಥಿಗಳಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ ಹಾಜರಿರಲಿದ್ದಾರೆ.

ಇದನ್ನೂ ಓದಿ | ರಾಜಮಾರ್ಗ ಅಂಕಣ: ಶೇಕ್ಸ್‌ಪಿಯರ್‌ ನೆನಪಿನಲ್ಲಿ ಓದುವ ಸುಖ ನೆನಪಿಸಿಕೊಳ್ಳುವ ಹೊತ್ತು

ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ಕೆ.ಪುಟ್ಟಸ್ವಾಮಿ, ಸಹ ಪ್ರಾಧ್ಯಾಪಕರಾದ ಪ್ರೊ. ಎನ್. ಮಮತ, ಪುಸ್ತಕಗಳ ಲೇಖಕರಾದ ಐತಿಚಂಡ ರಮೇಶ್ ಉತ್ತಪ್ಪ, ಪ್ರಕಾಶಕ ಚೇತನ್ ಕಣಬೂರು, ಮೈಸೂರು ಕಲ್ಬರಲ್ ಅಸೋಸಿಯೇಷನ್‌ನ ಎ.ಪಿ.ನಾಗೇಶ್ ಉಪಸ್ಥಿತರಿರಲಿದ್ದಾರೆ.

ಬಿಡುಗಡೆಯಾಗಲಿರುವ ಕೃತಿಗಳು

  • ಕಾಡು ಹೇಳಿದ ಕಥೆ: ವೈಲ್ಡ್‌ ಲೈಫ್ ರಿಪೋರ್ಟಿಂಗ್
  • ಹಾವು: ನಂಬಿಕೆ ಹಾಗೂ ಮನೋವೈಜ್ಞಾನಿಕ ವಿಶ್ಲೇಷಣೆ
  • ಆನೆ: ಬದಲಾದ ವರ್ತನೆ
  • ಅರ್ಜುನ ನಿನ್ನ ಮರೆಯಲೆಂತು ನಾ..!
Continue Reading

ಅಂಕಣ

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

ಧವಳ ಧಾರಿಣಿ ಅಂಕಣ: ಕಾಮವೆನ್ನುವುದು ಎಂತಹವರನ್ನೂ ತಲೆಕೆಡಿಸಿಬಿಡುತ್ತದೆ. ಕಾಮದ ಹುಚ್ಚಿನಲ್ಲಿರುವ ದಶರಥ ತನ್ನ ಸುಖಕ್ಕಾಗಿ ಏನನ್ನು ಮಾಡಲೂ ಹೇಸದ ಸ್ಥಿತಿಗೆ ತಲುಪಿದ್ದಾನೆ. ವಧಾರ್ಹನಲ್ಲದವನನ್ನು ವಧಿಸಲೇ, ಮರಣದಂಡನೆಗೆ ಗುರಿಯಾದವನನ್ನು ಬಿಡಿಸಲೇ, ದರಿದ್ರನನ್ನು ಶ್ರೀಮಂತನನ್ನಾಗಿ ಮಾಡಲೇ, ಶ್ರೀಮಂತನನ್ನು ದರಿದ್ರನನ್ನಾಗಿ ಮಾಡಲೇ; ನಿನ್ನ ಪ್ರೀತಿಗಾಗಿ ಏನನ್ನೂ ಮಾಡಲೂ ತಾನು ಸಿದ್ಧ ಎನ್ನುತ್ತಾನೆ.

VISTARANEWS.COM


on

king dasharatha kaikeyi dhavala dharini column
Koo

ಪ್ರಾಣಕ್ಕಿಂತ ಪ್ರಿಯಳಾದ ಸತಿಯಿಂದ ಪ್ರಾಪ್ತವಾದ ಪುತ್ರ ವಿಯೋಗ

dhavala dharini by Narayana yaji

ಧವಳ ಧಾರಿಣಿ ಅಂಕಣ: ಸ ಕೈಕೇಯ್ಯಾ ಗೃಹಂ ಶ್ರೇಷ್ಠಂ ಪ್ರವಿವೇಶ ಮಹಾಯಶಾಃ
ಪಾಣ್ಡುರಾಭ್ರಮಿವಾಕಾಶಂ ರಾಹುಯುಕ್ತಂ ನಿಶಾಕರಃ ৷৷ಅ.ಯೋ.10.11৷৷

ಬಿಳಿಯದಾದ ಮೋಡಗಳಿಂದ ಕೂಡಿದ ಆಕಾಶದಲ್ಲಿ ರಾಹುವಿಗೆ ಗ್ರಾಸವಾಗುವ ಸಲುವಾಗಿ ಚಂದ್ರನು ಪ್ರವೇಶಿಸುವಂತೆ ಮಹಾಯಶೋವಂತನಾದ ರಾಜನು ಭವ್ಯವಾದ ಕೈಕೇಯಿಯ ಅಂತಃಪುರವನ್ನು ಪ್ರವೇಶಿಸಿದನು.

ಕವಿಸಮಯವೆನ್ನುವದು ರಾಮಾಯಣ ಕಾವ್ಯದ ವಿಶೇಷ. ವಾಲ್ಮೀಕಿ ಕಾವ್ಯವನ್ನು ಕೇವಲ ಉಅಪದೇಶಕ್ಕಾಗಿಯಲ್ಲ, ಅದನ್ನು ತಾಳವಾದ್ಯಗಳೊಂದಿಗೆ ರಾಗವಾಗಿ ಹಾಡಲು ಅನುಕೂಲವಾಗುವಂತೆ ಬರೆದಿದ್ದಾನೆ. ಹಾಡುಗಾರಿಕೆಯಲ್ಲಿ ವರ್ಣನೆಗೆ ಮಹತ್ವ ಬರುತ್ತದೆ. ಕಾವ್ಯದ ಮುಂಗಾಣ್ಕೆ ಅಲ್ಲಲ್ಲಿ ವ್ಯಕ್ತವಾಗುತ್ತಾ ಹೋಗುತ್ತದೆ. ಕೈಕೇಯಿಯ ಅರಮನೆಗೆ ಹೋಗುವ ರಾಜನ ಕುರಿತು ವರ್ಣಿಸುವಾಗ ಬಿಳಿಯದಾದ ಮೋಡ, ರಾಹು, ಆಕಾಶ, ಚಂದ್ರ ಎನ್ನುವ ಉಪಮೆಗಳ ಮೂಲಕ ಹೇಳಿದ್ದಾನೆ. ಆಕಾಶ ಎನ್ನುವುದು ಮನಸ್ಸಿನಲ್ಲಿ ಆಸೆಗಳ ವಿಸ್ತಾರದವನ್ನು ಸೂಚಿಸಿದೆ. ಬಿಳಿಯದಾದ ಮೋಡವೆನ್ನುವದು ಅರ್ಥಪೂರ್ಣವಾದ ಉಪಮೆ. ನೀರಿನಿಂದ ಯುಕ್ತವಾದ ಮೋಡ ಕಪ್ಪಾಗಿರುತ್ತದೆ. ಮನಸ್ಸಿನಲ್ಲಿ ತನ್ನ ಮಗನ ಪಟ್ಟಾಭಿಷೇಕದ ಕುರಿತು ಯಾವ ಆಸೆಯನ್ನೇ ಇರಿಸಿಕೊಳ್ಳಲಿ, ಅದೆಲ್ಲವೂ ನೀರಿಲ್ಲದ ಮೋಡದಂತೆ ವ್ಯರ್ಥವಾಗಿ ಹಾರಿಹೋಗುತ್ತದೆ ಎನ್ನುವುದನ್ನು ಹೇಳುತ್ತಾನೆ. ರಾಹು ಮತ್ತು ಕೇತುಗಳು ಭಾರತೀಯ ಖಗೋಳಶಸ್ತ್ರದ ಪ್ರಕಾರ ಎರಡು ವಿರುದ್ಧದಿಕ್ಕುಗಳಲ್ಲಿರುವ ಬಿಂದುಗಳು. ಈ ಬಿಂದುವಿಗೆ ಸೂರ್ಯಚಂದರು ಬಂದಾಗ ಗ್ರಹಣವಾಗುತ್ತದೆ. ಚಂದ್ರ ಮನಸ್ಸಿನ ಕಾರಕ. ಸಂತೊಷ ಮತ್ತು ಕಾಮವಿಕಾರಗಳು ಮನಸ್ಸಿನಲ್ಲಿ ಉತ್ಪನ್ನವಾಗುವಂತವು. ಚಂದ್ರ ತನ್ನ ಪರಿಭ್ರಮಣದಲ್ಲಿ ರಾಹುವಿನ ಬಿಂದುವಿಗೆ ಬಂದಾಗ ಗ್ರಹಣವಾಗಿ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತಾನೋ ಅದೇರಿತಿ ರಾಜ ತನ್ನೆಲ್ಲ ಕನಸನ್ನು ಕಳೆದುಕೊಂಡು ನಿಶ್ಚಿತವಾಗಿ ಮರಣದತ್ತ ಸಾಗಲು ಬಂದಿದ್ದಾನೆ ಎನ್ನುವುದನ್ನು ಉಪಮಾಮಲಂಕಾರದಲ್ಲಿ ಕವಿ ವರ್ಣಿಸಿದ್ದಾನೆ.

ದಶರಥನ ಪಾತ್ರವನ್ನು ವಿವೇಚಿಸುವಾಗ ಮೊದಲಿನಿಂದಲೂ ಕಂಡುಬಂದ ಅಂಶವೆಂದರೆ ಮಹಾನ್ ರಾಜರ್ಶಿಯಾಗಿದ್ದ ದೊರೆ ರಾಮನ ಕುರಿತು ಕಡುಲೋಭಿಯಾಗಿ ಪರಿವರ್ತನೆಯಾಗಿರುವುದನ್ನು ಗಮನಿಸಬಹುದು. ದಶರಥನ ವ್ಯಕ್ತಿತ್ವವೆನ್ನುವುದು ಸಂಕೀರ್ಣವೇನೂ ಅಲ್ಲ. ಶೂರನಾಗಿದ್ದ; ಸೂರ್ಯವಂಶದ ಧ್ಯೇಯೋದ್ಧಶವಾದ ಧರ್ಮಸ್ಥಾಪನೆಯ ವಿಷಯದಲ್ಲಿ ಸದಾ ನಿರತನಾಗಿದ್ದ. ಅದೇ ಕಾಲಕ್ಕೆ ಅಯೋಧ್ಯೆಯ ಸಿಂಹಾಸನವೆನ್ನುವುದು ಗಣತಂತ್ರವ್ಯವಸ್ಥೆಯಲ್ಲಿ ಇತ್ತು. ರಾಜರಾಗುವವರು ಯಾರೇ ಆದರೂ ಅದಕ್ಕೆ ಪ್ರಜೆಗಳ ಒಪ್ಪಿಗೆ ಪಡೆಯಬೇಕಾಗಿತ್ತು. ಪ್ರಾಚೀನ ಗ್ರೀಸಿನಲ್ಲಿದ್ದ ರೀತಿಯ ಗಣತಂತ್ರವ್ಯವಸ್ಥೆ ಅಯೋಧ್ಯೆಯಲ್ಲಿ ಇತ್ತು ಎನ್ನುವುದಕ್ಕೆ ವಾಲ್ಮೀಕಿಯ ರಾಮಾಯಣವನ್ನು ಮತ್ತು ಮತ್ತು ಪ್ಲೇಟೋವಿನ “The Republic” ಕೃತಿಯನ್ನು ತುಲನೆ ಮಾಡಿದಾಗ ಅನಿಸುತ್ತದೆ. ಅದನ್ನು ಕೇವಲ ತೋರಿಕೆಗಾಗಿ ಆಚರಣೆಯಲ್ಲಿ ಇಟ್ಟು ತನಗೆ ಬೇಕಾದಂತೆ ಉತ್ತರಾಧಿಕಾರಿಯನ್ನು ಆರಿಸುವ ತಂತ್ರವನ್ನು ದಶರಥ ಅನುಸರಿಸಿರುವುದು ರಾಮನಿಗೆ ಪಟ್ಟಗಟ್ಟಬೇಕೆನ್ನುವ ಸಂದರ್ಭದಲ್ಲಿ ಕಾಣಬಹುದು. ಆತನ ಚಾಣಾಕ್ಷನಡೆಯ ಒಳಗಿರುವದು ತನ್ನದು ಎನ್ನುವ ಮೋಹದ ಅರಿವು ಎನ್ನುವುದು ಯಾರ ಗಮನಕ್ಕೂ, ಹೆಚ್ಚೇನು ರಾಮನ ಅರಿವಿಗೂ ಬಾರದ ಹಾಗೆ ನಡೆದುಕೊಂಡಿದ್ದಾನೆ. ಪರಿಪೂರ್ಣ ವ್ಯಕ್ತಿತ್ವದ ರಾಮನಂತಹ ದೊರೆ ತಮಗೆ ಸಿಗುತ್ತಾನೆ ಎನ್ನುವ ಕಾರಣಕ್ಕೆ ಪ್ರಜೆಗಳು ಸಂಭ್ರಮಿಸುವುದು ಸಹಜವೇ ಆಗಿದೆ. ತಾನು ಅಶ್ವಪತಿಗೆ ಕೊಟ್ಟ ಮಾತುಗಳು ಹೀಗೆ ಮರೆಯಾದ ಕಾರಣ ಅದು ದೊರೆಗೆ ಅಪರಿಮಿತ ಸಂತೋಷವನ್ನು ಕೊಟ್ಟಿದೆ. ಇಳಿವಯಸ್ಸಿನಲ್ಲಿ ಕಿರಿಯ ಚಲುವೆಯಾದ ಕೈಕೇಯಿಯ ಹಿಂದೆ ಬಿದ್ದಿದ್ದ ದೊರೆಗೆ ವೃದ್ದಾಪ್ಯದಲ್ಲಿ ಮಕ್ಕಳಾದ ಮೇಲೆ ರಾಮ ಎನ್ನುವ ಕುರುಡು ಮೋಹ ಆವರಿಸಿಕೊಂಡಿತ್ತು. ಆತನ ಕುರಿತು ಮಂಥರೆ ಹೇಳುವ ಮಾತು

ಧರ್ಮವಾದೀ ಶಠೋ ಭರ್ತಾ ಶ್ಲಕ್ಷ್ಣವಾದೀ ಚ ದಾರುಣಃ
ಶುದ್ಧಭಾವೇ ನ ಜಾನೀಷೇ ತೇನೈವ ಮತಿಸಂಧಿತಾ৷৷ಬಾ.ಕಾಂ.7.24৷৷

ನಿನ್ನ ಗಂಡನು ಮೇಲೆಮೇಲೆ ಧರ್ಮಸಮ್ಮತವಾದ ಮಾತುಗಳನ್ನು ಆಡುತ್ತಿದ್ದರೂ ಅಂತರಂಗದಲ್ಲಿ ಬಹಳ ಕಪಟಸ್ವಭಾವದವನು. ಬಾಯಲ್ಲಿ ಮೃದುವಾದ ಮಾತುಗಳನ್ನು ಆಡುತ್ತಿದ್ದರೂ ನಂಬಿಸಿ ಮೋಸಮಾಡುವುದು ಹೇಗೆಂದು ಯೋಚಿಸುತ್ತಿರುತ್ತಾನೆ. ಕರುಣೆಯೆನ್ನುವುದೇ ಇಲ್ಲ, ಬಹಳ ಋಜುಸ್ವಭಾವದವಳಾದ ನೀನು ಆತನ ಕಪಟವನ್ನು ಅರಿಯದೇ ಹೋದೆಯಲ್ಲವೇ.

ಮಂಥರೆ ಇಲ್ಲಿ ಕೈಕೇಯಿಯ ಮನಸ್ಸನ್ನು ತಿರುಗಿಸಲು ಹೇಳಿರುವಳಾದರೂ ಪಾಯಸವನ್ನು ತನ್ನ ರಾಣಿಯರಿಗೆ ಹಂಚುವಲ್ಲಿಂದ ಹಿಡಿದು ರಾಮಪಟ್ಟಾಭಿಷೇಕದ ವರೆಗೆ ದಶರಥ ಏಕಪಕ್ಷೀಯವಾಗಿ ತೆಗೆದುಕೊಂಡ ತೀರ್ಮಾನವನ್ನು ಗಮನಿಸಿದಾಗ ನಮ್ಮ ದೌರ್ಬಲ್ಯ ಶತ್ರುಗಳಿಗೆ ಆಯುಧ ಎನ್ನುವ ನೀತಿಶಾಸ್ತ್ರದ ಮಾತನ್ನು ನೆನಪಿಸುತ್ತದೆ. ಅಂತೂ ತನ್ನ ಕಾರ್ಯವಾದ ರಾಮನ ಪಟ್ಟಾಭಿಷೇಕದ ವಿಷಯದಲ್ಲಿ ಯಾವ ತೊಂದರೆಯಿಲ್ಲದೇ ಸಾಂಗವಾಗಿ ನಡೆಯುವುದು ಎನ್ನುವ ನಂಬಿಕೆಯೊಂದಿಗೆ ಸಂತೊಷವೆನ್ನುವುದು ಅತಿರೇಕಕ್ಕೆ ಹೋಗಿತ್ತು. ಸಂತೋಷ ಅತಿರೇಕಕ್ಕೆ ಹೋದಾಗ ಅದು ಮದಕ್ಕೆ ತಿರುಗುತ್ತದೆ. ಮದವೆನ್ನುವುದು ಕಾಮಕ್ಕೆ ಮೂಲ. ಅದನ್ನು ಇಳಿಸಿಕೊಳ್ಳಲು ಸಂಗಾತಿಯನ್ನು ಹುಡಿಕಿಕೊಳ್ಳುವುದು ಜೀವಿಗಳ ಸಹಜ ಕ್ರಿಯೆ. ಅರಸನಿಗೆ ತನ್ನ ಆಲೋಚನೆಯನ್ನು ಹಂಚಿಕೊಳ್ಳುವ ಸಂಗಾತಿಯ ಅಗತ್ಯ ತುರ್ತಾಗಿ ಎದುರಾಯಿತು. ವಶಿಷ್ಠರಲ್ಲಿಯಾಗಲಿ, ವಾಮದೇವರಲ್ಲಿಯಾಗಲಿ ಇದನ್ನೆಲ್ಲವನ್ನು ಹಂಚಿಕೊಳ್ಳಲು ಅವರೇನು ಸಾಮಾನ್ಯದವರಾಗಿರಲಿಲ್ಲ.

ರಾಮ ಯುವರಾಜ ಪಟ್ಟಕ್ಕೆ ಅರ್ಹನಾಗಿದ್ದರೂ, ಅಯೋಧ್ಯೆಯಲ್ಲಿ ಆ ಸಾಯಂಕಾಲ ನಡೆದ ಸಿದ್ಧತೆ ದಶರಥನ ವೈಯಕ್ತಿಕ ಕಾಮನೆಯ ಫಲವಾಗಿತ್ತು. ಪ್ರಜೆಗಳು ರಾಮನನ್ನು ರಾಜನ್ನಾಗಿ ನೋಡಲು ಬಯಸಿದ್ದರೆನ್ನುವುದು ನಿಜವಾದರೂ ಇಲ್ಲಿಮೊದಲ ಸಾರಿ ರಾಮನ ಪಟ್ಟಾಭಿಷೇಕಕ್ಕಾಗಿ ದಶರಥ ಹೇಗೆಲ್ಲಾ ಮಂಡಿಗೆಯನ್ನು ಹಾಕಿದ್ದ ಎನುವುದನ್ನು ಹಿಂದಿನ ಭಾಗಗಳಲ್ಲಿ ನೋಡಿದ್ದೇವೆ. ರಾಮನನ್ನು ಕೇವಲ ಮಗನಾಗಿ ಮಾತ್ರ ನೋಡಿದ್ದಾನೆಯೇ ಹೊರತು ವಿಶ್ವಾಮಿತ್ರ, ವಶಿಷ್ಠರು, ಪರಶುರಾಮ ಮೊದಲಾದವರಿಗೆ ರಾಮನ ಅವತಾರದ ಹಿಂದಿರುವ ದೈವತ್ವದ ದರ್ಶನ ಅರಸನಿಗೆ ಸಾಯುವವರೆಗೂ ಆಗಲೇ ಇಲ್ಲ. ರಾಮನಿಗೆ ಪಟ್ಟಗಟ್ಟುವ ತನ್ನ ಮನಸ್ಸಿನ ಮಂಡಿಗೆ ಯಶಸ್ವಿಯಾದ ವಿಷಯವನ್ನು ವಿವರವಾಗಿ ವರ್ಣಿಸಿ ಹೇಳಲು ಕಿರಿಯ ರಾಣಿಯಷ್ಟು ಆಪ್ತರು ಬೇರೆ ಯಾರೂ ಇಲ್ಲ. ಕೌಸಲ್ಯೆಗೆ ಹೇಳಿದರೆ ಆಕೆಗೆ ಸಂತೋಷವೇನೋ ಆಗಬಹುದಾದರೂ ಆಕೆಯಲ್ಲಿ ಕಾಮದ ಆಕರ್ಷಣೆ ದೊರೆಗೆ ಬತ್ತಿಹೋಗಿತ್ತು. ಸುಮಿತ್ರೆಯೂ ಅಷ್ಟೇ. ಚಿಕ್ಕವಯಸ್ಸಿನ ಕೈಕೆಯಿಯನ್ನು ಚೆನ್ನಾಗಿ ಮರಳುಮಾಡಿ ಇಟ್ಟುಕೊಂಡಿದ್ದ. ತನಗೆ ಬೇಕಾದ ಹಾಗೆ ಸುಖವನ್ನು ಅವಳಿಂದ ಪಡೆಯುತ್ತಿದ್ದ. ಆಕೆ ರಾಜನಿಗೋಸ್ಕರ ಅಲಂಕರಿಸಿಕೊಂಡು ನಗುಮುಖದಿಂದ ಯಾವತ್ತಿಗೂ ಸ್ವಾಗತಿಸಲು ಸಿದ್ಧಳಾಗಿರುತ್ತಿದ್ದಳು. ಕೈಕೇಯಿ ಮಂಥರೆಯ ಮಾತಿನಿಂದ ಪ್ರಭಾವಿತಳಾಗಿ ರಾಜನನ್ನು ಮಣಿಸಲೇ ಬೇಕೆಂದು ಕೋಪಾಗಾರವನ್ನು ಸೇರಿದರೆ ಇಳಿವಯಸ್ಸಿನ ರಾಜ “ರಾಮಾಭಿಷೇಕದ ಸಂತೋಷದ ವಾರ್ತೆಯನ್ನು ಕೈಕೇಯಿಗೆ ತಿಳಿಸಿ ರತಿಸುಖವನ್ನು ಪಡೆಯಬೇಕೆಂದು ಬಯಸಿ ಅತ್ಯಾಸೆಯಿಂದ ಕೈಕೇಯಿಯ ಅಂತಃಪುರಕ್ಕೆ ಧಾವಿಸಿ ಬರುತ್ತಾನೆ”.

ಕೈಕೇಯಿ ಅಂತಃಪುರದಲ್ಲಿ ಇಲ್ಲವಾಗಿರುವುದನ್ನು ಕಂಡವನಿಗೆ ವ್ಯಾಕುಲವಾಯಿತು. ಪ್ರತಿಹಾರಿ ಹೇಳಿದ “ದೇವ ದೇವಿ ಬೃಶಂ ಕ್ರುದ್ಧಾ ಕ್ರೋಧಾಗಾರಮಭಿದ್ರುತಾ-ಪರಮ ಕ್ರುದ್ಧೆಯಾಗಿ ದೇವಿ ಕೋಪಾಗಾರವನ್ನು ಸೇರಿದ್ದಾಳೆ” ಎನ್ನುವ ಮಾತನ್ನು ಕೇಳಿ ಕಂಗಾಲಾದ. ಕೋಪಾಗಾರಕ್ಕೆ ಧಾವಿಸಿ ನೋಡಿದರೆ ತನ್ನ ಪ್ರೇಯಸಿ ಅಸ್ತವ್ಯಸ್ತವಾಗಿ ನೆಲದ ಮೇಲೆ ಮಲಗಿದ್ದಾಳೆ. ಪ್ರಿಯತಮೆಯನ್ನು ಆಕಾಶದಿಂದ ಚ್ಯುತಳಾದ ಅಪ್ಸರೆಯಂತೆ ಕಂಡವನಿಗೆ ಎದೆಯೊಡೆದು ಹೋಯಿತು. “ನಿಷ್ಕಳಂಕನಾದ ದಶರಥ ಪಾಪಸಂಕಲ್ಪವನ್ನು ಹೊತ್ತ ಕೈಕೇಯಿಯನ್ನು ಕಂಡ” ಎನ್ನುವ ಮಾತು ಇಲ್ಲಿ ಬರುತ್ತದೆ. ಸಂಕಲ್ಪವೆನ್ನುವುದು ಹೊಸ ಕಾರ್ಯಕ್ಕೆ ಹೇತು. ಮುಂದಿನ ಘಟನೆಗೆ ಇಲ್ಲಿ ನಾಂದಿಯಾಗುತ್ತಿದೆ. ಧರ್ಮಮಾರ್ಗದಲ್ಲಿ ಸದಾ ನಡೆಯುತ್ತಿದ್ದ ಅರಸ ಕಾಮಮೋಹಿತನಾಗಿ ಕೈಕೇಯಿಯನ್ನು ಸಮಾಧಾನ ಮಾಡಲು ಹೇಳುವ ಮಾತುಗಳು ಸೂರ್ಯವಂಶಕ್ಕೆ ಹೇಳಿಸಿದ್ದಲ್ಲ.

ಅವಧ್ಯೋ ವಧ್ಯತಾಂ ಕೋ ವಾ ವಧ್ಯಃ ಕೋವಾ ವಿಮುಚ್ಯತಾಮ್.
ದರಿದ್ರಃ ಕೋ ಭವದಾಢ್ಯೋ ದ್ರವ್ಯವಾನ್ಕೋSಪ್ಯಕಿಂಚನಃ৷৷ಅ. ಕಾಂ.10.33৷৷

ಕಾಮವೆನ್ನುವುದು ಎಂತವರನ್ನೂ ತಲೆಕೆಡಿಸಿಬಿಡುತ್ತದೆ. ಕಾಮದ ಹುಚ್ಚಿನಲ್ಲಿರುವ ದಶರಥ ತನ್ನ ಸುಖಕ್ಕಾಗಿ ಏನನ್ನು ಮಾಡಲೂ ಹೇಸದ ಸ್ಥಿತಿಗೆ ತಲುಪಿದ್ದಾನೆ. ವಧಾರ್ಹನಲ್ಲದವನನ್ನು ವಧಿಸಲೇ, ಮರಣದಂಡನೆಗೆ ಗುರಿಯಾದವನನ್ನು ಬಿಡಿಸಲೇ, ದರಿದ್ರನನ್ನು ಶ್ರೀಮಂತನನ್ನಾಗಿ ಮಾಡಲೇ, ಶ್ರೀಮಂತನನ್ನು ದರಿದ್ರನನ್ನಾಗಿ ಮಾಡಲೇ; ನಿನ್ನ ಪ್ರೀತಿಗಾಗಿ ಏನನ್ನೂ ಮಾಡಲೂ ತಾನು ಸಿದ್ಧ ಎನ್ನುವ ಮಾತುಗಳು ದೊರೆತನಕ್ಕೆ ತಕ್ಕುದಲ್ಲ. ಆತ ಅವಳನ್ನು ಸಮಾಧಾನಿಸುತ್ತಾ “ಪ್ರಿಯತಮೆಯಲ್ಲಿ ನನಗೆ ನಿನಗಿಂತ- ಮನುಜರಲ್ಲಿ ರಾಮನಿಗಿಂತ ಹೆಚ್ಚಿನವರು ಯಾರೂ ಇಲ್ಲ” ಎನ್ನುವಲ್ಲಿ ರಾಮನ ಹೆಸರನ್ನು ಕೇಳಿದ ಆಕೆಗೆ ಮತ್ತುಷ್ಟು ಉರಿ ಹತ್ತಿತು. ದೊರೆ ಮನ್ಮಥನ ಬಾಣಕ್ಕೆ ಈಡಾಗಿರುವುದನ್ನು ಪಕ್ಕಾ ಮಾಡಿಕೊಂಡಳು. ಸ್ವಲ್ಪ ಹೊತ್ತು ಕಾಡಿಸಬೇಕು ಎಂದು ಸುಮ್ಮನಾದವಳು. ದಶರಥನಿಗೆ ಸಹಿಸಲಾಗಿಲ್ಲ. ಆಕೆಯ ರೂಪಲಾವಣ್ಯಕ್ಕೆ ಸೋತಿದ್ದ. ಅವಳ ನೋವನ್ನು ಬಗೆಹರಿಸುವುದು ತನ್ನ ಆದ್ಯ ಕರ್ತವ್ಯವೆಂದು ಬಗೆದ.. ಅದು ತನಕ ತಾನು ಗಳಿಸಿದ ಸುಕೃತದ ಮೇಲೆ ಆಣೆಯಿಟ್ಟು ಅವಳ ಬಯಕೆಯನ್ನು ಈಡೇರಿಸುವೆ ಎಂದು ಅಂಗಲಾಚಿದ.

dhavala dharini king dasharatha

ಆದರೂ ಸುಮ್ಮನಿದ್ದ ಕೈಕೇಯಿಗೆ ಕೊನೆಯದಾಗಿ “ನನ್ನ ರಾಮನಾಣೆಗೂ ನೀನು ಹೇಳುವ ಕಾರ್ಯವನ್ನು ಮಾಡುತ್ತೇನೆ” ಎಂದು ಪ್ರತಿಜ್ಞೆ ಮಾಡಿಬಿಟ್ಟ. ಗಾಳದಲ್ಲಿ ಚಿಕ್ಕಮೀನನ್ನು ಚುಚ್ಚಿ ದೊಡ್ಡಮೀನನ್ನು ಸೆಳೆಯುವಂತೆ ಚಕ್ರವರ್ತಿಯನ್ನು ಮಟ್ಟುಹಾಕಿ ತನ್ನ ಕಾರ್ಯಸಾಧಿಸಲು ಇದೇ ಸಮಯವೆಂದು ತಿಳಿದ ಕೈಕೇಯಿ ಬಯಕೆಯನ್ನು ಹೇಳುವ ಮುನ್ನ ರಾಜನಲ್ಲಿನ ಧರ್ಮಪ್ರಜ್ಞೆಯನ್ನು ಜಾಗ್ರತಗೊಳಿಸಲು “ನೀನು ಮಾಡಿದ ಈ ಪ್ರತಿಜ್ಞೆಯನ್ನು ಮೂವತ್ತುಮೂರು ಕೋಟಿ ದೇವತೆಗಳು ಕೇಳಲಿ, ಚಂದ್ರಸೂರ್ಯರೂ ಕೇಳಲಿ, ಆಕಾಶವೂ ಇದಕ್ಕೆ ಸಾಕ್ಷಿಯಾಗಲಿ, ನವಗ್ರಹಗಳು, ಹಗಲು-ರಾತ್ರಿಗಳು, ಎಂಟುದಿಕ್ಕುಗಳು,ಗಂಧರ್ವರಾಕ್ಷಸರನ್ನೊಳಗೊಂಡಿರುವ ಸ್ವರ್ಗ-ಮರ್ತ್ಯ-ಪಾತಾಳ, ನಿಶಾಚರರೂ, ಪಿಶಾಚಗಳೂ, ಭೂತಗಣಗಳೂ, ಗೃಹದೇವತೆಗಳೂ ಸಹಿತ ಎಲ್ಲರೂ ನೀನು ಹೇಳಿದ ಈ ಪ್ರತಿಜ್ಞಾವಾಕ್ಯಕ್ಕೆ ಸಾಕ್ಷಿಗಳಾಗಲಿ” ಎಂದವಳೇ ಆತನನ್ನು ಸಂಪೂರ್ಣವಾಗಿ ಖೆಡ್ಡಾಕ್ಕೆ ತೋಡುವ ಈ ಮಾತನ್ನು ಆಡುತ್ತಾಳೆ.

ಸತ್ಯಸಂಧೋ ಮಹಾತೇಜಾಃ ಧರ್ಮಜ್ಞಃ ಸುಸಮಾಹಿತಾಃ.
ವರಂ ಮಮ ದದಾತ್ಯೇಷಃ ತನ್ಮೇ ಶ್ರೃಣ್ವನ್ತು ದೈವತಾಃ৷৷ಅಯೋ.11.16৷৷

ಎಲೈ ದೇವತೆಗಳಿರಾ! ನೀವೆಲ್ಲರೂ ಕೇಳಿರಿ. ಸತ್ಯಸಂಧನಾದ ಮಹಾತೇಜಸ್ವಿಯಾದ, ಧರ್ಮಜ್ಞನಾದ ಧಶರಥನು ಸಮಾಧಾನಚಿತ್ತನಾಗಿ ತಾನು ಪ್ರತಿಜ್ಞೆ ಮಾಡಿರುವಂತೆ ನನಗೆ ವರವನ್ನು ದಯಪಾಲಿಸಲಿದ್ದಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಕವಿಗೆ ಕಾಡಿದ ಮೂರು ಚಿಂತೆಗಳು

ವ್ಯಾಧನ ಧ್ವನಿಯಿಂದ ಆಕರ್ಷಿತಳಾಗಿ ಬಲೆಗೆ ಬೀಳುವ ಜಿಂಕೆಯಂತೆ ರಾಜನು ತನ್ನ ವಿನಾಶಕ್ಕಾಗಿ ಧರ್ಮಪಾಶವನ್ನು ಕುತ್ತಿಗೆಗೆ ಬಿಗಿದುಕೊಂಡಿದ್ದು ಹೀಗೆ. ಅವನಿಗೆ ಮುಂದೆ ಮಾತಾಡಲು ಅವಕಾಶಕೊಡದಂತೆ ಆತನನ್ನು ಬಿಗಿದಪ್ಪಿ ತನಗೆ ಹಿಂದೆ ಕೊಟ್ಟಿದ್ದ ವರಗಳನ್ನು ಅಪೇಕ್ಷಿಸಿ ಅದಕ್ಕೆ ರಾಜ ಬೇರೆ ಏನನ್ನಾದರೂ ಹೇಳಬಾರದೆಂದು, “ರಾಮನಿಗೆ ಪಟ್ಟಾಭಿಷೇಕಕ್ಕೆ ಯಾವೆಲ್ಲಾ ಸಿದ್ಧತೆಗಳಾಗಿವೆಯೋ ಅದೇ ಸಾಂಬಾರಪದಾರ್ಥಗಳಿಂದ ಭರತನಿಗೆ ಪಟ್ಟಾಭಿಷೇಕವಾಗಬೇಕು. ಎರಡನೇಯ ವರವನ್ನೂ ಹೇಳಿಯೇಬಿಡುವೆ.

ನವ ಪಞ್ಚ ಚ ವರ್ಷಾಣಿ ದಣ್ಡಕಾರಣ್ಯಮಾಶ್ರಿತಃ
ಚೀರಾಜಿನಜಟಾಧಾರೀ ರಾಮೋ ಭವತು ತಾಪಸಃ.

ಹದಿನಾಲ್ಕು ವರುಷಗಳ ಕಾಲ ರಾಮನು ದಂಡಕಾರಣ್ಯಕ್ಕೆ ಹೋಗಿ ಅಲ್ಲಿ ಅವನು ಜಟಾಧಾರಿಯಾಗಿ ನಾರಮುಡಿಯನ್ನುಟ್ಟು ಕೃಷ್ಣಾಜಿನವನ್ನು ಧರಿಸಿ ತಾಪಸನಂತೆ ಇರಬೇಕು.

ಕೈಕೇಯಿ ಇಷ್ಟಕ್ಕೇ ನಿಲ್ಲಿಸುವುದಿಲ್ಲ. “ಆದ್ಯ ಚೈವ ಹಿ ಪಶ್ಯೇಯಂ ಪ್ರಯಾನ್ತಂ ರಾಘವಂ ವನಮ್- ರಾಘವನು ಚೀರಾಜಿನ-ಜಟಾಧಾರಿಯಾಗಿ ಕಾಡಿಗೆ ಹೋಗುವುದನ್ನು ಈಗಲೇ ನಾನು ನೋಡಬೇಕು, ಸತ್ಯವಚನನಾದ ನೀನು ಈಗಲೇ ನಡೆಸಿಕೊಡು” ತನ್ನ ಇಬ್ಬರು ಪ್ರಿಯರಲ್ಲಿ ಒಬ್ಬನಾದ ರಾಮನಿಗೆ ಆಘಾತಕಾರಿಯಾದ ವಿಷಯಗಳನ್ನು ಹೇಳುವ ಮಾತುಗಳು ದಶರಥನ ಕಾಮದ ಪಿತ್ಥವನ್ನು ಜರ್ರನೆ ಇಳಿಸಿಯೇಬಿಟ್ಟಿತು; ಜೊತೆಗೆ ಆತನ ಮನೋಧೈರ್ಯವನ್ನೂ ಸಹ! ಲೋಕದ ಎಲ್ಲಾ ರಾಜರನ್ನು, ಪ್ರಜೆಗಳನ್ನು ಮತ್ತು ವಶಿಷ್ಠರಾದಿಯಾಗಿರುವ ಎಲ್ಲಾ ಋಷಿಗಳನ್ನು ತನ್ನ ಇಷ್ಟಕ್ಕೆ ಒಗ್ಗಿಕೊಳ್ಳುವಂತೆ ತಂತ್ರವನ್ನು ಹೂಡಿದ ಅರಸನ ಇಚ್ಛೆ ಇಲ್ಲಿ ತರಗೆಲೆಗಳಂತೆ ಗಾಳಿಗೆ ಹಾರಿಹೋಯಿತು. ಯಾವ ಉದ್ಧೇಶಕ್ಕಾಗಿ ಕೈಕೇಯಿಯ ಅರಮನೆಗೆ ಬಂದಿದ್ದನೋ ಅವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಕದಡಿಹೋಯಿತು. ಅವನ ಜೀವನದಲ್ಲಿ ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿವದೊಂದೇ ಗುರಿ ಇದ್ದಿದ್ದು. ತನ್ನ ಪ್ರೀತಿಯ ರಾಣಿಯಿಂದಲೇ ಹೀಗೆ ವಿಘ್ನಬರಬಹುದೆಂದು ರಾಜ ಎಣಿಸಿರಲಿಲ್ಲ. ಅಂಥ ಸ್ವಲ್ಪ ಅನುಮಾನ ಬಂದಿದ್ದರೂ ಆತ ಕೈಕೇಯಿಯ ಅರಮನೆಗೆ ಬರುತ್ತಲೇ ಇರಲಿಲ್ಲ. ಒಮ್ಮೆಲೇ ಎಚ್ಚರತಪ್ಪಿ ಬಿದ್ದ. ತನ್ನ ರಾಜತ್ವಕ್ಕೆ ಧಿಕ್ಕಾರ ಹಾಕಿಕೊಂಡ. ಕೊನೆಗೆ ಅನಿವಾರ್ಯವಾಗಿ ಕೈಕೇಯಿಗೆ ನಮಸ್ಕರಿಸಿಕೊಂಡು “ನಿನ್ನ ಕಾಲನ್ನು ಬೇಕಾದರೂ ಹಿಡಿಯುತ್ತೇನೆ, ರಾಮನನ್ನು ರಕ್ಷಿಸು. ವರದಾನವೆನ್ನುವ ಒಂದು ಪ್ರತಿಜ್ಞೆಯಲ್ಲಿ ನನ್ನನ್ನು ಸಿಕ್ಕಿಹಾಕಿಸಿ ನಿರಪರಾಧಿಯನ್ನು ಕಾಡಿಗಟ್ಟಿದ ದೋಷ ನನಗೆ ಬಾರದಿರಲಿ” ಎಂದು ನೆಲದಲ್ಲಿ ಹೊರಳಾಡತೊಡಗಿದ.

ಮೂಂದಿನ ಭಾಗದಲ್ಲಿ ತನ್ನ ಕರ್ಮಫಲವನ್ನು ತಾನು ಉಂಡ ಮಹಾರಾಜ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ

Continue Reading

ದಕ್ಷಿಣ ಕನ್ನಡ

Yakshagana Artist: ವೇಷ ಕಳಚುತ್ತಿರುವಾಗಲೇ ಹೃದಯ ಸ್ತಬ್ಧ ; ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

Gangadhar Puttur : ವೇಷ ಕಳಚುತ್ತಿರುವಾಗಲೇ ಯಕ್ಷಗಾನ ಕಲಾವಿದ (Yakshagana Artist) ಗಂಗಾಧರ ಪುತ್ತೂರು ಇಹಲೋಕ ತ್ಯಜಿಸಿದ್ದಾರೆ. ಮುಖದ ಬಣ್ಣವನ್ನು ಅಳಿಸುತ್ತಿರುವಾಗ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

VISTARANEWS.COM


on

By

Yakshagana Artist No more
Koo

ಮಂಗಳೂರು: ವೇಷ ಕಳಚುತ್ತಿರುವಾಗಲೇ ಹೃದಯಾಘಾತದಿಂದ (Heart attack) ಧರ್ಮಸ್ಥಳ ಯಕ್ಷಗಾನ ಮೇಳದ ಸವ್ಯಸಾಚಿ ಕಲಾವಿದ (Yakshagana Artist) ಗಂಗಾಧರ ಪುತ್ತೂರು(60) ಅವರು ಇಹಲೋಕ ತ್ಯಜಿಸಿದ್ದಾರೆ.

ನಿನ್ನೆ ಬುಧವಾರ (ಮೇ 1) ರಾತ್ರಿ ಕೋಟ ಗಾಂಧಿಮೈದಾನದ ಬಳಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಅವರು ಕುಕ್ಕಿಂತ್ತಾಯ ದೈವದ ವೇಷವನ್ನು ನಿರ್ವಹಿಸಿದ್ದರು. ಬಳಿಕ ಚೌಕಿಗೆ ಆಗಮಿಸಿ ಕಿರೀಟ, ಯಕ್ಷಗಾನದ ಆಭರಣ ತೆಗೆದಿಟ್ಟು, ಮುಖದ ಬಣ್ಣವನ್ನು ಅಳಿಸುತ್ತಿರುವಾಗ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಪುತ್ತೂರಿನ ಸೇಡಿಯಾಪು ನಿವಾಸಿಯಾಗಿರುವ ಇವರು ಏಳನೇ ತರಗತಿಯವರೆಗೆ ವಿದ್ಯಾಭ್ಯಾಸ ಹೊಂದಿದ್ದರು. ತಮ್ಮ 18ನೇ ವಯಸ್ಸಿಗೆ ಯಕ್ಷಗಾನ ತಿರುಗಾಟ ಆರಂಭಿಸಿದ ಗಂಗಾಧರ ಪುತ್ತೂರು ಸುದೀರ್ಘ 40 ವರ್ಷಗಳಷ್ಟು ಕಾಲ ಯಕ್ಷಗಾನ ರಂಗದಲ್ಲಿ ವ್ಯವಸಾಯ ಮಾಡಿದ್ದರು. ಕರ್ಗಲ್ಲು ವಿಶ್ವೇಶ್ವರ ಭಟ್ ಹಾಗೂ ಕೆ.ಗೋವಿಂದ ಭಟ್ ಅವರಿಂದ ನಾಟ್ಯಾಭ್ಯಾಸ ಮಾಡಿದರು.

ಯಕ್ಷಗಾನ ರಂಗದ ಸವ್ಯಸಾಚಿ ಕಲಾವಿದರಾದ ಇವರು ಸ್ತ್ರೀವೇಷದಿಂದ ಹಿಡಿದು ಪುಂಡುವೇಷ, ರಾಜವೇಷ, ಹೆಣ್ಣುಬಣ್ಣ ಸಮರ್ಥವಾಗಿ ನಿರ್ವಹಿಸುತ್ತಿದ್ದರು. 30 ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಗಂಗಾಧರ ಪುತ್ತೂರು ಧರ್ಮಸ್ಥಳ ಮೇಳದಲ್ಲಿಯೇ ಕಲಾವಿದರಾಗಿ ತಿರುಗಾಟ ಮಾಡಿದ್ದರು.

ಇದನ್ನೂ ಓದಿ: Prajwal Revanna case: ತಲೆಮರೆಸಿಕೊಂಡ ಪ್ರಜ್ವಲ್‌ ರೇವಣ್ಣಗೆ ಲುಕೌಟ್‌ ನೋಟಿಸ್‌ ಜಾರಿ, ಬಂದ ಕೂಡಲೇ ಬಂಧನ!

ತೀವ್ರ ಹೃದಯಾಘಾತದಿಂದ ಹಿರಿಯ ಸಂಸದ ಶ್ರೀನಿವಾಸ್‌ ಪ್ರಸಾದ್‌ ವಿಧಿವಶ

ಬೆಂಗಳೂರು: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ (76) (Srinivas Prasad) ಅವರು ತೀವ್ರ ಹೃದಯಾಘಾತದಿಂದ (Heart Aattack) ವಿಧಿವಶರಾದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಲದಿನಗಳ ಹಿಂದೆ ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ 1:20ಕ್ಕೆ (Manipal Hospital ) ಅವರು ನಿಧನರಾಗಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀನಿವಾಸ್ ಪ್ರಸಾದ್ ಅವರು ಏಪ್ರಿಲ್ 22ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎನ್ನಲಾಗಿದೆ.

ಇನ್ನು ಈ ಬಗ್ಗೆ ಶ್ರೀನಿವಾಸ್ ಪ್ರಸಾದ್ ಅಳಿಯ ಹರ್ಷವರ್ಧನ್ ಮಾಹಿತಿ ನೀಡಿದ್ದು, ಶ್ರೀನಿವಾಸ್ ಪ್ರಸಾದ್ ಅವರು ರಾತ್ರಿ 1:20ರ ಸುಮಾರಿಗೆ ತೀವ್ರವಾದ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ರೀತಿಯಲ್ಲಿ ಪ್ರಯತ್ನ ಮಾಡಿದ್ದರು. ಅವರ ಈ ಅಗಲಿಕೆ ಇಡೀ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟ. ನನಗೆ ರಾಜಕೀಯಕ್ಕೆ ಜನ್ಮ ಕೊಟ್ಟಂತವರು. ರಾಜಕೀಯದಲ್ಲಿ ಏಕಾಂಗಿಯಾಗಿ ಹೋರಾಟ ಮಾಡೋದಕ್ಕೆ ಬಿಟ್ಟು ಹೋಗಿದ್ದಾರೆ. ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡಿದ್ದಾರೆ, ಹೋರಾಟದ ಜೀವಿ ಅವರು. ಐದು ವರ್ಷದ ಹಿಂದೆ ನಾನು ನಂಜನಗೂಡಿನಲ್ಲಿ ಗೆದ್ದಾಗ ಅವರು ಲೋಕಸಭೆಯಲ್ಲಿ ಸ್ಪರ್ಧೆ ಮಾಡ್ತಿನಿ ಅಂದರು. ನನ್ನನ್ನು ಅವರು ತಂದೆ ಸ್ಥಾನದಲ್ಲಿ ನಿಂತು ರಾಜಕೀಯವಾಗಿ ಬೆಳೆಸಿದ್ದಾರೆ ಯಾವುದೆ ವಿಚಾರ ಆಗಿದ್ದರೂ ಅವರ ಜೊತೆ ಚರ್ಚೆ ಮಾಡಿಯೇ ನಿರ್ಧಾರಕ್ಕೆ ಬರುತ್ತಿದೆ. ಈಗ ಯಾರ ಬಳಿ ಹೋಗಿ ಕೇಳಲಿ ಎಂದು ಅನಿಸಿ ಬಿಟ್ಟಿದೆ ಎಂದು ಭಾವುಕರಾಗಿ ಮಾತನಾಡಿದರು.

ಇದನ್ನೂ ಓದಿ:Raja Marga Column :‌ ಕಣ್ಣೇ ಕಾಣದ ಆಕೆ ಎರಡು ಬಾರಿ ಐಎಎಸ್‌ ಪಾಸ್‌ ಮಾಡಿದ್ದರು!

ಚಾಮರಾಜನಗರ ಕ್ಷೇತ್ರದಿಂದ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಶ್ರೀನಿವಾಸ್‌ ಪ್ರಸಾದ್‌ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇನ್ನು 2013ರಿಂದ 2016ರವರೆಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಸಚಿವರಾಗಿದ್ದರು . 24 ಡಿಸೆಂಬರ್ 2016 ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದ ಅವರು 2019ರಲ್ಲಿ ಚಾಮರಾಜನಗರ ಸಂಸದರಾಗಿ ಆಯ್ಕೆ.ಯಾಗಿದ್ದರು. ಅನಾರೋಗ್ಯ ಸಮಸ್ಯೆಯಿಂದಾಗಿ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ ಅವರು 2024 ಮಾರ್ಚ್ 17ರಂದು ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Kaladarpana-Art Reflects: ಬೆಂಗಳೂರಿನಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

Kaladarpana-Art Reflects: ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.

VISTARANEWS.COM


on

Kaladarpana-Art Reflects
Koo

ಬೆಂಗಳೂರು: ಕಲಾ ದರ್ಪಣ- ಆರ್ಟ್‌ ರಿಫ್ಲೆಕ್ಟ್ಸ್‌ (Kaladarpana-Art Reflects) ವತಿಯಿಂದ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ನಗರದ ನಾಗರಬಾವಿ 2ನೇ ಹಂತದ ಎನ್‌ಜಿಇಎಫ್‌ ಲೇಔಟ್‌ನ ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಭಾನುವಾರ (ಮೇ 5ರಂದು) ಬೆಳಗ್ಗೆ 8.30ಕ್ಕೆ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, 9ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.

ಅಂತರಾಷ್ಟ್ರೀಯ ಖ್ಯಾತಿಯ ತಬಲ ವಾದಕ ಪಂಡಿತ್ ಡಾ. ಸತೀಶ್ ಹಂಪಿಹೊಳಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಜಾವಾಣಿ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಮತ್ತು ಮಾರುತಿ ಮೆಡಿಕಲ್ಸ್ ಮಾಲೀಕರು ಮಹೇಂದ್ರ ಮುಣೋತ್ ಜೈನ್ ಅವರು ಭಾಗವಹಿಸಲಿದ್ದಾರೆ. ಈ ಮೂವರು ಗಣ್ಯರು, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕಲಾದರ್ಪಣ ಪ್ರಶಸ್ತಿ ಪುರಸ್ಕೃತರು

  • ಗೋ.ನಾ. ಸ್ವಾಮಿ, ಅಂತಾರಾಷ್ಟ್ರೀಯ ಖ್ಯಾತಿಯ ಜನಪದ ಗಾಯಕರು
  • ವಿದುಷಿ ಅನಸೂಯ ದ್ವಾರಕನಾಥ, ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು

ಇದನ್ನೂ ಓದಿ | Film festival: ಬೆಂಗಳೂರಿನಲ್ಲಿ ಮೇ 4, 5ರಂದು ಗುರುದತ್‌ ಚಲನ ಚಿತ್ರೋತ್ಸವ ಮತ್ತು ಸಂಗೀತ ರಸ ಸಂಜೆ

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಕರ್ನಾಟಕ ಚಿತ್ರಕಲಾ ಪರಿಷತ್‌ನ ಪ್ರಾಧ್ಯಾಪಕ ಪ್ರೊ. ವಿ.ಎಸ್. ನಾಯಕ ಬಳಕೂರು, ಎಸ್.ಎಸ್.ವಿ.ಎಸ್.ಪಿ.ಎಸ್. ಶಾಲೆ ಪ್ರಾಂಶುಪಾಲೆ ಲತಾ ಎಸ್. ಅವರು ಆಗಮಿಸಲಿದ್ದಾರೆ. ಕಲಾ ದರ್ಪಣ- ಆರ್ಟ್‌ ರಿಫ್ಲೆಕ್ಟ್ಸ್‌ ಸಂಸ್ಥೆಯ ಹೇಮಾ ವಿನಾಯಕ್‌ ಪಾಟೀಲ್‌ ಹಾಗೂ ವಿನಾಯಕ್‌ ಪಾಟೀಲ್‌ ಅವರು ಉಪಸ್ಥಿತರಿರಲಿದ್ದಾರೆ. ಖ್ಯಾತ ನಿರೂಪಕಿ ಭವಾನಿ ಲೋಕೇಶ್‌ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Continue Reading
Advertisement
Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ30 mins ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

IPL 2024
ಕ್ರೀಡೆ30 mins ago

IPL 2024 : ಪೃಥ್ವಿ ಶಾ ಗರ್ಲ್​​ ಫ್ರೆಂಡ್​​​ ನಿಧಿಯನ್ನು ತಬ್ಬಿ ಅಭಿನಂದಿಸಿದ ಶಾರುಖ್​ ಖಾನ್​​

CM Siddaramaiah
ಪ್ರಮುಖ ಸುದ್ದಿ39 mins ago

CM Siddaramaiah: ಚುನಾವಣೆಯಲ್ಲಿ ʼಕೈʼ ಬಲಪಡಿಸಿ; ನಾಡಿನ ಮಹಿಳೆಯರಿಗೆ ಸಿಎಂ ಬಹಿರಂಗ ಪತ್ರ

Arvind Kejriwal
ದೇಶ52 mins ago

Arvind Kejriwal: ಖಲಿಸ್ತಾನಿ ಉಗ್ರರಿಂದ ದೇಣಿಗೆ; ಕೇಜ್ರಿವಾಲ್‌ ವಿರುದ್ಧ ಎನ್‌ಐಎ ತನಿಖೆಗೆ ಶಿಫಾರಸು!

karnataka weather forecast
ಮಳೆ1 hour ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Female foeticide
ಪ್ರಮುಖ ಸುದ್ದಿ1 hour ago

Female Foeticide: ಮಂಡ್ಯದಲ್ಲಿ ನಿಲ್ಲದ ಹೆಣ್ಣು ಭ್ರೂಣ ಹತ್ಯೆ; ಗರ್ಭಪಾತ ಮಾಡುವಾಗಲೇ ದಾಳಿ, ಮೂವರ ಅರೆಸ್ಟ್‌!

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ1 hour ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Summer Holiday Fashion
ಫ್ಯಾಷನ್1 hour ago

Summer Holiday Fashion: ಸೀಸನ್‌ ಟ್ರೆಂಡ್‌ನ ಟಾಪ್‌ ಲಿಸ್ಟ್‌ನಲ್ಲಿ ಸಮ್ಮರ್‌ ಹಾಲಿಡೇ ಫ್ಯಾಷನ್‌

Woman
ಪ್ರಮುಖ ಸುದ್ದಿ1 hour ago

ಕೈಗಳನ್ನು ಕಟ್ಟಿಹಾಕಿ ಸಿಗರೇಟ್‌ನಿಂದ ಗಂಡನ ಗುಪ್ತಾಂಗ ಸುಟ್ಟ ಹೆಂಡತಿ! ಭೀಕರ ವಿಡಿಯೊ ಇಲ್ಲಿದೆ!

IPL 2024
ಪ್ರಮುಖ ಸುದ್ದಿ1 hour ago

IPL 2024 : ಧೋನಿ ಡಕ್​ಔಟ್ ಆಗುವಾಗ ಜೋರಾಗಿ ನಕ್ಕ ಪ್ರೀತಿ ಜಿಂಟಾ; ಇಲ್ಲಿದೆ ವಿಡಿಯೊ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ30 mins ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ1 hour ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ1 hour ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ15 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ24 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ1 day ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ1 day ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌