ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ - Vistara News

ಅಂಕಣ

ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ

ಧವಳ ಧಾರಿಣಿ ಅಂಕಣ: ಮಂಥರೆಯ ಪಾತ್ರ ರಾಮಾಯಣದಲ್ಲಿ ಚಿಕ್ಕ ಮತ್ತು ಮಹತ್ವದ ಪಾತ್ರ. ಇನ್ನೇನು ತನ್ನ ಮನಸ್ಸಿನಂತೆ ನಡೆಯುತ್ತದೆ ಎನ್ನುವ ಕನಸಿನ ವಿಹಾರದಲ್ಲಿರುವ ದಶರಥನ ಸೌಧವನ್ನು ನುಚ್ಚುನೂರು ಮಾಡಿದವಳು ಅವಳು. ಆಕಾರದಲ್ಲಿ ಈಕೆ ಕುಬ್ಜೆ, ಕುರೂಪಿ ಇರಬಹುದು; ಸಿಕ್ಕ ಸಣ್ಣ ಅವಕಾಶದಲ್ಲಿ ರಾಮಾಯಣದಲ್ಲಿ ಬರುವ ಎಲ್ಲ ಪಾತ್ರಗಳಿಗೂ ಮಹತ್ತರ ತಿರುವನ್ನು ಕೊಟ್ಟವಳು ಈಕೆ.

VISTARANEWS.COM


on

manthare ramayana dhavala dharini
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಮೋಹಪಾಶದ ಅಧಿಕಾರ ಯಾವತ್ತಿಗೂ ಸ್ಥಿರವಲ್ಲ

dhavala dharini by Narayana yaji

ಧವಳ ಧಾರಿಣಿ ಅಂಕಣ: ನ ಹಿ ರಾಜ್ಞಃ ಸುತಾಃ ಸರ್ವೇ ರಾಜ್ಯೇ ತಿಷ್ಠನ್ತಿ ಭಾಮಿನಿ
ಸ್ಥಾಪ್ಯಮಾನೇತು ಸರ್ವೇಷು ಸುಮಹಾನನಯೋ ಭವೇತ್ ৷৷ರಾ. ಅ.8.23৷৷

ಪ್ರಿಯ ಹೆಣ್ಣೇ, ರಾಜನ ಮಕ್ಕಳೆಲ್ಲರಿಗೂ ರಾಜ್ಯದಲ್ಲಿ ಬಾಧ್ಯತೆಯಿರುವುದಿಲ್ಲ. ಹಾಗೇ ಹುಟ್ಟಿದ ಮಕ್ಕಳೆಲ್ಲರಿಗೂ ಪಟ್ಟವನ್ನು ಗಟ್ಟಿದಲ್ಲಿ ಅದು ಸಂಪ್ರದಾಯಕ್ಕೂ ರಾಜನೀತಿಗೂ ವಿರುದ್ಧವಾಗುತ್ತದೆ. ಈರ್ಷ್ಯಾಸೂಯೆಗಳುಂಟಾಗಿ ದೊಡ್ಡ ಅನರ್ಥಕ್ಕೆ ಕಾರಣವಾಗುತ್ತದೆ.

ಮಂಥರೆಯ ಈ ಮಾತು ರಾಜತ್ವವೆನ್ನುವುದು ಪಿತ್ರಾರ್ಜಿತವಾದ ಸಂಪತ್ತಲ್ಲ. ಅದನ್ನು ಮಕ್ಕಳಿಗೆಲ್ಲ ಸಮನಾಗಿ ಹಂಚುವ ವ್ಯವಹಾರವೂ ಅಲ್ಲ, ಅದು ಅರ್ಹರಿಗೆ ಮಾತ್ರ ಸಲ್ಲಬೇಕಾಗುತ್ತದೆ ಎನ್ನುವ ವೇದವಾಣಿಯನ್ನು ದೃಢೀಕರಿಸುತ್ತದೆ. ಮಂಥರೆಯ ಪಾತ್ರ ರಾಮಾಯಣದಲ್ಲಿ ಚಿಕ್ಕ ಮತ್ತು ಮಹತ್ವದ ಪಾತ್ರ. ಇನ್ನೇನು ತನ್ನ ಮನಸ್ಸಿನಂತೆ ನಡೆಯುತ್ತದೆ ಎನ್ನುವ ಕನಸಿನ ವಿಹಾರದಲ್ಲಿರುವ ದಶರಥನ ಸೌಧವನ್ನು ನುಚ್ಚುನೂರು ಮಾಡಿದವಳು ಅವಳು. ಆಕಾರದಲ್ಲಿ ಈಕೆ ಕುಬ್ಜೆ, ಕುರೂಪಿ ಇರಬಹುದು; ಸಿಕ್ಕ ಸಣ್ಣ ಅವಕಾಶದಲ್ಲಿ ರಾಮಾಯಣದಲ್ಲಿ ಬರುವ ಎಲ್ಲ ಪಾತ್ರಗಳಿಗೂ ಮಹತ್ತರ ತಿರುವನ್ನು ಕೊಟ್ಟವಳು ಈಕೆ.

ವಾಲ್ಮೀಕಿಯ ಕಾವ್ಯದಲ್ಲಿ ಈಕೆಯ ಪೂರ್ವಾಪರಗಳ ಕುರಿತು ವಿವರಗಳೇನೂ ಸಿಗುವುದಿಲ್ಲ. ಈಕೆಯ ಪ್ರವೇಶದ ಹೊತ್ತಿಗೆ ಈಕೆಯ ಹೆಸರನ್ನು ವಾಲ್ಮೀಕಿ ಹೇಳುವುದಿಲ್ಲ. “ಜ್ಞಾತಿದಾಸಿ ಯತೋ ಜಾತಾ ಕೈಕೇಯ್ಯಾಸ್ತು ಸಹೋಷಿತಾ” (ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು ಕೈಕೇಯಿಯ ಜನನ ಕಾಲದಿಂದಲೇ ಅವಳೊಡನೆ ಇರುವ ಕುಟುಂಬದ ಆಳು) ಎಂದು ಅವಳ ಕುರಿತು ಹೇಳುತ್ತಾನೆ. ಯಾವ ಪಾತ್ರವನ್ನೂ ವಾಲ್ಮೀಕಿ ಕೀಳಾಗಿ ನೋಡುವುದಿಲ್ಲ. ಆದರೆ ಮಂಥರೆಯ ಪಾತ್ರವನ್ನು ಆತ ಅಷ್ಟು ಇಷ್ಟಪಟ್ಟಿಲ್ಲ, ಅದಕ್ಕೆ ಕಾವ್ಯದ ಕ್ರಮದಂತೆ ಪಾತ್ರದ ಪ್ರವೇಶದಲ್ಲಿ ಆತ ಜ್ಞಾತಿದಾಸಿ ಯತೋ ಜಾತಾ, ಎಂದು ಹೇಳಿರುವುದು. ಅಯೋಧ್ಯೆಯ ಜನಪದವನ್ನು ವಿವರಿಸುವಾಗ ಅಲ್ಲಿನ ಜನರ ಸದ್ಗುಣಗಳ ಕುರಿತು ವಿವರವಾಗಿ ಹೇಳಿದ್ದಾನೆ. ಅಲ್ಲಿನ ನಾರಿಯರನ್ನು ವರನಾರಿಯರು ಎಂದು ವರ್ಣಿಸಿದ್ದಾನೆ. ಅಂತಹ ಕೋಸಲಸೀಮೆಯಲ್ಲಿ ಮಂಥರೆಯಂತವಳು ಇರಲು ಸಾಧ್ಯವಿಲ್ಲವೆನ್ನುವುದನ್ನು ತಿಳಿಸುವುದು ಕವಿಯ ಉದ್ದೇಶ. ರಾಮನ ಪಟ್ಟಾಭಿಷೇಕವನ್ನು ಎಲ್ಲರೂ ಸಂಭ್ರಮಿಸುವಾಗ, ಲೋಕಪ್ರಿಯವಾದ ಪಟ್ಟಾಭಿಷೇಕವನ್ನು ಹಾಳು ಮಾಡುವವರು ಪುಣ್ಯಸ್ಥಳವಾದ ಅಯೋಧ್ಯೆಯಲ್ಲಿ ಹುಟ್ಟಿರಲು ಸಾಧ್ಯವೇ ಇಲ್ಲವೆನ್ನುವ ಅರ್ಥವನ್ನೂ ಮಾಡಬಹುದು.

ಎರಡನೆಯ ಶ್ಲೋಕದಲ್ಲಿ ಆಕೆಯ ಹೆಸರು ಮಂಥರೆ ಎಂದು ಹೇಳಿರುವುದು ಕಾವ್ಯದ ಮುಂದುವರಿಕೆಗೆ ಸಹಾಯವಾಗಲಿ ಎಂದು. ಈ ನಡೆ ಬಹುಶಃ ನಂತರ ರಾಮಾಯಣವನ್ನು ಬರೆದ ಕವಿಗಳಿಗೆ ಅಷ್ಟು ಇಷ್ಟವಾಗಿಲ್ಲ. ಪದ್ಮಪುರಾಣ ಈಕೆಯನ್ನು “ಮಂಥರಾನಾಮ ಕಾರ್ಯಾರ್ಥಮಪ್ಸರಾ ಪ್ರೇಷಿತಾ ಸುರೈಃ – ದೇವತೆಗಳು ರಾವಣವಧೆಯ ಕಾರ್ಯವನ್ನು ಸುಗಮಗೊಳಿಸುವ ಕಾರಣಕ್ಕೆ ಅಪ್ಸರೆಯೊಬ್ಬಳನ್ನು ಭೂಲೋಕಕ್ಕೆ ಕಳುಹಿಸಿದರು ಎಂದು ವಿವರಿಸಿದೆ. ಆನಂದ ರಾಮಾಯಣವೂ ಆಕೆಯನ್ನು ಶಾಪಗ್ರಸ್ತ ಅಪ್ಸರೆ ಎನ್ನುತ್ತದೆ. ಕೆಲವು ಕಥೆಗಳಲ್ಲಿ ಆಕೆ ಅಶ್ವಪತಿಗೆ ಅರಣ್ಯದಲ್ಲಿ ಸಿಕ್ಕ ಅನಾಥ ಮಗು ಎಂದು ತಿಳಿಸುತ್ತದೆ. ಆಕೆಯ ಶರೀರವನ್ನು ಅದಾಗಲೇ ಇರುವೆಗಳು ಮುತ್ತಿದ್ದವು, ಆ ಕಾರಣದಿಂದ ಆಕೆ ಕುಬ್ಜೆಯಾಗಿ ಉಳಿದಳು. ಕುವೆಂಪು “ರಾಮಾಯಣ ದರ್ಶನಂ”ದಲ್ಲಿ ಮಂಥರೆಯ ಕುರಿತು ಅಶ್ವಪತಿ ಮಹಾರಾಜ “ತಂದನೂರಿಗವಳಂ ದಾರಿಯಲಿ ನಡೆವ ಮಾರಿಯಂ ಮನೆಗೆ ತರುವಂತೆ” ಎಂದು ವರ್ಣಿಸುತ್ತಾರೆ.

ತಾಯಿಯಿಲ್ಲದ ಕೈಕೇಯಿಯನ್ನು ಆಕೆ ತನ್ನ ಮಗಳಂತೆ ನೋಡಿಕೊಳ್ಳುತ್ತಿದ್ದಳು. ಕೈಕೆಯೂ ಬಾಲ್ಯದಲ್ಲಿ ತಾಯಿಯಿಲ್ಲದೇ ಬೆಳೆದವಳು. ಆಕೆಗೆ ತಾಯಿಯ ಪ್ರೇಮವನ್ನು ಕೊಟ್ಟವಳು ಮಂಥರೆ. ಲೋಕವೆಲ್ಲವೂ ಆಕೆಯನ್ನು ಅನಿಷ್ಠೆ, ಗೂಬೆ, ಕುಬ್ಜೆ ಎಂದು ತಿರಸ್ಕರಿಸುತ್ತಿದ್ದರೆ ಆಕೆಯನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಂಡಳು ಕೈಕೆ. ಈ ಆಶ್ರಯವೆನ್ನುವುದು ಅವಳ ಬದುಕಿಗೆ “ಮಳೆಹೊಯ್ದ ತೆರನಾಯ್ತು ಮಂಥರೆಯ ಮರುಧರೆಗೆ, ಚೈತ್ರನಾಗಮವಾಯ್ತು ಮಂಥರೆಯ ಶಿಶಿರಕ್ಕೆ” (ರಾ.ದ. ಕುವೆಂಪು) ದಶರಥನೊಡನೆ ಕೈಕೇಯಿಯ ವಿವಾಹವಾದ ಮೇಲೆ ಅವಳ ಸಂಗಡವೇ ಅಯೋಧ್ಯೆಗೆ ಬಂದವಳು. ಕೈಕೇಯಿಯ ಅಂತರಂಗದ ಗುಟ್ಟುಗಳು ಈಕೆಗೆ ಗೊತ್ತಿತ್ತು. ಬಾಲ್ಯದಿಂದಲೂ ಮಂಥರೆ ಆಕೆಯ ಲಾಲನೆ ಪಾಲನೆ ಮಾಡಿರುವುದರಿಂದ ತಾಯಿಯಿಲ್ಲದವಳಿಗೆ ಈಕೆಯ ಮೇಲೆ ವಿಶೇಷ ಮಮತೆ ಮೂಡಿತ್ತು ಎನಿಸುತ್ತದೆ. ವೃದ್ಧಪತಿಯನ್ನು ಸದಾ ತನ್ನ ವಶದಲ್ಲಿ ಇರಿಸಿಕೊಳ್ಳಲು ಕೈಕೇಯಿಗೆ ಸಲಹೆ ನೀಡಿದವಳೇ ಮಂಥರೆ. ಕೌಸಲ್ಯೆಯನ್ನು ಕಂಡರೆ ಆಕೆಗೆ ಆಗುತ್ತಲೇ ಇರಲಿಲ್ಲ.

ವಾಲ್ಮೀಕಿ ರಾಮಾಯಣದ ನಂತರ ನನ್ನನ್ನು ಬಹುವಾಗಿ ಕಾಡಿದುದು ಕುವೆಂಪು ಅವರ “ರಾಮಾಯಣ ದರ್ಶನಂ”. ಇಲ್ಲಿ ಪಾತ್ರಗಳು ರಸದಲ್ಲಿ ಮುಳುಗೇಳುತ್ತವೆ. “ಮಮತೆಯ ಸುಳಿ ಮಂಥರೆ” ಎನ್ನುತ್ತಾ ಕೈಕೆಯ ಕುರಿತು, ವಿಶೇಷವಾಗಿ ಭರತನ ಮೇಲಿರುವ ಆಕೆಯ ಪ್ರೇಮವನ್ನು ಓದಿದ ಮೇಲೆ ಆಕೆಯನ್ನು ಬೈಯ್ಯುವ ಮನಸ್ಸು ಯಾರಿಗೂ ಬರಲಾರದು. ರಾಮಾಯಣದ ನಡೆಯೆಲ್ಲವೂ ವಿಧಿಯ ಹಸ್ತದ ಸೂತ್ರಗಳು, ಮಂಥರೆ ಈ ರಾಮಾಯಣವೆನ್ನುವ ಮೊಸರನ್ನು ಕಡೆದು ನವನೀತವನ್ನು ಕೊಡುವ ಕಡೆಗೋಲು ಎನ್ನುವ ಭಾವವನ್ನು ಕುವೆಂಪುವಿನಂತೆ ವರ್ಣಿಸಲು ಮತ್ಯಾರಿಗೂ ಸಾಧ್ಯವಾಗಲಿಕ್ಕಿಲ್ಲ. ಬೆಣ್ಣೆ ಕಡೆದುಕೊಟ್ಟ ಕಡೆಗೋಲನ್ನು ತೊಳೆದು ಒಣಗಿಸುವ ಹಾಗೇ ಮಂಥರೆಯ ಬದುಕಾಯಿತು. ಹೀಗೆ ನಿಟ್ಟಿಸಿರು ಬಿಡುವಾಗ ಕುವೆಂಪು ರಾಮಯಾಣದ ವಿಶೇಷವನ್ನು ಬಣ್ಣಿಸುವುದು ಹೀಗೆ.

ನೆಯ್ದಾಳುತಿದೆ ಜಗವನೊಂದತಿ ವಿರಾಣ್ ಮನಂ,
ಸೂಕ್ಷ್ಮಾತ್ಮಿಸೂಕ್ಷ್ಮತಂತ್ರದಿ ಬಿಗಿದು ಕಟ್ಟಿಯುಂ
ಜೀವಿಗಳಿಚ್ಛೆಯಾ ಸ್ವಾತಂತ್ರ್ಯಭಾವಮಂ
ನೀಡಿ. ಮಂಥರೆ ಸೀತೆ ರಾಮ ರಾವಣರೆಲ್ಲರುಂ
ಸೂತ್ರಗೊಂಬೆಗಳಲ್ತೆ ಆ ವಿಧಿಯ ಹಸ್ತದಲಿ?
ಮಥಿಸಿದುದು ದಶಸಿರನ ವಿಧಿ ಮಂಥರೆಯ ಮನದಿ

king dasharatha

ರಾಮಾಯಣದ ಅಂತಿಮ ಗುರಿಯಾಗಿರುವ ರಾವಣ ವಧೆಯೆನ್ನುವ ಹಾರುಗೋಲಿಗೆ ಚಿಮ್ಮುಹಲಗೆಯಾಗುವವಳು ಮಂಥರೆ ಎನ್ನುವದನ್ನು ಮಾರ್ಮಿಕವಾಗಿ ವರ್ಣಿಸಲಾಗಿದೆ. ದಶರಥನ ಕನಸಿನ ವಿಹಾರವನ್ನು ಭಂಗಗೊಳಿಸಿದವಳು ಇವಳು.

ಅಶ್ವಪತಿ ಮಹಾರಾಜ ಮತ್ತು ಜನಕ ಮಹಾರಾಜನಿಗೆ ಹೇಳಿ ಕಳುಹಿಸುವಷ್ಟು ಸಮಯವಿಲ್ಲದಿದ್ದರೂ ಬೇರೆ ಎಲ್ಲರಿಗೂ ಹೇಳಿಕೆ ಕಳುಹಿಸಿ ಅವರು ಬಂದು ಬಿಡಾರವನ್ನು ಹೂಡಿಯಾಗಿತ್ತು! ಸುಮಾರು ಒಂbತ್ತರಿಂದ ಹನ್ನೆರಡು ವರ್ಷಗಳ ಕಾಲ ಅಯೋಧ್ಯೆಯ ರಕ್ಷಣೆಯನ್ನು ಹೊತ್ತ ರಾಮ ಸಹಜವಾಗಿಯೇ ಜನಮಾನಸದಲ್ಲಿ ತನ್ನ ಪ್ರಭಾವವನ್ನು ಬೀರಿದ್ದ. ಅಯೋಧ್ಯೆಯಲ್ಲಿ ಮಾರನೆಯ ದಿನವೇ ಶ್ರೀರಾಮನಿಗೆ ಪಟ್ಟಾಭಿಷೇಕವೆನ್ನುವ ವಿಷಯವನ್ನು ಕೇಳಿದೊಡನೆ ಪ್ರಜೆಗಳ ಸಂಭ್ರಮ ಮೇರೆ ಮೀರಿತ್ತು. ಪರ್ವಕಾಲದಲ್ಲಿ ಉಕ್ಕಿಬರುವ ಸಮುದ್ರರಾಜನ ನಿನಾದದಂತೆ ಮೂಲೆ ಮೂಲೆಗಳಿಂದ ತಂಡ ತಂಡವಾಗಿ ಪ್ರಜಾಸಮೂಹ ಅಯೋಧ್ಯೆಯತ್ತ ಆಗಮಿಸುತ್ತಿದ್ದವರ ಸಂಭ್ರಮ ನಗರಿಯ ತುಂಬೆಲ್ಲ ಕೇಳಿಬರುತ್ತಿತ್ತು. ಯಕ್ಷಗಾನದ ಪಾರ್ತಿಸುಬ್ಬ ರಾಮಾಭಿಷೇಕದ ಕಾಲದ ಅಯೋಧ್ಯೆಯ ಸಂಭ್ರಮವನ್ನು ವಾರ್ದಿಕ ಷಟ್ಪದಿಯಲ್ಲಿ ವರ್ಣಿಸುವುದು ಹೀಗೆ:

ಕುಶನೆ ಕೇಳಿಂತಯೋಧ್ಯಾಪುರದ ಸಂಭ್ರಮವ
ವಶವಲ್ಲ ಹೇಳಿ ತುದಿಗಾಣಿಸುವಡರಿದೆಮೆಗೆ
ಪಸರಿಸಿತು ಮಂದಿ ಕುದುರೆಗಳ ಸಂದಣಿಯಿಂದ ನಾನಾರವಂಗಳಿಂದ I
ವಸುಧೆ ಹಿಗ್ಗಿದಳು ಕೆಂಧೂಳೆದ್ದು ನಭಗಳಂ
ಮುಸುಕಿ ದಿಗ್ಗಜ ಬೆದರೆ ಕೂರ್ಮನೆದೆಗೆಟ್ಟ ಫಣಿ
ಕುಸಿದ ಸುರರಾಕಾಶದಲ್ಲಿ ಜಯಜಯವೆಂದು ದೇವದುಂದುಭಿ ಮೊಳಗಿತು II

ಪಾರ್ತಿಸುಬ್ಬನ ರಾಮಾಯಣವಾಗಲಿ ಇನ್ನಿತರ ಕವಿಗಳ ಯಕ್ಷಗಾನ ಪ್ರಸಂಗಗಳು ಯಕ್ಷಗಾನ ವಲಯದಿಂದ ಆಚೆಗೆ ವಿದ್ವಾಂಸರ ದೃಷ್ಟಿಗೆ ಬೀಳದೇ ಇರುವದು ಕನ್ನಡ ಸಾಹಿತ್ಯಲೋಕಕ್ಕೆ ದೊಡ್ಡ ನಷ್ಟವಾಗಿದೆ.

ಹೀಗೆ ಅಯೋಧ್ಯೆಗೆ ಅಯೋಧ್ಯೆಯೇ ಸಂಭ್ರಮಿಸುತ್ತಿರುವಾಗ ಆಕಸ್ಮಿಕವಾಗಿ ಉಪ್ಪರಿಗೆಯನ್ನು ಹತ್ತಿದ ದಾಸಿಯೋರ್ವಳು ಇದೇನು ಸಂಭ್ರಮ ಎಂದು ಚಕಿತಳಾಗಿ ಇನ್ನೊಬ್ಬ ದಾಸಿಯ ಹತ್ತಿರ ಕೇಳಿದಳು ಎಂದು ವಾಲ್ಮೀಕಿ ಇವಳ ಪಾತ್ರದ ಪ್ರವೇಶ ಮಾಡಿಸುತ್ತಾನೆ. ರಾಮಪಟ್ಟಾಭಿಷೇಕದ ವಿಷಯ ಯಾವಾಗ ಕಿವಿಗೆ ಬಿತ್ತೋ ತಕ್ಷಣ ಮಂಥರೆಗೆ ಆಗಬಾರದ್ದು ಆಗಿಹೋಯಿತೆನ್ನುವ ಸಂಕಟವುಂಟಾಯಿತು. ಉರುಳುತ್ತಲೇ ಕೈಲಾಸಶಿಖರಾಕಾರದ ಪ್ರಾಸಾದದಿಂದ ಕೆಳಗಿಳಿದು ಬಂದು ಕೈಕೇಯಿಯ ಅರಮನೆಗೆ ಹೋದವಳೇ, ಅವಳನ್ನು ಕರ್ಕಶ ಧ್ವನಿಯಿಂದ ಕೂಗಿ “ಮೂರ್ಖಳೆ, ಎದ್ದೇಳು, ಇನ್ನೂ ಮಲಗಿರುವೆ ಯಾಕೆ” ಎನ್ನುತ್ತಾ ಆಕೆಯನ್ನು ಬೈಯುತ್ತಾ ಎಬ್ಬಿಸುತ್ತಾಳೆ. ಆಗ ತಾನೇ ರಾತ್ರಿ ಮುಸುಕಿದ ಸಮಯ, ಕೈಕೆ ನಿದ್ರೆ ಮಾಡುತ್ತಿದ್ದಳು. ಆಕೆಯನ್ನು ಎಬ್ಬಿಸುವಾಗ “ಭಯವು ನಿನ್ನನ್ನು ಸುತ್ತುವರಿದು ನಿಂತಿದೆ” ಎನ್ನುವ ಕಾವ್ಯಮಯ ಭಾಷೆ ಈ ಭಾಗದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ಒಂದರ್ಥದಲ್ಲಿ ತನ್ನ ಸೌಂದರ್ಯದ ಕುರಿತು ಹೆಮ್ಮೆ ಪಡುತ್ತಾ ತಾನು ರಾಜನ ಮುದ್ದಿನ ಮಡದಿ ಎನ್ನುವ ಆತ್ಮವಿಶ್ವಾಸದಲ್ಲಿ ಕೈಕೆ ಬೇರೇನನ್ನೂ ಯೋಚಿಸಿಲ್ಲ ಎನ್ನುವದು ಸ್ಪಷ್ಟ.

ಅಶ್ವಪತಿ ಮಹಾರಾಜ ವೃದ್ಧನಾದ ದಶರಥನಿಗೆ ಕೈಕೆಯನ್ನು ಕೊಡುವಾಗ ಅವಳ ಮನೋಭಾವನೆಯನ್ನು ಕೇಳಲೇ ಇಲ್ಲ. ಹಾಗಂತ ಇವಳು ಆ ಕುರಿತು ಬೇಸರವನ್ನೇನೂ ಮಾಡಲೂ ಇಲ್ಲ. ಚಕ್ರವರ್ತಿಯ ಕೈಹಿಡಿದ ಆಕೆಗೆ ಏನೂ ತಿಳಿಯದ ಮುಗ್ಧಳೇನೂ ಆಗಿರಲಿಲ್ಲವೆನ್ನುವದಕ್ಕೆ ಅವಳು ಧಶರಥನ ಸಂಗಡ ಶಂಬರನೊಡನೆ ನಡೆದ ಯುದ್ಧದಲ್ಲಿ ಭಾಗವಹಿಸಿದ ಘಟನೆಯನ್ನು ನೆನಪಿಸಬಹುದು. ಅವಳನ್ನು ಭರತ “ಆತ್ಮ ಕಾಮಾ ಸದಾ ಚಂಡಿ” ಎನ್ನುವ ಮೂಲಕವಾಗಿ ತನ್ನ ಸೌಂದರ್ಯದ ಕುರಿತು ಹೆಮ್ಮೆ ಮತ್ತು ಹಟಸ್ವಭಾವದವಳು ಎನ್ನುವುದಾಗಿ ವರ್ಣಿಸುತ್ತಾನೆ. ಅಶ್ವಪತಿ ಮತ್ತು ದಶರಥನ ನಡುವೆ ರಾಜ್ಯದ ಉತ್ತರಾಧಿಕಾರಿಯಾಗಿ ಕೈಕೇಯಿಯ ಸಂತಾನಕ್ಕೆ ನೀಡುವ ವಿಷಯ ದಶರಥ, ಸುಮಂತ್ರ ಮತ್ತು ಅಶ್ವಪತಿಗೆ ಬಿಟ್ಟರೆ ಮತ್ತೆ ಯಾರಿಗೂ ತಿಳಿದಿಲ್ಲ. ಅರಸನಿಗೆ ತಾನು ಬೇಕಾದವಳು ಎನ್ನುವ ಜಂಬ ಸಹಜವಾಗಿ ಕೈಕೇಯಿಯಲ್ಲಿದ್ದ ಕಾರಣ ಆಕೆ ಇನ್ನಿತರ ರಾಣಿಯರ ಮತ್ತು ಅರಮನೆಯಲ್ಲಿ ಅಧಿಕಾರವನ್ನು ಚಲಾಯಿಸುತ್ತಿದ್ದಳು. ಆಕೆಯ ಗಿಣಿಗಳು ಕೌಸಲ್ಯೆಯ ದಾಸಿಯರೇನಾದರು ಬಂದರೆ ಅವರನ್ನು ಕಚ್ಚು ಎಂದು ಹೇಳುತ್ತಿದ್ದವಂತೆ. ಬಹುಶಃ ಇದು ಕೈಕೇಯಿ ಹೇಳಿಕೊಟ್ಟ ಪಾಠವಾಗಿರಲಿಕ್ಕಿಲ್ಲ. ಮಂಥರೆ ಕಲಿಸಿದ್ದಾಗಿರಬಹುದು. ಅಶ್ವಮೇಧ, ಪುತ್ರಕಾಮೇಷ್ಠಿ ಯಾಗಗಳಲ್ಲಿ ಪ್ರಧಾನಳಾಗಿ ಕೌಸಲ್ಯೆ ಕುಳಿತಾಗಲೂ ಕೈಕೆ ಅದಕ್ಕೆ ಪ್ರತಿರೋಧವನ್ನು ಹೇಳಲಿಲ್ಲವೆನ್ನುವುದು ಸ್ವಭಾವತಃ ಆಕೆಯಲ್ಲಿ ಸಂಶಯ ಸ್ವಭಾವವಿರಲಿಲ್ಲ ಎನ್ನುವುದನ್ನು ತಿಳಿಸುತ್ತದೆ.

king dasharatha

ಭರತನಿಗಿಂತಲೂ ರಾಮನನ್ನು ಹೆಚ್ಚಿಗೆ ಹಚ್ಚಿಕೊಂಡ ಕೈಕೇಯಿಗೆ ಮಂಥರೆ “ಅನಿಷ್ಟಳೇ, ರಾಜ ನಿನ್ನನ್ನು ನಿಜವಾಗಿಯೂ ಇಷ್ಟಪಡುತ್ತಿಲ್ಲ” ಮುಂತಾದ ಸಾವಿರ ಬಗೆಯಲ್ಲಿ ಚಾಡಿ ಹೇಳಿದರೂ ಆಕೆ ರಾಮನ ಪಟ್ಟಾಭಿಷೇಕದ ವಿಷಯವನ್ನು ಕೇಳಿ ಸಂತೋಷವನ್ನೇ ವ್ಯಕ್ತಪಡಿಸುತ್ತಾಳೆ. ಭರತ ಇಲ್ಲದಿದ್ದಾಗ ರಾಮನಿಗೆ ಪಟ್ಟಕಟ್ಟುವುದು ಒಂದು ಸಂಚು, ಮುಂದೆ ರಾಮ ಭರತನನ್ನು ಕೊಲ್ಲಿಸಬಹುದು ಎಂದಾಗಲೂ ಆಕೆಯ ಮನಸ್ಸನ್ನು ತಿರುಗಿಸಲಾಗಿಲ್ಲ. ರಾಜ್ಯ ಭರತನ ಸಂತತಿಗೂ ಸಿಗದ ಕಾರಣವನ್ನು ಇಲ್ಲಿ ಪ್ರಾರಂಭದಲ್ಲಿಯೇ ನೀಡಲಾಗಿದೆ. ಅದನ್ನು ಎತ್ತಿ ಹಿಡಿಯುತ್ತಾ ದಶರಥ ಭರತನಿಲ್ಲದ ವೇಳೆಯಲ್ಲಿ ರಾಮನಿಗೆ ಪಟ್ಟಾಭಿಷೇಕಕ್ಕೆ ಏರ್ಪಾಡು ಮಾಡಿರುವುದು ಒಂದು ಸಂಚು ಎನ್ನುವುದನ್ನು ಸಂದರ್ಭಕ್ಕನುಗುಣವಾಗಿ ಕಥೆಯನ್ನು ಕಟ್ಟಿ ಹೇಳಿದವಳೇ ಕೊನೆಯ ಅಸ್ತ್ರವಾಗಿ “ನೀನು ಕೌಸಲ್ಯೆಯ ದಾಸಿಯಾಗುವೆ, ಭರತನ ಪ್ರಾಣ ಈ ಎಲ್ಲಾ ಕಾರಣಗಳಿಂದ ಅಪಾಯದಲ್ಲಿದೆ” ಎನ್ನುವ ಮಾತುಗಳು ಆಕೆಯನ್ನು ತಿರುಗಿಸುತ್ತವೆ.

ಪ್ರಪಂಚದ ಎಲ್ಲಾ ಹೆಣ್ಣುಜೀವಿಗಳು ತನಗೆ ಬರುವ ಎಂತಹ ಕಷ್ಟಗಳನ್ನಾದರೂ ಸಹಿಸಿಕೊಳ್ಳುತ್ತವೆ. ಆದರೆ ತನ್ನ ಮಕ್ಕಳಿಗೆ ಅಪಾಯ ಬಂತೆಂದರೆ ಆಕೆ ಸಮಗ್ರ ಜಗತ್ತನ್ನೇ ಎದುರಿಸಲೂ ಹಿಂದೆಮುಂದೆ ನೋಡುವದಿಲ್ಲ. ಮಂಥರೆ ದುರ್ಬೋಧಿಸಿದಂತೆಲ್ಲ ಕೈಕೆ ಬದಲಾಗುವದು ಕ್ರಿಯೆಗೆ ಒಂದು ಸಹಜ ಪ್ರತಿಕ್ರಿಯೆಯಷ್ಟೆ. ಈಗ ಮಂಥರೆಯೇ ಅವಳಿಗೆ ವರಗಳ ಕುರಿತು ಜ್ಞಾಪಿಸಿ ಕೋಪಾಗಾರಕ್ಕೆ ಹೋಗಲು ಸಲಹೆ ನೀಡುವದು. ಇಲ್ಲಿಂದ ಮುಂದೆ ಕೈಕೆ ರಣಚಂಡಿಯಾಗಿ ಬದಲಾಗುವದನ್ನು ನೋಡಬಹುದು. ಈ ರೀತಿಯ ಸ್ವಭಾವವನ್ನು ಗ್ರೀಕ್ ನಾಟಕಗಳಲ್ಲಿ ಬರುವ Character of Hamartia (ದುರಂತದೋಷ) ಅಂದರೆ ಸೌಮ್ಯವಾಗಿರುವ ಪಾತ್ರ ತಕ್ಷಣ ಋಣಾತ್ಮಕವಾಗಿ ಬದಲಾಗಿ ಸಂಪೂರ್ಣ ದುರಂತಕ್ಕೆ ಕಾರಣವಾಗುವುದು. ಮಂಥರೆಯ ದುರ್ಬೀಜ ಚನ್ನಾಗಿಯೇ ಕೆಲಸ ಮಾಡಿತು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕದ ಕನಸಿನ ವಿಹಾರ

ರಾಮಾಯಣದಲ್ಲಿ ಮಂಥರೆಯ ಪಾತ್ರವನ್ನು ಓರ್ವ ವಿಷಬೀಜವೆಂದು ಸುಲಭಕ್ಕೆ ಹೇಳಿಬಿಡಬಹುದು. ಅಥವಾ ಇವಕ್ಕೆಲ್ಲ ಕಾರಣ ಆಕೆ ಶಾಪಗ್ರಸ್ತಳಾಗಿರುವುದು ಎನ್ನುವ ಸಮಾಧಾನವನ್ನು ಪಟ್ಟುಕೊಳ್ಳಬಹುದು. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪ್ರಪಂಚವೇ ಆಕೆಯನ್ನು ಕುಬ್ಜೆ, ಅನಿಷ್ಟೆ ಎಂದು ಹೀಗೆಳೆವಾಗ ಮರುಭೂಮಿಯಲ್ಲಿ ಸಿಕ್ಕ ನೀರಿನಂತೆ ಕೈಕೇಯಿಯ ಲಾಲನೆ ಪಾಲನೆಯಲ್ಲಿ ಆಕೆ ತನ್ನ ನೋವನ್ನು ಮರೆತವಳು. ಅಶ್ವಪತಿ ಕೈಕೇಯಿಯ ತಾಯಿಯನ್ನು ಕೈಕೆ ಕೈಗೂಸಾಗಿರುವಾಗಲೇ ಕಾಡಿಗೆ ಅಟ್ಟಿದ್ದ. ಅದಕ್ಕೆ ಕಾರಣ ಅರಸನಿಗೆ ಪ್ರಾಣಿ ಪಕ್ಷಿಗಳ ಭಾಷೆ ಅರ್ಥವಾಗುತ್ತಿತ್ತು. ಅದನ್ನು ತನಗೆ ಹೇಳಲೇ ಬೇಕೆನ್ನುವ ಹಟಹಿಡಿದ ಕಾರಣಕ್ಕೆ ಆಕೆಯನ್ನು ಹಸಿ ಬಾಣಂತಿಯಾಗಿರುವಾಗಲೇ ಕಾಡಿನಲ್ಲಿ ಬಿಟ್ಟಿದ್ದ. ತಾಯಿಯಿಲ್ಲದ ತಬ್ಬಲಿಗೆ ತಾಯಿಯಾದವಳು ಮಂಥರೆ. ಅವಳ ಪಾಲಿಗೆ ಕೈಕೆಗೆ ಏನಾದರೂ ಆಯಿತೆಂದರೆ ಸಹಿಸಲಾರದ ಸಂಗತಿ. ತನ್ನ ಮಕ್ಕಳಿಗಿಂತಲೂ ಮೊಮ್ಮಕ್ಕಳ ಮೇಲೆ ಅಜ್ಜಿಯಂದಿರಿಗೆ ಮಮತೆ ಹೆಚ್ಚಿರುತ್ತದೆ. ಈ ಕಾರಣದಿಂದ ಭರತನ ಏಳಿಗೆಯನ್ನು ಬಯಸಿದರೆ ಅದು ಸಹಜವೂ ಹೌದು. ರಾಮನ ಮೇಲಿನ ಹುಚ್ಚು ಮಮತೆಯ ಕಾರಣಕ್ಕೆ ಆತನಿಗೆ ಶತಾಯು ಗತಾಯು ಪಟ್ಟಗಟ್ಟಬೇಕೆನ್ನುವುದು ದಶರಥನ ಇಚ್ಚೆಯಾದರೆ, ಕೈಕೆಯಿಯ ಸಂತಾನವೇ ಪಟ್ಟವೇರಬೇಕೆನ್ನುವ ಮೋಹ ಮಂಥರೆಯಲ್ಲಿದೆ. ಹೀಗೆ ಲೋಕದ ಒಳಿತಿಗಲ್ಲ, ತಮಗೆ ಬೇಕಾದವರು ಪಟ್ಟವೇರಲಿ ಎನ್ನುವ ಸ್ವಾರ್ಥ ಇಲ್ಲಿ ಕೆಲಸ ಮಾಡಿದೆ.

ರಾಜತ್ವವೆನ್ನುವುದು ವಿಷ್ಣುವಿನ ಪ್ರತಿನಿಧಿಯಾಗಿ ಇರುವ ಸ್ಥಾನ. ರಾಮನಂತಹ ಪರಿಪೂರ್ಣ ವ್ಯಕ್ತಿ ಇಂಥಹ ಮನಸ್ಥಿತಿಯಲ್ಲಿ ಪಟ್ಟವನ್ನೇರಿದರೆ ಅದು ಒಂದು ದೋಷವೇ. ಕಾವ್ಯದ ಪ್ರಾರಂಭದಲ್ಲಿ ನಾರದರ ಹತ್ತಿರ ವಾಲ್ಮೀಕಿ ಕೇಳಿಕೊಂಡಂತೆ ಹದಿನಾರು ಗುಣ ಸಂಪನ್ನನಾದ ರಾಮ ದಶರಥನ ಇಚ್ಛೆಯಂತೆ ಪಟ್ಟಕ್ಕೆ ಏರಿದ್ದರೆ ಅದೊಂದು ದೋಷವಾಗಿಬಿಡುತ್ತಿತ್ತು. ಅಧಿಕಾರವೆನ್ನುವುದು ಭೋಗವಲ್ಲ, ಹೊಣೆಗಾರಿಕೆಯಾಗಿ ನೋಡಬೇಕು. ಮಾನುಶಃ ಲೀಲೆಯಲ್ಲಿ ಗುಣವಂತನಾದ ವ್ಯಕ್ತಿಯ ಕುರಿತು ರಾಮಾಯಣವನ್ನು ರಚಿಸಲಾಗಿದೆ. ಗುಲಗಂಜಿಯಷ್ಟು ದೋಷವಿದ್ದರೂ ಕವಿ ವಾಲ್ಮೀಕಿ ತನ್ನ ಮನಸ್ಸಿನಲ್ಲಿ ಪಡಿಮೂಡಿದಾಕೃತಿಗೆ ತಾನೇ ಮುಗ್ಧನಾಗಲಾರ.

ವೇದೋಪನಿಷದಗಳ ಭೂತಗನ್ನಡಿಯೊಳಗೆ
ಪಡಿಮೂಡಿದಾಕೃತಿಗೆ ತಾನೆ ಮುಗ್ಧ
ಮತ್ಸ್ಯ ಕೂರ್ಮ ವರಾಹ ಮೆಟ್ಟಿಲುಗಳೇರುತ್ತ
ಹುತ್ತಗಟ್ಟಿದ್ದ ಕೈ ಕಡೆದ ನೋಟ;

ಅಡಿಗರು ಕಡೆದ ಪಾತ್ರದ ನೆನಪನ್ನು ಇಲ್ಲಿ ಮಾಡಿಕೊಳ್ಳಬೇಕು.

ಅಂತರಂಗದ ಅರಸಿ ಕೋಪಾಗಾರವನ್ನು ಸೇರಿದರೆ ದಶರಥ ಮಹಾರಾಜ ತನ್ನ ಕಾರ್ಯ ಈಡೇರಿತೆಂದು ಸಂತೋಷದ ಅತಿರೇಕಕ್ಕೆ ಹೋಗಿದ್ದ. ಮದವೇರಿದ ಆತ ಅದನ್ನು ಇಳಿಸಿಕೊಳ್ಳುವ ಬಯಕೆಯ ಸಲುವಾಗಿ ಹೊರಟಿದ್ದ.

ವಿವರ ಮುಂದಿನ ಸಂಚಿಕೆಯಲ್ಲಿ…..

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕ ಸಂಕಲ್ಪದ ಹಿಂದಿನ ಗೂಢಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಪ್ರಮುಖ ಸುದ್ದಿ

ವಿಭಿನ್ನ ಕಾರ್ಯಯೋಜನೆಯೊಂದಿಗೆ ಸಮಾಜದ ಪ್ರತಿನಿಧಿ ರೂಪದಲ್ಲಿ ಸಿದ್ಧಗೊಳ್ಳುತ್ತಿದೆ ಪಿಎನ್‌ಎಸ್‌ ವಿಸ್ತಾರ ನ್ಯೂಸ್-ಹೆಚ್.ಜಿ ಪವಿತ್ರ ಗೌಡ

VISTARANEWS.COM


on


ಜೈ ಶ್ರೀ ಗುರುದೇವ್‌,
ನಾಡಿನ ಎಲ್ಲಾ ಕನ್ನಡದ ಸೃಜನಶೀಲ ಮನಸುಗಳಿಗೆ ನಮಸ್ಕಾರ.
ಭಾಷೆ ನಮ್ಮ ಬದುಕು, ಭಾಷೆಯೊಂದಿಗೆ ಅನುಸಂಧಾನ ಮಾಡಿಕೊಂಡು ಕೆಲಸ ಮಾಡುವ ಮಾಧ್ಯಮವೇ ಪತ್ರಿಕೋದ್ಯಮ. ಪತ್ರಿಕಾ ಮಾಧ್ಯಮದಲ್ಲಿ ಸೇವೆ ಸಲ್ಲಿಸಬೇಕು ಎನ್ನುವುದು ನನ್ನ ಹಲವು ಕಾಲದ ಅಭಿಲಾಷೆಯಾಗಿತ್ತು. ಪರಮಾತ್ಮನ ದಯೆಯಿಂದ ಹಾಗೂ ಗುರುಗಳ ಕೃಪೆಯಿಂದ ಆ ಸದವಕಾಶ ಈಗ ಒದಗಿ ಬಂದಿದೆ. ಕನ್ನಡಿಗರ ಧ್ವನಿಯಾಗಿ ಮುಖ್ಯವಾಹಿನಿ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಲು ನಾವು ʻಪಿಎನ್‌ಎಸ್‌ ವಿಸ್ತಾರʼ ಸುದ್ದಿವಾಹಿನಿಯನ್ನು ಪುನರಾರಂಭಿಸುತ್ತಿದ್ದೇವೆ. ʻಪಿಎನ್‌ಎಸ್‌ ವಿಸ್ತಾರʼ ನ್ಯೂಸ್‌ ಕನ್ನಡ ಟಿವಿ ಮಾಧ್ಯಮ ಕ್ಷೇತ್ರದಲ್ಲಿ ಈಗಾಗಲೆ ತನ್ನದೇ ಆದ ಒಂದು ಬ್ರಾಂಡ್‌ ಸೃಷ್ಟಿಸಿಕೊಂಡಿದ್ದ ಸುದ್ದಿ ವಾಹಿನಿ, ಕಾರಣಾಂತರಗಳಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಒಂದು ವಿಶೇಷ ಹಾಗೂ ವಿಭಿನ್ನ ಕಾರ್ಯಯೋಜನೆಯೊಂದಿಗೆ ನಾವು ಮರಳಿ ಬರುತ್ತಿದ್ದೇವೆ. ಕನ್ನಡ ನಾಡಿನ ಬಂಧುಗಳ ಕಷ್ಟ-ನಷ್ಟಗಳ ಕುರಿತು ವಸ್ತುನಿಷ್ಟ ವರದಿ ಮಾಡಲು, ಕನ್ನಡ ನಾಡಿನ ಸಂಸ್ಕೃತಿ ಸಾರಗಳನ್ನು ಜಗತ್ತಿನಾದ್ಯಂತ ಪಸರಿಸಲು, ಕನ್ನಡದ ನುಡಿಸಿರಿಯ ವೈವಿಧ್ಯತೆಯನ್ನು ವರ್ಣಿಸಲು ಸರ್ವಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಸುದ್ದಿ ಜಗತ್ತಿನ ನಿಖರ ವರ್ತಮಾನಗಳನ್ನು ನಿರ್ಭೀತಿಯಿಂದ ನಿಮ್ಮ ಮುಂದಿಡಲು ನಾವು ಸಿದ್ಧರಾಗಿದ್ದೇವೆ. ಜನಸಾಮಾನ್ಯರ ಪ್ರತಿನಿಧಿಯಾಗಿ ಆಳುವ ಪ್ರಭುತ್ವವನ್ನು ಧೈರ್ಯದಿಂದ ಪ್ರಶ್ನಿಸಲು ನಾವು ಸಿದ್ಧರಾಗಿದ್ದೇವೆ. ಕರ್ನಾಟಕದ ನಾಡು-ನುಡಿ, ನೆಲ, ಜಲ, ಸಂಸ್ಕೃತಿಗಳ ಹಿತರಕ್ಷಣೆಗಾಗಿ ಸಂಕಲ್ಪಿಸಿಕೊಂಡಿದ್ದೇವೆ. ನಾವು ಕೇವಲ ಸುದ್ದಿಗಳನ್ನು ಪ್ರಾಮಾಣಿಕವಾಗಿ ವರದಿ ಮಾಡುತ್ತೇವೆ. ಮಾಹಿತಿಯೊಂದಿಗೆ ಮನೋರಂಜನೆ ಎಂಬ ವಿಶೇಷ ಆಯಾಮವನ್ನು ನಮ್ಮ ಮಾಧ್ಯಮದಲ್ಲಿ ಪ್ರಸ್ತುತ ಪಡಿಸಲಿದ್ದೇವೆ.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ವರ್ಷಗಳ ಅನುಭವ ಹೊಂದಿರುವ ಹಿರಿಯ, ಅನುಭವಿ, ಪ್ರಾವೀಣ್ಯತೆ ಹೊಂದಿರುವ ತಂಡ ನಮ್ಮೊಂದಿಗೆ ಕೆಲಸ ಮಾಡುತ್ತಿದೆ. ಪ್ರಸ್ತುತ ವಿದ್ಯಮಾನ, ರಾಜಕೀಯ, ಸಿನಿಮಾ-ಕಲೆ, ಕ್ರೀಡೆ, ಸಂಸ್ಕೃತಿ-ಸಂಪ್ರದಾಯ, ಆಚಾರ-ವಿಚಾರ, ಜೀವನಶೈಲಿ, ಇತಿಹಾಸ-ಪುರಾಣ, ಪದ್ಧತಿ-ಪರಂಪರೆ, ಭಾಷೆಯ ಸೊಗಡು ಮತ್ತು ಆಹಾರ ಕ್ರಮಗಳು, ನದಿ- ಪರಿಸರ ಅರಣ್ಯ- ಜೀವವೈವಿಧ್ಯ ಸೇರಿದಂತೆ ಹತ್ತಾರು ವಿಷಯಗಳ ಬಗ್ಗೆ ನಾವು ನಮ್ಮ ವಾಹಿನಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ನಿಮ್ಮ ಮುಂದೆ ತರಲಿದ್ದೇವೆ. ನಮ್ಮ ನಾಡಿನ ಕ್ರಿಯಾಶೀಲ, ಸೃಜನಶೀಲ ಮನಸುಗಳಿಗೆ ಅತ್ಯಂತ ಆಹ್ಲಾದಕಾರಿ ಸುದ್ದಿ ಸಂಗತಿಗಳನ್ನು ಉಣಬಡಿಸಬೇಕು ಅನ್ನುವುದಷ್ಟೆ ನಮ್ಮ ಕಳಕಳಿ. ಈ ನಿಟ್ಟಿನಲ್ಲಿ ನಮ್ಮ ʻಪಿಎನ್‌ಎಸ್‌ ವಿಸ್ತಾರʼ ನ್ಯೂಸ್‌ ತಂಡ ಕಳೆದ ಕೆಲವು ತಿಂಗಳಿನಿಂದ ಕಠಿಣ ಪರಿಶ್ರಮ ನಡೆಸುತ್ತಿದೆ. ಎಲ್ಲಾ ವಯೋಮಾನದವರ, ಎಲ್ಲಾ ವರ್ಗದವರ ಮತ್ತು ಎಲ್ಲಾ ರೀತಿಯ ಮನಸ್ಥಿತಿಯ ಜನಸಮುದಾಯವನ್ನು ತಲುಪಬೇಕು ಅನ್ನುವುದು ನಮ್ಮ ಹಿರಿಯಾಸೆ. ಕನ್ನಡಿಗರ ಆದ್ಯತೆಯ ವಿಷಯಗಳನ್ನು ಆಯ್ದು ನಮ್ಮ ಮಾಧ್ಯಮದಲ್ಲಿ ಪ್ರಸಾರ ಮಾಡಲು ಕಾರ್ಯಯೋಜನೆ ರೂಪಿಸಿಕೊಂಡಿದ್ದೇವೆ. ಈಗ ಬೇಕಿರುವುದು ನಿಮ್ಮ ಶುಭ ಹಾರೈಕೆ ಮಾತ್ರ. ನೀವು ನಮ್ಮೊಂದಿಗಿರಿ ಸಾಕು, ನಾವು ನಿಮಗಾಗಿ ದಿನದ ೨೪ ಗಂಟೆ, ವಾರದ ೭ ದಿನ, ವರ್ಷದ ೩೬೫ ದಿನಗಳು ಸೇವೆ ಸಲ್ಲಿಸಲು ಶತಸಿದ್ಧ.

ಕರುನಾಡಿನ ಸಮಸ್ತ ಕನ್ನಡಿಗರಿಗೆ ನನ್ನ ಧನ್ಯವಾದಗಳು

ಸದಾ ನಿಮ್ಮ ಸೇವೆಯಲ್ಲಿ.
-ಹೆಚ್.ಜಿ ಪವಿತ್ರ ಗೌಡ, ‌ಸಿಇಒ, ಪಿಎನ್‌ಎಸ್‌ ವಿಸ್ತಾರ ನ್ಯೂಸ್

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಸುಗ್ರೀವನ ಭೇಟಿಗೆ ಹನುಮಂತನ ಸೇತುಬಂಧ ಹೇಗಿತ್ತು?

ಧವಳ ಧಾರಿಣಿ ಅಂಕಣ: ಸುಗ್ರೀವನ ಭೇಟಿಗೆ ಹನುಮಂತನ ಸೇತುಬಂಧದ ಅಪರೂಪದ ಸನ್ನಿವೇಶ ಇಲ್ಲಿದೆ. ವಾನರೇಂದ್ರನ ಮಂತ್ರಿ ಕೋಸಲೇಂದ್ರನ ದಾಸನಾದ ಪ್ರಸಂಗವಿದು.

VISTARANEWS.COM


on

dhavala dharini column Hanuman's setubandha to meet Sugriva in ramayana by narayana yaji

ಸುಗ್ರೀವನ ಭೇಟಿಗೆ ಹನುಮಂತನ ಸೇತುಬಂಧದ ಅಪರೂಪದ ಸನ್ನಿವೇಶ

dhavala dharini by Narayana yaji

ಧವಳ ಧಾರಿಣಿ ಅಂಕಣ: ಭವತಾ ಸಖ್ಯಕಾಮೌ ತೌ ಭ್ರಾತರೌ ರಾಮಲಕ್ಷ್ಮಣೌ.
ಪ್ರತಿಗೃಹ್ಯಾರ್ಚಯಸ್ವೈತೌ ಪೂಜನೀಯತಮಾವುಭೌ৷৷ ಕಿ.5.7৷৷

ಸಹೋದರರಾದ ರಾಮಲಕ್ಷ್ಮಣರು ನಿನ್ನೊಡನೆ ಗೆಳೆತನವನ್ನು ಬೆಳೆಸುವ ಆಶಯವನ್ನು ಹೊಂದಿದ್ದಾರೆ. ಪೂಜನೀಯರಾದ ಇವರಿಬ್ಬರನ್ನೂ ನೀನು ಯಥೋಚಿತವಾಗಿ ಪ್ರತಿಗ್ರಹಿಸಿ ಪೂಜಿಸಬೇಕು

ರಾಮಾಯಣದ ಕಿಷ್ಕಿಂಧಾಕಾಂಡದಿಂದ ತೊಡಗಿ ಯುದ್ಧ ಕಾಂಡದಕೊನೆಯ ತನಕ ಸುಗ್ರೀವ ಪ್ರಮುಖವಾದ ಪಾತ್ರವನ್ನು ವಹಿಸುತ್ತಾನೆ. ಅನೇಕ ಸಲ ಆತನ ವ್ಯಕ್ತಿತ್ವ ಮರ್ಕಟ ಸ್ವಭಾವಕ್ಕೆ ಅನುಗುಣವಾಗಿದೆ. ವಾಲಿಯನ್ನು ಸಂಹರಿಸಿದ ನಂತರದಲ್ಲಿ ಸೀತಾನ್ವೇಷಣೆಗೆ ಪ್ರಾರಂಭಿಸಿದನೋ, ಅಲ್ಲಿಂದ ಆತ ತುಂಬಾ ಪ್ರೌಢತ್ವದಿಂದಲೇ ವ್ಯವಹರಿಸುತ್ತಾನೆ. ಸುಗ್ರೀವನ ಜೊತೆ ರಾಮನ ಸಖ್ಯದಲ್ಲಿ ಆತನ ವ್ಯವಹಾರ ಮೇಲ್ನೋಟಕ್ಕೆ ಚಂಚಲತೆಯಿಂದ ಕೂಡಿತ್ತು ಎಂದು ತೋರಿದರೂ ವಾಸ್ತವವಾಗಿ ಆತ ಸೂಕ್ಷ್ಮವಾಗಿ ಎದುರಾದವರನ್ನು ಅಭ್ಯಸಿಸುತ್ತಿದ್ದ. ವಾಲಿ ಆತನನ್ನು ರಾಜ್ಯದಿಂದ ಹೊರಗಟ್ಟಿ ಆತನನ್ನು ಕೊಲ್ಲಬೇಕೆಂದು ಇಡೀ ಪ್ರಪಂಚವನ್ನೆಲ್ಲಾ ಓಡಾಡಿಸಿದ ವಿಷಯವನ್ನು ಸವಿಸ್ತಾರವಾಗಿ ಹಿಂದಿನ ಸಂಚಿಕೆಯಲ್ಲಿ ಗಮನಿಸಿದ್ದೇವೆ. ಮತಂಗ ಋಷಿಯ ಶಾಪದ ಕಾರಣಕ್ಕೆ ವಾಲಿಗೆ ಮತಂಗಾಶ್ರಮವಿರುವ ಋಷ್ಯಮೂಕ ಪರ್ವತವನ್ನು ತನ್ನ ಅಡಗುದಾಣವನ್ನಾಗಿಸಿಕೊಂಡ. ಋಷ್ಯಮೂಕ ಪರ್ವತಕ್ಕೆ ಆ ಹೆಸರು ಬಂದಿರುವುದಕ್ಕೆ ಕಾರಣ ಅದು ತಪಸ್ವಿಗಳ ಜ್ಞಾನಾರ್ಜನಗೆ ಹೇಳಿ ಮಾಡಿಸಿದ ಸ್ಥಳವಾಗಿತ್ತು ಎನ್ನುವ ಕಾರಣಕ್ಕಾಗಿ. ಋಷೀಣಾಂ ತತ್ರ ಪ್ರಾಪ್ವಾನಾಂ ಅಮೂಕಃ- ಅಲ್ಲಿಗೆ ಹೋದ ಋಷಿಗಳ ಅಜ್ಞಾನವು ಹೋಗಿಬಿಡುತ್ತಿತ್ತು ಹಾಗಾಗಿ ಆ ಪರ್ವತಕ್ಕೆ ಋಷ್ಯಮೂಕವೆನ್ನುವ ಹೆಸರು ಬಂತು. ಮೌನಿಗಳಾದ ಋಷಿಗಳ ಪರ್ವತ ಎನ್ನುವ ಇನ್ನೊಂದು ಅರ್ತವೂ ಋಷ್ಯಮೂಕಕ್ಕೆ ಇದೆ. ಅಲ್ಲಿ ಮತಂಗ ಮುನಿಗಳು ಮೌನವಾಗಿಯೇ ತಪಸ್ಸಿಗೆ ಕುಳಿತಿರುತ್ತಿದ್ದರು.

ದುಂದುಭಿಯಂತಹ ರಾಕ್ಷಸನನ್ನು ಕೊಂದು ವಾಲಿ ಲೋಕಕ್ಕೆ ಉಪಕಾರವನ್ನು ಮಾಡಿದರೂ ಆತನಿಗೆ ಶಾಪ ಏತಕ್ಕೆ ಬಂತು ಎಂದು ಅನುಕಂಪ ಬರುವುದು ಸಹಜ. ವಾಲಿ ಮತ್ತು ದುಂದುಭಿಯ ಜಗಳದ ಹಿನ್ನೆಲೆಯನ್ನು ಗಮನಿಸಬೇಕು. ದುಂದುಭಿ ಕೋಣನ ಆಕಾರವನ್ನು ಹೊಂದಿದ್ದ ರಾಕ್ಷಸ. ಆತನಿಗೆ ಸಾವಿರ ಆನೆಯ ಬಲವಿತ್ತು. ತನ್ನ ಪರಾಕ್ರಮವನ್ನು ತೋರುವ ಹುಚ್ಚು. ಆ ಕಾರಣಕ್ಕಾಗಿ ಆತ “ಮಹ್ಯಂ ಯುದ್ಧ ಪ್ರಯಚ್ಛ- ನನಗೆ ಯುದ್ಧದ ಆತಿಥ್ಯವನ್ನು ನೀಡಿ” ಎಂದು ಎಲ್ಲಾ ಬಲಶಾಲಿಗಳ ಹತ್ತಿರ ಹೋಗಿ ಕೇಳಿದ್ದ. ಮೊದಲು ಆತ ಹೋಗಿದ್ದು ಸಮುದ್ರ ರಾಜನಲ್ಲಿಗೆ.

ಮುದ್ರದೊಡಯನಿಗೆ ಆತನೊಡನೆ ಯುದ್ಧ ಮಾಡುವ ಸಾಮರ್ಥ್ಯವಿಲ್ಲವೆಂದು ಅರ್ಥವಲ್ಲ; ಇದು ವೃಥಾ ಜಗಳ, ಅದರಿಂದ ತನ್ನೊಡಲಲ್ಲಿದ್ದ ಜಲಚರಗಳಿಗೆ ತೊಂದರೆಯಾಗುತ್ತದೆ ಎಂದು ಆತ ಪರ್ವತಗಳ ರಾಜನಾದ ಹಿಮವಂತನನ್ನು ತೋರಿಸಿದ. ಆತ ದುಂದುಭಿಯ ಆಹ್ವಾನವನ್ನು ನಿರಾಕರಿಸುವ ಕಾರಣ ತನ್ನಲ್ಲಿ ಸತ್ವಗುಣಶೀಲರಾದ ತಪಸ್ವಿಗಳು ತಪಸ್ಸನ್ನು ಮಾಡುತ್ತಿದ್ದಾರೆ. ಅವರ ತಪಸ್ಸಿಗೆ ಭಂಗಬಾರದೆನ್ನುವಕಾರಣಕ್ಕಾಗಿ ಜಗಳಕ್ಕೆ ಬರಲು ಒಪ್ಪುವುದಿಲ್ಲ. ಜಗಳವೆನ್ನುವುದು ಇನ್ನೊಬ್ಬರ ಶಾಂತತೆಗೆ ಭಂಗತರುವಂತಹುದಾಗಬಾರದು ಎನ್ನುವ ವಿವೇಕ ಇರಬೇಕು. ಸಮುದ್ರರಾಜನಾಗಲಿ, ಹಿಮವಂತನಾಗಲೀ ದುಂದುಭಿಯ ಯುದ್ಧಾಹ್ವಾನವನ್ನು ತಿರಸ್ಕರಿಸಿದರು ಎಂದ ಕಾರಣಕ್ಕೆ ಅವರು ಸಣ್ಣವರೇನೂ ಆಗಲಿಲ್ಲ. ವಾಲಿ ಜಗಳಕ್ಕೆ ಒಪ್ಪಿದ್ದೂ ಅಲ್ಲದೇ ಯುದ್ಧಮಾಡಿ ಆ ರಾಕ್ಷಸನನ್ನು ಕೊಂದಮೇಲೆ ಆತನ ದೇಹವನ್ನು ಒಂದು ಯೋಜನದಷ್ಟು ದೂರ ಎಸೆದನು. ಆಗ ಸಿಡಿದ ರಕ್ತದ ಹನಿಗಳೂ ಮತಂಗ ಆಶ್ರಮದಲ್ಲಿ ಬಿದ್ದು ಆಶ್ರಮ ಮಲಿನವಾಯಿತು. ಸತ್ತಮೇಲೆ ವೈರವಿರಕೂಡದು ಎನ್ನುತ್ತದೆ ಧರ್ಮಶಾಸ್ತ್ರ. ವಾಲಿ ಸತ್ತಮೇಲೆಯಾಗಲೀ, ರಾವಣ ಸತ್ತಮೇಲೆಯಾಗಲಿ ಅವರ ಕಳೇಬರಕ್ಕೆ ರಾಮ ಗೌರವಯುತವಾಗಿ ಅಂತ್ಯಸಂಸ್ಕಾರವನ್ನು ಮಾಡಿಸುತ್ತಾನೆ. ವಿಭೀಷಣ ರಾವಣನ ಸಂಸ್ಕಾರಕ್ಕೆ ಒಪ್ಪದಿದ್ದರೆ ತಾನೇ ರಾವಣನ ಅಂತ್ಯಸಂಸ್ಕಾರವನ್ನು ಮಾಡುತ್ತೇನೆ ಎನ್ನುತ್ತಾನೆ. ಮತಂಗರು ಶಾಪವನ್ನು ಕೊಡುವಾಗ ಹೇಳುವ ಮಾತು

ಯೇನಾಹಂ ಸಹಸಾ ಸ್ಪೃಷ್ಟಶ್ಶೋಣಿತೇನ ದುರಾತ್ಮನಾ.

ಕೋಯಂ ದುರಾತ್ಮಾ ದುರ್ಭುದ್ಘಿರಕೃತಾತ್ಮಾ ಚ ಬಾಲಿಶಃ II ಕಿ.11.50৷৷

ನನ್ನನ್ನು ಅಪವಿತ್ರವಾದ ರಕ್ತದ ಮೂಲಕ ಮುಟ್ಟಿದ ದುರಾತ್ಮನು ಯಾವನು. ಮೂಢನಾದ, ದುರಾತ್ಮನಾದ, ದುರ್ಬುದ್ಧಿಯುಳ್ಳ, ಜಿತೇಂದ್ರಿಯನಲ್ಲದ (ಅಕೃತಾತ್ಮಾ) ಆ ಮೂರ್ಖನು ಯಾರಾಗಿಬಹುದು”

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡದಲ್ಲಿನ ರಾಜನೀತಿಯ ವಿಲಕ್ಷಣ ಘಟನೆ

ಇಲ್ಲಿ ಜಿತೇಂದ್ರಿಯ ಎನ್ನುವ ಶಬ್ಧವನ್ನು ಬಳಸಿದ್ದಾರೆ. ಮೈತೀಟೆಯನ್ನು ತೀರಿಸಿಕೊಳ್ಳುವುದಕ್ಕೆ ಯುದ್ಧವಲ್ಲ. ಲೋಕ ಹಿತಕ್ಕಾಗಿ ಯುದ್ಧ ಅಪರಾಧವಲ್ಲ. ಇಲ್ಲಿ ವಾಲಿ ಕೇವಲ ರಕ್ತದಿಂದ ಆಶ್ರಮವನ್ನು ಮಲಿನಮಾಡಿದ್ದಲ್ಲ. ಪರ್ವತಮಯವಾದ ದುಂದುಭಿಯ ದೇಹವನ್ನು ಬಿಸುಟು ಆಶ್ರಮದ ವೃಕ್ಷಗಳೆಲ್ಲವನ್ನೂ ಧ್ವಂಸಮಾಡಿದ್ದಾನೆ. ಅವರಿಗೆ ಈ ಕೃತ್ಯವನ್ನು ನಡೆಸಿದವ ವಾಲಿ ಎನ್ನುವುದು ತಿಳಿಯಿತು. “ಯಾವಾತ ಈ ಕೃತ್ಯವನ್ನು ಎಸಗಿದವೋ ಆತನೇನಾದರೂ ಇನ್ನುಮುಂದೆ ಈ ಆಶ್ರಮದ ಪ್ರದೇಶಕ್ಕೆ ಬಂದರೆ ಇಲ್ಲಿಯೇ ಮರಣ ಹೊಂದುವನು. ಪುತ್ರನಂತೆ ಅಕ್ಕರೆಯಿಂದ ಬೆಳೆಸಿದ ಅವರ ಆಶ್ರಮದ ಗಡ್ಡೆಗೆಣಸುಗಳ ವಿನಾಶಾರ್ಥವಾಗಿ ಆತನ ಮಂತ್ರಿಗಳೇನಾದರೂ ಆತನ ಆಶ್ರಮದ ಪರಿಸರದಲ್ಲಿದ್ದರೆ ಅವರು ಒಂದು ದಿನಗಳೊಳಗಾಗಿ ಆ ಪ್ರದೇಶದಿಂದ ಹೊರಟುಬಿಡಬೇಕು. ಹೋಗದೇ ಉಳಿದರೆ ಅಂತವರು ಹಲವಾರು ಸಾವಿರ ವರುಷಗಳ ಕಾಲ ಕಲ್ಲಾಗಿಬಿಡುವರು” ಎನ್ನುವ ಶಾಪ ಕೊಟ್ಟರು. ವಿಷಯ ಅರಿತ ವಾಲಿ ಓಡೋಡಿ ಬಂದು ಮತಂಗ ಮುನಿಗಳಿಗೆ ತನ್ನನ್ನು ಕ್ಷಮಿಸಿ ಎಂದರೂ ಅವರು ಕ್ಷಮಿಸದೇ ಆಶ್ರಮವನ್ನೇ ಬಿಟ್ಟು ಹೊರಟುಹೋದರು. ಆ ನಂತರದಲ್ಲಿ ವಾಲಿಯಾಗಲೀ ಆತನ ಕಡೆಯವರಾಗಲೀ, ಶಾಪದ ಭಯದಿಂದ ಮತಂಗಾಶ್ರಮದ ಪರಿಸರಕ್ಕೆ ಬರುತ್ತಿರಲಿಲ್ಲ. ವಾಲಿ ಸುಗ್ರೀವ ಎಲ್ಲಿಯೇ ಅಡಗಿದ್ದರೂ ಆತನನ್ನು ಹುಡುಕಿ ಕೊಲ್ಲಲು ಬರುತ್ತಿದ್ದ ಎಂದು ಅನಿಸುತ್ತದೆ. ತನ್ನ ಜೀವ ಉಳಿಸಿಕೊಳ್ಳಲು ಸುಗ್ರೀವ ಪ್ರಪಂಚದ ಎಲ್ಲಾ ಕಡೆ ನಿರಂತರವಾಗಿ ಎಲ್ಲಿಯೂ ನಿಲ್ಲದೇ ಹಾರುತ್ತಿದ್ದ. ಶಾಪದ ಘಟನೆ ಹನುಮಂತನಿಗೆ ಅದುಹೇಗೋ ತಿಳಿಯಿತು. ಆತ ಈ ವಿಷಯವನ್ನು ಸುಗ್ರೀವನಿಗೆ ಹೇಳಿದ. ಮತಂಗಮುನಿಗಳ ಶಾಪದ ಕಾರಣದಿಂದ ಋಷ್ಯಮೂಕ ಪರ್ವತ ಸುಗ್ರೀವನಿಗೆ ಸುರಕ್ಷಿತ ತಾಣವಾಗಿ ಉಳಿಯಿತು. ಸುಗ್ರೀವ ತನ್ನ ಹತ್ತಿರವೇ ಬಂದು ಉಳಿದದ್ದು ನೋಡಿದ ವಾಲಿಗೆ ಮೈ ಪರಚಿಕೊಳ್ಳುವಂತಾಗಿದ್ದಂತೂ ಸತ್ಯ.

ಲಕ್ಷ್ಮಣನಿಂದ ಸಮಾಧಾನಿಸಲ್ಪಟ್ಟ ರಾಮ ಋಷ್ಯಮೂಕ ಪರಿಸರದಲ್ಲಿ ತಿರುಗಾಡುತ್ತಿರುವುದನ್ನು ದೂರದಲ್ಲಿಯೇ ನೋಡಿದ ಸುಗ್ರೀವನಿಗೆ ನಡುಕ ಉಂಟಾಯಿತು. ಅವರ ತೇಜಸ್ಸು ಆತನನ್ನು ಭಯಪಡಿಸಿತು. ವಾಲಿಯೇನಾದರೂ ತನ್ನನ್ನು ಕೊಲ್ಲಲು ಬೇರೆಯವರನ್ನು ಕಳುಹಿಸಿರಬಹುದೆನ್ನುವ ಸಂಶಯದಿಂದ ಆತನ ಚಲನವಲನಗಳೇ ನಿಂತು ಹೋಯಿತು. ಆತ ಹೆದರಿಕೆಯಿಂದ ಏನು ಮಾಡುವುದು ಎಂದು ತಿಳಿಯದೇ ಒಂದು ಪರ್ವತದಿಂದ ಇನ್ನೊಂದು ಪರ್ವತಕ್ಕೆ ಹಾರತೊಡಗಿದ. ಆಗ ಹನುಮಂತ ಸುಗ್ರೀವನಿಗೆ ಸಮಾಧಾನವನ್ನು ಹೇಳಿ “ನೀನು ರಾಜನಾದವನು, ಹೀಗೆ ಹೆದರಕೂಡದು. ಚನ್ನಾಗಿ ಆಲೋಚಿಸಿ ಅವರ ಹಾವ ಭಾವವನ್ನು ತಿಳಿದು ಶತ್ರುವೋ ಅಲ್ಲವೋ ಎನ್ನುವುದನ್ನು ತಿಳಿಯಬೇಕೆನ್ನುತ್ತಾನೆ. ಸುಗ್ರೀವ ಹನುಮಂತನಿಗೆ ಬಂದವರು ಯಾರು ಎಂದು ತಿಳಿದುಕೊಂಡು ಬರಲು ಕಳಿಸುತ್ತಾನೆ.

ನಮ್ಮ ರಾಜ್ಯದ ಆನೆಗೊಂದಿಯಲ್ಲಿ ಹನುಮಂತ ಮೊದಲು ರಾಮ ಲಕ್ಷ್ಮಣರನ್ನು ಭೆಟ್ಟಿಮಾಡಿರುವುದು. ಇಲ್ಲಿಯತನಕ ಸುಗ್ರೀವನ ಸಚಿವನಾಗಿದ್ದ ಹನುಮಂತ ಇಲ್ಲಿಂದ ಮುಂದೆ “ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯಾಕ್ಲಿಷ್ಟಕರ್ಮಣಃ” ಎಂದು ಪ್ರಸಿದ್ದನಾಗುವುದಕ್ಕೆ ಪೀಠಿಕೆ ಇದು. ಕಪಿಯ ರೂಪದಲ್ಲಿದ್ದರೆ ಯಾರಿಗೂ ನಂಬಿಕೆ ಹುಟ್ಟಲು ಸಾಧ್ಯವಿಲ್ಲವೆಂದು ಹನುಮಂತ ಬಿಕ್ಷುವಿನ ರೂಪದಲ್ಲಿ ರಾಮನ ಪರಿಚಯವನ್ನು ಕೇಳುತ್ತಾನೆ. ಕಿಷ್ಕಿಂಧಾ ಕಾಂಡದ 3 ನೆಯ ಸರ್ಗದಲ್ಲಿ ಹನುಮಂತ ರಾಮನ್ನು ಮಾತಾಡಿಸುವಾಗ ಉಪಯೋಗಿಸುವ ಭಾಷೆ, ದೇಹದ ಭಂಗಿ, ವಿನೀತ ಭಾವ, ತನ್ನ ಒಡೆಯನ ಕುರಿತು ಗೌರವ ಇವೆಲ್ಲವೂ ಸಮ್ಮಿಳಿತವಾಗಿದ್ದವು. ದೀರ್ಘವಾಗಿ ಮಾತಾಡಿದ್ದರಲ್ಲಿ ಒಂದೇ ಒಂದು ಅಪಶಬ್ಧವೂ ಇಲ್ಲವಾಗಿತ್ತು. ದೇಹದ ಯಾವ ಅವಯವಗಳಲ್ಲಿಯೂ ಯಾವುದೇ ದೋಷವಿರಲಿಲ್ಲ. ವಿಷಯನಿರೂಪಣೆಯಲ್ಲಿ ವಿಸ್ತಾರವಿರಲಿಲ್ಲ. ಸಮಯಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಮಾತಾಡಿದ್ದನು. ಸಂಶಯಕ್ಕೆಡೆಮಾಡುವಂತಹ ಯಾವ ಮಾತನ್ನೂ ಆತ ಆಡಲಿಲ್ಲ. ಮದ್ಯಸ್ವರದಲ್ಲಿ ವ್ಯಾಕರಣದಿಂದ ಸಂಸ್ಕೃತವಾದ ಶಬ್ದಗಳನ್ನು ಬಳಸಿ ಯಾವ ಯಾವ ವಾಕ್ಯಗಳನ್ನು ಎಲ್ಲೆಲ್ಲಿ ಆಡಬೇಕೋ ಅದನ್ನು ಮಾತ್ರವೇ ಆಡಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಕೇಳುವವರ ಮನಸ್ಸಿಗೆ ಹರ್ಷವನ್ನುಂಟುಮಾಡುವ ಶುಭಕರವಾದ ಮಾತುಗಳನ್ನೇ ಆಡಿದ್ದ. ಇಲ್ಲಿ ಒಂದು ಸಂಶಯ ಬರುತ್ತದೆ. ಅಷ್ಟೊಂದು ಸುಂದರವಾಗಿ ಮಾತನಾಡಿದ್ದ ಹನುಮಂತ ತನ್ನ ವೇಷವನ್ನು ಮರೆಮಾಚಿ ಬಿಕ್ಶುವಿನ ವೇಷವನ್ನು ಧರಿಸಿರುವುದು ವಂಚನೆಯಲ್ಲವೇ. ಅದಕ್ಕೆ ವಾಲ್ಮೀಕಿ ಪ್ರಾರಂಬದಲ್ಲಿಯೇ ಹೇಳಿದ್ದಾನೆ. ನೇರವಾಗಿ ಆತ ಕಪಿಯ ರೂಪದಲ್ಲಿಯೇ ಹೋದರೆ ಆತ ಆಡುವ ಮಾತಿನ ಶೈಲಿಗೂ ಆತನ ಬಹಿರಂಗ ರೂಪಕ್ಕೂ ಅಂತರ ಕಂಡು ಇದು ಯಾವುದೋ ಮಾಯೆ ಎನ್ನುವ ಭಾವಕ್ಕೆ ರಾಮ ಲಕ್ಷ್ಮಣರು ಬರುವ ಸಾಧ್ಯತೆಯಿದೆ. ಬಿಕ್ಷುವಿನ ವೇಷವಾದರೆ ಆಡುವ ಮಾತಿಗೆ ಸಾಮ್ಯತೆ ಬರುತ್ತದೆ. ಅದೂ ಅಲ್ಲದೇ ರಾಮ ಲಕ್ಷ್ಮಣರೂ ಸಹ ತಾಪಸಿಗಳಂತೆ ಇದ್ದರು. ಆದರೆ ಅವರ ಕೈಯಲ್ಲಿ ಬಿಲ್ಲು ಬಾಣಗಳಿದ್ದವು. ಬತ್ತಳಿಕೆ ಬಿಗಿದ್ದರು. ಹೀಗಿರುವಾಗ ಅವರನ್ನು ಮೊದಲು ನೋಡಲು ಸರ್ವಮಾನ್ಯವಾದ ಬಿಕ್ಷುವಿನ ರೂಪ ಧರಿಸಿದರೆ ಅವರು ತನ್ನ ಕಡೆಗೆ ಗಮನವನ್ನು ಹರಿಸುತ್ತಾರೆ ಎನ್ನುವುದಾಗಿದೆ. ರಾಮ ಲಕ್ಷ್ಮಣರನ್ನು ಹತ್ತಿರದಿಂದ ಕಂಡಾಗ ಅವರಲ್ಲಿ ದಿವ್ಯ ಪ್ರಭೆ ದೇದೀಪ್ಯಮಾನವಾಗಿ ಬೆಳಗುತ್ತಿತ್ತು. ಆ ಪ್ರಭೆಯ ಎದುರು ಹನುಮಂತನಿಗೆ ತಾನು ವೇಷವನ್ನು ಮರೆಮಾಚಿರುವ ವಿಷಯವನ್ನು ಮುಚ್ಚಿಟ್ಟುಕೊಳ್ಳಲಾವದಾಗಲಿಲ್ಲ. ಆತ ತಾನು ಬಿಕ್ಷುವಿನ ವೇಷವನ್ನು ಧರಿಸಿ ಬಂದವ. ಕಾಮರೂಪಿಯಾದ ತಾನು ಇಚ್ಛೆಬಂದ ಕಡೆ ಹೋಗಬಲ್ಲೆ, ಇಚ್ಛೆಬಂದ ರೂಪವನ್ನು ಧರಿಸಬಲ್ಲೆ ಎಂದು ಪ್ರಾರಂಭದಲ್ಲಿಯೇ ಹೇಳಿಬಿಡುತ್ತಾನೆ. ಸುಗ್ರೀವನ ಸಚಿವ ತಾನು, ಆತನಿಗೆ ಪ್ರಿಯವನ್ನುಂಟುಮಾಡಬೇಕೆಂಬ ಆಶಯದಿಂದ ಈ ವೇಷದಲ್ಲಿ ಬಂದಿರುವೆ ಎನ್ನುತ್ತಾನೆ. ಆತನ ಮಾತಿನಲ್ಲಿ ಎಲ್ಲಿಯೂ ಕಪಟತೆ ತಿಲಮಾತ್ರವೂ ಇರಲಿಲ್ಲ. ಧ್ವನಿ ಹೃದಯ ಕಂಠ ಮತ್ತು ಮುಖಗಳ ಮೂಲಕವಾಗಿ ಹೊರಬರುತ್ತಿತ್ತು. ತನ್ನೊಡೆಯನ ಕ್ಷೇಮಕ್ಕಾಗಿ ವೇಷಧರಿಸುವುದು ಅಗತ್ಯವಿತ್ತು. ಆದರೆ ಅವರನ್ನು ನೋಡಿದಾಗ ಅದರ ಅವಶ್ಯಕತೆ ಉಳಿದಿಲ್ಲ ಎನ್ನುವುದು ಆತನ ಮಾತಿನ ಸಾರಾಂಶವಾಗಿತ್ತು. ರಾಮನಿಗೆ ಆತನ ಸರಳ ಮತ್ತು ಸುಂದರವಾದ ಭಾಷೆಯನ್ನು ಕೇಳಿ ಆನಂದವಾಯಿತು. ಅದಕ್ಕಿಂತಲೂ ಆತ ಸುಗ್ರೀವನ ಸಚಿವನೆನ್ನುವುದನ್ನು ಕೇಳಿ ಇಮ್ಮಡಿ ಆನಂದವಾಯಿತು. ಯಾರನ್ನು ತಾವು ಹುಡುಕಲು ಬಂದ್ದೇವೆಯೋ ಆತನ ಸಚಿವನೇ ತನ್ನನ್ನು ಎದುರುಗೊಳ್ಳಲು ಬಂದಿದ್ದಾನೆ. ಇದರಿಂದ ಅಯೋಧ್ಯೆಯ ಚಕ್ರವರ್ತಿ ಮನೆತನದವರು ಅಪರಿಚಿತರಂತೆ ಬೇರೊಬ್ಬರ ಭೇಟಿಗೆ ಹೋಗಿರುವುದಲ್ಲ, ರಾಜಪರಂಪರೆಯ ನಡಾವಳಿಯಂತೆ (Protocol) ಸಚಿವನೋರ್ವ ಎದುರುಗೊಳ್ಳಲು ಬಂದಿದ್ದಾನೆ. ರಾಜರುಗಳನ್ನು ಎದುರುಗೊಳ್ಳಲು ಯಾರು ಯಾರು ಹೋಗಬೇಕೆನ್ನುವ ನಡಾವಳಿಕೆಗಳು ಪ್ರಾಚೀನ ಕಾಲದಲ್ಲಿಯೂ ಇತ್ತು. ರಾಮನಿಗೆ ಆತನ ವ್ಯಕ್ತಿತ್ವ ಮೊದಲ ಭೇಟಿಯಲ್ಲಿಯೇ ಇಷ್ಟವಾಯಿತು. ಲಕ್ಷ್ಮಣನಿಗೆ ಆತ ಹೇಳುವ ಮಾತು

ನಾನೃಗ್ವೇದವಿನೀತಸ್ಯ ನಾಯಜುರ್ವೇದಧಾರಿಣಃ.
ನಾಸಾಮವೇದವಿದುಷಶ್ಶಕ್ಯಮೇವಂ ವಿಭಾಷಿತುಮ್ ৷৷ಕಿ.3.27৷৷

ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳನ್ನು ಅಧ್ಯಯನಮಾಡಿ ಶಿಕ್ಷಣ ಪಡೆಯದವನಿಗೆ ಹೀಗೆ ಮಾತಾಡಲು ಸಾಧ್ಯವಿಲ್ಲ. ಎನ್ನುತ್ತಾನೆ. ಇಲ್ಲಿ ಪ್ರತಿಯೊಂದು ವೇದದ ವಿಶೇಷವನ್ನುಹೇಳುವಾಗ “ವಿನೀತ”, “ಧಾರಿ” ಮತ್ತು “ವಿತ್” ಶಬ್ಧಗಳನ್ನು ವಿಶೇಷಣಗಳನ್ನಾಗಿ ಬಳಸಿದ್ದಾರೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡ ಭಾಗ 2: ದೀಪದ ಬುಡದಲ್ಲಿ ಕತ್ತಲೆ

ಸಂಭಾಷಣೆಯಲ್ಲಿ ಸಂವಹನ ಕ್ರಿಯೆ ತುಂಬಾ ಮುಖ್ಯ. ಇದೊಂದು ಮಾತಿನಲ್ಲಿ ಹನುಮಂತನ ವಾಕ್ ಪಟುತ್ವವನ್ನು ರಾಮ ಶ್ಲಾಘಿಸುತ್ತಾನೆ. ಋಗ್ವೇದದ ಪ್ರತಿವರ್ಣವೂ ಸ್ವರಪೂರ್ಣವಾಗಿರುತ್ತದೆ. ಅದನ್ನು ಉಚ್ಛರಿಸಬೇಕಾದರೆ ಸಾವಧಾನವಾಗಿ, ವಿನಿಯೋಗಿಸಬೇಕಾದ ಛಂದಸ್ಸು, ವ್ಯಾಕರಣ ಶುದ್ಧತೆ ಮತ್ತು ಗಂಭೀರ ಸ್ವರಬೇಕಾಗುತ್ತದೆ. ಅದನ್ನು ಸರಿಯಾಗಿ ಅಧ್ಯಯನ ಮಾಡಿದವನಿಂದಲೇ ಹೀಗೆ ಮಾತಾಡಲು ಸಾಧ್ಯ. ಹಾಗಾಗಿ ವಿನೀತ ಎನ್ನುವ ಶಬ್ದವನ್ನು ಬಳಸಿದ್ದಾನೆ. ವಿನೀತ ಎಂದರೆ ಆಚಾರ್ಯಮುಖೇನ ಶಾಸ್ತ್ರಬದ್ಧವಾಗಿ ಕಲಿತವ ಎಂದು ಅರ್ಥ. ಯಜುರ್ವೇದದಲ್ಲಿ ಪ್ರತಿಯೊಂದು ಅನುವಾಕನ್ನೂ ಇತರ ಅನುವಾಕಗಳೊಡನೆ ಸಂಕರ ಆಗದ ರೀತಿಯಲ್ಲಿ ಉಚ್ಛರಿಸಬೇಕು. ಅದಕೆ ಅಸಾಧಾರಣ ಧಾರಣಶಕ್ತಿಯ ಅವಶ್ಯಕತೆ ಇದೆ. ಸಾಮವೇದವು ಊಹರಹಸ್ಯಗಳಿಂದ ಗಾನರೂಪವಾಗಿದೆ. ಹನುಮಂತ ಆಡುವ ಮಾತಿನಲ್ಲಿ ಪದ್ಯದ ಗೇಯತೆಯೂ ಇತ್ತು. ಕಿವಿಗೆ ಇಂಪಾಗಿ ಆದರೆ ಅರ್ಥಗರ್ಭಿತವಾಗಿ ಇತ್ತು ಎನ್ನುವುದನ್ನು ಮೂರು ಶಬ್ದಗಳಾದ ವಿನೀತ, ಧಾರಿ ಮತ್ತು ವಿತ್ ಶಬ್ದಗಳ ಮೂಲಕ ರಾಮ ತಿಳಿಸುತ್ತಾನೆ. ರಾಮನೂ ಮೂರೂ ವೇದಗಳಲ್ಲಿ ಪಾರಂಗತನಾಗಿರುವುದರಿಂದಲೇ ಹನುಮಂತನ ಮಾತನ್ನು ಗ್ರಹಿಸಲು ಸಾಧ್ಯವಾಯಿತು ಎಂದೂ ಇಲ್ಲಿ ಅರ್ಥೈಸಬಹುದಾಗಿದೆ. ಮಂತ್ರಿ ಎದುರಾದಾಗ ರಾಜನಾದವ ಮಾತನ್ನಾಡುವುದಲ್ಲ. ಆತನ ಪರವಾಗಿ ಮಂತ್ರಿಯೋ ಅಥವಾ ಸಮರ್ಥ ದೂತನೋ ಮಾತನ್ನಾಡಬೇಕು. ಹಾಗಾಗಿ ಇಲ್ಲಿ ಹನುಮಂತನೊಡನೆ ಮುಂದಿನ ವಿಷಯವನ್ನು ಲಕ್ಷ್ಮಣ ಮಾತಾಡಲಿ ಎಂದು ರಾಮ ಇಂಗಿತವನ್ನು ವ್ಯಕ್ತಪಡಿಸುತ್ತಾನೆ. ಹಾಗಾಗಿ ಮುಂದೆ ಲಕ್ಷ್ಮಣ ಹನುಮಂತನಲ್ಲಿ ತಮ್ಮ ಅರಣ್ಯವಾಸದ ವಿಷಯವನ್ನು, ಸೀತಾಪಹರಣದ ವಿಷಯವನ್ನೂ ಸಹ ಸಮಗ್ರವಾಗಿ ತಿಳಿಸಿ ತಮ್ಮ ಭೇಟಿಯ ಉದ್ಧೇಶ ಸೀತೆ ಎಲ್ಲಿರುತ್ತಾಳೆಂದು ಕಂಡುಹಿಡಿಯಲು ಕಬಂಧನ ಸೂಚನೆಯ ಮೇರೆಗೆ ಸುಗ್ರೀವನೊಡನೆ ಆಶ್ರಯಕೋರಲು ಬಂದಿದ್ದೇವೆ ಎನುತ್ತಾ ಮೊದಲು ಹೇಳಿದ ಸುಗ್ರೀವಂ ಶರಣಂ ಗತಃ ಎನ್ನುವ ಆರು ಬಗೆಯ ಉಲ್ಲೇಖವನ್ನು ಮಾಡುತ್ತಾನೆ.

ಹನುಮಂತನು ಸೂರ್ಯನ ಹತ್ತಿರ ಸೂತ್ರ, ವೃತ್ತಿ, ವಾರ್ತಿಕ, ಮಹಾಭಾಷ್ಯ, ಶಾಸ್ತ್ರ, ಛಂದಃಶಾಸ್ತ್ರಗಳನ್ನೂ, ನವವ್ಯಾಕರಣಗಳನ್ನೂ ಕಲಿತವ. ಅಗಸ್ತ್ಯರು ಹನುಮಂತನ ಕುರಿತು ಆತ ಶಾಸ್ತ್ರವಿಷಯದಲ್ಲಿ ಬ್ರಹಸ್ಪತಿಯೊಡನೆ ಹೋಲಿಸಬಹುದು ಎನ್ನುತ್ತಾರೆ. ಆತನಿಗೆ ಲಕ್ಷ್ಮಣ ಸುಗ್ರೀವನೊಡನೆ ಶರಣಾಗತಿಗಾಗಿ ಬಂದಿದ್ದಾರೆ ಎಂದು ಹೇಳಿರುವುದು ಮನಸ್ಸಿಗೆ ಸರಿಕಾಣಲಿಲ್ಲ. ಅತನಿಗೆ ಸೂರ್ಯವಂಶದ ವಿಷಗಳೆಲ್ಲವೂ ತಿಳಿದಿದೆ. ಅವರ ಶ್ರೇಷ್ಠತೆಯ ಮತ್ತು ಮಹಾತ್ಮತೆಯ ಕುರಿತು ಗೌರವವಿದೆ. ಆದರೆ ಈ ವಾಕ್ ದೋಷವನ್ನು ಟೀಕಿಸಲೂ ಹೋಗುವುದಿಲ್ಲ. ರಾಮಲಕ್ಷ್ಮಣರನ್ನು ತನ್ನ ಭುಜದಮೇಲೆ ಹೊತ್ತು ಅವರನ್ನು ಋಷ್ಯಮೂಕ ಪರ್ವತಕ್ಕೆ ಕರೆತರುತ್ತಾನೆ. ಸುಗ್ರೀವ ಆಗ ಆಗಂತುಕರ ವಿಷಯದಲ್ಲಿ ಭಯಪಟ್ಟು ಅಲ್ಲೇ ಪಕದಲ್ಲಿದ್ದ ಮಲಯ ಪರ್ವತದಲ್ಲಿ ಇದ್ದ. ಆತನಲ್ಲಿ ರಾಮ ಲಕ್ಷ್ಮಣರ ಮತ್ತು ದಶರಥನ ಸಹಿತವಾಗಿ ಸೂರ್ಯವಂಶದ ದೊರೆಗಳ ಮಹಿಮೆಯನ್ನು ಹೇಳುತ್ತಾನೆ. ಅಂತಹ ಮಹಿಮಾನ್ವಿತರು ಸೀತಾನ್ವೇಷಣೆಯ ಸಲುವಾಗಿ ನಿನ್ನ ಸಹಾಯವನ್ನು ಬಯಸಿ ಬಂದಿದ್ದಾರೆ ಎನ್ನುತ್ತಾನೆ. ಇಲ್ಲಿ ಹನುಮಂತನ ಜಾಣ್ಮೆಯನ್ನು ಗಮನಿಸಬೇಕು. “ಸುಗ್ರೀವನಲ್ಲಿ ಶರಣಾಗತಿಯನ್ನು ಹೊಂದಲು ಬಂದಿದ್ದಾರೆ ಎನ್ನುವ ಮಾತಿನ ದೋಷವನ್ನು ಹನುಮಂತ ಪ್ರಾರಂಭದಲ್ಲಿ ಹೇಳಿದ ಶ್ಲೋಕದಂತೆ “ಸಹೋದರರಾದ ರಾಮಲಕ್ಷ್ಮಣರು ನಿನ್ನೊಡನೆ ಗೆಳೆತನವನ್ನು ಬೆಳೆಸುವ ಆಶಯವನ್ನು ಹೊಂದಿದ್ದಾರೆ. ಪೂಜನೀಯರಾದ ಇವರಿಬ್ಬರನ್ನೂ ನೀನು ಯಥೋಚಿತವಾಗಿ ಪ್ರತಿಗ್ರಹಿಸಿ ಪೂಜಿಸಬೇಕು” ಎಂದು ಬದಲಾಯಿಸಿ ಹೇಳುತ್ತಾನೆ.

“ನವವ್ಯಾಕರಣವೇತ್ತಾ -ಒಂಬತ್ತು ವ್ಯಾಕರಣ ಸಿದ್ಧಾಂತವನ್ನು ತಿಳಿದವ ಹನುಮಂತ ಎಂದು ಅಗಸ್ತ್ಯರು ಈತನನ್ನು ಹೊಗಳಿದ್ದು ಆತನ ಜಾಣ್ಮೆ ಮತ್ತು ಶಾಸ್ತ್ರಕೌಶಲ್ಯದ ಪರಿಣಿತಿಗಾಗಿ. ರಾಮನ ಅನುಗ್ರಹದಿಂದ ಹನುಮಂತ ಬ್ರಹ್ಮನೇ ಆಗುವನು- “ಬ್ರಹ್ಮಾ ಭವಿಷ್ಯತ್ಯಪಿ ತೇ ಪ್ರಸಾದಾತ್” ಎನ್ನುವ ಮಾತನ್ನೂ ಆಡುತ್ತಾರೆ. ಸುಂದರನೆನ್ನುವುದು ಆತನ ಇನ್ನೊಂದು ಹೆಸರು. ಅದು ಬಾಹ್ಯರೂಪದಿಂದ ಅಲ್ಲ, ಆತನ ವಿದ್ಯೆ ಮತ್ತು ವಿನಯಗಳ ಶೋಭೆಯಿಂದಾಗಿ. ಸುಗ್ರೀವನ ಸಚಿವ ರಾಮನೆಡೆಗೆ ಆಕರ್ಷಿತನಾಗುವುದು ಆತನ ಮೊದಲ ನೋಟದಲ್ಲಿಯೇ. ರಾಮನನ್ನು ನೋಡಿದ ತಕ್ಷಣ ಆತನ ಶಾಪ ವಿಮೋಚನೆಯಾಯಿತು ಎನ್ನುವ ಕಥೆ ಮೂಲ ರಾಮಾಯಣದಲ್ಲಿಲ್ಲ.

ಸುಗ್ರೀವನ ಚಂಚಲತೆಯ ವಿಷಯಗಳನ್ನು ಮುಂದಿನ ಸಂಚಿಕೆಯಲ್ಲಿ ಗಮನಿಸೋಣ.

Continue Reading

ದೇಶ

ರಾಜಮಾರ್ಗ ಅಂಕಣ: ಅನಾಥಾಶ್ರಮದ ಹುಡುಗಿಯು ಅಮೇರಿಕನ್ ಕಂಪೆನಿಯ ಸಿಇಒ ಆದ ಕಥೆ

ರಾಜಮಾರ್ಗ ಅಂಕಣ: ವಿಶೇಷ ಎಂದರೆ ಜ್ಯೋತಿ ರೆಡ್ಡಿ ಅವರು ಇಂದಿಗೂ ತನ್ನ ಬಾಲ್ಯದ ಕಷ್ಟಗಳನ್ನು ಮರೆತಿಲ್ಲ. ವರ್ಷಕ್ಕೊಮ್ಮೆ ಆದರೂ ಭಾರತಕ್ಕೆ ಬಂದೇ ಬರುತ್ತಾರೆ. ಅನಾಥಾಶ್ರಮಗಳಿಗೆ ಭೇಟಿ ನೀಡಿ ನೆರವು ನೀಡುತ್ತಾರೆ. ಹಲವು ಸರಕಾರಿ ಶಾಲೆಗಳ ನೂರಾರು ಬಡ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸುತ್ತಾರೆ.

VISTARANEWS.COM


on

ರಾಜಮಾರ್ಗ ಅಂಕಣ Jyothi Reddy

ವಾರಂಗಲ್ ನಗರದ ಕಲ್ಲು ಒಡೆಯುವ ಹುಡುಗಿ ಜ್ಯೋತಿ ರೆಡ್ಡಿ ಬಿಲಿಯನ್ ಡಾಲರ್ ಕಂಪೆನಿ ಕಟ್ಟಿದ್ದು ಹೇಗೆ?

Rajendra-Bhat-Raja-Marga-Main-logo

:: ರಾಜೇಂದ್ರ ಭಟ್ ಕೆ.

ರಾಜಮಾರ್ಗ ಅಂಕಣ: ‘ಯಾವಾಗ ನಿನ್ನ ಆಕಾಂಕ್ಷೆಗಳು ಪ್ರಬಲವಾಗಿ ಇರುತ್ತವೆಯೋ, ಆಗ ನಿನ್ನೊಳಗೆ ಅತಿಮಾನುಷ ಶಕ್ತಿಗಳು ಪ್ರವಹಿಸುತ್ತವೆ.ʼ
(ನೆಪೋಲಿಯನ್ ಹಿಲ್)

ಈ ಮಾತಿಗೆ ನಿದರ್ಶನ ಆಗುವ ಸಾಧನೆ ಮಾಡಿ ತನ್ನ ಬದುಕನ್ನು ತಾನೇ ರೂಪಿಸಿಕೊಂಡಿರುವ ಒಬ್ಬ ಅನಾಥ ಹುಡುಗಿಯ ಕಥೆಯು ಇಂದು ನಿಮ್ಮ ಮುಂದೆ.

ಆಕೆಯ ಹೆಸರು ಜ್ಯೋತಿ ರೆಡ್ಡಿ (Jyothi Reddy). ಆಕೆ ತೆಲಂಗಾಣ ರಾಜ್ಯದ ವಾರಂಗಲನ ಅತ್ಯಂತ ಬಡ ಕುಟುಂಬದ ಹುಡುಗಿ ಆಗಿದ್ದಳು. ಆಕೆಯ ಹೆತ್ತವರಿಗೆ ಮೂರು ಗಂಡು ಮತ್ತು ಎರಡು ಹೆಣ್ಣು ಮಕ್ಕಳು. ಬಡತನ ಮತ್ತು ಹಸಿವು ಹೆಚ್ಚಾದ ಕಾರಣ ಅವಳ ಹೆತ್ತವರು ಇಬ್ಬರು ಹೆಣ್ಣು ಮಕ್ಕಳನ್ನು ಅನಾಥಾಶ್ರಮಕ್ಕೆ ಸೇರಿಸಿದರು. ಮತ್ತೆ ಅವರನ್ನು ನೋಡಲಿಕ್ಕೂ ಬರಲಿಲ್ಲ! ಅದರಲ್ಲಿ ಒಬ್ಬರು ಜ್ಯೋತಿ! ಆಕೆ ತನ್ನ ಬಾಲ್ಯದ ಐದು ವರ್ಷಗಳನ್ನು ಅನಾಥಾಶ್ರಮದಲ್ಲಿ ಕಳೆಯಬೇಕಾಯಿತು.

ಅಸಹಾಯಕ ಬದುಕು, ನೂರಾರು ಸವಾಲು!

ಹಿರಿಯ ಮಗಳಾದ ಜ್ಯೋತಿ ಅನಾಥ ಮಕ್ಕಳ ಸರಕಾರಿ ಶಾಲೆಗೆ ಹೋಗಿ 12ನೆಯ ತರಗತಿ ಪಾಸಾದಳು. ಅದರ ಬೆನ್ನಿಗೆ ಅವರ ಕಸಿನ್ ಜೊತೆಗೆ ಮದುವೆ ಕೂಡ ನಡೆದು ಹೋಯಿತು. ಆಗ ಅವರಿಗೆ 16 ವರ್ಷ! ಹದಿನೆಂಟು ತುಂಬುವ ಹೊತ್ತಿಗೆ ಮಡಿಲಲ್ಲಿ ಎರಡು ಹೆಣ್ಣು ಮಕ್ಕಳು ಮಲಗಿದ್ದವು! ಗಂಡನಿಗೆ ಎಲ್ಲಿಯೂ ಪರ್ಮನೆಂಟ್ ಕೆಲಸ ಇರಲಿಲ್ಲ. ಆಗ ಮಕ್ಕಳ ಜವಾಬ್ದಾರಿ ಕೂಡ ಜ್ಯೋತಿ ಅವರೇ ಹೊತ್ತರು.

ಕಠಿಣ ದುಡಿಮೆಯ ಜೊತೆಗೆ ಒಂದಷ್ಟು ಕನಸು!

ಬತ್ತದ ಗದ್ದೆಯಲ್ಲಿ ನೇಜಿಯನ್ನು ನೆಡುವ ಕೆಲಸ, ಕಲ್ಲನ್ನು ಒಡೆಯುವ ಕೆಲಸವನ್ನು ಕೂಡ ಅವರು ಮಾಡಿದರು. ತನ್ನ ಬದುಕು ಸ್ವಾವಲಂಬಿ ಆಗಬೇಕು ಎನ್ನುವ ತುಡಿತ ಅವರನ್ನು ಅಂತಹ ಕೆಲಸಕ್ಕೆ ದೂಡಿತು.

ಆಗ ಅವರ ನೆರವಿಗೆ ಬಂದದ್ದು ‘ನೆಹರೂ ಯುವ ಕೇಂದ್ರ’ ಎನ್ನುವ ಸರಕಾರದ ಅಧೀನ ಸಂಸ್ಥೆ. ಅದರಲ್ಲಿ ಜ್ಯೋತಿ ರೆಡ್ಡಿ ಅವರು ಸ್ವಯಂಸೇವಕಿಯಾಗಿ ಮಕ್ಕಳಿಗೆ ಪಾಠ ಮಾಡುವ ಕೆಲಸ ಮಾಡಿದರು. ಅದರ ಜೊತೆಗೆ ಅಂಬೇಡ್ಕರ್ ಬಯಲು ವಿವಿಯ ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವಿ ಎರಡನ್ನೂ ಅವರು ಮುಗಿಸಿದರು. ಹಾಗೆಯೇ ಅವರ ಕಂಪ್ಯೂಟರ್ ಅಪ್ಲಿಕೇಶನ್ ಡಿಪ್ಲೊಮಾ ಕೂಡ ಪೂರ್ತಿ ಆಯಿತು.

ಟೀಚರ್ ಆಗಿ ಉದ್ಯೋಗ ಆರಂಭ ಮಾಡಿದರು

ಆಗ ಅವರಿಗೆ ಸರಕಾರಿ ಶಾಲೆಯ ಟೀಚರ್ ಉದ್ಯೋಗವು ದೊರೆಯಿತು. ತಿಂಗಳಿಗೆ 6,000 ರೂಪಾಯಿ ಸಂಬಳ ಕೈ ಸೇರುತ್ತಿತ್ತು. ಪುಟ್ಟ ಬಾಡಿಗೆ ಮನೆ. ಅವರ ಕುಟುಂಬಕ್ಕೆ ಆ ಸಂಬಳವು ಯಾವುದಕ್ಕೂ ಸಾಲುತ್ತಿರಲಿಲ್ಲ. ಶಾಲೆಗೆ ಎರಡು ಘಂಟೆ ನಡೆದು ಹೋಗುವ ಕಷ್ಟ ಬೇರೆ. ಆಗ ದಾರಿಯಲ್ಲಿ ಸೀರೆಗಳನ್ನು ಮಾರುತ್ತ ಒಂದಿಷ್ಟು ಹಣ ಗಳಿಸಿದರು. ಮನೆಯಲ್ಲಿ ಒಂದು ಹೊಲಿಗೆ ಯಂತ್ರ ಇಟ್ಟುಕೊಂಡು ಸ್ವಲ್ಪ ಸಂಪಾದನೆ ಮಾಡಿದರು.

ಅಮೆರಿಕಾದಲ್ಲಿ ಉದ್ಯೋಗದ ಆಫರ್ ಬಂತು!

2000ರ ಹೊತ್ತಿಗೆ ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ಬಂದೇ ಬಿಟ್ಟಿತು. ಅವರ ಸೋದರ ಮಾವ ಒಬ್ಬರು ಅಮೆರಿಕಾದಿಂದ ಊರಿಗೆ ಬಂದವರು ಜ್ಯೋತಿ ಅವರನ್ನು ಭೇಟಿ ಮಾಡಿದರು. ಅಮೆರಿಕಾದಲ್ಲಿ ಉದ್ಯೋಗದ ಭರವಸೆ ನೀಡಿದರು. ಆಗ ಅವರ ಮನಸ್ಸಿನಲ್ಲಿ ಗೊಂದಲವು ಆರಂಭ ಆಯಿತು.

ಒಂದು ಕಡೆ ತನ್ನ ಸಂಸಾರದ ಜವಾಬ್ದಾರಿ. ಇನ್ನೊಂದು ಕಡೆ ಸರಕಾರಿ ನೌಕರಿ. ಮತ್ತೊಂದು ಕಡೆ ಅವರದ್ದೇ ಆದ ಬಹಳ ದೊಡ್ಡ ಕನಸು! ಇವುಗಳಲ್ಲಿ ಯಾವುದನ್ನು ಆರಿಸುವುದು? ಕೊನೆಗೆ ಅವರು ಗಟ್ಟಿ ನಿರ್ಧಾರ ಮಾಡಿ ಮೂರನೆಯದನ್ನು ಆರಿಸಿದರು. ಅದರಲ್ಲಿ ತೀವ್ರವಾದ ರಿಸ್ಕ್ ಇತ್ತು. ಆದರೆ ರಿಸ್ಕ್ ಇಲ್ಲದೆ ಕನಸು ಪೂರ್ತಿ ಆಗುವುದು ಹೇಗೆ?

ವಾರಂಗಲ್ ಟು ಅಮೆರಿಕಾ ಹಾರಿದರು!

ಪ್ರೀತಿಸುವ ತನ್ನ ಎರಡು ಹೆಣ್ಣು ಮಕ್ಕಳನ್ನು ಒಂದು ಮಿಷನರಿ ಹಾಸ್ಟೆಲಿನಲ್ಲಿ ಬಿಟ್ಟರು. ವೀಸಾ ಮಾಡಿಸಲು ತುಂಬಾ ಕಷ್ಟಪಟ್ಟರು. ಕೊನೆಗೆ ಧೈರ್ಯ ಜೋಡಿಸಿಕೊಂಡು ವಾರಂಗಲ್ ಟು ಅಮೆರಿಕ ವಿಮಾನದಲ್ಲಿ ಹಾರಿದರು! ಈಗ ಅವರಿಗೆ ನಿಜವಾದ ಸಮಸ್ಯೆಗಳು ಆರಂಭವಾದವು. ಕೆಲಸ ಕೊಡಿಸುವ ಭರವಸೆ ಕೊಟ್ಟಿದ್ದ ಸೋದರ ಮಾವ ಅಲ್ಲಿ ಕೈ ಎತ್ತಿದರು. ಮಹಾನಗರದಲ್ಲಿ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಬಿಟ್ಟ ಅನುಭವ ಅವರಿಗೆ ಆಯಿತು. ತಂದಿದ್ದ ಸ್ವಲ್ಪ ದುಡ್ಡು ಪೂರ್ತಿ ಖಾಲಿ ಆಗಿತ್ತು.

ಮಾಯಾ ನಗರಿಯಲ್ಲಿ ಒಂಟಿ ಹೆಣ್ಣಿನ ಹೋರಾಟ!

ಅವರು ಯಾವತ್ತೂ ಅಮೆರಿಕಾ ನೋಡಿದವರೇ ಅಲ್ಲ! ಅಲ್ಲಿ ಅವರಿಗೆ ಸಂಬಂಧಿಕರು ಅಥವಾ ಪರಿಚಯದವರು ಅಂತ ಯಾರೂ ಇರಲಿಲ್ಲ. ಆದರೆ ಗುಂಡಿಗೆಯಲ್ಲಿ ಧೈರ್ಯ ಇತ್ತು. ತಮ್ಮ ಪದವಿ, ಸ್ಟೇಟಸ್ ಎಲ್ಲವನ್ನೂ ಗಾಳಿಗೆ ತೂರಿ ಗ್ಯಾಸ್ ಸ್ಟೇಶನ್, ಬೇಬಿ ಸಿಟ್ಟಿಂಗ್, ವಿಡಿಯೋ ಗೇಮ್ಸ್ ಶಾಪ್… ಹೀಗೆ ಹಲವು ಕಡೆ ದುಡಿದರು. ಆ ಸಂದರ್ಭ ಸೂಕ್ಷ್ಮವಾಗಿ ಅಮೆರಿಕಾದ ಜನ ಜೀವನವನ್ನು, ಉದ್ಯೋಗದ ಅವಕಾಶಗಳನ್ನು ಅಭ್ಯಾಸ ಮಾಡಿದರು. ಅವರು ಒಂದೂವರೆ ವರ್ಷದಲ್ಲಿ 40,000 ಅಮೇರಿಕನ್ ಡಾಲರ್ ಸಂಪಾದನೆ ಮಾಡಿದ್ದರು!

ಆರಂಭ ಆಗಿಯೇ ಬಿಟ್ಟಿತು ಕನಸಿನ ಕಂಪೆನಿ!

ಅದನ್ನು ಬಂಡವಾಳ ಮಾಡಿಕೊಂಡು ಅಮೆರಿಕಾದ ಫೀನಿಕ್ಸ್ ಎಂಬಲ್ಲಿ ಒಂದು ಸಣ್ಣದಾದ ಕಚೇರಿಯನ್ನು ತೆರೆದು ‘KEY SOFTWARE SOLUTIONS’ ಎಂಬ ಕನ್ಸಲ್ಟೆನ್ಸಿ ಕಂಪೆನಿ ತೆರೆದರು( 2001). ಅವರು ಕಲಿತಿದ್ದ ಕಂಪ್ಯೂಟರ್ ತರಬೇತಿಯು ಅವರಿಗೆ ಈಗ ಸಹಾಯಕ್ಕೆ ಬಂದಿತು.

ಅಮೆರಿಕಾದಲ್ಲಿ ಹೊರಗಿಂದ ಬರುವವರಿಗೆ ಉದ್ಯೋಗದ ಅವಕಾಶಗಳ ಬಗ್ಗೆ ಮಾಹಿತಿ ಮತ್ತು ವೀಸಾ ಪಡೆಯುವ ಬಗ್ಗೆ ಮಾರ್ಗದರ್ಶನ ನೀಡುವ ಸಂಸ್ಥೆಯಾಗಿ ತಮ್ಮ ಸಂಸ್ಥೆಯನ್ನು ಬೆಳೆಸಿದರು. ಒಬ್ಬರೇ ಸ್ವಾವಲಂಬಿಯಾದ ಹೆಣ್ಣು ಮಗಳು ಅಮೆರಿಕಾದಲ್ಲಿ ಮಾಡಿದ ಭಾರೀ ಹೋರಾಟವು ಕೊನೆಗೂ ಫಲ ನೀಡಿತು. ಒಂದರ ಹಿಂದೆ ಒಂದು ಅವರ ಕಂಪೆನಿಯ ಫ್ರಾಂಚೈಸಿಗಳು ಆರಂಭ ಆದವು. ಅವರ ಕಠಿಣ ಪರಿಶ್ರಮ, ಬದ್ಧತೆ ಮತ್ತು ಬಲವಾದ ನಂಬಿಕೆ ಇವುಗಳು ಅವರನ್ನು ಬಹಳ ಎತ್ತರಕ್ಕೆ ಬೆಳೆಸಿದವು.

ಇಂದವರ ಕಂಪೆನಿ ಬಿಲಿಯನ್ ಡಾಲರ್ ಆದಾಯ ಹೊಂದಿದೆ!

ಈಗ ಅವರ ಬಿಲಿಯನ್ ಡಾಲರ್ ಕಂಪೆನಿಯು ನೂರಾರು ಮಂದಿಗೆ ಉದ್ಯೋಗ ನೀಡಿದೆ. ತನ್ನ ಇಬ್ಬರು ಮಕ್ಕಳನ್ನು ಕೂಡ ಅವರು ಅಮೆರಿಕಕ್ಕೆ ಕರೆಸಿ ಸಾಫ್ಟವೇರ್ ಇಂಜಿನಿಯರಿಂಗ್ ಓದಿಸಿ ಮದುವೆ ಮಾಡಿದ್ದಾರೆ. ಅವರಿಗೆ NRI OF THE YEAR ಪ್ರಶಸ್ತಿ ದೊರೆತಿದೆ!

ಕೆರೆಯ ನೀರನು ಕೆರೆಗೆ ಚೆಲ್ಲಿ…

ವಿಶೇಷ ಎಂದರೆ ಜ್ಯೋತಿ ರೆಡ್ಡಿ ಅವರು ಇಂದಿಗೂ ತನ್ನ ಬಾಲ್ಯದ ಕಷ್ಟಗಳನ್ನು ಮರೆತಿಲ್ಲ. ವರ್ಷಕ್ಕೊಮ್ಮೆ ಆದರೂ ಭಾರತಕ್ಕೆ ಬಂದೇ ಬರುತ್ತಾರೆ. ಅನಾಥಾಶ್ರಮಗಳಿಗೆ ಭೇಟಿ ನೀಡಿ ನೆರವು ನೀಡುತ್ತಾರೆ. ಹಲವು ಸರಕಾರಿ ಶಾಲೆಗಳ ನೂರಾರು ಬಡ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸುತ್ತಾರೆ. ಎಸೆಸೆಲ್ಸಿಯ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಬಡಮಕ್ಕಳಿಗೆ ತಲಾ ಐದು ಸಾವಿರ ರೂಪಾಯಿ ಬಹುಮಾನ ಕೊಟ್ಟು ಬೆನ್ನು ತಟ್ಟುತ್ತಾರೆ.

“ಬಾಲ್ಯದ ಬಡತನ ನನ್ನ ಮನಸ್ಸು ಮತ್ತು ಹೃದಯವನ್ನು ನೋಯಿಸಿತ್ತು. ಆದರೆ ಭಾರತದ ಪ್ರತಿ ಅನಾಥ ಮಗು ನನ್ನಂತೆ ಬೆಳೆಯಬೇಕು ಎಂದು ಆಸೆ ಪಡುತ್ತೇನೆ” ಎಂದು ಆಕೆಯು ಹೇಳುವಾಗ ಅವರ ಕಣ್ಣಲ್ಲಿ ಗೆದ್ದ ಖುಷಿ ಇತ್ತು!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಪೇಪರ್ ಹಂಚುತ್ತಿದ್ದ ಹುಡುಗ ಜಿಲ್ಲಾಧಿಕಾರಿ ಆದ ಕಥೆ

Continue Reading

ಅಂಕಣ

ರಾಜಮಾರ್ಗ ಅಂಕಣ: ಪೇಪರ್ ಹಂಚುತ್ತಿದ್ದ ಹುಡುಗ ಜಿಲ್ಲಾಧಿಕಾರಿ ಆದ ಕಥೆ

ರಾಜಮಾರ್ಗ ಅಂಕಣ: ಅನಾಥಾಶ್ರಮದಲ್ಲಿ ಇದ್ದ ಹುಡುಗ, ಪೇಪರ್‌ ಹಂಚುತ್ತಿದ್ದ ಬಾಲಕ, ಕಠಿಣ ಪರಿಶ್ರಮದಿಂದ ಬೆಳೆದು ಜಿಲ್ಲಾಧಿಕಾರಿ ಆದ ಕಥೆ ಎಂಥವರಿಗೂ ಸ್ಫೂರ್ತಿ.

VISTARANEWS.COM


on

ರಾಜಮಾರ್ಗ ಅಂಕಣ abudal nasar ias

ಕೇರಳದ ಅಬ್ದುಲ್ ನಾಸರ್ ಬದುಕಿನ ಯಶೋಗಾಥೆ ಅದ್ಭುತ!

Rajendra-Bhat-Raja-Marga-Main-logo

:: ರಾಜೇಂದ್ರ ಭಟ್ ಕೆ.

ರಾಜಮಾರ್ಗ ಅಂಕಣ: ಆತ ತನ್ನ ಐದನೇ ವರ್ಷಕ್ಕೆ ಸರಿಯಾಗಿ ತನ್ನ ಅಪ್ಪನನ್ನು ಕಳೆದುಕೊಂಡಿದ್ದರು. ಅವರಿಗೆ ಐದು ಜನ ಸೋದರ, ಸೋದರಿಯರು. ಅವರನ್ನೆಲ್ಲ ಸಾಕಲು ಅವರ ಅಮ್ಮ ಯಾರ್ಯಾರದೋ ಮನೆಯಲ್ಲಿ ಪಾತ್ರೆ ಪಗಡಿಗಳನ್ನು ತೊಳೆಯಬೇಕಾಯಿತು. ಹಸಿವು ಮತ್ತು ಅಪಮಾನ ಬದುಕಿನ ಪಾಠ ಕಲಿಸಿತು.

13 ವರ್ಷ ಅನಾಥಾಶ್ರಮದಲ್ಲಿ ಕಳೆದವರು ನಾಸರ್

ಅಮ್ಮನಿಗೆ ಅವರನ್ನು ಸಾಕುವುದು ಕಷ್ಟ ಆದಾಗ ಮಗನನ್ನು ಒಂದು ಅನಾಥಾಶ್ರಮದಲ್ಲಿ ತಂದು ಬಿಟ್ಟರು. ಅಲ್ಲಿನ ಅರೆಹೊಟ್ಟೆಯ ಊಟ, ಅನಾರೋಗ್ಯಕರ ವಾತಾವರಣ ಮತ್ತು ಬೆವರು ಹರಿಸುವ ದುಡಿಮೆ ಅವರ ಸಂಗಾತಿಗಳು ಆದದ್ದು ಆಗ. ಅಲ್ಲಿನ ಹಿಂಸೆಯು ಅತಿಯಾದಾಗ ಅನಾಥಾಶ್ರಮ ಬಿಟ್ಟು ಓಡಿ ಹೋಗುವ ನೆನಪು ಅವರಿಗೆ ಆದದ್ದು ಉಂಟು. ರಾಗಿಂಗ್ ಕೂಡ ಜೋರಾಗಿತ್ತು. ಓಡಿ ಹೋಗೋಣ ಎಂದು ಅನ್ನಿಸಿದಾಗಲೆಲ್ಲ ಅಮ್ಮನ ಅಸಹಾಯಕತೆಯು ಕಣ್ಣ ಮುಂದೆ ಬಂದು ಕಣ್ಣೀರು ಗಲ್ಲವನ್ನು ತೋಯಿಸುತ್ತಿತ್ತು. ಆಗ ತನ್ನ ಶಿಕ್ಷಣದ ಖರ್ಚು ತಾನೇ ಭರಿಸಲು ಅವರು ನಿರ್ಧಾರ ಮಾಡುತ್ತಾರೆ.

ಹೊಟ್ಟೆಪಾಡಿಗಾಗಿ ಹಲವೆಡೆಗಳಲ್ಲಿ ದುಡಿಮೆ

ಬಿಡುವಿನ ಅವಧಿಯಲ್ಲಿ ಪೇಪರ್ ಹಂಚುವ, ಬಸ್ಸುಗಳಲ್ಲಿ ಕ್ಲೀನರ್ ಆಗಿ ದುಡಿಯುವ, ಹೋಟೆಲುಗಳಲ್ಲಿ ಸಪ್ಲಾಯರ್ ಆಗಿ ದುಡಿಯುವ ಅವಕಾಶ ಅವರಿಗೆ ಒದಗಿತು. ತಲಸ್ಸೇರಿಯ ಪದವಿ ಕಾಲೇಜಿನಲ್ಲಿ ಓದುವಾಗ ತನಗಿಂತ ಕಿರಿಯ ವಿದ್ಯಾರ್ಥಿಗಳಿಗೆ ಟ್ಯೂಶನ್ ಕೊಡುವುದು, ಫೋನ್ ಆಪರೇಟರ್ ಮೊದಲಾದ ಉದ್ಯೋಗವನ್ನು ಮಾಡಿದರು.

ಕಲಿಕೆಯಲ್ಲಿ ಸಾಧಾರಣ ವಿದ್ಯಾರ್ಥಿ

ಅಬ್ದುಲ್ ನಾಸರ್ ಹೇಳುವ ಪ್ರಕಾರ ಅವರೊಬ್ಬ ಸಾಮಾನ್ಯರಲ್ಲಿ ಸಾಮಾನ್ಯ ಬುದ್ಧಿಮತ್ತೆಯ ವಿದ್ಯಾರ್ಥಿ. ಹೈಸ್ಕೂಲ್, ಪಿಯುಸಿ, ಪದವಿ ಎಲ್ಲ ಕಡೆಯೂ ಅವರಿಗೆ ದೊರೆತದ್ದು ಕೇವಲ ದ್ವಿತೀಯ ದರ್ಜೆ ಮಾತ್ರ. ಆದರೆ MSW ಮಾಡುವಾಗ ಅವರ ಅದ್ಭುತವಾದ ಪ್ರತಿಭೆ ಹೊರಬಂದಿತು. ಅದರಲ್ಲಿ ಅವರಿಗೆ ಅತ್ಯುನ್ನತ ಶ್ರೇಣಿ ಫಲಿತಾಂಶ ಬಂದಿತು. 1994ರಲ್ಲಿ ಕೇರಳ ಸರಕಾರದ ಆರೋಗ್ಯ ಇಲಾಖೆಯಲ್ಲಿ ಉದ್ಯೋಗಿ ಆಗಿ ಕೆಲಸಕ್ಕೆ ಸೇರಿದರು.

ಓದುವ ಹಸಿವು ಕಡಿಮೆ ಆಗಲೇ ಇಲ್ಲ

ಸರಕಾರಿ ಉದ್ಯೋಗಕ್ಕೆ ಸೇರಿದ ಕೂಡಲೇ ಅವರು ತನ್ನ ಅಮ್ಮನನ್ನು ಮನೆಕೆಲಸವನ್ನು ಬಿಡಿಸಿ ತನ್ನ ಕ್ವಾರ್ಟರ್ಸಗೆ ಕರೆದುಕೊಂಡು ಬಂದರು. ಅಲ್ಲಿ ಅವರಿಗೆ ನೆಮ್ಮದಿಯ ಬದುಕು ದೊರೆಯಲು ಏನೆಲ್ಲ ಬೇಕೋ ಅದೆಲ್ಲವನ್ನೂ ಮಾಡಿಕೊಟ್ಟರು.

ವರ್ಷಕ್ಕೆ ಎರಡೆರಡು ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಾ ಸಾಗಿದರು

ಈ ಕಡೆ ಅವರ ಓದುವ ಅಭ್ಯಾಸವು ತೀವ್ರವಾಗಿ ಹೆಚ್ಚಾಯಿತು. ರಸ್ತೆ ಬದಿಯಲ್ಲಿ ಅರ್ಧ ಬೆಲೆಗೆ ಮಾರಾಟ ಆಗುತ್ತಿದ್ದ ಪುಸ್ತಕಗಳನ್ನು ಆಯ್ದು ತಂದು ಓದಿದರು. ನಂತರ ಅವುಗಳನ್ನು ಅದೇ ರೇಟಿಗೆ ತನ್ನ ಗೆಳೆಯರಿಗೆ ಮಾರಿದರು. ವರ್ಷಕ್ಕೆ ಎರಡೆರಡು ಪರೀಕ್ಷೆಗಳನ್ನು ಬರೆದು ಭಡ್ತಿ ಪಡೆಯುತ್ತಾ ಮುಂದೆ ಹೋದರು. ಸಮರ್ಪಣಾ ಭಾವದಿಂದ ದುಡಿದು ಸರಕಾರದ ಮನ್ನಣೆ ಪಡೆದರು. 2015ರಲ್ಲಿ ಅವರು ಸ್ವಂತ ಸಾಮರ್ಥ್ಯದ ಮೇಲೆ ಡೆಪ್ಯೂಟಿ ಕಲೆಕ್ಟರ್ ಹುದ್ದೆಗೆ ಏರಿದರು. 2019ರಲ್ಲಿ ಕೊಲ್ಲಂ ಜಿಲ್ಲೆಯ ಜಿಲ್ಲಾಧಿಕಾರಿ ಆಗಿ ಕೂಡ ಆಯ್ಕೆ ಆದರು. ಭ್ರಷ್ಟಾಚಾರ ಇಲ್ಲದ ಶುದ್ಧಾಂಗ ಅಧಿಕಾರವನ್ನು ಉಪಯೋಗ ಮಾಡಿ ಗೆದ್ದರು.

ತನ್ನ ಹುದ್ದೆಯನ್ನು ಪ್ರಭಾವಯುತವಾಗಿ ಬಳಕೆ ಮಾಡಿಕೊಂಡು ಜನರ ಸೇವೆ ಮಾಡಿದರು. ತನ್ನನ್ನು ಜನಸೇವೆಗೆ ಮುಡಿಪಾಗಿಟ್ಟರು. ಅಬ್ದುಲ್ ನಾಸರ್ ಅವರ ಹೋರಾಟದ ಬದುಕು ಯಾರಿಗಾದರೂ ಸ್ಫೂರ್ತಿದಾಯಕ ಆಗಬಹುದು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ನೆನಪಾದಳು ಅರುಣಾ ಶಾನುಭಾಗ್!‌

Continue Reading
Advertisement
Latest4 ಗಂಟೆಗಳು ago

ಹೆಣ್ಣು ಮಗುವಿನ ತಂದೆಯಾದ ಖ್ಯಾತ ನಿರ್ದೇಶಕ ಅಟ್ಲಿ; ಅಭಿನಂದನೆಗಳ ಮಹಾಪೂರ

Latest5 ಗಂಟೆಗಳು ago

ಮಹಿಳಾ ಮೀಸಲು ಮಸೂದೆ ಕಾಂಗ್ರೆಸ್‌ ಪಕ್ಷದ ಕನಸು ಮತ್ತು ಕೂಸು: ಡಿ.ಕೆ.ಶಿವಕುಮಾರ್

ಅವಿಭಾಗೀಕೃತ5 ಗಂಟೆಗಳು ago

ಕಾಶ್ಮೀರ: ಕಂದಕಕ್ಕೆ ಉರುಳಿದ ಬಸ್; 15 ಸಾವು, ಹಲವರ ಸ್ಥಿತಿ ಗಂಭೀರ

ದೇಶ5 ಗಂಟೆಗಳು ago

ದೇಶದ ಪ್ರಧಾನಿಗೆ ಕೈಯಾರ ಚುರುಮುರಿ ಕೊಟ್ಟರೂ ಇಲ್ಲ ಖುಷಿ! ಆ ತಪ್ಪು ಮಾಡಬಾರದಿತ್ತು ಅಂದ ವ್ಯಾಪಾರಿ

Latest5 ಗಂಟೆಗಳು ago

ಗ್ಯಾಂಗ್‌ಸ್ಟರ್ ಸಿನಿಮಾ ಎಂಬ ಭ್ರಮೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಯಶ್; ‘ಟಾಕ್ಸಿಕ್’ ಹಿಂದಿದೆ ಬೇರೆಯದೇ ಪ್ಲ್ಯಾನ್‌!

ಅವಿಭಾಗೀಕೃತ5 ಗಂಟೆಗಳು ago

ಅಹಿಂದ ರಕ್ಷಣೆ ಹೊಣೆ ಹೊತ್ತ ಸಚಿವ ಜಾರಕಿಹೊಳಿ: ಇದರ ಮರ್ಮವೇನು?

Latest6 ಗಂಟೆಗಳು ago

ಸಾಧ್ವಿ ಸೈಲ್ ಮಿಸ್ ವರ್ಲ್ಡ್ ಪ್ರಶಸ್ತಿ ಗೆಲ್ಲಲಿ: ಸಿಎಂ ಸಿದ್ದರಾಮಯ್ಯ ಆಶಯ

Latest6 ಗಂಟೆಗಳು ago

ಮೋದಿ-ಸಿದ್ದರಾಮಯ್ಯ ಗುಸುಗುಸು: ಇಬ್ಬರೂ ಮಾತನಾಡಿದ ವಿಷಯ ಬಹಿರಂಗ

Latest7 ಗಂಟೆಗಳು ago

ಪ್ರಧಾನಿ ಮೋದಿ ಸಾಮಾಜಿಕ ನ್ಯಾಯದ ಪರವಾಗಿಲ್ಲ: ಸಿಎಂ ಸಿದ್ದರಾಮಯ್ಯ ಟೀಕೆ

Latest8 ಗಂಟೆಗಳು ago

ಬಸವಣ್ಣನವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು: ಸಚಿವ ಸತೀಶ್‌ ಜಾರಕಿಹೊಳಿ

galipata neetu
ಕಿರುತೆರೆ2 ವರ್ಷಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 ವರ್ಷಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 ವರ್ಷಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 ವರ್ಷಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 ವರ್ಷಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ವರ್ಷಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ವರ್ಷಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ವರ್ಷಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ವರ್ಷಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ವರ್ಷಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ವರ್ಷಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ವರ್ಷಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ವರ್ಷಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ವರ್ಷಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ವರ್ಷಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌