ಅಂಕಣ
ಗೋ ಸಂಪತ್ತು : ಕೃಷ್ಣನೇಕೆ ಬೆಣ್ಣೆ ಕದ್ದ? ಇಲ್ಲಿದೆ ವೈಜ್ಞಾನಿಕ ಸತ್ಯ!
ಗೋವಿನ ಮಹತ್ವ ಮತ್ತು ವಿಚಾರಗಳನ್ನು ತಿಳಿಸುವ ಲೇಖನ ಮಾಲೆ “ಗೋ ಸಂಪತ್ತು” ನಲ್ಲಿ ಈ ವಾರ ಹಾಲಿನ ಉತ್ಪನ್ನಗಳ ಪ್ರಾಮುಖ್ಯತೆಯನ್ನು (Importance of Dairy Products) ತಿಳಿಸಿಕೊಡಲಾಗಿದೆ.
ಕೃಷ್ಣನ ಬಾಲ ಲೀಲೆಗಳಲ್ಲಿ ಆತ ತನ್ನ ಸಂಗಡಿಗರೊಂದಿಗೆ ಬೆಣ್ಣೆಯನ್ನು ಕದಿಯುತ್ತಿದ್ದುದು ಅವಿಸ್ಮರಣೀಯವಾದುದು. ಹೀಗಾಗಿ ಈತನಿಗೆ ಬೆಣ್ಣೆ ಕಳ್ಳ ಎಂಬ ಹೆಸರು ಬಂದಿತ್ತು. ಈತ ಹೀಗೆ ಬೆಣ್ಣೆಯನ್ನು ಕದಿಯುತ್ತಿದ್ದುದರ ಹಿಂದೆ ಗೋಕುಲದಲ್ಲಿದ್ದ ಮಕ್ಕಳ ಸ್ವಾಸ್ಥ್ಯ ದ ರಹಸ್ಯವೇ ಅಡಗಿತ್ತು.
ಗೋಕುಲದಲ್ಲಿ ಅಪಾರ ಪ್ರಮಾಣದಲ್ಲಿ ಗೋವಂಶವಿತ್ತು. ಇದರಿಂದ ಅಪಾರ ಪ್ರಮಾಣದ ಹಾಲು ಹಾಗೂ ಅದರ ಉತ್ಪನ್ನಗಳ ಹೊಳೆಯೇ ಹರಿಯುತ್ತಿತ್ತು. ಹೀಗೆ ಅಪಾರವಾಗಿ ದೊರೆಯುತ್ತಿದ್ದ ಹೈನನ್ನು ಉಂಡ ಅಲ್ಲಿಯ ಮಕ್ಕಳಾದಿಯಾಗಿ ಎಲ್ಲರೂ ಸ್ವಾಸ್ಥ್ಯ ದಿಂದಿದ್ದರು. ಒಮ್ಮೆ ಇಲ್ಲಿ ಅಪಾರ ಪ್ರಮಾಣದಲ್ಲಿ ದೊರೆಯುತ್ತಿದ್ದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲೆ ಕ್ರೂರಿ ಕಂಸನ ಕಣ್ಣು ಬಿತ್ತು. ಕೂಡಲೇ ಆತ ಅಲ್ಲಿ ಉತ್ಪತ್ತಿಯಾಗುತ್ತಿದ್ದ ಅಷ್ಟು ಹೈನೋತ್ಪನ್ನಗಳನ್ನು ತನ್ನ ರಾಜಧಾನಿಯಾಗಿದ್ದ ಮಥುರಾಗೆ ಕಳುಹಿಸುವಂತೆ ರಾಜಾಜ್ಞೆ ಹೊರಡಿಸಿದ.
ಬೇರೆ ದಾರಿ ಕಾಣದೇ ಗೋಕುಲ ವಾಸಿಗಳು ತಮ್ಮಲ್ಲಿ ಉತ್ಪತ್ತಿಯಾಗುತ್ತಿದ್ದ ಅಷ್ಟು ಪ್ರಮಾಣದ ಹಾಲು, ಮೊಸರು, ಬೆಣ್ಣೆ ಸೇರಿದಂತೆ ಎಲ್ಲಾ ಹೈನೋತ್ಪನ್ನಗಳನ್ನು ಪ್ರತಿ ನಿತ್ಯ ಮಥುರಾಗೆ ಕಳುಹಿಸತೊಡಗಿದರು. ಇದರಿಂದ ಮನೆಯಲ್ಲಿ ಪೌಷ್ಟಿಕ ಅಂಶಗಳನ್ನೊಳಗೊಂಡ ಹಾಲು ಹಾಗೂ ಹಾಲಿನ ಉತ್ಪನ್ನಗಳು ಕಡಿಮೆಯಾಗಿ ದಿನದಿಂದ ದಿನಕ್ಕೆ ಮಕ್ಕಳಾದಿಯಾಗಿ ಗೋಕುಲದ ಜನರೆಲ್ಲಾ ಸೊರಗುವಂತಾಗಿ ದುರ್ಬಲರಾಗತೊಡಗಿದರು. ಇದನ್ನೆಲ್ಲಾ ಗಮನಿಸಿದ ಕೃಷ್ಣ ಪ್ರತಿ ನಿತ್ಯ ಕಂಸನ ರಾಜಧಾನಿಗೆ ಸಾಗಾಟವಾಗುತ್ತಿದ್ದ ಹೈನೋತ್ಪನ್ನಗಳನ್ನು ತಡೆದು ಮಕ್ಕಳನ್ನು ಬಲಿಷ್ಠರನ್ನಾಗಿಸುವ ಯೋಜನೆಯೊಂದನ್ನು ರೂಪಿಸಿದ. ಬೆಣ್ಣೆಯನ್ನು ತಾನು ಮತ್ತು ತನ್ನ ಸ್ನೇಹಿತರು ಕದ್ದು ತಿನ್ನುವ ಮೂಲಕ ಆ ಯೋಜನೆಗೆ ಚಾಲನೆಯನ್ನು ನೀಡಿದ.
ಗೋಲೋಕದ ನಿವಾಸಿಗಳನ್ನು ಸದೃಢಗೊಳಿಸುವ ಉದ್ದೇಶದಿಂದ ಬೃಂದಾವನದಲ್ಲಿದ್ದ ಅಷ್ಟು ಬೆಣ್ಣೆಯ ಮಡಿಕೆಗಳನ್ನು ಕದ್ದು ಮುಚ್ಚಿ ತನ್ನ ಸಹಪಾಠಿಗಳೊಂದಿಗೆ ಒಡೆಯಲಾರಂಭಿಸಿದ, ಜೊತೆಯಲ್ಲಿದ್ದವರಿಗೂ ತಿನ್ನಲು ಪ್ರೇರೇಪಿಸಿದ. ಹೀಗೆ ಪ್ರತಿ ನಿತ್ಯ ಇದನ್ನೇ ಕಾಯಕವನ್ನಾಗಿಸಿಕೊಂಡು ಜೊತೆಯಲ್ಲಿದ್ದ ಮಕ್ಕಳನ್ನು ಅವರಿಗೆ ತಿಳಿಯದಂತೆ ದಷ್ಟಪುಷ್ಟರನ್ನಾಗಿಸಿದ. ಈ ರೀತಿ ಊರಿನ ತರುಣ ಪೀಳಿಗೆ ಹಾಲು ಮತ್ತು ಹೈನನ್ನು ಸೇವಿಸಿ ದಷ್ಟಪುಷ್ಟರಾಗಲು ಪರೋಕ್ಷವಾಗಿ ಸಹಾಯಕನಾದ. ಈ ಕುರಿತಂತೆ ಪುರಾಣಗಳಲ್ಲ್ಲಿ ಸವಿಸ್ತಾರವಾದ ವರ್ಣನೆಯೇ ಇದೆ. ನಮಗೆ ಇದೊಂದು ಪೌರಾಣಿಕ ಕಥೆ ಎಂದೆನಿಸಬಹುದು. ಆದರೆ ಇದರ ಹಿಂದೆ ಅರಿವಿಲ್ಲದ ಸ್ವಾಸ್ಥ್ಯ ದ ಸತ್ಯದ ಭಂಡಾರವೇ ಅಡಗಿದೆ.
ಹೀಗೆ ಗೋಕುಲದ ಮುಂದಿನ ಪ್ರಜೆಗಳಿಗೆ ಭಗವಂತನು ಬೆಣ್ಣೆಯನ್ನು ತಿನ್ನಿಸಿ ಅವರನ್ನು ಆರೋಗ್ಯವಂತರನ್ನಾಗಿಸುವ ಮಾರ್ಗವನ್ನು ತೋರಿದ. ಸನ್ಮಾರ್ಗದಲ್ಲಿ ನಡೆದು ಗೋವುಗಳ ಸೇವೆಯನ್ನು ಮಾಡಲು ಶಕ್ತಿಯನ್ನು ತುಂಬಿದ. ಅವರಲ್ಲಿ ರೋಗ ನಿರೋಧಕ ಶಕ್ತಿಯನ್ನು ಅವರಿಗೆ ತಿಳಿಯದಂತೆ ಹೆಚ್ಚಿಸಿ ಅವರನ್ನು ನಿರೋಗಿಗಳನ್ನಾಗಿಸಿದ. ಹಾಗಾದರೆ ಶ್ರೀಕೃಷ್ಣ ಬೆಣ್ಣೆಯನ್ನು ಕದ್ದು ತಿನ್ನಿಸುವಷ್ಟರ ಮಟ್ಟಿಗೆ ಅದರಲ್ಲಿ ಅಂತಹದ್ದೇನಿದೆ ಎಂಬ ಸತ್ಯ ಇತ್ತೀಚೆಗೆ ವೈಜ್ಞಾನಿಕ ರೂಪದಲ್ಲಿ ಬೆಳಕಿಗೆ ಬರುತ್ತಿದೆ.
ಆಧುನಿಕ ವಿಜ್ಞಾನದಲ್ಲಿ ಮಕ್ಕಳಿಗೆ ದೇಶಿ ಗೋವಿನ ಬೆಣ್ಣೆಯ ಸೇವನೆ ಅಮೃತವೆಂದೇ ಹೇಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರೀ ಮೆಚ್ಯುರ್ ಬರ್ಥ್ ಎಂಬುದು ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ತಾಯಿಯ ಗರ್ಭದಲ್ಲಿ 6-7 ಅಥವಾ 8 ತಿಂಗಳಿದ್ದು ಸಮಯಕ್ಕೆ ಮುಂಚೆಯೇ ಮಗುವಿನ ಜನ್ಮವಾಗುತ್ತಿರುವುದು ಸಾಮಾನ್ಯ ಸಂಗತಿಯಂತಾಗುತ್ತಿದೆ. ಇಂತಹ ಸಮಯದಲ್ಲಿ ಹುಟ್ಟಿದ ಆ ಮಗುವಿನ ಶಾರೀರಿಕ ಬೆಳವಣಿಗೆ ಅಷ್ಟಾಗಿ ಆಗಿರುವುದಿಲ್ಲ. ತಾಯಿಯ ಗರ್ಭದಲ್ಲಿ ಯಾವ ವೇಗದಿಂದ ಬೆಳವಣಿಗೆ ಆಗುತ್ತದೋ, ಆ ವೇಗವು ಹುಟ್ಟಿದ ನಂತರ ಇರುವುದಿಲ್ಲ. ಇದರೊಂದಿಗೆ ಪೂರ್ಣ ಬೆಳವಣಿಗೆಯಾಗದಿರುವ ಮಗುವಿಗೆ ವಿವಿಧ ಕಾಯಿಲೆಗಳು ಸೋಂಕಿ ಅದರ ಬೆಳವಣಿಗೆಯ ವೇಗವು ಇನ್ನೂ ಕುಂಠಿತವಾಗುವುದರೊಂದಿಗೆ ದೇಹದ ತೂಕವು ಹೆಚ್ಚಾಗದೇ ಮಗು ಕ್ರಮೇಣ ಕ್ಷೀಣಿಸುತ್ತಾ ಹೋಗುತ್ತದೆ.
ಇದರೊಂದಿಗೆ ಬುದ್ಧಿಯ ಬೆಳವಣಿಗೆಯೂ ಸಹ ಸಾಕಷ್ಟು ಆಗದೆ, ರೋಗ ನಿರೋಧಕ ಕ್ಷಮತೆಯು ಕಡಿಮೆ ಇರುತ್ತದೆ. ವೈಜ್ಞಾನಿಕರೇ ಹೇಳುವಂತೆ ಇದಕ್ಕೆ ಒಂದೇ ಪರಿಹಾರ. ಅದೇ ತಾಯಂದಿರು ಮಗು ಗರ್ಭದಲ್ಲಿದ್ದಾಗ ಬೆಣ್ಣೆಯನ್ನು ಸೇವಿಸುವುದು. ಬೆಣ್ಣೆ ಬೆಳೆಯುತ್ತಿರುವ ಮಕ್ಕಳಿಗೆ ಎಲ್ಲದಕ್ಕಿಂತ ಉತ್ತಮ ಆಹಾರ. ಇದು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಹೇಳಿ ಮಾಡಿಸಿದಂತಿದ್ದು, ಮಗು ತಾಯಿಯ ಗರ್ಭದಲ್ಲಿದ್ದಾಗ ಮತ್ತು ನಂತರದ ದಿನಗಳಲ್ಲೂ ಮಕ್ಕಳನ್ನು ದಷ್ಟಪುಷ್ಟರನ್ನಾಗಿಸುತ್ತದೆ. ಇದರೊಂದಿಗೆ ಮಕ್ಕಳ ಬುದ್ಧಿಯನ್ನು ಕುಶಾಗ್ರ ಮಾಡುವ ಕೆಲಸವನ್ನು ಸಹ ಇದು ಮಾಡುತ್ತದೆ.
ಬೆಣ್ಣೆಯು ರುಚಿಯಲ್ಲಿ ಮಧುರ, ತಂಪು ಮತ್ತು ಜಿಗುಟಾಗಿದ್ದು ಅದು ಹೃದಯಕ್ಕೆ ಹಿತಕರವಾದುದಾಗಿದೆ. ಬೆಣ್ಣೆಯಲ್ಲಿರುವ ವಿಟಮಿನ್ ʻಎʼ ನೈಸರ್ಗಿಕವಾಗಿ ಶರೀರವು ಸ್ವೀಕರಿಸಬಹುದಾದ ವಿಧವಾಗಿದೆ. ಈ ವಿಟಮಿನ್ ʻಎ’ ಅಡ್ರೆನಾಲೀನ್ ಮತ್ತು ಥೈರಾಯ್ಡ್ ಗ್ಲ್ಯಾಂಡ್ನ ಕೆಲಸವನ್ನು ಸರಾಗವಾಗಿ ನಡೆಸುತ್ತದೆ. ಇದರಿಂದ ರಕ್ತ ಪರಿಚಲನಾ ವ್ಯೂಹ ಮತ್ತು ಹೃದಯ ಅವುಗಳ ಕೆಲಸವನ್ನೂ ಯೋಗ್ಯವಾಗಿ ಮಾಡಲು ಅನುಕೂಲವಾಗುತ್ತದೆ. ವಿಟಮಿನ್ `ಎ’ ಕಡಿಮೆಯಾದರೆ ಮಗುವಿನ ಹೃದಯದಲ್ಲಿ ಹುಟ್ಟುವಾಗಲೇ ಕೆಲವು ರೋಗಗಳು ಹುಟ್ಟಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಸಾವಿರಾರು ವರ್ಷಗಳಿಂದ ವೈದ್ಯರು ಗರ್ಭಿಣಿಗೆ ನಾಲ್ಕು ತಿಂಗಳಿನಿಂದಲೇ ಬೆಣ್ಣೆಯನ್ನು ತಿನ್ನಲು ಹೇಳುತ್ತಿದ್ದುದರ ಹಿಂದಿನ ಮರ್ಮ ಇಂದು ಅರ್ಥವಾಗುತ್ತಿದೆ. ಏಕೆಂದರೆ ಮಗು ತಾಯಿಯ ಗರ್ಭದಲ್ಲಿರುವ ನಾಲ್ಕನೇ ತಿಂಗಳಿನಲ್ಲಿಯೇ ಶರೀರದಲ್ಲಿ ಹೃದಯದ ರಚನೆಯಾಗುತ್ತದೆ.
ಹಲ್ಲುಗಳ ರಕ್ಷಣೆಯಲ್ಲಿ ಬೆಣ್ಣೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಮಕ್ಕಳ ಹಲ್ಲುಗಳ ರಕ್ಷಣೆಯಲ್ಲಿ ಇದು ಅತ್ಯವಶ್ಯಕ. ಇತ್ತೀಚೆಗೆ ಮೈದಾ ಹಿಟ್ಟಿನಿಂದ ಮಾಡಿದ ಪದಾರ್ಥಗಳು, ಬೇಕರಿಯ ಸಿಹಿ ಪದಾರ್ಥಗಳು, ಚಾಕಲೇಟ್ಗಳು, ಹಲ್ಲುಗಳಿಗೆ ಅಂಟಿಕೊಳ್ಳುವ ಜಂಕ್ಫುಡ್, ತಂಪು ಮತ್ತು ಮೃದು ಪದಾರ್ಥಗಳ ಸೇವನೆಯ ಪ್ರಮಾಣ ಹೆಚ್ಚಾಗುತ್ತಿದೆ. ಹೀಗೆ ಮೇಲಿಂದ ಮೇಲೆ ದೊರೆಯುವ ತಿನ್ನುವ ಪದಾರ್ಥಗಳನ್ನು ಮಕ್ಕಳು ಆಗಾಗ ತಿನ್ನುವುದು ಸಹಜ. ಹೀಗೆ ಪ್ರತಿ ಬಾರಿ ತಿಂದಾಗಲೂ ಬಾಯಿಯನ್ನು ಮುಕ್ಕಳಿಸಿ ಹಲ್ಲುಗಳನ್ನು ಸ್ವಚ್ಛ ಮಾಡುವ ಅಭ್ಯಾಸ ಅವುಗಳಿಗಿರುವುದಿಲ್ಲ. ಹೀಗಾಗಿ ಹಲ್ಲುಗಳ ಸಮಸ್ಯೆ ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಪ್ರಾರಂಭವಾಗುತ್ತದೆ. ಇದರೊಂದಿಗೆ ಹಲ್ಲುಗಳ ಸವೆಯುವಿಕೆ ಮತ್ತು ಹುಳಗಳಾಗುವುದು ಸಾಮಾನ್ಯವಾದುದಾಗಿದೆ. ಬೆಣ್ಣೆ ಮತ್ತು ಹಾಲಿನಲ್ಲಿ ಇವುಗಳನ್ನು ಪ್ರತಿರೋಧಿಸುವ ಸಾಮರ್ಥ್ಯವು ಹೆಚ್ಚಿದ್ದು ಇವುಗಳ ಸೇವನೆ ಮಕ್ಕಳಿಗೆ ಅವಶ್ಯಕವೂ ಮತ್ತು ಅನಿವಾರ್ಯವೂ ಆಗಿದೆ.
ಆಯುರ್ವೇದದ ಪ್ರಕಾರ ಬೆಣ್ಣೆಯು ಕಣ್ಣುಗಳಿಗೆ ಹಿತಕರವಾದುದಾಗಿದೆ. ಹೀಗಾಗಿಯೇ ಇಂದಿಗೂ ಬಹುತೇಕ ವೈದ್ಯರು ಕಣ್ಣಿನ ಹಲವು ವ್ಯಾಧಿಗಳಿಗೆ ಕೊಡುವ ಔಷಧಿಗಳನ್ನು ಬೆಣ್ಣೆಯೊಂದಿಗೆ ತೆಗೆದುಕೊಳ್ಳಲು ಹೇಳುತ್ತಿರುವುದು. ಹಿಂದೆ ಮನೆಮನೆಗಳಲ್ಲಿ ಗೋಸಂಪತ್ತು ಸಾಕಷ್ಟು ಸಂಖ್ಯೆಯಲ್ಲಿ ಇರುತ್ತಿತ್ತು. ಹೀಗಾಗಿ ಚಿಕ್ಕ ಮಕ್ಕಳಿಂದ ಹಿಡಿದು ಹದಿಹರೆಯದವರು, ಯುವಕರು, ಯುವತಿಯರು ಮತ್ತು ವೃದ್ಧರಾದಿಯಾಗಿ ಎಲ್ಲಾ ವಯೋಗುಂಪಿನ ಜನರು ಬೇಕಾದಷ್ಟು ಬೆಣ್ಣೆಯನ್ನು ಸೇವಿಸುತ್ತಿದ್ದರು. ಇದರಿಂದ ಸಹಜವಾಗಿಯೇ ನೈಸರ್ಗಿಕ ಸಮಸ್ಯೆಗಳ ಪ್ರಮಾಣವು ಅವರಲ್ಲಿ ಕಡಿಮೆ ಇರುತ್ತಿದ್ದವು.
90ರ ವಯಸ್ಸಿನವರೆಗೂ ಕನ್ನಡಕ ಹಾಕಿಕೊಳ್ಳದೇ ತಿರುಗಾಡುವ ಪೀಳಿಗೆಯನ್ನು ಬೆಣ್ಣೆ ಪೋಷಿಸುತ್ತಿತ್ತು. ಆದರೆ ಇಂದು ಬೆಣ್ಣೆಯ ಸೇವನೆ ಕಡಿಮೆಯಾಗಿ ಪ್ರಸ್ತುತ ದೇಶದಲ್ಲಿ ಮಕ್ಕಳಲ್ಲಿ ಕನ್ನಡಕದ ಪ್ರೊಗ್ರೆಸಿವ್ ಕ್ರಮಾಂಕ ಇರುವ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಹದ ಎತ್ತರದ ಬೆಳವಣಿಗೆ ಹೆಚ್ಚಾದಂತೆಲ್ಲಾ ಕನ್ನಡಕದ ಕ್ರಮಂಕವೂ ಬೆಳೆಯುತ್ತಾ ಹೋಗುತ್ತಿದೆ. ಅದೇ ರೀತಿ ಇಳಿವಯಸ್ಸಿನಲ್ಲಿನ ದೃಷ್ಟಿಮಾಂದ್ಯ, ಕಣ್ಣಿನಪೊರೆ ಇಂತಹ ಸಮಸ್ಯೆಗಳು ತುಂಬಾ ಹೆಚ್ಚಾಗಿ ಅವು ನಲವತ್ತರ ವಯಸ್ಸಿನಲ್ಲಿಯೇ ಪ್ರಾರಂಭವಾಗುತ್ತಿದೆ. ಪಾಶ್ಚಾತ್ಯ ವೈದ್ಯರಿಗೆ ಈ ಸಮಸ್ಯೆಗಳಿಗೆ ಯಾವುದೇ ಯೋಗ್ಯವಾದ ಪರಿಹಾರ ಇದುವರೆಗೆ ದೊರೆತಿಲ್ಲ.
ಪ್ರಸ್ತುತ ಮಹಿಳೆಯರಲ್ಲಿ ಪಿಸಿಓಡಿ ಹಾಗೂ ಪುರುಷರಲ್ಲಿ ಶುಕ್ರಾಣುಗಳ ಸಂಖ್ಯೆಯು ಕಡಿಮೆಯಿರುವ ಪ್ರಮಾಣವು ಹೆಚ್ಚಾಗುತ್ತಿದೆ. ಇದರ ಪರಿಣಾಮ ಬಹುತೇಕ ನಗರದಲ್ಲಿ ವಾಸಿಸುವ ಶೇಕಡಾ 70ಕ್ಕಿಂತಲೂ ಹೆಚ್ಚು ಯುವಕರಿಗೆ ಮೊದಲನೇ ಸಂತಾನವಾಗಲೂ ಸಹ ಚಿಕಿತ್ಸೆಯನ್ನು ಪಡೆದು ಕೊಳ್ಳಬೇಕಾಗುತ್ತಿದೆ. ಬಾಲ್ಯದಿಂದಲೇ ಆಹಾರದಲ್ಲಿ ಬೆಣ್ಣೆಯನ್ನು ಬಳಸಿದ್ದರೆ ತಾರುಣ್ಯದಲ್ಲಿ ಬರುವ ಈ ರೀತಿಯ ಸಂತಾನೋತ್ಪತ್ತಿಯ ಸಮಸ್ಯೆಯನ್ನು ತಡೆಗಟ್ಟಬಹುದು ಎಂದೇ ಹೇಳಲಾಗಿದೆ. ಹಾಗೆಯೇ ಬೆಣ್ಣೆ ವೀರ್ಯವರ್ಧಕವಾಗಿದ್ದು, ಹಸಿವನ್ನು ಹೆಚ್ಚಿಸುತ್ತದೆ. ಇದರೊಂದಿಗೆ ರಕ್ತ ಸೇರಿದಂತೆ ಮತ್ತಿತರ ಧಾತುಗಳನ್ನು ವರ್ಧಿಸುತ್ತದೆ. ವಾತ ಮತ್ತು ಪಿತ್ತ ನಾಶಕವಾಗಿ ಮೂಳೆರೋಗ, ಕ್ಷಯ, ಕೆಮ್ಮು ಹಾಗೂ ಅತಿಸಾರಕ್ಕೆ ಶಮನಕಾರಿಯಾಗಿರುವುದು ಸಾಬೀತಾಗಿದೆ. ಹೀಗಾಗಿಯೇ ಬೆಣ್ಣೆಯ ಸೇವನೆ ಬಾಲಕರು ಹಾಗೂ ವೃದ್ಧರಿಗೆ ಹೆಚ್ಚು ಲಾಭಕಾರಿ ಎಂದು ಹೇಳಲಾಗಿರುವುದು. ಒಂದರ್ಥದಲ್ಲಿ ಬೆಣ್ಣೆ ಸೇರಿದಂತೆ ಹಾಲಿನಿಂದ ತಯಾರಿಸಿದ ಎಲ್ಲಾ ಪದಾರ್ಥಗಳು ಚಿಕ್ಕ ಮಕ್ಕಳಿಂದ ಹಿಡಿದು ಯುವಕರು ಮತ್ತು ವೃದ್ಧರಾದಿಯಾಗಿ ಎಲ್ಲರ ಆರೋಗ್ಯಕ್ಕೂ ಅತಿ ಉಪಯುಕ್ತವಾದುದಾಗಿದೆ.
ಇದನ್ನೂ ಓದಿ : ಗೋ ಸಂಪತ್ತು : ಹಸು ಮತ್ತು ಮನುಷ್ಯರಿಗೆ ಸಂಜೀವಿನಿ ಗಿಣ್ಣು ಹಾಲು
ಅಂಕಣ
ರಾಜ ಮಾರ್ಗ ಅಂಕಣ: ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಭಾಗ-5, ನೀವೂ ಈ ಯಶೋಗಾಥೆಗಳ ಗುಂಪಿಗೆ ಸೇರಬಹುದು!
ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧವಾಗುತ್ತಿರುವ ಮಕ್ಕಳ ಮುಂದೆ, ಅವರ ಹೆತ್ತವರ ಮುಂದೆ ಕೆಲವೊಂದು ಯಶೋಗಾಥೆಗಳನ್ನು ತೆರೆದಿಟ್ಟಿದ್ದಾರೆ ಲೇಖಕರು. ನಿಮ್ಮ ಮಗ/ಮಗಳೂ ಈ ಪಟ್ಟಿ ಸೇರಲು ಎಲ್ಲ ಅವಕಾಶಗಳಿವೆ.
ನಾವು ಸಣ್ಣವರಿದ್ದಾಗ ಎಸ್ಸೆಸ್ಸೆಲ್ಸಿ, ಪಿಯುಸಿಗಳ ರ್ಯಾಂಕ್ ಘೋಷಣೆ ಆದಾಗ ಅವರನ್ನು ಬೆರಗು ಕಣ್ಣುಗಳಿಂದ ನೋಡುವುದೇ ಒಂದು ಸಂಭ್ರಮ! ಆಗೆಲ್ಲ ದೂರದರ್ಶನದಲ್ಲಿ ಅಂತಹ ಒಂದೆರಡು ಮಕ್ಕಳ ಸಂದರ್ಶನಗಳು ಪ್ರಸಾರ ಆಗುತ್ತಿದ್ದವು. ಮರುದಿನದ ಎಲ್ಲ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಫೋಟೊಸ್, ಅವರ ಹೆತ್ತವರು ಸಿಹಿ ತಿನಿಸುವ ಭಾವಚಿತ್ರಗಳು ನಮಗಂತೂ ಭಾರೀ ಕ್ರೇಜ್ ಹುಟ್ಟಿಸುತ್ತಿದ್ದವು! ಆಗ ಎಸ್ಸೆಸ್ಸೆಲ್ಸಿ, ಪಿಯುಸಿ ಬೋರ್ಡಿನವರು ಕೇವಲ ಹತ್ತು ರ್ಯಾಂಕ್ ಕೊಡುತ್ತಿದ್ದರು ಮತ್ತು ಅವುಗಳಲ್ಲಿ ಸಿಂಹಪಾಲು ರ್ಯಾಂಕ್ಗಳನ್ನು ಬೆಂಗಳೂರಿನ ಎರಡು ಪ್ರತಿಷ್ಠಿತವಾದ ಕಾಲೇಜುಗಳು ಬಾಚಿಕೊಳ್ಳುತ್ತಿದ್ದವು!
ರ್ಯಾಂಕ್ ಪಡೆದವರು ರಾತ್ರಿ ಹಗಲಾಗುವ ಹೊತ್ತಿಗೆ ಸೆಲೆಬ್ರಿಟಿ ಆಗುತ್ತಿದ್ದರು!
ಯಾರಾದ್ರೂ ಒಬ್ಬ ರ್ಯಾಂಕ್ ಪಡೆದನು/ ಪಡೆದಳು ಎಂದಾದರೆ ಅವರು ರಾತ್ರಿ ಹಗಲು ಆಗುವುದರೊಳಗೆ ಸೆಲೆಬ್ರಿಟಿ ಆಗಿ ಬಿಡುತ್ತಿದ್ದರು! ಅದರಲ್ಲಿ ಕೂಡ ಎಸೆಸೆಲ್ಸಿ ರ್ಯಾಂಕ್ ಪಡೆಯುವವರು ಎಲ್ಲರೂ ಆಂಗ್ಲ ಮಾಧ್ಯಮದ ಮಕ್ಕಳೇ ಆಗಿರುತ್ತಿದ್ದರು! ಈ ಅಪವಾದವನ್ನು ನಿವಾರಣೆ ಮಾಡಲು ಬೋರ್ಡು ಇಂಗ್ಲಿಷ್ ಮಾಧ್ಯಮಕ್ಕೆ ಹತ್ತು, ಕನ್ನಡ ಮಾಧ್ಯಮಕ್ಕೆ ಹತ್ತು.. ಹೀಗೆ ಇಪ್ಪತ್ತು ರ್ಯಾಂಕ್ಗಳನ್ನು ನೀಡಲು ಆರಂಭ ಮಾಡಿತು. ಮುಂದೆ ಕನ್ನಡ ಮಾಧ್ಯಮಕ್ಕೆ 20 ಮತ್ತು ಇಂಗ್ಲಿಷ್ ಮಾಧ್ಯಮಕ್ಕೆ 20 ಹೀಗೆ ರ್ಯಾಂಕ್ ಕೊಡಲು ಆರಂಭ ಮಾಡಿತು. ಆಗೆಲ್ಲ ನಮ್ಮ ಸುತ್ತಮುತ್ತಲಿನ ವಿದ್ಯಾರ್ಥಿಗಳು ರ್ಯಾಂಕ್ ಪಡೆಯಲು ಆರಂಭ ಮಾಡಿದರು. ಆಗೆಲ್ಲ ರ್ಯಾಂಕ್ ಪಡೆಯಲು ಅಡ್ಡ ದಾರಿಗಳು ಆರಂಭವಾದವು ಎನ್ನುವ ಕೂಗಿನ ನಡುವೆ ಕೂಡ ಮಕ್ಕಳ ಪ್ರತಿಭೆಗಳ ಬಗ್ಗೆ ಇರುವ ನಮ್ಮ ಉತ್ಕಟ ಅಭಿಮಾನ ಕಡಿಮೆ ಆಗಲೇ ಇಲ್ಲ. ಅದು ಕಡಿಮೆ ಆಗುವ ಕ್ರೇಜ್ ಅಲ್ಲವೇ ಅಲ್ಲ!
ಮುಂದೊಂದು ದಿನ ಎಸೆಸೆಲ್ಸಿ, ಪಿಯುಸಿ ರ್ಯಾಂಕ್ಗಳು ರದ್ದಾದವು!
ಈ ರ್ಯಾಂಕ್ ಪಡೆಯುವ ರೇಸಲ್ಲಿ ಮಕ್ಕಳ ಮೇಲೆ ಒತ್ತಡ ಹೆಚ್ಚಾಗುತ್ತಾ ಇದೆ ಮತ್ತು ಶಾಲೆಗಳು ಅಡ್ಡ ದಾರಿಯನ್ನು ಹಿಡಿಯುತ್ತಾ ಇವೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ಎರಡೂ ಬೋರ್ಡ್ಗಳು ರ್ಯಾಂಕ್ ಪದ್ಧತಿ ಕೈಬಿಟ್ಟವು. ಆದರೆ ಶಾಲೆಗಳು ರಾಜ್ಯಕ್ಕೆ ಪ್ರಥಮ, ರಾಜ್ಯಕ್ಕೆ ದ್ವಿತೀಯ, ಜಿಲ್ಲೆಗೆ ಪ್ರಥಮ, ತಾಲೂಕಿಗೆ ಪ್ರಥಮ…….ಹೀಗೆಲ್ಲ ಘೋಷಿಸಿಕೊಳ್ಳುವುದನ್ನು ಬಿಡಲೇ ಇಲ್ಲ! ನಮ್ಮ ಶಾಲೆಗಳಿಗೆ ಅವರ ಮಕ್ಕಳ ಪ್ರತಿಭೆಗಳಿಗಿಂತ ತಮ್ಮ ಶಾಲೆಗಳನ್ನು ಮಾರ್ಕೆಟ್ ಮಾಡೋದೇ ಆದ್ಯತೆ ಆಗಿತ್ತು ಅನ್ನುವುದನ್ನು ಒಪ್ಪಲೇ ಬೇಕು. ಏನಿದ್ದರೂ ರ್ಯಾಂಕ್ ಪಡೆಯುವುದು ಕೂಡ ಒಂದು ಅನನ್ಯ ಪ್ರತಿಭೆ ಎಂದು ನಾನು ಒಪ್ಪಿಕೊಳ್ಳುತ್ತೇನೆ.
2016ರಲ್ಲಿ ಭದ್ರಾವತಿಯ ರಂಜನ್ ಧೂಳೆಬ್ಬಿಸಿದ!
ಆ ವರ್ಷ ಎಸೆಸೆಲ್ಸಿ ಫಲಿತಾಂಶ ಘೋಷಣೆ ಆದಾಗ ಇಡೀ ರಾಜ್ಯಕ್ಕೇ ಒಂದು ಶಾಕ್ ಕಾದಿತ್ತು! ಭದ್ರಾವತಿಯ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಆಗಿದ್ದ ರಂಜನ್ ಎಸ್ಸೆಸೆಲ್ಸಿ ಬೋರ್ಡಿನ ಇತಿಹಾಸದಲ್ಲಿ ಮೊದಲ ಬಾರಿಗೆ 625/625 ಅಂಕ ಪಡೆದಿದ್ದ! ಆಗ ನಾನು ಸ್ಪಂದನ ಟಿವಿ ಸ್ಟುಡಿಯೋದಿಂದ ಅವನ ಜೊತೆಗೆ ಲೈವಲ್ಲಿ ಕಾಲ್ ಮಾಡಿ ಮಾತಾಡಿದ್ದೆ! ಮರುದಿನ ಕರ್ನಾಟಕದ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ರಂಜನ್ ಫೋಟೊ ವಿಜೃಂಭಿಸಿತ್ತು! ಅವನನ್ನು ಮುಖ್ಯಮಂತ್ರಿಗಳು ಬೆಂಗಳೂರಿಗೆ ಕರೆಸಿ ಸನ್ಮಾನ ಮಾಡಿದ್ದು ಆ ಕಾಲಕ್ಕೆ ಬಹಳ ದೊಡ್ಡ ಸುದ್ದಿ! ಸಾಕಷ್ಟು ಕುಹಕಿಗಳು ಅದು ಹೇಗೆ ಸಾಧ್ಯ? ಎಂದು ಪ್ರಶ್ನೆಗಳನ್ನು ಮಾಡಿದ್ದರು.
ಕೋರ್ ವಿಷಯಗಳಲ್ಲಿ ಓಕೆ, ಆದರೆ ಭಾಷೆಗಳಲ್ಲಿ ಹೇಗೆ ಪೂರ್ತಿ ಅಂಕ ಕೊಡುತ್ತಾರೆ? ಎಂದೆಲ್ಲ ಕೇಳಿದಾಗ ಎಸ್ಸೆಸೆಲ್ಸಿ ಬೋರ್ಡ್ ಅವನ ಆರೂ ವಿಷಯಗಳ ಉತ್ತರ ಪತ್ರಿಕೆಗಳನ್ನು ತನ್ನ ಜಾಲತಾಣದಲ್ಲಿ ಪಬ್ಲಿಷ್ ಮಾಡಿತ್ತು! ಅವನ ಉತ್ತರ ಪತ್ರಿಕೆಯಲ್ಲಿ ಒಂದು ಅಂಕ ಕೂಡ ಕಟ್ ಮಾಡುವ ಅವಕಾಶವೇ ಇರಲಿಲ್ಲ! ಅನಿಲ್ ಕುಂಬ್ಳೆ ಹತ್ತಕ್ಕೆ ಹತ್ತು ವಿಕೆಟ್ ಪಡೆದಂತೆ ಇತ್ತು ರಂಜನ್ ಯಶೋಗಾಥೆ!
ಮುಂದೆ ಅದೇ ಬೆಂಚ್ ಮಾರ್ಕ್ ಆಯ್ತು!
ಮುಂದೆ ಎಸೆಸೆಲ್ಸಿ ಬೋರ್ಡ್ ರ್ಯಾಂಕ್ ಘೋಷಣೆ ಮಾಡಲಿ ಅಥವಾ ಬಿಡಲಿ ಮುಂದಿನ ವರ್ಷಗಳಲ್ಲಿ 625/625 ಅಂಕ ಪಡೆಯುವುದೇ ಒಂದು ಸಂಪ್ರದಾಯ ಆಗಿ ಹೋಯಿತು! ಮುಂದಿನ ವರ್ಷ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅದೇ ಸಾಧನೆ ರಿಪೀಟ್ ಮಾಡಿದರು. 2021ರಲ್ಲಿ 157 ವಿದ್ಯಾರ್ಥಿಗಳು, 2022ರಲ್ಲಿ 145 ವಿದ್ಯಾರ್ಥಿಗಳು ಔಟ್ ಆಫ್ ಔಟ್ ಸ್ಕೋರ್ ಪಡೆದಿದ್ದಾರೆ. ಇದು ಮೊದಲ ಫಲಿತಾಂಶ ಘೋಷಣೆ ಆದಾಗ ಪಡೆದ ಸಂಖ್ಯೆ ಆಗಿದೆ (ಮರುಮೌಲ್ಯಮಾಪನದಲ್ಲಿ ಹೆಚ್ಚುವರಿ ಅಂಕ ಪಡೆದು ಈ ಸಾಧನೆ ಮಾಡಿದವರ ಸಂಖ್ಯೆ ಅಷ್ಟೇ ಇದೆ!). ಈಗ ನಮ್ಮ ಸುತ್ತಮುತ್ತಲಿನ ಶಾಲೆಯ ಮಕ್ಕಳೂ ಈ ಸಾಧನೆ ಮಾಡುವುದನ್ನು ನೋಡುವಾಗ ಮಕ್ಕಳ ಪ್ರತಿಭೆಗೆ ನಾವು ಸೆಲ್ಯೂಟ್ ಹೊಡೆಯದೆ ಇರಲು ಸಾಧ್ಯವೇ ಇಲ್ಲ!
ಕೊರೊನಾದ ವರ್ಷದಲ್ಲಿ ಸಾವಿರಾರು ಮಂದಿ ಫುಲ್ ಮಾರ್ಕ್ಸ್ ಪಡೆದರು!
ಒಂದು ವರ್ಷ ಕೊರೊನಾ ತೀವ್ರವಾಗಿದ್ದ ಸಂದರ್ಭದಲ್ಲಿ ಎಲ್ಲ ಪ್ರಶ್ನೆಗಳನ್ನು MCQ ಕೊಟ್ಟು ಬೋರ್ಡು ಪ್ರಯೋಗಾತ್ಮಕವಾಗಿ ಪರೀಕ್ಷೆ ಮಾಡಿತು. ಆ ವರ್ಷ ಪರೀಕ್ಷೆಯನ್ನು ಬರೆದ ಎಲ್ಲ ಮಕ್ಕಳೂ (ತಾಂತ್ರಿಕ ಕಾರಣಕ್ಕೆ ಒಬ್ಬನನ್ನು ಬಿಟ್ಟು) ಪಾಸಾದರು! ಅದಕ್ಕಿಂತ ಹೆಚ್ಚಾಗಿ ಆ ವರ್ಷ ಸಾವಿರಾರು ಮಕ್ಕಳು 625/625 ಅಂಕ ಪಡೆದರು ಮತ್ತು ಕೊರೊನಾಕ್ಕೆ ಥ್ಯಾಂಕ್ಸ್ ಹೇಳಿದರು!
ಇಂತಹ ಸಾಧನೆ ಮಾಡಿದ ನೂರಾರು ವಿದ್ಯಾರ್ಥಿಗಳನ್ನು ನಾನು ಟಿವಿಯಲ್ಲಿ ಸಂದರ್ಶನ ಮಾಡಿದ್ದು ಅವರಲ್ಲಿ ಕೆಲವರ ಮನೆಗಳಿಗೂ ಹೋಗಿದ್ದೇನೆ. ಅಂತಹವರ ಕೆಲವು ಯಶೋಗಾಥೆಗಳು ನಿಮ್ಮ ಮುಂದೆ……..
(ಕೆಲವರ ಹೆಸರು ನನಗೆ ಮರೆತುಹೋಗಿದೆ. ಇನ್ನೂ ಕೆಲವರ ಹೆಸರನ್ನು ಉದ್ದೇಶಪೂರ್ವಕ ಬಿಟ್ಟಿದ್ದೇನೆ)
ಎಸ್ಸೆಸ್ಸೆಲ್ಸಿಯ ಯಶೋಗಾಥೆಗಳು..
1) ರಾಯಚೂರಿನ ಕೃಷಿ ಕಾರ್ಮಿಕನ ಮಗಳು 625/625 ಅಂಕಗಳನ್ನು ಪಡೆದಳು. ಆಕೆ ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದವಳು!
2) ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಟ್ರಂಕ್ ಹೊರುವ ಹಮಾಲಿಯ ಮಗ 625/625 ಅಂಕ ಪಡೆದಿದ್ದ. ಅವನೂ ಸರಕಾರಿ ಶಾಲೆಯ ಕನ್ನಡ ಮಾಧ್ಯಮದ ಹುಡುಗ. ಯಾವ ಟ್ಯೂಷನ್ ಕ್ಲಾಸ್ ಕೂಡ ಹೋದವನು ಅಲ್ಲ!
3) ನನ್ನ ಟಿವಿ ಕಾರ್ಯಕ್ರಮಕ್ಕೆ ಬಂದಿದ್ದ ಅತ್ಯುತ್ತಮ ಶ್ರೇಣಿ ಪಡೆದಿದ್ದ ಹುಡುಗಿಯ ಮನೆಯಲ್ಲಿ ಕರೆಂಟ್ ಇರಲಿಲ್ಲ! ಆಕೆ ಕೂಡ ಕನ್ನಡ ಮಾಧ್ಯಮದ ಸರಕಾರಿ ಶಾಲೆಯ ಹುಡುಗಿ!
4) ನಾನು ಭೇಟಿ ಮಾಡಿದ ಶಿರಸಿಯ ಮುಸ್ಲಿಂ ಕುಟುಂಬದ ಹುಡುಗಿ ಕೂಡ 625/625 ಅಂಕ ಪಡೆದಿದ್ದಳು. ಆಕೆಯ ಅಪ್ಪ ಒಬ್ಬ ಸಾಮಾನ್ಯ ರಿಕ್ಷಾ ಚಾಲಕ ಆಗಿದ್ದರು. ಆಕೆ ಸರಕಾರಿ ಶಾಲೆಯ ಹುಡುಗಿ!
5) ಕುಮಟಾದ ಒಬ್ಬ ಟೆಂಪೋ ಚಾಲಕನ ಮಗಳು ಹಠ ಹಿಡಿದು ಓದಿ 625/625 ಅಂಕ ಪಡೆದು ಲೆಜೆಂಡ್ ಆಗಿದ್ದಳು. ಆಕೆ ಕೂಡ ಟ್ಯೂಶನ್ ಕ್ಲಾಸಿಗೆ ಹೋದವಳು ಅಲ್ಲ!
6) ದಕ್ಷಿಣ ಕನ್ನಡದ ಸುಬ್ರಹ್ಮಣ್ಯದ ಸಮೀಪದ ಒಬ್ಬ ಹುಡುಗ ಪ್ರತೀ ದಿನವೂ 4-5 ಕಿಲೋಮೀಟರ್ ಬೈಸಿಕಲ್ ತುಳಿದು ಶಾಲೆಗೆ ಬರುತ್ತಿದ್ದ ಮತ್ತು ಮನೆಯಿಂದ ಟಿಫಿನ್ ಬಾಕ್ಸ್ ತೆಗೆದುಕೊಂಡು ಬಂದು ಮಧ್ಯಾಹ್ನದ ಊಟ ಮಾಡುತ್ತಿದ್ದ! ಆತನು ಕೂಡ 625/625 ಅಂಕ ಪಡೆದು ಸ್ಟಾರ್ ಆಗಿದ್ದ!
7) ಮೂಡಬಿದ್ರೆಯ ಒಬ್ಬ ವಿದ್ಯಾರ್ಥಿ ಔಟ್ ಆಫ್ ಮಾರ್ಕ್ಸ್ ತೆಗೆದುಕೊಂಡಿದ್ದ. ಆತನು ಎಂಟನೇ ತರಗತಿಯಿಂದ ಕೂಡ ಪ್ರತೀ ಪರೀಕ್ಷೆಯಲ್ಲಿ ಒಂದು ಮಾರ್ಕ್ ಕಡಿಮೆ ತೆಗೆದುಕೊಂಡದ್ದೇ ಇಲ್ಲ ಎಂದು ಅವನ ಪ್ರಿನ್ಸಿಪಾಲ್ ನನಗೆ ಹೇಳಿದ್ದರು!
8) ಶಿವಮೊಗ್ಗದ ಒಬ್ಬ ಹುಡುಗ ಪರೀಕ್ಷೆ ಮುಗಿಸಿ ಬಂದವನೇ ತನಗೆ ಫುಲ್ ಮಾರ್ಕ್ ಎಂದು ಘೋಷಣೆ ಮಾಡಿದ್ದ. ಆತನು ಪ್ರತಿಭಾವಂತ ಆಗಿದ್ದರೂ ಆತನ ಮಾತು ಯಾರೂ ನಂಬಲಿಲ್ಲ! ರಿಸಲ್ಟ್ ಹಿಂದಿನ ದಿನವೇ 5 ಕಿಲೋ ಸ್ವೀಟ್ ತಂದು ಇಟ್ಟುಕೊಂಡಿದ್ದನು. ಅವನಿಗೂ ರಿಸಲ್ಟ್ ಬಂದಾಗ 625 ಅಂಕ ಬಂದಿತ್ತು!
9) ಮಲ್ಪೆಯ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕಳೆದ ವರ್ಷ ರಾಜ್ಯ ಮಟ್ಟದಲ್ಲಿ ಸುದ್ದಿ ಆದನು. ಅದಕ್ಕೆ ಕಾರಣ ಅವನು ಪ್ರತೀ ದಿನವೂ (ಎಸೆಸೆಲ್ಸಿ ವರ್ಷವೂ ಸೇರಿದಂತೆ) ತನ್ನ ಅಪ್ಪನ ಜೊತೆ ಬೋಟಲ್ಲಿ ಹೋಗಿ ಫಿಶಿಂಗ್ ಮಾಡುತ್ತಿದ್ದ! ಬೆಳಿಗ್ಗೆ ಎರಡು ಘಂಟೆ ಮತ್ತು ಸಂಜೆ ಒಂದು ಘಂಟೆ! ಅದೂ ಸರಕಾರಿ ಶಾಲೆಯ ಹಿನ್ನೆಲೆಯ ಹುಡುಗ!
10) ಮತ್ತೊಬ್ಬಳು ನಮ್ಮೂರಿನ ಪ್ರತಿಭಾವಂತ ವಿದ್ಯಾರ್ಥಿನಿ ಎಸೆಸೆಲ್ಸಿ ಪರೀಕ್ಷೆಯ ಹಿಂದಿನ ದಿನ ಬೆಂಗಳೂರಿಗೆ ಹೋಗಿ ಒಂದು ಖಾಸಗಿ ಸಂಸ್ಥೆಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದು ಇಡೀ ರಾತ್ರಿ ಜರ್ನಿ ಮಾಡಿಬಂದು ಪರೀಕ್ಷೆ ಬರೆದಿದ್ದಳು. ಆಕೆ ಪಡೆದ ಅಂಕಗಳು 623/625!
(ಮುಂದುವರಿಯುವುದು)
ಇವುಗಳನ್ನೂ ಓದಿ: ಸರಣಿಯ ಹಿಂದಿನ ಲೇಖನಗಳು
- 1. ರಾಜ ಮಾರ್ಗ: ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
- 2. ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಯಾವ ಪ್ರಶ್ನೆ ಬರ್ತದೆ? ಕೊನೇ ಕ್ಷಣದ ಸಿದ್ಧತೆ ಹೇಗಿರಬೇಕು? ಇಲ್ಲಿವೆ ಪವರ್ಫುಲ್ ಟಿಪ್ಸ್-ಭಾಗ 2
- 3. ರಾಜ ಮಾರ್ಗ : SSLC ಪರೀಕ್ಷೆ ಅಂತಿಮ ತಯಾರಿ ಭಾಗ-3 ; ವಿಜ್ಞಾನದಲ್ಲಿ ಖುಷಿ ಕೊಡುವ ಅಪ್ಲಿಕೇಶನ್ ಪ್ರಶ್ನೆಗಳು
- 4. ರಾಜ ಮಾರ್ಗ : ಎಸ್ಸೆಸ್ಸೆಲ್ಸಿ ಪರೀಕ್ಷೆ ಅಂತಿಮ ತಯಾರಿ ಭಾಗ-4; ಗಣಿತದ ಕುತೂಹಲಕಾರಿ ಅಪ್ಲಿಕೇಶನ್ ಪ್ರಶ್ನೆಗಳು
ಅಂಕಣ
ದಶಮುಖ ಅಂಕಣ: ʻತಿರುತಿರುಗಿಯು ಹೊಸತಾಗಿರಿ ಎನುತಿದೆ ಋತುಗಾನ…ʼ
ಬೇಸಿಗೆಯ ತಾಪವನ್ನೆಲ್ಲಾ ಒಮ್ಮೆ ತಣ್ಣಗೆ ಕೂರಿಸಿ, ಅದರ ಮತ್ತೊಂದು ಮುಖದತ್ತ ದೃಷ್ಟಿ ಹರಿಸಿದರೆ ಕಾಣುವುದು, ವಸಂತನೆಂಬ ಅನಂಗ ಸಖ! ಹೊಸ ಹೊಳಪಿನಿಂದ ನಳನಳಿಸುವುದೇ ಈಗ ಪ್ರಕೃತಿಯ ನಿಯಮ!
ಈ ಅಂಕಣವನ್ನು ಇಲ್ಲಿ ಕೇಳಿ:
ʻಬಂದಿತಿದಿಗೋ ಬೇಸಿಗೆ, ಸಂದ ಸಮಯದ ಕೊರಗ ಕಳೆಯುತ ಮಂದಿಯೆಲ್ಲರ ಲೇಸಿಗೆʼ ಎಂಬ ಬೇಸಿಗೆಯ ತಂಪನ್ನು ವರ್ಣಿಸುವ ಕವಿವಾಣಿಯನ್ನು ಕೇಳಿದವರು, ಈಗಾಗಲೇ ಸೂರ್ಯ ಝಳಪಿಸುತ್ತಿರುವ ತಾಪದ ಮೊನೆಯನ್ನು ತೋರಿಸಿ ಹುಬ್ಬು ಗಂಟಿಕ್ಕಿದರೆ ತಪ್ಪಲ್ಲ. ಬೇಸಿಗೆ ಎನ್ನುತ್ತಿದ್ದಂತೆ ಬಿಸಿಲು, ಬೇಗೆ, ಬವಣೆ, ಬೆವರು, ಬಾಯಾರಿಕೆ, ಬಳಲಿಕೆ, ಬರ ಮುಂತಾದ ʻಬʼರ-ಪೂರವನ್ನೇ ಹರಿಸಬಹುದು. ಆದರೆ ಬೇಸಿಗೆಯ ತಾಪವನ್ನೆಲ್ಲಾ ಒಮ್ಮೆ ತಣ್ಣಗೆ ಕೂರಿಸಿ, ಅದರ ಮತ್ತೊಂದು ಮುಖದತ್ತ ದೃಷ್ಟಿ ಹರಿಸಿದರೆ ಕಾಣುವುದು, ವಸಂತನೆಂಬ ಅನಂಗ ಸಖ! ಚೈತ್ರಮಾಸ, ಮಧುಮಾಸ, ಶೃಂಗಾರಮಾಸ ಮುಂತಾದ ಹೆಸರುಗಳೆಲ್ಲಾ ಈ ಚತುರ ವಸಂತನ ಸಹವರ್ತಿಗಳದ್ದೇ. ಅರವಿಂದ, ಅಶೋಕ, ಚೂತ, ನವಮಲ್ಲಿಕೆ ಮತ್ತು ನೀಲೋತ್ಪಲಗಳೆಂಬ ಅನಂಗನ ಬಾಣ ಪಂಚಕಗಳು ಪರಿಣಾಮ ಬೀರುವುದಕ್ಕೆ ವಸಂತ ಆಗಮಿಸಲೇ ಬೇಕು- ಎಂಬಲ್ಲಿಗೆ ಪ್ರಕೃತಿಯ ಮೇಲೆ ಆತನ ಪ್ರಭಾವವೇನು ಎಂಬುದು ಸ್ಫುಟವಾಗುತ್ತದೆ.
ಈ ಬಾರಿ ಎಂದಿನಂತೆ ಇಲ್ಲದಿದ್ದರೂ, ಸಾಮಾನ್ಯವಾಗಿ ವಸಂತವೆಂದರೆ ಹಿತವಾದ ಕಾಲ. ಚಳಿಯ ಆರ್ಭಟವೆಲ್ಲಾ ಮುಗಿದಿದೆ, ಆದರೆ ಬಿಸಲಿನ ಪ್ರಕೋಪವಿನ್ನೂ ಜೋರಾಗಿಲ್ಲ ಎಂಬಂಥ ದಿನಗಳು. ಹಾಗೆಂದೇ ಈಗ ಸುಲಿಯುವ ತುಟಿಗಳು, ಒಡೆಯುವ ಹಿಮ್ಮಡಿಗಳು, ಬಿರಿಯುವ ಕೈಕಾಲುಗಳೆಲ್ಲಾ ಮಾರ್ಪಾಡಾಗಿ, ಪ್ರಕೃತಿಯ ನಿಯಮದಂತೆ ಹೊಸ ಹೊಳಪಿನಿಂದ ನಳನಳಿಸುತ್ತವೆ. ಉದುರಿ ಬೋಳಾಗಿ ಬೋಳುಗಳಚಿ ನಿಂತಿದ್ದ ಭೂಮಿಯೂ ಹಸಿರುಡುವ ಹೊತ್ತು. ಹಸಿರೆಂದರೇನು ಒಂದೇ ಬಣ್ಣವೇ? ಎಳೆ ಹಸಿರು, ತಿಳಿ ಹಸಿರು, ಗಿಳಿ ಹಸಿರು, ಸುಳಿ ಹಸಿರು, ಪಾಚಿ ಹಸಿರು, ಪಚ್ಚೆ ಹಸಿರು, ಅಚ್ಚ ಹಸಿರು, ಹಳದಿ ಮಿಶ್ರಿತ ನಿಂಬೆ ಹಸಿರು, ನೀಲಿ ಮಿಶ್ರಿತ ವೈಢೂರ್ಯದ ಹಸಿರು- ಒಂದೇ ವರ್ಣದಲ್ಲಿ ಎಷ್ಟೊಂದು ಛಾಯೆಗಳು! ಈ ಪರಿಯ ಹಸಿರಿನ ನಡುವೆ ನಾನಾ ವರ್ಣ ಮತ್ತು ವಿನ್ಯಾಸಗಳ ಹೂ-ಮಿಡಿಗಳ ವೈಭೋಗ. ಶಿಶಿರ ಸುರಿಯುವ ಕಸಿವಿಸಿಯನ್ನು ಸಂಪೂರ್ಣವಾಗಿ ತೊಡೆದು, ಎಲ್ಲೆಡೆ ಆಹ್ಲಾದ, ಉತ್ಸಾಹ, ಉಲ್ಲಾಸಗಳನ್ನು ಚೆಲ್ಲುವುದರಲ್ಲಿ ನಮ್ಮ ವಸಂತ ಬಲು ಉದಾರಿ.
ಚೈತ್ರ ಮಾಸದ ಮೊದಲ ದಿನವಾದ ಯುಗಾದಿ ಬರುವಷ್ಟರಲ್ಲಿ, ವ್ಯಾಯಾಮದ ಉತ್ಸಾಹಿಗಳಿಗೆ ಬೆಳಗ್ಗೆ ಏಳಲಾರದೆ ಮುದುರಿ ಮಲಗುವ ತಾಪತ್ರಯವಿಲ್ಲ. ಹಗಲು ನಿಧಾನವಾಗಿ ದೀರ್ಘವಾಗುವತ್ತ ಸಾಗುವುದರಿಂದ, ಮುಂಜಾನೆ ನಿರುಮ್ಮಳವಾಗಿ ಎದ್ದು ಬೆವರು ಹರಿಸಬಹುದು. (ವೈಶಾಖ ಬರುವಷ್ಟರಲ್ಲಿ ಶಾಖ ಹೆಚ್ಚಿ, ಬೆವರು ಹರಿಸುವ ಕಷ್ಟವೂ ಇಲ್ಲ, ತಾನಾಗಿ ಹರಿಯುತ್ತಿರುತ್ತದೆ!) ಚಾರಣ, ಪ್ರಯಾಣ ಇತ್ಯಾದಿಗಳಿಗೆ ಹೇಳಿ ಮಾಡಿಸಿದ ಕಾಲವಿದು. ಎಷ್ಟೋ ದೇಶಗಳಲ್ಲಿ ಸ್ಪ್ರಿಂಗ್ ಡ್ರೈವ್ ಅತ್ಯಂತ ಜನಪ್ರಿಯ. ಕಾರಣ, ಎಷ್ಟೋ ದೂರದವರೆಗೆ ಸಾಲಾಗಿ ಹೂ ಬಿಟ್ಟು ನಿಂತ ಮರಗಳ ನಡುವೆ ಜುಮ್ಮನೆ ಡ್ರೈವ್ ಮಾಡುವ ಸುಖ- ಸುಮ್ಮನೆ ಹೇಳುವುದಲ್ಲ, ಮಾಡಿಯೇ ಅರಿಯಬೇಕು. ಯುರೋಪ್ನ ಹಲವಾರು ದೇಶಗಳಿಗೆ ಹೂ ಬಿಡುವ ಕಾಲವನ್ನು ಕಣ್ತುಂಬಿಕೊಳ್ಳುವುದಕ್ಕಾಗಿಯೇ ಪ್ರಯಾಣಿಸುವವರ ಸಂಖ್ಯೆ ಲೆಕ್ಕವಿಲ್ಲದಷ್ಟು. ಫ್ರಾನ್ಸ್ ದೇಶದ ಘಮಘಮಿಸುವ ಲಾವೆಂಡರ್ ಹೂವುಗಳು ಮತ್ತು ಸೂರ್ಯಕಾಂತಿಗಳು, ಜರ್ಮನಿಯ ಚೆರ್ರಿ ಹೂಗಳ ಚಪ್ಪರ, ಇಟಲಿಯ ಮನ ಸೆಳೆಯುವ ಆರ್ಕಿಡ್ಗಳು, ಹಾಲೆಂಡ್ನ ಟುಲಿಪ್ಗಳ ವರ್ಣಲೋಕ, ಬ್ರಿಟನ್ನ ಬ್ಲೂಬೆಲ್ಗಳು, ಸ್ಪೇನ್ನಲ್ಲಿ ಹಿಮ ಹೊತ್ತಂತೆ ಕಾಣುವ ಬಾದಾಮಿ ಮರಗಳ ಬಿಳಿ ಹೂವುಗಳು- ಹೇಳುತ್ತಾ ಹೋದಷ್ಟಕ್ಕೂ ಮುಗಿಯುವುದೇ ಇಲ್ಲ ಹೂವುಗಳ ವೈಭವ.
ಯಾವುದೋ ದೇಶಗಳ ಮಾತೇಕೆ? ಅಗ್ದಿ ನಮ್ಮ ಕನ್ನಡದ ಕವಿ ಹರಿಹರನ ಪುಷ್ಟರಗಳೆಯಲ್ಲಿ ಪರಿಮಳಿಸುವ ಹೂವುಗಳೇನು ಕಡಿಮೆಯೇ? ಬೆಳ್ಳಂಬೆಳಗ್ಗೆ ಶಿವನನ್ನು ಪೂಜಿಸಲು ಹೊರಡುವ ಭಕ್ತನೊಬ್ಬ, ಹೂದೋಟಕ್ಕೆ ಹೋಗಿ, ಹೂವುಗಳನ್ನು ಕೊಯ್ದು, ಕಟ್ಟಿ ದೇವರಿಗೆ ಅರ್ಚಿಸುವ ವರ್ಣನೆಯನ್ನು ಹೊತ್ತ ರಗಳೆಯಿದು. ಇಡೀ ಕಾವ್ಯದುದ್ದಕ್ಕೂ ಶಿವನ ಭಕ್ತಿಯೇ ಪ್ರಧಾನವಾಗಿದ್ದರೂ, ಇಡೀ ಪ್ರಕ್ರಿಯೆಯ ನಿರೂಪಣೆ ಸುಂದರವಾಗಿದೆ, ಪುಷ್ಪಮಯವಾಗಿದೆ. ಶಿವನಿಗೆ ಸೇವಂತಿಗೆಯ ಅರಲ ಪನ್ನೀರಿನಿಂದ ಮುಖ ತೊಳೆಸುವ ಆ ಭಕ್ತ, ಪರಾಗದಿಂದ ವಿಭೂತಿಯ ತಿಲಕವನ್ನಿಕ್ಕಿ, ಜಟೆಯಲ್ಲಿರುವ ಸೋಮ ಮತ್ತು ಸುರನದಿಯರಿಗೆ ತೊಂದರೆಯಾಗದಂತೆ ಕೇತಕಿ, ಇರುವಂತಿ ಮತ್ತು ಸೇವಂತಿಯನ್ನು ಮುಡಿಸಿ, ಮರುಗ ಮತ್ತು ಸಂಪಿಗೆಗಳನ್ನೇ ಗಜ ಹಾಗೂ ಹುಲಿ ಚರ್ಮವಾಗಿ ಉಡಿಸುತ್ತಾನೆ ಎಂಬಂತೆ ನಾನಾ ರೀತಿಯ ವಿವರಗಳು ಶಿವ-ಭಕ್ತ-ಹೂವುಗಳ ಸುತ್ತ ಇಡೀ ಕಾವ್ಯದಲ್ಲಿ ಹರಡಿಕೊಂಡಿವೆ.
ವಸಂತ ಎಂದರೆ ಸಂತಸ ಮಾತ್ರವೇ? ಈ ಹೂವು, ಹಣ್ಣು, ಹಸಿರು, ಚಿಗುರು ಮುಂತಾದವೆಲ್ಲ ಯಾಕಿಷ್ಟು ಮುಖ್ಯವೆನಿಸುತ್ತವೆ ನಮಗೆ? ಏನೆಲ್ಲಾ ಭಾವಗಳು ಬೆರೆತಿವೆ ಇದೊಂದು ಋತುವಿನೊಂದಿಗೆ? ಏಳಿಗೆ, ಸಮೃದ್ಧಿ, ನಿರೀಕ್ಷೆ, ಭರವಸೆ, ಹರುಷ, ಹೊಸವರುಷ, ಪ್ರೀತಿ, ಒಲವು, ಶೃಂಗಾರ, ಝೇಂಕಾರ, ಕವಿಸಮಯ- ಇನ್ನೂ ಎಷ್ಟೊಂದು ಹೇಳುವುದಕ್ಕೆ ಇದೆಯಲ್ಲ. ಕೆಲವರಿಗೆ ಕೋಗಿಲೆ, ದುಂಬಿಗಳು ನೆನಪಾದರೆ, ಹಲವರು ಮಾವಿನ ಹಣ್ಣನ್ನೇ ಧೇನಿಸಬಹುದು. ಈ ವಿಷಯಗಳಲ್ಲಿ ಮೊದಲು ನೆನಪಾಗುವುದು ನಮ್ಮ ಪಂಪ. ʻನೀನೇ ಭುವನಕ್ಕಾರಾಧ್ಯನೈ ಚೂತರಾಜ, ತರುಗಳ್ ನಿನ್ನಂತೆ ಚೆನ್ನಂಗಳೇʼ ಎಂದು ಮಾವಿನ ಮರವನ್ನು ಕೊಂಡಾಡುತ್ತಾ, ಬನವಾಸಿಯಲ್ಲಿ ಮರಿದುಂಬಿಯಾಗಿ, ಕೋಗಿಲೆಯಾಗಿ ಹುಟ್ಟಲು ಹಂಬಲಿಸುತ್ತಾನೆ. ಇಂಥ ಘನಕವಿಯಿಂದ ಹಿಡಿದು, ʻಮಧುಮಾಸ ಬಂದಿಹುದು/ ಮಧುಕರಿಗಳೇ ಬನ್ನಿʼ ಎನ್ನುವ ಕುವೆಂಪು ಅವರು, ʻಬಾ ಭೃಂಗವೇ ಬಾ, ವಿರಾಗಿಯಂದದಿ ಭ್ರಮಿಸುವೆ ನೀನೇಕೆ?/ ಕಂಪಿನ ಕರೆಯಿದು ಸರಾಗವಾಗಿರೆ ಬೇರೆಯ ಕರೆ ಬೇಕೆ?ʼ ಎಂಬ ಬೇಂದ್ರೆಯವರು, ʻಇಮ್ಮಾವಿನ ಮಡಿಲಲ್ಲಿದೆ ದುಂಬಿಯ ಝೇಂಕಾರ/ ತರುಲತೆಗಳ ಮೈಗೊಪ್ಪಿದೆ ಕೆಂಪಿನಲಂಕಾರʼ ಎನ್ನುವ ಕೆ. ಎಸ್. ನರಸಿಂಹಸ್ವಾಮಿಗಳರವರೆಗೆ ಮಾವು, ದುಂಬಿ, ಕೋಗಿಲೆಗಳ ಬಗ್ಗೆ ಸೃಷ್ಟಿಯಾದ ಕವಿಸಮಯಗಳಿಗೆ ಲೆಕ್ಕವೇ ಇಲ್ಲ.
ನಿಸರ್ಗದೊಂದಿಗೆ ನಿಕಟವಾಗಿ ಬೆರೆತು ಬದುಕುತ್ತಿದ್ದ ಹಿಂದಿನವರ ರೀತಿ-ನೀತಿಗಳನ್ನು ಹಳೆಗನ್ನಡ ಕಾವ್ಯ ಪರಂಪರೆಯಲ್ಲೂ ಕಾಣಬಹುದು. ಸೀತೆಯನ್ನು ಅರಸುತ್ತಾ ಹೋಗುವ ರಾಮ, ʻತಳಿರೇ ತಾಮರೆಯೇ ಮೃಗಾಳಿ ಸಂಕುಲಮೇ ಮತ್ತ ಕೋಕಿಲಮೇ ಕಂಡಿರೇ ಪಲ್ಲವಾಧರೆಯʼ ಎಂದು ಸುತ್ತಲಿನ ಪ್ರಕೃತಿಯನ್ನು ಕೇಳುತ್ತಾ ಹೋಗುವ ವರ್ಣನೆ ನಾಗಚಂದ್ರನ ರಾಮಚಂದ್ರಚರಿತ ಪುರಾಣದಲ್ಲಿದೆ. ʻಕಂಡಿರೇ ಚೆನ್ನಮಲ್ಲಿಕಾರ್ಜುನನʼ ಎನ್ನುವ ಅಕ್ಕನೂ ಪ್ರಕೃತಿಯೊಂದಿಗೆ ಸಂವಾದಿಸುವುದನ್ನು ವಚನಗಳಲ್ಲಿ ಕಾಣಬಹುದು. ನಾಡೊಂದು ಸುಭಿಕ್ಷವಾಗುವುದು ಹೇಗೆ ಎನ್ನುವುದನ್ನು, ʻಫಲವಿಲ್ಲದ ಮಾವು ಮಾವಿಲ್ಲದ ಮಲ್ಲಿಗೆ ಮಲ್ಲಿಕಾಲತಿಕೆ ಇಲ್ಲದ ವನ ವನವಿಲ್ಲದ ಭೋಗಿಗಳಿಲ್ಲ ದೇಶದೆಡೆಯೊಳುʼ ಎಂದು ವರ್ಣಿಸುತ್ತಾನೆ ನಂಜುಂಡ ಕವಿ.
ಇದನ್ನೂ ಓದಿ: ದಶಮುಖ ಅಂಕಣ: ಏನು ಹೇಳುತ್ತಿವೆ ಈ ಪ್ರತಿಮೆಗಳು?
ನಿಸರ್ಗದೊಂದಿಗಿನ ಅನುಸಂಧಾನ ಹೀಗಾದರೆ, ವಸಂತನ ಬಗ್ಗೆ ಹರಿದು ಬಂದ ಕವಿಸಾಲುಗಳಿಗೆ ತುದಿ-ಮೊದಲು ಉಂಟೇ? ʻಪಸರಿಸಿತು ಮಧುಮಾಸ ತಾವರೆ/ ಎಸಳ ದೋಣಿಯ ಮೇಲೆ ಹಾಯ್ದವು/ ಕುಸುಮ ರಸದ ಉಬ್ಬರ ತೆರೆಯನು ಕೂಡ ದುಂಬಿಗಳುʼ ಎಂದು ರಸವನ್ನೇ ಹರಿಸುತ್ತಾನೆ ರೂಪಕಗಳ ರಾಜ ಕುಮಾರವ್ಯಾಸ. ಶೃಂಗಾರ ರಸವೆಂಬುದು ವಸಂತನೊಂದಿಗೆ ಸ್ಥಾಯಿ ಎನ್ನುವಷ್ಟು ನಿಕಟವಾದ್ದರಿಂದ, ʻಲಲಿತ ಲವಂಗ ಲತಾ ಪರಿಶೀಲನ ಕೋಮಲ ಮಲಯ ಸಮೀರೆ/ ಮಧುಕರ ನಿಕರ ಕರಂಬಿತ ಕೋಕಿಲ ಕೂಜಿತ ಕುಂಜ ಕುಟೀರೆʼ (ಸ್ಥೂಲವಾಗಿ ಹೇಳುವುದಾದರೆ, ಪ್ರಕೃತಿಯಲ್ಲಿ ಅರಳಿ ನಿಂತ ಹೂಗಿಡ ಬಳ್ಳಿಗಳ ಕುಸುಮಗಳ ಸುಗಂಧವನ್ನು ಕೋಮಲವಾದ ಮರುತ ಹೊತ್ತು ತರುತ್ತಿದ್ದಾನೆ. ಕುಟೀರದ ಸುತ್ತೆಲ್ಲ ದುಂಬಿಗಳು ಝೇಂಕರಿಸುತ್ತಿವೆ) ಎನ್ನುವ ಜಯದೇವ ಕವಿಯ ವರ್ಣನೆಯಿಂದ, ಕೃಷ್ಣ-ಗೋಪಿಕೆಯರ ಇನ್ನೊಂದು ಲೋಕವೇ ತೆರೆದುಕೊಳ್ಳುತ್ತದೆ. ಹೊಸಗನ್ನಡದ ಹಾದಿಗಳೂ ವಸಂತನಿಂದ ಸಿಂಗಾರಗೊಂಡಂಥವೇ. ಬಿಎಂಶ್ರೀ ಅವರ ʻವಸಂತ ಬಂದ, ಋತುಗಳ ರಾಜ ತಾ ಬಂದʼ ಎನ್ನುವ ಸಾಲುಗಳಿಂದ ಮೊದಲ್ಗೊಂಡರೆ, ʻಗಿಡದಿಂದುದುರುವ ಎಲೆಗಳಿಗೂ ಮುದ, ಚಿಗುರುವಾಗಲೂ ಒಂದೇ ಹದ/ ನೆಲದ ಒಡಲಿನೊಳಗೇನು ನಡೆವುದೋ, ಎಲ್ಲಿ ಕುಳಿತಿಹನೋ ಕಲಾವಿದ!ʼ ಎಂಬ ಅಚ್ಚರಿ ಚನ್ನವೀರ ಕಣವಿಯವರದ್ದಾದರೆ, ʻಋತು ವಸಂತ ಬಂದನಿದೋ, ಉಲ್ಲಾಸವ ತಂದನಿದೋ/ ಬತ್ತಿದೆದೆಗೆ ಭರವಸೆಗಳ ಹೊಸ ಬಾವುಟವೇರಿಸಿ/ ಹಳೆಗಾಡಿಗೆ ಹೊಸ ಕುದುರೆಯ ಹೊಸಗಾಲಿಯ ಜೋಡಿಸಿʼ ಎಂದು ಸಂಭ್ರಮ ಪಲ್ಲವಿಸುವ ಬಗೆಯನ್ನು ಜಿ.ಎಸ್.ಶಿವರುದ್ರಪ್ಪನವರು ವರ್ಣಿಸುತ್ತಾರೆ. ಇದಿಷ್ಟೇ ಅಲ್ಲ, ಕುವೆಂಪು, ಬೇಂದ್ರೆ, ಪುತಿನ, ಅಡಿಗರು- ಹೀಗೆ ವಸಂತನ ಸೌಂದರ್ಯಕ್ಕೆ ಸೋಲದ ಕವಿಗಳೇ ಇಲ್ಲ.
ಇಷ್ಟೆಲ್ಲಾ ಬೆಡಗಿನೊಂದಿಗೆ ಇದೀಗ ಬಂದಿರುವ ವಸಂತನೇನೂ ನಿಲ್ಲುವವನಲ್ಲ, ಉಳಿದೆಲ್ಲರಂತೆಯೇ ಅವನೂ ಋತುಚಕ್ರದೊಂದಿಗೆ ಉರುಳುವವನೇ. ಇಂದು ಚೆಲುವಾಗಿ ಹಬ್ಬಿನಿಂತ ವಲ್ಲರಿ ಮುಂದೊಮ್ಮೆ ಎಲೆ ಉದುರಿಸಲೇಬೇಕು, ಒಣಗಲೇಬೇಕು, ಮತ್ತೆ ಚಿಗುರಲೇಬೇಕು. ಹಳತೆಲ್ಲ ಮಾಗಿ, ಹೋಗಿ, ಹೊಸದಕ್ಕೆ ಹಾದಿ ಬಿಡುವ ಈ ನೈಸರ್ಗಿಕ ಕ್ರಿಯೆಯನ್ನು ಸಹಜವಾಗಿ ಒಪ್ಪಿಕೊಂಡವರು ಮಾತ್ರವೇ ಕಾಲಪ್ರವಾಹದಲ್ಲಿ ದಡ ಸೇರಲು ಸಾಧ್ಯ. ಹಾಗಾಗಿ ಕಾಲಕ್ಕೆ ತಕ್ಕಂತೆ ಮಾಗಲಿ, ಸಾಗಲಿ ನಮ್ಮೆಲ್ಲರ ಜೀವನಚಕ್ರ.
ಇದನ್ನೂ ಓದಿ: ದಶಮುಖ ಅಂಕಣ: ವೈಜ್ಞಾನಿಕತೆ ಮತ್ತು ಭ್ರಮರ-ಕೀಟ ನ್ಯಾಯ!
ಅಂಕಣ
ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆ ಅಂತಿಮ ತಯಾರಿ ಭಾಗ-4; ಗಣಿತದ ಕುತೂಹಲಕಾರಿ ಅಪ್ಲಿಕೇಶನ್ ಪ್ರಶ್ನೆಗಳು
ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧವಾಗುತ್ತಿರುವ ಮಕ್ಕಳಿಗೆ ಅಂತಿಯ ತಯಾರಿಗೆ ಅನುಕೂಲವಾಗಲೆಂದು, ಪಾಸ್ ಆಗಲು ಕೆಲವು ಸೂತ್ರಗಳನ್ನು ಇಲ್ಲಿ ಕೊಡಲಾಗಿದೆ. ಇಂದು ಗಣಿತದ ಕುತೂಹಲಕಾರಿ ಅನ್ವಯಿಕ ಪ್ರಶ್ನೆಗಳು ಇಲ್ಲಿವೆ.
ಪ್ರೀತಿಯ ವಿದ್ಯಾರ್ಥಿಗಳೇ,
ನಿನ್ನೆಯ ಸಂಚಿಕೆಯಲ್ಲಿ ವಿಜ್ಞಾನ ಪ್ರಶ್ನೆಪತ್ರಿಕೆಯ ಅಪ್ಲಿಕೇಶನ್ ಪ್ರಶ್ನೆಗಳ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದೆ. ಇಂದು ಅಷ್ಟೇ ಆಕರ್ಷಕವಾದ ಗಣಿತದ ಅಪ್ಲಿಕೇಶನ್ ಪ್ರಶ್ನೆಗಳನ್ನು ತಮ್ಮ ಮುಂದೆ ಇಡುತ್ತಿದ್ದೇನೆ.
ಗಣಿತದಲ್ಲಿಯೂ ವಿಜ್ಞಾನದ ಹಾಗೆ ನಾಲ್ಕು ರೀತಿಯ ಪ್ರಶ್ನೆಗಳು ಇದ್ದು 12-14 ಅಂಕದ ಪ್ರಶ್ನೆಗಳು ಮಾತ್ರ ಅನ್ವಯಿಕ ಪ್ರಶ್ನೆಗಳು ಆಗಿರುತ್ತವೆ. ಅಂದರೆ ಪಠ್ಯಪುಸ್ತಕದ ಜ್ಞಾನವನ್ನು ನಿಮ್ಮ ಜೀವನಕ್ಕೆ ಅನ್ವಯ ಮಾಡಿ ಕೇಳಿದ ಪ್ರಶ್ನೆಗಳು ಇವು ಆಗಿರುತ್ತವೆ.
ವಿಜ್ಞಾನದಲ್ಲಿ ಯಾವ ಪಾಠದಿಂದ ಅನ್ವಯಿಕ ಪ್ರಶ್ನೆಗಳು ಬರಬಹುದು ಎಂದು ಸ್ಪಷ್ಟವಾಗಿ ಹೇಳಲಾಗದು. ಆದರೆ, ಗಣಿತದಲ್ಲಿ ಆ ಸಮಸ್ಯೆ ಇಲ್ಲ. ಇದೇ ಪಾಠ ಎಂದು ಖಚಿತವಾಗಿ ಹೇಳಬಹುದು. ಪ್ರತೀ ವರ್ಷವೂ ಕೇಳುವ ಅನ್ವಯ ಪ್ರಶ್ನೆಗಳು ಬ್ರಾಂಡ್ ನ್ಯೂ ಆದ ಕಾರಣ ನೀವು ಮಾನಸಿಕವಾಗಿ ಪ್ರಿಪೇರ್ ಆಗಬೇಕು. ಆದರೆ, ಈ ಪ್ರಶ್ನೆಗಳು ಕಠಿಣ ಇರುವುದಿಲ್ಲ ಎಂದು ನಾನು ಖಂಡಿತವಾಗಿ ಹೇಳಬಲ್ಲೆ.
1. ಸಮಾಂತರ ಶ್ರೇಡಿ (Arithmatic Progression)
ಈ ಪಾಠದಿಂದ ನಾಲ್ಕು ಅಂಕಗಳ ಒಂದು ಅಪ್ಲಿಕೇಶನ್ ಪ್ರಶ್ನೆಯು ಪರೀಕ್ಷೆಗೆ ಬರುತ್ತದೆ ಮತ್ತು ಅದಕ್ಕೆ ಚಾಯ್ಸ್ ಕೂಡ ಇರುವ ಸಾಧ್ಯತೆ ಹೆಚ್ಚಿದೆ. ಕೆಲವು ಉದಾಹರಣೆ ನೋಡೋಣ.
1) ಸಮಾಂತರ ಶ್ರೇಡಿಯ ಹತ್ತನೇ ಮತ್ತು ಇಪ್ಪತ್ತನೇ ಪದಗಳು 22 ಮತ್ತು 42 ಇವೆ. ಇಪ್ಪತ್ತೈದನೇ ಪದ ಕಂಡು ಹಿಡಿಯಿರಿ.
2) ಸಮಾಂತರ ಶ್ರೇಢಿಯ ಮೂರು ಅನುಕ್ರಮ ಪದಗಳ ಮೊತ್ತ 15. ಅವುಗಳ ವರ್ಗಗಳ ಮೊತ್ತ 83. ಆ ಸಂಖ್ಯೆಗಳನ್ನು ಕಂಡು ಹಿಡಿಯಿರಿ.
3) 200ರಿಂದ 300ರ ವರೆಗಿನ ಮೂರರ ಅಪವರ್ತ್ಯಗಳ ಮೊತ್ತ ಕಂಡು ಹಿಡಿಯಿರಿ.
4) 50 ಪದಗಳಿರುವ ಒಂದು ಸಮಾಂತರ ಶ್ರೇಡಿಯ ಮೊತ್ತ 10 ಪದಗಳ ಮೊತ್ತ 210. ಕೊನೆಯ 15 ಪದಗಳ ಮೊತ್ತ 2565. ಹಾಗಿದ್ದರೆ ಸಮಾಂತರ ಶ್ರೇಡಿಯನ್ನು ಬರೆಯಿರಿ.
5) ಸಮಾಂತರ ಶ್ರೇಡಿಯ ನಾಲ್ಕು ಅನುಕ್ರಮ ಪದಗಳ ಮೊತ್ತ 32. ಮೊದಲ ಮತ್ತು ಕೊನೆಯ ಪದಗಳ ಗುಣಲಬ್ಧ ಮತ್ತು ಮಧ್ಯದ ಎರಡು ಪದಗಳ ಗುಣಲಬ್ಧಗಳ ಅನುಪಾತವು 7: 15 ಆಗಿದೆ. ಆ ಸಂಖ್ಯೆಗಳನ್ನು ಕಂಡುಹಿಡಿಯಿರಿ.
2. ವರ್ಗ ಸಮೀಕರಣ (Quadratic Equations)
ಈ ಪಾಠದಿಂದ ಮೂರು ಅಂಕಗಳ ಒಂದು ಅನ್ವಯ ಪ್ರಶ್ನೆಯು ಪರೀಕ್ಷೆಗೆ ಬರುತ್ತಿದ್ದು ಅದಕ್ಕೆ ಕೂಡ ಚಾಯ್ಸ್ ಇರುವ ಸಾಧ್ಯತೆ ಇರುತ್ತದೆ. ಕೆಲವು ಉದಾಹರಣೆ ಇಲ್ಲಿವೆ.
1) ಲಂಬಕೋನದ ವಿಕರ್ಣವು 13 ಸೆಂ.ಮೀ. ಇರುತ್ತದೆ. ಪಾದವು ಎತ್ತರಕ್ಕಿಂತ ಏಳು ಸೆಂ.ಮೀ. ಹೆಚ್ಚು ಉದ್ದ ಇರುತ್ತದೆ. ಪಾದ ಮತ್ತು ಎತ್ತರಗಳನ್ನು ಕಂಡು ಹಿಡಿಯಿರಿ.
2) ಒಂದು ಶಾಲೆಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ 3600 ರೂಪಾಯಿಗಳನ್ನು ಸಮನಾಗಿ ಹಂಚಲಾಯಿತು. ಅದರಲ್ಲಿ ನಾಲ್ಕು ವಿದ್ಯಾರ್ಥಿಗಳು ಕಡಿಮೆ ಬಂದ ಕಾರಣ ಉಳಿದವರಿಗೆ 10 ರೂ. ಹೆಚ್ಚು ದೊರೆಯಿತು. ಹಾಗಾದರೆ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು?
3) ಎರಡು ಸಂಖ್ಯೆಗಳ ಮೊತ್ತ 18. ಅವುಗಳ ವರ್ಗಗಳ ಮೊತ್ತ 290. ಆ ಸಂಖ್ಯೆ ಕಂಡುಹಿಡಿಯಿರಿ.
4) ಒಂದು ಆಯತದ ಸುತ್ತಳತೆ 54 ಸೆಂ.ಮೀ. ಅದರ ವಿಸ್ತೀರ್ಣವು 180 ಚದರ ಸೆಂ.ಮೀ. ಇದೆ. ಅದರ ಉದ್ದ ಅಗಲ ಕಂಡು ಹಿಡಿಯಿರಿ.
5.) ಬೆಂಗಳೂರಿನಿಂದ ಒಂದು ನಗರಕ್ಕೆ 1200 ಕಿಮೀ ದೂರ ಇದೆ. ಒಂದು ಪ್ಯಾಸೆಂಜರ್ ರೈಲಿನ ಸರಾಸರಿ ವೇಗಕ್ಕಿಂತ ಎಕ್ಸ್ಪ್ರೆಸ್ ರೈಲಿನ ಸರಾಸರಿ ವೇಗವು 20ಕಿ.ಮೀ. / ಗಂಟೆ ಹೆಚ್ಚಿದೆ. ಎಕ್ಸ್ಪ್ರೆಸ್ ರೈಲು ಪ್ಯಾಸೆಂಜರ್ ರೈಲಿಗಿಂತ ಎರಡು ಗಂಟೆ ಕಡಿಮೆ ಸಮಯದಲ್ಲಿ ಆ ನಗರವನ್ನು ತಲುಪಿದರೆ ಎರಡೂ ರೈಲುಗಳ ಸರಾಸರಿ ವೇಗ ಕಂಡುಹಿಡಿಯಿರಿ.
6.) ಮೂರು ಕ್ರಮಾನುಗತ ಸಂಖ್ಯೆಗಳ ವರ್ಗಗಳ ಮೊತ್ತವು 50. ಆದರೆ ಆ ಸಂಖ್ಯೆಗಳನ್ನು ಕಂಡು ಹಿಡಿಯಿರಿ.
3. ತ್ರಿಕೋನ ಮಿತಿ (Trigonometry)
ಈ ಪಾಠದಿಂದ ಮೂರು ಅಥವಾ ನಾಲ್ಕು ಅಂಕಗಳ ಒಂದು ಅನ್ವಯ ಪ್ರಶ್ನೆಯು ಪ್ರತೀ ವರ್ಷವೂ ಪರೀಕ್ಷೆಗೆ ಕೇಳಲ್ಪಡುತ್ತದೆ. ಆ ಪ್ರಶ್ನೆಗಳು ಉನ್ನತ ಕೋನ ಮತ್ತು ಅವನತ ಕೋನ ಆಧಾರಿತ ಆಗಿರುತ್ತವೆ. ಇಲ್ಲಿವೆ ಕೆಲವು ಉದಾಹರಣೆಗಳು. (ಆಕೃತಿಯನ್ನು ಅವರೇ ಕೊಡಬಹುದು ಅಥವಾ ಕೊಡದಿರಬಹುದು)
1) 100 ಮೀಟರ್ ಎತ್ತರವಿರುವ ದೀಪಸ್ತಂಭದ ಬುಡದಿಂದ ಸ್ವಲ್ಪ ದೂರದ ಒಂದು ಬಿಂದುವಿನಿಂದ ಆ ದೀಪಸ್ತಂಭದ ತುದಿಯನ್ನು ನೋಡಿದಾಗ ಉನ್ನತ ಕೋನವು 30 ಡಿಗ್ರಿ ಆಗಿರುತ್ತದೆ. ಅವನು ಸ್ವಲ್ಪ ದೂರ ದೀಪಸ್ತಂಭದ ಕಡೆಗೆ ನಡೆಯುತ್ತ ಇನ್ನೊಂದು ಬಿಂದು ತಲುಪುತ್ತಾನೆ. ಅಲ್ಲಿಂದ ದೀಪಸ್ತಂಭದ ತುದಿಯನ್ನು ನೋಡಿದಾಗ ಉನ್ನತ ಕೋನವು 60 ಡಿಗ್ರಿ ಆಗಿರುತ್ತದೆ. ಆ ಎರಡು ಬಿಂದುಗಳ ನಡುವಿನ ದೂರ ಎಷ್ಟು?
2) ಒಂದು ಎತ್ತರದ ಬೆಟ್ಟದ ಮೇಲೆ ಒಂದು ಧ್ವಜವು ಹಾರುತ್ತಿದೆ. ನೆಲದ ಮೇಲಿನ ಒಂದು ಬಿಂದುವಿನಿಂದ ಆ ಬೆಟ್ಟದ ತುದಿಯನ್ನು ನೋಡಿದಾಗ ಉನ್ನತ ಕೋನವು 45 ಡಿಗ್ರಿ ಇರುತ್ತದೆ. ಅದೇ ಬಿಂದುವಿನಿಂದ ಬಾವುಟದ ತುದಿಯನ್ನು ನೋಡಿದಾಗ ಉನ್ನತ ಕೋನವು 60 ಡಿಗ್ರಿ ಇದೆ. ಆ ನೆಲದ ಮೇಲಿನ ಬಿಂದುವು ಬೆಟ್ಟದ ಬುಡದಿಂದ 100 ಮೀಟರ್ ದೂರ ಇದ್ದರೆ ಆ ಬೆಟ್ಟ ಮತ್ತು ಬಾವುಟದ ಎತ್ತರ ಕಂಡುಹಿಡಿಯಿರಿ.
3) 100 ಮೀಟರ್ ಎತ್ತರವಿರುವ ಒಂದು ದೀಪಸ್ಥಂಭದ ತುದಿಯಿಂದ ಅದರ ಒಂದೇ ಪಾರ್ಶ್ವದಲ್ಲಿ ಇರುವ ಎರಡು ದೋಣಿಗಳನ್ನು ನೋಡಿದಾಗ ಅವುಗಳ ಅವನತ ಕೋನವು 30 ಡಿಗ್ರಿ ಮತ್ತು 45 ಡಿಗ್ರಿ ಇವೆ. ಒಂದು ಹಡಗು ಇನ್ನೊಂದರ ಹಿಂಬದಿಯಲ್ಲಿ ಇದ್ದರೆ ಆ ದೋಣಿಗಳ ನಡುವಿನ ಅಂತರ ಎಷ್ಟು?
4) 70 ಮೀಟರ್ ಎತ್ತರವಿರುವ ಒಂದು ಕಟ್ಟಡದ ತುದಿಯಿಂದ ಅದರ ಮುಂದೆ ಇರುವ ಒಂದು ಗೋಪುರದ ಮೇಲ್ತುದಿಯನ್ನು ನೋಡಿದಾಗ ಉನ್ನತ ಕೋನವು 60 ಡಿಗ್ರಿ ಇದೆ. ಅದೇ ಕಟ್ಟಡದ ಮೇಲ್ತುದಿಯಿಂದ ಗೋಪುರದ ಕೆಳ ತುದಿಯನ್ನು ನೋಡಿದಾಗ ಅವನತ ಕೋನವು 45 ಡಿಗ್ರಿ ಇದೆ. ಆ ಗೋಪುರದ ಎತ್ತರವನ್ನು ಕಂಡುಹಿಡಿಯಿರಿ.
4. ವಿಸ್ತೀರ್ಣ ಮತ್ತು ಘನಫಲ (Surface Area and Volume)
ಈ ಪಾಠದಲ್ಲಿ ಒಟ್ಟು 14 ಸೂತ್ರಗಳು ಇವೆ. ಆಕೃತಿಗಳನ್ನು ಕೊಡಬಹುದು ಅಥವಾ ಕೊಡದಿರಬಹುದು. ಈ ಪಾಠದಿಂದ 4/5 ಅಂಕಗಳ ಒಂದು ಅನ್ವಯಿಕ ಪ್ರಶ್ನೆಯು ಪರೀಕ್ಷೆಗೆ ಖಂಡಿತವಾಗಿಯೂ ಬರುತ್ತದೆ.
1) 21 ಮೀಟರ್ ಎತ್ತರವಿರುವ ಮತ್ತು 7 ಮೀಟರ್ ತ್ರಿಜ್ಯ ಇರುವ ಒಂದು ಸಿಲಿಂಡರ್ನ ಮೇಲೆ ಅಷ್ಟೇ ತ್ರಿಜ್ಯ ಇರುವ ಎರಡು ಅರ್ಧ ಗೋಲಗಳನ್ನು ಎರಡೂ ಪಾರ್ಶ್ವದಲ್ಲಿ ಜೋಡಿಸಿ ಒಂದು ಟ್ಯಾಂಕರ್ ಮಾಡಲಾಗಿದೆ. ಅದರ ಮೇಲ್ಮೈಗೆ ಬಣ್ಣ ಹಚ್ಚಲು ದೊರೆಯುವ ವಿಸ್ತೀರ್ಣ ಎಷ್ಟು? ಅದರಲ್ಲಿ ತುಂಬಿಸಲು ಸಾಧ್ಯವಾಗುವ ಡೀಸೆಲನ್ನು ಲೀಟರ್ನಲ್ಲಿ ಕಂಡುಹಿಡಿಯಿರಿ.
2) 15 ಮೀಟರ್ ಎತ್ತರವಿರುವ ಮತ್ತು 3.5 ಮೀಟರ್ ತ್ರಿಜ್ಯ ಇರುವ ಒಂದು ಸಿಲಿಂಡರ್ ಮೇಲೆ ಅಷ್ಟೇ ತ್ರಿಜ್ಯವಿರುವ ಒಂದು ಅರ್ಧಗೋಳ ಮತ್ತು ಕೆಲಭಾಗಗಳಲ್ಲಿ ಕೂಡ ಅಷ್ಟೇ ತ್ರಿಜ್ಯವಿರುವ ಮತ್ತು 7 ಮೀಟರ್ ಓರೆ ಎತ್ತರವಿರುವ ಒಂದು ಶಂಕುವನ್ನು ಫಿಟ್ ಮಾಡಲಾಗಿದೆ. ಅದರ ಒಟ್ಟು ಘನಫಲವನ್ನು ಕಂಡು ಹಿಡಿಯಿರಿ.
3) 21 ಮೀಟರ್ ಆಳವಿರುವ ಮತ್ತು 15 ಮೀಟರ್ ತ್ರಿಜ್ಯ ಇರುವ ಒಂದು ಸಿಲಿಂಡರ್ ಆಕಾರದ ಒಂದು ಬಾವಿಯನ್ನು ಕೊರೆದು ಆ ಮಣ್ಣನ್ನು ಒಂದು ಆಯತ ಘನಾಕೃತಿಯ ಒಂದು ಕಟ್ಟೆಯನ್ನು ಮಾಡಲಾಗಿದೆ. ಅದರ ಉದ್ದ ಮತ್ತು ಅಗಲಗಳು 3.5 ಮೀಟರ್ ಮತ್ತು 7 ಮೀಟರ್ ಇವೆ. ಅದರ ಎತ್ತರವನ್ನು ಕಂಡುಹಿಡಿಯಿರಿ.
4) 21 ಮೀಟರ್ ತ್ರಿಜ್ಯವಿರುವ ಮತ್ತು 15 ಮೀಟರ್ ಎತ್ತರವಿರುವ ಒಂದು ಘನ ಸಿಲಿಂಡರ್ನ ಆಕಾರದ ಒಂದು ಮರದ ಕಾಂಡದಿಂದ ಮೇಲೆ ಮತ್ತು ಕೆಳಗೆ 7 ಮೀಟರ್ ವ್ಯಾಸವಿರುವ ಎರಡು ಅರ್ಧ ಘನ ಗೋಲಗಳನ್ನು ಕೊರೆದು ತೆಗೆಯಲಾಗಿದೆ. ಉಳಿದ ಆಕೃತಿಯ ಘನಫಲ ಕಂಡುಹಿಡಿಯಿರಿ.
5) 3.5 ಮೀಟರ್ ತ್ರಿಜ್ಯ ಇರುವ ಮತ್ತು 12 ಮೀಟರ್ ಎತ್ತರ ಇರುವ ಒಂದು ಶಂಕುವಿನಾಕೃತಿಯ ಪಾತ್ರೆಯಲ್ಲಿ ತುಂಬಾ ಹಣ್ಣಿನ ಜ್ಯೂಸ್ ಇದೆ. ಅದನ್ನು 7 ಮೀಟರ್ ತ್ರಿಜ್ಯ ಇರುವ ಒಂದು ಸಿಲಿಂಡರ್ ಆಕಾರದ ಪಾತ್ರೆಗೆ ವರ್ಗಾವಣೆ ಮಾಡಲಾಯಿತು. ಆಗ ಎಷ್ಟು ಎತ್ತರದವರೆಗೆ ಜ್ಯೂಸ್ ಭರ್ತಿ ಆಗಿದೆ?
6) ಶಂಕುವಿನ ಒಂದು ಭಿನ್ನಕದ ಎತ್ತರವು 12 ಮೀಟರ್. ಅದರ ಎರಡು ತ್ರಿಜ್ಯಗಳು ಕ್ರಮವಾಗಿ 3.5 ಮೀಟರ್ ಮತ್ತು 5 ಮೀಟರ್ ಇವೆ. ಅದರ ವಿಸ್ತೀರ್ಣ ಮತ್ತು ಘನಫಲ ಕಂಡು ಹಿಡಿಯಿರಿ.
ಇತರ ಪಾಠಗಳ ಸಂಭನೀಯ ಪ್ರಶ್ನೆಗಳನ್ನು ಗಮನಿಸಿ
ಅದೇ ರೀತಿ ಸಂಭವನೀಯತೆ( Probability), ಪೈಥಾಗೊರಸ್ ಥಿಯರಂ ಮತ್ತು ವೃತ್ತಗಳಿಗೆ ಸಂಬಂಧಿಸಿದ
ವಿಸ್ತೀರ್ಣಗಳು ಈ ಪಾಠದಿಂದ ಕೂಡ ಒಂದೆರಡು ಅನ್ವಯಿಕ ಪ್ರಶ್ನೆಗಳು ಹಿಂದಿನ ಎಸೆಸೆಲ್ಸಿ ಪರೀಕ್ಷೆಗೆ ಬಂದಿವೆ ಅನ್ನುವುದು ನಿಮ್ಮ ಗಮನದಲ್ಲಿ ಇರಲಿ. ಈ ಪ್ರಶ್ನೆಗಳಿಗೆ ನೀವು ನಿಮ್ಮ ಗಣಿತ ಅಧ್ಯಾಪಕರನ್ನು ಸಂಪರ್ಕಿಸಿ ಉತ್ತರ ಪಡೆದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಒಳ್ಳೆದಾಗಲಿ ನಿಮಗೆ.
(ನಾಳೆಗೆ ಮುಂದುವರಿಯುತ್ತದೆ)
ಇದನ್ನೂ ಓದಿ: ಸರಣಿಯ ಹಿಂದಿನ ಮೂರು ಲೇಖನಗಳು
1 ರಾಜ ಮಾರ್ಗ ಅಂಕಣ : ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
2. ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಯಾವ ಪ್ರಶ್ನೆ ಬರ್ತದೆ? ಕೊನೇ ಕ್ಷಣದ ಸಿದ್ಧತೆ ಹೇಗಿರಬೇಕು? ಇಲ್ಲಿವೆ ಪವರ್ಫುಲ್ ಟಿಪ್ಸ್-ಭಾಗ 2
3.: ರಾಜ ಮಾರ್ಗ ಅಂಕಣ : SSLC ಪರೀಕ್ಷೆ ಅಂತಿಮ ತಯಾರಿ ಭಾಗ-3 ; ವಿಜ್ಞಾನದಲ್ಲಿ ಖುಷಿ ಕೊಡುವ ಅಪ್ಲಿಕೇಶನ್ ಪ್ರಶ್ನೆಗಳು
ಅಂಕಣ
ವೈದ್ಯ ದರ್ಪಣ ಅಂಕಣ: ನೆತ್ತಿಯೊಳಗಿನ ವಿದ್ಯುತ್ ಮತ್ತು ಮಾನಸಿಕ ಸಂತೃಪ್ತಿ
ಭಯೋತ್ಪಾದಕರನ್ನು ಕಂಡರೆ ಅಂಜುವ ಆಕೆ ಮೆದುಳಿಗೆ ತುಸು ವಿದ್ಯುತ್ ಪ್ರಚೋದನೆ ನೀಡಿದಾಗ ಅವರನ್ನು ಗುಂಡಿಟ್ಟು ಕೊಂದಳು! ಇದು ಹೇಗೆ ಸಾಧ್ಯ? ಪ್ರಯತ್ನದ ಲವಲೇಶವೂ ಇಲ್ಲದೆ, ತಂತ್ರಜ್ಞಾನದ ನೆರವಿನಿಂದ ಯಾವುದೇ ಕೆಲಸದಲ್ಲಿ ಪರಿಣತಿ ಪಡೆಯಲು ಸಾಧ್ಯವೇ? ಇದು ತಂದೊಡ್ಡಬಹುದಾದ ನೈತಿಕ ಪ್ರಶ್ನೆಗಳೇನು?
ಮಾನಸಿಕ ಸಂತೃಪ್ತಿಯ ಸಂಶೋಧಕರಲ್ಲಿ ಒಂದು ನಗೆಯ ಮಾತಿದೆ. “ನೀವು ನಿಮ್ಮ ಗಂಡ/ಹೆಂಡತಿಯನ್ನು ಪ್ರೀತಿಸುತ್ತೀರಾ?” ಮತ್ತು “ನೀವು ನಿಮ್ಮ ವೃತ್ತಿಯನ್ನು ಪ್ರೀತಿಸುತ್ತೀರಾ?” ಎನ್ನುವ ಪ್ರಶ್ನೆಗಳ ಪೈಕಿ ಯಾವುದಕ್ಕೆ ಹೆಚ್ಚು “ಹೌದು” ಎನ್ನುವ ಉತ್ತರ ಬರುತ್ತದೆ ಎಂದು ಯಾರಿಗೂ ತಿಳಿಯದು. ಜೊತೆಗೆ ಈ ಎರಡೂ ಪ್ರಶ್ನೆಗಳು ಸಾಪೇಕ್ಷವಾಗಿ ವಿಲೋಮವಂತೆ! ಅಂದರೆ, ಮೊದಲ ಪ್ರಶ್ನೆಗೆ ಹೌದು/ಇಲ್ಲ ಎಂದವರು ಎರಡನೆಯ ಪ್ರಶ್ನೆಗೆ ಇಲ್ಲ/ಹೌದು ಎನ್ನುವರಂತೆ! “ನೀವು ಸೋಮವಾರದ ಮುಂಜಾನೆಗೆ ಕಾಯುತ್ತಿದ್ದೀರಿ ಎಂದರೆ, ಒಂದೋ ನೀವು ನಿಮ್ಮ ಕೆಲಸವನ್ನು ಹೆಚ್ಚು ಪ್ರೀತಿಸುತ್ತೀರಿ ಅಥವಾ ನಿಮ್ಮ ಮನೆಯಾಕೆ/ಮನೆಯಾತನನ್ನು ಹೆಚ್ಚು ದ್ವೇಷಿಸುತ್ತೀರಿ ಎಂದರ್ಥ” ಎನ್ನುವ ಚಮತ್ಕಾರದ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಒಟ್ಟಿನಲ್ಲಿ, ವೃತ್ತಿಯ ಮೇಲಿನ ಪ್ರೀತಿ ಎನ್ನುವುದು ಸುಲಭವಾಗಿ ಪರಿಹಾರವಾಗುವಂಥದ್ದಲ್ಲ.
ಕೆಲವೊಮ್ಮೆ ಇಷ್ಟವಿಲ್ಲದೆ ಮಾಡುವ ಕೆಲಸಗಳನ್ನು ಬಹಳ ಕಾಲ ಮಾಡುತ್ತಿದ್ದರೆ ಒಂದು ರೀತಿಯ ಆತ್ಮೀಯತೆ ಬಂದುಬಿಡುತ್ತದೆ. ಇದೇ ತತ್ತ್ವವನ್ನು ಆಧರಿಸಿ ಬಲವಂತದ ಮದುವೆಗಳನ್ನು ಮಾಡಿಸುತ್ತಿದ್ದ ಕಾಲವೂ ಇತ್ತು! “ಮಾಡುವ ವೃತ್ತಿಯ ಬಗ್ಗೆ ಪ್ರೀತಿ ಇದೆಯೇ?” ಎನ್ನುವ ಪ್ರಶ್ನೆಯನ್ನು “ನಿಮ್ಮ ವೃತ್ತಿಯ ಬಗ್ಗೆ ಸಂತೃಪ್ತಿ ಇದೆಯೇ?” ಎಂದು ಬದಲಾಯಿಸಿದರೆ ಧನಾತ್ಮಕ ಉತ್ತರಗಳ ಪರಿಮಾಣ ಮತ್ತಷ್ಟು ಕಡಿಮೆಯಾಗಬಹುದು. ಕೆಲಸದಲ್ಲಿ ಸಂತೃಪ್ತಿ ಎಂದರೇನು? ಅದು ಯಾವಾಗ ಬರುತ್ತದೆ? ಎನ್ನುವುದರ ಬಗ್ಗೆ ಸಂಶೋಧಕರು ಬಹಳ ಕಾಲದಿಂದ ಗಮನ ಹರಿಸಿದ್ದಾರೆ. ಇದರಲ್ಲಿ ಎರಡು ಮಾಪನಗಳಿವೆ.
ಒಂದು: ಮಾಡುವ ಕೆಲಸದಲ್ಲಿ ನಮ್ಮ ಪರಿಣತಿ. ಎರಡು: ಆ ಕೆಲಸ ಒಡ್ಡುವ ಸವಾಲುಗಳು. ಕೆಲಸದಲ್ಲಿ ಪರಿಣತಿ ಇರದಿದ್ದರೆ ಸವಾಲಿನ ಮಟ್ಟ ಹೆಚ್ಚಿದಂತೆ ಆತಂಕ ಹೆಚ್ಚುತ್ತದೆ. “ಇದನ್ನು ನಾನು ಮಾಡಲಾರೆ. ಆದರೆ, ಇದು ಮೇಲ್ವಿಚಾರಕರಿಗೆ ತಿಳಿದುಹೋದರೆ ಕೆಲಸ ಹೋಗಬಹುದು. ಹೀಗಾಗಿ, ನಾನು ಕೆಲಸದಿಂದ ತಪ್ಪಿಸಿಕೊಳ್ಳುವ ಉಪಾಯಗಳನ್ನು ಹುಡುಕಬೇಕು” ಎನ್ನುವ ಮನಸ್ಥಿತಿ ಬೆಳೆಯುತ್ತದೆ. ಅಂತೆಯೇ, ನಮ್ಮ ಪರಿಣತಿ ಬಹಳ ಚೆನ್ನಾಗಿದ್ದು, ನಾವು ಮಾಡಬೇಕಾದ ಕೆಲಸದಲ್ಲಿ ಸವಾಲುಗಳೇ ಇಲ್ಲವಾದರೆ ಒಂದು ರೀತಿಯ ಆಲಸ್ಯ ಬೆಳೆಯುತ್ತದೆ. ಹತ್ತು ಫೈಲುಗಳನ್ನು ಒಂದೇ ದಿನಕ್ಕೆ ವಿಲೇವಾರಿ ಮಾಡುವ ಸಾಮರ್ಥ್ಯದ ನೌಕರನಿಗೆ ದಿನಕ್ಕೊಂದೇ ಫೈಲು ನೀಡಿದರೆ ಆತ ಹತ್ತನೆಯ ದಿನದವರಗೆ ಸೋಮಾರಿಯಾಗಿ ಕಳೆದು, ಹತ್ತನೆಯ ದಿನ ಚಕಚಕನೆ ಹತ್ತೂ ಫೈಲುಗಳನ್ನು ಮುಗಿಸಿ ಒಗೆಯುತ್ತಾನೆ. ಇದು ಕೆಲಸಗಾರನ ಸಾಮರ್ಥ್ಯವನ್ನು ಸರಿಯಾಗಿ ಗ್ರಹಿಸಬಲ್ಲ ನಾಯಕರ ಅಭಾವದಿಂದ ಆಗುವ ಪ್ರಕ್ರಿಯೆ. ಈ ಎರಡೂ ಸಾಧ್ಯತೆಗಳ ಪರಮೋಚ್ಚ ಉದಾಹರಣೆಗಳು ನಮ್ಮ ದೇಶದಲ್ಲಿ ಒಂದೇ ಕಡೆ ಲಭಿಸುತ್ತವೆ. ಅದನ್ನು ನಾವೆಲ್ಲರೂ ಕಂಡಿರುತ್ತೇವೆ.
ಇದರ ಮತ್ತಷ್ಟು ಆಯಾಮಗಳನ್ನು ಗಮನಿಸಬಹುದು: ಕಡಿಮೆ ಸಾಮರ್ಥ್ಯದ ಕೆಲಸಗಾರನಿಗೆ ಕಡಿಮೆ ಸವಾಲಿನ ಕೆಲಸ ನೀಡಿದರೆ ಆತನಿಗೆ ನಿರ್ಲಕ್ಷ್ಯ ಧೋರಣೆ ಬೆಳೆಯುತ್ತದೆ. ಸವಾಲಿನ ಮಟ್ಟ ಒಂದೆರಡು ಇಂಚು ಬೆಳೆದರೂ ಆತ ಚಿಂತೆಗೊಳಗಾಗುತ್ತಾನೆ; ಇತರರ ಸಹಾಯಕ್ಕೆ ಹಂಬಲಿಸುತ್ತಾನೆ. ತಕ್ಕಮಟ್ಟಿನ ಸಾಮರ್ಥ್ಯದ ವ್ಯಕ್ತಿಗೆ ಕಡಿಮೆ ಸವಾಲಿನ ಕೆಲಸ ಬೋರು ಹೊಡೆಸುತ್ತದೆ. ಆದರೆ, ಅದೇ ವ್ಯಕ್ತಿಗೆ ಹೆಚ್ಚು ಸವಾಲಿನ ಕೆಲಸ ನೀಡಿದರೆ ಆತನ ಮನಸ್ಥಿತಿಯನ್ನು ಉತ್ತೇಜಿಸಿದಂತಾಗುತ್ತದೆ. ಉನ್ನತ ಸಾಮರ್ಥ್ಯದ ವ್ಯಕ್ತಿ ಮಧ್ಯಮ ಸವಾಲಿನ ಕೆಲಸವನ್ನು ಬಹುಬೇಗ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾನೆ.
ಈ ಸಮೀಕರಣದ ಅಂತಿಮ ಆಯಾಮ ಉನ್ನತ ಸಾಮರ್ಥ್ಯದ ವ್ಯಕ್ತಿಗೆ ಹೆಚ್ಚಿನ ಸವಾಲಿನ ಕೆಲಸ ನೀಡುವುದು. ಜಗತ್ತಿನ ಸಾಧಕರು ಇದೇ ಗುಂಪಿಗೆ ಸೇರಿದವರು. ತನ್ನ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಬಲ್ಲ ಸವಾಲಿಗೆ ಆತ ಯಾವಾಗಲೂ ಹಾತೊರೆಯುತ್ತಾನೆ. ಅದನ್ನು ಸಶಕ್ತವಾಗಿ ನಿರ್ವಹಿಸಲು ತನ್ನ ಶಕ್ತಿಯನ್ನು ಪಣಕ್ಕಿಡುತ್ತಾನೆ. ಸಮಯದ ಪರಿವೆಯಿಲ್ಲದೆ ಆ ಕೆಲಸದಲ್ಲಿ ನೈಪುಣ್ಯ ಸಾಧಿಸುತ್ತಾನೆ. ಒಂದು ವಿಧದಲ್ಲಿ ಆತನ ಮಾನಸಿಕತೆ ಕಠಿಣ ಕೆಲಸದ ಜೊತೆ ಸಮನ್ವಯವಾಗುತ್ತದೆ. ಅದನ್ನು ಮಾಡುತ್ತಾ ಹೋದಂತೆ ಅಸಾಧಾರಣ ಸಂತೃಪ್ತಿ ಆವರಿಸುತ್ತದೆ. ಮನಃಶಾಸ್ತ್ರಜ್ಞರು ಇಂತಹ ಮನಸ್ಥಿತಿಯನ್ನು “ಫ್ಲೋ” (Flow) ಎಂದು ಕರೆಯುತ್ತಾರೆ. ತನ್ನ ಕೆಲಸವನ್ನು ಪ್ರೀತಿಸುವ, ಅದರಲ್ಲಿ ಸಂತೃಪ್ತಿ ಕಾಣುವ ಇಂತಹ ಮನಸ್ಥಿತಿ ಪ್ರತಿಯೊಬ್ಬ ಸಾಮರ್ಥ್ಯಶಾಲಿಯ ಕನಸಾದರೂ, ಅದನ್ನು ಸಾಧಿಸಬಲ್ಲ ಅವಕಾಶ, ಅನುಕೂಲ, ಅದೃಷ್ಟ ಇರುವವರು ಕಡಿಮೆಯೇ. ಪ್ರಪಂಚದ ದಿಕ್ಕನ್ನು ಬದಲಿಸಿದ ಬಹುತೇಕ ಮಂದಿ ಈ ಗುಂಪಿನವರು.
ಆದರೆ ಈ ಗುಂಪಿಗೆ ಸೇರುವುದು ಸುಲಭವಲ್ಲ. ಇದೊಂದು ರೀತಿಯ ತಪಸ್ಸಿನಂತೆ. ಜಗದ್ವಿಖ್ಯಾತ ಸಂಗೀತಕಾರ ಬಿಥೋವನ್ ಕುರಿತಾದ ಒಂದು ಪ್ರಸಂಗವಿದೆ. ಇಳಿವಯಸ್ಸಿನಲ್ಲಿ ಆತನಿಗೆ ಕಿವಿ ಕೇಳುತ್ತಿರಲಿಲ್ಲ. ಅದು ಆತನ ಸಂಗೀತ ಸಾಧನೆಗೆ ಅಡ್ಡಿಯಾಗಲಿಲ್ಲ. ಒಮ್ಮೆ ಆತನ ಕಛೇರಿಯ ನಂತರ ತುಸು ವಯಸ್ಸಾದ ಹೆಂಗಸೊಬ್ಬರು ಆತನನ್ನು ಅಭಿನಂದಿಸುತ್ತಾ “ನಿಮ್ಮಷ್ಟು ನೈಪುಣ್ಯವನ್ನು ಆ ಭಗವಂತ ನನಗೆ ಕೊಟ್ಟಿದ್ದರೆ…” ಎಂದರಂತೆ. ತನ್ನ ಸಹಾಯಕನಿಂದ ಸನ್ನೆಗಳ ಮೂಲಕ ಆಕೆಯ ಮಾತನ್ನು ಅರಿತ ಬಿಥೋವನ್ ಆಕೆಗೆ ಉತ್ತರಿಸಿದರಂತೆ: “ಅಂತಹ ಸಾಮರ್ಥ್ಯವನ್ನು ಭಗವಂತನಿಂದ ನೀವು ಕೂಡ ಪಡೆಯಬಹುದು. ಹೆಚ್ಚೇನಿಲ್ಲ – ದಿನಕ್ಕೆ ಹದಿನಾಲ್ಕು ಗಂಟೆಗಳಂತೆ ಒಂದು ದಿನವೂ ಬಿಡದೆ ಮೂವತ್ತು ವರ್ಷಗಳ ಕಾಲ ಅಭ್ಯಾಸ ಮಾಡಿದರೆ ಸಾಕು; ಭಗವಂತ ಇಷ್ಟು ನೈಪುಣ್ಯವನ್ನು ಮುಲಾಜಿಲ್ಲದೆ ಪ್ರಸಾದಿಸುತ್ತಾನೆ”. ಸಾಧಕರ ಅಂತಿಮ ಪ್ರದರ್ಶನವನ್ನು ನೋಡುವವರಿಗೆ ಅದರ ಹಿಂದಿನ ನಿರಂತರ ಅಭ್ಯಾಸದ ಅಂದಾಜು ಮೂಡುವುದಿಲ್ಲ. “ಯಾವುದೇ ಕೆಲಸ ನೋಡುಗರಿಗೆ ಸುಲಭ ಎನಿಸಿದರೆ ಆ ಕೆಲಸ ಸುಲಭ ಎಂತಲ್ಲ. ಬದಲಿಗೆ ಅದನ್ನು ಮಾಡುತ್ತಿರುವ ವ್ಯಕ್ತಿ ಅತ್ಯಂತ ಸಮರ್ಥ ಎಂದರ್ಥ” ಎನ್ನುವ ಮಾತಿದೆ. ಶಿಲ್ಪಕಲೆಯೋ, ಶಸ್ತ್ರಚಿಕಿತ್ಸೆಯೋ, ರೇಸ್ ವಾಹನ ಚಾಲನೆಯೋ, ಚಿತ್ರಕಲೆಯೋ, ಪ್ರಯೋಗವೋ – ಯಾವುದನ್ನಾದರೂ ದಣಿವರಿಯದೆ, ಅತೀವ ಆನಂದದಿಂದ ಮಾಡುವ ವ್ಯಕ್ತಿ ಅದರಲ್ಲಿ ತನ್ನ “ಫ್ಲೋ” ಎನ್ನುವ ಸಂತೃಪ್ತಿಯನ್ನು ಕಂಡುಕೊಂಡಿರುತ್ತಾನೆ.
ಈಗ ಸ್ವಲ್ಪ ಕಾಲದ ಮಟ್ಟಿಗೆ ಬೇರೊಂದು ಪ್ರದೇಶಕ್ಕೆ ಹೋಗೋಣ. ಉಸುಕಿನಿಂದ ತುಂಬಿದ ಇಪ್ಪತ್ತು ಗೋಣಿಚೀಲಗಳು. ಅದರ ಹಿಂದೆ ನಿಂತಿರುವ, ಹುಲ್ಲೆಯಂತೆ ನಡುಗುತ್ತಿರುವ ಮೂವತ್ತರ ಹರೆಯದ ಓರ್ವ ಹೆಣ್ಣುಮಗಳು. ಆಕೆಯ ಕೈಲೊಂದು ಆಟೊಮ್ಯಾಟಿಕ್ ಬಂದೂಕು. ಚೀಲಗಳ ಮತ್ತೊಂದು ಬದಿ ಜೋರಾಗಿ ಚೀರುತ್ತಾ ಈಕೆಯೆಡೆಗೆ ಮುನ್ನುಗ್ಗುತ್ತಿರುವ ಇಪ್ಪತ್ತು ಮಂದಿ ಮುಸುಕುಧಾರಿ ಆತ್ಮಾಹುತಿ ಭಯೋತ್ಪಾದಕರು. ಅವರ ಸೊಂಟದಲ್ಲೊಂದು ಬಾಂಬ್; ಕೈಯಲ್ಲಿ ಬಂದೂಕು. ಇವರಲ್ಲಿ ಒಬ್ಬರನ್ನು ಆಕೆ ಗುಂಡು ಹೊಡೆದು ಬೀಳಿಸಿದರೆ ಮೂವರು ಮುನ್ನುಗ್ಗುವರು. ಆಕೆಯ ಹಣೆಯಲ್ಲಿ ಬೆವರ ಸಾಲು; ಕೈಲಿ ನಡುಕ. ಈ ಆತಂಕದಿಂದ ಆಗಾಗ ಜ್ಯಾಮ್ ಆಗುತ್ತಿರುವ ಬಂದೂಕಿನ ಟ್ರಿಗ್ಗರ್. ಬಂದೂಕು ಚಲಾಯಿಸುವ ತನ್ನ ವೇಗ ಸಾಲದಾಗಿದೆ ಎನ್ನುವ ಭೀತಿ ಆಕೆಯದ್ದು; ನೀಡಿದ ಕೆಲಸ ನಿಭಾಯಿಸಲು ತಾನು ಅಸಮರ್ಥಳು ಎನ್ನುವ ಭಾವ .ಎಲ್ಲ ಮುಗಿದುಹೋಯಿತು ಎನ್ನುವ ಮನಸ್ಥಿತಿ.
ಈ ವಿಷಮ ಪರಿಸ್ಥಿತಿಯಲ್ಲಿ ಇದ್ದ ಒಂದೇ ಒಂದು ಸಮಾಧಾನ ಎಂದರೆ ಇದೊಂದು ವಿಡಿಯೋ ಆಟ ಎನ್ನುವುದು ಮಾತ್ರ. ಆಕೆ ಉಸುಕಿನ ಚೀಲಗಳ ಹಿಂದೆ ಇದ್ದದ್ದು ನಿಜ. ಆದರೆ ಆಕೆಯ ಕೈಲಿದ್ದದ್ದು ಆಟಿಕೆಯ ಬಂದೂಕು. ಉಳಿದೆಲ್ಲವೂ ಆ ಚೀಲಗಳ ಮತ್ತೊಂದು ಬದಿ ಇದ್ದ ದೊಡ್ಡ ಪರದೆಯ ಮೇಲೆ ನೈಜತೆಗೆ ಸವಾಲೊಡ್ಡುವಂತೆ ಮೂಡುತ್ತಿದ್ದ ಬಿಂಬಗಳು. ಇದು ನಡೆಯುತ್ತಿದ್ದುದು ಕ್ಯಾಲಿಫೋರ್ನಿಯಾದ ಸೈನಿಕ ತರಬೇತಿ ಕೇಂದ್ರದ ಮಿಲಿಟರಿ ಪ್ರಯೋಗಾಲಯದಲ್ಲಿ. ಶಾರ್ಪ್ ಶೂಟರ್ಗಳ ತರಬೇತಿಗೆ ಬಳಸುವ ಪ್ರಯೋಗದ ಒಂದು ಭಾಗವಾಗಿ ಜನಪ್ರಿಯ ವಿಜ್ಞಾನದ ಲೇಖಕಿಯಾದ ಆಕೆ ಪ್ರಯೋಗಾಲಯಕ್ಕೆ ಭೇಟಿ ನೀಡಿದ್ದರು. ಇಪ್ಪತ್ತು ನಿಮಿಷಗಳ ಕಾಲ ನಡೆದ ಪ್ರಯೋಗದ ಭಾಗವಾಗಿ ಆಕೆ ಉಸುಕಿನ ಚೀಲಗಳ ಹಿಂದೆ ಬಂದೂಕು ಹಿಡಿದು ನಿಂತಿದ್ದರು. ಆ ಇಪ್ಪತ್ತು ನಿಮಿಷಗಳ ಉಸಿರುಗಟ್ಟಿಸುವ ಅವಧಿಯ ನಂತರ ಆಕೆ ಸಾಗಿದ್ದು ತನ್ನ ಜೀವನದಲ್ಲಿ ಮರೆಯಲಾಗದ ಒಂದು ಅನುಭವದ ಮೂಲಕ.
ಇದನ್ನೂ ಓದಿ: ವೈದ್ಯ ದರ್ಪಣ ಅಂಕಣ | ನಮ್ಮ ಶರೀರವನ್ನು ನಿಯಂತ್ರಿಸುವವರು ಯಾರು?
ಮಿಲಿಟರಿ ತರಬೇತಿ ಕೇಂದ್ರದ ಸಂಶೋಧಕರು ಆಕೆಯ ತಲೆಗೆ ಕೆಲವು ವಿದ್ಯುತ್ ವಾಹಕಗಳನ್ನು ಒಳಗೊಂಡ ಹೆಲ್ಮೆಟ್ ಮಾದರಿಯ ತಲೆಗವಚವನ್ನು ಜೋಡಿಸಿದರು. ಇದಕ್ಕೆ 9 ವೋಲ್ಟಿನ ಪುಟ್ಟ ಬ್ಯಾಟರಿ ಸಂಪರ್ಕ ನೀಡಿದರು. ಇದರಿಂದ ಅಲ್ಪ ಪ್ರಮಾಣದ ವಿದ್ಯುತ್ ನೇರವಾಗಿ ಆಕೆಯ ಮಿದುಳಿನ ಕೆಲವು ನಿರ್ದಿಷ್ಟವಾದ ಭಾಗಗಳನ್ನು ಪ್ರಚೋದಿಸುತ್ತಿತ್ತು. ಮತ್ತೊಮ್ಮೆ ಬಂದೂಕು ಹಿಡಿದ ಆಕೆ ಉಸುಕಿನ ಚೀಲಗಳ ಹಿಂದೆ ನಿಂತರು. ಮುಂದಿನ ಇಪ್ಪತ್ತು ನಿಮಿಷಗಳ ಕಾಲ ಆಕೆ ಬೇರೆಯೇ ವ್ಯಕ್ತಿಯಾದರು. ಆಕೆಯ ಬಂದೂಕಿನ ಗುರಿ ಒಮ್ಮೆಯೂ ತಪ್ಪಲಿಲ್ಲ. ಸರಣಿಯಲ್ಲಿ ಆತ್ಮಾಹುತಿ ಭಯೋತ್ಪಾದಕರು ಆಕೆಯೆಡೆಗೆ ನುಗ್ಗಿ ಬರುತ್ತಿದ್ದರೂ ಆಕೆ ಒಂದಿನಿತೂ ಅಳುಕಲಿಲ್ಲ. ಭೀತಿ ಎಂಬುದು ಆಕೆಯ ಅನುಭವಕ್ಕೂ ಬರಲಿಲ್ಲ. ಭಯವಿಲ್ಲ; ಆತ್ಮಶಂಕೆಯಿಲ್ಲ; ಗೊಂದಲವಿಲ್ಲ. ಆಕೆಯ ಬಂದೂಕಿನ ಪ್ರತಿಯೊಂದು ನಿಶಾನೆಯೂ ನಿಶಿತ, ನಿಖರ. ದಶಕಗಳ ನಿರಂತರ ಪ್ರಯತ್ನಗಳಿಂದ ಪಳಗಿದ ಗುರಿಕಾರನ ರೀತಿಯಲ್ಲಿ ಸಂದರ್ಭವನ್ನು ಶಾಂತವಾಗಿ, ಸಂಪೂರ್ಣ ನಿಯಂತ್ರಣದಿಂದ ನಿಭಾಯಿಸಿದರು. ಇಪ್ಪತ್ತು ನಿಮಿಷಗಳ ಅವಧಿ ಮುಗಿದಾಗ ಆಕೆಯ ಎದುರು ಒಬ್ಬ ಭಯೋತ್ಪಾದಕನೂ ಉಳಿದಿರಲಿಲ್ಲ. ತಾನು ಮಾಡುತ್ತಿರುವ ಕೆಲಸದಲ್ಲಿ ಬಹಳ ಉನ್ನತ ಮಟ್ಟದ ಸಾಮರ್ಥ್ಯ ಆ ಇಪ್ಪತ್ತು ನಿಮಿಷಗಳ ಕಾಲ ಆಕೆಯದಾಗಿತ್ತು. ಅಷ್ಟೂ ವೇಳೆಯೂ ಅತ್ಯಂತ ಕಠಿಣವಾದ ಕೆಲಸವನ್ನು ಆಕೆ ನಿಷ್ಪ್ರಯಾಸದಿಂದ ಮಾಡಿ ಸಂತೃಪ್ತಿಯ “ಫ್ಲೋ” ಅನುಭವಿಸಿದರು. ಆಕೆಯ ತಲೆಯಿಂದ ವಿದ್ಯುತ್ ವಾಹಕಗಳನ್ನು ತೆಗೆದುಹಾಕಿದ ಕೂಡಲೇ ಮೊದಲಿನ ಬೆದರಿದ ಹುಲ್ಲೆಯಾದರು.
ತನ್ನ ಈ ಅನುಭವವನ್ನು ಆಕೆ ನ್ಯೂ ಸೈಂಟಿಸ್ಟ್ ಪತ್ರಿಕೆಯಲ್ಲಿ ಪ್ರಕಟಿಸಿದಾಗ ಒಂದು ಸಂಚಲನವೇ ಮೂಡಿತು. ಯುವಲ್ ನೋಹ್ ಹರಾರಿಯಂತಹ ಪ್ರಸಿದ್ಧ ಲೇಖಕರು ಆಕೆಯ ಅನುಭವದ ಬಗ್ಗೆ ತಮ್ಮ ಪುಸ್ತಕದಲ್ಲಿ ಬರೆದರು. ತನ್ನ ಈ ಅನುಭವವನ್ನು ಆಕೆ The nine-volt Nirvana (9 ವೋಲ್ಟ್ ನಿರ್ವಾಣ) ಎಂದು ಬಣ್ಣಿಸಿದರು. ಯಾವ ಸಂತೃಪ್ತಿಯ ಸಾಧನೆಗಾಗಿ ದಶಕಗಳ ನಿರಂತರ ಶ್ರಮ ಹಿಡಿಯುತ್ತದೆಯೋ ಅದನ್ನು ತಲೆಗೆ ಹಚ್ಚಿದ ವಿದ್ಯುತ್ ವಾಹಕಗಳ ಹೆಲ್ಮೆಟ್ ಮತ್ತು ಪುಟ್ಟ ಬ್ಯಾಟರಿಗಳು ಮಾಡಿದ್ದವು. ಆ ಸಮಯದಲ್ಲಿ ಆಕೆಗೆ ಯಾವ ಅಡ್ಡ ಪರಿಣಾಮಗಳೂ ಆಗಲಿಲ್ಲ. ಆ ಸಂತೃಪ್ತಿಯ ಗುಂಗಿನಿಂದ ಹೊರಬರಲು ಆಕೆಗೆ ಮೂರು ದಿನಗಳು ಹಿಡಿದವು. “ಈ ಅನುಭವ ಮತ್ತೊಮ್ಮೆ ಆಗಲಿ” ಎಂದು ಆಕೆಯ ಮನಸ್ಸು ಹಾತೊರೆಯಹತ್ತಿತು. ವಿದ್ಯುತ್ ವಾಹಕಗಳ ಹೆಲ್ಮೆಟ್ ಧರಿಸಿದ ಆ ಇಪ್ಪತ್ತು ನಿಮಿಷಗಳ ಕಾಲ ಆಕೆಗೆ ಆದದ್ದೇನು? ಆಕೆಯ ಮನದಲ್ಲಿ ಈ ಮೊದಲೇ ಮನೆಮಾಡಿದ್ದ ಸೋಲಿನ ಭೀತಿ, ಆತ್ಮಶಂಕೆಗಳಂತಹ ಹಿಂಜರಿತಗಳು ಇಲ್ಲವಾದವೇ? ಅಥವಾ ಆಕೆಯ ಮಿದುಳು ಈ ಮೊದಲು ಎಂದೂ ಅರಿಯದ ಹೊಸ ಬಗೆಯ ಕಲಿಕೆಯನ್ನು ಅನುಭವಿಸಿತೇ? ಈ ಅನುಭವ ಆಕೆಯಿಂದ ಹಳೆಯ ಏನನ್ನಾದರೂ ಕಳೆಯಿತೇ ಅಥವಾ ಹೊಸದಾದ ಏನನ್ನಾದರೂ ನೀಡಿತೇ?
ಇದನ್ನೂ ಓದಿ: ವೈದ್ಯ ದರ್ಪಣ ಅಂಕಣ | ಮನುಷ್ಯನ ಆಯಸ್ಸು ಎಷ್ಟು?
ಈ ಪ್ರಶ್ನೆಗಳ ಉತ್ತರ ಸುಲಭವಲ್ಲ. ಪರಿಣತಿ ಎಂದರೇನು? ನಿರಂತರ ಪ್ರಯತ್ನಗಳಿಂದ ನಾವು ನಮ್ಮ ಮಿದುಳಿನಲ್ಲಿ ವಿವಿಧ ನರಕೋಶಗಳ ನಡುವೆ ಶಕ್ತಿಶಾಲಿಯಾದ ಸಂಪರ್ಕಗಳನ್ನು ನಿರ್ಮಿಸಿಕೊಳ್ಳುತ್ತೇವೆ. ಅದು ಸಂಗೀತಗಾರನೊಬ್ಬನ ಹಾಡುಗಾರಿಕೆಯಿರಬಹುದು; ವಾದ್ಯವೊಂದರ ಮೇಲಿನ ನೈಪುಣ್ಯವಿರಬಹುದು; ವಾಹನದ ಕ್ಲಿಷ್ಟಕರ ರಿಪೇರಿಯ ಸೂಕ್ಷ್ಮ ಹಂತಗಳಿರಬಹುದು; ಕಠಿಣವಾದ ಶಸ್ತ್ರಚಿಕಿತ್ಸೆಯ ಹತ್ತಾರು ಅಂಶಗಳಿರಬಹುದು; ಕುಸುರಿ ಕೆಲಸ ಮಾಡುವ ಅಕ್ಕಸಾಲಿಯ ಪರಿಶ್ರಮವಿರಬಹುದು – ಪ್ರತಿಬಾರಿಯ ಸಾಧನೆ, ಅನುಭವದ ಕಲಿಕೆ, ತಪ್ಪುಗಳನ್ನು ಒಪ್ಪಗೊಳಿಸುವುದು, ಹಿಂದಿನ ಬಾರಿಯ ಸಾಫಲ್ಯವನ್ನು ಮತ್ತಷ್ಟು ಚಂದಗೊಳಿಸುವುದು, ಒಂದು ಹಂತದ ಪ್ರಾವೀಣ್ಯ ಪಡೆದ ಮೇಲೆ ಆ ಕೆಲಸಕ್ಕೆ ಮತ್ತೊಂದು ನವೀನ ಆಯಾಮವನ್ನು ಜೋಡಿಸುವುದು – ಹೀಗೆ ಪ್ರತಿಬಾರಿಯೂ ಆ ಕೆಲಸ ಮಾಡುವಾಗ ಮಿದುಳು ಹೊಸಹೊಸ ನರಕೋಶಗಳನ್ನು ಜೋಡಿಸುತ್ತಾ, ಹಿಂದೆಂದೂ ಆಗಿಲ್ಲದ ಸಂಪರ್ಕಗಳನ್ನು ನಿರ್ಮಿಸುತ್ತದೆ. ಪ್ರತಿ ಬಾರಿ ಈ ಸಾಧನೆಯಲ್ಲಿ ಯಶಸ್ಸು ಕಂಡಾಗ ಆಗುವ ಆನಂದದ ಭಾವ, ನಮಗೆ ಸಂತಸವನ್ನು ಉಂಟುಮಾಡುವ ಮಿದುಳಿನ ಭಾಗದ ಜೊತೆಗೆ ಈ ಬಲಶಾಲಿ ಸಂಪರ್ಕಗಳನ್ನು ಸಮನ್ವಯಗೊಳಿಸಿ ಬೆಸೆಯುತ್ತದೆ. ಸಾಧನೆ ಕಠಿಣವಾದಷ್ಟೂ ಸಂತಸದ ಪ್ರಮಾಣ ಹೆಚ್ಚುತ್ತದೆ. ಇದು ಒಂದು ಹಂತವನ್ನು ಮೀರಿದಾಗ ಆನಂದದ ಭಾವ ಸ್ಥಾಯಿಯಾಗುತ್ತದೆ. ಇದನ್ನೇ ಸಂತೃಪ್ತಿಯ “ಫ್ಲೋ” ಎಂದು ಬಣ್ಣಿಸುತ್ತಾರೆ. ಅಸಲಿಗೆ ಈ ಫ್ಲೋ ಎನ್ನುವುದು ಮಿದುಳಿನ ವಿವಿಧ ನರಕೋಶಗಳ ನಡುವಿನ ಸಂಪರ್ಕಗಳ ಮೂಲಕ ಹರಿಯುವ ಸಣ್ಣ ಪ್ರಮಾಣದ ವಿದ್ಯುದಾವೇಶ. ತಲೆಯ ಮೇಲ್ಭಾಗದಲ್ಲಿ ಅಂಟಿಸಿದ ವಿದ್ಯುತ್ ವಾಹಕಗಳ ಹೆಲ್ಮೆಟ್ ಮೂಲಕ ಮಿದುಳಿನ ನರಗಳಿಗೆ ಕೃತಕ ಸಂಪರ್ಕ ಕಲ್ಪಿಸಿ ನೀಡಿದ ವಿದ್ಯುದಾವೇಶವೂ ಸಾಧಿಸಿದ್ದು ಇದನ್ನೇ.
ಇದರ ದೂರಗಾಮಿ ಪರಿಣಾಮಗಳೇನು? ಪ್ರಯತ್ನದ ಲವಲೇಶವೂ ಇಲ್ಲದೆ ಪರಿಣತ ಸಾಧಕರಾಗುವ ಭಾಗ್ಯವನ್ನು ಯಾರು ತಾನೇ ನಿರಾಕರಿಸಬಲ್ಲರು? ಆಧುನಿಕ ತಂತ್ರಜ್ಞಾನಗಳನ್ನು ಬಳಸಿ, ಮಿದುಳಿನ ಕೆಲಸಗಳನ್ನು ಚೆನ್ನಾಗಿ ಅರಿತುಕೊಂಡು, ಸರಿಯಾದ ಹಾದಿಯಲ್ಲಿ ವಿದ್ಯುದಾವೇಶ ಕಲ್ಪಿಸಿ, ಹಾದಿಬದಿಯ ಯಾರನ್ನು ಬೇಕಾದರೂ ಸೂಪರ್ ಮ್ಯಾನ್ ಮಾಡಬಲ್ಲ ವಿಧಾನಗಳು ಮನುಕುಲವನ್ನು ಸರಿಯಾದ ಹಾದಿಯಲ್ಲಿ ಒಯ್ಯಲು ಸಾಧ್ಯವೇ? ಇಂತಹ ಪ್ರಯೋಗಗಳು ಅಸಾಧುವಲ್ಲವೇ? ಇದು ಹೀಗೆಯೇ ಮುಂದುವರೆದರೆ ನಾಳೆ ಇಂತಹ ತಂತ್ರಜ್ಞಾನದ ಲಭ್ಯತೆ ಇಲ್ಲದ ಸಾಮಾನ್ಯರ ಪಾಡೇನು?
ಈ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯ ಸದ್ಯಕ್ಕಂತೂ ಕಂಡುಬಂದಿಲ್ಲ. ಆದರೆ ಎಂದಾದರೊಂದು ದಿನ ಇವು ನಮ್ಮ ಮುಂದೆ ರಾಕ್ಷಸಾಕಾರವಾಗಿ ನಿಲ್ಲುತ್ತವೆ. ಅಷ್ಟರೊಳಗೆ ಇದರ ಸಮ್ಯಕ್ ಉತ್ತರಗಳನ್ನು ನಾವು ಆಲೋಚಿಸಲೇಬೇಕು. ಪ್ರಗತಿಯ ನಾಗಾಲೋಟವನ್ನು ತಡೆಯುವುದು ಅಸಾಧ್ಯ. ಆದರೆ ಅದನ್ನು ಒಳ್ಳೆಯ ಹಾದಿಯಲ್ಲಿ ಬಳಸಿಕೊಳ್ಳಲು ಸರಿಯಾದ ನಿಯಮಗಳನ್ನು ರೂಪಿಸುವುದರಲ್ಲಿ ಮನುಕುಲದ ಭವಿಷ್ಯ ಅಡಗಿದೆ.
ಇದನ್ನೂ ಓದಿ: ವೈದ್ಯ ದರ್ಪಣ ಅಂಕಣ | ರೊಬೊಟ್ ಇಲಿಗಳು, ಕೃತಕ ಕಣ್ಣು, ಸಿಂಗ್ಯುಲಾರಿಟಿ ಇತ್ಯಾದಿ…
-
ಕರ್ನಾಟಕ12 hours ago
Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ
-
ಕರ್ನಾಟಕ13 hours ago
Karnataka Election 2023 LIVE: ಕರ್ನಾಟಕದಲ್ಲಿ ಮೇ 10ಕ್ಕೆ ಮತದಾನ, 13ಕ್ಕೆ ರಿಸಲ್ಟ್, ಒಂದೇ ಹಂತದ ಎಲೆಕ್ಷನ್
-
ಕರ್ನಾಟಕ16 hours ago
Karnataka Election: ಕರ್ನಾಟಕ ಚುನಾವಣೆ ದಿನಾಂಕ ಇಂದು ಘೋಷಣೆ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
-
ಕರ್ನಾಟಕ11 hours ago
Karnataka Election: ನೀತಿ ಸಂಹಿತೆಗೆ ಮೊದಲೇ ತುಂಬಿತು ಅಕ್ರಮದ ಪಾತ್ರೆ: 2018ರ ಹಣದ ಹೊಳೆಯನ್ನು ಈಗಲೇ ಮೀರಿಸಿದ ಕರ್ನಾಟಕ !
-
ಪ್ರಮುಖ ಸುದ್ದಿ7 hours ago
UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?
-
ಗ್ಯಾಜೆಟ್ಸ್8 hours ago
Google: ಗೂಗಲ್ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
-
ಕರ್ನಾಟಕ10 hours ago
Karnataka Elections 2023 : ವಲಸಿಗ ಸಚಿವರ ಮೇಲೆ ಬೊಮ್ಮಾಯಿ ನಿಗಾ; ಹೆಬ್ಬಾರ್, ಮುನಿರತ್ನ ಕರೆಸಿಕೊಂಡು ಚರ್ಚೆ
-
ಕರ್ನಾಟಕ14 hours ago
Karnataka Elections 2023 : 8 ಸಚಿವರ ಸಹಿತ 35 ಶಾಸಕರಿಗೆ ಸೋಲಿನ ಭೀತಿ, ಈ ಬಾರಿ ಬಿಜೆಪಿಯಲ್ಲಿ 50 ಹೊಸ ಮುಖ?