ಅಂಕಣ
ಪೋಸ್ಟ್ ಬಾಕ್ಸ್ 143 ಅಂಕಣ: ತರ್ಕವಿಲ್ಲ, ಅರ್ಥವಿಲ್ಲ, ಬರಿಯ ಪ್ರೀತಿಗೀತ!
ನಮಗೆ ಒಂದಿಷ್ಟಾದರೂ ಮುಗ್ಧತೆಯನ್ನೂ ಅಪ್ರಜ್ಞಾಪೂರ್ವಕ ಸ್ಥಿತಿಯನ್ನೂ ಕಲ್ಪಿಸಲು ಸಾಧ್ಯವಾಗುವುದು ಪ್ರೇಮಕ್ಕೆ ಮಾತ್ರ ಅನ್ನುವುದಾದರೆ ಎಂತಹಾ ಶ್ರೇಷ್ಠ ಭಾವ ಅದು! ಪ್ರೀತಿಯ ಸ್ವಭಾವವೇ ಅದು ಅಕಾರಣವಾಗಿರುವುದು ಎಂದು ಕವಿ ಗುಲ್ಜಾರ್ ಹೇಳಿರುವುದು ಎಷ್ಟೊಂದು ನಿಜ!
ವಿನಾಕಾರಣವೇ,
ಯಾಕೋ ಮೂರು ದಿನದಿಂದ ಪುಷ್ಪ ಸಿನೆಮಾದ ಕ್ಲೈಮ್ಯಾಕ್ಸು ಕಾಡ್ತಿತ್ತು ಕಣೋ. ಕಡೆಯ ಇಪ್ಪತ್ತು ನಿಮಿಷಗಳನ್ನು ಮತ್ಮತ್ತೆ ನೋಡಿದೆ. ಒಂದೇ ಹಾಡನ್ನ ನೂರಾರು ಸಲ ಕೇಳ್ಕೇಳಿ ಉಜ್ಜಾಡೋ ಕಾಯಿಲೆ ಹಳೇದು. ಈಗ ಸೀನ್ಗಳನ್ನ ನೋಡ್ನೋಡಿ ಉಜ್ಜಾಡೋ ಹೊಚ್ಚ ಹೊಸ್ಸಾ ಖಾಯ್ಲೆ ಬಂತಾ? ಅಂತೆಲ್ಲ ನನ್ ಬಗ್ಗೆ ಓವರಾಗ್ ಥಿಂಕ್ ಮಾಡ್ಬೇಡ. ಇಲ್ ಕೇಳು, ಈ ಪುಷ್ಪಾ ಪಕ್ಕಾ ಕಮರ್ಷಿಯಲ್ ಪಿಚ್ಚರು. ನನ್ ಕೆಟಗರಿ ಏನಲ್ಲ. ಆದ್ರೂ ಇದು ಯಾಕಿಷ್ಟ ಆಯ್ತೂಂತ ಯೋಚಿಸ್ತಿದ್ದೆ. ಈ ಸಿನೆಮಾದಲ್ಲಿ ಕ್ಯಾರೆಕ್ಟರೈಸೇಷನ್ ಇದೆ. ನೀ ನೋಡಿಲ್ಲ ಅಲ್ವ? ಕೇಳದೇನ್ ಬಂತು. ನೀ ಇಂತಾ ಪಿಚ್ಚರೆಲ್ಲ ನೋಡಿರಕ್ ಸಾಧ್ಯಾನೇ ಇಲ್ಲ. ನಿನ್ಹತ್ರ ಟೈಮೂ ಇಲ್ಲ ನಂಗೊತ್ತು. ಈ ಪುಷ್ಪ ಒಬ್ಬ ಕಳ್ಳ ಕಣೋ. ರಕ್ತಚಂದನ ಮರ ಕದ್ ಸಾಗಿಸ್ತಾನೆ. ಒಬ್ಬ ಪೋಲೀಸ್ ಆಫೀಸರ್ ಬರ್ತಾನೆ. ಬನ್ವರ್ ಸಿಂಗ್ ಶೇಕಾವತ್. ನನ್ ಫೇವರಿಟ್ ಫಹಾದ್ ಫಾಸಿಲ್ ಆ ಪಾತ್ರಧಾರಿ. ಪುಷ್ಪಾಗೇನೂ ಆದರ್ಶ ಗೀದರ್ಶ ಇಲ್ಲ. ಪೋಲೀಸ್ ಕಾಟ ಕೊಟ್ನ? ಲಂಚ ಕೊಡದಪ್ಪಾ ಅನ್ನೋ ಜನ ಅವನು. ಲಂಚ ಕೊಡ್ತಾನೆ. ಆದ್ರೆ ಅವನಿಗೊಂದು ಆಟಿಟ್ಯೂಡಿರತ್ತಲ್ಲ? ಅದ್ ಮಾತ್ರ ಕಮ್ಮಿಯಾಗಲ್ಲ. ಪೋಲೀಸಿಗೆ ಅದ್ ಕಂಡ್ರಾಗಲ್ಲ. ಲಂಚದ ಹಣ ಎಷ್ಟು ಸಲ ಎಣಿಸಿಯೂ ಒಂದ್ ನೋಟ್ ಕಮ್ಮಿಯಾಗಿದೆ ಅಂತಾನೆ. ಎಣಿಸಿ ಎಣಿಸಿ ಸಾಕಾಗಿ, ಸರಿಯಾಗೇ ಇದೆ ಸಾರ್ ಅನ್ನೋ ಪುಷ್ಪಾಗೆ. ಇದೇ ಕಮ್ಮಿಯಾಗಿದ್ದಿದ್ದು “ಸಾರ್ʼ ಅನ್ನೋ ಮರ್ಯಾದೆ ಅಂತಾನೆ ಆಫೀಸರ್.
ಸಮಾಜದ ಒಪ್ಪಿತ ಸಂಬಂಧದ ತಂದೆಯ ಗುರುತಿಲ್ಲದ ಅವನ ಹಿನ್ನಲೆ ಕೆದಕ್ತಾನೆ. ಅವಮಾನಿಸ್ತಾನೆ. ಕಡೆಗೆ ಸೋತು ಶರಣಾದಂತೆ ನಟಿಸೋ ಪುಷ್ಪ, ಅವನ ವಿಶ್ವಾಸ ಗಳಿಸಿ, ತನ್ನದೇ ಮದುವೆ ದಿನ ಊರಾಚೆ ಕರ್ಕೊಂಡೋಗಿ ಪಾರ್ಟಿ ಮಾಡ್ತಾ ಪೋಲೀಸಿನ ರಿವಾಲ್ವರ್ ಕಿತ್ಕೊಂಡು ಅವನ ಯೂನಿಫಾರ್ಮ್ ಬಿಚ್ಚಿಸ್ತಾನೆ. ತಾನೂ ಬಟ್ಟೆ ಬಿಚ್ಚಿ ನಿಂತು, ಇಬ್ಬರ ಬರಿಮೈ ತೋರ್ತಾ “ನೋಡಿ ಸಾರ್, ನಾವಿಬ್ರೂ ಒಂದೇ ಅಲ್ವ? ಮತ್ತೆ ನೀವ್ಯಾಕ್ ನಂಗ್ ಅವಮಾನ ಮಾಡಿದ್ದು? ನಾನು ಹೀಗೇ ನಡ್ಕೊಂಡೋದ್ರೂ ನಾ ಪುಷ್ಪಾನೇ. ಆದ್ರೆ ನೀವು? ಈ ತರ ಹೋದ್ರೆ ನಿಮ್ ನಾಯಿನೂ ಗುರತ್ ಹಿಡಿಯಲ್ಲ” ಅಂತಾನೆ.
ನಿಜವಾಗಿಯೂ ಅವನ ನಾಯಿ ಗುರುತು ಹಿಡಿಯಲ್ಲ ಪಿಚ್ಚರಲ್ಲಿ. ಅದ್ ಬಿಡು. ಆದ್ರೆ ಯೋಚ್ಸು, ನಾನು ಎಲ್ಲಿದ್ರೂ ಹೇಗಿದ್ರೂ ನಾನು ನಾನೇ. ಆದರೆ ನೀನು? ಯಾವ್ದೋ ಸ್ಥಾನ, ಅಧಿಕಾರದಂತಹ ಹೊರಗಿನ ಗುರುತುಗಳಿಂದ ನೀನಾಗಿದ್ದೀಯೆ. ಅವನ್ನು ಕಳಚಿದರೆ ನೀನು ಏನು? ಅನ್ನುವ ಪ್ರಶ್ನೆ ಅದೆಷ್ಟು ಮಹತ್ವದ್ದಲ್ವೇನೋ? ಒಬ್ಬ ಖ್ಯಾತ ಪತ್ರಕರ್ತರಿದ್ದರು. ದೊಡ್ಡ ಅಭಿಮಾನಿ ಬಳಗ ಅವರಿಗೆ. ಅವರಿಗೊಬ್ಬ ಸಹಾಯಕ. ಭಾರೀ ಬೇಡಿಕೆ ಅವನಿಗೆ. ಅವನೂ ಬೀಗುತ್ತಿದ್ದ. ಅವರು ಹೋದರು. ಅವನ ಡಿಮಾಂಡೂ ಹೋಯಿತು. ಯಾಕಂದ್ರೆ ಅವರ ಸಹಾಯಕ ಅನ್ನೋದಷ್ಟೆ ಅವನ ಐಡೆಂಟಿಟಿಯಾಗಿತ್ತು. ರಾಜಕೀಯ, ಆಡಳಿತದಲ್ಲಿ ದೊಡ್ಡ ದೊಡ್ಡ ಸ್ಥಾನದಲ್ಲಿದ್ದವರನ್ನೂ ನೋಡಿದ್ದೇನೆ ನಾನು. ಕುರ್ಚಿ ಇರುವವರೆಗಷ್ಟೇ ಅವರು ಚಲಾವಣೆಯಲ್ಲಿರುವ ನಾಣ್ಯ. ಇಂತಾ ಸಂಸ್ಥೆಯಲ್ಲಿ ನಾನು ಇದಾಗಿದ್ದೇನೆ ಎಂಬುದೇ ನಮ್ಮ ಗುರುತಾಗಬಾರದು. ಅದಿಲ್ಲದೇ ನಾವೇನು? ಹೊರಗಿನ ಯಾವ ಟ್ಯಾಗ್, ಕಿರೀಟ ಇಲ್ಲದೆಯೂ ಬರಿಯ ನಾವಾಗಿ, ಏಕಾಂಗಿ ವ್ಯಕ್ತಿಯಾಗಿ ಏನು ಎಂಬುದರಲ್ಲಿ ನಮ್ಮ ಗುರುತಿದೆ. ನಮ್ಮ ನಿಜವಿದೆ ಅನಿಸ್ತದೆ.
ಮೊನ್ನೆ ನಮ್ಮ ತೋಳ್ಪಾಡಿಯವ್ರು ಹೇಳಿದ್ದು ನೆನಪಾಗ್ತಿದೆ. “ನಮ್ಮನ್ನು ನೋಡುವವರನ್ನು ನೋಡಿ ನಾವು ಬದುಕಬಾರದು. ನಮ್ಮನ್ನು ನೋಡುವವರನ್ನು ನೋಡ್ತಾ ಇದ್ರೆ ನಾವು ಅವರಿಗಾಗಿ ಬದುಕ್ತೇವೆ. ನಾವು ಕೆಡ್ತೇವೆ. ಅವರನ್ನೂ ಕೆಡಿಸ್ತೇವೆ. ನಮ್ಮನ್ನು ನೋಡುವವರನ್ನು ನೋಡ್ತಾ ನಮ್ಮ ಕಣ್ಣು ಕುರುಡು, ಕೇಳಿ ಕಿವುಡು, ವ್ಯಕ್ತಿತ್ವ ಭ್ರಾಂತಿ. ಒಂದು ಕಲ್ಪಿತ ವ್ಯಕ್ತಿತ್ವದಲ್ಲಿ ಬದುಕ್ತಾ ಇರ್ತೇವೆ ನಾವು. ಪ್ರಜ್ಞಾಪೂರ್ವಕವಾದ ವ್ಯವಹಾರದಿಂದ ನಾವು ಬದುಕಿರುವುದೇ ಅಲ್ಲ. ನಿದ್ದೆಯಲ್ಲಿರುವಾಗ ನಾವು ಏನಾಗಿರ್ತೇವೆ? ಯಾರಾಗಿರ್ತೇವೆ? ಜೀವಂತ ಇರ್ತೇವೆ. ಆದರೆ ಯಾವ ಕಲ್ಪಿತ ವ್ಯಕ್ತಿತ್ವವೂ ಅಲ್ಲಿರುವುದಿಲ್ಲ. ಮರೆತುಹೋದ ಅವಸ್ಥೆಯಲ್ಲಿ, ಅಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ಇರ್ತೇವೆ. ಎಚ್ಚರವಾದ ಮೇಲೆ ಮತ್ತೆ ಏನೇನನ್ನೋ ಆರೋಪಿಸಿಕೊಳ್ತೇವೆ. ಮತ್ತೊಬ್ಬರಿಗೆ “ಇದು ನಾನು” ಅಂತ ಹೇಳೋಕೆ ರೆಡಿಯಾಗ್ತೇವೆ. ಇನ್ನೊಬ್ಬರ ಕಣ್ಣಲ್ಲಿ ನಮ್ಮನ್ನು ನೋಡ್ತೇವೆ”.
ಇದನ್ನೂ ಓದಿ: ಪೋಸ್ಟ್ ಬಾಕ್ಸ್ 143 | ಕೊಲ್ಲುವುದಾದರೆ ಕೊಂದುಬಿಡು, ಹೀಗೆ ಕಾಡಬೇಡ!
ಅವರ ಇಷ್ಟೂ ಮಾತುಗಳು ಡ್ರಿಪ್ ಇರಿಗೇಷನ್ನಿನ ಹಾಗೆ ನಿಧಾನಕ್ಕೆ ಒಳಗಿಳೀತಾ ಇವೆ. ನಾನು ಪ್ರಜ್ಞಾಪೂರ್ವಕವಾಗಿ ಮತ್ತು ಅಪ್ರಜ್ಞಾಪೂರ್ವಕವಾಗಿ ಏನೇನನ್ನು ಮಾಡುತ್ತಿರುವೆ ಅಂತ ಲಿಸ್ಟು ಮಾಡ್ಕೋತಿರುವೆ. ಪಟ್ ಅಂತ ಯಾವ್ದೋ ಕ್ಷಣದಲ್ಲಿ ನಿನ್ನ ಮೇಲೆ ಪ್ರೀತಿ ಹುಟ್ಟಿದ್ದಿದೆಯಲ್ಲಾ… ಅದು ನಿಜಕ್ಕೂ ಅಪ್ರಜ್ಞಾಪೂರ್ವಕ ಸ್ಥಿತಿಯಲ್ಲೆ ಆದದ್ದು. ಪ್ರಜ್ಞಾಪೂರ್ವಕವಾಗಿ ಆದರೆ ಅದಕ್ಕೆ ಎಷ್ಟೊಂದು ಬೇಲಿಗಳು, ತರ್ಕಗಳು, ಬುದ್ಧಿಯ ಬಾಣಗಳು ಅಡ್ಡಬಂದು ಅಲ್ಲಿ ಪ್ರೇಮ ಸಂಭವಿಸಲು ಬಿಡುತ್ತಲೇ ಇರಲಿಲ್ಲ. ಅಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ಆದದ್ದನ್ನು ಪ್ರಜ್ಞಾಪೂರ್ವಕ ಸ್ಥಿತಿ ಸದಾ ಪ್ರಶ್ನಿಸುತ್ತದೆ. ನಿರೀಕ್ಷಿಸುತ್ತದೆ, ಪ್ರತಿಪ್ರೀತಿ ಬಯಸುತ್ತದೆ. ಬೇಸರ, ನೋವು ಎಲ್ಲ ಆಗ್ತದೆ. ಎಲ್ಲಕ್ಕೂ ನಿಜವೆಂದರೆ ಇದರಿಂದ ಬಿಡಿಸಿಕೊಳ್ಳಲು ಸದಾ ಪ್ರಯತ್ನಿಸ್ತಲೇ ಇರ್ತದೆ. ಪ್ರೇಮವೆಂದರೆ ಸುಖವಲ್ಲ ಗೆಳೆಯಾ, ಅದೊಂದು ನೋವು. ಪರಮಯಾತನೆ. ಪ್ರೇಮದಲ್ಲಿ ಬಿದ್ದವರು ರೊಮ್ಯಾಂಟಿಕ್ ಸಂಗತಿಗಳನ್ನು ಮಾತಾಡಬೇಕು. ಈ ಫಿಲಾಸಫಿಯೆಲ್ಲ ಬಿಡು ನೀನು ಅನ್ನಬೇಡವೋ, ಸಫರ್ ಆದರೆ ಮಾತ್ರ ಫಿಲಾಸಫರ್ ಆಗಲಿಕ್ಕಾಗೋದು. ಪ್ರೇಮ ಕೊಡುವಷ್ಟು ಸಫರಿಂಗ್ ಯಾವ್ದು ಕೊಡ್ತದೆ ಹೇಳು? ಈ ಸಫರಿಂಗ್ ಕೂಡ ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ಬದುಕುವುದರ ಫಲವಾ? ಯೋಚಿಸಿ ಹೇಳು.
ನೀನ್ಯಾಕಿಷ್ಟ ನನಗೆ ಅಂತ ಕಾರಣ ಹುಡುಕಲು ಯತ್ನಿಸುತ್ತೇನೆ. ಬಹಳ ಸಲ. ಒಂದೇ ಒಂದು ಕಾರಣವೂ ಸಿಗುವುದಿಲ್ಲ. ಯಾವ್ದೋ ಕ್ಷಣದಲ್ಲಿ ಯಾವ ಪೂರ್ವತಯಾರಿಯೂ ಇಲ್ಲದೇ, ತೋಳ್ಪಾಡಿಯವರಂದಂತೆ ಅಪ್ರಜ್ಞಾಪೂರ್ವಕವಾಗಿ ಹುಟ್ಟಿದ್ದಕ್ಕೆ ಯಾವ ಕಾರಣವೂ ಇಲ್ಲ ಕಣೋ. ಗುಲ್ಜಾರ್ ಬರೆಯುತ್ತಾರೆ “ನಿನ್ನನ್ನು ಪ್ರೀತಿಸುವುದಕ್ಕೆ ಅಂತಾ ಕಾರಣಗಳೇನೂ ಇಲ್ಲ, ಪ್ರೀತಿಯ ಸ್ವಭಾವವೇ ಅದು ಅಕಾರಣವಾಗಿರುವುದು” ಇದು ಮೊನ್ನೆ ಎಲ್ಲೋ ಫೇಸ್ಬುಕ್ಕಲ್ಲಿ ಸಿಕ್ಕು, ಅರೆ! ಅವರೂ ನಂಗನಿಸಿದ್ದೇ ಹೇಳಿದಾರಲ್ಲಾ ಅನಿಸಿತು.
ಇದನ್ನೂ ಓದಿ: ಪೋಸ್ಟ್ ಬಾಕ್ಸ್ 143 | ಪೋಷಾಕಿಲ್ಲದಿದ್ದರೂ ನೀನು ರಾಜ, ನಾನು ಬೆದರಿದ ಪ್ರಜೆ; ಭಾವದಲ್ಲೇ ಪಾತ್ರ ಬದಲಾಗುತ್ತದಲ್ಲಾ?
ಯಾರಿಗಾಗಿಯೋ, ಏನೇನೋ ಆಗಿ, ಪ್ರಜ್ಞಾಪೂರ್ವಕವಾದ ಹುಸಿ ಸ್ಥಿತಿಯಲ್ಲಿ ಬದುಕಬಾರದು. ನಿನಗೆ ಇದು ಅಷ್ಟು ರುಚಿಸಲಿಕ್ಕಿಲ್ಲ. ನಂಗೊತ್ತಿದೆ. ಆದರೆ ಇದರಿಂದ ಪೂರ್ಣ ವಿಮುಖವಾಗಿ ಯೋಚಿಸೋ ಹುಡುಗನೂ ನೀನಲ್ಲ. ಅದೂ ಗೊತ್ತಿದೆ. ಆದರೆ ನಿಧಾನ ಯೋಚಿಸು, ಅಪ್ರಜ್ಞಾಪೂರ್ವಕ ಸ್ಥಿತಿ ಒಂದು ಶ್ರೇಷ್ಠ ಸ್ಥಿತಿ ಅನಿಸ್ತಿದೆ ನಂಗೆ. ಬರೆಯುವವರು ಬರೆಯುವ ಸಮಯದಲ್ಲಿ ತಮ್ಮನ್ನೆ ಮರೆತು ಒಂತರದ ಅಪ್ರಜ್ಞಾಪೂರ್ವಕ ಸ್ಥಿತೀಲಿರ್ತಾರೆ, ನಟಿಸುವವರೂ. ಈ ಕ್ಷಣ ರೈಲಿನಲ್ಲಿ ಕೂತು ಇದನ್ನು ಬರೆಯುವಾಗ ಸೊಲ್ಲಾಪುರದಿಂದ ಮೈಸೂರಿಗೆ ಹೋಗ್ತಿರೋ ಮಕ್ಕಳು ಬೋಗಿಯ ತುಂಬಾ ಹಾಡಿಕೊಂಡು ಕುಣಿಯುತ್ತಿದ್ದಾರೆ. ಎಂತಾ ಅಪ್ರಜ್ಞಾಪೂರ್ವಕ ಸ್ಥಿತಿ ಅದು! ಅಪ್ರಜ್ಞಾಪೂರ್ವಕ ಸ್ಥಿತಿಗೆ ಒಂದು ಮಟ್ಟಿನ ಮುಗ್ದತೆಯೂ ಪ್ರಾಪ್ತಿಯಾಗಿರುತ್ತದೆ ಅನಿಸುತ್ತದೆ.
ಅಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ವಿನಾಕಾರಣ ಹುಟ್ಟಿದ್ದು ಶ್ರೇಷ್ಠವಾದರೆ, ಹಾಗೆ ಹುಟ್ಟಿದ ಪ್ರೀತಿಯೂ ಅದೆಷ್ಟು ಶ್ರೇಷ್ಠ! ವಾವ್, ಈ ಹೊಸ ಅರಿವು ಎಂತದೋ ಖುಷಿಕೊಡ್ತಿದೆ ಗೆಳೆಯಾ. ಈ ಹಂತದಲ್ಲಿ ನಮಗೆ ಒಂದಿಷ್ಟಾದರೂ ಮುಗ್ಧತೆಯನ್ನೂ ಅಪ್ರಜ್ಞಾಪೂರ್ವಕ ಸ್ಥಿತಿಯನ್ನೂ ಕಲ್ಪಿಸಲು ಸಾಧ್ಯವಾಗುವುದು ಪ್ರೇಮಕ್ಕೆ ಮಾತ್ರ ಅನ್ನುವುದಾದರೆ ಎಂತಾ ಶ್ರೇಷ್ಠ ಭಾವ ಅದು! ಹೌದೂ, ನಿನ್ನ ಮನಸ್ಸು ಏನಾಗಿತ್ತು ಆಗ? ಮೊದಲ ಬಾರಿ ಐ ಲವ್ ಯೂ ಅಂದಾಗ? ಅದು ಪ್ರಜ್ಞಾಪೂರ್ವಕ ಸ್ಥಿತಿಯೋ, ಅಪ್ರಜ್ಞಾಪೂರ್ವಕವೋ? ಅಥವಾ ಆ ಕ್ಷಣ ಅಪ್ರಜ್ಞಾಪೂರ್ವಕವಾಗಿ ಆಡಿ, ನಂತರ ಪ್ರಜ್ಞಾಪೂರ್ವಕವಾಗಿ ಬಹಳ ತರ್ಕದ ಯೋಚನೆ ಮಾಡ್ತಾ ಇರುವೆಯೋ ಒಳಗೊಳಗೇ?
ಹೇಳು ಎಂದಾದರೊಂದು ದಿನ. ನೀನು ನೀನು ಮಾತ್ರವಾಗಿ, ನಾನು ನಾನು ಮಾತ್ರವಾಗಿ ನಾವು ನಾವಾಗಿ ಕೂತು ಮಾತಾಡಬಹುದಾದ ಎಂದಾದರೊಂದು ದಿನ. ನಾನು ಕಾಯುವೆ.
ಇದನ್ನೂ ಓದಿ: ಪೋಸ್ಟ್ ಬಾಕ್ಸ್ 143 | ಪ್ರೇಮಲೋಕದ ಬಾಗಿಲು ಯಾವಾಗ ತೆಗೆಯುತ್ತೆ?
ಅಂಕಣ
ಮೊಗಸಾಲೆ ಅಂಕಣ: ಮೋದಿ, ಖರ್ಗೆ ಹಣಾಹಣಿಗೆ ವೇದಿಕೆ ಸಜ್ಜು
ಮೊಗಸಾಲೆ ಅಂಕಣ
ಮೋದಿ, ಖರ್ಗೆ ಹಣಾಹಣಿಗೆ ವೇದಿಕೆ ಸಜ್ಜು
ಅತ್ತ ಮೋದಿಯವರಿಗೆ ಈ ಕರ್ನಾಟಕ ಚುನಾವಣೆ ಗೆಲುವು ಎಷ್ಟು ಮುಖ್ಯವೋ, ಅದಕ್ಕಿಂತ ಹತ್ತು ಪಟ್ಟು ಖರ್ಗೆಯವರಿಗೆ ಮುಖ್ಯವಾಗಿದೆ. ಎಸ್.ನಿಜಲಿಂಗಪ್ಪ ಬಳಿಕ ಏಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರಿರುವ ಕನ್ನಡಿಗ ಖರ್ಗೆಯವರಿಗೆ ಕರ್ನಾಟಕವನ್ನು ಜೈಸಲೇಬೇಕಾಗಿದೆ. ಆದರೆ ಹೇಗೆ?
ಕರ್ನಾಟಕ ವಿಧಾನಸಭೆ ಚುನಾವಣೆ ಕಣ
ಬರಲಿರುವ ಮೇ ಮಾಹೆಯ ಹತ್ತನೇ ದಿವಸ ಕರ್ನಾಟಕ ವಿಧಾನ ಸಭಾ ಚುನಾವಣೆಯ (karnataka election 2023) ಮತದಾನದ ದಿನ ಮಾತ್ರವೇ ಆಗಿರದೆ ಜನಮಾನಸದ ಐತೀರ್ಪಿನ ಮುಹೂರ್ತವೂ ಆಗಿದೆ. ಜಡ್ಜ್ಮೆಂಟ್ ಡೇ ಎಂದು ಅದನ್ನು ಕರೆಯಬಹುದು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹೆಸರನ್ನು ಮುಂದಿಟ್ಟು ಯಾರು ಹಿತವರು ನಿಮಗೆ ಈ ಮೂರರೊಳಗೆ ಎಂದು ಕೇಳಿದರೆ ಯಾವುದೂ ಹಿತವಲ್ಲ ಎಂದು ಜನ ಹೇಳಿಯಾರು. ಆದರೆ ನಮ್ಮದು ಚುನಾಯಿತ ಪ್ರಜಾಪ್ರಭುತ್ವ. ಇಲ್ಲಿ ಅದಕ್ಕೆಲ್ಲ ಸೀಮಿತ ಅವಕಾಶವಷ್ಟೇ ಇರುತ್ತದೆ. ಕರ್ನಾಟಕದ ಜನರಿಗೆ ಸದ್ಯಕ್ಕೆ ಈ ಮೂರೂ ಪಕ್ಷಗಳ ಆಚೆಗೆ ಪ್ರಬಲವಾದ ನಾಲ್ಕನೇ ಆಯ್ಕೆಗೆ ಅವಕಾಶ ಇಲ್ಲ.
ಒಂದೇ ಹಂತದಲ್ಲಿ ಚುನಾವಣೆ ನಡೆಯುವುದೆಂದು ಚುನಾವಣಾ ಆಯೋಗ ಪ್ರಕಟಿಸಿದೆ. ಕಾನೂನು ಸುರಕ್ಷತೆ ಮತ್ತು ಕಾಯ್ದೆಯನ್ನು ವ್ಯವಸ್ಥಿತವಾಗಿ ಕಾಯ್ದುಕೊಂಡು ಬರುವ ಭರವಸೆಯನ್ನು ಮುಖ್ಯ ಕಾರ್ಯದರ್ಶಿ ವಂದನಾ ಶರ್ಮ ಮತ್ತು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ನೀಡಿರುವುದು ಈ ನಿರ್ಧಾರಕ್ಕೆ ಆಧಾರವೆಂದು ಮೇಲು ನೋಟಕ್ಕೇ ಅರ್ಥವಾಗುತ್ತದೆ. ಈ ಇಬ್ಬರು ವರಿಷ್ಠ ಅಧಿಕಾರಿಗಳೊಂದಿಗೆ ನಡೆಸಿದ ಸಮಾಲೋಚನೆ ಸಮಾಧಾನಕರವೆಂದು ಆಯೋಗಕ್ಕೆ ಮನವರಿಕೆಯಾಗಿರುವುದು ರಾಜ್ಯದಲ್ಲಿ ನೆಲೆಸಿರುವ ಶಾಂತಿಯುತ ವಾತಾವರಣಕ್ಕೆ ಕೋಡು ಮೂಡಿಸಿರುವ ಬೆಳವಣಿಗೆ. 31 ಜಿಲ್ಲೆಗಳಲ್ಲಿ ಹರಡಿರುವ 224 ಕ್ಷೇತ್ರಗಳಿಗೆ ಒಂದೇ ಹಂತ/ಒಂದೇ ದಿವಸ ಚುನಾವಣೆ ನಡೆಸುವುದು ಹುಡುಗಾಟಿಕೆಯ ಮಾತಲ್ಲ. ಶಾಸಕ ಬಲಕ್ಕೆ ಹೋಲಿಸಿದರೆ ಕರ್ನಾಟಕದ ಅರ್ಧವೂ ಇರದ ಚಿಕ್ಕಪುಟ್ಟ ರಾಜ್ಯಗಳಲ್ಲಿ ಎರಡು ಮೂರು ಹಂತದ ಚುನಾವಣೆ ನಡೆದಿದ್ದಕ್ಕೆ ದೇಶ ಸಾಕ್ಷಿಯಾಗಿದೆ. ಇಲ್ಲಿ ಎಲ್ಲವೂ ಸುಗಮ ಸುರಕ್ಷಿತ ಎಂದು ಆಯೋಗ ಭಾವಿಸಿದ್ದರೆ ಅದಕ್ಕಾಗಿ ನಮ್ಮ ಬೆನ್ನನ್ನು ನಾವೇ ತಟ್ಟಿಕೊಂಡು ಸುಖಿಸಬಹುದು.
ಎಚ್.ಡಿ. ದೇವೇಗೌಡ ನೇತೃತ್ವದ ಜಾತ್ಯತೀತ ಜನತಾ ದಳದ ಮುಖ್ಯಮಂತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿಯವರು ಸ್ವತಂತ್ರ ಬಲದ ಮೇಲೆ ಅಧಿಕಾರಕ್ಕೆ ಬರುವ, 123 ಸ್ಥಾನ ಗೆಲ್ಲುವ ಛಲದಲ್ಲಿ ಪ್ರಚಾರ ಪ್ರವಾಸ ನಡೆಸಿದ್ದಾರೆ. ಚುನಾವಣಾ ರಾಜಕೀಯಕ್ಕೆ ಇಳಿಯುವ ಪ್ರತಿಯೊಂದೂ ಪಕ್ಷ ತಾನೇ ಅಧಿಕಾರಕ್ಕೆ ಬರುವುದಾಗಿ ಜನರ ಮುಂದೆ ಹೇಳಬೇಕು; ಜನರು ಅದನ್ನು ನಂಬುವಂತೆ ಮಾಡಬೇಕು. ಕುಮಾರಸ್ವಾಮಿಯವರಿಗೆ ಪ್ರವಾಹದ ವಿರುದ್ಧ ಈಜುತ್ತಿರುವ ಅನುಭವ ಈಗಾಗಲೇ ಮನವರಿಕೆಯಾಗಿದೆ. ಹಾಸನ ಜಿಲ್ಲೆಯಲ್ಲಿ ನಡೆದಿರುವ ಟಿಕೆಟ್ ಹಂಚಿಕೆ ಯಾದವೀ ಕಲಹ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ ಎನ್ನಲು ಹೇರಳ ಸಾಂದರ್ಭಿಕ ಸಾಕ್ಷ್ಯಗಳಿವೆ. ಮಾರು ಗೆದ್ದು ಊರು ಗೆಲ್ಲು ಎಂಬ ಮಾತಿದೆ. ಕುಮಾರಸ್ವಾಮಿಯವರು ಮೊದಲಿಗೆ ಹಾಸನವನ್ನು ಗೆಲ್ಲಬೇಕಿದೆ; ನಂತರದಲ್ಲಿ ರಾಜ್ಯದ ಮಾತು.
2004ರ ಚುನಾವಣೆಯಲ್ಲಿ ಜೆಡಿಎಸ್ 58 ಸ್ಥಾನ ಗೆದ್ದಿತ್ತು. ಅದು ಆ ಪಕ್ಷದ ಹೆಸರಿನಲ್ಲಿರುವ ದಾಖಲೆ. ನಂತರದ 2009ರ ಚುನಾವಣೆಯಲ್ಲಿ ಅದು 30 ಸೀಟು ಗೆದ್ದು 28 ಸೀಟು ಕಳೆದುಕೊಂಡಿತ್ತು. 2013ರ ಚುನಾವಣೆಯಲ್ಲಿ 40 ಸ್ಥಾನ ಅದಕ್ಕೆ ಒಲಿದಿತ್ತು. ವಿಶೇಷವೆಂದರೆ ಚುನಾವಣೆ ಪೂರ್ವದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯೂ ನಲವತ್ತು ಸ್ಥಾನ ಜೈಸಿ ಮೂರನೇ ಸ್ಥಾನದಲ್ಲಿ ಕೂರುವಂತಾಗಿತ್ತು. ಎರಡೂ ಪಕ್ಷಗಳು ತಲಾ ನಲವತ್ತು ಸ್ಥಾನ ಗಳಿಸಿದಾಗ ಯಾವ ಪಕ್ಷಕ್ಕೆ ವಿಧಾನ ಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ನೀಡಬೇಕು ಎಂಬ ಜಿಜ್ಞಾಸೆ ಉದ್ಭವಿಸಿತ್ತು. ಆಡಳಿತ ನಡೆಸಿರುವ ಪಕ್ಷ ತಾನಾಗಿರುವ ಕಾರಣ ಆ ಸ್ಥಾನಮಾನ ತನಗೇ ಎಂದು ಬಿಜೆಪಿ ಪ್ರತಿಪಾದಿಸಿತ್ತು. ಇಕ್ಕಟ್ಟಿನ ಪರಿಸ್ಥಿತಿ ಎದುರಾದ ಅಂಥ ಸಂದರ್ಭದಲ್ಲಿ ಕಾನೂನು ಪರಿಹಾರವೂ ಇದೆ. ಯಾವ ಪಕ್ಷಕ್ಕೆ ಜಾಸ್ತಿ ಮತಗಳು ಸಿಕ್ಕಿವೆ ಎನ್ನುವುದರ ಆಧಾರದಲ್ಲಿ ತೀರ್ಮಾನ ಆಗುತ್ತದೆ. ಅದರಂತೆ ಜೆಡಿಎಸ್ನ ಕುಮಾರಸ್ವಾಮಿ ವಿಪಕ್ಷ ನಾಯಕರಾದರು.
ಆ ತರುವಾಯದ ಚುನಾವಣೆಗಳಲ್ಲಿ ಜೆಡಿಎಸ್ 40 ಶಾಸಕರ ಗಡಿ ಮುಟ್ಟಲಿಲ್ಲ. ಹಾಗಂತ ಆ ಪಕ್ಷ ತನ್ನ ವಿಶ್ವಾಸ ಕಳೆದುಕೊಂಡಿಲ್ಲ. ಛಲಬಿಡದ ತ್ರಿವಿಕ್ರಮನಂತೆ ಹೋರಾಟ ನಡೆಸಿರುವ ಕುಮಾರಸ್ವಾಮಿಯವರು 123 ಸ್ಥಾನ ಗೆಲ್ಲುವ, ಯಾರ ಹಂಗೂ ಇಲ್ಲದೆ ಸರ್ಕಾರ ನಡೆಸುವ ಕನಸನ್ನು ಜನರಲ್ಲಿ ಬಿತ್ತುತ್ತ ಸಾಗಿದ್ದಾರೆ. ಏತನ್ಮಧ್ಯೆ ಯಾವುದೇ ಪಕ್ಷಕ್ಕೂ ಸರಳ ಬಹುಮತ ಸಿಗಲಾರದು ಎಂಬ ಮಾಹಿತಿ ಅವರಿಗೆ ಸಿಕ್ಕಿದೆ ಎನ್ನುವುದು ಅವರ ಮಾತಿನಿಂದಲೇ ವೇದ್ಯವಾಗಿದೆ. ಬಿಜೆಪಿ, ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳ ದೆಹಲಿ ಮಟ್ಟದ ನಾಯಕರು ಭವಿಷ್ಯದ ಸರ್ಕಾರ ರಚಿಸುವ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆಂಬ ಅವರ ಮಾತನ್ನು ಸೀಳಿ ನೋಡಿದರೆ ಮತ್ತೊಮ್ಮೆ ಅತಂತ್ರ ವಿಧಾನ ಸಭೆ, ಮತ್ತೊಮ್ಮೆ ಸಮ್ಮಿಶ್ರ ಸರ್ಕಾರ ಎಂಬ ಭಾವನೆ ಬರುತ್ತದೆ. ಈ ನಿಟ್ಟಿನಲ್ಲಿ ಮಾತುಕತೆ ನಡೆದಿರುವುದು ಅಸಲಿಗೆ ಎಷ್ಟು ನಿಜ ಅಥವಾ ಅಲ್ಲ ಎನ್ನುವುದು ಕುಮಾರಸ್ವಾಮಿ ಮತ್ತು ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿರುವ ಕಾಂಗ್ರೆಸ್, ಬಿಜೆಪಿ ವರಿಷ್ಠರಿಗೆ ಮಾತ್ರ ಗೊತ್ತಿದೆ. ನಮಗೆ ಗೊತ್ತಾಗುವ ಅಂಶವೆಂದರೆ ರಾಷ್ಟ್ರೀಯ ಪಕ್ಷಗಳೂ ಅಭದ್ರತೆಯ ಕರಿನೆರಳ ಕೆಳಗಿವೆ ಎನ್ನುವುದು. ಈ ಮಾತಿಗೆ ಪೂರಕವಾಗಿ ಬಂದಿರುವ ವಿವಿಧ ಸಮೀಕ್ಷೆಗಳನ್ನು ಗಮನಿಸಬಹುದಾಗಿದೆ.
ಒಂದೆರಡು ಸಮೀಕ್ಷೆ ಹೊರತಾಗಿಸಿದರೆ ಅತಂತ್ರ ವಿಧಾನ ಸಭೆಯೇ ನಿಕ್ಕಿ ಎನ್ನುವುದು ಬಹುತೇಕ ಸಮೀಕ್ಷೆಗಳ ಫಲಶ್ರುತಿ. ಆ ಒಂದೆರಡು ಸಮೀಕ್ಷಾ ಭವಿಷ್ಯವಾದರೂ ಒಂದೇ ಪಕ್ಷದತ್ತ ಬೆರಳು ಮಾಡಿವೆಯೇ…? ಇಲ್ಲ. ಅತ್ತ ಕಾಂಗ್ರೆಸ್ಸನ್ನು ಒಂದೆರಡು ಸಮೀಕ್ಷೆ ಸರಳ ಬಹುಮತದ (113) ಗಡಿಯನ್ನು ದಾಟಿಸಿದ್ದರೆ, ಒಂದೆರಡು ಸಮೀಕ್ಷೆ ಬಿಜೆಪಿಯನ್ನು ಅತ್ಯಧಿಕ ಸ್ಥಾನಬಲದ ಆದರೆ ಸರಳ ಬಹುಮತ ಪಡೆಯದ ಪಕ್ಷವಾಗಲಿದೆ ಎಂದಿವೆ. ಈ ಹಿಂದೆ 2008ರಲ್ಲಿ ಬಿಜೆಪಿ ಅಧಿಕಾರ ನಡೆಸಿತ್ತು. ಆದರೆ ಅದು ಗೆದ್ದುದು 110 ಸ್ಥಾನ ಮಾತ್ರ. ಮತ್ತೆ ಅದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು 2018ರಲ್ಲಿ. ಅಂದರೆ ಕಳೆದ ಚುನಾವಣೆಯಲ್ಲಿ. ಆಗ ಅದು ಗೆದ್ದುದು 104 ಸೀಟು ಮಾತ್ರ. ಎರಡೂ ಸಂದರ್ಭದಲ್ಲಿ ಅದರ ಕೈಗೆ ಅಧಿಕಾರ ಬಂದುದು ಆಪರೇಷನ್ ಕಮಲದ ಕಾರಣವಾಗಿ.
ಇದನ್ನೂ ಓದಿ:ಮೊಗಸಾಲೆ ಅಂಕಣ: ರಾಜ್ಯ ಬಿಜೆಪಿ ಕಲಿಯಲೊಲ್ಲದ ಪಾಠ
2008ರಲ್ಲಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ಅವರ ಹೆಸರು ಇಷ್ಟೆಲ್ಲ ಮಹತ್ವಕ್ಕೆ ಬಂದಿರಲಿಲ್ಲ. ಆ ವರ್ಷ ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆದುದು ಬಿ.ಎಸ್.ಯಡಿಯೂರಪ್ಪ ಹೆಗಲ ಮೇಲೆ. ಆಗ ಆ ಪಕ್ಷ ಗೆದ್ದಿದ್ದು 110 ಸೀಟನ್ನು. 2018ರ ಹೊತ್ತಿಗೆ ದೇಶದಾದ್ಯಂತ ಮೋದಿ ಅಲೆ. ಅದು ಕೇವಲ ಅಲೆಯಲ್ಲ ಸುನಾಮಿ ಎಂಬ ಮಾತೂ ಚಾಲ್ತಿಯಲ್ಲಿತ್ತು. ಅವರದೇ ಸಾರಥ್ಯದಲ್ಲಿ ನಡೆದ 2018ರ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು 104 ಸೀಟನ್ನಷ್ಟೆ. ಅಂದರೆ ಆರು ಸ್ಥಾನ ಕಡಿಮೆ. ಕರ್ನಾಟಕದ ಮತದಾರರು ಮೋದಿ ಎಂದ ಮಾತ್ರಕ್ಕೇ ಮೋಡಿಗೆ ಒಳಗಾಗುವವರಲ್ಲ ಎಂಬ ಸಂದೇಶ ಐದು ವರ್ಷದ ಹಿಂದೆಯೇ ರವಾನೆ ಆಗಿದೆ.
ಹೀಗೆಂದ ಮಾತ್ರಕ್ಕೆ ಕಾಂಗ್ರೆಸ್ಗೆ ಸರಳ ಬಹುಮತ ಶತಸ್ಸಿದ್ಧ ಎಂದೇನೂ ಅಲ್ಲ. ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಸಾಗಿದ್ದು 22 ದಿವಸ. ವಿಚಿತ್ರ ಆದರೂ ಸತ್ಯ ಎನ್ನುತ್ತಾರಲ್ಲ ಹಾಗಿದೆ ಯಾತ್ರೆಯ ಫಲಶ್ರುತಿ ಈ ರಾಜ್ಯದಲ್ಲಿ. ಈಗ ಜನ ಹಾಗಿರಲಿ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಕೂಡಾ ಅದನ್ನು ಪ್ರಸ್ತಾಪಿಸಿ ಮಾತಾಡುತ್ತಿಲ್ಲ. ಭಾರತ್ ಜೋಡೋ, ಬಿರುಕು ಬಿಡಲಿದ್ದ ಜನರ ಮನಸ್ಸನ್ನು ಪುನಃ ಬೆಸೆಯುವುದಕ್ಕೆ ಹೇಗೆ ನೆರವಾಯಿತು ಎಂದು ಅವರಲ್ಲದೆ ಇನ್ಯಾರು ಹೇಳಬೇಕು. ಆದರೆ ಪ್ರಚಾರದ ರ್ಯಾಲಿಗಳಲ್ಲಿ ಇದರ ಪ್ರಸ್ತಾಪವೇ ಆಗುತ್ತಿಲ್ಲ. ಏನಿರಬಹುದು ಒಳಗುಟ್ಟು…? ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಲ್ಲವೇ ಸಿದ್ದರಾಮಯ್ಯ ಹೇಳಬೇಕು. ಯಾಕೆ ಅವರು ಮೌನಕ್ಕೆ ಜಾರಿದ್ದಾರೋ ಗೊತ್ತಿಲ್ಲ.
ಸೂರತ್ ನ್ಯಾಯಾಲಯದ ತೀರ್ಪನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಕಾಂಗ್ರೆಸ್ ಇರಾದೆ ನಿಚ್ಚಳವಾಗಿದೆ. ಇದರಲ್ಲಿ ತಪ್ಪು ಹುಡುಕಲು ಏನೂ ಇಲ್ಲ. ಲೋಕಸಭಾ ಸದಸ್ಯತ್ವ ರದ್ದಾಗಿರುವುದು, ತಾವು ವಾಸವಿದ್ದ ಮನೆಯನ್ನು ರಾಹುಲ್ರು ತೆರವು ಮಾಡಬೇಕಾಗಿರುವುದು; ಮೇಲಿನ ಕೋರ್ಟ್ಗೆ ಹೋಗಿ ತಡೆಯಾಜ್ಞೆ ತಾರದ ಪಕ್ಷದಲ್ಲಿ ಅನುಭವಿಸಲೇ ಬೇಕಿರುವ ಎರಡು ವರ್ಷದ ಜೈಲು ಶಿಕ್ಷೆ..ಇವುಗಳು ಕಾಂಗ್ರೆಸ್ಗೆ ಚುನಾವಣಾ ಬಲ ತರುವ ಸಂಗತಿಗಳಾಗಲಿವೆ. ಸೂರತ್ ಕೋರ್ಟ್ನ ಆದೇಶಕ್ಕೆ ತಡೆ ತರಬೇಕೇ ಬೇಡವೇ ಎಂಬುದು ಕಾಂಗ್ರೆಸ್ನ ಉನ್ನತ ಸ್ತರದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವೊದಗಿಸಿದೆ. ಈವರೆಗಿನ ಬೆಳವಣಿಗೆಗಳನ್ನು ಗಮನಿಸಿ ಹೇಳುವುದಾದರೆ ರಾಹುಲ್ರು ಜೈಲಿಗೆ ಹೋಗುವ ತಯಾರಿಯಲ್ಲಿದ್ದಾರೆ. ಹಾಗೆ ಹೋಗುವುದರಿಂದ ಪಕ್ಷಕ್ಕೆ ಅದು ಒಂದಾನೊಂದು ಕಾಲದಲ್ಲಿ ಹೊಂದಿದ್ದ ಬಲ ಮರಳುತ್ತದೆ ಎನ್ನುವುದು ಈ ತಯಾರಿ ಹಿಂದಿರುವ ಮನಃಸ್ಥಿತಿ. 2024ರ ಲೋಕಸಭಾ ಚುನಾವಣೆ ಗೆದ್ದರೆ ಯುಪಿಎ ಬಹುಮತದಲ್ಲಿ ಅಧಿಕಾರಕ್ಕೆ ಬಂದರೆ ಸಂಬಂಧಿಸಿದ ಕಾಯಿದೆಗೆ ತಿದ್ದುಪಡಿ ತಂದು ರಾಹುಲ್ರನ್ನು ಬಂಧಮುಕ್ತರನ್ನಾಗಿಸಬಹುದು ಎಂಬ ದೂರಗಾಮೀ ಲೆಕ್ಕಾಚಾರದ ಭಾಗಾಕಾರ, ಗುಣಾಕಾರ ನಡೆದಿದೆ ಎಂಬ ವದಂತಿ ತೇಲುತ್ತಿದೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಆಯಾರಾಂ ಗಯಾರಾಂ ಮರಕೋತಿ ಆಟ
ಲೋಕಸಭಾ ಚುನಾವಣೆಗೂ ಪೂರ್ವದಲ್ಲಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ಕರ್ನಾಟಕವನ್ನು ಗೆಲ್ಲುವ, ಬಿಜೆಪಿಯಿಂದ ಅದನ್ನು ಕಸಿಯುವ ಅನಿವಾರ್ಯ ಕಾಂಗ್ರೆಸ್ಗೆ, ಕೈಯಲ್ಲಿರುವ ಕರ್ನಾಟಕವನ್ನು ಕೈಯಲ್ಲೇ ಉಳಿಸಿಕೊಳ್ಳುವ ಅನಿವಾರ್ಯ ಬಿಜೆಪಿಗೆ ಎದುರಾಗಿದೆ. ಕೇಂದ್ರಾಡಳಿತ ಪುದುಚೆರಿಯ ಆಡಳಿತ ಬಿಜೆಪಿ ಕೈಲಿದೆ. ಅದು ಲೆಕ್ಕಕ್ಕೆ ಉಂಟು ಆಟಕ್ಕೆ ಇಲ್ಲ ಎಂಬಂತಿರುವ ಸಣ್ಣ ಲಂಗೋಟಿಯಂತಿರುವ ರಾಜ್ಯ. ದಕ್ಷಿಣದಲ್ಲಿ ಬಿಜೆಪಿಯ ಹೆಬ್ಬಾಗಿಲು ಕರ್ನಾಟಕ. ಈ ರಾಜ್ಯ 2019ರಲ್ಲಿ ಲೋಕಸಭೆಗೆ 26 ಸಂಸದರನ್ನು ಆಯ್ಕೆ ಮಾಡಿ ಕಳಿಸಿದೆ. ಆ ದಾಖಲೆಯ ಪುನರಾವರ್ತನೆ ಆಗಬೇಕೆಂದಾದರೆ ವಿಧಾನ ಸಭಾ ಚುನಾವಣೆಯನ್ನು ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಗೆಲ್ಲಬೇಕಿದೆ. 2018ರ ವಿಧಾನ ಸಭಾ ಚುನಾವಣೆಯಲ್ಲಿ 104 ಕ್ಷೇತ್ರ ಬಿಜೆಪಿ ತೆಕ್ಕೆಗೆ ಬಂತು. ಮರುವರ್ಷ 2019ರಲ್ಲಿ ಲೋಕಸಭೆಗೆ ಚುನಾವಣೆ ನಡೆದಾಗ 140ಕ್ಕೂ ಅಧಿಕ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಲೀಡ್ ಸಿಕ್ಕಿತ್ತು. ಇದನ್ನು ಬಲ್ಲ ಪ್ರಧಾನಿ ಮೋದಿಯವರು ಕರ್ನಾಟಕವನ್ನು ಶತಾಯಗತಾಯ ಉಳಿಸಿಕೊಳ್ಳುವ ಛಲದಲ್ಲಿ ಚುನಾವಣಾ ತಯಾರಿ ನಡೆಸಿದ್ದಾರೆ. ಪಕ್ಷವನ್ನು ಸರ್ವ ಸನ್ನದ್ಧ ಸ್ಥಿತಿಯಲ್ಲಿ ಹೋರಾಟಕ್ಕೆ ಅಣಿಗೊಳಿಸುತ್ತಿದ್ದಾರೆ.
ಕಾಂಗ್ರೆಸ್ನ ಅಖಿಲ ಭಾರತ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಕರ್ನಾಟಕ ಚುನಾವಣೆ ಅಕ್ಷರಶಃ ಅಗ್ನಿಪರೀಕ್ಷೆಯ ಕಣವಾಗಿದೆ. ಎಸ್.ನಿಜಲಿಂಗಪ್ಪ ಬಳಿಕ ಏಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರಿರುವ ಕನ್ನಡಿಗ ಖರ್ಗೆಯವರಿಗೆ ಕರ್ನಾಟಕವನ್ನು ಜೈಸಲೇಬೇಕಾಗಿದೆ. ಐದು ವರ್ಷದ ಹಿಂದೆ ಕಳೆದುಕೊಂಡ ಅಧಿಕಾರವನ್ನು ಮರಳಿ ಪಡೆಯುವುದಕ್ಕಷ್ಟೇ ಖರ್ಗೆ ಆಶಯ ಉದ್ದೇಶವಲ್ಲ. ಕಾಂಗ್ರೆಸ್ ಈ ಚುನಾವಣೆಯನ್ನೂ ಸೋತರೆ ಅದರ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಲಿದೆ. ಕಾಂಗ್ರೆಸ್ ಸೋತರೆ ಆ ಪಕ್ಷದ ಮುಖಂಡರು ಅದನ್ನು ಖರ್ಗೆಯವರ ತಲೆಗೆ ಕಟ್ಟುತ್ತಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಹತ್ತಾರು ಚುನಾವಣೆ ಸೋತರೂ ಅವರೊಂದಿಗೇ ನಿಂತಿರುವ ಕಾಂಗ್ರೆಸ್ನ ನಾಯಕರನೇಕರು ಖರ್ಗೆಯವರಿಗೆ ಅಷ್ಟೆಲ್ಲ ಅವಕಾಶ ಕೊಡಲಾರರು. ಖರ್ಗೆಯವರ ತಲೆದಂಡ ಪಡೆಯುವ ಕೆಲಸಕ್ಕೆ ಅವರೆಲ್ಲ ಒಂದುಗೂಡಿ ಮುಂದಾಗುವುದು ಶತಃಸ್ಸಿದ್ಧ. ಅತ್ತ ಮೋದಿಯವರಿಗೆ ಈ ಚುನಾವಣೆ ಗೆಲುವು ಎಷ್ಟು ಮುಖ್ಯವೋ ಅದಕ್ಕಿಂತ ಹತ್ತು ಪಟ್ಟು ಖರ್ಗೆಯವರಿಗೆ ಮುಖ್ಯವಾಗಿದೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಮತ್ತೆ ಮಧ್ಯರಂಗಕ್ಕೆ ಬಂದ ಬಿಎಸ್ ಯಡಿಯೂರಪ್ಪ
ಅಂಕಣ
ಸೈಬರ್ ಸೇಫ್ಟಿ ಅಂಕಣ: ಆಧಾರ್ಗೆ ಬ್ಲಾಕ್ಚೈನ್ ತಂತ್ರಜ್ಞಾನ ಆಧಾರ ಆಗಬಲ್ಲದೇ?
ಆಧಾರ್ಗೆ ಸಂಬಂಧಿಸಿದ ಗೌಪ್ಯತೆ ಮತ್ತು ಭದ್ರತಾ ಕಾಳಜಿಗಳಿಗೆ ಸಂಭಾವ್ಯ ಪರಿಹಾರವಾಗಿ ಬ್ಲಾಕ್ಚೈನ್ ತಂತ್ರಜ್ಞಾನವನ್ನು ಪ್ರಸ್ತಾಪಿಸಲಾಗಿದೆ. ಇದು ಸುರಕ್ಷಿತ ಹೌದು. ಆದರೆ ಇದು ಕಾರ್ಯರೂಪಕ್ಕೆ ಬರುವವರೆಗೆ ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ.
ಆಧಾರ್ ನಮ್ಮ ದಿನನಿತ್ಯದ ವಹಿವಾಟಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಗುರುತಿನ ಚೀಟಿಯಾಗಿ, ಅಡ್ರಸ್ ಫ್ರೂಫ್ ಆಗಿ, ಮುಖ್ಯವಾಗಿ ಭಾರತೀಯ ಪೌರತ್ವವನ್ನು ದೃಢೀಕರಿಸುವ ದಾಖಲೆಯಾಗಿ ಬಳಕೆಯಲ್ಲಿದೆ. ಆಧಾರ್ ಒಂದು ಬಯೋಮೆಟ್ರಿಕ್ ಗುರುತಿನ ವ್ಯವಸ್ಥೆಯಾಗಿದ್ದು, ಇದನ್ನು 2009ರಲ್ಲಿ ಭಾರತದಲ್ಲಿ ಪರಿಚಯಿಸಲಾಯಿತು. ಇದು ಭಾರತದ ಎಲ್ಲಾ ಪ್ರಜೆಗಳಿಗೆ ಅವರ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ಡೇಟಾವನ್ನು ಆಧರಿಸಿ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಒದಗಿಸುತ್ತದೆ. ವೈಯಕ್ತಿಕ ಡೇಟಾದ ಗೌಪ್ಯತೆ ಮತ್ತು ಸುರಕ್ಷತೆಯ ಮೇಲಿನ ಕಾಳಜಿಯಿಂದಾಗಿ, ಆರಂಭದಲ್ಲಿ ಆಧಾರ್ ಬಳಕೆಯ ಬಗ್ಗೆ ಅನೇಕ ಅನುಮಾನಗಳಿದ್ದವು. ಅದೇ ಸಮಯದಲ್ಲಿ ಬಂದ ವರ್ಲ್ಡ್ ಎಕನಾಮಿಕ್ ಫೋರಂನ 2019ರ ಜಾಗತಿಕ ರಿಸ್ಕ್ ವರದಿಯ ಪ್ರಕಾರ, 2018ರಲ್ಲಿ ಆದ ಆಧಾರ್ನ ಮಾಹಿತಿ ಸೋರಿಕೆ ಪ್ರಪಂಚದಲ್ಲೇ ಅತಿ ದೊಡ್ಡ ಮಾಹಿತಿ ಸೋರಿಕೆ. ಆಗಸ್ಟ್ 2017 ಮತ್ತು ಜನವರಿ 2018ರ ನಡುವೆ, ಸುಮಾರು 110 ಕೋಟಿ ಭಾರತೀಯರ ಆಧಾರ್ ಸಂಖ್ಯೆಗಳು, ಹೆಸರುಗಳು, ಇಮೇಲ್ ವಿಳಾಸಗಳು, ಭೌತಿಕ ಸ್ಥಳಗಳು, ಫೋನ್ ಸಂಖ್ಯೆಗಳು ಮತ್ತು ಛಾಯಾಚಿತ್ರಗಳು ಡೇಟಾ ಉಲ್ಲಂಘನೆಗೆ ಗುರಿಯಾಗಿತ್ತು ಎಂದು ವಿಶ್ವದ ದೊಡ್ಡ ಆಂಟಿವೈರಸ್ ಸಂಸ್ಥೆಗಳಲ್ಲಿ ಒಂದಾದ ಅವಾಸ್ಟ್ ತನ್ನ ವರದಿಯಲ್ಲಿ ಹೇಳಿದೆ.
ಈ ಕಳವಳಗಳಿಗೆ ಪ್ರತಿಕ್ರಿಯೆಯಾಗಿ, ಭಾರತ ಸರ್ಕಾರವು 2019ರಲ್ಲಿ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆಯನ್ನು ಪರಿಚಯಿಸಿತು. ಇದು ಭಾರತದಲ್ಲಿ ವೈಯಕ್ತಿಕ ಡೇಟಾದ ಸಂಗ್ರಹಣೆ, ಬಳಕೆ ಮತ್ತು ವರ್ಗಾವಣೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಮಸೂದೆಯು ಪ್ರಸ್ತುತ ಪರಿಶೀಲನೆಯಲ್ಲಿದೆ ಮತ್ತು ಇನ್ನೂ ಕಾನೂನಾಗಿ ಅಂಗೀಕಾರವಾಗಲಿಲ್ಲ. ಅದನ್ನು ಪರಿಷ್ಕರಿಸಿ 2022ರಲ್ಲಿ ಸರ್ಕಾರ ಹೊಸದಾಗಿ ಮಸೂದೆಯನ್ನು ಮಂಡಿಸಿದೆ.
ಇತ್ತೀಚೆಗೆ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸರ್ಕಾರಿ ವಿಭಾಗಗಳಿಂದ ಮಾಹಿತಿ ಸೋರಿಕೆಯು ಕ್ರಮವಾಗಿ 2020ರಲ್ಲಿ 10, 2021ರಲ್ಲಿ 5 ಮತ್ತು 2022ರಲ್ಲಿ 7 ಎಂದು ಮಿನಿಸ್ಟರಿ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ (MeitY)ಯ ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಮಾರ್ಚ್ ತಿಂಗಳಿನ ಎರಡನೆಯ ವಾರದಲ್ಲಿ ನೀವೂ ಒಂದು ವರದಿ ಓದಿರಬಹುದು. ದೆಹಲಿ ಪೊಲೀಸರು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI) ಆಧಾರ್ ವ್ಯವಸ್ಥೆಯಲ್ಲಿನ ಹಲವಾರು ದೋಷಗಳನ್ನು ವಂಚಕರು ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಸೂಚನೆ ನೀಡಿದ್ದಾರೆ. ಬ್ಯಾಂಕ್ ವಂಚನೆ ಸೇರಿದಂತೆ ಕೆಲವು ಪ್ರಕರಣಗಳ ತನಿಖೆಯಲ್ಲಿ, ಆಧಾರ್ ಐಡಿಗಳನ್ನು ರಚಿಸುವಾಗ ಮುಖದ ಬಯೋಮೆಟ್ರಿಕ್ಗಳನ್ನು ಹೊಂದಿಕೆ ಮಾಡುತ್ತಿಲ್ಲ ಎಂಬ ಅಂಶ ತಿಳಿದುಬಂತು ಎಂದು ಹೇಳಿದ್ದಾರೆ. ಇದರಿಂದ ಆಧಾರ್ನಲ್ಲಿರುವ ಜನರ ವೈಯಕ್ತಿಕ ಮಾಹಿತಿ ಸುರಕ್ಷಿತವಾಗಿಲ್ಲ ಎಂಬ ಚರ್ಚೆ ಮತ್ತೆ ಹೊಗೆ ಆಡುತ್ತಿದೆ.
ಆಧಾರ್ ಆಧಾರಿತ ಫಿಂಗರ್ಪ್ರಿಂಟ್ ದೃಢೀಕರಣ ಮತ್ತು ವಂಚನೆಯ ಪ್ರಯತ್ನಗಳನ್ನು ವೇಗವಾಗಿ ಪತ್ತೆಹಚ್ಚಲು ಎಐ/ಎಂಎಲ್ ಆಧಾರಿತ ಹೊಸ ಭದ್ರತಾ ತಂತ್ರಜ್ಞಾನವನ್ನು ಆಂತರಿಕವಾಗಿ ಅಭಿವೃದ್ಧಿಪಡಿಸಿದೆ.
ಈಗ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಬೇಕಾಗಿರುವುದರಿಂದ, ಆಧಾರ್ನ ಸುರಕ್ಷತಾ ನ್ಯೂನತೆಗಳು ಸೈಬರ್ ಕ್ರಿಮಿನಲ್ಗಳಿಗೆ ಪ್ಯಾನ್ ಮಾಹಿತಿಯನ್ನೂ ಬಹಿರಂಗಗೊಳಿಸುವ ಅಪಾಯವಿದೆ. ಈ ಸಂದರ್ಭದಲ್ಲಿ ನಿಮಗೆ ಸುಪ್ರೀಂ ಕೋರ್ಟಿನ ಒಂದು ತೀರ್ಪಿನ ಬಗ್ಗೆ ನೆನಪಿಸುತ್ತೇನೆ. ಸುಪ್ರೀಂ ಕೋರ್ಟ್ನ ಪ್ರಕಾರ ಯಾರೂ ಆಧಾರ್ಗೆ ಬೇಡಿಕೆ ಇಡುವಂತಿಲ್ಲ, ಬ್ಯಾಂಕ್ಗಳಿಗೂ ಬೇಡ. ನೀವು ಬೇರೆ ಯಾವುದೇ ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆಗಳನ್ನು ಬಳಸಬಹುದು. DBT (ನೇರ ಲಾಭ ವರ್ಗಾವಣೆ) ಫಲಾನುಭವಿಯ ಹೊರತು ನೀವು ಆಧಾರ್ ಅನ್ನು ಹಂಚಿಕೊಳ್ಳಬೇಕಾಗಿಲ್ಲ ಎಂದು UIDAI ಹೇಳುತ್ತದೆ. ಅಷ್ಟು ಬೇಕಾದರೆ, ನೀವು ನಿಮ್ಮ ಆಧಾರ್ನ ಮಧ್ಯದ ಎಂಟು ಅಂಕೆಗಳನ್ನು ಮಸಕುಗೊಳಿಸಿ ಹಂಚಿಕೊಳ್ಳಬಹುದು. ಯಾರಾದರೂ ಒತ್ತಾಯಿಸಿದರೆ, ಇದರ ಬಗ್ಗೆ UIDAI ಏನು ಹೇಳುತ್ತದೆ (https://uidai.gov.in/kn/) ಎಂಬುದನ್ನು ಅವರಿಗೆ ತಿಳಿಸಿ ಹೇಳಿ.
ಆಧಾರ್ಗೆ ಸಂಬಂಧಿಸಿದ ಗೌಪ್ಯತೆ ಮತ್ತು ಭದ್ರತಾ ಕಾಳಜಿಗಳಿಗೆ ಸಂಭಾವ್ಯ ಪರಿಹಾರವಾಗಿ ಬ್ಲಾಕ್ಚೈನ್ ತಂತ್ರಜ್ಞಾನವನ್ನು ಪ್ರಸ್ತಾಪಿಸಲಾಗಿದೆ. ಈ ಬ್ಲಾಕ್ ಚೈನ್ ತಂತ್ರಜ್ಞಾನ ಎಂದರೇನು?
ಬ್ಲಾಕ್ಚೈನ್ ವಿಕೇಂದ್ರೀಕೃತ ಡಿಜಿಟಲ್ ಲೆಡ್ಜರ್ ಆಗಿದ್ದು ಅದರಲ್ಲಿ ಡೇಟಾವನ್ನು ಸುರಕ್ಷಿತ ಮತ್ತು ಟ್ಯಾಂಪರ್-ಪ್ರೂಫ್ ರೀತಿಯಲ್ಲಿ ಸಂಗ್ರಹಿಸಬಹುದು. ಮುಖ್ಯವಾಗಿ, ಬ್ಲಾಕ್ಚೈನ್ ಬಳಸುವ ಮೂಲಕ, ಆಧಾರ್ನಲ್ಲಿ ಸಂಗ್ರಹವಾಗಿರುವ ಡೇಟಾವನ್ನು ಎನ್ಕ್ರಿಪ್ಟ್ ಮಾಡಬಹುದು ಮತ್ತು ಹ್ಯಾಕಿಂಗ್ ಮತ್ತು ಟ್ಯಾಂಪರಿಂಗ್ಗೆ ನಿರೋಧಕವಾದ ರೀತಿಯಲ್ಲಿ ಸುರಕ್ಷಿತಗೊಳಿಸಬಹುದು.
ಇದನ್ನೂ ಓದಿ: ಹೊಸ ಅಂಕಣ: ಸೈಬರ್ ಸೇಫ್ಟಿ: ಜಾಣರಾಗಿ, ಜಾಗರೂಕರಾಗಿರಿ!
ಒಬ್ಬ ವ್ಯಕ್ತಿಯ ಆಧಾರ್ನಲ್ಲಿ ಅಡಕವಾಗಿರುವ ವೈಯಕ್ತಿಕ ಮಾಹಿತಿ ಬ್ಲಾಕ್ಚೈನಿನಲ್ಲಿದ್ದರೆ ಆ ಸಂಗ್ರಹವನ್ನು ಭೇದಿಸಲು ಮತ್ತು ಬದಲಾಯಿಸಲು ಹ್ಯಾಕರ್ಗಳಿಗೆ ಬಹಳ ಕಷ್ಟವಾಗಿರುತ್ತದೆ. ಮಾಹಿತಿಯ ಸೋರಿಕೆ, ಡೇಟಾ ಉಲ್ಲಂಘನೆ ಮತ್ತು ಗುರುತಿನ ಕಳ್ಳತನದ ಅಪಾಯವನ್ನು ಸಮರ್ಥವಾಗಿ ಕಡಿಮೆ ಮಾಡುತ್ತದೆ. ಆಧಾರ್ನಲ್ಲಿ ಸಂಗ್ರಹವಾಗಿರುವ ಡೇಟಾಗೆ ಮಾಡಿದ ಬದಲಾವಣೆಗಳ ಬಗ್ಗೆ ಬ್ಲಾಕ್ಚೈನ್ ಟ್ಯಾಂಪರ್-ಪ್ರೂಫ್ ದಾಖಲೆಯನ್ನು ರಚಿಸುವ ಮೂಲಕ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ.
ಬ್ಲಾಕ್ಚೈನ್ ತಂತ್ರಜ್ಞಾನ ಹಸ್ತಚಾಲಿತ ಪರಿಶೀಲನೆಯ ಅಗತ್ಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಡೇಟಾದಲ್ಲಿನ ದೋಷಗಳು ಮತ್ತು ಅಸಂಗತತೆಗಳ ಅಪಾಯವನ್ನು ಕಡಿಮೆ ಮಾಡಿ ಆಧಾರ್ನ ದಕ್ಷತೆ, ನಿಖರತೆಯನ್ನು ಹೆಚ್ಚಿಸುತ್ತದೆ.
ಆಧಾರ್ಗೆ ಬ್ಲಾಕ್ಚೈನ್ ತಂತ್ರಜ್ಞಾನದ ಆಧಾರವನ್ನು ಕೊಡಲು ಪರಿಗಣಿಸಬೇಕಾದ ಕೆಲವು ಅಂಶಗಳು:
- ಇದಕ್ಕೆ ಹೊಸ ಪ್ರೋಟೋಕಾಲ್ಗಳು ಮತ್ತು ಬೇಕಾದ ಮೂಲಸೌಕರ್ಯಗಳ ಅಭಿವೃದ್ಧಿಯ ಅವಶ್ಯಕತೆ ಮತ್ತು ಭಾರತ ಸರ್ಕಾರ, ಖಾಸಗಿ ಕಂಪನಿಗಳು ಮತ್ತು ನಾಗರಿಕರ ಸಹಕಾರದ ಅಗತ್ಯವಿರುತ್ತದೆ.
- ಬ್ಲಾಕ್ಚೈನ್ ತಂತ್ರಜ್ಞಾನದ ವಿಸ್ತರತೆ (scalability) ಮತ್ತು ಕಾರ್ಯಕ್ಷಮತೆ, ವಿಶೇಷವಾಗಿ ಆಧಾರ್ನಷ್ಟು ದೊಡ್ಡ ವ್ಯವಸ್ಥೆಯಲ್ಲಿ ಇದುವರೆಗೂ ಯಾರೂ ಪರೀಕ್ಷಿಸಿಲ್ಲ.
- ಆಧಾರ್ಗಾಗಿ ಬ್ಲಾಕ್ಚೈನ್ ಅನ್ನು ಬಳಸಲು ಕಾನೂನು ಮತ್ತು ನಿಯಂತ್ರಕಗಳ ವ್ಯಾಪ್ತಿ ಮತ್ತು ಪರಿಣಾಮಗಳು, ಜೊತೆಗೆ ಮುಖ್ಯವಾಗಿ ಡೇಟಾ ರಕ್ಷಣೆ ಮತ್ತು ಗೌಪ್ಯತೆ ಕಾನೂನುಗಳಿಗೆ ಸಂಬಂಧಿಸಿದಂತೆ ಖಚಿತಪಡಿಸಬೇಕು.
ಇದೆಲ್ಲಾ ಕಾರ್ಯರೂಪಕ್ಕೆ ಬರುವವರೆಗೆ UIDAIಯ mAadhaar ಆಪ್ ಬಳಸಿಕೊಳ್ಳಿ. ಆಂಡ್ರಾಯ್ಡ್ ಮತ್ತು ಐಫೋನುಗಳಿಗೆ ಲಭ್ಯ. ಅನವಶ್ಯಕವಾಗಿ ಎಲ್ಲೆಂದರಲ್ಲಿ ಆಧಾರ್ ಬಳಸಬೇಡಿ. ನಿಮ್ಮ ಜಾಗ್ರತೆಯಲ್ಲಿ ನೀವಿರಿ.
ಇದನ್ನೂ ಓದಿ: ಗ್ಲೋಕಲ್ ಲೋಕ ಅಂಕಣ: ಎಐ ಇದೆ, ಚಾಟ್ ಜಿಪಿಟಿ ಬಂದಿದೆ, ಮುಂದೇನು?
ಅಂಕಣ
ಭಾವಲೋಕದೊಳ್.. : ಈ ಹಾಡೆಂದರೆ, ಬದುಕನು ರಮಿಸೋ ತಾಯಮ್ಮ, ಹೃದಯದ ಮಾತಿನ ಗುಂಗಮ್ಮ!
ಭಾವಲೋಕದೊಳ್: ಈ ಹಾಡುಗಳೆಂದರೆ ಒಂಥರಾ ಮಗು, ಒಂಥರಾ ನಗು, ಇನ್ನೊಂದು ಥರಾ ಹುಚ್ಚುಹಿಡಿಸೋ ಗುಂಗು. ಎದೆಯೊಳಗಿನ ಎಲ್ಲ ಭಾವನೆಗಳನ್ನು ಅರೆದು ಹೊಯ್ದ ಸಾಲು..
ಕೆಲವೊಂದು ಹಾಡುಗಳೆ ಹಾಗೇ ಅಲ್ವಾ? ಗೊತ್ತಿಲ್ಲದೆ ಮನಸ್ಸಿನಾಳಕ್ಕೆ ಇಳಿದುಬಿಡುತ್ತವೆ. ಎಲ್ಲೋ ಒಮ್ಮೆ ಕೇಳಿದ ಸಾಲುಗಳೇ ಎದೆಗವಚಿಕೊಂಡು ಕಾಡಲು ಶುರುವಿಟ್ಟುಬಿಡುತ್ತದೆ. ಹಾಡಿನ ಭಾವ, ಎದೆಯಾಳದ ಸಾಹಿತ್ಯ, ಮನಮಿಡಿಯುವ ಸಂಗೀತ, ಸ್ವರ ಮೀಟುವ ನಾದತಂತಿಗಳು, ಹಾಡುಗನ ಶೃತಿಯ ಲಹರಿಯಲ್ಲೊಂದು ಗಟ್ಟಿ ಸೆಳೆತ, ಕಣ್ಣಿಗೆ ಕಟ್ಟುವ ಕಲ್ಪನೆಗಳು ಕಣ್ಣಲ್ಲಿ ನೀರು ಜಿನುಗಿಸಿ ಎದೆ ಭಾರ ಇಳಿಸಿ ಮನಸ್ಸಿಗೊಂದು ಮುದ ನೀಡುತ್ತದೆ.
ನೋವಿರಲಿ, ನಗುವಿರಲಿ, ಕಷ್ಟದ ದಿನಗಳಿರಲಿ, ಸಂಭ್ರಮದ ಸಡಗರವಿರಲಿ, ವಿಷಾದದ ಆಕ್ರಂದನವಿರಲಿ, ಸೋಲಿನ ಹತಾಶೆಯಿರಲಿ, ಗೆಲುವಿನ ಉನ್ಮಾದವಿರಲಿ ಒಂಟಿತನದ ಬೇಸರವಿರಲಿ, ಪ್ರೀತಿಯ ಅಪ್ಪುಗೆಯಿರಲಿ, ಸ್ನೇಹದ ಒಡನಾಟವಿರಲಿ, ಪ್ರಕೃತಿಯ ನಿರ್ಲಿಪ್ತ ಶಾಂತಿಯಿರಲಿ, ಅದು ಯಾವುದೇ ಭಾವವಿದ್ದರೂ ಮುದ್ದು ಮಗುವಿಗೆ ಅಮ್ಮನ ಮಡಿಲು ಬೇಕೆನಿಸುವಂತೆ ನಮ್ಮಿಷ್ಟದ ಹಾಡೊಂದು ಆಗಾಗ ಭಾವಬದುಕಿಗೆ ಬೇಕೆನಿಸುತ್ತದೆ. ಕಿವಿ ಹಾಡಿನ ಸಾಲುಗಳ ಏರಿಳಿತ ಆಲಿಸುತ್ತಿದ್ದರೆ ಹೃದಯದೊಳಗಿನ ಭಾವ ತರಂಗ ತಲೆಯಾಡಿಸುತ್ತಿರುತ್ತದೆ.
ಕೆಲವೊಂದು ಹಾಡುಗಳಂತೂ ನನಗಾಗೇ ಬರೆದಿರೋದು ಅನಿಸುತ್ತದೆ. ಹಾಡಿನ ಸಾಹಿತ್ಯ ನನ್ನ ಜೀವನದ ಪ್ರತಿಕನ್ನಡಿ ಅನಿಸುತ್ತದೆ. ಹಾಡಿನ ಸಾಹಿತಿ ಕತ್ತಲೆಯ ಮರೆಯಲ್ಲಿ ನನ್ನ ಬದುಕನ್ನೇ ಕದ್ದು ನೋಡಿ ಬಿಳಿ ಹಾಳೆಯ ಮೇಲೆ ಸಾಲುಗಳಾಗಿ ಗೀಚಿ ಹಾಡಾಗಿ ಹೊರತಂದಿರುವನೇನೋ ಅನಿಸುತ್ತದೆ. ಎಲ್ಲೋ ಹುಡುಕುತ್ತಿರುವ ಪ್ರಶ್ನೆಗಳಿಗೆ ಯಾವುದೋ ಸಿನಿಮಾದ ಯಾವುದೋ ಹಾಡು ಉತ್ತರ ನೀಡುತ್ತದೆ. ಸಾವಿರಾರು ಸಿನಿಮಾದ ಲಕ್ಷಾಂತರ ಹಾಡುಗಳ ಕೋಟ್ಯಾಂತರ ಸಾಲುಗಳಿದ್ದರೂ ನಮ್ಮಿಷ್ಟದ ಹಾಡಿನ ಸಾಲು ಮಾತ್ರ ನನ್ನದೇ ಎನಿಸುತ್ತದೆ.
ಒಂದು ಹಾಡಿಗೆ ಅದೆಂಥ ಶಕ್ತಿ ಇದೆ ಗೊತ್ತಾ!? ಒಂದು ಹಾಡು, ಕೈಕಟ್ಟಿ ಕೂತು ಕಣ್ಣಿರಾದಾಗ ಬೆನ್ನು ತಟ್ಟಿ ನಡೆ ಮುಂದೆ ಅಂತ ಮುನ್ನಡೆಸುತ್ತದೆ. ಪ್ರೀತಿಯ ಸೋಲಿಗೆ ಪಕ್ಕದಲ್ಲೆ ಕೂತು ಸಾಂತ್ವನವಾಗುತ್ತದೆ. ಜೋಳಿಗೆ ತುಂಬ ಕಷ್ಟ ತುಂಬಿರುವ ಬದುಕಿಗೆ ಸಾಧನೆಯ ಶಿಖರ ಏರುವ ಧೈರ್ಯ ತುಂಬಿಸುತ್ತದೆ, ಸಿಹಿ ಖುಷಿಯ ಕ್ಷಣಗಳನ್ನು ಸಂತೋಷ ಭರಿತ ಹಾಡೊಂದು ಮತ್ತಷ್ಟು ಹೆಚ್ಚಿಸುತ್ತದೆ, ಪ್ರೀತಿಯಲ್ಲಿ ಮುಳುಗಿದ ಯೌವ್ವನದ ಮನಸ್ಸಿಗೆ ಪ್ರೇಮಗೀತೆಯೊಂದು ಮತ್ತಷ್ಟು ಮುದ ನೀಡುತ್ತದೆ, ಕೋಪದ ಕ್ರೌರ್ಯದಲ್ಲಿ ಹಾಡಿನ ಸಾಲೊಂದು ಜ್ವಾಲಾಮುಖಿ ಏರಿಸುತ್ತದೆ. ಎಂದೋ ನಡೆದ ಘಟನೆಗಳ ನೆನಪುಗಳು ಪರದೆಯ ಮೇಲಿನ ಚಿತ್ರದಂತೆ ಕಣ್ಣ ಮುಂದೆ ಓಡುತ್ತಿರುತ್ತದೆ. ಹೀಗೆ ಪ್ರತಿ ಘಟನೆಗಳು ಮನುಷ್ಯನೊಳಗಿನ ಯಾವುದೋ ಭಾವವನ್ನು ಹಾಡಾಗಿ ಹಾಡಿಸುತ್ತದೆ.
ಸಂಗೀತ ಗೊತ್ತಿಲ್ಲದವನೂ ಕೆಲವು ಹಾಡುಗಳಿಗೆ ತಲೆಯಾಡಿಸುತ್ತಾ ತಲ್ಲೀನನಾಗುತ್ತಾನೆಂದರೆ ಅದು ಹಾಡಿನ ಶಕ್ತಿ, ಸಂಗೀತದ ಮಹಿಮೆ. ಅಂದಿನ ಗ್ರಾಮೋಫೋನ್, ಟೇಪ್ ರೆಕಾರ್ಡರ್ ಕ್ಯಾಸೆಟ್ಸ್ನಿಂದ ಹಿಡಿದು ಇವತ್ತಿನ ಬ್ಲೂಟೂತ್,
ಹೆಡ್ಫೋನ್, ಇಯರ್ಫೋನ್ವರೆಗೂ ಹಾಡುಗಳು ಬದಲಾಗಿವೆ. ಹಾಡುಗಳ ಶೈಲಿಯು ಬದಲಾಗಿದೆ, ಹಾಡು ಕೇಳುವ ಸಾಧನಗಳು ಬದಲಾಗಿದೆ. ಆದರೆ ಹಾಡು ಕೇಳುವುದು ಮಾತ್ರ ಬದಲಾಗಿಲ್ಲ. ಯಾಕೆಂದರೆ ಹಾಡು, ಸಂಗೀತ ಅಂತ್ಯವೇ ಇಲ್ಲದ ನಿರಂತರ!…
ಹಾಡಿಗೆ ಭಾಷೆ ಮುಖ್ಯ ಅಲ್ಲ ಭಾವನೆ ಮುಖ್ಯ, ಎಷ್ಟೋ ಸಲ ಹಾಡಿನ ಸಾಹಿತ್ಯ ಅರ್ಥವಾಗದಿದ್ದರೂ ಅದರ ನಾದಕ್ಕೆ ಮನಸ್ಸು ಸೋತು ಹೋಗಿರುತ್ತದೆ. ವಿಶ್ವದಲ್ಲಿ ಅದೆಷ್ಟೊ ಭಾಷೆಗಳು, ಭಾಷೆಗೆ ತಕ್ಕಂತೆ ಸಂಗೀತ, ಸಂಗೀತಕ್ಕೆ ತಕ್ಕಂತೆ ಸಾಹಿತ್ಯ, ಸಾಹಿತ್ಯಕ್ಕೆ ತಕ್ಕಂತೆ ಹೆಜ್ಜೆಯ ಗೆಜ್ಜೆಗಳಿವೆ. ಹಿಂದೂಸ್ತಾನಿ, ಕರ್ನಾಟಿಕ್ ಶಾಸ್ತ್ರೀಯ ಸಂಗೀತ, ಜಾನಪದ ಸಂಗೀತ, ವೆಸ್ಟರ್ನ್ ಮ್ಯೂಸಿಕ್, ರಾಕ್ ಮ್ಯೂಸಿಕ್, ಪಾಪ್ ಮ್ಯೂಸಿಕ್, ರ್ಯಾಪ್ ಸಾಂಗ್ಸ್, ಭಾವಗೀತೆಗಳು, ಗಝಲ್, ಲಾವಣಿ, ಭಾಂಗ್ರಾ, ಸೂಫಿ, ಡಿಜೆ ಹೀಗೆ ನೂರಾರು ಬಗೆಯ ಶೈಲಿಗಳು ಸಂಗೀತದ ಎಲ್ಲೆಗಳನ್ನು ಮೀರಿ ನಿಂತಿವೆ.
ಪ್ರತಿಸಲ ಕೇವಲ ತನ್ಮಯತೆಗೆ ಅಲ್ಲದೇ ಯಾವುದೋ ಕೆಲಸ ಮಾಡುವಾಗ ಪ್ಲೇ ಆಗುವ ಹಳೇ ಹಾಡುಗಳು, ಕಾರ್ನಲ್ಲಿ ಹೋಗುವಾಗ ಬರುವ ಎಫ್ ಎಂನ ಹಾಡುಗಳು, ರೆಸ್ಟೊರೆಂಟ್ನಲ್ಲಿನ ಸಣ್ಣ ದನಿಯ ಹಾಡುಗಳು, ಹಬ್ಬ, ಜಾತ್ರೆಗಳಲ್ಲಿ ಹಾಕುವ ಜೋರು ದನಿಯ ಹಾಡುಗಳು ಬೋರ್ ಎನಿಸದೆ ಆ ಕ್ಷಣಗಳನ್ನು ಎಂಗೇಜ್ ಮಾಡಿಸುತ್ತದೆ. ಒಂಟಿ ಪಯಣದಲ್ಲೋ, ಮುಸ್ಸಂಜೆಯ ಮಳೆಯಲ್ಲೊ, ಕಡಲ ತೀರದ ಹೆಜ್ಜೆಯಲ್ಲೊ, ಆಗಸದ ಹಾರಾಟದಲ್ಲೊ,
ಒಂದು ಲಾಂಗ್ ಡ್ರೈವ್ನಲ್ಲೊ ಕಿವಿಗೆ ಹಾಡೊಂದು ಬೀಳುತ್ತಿದ್ದರೆ, ಸುತ್ತಲಿನ ಪ್ರಪಂಚವನ್ನೆ ಮರೆತು ನಮ್ಮೊಳಗೆ ಕಳೆದುಹೋಗುತ್ತೇವೆ.
ದೇಹವನ್ನು ಬದುಕಿಸುವುದು ನೀರು, ನಿದ್ರೆ, ಆಹಾರ
ಮನಸ ಬದುಕಿಸುವುದು ಸಂಗೀತ, ಸಾಹಿತ್ಯ, ಸಂಚಾರ….
ಇದನ್ನೂ ಓದಿ : ಭಾವಲೋಕದೊಳ್ ಅಂಕಣ : ನೆನಪು, ಮರೆವುಗಳ ಮಾಯಾಜಾಲ; ಕೆಲವನ್ನು ಮರೆತೆನೆಂದರೂ ಮರೆಯಲಿ ಹೇಗೆ?
ಅಂಕಣ
ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಭಾಗ-7, ನಿಮಗೆ ಸ್ಫೂರ್ತಿ ನೀಡುವ ಮೂರು ಘಟನೆಗಳು!
ರಾಜ ಮಾರ್ಗ ಅಂಕಣ : ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ. ಪರೀಕ್ಷೆಗೆ ತೆರಳುವ ಮುನ್ನ ಪ್ರತಿ ದಿನ ಈ ಮೂವರು ಸಾಧಕರನ್ನು ನೆನಪು ಮಾಡಿಕೊಳ್ಳಿ.. ಅಷ್ಟು ಸಾಕು.
ಪ್ರೀತಿಯ ವಿದ್ಯಾರ್ಥಿಗಳೇ,
ಮೊದಲಾಗಿ ನಿಮಗೆ ಎಸೆಸೆಲ್ಸಿ ಪರೀಕ್ಷೆಗೆ ಆಲ್ ದ ಬೆಸ್ಟ್. ಇಡೀ ವರ್ಷ ಒಂದು ಪರೀಕ್ಷೆಗಾಗಿ ಕಷ್ಟ ಪಟ್ಟು ಓದಿರುವ ನಿಮಗೆ ಅಭಿನಂದನೆಗಳು. ಹಾಗೆಯೇ ನಿಮ್ಮನ್ನು ಪರೀಕ್ಷೆಗಾಗಿ ಪ್ರಿಪೇರ್ ಮಾಡಿದ ನಿಮ್ಮ ಅಧ್ಯಾಪಕರಿಗೂ ಅಭಿನಂದನೆಗಳು. ಇವತ್ತು ನಾನು ನಿಮಗೆ ಪರೀಕ್ಷೆಗಳ ಬಗ್ಗೆ ಏನೂ ಹೇಳುವುದಿಲ್ಲ. ಇಡೀ ವರ್ಷ ನಿಮಗೆ ಅದನ್ನು ಹಲವು ಬಾರಿ ಹೇಳಿ ಆಗಿದೆ. ಇವತ್ತು ನಾನು ನಿಮಗೆ ತುಂಬಾ ಸ್ಫೂರ್ತಿ ತುಂಬುವ ಮೂರು ವ್ಯಕ್ತಿತ್ವಗಳು ಮತ್ತು ಅದಕ್ಕೆ ಪೂರಕವಾದ ಮೂರು ಘಟನೆಗಳನ್ನು ವಿವರಿಸಬೇಕು. ಓದುತ್ತಾ ಹೋಗಿ…..
1. ವಿಶ್ವ ವಿಜಯೀ ಸೋಟೋ ಮೇಯರ್!
ಜಗತ್ತಿನ ಬೆಸ್ಟ್ ಹೈ ಜಂಪರ್ ಯಾರು ಎಂದು ಗೂಗಲ್ ಸರ್ಚ್ ಮಾಡಿದರೆ ಬರುವ ಮೊದಲ ಹೆಸರು ಜೆವಿಯರ್ ಸೋಟೋ ಮೇಯರ್! ಆತನು ಕ್ಯೂಬಾ ದೇಶದ ಮಹೋನ್ನತ ಹೈ ಜಂಪರ್. 1992ರ ಒಲಿಂಪಿಕ್ಸ್ ಕೂಟದಲ್ಲಿ ಆತ 2-45 ಮೀಟರ್ ಎತ್ತರ ಜಿಗಿದು ವಿಶ್ವದಾಖಲೆಯನ್ನು ಮಾಡಿದ್ದನು! ಅಷ್ಟು ಎತ್ತರ ಯಾರಿಗೂ ಹಾರಲು ಸಾಧ್ಯವೇ ಇಲ್ಲ ಎಂದು ಕ್ರೀಡಾ ವಿಮರ್ಶಕರು ಹೇಳಿದ್ದರು. ನಿನಗೆ ಅಷ್ಟು ಎತ್ತರ ಹಾರಲು ಹೇಗೆ ಸಾಧ್ಯ ಆಯಿತು ಎಂದು ಅವನನ್ನು ಪತ್ರಕರ್ತರು ಕೇಳಿದಾಗ ಅವನು ಕೊಟ್ಟ ಉತ್ತರ ಅದ್ಭುತ ಆಗಿತ್ತು..!
My HEART jumps FIRST and then my BODY follows!
ಅಂದರೆ ನಾನು ಹಾರುವಾಗ ನನ್ನ ಹೃದಯವು ಮೊದಲು ಹಾರುತ್ತದೆ, ಮತ್ತು ನನ್ನ ದೇಹವು ಅದನ್ನು ಹಿಂಬಾಲಿಸುತ್ತದೆ!
ಯಾವುದೇ ಕೆಲಸವನ್ನು ಭಾವನೆಗಳನ್ನು ಹಾಕಿ ಮಾಡಿದರೆ ಫಲಿತಾಂಶ ಅದ್ಭುತವಾಗಿ ಇರುತ್ತದೆ ಅನ್ನುವುದಕ್ಕೆ ಸೋಟೋ ಮೇಯರ್ ಸಾಧನೆ ಒಂದು ಅದ್ಭುತ ನಿದರ್ಶನ.
2. ವಿಶ್ವ ವಿಜಯೀ ಈಜು ಪಟು ಮೈಕೆಲ್ ಫೆಲ್ಪ್ಸ್
ಜಗತ್ತಿನ ಬೆಸ್ಟ್ ಸ್ವಿಮ್ಮರ್ ಯಾರು ಎಂಬ ಪ್ರಶ್ನೆಗೆ ಗೂಗಲ್ ಕೊಡುವ ನೇರ ಉತ್ತರ ಅಮೆರಿಕಾದ ಮೈಕೆಲ್ ಪೆಲ್ಪ್ಸ್! ಆತನು ಅಮೆರಿಕದ ಈಜುಪಟು. ಆತನನ್ನು ‘ಬಾಲ್ಟಿಮೋರ್ನ ಬುಲೆಟ್’ ಎಂದೇ ಕರೆಯಲಾಗುತ್ತದೆ. ಆತನು ಎರಡು ಒಲಿಂಪಿಕ್ಸ್ ಕೂಟಗಳಲ್ಲಿ ಗೆದ್ದ ಒಟ್ಟು ಮೆಡಲ್ಗಳ ಸಂಖ್ಯೆಯೇ ಬರೋಬ್ಬರಿ 28! ಅದರಲ್ಲಿ 23 ಚಿನ್ನದ ಪದಕಗಳು, 3 ಬೆಳ್ಳಿಯ ಪದಕಗಳು, 2 ಕಂಚಿನ ಪದಕಗಳು!
ಅಷ್ಟು ಒಲಿಂಪಿಕ್ಸ್ ಪದಕಗಳನ್ನು ಇದುವರೆಗೆ ಯಾರೂ ಗೆಲ್ಲಲು ಸಾಧ್ಯವೇ ಆಗಲಿಲ್ಲ! ಮುಂದೆ ಸಾಧ್ಯವೂ ಇಲ್ಲ! ಭಗವಂತ ಅವನನ್ನು ಈಜುವುದಕ್ಕಾಗಿ ಸೃಷ್ಟಿ ಮಾಡಿರಬೇಕು! ಅದೇ ರೀತಿ ವಿಶ್ವ ಚಾಂಪಿಯನ್ಷಿಪ್ ಕೂಟಗಳಲ್ಲಿ ಆತನದ್ದು ಅದ್ಭುತವಾದ ಸಾಧನೆ. 26 ಚಿನ್ನ, 6 ಬೆಳ್ಳಿ, 1 ಕಂಚು! ಆತನು ತನ್ನ ಜೀವನದ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಸ್ವಿಮ್ಮಿಂಗ್ ಪೂಲ್ಗಳಲ್ಲಿ ಕಳೆದನು ಅಂದರೆ ಅದು ಅದ್ಭುತ! ಒಂದು ದಿನವೂ ಪ್ರಾಕ್ಟೀಸ್ ಮಿಸ್ ಮಾಡದೆ ದಿನಕ್ಕೆ 12 ಘಂಟೆಯ ಕಾಲ ಅವನು ನೀರಿನಲ್ಲಿ ಈಜುತ್ತಾ ಇರುತ್ತಿದ್ದ!
ನಮಗೆಲ್ಲ ತಿಳಿದಿರುವಂತೆ ಸೆಪ್ಟೆಂಬರ್ 11, 2001ರಂದು ಅಮೆರಿಕಾದ ಟ್ವಿನ್ ಟವರ್ ಮೇಲೆ ಭಯೋತ್ಪಾದಕ ದಾಳಿ ನಡೆದು ಇಡೀ ಅಮೆರಿಕ ತಲ್ಲಣಪಟ್ಟ ದಿನ ಕೂಡ ಬೆಳಿಗ್ಗೆ ಮೈಕೆಲ್ ಈಜುಕೊಳದಲ್ಲಿ ಈಜುತ್ತ ತನ್ನ ಕೋಚ್ಗೆ ಕಾಲ್ ಮಾಡಿ – ಸರ್, ಎಲ್ಲಿದ್ದೀರಿ? ನಾನಾಗಲೇ ಪೂಲಲ್ಲಿ ರೆಡಿ ಇದ್ದೇನೆ ಎಂದನಂತೆ!
ಯಾವ ಕ್ಷೇತ್ರದಲ್ಲಾದರೂ ಸಾಧನೆ ಮಾಡಬೇಕು ಎಂಬ ಹಸಿವು ಇದ್ದವರು ಅದನ್ನು ತಪಸ್ಸಿನಂತೆ ಸ್ವೀಕಾರ ಮಾಡಿದರೆ ಮಾತ್ರ ಯಶಸ್ಸು ದೊರೆಯಲು ಸಾಧ್ಯ ಎಂದು ಮೈಕೆಲ್ ಫೆಲ್ಪ್ಸ್ ನಮಗೆ ತೋರಿಸಿಕೊಟ್ಟಿದ್ದಾನೆ.
3. ದಾಖಲೆಗಳ ಮೇಲೆ ದಾಖಲೆ ಬರೆದ ಸರ್ಗೆಯಿ ಬೂಬ್ಕಾ!
ವಿಶ್ವಮಟ್ಟದ ಬೆಸ್ಟ್ ಪೋಲ್ ವಾಲ್ಟರ್ ಯಾರು ಮತ್ತು ಅತೀ ಹೆಚ್ಚು ಕ್ರೀಡೆಯ ವಿಶ್ವದಾಖಲೆ ಹೊಂದಿದವರು ಯಾರು ಈ ಎರಡೂ ಪ್ರಶ್ನೆಗೆ ಗೂಗಲ್ ಥಟ್ಟನೆ ನೀಡುವ ಉತ್ತರ ಯುಕ್ರೇನ್ ದೇಶದ ಸರ್ಗೆಯಿ ಬೂಬ್ಕಾ! ಆತನ ಬದುಕೇ ಒಂದು ಅದ್ಭುತ ಯಶೋಗಾಥೆ! ಪೋಲ್ ವಾಲ್ಟ್ ಎಂಬ ಕ್ಲಿಷ್ಟಕರವಾದ ಸ್ಪರ್ಧೆಯಲ್ಲಿ ಆತನಿಗೆ ದಶಕಗಳ ಕಾಲ ಪ್ರತಿಸ್ಪರ್ಧಿಯೇ ಇರಲಿಲ್ಲ! ಬರೋಬ್ಬರಿ ಮೂವತ್ತೈದು ಬಾರಿ ಆತನು ತನ್ನದೇ ರೆಕಾರ್ಡ್ ಮುರಿಯುತ್ತಾ ಹೋದನು. ತನ್ನ ಸ್ಪರ್ಧಾ ಅವಧಿಯಲ್ಲಿ ಆತನು ಒಮ್ಮೆ ಮಾತ್ರ ತನ್ನ ವಿಶ್ವದಾಖಲೆಯನ್ನು ಕಳೆದುಕೊಂಡಿದ್ದನು!
ಆತನು ನಿವೃತ್ತಿ ಹೊಂದುವಾಗ ಹೇಳಿದ ಮಾತು ನನಗೆ ಭಾರಿ ಪ್ರೇರಣೆ ಕೊಟ್ಟಿದೆ.
‘ನಾನು ನನ್ನ ಇಡೀ ಜೀವನದಲ್ಲಿ ಯಾರ ಜೊತೆಯೂ ಸ್ಪರ್ಧೆ ಮಾಡಲು ಹೋಗಲಿಲ್ಲ. ನನಗೆ ನನ್ನ ಹಿಂದಿನ ಸಾಧನೆಗಳೇ ಬೆಂಚ್ ಮಾರ್ಕ್! ನನ್ನ ನಿಜವಾದ ಸಾಮರ್ಥ್ಯದ ಅಲ್ಟಿಮೇಟ್ ಜಂಪ್ ಇನ್ನೂ ಬಾಕಿ ಇದೆ!’
ಬೂಬ್ಕಾ ಹೇಳಿದ ಮಾತುಗಳನ್ನು ವಿವರಿಸುವ ಅಗತ್ಯ ಇಲ್ಲ ಎಂದು ನನಗೆ ಅನಿಸುತ್ತದೆ. ಈ ಮೂವರು ಶಿಖರ ಸಾಧಕರ ಸಾಧನೆಗಳೇ ಇಂದಿನಿಂದ ನಿಮಗೆ ಸ್ಫೂರ್ತಿಯಾಗಿ ನಿಲ್ಲಲಿ. ನಿಮಗೆ ಶುಭವೇ ಆಗಲಿ.
ಇವುಗಳನ್ನೂ ಓದಿ: ಸರಣಿಯ ಹಿಂದಿನ ಲೇಖನಗಳು
- 1. ರಾಜ ಮಾರ್ಗ: ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
- 2. ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಯಾವ ಪ್ರಶ್ನೆ ಬರ್ತದೆ? ಕೊನೇ ಕ್ಷಣದ ಸಿದ್ಧತೆ ಹೇಗಿರಬೇಕು? ಇಲ್ಲಿವೆ ಪವರ್ಫುಲ್ ಟಿಪ್ಸ್-ಭಾಗ 2
- 3. ರಾಜ ಮಾರ್ಗ : SSLC ಪರೀಕ್ಷೆ ಅಂತಿಮ ತಯಾರಿ ಭಾಗ-3 ; ವಿಜ್ಞಾನದಲ್ಲಿ ಖುಷಿ ಕೊಡುವ ಅಪ್ಲಿಕೇಶನ್ ಪ್ರಶ್ನೆಗಳು
- 4. ರಾಜ ಮಾರ್ಗ : ಎಸ್ಸೆಸ್ಸೆಲ್ಸಿ ಪರೀಕ್ಷೆ ಅಂತಿಮ ತಯಾರಿ ಭಾಗ-4; ಗಣಿತದ ಕುತೂಹಲಕಾರಿ ಅಪ್ಲಿಕೇಶನ್ ಪ್ರಶ್ನೆಗಳು
- 5. ರಾಜ ಮಾರ್ಗ ಅಂಕಣ: ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಭಾಗ-5, ನೀವೂ ಈ ಯಶೋಗಾಥೆಗಳ ಗುಂಪಿಗೆ ಸೇರಬಹುದು!
- 6. ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಭಾಗ-6, ನಿಮ್ಮದೂ ಒಂದು ಯಶೋಗಾಥೆ ಯಾಕಾಗಬಾರದು?
-
ದೇಶ19 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ20 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಗ್ಯಾಜೆಟ್ಸ್9 hours ago
Aadhaar Update: ಆನ್ಲೈನ್ನಲ್ಲಿ ಆಧಾರ್ ಅಪ್ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
-
ಅಂಕಣ20 hours ago
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
-
ಅಂಕಣ21 hours ago
Brand story : ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?
-
ಕರ್ನಾಟಕ11 hours ago
B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ
-
ದೇಶ12 hours ago
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್ಗೆ 25 ಸಾವಿರ ರೂ. ದಂಡ!
-
ಕರ್ನಾಟಕ14 hours ago
SSLC Exam 2023: ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ವಾಟ್ಸಾಪ್ನಲ್ಲಿ ಹರಿದಾಡಿದ ಕನ್ನಡ ಪೇಪರ್