ಅಂಕಣ
ರಾಜ ಮಾರ್ಗ ಅಂಕಣ : ನಾವೂ ನಮ್ಮದೇ ಸ್ಪೆಷಲ್ ಬ್ರಾಂಡ್ ಕ್ರಿಯೇಟ್ ಮಾಡಿಕೊಳ್ಳುವುದು ಹೇಗೆ?
Raja Marga column: ಕೆಲವೊಂದು ಬ್ರಾಂಡ್ಗಳು ಶತಮಾನಗಳ ಆಚೆಗೂ ಜನರ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತಿವೆ. ಇದು ಹೇಗೆ ಸಾಧ್ಯವಾಯಿತು? ಹಾಗಿದ್ದರೆ ನಾವೇ ನಮ್ಮ ಬ್ರಾಂಡ್ ಕ್ರಿಯೇಟ್ ಮಾಡಿಕೊಳ್ಳುವುದು ಹೇಗೆ?
ಜಗತ್ತಿನ ಮೊಟ್ಟ ಮೊದಲ ಮೋಟಾರ್ ಕಾರನ್ನು ಸಂಶೋಧನೆ ಮಾಡಿದವನು ಕಾರ್ಲ್ ಬೆಂಝ್ ಎಂಬ ಜರ್ಮನಿಯ ವ್ಯಾಪಾರಿ (1844-1929). ಅದೇ ಕಾರ್ಲ್ ಬೆಂಝ್ 1886 ಜುಲೈ ತಿಂಗಳ 3ರಂದು ತನ್ನ ಮೊದಲ ಕಾರನ್ನು ಜರ್ಮನಿಯ ರಸ್ತೆಯಲ್ಲಿ ಓಡಿಸುತ್ತಾ ಹೇಳಿದ ಮಾತು ತುಂಬಾನೇ ಪ್ರಾಮುಖ್ಯ ಆದದ್ದು. “ಮುಂದೆ ಜನರು ನನ್ನನ್ನು ನೆನಪು ಇಟ್ಟುಕೊಳ್ಳುವರೋ ಇಲ್ಲವೋ ನನಗೆ ಗೊತ್ತಿಲ್ಲ. ಆದ್ರೆ ನಾನು ಕಂಡು ಹಿಡಿದ ಈ ಕಾರು ಶತಮಾನಗಳ ನಂತರವೂ ಜಗತ್ತಿನಾದ್ಯಂತ ಓಡ್ತಾ ಇರುತ್ತದೆ!” ಆತನ ಆತ್ಮವಿಶ್ವಾಸವು ಆಗಿನ ಕಾಲಕ್ಕೆ ನಗೆಪಾಟಲಿಗೆ ತುತ್ತಾಗಿತ್ತು. ಜನರು ಅದನ್ನು ಭಂಡ ಧೈರ್ಯ ಎಂದು ಕರೆದರು. ಆದರೆ ಅವನ ಕಾರುಗಳು ಅವನು ಹೇಳಿದ ಹಾಗೆ ಶತಮಾನಗಳ ಆಚೆಗೂ ಓಡಿದವು. ಈಗಲೂ ಅವನ ಕಾರಿನ ಅಪ್ಡೇಟೆಡ್ ವರ್ಷನ್ (ರಾಜ ಮಾರ್ಗ ಅಂಕಣ) ಆಗಿರುವ ಮರ್ಸಿಡಿಸ್ ಬೆಂಝ್ ಜಗತ್ತಿನ ಮಾರುಕಟ್ಟೆಯನ್ನು ಆಳುತ್ತಿದೆ! ಆತನ ಆತ್ಮವಿಶ್ವಾಸ ಮತ್ತು ತನ್ನ ಬ್ರಾಂಡ್ ಮೇಲಿನ ನಂಬಿಕೆ ನನಗೆ ವಿಸ್ಮಯ ಅಂತ ಅನ್ನಿಸುತ್ತಿದೆ.
ತನ್ನ ಬ್ರಾಂಡ್ ಕಾರ್ ಬಗ್ಗೆ ಹೆನ್ರಿ ಫೋರ್ಡ್ ಹೇಳಿದ್ದೇನು?
ಆಧುನಿಕ ಮೋಟಾರ್ ವಾಹನಗಳ ಮೂಲಕ ಜಗತ್ತಿನ ದೃಷ್ಟಿಕೋನವನ್ನು ಬದಲಾಯಿಸಿದ ಹೆನ್ರಿ ಫೋರ್ಡ್ ಮುಂದೆ ಇದನ್ನೇ ಮುಂದುವರಿಸಿದರು.1903ರ ಜುಲೈ 15ರಂದು ತನ್ನ ವೈಭವದ ಕಾರಲ್ಲಿ ಕುಳಿತು ಅಮೆರಿಕದ ಮಿಚಿಗನ್ ನಗರದ ಬೀದಿಗಳಲ್ಲಿ ತನ್ನ ಕಂಪೆನಿ ಕಾರನ್ನು ಓಡಿಸುತ್ತಾರೆ. ಆ ದಿನ ಅವರು ಹೇಳಿದ ಮಾತು ಕೇಳಿ. “ನನ್ನ ಕಾರುಗಳು ಪ್ರತೀ ಲೀಟರ್ ಪೆಟ್ರೋಲ್ ಕುಡಿದು 30 ಕಿಲೋಮೀಟರ್ ಓಡುತ್ತವೆ. ಅದರಲ್ಲಿ ಇಂಧನದ ಮೂಲಕ ಓಡುವುದು 20 ಕಿಲೋಮೀಟರ್. ಉಳಿದ 10 ಕಿಲೋಮೀಟರ್ ಓಡುವುದು ನನ್ನ ಹೆಸರಿನ ಮೇಲೆ!” ಇದನ್ನು ಕಾರ್ಪೊರೇಟ್ ಜಗತ್ತು ಇಂದು ವಿಶ್ವಾಸಾರ್ಹತೆ (ಕ್ರೆಡಿಬಿಲಿಟಿ) ಎಂದು ಕರೆಯುತ್ತದೆ.
ಇವೆರಡೂ ಘಟನೆಗಳು ನಮಗೆ ಬ್ರಾಂಡ್ ಕಂಪೆನಿಗಳ ಸಕ್ಸೆಸ್ ರಹಸ್ಯವನ್ನು ತೆರೆದಿಡುತ್ತವೆ. ಅದುವೇ ಕ್ವಾಲಿಟಿ ಚೆಕ್ ಮತ್ತು ಕ್ರೆಡಿಬಿಲಿಟಿ. ಪ್ರತೀ ಒಂದು ಬ್ರಾಂಡೆಡ್ ಕಂಪೆನಿಯು ಕೂಡ ಇಂದು ಇವೆರಡು ಅಂಶಗಳಿಗೆ ತುಂಬಾ ಪ್ರಾಮುಖ್ಯತೆ ಕೊಡುತ್ತದೆ.
ನೋಕಿಯಾ ಮೊಬೈಲ್ ಕಂಪನಿ ಮಾಡಿದ ನಿರ್ಧಾರ ಅದು ಅದ್ಭುತ!
ದಶಕಗಳ ಹಿಂದೆ ನೋಕಿಯಾ ಮೊಬೈಲ್ ಕಂಪೆನಿಯ ಯಾವುದೋ ಒಂದು ಬ್ರಾಂಡ್ ಹ್ಯಾಂಡ್ ಸೆಟ್ ಅಸ್ಸಾಂ ರಾಜ್ಯದ ಯಾವುದೋ ಒಂದು ಸಣ್ಣ ಹಳ್ಳಿಯಲ್ಲಿ ಬ್ಲಾಸ್ಟ್ ಆಯ್ತು. ಆ ಸುದ್ದಿಯು ಪತ್ರಿಕೆಗಳ ಒಂದು ಮೂಲೆಯಲ್ಲಿ ಪ್ರಕಟ ಆಗಿತ್ತು. ಆದರೆ ತಕ್ಷಣ ನೋಕಿಯಾ ಕಂಪೆನಿ ಏನು ಮಾಡಿತು ಎಂದರೆ ನಿಮಗೆ ಆಶ್ಚರ್ಯ ಆಗಬಹುದು. ಕಂಪೆನಿಯು ಕೋಟಿ ಕೋಟಿ ರೂ. ಬಂಡವಾಳ ಹೂಡಿದ್ದ ಆ ಬ್ರಾಂಡನ್ನು ಹಿಂದೆ ಮುಂದೆ ನೋಡದೆ ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯಿತು! ಮಾತ್ರವಲ್ಲ ಆ ಬ್ರಾಂಡಿನ ಎಲ್ಲಾ ಹ್ಯಾಂಡ್ ಸೆಟ್ಗಳನ್ನು ಗ್ರಾಹಕರಿಂದ ಮರು ಖರೀದಿ ಮಾಡಿತು!
ಒಂದು ಬ್ರಾಂಡೆಡ್ ಕಂಪೆನಿಯು ತನ್ನ ಗ್ರಾಹಕರ ಕ್ರೆಡಿಬಿಲಿಟಿಯನ್ನು ಉಳಿಸಿಕೊಳ್ಳುವ ಜಾಣ್ಮೆ ಇದು!
ಒಂದು ಕಾಲದಲ್ಲಿ ಭಾರತದಲ್ಲಿ ವಾಚ್ ಅಂದ್ರೆ HMT ಮತ್ತು HMT ಮಾತ್ರ ಆಗಿತ್ತು! ಪ್ರತೀ ಒಬ್ಬ ಯುವಕನು ತನ್ನ ಪ್ರಿಯತಮೆಗೆ HMT ವಾಚ್ ಗಿಫ್ಟ್ ಕೊಡಬೇಕು ಎಂದು ಹಂಬಲಿಸುವ ದಿನಗಳು. ಆದರೆ ಆ ಕಂಪನಿಯು ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಅಪ್ಡೇಟ್ ಆಗಲೇ ಇಲ್ಲ. ಗ್ರಾಹಕರ ನಾಡಿಮಿಡಿತದ ಅಧ್ಯಯನವನ್ನು ಮಾಡಲೇ ಇಲ್ಲ. ಕಸ್ಟಮರ್ ಕೇರ್ ಸೆಂಟರ್ ನೇಮಕ ಮಾಡಲೇ ಇಲ್ಲ. ಪರಿಣಾಮವಾಗಿ 2016ರಲ್ಲಿ HMT ವಾಚ್ ಕಂಪನಿ ಬಾಗಿಲು ಮುಚ್ಚಿತ್ತು! ಅದೇ ಹೊತ್ತಿಗೆ ಬಹಳ ಸ್ಟ್ರಾಂಗ್ ಅದ ಕಸ್ಟಮರ್ ಕೇರ್ ಸೆಂಟರನ್ನು ಹೊಂದಿರುವ ಮತ್ತು ಕಸ್ಟಮರ್ ಡಿಲೈಟ್ ಆಶಯವನ್ನು ಹೊಂದಿರುವ ಟೈಟಾನ್ ವಾಚ್ ಇಂದು ದೇಶದ ಮಾರುಕಟ್ಟೆಯನ್ನು ಆಳುತ್ತಾ ಇದೆ! ಟೈಟಾನ್ ವಾಚ್ ಹಿಂದೆ ಟಾಟಾ ಕಂಪೆನಿಯ ಗುಡ್ ವಿಲ್ ಇತ್ತು ಅಂದರೆ ನಾವು ನಂಬಲೇ ಬೇಕು!
ಎಲ್ಲರೂ ಓಡುವುದು ಬ್ರಾಂಡ್ಗಳ ಹಿಂದೆ!
ಭಾರತದಲ್ಲಿ ದಶಕಗಳ ಹಿಂದೆ ಬೆಸ್ಟ್ ಬೈಕ್ ಯಾವುದು ಎಂದು ಕೇಳಿದರೆ ಎಲ್ಲರ ಉತ್ತರ ಒಂದೇ ಆಗಿತ್ತು. ಅದು ಯಮಾಹಾ. ಈಗಲೂ ಅದೇ ಉತ್ತರ ಬರುತ್ತದೆ! ಮುಂದೆ ಹಲವು ದಶಕಗಳು ಕಳೆದರೂ ಅದೇ ಉತ್ತರ ಬರುವ ಸಾಧ್ಯತೆ ಇದೆ. ಅದು ಯಮಾಹಾ ಬೈಕ್ ಹುಟ್ಟು ಹಾಕಿರುವ ಬ್ರಾಂಡ್ ನೇಮ್ ಮತ್ತು ಕ್ರೆಡಿಬಿಲಿಟಿ! ನಮ್ಮ ಬೈಕ್ ಎಂದಿಗೂ ರಸ್ತೆಯಲ್ಲಿ ಕೈ ಕೊಡುವುದಿಲ್ಲ ಎಂಬ ಕಂಪೆನಿಯ ಬದ್ಧತೆಯು ಗ್ರಾಹಕರಿಗೆ ಟಚ್ ಆಗಿದೆ.
ಹಿಂದೆ – ಇಂದು – ಮುಂದೆ ಹೀಗೆ ಭಾರತದ ಸಾರಿಗೆಯ ಪ್ರಪಂಚವನ್ನು ಆಳ್ವಿಕೆ ಮಾಡಿದ್ದು ಒಂದೇ ಬ್ರಾಂಡ್ – TATA, TATA ಮತ್ತು TATA! ಅದು ಹೇಗೆ?
ಇವತ್ತಿಗೂ ಎಲೆಕ್ಟ್ರಾನಿಕ್ ವಸ್ತುಗಳು ಅಂದಾಗ ಫಿಲಿಪ್ಸ್, ಡ್ರೆಸ್ ಮೆಟೀರಿಯಲ್ ಅಂದಾಗ ರೇಮಂಡ್, ಗೋಡೆ ಗಡಿಯಾರ ಅಂದಾಗ ಅಜಂತಾ, ಬಾಲ್ ಪೆನ್ನು ಅಂದಾಗ ರೆನಾಲ್ಡ್, ಶೂಸ್ ಅಂದಾಗ ಬಾಟಾ, ಮಿಲ್ಕ್ ಚಾಕೊಲೇಟ್ ಅಂದಾಗ ಅಮುಲ್, ಸೀರೆ ಅಂದಾಗ ಕಾಂಜೀವರಂ, ಮನರಂಜನೆ ಅಂದಾಗ ಡಿಸ್ನಿ, ನಗೆ ಅಂದಾಗ ಚಾಪ್ಲಿನ್, ಟ್ರಕ್ ಅಂದರೆ ಮಹೀಂದ್ರ………. ತಮ್ಮ ಬ್ರಾಂಡ್ ನಂಬಿಕೆಯನ್ನು ಉಳಿಸಿಕೊಳ್ಳಲು ಸಾಧ್ಯ ಅದದ್ದು ಹೇಗೆ? ಯೋಚನೆ ಮಾಡಿ.
ಬ್ರಾಂಡ್ ಕಂಪನಿಗಳು ಹೇಗೆ ಯೋಚನೆ ಮಾಡುತ್ತವೆ?
ಭಾರತ ಸರಕಾರವು ಜನಸಂಖ್ಯೆಯ ನಿಯಂತ್ರಣಕ್ಕೆ ಅನುಗುಣವಾಗಿ ಸಣ್ಣ ಸಣ್ಣ ಕುಟುಂಬದ ಪ್ರಚಾರಕ್ಕೆ ಇಳಿದಾಗ TATA ಕಂಪೆನಿ ನ್ಯಾನೋ ಕಾರುಗಳನ್ನು ಮಾರುಕಟ್ಟೆಗೆ ತಂದಿತು. ಸಣ್ಣ ಕುಟುಂಬಗಳ ಕನಸಿನ ಕಾರು ಅದು. ಬಹುರಾಷ್ಟ್ರೀಯ ಕಂಪೆನಿಗಳ ವಿರುದ್ಧ ದೇಶದಲ್ಲಿ ಒಂದು ಸಂಚಲನ ಉಂಟಾದಾಗ ಬಾಬಾ ರಾಮದೇವ್ ಅದನ್ನು ಗಮನಿಸಿ ಸ್ವದೇಶೀ ಬ್ರಾಂಡ್ ಅದ ಪತಂಜಲಿಯನ್ನು ಚಂದವಾಗಿ ಮಾರ್ಕೆಟ್ ಮಾಡಿದರು! ಪತಂಜಲಿ ಆಟಾ, ಪತಂಜಲಿ ಘೀ, ಪತಂಜಲಿ ಉಪ್ಪಿನಕಾಯಿ….. ಹೀಗೆ ನೂರಾರು ಪತಂಜಲಿಯ ಉತ್ಪನ್ನಗಳು ವರ್ತಮಾನ ಕಾಲದ ಆವಶ್ಯಕತೆ ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ಟ್ರೆಂಡ್ ಸೆಟ್ಟರ್ ಆಗಿರುವುದೇ ಬ್ರಾಂಡ್ ಕಂಪೆನಿಗಳ ಆದ್ಯತೆ ಆಗಿದೆ ಎಂಬುದನ್ನು ಪ್ರೂವ್ ಮಾಡಿತು.
ನಾವು ನಮ್ಮ ಕ್ಷೇತ್ರದ ಬ್ರಾಂಡ್ ಆಗುವುದು ಯಾವಾಗ?
ಅದೇ ರೀತಿಯಾಗಿ ನಟನೆ ಅಂದಾಗ ಅಮಿತಾಬ್, ಚಿತ್ರ ನಿರ್ಮಾಣ ಅಂದಾಗ ಆಮಿರ್ ಖಾನ್, ಮ್ಯೂಸಿಕ್ ಅಂದಾಗ ರೆಹಮಾನ್, ಫ್ಯೂಷನ್ ಮ್ಯೂಸಿಕ್ ಅಂದಾಗ ಹರಿಹರನ್, ಕ್ರಿಕೆಟ್ ಅಂದಾಗ ಸಚಿನ್, ಫುಟ್ಬಾಲ್ ಅಂದಾಗ ರೆನಾಲ್ದೋ, ಬರವಣಿಗೆ ಅಂದಾಗ ಚೇತನ್ ಭಗತ್, ಕರ್ನಾಟಕ ಸಂಗೀತ ಅಂದಾಗ ಸುಬ್ಬುಲಕ್ಷ್ಮಿ, ಭಜನ್ ಅಂದಾಗ ಭೀಮಸೇನ್ ಜೋಶಿ, ತಬಲಾ ಅಂದಾಗ ಝಾಕೀರ್ ಹುಸೇನ್, ಚಾರಿಟಿ ಅಂದಾಗ ಅಜೀಂ ಪ್ರೇಂಜಿ, ಫ್ಲೂಟ್ ಅಂದಾಗ ಚೌರಾಸಿಯಾ, ಹೊಟೇಲು ಉದ್ಯಮ ಅಂದಾಗ ತಾಜ್, ಉಪ್ಪಿನಕಾಯಿ ಅಂದಾಗ ಬೆಡೇಕರ್, ಸಣ್ಣ ಕತೆಗಳು ಅಂದಾಗ ಆರ್. ಕೆ.ನಾರಾಯಣನ್, ಸಿನಿಮಾ ಸ್ಟುಡಿಯೋ ಅಂದಾಗ ರಾಮೋಜಿ ರಾವ್, ಐಟಿ ಕ್ಷೇತ್ರ ಅಂದಾಗ ಇನ್ಫೋಸಿಸ್ ಯಾಕೆ ತಟ್ಟನೇ ನೆನಪಿಗೆ ಬರುತ್ತಾರೆ? ಅವರೆಲ್ಲರೂ ಕ್ರಿಯೇಟ್ ಮಾಡಿದ ಬ್ರಾಂಡ್ ವ್ಯಾಲ್ಯೂ ಯಾವುದು? ಯೋಚನೆ ಮಾಡಿ.
ನಾವೂ ನಮ್ಮ ಕ್ಷೇತ್ರದ ಒಂದು ಬ್ರಾಂಡ್ ಆಗುವುದು ಯಾವಾಗ?
ಇದನ್ನೂ ಓದಿ: ರಾಜ ಮಾರ್ಗ ಅಂಕಣ : 81ರ ವಯಸ್ಸಿನಲ್ಲಿಯೂ ಕಲರಿ ಪಾಠ ಮಾಡುತ್ತಿದ್ದಾರೆ ಮೀನಾಕ್ಷಿ ಅಮ್ಮ!
ಅಂಕಣ
ರಾಜಮಾರ್ಗ ಅಂಕಣ: ತೋಚಿದ್ದನ್ನು ಗೀಚಿ ಮಹಾನ್ ಸಾಹಿತಿ ಆದ ಬೀಚಿ
ನನ್ನ ಬಾಲ್ಯದಲ್ಲಿ ಕಾರ್ಕಳದ ಕೇಂದ್ರ ಗ್ರಂಥಾಲಯದಲ್ಲಿ ವಾರಗಳ ಕಾಲ ಕುಳಿತು ಓದಿದ ಅತೀ ಹೆಚ್ಚು ಪುಸ್ತಕ, ಅದು ಖಂಡಿತವಾಗಿಯೂ ಬೀಚಿ ಅವರದ್ದು! ಅವರ ಪ್ರಭಾವವೇ ಅದ್ಭುತ!
ಬೀಚಿಯವರ ಸಂಪೂರ್ಣ ಹೆಸರು ರಾಯಸಂ ಭೀಮಸೇನ ರಾವ್. ಹುಟ್ಟಿದ್ದು ಅಂದಿನ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಸಂಪ್ರದಾಯಸ್ಥರ ಕುಟುಂಬದಲ್ಲಿ. ಹುಟ್ಟಿದ ಕೆಲವೇ ದಿನಗಳಲ್ಲಿ ಅಪ್ಪ ತೀರಿದರು. ಆಗ ಹಿರಿಯರು ‘ಅಪಶಕುನದ ಮಗು’ ಎಂದು ಭಾವಿಸಿ ಸತ್ತರೆ ಸಾಯಲಿ ಎಂದು ಭಾವಿಸಿ ಮೂರು ದಿನ ಹೊರಗೆ ಬಿಸಿಲಲ್ಲಿ ಮಲಗಿಸಿದರಂತೆ. ನಾನು ‘ಗಟ್ಟಿ ಪಿಂಡ’ ಆದ್ದರಿಂದ ಬದುಕಿದೆ ಎಂದವರು ಹೇಳುತ್ತಾರೆ! ಎಂಟನೇ ವಯಸ್ಸಿಗೆ ಅಮ್ಮ ಕೂಡ ತೀರಿ ಹೋದರು. ಆಗ ಸೋದರತ್ತೆ ಅವರನ್ನು ಕಷ್ಟಪಟ್ಟು ಸಾಕಿದ್ದನ್ನು ಅವರು ಕೊನೆಯವರೆಗೆ ಮರೆಯಲಿಲ್ಲ. SSLC ವರೆಗೆ ಮಾತ್ರ ಓದಿದ ಬೀಚಿ ಒಬ್ಬ ಜವಾನನಾಗಿ ಸರಕಾರಿ ನೌಕರರಿಗೆ ಸೇರುತ್ತಾರೆ. ಮುಂದೆ ಪೋಲಿಸ್ ಇಲಾಖೆಗೆ ಕಾನ್ಸಟೆಬಲ್ ಆಗಿ ಆಯ್ಕೆ ಆಗುತ್ತಾರೆ. ತನ್ನನ್ನು “ಕನಿಷ್ಟ ಬಿಲ್ಲೆ” ಎಂದು ತಮಾಶೆಗೆ ಕರೆದುಕೊಳ್ಳುತ್ತಾರೆ. ಅವರ ಜೀವನದ ಟರ್ನಿಂಗ್ ಪಾಯಿಂಟ್ ಬಗ್ಗೆ ನಾನು ಹೇಳಲೇಬೇಕು.
ಕನ್ನಡದ ದ್ವೇಷವು ಪ್ರೀತಿಯಾಗಿ ಬದಲಾಯಿತು.
ಬಳ್ಳಾರಿ ಜಿಲ್ಲೆಯು ಆಗ ಪೂರ್ತಿ ತೆಲುಗಿನ ಪ್ರಭಾವದಲ್ಲಿತ್ತು. ಬೀಚಿಗೂ ಕನ್ನಡದ ಬಗ್ಗೆ ತಾತ್ಸಾರದ ಭಾವನೆ ಇತ್ತು. ಏನಿದೆ ಅಂತಹದ್ದು ಕನ್ನಡದಲ್ಲಿ? ಅಂತ ಯಾವಾಗಲೂ ಹೇಳುತ್ತಿದ್ದರು. ಒಮ್ಮೆ ರೈಲಿನಲ್ಲಿ ಹೆಂಡತಿಯ ಜೊತೆಗೆ ದೂರ ಪ್ರಯಾಣ ಹೋಗುತ್ತಿದ್ದಾಗ “ಟೈಮ್ ಪಾಸ್ ಮಾಡಲು ಒಂದು ಪುಸ್ತಕ ತೆಗೆದುಕೊಂಡು ಬನ್ನಿ” ಅಂತ ಹೆಂಡತಿ ಹೇಳಿದಾಗ ರೈಲ್ವೆ ಪ್ಲಾಟ್ ಫಾರ್ಮನ ಪುಸ್ತಕದ ಅಂಗಡಿಗೆ ಹೋಗಿ ಯಾವುದಾದರೂ ಒಂದು ಕೊಡ್ರಿ ಅಂದಾಗ ಆ ಅಂಗಡಿಯವನು ಖ್ಯಾತ ಕಾದಂಬರಿಕಾರ ಅ.ನ.ಕೃ. ಅವರ ಎಪಿಕ್ ಕೃತಿ ‘ಸಂಧ್ಯಾ ರಾಗ’ ಕಾದಂಬರಿಯನ್ನು ಕೊಟ್ಟನು. ಅದನ್ನು ಓದುವುದು ಅಪಮಾನ ಎಂದು ಭಾವಿಸಿದರು ಬೀಚಿ. ಹೆಂಡತಿಯ ಕಣ್ಣಿಗೆ ಮಣ್ಣು ಹಾಕಲು ಇಂಗ್ಲಿಷ್ ಪತ್ರಿಕೆಯ ನಡುವೆ ಆ ಪುಸ್ತಕವನ್ನಿಟ್ಟು ಓದಲು ಆರಂಭಿಸಿದ್ದರು. ಆ ಪುಸ್ತಕ ಎಷ್ಟು ಪ್ರಭಾವ ಬೀರಿತು ಅಂದರೆ ಓದಿ ಮುಗಿಸಿದಾಗ ನನ್ನ ಕಣ್ಣಲ್ಲಿ ನೀರು ಬಂದಿತ್ತು ಎಂದು ಬೀಚಿ ಹೇಳುತ್ತಾರೆ! ಮುಂದೆ ಅವರು ಕನ್ನಡದಲ್ಲೇ ಬರೆಯಲು ನಿರ್ಧಾರ ಮಾಡಿಯಾಗಿತ್ತು!
ಬೀಚಿ ಬರೆದದ್ದು ಎಲ್ಲವೂ ಹುಲುಸು ಬೆಳೆ
ಒಂದಕ್ಕಿಂತ ಒಂದು ಶ್ರೇಷ್ಠವಾದ 65 ಕನ್ನಡದ ಹಾಸ್ಯ ಕೃತಿಗಳನ್ನು ಬರೆದು ಬೀಚಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತವಾಗಿ ಮಾಡಿದರು. ಅದರಲ್ಲಿ ಹೆಚ್ಚಿನವುಗಳು ಕಾದಂಬರಿಗಳು, ನಾಟಕಗಳು, ಲೇಖನಮಾಲೆಗಳು ಮತ್ತು ಅಂಕಣ ಬರಹಗಳು. ಕೇವಲ ಹಾಸ್ಯಕ್ಕಾಗಿ ಬರೆಯದೆ ವಿಡಂಬನೆ, ವ್ಯಂಗ್ಯ, ಮೊನಚು, ಸಮಾಜವನ್ನು ತಿದ್ದುವ ದೃಷ್ಟಿಕೋನ, ಮೌಢ್ಯದ ವಿರುದ್ಧ ಸಾತ್ವಿಕ ಸಿಟ್ಟು ಹೀಗೆ ಎಲ್ಲವನ್ನೂ ಹದವಾಗಿ ಬೆರೆಸಿ ಸಾಹಿತ್ಯದ ಸೃಷ್ಠಿ ಮಾಡುತ್ತ ಹೋದರು. ಅವರ ಮೊದಲ ಕಾದಂಬರಿ ‘ದಾಸ ಕೂಟ’. ಅದು ಕನ್ನಡದ ಮೊದಲ ಪೂರ್ಣ ಹಾಸ್ಯದ ಕಾದಂಬರಿ ಎಂದು ಕೀರ್ತಿ ಪಡೆಯಿತು.
ಎಲ್ಲಿರುವೆ ತಂದೆ ಬಾರೋ, ಆರಿದ ಚಹಾ, ಆಗಿಷ್ಟು ಈಗಿಷ್ಟು ಅವರ ಶ್ರೇಷ್ಟವಾದ ಮತ್ತು ಜನಪ್ರಿಯ ಕಾದಂಬರಿಗಳು.
‘ನನ್ನ ಭಯಾಗ್ರಾಫಿ’ ಅವರ ಆತ್ಮಚರಿತ್ರೆಯ ಪುಸ್ತಕ. ಅದು ಕನ್ನಡದ ಅತ್ಯುತ್ತಮ ಪುಸ್ತಕಗಳಲ್ಲಿ ಒಂದು ಎಂದು ಮನ್ನಣೆ ಪಡೆದಿದೆ. ಬೀಚಿ ಸೃಷ್ಟಿಸಿದ ಒಂದು ಅದ್ಭುತ ಪಾತ್ರ ಅಂದ್ರೆ ಅದು ತಿಂಮ! ಅವನು ಜನಸಾಮಾನ್ಯರ ಪ್ರತಿನಿಧಿ ಎಂದು ಬೀಚಿಯವರು ಹೇಳುತ್ತಾರೆ. ಅವರ ಎಲ್ಲ ಕೃತಿಗಳಲ್ಲೂ ಆತ ಒಂದು ಪಾತ್ರವಾಗಿ ಇಣುಕಿ ನೋಡುತ್ತಾನೆ. ಕಚಗುಳಿ ಇಡುತ್ತಾನೆ.
‘ ಉತ್ತರ ಭೂಪ’ ಭಾರೀ ಫೇಮಸ್!
ಬೀಚಿ ಹತ್ತಾರು ವರ್ಷಗಳ ಕಾಲ ಸುಧಾ ವಾರಪತ್ರಿಕೆಯಲ್ಲಿ ಓದುಗರ ಪ್ರಶ್ನೆಗಳಿಗೆ ‘ಉತ್ತರ ಭೂಪ’ ಎಂಬ ಹೆಸರಿನಲ್ಲಿ ಉತ್ತರ ಕೊಡುತ್ತಿದ್ದರು. ಅದರಲ್ಲಿ ಆಯ್ದ ಪ್ರಶ್ನೋತ್ತರಗಳು ‘ ‘ಉತ್ತರ ಭೂಪ’ ಎಂಬ ಪುಸ್ತಕದಲ್ಲಿ ಉಲ್ಲೇಖಿತವಾಗಿವೆ. ಅದು ಕೂಡ ಅತೀ ಶ್ರೇಷ್ಟ ಪುಸ್ತಕ. ಅವರು ಎಂಟು ನಾಟಕಗಳನ್ನು ಕೂಡ ಬರೆದರು.ಅದರಲ್ಲಿ ರೇಡಿಯೋ ನಾಟಕಗಳು ಮತ್ತು ದೇವರ ಆತ್ಮಹತ್ಯೆ ತುಂಬಾ ಜನಪ್ರಿಯವಾದ ನಾಟಕಗಳು. ದೇವರ ಆತ್ಮಹತ್ಯೆ ನಾಟಕದಲ್ಲಿ ದೇವರ ಪಾತ್ರವನ್ನು ಬೀಚಿ ಅವರೇ ಮಾಡುತ್ತಿದ್ದರು. ಆ ಕಾಲಕ್ಕೆ ತುಂಬಾ ವಿವಾದಗಳನ್ನು ಸೃಷ್ಟಿಸಿದ್ದ ನಾಟಕ ಅದು. ಬೀಚಿ ಅದಕ್ಕಾಗಿ ಕೋರ್ಟ್ ವಿಚಾರಣೆ ಎದುರಿಸಬೇಕಾಯಿತು!
ಮೌಢ್ಯದ ವಿರುದ್ಧ ಬೀಚಿ
ಬೀಚಿ ಕೊನೆಯವರೆಗೂ ಮೌಢ್ಯವನ್ನು ಸಹಿಸಲೆ ಇಲ್ಲ. ಅವರ ದೊಡ್ಡ ಮಗನಿಗೆ ವಿವಾಹ ನಿಶ್ಚಯ ಆಗಿತ್ತು. ಅತೀ ಸಣ್ಣ ಪ್ರಾಯದಲ್ಲೇ ಅವನು ತೀರಿ ಹೋದಾಗ ಆ ಹುಡುಗಿಯ ಕಾಲ್ಗುಣ ಸರಿಯಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಬೀಚಿ ಅದನ್ನು ಲೆಕ್ಕಿಸದೆ ತನ್ನ ಎರಡನೇ ಮಗನಿಗೆ ಅದೇ ಹುಡುಗಿಯನ್ನು ಕೊಟ್ಟು ಮನೆ ತುಂಬಿಸಿದರು!
ಬೀಚಿ ಅವರ ಅದ್ಭುತವಾದ ಕೊಟೆಶನ್ಗಳು
ಬೀಚಿಯವರ ಸೂಕ್ತಿಗಳು (Quotations) ಬಹಳ ಅದ್ಭುತ ಪಂಚ್ ಲೈನಗಳು. ಅಂತಹ ಸಾವಿರಾರು ಸೂಕ್ತಿಗಳು ಬಹು ಜನಪ್ರಿಯವಾಗಿವೆ. ಅವುಗಳಲ್ಲಿ ಕೆಲವನ್ನು ಮಾತ್ರ ಆಯ್ದು ಇಲ್ಲಿ ದಾಖಲು ಮಾಡಿದ್ದೇನೆ.
1) ಮತಗಳನ್ನು ಮತ್ತು ಮಗಳನ್ನು ಅಯೋಗ್ಯರಿಗೆ ಕೊಡಬಾರದು.
2) ಸಾರಾಯಿ ನಿಷೇಧ ಕುಡಿಯದವರಿಗೆ ಮಾತ್ರ!
3) ಪ್ರತೀ ಒಬ್ಬ ಗಂಡಸಿಗೆ ಮನೆ ಮತ್ತು ಹೆಂಡತಿ ಇರಬೇಕು. ಸ್ವಂತದ್ದು ಆದಷ್ಟು ಒಳ್ಳೆಯದು!
4) ತಾಳಿ ಕದ್ದವನಿಗೆ ಕಠಿಣ ಶಿಕ್ಷೆ. ತಾಳಿ ಕಟ್ಟಿದವನಿಗೆ ಜೀವಾವಧಿ ಶಿಕ್ಷೆ!
5) ಮನೆಯಾಕೆಯು ಸೃಷ್ಟಿಸುವ ವಾತಾವರಣವೇ ಮನೆಯ ವಾತಾವರಣ!
6) ಒಂದೇ ಹಗ್ಗದಿಂದ ಇಬ್ಬರಿಗೆ ನೇಣು ಹಾಕಿಕೊಳ್ಳುವ ಜಾಣ್ಮೆಗೆ ಮದುವೆ ಎಂದು ಹೆಸರು!
7) ಅಕ್ಕಿ ಹೊಟ್ಟೆಗೆ ಬೀಳಲಿ ಅಥವಾ ಬಿಡಲಿ. ಮದುವೆಯ ದಿನ ತಲೆಗೆ, ಸತ್ತದಿನ ಬಾಯಿಗೆ ಬಿದ್ದೇ ಬೀಳುತ್ತದೆ!
ಇದನ್ನೂ ಓದಿ: ರಾಜಮಾರ್ಗ ಅಂಕಣ: ಈ ಪಾಪ್ ಗಾಯಕಿಗೆ ಜಗತ್ತಿನಾದ್ಯಂತ ಎರಡು ಬಿಲಿಯನ್ ವೀಕ್ಷಕರು!
ಮುಂದೆ 1980ರಲ್ಲಿ ಬೀಚಿಯವರು ನಮ್ಮನ್ನು ಬಿಟ್ಟು ಹೋದರೂ ಅವರ ಮೌಲ್ವಿಕವಾದ ಕೃತಿಗಳ ಮೂಲಕ ಇನ್ನೂ ನಮ್ಮೊಳಗೆ ಜೀವಂತವಾಗಿದ್ದಾರೆ. ನಮ್ಮ ತುಟಿಗಳಲ್ಲಿ ಮುಗುಳ್ನಗುವನ್ನು ಮೂಡಿಸುತ್ತಿದ್ದಾರೆ.
ಅಂಕಣ
ವಿಧಾನಸೌಧ ರೌಂಡ್ಸ್: ರೌಂಡ್ ಟೇಬಲ್ ಸ್ನೇಹಿತರು ಮತ್ತು ವಿಧಾನಸೌಧದಲ್ಲಿ ಬದಲಾಗದ 40 % ಬ್ರಾಂಡ್!
ಮಲ್ಯ ವಿದೇಶಕ್ಕೆ ಹಾರಿದರೂ ಅವನ ಕಿಂಗ್ ಫಿಶರ್ ಬ್ರಾಂಡ್ ಮಾತ್ರ ಕಡಿಮೆ ಆಗಲಿಲ್ಲ. ನಮ್ಮ ವಿಧಾನಸೌಧದಲ್ಲೂ ಕೂಡ ಅಷ್ಟೇ. ಸರ್ಕಾರ ಯಾವುದೇ ಪಕ್ಷದ್ದು ಬಂದರೂ 40 % ಭ್ರಷ್ಟಾಚಾರದ ಬ್ರಾಂಡ್ ಬದಲಾಗಲ್ಲ. ಸ್ವಲ್ಪ ಹೆಚ್ಚಿಗೆ ಆಗಬಹುದು ಅಂದರವರು!
ಮಾರುತಿ ಪಾವಗಡ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಹದಿನೈದು ದಿನಗಳು ಕಳೆದು ಹೋಗಿವೆ. ಅದರಲ್ಲಿ ಕಾಂಗ್ರೆಸ್ ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ ಗ್ಯಾರಂಟಿಗಳಿಗೆ ಸರ್ಕಾರ ಮುದ್ರೆ ಒತ್ತಿದೆ. ಇನ್ನೇನ್ನಿದ್ದರೂ ಜನರ ಕೈಗೆ ಈ ಗ್ಯಾರಂಟಿ ಸೇರುವುದು ಮಾತ್ರ ಬಾಕಿಯಿದೆ. ಈ ನಡುವೆ ಹೊಸ ಸರ್ಕಾರ ಬಂದ ಮೇಲೆ ಹಲವು ನಡೆಗಳು ಬಹಳ ಚರ್ಚೆ ಆಗ್ತಿವೆ. ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ವಿಧಾನಸೌಧದಲ್ಲಿ ಗಿಜಿಗಿಡುವ ಜನ ಮತ್ತು ಕೈ ಕಾರ್ಯಕರ್ತರ ಮಾತುಗಳು ಭಾರಿ ಸದ್ದು ಆಗುತ್ತಿವೆ.
ರೌಂಡ್ ಟೇಬಲ್ ಸ್ನೇಹಿತರು ದೂರವಾದರಾ?
ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಂಡು ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾದಾಗ ಇದ್ದ ಟೀಮ್ ಈಗ ಕಾಣಿಸುತ್ತಿಲ್ಲ. ಸಿದ್ದರಾಮಯ್ಯಗೆ ಅಂದು ಸಾಥ್ ಕೊಟ್ಟವರು ವಿ.ಎಸ್ ಉಗ್ರಪ್ಪ, ಎಚ್ ಎಂ ರೇವಣ್ಣ, ಪ್ರಕಾಶ್ ರಾಥೋಡ್, ಆಶೋಕ್ ಪಟ್ಟಣ್. ಸರ್ಕಾರ ಬರುವವರೆಗೂ ಸಿದ್ದರಾಮಯ್ಯ ಜತೆ ಕಾಣಿಸಿಕೊಳ್ಳುತ್ತಿದ್ದ ಪಟ್ಟಣ್, ಉಗ್ರಪ್ಪ, ರಾಥೋಡ್ ಕಾಣಿಸಿಕೊಳ್ಳದಿರುವುದು ಕೆಪಿಸಿಸಿಯಲ್ಲಿ ಚರ್ಚೆ ಆಗ್ತಿದೆ.
40% ಬ್ರಾಂಡ್ ಬದಲಿಸಲು ಸಾಧ್ಯವಿಲ್ಲ!
ನಮಗೆ ಪತ್ರಕರ್ತರಿಗೆ ವಿಧಾನಸೌಧದಲ್ಲಿ ಡಿ ದರ್ಜೆಯ ನೌಕರರ ಸಂಪರ್ಕ ಹೆಚ್ಚು. ಯಾಕೆಂದರೆ ಅಧಿಕಾರಿಗಳಿಂದ ಸಿಗದ ಮಾಹಿತಿ ಡಿ ದರ್ಜೆಯ ನೌಕರರಿಂದ ಸಿಗುತ್ತದೆ. ಇದೇ ರೀತಿ ರೌಂಡ್ ಹಾಕುತ್ತಿದ್ದಾಗ ಪರಿಚಿತ ಡಿ ದರ್ಜೆ ಸಿಬ್ಬಂದಿಯೊಬ್ಬರು, ಹೆಂಗ್ ಅಣ್ಣಾ ಸಿದ್ದಣ್ಣನ ಸರ್ಕಾರ ಅಂದ್ರು. ಪರವಾಗಿಲ್ಲ, ಬಂದ ಹದಿನೈದು ದಿನಕ್ಕೆ ಗ್ಯಾರಂಟಿ ಜಾರಿ ಮಾಡಿದ್ರು, ಅದರಲ್ಲಿ ಒಂದಷ್ಟು ತಪ್ಪುಗಳಿದ್ದರೂ ಬಹುಸಂಖ್ಯಾತರಿಗೆ ಅನುಕೂಲ ಅಂದೆ. ಸ್ವಲ್ಪ ಭ್ರಷ್ಟಾಚಾರ ಸಹ ಕಡಿಮೆ ಆಗಬಹುದು ಎಂದೂ ಮಾತು ಸೇರಿಸಿದೆ. ಅವರು ನನಗೆ ತಿರುಗಿ ಹೇಳಿಯೇ ಬಿಟ್ಟರು: ಮಲ್ಯ ವಿದೇಶಕ್ಕೆ ಹಾರಿದರೂ ಅವನ ಕಿಂಗ್ ಫಿಶರ್ ಬ್ರಾಂಡ್ ಮಾತ್ರ ಕಡಿಮೆ ಆಗಲಿಲ್ಲ. ನಮ್ಮ ವಿಧಾನಸೌಧದಲ್ಲೂ ಕೂಡ ಅಷ್ಟೇ. ಸರ್ಕಾರ ಯಾವುದೇ ಪಕ್ಷದ್ದು ಬಂದರೂ 40 % ಭ್ರಷ್ಟಾಚಾರದ ಬ್ರಾಂಡ್ ಬದಲಾಗಲ್ಲ. ಸ್ವಲ್ಪ ಹೆಚ್ಚಿಗೆ ಆಗಬಹುದು ಅನ್ನೋದಾ?!
ಚಿಕ್ಕಬಳ್ಳಾಪುರದ ಯುವ ಶಾಸಕನ ಕಿರಿಕಿರಿಗೆ ಕೈ ನಾಯಕರು ಸುಸ್ತು
ಈ ಚಿಕ್ಕಬಳ್ಳಾಪುರದ ಶಾಸಕನ ನಡೆನುಡಿ ಬಗ್ಗೆ ವಿಧಾನಸೌಧದಲ್ಲಿ ಚರ್ಚೆ ಆಗುತ್ತಿದೆ. ಕೆಲವರು ಇವನೊಬ್ಬ ಅಂಡೆಪಿರಕಿ ಅಂದರೆ, ಕೆಲವರು ರಾಜಕಾರಣಿ ಹೀಗೆಯೇ ಇರಬೇಕು ಅಂತಿದ್ದಾರೆ. ಆದ್ರೆ ತೆಲುಗಿನಲ್ಲಿ ಅಕ್ಕೋ ಅಮ್ಮೋ ಅನ್ನೋ ಈ ಮಹಾನುಭಾವನ ಕಿರಿಕಿರಿ ಮಿತಿ ಮೀರಿದೆ ಅನ್ನುವವರೂ ಇದ್ದಾರೆ. ಫೋನ್ ನಂಬರ್ ಕೊಡ್ತಾನೆ ರಿಸೀವ್ ಮಾಡಲ್ಲ. ಬರೀ ಹೇಳ್ತಾನೆ, ಹೇಳೋದನ್ನ ಮಾಡಲ್ಲ. ಆಕಾಶ ತೋರಿಸುತ್ತಾನೆ, ನೆಲ ಮರೆತುಬಿಟ್ಟಿದ್ದಾನೆ. ಈ ನಡೆ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಸೇರಿದಂತೆ ಹಲವರಿಗೆ ಬೇಸರ ತರಿಸಿದೆಯಂತೆ. ಯಾಕೆಂದರೆ ಈ ಅಣ್ಣಾ ಕ್ಯಾಮೆರಾ ಇಲ್ಲದೇ ಕೆಲಸ ಮಾಡಲ್ಲ. ಕಾಂಗ್ರೆಸ್ ಗಾಳಿಯಲ್ಲಿ ಗೆದ್ದ ಅಣ್ಣಾ ಕಾರ್ಯಕರ್ತರನ್ನ ಬಾಯಿಗೆ ಬಂದ ಹಾಗೆ ಮಾತನಾಡ್ತಾನೆ. ಈ ದೂರು ಕೆಪಿಸಿಸಿವರೆಗೂ ಬಂದಿದೆ. ಈತನ ಆಕ್ಟಿಂಗ್ ನೋಡಿದ ಹಲವರು ಇದೇ ಫಸ್ಟ್ ಇದೇ ಲಾಸ್ಟ್ ಅಂತಿದ್ದಾರೆ!
ಡಿಸಿಎಂ ಆದ ಮೇಲೆ ಡಿಕೆಶಿ ಬದಲಾಗಿದ್ದಾರೆ
ಡಿ ಕೆ ಶಿವಕುಮಾರ್ ಡಿಸಿಎಂ ಆಗಿ ಮೂರನೆಯ ಮಹಡಿಯಲ್ಲಿ ಮೂರು ರೂಮ್ ಪಡೆದ ಮೇಲೆ ಓವರ್ ಸ್ಪೀಡ್ ಆಗಿದ್ದಾರೆ. ಇವರ ಸ್ಪೀಡ್ಗೆ ಅಧಿಕಾರಿಗಳು ಸೈಡ್ ಕೊಟ್ಟು ದೂರದಲ್ಲಿ ಅವಿತು ಕುಳಿತುಕೊಳ್ಳುತ್ತಿದ್ದಾರೆ. ಅವರೇಕೆ ಈಗ ಮೀಡಿಯಾದವರು ಸಹ ಡಿಸಿಎಂ ನೋಡಿದ್ರೆ ದೂರ ಹೋಗುವ ರೀತಿ ನಡೆದುಕೊಳ್ಳುತ್ತಿದ್ದಾರೆ. ಇನ್ನು ಶಾಸಕರು ಇವರ ಮೇಲೆ ಕೊಡುವ ದೂರು ಮಾತ್ರ ಬದಲಾಗಿಲ್ಲ. ಹೀಗಾಗಿ ಅವರ ಹಿತೈಷಿ ಒಬ್ಬರು, ಏನ್ರಿ ಇನ್ನೂ ಐದು ವರ್ಷ ನಿಮ್ಮದೇ ಸರ್ಕಾರ ಅಂದ್ವಿ. ಏನು ಬಂತು ನಮ್ಮ ಸಾಹೇಬರು ಅಧಿಕಾರಿಗಳ ಮೇಲೆ ಗುರ್ ಗುರ್ ಅಂತಾರೆ, ಶಾಸಕರ ನೋಡಿ ಅರ್ಧತಲೆ ಎತ್ತಿ ಏನ್ ಎನ್ ಅನ್ನೋದು ಬಿಟ್ಟಿಲ್ಲ. ಇನ್ನು ಕೊನೆಯವರೆಗೂ ಡಿಕೆಶಿನೇ ಸಿಎಂ ಎಂದು ಬ್ರೇಕಿಂಗ್ ಹಾಕಿದ ಮೀಡಿಯಾದವರ ಮೇಲೂ ಸಿಟ್ಟು ಮಾಡಿಕೊಂಡವರೇ ಅಂದು ಬಿಡೋದಾ?
ಇದನ್ನೂ ಓದಿ : D ಕೋಡ್ ಅಂಕಣ: ಕ್ರೀಡಾ ಸಂಸ್ಥೆಗಳಿಂದ ರಾಜಕಾರಣಿಗಳನ್ನು ಹೊರಹಾಕುವುದು ಯಾವಾಗ?
ಪಕ್ಷ ಅಧಿಕಾರಕ್ಕೆ ಬಂದರೂ ಕಾಂಗ್ರೆಸ್ ವಕ್ತಾರರಿಗೆ ಒಂದು ಥ್ಯಾಕ್ಸ್ ಹೇಳಲಿಲ್ಲ!
ಪಕ್ಷ ಅಧಿಕಾರಕ್ಕೆ ತರಲು ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಎಷ್ಟು ಮುಖ್ಯವೋ ಮಾಧ್ಯಮಗಳಲ್ಲಿ ಪಕ್ಷದ ಪರ ಸಮರ್ಥನೆ ಸಹ ಅಷ್ಟೇ ಮುಖ್ಯ. ನಿನ್ನೆ ಒಬ್ಬರು ವಕ್ತಾರರು ಸಿಕ್ಕಿದ್ರು. ಬಿಡ್ರಿ ನಿಮ್ಮ ಕಷ್ಟಕ್ಕೆ ಫಲ ಸಿಕ್ತು ಅಂದೆ. ಎಲ್ರೀ ನಮ್ಮನ್ನ ಯಾರೂ ಕೇಳೋರಿಲ್ಲ. ನಮ್ಮದು ಬರೀ ಬಿಜೆಪಿ ಮತ್ತು ನಿಮ್ಮ ಆಂಕರ್ಗಳ ಜತೆ ಗುದ್ದಾಡುವುದೇ ಕಾಯಕವಾಗಿದೆ. ಈ ಕ್ಷಣಕ್ಕೂ ಒಂದು ಸಭೆ ಕರೆದು ಥ್ಯಾಂಕ್ಸ್ ಹೇಳಲಿಲ್ಲ ಅಂದರು. ಬೇಸರಿಸಿಕೊಳ್ಳಬೇಡಿ ನಿಗಮ, ಮಂಡಳಿ ಇದೆ ಅಂದೆ. ನಮಗೆ ಮಾಧ್ಯಮವೇ ಮಂಡಳಿ, ಮಾಧ್ಯಮವೇ ನಿಗಮ ಅಂದು ಬಿಟ್ಟರು. ಪಾಪ ಪಕ್ಷ ಸಮರ್ಥನೆ ಮಾಡಿದವರಿಗೆ ಒಂದು ಥ್ಯಾಂಕ್ಸ್ ಹೇಳಿದ್ರೆ ಇವರದ್ದು ಏನು ಹೋಗ್ತಿತ್ತು ಅನ್ನೋ ಬೇಸರ ಸಹಜ.
ವಿಧಾನಸೌಧದ ಮೂರನೇ ಮಹಡಿಗೆ ಟ್ರಾಫಿಕ್ ಪೊಲೀಸ್ ಬೇಕು
ಕಾಂಗ್ರೆಸ್ ಸರ್ಕಾರ ಬಂದ ಬಳಿಕ ವಿಧಾನಸೌಧದ ಮೂರನೇ ಮಹಡಿ ತುಂಬಿ ತುಳುಕುತ್ತಿದೆ. ಕಾಂಗ್ರೆಸ್ ಕಚೇರಿ ಮರೆತುಬಿಟ್ಟಿದ್ದಾರೆ. ಬಾವುಟ ಕಟ್ಟಿದವರು, ಕಟ್ಟದೇ ಇರೋರು ವಿಧಾನಸೌಧ ಸೇರಿದ್ದಾರೆ. ಅದರಲ್ಲೂ ಕನಕಪುರ, ಬೆಳಗಾವಿ ಮೇಡಂ ಟೀಮ್ ಕಚೇರಿ ಮುಂದೆ ಒಬ್ಬ ಟ್ರಾಫಿಕ್ ಪೊಲೀಸ್ನ ಹಾಕಬೇಕು ಅನ್ನೋ ಮಾತು ವಿಧಾನಸೌಧದಲ್ಲಿ ಕೇಳಿ ಬರುತ್ತಿದೆ.
ಅಂಕಣ
D ಕೋಡ್ ಅಂಕಣ: ಕ್ರೀಡಾ ಸಂಸ್ಥೆಗಳಿಂದ ರಾಜಕಾರಣಿಗಳನ್ನು ಹೊರಹಾಕುವುದು ಯಾವಾಗ?
ಕ್ರೀಡೆ ಎನ್ನುವುದು ಕ್ರೀಡಾಪಟುಗಳ ಬೆವರಿನ ಫಲವೇ ಹೊರತು ರಾಜಕಾರಣಿಗಳ ಆಡುಂಬೊಲ ಅಲ್ಲ. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಹಿಡಿತ ಹೊಂದಬೇಕು ಎಂಬ ರಾಜಕಾರಣಿಗಳ ಗೀಳು ಕ್ರೀಡಾ ಕ್ಷೇತ್ರವನ್ನು ಹಾಳುಗೆಡವುತ್ತಿರುವುದು ನಿಜ.
ಈ ಘಟನೆ ನಡೆದು ಇನ್ನೂ ಇಪ್ಪತ್ತು ವರ್ಷ ಕೂಡ ಆಗಿಲ್ಲ. 2006ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಆಸ್ಟ್ರೇಲಿಯಾ ಕ್ರಿಕೆಟ್ ಟೀಂ ಗೆದ್ದಿತು. ಮುಂಬೈಯಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ ರಿಕಿ ಪಾಂಟಿಂಗ್ ನೇತೃತ್ವದ ತಂಡಕ್ಕೆ ಟ್ರೋಫಿ ನೀಡುವ ಸಮಯ. ತಂಡದ ಸದಸ್ಯರೆಲ್ಲರೂ ಟ್ರೋಫಿಗಾಗಿ ಕಾದು ಕುಳಿತಿದ್ದಾರೆ, ಸ್ಟೇಡಿಯಂನಲ್ಲಿರುವ ಜನರು ಶಿಳ್ಳೆ ಹಾಕುತ್ತ, ಆ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಟ್ರೋಫಿಯನ್ನು ಹಿಡಿದು ನಿಂತಿದ್ದವರು ಬಿಸಿಸಿಐ ಅಧ್ಯಕ್ಷ ಹಾಗೂ ರಾಜಕಾರಣಿ ಶರದ್ ಪವಾರ್. ರಿಕಿ ಪಾಂಟಿಂಗ್ ಒಂದಷ್ಟು ಸಮಯ ನೋಡಿದವರೇ, ಶರದ್ ಪವಾರನ್ನು ಮುಟ್ಟಿ, ಈ ಕಡೆ ಕೊಡಿ ಟ್ರೋಫಿಯನ್ನ ಅಂತ ಬೆರಳಲ್ಲಿ ಸನ್ನೆ ಮಾಡಿದರು. ಮುಂದೆ ಬನ್ನಿ ಎಂದ ಶರದ್ ಪವಾರ್, ನಗುನಗುತ್ತ ಟ್ರೋಫಿಯನ್ನು ನೀಡಿದರು. ಇದರಿಂದ ಮತ್ತಷ್ಟು ಸಂತೋಷಗೊಂಡ ತಂಡದ ಸದಸ್ಯರು ಟ್ರೋಫಿ ಜತೆಗೆ ಫೋಟೊ ತೆಗೆದುಕೊಳ್ಳಲು ಗುಂಪಾದರು. ಈ ಸಮಯದಲ್ಲಿ ನೀನ್ಯಾಕಪ್ಪ ಮಧ್ಯದಲ್ಲಿ ನಿಂತಿದ್ದೀಯ ಎನ್ನುವ ರೀತಿಯಲ್ಲಿ ಪವಾರನ್ನು ಬದಿಗೆ ಸರಿಸಿ ಫೋಟೊಗೆ ಪೋಸ್ ನೀಡಿದರು. ಅತ್ತಿಂದಿತ್ತ ನೋಡಿದ ಪವಾರ್, ವೇದಿಕೆಯಿಂದ ಇಳಿದು ಹೋದರು.
ಆಗಿನ ಕಾಲಕ್ಕೆ ಇದು ಅತಿ ದೊಡ್ಡ ವಿವಾದ. ದೇಶದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದವರು, ಮಹಾರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಹೆಸರು, ಅದಕ್ಕೂ ಮಿಗಿಲಾಗಿ ಈ ಟೂರ್ನಿಯನ್ನು ಭಾರತದಲ್ಲಿ ಹೋಸ್ಟ್ ಮಾಡಿರುವ ಬಿಸಿಸಿಐ ಅಧ್ಯಕ್ಷರೇ ಶರದ್ ಪವಾರ್. ಅವರನ್ನು ಬದಿಗೆ ಸರಿಸಿ ಪಾಂಟಿಂಗ್ ಅವಮಾನ ಮಾಡಿದರು ಅಂತ ವಿವಾದ ಆಗಿತ್ತು. ಆಸ್ಟ್ರೇಲಿಯಾದ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಪವಾರ್, ಇದು ಅನಾಗರಿಕ ವರ್ತನೆ ಎಂದಿದ್ದರು. ಆನಂತರ ಸ್ವತಃ ಎಲ್ಲಿಯೂ ಅಸಮಾಧಾನ ಹೊರಹಾಕದಿದ್ದರೂ, ಬಿಸಿಸಿಐ ಪದಾಧಿಕಾರಿಗಳ ಮೂಲಕ ಆಟ್ರೇಲಿಯಾ ಕ್ರಿಕೆಟ್ ಮಂಡಳಿಗೆ (ಸಿಎ) ʼಬಿಸಿʼ ಮುಟ್ಟಿಸಿದರು. ಕೊನೆಗೆ ಸಿಎ ಕ್ಷಮಾಪಣೆ ಪತ್ರ ಬರೆಯುವುದಷ್ಟೆ ಅಲ್ಲದೆ ಸ್ವತಃ ಪಾಂಟಿಂಗ್ ಫೋನ್ ಮಾಡಿ ಶರದ್ ಪವಾರ್ ಕ್ಷಮೆ ಯಾಚಿಸಿದರು. ಈ ಒಂದು ಫೋನ್ ಕಾಲ್ಗೂ ಮುನ್ನ ಪಾಂಟಿಂಗ್ ಹತ್ತಾರು ಸಾರಿ ಪ್ರಯತ್ನಿಸಿದ್ದರು, ಆದರೆ ಪವಾರ್ ಮಾತನಾಡಿರಲಿಲ್ಲ.
ಇದು ಒಂದು ಪ್ರಕರಣ, ವೈಯಕ್ತಿಕವಾಗಿ ಶರದ್ ಪವಾರ್ ಉದಾಹರಣೆಯಾಗಿ ತೆಗೆದುಕೊಂಡರೆ, ಹಿರಿಯ ರಾಜಕಾರಣಿಗೆ ಮಾಡಿದ ಅವಮಾನ ಎಂದು ಕಾಣುತ್ತದೆ. ಆದರೆ ನಿಜವಾಗಿ ಕ್ರೀಡಾ ಕ್ಷೇತ್ರದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ನೋಡಿದರೆ ಪಾಂಟಿಂಗ್ ಮಾಡಿದ್ದು ಮಹಾಪರಾಧ ಏನೂ ಅಲ್ಲ ಎನ್ನಿಸುತ್ತದೆ. ಈಗ ನವದೆಹಲಿಯಲ್ಲಿ ಕುಸ್ತಿಪಟುಗಳು, ಭಾರತೀಯ ಕುಸ್ತಿ ಸಂಸ್ಥೆ(ಡಬ್ಲ್ಯುಎಫ್ಐ) ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಸದನ ವಿರುದ್ಧ ಇರುವುದು ಕೇವಲ ಹಣಕಾಸು ಭ್ರಷ್ಟಾಚಾರದ ಆರೋಪ ಅಲ್ಲ ಬದಲಿಗೆ ನೈತಿಕ ಭ್ರಷ್ಟಾಚಾರದ ಆರೋಪ.
ಕುಸ್ತಿಪಟುಗಳು ಆರೋಪಿಸಿದಂತೆ ಅನೇಕ ಮಹಿಳಾ ಕುಸ್ತಿಪಟುಗಳ ವಿರುದ್ಧ ಸಂಸದ ಅಸಭ್ಯ ವರ್ತನೆ ತೋರಿದ್ದಾರೆ. ಅಪ್ರಾಪ್ತ ವಯಸ್ಸಿನ ಆಟಗಾರ್ತಿಯ ಎದೆ ಸುತ್ತಲೂ ಕೈಗಳನ್ನು ಆಡಿಸಿದ್ದರು ಮತ್ತು ಆಕೆಯನ್ನು ದುರುಗುಟ್ಟಿ ನೋಡುತ್ತಿದ್ದರು, ಉಸಿರಾಟವನ್ನು ಪರೀಕ್ಷಿಸುವ ನೆಪದಲ್ಲಿ ಅವರನ್ನು ಅಸಭ್ಯವಾಗಿ ಸ್ಪರ್ಶಿಸಿದ, ಮೈ ಸವರಿದ, ಮುಜುಗರ ಉಂಟುಮಾಡುವ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದ, ಟೂರ್ನಮೆಂಟ್ ಸಂದರ್ಭದಲ್ಲಿ ಗಾಯಗೊಂಡರೆ ಸಂಸ್ಥೆಯೇ ಚಿಕಿತ್ಸೆ ವೆಚ್ಚ ಭರಿಸುವುದಕ್ಕೆ ಪ್ರತಿಯಾಗಿ ಲೈಂಗಿಕ ಸುಖದ ಬೇಡಿಕೆ ಇರಿಸಿದ ಆರೋಪಗಳನ್ನು ಈ ಸಂಸದನ ವಿರುದ್ಧ ದಾಖಲಿಸಿರುವ ಎಫ್ಐಆರ್ಗಳಲ್ಲಿ ವಿವರಿಸಲಾಗಿದೆ. ಈ ಪ್ರತಿಭಟನೆಯು ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ರಾಜಕೀಯ ಸಮರವಾಗಿಯೂ ರೂಪುಗೊಂಡಿದೆ. ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕ್ರೀಡಾಪಟುಗಳನ್ನು ಎತ್ತಿಕಟ್ಟಲಾಗುತ್ತಿದೆ ಎನ್ನುವುದರಿಂದ, ಸ್ವತಃ ಕ್ರೀಡಾಪಟುಗಳೇ ʼದೇಶವಿರೋಧಿ ಟೂಲ್ಕಿಟ್ʼಗಳಾಗಿದ್ದಾರೆ ಎಂದೂ ಆರೋಪಿಸಲಾಗುತ್ತಿದೆ. ಬ್ರಿಜ್ ಭೂಷಣ್ ಶರಣ್ ಸಿಂಗ್, ಡಬ್ಲ್ಯುಎಫ್ಐನಿಂದ ರಾಜೀನಾಮೆ ನೀಡಬೇಕು ಹಾಗೂ ಅವರನ್ನು ಬಂಧಿಸಬೇಕು ಎಂದು ಕುಸ್ತಿಪಟುಗಳು ಪಟ್ಟು ಹಿಡಿದಿದ್ದಾರೆ. ಒಂದೆಡೆ ಪ್ರತಿಭಟನೆ ನಡೆಯುತ್ತಿದ್ದರೆ ಮತ್ತೊಂದೆಡೆ ಕಾನೂನು ಪ್ರಕ್ರಿಯೆಯೂ ನಡೆಯುತ್ತಿದೆ. ಅವೆರಡೂ ಅದರ ಪಾಡಿಗೆ ನಡೆಯಲಿ, ಆದರೆ ಈ ಕ್ರೀಡಾ ಸಂಸ್ಥೆಯಲ್ಲಿ ರಾಜಕಾರಣಿಗೆ ಏನು ಕೆಲಸ?
ಕ್ರೀಡಾ ಸಂಸ್ಥೆಗಳಲ್ಲಿ ರಾಜಕಾರಣಿಗಳು:
ಭಾರತದ ಜುಡೊ ಫೆಡರೇಷನ್ಗೆ 2013ರವರೆಗೆ, ನವದೆಹಲಿಯಲ್ಲಿ ಸಿಖ್ಖರ ನರಮೇಧ ಪ್ರಕರಣದಲ್ಲಿ ಆರೋಪಿ, ಕಾಂಗ್ರೆಸ್ನ ಜಗದೀಶ್ ಟೈಟ್ಲರ್ ಅಧ್ಯಕ್ಷರಾಗಿದ್ದರು. ನಂತರ ಅನೇಕ ವಿವಾದಗಳಾಗಿದ್ದವು. ಮತ್ತೆ ಚುನಾವಣೆ ನಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಪಂಜಾಬ್ನ ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್ ಬಾಜವಾ. ಈಗ ಮತ್ತೆ ವಿವಾದಕ್ಕೀಡಾಗಿ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ.
ಕಾಂಗ್ರೆಸ್ನ ಹಿರಿಯ ನಾಯಕರಾಗಿದ್ದ ಪ್ರಿಯರಂಜನ್ ದಾಸ್ ಮುನ್ಷಿ, ಫುಟ್ಬಾಲ್ ಫೆಡರೇಷನ್ನಿನ ಅಧ್ಯಕ್ಷರಾಗಿ ಬರೊಬ್ಬರಿ 20 ವರ್ಷ ಇದ್ದರು. 2008ರಲ್ಲಿ ದಾಸ್ಮುನ್ಷಿಗೆ ಅನಾರೋಗ್ಯವಾದಾಗ ಆ ಸ್ಥಾನವನ್ನು ಅಲಂಕರಿಸಿದ್ದು ಮತ್ತೊಬ್ಬ ರಾಜಕಾರಣಿ ಪ್ರಫುಲ್ ಪಟೇಲ್. ಅನಾರೋಗ್ಯದ ನಡುವೆಯೇ ದಾಸ್ಮುನ್ಷಿ ಅವರನ್ನು ಗೌರವ ಅಧ್ಯಕ್ಷರಾಗಿ ನೇಮಿಸಲಾಯಿತು. ವಿಶ್ವದ ಟಾಪ್-100 ರ್ಯಾಂಕಿಂಗ್ ಒಳಕ್ಕೂ ಭಾರತವನ್ನು ತರಲಾಗದಿದ್ದರೂ ಫುಟ್ಬಾಲ್ ಆಡಳಿತದಲ್ಲಿ ದಾಸ್ಮುನ್ಷಿ ಪವರ್ಫುಲ್. ವರ್ಲ್ಡ್ ಕಪ್ ಕಮಿಷನರ್ ಆಗಿ, ವಿಶ್ವಕಪ್ ಸ್ಥಳಗಳ ಹೊಣೆಹೊರುವುದೂ ಸೇರಿ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿ ಸೈ ಎನ್ನಿಸಿಕೊಂಡವರು. ಫುಟ್ಬಾಲ್ ಕ್ರೀಡೆ ಭಾರತದಲ್ಲಿ ಬೆಳೆಯಲಿಲ್ಲ ಎನ್ನುವುದನ್ನು ಬಿಟ್ಟರೆ ಉಳಿದೆಲ್ಲ ಒಳ್ಳೆಯದೇ ಆಯಿತು.
ಬಿಜೆಪಿಯ ವಿಜಯ್ಕುಮಾರ್ ಮಲ್ಹೋತ್ರಾ, ಆರ್ಚರಿ ಫೆಡರೇಷನ್ ಅಧ್ಯಕ್ಷರಾಗಿ 31 ವರ್ಷ ಇದ್ದರು. ಮಹಾರಾಷ್ಟ್ರದ ಖೊಖೊ ಹಾಗೂ ಕಬಡ್ಡಿ ಸಂಸ್ಥೆಗಳ ಅಧ್ಯಕ್ಷ ಸ್ಥಾನದಿಂದ ರಾಜಕೀಯ ಜೀವನ ಆರಂಭಿಸಿ ಕೊನೆಗೆ ಬಿಸಿಸಿಐ ಅಧ್ಯಕ್ಷರೂ ಆಗಿದ್ದವರು ಶರದ್ ಪವಾರ್. ರಾಜ್ಯ ಕ್ರಿಕೆಟ್ ಅಸೋಸಿಯೇಷನ್ಗಳಲ್ಲಂತೂ ರಾಜಕಾರಣಿಗಳು ಲೆಕ್ಕಕ್ಕಿಲ್ಲ. ಕ್ರೀಡಾಪಟುಗಳನ್ನು ಕ್ರೀಡಾ ಸಂಸ್ಥೆಗಳಲ್ಲಿ ಇರುವಂತೆ ಮಾಡಲು ಕೆಲವು ನಿಯಮಗಳಿವೆ. ಅದನ್ನು ರಾಜಕಾರಣಿಗಳು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದಕ್ಕೆ ಕ್ಲಾಸಿಕ್ ಉದಾಹರಣೆ ಎಂದರೆ ಈಗಿನ ಕೇಂದ್ರ ಸರ್ಕಾರದಲ್ಲಿ ಅತ್ಯಂತ ಕ್ರಿಯಾಶೀಲ ಹಾಗೂ ಪರಿಶ್ರಮಿ ಸಚಿವರಲ್ಲೊಬ್ಬರಾದ ಅನುರಾಗ್ ಸಿಂಗ್ ಠಾಕುರ್.
ಅವರು ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದರು.(ಅವರ ತಂದೆ ಪ್ರೇಮ್ಕುಮಾರ್ ಧುಮಾಲ್ ಅವರು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಆಗಿದ್ದವರು). ರಾಜ್ಯ ಮಟ್ಟದಲ್ಲಿ ಕ್ರೀಡಾಪಟುಗಳನ್ನು ಆಯ್ಕೆ ಮಾಡಬೇಕೆಂದರೆ ಕನಿಷ್ಠ ಒಂದು ಫರ್ಸ್ಟ್ ಕ್ಲಾಸ್ ಮ್ಯಾಚ್ ಆಡಬೇಕೆಂಬ ನಿಯಮವಿತ್ತು. ಅದಕ್ಕಾಗಿ ತಮ್ಮನ್ನು ತಾವೇ ತಂಡಕ್ಕೆ ಆಯ್ಕೆ ಮಾಡಿಕೊಂಡ ಠಾಕೂರ್ಜಿ, 2000ದಲ್ಲಿ ಜಮ್ಮು ಕಾಶ್ಮೀರದ ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್ ಆಗಿ ಆಡಿದರು. ಆ ಮ್ಯಾಚ್ನಲ್ಲಿ ಹಿಮಾಚಲಕ್ಕೆ ಸೋಲಾಯಿತು. ಆದರೆ ಹಿಮಾಚಲದ ರಣಜಿ ಟ್ರೋಫಿ ತಂಡವನ್ನು ಆಯ್ಕೆ ಮಾಡುವ ಸಮಿತಿಯ ಅಧ್ಯಕ್ಷರಾಗಲು ಅಷ್ಟು ಸಾಕಾಗಿತ್ತು. ಇದೇ ಒಂದು ಮ್ಯಾಚಿನ ಅನುಭವವು, ಅವರನ್ನು ಬಿಸಿಸಿಐನ ರಾಷ್ಟ್ರೀಯ ಜೂನಿಯರ್ ಆಯ್ಕೆ ಸಮಿತಿ ಪ್ರವೇಶಕ್ಕೂ ಅವಕಾಶ ನೀಡಿತು. ನಂತರ ಬಿಸಿಸಿಐ ಅಧ್ಯಕ್ಷರೂ ಆದರು. ಬಿಜೆಪಿ ನಾಯಕ, ದಿವಂಗತ ಅರುಣ್ ಜೇಟ್ಲಿ ಅವರು ಸಾಕಷ್ಟು ವರ್ಷ ಕ್ರಿಕೆಟ್ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದವರು. ಶರದ್ ಪವಾರ್, ಅನುರಾಗ್ ಠಾಕೂರ್ ಅಷ್ಟೆ ಅಲ್ಲದೆ ಎನ್ಸಿಪಿಯ ಮಾಧವರಾವ್ ಸಿಂಧಿಯಾ ಸಹ ಬಿಸಿಸಿಐ ಅಧ್ಯಕ್ಷರಾಗಿದ್ದವರು. ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಗಳಲ್ಲೊಂದಾದ ಬಿಸಿಸಿಐನಲ್ಲಿ ಅನುರಾಗ್ ಠಾಕೂರ್ ಅವರ ಸಹೋದರ ಅರುಣ್ ಸಿಂಗ್ ಧುಮಾಲ್ ಐಪಿಎಲ್ ಅಧ್ಯಕ್ಷರಾಗಿ, ಕೇಂದ್ರ ಗೃಹಸಚಿವ ಅಮಿತ್ ಶಾ ಪುತ್ರ ಜಯ್ ಶಾ ಕಾರ್ಯದರ್ಶಿಯಾಗಿ, ಕಾಂಗ್ರೆಸ್ ಪಕ್ಷದ ರಾಜೀವ್ ಶುಕ್ಲ ಉಪಾಧ್ಯಕ್ಷರಾಗಿ ಹಾಗೂ ಬಿಜೆಪಿಯ ಆಶೀಶ್ ಶೆಲ್ಲಾರ್ ಖಜಾಂಚಿಯಾಗಿದ್ದಾರೆ. ಇವಿಷ್ಟೆ ಅಲ್ಲ, ವಿವಿಧ ಕ್ರೀಡಾ ಸಂಸ್ಥೆಗಳಲ್ಲಿ ರಾಜಕಾರಣಿಗಳು ಅಧ್ಯಕ್ಷರಾಗಿದ್ದವರ ವಿವರ ಹೀಗಿದೆ.
ಇವರಲ್ಲಿ ಅನೇಕರು ಈಗಲೂ ಮುಂದುವರಿದಿದ್ದರೆ ಕೆಲವರು ಬದಲಾಗಿರಲೂಬಹುದು. ಕರ್ನಾಟಕದ ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್ ಅವರು ಫುಟ್ಬಾಲ್ ಫೆಡರೇಷನ್ ಉಪಾಧ್ಯಕ್ಷರಾಗಿ 2022ರಲ್ಲಷ್ಟೆ ಆಯ್ಕೆಯಾಗಿದ್ದಾರೆ. ಇನ್ನು ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಾಂಗ್ರೆಸ್ನ ಕೆ. ಗೋವಿಂದರಾಜು ಅವರು 2002ರಿಂದಲೂ ಸೇವೆ ಸಲ್ಲಿಸುತ್ತಿದ್ದಾರೆ. ಅಂದರೆ ಸತತ 21 ವರ್ಷದಿಂದ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ನ ಕ್ರೀಡಾ ಜ್ಯೋತಿಯನ್ನು ಹಿಡಿದು ಓಡುತ್ತಿದ್ದಾರೆ.
ಕ್ರೀಡಾಪಟುಗಳೇ ವಿರಳ:
2016ರಲ್ಲಿ ಇನ್ಗವರ್ನ್ ರಿಸರ್ಚ್ ಸರ್ವೀಸಸ್ ಎಂಬ ಸಂಸ್ಥೆ ತಯಾರಿಸಿದ ವರದಿಯ ಪ್ರಕಾರ 27 ವಿವಿಧ ಕ್ರೀಡಾ ಒಕ್ಕೂಟ ಅಥವಾ ಸಂಸ್ಥೆಗಳಲ್ಲಿ ಕೇವಲ ಒಂದರಲ್ಲಿ, ಅದರೂ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಮಾತ್ರವೇ ರಾಷ್ಟ್ರೀಯ ಮಟ್ಟದ ಮಾಜಿ ಕ್ರೀಡಾಪಟುವನ್ನು ಅಧ್ಯಕ್ಷನನ್ನಾಗಿ ಹೊಂದಿತ್ತು. ಎಲ್ಲ ಕ್ರೀಡಾ ಸಂಸ್ಥೆಗಳನ್ನೂ ಸೇರಿಸಿದರೆ ಶೇ.47ರಲ್ಲಿ ರಾಜಕಾರಣಿಗಳೇ ಅಧ್ಯಕ್ಷರಾಗಿದ್ದರು. 32 ಒಲಿಂಪಿಕ್ ಕ್ರೀಡಾ ಸಂಸ್ಥೆಗಳ ಪೈಕಿ 15 ಅಧ್ಯಕ್ಷರು ರಾಜಕಾರಣಿಗಳು. ಅಧ್ಯಕ್ಷರಾಗದಿದ್ದರೆ ಹೋಗಲಿ, ತಮ್ಮ ಆಡಳಿತ ಮಂಡಳಿಗಳಲ್ಲಿ ರಾಷ್ಟ್ರೀಯ ಮಟ್ಟದ ಮಾಜಿ ಕ್ರೀಡಾಪಟುಗಳನ್ನು ಹೊಂದಿದ್ದ ಸಂಸ್ಥೆಗಳ ಸಂಖ್ಯೆ ಕೇವಲ 9.
100 ಮೀಟರ್ ಸ್ಪ್ರಿಂಟರ್ ದುತೀ ಚಾಂದ್ ಒಮ್ಮೆ ಹೇಳಿದ್ದರು. “ಹೈದರಾಬಾದ್ನಿಂದ ನಾನು ಒಬ್ಬಳೇ ಪ್ರಯಾಣಿಸಿದ್ದೆ, ನನ್ನ ಕೋಚ್ ಸಹಿತ ಜತೆಗೆ ಬರಲಿಲ್ಲ. ಮ್ಯಾನೇಜರ್ ಹಾಗೂ ಇತರೆ ಸಿಬ್ಬಂದಿಗೆ ಬಿಸಿನೆಸ್ ಕ್ಲಾಸ್ ವಿಮಾನದ ಟಿಕೆಟ್ ನೀಡಿದರೆ ಆಟಗಾರರಿಗೆ ಎಕಾನಮಿ ಕ್ಲಾಸ್ ಬುಕ್ ಮಾಡಲಾಗುತ್ತದೆ. 36 ಗಂಟೆಗಳ ಪ್ರಯಾಣದಲ್ಲಿ ಸರಿಯಾಗಿ ನಿದ್ದೆ ಹಾಗೂ ವಿಶ್ರಾಂತಿ ಪಡೆಯಲು ಆಗಲಿಲ್ಲ. ಆಟಗಾರರನ್ನು ಹೀಗೆ ನಡೆಸಿಕೊಂಡರೆ ಅವರು ಒಲಿಂಪಿಕ್ನಲ್ಲಿ ಪದಕ ಹೇಗೆ ತರುತ್ತಾರೆ?” ಎಂದಿದ್ದರು.
ಅನೇಕ ಸಂದರ್ಭದಲ್ಲಿ ಆಟಗಾರರು ರೈಲ್ವೆ ನಿಲ್ದಾಣದಲ್ಲಿ ಸಂಕಷ್ಟಪಡುತ್ತಿರುವ, ಸಿಲುಕಿರುವ ಸುದ್ದಿಗಳೂ ಪ್ರಸಾರವಾಗಿವೆ. ಇದಕ್ಕೆಲ್ಲ ಕಾರಣವೆಂದರೆ ಭಾರತದ ಕ್ರೀಡಾ ಸಂಸ್ಥೆಗಳನ್ನು, ಈ ಕ್ರೀಡೆಗಳ ಗಂಧ ಗಾಳಿ ಗೊತ್ತಿಲ್ಲದ ರಾಜಕಾರಣಿಗಳು ವಹಿಸಿಕೊಂಡಿದ್ದಾರೆ.
ಭಾರತದಲ್ಲಿ ಪ್ರಜಾಪ್ರಭುತ್ವ ಇದೆ ಎನ್ನುತ್ತಲೇ 75 ವರ್ಷ ಆಡಳಿತ ನಡೆಸಿದ ರಾಜಕಾರಣಿಗಳು ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಆವರಿಸಿಕೊಂಡಿದ್ದಾರೆ. ಅದು ಸಾಂಸ್ಕೃತಿಕ ಸಂಸ್ಥೆಯಿರಬಹುದು, ಭಜನಾ ಮಂಡಳಿ ಇರಬಹುದು, ದೇವಸ್ಥಾನ ಇರಬಹುದು, ಸಹಕಾರಿ ಸಂಸ್ಥೆ ಇರಬಹುದು… ಎಲ್ಲದರಲ್ಲಿಯೂ ರಾಜಕಾರಣಿಗಳಿದ್ದಾರೆ. ಹಾಗೂ ಅವರು ಆ ಕ್ಷೇತ್ರಕ್ಕೆ ಕೊಡುಗೆ ನೀಡುವುದಕ್ಕಿಂತಲೂ ಹೆಚ್ಚಾಗಿ ಪಡೆದುಕೊಂಡಿರುವುದೇ ಹೆಚ್ಚು.
ರಾಜಕಾರಣದಲ್ಲಿ ಸೋತಾಗ ಅಥವಾ ತಮ್ಮ ಪಕ್ಷದ ಅಧಿಕಾರ ಇಲ್ಲದಿರುವಾಗ ಈ ರಾಜಕಾರಣಿಗಳನ್ನು ʼಬ್ಯುಸಿʼಯಾಗಿಡಲು ಕ್ರೀಡಾ ಸಂಸ್ಥೆಗಳ ಉಪಯೋಗವಾಗುತ್ತದೆ. ತಾವು ಕ್ರೀಡಾ ಸಂಸ್ಥೆಗಳಲ್ಲಿರುವುದರಿಂದ ಕ್ರೀಡೆಗೇ ಲಾಭ ಎನ್ನುವುದು ಇವರುಗಳ ವಾದ. ತಾವು ಇರುವುದರಿಂದ ಸಂಸ್ಥೆಗೆ ಹಣಕಾಸು ನೆರವು, ಸ್ಪಾನ್ಸರ್ ಹುಡುಕುವುದು ಸುಲಭ ಎನ್ನುತ್ತಾರೆ.
ಕ್ರೀಡೆ ಎನ್ನುವುದು ಯುವಜನರ ಕ್ಷೇತ್ರ. ಇಲ್ಲಿಯೂ ತಮ್ಮ ಪ್ರಭಾವವನ್ನು ಬೀರಬೇಕು ಎಂದು ಒಂದೆಡೆ ತಮ್ಮ ಪ್ರಚಾರದ ಗೀಳನ್ನು ಈಡೇರಿಸಿಕೊಳ್ಳಲು ರಾಜಕಾರಣಿಗಳು ಕ್ರೀಡಾ ಕ್ಷೇತ್ರವನ್ನು ಬಳಸಿಕೊಳ್ಳುತ್ತಾರೆ ಎನ್ನುವುದು ನಿಜ. ಆದರೆ ಕ್ರೀಡೆ ಹಾಗೂ ಸೆಕ್ಸ್ಗೆ ಅವಿನಾಭಾವ ಸಂಬಂಧ ಇರುವುದು ಜಗಜ್ಜಾಹೀರಾದ ವಿಚಾರ. ಅದೇ ರೀತಿ ಸೆಕ್ಸ್ ಮತ್ತು ರಾಜಕಾರಣಕ್ಕಿರುವ ಸಂಬಂಧವೂ ಎಲ್ಲರಿಗೂ ತಿಳಿದಿರುವಂಥದ್ದು. ಕ್ರೀಡಾಪಟುಗಳಿಗೆ ಅವಕಾಶಗಳನ್ನು ನೀಡುವ ʼವಿವೇಚನಾಧಿಕಾರʼವನ್ನು ದುರುಪಯೋಗಪಡಿಸಿಕೊಂಡ ಉದಾಹರಣೆಗಳು ಆಗಿಂದಾಗ್ಗೆ ಆರೋಪಗಳಾಗಿ ಕೇಳುತ್ತವೆ. ಎಂದಿನಂತೆ ಇವುಗಳಿಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಬಿದ್ದುಹೋಗುತ್ತವೆ. ರಾಜಕಾರಣ-ಅಧಿಕಾರ- ಸೆಕ್ಸ್ನ ತ್ರಿಕೋನ ಜಾಲದಲ್ಲಿ ಕ್ರೀಡೆ ಸಿಲುಕೊಕೊಂಡಿರುವುದಂತೂ ನಿಜ. ಕೆಲವು ರಾಜಕಾರಣಿಗಳು ಕ್ರೀಡಾ ಸಂಸ್ಥೆಗಳಿಗೆ ಒಳಿತು ಮಾಡಿದವರೂ ಇರಬಹುದು. ಆದರೆ ಅವರನ್ನು ಗುರಾಣಿಯಾಗಿಸಿಕೊಂಡು ನೂರಾರು ರಾಜಕಾರಣಿಗಳು ಕ್ರೀಡಾಕ್ಷೇತ್ರವನ್ನು ಗಬ್ಬೆಬ್ಬಿಸುತ್ತಿರುವುದಂತೂ ನಿಜ. ವಿಶ್ವದಲ್ಲೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗುವತ್ತ ಸಾಗಿರುವ ಭಾರತವು ಒಲಿಂಪಿಕ್ ಸೇರಿ ಯಾವುದೇ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಕಳಪೆ ಪ್ರದರ್ಶನ ನೀಡಲು ಇಲ್ಲಿನ ಆಡಳಿತ ಸಂಸ್ಥೆಗಳಲ್ಲಿ ರಾಜಕಾರಣಿಗಳು ಸೇರಿಕೊಂಡು ವ್ಯವಸ್ಥೆಯನ್ನು ಹಾಳುಮಾಡಿರುವುದು ಕಾರಣವೇ ಹೊರತು ನಮ್ಮ ಕ್ರೀಡಾಪಟುಗಳ ಅಸಾಮರ್ಥ್ಯವಲ್ಲ. ಕ್ರೀಡಾ ಸಂಸ್ಥೆಗಳಲ್ಲಿ ರಾಜಕಾರಣಿಗಳಿಗೆ ಒಂದೆರಡು ಸ್ಥಾನ ನೀಡಬಹುದಾದರೂ ಅಧ್ಯಕ್ಷ, ಕಾರ್ಯದರ್ಶಿಯಂತಹ ಮುಖ್ಯ ಹುದ್ದೆಗಳನ್ನು ಮಾಜಿ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಕ್ರೀಡಾಪಡುಗಳು, ಕೋಚ್ಗಳು, ಆಡಳಿತದ ಅನುಭವವಿರುವ ನಿವೃತ್ತ ಅಧಿಕಾರಿಗಳಿಗೆ ನೀಡುವುದು ಒಳ್ಳೆಯದು.
ಕ್ರೀಡೆ ಎನ್ನುವುದು ಕ್ರೀಡಾಪಟುಗಳ ಬೆವರಿನ ಫಲವೇ ಹೊರತು ರಾಜಕಾರಣಿಗಳ ಆಡುಂಬೊಲ ಅಲ್ಲ. ರಿಕಿ ಪಾಂಟಿಂಗ್ ನಿರ್ದಾಕ್ಷಿಣ್ಯವಾಗಿ ತನ್ನ ಬೆವರು ಹನಿಯ ಫಲವಾದ ಚಾಂಪಿಯನ್ಸ್ ಕಪ್ಅನ್ನು ಕಿತ್ತುಕೊಂಡು ಕೆಳಗೆ ಕಳಿಸಿದ ರೀತಿ ಭಾರತದ ರಾಜಕಾರಣಗಿಳನ್ನು ಕ್ರೀಡಾ ಕ್ಷೇತ್ರದಿಂದ ಹೊರಗಟ್ಟುವ ಕಾರ್ಯ ಆದಷ್ಟು ಬೇಗ ಆಗಬೇಕು. ಇಲ್ಲದಿದ್ದರೆ ಯಾವುದೇ ಸರ್ಕಾರ ಕ್ರೀಡೆಗೆ ನೀಡುವ ಪ್ರೋತ್ಸಾಹಕ ನೀರಿನಲ್ಲಿ ಹೋಮ ಮಾಡಿದಂತೆ ಆಗುತ್ತದೆ.
ಇದನ್ನೂ ಓದಿ: D ಕೋಡ್ ಅಂಕಣ: ಬಿಜೆಪಿಗೆ ಲಿಂಗಾಯತ ಮತಗಳು ನಷ್ಟವಾಗಿಲ್ಲ ಎನ್ನುವುದು ಎಷ್ಟು ಸುಳ್ಳು? ಮೀಸಲು ಜೇನು ಕಚ್ಚಿದ್ದೆಷ್ಟು?
ಅಂಕಣ
ದಶಮುಖ ಅಂಕಣ: ನೆರಳಲ್ಲಿ ಅರಳಿದ ಚಿತ್ರಗಳು
ನೆರಳನ್ನು ಏನೆಂದು ಬಣ್ಣಿಸಬಹುದು? ಬಿಸಿಲಿನಲ್ಲಿ ಸುಡುವ ನೆತ್ತಿಯನ್ನು ತಣಿಸಿಕೊಳ್ಳುವುದಕ್ಕೆ ನೆರಳಿನ ಬಗೆಗೊಂದು ತಂಪಾದ ಹರಟೆಯಿದು.
ಈ ಅಂಕಣವನ್ನು ಇಲ್ಲಿ ಕೇಳಿ:
ಮನೆಯಾತ ಮತ್ತು ರಸ್ತೆಯಲ್ಲಿ ಕಾರು ನಿಲ್ಲಿಸಿದ್ದಾತನ ನಡುವೆ ಜೋರು ವಾಗ್ವಾದ ನಡೆಯುತ್ತಿತ್ತು-
ʻತಗೀರಿ ನಿಮ್ ಕಾರು ಅಂದ್ನಲ್ಲಾ. ಇನ್ನೂ ಇಲ್ಲೇ ನಿಲ್ಸಿದ್ರೆ ಸರಿ ಇರಲ್ಲʼ ಮನೆಯಾತ ಗೇಟಿನೊಳಗಿಂದಲೇ ಜಬರಿಸಿದ. ʻನಿಮ್ದೊಳ್ಳೆ ಕಥೆ! ನಿಮ್ ಗೇಟಿನ್ಮುಂದೆ ನಾನೇನು ನಿಲ್ಸಿಲ್ಲವಲ್ಲ. ಯಾಕ್ಸುಮ್ನೆ ಗಲಾಟೆ ಮಾಡ್ತೀರಿ?ʼ ಸಮರ್ಥಿಸಿಕೊಂಡ ಕಾರಿನೊಡೆಯ. ʻಗೇಟಿನ್ ವಿಷ್ಯನೇ ಅಲ್ಲ ಇದೀಗ. ಅಲ್ನೋಡಿ…ʼ ಎನ್ನುತ್ತಾ ಮನೆಯಾತ ರಸ್ತೆಯತ್ತ ಕೈತೋರಿದ. ʻಹೂಂ… ರಸ್ತೆ ಮೇಲೆ ನಿಲ್ಸಿದ್ದೀನಿ, ಏನೀಗ? ರಸ್ತೆ ಏನ್ ನಿಮ್ಮಪ್ಪುಂದಾ?ʼ ಈಗ ಕಾರಿನೊಡೆಯನೂ ದನಿಯೇರಿಸಿದ. ʻರಸ್ತೆಯಲ್ಲ, ರಸ್ತೆ ಮೇಲೆ ಬಿದ್ದಿರೊ ನೆರಳು ನಂದುʼ ಎಂದ ಮನೆಯಾತ! ಆತನ ಕಾಂಪೌಂಡಿನೊಳಗಿದ್ದ ಮರದ ನೆರಳು ರಸ್ತೆಯ ಮೇಲೆ ಹರಡಿಕೊಂಡಿತ್ತು. ಅದೇ ಕಾರಣಕ್ಕಾಗಿ ಕಾರಿನೊಡೆಯ ಅಲ್ಲಿ ಕಾರು ನಿಲ್ಲಿಸಿದ್ದ. ಅದೀಗ ಅವರ ಜಗಳಕ್ಕೆ ಮೂಲವಾಗಿತ್ತು. ಪಕ್ಕದ ಅಂಗಡಿಯಲ್ಲಿ ಕಿರಾಣಿ ವಸ್ತುಗಳನ್ನು ಹಾಕಿಸಲು ನಿಂತಿದ್ದ ನಮಗೆ ಇವರ ಜಗಳದಿಂದ ಪುಕ್ಕಟ್ಟೆ ಮನರಂಜನೆ. ಮಾತ್ರವಲ್ಲ, ಪ್ರೊ. ನಿಸಾರ್ ಅಹಮದ್ ಅವರ ಇದೇ ಧಾಟಿಯಲ್ಲಿರುವ ʻಹಕ್ಕುʼ ಎಂಬ ಕವನ ನೆನಪಾಯ್ತು.
ನೆರಳಿನ ಮೇಲೆ ಯಾರಾದರೂ ಹೀಗೆ ಹಕ್ಕುಸ್ವಾಮ್ಯ ಸಾಧಿಸಬಹುದೇ ಎಂಬ ಕುತೂಹಲ ಮೂಡಿದ್ದು ಆಗಲೇ. ಅವರವರ ನೆರಳೇ ಅವರಿಗೆ ಶಾಶ್ವತವಲ್ಲ ಎನ್ನುವಾಗ, ರಸ್ತೆ ಮೇಲೆ ಬಿದ್ದ ಮರದ ನೆರಳು ತನ್ನದೆನ್ನುವುದನ್ನು ಏನೆಂದು ಬಣ್ಣಿಸುವುದು? ಅದಕ್ಕೂ ಮೊದಲು, ನೆರಳನ್ನು ಏನೆಂದು ಬಣ್ಣಿಸಬಹುದು? ಅಮೂರ್ತವಾದದ್ದು ಎನ್ನೋಣವೇ? ಅದು ಮೂಲಮೂರ್ತಿಯ ಪಡಿಯಚ್ಚು ತಾನೇ? ಹಾಗಾದರೆ ಅಮೂರ್ತ ಹೇಗಾದೀತು? ಹಾಡು-ಕಥೆಯಂತೇನೂ ಅಲ್ಲವಲ್ಲ? ನೋಡಲು ದಕ್ಕಿದರೂ, ಹಿಡಿಯಲು ಸಿಕ್ಕದಲ್ಲಾ!… ಹೀಗೆ ತನ್ನಷ್ಟಕ್ಕೆ ಹರಿಯುತ್ತಿತ್ತು ತಲೆಯಲ್ಲಿ ಲಹರಿ. ಇನ್ನೂ ಪ್ರಾರಂಭವಾಗದ ಕಾರ್ಗಾಲವನ್ನೇ ನೆನಪಿಸಿಕೊಳ್ಳುತ್ತಾ, ಬಿಸಿಲಿನಲ್ಲಿ ಸುಡುವ ನೆತ್ತಿಯನ್ನು ತಣಿಸಿಕೊಳ್ಳುವುದಕ್ಕೆ ನೆರಳಿನ ಬಗೆಗೊಂದು ತಂಪಾದ ಹರಟೆಯಿದು.
ಬಾಲ್ಯದಿಂದ ಹಿಡಿದು ವಾರ್ಧಕ್ಯದವರೆಗಿನ ದಿನಗಳನ್ನು ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದವರೆಗಿನ ಅವಧಿಗೆ ಸಮೀಕರಿಸುವುದು ಸಾಮಾನ್ಯ. ಅದೇ ತರ್ಕವನ್ನು ಮುಂದುವರಿಸುತ್ತಾ ಹೋಗೋಣ. ಬೆಳಗು ಮತ್ತು ಸಂಜೆಯ ಸಮಯದಲ್ಲಿ ಸೂರ್ಯನ ಬಿಸಿಲು ಓರೆಯಾಗಿ ಬೀಳುವುದರಿಂದ ನೆರಳು ಉದ್ದವಾಗಿರುತ್ತದೆ. ನೆತ್ತಿಯ ಮೇಲೆ ಸೂರ್ಯ ಬಂದಾಗ, ಅಂದರೆ ಸುಡು-ಮಧ್ಯಾಹ್ನದ ನೆರಳು ಗಿಡ್ಡ. ನೆರಳು ಎಂಬುದಕ್ಕೆ ಆಶ್ರಯ ಎಂಬ ಅರ್ಥವೂ ಇದೆಯಲ್ಲ. ಆ ಧಾಟಿಯಲ್ಲಿ ಯೋಚಿಸಿದರೆ, ಬದುಕಿನ ಬೆಳಗು ಮತ್ತು ಸಂಜೆಯಲ್ಲಿ ಆಶ್ರಯ ಹೆಚ್ಚು ಬೇಕಾಗುತ್ತದೆ. ಸುಡು-ಯೌವನದಲ್ಲಿ ಆಶ್ರಯ ಗಿಡ್ಡವಾದರೂ ಅಡ್ಡಿಯಿಲ್ಲ ಎನ್ನೋಣವೇ!
ನಮ್ಮ ಜನಪದರ ಬದುಕಿನಲ್ಲಿ ನೆರಳು ಎಂಬುದು ಬಿಟ್ಟೂಬಿಡದೆ ಅವರನ್ನು ಹಿಂಬಾಲಿಸಿದೆ. ಗಡಿಯಾರಗಳು ವ್ಯಾಪಕವಾಗಿ ಬಳಕೆಯಲ್ಲಿ ಇಲ್ಲದ ಸಮಯದಲ್ಲಿ, ಬಿಸಿಲು ಮತ್ತು ನೆರಳು- ಸಮಯವನ್ನು ಅಳೆಯುವಂಥ ಮಾಪನಗಳಾಗಿದ್ದವು ಅವರ ಪಾಲಿಗೆ. ʻನಾಳೆ ಎಷ್ಟೊತ್ತಿಗೆ ಬರುವೆ?ʼ ಎಂಬ ಪ್ರಶ್ನೆಗೆ- ʻನೆರಳು ಮೈಮೇಲೆ ಬೀಳೋ ಹೊತ್ತಿಗೆ ಬರ್ತೀನಿ ಅಥವಾ ನೆರಳು ಉದ್ದ ಆಗೋ ಹೊತ್ತಿಗೆ ಬರ್ತೀನಿʼ ಎಂಬಂಥ ಮಾತುಗಳು ಸಾಮಾನ್ಯವಾಗಿದ್ದವು. ʻನನ್ನಯ್ಯನಂತೋರು ಹನ್ನೆರಡು ಮಕ್ಕಳು ಹೊಂಗೆಯ ಮರದಾ ನೆರಳಲ್ಲಿ/ ಹೊಂಗೆಯ ಮರದಾ ನೆರಳಲ್ಲಾಡುವಾಗ ಸನ್ಯಾಸಿ ಜಪವಾ ಮರೆತಾನʼ ಎಂಬ ತಾಯಿಯ ಭಾವದಲ್ಲಿ ಕಾಣುವುದು, ಮಕ್ಕಳು ಹೊಂಗೆಯ ನೆರಳಲ್ಲಿ ತಣ್ಣಗೆ ಆಡಿಕೊಂಡಿರುವ ಸಂಭ್ರಮವೇ ತಾನೇ. ಅದಕ್ಕಾಗಿಯೇ ಇರಬೇಕು, ʻಹೊಂಗೆಯ ನೆರಳು, ತಾಯಿಯ ಮಡಿಲುʼ ಎಂಬ ಲೋಕೋಕ್ತಿ ಪ್ರಚಲಿತದಲ್ಲಿರುವುದು.
ನಮ್ಮ ನಿತ್ಯ ಬದುಕಿನ ಎಷ್ಟೋ ಸಣ್ಣ-ಸರಳ ಸಂಗತಿಗಳು ನೆರಳಿನಿಂದ ಪ್ರಭಾವಿತವಾಗಿವೆ. ಉದಾ, ನಮ್ಮ ಭಾಷೆ. ನೆರಳು ಎಂಬುದನ್ನು ಛಾಯೆ, ಪ್ರತಿರೂಪ, ಆಸರೆ, ಆಶ್ರಯ ಎಂದೆಲ್ಲಾ ಅರ್ಥಗಳಲ್ಲಿ ಬಳಸುತ್ತೇವೆ. ʻಆತ ಕುಟುಂಬಕ್ಕೆ ನೆರಳಾದʼ ಎನ್ನುವಾಗ, ಆತ ಆಶ್ರಯ ನೀಡಿದ ಎನ್ನುವಂತೆ ಬಳಕೆಯಾದರೆ, ʻತಾಯಿಯ ನೆರಳಲ್ಲೇ ಮಗು ಬೆಳೆಯಿತುʼ ಎನ್ನುವಾಗ ಮಗು ಆಸರೆಯಲ್ಲಿ ಬೆಳೆದಿದೆ ಎಂಬ ಅರ್ಥವಿದೆ. ಹಾಗಾದರೆ ನೆರಳಾಗು ಮತ್ತು ನೆರಳಿನಲ್ಲಿರುವ ಎನ್ನುವ ಮೂಲಕ, ಒಂದೇ ಶಬ್ದ ಆಶ್ರಯದಾತ ಮತ್ತು ಆಶ್ರಿತ ಎಂಬ ಎರಡೂ ಭಾವಗಳನ್ನು ಹೊಮ್ಮಿಸುತ್ತದಲ್ಲ. ʻನೆರಳು ಬಿದ್ರೂ ಸಹಿಸಲ್ಲʼ ಎನ್ನುತ್ತಾ ಕೋಪ ತೋರುವವರೂ ಇದ್ದರೆ, ʻನನ್ನ ನೆರಳಿಗೂ ವಿಷಯ ಗೊತ್ತಾಗಿಲ್ಲʼ ಎನ್ನುತ್ತಾ ಸಿಕ್ಕಾಪಟ್ಟೆ ಗುಟ್ಟು ಮಾಡುವವರೂ ಇರಬಹುದು. ಆದರೆ ʻತನ್ನ ನೆರಳಿನಿಂದ ತಪ್ಪಿಸಿಕೊಂಡು ಓಡುತ್ತಿದ್ದʼ ಎನ್ನುವ ವಿವರಣೆ ಬಂದರೆ, ಅವರ ಮಾನಸಿಕ ಆರೋಗ್ಯದ ಬಗ್ಗೆ ಪ್ರಶ್ನೆಗಳೆದ್ದರೆ ಅಚ್ಚರಿಯಿಲ್ಲ.
ಕಪ್ಪು-ಬಿಳುಪು ಎನ್ನುವಂಥದ್ದೇ ಅರ್ಥದಲ್ಲಿ ನೆರಳು-ಬೆಳಕು ಎನ್ನುವ ಪದಗಳೂ ಬಳಕೆಯಾಗುತ್ತವೆ. ಈ ʻನೆರಳುʼ ಎಂಬುದು ಕೆಲವೊಮ್ಮೆ ʻಪ್ರಭಾವʼ ಆಗಿಯೂ ಕಾಡಿಸಬಹುದು. ಪ್ರಭಾವಿಗಳ ನೆರಳಿನಲ್ಲಿರುವಾಗ, ಬದುಕುವುದು ಸುಲಭವಾದರೂ ಬೆಳೆಯುವುದು ಕಷ್ಟ ಎಂಬ ಮಾತೇ ಇಲ್ಲವೇ. ಹಾಗಾಗಿಯೇ ದೊಡ್ಡ ಮರದ ನೆರಳಿನಲ್ಲಿ ಸಣ್ಣ ಸಸ್ಯಾದಿಗಳು ಬೆಳೆದಾವೇ ಹೊರತು, ಸಸಿಯೊಂದು ಬೆಳೆದು ಹೆಮ್ಮರವಾಗುವುದು ಕಷ್ಟ.
ಈ ನೆರಳಿಗೆ ವೈಜ್ಞಾನಿಕ ಮುಖವೂ ಢಾಳಾಗಿಯೇ ಇದೆ. ಅಂದರೆ, ನೆರಳನ್ನು ವೈಜ್ಞಾನಿಕವಾಗಿ ವ್ಯಾಖ್ಯಾನಿಸಿ ತಲೆತಿನ್ನುವ ಉದ್ದೇಶ ಖಂಡಿತಕ್ಕೂ ಇಲ್ಲ ಇಲ್ಲಿ. ಬದಲಿಗೆ ಕೆಲವು ಕುತೂಹಲಕರ ವಿದ್ಯಮಾನಗಳು ನೆನಪಾಗುತ್ತಿವೆ. ಮೊದಲಿಗೆ ಗ್ರಹಣಗಳು. ಸೂರ್ಯ, ಚಂದ್ರ ಮತ್ತು ಭೂಮಿಗಳ ನಡುವಿನ ನೆರಳು-ಬೆಳಕಿನಾಟವೇ ಚಂದ್ರ ಮತ್ತು ಸೂರ್ಯ ಗ್ರಹಣಗಳಿಗೆ ಕಾರಣ ಎಂಬುದು ಗೊತ್ತಿರುವಂಥದ್ದೇ. ಇನ್ನೊಂದು ಆಸಕ್ತಿಕರ ವಿದ್ಯಮಾನವೆಂದರೆ ಶೂನ್ಯನೆರಳಿನದ್ದು. ಸಾಮಾನ್ಯವಾಗಿ ವರ್ಷದಲ್ಲಿ ಎರಡು ಬಾರಿ ಶೂನ್ಯನೆರಳಿನ ದಿನ ಅಥವಾ ಶೂನ್ಯನೆರಳಿನ ಹೊತ್ತು ಸಂಭವಿಸುತ್ತದೆ. ನಿಗದಿತ ಕೋನದಲ್ಲಿ ಭೂಮಿ ಸೂರ್ಯನನ್ನು ಹಾಯುವಾಗ, ನಮ್ಮ ನೆರಳು ಸಂಪೂರ್ಣವಾಗಿ ನಮ್ಮ ಕಾಲಡಿಗೇ ಬಿದ್ದು ಶೂನ್ಯ ನೆರಳನ್ನು ಸೃಷ್ಟಿಸುತ್ತದೆ. ಸಾಮಾನ್ಯವಾಗಿ ಏಪ್ರಿಲ್ ತಿಂಗಳು ಮತ್ತು ಆಗಸ್ಟ್ ತಿಂಗಳಲ್ಲಿ ಶೂನ್ಯ ನೆರಳಿನ ಘಳಿಗೆಗಳನ್ನು ಕಾಣಬಹುದು.
ನೆರಳಿನ ಪರಿಸರದ ಆಯಾಮಗಳು ಹೇಳಿ ಮುಗಿಸಲಾರದಷ್ಟಿವೆ. ಕಾಲ್ನಡಿಗೆಯ ಹಾದಿಯುದ್ದಕ್ಕೂ ಸಾಲು ಮರಗಳನ್ನ ನೆಡಿಸುತ್ತಿದ್ದ ಹಿಂದಿನ ಕಾಲದ ಪರಿಸರ-ಸ್ನೇಹಿ, ಪ್ರಜಾವತ್ಸಲ ರಾಜರಿಂದ ಹಿಡಿದು, ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆಯಂಚಿನ ಮರಗಳನ್ನು ಬೀಳಿಸುತ್ತಿರುವ ಇಂದಿನಕಾಲದ ಪ್ರಭುಗಳವರೆಗೆ- ನೆರಳಿನ ಕಥೆಗಳನ್ನು ಹೇಳಿದಷ್ಟಕ್ಕೂ ತೀರುವುದಿಲ್ಲ. ನಿನ್ನೆಯಷ್ಟೇ ಮುಗಿದ ಪರಿಸರ ದಿನದಂದು ಮಣ್ಣಿಗೆ ಊರಲ್ಪಟ್ಟ ಸಸಿಗಳಲ್ಲಿ ಎಷ್ಟು ಬೆಳೆಯುತ್ತವೆ, ಎಷ್ಟು ಮಣ್ಣು ಕಚ್ಚುತ್ತವೆ ಎಂಬುದೂ ಗಮನಾರ್ಹ ಸಂಗತಿಯೇ. ಯಾವುದೇ ಸ್ವಾರ್ಥವಿಲ್ಲದೆ ಸಾಲು ಮರಗಳನ್ನು ನೆಡುವವರು, ಕಾನು ಬೆಳೆಸುವವರು, ಮರಗಳನ್ನೇ ದೇವರೆಂದು ಪೂಜಿಸುವವರು, ಪ್ರಭುತ್ವ ಉರುಳಿಸುವ ಮರಗಳನ್ನು ಅಪ್ಪಿಕೊಂಡು ಬದುಕಿಸುವವರು- ಇಂಥ ಎಷ್ಟೋ ಕಥೆಗಳನ್ನು ನಾವೆಲ್ಲ ಕೇಳಿರುತ್ತೇವೆ. ಲೋಕವೆಲ್ಲಾ ತಂಪಾಗಿರಲಿ ಎಂಬ ಕಾಳಜಿಯಿಂದ ನೆರಳು ಹೆಚ್ಚಿಸುವ ಕಾಯಕ ಮಾಡುವಂಥ ಎಲ್ಲರ ಹೊಟ್ಟೆಯೂ ತಣ್ಣಗಿರಲಿ.
ಅಲ್ಲೊಂದಿಲ್ಲೊಂದು ಪ್ರಸ್ತಾಪಗಳು ಬರುತ್ತಾ, ಕನ್ನಡ ಸಾಹಿತ್ಯವನ್ನೂ ನೆರಳು ತಂಪಾಗಿರಿಸಿದೆ. ʻತುಂಗೆ ದಡದಲ್ಲಿ ಹೊಂಗೆ ನೆರಳಲ್ಲಿ ಹರಟೆ ಹೊಡೆಯಬೇಕುʼ ಎಂದು ಬಯಸುತ್ತಾರೆ ಕವಿ ಸುಮತೀಂದ್ರ ನಾಡಿಗರು. ಈ ಮೂಲಕ ʻಹೊಂಗೆ ನೆರಳು ತಂಪು ಮತ್ತು ಆರಾಮದಾಯಕʼ ಎಂಬ ಜನಪ್ರಿಯ ಭಾವನೆಯನ್ನು ಮತ್ತೆ ನೆನಪು ಮಾಡುತ್ತಾರೆ. ಆದರೆ ಎಲ್ಲಕ್ಕಿಂತ ಪ್ರಧಾನವಾಗಿ ನೆನಪಾಗುವುದು ಪು.ತಿ. ನರಸಿಂಹಾಚಾರ್ ಅವರ ʻನೆರಳುʼ ಎಂಬ ಕವನ. ಇಂದಿನ ಬದುಕನ್ನು ಪುರಾಣದ ಚೌಕಟ್ಟಿನಲ್ಲಿಟ್ಟು ಶೋಧಿಸುವುದು ಪು.ತಿ.ನ ಅವರ ಶೈಲಿ. ಈ ಕವಿತೆಯೂ ಅದೇ ಜಾಡಿನಲ್ಲಿದೆ.
ಇದನ್ನೂ ಓದಿ: ದಶಮುಖ ಅಂಕಣ: ನೆಮ್ಮದಿಯೆಂಬ ಗಮ್ಯದ ಹಾದಿ ಯಾವುದು?
ʻಮೇಲೊಂದು ಗರುಡ ಹಾರುತಿಹುದು/ ಕೆಳಗದರ ನೆರಳು ಓಡುತಿಹುದು/ ಅದಕೆ ಅದರಿಚ್ಚೆ ಹಾದಿ/ ಇದಕು ಹರಿದತ್ತ ಬೀದಿʼ ಎನ್ನುವಂತೆ ಪ್ರಾರಂಭವಾಗುತ್ತದೆ. ಈ ಗರುಡ ಪಕ್ಷಿ ಮೇಲೆ ಹಾರಿದಾಗ, ಕೆಳಗಿನ ನೆಲ, ಮನೆ, ಕೊಳ, ಬಾವಿ, ಗಿಡ, ಗಂಟಿ, ತೆವರು, ತಿಟ್ಟು ಎನ್ನುವಂತೆ ಎಲ್ಲದರ ಮೇಲೂ ಅದರ ನೆರಳು ಆವರಿಸಿಕೊಳ್ಳುತ್ತದೆ. ಆದರೆ ಇಡೀ ಕವನದ ವಸ್ತು ನೆರಳೂ ಅಲ್ಲ, ಗರುಡವೂ ಅಲ್ಲ- ಬದಲಿಗೆ, ಗಾಂಧಿ. ಈ ಕವಿತೆಯ ಕೇಂದ್ರ ಪ್ರಜ್ಞೆಯಾದ ಗರುಡವನ್ನು ನಮ್ಮ ರಾಷ್ಟ್ರಪ್ರಜ್ಞೆಯಾದ ಗಾಂಧಿಗೆ ಸಮೀಕರಿಸಿದರೆ- ಎಲ್ಲೆಡೆ ಪಸರಿಸುವ ಅದರ ನೆರಳನ್ನು ಸ್ವಾತಂತ್ರ್ಯಕ್ಕಾಗಿ ಅವರನ್ನು ನೆರಳಿನಂತೆ ಹಿಂಬಾಲಿಸುವ ಕೋಟಿಕೋಟಿ ಅಹಿಂಸಾ ಸೇನಾನಿಗಳಿಗೆ ಹೋಲಿಸಲಾಗಿದೆ.
ಅಂತೂ ನೆರಳಲ್ಲಿ ಕುಳಿತು, ನೆರಳಿನ ಮೇಲೆಯೇ ಒಂದಷ್ಟು ಹರಟೆಯಾಯಿತು. ಈ ಲಹರಿಯೇನು ಇಲ್ಲಿಗೇ ಮುಗಿಯಲಿಲ್ಲ. ತಮ್ಮದೇ ನೆರಳನ್ನು ಫೋಟೋಗ್ರಾಫ್ ಮಾಡಿಕೊಳ್ಳುವ ಉತ್ಸಾಹಿಗಳು, ತಮ್ಮ ನೆರಳು ಎಂಬುದನ್ನು ತಿಳಿಯದೆ ಅದನ್ನು ಹಿಡಿಯ ಹೋಗುವ ಮಕ್ಕಳು, ನೆರಳಿರುವುದೇ ನಿದ್ದೆ ಮಾಡಲು ಎಂಬಂಥ ಸುಖಜೀವಿಗಳು, ನೆರಳಿಗೆ ಬಣ್ಣ ಇರುವುದೇ ಇಲ್ಲ ಎಂದು ವಾದಿಸುವವರು, ನೆರಳಿನ ಹಕ್ಕುಸ್ವಾಮ್ಯ ಸಾಧಿಸುವವರು- ಇಂಥ ಹಲವು ನಮೂನೆಯ ಜನರನ್ನು ಕಂಡಾಗಲೆಲ್ಲಾ ನೆರಳಲ್ಲಿ ಕುಳಿತು ಮತ್ತೆ ಹರಟುವ ಮನಸ್ಸಾಗುತ್ತದೆ. ಆದರೆ ಅಷ್ಟು ಪುರುಸೊತ್ತು ನಿಮಗೂ ಇರಬೇಕಲ್ಲ!
ಇದನ್ನೂ ಓದಿ: ದಶಮುಖ ಅಂಕಣ: ʻ… ನಿನ್ನ ಕಲೆಗೆ ಯಾವುದು ಭಾರʼ!
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ11 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ13 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಉತ್ತರ ಕನ್ನಡ21 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ16 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ23 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
-
ಪ್ರಮುಖ ಸುದ್ದಿ23 hours ago
ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?
-
ಕರ್ನಾಟಕ7 hours ago
Monsoon Season: ಮಂಗಳೂರು ವಿವಿ ಕಾಲೇಜಲ್ಲಿ ಕೈ ತೊಳೆಯೋಕೂ ನೀರಿಲ್ಲ; ರಜೆ ಕೊಟ್ಟ ಆಡಳಿತ ಮಂಡಳಿ!