ಧಾರ್ಮಿಕ
Shrut Panchami 2023 : ಇಂದು ಶ್ರುತ ಪಂಚಮಿ; ಏನಿದು ಪರ್ವ? ಆಚರಣೆಯ ವಿಶೇಷತೆ ಏನು?
ಜೈನ ಧರ್ಮ ಆಚರಿಸುವ ಪ್ರಮುಖ ಪರ್ವಗಳಲ್ಲಿ ‘ಶ್ರುತ ಪಂಚಮಿ’ (Shrut Panchami 2023) ಕೂಡ ಒಂದು. ಈ ಪರ್ವದ ಮಹತ್ವವೇನು? ಯಾವಾಗಿನಿಂದ ಆಚರಣೆ ಬಂತು? ಹೆಚ್ಚಿನ ಮಾಹಿತಿ ಇಲ್ಲಿದೆ.
ಜೈನ ಧರ್ಮ ಆಚರಿಸುವ ಪ್ರಮುಖ ಪರ್ವಗಳಲ್ಲಿ ‘ಶ್ರುತ ಪಂಚಮಿ’ (Shrut Panchami 2023) ಕೂಡ ಒಂದು. ಶ್ರುತ (ಶಾಸ್ತ್ರ) ಎಂದರೆ ತೀರ್ಥಂಕರರು ನೀಡಿದ ವಚನಗಳ ಅನುಸಾರ ರಚನೆಗೊಂಡ ಗ್ರಂಥಗಳು. ಇವು ಲಿಪಿಬದ್ಧವಾಗಿ ಪೂರ್ಣಗೊಂಡ ದಿನವೇ ಜ್ಯೇಷ್ಠ ಶುಕ್ಲ ಪಂಚಮಿ.
ಜೈನ ಧರ್ಮದ ಪ್ರಕಾರ ನಮ್ಮೆಲ್ಲರ ಜೀವನವು ಸದ್ಗತಿಯನ್ನು ಹೊಂದಬೇಕೆಂದರೆ ‘ಸಮ್ಯಕ್’ ಜ್ಞಾನವನ್ನು ‘ಜೀನೇಂದ್ರವಾಣಿ’ (ಜಿನವಾಣಿ) ಯಿಂದ ಪಡೆಯುವುದರ ಮೂಲಕ ಮಾತ್ರ ಸಾಧ್ಯ. ಸಾಕ್ಷಾತ್ ಜಿನೇಂದ್ರ (ತೀರ್ಥಂಕರ)ಭಗವಂತರಿಂದ ಹೊರಟ ಓಂಕಾರ ಸ್ವರೂಪಿ ದಿವ್ಯಧ್ವನಿಯೇ ‘ಜಿನವಾಣಿ’ಯಾಗಿದೆ. ತತ್ವದ ಸ್ವರೂಪವನ್ನು ಹೇಳುವಂತಹ ಈ ‘ಜಿನವಾಣಿ’ಯು ದ್ವಾದಶಂಗ ಸ್ವರೂಪವಾಗಿರುತ್ತದೆ.
ಜಿನವಾಣಿಗೆ ‘ಆಗಮ’ ಮತ್ತು ‘ಶಾಸ್ತ್ರ’ ಎಂಬ ಪರ್ಯಾಯವಾಚಿ ಶಬ್ದಗಳು ಇವೆ. ಆಚಾರ್ಯ ಪರಂಪರೆಯಿಂದ ಬಂದಂತಹ ಮೂಲ ಸಿದ್ಧಾಂತಗಳಿಗೆ ಆಗಮವೆಂದು ಕರೆಯುತ್ತಾರೆ. ಆಗಮ ಶಬ್ದದಲ್ಲಿ ಕೂಡಿರುವ ಮೂರು ಅಕ್ಷರಗಳ ಅರ್ಥವೇನೆಂದರೆ;
ಆ – ಆಪ್ತರ (ನಿಜವಾದ ದೇವರು) ಮೂಲಕ ಹೇಳಿರುವ
ಗ – ಗಣಧರರಿಂದ ಸಂಗ್ರಹಿಸಿರುವ
ಮ – ಮುನಿಗಳಿಂದ ಬರೆದು ವಿಚಾರಿಸಲ್ಪಟ್ಟು ಚಾರಿತ್ರ (ಆಚರಣೆಗೆ) ದಲ್ಲಿ ತಂದಿರುವುದು
ಶ್ರುತ ಎಂದರೇನು?
ತೀರ್ಥಂಕರರ ಮೂಲಕ ಉಪದೇಶಿಸಿದ, ಗಣಧರರಿಂದ ತಿಳಿಸಲ್ಪಟ್ಟ ಮತ್ತು ಆಚಾರ್ಯರ ಮೂಲಕ ಬರೆಯಲ್ಪಟ್ಟ ಸದ್ ಗ್ರಂಥಗಳನ್ನು ‘ಶಾಸ್ತ್ರ’ ಎಂದು ಕರೆಯುತ್ತಾರೆ. ‘ಶ್ರುತ’ ವೆಂದರೆ ತೀರ್ಥಂಕರರ ಮೂಲಕ ಹೇಳುವ ವಚನಗಳ ಅನುಸಾರ ಗಣಧರ ಮುಂತಾದವರ ಮೂಲಕ ಗ್ರಂಥಗಳ ರಚನೆಯಾಗಿದೆಯೋ ಅದನ್ನು ಶ್ರುತ (ಶಾಸ್ತ್ರ) ವೆನ್ನುತ್ತಾರೆ.
ಶ್ರುತ ದಲ್ಲಿ ಎರಡು ವಿಧಗಳಿವೆ;
1. ದ್ರವ್ಯ ಶ್ರುತ: ಅಕ್ಷರಾತ್ಮಕವಾಗಿರುವ ದ್ವಾದಶಾಂಗವು ‘ದ್ರವ್ಯ ಶ್ರುತ’ ವಾಗಿರುತ್ತದೆ.
2. ಭಾವಶ್ರುತ: ಜಿನೇಂದ್ರವಾಣಿಯನ್ನು ಕೇಳುವ ಮೂಲಕ ಯಾವ ಸ್ವಾನುಭವ ಅಥವಾ ಸ್ವಸಂವೇದನೆ ಜ್ಞಾನವುಂಟಾಗುತ್ತದೆಯೋ ಅದನ್ನು ‘ಭಾವಶ್ರುತ’ವೆನ್ನುತ್ತಾರೆ.
ಶ್ರುತವು ಮತ್ತೆ 2 ಪ್ರಕಾರವಾಗಿದೆ
1. ಅಂಗಪ್ರವಿಷ್ಟ: ಜಿನೇಂದ್ರವಾಣಿಯನ್ನು ಗಣಧರರು ರಚಿಸಿ, ಸೂತ್ರ, ಗ್ರಂಥದ ರೂಪದಲ್ಲಿರುವುದನ್ನು ದ್ವಾದಶಾಂಗ (14 ಪೂರ್ವ ಸಹಿತ) ಶ್ರುತವನ್ನು ಅಂಗಪ್ರವಿಷ್ಟವೆನ್ನುತ್ತಾರೆ.
2. ಅಂಗಬಾಹ್ಯ: ಮಂದಬುದ್ದಿಯಿರುವ ಶಿಷ್ಯರಿಗೆ ಅನುಕೂಲವಾಗಲೆಂದು ವಿಶಿಷ್ಟ ಜ್ಞಾನಿ ಆಚಾರ್ಯರ ಮೂಲಕ ರಚನೆಯಾದ ಶಾಸ್ತ್ರಗಳೇ ಅಂಗಬಾಹ್ಯಗಳು.
ಇದರಲ್ಲಿ ಸಾಮಾಯಿಕಾದಿ 14 ಭೇದಗಳು ಬರುತ್ತವೆ. ಹೀಗೆ ಜಿನೇಂದ್ರವಾಣಿಯು ಜ್ಞಾನದ ಹಸಿವಿರುವವರಿಗೆ ಅಮೃತ ಸಮಾನದಂತೆ ಜ್ಞಾನವನ್ನು ನೀಡುವಂತಹದ್ದಾಗಿದೆ. ಭಗವಾನ್ ಶ್ರೀಮಹಾವೀರರವರ ಉಪದೇಶಿಸಿದ ಆಗಮ ಸೂತ್ರಗಳು ಎಲ್ಲವೂ ಒಂದೆ. ಮೌಕಿಕವಾಗಿಯೇ ತೀಕ್ಷ್ಣಬುದ್ಧಿಯುಳ್ಳ ಸಾಧಕರ ಮೂಲಕ ಜ್ಞಾನಪರಂಪರೆ ಹರಿದು ಬಂದಿತು.
ಭಗವಾನ್ ಶ್ರೀ ಮಹಾವೀರರ ನಂತರ ಸುಮಾರು ಆರುನೂರು ವರ್ಷಗಳವರೆಗೆ ಅಖಂಡವಾಗಿ ಶ್ರುತ ಜ್ಞಾನವು ಸಂರಕ್ಷಿತವಾಗಿ ಬಂದಿತು. ಆಚಾರ್ಯ ಧರಸೇನರ (ಕ್ರಿ. ಶ. 1ರ ಆಸುಪಾಸು) ಕಾಲಕ್ಕೆ ಅದು ಪರಿವರ್ತನೆಯ ಹಾದಿಗೆ ಬಂತು ಎನ್ನುತ್ತದೆ ಇತಿಹಾಸ.
ಲಿಪಿ ಬದ್ಧವಾದ ಆಗಮ ಆಚಾರ್ಯ ಧರಸೇನರ ಸಮಯಕ್ಕೆ ಮನುಷ್ಯರ ಬುದ್ಧಿ ಮತ್ತೆಯಲ್ಲಿ ಕುಂಠಿತವಾಯಿತು. ತೀಕ್ಷ್ಣ ಬುದ್ಧಿಯ ಶಿಷ್ಯರ ಕೊರತೆ ಬಂದಾಗ, ಆಗಮವನ್ನು ಲಿಪಿಬದ್ಧಗೊಳಿಸಲು ಚಿಂತಿಸಿದರು. ಅಂತೆಯೇ ನಾನಾ ಪರೀಕ್ಷೆಗಳನ್ನು ಮಾಡಿ ಭೂತಬಲಿ ಮತ್ತು ಪುಷ್ಪದಂತ ಮುನಿಗಳಿಗೆ ಆಗಮ ಸೂತ್ರಗಳನ್ನು ಹೇಳುವ ಮೂಲಕ ಅದನ್ನು ಲಿಪಿಬದ್ಧ ಮಾಡಿಸಿದರು.
ದ್ವಾದಶಾಂಗವು ಲಿಪಿಬದ್ಧವಾಗಿ ‘ಶಾಸ್ತ್ರ ’ ರೂಪಧರಿಸಿತ್ತು. ನಂತರದ ವರ್ಷಗಳಲ್ಲಿ ಆ ಷಟ್ ಖಂಡಾಗಮ ಸೂತ್ರಗಳಿಗೆ ಟೀಕಾ ಗ್ರಂಥಗಳ ರಚನೆಯಾದವು. ಹೀಗೆ ಆಗಮ ಸೂತ್ರಗಳು ಲಿಪಿಬದ್ಧವಾಗಿ ಪೂರ್ಣಗೊಂಡ ದಿನವೇ ಜ್ಯೇಷ್ಠ ಶುಕ್ಲ ಪಂಚಮಿ. ಅದನ್ನೇ ‘ಶ್ರುತಪಂಚಮಿ’ ಪರ್ವ ವೆಂದು ಕರೆಯುತ್ತಾರೆ. ಈ ಪರಮಾಗಮ ಗ್ರಂಥವು ಪ್ರಾಕೃತ ಭಾಷೆಯಲ್ಲಿದೆ.
ಇದು ಉಪಕಾರ ದಿವಸ
ಪೂರ್ವಾಚಾರ್ಯರ ಪರೋಪಕಾರ ಇಂದು ನಾವೇನಾದರೂ ಜಿನಧರ್ಮದಲ್ಲಿ ಆಸಕ್ತಿಯಿಟ್ಟು ಶಾಸ್ತ್ರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆಯೆಂದರೆ ಅದು ಪೂರ್ವಾಚಾರ್ಯರ ಪರೋಪಕಾರವಾಗಿದೆ. ಈ ಸಂಸಾರದಲ್ಲಿ ಪ್ರಸ್ತುತ ಭರತ ಭೂಮಿಯಿಂದ ಮುಕ್ತಿ ಲಭ್ಯವಿಲ್ಲವೆಂದು ಶಾಸ್ತ್ರದಲ್ಲಿ ಹೇಳಿದ್ದರೂ ಮುಂದಿನ ಸದ್ಗತಿಗೆ ಬೇಕಾಗುವ ಉಪಾಯವನ್ನು ಈ ಆಗಮ ಗ್ರಂಥಗಳು ತಿಳಿಸುತ್ತವೆ. ಆಚಾರ್ಯರ ಉಪಕಾರ ಮರೆಯಲು ಅಸಾಧ್ಯ, ಈ ದಿನವನ್ನು ‘ಉಪಕಾರ ದಿವಸ’ ವೆಂದು ಕರೆದರೂ ತಪ್ಪಾಗಲಾರದು.
ನಮ್ಮ ಅಜ್ಞಾನವನ್ನು ತೊರೆಯಲು, ಈ ಆಗಮ ಜ್ಞಾನದಿಂದ ಸಾಧ್ಯವಿದೆ. ಒಳ್ಳೆಯ ಸಂಸ್ಕಾರವಂತರಾಗಿ ಜೀವನವನ್ನು ಸದಾಚಾರ, ಸದ್ವಿಚಾರಗಳೊಂದಿಗೆ ಬದುಕುವ ಅಭ್ಯಾಸ ನಮ್ಮದಾಗಲಿ ಎಂಬ ಆಶಯ ಈ ʼಶ್ರುತ ಪಂಚಮಿʼ ಯದ್ದು.
ಇದನ್ನೂ ಓದಿ: Prerane : ಸ್ಮೃತಿ, ವಿಸ್ಮೃತಿ, ಸಂಸ್ಕೃತಿ; ಇವುಗಳ ನಡುವಿನ ಸಂಬಂಧವೇನು?
ಧಾರ್ಮಿಕ
Prerane : ಕನ್ಯೆ ಎಂದರೆ ಯಾರು? ಈ ಪದಕ್ಕಿರುವ ಮಹತ್ವವೇನು?
“ಪ್ರೇರಣೆʼʼ (Prerane) ಇದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತುವ ಬೆಳಗಿನ ಹೊಳಹು. ಪ್ರತಿ ನಿತ್ಯ ಧಾರ್ಮಿಕ ಚಿಂತಕರು, ಪ್ರವಚನಕಾರರು, ಆಧ್ಯಾತ್ಮ ಚಿಂತಕರು ಇಲ್ಲಿ ಬರೆಯುತ್ತಿದ್ದಾರೆ. ಕನ್ಯೆ ಪದದ ಮಹತ್ವವನ್ನು ತಿಳಿಸುವ ಲೇಖನ ಇಲ್ಲಿದೆ.
ನರಸಿಂಹ ಭಟ್ಟ
ಅನೇಕ ಸಹಸ್ರಮಾನಗಳಿಂದಲೂ ಭಾರತೀಯ ಸಂಸ್ಕೃತಿಯು ವಿಶಿಷ್ಟಸ್ಥಾನವನ್ನು ಪಡೆದುಕೊಂಡಿದೆ. ಅದಕ್ಕೆ ಕಾರಣ ಪ್ರಕೃತಿ. ‘ದ್ವಿಧಾ ಕೃತ್ವಾ ಆತ್ಮನೋ ದೇಹಮ್ ಅರ್ಧೇನ ಪುರುಷೋಽಭವತ್ ಅರ್ಧೇನ ನಾರೀ’ ಎಂದು ಉಪನಿಷತ್ತು ಕೂಡಾ ಪ್ರಕೃತಿಯ ಪ್ರಾಧಾನ್ಯವನ್ನು ಪ್ರತಿಪಾದಿಸುತ್ತದೆ. ಪ್ರಕೃತಿ ಇಲ್ಲದೆ ಪುರುಷನಿಗೆ ಚೈತನ್ಯವಿಲ್ಲ. ಆದ್ದರಿಂದ ನಮ್ಮ ಪರಂಪರೆಯೂ ಕೂಡಾ ಪ್ರಕೃತಿಗೆ ಚೈತನ್ಯದಾಯಿತ್ವವನ್ನು ಪ್ರತಿಪಾದಿಸುತ್ತದೆ. ಈ ಪ್ರಕೃತಿಯು ನಾನಾ ದೆಶೆಯನ್ನು ಪಡೆಯುತ್ತದೆ. ಅವುಗಳಲ್ಲಿ ಮೊದಲನೆಯದೇ ‘ಕನ್ಯಾ’ ಎಂದು. ಆದಕಾರಣ ಕನ್ಯೆಯ ಸ್ವರೂಪ ಸ್ವಭಾವ ಮತ್ತು ಅದರ ಕಾರ್ಯಕ್ಷೇತ್ರವನ್ನು ಅನುಸಂಧಾನ ಮಾಡಬೇಕಾಗಿದೆ.
‘ಕನ –ದೀಪ್ತೌ’ ಧಾತುವಿಗೆ ‘ಯಕ್’ ಎಂಬ ಉಣಾದಿಪ್ರತ್ಯಯವನ್ನು ಸೇರಿಸಿದಾಗ ಕನ್ಯಾ ಎಂಬ ಶಬ್ದವು ಕುಮಾರೀ ಎಂಬ ಅರ್ಥವನ್ನು ಕೊಡುತ್ತದೆ. ‘ಕನ್ಯಾಯಾಃ ಕನೀನ ಚ’ ಎಂಬ ಪಾಣಿನಿ ಸೂತ್ರಪ್ರಕಾರವಾಗಿ ಇಲ್ಲಿ ‘ಙೀಷ್’ ಎಂಬ ಸ್ತ್ರೀ ಪ್ರತ್ಯಯದ ಬದಲಾಗಿ ‘ಟಾಪ್’ ಎಂಬ ಪ್ರತ್ಯಯವು ಬರುತ್ತದೆ. ಕನ್ಯಾ ಶಬ್ದವು ಹನ್ನೆರಡು ರಾಶಿಗಳಲ್ಲಿ ಒಂದಾಗಿಯೂ ಮತ್ತು ಒಂದು ಬಗೆಯ ಓಷಧಿ ಎಂಬ ಅರ್ಥವನ್ನೂ ಸುತಾ ಮೊದಲಾದ ಅರ್ಥಗಳಲ್ಲಿಯೂ ಬಳಕೆಯಲ್ಲಿದೆ.
ವಿಶೇಷವಾಗಿ ಕನ್ಯಾ ಶಬ್ದಕ್ಕೆ ದೀಪ್ತಿಮತೀ-ಕಾಂತಿ ಉಳ್ಳವಳು ಎಂಬ ಅರ್ಥವನ್ನು ನಾವಿಲ್ಲಿ ತೆಗೆದುಕೊಳ್ಳೋಣ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಶ್ರದ್ಧಾಳುಗಳಾದ ನಾವು ಪ್ರತಿದಿನ ಬೆಳಗ್ಗೆ ಎದ್ದು ಈ ಶ್ಲೋಕವನ್ನು ಪಠಿಸುತ್ತೇವೆ;
ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ |
ಪಂಚಕನ್ಯಾಃ ಸ್ಮರೇನ್ನಿತ್ಯಂ ಮಹಾಪಾತಕನಾಶನಮ್ ||
ಎಂದು. ಈ ಕನ್ಯೆಯರು ನಮಗೆ ಆದರ್ಶರು. ಯಾಕೆ ಇಷ್ಟು ಆದರ್ಶರು? ಎಂಬುದಕ್ಕೆ ಅಷ್ಟಾಂಗಯೋಗ ವಿಜ್ಞಾನಮಂದಿರದ ಸಹಜಾಧ್ಯಕ್ಷರೂ ಯೋಗಿಗಳೂ ಆದ ಶ್ರೀರಂಗ ಮಹಾಗುರುಗಳು ಇವರ ಕನ್ಯಾ ಶ್ರೇಷ್ಠತ್ವವನ್ನು ವಿವರಿಸಿರುವುದನ್ನು ನೋಡಿದರೆ ಅವರ ಮೇಲೆ ನಮ್ಮ ಗೌರವ ಇಮ್ಮಡಿಯಾಗುವುದು. “ಸಾಮಾನ್ಯವಾಗಿ ವಿವಾಹದ ಅನಂತರದಲ್ಲಿ ಕನ್ಯೆಯರ ದೀಪ್ತಿಯು ನಶಿಸುತ್ತಾ ಹೋಗುತ್ತದೆ. ಆದರೆ ಅಹಲ್ಯಾದಿ ಈ ಕನ್ಯೆಯರ ಕಾಂತಿಯು ದಿನದಿಂದ ದಿನಕ್ಕೆ ದೇದೀಪ್ಯಮಾನವಾಗಿ ಹೋಗುತ್ತಿತ್ತು. ಇದಕ್ಕಾಗಿಯೇ ಇವರು ಪ್ರಾತಃಸ್ಮರಣೀಯರು. ಯಾರು ಆತ್ಮ ದೀಪ್ತಿಯ ಕಡೆಗೆ ಆಕರ್ಷಿಸುತ್ತಾರೋ ಅವರು ಪ್ರಾತಃಸ್ಮರಣೀಯರಾಗುತ್ತಾರೆ” ಎಂಬುದಾಗಿ. ಆದ್ದರಿಂದಲೇ ಭಾರತೀಯ ಪರಂಪರೆಯು ಕನ್ಯೆಗೆ ಅನುಪಮ ಮರ್ಯಾದೆಯನ್ನು ಕೊಟ್ಟಿದೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಭಾರತೀಯರ ವಿವಾಹ ಸಂದರ್ಭದಲ್ಲಿ ಈ ವಿಷಯ ಅತ್ಯಂತ ಸ್ಪಷ್ಟವಾಗುತ್ತದೆ. ಅಲ್ಲಿ ಕನ್ಯೆಯ ತಂದೆಯಾದವನು ಈ ರೀತಿಯಾಗಿ ಸಂಕಲ್ಪ ಮಾಡುತ್ತಾನೆ. “ಲಕ್ಷ್ಮೀರೂಪಾಮ್ ಇಮಾಂ ಕನ್ಯಾಂ ಶ್ರೀಧರರೂಪಿಣೇ ವರಾಯ ಪ್ರದಾಸ್ಯಾಮಿ’ʼ ಎಂದು. ಕನ್ಯೆಯಲ್ಲಿ ಲಕ್ಷ್ಮಿಯನ್ನೋ ಪಾರ್ವತಿಯನ್ನೋ ಸರಸ್ವತಿಯನ್ನೊ ಭಾವಿಸುತ್ತಾರೆ. ಮತ್ತು ಎಲ್ಲಿ ಸ್ತ್ರೀಯರಿಗೆ ಸಮಾಜವು ಗೌರವಿಸುವುದೋ ಅಲ್ಲಿ ಸಕಲ ದೇವತೆಗಳೂ ನಲಿದು ನರ್ತಿಸುತ್ತಾರೆ. ಈ ಕಾರಣದಿಂದಲೇ ತಾಯಿಗೆ ಮೊದಲ ಪೂಜೆ ಸಲ್ಲುತ್ತದೆ; “ಮಾತೃದೇವೋ ಭವ | ಲಕ್ಷ್ಮೀನಾರಾಯಣಾಭ್ಯಾಂ ನಮಃ ಉಮಾಮಹೇಶ್ವರಾಭ್ಯಾಂ ನಮಃ ವಾಣೀವಿಧಾತೃಭ್ಯಾಂ ನಮಃ ಅರುಂಧತೀವಸಿಷ್ಠಾಭ್ಯಾಂ ನಮಃ” ಇತ್ಯಾದಿಯಾಗಿ. ಕೊನೆಯದಾಗಿ ಹೇಳುವುದಾರೆ ಕಾಂತಿಮತ್ವ ಮತ್ತು ಆತ್ಮದೀಪ್ತಿಕರ್ಷಣದಂತಹ ಅನೇಕ ಸದ್ಗುಣಗಳ ಗಣಿಯಾಗಿರುವುದರಿಂದ ಕನ್ಯೆಗೆ ಮಹತ್ವ ಬಂದಿದೆ.
– ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
ಅಷ್ಟಾಂಗಯೋಗ ವಿಜ್ಞಾನಮಂದಿರಂ
ದೇಶ
Sharada Devi Idol: ತಿತ್ವಾಲ್ ಶಾರದಾ ದೇವಿ ದೇಗುಲಕ್ಕೆ ಶೃಂಗೇರಿ ವಿಧುಶೇಖರ ಭಾರತೀ ಶ್ರೀಗಳ ಭೇಟಿ
ಜನವರಿ 24ರಂದು ಶೃಂಗೇರಿಯಿಂದ ಹೊರಟಿದ್ದ ಪಂಚಲೋಹದ ಶಾರದಾಂಬೆ ಮೂರ್ತಿಯ ರಥಯಾತ್ರೆಗೆ ಶೃಂಗೇರಿಯ ಗುರುತ್ರಯರು ಪೂಜೆ ಸಲ್ಲಿಸಿ ಚಾಲನೆ ನೀಡಿದ್ದರು.
ಚಿಕ್ಕಮಗಳೂರು: ತಿತ್ವಾಲ್ನಲ್ಲಿ ಹೊಸದಾಗಿ ಸ್ಥಾಪಿಸಲಾಗಿರುವ ಶಾರದಾಂಬೆ ದೇವಾಲಯಕ್ಕೆ (sharadamba temple) ಶೃಂಗೇರಿ ಜಗದ್ಗುರು ವಿಧುಶೇಖರ ಭಾರತೀ ಶ್ರೀಗಳು (Sri Vidhushekhara Bharati) ಭೇಟಿ ನೀಡಿ ಪೂಜೆ ಸಲ್ಲಿಸಿದರು.
ತಿತ್ವಾಲ್ನಲ್ಲಿದ್ದ ಪುರಾತನ ಶಾರದಾಂಬಾ ದೇವಾಲಯ ಪಾಳುಬಿದ್ದಿತ್ತು. ಇದು ಪಾಕ್ ಆಕ್ರಮಿತ ಪ್ರದೇಶದಲ್ಲಿದೆ. ಇಲ್ಲಿನ ಶಾರದಾಂಬಾ ದೇವಾಲಯವನ್ನು ನವೀಕರಣ ಮಾಡಲಾಗಿದ್ದು, 75 ವರ್ಷಗಳ ಬಳಿಕ ಇಲ್ಲಿ ಶಾರದಾಂಬೆ ಮೂರ್ತಿಯ ಪ್ರತಿಷ್ಠಾಪನೆಯಾಗಿದೆ.
ಜನವರಿ 24ರಂದು ಶೃಂಗೇರಿಯಿಂದ ಹೊರಟಿದ್ದ ಪಂಚಲೋಹದ ಶಾರದಾಂಬೆ ಮೂರ್ತಿಯ ರಥಯಾತ್ರೆಗೆ ಶೃಂಗೇರಿಯ ಗುರುತ್ರಯರು ಪೂಜೆ ಸಲ್ಲಿಸಿ ಚಾಲನೆ ನೀಡಿದ್ದರು. ಶೃಂಗೇರಿಯಿಂದ 4000 ಕಿ.ಮೀ. ದೂರದಲ್ಲಿರುವ ತಿತ್ವಾಲ್ನ ದೇವಾಲಯವನ್ನೂ ಶ್ರೀ ಆದಿ ಶಂಕರಾಚಾರ್ಯರು ಸ್ಥಾಪಿಸಿದ್ದರು ಎಂಬ ಇತಿಹಾಸ ಇದೆ. ವಿಶೇಷ ವಿಮಾನದಲ್ಲಿ ಕಾಶ್ಮೀರ ತಲುಪಿ, ಅಲ್ಲಿಂದ ತಿತ್ವಾಲ್ಗೆ ಭೇಟಿ ನೀಡಿದ ವಿಧುಶೇಖರ ಭಾರತೀ ಶ್ರೀಗಳಿಂದ ಶಾರದಾಂಬೆಗೆ ವಿಶೇಷ ಪೂಜೆ ನೆರವೇರಿತು.
ಇದನ್ನೂ ಓದಿ: Sharada Devi Idol: ಶೃಂಗೇರಿಯಿಂದ ತೀತ್ವಾಲ್ನತ್ತ ಹೊರಟಿದ್ದಾಳೆ ʻಕಾಶ್ಮೀರ ಪುರವಾಸಿನಿʼ; ಮಾ. 24ರಂದು ಪ್ರತಿಷ್ಠಾಪನೆ
ಧಾರ್ಮಿಕ
ತಾತಯ್ಯ ತತ್ವಾಮೃತಂ : ನಿನ್ನ ನಾಮದ ಬಲವೊಂದಿದ್ದರೇ ಸಾಕೋ…!
ಅವಸಾನ ಕಾಲ ಎಂದರೆ ಮರಣಕಾಲದ ಸಮಯದಲ್ಲಿ ಹಾದಿಯನ್ನು ತೋರುತ್ತದೆ ನಾಮಸ್ಮರಣೆ ಎನ್ನುತ್ತಿದ್ದಾರೆ ಶ್ರೀ ಕ್ಷೇತ್ರ ಕೈವಾರದ ಧರ್ಮಾಧಿಕಾರಿ ಡಾ. ಎಂ.ಆರ್. ಜಯರಾಮ್. ತಾತಯ್ಯರ ವಚನಗಳ ಒಳಾರ್ಥವನ್ನು ತಿಳಿಸುವ ಅವರ ಅಂಕಣ ಬರಹ ʻತಾತಯ್ಯ ತತ್ವಾಮೃತಂʼ ಇಲ್ಲಿದೆ.
“ನಿನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೇ ಸಾಕೋ” ಎಂದು ದಾಸಶ್ರೇಷ್ಠರಾದ ಪುರಂದರದಾಸರು ಪರಮಾತ್ಮನ ನಾಮಸ್ಮರಣೆಯ ಮಹತ್ವವನ್ನು ಸಾರಿ ಹೇಳಿದ್ದಾರೆ. ಹುಟ್ಟು ಸಾವುಗಳೆಂಬ ಭವರೋಗವನ್ನು ಪರಿಹರಿಸುವ ಶಕ್ತಿ ಪರಮಾತ್ಮನ ನಾಮಸ್ಮರಣೆಗೆ ಇದೆ. ನಾಮಸ್ಮರಣೆಯ ಮಹಿಮೆಯನ್ನು ತಮ್ಮ ಕೀರ್ತನೆಯಲ್ಲಿ ಕೈವಾರದ ತಾತಯ್ಯನವರು ಹೀಗೆ ಹೇಳಿದ್ದಾರೆ.
“ಆತ್ಮಧ್ಯಾನಿಸೋ ಮನುಜ ಹರಿಪುಣ್ಯನಾಮ
ಬಲವಂತವಾದ ಭವಹರ ಮಾಡೋ ನಾಮ” ಎಂದಿದ್ದಾರೆ.
ಆತ್ಮದಲ್ಲಿ ಪರಮಾತ್ಮನ ಪುಣ್ಯವಾದ ನಾಮಸ್ಮರಣೆಯನ್ನು ಮಾಡು, ಇದು ಎಷ್ಟು ಪ್ರಭಾವಶಾಲಿಯಾದದು ಎಂದರೆ ಎಷ್ಟೋ ಸಾವಿರಾರು ವರ್ಷಗಳಿಂದ ಇರುವ ಹುಟ್ಟುಸಾವಿನ ಚಕ್ರವನ್ನೇ ನಾಶ ಮಾಡಿ, ಭವಹರ ಮಾಡುವ ಶಕ್ತಿ ನಾಮಸ್ಮರಣೆಗೆ ಇದೆ ಎನ್ನುತ್ತಾರೆ ತಾತಯ್ಯನವರು. ನಾಮಸ್ಮರಣೆ ಮಾಡು ಎಂದು ಹೇಳಿ ತಾತಯ್ಯನವರು ಸುಮ್ಮನಾಗುವುದಿಲ್ಲ. ನಮಗೆ ಅಂತರಂಗದಲ್ಲಿ ಮಾಡುವ ನಾಮಸ್ಮರಣೆಯ ಮಹಿಮೆಯನ್ನು ಅರ್ಥಮಾಡಿಸಲು ಉದಾಹರಣೆಯ ಸಹಿತವಾಗಿ ತಿಳಿಸಿಕೊಡುತ್ತಾರೆ.
ಘೋರಪಾತಕ ಅಜಾಮಿಳನ ಸಲಹಿದ ನಾಮ
ವಾಲ್ಮೀಕಿಮುನಿಗೆ ವರಕೊಟ್ಟ ನಾಮ
ದಾಸಿ ಮಗನಿಗೆ ತನ್ನ ಮಹಿಮೆ ತೋರಿದ ನಾಮ
ದ್ರೌಪದಿಯ ಮಾನಭಂಗ ಕಾಯ್ದ ನಾಮ||
ಆಜಾಮಿಳನು ಮಾಡಿರುವ ಪಾಪಗಳನ್ನು ಕಂಡು ತಾತಯ್ಯನವರು ಅವನನ್ನು ಘೋರಪಾತಕ ಎಂದಿದ್ದಾರೆ. ಭಾಗವತದ ಆರನೇಯ ಸ್ಕಂದದಲ್ಲಿ ಬರುವ ಆಜಾಮಿಳನ ಕಥೆಗೆ ಬಹಳ ಮಹತ್ವವಿದೆ. ಅಜಾಮಿಳನು ತಂದೆ, ತಾಯಿ ಮತ್ತು ಹೆಂಡತಿಯನ್ನು ತ್ಯಜಿಸಿ, ಅನ್ಯಸ್ತ್ರೀಯ ಸಂಪರ್ಕವನ್ನು ಮಾಡಿ, ದುರಾಚಾರದಿಂದ ಮಾಡಬಾರದ ಪಾಪಗಳನ್ನು ಮಾಡಿರುತ್ತಾನೆ. ಕೊನೆಗೆ ತನ್ನ ಮರಣದ ಸಂದರ್ಭದಲ್ಲಿ ಪರಮಾತ್ಮನ ನಾಮಸ್ಮರಣೆಯಿಂದ ಕೂಡಿದ ಮಗನ ಹೆಸರನ್ನು ಕರೆದು ಮುಕ್ತಿಯನ್ನು ಹೊಂದುತ್ತಾನೆ. ಇದರಿಂದ ನಮಗೆ ತಿಳಿಯುವುದೆನೆಂದರೆ ಪರಮಾತ್ಮನಿಗೂ, ಪರಮಾತ್ಮನ ನಾಮಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಹೃದಯದ ಭಾವನೆಗೆ ತಕ್ಕಂತೆ ಒಲಿಯುವವನು ಪರಮಾತ್ಮ..
ವಾಲ್ಮೀಕಿ ಮಹರ್ಷಿ ಶ್ರೇಷ್ಠವಾದ ರಾಮಾಯಣದ ಕರ್ತೃ. ರಾಮನಾಮ ಸ್ಮರಣೆಯಿಂದ ತನ್ನ ಪೂರ್ವಕರ್ಮಗಳೆಲ್ಲವನ್ನೂ ನಾಶಪಡಿಸಿಕೊಂಡು ಜ್ಞಾನಿಯಾಗಿ, ರಾಮನಾಮವನ್ನೇ ಮನಸ್ಸಿನಲ್ಲಿ ಸ್ಥಿರವಾಗಿ ನಿಲ್ಲಿಸಿ ಹುತ್ತದಿಂದ ಹೊರಬಂದವರು ವಾಲ್ಮೀಕಿ ಮಹರ್ಷಿಗಳು. ಈ ಕಾರಣದಿಂದಲೇ ತಾತಯ್ಯನವರು ವಾಲ್ಮೀಕಿ ಮುನಿಗೆ ವರಕೊಟ್ಟ ನಾಮ ಎಂದಿದ್ದಾರೆ.
ದಾಸಿಮಗನಿಗೆ ತನ್ನ ಮಹಿಮೆ ತೋರಿದ ನಾಮ ಎಂದಿದ್ದಾರೆ ತಾತಯ್ಯನವರು. ಹಸ್ತಿನಾಪುರದ ರಾಣಿಯರಾದ ಅಂಬಿಕ ಮತ್ತು ಅಂಬಾಲಿಕೆಯರ ದಾಸಿಯ ಪುತ್ರ ವಿದುರ. ವಿದುರನು ದಾಸಿಯ ಪುತ್ರನಾದ ಕಾರಣ ರಾಜನೆಂದು ಪರಿಗಣಿಸಲಿಲ್ಲ. ಆದರೆ ಪರಮಾತ್ಮನ ಮಹಾಭಕ್ತ. ನೀತಿ ಮತ್ತು ಸತ್ಯವನ್ನು ಹೇಳುವುದರಲ್ಲಿ ನಿಪುಣನಾಗಿದ್ದನು. ತನ್ನ ನೀತಿ ಮಾತುಗಳಿಂದ ಪಾಂಡವರನ್ನು ಎಚ್ಚರಿಸುತ್ತಿದ್ದನು. ರಾಯಭಾರಕ್ಕೆಂದು ಶ್ರೀಕೃಷ್ಣನು ಹಸ್ತಿನಾಪುರಕ್ಕೆ ಬಂದಾಗ ಯಾರ ಆತಿಥ್ಯವನ್ನೂ ಸ್ವೀಕರಿಸದೆ ನೇರವಾಗಿ ವಿದುರನ ಮನೆಗೆ ತೆರಳುತ್ತಾನೆ. ಇದು ನನ್ನ ಸೌಭಾಗ್ಯವೆಂದು ತಿಳಿದ ವಿದುರನು ಶ್ರೀಕೃಷ್ಣ ಪರಮಾತ್ಮನನ್ನು ಸ್ವಾಗತಿಸಿ ಅತಿಥ್ಯವನ್ನು ನೀಡುತ್ತಾನೆ.
ಶ್ರೀಕೃಷ್ಣನು ಬಂದನೆಂಬ ಸಂತೋಷದಲ್ಲಿ ಬಾಳೆಹಣ್ಣನ್ನು ನೀಡುವಾಗ ಹಣ್ಣನ್ನು ಬಿಸಾಕಿ, ಮೇಲಿನ ಸಿಪ್ಪೆಯನ್ನು ಕೃಷ್ಣನಿಗೆ ನೀಡುತ್ತಾನೆ. ಆಗ ಶ್ರೀಕೃಷ್ಣನು ಅವನ ಅಂತರAಗದ ಮುಗ್ಧ ಭಕ್ತಿಯನ್ನು ಕಂಡು ಸಿಪ್ಪೆಯನ್ನೇ ಸ್ವೀಕರಿಸಿ ಅವನನ್ನು ಹರಸಿ ಹಾರೈಸುತ್ತಾನೆ. ಇದನ್ನೇ ತಾತಯ್ಯನವರು ದಾಸಿಮಗನಿಗೆ ತನ್ನ ಮಹಿಮೆ ತೋರಿದ ನಾಮ ಎಂದಿದ್ದಾರೆ.
ದ್ರೌಪದಿಯು ಪಂಚ ಪಾಂಡವರ ಧರ್ಮಪತ್ನಿ. ಧರ್ಮರಾಯನು ಜೂಜಾಟದಲ್ಲಿ ಸರ್ವಸ್ವವನ್ನು ಸೋತಾಗ ಕೊನೆಗೆ ದ್ರೌಪದಿಯನ್ನೇ ಪಣವಾಗಿ ಇಡುತ್ತಾನೆ. ಪಣದಲ್ಲಿ ದ್ರೌಪದಿಯನ್ನು ಸೋತಾಗ ಕೌರವರು ತುಂಬಿದ ಸಭೆಗೆ ದ್ರೌಪದಿಯನ್ನು ಎಳೆತರುತ್ತಾರೆ. ವಸ್ತ್ರಾಪಹರಣದ ಸಂದರ್ಭದಲ್ಲಿ ದ್ರೌಪದಿಯ ರಕ್ಷಣೆಗೆ ಯಾರೂ ಬರದಿದ್ದಾಗ, ತಾನು ನಂಬಿರುವ ಶ್ರೀಕೃಷ್ಣನನ್ನು ಮನಪೂರ್ವಕವಾಗಿ ಪ್ರಾರ್ಥಿಸುತ್ತಾಳೆ. ಶ್ರೀಕೃಷ್ಣನು ಅಕೆಗೆ ಅಭಯವನ್ನು ನೀಡಿ ಅವಮಾನದಿಂದ ರಕ್ಷಿಸುತ್ತಾನೆ. ಇದನ್ನೇ ತಾತಯ್ಯನವರು ದ್ರೌಪದಿಯ ಮಾನಭಂಗ ಕಾಯ್ದ ನಾಮ ಎಂದಿದ್ದಾರೆ.
ರಕ್ಕಸನ ಅನುಜನಿಗೆ ಪಟ್ಟಕಟ್ಟಿದ ನಾಮ
ಪ್ರಹ್ಲಾದನಿಗೆ ಪ್ರಸನ್ನವಾದ ನಾಮ
ಅಜಸುರಾದಿಗಳು ಅನುದಿನವು ಜಪಿಸುವ ನಾಮ
ಗಜವ ಪಾಲಿಸಿದ-ಜಗದೀಶ್ವರನ ನಾಮ||
ರಕ್ಕಸನ ಅನುಜನೆಂದರೆ ರಾವಣನ ಸಹೋದರ ವಿಭೀಷಣ. ವಿಬೀಷಣ ರಾಕ್ಷಸನಾದರೂ ಉತ್ತಮ ಗುಣಗಳನ್ನು ಹೊಂದಿದ್ದನು. ತಪಸ್ಸಿನ ಫಲದಿಂದ ಬ್ರಹ್ಮನಿಂದ ವರವನ್ನು ಪಡೆದಿದ್ದನು ವಿಭೀಷಣ. ವಿಭೀಷನು ಕೇಳಿದ ವರವೆಂದರೆ “ನನಗೆ ಮಹಾವಿಷ್ಣುವಿನ ದರ್ಶನವಾಗಬೇಕು ಹಾಗೂ ಪರಮಾತ್ಮನ ಚರಣಕಮಲಗಳಲ್ಲಿ ಮನಸ್ಸು ಸ್ಥಿರವಾಗಿರಬೇಕು” ಎಂದು ವರ ಪಡೆದಿರುತ್ತಾನೆ. ಅದರಂತೆ ಶ್ರೀರಾಮನ ದರ್ಶನವಾಗುತ್ತದೆ. ಸರ್ವಸ್ವವನ್ನು ತ್ಯಜಿಸಿ ಪರಮಾತ್ಮನ ಪಾದದಲ್ಲಿ ಶರಣಾಗುತ್ತಾನೆ. ಕೊನೆಗೆ ಲಂಕೆಗೆ ರಾಜನಾಗಿ ಪಟ್ಟಾಭಿಷಿಕ್ತನಾಗುತ್ತಾನೆ. ರಕ್ಕಸನ ಅನುಜನಿಗೆ ಪಟ್ಟ ಕಟ್ಟಿದ ನಾಮ ಎಂದಿದ್ದಾರೆ ತಾತಯ್ಯನವರು.
ಹಿರಣ್ಯಕಶ್ಯಪುವಿನ ಪುತ್ರ ಪ್ರಹ್ಲಾದ. ಹಿರಣ್ಯಕಶ್ಯಪು ಅಹಂಕಾರದಿAದ ಮೆರೆಯುತ್ತಿರುತ್ತಾನೆ. ಆದರೆ ಪ್ರಹ್ಲಾದ ಮಾತ್ರ ಭಗವಂತನ ನಾಮಸ್ಮರಣೆಯಲ್ಲಿಯೇ ಮಗ್ನನಾದವನು. ತಂದೆ ಎಷ್ಟೇ ಕಷ್ಟಗಳನ್ನು ಕೊಟ್ಟರೂ ಧೃತಿಗೆಡದೆ ಪರಮಾತ್ಮನಲ್ಲಿ ಶರಣಾದವನು ಪ್ರಹ್ಲಾದ. ನಾಮಸ್ಮರಣೆಯಿಂದಲೇ ಕೊನೆಗೆ ಶ್ರೀನರಸಿಂಹ ಅವತಾರದಲ್ಲಿ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡ ಕಾರಣದಿಂದ ಪ್ರಹ್ಲಾದನಿಗೆ ಪ್ರಸನ್ನವಾದ ನಾಮ ಎಂದಿದ್ದಾರೆ ತಾತಯ್ಯನವರು.
ಬ್ರಹ್ಮಾದಿಯಾಗಿ ದೇವತೆಗಳೆಲ್ಲರೂ ಅನುದಿನವೂ ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾರೆ ಎನ್ನುತ್ತಾ ಗಜೇಂದ್ರ ಮೋಕ್ಷದ ಪ್ರಸಂಗವನ್ನು ತಾತಯ್ಯನವರು ನೆನಪಿಸಿಕೊಳ್ಳುತ್ತಾರೆ. ಪರಮಾತ್ಮನು ಆತ್ಮದ ಅಂತರಂಗದ ಭಕ್ತಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾನೆ ಎನ್ನುವುದಕ್ಕೆ ಗಜವನ್ನು ರಕ್ಷಿಸುವುದೇ ಸಾಕ್ಷಿಯಾಗಿದೆ.
ಹಂತಕನ ದೂತರನ ಹೊಡೆದು ಓಡಿಸೋ ನಾಮ
ಆಂಜನೇಯನಿಗೆ ಆಧಾರ ನಾಮ
ಅವಸಾನ ಕಾಲಕ್ಕೆ ಹಾದಿ ತೋರುವ ನಾಮ
ನಂಬಿರೋ ಅಮರ ನಾರೇಯಣಸ್ವಾಮಿ ನಾಮ||
ಯಮದೂತರನ್ನು ಹೊಡೆದು ಓಡಿಸುವ ಶಕ್ತಿಯನ್ನು ನಾಮಸ್ಮರಣೆಯು ಪಡೆದುಕೊಂಡಿದೆ ಎನ್ನುತ್ತಿದ್ದಾರೆ ತಾತಯ್ಯನವರು. ಭಗವಂತನ ನಾಮಸ್ಮರಣೆಯ ಬಲದ ಆಧಾರದಿಂದ ಆಂಜನೇಯನು ಎಲ್ಲಾ ಸಾಧನೆಯನ್ನು ಮಾಡಿದ ಎನ್ನುವ ಉದಾಹರಣೆಯನ್ನು ನೀಡುತ್ತಾ ಅವಸಾನ ಕಾಲ ಎಂದರೆ ಮರಣಕಾಲದ ಸಮಯದಲ್ಲಿ ಹಾದಿಯನ್ನು ತೋರುತ್ತದೆ ನಾಮಸ್ಮರಣೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಈ ಎಲ್ಲಾ ಕಾರಣಗಳಿಂದ ಭಗವಂತನ ನಾಮಸ್ಮರಣೆಯನ್ನು ನಂಬಿಕೊಳ್ಳಿ ಎಂದು ಮನದಟ್ಟು ಮಾಡಿಕೊಡುತ್ತಾ, ಕೊನೆಯದಾಗಿ ಶ್ರೀಅಮರನಾರೇಯಣಸ್ವಾಮಿಯ ಅಂಕಿತವನ್ನು ಹಾಕಿ, ಪರಮಾತ್ಮನಿಗೆ ಸಮರ್ಪಣೆಯನ್ನು ಮಾಡಿದ್ದಾರೆ. ಇದೇ ನಾಮಸ್ಮರಣೆಯ ಶ್ರೇಷ್ಠತೆ.
ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ಬುದ್ಧನಂತೆ ಆಸೆಯೇ ದುಃಖಗಳ ಆಲಯ ಎಂದಿದ್ದಾರೆ ತಾತಯ್ಯ
ಧಾರ್ಮಿಕ
Prerane : ದೇವರ ಅವತಾರ; ಏನಿದು ವಿಚಾರ?
ನಿಮ್ಮನ್ನು ನೀವು ದೇವರಿಗೆ ಸಂಪೂರ್ಣವಾಗಿ ಅರ್ಪಣೆ ಮಾಡಿಕೊಂಡರೆ ನಿಮ್ಮಲ್ಲಿ ಏನೂ ಉದಯವಾಗುವುದಿಲ್ಲ, ನೀವೆಲ್ಲಿರುವಿರೋ ಅಲ್ಲಿಯೇ ಇರುತ್ತೀರ, ಗಾಢವಾದ ಪ್ರಾರ್ಥನೆ, ಪ್ರೇಮ, ಶ್ರದ್ದೆಯಿಂದ ದೇವರಿಗಾಗಿ ಕಾಯುತ್ತೀರಿ ಎನ್ನುತ್ತಾರೆ ಸ್ವಾಮಿ ಶ್ರೀ ಕೈವಲ್ಯಾನಂದ ಸರಸ್ವತೀ. ಅವರ ಲೇಖನ ಇಂದಿನ ಪ್ರೇರಣೆ (Prerane) ಅಂಕಣದಲ್ಲಿ.
ಶ್ರೀ ಕೈವಲ್ಯಾನಂದ ಸರಸ್ವತೀ
ಇರುವಿಕೆಯೇ ದೇವರು. ದೇವರು ಏರುವುದೂ ಇಲ್ಲ, ಇಳಿಯುವುದೂ ಇಲ್ಲ. ದೇವರು ಎಲ್ಲಿಗೆ ಏರಬೇಕು, ಎಲ್ಲಿಗೆ ಇಳಿಯಬೇಕು, ದೇವರನ್ನು ಬಿಟ್ಟರೆ ಮತ್ತಾರು ಇಲ್ಲ, ಮತ್ತಾವುದೂ ಇಲ್ಲ, ಇರುವುದೆಲ್ಲವೂ ದೈವವೇ ಆದಕಾರಣ ಮೊದಲನೆಯದಾಗಿ “ದೇವರು ಏರುವುದೂ ಇಲ್ಲ. ಇಳಿಯುವುದೂ ಇಲ್ಲ”.
ಆದರೆ “ಅವತಾರ” ಎಂದು ಹೇಳುವಾಗ ಅದರಲ್ಲಿ ಏನೋ ಒಂದು ತಾತ್ವಿಕಾರ್ಥವಿರಬೇಕು. ಅರ್ಥವು ಸಂಪೂರ್ಣವಾಗಿ ಬಿನ್ನ ಅದನ್ನು ಈಗ ನೋಡುವ; ಇರುವಿಕೆಯೇ ದೇವರು. ಪವಿತ್ರವಾದ ಇರುವಿಕೆ. ಇಡೀ ಪ್ರಪಂಚ ದೇವರಿಂದಲೇ ತುಂಬಿದೆ, ತನ್ನ ಅಸ್ಥಿತ್ವವನ್ನು (ಪ್ರಪಂಚವನ್ನು) ತಾನು ತುಂಬಿರುತ್ತಾನೆ. ದೇವರ ಅವತಾರಕ್ಕೆ ಅರ್ಥವಿರಬೇಕು.
ಮನುಷ್ಯ ದೇವರನ್ನು ಅರಸುವುದು ಎರಡು ವಿಧ: ದೇವರು ಒಬ್ಬನೇ ಸತ್ಯವೆಂದಾಗ “ಮನುಷ್ಯ” ಎಂದರೆ ಏನು? ತಾನು ದೇವರೆಂಬುದನ್ನು ಮರೆತು ಹೋಗಿರುವಾಗ ದೇವರೇ ಮನುಷ್ಯ. ಮನುಷ್ಯನೆಂದರೆ ಮರೆತಿದ್ದಾನೆ- ತನ್ನನ್ನು ತಾನು ಮರೆತಿದ್ದಾನೆ. ಮನುಷ್ಯ ತನ್ನ ದೈವತ್ವವನ್ನು ಎರಡು ವಿಧದಲ್ಲಿ ಸ್ಮರಿಸಿಕೊಳ್ಳಬಹುದು: ಸಮರ್ಪಣೆ, ಭಕ್ತಿ, ಪ್ರೇಮ, ಪ್ರಾರ್ಥನೆ – ಇದು ಒಂದು ಮಾರ್ಗ, ಮತ್ತೊಂದು ಮಾರ್ಗವೆಂದರೆ
ದೃಡನಿಶ್ಚಯ. ಮನಸ್ಸು ಮಾಡುವಿಕೆ ಧ್ಯಾನ (ಜ್ಞಾನ) ಯೋಗ.
ಮನಃ ಪೂರ್ವಕ ಪ್ರಯತ್ನದಿಂದ ಪ್ರಯಾಣ ಮಾಡಲು ಪ್ರಯತ್ನ ಪಟ್ಟಾಗ ಆಗ ಆತ ತಾನು ದೈವತ್ವಕ್ಕೆ ಏರುತ್ತಿದ್ದೇನೆ ಎಂದು ಭಾವಿಸುತ್ತಾನೆ. ಈ ಕಾರಣಕ್ಕಾಗಿ ಜೈನ ಸಂಪ್ರದಾಯದಲ್ಲಿ ದೈವತ್ವ ಪಡೆದವನನ್ನು “ತೀರ್ಥಂಕರ” ಎನ್ನುತ್ತಾರೆ. ತೀರ್ಥಂಕರ ಎಂದರೆ ಪ್ರಜ್ಞೆ, ಅರಿವು ಶಿಖರವನ್ನು ಮುಟ್ಟಿದೆ, ಮನುಷ್ಯ ಏರುವ ಮುಖಾಂತರ ತಲುಪಿದ್ದಾನೆ – ಮನೋ ನಿಶ್ಚಯದ ಪ್ರಯತ್ನದ ಜ್ಞಾನ ಯೋಗದ ಒಂದು ಏಣಿ ಇರುವಂತೆ.
ಅವತಾರವೆಂದರೆ ದೇವರು ಇಳಿದು ಬರುವಿಕೆ, ಇದು ಮತ್ತೊಂದು ರೀತಿ ದೇವರನ್ನು ಸೇರುವಿಕೆ – ಮರೆತಿರುವುದನ್ನು ಜ್ಞಾಪಿಸಿಕೊಳ್ಳುವಿಕೆ. ಮನುಷ್ಯ ತನ್ನನ್ನು ತಾನು ಸಮರ್ಪಿಸಿಕೊಂಡಾಗ ಕೇವಲ ತನ್ನ ಹೃದಯವನ್ನು ತೆರೆದಿಡುತ್ತಾನೆ, ಕಾದಿರುತ್ತಾನೆ, ಪ್ರಾರ್ಥಿಸುತ್ತಾನೆ, ತಕ್ಷಣ ತನ್ನ ಹೃದಯದಲ್ಲಿ ಏನೋ ಕಲಕಿದಂತಾಗುತ್ತದೆ. “ದೇವರು ನನ್ನಲ್ಲಿ ಅವತರಿಸಿದ್ದಾನೆ” ಎಂಬುದಾಗಿ ತಪ್ಪದೇ ನೋಡುತ್ತಾನೆ. ಅವತಾರವೆಂದರೆ ದೇವರು ಇಳಿಯುವಿಕೆ ಕೆಳಕ್ಕೆ ಬರುವಿಕೆ.
ಮಹಾವೀರರು ಏರಿದರು, ಮೀರಾ ಅವರಿಗೆ ದೇವರು ಇಳಿದು ಬಂದ. ಆದರೆ ದೇವರು ಎಂದು ಕೆಳಕ್ಕೆ ಬರುವುದಿಲ್ಲ, ಎಂದೂ ಮೇಲಕ್ಕೆ ಹೋಗುವುದಿಲ್ಲ, ದೇವರು ಎಲ್ಲಿದ್ದಾನೆಯೋ ಅಲ್ಲಿಯೇ ಇದ್ದಾನೆ. ಆದರೆ ನಿಮ್ಮ ಅನುಭವ ಭಿನ್ನವಾಗಿರುತ್ತದೆ, ದೇವರನ್ನು ಹೊಂದಲು ತೀವ್ರ ಪ್ರಯತ್ನಮಾಡಿದ್ದೇ ಆದರೆ, ನೀವು ಉನ್ನತ, ಉನ್ನತ, ಉನ್ನತವಾಗಿ ಹೋಗುತ್ತೀರ; ನಿಮ್ಮಲೇ ಹುದುಗಿರುವ ದೇವರು ಉದಯವಾಗುತ್ತಿದ್ದಾನೆ, ಮೇಲಕ್ಕೆ ಬರುತ್ತಿದ್ದಾನೆ, ತುಟ್ಟತುದಿಯನ್ನು ತಲುಪುತ್ತಿದ್ದಾನೆ ಎಂದು ಭಾವಿಸುವುದು ಸ್ವಾಭಾವಿಕ. ಆದರೆ ನೀವು ಅರ್ಪಣೆ ಮಾಡಿಕೊಂಡರೆ ನಿಮ್ಮಲ್ಲಿ ಏನೂ ಉದಯವಾಗೋಲ್ಲ, ನೀವೆಲ್ಲಿರುವಿರೋ ಅಲ್ಲಿಯೇ ಇರುತ್ತೀರ, ಗಾಢವಾದ ಪ್ರಾರ್ಥನೆ, ಪ್ರೇಮ, ಶ್ರದ್ದೆಯಿಂದ ದೇವರಿಗಾಗಿ ಕಾಯುತ್ತೀರ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಒಂದು ದಿವಸ ದೇವರು ನಿಮ್ಮಲ್ಲಿ ಅವತರಿಸಿದಂತೆ ಕಾಣುತ್ತೀರ. ಮೇಲಿನಿಂದ ಬಂದಂತೆ ಪರಮಾತ್ಮನನ್ನು ಅರಸುವವರಲ್ಲಿ ಇವು ಎರಡು ವಿಧವಾದ ಅನುಭವಗಳು, ಇದಕ್ಕೂ ದೇವರಿಗೂ ಯಾವ ಸಂಬಂಧವಿಲ್ಲ, ಅರಸುವವನ ಮಾರ್ಗಕ್ಕೆ ಸಂಬಂಧ ಪಟ್ಟದ್ದು,
ಭಕ್ತಿಪಂಥದವರು ದೇವರು ಅವತರಿಸಿದನೆನ್ನುತ್ತಾರೆ.
ಅನವಶ್ಯಕವಾದದ್ದನ್ನು ಮರೆತರೆ ಅವಶ್ಯಕವಾದದ್ದು ಜ್ಞಾಪಕದಲ್ಲಿ ನಮ್ಮಲ್ಲಿ ಉಂಟಾಗುತ್ತದೆ.
– ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.
ಇದನ್ನೂ ಓದಿ : Prerane : ಅರ್ಥವು ಅನರ್ಥವೇ? ಈ ಬಗ್ಗೆ ಶಂಕರಭಗವತ್ಪಾದರು ಹೇಳಿದ್ದಾದರೂ ಏನು?
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ12 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ14 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಉತ್ತರ ಕನ್ನಡ22 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ17 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ24 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
-
ಕರ್ನಾಟಕ8 hours ago
Monsoon Season: ಮಂಗಳೂರು ವಿವಿ ಕಾಲೇಜಲ್ಲಿ ಕೈ ತೊಳೆಯೋಕೂ ನೀರಿಲ್ಲ; ರಜೆ ಕೊಟ್ಟ ಆಡಳಿತ ಮಂಡಳಿ!
-
ಪ್ರಮುಖ ಸುದ್ದಿ24 hours ago
ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?