ರಾಜಮಾರ್ಗ ಅಂಕಣ: ಕನ್ನಡ ಚಿತ್ರರಂಗದ ಬಂಗಾರದ ಹುಡುಗ ರಿಶಬ್ ಶೆಟ್ಟಿ - Vistara News

ಅಂಕಣ

ರಾಜಮಾರ್ಗ ಅಂಕಣ: ಕನ್ನಡ ಚಿತ್ರರಂಗದ ಬಂಗಾರದ ಹುಡುಗ ರಿಶಬ್ ಶೆಟ್ಟಿ

ರಾಜಮಾರ್ಗ ಅಂಕಣ: ರಾಷ್ಟ್ರಪ್ರಶಸ್ತಿಗಳು ಆರಂಭವಾಗಿ 75 ವರ್ಷಗಳಲ್ಲಿ ಕನ್ನಡಕ್ಕೆ ದೊರೆತದ್ದು ಕೇವಲ ನಾಲ್ಕನೆಯ ಪ್ರಶಸ್ತಿ ಇದು! 1975ರಲ್ಲಿ ಚೋಮನ ದುಡಿ ಸಿನೆಮಾದಲ್ಲಿ ಎಂ.ವಿ. ವಾಸುದೇವ್ ರಾವ್, 1986ರಲ್ಲಿ ತಬರನ ಕಥೆ ಸಿನೆಮಾದಲ್ಲಿ ಚಾರುಹಾಸನ್, 2014ರಲ್ಲಿ ನಾನು ಅವನಲ್ಲ, ಅವಳು ಸಿನೆಮಾದಲ್ಲಿ ಸಂಚಾರಿ ವಿಜಯ್ ಈವರೆಗೆ ಅಭಿನಯಕ್ಕಾಗಿ ಪ್ರಶಸ್ತಿಗಳನ್ನು ಗೆದ್ದವರು.

VISTARANEWS.COM


on

ರಾಜಮಾರ್ಗ ಅಂಕಣ kantara Movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

75 ವರ್ಷಗಳಲ್ಲಿ ಕನ್ನಡಕ್ಕೆ ದೊರಕಿದ ಕೇವಲ ನಾಲ್ಕನೇ ಪ್ರಶಸ್ತಿ ಇದು!

Rajendra-Bhat-Raja-Marga-Main-logo

:: ರಾಜೇಂದ್ರ ಭಟ್ ಕೆ.

ರಾಜಮಾರ್ಗ ಅಂಕಣ: ಕೋರೋನಾ ಮಹಾಮಾರಿಯಿಂದ ರಾಡಿ ಆಗಿದ್ದ ಕನ್ನಡದ ಮನಸ್ಸುಗಳಿಗೆ 2022ರಲ್ಲಿ ಒಂದು ಬಿಗ್ ಎಕ್ಸೈಟ್‌ಮೆಂಟ್ ಕೊಡುವ ಸಿನೆಮಾ ಆಗಿ ಬಂದದ್ದು ಕಾಂತಾರ! ಆ ಸಿನೆಮಾ (Kantara Movie) ಯಾವ ರೀತಿ ಹಿಟ್ ಆಯ್ತು ಅಂದರೆ ನೋಡಿದವರೇ ಮತ್ತೆ ಮತ್ತೆ ನೋಡಿದರು. ಹೊಂಬಾಳೆ ಫಿಲಂಸ್ (Hombale Films) ಕೇವಲ 16 ಕೋಟಿ ದುಡ್ಡಲ್ಲಿ ನಿರ್ಮಾಣ ಮಾಡಿದ ಈ ಸಿನೆಮಾ 450 ಕೋಟಿ ದುಡಿಯಿತು! ಆರಂಭದಲ್ಲಿ ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆ ಆದ ಸಿನೆಮಾ ಒಂದು ವರ್ಷದ ಅವಧಿಯಲ್ಲಿ ತಮಿಳು, ತೆಲುಗು, ಮಲಯಾಳಂ, ತುಳು, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಿಗೆ ಡಬ್ ಅಥವಾ ರೀಮೇಕ್ ಆಗಿ ಪಾನ್ ಇಂಡಿಯಾ ಹಿಟ್ ಆಯ್ತು. ರಿಷಬ್ ಶೆಟ್ಟಿ (Rishab Shetty) ಪಾನ್ ಇಂಡಿಯಾ ಸ್ಟಾರ್ (Pan India) ಆದರು. ಕನ್ನಡದಲ್ಲಿ ಅತೀ ಹೆಚ್ಚು ದುಡ್ಡು ಮಾಡಿದ ಎರಡನೇ ಸಿನಿಮಾ ಆಗಿ ಕಾಂತಾರ ರಿಜಿಸ್ಟರ್ ಆಯ್ತು. ಅದರಲ್ಲಿ ಮೂಡಿಬಂದಿದ್ದ ಗ್ರಾಮೀಣ ಸೊಗಡಿನ ದೃಶ್ಯಗಳು, ಕರಾವಳಿಯ ಸಂಸ್ಕೃತಿ ಮತ್ತು ದೈವದ ಮೇಲಿನ ನಂಬಿಕೆ, ಸುಂದರವಾದ ಹಾಡುಗಳು ಎಲ್ಲವೂ ಅದ್ಭುತವಾಗಿಯೇ ಇದ್ದವು.

ಆ ಸಿನೆಮಾದ ಮಾಸ್ಟರ್ ಬ್ರೈನ್ ಮತ್ತು ಸ್ಟಾರ್ ಆಕರ್ಷಣೆ ಆಗಿದ್ದರು ರಿಶಭ್! 80% ಸ್ಥಳೀಯ ಕಲಾವಿದರು ಅದ್ಭುತವಾಗಿ ಅಭಿನಯ ಮಾಡಿದ್ದು ಕೂಡ ಸಿನೆಮಾದ ಹೆಚ್ಚುಗಾರಿಕೆ.

75 ವರ್ಷಗಳಲ್ಲಿ ಕನ್ನಡಕ್ಕೆ ಇದು ಕೇವಲ 4ನೆಯ ರಾಷ್ಟ್ರಪ್ರಶಸ್ತಿ!

ಶುಕ್ರವಾರ 70ನೆಯ ಸಿನೆಮಾ ರಾಷ್ಟ್ರಪ್ರಶಸ್ತಿಗಳ ಘೋಷಣೆ ಆಗಿದ್ದು ಕಾಂತಾರ ಸಿನೆಮಾಕ್ಕೆ 2 ಪ್ರಶಸ್ತಿಗಳು ದೊರೆತಿವೆ. ಅದರಲ್ಲಿ ಬೆಲೆ ಕಟ್ಟಲು ಸಾಧ್ಯವೇ ಇಲ್ಲದ್ದು ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ! ಏಕೆಂದರೆ ರಾಷ್ಟ್ರಪ್ರಶಸ್ತಿಗಳು ಆರಂಭವಾಗಿ 75 ವರ್ಷಗಳಲ್ಲಿ ಕನ್ನಡಕ್ಕೆ ದೊರೆತದ್ದು ಕೇವಲ ನಾಲ್ಕನೆಯ ಪ್ರಶಸ್ತಿ ಇದು! 1975ರಲ್ಲಿ ಚೋಮನ ದುಡಿ ಸಿನೆಮಾದಲ್ಲಿ ಎಂ.ವಿ. ವಾಸುದೇವ್ ರಾವ್, 1986ರಲ್ಲಿ ತಬರನ ಕಥೆ ಸಿನೆಮಾದಲ್ಲಿ ಚಾರುಹಾಸನ್, 2014ರಲ್ಲಿ ನಾನು ಅವನಲ್ಲ, ಅವಳು ಸಿನೆಮಾದಲ್ಲಿ ಸಂಚಾರಿ ವಿಜಯ್ ಈವರೆಗೆ ಅಭಿನಯಕ್ಕಾಗಿ ಪ್ರಶಸ್ತಿಗಳನ್ನು ಗೆದ್ದವರು. ಕನ್ನಡಕ್ಕೆ ರಿಶಭ್ ಶೆಟ್ಟಿ ಮೂಲಕ ನಾಲ್ಕನೆಯ ರಾಷ್ಟ್ರಪ್ರಶಸ್ತಿಯು ಈ ವಿಭಾಗದಲ್ಲಿ ಬಂದಿದೆ. ಅದರಲ್ಲಿಯೂ ರಿಶಭ್ ಈ ಬಾರಿ ಮಲಯಾಳಂ ಲೆಜೆಂಡ್ ನಟ ಮಮ್ಮುಟ್ಟಿ ಜೊತೆಗೆ ಸ್ಪರ್ಧೆಯಲ್ಲಿ ಇದ್ದರು ಅಂದಾಗ ಪ್ರಶಸ್ತಿಯ ಮೌಲ್ಯವು ಭಾರೀ ಎತ್ತರಕ್ಕೆ ತಲುಪುತ್ತದೆ. ಕಾಂತಾರ ಸಿನೆಮಾ ನೋಡಿದವರು ಆಗಲೇ ಕಾಡಬೆಟ್ಟು ಶಿವನ ಅಭಿನಯಕ್ಕೆ ಫಿದಾ ಆಗಿದ್ದರು. ಅದರಲ್ಲಿಯೂ ಸಿನೆಮಾದ ಕೊನೆಯ 20 ನಿಮಿಷಗಳ ಕ್ಲೈಮ್ಯಾಕ್ಸ್ ಕನ್ನಡಕ್ಕೆ ಹೊಸದಾಗಿತ್ತು. ಅದು ಮೈ ರೋಮಾಂಚನ ಮಾಡುವ ಅಭಿನಯ ಆಗಿತ್ತು. ಅದಕ್ಕೆ ಅರ್ಹವಾಗಿ ರಿಶಭ್ ಶೆಟ್ಟರಿಗೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಅದರಲ್ಲಿ ಕೂಡ ತಾನೇ ನಿರ್ದೇಶಿಸಿ, ಅಭಿನಯ ಮಾಡಿ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ನಟ ಎನ್ನುವ ಕೀರ್ತಿ ನಮ್ಮ ಕುಂದಾಪುರದ ಹೈದನಿಗೆ ಸಿಕ್ಕಿದೆ. ಇನ್ನೇನು ಬೇಕು?

Rishab Shetty cinema Journey before Kantara
Kantara Movie Massive Set Constructed In Kundapura

ರಿಶಭ್ ಸಾಗಿ ಬಂದ ದಾರಿ ಕೇವಲ ಹೂವಿನದ್ದು ಆಗಿರಲಿಲ್ಲ!

1983ರಲ್ಲಿ ಕುಂದಾಪುರದ ಕೆರಾಡಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ರಿಶಭ್ ಶೆಟ್ಟಿ ಅಲ್ಲಿಯೇ ತಮ್ಮ ಬಾಲ್ಯವನ್ನು, ಶಿಕ್ಷಣವನ್ನು ಸಂಭ್ರಮಿಸಿದವರು. ಮುಂದೆ ಪದವಿ ಪಡೆಯಲು ಬೆಂಗಳೂರು ವಿಜಯಾ ಕಾಲೇಜಿಗೆ ಸೇರಿದಾಗ ನಾಟಕ, ಯಕ್ಷಗಾನಗಳ ಸೆಳೆತ ತೀವ್ರವಾಯಿತು. ಹೊಟ್ಟೆಪಾಡಿಗಾಗಿ ನೀರಿನ ಬಾಟಲಿ ವ್ಯಾಪಾರ, ಸಣ್ಣ ಹೋಟೆಲ್, ರಿಯಲ್ ಎಸ್ಟೇಟ್ ಮಾಡಿದರೂ ವ್ಯವಹಾರ ಕೈಗೆ ಹತ್ತಲಿಲ್ಲ. ಸಿನೆಮಾಗಳ ಮೂಲಕವೇ ಅದೃಷ್ಟ ಪರೀಕ್ಷೆ ಮಾಡಬೇಕು ಎಂದು ನಿರ್ಧರಿಸಿ ಆರಂಭದಲ್ಲಿ ಕ್ಲಾಪ್ ಬಾಯ್, ಸ್ಪಾಟ್ ಬಾಯ್, ಸಹಾಯಕ ನಿರ್ದೇಶಕ…..ಹೀಗೆಲ್ಲ ಮುಂದುವರೆದರು. ಸಿನೆಮಾ ನಿರ್ದೇಶನದಲ್ಲಿ ಡಿಪ್ಲೊಮಾ ಪದವಿ ಪಡೆದದ್ದು ಇದೇ ಹಸಿವಿನ ದಿನಗಳಲ್ಲಿ!

ಆಗ ಅವರಿಗೆ ದೊರೆತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಗೆಳೆತನ ಅವರ ಬದುಕಿನ ದಾರಿಯನ್ನೇ ಬದಲಾಯಿಸಿತು. ಈ ಇಬ್ಬರು ಶೆಟ್ಟರು ಸೇರಿ ಕನ್ನಡ ಸಿನೆಮಾಗಳನ್ನು ನೆಕ್ಸ್ಟ್ ಲೆವಲಿಗೆ ತೆಗೆದುಕೊಂಡು ಹೋಗುವ ಕನಸು ಕಂಡರು.

2012, ಸ್ಪ್ಲೆಂಡರ್ ಬೈಕ್, ಗೆಳೆಯರು ಮತ್ತು ತುಫಲಕ್!

ಇಬ್ಬರು ಶೆಟ್ಟರು ತುಂಬಾ ಆಸೆ ಪಟ್ಟು ಮಾಡಿದ ಸಿನೆಮಾ ಅಂದರೆ ಅದು ತುಘಲಕ್. ಅದರ ಮೊದಲ ದಿನ ಸಿನೆಮಾ ಥಿಯೇಟರಗೆ ಬೈಕಲ್ಲಿ ಬಂದು ಗೆಳೆಯರು ಸಿಗರೇಟ್ ಸೇದುತ್ತಾ ಪ್ರೇಕ್ಷಕರನ್ನು ಕಾದು ನಿಂತಿದ್ದರು. ಎಷ್ಟು ಸಿಗರೇಟ್ ಖಾಲಿಯಾದರೂ ಥಿಯೇಟರಿಗೆ ಪ್ರೇಕ್ಷಕರೇ ಬರಲಿಲ್ಲ! ಇದು ರಿಶಭ್ ಅವರ ಓಪನಿಂಗ್ ಇನ್ನಿಂಗ್ಸ್! ಮುಂದೆ ಲೂಸಿಯಾ, ಉಳಿದವರು ಕಂಡಂತೆ, ರಿಕ್ಕಿ ಯಾವುದೂ ಆರ್ಥಿಕವಾಗಿ ಗೆಲ್ಲಿಸಲಿಲ್ಲ. ಉಳಿದವರು ಕಂಡಂತೆ ರಕ್ಷಿತ್ ಶೆಟ್ಟಿ ಅವರಿಗೆ ಭಾರೀ ಬ್ರೇಕ್ ಕೊಟ್ಟರೂ ದುಡ್ಡು ಮಾಡಲಿಲ್ಲ. ರಿಶಭ್ ಹೀರೋ ಆಗಿ ಅಭಿನಯಿಸಿದ ಬೆಲ್ ಬಾಟಮ್ ಸಿನೆಮಾ ನಿರ್ಮಾಪಕರನ್ನು ಗೆಲ್ಲಿಸಿತ್ತು.

ಕಿಸೆ ಮತ್ತು ಹೊಟ್ಟೆ ಖಾಲಿಯಾದಾಗ ಹೆಚ್ಚು ಕ್ರಿಯೇಟಿವ್ ಯೋಚನೆಗಳು ಬರುತ್ತವೆ ಎನ್ನುತ್ತಾರೆ ರಿಶಭ್! ಎಂತಹ ಬಿಕ್ಕಟ್ಟು ಬಂದಾಗಲೂ ರಿಶಭ್ ಮತ್ತು ರಕ್ಷಿತ್ ಧೈರ್ಯ ಕೆಡಲಿಲ್ಲ ಮತ್ತು ಗೆಳೆತನ ಬಿಡಲಿಲ್ಲ.

Kantara Movie Massive Set Constructed In Kundapura
Kantara Movie Massive Set Constructed In Kundapura

ಕಿರಿಕ್ ಪಾರ್ಟಿ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ!

ವರ್ಷಾನುಗಟ್ಟಲೆ ಸ್ಕ್ರಿಪ್ಟ್ ಬರೆದು ಆಸ್ತೆಯಿಂದ ಮಾಡಿದ ಸಿನೆಮಾಗಳು ಇವು. ಇಬ್ಬರು ಶೆಟ್ಟರು ಸೇರಿ ಮಾಡಿದ ಇವೆರಡೂ ಸಿನೆಮಾಗಳು ಸಾಂಡಲ್ ವುಡನಲ್ಲಿ ಸುನಾಮಿಯನ್ನೇ ಕ್ರಿಯೇಟ್ ಮಾಡಿದವು. ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಗಳು ಹರಿದು ಬಂದವು. ಹಿಂದಿನ ಸಿನೆಮಾಗಳಲ್ಲಿ ಕೈಕೊಟ್ಟಿದ್ದ ಅದೃಷ್ಟವು ಈಗ ಕೈ ಹಿಡಿಯಿತು.

ಆಗ ಇನ್ನೊಬ್ಬ ಸೃಜನಶೀಲವಾಗಿ ಯೋಚನೆ ಮಾಡುವ ಶೆಟ್ಟರು ಈ ತಂಡವನ್ನು ಸೇರಿಕೊಂಡರು. ಅದು ರಾಜ್ ಬಿ ಶೆಟ್ಟಿ! ಇವರ ಕಾಂಬಿನೇಶನ್ ಕನ್ನಡ ಸಿನೆಮಾ ಉದ್ಯಮವನ್ನು ಭಾರೀ ಎತ್ತರಕ್ಕೆ ತೆಗೆದುಕೊಂಡು ಹೋಯಿತು. ರಿಶಭ್ ಶೆಟ್ಟರಿಗೆ ಲಕ್ ಖುಲಾಯಿಸಿತು. ಇದೀಗ ಅವರ ಪ್ರತಿಭೆಗೆ ನ್ಯಾಶನಲ್ ಅವಾರ್ಡ್ ಕೂಡ ಒಲಿದಿದೆ. ಮುಂದಿನ ಹತ್ತಾರು ವರ್ಷಗಳ ಕಾಲ ಈ ಮೂವರು ಗೆಳೆಯರು ಸಾಂಡಲ್ ವುಡನ್ನು ರೂಲ್ ಮಾಡುವುದು ಖಂಡಿತ. ರಾಷ್ಟ್ರಪ್ರಶಸ್ತಿ ಗೆದ್ದ ರಿಶಭ್ ಶೆಟ್ಟರಿಗೆ ಅಭಿನಂದನೆಗಳು.

ಈ ಬಾರಿ ಕನ್ನಡದ ನಾಲ್ಕು ಸಿನೆಮಾಗಳಿಗೆ ದೊರೆತಿವೆ 7 ರಾಷ್ಟ್ರಪ್ರಶಸ್ತಿಗಳು!

ಕಳೆದ ಒಂದೆರಡು ವರ್ಷಗಳಿಂದ ಪ್ರಖರ ಸೂರ್ಯನಿಗೆ ಮೋಡ ಮುಸುಕಿದ ಹಾಗೆ ಆಗಿದ್ದ ಕನ್ನಡ ಚಿತ್ರರಂಗಕ್ಕೆ ಚೇತೋಹಾರಿ ಸುದ್ದಿ ಇದು. ಬಹಳ ಶ್ರಮದಿಂದ ಜನರ ಮುಂದೆ ಬಂದ ಕೆ ಜಿ ಎಫ್ (ಚಾಪ್ಟರ್ 2) ಚಿತ್ರಕ್ಕೆ ಕೂಡ ಎರಡು ಪ್ರಶಸ್ತಿಗಳು ಬಂದಿವೆ.

ಪ್ರಶಸ್ತಿ ಗೆದ್ದ ಎಲ್ಲ ಸಿನೆಮಾಗಳಿಗೆ ನಮ್ಮ ಅಭಿನಂದನೆ ಇರಲಿ. ಅಲ್ಲವೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಪದಕವೊಂದೇ ಲಕ್ಷ್ಯ – ಲಕ್ಷ್ಯ ಸೇನ್!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ಪದಕವೊಂದೇ ಲಕ್ಷ್ಯ – ಲಕ್ಷ್ಯ ಸೇನ್!

ರಾಜಮಾರ್ಗ ಅಂಕಣ: ಇಡೀ ಕೋರ್ಟಿನಲ್ಲಿ ಚಿರತೆಯಂತೆ ಪಾದ ಚಲನೆ ಹೊಂದಿರುವ ಲಕ್ಷ್ಯ ಸೇನ್ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸನಲ್ಲಿ ಒಂದು ಪದಕಕ್ಕೆ ಲಕ್ಷ್ಯ ಇಡುವುದನ್ನು ಯಾರೂ ತಡೆಯಲು ಅಸಾಧ್ಯ ಎನ್ನುವುದು ಭಾರತೀಯರ ನಂಬಿಕೆ.

VISTARANEWS.COM


on

lakshya sen ರಾಜಮಾರ್ಗ ಅಂಕಣ
Koo

ಭಾರತದ ಬ್ಯಾಡ್ಮಿಂಟನ್ ಭರವಸೆಗೆ ಇಂದು ಹುಟ್ಟಿದ ಹಬ್ಬ(ಆಗಸ್ಟ್ 16)

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಮೊನ್ನೆ ಮುಗಿದುಹೋದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics 2024) ಭಾರತದ (India) ಕನಿಷ್ಠ ಆರು ಕ್ರೀಡಾಪಟುಗಳು ಕೂದಲೆಳೆಯ ಅಂತರದಲ್ಲಿ ಪದಕ ಮಿಸ್ ಮಾಡಿದ್ದರು. ಅದರಲ್ಲಿ ಒಂದು ಪ್ರಮುಖವಾದ ಹೆಸರು ಬ್ಯಾಡ್ಮಿಂಟನ್ (Badminton) ಪ್ರತಿಭೆ ಲಕ್ಷ್ಯ ಸೇನ್ (Lakshya Sen) . ಈ ಒಲಿಂಪಿಕ್ಸ್ ಕೂಟದಲ್ಲಿ ವಿಶ್ವ ಚಾಂಪಿಯನ್ ಆಟಗಾರ ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸೆನ್ ( Victor Axelsen)ಗೆ ಬೆವರು ಇಳಿಸಿದ ಕೀರ್ತಿ ಈತನದ್ದು. ಇಂದಾತನಿಗೆ 24ನೇ ಹುಟ್ಟಿದ ಹಬ್ಬ (2001,ಆಗಸ್ಟ್ 16).

ಭಾರತದ ಬ್ಯಾಡ್ಮಿಂಟನ್ ಭರವಸೆ – ಲಕ್ಷ್ಯ ಸೇನ್

ಉತ್ತರಾಖಂಡ್ ರಾಜ್ಯದ ಅಲ್ಮೋರ ಎಂಬ ನಗರದಲ್ಲಿ ಹುಟ್ಟಿದ ಈತನಿಗೆ ಬಾಲ್ಯದಿಂದಲೂ ಅಪ್ಪ ಡಿ ಕೆ ಸೇನ್ ಅವರೇ ಕೋಚ್. ಹಾಗೆಯೇ ಆತನಿಗೆ ಲೆಜೆಂಡ್ ಪ್ರಕಾಶ್ ಪಡುಕೋಣೆ ಅವರೇ ಸ್ಫೂರ್ತಿ. ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ಸಾಗಿದ ದಾರಿಯಲ್ಲಿ ಬೆಳೆಯಬೇಕು ಎಂದು ಹುರುಪು ತುಂಬಿದ್ದೇ ಅಪ್ಪ. ಈ ಹುಡುಗ ಕಠಿಣ ಪರಿಶ್ರಮಿ. ಬೆವರು ಹರಿಸುವುದರಲ್ಲಿ ಹೆಚ್ಚು ನಂಬಿಕೆ. ಈಗ ಅವನ ಕೋಚ್ ಆಗಿರುವ ವಿಮಲ್ ಕುಮಾರ್ ಹೇಳಿದ ಪ್ರತೀಯೊಂದು ಮಾತು ವೇದವಾಕ್ಯ. ‘ನಿನ್ನ ಹಿಂಗೈ ಹೊಡೆತ ಸ್ವಲ್ಪ ವೀಕ್ ಇದೆ ಹುಡುಗಾ’ ಎಂದು ಕೋಚ್ ಹೇಳಿದರೆ ‘ಮೂರು ದಿನ ಟೈಮ್ ಕೊಡಿ ಸರ್. ಸರಿ ಮಾಡಿಕೊಂಡು ಬರುತ್ತೇನೆ ‘ ಎಂದವನು. ನುಡಿದಂತೆಯೇ ನಡೆದವನು.

ಕೋಚ್ ಆತನಿಗೆ ಹೇಳಿದ ಮಾತುಗಳು

ಬ್ಯಾಡ್ಮಿಂಟನ್ ಆಟಕ್ಕೆ ದೇಹದ ಕಸುವು ತುಂಬಾ ಮುಖ್ಯ. ಫೋಕಸ್ ಅದಕ್ಕಿಂತ ಮುಖ್ಯ. ಕೊನೆಯ ಸರ್ವಿಸ್ ತನಕ ಆಟವನ್ನು ಕೈ ಚೆಲ್ಲಬಾರದು. ಎಷ್ಟು ಪಾಯಿಂಟ್ ಹಿಂದೆ ಇದ್ದರೂ ನಿನಗೆ ಕಮ್ ಬ್ಯಾಕ್ ಮಾಡಲು ಅವಕಾಶ ಇರುತ್ತದೆ. ಎದುರಾಳಿ ಎಷ್ಟು ಬಲಿಷ್ಠ ಎಂದು ತಲೆಗೆ ತೆಗೆದುಕೊಳ್ಳಬಾರದು. ನಿನ್ನ ಸಾಮರ್ಥ್ಯಗಳ ಮೇಲೆ ಭರವಸೆ ಇಟ್ಟು ಆಡು – ಇದು ಅವರ ಕೋಚ್ ಪದೇ ಪದೇ ಹೇಳುತ್ತಿದ್ದ ಮಾತುಗಳು. ಪ್ಯಾರಿಸ್ ಒಲಿಂಪಿಕ್ಸನ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ವಿಕ್ಟರ್ ಅವರನ್ನು
ಎದುರಿಸುವಾಗಲೂ ಕಿವಿಯಲ್ಲಿ ರಿಬೌಂಡ್ ಆಗ್ತಾ ಇದ್ದದ್ದು ಕೋಚ್ ಹೇಳಿದ ಈ ಮಾತುಗಳೇ.

ಪ್ರಕಾಶ್ ಪಡುಕೋಣೆ – ನನ್ನ ಸ್ಫೂರ್ತಿ ದೇವತೆ

ಯಾಕೆಂದರೆ ಒಂದು ಕಾಲದಲ್ಲಿ ಇಂಡೋನೇಷಿಯಾ ಮತ್ತು ಚೀನಾ ಪ್ರಭುತ್ವ ಸ್ಥಾಪನೆ ಮಾಡಿದ್ದ ಈ ಕ್ರೀಡೆಯನ್ನು ಭಾರತದ ಮಗ್ಗುಲಿಗೆ ತಂದವರೇ ಪಡುಕೋಣೆ ಸರ್. 80ರ ದಶಕದಲ್ಲಿ ಅವರು ವರ್ಲ್ಡ್ ನಂಬರ್ ಒನ್ ಆಗಿದ್ದರು ಮತ್ತು ಅದೇ ವರ್ಷ ಅವರು ಆಲ್ ಇಂಗ್ಲೆಂಡ್ ಓಪನ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರಾದರು. ಆವಾಗ ಲಕ್ಷ್ಯ ಸೇನ್ ಹುಟ್ಟಿರಲೇ ಇಲ್ಲ. ಮುಂದೆ ಅವರನ್ನು ಅವರ ಟ್ರೈನಿಂಗ್ ಆಕಾಡೆಮಿಯಲ್ಲಿ ಭೇಟಿ ಆದಾಗ ಅವರು ಕೊಟ್ಟ ಟಿಪ್ಸ್, ಆಶೀರ್ವಾದ ನನ್ನನ್ನು ಬೆಳೆಸುತ್ತಿದೆ. ನಾನು ಅವರಿಗೆ ಆಭಾರಿ ಎನ್ನುತ್ತಾರೆ ನಮ್ಮ ಚಾಂಪ್.

ಈ ಬಾರಿ ಪ್ಯಾರಿಸ್ ಒಲಿಂಪಿಕ್ಸನಲ್ಲಿ..

ಪ್ರತೀಯೊಂದು ಪಂದ್ಯವು ಅವರಿಗೆ ಸ್ಪರ್ಧಾತ್ಮಕವಾಗಿಯೇ ಇತ್ತು. ಅವುಗಳನ್ನು ಗೆದ್ದು ಸೆಮೀಸ್ ಪ್ರವೇಶ ಮಾಡಿದಾಗ ಭಾರತಕ್ಕೆ ಒಂದಾದರೂ ಪದಕವನ್ನು ಗೆಲ್ಲಬೇಕು ಎಂಬ ಕನಸು ಸ್ಟ್ರಾಂಗ್ ಆಗಿತ್ತು. ಆದರೆ ಪಂದ್ಯದ ಆರಂಭದಲ್ಲಿಯೇ ಮೊಣಕೈಗೆ ಬಲವಾದ ಗಾಯವಾಗಿ ರಕ್ತ ಸುರಿಯಲು ಆರಂಭವಾಯಿತು. ಹಲವು ಬಾರಿ ಫಿಸಿಯೋ ಮೈದಾನಕ್ಕೆ ಕಿಟ್ ತೆಗೆದುಕೊಂಡು ಬಂದರೂ ನೋವು ಕಡಿಮೆ ಆಗಲಿಲ್ಲ. ಆದರೂ ವಿಶ್ವ ಚಾಂಪಿಯನ್ ಆಟಗಾರನಿಗೆ ಫೈಟ್ ಕೊಟ್ಟ ತೃಪ್ತಿ ಇದೆ. ಭಾರತಕ್ಕೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬ ನೋವು ಅದಕ್ಕಿಂತ ದೊಡ್ಡದು. ಮುಂದಿನ ಒಲಿಂಪಿಕ್ಸ್ ಕೂಟಕ್ಕೆ ಈಗಿನಿಂದಲೇ ಸಿದ್ಧತೆ ಮಾಡುತ್ತೇನೆ ಎಂದು ಲಕ್ಷ್ಯ ಸೇನ್ ಹೇಳಿದ್ದಾರೆ.

ಆತನ ಬಗ್ಗೆ ವಿಶ್ವಚಾಂಪಿಯನ್ ವಿಕ್ಟರ್ ಹೇಳಿದ ಮಾತುಗಳು ಇನ್ನೂ ಸ್ಫೂರ್ತಿದಾಯಕ ಆಗಿವೆ. ʼನಾನು ಇದುವರೆಗೂ ಎದುರಿಸಿದ ಅತ್ಯಂತ ಕಠಿಣ ಸ್ಪರ್ಧಿ ಎಂದರೆ ಲಕ್ಷ್ಯ ಸೇನ್. ಆತನಿಗೆ ಉಜ್ವಲ ಭವಿಷ್ಯ ಇದೆ. ಮುಂದಿನ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ನಾನು ಇರುವುದಿಲ್ಲ. ಆತನು ಖಂಡಿತವಾಗಿ ಪದಕ ಗೆಲ್ಲುವ ಫೇವರಿಟ್ ಆಗಿರುತ್ತಾನೆ!’ ಈ ಮಾತುಗಳು ಪದಕಕ್ಕಿಂತ ಹೆಚ್ಚು ಮೌಲ್ಯ ಹೊಂದಿವೆ ಎಂದು ನಿಮಗೆ ಅನ್ನಿಸುತ್ತದೆಯಾ?

ಅದ್ಭುತವಾದ ಟ್ರಾಕ್ ರೆಕಾರ್ಡ್

ವರ್ಲ್ಡ್ ಜ್ಯೂನಿಯರ್ ವಿಭಾಗದಲ್ಲಿ ಆತನು ನಂಬರ್ ಒನ್ ರಾಂಕ್ ಹೊಂದಿದ್ದ ಆಟಗಾರ. ಯೂತ್ ಒಲಿಂಪಿಕ್ಸನಲ್ಲಿ ಎರಡು ಪದಕ, ವರ್ಲ್ಡ್ ಚಾಂಪಿಯನ್ ಶಿಪ್ ಕೂಟದಲ್ಲಿ ಕಂಚಿನ ಪದಕ, ಥಾಮಸ್ ಕಪ್, ಕಾಮನ್ ವೆಲ್ತ್ ಗೇಮ್ಸ್, ಏಷಿಯನ್
ಬ್ಯಾಡ್ಮಿಮಿಂಟನ್ ಕೂಟ…ಎಲ್ಲ ಕಡೆಯಲ್ಲಿಯೂ ಲಕ್ಷ್ಯ ಸೇನ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅವರು ಈಗಾಗಲೇ ಒಟ್ಟು 15 ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದ ದಾಖಲೆ ಹೊಂದಿದ್ದಾರೆ. ಅವರ ಸಕ್ಸೆಸ್ ರೇಟ್ 236 ಗೆಲುವು/102 ಸೋಲು! ಇಂದಿನ ದಿನಕ್ಕೆ ಆತನ ವರ್ಲ್ಡ್ ರಾಂಕಿಂಗ್ 16. ಅದು ಇಂಪ್ರೂವ್ ಆಗ್ತಾ ಇದೆ ಅನ್ನೋದು ನಮಗೆ ಸಿಹಿಸುದ್ದಿ.

ಐದು ಅಡಿ 10 ಇಂಚು ಎತ್ತರದ, ಅಹಂಕಾರದ ಸೊಂಕೂ ಇಲ್ಲದ, ಕೀರ್ತಿ ಶನಿ ಇನ್ನೂ ತಲೆಗೆ ಹತ್ತದೆ ಇರುವ, ಬಲಿಷ್ಠ ಹಿಂಗೈ ಮತ್ತು ಮುಂಗೈ ಹೊಡೆತಗಳ ಆಟಗಾರ, ಇಡೀ ಕೋರ್ಟಿನಲ್ಲಿ ಚಿರತೆಯಂತೆ ಪಾದ ಚಲನೆ ಹೊಂದಿರುವ ಲಕ್ಷ್ಯ ಸೇನ್ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸನಲ್ಲಿ ಒಂದು ಪದಕಕ್ಕೆ ಲಕ್ಷ್ಯ ಇಡುವುದನ್ನು ಯಾರೂ ತಡೆಯಲು ಅಸಾಧ್ಯ ಎನ್ನುವುದು ಭಾರತೀಯರ ನಂಬಿಕೆ.

ಆಲ್ ದ ಬೆಸ್ಟ್ ಮತ್ತು ಹ್ಯಾಪಿ ಬರ್ತಡೇ ಚಾಂಪಿಯನ್.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಸ್ವಾತಂತ್ರ್ಯದ ಕನವರಿಕೆಯಲ್ಲಿ ಮಿಂದೆದ್ದ ಭಾರತ

Continue Reading

ಅಂಕಣ

ರಾಜಮಾರ್ಗ ಅಂಕಣ: ಸ್ವಾತಂತ್ರ್ಯದ ಕನವರಿಕೆಯಲ್ಲಿ ಮಿಂದೆದ್ದ ಭಾರತ

ರಾಜಮಾರ್ಗ ಅಂಕಣ: ಆ ಘಟನೆ ನಡೆದು 78 ವರ್ಷಗಳೇ ಕಳೆದುಹೋದವು. ಬ್ರಿಟಿಷ್ ಚಕ್ರಾಧಿಪತ್ಯವು ನಮ್ಮನ್ನು ತೊರೆದು ಸ್ವಾತಂತ್ರ್ಯದ ನಸುಕು ಹರಿದು ಅಷ್ಟೇ ವರ್ಷಗಳು ಪೂರ್ತಿಯಾದವು. ಆದರೆ ಆ ಸ್ವಾತಂತ್ರ್ಯವು ನಮಗೆ ಸುಲಭವಾಗಿ ದೊರೆಯಿತು ಎಂದು ಯಾರೂ ತಿಳಿಯುವುದು ಬೇಡ.

VISTARANEWS.COM


on

Rajamarga
Koo

ಸ್ವಾತಂತ್ರ್ಯ ಎಂಬ ಹೆರಿಗೆ ನೋವನ್ನು ದಾಟಿ!

ರಾಜಮಾರ್ಗ ಅಂಕಣ: ಮೊಘಲ್ ದೊರೆ ಶಹಜಾಹನ್ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಈಸ್ಟ್ ಇಂಡಿಯಾ ಕಂಪನಿಗೆ ಸತಾರಾ ನಗರದಲ್ಲಿ ವಸಾಹತು ಮಾಡಲು ಅನುಮತಿ ನೀಡಿದ್ದೇ ಆರಂಭ. ಆ ಕಂಪೆನಿಯ ಹಿಂದೆ ಬಂದದ್ದು ಇಂಗ್ಲೆಂಡಿನ ಪ್ರಭುತ್ವ. ಅದರ ಬೆನ್ನಿಗೆ ಬಂದದ್ದು ಮತಾಂತರದ ಆಮಿಷಗಳು. ಕೊನೆಯದಾಗಿ ಬಂದದ್ದು ಭಾರತದ ಅನರ್ಘ್ಯ ಸಂಪತ್ತನ್ನು ಲೂಟಿ ಮಾಡುವ, ಭಾರತದ ಒಂದೊಂದೇ ಪ್ರದೇಶವನ್ನು ಆಪೋಶನ ಮಾಡುವ ಹುನ್ನಾರಗಳು. ಅದಕ್ಕೆ ಪೂರಕವಾದ ಇಂಗ್ಲಿಷರ ಕುಟಿಲ ನೀತಿಗಳು ಮತ್ತು ಷಡ್ಯಂತ್ರಗಳು! ಆಗೊಮ್ಮೆ ಕೂತು ನನ್ನ ಮನಸ್ಸು ಯೋಚಿಸುತ್ತದೆ, 1757ರ ಕದನದಲ್ಲಿ ಬ್ರಿಟಿಷರ 3000 ಸೈನಿಕರ ಒಂದು ಪುಟಗೋಸಿ ಸೇನೆಯನ್ನು ಬಂಗಾಲದ ನವಾಬನ ಸಿರಾಜುದ್ದೌಲನ 30,000 ಸೈನಿಕರ ಬಲಿಷ್ಠ ಸೇನೆ ಸೋಲಿಸಿದ್ದರೆ? ಹಾಗೇನಾದರೂ ಆಗಿದ್ದರೆ ಆಗಲೇ ಬ್ರಿಟಿಷ್ ಸಾಮ್ರಾಜ್ಯ ಭಾರತದಿಂದ ಗಂಟು ಮೂಟೆ ಕಟ್ಟಬೇಕಿತ್ತು. ಯಾಕೆ ಹಾಗಾಗಲಿಲ್ಲ ಎಂದರೆ ಭಾರತದ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಹೆಚ್ಚು ಬಲಿಷ್ಠರಾಗಿದ್ದರು!

223 ವರ್ಷಗಳ ಸುದೀರ್ಘ ಸ್ವಾತಂತ್ರ್ಯದ ಹೋರಾಟ!

ನೂರಾರು ವಿದೇಶಿ ಆಕ್ರಮಣಕಾರರು ಭಾರತದ ಮೇಲೆ ದಂಡೆತ್ತಿಕೊಂಡು ಬಂದರು ಎಂದು ನಮಗೆ ಇತಿಹಾಸ ಪಠ್ಯಗಳು ಹೇಳುತ್ತಿದ್ದವು. ಆದರೆ ಯಾಕೆ ಬಂದರು ಎಂದು ನಮಗೆ ಅರ್ಥವಾದದ್ದು ನಾವು ಮುಂದೆ ಭಾರತದ ನೈಜ ಇತಿಹಾಸವನ್ನು ಓದಿದ ನಂತರವೇ! ಬ್ರಿಟಿಷರು ಭಾರತಕ್ಕೆ ಬರುವ ಮೊದಲು ನಮ್ಮ ದೇಶವು ಜಗತ್ತಿನ ಅತ್ಯಂತ ಬಲಿಷ್ಠ ರಾಷ್ಟ್ರವಾಗಿತ್ತು. ಸಂಪತ್ತಿನಲ್ಲಿಯೂ ಮತ್ತು ಜ್ಞಾನದಲ್ಲಿಯೂ! ಅದೇ ಆಕರ್ಷಣೆ ಈ ಬ್ರಿಟಿಷರಿಗೆ ಕೂಡ. ಆಗ ಭಾರತದಲಿದ್ದ ಸಣ್ಣ ಸಣ್ಣ ರಾಜ್ಯಗಳ ನಡುವೆ ಒಮ್ಮತವಿರಲಿಲ್ಲ. ಸ್ವಾರ್ಥ ತುಂಬಿದ್ದ ಆ ರಾಜಮಹಾರಾಜರು ಏನಾದರೂ ಒಟ್ಟಾಗಿ ನಿಂತಿದ್ದರೆ ನಮಗೆ 100 ವರ್ಷಗಳ ಹಿಂದೆಯೇ ಸ್ವಾತಂತ್ರ್ಯವು ದೊರೆಯುತ್ತಿತ್ತು! ಆಗಲೂ ಭಾರತದ ಸ್ವಾತಂತ್ರ್ಯಕ್ಕೆ ಗೋಡೆಯಾಗಿ ನಿಂತವರು ಈ ಒಳಗಿನ ಶತ್ರುಗಳೇ! ಹಿಂದೂ ಮತ್ತು ಮುಸಲ್ಮಾನರು ಒಟ್ಟಾಗಿ ಸ್ವಾತಂತ್ರ್ಯಕ್ಕೆ ಹೋರಾಡುವುದನ್ನು ಬ್ರಿಟಿಷರು ಸಹಿಸಿಕೊಳ್ಳಲೇ ಇಲ್ಲ. ಈ ಒಡೆದು ಆಳುವ ನೀತಿಯಿಂದಾಗಿ ಭಾರತದ ಸ್ವಾತಂತ್ರ್ಯ ಹೋರಾಟವು ಬೇರೆ ರಾಷ್ಟ್ರಗಳ ಹೋರಾಟಕ್ಕಿಂತ ದೀರ್ಘ ಆಯಿತು.

ಸ್ವಾತಂತ್ರ್ಯದ ಕನವರಿಕೆಯಲ್ಲಿ ದೇಶ ಇಬ್ಭಾಗವಾಯಿತು!

ಜಗತ್ತಿನ ಯಾವ ರಾಷ್ಟ್ರವು ಕೂಡ ಸ್ವಾತಂತ್ರ್ಯವನ್ನು ಪಡೆದಾಗ ಎರಡಾಗಿ ಒಡೆದು ಹೋದ ನಿದರ್ಶನ ದೊರೆಯುವುದಿಲ್ಲ! ಆದರೆ ಆಗಸ್ಟ್ 14ರ ಮಧ್ಯರಾತ್ರಿ ಪ್ರಧಾನಿ ನೆಹರೂ ಯುನಿಯನ್ ಜ್ಯಾಕನ್ನು ಕೆಳಗೆ ಇಳಿಸಿ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೊದಲೇ ಭಾರತವು ಎರಡು ಭಾಗವಾಗಿ ಪಾಕಿಸ್ಥಾನದ ಉದಯ ಆಗಿತ್ತು! ಆ ಕ್ಷಣದಲ್ಲಿ ಬ್ರಿಟಿಷ್ ಪ್ರಭುತ್ವ ಮೀಸೆ ತಿರುವಿ ನಗುತ್ತಿತ್ತು. ಏಕೆಂದರೆ ಅಖಂಡ ಭಾರತವು ಮುಂದೆ ವಿಶ್ವದ ಬಲಿಷ್ಠ ಶಕ್ತಿಯಾಗಿ ಹೊಮ್ಮುವ ಕನಸಿಗೆ ಅಂದೇ ಅವರು ಕೊಳ್ಳಿಯಿಟ್ಟಾಗಿತ್ತು! ಭಾರತೀಯರ ಆ ಒಂದು ಸಂಭ್ರಮದ ಮೈಮರೆತವು ಪಾಕಿಸ್ತಾನದ ರೂಪದಲ್ಲಿ ಇಂದಿಗೂ ನಮಗೆ ಮಗ್ಗುಲ ಮುಳ್ಳಾಗಿ ನಿಂತದ್ದು ವಿಪರ್ಯಾಸ!

ರಾವಿ ನದಿಯನ್ನು ದಾಟಿ ರೈಲು ತುಂಬ ಭಾರತಕ್ಕೆ ಬಂದ ರಕ್ತಸಿಕ್ತ ಹೆಣಗಳು ಭಾರತದ ಸ್ವಾತಂತ್ರ್ಯದ ಕನವರಿಕೆಯಲ್ಲಿ ಮುಳುಗಿದ್ದ ಆಗಿನ ಕೆಲವು ನಾಯಕರಿಗೆ ದ್ರೋಹ ಎಂದು ಅನ್ನಿಸಲೇ ಇಲ್ಲ. ಭೀಷ್ಮ ಸಾಹನಿ ಬರೆದ ಹಿಂದೀ ಕಾದಂಬರಿ
‘ತಮಸ್ ‘ಇದನ್ನುಒಮ್ಮೆ ಓದಿದಾಗ ನಮ್ಮ ರಕ್ತ ಕುದಿಯದೆ ಹೋದರೆ ನಾವು ಭಾರತೀಯರೇ ಅಲ್ಲ ಬಿಡಿ! ಆಗಲೂ ಭಾರತವನ್ನು ಕಾಡಿದ್ದು ಒಳಗಿನ ಶತ್ರುಗಳೇ! ಭಾರತಕ್ಕೆ ಸ್ವಾತಂತ್ರ್ಯವನ್ನು ಕೊಟ್ಟೆವು ಎಂದು ಹೊರಗಿಂದ ಶೋ ಮಾಡಿ ಒಳಗೊಳಗೆ ‘ಡೊಮಿನಿಯನ್ ರಿಪಬ್ಲಿಕ್ ‘ ಎಂಬ ಢೋಂಗಿ ಒಪ್ಪಂದಕ್ಕೆ ನಮ್ಮ ವರಿಷ್ಟರಿಂದ ಸಹಿಮಾಡಿಸಿದ, ಮತ್ತೆ ಮೂರು ವರ್ಷಗಳ ಕಾಲ ಭಾರತವನ್ನು ಕಾಡಿದ ಈಸ್ಟ್ ಇಂಡಿಯಾ ಕಂಪೆನಿಯ ವರಿಷ್ಠರಿಗೆ ಅದೇ ತಾನೇ ಬೇಕಾಗಿತ್ತು!

ಸ್ವಾತಂತ್ರ್ಯದ ನಂತರದ 78 ವರ್ಷಗಳು!

1945ರ ಹಿರೋಶಿಮಾ ಬಾಂಬ್ ಸ್ಫೋಟದ ನಂತರ ಜಪಾನ್ ಮತ್ತೆ ಎದ್ದು ಬಂದದ್ದು ದೇಶಪ್ರೇಮದ ಜಾಗೃತಿಯಿಂದ. ಭಾರತಕ್ಕೂ ಅಂತಹದ್ದೇ ಅವಕಾಶ ಇತ್ತು. 223 ವರ್ಷಗಳ ಸುದೀರ್ಘ ಸ್ವಾತಂತ್ರ್ಯದ ಹೋರಾಟದ ಕಾವು ಕಣ್ಣ ಮುಂದೆ ಇತ್ತು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳು ಇದ್ದವು. ಕ್ರಾಂತಿಕಾರಿಗಳ ರಕ್ತಸಿಕ್ತ ಹೋರಾಟದ ಘಟನೆಗಳು ಇದ್ದವು. ನೇತಾಜಿ ಸುಭಾಸರ ‘ನನಗೆ ರಕ್ತ ಕೊಡಿ, ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ!’ ಮೊದಲಾದ ಘೋಷಣೆಗಳು ಇದ್ದವು. ಬಂಕಿಮ ಚಂದ್ರರ ಕ್ಷಾತ್ರತೇಜಸ್ಸಿನ ವಂದೇ ಮಾತರಂ ಗೀತೆ ಇತ್ತು. ಒಡೆದು ಹೋದ ಭಾರತವನ್ನು ಮತ್ತೆ ಏಕೀಕರಣ ಮಾಡಿದ ಸರ್ದಾರ್ ಪಟೇಲ್ ಅವರ ನೇತೃತ್ವ ಇತ್ತು. ಇದನ್ನೆಲ್ಲ ಬಂಡವಾಳವಾಗಿ ತೆಗೆದುಕೊಂಡಿದ್ದರೆ ಭಾರತವು ಯಾವಾಗಲೋ ‘ವಿಶ್ವಗುರು’ ಆಗುತ್ತಿತ್ತು. ಇನ್ನೂ ಪೂರ್ತಿ ಆಗಲಿಲ್ಲ ಅಂದರೆ ಅದಕ್ಕೂ ಕಾರಣ ಒಳಗಿನ ಶತ್ರುಗಳು.

ಭಾರತದ ಕ್ಷಾತ್ರತೇಜಸ್ಸು ಮತ್ತೆ ಎದ್ದು ಬರಬೇಕಾಗಿದೆ.

ನಾನು ಈವರೆಗೆ ಪಟ್ಟಿ ಮಾಡಿದ ಯಾವ ದೋಷವೂ ತಾಯಿ ಭಾರತಿಯದ್ದು ಅಲ್ಲ. ಆಕೆ ಹಿಂದೆಯೂ, ಇಂದಿಗೂ, ಮುಂದೆಯೂ ಸ್ವಯಂಭೂ ಸುವರ್ಣಗರ್ಭೆ! ಮಾತೃ ಸ್ವರೂಪಿಣಿ! ಜಗತ್ತಿನ ಬೇರೆ ಯಾವ ರಾಷ್ಟ್ರಕ್ಕೂ 10,000 ವರ್ಷಗಳ ಬರೆದಿಟ್ಟ ಇತಿಹಾಸ ಇಲ್ಲ, ಅದು ಭಾರತಕ್ಕಿದೆ ಎಂಬಲ್ಲಿಗೆ ಭಾರತವು ಫೀನಿಕ್ಸ್ ಪಕ್ಷಿಯಂತೆ ಮತ್ತೆ ಎದ್ದುಬರುವ ಸಾಧ್ಯತೆಗಳು ನಮ್ಮ ಕಣ್ಣ ಮುಂದಿವೆ. ಭಾರತವು ಜಗತ್ತಿನ ಐದನೇ ಅತೀ ದೊಡ್ಡ ಆರ್ಥಿಕ ಶಕ್ತಿ ಆಗ್ತಾ ಇದೆ. ಜಾಗತಿಕ ವೇದಿಕೆಗಳಲ್ಲಿ ಭಾರತದ ಇಮೇಜ್ ಹೆಚ್ಚಾಗ್ತಾ ಇದೆ. ನಮ್ಮ ಸುತ್ತಮುತ್ತಲಿನ ಪಾಕಿಸ್ತಾನ್, ಬಾಂಗ್ಲಾ ದೇಶ, ಶ್ರೀಲಂಕಾ, ಅಫ್ಘಾನಿಸ್ತಾನಗಳು ಆರ್ಥಿಕವಾಗಿ ನಡುಗಿದರೂ ಭಾರತದ ಆರ್ಥಿಕತೆಯ ಒಂದು ಇಟ್ಟಿಗೆ ಕೂಡ ಅಲುಗಾಡಿಲ್ಲ ಅನ್ನೋದು ನಮ್ಮ ಭರವಸೆಯ ಕಾರಣ. ಕೊರಾನಾ ಮಹಾಮಾರಿಯನ್ನು ಹೇಗೆ ಲಸಿಕೆಗಳ ಅಭಿಯಾನದ ಮೂಲಕ ಭಾರತವು ಗೆದ್ದಿತು ಎನ್ನುವ ನಿದರ್ಶನ ನಮ್ಮ ಮುಂದಿದೆ. ಇಸ್ರೋ ಕೈಗೊಳ್ಳುತ್ತಿರುವ ವ್ಯೋಮ ಕಾರ್ಯಕ್ರಮಗಳನ್ನು ಜಗತ್ತು ಬೆರಗುಗಣ್ಣಿಂದ ನೋಡುತ್ತಿದೆ. ಸ್ವಾತಂತ್ರ್ಯದ ನಂತರ ನಡೆದ ಪ್ರತೀಯೊಂದು ಯುದ್ಧವನ್ನು
(ಒಂದನ್ನು ಬಿಟ್ಟು) ಭಾರತವು ದೊಡ್ಡಮಟ್ಟದಲ್ಲಿ ಗೆದ್ದಿದೆ. ವಿಶ್ವದ ಬಲಿಷ್ಠ ರಾಷ್ಟ್ರಗಳು ಈಗ ಭಾರತದ ಗೆಳೆತನಕ್ಕಾಗಿ ಕಾಯುತ್ತಿವೆ ಅಂದರೆ ಅದು ಎಷ್ಟೊಂದು ಅದ್ಭುತವಾದ ಪರಿವರ್ತನೆ.

2047ರ ಹೊತ್ತಿಗೆ ಭಾರತವು ವಿಕಸಿತ ರಾಷ್ಟ್ರವಾಗುವ ಭರವಸೆ ನಮ್ಮೆಲ್ಲರನ್ನೂ ಸದ್ಯಕ್ಕೆ ಕೈ ಹಿಡಿದು ಮುನ್ನಡೆಸಲಿ.

ಜೈ ಹಿಂದ್!

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೃಷ್ಟಿ ವಿಕಲತೆಯನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿ ಆದ ಪ್ರಾಂಜಲ್ ಪಾಟೀಲ್!

Continue Reading

ಅಂಕಣ

ಧವಳ ಧಾರಿಣಿ ಅಂಕಣ: ರಾಮವಿಲಾಪಕ್ಕೆ ಲಕ್ಷ್ಮಣೋಪಶಮನ

ಧವಳ ಧಾರಿಣಿ ಅಂಕಣ: ಹಲವು ವಿಧಗಳಲ್ಲಿ ಸೀತೆಗಾಗಿ ವಿಲಪಿಸುತ್ತಾನೆ. ರಾಮನ ದುಃಖವನ್ನು ಶಮನ ಮಾಡುವ ಲಕ್ಷ್ಮಣನ ಸಂಯಮ ಅದ್ಭುತವಾದದ್ದು. ಲಕ್ಷ್ಮಣ ರಾಮನಿಗೆ ತನ್ನ ಕರ್ತವ್ಯವನ್ನು ನಿಭಾಯಿಸುವಂತೆ ಆತನನ್ನು ಎಚ್ಚರಿಸುವ ಅಪೂರ್ವ ಮಾತುಗಳು ಕಿಷ್ಕಿಂಧಾಕಾಂಡದ ಮೊದಲನೆಯ ಸರ್ಗದಲ್ಲಿ ಬರುತ್ತದೆ.

VISTARANEWS.COM


on

rama laxmana ಧವಳ ಧಾರಿಣಿ ಅಂಕಣ
Koo

ವಿಯೋಗದಿಂದ ಕದಡಿದ ಮನಸ್ಸಿಗೆ ಪೂರ್ವಸ್ಮೃತಿಯನ್ನು ತಂದುಕೊಡುವ ಸನ್ನಿವೇಶ

dhavala dharini by Narayana yaji

:: ನಾರಾಯಣ ಯಾಜಿ

ತ್ಯಜತ್ವಾಂ ಕಾಮವೃತ್ತತ್ತ್ವಂ ಶೋಕಂ ಸಂನ್ಯಸ್ಯ ಪೃಷತಃ I
ಮಹಾತ್ಮನಂ ಕೃತಾತ್ಮಾನಮಾತ್ಮಾನಂ ನಾವಬಿಧ್ಯಸೇ II ಕಿ. 1.123 II

ಸೀತಾವಿಯೋಗದಿಂದುಂಟಾಗಿರುವ ಶೋಕವನ್ನು ಬಿಡು. ಮನ್ಮಥವಿಕಾರವನ್ನು ತ್ಯಜಸು! ನೀನು ಮಹಾತ್ಮನೆಂಬುದನ್ನೂ , ಕೃತಾತ್ಮನೆನ್ನುವುದನ್ನೂ ಮರೆತುಬಿಟ್ಟಿರುವೆ.

ರಾಮಾಯಣದಲ್ಲಿ ಕಿಷ್ಕಿಂಧಾ ಕಾಂಡದ ಬಹುಮುಖ್ಯವಾದ ಘಟನೆಯೇ ಪತ್ನಿಯ ವಿರಹದಿಂದ ಅಪಾರ ದುಃಖಕ್ಕೆ ಒಳಗಾದ ರಾಮನನ್ನು ಲಕ್ಷ್ಮಣ ಸಮಾಧಾನಪಡಿಸುವುದು. ಕಿಷ್ಕಿಂಧಾ ಕಾಂಡದ ನಾಲ್ಕನೆಯ ಸರ್ಗದಲ್ಲಿ ಲಕ್ಷ್ಮಣ ಎಂಟು ಶ್ಲೋಕದಲ್ಲಿ ರಾಮನು ಸುಗ್ರೀವನಲ್ಲಿಗೆ ಶರಣು ಹೊಂದಲು ಬಂದಿದ್ದಾನೆ ಎನ್ನುವ ಮಾತುಗಳನ್ನು ಹೇಳಿದ್ದಾನೆ ಎನ್ನುವುದನ್ನು ನೋಡಿದ್ದೇವೆ. ಆರು ಬಗೆಯಲ್ಲಿ ಎಂಟು ಶ್ಲೋಕಗಳಲ್ಲಿ (ರಾಮಶ್ಚ ಸುಗ್ರೀವಂ ಶರಣಂ ಗತೌ ಮುಂತಾಗಿ) ಲಕ್ಷ್ಮಣನು ಹನುಮಂತನ ಹತ್ತಿರ ಕೇಳಿಕೊಳ್ಳುವ ಭಾಗ ರಾಮನ ವ್ಯಕ್ತಿತ್ವಕ್ಕೆ ಒಂದು ಕಪ್ಪುಚುಕ್ಕೆ ಎಂದು ಕೆಲ ಟೀಕಾಕಾರರು ಹೇಳಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಲಕ್ಷ್ಮಣ ಹಾಗೆ ಹೇಳಲಿಕ್ಕೆ ಕಾರಣವಾಗಿರುವ ಸಂಗತಿಯನ್ನು ಕಿಷ್ಕಿಂಧಾ ಕಾಂಡದ ಮೊದಲ ಭಾಗದಲ್ಲಿ ವಿವರವಾಗಿ ವಿವೇಚಿಸಲಾಗಿದೆ. ಸಮಗ್ರ ಭೂಮಂಡಲದ ಚಕ್ರವರ್ತಿಗಳಾದ ರಘುವಂಶೀಯ ರಾಮ ತನ್ನ ಸಿಂಹಾಸನದ ಘನತೆ ಗೌರವವನ್ನೆಲ್ಲಾ ಬಿಟ್ಟು ಸುಗ್ರೀವನಲ್ಲಿ ಆಶ್ರಯ ಕೋರಿ ಬಂದಿದ್ದಾನೆ. ಸೀತೆಯನ್ನು ಕಳೆದುಕೊಂಡ ರಾಮನಿಗೆ ಬುದ್ಧಿ ವಿಸ್ಮೃತಿಯಾಗಿತ್ತು. ವಿರಹದಿಂದಲಾಗಿ ರಾಮ ಗೋದಾವರಿ ನದಿಯನ್ನು ಬತ್ತಿಸಿಬಿಡುವೆ, ವಿಂದ್ಯಪರ್ವತವನ್ನೇ ಕೆಡಹಿಬಿಡುವೆ ಎಂದು ಕೂಗಾಡುವುದು ನಂತರ ಪಂಪಾಸರೋವರದಲ್ಲಿದ್ದ ಕಮಲವನ್ನೇ ತಿಂಗಳ ಬೆಳಕಿನಲ್ಲಿ ಕಮಲಮುಖಿ ಸೀತೆ ಎಂದು ಭ್ರಮಿಸಿ ಸರೋವರಕ್ಕೆ ಧುಮುಕಲು ಹೋಗುವುದು, ಹೀಗೆ ಹಲವು ವಿಧಗಳಲ್ಲಿ ಸೀತೆಗಾಗಿ ವಿಲಪಿಸುತ್ತಾನೆ. ರಾಮನ ದುಃಖವನ್ನು ಶಮನ ಮಾಡುವ ಲಕ್ಷ್ಮಣನ ಸಂಯಮ ಅದ್ಭುತವಾದದ್ದು. ಲಕ್ಷ್ಮಣ ರಾಮನಿಗೆ ತನ್ನ ಕರ್ತವ್ಯವನ್ನು ನಿಭಾಯಿಸುವಂತೆ ಆತನನ್ನು ಎಚ್ಚರಿಸುವ ಅಪೂರ್ವ ಮಾತುಗಳು ಕಿಷ್ಕಿಂಧಾಕಾಂಡದ ಮೊದಲನೆಯ ಸರ್ಗದಲ್ಲಿ ಬರುತ್ತದೆ. ರಾಮ ತನ್ನ ತಂದೆ ತಾಯಿಯರಿಗೆ, ಸುಮಂತ್ರನಿಗೆ, ಗುಹನಿಗೆ ವಶಿಷ್ಠರು, ಜಾಬಾಲಿ ಮತ್ತು ಭರತನಿಗೆ ತನ್ನ ವನವಾಸ ದೀಕ್ಷೆಯ ಕುರಿತು ತಿಳಿಹೇಳುವ ಮಾತುಗಳು ಬಲು ಪ್ರಸಿದ್ಧ. ಪ್ರಸ್ತುತ ಸಂದರ್ಭದಲ್ಲಿ ಸೀತಾಪಹರಣವೆನ್ನುವುದು ಆತನ ಬುದ್ಧಿಯನ್ನು ವಿಭ್ರಣೆಗೊಳಿಸಿಬಿಟ್ಟಿದೆ. ಆತನಿಗೆ ಆ ದಟ್ಟ ಅರಣ್ಯದಲ್ಲಿ ಬುದ್ಧಿ ಹೇಳುವವರು ಯಾರೂ ಇಲ್ಲ. ಆ ಕೆಲಸವನ್ನು ಇಲ್ಲಿ ಲಕ್ಷ್ಮಣ ಮಾಡಬೇಕಾದ ಅನಿವಾರ್ಯತೆ ಬರುತ್ತದೆ. ಹಾಗೇ ವಿವೇಕವನ್ನು ಹೇಳುವಾಗ ಲಕ್ಷ್ಮಣನಿಗೆ ತನ್ನ ಮಿತಿಯ ಅರಿವಿದೆ. ಆಜ್ಞಾಪೂರ್ವಕವಾಗಿ ಹೇಳುವಂತಿಲ್ಲ. ಉಪದೇಶವೂ ಆಗಕೂಡದು, ಹೇಳುವ ವಿಧಾನದಲ್ಲಿ ಹಿರಿಯನ ಗೌರವವಕ್ಕೆ ಚ್ಯುತಿಬರಬಾರದು.

ವಾಲ್ಮೀಕಿ ಇಲ್ಲಿ ಲಕ್ಷ್ಮಣನಿಂದ ಅಣ್ಣನಿಗೆ ವಿವೇಕವನ್ನು ಹೇಳುವ ವಿವರ ಬಲು ಆಸಕ್ತಿದಾಯಕವಾಗಿದೆ. ಮಹಾಕಾವ್ಯವನ್ನು ಬರೆಯಲು ವಾಲ್ಮೀಕಿಯಲ್ಲಿ ಅದೆಷ್ಟು ಲೋಕಾನುಭವ ಮತ್ತು ಶಾಸ್ತ್ರದ ಅಧ್ಯಯನ ಇರಬಹುದೆನ್ನುವುದಕ್ಕೆ ಇದೊಂದು ನಿದರ್ಶನ. ಆತ ರಾಮನಿಗೆ ಹೀಗೆ ಮಾಡಿ ಎಂದು ಹೇಳುವುದಿಲ್ಲ. ಚಿಕ್ಕವ ಹಿರಿಯರ ಹತ್ತಿರ ತನಗೆ ತಿಳಿಯದ ವಿಷಯವನ್ನು ಕಲಿಸಿಕೊಡು ಎನ್ನುವ ರೀತಿಯಲ್ಲಿ ಇದೇಕೆ ಹೀಗೆ ಎನ್ನುವ ಅನೇಕ ಪ್ರಶ್ನೆಗಳ ಮೂಲಕ ರಾಮನಲ್ಲಿ ಪ್ರಶ್ನೆ ಮಾಡುತ್ತಾನೆ. ರಾವಣನು ಪಾತಾಳಕ್ಕೆ ಹೊಕ್ಕರೂ. ಅಲ್ಲಿಂದ ಮುಂದೆ ಇನ್ನೋ ಗಹನವಾದ ಸ್ಥಳ ಹೊಕ್ಕರೂ ಆತ ಉಳಿಯಲಾರನು. ದಿತಿಯ ಗರ್ಭವನ್ನು ಹೊಕ್ಕರೂ ಮೈಥಿಲಿಯನ್ನು ತಂದೊಪ್ಪಿಸದಿದ್ದಲ್ಲಿ ಗರ್ಭವನ್ನು ಪ್ರವೇಶಿಸಿಯಾದರೂ ನಾನು ಅವನನ್ನು ಸಂಹರಿಸುತ್ತೇನೆ. ನೀನು ಉತ್ಸಾಹವನ್ನು ಕಳೆದುಕೊಂಡು ಹೀಗೆ ಯಾಕೆ ಇರುವೆ ಎನ್ನುವ ಮಾತುಗಳಲ್ಲಿ ನೀನು ಭ್ರಮಿತನಾಗಿದ್ದೀಯಾ ಎಂದು ನೇರವಾಗಿ ಹೇಳುವುದಿಲ್ಲ; ನೀನು ಉತ್ಸಾಹವನ್ನು ಕಳೆದುಕೊಳ್ಳಬೇಡ, ನೀನು ಹೀಗೆಲ್ಲಾ ಇರುವವಂತವನಲ್ಲ ವ್ಯಕ್ತಿಯಲ್ಲ ಎನ್ನುವ ಭಾವ ಪ್ರತೀ ಮಾತಿನಲ್ಲಿಯೂ ವ್ಯಕ್ತವಾಗುತ್ತದೆ.

ಪ್ರಾರಂಭದಲ್ಲಿ ಹೇಳಿದ ತ್ಯಜತ್ವಾಂ… ಎನ್ನುವ ಶ್ಲೋಕವನ್ನು ಗಮನಿಸಿ. ಅದರಲ್ಲಿ ಎರಡನೆಯ ಸಾಲಿನಲ್ಲಿ ಬರುವ “ಮಹಾತ್ಮನಂ ಕೃತಾತ್ಮಾನಮಾತ್ಮಾನಂ ನಾವಬಿಧ್ಯಸೇ” ಎನ್ನುವದರಲ್ಲಿ ಪ್ರಯೋಗಿಸಿದ “ಮಹಾತ್ಮ ಮತ್ತು ಕೃತಾತ್ಮಾ” ಎನ್ನುವುದು ರಾಮನ ಪೂರ್ವದ ಮೂಲಸ್ವರೂಪವಾದ ಮಹಾವಿಷ್ಣುವನ್ನು ಹೇಳುತ್ತದೆ. ಮಹಾತ್ಮಾ ಎಂದರೆ ಶ್ರೇಷ್ಠ, ಯಾರ ಶರೀರವು ಇತರರಿಗೆ ಶ್ರೇಷ್ಠವಾಗಿ ಕಾಣುವುದೋ; ಯಾವಾತನಿಗೆ ರಜಸ್ತಮಗಳೆನ್ನುವ ಮಲಿನತೆ ಇರುವುದಿಲ್ಲವೋ ಆತ ಮಹಾತ್ಮನು, ಸತ್ತ್ವಸ್ವರೂಪನು ಎಂದು ಆರ್ಥವಾಗುತ್ತದೆ. ಮತ್ತೊಂದು ಕೃತಾತ್ಮಾ-ಶುದ್ಧವಾದ ಆತ್ಮವುಳ್ಳವನು. ಶಾಶ್ತ್ರಗಳಿಂದ ಪರಿಶುದ್ಧವಾದ ಹೃದಯವುಳ್ಳವನು. ಶ್ರುತಿ ಸ್ಮೃತಿಗಳಲ್ಲಿ ಸ್ಮರಿಸಲ್ಪಟ್ಟವ ಎಂದಾಗುತ್ತದೆ. ಈ ಕಾರಣದಿಂದ ನೀನು “ತ್ಯಜತಾಂ ಕಾಮವೃತ್ತತ್ತ್ವಂ- ಕಾಮವಿಕಾರವೆನ್ನುವುದು ನಿನಗಲ್ಲ ಎನ್ನುತ್ತಾನೆ. ರಾಮನ ಮೂಲ ಯಾವುದು ಎನ್ನುವುದನ್ನು ಇಲ್ಲಿ ಲಕ್ಷ್ಮಣ ಈ ರೀತಿಯಲ್ಲಿ ಸೂಚಿಸುತ್ತಾನೆ. ಆತನ ಅವತಾರದ ಉದ್ಧೇಶವು ರಾವಣನನ್ನು ಸಂಹರಿಸುವ ಸಲುವಾಗಿಯೇ ಆಗಿದೆ. ಎಲ್ಲ ಕಡೆಯೂ ಮಾನವರಂತೆ ವ್ಯವಹರಿಸುವ ರಾಮ ಜಟಾಯುವಿನ ಪ್ರಕರಣದಲ್ಲಿ ಪರೋಕ್ಷವಾಗಿ, ಶಬರಿಯ ವಿಷಯದಲ್ಲಿ ಸ್ವ-ಸ್ವರೂಪದ ಪ್ರಜ್ಞೆಯಲ್ಲಿಯೇ ಅವರವರಿಗೆ ಮೋಕ್ಷವನ್ನು ಅನುಗ್ರಹಿಸಿದ್ದಾನೆ. ರಾಮಾಯಣದಲ್ಲಿ ರಾಮ ತನ್ನ ಮೂಲ ಸ್ವರೂಪವನ್ನು ಪ್ರಕಟಮಾಡುವ ಅಪರೂಪದ ಸಂದರ್ಭಗಳು ಇವು.

ಅಣ್ಣನಿಗೆ “ನೀನು ಪುರುಷೋತ್ತಮ” ಎನ್ನುತ್ತಾ ರಾಮನೆನ್ನುವ ದಶರಥನ ಮಗ ಯತಾರ್ಥದಲ್ಲಿ ವಿರಜಾಸ್ವರೂಪನಾದವ (ಪರತತ್ತ್ವ ಸ್ವರೂಪನಾದವ) ಇದೀಗ ಕಾರ್ಯಕಾರಣ ಸಂಬಂಧದಿಂದಾಗಿ ಸಂಸಾರಿಮಂಡಲಕ್ಕೆ ಅಭಿಮುಖನಾಗಿದ್ದಾನೆ. ಅದಕ್ಕೆ ಕಾರಣವಾದ ಅಂಶವನ್ನು ಸ್ಮರಣೆಗೆ ತಂದುಕೊಳ್ಳಬೇಕು. ರಾಮನ ಈ ದುಃಖವೆಲ್ಲವೂ ಅಭಿನಯವೇ ಹೊರತು ಅನುಭವಿಸಿ ಅದರಲ್ಲಿಯೇ ಮುಳುಗಿಹೋಗುವುದಲ್ಲ ಎನ್ನುವ ಅನೇಕ ಅರ್ಥವನ್ನು ಇಲ್ಲಿ ಕೊಡುತ್ತದೆ. ಕಿರಿಯರು ಹಿರಿಯರಿಗೆ ವಿವೇಕವನ್ನು ಹೇಳುವುದಲ್ಲ; ಅದರ ಕುರಿತಾದ ಅರಿವನ್ನು ಅವರ ಸ್ಮರಣೆಗೆ ತಂದುಕೊಡುವುದು ಎನ್ನುವುದು ಇಲ್ಲಿ ಲಕ್ಷ್ಮಣನ ವಿನಂತಿಯಲ್ಲಿ ಸ್ಪಷ್ಟವಾಗುತ್ತದೆ. ಹಿರಿಯರು ಉಪದೇಶವನ್ನು ನೀಡುತ್ತಾರೆ, ಸಮವಯಸ್ಕರು ಸಲಹೆಯನ್ನು ನೀಡುತ್ತಾರೆ (ಮಿತ್ರವಾಕ್ಯ), ಕಿರಿಯರು ತಮಗೆ ಗೊತ್ತಿದೆ ಎಂದು ಹಿರಿಯರನ್ನು ಯಾವ ಸಂದರ್ಭದಲ್ಲಿಯೂ ಅತಿಕ್ರಮಿಸಬಾರದು. ಇದೇಕೆ ಹೀಗೆ ಎನ್ನುತ್ತಲೇ ಹೇಳಬೇಕಾದುದನ್ನು ಹೇಳಬೇಕೆನ್ನುವುದಕ್ಕೆ ಇಲ್ಲಿ ಲಕ್ಷ್ಮಣನ ಮಾತುಗಳು ಸಾಕ್ಷಿ. ಈ ಭಾಗದಲ್ಲಿ ಲಕ್ಷ್ಮಣನನ್ನು ಮದಿಸಿದ ಮದ್ದಾನೆಗೆ ಕವಿ ಹೋಲಿಸಿದ್ದಾನೆ.

ತಂ ಮತ್ತಮಾತಙ್ಗವಿಲಾಸಗಾಮೀ ಗಚ್ಛನ್ತಮವ್ಯಗ್ರಮನಾ ಮಹಾತ್ಮಾ.
ಸ ಲಕ್ಷ್ಮಣೋ ರಾಘವಮಪ್ರಮತ್ತೋ ರರಕ್ಷ ಧರ್ಮೇಣ ಬಲೇನ ಚೈವ৷৷ಕಿ.1.127৷৷

ಮದಿಸಿದ ಆನೆಯಂತೆ ಒಯ್ಯಾರದಿಂದ ಹೆಜ್ಜೆಯಿಡುತ್ತಿದ್ದ ಅಣ್ಣನ ಸೇವೆಯಲ್ಲಿಯೇ ಏಕಾಗ್ರವಾದ ಮನಸ್ಸಿನಿಂದ ಕೂಡಿದ ಮಹಾತ್ಮನಾದ ಲಕ್ಷ್ಮಣನಾದರೋ, “ರರಕ್ಷ ಧರ್ಮೇಣ ಬಲೇನ ಚೈವ- ಧರ್ಮದಿಂದಲೂ ಬಲದಿಂದಲೂ ರಾಘವನ ದುಃಖವು ಕಡಿಮೆಯಾಗುವಂತೆ ಮಾಡಿದನು”. ರರಕ್ಷ- ಎನ್ನುವುದಕ್ಕೆ ದುಃಖರಹಿತನನ್ನಾಗಿ ಮಾಡಿದನು ಎನ್ನುವ ಅರ್ಥಬರುತ್ತದೆ(ನಿರ್ಧುಃಖಮಕರೋತ್). ರಾಮನಿಗೆ ಆತನ ಪೂರ್ವಸ್ಮರಣೆಯನ್ನು ತಂದುಕೊಡುವ ಸನ್ನಿವೇಶ ಇದು. ರಾಮನಿಗೆ ಅವನ ಮೂಲವನ್ನು ನೆನಪಿಸಿ ಆತ ಪರಂಧಾಮಕ್ಕೆ ಮರಳುವಂತೆ ಮಾಡುವವನು ಕಾಲಪುರುಷ. ಅದೂ ರಾಮಾಯಣದ ಅವತಾರದ ಉದ್ಧೇಶವಎಲ್ಲವೂ ಸಫಲವಾದ ಮೇಲೆ. ಇಲ್ಲಿ ಲಕ್ಷ್ಮಣನಿಗೆ ರಾಮನಿಗುಂಟಾದ ಬುದ್ಧಿವಿಸ್ಮೃತಿಯಿಂದ ಹೊರತರಬೇಕಾಗಿದೆ. ಇಲ್ಲಿ ಬರುವ “ಧರ್ಮೇಣ” ಅಂದರೆ ಸದಾಕಾಲವೂ ರಾಮನಿಗೆ ವಿಧೇಯನಾಗಿರುವ ಆತ ಆತನಿಗೆ ವಿವೇಕವನ್ನು ಹೇಳುವ ಸಂಧರ್ಭದಲ್ಲಿಯೂ ರಾಮಸೇವಕರೂಪದ ತನ್ನ ಸ್ವಭಾವಕ್ಕೆ ಕಿಂಚಿತ್ ಭಂಗ ಬಾರದಿರುವ ರೀತಿಯಲ್ಲಿ ವಿಷಯವನ್ನು ತಿಳಿಸುತ್ತಿದ್ದಾನೆ. ಇನ್ನು “ಬಲೇನಚೈವ” ಎನ್ನುವುದಕ್ಕೆ ಲಕ್ಷ್ಮಣ ಸೀತೆಯನ್ನು ರಾವಣ ಕದ್ದೊಯ್ದಿದ್ದಾನೆ ಎನ್ನುವುದು ಅವರಿಗೆ ತಿಳಿದಿದೆ. ಆದರೆ ರಾವಣ ಎಲ್ಲಿರಬಹುದು ಎನ್ನುವುದರ ಸುಳಿವು ಸಿಕ್ಕಿಲ್ಲ. ಇಲ್ಲಿ ದುಃಖಿಸುತ್ತಾ ಕುಳಿತರೆ ಕಾರ್ಯಸಾಧಿಸುವುದಿಲ್ಲ. ರಾವಣ ಎಲ್ಲಿದ್ದಾನೆ ಎನ್ನುವುದನ್ನು ಮೊದಲು ತಿಳಿಯಬೇಕು. ಆತ ಪಾತಾಳದಲ್ಲಿ ಇದ್ದರೂ, ಅಲ್ಲಿಂದ ಮುಂದೆ ಇನೂ ಗಹನವಾದ ಸ್ಥಳವನ್ನು ಹೊಕ್ಕರೂ ಪಾಪಿಷ್ಟನಾದ ಆತನನ್ನು ಹುಡುಕೋಣ ಎಂದು ಸಮಾಧಾನ ಹೇಳುತ್ತಾನೆ.

dhavala dharini king dasharatha
rama laxmana ಧವಳ ಧಾರಿಣಿ ಅಂಕಣ

ಅಯೋಧ್ಯಾ ಕಾಂಡದಲ್ಲಿ ಮುಂಗೋಪಿಯಾಗಿ ಲಕ್ಷ್ಮಣ ಕಾಣಿಸಿಕೊಳ್ಳುತ್ತಾನೆ. ತಂದೆಯಾದ ದಶರಥನನ್ನು ಬಂಧಿಸಿ ಸೆರೆಯಲ್ಲಿಟ್ಟು ರಾಜ್ಯವನ್ನು ಗೆದ್ದು ಅಣ್ಣನಾದ ರಾಮನಿಗೆ ಕೊಡುವೆ ಎಂದು ಅಬ್ಬರಿಸುತ್ತಾನೆ. ರಾಮನ ವಿವೇಕದ ಮಾತಿಗೆ ಅನಿವಾರ್ಯತೆಯಿಂದ ಸುಮ್ಮನಾಗುತ್ತಾನೆ. ಮುಂದೆ ಭರತ ರಾಮನನ್ನು ಕರೆತರಲು ಚಿತ್ರಕೂಟಕ್ಕೆ ಬರುವಾಗ ಆತನನ್ನು ನೋಡಿ, ತಮ್ಮಮೇಲೆ ಆಕ್ರಮಣಮಾಡಲು ಬಂದಿರಬಹುದೆನ್ನುವ ಸಂಶಯದಿಂದ ಭರತನನ್ನು ಎದುರಿಸುವೆ ಎನ್ನುವ ವೀರಾವೇಶದ ಮಾತುಗಳನ್ನು ಆಡುತ್ತಿದ್ದ ಲಕ್ಷ್ಮಣನ ಮೂಲ ಸ್ವಭಾವ ದುಡುಕಿನದ್ದಲ್ಲ. ರಾಮ ಗುಹನ ಆತಿಥ್ಯದಲ್ಲಿ ಗಂಗಾ ನದಿಯ ದಡದ ಮೇಲೆ ಮಲಗಿರುವಾಗ ಆತನ ಸ್ಥಿತಿಯನ್ನು ನೋಡಿ ಗುಹನ ಹತ್ತಿರ ಲಕ್ಷ್ಮಣ ಮರುಗುವುದು ಕರಳು ಚುರುಕ್ಕೆನ್ನುತ್ತದೆ. ಸದಾ ಹಂಸತೂಲಿಕಾತಲ್ಪದಲ್ಲಿ ಮಲಗುವ ತನ್ನ ಅಣ್ಣ ಇಂದು ಹೀಗೆ ಕೈಯನ್ನೇ ತಲೆದಿಂಬನ್ನಾಗಿಸಿಕೊಂಡು ಮಲಗಿರುವುದನ್ನು ನೋಡಲು ಆತನಿಗೆ ಸಾಧ್ಯವಾಗುವುದಿಲ್ಲ. ಲಕ್ಷ್ಮಣನದ್ದು ಹೆಂಗರಳು. ರಾಮನ ವಿಷಯದಲ್ಲಿ ಮಾತ್ರ ಕರುಣೆ ತೋರುವುದಲ್ಲ.

ಜನಸ್ಥಾನದಲ್ಲಿ ಅವರು ವಾಸಮಾಡುವಾಗ ನಡೆದ ಘಟನೆ. ವನವಾಸದ ಹದಿಮೂರನೆಯ ವರ್ಷದಲ್ಲಿ ಅವರು ಇದ್ದಾರೆ. ಆ ವರ್ಷದ ಹೇಮಂತ ಋತುವಿನಲ್ಲಿ ಅಸಾಧ್ಯವಾದ ಚಳಿಯಿದೆ. ಕಾಡಾನೆಗಳ ಹಿಂಡು ಬಾಯಾರಿಕೆಯಿಂದ ನೀರುಕುಡಿಯಲು ನದಿಗೆ ಬರುತ್ತಿದ್ದವಂತೆ ಆದರೆ ಹೇಮಂತದ ಚಳಿಯನ್ನು ತಾಳಲಾರದೇ ಸೊಂಡಿಲನ್ನು ನೀರಿಗೆ ಚಾಚಿ ನೀರು ಕುಡಿಯಲು ಯತ್ನಿಸಿದರೆ ಅವುಗಳಿಗೆ ತಣ್ಣನೆಯ ನೀರಿನ ಛಳಿಯನ್ನು ತಾಳಿಕೊಳ್ಳಲಾಗುವುದಿಲ್ಲ, ಮೈಕೊರೆವ ಚಳಿಗೆ ಅಂಜಿ ನೀರನ್ನು ಕುಡಿಯದೇ ಬಾಯಾರಿಕೆಯನ್ನು ಸಹಿಸಿಕೊಂಡು ಕಾಡಿಗೆ ಮರಳುತ್ತಿದ್ದವು. ಸದಾ ನೀರಿನಲ್ಲಿಯೇ ಇರುವ ಹಂಸಪಕ್ಷಿಗಳು ಸಹ ಚಳಿಗೆ ಹೆದರಿ ನೀರಿಗಿಳಿಯದೇ ದಡದಲ್ಲಿಯೇ ಸಾಲಾಗಿ ಕುಳಿತುಕೊಂಡಿದ್ದವು. ಅದನ್ನು ನೋಡಿದ ಲಕ್ಷ್ಮಣನಿಗೆ ನಂದಿಗ್ರಾಮದಲ್ಲಿ ಭರತನೂ ತಮ್ಮಂತೆ ವೃತಧಾರಿಯಾಗಿ ಗಡ್ಡೆ ಗಣಸು ತಿನ್ನುತ್ತಾ, ಜಟಾಧಾರಿಯಾಗಿ ನೆಲದಮೇಲೆ ಮಲಗುತ್ತಿದ್ದಾನೆ ಎನ್ನುವುದು ನೆನಪಾಯಿತು. ಸ್ವತಃ ತಾವು ಅಂತಹ ಚಳಿಯಲ್ಲಿ ನಡುಗುತ್ತಿದ್ದರೂ ಲಕ್ಷ್ಮಣನ ಮನಸ್ಸು ಇಲ್ಲಿ ಭರತನಿಗಾಗಿ ಮರುಗುತ್ತದೆ.

ಅತ್ಯನ್ತಸುಖಸಂವೃದ್ಧಸ್ಸುಕುಮಾರಸ್ಸುಖೋಚಿತಃ.
ಕಥಂ ನ್ವಪರರಾತ್ರೇಷು ಸರಯೂಮವಗಾಹತೇ৷৷ಅ.16.30৷৷

ಸುಖದಲ್ಲಿ ಬೆಳೆದ ಭರತ ಚಳಿಯಿಂದ ಕೂಡಿದ ಈ ಅಪರಾತ್ರಿಯಲ್ಲಿ ಸರಯೂ ನದಿಯಲ್ಲಿ ಹೇಗೆ ಸ್ನಾನ ಮಾಡಿಯಾನು ಎಂದು ಭರತನ ಕುರಿತು ಕಳವಳವನ್ನು ವ್ಯಕ್ತಪಡುತ್ತಾನೆ. ಅಪರಾತ್ರಿಯೆಂದರೆ ಮುಂಜಾನೆ ಬ್ರಾಹ್ಮೀ ಮುಹೂರ್ತಕ್ಕೆ ಮುನ್ನವೇ ಎದ್ದು ಸ್ನಾನಗಳನ್ನು ಪೂರೈಸಿ ನಿತ್ಯಕರ್ಮಾನುಷ್ಠಾನಗಳನ್ನು ಮಾಡಿ ಪ್ರಜೆಗಳ ಯೋಗಕ್ಷೇಮಗಳನ್ನು ನೋಡಲು ಪ್ರಾತಃಕಾಲದಲ್ಲಿ ಸಿದ್ಧನಾಗುತ್ತಿದ್ದ. ತಮಗಾದರೋ ವನವಾಸದ ದೀಕ್ಷೆಯಿದೆ. ಆದರೆ ಭರತ ಸುಖವಾಗಿ ಇರಬಹುದಾಗಿದ್ದರೂ ತಮ್ಮಂತೆ ವನವಾಸೀ ದೀಕ್ಷೆಯನ್ನು ಕೈಗೊಂಡು ರಾಜ್ಯವನ್ನು ನಡೆಸುತ್ತಿದ್ದಾನೆ. ರಾಜ್ಯವನ್ನು ರಾಮನ ಪ್ರತಿನಿಧಿಯಾಗಿ ನಿರ್ವಹಿಸುವ ಆತ ಅದಕ್ಕೆ ಚ್ಯುತಿಬಾರದ ರೀತಿಯಲ್ಲಿ ಚಳಿಗಾಲವನ್ನು ಲೆಕ್ಕಿಸದೇ ಕರ್ತವ್ಯಪರಾಯಣನಾಗಿದ್ದಾನೆ. ಚಳಿಗಾಲದ ವರ್ಣನೆ ಮತ್ತು ಭರತನ ಕುರಿತು ಲಕ್ಷ್ಮಣನ ಕಾಳಜಿ ಎರಡನ್ನೂ ಅನೇಕ ಉಪಮೆಗಳೊಂದಿಗೆ ವಾಲ್ಮೀಕಿ ಕಟ್ಟಿಕೊಟ್ಟಿದ್ದಾರೆ. ಧರ್ಮದ ಮೂಲಕವಾಗಿ ರಾಮನನ್ನು ಸಮಾಧಾನ ಮಾಡಿದ ಜೊತೆಗೆ ಬಲದ ಪ್ರದರ್ಶನದ ಮೂಲಕವೂ ರಾಮನನ್ನು ಸಮಾಧಾನಿಸಿದ ಎನ್ನುವುದಕ್ಕೆ ಲಕ್ಷ್ಮಣ ರಾಮನಲ್ಲಿ ”ಮೊದಲು ರಾವಣನನ್ನು ಹುಡುಕೋಣ. ಆತನಲ್ಲಿ ತಮ್ಮ ಪರಾಕ್ರಮವೆಷ್ಟು ಎನ್ನುವುದನ್ನು ತೋರಿಸಿ ಆತ ಸೀತೆಯನ್ನು ಬಿಟ್ಟುಕೊಡುವಂತೆ ಎಚ್ಚರಿಸೋಣ. ಅದಕ್ಕೂ ಆತ ಬಗ್ಗದಿದ್ದರೆ ಆತ ದಿತಿಯ ಗರ್ಭದಲ್ಲಿದ್ದರೂ ಆತನನ್ನು ಸಂಹರಿಸುವೆ” ಎನ್ನುವ ಮೂಲಕ ಬಲದಿಂದಲೂ ರಾಮನನ್ನು ಸಮಾಧಾನಿಸುತ್ತಾನೆ.

rama laxmana ಧವಳ ಧಾರಿಣಿ ಅಂಕಣ
rama laxmana ಧವಳ ಧಾರಿಣಿ ಅಂಕಣ

ಕಾವ್ಯದಲ್ಲಿ ನಾಟಕೀಯತೆಯ ಸನ್ನಿವೇಶ ಹೇಗೆ ಬರಬೇಕೆನ್ನುವುದಕ್ಕೆ ಇಲ್ಲಿನ ವರ್ಣನೆ ಸಾಕ್ಷಿ. ಲಕ್ಷ್ಮಣ ಪರಾಕ್ರಮದಲ್ಲಿ ಯಾರಿಗೂ ಕಡಿಮೆ ಇಲ್ಲದವನು. ಆನೆಯಷ್ಟು ಬಲ ಆತನಲ್ಲಿದೆ. ಮದಿಸಿದ ಆನೆ ತನ್ನ ಮಾವುತನ ಮೇಲೆ ಅಪಾರಪ್ರೀತಿಯನ್ನು ತೋರುತ್ತದೆ. ತನ್ನ ಮಾವುತ ವ್ಯಾಕುಲತೆಯಿಂದ ಕುಳಿತರೆ ಆತನನ್ನು ರಮಿಸಿ ತನ್ನೊಂದಿಗೆ ಕರೆದೊಯ್ಯುವ ಸ್ವಭಾವ ಅದಕ್ಕಿರುತ್ತದೆ ಇಂತಹ ದೃಶ್ಯವನ್ನು ಅನೇಕ ಕಡೆ ನೋಡಬಹುದಾಗಿದೆ. ಸುಮಾರು 70ರ ಉತ್ತರಾರ್ಧದಶಕದಲ್ಲಿ ರಾಜೇಶ ಖನ್ನಾ ಅಭಿನಯಿಸಿದ “ಹಾಥಿ ಮೇರಾ ಸಾಥಿ” ಸಿನೇಮಾವನ್ನು ನೋಡಿದ್ದರೆ ಅದು ಅರ್ಥವಾದೀತು. ರಾಮನೆನ್ನುವ ಸೋದರತ್ವದ ಒಲವಿನಲ್ಲಿ ಬಂಧಿತನಾದ ಲಕ್ಷ್ಮಣ ಅಥವಾ ತನ್ನ ತಾಯಿಯಾದ ಸುಮಿತ್ರೆಯ ಹತ್ತಿರ ಲಕ್ಷ್ಮಣ ಕಾಡಿಗೆ ಅಣ್ಣನನ್ನು ಅನುಸರಿಸಿಕೊಂಡು ಹೋಗುತ್ತೇನೆ ಎಂದು ಆಶೀರ್ವಾದವನ್ನು ಕೇಳಿದಾಗ ಆಕೆ ಮಗನಿಗೆ “ರಾಮಂ ದಶರಥಂ ವಿದ್ಧಿ ಮಾಂ ವಿದ್ಧಿ ಜನಕಾತ್ಮಜಾಮ್..” ರಾಮನನ್ನು ದಶರಥನೆಂದೆ ತಿಳಿದು ಗೌರವಿಸು, ನನ್ನನ್ನು ಹೇಗೆ ಗೌರವಿಸುತ್ತೀಯೋ ಅದೇ ರೀತಿ ಸೀತೆಗೆ ಗೌರವವನ್ನು ನೀಡು , ಅಡವಿಯನ್ನೇ ಅಯೋಧ್ಯೆಯೆಂದು ಭಾವಿಸು” ಎಂದು ಹರಸಿಕಳುಹಿಸಿದ್ದಳು. ಸಹಜವಾಗಿಯೂ ರಾಮನಲ್ಲಿ ಭಯಭಕ್ತಿಯುಳ್ಳ ಮತ್ತು ಅತನೇ ತನ್ನ ರಾಜನೆಂದು ತಿಳಿದು ತ್ರಿಕರಣಪೂರ್ವಕವಾಗಿ ಅನುಸರಿಸಿಕೊಂಡು ಬಂದವ ಲಕ್ಷ್ಮಣ. ಹಾಗಾಗಿ ಇಲ್ಲಿ ರಾಮನೆನ್ನುವ ಮಾವುತನನ್ನು ಮದಿಸಿದ ಆನೆಯಂತಿರುವ ಲಕ್ಷ್ಮಣ ಒಯ್ಯಾರದಿಂದ ಕರೆದುಕೊಂಡು ಬಂದ ಎನ್ನುವ ಉಪಮೆ ಸುಂದರವಾಗಿ ಮೂಡಿಬಂದಿದೆ.

ರಾಮನಿಗೆ ಸೀತೆಯನ್ನು ಕಳೆದುಕೊಂಡ ದುಃಖ ತಡೆಯಲಾರದೇ ವಿಸ್ಮೃತಿಗೊಳಗಾದ ವಿಷಯವನ್ನು ವಾಲ್ಮೀಕಿ ರಾಮಾಯಣದಲ್ಲಿ ವಿವರವಾಗಿ ಬಂದರೂ ಸ್ಕಾಂದಪುರಾಣದಲ್ಲಿ ಇನ್ನಷ್ಟು ವಿವರವಾಗಿ ವರ್ಣಿಸಲಾಗಿದೆ. ರಾಮನಿಗೆ ಅರಣ್ಯದಲ್ಲಿ ಸೀತೆಯ ವಿರಹದಿಂದ ಕಾಮೋದ್ದೀಪಕವಾಯಿತು. ಕಾಡಿನಲ್ಲಿರುವ ಭ್ರಮರವೇ ಮೊದಲಾದವುಗಳು ಸ್ವಂಚ್ಛಂದದಿಂದ ಹಾರಾಡುತ್ತಾ ಸಂಪಿಗೆಯ ಹೂವಿನ ಮಕರಂದವನ್ನು ಹೀರುತ್ತಿದ್ದವು. ಮಂದಮಾರುತ ಬೀಸುತ್ತಿತ್ತು. ಚಕ್ರವಾಕ ಪಕ್ಷಿಜೋಡಿಗಳು ಹಗಲಿನಲ್ಲಿ ಪರಸ್ಪರ ಮುದ್ದಾಡುತ್ತಿದ್ದವು. ವಿರಹಿಯಾದ ರಾಮ ಅದನ್ನು ನೋಡಿ ಕೋಪಗೊಂಡನಂತೆ. ತನ್ನ ವಿರಹದುಃಖವನ್ನು ನೋಡಿಯೂ ಕರುಣೆತೋರದೇ ಸಂತಸದಿಂದ ಇರುವ ಅವುಗಳನ್ನು ನೋಡಿ

ವೈಮುಖ್ಯಂ ಗಂಧಫಲ್ಯಾಸ್ತು ಭ್ರಮರಾಶಪತ್ಪ್ರಭುಃ I
ಕೋಕಾನ್ನಿಶಿಧೇ ವಿಶ್ಲೇಷಂ ಪಿಕಮನ್ಯವಿವರ್ಧನಮ್I
ಚಂದನಂ ಸರ್ಪ ನಿಲಯಂ ವಾಯುಂ ಸರ್ಪಾಶನಂ ತಥಾ I
ಜ್ಯೋತ್ಸ್ನಾಂ ಕಳಂಕಸಛನ್ನಾಂ ಶಶಾಪ ರಘುನಂದನಃ II II

ಸಂಪಗೆಯನ್ನು ಮುಟ್ಟದಂತೆ ಭ್ರಮರಗಳಿಗೂ, ರಾತ್ರಿಯಲ್ಲಿ ವಿಯೋಗವನ್ನು ಹೊಂದುವಂತೆ ಚಕ್ರವಾಕ ಜೋಡಿಗಳಿಗೂ, ಇತರಪಕ್ಷಿಗಳ ಪೋಷಣೆಗೊಳಗಾಗುವಂತೆ ಕೋಗಿಲೆಗಳಿಗೂ (ಪರಪುಟ್ಟ), ಕ್ರೂರಸರ್ಪಗಳಿಗೆ ಆಶ್ರಯತಾಣವಾಗುವಂತೆ ಚಂದನವೃಕ್ಷಕ್ಕೂ, ಹಾವುಗಳಿಗೆ ಆಹಾರವಾಗುವಂತೆ ಗಾಳಿಗೂ, ಕಳಂಕವಿಶಿಷ್ಟ (ಕಲೆಗಳಿಂದ ಕೂಡಿರುವಂತೆ) ಚಂದ್ರಕಾಂತಿಗೂ ಶಾಪಕೊಟ್ಟ ಎನ್ನುವ ವರ್ಣನೆ ಬರುತ್ತದೆ.

ಸೀತೆಯ ವಿಯೋಗ ರಾಮನಿಗೆ ಎರಡು ರೀತಿಯಿಂದ ಕಾಡುತ್ತಿತ್ತು. ಮೊದಲನೆಯದು ತನ್ನ ಪ್ರಿಯ ಮಡದಿಯನ್ನು ಕಳೆದುಕೊಂಡಿರುವುದು. ಎರಡನೆಯದು ರಾವಣ ಸೀತೆಯನ್ನು ಕದ್ದೊಯ್ಯುವ ಮೂಲಕ ರಾಮನ ಪುರುಷತ್ವಕ್ಕೆ ಸವಾಲನ್ನು ಎಸೆದಿದ್ದ. ಇದು ಸ್ಕಂಧಪುರಾಣದ ಮೇಲಿನ ಶ್ಲೋಕದಿಂದ ಸ್ಪಷ್ಟವಾಗುತ್ತದೆ. ಈ ಕಾರಣದಿಂದ ನೊಂದಿದ್ದ ರಾಮನನ್ನು ಲಕ್ಷ್ಮಣ ಸಮಾಧಾನ ಪಡಿಸಿ ಆತನ ಸ್ಮೃತಿಯನ್ನು ವಾಸ್ತವಕ್ಕೆ ಕರೆತರುತ್ತಾನೆ. ಆತನ ದುಃಖವನ್ನು ಶಮನಮಡುತ್ತಾನೆ. ಈಗ ಆತನಿಗೆ ಸೀತೆಯನ್ನು ಹುಡುಕುವ ಸಲುವಾಗಿ ಕಬಂಧ ಹೇಳಿದಂತೆ ಸುಗ್ರೀವನ ಸಖ್ಯ ಅನಿವಾರ್ಯವೆನ್ನುವುದು ನೆನಪಾಗುತ್ತದೆ. ಆ ಕಾರಣದಿಂದ ಹನುಮಂತನ ಹತ್ತಿರ ಲಕ್ಷ್ಮಣ ರಘುಕುಲದ ಶ್ರೇಷ್ಠನಾದ ರಾಮನೇ ಸುಗ್ರೀವನಲ್ಲಿ ಆಶ್ರಯವನ್ನು ಕೋರಿ ಬಂದಿದ್ದಾನೆ. ಆತನಲ್ಲಿ ಶರಣಾಗಲು ಬಂದಿದ್ದಾನೆ. ಎನ್ನುವ ಮಾತುಗಳನ್ನು ಲಕ್ಷ್ಮಣ ಆಡುವುದು.

ಸುಗ್ರೀವನ ಸ್ಥಿತಿ ಮತ್ತು ಇನ್ನಷ್ಟು ರೋಚಕ ವಿಚಾರಗಳನ್ನು ಮುಂದಿನ ಸಂಚಿಕೆಯಲ್ಲಿ ಗಮನಿಸೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡ ಭಾಗ 2: ದೀಪದ ಬುಡದಲ್ಲಿ ಕತ್ತಲೆ

Continue Reading

ಅಂಕಣ

ರಾಜಮಾರ್ಗ ಅಂಕಣ: ಪ್ಯಾರಿಸ್ ಒಲಿಂಪಿಕ್ಸ್ – ಭಾರತದ ಸಾಧನೆ ಕಳಪೆಯೇ?

ರಾಜಮಾರ್ಗ ಅಂಕಣ: ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಭಾರತದ ಸಾಧನೆಯು ಕಳಪೆ ಎಂದು ಹಲವರು ವಿಶ್ಲೇಷಣೆ ಮಾಡುತ್ತಾ ಇದ್ದಾರೆ. ಆದರೆ ಇದು ಕಳಪೆ ಒಲಿಂಪಿಕ್ಸ್ ಅನ್ನೋದಕ್ಕಿಂತ ಭಾರತಕ್ಕಿದು ದುರದೃಷ್ಟದ ಒಲಿಂಪಿಕ್ಸ್ ಎಂದೇ ಹೇಳಬಹುದು.

VISTARANEWS.COM


on

ರಾಜಮಾರ್ಗ ಅಂಕಣ Paris Olympics
Koo

ಭಾರತದಲ್ಲಿ ಯಾಕೆ ಶ್ರೇಷ್ಠ ಕ್ರೀಡಾ ಪ್ರತಿಭೆಗಳು ಅರಳುತ್ತಿಲ್ಲ?

Rajendra-Bhat-Raja-Marga-Main-logo

:: ರಾಜೇಂದ್ರ ಭಟ್‌ ಕೆ.

ರಾಜಮಾರ್ಗ ಅಂಕಣ: ಬಹಳ ನಿರೀಕ್ಷೆಯ ಪ್ಯಾರಿಸ್ ಒಲಿಂಪಿಕ್ಸ್ (Paris Olympics 2024) ಕೂಟಕ್ಕೆ ತೆರೆಬಿದ್ದಾಗಿದೆ. ಭಾರತಕ್ಕೆ (India) ದೊರಕಿದ್ದು 5 ಕಂಚಿನ ಪದಕಗಳು (Bronze medal) ಮತ್ತು ಒಂದು ಬೆಳ್ಳಿಯ ಪದಕ (Silver Meadl). ಒಲಿಂಪಿಕ್ ಗ್ರಾಮದಲ್ಲಿ ಒಮ್ಮೆ ಕೂಡ ಭಾರತದ ರಾಷ್ಟ್ರಗೀತೆ ಮೊಳಗಲೇ ಇಲ್ಲ ಎಂಬ ದುಃಖ ನಮಗೆ. ಭಾರತಕ್ಕೆ ದೊರಕಿದ್ದು 71ನೇ ಸ್ಥಾನ. ಈ ಒಲಿಂಪಿಕ್ ಕೂಟದಲ್ಲಿ ಭಾರತದ ಸಾಧನೆಯು ಕಳಪೆ ಎಂದು ಹಲವರು ವಿಶ್ಲೇಷಣೆ ಮಾಡುತ್ತಾ ಇದ್ದಾರೆ. ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಂದು ಚಿನ್ನದ ಪದಕ (Gold Medal) ಸೇರಿ ಏಳು ಪದಕಗಳು ದೊರೆತಿದ್ದವು. ಅದಕ್ಕೆ ಹೋಲಿಸಿದರೆ ಈ ಬಾರಿ ಭಾರತ ಸ್ವಲ್ಪ ಹಿಂದೆ ಬಿದ್ದಿದೆ.

ನಮಗೆ ಈ ಬಾರಿ 7-8 ಪದಕಗಳು ಕೂದಲೆಳೆಯ ಅಂತರದಲ್ಲಿ ಮಿಸ್ ಆದವು!

ಇದು ಕಳಪೆ ಒಲಿಂಪಿಕ್ಸ್ ಅನ್ನೋದಕ್ಕಿಂತ ಭಾರತಕ್ಕಿದು ದುರದೃಷ್ಟದ ಒಲಿಂಪಿಕ್ಸ್ ಎಂದೇ ಹೇಳಬಹುದು. ದೇಶದ 6 ಮಂದಿ ಕ್ರೀಡಾಪಟುಗಳು ಕೂಟದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದು ಪದಕವಂಚಿತರಾದರು. ಅರ್ಜುನ್ ಬಬುತಾ, ಅಂಕಿತ ಧೀರಜ್, ಮನು ಭಾಕರ್ (Manu Bhaker – ಮೂರನೇ ಪದಕ), ಅನಂತ್ ಜೀತ್, ಮಹೇಶ್ವರಿ, ಲಕ್ಷ್ಯ ಸೇನ್, ಮೀರಾಬಾಯಿ ಚಾನು ಇವರು ನಾಲ್ಕನೇ ಸ್ಥಾನಿಗಳಾಗಿ ಸ್ಪರ್ಧೆಯನ್ನು ಮುಗಿಸಿದವರು. ಹಾಗೆಯೇ ವಿನೇಶ್ ಫೊಗಟ್ (Vinesh Phogat), ನಿಶಾ ದಹಿಯ, ರಿತಿಕ ಹೂಡ ಮೊದಲಾದ ಕುಸ್ತಿ ಪಟುಗಳು ಒಲಿಂಪಿಕ್‌ನ ಕರಾಳ ನಿಯಮಕ್ಕೆ ಬಲಿಯಾಗಿ ಪದಕ ಮಿಸ್ ಮಾಡಿಕೊಂಡರು ಅನ್ನೋದು ನಮ್ಮ ನೋವು. ಇವರೆಲ್ಲರೂ ಪದಕ ಪಡೆದಿದ್ದರೆ ಭಾರತದ ಟೋಟಲ್ ಪದಕಗಳ ಸಂಖ್ಯೆ 15 ದಾಟುತ್ತಿತ್ತು ಅಲ್ಲವೇ? ಕೆಲವೊಮ್ಮೆ ಪ್ರತಿಭೆ, ಸಾಮರ್ಥ್ಯಗಳು ಇದ್ದರೆ ಸಾಕಾಗುವುದಿಲ್ಲ, ಅದೃಷ್ಟವೂ ಜೊತೆಗೆ ಇರಬೇಕು ಎಂಬ ಸಿದ್ಧಾಂತವನ್ನು ನಾವು ಈ ಬಾರಿ ಒಪ್ಪಿಕೊಳ್ಳಲೇಬೇಕಾಯಿತು.

130 ಕೋಟಿ ಜನಸಂಖ್ಯೆ ಇರುವ, ಅದರಲ್ಲಿ 60%ಕ್ಕಿಂತ ಅಧಿಕ ಯುವಜನತೆ (Below 40) ಇರುವ ದೇಶವಾದ ಭಾರತದಲ್ಲಿ ಶ್ರೇಷ್ಠ ಕ್ರೀಡಾಪ್ರತಿಭೆಗಳು ಯಾಕೆ ಅರಳುತ್ತಿಲ್ಲ ಅನ್ನುವುದು ಹಲವರು ಕೇಳುವ ಪ್ರಶ್ನೆ. ಭಾರತಕ್ಕೆ ಈಗ ಅದರದ್ದೇ ಆದ ಕ್ರೀಡಾನೀತಿ ಇದೆ. ಒಳ್ಳೆಯ ಬಜೆಟ್ ಇದೆ. ವಿದೇಶದ ಕೋಚುಗಳ ನೇಮಕ ಆಗಿದೆ. ಸ್ವತಃ ಕ್ರೀಡಾಪಟು ಆಗಿದ್ದ ಪಿಟಿ ಉಷಾ ಅಧ್ಯಕ್ಷೆಯಾಗಿರುವ ಬಲಿಷ್ಠವಾದ ಒಲಿಂಪಿಕ್ ಸಮಿತಿ ಇದೆ. ಆದರೂ ಅದಕ್ಕೆ ಅನುಗುಣವಾದ ಫಲಿತಾಂಶ ಈ ಬಾರಿ ದೊರೆತಿಲ್ಲ. ಯಾಕೆ?

ಎಲ್ಲರೂ ಉತ್ತರಿಸಲೇ ಬೇಕಾದ ಪ್ರಶ್ನೆಗಳು

1) ಅಮೇರಿಕಾ, ಚೀನಾದಂತಹ ದೇಶಗಳಲ್ಲಿ ಬಾಲ್ಯದಲ್ಲಿಯೇ ಮಗುವಿನ ಕ್ರೀಡಾಪ್ರತಿಭೆಗಳನ್ನು ಹುಡುಕಿ ತರಬೇತು ಆರಂಭ ಮಾಡುತ್ತಾರೆ. ಆದರೆ ನಮ್ಮಲ್ಲಿ ಬಾಲ್ಯದಲ್ಲಿ ಮಗು ಮೈದಾನಕ್ಕೆ ಇಳಿಯುವುದನ್ನು ಹೆತ್ತವರು ಇಷ್ಟ ಪಡುವುದಿಲ್ಲ. ಕ್ರೀಡೆಯ ಮೂಲಕ ಮಗುವಿನ ಭವಿಷ್ಯ ಕಟ್ಟುವ ಭರವಸೆ ಭಾರತದ ಹೆಚ್ಚಿನ ಪೋಷಕರಿಗೆ ಇಲ್ಲ.

2) ಒಳ್ಳೆಯ ಕ್ರೀಡಾಪಟು ರೂಪುಗೊಳ್ಳಬೇಕು ಅಂತಾದರೆ ಪರಿಣತ ಕೋಚ್, ತರಬೇತುದಾರ ಬೇಕು. ಭಾರತವು ಇನ್ನೂ ಉತ್ತಮ ಕೋಚುಗಳನ್ನು ಬೆಳೆಸಿಲ್ಲ. ಕ್ರೀಡಾ ಸಲಕರಣೆಗಳು, ಜಿಮ್ ಗಳು ಮಕ್ಕಳಿಗೆ ಹತ್ತಿರದಲ್ಲಿ ದೊರೆಯುತ್ತಿಲ್ಲ. ವಿದೇಶದ ಕೋಚಗಳನ್ನು ನೇಮಕ ಮಾಡುವಷ್ಟು ಭಾರತದ ಗ್ರಾಮಾಂತರ, ಮಧ್ಯಮವರ್ಗದ ಪೋಷಕರು ಶ್ರೀಮಂತರಾಗಿಲ್ಲ.

Neeraj Chopra
Paris Olympics

3) ಒಬ್ಬ ಒಳ್ಳೆಯ ಕ್ರೀಡಾಪಟುವು ಅರಳಬೇಕಾದರೆ ದೈಹಿಕ ಕ್ಷಮತೆ (ಫಿಸಿಕಲ್ ಫಿಟ್ನೆಸ್)ಯು ತುಂಬಾನೆ ಪ್ರಾಮುಖ್ಯ. ಅಂದರೆ ಸಣ್ಣ ಪ್ರಾಯದಲ್ಲಿ ಪೌಷ್ಟಿಕ ಆಹಾರ, ವಿಟಮಿನಗಳು ದೊರೆಯಬೇಕು. ಆ ಮಗು ಬೆವರು ಬಸಿದು ಕೆಲಸ ಮಾಡಬೇಕು. ಜಿಮ್, ಟೆನಿಸ್ ಕೋರ್ಟ್, ಬ್ಯಾಡ್ಮಿಂಟನ್ ಕೋರ್ಟು ಹತ್ತಿರದಲ್ಲಿ ಇರಬೇಕು. ಇದೆಲ್ಲ ಸಾಧ್ಯ ಆಗ್ತಾ ಇದೆಯಾ?

4) ಯಾವುದೇ ರಾಜ್ಯದಲ್ಲಿ ಕ್ರೀಡೆಗೆ ಪ್ರತ್ಯೇಕ ಸಚಿವಾಲಯ ಬೇಕು. ಒಳ್ಳೆಯ ಬಜೆಟ್ ಬೇಕು. ಆದರೆ ನಮ್ಮಲ್ಲಿ ಕ್ರೀಡಾ ಇಲಾಖೆಯು ಯುವಜನ ಸೇವಾ ಇಲಾಖೆಯ ಜೊತೆಗೆ ಇದೆ. ಬಜೆಟ್ ಕೇಳಿದರೆ ನೀವು ಖಂಡಿತವಾಗಿ ನಗುತ್ತೀರಿ. ಇನ್ನು ಪದಕ ನಿರೀಕ್ಷೆ ಮಾಡುವುದು ಹೇಗೆ?

5) ನಮ್ಮ ಶೈಕ್ಷಣಿಕ ವರ್ಷವು ಆರಂಭವಾಗುವುದೇ ಮಳೆಗಾಲದಲ್ಲಿ. ಮೊದಲ ನಾಲ್ಕು ತಿಂಗಳ ಒಳಗೆ ಎಲ್ಲ ಪಂದ್ಯಾಟಗಳು, ಕ್ರೀಡಾಕೂಟಗಳು ಮುಗಿಯಬೇಕು. ಅಂದರೆ ನಮ್ಮ ಪುಟ್ಟ ಮಕ್ಕಳು ಮಳೆಗೆ ತಲೆಕೊಟ್ಟು, ಜಾರುವ ಮೈದಾನದಲ್ಲಿ ಓಡಬೇಕು. ಮಳೆಗಾಲದ ಹೊತ್ತಲ್ಲಿ ತರಬೇತಿ ಪಡೆಯುವುದು ಯಾವಾಗ? ಒಳಾಂಗಣ ಕ್ರೀಡಾಂಗಣಗಳು ಎಷ್ಟು ಕಡೆ ಇವೆ? ಇದು ಕ್ರೀಡೆಗೆ ಪೂರಕವೇ?

6) ಕೆಲವು ರಾಜ್ಯಗಳಲ್ಲಿ ಕ್ರೀಡಾಪಟುಗಳಿಗೆ ಮೀಸಲು ಕೋಟಾ ಇದೆ. ಕೃಪಾಂಕದ ವ್ಯವಸ್ಥೆ ಇದೆ. ಉದ್ಯೋಗದಲ್ಲಿ ಮೀಸಲಾತಿ ವ್ಯವಸ್ಥೆ ಇದೆ. ಆದರೆ ನಮ್ಮಲ್ಲಿ?

7) ಬಾಲ್ಯದಿಂದ ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಬೇಕು ಎಂದು ಕನಸು ಕಾಣುವ, ಅದೇ ಕನಸುಗಳನ್ನು ಮಗುವಿನ ತಲೆಗೆ ತುಂಬುವ ಹೆತ್ತವರು ಮಕ್ಕಳು ಮೈದಾನಕ್ಕೆ ಇಳಿಯುವುದನ್ನು ಇಷ್ಟ ಪಡುವುದೇ ಇಲ್ಲ. ಕ್ರೀಡೆಗಳಲ್ಲಿ ಸಾಧನೆ ಮಾಡಬೇಕಾದರೆ ಮಗು ತರಗತಿ ಪಾಠ, ಪರೀಕ್ಷೆಗಳು ಇತ್ಯಾದಿಗಳಲ್ಲಿ ರಿಯಾಯಿತಿ ಪಡೆಯಬೇಕು. ಆಗ್ತಾ ಇದೆಯಾ?

8) ಎಷ್ಟೋ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇನ್ನು ಪದವಿಪೂರ್ವ ಕಾಲೇಜುಗಳ ಹಂತಕ್ಕೆ ಬಂದರೆ 50% ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ದೊಡ್ಡ ದೊಡ್ಡ ಶಾಲೆಗಳ ಕಟ್ಟಡಗಳನ್ನು ಕಟ್ಟುವ ಕಾಲೇಜುಗಳು ಗ್ರೌಂಡ್ ಇಲ್ಲದೆ ಕೂಡ ಕ್ಲಾಸ್ ನಡೆಸುತ್ತವೆ ಎಂದರೆ ನೀವು ನಂಬಲೇಬೇಕು.

9) ಶೂಟಿಂಗ್, ಗಾಲ್ಫ್, ಜಿಮ್ನಾಸ್ಟಿಕ್ ಉಪಕರಣಗಳು ತುಂಬಾ ದುಬಾರಿ. ಸರಕಾರಿ ಬ್ಯಾಡ್ಮಿಂಟನ್ ಕೋರ್ಟು, ಸ್ವಿಮ್ಮಿಂಗ್ ಪೂಲ್, ಜಿಮ್ ಗಳು ಇರುವುದು ತಾಲೂಕಿಗೆ ಒಂದೇ! ಎಷ್ಟೋ ಕಡೆಗಳಲ್ಲಿ ಅದೂ ಇಲ್ಲ. ಖಾಸಗಿಯವರು ಹೆಚ್ಚು ಫೀಸ್ ತೆಗೆದುಕೊಳ್ಳುತ್ತಾರೆ. ಹಾಗಿರುವಾಗ ಕ್ರೀಡಾಪ್ರತಿಭೆಗಳು ತರಬೇತು ಪಡೆಯಲು ತುಂಬಾ ದೂರಕ್ಕೆ ಹೋಗಬೇಕು. ಹಾಗಿರುವಾಗ ಪ್ರತಿಭೆಗಳು ಅರಳುವುದು ಹೇಗೆ?

10) ಸ್ಥಳೀಯ, ತಾಲೂಕು, ಜಿಲ್ಲಾಮಟ್ಟದ ಕ್ರೀಡಾಕೂಟಗಳಿಗೆ ಅದರಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಅನುದಾನದ ಬೆಂಬಲ ತುಂಬ ಕಡಿಮೆ. ಹೆತ್ತವರು ಅಥವಾ ಶಿಕ್ಷಕರೇ ಖರ್ಚು ಮಾಡಬೇಕು ಅಂತಾದಾಗ ಸಹಜವಾಗಿ ಎಲ್ಲರ ಆಸಕ್ತಿ ಕಡಿಮೆ ಆಗುತ್ತದೆ.

Paris Olympics
Paris Olympics

11) ಏಷಿಯಾಡ್, ಕಾಮನ್ ವೆಲ್ತ್ ಅಥವಾ ಒಲಿಂಪಿಕ್ಸ್ ಮೊದಲಾದ ಕೂಟಗಳಲ್ಲಿ ಅರ್ಹತೆಯನ್ನು ಪಡೆಯಬೇಕಾದರೆ ಒಬ್ಬ ಕ್ರೀಡಾಪಟು ದಿನಕ್ಕೆ ಕನಿಷ್ಟ 10-12 ಘಂಟೆ ಮೈದಾನದಲ್ಲಿ ಕಠಿಣ ಪರಿಶ್ರಮಪಡಬೇಕು. ಬೆವರು ಸುರಿಸಬೇಕು. ಒಳ್ಳೆಯ ತರಬೇತುದಾರರು ಸಿಗಬೇಕು. ಸರಕಾರಗಳು ಅಂತಹ ಕ್ರೀಡಾ ಪ್ರತಿಭೆಗಳನ್ನು ದತ್ತುಸ್ವೀಕಾರ ಮಾಡಬೇಕು. ಒಳ್ಳೆಯ ಸೌಲಭ್ಯಗಳನ್ನು ಖಾತರಿ ಪಡಿಸಬೇಕು. ಪೌಷ್ಟಿಕವಾದ ಆಹಾರದ ವ್ಯವಸ್ಥೆ ಮಾಡಬೇಕು. ನೀನು ಕ್ರೀಡೆಯಲ್ಲಿ ಗಮನ ಕೊಡು, ನಾನಿದ್ದೇನೆ ಎಂದು ಭರವಸೆಯನ್ನು ತುಂಬಬೇಕು. ಇದು ಆಗ್ತಾ ಇದೆಯಾ?

12) ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರಮಟ್ಟದ ಕ್ರೀಡಾತಾರೆಗಳನ್ನು ನ್ಯಾಶನಲ್ ಹೀರೋಗಳಾಗಿ ಘೋಷಣೆ ಮಾಡಬೇಕು. ಅವರ ಬದುಕಿನ ಕಥೆಗಳು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪಠ್ಯಪುಸ್ತಕದಲ್ಲಿ ಇರಬೇಕು. ಕ್ರಿಕೆಟ್ ನಮ್ಮ ಧರ್ಮ ಆಗಿರುವ, ಕ್ರಿಕೆಟರಗಳು ನಮಗೆ ದೇವರಾಗಿರುವ ಈ ದೇಶದಲ್ಲಿ ಕ್ರೀಡಾಪಟುಗಳಿಗೆ ಸ್ಟಾರ್ ವ್ಯಾಲ್ಯೂ ತರುವುದು ಸಾಧ್ಯ ಆಗಿದೆಯಾ?

ಎಲ್ಲಕ್ಕಿಂತ ಹೆಚ್ಚಾಗಿ ಹೆತ್ತವರ ಮೈಂಡ್ ಸೆಟ್ ಬದಲಾಗಬೇಕು. ಇಲ್ಲಾಂದರೆ ನಾವು ಭಾರತದ ಕ್ರೀಡಾ ಸಾಧನೆಯನ್ನು ಕಳಪೆ ಎಂದು ದೂರುವುದನ್ನು ಬಿಡಬೇಕು.

ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೃಷ್ಟಿ ವಿಕಲತೆಯನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿ ಆದ ಪ್ರಾಂಜಲ್ ಪಾಟೀಲ್!

Continue Reading
Advertisement
Subramanian Swamy
ದೇಶ5 mins ago

Subramanian Swamy: ರಾಹುಲ್‌ ಗಾಂಧಿಯ ಭಾರತೀಯ ಪೌರತ್ವ ರದ್ದುಗೊಳಿಸಿ; ಹೈಕೋರ್ಟ್‌ಗೆ ಮೊರೆ ಹೋದ ಸುಬ್ರಮಣಿಯನ್ ಸ್ವಾಮಿ

Pro Kabaddi 2024
ಕ್ರೀಡೆ10 mins ago

Pro Kabaddi 2024: ಈ ಬಾರಿ ಬೆಂಗಳೂರು ಬುಲ್ಸ್​ ತಂಡ ಹೇಗಿದೆ?

Stree 2 Box Office Day 2 Shraddha Kapoor-Rajkummar Rao Film Creates History
ಬಾಲಿವುಡ್18 mins ago

Stree 2 Box Office: ಗೆದ್ದು ಬೀಗಿದ ‘ಸ್ತ್ರೀ 2’ ಚಿತ್ರ; ಎರಡೇ ದಿನದಲ್ಲಿ 100 ಕೋಟಿ ರೂ. ಭರ್ಜರಿ ಕಲೆಕ್ಷನ್‌!

tipper road accident
ಬೆಂಗಳೂರು23 mins ago

Road Accident: ಟಿಪ್ಪರ್‌ ರೂಪದಲ್ಲಿ ಬಂದ ಯಮ, ಮನೆ ಮುಂದೆ ಆಟವಾಡುತ್ತಿದ್ದ ಇಬ್ಬರು ಮಕ್ಕಳು ನಜ್ಜುಗುಜ್ಜು

car death udupi news
ಉಡುಪಿ47 mins ago

Udupi News: ಕಾರಿನ ಗ್ಲಾಸ್ ಮುಚ್ಚಿ ಮಲಗಿದ್ದ ವ್ಯಕ್ತಿ ಉಸಿರುಗಟ್ಟಿ ಸಾವು

Robin Uthappa
ಕ್ರೀಡೆ53 mins ago

Robin Uthappa: ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಬಿನ್ ಉತ್ತಪ್ಪಗೆ ಬಿಗ್ ರಿಲೀಫ್; ಜಾಮೀನು ರಹಿತ ವಾರೆಂಟ್​ಗೆ ಹೈಕೋರ್ಟ್ ತಡೆ

Kolkata Doctor Murder Case
ದೇಶ57 mins ago

Kolkata Doctor Murder Case: ಇಂದು ದೇಶಾದ್ಯಂತ ವೈದ್ಯರ ಮುಷ್ಕರ; ಏನಿರುತ್ತೆ? ಏನಿರಲ್ಲ?

Kannada New Movie Langoti man trailer Out d k shivakumar invite
ಸ್ಯಾಂಡಲ್ ವುಡ್1 hour ago

Kannada New Movie: ಆಗಸ್ಟ್ 19 ರಂದು ʻಲಂಗೋಟಿ ಮ್ಯಾನ್ʼ ಚಿತ್ರದ ಟ್ರೈಲರ್‌ ಬಿಡುಗಡೆ ಸಮಾರಂಭ; ಡಿ.ಕೆ.ಶಿವಕುಮಾರ್‌ಗೆ ಆಹ್ವಾನ ಕೊಟ್ಟ ಚಿತ್ರತಂಡ!

doctors strike opd close
ಕರ್ನಾಟಕ1 hour ago

Doctors Strike: ಗಮನಿಸಿ, ಇಂದು ಯಾವುದೇ ಆಸ್ಪತ್ರೆಯಲ್ಲಿ ಒಪಿಡಿ ಇಲ್ಲ

Raksha Bandhan 2024
Latest1 hour ago

Raksha Bandhan 2024: ರಕ್ಷಾ ಬಂಧನದ ಹಿನ್ನೆಲೆ ಏನು? ರಾಖಿ ಕಟ್ಟಲು ಯಾವುದು ಶುಭ ಮುಹೂರ್ತ?

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌