ಅಂಕಣ
Legend Singer SPB | ತಮ್ಮ ಕಂಠಸಿರಿಯಿಂದಲೇ ಚಿತ್ರರಂಗದ ಸಿರಿ ಹೆಚ್ಚಿಸಿದ ಎಸ್ಪಿಬಿ
ದಂತಕತೆ ಗಾಯಕ ಎಸ್ಪಿಬಿ(SPB) ನಮ್ಮನ್ನು ಅಗಲಿ ಇಂದಿಗೆ(ಸೆ.25) ಎರಡು ವರ್ಷ. ಆದರೆ, ಅವರು ಹಾಡಿ ಬಿಟ್ಟು ಹೋದ ಹಾಡುಗಳಿಗೆ ಸಾವಿಲ್ಲ. ಯುಗ ಯುಗ ಕಳೆದರೂ ಅವರ ಹಾಡುಗಳು ನಮ್ಮನ್ನು ರಂಜಿಸುತ್ತಲೇ ಇರುತ್ತವೆ.
ಎಸ್ಪಿಬಿ ಎಂದೇ ಖ್ಯಾತರಾಗಿದ್ದ ಎಸ್ ಪಿ ಬಾಲುಸುಬ್ರಹ್ಮಣ್ಯಂ (SPB) ಅವರು ತಮ್ಮ ಕಂಠಸಿರಿಯಿಂದಲೇ ಭಾರತೀಯ ಚಿತ್ರರಂಗದ ಶ್ರೀಮಂತಿಕೆಯನ್ನು ಹೆಚ್ಚಿಸಿದರು. ಅದರಲ್ಲೂ ದಕ್ಷಿಣ ಭಾರತದ ಚಿತ್ರರಂಗವನ್ನು ಎಸ್ಪಿಬಿ ಅವರನ್ನು ಹೊರಗಿಟ್ಟು ನೋಡಲು ಸಾಧ್ಯವೇ ಇಲ್ಲ. ಸುಮಾರು ಐದು ದಶಕಗಳ ಕಾಲ ಅವರು ಕೇಳುಗರನ್ನು ರಂಜಿಸಿದರು. ಸಮ್ಮೋಹನಗೊಳಿಸಿದರು.
ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ, ತುಳು, ಪಂಜಾಬಿ, ಮರಾಠಿ ಹೀಗೆ ದೇಶದ ಎಲ್ಲ ಭಾಷೆಗಳಲ್ಲೂ ಎಸ್ಪಿಬಿ ಹಾಡಿದ್ದಾರೆ. ಐದು ದಶಕಗಳ ಅವಧಿಯಲ್ಲಿ 45 ಸಾವಿರ ಹಾಡುಗಳನ್ನು ಹಾಡುವುದೆಂದರೆ ಹುಡುಗಾಟವೇನಲ್ಲ. ಅದೇ ಕಾಲಕ್ಕೆ ಎಲ್ಲ ದಿಗ್ಗಜ ಸಂಗೀತ ನಿರ್ದೇಶಕರ ಜತೆ ಕೆಲಸ ಮಾಡಿದ್ದಾರೆ. ಅದರಲ್ಲೂ ತಮಿಳಿನಲ್ಲಿ ಇಳಯರಾಜಾ-ಎಸ್ಪಿಬಿ-ರಜಿನಿಕಾಂತ್ ಜೋಡಿ ಎಲ್ಲಡೆ ಮೋಡಿ ಮಾಡಿತ್ತು. ಕನ್ನಡದಲ್ಲೂ ಹಂಸಲೇಖ-ಎಸ್ಪಿಬಿ- ರವಿಚಂದ್ರನ್ ಜೋಡಿಗೆ ಇಂಥದ್ದೇ ಫ್ಯಾನ್ ಕ್ರೇಜ್ ಇತ್ತು. ಎಲ್ಲ ಭಾಷೆ ಚಿತ್ರರಂಗದ ಉತ್ಕೃಷ್ಟ ಸಂಗೀತ ನಿರ್ದೇಶಕರ ಜತೆ ಎಸ್ಪಿಬಿ ಕೆಲಸ ಮಾಡಿದ್ದಾರೆ. ಹಳೆಯ ಮ್ಯೂಸಿಕ್ ಡೈರೆಕ್ಟರ್ಗಳಿಂದ ಹಿಡಿದು ಹೊಸ ಕಾಲದ ಮ್ಯೂಸಿಕ್ ಡೈರೆಕ್ಟರ್ಗಳವರೆಗೂ ಎಸ್ಪಿಬಿ ಅವರ ಗೋಲ್ಡ್ ವಾಯ್ಸ್ ಸೆರೆ ಹಿಡಿದಿದೆ.
ಹುಟ್ಟಿದ್ದು ಕೋನೆಟಂಪೇಟೆಯಲ್ಲಿ…
ಎಸ್ಪಿಬಿ ಅವರು 1946ರ ಜೂನ್ 4ರಂದು ಇಂದಿನ ತಮಿಳುನಾಡಿನ ಕೋನೆಟಂಪೇಟೆಯಲ್ಲಿ ಜನಿಸಿದರು. ತಂದೆ ಎಸ್ ಬಿ ಸಾಂಬಮೂರ್ತಿ. ಅವರು ಉತ್ತಮ ಸಂಗೀತಗಾರರಾಗಿದ್ದರು ಮತ್ತು “ಹರಿಕಥಾ” ವಿದ್ವಾಂಸರಾಗಿದ್ದರು. ಸಹಜವಾಗಿಯೂ ಇದು ಬಾಲಕ ಎಸ್ಪಿಬಿ ಮೇಲೂ ಪ್ರಭಾವ ಬೀರಿತು. ಆದರೆ, ಬಾಲ್ಯದಲ್ಲಿ ಅವರೇನೂ ಶಾಸ್ತ್ರೀಯ ಸಂಗೀತವನ್ನು ಕಲಿತಿರಲಿಲ್ಲ. ಎಂಜಿನಿಯರಿಂಗ್ ಡಿಪ್ಲೋಮಾ ಮುಗಿಯುತ್ತಿದ್ದಂತೆ ಸಾರ್ವಜನಿಕವಾಗಿ ಸ್ಪರ್ಧೆಗಳಲ್ಲಿ ಅವರು ಹಾಡುತ್ತಿದ್ದರು.
ಚೆನ್ನೈನಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ಎಸ್ಪಿಬಿ ಭಾಗವಹಿಸಿಿದ್ದರು. ಸ್ಪರ್ಧೆಯಲ್ಲಿ ಗೆದ್ದ ಬಾಲು ಅವರಿಗೆ ಮ್ಯೂಸಿಕ್ ಡೈರೆಕ್ಟರ್ ಎಸ್ ಪಿ ಕೋದಂಡಪಾಣಿ ಅವರು ಬಹುಮಾನ ವಿತರಿಸಿದರು. ಆ ಬಳಿಕ 1966ರಲ್ಲಿ ತೆರೆ ಕಂಡ ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ ಚಿತ್ರದಲ್ಲಿ ಹಾಡಲು ಎಸ್ಪಿಬಿ ಅವರಿಗೆ ಕೋದಂಡಪಾಣಿ ಅವರು ಅವಕಾಶ ನೀಡಿದರು. ಅಲ್ಲಿಂದ ಎಸ್ಪಿಬಿ ಹಿಂದೆ ತಿರುಗಿ ನೋಡಲಿಲ್ಲ. 1967ರಲ್ಲಿ ಅವರು ಕನ್ನಡದಲ್ಲಿ ಮೊದಲ ಹಾಡು ಹಾಡಿದರು. ನಕ್ಕರೆ ಅದೇ ಸ್ವರ್ಗದ ಚಿತ್ರದ ಮೂಲಕ ಕನ್ನಡಕ್ಕೂ ಪರಿಚಯಗೊಂಡರು. ಆ ಬಳಿಕ ಕನ್ನಡದ ಮನೆ ಮಗನಾಗಿಯೇ ಬೆಳೆದರು. ಎಸ್ಪಿಬಿ ಅವರು, ಒಂದೇ ದಿನದಲ್ಲಿ ತೆಲುಗು ಮತ್ತು ತಮಿಳಿನಲ್ಲಿ 19 ಸಾಂಗ್ಸ್ ರೆಕಾರ್ಡ್ ಮಾಡಿದ್ದಾರೆ. ಆನಂದ್ ಮತ್ತು ಮಿಲಿಂದ್ ಅವರ ಸಂಗೀತ ನಿರ್ದೇಶನದಲ್ಲಿ ಹಿಂದಿಯಲ್ಲಿ ಒಂದೇ ದಿನದಲ್ಲಿ 16 ಹಾಡುಗಳನ್ನು ರೆಕಾರ್ಡ್ ಮಾಡಿರುವುದು ಈವರೆಗೂ ದಾಖಲೆಯಾಗಿಯೇ ಉಳಿದಿದೆ!
ಕನ್ನಡದ ಎಲ್ಲ ನಟರಿಗೂ ಹಾಡು
ಡಾ. ವಿಷ್ಣುವರ್ಧನ್ ಅವರಿಂದ ಹಿಡಿದು ಪುನೀತ್ ರಾಜಕುಮಾರ್ ಅವರವರೆಗೂ ಎಲ್ಲ ನಾಯಕ ನಟರಿಗಾಗಿ ಹಾಡಿದ್ದಾರೆ. ಪುನೀತ್ ರಾಜಕುಮಾರ್ ನಿರ್ಮಾಣದ ಮಾಯಾಬಜಾರ್ ಚಿತ್ರದಲ್ಲಿ ಎಸ್ಪಿಬಿ ಅವರು ಲೋಕ ಮಾಯಾ ಬಜಾರು ಎಂಬ ಗೀತೆಯನ್ನು ಹಾಡಿದ್ದರು ಮತ್ತು ಇದರಲ್ಲಿ ಪುನೀತ್ ಅವರು ಅಭಿನಯಿಸಿದ್ದರು. ಕನ್ನಡದ ಮಟ್ಟಿಗೆ ಇದೇ ಕೊನೆಯ ಹಾಡು ಅವರದ್ದು. ಈ ಚಿತ್ರವು 2016ರಲ್ಲಿ ತೆರೆಗೆ ಬಂದಿತ್ತು. ಆ ಬಳಿಕ ಅವರು ಕೊರೊನಾ ಜಾಗೃತಿಗಾಗಿ ಕನ್ನಡದಲ್ಲಿ ಹಾಡು ಹಾಡಿದರು.
ವಿಷ್ಣುವರ್ಧನ್ ಅವರ ಚಿತ್ರಗಳಲ್ಲಿ ಎಸ್ಪಿಬಿ ಹಾಡುವುದು ಪಕ್ಕಾ. ಒಂದು ರೀತಿಯಲ್ಲಿ ವಿಷ್ಣು ಶರೀರವಾದರೆ, ಎಸ್ಪಿಬಿ ಅವರು ಶಾರೀರವಾಗಿದ್ದರು. ರೆಬೆಲ್ ಸ್ಟಾರ್ ಅಂಬರೀಷ್, ಶಶಿಕುಮಾರ್, ರವಿಚಂದ್ರನ್, ಶಂಕರ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್, ಉಪೇಂದ್ರ, ಶ್ರೀನಾಥ ಹೀಗೆ… ಪಟ್ಟಿ ಬೆಳೆಯುತ್ತದೆ. ಅದೇ ರೀತಿ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲೂ ಎಲ್ಲ ಸ್ಟಾರ್ ನಟರು, ಘಟಾನುಘಟಿ ಕಲಾವಿದರಿಗೆ ಹಾಡಿದ್ದಾರೆ ಎಸ್ಪಿಬಿ.
ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್ ಅವರೊಂದಿಗೆ ಎಸ್ಪಿಬಿ ವಿಶಿಷ್ಟ ದಾಖಲೆಯೊಂದನ್ನು ಬರೆದಿದ್ದಾರೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 9 ಗಂಟೆವರೆಗೆ, ಅವರ ನಿರ್ದೇಶನದಲ್ಲಿ ಒಟ್ಟು 17 ಹಾಡುಗಳನ್ನು ರೆಕಾರ್ಡ್ ಮಾಡಿ ಕೊಟ್ಟಿದ್ದಾರೆ. ಇದೊಂದ ವಿಶಿಷ್ಟ ದಾಖಲೆಯಾಗಿ ಉಳಿದಿದೆ. ಗಾಯನದೊಂದಿಗೆ ಎಸ್ಪಿಬಿ ಕನ್ನಡ, ತೆಲುಗು, ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಸುಮಾರು 45 ಸಿನಿಮಾಗಳಿಗೆ ಸಂಗೀತ ಸಂಯೋಜನೆ ಕೂಡ ಮಾಡಿದ್ದಾರೆ. ಇಷ್ಟೇ ಸಂಖ್ಯೆಯ ಚಿತ್ರಗಳಲ್ಲಿ ನಟಿಸಿದ್ದಾರೆ ಕೂಡ.
ಎಸ್ಪಿಗಾಗಿ ಡಾ.ರಾಜ್ ಹಾಡಿದ್ದರು
ಇದೊಂದು ಅಪರೂಪದ ಘಟನೆ. ಕನ್ನಡದಲ್ಲಿ ಮುದ್ದಿನಮಾವ ಸಿನಿಮಾದಲ್ಲಿ ಶಶಿಕುಮಾರ್ ಜತೆ ಎಸ್ ಪಿ ಬಾಲಸುಬ್ರಹ್ಮಣ್ಯ ಅವರು ನಟಿಸಿದ್ದರು. ಈ ಚಿತ್ರದಲ್ಲಿ ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ ಎಂಬ ಹಾಡು ಇದೆ. ಈ ಹಾಡಿನಲ್ಲಿ ಶಶಿಕುಮಾರ್ ಅವರಿಗೆ ಎಸ್ಪಿಬಿ ಹಾಡಿದ್ದಾರೆ. ಎಸ್ಪಿಬಿಗೆ ಯಾರು ಹಾಡಬೇಕೆಂದು ಯೋಚನೆ ಮಾಡಿದಾಗ ಹೊಳೆದಿದ್ದು ಗಾನಗಂಧರ್ವ ಡಾ. ರಾಜ್. ರಾಘವೇಂದ್ರ ರಾಜಕುಮಾರ್ ಅವರ ಮೂಲಕ ಈ ವಿಷಯವನ್ನು ಡಾ.ರಾಜ್ ಅವರ ಕಿವಿಗೆ ಹಾಕಿದರಂತೆ. ಆಗ ರಾಜಕುಮಾರ್ ಅವರು ಅಯ್ಯೋ ಅದು ನನ್ನ ಪುಣ್ಯ ಎಂದು ಬಂದು ಎಸ್ಪಿಗೆ ಹಾಡಿದರಂತೆ. ಈ ವಿಷಯವನ್ನು ಸ್ವತಃ ಎಸ್ಪಿಬಿ ಅವರು ರಿಯಾಲಿಟಿ ಶೋವೊಂದರಲ್ಲಿ ಹೇಳಿಕೊಂಡಿದ್ದಾರೆ. ಹಿನ್ನೆಲೆ ಗಾಯನದಲ್ಲಿ ಎಸ್ಪಿಬಿ ಮತ್ತು ಡಾ.ರಾಜ್ ಇಬ್ಬರೂ ಮಹಾ ಪರ್ವತ. ಅಂಥವರು ಇನ್ನೊಬ್ಬರಿಗೆ ಸ್ವರವಾಗುವುದೆಂದರೆ ಅದು ಮಹಾ ಸಂಗಮವೇ ಸರಿ. ಬಹುಶಃ ಇದೊಂದು ಅಪರೂಪದ ಘಟನೆಯಾಗಿ ಇತಿಹಾಸ ಸೇರಿದೆ.
ಕನ್ನಡಿಗರಿಂದ ವಿಶೇಷ ಪ್ರೀತಿ
ಬಹುಶಃ ಎಸ್ಪಿಬಿ ಈ ವಿಷಯವನ್ನು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಅವರಿಗೆ ಕರ್ನಾಟಕ, ಕನ್ನಡ ಮತ್ತು ಕನ್ನಡಿಗರು ಎಂದರೆ ಅಚ್ಚುಮೆಚ್ಚು. ಆಂಧ್ರದವರಾದರೂ ಕನ್ನಡಿಗರು ಅವರನ್ನು ತಮ್ಮವರೆಂದೇ ಪ್ರೀತಿಸಿದರು. ಅದಕ್ಕಾಗಿ ಅವರು ಆಗಾಗ, ಕನ್ನಡಿಗರಿಂದ ನನಗೇ ವಿಶೇಷವಾದ ಪ್ರೀತಿ ಸಿಕ್ಕಿದೆ. ಈ ಪ್ರೀತಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ ಎನ್ನುತ್ತಿದ್ದರು.
ಎದೆ ತುಂಬಿ ಹಾಡಿದರು
ಎಸ್ಪಿಬಿ ಹಾಡಲು ನಿಂತರೆ ಸಂಗೀತದ ರಸದೌತಣ. ಅಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಅವರು ಹಾಡಿದ ಅಷ್ಟೂ ಭಾಷೆಗಳ ಅಷ್ಟೂ ಸಾಂಗುಗಳೇ ಇದಕ್ಕೆ ನಿದರ್ಶನ. ಗಾಯನದಲ್ಲಿ ಮೇರು ಪರ್ವತವೇ ಆದ ಎಸ್ಪಿಬಿ, ಕನ್ನಡದಲ್ಲಿ ಎದೆ ತುಂಬಿ ಹಾಡಿದೆನು ಎಂಬ ವಿಶಿಷ್ಟ ಸಂಗೀತ ರಿಯಾಲ್ಟಿ ಶೋವನ್ನು ದೂರದರ್ಶನಕ್ಕಾಗಿ ನಡೆಸಿಕೊಂಡು ಬರುತ್ತಿದ್ದರು. ಈ ಶೋ ಮೂಲಕ ಅನೇಕ ಪ್ರತಿಭಾವಂತ ಗಾಯಕ, ಗಾಯಕಿಯರನ್ನು ಸಂಗೀತ ಲೋಕಕ್ಕೆ ಪರಿಚಯಿಸಿದ್ದಾರೆ. ಬೇರೆ ಭಾಷೆಗಳಲ್ಲೂ ಇದೇ ರೀತಿಯ ಪ್ರೋಗ್ರಾಮ್ ನಡೆಸಿ ಕೊಡುತ್ತಿದ್ದರು.
ಅರಸಿ ಬಂದ ಬಿರುದು, ಸನ್ಮಾನ
ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿ ವಿವಿಧ ಭಾಷೆಗಳಲ್ಲಿ 45 ಸಾವಿರಕ್ಕೂ ಅಧಿಕ ಹಾಡುಗಳು ಎಸ್ಪಿಬಿ ಅವರ ಕಂಠಸಿರಿಯಲ್ಲಿ ಅರಳಿವೆ. ಶಂಕರಾಭರಣಂ, ಪಂಚಾಕ್ಷರಿ ಗವಾಯಿ(ಕನ್ನಡ), ಸಾಗರ ಸಂಗಮಂ, ಸ್ವಾತಿ ಮುತ್ಯಂ, ರುದ್ರವೀಣ, ಏಕ್ ದೂಜೇ ಕೇಲಿಯೇ ಚಿತ್ರದ ಹಾಡುಗಳಿಗೆ 6 ಬಾರಿ ಅತ್ಯುತ್ತಮ ಗಾಯಕ ಎಂಬ ನ್ಯಾಷನಲ್ ಅವಾರ್ಡ್ ಬಂದಿದೆ. ಆಂಧ್ರ ಪ್ರದೇಶ ಸರ್ಕಾರ ನೀಡುವ ನಂದಿ ಪ್ರಶಸ್ತಿಯನ್ನು 25 ಬಾರಿ ಪಡೆದುಕೊಂಡಿದ್ದಾರೆ. ಇದೊಂದು ದಾಖಲೆಯೇ ಸರಿ. ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯ ಸರ್ಕಾರಗಳು ನೀಡುವ ಪ್ರಶಸ್ತಿಯೂ ಎಸ್ಪಿಬಿ ಅವರನ್ನು ಹುಡುಕಿಕೊಂಡು ಬಂದಿವೆ.
ಎಲ್ಲಕ್ಕಿಂತ ಹೆಚ್ಚಾಗಿ ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು ಎನಿಸಿಕೊಂಡಿರುವ ಪದ್ಮಶ್ರೀ ಮತ್ತು ಪದ್ಮಭೂಷಣಗಳೂ ಅವರಿಗೆ ಸಂದಿವೆ. ಈ ಬಿರುದು ಸನ್ಮಾನಗಳಿಗಿಂತಲೂ ಇಡೀ ಭಾರತದ ಸಂಗೀತ ಪ್ರಿಯರ ಹೃದಯದಲ್ಲಿ ಅವರಿಗೆ ಬೇರೆಯದ್ದೇ ಸ್ಥಾನವಿದೆ. ನಾಲ್ಕು ಭಾಷೆಗಳಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ಗಾಯಕ ಇವರು. ಈ ಸಾಧನೆ ಗಾಯಕರಷ್ಟೇ ಅಲ್ಲ ಬೇರಾರೂ ಮಾಡಿಲ್ಲ ಕೂಡ. ಇಷ್ಟು ಮಾತ್ರವಲ್ಲದೇ, ತಮಿಳುನಾಡು ಸರ್ಕಾರವು ಕಲೈಂಮಣಿ ಪುರಸ್ಕಾರ ನೀಡಿದರೆ, ಪೊಟ್ಟಿ ಶ್ರೀರಾಮುಲು ತೆಲುಗು ವಿವಿ ಅವರಿಗೆ 1999ರಲ್ಲಿ ಗೌರವ ಡಾಕ್ಟರೇಟ್ ನೀಡಿತು. ಅದೇ ವರ್ಷ ಮಧ್ಯಪ್ರದೇಶ ಸರ್ಕಾರವು ಲತಾ ಮಂಗೇಶ್ಕರ್ ಪುರಸ್ಕಾರ ಪ್ರದಾನ ಮಾಡಿತು. ಸತ್ಯಂಬಾ ಮತ್ತು ಆಂಧ್ರ, ಅನಂತಪುರ ವಿವಿಗಳು ಗೌರವ ಡಾಕ್ಟರೇಟ್ ನೀಡಿವೆ.
ಇದನ್ನೂ ಓದಿ | ಕೇರಂ ಬೋರ್ಡ್ ಅಂಕಣ | ಉಸಿರು ಹಿಡಿದು ಹಾಡುವೆ, ಕೇಳಡಿ ಕಣ್ಮಣಿ!
ಅಂಕಣ
ವಿಸ್ತಾರ ಅಂಕಣ: ಗ್ಯಾರಂಟಿ ಮರೆಮಾಚಲು ʼಗೋಹತ್ಯೆʼ ಗುರಾಣಿಯಾಗಬೇಕೆ?
ಗೋಹತ್ಯೆ ನಿಷೇಧವೇ ಇರಲಿ, ಪಠ್ಯ ಪರಿಷ್ಕರಣೆಯೇ ಇರಲಿ. ಎಲ್ಲವನ್ನೂ ವ್ಯಾಪಾರಿ ದೃಷ್ಟಿಕೋನದಲ್ಲಿ ಏಕೆ ನೋಡಬೇಕು? ತನಗೆ ಮತ ನೀಡಿರುವ ಮುಸ್ಲಿಮರನ್ನು ಉದ್ಧರಿಸಲು ಕಾಂಗ್ರೆಸ್ ಮುಂದಾಗಲಿ; ಆದರೆ ಆ ಸಮುದಾಯವನ್ನು ಓಲೈಸಿ, ಮತ್ತಷ್ಟು ಹಿಂದಕ್ಕೆ ತಳ್ಳುವ ಹೆಜ್ಜೆಗಳನ್ನು ಅದು ಇಡುವಂತೆ ಕಾಣುತ್ತಿದೆ.
ತುರ್ಕಿಯ ಕುರಿತು ಬ್ರಿಟಿಷರ ಧೋರಣೆ ವಿರುದ್ಧ ಹಾಗೂ ಸುನ್ನಿ ಮುಸಲ್ಮಾನರ ಪರಮೋಚ್ಛ ನಾಯಕ ಎಂದು ಪರಿಗಣಿತನಾಗಿದ್ದ ಖಲೀಫನನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು ಎಂಬ ವಿಚಾರ ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಪ್ರಬಲವಾಗಿಯೇ ಪ್ರತಿಧ್ವನಿಸಿತು. ಅದರ ಹೆಸರು ಖಿಲಾಫತ್ ಆಂದೋಲನ.
1919-24ರ ನಡುವಿನ ಈ ಅವಧಿಯಲ್ಲಿಯೇ ಭಾರತದಲ್ಲಿ ಮಹತ್ವದ ಹಾಗೂ ಘೋರ ಘಟನಾವಳಿಗಳು ನಡೆದವು. ಮುಸ್ಲಿಂ ಸಮುದಾಯವನ್ನು ಬೆಂಬಲಿಸಿ ಹಿಂದುಗಳು ಖಿಲಾಫತ್ ಆಂದೋಲನದಲ್ಲಿ ಭಾಗವಹಿಸಿ ಎಂದು ಮಹಾತ್ಮಾ ಗಾಂಧೀಜಿ ಕರೆ ನೀಡಿದರು. ಹೀಗಿದ್ದರೂ, ಕೇರಳದಲ್ಲಿ ಮಾಪಿಳ್ಳೆಗಳು ಹಿಂದುಗಳ ವಿರುದ್ಧವೇ ದೌರ್ಜನ್ಯವೆಸಗಿ ಅತ್ಯಾಚಾರ, ಅನಾಚಾರ ಮಾಡಿದರು.
ಇತಿಹಾಸದ ಗರ್ಭದಲ್ಲಿ ಅವಿತಿಟ್ಟಿದ್ದ ಈ ಸತ್ಯವನ್ನು ಮೋಪ್ಲಾ ದಂಗೆಗಳು ಎಂಬ ಹೆಸರಿನಲ್ಲಿ ಹೊರ ಜಗತ್ತಿಗೆ ಪರಿಚಯಿಸಿದವರು ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್. ಈ ವಾರದ ಅಂಕಣ ಬರಹ ಪ್ರಕಟವಾಗುವ ಮರುದಿನ, ಅಂದರೆ ಮೇ 28ರಂದು ಸಾವರ್ಕರ್ ಜಯಂತಿ. ಈ ಸಂದರ್ಭದಲ್ಲಿ ಅವರನ್ನು ನೆನೆಯೋಣ. ಆದರೆ ಈ ಲೇಖನ ಸಾವರ್ಕರರಿಗೆ ಸಂಬಂಧಿಸಿದ್ದಲ್ಲ. ಆದರೆ, ಹಿಂದೂಗಳ ಉದಾತ್ತ ಧೋರಣೆಗೆ ಸಂಬಂಧಿಸಿದ್ದು !
ಅಂದಹಾಗೆ, ಇಡೀ ದೇಶ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ, ಅದ್ಯಾವುದೋ ದೇಶದ ಖಲೀಫನಿಗೆ ಸಂಬಂಧಿಸಿದ ಖಿಲಾಫತ್ ಹೋರಾಟ ಎದುರಾಯಿತು. ಹಿಂದೂಗಳು ಈ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮುಸ್ಲಿಂ ಸಮುದಾಯದ ನಾಯಕರುಗಳಾದ ಹಕೀಂ ಅಜಮಲ್ ಖಾನ್ ಹಾಗೂ ಆಸಫ್ ಅಲಿ ಮುಂತಾದವರು ಬಯಸಿದರು. ಇದಕ್ಕಾಗಿ ಸ್ವಾಮಿ ಶ್ರದ್ಧಾನಂದರ ಜತೆಗೆ ಮಹಾತ್ಮಾ ಗಾಂಧಿಯವರನ್ನೂ ಸಭೆಯೊಂದಕ್ಕೆ ಆಹ್ವಾನಿಸಲಾಯಿತು. ಮುಸ್ಲಿಮರ ಹಿತಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಹಿಂದೂಗಳು ಏಕೆ ಬೆಂಬಲ ಕೊಡುತ್ತಾರೆ? ಅವರಿಗೆ ಉಪಯೋಗ ಆಗುವ ಯಾವುದಾದರೂ ಸಾರ್ವಜನಿಕ ವಿಷಯವನ್ನೂ ಈ ಸಭೆಯಲ್ಲಿ ಸೇರಿಸಿ ಅವರನ್ನು ಸಂತೋಷಪಡಿಸೋಣ ಎಂದು ಸಭೆಯ ಆಯೋಜಕರಾದ ಮುಸ್ಲಿಂ ಮುಖಂಡರು ಆಲೋಚಿಸಿದರು. ಆಗ ಅವರಿಗೆ ಹೊಳೆದಿದ್ದೇ ಗೋ ಹತ್ಯೆ ನಿಷೇಧ. ಈ ವಿಷಯ ಹೇಳಿದರೆ ಹಿಂದುಗಳು ಖುಷಿಯಾಗುತ್ತಾರೆ ಎಂದು ಅವರು ಭಾವಿಸಿದ್ದರು.
ಇದಕ್ಕಾಗಿ ಮಹಾತ್ಮಾ ಗಾಂಧೀಜಿಯವರನ್ನು ಸಭೆಗೆ ಆಹ್ವಾನಿಸಲು ಬರೆದ ಪತ್ರದಲ್ಲಿ ಹೀಗೆ ಇತ್ತು; “ಈ ಸಮ್ಮೇಳನದಲ್ಲಿ ಖಿಲಾಫತ್ ಪ್ರಶ್ನೆ ಮಾತ್ರವಲ್ಲ, ಗೋರಕ್ಷಣೆಯ ಪ್ರಶ್ನೆಯೂ ಚರ್ಚಿಸಲ್ಪಡುವುದು. ಗೋವಿನ ಪ್ರಶ್ನೆಯನ್ನು ತೀರ್ಮಾನಿಸಲು ಇದು ಸುವರ್ಣ ಸಂಧಿ”
ಗೋ ಸಂರಕ್ಷಣೆ ಎನ್ನುವುದು ಗಾಂಧೀಜಿಯವರ ಹೃದಯಕ್ಕೆ ಹತ್ತಿರದ ವಿಚಾರ. ಈ ವಿಚಾರವನ್ನು ಪ್ರಸ್ತಾಪಿಸಿದರೆ ಅವರು ಒಪ್ಪಿ ಖಿಲಾಫತ್ ಆಂದೋಲನಕ್ಕೆ ಬೆಂಬಲ ನೀಡುತ್ತಾರೆ ಎನ್ನುವುದು ಮುಸ್ಲಿಮರ ಉದ್ದೇಶವಾಗಿತ್ತು. ಆದರೆ ಈ ಪ್ರಸ್ತಾಪವನ್ನು ಗಾಂಧೀಜಿ ಸ್ಪಷ್ಟ ಶಬ್ದಗಳಲ್ಲಿ ತಿರಸ್ಕರಿಸಿದರು. ಈ ಕುರಿತು ಮುಸ್ಲಿಂ ಮುಖಂಡರಿಗೆ ಪತ್ರ ಬರೆದರು. “ನಿಜಕ್ಕೂ ನಿಮಗೆ ಅನ್ಯಾಯ ಆಗಿದೆ ಎನ್ನುವುದಾದರೆ ಅದಕ್ಕೆ ಹಿಂದೂಗಳು ಬೆಂಬಲ ನೀಡುತ್ತಾರೆ. ಆದರೆ ಹಿಂದುಗಳು ಬೆಂಬಲ ಪಡೆಯಬೇಕು ಎಂಬ ಕಾರಣಕ್ಕೆ ಗೋ ಸಂರಕ್ಷಣೆಯ ವಿಚಾರವನ್ನು ಈ ಸಭೆಗೆ ತರುವುದು ಬೇಡ. ಖಿಲಾಫತ್ ಮತ್ತು ಗೋರಕ್ಷಣೆ ವಿಚಾರವನ್ನು ಬೆರೆಸಬಾರದು. ಎರಡೂ ಪ್ರಶ್ನೆಗಳ ಸಮಾಲೋಚನೆಯನ್ನು ವ್ಯಾಪಾರಿ ದೃಷ್ಟಿಯಿಂದ ನಡೆಸಬಾರದು. ಪ್ರತಿಯೊಂದು ಪ್ರಶ್ನೆಯನ್ನೂ ಅದರದರ ಯೋಗ್ಯತೆಯ ಮೇಲೆ ಬೇರೆಬೇರೆಯಾಗಿ ಪರಿಗಣಿಸಬೇಕು” ಎಂದು ಆಯೋಜಕರಿಗೆ ಪತ್ರದಲ್ಲಿ ತಿಳಿಹೇಳಿದರು.
ಮುಂದೆ ಅವರು ಸಮ್ಮೇಳನದಲ್ಲಿ ಭಾಗವಹಿಸಿದಾಗಲೂ ಇದೇ ಮಾತನ್ನು ಪುನರುಚ್ಛರಿಸಿದರು. “ಮುಸಲ್ಮಾನರಿಗೆ ಸಹಾಯ ಮಾಡುವ ಸಂದರ್ಭವನ್ನು ಉಪಯೋಗಿಸಿಕೊಂಡು ಗೋಹತ್ಯೆ ನಿಷೇಧ ಮಾಡುವುದು ಸರಿಯಲ್ಲ. ಇದರ ಬದಲು ಮುಸಲ್ಮಾನರು ಹಿಂದೂಗಳ ಭಾವನೆಯನ್ನು ಪ್ರಾಮಾಣಿಕವಾಗಿ ಗೌರವಿಸಬೇಕು. ನಾವೂ, ಹಿಂದುಗಳೂ ಒಂದೇ ನೆಲದ ಮಕ್ಕಳು. ಅವರು ಆರಾಧಿಸುವ ಗೋವನ್ನು ಹತ್ಯೆ ಮಾಡುವುದಿಲ್ಲ. ಇದು ನಮ್ಮ ಕರ್ತವ್ಯ ಎಂದು ಸ್ವಂತ ಇಚ್ಛೆಯಿಂದಲೇ ಗೋಹತ್ಯೆಯನ್ನು ನಿಲ್ಲಿಸಿದರೆ ಅದು ಉತ್ತಮ ವಿಚಾರ. ಇದು ಮುಸಲ್ಮಾನರಿಗೆ ಗೌರವವನ್ನುಂಟುಮಾಡುತ್ತದೆ. ಇದು ತಮ್ಮ ಕರ್ತವ್ಯ ಎಂದು ಮುಸಲ್ಮಾನರು ಭಾವಿಸಬೇಕು. ಹಿಂದುಗಳು ಖಿಲಾಫತ್ನಲ್ಲಿ ಸಹಾಯ ಮಾಡಲಿ ಬಿಡಲಿ ಅವರು ಗೋವಧೆಯನ್ನು ನಿಲ್ಲಿಸಬೇಕು. ಈ ವಿಷಯವನ್ನು ವ್ಯಾಪಾರಿ ಮನೋಭಾವನೆಯಿಂದ ನೋಡುವುದು ಬೇಡ” ಎಂದರು.
ಗಾಂಧೀಜಿ ತಮ್ಮ ಹೃದಯಕ್ಕೆ ಹತ್ತಿರವಾಗಿದ್ದ ವಿಷಯದಲ್ಲೂ ಇಂತಹ ಕಠಿಣ ನಿಲುವನ್ನು ತಳೆದರು. ಮುಸಲ್ಮಾನರ ಅಸಹಾಯಕತೆಯನ್ನು ಉಪಯೋಗಿಸಿಕೊಂಡು ಬಲವಂತವಾಗಿ ಗೋಹತ್ಯೆ ನಿಷೇಧದ ವಾಗ್ದಾನ ಪಡೆಯಬಹುದಾಗಿತ್ತು. ಆದರೆ ಸನಾತನಿ ಗಾಂಧೀಜಿ ಹಾಗೆ ಮಾಡಲಿಲ್ಲ. ಮುಸಲ್ಮಾನದ ಮೇಲೆ ಮಾತ್ರವಲ್ಲ, ಒಟ್ಟಾರೆ ದೇಶದ ಮೇಲೆಯೂ ಗೋಹತ್ಯಾ ನಿಷೇಧವನ್ನು ಹೇರಲಿಲ್ಲ. ಗೋಹತ್ಯೆ ತಡೆಯುವುದು ಹಾಗೂ ಗೋಸಂರಕ್ಷಣೆಯನ್ನು ಸಂವಿಧಾನದ ಮುಖ್ಯಭಾಗದಲ್ಲೇ ಸೇರಿಸಬೇಕು ಎಂದಿದ್ದರೂ, ಇನ್ನೂ ದೇಶದಲ್ಲಿ ಈ ಕುರಿತು ಒಮ್ಮತ ಮೂಡಲಿ ಎಂಬ ಕಾರಣಕ್ಕೆ ನಿರ್ದೇಶಕ ತತ್ವಗಳಲ್ಲಿ ಇದನ್ನು ಸೇರಿಸಲಾಯಿತು. ತಳಿಗಳನ್ನು ಸಂರಕ್ಷಿಸುವ ಸಲುವಾಗಿ ಹಸುಗಳ ಮತ್ತು ಕರುಗಳ ಹಾಗೂ ಇತರ ಹಾಲು ಕೊಡುವ ಮತ್ತು ಭಾರ ಎಳೆಯುವ ಜಾನುವಾರುಗಳ ವಧೆಯನ್ನು ನಿಷೇಧಿಸುವುದಕ್ಕಾಗಿ ಸರ್ಕಾರ ಕ್ರಮ ಕೈಗೊಳ್ಳತಕ್ಕದ್ದು ಎಂದು ತಿಳಿಸಲಾಯಿತು.
ಇಷ್ಟೆಲ್ಲ ದೀರ್ಘ ಪೀಠಿಕೆ ಏಕೆ ಬೇಕಾಯಿತು ಎಂದರೆ ಇಂದಿನ ಅಜ್ಞಾನದ ಕಾರಣಕ್ಕೆ. ಈಗ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬದಲಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮೇ 13ರಂದು ಫಲಿತಾಂಶ ಹೊರಬಂದು ಮೇ 20ರಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ 8 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ, ಇನ್ನೂ ಯಾರಿಗೂ ಖಾತೆಗಳ ಹಂಚಿಕೆಯೂ ಆಗಿಲ್ಲ. ಆದರೆ ಸರ್ಕಾರದ ಭಾಗವಾದ ಸಚಿವರುಗಳು ಪುಂಖಾನುಪುಂಖವಾಗಿ ನಾಲಗೆಯನ್ನು ಹರಿಬಿಡುತ್ತಿದ್ದಾರೆ. ಬಿಜೆಪಿ ಸರ್ಕಾರ ಮಾಡಿದ ಪಠ್ಯಪುಸ್ತಕ ಪರಿಷ್ಕರಣೆ, ಗೋಹತ್ಯೆ ನಿಷೇಧ ಸೇರಿದಂತೆ ಎಲ್ಲವನ್ನೂ ಹಿಂಪಡೆಯಲಾಗುತ್ತದೆ. ಆಗತ್ಯಬಿದ್ದರೆ ಬಜರಂಗದಳವನ್ನಷ್ಟೆ ಅಲ್ಲ, ಆರ್ಎಸ್ಎಸ್ ಅನ್ನೂ ನಿಷೇಧಿಸಲಾಗುವುದು ಎಂದು ಸಚಿವರೊಬ್ಬರು ಪದೇಪದೆ ಹೇಳುತ್ತಿದ್ದಾರೆ.
ಇಲ್ಲಿ ಅಜ್ಞಾನದ ವಿಚಾರ ಎಂದರೆ, ಗೋಹತ್ಯೆ ನಿಷೇಧ ಎನ್ನುವುದು ತನ್ನ ಚುನಾವಣಾ ವಿಷಯ, ವೋಟು ತಂದುಕೊಡುವ ಅಜೆಂಡಾ ಎಂದು ಬಿಜೆಪಿಯ ಕೆಲ ನಾಯಕರು ಭಾವಿಸಿದ್ದಾರೆ. ಅದೇ ರೀತಿ, ಗೋಹತ್ಯೆ ನಿಷೇಧ ಎನ್ನುವುದು ಬಿಜೆಪಿಯ ಅಜೆಂಡಾ ಎಂದು ಭಾವಿಸಿರುವ ಕಾಂಗ್ರೆಸ್ ಸಹ, ತಾನು ಅಧಿಕಾರಕ್ಕೆ ಬಂದರೆ ಈ ಕಾನೂನನ್ನು ಹಿಂಪಡೆಯುವೆ ಎನ್ನುತ್ತಿದೆ. ಬಿಜೆಪಿಯಲ್ಲಿ ಕೆಲವರಿಗೆ ಮಾತ್ರ ಅಜ್ಞಾನವಿದ್ದರೆ, ಕಾಂಗ್ರೆಸ್ನಲ್ಲಿ ಎಲ್ಲರಿಗೂ ಇದೆ.
ಗೋಹತ್ಯೆ ನಿಷೇಧ ಎನ್ನುವುದು ಭಾರತೀಯ ಸಂವಿಧಾನದ ನಿರ್ದೇಶಕ ತತ್ವಗಳಲ್ಲೇ ಅಡಕವಾಗಿದೆ. ಕೃಷಿಗೆ ಪೂರಕವಾದ ಜಾನುವಾರಾದ್ದರಿಂದ ಗೋವನ್ನು ಹತ್ಯೆ ಮಾಡಬಾರದು ಎಂದು ಬ್ರಿಟಿಷ್ ಕಾಲದಿಂದಲೂ ವಿವಿಧ ಕಾನೂನುಗಳಿವೆ. ಆದರೆ ತಾನು ಈ ದೇಶದ ಅತ್ಯಂತ ಹಳೆಯ ಪಕ್ಷ, ಸ್ವಾತಂತ್ರ್ಯಕ್ಕೆ ಹೋರಾಡಿದ ಪಕ್ಷ ಎಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ಗೆ ತನ್ನ ಇತಿಹಾಸವೇ ಮರೆತುಹೋಗಿದೆ. ತನ್ನದೇ ಪಕ್ಷ ಜಾರಿಗೆ ತಂದ ಯೋಜನೆಗಳನ್ನು, ನೀತಿಗಳನ್ನು, ಬಿಜೆಪಿ ಪೊಲಿಟಿಕಲ್ ಮೈಲೇಜ್ ತೆಗೆದುಕೊಳ್ಳುತ್ತದೆ ಎಂಬ ಒಂದೇ ಕಾರಣಕ್ಕೆ ವಿರೋಧಿಸಲು ಮುಂದಾಗಿದೆ. ಇದರಲ್ಲಿ ಗೋಹತ್ಯೆ ನಿಷೇಧವೂ ಒಂದು. ಕಾಂಗ್ರೆಸ್ ಈಗ ದೇಶದ ಮಟ್ಟದಲ್ಲಿ ಹೊಂದಿರುವ ಅಧಃಪತನಕ್ಕೆ ಈ ಅಜ್ಞಾನವೂ ಒಂದು ಕಾರಣ.
ಗೋಹತ್ಯೆ ನಿಷೇಧವೇ ಇರಲಿ, ಪಠ್ಯ ಪರಿಷ್ಕರಣೆಯೇ ಇರಲಿ. ಎಲ್ಲವನ್ನೂ ವ್ಯಾಪಾರಿ ದೃಷ್ಟಿಕೋನದಲ್ಲಿ ಏಕೆ ನೋಡಬೇಕು? ಮುಸ್ಲಿಂ ಸಮುದಾಯ ಈ ಬಾರಿ ಕಾಂಗ್ರೆಸ್ಗೆ ಹೆಚ್ಚಿನ ಮತ ನೀಡಿದೆ ಎನ್ನುವುದು ನಿರ್ವಿವಾದ. ಆದರೆ ಆ ಸಮುದಾಯದ ಏಳಿಗೆಗೆ ಏನು ಮಾಡಿದರೆ ಆ ಸಮುದಾಯ ಸಮಾಜದ ಮುಖ್ಯ ವಾಹಿನಿಗೆ ಬರುತ್ತದೆ ಎಂದು ಆಲೋಚಿಸುವುದು ಕಾಂಗ್ರೆಸ್ ಕರ್ತವ್ಯ. ತನಗೆ ಮತ ನೀಡಿರುವ ಮತದಾರರನ್ನು ಉದ್ಧಾರ ಮಾಡಬೇಕಾಗಿರುವುದು ಕಾಂಗ್ರೆಸ್ ಪಕ್ಷದ ಆದ್ಯತೆಯಾಗಬೇಕು. ಆದರೆ ಆ ಸಮುದಾಯವನ್ನು ಓಲೈಸಿ, ಮತ್ತಷ್ಟು ಹಿಂದಕ್ಕೆ ತಳ್ಳುವ ಹೆಜ್ಜೆಗಳನ್ನು ಇಡುವಂತೆ ಕಾಣುತ್ತಿದೆ ಸರ್ಕಾರ. ಮುಸ್ಲಿಂ ಸಮುದಾಯದಲ್ಲಿ ಕೆಲವರು ಇಷ್ಟಪಡುತ್ತಾರೆ ಎಂಬ ಕಾರಣಕ್ಕೆ ಗೋಹತ್ಯೆ ನಿಷೇಧವನ್ನು ಹಿಂಪಡೆಯುವುದಾದರೆ ಸಂವಿಧಾನದ ನಿರ್ದೇಶಕ ತತ್ವಕ್ಕೆ, ಮಹಾತ್ಮ ಗಾಂಧೀಜಿಗೆ ಏನು ಬೆಲೆ ನೀಡುತ್ತಿದೆ ಕಾಂಗ್ರೆಸ್?
ಬಿಜೆಪಿ ಅವಧಿಯಲ್ಲಿ ನಡೆಸಿದ ಪಠ್ಯಪುಸ್ತಕ ಪರಿಷ್ಕರಣೆಯನ್ನು ರದ್ದುಪಡಿಸಲಾಗುತ್ತದೆ ಎಂದೂ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. ಇದಕ್ಕೆ ಶಿಕ್ಷಣ ತಜ್ಞರು ಎನ್ನಿಸಿಕೊಂಡ ಕೆಲವರೂ ಒತ್ತಾಯ ಮಾಡುತ್ತಿದ್ದಾರೆ. ಈಗಾಗಲೆ ಅನೇಕ ಕಡೆಗಳಲ್ಲಿ ಶಾಲೆ ಆರಂಭವಾಗಿದೆ. ಇನ್ನು ನಾಲ್ಕೈದು ದಿನದಲ್ಲಿ ಸಂಪೂರ್ಣ ಶಾಲೆಗಳು ಆರಂಭವಾಗುತ್ತವೆ. ಈ ಸಮಯದಲ್ಲಿ ಪಠ್ಯ ವಿಚಾರದಲ್ಲಿ ಗೊಂದಲ ಮಾಡಿಕೊಳ್ಳುವುದು ಸರಿಯೆ? ಹಿಜಾಬ್ ವಿಚಾರವನ್ನು ಮುಸ್ಲಿಂ ಸಮಾಜದ ಕೆಲವರು ಇಷ್ಟಪಡುತ್ತಿರುವಂತೆ ನಿರ್ಧಾರ ಮಾಡಬೇಕೆ? ಅಥವಾ ನಿಜವಾಗಿಯೂ ಈಗಿನ ಜಗತ್ತಿನ ಅವಶ್ಯಕತೆಗೆ ತಕ್ಕಂತೆ ನಿರ್ಧಾರ ಮಾಡಬೇಕೆ ಎಂಬ ಕುರಿತೂ ಸರ್ಕಾರದಲ್ಲಿ ಸ್ಪಷ್ಟತೆ ಇದ್ದಂತಿಲ್ಲ. ಇನ್ನು, ಅನವಶ್ಯಕವಾಗಿ ಬಜರಂಗದಳ ಹಾಗೂ ಆರ್ಎಸ್ಎಸ್ ನಿಷೇಧದ ಮಾತನ್ನು ಆಡುತ್ತಿರುವುದಾದರೂ ಏತಕ್ಕೆ?
ನಿಜಕ್ಕೂ ರಾಜ್ಯ ಸರ್ಕಾರಕ್ಕೆ ಈ ಅಧಿಕಾರವಾದರೂ ಇದೆಯೇ? ಇದನ್ನಾದರೂ ಆಲೋಚನೆ ಮಾಡಬೇಕಲ್ಲವೇ? ಆರ್ಎಸ್ಎಸ್ 1925ರಲ್ಲಿ ಆರಂಭವಾಗಿ ಇನ್ನು 2 ವರ್ಷದಲ್ಲಿ ಶತಮಾನೋತ್ಸವ ಆಚರಿಸುವ ಸಂಘಟನೆ. ಭಾರತವಷ್ಟೆ ಅಲ್ಲದೆ ವಿದೇಶಗಳಲ್ಲೂ ವಿವಿಧ ರೂಪಗಳಲ್ಲಿ ತನ್ನ ಬಾಹುಗಳನ್ನು ಚಾಚಿಕೊಂಡಿದೆ. ಈ ಹಿಂದೆ ಮೊದಲಿಗೆ ಗಾಂಧಿ ಹತ್ಯೆ ಸಂದರ್ಭದಲ್ಲಿ, ನಿಷೇಧ, ನಿರ್ಬಂಧಕ್ಕೆ ಒಳಗಾಗಿದ್ದರೂ ನಂತರ ಕಾನೂನಾತ್ಮಕವಾಗಿ ಹೋರಾಡಿ ನಡೆಯುತ್ತಿರುವ ಸಂಘಟನೆ. ಹಾಗೆಂದು ಈ ಸಂಘಟನೆಯ ಸಿದ್ಧಾಂತವನ್ನು ಎಲ್ಲರೂ ಒಪ್ಪಲೇಬೇಕು, ಅದನ್ನು ಪ್ರಶ್ನೆಯೇ ಮಾಡಬಾರದು ಎಂದು ಹೇಳುತ್ತಿಲ್ಲ. ಆದರೆ ನಮಗೆ ಆ ಸಿದ್ಧಾಂತ ಇಷ್ಟವಿಲ್ಲ ಎಂಬ ಕಾರಣಕ್ಕೆ ನಿಷೇಧವನ್ನೇ ಮಾಡಬೇಕು ಎನ್ನುವುದು ಸರಿಯೇ? ಗಾಂಧೀ ವಿಚಾರಗಳು ತನಗೆ ಹಿಡಿಸಲಿಲ್ಲ, ಅದು ದೇಶಕ್ಕೆ ಮಾರಕ ಎಂದು ತಾನು ಭಾವಿಸಿದ ಕೂಡಲೆ ಅವರನ್ನು ಕೊಂದುಬಿಡಬೇಕೆಂಬ ಆಲೋಚನೆ ಮಾಡಿದ ನಾಥೂರಾಮ್ ಗೋಡ್ಸೆಗೂ ಈ ಆಲೋಚನೆಗೂ ಏನು ವ್ಯತ್ಯಾಸ ಉಳಿಯುತ್ತದೆ?
ಪೊಲೀಸರು ಆಯುಧ ಪೂಜೆಯ ದಿನ ಕೇಸರಿ ಶಲ್ಯ ಅಥವಾ ಅಂಗಿಯನ್ನು ಧರಿಸಿದ್ದು ಹೇಗೆ ಸಂವಿಧಾನಕ್ಕೆ ವಿರುದ್ಧವಾಗುತ್ತದೆ ಎನ್ನುವುದನ್ನು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಬೇಕು. ದೇಶದ ತ್ರಿವರ್ಣ ಧ್ವಜದಲ್ಲಿ ಕೇಸರಿ ಬಣ್ಣವಿದೆ. ಹಾಗೆ ಬಟ್ಟೆ ಧರಿಸಿದ ಪೊಲೀಸರು ಯಾರ ಮೇಲಾದರೂ ದಾಳಿ ಮಾಡಿದ್ದಾರೆಯೇ? ತಮ್ಮ ಪಾಡಿಗೆ ಕುಟುಂಬದೊಂದಿಗೆ ಸಂತಸಪಟ್ಟಿದ್ದರು. ಇದೊಂದೇ ವಿಷಯ ಇಟ್ಟುಕೊಂಡು, ʼಕೇಸರೀಕರಣಕ್ಕೆ ಅವಕಾಶ ನೀಡುವುದಿಲ್ಲʼ ಎಂದು ಅವರನ್ನೇ ಬೆದರಿಸಲು ಹೋಗುವುದು ಜನಪ್ರತಿನಿಧಿಗಳಿಗೆ ಶೋಭಿಸುವುದಿಲ್ಲ. ಶಾಸಕಾಂಗವು ಕಾರ್ಯಾಂಗವನ್ನು ವಿಶ್ವಾಸಕ್ಕೆ ತಂದುಕೊಂಡು ಕೆಲಸವನ್ನು ಸಾಧಿಸಿಕೊಳ್ಳಬೇಕು. ಅದು ಬಿಟ್ಟು ಧಮ್ಕಿ ಹಾಕಿದರೆ ಅವರು ಕೇಳುತ್ತಾರೆಯೇ?
ಇದನ್ನೂ ಓದಿ: ವಿಸ್ತಾರ ಅಂಕಣ: ಜನಕಲ್ಯಾಣದ ಕನಸಿಗೆ ಕಾರ್ಯಾಂಗವೂ ಕೈ ಜೋಡಿಸಲಿ
ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತ, ಎಲ್ಲ ನಿರುದ್ಯೋಗಿಗಳಿಗೂ ಭತ್ಯೆ, ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಮಾಸಿಕ ಧನ, ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಎನ್ನುವ ಸ್ಪಷ್ಟ ಘೋಷಣೆಗಳನ್ನು ಕಾಂಗ್ರೆಸ್ ಮಾಡಿತ್ತು. ಬೆಲೆಯೇರಿಕೆಯ ಬಿಸಿಲಿಗೆ ಬಳಲಿರುವ ಬಡವರು, ಕೆಳ ಮಧ್ಯಮ ವರ್ಗದವರು, ಮಧ್ಯಮವರ್ಗದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಯೋಜನೆ ಯಾವಾಗ ಜಾರಿ ಎಂದು ಕೇಳಿದರೆ, “ಹಾದಿ ಬೀದಿಯಲ್ಲಿ ಹೋಗುವವರಿಗೆ ಕೊಡುವುದಕ್ಕೆ ಆಗುತ್ತದೆಯೇ?” ಎಂಬ ಮಾತನ್ನು ಕಾಂಗ್ರೆಸ್ ಆಡುತ್ತಿದೆ.
ಅಂದು ಮತ ಕೇಳುವಾಗ ಇದ್ದ ಬದ್ಧತೆ, ವಿಶ್ವಾಸ, ಆತ್ಮೀಯತೆ ಕೇವಲ ಒಂದೇ ವಾರಕ್ಕೆ ಕಾಣೆಯಾಗುವಂತೆ ಕಾಣುವುದು ಒಳ್ಳೆಯ ಲಕ್ಷಣವಲ್ಲ. ಹಾದಿಬೀದಿಯಲ್ಲಿ ಹೋಗುವವರಿಗೆ ಯೋಜನೆ ನೀಡಲಾಗುವುದಿಲ್ಲ ಎನ್ನುವ ಸರ್ಕಾರದ್ದೇ ಭಾಗವಾಗಿರುವವರು, ಗೋಹತ್ಯೆ ನಿಷೇಧ ವಾಪಸ್, ಪಠ್ಯ ಪರಿಷ್ಕರಣೆ ವಾಪಸ್, ಬಜರಂಗ ದಳ ನಿಷೇಧ, ಆರ್ಎಸ್ಎಸ್ ನಿಷೇಧದಂತಹ ವಿಚಾರಗಳನ್ನು ಹಾದಿಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಬಹುಶಃ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಹೆಣಗಾಡುತ್ತಿರುವ ಸರ್ಕಾರ ಹೇಗಾದರೂ ಮಾಡಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿರಬಹುದು. ಇದರ ಭಾಗವಾಗಿ ಇಂತಹ ಅನೇಕ ವಿಚಾರಗಳನ್ನು ಹರಿಯಬಿಟ್ಟು ತಮಾಷೆ ನೋಡುತ್ತಿರಬಹುದು. ಅದು ರಾಜಕೀಯ ತಂತ್ರಗಾರಿಕೆಯ ಭಾಗ.
ಆದರೆ ಭಾರತದ ಸಂವಿಧಾನದಲ್ಲೇ ಅಡಕವಾಗಿರುವ ವಿಚಾರದ ಕುರಿತು, ದೇಶದ ಮುಂದಿನ ಭವಿಷ್ಯವಾದ ಮಕ್ಕಳ ಪಠ್ಯದ ಕುರಿತು, ಸಮಾಜದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ವ್ಯಕ್ತಿ ಹಾಗೂ ಸಂಘಟನೆಗಳ ಕುರಿತು ಹಾದಿಬೀದಿಯಲ್ಲಿ ಮಾತನಾಡುವುದನ್ನು ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ಬಳಸುವುದು ಸರಿಯಲ್ಲ. ಇಂತಹ ತಂತ್ರಗಾರಿಕೆಗಳನ್ನು ಕೈಬಿಟ್ಟು, ನಿಜವಾಗಿಯೂ ತಾವು ನೀಡಿರುವ ಘೋಷಣೆಗಳನ್ನು ಈಡೇರಿಸುವತ್ತ ಸರ್ಕಾರ ಗಮನಹರಿಸುವುದು ಒಳಿತಲ್ಲವೇ?
ಇದನ್ನೂ ಓದಿ: ವಿಸ್ತಾರ ಅಂಕಣ: ಅಮೃತ ಕಾಲದ ಶಾಸಕರು ಯಾವ ಮನಸ್ಸಿನಿಂದ ವಿಧಾನಸೌಧ ಪ್ರವೇಶಿಸಬೇಕು?
ಅಂಕಣ
ರಾಜ ಮಾರ್ಗ ಅಂಕಣ: ಆತಂಕವಿಲ್ಲ, ಲಜ್ಜೆ ಇಲ್ಲ, ಭಾವನೆಗಳೇ ಇಲ್ಲ! ಗರ್ಭವನ್ನು ಕಿತ್ತು ಕಿತ್ತು ಎಸೆಯುತ್ತಿದ್ದಾರೆ ನವ ಯುವ ಜನತೆ!
Raja Marga column: ಯಾವ ಭಾವನೆಗಳೂ ಇಲ್ಲ! ಅದು ನನ್ನ ಮಗು ಎಂದಾಗಲೀ, ನನ್ನರಕ್ತ ಮಾಂಸದ ಜೀವ ಎಂದಾಗಲೀ ಇಲ್ಲವೇ ಇಲ್ಲ. ಕ್ಷಣಿಕ ಸುಖದ ಫಲವಾದ ಭ್ರೂಣಗಳನ್ನು ಕಿತ್ತು ಎಸೆಯಲು ಯಾವ ಮುಲಾಜೂ ಇಲ್ಲ. ಇದು ಇವತ್ತಿನ ನಯಾ ದುನಿಯಾ!
ಇತ್ತೀಚೆಗೆ ಇಂಟರ್ನೆಟ್ ಮೂಲಕ ಮಾನವ ಅಂಡಾಣುಗಳನ್ನು ಮಾರಾಟ ಮಾಡುವ ಸಂಗತಿಗಳು ಹೆಚ್ಚುತ್ತಿವೆ. ಅದರಲ್ಲಿಯೂ ಸೂಪರ್ ಮಾಡೆಲ್ಗಳ ಅಂಡಾಣುಗಳಿಗೆ ಭಾರಿ ಬೇಡಿಕೆ ಇದೆ. ಈಗಾಗಲೇ ರಕ್ತ ಬ್ಯಾಂಕುಗಳು ಇರುವ ಹಾಗೆ ಮಾನವರ ವೀರ್ಯ ಬ್ಯಾಂಕುಗಳು ಜನಪ್ರಿಯ ಆಗ್ತಾ ಇವೆ. ಮಕ್ಕಳಿಲ್ಲದ ದಂಪತಿಗಳಿಗೆ ಮಗುವನ್ನು ಪಡೆಯಲು ಇಂದು ಹತ್ತಾರು ಕಾನೂನುಬದ್ಧವಾದ ದಾರಿಗಳು ಇವೆ. ದುಃಖಪಡುತ್ತಾ ಮೂಲೆ ಸೇರುವ ಕಾಲವು ಇನ್ನಿಲ್ಲ ಎಂದೇ ಹೇಳಬಹುದು.
ತಮ್ಮ ವೀರ್ಯದಾನ ಮಾಡಿ ಸಾವಿರಾರು ಮಕ್ಕಳ ಜನನಕ್ಕೆ ಕಾರಣ ಆಗಲು ವೀರ್ಯವಂತ ಪುರುಷರು ತುದಿಗಾಲಲ್ಲಿ ನಿಂತಿದ್ದಾರೆ. ಹಾಗೆಯೇ ದುಡ್ಡಿದ್ದವರ ಮಗುವಿಗೆ ತಾಯಿ ಆಗಲು ತಮ್ಮ ಗರ್ಭಾಶಯವನ್ನು ತೆರೆದಿಟ್ಟು ಹಲವು ಬಾಡಿಗೆಯ ತಾಯಂದಿರು ಕೂಡ ಅಷ್ಟೇ ಉತ್ಸಾಹದಲ್ಲಿ ರೆಡಿ ಇದ್ದಾರೆ. ಅದೇ ರೀತಿಯಲ್ಲಿ ಇತ್ತೀಚೆಗೆ ಮಾನವ ಕ್ಲೋನಿಂಗ್ ಮೂಲಕ ತಮ್ಮದೇ ವಂಶವಾಹಿ ಇರುವ ಮಗುವನ್ನು ಪಡೆಯಲು ದಂಪತಿಗಳಿಗೆ ಸಾಧ್ಯ ಇರುವ ಸಂಶೋಧನೆಗಳು ಫಲಿತಾಂಶವನ್ನು ಕೊಡುತ್ತಿವೆ. ಇನ್ನು ಮುಂದೆ ಬಂಜೆತನ ಒಂದು ಶಾಪ ಎಂದು ಯಾವ ದಂಪತಿಗಳೂ ದುಃಖ ಪಡಬೇಕು ಅಂತ ಇಲ್ಲ! ಮಕ್ಕಳಿಲ್ಲ ಎಂಬ ಕಾರಣಕ್ಕೆ ಕೀಳರಿಮೆಗೆ, ಕೊರಗಿಗೆ ಹೋಗುವ ಅಗತ್ಯ ಕೂಡ ಇಲ್ಲ!
ಮಗು ಇಲ್ಲದ ದಂಪತಿಗಳ ದುಃಖ ಒಂದೆಡೆಯಾದರೆ..
ಆರೋಗ್ಯಪೂರ್ಣ ದಂಪತಿಗಳು ಮಗುವನ್ನು ಪಡೆಯಲು ವಿಫಲವಾದಾಗ ಪಡುವ ಅಪಮಾನ, ನೋವು ಅವರಿಗೆ ಮಾತ್ರ ಗೊತ್ತು. ಆ ಗಂಡನನ್ನು ನಪುಂಸಕ ಎಂದೂ, ಹೆಣ್ಣನ್ನು ಬಂಜೆ ಎಂದೂ ಸಮಾಜ ಇಂದಿಗೂ ಕರೆಯುತ್ತದೆ. ಹೆಣ್ಣಿನ ಮೇಲೆ ಬರುವ ಅಪವಾದಗಳು ಜಾಸ್ತಿ. ಈ ಅಪಮಾನಗಳಿಂದ ಹೊರಬರಲು ಅಡ್ಡದಾರಿ ಹುಡುಕುವ ದಂಪತಿಗಳ ಸಂಖ್ಯೆಯೂ ಸಾಕಷ್ಟು ಇದೆ! ಆದರೆ ಇಂದು ಅತ್ಯಂತ ವೇಗವಾಗಿ ಓಡುತ್ತಿರುವ ವೈದ್ಯಕೀಯ ವಿಜ್ಞಾನವು ಅದಕ್ಕೆಲ್ಲ ಪರಿಹಾರಗಳನ್ನು ಈಗಲೇ ಹುಡುಕಿ ಆಗಿದೆ. ಅವುಗಳಲ್ಲಿ 60% ಪರಿಹಾರಗಳಿಗೆ ನಮ್ಮ ದೇಶದ ಕಾನೂನು ಮಾನ್ಯತೆ ಕೊಟ್ಟಿದೆ. ದೇಶದ ಕಾನೂನುಬದ್ಧವಾದ ವಿಧಾನಗಳ ಮೂಲಕ ಈಗ ತಮ್ಮದೇ ಮಗುವನ್ನು ಪಡೆಯಲು ನೂರಾರು ಅವಕಾಶಗಳು ಇವೆ. ಅದಕ್ಕಾಗಿ ದಂಪತಿಗಳು ಲಕ್ಷ ಲಕ್ಷ ದುಡ್ಡು ಖರ್ಚು ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ತಮ್ಮದೇ ಮಗುವನ್ನು ಪಡೆಯುವ ಖುಷಿಯು ಲಕ್ಷ ಕೋಟಿ ದುಡ್ಡಿಗೂ ಮೀರಿದ್ದು ಎಂಬುದು ಅವರ ಭಾವನೆ. ಸ್ವಲ್ಪ ಬ್ರಾಡ್ ಆಗಿ ಯೋಚನೆ ಮಾಡುವವರು ಅನಾಥಾಶ್ರಮದ ಒಂದು ಮಗುವನ್ನು ಅಧಿಕೃತವಾಗಿ ದತ್ತು ತೆಗೆದುಕೊಂಡು ತಮ್ಮ ಮಗುವಿನ ಹಾಗೆ ಪ್ರೀತಿಯನ್ನು ಕೊಡುವವರೂ ಇದ್ದಾರೆ. ಅಂತವರನ್ನು ನಾವು ಹೆಚ್ಚು ಅಭಿನಂದಿಸೋಣ.
ಆ ಮಗು ಬೇಡ ಎಂದು ಕಿತ್ತು ಹಾಕುವವರು!
ಇದೇ ಸಮಸ್ಯೆಯ ಇನ್ನೊಂದು ಮುಖವನ್ನು ನನ್ನ ಆತ್ಮೀಯರಾದ ವೈದ್ಯರು ನನ್ನ ಜೊತೆ ಹೇಳುತ್ತಾ ಹೋದರು. ಅವರು ಮತ್ತು ಅವರ ಪತ್ನಿ ಒಂದು ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರಾಗಿ ವೃತ್ತಿ ಮಾಡುತ್ತಿದ್ದಾರೆ. ಅಲ್ಲಿ ವಾರಕ್ಕೆ ಕನಿಷ್ಠ 18-20 ಅಬಾರ್ಷನ್ಗಳು ನಡೆಯುತ್ತಿವೆ ಅನ್ನೋದನ್ನು ಅವರು ಹೇಳಿದಾಗ ನನ್ನ ಬೆನ್ನುಮೂಳೆಯಲ್ಲಿ ಚಳಕ್ ಎಂದು ಕರೆಂಟ್ ಓಡಿತು!
ಅನೈತಿಕತೆಯ ಫಲ – ಮಾಂಸದ ಮುದ್ದೆ!
ಆ ವೈದ್ಯರು ತಮ್ಮ ಹೆಸರನ್ನು ಉಲ್ಲೇಖ ಮಾಡಬಾರದು ಎಂದು ಹೇಳಿದ್ದಾರೆ. ಅವರು ಹೇಳಿದ್ದು ನಿಜಕ್ಕೂ ಭಯಾನಕವಾದ ವಿಷಯ. ಅದರಲ್ಲಿ ಹೆಚ್ಚಿನವರು 18-23 ವರ್ಷ ಪ್ರಾಯದ ಮೆಡಿಕಲ್
ವಿದ್ಯಾರ್ಥಿನಿಯರು! ಅಪ್ಪ ಅಮ್ಮನಿಂದ ದೂರ ಇರುವವರು. ಒಬ್ಬಂಟಿತನ ಹೋಗಲಾಡಿಸಲು ಪ್ರೀತಿ, ಪ್ರೇಮ, ಪ್ರಣಯ, ಸೆಕ್ಸ್, ಡ್ರಗ್ಸ್ ಇವುಗಳ ಮೊರೆ ಹೋಗುವವರು. ಸ್ವಚ್ಛಂದದ ರೆಕ್ಕೆ ಬಿಚ್ಚಿ ಹಾರಾಡುವವರು.
ಎಲ್ಲಾ ಹುಡುಗಿಯರು ಹಾಗೆ ಅಂತ ಅಲ್ಲವೇ ಅಲ್ಲ!
ವೈದ್ಯರು ಹೇಳುವ ಪ್ರಕಾರ ಮೆಡಿಕಲ್ ಕಲಿಯಲು ಬರುವ ಎಲ್ಲ ಹುಡುಗಿಯರೂ, ಹುಡುಗರೂ ಹಾಗೆ ಅಂತಲ್ಲ. ತುಂಬಾ ಸೀರಿಯಸ್ ಆಗಿ ಕಲಿಯುವ ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ಆದರೆ ಸ್ವಚ್ಛಂದತೆಯ ಬದುಕು ಆಸೆ ಪಡುವ ಹಲವರು ವರ್ಷಕ್ಕೆ ಎರಡು, ಮೂರು ಬಾರಿ ಅಬಾರ್ಷನ್ ಮಾಡಿಸಿಕೊಳ್ಳಲು ಕೂಡ ಹಿಂದೇಟು ಹಾಕುವುದಿಲ್ಲ! ಗರ್ಭಪಾತಕ್ಕೆ ಹೆದರುವುದೇ ಇಲ್ಲ. ಹೀಗೆಲ್ಲ ಮಾಡಿದರೆ ಮುಂದೆ ನಿಮಗೆ ಮಕ್ಕಳಾಗುವುದೇ ಇಲ್ಲ ಎಂದು ವೈದ್ಯರು ಎಚ್ಚರಿಕೆ ಕೊಟ್ಟರೂ ಅವರು ಕ್ಯಾರೇ ಅನ್ನುತ್ತಿಲ್ಲ ಅನ್ನೋದು ಇನ್ನೂ ಭಯ ಹುಟ್ಟಿಸುವ ಸಂಗತಿ. ಅವರು ವೈದ್ಯಕೀಯ ವಿದ್ಯಾರ್ಥಿಗಳು. ಅವರಿಗೆ ಎಲ್ಲವೂ ಗರ್ಭ ನಿರೋಧಕ ವಿಧಾನಗಳು ಗೊತ್ತಿವೆ. ಆದರೆ ಆ ಕ್ಷಣಕ್ಕೆ ಮೈ ಮರೆವು ಅವರನ್ನು ಈ ಹಂತಕ್ಕೆ ತಲುಪಿಸುತ್ತದೆ. ಈಗಿನ ಆಧುನಿಕ ಸಿನಿಮಾಗಳು, ವೆಬ್ ಸೀರೀಸ್, ಮೊಬೈಲ್, ಜಾಲತಾಣಗಳು, ಆಧುನಿಕ ಜೀವನ ಪದ್ಧತಿ ಮತ್ತು ಸುಲಭದಲ್ಲಿ ದೊರೆಯುವ ಡ್ರಗ್ಸ್ ಅವರನ್ನು ಪ್ರಪಾತಕ್ಕೆ ದೂಡುತ್ತಿದೆ.
ಅದಕ್ಕಿಂತ ಹೆಚ್ಚಿನ ಭಯಪಡುವ ಸಂಗತಿ ಎಂದರೆ ಗ್ರಾಮಾಂತರ ಭಾಗದ ವಿದ್ಯಾವಂತ ಹೆಣ್ಣುಮಕ್ಕಳು ಪ್ರೀತಿ, ಪ್ರೇಮದ ಆಮಿಷಗಳಿಗೆ ಬಲಿಯಾಗಿ ಗರ್ಭ ಧರಿಸುತ್ತಿದ್ದಾರೆ! ಅವರ ಪ್ರಮಾಣವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆ ಬೇಡದ ಮಗುವನ್ನು ಕಿತ್ತು ಕಸದ ಬುಟ್ಟಿಗೆ ಎಸೆಯಲು ಅವರು ಹೇಸುತ್ತಿಲ್ಲ. ಆ ಅನೈತಿಕತೆಯ ಫಲವಾದ ಮಾಂಸದ ಪಿಂಡವನ್ನು ತೆಗೆದು ಬಿಸಾಡಲು ಇಂದು ಹದಿಹರೆಯದ ಜೋಡಿಗಳು ಹಿಂದೆ ಮುಂದೆ ನೋಡುತ್ತಿಲ್ಲ!
ಮೊಬೈಲ್ ಮೂಲಕ, ವಿವಿಧ ಜಾಲತಾಣಗಳ ಮೂಲಕ ಗೆಳೆತನ ಮಾಡಿಕೊಂಡ ಹದಿಹರೆಯದ ಜೋಡಿಗಳು ಬಹಳ ಬೇಗ ನಿಕಟವಾಗುತ್ತಾರೆ . ಸಂಯಮ ಕಳೆದುಕೊಂಡು ಈ ಭಾವುಕ ಕ್ಷಣದಲ್ಲಿ ಮೈಮರೆಯುತ್ತಾರೆ.
ಅವುಗಳಲ್ಲಿ 90% ಪ್ರೀತಿಗಳು ಮದುವೆಯವರೆಗೂ ಹೋಗುವುದಿಲ್ಲ ಅನ್ನೋದು ಕೂಡ ಅಷ್ಟೇ ಸತ್ಯವಾದ ಸಂಗತಿ. ಆ ಹುಡುಗ ಮತ್ತು ಹುಡುಗಿ ಯಾವ ಪಾಪ ಪ್ರಜ್ಞೆಯೂ ಇಲ್ಲದೆ ಮಾಂಸದ ಮುದ್ದೆಯನ್ನು ಕಸದ ಬುಟ್ಟಿಗೆ ಎಸೆದು ಮುಂದಕ್ಕೆ ಹೋಗುತ್ತಿರುವುದು ಕೂಡ ಹೆಚ್ಚು ಆತಂಕಕ್ಕೆ ಕಾರಣವಾಗಿದೆ.
ಒಂದೆಡೆ ಮಗು ಬೇಕೂ ಎಂದು ದಂಪತಿಗಳು ತೀವ್ರವಾಗಿ ಹಂಬಲಿಸುವುದು, ಅದಕ್ಕಾಗಿ ಲಕ್ಷ ಲಕ್ಷ ದುಡ್ಡು ಸುರಿಯಲು ಕೂಡ ಮುಂದಾಗುವ ದೃಶ್ಯ! ಇನ್ನೊಂದೆಡೆ ತಮ್ಮ ಫೇಕ್ ಪ್ರೀತಿಯ ಪ್ರತೀಕವಾದ ಮುಗ್ಧ ಮಗು (ಅವರ ಪ್ರಕಾರ ಮಾಂಸದ ಮುದ್ದೆಯನ್ನು) ಕಿತ್ತು ಬಿಸಾಡಿ ಧಿಮಾಕು ತೋರುವ ಯುವ ಪ್ರೇಮಿಗಳು!
ಈ ದುರಂತಕ್ಕೆ ಕಾರಣರು ಯಾರು? ನಮ್ಮ ಯುವ ಸಮಾಜವು ಎತ್ತ ಕಡೆಗೆ ಹೋಗುತ್ತಿದೆ?
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ನಾವೂ ನಮ್ಮದೇ ಸ್ಪೆಷಲ್ ಬ್ರಾಂಡ್ ಕ್ರಿಯೇಟ್ ಮಾಡಿಕೊಳ್ಳುವುದು ಹೇಗೆ?
ಅಂಕಣ
ಗೋ ಸಂಪತ್ತು: ದಕ್ಷಿಣ ಭಾರತದ ಬಹುತೇಕ ಗೋ ತಳಿಗಳ ಮೂಲ ಹಳ್ಳಿಕಾರ್ ತಳಿ!
ಗೋವಿನ ಮಹತ್ವ ಮತ್ತು ವಿಚಾರಗಳನ್ನು ತಿಳಿಸುವ ಲೇಖನ ಮಾಲೆ “ಗೋ ಸಂಪತ್ತು” ನಲ್ಲಿ ಈ ವಾರ ದೇಶೀಯ ಗೋತಳಿ ಹಳ್ಳಿಕಾರ್ನ ಗುಣ, ವಿಶೇಷತೆಗಳನ್ನು ತಿಳಿಸಿಕೊಡಲಾಗಿದೆ.
ಭಾರತ ಹಲವು ವಿಶಿಷ್ಟ ಗೋ ತಳಿಗಳನ್ನು ಪ್ರಪಂಚಕ್ಕೆ ನೀಡಿದೆ. ಅದರಲ್ಲಿ ಅತಿ ವಿಶಿಷ್ಟವಾದ ಗೋತಳಿಯೇ ಹಳ್ಳಿಕಾರ್ ತಳಿ. ಇದನ್ನು ಜಗತ್ತಿನಲ್ಲಿಯೇ ಉಳುಮೆಗೆ ಹೆಸರಾದ ತಳಿ ಎಂದು ಹೇಳಲಾಗುತ್ತದೆ.
ವಿಶಿಷ್ಟವೇನೆಂದರೆ ಈ ತಳಿಗಳ ಎತ್ತುಗಳಷ್ಟೇ ಅಲ್ಲದೆ ದನಗಳು ಸಹ ಉಳುಮೆಯಲ್ಲಿ ತಮ್ಮ ಸಹಭಾಗಿತ್ವವನ್ನು ನೀಡುತ್ತವೆ. ಈ ಲಕ್ಷಣ ಮತ್ತು ಕಾರ್ಯಕ್ಷಮತೆ ಬೇರೆ ಯಾವುದೇ ತಳಿಗಳಲ್ಲಿ ಈ ತಳಿಯಷ್ಟು ಕಂಡುಬರುವುದಿಲ್ಲ. ಕರ್ನಾಟಕವೇ ಇದರ ಮೂಲ ಸ್ಥಾನ ಎಂಬುದನ್ನು ಹಲವು ಸಮೀಕ್ಷೆಗಳು ದೃಢಪಡಿಸುತ್ತವೆ.
ಹೀಗಾಗಿ ಈ ತಳಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕದಲ್ಲಿಯೇ ಕಂಡುಬರುತ್ತದೆ. ಇದರೊಂದಿಗೆ ಕರ್ನಾಟಕದ ಪೂರ್ವ ಜಿಲ್ಲೆಗಳೊಂದಿಗೆ ಹೊಂದಿಕೊಂಡಿರುವಂತಹ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕೆಲ ಜಿಲ್ಲೆಗಳಲ್ಲೂ ಸಹ ಈ ತಳಿ ಕಂಡುಬರುತ್ತದೆ.
ಈ ತಳಿಯನ್ನು ದಕ್ಷಿಣ ಭಾರತದ ಅತಿ ಪುರಾತನ ತಳಿ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ದಕ್ಷಿಣ ಭಾರತದ ದೇಶಿ ತಳಿಗಳ ತಾಯಿ ಎಂದು ಸಹ ಇದನ್ನು ಕರೆಯಲಾಗುತ್ತದೆ. ಕಾರಣ ದಕ್ಷಿಣ ಭಾರತದ ಬಹುತೇಕ ತಳಿಗಳ ಮೂಲ ಇದೇ ಹಳ್ಳಿಕಾರ್ ತಳಿಯಾಗಿರುವುದೇ ಆಗಿದೆ. ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಈ ತಳಿಯನ್ನು ಮಾನವ ಕುಲದ ಭವಿಷ್ಯದ ತಳಿ ಎಂದು ಸಹ ಕರೆಯಲಾಗುತ್ತದೆ. ಕೆಲವೆಡೆ ಇದನ್ನು ಮೂಡಲ ತಳಿ ಎಂದು ಕರೆಯಲಾಗುತ್ತದೆ. ವೈಜ್ಞಾನಿಕವಾಗಿ ಸುಮಾರು 600 ವರ್ಷಗಳಿಗೂ ಹೆಚ್ಚಿನ ಚರಿತ್ರೆಯನ್ನು ಹೊಂದಿರುವ ಈ ತಳಿ ಕರ್ನಾಟಕದ ಪ್ರಮುಖ ಪಶುಪಾಲಕ ಸಮುದಾಯವಾದ ಕಾಡುಗೊಲ್ಲ ಮತ್ತು ಅದರ ಉಪ ಪಂಗಡವಾಗಿದ್ದ ಹಳ್ಳಿಕಾರ್ ಸಮುದಾಯಗಳಿಂದ ರೂಪಿತಗೊಂಡಿರುವುದಾಗಿದೆ ಎಂಬುದಾಗಿ ಹೇಳಲಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದಿಗೂ ದಕ್ಷಿಣ ಕರ್ನಾಟಕದ ಕಾಡುಗೊಲ್ಲರ ಹಟ್ಟಿಗಳಲ್ಲಿ ಈ ತಳಿ ಯಥೇಚ್ಛವಾಗಿ ಕಂಡುಬರುತ್ತದೆ.
400 ರಿಂದ 500 ಕೆ.ಜಿ. ತೂಕದ ಗೋವು!
ಸಾಮಾನ್ಯವಾಗಿ ಹಳ್ಳಿಕಾರ್ ಹಸುವೊಂದು 400 ರಿಂದ 500 ಕೆ.ಜಿ.ಯಷ್ಟು ದೇಹ ತೂಕವನ್ನು ಹೊಂದಿರುತ್ತದೆ. ಇವುಗಳಲ್ಲಿ ಹೆಚ್ಚಿನವು ಬಣ್ಣದಲ್ಲಿ ಬಿಳಿಯ ಬಣ್ಣದಿಂದ ಇಲ್ಲವೇ ಕಪ್ಪು ಮಿಶ್ರಿತ ಬೂದಿ ಬಣ್ಣದಿಂದ ಕೂಡಿರುತ್ತವೆ. ಹೋರಿಗಳಲ್ಲಿ ಶರೀರದ ಮಧ್ಯ ಭಾಗವು ತಿಳಿ ಬಿಳಿಯ ಬಣ್ಣವಾಗಿದ್ದು, ಕುತ್ತಿಗೆ, ಡುಬ್ಬದ ಭಾಗ, ತೋಳು ಹಾಗೂ ಚಪ್ಪೆಯ ಭಾಗವು ಹೆಚ್ಚು ಕಪ್ಪು ಬಣ್ಣದಿಂದ ಕೂಡಿರುತ್ತದೆ. ಹೋರಿಗಳಲ್ಲಿ ಬೆನ್ನಿನ ಡುಬ್ಬವು ಚೆನ್ನಾಗಿ ಬೆಳೆದು ದಪ್ಪವಾಗಿರುತ್ತದೆ. ಮುಖದ ಮೇಲೆ ಅಲ್ಲಲ್ಲಿ ಬಿಳಿ ಮಚ್ಚೆಗಳು ಕಂಡುಬರುವುದರೊಂದಿಗೆ ಮುಖವು ನೋಡಲು ಸುಂದರವಾಗಿ, ಮನೋಹರವಾಗಿ ಕಾಣಿಸುತ್ತದೆ.
ಇದರೊಂದಿಗೆ ಉದ್ದನೆಯ ಮುಖಚರ್ಯೆಯನ್ನು ಹೊಂದಿರುವ ಇವುಗಳ ತಲೆಯ ಭಾಗವು ತೀಕ್ಷ್ಣವಾಗಿದ್ದು, ಹಣೆಯ ಭಾಗವು ತಗ್ಗಾಗಿರುತ್ತದೆ. ತಲೆಯ ಮೇಲು ಭಾಗದಲ್ಲಿ ಸ್ವಲ್ಪ ದಪ್ಪವಾಗಿ ಮುಖವು ಹೆಚ್ಚು ಅಗಲವಿಲ್ಲದೆ ಕೆಳಗೆ ಬರಬರುತ್ತಾ ನೀಳವಾಗಿ, ಎಳಸಾಗಿ, ಸರಳವಾಗಿರುತ್ತದೆ. ಉತ್ತಮ ಮೈಕಟ್ಟನ್ನು ಹೊಂದಿರುವ ಇವುಗಳು ಉದ್ದನೆಯ ದೇಹವನ್ನು ಹೊಂದಿದ್ದು, ತಮ್ಮ ನಿಲುವು, ಮೈಕಟ್ಟು, ಆಕಾರ, ಗಾತ್ರದಲ್ಲಿ ಹೆಚ್ಚು ದಪ್ಪ ಅಥವಾ ಅತಿ ತೆಳುವು ಇಲ್ಲವೇ ಸಮತೋಲವಾಗಿ, ಸ್ವಲ್ಪ ಹೆಚ್ಚು ಕಡಿಮೆ ಜೂಜಿನ ಕುದುರೆಯನ್ನು ಹೋಲುತ್ತವೆ ಎಂದು ಹೇಳಬಹುದಾಗಿದೆ. ಕಪ್ಪು ಮಿಶ್ರಿತ ಬೂದಿ ಬಣ್ಣದ ದನಗಳು ಹೆಚ್ಚು ಗಡಸಿನ ದನಗಳೆಂದು ತಿಳಿದು ರೈತರು ಹೆಚ್ಚಾಗಿ ಇಂತಹ ದನಗಳನ್ನು ಹೊಲ ಮತ್ತು ಮನೆಯ ಕೆಲಸಗಳಿಗಾಗಿ ಉಪಯೋಗಿಸುತ್ತಾರೆ.
ಇವುಗಳ ಮೈ ಚರ್ಮವು ಮೃದುವಾಗಿ, ಕೂದಲುಗಳು ನಯವಾಗಿ ನುಣುಪಾಗಿರುತ್ತವೆ. ಕೋಡುಗಳು ಬುಡದಲ್ಲಿ ಒಂದಕ್ಕೊಂದು ಅತಿ ಸಮೀಪದಲ್ಲಿ ಹುಟ್ಟಿಕೊಂಡು, ಮೇಲಕ್ಕೆ ಹೋಗುತ್ತಾ ಅಗಲವಾಗಿ ಸ್ವಲ್ಪ ಹಿಂದಕ್ಕೆ ಬಾಗಿ ಪುನಃ ಮುಂದಕ್ಕೆ ಬಾಗಿಕೊಂಡು, ಉದ್ದವಾಗಿ ಬರಬರುತ್ತಾ ಗಾತ್ರದಲ್ಲಿ ಸಣ್ಣದಾಗುತ್ತಾ ತುದಿಯಲ್ಲಿ ಬಹಳ ಚೂಪಾಗಿರುತ್ತವೆ.
ಜಿಂಕೆಯಂತಹ ಕಣ್ಣಿನ ಹಸು
ಇವುಗಳ ಕಣ್ಣುಗಳು ಕಾಂತಿಯುಕ್ತವಾಗಿದ್ದು ಜಿಂಕೆಯ ಕಣ್ಣುಗಳಂತಿರುತ್ತವೆ. ಕಿವಿಗಳು ಸಣ್ಣದಾಗಿದ್ದು ತುದಿಯಲ್ಲಿ ಚೂಪಾಗಿರುತ್ತವೆ. ಇವುಗಳ ಒಳಭಾಗವು ತಿಳಿಹಳದಿ ಬಣ್ಣದಿಂದ ಕೂಡಿರುತ್ತದೆ. ಹೀಗೆ ಸಮಾನಾಂತರವಾಗಿ ನಿಮಿರಿದ ಕಿವಿಗಳು ಇವುಗಳ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ಈ ದನಗಳಲ್ಲಿ ಗಂಗೆದೊಗಲು ಬೇರೆ ಜಾತಿಯ ದನಗಳಿಗಿಂತ ಬಹಳ ಸಣ್ಣವಾಗಿರುತ್ತದೆ. ಕಾಲುಗಳು ಮತ್ತು ತೊಡೆಗಳು ಬಲವಾದ ಸ್ನಾಯುಗಳಿಂದ ತುಂಬಿಕೊಂಡಿರುತ್ತವೆ. ಗೊರಸುಗಳು ಬಿರುಸಾಗಿ, ಕಪ್ಪಾಗಿರುತ್ತವೆ. ಇವುಗಳ ಬಾಲ ಉದ್ದವಾಗಿದ್ದು ನೆಲವನ್ನು ಸೋಕುವಂತಿದ್ದು, ತುದಿ ಕಪ್ಪಾಗಿರುತ್ತದೆ. ಈ ದನಗಳು ಸಾಮಾನ್ಯವಾಗಿ 52 ಅಂಗುಲ ಎತ್ತರವಿರುತ್ತವೆ. ಎದೆಯು ವಿಶಾಲವಾಗಿದ್ದು, 60 ರಿಂದ 70 ಅಂಗುಲ ಸುತ್ತಳತೆ ಇರುತ್ತದೆ. ಉಳುಮೆಯ ತಳಿಯಾದ್ದರಿಂದ ಇವುಗಳ ಕೆಚ್ಚಲು ಸಣ್ಣ ಗಾತ್ರದಲ್ಲಿದ್ದು, ತೊಟ್ಟುಗಳು ಚಿಕ್ಕದಾಗಿರುತ್ತವೆ.
ಸ್ವಭಾವದಲ್ಲಿ ತುಸು ಗಡುಸಾದರೂ ಸಹ ಇವುಗಳು ಒಳ್ಳೆಯ ಸ್ನೇಹ ಜೀವಿಗಳು. ಭಾರತದ ಕಚ್ಚಾ ರಸ್ತೆಗೆ ಇವುಗಳು ಹೇಳಿ ಮಾಡಿಸಿದಂತವುಗಳು. ಹೀಗಾಗಿಯೇ ರಸ್ತೆ ಸಮತಟ್ಟಾಗಿಲ್ಲದಿದ್ದರೂ ಸಹ ಎಂತಹ ರಸ್ತೆಯಲ್ಲೂ ಸಾಮಾನ್ಯವಾಗಿ 2 ರಿಂದ 3 ಟನ್ ತೂಕವನ್ನು ಎಳೆಯುವ ಸಾಮರ್ಥ್ಯ ಇವುಗಳಿಗಿದೆ. ಈ ದನಗಳಲ್ಲಿ ಒಂದು ಮುಖ್ಯ ಕೊರತೆಯೆಂದರೆ ಇವು ಹೆಚ್ಚು ಹಾಲನ್ನು ಹಿಂಡುವುದಿಲ್ಲ. ದಿನಕ್ಕೆ 2 ರಿಂದ 3 ಲೀಟರ್ನಷ್ಟು ಸಿಗುವ ಇವುಗಳ ಹಾಲು ಮನುಷ್ಯನ ದೇಹಕ್ಕೆ ಹೇಳಿ ಮಾಡಿಸಿದ್ದು ಎಂದೇ ಹೇಳಲಾಗುತ್ತದೆ.
ದಪ್ಪ ಹಾಲು ಕೊಡುವ ಹಳ್ಳಿಕಾರ್ ಹಸು
ಬೇರೆ ತಳಿಗಳಿಗೆ ಹೋಲಿಸಿದ್ದಲ್ಲಿ ಇವುಗಳ ಹಾಲು ದಪ್ಪವಾಗಿದ್ದು, ತಿಳಿ ಹಳದಿ ಬಣ್ಣದಿಂದ ಕೂಡಿರುತ್ತದೆ. ಇಂತಹ ಹಾಲಿನಲ್ಲಿ ಮನುಷ್ಯನಿಗೆ ಅವಶ್ಯಕವಾಗಿ ಬೇಕಾದ ಎಲ್ಲಾ ಪೌಷ್ಠಿಕಾಂಶಗಳು ಅಡಕವಾಗಿರುತ್ತವೆ ಎಂದು ಹೇಳಲಾಗಿದೆ. ಹಿಂದೊಮ್ಮೆ ಇವುಗಳು ಸಹ ಹೆಚ್ಚಿನ ಪ್ರಮಾಣದ ಹಾಲನ್ನು ನೀಡುತ್ತಿದ್ದವು ಎಂಬುದನ್ನು ದಾಖಲೆಗಳು ದೃಢಪಡಿಸುತ್ತವೆ.
ಇವುಗಳ ಹಾಲಿನಿಂದ ಮಾಡಿದ ತುಪ್ಪವು ಸಹ ಆಹಾರದಲ್ಲಿ ಅತಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹುಟ್ಟಿದ ಮಕ್ಕಳಿಗೆ ಈ ತಳಿಯ ಹಾಲು ಮತ್ತು ತುಪ್ಪ ಅಮೃತವೆಂದೇ ಗ್ರಾಮೀಣ ಭಾಗದಲ್ಲಿ ಹೇಳಲಾಗುತ್ತದೆ. ಇದರ ಹಾಲು ಮಕ್ಕಳಿಂದ ಹಿಡಿದು ವಯೋವೃದ್ಧರಲ್ಲಿಯೂ ಸುಲಭವಾಗಿ ಜೀರ್ಣವಾಗುತ್ತದೆ. ರೋಗ ನಿರೋಧಕ ಶಕ್ತಿಗೆ ಹೆಸರುವಾಸಿಯಾದ ಈ ತಳಿಯ ಹಾಲಿನಲ್ಲಿ ಎಲ್ಲಾ ಅಂಶಗಳು ಮಿಳಿತವಾಗಿರುವುದರಿಂದ ಇದರ ಹಾಲು ಸ್ಥಳೀಯವಾಗಿಯೇ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಮುಖ್ಯವಾಗಿ ಯಾವುದೇ ಅಲೋಪತಿ ಔಷಧಿ ಹಾಗೂ ಇಂಜೆಕ್ಷನ್ನ ಅವಶ್ಯಕತೆ ಇವುಗಳಿಗೆ ಇಲ್ಲವಾದ್ದರಿಂದ ಇವುಗಳ ಹಾಲು ಮನುಷ್ಯನ ಬಳಕೆಗೆ ಅತಿ ಯೋಗ್ಯವಾದುದು ಎಂದೇ ಹೇಳಲಾಗುತ್ತದೆ.
ಇವುಗಳಲ್ಲಿ ಹೆಚ್ಚಿನವು ಕಾಡಿನಲ್ಲಿ ಇಲ್ಲವೇ ಹುಲ್ಲುಗಾವಲಿನಲ್ಲಿಯೇ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದರಿಂದ ಇವುಗಳ ಸಾಕಾಣಿಕೆ ವೆಚ್ಚವು ಸಹ ಅತಿ ಕಡಿಮೆ. ಇವುಗಳ ಸಗಣಿ ಮತ್ತು ಗೋಮೂತ್ರವನ್ನು ಸರಿಯಾಗಿ ಬಳಸಿಕೊಂಡಿದ್ದೇ ಆದಲ್ಲಿ ಸಾಕುವವರಿಗೆ ಇವುಗಳಿಂದ ಲಾಭವೇ ಹೆಚ್ಚು. ಇನ್ನು ರೈತರು ಪ್ರತಿ ವರ್ಷ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಕ್ಕೆ ಖರ್ಚು ಮಾಡುತ್ತಿದ್ದ ಲಕ್ಷಾಂತರ ರೂಪಾಯಿಗಳನ್ನು ಇವುಗಳು ಉಳಿಸುತ್ತಿವೆ. ವಿಶೇಷವೇನೆಂದರೆ ದೇಶದಲ್ಲಿ ತಳಿ ಮಾನ್ಯತೆ ಪಡೆದ ಸುಮಾರು 39 ತಳಿಗಳಲ್ಲಿ ಕೆಲವಷ್ಟೇ ಉಳುಮೆಗೆ ಹೆಸರುವಾಸಿಯಾಗಿವೆ. ಅಂತಹ ತಳಿಗಳಲ್ಲಿಯೇ ಹಳ್ಳಿಕಾರ್ಗೆ ಅಗ್ರಸ್ಥಾನ.
ಹಿಂದೊಮ್ಮೆ ರಾಜ್ಯದಲ್ಲಿ ಜನ ಸಂಖ್ಯೆಗಿಂತ ಹಳ್ಳಿಕಾರ್ ದನಗಳ ಸಂಖ್ಯೆಯೇ ಹೆಚ್ಚಾಗಿತ್ತು ಎಂಬ ಮಾತಿದೆ. ನಿರಂತರ ಇವುಗಳ ಹತ್ಯೆಯ ನಂತರವೂ ಸಹ ಇಂದಿಗೂ ರಾಜ್ಯದಲ್ಲಿ ಸುಮಾರು 15 ರಿಂದ 16 ಲಕ್ಷದಷ್ಟು ಈ ತಳಿಯ ಹಸುಗಳು ಉಳಿದಿರುವುದನ್ನು ಹಲವಾರು ಸಮೀಕ್ಷೆಗಳು ದೃಢಪಡಿಸುತ್ತವೆ. 2012ರ ಸಮೀಕ್ಷೆಗೆ ಹೋಲಿಸಿದ್ದಲ್ಲಿ ಇವುಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿರುವುದು ಸ್ಪಷ್ಟವಾಗುತ್ತದೆ. ಹೀಗೆ ಐತಿಹಾಸಿಕ ಹಿನ್ನೆಲೆಯುಳ್ಳ ತಳಿಯಿಂದು ಕ್ರಮೇಣ ನಶಿಸುತ್ತಾ ಕಾಲಘಟ್ಟಗಳಲ್ಲಿ ಹುದುಗಿ ಹೋಗುತ್ತಿದೆ.
ಎಲ್ಲವನ್ನು ಹಾಲೆಂಬ ಬಿಳಿ ದ್ರಾವಣದಿಂದಲೇ ಅಳೆಯುವಂತಹ ಮನಃಸ್ಥಿತಿಗೆ ಬೆಲೆ ಕಟ್ಟಲಾಗದ ವಿಶಿಷ್ಟ ತಳಿಯೊಂದು ನಾಮಾವಶೇಷವಾಗುತ್ತಿದೆ. ಸರ್ಕಾರ ಮತ್ತು ರೈತರ ಅಸಡ್ಡೆ ಒಂದು ಕಡೆಯಾದರೆ ಕೃತಕ ಗರ್ಭಧಾರಣೆ ಮತ್ತು ತಳಿಯ ಅಸಮರ್ಥ ಸಂವರ್ಧನೆ ಈ ತಳಿಯನ್ನು ಇನ್ನಿಲ್ಲವಾಗಿಸುತ್ತಿದೆ. ಇಷ್ಟಾದರೂ ಸಹ ಇಂದಿಗೂ ಈ ತಳಿಗಳ ಜೋಡೆತ್ತುಗಳು ದಾಖಲೆ ಬೆಲೆಗೆ ಮಾರಾಟವಾಗುತ್ತಿರುವುದು ಇವುಗಳ ಬೇಡಿಕೆಯನ್ನು ಎತ್ತಿ ತೋರಿಸುತ್ತದೆ. ಸಮಾಧಾನಕರ ಅಂಶವೇನೆಂದರೆ ಕೆಲವೆಡೆ ಈ ತಳಿಯನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯುತ್ತಿದೆ. ಸರ್ಕಾರವು ಸಹ ಹೆಸರುಘಟ್ಟ ಮತ್ತು ಕುಣಿಕೇನಹಳ್ಳಿಯಲ್ಲಿ ಈ ತಳಿಯ ಪಾಲನೆ, ಪೋಷಣೆ ಮತ್ತು ಸಂವರ್ಧನೆಯ ಕಾರ್ಯವನ್ನು ಮಾಡುತ್ತಿದೆ. ವಿಪರ್ಯಾಸವೆಂದರೆ ಇವ್ಯಾವುದು ಪ್ರತಿನಿತ್ಯ ಸಾಯುತ್ತಿರುವ ಇವುಗಳ ಸಂಖ್ಯೆಯನ್ನು ಇಂದಿಗೂ ಮೀರಿಸಲಾಗಿಲ್ಲ.
ಇದನ್ನೂ ಓದಿ : ಗೋ ಸಂಪತ್ತು: ತುಪ್ಪದಿಂದ ಯಾವೆಲ್ಲಾ ಔಷಧಿ ತಯಾರಿಸುತ್ತಾರೆ ನೋಡಿ!
ಅಂಕಣ
ಮೊಗಸಾಲೆ ಅಂಕಣ: ಸಿಎಂ ಪದವಿ ಹಂಚಿಕೆ: ʼಕೈʼಕಮಾಂಡ್ ಮೌನದ ಹಿಂದೆ ಏನು ಸಂದೇಶವಿದೆ?
ಎಂ.ಬಿ ಪಾಟೀಲರ ಹೇಳಿಕೆಗೆ ಖರ್ಗೆ, ಸೋನಿಯಾ ಯಾರೂ ಪ್ರತಿಕ್ರಿಯಿಸಿಲ್ಲ. ದಿನದ 24 ತಾಸೂ ಮಾಧ್ಯಮದವರ ಮುಂದೆ ಠಳಾಯಿಸುತ್ತಿದ್ದ ನಾಯಕರು ಸದ್ಯ ತೆನಾಲಿರಾಮನಂತೆ ಮುಖಕ್ಕೆ ಮಡಕೆ ಕವುಚಿಕೊಂಡು ಅಡ್ಡಾಡುತ್ತಿದ್ದಾರೆ!
ಮೇ ಮಾಹೆ 13ರಂದು ಶನಿವಾರ ರಾಜ್ಯ ವಿಧಾನ ಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದು ಕಾಂಗ್ರೆಸ್ ಕೈಗೆ ಅಧಿಕಾರ ಕೊಟ್ಟ ಜನರ ಐತೀರ್ಪು ಬಹಿರಂಗವಾಗಿತ್ತು. ಮೂರೂವರೆ ದಶಕಾನಂತರ ಇಷ್ಟು ದೊಡ್ಡ ಜಯ ಕರ್ನಾಟಕದಲ್ಲಿ 137 ವರ್ಷ ಹಳೆಯದಾದ ಪಕ್ಷದ ಕೈ ಹಿಡಿದಿತ್ತು. ದೇಶದ ಅಲ್ಲಲ್ಲಿ ನಡೆದ ಚುನಾವಣೆಗಳಲ್ಲಿ ಸತತ ಎಂಬಂತೆ ಸೋಲನ್ನೇ ಕಾಣುತ್ತಿದ್ದ ಕಾಂಗ್ರೆಸ್ಗೆ ಸಂಜೀವಿನಿ ಆಗಿದ್ದು ರಾಜ್ಯದಲ್ಲಿ ಕೈಗೊಲಿದ ಜಯ. ಕರ್ನಾಟಕದವರೇ ಆದ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮರ್ಯಾದೆಯನ್ನೂ ಕಾಪಾಡಿದ ಜಯ ಇದು. ಸತತ ಸೋಲಿನಿಂದ ಬಸವಳಿದಿದ್ದ ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ತ್ರಯರಿಗೆ ರಾಜಕೀಯ ಮಾಡಲು ಇನ್ನೂ ಅವಕಾಶವಿದೆ ಎಂಬ ನಂಬಿಕೆಯನ್ನು ಮೂಡಿಸಿದ ಜಯ ಕರ್ನಾಟಕದ್ದು. ಸಂಭ್ರಮಾಚರಣೆಗೆ ಏನೆಲ್ಲ ಬೇಕೋ ಅದೆಲ್ಲವನ್ನೂ ರಾಶಿವೊಡ್ಡಿದ್ದು ಕರ್ನಾಟಕದ ಜಯ.
ಈ ಸಂಭ್ರಮ ಒಮ್ಮಿಂದೊಮ್ಮೆಗೇ ಮುಗ್ಗರಿಸಿದ್ದು ಫಲಿತಾಂಶ ಪ್ರಕಟವಾದ 9-10 ದಿನ ನಂತರದ ಬೆಳವಣಿಗೆ. ಹೊಸ ಸರ್ಕಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ವಿಜಾಪುರ ಜಿಲ್ಲೆ ಬಬಲೇಶ್ವರ ಕ್ಷೇತ್ರದ ಶಾಸಕ ಎಂ.ಬಿ. ಪಾಟೀಲರು ಹಾಕಿದ ಬಾಂಬು ಆ ಪಕ್ಷದ ಚುನಾವಣಾ ಜಯದ ಸಂಭ್ರಮವೆಲ್ಲವಕ್ಕೂ ನಿಗಿನಿಗಿ ಉರಿಯುವ ಕೊಳ್ಳಿ ಇಟ್ಟಿದೆ. “ಸಿದ್ದರಾಮಯ್ಯ ಐದು ವರ್ಷ ಪೂರ್ತಿ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುತ್ತಾರೆ” ಎಂಬ ಅವರ ಹೇಳಿಕೆ ಆ ಪಕ್ಷದೊಳಗಣ ಡಿ.ಕೆ.ಶಿವಕುಮಾರ್ ನೇತೃತ್ವದ ಬಣದಲ್ಲಿ ಅಡಿಯಿಂದ ಮುಡಿವರೆಗೂ ಅಲ್ಲೋಲಕಲ್ಲೋಲ ಸೃಷ್ಟಿಸಿದೆ.
ಐದು ವರ್ಷದ ಅಧಿಕಾರಾವಧಿಯನ್ನು ಸಮಸಮ ಎರಡೂವರೆ ವರ್ಷಕ್ಕೆ ವಿಭಜಿಸಿ ಮೊದಲ ಅವಧಿ ಸಿದ್ದರಾಮಯ್ಯ ನಂತರದ ಅವಧಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದಲ್ಲಿ ಇರುತ್ತಾರೆಂದು ಮಾಡಿಕೊಂಡ ಒಡಂಬಡಿಕೆಗೆ ತದ್ವಿರುದ್ಧವಾಗಿ ಪಾಟೀಲರ ಹೇಳಿಕೆ ಬಂದಿದ್ದು ಮುಖ್ಯವಾಗಿ ಡಿಕೆಶಿ ನೇತೃತ್ವದ ಒಕ್ಕಲಿಗ ಬಣದಲ್ಲಿ ಒಪ್ಪಿಕೊಳ್ಳಲಾಗದ ಸ್ಥಿತಿ ನಿರ್ಮಿಸಿದೆ. ಹಾಗಂತ ಹೇಳಬಾರದ್ದೇನನ್ನೋ ಹೇಳಿಬಿಟ್ಟೆ ಎಂದು ಪಾಟೀಲರಿಗೆ ಅನಿಸಿಲ್ಲ. ಮರುದಿನ ನೀಡಿದ ವಿವರಣೆಯಲ್ಲಿ ತಾವು ಹಾಗೆ ಹೇಳೇ ಇಲ್ಲ; ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂಬಿತ್ಯಾದಿ ಸಬೂಬನ್ನು ಅವರು ಕೊಟ್ಟಿಲ್ಲ. ತಮ್ಮ ಹೇಳಿಕೆಗೆ ತಾವು ಬದ್ಧರೆಂದೂ ಏಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಹೇಳಿದ್ದನ್ನು ತಾವು ಪುನರುಚ್ಚರಿಸಿದ್ದಾಗಿಯೂ ಅವರು ಸ್ಪಷ್ಟಪಡಿಸಿ ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ಒದ್ದಿದ್ದಾರೆ.
ತಥಾಕಥಿತ ಒಡಂಬಡಿಕೆ ನಡೆದ ಸಂದರ್ಭದಲ್ಲಿ ಹಾಜರಿದ್ದವರು ಸೋನಿಯಾ, ರಾಹುಲ್, ಖರ್ಗೆ ಮತ್ತು ವೇಣುಗೋಪಾಲ್ ಮಾತ್ರ. ಸತ್ಯ ಏನೆನ್ನುವುದು ಈ ನಾಲ್ವರಿಗೆ ಮಾತ್ರ ಗೊತ್ತಿದೆ. “ಮುಖ್ಯಮಂತ್ರಿ ಸ್ಥಾನದಲ್ಲಿ ಪವರ್ ಶೇರಿಂಗ್ ಎನ್ನುವುದೇನೂ ಇಲ್ಲ. ಅಂಥದ್ದೇನಾದರೂ ಇದ್ದರೆ ಅದು ಕರ್ನಾಟಕದ ಜನತೆಯೊಂದಿಗೆ ಮಾತ್ರ” ಎಂದು ಆ ಸಭೆಯಲ್ಲಿದ್ದ ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ. ಅಂದಮೇಲೆ ಪೂರ್ಣಾವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಎನ್ನುವುದರಲ್ಲಿ ಅನುಚಿತವಾದುದಾದರೂ ಏನಿದೆ ಎನ್ನುವುದು ಪಾಟೀಲರ ಪ್ರಶ್ನೆ.
ಈ ಹೇಳಿಕೆಯಿಂದ ತಳಮಳಗೊಂಡಿರುವ ಶಿವಕುಮಾರ್ ಅತ್ಯಂತ ಜಾಗರೂಕತೆಯಲ್ಲಿ ತಾಳ್ಮೆಯ ಗೆರೆಯನ್ನು ತಿಲಾಂಶವೂ ಉಲ್ಲಂಘಿಸದೆ ಪ್ರತಿಕ್ರಿಯಿಸಿದ್ದಾರೆ. ಪಾಟೀಲರ ಹೇಳಿಕೆಯನ್ನು ಪುಷ್ಟೀಕರಿಸುವ ಅಥವಾ ನಿರಾಕರಿಸುವ ಜವಾಬ್ದಾರಿಯನ್ನು ಅವರು ಹೈಕಮಾಂಡ್ಗೇ ಬಿಟ್ಟುಕೊಟ್ಟಿದ್ದಾರೆ. ಏತನ್ಮಧ್ಯೆ ರಾಜ್ಯ ಉಸ್ತುವಾರಿ ಏಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾರು “ಯಾರೂ ಅನಗತ್ಯ ಹೇಳಿಕೆ ನೀಡಕೂಡದು” ಎಂದು ಸಾರಾಸಗಟು ಫರ್ಮಾನು ಹೊರಡಿಸಿದ್ದಾರೆ. ತಪ್ಪಿಯೂ ಎಂ.ಬಿ. ಪಾಟೀಲರ ಹೆಸರನ್ನು ತಮ್ಮ ಹೇಳಿಕೆಯಲ್ಲಿ ಅವರು ತಂದಿಲ್ಲ ಎನ್ನುವುದು ಕೇವಲ ಆಕಸ್ಮಿಕವಿರಲಾರದು. ಇನ್ನು ಸುರ್ಜೇವಾಲಾರು ಬಳಸಿರುವ “ಅನಗತ್ಯ” ಪದದ ವಿಚಾರ. ಕಾಂಗ್ರೆಸ್ನೊಳಗೆ ಈ ವಿವಾದ ಕೆಲವರಿಗೆ “ಅನಗತ್ಯ” ಎನಿಸಿದರೆ ಮತ್ತೆ ಕೆಲವರಿಗೆ “ಅಗತ್ಯ” ಎನಿಸಿಬಿಟ್ಟಿದೆ. ಅಗತ್ಯವೆನಿಸಿರುವ ಎರಡನೇ ಗುಂಪಿನ ನಾಯಕತ್ವ ಸದ್ಯ ಪಾಟೀಲರ ಹಿಡಿತದಲ್ಲಿದೆ.
ಕಾಂಗ್ರೆಸ್ ಜಯದ ಬೆನ್ನೇರಿ ಬಂದುದು ಸಿಎಂ ಯಾರೆಂಬ ಚರ್ಚೆ. ಸಿದ್ದರಾಮಯ್ಯ, ಡಿಕೆಶಿಯವರಿಬ್ಬರೂ ಆ ಕುರ್ಚಿ ಮೇಲೆ ಟವೆಲ್ ಹಾಕಿ, ತಮ್ಮ ಕೈಲಾದಷ್ಟೂ ಒತ್ತಡ ಹೇರಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಚಾತಕ ಪಕ್ಷಿಯಂತೆ ಕಾದಿದ್ದರು. ಹಗ್ಗ ಜಗ್ಗಾಟ, ಗುದಮುರಗಿಗಳೆಲ್ಲವೂ ಮುಗಿದು ಅಂತಿಮವಾಗಿ ತಥಾಕಥಿತ ಒಡಂಬಡಿಕೆಗೆ ಡಿಕೆಶಿ ಮಣಿದು ಉಪಮುಖ್ಯಮಂತ್ರಿ ಹುದ್ದೆ ಒಪ್ಪಿ ಸಹಕರಿಸುವ ಭರವಸೆ ನೀಡುವುದರೊಂದಿಗೆ ಕಥೆ “ಸುಖಾಂತ್ಯ” ಆಯಿತೆಂದು ಭಾವಿಸಲಾಗಿತ್ತು. ಈಗ ಪಾಟೀಲರು ಸಿಡಿಸಿರುವ ಬಾಂಬ್ನ ಶಕ್ತಿ ಸಾಮರ್ಥ್ಯ ನೋಡಿದರೆ ಸುಖಾಂತ್ಯದ ಮಾತು ಒತ್ತಟ್ಟಿಗೆ ಇರಲಿ, ಕಥೆ ಮುಕ್ತಾಯ ಕಾಣುವುದೂ ಕಷ್ಟವಾಗಿದ್ದು ಈಗ ಕಥೆ ಹೊಸ ತಿರುವಿನೊಂದಿಗೆ ಮತ್ತೆ ಶುರುವಾಗುತ್ತಿದೆ ಎನ್ನುವುದು ಪಾಟೀಲ್ ಬಣದ ನಿಲುವು.
ಅವರು ಹೇಳುವ ಕಥೆಗೆ ಮುನ್ನುಡಿ ಬರೆದುದು ಫಲಿತಾಂಶ ನಿಚ್ಚಳಗೊಂಡ ಮೇ 13ರ ಇಳಿಸಂಜೆ ಹೊತ್ತು. ಗೋಧೂಳಿ ಮುಹೂರ್ತ. ಬಬಲೇಶ್ವರದ ಮತ ಎಣಿಕೆ ಕೇಂದ್ರದ ಆಜೂಬಾಜಿನಲ್ಲಿ. ಪಾಟೀಲರು ಗೆಲ್ಲುವುದರಲ್ಲಿ ಯಾರಿಗೂ ಅನುಮಾನ ಇರಲಿಲ್ಲ. ಲಿಂಗಾಯತ ಕೋಟಾದಲ್ಲಿ ಅವರು ಉಪ ಮುಖ್ಯಮಂತ್ರಿ ಆಗುತ್ತಾರೆಂಬ ಸುದ್ದಿ ಆ ಹೊತ್ತಿಗೆ ಢಾಳಾಗಿ ಹರಡಿತ್ತು. ಹೈಕಮಾಂಡ್ ಹಂತದಲ್ಲಾದ ತೀರ್ಮಾನದ ರೀತ್ಯ ಸಿದ್ದರಾಮಯ್ಯ ಮೊದಲ ಎರಡೂವರೆ ವರ್ಷದ ಅವಧಿಗೆ ಮುಖ್ಯಮಂತ್ರಿ, ಒಕ್ಕಲಿಗ ಡಿಕೆಶಿ, ಲಿಂಗಾಯತ ಎಂ.ಬಿ.ಪಾಟೀಲ, ದಲಿತ ಸಮುದಾಯದಿಂದ ಡಾ.ಜಿ.ಪರಮೇಶ್ವರ ಇಲ್ಲವೇ ಕೆ.ಎಚ್.ಮುನಿಯಪ್ಪ ಹೀಗೆ ಮೂವರು ಡಿಸಿಎಂ ಆಗುತ್ತಾರೆಂಬ ಸುದ್ದಿ ಹರಡಿತ್ತು. ಇದನ್ನು ಹರಡಿದ್ದು ಸ್ವತಃ ಪಕ್ಷದ ದೆಹಲಿ ವರಿಷ್ಟ ಮಂಡಳಿಯೇ.
ಬಬಲೇಶ್ವರದಲ್ಲಿ ನಡೆದ ಸಂಭ್ರಮ, ಪಟಾಕಿ ಸಿಡಿಸಿ ಹರ್ಷಾಚರಣೆ ನಡೆಸಿದ್ದಕ್ಕೆ ದೊಡ್ಡ ಕಾರಣ ನಮ್ಮ ಪಾಟೀಲರು ಡಿಸಿಎಂ ಆಗ್ತಾರೆ ಎನ್ನುವುದೇ ಆಗಿತ್ತು. ಆದರೆ ಅತ್ತ ದೆಹಲಿಯಲ್ಲಿ ಡಿಕೆಶಿ ಹಾಕಿದ ಒತ್ತಡ ಕಾರಣವಾಗಿ ಅವರೊಬ್ಬರಿಗೆ ಮಾತ್ರವೇ ಡಿಸಿಎಂ ಹುದ್ದೆ ಎಂಬ ತೀರ್ಮಾನಕ್ಕೆ ಬರಲಾಯಿತು. ಈ ಸುದ್ದಿ ಹರಡುತ್ತಿದ್ದಂತೆ ಸಂಕಟದ ಸರಮಾಲೆಯೇ ಸಂಭವಿಸಿತು. ಇತ್ತ ಕೊರಟಗೆರೆಯಲ್ಲಿ ಗೆದ್ದ ಜಿ.ಪರಮೇಶ್ವರ, ದೇವನಹಳ್ಳಿಯಲ್ಲಿ ಗೆದ್ದ ಕೆ.ಎಚ್. ಮುನಿಯಪ್ಪ, ಬಬಲೇಶ್ವರದ ಎಂ.ಬಿ. ಪಾಟೀಲರು “ನಾಟ್ ಅಟ್ ಆಲ್ ಹ್ಯಾಪಿ” ಎಂದು ಉದ್ಗರಿಸಿದ್ದು ಈ ಬೆಳವಣಿಗೆಯ ಕ್ಲೈಮ್ಯಾಕ್ಸ್. ಪರಮೇಶ್ವರ ಮತ್ತು ಮುನಿಯಪ್ಪ ಮೇಲ್ನೋಟಕ್ಕಾದರೂ ಡಿಸಿಎಂ ಪಟ್ಟದಿಂದ ವಂಚಿತರಾದ ದುಃಖವನ್ನು ಬಲವಂತದಿಂದ ನುಂಗಿಕೊಂಡರು.
ಪಾಟೀಲರು ಮಾತ್ರ ಸಿಡಿದೆದ್ದರು. ಮೈಸೂರಿನ ಸುತ್ತೂರು ಮಠಕ್ಕೆ ತೆರಳಿ ಸ್ವಾಮಿಗಳ ದರ್ಶನ ಪಡೆಯುವುದಕ್ಕೆ ಮುನ್ನಾ ದಿವಸ ಬೆಂಗಳೂರಿನಲ್ಲಿ ನಡೆದ ಪಕ್ಷದ ಸಭೆಯೊಂದರಲ್ಲಿ ಡಿಕೆಶಿ ದರ್ಪದರ್ಶನಕ್ಕೆ ಪಾಟೀಲರು ಮುಖಾಮುಖಿಯಾಗಿದ್ದರು. ಆ ಸಭೆಯಲ್ಲಿ ಸಿದ್ದರಾಮಯ್ಯ, ಪಾಟೀಲರು ಏನೋ ಹರಟುತ್ತಿದ್ದುದು ಮೈಕ್ ಹಿಡಿದು ಭಾಷಣಕ್ಕೆ ಸಜ್ಜಾಗಿದ್ದ ಡಿಕೆಶಿಗೆ ಸರಿ ಬರಲಿಲ್ಲ. ಮಧ್ಯ ಮಾತಾಡಬೇಡಿರೆಂದು (ಡೋಂಟ್ ಡಿಸ್ಟರ್ಬ್) ಅವರು ಮಾಡಿದ ತಾಕೀತನ್ನು ಜೀರ್ಣಿಸಿಕೊಳ್ಳುವುದು ಪಾಟೀಲರಿಗೆ ಕಷ್ಟವಾಗಿತ್ತು. “ಎಲಾ ಇವನಾ, ಡಿಸಿಎಂ ಆದಾಕ್ಷಣ ಕೋಡು ಮೂಡಿತೇನು” ಎಂದು ಮನಸ್ಸಿನಲ್ಲಿ ಅಂದುಕೊಂಡಿರಬಹುದಾಗಿದ್ದ ಪಾಟೀಲರು ಸೇಡು ತೀರಿಸಿಕೊಳ್ಳಲು ಕಾದಿದ್ದ ಮುಹೂರ್ತ ಸುತ್ತೂರಿನಲ್ಲಿ ಎದುರಾಗಿತ್ತು.
ಸ್ವಾಮಿಗಳು ಮತ್ತು ಪಾಟೀಲರ ನಡುವೆ ನಡೆದ ಮಾತುಕತೆ ಏನೋ ಗೊತ್ತಿಲ್ಲ. ಆದರೆ ಅಲ್ಲಿ ಸೇರಿದ್ದ ಲಿಂಗಾಯತ ಸಮುದಾಯದ ಮುಖಂಡರಿಗೆ ಸ್ಥಾನ ವಂಚಿತ ಅವಮಾನವನ್ನು ನುಂಗಿಕೊಂಡು ಮೌನ ತಾಳುವುದು ಕಷ್ಟವಾಗಿತ್ತು. ಕಾಂಗ್ರೆಸ್ನಲ್ಲಿ ಲಿಂಗಾಯತ ಶಾಸಕರು 39 ಜನ, ಒಕ್ಕಲಿಗ ಶಾಸಕರು 31 ಜನ. ಅವರಿಗೆ ಡಿಸಿಎಂ ಪಟ್ಟ, ನಿಮಗೆ…? ಎಂಬ ಪ್ರಶ್ನೆಯ ಬೆನ್ನೇರಿ ಬಂದುದು ಸುಮ್ಮನೆ ಒಪ್ಪಿಕೊಳ್ಳಬಾರದೆಂಬ ಖಡಕ್ ಸಂದೇಶ. ಒಪ್ಪಿಕೊಳ್ಳದೇ ಇರುವ ಮಾರ್ಗ ಪಾಟೀಲರ ಮುಂದೆ ಇರಲಿಲ್ಲ. ಆ ಕ್ಷಣದಲ್ಲಿ ಅವರಿಗೆ ವರ ಪ್ರಸಾದ ರೂಪದಲ್ಲಿ ನೆನಪಿಗೆ ಬಂದಿದ್ದು ಕೆ.ಸಿ. ವೇಣುಗೋಪಾಲರು ಆಡಿದರೆಂದು ಅವರೇ ಹೇಳಿದ ಮಾತು. “ಬ್ರೇಕಿಂಗ್ ನ್ಯೂಸ್”ಗೆ ಮಾಧ್ಯಮದವರು ಕಾದಿದ್ದಕ್ಕೂ ಪಾಟೀಲರ ನೆನಪಿನಲ್ಲಿ ವೇಣುಗೋಪಾಲ್ ಬಂದುದಕ್ಕೂ ತಾಳೆಯಾಗಿತ್ತು. ಕಣ್ಣೆವೆ ಮುಚ್ಚಿ ತೆರೆಯುವಷ್ಟರಲ್ಲಿ ಕಾಂಗ್ರೆಸ್ ಪಕ್ಷ ಕೋಲಾಹಲದ ಮಡುವಾಗಿತ್ತು.
ಇದನ್ನೂ ಓದಿ: ಮೊಗಸಾಲೆ ಅಂಕಣ: ಮುಖ್ಯಮಂತ್ರಿಗಿರಿಗೆ ಡಿಕೆಶಿ ಪಟ್ಟು ಸಡಿಲಿಕೆಯ ಹಿಂದೆ ಏನೇನಿದೆ?
ಈ ಅಂಕಣ ಬರಹ ಸಿದ್ಧವಾಗುತ್ತಿದ್ದ ಗುರುವಾರ ಮಧ್ಯಾಹ್ನದವರೆಗೂ ಕೆ.ಸಿ. ವೇಣುಗೋಪಾಲರು ಹರಶಿವ ಎಂದಿಲ್ಲ. ಅವರ ಮೌನದ ಕಾರಣ ಸ್ಪಷ್ಟವಾಗಿಲ್ಲ. ಏಐಸಿಸಿ ಅಧ್ಯಕ್ಷ ಖರ್ಗೆಯವರೂ ಮಾತಾಡುತ್ತಿಲ್ಲ. ಪಕ್ಷದ ವರ್ಚಸ್ಸಿಗೆ ಇಷ್ಟೆಲ್ಲ ಹಾನಿಯಾಗುತ್ತಿದ್ದರೂ ಸೋನಿಯಾ ಗಾಂಧಿ, ರಾಹುಲ್ಗಾಂಧಿ ತುಟಿಪಿಟಿಕ್ ಎಂದಿಲ್ಲ. ಇದರರ್ಥ ಪಾಟೀಲರು ಹೇಳಿದ್ದರಲ್ಲಿ ತಪ್ಪಿಲ್ಲ ಎಂದಲ್ಲದೆ ಮತ್ತೇನೂ ಅಲ್ಲ. ಇದಕ್ಕೆ ಇನ್ನೊಂದು ಆಯಾಮವೂ ಇದೆ. ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಬೇಕೆಂಬ ಷರತ್ತು ಕಾಂಗ್ರೆಸ್ ಆಡಳಿತವಿರುವ ರಾಜಸ್ತಾನ, ಚತ್ತೀಸ್ಘಡದಲ್ಲೂ ಇತ್ತು. ಅದನ್ನು ಸಿಎಂ ಸ್ಥಾನಕ್ಕೆ ಬಂದ ಅಶೋಕ್ ಗೆಹ್ಲೋಟ್ ಮತ್ತು ಬಘೇಲರಿಬ್ಬರೂ ಮರೆತರು. ಹೈಕಮಾಂಡ್ ಆದೇಶವನ್ನು ಕಸದ ಬುಟ್ಟಿಗೆ ಎಸೆದು ಸವಾಲಾದರು. ಪಕ್ಷಕ್ಕೆ ಭಾರೀ ಮುಜುಗರ ತಂದರು. ಅದೇ ಸ್ಥಿತಿ ಕರ್ನಾಟಕದಲ್ಲೂ ಆಗಬಹುದಲ್ಲವೆ ಎಂದು ಡಿಸಿಎಂ ಸ್ಥಾನ ಒಪ್ಪಿಕೊಳ್ಳುವ ಮುನ್ನ ಡಿಕೆಶಿ ಕೇಳಿದ್ದರು. ಹಾಗೇನೂ ಇಲ್ಲ ಎಂಬ ಸೋನಿಯಾ ಮಾತನ್ನು ನಂಬಿದರೆ ಇಲ್ಲಿ ಪಾಟೀಲರು ಬಾಂಬ್ ಸಿಡಿಸಿದ್ದಾರೆ. ತನ್ನ ಅನುಮಾನ ಇಷ್ಟು ಬೇಗ ನಿಜವಾಯಿತೇ ಎಂಬ ಆತಂಕ ಡಿಕೆಶಿ ಬಾಯನ್ನು ಕಟ್ಟಿದೆ.
ಡಿಕೆಶಿ ಮತ್ತು ಅವರ ಸಂಸದ ಸಹೋದರ ಡಿ.ಕೆ. ಸುರೇಶ್ ಸಮಯಕ್ಕೆ ಕಾದಿದ್ದಾರೆ. ಸಂಪುಟ ವಿಸ್ತರಣೆ ಕಸರತ್ತು ನಡೆದಿರುವ ಈ ಸಮಯದಲ್ಲಿ ಭರ್ಜರಿ ಖಾತೆಗಳನ್ನು ಕೈವಶ ಮಾಡಿಕೊಂಡ ಬಳಿಕ ಮುಂದಿನ ಅಧ್ಯಾಯವಾಗಿ ಪಾಟೀಲರ ಹೇಳಿಕೆ ಮತ್ತು ಹೈಕಮಾಂಡ್ನ ಮೌನವನ್ನು ಅವರು ಕೈಗೆತ್ತಿಕೊಳ್ಳಲಿದ್ದಾರೆ. ಡಿಕೆಶಿ ಸಿಎಂ ಆಗುತ್ತಾರೆಂದು ಅಖಂಡ ಬೆಂಬಲ ನೀಡಿದ ಒಕ್ಕಲಿಗ ಸಮುದಾಯಕ್ಕೆ ತಾಳ್ಮೆಯಿಂದಿರುವಂತೆ ಸಂದೇಶ ರವಾನೆಯಾಗಿದೆ. ನಗುವಿನ ಮುಖವಾಡ ಧರಿಸಿರುವ ಡಿಕೆಶಿ ಸರಬರ ಓಡಾಡುತ್ತಿದ್ದಾರೆ. ಪಾಟೀಲರ ಹೇಳಿಕೆ ಹೊರಬಿದ್ದಂದಿನಿಂದಲೂ ಖರ್ಗೆ, ವೇಣುಗೋಪಾಲರಾದಿಯಾಗಿ ಹೈಕಮಾಂಡ್ ಮುಖಂಡರು ಬೆಂಗಳೂರಿನಲ್ಲಿ ಕಾಣಿಸಿಕೊಂಡಿಲ್ಲ. ದಿನದ 24 ತಾಸೂ ಮಾಧ್ಯಮದವರಿಗಾಗಿ ಕಾಯುತ್ತಿದ್ದ ಮುಖಂಡರು ಸದ್ಯಕ್ಕೆ ತೆನಾಲಿ ರಾಮನಂತೆ ಮುಖಕ್ಕೆ ಮಡಿಕೆ ಕವುಚಿಕೊಂಡು ಅಡ್ಡಾಡುತ್ತಿದ್ದಾರೆನಿಸುತ್ತಿದೆ.
ಡಿಕೆಶಿ ಕ್ಯಾಂಪಿನ ಮುಖಂಡರೊಬ್ಬರು ಆಡಿದ ಮಾತನ್ನು ಕೇಳಿಸಿಕೊಂಡರೆ ಹೀಗೂ ಉಂಟೆ ಅನಿಸುತ್ತದೆ. ನಾನು ಕೇಳಿಸಿಕೊಂಡಿದ್ದನ್ನು ನೀವೂ ಓದಿ: ಸಂಪುಟ ರಚನೆಯನ್ನು ಇಡಿಯಾಗಿ ರಚಿಸುವುದರ ಪೌರೋಹಿತ್ಯ ವಹಿಸಬೇಕಿದ್ದ ಏಐಸಿಸಿ ಅಧ್ಯಕ್ಷ ಖರ್ಗೆಯವರು ತಮ್ಮ ಕುಟುಂಬದ ಬೇಕು ಬೇಡವೆಂಬ ಮಟ್ಟಕ್ಕೆ ಪಕ್ಷವನ್ನು ಇಳಿಸಿ ದೆಹಲಿಗೆ ಹೊರಟುಬಿಟ್ಟರು. ಅವರು ಮರೆಯದೆ ಮಾಡಿದ ಕೆಲಸವೆಂದರೆ ಸಂಪುಟದ ಮೊದಲ ಪಟ್ಟಿಯಲ್ಲಿ ತಮ್ಮ ಮಗ ಪ್ರಿಯಾಂಕ್ ಖರ್ಗೆ ಹೆಸರು ಸೇರುವಂತೆ ನೋಡಿಕೊಂಡಿದ್ದು. ಅಧ್ಯಕ್ಷರಾಗಿ ಅವರು ಮಾಡಿದ ಸಾರ್ಥಕ ಕೆಲಸ ಇದೊಂದೇ!
ಇದನ್ನೂ ಓದಿ: ಮೊಗಸಾಲೆ ಅಂಕಣ: ನಿನ್ನೆವರೆಗೂ ಮತದಾರರೇ ಗತಿ, ಇಂದು ದೇವರೇ ಗತಿ
-
ಕರ್ನಾಟಕ17 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ20 hours ago
Karnataka Cabinet Expansion Live : 34 ಸಚಿವರಿಗೆ ಖಾತೆ ಹಂಚಿಕೆ; ಬಯಸಿದ ಖಾತೆ ಪಡೆದ ಡಿ ಕೆ ಶಿವಕುಮಾರ್
-
ಕರ್ನಾಟಕ17 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ15 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ11 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕಿರುತೆರೆ18 hours ago
Weekend With Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಅತಿಥಿಗಳು ಇವರು!
-
ಕ್ರಿಕೆಟ್7 hours ago
World Cup 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ
-
ಕರ್ನಾಟಕ7 hours ago
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ